ಕೆಲವೇ ಕೆಲವರ ಸುಖ, ಹಲವರ ದುಃಖದ ಮೂಲವಾಗಬಾರದು

-ಡಾ.ಎಸ್. ಜಿ. ಜೋಗುರ

ಸಂಪತ್ತಿನ ಅಸಮಾನ ಹಂಚಿಕೆ ಎನ್ನುವದು ಅನೇಕ ಬಗೆಯ ಅವಕಾಶಗಳಲ್ಲಿಯೂ ಅಂತರಗಳನ್ನು ಸೃಷ್ಟಿಸಿದೆ. ಬೇಕು ಅನಿಸುವುದನ್ನು ತಕ್ಷಣವೇ ಕೊಂಡು ಬಳಸುವ ಸಾಮರ್ಥ್ಯವಿದ್ದದ್ದು ಕೇವಲ 15 ಪ್ರತಿಶತ ಜನರಿಗೆ ಮಾತ್ರ. ಮಿಕ್ಕ 85 ಪ್ರತಿಶತ ಜನರು ತಮ್ಮ ದುಡಿಮೆಯನ್ನು ನಿರಂತರವಾಗಿ ಒತ್ತೆಯಿಟ್ಟರೂ ಬೇಕು ಅನಿಸಿರುವದನ್ನು ಕೊಂಡುಕೊಳ್ಳಲು ಅನೇಕ ಬಗೆಯ ಸಾಹಸಗಳನ್ನು ಮಾಡಬೇಕಾಗುತ್ತದೆ. ಏನೋ ಒಂದನ್ನು ಪಡೆಯಲು ಏನೋ ಒಂದನ್ನು ಕಳೆದುಕೊಳ್ಳಬೇಕಾಗುತ್ತದೆ ಎನ್ನುವ ಸೂತ್ರ ಇವರ ಪಾಲಿಗೆ ಅಕ್ಷರಶಃ ಅನ್ವಯವಾಗುತ್ತದೆ. ಅನೇಕ ಬಾರಿ ಬೇಕು ಅನಿಸಿದ್ದು ಬರೀ ಕನಸಾಗಿ, ಕೈಗೆಟುಕದ ಪಾರಿಜಾತವಾಗಿ ಇಡೀ ಬದುಕಿನುದ್ದಕ್ಕೂ ಬಸವಳಿದರೂ ಅದು ದಕ್ಕುವದಿಲ್ಲ. ತನ್ನ ಕೈಲಿ ಆಗದಿದ್ದದ್ದು ತನ್ನ ಮಗ, ಮೊಮ್ಮಗನ ಕೈಯಿಂದಲಾದರೂ ಸಾಧ್ಯವಾಗಲಿ ಎನ್ನುವ ಆಶಯದೊಂದಿಗೆ ಆ ಜೀವ ಕಣ್ಣು ಮುಚ್ಚುವದಿದೆ.

ಬೇಸಿಗೆಯಲ್ಲಿ ನರಕ ಸದೃಶ ಬದುಕಿನ ಹತ್ತಿರದ ಪರಿಚಯವಾಗಬೇಕಿದ್ದರೆ ಉತ್ತರ ಕರ್ನಾಟಕದ ಬಯಲುಸೀಮೆಗಳಿಗೆ ಭೇಟಿ ನೀಡಿ. ಅವರ ಪ್ರತಿನಿತ್ಯದ ಚಡಪಡಿಕೆಗಳು ಯಾವುದೋ ಒಂದು ಸುಖಭೋಗದ ಭೌತಿಕ ವಸ್ತುವಿಗಾಗಿ ಇಲ್ಲ. ಬದಲಾಗಿ ಒಂದು ಕೊಡ ಕುಡಿಯುವ ನೀರಿಗಾಗಿ, ಒಂದಷ್ಟು ಹೊತ್ತಿನ ವಿದ್ಯುತ್

ಚಿತ್ರಕೃಪೆ: ಸೆಲ್ಕೋ ಫೌಂಡೇಷನ್

ಚಿತ್ರಕೃಪೆ: ಸೆಲ್ಕೋ ಫೌಂಡೇಷನ್

ಗಾಗಿ, ಕಚ್ಚಾ ರಸ್ತೆಗಾಗಿ, ತೀರಾ ಕನಿಷ್ಟ ವೈದ್ಯಕೀಯ ಸೌಲಭ್ಯಗಳಿಗಾಗಿದೆ. ಇವುಗಳ ನಡುವೆ ಅವರಿಗೆ ಪೌಷ್ಟಿಕ ಆಹಾರದ ಕೊರತೆ ಒಂದು ಸಮಸ್ಯೆಯೇ ಅಲ್ಲ. ಬರೀ ಒಂದು ತಂಬಿಗೆ ನೀರು ಕುಡಿದು ಒಂದು ದಿನ ಬದುಕುತ್ತೇವೆ ಎನ್ನುವ ಇಚ್ಚಾಶಕ್ತಿ ಇರುವ ಈ ಜನರಿಗೆ ಬದುಕು ಎನ್ನುವುದು ನಿತ್ಯದ ಹೋರಾಟ, ಬವಣೆ. ಅನೇಕ ಬಗೆಯ ಕೊರತೆಗಳ ನಡುವೆಯೂ ಇವರು ಬದುಕಿದ್ದಾರೆ. ಹೇಗೆಂದು ಮಾತ್ರ ಕೇಳಬೇಡಿ. ಈ ಜನಸಮುದಾಯದ ಅಸ್ಥಿತ್ವವೇ ನಗಣ್ಯ ಎನ್ನುವಂತೆ ಇವರು ಬದುಕಿರುವುದಿದೆ. ಇವರು ಪ್ರಜಾಸತ್ತೆಯ ಭಾಗವಾದರೂ ತಮ್ಮ ಹಕ್ಕುಗಳ ಬಗ್ಗೆ, ಅವಕಾಶಗಳ ಬಗ್ಗೆ ಒಟ್ಟ್ತಾರೆಯಾಗಿ ಯೋಚಿಸದವರು. ಯಾವುದರಲ್ಲಿಯೂ ಅಪಾರವಾದ ನಂಬುಗೆಯನ್ನು ಉಳಿಸಿಕೊಂಡಿರದ ಈ ಜನ, ಸಿನಿಕರಾಗಿ ತೀರಾ ಯಥಾರ್ಥವಾಗಿಯೇ ಬದುಕುತ್ತಾರೆ. ವ್ಯವಸ್ಥೆಯ ವಿರುದ್ಧ ಪ್ರತಿಭಟಿಸುವುದಂತೂ ದೂರ, ಇದ್ದ ಪರಿಸ್ಥಿತಿಗೆ ಹೊಂದಿಕೊಳ್ಳುವುದರಲ್ಲಿಯೇ ಹೈರಾಣಾಗಿ ಹೋಗಿರುತ್ತಾರೆ. ತಮ್ಮನ್ನು ಯಾರೋ ಉದ್ದರಿಸುತ್ತಾರೆ ಎನ್ನುವ ನಿರೀಕ್ಷೆ ಇವರಿಗಿಲ್ಲ. ವಾಸ್ತವದಲ್ಲಿ ಅವರಿಗಿರುವ ಎಲ್ಲ ಬಗೆಯ ಸಂದಿಗ್ದಗಳೇ ಅವರ ನಿಜವಾದ ಬದುಕಿನ ದಿನಚರಿ. ಅವರ ಮನೆಯ ಮಹಿಳೆಯರೊ, ಒಂದು ಕೊಡ ನೀರಿಗಾಗಿ ದೂರದ ದಾರಿಯನ್ನು ಕ್ರಮಿಸುವ, ಕಲಹ, ವೈಮನಸ್ಸುಗಳನ್ನು ಪ್ರದರ್ಶಿಸುವ  ಪರಿಪಾಠ ಸಾಮಾನ್ಯ ಎನ್ನುವ ಇಲ್ಲಿಯ ಬದುಕು ಅತ್ಯಂತ ಕಠೋರವಾದುದು. ಮಹತ್ವಾಕಾಂಕ್ಷೆ ಎನ್ನುವುದು ಇಲ್ಲಿ ಮಣ್ಣುಪಾಲಾಗಿದೆ. ಒಂದು ಕೊಡ ನೀರು ಆ ಕುಟುಂಬದ ಇಡೀ ದಿನದ ಕನವರಿಕೆಯಾಗಿರುವ ನೆಲಗಳಲ್ಲಿ ಅದು ಹೇಗೆ ಅವರಲ್ಲಿ ಮಹತ್ವಾಕಾಂಕ್ಷೆಯನ್ನು, ಹೋರಾಟದ ಹಾದಿಯನ್ನು ತೋರುವುದು..? ಹೀಗೆ ಒಂದು ಬೇಸಿಗೆಯ ನಿರ್ಗಮನವೆನ್ನುವುದು ಆ ಗ್ರಾಮದ ಜನತೆಯ ಒಟ್ಟು ಕಸುವನ್ನೆಲ್ಲಾ ಹಿಂಡಿ ಹಿಪ್ಪೆ ಮಾಡಿದ ಭೌಗೋಳಿಕ ಸ್ಥಿತಿ ಎನ್ನುವಂತಿರುತ್ತದೆ.
ಇನ್ನೊಂದು ಬದಿ ನಮ್ಮ ಕಣ್ಣೆದುರಲ್ಲಿಯೇ ಅಪಾರ ಪ್ರಮಾಣದ ನೀರು, ವಿಧ್ಯುತ್ ಪೋಲಾಗುತ್ತಿರುತ್ತದೆ. ಸಾರ್ವಜನಿಕ ನಲ್ಲಿಗೆ ಆರಂಭವಾಗುವುದು ಮಾತ್ರ ತಿಳಿದಿದೆ ಆದರೆ ಬಂದ್ ಆಗುವ ಕ್ರಿಯೆ ತಿಳಿದಿಲ್ಲ. ಹೀಗಾಗಿ ಧೋ..ಧೋ.. ಎಂದು ಸುರಿಯುವ ನಲ್ಲಿಯ ಟ್ಯಾಪ್ ನ್ನು ಬಂದ್ ಮಾಡಲು ಮನುಷ್ಯರಾದವರಿಗೆ ತಿಳಿಹೇಳಲು, ಮಂಗನ ಮೂಲಕ ಜಾಹೀರಾತನ್ನು ರೂಪಿಸಿ ತೋರಿಸಬೇಕಾಗುತ್ತದೆ. ಅವಶ್ಯವಿರುವಷ್ಟೇ ನೀರು, ವಿದ್ಯುತ್, ಆಹಾರ ಬಳಿಸುವ ತಿಳಿವಳಿಕೆ ಕಡ್ಡಾಯ ಹಾಗೂ ತೀರಾ ಸಾಮಾನ್ಯವಾದ ಬದುಕಿನ ಪಠ್ಯಕ್ರಮವಾಗಬೇಕು. ಮದುವೆಯ ಸಂದರ್ಭದಲ್ಲಿ ಬೇಕಾಬಿಟ್ಟಿ ನೀರು ಆಹಾರ ಹಾಳಾಗದಂತೆ ನೋಡಿಕೊಳ್ಳುವದು ಪ್ರತಿಯೊಬ್ಬ ನಾಗರಿಕನ ಹೊಣೆಗಾರಿಕೆ. ಮದುವೆಯಾಗುವ ಹುಡುಗ-ಹುಡುಗಿಯ ತಂದೆ-ತಾಯಿಗಳ ಅತಿ ಮುಖ್ಯವಾದ ಹೊಣೆಗಾರಿಕೆಗಳಲ್ಲಿ ಅದು ಮೊದಲನೆಯದಾಗಬೇಕು. ಈಚೆಗೆ ಆಂಗ್ಲ ದಿನಪತ್ರಿಕೆಯೊಂದು ಮಹಾನಗರಗಳಲ್ಲಿಯ ಸ್ಟಾರ್ ಹೊಟೆಲುಗಳು ವ್ಯಯಿಸುವ ವಿದ್ತ್ಯುತ್, ನೀರು ಮುಂತಾದವುಗಳ ಬಗ್ಗೆ ಸಮಗ್ರ ಬೆಳಕು ಚೆಲ್ಲುವ ಮೂಲಕ ಒಂದು ಸ್ಟಾರ್ ಹೊಟೇಲ್ ಎಷ್ಟು ಸಾಮಾನ್ಯ ಕುಟುಂಬಗಳ ಮನೆಯ ಬೆಳಕನ್ನು, ನೀರನ್ನು ನಿಗಟುತ್ತಿರುತ್ತದೆ ಎನ್ನುವದನ್ನು ಅಂಕಿ ಅಂಶಗಳ ಮೂಲಕ ತೋರಿಸಿಕೊಟ್ಟಿರುವದಿದೆ.
ಒಂದು ಸಾವಿರ ಮನೆಗಳಿಗೆ ಸಾಕಾಗಬಹುದಾದ ನೀರನ್ನು ಕೇವಲ ಒಂದು ಹೊಟೆಲ್ ಅನುಭೋಗಿಸುವುದನ್ನು ಆ ಪತ್ರಿಕೆ ಹೊರಹಾಕಿದೆ. ದೆಹಲಿಯ ಸುಮಾರು 35 ಸ್ಟಾರ್ ಹೊಟೆಲ್ ಗಳು ಬಳಸುವ ನೀರಿನ ಪ್ರಮಾಣ ಪ್ರತಿನಿತ್ಯ ಸುಮಾರು 15 ಮಿಲಿಯನ ಲೀಟರ್. ಅಷ್ಟು ನೀರಲ್ಲಿ ಪ್ರತಿದಿನ ದೆಹಲಿಯ ಒಂದು ವಿಶಾಲ ಪ್ರದೇಶಕ್ಕೆ ನೀರನ್ನು ಒದಗಿಸಬಹುದಾಗಿದೆ. ಸುಮಾರು 600 ಮನೆಗಳಿಗೆ ಸಾಧ್ಯವಾಗಬಹುದಾದ ವಿಧ್ಯುತ್ ನ್ನು ಕೆವಲ ಒಂದು ಸ್ಟಾರ್ ಹೊಟೆಲ್ ಬಳಸುವ ಬಗ್ಗೆಯೂ ಅದು ಹೇಳಿರುವದಿದೆ. ಒಂದು ಅಂದಾಜಿನಂತೆ ಸ್ಟಾರ್ ಹೊಟೆಲೊಂದು 15 ಸಾವಿರ ಇಲೆಕ್ಟ್ರಿಕ್ ಪಾಯಿಂಟ್ ಗಳನ್ನು ಹೊಂದಿರುವದಿದೆ ಅದರಲ್ಲಿ 3 ಸಾವಿರ ಬಲ್ಬುಗಳು ಅನಾವಶ್ಯಕವಾಗಿದ್ದರೂ ನಿರಂತರವಾಗಿ ಉರಿಯುತ್ತಿರುತ್ತವೆ. ಸುಮಾರು 14 ರಷ್ಟು ಸ್ಟಾರ್ ಹೊಟೇಲುಗಳು ಸೋಲಾರ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳದೇ ಬರೀ ವಿದ್ಯುತ್ ನ್ನೇ ಅವಲಂಬಿಸಿವೆ. ಇದರ ಜೊತೆಗೆ ಅಪಾರ ಪ್ರಮಾಣದ ಕಸವನ್ನು ಹೊರಗೆಸೆಯುತ್ತವೆ. ಆ ಮೂಲಕ ನಗರ ಪ್ರದೇಶದ ಕೊಳಗೇರಿಗಳ ವಿಸ್ತಾರಕ್ಕೆ ತಮ್ಮ ಕೊಡುಗೆಯನ್ನು ನೀಡುತ್ತವೆ. ಭಾರತದಂತಹ ರಾಷ್ಟ್ರದಲ್ಲಿ ಪ್ರತಿ ಹನಿ ನೀರು, ಪ್ರತಿ ತುತ್ತು ಅನ್ನ, ಪೆಟ್ರೋಲ್ ಮತ್ತು ವಿಧ್ಯುತ್ ತುಂಬಾ ಅಮೂಲ್ಯವಾದವುಗಳು. ಇವುಗಳನ್ನು ಬೇಕಾಬಿಟ್ಟಿಯಾಗಿ ಬಳಸುವ ಪರಿಣಾಮ ಮುಂದಿನ ದಿನಗಳಲ್ಲಿ ಇನ್ನಷ್ಟು ಭೀಕರತೆಯನ್ನು ಅನುಭವಿಸಬೇಕಾಗುತ್ತದೆ. ಇದು ಕೆವಲ ನಗರಪ್ರದೇಶದ ಹೊಟೆಲ್ ಗಳಿಗೆ ಮಾತ್ರ ಸಂಬಂಧಿಸಿರದೇ ನಾವು ನಿರ್ಮಿಸಿಕೊಳ್ಳುವ ಮನೆಗಳೂ ಈಗೀಗ ತೀರಾ ಐಷಾರಾಮಿಯಾಗಿರುತ್ತವೆ. ಅಲ್ಲಿಯೂ ಅಗತ್ಯಕ್ಕಿಂತಲೂ ಹೆಚ್ಚಿನ ಲೈಟ್ ಪಾಯಿಂಟ್ ಗಳಿರುತ್ತವೆ. ಮನೆಮಂದಿಯೆಲ್ಲಾ ಟಿ.ವಿ.ಯ ಎದುರಲ್ಲಿ ಕುಳಿತಿರುವಾಗಲೂ ಎಲ್ಲ ಕೋಣೆಗಳ ಲೈಟುಗಳು ಬಿಂದಾಸ್ ಆಗಿ ಉರಿಯುತ್ತಿರುತ್ತವೆ. ಹಾಗೆಯೇ ಮನೆ ಎದುರಿನ ನೀರಿನ ಟ್ಯಾಂಕ್ ತುಂಬಿ ಹೆಚ್ಚಾದ ನೀರು ಗಟಾರ್ ಸೇರುವ, ಇಲ್ಲವೇ ರಸ್ತೆಗೆ ಹರಿಯುವ ಕ್ರಿಯೆ ನಮ್ಮ ಕಣ್ಣ ಎದುರೇ ನಡೆದರೂ ನಾವು ಅಷ್ಟಾಗಿ ತಲೆ ಕೆಡಿಸಿಕೊಳ್ಳುವದಿಲ್ಲ. ನೀರು, ವಿದ್ಯುತ್, ಆಹಾರ ಇವೆಲ್ಲವೂ ಹಣ ಕೊಟ್ಟರೂ ಸಿಗದೇ ಇರುವ ಸಂಗತಿಗಳಾಗುವ ದಿನಗಳು ದೂರಿಲ್ಲ.
ದೇಶದ ಕೇವಲ 10 ಪ್ರತಿಶತ ಜನರ ಸುಖಕ್ಕಾಗಿ 90 ಪ್ರತಿಶತ ಜನರ ಅವಕಾಶಗಳನ್ನು, ಹಕ್ಕುಗಳನ್ನು ಕಸಿಯುವದು ಖಂಡಿತ ನ್ಯಾಯವಲ್ಲ. ಅಷ್ಟಕ್ಕೂ ಈ ಸ್ಟಾರ್ ಹೊಟೆಲುಗಳನ್ನು ನಂಬಿಕೊಂಡು ಒಂದು ದೇಶದ ಜನಸಮುದಾಯದ ಬದುಕನ್ನು ನಿರ್ಣಯಿಸುವಂತಿಲ್ಲ. ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಸ್ವಾತಂತ್ರ್ಯಕ್ಕಿಂತಲೂ ಮುಖ್ಯವಾಗಿ ನಾವು ಸಮಾನತೆಗೆ ಅವಕಾಶವನ್ನು ಕೊಡಬೇಕಿದೆ. ಆ ಮೂಲಕ ಮೂಲಭೂತ ಸೌಕರ್ಯಗಳು ಕೇವಲ ಉಳ್ಳವರ ಸ್ವತ್ತಾಗುವದನ್ನು ತಪ್ಪಿಸಬೇಕಿದೆ.

Leave a Reply

Your email address will not be published. Required fields are marked *