ಸುಭದ್ರ ಸರಕಾರದ ನಿರೀಕ್ಷೆಯಲ್ಲಿ. . . .

– ಡಾ. ಅಶೋಕ್. ಕೆ. ಆರ್.

ಮತ್ತೊಂದು ಚುನಾವಣೆ ಮುಗಿದಿದೆ. ಹತ್ತು ವರುಷದ ನಂತರ ಕಾಂಗ್ರೆಸ್ ಸಂಪೂರ್ಣ ವಿಜಯ ಸಾಧಿಸಿದೆ. ಧರ್ಮಸಿಂಗ್ ಸರಕಾರದ ಪತನದ ನಂತರ ಜೆಡಿಎಸ್ ಮತ್ತು ಬಿಜೆಪಿ ಜೊತೆಗೂಡಿ ಸರಕಾರ ರಚಿಸಿದಾಗಿನಿಂದಲೂ ರಾಜ್ಯದಲ್ಲಿ ರಾಜಕೀಯ ಅನಿಶ್ಚಿತತೆ ಕಾಡುತ್ತಿತ್ತು. ಇಪ್ಪತ್ತು ತಿಂಗಳ ಕುಮಾರಸ್ವಾಮಿ ನೇತೃತ್ವದ ಸರಕಾರ, ತದನಂತರ ಕೆಲವೇ ದಿನಗಳ ಯಡಿಯೂರಪ್ಪ ಸರಕಾರ; ವಚನಭಂಗದ ನೆಪದಲ್ಲಿ ಬಹುಮತದ ಸಮೀಪಕ್ಕೆ ಬಂದ ಬಿಜೆಪಿ. ಪಕ್ಷೇತರರ ನೆರವಿನಿಂದ ಬಿಜೆಪಿ ಯಡಿಯೂರಪ್ಪನವರ ಮುಖ್ಯಮಂತ್ರಿತ್ವದ ಅಡಿಯಲ್ಲಿ ಸರಕಾರ ರಚಿಸಿತು. ನಂತರ ನಡೆದಿದ್ದು ಕರ್ನಾಟಕ ಇದುವರೆಗೂ ಕಂಡರಿಯದ ರಾಜಕೀಯ ನೈತಿಕತೆಯ ಅಧಃಪತನ.

ಹಸಿರು ಶಾಲು ಹೊದ್ದು ರೈತರ ಹೆಸರಿನಲ್ಲಿ ಪ್ರಮಾಣ ವಚನವನ್ನೋದಿದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ತೀರ ಈ ಮಟ್ಟಿಗೆ ಆಡಳಿತ ನಡೆಸುತ್ತದೆಂಬುದನ್ನು ಬಿಜೆಪಿಯ ಕಡುವೈರಿಗಳೂ ಊಹಿಸಿರಲಿಲ್ಲ! ದಶಕಗಳ ಕಾಲ ವಿರೋಧ ಪಕ್ಷದ ನಾಯಕನಾಗಿ ಬೆಳೆದು, ಹತ್ತು ಹಲವು ಆಡಳಿತ ಪಕ್ಷಗಳ ವಿರುದ್ಧದ ಹೋರಾಟಗಳ ಮುಂಚೂಣಿಯಲ್ಲಿದ್ದವರು ಯಡಿಯೂರಪ್ಪ. ಹಿಂದಿ ಭಾಷಿಕ ಪ್ರದೇಶಗಳ ಪಕ್ಷ ಎಂಬ ಹಣೆಪಟ್ಟಿಯನ್ನು ಪಡೆದಿದ್ದ ಬಿಜೆಪಿ ಪಕ್ಷ, ನಗರಗಳಿಗಷ್ಟೇ ಸೀಮಿತವಾದ ಪಕ್ಷ ಎಂಬ ಹಣೆಪಟ್ಟಿ ಪಡೆದಿದ್ದ ಬಿಜೆಪಿ ಪಕ್ಷ ದಕ್ಷಿಣ ಭಾರತದ ಹಿಂದಿಯೇತರ ರಾಜ್ಯವೊಂದರಲ್ಲಿ ನೂರಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಕಂಡಿದ್ದು ಸಾಧನೆಯೇ ಸರಿ. ಈ ಗೆಲುವಿನ ಹಿಂದೆ ಕುಮಾರಸ್ವಾಮಿ ಮತ್ತವರ ಜೆಡಿಎಸ್ ಕೊಟ್ಟ ಮಾತಿಗೆ ತಪ್ಪಿ ನಡೆದಿದ್ದೂ ಕಾರಣವಾಗಿತ್ತೆಂಬುದರಲ್ಲಿ ಸಂಶಯವಿಲ್ಲ. ಜೊತೆಗೆ ಸಹವರ್ತಿಗಳ ಕಾಲೆಳೆಯುತ್ತಲೇ ಕಾಲಹರಣ ಮಾಡಿದ ಕಾಂಗ್ರೆಸ್ ಧುರೀಣರ ಪಾಲೂ ಸಾಕಷ್ಟಿತ್ತು. ಗೆಲುವಿಗೆ ಕಾರಣಗಳೇನೆ ಇದ್ದರೂ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಅಧಿಕಾರದ ನೊಗವಿಡಿದ ಬಿಜೆಪಿ ಕನಿಷ್ಟ ದಕ್ಷಿಣದ ಇತರ ರಾಜ್ಯಗಳಲ್ಲಿ ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳಲಾದರೂ ಅತ್ಯುತ್ತಮವಲ್ಲದಿದ್ದರೂ ಕೊನೇ ಪಕ್ಷ ಸಾಧಾರಣ ಮಟ್ಟದ ಆಡಳಿತವನ್ನಾದರೂ ನೀಡಬಹುದು ಎಂಬ ನಿರೀಕ್ಷೆಯಿತ್ತು.

ಆದರೆ ಕಳೆದ ಐದು ವರ್ಷಗಳಲ್ಲಿ ನಡೆದಿದ್ದು ನೈತಿಕತೆಯ ಮೇಲಿನ ರಾಜಕೀಯ ಅತ್ಯಾಚಾರ. ಏಕಪಕ್ಷವೇ ಅಧಿಕಾರದಲ್ಲಿದ್ದಾಗ್ಯೂ ಮೂರು ಬಾರಿ ಮುಖ್ಯಮಂತ್ರಿಯ ಬದಲಾವಣೆ. yeddyurappa-SirigereTaralabaluಕರ್ನಾಟಕದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಮುಖ್ಯಮಂತ್ರಿಯಾಗಿದ್ದ ವ್ಯಕ್ತಿಯೊಬ್ಬರ ಜೈಲುವಾಸ – ಭ್ರಷ್ಟಾಚಾರದ ಕಾರಣದಿಂದ. ತತ್ವ ಸಿದ್ಧಾಂತಗಳು ಮರೆಯಾಗಿ ಹಣದ ರುದ್ರನರ್ತನ ಹೆಚ್ಚಾಗಿ ನಡೆದಿದ್ದೂ ಈ ಅವಧಿಯಲ್ಲೇ. ಆಪರೇಷನ್ ಕಮಲದಂತ ಅನೈತಿಕ ದಂಧೆಗೆ ಅಧಿಕೃತ ರೂಪುರೇಷೆಗಳನ್ನು ನಿರ್ಮಿಸಿದ ಕೀರ್ತಿ “ವಿಭಿನ್ನ ಪಕ್ಷ”ವೆಂದೇ ಪ್ರಚಾರ ಗಿಟ್ಟಿಸುವ ಬಿಜೆಪಿಗೆ ಸೇರಬೇಕು. ಇದರೊಟ್ಟಿಗೆ ಯಥಾ ರಾಜ ತಥಾ ಮಂತ್ರಿಯೆಂಬಂತೆ ಯಡಿಯೂರಪ್ಪನವರ ಹಿಂದೆ ಮುಂದೆ ಅನೇಕ ಮಂತ್ರಿ ಶಾಸಕರು ಜೈಲುವಾಸಿಗಳಾದರು. ಕೆಲವರು ಇನ್ನೂ ಜೈಲಿನಲ್ಲೇ ಇದ್ದಾರೆ. ವೈಯಕ್ತಿಕ ನೆಲೆಯಲ್ಲೂ ಬಿಜೆಪಿಯ ಶಾಸಕರನೇಕರು ಅನೈತಿಕತೆಯಲ್ಲೇ ಶ್ರೇಷ್ಟತೆ ಕಂಡುಕೊಂಡರು. ಅತ್ಯಾಚಾರ, ಮಡದಿಯ ನಿಗೂಢ ಸಾವು, ಸದನದಲ್ಲೇ ಪೋಲಿ ಚಿತ್ರಗಳ ವೀಕ್ಷಣೆ, ನರ್ಸ್ ಪ್ರಕರಣ, ಸಿಡಿ ಪ್ರಕರಣ …. ಸಂಸ್ಕೃತಿ ರಕ್ಷಿಸುವ ಪಕ್ಷದಲ್ಲಿ ಅಸಂಸ್ಕೃತರೇ ಹೆಚ್ಚಾಗಿ ಬಿಟ್ಟಿದ್ದರು. ಕಾಂಗ್ರೆಸ್ ಐವತ್ತು ಚಿಲ್ಲರೆ ವರುಷಗಳಲ್ಲಿ ಮಾಡಿದ ಭ್ರಷ್ಟಾಚಾರವನ್ನು ಐದೇ ವರ್ಷದಲ್ಲಿ ಮಾಡಿ ತೋರಿಸಿದ್ದು ಬಿಜೆಪಿಯ ನಿಜವಾದ “ಸಾಧನೆ”!! ಕರ್ನಾಟಕದ ರಾಜಕೀಯ ಪ್ರಹಸನ ರಾಷ್ಟ್ರೀಯ ಮಟ್ಟದಲ್ಲಿ ಅಪಹಾಸ್ಯಕ್ಕೊಳಗಾಗುವಂತೆ ಮಾಡಿದ್ದೂ ಸಾಧನೆಯೇ ಸರಿ!

ಇನ್ನು ಸಾಮಾಜಿಕವಾಗಿಯೂ ಬಹಳಷ್ಟು ಹಾನಿಯುಂಟುಮಾಡುವಲ್ಲಿ ಬಿಜೆಪಿ ಹಿಂದೆ ಬೀಳಲಿಲ್ಲ! ಹಿಂದುತ್ವವನ್ನಷ್ಟೇ ಮುಖ್ಯ ಅಜೆಂಡವನ್ನಾಗಿರಿಸಿಕೊಂಡ ಬಿಜೆಪಿ ತಾನು ನಂಬಿದ “ಹಿಂದುತ್ವ”ದ ಮಾದರಿಯನ್ನು ನೇರವಾಗಲ್ಲದಿದ್ದರೂ ಹತ್ತಲವು ಹಿಂದೂ ಸಂಘಟನೆಗಳ ಮುಖಾಂತರ ಸಮಾಜದ ಮೇಲೆ ಹೇರುವ ದುಸ್ಸಾಹಸ ಮಾಡುವುದರಲ್ಲಿ ಅನುಮಾನವಿರಲಿಲ್ಲ. ಹಿಂದೂ ಧರ್ಮದ ಒಳಗಿನ ಹುಳುಕಗಳೇ ಹಿಂದೂ ಧರ್ಮದ ನಿಜವಾದ ವೈರಿ ಎಂಬುದನ್ನು ಉದ್ದೇಶಪೂರ್ವಕವಾಗಿ ಮರೆಮಾಚುವ ಈ ಹಿಂದುತ್ವ ಮಾದರಿ ಮುಸ್ಲಿಂ, ಕ್ರಿಶ್ಚಿಯನ್ನರಿಂದಷ್ಟೇ ಹಿಂದೂ ಧರ್ಮಕ್ಕೆ ಅಪಾಯವಿದೆ ಎಂಬುದನ್ನು ಹರಡುತ್ತ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವುದಕ್ಕೆ ಮುಂದಾಯಿತು. ಹಿಂದೂ ಧರ್ಮದ ಜಾತಿ ವ್ಯವಸ್ಥೆಯಲ್ಲಿ ನಲುಗಿದ ಜನರನ್ನೇ ತನ್ನ ಅಸ್ತ್ರಗಳನ್ನಾಗಿ ಬಳಸಿಕೊಂಡು ಅನ್ಯಧರ್ಮೀಯರ ಮೇಲೆ ಹಲ್ಲೆ ನಡೆಸಿದ ಕೀರ್ತಿ ಈ ಹಿಂದುತ್ವ ಮಾದರಿಯದು. ಈ ಹಿಂದುತ್ವ ಮಾದರಿ ಅತಿ ಹೆಚ್ಚು ಪ್ರಯೋಗಕ್ಕೊಳಗಾಗಿದ್ದು ಕರಾವಳಿ ಜಿಲ್ಲೆಗಳಲ್ಲಿ. ಸಹಪಾಠಿಗಳೊಂದಿಗೆ ಸಹೋದ್ಯೋಗಿಗಳೊಂದಿಗೆ ಮಾತನಾಡಲೂ ಭಯವಾಗುವಂತಹ ವಾತಾವರಣ ಈ ಜಿಲ್ಲೆಗಳಲ್ಲಿ ಸೃಷ್ಟಿಯಾಗಿರುವುದು ಸುಳ್ಳಲ್ಲ. ಕೆಲವೊಂದು ಪ್ರಕರಣಗಳಲ್ಲಿ ಮುಸ್ಲಿಂ ಮೂಲಭೂತವಾದಿಗಳ ಅಟ್ಟಹಾಸವೂ ಇತ್ತು. ಮುಸ್ಲಿಂ ಮತ್ತು ಹಿಂದೂ ಮೂಲಭೂತವಾದಿಗಳ ಮುಖ್ಯ ಉದ್ದೇಶ ಎರಡೂ ಕೋಮಿನ ಜನತೆ ಮಾನಸಿಕವಾಗಿ ದೂರವಾಗಬೇಕು, ಅನ್ಯ ಮತದ ಜನರ ಬಗ್ಗೆ ಅಸಮಾನ್ಯ ದ್ವೇಷ ಕಾರಬೇಕು. ಆ ಉದ್ದೇಶ “ಬುದ್ಧಿವಂತರ” ಜಿಲ್ಲೆಗಳಲ್ಲೇ ಅತ್ಯಂತ ಯಶಸ್ವಿಯಾಗಿದ್ದು ನಮ್ಮ ಶೈಕ್ಷಣಿಕ ವಿಧಾನದ ಸೋಲೆಂದರೆ ತಪ್ಪಿಲ್ಲ. ಅದೃಷ್ಟವಶಾತ್ ಇತರ ಜಿಲ್ಲೆಗಳಲ್ಲಿ ಈ “ಪ್ರಯೋಗ”ಗಳಿಗೆ ಜನಬೆಂಬಲ ಹೆಚ್ಚಾಗಿ ಸಿಗಲಿಲ್ಲ. ಬ್ರಹ್ಮಾಂಡದಂಥ ಕಾರ್ಯಕ್ರಮಗಳು, ಜ್ಯೋತಿಷ್ಯ, ವಾಸ್ತು, ಕಂದಾಚಾರ ಇದೇ ಸಮಯದಲ್ಲಿ ಹೆಚ್ಚಾಗಿದ್ದು ಕಾಕತಾಳೀಯವಾ?! ಮುಖ್ಯಮಂತ್ರಿಯ ವರ್ತನೆ ಇಡೀ ರಾಜ್ಯದ ಜನರ ಮೇಲೆ ಪರಿಣಾಮ ಬೀರಿದ ಕಾರಣಕ್ಕೆ ಇವೆಲ್ಲವೂ ಹೆಚ್ಚಾದವಾ ಎಂಬುದರ ಸಾಮಾಜಿಕ ಅಧ್ಯಯನ ನಡೆದರೆ ಆಸಕ್ತಿಕರ ಅಂಶಗಳು ಹೊರಬೀಳಬಹುದು!

ತನ್ನದೇ ಸಾವಿರ ತಪ್ಪುಗಳಿಂದ ಚುನಾವಣೆಯಲ್ಲಿ ಸೋಲುಂಡಿರುವ ಬಿಜೆಪಿ ಈಗ ಅಧಿಕೃತ ವಿರೋಧ ಪಕ್ಷದ ಸ್ಥಾನವನ್ನೂ ಪಡೆಯಲಾಗದ ಸ್ಥಿತಿಗೆ ತಲುಪಿದೆ. ಯಡಿಯೂರಪ್ಪ, ಶ್ರೀರಾಮುಲು ಬಿಜೆಪಿಯನ್ನು ಸೋಲಿಸುವ ಉದ್ದೇಶದಿಂದಲೇ ಹೊಸಪಕ್ಷವನ್ನು ಕಟ್ಟಿ ತಮ್ಮ ಉದ್ದಿಶ್ಯದಲ್ಲಿ ತಕ್ಕಮಟ್ಟಿಗಿನ ಯಶಸ್ಸು ಗಳಿಸಿದ್ದಾರೆ. ಅವರು ಪಕ್ಷ ತೊರೆಯದಿದ್ದರೆ ಸೋಲನ್ನು ತಪ್ಪಿಸಿಕೊಳ್ಳಲಾಗದಿದ್ದರೂ ಇನ್ನೊಂದಷ್ಟು ಸ್ಥಾನಗಳಲ್ಲಿ ಬಿಜೆಪಿ ಗೆಲ್ಲುವ ಸಾಧ್ಯತೆಯಿತ್ತು. ಜೆಡಿಎಸ್ ಪಡೆದಷ್ಟೇ ಸ್ಥಾನಗಳನ್ನು (40) ಪಡೆದಿರುವ ಬಿಜೆಪಿ ಗಿಟ್ಟಿಸಿದ ಮತಗಳ ಸಂಖ್ಯೆಯ ಆಧಾರದಲ್ಲಿ ಅಧಿಕೃತ ವಿರೋಧ ಪಕ್ಷದ ಸ್ಥಾನವನ್ನು ಪಡೆವ ಸಾಧ್ಯತೆ ಕಡಿಮೆ.

ರಾಜಕೀಯ ಅನಿಶ್ಚಿತತೆ ಅನೈತಿಕತೆ ಶಿಖರ ತಲುಪಿ ಕುಳಿತಿದೆ. ಬಿಜೆಪಿಯಿಂದ ರೋಸತ್ತ ಜನ ಮತ್ಯಾವುದೇ ಪಕ್ಷವೂ ಇಲ್ಲದ ಕಾರಣ ಕಾಂಗ್ರೆಸ್ಸಿಗೆ ನಿಚ್ಚಳ ಬಹುಮತ ನೀಡಿದ್ದಾರೆ. Siddaramaiahಈ ಬಹುಮತ ಪಡೆಯುವಲ್ಲಿ ಕಾಂಗ್ರೆಸ್ಸಿಗರ ಶ್ರಮ ಕಡಿಮೆಯೆಂದೇ ಹೇಳಬೇಕು. ಕಳೆದ ಐದು ವರ್ಷದಲ್ಲಿ ಅಧಿಕೃತ ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ ತನ್ನ ಕರ್ತವ್ಯವನ್ನು ನಿಭಾಯಿಸಲೇ ಇಲ್ಲ. ಅಧಿಕೃತ ವಿರೋಧ ಪಕ್ಷದಂತೆ ಕಾರ್ಯನಿರ್ವಹಿಸಿದ್ದು ಜೆಡಿಎಸ್. ಅದರ ಕಾರ್ಯ ಯಡಿಯೂರಪ್ಪನವರ ಪತನದ ನಂತರ ಅಚಾನಕ್ಕಾಗಿ ನಿಂತು ಹೋಗಿದ್ದು ಅದರ ಉದ್ದೇಶಗಳ ಬಗ್ಗೆ ಅನುಮಾನ ಮೂಡಿಸುತ್ತದೆ. ಬಿಜೆಪಿಯ ಭ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್ ಸೊಲ್ಲೆತದಿದುದಕ್ಕೆ ಕಾರಣ ಅದರದೇ ನೇತೃತ್ವದ ಯುಪಿಎ ಸರಕಾರ ನಡೆಸುತ್ತಿರುವ ಅಗಾಧ ಹಗರಣಗಳು! ಉತ್ತರ ಕರ್ನಾಟಕದಲ್ಲಿ ಮತ್ತೆ ತನ್ನ ಅಸ್ತಿತ್ವ ಕಂಡುಕೊಳ್ಳುವಲ್ಲಿ “ವಿಶೇಷ ಸ್ಥಾನಮಾನ” ನೀಡಿದ್ದು ನೆರವಿಗೆ ಬಂತು. “ಹಿಂದುತ್ವದ ಪ್ರಯೋಗಶಾಲೆ” ಬಿಜೆಪಿಯ ಶಕ್ತಿಕೇಂದ್ರದಂತಿದ್ದ ಕರಾವಳಿ ಜಿಲ್ಲಿಯ ಬಹುತೇಕ ಕಡೆ ಬಿಜೆಪಿಗೆ ಸೋಲುಂಟಾಗಿದ್ದು ಧರ್ಮಾಧಾರಿತವಾಗಿ ಪಕ್ಷ ಕಟ್ಟಲೊರಡುವ ಎಲ್ಲರಿಗೂ ಒಂದು ಎಚ್ಚರಿಕೆಯ ಪಾಠ. ಧರ್ಮಾಂಧರು ಹೆಣ್ಣು ಮಕ್ಕಳ ಮೇಲೆ ಕೈಮಾಡಿದ ಪ್ರಕರಣಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚೆಚ್ಚು ನಡೆದಷ್ಟೂ ಬಿಜೆಪಿಯಿಂದ ಮತಗಳು ದೂರವಾದವು. ಸುಳ್ಯ ಹೊರತು ಪಡಿಸಿ ಮತ್ಯಾವುದೇ ಕ್ಷೇತ್ರದಲ್ಲೂ ಬಿಜೆಪಿ ಗೆಲುವು ಕಾಣಲಿಲ್ಲ. ಭ್ರಷ್ಟಾಚಾರ, ಅನೈತಿಕತೆಯಲ್ಲೇ ಮುಳುಗಿಹೋಗಿದ್ದ ಅನೇಕರು ಈ ಚುನಾವಣೆಯಲ್ಲಿ ಸೋಲುಂಡಿದ್ದು ಆರೋಗ್ಯಕರ ಬೆಳವಣಿಗೆ.

ಕಾಂಗ್ರೆಸ್ ಸುಭದ್ರ, ಸ್ವಚ್ಛ ಆಡಳಿತ ನೀಡುವಲ್ಲಿ ಯಶ ಕಾಣಬಲ್ಲದೆ? ಇತಿಹಾಸದ ಪುಟಗಳನ್ನು ನೋಡಿದರೆ ಆಶಾದಾಯಕ ಭವಿಷ್ಯವೇನೂ ಕಾಣುವುದಿಲ್ಲ. ರಾಜಕೀಯ ಅನಿಶ್ಚಿತತೆ, ಅನೈತಿಕತೆ, ಭ್ರಷ್ಟಾಚಾರಕ್ಕೆ ಕರ್ನಾಟಕದ ಜನತೆ ಕೊಡುವ ಉತ್ತರವೆಂತದೆಂಬುನ್ನು ಈ ಚುನಾವಣೆ ಮಗದೊಮ್ಮೆ ಸಾಬೀತುಪಡಿಸಿದೆ. ಈ ಐದು ವರುಷಗಳ ಪಾಠದಿಂದ ಕಾಂಗ್ರೆಸ್ ಏನಾದರೂ ಕಲಿತಿದೆಯಾ? ಆ ಕಲಿಕೆಯ ಆಧಾರದಲ್ಲಿ ಮುನ್ನಡೆಯುತ್ತದೆಯಾ? ಕಾದು ನೋಡಬೇಕಷ್ಟೇ.

One thought on “ಸುಭದ್ರ ಸರಕಾರದ ನಿರೀಕ್ಷೆಯಲ್ಲಿ. . . .

  1. vasanthn

    ಜೆಡಿ ಎಸ್ ನೀವು ಹೇಳಿದ ಹಾಗೆ ಯಡಿಯೂರಪ್ಪ ರಾಜೀನಾಮೆ ನೀಡಿದ ನಂತರ ಯಾವುದೋ ಕಾಣದ ಮೌನಕ್ಕೆ ಒಳಗಾಗಿದ್ದು ನಿಜ. ಅವರ ಅವಕಾಶವಾದಿ ರಾಜಕಾರಣಕ್ಕೂ ಮತದಾರ ತಕ್ಕ ಉತ್ತರ ನೀಡಿದ್ದಾನೆ. ಅಪ್ಪ-ಮಕ್ಖಳ ಪಕ್ಷಕ್ಕೆ ಯಾವುದೇ ಸೈದಾಂತಿಕ ಚೌಕಟ್ಟಿಲ್ಲ. ಅಧಿಕಾರದ ಆಶೆಗಾಗಿ ಮತ್ತೊಮ್ಮೆ ಬಿಜೆಪಿ ಶಕ್ಯಬೆಳೆಸಲು ತೆರೆಮರೆ ಪ್ರಯತ್ನ ನಡೆಸಿದ್ದರು ಅದಕ್ಕೆ ಮತದಾರ ತಕ್ಕ ಉತ್ತರ ನೀಡಿದ್ದಾನೆ. ಕಾಂಗ್ರೆಸ್ ಪಯಾ‍್ಯವಲ್ಲದಿದ್ದರು, ಸಿದ್ದರಾಮಯ್ಯ ಒಂದು ಭರವಸೆ.

    Reply

Leave a Reply

Your email address will not be published. Required fields are marked *