Monthly Archives: May 2013

ಪ್ರೊ. ಮಾಧವ ಗಾಡ್ಗಿಳ್ ವರದಿ – ಒಂದು ಅವಲೋಕನ

– ಸಿ. ಯತಿರಾಜು

ಸಹ್ಯಾದ್ರಿಯ ಸಂಪತ್ತು

ಭಾರತದ ೭ ಪ್ರಮುಖ ಬೆಟ್ಟ ಸಾಲುಗಳಲ್ಲಿ ಪಶ್ಚಿಮ ಘಟ್ಟಗಳು ಅತ್ಯಂತ ಪ್ರಮುಖವಾದವು. ಇವು ದಕ್ಷಿಣದ ದಖನ್ ಪ್ರಸ್ಥಭೂಮಿಯ ಜಲಗೋಪುರ ಎಂದೇ ಪರಿಗಣಿಸಿಲ್ಪಟ್ಟಿವೆ. ದಖನ್ ಪ್ರಸ್ಥಭೂಮಿಯ ಪ್ರಮುಖವಾದ ೫೮ ನದಿಗಳು ಈ ಪಶ್ಚಿಮ ಘಟ್ಟಗಳಲ್ಲಿ ಜನಿಸುತ್ತವೆ. ಮುಂಗಾರು ಮಳೆಯ ಮಾರುತಗಳು ವರ್ಷದ ಕೆಲವೇ ತಿಂಗಳುಗಳಲ್ಲಿ ೨೦೦೦ ಮಿ.ಮೀ.ನಿಂದ ೮೦೦೦ ಮಿ.ಮೀ.ರವರೆಗೆ ಈ ಪ್ರದೇಶದಲ್ಲಿ ಮಳೆ ಸುರಿಸುತ್ತವೆ. ಪಶ್ಚಿಮ ಘಟ್ಟಗಳು ತಮ್ಮ ವಿಶಿಷ್ಟವಾದ ಭೌಗೋಳಿಕ ಲಕ್ಷಣಗಳಿಂದಾಗಿ ಭಾರತದ ವಾಯುಗುಣದ ಮೇಲೆ ಅದರಲ್ಲೂ ವಿಶೇಷವಾಗಿ ಮಳೆಯ ಮೇಲೆ ಅಗಾಧವಾದ ಪರಿಣಾಮ ಬೀರುತ್ತವೆ. ಪಶ್ಚಿಮ ಘಟ್ಟಗಳಲ್ಲಿ ಜನಿಸುವ ನದಿಗಳಲ್ಲಿ ೪೭ ನದಿಗಳು ಪೂರ್ವಕ್ಕೆ ಹರಿದು ವಿಶಾಲ ಮೈದಾನ ಪ್ರದೇಶಗಳಿಗೆ ನೀರುಣಿಸುತ್ತವೆ. ೮ ನದಿಗಳು ಪಶ್ಚಿಮಕ್ಕೆ ಹರಿದು ಕರಾವಳಿ ಪ್ರದೇಶದ ಜೀವನಾಡಿಗಳಾಗಿವೆ. ಉಳಿದ ೩ ನದಿಗಳು ದಕ್ಷಿಣಕ್ಕೆ ಹರಿಯುತ್ತವೆ. ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, western ghatsತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ಹರಡಿಕೊಂಡಿರುವ ಪಶ್ಚಿಮ ಘಟ್ಟಗಳಲ್ಲಿ ಸುಮಾರು ೫೦ಕ್ಕೂ ಅಧಿಕವಾದ ಪ್ರಮುಖ ಅಣೆಕಟ್ಟುಗಳಿವೆ. ಸುಮಾರು ೨೫ ಕೋಟಿ ಜನರು ಈ ನದಿಗಳಿಂದ ಮತ್ತು ಅಣೆಕಟ್ಟುಗಳಿಂದ ಕುಡಿಯುವ ನೀರು, ಕೃಷಿ ನೀರಾವರಿ, ಕೈಗಾರಿಕೆ, ಮುಂತಾದವುಗಳಿಗೆ ಅತ್ಯಗತ್ಯವಾದ ನೀರನ್ನು ಪಡೆಯುತ್ತಿದ್ದಾರೆ. ಹಾಗಾಗಿ ಇಡೀ ದಖನ್ ಪ್ರಸ್ಥಭೂಮಿಯ ಬಹುಪಾಲು ಜನರ ಅಸ್ತಿತ್ವ ಮತ್ತು ಭವಿಷ್ಯ ಪಶ್ಚಿಮ ಘಟ್ಟಾವಲಂಬಿಯಾಗಿದೆ.

ಇಡೀ ಜಗತ್ತಿನ ೩೫ ಜೀವ ವೈವಿಧ್ಯತಾ ಸೂಕ್ಷ್ಮ ತಾಣಗಳಲ್ಲಿ (Biodiversity Hotspots) ಪಶ್ಚಿಮ ಘಟ್ಟವೂ ಒಂದು ಪ್ರಮುಖ ತಾಣವಾಗಿದೆ. ಮಹಾ ಜೀವವೈವಿಧ್ಯತೆಯ ಅತ್ಯಂತ ೮ ಸೂಕ್ಷ್ಮ ತಾಣಗಳ ಪೈಕಿ ಪಶ್ಚಿಮ ಘಟ್ಟವು ಒಂದು ತಾಣವಾಗಿದೆ. ಈ ಘಟ್ಟಗಳು ಜೀವವೈವಿಧ್ಯತೆಯ ಮಹಾಭಂಡಾರಗಳು ೪೦೦೦ ಪ್ರಭೇದದ ಹೂಬಿಡುವ ಸಸ್ಯಗಳು, ೬೪೫ ನಿತ್ಯಹರಿದ್ವರ್ಣ ಜಾತಿ ಮರಗಳು, ೩೫೦ ರೀತಿಯ ಇರುವೆಗಳು, ೩೩೦ ರೀತಿಯ ಚಿಟ್ಟೆಗಳು, ೧೭೪ ಜಾತಿ ಕೀಟಗಳು, ೨೮೮ ಪ್ರಭೇದದ ಮೀನುಗಳು, ೨೨೦ ಉಭಯವಾಸಿ ಪ್ರಭೇದಗಳು, ೨೨೫ ಸರಿಸೃಪ ಪ್ರಭೇದಗಳು ೧೨೦ ಸ್ತನಿ ಪ್ರಭೇದಗಳು, ೫೦೦ಕ್ಕೂ ಅಧಿಕವಾದ ಪಕ್ಷಿ ಪ್ರಭೇದಗಳು ಇಲ್ಲಿ ಆಶ್ರಯ ಪಡೆದಿವೆ. ಈ ಪ್ರಭೇದಗಳಲ್ಲಿ ಅನೇಕವು ಈ ಪ್ರದೇಶಗಳಲ್ಲಿ ಮಾತ್ರ ದೊರಕುವ ಮತ್ತು ಬೇರೆಲ್ಲೂ ಕಾಣಸಿಗದಿರುವ ಸ್ಥಳ ವಿಶಿಷ್ಟ ಅಂತಃಸೀಮಿತ ಪ್ರಭೇದಗಳೆಂಬುದು ಅತ್ಯಂತ ಮಹತ್ವಪೂರ್ಣ ಸಂಗತಿಯಾಗಿದೆ. ಈಗಲೂ ಈ ಪ್ರದೇಶಗಳಲ್ಲಿ ಹೊಸ ಹೊಸ ಜೀವವೈವಿಧ್ಯತೆಯ ಪ್ರಭೇದಗಳು ನಿರಂತರವಾಗಿ ಪತ್ತೆಯಾಗುತ್ತಲೇ ಇವೆ. ಹಾಗಾಗಿ ಪಶ್ಚಿಮ ಘಟ್ಟಗಳು ಅತ್ಯಮೂಲ್ಯವಾದ ಬೆಲೆ ಕಟ್ಟಲಾಗದ ಅಗಣಿತ ಜೀವವೈವಿಧ್ಯತೆಯ ಜೀವಂತ ಗಣಿಯಾಗಿವೆ.

ದಿನೇ ದಿನೇ ಹೆಚ್ಚುತ್ತಾ ಸಾಗಿರುವ ಒತ್ತಡಗಳು

ಇಂತಹ ನಿಸರ್ಗದ ರಮಣೀಯ ಸೃಷ್ಟಿಯಾದ ಪಶ್ಚಿಮಘಟ್ಟಗಳು ಹೆಚ್ಚುತ್ತಿರುವ ಜನಸಂಖ್ಯೆ, ಅದಕ್ಕನುಗುಣವಾಗಿ ಹೆಚ್ಚಾಗುತ್ತಾ ಸಾಗಿರುವ ಅಗತ್ಯಗಳು ಮತ್ತು ಅತಿಯಾಸೆಗಳಿಂದಾಗಿ ಒತ್ತಡಕ್ಕೆ ಸಿಲುಕುತ್ತಿವೆ. ಆಧುನಿಕತೆಯ ಅಗತ್ಯಗಳು ಮತ್ತು ಅತಿಯಾಸೆ ಸೃಷ್ಟಿಸಿರುವ ಬೇಡಿಕೆಗಳ ಪೂರೈಕೆಗಾಗಿ ಪಶ್ಚಿಮ ಘಟ್ಟಗಳ ವನರಾಶಿಯನ್ನು, ಖನಿಜಗಳನ್ನು, ಜೀವವೈವಿಧ್ಯತೆಯನ್ನು ತರಿದು ಚೆಂಡಾಡಲಾಗುತ್ತಿದೆ. ಆಧುನಿಕ ದೇವಾಲಯಗಳೆಂದು ಪರಿಗಣಿತವಾದ ಅಣೆಕಟ್ಟುಗಳಿಗೆ, ಜಲವಿದ್ಯುತ್ ಯೋಜನೆಗಳಿಗೆ ಅನೇಕ ರೀತಿಯ ಗಣಿಗಾರಿಕೆಗೆ, ರಸ್ತೆ ರೈಲು ಮುಂತಾದ ಮೂಲಸೌಕರ್ಯಗಳಿಗೆ, ವಿದ್ಯುತ್ ಸಾಗಾಣಿಕಾ ಲೈನುಗಳಿಗೆ, ಕೃಷಿಗೆ, ಪ್ರವಾಸೋದ್ಯಮಕ್ಕೆ ಇನ್ನೂ ಮುಂತಾದ ಚಟುವಟಿಕೆಗಳಿಗೆ ವಿಶಾಲವಾದ ಪಶ್ಚಿಮ ಘಟ್ಟ ಪ್ರದೇಶಗಳ ಪರಿಸರವನ್ನು ಅನಾಮತ್ತಾಗಿ ಹಾಳುಗೆಡವಲಾಗುತ್ತಿದೆ ಇಲ್ಲವೆ ಮುಳುಗಿಸಲಾಗುತ್ತಿದೆ. ಈ ವಿನಾಶಕಾರಿ ಚಟುವಟಿಕೆಗಳ ಮೂಲಕ ವನ್ಯಜೀವಿಗಳನ್ನು, ಬುಡಕಟ್ಟು ಮತ್ತು ಗಿರಿಜನರನ್ನು ಅವರ ಮೂಲ ನೆಲೆಗಳಿಂದ ಒಕ್ಕಲೆಬ್ಬಿಸಿ ನಿರಾಶ್ರಿತರನ್ನಾಗಿಸಿ ಅವುಗಳ ಸಂತತಿ ಕ್ರಮೇಣವಾಗಿ ಕರಗುತ್ತಾ ಸಾಗಿ ಶಾಶ್ವತವಾಗಿ ಕಣ್ಮರೆಯಾಗುವ ಅಪಾಯಕ್ಕೀಡಾಗುವಂತೆ, ವಿನಾಶವಾಗುವಂತೆ ಮಾಡಲಾಗುತ್ತಿದೆ.

ಸಂರಕ್ಷಣೆಯ ಸಮರಗಳು

ಅತ್ಯಮೂಲ್ಯವಾದ ಪಶ್ಚಿಮ ಘಟ್ಟಗಳನ್ನು ಇಂತಹ ವಿನಾಶಕಾರಿ ಚಟುವಟಿಕೆಗಳಿಂದ ಸಂರಕ್ಷಿಸಿ ಕಾಪಾಡಲು ನಿರಂತರವಾಗಿ ಅನೇಕ ಪ್ರಯತ್ನಗಳು ನಡೆಯುತ್ತಿವೆ. ಕಾಯ್ದಿರಿಸಿದ ಅರಣ್ಯಗಳು, ರಾಷ್ಟ್ರೀಯ ಉದ್ಯಾನಗಳು, ಅಭಯಾರಣ್ಯಗಳು, ವನ್ಯಜೀವಿಧಾಮಗಳು, ಕಾಯ್ದಿರಿಸಿದ ಜೀವಾವಲಯಗಳು ಮುಂತಾದ ರೂಪಗಳಲ್ಲಿ ಪಶ್ಚಿಮ ಘಟ್ಟಗಳನ್ನು ಸಂರಕ್ಷಿಸುವ ಹಲವಾರು ಪ್ರಯತ್ನಗಳು ನಡೆಯುತ್ತಿದ್ದರೂ ಅವು ನಿರೀಕ್ಷಿತ ಪ್ರಮಾಣ ಯಶಸ್ಸನ್ನು ಪಡೆಯದೆ ದಿನೇ ದಿನೇ ವಿಕೃತ ಅಭಿವೃದ್ಧಿಯ ಅವ್ಯಾಹತ ದಾಳಿಗೆ ಬಲಿಯಾಗುತ್ತಾ ಸಾಗಿವೆ. ಮೇಲಿನಿಂದ ಹೇರಲ್ಪಟ್ಟ ಎಚ್ಚರಗೇಡಿ, ಅಭಿವೃದ್ಧಿ ಕಾರ್ಯಗಳು ಮತ್ತು ವಿವೇಚನಾರಹಿತ ಸಂರಕ್ಷಣೆಯ ಪ್ರಯತ್ನಗಳು ಇಂದು ಪಶ್ಚಿಮ ಘಟ್ಟಗಳ ಅಸ್ತಿತ್ವಕ್ಕೆ ಕಂಟಕವಾಗಿ ಪರಿಣಮಿಸಿವೆ. ಬೆಲೆ ಕಟ್ಟಲಾಗದ, ಬಹುಪಯೋಗಿ, ಜೀವನಾಧಾರವಾದ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕೂಗು ಇಂದು ಹಿಂದೆಂದಿಗಿಂತಲೂ ಅಧಿಕವಾಗಿದೆ. “ಮೌನಕಣಿವೆ ಉಳಿಸಿ ಆಂದೋಲನ” ಮತ್ತು “ಪಶ್ಚಿಮ ಘಟ್ಟ ಉಳಿಸಿ” Kudremukh_National_Park,_Western_Ghats,_Karnatakaಅಭಿಯಾನಗಳಿಂದಾರಂಭಗೊಂಡ ಪಶ್ಚಿಮ ಘಟ್ಟ ಸಂರಕ್ಷಣಾ ಚಳುವಳಿಗಳು ಮತ್ತು ಅನೇಕ ಚದುರಿದಂತಹ ವೈವಿಧ್ಯಮಯ ಸಂರಕ್ಷಣಾ ಪ್ರಯತ್ನಗಳು ಮತ್ತು ಹೋರಾಟಗಳ ನಡುವೆಯೂ ಪಶ್ಚಿಮ ಘಟ್ಟಗಳ ಮೇಲೆ ಬೃಹತ್ ಪ್ರಮಾಣದ ವಿನಾಶಕಾರಿ ಚಟುವಟಿಕೆಗಳ ದಾಳಿ ವ್ಯಾಪಕವಾಗಿ ನಿರಂತರವಾಗಿ ಮುಂದುವರಿದಿದೆ. ಇದರಿಂದಾಗಿ ಜೀವಸಲಿಲವಾಗಿರುವ ಪಶ್ಚಿಮ ಘಟ್ಟಗಳು ದಿನೇ ದಿನೇ ಬರಡಾಗುತ್ತಾ ಬೋಳಾಗುತ್ತಾ ಸಾಗಿವೆ. ಈ ಬೆಳವಣಿಗೆಗಳು ಕೇವಲ ಪಶ್ಚಿಮ ಘಟ್ಟಗಳಿಗೆ ಮಾತ್ರ ಮಾರಕವಾಗಿಲ್ಲ, ಅವು ವಿಶಾಲವಾದ ದಖನ್ ಪ್ರಸ್ಥಭೂಮಿಯ ಮೈದಾನ ಪ್ರದೇಶಗಳಿಗೂ ಮಾರಕವಾಗಿ ಪರಿಣಮಿಸುತ್ತಿವೆ. ಈ ವರ್ಷ ನಮ್ಮ ರಾಜ್ಯದ ಬಹುಪಾಲು ಅಣೆಕಟ್ಟುಗಳ ಜಲಮಟ್ಟ ದಾಖಲೆಯ ಕುಸಿತ ಕಂಡಿದೆ. ಕುಡಿಯುವ ನೀರಿಗೆ ರಾಜಧಾನಿ ಬೆಂಗಳೂರು ಸೇರಿದಂತೆ ಹಲವಾರು ನಗರ ಪಟ್ಟಣಗಳು ಹಾಹಾಕಾರ ಪಡುವಂತಾಗಿದೆ. ಬೃಹತ್ ಅಣೆಕಟ್ಟುಗಳು ಖಾಲಿಯಾಗಿ ಅಚ್ಚುಕಟ್ಟು ಪ್ರದೇಶದ ಕೃಷಿಗೆ ಕಂಟಕ ಎದುರಾಗಿದೆ. ಈಗಲಾದರೂ ನಾವು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ನಮ್ಮ ಬೇಜವಾಬ್ದಾರಿತನಕ್ಕೆ ನಾವು ಅಪಾರವಾದ ಬೆಲೆ ತೆರಬೇಕಾಗುತ್ತದೆ.

ಸಂಕಷ್ಟಕ್ಕೊಂದು ಸಮಿತಿ

ಇವೆಲ್ಲವನ್ನೂ ಮನವರಿಕೆ ಮಾಡಿಕೊಂಡಿದ್ದ ಕೇಂದ್ರ ಸರ್ಕಾರದ ಅಂದಿನ ಪರಿಸರ ಮತ್ತು ಅರಣ್ಯ ಸಚಿವರಾಗಿದ್ದ ಜೈರಾಮ್ ರಮೇಶ್‌ರವರು ಪಶ್ಚಿಮ ಘಟ್ಟಗಳ ಸಮಗ್ರ ಸಂರಕ್ಷಣೆ ಮಾರ್ಗೋಪಾಯಗಳನ್ನು ಸಲಹೆ ಮಾಡಲು ಖ್ಯಾತ ಪರಿಸರ ತಜ್ಞರಾದ ಪ್ರೊ. ಮಾಧವ್ ಗಾಡ್ಗೀಳ್ ಅಧ್ಯಕ್ಷತೆಯಲ್ಲಿ ‘ಪಶ್ಚಿಮ ಘಟ್ಟ ಜೀವಿ ಪರಿಸ್ಥಿತಿ ಪರಿಣಿತರ ತಂಡ’ (Western Ghat’s Ecology Expert Panel) ವೊಂದನ್ನು ನೇಮಿಸಿ ಶೀಘ್ರವಾಗಿ ವರದಿ ನೀಡಲು ಕೋರಿದ್ದರು. ಅವರ ಕೋರಿಕೆಯ ಮೇರೆಗೆ ಸುಮಾರು ೧೮ ತಿಂಗಳು ಪರಿಶ್ರಮ ಹಾಕಿ ಈ ಪರಿಣಿತ ತಂಡ ೩೦-೮-೨೦೧೧ರಂದು ಸರ್ಕಾರಕ್ಕೆ ವರದಿ ಸಲ್ಲಿಸಿತು. ಸರ್ಕಾರ ಈ ವರದಿಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡದೆ ತಡೆಹಿಡಿಯುವ ಪ್ರಯತ್ನ ಮಾಡಿತು. ಇದೇ ಅವಧಿಯಲ್ಲಿ ಜೈರಾಮ್ ರಮೇಶ್‌ರವರ ಸ್ಥಾನದಲ್ಲಿ ಶ್ರೀಮತಿ ಜಯಂತಿ ನಟರಾಜನ್ ಮಂತ್ರಿಯಾಗಿ ಬಂದಿದ್ದರು. ಪರಿಸರವಾದಿಗಳು, ಮಾಹಿತಿ ಹಕ್ಕು ಕಾರ್ಯಕರ್ತರ ಹೋರಾಟದ ಫಲವಾಗಿ ಪ್ರೊ. ಮಾಧವ್ ಗಾಡ್ಗೀಳ್ ಅಧ್ಯಕ್ಷತೆಯ ಪರಿಣಿತ ವರದಿ ಸಾರ್ವಜನಿಕರಿಗೆ ಲಭ್ಯವಾಯಿತು. ಈ ವರದಿ ಬಹಿರಂಗಗೊಂಡ ಮೇಲೆ ಪಶ್ಚಿಮ ಘಟ್ಟ ಸಂರಕ್ಷಣೆ ಮತ್ತು ಅಭಿವೃದ್ಧಿಯ ವಿಚಾರವಾಗಿ ಸಾರ್ವಜನಿಕ ವಿವಾದ ಆರಂಭಗೊಂಡಿದೆ. ಪಶ್ಚಿಮ ಘಟ್ಟಗಳಿರುವ ರಾಜ್ಯ ಸರ್ಕಾರಗಳು, ಎಲ್ಲ ರಾಜಕೀಯ ಪಕ್ಷಗಳು ಈ ಪರಿಣಿತ ವರದಿಯ ಶಿಫಾರಸ್ಸುಗಳ ಬಗ್ಗೆ ತೀವ್ರ ವಿರೋಧ ಮತ್ತು ಆಕ್ಷೇಪಣೆಗಳನ್ನು ಎತ್ತುತ್ತಿವೆ.

ಪ್ರೊ. ಮಾಧವ್ ಗಾಡ್ಗೀಳ್ ಸಮಿತಿಯ ಪ್ರಮುಖವಾದ ಶಿಫಾರಸ್ಸುಗಳು :

ಜೀವಿ ಪರಿಸರಾತ್ಮಕ ಸೂಕ್ಷ್ಮಪ್ರದೇಶ ಮತ್ತು ವಲಯಗಳು

ಪ್ರೊ. ಮಾಧವ್ ಗಾಡ್ಗೀಳ್ ನೇತೃತ್ವದ ಪರಿಣಿತ ತಂಡ ನೀಡಿದ ವರದಿಯಲ್ಲಿ ಇಡೀ ಪಶ್ಚಿಮ ಘಟ್ಟ ಪ್ರದೇಶವನ್ನು ‘ಜೀವಿ ಪರಿಸರಾತ್ಮಕ ಸೂಕ್ಷ್ಮ ಪ್ರದೇಶ’ವೆಂದು (Ecologically Sensitive Area – ESA) ಪರಿಗಣಿಸಬೇಕೆಂದು ಹೇಳಲಾಗಿದೆ. ಮುಂದುವರಿದು ಈ ವರದಿ ಪಶ್ಚಿಮ ಘಟ್ಟಗಳ ವಿವಿಧ ಪ್ರದೇಶಗಳ ಜೀವಿ ಪರಿಸರಾತ್ಮಕ ಸೂಕ್ಷ್ಮತೆಯನ್ನಾಧರಿಸಿ ಇಡೀ ಪ್ರದೇಶವನ್ನು ೩ ಜೀವಿ ಪರಿಸರಾತ್ಮಕ ಸೂಕ್ಷ್ಮ ವಲಯಗಳನ್ನಾಗಿ (Ecologically Sensitive Zones-ESZ) ಗುರುತಿಸಿದೆ. ಅತ್ಯುನ್ನತವಾದ ಸೂಕ್ಷ್ಮತೆಯನ್ನು ಹೊಂದಿರುವ (Highest Sensitivity) ಪ್ರದೇಶಗಳನ್ನು ESZ-1 ಎಂದು ಗುರುತಿಸಿದೆ. ಅತಿ ಸೂಕ್ಷ್ಮತೆಯನ್ನು (High Sensitivity) ಹೊಂದಿರುವ ಪ್ರದೇಶವನ್ನು ESZ-2 ಎಂದು, ಮಧ್ಯಮ ಪ್ರಮಾಣದ ಸೂಕ್ಷ್ಮತೆಯನ್ನು (Moderate Sensitivity) ಹೊಂದಿರುವ ಪ್ರದೇಶವನ್ನು ESZ-3 ಎಂದು ಗುರುತಿಸಿದೆ.

ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಈಗಾಗಲೇ ಬೇರೆ ಬೇರೆ ಕಾಯ್ದೆಗಳನ್ವಯ “ಸಂರಕ್ಷಿತ ಪ್ರದೇಶಗಳೆಂದು” (Protected Areas) ಘೋಶಿಸಲ್ಪಟ್ಟಿರುವ ಪ್ರದೇಶಗಳ ನಿರ್ವಹಣೆ ಯಥಾವತ್ತಾಗಿ ಮುಂದುವರಿಯಲಿದೆ. ಅವುಗಳಲ್ಲಿ ಯಾವುದೇ ಬದಲಾವಣೆಗಳನ್ನು ಸೂಚಿಸಲಾಗಿಲ್ಲ. ಇವುಗಳಿಗೆ ಪೂರಕವಾಗಿ ಜೀವಿ ಪರಿಸರಾತ್ಮಕ ಸೂಕ್ಷ್ಮವಲಯ ೧, ೨ ಮತ್ತು ೩ನ್ನು ಮರುಗುರುತಿಸಲಾಗುತ್ತದೆ. ಹೀಗಾಗಿ ಈ ಪರಿಣಿತ ವರದಿ ಸಂಪೂರ್ಣವಾಗಿ ಪಶ್ಚಿಮ ಘಟ್ಟ ಪ್ರದೇಶವನ್ನು ‘ಸಂರಕ್ಷಿತ ಪ್ರದೇಶ’, ESZ-1, ESZ-2 ಮತ್ತು ESZ-3 ಎಂಬ ನಾಲ್ಕು ವಲಯಗಳನ್ನು ೨೨೦೦ ಗ್ರಿಡ್‌ಗಳಾಗಿ ವಿಭಜನೆ ಮಾಡಿದೆ. ಈಗ ಹಾಲಿ ಇರುವ ಸಂರಕ್ಷಿತ ಪ್ರದೇಶ ಮತ್ತು ESZ-1 ರ ವಿಸ್ತೀರ್ಣ ಶೇ. ೬೦ಕ್ಕಿಂತ ಹೆಚ್ಚಾಗದಂತೆ ನೋಡಿಕೊಳ್ಳಲಾಗಿದೆ. ಇದರ ಜೊತೆಗೆ ESZ-2 ರ ಪ್ರದೇಶವನ್ನು ಸೇರಿಸಿಕೊಂಡರೆ ಅದು ಒಟ್ಟು ಪಶ್ಚಿಮ ಘಟ್ಟ ಪ್ರದೇಶದ ಶೇ. ೭೫ ರಷ್ಟಾಗುತ್ತದೆ. ಇನ್ನುಳಿದ ಶೇ. ೨೫ ರಷ್ಟು ಪ್ರದೇಶವನ್ನು ಮಾತ್ರ ESZ-3 ವಲಯವನ್ನಾಗಿ ಗುರುತಿಸಲಾಗಿದೆ. ಸಮಿತಿ ವಲಯಗಳನ್ನಾಗಿ ಗುರುತಿಸುವ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿ ಕರಡು ವಿಭಜನೆಯನ್ನು ಮಾತ್ರ ಮಾಡಿದೆ. ಆದರೆ ವಲಯಗಳನ್ನು ಅಂತಿಮವಾಗಿ ನಿರ್ಧರಿಸುವ ಪರಮಾಧಿಕಾರವನ್ನು ಮುಂದೆ ರಚಿತವಾಗಲಿರುವ ‘ಪಶ್ಚಿಮ ಘಟ್ಟ ಜೀವಿ ಪರಿಸರಾತ್ಮಕ ಪ್ರಾಧಿಕಾರ’ದ ಮಾರ್ಗದರ್ಶನದಲ್ಲಿ ಸ್ಥಳೀಯ ಸಂಸ್ಥೆಗಳು ಅಂತಿಮವಾಗಿ ನಿರ್ಧರಿಸಬೇಕೆಂದು ಹೇಳುತ್ತದೆ. ESZ ವಲಯವಾರು ವಿಂಗಡಣೆ ಮತ್ತು ಮರು ಗುರುತಿಸುವಿಕೆಯನ್ನು ಅಧಿಕಾರಿಗಳಿಗೆ ಬಿಡಬಾರದು ಅದನ್ನು ಸ್ಥಳೀಯ ಜನ ನಿರ್ಧಾರ ಮಾಡಬೇಕೆಂದು ಹೇಳುವ ಮೂಲಕ ಅಭಿವೃದ್ಧಿ ಮತ್ತು ಸಂರಕ್ಷಣೆಯ ವಿಚಾರಗಳನ್ನು ಅತ್ಯಂತ ವಿಕೇಂದ್ರಿಕೃತವಾಗಿ ಜನ ಸಹಭಾಗಿತ್ವದಲ್ಲಿ ನಿರ್ಧಾರ ಮಾಡಬೇಕೆಂದು ವರದಿ ತಿಳಿಸಿದೆ.

ಪಶ್ಚಿಮ ಘಟ್ಟ ಸಂರಕ್ಷಣೆಗಾಗಿ ಸೂಚಿತ ನಿಯಂತ್ರಣಗಳು ಮತ್ತು ಪ್ರೋತ್ಸಾಹಕ ಕ್ರಮಗಳು
ಪ್ರಮುಖ ನಿಯಂತ್ರಣ ಕ್ರಮಗಳು

  1. ವಂಶವಾಹಿ ರೂಪಾಂತರಿತ ಬೆಳೆಗಳಿಗೆ ಅವಕಾಶ ನೀಡಬಾರದು.
  2. ಪ್ಲಾಸ್ಟಿಕ್ ಬಳಕೆಗೆ ಸಂಪೂರ್ಣ ನಿಷೇಧ.
  3. ವಿಶೇಷ ಆರ್ಥಿಕ ವಲಯಗಳಿಗೆ (SEZ) ಅವಕಾಶ ನೀಡಬಾರದು.
  4. ಹೊಸ ಪರ್ವತ ತಾಣಗಳಿಗೆ ಅವಕಾಶ ನೀಡಬಾರದು. (Hill Stations)
  5. ಸಾರ್ವಜನಿಕ ಭೂಮಿಯನ್ನು ಖಾಸಗಿ ಭೂಮಿಯಾಗಿ ಪರಿವರ್ತಿಸಬಾರದು.
  6. ಪರಿಸರಸ್ನೇಹಿ ಕಟ್ಟಡ ನೀತಿ ಸಂಹಿತೆ ಅಳವಡಿಸಿಕೊಂಡು ಕಟ್ಟಡ ನಿರ್ಮಾಣ ಮಾಡಬೇಕು.
  7. ಯಾವುದೇ ಹಳ್ಳ/ನದಿಗಳ ಸ್ವಾಭಾವಿಕ ಹರಿವನ್ನು ವಿದ್ಯುತ್ ಯೋಜನೆಗಳಿಗೆ ತಿರುಗಿಸಬಾರದು.
  8. ಜೀವಿತಾವಧಿ ಪೂರೈಸಿರುವ ಹಳೆ ಅಣೆಕಟ್ಟುಗಳು/ಉಷ್ಣ ಸ್ಥಾವರಗಳನ್ನು ಕಳಚಬೇಕು. (Decommissioned).
  9. ನದೀ ಪಾತ್ರಗಳ ನೀರಿನ ಅಂತರ್‌ವರ್ಗಾವಣೆಗೆ ಅವಕಾಶ ನೀಡಬಾರದು.
  10. ವಾಣಿಜ್ಯ ಬೆಳೆ ಪ್ರದೇಶಗಳಲ್ಲಿ/ರಸ್ತೆಗಳಲ್ಲಿ ಕಳೆನಾಶಕಗಳ ಬಳಕೆಯನ್ನು ನಿಷೇಧಿಸಬೇಕು.

ESZ-1 ರಲ್ಲಿನ ನಿಯಂತ್ರಣಗಳು

  1. ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಗಳಿಗೆ ಪರಿವರ್ತಿಸಬಾರದು. ಸ್ಥಳೀಯ ಜನರ ಜನಸಂಖ್ಯಾ ಹೆಚ್ಚಳಕ್ಕನುಸಾರವಾಗಿ ಹಾಲಿ ಇರುವ ನಿವಾಸ ಪ್ರದೇಶಗಳನ್ನು ವಿಸ್ತರಿಸಬಹುದು. ಕೃಷಿ ಭೂಮಿಯನ್ನು ಅರಣ್ಯಗಳಾಗಿ ಇಲ್ಲವೆ ಮರ ಬೆಳೆ ಪ್ರದೇಶಗಳಾಗಿ ಪರಿವರ್ತಿಸಬಹುದು.
  2. ಪರಿಸರ ಸಚಿವಾಲಯದ ಪ್ರವಾಸ ನೀತಿಯನುಸಾರವಾಗಿ ಹಾಲಿ ಇರುವ ಹೋಟೆಲುಗಳು ಮತ್ತು ರೆಸಾರ್ಟ್‌ಗಳನ್ನು ಮುಂದುವರಿಸುವುದು.
  3. ವಿಷಕಾರಿ ತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ಅವಕಾಶ ನೀಡಬಾರದು.
  4. ಸ್ಥಳೀಯ ಯೋಜನಾ ಪ್ರಾಧಿಕಾರಗಳು ಪರಿಸರ ಪರಿಣಾಮ ಅಂದಾಜು ಅಧ್ಯಯನ ನಡೆಸಿ ರಸ್ತೆ ಮತ್ತಿತರ ಮೂಲ ಸೌಕರ್ಯಾಭಿವೃದ್ಧಿ ಯೋಜನೆಗಳಿಗೆ ಅವಕಾಶ ನೀಡಬೇಕು.
  5. ಹಂತಹಂತವಾಗಿ ೫ ವರ್ಷಗಳೊಳಗಾಗಿ ರಾಸಾಯನಿಕ ಕೀಟ/ಕಳೆನಾಶಕಗಳನ್ನು ನಿಷೇಧಿಸಬೇಕು.
  6. ಹೊಸದಾಗಿ ಗಣಿ, ಕಲ್ಗಣಿ ಮತ್ತು ಮರಳು ಗಣಿಗಾರಿಕೆಗೆ ಲೈಸೆನ್ಸ್ ನೀಡಬಾರದು. ಹಾಲಿ ನಡೆಯುತ್ತಿರುವ ಗಣಿಗಾರಿಕೆಯನ್ನು ೫ ವರ್ಷಗಳೊಳಗಾಗಿ, ಸಂಪೂರ್ಣವಾಗಿ ನಿಷೇಧಿಸಬೇಕು.
  7. ಯಾವುದೇ ಮಾಲಿನ್ಯ ಉಂಟು ಮಾಡುವ (ಕೆಂಪು ಮತ್ತು ಕಿತ್ತಳೆ) ಹೊಸ ಕೈಗಾರಿಕೆಗಳಿಗೆ ಅವಕಾಶ ನೀಡಬಾರದು. ಈಗ ಹಾಲಿ ಇರುವ ಇಂತಹ ಕೈಗಾರಿಕೆಗಳನ್ನು ೨೦೧೬ರ ವೇಳೆಗೆ ಶೂನ್ಯ ಮಾಲಿನ್ಯದ ಹಂತಕ್ಕಿಳಿಸುವುದು.
  8. ದಡ ಮೀರಿ ಹರಿಯದ (Run of the river) ನದೀ ಅಣೆಕಟ್ಟು ಯೋಜನೆಗಳಿಗೆ ೩ ಮೀ ಎತ್ತರದವರೆಗೆ ಮಾತ್ರ ಅನುಮತಿಸುವುದು.
  9. ಹೊಸ ಉಷ್ಣ ಸ್ಥಾವರಗಳು, ಬೃಹತ್ ಪವನ ವಿದ್ಯುತ್ ಯೋಜನೆಗಳಿಗೆ ಅವಕಾಶ ನೀಡಬಾರದು.
  10. ಹೊಸ ಹೆದ್ದಾರಿಗಳನ್ನು, ವೇಗ ಹೆದ್ದಾರಿಗಳನ್ನು ತಪ್ಪಿಸುವುದು. ಹೊಸ ರೈಲ್ವೆ ಲೈನುಗಳಿಗೆ, ಪ್ರಮುಖ ರಸ್ತೆಗಳಿಗೆ ಅವಕಾಶ ನೀಡಬಾರದು.
  11. ನೀಲಗಿರಿಯಂತಹ ಅನ್ಯ ಪ್ರದೇಶಿಯ ಏಕ ಜಾತಿ ನೆಡುತೋಪುಗಳಿಗೆ ಅವಕಾಶ ನೀಡಬಾರದು.

ಇದೇ ರೀತಿ ESZ-2, ESZ-3 ರಲ್ಲೂ ಅನೇಕ ನಿಯಂತ್ರಣಗಳನ್ನು ಮತ್ತು ಸಡಿಲ ಅವಕಾಶಗಳನ್ನು ವರದಿ ಕಲ್ಪಿಸಿದೆ. ಕೆಲವು ನಿರ್ದಿಷ್ಟ ಪ್ರದೇಶಗಳನ್ನು ‘ಹೋಗಬಹುದಾದ’ (Go Areas) ಪ್ರದೇಶಗಳೆಂದು ಮತ್ತೆ ಕೆಲವನ್ನು ‘ಹೋಗಬಾರದ’ (No-Go Areas) ಪ್ರದೇಶಗಳೆಂದು ಗುರುತಿಸುವುದು ಈ ವಲಯವಾರು ವಿಂಗಡಣೆಯ ಪ್ರಮುಖವಾದ ಉದ್ದೇಶ. ನೀರು ಹರಿವ ದಾರಿ, ಜಲಾಗಾರಗಳು ವಿಶೇಷ ಆವಾಸಗಳು, ಭೌಗೋಳಿಕ ನಿರ್ಮಾಣಗಳು ಜೀವವೈವಿಧ್ಯತೆಯ ಶ್ರೀಮಂತ ಪ್ರದೇಶಗಳು, ಪವಿತ್ರವನಗಳು ಇತ್ಯಾದಿಗಳು ಹೋಗಬಾರದ ಪ್ರದೇಶಗಳು. ಈ ಪ್ರದೇಶಗಳಲ್ಲಿ ಮಾನ ಚಟುವಟಿಕೆಗಳ ಮಧ್ಯ ಪ್ರವೇಶ ಇರಲೇ ಬಾರದು. ಅನಿವಾರ್ಯವಾದರೆ ಕನಿಷ್ಟ ಪ್ರಮಾಣದಲ್ಲಿರಬೇಕು. ಮತ್ತೆ ಇನ್ನುಳಿದ ಪ್ರದೇಶಗಳಲ್ಲಿ ನಿಯಂತ್ರಿತ ಮಾನವ ಚಟುವಟಿಕೆಗಳಿಗೆ ಮತ್ತು ಸೀಮಿತ ಮಧ್ಯ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.

ಪ್ರೋತ್ಸಾಹಕ ಸಲಹೆಗಳು :

ವರದಿಯಲ್ಲಿ ಕೇವಲ, ನಿಷೇಧಾತ್ಮಕ ಮತ್ತು ನಿಯಂತ್ರಣಗಳನ್ನಷ್ಟೇ ಸಲಹೆ ಮಾಡದೆ ಕೆಲವು ಪ್ರೋತ್ಸಾಹಕ ಮತ್ತು ಧನಾತ್ಮಕ ಸಲಹೆಗಳನ್ನು ನೀಡಲಾಗಿದೆ. (೧) ಸಾವಯವ ಕೃಷಿಗೆ ಪ್ರೋತ್ಸಾಹ ನಿಡುವುದು, (೨) ದೇಶಿಯ ದನಕರುಗಳನ್ನು ಸಾಕುವುದು. (೩) ಗೋಮಾಳ ಹುಲ್ಲುಗಾವಲುಗಳನ್ನು ಮರುಸ್ಥಾಪಿಸುವುದು, (೪) ಜಲಾನಯನ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದು. (೫) ಅತಿ ಎತ್ತರದ ಕಣಿವೆ ಜೌಗು ಪ್ರದೇಶಗಳನ್ನು ಜಲಾಗಾರಗಳನ್ನು ರಕ್ಷಿಸುವುದು, (೬) ಸಾವಯವ ಗೊಬ್ಬರ, ಗೋಬರ್ ಅನಿಲ ತಯಾರಿಕಾ ಚಟುವಟಿಕೆಗಳಿಗೆ ಪ್ರೋತ್ಸಾಹ; (೭) ಸಂರಕ್ಷಣಾ ಸೇವಾ ಶುಲ್ಕವನ್ನು (Conservation Service Charges) ನೀಡುವ ಮೂಲಕ ಸಾಂಪ್ರದಾಯಿಕ ಬೆಳೆಗಳ ಬೀಜಗಳ ಸಂರಕ್ಷಣೆಗೆ, ಸ್ಥಳೀಯ ಮೀನಿನ ಪ್ರಭೇದಗಳನ್ನು ಕೆರೆಕೊಳ ನದಿಗಳಲ್ಲಿ ಸಾಕಲು ಪ್ರೋತ್ಸಾಹ ನೀಡಬೇಕೆಂದು ವರದಿ ಶಿಫಾರಸ್ಸು ಮಾಡುತ್ತದೆ.

ಅರಣ್ಯ ಹಕ್ಕು ಕಾಯ್ದೆಯನ್ನು ಅದರ ಮೂಲ ಆಶಯದಂತೆ ಜಾರಿಗೊಳಿಸಬೇಕು. ಅರಣ್ಯ ಸಂಪನ್ಮೂಲಗಳ ಮೇಲೆ ಜನಗಳಿಗಿರುವ ಸಾಮುದಾಯಿಕ ಹಕ್ಕು ಮತ್ತು ಅರಣ್ಯವಾಸಿಗಳ ಹಕ್ಕುಗಳು ಅವರಿಗೆ ನ್ಯಾಯವಾಗಿ ದೊರಕುವಂತಾಗಬೇಕು. ಜಂಟಿ ಅರಣ್ಯ ನಿರ್ವಹಣಾ ಕಾರ್ಯಕ್ರಮಗಳು ಪೂರ್ಣವಾಗಿ ಅರಣ್ಯವಾಸಿಗಳಿಗೆ ಹಸ್ತಾಂತರಿಸಲ್ಪಡಬೇಕು. ಸಾಂಪ್ರದಾಯಿಕ ಸಣ್ಣ ಖಾಸಗಿ ಭೂಮಿಯುಳ್ಳವರಿಗೆ ಅರಣ್ಯ ಹಕ್ಕು ಕಾಯ್ದೆ ಕೂಡ ಮಾಡುವ ಹಕ್ಕುಗಳನ್ನು ಮಾನ್ಯ ಮಾಡಬೇಕು. ಇವರು ತಮ್ಮ ಜಮೀನಿನಲ್ಲಿ ಹಸಿರು ಹೊದಿಕೆಯನ್ನು ನಿರ್ವಹಣೆ ಮಾಡಲು, ವಾರ್ಷಿಕ ಬೆಳೆಗಳಿಂದ ಬಹುವಾರ್ಷಿಕ ಬೆಳೆಗಳಿಗೆ ಬದಲಾಯಿಸಿಕೊಳ್ಳಲು ವಿವಿಧ ರೂಪಗಳ ಪ್ರೋತ್ಸಾಹಗಳನ್ನು ನೀಡಬೇಕು. ಖಾಸಗಿ ಭೂಮಿಗಳಲ್ಲಿ ಜೀವ ವೈವಿಧ್ಯತಾ ಅಂಶಗಳನ್ನು, ಪವಿತ್ರ ವನಗಳನ್ನು, ಸಮುದಾಯ ಅರಣ್ಯ ಸಂಪನ್ಮೂಲಗಳನ್ನು, ಜಂಟಿ ಅರಣ್ಯ ನಿರ್ವಹಣಾ ಭೂಮಿಗಳನ್ನು ನಿರ್ವಹಿಸಲು ಮತ್ತು ವನ್ಯ ಜೀವಿಗಳಿಂದುಂಟಾಗುವ ಹಾನಿಗಳಿಗೆ ಪರಿಹಾರ ನೀಡಲು ಜೀವವೈವಿಧ್ಯ ನಿರ್ವಹಣಾ ಮಂಡಳಿಗೆ ವಿಶೇಷ ನಿಧಿಯನ್ನು ನೀಡುವುದು.

ಶಾಲೆಗಳಲ್ಲಿ ಕೃಷಿ ಕಲಿಸುವಂತಾಗಬೇಕು. ಮಕ್ಕಳು ಮತ್ತು ಯುವಕರನ್ನು ಸೂಕ್ತ ಪರಿಸರ ಶಿಕ್ಷಣದ ಮೂಲಕ ಸ್ಥಳೀಯ ಪರಿಸರದೊಂದಿಗೆ ಮರುಜೋಡಿಸುವ ಕಾರ್ಯವಾಗಬೇಕು. ಸ್ಥಳೀಯ ಪರಿಸರದ ಸಮಸ್ಯೆಗಳಾದ ಅರಣ್ಯ ನಾಶ, ನೈಸರ್ಗಿಕ ಸಂಪನ್ಮೂಲಗಳ ಹಾಳುಗೆಡವುವಿಕೆ, ಭೂ, ಜಲ ಮತ್ತು ವಾಯು ಮಾಲಿನ್ಯ ಮುಂತಾದವುಗಳ ಬಗ್ಗೆ ಅವರು ಜಾಗೃತರಾಗಿ ಕ್ರಿಯಾಶೀಲರಾಗುವಂತೆ ಮಾಡಬೇಕು. ಹಸಿರು ತಂತ್ರಜ್ಞಾನಗಳನ್ನು ಪರಿಪಕ್ವಗೊಳಿಸಿ ಅವುಗಳು ಸಾಮಾನ್ಯ ಜನರಿಗೂ ದೊರಕುವಂತಾಗಬೇಕು.

ಪರಿಣಿತ ವರದಿ ಪಶ್ಚಿಮ ಘಟ್ಟಗಳ ಬಗ್ಗೆ ಸಂಗ್ರಹಿಸಿರುವ ದತ್ತಾಂಶ ಮಾಹಿತಿ ಕೋಶವನ್ನು, ತೆರೆದ ಪಾರದರ್ಶಕವಾದ ಎಲ್ಲ ಜನ ಭಾಗವಹಿಸುವ ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿ ಸಮುದಾಯದ ಪಾಲ್ಗೊಳ್ಳುವಿಕೆಯ ಮೂಲಕ ನಿರಂತರವಾಗಿ ಉನ್ನತೀಕರಿಸುವ ಕಾರ್ಯವಾಗಬೇಕು. ನದಿ ಜಲ ದತ್ತಾಂಶಗಳನ್ನು ಕಾಲಕಾಲಕ್ಕೆ ಉನ್ನತೀಕರಿಸಬೇಕು. ಸಂಶೋಧನಾ ಸಂಸ್ಥೆಗಳು, ಸ್ಥಳೀಯ ಸಮುದಾಯಗಳು ಮತ್ತು ಸರ್ಕಾರೇತರ ಸಂಸ್ಥೆಗಳೊಂದಿಗೆ ಸೇರಿ ಪರಿಸರ ಹರಿವು ಸೂಚಕಗಳನ್ನು (Environmental Flow Assessment Indicators) ಗಳನ್ನು ನಿರೂಪಿಸುವಂತಾಗಬೇಕು.

ಪಶ್ಚಿಮ ಘಟ್ಟಗಳ ಜೀವಿ ಪರಿಸರಾತ್ಮಕ ಪ್ರಾಧಿಕಾರ (WEGA)

ಪರಿಣಿತ ತಂಡದ ಮತ್ತೊಂದು ಅತ್ಯಂತ ವಿವಾದಾತ್ಮಕ ಶಿಫಾರಸ್ಸು WEGA. ೬ ರಾಜ್ಯಗಳ ೪೪ ಜಿಲ್ಲೆಗಳ ೧೪೨ ತಾಲ್ಲೂಕುಗಳಲ್ಲಿ ಪರಿಣಿತ ವರದಿಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಮತ್ತು ವರದಿಯ ಘೋಷಣೆಗಳಿಂದ ಉದ್ಭವವಾಗುವ ಪರಿಸರಾತ್ಮಕ ಸವಾಲುಗಳನ್ನು ಉದ್ದೇಶಿಸಿ ಇಡೀ ಪ್ರದೇಶದಲ್ಲಿ ಕೆಲಸ ಮಾಡಲು ಒಂದು ಉನ್ನತ ಪ್ರಾಧಿಕಾರ ರಚನೆಯಾಗಬೇಕು. ಇದರೊಟ್ಟಿಗೆ ಪ್ರತಿ ರಾಜ್ಯದಲ್ಲೂ ಆ ರಾಜ್ಯಕ್ಕೆ ಸೀಮಿತವಾಗಿ ಪಶ್ಚಿಮ ಘಟ್ಟ ರಾಜ್ಯ ಪ್ರಾಧಿಕಾರಗಳನ್ನು ಹಾಗೂ ಪ್ರತಿ ಜಿಲ್ಲೆಯಲ್ಲಿ ಜಿಲ್ಲಾ ಜೀವಿ ಪರಿಸರಾತ್ಮಕ ಸಮಿತಿಗಳನ್ನು (District Ecology Committees) ರಚಿಸಲು ಪರಿಣಿತ ತಂಡ ಶಿಫಾರಸ್ಸು ಮಾಡಿದೆ. ಪರಿಸರ ಸಂರಕ್ಷಣಾ ಕಾಯಿದೆ-೧೯೮೬ರ ಸೆಕ್ಷನ್ ೩ರ ಅಡಿಯಲ್ಲಿ ಭಾರತ ಸರ್ಕಾರದ ಪರಿಸರ ಮತ್ತು ಅರಣ್ಯ ಸಚಿವಾಲಯ ಈ ಪ್ರಾಧಿಕಾರವನ್ನು ಒಂದು ಶಾಸನಾತ್ಮಕ ಸಂಸ್ಥೆಯಾಗಿ ರಚಿಸಬೇಕು. ಪಶ್ಚಿಮ ಘಟ್ಟ ಅಭಿವೃದ್ಧಿ ಯೋಜನಾ ಕಾರ್ಯಕ್ರಮಗಳನ್ನು ರಾಜ್ಯ ಸರ್ಕಾರ ಈ ರಾಜ್ಯ ಪ್ರಾಧಿಕಾರಗಳ ಮೂಲಕ ಜಾರಿ ಮಾಡಬಹುದು. ಕೇಂದ್ರ ಮತ್ತು ರಾಜ್ಯ ಪ್ರಾಧಿಕಾರಗಳು ಈಗಾಗಲೇ ಜಾರಿಯಲ್ಲಿರುವ ೮-೧೦ ಪರಿಸರ ಕಾಯಿದೆಗಳು ನಿಯಮಾವಳಿಗಳು ಹಾಗೂ ನೋಟಿಫಿಕೇಷನ್‌ಗಳಿಗನುಸಾರವಾಗಿ ಪೂರಕವಾಗಿ ಕಾರ್ಯ ನಿರ್ವಹಿಸುವುದು.

ಸುಮಾರು ೨೪ ಸದಸ್ಯರನ್ನುಳ್ಳ ಪಶ್ಚಿಮ ಘಟ್ಟ ಜೀವಿ ಪರಿಸರಾತ್ಮಕ ಪ್ರಾಧಿಕಾರಕ್ಕೆ ಅಧ್ಯಕ್ಷರಾಗುವವರು ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳು ಇಲ್ಲವೆ ಪಶ್ಚಿಮ ಘಟ್ಟ ಪರಿಸರ ಸಂರಕ್ಷಣೆಯಲ್ಲಿ ಮಹತ್ತರ ಕೊಡುಗೆ ನೀಡಿರುವ ಖ್ಯಾತ ಪರಿಸರ ಸಂರಕ್ಷಣಾ ಪರಿಣಿತರಾಗಿರುವುದು. ಇದರಲ್ಲಿ ವಿವಿಧ ವಿಷಯಗಳ ಪರಿಣಿತರು,  ಜೀವಿ ಪರಿಸರಶಾಸ್ತ್ರ ಸಂಪನ್ಮೂಲ ಪರಿಣಿತರು, ಬುಡಕಟ್ಟು ಪ್ರತಿನಿಧಿಗಳು, ನಾಗರಿಕ ಸಮಾಜದ ಮುಖಂಡರು ಹಾಗೂ ಪರಿಸರ ಅರಣ್ಯ ಯೋಜನೆ ಇತ್ಯಾದಿ ಇಲಾಖೆಗಳ, ಮಂಡಳಿಗಳ, ಪ್ರಾಧಿಕಾರಗಳ ಸದಸ್ಯರು ಇಲ್ಲಿ ಪದನಿಮಿತ್ತ ಸದಸ್ಯರಾಗಲು ಅವಕಾಶ ಕಲ್ಪಿಸಲಾಗಿದೆ.

ಇದೇ ಮಾದರಿಯಲ್ಲಿ ಪಶ್ಚಿಮ ಘಟ್ಟದ ೬ ರಾಜ್ಯಗಳಲ್ಲಿ ‘ರಾಜ್ಯ ಪಶ್ಚಿಮ ಘಟ್ಟ ಪ್ರಾಧಿಕಾರ’ (SWGA) ಗಳನ್ನು ಆಯಾ ರಾಜ್ಯಗಳಿಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಸ್ಥಾಪಿಸುವುದು. ೧೧ ಜನ ಸದಸ್ಯರನ್ನುಳ್ಳ ಈ ರಾಜ್ಯ ಪ್ರಾಧಿಕಾರಗಳಿಗೆ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರು ಅಥವಾ ಪಶ್ಚಿಮ ಘಟ್ಟ ಪ್ರದೇಶದ ಖ್ಯಾತ ಜೀವಿ ಪರಿಸರ ತಜ್ಞರನ್ನು ಅಧ್ಯಕ್ಷರನ್ನಾಗಿ ನೇಮಿಸಬೇಕಾಗುತ್ತದೆ. ಇದಲ್ಲದೆ ಖ್ಯಾತ ಪರಿಸರ ಕಾನೂನು ತಜ್ಞರು, ಜೀವಿ ಪರಿಸರ ತಜ್ಞರು, ೪-೬ ಖ್ಯಾತ ನಾಗರೀಕ ಸಮಾಜದ ಪ್ರತಿನಿಧಿಗಳು ಈ ರಾಜ್ಯಮಟ್ಟದ ಪ್ರಾಧಿಕಾರದಲ್ಲಿ ಅಧಿಕಾರೇತರ ಸದಸ್ಯರಾಗಿರುತ್ತಾರೆ. ಇದಲ್ಲದೆ ಅರಣ್ಯ ಮತ್ತು ಪರಿಸರ ಸಚಿವಾಚಲಯದ ಅಧಿಕಾರಿಗಳು ರಾಜ್ಯ ಯೋಜನಾ ಆಯೋಗದ ಪ್ರತಿನಿಧಿ, ಮಾಲಿನ್ಯ ನಿಯಂತ್ರಣ ಮಂಡಳಿ, ಜೀವವೈವಿಧ್ಯ ಮಂಡಳಿಗಳ ಅಧ್ಯಕ್ಷರುಗಳು ಈ ಪ್ರಾಧಿಕಾರದಲ್ಲಿ ಪದನಿಮಿತ್ತ ಸದಸ್ಯರಾಗಿರುತ್ತಾರೆ.

ರಾಜ್ಯ ಪ್ರಾಧಿಕಾರಗಳು ತಮ್ಮ ರಾಜ್ಯದ ವ್ಯಾಪ್ತಿಯಲ್ಲಿ ಬರುವ ಪ್ರತಿ ಪಶ್ಚಿಮ ಘಟ್ಟ ಜಿಲ್ಲೆಗಳಲ್ಲಿ ಜಿಲ್ಲಾ ಮಟ್ಟದ ಜೀವಿ ಪರಿಸರಾತ್ಮಕ ಸಮಿತಿಗಳನ್ನು Wಉಇಂ ಮಾರ್ಗದರ್ಶನದಲ್ಲಿ ರಚಿಸುವುದು. ಈ ಸಮಿತಿಯಲ್ಲಿ ವಿಷಯತಜ್ಞರು, ಸಂಪನ್ಮೂಲ ಪರಿಣಿತರು ಇರತಕ್ಕದ್ದು. ಈ ಸಮಿತಿ ತನ್ನ ವ್ಯಾಪ್ತಿ ಪ್ರದೇಶದಲ್ಲಿ ಬರುವ ಜೀವಿ ಪರಿಸರಾತ್ಮಕ ಸೂಕ್ಷ್ಮ ವಲಯದ ಬಗೆಗಿನ ವಿವಾದಗಳನ್ನು ಪರಿಶೀಲಿಸಿ ಮೇಲಿನ ಸಮಿತಿಗೆ ವರದಿ ಮಾಡುವ ಪ್ರಾಥಮಿಕ ಸಮಿತಿಯಾಗಿದೆ.

ಈ ಎಲ್ಲ ಹಂತದ ಪ್ರಾಧಿಕಾರಗಳು/ಸಮಿತಿಗಳ ಅಧಿಕಾರಾವಧಿ ೫ ವರ್ಷಗಳದ್ದಾಗಿರುತ್ತದೆ.

ಕೇರಳದ ಅಥಿರಪಲ್ಲಿ ಮತ್ತು ಕರ್ನಾಟಕದ ಗುಂಡ್ಯ ಜಲವಿದ್ಯುತ್ ಯೋಜನೆಗಳು

ಪರಿಣಿತ ವರದಿ ESZ-1 ಮತ್ತು ESZ-2 ಗಳಲ್ಲಿ ದೊಡ್ಡ ಸಂಗ್ರಹಣಾ ಅಣೆಕಟ್ಟುಗಳಿಗೆ ಅವಕಾಶ ನೀಡಬಾರದೆಂದು ಶಿಫಾರಸ್ಸು ಮಾಡಿದೆ. ಅಥಿರಪಲ್ಲಿ ಅಣೆಕಟ್ಟು ESZ-1 ವಲಯದಲ್ಲಿ ಬರುತ್ತದೆ. ಕರ್ನಾಟಕ ಪವರ್ ಕಾರ್ಪೊರೇಶನ್ ತನ್ನ ಮೂಲ ಪ್ರಸ್ತಾವನೆಯಿಂದ ಹೊಂಗಡಹಳ್ಳ ಅಣೆಕಟ್ಟನ್ನು ಕೈಬಿಟ್ಟು ಗುಂಡ್ಯ ಜಲವಿದ್ಯುತ್ ಯೋಜನೆಯಿಂದ ಈಗ ಮುಳುಗಡೆಯಾಗಬಹುದಾದ ಪ್ರದೇಶವನ್ನು ಶೇ. ೮೦ ರಷ್ಟು ಕಡಿಮೆ ಮಾಡಿರುವುದಾಗಿ ಹೇಳಿಕೊಂಡಿದೆ. ಆದರೆ ಈಗಲೂ ಈ ಯೋಜನೆಯ ಭಾಗವಾಗಿರುವ ಬೆಟ್ಟ ಕುಮರಿ ಅಣೆಕಟ್ಟು ESZ-1 ರಲ್ಲಿ ಬರುತ್ತದೆ. ಇದಲ್ಲದೆ ಈ ಪ್ರದೇಶಗಳಲ್ಲಿ ಅರಣ್ಯ ಹಕ್ಕು ಕಾಯಿದೆಯನ್ವಯ ಬುಡಕಟ್ಟು ಮತ್ತು ಗಿರಿಜನರ ಸಾಂಪ್ರದಾಯಿಕ ಹಕ್ಕುಗಳನ್ನು ಮಾನ್ಯ ಮಾಡುವ ಕಾರ್ಯ ಪೂರ್ಣಗೊಂಡಿಲ್ಲ.

ಅಥಿರಪಲ್ಲಿ ಉನ್ನತ ಸಂರಕ್ಷಣಾ ಮೌಲ್ಯವುಳ್ಳ ಜೀವಿವೈವಿಧ್ಯತೆಯ ಶ್ರೀಮಂತ ಪ್ರದೇಶ. ಈ ಪ್ರದೇಶದ ಜೀವಾವಾಸದ ಮೇಲೆ ಮತ್ತು ಜೀವಿವೈವಿಧ್ಯತೆಯ ಮೇಲೆ ಈ ಯೋಜನೆ ಉಂಟು ಮಾಡುವ ದುಷ್ಪರಿಣಾಮಗಳನ್ನು ಸರಿಪಡಿಸಲಾಗುವುದಿಲ್ಲ. ಈ ಪ್ರದೇಶದಲ್ಲಿ ಅತಿವಿಶಿಷ್ಟವಾದ ಮೀನಿನ ಪ್ರಭೇದಗಳಿವೆ. ಅದರಲ್ಲಿ ೫ ಹೊಸ ಪ್ರಭೇದಗಳು, ೨೨ ಅಂತಃಸೀಮಿತ ಪ್ರಭೇದಗಳು ಮತ್ತು ೯ ಅತ್ಯಂತ ವಿನಾಶದ ಅಪಾಯದಲ್ಲಿರುವ ಪ್ರಭೇಗಳಾಗಿವೆ. ಇದಲ್ಲದೆ ಪಶ್ಚಿಮ ಘಟ್ಟದ ಬೇರಾವ ಪ್ರದೇಶದಲ್ಲೂ ಕಾಣದಿರುವ ವಿಶಿಷ್ಟ ನದೀ ನೀರಿನ ಜೀವಾವಾಸ ಇಲ್ಲಿದೆ. ನಿರ್ಮಾಣದ ದುಬಾರಿ ವೆಚ್ಚ ಅಲ್ಲಿರುವ ಮೂಲ ಕಾಡಾರ್ ಬುಡಕಟ್ಟು ಜನರ ಜೀವಾವಾಸದ ಮೇಲಾಗುವ ಪರಿಣಾಮ ಮತ್ತು ಕೇರಳ ಹೈಕೋರ್ಟ್ ೧೭-೧೦-೨೦೦೧ರಲ್ಲಿ KSEBಗೆ ನೀಡಿರುವ ನಿರ್ದೇಶನ ಇವೆಲ್ಲವನ್ನೂ ಪರಿಶೀಲಿಸಿ ಅಥಿರಪಲ್ಲಿ ಮತ್ತು ವಝಾಚಲ ಪ್ರದೇಶವನ್ನು ಹೀಗಿರುವಂತೆ ಸಂರಕ್ಷಿಸಲು ಶಿಫಾರಸ್ಸು ಮಾಡುತ್ತದೆ. ಚಾಲಕುಡಿ ನದಿಯನ್ನು ಮೀನುಗಳ ಜೀವಿವೈವಿಧ್ಯತೆಯನ್ನು ಹೊಂದಿರುವ ಪ್ರದೇಶವೆಂದು ಘೋಷಿಸಿ ಅದನ್ನು ಕೇರಳದ ‘ಉಡುಂಬಾಂಚೂಲ’ ತಾಲ್ಲೂಕಿನ ಮಾದರಿಯಲ್ಲಿ ನಿರ್ವಹಿಸಬೇಕು. ಆದ್ದರಿಂದ MOEF ಅಥಿರಪಲ್ಲಿ ಯೋಜನೆಗೆ ಅನುಮತಿಸಬಾರದೆಂದು ಶಿಫಾರಸ್ಸು ಮಾಡಿದೆ.

೨ ಹಂತಗಳಲ್ಲಿ ೩ ಮಟ್ಟಗಳಲ್ಲಿ ಜಾರಿಯಾಗಲಿರುವ ಗುಂಡ್ಯಾ ಜಲವಿದ್ಯುತ್ ಯೋಜನೆ ನದೀ ಪಾತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಭೂ ಹೊದಿಕೆ ಬದಲಾವಣೆಗಳನ್ನುಂಟು ಮಾಡುತ್ತದೆ. ಮುಳುಗಡೆಯಾಗುವ ಪ್ರದೇಶವಲ್ಲದೆ ಕಟ್ಟಡ ನಿರ್ಮಾಣ ಹಾಗೂ ಸಂಪರ್ಕ ರಸ್ತೆಗಳ ನಿರ್ಮಾಣ ಈ ಪ್ರದೇಶದ ಜೀವಾವಾಸ ಮತ್ತು ಜೀವಿವೈವಿಧ್ಯತೆಯ ಮೇಲೆ ಅಗಾಧ ಪರಿಣಾಮಗಳನ್ನುಂಟು ಮಾಡಲಿದೆ. ಈ ಯೋಜನೆಯಿಂದಾಗಿ ಈ ಪ್ರದೇಶದ ಜಲಾಡಳಿತ ವಿನ್ಯಾಸ ಬದಲಾಗಲಿದೆ. ಬೆಟ್ಟಕುಮರಿ ಅಣೆಕಟ್ಟಿನಿಂದ ನೀರನ್ನು ತಿರುಗಿಸುವುದರಿಂದ ದೇವಾಲಯದ ಪಟ್ಟಣ ಸುಬ್ರಮಣ್ಯಕ್ಕೆ ನೀರೊದಗಿಸುತ್ತಿರುವ ಕುಮಾರಧಾರ ನದಿಗೆ ನೀರು ಕಡಿಮೆಯಾಗಲಿದೆ. ಈಗ ವರ್ಷವಿಡೀ ಹರಿಯುತ್ತಿರುವ ನದಿಗಳು ಕೆಲವೆ ಋತುಗಳಲ್ಲಿ ಹರಿಯುವ ನದಿಗಳಾಗಿ ರೂಪಾಂತರಗೊಳ್ಳುವ ಅಪಾಯವಿದೆ. ಪ್ರಾಥಮಿಕ ಅರಣ್ಯ ಹೊದಿಕೆಯನ್ನು ಹೊಂದಿರುವ ಪ್ರದೇಶದಲ್ಲಿ ನೆಲಾಂತರಾಳದ (Underground) ವಿದ್ಯುತ್ ಉತ್ಪಾದನಾ ಕೇಂದ್ರ ಮತ್ತು ಸುರಂಗಗಳು ಬರುತ್ತವೆ. ಇದು ಅಪೇಕ್ಷಣೀಯವಲ್ಲ. ಏಕೆಂದರೆ ಇದು ಗುಂಡ್ಯಾ ನದೀಪಾತ್ರದಲ್ಲಿ ಉಳಿದುಕೊಂಡಿರುವ ಕೆಲವೇ ಪ್ರಾಥಮಿಕ ನಿತ್ಯಹರಿದ್ವರ್ಣದ ಪ್ರದೇಶವನ್ನು ಹಾಳುಗೆಡಹುವ ಅಪಾಯವಿದೆ. ಈ ಪ್ರದೇಶದ ಭೂ ಹೊದಿಕೆಯ ಬದಲಾವಣೆಯಿಂದ ಅಲ್ಲಿಯ ಜಲಾನಯನ ಪ್ರದೇಶದ ಮೇಲೆ ಹಾಗೂ ನದಿಗಳ ನೀರಿನ ತಿರುವುವಿಕೆಯಿಂದುಂಟಾಗುವ ಪರಿಣಾಮಗಳ ಬಗ್ಗೆ ಸ್ಪಷ್ಟವಾದ ಚಿತ್ರಣವಿಲ್ಲ. ಆದ್ದರಿಂದ ಗುಂಡ್ಯಾ ಜಲವಿದ್ಯುತ್ ಯೋಜನೆಯಿಂದ ಗಣನೀಯ ಪ್ರಮಾಣದಲ್ಲಿ ಜೀವವೈವಿಧ್ಯತಾ ನಷ್ಟ ಮತ್ತು ಪರಿಸರ ಪರಿಣಾಮ ಉಂಟಾಗಲಿರುವುದರಿಂದ ಈ ಯೋಜನೆಯ ಜಾರಿಗೆ ಅನುಮತಿ ನೀಡಬಾರದೆಂದು ಪರಿಣಿತ ಸಮಿತಿ ಶಿಫಾರಸ್ಸು ಮಾಡಿದೆ.

ಮಹಾರಾಷ್ಟ್ರದ ರತ್ನಗಿರಿ ಮತ್ತು ಸಿಂಧು ದುರ್ಗ್ ಬಗ್ಗೆ

ಮಹಾರಾಷ್ಟ್ರದ ರತ್ನಗಿರಿ ಮತ್ತು ಸಿಂಧುದುರ್ಗ್ ಜಿಲ್ಲೆಗಳಲ್ಲಿ ಈಗ ನಡೆಯುತ್ತಿರುವ ಗಣಿಗಾರಿಕೆ, ವಿದ್ಯುತ್ ಉತ್ಪಾದನೆ ಮತ್ತು ಮಾಲಿನ್ಯಕಾರಕ ಕೈಗಾರಿಕೆಗಳನ್ನು ಸೂಕ್ತವಾಗಿ ಅಭಿವೃದ್ಧಿಪಡಿಸಬಹುದಾದ ಮಾರ್ಗೋಪಾಯಗಳ ಬಗ್ಗೆ ಶಿಫಾರಸ್ಸುಗಳನ್ನು ಮಾಡಲು ಪರಿಣಿತ ಸಮಿತಿಯನ್ನು ಕೋರಲಾಗಿತ್ತು. ಮಹಾರಾಷ್ಟ್ರದ ಈ ಎರಡೂ ಜಿಲ್ಲೆಗಳು ಜೀವಿ ಪರಿಸರಾತ್ಮಕವಾಗಿ ಅತ್ಯಂತ ಶ್ರೀಮಂತವಾದ ಆದರೆ ಅತ್ಯಂತ ನಾಜೂಕಾದ ಜಿಲ್ಲೆಗಳಾಗಿವೆ. ಆದ್ದರಿಂದ ನಾವು ಈ ಜಿಲ್ಲೆಗಳಲ್ಲಿ ಅತ್ಯಂತ ಎಚ್ಚರಿಕೆಯಿಂದ ಮುಂದುವರಿಯಬೇಕಾಗಿದೆ. ಈ ಜಿಲ್ಲೆಗಳ ಪೂರ್ವ ಭಾಗಗಳು ಮಾತ್ರ ಪಶ್ಚಿಮ ಘಟ್ಟದ ವ್ಯಾಪ್ತಿಗೆ ಬರುತ್ತವೆ. ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ಬರುವ ಈ ಪ್ರದೇಶಗಳಲ್ಲಿ ESZ-1 ಮತ್ತು ESZ-2 ವಲಯಗಳಲ್ಲಿ ಹೊಸ ಗಣಿಗಾರಿಕೆಗೆ ಅನಿರ್ದಿಷ್ಟಾವಧಿ ನಿಲುಗಡೆಯನ್ನು ಈ ಕೂಡಲೇ ಜಾರಿ ಮಾಡಲು ಶಿಫಾರಸ್ಸು ಮಾಡಿದೆ. ESZ-1 ನಲ್ಲಿ ನಡೆಯುತ್ತಿರುವ ಗಣಿಗಾರಿಕೆಯನ್ನು ೨೦೧೬ರ ವೇಳೆಗೆ ಹಂತಗಳಲ್ಲಿ ಹೊರಹಾಕುವಂತೆ ಶಿಫಾರಸ್ಸು ಮಾಡಲಾಗಿದೆ. ESZ-2 ರಲ್ಲಿ ಹಾಲಿ ನಡೆಯುತ್ತಿರುವ ಗಣಿಗಾರಿಕೆಯನ್ನು ಅತ್ಯಂತ ಕಟ್ಟುನಿಟ್ಟಾದ ನಿಯಮಗಳನುಸಾರ ಪರಿಣಾಮಕಾರಿ ಸಾಮಾಜಿಕ ಆಡಿಟ್‌ನೊಂದಿಗೆ ಮುಂದುವರಿಸಬಹುದೆಂದು ಹೇಳಿದೆ. ESZ-1 ಮತ್ತು ESZ-2 ರಲ್ಲಿ ಕಲ್ಲಿದ್ದಲು ಆಧಾರಿತ ಶಾಖೋತ್ಪನ್ನ ವಿದ್ಯುತ್ ಘಟಕಗಳನ್ನು ಸೇರಿಸಿಕೊಂಡಂತೆ ಯಾವುದೇ ಕೆಂಪು ಮತ್ತು ಕಿತ್ತಳೆ ಮಾದರಿ ಕೈಗಾರಿಕೆಗಳನ್ನು ಹೊಸದಾಗಿ ಸ್ಥಾಪಿಸಲು ಅವಕಾಶ ನೀಡಬಾರದೆಂದು ಹೇಳಿದೆ. ಈಗ ESZ-1 ಮತ್ತು ESZ-2 ರಲ್ಲಿ ಹಾಲಿ ನಡೆಯುತ್ತಿರುವ ಕೆಂಪು ಮತ್ತು ಕಿತ್ತಳೆ ಕೈಗಾರಿಕೆಗಳನ್ನು ಶೂನ್ಯ ಮಾಲಿನ್ಯವುಂಟು ಮಾಡುವ ಕಡೆಗೆ ಅಗತ್ಯ ಕ್ರಮಗಳನ್ನು ಕೈಗೊಂಡು ೨೦೧೬ರ ವೇಳೆಗೆ ಪೂರ್ಣಗೊಳಿಸಲು ಸಲಹೆ ನೀಡಲಾಗಿದೆ.

ರತ್ನಗಿರಿ ಮತ್ತು ಸಿಂಧು ದುರ್ಗ್‌ನ ಮೈದಾನ ಮತ್ತು ಕರಾವಳಿ ತೀರ ಪ್ರದೇಶಗಳ ಜೀವಿ ಪರಿಸರಾತ್ಮಕ ಸೂಕ್ಷ್ಮತೆ ಬಗೆಗಿನ ದತ್ತಾಂಶಗಳು ಅತ್ಯಂತ ಸೀಮಿತವಾಗಿ ಲಭ್ಯವಾಗಿತ್ತು. ತಂಡ ಸೀಮಿತವಾದ ತನಿಖೆ ನಡೆಸಿದಾಗ ಈ ಪ್ರದೇಶಗಳ ಮೇಲೆ ತೀವ್ರವಾದ ಪರಿಸರಾತ್ಮಕ ಮತ್ತು ಸಾಮಾಜಿಕ ಒತ್ತಡಗಳಿರುವುದನ್ನು ಗಮನಿಸಿದೆ. ಈ ಪ್ರದೇಶಗಳಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಂದ ಉಂಟಾಗಿರುವ ಸಂಚಿತ ಪರಿಣಾಮ ವಿಶ್ಲೇಷಣೆಯನ್ನು ಅತ್ಯಂತ ಎಚ್ಚರಿಕೆಯಿಂದ ಮಾಡಬೇಕಾದ ಅಗತ್ಯವನ್ನು ತಂಡದ ವರದಿ ಒತ್ತಿ ಹೇಳಿದೆ. ಮಹಾರಾಷ್ಟ್ರದ ರಾಯಘಡ ಮತ್ತು ಗೋವಾ ರಾಜ್ಯದೊಂದಿಗೆ ಸೇರಿಕೊಂಡಂತೆ ಈ ಅಧ್ಯಯನ ನಡೆಯಬೇಕು. ಅದು ಕೇವಲ ಒಂದು ತಾಂತ್ರಿಕ ಪ್ರಧಾನ ಅಧ್ಯಯನ ಮಾತ್ರವಾಗದೆ ಅದು ಸ್ಥಳೀಯ ಜನರ ಆಳವಾದ ಪರಿಸರ ಜ್ಞಾನ ಮತ್ತು ಅಭಿವೃದ್ಧಿಯ ಆಶೋತ್ತರಗಳನ್ನು ಪ್ರತಿಬಿಂಬಿಸುವಂತಿರುವುದು ತುಂಬಾ ಅಗತ್ಯವೆಂದು ಹೇಳಿದೆ. ಕೇಂದ್ರದ MOEF ಮಂತ್ರಾಲಯ ರಾಜ್ಯ ಅರಣ್ಯ ಇಲಾಖೆಗೆ ಈ ಪ್ರದೇಶಗಳಲ್ಲಿ ಅರಣ್ಯ ಹಕ್ಕು ಕಾಯ್ದೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಜಾರಿ ಮಾಡಲು ಬುಡಕಟ್ಟು ಕಲ್ಯಾಣ ಇಲಾಖೆಗೆ ಸಕ್ರಿಯವಾಗಿ ನೆರವು ನೀಡಬೇಕೆಂದು ತಿಳಿಸಿದೆ. ಇದಲ್ಲದೆ MOEF ಈ ಪ್ರದೇಶದ ಎಲ್ಲ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಜೀವವೈವಿಧ್ಯತಾ ನಿರ್ವಹಣಾ ಸಮಿತಿಗಳ ಸ್ಥಾಪನೆಯನ್ನು ಖಚಿತಪಡಿಸಿಕೊಳ್ಳಬೇಕು. ರತ್ನಗಿರಿ ಮತ್ತು ಸಿಂಧು ದುರ್ಗ್ ಜಿಲ್ಲೆಗಳ ಧಾರಣ ಸಾಮರ್ಥ್ಯಗಳ ಅಧ್ಯಯನ ಮತ್ತು ವಿಶ್ಲೇಷಣೆ ನಡೆಯುವ ತನಕ ಕೆಂಪು ಮತ್ತು ಕಿತ್ತಳೆ ಮಾದರಿ ಕೈಗಾರಿಕೆಗಳ ಸ್ಥಾಪನೆ, ಗಣಿಗಾರಿಕೆ ಮತ್ತು ವಿದ್ಯುತ್, ಉತ್ಪಾದನಾ ಘಟಕಗಳ ಸ್ಥಾಪನೆಗೆ ಈಗ ಹಾಲಿ ಇರುವ ಸಂಪೂರ್ಣ ತಡೆಯನ್ನು ಮುಂದುವರಿಸಲು ಸಲಹೆ ಮಾಡಿದೆ. ಧಾರಣಾ ಸಾಮರ್ಥ್ಯದ ವಿಶ್ಲೇಷಣೆಯ ನಂತರ ಪರವಾನಗಿ ನೀಡುವ ಬಗ್ಗೆ ಆಲೋಚಿಸಬಹುದೆಂದು ಸಲಹೆ ಮಾಡಿದೆ.

ಗೋವಾ ಗಣಿಗಾರಿಕೆ ಬಗ್ಗೆ

ಗೋವಾದಲ್ಲಿ ಗಣಿಗಾರಿಕೆಗೆ ಸದ್ಯ ಸಂಪೂರ್ಣ ತಡೆ ಜಾರಿಯಲ್ಲಿದೆ. MOEF ಗೋವಾದಲ್ಲಿ ಗಣಿಗಾರಿಕೆಗೆ ಹೊಸ ಲೈಸೆನ್ಸ್‌ಗಳನ್ನು ನೀಡುವ ಬಗ್ಗೆ ಮರುಪರಿಶೀಲನೆ ನಡೆಸಲು ಪರಿಣಿತ ತಂಡದಿಂದ ಸಲಹೆಗಳನ್ನು ಕೋರಿತ್ತು. ಈ ಬಗ್ಗೆ ವಿವರವಾದ ಅಧ್ಯಯನ ನಡೆಸಿದ ತಂಡ ಜೀವಿ ಪರಿಸರಾತ್ಮಕ ಸೂಕ್ಷ್ಮ ಪ್ರದೇಶ/ವಲಯಗಳನ್ನು ಗಣಿಗಾರಿಕೆಯಿಂದ ಮುಕ್ತಗೊಳಿಸಬೇಕೆಂದು ಶಿಫಾರಸ್ಸು ಮಾಡಿದೆ. ಗೋವಾದ ಪಶ್ಚಿಮ ಘಟ್ಟಗಳ ಹಾಲಿ ಸಂರಕ್ಷಿತ ಪ್ರದೇಶಗಳಲ್ಲಿ ಅಂದರೆ ರಾಷ್ಟ್ರೀಯ ಉದ್ಯಾನಗಳಲ್ಲಿ ವನ್ಯಜೀವಿ ಅಭಯಾರಣ್ಯಗಳಲ್ಲಿ ಪರಿಣಿತ ತಂಡ ಮರುಗುರುತಿಸಿರುವ ಅತಿಹೆಚ್ಚು ಸೂಕ್ಷ್ಮತೆ ಹೊಂದಿರುವ ESZ-1 ಪ್ರದೇಶಗಳಲ್ಲಿ ಯಾವುದೇ ಗಣಿಗಾರಿಕೆಗೆ ಅವಕಾಶ ನೀಡಬಾರದೆಂದು ಶಿಫಾರಸ್ಸು ಮಾಡಿದೆ. ಈ ಪ್ರದೇಶಗಳಲ್ಲಿ ಈಗಾಗಲೇ ಗಣಿಗಾರಿಕೆಗೆ ನೀಡಲಾಗಿರುವ ಪರಿಸರಾತ್ಮಕ ಅನುಮತಿಯ ಪ್ರದೇಶಗಳಲ್ಲಿ ಪ್ರತಿವರ್ಷ ಶೇ. ೨೫ ಗಣಿಗಾರಿಕೆಯನ್ನು ೨೦೧೬ರವರೆಗೆ ಕಡಿಮೆ ಮಾಡುತ್ತಾ ಹೋಗಬೇಕು. ಆ ಅವಧಿಗೆ ESZ-1 ರಲ್ಲಿ ಗಣಿಗಾರಿಕೆ ಸಂಪೂರ್ಣವಾಗಿ ನಿಲ್ಲತಕ್ಕದ್ದು. ಗಣಿಗಾರಿಕೆಯ ಮುಕ್ತಾಯದ ನಂತರ ಈ ಪ್ರದೇಶಗಳಲ್ಲಿ ಪರಿಸರಾತ್ಮಕ ಪುನಶ್ಚೇತನ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು. ESZ-2 ವಲಯಗಳಲ್ಲಿ ಹಾಲಿ ನಡೆಯುತ್ತಿರುವ ಗಣಿಗಾರಿಕೆಯನ್ನು ಮುಂದುವರಿಸಬಹುದು. ಆದರೆ ಗಣಿಗಾರಿಕಾ ಪ್ರದೇಶದ ಪರಿಸ್ಥಿತಿ ಉತ್ತಮಗೊಳ್ಳುವವರೆಗೂ ಯಾವುದೇ ಹೊಸ ಗಣಿಗಳಿಗೆ ಪರವಾನಗಿ ನೀಡಬಾರದು. ಗಣಿ ಲೈಸೆನ್ಸ್‌ನಲ್ಲಿ ನಿಗದಿ ಪಡಿಸಲಾಗಿದ್ದ ಅದಿರಿನ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಅದಿರನ್ನು ತೆಗೆದಿರುವ ಲೈಸೆನ್ಸ್‌ಗಳನ್ನು ಕೂಡಲೇ ರದ್ದು ಮಾಡುವುದು. ESZ-1 ರಲ್ಲಿ ಕಾರ್ಯ ನಡೆಸುತ್ತಿರುವ ಲೀಸ್‌ಗಳನ್ನು ೨೦೧೬ರವೇಳೆಗೆ ರದ್ದುಪಡಿಸುವುದು. ಕಾರ್ಯ ನಡೆಸದಿರುವ ಲೀಸ್‌ಗಳನ್ನು ಕೂಡಲೇ ರದ್ದು ಮಾಡುವುದು. ವನ್ಯಜೀವಿ ಅಭಯಾರಣ್ಯ ಪ್ರದೇಶಗಳ ಗಣಿ ಲೀಸ್‌ಗಳನ್ನು ಶಾಶ್ವತವಾಗಿ ರದ್ದುಪಡಿಸುವುದು. ಕುಡಿಯುವ ನೀರಿಗೆ ಉಪಯೋಗಿಸುವ ಅಣೆಕಟ್ಟುಗಳ ಜಲಾನಯನ ಪ್ರದೇಶಗಳಲ್ಲಿ ಗಣಿ ಲೀಸ್‌ಗಳನ್ನು ಅಂತ್ಯಗೊಳಿಸುವುದು.

ಗೋವಾದಲ್ಲಿ ಮರಳು ಗಣಿಗಾರಿಕೆ ವ್ಯಾಪಕವಾಗಿದೆ. ಕೆಲವು ನದಿ ಭಾಗಗಳಲ್ಲಿ ಮರಳು ಗಣಿಗಾರಿಕಾ ರಜೆ ಜಾರಿಯಾಗಬೇಕು ಮತ್ತು ಮರಳು ಗಣಿಗಾರಿಕೆಯ ಆಡಿಟ್ ನಡೆಯಬೇಕು. ಒಟ್ಟಾರೆ ಸರಾಸರಿ ನಿರ್ವಹಣೆಯನ್ನು ನಿದೀ ನಿರ್ವಹಣೆಯಿಂದ ಪ್ರತ್ಯೇಕವಾಗಿ ಪರಿಶೀಲಿಸಬೇಕು. ಈ ಉದ್ದೇಶಕ್ಕೆ ಪ್ರತ್ಯೇಕ ಶಾಸನದ ಅಗತ್ಯವಿದೆ. ನದೀ ಮತ್ತು ಉಪನದೀಗಳ ದಂಡೆಗಳಲ್ಲಿ ಮಾನವ ಮಧ್ಯಪ್ರವೇಶದಿಂದ ಹಾಳಾಗಿರುವ ಪ್ರದೇಶಗಳಲ್ಲಿ ಸ್ವಾಭಾವಿಕ ನದೀ ದಂಡೆ ಸಸ್ಯರಾಶಿಯನ್ನು ಪುನಶ್ಚೇತನಗೊಳಿಸಬಲ್ಲಂತಹ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬೇಕು. ಗೋವಾದಲ್ಲಿ ಗಣಿ ಲೀಸ್ ಅರ್ಜಿಗಳನ್ನು ಪರಿಶೀಲಿಸುವಾಗ ಪ್ರತಿ ಲೀಸ್‌ಗೂ ಪ್ರತ್ಯೇಕ ‘ಪರಿಸರ ಪರಿಣಾಮ ಅಂದಾಜು’ (EIA) ನಡೆಸುವುದಕ್ಕಿಂತಲೂ ಸಂಚಿತ ಪರಿಸರ ಪರಿಣಾಮ ಅಂದಾಜು ಮಾಡುವುದನ್ನು ಶಾಸನಾತ್ಮಕವಾಗಿ ಕಡ್ಡಾಯ ಮಾಡಬೇಕು.

ಅಭಿವೃದ್ಧಿಯ ಹೊಸ ಪರಿಭಾಷೆ

‘ಪಶ್ಚಿಮ ಘಟ್ಟ ಜೀವಿ ಪರಿಸ್ಥಿತಿ ಪರಿಣಿತ ತಂಡ’ ಬಹಳ ಮುಖ್ಯವಾಗಿ ಅಭಿವೃದ್ಧಿ ಮತ್ತು ಸಂರಕ್ಷಣೆಯ ಹೊಸ ಪರಿಕಲ್ಪನೆಗಳ ಬಗ್ಗೆ ಮಾತನಾಡುತ್ತದೆ. ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಮತ್ತು ದೇಶದ ಇತರ ಭಾಗಗಳಲ್ಲಿ ನಾವಿಂದು ಅನುಸರಿಸುತ್ತಿರುವ ನೀತಿ ‘ಹೊರಹಾಕುವ/ಹೊರಗಿಡುವ ಅಭಿವೃದ್ಧಿ’ (Development by Exclusion) ಮತ್ತು ಅದರ ಜೊತೆ ಜೊತೆಗೆ ‘ಹೊರಗಿಡುವ ಸಂರಕ್ಷಣೆ’ (Conservation by Exclusion) ರಾಜ್ಯಾಂಗದ ೭೩ ಮತ್ತು ೭೪ನೇ ತಿದ್ದುಪಡಿಗಳು ಅಭಿವೃದ್ದಿಯ ಬಗ್ಗೆ ತೀರ್ಮಾನಿಸುವ ಹಕ್ಕನ್ನು ಪಂಚಾಯತ್ ರಾಜ್ಯ ಸಂಸ್ಥೆಗಳಿಗೆ ಮತ್ತು ನಗರ ಪಾಲಿಕೆಗಳಿಗೆ ವರ್ಗಾಯಿಸಿ ಬಹಳ ಕಾಲವೇ ಆಗಿದೆ. ಆದರೂ ಇಂದಿಗೂ ಎಲ್ಲ ಅಭಿವೃದ್ಧಿಯ ತೀರ್ಮಾನಗಳನ್ನು ಜನರ ಮೇಲೆ ಹೇರಲಾಗುತ್ತಿದೆ. ಭಾರತೀಯ ಸಮಾಜ ಅತ್ಯಂತ ಶ್ರೀಮಂತವಾದ ನಿಸರ್ಗ ಸಂರಕ್ಷಣಾ ಸಂಪ್ರದಾಯಗಳನ್ನು ಹೊಂದಿದೆ. ಪಶ್ಚಿಮ ಘಟ್ಟಗಳ ಅಳಿದುಳಿದ ಮೂಲ ಸಸ್ಯರಾಶಿಗಳನ್ನು ಪವಿತ್ರ ವನಗಳಲ್ಲಿ ಕಾಪಿಟ್ಟು ಸಂರಕ್ಷಿಸಲಾಗಿದೆ. ಆದರೆ ಅಧಿಕೃತ ಸಂರಕ್ಷಣಾ ಪ್ರಯತ್ನಗಳಾದಂತಹ ‘ಸಂರಕ್ಷಿತ ಪ್ರದೇಶಗಳ’ ಪರಿಕಲ್ಪನೆ ಇದಕ್ಕೆ ತದ್ವಿರುದ್ಧವಾಗಿದೆ. ಅಧಿಕಾರಿಗಳು ಜೀವಿವೈವಿಧ್ಯತೆಯ ವಿನಾಶಕ್ಕೆ ಸ್ಥಳೀಯ ಜನರೇ ಪ್ರಾಥಮಿಕವಾಗಿ ಜವಾಬ್ದಾರರು ಮತ್ತು ಕಾರಣಕರ್ತರು ಎಂದು ನಂಬಿದ್ದಾರೆ. ಆದ್ದರಿಂದ ಅವರನ್ನು ಆ ಪ್ರದೇಶಗಳಿಂದ ಹೊರ ಹಾಕುವುದಕ್ಕೆ ಅತ್ಯುನ್ನತ ಆದ್ಯತೆ ನೀಡಬೇಕೆಂದು ಅವರು ಪ್ರತಿಪಾದಿಸುತ್ತಾರೆ.

ಆದರೆ ಇಂದು ಅಭಿವೃದ್ಧಿ ಯೋಜನೆಗಳನ್ನು ಪೆಡಸಾದ ಚೌಕಟ್ಟಿನಲ್ಲಿರಿಸಬಾರದು. ಅವುಗಳನ್ನು ಸ್ಥಳೀಯ ಪರಿಸ್ಥಿತಿಗೆ ಮತ್ತು ಕಾಲ ವಿಶಿಷ್ಟ ಸ್ಥಿತಿಗೆ ಜೋಡಿಸಿ ಹೊಲೆಯಬೇಕು. ಇವುಗಳಲ್ಲಿ ಜನರು ಪೂರ್ಣವಾಗಿ ಪಾಲ್ಗೊಳ್ಳುವಂತಾಗಬೇಕು. ಈ ಮಾದರಿಯ ಅಭಿವೃದ್ಧಿಯನ್ನು ‘ಮಾರ್ಪಾಟು ಸಹನಿರ್ವಹಣೆ’ (Adaptive Co-management) ಎಂದು ಕರೆಯಲಾಗುತ್ತದೆ. ಯಾವುದು ಹೋಗಬಹುದಾದ (Go) ಮತ್ತು ಯಾವುದು ಹೋಗಬಾರದ (No-go) ಅಭಿವೃದ್ಧಿಯ ಆಯ್ಕೆಯಾಗಬೇಕೆಂಬುದನ್ನು ಪ್ರಕರಣವಾರು ತೀರ್ಮಾನಿಸಬೇಕಲ್ಲದೆ ಸಾರಾಸಗಟಾಗಿ ತೀರ್ಮಾನಿಸಬಾರದು. ಹೀಗೆ ತೀರ್ಮಾನಿಸುವಾಗ ಸ್ಥಳೀಯ ಜನರ ಆಶೋತ್ತರಗಳು, ಸಾಮಾಜಿಕ ಆರ್ಥಿಕ ಸನ್ನಿವೇಶ ಮತ್ತು ವಿಶಿಷ್ಟವಾದ ಪರಿಸರಾತ್ಮಕ ಸ್ಥಿತಿಗಳನ್ನು ಆಧಾರವಾಗಿಟ್ಟುಕೊಂಡು ತೀರ್ಮಾನಿಸುವುದು. ಇಂತಹ ಒಂದು ‘ಮಾರ್ಪಾಟು ಸಹನಿರ್ವಹಣಾ’ ವ್ಯವಸ್ಥೆ ಸಂರಕ್ಷಣೆಯನ್ನು ಅಭಿವೃದ್ಧಿಯೊಂದಿಗೆ ಜೋಡಿಸುತ್ತದೆ ಮತ್ತು ಅವುಗಳನ್ನು ಹೊಂದಿಕೆಯಾಗದ ಪ್ರತ್ಯೇಕ ಗುರಿಗಳನ್ನಾಗಿ ನೋಡುವುದಿಲ್ಲ. ಸಾಮಾಜಿಕ ಜೀವಿ ಪರಿಸರಾತ್ಮಕ ವ್ಯವಸ್ಥೆಗಳ ಆಡಳಿತಕ್ಕೆ ‘ಮಾರ್ಪಾಟು ಸಹನಿರ್ವಹಣಾ’ ಕ್ರಮ ಒಂದು ಹೊರಹೊಮ್ಮುತ್ತಿರುವ ವಿನೂತನ ಕ್ರಮವಾಗಿದೆ. ಮಾರ್ಪಾಟು ಸಹನಿರ್ವಹಣಾ ಕ್ರಮ ಪ್ರಧಾನವಾಗಿ ಈ ಕೆಳಕಂಡ ಅಂಶಗಳನ್ನೊಳಗೊಂಡಿರುತ್ತದೆ.

  • ಮಾಡುತ್ತಾ ಕಲಿಯುವುದಕ್ಕೆ ಪ್ರಾಧಾನ್ಯತೆ
  • ವಿವಿಧ ಜ್ಞಾನ ಪದ್ಧತಿಗಳ ಸಂಯೋಜನೆ
  • ಸಮುದಾಯ ಪ್ರಾದೇಶಿಕ ಮತ್ತು ರಾಷ್ಟ್ರೀಯ ಹಂತಗಳಲ್ಲಿ ಅಧಿಕಾರ ಹಂಚಿಕೆ ಮತ್ತು ಸಹಕಾರ
  • ನಿರ್ವಹಣೆಯಲ್ಲಿ ನಮ್ಯತೆ

ಈ ಅಂಶಗಳು ಸ್ಥಳ ವಿಶಿಷ್ಟ ಆಡಳಿತ ವಿಕಾಸಗೊಳ್ಳುವಿಕೆಯನ್ನು ಪ್ರೋತ್ಸಾಹಿಸುತ್ತವೆ. ಇದರಲ್ಲಿ ರೂಪಿಸಲಾಗುವ ಕಾರ್ಯತಂತ್ರಗಳು ಸಾಮಾಜಿಕ ಮತ್ತು ಜೀವಿ ಪರಿಸರಾತ್ಮಕ ಹಿಮ್ಮಾಹಿತಿಗಳಿಗೆ ಸೂಕ್ಷ್ಮವಾಗಿರುತ್ತವೆ ಮತ್ತು ವ್ಯವಸ್ಥೆಯ ಪುನಶ್ಚೇತನ ಮತ್ತು ಸುಸ್ಥಿರತೆ ಕಡೆ ಮುಖ ಮಾಡಿರುತ್ತವೆ. ಮಾರ್ಪಾಟು ನಿರ್ವಹಣೆಯ ಇತರ ಕೆಲವು ಮುಖ್ಯ ವಿಷಯಗಳೆಂದರೆ,

  • ವಿಧಾನ ಮತ್ತು ಫಲಿತಾಂಶಗಳ ಮೌಲ್ಯಮಾಪನ ಕ್ರಮಗಳನ್ನು ಉತ್ತಮಪಡಿಸುವುದು.
  • ಸಾಮಾಜಿಕ-ಜೀವಿ ಪರಿಸರಾತ್ಮಕ ವ್ಯವಸ್ಥೆಗಳ ಆಡಳಿತದಲ್ಲಿ ವಿಶ್ವಾಸ ನಿರ್ಮಾಣ, ಅರ್ಥಪೂರ್ಣ ಒಡನಾಟಗಳು, ಸಾಮಾಜಿಕ ಬಂಡವಾಳದ ಪಾತ್ರ ಮತ್ತು ಅಧಿಕಾರಕ್ಕೆ ಹೆಚ್ಚಿನ ಒತ್ತನ್ನು ನೀಡುವುದು.

ಆದರೆ ನಾವಿಂದು ಸಂರಕ್ಷಣೆಯನ್ನು ಅಭಿವೃದ್ಧಿಯಿಂದ ಬಲಾತ್ಕಾರವಾಗಿ ದೂರತಳ್ಳಿರುವ ಪರಿಸ್ಥಿತಿಯಲ್ಲಿ ಸಿಕ್ಕಿ ಹಾಕಿಕೊಂಡು, ಒದ್ದಾಡುತ್ತಿದ್ದೇವೆ. ಇದರಿಂದಾಗಿ ನಮ್ಮ ನೀತಿಗಳು ಕೆಲವು ಪ್ರದೇಶಗಳಲ್ಲಿ ಜಾಗರೂಕತೆಯೇ ಇಲ್ಲದ ಅಭಿವೃದ್ಧಿಯನ್ನು ಹಾಗೂ ಮತ್ತೆ ಕೆಲವು ಪ್ರದೇಶಗಳಲ್ಲಿ ವಿವೇಚನಾರಹಿತ ಸಂರಕ್ಷಣೆಯನ್ನು ಪ್ರೋತ್ಸಾಹಿಸುತ್ತಿವೆ. ಇದರಿಂದಾಗಿ ನಾವಿಂದು ಜೀವಿ ಪರಿಸರಾತ್ಮಕ ವಿನಾಶದ ಮಹಾಸಾಗರಗಳಲ್ಲಿ ಸಂರಕ್ಷಿತ ಪ್ರದೇಶಗಳೆಂಬ ದ್ವೀಪಗಳನ್ನು ನಿರ್ಮಿಸುತ್ತಿದ್ದೇವೆ. ಸಂರಕ್ಷಿತ ಪ್ರದೇಶಗಳಲ್ಲಿ ಒಂದು ಹುಲ್ಲು ಕಡ್ಡಿಯನ್ನು ತೆಗೆಯಲು ಬಿಡದಿರುವುದು ಎಷ್ಟು ಅಸಮರ್ಪಕವಾದದ್ದೋ ಅವುಗಳ ಹೊರಭಾಗದಲ್ಲಿ ಮಾಲಿನ್ಯ ನಿಯಂತ್ರಣದ ಕಾನೂನುಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವುದು ಅಷ್ಟೆ ಅಸಮರ್ಪಕವಾದ ನಡವಳಿಕೆಯಾಗಿದೆ. ಈಗ ಹಾಲಿ ಅನುಸರಿಸಲಾಗುತ್ತಿರುವ ‘ಜಾಗರೂಕತೆ ಇಲ್ಲದೆ ಅಭಿವೃದ್ಧಿಪಡಿಸಿ-ವಿವೇಚನಾರಹಿತವಾಗಿ ಸಂರಕ್ಷಿಸಿ’ (Develop recklessly – Conserve thoughtlessly) ಎಂಬ ನೀತಿಯನ್ನು ಕೈಬಿಟ್ಟು ಅದರ ಸ್ಥಾನದಲ್ಲಿ ‘ಸುಸ್ಥಿರವಾಗಿ ಅಭಿವೃದ್ಧಿಪಡಿಸಿ-ವಿವೇಕಾಪೂರ್ಣವಾಗಿ ಸಂರಕ್ಷಿಸಿ’ (Develop Sustainably – Conserve thoughtfully) ಎಂಬ ನೀತಿಯನ್ನು ಪ್ರತಿಷ್ಠಾಪಿಸಬೇಕಾಗಿದೆ. ನಾವಿಂದು ಪರಸ್ಪರ ಪೂರಕವಾದ ಅಭಿವೃದ್ಧಿ ಮತ್ತು ಸಂರಕ್ಷಣಾ ಮಾದರಿಯನ್ನು ಅಭಿವೃದ್ಧಿ ಪಡಿಸಬೇಕಾಗಿದೆ. ಸ್ಥಳೀಯ ಸನ್ನಿವೇಶಕ್ಕೆ ಅಭಿವೃದ್ಧಿ ಮತ್ತು ಸಂರಕ್ಷಣಾ ಅಭ್ಯಾಸಗಳನ್ನು ಅತ್ಯಂತ ಸೂಕ್ಷ್ಮವಾಗಿ ಜೋಡಿಸುವ ಪ್ರಕ್ರಿಯೆಯಲ್ಲಿ ಸ್ಥಳೀಯ ಸಮುದಾಯಗಳ ಸಂಪೂರ್ಣ ಭಾಗವಹಿಸುವಿಕೆ ತೀರಾ ಅಗತ್ಯವಾಗಿದೆ. ಒಟ್ಟಾರೆಯಾಗಿ ಪರಿಣಿತ ತಂಡ ಸೂಕ್ಷ್ಮ ಪೊರೆಗಳುಳ್ಳ (Layered nuanced participatory) ಪಾಲ್ಗೊಳ್ಳುವ ವಿಧಾನದ ಅಳವಡಿಕೆಯನ್ನು ಪ್ರತಿಪಾದಿಸುತ್ತದೆ. ಆದ್ದರಿಂದ ತುಂಡರಿಸಲ್ಪಟ್ಟ ಗಡೀ ರೇಖೆಗಳಿಗೆ ಅನಗತ್ಯವಾದ ಪ್ರಾಮುಖ್ಯತೆ ಪ್ರಾಪ್ತವಾಗದೆ ಪಶ್ಚಿಮ ಘಟ್ಟಗಳ ಹೊರ ಭಾಗದಲ್ಲಿ ಬರುವ ಪ್ರದೇಶಗಳಲ್ಲಿಯೂ ಮಾರ್ಪಾಟು ಸಹನಿರ್ವಹಣಾ ಮಾದರಿಯನ್ನು ಅನುಸರಿಸಲು ಶಿಫಾರಸ್ಸು ಮಾಡಲಾಗಿದೆ.

ಕೃಪೆ: ಧರಣಿಮಂಡಲ

ಆಶಾವಾದ ಮೂಡಿಸುತ್ತಲೇ, ಎಡವುತ್ತಿರುವ ಸರ್ಕಾರ…

– ರವಿ ಕೃಷ್ಣಾರೆಡ್ಡಿ

ಸಂಪುಟ ರಚನೆಯ ನಂತರ ಸಿದ್ದರಾಮಯ್ಯನವರ ಹೊಸ ಸರ್ಕಾರದ ಬಗ್ಗೆ ಒಂದಷ್ಟು ಭರವಸೆ ಮತ್ತು ಆಶಾವಾದ ಇಟ್ಟುಕೊಳ್ಳಬಹುದು ಎನ್ನಿಸಿತ್ತು. siddaramaiah-cmಸಂಪುಟಕ್ಕೆ ಸೇರಿದ ಎಲ್ಲರೂ ಅರ್ಹರು ಮತ್ತು ಪ್ರಾಮಾಣಿಕರು ಎನ್ನುವುದು ಆ ಆಶಾವಾದಕ್ಕೆ ಕಾರಣವಾಗಿರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕ ಕಂಡ (ಇದ್ದುದರಲ್ಲಿ) ಉತ್ತಮ ಎನ್ನಬಹುದಾದ ಸಂಪುಟ ಇದು ಎನ್ನುವುದು ಆ ಭರವಸೆಗೆ ಕಾರಣ ಆಗಿತ್ತು. ಇದಕ್ಕೆ ಮತ್ತು ಕೆಲವರನ್ನು ಹೊರಗಿಟ್ಟ ರೀತಿ ಮತ್ತು ನೀತಿಗಳಿಗೆ ಖಂಡಿತವಾಗಿ ಸಿದ್ಧರಾಮಯ್ಯನವರು ಅಭಿನಂದನಾರ್ಹರು.

ಆದರೆ, ಖಾತೆಗಳ ಹಂಚಿಕೆಯ ನಂತರ ಪರಿಸ್ಥಿತಿ ಬದಲಾಗಿದೆ. ಕೆಲವು ಖಾತೆ ಮತ್ತು ಸಚಿವರ ಬಗ್ಗೆ ಭರವಸೆ ಇಟ್ಟುಕೊಳ್ಳುವಂತೆ, ಮತ್ತಷ್ಟು ಖಾತೆಗಳ ಹಂಚಿಕೆಯಲ್ಲಿ ಮುಖ್ಯಮಂತ್ರಿಗಳು ಖಂಡಿತವಾಗಿ ಅಸೂಕ್ಷ್ಮವಾಗಿ ವರ್ತಿಸಿದ್ದಾರೆ.

ಕೃಷ್ಣ ಭೈರೇಗೌಡರಿಗೆ ಖಂಡಿತವಾಗಿ ಬೇರೆ ಖಾತೆ ಕೊಡಬಹುದಿತ್ತು. ಅವರಿಗೆ ಕೃಷಿ ಖಾತೆಯನ್ನು ನಿಭಾಯಿಸಲಾಗುವುದಿಲ್ಲ ಎಂದು ಈ ಮಾತಿನ ಅರ್ಥವಲ್ಲ. ಅವರ ತಂದೆ ಭೈರೇಗೌಡರೂ ಕೃಷಿ ಸಚಿವರಾಗಿ ಒಳ್ಳೆಯ ಹೆಸರು ತೆಗೆದುಕೊಂಡಿದ್ದರು. ಕೃಷ್ಣ ಭೈರೇಗೌಡ ಖಂಡಿತವಾಗಿ ಅದನ್ನು ಆಧುನಿಕ ದೃಷ್ಟಿಕೋನದಿಂದ ನಿಭಾಯಿಸಲಿದ್ದಾರೆ. ಸ್ವತಃ ಕೃಷಿ ಹಿನ್ನೆಲೆಯ ಕುಟುಂಬದಿಂದ ಬಂದಿರುವ ಅವರು ಈಗಾಗಲೆ ಅದನ್ನು ಅವರ ಪ್ರಥಮ ಪತ್ರಿಕಾಗೊಷ್ಟಿಯಲ್ಲಿ ನಿರೂಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೃಷ್ಣ ಭೈರೇಗೌಡರ ಖಾತೆ ನಿರ್ವಹಣೆ ಬಗ್ಗೆ ಭರವಸೆ ಇಟ್ಟುಕೊಳ್ಳಬಹುದು. krishnabyregowdaಆದರೆ, ಕೃಷ್ಣರಂತಹ ಆಧುನಿಕ ಶಿಕ್ಷಣ ಮತ್ತು ಜಾಗತಿಕ ಉದ್ಯೋಗದ ಅನುಭವ ಇದ್ದವರು ಸಶಕ್ತವಾಗಿ ಮತ್ತು ಪರಿಣಾಮಕಾರಿಯಾಗಿ ನಿಭಾಯಿಸಬಹುದಾಗಿದ್ದ ಹಲವು ಖಾತೆಗಳು ಇದ್ದವು. ಉದಾಹರಣೆಗೆ, ಮಾಹಿತಿ ಮತ್ತು ತಂತ್ರಜ್ಞಾನ, ಉನ್ನತ ಶಿಕ್ಷಣ, ಕೈಗಾರಿಕೆ, ನಗರಾಭಿವೃದ್ಧಿ, ಇತ್ಯಾದಿ. ಕೃಷಿ ಇಲಾಖೆಯನ್ನು ಸಮರ್ಥವಾಗಿ ನಿಭಾಯಿಸಬಲ್ಲ ಹಲವರು ಈ ಸಂಪುಟದಲ್ಲಿ ಇದ್ದಾರೆ. ಆದರೆ, ನಾನು ಈಗ ಉಲ್ಲೇಖಿಸಿದ ಹಲವು ಖಾತೆಗಳನ್ನು ಭ್ರಷ್ಟಾಚಾರಕ್ಕೆ ಆಸ್ಪದವೀಯದೆ ಮತ್ತು ಅಧಿಕಾರಿಗಳ ಜ್ಞಾನದ ಮೇಲೆ ಅವಲಂಬಿಸದೆ ತಮ್ಮ ಶೈಕ್ಷಣಿಕ ಜ್ಞಾನ ಮತ್ತು ಅನುಭವದ ಆಧಾರದ ಮೇಲೆ ನಿಭಾಯಿಸಬಲ್ಲವರು ಕೆಲವರೇ ಇದ್ದಾರೆ. ಹಾಗಾಗಿ ಕೃಷ್ಣ ಭೈರೇಗೌಡರಂತಹವರನ್ನು ಎಲ್ಲಿ ಬಳಸಿಕೊಳ್ಳಬೇಕು ಎನ್ನುವುದರ ಬಗ್ಗೆ ಸಿದ್ಧರಾಮಯ್ಯನವರು ಮತ್ತಷ್ಟು ಗಂಭೀರವಾಗಿ ಯೋಚಿಸಬೇಕು.

ಎಚ್.ಕೆ.ಪಾಟೀಲರಿಗೆ ಸಹಜವಾಗಿ ಎಂಬಂತೆ ಗ್ರಾಮೀಣಾಭಿವೃಧ್ಹಿ ದೊರಕಿದೆ. ಇವರು ಆ ಖಾತೆಯಲ್ಲಿ ಮಾಡಲಿರುವ ಕೆಲಸಗಳ ಬಗ್ಗೆ ಅಪಾರವಾದ ನಿರೀಕ್ಷೆಗಳಿವೆ. ಶ್ರೀನಿವಾಸ ಪ್ರಸಾದರಿಗೆ ಕಂದಾಯ ಖಾತೆ ದೊರಕಿದೆ. ತೀರ್ಥಹಳ್ಳಿಯ ಕಿಮ್ಮನೆ ರತ್ನಾಕರರಿಗೆ ಪ್ರಾಥಮಿಕ ಶಿಕ್ಷಣ ದೊರಕಿದೆ. ಇಲ್ಲಿಯವರೆಗೂ ಗಂಭೀರವಾದ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದ ಆರೋಪಗಳಿಲ್ಲದ ಸಿದ್ಧರಾಮಯ್ಯನವರ ಹಲವಾರು ಆಪ್ತರಿಗೆ ಒಳ್ಳೆಯ ಖಾತೆಗಳೇ ಲಭಿಸಿವೆ. ಆದರೆ, ಅವರು ಎಷ್ಟು ದಕ್ಷತೆಯಿಂದ ಕಾರ್ಯ ನಿರ್ವಹಿಸುತ್ತಾರೆ ಮತ್ತು ಜನಮುಖಿಯಾದ ಆಡಳಿತ ನಡೆಸುತ್ತಾರೆ ಎನ್ನುವುದು ಬರಲಿರುವ ದಿನಗಳಲ್ಲಿ ಮಾತ್ರವೇ ಗೊತ್ತಾಗಲಿರುವ ವಿಷಯ.

ರಾಜ್ಯದ ರಾಜಕೀಯ ವಲಯದಲ್ಲಿ ಅಷ್ಟೇನೂ ಪರಿಚಿತರಲ್ಲದ ಕೆ.ಜೆ. ಜಾರ್ಜ್‌ರಿಗೆ ಗೃಹ ಖಾತೆಯಂತಹ ಪ್ರಮುಖ ಖಾತೆ ಕೊಡಲಾಗಿದೆ. ಮಾನವ ಹಕ್ಕುಗಳು ಮತ್ತು ಮಾನವೀಯ ಮೌಲ್ಯಗಳ ಬಗ್ಗೆ ಗಂಭೀರ ಚಿಂತನೆಗಳಿಲ್ಲದ, ಪೋಲಿಸ್ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ತರುವ ಮನಸ್ಥಿತಿಯಿಲ್ಲದ ಯಾರಾದರೂ ಗಟ್ಟಿಜೀವ ಈ ಖಾತೆಯನ್ನು ವಹಿಸಿಕೊಳ್ಳುವ ತನಕ ರಾಜ್ಯದ ಪೋಲಿಸ್ ವ್ಯವಸ್ಥೆ ಸುಧಾರಿಸುವುದಿಲ್ಲ ಮತ್ತು ಜನಸ್ನೇಹಿಯಾಗುವುದಿಲ್ಲ. ಜಾರ್ಜ್‌ರ ಬಗ್ಗೆ ಯಾವ ರೀತಿಯ ಭರವಸೆ ಇಟ್ಟುಕೊಳ್ಳಬಹುದೊ ಗೊತ್ತಾಗುತ್ತಿಲ್ಲ.

ಕೆಲವರನ್ನು ಉಲ್ಲೇಖಿಸುವುದಕ್ಕೆ ಮೊದಲು ಎಂದೋ ಓದಿದ ಮತ್ತು ಅಷ್ಟಿಷ್ಟು ಜ್ಞಾಪಕದಲ್ಲಿರುವ ಈ ಉಪಕತೆ ಹೇಳುತ್ತೇನೆ. ಒಬ್ಬ ಪರಮಾತಿಭ್ರಷ್ಟ ಇರುತ್ತಾನೆ. ಯಾವ ಜಾಗದಲ್ಲಿ ಹಾಕಿದರೂ ಅವನು ಲಂಚ ಹೊಡೆಯುವುದರಲ್ಲಿ ನಿಸ್ಸೀಮ. ತಲೆಕೆಟ್ಟ ಅವನ ಮೇಲಧಿಕಾರಿಗಳು ಅವನಿಗೆ ಬೇರೆ ಯಾವ ಕೆಲಸವೂ ಬೇಡ ಎಂದು, ಸಮುದ್ರದಲ್ಲಿ ಅಲೆಗಳನ್ನು ಎಣಿಸುವ ಕೆಲಸ ಮಾಡು ಎಂದು ಅಲ್ಲಿಗೆ ವರ್ಗ ಮಾಡುತ್ತಾರೆ. ಕೆಲವು ದಿನಗಳ ನಂತರ ಆತನ ಮೇಲಧಿಕಾರಿಗಳಿಗೆ ಗೊತ್ತಾಗುತ್ತದೆ, ಸಮುದ್ರದ ಅಲೆಗಳನ್ನು ಎಣಿಸುವ ಕೆಲಸದಲ್ಲೂ ಆತ ಲಂಚ ಹೊಡೆಯುತ್ತಿದ್ದಾನೆ ಎಂದು. ಹೇಗೆ ಎಂದು ವಿಚಾರಿಸಿದರೆ ಗೊತ್ತಾದ ಸಂಗತಿ, ಆತ ಸಮುದ್ರದ ಮುಂದೆ ಕುರ್ಚಿ ಹಾಕಿಕೊಂಡು ಅಲೆಗಳನ್ನು ಎಣಿಸುತ್ತಿರುತ್ತಾನೆ. ಸಮುದ್ರದಲ್ಲಿ ಸಹಜವಾಗಿ ಅತ್ತಿಂದಿತ್ತ ದೋಣಿಗಳು ಮತ್ತು ಹಡಗುಗಳು ಸಂಚರಿಸುತ್ತಿರುತ್ತವೆ. ಇವನು ಅವುಗಳನ್ನು ತಡೆದು ನಿಲ್ಲಿಸಿ, ತನ್ನ ಅಲೆಗಳನ್ನು ಎಣಿಸುವ ಸರ್ಕಾರಿ ಕೆಲಸಕ್ಕೆ ನಿಮ್ಮಿಂದ ತೊಂದರೆಯಾಗಿತ್ತಿದೆ, ಇದು ಕಾನೂನು ವಿರೋಧಿ ಎನ್ನುತ್ತಾನೆ. ದೋಣಿಗಳವರು ಆತನಿಗೆ ಲಂಚ ಕೊಡುವುದನ್ನು ಆರಂಭಿಸುತ್ತಾರೆ.

ಇಂತಹ ಮನಸ್ಥಿತಿಯ ಹಲವು ಜನ ಈ ಸಂಪುಟದಲ್ಲಿದ್ದಾರೆ. ಇವರಿಗೆ ಭಾರೀ ಖಾತೆಗಳೇ ಸಿಗಬಹುದು ಎಂದು ನಿರೀಕ್ಷಿಸಿದ್ದರೂ ಸಿದ್ಧರಾಮಯ್ಯನವರು ಆ ವಿಷಯದಲ್ಲಿ ಅವರಿಗೆ ಸದ್ಯಕ್ಕೆ ಅಷ್ಟೇನೂ ಗಣನೀಯವಲ್ಲದ ಖಾತೆಗಳನ್ನು ನೀಡಿದ್ದಾರೆ. ಆದರೆ ಅವರ ಚಾಳಿ ಹೇಗೆ ಮುಂದುವರೆಯುತ್ತದೆ ಎನ್ನುವುದು ಒಂದಾರು ತಿಂಗಳಿನಲ್ಲಿಯೇ ಗೊತ್ತಾಗಲಿದೆ. ಮತ್ತೆ ಕೆಲವು ಸಚಿವರು ಉದಾಸೀನದಿಂದ ವರ್ತಿಸುವ ನಡವಳಿಕೆಗಳೂ ಹೆಚ್ಚಾಗಲಿವೆ. ನಿನ್ನೆ ಖಾಸಗಿ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜುಗಳ ಮುಖ್ಯಸ್ಥರೊಡನೆ ಮುಖ್ಯಮಂತ್ರಿ ಮತ್ತು ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ಹಾಗೂ ವೈದ್ಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ನಡೆದುಕೊಂಡ ರೀತಿ. ಸಭೆಗೆ ಸಾಕಷ್ಟು ಪೂರ್ವತಯಾರಿ ಮಾಡಿಕೊಂಡು ಬರದ ಸಚಿವರ ಬಗ್ಗೆ ಇಂದಿನ ವಿಜಯ ಕರ್ನಾಟಕದಲ್ಲಿ ಉಲ್ಲೇಖವಿದೆ. ದೇಶಪಾಂಡೆಯಂತಹವರು ವಿದ್ಯಾರ್ಥಿಗಳ ಮತ್ತು ಜನಸಾಮಾನ್ಯರ ಹಿತಾಸಕ್ತಿಗಳನ್ನು ಕಾಯುತ್ತಾರೆ ಎಂದು ಭಾವಿಸುವುದು ಮುಗ್ಧತೆಯಾಗುತ್ತದೆ.

ಆರಂಭದ ಪ್ಯಾರಾದಲ್ಲಿ ಮುಖ್ಯಮಂತ್ರಿಗಳು ಕೆಲವು ಖಾತೆಗಳನ್ನು ಹಂಚುವ ವಿಚಾರದಲ್ಲಿ ಅಸೂಕ್ಷ್ಮವಾಗಿ ವರ್ತಿಸಿದ್ದಾರೆ ಎಂದು ಪ್ರಸ್ತಾಪಿಸಿದ್ದೆ. ಇದು ಎರಡು ಖಾತೆಗಳ ವಿಚಾರವಾಗಿ ಎದ್ದು ಕಾಣುತ್ತದೆ. ಒಂದು, ಸತೀಶ್ ಜಾರಕಿಹೊಳಿಯವರಿಗೆ ನೀಡಿರುವ ಅಬಕಾರಿ ಖಾತೆ ಮತ್ತು ಪ್ರಕಾಶ್ ಹುಕ್ಕೇರಿಯವರಿಗೆ ನೀಡಿರುವ ಸಕ್ಕರೆ ಖಾತೆ. ಸತೀಶ್ ಜಾರಕಿಹೊಳಿಯವರ ತಂದೆ ಬೈಲಹೊಂಗಲದ ಲಕ್ಷ್ಮಣ ಜಾರಕಿಹೊಳಿಯವರು ಎಷ್ಟು ದೊಡ್ಡ ಅಬಕಾರಿ ಗುತ್ತಿಗೆದಾರರಾಗಿದ್ದರು ಎನ್ನುವುದು ಬೆಳಗಾವಿ ಮತ್ತು ಬಿಜಾಪುರದ ಸೀಮೆಯಲ್ಲಿ ಜನಸಾಮಾನ್ಯರಿಗೂ ತಿಳಿದ ವಿಷಯ. ಜಾರಕಿಹೊಳಿಯವರ ಕುಟುಂಬದ ಮೂಲ ಉದ್ಯೋಗ ಮತ್ತು ಆದಾಯ ಅಬಕಾರಿ ಗುತ್ತಿಗೆಗಳದ್ದು. ಇತ್ತೀಚಿನ ವರ್ಷಗಳಲ್ಲಿ ಜಾರಕಿಹೊಳಿ ಸಹೋದರರು ತಮ್ಮ ವ್ಯವಹಾರಗಳನ್ನು Diversify ಮಾಡಿಕೊಂಡಿರಬಹುದು. ಆದರೆ ಅವರಿಗೆ ಅಬಕಾರಿಯಲ್ಲಿ ಆಸಕ್ತಿ ಮತ್ತು ಆದಾಯ ಇದ್ದೇ ಇರುತ್ತದೆ. ಹೀಗಿರುವಾಗ ಸತೀಶ್ ಜಾರಕಿಹೊಳಿಯವರಿಗೆ ಅಬಕಾರಿ ಖಾತೆ ನೀಡಿರುವುದು ಅಸಮಂಜಸ. ಸತೀಶರು ಭ್ರಷ್ಟಾಚಾರ ಎಸಗದೇ ಕಾರ್ಯ ನಿರ್ವಹಿಸಿದರೂ ಇದು “Conflict of Interest” (ಅನೈತಿಕವಾಗಿ ಸ್ವಲಾಭ ಮಾಡಿಕೊಳ್ಳುವ ಸಾಧ್ಯತೆ) ಗೆ ಉದಾಹರಣೆ. ಹಾಗೆಯೇ, ಸಕ್ಕರೆ ಸಚಿವ ಪ್ರಕಾಶ್ ಹುಕ್ಕೇರಿ ಮತ್ತವರ ಕುಟುಂಬದವರು ಹಲವಾರು ಸಕ್ಕರೆ ಕಾರ್ಖಾನೆಗಳ ಉದ್ಯಮದಲ್ಲಿ ಪಾಲುದಾರರು. ಇವರು ತಮ್ಮ ಖಾತೆಯನ್ನು ನಿಭಾಯಿಸುವಾಗ ತಮ್ಮ ಮತ್ತು ತಮ್ಮವರ ಹಿತಾಸಕ್ತಿಗಳಿಗೆ ಪೂರಕವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ ಎನ್ನುವುದಕ್ಕೆ ಆಧಾರಗಳೇನಿದೆ?

ಇಂತಹುದಕ್ಕೆ ಆಧಾರಗಳು ಬೇಕಿಲ್ಲ. ಆದರೆ, ಇಂತಹ ಸಂಶಯಗಳು ಬರದೇ ಇರುವಂತೆ ಸೂಕ್ಷ್ನತೆಯಿಂದ ನಡೆದುಕೊಳ್ಳುವುದು ಸರ್ಕಾರದ ಕರ್ತವ್ಯ. ಇದು ಸಿದ್ಧರಾಮಯ್ಯನವರಿಗೆ, ಸತೀಶ್ ಜಾರಕಿಹೊಳಿಯವರಿಗೆ, ಪ್ರಕಾಶ್ ಹುಕ್ಕೇರಿಯವರಿಗೆ, ಮತ್ತು ಆಡಳಿತ ಪಕ್ಷವಾದ ಕಾಂಗ್ರೆಸ್‌ನವರಿಗೆ ಅರ್ಥವಾಗದೇ ಹೋಗಿದ್ದರೆ ಅದು ಅವರ ತಿಳಿವಳಿಕೆ ಮತ್ತು ಪ್ರಬುದ್ಧತೆಯನ್ನು ತೋರಿಸುತ್ತದೆ. ಅರ್ಥವಾಗಿಯೂ ಇದನ್ನು ಮಾಡಿದ್ದರೆ ಅದು ಅಕ್ಷಮ್ಯವಾಗುತ್ತದೆ.

ಒಟ್ಟಿನಲ್ಲಿ. ಸಿದ್ಧರಾಮಯ್ಯನವರ ಸರ್ಕಾರ ಭರವಸೆಗಳನ್ನು ಹುಟ್ಟಿಸುತ್ತಲೇ ಬರಲಿರುವ ದಿನಗಳ ಭ್ರಷ್ಟಾಚಾರ, ದುರಾಡಳಿತ ಮತ್ತು ಸ್ವಜನಪಕ್ಷಪಾತದ ಬೀಜಗಳನ್ನು ತನ್ನೊಳಗೆ ಹುದುಗಿಸಿಕೊಂಡಿರುವುದನ್ನು ಕಾಣಿಸುತ್ತಿದೆ.


ಪೂರಕ ಓದಿಗೆ: ಹಿಂದೆ 2009ರಲ್ಲಿ “ವಿಕ್ರಾಂತ ಕರ್ನಾಟಕ”ಕ್ಕೆ “Conflict of Interest” ಹಿನ್ನೆಲೆಯಲ್ಲಿ “ದೊಡ್ಡ ಹಗರಣಗಳಿಲ್ಲ; ಅಕ್ರಮವಾಗಿ ಶ್ರೀಮಂತರಾಗುತ್ತಿರುವ ರಾಜಕಾರಣಿಗಳಿಗೆ ಕಮ್ಮಿ ಇಲ್ಲ.” ಎಂಬ ಲೇಖನ ಬರೆದಿದ್ದೆ. ತಮ್ಮ ಹಿತಾಸಕ್ತಿಗೆ ಹೇಗೆ ಅಧಿಕಾರಸ್ಥರು ತಮ್ಮ ಸ್ಥಾನದ ದುರುಪಯೋಗಪಡಿಸಿಕೊಳ್ಳುತ್ತಾರೆ ಎನ್ನುವುದಕ್ಕೆ ಮಾರ್ಥಾ ಸ್ಟುವರ್ಟ್ ಮತ್ತು ಕೃಷ್ಣಯ್ಯ ಶೆಟ್ಟಿಯ ಉದಾಹರಣೆಯೊಂದಿಗೆ ಅದನ್ನು ಚರ್ಚಿಸಲಾಗಿದೆ. ಆಸಕತರು ಅದನ್ನು ಇಲ್ಲಿ ಗಮನಿಸಬಹುದು.

ಕಲೋನಿಯಲ್ ನಶೆಯಿಂದ ಕಳಂಕಿತಗೊಂಡ ಭೂ ಮಸೂದೆ

ಮೂಲ : ಮಧುರೇಶ್ ಕುಮಾರ್
ಅನುವಾದ : ಬಿ.ಶ್ರೀಪಾದ ಭಟ್

ಕರಾಳ ಹಿನ್ನೆಲೆಯ, ಭೂ ಆಕ್ರಮಣವನ್ನು ಮೂಲ ಉದ್ದೇಶವನ್ನಾಗಿರಿಸಿಕೊಂಡ 1894 ರ ಭೂ ಮಸೂದೆಯ ಕಾನೂನಿಗೆ ಅಮೂಲಾಗ್ರವಾಗಿ ತಿದ್ದುಪಡಿ ತಂದು ಹೊಸದಾದ ಭೂ ಸ್ವಾಧೀನ ಮಸೂದೆಯನ್ನು ರಚಿಸುವುದು ಮನಮೋಹನಸಿಂಗ್ ನೇತೃತ್ವದ ಯುಪಿಎ-2 ಸರ್ಕಾರದ ಆದ್ಯ ಕರ್ತವ್ಯವಾಗಬೇಕಿತ್ತು. ಆದರೆ ಬದಲಾಗಿ ಭೂ ಸ್ವಾಧೀನ ಮಸೂದೆ ಮತ್ತು ಪುನರ್ವಸತೀಕರಣ ಮಸೂದೆ 2001 ಯನ್ನು ಪಾರ್ಲಿಮೆಂಟಿನಲ್ಲಿ ಅನುಮೋದಿಸುವ ಕುರಿತಾಗಿ ಇತ್ತೀಚಿನ ತಿಂಗಳುಗಳಲ್ಲಿ ರಾಜಕೀಯ ಪಕ್ಷಗಳ ನಡುವೆ ಕ್ಷಿಪ್ರಗತಿಯಲ್ಲಿ ನಡೆಯುತ್ತಿರುವ ವಿವಿಧ ರೀತಿಯ ಚಟುವಟಿಕೆಗಳನ್ನು ಗಮನಿಸಿದರೆ ಅಲ್ಲಿನ ವಿದ್ಯಾಮಾನಗಳೇ ವಿರುದ್ಧ ದಿಕ್ಕಿನಲ್ಲಿವೆ ಎಂದು ನಿಚ್ಛಳವಾಗಿ ಗೋಚರವಾಗುತ್ತದೆ. ಭೂ ಸ್ವಾಧೀನ ಮಸೂದೆಯ ಉದ್ದೇಶವು ಅಭಿವೃದ್ಧಿಯ ಹೆಸರಿನಲ್ಲಿ ಜಮೀನನ್ನು ಕಳೆದುಕೊಂಡ ಸಣ್ಣ, ಅತಿ ಸಣ್ಣ ರೈತರಿಗೆ ಪುನರ್ವಸತೀಕರಣ ಕಲ್ಪಿಸುವುದು ಮತ್ತು ಅವರ ದೈನಂದಿಕ ಜೀವನವನ್ನು ಮರಳಿ ಸಹಜ ಮಾರ್ಗಕ್ಕೆ ಮರಳುವಂತೆ ನೋಡಿಕೊಳ್ಳುವುದು ಸರ್ಕಾರದ ಮುಖ್ಯ ಇಲಾಖೆಗಳಲ್ಲೊಂದಾದ ಗ್ರಾಮೀಣ ಅಭಿವೃದ್ಧಿ ಇಲಾಖೆಯ ಮುಖ್ಯ ಧೇಯೋದ್ಧೇಶವಾಗಿರಬೇಕಿತ್ತು. ಆದರೆ ವಿರುದ್ಧ ದಿಕ್ಕಿನಲ್ಲಿರುವ ಈ ಪ್ರಕ್ರಿಯೆಯು ಸಂಪೂರ್ಣ ಕೈಗಾರೀಕರಣ ಮತ್ತು ನಗರೀಕರಣವನ್ನೇ ಮೂಲೋದ್ದೇಶವನ್ನಾಗಿರಿಸಿಕೊಂಡಿದೆ.

1894 ರ ಭೂ ಮಸೂದೆಗೆ ಹೋಲಿಸಿದರೆ ಈಗಿನ ಭೂ ಸ್ವಾಧೀನ ಮಸೂದೆಯು ಅನೇಕ ರೀತಿಯಲ್ಲಿ ಸುಧಾರಿತಗೊಂಡ ಅಂಶಗಳನ್ನು ಒಳಗೊಂಡಿದ್ದರೂ ಮುಖ್ಯವಾದIndustrial_Mangalore ಆಶಯಗಳು ಮತ್ತು ಜೀವಪರ ನಿಲುವುಗಳನ್ನು ಸಂಪೂರ್ಣವಾಗಿ ಕೈ ಬಿಟ್ಟಿದೆ. ಸಂಸದೀಯ ಕಮಿಟಿಯು ಈ ನಿರ್ಲಕ್ಷಿತ ಪರಿಚ್ಛೇದಗಳನ್ನು ಪಟ್ಟಿ ಮಾಡಿಕೊಟ್ಟಿತ್ತು. ಇದರಲ್ಲಿ ಸರ್ಕಾರವು ತಾನು ಸ್ವಾಧೀನ ಪಡೆಸಿಕೊಂಡ ಭೂಮಿಯನ್ನು ನೇರವಾಗಿಯೇ ಆಗಲಿ, ಪರೋಕ್ಷವಾಗಿಯೇ ಆಗಲಿ ಖಾಸಗಿ ಬಂಡವಾಳಶಾಹಿಯವರಿಗೆ ಹಸ್ತಾಂತರಗೊಳಿಸಬಾರದು ಎನ್ನುವ ಅತ್ಯಂತ ಮುಖ್ಯವಾದ ಶಿಫಾರಸನ್ನು ಕೇಂದ್ರ ಸರ್ಕಾರವು ತಿರಸ್ಕರಿಸಿತು. ದೇಶದ ಅಭಿವೃದ್ಧಿಗಾಗಿ ಖಾಸಗಿ ಬಂಡವಾಳಶಾಹಿಗಳ ಪಾತ್ರ ಬಹು ಮುಖ್ಯವಾದದ್ದೆಂದು, ಅವರನ್ನು ಒಳಗೊಳ್ಳಲೇಬೇಕೆಂದು ಅಭಿಪ್ರಾಯ ಪಟ್ಟ ಸರ್ಕಾರವು ಸಂಸದೀಯ ಕಮಿಟಿಯ ಶಿಫಾರಸನ್ನು ತಿರಸ್ಕರಿಸಿತು. 1894 ರ ಮಸೂದೆಯಲ್ಲಿ ನಿಷೇಧಿಸಲ್ಪಟ್ಟ ಸಾರ್ವಜನಿಕ ಉದ್ದಿಮೆ ಮತ್ತು ಖಾಸಗಿ ಉದ್ದಿಮೆಗಳ ನಡುವಿನ ಸಹಭಾಗಿತ್ವನ್ನು ಈಗಿನ ಕೇಂದ್ರ ಸರ್ಕಾರದ ಭೂ ಮಸೂದೆಯು ಬಲವಾಗಿ ಸಮರ್ಥಿಸಿಕೊಂಡಿತು. ಏತಕ್ಕಾಗಿ ಸರ್ಕಾರವು ಖಾಸಗಿಯವರಿಗೆ ಮಧ್ಯವರ್ತಿಯಾಗಲು ಬಯಸುತ್ತದೆ? ಇಂದಿನ ಅಭಿವೃದ್ಧಿಯ ಮಾದರಿಯನ್ನು ಅವಲೋಕಿಸಿದಾಗ ಅದು ಇಂಧನ, ಸಾರಿಗೆ, ರೈಲ್ವೇಗಳಂತಹ ಪ್ರಮುಖ ಸಾರ್ವಜನಿಕ ಇಲಾಖೆಗಳನ್ನು ಅಭಿವೃದ್ಧಿಯ ಹೆಸರಿನಲ್ಲಿ ಖಾಸಗಿ ಬಂಡವಾಳಶಾಹಿಗಳಿಗೆ ಪರಭಾರೆ ಮಾಡಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಆದರೆ ಸರ್ಕಾರವು ವಿವೇಚನೆಯಿಲ್ಲದೆ ಬೇಕಾಬಿಟ್ಟಿ ಜಮೀನನ್ನು ಆಕ್ರಮಿಸಿಕೊಂಡು ಅದನ್ನು ಖಾಸಗಿಯವರ ಕೈಗೊಪ್ಪಿಸುತ್ತಿರುವುದು ಸಂಘರ್ಷಕ್ಕೆ ಎಡೆಮಾಡಿಕೊಡುತ್ತಿದೆ. ಭೂಮಿಯನ್ನು ಹೊರತುಪಡಿಸಿ ಬೇರೇನನ್ನು ಹೊಂದಿಲ್ಲದ ಸಣ್ಣ, ಅತಿ ಸಣ್ಣ ರೈತರು, ಆದಿವಾಸಿಗಳು, ದಲಿತರು ತಮ್ಮ ಸ್ವಂತದ ಭೂಮಿಯು ಖಾಸಗಿಯವರ ಕೈ ಸೇರುತ್ತಿರುವುದನ್ನು ಸುತಾರಂ ಒಪ್ಪುವುದಿಲ್ಲ.

1984ರ ವರೆಗೂ ಸರ್ಕಾರದ ಯೋಜನೆಗಳಿಗಾಗಿ ಬಡ ರೈತರಿಂದ ಭೂಮಿಯನ್ನು ಸ್ವಾಧೀನಪಡೆಸಿಕೊಂಡು ಅವರಿಗೆ ಪರಿಹಾರವಾಗಿ ಬಿಡಿಗಾಸನ್ನು ಬಿಸಾಡುತ್ತಿದ್ದ droughtಸರ್ಕಾರವು ಇಂದು ಖಾಸಗಿ ಮತ್ತು ಸಾರ್ವಜನಿಕ ಯೋಜನೆಗಳಿಗಾಗಿ ಈ ಕಾರ್ಯಕ್ಕೆ ಕೈ ಹಾಕಿದೆ. ಆದರೆ ಇಂದಿನ ಮಸೂದೆಯಲ್ಲಿ ಭೂಮಿಯನ್ನು ಕಳೆದುಕೊಳ್ಳಲಿರುವ ಶೇಕಡ 80 ರಷ್ಟು ರೈತರ ಅಭಿಪ್ರಾಯವನ್ನು ಆಧರಿಸಿ ಭೂಮಿಯನ್ನು ಸ್ವಾಧೀನಪಡೆಸಿಕೊಳ್ಳಲಾಗುವುದು ಎನ್ನುವ ಕಣ್ಣೊರೆಸುವ ತಂತ್ರಕ್ಕೆ ಕೈ ಹಾಕಿದೆ. ಆದರೆ ಇದೇ ಅಂಶವು ಸರ್ಕಾರಿ ಯೋಜನೆಗಳಿಗೆ ಅನ್ವಯಿಸುವುದಿಲ್ಲ. ಇದು ಯಾವ ಬಗೆಯ ನ್ಯಾಯ?

ಮೂರನೆಯದಾಗಿ ಆಹಾರ ಭದ್ರತೆಯ ಪ್ರಶ್ನೆ. ವ್ಯವಸಾಯಕ್ಕಾಗಿ ಉಪಯೋಗಿಸುತ್ತಿದ್ದ ಜಮೀನನ್ನು ಬಡ ರೈತರಿಂದ ಆಕ್ರಮಿಸಿಕೊಂಡು ವ್ಯವಸಾಯೇತರ ಉದ್ದೇಶಗಳಿಗೆ ಪರಭಾರೆ ಮಾಡುವುದು ಆಹಾರ ಉತ್ಪಾದನೆಯಲ್ಲಿ ತೀವ್ರವಾದ ಕಡಿತವನ್ನುಂಟು ಮಾಡುತ್ತದೆ. ಕ್ಷೀಣಗೊಂಡ ಆಹಾರ ಉತ್ಪಾದನೆಯು ಆಹಾರ ಪೂರೈಕೆಯ ಮೇಲೂ ತೀವ್ರವಾದ ಪರಿಣಾಮ ಬೀರುತ್ತದೆ. ವ್ಯವಸಾಯಕ್ಕಾಗಿಯೇ ಮೀಸಲಿಟ್ಟ ಒಣ ಭೂಮಿಯನ್ನಾಗಲೀ ಅಥವಾ ನೀರಾವರಿ ಭೂಮಿಯನ್ನಾಗಲೀ ಬೇರೆ ಉದ್ದೇಶಗಳಿಗೆ ಸ್ವಾಧೀನಪಡಿಸಿಕೊಳ್ಳಬಾರದೆಂದು ಸ್ಥಾಯೀ ಸಮಿತಿಯು ತನ್ನ ನಿರ್ಧಾರದಲ್ಲಿ ಸ್ಪಷ್ಟವಾಗಿ ತಿಳಿಸಿದೆ. ಆದರೆ ವರ್ಷಕ್ಕೆ ಎರಡು ಬೆಳೆಯನ್ನು ಬೆಳೆಯುವ ಭೂಮಿಯನ್ನು ವಶಪಡಿಸಿಕೊಳ್ಳುವುದಿಲ್ಲವೆಂದು ಹೇಳುವ ರಂಗೋಲಿ ಕೆಳಗೆ ನುಸುಳುವ ಸರ್ಕಾರ, ದೇಶದ ಬಹುಪಾಲು ರೈತರು ಹೊಂದಿರುವುದು ಒಂದು ಬೆಳೆಯ ಭೂಮಿಯನ್ನು ಹೊಂದಿರುವ ಸತ್ಯವನ್ನು ಮರಮಾಚುತ್ತದೆ. ಈ ಒಂದು ಬೆಳೆಯನ್ನು ಬೆಳೆಯುವ ರೈತರಿಗೇ ಹೆಚ್ಚಿನ ಭದ್ರತೆ ಮತ್ತು ಸಹಾಯವನ್ನು ನೀಡಬೇಕಾದಂತಹ ಸಂದರ್ಭದಲ್ಲಿ ಸರ್ಕಾರವು ಅವರ ಭೂಮಿಯನ್ನು ವಶಪಡಿಸಿಕೊಳ್ಳುವುದು ಪರಮ ನೀಚತನವಲ್ಲವೇ!

ನಾಲ್ಕನೆಯದಾಗಿ ಸ್ಥಾಯೀ ಸಮಿತಿಯು ತನ್ನ ವರದಿಯಲ್ಲಿ ಹೇಳಿರುವ ಪ್ರಕಾರ ಸರ್ಕಾರವು ತಾನು ವಶಪಡಿಸಿಕೊಳ್ಳುವ ಶೇಕಡಾ 90 ರಷ್ಟು ಭೂಮಿಯನ್ನು ಭೂ ಸ್ವಾಧೀನ ಮಸೂದೆಯ ಪರಿಚ್ಛೇಧಗಳನ್ನು ಮಾತ್ರ ಆಧರಿಸದೆ ಜೊತೆಗೆ ಸಂಬಂದಿತ ಕೇಂದ್ರ ಮತ್ತು ಆಯಾ ರಾಜ್ಯಗಳ ಆಕ್ಟ್ ಆನ್ನು ಸಹ ಆಧರಿಸಿ ಭೂ ಸ್ವಾಧೀನ ಪಡಿಸಿಕೊಂಡಿರುವುದು ಮತ್ತು ಇದನ್ನು ತನ್ನ ಮಸೂದೆಯಲ್ಲಿ ಉಪ ಶೆಡ್ಯೂಲ್‌ನ ಅಡಿಯಲ್ಲಿ ತಂದಿರುವುದು ಅನೇಕ ಶಂಕೆಗಳನ್ನು ಹುಟ್ಟು ಹಾಕುತ್ತದೆ. ಆಂದರೆ ದೇಶಾದ್ಯಾಂತ ಏಕರೂಪಿ ಸಮಾನ ಕಾಯ್ದೆಯ ಅಡಿಯಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಮತ್ತು ಪುನರ್ವಸತೀಕರಣ ಪ್ರಕ್ರಿಯೆಯನ್ನು ಪುನರ್ರೂಪಿಸುವುದು ಬಹು ಮುಖ್ಯವಾಗಿ ಆಗಬೇಕಾದಂತಹ ಕೆಲಸ

ಐದನೇಯದಾಗಿ ಯೋಜನಾ ಆಯೋಗದ ವರದಿಯ ಪ್ರಕಾರ 2031 ರ ವೇಳೆಗೆ ಭಾರತದ ಜನಸಂಖ್ಯೆಯು 2600 ಮಿಲಿಯನ್‌ಗೆ ಮುಟ್ಟುತ್ತದೆ. ಅಂದರೆ 2011 ಗೆ ಹೋಲಿಸಿದರೆ ಮುಂದಿನ 20 ವರ್ಷಗಳಲ್ಲಿ 200 ಮಿಲಿಯನ್‌ನಷ್ಟು ಜನಸಂಖ್ಯೆ ಹೆಚ್ಚಳವಾಗುತ್ತದೆ. ಮುಂದುವರೆದು ಆಯೋಗವು ಆ ಸಂದರ್ಭದಲ್ಲಿ ನಗರಗಳಲ್ಲಿ ಸರಾಸರಿ ಕೇವಲ ಒಂದು ಗಂಟೆಯ ಅವಧಿಗೆ ಮಾತ್ರ ನೀರಿನ ಪೂರೈಕೆ ಇರುತ್ತದೆ ಎಂದು ಅಂದಾಜಿಸುತ್ತದೆ. ಆಗ ಶೇಕಡಾ 13 ರಷ್ಟು ಜನಸಂಖ್ಯೆ ಬಹಿರಂಗ ಶೌಚಾಲಯವನ್ನು ಅವಲಂಬಿಸಬೇಕಾಗುತ್ತದೆ. ಶೇಕಡಾ 37 ರಷ್ಟು ಜನಸಂಖ್ಯೆಯ ಒಳಚರಂಡಿಯ ವ್ಯವಸ್ಥೆ ಖಾಸಗಿಯಾಗಿರದೆ ಸಾರ್ವಜನಿಕಗೊಂಡಿರುತ್ತದೆ. ಶೇಕಡಾ 18 ರಷ್ಟು ಜನಸಂಖ್ಯೆಗೆ ಒಳಚರಂಡಿ ವ್ಯವಸ್ಥೆಯ ಸೌಲಭ್ಯವೇ ಇರುವುದಿಲ್ಲ.

1993-2004 ರ ಅವಧಿಯಲ್ಲಿ ನಗರದ ಬಡಜನರ, ವಸತಿಹೀನರ ಜನಸಂಖ್ಯೆ ಶೇಕಡ 35 ರಷ್ಟು ಹೆಚ್ಚಳಗೊಂಡಿದೆ. ಶೇಕಡ 60 ರಷ್ಟು ಜನಸಂಖ್ಯೆ ಸ್ಲಂಗಳಲ್ಲಿ ವಾಸಿಸುತ್ತಾರೆ. INDIA-BHOPAL-POLLUTION-ACCIDENT-25YRSಆದರೆ ತಮ್ಮ ವಸತಿಗಾಗಿ ಈ ಬಡಜನರು ಬಳಸಿಕೊಳ್ಳುವುದು ಒಟ್ಟು ನಗರ ವ್ಯಾಪ್ತಿಯ ಶೇಕಡ 12 ರಷ್ಟು ಜಾಗವನ್ನು ಮಾತ್ರ ಮತ್ತು ಅವರು ವಾಸಿಸುತ್ತಿರುವ ಆ ಜಾಗವನ್ನು ಅಕ್ರಮವೆಂದೇ ಪರಿಗಣಿಸಲ್ಪಡುತ್ತದೆ. ಮಂದೊಂದು ದಿನ ಈ ಜನರ ವಿರುದ್ಧ ಅತಿಕ್ರಮ ವಲಸೆಗಾರರೆಂದು ಆದೇಶ ಹೊರಡಿಸಿ ಅಧಿಕೃತವಾಗಿಯೇ ತೆರವು ಕಾರ್ಯಕ್ಕೆ ಮುಂದಾಗುತ್ತಾರೆ, ಅವರ ಗುಡಿಸಲುಗಳನ್ನು, ಜನತಾ ಮನೆಗಳನ್ನು ಕೆಡವಲಾಗುತ್ತದೆ. ನಗರದ ಈ ಬಡಜನರ ಸಂಕಷ್ಟಗಳಿಗೆ ಹೊಸ ಭೂಮಸೂದೆಯಲ್ಲಿ ಯಾವುದೇ ಉಲ್ಲೇಖವಿಲ್ಲ. ಏಕೆಂದರೆ ಆ ಮಸೂದೆಯನ್ನು ಗ್ರಾಮದ ಚೌಕಟ್ಟಿನ ಅಡಿಯಲ್ಲಿ ರೂಪಿಸಲಾಗಿದೆ ವಿನಹಃ ನಗರದ ಚೌಕಟ್ಟಿನ ನಿರ್ಗತಿಕರನ್ನು ಅದು ಒಳಗೊಳ್ಳುವುದಿಲ್ಲ. ಬಡತನರೇಖೆಗಿಂತ ಕೆಳಗಿರುವ ಈ ಬಡಜನರ ಈ ಶೋಷಣೆಯನ್ನು ಆದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳುವುದು ಈಗ ತುರ್ತಾಗಿ ಆಗಬೇಕಾಗಿದೆ.

ಕಡೆಯದಾಗಿ ಅಭಿವೃಧ್ಧಿಯ ಹೆಸರಿನಲ್ಲಿ ಭೂಮಿಯನ್ನು ಕಳೆದುಕೊಳ್ಳುವ ಸಣ್ಣ ಮತ್ತು ಅತಿ ಸಣ್ಣ ರೈತರು ಮತ್ತು ಆದಿವಾಸಿಗಳು ಮತ್ತು ದಲಿತರಿಗೆ ಪರಿಹಾರವು ಕೇವಲ ಹಣದ ರೂಪದಲ್ಲಿರುತ್ತದೆ ವಿನಹಃ ಅವರಿಗೆ ಭೂಮಿಗೆ ಬದಲಾಗಿ ಪರ್ಯಾಯ ಜಾಗದಲ್ಲಿ ಭೂಮಿಯನ್ನು ಒದಗಿಸುವುದಿಲ್ಲ. ಇದು ಇಡೀ ಆದಿವಾಸಿ ಮತ್ತು ದಲಿತ ಸಮುದಾಯಕ್ಕೆ,ಸಣ್ಣ ಮತ್ತು ಅತಿ ಸಣ್ಣ ರೈತರ ದೈನಂದಿನ ಜೀವನ ಕ್ರಮಕ್ಕೆ ತೀವ್ರ ಧಕ್ಕೆಯನ್ನುಂಟು ಮಾಡುತ್ತದೆ. ಅವರ ಭವಿಷ್ಯವನ್ನು ಸರ್ಕಾರವು ಪರಿಹಾರ ರೂಪದಲ್ಲಿ ಕೊಡುವ ಹಣದ ಮೇಲೆ ಅವಂಬಿಸುವಂತೆ ಮಾಡಲು ಶಕ್ಯವೇ ಇಲ್ಲ. ಅವರಿಗೆ ಮತ್ತು ಮುಂದಿನ ತಲೆಮಾರಿಗೆ ಭವಿಷ್ಯದಲ್ಲಿ ಜೀವಿಸಲು ಭೂಮಿಯ ಅವಶ್ಯಕತೆ ಇದೆ ವಿನಹಃ ಪುಡಿಗಾಸಿನಲ್ಲಲ್ಲ. ಇದರಿಂದ ಇವರೆಲ್ಲ ಕ್ರಮೇಣ ನಗರ,ಪಟ್ಟಣಗಳಿಗೆ ವಲಸೆ ಹೋಗುತ್ತಾರೆ. ಈ ಮೂಲಕ ಆರ್ಥಿಕ ಸಮತೋಲನತೆಯು ಹಳಿತಪ್ಪುತ್ತದೆ. ಏಕೆಂದರೆ ಹಳ್ಳಿಗಳಿಂದ ನಗರ, Working_in_the_rice_paddyಪಟ್ಟಣಗಳಿಗೆ ವಲಸೆ ಹೋಗುವವರ ಜನಸಂಖ್ಯೆ ಮಿತಿಮೀರಿದಾಗ ಇಡೀ ವ್ಯವಸ್ಥೆಯಲ್ಲಿ ಅರಾಜಕತೆ ರಾರಾಜಿಸುತ್ತದೆ. ಎಲ್ಲರಿಗೂ ಕಾರ್ಖಾನೆಗಳಲ್ಲಿ, ಸೇವಾ ಕೇಂದ್ರಗಳಲ್ಲಿ ನೌಕರಿಯನ್ನು ಒದಗಿಸುವುದು ಕಷ್ಟಕರ. ಶಿಕ್ಷಣದ ಕೊರತೆ ತೀವ್ರವಾಗುತ್ತದೆ. ವಸತಿ ಸಮಸ್ಯೆ ಉಲ್ಬಣಗೊಳ್ಳುತ್ತದೆ. ಆದರೆ ತನ್ನ ಭೂ ಸ್ವಾಧೀನ ಮಸೂದೆಯ ಮೂಲಕ ಸ್ವತಹಃ ತಾನೇ ಗ್ರಾಮೀಣ ಭಾಗದ ಸಣ್ಣ, ಅತಿ ಸಣ್ಣ ರೈತರು, ಆದಿವಾಸಿಗಳು, ದಲಿತರನ್ನು ಒಕ್ಕಲೆಬ್ಬಿಸಿ ನಗರಕ್ಕೆ ವಲಸೆ ಹೋಗುವಂತಹ ಅನಿವಾರ್ಯ ವಾತಾವರಣ ಸೃಷ್ಟಿಸುವ ಸರ್ಕಾರ ಇದೇ ಜನತೆಗೆ ನಗರಗಳಲ್ಲಿ, ಪಟ್ಟಣಗಳಲ್ಲಿ ಬದುಕುವ ಸೌಲಭ್ಯವನ್ನು ಸಹ ಕಿತ್ತುಕೊಳ್ಳುತ್ತದೆ. ಇದಕ್ಕೆಲ್ಲಾ ಮೂಲಭೂತ ಕಾರಣ ಈ ಭೂ ಮಸೂದೆಯ ಈಗಿನ ಸ್ವರೂಪ ಮತ್ತದರ ಕಾನೂನುಗಳು.

ಕಡೆಯದಾಗಿ ಸಂವಿಧಾನದ 73 ಮತ್ತು 74 ತಿದ್ದುಪಡಿಯು ಸಂಪೂರ್ಣ ವಿಕೇಂದ್ರೀಕರಣ ವ್ಯವಸ್ಥೆಗೆ ಆದೇಶಿಸುತ್ತ ಗ್ರಾಮ, ಹೋಬಳಿ, ತಾಲೂಕು ಮಟ್ಟಗಳಲ್ಲಿ ಸ್ಥಳೀಯ ಮಟ್ಟದಲ್ಲಿಯೇ ಅಧಿಕಾರವಿರಬೇಕು ಎಂದು ಪ್ರತಿಪಾದಿಸುತ್ತದೆ. ಆದರೆ ಕೇಂದ್ರ ಸರ್ಕಾರದ ಈ ಹೊಸ ಭೂ ಮಸೂದೆ ಸಂವಿಧಾನದ ಮೇಲಿನ ಆಶಯಗಳಿಗೇ ವ್ಯತಿರಿಕ್ತವಾಗಿದೆ. ಸ್ಥಳೀಯ ಜನರ ಅಧಿಕಾರವನ್ನು ಕಿತ್ತುಕೊಂಡು ಅದನ್ನು ಕೇಂದ್ರೀಕರಿಸಿ ಅವರ ಸಂವಿಧಾನಬದ್ಧ ಹಕ್ಕುಗಳಿಗೆ ಮಾರಕವಾಗುತ್ತದೆ ಈ ಭೂ ಮಸೂದೆಯ ಕಾನೂನುಗಳು.

( ಕೃಪೆ : ತೆಹೆಲ್ಕ ವಾರಪತ್ರಿಕೆ)

ಸಾರ್ವಜನಿಕ ಪಡಿತರ ವ್ಯವಸ್ಥೆ ಮತ್ತು ಸಿದ್ದರಾಮಯ್ಯನವರ ಘೋಷಣೆ

– ಜಿ.ಮಹಂತೇಶ್

 “ಬಿಪಿಎಲ್ ಕಾರ್ಡ್‌ದಾರರಿಗೆ ಒಂದು ರೂಪಾಯಿ ದರದಲ್ಲಿ 30 ಕೆ.ಜಿ.ಅಕ್ಕಿ.” ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮರು ಗಳಿಗೆಯಲ್ಲಿ ತುಂಬಾ ಧಾವಂತದಿಂದಲೇ ಘೋಷಿಸುತ್ತಿದ್ದಂತೆ ಬಿಪಿಎಲ್ ಕುಟುಂಬಗಳು ಅಕ್ಷರಶಃ ಕೈ ಮುಗಿದವು. ಮುಂಬರುವ ಜೂನ್ ತಿಂಗಳಿನಿಂದಲೇ ಬಿಪಿಎಲ್ ಕಾರ್ಡ್‌ದಾರರಿಗೆ ಅಕ್ಕಿ ವಿತರಣೆ ಆಗಲಿದೆ ಎಂದು ಹೇಳಿದಾಗಲಂತೂ ಬಿಪಿಎಲ್ ಕಾರ್ಡ್‌ದಾರರು ಧನ್ಯೋಸ್ಮಿ ಎಂದು ಹೇಳಿದ್ದೂ ಉಂಟು.

ಸಿದ್ದರಾಮಯ್ಯ ಅವರ ನೇತೃತ್ವದ ಏಕ ವ್ಯಕ್ತಿ ಸಂಪುಟ ತೆಗೆದುಕೊಂಡಿರುವ ಈ ನಿರ್ಧಾರದಿಂದ 98.17 ಲಕ್ಷ ಜನರಿಗೆ ಅನುಕೂಲವಾಗಲಿದೆ.rice ಈ ನಿರ್ಧಾರದಿಂದ ರಾಜ್ಯದ ಬೊಕ್ಕಸಕ್ಕೆ 460 ಕೋಟಿ ರೂಪಾಯಿ ಹೊರೆ ಬೀಳಲಿದೆ ಎಂದೂ ಹೇಳಿದರು. (ಇಂದಿನ ಮಾಧ್ಯಮ ವರದಿಗಳು ಅದನ್ನು ವಾರ್ಷಿಕ ರೂ. 2,373 ಕೋಟಿಯಿಂದ ರೂ. 6,650 ಕೋಟಿಯ ತನಕ ಹೊರೆ ಬೀಳಲಿದೆ ಎಂದು ಅಂದಾಜಿಸಿವೆ.)

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಈ ನಿರ್ಧಾರ ಅಕ್ಷರಶಃ ಜನಪರವಾಗಿದೆ. ಇದರಲ್ಲಿ ಎರಡು ಮಾತಿಲ್ಲ. ಆದರೆ, ಬೋಗಸ್ ಬಿಪಿಎಲ್ ಕಾರ್ಡ್‌ಗಳಿಗೆ ಕಡಿವಾಣ ಹಾಕದ ಹೊರತು 1 ರೂಪಾಯಿಗೆ ಕೊಡುತ್ತಿರುವ 3- ಕೆ.ಜಿ. ಮತ್ತದೇ ಕಾಳಸಂತೆಕೋರರ ಬೊಕ್ಕಸವನ್ನ ಮತ್ತಷ್ಟು ತುಂಬಿಸಿ, ಅದನ್ನ ಇನ್ನಷ್ಟು ಶ್ರೀಮಂತವಾಗಿಸುವ ಸಾಧ್ಯತೆ ಇದೆ.

ಕಸದ ಬುಟ್ಟಿಗೆ ಸೇರಿರುವ ಬಾಲಸುಬ್ರಹ್ಮಣ್ಯಂ ತನಿಖಾ ವರದಿ:

ಬಿಪಿಎಲ್ ಕಾರ್ಡ್‌ಗಳಲ್ಲಿ ನಡೆದಿರುವ ಭ್ರಷ್ಟಾಚಾರ ಮತ್ತು ಬೋಗಸ್ ಕಾರ್ಡ್‌ಗಳಿಂದ ಸರ್ಕಾರಕ್ಕೆ ಸಂಭವಿಸುತ್ತಿರುವ ಸಾವಿರಾರು ಕೋಟಿ ರೂಪಾಯಿ ನಷ್ಟದ ಬಗ್ಗೆ ಲೋಕಾಯುಕ್ತರಾಗಿದ್ದ ಸಂತೋಷ್ ಹೆಗ್ಡೆ ಅವರು ನೇಮಿಸಿದ್ದ ಡಾ.ಬಾಲಸುಬ್ರಹ್ಮಣ್ಯಂ ಸಮಿತಿ ಕೊಟ್ಟಿರುವ ವರದಿ ಕಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಮನಿಸಬೇಕಿತ್ತು.

ನಮ್ಮ ರಾಜ್ಯದಲ್ಲಿ ತುಂಬಾ ವ್ಯವಸ್ಥಿತವಾಗಿ ಬಡತನವನ್ನ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಬಾಲಸುಬ್ರಹ್ಮಣ್ಯ ಅವರು ಕೊಟ್ಟಿರುವ ವರದಿಯ ಪುಟಗಳನ್ನ ತಿರುವಿ ಹಾಕಿದರೆ, ಬಡತನ ಮತ್ತು ಬಿಪಿಎಲ್ ಕಾರ್ಡ್‌ಗಳ ಬಂಡವಾಳ ಬಯಲಾಗುತ್ತದೆ.

ಒಟ್ಟು ಕುಟುಂಬಗಳು 120 ಲಕ್ಷ ಇದ್ದಲ್ಲಿ, ಇದರಲ್ಲಿ ಪಡಿತರ ಚೀಟಿ ಇರುವವರ ಸಂಖ್ಯೆ 159 ಲಕ್ಷ 29 ಸಾವಿರ. ಅಂದರೆ ಇಲ್ಲಿ ಹೆಚ್ಚುವರಿಯಾಗಿ 39 ಲಕ್ಷ 29 ಸಾವಿರ ಸಂಖ್ಯೆಯಲ್ಲಿ ಪಡಿತರ ಚೀಟಿಗಳು ಹಂಚಿಕೆ ಆಗಿವೆ. ಇವೆಲ್ಲವೂ ಬೋಗಸ್ ಎಂದು ಮತ್ತೆ ಮತ್ತೆ ಹೇಳಬೇಕಿಲ್ಲ.

ಅಕ್ರಮ ಪಡಿತರ ಚೀಟಿಗಳಿಂದಾಗಿ ರಾಜ್ಯ ಬೊಕ್ಕಸಕ್ಕೆ ಆಗುತ್ತಿರುವ ನಷ್ಟ 1737 ಕೋಟಿ ರೂಪಾಯಿ. ನಮ್ಮ ರಾಜ್ಯದಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆ ನೆಗೆದು ಬಿದ್ದಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ನಡೆಯುತ್ತಿರುವುದು ಸೋರಿಕೆ ಬಿಟ್ಟರೆ ಬೇರಿನ್ನೇನೂ ಪ್ರಗತಿಯಿಲ್ಲ.

ನಿಯಮಗಳ ಪ್ರಕಾರ ಬಡತನ ರೇಖೆಗಿಂತ ಕೆಳಗಿರೋ 5.8 ಲಕ್ಷ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್‌ಗಳು ಸಿಕ್ಕಿಯೇ ಇಲ್ಲ. ಇದರಲ್ಲಿ 4.2 ಲಕ್ಷ ಕುಟುಂಬಗಳಿಗೆ ಸಂಬಂಧಿಸಿದಂತೆ ತಪ್ಪು ಮಾಹಿತಿ ನೀಡಿ ಎಪಿಎಲ್ ಪಟ್ಟಿಗೆ ಸೇರಿಸಿದಸರೆ. ಇನ್ನು, ಅಧಿಕಾರಿಗಳು ಮಾಡಿರುವ ಎಡವಟ್ಟಿನಿಂದ 1.6 ಲಕ್ಷ ಕುಟುಂಬಗಳು ಬಿಪಿಎಲ್ ಪಟ್ಟಿಗೆ ಸೇರಿಲ್ಲ.

ತೀರಾ ಇತ್ತೀಚೆಗೆ ದಾವಣಗೆರೆ ನಗರದಲ್ಲಿ ಬಿಪಿಎಲ್ ಕಾರ್ಡ್‌ಗಳಿಗೆ ಸಂಬಂಧಿಸಿದಂತೆ ಒಂದು ದೂರು ದಾಖಲಾಗಿತ್ತು. ಬೋಗಸ್ ಕಾರ್ಡ್‌ಗಳಿಂದ ಕೇವಲ ದಾವಣಗೆರೆ ನಗರವೊಂದರಿಂದಲೇ ಆಗಿರುವ ವಂಚನೆ ಮೊತ್ತ 75 ಕೋಟಿ ರೂಪಾಯಿಗೂ ಅಧಿಕ. ದಾವಣಗೆರೆ ನಗರದಲ್ಲಿ 3 ಲಕ್ಷ 20 ಸಾವಿರ ಕುಟುಂಬಗಳಿದ್ದರೆ, 4 ಲಕ್ಷ 69 ಸಾವಿರ ಬಿಪಿಎಲ್ ಕಾರ್ಡ್‌ದಾರರಿದ್ದಾರೆ. ಪ್ರತಿಷ್ಠಿತರು ಮತ್ತು ಗಣ್ಯಾತಿಗಣ್ಯರು ವಾಸ ಮಾಡುತ್ತಿರುವ ಕಾಲೋನಿಗಳಲ್ಲೂ ಬಿಪಿಎಲ್ ಕಾರ್ಡ್‌ಗಳು ಹಂಚಿಕೆ ಆಗಿವೆ ಎಂದರೆ, ಪಡಿತರ ವ್ಯವಸ್ಥೆ ಹೇಗಿದೆ ಎಂದು ಯಾರೂ ಬೇಕಾದರೂ ಊಹಿಸಿಕೊಳ್ಳಬಹುದು.

ಸಾರ್ವಜನಿಕ ಪಡಿತರ ವ್ಯವಸ್ಥೆ ಇಷ್ಟರ ಮಟ್ಟಿಗೆ ಹದಗೆಟ್ಟಿದ್ದರೂ ಬಿ.ಜೆ.ಪಿ.ಸರ್ಕಾರ ಇದರ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಶೋಭಾ ಕರಂದ್ಲಾಜೆ ಮತ್ತು ಡಿ.ಎನ್.ಜೀವರಾಜ್ ಅವರು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮಂತ್ರಿಗಳಾಗಿದ್ದ ಸಂದರ್ಭದಲ್ಲೇ ಬೋಗಸ್ ಕಾರ್ಡ್‌ಗಳ ಭ್ರಷ್ಟಾಚಾರ ಬಯಲಿಗೆ ಬಂದಿತ್ತು. ಆದರೂ ಬಿ.ಜೆ.ಪಿ. ಸರ್ಕಾರ, ಯಥಾ ಪ್ರಕಾರ ಇದನ್ನೂ ಒಂದು ಪ್ರಕರಣ ಎಂದು ಭಾವಿಸಿಕೊಂಡು ಕೈ ತೊಳೆದುಕೊಂಡಿತು. ಎಲ್ಲಾ ತನಿಖಾ ವರದಿಗಳು ಸೇರಿರುವ ಜಾಗಕ್ಕೇ ಈ ವರದಿಯನ್ನು ತಳ್ಳಿತು.

ಈಗ ಕಾಂಗ್ರೆಸ್, ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸಿದೆ. siddaramaiah-cmಮುಖ್ಯಮಂತ್ರಿ ಸಿದ್ದರಾಮಯ್ಯ 1 ರೂಪಾಯಿಗೆ 30 ಕೆ.ಜಿ.ಕೊಡುವ ವಿಸ್ತರಿತ ಯೋಜನೆಯನ್ನ ಜಾರಿಗೆ ತರಲು ಹೊರಡುವ ಮೊದಲು, ಲೋಕಾಯುಕ್ತರು ನೇಮಿಸಿದ್ದ ಬಾಲಸುಬ್ರಹ್ಮಣ್ಯಂ ಅವರ ವರದಿಯನ್ನ ಅಮೂಲಾಗ್ರವಾಗಿ ಪರಿಶೀಲಿಸಿ, ಲೋಪಗಳನ್ನ ಸರಿಪಡಿಸಿ, 1 ರೂಪಾಯಿ ದರದ 30 ಕೆ.ಜಿ.ಯನ್ನ ನಿಜವಾದ ಬಡವರಿಗೆ ಕೊಡುವುದು ಒಳಿತು. ಇಲ್ಲದಿದ್ದಲ್ಲಿ, ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ನಡೆದಿರುವ ಬ್ರಹ್ಮಾಂಡ ಹಗರಣವೂ ಸರ್ಕಾರದ ಕಸದ ಬುಟ್ಟಿಗೆ ಸೇರಲಿದೆ.

ಡೇಂಜರ್ ಜೋನ್‌ನಲ್ಲಿ ಭೂಮಿಯ ಮೇಲಿನ ಜೀವಸಂಕುಲ…

-ರವಿ ಕೃಷ್ಣಾರೆಡ್ಡಿ

ಬಹುಶಃ ಇದು ನಮ್ಮ ನಡುವೆ ಚರ್ಚೆಯಾಗುವ ವಿಷಯ ಅಲ್ಲ, ಆದರೆ ನಮ್ಮ ಮತ್ತು ನಮ್ಮ ಮುಂದಿನ ತಲೆಮಾರುಗಳ ಮೇಲೆ ಗಂಭೀರ ಪರಿಣಾಮ ಬೀರಲಿರುವ ವಿಷಯ. ಅದು ಇಂಗಾಲದ ಡೈಆಕ್ಸೈಡ್‌‌ನ ಅಂಶ ವಾತಾವರಣದಲ್ಲಿ ಯಾವ ಮಟ್ಟದಲ್ಲಿ ಇದೆ ಎನ್ನುವುದಕ್ಕೆ ಸಂಬಂಧಿಸಿದ್ದು. ಅಂದ ಹಾಗೆ, ಇಂಗಾಲದ ಡೈಆಕ್ಸೈಡ್ ಶಾಖವನ್ನು ಹಿಡಿದಿಟ್ಟುಕೊಳ್ಳುವ, ಮತ್ತದನ್ನು ಹೆಚ್ಚಿಸುವ ಹಸಿರುಮನೆ ಅನಿಲಗಳಲ್ಲಿ ಒಂದು.

ಕಳೆದ ಲಕ್ಷಾಂತರ, ಕೋಟ್ಯಾಂತರ ವರ್ಷಗಳಲ್ಲಿ ಭೂಮಿಯ ಮೇಲೆ ಇಂಗಾಲದ ಡೈಆಕ್ಸೈಡ್ ಈ ಪ್ರಮಾಣದಲ್ಲಿ ಇರಲಿಲ್ಲ. ಮನುಷ್ಯ ಭೂಮಿಯ ಮೇಲೆ ವಿಕಾಸವಾಗುವುದಕ್ಕಿಂತ ಲಕ್ಷಾಂತರ ವರ್ಷಗಳ ಮೊದಲು ಇತ್ತು, ಅದರೆ ಆತ ಓಡಾಡಲು ಆರಂಭಿಸಿದ ನಂತರ ಇದೇ ಮೊದಲ ಬಾರಿಗೆ ಈ ಪ್ರಮಾಣದಲ್ಲಿ ಅದು ಶೇಖರಣೆಯಾಗಿದೆ.

ಕೈಗಾರಿಕಾ ಯುಗಕ್ಕೂ ಮೊದಲು ಭೂಮಿಯ ವಾತಾವರಣದಲ್ಲಿ ಇಂಗಾಲದ ಡೈಆಕ್ಸೈಡ್‌ನ ಪ್ರಮಾಣ ದಶಲಕ್ಷಕ್ಕೆ ಕೇವಲ 280 ಅಂಶಗಳಲ್ಲಿತ್ತು (280 parts per million). carbon-atmosphere-440-ppmಕಳೆದ ಎರಡು-ಮೂರು ಶತಮಾನಗಳ ಕೈಗಾರಿಕಾ ಕ್ರಾಂತಿಯಿಂದಾಗಿ ಕಲ್ಲಿದ್ದಲು ಮತ್ತು ತೈಲವನ್ನು ಉಪಯೋಗಿಸಲು ಆರಂಭಿಸಿದಾಗಿನಿಂದ ಇಂಗಾಲದ ಡೈಆಕ್ಸೈಡ್‌ನ ಪ್ರಮಾಣ ವಾತಾವರಣದಲ್ಲಿ ವಿಪರೀತ ಗತಿಯಲ್ಲಿ ಏರುತ್ತಲೇ ಬಂದಿದೆ. 1958ರಲ್ಲಿ ಫೆಸಿಫಿಕ್ ಸಾಗರದ ಹವಾಯಿ ದ್ವೀಪದಲ್ಲಿ ಈ ಇಂಗಾಲದ ಡೈಆಕ್ಸೈಡ್ ಪ್ರಮಾಣವನ್ನು ಅಳೆಯಲು ಆರಂಭಿಸಿದಾಗ ಅದು 318 ppm ಇತ್ತು. 1990ರ ದಶಕದ ಆರಂಭದಲ್ಲಿ ಅದು 350 ppm ದಾಟಿತು. ಕಳೆದ ವಾರ ಅದು ಸರಾಸರಿ 400 ppm ದಾಟಿದೆ.

ಈ 400 ppm ಸಂಖ್ಯೆ ಗಂಭೀರವಾದದ್ದು ಏಕೆಂದರೆ ಹವಾಮಾನ ವಿಜ್ಞಾನಿಗಳ ಪ್ರಕಾರ ಭೂಮಿಯ ಮೇಲೆ ಈ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು ಈ ಹಂತದಲ್ಲಿಯೇ ನಿಯಂತ್ರಣ ಮಾಡಿದರೆ ಮಾತ್ರ ಭೂಮಿಯ ಮೇಲಿನ ಶಾಖವನ್ನು ಕೈಗಾರಿಕಾ ಪೂರ್ವ ದಿನಗಳ ಸರಾಸರಿ ತಾಪಮಾನಕ್ಕಿಂತ 2 ಡಿಗ್ರಿ ಸೆಲ್ಸಿಯಸ್ ಹೆಚ್ಚು ಪ್ರಮಾಣದ ಒಳಗೇ ನಿಯಂತ್ರಿಸಲು ಸಾಧ್ಯ. ಅದು ಸಾಧ್ಯವಾಗದೆ ಭೂಮಿಯ ಮೇಲಿನ ತಾಪಮಾನ ಸರಾಸರಿ 2 ಸೆಲ್ಸಿಯಸ್ ಹೆಚ್ಚಾಗಿದ್ದೇ ಆದರೆ, ಭೂಮಿಯ ಮೇಲಿನ ಪ್ರತಿಯೊಂದು ಜೀವಸಂಕುಲದ ಮೇಲೆ ತೀವ್ರವಾದ ಪರಿಣಾಮಗಳಾಗಲಿವೆ ಮತ್ತು ಅದು ಬಹುಪಾಲು ಮಾರಣಾಂತಿಕವಾಗಲಿದೆ.

ಇಂಗಾಲದ ಡೈಆಕ್ಸೈಡ್‌ನ ಪ್ರಮಾಣವನ್ನು ತಗ್ಗಿಸಲು ಸಾಧ್ಯವಾಗದೇ ಹೋದರೆ ಮುಂದಿನ ಬೇಸಿಗೆಗಳ ಉರಿಬಿಸಿಲು ಹೆಚ್ಚುತ್ತದೆ. ಬರಗಾಲಗಳ ಪುನರಾವರ್ತನೆ ಹೆಚ್ಚಾಗಲಿವೆ. ಅನಾವೃಷ್ಟಿ ಮಾತ್ರವಲ್ಲ, ಅಕಾಲಿಕ ಅತಿವೃಷ್ಟಿಗಳೂ ಘಟಿಸಿ ನೂರು-ವರ್ಷಕ್ಕೊಮ್ಮೆಯ ಪ್ರವಾಹಗಳು ಜರುಗಲಿವೆ. ಸಮುದ್ರದ ನೀರಿನ ಮಟ್ಟ ಹೆಚ್ಚಿ ಸಮುದ್ರ ದಂಡೆಯ ಭೂಭಾಗಗಳು ಮುಳುಗಲಿವೆ.

ಇಂದು ಪ್ರಪಂಚದ ಅತಿ ದೊಡ್ಡ ಮಾಲಿನ್ಯ ಉತ್ಪಾದಕರಾದ ಅಮೆರಿಕ, ಚೀನಾ, ಯೂರೋಪ್‌ಗಳಿಗೆ ಮಾತ್ರ ಗಂಭೀರ ವಿಷಯವಲ್ಲ. ಭಾರತದಂತಹ ಸಂಕೀರ್ಣ ಮತ್ತು ವೈವಿಧ್ಯತೆಯ ನಾಡಿನ ಜನರ ಉಳಿವಿನ ಪ್ರಶ್ನೆಯೂ ಆಗಲಿದೆ. ಹವಾಮಾನ ವೈಪರೀತ್ಯದ ಪರಿಣಾಮ ಮೊದಲು ತಟ್ಟುವುದೇ ಬಡವರನ್ನು ಮತ್ತು ದುರ್ಬಲರನ್ನು. ಇದು ಅಳಿವು-ಉಳಿವಿನ ಪ್ರಶ್ನೆಯಾಗುವುದಕ್ಕಿಂತ ಮುಂಚೆ ಪ್ರಪಂಚದ ಬಡ ಮತ್ತು ಹಿಂದುಳಿದ ದೇಶಗಳ ನಾಯಕರು ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ವಿಜ್ಞಾನಿಗಳು ಮತ್ತು ಸಾಮಾಜಿಕ ಹೋರಾಟಗಾರರು ಇದನ್ನು ಪ್ರಸ್ತುತವಾಗಿಸಲು ಪ್ರಯತ್ನಿಸಬಹುದು, ಆದರೆ ರಾಜಕೀಯ ನಾಯಕರಿಗೆ ಇಂತಹ ವಿಷಯಗಳು ಅರ್ಥವಾಗುವಷ್ಟು ಯೋಗ್ಯತೆ ಮತ್ತು ಕಳಕಳಿಗಳಾಗಲಿ, ಚಿತ್ತಶುದ್ಧಿ ಇದೆಯೇ ಎನ್ನುವುದು ಪ್ರಶ್ನೆ.

ಪ್ರಪಂಚದಾದ್ಯಂತ ಬರಲಿರುವ ದಿನಗಳ ರಾಜಕೀಯ ಮತ್ತು ಸಾಮಾಜಿಕ ಹೋರಾಟ ಬೇರೆ ಬಗೆಯದೇ ಇರುತ್ತದೆ. ಆದರೆ ಆ ವಿಷಮ ಘಟ್ಟ ಎಂದಿನಿಂದ ಆರಂಭವಾಗುತ್ತದೆ ಎನ್ನುವುದರ ಬಗ್ಗೆ ವಿಜ್ಞಾನಿಗಳಿಗೂ ಸ್ಪಷ್ಟವಾಗಿ ತಿಳಿದಿಲ್ಲ. ಹಾಗಾಗಿಯೇ, ಜಾಗತಿಕ ನಾಯಕತ್ವವೂ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಆದರೆ, ಬೇಗ ಎಚ್ಚತ್ತುಕೊಂಡು ತಾಪಮಾನದ ಪ್ರಮಾಣವನ್ನು ತಹಬಂದಿಗೆ ತರದೇ ಹೋದರೆ ಏನಾಗಲಿದೆಯೋ ಅದು ಆಗಲಿದೆ.