ಅಕಾಡೆಮಿಗಳ ಅಧ್ಯಕ್ಷರ ರಾಜೀನಾಮೆ ಅನಿರೀಕ್ಷಿತವಲ್ಲ

– ಡಾ.ಎಸ್.ಬಿ.ಜೋಗುರ

ಮುಖ್ಯಮಂತ್ರಿಗಳು ಅಕಾಡೆಮಿಗಳ ಅಧ್ಯಕ್ಷರ ರಾಜೀನಾಮೆಯನ್ನು ಕೇಳಿದ್ದೇ ಕೆಲವು ಸಾಹಿತಿಗಳು ತುಂಬಾ ಬೇಸರ ವ್ಯಕ್ತಪಡಿಸಿ ಕನಿಷ್ಟ ಮೂರು ವರ್ಷದ ಮಟ್ಟಿಗಾದರೂ ಇರಬೇಡವೇ..? ಎನ್ನುವ ಮಾತನಾಡಿರುವದನ್ನು ನೋಡಿದರೆ ಪ್ರಭುತ್ವಕ್ಕಂಟಿದ ಅಧಿಕಾರದ ಮೋಹವನ್ನು ಸಾಹಿತಿಗಳಿಗೂ ಮೀರಲಾಗುವದಿಲ್ಲ ಎಂಬಂತಾಯಿತು. ಸದ್ಯದ ಸಂದರ್ಭದಲ್ಲಿ ಸಾಂಸ್ಕೃತಿಕ ಲೋಕದಲ್ಲಿಯೂ ಅನೇಕ ಬಗೆಯ ವಿಪ್ಲವಗಳಿವೆ. ಅಲ್ಲಿಯ ಮೌಲ್ಯಗಳ ಬಗೆಗಿನ ಮಾತೇ ಒಂದು ಬಗೆಯ ಕ್ಲೀಷೆಯಾಗುತ್ತದೆ. ಅಷ್ಟಕ್ಕೂ ಸಾಹಿತ್ಯಕ್ಕೂ ರಾಜಕಾರಣಕ್ಕೂ ತುಂಬಾ ವ್ಯತ್ಯಾಸಗಳು ಈಗ ಉಳಿದಿಲ್ಲ. ಕೆಲ ಸಾಹಿತಿಗಳು ಯಾವ ರಾಜಕಾರಣಿಗಳಿಗೂ ಕಡಿಮೆಯಿಲ್ಲ. ಇಂದು ಸಾಹಿತ್ಯಕ ವಲಯದಲ್ಲಿ ಜಾತಿ, ಧರ್ಮ, ಲಾಬಿ, ಪ್ರಭಾವಗಳ ಹಾವಳಿಯೇ ಹೆಚ್ಚಾಗಿ ಎದ್ದು ತೋರುತ್ತದೆ. ಕೆಲ ದೊಡ್ಡ ಸಾಹಿತಿಗಳ ಸಣ್ಣತನ ಅನೇಕ ಬಾರಿ ಬಯಲಾಗಿರುವದಿದೆ. ಇಂಥವರು ಸಾಹಿತಿ ಕಂ ರಾಜಕಾರಣಗಳೇ ಸರಿ. ನಡೆ-ನುಡಿಯೊಳಗೆ ಸಾರೂಪ್ಯತೆಯಿರುವ ಸಾಹಿತಿಗಳನ್ನು ಈಗ ಕೇಳುವವರೇ ಇಲ್ಲ. ಹಿಂದಿನ ಪ್ರಭುತ್ವ ತನ್ನ ಆಡಳಿತಕ್ಕೆ ಸರಿ ಹೊಂದುವವರನ್ನು ಆ ಹುದ್ದೆಗಳಲ್ಲಿ ಕೂಡಿಸಿದ್ದರೆ, ಈಗಿನ ಪ್ರಭುತ್ವ ತನಗೆ ಬೇಕಿರುವವರನ್ನು ಆ ಸ್ಥಾನದಲ್ಲಿ ಕುಳ್ಳರಿಸುತ್ತದೆ. ಅದು ನಿರೀಕ್ಷಿತವೂ ಹೌದು. ಇಲ್ಲಿ ಸಾಮರ್ಥ್ಯ, ಪ್ರತಿಭೆ, ಅರ್ಹತೆ ಎನ್ನುವ ಮಾತುಗಳೆಲ್ಲಾ ಬರೀ ಸಂಸ್ಕೃತಾನುಕರಣದ ಮೇಲ್ಪದರಿನ ಸಂಭಾಷಣೆ ಮಾತ್ರ. ಕೊನೆಗೆ ಮತ್ತೆ ಗೆಲ್ಲುವ ಸೂತ್ರಗಳೆಂದರೆ ಜಾತಿ, ಧರ್ಮ, ಲಾಬಿ, ಹಣ ಮತ್ತು ಪ್ರಭಾವಗಳೇ.. ಇವುಗಳನ್ನು ಮೀರಿ ದಕ್ಷ ಮತ್ತು ಸಮರ್ಥರಾದವರನ್ನು ಅಕಾಡೆಮಿಗಳಿಗೆ ನೇಮಿಸುವಂತಾದರೆ ಸಾಕು.

ಈಗಿರುವ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂದರ್ಭದಲ್ಲಿ ಮೌಲ್ಯ ಎನ್ನುವ ಪದವನ್ನು ಬಳಸುವದೇ ಮಹಾ ಪ್ರಮಾದವಾಗಿ ತೋರುತ್ತದೆ. ಧರ್ಮವನ್ನೂ ರಾಜಕಾರಣ ವ್ಯಾಪಿಸಿರುವ ಸಂದರ್ಭದಲ್ಲಿ ಜಾತಿಯನ್ನೇ ಸಾಮರ್ಥ್ಯದ ಜಾಗೆಯಲ್ಲಿ ಪ್ರಬಲ ಮಾನದಂಡವಾಗಿಸಿಕೊಂಡ ಈ ಹೊತ್ತಿನಲ್ಲಿ ಸಾಹಿತ್ಯಕ, ಸಾಂಸ್ಕೃತಿಕ ವಲಯದ ಶ್ರೇಷ್ಟತೆಯ ಬಗ್ಗೆ ಮಾತನಾಡುವವರ ಬಗ್ಗೆ ಮರುಕವೆನಿಸುತ್ತದೆ. ಅಸ್ಥಿತ್ವದಲ್ಲಿರುವ ಸರಕಾರವೊಂದು ತಾನು ಕೊಡಮಾಡುವ ಹಣಕಾಸಿನ ನೆರವಿನ ಹಿನ್ನೆಲೆಯಲ್ಲಿ ಪ್ರಭುತ್ವದ ಮೂಲಕ ಅಲ್ಲಿಯ ಆಯಕಟ್ಟಿನ ಹುದ್ದೆಗಳನ್ನು ಬದಲಿಸುವ ಸ್ವಾತಂತ್ರ್ಯ ಹೊಂದುವದು ಸರಿಯಲ್ಲ ಎನ್ನುವ ಕೂಗೇ ಒಂದು ಬಗೆಯ ರಾಜಕೀಯ ಹಿತಾಸಕ್ತಿಯಂತಿದೆ.
kannada-writers-politicsಅಕಾಡೆಮಿಗಳಲ್ಲಿ ಅಲಂಕರಿಸುವವರಿಗೆ ರಾಜೀನಾಮೆ ಕೇಳುವ ಮುನ್ನವೇ ತಾವೇ ಮುಂದಾಗಿ ಅದನ್ನು ನೀಡುವದರಲ್ಲಿ ಆ ಹುದ್ದೆಯ ಬಗೆಗೆ ಮೋಹವಿಲ್ಲ ಎನ್ನುವದನ್ನು ತೋರಿಸಿಕೊಡುವ ಮೂಲಕ ತಮಗೂ ರಾಜಕಾರಣಿಗಳಿಗೂ ಸ್ವಲ್ಪವಾದರೂ ಭಿನ್ನತೆಯಿದೆ ಎಂದು ಸಾಬೀತು ಮಾಡಬೇಕು, ಅದನ್ನು ಬಿಟ್ಟು ಹೀಗೆ ಕೇವಲ ಒಂದೂವರೆ ವರ್ಷದ ಅವಧಿಯಲ್ಲಿ ಆ ಹುದ್ದೆಯಿಂದ ನನ್ನನ್ನು ಕೆಳಗಿಳಿಸಿದರು ಎನ್ನುವದನ್ನೇ ಮತ್ತೆ ಮತ್ತೆ ಹಲಬುವ ಮೂಲಕ ತಾವೂ ಅಧಿಕಾರ ದಾಹಿಗಳೇ ಎನ್ನುವದನ್ನು ಸಾಬೀತು ಮಾಡಬಾರದು. ಕೆಲ ಸಾಹಿತಿಗಳು ಪ್ರಶಸ್ತಿಗಾಗಿ ಲಾಬಿ ಮಾಡುವದನ್ನು ನೋಡಿ ಜನಸಾಮಾನ್ಯನೇ ರೋಸಿ ಹೋಗಿರುವನು. ಅಷ್ಟಕ್ಕೂ ಸದ್ಯದ ಸಾಹಿತ್ಯಕ ಸಂದರ್ಭ ಯಾವ ರಾಜಕೀಯ ಪರಿಸರಕ್ಕಿಂತಲೂ ವಿಭಿನ್ನವಾಗಿಲ್ಲ. ಇಂದು ಅಮೂರ್ತವಾದ ಜಾತಿಯೇ ಬಹುತೇಕವಾಗಿ ಸಾಹಿತ್ಯಕ ಚಟುವಟಿಕೆಗಳನ್ನು ನಿರ್ವಹಿಸುವ, ನಿರ್ದೇಶಿಸುವ ದಿನಮಾನಗಳಲ್ಲಿ ಅದ್ಯಾವ ಸಾಂಸ್ಕೃತಿಕ ಮೌಲ್ಯಗಳಿರುವ ಕ್ಷೇತ್ರದ ಬಗ್ಗೆ ಮಾತನಾಡುತ್ತಿರುವಿರಿ ಸ್ವಾಮಿ..?

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಕಾಡೆಮಿಗಳಲ್ಲಿರುವ ಅಧ್ಯಕ್ಷರುಗಳು ರಾಜೀನಾಮೆ ನೀಡಬೇಕು ಎಂದು ಕೇಳಿರುವದರಲ್ಲಿ ಒಂದು ಬಗೆಯ ತಾತ್ವಿಕತೆಯಿದೆಯಾದರೂ ರಾಜೀನಾಮೆಯ ನಂತರ ನಡೆಯಬಹುದಾದ ಆಯ್ಕೆಯ ಪಾರದರ್ಶಕತೆಯ ಬಗ್ಗೆಯೂ ಸ್ವಲ್ಪ ಯೋಚಿಸಬೇಕಾಗುತ್ತದೆ. ಹೊಸದಾಗಿ ಅಕಾಡೆಮಿಗಳಿಗೆ ನೇಮಕ ನಡೆಯಲಿದೆ ಎನ್ನುವ ಸುದ್ದಿ ಬಯಲಾದದ್ದೇ ತಡ ಮೊದಲು ಜಾತಿಯ ಲಾಬಿ ಶುರುವಾಗುತ್ತದೆ. ಅಸಹ್ಯ ಮತ್ತು ಹೇಸಿಗೆ ಹುಟ್ಟಿಸುವ ಮಟ್ಟದಲ್ಲಿ ಈ ಜಾತಿ ಲಾಭಿ ನಡೆಯುತ್ತದೆ. ಎಲ್ಲರೂ ಅಗಾಧ ಪಂಡಿತರೇ ಆದರೂ ಎಲ್ಲರ ಸಾಮರ್ಥ್ಯದ ಮಾನದಂಡ ಜಾತಿ. ಹಿಂದೆಂದಿಗಿಂತಲೂ ಇಂದು ಹೆಜ್ಜೆ ಹೆಜ್ಜೆಗೂ ನಮ್ಮನ್ನು ಆಳುವ, ನಮ್ಮ ಎಲ್ಲ ವ್ಯವಹಾರಗಳನ್ನು ನಿರ್ಧರಿಸುವ ಒಂದು ಪ್ರಬಲ ಸಂಸ್ಥೆಯಾಗಿ ಜಾತಿ ಕೆಲಸ ಮಾಡುತ್ತಿದೆ. ಸಾಹಿತ್ಯಕ ವಲಯದಲ್ಲಂತೂ ಇದರ ಹಾವಳಿ ಮತ್ತೂ ಹೆಚ್ಚಿಗಿದೆ. ಲೇಖಕನೊಬ್ಬನ ಕೃತಿಯನ್ನು ಜಾತಿಯ ವಾಸನೆಯ ಮೂಲಕವೇ ಓದುವ, ವಿಮರ್ಶಿಸುವ ಸೂಕ್ಷ್ಮ ನಾಸಿಕವಾಹಿಗಳ ಸಂಖ್ಯೆ ಈಗ ಅಪಾರವಾಗಿದೆ. ಹೀಗಾಗಿ ಒಬ್ಬ ಹೊಸ ಬರಹಗಾರ ಈ ಸಾಂಸ್ಕೃತಿಕ ಹೊಲಸುತನದ ನಡುವೆ ಒಂದು ಒಳ್ಳೆಯ ಕೃತಿಯನ್ನು ಕೊಟ್ಟರೂ ಅದನ್ನು ಸರಿಯಾಗಿ ಗುರುತಿಸದ ಸಂದರ್ಭ ಸಾಹಿತ್ಯಕ ವಲಯದಲ್ಲಿದೆ. ಮಹಾನ್ ದೊಡ್ಡ ದೊಡ್ಡ ಸಾಹಿತಿಗಳೆನಿಸಿಕೊಂಡವರು ಪರೋಕ್ಷವಾಗಿ ಸ್ವಜಾತಿಯನ್ನು ಪ್ರೀತಿಸುತ್ತ, ಪೊರೆಯುತ್ತ ಬಂದಿರುವದರ ಪರಿಣಾಮವಾಗಿಯೇ ಇಂದು ಸಾಹಿತ್ಯಕ ವಲಯ ಹೇಸಿಗೆ ಹುಟ್ಟಿಸುವಂತಾಗಿದೆ. ರಾಜಕಾರಣಿಯೊಬ್ಬ ರಾಜಕೀಯ ಮಾಡುತ್ತಾನೆ ಎನ್ನುವದಾದರೆ ಅದು ಅವನ ವೃತ್ತಿ ಮತ್ತು ಪ್ರವೃತ್ತಿ. ಅಲ್ಲೊಂದು ಬಗೆಯ ತಾದಾತ್ಮ್ಯತೆ ಇದೆ. ಇನ್ನು ನಾವು ಅವನನ್ನು ಶಪಿಸಬೇಕಿರುವದು ಆತನ ಭ್ರಷ್ಟ ಗುಣ ಮತ್ತು ಸುಳ್ಳು ಭರವಸೆಗಳಿಗಾಗಿ. ಸಾಹಿತಿಯಾದವನು ಹಾಗಲ್ಲ. ನುಡಿದಂತೆ ನಡೆವವನು ಎನ್ನುವ ಹಾಗೆ ವೇದಿಕೆಯಲ್ಲಿ ಪುಂಖಾನುಪುಂಖವಾಗಿ ಮಾತನಾಡುವವನು. ನಿಜಜೀವನಕ್ಕಿಳಿದರೆ ನಡೆ-ನುಡಿಯಲ್ಲಿ ಒಂದಾಗಿರುವ ಸಂದರ್ಭಗಳು ಅಪರೂಪ. ರಾಜಕಾರಣ ಇವನ ವೃತ್ತಿಯೂ ಅಲ್ಲ, ಪ್ರವೃತ್ತಿಯೂ ಅಲ್ಲ. ಆದ್ರೆ ರಾಜಕಾರಣಿಗಳು ಕೂಡಾ ನಾಚುವ ಹಾಗೆ ರಾಜಕೀಯ ಮಾಡುವ ನಾಜೂಕಯ್ಯ. ಹೀಗಾಗಿಯೇ ಇಂದು ಸಾಹಿತ್ಯಕ ವಲಯದಲ್ಲಿ ನಿಂತು ಸಾಂಸ್ಕೃತಿಕ ಮೌಲ್ಯಗಳ ಬಗ್ಗೆ ಮಾತನಾಡುವವರು ತುಂಬಾ ಸಿಂಪಥಿ ಗಿಟ್ಟಿಸುವವರ ಹಾಗೆ ಕಾಣುತ್ತಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ತೀರ್ಮಾನ ಸರಿಯಾದುದು. ಪ್ರತಿಯೊಂದು ರಾಜಕೀಯ ಪಕ್ಷವು ತನ್ನ ತನ್ನ ಹಿಂಬಾಲಕರನ್ನು ಓಲೈಸುವದು ಮಾಮೂಲು. ಮೊದಲಿನ ರಾಜಕೀಯ ಪಕ್ಷದ ಅವಧಿಯಲ್ಲಿ ನೇಮಕಗೊಂಡವರ ಬದಲಾಗಿ ಹೊಸ ಆಯ್ಕೆ ಬಯಸುವದು ಸಹಜ. ಆದರೆ ಮೊದಲಿನ ಆಯ್ಕೆಗೂ ಮತ್ತು ಈಗಿನ ಆಯ್ಕೆಯ ನಡುವೆ ಯಾವ ವ್ಯತ್ಯಾಸಗಳೂ ಉಳಿಯಲಿಲ್ಲ ಎನ್ನುವ ಹಾಗೆ ಸಾಂಸ್ಕೃತಿಕ ವಲಯದ ಜನತೆ ಆಡಿಕೊಳ್ಳದ ಹಾಗೆ ಆಯ್ಕೆ ಮಾಡಿದರೆ ಸಾಕು ಎನ್ನುವದು ನನ್ನಂಥವರ ಆಸೆ.

One thought on “ಅಕಾಡೆಮಿಗಳ ಅಧ್ಯಕ್ಷರ ರಾಜೀನಾಮೆ ಅನಿರೀಕ್ಷಿತವಲ್ಲ

Leave a Reply

Your email address will not be published. Required fields are marked *