Monthly Archives: June 2013

ಕನ್ನಡದಲ್ಲಿ ಮಕ್ಕಳ ಪತ್ರಿಕೆಗಳು

– ರೂಪ ಹಾಸನ

ನಮ್ಮ ಸಮಾಜದಲ್ಲಿ ಅತ್ಯಂತ ನಿರ್ಲಕ್ಷಿತರು ಎಂದರೆ ಮಕ್ಕಳು. ಅವರಿಗೆ ತಮ್ಮ ಹಕ್ಕುಗಳ ಬಗ್ಗೆ ತಿಳಿವಳಿಕೆ, ಸಂಘಟನೆ ಹಾಗೂ ದನಿ ಇಲ್ಲದಿರುವುದೇ ಇದಕ್ಕೆ ಮುಖ್ಯ ಕಾರಣ. ನಮ್ಮ ಸಮಾಜದ ಕೆಳವರ್ಗ, ತಳಸಮುದಾಯ, ರೈತ, ಕಾರ್ಮಿಕ, ಮಹಿಳೆ ಹಾಗೂ ಅಸಹಾಯಕ ವರ್ಗಕ್ಕೆ ಇವತ್ತು ತಮ್ಮ ಹಕ್ಕುಗಳ ಬಗ್ಗೆ ಒಂದಿಷ್ಟಾದರೂ ತಿಳಿವಳಿಕೆ, ಜಾಗೃತಿ ಮೂಡಿರುವುದರಿಂದ ಅವರು ಅದಕ್ಕಾಗಿ ದನಿಯೆತ್ತಿ ಕೇಳುವಂತಾ, ಸಂಘಟಿತರಾಗುವಂತಾ, ಹೋರಾಟ ಮಾಡುವಂತಾ ಹಂತವನ್ನು ತಲುಪಿದ್ದಾರೆ. ಆದರೆ ಮಕ್ಕಳು ಮುಗ್ಧರು ಮತ್ತು ಅಸಹಾಯಕರು ಆಗಿರುವುದರಿಂದ ಅವರು ಸಮಾಜದಲ್ಲಿ ಇನ್ನೂ ನಿರ್ಲಕ್ಷಿತರಾಗೇ ಉಳಿದಿದ್ದಾರೆ. ಮಕ್ಕಳ ಕುರಿತಾಗಿ ಈ ಎಲ್ಲ ಮಾತುಗಳನ್ನ ಯಾಕೆ ಹೇಳುತ್ತಿದ್ದೇನೆ ಎಂದರೆ ಮಕ್ಕಳು ನಿರ್ಲಕ್ಷಿತರಾಗಿರುವುದರಿಂದ ಮಕ್ಕಳ ಸಾಹಿತ್ಯವೂ ನಿರ್ಲಕ್ಷಿತವಾಗಿದೆ. ಹಾಗೇ ಮಕ್ಕಳ ಪತ್ರಿಕೆಗಳ ಬಗೆಗೆ, ಪತ್ರಿಕೆಗಳಲ್ಲಿ ಮಕ್ಕಳ ಬಗೆಗೆ ನಮ್ಮ ಗಮನ ಕೂಡ ಕಡಿಮೆ ಇದೆ. ನಮ್ಮಲ್ಲಿ ಮಕ್ಕಳ ಪತ್ರಿಕೋದ್ಯಮ ಎನ್ನುವಂತಾ ವಿಚಾರವೇ ಇನ್ನೂ ಜಾಗೃತಗೊಂಡಿಲ್ಲ ಎಂದರೆ ತಪ್ಪಾಗಲಾರದು.

ಇವತ್ತಿಗೂ ನಮ್ಮಲ್ಲಿ ಮಕ್ಕಳ ಸ್ವತಂತ್ರ ಲೋಕದ ಬಗ್ಗೆ ನಮಗೆ ಅನುಮಾನ ಇದೆ. ನಮ್ಮಲ್ಲಿ ಬಾಲ್ಯ ಎಂದರೆ ಒಟ್ಟು ಬದುಕಿನ ತಯಾರಿ ಎಂದೇ ನೋಡುವುದರಿಂದ ಧಾರ್ಮಿಕ ಚೌಕಟ್ಟಿನಲ್ಲಿಯೇ, ನೈತಿಕತೆಯ ಹಿನ್ನೆಲೆಯಲ್ಲಿಯೇ ಮಕ್ಕಳನ್ನ ಬೆಳೆಸುವ ಪರಿಪಾಠವಿದೆ. ಹಿರಿಯರೇ ಮಕ್ಕಳ ಎಲ್ಲವನ್ನೂ ನಿರ್ಧರಿಸುವಂತಾ, ಅವರ ಭವಿಷ್ಯದ ಬಗ್ಗೆ ಗೊತ್ತುಪಡಿಸುವಂತದ್ದನ್ನ ನಾವು ಕಾಣುತ್ತೇವೆ. ಹಾಗಾಗೇ ನೀತಿಕಥೆಗಳು, ಪುರಾಣದ ಕಥೆಗಳು, ಆದರ್ಶ ಪುರುಷರ, ಸಾಧಕರ ಕಥೆಗಳು, ಧಾರ್ಮಿಕ ನಡವಳಿಕೆ, ವಿಧೇಯತೆಯ ಪಾಠಗಳಿಗೆ ಬಾಲ್ಯದಲ್ಲಿ ಆದ್ಯತೆ ನೀಡಲಾಗುತ್ತದೆ. ಹಾಗೆ ನೋಡಿದರೆ ನಮ್ಮ ಜಾನಪದ ಸಾಮಗ್ರಿ ಅದ್ಭುತವಾದುದ್ದು. ಅದು ಕಲ್ಪನೆಯ ಮಾನವ ಸಹಜ ತುಡಿತವನ್ನ ಹೊತ್ತುಕೊಂಡಿದೆ. ಇದನ್ನ ಬಳಸಿಕೊಂಡೇ ನಮ್ಮ ಕಾಮಿಕ್‌ಗಳು ರೂಪುಗೊಂಡಿರುವುದು.

ಮಕ್ಕಳ ಕಲ್ಪನಾಶಕ್ತಿಯನ್ನು, ಜ್ಞಾನ, ಅನುಭವಗಳನ್ನು ವಿಸ್ತರಿಸುವ, ಅವರ ಮನಸ್ಸನ್ನು ಅರಳಿಸುವ ನಿಟ್ಟಿನಲ್ಲಿ, ರಂಜನೆ, ಮಾಹಿತಿ, ಶಿಕ್ಷಣ, ಸಮಸ್ಯೆಗಳ ಅರಿವಿನ ವಿಸ್ತರಣೆ ಮತ್ತು ಸಂತೋಷದ ಸಮಯ ಕಂಡುಕೊಳ್ಳುವಲ್ಲಿ ಪತ್ರಿಕೆ ಅತ್ಯಂತ ಅನಿವಾರ್ಯವಾದದ್ದು. ದೊಡ್ಡವರ ಪತ್ರಿಕೆ ರೂಪುಗೊಂಡ ಅನೇಕ ದಶಕಗಳ ನಂತರ ಮಕ್ಕಳ ಮಾಧ್ಯಮ ಸಾಧ್ಯತೆಯ ಬಗ್ಗೆ ಹಿರಿಯರು ಯೋಚಿಸಿದರು. ಬ್ರಿಟೀಷರ ಪ್ರಭಾವದಿಂದ, ಕ್ರಿಶ್ಚಿಯನ್ ಮಿಷಿನರಿಗಳ ಆಗಮನದಿಂದ 19ನೇ ಶತಮಾನದ ಕೊನೆಯಲ್ಲಿ ಹಾಗೂ 20ನೇ ಶತಮಾನದ ಪ್ರಾರಂಭದಲ್ಲಿ ದೇಶದ ಅನೇಕ ಭಾಗಗಳಲ್ಲಿ, ಬೇರೆ ಬೇರೆ ಭಾಷೆಗಳಲ್ಲಿ ಮಕ್ಕಳ ಪತ್ರಿಕೆಗಳು ಪ್ರಾರಂಭವಾಗಿದ್ದಕ್ಕೆ ನಮಗೆ ದಾಖಲೆಗಳು ಸಿಗುತ್ತವೆ.

ಮೊದಲ ಹಂತದಲ್ಲಿ ಮಕ್ಕಳ ಪತ್ರಿಕೆಗಳು, ಮಕ್ಕಳಿಗೆ ಅಗತ್ಯವಾದುದನ್ನು ಹಿರಿಯರೇ ಗುರುತಿಸಿ, ತಮ್ಮ ಕಲ್ಪನೆಯಲ್ಲಿ ರೂಪಿಸಿದಂತಹುದೇ ಆಗಿತ್ತು. ಅದರಲ್ಲಿ ಮಕ್ಕಳಿಗೆ ತೋರಿಸಬೇಕಾದ ಅಕ್ಕರೆ, ಆಸಕ್ತಿ, ಅವರ ಬಾಲ್ಯದ ತುಂಟಾಟ, ಆರೋಗ್ಯ, ಅವರ ಭವಿಷ್ಯವನ್ನು ಸರಿಯಾಗಿ ರೂಪಿಸಲು ತೆಗೆದುಕೊಳ್ಳಬೇಕಾದ ಎಚ್ಚರಿಕೆಯ ಕುರಿತು ಹಿರಿಯರಿಗೆ ಹಾಗೂ ಶಿಕ್ಷಕರಿಗೆ ಮಾರ್ಗದರ್ಶನ ನೀಡುವ ಮಾಹಿತಿಗಳೇ ಹೆಚ್ಚಾಗಿ ಇರುತ್ತಿದ್ದವು. ಹಾಗೂ ಮುಖ್ಯವಾಗಿ ಬೇರೆ ಬೇರೆ ಭಾಷೆಯ ಹಿರಿಯ ಸಾಹಿತಿಗಳೇ ಮಕ್ಕಳಿಗಾಗಿ ಪತ್ರಿಕೆಯನ್ನು ಮೊದಲು ಪ್ರಾರಂಭಿಸಿದರು ಎಂಬುದು ಗಮನಾರ್ಹವಾದುದು.

1928 ರಲ್ಲಿ ಬೆಂಗಳೂರಿನಲ್ಲಿ ನೆಲೆ ನಿಂತವರಾದ ಆಂಧ್ರಪ್ರದೇಶ ಮೂಲದ ಸಿ. ಅಶ್ವಥ್ ನಾರಾಯಣರಾವ್ ಎಂಬುವವರ ಪ್ರಕಾಶನದಡಿಯಲ್ಲಿ, ದೇವುಡು ಅವರ ಸಂಪಾದಕತ್ವದಲ್ಲಿ ಬೆಂಗಳೂರಿನಿಂದ “ಮಕ್ಕಳ ಪುಸ್ತಕ” ಎಂಬ ಮಕ್ಕಳ ಪತ್ರಿಕೆ ಪ್ರಾರಂಭಗೊಂಡು ಎರಡು ವರ್ಷಗಳ ಕಾಲ ನಡೆಯಿತು. ಇದೇ ಕನ್ನಡದ ಮೊದಲ ಮಕ್ಕಳ ಪತ್ರಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನಂತರ 1935ರ ಸುಮಾರಿಗೆ ದೇವುಡು ಅವರು ಸ್ವತಂತ್ರವಾಗಿ ಪ್ರಾರಂಭಿಸಿ 25 ವರ್ಷಗಳಿಗೂ ಹೆಚ್ಚು ಕಾಲ ನಡೆಸಿದ “ನಮ್ಮ ಪುಸ್ತಕ” ಎಂಬ ಪತ್ರಿಕೆ ಕನ್ನಡದಲ್ಲಿ ಅತಿ ದೀರ್ಘಕಾಲ ಹಾಗೂ ನಿರಂತರವಾಗಿ ನಡೆದ ಮೊದಲ ಮಕ್ಕಳ ಪತ್ರಿಕೆ ಎಂಬ ವಿಶೇಷಕ್ಕೆ ಪಾತ್ರವಾಗಿದೆ. ಮೊದಲು ನಾಲ್ಕಾಣೆಯಿಂದ ಪ್ರಾರಂಭವಾಗಿ ಆ ಕಾಲದಲ್ಲಿಯೇ 3 ರೂಪಾಯಿವರೆಗೆ ನಿಗದಿ ಪಡಿಸಿದ ಮಾಸಿಕವಾಗಿ ಅವರು ಮಕ್ಕಳನ್ನು ರಂಜಿಸಲು, ಅವರ ಜ್ಞಾನವೃದ್ಧಿಗಾಗಿ, ಸನ್ನಡತೆಗೆ ಪ್ರೇರೇಪಿಸಲು ವಿಶೇಷ ಕಾಳಜಿಯಿಂದ ಪತ್ರಿಕೆಯನ್ನು ರೂಪಿಸಿದ್ದು ಗೋಚರಿಸುತ್ತದೆ. ಚಿತ್ರಕಥೆ, ಚಿತ್ರಲಿಪಿ, ಚುಕ್ಕಿಚಿತ್ರ, ವಿಜ್ಞಾನದ ವಿಷಯಗಳು, ವ್ಯಕ್ತಿ ಪರಿಚಯ, ಪೋಷಕರಿಗೆ, ಶಿಕ್ಷಕರಿಗೆ ಸಲಹೆಗಳು ಹೀಗೆ ಪತ್ರಿಕೆ ಆ ಕಾಲಕ್ಕೆ ಸಮೃದ್ಧವಾಗಿಯೇ ಹೊರಬರುತ್ತಿತ್ತು ಎನ್ನಬಹುದು. ಪತ್ರಿಕೆಯಲ್ಲಿ ಫೋಟೋಗಳನ್ನು, ಚಿತ್ರಗಳನ್ನು ಮುದ್ರಿಸಲು ಪ್ರಾರಂಭಿಸಿದ್ದೂ ವಿಶೇಷ. ಅವರು ಪತ್ರಿಕೆಯನ್ನು ಶಿಕ್ಷಣ ಇಲಾಖೆಯ ನೆರವಿನೊಂದಿಗೆ ಬೇರೆ ಬೇರೆ ಜಿಲ್ಲೆಗೂ ವಿಸ್ತರಿಸಿದ್ದರು.

ಆರ್. ಕಲ್ಯಾಣಮ್ಮನವರು ಪ್ರಕಟಿಸುತ್ತಿದ್ದ “ಸರಸ್ವತಿ” ಎಂಬ ಪ್ರಥಮ ಮಹಿಳಾ ಪ್ರತಿಕೆಯಲ್ಲಿ ಮಕ್ಕಳಿಗಾಗಿಯೇ ಕೆಲ ಪುಟಗಳನ್ನು ಮೀಸಲಾಗಿಟ್ಟಿದ್ದರು. ನಂತರ ಅವರು ಮಕ್ಕಳ ಕೂಟದ ರೂವಾರಿಯಾಗಿ “ಮಕ್ಕಳ ಬಾವುಟ” ಪತ್ರಿಕೆ ಪ್ರಾರಂಭಿಸಿದರು. ಅನೇಕ ಹಿರಿಯ ಸಾಹಿತಿಗಳು ಇದರಲ್ಲಿ ಮಕ್ಕಳಿಗಾಗಿ ಸೃಜನಶೀಲ ಬರಹಗಳನ್ನು ಬರೆದರು. ಹಾಗೇ ಸಿಸು ಸಂಗಮೇಶರ “ಬಾಲ ಭಾರತಿ” ಉತ್ತರ ಕರ್ನಾಟಕದಲ್ಲಿ ಮಕ್ಕಳ ಪರವಾದ ಒಂದಿಷ್ಟು ಒಳ್ಳೆಯ ವಾತಾವರಣ ನಿರ್ಮಿಸಿತು. ಇದು ನಾಲ್ಕು ವರ್ಷಗಳ ಕಾಲ ನಡೆಯಿತು. ಧಾರವಾಡದ ಮಕ್ಕಳ ಮನೆಯ ಈಶ್ವರ ಕಮ್ಮಾರ ಅವರು “ಮಕ್ಕಳ ಮಂದಿರ” ಪತ್ರಿಕೆಯನ್ನು ಸುಮಾರು 3 ವರ್ಷಗಳ ಕಾಲ ಆಸಕ್ತಿಯಿಂದ ನಡೆಸಿದರು. ರಾಮದುರ್ಗದಿಂದ ನಾಗಕಲಾಲ್ ಅವರು “ಚಿಣ್ಣರ ಲೋಕ” ಎಂಬ ಪತ್ರಿಕೆಯನ್ನು 2 ವರ್ಷಗಳ ಕಾಲ ನಡೆಸಿದರು, ಬೆಂಗಳೂರಿನಿಂದ “ಚಿಗುರು” ಪತ್ರಿಕೆ ಅಂದವಾಗಿ ಮುದ್ರಣಗೊಂಡು ಒಳ್ಳೆಯ ಮುಖಪುಟದೊಂದಿಗೆ ಕೆಲ ಸಮಯ ಬಂತು. ಒಳ ಪುಟಗಳೂ ಒಳ್ಳೆಯ ಆಸಕ್ತರಿಂದ ಸೊಗಸಾಗಿ ಸಂಯೋಜನೆಗೊಂಡು ಬರುತ್ತಿತ್ತು. ಹೀಗೇ ಪುಟಾಣಿ, ಪಾಪಚ್ಚಿ, ಅಂಗಳ ಎನ್ನುವ ಮಕ್ಕಳ ಪತ್ರಿಕೆಗಳು ಭರವಸೆ ಹುಟ್ಟಿಸಿ ಅಲ್ಪ ಕಾಲಕ್ಕೆ ಕಣ್ಮರೆಯಾದವು. “ಅಂಗಳ” ಬಲು ದೊಡ್ಡ ಆಕಾರದಲ್ಲಿ ಅಂದವಾಗಿ ಹಲವಾರು ಹೊಸತುಗಳಿಗೆ ಹೊಸಗಾಲದ ಅಗತ್ಯಗಳಿಗೆ ತುಡಿಯುವ ಎಲ್ಲ ಸಾಧ್ಯತೆಗಳನ್ನು ತೋರಿಸಿದ್ದ ಪತ್ರಿಕೆ. ಕುಮಾರ ಪಟ್ಟಣದಿಂದ ಪ್ರಕಾಶ್ ರಾವ್ ಅವರು “ಅಮೃತವರ್ಷಿಣಿ” ಎನ್ನುವ ಪತ್ರಿಕೆಯನ್ನು ಕಳೆದ 7-8 ವರ್ಷದಿಂದ ತರುತ್ತಿದ್ದಾರೆ. ಇದು ಹಾವೇರಿ ಜಿಲ್ಲೆಯನ್ನು ಕೇಂದ್ರೀಕರಿಸಿಕೊಂಡು ಶೈಕ್ಷಣಿಕ ಹಿನ್ನಲೆಯಲ್ಲಿ ಹೊರಬರುತ್ತಿದೆ. ಹಾಗೇ ಭಾರತ ಸಂಸ್ಕೃತಿ ವಿದ್ಯಾಲಯದವರು “ವಿವೇಕ” ಎಂಬ ಪತ್ರಿಕೆಯನ್ನು ತರುತ್ತಿದ್ದಾರೆ. ಚಳ್ಳಕೆರೆಯ ಯರ್ರಿಸ್ವಾಮಿಯವರು ಕಳೆದ 15 ವರ್ಷಗಳಿಂದ ವಿಜ್ಞಾನಕ್ಕೆ ಸಂಬಂದಿಸಿದ ವಿಷಯಗಳನ್ನು ಮಕ್ಕಳಿಗೆ ತಲುಪಿಸಲಿಕ್ಕಾಗಿಯೇ “ಪುಟಾಣಿ ವಿಜ್ಞಾನ” ಎಂಬ ಪತ್ರಿಕೆ ತರುತ್ತಿದ್ದಾರೆ.

ಹೀಗೆ ಅಲ್ಲಲ್ಲಿ ಪ್ರಯತ್ನಗಳು ನಡೆದಿವೆ. ಇನ್ನೂ ಅಲ್ಲಲ್ಲಿ ನಡೆದಿರಬಹುದು. ಶಿವಮೊಗ್ಗದಲ್ಲಿ “ಮಕ್ಕಳ ಮಂಟಪ” ಎನ್ನುವ ಪತ್ರಿಕೆ ಬರುತ್ತಿದೆ. ಹಾಗೇ ದಕ್ಷಿಣ ಕನ್ನಡದ ಬಿ.ಸಿ ರೋಡ್‌ನಿಂದ ವಾಣಿಯೆನ್ನುವವರು “ಸಿಂಫನಿ” ಎನ್ನುವ ಪತ್ರಿಕೆ ನಡೆಸುತ್ತಿದ್ದಾರೆ. ಹೊನ್ನಾವರದ ಸೇಂಟ್ ಇಗ್ನೇಶಿಯಸ್ ಶಿಕ್ಷಣ ಸಂಸ್ಥೆಯಿಂದ ಬರುತ್ತಿರುವ “ಸಂಜೀವಿನಿ” ಎನ್ನುವ ಪತ್ರಿಕೆ ದಶಕಗಳನ್ನು ದಾಟಿ ಮುಂದುವರೆದಿದ್ದು ಆ ಭಾಗದಲ್ಲಿ ಒಳ್ಳೆಯ ಪ್ರತಿಕ್ರಿಯೆ ಗಳಿಸಿದೆ. ರಾಣೀಬೆನ್ನೂರಿನಿಂದ ಬರುತ್ತಿರುವ “ಯಶಸ್ವಿನಿ” ಆದಷ್ಟೂ ಶೈಕ್ಷಣಿಕವಾಗಿ ಕಾಣಿಸಿಕೊಂಡಿದ್ದರೂ ನಿರಂತರವಾಗಿ ಬರುತ್ತಿದೆ.

ಈ ನಿಟ್ಟಿನಲ್ಲಿ ಧಾರವಾಡದ ಶಂಕರ ಹಲಗತ್ತಿಯವರು ತರುತ್ತಿರುವ “ಗುಬ್ಬಚ್ಚಿಗೂಡು” ಈಗ ಬಹುಶಃ ಕನ್ನಡದಲ್ಲಿ, ಕನ್ನಡದವರ ಪ್ರಯತ್ನವಾಗಿ ಎದ್ದು ಕಾಣುವಂತಿದೆ. ಈಗಾಗಲೇ 10 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿ ಮುನ್ನೆಡೆದಿದೆ. ಆದಷ್ಟೂ ಶೈಕ್ಷಣಿಕವಾಗಿಯೇ ಕಾಣಿಸಿಕೊಳ್ಳುತ್ತಿರುವ ಪತ್ರಿಕೆ ಶಾಲಾ ಸಂಸ್ಥೆಗಳನ್ನೇ ನೆಚ್ಚಿಕೊಂಡರೆ ಅದೇ ಮಾರ್ಗದಲ್ಲಿ ಹೆಜ್ಜೆ ಇಡಬೇಕಾಗಬಹುದು. ಇದರೊಂದಿಗೇ ಪತ್ರಿಕೆ ಸೃಜನಶೀಲವಾದ ಹಲವಾರು ಪ್ರಯತ್ನಗಳನ್ನು ಹೊಸಕಾಲದ ಮಕ್ಕಳಿಗಾಗಿ ಮಾಡುತ್ತಿರುವುದು ಗಮನಾರ್ಹ. ಹಿರಿಯ ಮಕ್ಕಳ ಸಾಹಿತಿಗಳ ಬರಹಗಳ ಜೊತೆಗೆ ಮಕ್ಕಳ ಕಲ್ಪನೆ, ಸೃಜನಶೀಲತೆಗೂ ಹೆಚ್ಚಿನ ಒತ್ತು ನೀಡಿದೆ. ಗುಣಮಟ್ಟದ ದೃಷ್ಟಿಯಿಂದ ಉತ್ತಮವಾಗಿದೆ. ಆದರೆ ಮಾರುಕಟ್ಟೆಯಲ್ಲಿ ಸ್ವತಂತ್ರವಾಗಿ, ವ್ಯಾವಹಾರಿಕವಾಗಿ ಪೈಪೋಟಿಯನ್ನು ಎದುರಿಸುವ ನಿಟ್ಟಿನಲ್ಲಿ ಇನ್ನೂ ಹೆಚ್ಚಾಗಿ ಯೋಚಿಸಿಲ್ಲ. ಮಕ್ಕಳ ಕುರಿತು ನೈಜ್ಯ ಕಾಳಜಿಯಿರುವುದು ಪತ್ರಿಕೆಯಲ್ಲಿ ಗೋಚರಿಸುವುದರಿಂದ ಆಶಾಭಾವನೆ ಇಟ್ಟುಕೊಳ್ಳುವುದಕ್ಕೆ ಕಾರಣವಾಗಿದೆ. [ಮಕ್ಕಳ ಪತ್ರಿಕೆಗಳ ಕುರಿತ ಈ ಎಲ್ಲ ಮಾಹಿತಿಗಳನ್ನು ಖ್ಯಾತ ಮಕ್ಕಳ ಸಾಹಿತಿಗಳಾದ ಡಾ.ಆನಂದ ಪಾಟೀಲರು ವಿಸ್ತೃತವಾಗಿ ಅಧ್ಯಯನ ನಡೆಸಿ ದಾಖಲಿಸಿದ್ದಾರೆ.]

ಹಾಗೇ ಮಕ್ಕಳೇ ನಡೆಸುವ ಪತ್ರಿಕೆಗಳು ಈಗ ನಮ್ಮ ನಡುವೆ ಕೆಲವಿವೆ. ತೀರ್ಥಹಳ್ಳಿಯ ಮುದ್ದು ನಡೆಸುವ “ಮಂದಾನಿಲ” ಅಲ್ಪ ಕಾಲದಲ್ಲಿಯೇ ಗಮನಿಸುವಂತಾ ಸಾಧನೆ ಮಾಡಿದೆ. ಹಾಗೇ ಹಾಸನದಲ್ಲಿ ಪ್ರೇರಣಾ ವಿಕಾಸ ವೇದಿಕೆಯ ಕೆಲವು ಮಕ್ಕಳು ಸೇರಿ “ಪ್ರೇರಣಾ” ಎನ್ನುವ ಪತ್ರಿಕೆ ನಡೆಸುತ್ತಿದಾರೆ. ಇದರ ಸಂಪಾದಕಿ ಅನಘ. ಸಮಾಜಮುಖಿ ಒಲವುಗಳುಳ್ಳ ದಿಟ್ಟ ಪತ್ರಿಕೆಯಾಗಿ ಇದು ರೂಪುಗೊಂಡಿದೆ. ಮಕ್ಕಳಿಗಾಗಿ ಹಿರಿಯರು ಬರೆಯುವುದಕ್ಕೂ ಮಕ್ಕಳೇ ನೇರವಾಗಿ ತಮ್ಮ ಪತ್ರಿಕೆಯನ್ನು ತರುವುದಕ್ಕೂ ಇರುವ ವ್ಯತ್ಯಾಸವನ್ನು ಇದರಿಂದ ಗುರುತಿಸಬಹುದಾಗಿದೆ.

ಈ ಬಗೆಯ ಎಲ್ಲಾ ಪ್ರಯತ್ನಗಳನ್ನು ಗಮನಿಸಿದಾಗ ಸಾಹಿತ್ಯಾಸಕ್ತರೇ ಇಂಥ ಪತ್ರಿಕೆಯ ಹಿಂದೆ ಇರುವುದು ಗೋಚರಿಸುತ್ತದೆ. ಆದರೆ ಅವರ ಮುಖ್ಯವಾದ ಸಮಸ್ಯೆ ಎಂದರೆ ಆರ್ಥಿಕ ಸಬಲತೆ ಇಲ್ಲದಿರುವುದು. ಕೇವಲ ಉತ್ಸಾಹ, ಆಸಕ್ತಿಯೇ ಇಲ್ಲಿನ ಬಂಡವಾಳ. ಕೇವಲ ಚಂದಾ ಹಣದ ಮೇಲೆ ಅವಲಂಬಿಸುವ ಇವು ಪತ್ರಿಕೆಯ ಮಾರಾಟ ಜಾಲವನ್ನು ವ್ಯವಸ್ಥಿತವಾಗಿ ತೂಗಿಸಲಾಗದೇ ಅಲ್ಪ ಕಾಲದಲ್ಲೇ ಕೊನೆಯುಸಿರೆಳೆಯುತ್ತವೆ. ಅಥವಾ ನಷ್ಟದಲ್ಲಾದರೂ ಸರಿ ಪ್ರಯತ್ನವನ್ನು ಕೈ ಬಿಡಬಾರದೆಂದು ಆಸಕ್ತರು ತಾವೇ ಹಣ ಹಾಕಿ ಆಗುವವರೆಗೂ ಮುಂದುವರೆಸುತ್ತಾರೆ. ಕನ್ನಡದಲ್ಲಿ ಇದುವರೆಗೆ ನಡೆದ ಪ್ರಯತ್ನಗಳೆಲ್ಲಾ ಈ ಬಗೆಯವೇ ಆಗಿವೆ. ಹಾಗೇ ಇವಾವುವೂ ಉದ್ಯಮವಾಗಿ ತಮ್ಮನ್ನು ಗುರುತಿಸಿಕೊಳ್ಳುವಲ್ಲಿ ಮುನ್ನೆಡೆದಿಲ್ಲ ಎಂಬುದು ಗಮನಾರ್ಹ. ಈ ಎಲ್ಲ ಪತ್ರಿಕೆಗಳಿಗೆ ಹಿನ್ನೆಲೆಯಾಗಿ ಉದ್ಯಮಿಗಳ ಬೆಂಬಲವಿಲ್ಲದಿರುವುದೂ ಕನ್ನಡ ಮಕ್ಕಳ ಪತ್ರಿಕೆಗಳು ಸೋಲನುಭವಿಸುತ್ತಿರುವುದಕ್ಕೆ ಮುಖ್ಯ ಕಾರಣವಾಗಿವೆ. ನಮ್ಮ ಯಾವ ಪ್ರತಿಷ್ಟಿತ ಪತ್ರಿಕಾ ಸಂಸ್ಥೆಯವರು ಮಕ್ಕಳ ಪತ್ರಿಕೆಯನ್ನು ಮಾಡುವ ಸಾಹಸಕ್ಕೆ ಹೋಗಲಿಲ್ಲ. ಎಲ್ಲರಿಗೂ ಆಗುವ ಮಾಸಿಕ, ಪಾಕ್ಷಿಕ, ವಾರಪತ್ರಿಕೆಗಳು ಮಕ್ಕಳಿಗಾಗಿ ಒಂದಿಷ್ಟು ಪುಟಗಳನ್ನು ಮೀಸಲಿರಿಸಿ ತೃಪ್ತಿಕಂಡಿವೆ. ಅಲ್ಲೇ ಕೆಲವರು ಹೊಸತಿಗೆ ತುಡಿದುದು, ಉತ್ಸಾಹ ತೋರಿದುದು ಕಾಣುತ್ತದೆ. ಹಾಗೆ ಇನ್ನಷ್ಟು ಆಸಕ್ತಿಯಿಂದ ಗಂಭೀರ ಪ್ರಯತ್ನ ಮಾಡಿ “ಪುಟಾಣಿ ವಿಜಯ” ದ ಹೆಸರಲ್ಲಿ 2 ವರ್ಷಗಳ ಕಾಲ ಮೊದಲಿಗೆ ಮಕ್ಕಳ ಪುರವಣಿ ತಂದವರೆಂದರೆ ವಿಜಯ ಕರ್ನಾಟಕದವರು. ಹಾಗೇ ಸಂಯುಕ್ತ ಕರ್ನಾಟಕದವರು ಮಕ್ಕಳಿಗಾಗಿ ತರುತ್ತಿರುವ “ಕಿಂದರ ಜೋಗಿ” ಪುರವಣಿ ಗಮನಿಸುವಂತಾ ಪ್ರಯತ್ನ ಮಾಡುತ್ತಿದೆ. ಇದನ್ನು ಮೀರಿ ಹೊಸ ಪ್ರಯತ್ನಗಳೇನೂ ಪತ್ರಿಕಾ ಮಾಧ್ಯಮದಲ್ಲಿ ಆಗಿಲ್ಲ.

ಇದಕ್ಕೆ ಅಪವಾದವೆನ್ನುವಂತೆ ಕೇವಲ ಉದಯವಾಣಿ ಪತ್ರಿಕಾ ಸಮೂಹದವರು ತರುತ್ತಿರುವ “ತುಂತುರು” ಒಂದು ಕನ್ನಡದ ಎಣಿಸಬಹುದಾದ ಗಟ್ಟಿಯಾದ ಪ್ರಯತ್ನ. ಇದರ ಸಂಪಾದಕರು ಸಂಧ್ಯಾ ಪೈ ಅವರು. ಪತ್ರಿಕಾರಂಗದ ಅನುಭವ ಸಾಕಷ್ಟಿರುವ, ಆರ್ಥಿಕ ಬೆಂಬಲ ಗಟ್ಟಿಯಾಗಿರುವ ಈ ಸಂಸ್ಥೆಯ ಪ್ರಯತ್ನ, ಸಮರ್ಥ ವಿತರಣಾ ಜಾಲದಿಂದಾಗಿ 10 ವರ್ಷಗಳನ್ನು ದಾಟಿ ಮುನ್ನೆಡೆದಿದೆ. “ತುಂತುರು” ಬಣ್ಣ ಬಣ್ಣವಾಗಿ ಅಂದವಾಗಿ ಬರುತ್ತಿದ್ದು ಕರ್ನಾಟಕದಲ್ಲಿ ಈ ರೀತಿಯ ಬೇರೆ ಮಕ್ಕಳ ಪತ್ರಿಕೆಯ ಸ್ಪರ್ಧೆಯ ಭಯ ಅನುಭವಿಸಿಲ್ಲ. ಈಗ ಮಕ್ಕಳ ಲೋಕದಲ್ಲಿರುವ ಎಲ್ಲಾ ಗಿಮಿಕ್‌ಗಳನ್ನೂ ಬಳಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಪಾಕ್ಷಿಕವಾಗಿ 10-12 ರ ವಯಸ್ಸಿನ ಮಕ್ಕಳಿಗಾಗಿ ಅತ್ಯಂತ ಸುಂದರವಾಗಿ ಬರುತ್ತಿರುವುದು ಶ್ಲಾಘನೀಯ ಪ್ರಯತ್ನವಾಗಿದೆ.

ಹಾಗೇ ಕನ್ನಡದ ಮಕ್ಕಳಿಗಾಗಿ ಹೊರ ರಾಜ್ಯದಿಂದ ಬರುತ್ತಿರುವ ಪತ್ರಿಕೆಗಳು ಅನೇಕವಿವೆ. ಭಾರತದಲ್ಲಿ ಬಹುಶಃ ಚಂದಮಾಮದಷ್ಟು ಜನಪ್ರಿಯವಾದ ಮಕ್ಕಳ ಪತ್ರಿಕೆ ಇನ್ನೊಂದಿರಲಿಕ್ಕಿಲ್ಲ. 1947ರಲ್ಲಿ ಪ್ರಾರಂಭಗೊಂಡ ಇದು ನಿರಂತರವಾಗಿ 60 ವರ್ಷಗಳನ್ನು ಯಶಸ್ವಿಯಾಗಿ ದಾಟಿ ನಡೆದುಬರುತ್ತಿದೆ. 2008 ರಿಂದ ಈ ಪತ್ರಿಕೆಗೆ ಹೊಸ ಆಯಾಮ ನೀಡಲಾಗಿದೆ. ಭಾಷೆ, ಪ್ರಸ್ತುತಿ, ಚಿತ್ರ, ದೃಶ್ಯ, ಸಂವಹನ, ವಸ್ತು ಎಲ್ಲ ರೀತಿಯಲ್ಲೂ ಹೊಸತನ ಸಾಧಿಸಿದೆ. ಸಮಕಾಲೀನ ಸ್ಪಂದನೆಯ ಕತೆ, ಸಾಹಸ ಸರಣಿ, ಕ್ರೀಡಾ ಸಮಾಚಾರ, ತಾಂತ್ರಿಕ ರಂಗದ ಸುದ್ದಿಗಳು, ವಿಜ್ಞಾನ ಹೀಗೆ ಇವತ್ತಿನ ಮಕ್ಕಳ ನಿರೀಕ್ಷೆಯನ್ನು ಅಚ್ಚರಿಪಡುವಷ್ಟು ಸಮರ್ಥವಾಗಿ ತುಂಬಿಕೊಡುತ್ತಿದೆ. ಸಂವೇದನಾಶೀಲ ಸಾಮಗ್ರಿ ಹಾಗೂ ಶೈಕ್ಷಣಿಕ ಸಾಮಗ್ರಿ ಎಲ್ಲವನ್ನೂ ನೀಡಲು ಈಗ ಪತ್ರಿಕೆ ಸಜ್ಜಾಗಿದೆ. ಈಗ ಸ್ವಲ್ಪ ದೊಡ್ಡ ಮಕ್ಕಳಿಗಾಗಿಯೇ ಪತ್ರಿಕೆಯನ್ನು ಅಚ್ಚುಕಟ್ಟಾಗಿ ರೂಪಿಸಲಾಗುತ್ತಿದೆ. ಈಗ ಇಂಗ್ಲೀಷಲ್ಲದೇ, ಕನ್ನಡವನ್ನೂ ಒಳಗೊಂಡಂತೆ ಭಾರತದ ಇತರ ೧೨ ಭಾಷೆಗಳಲ್ಲಿ ಚಂದಮಾಮ ಬರುತ್ತಿದೆ.

ಹಾಗೇ ಹೊರರಾಜ್ಯದಿಂದ ಕನ್ನಡದ ಮಕ್ಕಳಿಗಾಗಿ ಬರುತ್ತಿದ್ದ ಬಾಲಮಿತ್ರ, ಬೊಂಬೆಮನೆ, ಪುಟಾಣಿ ಮುಂತಾದ ನಿಯತಕಾಲಿಕಗಳು champaka2ಈಗ ಉಸಿರು ಕಳೆದುಕೊಂಡಿವೆ. ಆದರೆ ಮೂಲ ಕೇರಳದ ಮಂಗಳಂ ಪಬ್ಲಿಕೇಷನ್ಸ್ ಕನ್ನಡದಲ್ಲಿ “ಬಾಲಮಂಗಳ” ಮತ್ತು “ಬಾಲಮಂಗಳ ಚಿತ್ರಕಥಾ” ಎಂಬ ಎರಡು ಪಾಕ್ಷಿಕವನ್ನು ಹತ್ತಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದು ಇತ್ತೀಚೆಗಿನ ಕೆಲ ವರ್ಷಗಳಿಂದ ಪುಟಾಣಿ ಮಕ್ಕಳಿಗಾಗಿ “ಗಿಳಿವಿಂಡು” ಎಂಬ ಮಾಸಿಕವನ್ನು ತರುತ್ತಿದ್ದಾರೆ. ಇದು ವ್ಯಾಪಾರಿ ಉದ್ದೇಶವನ್ನೂ ಮೀರಿದ ಒಂದು ಒಳ್ಳೆಯ ಪ್ರಯತ್ನ. ಹಾಗೇ “ಚಂಪಕ” ಕೂಡ ಮಕ್ಕಳಿಗೆ ಇಷ್ಟವಾಗುವ ಒಳ್ಳೆಯ ಪತ್ರಿಕೆ.

ಈ ಎಲ್ಲಾ ಪತ್ರಿಕೆಗಳನ್ನು ಹಾಗೇ ಗಮನಿಸಿದರೆ ಇವುಗಳಲ್ಲಿನ ಸಾಮಾನ್ಯವಾದ ಸೂತ್ರವನ್ನು ಕಂಡುಕೊಳ್ಳಬಹುದು. ಇವು ಮಕ್ಕಳ ಭಾವನಾತ್ಮಕ ಹಾಗೂ ಬೌದ್ಧಿಕ ಸಾಮರ್ಥ್ಯವನ್ನು ಗುರಿಯಾಗಿಟ್ಟುಕೊಂಡು ಸಾಮಾನ್ಯವಾದ ಒಂದಿಷ್ಟು ಫಾರ್ಮುಲಾಗಳನ್ನು ಅನುಸರಿಸುತ್ತಿವೆ. ಕಾಮಿಕ್ಸ್ ಎಲ್ಲ ಮಕ್ಕಳ ಪತ್ರಿಕೆಗಳ ಮುಖ್ಯ ಆಕರ್ಷಣೆ. ಹಾಗೇ ರಂಜನೆ, ಮಾಹಿತಿ, ಶಿಕ್ಷಣವೇ ಇವುಗಳ ಮುಖ್ಯ ಗುರಿ. ಸಾಮಾನ್ಯವಾಗಿ ಮಕ್ಕಳು ಎಂದರೆ ನಿರ್ದಿಷ್ಟ ವಯೋವರ್ಗವನ್ನು ಗುರುತಿಸಲಾಗದಿದ್ದರೂ 7 ವರ್ಷದಿಂದ 10-12 ವರ್ಷದವರೆಗಿನ ಮಕ್ಕಳನ್ನು ಇಲ್ಲಿ ಪರಿಗಣಿಸಲಾಗುತ್ತದೆ. ಆದರೆ ಹೈಸ್ಕೂಲ್ ಮಕ್ಕಳಿಗೆ ಇಷ್ಟವಾಗುವ, ಅವರ ಸಮಸ್ಯೆಗಳನ್ನು ಕುರಿತು ಚರ್ಚಿಸುವಂತಾ ವಾಸ್ತವ ಲೋಕದ ಗಂಭೀರ ಸಾಮಗ್ರಿ ಇಲ್ಲಿ ಅಷ್ಟಾಗಿ ಕಾಣುವುದಿಲ್ಲ. ಸುಮಾರಾಗಿ ಹೈಸ್ಕೂಲಿಗೆ ಬಂದ ಮಕ್ಕಳ ಗ್ರಹಿಕೆ ಹಿಗ್ಗುತ್ತಿರುತ್ತದೆ. ಸುತ್ತಲಿನ ಅನೇಕ ಸಂಗತಿಗಳು ಅವರನ್ನು ದಿಗಿಲುಗೊಳಿಸುತ್ತವೆ. ಮನೆ, ಶಾಲೆ, ಗೆಳೆಯರ ನಡುವೆ, ಸಮಾಜದಲ್ಲಿ ಕಾಣುವ ಅನಪೇಕ್ಷಿತ ಎಂದುಕೊಳ್ಳುವ ಎಷ್ಟೋ ಸಂಗತಿಗಳಾಗಬಹುದು. ಎಲ್ಲವನ್ನೂ ಮಕ್ಕಳು ನೋಡುತ್ತಾರೆ, ಅನುಭವಿಸುತ್ತಾರೆ. ತಮ್ಮೊಳಗೇ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿಕೊಳ್ಳುತ್ತಾರೆ. ಇಂಥದ್ದಕ್ಕೆಲ್ಲಾ ಸ್ಪಂದಿಸುವ ಸಂವೇದನಾಶೀಲ ಬರವಣಿಗೆ ನಮ್ಮ ಈ ಮಕ್ಕಳ ಪತ್ರಿಕೆಗಳಲ್ಲಿ ಇಲ್ಲವೇ ಇಲ್ಲ ಎನ್ನುವಷ್ಟು ವಿರಳ.

ಮಕ್ಕಳು ಎಂದರೆ ನಿರ್ದಿಷ್ಟವಾಗಿ 5 ರಿಂದ 8, 8 ರಿಂದ 12, 12 ರಿಂದ 16 ವರ್ಷದವರನ್ನು ಗಮನದಲ್ಲಿಟ್ಟುಕೊಂಡು ಪ್ರತ್ಯೇಕವಾಗಿಯೇ ಮಕ್ಕಳ ಪತ್ರಿಕೆಗಳು ರೂಪುಗೊಂಡರೆ ಅದರ ಉದ್ದೇಶ ಸಫಲವಾಗುತ್ತದೆ. ರಂಜನೆಯ ಹಾಗೆಯೇ ಮಕ್ಕಳಿಗೆ ಬೌದ್ಧಿಕ ಕಸರತ್ತು ಮುಟ್ಟಿಸುವ ಆಟದ ಹೊಸ ಬಗೆಗಳ ಪ್ರಯತ್ನವೂ ಇತ್ತೀಚೆಗೆ ಆಗಿಲ್ಲ. ಅವರ ಬೇರೆ ಬೇರೆ ತಲ್ಲಣ, ಕಳವಳ, ಸಮಸ್ಯೆಗಳ ಕುರಿತು ವಿಶ್ಲೇಷಿಸುವ ಪ್ರಯತ್ನಗಳೂ ಆಗಿಲ್ಲ. ಪತ್ರಿಕೆಯನ್ನು ಆಸಕ್ತಿಯುತವಾಗಿ, ಆಕರ್ಷಕವಾಗಿ ರೂಪಿಸುವುದಷ್ಟೇ ಅಲ್ಲ ಅದನ್ನು ಮಕ್ಕಳಿಗೆ ಯಶಸ್ವಿಯಾಗಿ ಮುಟ್ಟಿಸುವ ಪ್ರಯತ್ನವೂ ಆಗಬೇಕು. ಜಾಹಿರಾತಿನ ಹೊಸ ಹೊಸ ಸಾಧ್ಯತೆಗಳನ್ನು ಬಳಸಿಕೊಂಡರೂ ತಪ್ಪಿಲ್ಲ. ಪತ್ರಿಕೆ ಮಕ್ಕಳಿಗೆ ತಲುಪಿ ಅವರದನ್ನು ಆಸ್ವಾದಿಸುವಂತಾಗಬೇಕು. ಅವರ ಕಲ್ಪನಾಶಕ್ತಿ, ವಿವೇಕ, ಜ್ಞಾನ, ಅನುಭವ ಇದರಿಂದ ವಿಸ್ತರಿಸಲು ಮತ್ತು ಅವರು ತಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಂಡು ಮಾನಸಿಕವಾಗಿ ಸಬಲರಾಗಲು ಅನುಕೂಲ ಆಗಬೇಕು.

ಮಕ್ಕಳಿಗೆ ಮಾಹಿತಿಯಾಧಾರಿತವಾಗಿ ಇತಿಹಾಸ, ವಿಜ್ಞಾನ, ಪ್ರಾದೇಶಿಕ ವಿಶೇಷತೆ, ಪ್ರಾಣಿ-ಪಕ್ಷಿ ವೈಶಿಷ್ಟ್ಯ, ರೋಚಕ ಸಂಗತಿಗಳು ಹೀಗೆ ನಾನಾ ಬಗೆಯಲ್ಲಿ ಮಾಹಿತಿಯನ್ನೂ ರಂಜನೀಯವಾಗಿ ಕೊಡುವ ಪ್ರಯತ್ನಗಳು ಮತ್ತಷ್ಟು ಹೆಚ್ಚಾಗಬೇಕಿದೆ. ಯಾವ ಮಕ್ಕಳ ಪತ್ರಿಕೆಯೂ ನಮ್ಮ ಸುದ್ದಿ ಮಾಧ್ಯಮಗಳು ದೊಡ್ಡವರಿಗಾಗಿ ನೀಡುವಂತದ್ದನ್ನು ಸೂಕ್ಷ್ಮವಾಗಿಯಾದರೂ ಮಕ್ಕಳಿಗೆ ನೀಡಲು ಪ್ರಯತ್ನಿಸಿಲ್ಲ. ಇವು ನಿಯತಕಾಲಿಕಗಳು ಎಂಬ ಒಂದು ಮಿತಿಯಿದ್ದರೂ ಪ್ರಚಲಿತ ಸುದ್ದಿಯನ್ನು ಮಕ್ಕಳ ಮಟ್ಟಕ್ಕೆ ಇಳಿದು ಅಗತ್ಯವಾದುದನ್ನು ನೀಡುವ ಪ್ರಯತ್ನ ಮಾಡಬಹುದು. ಹಾಗೇ ಇವತ್ತಿನ ಮಕ್ಕಳ ಜ್ವಲಂತ ಸಮಸ್ಯೆಗಳನ್ನು ಮುಖ್ಯವಾಹಿನಿಯಲ್ಲಿ ಚರ್ಚಿಸುವಂತಾ ಕೆಲಸಗಳೂ ಆಗುತ್ತಿಲ್ಲ ಎಂಬುದೂ ಒಂದು ಪ್ರಮುಖ ಆರೋಪವೇ.

ಮಕ್ಕಳೇ ಬರೆದ ಕಥೆ, ಕವಿತೆ, ಚಿತ್ರಕ್ಕೆ ಪತ್ರಿಕೆಗಳಲ್ಲಿ ಜಾಗವಿರುತ್ತದೆ. ಆದರೆ ವಿಶಿಷ್ಟ ಸಾಧನೆ ಮಾಡಿದ ಮಕ್ಕಳ ವ್ಯಕ್ತಿಚಿತ್ರ, ಮಕ್ಕಳ ಪರ ಸಂಘ ಸಂಸ್ಥೆಗಳ ಪರಿಚಯ, ಅಂಗವಿಕಲ ಶಾಲಾಸಂಸ್ಥೆಯ ಪರಿಚಯ, ಅಂತಹ ಮಕ್ಕಳ ವಿಶೇಷ ಸಂದರ್ಶನಗಳು ಕಾಣಸಿಗುವುದಿಲ್ಲ. ಇಂದಿನ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗೆ ತಜ್ಞರಿಂದ ಉತ್ತರ, ಮಕ್ಕಳ ಸ್ವಾರಸ್ಯದ ಅನುಭವಗಳಿಗೆ ಜಾಗ, ಒಂದು ವಿಷಯ ನೀಡಿ ಮಕ್ಕಳ ಅಭಿಪ್ರಾಯ ಆಹ್ವಾನಿಸುವುದು ಇಂಥವನ್ನು ಮಾಡಿದಾಗ ಮಕ್ಕಳಿಗೆ ತಾವೇ ತಮ್ಮದೊಂದು ಅನನ್ಯತೆಯನ್ನು, ಅಭಿಪ್ರಾಯವನ್ನು ರೂಪಿಸಿಕೊಳ್ಳಲು ತನ್ಮೂಲಕ ಪ್ರತ್ಯೇಕ ವ್ಯಕ್ತಿತ್ವ ಹೊಂದಲು ಸಾಧ್ಯವಾಗುತ್ತದೆ.

ಮಕ್ಕಳ ಪತ್ರಿಕೆಯ ಆಕಾರ, ಅದರ ದೃಶ್ಯ, ಪ್ರಸ್ತುತಿ, ಅದು ಒಳಗೊಳ್ಳಬಹುದಾದ ವಿಷಯ, ಸಾಮಗ್ರಿ ಎಲ್ಲ ವಿಶೇಷವೂ, champakaವಿಶಿಷ್ಟವೂ ಆಗಿದ್ದು ಪತ್ರಿಕಾರಂಗ ಇದಕ್ಕೆ ಪ್ರತ್ಯೇಕವಾಗಿಯೇ ತೊಡಗಿಕೊಳ್ಳಬೇಕಾಗುತ್ತದೆ. ನಮ್ಮಲ್ಲಿ ಹಿರಿಯರ ದಿನಪತ್ರಿಕೆಗೆ ನೀಡುವಷ್ಟು ಮಹತ್ವವನ್ನು ಇಂಥಹ ಮಕ್ಕಳ ನಿಯತಕಾಲಿಕಗಳಿಗೆ ನೀಡುವುದಿಲ್ಲ. ಪತ್ರಿಕೋದ್ಯಮದ ಪಠ್ಯದಲ್ಲೂ ಮಕ್ಕಳ ಪತ್ರಿಕೆಯ ಕುರಿತು ವಿಶೇಷ ಅಧ್ಯಾಯಗಳು ಕಾಣುವುದಿಲ್ಲ. ಇದೆಲ್ಲ ಆಗಬೇಕಾದ ಕೆಲಸ. ಮಕ್ಕಳ ಪತ್ರಿಕಾರಂಗದಲ್ಲಿ ತೊಡಗಿಕೊಳ್ಳುವವರು ಪ್ರತ್ಯೇಕವಾದ ವರ್ಗ. ಅವರಿಗೆ ಮಕ್ಕಳ ಮನಃಶಾಸ್ತ್ರ ಕಡ್ಡಾಯವಾಗಿ ಗೊತ್ತಿರಬೇಕು. ಮಕ್ಕಳ ಪತ್ರಿಕೆ ಅಥವಾ ಪತ್ರಿಕೆಯಲ್ಲಿ ಮಕ್ಕಳ ಪುಟಗಳನ್ನು ನೋಡಿಕೊಳ್ಳುವುದು ‘ಹೇಗೋ ಒಂದು’ ಎಂಬ ಕಾಟಾಚಾರದ ವಿಷಯವಾಗಬಾರದು. ಹಾಗೆ ಪತ್ರಕರ್ತರಿಗೆ ತರಬೇತಿ, ಮಾರ್ಗದರ್ಶನ ಸಿಗಬೇಕು. ಮಕ್ಕಳ ಪತ್ರಿಕೆಯ ಬಗೆಗೆ ಮುಖ್ಯವಾಗಿ ಮಕ್ಕಳನ್ನು ಸಂದರ್ಶಿಸಿ, ಸಮೀಕ್ಷಿಸಿ ಅವರಿಗೆ ಬೇಕಾದಂತೆಯೇ ಪತ್ರಿಕೆಯನ್ನು ರೂಪಿಸಬೇಕು. ಹಿರಿಯರು ಎಷ್ಟೇ ತಿಳಿವಳಿಕೆಯುಳ್ಳವರಾದರೂ ಮಕ್ಕಳು ಪ್ರತಿ ಕ್ಷಣ ಇವತ್ತಿನ ಸಂದರ್ಭಕ್ಕೆ ತಕ್ಕಂತೆ ಅಪ್ ಡೇಟ್ ಆಗುತ್ತಿರುತ್ತಾರೆ. ಅವರ ಹೊಸತನದ ಮುಂದೆ ಹಿರಿಯರು ಸದಾ ಔಟ್ ಡೇಟೆಡ್! ಹೀಗಾಗಿ ಮಕ್ಕಳ ಪತ್ರಿಕೆಯನ್ನು ರೂಪಿಸುವವರು ಹಿರಿಯರಾದರೂ ಅದು ಮಕ್ಕಳ ಮನಸ್ಸನ್ನು ಹೊಂದಿರಬೇಕು. ಅಂದರೆ ಮಕ್ಕಳಿಗೆ ಎಲ್ಲ ರೀತಿಯಲ್ಲೂ ಇಷ್ಟ ಆಗಬೇಕು. ಅವರಿಗೆ ಅದು ನೇರವಾಗಿ ಸಂಬಂಧಿಸಿದ್ದಾಗಬೇಕು.

ಮಕ್ಕಳನ್ನು ಹೇಗೆಲ್ಲಾ ಆಕರ್ಷಕವಾಗಿ ತಲುಪಬೇಕು? ಮಕ್ಕಳಿಗೆ ಇಂದು ಏನೆಲ್ಲಾ ಅಗತ್ಯವಿದೆ? ಮಕ್ಕಳಿಗೆ ವಿಭಿನ್ನವೂ, ವಿಶೇಷವೂ ಆದ ಹೊಸತೇನನ್ನು ಕೊಡಬಹುದು? ಅವಗಣನೆಗೊಳಗಾದ ಮಕ್ಕಳ ಸಮಸ್ಯೆಗಳು ಯಾವುವು? ಎಂದು ಪ್ರತಿಕ್ಷಣ ತುಡಿಯುವ, ಮಕ್ಕಳ ಲೋಕದ ಪ್ರತಿಯೊಂದನ್ನೂ ಸೂಕ್ಷ್ಮವಾಗಿ ಅವಲೋಕಿಸುವ, ಅನುಭವಿಸುವ, ಮಕ್ಕಳ ಮನಸ್ಸನ್ನು ಪರಕಾಯ ಪ್ರವೇಶ ಮಾಡಿ ಅರಿತುಕೊಳ್ಳಬಲ್ಲ ವಿಶಿಷ್ಟ ಮನೋಧರ್ಮದವರೇ ಮಕ್ಕಳ ಪತ್ರಿಕೆಗಳನ್ನು ಮಾಡಬೇಕು. ಹಾಗೇ ಒಟ್ಟು ಪತ್ರಿಕಾ ಕ್ಷೇತ್ರದಲ್ಲಿ ಮಕ್ಕಳ ಪತ್ರಿಕಾರಂಗ ತನ್ನ ಪ್ರತ್ಯೇಕತೆಯನ್ನು ಕಾಯ್ದುಕೊಳ್ಳುವ ಮೂಲಕ ವಿಭಿನ್ನವೂ, ಅನನ್ಯವೂ ಆದುದನ್ನು ಸಾಧಿಸಬೇಕಿದೆ. ಸಮಾಜ ಮಕ್ಕಳ ಜಗತ್ತಿನೆಡೆಗೆ ಒಂದಿಷ್ಟು ಗಮನ ಕೇಂದ್ರೀಕರಿಸಿದರೆ ಮಕ್ಕಳ ಪತ್ರಿಕಾ ಕ್ಷೇತ್ರದಲ್ಲಿ ಹೊಸಬೆಳಕು ಮೂಡಲು ಸಾಧ್ಯವಿದೆ.

[ಕರ್ನಾಟಕ ಬಾಲವಿಕಾಸ ಅಕಾಡೆಮಿ ಹಾಗೂ ಕರ್ನಾಟಕ ಮಾಧ್ಯಮ ಅಕಾಡೆಮಿವತಿಯಿಂದ ಧಾರವಾಡದಲ್ಲಿ ಅಕ್ಟೋಬರ್ 28 ಮತ್ತು 29, 2010 ರಂದು ಪತ್ರಕರ್ತರಿಗಾಗಿ ನಡೆದ ಮಕ್ಕಳು ಮತ್ತು ಮಾಧ್ಯಮಗಳು ಎಂಬ ರಾಜ್ಯ ಮಟ್ಟದ ಕಾರ್ಯಾಗಾರದಲ್ಲಿ ಪ್ರಸ್ತುತಪಡಿಸಿದ್ದು.]

ಕುವೆಂಪು ಹೆಸರಿನಲ್ಲಿ ದುಂದು ವೆಚ್ಚ ಬೇಕೆ?

– ಪ್ರದೀಪ್ ಮಾಲ್ಗುಡಿ

ಮೈಸೂರಿನ ರಂಗಾಯಣದ ಮಲೆಗಳಲ್ಲಿ ಮದುಮಗಳು

ಕುವೆಂಪುರವರ ಮಲೆಗಳಲ್ಲಿ ಮದುಮಗಳು ಕಾದಂಬರಿಯನ್ನು ಡಾ.ಕೆ.ವೈ.ನಾರಾಯಣ ಸ್ವಾಮಿಯವರು ನೀಡಿದ ರಂಗರೂಪವು ಸಿ.ಬಸವಲಿಂಗಯ್ಯನವರ ನಿರ್ದೇಶನದಲ್ಲಿ 2010ರಲ್ಲಿ ಮೈಸೂರಿನ ರಂಗಾಯಣದಲ್ಲಿ ಪ್ರಯೋಗಗೊಂಡಿತ್ತು. ಕುವೆಂಪು ಅವರ ಹೆಸರು ಹಾಗೂ ಕಾದಂಬರಿಯ ಕಾರಣಕ್ಕೆ ಹಾಗೂ ಕನ್ನಡದಲ್ಲಿ ನಡೆಯುತ್ತಿರುವ ಹೊಸ ಪ್ರಯೋಗದಿಂದಾಗಿ ಇದು ಹೆಸರಾಯಿತು. ಅಂತೆಯೇ ರಂಗಾಯಣದ ಕಲಾವಿದರಿಂದ ಆ ಪ್ರಯೋಗವು ಅದ್ಭುತವಾಗಿ ಮೂಡಿಬಂದಿತ್ತು. ನಿರ್ದೇಶಕರ ವಿನ್ಯಾಸ, ಅದ್ದೂರಿ ಸೆಟ್ ಇತ್ಯಾದಿಗಳೂ ಇಲ್ಲಿ ಜೊತೆಗೂಡಿದ್ದವು.

ಆಗಲೇ ಈ ಪ್ರಯೋಗದ ಖರ್ಚಿನ ಬಗೆಗೆ ಭಿನ್ನಾಭಿಪ್ರಾಯಗಳು ಎದುರಾಗಿದ್ದವು. ಆದರೆ ಆಗ ನಾಡಿನ ಚಿಂತಕರು, ರಂಗಕರ್ಮಿಗಳು ಹಾಗೂ ಸಾಹಿತ್ಯಾಸಕ್ತರು ಪ್ರಯೋಗದ ಪರವಾಗಿ ವಾದಿಸಿದ್ದರು. ಬೆಂಗಳೂರಿನಲ್ಲಿ ಸಂಸ ಪತ್ರಿಕೆಯ ಸಂಪಾದಕರಾದ ಸುರೇಶ್ ಅವರು ಆಯೋಜಿಸಿದ್ದ ಸಂವಾದದಲ್ಲಿ ಡಾ.ಕೆ.ಮರುಳಸಿದ್ದಪ್ಪ, ಪ್ರೊ.ಕಿ.ರಂ.ನಾಗರಾಜ, ಡಾ.ಕೆ.ವೈ.ನಾರಾಯಣಸ್ವಾಮಿ, ಜಿ.ಕೆ.ಗೋವಿಂದರಾವ್, ಬೋಳುವಾರು ಮಹಮದ್ ಕುಂಞ, ಗುಡಿಹಳ್ಳಿ ನಾಗರಾಜ ಕ.ವೆಂ.ರಾಜಗೋಪಾಲ್, ಡಾ.ಬಿ.ವಿ.ರಾಜಾರಾಂ, ಎನ್.ಮಂಗಳ ಮೊದಲಾದ ರಂಗಾಸಕ್ತರು ಈ ಪ್ರದರ್ಶನದ ಕುರಿತು ಸಂವಾದ ನಡೆಸಿದ್ದರು. ಆಗ ಪ್ರೊ.ಕಿ.ರಂ.ನಾಗರಾಜ ಕುವೆಂಪು ಅವರ ಕವಿತೆಗಳನ್ನು ಪ್ರಯೋಗದಲ್ಲಿ ಬಳಸಿಕೊಳ್ಳದಿರುವ ಹಾಗೂ ಅವರ ಜಾತಿಯನ್ನು ಕುರಿತ ಚರ್ಚೆಗಳನ್ನು ಭಿನ್ನವಾಗಿ ಮುಖಾಮುಖಿಯಾಗಿದ್ದರು. ಆದರೆ ಆಗ ಕಿ.ರಂ.ರವರು ವ್ಯಕ್ತಪಡಿಸಿದ ಅಭಿಪ್ರಾಯಗಳಿಗೆ ಬೆಂಗಳೂರಿನ ಪ್ರಯೋಗದಲ್ಲೂ ಯಾವುದೇ ಬೆಲೆ ಇಲ್ಲ ಎಂಬುದು ಪ್ರಯೋಗದ ನಂತರ ನನ್ನ ಅರಿವಿಗೆ ಬಂತು.

ಬೆಂಗಳೂರಿನ ಮಲೆಗಳಲ್ಲಿ ಮದುಮಗಳು

ಬೆಂಗಳೂರಿನಲ್ಲಿ ನಡೆದ ಮಲೆಗಳಲ್ಲಿ ಮದುಮಗಳು ರಂಗರೂಪದ ಪ್ರದರ್ಶನದ ಬಗೆಗೆ ಇತ್ತೀಚೆಗೆ ಮಾಧ್ಯಮಗಳಲ್ಲಿ ವಿವಿಧ ಗಣ್ಯರು ಹಾಗೂ ಸಹೃದಯರು ಅನೇಕ ಬಗೆಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಈ ಪ್ರಯೋಗದ ಬಗೆಗಿನ ಸಕಾರಾತ್ಮಾಕ ಅಂಶಗಳೆಲ್ಲವನ್ನು ಒಪ್ಪಿಕೊಂಡು ನನ್ನ ಕೆಲವು ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದೇನೆ. ಬೆಂಗಳೂರಿನ ಪ್ರದರ್ಶನವನ್ನು ಮೊಟ್ಟಮೊದಲ ಬಾರಿಗೆ ನೋಡಿದವರಿಗೆ ಹಾಗೂ ಮಲೆಗಳಲ್ಲಿ ಮದುಮಗಳು ಕಾದಂಬರಿಯನ್ನು malegalalli-1ಓದದವರಿಗೆ ಇದು ಅದ್ಭುತವಾದ ಪ್ರದರ್ಶನ ಎನ್ನಿಸಬಹುದೇನೋ? ಆದರೆ ಮೈಸೂರಿನ ಪ್ರಯೋಗವನ್ನು ನೋಡಿದವರಿಗೆ ಹಾಗೂ ಕಾದಂಬರಿಯನ್ನು ಓದಿದವರಿಗೆ ಇಲ್ಲಿನ ಪ್ರದರ್ಶನವು ನೀರಸವೆಸನಿಸುತ್ತದೆ. ಏಕೆಂದರೆ ನಿರಂತರವಾದ 9 ಗಂಟೆಗಳ ಪ್ರಯೋಗವೊಂದು ಯಶಸ್ವಿಯಾಗಬೇಕಾದರೆ ಅನುಭವೀ ನಟನಟಿಯರ ಸಕ್ರಿಯ ಪಾಲ್ಗೊಳ್ಳುವಿಕೆ ಅಗತ್ಯವಾಗುತ್ತದೆ. ಆಗ ಮಾತ್ರ ಇಂತಹ ಪ್ರಯೋಗಗಳ ಯಶಸ್ಸು ಸಾಧ್ಯವಾಗುತ್ತದೆ.

ಅಲ್ಲದೇ ಅನುಭವೀ ನಟರು ಸಿಕ್ಕರಷ್ಟೇ ಸಿ.ಬಸವಲಿಂಗಯ್ಯನವರ ಪ್ರದರ್ಶನವು ಯಶಸ್ಸಾಗುತ್ತದೆ. ಇಲ್ಲವಾದಲ್ಲಿ ಸಿ.ಬಸವಲಿಂಗಯ್ಯನವರು ಸಂಗೀತ, ರಂಗಪರಿಕರ, ವೇಷಭೂಷಣಗಳ ಮೇಲೆ ಹೆಚ್ಚು ಕೆಲಸ ಮಾಡುತ್ತಾರೆ. ಆ ಮೂಲಕ ಉಳಿದ ಕೊರತೆಗಳನ್ನು ನೀಗಿಸುವ ಪ್ರಯತ್ನವನ್ನು ಮಾಡುತ್ತಾರೆ. ಇಲ್ಲಿ ಅವರು ಯಶಸ್ಸನ್ನೂ ಸಾಧಿಸುತ್ತಾರೆ. ಈ ಮಾತುಗಳನ್ನು ತಾವರೆ ಕೆರೇಲಿ ತಾಳಿ ಕಟ್ಟೋಕೆ ಕೂಲೀನೇ ಹಾಗೂ ಕಾತಚಿ ಕಥಾರಂಗ ಪ್ರಯೋಗಗಳನ್ನು ನೆನಪಿಸಿಕೊಂಡು ಹೇಳುತ್ತಿದ್ದೇನೆ.

30.04.2013 ರಂದು ಬೆಂಗಳೂರಿನಲ್ಲಿ ಪ್ರಯೋಗವಾದ ಮಲೆಗಳಲ್ಲಿ ಮದುಮಗಳು ರಂಗರೂಪದ ಪ್ರದರ್ಶನ ತೀವ್ರವಾದ ನಿರಾಸೆಯನ್ನು ಮೂಡಿಸಿತು. ಪ್ರಸ್ತುತ ರಂಗಪ್ರಯೋಗದಲ್ಲಿ ಅನೇಕ ಅವಘಡಗಳು ಸಂಭವಿಸಿದವು. ಮೊಟ್ಟಮೊದಲು ನನಗೆ ಈ ಪ್ರಯೋಗದಲ್ಲಿ ಕುವೆಂಪುರವರ ಕಾದಂಬರಿಯ ಭಾಷೆಯೆ ಇಲ್ಲವೆನಿಸಿತು. ಪ್ರಯೋಗದಲ್ಲಿನ ನಟರ ಭಾಷಾ ಬಳಕೆ ಕಾದಂಬರಿಯ ಭಾಷೆಯ ಸಮೀಪವೂ ಸುಳಿಯಲಾಗಲಿಲ್ಲ. ಇಡೀ ಪ್ರಯೋಗದಲ್ಲಿ ಮಲೆನಾಡಿನ ಭಾಷೆಯ ಗೈರುಹಾಜರಿ ಎದ್ದು ಕಾಣುತ್ತಿತ್ತು. ಬೆಂಗಳೂರು, ಮೈಸೂರು, ಮಂಡ್ಯಗಳ ಸುತ್ತಮುತ್ತಲ ಭಾಷೆಯ ನಡುವೆ ಆಗೊಮ್ಮೆ, ಈಗೊಮ್ಮೆ ಮಲೆನಾಡಿನ ಭಾಷೆಯನ್ನು ಕೇಳಬಹುದಾಗಿತ್ತು. ಮಲೆನಾಡಿನ ಪರಿಸರದಲ್ಲಿ ಮಲೆನಾಡಿನ ಭಾಷೆಯನ್ನು ತರುವಲ್ಲಿ ಈ ಪ್ರಯೋಗ ಸೋತಿತು. ಅದು ರಂಗತಾಲೀಮಿನ ಕೊರತೆಯನ್ನು ಪ್ರಯೋಗದುದ್ದಕ್ಕೂ ಎತ್ತಿ ತೋರಿಸುತ್ತಿತ್ತು.

ಮೈಸೂರಿನಲ್ಲಿ ಅಭಿನಯಿಸಿದ ಪಾತ್ರಧಾರಿಗಳು ಹಾಗೂ ಬೀದಿ ರಂಗಭೂಮಿಯಲ್ಲಿ ಪಳಗಿದ ಕೆಲವು ನಟನಟಿಯರನ್ನು ಹೊರತು ಪಡಿಸಿದರೆ ಉಳಿದವರ ಅಭಿನಯ ಅತೃಪ್ತಿಕರವಾಗಿತ್ತು. ಸಂಭಾಷಣೆಯನ್ನು ಉರು ಹೊಡೆದು, ಅದನ್ನು ಪ್ರೇಕ್ಷಕರೆದುರು ಕಷ್ಟಪಟ್ಟು ಹೇಳಿದ ಮಾತ್ರಕ್ಕೆ ನಾಟಕವಾಗುವುದಿಲ್ಲ. ಹಾಗೆ ಉರು ಹೊಡೆದ ಸಂಭಾಷಣೆಗಳನ್ನು ಹೇಳಲು ಕೂಡ ನಟನಟಿಯರು ಸಜ್ಜಾಗಿರಬೇಕಾಗುತ್ತದೆ. ಇಲ್ಲಿನ ನಟನಟಿಯರಲ್ಲಿ ಬಹುತೇಕರು ಉರು ಹೊಡೆದ malegalalli-3ಸಂಭಾಷಣೆಯನ್ನು ಹೇಳಿಬಿಟ್ಟರೆ ಸಾಕಪ್ಪ ಎಂಬ ಭಾವನೆಯಲ್ಲೆ ನಟಿಸಿದರು. ಇನ್ನು ಕೆಲವರು ಸಂಭಾಷಣೆಯನ್ನು ಮರೆತು ಸುಮ್ಮನಾಗಿ, ಮುಂದಿನ ಸಂಭಾಷಣೆಯನ್ನು ಎದುರಿನ ಪಾತ್ರಧಾರಿಯೂ ಎತ್ತಿಕೊಳ್ಳದೆ ಆಭಾಸವಾಗುತ್ತಿತ್ತು. ಆದರೆ ಹೆಚ್ಚುಹೆಚ್ಚು ರಂಗತಾಲೀಮುಗಳು ನಡೆದಾಗ ಈ ಬಗೆಯ ಆಭಾಸಗಳು ಇಲ್ಲವಾಗುತ್ತವೆ. ನಿರಂತರವಾದ ರಂಗತಾಲೀಮಿನಿಂದ ಈ ಬಗೆಯ ತಪ್ಪುಗಳು ಪ್ರಯೋಗದಲ್ಲಿ ನುಸುಳದಂತೆ ನೋಡಿಕೊಳ್ಳಬಹುದು. ನುರಿತ ನಿರ್ದೇಶಕರಾದ ಸಿ.ಬಸವಲಿಂಗಯ್ಯನವರಿಂದಲೂ ಇದು ಸಾಧ್ಯವಾಗುತ್ತದೆ. ಆದರೆ ಈ ಪ್ರಯೋಗ ಮಾತ್ರ ಅದಕ್ಕೆ ವ್ಯತಿರಿಕ್ತವಾಗಿತ್ತು.

ಇನ್ನು ಸೂತ್ರಧಾರರಂತೂ ಇಡೀ ಪ್ರಯೋಗದಲ್ಲಿ ಎಲ್ಲೂ ತಮ್ಮ ಚಾಕಚಕ್ಯತೆಯನ್ನು ತೋರಿಸಲಿಲ್ಲ. ಇದುವರೆಗಿನ ಸೂತ್ರಧಾರರ ಪಾತ್ರಗಳನ್ನು ನೋಡಿರುವವರಿಗೆ ತಿಳಿದಿರುವಂತೆ, ಇವರು ಚುರುಕಾಗಿ ಇರಲಿಲ್ಲ. ಕಥನವು ವೇಗ ಪಡೆದುಕೊಳ್ಳಬೇಕಾದ ಸಂದರ್ಭದಲ್ಲೆಲ್ಲ ಇವರು ಪ್ರವೇಶಿಸಿ ಪ್ರಯೋಗದ ಟೆಂಪೋವನ್ನು ಹಾಳುಗೆಡವುತ್ತಿದ್ದರು. ದೇಯಿಯ ಸಾವಿನ ಸನ್ನಿವೇಶದಲ್ಲಿ ದೇಯಿಯ ಶವ! ವೇದಿಕೆಯಲ್ಲಿರದೇ, ದೃಶ್ಯ ಆರಂಭವಾಯಿತು. ನಂತರ ಲೈಟ್ಸ್‌ಗಳನ್ನು ಆಫ್ ಮಾಡಿ ದೇಯಿಯ ಶವವನ್ನು ಕರೆಸಲಾಯಿತು!

ಮುಸ್ಲಿಂ ಪಾತ್ರಧಾರಿಗಳಂತೂ ಇಲ್ಲಿನ ಪ್ರಯೋಗದಲ್ಲಿ ಮನುಷ್ಯರಂತೆ ಚಿತ್ರಿತವಾಗಿರಲೇ ಇಲ್ಲ. ಕ್ರೈಸ್ತ ಪಾದ್ರಿಗಳಂತೂ ಜೋಕರ್‌ಗಳಾಗಿ ಬದಲಾಗಿದ್ದರು. ಕಾದಂಬರಿಯಲ್ಲಿಲ್ಲದ ದೃಶ್ಯೀಕರಣ ಹಾಗೂ ಡಬಲ್ ಮೀನಿಂಗ್‌ಗಳಂತೂ ಪ್ರೇಕ್ಷಕರಿಂದ ಅಪಾರವಾದ ಚಪ್ಪಾಳೆಗಳನ್ನು ಗಿಟ್ಟಿಸಿಕೊಂಡವು. ಈ ರೀತಿಯ ಚಪ್ಪಾಳೆಗಳನ್ನು ಮೈಸೂರಿನಲ್ಲಿ ಕಾಣಲಾಗಿರಲಿಲ್ಲ. ಅಲ್ಲಿನ ನಟನಟಿಯರು ಯಾವ ಸಂದರ್ಭದಲ್ಲಿ ಏನನ್ನು, ಹೇಗೆ, ಎಷ್ಟನ್ನು ಅಭಿವ್ಯಕ್ತಿಸಬೇಕೆಂದು ಅರಿತವರಾಗಿದ್ದರು. ಅವರ ಪ್ರಬುದ್ಧತೆಯನ್ನು ನಿರ್ದೇಶಕರು ಇಲ್ಲಿನ ಪಾತ್ರಧಾರಿಗಳಿಗೆ ಕಲಿಸಬೇಕಿತ್ತು. ನಿದೇಶಕರ ಸಾಮರ್ಥ್ಯವಿರುವುದೇ ಹೊಸ ನಟರನ್ನು ಸೃಷ್ಟಿಸುವುದರಲ್ಲಿ. ಸಿ.ಬಸವಲಿಂಗಯ್ಯನವರ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟು ನಾಟಕ ನೋಡಲು ಹೋದ ನಮ್ಮಂತಹ ಅವರ ಅಭಿಮಾನಿಗಳಿಗೆ ಅದ್ಧೂರಿ ಸೆಟ್ ಹಾಗೂ ಸಿ.ಡಿ.ಸಂಗೀತ ನಿರಾಶೆ ಮೂಡಿಸಿತು. ರಂಗಸಂಗೀತದ ಸೊಗಡಿಲ್ಲದ ಗೇಯಗೀತೆಗಳು ಪ್ರಯೋಗಕ್ಕೆ ಪೂರಕವಾಗಿದ್ದರೂ ರಂಗಸಂಗೀತದ ಕೊರತೆ ಕಿವಿಗೆ ಕೇಳಿಸುತ್ತಿತ್ತು.

ಇನ್ನು ನಟನಟಿಯರ ಸಮಸ್ಯೆಯನ್ನು ಹೇಳುವಂತಿಲ್ಲ. ಪ್ರೇಕ್ಷಕರು ತಮ್ಮ ಸೀಟ್‌ಗಾಗಿ ಓಡುತ್ತಿದ್ದರೆ, ಪಾತ್ರಧಾರಿಗಳೂ ನಟಿಸಲು ಓಡುತ್ತಿದ್ದರು. ಕುವೆಂಪು ಅವರ ಇಲ್ಲಿ ಅವಸರವೂ ಸಾವಧಾನದ ಬೆನ್ನೇರಿದೆ ಎಂಬ ಮಾತು ನೆನಪಾಗುತ್ತಿತ್ತು.

ಬಸವಲಿಂಗಯ್ಯನವರ ನಾಟಕಗಳ ಆಯ್ಕೆಯೇ ಇದುವರೆಗೆ ಕನ್ನಡ ರಂಗಭೂಮಿಯಲ್ಲಿ ಒಂದು ಮಹತ್ತರ ಸಂಚಲನವನ್ನು ಉಂಟು ಮಾಡುತ್ತಿದ್ದವು. ಅವರ ಅಪ್ರತಿಮ ಕ್ರಿಯಾಶೀಲತೆಗೆ ಕುಸುಮಬಾಲೆ, ಕುಲಂ, ಅಗ್ನಿ ಮತ್ತು ಮಳೆ, ಮನುಷ್ಯ ಜಾತಿ ತಾನೊಂದೆವಲಂ ಮೊದಲಾದವುಗಳನ್ನು ಉದಾಹರಿಸಬಹುದು. ಇಂತಹ ಆಯ್ಕೆಯ ಹಿಂದಿನ ಸೂಕ್ಷ್ಮತೆಗಳು ರಂಗಭೂಮಿಯ ಜೀವಂತಿಕೆ ಹಾಗೂ ಚಲನೆಗೆ ಅವಶ್ಯಕವಾದುದು. ಕುಸುಮ ಬಾಲೆಯಿಂದ, ಮಲೆಗಳಲ್ಲಿ ಮದುಮಗಳುವರೆಗಿನ ಬಸವಲಿಂಗಯ್ಯನವರ ಆಯ್ಕೆಗಳೆ ರಂಗಕರ್ಮಿಯೋರ್ವನ ಪ್ರಗತಿಪರತೆಯನ್ನು ಸೂಚಿಸುವಂತೆ, ರಂಗದಲ್ಲಿ ಅವರ ತೊಡಗುವಿಕೆಯನ್ನೂ ಮಂಡಿಸುತ್ತದೆ. ಆದರೆ ಮೈಸೂರಿನ ಮಲೆಗಳಲ್ಲಿ ಮದುಮಗಳು ಬೆಂಗಳೂರಿನಲ್ಲಿ ನೀರಸವಾದಳು. ಅದಕ್ಕೆ ಅನೇಕ ಕಾರಣಗಳಿವೆ. ಮೈಸೂರಿನ ರಂಗಾಯಣ ಕಲಾವಿದರ ಕೊರತೆ ಇಲ್ಲಿನ ಪ್ರಯೋಗದಲ್ಲಿ ಎದ್ದು ಕಾಣುತ್ತಿತ್ತು. ಹಾಗೆಯೇ ಕಾದಂಬರಿಯಲ್ಲಿ ಇಲ್ಲದ ಡಬ್ಬಲ್ ಮೀನಿಂಗ್ ಅನ್ನು ಪ್ರೇಕ್ಷಕರು ಕಲ್ಪಿಸಿಕೊಳ್ಳುವಂತೆ ಇಲ್ಲಿನ ನಟರ ಅಭಿವ್ಯಕ್ತಿ ಇತ್ತು. ಅನೇಕ ಕಡೆಗಳಲ್ಲಿ ಇದು ಕುವೆಂಪು ಅವರ ಮಲೆಗಳಲ್ಲಿ ಮದುಮಗಳುವಿನ ವಿಕೃತ ರೂಪವೆನಿಸುತ್ತಿತ್ತು. ನಾಟಕದ ಅಪಾರ್ಥಗಳು ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡವು. ಆದರೆ ಈ ಬಗೆಯ ಡಬಲ್ ಮೀನಿಂಗ್‌ಗಳಿಂದ ಚಪ್ಪಾಳೆ ಗಿಟ್ಟಿಸಿದ ಮಾತ್ರಕ್ಕೆ ಈ ಪ್ರಯೋಗವು ಯಶಸ್ವಿಯಾದಂತೆಯೇ? ಎಂಬ ಪ್ರಶ್ನೆಯನ್ನು ನನಗೆ ಈ ಪ್ರಯೋಗವು ಮೂಡಿಸಿತು.

ಕುವೆಂಪು ವಿಚಾರಧಾರೆಗೆ ಅಪಚಾರವಾಗಿಲ್ಲವೇ?

ಕುವೆಂಪು ಅವರು ಅಂದಿನ ಕಾಲದಲ್ಲೇ ಮದುವೆಯ ಸಂದರ್ಭದಲ್ಲಿ ಉಂಟಾಗುತ್ತಿರುವ ದುಂದು ವೆಚ್ಚ ಹಾಗೂ ಪುರೋಹಿತಶಾಹಿ ಶೋಷಣೆಗಳನ್ನು ವಿರೋಧಿಸಿ ಸರಳ ವಿವಾಹಗಳನ್ನು ಪ್ರೋತ್ಸಾಹಿಸಲು ಮಂತ್ರ ಮಾಂಗಲ್ಯವನ್ನು ಜಾರಿಗೆ ತರಬೇಕೆಂದು ಮನವಿ ಮಾಡಿಕೊಂಡರು. ಆದರೆ ಅವರ ಕಾದಂಬರಿಯ ರಂಗರೂಪಕ್ಕೆ ಬೆಂಗಳೂರಿನಲ್ಲಿ 2013ರ ಏಪ್ರಿಲ್ 18 ರಿಂದ ಜೂನ್ 3 ರವರೆಗೆ ನಡೆದ ಪ್ರಯೋಗಕ್ಕಾಗಿ 70 ಲಕ್ಷ ರೂಗಳನ್ನು ಖರ್ಚು ಮಾಡುತ್ತಿರುವುದು ಕುವೆಂಪು ಅವರ ವಿಚಾರಧಾರೆಗಳಿಗೆ ಸಂಪೂರ್ಣ ವ್ಯತಿರಿಕ್ತವಾಗಿಲ್ಲವೇ? ಇನ್ನಾದರೂ ಪಜ್ಞಾವಂತಿಕೆಯಿಂದ ನಾವೆಲ್ಲರೂ ವರ್ತಿಸಬೇಕಿದೆಯಲ್ಲವೇ?

ಈ ಪ್ರಯೋಗ ಬೆಂಗಳೂರಿನಲ್ಲಿ ಆರಂಭವಾದಾಗ ಬೆಂಗಳೂರೂ ಸೇರಿದಂತೆ ರಾಜ್ಯದ ವಿವಿಧೆಡೆ ನೀರಿಗಾಗಿ ಹಾಹಾಕಾರವೆದ್ದಿತ್ತು. ಇಂತಹ ಸಂದರ್ಭದಲ್ಲಿ ನಾಳೆಯ ನೀರಿನ ಸಮಸ್ಯೆಯನ್ನು ಬಿಟ್ಟು, ಕುವೆಂಪುರವರ ಹೆಸರಿನಲ್ಲಿ ಬೊಕ್ಕಸದ 70 ಲಕ್ಷಗಳನ್ನು ಈಗಾಗಲೇ ಆಗಿರುವ ಪ್ರಯೋಗಕ್ಕಾಗಿ ಸುರಿದಿರುವುದು ಸರಿಯೇ? ಹಾಗೊಂದು ವೇಳೆ ಈ ನಾಟಕವನ್ನು ಮಾಡಿಯೆ ತೀರಬೇಕೆಂದಾದರೆ ಮೈಸೂರಿನಲ್ಲಿ ಈಗಾಗಲೇ 40 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಮಾಡಿದ ಸೆಟ್‌ಗಳನ್ನು ಹಾಗೆಯೇ ಉಳಿಸಿಕೊಂಡು ಅಲ್ಲಿಯೇ ಸಾಂದರ್ಭಿಕವಾಗಿ ಈ ಪ್ರಯೋಗವನ್ನು ಮಾಡಬಹುದಾಗಿತ್ತಲ್ಲವೇ?

ಅರ್ಥವಾಗದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ದ್ವಂದ್ವ ನಿಲುವು

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಅನುದಾನ ನೀಡುವ ರಂಗಪ್ರಯೋಗಗಳಿಗೆ ಪ್ರವೇಶ ಶುಲ್ಕವನ್ನು ಇಡುವಂತಿಲ್ಲ ಎಂಬ malegalalli-2ನಿಯಮವನ್ನು ಎಲ್ಲ ರಂಗತಂಡಗಳಿಗೆ ವಿಧಿಸಲಾಗಿದೆ. ಆದರೆ ಈ ನಿಯಮವನ್ನು ಈ ಪ್ರಯೋಗದಲ್ಲಿ ಮೀರಲಾಗಿದೆ. ಅಲ್ಲದೆ ಪ್ರವೇಶಕ್ಕೆ ನೂರು ರೂಪಾಯಿ ನಿಗದಿ ಮಾಡಿ, ಮಲೆಗಳಲ್ಲಿ ಮದುಮಗಳು ಪ್ರಯೋಗದ ಹಾಡುಗಳ ಸಿ.ಡಿ.ಯನ್ನು ನೀಡುವುದಾಗಿ ಘೋಷಿಸಲಾಗಿತ್ತು. ಆದರೆ ಅನೇಕರಿಗೆ ಈ ಸಿ.ಡಿ.ಯನ್ನೂ ಕೂಡ ನೀಡಿಲ್ಲ. ಕೇಳಿದರೆ ಆಗ ಬಾ, ಈಗ ಬಾ, ನಾಳೆ ಬಾ ಅಥವಾ ಕಲಾಕ್ಷೇತ್ರಕ್ಕೆ ಹೋಗಿ ಎಂಬ ಉತ್ತರವನ್ನು ನೀಡಲಾಗಿದೆ.

ಯುವಕರು ಹಾಗೂ ಹೊಸ ತಂಡಗಳು ಸಂಸ್ಕೃತಿ ಇಲಾಖೆಯ ಮೆಟ್ಟಿಲು ಹಾಗೂ ಕಲ್ಲುಹಾಸುಗಳನ್ನು ಸವೆಸಿದರೂ ದೊರೆಯದ ೨೦ ಸಾವಿರ ರೂಪಾಯಿಗಳ ಅನುದಾನ ಕೋಟಿ ಹಾಗೂ ಲಕ್ಷಗಳ ಲೆಕ್ಕದಲ್ಲಿ ಮತ್ತೆ ಮತ್ತೆ ಸಿ.ಬಸವಲಿಂಗಯ್ಯನವರಿಗೇ ಸಿಗುತ್ತಿರುವುದೇಕೆ? ಇರುವ ಎಲ್ಲ ಅವಕಾಶಗಳನ್ನೂ ಒಬ್ಬರಿಗೆ ನೀಡಿದರೆ ಸಾಮಾಜಿಕ ನ್ಯಾಯದ ತಕ್ಕಡಿ ವ್ಯತಿರಿಕ್ತವಾಗುವುದಿಲ್ಲವೇ? ಇದೇ 70 ಲಕ್ಷ ರೂಪಾಯಿಗಳನ್ನು ತಲಾ 20 ಸಾವಿರದಂತೆ ಹೊಸ ತಂಡ ಹಾಗೂ ನಿರ್ದೇಶಕರಿಗೆ ನೀಡಿದ್ದರೆ 350 ನಾಟಕಗಳು ಹಾಗೂ 350 ತಂಡಗಳಿಗೆ ಅವಕಾಶ ನೀಡಬಹುದಾಗಿತ್ತಲ್ಲವೇ? ಆ ಮೂಲಕ ಕರ್ನಾಟಕದಲ್ಲಿ ಹೊಸ ರಂಗಕ್ರಾಂತಿಯನ್ನೇ ಮಾಡಬಹುದಾಗಿತ್ತಲ್ಲವೇ? ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಈ ಇಬ್ಬಂದಿತನವನ್ನು ಪ್ರಶ್ನಿಸುವವರಾರು ಇಲ್ಲವೇ?

ಅಕಾಡೆಮಿಗಳು, ಪ್ರಾಧಿಕಾರಗಳ ನೇಮಕಾತಿ ಸಮಯದಲ್ಲಿ ಹೊಸಬರಿಗೆ ಅವಕಾಶ ಸಿಗಲಿ

– ಪ್ರದೀಪ್ ಮಾಲ್ಗುಡಿ

ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಇತರೆ ಅಕಾಡೆಮಿ, ಪ್ರಾಧಿಕಾರ, ನಿಗಮ ಮಂಡಳಿಗಳು, ರಂಗಾಯಣದ ಕೇಂದ್ರಗಳಿಗೆ ಸರ್ಕಾರವು ಅಧ್ಯಕ್ಷರು, ನಿರ್ದೇಶಕರನ್ನು ಆದಷ್ಟು ಶೀಘ್ರವಾಗಿ ನೇಮಿಸಬೇಕಿದೆ. ಅದರಲ್ಲೂ ಸಾಂಸ್ಕೃತಿಕ ಮಹತ್ವವುಳ್ಳ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ರಂಗಾಯಣದಂತಹ ಸಂಸ್ಥೆಗಳು ದೀರ್ಘಕಾಲ ಖಾಲಿ ಉಳಿಯಬಾರದು. ಅದರಿಂದ ಸಾಂಸ್ಕೃತಿಕ ಕ್ಷೇತ್ರ ಬಡವಾಗುತ್ತದೆ. ಇದು ಕನ್ನಡ ಸಂಸ್ಕೃತಿಗೆ ಭವಿಷ್ಯದಲ್ಲಿ ಹಾನಿಯುಂಟುಮಾಡಬಲ್ಲುದು. ಆದರೆ ಈ ನೇಮಕದ ವಿಷಯದಲ್ಲಿ ಇದುವರೆಗೆ ಅನೇಕ ತಪ್ಪುಗಳು ಘಟಿಸಿವೆ.

ಸಾಂಸ್ಕೃತಿಕ ವಲಯದ ಬಹುತೇಕ ವಿದ್ವಾಂಸರು, ರಂಗಕರ್ಮಿಗಳು, ರಂಗಾಸಕ್ತರು ಈಗಾಗಲೇ ಒಂದು ಹುದ್ದೆಯನ್ನು ಪಡೆದಿರುವ ವ್ಯಕ್ತಿ ಮತ್ತೆ ಮತ್ತೆ ಅದೇ ಹುದ್ದೆಯಲ್ಲಿ ಮುಂದುವರೆಯುವುದು ಹಾಗೂ ಈಗಿನ ಅಕಾಡೆಮಿಗಳು, ಪ್ರಾಧಿಕಾರಗಳು ಮೊದಲಾದವುಗಳಿಂದ ಒಂದರಿಂದ ಮತ್ತೊಂದಕ್ಕೆ ವರ್ಗಾವಣೆ ಮಾಡುವುದನ್ನು ಅಂತರಂಗ-ಬಹಿರಂಗದಲ್ಲಿ ಖಂಡಿಸಿದ್ದಾರೆ. ಆದರೆ, ಈ ಯಾವ ಖಂಡನೆಗಳೂ ಅಧಿಕಾರದ ಆಕಾಂಕ್ಷಿಗಳ ಮಂಡನೆಗಳ ಮುಂದೆ ಪರಿಣಾಮಕಾರಿಯಾಗುತ್ತಿಲ್ಲ.

ಇರುವ ಎಲ್ಲ ಸಾಂಸ್ಕೃತಿಕ ಹುದ್ದೆಗಳನ್ನು ಅಲಂಕರಿಸುವ ಅನಿವಾರ್ಯತೆ ಸಾಂಸ್ಕೃತಿಕ ಕ್ಷೇತ್ರದಲ್ಲಿ ಹಾಗೇನಾದರೂ ಇದೆ ಎಂದಾದರೆ, ಆ ವ್ಯಕ್ತಿಗಳು ಎರಡನೆ ತಲೆಮಾರಿನ ವ್ಯಕ್ತಿಗಳನ್ನು ಬೆಳೆಸಿಲ್ಲವೆಂದರ್ಥ. ಯುವ ಜನಾಂಗದ ಮೇಲೆ ತಮ್ಮ ನಡೆ-ನುಡಿಗಳಿಂದ ಪ್ರೇರಣೆ ಬೀರಲಾಗದಂಥ-ಭಿನ್ನ ಕ್ಷೇತ್ರಗಳಲ್ಲಿ ಆಳವಾಗಿ ತೊಡಗಿಸಿಕೊಳ್ಳುವ ದಾರಿಗಳನ್ನು ನಿರ್ಮಿಸಿಕೊಳ್ಳಲು ಅವಕಾಶ ಮಾಡಿಕೊಡದವರು ಯಾವ ಹುದ್ದೆಯಲ್ಲಿದ್ದರೂ-ನಿರಂತರ ಹುದ್ದೆಗಳನ್ನು ಪಡೆಯುತ್ತಿದ್ದರೂ ಅದು ಅವರವರ ವೈಯಕ್ತಿಕ ಸಾಧನೆಯಾಗುತ್ತದೆಯೇ ಹೊರತು ಸಾಂಘಿಕ, ಸಾಮಾಜಿಕ, ಸಾಂಸ್ಕೃತಿಕ ಬೆಳವಣಿಗೆಯಾಗಲಾರದು.

ಅಕಾಡೆಮಿ, ಪ್ರಾಧಿಕಾರ ಹಾಗೂ ಸರ್ಕಾರದ ಇತರೆ ಸಂಸ್ಥೆಗಳ ಅಧ್ಯಕ್ಷ, ನಿರ್ದೇಶಕ ಹುದ್ದೆಗಳನ್ನು ಒಂದು ಬಾರಿ ನಿರ್ವಹಿಸಿರುವವರನ್ನೇ ವರ್ಗಾಯಿಸುವ/ಪುನರ್ನೇಮಿಸುವ ಕ್ರಿಯೆಯು ಈಗಾಗಲೇ ಅಧಿಕಾರದಲ್ಲಿರುವವರನ್ನು ಬಿಟ್ಟು-ಅರ್ಹರಾದ ಒಬ್ಬ ವ್ಯಕ್ತಿಯೂ ಕರ್ನಾಟಕದಲ್ಲಿಲ್ಲ ಎಂದು ಹೇಳಿದಂತಾಗುತ್ತದೆ. ಈ ಬಗೆಯ ಅಪಕಲ್ಪನೆಗಳನ್ನು ಸಾಂಸ್ಕೃತಿಕ ವಾತಾವರಣದ ಹಿನ್ನೆಲೆಯುಳ್ಳವರು ಹುಟ್ಟು ಹಾಕಬಾರದು. ಯಯಾತಿ’ ನಾಟಕವನ್ನು ಓದಿ, ನೋಡಿ, ಅಭಿನಯಿಸಿ, ನಿರ್ದೇಶಿಸಿ, ಬೋಧಿಸಿ, ವಿಮರ್ಶಿಸಿದವರು ಆ ಯಯಾತಿ’ಯಂತಾಗಬಾರದಲ್ಲವೆ? ಸಾಂಸ್ಕೃತಿಕ ಕ್ಷೇತ್ರದಲ್ಲಿರುವವರು ಯಯಾತಿಯ ನೆನಪೇ ಇಲ್ಲದಂತೆ ವರ್ತಿಸುತ್ತಿರುವುದೇಕೆ? ಯುವ ಜನಾಂಗ ಈ ಎಲ್ಲವನ್ನು ಎಚ್ಚರದಿಂದ ಗಮನಿಸುತ್ತಿದೆ. ನೀವುಗಳು ಕೇಳಿದ ಪ್ರಶ್ನೆಗಳನ್ನೇ ಮತ್ತೆ ಯುವ ಜನಾಂಗವು ಇನ್ನೆಷ್ಟು ಕಾಲ ಮುಂದುವರಿಸಬೇಕು?

ಸರ್ಕಾರವಾದರೂ ಈ ಸಂದರ್ಭದಲ್ಲಿ ಕಠಿಣವಾದರೂ ನಿಷ್ಠುರವಾದ, ಸೂಕ್ತವಾದ ನಿರ್ಧಾರವನ್ನು ಕೈಗೊಂಡು ಇನ್ನುಮುಂದಾದರೂ ಮೇಲ್ಪಂಕ್ತಿಯನ್ನು ಹುಟ್ಟುಹಾಕಬೇಕಾಗಿದೆ.

ಮುಂದಿನ ರಂಗಾಯಣದ ನಿರ್ದೇಶಕರು ಯಾರು?

ಕಳೆದ ನಾಲ್ಕು ಬಾರಿಯಿಂದ ರಂಗಾಯಣದ ನಿರ್ದೇಶಕರ ಸ್ಥಾನಕ್ಕೆ ಜನಾರ್ಧನ್ ಹೆಸರು ಮೊದಲ ಆದ್ಯತೆಯಲ್ಲಿರುತ್ತದೆ. ಆದರೆ ಮತ್ತಾರದ್ದೋ ನೇಮಕ ಆಗುತ್ತದೆ. ಅವರು ನಿರ್ದೇಶಕರಾಗದಿರುವುದಕ್ಕೆ ಕಾರಣಗಳೇನಿರಬಹುದು? ಕೇಳಿದರೆ ಆಯ್ಕೆಯ ಪ್ರಕ್ರಿಯೆಯಲ್ಲಿದ್ದವರೆಲ್ಲ ಇಬ್ಬಂದಿತನ ಮಾಡಿದರೆನಿಸುತ್ತದೆ. ಅವರೆ ಆಯ್ಕೆ ಆಗುತ್ತಾರೆಂದು ಹೇಳುತ್ತಲೆ ಆಗದಂತೆ ನೋಡಿಕೊಂಡಿದ್ದಾರೆ. ಪಿಳ್ಳೆ ನೆವಗಳನ್ನು ಹೇಳುತ್ತ ಬಂದಿದ್ದಾರೆ. ಬಿ.ವಿ.ಕಾರಂತರ ಶಿಷ್ಯರಲ್ಲೊಬ್ಬರಾದ ಜನ್ನಿ ದೇಶದ ಪ್ರಸಿದ್ಧ ರಂಗಕರ್ಮಿಗಳಲ್ಲೊಬ್ಬರು. ಒಬ್ಬ ಗಾಯಕನಾಗಿ ದಲಿತ-ಬಂಡಾಯ ಕಾವ್ಯ ಹಾಗೂ ತತ್ವಪದ ಪರಂಪರೆಗೆ ಹೊಸಜೀವ ನೀಡಿದವರು. ಸಿ.ಅಶ್ವಥ್‌ರಂತ ಸಂಗೀತ ನಿರ್ದೇಶಕರು ಜನ್ನಿಯ ಸಹಚರ್ಯದಿಂದ ತಮ್ಮ ಸಂಗೀತದಲ್ಲಿ ಹೊಸ ಸಾಧ್ಯತೆಗಳನ್ನು ಕಂಡವರು. ರಂಗಸಂಗೀತಕ್ಕೆ ಹೊಸತನವನ್ನು ತಂದವರಲ್ಲಿ ಜನ್ನಿ ಪ್ರಮುಖರು. ಕುಸುಮಬಾಲೆ ಕಾದಂಬರಿಯನ್ನು ಮೊದಲು ರಂಗಕ್ಕೆ ಅಳವಡಿಸಿದವರು. ದಲಿತ ಸಂಘರ್ಷ ಸಮಿತಿಗೆ ಮುಖವಾಣಿಯಂತ ಗಾಯಕರು. ಕನ್ನಡದ ಅಲಕ್ಷಿತ ಕಾವ್ಯಕ್ಕೆ ಸಂಗೀತ ಸಂಯೋಜಿಸಿದವರು. ಪ್ರಸಿದ್ಧ ರಂಗನಿರ್ದೇಶಕರು. ಬಸವಲಿಂಗಯ್ಯನವರ ನಂತರ ಮತ್ತೊಂದು ದಲಿತ ಪ್ರತಿಭೆ ರಂಗಾಯಣಕ್ಕೆ ಬೇಕಿಲ್ಲವೇ?

ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಕಲಿತ ಜನ್ನಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರಂಗಭೂಮಿ ಮತ್ತು ರಂಗಸಂಗೀತದಲ್ಲಿ ಪ್ರಸಿದ್ಧರಾದವರು. ಇಂಥವರಿಗೆ ಮೈಸೂರಿನಲ್ಲೆ ಇರುವ ರಂಗಾಯಣದ ನಿರ್ದೇಶಕರಾಗುವ ಅರ್ಹತೆಯಿಲ್ಲವೇ? ದಲಿತ, ಬುಡಕಟ್ಟು, ಅಲೆಮಾರಿ ಹಾಗೂ ಬೀದಿರಂಗಭೂಮಿಯಲ್ಲಿ ಪರಿಣಿತರಾದ ಜನ್ನಿ ಅಭಿಜಾತ ರಂಗಭೂಮಿಯಲ್ಲೂ ಪಳಗಿದವರು. ಅವರ ನಾಲ್ಕು ದಶಕಗಳ ರಂಗಾನುಭವ ರಂಗಾಯಣಕ್ಕೆ ಹೊಸ ಸತ್ವವನ್ನು ನೀಡಬಲ್ಲದು. ಪ್ರತಿಭಾವಂತನೊಬ್ಬನನ್ನು ಮತ್ತೆ ಮತ್ತೆ ರಂಗಾಯಣದಿಂದ ದೂರವಿಡುತ್ತಿರುವುದು ಜಾತಿಯ ಕಾರಣದಿಂದಲೋ ಅಥವಾ ಹೊಸ ವಿಚಾರಗಳು ರಂಗಾಯಣದಲ್ಲಿ ಸೃಜನಗೊಳ್ಳದಿರುವ ರಾಜಕಾರಣದಿಂದಲೋ ತಿಳಿಯುತ್ತಿಲ್ಲ.

ರಂಗಾಯಣದ ವಿಕೇಂದ್ರೀಕರಣ ಹಾಗೂ ವರ್ಗಾವಣೆ:

ರಂಗಾಯಣದ ವಿಕೇಂದ್ರೀಕರಣದ ಸಂದರ್ಭದಲ್ಲಿ ಮೈಸೂರಿನ ರಂಗಾಯಣದ ಕಲಾವಿದರ ವ್ಯಾಪಕವಾದ ಅನುಭವವನ್ನು ಶಿವಮೊಗ್ಗ ಹಾಗೂ ಧಾರವಾಡ ಶಾಖೆಗಳಲ್ಲಿ ಬಳಸಿಕೊಳ್ಳಬೇಕಾಗಿದೆ. ಬಿ.ವಿ.ಕಾರಂತ, ಸಿ.ಬಸವಲಿಂಗಯ್ಯ, ಪ್ರಸನ್ನ, ಚಿದಂಬರರಾವ್ ಜಂಬೆ ಮೊದಲಾದ ನಿರ್ದೇಶಕರುಗಳ ಅಡಿಯಲ್ಲಿ ಕಾರ್ಯ ನಿರ್ವಹಿಸಿರುವ, ಅಭಿನಯಿಸಿರುವ ಈ ನಟ ನಟಿಯರು ಭಾರತೀಯ, ಪಾಶ್ಚಿಮಾತ್ಯ ರಂಗಕರ್ಮಿಗಳು ಮತ್ತು ರಂಗಸಿದ್ಧಾಂತಗಳು ಹಾಗೂ ಅವುಗಳ ಪ್ರಾಯೋಗಿಕ ಸಾಧ್ಯತೆಗಳು-ಸಮಸ್ಯೆಗಳನ್ನು ಅರಿತವರು. ಹಾಗೆಯೇ, ಅನೇಕ ರಂಗಶಿಬಿರಗಳಲ್ಲಿ, ಧ್ವನಿ-ಬೆಳಕು ಪ್ರದರ್ಶನಗಳಲ್ಲಿ, ರಂಗಕ್ಕೆ ಸಂಬಂಧಿಸಿದ ಕಾರ್ಯಾಗಾರಗಳಲ್ಲಿ ಭಾಗವಹಿಸುವ ಮೂಲಕ ಈ ನಟನಟಿಯರು ಕರ್ನಾಟಕದ ರಂಗಭೂಮಿಯ ಬೆಳವಣಿಗೆಯ ದೃಷ್ಟಿಯಿಂದ ಅಸಂಖ್ಯ ಸಾಧ್ಯತೆಗಳನ್ನು ಸೃಷ್ಟಿಸಬಲ್ಲರು.

ಆದರೆ ಅವರನ್ನು ಹೊಸ ರಂಗಾಯಣದ ಘಟಕಗಳಲ್ಲಿ ದ್ವಿತೀಯ ದರ್ಜೆಯವರಂತೆ ಪರಿಗಣಿಸಬಾರದು. ರಂಗಾಯಣದ ನಿರ್ದೇಶಕರ ಆಯ್ಕೆಯಲ್ಲಿ ಈ ಹಿರಿಯ ಕಲಾವಿದರಿಗೆ ಅವಮಾನ ಮಾಡುವಂಥ ಕೆಲಸಗಳಾಗಬಾರದು. ಅವರ ಅನುಭವವನ್ನು ಈ ಶಾಖೆಗಳು ಬಳಸಿಕೊಳ್ಳುವಂಥ ವಾತಾವರಣ ನಿರ್ಮಾಣವಾಗಬೇಕು. Kalamandira_Mysoreಈಗಿರುವ ಈ ಕಲಾವಿದರು ಏಳೆಂಟು ವರ್ಷಗಳಲ್ಲಿ ನಿವೃತ್ತರಾಗಲಿದ್ದಾರೆ. ಇವರ ನಂತರ ರಂಗಾಯಣ ಹೊಸ ಕಲಾವಿದರನ್ನು ನೇಮಿಸಿಕೊಂಡು, ಅವರಿಗೆ ನಂತರ ತರಬೇತಿ ನೀಡುವುದು, ಇತ್ಯಾದಿ ಪ್ರಯೋಗಗಳಿಗಿಂಥ ಇವರ ಗರಡಿಯಲ್ಲಿ ಯುವ ಕಲಾವಿದರನ್ನು ನೇಮಿಸಿಕೊಂಡು, ಅವರನ್ನು ರಂಗಾಯಣಗಳನ್ನು ಕಟ್ಟುವ ನಿಟ್ಟಿನಲ್ಲಿ ಕ್ರಿಯಾಶೀಲಗೊಳಿಸಬೇಕಾದ ಅಗತ್ಯವಿದೆ.

ರಂಗಾಯಣದ ಕ್ರಿಯಾಶೀಲತೆಯನ್ನು ಹೆಚ್ಚಿಸುವಲ್ಲಿ ನಿಲಯದ ಕಲಾವಿದರ ಪಾತ್ರ ದೊಡ್ಡದು. ಕಾಲಕಾಲಕ್ಕೆ ವಿವಿಧ ವಯೋಮಾನದ, ಭಿನ್ನ ಅನುಸಂಧಾನದ ನಿರ್ದೇಶಕರುಗಳೊಡನೆ ಕಲಾವಿದರು ತಮ್ಮ ಸಾಮರ್ಥ್ಯವನ್ನು ಸಾಬೀತುಗೊಳಿಸಿದ್ದಾರೆ. ಬಂದು-ಹೋಗುವ ನಿರ್ದೇಶಕರುಗಳ ಜೊತೆ ಅಲ್ಲಿಯೇ ಖಾಯಂ ಆಗಿರುವ ಕಲಾವಿದರು ತಗಾದೆ ತೆಗೆದದ್ದೂ ಉಂಟು. ಕಲಾವಿದರ ಅನುಭವ ರಂಗಾಯಣದ ಬೆಳವಣಿಗೆಗೆ ಅವಶ್ಯಕ. ಅದರಲ್ಲೂ ಈಗ ಹೊಸದಾಗಿ ಆರಂಭವಾಗುತ್ತಿರುವ ಶಾಖೆಗಳಿಗೆ ಈ ಅನುಭವೀ ಕಲಾವಿದರು ಹಾಗೂ ಯುವ ಕಲಾವಿದರನ್ನು ಬೆಳೆಸುವ ಕೆಲಸ ಅಗತ್ಯವಾಗಿದೆ. ಏಕೆಂದರೆ, ರಂಗಾಯಣದ ’ಗೋರಾ’ ರಂಗ ಪ್ರಯೋಗದಲ್ಲಿ 16,17,18 ವಯೋಮಾನದ ಪಾತ್ರಗಳನ್ನು 35-45 ರ ಆಸುಪಾಸಿನ ಪ್ರಾಯದ ಪಾತ್ರಧಾರಿಗಳು ಅಭಿನಯಿಸುತ್ತಿದ್ದರು. ಇದು ಪ್ರೇಕ್ಷಕರಿಗಿರಲಿ, ಕಲಾವಿದರಿಗೇ ಮುಜುಗರ ತರುತ್ತಿತ್ತು.

ಸ್ವತಃ ರಂಗಭೂಮಿಯ ನಟಿ ಉಮಾಶ್ರೀ ತಮ್ಮ ರಂಗ ಗುರುಗಳಾದ ಸಿ.ಜಿ.ಕೆ.ಯ ನೆನಪಿಗಾದರೂ ತಮಗಿಂತ ಹಿರಿಯ ಸಿ.ಜಿ.ಕೆ. ರಂಗಶಿಷ್ಯ ಜನಾರ್ಧನ್ ಅವರನ್ನು ರಂಗಾಯಣದ ನಿರ್ದೇಶಕರನ್ನಾಗಿ ಮಾಡುವ ಮೂಲಕ ತಮ್ಮ ಜವಾಬ್ದಾರಿಯನ್ನು ನಿಷ್ಪಕ್ಷಪಾತವಾಗಿ ನಿಭಾಯಿಸುತ್ತಾರೆಂದು ಅಪೇಕ್ಷಿಸಬಹುದೇ?

ಅಕಾಡೆಮಿಗಳ ಅಧ್ಯಕ್ಷರ ರಾಜೀನಾಮೆ ಅನಿರೀಕ್ಷಿತವಲ್ಲ

– ಡಾ.ಎಸ್.ಬಿ.ಜೋಗುರ

ಮುಖ್ಯಮಂತ್ರಿಗಳು ಅಕಾಡೆಮಿಗಳ ಅಧ್ಯಕ್ಷರ ರಾಜೀನಾಮೆಯನ್ನು ಕೇಳಿದ್ದೇ ಕೆಲವು ಸಾಹಿತಿಗಳು ತುಂಬಾ ಬೇಸರ ವ್ಯಕ್ತಪಡಿಸಿ ಕನಿಷ್ಟ ಮೂರು ವರ್ಷದ ಮಟ್ಟಿಗಾದರೂ ಇರಬೇಡವೇ..? ಎನ್ನುವ ಮಾತನಾಡಿರುವದನ್ನು ನೋಡಿದರೆ ಪ್ರಭುತ್ವಕ್ಕಂಟಿದ ಅಧಿಕಾರದ ಮೋಹವನ್ನು ಸಾಹಿತಿಗಳಿಗೂ ಮೀರಲಾಗುವದಿಲ್ಲ ಎಂಬಂತಾಯಿತು. ಸದ್ಯದ ಸಂದರ್ಭದಲ್ಲಿ ಸಾಂಸ್ಕೃತಿಕ ಲೋಕದಲ್ಲಿಯೂ ಅನೇಕ ಬಗೆಯ ವಿಪ್ಲವಗಳಿವೆ. ಅಲ್ಲಿಯ ಮೌಲ್ಯಗಳ ಬಗೆಗಿನ ಮಾತೇ ಒಂದು ಬಗೆಯ ಕ್ಲೀಷೆಯಾಗುತ್ತದೆ. ಅಷ್ಟಕ್ಕೂ ಸಾಹಿತ್ಯಕ್ಕೂ ರಾಜಕಾರಣಕ್ಕೂ ತುಂಬಾ ವ್ಯತ್ಯಾಸಗಳು ಈಗ ಉಳಿದಿಲ್ಲ. ಕೆಲ ಸಾಹಿತಿಗಳು ಯಾವ ರಾಜಕಾರಣಿಗಳಿಗೂ ಕಡಿಮೆಯಿಲ್ಲ. ಇಂದು ಸಾಹಿತ್ಯಕ ವಲಯದಲ್ಲಿ ಜಾತಿ, ಧರ್ಮ, ಲಾಬಿ, ಪ್ರಭಾವಗಳ ಹಾವಳಿಯೇ ಹೆಚ್ಚಾಗಿ ಎದ್ದು ತೋರುತ್ತದೆ. ಕೆಲ ದೊಡ್ಡ ಸಾಹಿತಿಗಳ ಸಣ್ಣತನ ಅನೇಕ ಬಾರಿ ಬಯಲಾಗಿರುವದಿದೆ. ಇಂಥವರು ಸಾಹಿತಿ ಕಂ ರಾಜಕಾರಣಗಳೇ ಸರಿ. ನಡೆ-ನುಡಿಯೊಳಗೆ ಸಾರೂಪ್ಯತೆಯಿರುವ ಸಾಹಿತಿಗಳನ್ನು ಈಗ ಕೇಳುವವರೇ ಇಲ್ಲ. ಹಿಂದಿನ ಪ್ರಭುತ್ವ ತನ್ನ ಆಡಳಿತಕ್ಕೆ ಸರಿ ಹೊಂದುವವರನ್ನು ಆ ಹುದ್ದೆಗಳಲ್ಲಿ ಕೂಡಿಸಿದ್ದರೆ, ಈಗಿನ ಪ್ರಭುತ್ವ ತನಗೆ ಬೇಕಿರುವವರನ್ನು ಆ ಸ್ಥಾನದಲ್ಲಿ ಕುಳ್ಳರಿಸುತ್ತದೆ. ಅದು ನಿರೀಕ್ಷಿತವೂ ಹೌದು. ಇಲ್ಲಿ ಸಾಮರ್ಥ್ಯ, ಪ್ರತಿಭೆ, ಅರ್ಹತೆ ಎನ್ನುವ ಮಾತುಗಳೆಲ್ಲಾ ಬರೀ ಸಂಸ್ಕೃತಾನುಕರಣದ ಮೇಲ್ಪದರಿನ ಸಂಭಾಷಣೆ ಮಾತ್ರ. ಕೊನೆಗೆ ಮತ್ತೆ ಗೆಲ್ಲುವ ಸೂತ್ರಗಳೆಂದರೆ ಜಾತಿ, ಧರ್ಮ, ಲಾಬಿ, ಹಣ ಮತ್ತು ಪ್ರಭಾವಗಳೇ.. ಇವುಗಳನ್ನು ಮೀರಿ ದಕ್ಷ ಮತ್ತು ಸಮರ್ಥರಾದವರನ್ನು ಅಕಾಡೆಮಿಗಳಿಗೆ ನೇಮಿಸುವಂತಾದರೆ ಸಾಕು.

ಈಗಿರುವ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂದರ್ಭದಲ್ಲಿ ಮೌಲ್ಯ ಎನ್ನುವ ಪದವನ್ನು ಬಳಸುವದೇ ಮಹಾ ಪ್ರಮಾದವಾಗಿ ತೋರುತ್ತದೆ. ಧರ್ಮವನ್ನೂ ರಾಜಕಾರಣ ವ್ಯಾಪಿಸಿರುವ ಸಂದರ್ಭದಲ್ಲಿ ಜಾತಿಯನ್ನೇ ಸಾಮರ್ಥ್ಯದ ಜಾಗೆಯಲ್ಲಿ ಪ್ರಬಲ ಮಾನದಂಡವಾಗಿಸಿಕೊಂಡ ಈ ಹೊತ್ತಿನಲ್ಲಿ ಸಾಹಿತ್ಯಕ, ಸಾಂಸ್ಕೃತಿಕ ವಲಯದ ಶ್ರೇಷ್ಟತೆಯ ಬಗ್ಗೆ ಮಾತನಾಡುವವರ ಬಗ್ಗೆ ಮರುಕವೆನಿಸುತ್ತದೆ. ಅಸ್ಥಿತ್ವದಲ್ಲಿರುವ ಸರಕಾರವೊಂದು ತಾನು ಕೊಡಮಾಡುವ ಹಣಕಾಸಿನ ನೆರವಿನ ಹಿನ್ನೆಲೆಯಲ್ಲಿ ಪ್ರಭುತ್ವದ ಮೂಲಕ ಅಲ್ಲಿಯ ಆಯಕಟ್ಟಿನ ಹುದ್ದೆಗಳನ್ನು ಬದಲಿಸುವ ಸ್ವಾತಂತ್ರ್ಯ ಹೊಂದುವದು ಸರಿಯಲ್ಲ ಎನ್ನುವ ಕೂಗೇ ಒಂದು ಬಗೆಯ ರಾಜಕೀಯ ಹಿತಾಸಕ್ತಿಯಂತಿದೆ.
kannada-writers-politicsಅಕಾಡೆಮಿಗಳಲ್ಲಿ ಅಲಂಕರಿಸುವವರಿಗೆ ರಾಜೀನಾಮೆ ಕೇಳುವ ಮುನ್ನವೇ ತಾವೇ ಮುಂದಾಗಿ ಅದನ್ನು ನೀಡುವದರಲ್ಲಿ ಆ ಹುದ್ದೆಯ ಬಗೆಗೆ ಮೋಹವಿಲ್ಲ ಎನ್ನುವದನ್ನು ತೋರಿಸಿಕೊಡುವ ಮೂಲಕ ತಮಗೂ ರಾಜಕಾರಣಿಗಳಿಗೂ ಸ್ವಲ್ಪವಾದರೂ ಭಿನ್ನತೆಯಿದೆ ಎಂದು ಸಾಬೀತು ಮಾಡಬೇಕು, ಅದನ್ನು ಬಿಟ್ಟು ಹೀಗೆ ಕೇವಲ ಒಂದೂವರೆ ವರ್ಷದ ಅವಧಿಯಲ್ಲಿ ಆ ಹುದ್ದೆಯಿಂದ ನನ್ನನ್ನು ಕೆಳಗಿಳಿಸಿದರು ಎನ್ನುವದನ್ನೇ ಮತ್ತೆ ಮತ್ತೆ ಹಲಬುವ ಮೂಲಕ ತಾವೂ ಅಧಿಕಾರ ದಾಹಿಗಳೇ ಎನ್ನುವದನ್ನು ಸಾಬೀತು ಮಾಡಬಾರದು. ಕೆಲ ಸಾಹಿತಿಗಳು ಪ್ರಶಸ್ತಿಗಾಗಿ ಲಾಬಿ ಮಾಡುವದನ್ನು ನೋಡಿ ಜನಸಾಮಾನ್ಯನೇ ರೋಸಿ ಹೋಗಿರುವನು. ಅಷ್ಟಕ್ಕೂ ಸದ್ಯದ ಸಾಹಿತ್ಯಕ ಸಂದರ್ಭ ಯಾವ ರಾಜಕೀಯ ಪರಿಸರಕ್ಕಿಂತಲೂ ವಿಭಿನ್ನವಾಗಿಲ್ಲ. ಇಂದು ಅಮೂರ್ತವಾದ ಜಾತಿಯೇ ಬಹುತೇಕವಾಗಿ ಸಾಹಿತ್ಯಕ ಚಟುವಟಿಕೆಗಳನ್ನು ನಿರ್ವಹಿಸುವ, ನಿರ್ದೇಶಿಸುವ ದಿನಮಾನಗಳಲ್ಲಿ ಅದ್ಯಾವ ಸಾಂಸ್ಕೃತಿಕ ಮೌಲ್ಯಗಳಿರುವ ಕ್ಷೇತ್ರದ ಬಗ್ಗೆ ಮಾತನಾಡುತ್ತಿರುವಿರಿ ಸ್ವಾಮಿ..?

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಕಾಡೆಮಿಗಳಲ್ಲಿರುವ ಅಧ್ಯಕ್ಷರುಗಳು ರಾಜೀನಾಮೆ ನೀಡಬೇಕು ಎಂದು ಕೇಳಿರುವದರಲ್ಲಿ ಒಂದು ಬಗೆಯ ತಾತ್ವಿಕತೆಯಿದೆಯಾದರೂ ರಾಜೀನಾಮೆಯ ನಂತರ ನಡೆಯಬಹುದಾದ ಆಯ್ಕೆಯ ಪಾರದರ್ಶಕತೆಯ ಬಗ್ಗೆಯೂ ಸ್ವಲ್ಪ ಯೋಚಿಸಬೇಕಾಗುತ್ತದೆ. ಹೊಸದಾಗಿ ಅಕಾಡೆಮಿಗಳಿಗೆ ನೇಮಕ ನಡೆಯಲಿದೆ ಎನ್ನುವ ಸುದ್ದಿ ಬಯಲಾದದ್ದೇ ತಡ ಮೊದಲು ಜಾತಿಯ ಲಾಬಿ ಶುರುವಾಗುತ್ತದೆ. ಅಸಹ್ಯ ಮತ್ತು ಹೇಸಿಗೆ ಹುಟ್ಟಿಸುವ ಮಟ್ಟದಲ್ಲಿ ಈ ಜಾತಿ ಲಾಭಿ ನಡೆಯುತ್ತದೆ. ಎಲ್ಲರೂ ಅಗಾಧ ಪಂಡಿತರೇ ಆದರೂ ಎಲ್ಲರ ಸಾಮರ್ಥ್ಯದ ಮಾನದಂಡ ಜಾತಿ. ಹಿಂದೆಂದಿಗಿಂತಲೂ ಇಂದು ಹೆಜ್ಜೆ ಹೆಜ್ಜೆಗೂ ನಮ್ಮನ್ನು ಆಳುವ, ನಮ್ಮ ಎಲ್ಲ ವ್ಯವಹಾರಗಳನ್ನು ನಿರ್ಧರಿಸುವ ಒಂದು ಪ್ರಬಲ ಸಂಸ್ಥೆಯಾಗಿ ಜಾತಿ ಕೆಲಸ ಮಾಡುತ್ತಿದೆ. ಸಾಹಿತ್ಯಕ ವಲಯದಲ್ಲಂತೂ ಇದರ ಹಾವಳಿ ಮತ್ತೂ ಹೆಚ್ಚಿಗಿದೆ. ಲೇಖಕನೊಬ್ಬನ ಕೃತಿಯನ್ನು ಜಾತಿಯ ವಾಸನೆಯ ಮೂಲಕವೇ ಓದುವ, ವಿಮರ್ಶಿಸುವ ಸೂಕ್ಷ್ಮ ನಾಸಿಕವಾಹಿಗಳ ಸಂಖ್ಯೆ ಈಗ ಅಪಾರವಾಗಿದೆ. ಹೀಗಾಗಿ ಒಬ್ಬ ಹೊಸ ಬರಹಗಾರ ಈ ಸಾಂಸ್ಕೃತಿಕ ಹೊಲಸುತನದ ನಡುವೆ ಒಂದು ಒಳ್ಳೆಯ ಕೃತಿಯನ್ನು ಕೊಟ್ಟರೂ ಅದನ್ನು ಸರಿಯಾಗಿ ಗುರುತಿಸದ ಸಂದರ್ಭ ಸಾಹಿತ್ಯಕ ವಲಯದಲ್ಲಿದೆ. ಮಹಾನ್ ದೊಡ್ಡ ದೊಡ್ಡ ಸಾಹಿತಿಗಳೆನಿಸಿಕೊಂಡವರು ಪರೋಕ್ಷವಾಗಿ ಸ್ವಜಾತಿಯನ್ನು ಪ್ರೀತಿಸುತ್ತ, ಪೊರೆಯುತ್ತ ಬಂದಿರುವದರ ಪರಿಣಾಮವಾಗಿಯೇ ಇಂದು ಸಾಹಿತ್ಯಕ ವಲಯ ಹೇಸಿಗೆ ಹುಟ್ಟಿಸುವಂತಾಗಿದೆ. ರಾಜಕಾರಣಿಯೊಬ್ಬ ರಾಜಕೀಯ ಮಾಡುತ್ತಾನೆ ಎನ್ನುವದಾದರೆ ಅದು ಅವನ ವೃತ್ತಿ ಮತ್ತು ಪ್ರವೃತ್ತಿ. ಅಲ್ಲೊಂದು ಬಗೆಯ ತಾದಾತ್ಮ್ಯತೆ ಇದೆ. ಇನ್ನು ನಾವು ಅವನನ್ನು ಶಪಿಸಬೇಕಿರುವದು ಆತನ ಭ್ರಷ್ಟ ಗುಣ ಮತ್ತು ಸುಳ್ಳು ಭರವಸೆಗಳಿಗಾಗಿ. ಸಾಹಿತಿಯಾದವನು ಹಾಗಲ್ಲ. ನುಡಿದಂತೆ ನಡೆವವನು ಎನ್ನುವ ಹಾಗೆ ವೇದಿಕೆಯಲ್ಲಿ ಪುಂಖಾನುಪುಂಖವಾಗಿ ಮಾತನಾಡುವವನು. ನಿಜಜೀವನಕ್ಕಿಳಿದರೆ ನಡೆ-ನುಡಿಯಲ್ಲಿ ಒಂದಾಗಿರುವ ಸಂದರ್ಭಗಳು ಅಪರೂಪ. ರಾಜಕಾರಣ ಇವನ ವೃತ್ತಿಯೂ ಅಲ್ಲ, ಪ್ರವೃತ್ತಿಯೂ ಅಲ್ಲ. ಆದ್ರೆ ರಾಜಕಾರಣಿಗಳು ಕೂಡಾ ನಾಚುವ ಹಾಗೆ ರಾಜಕೀಯ ಮಾಡುವ ನಾಜೂಕಯ್ಯ. ಹೀಗಾಗಿಯೇ ಇಂದು ಸಾಹಿತ್ಯಕ ವಲಯದಲ್ಲಿ ನಿಂತು ಸಾಂಸ್ಕೃತಿಕ ಮೌಲ್ಯಗಳ ಬಗ್ಗೆ ಮಾತನಾಡುವವರು ತುಂಬಾ ಸಿಂಪಥಿ ಗಿಟ್ಟಿಸುವವರ ಹಾಗೆ ಕಾಣುತ್ತಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ತೀರ್ಮಾನ ಸರಿಯಾದುದು. ಪ್ರತಿಯೊಂದು ರಾಜಕೀಯ ಪಕ್ಷವು ತನ್ನ ತನ್ನ ಹಿಂಬಾಲಕರನ್ನು ಓಲೈಸುವದು ಮಾಮೂಲು. ಮೊದಲಿನ ರಾಜಕೀಯ ಪಕ್ಷದ ಅವಧಿಯಲ್ಲಿ ನೇಮಕಗೊಂಡವರ ಬದಲಾಗಿ ಹೊಸ ಆಯ್ಕೆ ಬಯಸುವದು ಸಹಜ. ಆದರೆ ಮೊದಲಿನ ಆಯ್ಕೆಗೂ ಮತ್ತು ಈಗಿನ ಆಯ್ಕೆಯ ನಡುವೆ ಯಾವ ವ್ಯತ್ಯಾಸಗಳೂ ಉಳಿಯಲಿಲ್ಲ ಎನ್ನುವ ಹಾಗೆ ಸಾಂಸ್ಕೃತಿಕ ವಲಯದ ಜನತೆ ಆಡಿಕೊಳ್ಳದ ಹಾಗೆ ಆಯ್ಕೆ ಮಾಡಿದರೆ ಸಾಕು ಎನ್ನುವದು ನನ್ನಂಥವರ ಆಸೆ.

ಮಾನಸಿಕ ದಾಸ್ಯಕ್ಕೆ ಬಲಿಯಾದ ‘ದ ಇಂಡಿಯನ್’

– ಬಿ.ಶ್ರೀಪಾದ ಭಟ್

ಇಂದು ಇಂಡಿಯಾದ ಸಮಕಾಲೀನ ರಾಜಕೀಯ ಮಾದರಿಗಳು ತನ್ನ ಸೋಲೊಪ್ಪದ ಛಾತಿ ಮತ್ತು ಇಚ್ಛಾಶಕ್ತಿ, ಧನಾತ್ಮಕ ಬದಲಾವಣೆಗಳಿಗಾಗಿ ಸದಾ ತುಡಿಯುವ, ಹಂಬಲಿಸುವ ಚಿಂತನೆಗಳು ಮತ್ತು ಅದನ್ನು ಕಾರ್ಯಗತಗೊಳಿಸುವ ಕ್ರಿಯಾತ್ಮಕ ರೂಪರೇಷೆಗಳು, indiaಮತ್ತು ತಾನು ರೂಪಿಸುವ ನಿಯಮಾವಳಿಗಳಿಗೆ ಉತ್ತರದಾಯಿತ್ವ ಇವೆಲ್ಲವನ್ನು ಕಳೆದುಕೊಂಡು ಅತ್ಯಂತ ಕ್ಷುಲ್ಲಕ ಮತ್ತು ಹೇಸಿಗೆ ಹುಟ್ಟಿಸುವ, ಲಜ್ಜೆಗೆಟ್ಟ ಸ್ಥಿತಿಗೆ ಬಂದು ತಲುಪಿದ್ದರೆ ನಮ್ಮ ಮಾಧ್ಯಮಗಳು ಸದಾ ಧಗಧಗಿಸುವ ತಮ್ಮೊಡಲೊಳಗಿನ ನೈತಿಕತೆ, ಅಂತರ್ಗತವಾಗಿ ಪ್ರವಹಿಸುವ ನ್ಯಾಯವಂತಿಕೆ, ಸಾಮಾಜಿಕ ಮೌಲ್ಯಗಳು ಮತ್ತು ಮುಖ್ಯವಾಗಿ ಮಾನವೀಯತೆಯ, ಸಾಮಾಜಿಕ ನ್ಯಾಯದ ತತ್ವಜ್ಞಾನ ಇವೆಲ್ಲವನ್ನೂ ಮರೆತು, ಅವಕ್ಕೆಲ್ಲಾ ತಿಲಾಂಜಲಿ ನೀಡಿ, ಬದಲಾಗಿ ಅಳುವ ವ್ಯವಸ್ಥೆಯನ್ನು, ಪ್ರಭುತ್ವವನ್ನು ತಮಗೆ ಬೇಕೆಂದಹಾಗೆ ಅಲ್ಲಾಡಿಸುತ್ತೇವೆ, ಬೇಕಿದ್ದರೆ ಬೀಳಿಸುತ್ತೇವೆ ಸಹ ಎಂಬಂತಹ ಮಿತಿಮೀರಿದ ಭಂಡತನದಿಂದಾಗಿ ಇಂದು ತಲುಪಿರುವ ಕೆಳಮಟ್ಟದ ಅನೈತಿಕತೆ ಮತ್ತು ತಮ್ಮೊಂದಿಗೆ ಇಡೀ ವ್ಯವಸ್ಥೆಯ ಶುದ್ಧಾಂಗ ಲವಲವಿಕೆಯನ್ನೇ ಒಂದು ಮಟ್ಟದಲ್ಲಿ ನಿರ್ಜೀವಗೊಳಿಸಿರುವುದು, ಇವೆರೆಡೂ ಒಂದಕ್ಕೊಂದು ತಳಕು ಹಾಕಿಕೊಂಡು ಇಂದು ಇಡೀ ದೇಶವನ್ನೇ ನಗೆಪಾಟಲಿಗೀಡಾಗಿಸಿವೆ. ಇಂಡಿಯಾಗೆ ಈ ರಾಜಕೀಯ ಪಕ್ಷಗಳು ಮತ್ತು ಬಹುಪಾಲು ಮಾಧ್ಯಮಗಳು ಅಂಟಿಸಿರುವ ಕಳಂಕಗಳು ವಿವಿಧ ಸ್ವರೂಪಗಳಲ್ಲಿವೆ. ಒಂದನ್ನು ಬಿಡಿಸಹೊರಟರೆ ಮತ್ತೊಂದಕ್ಕೆ ತಗಲಿಕೊಳ್ಳುತ್ತೇವೆ ಮತ್ತು ಈ ನಿರಂತರ ಅರಾಜಕತೆಗೆ ಭಾಗಿಗಳಾಗುತ್ತಲೇ ಸಾಕ್ಷಿಗಳಾಗುತ್ತೇವೆ. ಸ್ವತಂತ್ರ ಭಾರತದಲ್ಲಿ ಭಾರತೀಯರು ಈ ಮಟ್ಟದಲ್ಲಿ ಮಾನಸಿಕ ದಾಸ್ಯಕ್ಕೆ ಬಲಿಯಾಗಿದ್ದು ಇದೇ ಮೊದಲೇನೊ.

ಬಿಜೆಪಿ ತನ್ನ ವಾರ್ಷಿಕ ಕಾರ್ಯಕಾರಣಿ ಸಭೆಯನ್ನು ನಡೆಸುತ್ತದೆ. ಇದರಲ್ಲಿ ವಿಶೇಷವೇನಿದೆ? ಆದರೆ ಬಹುಪಾಲು ಮಾಧ್ಯಮಗಳಿಗೆ Advaniಅದು ಮೊದಲ ಪುಟದ ಸುದ್ದಿ. ಬ್ರೇಕಿಂಗ್ ನ್ಯೂಸ್. ಮ್ಯಾಜಿಕ್ ಮೊಮೆಂಟ್. ಇದನ್ನು ಮತ್ತು ಈ ತರಹದ ಅನೇಕ ಕ್ಷುಲ್ಲಕ ವಿದ್ಯಾಮಾನಗಳನ್ನು ಒಂದು ಬಗೆಯ ರಿಯಲ್ ಎಸ್ಟೇಟ್ ಧಂಧೆಯ ಮಟ್ಟಕ್ಕೆ ತಂದು ನಿಲ್ಲಿಸಿದ್ದು ನಮ್ಮ ಬಹುಪಾಲು ಕಳಂಕಿತ ಮಾಧ್ಯಮಗಳು. ಈ ರಿಯಲ್ ಎಸ್ಟೇಟ್ ಧಂಧೆಯಲ್ಲಿ ಬಹುಪಾಲು ಕಳಂಕಿತ ಮಾಧ್ಯಮಗಳು ಉತ್ಸಾಹಿ ಬ್ರೋಕರ್‌ನ ಪಾತ್ರ ನಿರ್ವಹಿಸಿದ್ದರೆ ಆ ಬದಿಯಲ್ಲಿ ರಾಜಕೀಯ ಪಕ್ಷಗಳು ಭ್ರಷ್ಟ ಭೂಮಾಲೀಕನ ಪಾತ್ರ ನಿರ್ವಹಿಸಿದ್ದರೆ ಇಲ್ಲಿನ ಜನತೆ ಎಂದಿನಂತೆ ಮೋಸಹೋದ ಖರೀದುದಾರರು. ಇಂದಿನ ಸಂದರ್ಭದಲ್ಲಿ ಮತ್ತು ಹಿಂದೆ ಅನೇಕ ಸಂದರ್ಭಗಳಲ್ಲಿ ಮಾಧ್ಯಮಗಳ ಈ ಗತಿಗೆಟ್ಟ ಹಪಾಹಪಿತನವನ್ನು ತನ್ನ ಅನುಕೂಲಕ್ಕೆ, ತನ್ನ ಮೇಲ್ಮುಖ ಚಲನೆಗೆ ಅದ್ಭುತವಾಗಿ ಬಳಸಿಕೊಂಡಿದ್ದು ಫ್ಯಾಸಿಸ್ಟ್ ರಾಜಕಾರಣಿ ನರೇಂದ್ರ ಮೋದಿ. ಪರಸ್ಪರ ದೈವತ್ವತ್ತಕ್ಕೇರಿಸಿಕೊಳ್ಳುವ ಇವರಿಬ್ಬರ ಕಣ್ಣಾಮುಚ್ಚಾಲೆಯಾಟದ ವಿಷಚಕ್ರದ ಸುಳಿಯಲ್ಲಿ ಸಿಲುಕಿಕೊಂಡ ಇಂಡಿಯಾದ ನಾಗರಿಕರು ತಾವಿದನ್ನು ಆನಂದಿಸುತ್ತಿದ್ದೇವೆಯೋ ಅಥವಾ ತಿರಸ್ಕರಿಸುತ್ತಿದ್ದೇವೆಯೋ ಎಂದು ತಿಳಿಯದೆ ಕಕ್ಕಾಬಿಕ್ಕಿಯಾಗಿ ಮಾನಸಿಕ ದಾಸ್ಯಕ್ಕೆ ಬಲಿಯಾಗುತ್ತಿರುವುದು ಮಾತ್ರ ದುರಂತವೇ ಸರಿ. ಅದರಲ್ಲಿಯೂ ವಿದ್ಯಾವಂತ ಮಧ್ಯಮ, ಮೇಲ್ಮಧ್ಯಮ ವರ್ಗ ಈ ಮಟ್ಟದಲ್ಲಿ ಆತ್ಮವಂಚನೆಗೆ ಗುರಿಯಾಗಿದ್ದು ಇವರ ಕುರಿತಾದ ಪ್ರೀತಿ, ಗೌರವಗಳು ಕುಂಠಿತಗೊಳ್ಳುತ್ತಿವೆ.

ಎಂಬತ್ತು ವರ್ಷಗಳ ಹಿಂದೆಯೇ ಯುರೋಪಿಯನ್ ರಾಷ್ಟ್ರಗಳಲ್ಲಿ ಫ್ಯಾಸಿಸ್ಟರು ನೇರವಾಗಿಯೇ ತಮ್ಮ ಫ್ಯಾಸಿಸ್ಟ್ ಧೋರಣೆಗಳನ್ನು, ಸರ್ವಾಧಿಕಾರ ನೀತಿಯನ್ನು ಬಳಸಿಕೊಂಡು ಅಧಿಕಾರವನ್ನು ವಹಿಸಿಕೊಂಡಿದ್ದೂ ಆಯ್ತು. ಅಲ್ಪಕಾಲಾವಧಿಯ ಸರ್ವಾಧಿಕಾರದ ಆಡಳಿತದ ನಂತರ ತಿರಸ್ಕಾರಕ್ಕೆ ಗುರಿಯಾಗಿ ಅಷ್ಟೇ ಕ್ಷ್ರಿಪ ಗತಿಯಲ್ಲಿ ನಾಶವಾಗಿ, ಕಣ್ಮೆಯಾಗಿದ್ದೂ ಆಯ್ತು. ಆದರೆ ಇಂಡಿಯಾದ ಸಂದರ್ಭದಲ್ಲಿ ತಾನು ಚಾಲ್ತಿಗೆ ಬಂದು ಎಂಬತ್ತು ವರ್ಷಗಳಾದರೂ ಇಲ್ಲಿನ ಫ್ಯಾಸಿಸ್ಟ್ ಪಕ್ಷ ಆರೆಸಸ್‌ಗೆ ತಮ್ಮ ಮತೀಯವಾದಿ ಸಿದ್ಧಾಂತಗಳನ್ನು ಆಧರಿಸಿ ನೇರವಾಗಿ ಅಧಿಕಾರವನ್ನು ಕಬಳಿಸಲು ಇಂದಿಗೂ ಸಾಧ್ಯವಾಗಿಲ್ಲ. ಕೇವಲ ಆರೆಸಸ್ ಮಾತ್ರವಲ್ಲ ಇತರೇ ಧರ್ಮಗಳ ಎಲ್ಲಾ ಬಗೆಯ ಮೂಲಭೂತವಾದಿ ಫ್ಯಾಸಿಸ್ಟರ ವಿಷಯದಲ್ಲಿಯೂ ಸಹ ಈ ಮಾತು ಸತ್ಯ. ಎಲ್ಲಾ ಧರ್ಮಗಳ ಫ್ಯಾಸಿಸ್ಟರು ನೇರವಾಗಿ ಅಧಿಕಾರ ವಹಿಸಿಕೊಳ್ಳುವ ಎಲ್ಲಾ ದಾರಿಗಳನ್ನೂ ನಿರಾಕರಿಸಿದ್ದಾನೆ ಇಂಡಿಯಾದ ಪ್ರಜೆ. ಇಂದಿಗೂ ಫ್ಯಾಸಿಸ್ಟರ ಕೈಗೆ ಸಂಪೂರ್ಣ ಅಧಿಕಾರವನ್ನು ಹಸ್ತಾಂತರಗೊಳಿಸಿಲ್ಲ ಇಲ್ಲಿನ ಪ್ರಜ್ಞಾವಂತ ನಾಗರಿಕ. ಇದನ್ನು ಸೋಷಿಯಲಾಜಿ ಮತ್ತು ಅಂಥ್ರೋಪಾಲಜಿ ನೆಲೆಯಲ್ಲಿ ವಿಶ್ಲೇಷಿಸಬೇಕಾದಂತಹ ಸಂದರ್ಭದಲ್ಲಿ ನಮ್ಮ ಬುದ್ಧಿಜೀವಿಗಳು ಮತ್ತು ಬಹುಪಾಲು ಮಾಧ್ಯಮಗಳು ಮಾಡುತ್ತಿರುವುದಾದರೂ ಏನು? ಭಜನೆ !!! ಮೋದಿ ಭಜನೆ!!! ಲಜ್ಜಗೆಟ್ಟ ಈ ಜನಗಳು ಫ್ಯಾಸಿಸ್ಟರ ವಿವಿಧ ಆಯಾಮಗಳನ್ನು, ಅವುಗಳು ರೂಪುಗೊಳಿಸುತ್ತಿರುವ ಏಕರೂಪಿ ವಿನ್ಯಾಸಗಳನ್ನು, ಅವುಗಳ ದಮನೀಯತೆಯ ನಡೆಗಳನ್ನು ಪದರುಪದರಾಗಿ ಬಿಡಿಸಿಡುವುದರ ಬದಲಾಗಿ ಈ ಗುಂಪು ಹಸಿಹಸಿಯಾಗಿ ಸತ್ಯದರ್ಶನದ ಹೆಸರಿನಲ್ಲಿ ಇಲ್ಲಿನ ಜನತೆಯ ಮೇಲೆ ಬೌದ್ಧಿಕ ಡಿಕ್ಟೇಟರ್‌ಶಿಪ್ ನಡೆಸುತ್ತಿದ್ದಾರೆ. ಇಡೀ ವ್ಯವಸ್ಥೆಯನ್ನೇ ಋಣಾತ್ಮಕತೆಯ ದಿಕ್ಕಿಗೆ ದಾರಿ ತಪ್ಪಿಸಿದ ಅಪಕೀರ್ತಿ ಈ ಜನಗಳಿಗೇ ಸಲ್ಲಬೇಕು.

ಸಧ್ಯಕ್ಕೆ ಸುದ್ದಿಯಲ್ಲಿರುವ ಸಂಘಪರಿವಾರವು ಮತ್ತೇನಲ್ಲದೆ ಒಂದು ಮತೀಯವಾದಿ ಲುಂಪೆನ್ ಗುಂಪು. ಧಾರ್ಮಿಕ ಫೆನಟಿಸಂ ಅನ್ನು ತನ್ನ ಏಕಮಾತ್ರ ಅಜೆಂಡಾವನ್ನಾಗಿರಿಸಿಕೊಂಡಿರುವ, ಏಕ್ ಧಕ್ಕ ಔರ್ ದೋ ನುಡಿಗಟ್ಟನ್ನು ತನ್ನ ಸ್ಲೋಗನ್ನಾಗಿಸಿಕೊಂಡ ಈ ಮತೀಯವಾದಿ ಗುಂಪು 1990 ರಿಂದ ಪ್ರತ್ಯಕ್ಷವಾಗಿಯೇ ಮತ್ತು ನೇರವಾಗಿಯೇ ಧರ್ಮದ, ಜಾತಿಯ ಆಧಾರದ ಮೇಲೆ ಇಂಡಿಯಾವನ್ನು ಇಬ್ಭಾಗಿಸಿತು. ಆಗ ಇದರ ನೇತೃತ್ವ ವಹಿಸಿದ್ದು ಎಲ್.ಕೆ,ಅಡ್ವಾನಿ. ತಮ್ಮ ಕೋಮುವಾದಿ ರಥಯಾತ್ರೆಯ ಮೂಲಕ ದೇಶದ ಮೂಲಸೆಲೆಯಾಗಿದ್ದ, ಸ್ವತಂತ್ರ ಭಾರತದಲ್ಲಿ ನೆಹರೂ, ಅಂಬೇಡ್ಕರ್ ಅವರು ಅಪಾರ ನಿಷ್ಟೆ ಮತ್ತು ಬದ್ಧತೆಯಿಂದ ಕಟ್ಟಿದ್ದ ಸಹೋದರತ್ವದ, ಸಂಕೀರ್ಣವಾದ, ಮಾನವೀಯ ಹಿನ್ನೆಲೆಯ ಸಾಂಸ್ಕೃತಿಕ ಎಳೆಗಳ, ಸೆಕ್ಯುಲರ್, Narendra_Modiಜಾತ್ಯಾತೀತ ಸಂವಿಧಾನದ ಧ್ವಂಸ ಕಾರ್ಯವನ್ನು ಶುರಮಾಡಿದ ಅಡ್ವಾನಿ ಮತ್ತವರ ಸಹಚರರಿಗೆ ಸಾರಥಿಯಾಗಿದ್ದು ಆ ಕಾಲದ ಆರೆಸಸ್ ಸ್ವಯಂಸೇವಕ ನರೇಂದ್ರ ಮೋದಿ. ಧರ್ಮದ ಆಧಾರದ ಮೇಲೆ ದೇಶವನ್ನು ಒಡೆಯುವ ಇವರ ಕಾರ್ಯಕ್ಕೆ ಸಂಪೂರ್ಣವಾಗಿ ಬೆಂಬಲಿಸಿದ್ದು ಆರೆಸಸ್. ಇದೆಲ್ಲವೂ ಇಂದು ಇತಿಹಾಸದಲ್ಲಿ ದಾಖಲಾಗಿದೆ. ದೇಶವನ್ನು ಒಡೆಯುವ ಈ ದುಷ್ಕೃತ್ಯ ತಾರಕಕ್ಕೇರಿದ್ದು ಬಾಬರಿ ಮಸೀದಿಯ ಧ್ವಂಸದ ಮೂಲಕ. ನಂತರ ತನ್ನ ರಕ್ತಸಿಕ್ತ ಪ್ರಯಾಣವನ್ನು ತಾರ್ಕಿಕ ಅಂತ್ಯಕ್ಕೆ ತಲುಪಿಸಿದ್ದು 2002ರ ಗುಜರಾತ್ ನರಮೇಧದ ಮೂಲಕ.

ಇಡೀ ಕಾಲಘಟ್ಟದಲ್ಲಿ ಅಡ್ವಾನಿಯವರು ಅನೇಕ ಬಾರಿ ನೇರವಾಗಿ ಪಾಲುದಾರrAಗಿದ್ದರೆ ಕೆಲವು ಬಾರಿ ಪ್ರೇಕ್ಷಕರಾಗಿಯೂ ತಮ್ಮ ಆರೆಸಸ್ ಸ್ವಯಂಸೇವಕನ ಜವಾಬ್ದಾರಿ ನಿಭಾಯಿಸಿದ್ದಾರೆ. ಇಂದಿಗೂ ಬಾಬರಿ ಮಸೀದಿಯ ಧ್ವಂಸ ಪ್ರಕರಣದಲ್ಲಿ ಇವರ ಮೇಲಿನ ಆಪಾದನೆ ನಿವಾರಣೆಯಾಗಿಲ್ಲ. ಇಂದು ವೃದ್ಧನಾರಿ ಪತಿವ್ರತೆಯ ಮಾದರಿಯಲ್ಲಿ ತಮ್ಮನ್ನು ತಾವು ಹುತಾತ್ಮರಾಗಿಸಕೊಳ್ಳಬಯಸುವ ಅಡ್ವಾನಿಯವರಿಗೆ ಮೃದುವಾದಿಯ ಮುಖವಾಡವನ್ನು ಅದೂ ವಾಜಪೇಯಿಯವರ ವೇಷವನ್ನು ತೊಡಿಸಲು ಬೌದ್ಧಿಕವಾಗಿ ದಿವಾಳಿಯೆದ್ದಿರುವ ಮಾಧ್ಯಮಗಳು ವೇದಿಕೆಯನ್ನೊದಗಿಸುತ್ತಿರುವುದು ಒಂದು ದುರಂತ ಪ್ರಹಸನವಲ್ಲದೆ ಮತ್ತಿನ್ನೇನು ?? ಎಂಬತ್ತಾರರ ಇಳಿ ವಯಸ್ಸಿನಲ್ಲಿಯೂ ನಾವೆಲ್ಲ ಅಸೂಯೆ ಪಡುವಷ್ಟು ಅತ್ಯಂತ ಲವಲವಿಕೆಯಿಂದಿರುವ ಅಡ್ವಾನಿಯವರಿಗೆ ಇಂದು ತಮ್ಮ ಇಳಿ ವಯಸ್ಸಿನಲ್ಲಿ ತಮ್ಮ ಗತಕಾಲದ ತಪ್ಪುಗಳ ಕುರಿತಾಗಿ ಪ್ರಾಯಶ್ಚಿತ್ತವಿದ್ದಂತಿಲ್ಲ. ಇಂದು ಮಾಡಿದ್ದುಣ್ಣೋ ಮಾರಾಯನೆಂಬ ಸ್ಥಿತಿಗೆ ಬಂದು ತಲುಪಿರುವ ಅಡ್ವಾನಿಯವರ ಅರವತ್ತು ವರ್ಷಗಳ ದೀರ್ಘವಾದ ರಾಜಕೀಯ ಬದುಕು ಪ್ರತಿಯೊಬ್ಬ ಮತೀಯವಾದಿ ರಾಜಕಾರಣಿಗೆ ತಕ್ಕ ಪಾಠವಾಗಬಲ್ಲದೆಂದು ವಾಸ್ತವ ಸತ್ಯಗಳನ್ನು ಹೇಳಲು ನಿರಾಕರಿಸುತ್ತಿರುವ ನಮ್ಮ ಮಾಧ್ಯಮಗಳಿಗೆ ಸದಾ ಕಾಲ ಅಮ್ನೀಸಿಯ !!

ದೇಶಪ್ರೇಮಕ್ಕೂ ಮತ್ತು ಅದನ್ನು ನೆಪವನ್ನಾಗಿರಿಸಿಕೊಂಡು ದಬ್ಬಾಳಿಕೆ ನಡೆಸುವ ಫ್ಯಾಸಿಸಂನ ಮುಖಗಳಿಗೂ ಇರುವ ಅಜಗಜಾಂತರ ವ್ಯತ್ಯಾಸ ಮತ್ತು ಅಪಾರ ಭಿನ್ನತೆ ಅರವತ್ತು ವರ್ಷಗಳಷ್ಟು ಕಾಲ ಅತ್ಯಂತ ಪ್ರಾಮಾಣಿಕವಾಗಿ ಪಕ್ಷನಿಷ್ಟ ರಾಜಕಾರಣವನ್ನು ಮಾಡಿಕೊಂಡು ಬಂದ ಅಡ್ವಾನಿಯವರಲ್ಲಿನ ಮುಗ್ಧತೆಯ ವ್ಯಕ್ತಿತ್ವ ಅರಿಯದೇ ಹೋಗಿದ್ದು ಕೂಡ ಭಾರತದ ರಾಜಕಾರಣದ ದುರಂತ ಅಧ್ಯಾಯ. ಈ ಕಾಮನ್‌ಸೆನ್ಸ್ ಅನ್ನು ಒಳಗೊಂಡತಂಹ, ಆಳವಾದ ಸಾಮಾಜಿಕ ಒಳನೋಟಗಳನ್ನು ತನ್ನೊಳಗೆ ಬಸಿದುಕೊಳ್ಳುವ ಗುಣವಿಲ್ಲದಿದ್ದಕ್ಕಾಗಿಯೇ ವೈಯುಕ್ತಿಕವಾಗಿ ಮುಸ್ಲಿಂರನ್ನು ತಮ್ಮ ಸ್ನೇಹಿತನಂತೆ ನಡೆಸಿಕೊಳ್ಳುವ, ಮಾನವತಾವಾದಿ, ಸ್ನೇಹಶೀಲ, ಅಪಾರ ಪ್ರೀತಿಯ ಸ್ನೇಹಿತನಂತೆ, ತಂದೆಯಂತೆ ವರ್ತಿಸುವ ಅಡ್ವಾನಿ ಸಾರ್ವಜನಿಕವಾಗಿ ಮತೀಯವಾದಿಯಾಗಿ, ಅನ್ಯಧರ್ಮದ್ವೇಷಿಯಾಗಿ ಬದಲಾಗುತ್ತಿದ್ದದು. ಸಂಘಪರಿವಾರದ ಫೆನಟಿಕ್, ಲುಂಪೆನ್ ಗುಂಪಿನ ನೇತಾರರಾಗಿದ್ದು.ಈ ಸಂದರ್ಭದಲ್ಲಿಯೇ ನರೇಂದ್ರ ಮೋದಿಯೆಂಬ ವರ್ಕೋಹಾಲಿಕ್, ಪ್ರಾಮಾಣಿಕ ಸ್ವಯಂಸೇವಕ ಫ್ಯಾಸಿಸ್ಟ್ ಆಗಿ ರೂಪುಗೊಳ್ಳತೊಡಗಿದ್ದು. ಮೋದಿಯು ಈ ಫ್ಯಾಸಿಸಂನ ಎಲ್ಲ ಪಟ್ಟುಗಳನ್ನು ನಿಭಾಯಿಸುವ ಗುಣಗಳನ್ನೂ ಕಲಿತದ್ದು ಈ ಕಾಲಘಟ್ಟದಲ್ಲಿಯೇ.

ಈ ವರ್ಷಗಳಲ್ಲಿ ಫೆನಟಿಸಂನ ರಾಜಕಾರಣವನ್ನು ಹತ್ತಿರದಿಂದ ನೋಡಿ ಈ ಗುಣಗಳನ್ನು ತನ್ನ ವ್ಯಕ್ತತ್ವದ ಅವಿಭಾಜ್ಯ gujarat-povertyಅಂಗವಾಗಿ ರೂಪಿಸಿಕೊಂಡ ಅತ್ಯಂತ ಚಾಣಾಕ್ಷ ರಾಜಕಾರಣಿ ಈ ನರೇಂದ್ರ ಮೋದಿ. ಮುಸಲೋನಿಯ ಮಾದರಿಯಲ್ಲಿಯೇ ಕಳೆದ ಹತ್ತು ವರ್ಷಗಳಲ್ಲಿ ಗುಜರಾತ್‌ನಲ್ಲಿ ಮಾನವೀಯತೆಯ, ಸೆಕ್ಯುಲರ್‌ನ ಎಲ್ಲಾ ಬಗೆಯ ಮಾದರಿಗಳನ್ನು ಮತ್ತು ಬದುಕನ್ನು ,ಪ್ರಜ್ಞಾವಂತರ ಚಿಂತನೆಗಳನ್ನು ತನ್ನ ಸರ್ವಾಧಿಕಾರದ ಮೂಲಕ ಹೆಚ್ಚೂ ಕಡಿಮೆ ಸಾಯಿಸಿರುವ ಈ ಮೋದಿ ಭಸ್ಮಾಸುರನ ರೀತಿಯಲ್ಲಿ ತನ್ನ ಮುಂದಿನ ಆಹುತಿಗಳಿಗಾಗಿ ದೆಹಲಿಯ ಗುದ್ದುಗೆಗಾಗಿ ತಡಕಾಡುತ್ತಿದ್ದಾನೆ. ಅಪಾರ ಮಹಾತ್ವಾಕಾಂಕ್ಷಿಯಾದ ಈ ಅದ್ಭುತ ಭಾಷಣಕಾರ ನರೇಂದ್ರ ಮೋದಿಯ ಸರ್ವಾಧಿಕಾರಕ್ಕೆ ಮುಂದಿನ ಪ್ರಯೋಗಶಾಲೆ ಕೇಂದ್ರದಲ್ಲಿನ ಅಧಿಕಾರ. ಆದರೆ ಫ್ಯಾಸಿಸ್ಟರಿಗೆ ಎಂದೂ ಮಣೆ ಹಾಕದ ಭಾರತದ ಆರೋಗ್ಯವಂತ ಮನಸ್ಸು ಸರ್ವಾಧಿಕಾರಿ ಮೋದಿಗೂ ಸರಿಯಾಗಿಯೇ ಕಪಾಳಮೋಕ್ಷ ಮಾಡಲಿದೆ. ಹಿಂದೂ ಧರ್ಮದ ಏಕರೂಪಿ ಸಂಸ್ಕೃತಿಯ ಪ್ರತಿಪಾದಕನಾದ ಈ ಮೋದಿ ಸರ್ವಾಧಿಕಾರವನ್ನು ಬಳಸಿಕೊಂಡು ಎಲ್ಲವನ್ನೂ ಸಾಧಿಸಬಹುದೆಂಬ ಹುಸಿ ನಂಬುಗೆಯಲ್ಲಿದ್ದಾನೆ. ಅನೇಕ ಸುಳ್ಳುಗಳನ್ನೊಳಗೊಂಡ ಈತನ ಅಭಿವೃದ್ಧಿ ಮಂತ್ರಗಳ ನಿಜಬಣ್ಣ ಇಂದು ಬಯಲಾಗುತ್ತಿದೆ. ಸರ್ವಾಧಿಕಾರದ ಉಕ್ಕಿನ ಹಿಡಿತದ ಆಡಳಿತದ ಶೈಲಿಯನ್ನು ಸಶಕ್ತ ಆಡಳಿತಗಾರನ ಶೈಲಿಯೆಂದು ಸ್ವತಃ ಮೋದಿ ಮತ್ತು ದಿವಾಳಿಯೆದ್ದ ಬಹುಪಾಲು ಮಾಧ್ಯಮಗಳು ಬೂಸಿ ಬಿಟ್ಟಿದ್ದು, ವರ್ಷಗಳ ಕಾಲ ಹಾದಿ ತಪ್ಪಿಸಿದ್ದು ಇಂದು ಇವೆಲ್ಲವೂ ಬತ್ತಲಾಗಿ ಬಯಲಾಗಿದ್ದೂ ಪ್ರಜ್ಞಾವಂತ ಭಾರತೀಯ ಮರೆತಿಲ್ಲ. ಈತನ ಹತ್ತು ವರ್ಷಗಳ ಕಾಲದ ಆಡಳಿತದಲ್ಲಿ ಗುಜರಾತ್‌ನ ಸೌರಾಷ್ಟ್ರ ಭಾಗವು ಸಂಪೂರ್ಣವಾಗಿ ನಿರ್ಲಕ್ಷ್ಯಕ್ಕೆ ಗುರಿಯಾಗಿ ನಿರಂತರ ಬರಗಾಲಕ್ಕೆ ತುತ್ತಾಗುತ್ತಿರುವುದು ಇಂದು ಭಾರತದ ಕಣ್ಣ ಮುಂದಿದೆ.

ಗುಜರಾತ್‌ನ ಹುಸಿ ಅಭಿವೃದ್ಧಿಯ ಕಾಲಘಟ್ಟದಲ್ಲಿಯೇ ಆ ರಾಜ್ಯದಲ್ಲಿ ಮಾನವ ಸಂಪನ್ಮೂಲದ ಸೂಚ್ಯಾಂಕ ಕೆಳಮಟ್ಟದಲ್ಲಿದೆ. Modiಖಾಸಗಿ ಮಾಲೀಕರು ಮತ್ತು ಖಾಸಗಿ ಉದ್ದಿಮೆದಾರರ ಅಭಿವೃದ್ಧಿಯನ್ನು ರಾಜ್ಯದ ಏಳ್ಗೆಯೆಂಬಂತೆ ಜಂಬ ಕೊಚ್ಚಿಕೊಂಡಿದ್ದು, ಮೇಲ್ಪದರದ, ನಗರಕೇಂದ್ರಿತ ಸುಧಾರಣೆಗಳನ್ನು ಇಡೀ ರಾಜ್ಯಕ್ಕೆ ಅನ್ವಯಿಸಿ ದಾರಿ ತಪ್ಪಿಸಿದ್ದು ಇಂದು ಭಾರತೀಯ ಮನಸ್ಸಿಗೆ ನಿಧಾನವಾಗಿಯಾದರೂ ನಿಖರವಾಗಿ ಗೋಚರಿಸುತ್ತಿದೆ. ಸಣ್ಣ ಮಟ್ಟದ ಬಂಡವಾಳ ಹೂಡಿಕೆಯನ್ನು ಕೃತಕವಾಗಿ, ಕಾಲ್ಪನಿಕವಾಗಿ ದ್ವಿಗುಣಗೊಳಿಸಿ ಮೋಸದ ಅಂಕಿಅಂಶಗಳನ್ನು ತೇಲಿಬಿಟ್ಟರೂ ಅದು ಬಹಳ ಕಾಲ ನಿಲ್ಲದೇ ಮೋದಿ ನಗೆಪಾಟಲಿಗೀಡಾಗಬೇಕಾಯ್ತು. ಶಿಲಾಯುಗದ, ಮನುವಾದದ ಗುಂಪಿನ ಸ್ವಯಂಸೇವಕನೊಬ್ಬ ಇಂದು ತಾನೊಬ್ಬ ಆಧುನಿಕ ಮುಖ್ಯಮಂತ್ರಿಯೆಂದು ಅತ್ಯಂತ ಯಶಸ್ವಿಯಾಗಿ ಮಾರ್ಕೆಟಿಂಗ್ ಮಾಡಿದ್ದು ಮೋದಿಯ ಬಲು ದೊಡ್ಡ ಸಾಧನೆ. ಹಾಗೆಯೇ 2002 ರಲ್ಲಿ ಮುಸ್ಲಿಂರ ಹತ್ಯಾಕಾಂಡವೂ ಸಹ. ಇದರ ಕಲೆಯನ್ನು ಯಾವುದೇ ಬಗೆಯ ಸುಗಂಧ ದ್ರವ್ಯಗಳಿಂದಲೂ ತೊಳೆಯಲಾಗದೆ ಸೋತುಹೋಗಿರುವ ಮೋದಿ ಇಂದು ತಿರಸ್ಕೃತಗೊಂಡ ಜನಪ್ರಿಯ ರಾಜಕಾರಣಿ. ಸ್ವತಂತ್ರ ಭಾರತದಲ್ಲಿ ಇಷ್ಟರ ಮಟ್ಟಿಗೆ ಏಕಾಂಗಿಯಾದ ಜನಪ್ರಿಯ ರಾಜಕಾರಣಿಯ ಉದಾಹರಣೆ ಮತ್ತೆಲ್ಲೂ ಸಿಗಲಾರದು. ಏಕೆಂದರೆ ಶಿವ ವಿಶ್ವನಾಥನ್ ಹೇಳಿದಂತೆ ,”ಮೋದಿ ಭಾರತವನ್ನು ಪ್ರತಿನಿಧಿಸುವುದಿಲ್ಲ. ಏಕೆಂದರೆ ಸಂವಿಧಾನವನ್ನು ಗೌರವಿಸುವ, ಒಳಗೊಳ್ಳುವಿಕೆಯ ಯಾವುದೇ ಗುಣಲಕ್ಷಣಗಳು ಈತನಲ್ಲಿಲ್ಲ.”