Daily Archives: August 7, 2013

ನಿಂಗಮ್ಮನ ಹರಕೆ, ಸೂರಿದೇವರ ಗೂಳಿ : ಗಂಗೆ, ಗೌರಿ,..: ಭಾಗ–4

– ಎಚ್.ಜಯಪ್ರಕಾಶ್ ಶೆಟ್ಟಿ

ಭಾಗ – 1: ಗಂಗೆ, ಗೌರಿ, ಕೆಂಪಿ, ಬುಡ್ಡಿಯರನ್ನು ಕೂಗಿ…
ಭಾಗ – 2: ಹಟ್ಟಿಯ ಅವತಾರ, ಹಕ್ಕಿಯ ಕೂಗು
ಭಾಗ – 3: ನಮ್ಮ ಅಪ್ಪ ಎಮ್ಮೆ ಸಾಕಣೆ ಸಾಕುಮಾಡಿದ್ದು

ಭಾಗ – 4: ನಿಂಗಮ್ಮನ ಹರಕೆ, ಸೂರಿದೇವರ ಗೂಳಿ

ಉಳುವ ಎತ್ತು/ಕೋಣ ಕಳಿಹಾಕಿದರೆ, ಕರೆವ ಹಸು ಹಾಲಿಳಿಸದಿದ್ದರೆ, ಗಬ್ಬಕಟ್ಟಿ ಕರುಹಾಕದಿದ್ದರೆ, ಕಾಲುಕುಂಟಿದರೆ, ಕೈತಪ್ಪಿ ಹೋಗಿಯೇ ಬಿಟ್ಟಿತೆಂಬ ಕಾಯಿಲೆಗೆ ತುತ್ತಾದರೆ-ಹೀಗೆ ಹಸುಗಳ ಮೇಲೆಹರಕೆಗಳು ಹುಟ್ಟಿಕೊಳ್ಳುವುದಕ್ಕೆ ಕಾರಣಗಳು ಹಲವು. ನಾಗ, ಬೊಬ್ಬರ್ಯ, ಹೈಗುಳಿ, ಚೌಂಡಿ, ಕೀಳು ಹೀಗೆ ಸರದಿಯ ಮೇಲೆ ಹಟ್ಟಿಯ ಹಸುವಿನ ಮೇಲಿನ ಮೌಲು ಹಾಳಾಗದ ಹಾಗೆ ಕಾದುಕೊಡುವ ಸೈನಿಕರಿಗೆ ತೆಂಗಿನಕಾಯಿ, ಹಸುವಿನ ಹಾಲು,ಕೋಳಿ-ಪಾಳಿ ಇನ್ನು ಏನೇನೋ ಹರಕೆ ಹೇಳಿಕೊಂಡು ಸಂದಾಯ ಮಾಡಿ ‘ಚಾಷ್ಟಿ’ (ಚೇಷ್ಟೆ) ಆಗದ ಹಾಗೆ ಜಾಗೃತೆವಹಿಸದೆ ಹೋದರೆ ಹಟ್ಟಿ ಖಾಲಿಯಾದೀತೆಂಬ ಭಯ. Pongal-calfಈ ಭಯ-ಭಕ್ತಿಯ ಭಾಗವಾಗಿ ಅಮ್ಮನವರಮನೆಗೆ (ಈಗ ಅವುಗಳೆಲ್ಲಾ ಪರಮೇಶ್ವರಿಯ ದೇವಸ್ಥಾನಗಳಾಗಿವೆ!) ಹಸು ಕರುವನ್ನೇ ಬಿಡುವ ಕ್ರಮವೂ ಇದೆ. ಇದೊಂತರಹ ಹಸುಗಳ ಪಾಲಿಗೆ ವಿಮೆ ಮಾಡಿಸಿದ ಹಾಗೆ!

ನನ್ನ ಅಕ್ಕಪಕ್ಕದ ಮನೆಗಳೆರಡರಲ್ಲಿ ಎರಡು ಕುತೂಹಲಕಾರಿ ಹಸುಸಂಬಂಧಿ ಹರಕೆಗಳಿದ್ದವು. ಒಂದು ಮನೆಯಲ್ಲಿ ಕಮ್ರಸಾಲಿನಿಂಗಮ್ಮ (ಕಮಲಶಿಲೆ ಬ್ರಾಹ್ಮೀದುರ್ಗಾಪರಮೇಶ್ವರಿ!)ನ ಹೆಸರು ಹೇಳಿ ಬಿಟ್ಟ ಹರಕೆಯ ಚಾಲ್ತಿ ರೂಪವಿದೆ. ಇನ್ನೊಂದು ಮನೆಯಲ್ಲಿ ನಾನು ಮತ್ತೆಲ್ಲೂ ಕೇಳಿರದ ಸೂರೀ ದೇವರಿಗೆ (ಸೂರ್ಯ ದೇವರಿಗೆ) ಬಿಟ್ಟ ಹರಕೆ ನಡೆದುಕೊಂಡು ಬರುತ್ತಿತ್ತು ಮಾತ್ರವಲ್ಲ ಈಗಲೂ ಇದೆ. ನಿಂಗಮ್ಮನಿಗೆ ಹರಕೆಬಿಟ್ಟ ಹಸುವಿನ ಕರುಮರಿ ಮಾಡಿ ಕರಾವು ಮಾಡಿಕೊಂಡು ಉಣ್ಣುವುದಕ್ಕೆ ತೆರಿಗೆ ಕಟ್ಟುವ ಹಾಗೆ ವರ್ಷಕ್ಕೊಂದಾವರ್ತಿ ನಿಂಗಮ್ಮನಿಗೆ ಹಾಲು,ತುಪ್ಪ ಒಪ್ಪಿಸಿ ಕಾಸುರುಬಿ (ಕಾಸುರೂಪಾಯಿ) ಕಾಣಿಕೆ ಸಲ್ಲಿಸುವ ಕ್ರಮವಿತ್ತು. ಈ ಹಸುವಿನ ಹೆಣ್ಣು ಕರುಗಳೆಲ್ಲಾ ನಿಂಗಮ್ಮ ಕೊಟ್ಟ ಸಂತಾನವಾಗಿ ಆ ಹಟ್ಟಿಯಲ್ಲಿಯೇ ಹರಕೆಯ ನಿಯಮಕ್ಕೊಳಪಟ್ಟು ಸಾಕಲ್ಪಡುತ್ತಿದ್ದವು. ಆದರೆ ಗಂಡು ಕರುಗಳನ್ನು ಅಲ್ಲಿಗೇ ಹೊಡೆದು ಬರಬಹುದು, ಇಲ್ಲವೇ ಅವುಗಳನ್ನು ‘ಯಾರಿಗಾದರೂ’ ಮಾರಿದರೆ ಮೌಲು ಹಾಕಬೇಕಾಗಿತ್ತು.

ನಿಂಗಮ್ಮನ ಹರಕೆಯಲ್ಲಿ ಹರಕೆ ಸಂದಾಯ ಮಾಡುವ ದಾರಿಯ ಬಗ್ಗೆ ಹೆಚ್ಚು ಗೊಂದಲ ಇರಲಿಲ್ಲ. ಆದರೆ ಸೂರೀದೇವರ ಹರಕೆಯ ಕರುಮರಿಗಳ ವಿಲೇವಾರಿಗೆ ಸಂಬಂಧಿಸಿದಂತೆ ಸ್ಪಷ್ಟತೆ ಇರಲಿಲ್ಲ. ಈ ಹಸುವಿನ ಕರುಗಳನ್ನು ಮಾರುವುದಕ್ಕಿಲ್ಲ. ಹರಕೆ ಸಂದಾಯದ ಭಾಗವಾಗಿ ಬೆಳಿಗ್ಗೆ ಹಾಲು ಕರೆದು (ಹಾಲುತಿಂಡಿ) ಒಳತರುವಾಗ ಪಾತ್ರೆಯನ್ನು ಸೆರಗಿನಿಂದ ಮುಚ್ಚದೆ, ತೆರೆದುಕೊಂಡೇ ತರಬೇಕು. ಒಳತರುವ ಮುನ್ನ ತುಳಸಿಕಟ್ಟೆಯ ಎದುರಿಗೆ ಮೂಡುದಿಕ್ಕಿನ ಸೂರ್ಯನಿಗೆ ತೋರಿಸಿ, ಒಂದಿಷ್ಟು ಹಾಲನ್ನು ತುಳಸಿಬುಡಕ್ಕೆ ಬಿಟ್ಟು ನಂತರ ತಮ್ಮ ಉಪಯೋಗಕ್ಕಾಗಿ ಮನೆಯ ಒಳಕ್ಕೆ ಕೊಂಡೊಯ್ಯುವ ಕ್ರಮ ಹರಕೆ ಸಂದಾಯದ ದಿನಚರಿಯ ಭಾಗವಾಗಿತ್ತು. ಹಾಲು ಮಾರುವುದಕ್ಕೆ , ಮಜ್ಜಿಗೆ ಮೊಸರು ತಿನ್ನುವುದಕ್ಕೆ ತಕರಾರಿರದ ಈ ಹರಕೆಯಲ್ಲಿ ‘ಹಣ’ ಎಂಬುದರ ಪ್ರಶ್ನೆಯೇ ಇರಲಿಲ್ಲ. ಶುದ್ಧ ಆದಿಮಸ್ವರೂಪದ ವಿಕ್ರಯ ವಿಲೇವಾರಿಯಿರದ ಈ ಹರಕೆಯಲ್ಲಿ ಯಾವುದೇ ನಿರ್ದಿಷ್ಟ ದೈವ ಕೇಂದ್ರದ ಕಲ್ಪನೆಯೂ ಇಲ್ಲ. ವಸ್ತುರೂಪದ ಸಂದಾಯವೂ ಇಲ್ಲ.bull ಭಾವನೆಯ ಬುನಾದಿಯಲ್ಲಿ ಕಟ್ಟಲಾಗಿದ್ದ ಪರಿಹಾರದ ಸುಲಭದಾರಿಗಳಿಲ್ಲದ ಈ ಹರಕೆಯಲ್ಲಿ ಅಳಿದುಳಿದು ಬದುಕಿ ಬಿಡುವ ಗಂಡುಕರುಗಳದ್ದೇ ಸಮಸ್ಯೆ. ಅವುಗಳನ್ನು ಬೀಜ ಒಡೆಯುವಂತಿಲ್ಲ (ಶೀಲ ಮಾಡುವಂತಿಲ್ಲ). ಶೀಲಮಾಡದೆ ಉಳಲು ಬಳಸುವುದು ಅಷ್ಟು ಸುಲಭವಲ್ಲ. ಜೀವಿತದುದ್ದಕ್ಕೂ ಮನೆಯ ಹಟ್ಟಿಯಲ್ಲಿಯೇ ಅವನ್ನು ಉಳಿಸಿಕೊಳ್ಳಬೇಕಾಗಿತ್ತು. ಉಳಿದ ಹರಕೆಗಳಲ್ಲಿ ಅಂದರೆ ಧರ್ಮಸ್ಥಳದ ಅಣ್ಣಪ್ಪನಿಗೋ, ಹಿರಿಯಡಕದ ಅಬ್ಬಗದಾರಕನಿಗೋ ಬಿಡುವ ಗಂಡು ಕರುಗಳನ್ನು ಅಲ್ಲಿಗೇ ಹೊಡೆದು ಬರಬೇಕಾಗಿರಲಿಲ್ಲ. ಅವುಗಳನ್ನು ಉಳುವವರಿಗೋ,ತಿನ್ನುವವರಿಗೋ ಮಾರಿ ಮೌಲು ಕಳಿಸಿದರೆ ಮುಗಿಯಿತು. ಅಣ್ಣಪ್ಪ ದೇವರಿಗೆ ಹರಕೆಬಿಟ್ಟ ಗಂಡುಕೋಳಿಯನ್ನು ಗೃಹಸ್ಥರು ಕಟ್ಟುವ ರೇಟಿಗೆ ಕೊಟ್ಟು ಮೌಲು ಕಳಿಸುವ ಕ್ರಮದಷ್ಟೆ ಸರಳವಿದು. ಆದರೆ ಸೂರೀದೇವರ ಹರಕೆಯಲ್ಲಿ ಇದಕ್ಕೆ ಅವಕಾಶವಿರಲಿಲ್ಲ.

ಮೇಲೆ ಹೇಳಲಾದ ಕಮ್ರಸಾಲಿ ಮತ್ತು ಸೂರೀದೇವರ ಹರಕೆಯ ಕುಡಿಗಳು ಈಗಲೂ ಆ ಎರಡು ಮನೆಗಳಲ್ಲಿ ಮುಂದುವರೆದುಕೊಂಡು ಬಂದಿವೆ. ನನ್ನ ದಾಯದ್ಯರೇ ಆದ ನನ್ನ ಪಕ್ಕದಮನೆಯಲ್ಲಿ ಕಮ್ರಸಾಲಿಗೆ ಬಿಟ್ಟದ್ದೆಂದು ಹೇಳಲಾಗುವ ರತ್ನು ಎಂಬ ದನವಿತ್ತು. ನನಗೆ ಬುದ್ಧಿ ಬರುವಾಗಲೇ 3-4 ಕರುಹಾಕಿ ಮುಗಿಸಿರುವ ಈ ಹಸು ದಿನಕ್ಕೆ 2-3 ಸಿದ್ದೆ ಹಾಲು ಕೊಡುತ್ತಿದ್ದ ಕಿರುಗಾತ್ರದ ಬೂದುಗೆಂಪು ಬಣ್ಣದ್ದು. ತಲೆಯ ಮೇಲೆ ಬೆಳ್ಳನೆಯ ಬೆರಳಿನಷ್ಟೇ ಉದ್ದದ ಅಲುಗಾಡುವ ಪುಟ್ಟ ಪುಟ್ಟ ಹಾಲುಗೋಡುಗಳನ್ನು ಹೊಂದಿದ್ದ ಈ ಹಸುವಿನ ಬಗೆಗೆ ಅಕ್ಕಪಕ್ಕದ ಮನೆಗಳಲ್ಲಿ ಒಳ್ಳೆಯ ಮಾತೆಂಬುದೇ ಇರಲಿಲ್ಲ. ಎಂತಹ ಬೇಲಿಯನ್ನಾದರೂ ಹಂದಿಯ ಹಾಗೆ ತೂರಿಕೊಂಡು ಕಳ್ಳನ ಹಾಗೆ ನುಗ್ಗಿ ಬಿಡುವ ಛಾತಿಯ ಹಸುವಿದು. ಈ ಹಸು ತಿಂದ ಬೆಳೆಗಳು ಅಲ್ಲಿಯೇ ಕಮರಿಹೋಗುತ್ತವೆ ಎಂಬುದಾಗಿ ಆಡಿಕೊಳ್ಳುತ್ತಿದ್ದ ಊರಮಂದಿ ಇದನ್ನು ಒಡುವಿನಂತೆ ಕಬರು ನಾಲಿಗೆಯದ್ದೆಂದೂ (ಉಡ/ಒಡು = ಅರಿಷ್ಟದ ಪ್ರಾಣಿ), ಅರಿಷ್ಟ ಹಿಡಿದದ್ದೆಂದೂ ಕರೆಯತ್ತಿದ್ದುದನ್ನು ಕೇಳಿದ್ದೇನೆ. ನನ್ನಪ್ಪನಂತೂ ಈ ದನವನ್ನು ಕಂಡರೇ ಕುದಿಯುತ್ತಿದ್ದುದನ್ನು ಕಂಡಿದ್ದೇನೆ. ನೋಡಲು ಪಾಪದ ನಿರುಪದ್ರವಿಯಂತೆ ಕಾಣಿಸುತತ್ತಿದ್ದ ಈ ದನ ನುಗ್ಗಿ ಬಾಯಿ ಹಾಕಿದ ಬೆಳೆ ಹಾಳಾಯಿತೆಂದೇ ಊರಲ್ಲನೇಕರು ಭಯಪಡುತ್ತಿದ್ದರು. ನಮ್ಮ ತಂದೆ ಹೊಳೆ ಬದಿಯಲ್ಲಿ ತಮ್ಮೆಲ್ಲಾ ಶ್ರಮ ಹಾಕಿ ಮಕ್ಕಳಂತೆ ಬೆಳೆಸಿದ ಮೆಣಸಿನ ಹಿತ್ತಲಿಗೆ ಎಂತಹದೇ ಬೇಲಿ ಮಾಡಿದರೂ ಈ ದನ ಅದನ್ನು ತಿನ್ನದೇ ಬಿಟ್ಟ ವರ್ಷವೇ ಇಲ್ಲ. ಹೆಚ್ಚು ವೇಗವಾಗಿ ಓಡಲಾರದ, decorated-bullಎಂತಹ ಬೇಲಿಯನ್ನಾದರೂ ನುಸಿಯುವ ಈ ದನ ತೊಂಡು ತಿನ್ನುವಾಗ ಸಿಕ್ಕಿದರೆ ಇದನ್ನೇನು ದೇವರಿಗೆ ಬಿಟ್ಟದನ ಎಂದು ಯಾರೂ ರಿಯಾಯಿತಿ ತೋರುತ್ತಿರಲಿಲ್ಲ. ಸಿಕ್ಕಿದಲ್ಲಿ ಬುಡ್ಡುಬುಡ್ಡು ಅಂತ ಹೇರುತ್ತಿದ್ದರು. (ಹೊಡೆಯುತ್ತಿದ್ರು). ಇಷ್ಟೆಲ್ಲ ಮಾಡಿ ಅದು ಕರೆಯುತ್ತಿದ್ದುದೇನೂ ಲೀಟರ್‌ಗಟ್ಟಲೆಯಾಗಿರಲಿಲ್ಲ. ಹಾಗಾಗಿ ಸಾಕಿದವರಿಗೆ ಕರೆಯುವ ಹಾಲಿನ ಪಾತ್ರೆ ತುಂಬಿಸದೆ ಹೋದರೂ ಕಿವಿತುಂಬ ಬೈಗುಳ ತುಂಬಿಸದೇ ಬಿಡುತ್ತಿರಲಿಲ್ಲ. ಗದ್ದೆಗಳಿಗೆ ನುಗ್ಗುವ ಪ್ರತೀ ಬಾರಿಯೂ ಶಾಪವನ್ನೇ ಬಳುವಳಿಯಾಗಿ ಪಡೆಯುತ್ತಿದ್ದ ‘ರತ್ನು’ ತನ್ನ ಮೈಯಲ್ಲಿ ಕಸುವು ಇರುವಲ್ಲಿಯವರೆಗೂ ಕಾಡುವುದನ್ನು ಬಿಡಲಿಲ್ಲ. ಜತೆಗೆ ಈ ಪುಣ್ಯಾತಗಿತ್ತಿ ಹಸುವಿನ ಬಳುವಳಿಯಾಗಿ ಬದುಕಿದ್ದು ಒಂದೋ ಎರಡೋ ಹೆಣ್ಣು ಕರುಗಳು ಮಾತ್ರ.. ಮತ್ತುಳಿದಂತೆ ಬದುಕಿದ ಕೆಲವು ಗಂಡುಕರುಗಳು ಮೌಲಾಗಿ ಪರಿವರ್ತಿಸಲ್ಪಟ್ಟು ನಿಂಗಮ್ಮನ ಕಾಣಿಕೆ ಹುಂಡಿ ಸೇರಿದುವು. ಕಸುವಿರುವ ತನಕ ಕಾಡುತ್ತಾ, ಕರುಹಾಕುತ್ತಾ ಬದುಕಿದ ರತ್ನು, ಮುದಿ ಅವಸ್ಥೆಯಲ್ಲಿ ತನ್ನ ಮೇಲೆ ಈ ಹಿಂದೆಬಿದ್ದ ಸಾಪುಳಿ (ಶಾಪದಉಲಿ) ಯನ್ನೆಲ್ಲಾ ತಾನೇ ಅನುಭವಿಸಿ ತೀರಿಸುವಂತೆ ಒಣಹುಲ್ಲು ಜಗಿಯಲಾರದೆ, ನಡೆಯಲು ತ್ರಾಸಪಡತೊಡಗಿತು. ಅದೇನು ದೊಡ್ಡಗಾತ್ರದ ಹಸುವಾಗಿರಲಿಲ್ಲ. ಒಂದಿಬ್ಬರು ಆರಾಮವಾಗಿ ಅದನ್ನು ಎತ್ತಿ ನಿಲ್ಲಿಸಬಹುದಿತ್ತು. ಆದರೆ ಆ ಒಂದಿಬ್ಬರು ಮನೆಯಲ್ಲಿ ಇರಬೇಡವೇ? ಇಲ್ಲಿಯವರೆಗೆ ನಿಂಗಮ್ಮನ ಹರಕೆಯ ಹೊರೆ ಅರ್ಥವಾಗದ ಮನೆಮಂದಿಗೆ ಹಟ್ಟಿಯಲ್ಲ್ಲಿಯೇ ಮಲಗಿ ಗಾಯವಾಗಿ ಹುಳಪಳ ಆಗಿ ನವೆಯತೊಡಗಿದಾಗ ಆದಷ್ಟು ಬೇಗ ಸಾವಿನ ಮೂಲಕವಾದರೂ ಅದರ ನೋವಿಗೆ ಪರಿಹಾರ ಸಿಕ್ಕಲಿ ಎಂದು ಬೇಡತೊಡಗಿದರು. ಒಂದೆರೆಡು ತಿಂಗಳು ಕೊರಗಿ ಕೊನೆಗೂ ಸತ್ತು ಹೋದ ರತ್ನುವನ್ನು ಹಟ್ಟಿಯಿಂದ ಕದಲಿಸಿ ಹಪ್ಪುಗಳ (ರಣಹದ್ದಿಗೆ) ಬಾಯಿಗೆ ಆಹಾರವಾಗಿಸಲು ಅದನ್ನು ಸಾಕಿ ಈಗ ಮುದಿಯಾಗಿ ಕುಳಿತ ಯಜಮಾನದಂಪತಿಯೇ ತ್ರಾಸ ಪಡಬೇಕಾಯಿತು. ಅದನ್ನು ಸಾಕಿದ ಕಾರಣದಿಂದಾಗಿ ಅದರ ಹಾಲಿಗಿಂತ ತುಸು ಹೆಚ್ಚೇ ಬೈಗುಳ ತಿಂದ ಆ ಮುದಿ ಗಂಡ-ಹೆಂಡತಿಯೇ ಒದ್ದಾಡಬೇಕಾಗಿ ಬಂತು. ಅದು ಅನಿವಾರ್‍ಯವೂ ಹೌದು. ಯಾಕೆಂದರೆ ಅನ್ನ ಹುಡುಕುವ ಅನಿವಾರ್‍ಯತೆಯಲ್ಲಿ ಮನೆಯಲ್ಲಿ ಹುಟ್ಟಿದವರೆಲ್ಲಾ ಮನೆಯಲ್ಲಿಯೇ ಕೂರಲಾದೀತೆ? ಅಪ್ಪ-ಅಮ್ಮನನ್ನು ನೋಡಲು ವರ್ಷಕ್ಕೊಂದಾವರ್ತಿ ನೋಡಲು ಬರುವ ಅವರ ಮಕ್ಕಳಿಗೆ ಮುದಿರತ್ನುವನ್ನು ಸಾಕುತ್ತಾ ಕೂತುಬಿಡಿ ಎನ್ನಲಾದೀತೆ? ಅವರ ಹೊಟ್ಟೆ ಮತ್ತು ಆ ಹೊಟ್ಟೆಯಲ್ಲಿ ಮತ್ತೆ ಹುಟ್ಟುವವರ ಹೊಟ್ಟೆಗಳ ಪ್ರಶ್ನೆ ರತ್ನುವಿಗಿಂತಲೂ ಕಂಡಿತಾ ದೊಡ್ಡದಲ್ಲವೆ? ಅಂತೂ ನಿಂಗಮ್ಮನ ಹರಕೆಯ ಹಸು ಕೊನೆಗೂ ಹೆಣವಾಗಿ, ಮೂಳೆಯಾಗಿ ಹಾಡಿಯಲ್ಲಿ ಚದುರಿ ಹೋಯಿತು.

ಹಟ್ಟಿಯ ಹಸುವನ್ನು ಹುಲಿ ಹಿಡಿದು ತಿನ್ನುತ್ತಿದ್ದ ಕಾಲದಲ್ಲಿ ‘ಸೂರೀದೇವರೇ ನೀನೇ ಕಾದುಕೊಡು’ ಎಂದು ಹೇಳಿಕೊಂಡು ಆರಂಭಿಸಿದ ಹರಕೆಯೆಂಬಂತೆ ಪ್ರತೀತಿಯುಳ್ಳ ಹರಕೆಯನ್ನು ಪಾಲಿಸುತ್ತಿದ್ದ ಇನ್ನೊಂದು ಮನೆಯಲ್ಲಿ ಹುಟ್ಟಿದವುಗಳಲ್ಲಿ ಸತ್ತು-ಬದುಕಿ ಅಂತೂ ಕೆಲವು ಕರುಮರಿಗಳಿದ್ದವು. ಈ ಹರಕೆಯ ಗಂಭೀರ ಪರಿಣಾಮವನ್ನು ಹರಕೆಯಾಚರಣೆಯ ಮನೆಯವರು, ಊರವರು ಅನುಭವಿಸುವಂತಾದುದು ಪಾಪದ ಹೆಣ್ಣುಕರುಗಳಿಂದಲ್ಲ. ಬದಲಾಗಿ ಶೀಲಮಾಡಲು ನಿಷೇಧವಿರುವ ಕಾರಣಕ್ಕಾಗಿ ಸೊಕ್ಕಿದ ಗಂಡುಗೂಳಿಯಿಂದ. ಮೈಕೈ ತುಂಬಿಕೊಂಡು ಗುಟುರು ಹಾಕುತ್ತಾ ಗದ್ದೆ ಅಂಚುಗಳನ್ನು ತನ್ನ ಎಳೆಗೋಡುಗಳ ತೀಟೆಗೆ ಉದುರಿಸುತ್ತಿದ್ದ ಗುಡ್ಡನ(ಗೂಳಿಯ)ಕೋಡು ಮನುಷ್ಯರ ಕಡೆಗೆ ತಿರುಗಲು ಹೊರಟಾಗಲೇ ಅಪಾಯ ಆರಂಭವಾದುದು. ಸೊಕ್ಕಿನ ಈ ಗುಡ್ಡ ಗಾತ್ರದಲ್ಲಿ ಬಹಳವಾಗಿಯೇನು ಇರಲಿಲ್ಲ. ಹಾಗಿದ್ದೂ ಊರಿನ ಬೆದೆಹಸುಗಳ ಯಜಮಾನನಾಗಿ ಕಂಡವರ ಹಟ್ಟಿಗೆ ದಾಳಿಯಿಟ್ಟು ಪ್ರತಾಪ ತೋರಿಸಲು ತೊಡಗಿ, ಪ್ರಾಯದ ಎತ್ತುಗಳ ಜತೆಗೆ ಇದರ ಹೊ ಕೈ ನಿತ್ಯದ ಸಂಗತಿಯಾಯ್ತು. ರಾಜನಹಾಗೆ ಗುಟುರುಹಾಕುತ್ತಾ ಬೆದೆಬರಿಸಿದ ಹಸುಗಳಿಗೆಲ್ಲಾ ಹುಟ್ಟಿದವುಗಳು ಇದಕ್ಕಿಂತಲೂ ಚಿಕ್ಕ ಮಾವಿನಕಾಯಿ ಗಾತ್ರದ ಕರುಗಳೇ ಆದವು. ಆರಂಭದಲ್ಲಿ ಮನೆಮಂದಿಗೆ ತಕರಾರು ಮಾಡದಿರುತ್ತಿದ್ದ ಗುಡ್ಡ ಊರಲ್ಲಿರುವ ಮಕ್ಕಳು, ಹೆಂಗಸರ ಪಾಲಿನ ಆತಂಕವಷ್ಟೇ ಆಗಿತ್ತು. ಬರಬರುತ್ತಾ ಮನೆಮಂದಿಯೇ ಆದ ಬಚ್ಚಣ್ಣ, ಅಣ್ಣಪ್ಪಣ್ಣನಂತವರನ್ನು ಹೊರಳಾಡಿಸಿಕೊಂಡು ಗುದ್ದಿತು. ಬೆದೆಗೆ ಒಂದು ಬೀಜದ ಗುಡ್ಡವಿದೆಯಲ್ಲಾ ಎಂಬ ನೆಮ್ಮದಿಯ ನಡುವೆಯೇ ಇದರ ಉಪಟಳಕ್ಕಾಗಿ ಇಷ್ಟು ದಿನ ಊರ ಮಂದಿ ಬೈಯುತ್ತಿದ್ದರು. ಈಗ ಮನೆಮಂದಿಯೂ ಅದರ ಮೇಲೆ ವ್ಯಗ್ರರಾಗತೊಡಗಿದರು. bull-Jallikattuಒಮ್ಮೆ ಮನೆ ಹುಡುಗನೊಬ್ಬನ ಎಡವಟ್ಟಿನಿಂದ ಈ ಗೂಳಿಯಿರುವ ಹಟ್ಟಿಗೆ ಬಲಿಪಾಡ್ಯದಂದು ರಾತ್ರಿ ಬೆಂಕಿ ಬಿದ್ದಿತ್ತು. ಆಗ ಪ್ರಾಣ ರಕ್ಷಣೆಗಾಗಿ ಹಟ್ಟಿಯಲ್ಲಿರುವ ಹಸುಗಳ ಕೊರಳ ಬಳ್ಳಿಯನ್ನು ಕತ್ತರಿಸಿ ಬಿಡಲಾಯಿತು. ಈ ವೇಳೆಯಲ್ಲಿ ಹಟ್ಟಿಯಿಂದ ಹೊರಬಂದ ಆ ಗೂಳಿ ಇತರ ಹಸುಗಳೊಂದಿಗೆ ನಮ್ಮ ಹಿತ್ತಿಲಿಗೆ ನುಗ್ಗಿತ್ತು. ಅದು ಹಿತ್ತಲಲ್ಲಿದ್ದುದನ್ನು ಅರಿಯದ ನನ್ನಮ್ಮ ಕತ್ತಲೆಯಲ್ಲಿ ಅವುಗಳನ್ನು ಹೊರಗಟ್ಟಲು ಹೋಗಿ ಅಪಾಯಕ್ಕೆ ಸಿಕ್ಕಿದ್ದಳು. ಈ ಗೂಳಿಯ ಉಪಟಳ ಹೀಗೆ ದಿನೇ ದಿನೇ ಏರುತ್ತಾ ಹೋಯಿತು. ಹಣವೇ ಇಲ್ಲದ ಹರಕೆ ಮನೆಮಂದಿಗೆ ಪರಿಹಾರವೇ ಕಾಣದ ಸಮಸ್ಯೆಯಾಗಿ ಕಾಡತೊಡಗಿತು. ಕೊನೆಗೊಂದು ದಿನ ಸಂಬಂಧವೇ ಇರದಿದ್ದರೂ ಪರಿಹಾರಕ್ಕ್ಕಾಗಿ ಊರದೈವದ ದರ್ಶನದಲ್ಲಿ ಕೇಳಿಕೆಯಾಯ್ತು. ಸಿಕ್ಕ ಪರಹಾರ ಅದಕ್ಕೊಂದು ಎಣೆ(ಜೋಡು)ಮಾಡಿ ಮಾರಿ ಮೌಲನ್ನು ತನ್ನ ಹುಂಡಿಗೆ ಹಾಕುವಂತೆ ಕೊಟ್ಟ ಆದೇಶವಾಗಿತ್ತು. ಎಲ್ಲಿಯ ಸೂರ್‍ಯ ಇನ್ನೆಲ್ಲಿಯ ಮಕ್ಕಿಯಲ್ಲಿ ಕೂತ ನಂದಿ? ಏನೇ ಆಗಲಿ ಕೊನೆಗೂ ಹರಕೆಯ ಮನೆಯವರಿಗೆ ಪರಿಹಾರ ಸಿಕ್ಕಿದ ನೆಮ್ಮದಿ. ಮನೆಯವರಿಗಿಂತ ಹೆಚ್ಚಾಗಿ ಊರಿನ ಮಕ್ಕಳುಮರಿ, ಹೆಂಗಸರು ಅದು ಓಡಿಸಿಕೊಂಡು ಬರುವಾಗಿ ಸೀರೆಯೆತ್ತಿಕೊಂಡು ಓಡುವ ದಾರಿ ಹುಡುಕಬೇಕಾದ ಸ್ಥಿತಿ ತಪ್ಪಿದಕ್ಕಾಗಿ ಖುಷಿಪಟ್ಟರು. ಈ ಸಂಕಟಕಂಡು ಸೂರೀದೇವರಿಗೆ ಸಂಕಟವಾಯಿತೊ ಏನೋ. ಮತ್ತೆ ಅಂತಹ ಇನ್ನೊಂದು ಕಂಟಕ ಆ ಹಸುಗಳ ಒಡಲಿನಿಂದ ಹುಟ್ಟಿದರೂ ಬದುಕಲಿಲ್ಲ. ಆದರೆ ಅಲ್ಲಿಯೇ ಕಾಣುವಂತಾದ ಗೊಡ್ಡು ಹಸುವೊಂದನ್ನು ಗಬ್ಬ ಕಟ್ಟಿಸುವಲ್ಲಿ ಸೋತು, ಹಡ್ಲು-ಪಡ್ಲು ಎಳೆಸಿ ಏನೂ ಮಾಡಲಾರದೆ ಹರಕೆ ಹೊತ್ತ ಕಾರಣಕ್ಕಾಗಿ ಶಾಪಹಾಕಿಕೊಳ್ಳುತ್ತಾ ಐದು ನಯಾ ಪೈಸೆ ಪ್ರಯೋಜನ ಕಾಣದೆ ಬದುಕಿನುದ್ದಕ್ಕೂ ಸಾಕಿ ಸೈ ಎನಿಸಿ ನಿಟ್ಟುಸಿರುಬಿಟ್ಟರು.