Monthly Archives: September 2013

ಮೋದಿ ಮತ್ತವರ ಆನ್‌ಲೈನ್ ಭಕ್ತರ ಬಗ್ಗೆ ಅನಗತ್ಯ ಭಯ ಬೇಡ…


– ರವಿ ಕೃಷ್ಣಾರೆಡ್ದಿ


 

ಕಳೆದ ಎರಡು ದಿನಗಳಿಂದ ವರ್ತಮಾನ,ಕಾಮ್‌ನಲ್ಲಿ ನಡೆಯುತ್ತಿರುವ ಚರ್ಚೆ ಮತ್ತದರ ಸ್ವರೂಪ ನೋಡಿದರೆ ಕರ್ನಾಟಕದ ಮಟ್ಟಿಗಂತೂ ಮೋದಿಯವರ ಆನ್‌ಲೈನ್ ಭಕ್ತರ ಬಗ್ಗೆ ಮತ್ತವರ ಪ್ರಚಾರ ಭರಾಟೆಯ ಬಗ್ಗೆ ಪ್ರಜಾಪ್ರಭುತ್ವವಾದಿಗಳು ಮತ್ತು ಜಾತ್ಯತೀತವಾದಿಗಳು ಭಯಪಡುವುದು ಅನವಶ್ಯಕ ಎನ್ನಿಸುತ್ತದೆ.

ಇಲ್ಲಿಯವರೆಗೂ ಬಹುಪಾಲು ಜನ ಅಂದುಕೊಳ್ಳುತ್ತಿದ್ದೇನೆಂದರೆ, ಅಂತರ್ಜಾಲದಲ್ಲೆಲ್ಲ ಮೋದಿಯ ಭಕ್ತರೇ ತುಂಬಿಕೊಂಡಿದ್ದಾರೆ, ಮೋದಿಯೇ ನಮ್ಮೆಲ್ಲಾ ಕಷ್ಟಗಳನ್ನು ತೊಡೆಯಲು ಬರುತ್ತಿರುವ ಪವಾಡಪುರುಷ, ಮತ್ತು ಬಲಿಷ್ಟ ದೇಶವನ್ನು ಕಟ್ಟಲು ಅವರಿಂದ ಮಾತ್ರ ಸಾಧ್ಯ ಎಂದೆಲ್ಲಾ ಗಟ್ಟಿಯಾದ ಜನಾಭಿಪ್ರಾಯ ರೂಪಿಸುತ್ತಿದ್ದಾರೆ ಎಂದು. ಆದರೆ, ಈ ಗುಂಪಿನಿಂದ ಯಾವ ರೀತಿಯ ಜನಾಭಿಪ್ರಾಯ ರೂಪಿಸಲು ಸಾಧ್ಯವಿದೆ ಮತ್ತು ಇವರ ಮಾತುಗಳನ್ನು ಒಪ್ಪದ ಜನ ಹೇಗೆ ಯೋಚನೆ ಮಾಡುತ್ತಾರೆ ಎನ್ನುವುದು ಸ್ಪಷ್ಟವಾಗಿ ಕಾಣಿಸುತ್ತಿರಲಿಲ್ಲ. ಆನ್‌ಲೈನ್ ಭಕ್ತರು ಮಾತ್ರ ಮತದಾರರಲ್ಲ, ಮತ್ತು ಆನ್‌ಲೈನ್‌ ಆಗಿರುವವರೆಲ್ಲ ಮೋದಿ ಜಪ ಮಾಡುವವವರಲ್ಲ.

ನೆನ್ನೆ ವರ್ತಮಾನ.ಕಾ‌ನಲ್ಲಿ ಎಮ್.ಸಿ.ಡೋಂಗ್ರೆಯವರ “ಮೋದಿಯ ಸುಳ್ಳುಗಳಿಗೆ ದೇಶದ ಜನ ಮರುಳಾಗದಿರಲಿ” ಲೇಖನ ಪ್ರಕಟವಾಯಿತು. ಆ ಲೇಖನದಲ್ಲಿ ಅನೇಕ ಅಂಕಿಅಂಶಗಳಿದ್ದವು. ಕೆಲವನ್ನು ಎಷ್ಟೇ ನಿರಾಕರಿಸಿದರೂ ಮೋದಿಯ ಪರ ಕೆಲಸ ಮಾಡುವ ಅಂಕಿಅಂಶಗಳೂ ಅದರಲ್ಲಿ ಸ್ಥೂಲವಾಗಿ ಇದೆ. ಆದರೆ ಆ ಲೇಖನದ ಒಟ್ಟಾರೆ ಧ್ವನಿ ಗುಜರಾತಿನ ಅಭಿವೃದ್ಧಿಯ ಬಗ್ಗೆ ಪ್ರಶ್ನೆಗಳನ್ನೆತ್ತಿರುವುದೇ ಅಲ್ಲದೆ, ಅಲ್ಲಿ ಆಗಿರಬಹುದಾದ ಅಭಿವೃದ್ಧಿ ಕಾರ್ಯಗಳಿಗೆ modiಮೋದಿಯೊಬ್ಬರೇ ಕಾರಣಪುರುಷ ಅಲ್ಲ ಎನ್ನುವುದನ್ನು ತಿಳಿಸುತ್ತದೆ. ಮೋದಿಯನ್ನು ತಾರ್ಕಿಕವಾಗಿ ಮತ್ತು ಮಾಹಿತಿಯುಕ್ತವಾಗಿ ವ್ಯತಿರೇಕಿಸುವುದೇ ಮುಖ್ಯವಾಗಿರುವ ಆ ಲೇಖನ ವರ್ತಮಾನ.ಕಾಮ್ ಮಟ್ಟಿಗೆ ಅಂತರ್ಜಾಲದಲ್ಲಿ ವೈರಲ್ ಆಗಿ ಪ್ರಸರಿಸಿದಂತಹ ಲೇಖನ. ಸಾವಿರಾರು ಜನ ಆ ಲೇಖನವನ್ನು ಓದಿರುವುದೇ ಅಲ್ಲದೆ, ಸಾಕಷ್ಟು ಕಡೆ ಅದನ್ನು ಹಂಚಿಕೊಂಡಿದ್ದಾರೆ. ಫೇಸ್‌ಬುಕ್‌ನಲ್ಲಿ ಅದನ್ನು ಹಂಚಿಕೊಂಡಿರುವವರ ಮತ್ತು ಲೈಕ್ ಮಾಡಿದವರ ಸಂಖ್ಯೆಯೇ ಈ ಲೇಖನ ಬರೆಯುತ್ತಿರುವ ಹೊತ್ತಿನಲ್ಲಿ 800 ದಾಟಿದೆ. ಮತ್ತು ಹೀಗೆ ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿರುವವರಲ್ಲಿ ಯಾರೊಬ್ಬರೂ ಮೋದಿಯ ಭಕ್ತರಾಗಿರುವುದಿಲ್ಲ ಎನ್ನುವುದನ್ನು ನಾವು ಗಮನಿಸಬೇಕು. ಇಂತಹುದೊಂದು ದೊಡ್ದ ಗುಂಪು ನಿಶ್ಯಬ್ದವಾಗಿ ಇದೆ ಎನ್ನುವುದೇ ಅನೇಕ ವಿಷಯಗಳನ್ನು ಹೇಳುತ್ತದೆ.

ಈ ಲೇಖನ ಪ್ರಕಟವಾಗುವ ಹಿಂದಿನ ದಿನ ನಾನು ಬರೆದಿದ್ದ “ಮೋದಿ ಮತ್ತು ಭವಿಷ್ಯದ ಇತಿಹಾಸದ ಪುಟಗಳು” ಪ್ರಕಟವಾಗಿತ್ತು. ಅಂಕಿಅಂಶಗಳಿಲ್ಲದ ಆ ಲೇಖನ ಮೋದಿಯಂತಹ ಕಿಂಚಿತ್ತೂ ಪ್ರಾಯಶ್ಛಿತ್ತ ಮನೋಭಾವವಿಲ್ಲದ ವ್ಯಕ್ತಿ ಮತ್ತು ಯಡ್ಡಯೂರಪ್ಪನಂತಹ ಭ್ರಷ್ಟಚಾರಿಯೊಡನೆ ರಾಜಿ ಮಾಡಿಕೊಂಡಾದರೂ ಸರಿ ಅಧಿಕಾರ ಹಿಡಿಯುವ ನೀತಿಯ ಹಿಂದೆ ಇದ್ದಿರಬಹುದಾದ ಲಾಲಸೆ ಮತ್ತು ನೀತಿರಾಹಿತ್ಯದ ಬಗ್ಗೆ ಚರ್ಚಿಸಿತ್ತು. ಇದನ್ನು ನಾನು ಹೇಳಬಯಸಿದ್ದೇಕೆಂದರೆ ಕೇಂದ್ರದಲ್ಲಿಯ ಯುಪಿಎ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತ ಮತ್ತು ಅದರ ಬಗ್ಗೆ ಸಕಾರಣಗಳಿಗಾಗಿಯೇ ಕೋಪೋದ್ರಿಕ್ತರಾಗಿರುವ ಒಂದು ಗುಂಪು ಮೋದಿ ಭ್ರಷ್ಟಾಚಾರಿಯಲ್ಲ ಎಂದುಕೊಂಡು ಅವರನ್ನು ಬೆಂಬಲಿಸುತ್ತಿರುವುದು ಅರ್ಥಹೀನ ಎನ್ನುವ ಕಾರಣಕ್ಕೆ. ಭ್ರಷ್ಟಾಚಾರದ ವಿಷಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು. ಬಿಜೆಪಿ ಉತ್ತಮ ಎಂದುಕೊಂಡಿರುವವರು ಮುಗ್ಧರು ಇಲ್ಲವೇ ಅಜ್ಞಾನಿಗಳು. ಆದರೆ ಹೊಸದೇನನ್ನೂ ಹೇಳದೆ, ಇತಿಹಾಸದಲ್ಲಿ ನಾವು ಹೇಗೆ ದಾಖಲಾಗಬೇಕು ಎನ್ನುವ ಬಗ್ಗೆ ಈ ತಲೆಮಾರು ಎಚ್ಚರ ವಹಿಸಬೇಕು ಎಂದು ಹೇಳಿದ್ದ ನನ್ನ ಆ ಲೇಖನ ಮೇಲಿನ ಲೇಖನದಷ್ಟಲ್ಲದಿದ್ದರೂ ನನ್ನ ಊಹೆಗೂ ಮೀರಿ ಅಂತರ್ಜಾಲದಲ್ಲಿ ಹರಡಿದೆ.

ಮತ್ತೆ, ವರ್ತಮಾನ.ಕಾಮ್‌ನಲ್ಲಿ ಪ್ರಕಟವಾಗುವ ಲೇಖನಗಳ ವ್ಯಾಪ್ತಿ ದೊಡ್ದದಿದೆ. ಇದು ಕೇವಲ ಅಂತರ್ಜಾಲಕ್ಕೆ ಸೀಮಿತವಾಗಿಲ್ಲ. ರಾಜ್ಯದ ಅನೇಕ ಕಡೆಯ ಸ್ಥಳೀಯ ಆದರೆ ಪ್ರಭಾವಶಾಲಿಯಾಗಿರುವ ಅನೇಕ ದಿನಪತ್ರಿಕೆಗಳು ಮತ್ತು ವಾರಪತ್ರಿಕೆಗಳು ಇಲ್ಲಿ ಪ್ರಕಟವಾಗುವ ಲೇಖನಗಳನ್ನು ಪ್ರಕಟಿಸುತ್ತವೆ. ರಾಜ್ಯದ ಯಾವಯಾವುದೋ ಮೂಲೆಗಳಿಂದ ಆಗಾಗ ಪರಿಚಿತರು ಫೋನ್ ಮಾಡಿ ’ಇಂದು ಆ ಲೇಖನ ಇಂತಿಂಥ ಪತ್ರಿಕೆಯಲ್ಲಿ ಬಂದಿದೆ’ ಎನ್ನುತ್ತಾರೆ. ಮೋದಿಯ ಬಗ್ಗೆ ಇಲ್ಲಿ ಪ್ರಕಟವಾದ ಲೇಖನಗಳೂ ಸಹ ಮುದ್ರಿತ ರೂಪದಲ್ಲಿ ಸಹಸ್ರಾರು ಓದುಗರನ್ನು ಮುಟ್ಟಿವೆ.

ಈ ಹಿನ್ನೆಲೆಯಲ್ಲಿ ಹೇಳುವುದಾದರೆ, ಅಂತರ್ಜಾಲ ಕೇವಲ ಮೋದಿಯ ಭಕ್ತರಿಂದ ತುಂಬಿತುಳುಕಾಡುತ್ತಿಲ್ಲ. ಮತ್ತು ಮೋದಿಯನ್ನು ವಿರೋಧಿಸುವವರೆಲ್ಲ ಕಾಂಗ್ರೆಸ್‌ನ ನೀತಿಗಳನ್ನು ಮತ್ತು ಭ್ರಷ್ಟಾಚಾರವನ್ನು ಒಪ್ಪಿಕೊಂಡವರಾಗಲಿ, ವಿರೋಧಿಸದೇ ಉಳಿದವರಾಗಲಿ ಅಲ್ಲ. ಈ ದೇಶದಲ್ಲಿ ಪ್ರಜಾಪ್ರಭುತ್ವದ ಕಲ್ಪನೆಗೆ ವಿರುದ್ಧವಾಗಿರುವ rahul_priyanka_soniaವಂಶಪಾರಂಪರ್ಯ ಹಿಡಿತ ಹಾಗೂ ಅನಿಯಂತ್ರಿತ ಭ್ರಷ್ಟಾಚಾರದಿಂದ ಮುಳುಗಿರುವ ಕಾಂಗ್ರೆಸ್‌ ಪಕ್ಷವನ್ನು ಮತ್ತು ಜನಾಂಗಭೇದ ಪ್ರತಿಪಾದಿಸುವ, ಕಂದಾಚಾರ ಮತ್ತು ಸುಳ್ಳುಗಳ ಮೂಲಕ ಜನರನ್ನು ಉದ್ರೇಕಿಸುವ, ಭ್ರಷ್ಟಾಚಾರದ ವಿಷಯದಲ್ಲಿ ಕಾಂಗ್ರೆಸ್‌ಗೆ ಯಾವ ರೀತಿಯಲ್ಲಿಯೂ ಕಡಿಮೆಯಿಲ್ಲದ ಬಿಜೆಪಿ ಪಕ್ಷಗಳೆರಡನ್ನೂ ತ್ಯಜಿಸಿ ಇನ್ನೊಂದು ಪರ್ಯಾಯವನ್ನು ಕಟ್ಟುವ ಅಗತ್ಯ ದೇಶದ ಜನರ ಮುಂದಿದೆ. ಮತ್ತು ಅದಕ್ಕೆ ಸಮಯವೂ ಬಂದಿದೆ. ಪ್ರಜ್ಞಾವಂತ ಜನ ಅದನ್ನು ಪ್ರತಿಪಾದಿಸಬೇಕಿದೆ. ಮೋದಿಯನ್ನು ವಿರೋಧಿಸುವ ಒಂದೇ ಕಾರಣಕ್ಕೆ ಕಾಂಗ್ರೆಸ್ ಅನ್ನು ಬೆಂಬಲಿಸುವುದು ಅಪ್ರಬುಧ್ಹತೆಯಷ್ಟೇ ಅಲ್ಲ, ಅಪ್ರಾಮಾಣಿಕತೆಯೂ ಸಹ.

ಕಳೆದ ಎರಡು-ಮೂರು ಸಹಸ್ರ ವರ್ಷಗಳಲ್ಲಿ ಎಂತೆಂತಹವರನ್ನೋ ಈ ದೇಶ ಸಹಿಸಿಕೊಂಡಿದೆ. ಹೊರಗಿನವರ ದಾಳಿ, ಒಳಗಿನವರ ಸಂಕುಚಿತತೆ, ಇಲ್ಲಿಗೆ ಕಾಲಿಟ್ಟು ಇಲ್ಲಿಯೇ ಒಂದಾಗಿಹೋದ ಅನೇಕ ಜನಾಂಗಗಳು, ಸತ್ಯ ಮತ್ತು ನ್ಯಾಯದ ಪ್ರತಿಪಾದನೆಗೆ ಹುಟ್ಟಿಕೊಂಡ ಅನೇಕ ಸಾಂಸ್ಕೃತಿಕ ಹೋರಾಟಗಳು, ಕವಿಗಳು, ದಾರ್ಶನಿಕರು, ಬುದ್ಧ-ಬಸವ-ಗಾಂಧಿಯಂತಹ ಕಾಲಾತೀತರು; ಹೀಗೇ ವಿಶ್ವದಲ್ಲಿಯೇ ಅನನ್ಯವಾದ ಪರಂಪರೆ ಈ ದೇಶಕ್ಕಿದೆ. ಪ್ರಜಾಪ್ರಭುತ್ವದ ಪ್ರಸರಿಕೆ ಹಾಗೂ ನಮ್ಮ ಸಂವಿಧಾನ ಇಂದಿರಾ ಗಾಂಧಿಯೇ ಆಗಲಿ ಮೋದಿಯೇ ಆಗಲಿ, ಯಾವೊಬ್ಬ ಸರ್ವಾಧಿಕಾರಿಯೂ ಈ ದೇಶದ ಭವಿಷ್ಯವನ್ನು ತಮಗನ್ನಿಸಿದ ಹಾಗೆ ಬದಲಾಯಿಸಲಾಗದ ಕಟ್ಟುಪಾಡುಗಳನ್ನು ನಿರ್ಮಿಸಿವೆ. ಇಡೀ ವಿಶ್ವವೇ ಸಹಿಷ್ಣುತೆಯೆಡೆಗೆ, ದೇವರ ವಿಷಯದಲ್ಲಿ ನಾಸ್ತಿಕತೆ ಮತ್ತು ಅನಾಸಕ್ತಿಯಿಂದ ಕೂಡಿದ ಮತಾತೀತತೆಯೆಡೆಗೆ, ವಿಶ್ವಮಾನವತೆಯೆಡೆಗೆ ಹೊರಟಿರುವಾಗ, ಆ ನಿಸರ್ಗ ಶಕ್ತಿಗೆ ಎದುರಾಗಿ ಬರುವ ಕ್ಷುಲ್ಲಕ ವ್ಯಕ್ತಿಗಳನ್ನು ಈ ದೇಶ ಮತ್ತು ವಿಶ್ವ ನುಂಗಿ ಅರಗಿಸಿಕೊಳ್ಳಲಿದೆ. ಮೋದಿ ಯಾಕಾಗಿ ಪ್ರಧಾನಿಯಾಗಬಾರದು ಎನ್ನುವುದು ನ್ಯಾಯ ಮತ್ತು ಸತ್ಯದ ಕಾರಣಗಳಿಗಾಗಿ ಇರಬೇಕು. ಆದರೆ ಅದು ಮೋದಿ ಪ್ರಧಾನಿಯಾಗಿಬಿಟ್ಟರೆ ಅಯ್ಯೋ ಎನ್ನುವ ಭಯದಿಂದ ಹುಟ್ಟುವುದಾಗಿರಬಾರದು. ಭಯಭೀತರು ಅಂತಹ ಸಂದರ್ಭ ಬಂದುಬಿಟ್ಟರೆ ಶರಣಾಗುತ್ತಾರೆ ಇಲ್ಲವೇ ಭಯದಿಂದಲೇ ಸಾಯುತ್ತಾರೆ. ಸತ್ಯ ಮತ್ತು ನ್ಯಾಯದ ಕಾರಣಕ್ಕೆ ಎದುರಿಸುವವರು ಎಂತಹ ಸಂದರ್ಭದಲ್ಲೂ ಧೃತಿಗೆಡದೆ ಹೋರಾಡುತ್ತಾರೆ. ಈ ಗುಂಪಿನಲ್ಲಿ ನಾವು ಯಾರು ಎನ್ನುವುದಷ್ಟೆ ಮುಖ್ಯ.

ಮೋದಿಯ ಸುಳ್ಳುಗಳಿಗೆ ದೇಶದ ಜನತೆ ಮರುಳಾಗದಿರಲಿ

– ಎಮ್.ಸಿ.ಡೋಂಗ್ರೆ

2014 ರ ನಂತರದ ಭಾರತಕ್ಕೆ ಈಗಿನ ಗುಜರಾತಿನ ಮುಖ್ಯಮಂತ್ರಿಯಾಗಿರುವ ಶ್ರೀ ನರೇಂದ್ರ ಮೋದಿಯವರೇ ಸರಿಯಾದ ನಾಯಕನೆಂದೂ, ಹಾಗೂ ನರೇಂದ್ರ ಮೋದಿಯ ನೇತೃತ್ವದಲ್ಲಿ ಭಾರತವು ಅತ್ಯುನ್ನತವಾದ ಸರ್ವಾಂಗೀಣ ಏಳಿಗೆಯನ್ನು (ಗುಜರಾತ್ ಮಾದರಿಯಲ್ಲಿ) ಹೊಂದುವುದು ಶತಸ್ಸಿದ್ದ ಎಂದೂ ಬಿಂಬಿಸಲಾಗುತ್ತಿದೆ. ದೇಶದ ನಗರ ಕೇಂದ್ರದ ಯುವಜನರು ಮೋದಿಯ ಪ್ರಭಾವಕ್ಕೆ ಒಳಗಾಗುವಂತೆ ಮಾಡುವಲ್ಲಿಯೂ ಸಹ ಸ್ವಲ್ಪ ಮಟ್ಟಿನ ಯಶಸ್ಸು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದನ್ನೂ ಸಹ ನೋಡಬಹುದಾಗಿದೆ. ಮೋದಿಯನ್ನು “ಅಭಿವೃದ್ಧಿಯ ಹರಿಕಾರ”ನೆಂದು ಬಿಂಬಿಸಲಾಗುತ್ತಿದ್ದೆಯೇ ವಿನಹ, ಅವರ ರಾಜಕೀಯ ಹಾಗೂ ವೈಚಾರಿಕ ಹಿನ್ನೆಲೆಯನ್ನು ಮರೆಮಾಚಲಾಗುತ್ತಿದೆ. ಮೋದಿಯ ಹೆಸರಿನ ಮೇಲೆ ಬಿ.ಜೆ.ಪಿ.ಗೆ ವೋಟ್ ಬ್ಯಾಂಕ್ ಸೃಷ್ಟಿಯಾಗುತ್ತಿದೆಯೇ ವಿನಹ, ಬಿ.ಜೆ.ಪಿ.ಯಿಂದ ಮೋದಿಗೆ ಅಲ್ಲ ಎಂಬುದನ್ನು ಗಮನಿಸಬೇಕು.

ನಗರ ಕೇಂದ್ರದ ಮಧ್ಯಮ ವರ್ಗಕ್ಕೆ ಸೇರಿರುವ ಅನೇಕ ಮಂದಿ ಯುವಕರು, ಶ್ರೀಮಂತ ವರ್ಗದ ಅನೇಕ ಮಂದಿ, Narendra_Modiಮೋದಿಯ ನಾಯಕತ್ವದ ಅಗತ್ಯ ದೇಶಕ್ಕೆ ಬಹಳವಿದೆಯೆಂದು ಹೇಳಲಾರಂಭಿಸಿದ್ದಾರೆ. ಈಗಿನ ನಮ್ಮ ಪ್ರಧಾನಿಯನ್ನು ಒಬ್ಬ “ಜೋಕರ್”ನಂತೆ ಸುಶಿಕ್ಷಿತರ ಮನಸ್ಸಿನಲ್ಲಿ ಮೂಡಿಸುವಲ್ಲಿ ಸಂಘ ಪರಿವಾರ ಸ್ವಲ್ಪ ಸಫಲತೆಯನ್ನು ಕಂಡುಕೊಂಡಿದೆ. ಮೊನ್ನೆಯ ಒಂದು ಸಂದರ್ಶನದಲ್ಲಿ ಬಿ.ಜೆ.ಪಿ.ಯ ನಾಯಕರಲ್ಲೊಬ್ಬರಾಗಿರುವ ಶ್ರೀ ಅರುಣ್ ಶೌರಿಯವರು ಮಾನ್ಯ ಮನಮೋಹನ ಸಿಂಗ್‌ರವರನ್ನು “ಒಬ್ಬ ಬೇಜವಾಬ್ದಾರಿ ಪ್ರಧಾನ ಮಂತ್ರಿ”ಯೆಂದೇ ನೇರವಾಗಿ ಪ್ರತಿಪಾದಿಸಿಯೂ ಆಗಿದೆ.

ಎಡಪಕ್ಷಗಳು ಹಾಗೂ ಕಾಂಗ್ರೆಸ್ ಇವೆರಡೂ ಪಕ್ಷಗಳು ಮೋದಿಯನ್ನು ಒಬ್ಬ “ಕೋಮುವಾದಿ” ಎಂದು ಬಿಂಬಿಸುವಲ್ಲಿ ಮಗ್ನವಾಗಿದ್ದಾವೆಯೇ ವಿನಹ, ಮೋದಿಯ ಕುರಿತು “ಅಭಿವೃದ್ಧಿಯ ಹರಿಕಾರ” ಎಂಬ ಇಮೇಜಿನ ಹಿಂದಿರುವ ಸುಳ್ಳುಗಳನ್ನು ಬಯಲಿಗೆಳೆಯುವಲ್ಲಿ ಸೋಲುತ್ತಿವೆ.

ಗುಜರಾತಿನಲ್ಲಿ ಎಂತಹ ಅಭಿವೃದ್ಧಿಗಳಾಗಿವೆ, ಅದರಲ್ಲಿ ಮೋದಿಯ ಪಾತ್ರ ಅಥವಾ ಕಾಣಿಕೆಯಾದರೂ ಎಷ್ಟು ಎಂಬುದರ ಕುರಿತು ನೈಜ ಚಿತ್ರಣವನ್ನು ಎಲ್ಲಿಯವರೆಗೆ ನಾವು ಜನಮನದಲ್ಲಿ ಮನದಟ್ಟು ಮಾಡುವುದಿಲ್ಲವೋ ಅಲ್ಲಿಯವರೆಗೆ ಮೋದಿಯ ಕುರಿತು ಕುತೂಹಲ, ಮತ್ತು ಮೆಚ್ಚುಗೆ ಇದ್ದೇ ಇರುತ್ತದೆ. ಮೋದಿ ಕೋಮುವಾದಿಯೋ ಅಥವಾ ಅಲ್ಲವೋ ಎಂಬುದು ಜನರಿಗೆ ಈಗ ಮುಖ್ಯವಾದ ಅಂಶವೇ ಅಲ್ಲ. ಜನಸಾಮಾನ್ಯರು ತಮ್ಮ ನಾಯಕನಲ್ಲಿ ಚತುರ ಮಾತುಗಾರಿಕೆಯನ್ನು, ಸ್ಪಷ್ಟವಾಗಿ ಬಾಯಿಬಿಟ್ಟು ಹೇಳುವ ವ್ಯಕ್ತಿತ್ವವನ್ನು, ಹಾಗೂ ಆತ್ಮವಿಶ್ವಾಸದ ಲಕ್ಷಣಗಳನ್ನು ನೋಡಬಯಸುತ್ತಾರೆ.

ಹಾಗಿದ್ದಲ್ಲಿ ಮೋದಿಯ ನಾಯಕತ್ವದಲ್ಲಿ ಗುಜರಾತಿನ ಸಾಧನೆಗಳಾದರೂ ಏನು? ಎಂಬುದನ್ನು ಅವಲೋಕಿಸುವುದು ಬಹಳ ಅಗತ್ಯವೆನಿಸುತ್ತದೆ.

ಗುಜರಾತಿನ ಅಭಿವೃದ್ಧಿ ಒಂದು ಪಕ್ಷಿನೋಟ-1 : ಬಿ.ಜೆ.ಪಿ.ಯ ಆಳ್ವಿಕೆಯಲ್ಲಿ :

ಗುಜರಾತ್ ರಾಜ್ಯವನ್ನು ಬಿ.ಜೆ.ಪಿ.ಯು 1998-99 ರಿಂದ (ಅಂದರೆ ಸುಮಾರು 15 ವರ್ಷಗಳಿಂದ) ಆಳುತ್ತ ಬಂದಿದೆ. ಇದರಲ್ಲಿ ಮೋದಿಯ ಆಳ್ವಿಕೆ ಆರಂಭವಾದದ್ದು 10, 2001 ರಿಂದ.

19998-99 ರಿಂದ 2001-02 ರವರೆಗೆ ಗುಜರಾತಿನ ಮುಖ್ಯಮಂತ್ರಿಯಾಗಿ ಬಿ.ಜೆ.ಪಿ.ಯ ಶ್ರೀ ಕೇಶುಭಾಯ್ ಪಟೇಲರಿದ್ದರು. ಆಗ ಗುಜರಾತ್ ರಾಜ್ಯದ ವಾರ್ಷಿಕ ಅಭಿವೃದ್ಧಿ ದರ 7.5% ಇತ್ತು. ಭಾರತದ ಅಭಿವೃದ್ಧಿ ದರ 10.7 % ಇತ್ತು. ಅಂದರೆ ಬಿ.ಜೆ.ಪಿ.ಯು ಅಧಿಕಾರಕ್ಕೆ ಬಂದಾಕ್ಷಣ ಮಹತ್ತರವಾದ ಪವಾಡಗಳೇನೂ ಗುಜರಾತಿನಲ್ಲಿ ನಡೆಯಲಿಲ್ಲ ಎನ್ನುವುದನ್ನು ತಿಳಿಯಬಹುದು.

ಮೋದಿಯ ಆಡಳಿತ ಅವಧಿ ಆರಂಭಗೊಂಡಿದ್ದು 2002-03 ನೇ ಇಸವಿಯಿಂದ. ಈ ಅವಧಿಯಲ್ಲಿ ಗುಜರಾತಿನ ವಾರ್ಷಿಕ ಅಭಿವೃದ್ಧಿ ದರ gujarath16.25 %. ಭಾರತದ ವಾರ್ಷಿಕ ಅಭಿವೃದ್ಧೀ ದರ 14%. ಭಾರತದ ಈ ಒಟ್ಟು ಅಭಿವೃದ್ಧೀ ದರವನ್ನು ಲೆಖ್ಖ ಹಾಕುವಾಗ ಅದರಲ್ಲಿ ಗುಜರಾತಿನಂತಹ ಉತ್ತಮ ಅಭಿವೃದ್ಧಿ ಹೊಂದಿರುವ ರಾಜ್ಯಗಳೂ ಸೇರಿರುತ್ತವೆ ಹಾಗೂ ಕಳಪೆ ಪ್ರದರ್ಶನ ನೀಡುವ ರಾಜ್ಯಗಳೂ ಸೇರಿರುತ್ತವೆ ಎಂಬುದನ್ನು ನೆನಪಲ್ಲಿಟ್ಟುಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಗುಜರಾತ್ ರಾಜ್ಯವು ಭಾರತಕ್ಕಿಂತ ಅಭಿವೃದ್ಧೀ ದರದಲ್ಲಿ ಕೇವಲ 2..25% ಹೆಚ್ಚಿನ ಅಭಿವೃದ್ದಿ ದರವನ್ನು ತೋರಿಸುತ್ತಿರುವುದು ದೊಡ್ಡ ಮಾತೇನಲ್ಲ.

ಇಲ್ಲಿ ನೀಡಿರುವ ಅಂಕಿ-ಅಂಶಗಳ ಕುರಿತು ಒಂದು ಮಾತು.

  1. ಇಲ್ಲಿಯ ಅಂಕಿ-ಅಂಶಗಳು ಭಾರತದ ರಿಸರ್ವ್ ಬ್ಯಾಂಕ್ ಪ್ರತಿ ವರ್ಷ ಹೊರತರುವ “Handbook of Statistics of Indian Economy”ಎಂಬ ಕಿರುಹೊತ್ತಿಗೆಯ ಆಧರಿಸಿ ನೀಡಲಾಗಿದೆ.
  2. ಅಭಿವೃದ್ಧೀ ದರವನ್ನು ಹೇಳುವಾಗ “ಸಾಮಾನ್ಯ ಸರಾಸರಿ”ಯನ್ನು ತೆಗುಕೊಳ್ಳಲಾಗಿದೆ.
  3. ರಾಜ್ಯದ ಅಭಿವೃದ್ಧಿ ದರವನ್ನು ಹೇಳುವಾಗ “Net State Domestic Product at Factor Cost” ನಲ್ಲಿ ಹೇಳಲಾಗಿದೆ. Factor Cost ನ್ನು ಯಾಕೆ ತೆಗೆದುಕೊಂಡಿದ್ದೇವೆ ಎಂದರೆ ಆಗ ಎಲ್ಲ ಲೆಕ್ಕಾಚಾರದ ಮೇಲೆ ಬೆಲೆ ಏರಿಕೆಯ ಪರಿಣಾಮವನ್ನು ಗಣನೆಗೆ ತೆಗೆದುಕೊಳ್ಳುವ ಪ್ರಯಾಸದ ಕೆಲಸ ತಪ್ಪುತ್ತದೆ ಎಂಬ ಕಾರಣಕ್ಕೆ. Net State Domestic Product ಅಂದರೆ ಒಂದು ರಾಜ್ಯದ ಒಂದು ವರ್ಷದ ಜಿ.ಡಿ.ಪಿ. ಮೈನಸ್ ಆ ರಾಜ್ಯದ ನಿವೇಶನ, ವಾಹನಗಳು, ಯಂತ್ರೋಪಕರಣಗಳು ಇತ್ಯಾದಿ Capital Goods ಗಳಲ್ಲಿ ಆದ “ಡೆಪ್ರಿಷಿಯೇಷನ್”.

ಗುಜರಾತಿನ ಅಭಿವೃದ್ಧಿ ಒಂದು ಪಕ್ಷಿನೋಟ-2 : ಬಿ.ಜೆ.ಪಿ.ಯೇತರ ಪಕ್ಷಗಳ ಆಳ್ವಿಕೆಯಲ್ಲಿ :

  1. 1998-99 ರ ಮೊದಲು ಗುಜರಾತನ್ನು ಕಾಂಗ್ರೆಸ್ ಸರ್ಕಾರವೇ ಅನೇಕ ವರ್ಷಗಳಿಂದ ಅಭಿವೃದ್ಧಿ ಪಡೆಸುತ್ತ ಬಂದಿದೆ. ಗುಜರಾತಿನ ಈಗಿನ ಆರ್ಥಿಕ ಅಭಿವೃದ್ಧಿಗೆ ಭದ್ರವಾದ ಬುನಾದಿಯನ್ನು ಹಾಕಿದ್ದೇ ಅಲ್ಲಿಯ ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತವೆಂಬುದನ್ನು ನಾವು ಮರೆಯಬಾರದು. (1994-95 ರಿಂದ 1998-99 ರವರೆಗೆ ಗುಜರಾತಿನಲ್ಲಿ ರಾಜಕೀಯ ಅಸ್ಥಿರತೆಯಿತ್ತು. ಅನೇಕ ಮಂದಿ ಮುಖ್ಯಮಂತ್ರಿಗಳು ಈ ಅವಧಿಯಲ್ಲಿ ಆಗಿ ಹೋಗಿದ್ದು, ಈ ಒಂದು ಕಾಲಘಟ್ಟವನ್ನು ನಮ್ಮ ಅಧ್ಯಯನದಿಂದ ಹೊರಗಿಡುತ್ತಿದ್ದೇವೆ.)
  2. 1990-91 ರಿಂದ 1993-94 ರವರೆಗೆ ಗುಜರಾತಿನ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ಸಿನ ಶ್ರೀ ಚಿಮನ್ ಭಾಯಿ ಪಟೇಲರಿದ್ದರು. Reliance-Gujarathಈ ಅವಧಿಯಲ್ಲಿ ಗುಜರಾತಿನ ವಾರ್ಷಿಕ ಅಭಿವೃದ್ಧೀ ದರ 16.75 % ಇತ್ತು!!. ಅಂದರೆ ಮೋದಿಯ ಕಾಲದಲ್ಲಿರುವ ಅಭಿವೃದ್ಧೀ ದರಕ್ಕಿಂತಲೂ ಹೆಚ್ಚು!!.
  3. 1980-81 ರಿಂದ 1989-90 ರ ಅವಧಿಯಲ್ಲಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದವರು ಕಾಂಗ್ರೆಸ್ಸಿನ ಮಾನ್ಯ ಮಾಧವಸಿಂಗ್ ಸೋಳಂಕಿ. ಇವರ ಆಳ್ವಿಕೆಯಲ್ಲಿ ಗುಜರಾತ್ ವಾರ್ಷಕ್ಕೆ 14.8 % ವೇಗದಲ್ಲಿ ಬೆಳೆಯುತ್ತಿತ್ತ್ತು. ಆರ್ಥಿಕ ಉದಾರೀಕರಣ, ಜಾಗತೀಕರಣಗಳ ಕಲ್ಪನೆಯೇ ಇಲ್ಲದಿದ್ದ ಕಾಲ ಅದಾಗಿತ್ತು. ಆಂತಹ ಕಾಲಘಟ್ಟದಲ್ಲೇ ಶೇಕಡಾ 14.8 ರ ದರದಲ್ಲಿ ಅಭಿವೃದ್ಧಿ ಗುಜರಾತಿನಲ್ಲಿ ಆಗಿತ್ತು ಎಂದಾದಲ್ಲಿ ಮೋದಿಯ ಈಗಿನ 16.25% ಅಭಿವೃದ್ಧಿ ದರ ಬಡಾಯೀ ಕೊಚ್ಚಿಕೊಳ್ಳುವುದಕ್ಕೆ ಯೋಗ್ಯವಲ್ಲ. ಮೋದಿಯವರು ತನ್ನ ಮೊದಲು ಇದ್ದ ಅಭಿವೃದ್ಧೀ ದರವು ಕೆಳಗಿಳಿಯದಿರುವಂತೆ ನಿರ್ವಹಣೆ ಮಾಡಿದ್ದಾರೆ ಎಂಬುದನ್ನು ಮಾತ್ರ ಖಂಡಿತವಾಗಿಯೂ ಎಲ್ಲರೂ ಒಪ್ಪಿಕೊಳ್ಳುವ ವಿಚಾರವಾಗಿದೆ.

ಮೋದಿಯ ಆಗಮನದ ಮೊದಲೇ:

ಗುಜರಾತ್ ಮೊದಲಿನಿಂದಲೂ ನಮ್ಮ ದೇಶದ ಬಹು ದೊಡ್ಡ ವ್ಯಾಪಾರ ಕೇಂದ್ರ. ಹರಪ್ಪ-ಮೊಹೆಂಜೋದಾರೋ ನಾಗರಿಕತೆಯ ಕಾಲದಿಂದಲೂ ಸಹ ಗುಜರಾತ್ ಒಂದು ದೊಡ್ಡ ವ್ಯಾಪಾರ ಕೇಂದ್ರವಾಗಿದೆ. ಸಂಪದ್ಭರಿತ ರಾಜ್ಯಗಳ ತುಲನೆಯಲ್ಲಿ 1985 ರಿಂದಲೇ ಗುಜರಾತ್ 3 ನೇ ಸ್ಥಾನದಲ್ಲಿದೆ.

  1. ಗುಜರಾತಿನಲ್ಲಿ ಒಟ್ಟು 18028 ಹಳ್ಳಿಗಳಿದ್ದು ಅವುಗಳಲ್ಲಿ 17940 ಹಳ್ಳಿಗಳು 1991 ರಲ್ಲೇ ಸಂಪೂರ್ಣವಾಗಿ ವಿದ್ಯುತ್ ಶಕ್ತಿಯನ್ನು ಪಡೆದಿದ್ದವು.
  2. ಗುಜರಾತಿನ ರಸ್ತೆಗಳಲ್ಲಿ 85% ರಸ್ತೆಗಳು ಮೋದಿ ಬರುವುದಕ್ಕಿಂತಲೂ ಮೊದಲೇ ಸಿಮೆಂಟ್ ರಸ್ತೆಗಳಾಗಿದ್ದವು.
  3. ಪ್ರಪಂಚದ ಅತಿ ದೊಡ್ಡ ಹಡಗುಗಳನ್ನು ಒಡೆಯುವ ಯಾರ್ಡ್, ಅಂಬಾನಿಯವರ ಜಾಮ್ ನಗರದ ಕಚ್ಚಾ ತೈಲ ಶುದ್ಧೀಕರಣ ಫ಼ಾಕ್ಟರಿ ಇವೆಲ್ಲ ಮೋದಿ ಬರುವ ಮೊದಲೇ ಗುಜರಾತಿನಲ್ಲಿ ಅಸ್ತಿತ್ವದಲ್ಲಿದ್ದವು.
  4. ಭಾರತಕ್ಕೆ ಬೇಕಾಗಿರುವ ತೈಲೋತ್ಪನ್ನಗಳಲ್ಲಿ 45% ಗುಜರಾತಿನಲ್ಲಿ ಮೋದಿ ಬರುವ ಮೊದಲೇ ಉತ್ಪತ್ತಿಯಾಗುತ್ತಿತ್ತು.
  5. ಭಾರತದ ಹಡಗುಗಳ ಮೂಲಕ ನಡೆಯುವ ಸರಕು-ಸಾಗಣೆಯ 18% ಗುಜರಾತಿನಿಂದ ಮೋದಿ ಬರುವ ಮೊದಲೇ ನಡೆಯುತ್ತಿತ್ತು.
  6. ನಮ್ಮ ದೇಶಕ್ಕೆ ಬೇಕಾದ ಕಚ್ಚಾ ತೈಲದ 23% ಗುಜರಾತಿನಲ್ಲಿ ಮೋದಿ ಬರುವ ಮೊದಲೇ ಸಿಗುತ್ತಿತ್ತು.
  7. ನಮಗೆ ಬೇಕಾಗಿರುವ ನೈಸರ್ಗಿಕ ಅನಿಲದಲ್ಲಿ 30% ಅನಿಲ ಗುಜರಾತಿನಿಂದ ಮೋದಿ ಬರುವ ಮೊದಲೇ ಸಿಗುತ್ತಿತ್ತು.
  8. ನಮ್ಮ ದೇಶಕ್ಕೆ ಅಗತ್ಯವಾಗಿರುವ ಔಷಧಿಗಳಲ್ಲಿ 26% ಔಷಧಿಗಳೂ, 78% ಉಪ್ಪು ಹಾಗೂ 98% ಸೋಡಾ ಆಷ್ ಗುಜರಾತಿನಲ್ಲಿ ಮೋದಿ ಬರುವ ಮೊದಲೇ ಉತ್ಪತ್ತಿಯಾಗುತ್ತಿದ್ದವು.

ಮೋದಿಯ ಗುಜರಾತ್ v/s ಬೇರೆ ಕೆಲವು ರಾಜ್ಯಗಳು :

2002-03 ರಿಂದ ಮೋದಿಯವರ ಆಡಳಿತ ಗುಜರಾತಿನಲ್ಲಿ ನಡೆಯುತ್ತಿದ್ದು ಗುಜರಾತ್ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ರಾಜ್ಯವಾಗಿದ್ದು ದೇಶದ ಬೇರೆ ಯಾವ ರಾಜ್ಯಗಳೂ ಈ ರೀತಿಯ ಅಭಿವೃದ್ಧಿಯನ್ನು ಸಾಧಿಸುತ್ತಿಲ್ಲ ಇದಕ್ಕೆಲ್ಲ ಮಾನ್ಯ ಮೋದಿಯವರ “ಸಮರ್ಥ ನಾಯಕತ್ವ”ವೇ ಕಾರಣ ಎಂದು ಪ್ರಚಾರ ಮಾಡಲಾಗುತ್ತಿದೆ. ಆದರೆ ಗುಜರಾತ್ ರಾಜ್ಯದಷ್ಟೆ ಪ್ರಮಾಣದಲ್ಲಿ(ಕೆಲವೊಮ್ಮೆ ಅದಕ್ಕಿಂತಲೂ ಹೆಚ್ಚು) ಬೇರೆ ರಾಜ್ಯಗಳು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದು ಅವುಗಳ ಕಡೆಗೆ ಒಂದು ಸಲ ನಮ್ಮ ಗಮನವನ್ನು ನೀಡೋಣ.

  1. ಮಹಾರಾಷ್ಟ್ರ ರಾಜ್ಯ: ಕಾಂಗ್ರೆಸ್ ಆಡಳಿತ. ಸರಾಸರಿ ಅಭಿವೃದ್ಧಿ ದರ 15.5%.
    • ( ಅ) ಮಹಾರಾಷ್ಟ್ರದ ಈಗಿನ Net State Domestic Product = 1980-81 ರ Net State Domestic Product ಕ್ಕಿಂತ 54 ಪಟ್ಟು ಹೆಚ್ಚಾಗಿದೆ.
    • (ಆ) ಗುಜರಾತಿನ ಈಗಿನ Net State Domestic Product = 1980-81 ರ Net State Domestic Product ಕ್ಕಿಂತ 56 ಪಟ್ಟು ಹೆಚ್ಚಾಗಿದೆ.

    ಇದನ್ನು ಗಮನಿಸಿದಾಗ ಮಹಾರಾಷ್ಟ ರಾಜ್ಯದ ಸಾಧನೆಗಳು ಗುಜರಾತಿನ ಸಾಧನೆಗೆ ಬಹಳ ಸಮೀಪದಲ್ಲೇ ಇದೆ.

  2. ಹರಿಯಾಣಾ ರಾಜ್ಯ : 04/2005 ರಿಂದ ಕಾಂಗ್ರೆಸ್ ಆಡಳಿತ. ಸರಾಸರಿ ಅಭಿವೃದ್ಧಿ ದರ 18%
  3. ಆಂಧ್ರಪ್ರದೇಶ ರಾಜ್ಯ: 05/2004 ರಿಂದ ಕಾಂಗ್ರೆಸ್ ಆಡಳಿತ. ಸರಾಸರಿ ಅಭಿವೃದ್ಧಿ ದರ 16%
  4. ಇನ್ನು ಜಿ.ಡಿ.ಪಿ.ಯ ಲೆಕ್ಕ ಹಾಕಿದಾಗ ಇಡೀ ದೇಶದಲ್ಲಿ ಗುಜರಾತ್ ಐದನೇ ಸ್ಥಾನದಲ್ಲಿದೆ. ಮಹಾರಾಷ್ಟ್ರ, ಉತ್ತರ ಪ್ರದೇಶ, ಆಂಧ್ರ ಮತ್ತು ತಮಿಳುನಾಡಿನ ನಂತರ ಗುಜರಾತ್ ಬರುತ್ತದೆ.
  5. ಪ್ರತಿ ವ್ಯಕ್ತಿಯ ವಾರ್ಷಿಕ ತಲಾ ಆದಾಯವನ್ನು ಲೆಕ್ಕ ಹಾಕಿದರೆ, ಹರ್ಯಾಣಾದಲ್ಲಿ ರೂ. 78781/-, ಮಹಾರಾಷ್ಟ್ರದಲ್ಲಿ ರೂ. 74072/- ಆದರೆ ಗುಜರಾತಿನಲ್ಲಿ ರೂ. 63961/-.

ಮೋದಿಯ ಆಳ್ವಿಕೆಯಲ್ಲಿ ಈಗಿನ ಗುಜರಾತ್ :

ಸುಮಾರು 12 ವರ್ಷಗಳಿಂದ ಮುಖ್ಯಮಂತ್ರಿಯಾಗಿರುವ ಮಾನ್ಯ ನರೇಂದ್ರ ಮೋದಿಯವರ ಸಾಧನೆಗಳಾದರೂ ಏನು? ಜನಸಾಮಾನ್ಯರಿಗೆ ಉಪಯೋಗವಾಗುವ ಕಾರ್ಯಗಳಾದರೂ ಯಾವುವು? ಎಂಬಿತ್ಯಾದಿಗಳನ್ನು ತಿಳಿಯುವ ಮೊದಲು ಗುಜರಾತಿನ ಈಗಿನ ಪರಿಸ್ಥಿತಿಯನ್ನು ಒಮ್ಮೆ ಅವಲೋಕಿಸುವುದು ಒಳ್ಳೆಯದು.

  1. ಮಾನವ ಅಭಿವೃದ್ಧಿ ಸೂಚ್ಯಾಂಕದಲ್ಲಿ ಗುಜರಾತ್ 10 ನೇ ಸ್ಥಾನದಲ್ಲಿದೆ. ಮೊದಲ ಸ್ಥಾನ ಕೇರಳ ರಾಜ್ಯಕ್ಕೆ.
  2. 5 ವರ್ಷಕ್ಕೂ ಕಮ್ಮಿ ವಯಸ್ಸಿನ ಮಕ್ಕಳ ಸಂಖ್ಯೆಯಲ್ಲಿ 44.6% ಮಕ್ಕಳು ಸತ್ವಯುತ ಆಹಾರವಿಲ್ಲದೇ ಗುಜರಾತಿನಲ್ಲಿ ನರಳುತ್ತಿದ್ದಾವೆ.
  3. ಗುಜರಾತಿನ ಮಕ್ಕಳಲ್ಲಿ 70% ಮಕ್ಕಳು ಅನಿಮಿಯಾದಿಂದ ಬಳಲುತ್ತಿದ್ದಾರೆ.
  4. ಎನ್.ಆರ್.ಇ.ಜಿ.ಎಸ್. ಸ್ಕೀಂನ ಅಡಿಯಲ್ಲಿ ಬೇರೆ ರಾಜ್ಯದಲ್ಲಿ ಕೊಡುವ ದಿನಗೂಲಿಯ ಅರ್ಧದಷ್ಟು ಮಾತ್ರ ದಿನಗೂಲಿಯನ್ನು ಗುಜರಾತ್ ಸರ್ಕಾರ ಕೊಡುತ್ತಿದೆ.
  5. ಸುಶಿಕ್ಷಿತ ಮಹಿಳೆಯರಲ್ಲಿ ಕೇವಲ 2.04% ಮಹಿಳೆಯರು ಮಾತ್ರ ಸರ್ಕಾರಿ ಹಾಗೂ ಅರೆ ಸರ್ಕಾರೀ ಉದ್ಯೋಗದಲ್ಲಿದ್ದಾರೆ.
  6. ಗುಜರಾತಿನಲ್ಲಿ ಅತೀ ಕಡಿಮೆ ಕೂಲಿಯನ್ನು ಕಾರ್ಮಿಕರಿಗೆ ನೀಡಲಾಗುತ್ತಿದ್ದು, ಅದರಲ್ಲೂ ಮಹಿಳಾ ಕಾರ್ಮಿಕರಿಗೆ ಸಿಗುವ ಸಂಬಳ ಬಹಳ ನಿಕೃಷ್ಟವಾಗಿರುತ್ತದೆ.
  7. ಸಂಘಟಿತ ಕಾರ್ಮಿಕರಲ್ಲಿ ಉದ್ಯೋಗದ ಬೆಳವಣಿಗೆಯ ಪ್ರಮಾಣ ಅತಿ ಕಡಿಮೆಯಾಗಿದೆ. ವರ್ಷಕ್ಕೆ ಸಂಘಟಿತ ಕ್ಷೇತ್ರದಲ್ಲಿ ಕೇವಲ 0.50% ಉದ್ಯೋಗದಲ್ಲಿ ಹೆಚ್ಚಳವನ್ನು ಕಾಣಬಹುದು. ಅಂದರೆ ಈ ವರ್ಷ 1000 ಜನ ಕೆಲಸದಲ್ಲಿದ್ದರೆ, ಮುಂದಿನ ವರ್ಷದಲ್ಲಿ ಅವರ ಸಂಖ್ಯೆ ಕೇವಲ 1005 !
  8. ಮೋದಿಯವರ ಗುಜರಾತಿನಲ್ಲಿ ಬಡವರೆಂದರೆ ಯಾರೂ ಎಂಬುದನ್ನು ನಿರ್ಧರಿಸಲು ಇರುವ ಮಾನದಂಡವೇ ಬೇರೆ!!. ನಗರ ಪ್ರದೇಶದಲ್ಲಿ ಯಾರ ಮಾಸಿಕ ಆದಾಯ 540/- ರೂಪಾಯಿ ದಾಟುವುದಿಲ್ಲವೋ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ modi-GIMಯಾರ ಮಾಸಿಕ ಆದಾಯ ರೂಪಾಯಿ 361/- ದಾಟುವುದಿಲ್ಲವೋ ಅವರು ಮಾತ್ರ ಬಡವರು. ಅವರಿಗೆ ಮಾತ್ರ BPL.ಕಾರ್ಡ್‌ನ್ನು ನೀಡಲಾಗುವುದು!!.
  9. ಪ್ರತಿ ವರ್ಷ ಅಂತಾರಾಷ್ಟ್ರೀಯ ಉದ್ಯಮಪತಿಗಳನ್ನು ಗುಜರಾತಿಗೆ ಕರೆಯಿಸಿ “ಗ್ಲೋಬಲ್ ಮೀಟ್” ಮಾಡಿ, ಅನೇಕ ಉದ್ದಿಮೆಗಳಿಗೆ ಅಲ್ಲಿ ಸಹಿಹಾಕುವ ಕೆಲಸ ಗುಜರಾತಿನಲ್ಲಿ ನಡೆಸುತ್ತ ಬರಲಾಗಿದೆ. ಆದರೆ ಅವುಗಳಲ್ಲಿ ಕೇವಲ 20% ಮಾತ್ರ ಇಲ್ಲಿಯವರೆಗೆ ಅನುಷ್ಠಾನಗೊಂಡಿವೆ.
  10. ನಮ್ಮ ದೇಶಕ್ಕೆ ಇಲ್ಲಿಯವರೆಗೆ ಹರಿದುಬಂದಿರುವ FDI ನಲ್ಲಿ ಕೇವಲ 5% ಮಾತ್ರ ಗುಜರಾತಿಗೆ ತರಿಸುವಲ್ಲಿ ಮೋದೀಯ ಮೋಡಿ ಕೆಲಸಮಾಡಿದೆ. ತಮಿಳುನಾಡು ಮತ್ತು ಕರ್ನಾಟಕವು ಸದ್ದಿಲ್ಲದೆ ತಲಾ 6% ಈ.FDI ನ್ನು ತಮ್ಮದಾಗಿಸಿದ್ದರೆ, ಮಹಾರಾಷ್ಟ್ರಾದವರು 35% ತಮ್ಮೆಡೆಗೆ ಸೆಳೆದಿದ್ದಾರೆ.

ಕೆ.ಪಿ.ಶಶಿ ಎಂಬ ಚಿಂತಕರು ಗುಜರಾತಿನ ಅಭಿವೃದ್ಧಿಯ ಕುರಿತು ಒಂದು ಮಾತನ್ನು ಹೇಳಿದ್ದು ಅದು ಬಹಳ ಅರ್ಥಪೂರ್ಣವಾಗಿದೆ. ಅವರ ಪ್ರಕಾರ “ಮೋದಿಯವರ ಅಭಿವೃದ್ಧಿಯ ಮಾಡೆಲ್” ಆರ್.ಎಸ್.ಎಸ್.ನ ಚಡ್ಡಿಯಿದ್ದಂತೆ-ಅದು ಎಂದೂ ನೆಲವನ್ನು ಮುಟ್ಟುವುದೇ ಇಲ್ಲ!!.

ಗುಜರಾತಿನ ಕೃಷಿ :- ಸತ್ಯ ಮತ್ತು ಮಿಥ್ಯ

ನರೇಂದ್ರ ಮೋದಿಯ ಅಭಿಮಾನಿಗಳು ನರೇಂದ್ರಮೋದಿಯವರಿಂದ ಗುಜರಾತಿನ ಕೃಷಿ ಬಹಳವಾಗಿ ಬೆಳೆದಿದೆ. ಕೃಷಿಯಲ್ಲಿ ಭಾರತದ ಅಭಿವೃದ್ಧಿಗಿಂತ ಹೆಚ್ಚಿನದಾಗಿ ಅಭಿವೃದ್ಧಿ ಗುಜರಾತಿನಲ್ಲಿ ನಡೆದಿದೆ. ಇದಕ್ಕೆಲ್ಲ ಮೋದಿಯವರ ಸಮರ್ಥ ನಾಯಕತ್ವ, ಒಳನೋಟ ಇವುಗಳೇ ಕಾರಣ ಎಂದೆಲ್ಲ ಹೊಗಳಲು ಆರಂಭಿಸಿದ್ದಾರೆ.

ಮೋದಿಯೂ ಸಹ ತನ್ನ ವೆಬ್‌ಸೈಟ್‌ನಲ್ಲಿ ಹಾಗೂ ಇತರ ಕಡೆಯಲಿ ಭಾಷಣ ಮಾಡುವಾಗ ಈಗ ಭಾರತದ guj-agricultureಕೃಷಿಕ್ಷೇತ್ರದಲ್ಲಿ ನಾವೇ ನಂಬರ್ 1 ಎಂದೆಲ್ಲ ಸುಳ್ಳುಗಳನ್ನೂ ಹೇಳಿಯಾಗಿದೆ. ಭಾರತದ ಕೃಷಿ ವರ್ಷಕ್ಕೆ 4% ನಂತೆ ವೃದ್ಧಿಯಾಗುತ್ತಿದೆ, ಆದರೆ ಗುಜರಾತಿನಲ್ಲಿ ಅದು 11% ನಂತೆ ಹೆಚ್ಚಾಗುತ್ತಿದೆ ಎಂದು ಬಾಯಿಗೆ ಬಂದ ಅಂಕಿ-ಅಂಶಗಳನ್ನು ನೀಡಲಾಗುತ್ತಿದೆ.

ಕೇಂದ್ರ ಸಚಿವಾಲಯವು ಮುದ್ರಿಸಿರುವ ಭಾರತದ ಕೃಷಿಯ ಸ್ಥಿತಿ-ಗತಿ, 2012-13ರ ವರದಿಯ ಪ್ರಕಾರ ಕೃಷಿಯಲ್ಲಿ ಗುಜರಾತಿನ ಸ್ಥಾನ 8ನೇ ಸ್ಥಾನ.

2007-08 ರಿಂದ 2011-12 ರ ಅವಧಿಯಲ್ಲಿ ಗುಜರಾತಿನ ಕೃಷಿ ಅಭಿವೃದ್ಧಿಯು 4.8% ದರದಲ್ಲಿ ಪ್ರತಿವರ್ಷ ವೃದ್ಧಿಯಾಗುತ್ತಿದೆ.

ಗುಜರಾತ್ ಸರ್ಕಾರವು ಪ್ರತಿ ವರ್ಷ ತನ್ನ ಆರ್ಥಿಕ ಸ್ಥಿತಿ-ಗತಿಗಳ ಕುರಿತು ಮಾಹಿತಿಯನ್ನು ಸಂಗ್ರಹಿಸಿ ಪ್ರಕಟಿಸುತ್ತದೆ. ಈ ರೀತಿ ಪ್ರಕಟಿತ ಮಾಹಿತಿಯ ಕೆಲವು ಅಂಶಗಳನ್ನು ಓದುಗರ ಗಮನಕ್ಕೆ ತರಲು ಬಯಸುತ್ತೇವೆ. ಆಗ ಮಾತ್ರ ಎಲ್ಲರಿಗೂ “ಈ ಮೋದಿ ಎನ್ನುವವ ಎಂತಹ ಸುಳ್ಳುಗಾರ” ಎಂಬುದು ಮನದಟ್ಟಾಗುತ್ತದೆ.

ವರ್ಷ ಆಹಾರಧಾನ್ಯಗಳು (ಲಕ್ಷ ಟನ್‌ಗಳಲ್ಲಿ) ಎಣ್ಣೆಕಾಳುಗಳು (ಲಕ್ಷ ಟನ್‌ಗಳಲ್ಲಿ) ಹತ್ತಿ ಬೆಳೆ(ಲಕ್ಷ ಬೇಲ್‌ಗಳಲ್ಲಿ)
1996-97 60.89 38.02 28.18
1997-98 61.13 38.65 34.17
1998-99 60.38 38.81 40.03
1999-2000 44.37 18.26 21.45
2000-01 31.84 17.37 12.82
2001-02 52.54 37.46 16.84
2002-03 43.95 18.77 18.39
2003-04 67.36 58.55 42.79
2004-05 51.53 28.99 55.40
2005-06 61.41 47.34 65.12
2006-07 61.10 28.46 87.87
2007-08 82.06 46.99 78.76
2008-09 63.45 39.32 82.75
2009-10 56.05 30.10 74.01
2010-11 100.71 51.42 98.25
2011-12 92.57 50.53 103.75

1996-97 ರಿಂದ 2004-05 ರವರೆಗೆ ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿಯ ದರ ವಾರ್ಷಿಕ ಸರಾಸರಿ 5.65% ಇತ್ತು, ಅದೀಗ 6.47% ಆಗಿದೆ.

ಗುಜರಾತಿನ ಕೃಷಿಯಲ್ಲಿ ಆಗುತ್ತಿರುವ ಅಭಿವೃದ್ಧಿಗೆ ಈ ಕೆಲವು ಕಾರಣಗಳನ್ನು ಪಟ್ಟಿಮಾಡಬಹುದು:

  1. ಸರ್ದಾರ್ ಸರೋವರ ಆಣೆಕಟ್ಟಿನಿಂದ ಗುಜರಾತಿನ ಅನೇಕ ಭಾಗಗಳಿಗೆ 2002 ರಿಂದ ನೀರು ಲಭ್ಯವಾಗಲಾರಂಭಗೊಂಡಿದ್ದು.
  2. Bt ಹತ್ತಿಯನ್ನು ಬೆಳೆಸುತ್ತಿರುವುದು
  3. ಮೈನರ್ ಇರಿಗೇಷನ್‌ಗಳ ಆಳವಡಿಕೆ
  4. ಭೂಮಿಯ ಅಂತರ್ಜಲವನ್ನು ಹೆಚ್ಚಿಸಲು ಸಾವಿರಾರು ಚೆಕ್-ಡ್ಯಾಮ್ ಗಳ ರಚನೆ
  5. ಸಣ್ಣ-ಸಣ್ಣ ಯಾಂತ್ರಿಕ ಉಪಕರಣಗಳ ಬಳಕೆ
  6. ಒಳ್ಳೆಯ ಸಾರಿಗೆ ಸೌಕರ್ಯಗಳು
  7. ನಿಯಮಿತವಾಗಿ ಹಾಗೂ ಕಡ್ಡಾಯವಾಗಿ ನಿಗದಿಪಡಿಸಿದ ಅವಧಿಗೆ 3-ಫೇಸ್ ವಿದ್ಯುತ್ ಸರಬರಾಜು

ಮುಗಿಸುವ ಮೊದಲು:

ಗುಜರಾತಿನಲ್ಲಿ ಮೋದಿ ಆಳ್ವಿಕೆಯಲ್ಲಿ ನಗರದ ಮಧ್ಯಮ ವರ್ಗದ ಜನರು ಅನೇಕ ಸೌಲಭ್ಯಗಳಿಂದ, middleclass-indiaಅಭಿವೃದ್ಧಿಯ ಫಲವನ್ನು ಆನಂದಿಸುತ್ತ ಇದ್ದಾರೆಯೇ ವಿನಹ ಅಲ್ಲಿಯ ಆದಿವಾಸಿಗಳ ಹಾಗೂ ದಲಿತರ ಸ್ಥಿತಿ-ಗತಿ ಬಹಳ ಚಿಂತಾಜನಕವಾಗಿದೆ. ಫಲವತ್ತಾದ ಭೂಮಿಯನ್ನು ಉದ್ಯಮಪತಿಗಳಿಗೆ ನೀಡುತ್ತಿರುವುದರ ವಿರುದ್ಧ ಈಗಾಗಲೇ ಗುಜರಾತಿನ ಗ್ರಾಮ-ಗ್ರಾಮಗಳಲ್ಲಿ ಸಂಘಟಿತ ರೈತರಿಂದ ಪ್ರತಿರೋಧ ಬಲಗೊಳ್ಳುತ್ತಿದೆ. ಭಾರತದ ಉದ್ಯಮಪತಿಗಳಿಗೆ ಈಗ ಮೋದಿ ಬೇಕಾಗಿದ್ದಾರೆ. ಯು.ಪಿ.ಎ. ಸರ್ಕಾರದಿಂದ ನಿರೀಕ್ಷಿತ ಅನುಕೂಲತೆಗಳು ಸುಲಭವಾಗಿ ದೊರೆಯಲಾರದು ಎಂದು ಮನಗಂಡಿರುವ ಬಂಡವಾಳಶಾಹಿಗಳು ಈಗ ಮೋದಿಯನ್ನು “ದೇಶದ ಪ್ರಧಾನಿ”ಯಾಗಿಸಲು ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ ಮೋದಿಯ ಸುಳ್ಳುಗಳನ್ನು ಬಯಲು ಮಾಡಬೇಕು, ಮೋದಿಯ ಕೊಳಕು ಕೋಮುವಾದವನ್ನು ಹಿಮ್ಮೆಟ್ಟಿಸುವಲ್ಲಿ ಸಂಘಟಿತ ಹಾಗೂ ವೈಜ್ಞಾನಿಕ ಕಾರ್ಯತಂತ್ರಗಳನ್ನು ರೂಪಿಸಬೇಕು.

ಮೋದಿ ಮತ್ತು ಭವಿಷ್ಯದ ಇತಿಹಾಸದ ಪುಟಗಳು


– ರವಿ ಕೃಷ್ಣಾರೆಡ್ದಿ


 

“It’s easier to fool people than to convince them that they have been fooled.”― Mark Twain

ಇದು ಅಮೆರಿಕ ಅಲ್ಲ ಮತ್ತು ಇಲ್ಲಿ ಅಧ್ಯಕ್ಷೀಯ ವ್ಯವಸ್ಥೆ ಇಲ್ಲ. ಕಳೆದ ಮೂರ್ನಾಲ್ಕು ದಿನಗಳಿಂದ ದೇಶದ ದೊಡ್ಡ ಪಕ್ಷವೊಂದು ತನ್ನ ಪಕ್ಷದ ಪ್ರಧಾನ ಮಂತ್ರಿ ಅಭ್ಯರ್ಥಿಯನ್ನು ಘೋಷಿಸಿದ ಸುತ್ತಮುತ್ತ ನಡೆದ ಘಟನಾವಳಿಗಳ ಬಗ್ಗೆ ಹೇಳುವುದಾದರೆ, ಪ್ರಧಾನಿ ಸ್ಥಾನಕ್ಕೆ ಸ್ಪರ್ಧೆ ಇರುವುದಿಲ್ಲ ಮತ್ತು ಅಭ್ಯರ್ಥಿಗಳೂ ಇರುವುದಿಲ್ಲ. ಬಹುಮತ ಪಡೆದ ಸಂಸದೀಯ ಗುಂಪು ಆಯ್ಕೆ ಮಾಡಿಕೊಳ್ಳುವ ನಾಯಕತ್ವದ ಸ್ಥಾನ ಅದು. ಇತ್ತೀಚೆಗೆ ಆಗುತ್ತಿರುವುದೆಲ್ಲ ಮೀಡಿಯಾ ಮ್ಯಾನೇಜ್ ಮಾತ್ರವಾಗಿದೆ ಮತ್ತು ನಿತ್ಯಹಸಿವಿನ ಕಾರಣಕ್ಕಾಗಿ ಅದನ್ನು ಮಾಧ್ಯಮಗಳು ಭಕ್ಷಿಸಿ ಜನರಿಗೆ ಉಣಬಡಿಸುತ್ತಿವೆ.

ಗುಜರಾತಿನ ನೆಲದಲ್ಲಿ ಹುಟ್ಟಿಬಂದ ಸಂತ, ರಾಜಕಾರಣಿ, ಶಾಂತಿದೂತ,  ಗಾಂಧೀಜಿ. 200px-MKGandhi[1]ಹಲವಾರು ಭಿನ್ನಾಭಿಪ್ರಾಯಗಳಿದ್ದರೂ ಕೊನೆಯವರೆಗೂ ಗಾಂಧೀಜಿಯನ್ನು ಗೌರವಿಸುತ್ತ ಉಳಿದವರು ಸರ್ದಾರ್ ಪಟೇಲ್. ದೇಶ ಕಟ್ಟಿದವರು. ಅಂತಹ ನೆಲದಲ್ಲಿ ಯಾವುದೇ ಪಾಪಪ್ರಜ್ಞೆ ಮತ್ತು ಪ್ರಾಯಶ್ಚಿತ್ತದ ಲವಲೇಶವೂ ಇಲ್ಲದ ಕಳೆಯ ಗಿಡವೊಂದು ಇಂದು ವಿಷಪೂರಿತ ಮುಳ್ಳುಗಳೊಂದಿಗೆ ಆಮ್ಲಜನಕಕ್ಕೆ ಬದಲಾಗಿ ಇಂಗಾಲವನ್ನೇ ಕಕ್ಕುವ ಹೆಮ್ಮರವಾಗಿ ಬೆಳೆದು ನಿಂತಿದೆ. ಭಾರತದ ಇತಿಹಾಸ, ಪರಂಪರೆ ಮತ್ತು ಆತ್ಮದ ಪರಿಚಯವೇ ಇಲ್ಲದ ಜನ ಈ ದೇಶವನ್ನು ರೋಬಾಟ್ ಯಂತ್ರಮಾನವರಂತೆಯ ಏಕೋದ್ದೇಶದ ಮನುಷ್ಯರ ಸಂಕುಚಿತ ರಾಷ್ಟ್ರ ಕಟ್ಟುವುದಕ್ಕಾಗಿ, ಈ ದೇಶದಲ್ಲಿ ನಡೆದ ಸಾಂಸ್ಕೃತಿಕ ಮತ್ತು ರಾಜಕೀಯ ಹೋರಾಟಗಳ, ನ್ಯಾಯ ಮತ್ತು ಸಮಾನತೆಯ, ಮಾನವನ ಪರಮಾದ್ಭುತ ಜೀವವಿಕಾಸದ ಮತ್ತು ವಲಸೆಯ ಕತೆಯನ್ನೇ ತಿರುಚಿ ಕಗ್ಗತ್ತಲ ಭವಿಷ್ಯ ಬರೆಯಹೊರಟಿದ್ದಾರೆ.

ಮೋದಿಯನ್ನು ಪ್ರಧಾನ ಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದಾಕ್ಷಣ ಮೋದಿಯೇನೂ ಪ್ರಧಾನಿ ಆಗುವುದಿಲ್ಲ. ಚುನಾವಣೆಯಲ್ಲಿ ಏನಾಗುತ್ತದೆ ಎಂದು ಊಹಿಸಲಾಗದ ರಭಸದ ಮತ್ತು ಅನಿಶ್ಚಿತತೆತ ವರ್ತಮಾನದಲ್ಲಿ ನಾವಿದ್ದೇವೆ. ಈಗಿನ ಪರಿಸ್ಥಿತಿಯನ್ನು ಇಟ್ಟುಕೊಂಡು ಹೇಳುವುದಾದರೆ ಬಿಜೆಪಿ ಮತ್ತದರ ಎರಡೇ ಎರಡು ಮಿತ್ರಪಕ್ಷಗಳು ಏನೇ ತಿಪ್ಪರಲಾಗ ಹಾಕಿದರೂ ಮುಂದಿನ ಸರ್ಕಾರ ರಚಿಸುವ ಸ್ಥಿತಿ ಮುಟ್ಟುವುದಿಲ್ಲ. ಆದರೆ ಅವಿಭಜಿತ ಆಂಧ್ರಪ್ರದೇಶದ ತೆಲಂಗಾಣ ಮತ್ತು ಸೀಮಾಂಧ್ರದಲ್ಲಿ ಅಪ್ರಸ್ತುತವಾಗುತ್ತ ಸಾಗಿರುವ ತೆಲುಗುದೇಶಂ ಪಕ್ಷ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡರೆ ಅಲ್ಲೊಂದು ಬೋನಸ್ ಪಕ್ಷ ಸಿಗುತ್ತದೆ, ಆದರೆ ಹೆಚ್ಚಿನ ಸೀಟುಗಳೇನೂ ಬರುವ ಹಾಗೆ ಕಾಣಿಸುತ್ತಿಲ್ಲ. ತಮಿಳುನಾಡಿನಲ್ಲಿ ಜಯಲಲಿತ ಜೊತೆಯಾಗಬಹುದು. ಮಾಮೂಲಿನಂತೆ ಒಂದೇ ಪಕ್ಷಕ್ಕೆ ಅಪಾರವಾದ ಬಹುಮತ ಕೊಡುವ ತಮಿಳುನಾಡಿನ ನಿಯಮ ಈ ಸಾರಿಯೂ ಪುನರಾವರ್ತನೆ ಆಗಿ ಜಯಲಲಿತರ ಪಕ್ಷಕ್ಕೆ ಹೆಚ್ಚು ಸ್ಥಾನಗಳು ಬಂದರೆ ಅದು ಮಾತ್ರ ಮೋದಿಗೆ ನಿಜವಾದ ಬೋನಸ್.

ಆದರೂ ಚುನಾವಣೆಗಳಲ್ಲಿ ಹೀಗೆ ಆಗುತ್ತದೆ ಎಂದು ಹೇಳಲಾಗುವುದಿಲ್ಲ. ತಿಂಗಳ ಹಿಂದೆ ಎರಡು ಲೋಕಸಭಾ ಸ್ಥಾನಕ್ಕೆ ನಡೆದ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಎರಡರಲ್ಲೂ ಸೋಲುತ್ತದೆ ಎಂದುಕೊಂಡ ಅನೇಕರಲ್ಲಿ ನಾನೂ ಒಬ್ಬ. ಮಂಡ್ಯದಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂದು ನಾನು ಮಾತನಾಡಿಸಿದ ಕೆಲವು ಕಾಂಗ್ರೆಸ್ ನಾಯಕರಿಗೇ ವಿಶ್ವಾಸವಿರಲಿಲ್ಲ. ಹಾಗಾಗಿ, ಅಂಕಗಣಿತ ಏನೇ ಹೇಳಿದರೂ Modiಮೋದಿ ನೇತೃತ್ವದ ಎನ್‌ಡಿಎ‌ ಅಧಿಕಾರ ಸ್ಥಾನದ ಹತ್ತಿರಕ್ಕೆ ಬರುವುದೇ ಇಲ್ಲ ಎಂದು ಹೇಳುವುದು ನಮ್ಮಗಳ ಇಚ್ಚೆ ಆಗುತ್ತದೆಯೇ ಹೊರತು ಕಾಲಜ್ಞಾನವಾಗುವುದಿಲ್ಲ. ಅವಕಾಶವಾದಿ ಮತ್ತು ಸಮಯಸಾಧಕ ರಾಜಕಾರಣಿಗಳೇ ಹೆಚ್ಚಿರುವ ದೇಶ ನಮ್ಮದು. ಅದರ ಜೊತೆಗೆ, ದೇಶದಲ್ಲಿ ಹೆಚ್ಚುತ್ತಿರುವ ನಗರವಾಸಿಗಳು, ನಗರ ಪ್ರದೇಶಗಳಲ್ಲಿಯೇ ಹೆಚ್ಚು ಘಟಿಸುವ ಕೋಮುಗಲಭೆಗಳು ಮತ್ತದು ಮಾಡುವ ಓಟು-ಕ್ರೋಢೀಕರಣ, ತಂತ್ರಜ್ಞಾನವನ್ನು ಬಳಸಿಕೊಂಡು ಭಾವಾವೇಶ ಮತ್ತು ಸಂಕುಚಿತ ಮತಾಂಧತೆಯನ್ನು ಹರಡಲು ಮಾಡುತ್ತಿರುವ ವ್ಯವಸ್ಥಿತ ಪ್ರಯತ್ನ, ವ್ಯಕ್ತಿಪೂಜೆ, ಇತ್ಯಾದಿಗಳು ಮೋದಿ ಮತ್ತವರ ಪಕ್ಷಕ್ಕೆ ಚುನಾವಣೆಯಲ್ಲಿ ಅನುಕೂಲ ಮಾಡಿಕೊಡುವ ಅಂಶಗಳು. ಹಾಗೇನಾದರೂ ಆದರೆ, ಭವಿಷ್ಯದ ಇತಿಹಾಸಕಾರರು ಈ ತಲೆಮಾರಿನ ಬಗ್ಗೆ ಒಳ್ಳೆಯ ಮಾತುಗಳನ್ನು ಆಡುವುದಿಲ್ಲ.

ಆದರೆ ಕರ್ನಾಟಕ ಬೇರೆಯದೇ ತೀರ್ಮಾನ ತೆಗೆದುಕೊಳ್ಳುತ್ತದೆ ಎನ್ನುವ ವಿಶ್ವಾಸ ನನ್ನದು. ದೇಶದಲ್ಲಿಯ ಕೆಲವು ಕಡೆ ಅಷ್ಟೇ ಅಲ್ಲದೆ ಕರ್ನಾಟಕದಲ್ಲಿಯೂ ಎದ್ದು ಕುಣಿಯುತ್ತಿರುವ ಕೆಲವು ಪಿತೂರಿಕೋರ ನರಿಗಳಿಗೆ ಬಿಜೆಪಿ ಪಕ್ಷ ತಾನು ಪ್ರತಿನಿಧಿಸುತ್ತಿರುವ ಬೆಂಗಳೂರು ನಗರದ ಮೂರು ಲೋಕಸಭಾ ಸ್ಥಾನಗಳಲ್ಲಿ ಒಂದನ್ನು ಉಳಿಸಿಕೊಂಡರೂ ಸಾಧನೆ ಆಗುತ್ತದೆ ಎನ್ನುವುದರ ಅರಿವಿದ್ದಂತಿಲ್ಲ. ರಾಜ್ಯದಲ್ಲಿ ಸದ್ಯದ ವಾಸ್ತವವೇ ಬೇರೆ ಇದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಗರದಲ್ಲಿಯ ಕನಿಷ್ಟ ಮೂರು ಸ್ಥಾನಗಳಲ್ಲಿ (ಹೆಬ್ಬಾಳ, ಜಯನಗರ, ಬಸವನಗುಡಿ) ಕಾಂಗ್ರೆಸ್ ಹೀನಾಯವಾಗಿ ಸೋತು ಬಿಜೆಪಿ ಗೆಲ್ಲಲು ಸ್ವತಃ ಕಾಂಗ್ರೆಸ್ ಕಾರಣವೇ ಹೊರತು ಬಿಜೆಪಿಗಿದ್ದಂತಹ “ಒಳ್ಳೆಯ” ಹೆಸರು ಅಲ್ಲ. ಇಂತಹ ಅನುಚಿತ ಔದಾರ್ಯವನ್ನು ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರದರ್ಶಿಸದೆ ಸರಿಯಾದ ತಂತ್ರಗಾರಿಕೆ ಮಾಡಿದರೆ, ಎಷ್ಟೇ ಮೋದಿ ಮುಖವಾಡಗಳು ಕುಣಿದಾಡಿದರೂ ಬೆಂಗಳೂರು ನಗರದಿಂದ ಒಬ್ಬನೇ ಒಬ್ಬ ಬಿಜೆಪಿ ಸಂಸದ ಗೆದ್ದು ಬರುವುದು ಕಷ್ಟವಿದೆ. ರಾಜ್ಯದ ಅನೇಕ ಕಡೆಯೂ ಇದೇ ಆಗಲಿದೆ.

ಮತ್ತು ಕೇಂದ್ರ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತ, ಅದೇ ರಭಸದಲ್ಲಿ ನಮ್ಮ ರಾಜ್ಯ ಕಂಡ ಪರಮಾತಿಭ್ರಷ್ಟ ಯಡ್ಡಯೂರಪ್ಪನವರ ಜೊತೆಜೊತೆಗೆ ನಿಂತು ನರೇಂದ್ರ ಮೋದಿ ಮತ ಕೇಳಲಿರುವ ಚಿತ್ರ ಮೋದಿಯ ಅಧಿಕಾರದ ಹಪಹಪಿ ಮತ್ತು ನೀತಿಗಳಿಲ್ಲದ ಮನೋಭಾವವನ್ನೂ ಅನಾವರಣಗೊಳಿಸಲಿದೆ. ಇದನ್ನು ಪ್ರಾಮಾಣಿಕತೆ, ಬಲಿಷ್ಟ ದೇಶ, ಗಂಡಸುತನ, ದೇಶಭಕ್ತಿ, ಇತ್ಯಾದಿಗಳ ಹೆಸರಿನಲ್ಲಿ ಅಂತರ್ಜಾಲದಲ್ಲಿ ಎಗರಾಡುತ್ತಿರುವ ಕರ್ನಾಟಕದ ಕೆಲವು ಮತಾಂಧ ನರಿಗಳು ಹೇಗೆ ಸಮರ್ಥಿಸಿಕೊಳ್ಳಲಿವೆ? ಅವರಿಗೆ ಬೇಕಿರುವುದು ಜನಾಂಗ ನಿರ್ಮೂಲನೆಯೇ ಹೊರತು ಮನುಷ್ಯ ಸಮಾಜವನ್ನು ಕಟ್ಟುವ ಕಾಳಜಿ ಅಲ್ಲ. ಇದನ್ನು ಅರಿಯದ ಮುಗ್ಧರು, ದುಷ್ಟರು ಹಾಕಿದ ಕೋಮುದ್ವೇಷದ ಹೋಮದಲ್ಲಿ ಸಮಿತ್ತುಗಳಾಗಿ ಉರಿದುಹೋಗುತ್ತಿದ್ದಾರೆ. ದೇಶದ ಪ್ರಜ್ಞಾವಂತರೆಲ್ಲ ಈ ದುಷ್ಕೃತ್ಯದ ಸಾಮೂಹಿಕ ಜವಾಬ್ದಾರಿ ಹೊರಬೇಕಿದೆ.

ಬಹುಶಃ ಈ ಚುನಾವಣೆ ಕಾಂಗ್ರೆಸ್‌ನ rahul_priyanka_soniaಇಂದಿರಾಗಾಂಧಿ ಕುಟುಂಬದ ವಂಶಪಾರಂಪರ್ಯ ರಾಜಕಾರಣದ ಅವಸಾನಕ್ಕೂ ನಾಂದಿ ಹಾಡುತ್ತದೆ ಎನ್ನುವ ವಿಶ್ವಾಸ ನನ್ನದು. ಆ ಮೂಲಕ ದೇಶದಲ್ಲಿ ಇನ್ನೂ ಹಲವು ಪ್ರಾದೇಶಿಕ ಪಕ್ಷಗಳು ಹುಟ್ಟುತ್ತವೆ ಮತ್ತು ರಾಷ್ಟ್ರೀಯ ಪಕ್ಷಗಳ ಸ್ಥಾನಮಾನಗಳು ಕುಸಿಯುತ್ತ ಹೋಗುತ್ತದೆ. ಆಂತರಿಕ ಪ್ರಜಾಪ್ರಭುತ್ವ ಕಟ್ಟಿಕೊಳ್ಳದೆ, ನೀತಿ ಮತ್ತು ಮೌಲ್ಯಗಳ ವಿಚಾರದಲ್ಲಿ ಪರ್ಯಾಯ ಕಲ್ಪಿಸದೇ ಹೋದರೆ ಕಾಂಗ್ರೆಸ್ ಸರ್ವನಾಶದತ್ತ ಸಾಗಲಿದೆ. ಅವರ ತಾಯಿಯ ಪರ ಕೆಲಸ ಮಾಡಿದ ಅನುಕಂಪ ಮತ್ತು 2004 ರಂತಹ ಚಾರಿತ್ರಿಕ ಅವಕಾಶಗಳು ರಾಹುಲ್ ಗಾಂಧಿಗೆ ಕೂಡಿ ಬರುವುದಿಲ್ಲ. ಅದನ್ನು ಮೀರುವ ಗಟ್ಟಿಯಾದ ವ್ಯಕ್ತಿತ್ವವನ್ನೂ ಅವರು ಬೆಳೆಸಿಕೊಂಡಿಲ್ಲ. ರಾಷ್ಟ್ರ ಮಟ್ಟದಲ್ಲಿ ಕುಟುಂಬ ರಾಜಕಾರಣದ ಹಿಡಿತ ಇನ್ನೊಂದೈದತ್ತು ವರ್ಷಗಳಲ್ಲಿ ಇಲ್ಲವಾಗುವ ಸಾಧ್ಯತೆ ಇದೆ.

ಈ ದೇಶದಲ್ಲಿ ಜಾತ್ಯತೀತತೆ, ವೈವಿಧ್ಯತೆ, ಸಹಿಷ್ಣುತೆ, ಪ್ರಜಾಪ್ರಭುತ್ವ, ಸಮಾನತೆ, ನ್ಯಾಯ, ಇತ್ಯಾದಿಯಂತಹ ಸಾರ್ವಕಾಲಿಕ ಮೌಲ್ಯಗಳಲ್ಲಿ ವಿಶ್ವಾಸವಿಟ್ಟಂತಹ ಪಕ್ಷಗಳ ಕೊರತೆ ಇದೆ. ಮೋದಿಯನ್ನು ತೋರಿಸಿ ಕೆಲವು ಪಕ್ಷಗಳು ಜಾತ್ಯತೀತತೆ ಬಗ್ಗೆ ಮಾತನಾಡುತ್ತವೆಯೇ ಹೊರತು ಅವು ನಿಜಕ್ಕೂ ಜಾತ್ಯತೀತವೇನಲ್ಲ. ಮೋದಿಯಂತಹ ವ್ಯಕ್ತಿ ಇಷ್ಟು ಪ್ರಾಮುಖ್ಯತೆ ಗಳಿಸಲು ನಮ್ಮ ಜಾತ್ಯತೀತ ಪಕ್ಷಗಳ ದಿವಾಳಿತನ, ಅಪ್ರಾಮಾಣಿಕತೆ ಮತ್ತು ಮೌಲ್ಯದಾರಿದ್ರ್ಯಗಳು ಕಾರಣವೇ ಹೊರತು ಮೋದಿಯ ಆಡಳಿತ ವೈಖರಿ ಮತ್ತು ಭಾಷಣಗಳಲ್ಲ. ಮನಮೋಹನ ಸಿಂಗರು ಎರಡು-ಮೂರು ವರ್ಷಗಳ ಹಿಂದೆಯೇ ಪ್ರಧಾನಮಂತ್ರಿ ಸ್ಥಾನದಿಂದ ಹಿಂದೆಸರಿದು, ಮತ್ತೊಬ್ಬ ಕ್ರಿಯಾಶೀಲ ಮತ್ತು ಪ್ರಾಮಾಣಿಕರನ್ನು ಪ್ರಧಾನಿ ಮಾಡಿದ್ದರೆ ವಾಸ್ತವವೇ ಬೇರೆ ಆಗಿರುತ್ತಿತ್ತು. ಆದರೆ ಕಾಂಗ್ರೆಸ್ ನಾಯಕತ್ವ ಯಾವುದೇ ಸ್ವತಂತ್ರ ಮನೋಭಾವದ ವ್ಯಕ್ತಿಯನ್ನು ನಂಬುವ ಸ್ಥಿತಿಯಲ್ಲಿಲ್ಲ. ಇದು ಕಾಂಗ್ರೆಸ್‌ಗಾದ ನಷ್ಟ ಮಾತ್ರವಲ್ಲ, ದೇಶದ ವರ್ತಮಾನ ಮತ್ತು ಭವಿಷ್ಯಕ್ಕೂ ಆದ ಅನ್ಯಾಯ.

ಭವಿಷ್ಯ ಆಶಾದಾಯಕವಾಗಿ ಇಲ್ಲದಿದ್ದರೂ, ಈ ನಾಡಿನಲ್ಲಿ ಸೀಮಿತ ಪ್ರಮಾಣದಲ್ಲಾದರೂ ನಡೆಯುತ್ತಿರುವ upward-mobility,garment-factory ಗಾರ್ಮೆಂಟ್ಸ್-ಐಟಿಬಿಟಿ-ಮಾಲ್‌ಗಳ ಕಾರಣಕ್ಕಾಗಿ ಕೆಳಮಧ್ಯಮವರ್ಗದ ಹೆಣ್ಣುಮಕ್ಕಳಿಗೆ ಸಿಗುತ್ತಿರುವ ಆರ್ಥಿಕ ಸ್ವಾತಂತ್ರ್ಯ, ಕುಲಮತ‌ಅಂತಸ್ತುಗಳ ಭೇದವಿಲ್ಲದೆ ಪ್ರೇಮದಲ್ಲಿ ಬೀಳುತ್ತಿರುವ ಯುವಸಮಾಜ, ಹೆಚ್ಚುತ್ತಿರುವ ಅಂತರ್ಜಾತಿ ವಿವಾಹಗಳು, ಇವೆಲ್ಲವೂ ಹೊಸದಾದ ಭಾರತವನ್ನೇ ಸೃಷ್ಟಿಸುತ್ತಿವೆ. ಪೂರ್ವಿಕರ ಕೆಲವು ಪ್ರತಿಗಾಮಿ ಚಿಂತನೆಗಳನ್ನು ತೊಡೆದುಹಾಕಿ, ಈ ನೆಲದಲ್ಲಿ ಹುಟ್ಟಿದ ಸಾರ್ವತ್ರಿಕ ಮೌಲ್ಯಗಳನ್ನು ಮತ್ತು ನಮ್ಮ ಪರಂಪರೆಯಲ್ಲಿಯ ಬಂಡಾಯ, ಅಹಿಂಸಾತ್ಮಕ ಹೋರಾಟ, ಮತ್ತು ಸಹಬಾಳ್ವೆಯ ನಾಗರಿಕತೆಯನ್ನು ಹೊಸಕಾಲಕ್ಕೆ ಅನ್ವಯಿಸಿಕೊಂಡು ರೂಪಿಸಿಕೊಂಡರೆ ಪ್ರಪಂಚವೆಲ್ಲ ಸ್ಫೂರ್ತಿಗಾಗಿ ಇದರತ್ತ ನೋಡುವ ದೇಶವಾಗುತ್ತದೆ ನಮ್ಮದು. ಇಲ್ಲದಿದ್ದರೆ ಹಿಟ್ಳರನ ಜರ್ಮನಿಯ ಬಗ್ಗೆ ಇಂದಿನ ಜರ್ಮನ್ನರೂ ಹೇಗೆ ಅಸಹ್ಯಿಸಿಕೊಳ್ಳುತ್ತಾರೋ, ಅದನ್ನು disown ಮಾಡುತ್ತಾರೋ, ಭಾರತದ ಅಂತಹ ಅವಧಿಗೆ ಕಾರಣರೂ ಸಾಕ್ಷಿಗಳೂ ಆಗಿ ಈ ತಲೆಮಾರು ನಿಲ್ಲುತ್ತದೆ. ನಮ್ಮದೇ ಸಂತತಿ ನಮ್ಮ ಭ್ರಷ್ಟತೆ ಮತ್ತು ದುಷ್ಟತೆಯ ಕಾರಣಕ್ಕೆ ನಮ್ಮನ್ನು ನಿರಾಕರಿಸುವುದಕ್ಕಿಂತ ಹೆಚ್ಚಿನ ತಿರಸ್ಕಾರ ಇನ್ನೊಂದಿಲ್ಲ. ಭವಿಷ್ಯದ ಇತಿಹಾಸದ ಪುಟಗಳಲ್ಲಿ ಇಂದಿನ ವರ್ತಮಾನ ಹೇಗೆ ದಾಖಲಾಗಬೇಕು ಎನ್ನುವ ಎಚ್ಚರವನ್ನು ಇಂದಿನ ಭಾರತ ಪಡೆಯಬೇಕಿದೆ.

ಹಾಸನದಲ್ಲಿ ನಡೆದ “ದಲಿತರು ಮತ್ತು ಉದ್ಯಮಶೀಲತೆ” ಕುರಿತ ವಿಚಾರಸಂಕಿರಣ

ಸ್ನೇಹಿತರೇ,

’ವರ್ತಮಾನ.ಕಾಮ್’ ಮತ್ತು ಹಾಸನದ ’ಸಹಮತ ವೇದಿಕೆ’ಯವರು ಕಳೆದ ಶನಿವಾರ ಹಾಸನದಲ್ಲಿ ಏರ್ಪಡಿಸಿದ್ದ “ದಲಿತರು ಮತ್ತು ಉದ್ಯಮಶೀಲತೆ” ಕುರಿತಾದ ವಿಚಾರಸಂಕಿರಣಕ್ಕೆ ದೊರೆತ ಸ್ಪಂದನೆ ಸಮಾಧಾನಕರವಾಗಿತ್ತು. ಬೆಂಗಳೂರಿನಿಂದ ಬಂದಿದ್ದ ಎಲ್.ಹನುಮಂತಯ್ಯ, ರಾಜಾ ನಾಯಕ್, ಮತ್ತು vartamaana-sahamata-invitationಸಿ.ಜಿ.ಶ್ರೀನಿವಾಸನ್‌ರವರು ದಲಿತರು ಉದ್ಯಮಿಗಳಾಗಬೇಕಾದ ಅಗತ್ಯ, ಮತ್ತು ಉದ್ಯಮವಲಯದಲ್ಲಿ ಹಾಗೂ ಸರ್ಕಾರದ ಮಟ್ಟದಲ್ಲಿ ಅವರಿಗಿರುವ ಅವಕಾಶಗಳು, ಮತ್ತಿತರ ವಿಷಯಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು. ಇಂತಹ ವಿಷಯಗಳ ಬಗ್ಗೆ ಪೂರಕವಾಗಿ ಸ್ಪಂದಿಸುವ ಹಾಸನದಲ್ಲಿರುವ ಪ್ರಖ್ಯಾತ ಚಿತ್ರಕಲಾವಿದ ಕೆ.ಟಿ.ಶಿವಪ್ರಸಾದ್‌ರವರು ಅಧ್ಯಕ್ಷತೆ ವಹಿಸಿ ದಲಿತರು ಎದುರಿಸಬಹುದಾದ ಸವಾಲುಗಳ ಬಗ್ಗೆ ಮಾತನಾಡಿದರು. ಹಾಸನದ ಪತ್ರಕರ್ತ ನಾಗರಾಜ್ ಹೆತ್ತೂರ್ ಕಾರ್ಯಕ್ರಮ ನಿರೂಪಿಸಿದರು. ಒಂದೂವರೆ ತಾಸಿನಲ್ಲಿ ಮುಗಿಯುತ್ತದೆ ಎಂದುಕೊಂಡ ಕಾರ್ಯಕ್ರಮ ಸಭಿಕರ ಪ್ರಶ್ನೆ, ಸಂವಾದ, ಆಸಕ್ತಿಯ ಕಾರಣವಾಗಿ ಎರಡೂವರೆ ತಾಸಿಗೂ ಹೆಚ್ಚಿಗೆ ನಡೆಯಿತು. ಲೇಖಕಿ ರೂಪ ಹಾಸನ, ಜೆ.ವಿ.ಕಾರ್‍ಲೊ, ಮುಂತಾದ ಹಲವು ಬರಹಗಾರರು ಮತ್ತು ಪ್ರಗತಿಪರ ಹೋರಾಟಗಾರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಈ ಕಾರ್ಯಕ್ರಮಕ್ಕೆ ಸಂಬಂಧಿಸಿದ ಟಿಪ್ಪಟಿಯನ್ನು ನಾನು ಈ ಮೊದಲೇ ಇಲ್ಲಿ ಬರೆಯಬೇಕಿತ್ತು. ಆದರೆ ನನ್ನ ಇತರೆ ಕೆಲವು ವೈಯಕ್ತಿಕ ಕೆಲಸಗಳ ಕಾರಣವಾಗಿ ಮಾಡಲಾಗಿರಲಿಲ್ಲ. ಕ್ಷಮೆ ಇರಲಿ. ಈ ಕಾರ್ಯಕ್ರಮದಲ್ಲಿ ಬಹಳ ಸವಿಸ್ತಾರವಾಗಿ ಮಾತನಾಡಿದ ಸಾಹಿತಿ, ರಾಜಕಾರಣಿ, ಮತ್ತು ಚಿಂತಕ ಎಲ್.ಹನುಮಂತಯ್ಯನವರ ಭಾಷಣದ ಧ್ವನಿಮುದ್ರಿಕೆಯನ್ನು ವರ್ತಮಾನ.ಕಾಮ್‌ನಲ್ಲಿ ಪಾಡ್‌ಕ್ಯಾಸ್ಟ್ ರೂಪದಲ್ಲಿ ಪ್ರಕಟಿಸುವ ಆಲೋಚನೆ ಇದೆ. ಒಂದಿಷ್ಟು ತಾಂತ್ರಿಕ ಕೆಲಸಗಳ ಕಾರಣದಿಂದಾಗಿ ಅದು ತಡವಾಗಿದೆ. ಇಷ್ಟರಲ್ಲೇ ಅದನ್ನು ಪ್ರಕಟಿಸುವ ಕೆಲಸ ಮಾಡಲಾಗುವುದು.

ಕಾರ್ಯಕ್ರಮ ಕುರಿತ ವರದಿಗಳು ಪ್ರಜಾವಾಣಿಯ ಸ್ಥಳೀಯ ಆವೃತ್ತಿಯಲ್ಲಿ, ಹಾಸನದ ಜನತಾ ಮಾಧ್ಯಮ ಪತ್ರಿಕೆಯಲ್ಲಿ, ಮತ್ತು ದಿ ಹಿಂದೂ ಪತ್ರಿಕೆಯಲ್ಲಿ ಪ್ರಕಟವಾಗಿವೆ. ಅವನ್ನು ಇಲ್ಲಿ ಕೆಳಗೆ ಲಗತ್ತಿಸಲಾಗಿದೆ. ಹಾಗೆಯೇ ಹತ್ತಾರು ಚಿತ್ರಗಳನ್ನು ಹಾಸನದ ಐವಾನ್ ಡಿಸಿಲ್ವರು ತೆಗೆದಿದ್ದು ಕೆಲವನ್ನು ಇಲ್ಲಿ ಪ್ರಕಟಿಸಲಾಗಿದೆ. ಇನ್ನೂ ಹೆಚ್ಚಿನ ಚಿತ್ರಗಳು ಡಿಸಿಲ್ವರ ಫೇಸ್‌ಬುಕ್ ಪೇಜ್‌ನಲ್ಲಿ ಇವೆ.

ಈ ಕಾರ್ಯಕ್ರಮವನ್ನು ಆಯೋಜಿಸಲು ಸಹಕರಿಸಿದ ಸಹಮತ ವೇದಿಕೆಯ ಸ್ನೇಹಿತರಿಗೆ ನಾನು ಆಭಾರಿ. ಹಾಗೆಯೇ, ಮೊದಲಿನಿಂದಲೂ ಈ ವಿಷಯದ ಬಗ್ಗೆ ಸ್ಪಂದಿಸುತ್ತ, ಈ ಕಾರ್ಯಕ್ರಮದ ಹಲವಾರು ಜವಾಬ್ದಾರಿಗಳನ್ನು ಹೊತ್ತು, ಬೆಂಗಳೂರಿನಿಂದ ನಮ್ಮೊಡನೆ ಬಂದಿದ್ದ ನಮ್ಮ ಬಳಗದ ಶ್ರೀಪಾದ್ ಭಟ್ಟರಿಗೂ ಸಹ ಧನ್ಯವಾದಗಳು. ಇದೇ ವಿಷಯದ ಬಗ್ಗೆ ದಕ್ಷಿಣ ಕರ್ನಾಟಕದಲ್ಲಿ ಹಲವು ಕಡೆ ವಿಚಾರ ಸಂಕಿರಣಗಳನ್ನು ಏರ್ಪಡಿಸಲು ಶ್ರೀಪಾದ ಭಟ್ಟರು ಪ್ರಯತ್ನಿಸುತ್ತಿದ್ದಾರೆ. ತಮ್ಮ ಊರು ಅಥವ ನಗರಗಳಲ್ಲಿ ಇದನ್ನು ಆಯೋಜಿಸಲು ಆಸಕ್ತರಾಗಿರುವ ಸ್ನೇಹಿತರು ಅವರನ್ನು ಅಥವ ನನ್ನನ್ನು ಸಂಪರ್ಕಿಸಬಹುದು.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ

ಪತ್ರಿಕಾ ವರದಿಗಳು:

ಪ್ರಜಾವಾಣಿ:

prajavani

 

 

ಜನತಾ ಮಾಧ್ಯಮ :

janatha-maadhyama-1

janatha-maadhyama-2

 

 

The Hindu:

the-hindu-report-hassan
ಕೆಲವು ಚಿತ್ರಗಳು:

dalit-entrepreneurship-1
dalit-entrepreneurship-2
dalit-entrepreneurship-3
dalit-entrepreneurship-4
dalit-entrepreneurship-5
dalit-entrepreneurship-6
dalit-entrepreneurship-7
dalit-entrepreneurship-10
dalit-entrepreneurship-8
dalit-entrepreneurship-9
dalit-entrepreneurship-11
dalit-entrepreneurship-12
dalit-entrepreneurship-13
dalit-entrepreneurship-14
dalit-entrepreneurship-15
dalit-entrepreneurship-16

ಜಾನುವಾರು ಜಾನಪದ ಮತ್ತು ಐಬುಗಳು : ಗಂಗೆ, ಗೌರಿ,.. ಭಾಗ–9

– ಎಚ್.ಜಯಪ್ರಕಾಶ್ ಶೆಟ್ಟಿ

ಭಾಗ – 1: ಗಂಗೆ, ಗೌರಿ, ಕೆಂಪಿ, ಬುಡ್ಡಿಯರನ್ನು ಕೂಗಿ…
ಭಾಗ – 2: ಹಟ್ಟಿಯ ಅವತಾರ, ಹಕ್ಕಿಯ ಕೂಗು
ಭಾಗ – 3: ನಮ್ಮ ಅಪ್ಪ ಎಮ್ಮೆ ಸಾಕಣೆ ಸಾಕುಮಾಡಿದ್ದು
ಭಾಗ – 4: ನಿಂಗಮ್ಮನ ಹರಕೆ, ಸೂರಿದೇವರ ಗೂಳಿ
ಭಾಗ–5 : ಹೊಳೆಗಟ್ಟಿದ ಶೆಟ್ಟಿ, ದಡಮುಟ್ಟಿಸಿದ ಖಾದರ್
ಭಾಗ–6 : ಕೊರಳಿನ ಕುಂಟಿ, ಮೂತಿಯ ಚುಳ್ಳಿ, ಶೀಲ ಸರ್ಕಸ್
ಭಾಗ–7 : ದಾನದ ಪಾತ್ರೆ ಪಂಚೆ ಹಾಗೆಯೆ ಗೋವು
ಭಾಗ–8 : ಹಸು ಹುಲ್ಲನ್ನಷ್ಟೇ ತಿನ್ನುವುದಿಲ್ಲ

ಭಾಗ–9 : ಜಾನುವಾರು ಜಾನಪದ ಮತ್ತು ಐಬುಗಳು

ಹಟ್ಟಿಯಲ್ಲಿಯೇ ಹುಟ್ಟಿದವುಗಳು ಹಣೆಬರಹ. ಆದರೆ ತಂದು ಕಟ್ಟಿಕೊಳ್ಳುವವುಗಳು ಹೀಗೆ ಹಣೆಬರಹದಂತೆ ಬಂದು ತಗುಲಿಕೊಳ್ಳದಂತೆ ಜಾಗರೂಕತೆ ವಹಿಸುವುದಲ್ಲವೇ? ಅಂದಮೇಲೆ ಅದಕ್ಕಾಗಿ ಗ್ರಹಗತಿಗಳ ಲೆಕ್ಕಾಚಾರ, ಗುಣ ನಡತೆಯ ವಿಶ್ಲೇಷಣೆ ಎಲ್ಲವೂ ಇರಬೇಕು. ಹೀಗೆ ದನ ಎಮ್ಮೆಗಳನ್ನು ಸಾಕುವುದೆಂದರೆ ಅಲ್ಲೊಂದು ಒಳಿತು ಕೆಡುಕುಗಳ ಲೆಕ್ಕಾಚಾರವಿರುವ ಲಕ್ಷಣ ಶಾಸ್ತ್ರದ ಜಾನಪದ ಜಗತ್ತೂ ಇರುತ್ತದೆ. ಹಸುಕೊಳ್ಳುವಾಗ ಅದರ ನಾಲ್ಕುಕಾಲು, ಒಂದು ಬಾಲ, ಎರಡುಕಣ್ಣು, ಕಿವಿಗಳಷ್ಟೇ ಗಣಿಸಲ್ಪಡುವುದಲ್ಲ. handicapped-cowನಾಲ್ಕು ಕಾಲಿನ ಎರಡು ಕಿವಿಯ ಎಲ್ಲಾ ಜಾನುವಾರುಗಳು ವಿಕ್ರಯಯೋಗ್ಯ, ಪಾಲನಾಯೋಗ್ಯವೆಂಬ ಸ್ಥಿತಿಯಿಲ್ಲ. ಹೇಗೆ ಮದುವೆ ಮುಂಜಿಗಳಲ್ಲಿ ಗುಣಕೂಟ, ಯೋನಿಕೂಟ, ಅಂಗಾರಕ ಇನ್ನೂ ಏನೇನನ್ನೋ ನೋಡುವ ಕ್ರಮವಿರುವಂತೆ ಜಾನುವಾರಗಳ ವಿಲೇವಾರಿಯಲ್ಲಿಯೂ ಅವುಗಳ ದೇಹರಚನೆ, ಚಾಳಿ, ಆರೋಗ್ಯಾದಿಗಳನ್ನಾಧರಿಸಿದ ಒಂದು ಜಾನಪದ ಪಶುಮೀಮಾಂಸೆಯಿದೆ. ಈ ವಿವೇಚನಾಶಾಸ್ತ್ರ ಒಪ್ಪುವ ಮತ್ತು ನಿರಾಕರಿಸುವ ಸಂಗತಿಗಳನ್ನಾಧರಿಸಿ ಹಸುಗಳ ವಿಕ್ರಯನಡೆಸಲಾಗುತ್ತದೆ. ಈ ಪಶುಮೀಮಾಂಸೆಯ ಮೂಲಕ ಐಬುಗಳೆಂಬಂತೆ ನಿರೂಪಿತವಾದ ಸಂಗತಿಗಳೊಂದಿಗೆ ತುಳುಕು ಹಾಕಿಕೊಂಡ ಹಸುಗಳನ್ನು ಹಟ್ಟಿಯಲ್ಲಿ ಕಟ್ಟಿಕೊಳ್ಳುವುದೇ ಅನಿಷ್ಟದಾಯಕವೆಂಬಂತೆಯೂ ನಂಬಿಕೊಂಡಿರುವ ಜಾನಪದರಿಗೆ ಅವರ ಬದುಕು ಹಸುನುಮಾಡುವ ಸಲ್ಲಕ್ಷಣದ ಹಸುವಷ್ಟೇ ಬೇಕು ವಿನಹಾ ಹಸುವೆಂಬ ರೂಹುವಲ್ಲ.

ನನಗೆ ತಿಳಿದಿರುವ ಅಲ್ಪಮಾಹಿತಿಯನ್ನಾದರಿಸಿ ಹೇಳುವುದಿದ್ದರೆ ದೇಹ ರಚನೆಗೆ ಸಂಬಂಧಿಸಿ ಬಳಕೆಯಲ್ಲಿರುವ ಕುಂಟುಮೂಳೆ, ಚೋಂಕುಬಾಲ, ಕಂಟ್‌ಬಾಲ, ಇಳ್‌ಗೋಡು, ದಾಸ್‌ಹುಂಡ್, ಕತ್ರಿಸುಳಿ, ನೇತ್ರ್‌ಬೆಳು, ಚಕ್ರ್‌ಕೋಡ್, ಕಳ್ಕ್‌ಬಾಯಿ ಇತ್ಯಾದಿಗಳು ಒಳ್ಳೆಯ ಚಹರೆಗಳಲ್ಲ. ದೈಹಿಕ ಅಸಾಮರ್ಥ್ಯತೆಯ ಭಾಗವಾಗಿ ಜೀನಬಾವು ಸೆಡಿಗಾಲು ಇತ್ಯಾದಿಗಳು ಅನುಕೂಲಕರವಲ್ಲ. ನಡತೆ/ಚಾಳಿಯ ಭಾಗವಾಗಿ ಕಳಿಹಾಕುವುದು, ನೊಗಮುರದ್ದ್, ನೇಲ್‌ನೊಗದ ಜೊತೆಗೆ ಹಟ್ಟಿಗ್ ಹೊಗ್ಗದ್, ಹಾರ್‍ಸ್ಕಹೋಪ್ದ್, ಹೆಜ್‌ಮಣ್‌ತೆಗುದ್ ಇತ್ಯಾದಿಗಳು ಒಳ್ಳೆಯ ಚಾಳಿಯಲ್ಲ. ಇವೆಲ್ಲವನ್ನೂ ಐಬುಗಳೆಂದೇ ಜಾನುವಾರು ಜಾನಪದದಲ್ಲಿ ಗುರುತಿಸಲಾಗುತ್ತದೆ. ಈ ಪರಿಭಾಷೆಗಳ ಮೂಲಕವಾಗಿ ಜಾನುವಾರುಗಳ ಕಾರ್ಯಕ್ಷಮತೆಯ ಜತೆಗೆ ಇಷ್ಟಾನಿಷ್ಟ ಪ್ರಯೋಜನಗಳನ್ನು ವಿವರಿಸುವ ಈ ‘ಜಾನುವಾರು ಜಾನಪದ ಸಂವಿಧಾನ’ ಹಸುವಿನ ವಯಸ್ಸು ಮತ್ತು ದುಡಿಯುವ ಶಕ್ತಿಯನ್ನು ಮೀರಿಯೂ ಅದನ್ನು ಇಟ್ಟ್ಟುಕೊಳ್ಳಬೇಕಾದುದೋ, deformed-cowಇಲ್ಲ ಹಟ್ಟಿಯಿಂದ ಹೊರಗಿಡಬೇಕಾದದೋ ಎಂಬುದನ್ನು ನಿರ್ಧರಿಸುತ್ತದೆ. ಹಾಗಾಗಿ ಹಸುವೊಂದನ್ನು ಕೊಡಲೇಬೇಕಾದ ಸಂದರ್ಭವನ್ನು ಕೇವಲ ಅದರ ವಯಸ್ಸು, ಗೊಡ್ಡುತನಗಳಷ್ಟೇ ನಿರ್ಧರಿಸುವುದಲ್ಲ. ಅದೊಂದು ಅನುಪಯುಕ್ತವಲ್ಲದ ಹಂತದಲ್ಲಿಯೂ ತನ್ನ ಐಬಿನ ಕಾರಣದಿಂದಾಗಿ ಸಾಕಿದವನ ಪಾಲಿಗೆ ಅಪಾಯಕಾರಿ ಸರಕಾಗಿ ಭಾವಿತವಾಗಲೂಬಹುದು. ಹಟ್ಟಿಯಲ್ಲಿ ಹಸುವಿರಬೇಕೆಂದು ಹಂಬಲಿಸುವ ಜನ ಈ ಐಬಿರುವ ಹಸು ಹಟ್ಟಿಯ ಹೊದ್ದುಹೋಕಿನಲ್ಲಿಯೇ ಇರಬಾರದೆಂಬ ಗಾಢವಾದ ನಂಬುಗೆಯನ್ನು ಹೊಂದಿರುವುದರಿಂದ ಹಸುವಿನ ಕೊಳ್ಳುವಿಕೆ ಕೊಡುವಿಕೆಗಳಲ್ಲಿ ಐಬುಗಳಿಗೆ ಪ್ರಮುಖ ಜಾಗವಿದೆ.

ಜಾನುವಾರುಗಳನ್ನು ಕೊಳ್ಳುವಾಗ ದೇಹರಚನೆ, ಬಣ್ಣ ಕೋಡುಗಳ ಸ್ವರೂಪ, ಮೈಮೇಲಿನ ರೊಮಗಳ ಸುಳಿ(ಸುರುಳಿ)ಗಳ ಸ್ವರೂಪಗಳನ್ನು ಅನುಭವಸ್ಥರು ಸೂಕ್ಷ್ಮವಾಗಿ ಗಮನಿಸುತ್ತಾರೆ. ಕೆಲವೊಮ್ಮೆ ಕೊಂಡುಕೊಳ್ಳುವವನಿಗೆ ಇದರ ಅರಿವಿಲ್ಲದೆ ಹೋದರೆ ಅವನು ಕೊಂಡುಕೊಂಡು ಬೆಪ್ಪಾದ ಮೇಲೆ ಅವುಗಳನ್ನು ಯಾರಿಗಾದರೂ ಸಾಗಹಾಕಲೇಬೇಕಾದ ಒತ್ತಡಕ್ಕೆ ಒಳಗಾಗುತ್ತಾನೆ. ಯಾಕೆಂದರೆ ಐಬುಗಳು ಅಷ್ಟೊಂದು ಪರಿಣಾಮಕಾರಿಯಾದ ನೆಲೆಯಲ್ಲಿ ಪ್ರಭಾವಬೀರಬಲ್ಲ ರೀತಿಯಲ್ಲಿ ನಂಬುಗೆಯ ಭಾಗವಾಗಿವೆ. ತಲೆಯ ಮೇಲಿನ ಉದ್ದನೆಯ ಬಿಳಿನಾಮ (ದಾಸ್‌ಹುಂಡು) ಕೊಂಡವನಗಂಟಿಗೆ ಪಂಗನಾಮವೆಂದೂ, ನೆತ್ರಬೆಳು (ರಕ್ತಕೆಂಪಿನ ಮಿಶ್ರಣದ ಬಿಳುಪು) ಯಜಮಾನನ ನೀರುಬಾರದ ಕಣ್ಣಲ್ಲಿ ನೆತ್ತರು ತರಿಸುತ್ತದೆ ಎಂದೂ ನಂಬುತ್ತಾರೆ. ಮೂರು ಹುರಿ ಮೂಳೆಗಳು ಕೂಡುವ ಜಾಗದಲ್ಲಿನ ಕುಂಟುಮೂಳೆ(ಕಿರುಗಾತ್ರದ ಮೂಳೆ), ಚಕ್ರಕೋಡು/ವೃತ್ತ್ತಾಕರದ ಕೋಡು, ಚೋಂಕ್ಬಾಲಗಳು ಹಸುವಿನ ಮೌಲ್ಯಕ್ಕೆ ಬಹುದೊಡ್ಡ ಹೊಡೆತ ಕೊಡುತ್ತವೆ. ಇನ್ನು ಚಾಳಿಗೆ ಸಂಬಂಧಿಸಿದಂತೆ ಉಳುವ ವೇಳೆಯಲ್ಲಿ ನೇಗಿಲು-ನೊಗಸಮೇತ ಪೇರಿಕೀಳುವ ಜಾನುವಾರುಗಳು ಹಾಗೆ ಓಡುವಾಗ ನೊಗಮುರಿದರೆ, ಇಲ್ಲವೇ ಅವುಗಳು ಹಾಗೆಯೇ ಹಟ್ಟಿಗೆ ಪ್ರವೇಶ ಮಾಡಿದ್ದರೆ ಹಟ್ಟಿಯನ್ನೇ ಉಳುವುದಕ್ಕಾಗಿ, ಎತ್ತುಬೀಜವನ್ನು ನಾಶಮಾಡಲಿಕ್ಕಾಗಿ ಬಂದವುಗಳೆಂಬಂತೆ ಭಾವಿಸುವುದರಿಂದ ಇಂತಹವುಗಳನ್ನು ಕಟ್ಟಿಕೊಳ್ಳಲೇಬಾರದೆಂಬ ದೃಢವಾದ ನಂಬುಗೆಯಿದೆ. ಹಾಗೆಯೇ ಜೇನುಬಾವು, ಸೆಡಿಕಾಲು(ಚಳಿಗಾಲದಲ್ಲಿ ನಡೆಯಲು ಎಳೆದಂತಾಗುವ ಕಾಲಿನ ರೋಗ) ಇತ್ಯಾದಿಗಳು ಋಣಾತ್ಮಕ ಐಬುಗಳೇ ಆಗಿವೆ.

ಇವುಗಳಲ್ಲಿ ಕೆಲವು ಐಬುಗಳು ಹಸುವಿನ ಮೌಲ್ಯಕ್ಕೆ ಪೆಟ್ಟುಕೊಟ್ಟು ಸಾಕಿದವನಿಗೆ ಮೂರುಕಾಸಿನ ಬೆಲೆಸಿಗದಂತೆ ಮಡಿದರೆ, ಇನ್ನು ಕೆಲವು ಐಬುಗಳು ಆ ಇಡಿಯ ಜೋಡಿಯನ್ನೋ, ಒಂಟಿ ಹಸುವನ್ನೋ ಸಂಪೂರ್ಣ ನಿರಾಕೃತ ಸರಕಾಗಿಸುತ್ತವೆ. ಒಂದುವೇಳೆ ಬುದ್ಧಿವಂತ ದಲ್ಲಾಳಿಗಳ ಮೂಲಕ ಉಳುವ ಇನ್ನಾರಿಗಾದರೂ ವಿಕ್ರಯ ಮಾಡಿದರೆ ಕೊಂಡವರು ಐಬಿನ ಸಮಾಚಾರ ತಿಳಿದ ಮೇಲೆ ಅದನ್ನೊಂದು (ತನಗೆ ಕೊಟ್ಟವರ) ಘೋರ ಅಪರಾಧ/ವಂಚನೆಯಾಗಿಯೇ ಭಾವಿಸುತ್ತಾರೆ. ಇಂತಹ ಸಂದರ್ಭದಲ್ಲಿ ಈ ಲಕ್ಷಣಮೀಮಾಂಸೆಯ ಕಿಂಚಿತ್ ಪರಿಚಯವಿರುವವರು ಈ ತೆರನಾದ ಹಸುಗಳನ್ನು ಧರ್ಮಕ್ಕೆ ಕೊಟ್ಟರೂ ಬೇಡವೆಂಬಂತೆ disabled-cowಸಾರುವಂತಾಗುವುದರಿಂದ ಅವುಗಳು ಯಾರ ಹಟ್ಟಿಯಲ್ಲಿರುತ್ತವೋ ಆ ಹಟ್ಟಿಯವನು ಕೊಡುವ ದಾರಿಕಾಣದೆ, ಉಳಿಸಿಕೊಳ್ಳಲಾರದೆ ಅತೀವ ಸಂಕಟ ಅನುಭವಿಸಿದ ಉದಾಹರಣೆಗಳಿವೆ. ಬಹುಶಃ ಪಶುವೊಂದನ್ನು ಉಪಯುಕ್ತ ಮತ್ತು ಅನುಪಯುಕ್ತವೆಂಬ ತೀರ್ಪಿಗೆ ಒಳಪಡಿಸುವ ಮುನ್ನವೇ ಇಂತಹ ಸಂದಿಗ್ದಗಳಿರುವುದರಿಂದ ಹಸುವೆಂಬುದನ್ನು ಏಕರೂಪಿ ಮಾದರಿಯಲ್ಲಿ, ಪವಿತ್ರತೆ, ಉಪಯುಕ್ತ, ಮುಗ್ಧ, ದೇವತೆಗಳ ಆವಾಸ ಎಂದೆಲ್ಲಾ ಪರಿಭಾವಿಸಲಾಗದು. ಹಾಗಾಗಿ ಸಹಜವಾಗಿಯೇ ಐಬಿರುವ ಹಸುಗಳನ್ನು ಈ ಜಾನಪದಮೀಮಾಂಸಾ ಆವರಣದಿಂದ ಹೊರಗಿರುವವರು, ಇಲ್ಲವೇ ಈ ಕಲ್ಪನೆಗಳ ಇರುವಿಕೆಯನ್ನೇ ನಿರಾಕರಿಸಿದವರು ಅಥವಾ ಮಾಂಸವಾಗಿ ಪರಿವರ್ತಿಸಿಕೊಳ್ಳಬಲ್ಲವರು ಮಾತ್ರ ಖರೀದಿಸಲು ಸಾಧ್ಯ.

ಬಹುಶ ರೈತನೊಬ್ಬ ತನ್ನ ಹಸುವನ್ನು ಇನ್ನೊಬ್ಬನಿಗೆ ಮಾರುವಾಗಲೆಲ್ಲಾ ಆತನ ಕಣ್ಣೆದುರಿರುವುದು ತನ್ನ ಜೀವಿತಕ್ಕೆ ನೆಲೆಯಾಗಬಲ್ಲ ಮೂಲಧನ. ಕೆಲವು ಐಬುಗಳ ಮೂಲಕ ಹತ್ತು ಸಾವಿರ ಬೆಲೆಬಾಳುವ ಜೋಡನ್ನು ಐದು ಸಾವಿರಕ್ಕೂ ಕೇಳುವವರಿಲ್ಲದಾದಾಗ, ತಾನೇ ಸ್ವಯಂ ಕಟ್ಟಿಕೊಂಡು ಸಾಕಲಾಗದಾದಾಗ ಐದಕ್ಕಿಂತ ಹೆಚ್ಚಿನ ದರ ಸಿಕ್ಕುತ್ತದೆ ಅಂತನಿಸಿದ ಗಿರಾಕಿಗೆ ಕೊಡಲಾರದ ಸಂದರ್ಭದಲ್ಲಿ ನಿಶ್ಚಿತವಾಗಿಯೂ ಅವನ ಹಟ್ಟಿ ,ಕೈ, ಮೆದುಳು ಎಲ್ಲವೂ ಬರಿದಾಗುತ್ತದೆ. ಬಾಲದಲ್ಲಿ ಬಿಳಿಯ ಉಂಗುರಾಕಾರದ ರಚನೆಯಿರುವ ಕರುವೊಂದು ಹಟ್ಟಿಯಲ್ಲಿರುವಷ್ಟು ದಿನವೂ ‘ಒಡು’ (ಉಡ) ವಂತಹ ಅನಿಷ್ಟ ಸಂಗತಿಯೊಂದು ತನಗೆ ತಗುಲಿಹಾಕಿಕೊಂಡಿದೆ ಎಂಬಲ್ಲಿ ನೆಮ್ಮದಿ ಹೇಗೆ ಸಾಧ್ಯ? ಮುದಿ ಹಾಗೂ ಒಳ್ಳೆಯ ಲಕ್ಷಣವಿಲ್ಲದ ಕೆಟ್ಟ ಐಬಿನ ಹಸುಗಳನ್ನೆಲ್ಲಾ ರೈತನ ತಲೆಗೆ ಕಟ್ಟಿ ನೀನು ಇವುಗಳನ್ನೆಲ್ಲಾ ಸಾಕಲೇಬೇಕು ಎಂಬ ಫರ್ಮಾನು ಏನಾದರೂ ಹೊರಟಲ್ಲಿ ಇಡಿಯ ಕೃಷಿ ಬದುಕಿನ ಜೀವನಕ್ರಮವೇ ಒಂದು ವಿರುದ್ಧ ದಿಕ್ಕಿನ ಬೆಳವಣಿಗೆಗೆ ಕಾರಣವಾಗಲಿದೆ. ಮನುಷ್ಯರ ಜಾತಕ ಹಿಡಿದು ಅವರ ಯೋಗಾಯೋಗ ಫಲ ಹೇಳಿ ನಂಬಿಸುವವರು, ಅಮೇರಿಕಾದ ಅಣ್ಣನ ವಿಶ್ವವ್ಯಾಪಾರ ಕಟ್ಟಡದ ಪುನರ್‌ನಿರ್ಮಾಣಕ್ಕೂ ವಾಸ್ತುವಿನ ಜ್ಞಾನ, deformed-calfನಂಬುಗೆ ಹರಿಸುವವರು, ರೈತರ/ಜಾನಪದರ ನಂಬುಗೆಯ ‘ಜಾನುವಾರು ಜಾನಪದ’ವನ್ನು ಅವೈಜ್ಞಾನಿಕ ಎನ್ನಲಾದೀತೇ? ಜ್ಯೋತಿಷ್ಯವನ್ನು ವಿಜ್ಞಾನವೆಂದು ಪಂಚಕಜ್ಜಾಯದ ತರಹ ಹಂಚಲಾಗುತ್ತಿರುವ ಕಾಲದಲ್ಲಿ ಜಾನುವಾರುಗಳಿಗೆ ಸಂಬಂಧಿಸಿದ ಜಾನಪದಲಕ್ಷಣ ಮೀಮಾಂಸೆಯನ್ನು ಹೇಗೆ ನಿರಾಕರಿಸಲಾಗುತ್ತದೆ? ಹಸುಕಟ್ಟಿಕೊಂಡವರು ಕಟ್ಟಿದ ಈ ಲಕ್ಷಣಮೀಮಾಂಸೆಗೆ ಜೀವನಾನುಭವದ ಹಿನ್ನೆಲೆಯೂ ಇದ್ದಿರಲೇಬೇಕಲ್ಲವೇ? ಜೀವನಾನುಭವಗಳ ಹಿನ್ನೆಲೆಯಲ್ಲಿ ಬೆಳೆದುಬಂದ ಈ ನಂಬಿಕೆಯ ಜೀವನಕ್ರಮವನ್ನು ಸ್ವಲ್ಪ ಆಪ್ತತೆಯಿಂದ ನೋಡಿದಲ್ಲಿ ಪವಿತ್ರಗೋವೊಂದು ಯಾವ ಹಟ್ಟಿಗಳಲ್ಲಿ ಯಾವ್ಯಾವ ಕಾರಣಕ್ಕಾಗಿ ಅಪವಿತ್ರವಾಗುತ್ತದೆ ಎಂಬ ಅರಿವು ಖಂಡಿತಾ ದಕ್ಕುತ್ತದೆ. ಯಾಕೆಂದರೆ ಅದು ಒಂದೇ ಏಟಿಗೆ ಆರಾಧನೆ ಮಾಡಿಯೋ, ಉಪಯೋಗ ಮಾಡಿಯೋ ಬಿಡಬಹುದಾದ ಸಂಗತಿಯಲ್ಲ. ಅದೊಂದು ಸಂಕೀರ್ಣವಾದ ಪ್ರತ್ಯೇಕಲೋಕ. ಏಕರೂಪಿಯಲ್ಲದ ಈ ಜಗತ್ತಿನಲ್ಲಿ ಅವರವರ ಗೋವು ಅವರವರೇ ಕಟ್ಟಿಕೊಳ್ಳತಕ್ಕಂತಹ ನೆಲೆಯಲ್ಲಿರುತ್ತದೆ.ಸಾರ್ವತ್ರಿಕವಾದ ಗೋಸಂಕಥನದ ಮೂಲಕ ಪವಿತ್ರೀಕರಿಸಲ್ಪಟ್ಟ ಅದರ ಅಂತರಿಕಜಗತ್ತು ಛಿದ್ರೀಕರಣಕ್ಕೆ ಒಳಗಾದುದೆಂಬುದನ್ನು ಸಾವಧಾನವಾಗಿ ಗಮನಿಸಬೇಕಾಗುತ್ತದೆ.