Monthly Archives: September 2013

ರಂಗಸಮಾಜದ ಸದಸ್ಯರ ಜವಾಬ್ದಾರಿ

– ಪ್ರದೀಪ್ ಮಾಲ್ಗುಡಿ

ಕರ್ನಾಟಕ ರಂಗಾಯಣ ವಿಕೇಂದ್ರೀಕರಣದ ಸಂದರ್ಭದಲ್ಲಿ ಮೈಸೂರಿನ ರಂಗಾಯಣ ಕಲಾವಿದರ ಅನುಭವವನ್ನು ಶಿವಮೊಗ್ಗ, ಧಾರವಾಡ ಹಾಗೂ ಗುಲ್ಬರ್ಗಾ ಶಾಖೆಗಳಲ್ಲಿ ಬಳಸಿಕೊಳ್ಳಬೇಕಾಗಿದೆ. ಬಿ.ವಿ.ಕಾರಂತ, ಸಿ.ಬಸವಲಿಂಗಯ್ಯ, ಪ್ರಸನ್ನ, ಚಿದಂಬರರಾವ್ ಜಂಬೆ ಮೊದಲಾದ ನಿರ್ದೇಶಕರ ಗರಡಿಯಲ್ಲಿ ಪಳಗಿ, ಕಾರ್ಯ ನಿರ್ವಹಿಸಿ, ಅಭಿನಯಿಸಿರುವ ಈ ನಟನಟಿಯರು ಭಾರತೀಯ, ಪಾಶ್ಚಿಮಾತ್ಯ ರಂಗಕರ್ಮಿಗಳು ಮತ್ತು ರಂಗಸಿದ್ಧಾಂತಗಳು ಹಾಗೂ ಅವುಗಳ ಪ್ರಾಯೋಗಿಕ ಸಾಧ್ಯತೆಗಳು-ಸಮಸ್ಯೆಗಳನ್ನು ಅರಿತವರು. ಹಾಗೆಯೇ, ಅನೇಕ ರಂಗಶಿಬಿರಗಳಲ್ಲಿ, ಧ್ವನಿ-ಬೆಳಕು ಪ್ರದರ್ಶನಗಳಲ್ಲಿ, ರಂಗಕ್ಕೆ ಸಂಬಂಧಿಸಿದ ಕಾರ್ಯಾಗಾರಗಳಲ್ಲಿ ಭಾಗವಹಿಸುವ ಮೂಲಕ ಅವರು ರಂಗಭೂಮಿಗೆ ಸಂಬಂಧಿಸಿದ ಅನೇಕ ಜ್ಞಾನಶಿಸ್ತುಗಳ ಬಗೆಗೆ ಪಡೆದಿರುವ ಅನುಭವವನ್ನು ರಂಗಭೂಮಿಯ ಕಡೆಗೆ ತಿರುಗಿಸಬೇಕಾದ ಕೆಲಸ ಅಗತ್ಯವಾಗಿ ಹಾಗೂ ತುರ್ತಾಗಿ ಆಗಬೇಕಿದೆ.

ಈ ಕಲಾವಿದರು ಕರ್ನಾಟಕದ ರಂಗಭೂಮಿಯ ಬೆಳವಣಿಗೆಯ ದೃಷ್ಟಿಯಿಂದ ಅಸಂಖ್ಯ ಸಾಧ್ಯತೆಗಳನ್ನು ಸೃಷ್ಟಿಸಬಲ್ಲರು. ರಂಗಾಯಣದ Kalamandira_Mysoreಕ್ರಿಯಾಶೀಲತೆಯನ್ನು ಹೆಚ್ಚಿಸುವಲ್ಲಿ ಇವರ ಪಾತ್ರ ದೊಡ್ಡದು. ಕಾಲಕಾಲಕ್ಕೆ ವಿವಿಧ ವಯೋಮಾನದ, ಭಿನ್ನ ಅನುಸಂಧಾನದ ನಿರ್ದೇಶಕರೊಡನೆ ಇವರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಈ ಕಲಾವಿದರ ಅನುಭವ ಹೊಸ ರಂಗಾಯಣಗಳ ಬೆಳವಣಿಗೆಗೆ ಅವಶ್ಯಕ. ಅದರಲ್ಲೂ ಈಗ ಹೊಸದಾಗಿ ಆರಂಭವಾಗುತ್ತಿರುವ ಶಾಖೆಗಳಿಗೆ ಈ ಕಲಾವಿದರ ಅನುಭವದ ಮೂಲಕ ಯುವ ಕಲಾವಿದರನ್ನು ಬೆಳೆಸುವ ಕೆಲಸ ಅಗತ್ಯವಾಗಿ ಆಗಬೇಕಾಗಿದೆ.

ಆದರೆ ಅವರನ್ನು ಹೊಸ ರಂಗಾಯಣದ ಘಟಕಗಳಲ್ಲಿ ದ್ವಿತೀಯ ದರ್ಜೆಯವರಂತೆ ಪರಿಗಣಿಸಬಾರದು. ರಂಗಾಯಣಗಳ ನಿರ್ದೇಶಕರ ಆಯ್ಕೆಯಲ್ಲಿ ಈ ಹಿರಿಯ ಕಲಾವಿದರಿಗೆ ಅವಮಾನ ಮಾಡುವಂಥ ಕೆಲಸಗಳಾಗಬಾರದು. ಅವರ ಅನುಭವವನ್ನು ಈ ಶಾಖೆಗಳು ಬಳಸಿಕೊಳ್ಳುವಂಥ ವಾತಾವರಣ ನಿರ್ಮಾಣವಾಗಬೇಕು. ಈಗಿರುವ ಈ ಎಲ್ಲ ಕಲಾವಿದರು ಏಳೆಂಟು ವರ್ಷಗಳಲ್ಲಿ ನಿವೃತ್ತರಾಗಲಿದ್ದಾರೆ. ಇವರ ನಿವೃತ್ತಿಯ ನಂತರ ರಂಗಾಯಣಗಳಲ್ಲಿ ನಿರ್ವಾತ ಉಂಟಾಗಬಾರದು. ಇವರ ನಿರ್ಗಮನದ ತರುವಾಯ ಹೊಸ ಕಲಾವಿದರನ್ನು ನೇಮಿಸಿಕೊಂಡು, ಅವರಿಗೆ ತರಬೇತಿ ನೀಡುವುದು, ಇತ್ಯಾದಿ ಪ್ರಯೋಗಗಳಿಗಿಂಥ ಇವರ ಗರಡಿಯಲ್ಲಿ ಯುವ ಕಲಾವಿದರ ಪಡೆಯನ್ನು ಸಜ್ಜುಗೊಳಿಸಿಕೊಂಡು, ಅವರನ್ನು ರಂಗಾಯಣಗಳನ್ನು ಕಟ್ಟುವ ನಿಟ್ಟಿನಲ್ಲಿ ಕ್ರಿಯಾಶೀಲಗೊಳಿಸಬೇಕಾದ ಅಗತ್ಯವಿದೆ.

ರಂಗಾಯಣದ ಹಿರಿಯ ಕಲಾವಿದರನ್ನು ಹೊಸ ರಂಗಾಯಣಗಳ ನಿರ್ದೇಶಕರ ಆಯ್ಕೆಯ ಸಂದರ್ಭದಲ್ಲಿ ಪರಿಗಣಿಸಬಹುದು. ಈ ನುರಿತ ಕಲಾವಿದರ ಸೇವಾಹಿರಿತನವನ್ನು ಮಾನದಂಡವಾಗಿಟ್ಟುಕೊಂಡು, ಅವರಿಗೆ ಸರದಿಯ ಪ್ರಕಾರ ನಿರ್ದೇಶಕ ಸ್ಥಾನದ ಜವಾಬ್ದಾರಿಯನ್ನು ನೀಡಬಹುದು. ಹೊಸ ರಂಗಾಯಣಗಳ ನಿರ್ದೇಶಕರ ನೇಮಕಾತಿ ಸಮಯದಲ್ಲಿ ರಂಗಾಯಣದ ಹಿರಿಯ ಕಲಾವಿದರನ್ನೂ ಪರಿಗಣಿಸಬೇಕಾಗಿದೆ. ಏಕೆಂದರೆ, ವಿಕೇಂದ್ರೀಕರಣದ ಸಂದರ್ಭದಲ್ಲಿ ಮೈಸೂರಿನ ರಂಗಾಯಣದ ಕಲಾವಿದರ ವ್ಯಾಪಕವಾದ ಅನುಭವವನ್ನು ಶಿವಮೊಗ್ಗ, ಧಾರವಾಡ ಹಾಗೂ ಗುಲ್ಬರ್ಗಾ ಶಾಖೆಗಳಲ್ಲಿ ಬಳಸಿಕೊಳ್ಳಬೇಕಾಗಿದೆ. ಈ ಮೂಲಕ ಇಷ್ಟು ದಿನಗಳ ಅವರ ನಿರಂತರವಾದ ರಂಗಭೂಮಿಯ ಸೇವೆಯನ್ನು ಪರಿಗಣಿಸಿ ಅವರನ್ನು ಗೌರವಿಸಿದಂತಾಗುತ್ತದೆ.

ಈ ಹಿಂದಿನ ಸರ್ಕಾರವು ಸಾಂಸ್ಕೃತಿಕ ವಿಷಯಕ್ಕೆ ಸಂಬಂಧಿಸಿದಂತೆ ಮಾಡಿದ ಒಂದೇ ಒಂದು ಒಳ್ಳೆಯ ಕೆಲಸವೆಂದರೆ, ರಂಗಾಯಣ ಕಲಾವಿದರ ವರ್ಗಾವಣೆ. ಆದರೆ ಈ ಹೊಸ ರಂಗಸಮಾಜದ ಸದಸ್ಯರು ಅದನ್ನು ರದ್ದುಗೊಳಿಸಿ ಅಚಾತುರ್ಯವೆಸಗಿದ್ದಾರೆ. ಮೈಸೂರಿನ ಕೆಲವು ಬುದ್ಧಿಜೀವಿಗಳು, ಸಾಹಿತಿ, ಕಲಾವಿದರು ಹಾಗೂ ಪ್ರೇಕ್ಷಕರು ತಾವು ಹಾಗೂ ರಂಗಾಯಣದ ಕಲಾವಿದರು ಸಾಯುವವರೆಗೂ ಮೈಸೂರಿನಲ್ಲೇ ನೆಲೆನಿಲ್ಲುವ, ಆ ಮೂಲಕ ಅವರ ನಟನೆ, ಅನುಭವ ಎಲ್ಲಿಯೂ ಬಳಕೆಯಾಗದಂತೆ, ಮತ್ತಾರಿಗೂ ಅವರ ಅಭಿನಯವನ್ನು ವೀಕ್ಷಿಸುವ ಅವಕಾಶ ಲಭಿಸದಂತೆ ಹುನ್ನಾರಗಳನ್ನು ಹೂಡುತ್ತಿದ್ದಾರೆ. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ರಂಗಸಮಾಜದ ಸದಸ್ಯರು ಕಾರ್ಯನಿರ್ವಹಿಸಬೇಕಾಗಿದೆ.

ಈಗಾಗಲೇ ರಂಗಾಯಣದ ನಿರ್ದೇಶಕ ಸ್ಥಾನದ ಆಕಾಂಕ್ಷಿಗಳು ಕ್ರಿಯಾಶೀಲವಾಗಿದ್ದಾರೆ. ಈಗಿರುವ ರಂಗಾಯಣದ ನಿಯಮಾವಳಿಗಳಿಗೆ ಕೂಡ ಇದೇ ಸಮಯದಲ್ಲಿ ಸೂಕ್ತ ತಿದ್ದುಪಡಿ ತರುವ ಮೂಲಕ ರಂಗಾಯಣದ ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರವನ್ನು ಕಂಡುಕೊಳ್ಳಬೇಕಿದೆ. ಆಗ ಬಾಹ್ಯ ಒತ್ತಡಗಳು ಇಲ್ಲವಾಗುತ್ತವೆ.

ರಂಗಾಯಣದ ಮುಂದಿನ ಬಿಕ್ಕಟ್ಟುಗಳು:

ರಂಗಾಯಣದ ಮುಂದಿನ ನಿರ್ದೇಶಕರಾರು? ಎಂಬ ಪ್ರಶ್ನೆ ಈಗ ಮತ್ತೆ ರಂಗಭೂಮಿ ಹಾಗೂ ಸಾಂಸ್ಕೃತಿಕ ವಲಯದಲ್ಲಿ ತೀವ್ರವಾದ ಚರ್ಚೆಗೆ ಗ್ರಾಸ ಒದಗಿಸಿದೆ. ರಂಗಾಯಣದ ನಿರ್ದೇಶಕ ಸ್ಥಾನದ ಆಕಾಂಕ್ಷಿಗಳು ಹಾಗೂ ಪರಸ್ಪರರನ್ನು ಬೆಂಬಲಿಸುವ ಅನೇಕ ಗುಂಪುಗಳು – ಅನೇಕ ಬಗೆಯಲ್ಲಿ ಕ್ರಿಯಾಶೀಲವಾಗಿವೆ. ರಂಗಾಯಣದ ಈಚಿನ ಮೂವರು ನಿರ್ದೇಶಕರು – ಬಿ.ಜಯಶ್ರೀ ಅವರ ರಾಜೀನಾಮೆ, ಪ್ರೊ.ಲಿಂಗದೇವರು ಹಳೆಮನೆಯವರ ಅಕಾಲಿಕ ನಿಧನ ಹಾಗೂ ಡಾ.ಬಿ.ವಿ.ರಾಜಾರಾಂ ಅವರನ್ನು ಸರ್ಕಾರವು ವಜಾಗೊಳಿಸಿದ ಕ್ರಮಗಳಿಂದ – ಈ ಮೂವರೂ ಅಕಾಲದಲ್ಲಿ ಹುದ್ದೆ ತೊರೆಯುವಂತಾದುದು ಪ್ರಸ್ತುತ ಸನ್ನಿವೇಶ ನಿರ್ಮಾಣಕ್ಕೆ ಕಾರಣ.

ಇದುವರೆಗಿನ ರಂಗಾಯಣದ ನಿರ್ದೇಶಕರ ಪಟ್ಟಿಯನ್ನು ಗಮನಿಸಿದಾಗ ಎದ್ದು ಕಾಣುವ ಅಂಶವೆಂದರೆ; ಎನ್.ಎಸ್.ಡಿ. ಪದವೀಧರರು ಹೆಚ್ಚಿನ ಅವಕಾಶಗಳನ್ನು ಪಡೆದಿದ್ದಾರೆ. ಪ್ರೊ.ಲಿಂಗದೇವರು ಹಳೆಮನೆಯವರು ಹಾಗೂ ಬಿ.ವಿ.ರಾಜಾರಾಂರನ್ನು ಹೊರತುಪಡಿಸಿದರೆ, ಉಳಿದವರೆಲ್ಲ ಎನ್.ಎಸ್.ಡಿ., ಪದವೀಧರರೆ ಆಗಿದ್ದಾರೆ. ಇದನ್ನು ಗಮನಿಸಿದಾಗ, ರಂಗಸಮಾಜದ ಸದಸ್ಯರು ಈ ಅರ್ಹತೆಯನ್ನು ಅಲಿಖಿತ ನಿಯಮವನ್ನಾಗಿ ಅನುಸರಿಸಿರುವಂತೆ ತೋರುತ್ತದೆ. ರಂಗಾಯಣದ ಕ್ರಿಯಾಶೀಲತೆಯನ್ನು ಅನೇಕ ಹಂತಗಳಲ್ಲಿ ವಿಸ್ತರಿಸುವ ಕೆಲಸವನ್ನು ಈ ಪದವೀಧರರು ಮಾಡಿದ್ದಾರೆ. ಈಗಲಾದರೂ ರಂಗಸಮಾಜವು ಆಯ್ಕೆಯಲ್ಲಿ ಅಂತಿಮಪಟ್ಟಿ ಕಳಿಸುವಾಗ ಈ ಬಗೆಯ ಅಲಿಖಿತ ನಿಯಮಗಳು ಇನ್ನೆಷ್ಟು ದಿನ ಅಗತ್ಯ ಎಂದು ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳಬೇಕಾಗಿದೆ.

ರಂಗಸಮಾಜದ ಸದಸ್ಯರು ಕರ್ನಾಟಕದ ರಂಗಭೂಮಿಯಲ್ಲಿ ದೀರ್ಘಾವಧಿಯಿಂದ ತೊಡಗಿಕೊಂಡಿದ್ದಾರೆ. ರಂಗಭೂಮಿಯ ವಿವಿಧ ವಿಭಾಗಗಳಲ್ಲಿ ಕ್ರಿಯಾಶೀಲವಾಗಿ ಭಾಗವಹಿಸುವ ಮೂಲಕ ರಂಗಭೂಮಿಯ ಚರಿತ್ರೆ, ಆಧುನಿಕ ವಿದ್ಯಮಾನ, ಅಧಿಕಾರ ಹಾಗೂ ಅದರ ಸಾಂಸ್ಥಿಕ ರೂಪಗಳು ಅದು ತರುವ ಒತ್ತಡಗಳನ್ನು ಅರಿಯದವರೇನೂ ಅಲ್ಲ. ಅವರು ಈ ಎಲ್ಲ ಸಮಸ್ಯೆಗಳ ನಡುವೆಯೂ ರಂಗಾಯಣದ ಸ್ಥಾಪನೆ, ಅದರ ಧ್ಯೇಯೋದ್ದೇಶಗಳನ್ನು ಅರ್ಥಪೂರ್ಣಗೊಳಿಸುವ ಸಲುವಾಗಿ ಅರ್ಹರನ್ನು ಆಯ್ಕೆ ಮಾಡಬೇಕಾಗಿದೆ.

ರಂಗಾಯಣದ ನಿರ್ದೇಶಕ ಸ್ಥಾನಕ್ಕೆ ರಂಗಸಮಾಜವು ಹೆಸರುಗಳನ್ನು ಸೂಚಿಸುವಾಗ ನಿರ್ದೇಶಕರಾಗಿ ಹೆಸರಾದವರನ್ನು ಮತ್ತು ಅವರ ರಂಗಭೂಮಿಯ ಆಸಕ್ತಿ, ತೊಡಗುವಿಕೆ, ರಂಗಾಯಣದ ಆಡಳಿತವನ್ನು ನಿರ್ವಹಿಸುವ ಸಾಧ್ಯತೆ ಇತ್ಯಾದಿ ವಿಷಯಗಳನ್ನೂ ಗಮನದಲ್ಲಿರಿಸಿಕೊಂಡು ಮೂವರು ಸೂಕ್ತ ಅಭ್ಯರ್ಥಿಗಳ ಪಟ್ಟಿಯನ್ನು ಸಲ್ಲಿಸುತ್ತಿತ್ತು. ಈ ಬಾರಿಯೂ ಈ ಸಂಖ್ಯೆ ಹೆಚ್ಚಳವಾಗದಂತೆ ನೋಡಿಕೊಳ್ಳಬೇಕಾಗಿರುವುದು ರಂಗಸಮಾಜದ ಮೊದಲ ಜವಾಬ್ದಾರಿ. ಆ ಮೂಲಕ ಈ ಪಟ್ಟಿಯಲ್ಲಿ ಯೋಗ್ಯರಾದವರು ಮಾತ್ರ ಉಳಿದುಕೊಳ್ಳುವ ಆಯ್ಕೆ ಮಾಡುವುದು ಎರಡನೇ ಜವಾಬ್ದಾರಿಯಾಗಿದೆ.

ಆದರೆ ರಂಗಸಮಾಜವು ಸೂಚಿಸಿದ ಹೆಸರುಗಳನ್ನು ಇತ್ತೀಚೆಗೆ ಮೈಸೂರು, ಶಿವಮೊಗ್ಗ ಹಾಗೂ ಧಾರವಾಡದ ರಂಗಾಯಣಗಳಿಗೆ ಪರಿಗಣಿಸದಿರುವುದು ಗೊತ್ತಾಗಿದೆ. ಹಾಗಾದರೆ ರಂಗಾಯಣಕ್ಕೆ ರಂಗಸಮಾಜವೇಕೆ ಬೇಕು? ರಂಗಸಮಾಜದ ಅಸ್ತಿತ್ವವಿರುವುದು ರಂಗಾಯಣದ ನಿರ್ದೇಶಕರ ಆಯ್ಕೆಯಲ್ಲಿ. ಪ್ರಜಾಪ್ರಭುತ್ವ ಮಾದರಿಯನ್ನು ಅನುಸರಿಸುವಲ್ಲಿ. ಅದು ಮುಂದೆ ರಂಗಾಯಣದ ಅಸ್ತಿತ್ವದ ಸ್ಥಿತ್ಯಂತರಗಳಿಗೂ ಕಾರಣವಾಗುತ್ತದೆ. ಆದ್ದರಿಂದ, ರಂಗಾಯಣದ ನಿರ್ದೇಶಕ ಸ್ಥಾನದ ಆಕಾಂಕ್ಷಿಗಳು ಹಾಗೂ ಅವರ ಬೆಂಬಲಿಗರಿಂದ ಬರುತ್ತಿರುವ, ಮುಂದೆ ಬರಬಹುದಾದ ಒತ್ತಡಗಳನ್ನು ಯಶಸ್ವಿಯಾಗಿ ನಿಭಾಯಿಸುವ ಸಾಮರ್ಥ್ಯವನ್ನು ರಂಗಭೂಮಿಯೇ ಒದಗಿಸುತ್ತದೆ. ರಂಗಭೂಮಿಯ ಒಡನಾಟವು ಈ ಬಗೆಯ ವಿವೇಕವನ್ನು ಕಲಿಸಿರುತ್ತದೆ. ಆದಾಗ್ಯೂ, ಸಾಂದರ್ಭಿಕವಾಗಿ ಪ್ರಭುತ್ವದ ಒತ್ತಡಗಳು ಈ ವಿವೇಕವನ್ನು ಹೊಸಕಿ ಹಾಕಿ-ತನಗೆ ಬೇಕಾದವರನ್ನು ಆರಿಸುವಂತಾಗಬಾರದು. ಪ್ರಭುತ್ವದ ಒತ್ತಡಕ್ಕೆ ಮಣಿಯುವುದಾದಲ್ಲಿ ರಂಗಸಮಾಜದ ಅಗತ್ಯವೇನಿದೆ?

ಇದುವರೆಗೆ ರಂಗಾಯಣದ ನಿರ್ದೇಶಕರಾಗಿರುವವರು ದಕ್ಷಿಣ ಕರ್ನಾಟಕದ ವ್ಯಾಪ್ತಿಯವರು, ಹವ್ಯಾಸಿ ರಂಗಕರ್ಮಿಗಳು, ನಿರ್ದೇಶಕರು. ಆದರೆ, ಉತ್ತರ ಕರ್ನಾಟಕದ ರಂಗಕರ್ಮಿಗಳು, ವೃತ್ತಿ ರಂಗಕರ್ಮಿಗಳು, ರಂಗಭೂಮಿಯ ತಂತ್ರಜ್ಞರು ಹಾಗೂ ನಾಟಕಕಾರರು ರಂಗಾಯಣದ ನಿರ್ದೇಶಕರಾಗಿಲ್ಲ. ರಂಗ ಸಮಾಜದ ಸದಸ್ಯರುಗಳು ಈ ಅನೇಕ ಅಂಶಗಳನ್ನು ಕೂಡ ಗಮನದಲ್ಲಿಟ್ಟುಕೊಂಡು ಆಯ್ಕೆ ಮಾಡಬೇಕಾಗಿದೆ. ಸಾಮಾಜಿಕ ನ್ಯಾಯದ ದೃಷ್ಟಿಯನ್ನು ಪರಿಗಣಿಸಿದ್ದಾದಲ್ಲಿ ಈಗಿನ ಆಕಾಂಕ್ಷಿಗಳ ಪಟ್ಟಿಯು ಅರ್ಧಕ್ಕಿಳಿಯುತ್ತದೆ. ಈ ಮಾನದಂಡಗಳನ್ನು ಅನುಸರಿಸಿದಲ್ಲಿ ರಂಗಾಯಣದ ಘನತೆಯೂ ಹೆಚ್ಚುತ್ತದೆ.

ಶಕ್ತಿ ಕೇಂದ್ರಗಳ ಒಡೆಯುವಿಕೆಯ ಸಂಕ್ರಮಣ ಕಾಲ

– ಬಿ.ಶ್ರೀಪಾದ ಭಟ್

“ನಾವು ಬದುಕುತ್ತಿರುವ ವರ್ತಮಾನದ ಸ್ಥಿತಿಗತಿಗಳ ಬಗೆಗೆ ನಿಮಗೆ ಅರಿವಿಲ್ಲದಿದ್ದರೆ ನೀವು ನನ್ನ ಕತೆಗಳನ್ನು ಓದಬೇಕು. ಈ ನನ್ನ ಕತೆಗಳನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗದಿದ್ದರೆ ಇಂದಿನ ವರ್ತಮಾನವನ್ನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ.” – ಸಾದತ್ ಹಸನ್ ಮಂಟೋ

ಇಂದು ಇಂಡಿಯಾ ದೇಶವು ತನಗರಿವಿಲ್ಲದಂತೆಯೇ ನಿಧಾನವಾಗಿ ಫ್ಯಾಸಿಸಂನ ಸ್ವರೂಪಕ್ಕೆ, ಅರಾಜಕತೆಯ ತೆಕ್ಕೆಗೆ ಜಾರಿಕೊಳ್ಳುತ್ತಿದೆ. ಬೌದ್ಧಿಕವಾಗಿ ದಾರಿದ್ರ್ಯಗೊಂಡಿರುವ ಬಹುಪಾಲು ಮಾಧ್ಯಮಗಳು ಈ ಫ್ಯಾಸಿಸಂನ ಆಳ ಅಗಲಗಳನ್ನು ಅರಿಯದೆಯೇ ಅಭಿವೃದ್ಧಿಯ ನೆಪದಲ್ಲಿ ಕೇವಲ ಸಂಕುಚಿತ ಆರ್ಥಿಕ ನೀತಿಯನ್ನು ಪ್ರತಿಪಾದಿಸುತ್ತ ಒಂದು ನಿರ್ದಿಷ್ಟ ಮೇಲ್ವರ್ಗಗಳ, ಮಧ್ಯಮವರ್ಗದ ಜೀವನ ಕ್ರಮವನ್ನೇ, ಅವರ ಏಕರೂಪಿ ಸಂಸ್ಕೃತಿಯನ್ನೇ ಇಂಡಿಯಾದ ಐಡೆಂಟಿಟಿಯೆಂದು ವಾದಿಸುತ್ತಿವೆ. ಆಮ್ ಆದ್ಮಿಯ ಕುರಿತಾಗಿ ಮಾತನಾಡುತ್ತಲೇ ಈ ಉದ್ದಿಮೆದಾರರು ಮತ್ತು ಮಾಧ್ಯಮಗಳು ಒಂದಾಗಿ ದೇಶದ ಬಡವನ ವಿರುದ್ಧ ಅಮಾನವೀಯವಾಗಿ ವರ್ತಿಸುತ್ತಿದ್ದಾರೆ. ಯಾವುದೇ ಜನಪರ ಕಾರ್ಯಕ್ರಮಗಳನ್ನು ಅಭಿವೃದ್ಧಿ ವಿರೋಧಿ ಎಂದು ವಾದಿಸುತ್ತಾರೆ.

ಈ ಕೇಂದ್ರೀಕೃತಗೊಂಡ ಕಾರ್ಪೋರೇಟ್ ಗುಂಪು ಯಾವುದೇ ಬಗೆಯ ಜನಪರ ಸಣ್ಣ ಯೋಜನೆಗಳನ್ನು ಉಗ್ರವಾಗಿ ವಿರೋಧಿಸುತ್ತದೆ. ಏಕೆಂದರೆ ತಮ್ಮ ಸ್ವಹಿತಾಸಕ್ತಿಗಾಗಿ ಸರ್ಕಾರಗಳೊಂದಿಗೆ ಬಹಿರಂಗವಾಗಿಯೇ ಡೀಲ್‌ಗಳನ್ನು ಮಾಡಿಕೊಂಡ ಈ ಕಾರ್ಪೋರೇಟ್ ವಲಯ ಆ ಡೀಲ್‌ಗಳನ್ನು ಸಕ್ರಮಗೊಳಿಸಿಕೊಳ್ಳಲು ಬಹುಪಾಲು ಮಾಧ್ಯಮಗಳನ್ನು ಬಳಸಿಕೊಂಡು ಅವನ್ನು ತನ್ನ ಉಕ್ಕಿನ ಹಿಡಿತದಲ್ಲಿರಿಸಿಕೊಂಡಿತು.

ಕಳೆದ ಕೆಲವು ತಿಂಗಳಿಂದ ಈ ಮಾಧ್ಯಮಗಳ ವರ್ತನೆಗಳನ್ನು ಗಮನಿಸಿದರೆ ಇವರ ಅಮಾನವೀಯ ವರ್ತನೆಗಳಿಗೆ ಉತ್ತರ ಸಿಗುತ್ತದೆ. Food Security Billಅಹಾರ ಭದ್ರತೆ ಮಸೂದೆ ಬೇಡ, ಕೋಮುವಾದ ವಿರೋಧಿ ಮಸೂದೆ ಬೇಡ, ಭೂ ಸ್ವಾಧೀನ ಮಸೂದೆ ರೈತ ವಿರೋಧಿ, ಹೀಗೆ ಎಲ್ಲಾ ಬಗೆಯ ಜನಪರವಾದ ಪ್ರಗತಿಪರ ಯೋಜನೆಗಳ ವಿರುದ್ಧ ವಿಷ ಕಾರುತ್ತಿದ್ದಾರೆ. ಸಂಪೂರ್ಣವಾಗಿ ಕಾರ್ಪೋರೇಟ್‌ಗಳ ಹಿಡಿತದಲ್ಲಿರುವ ಈ ಮಾಧ್ಯಮಗಳ ವರ್ತನೆ ದೇಶದ ವಿಕೇಂದ್ರೀಕರಣದ ವ್ಯವಸ್ಥೆಗೆ, ಪ್ರಜಾಪ್ರಭುತ್ವದ ಉಳಿವಿಗೆ ಅತ್ಯಂತ ಮಾರಕವಾದುದು. ಸಮುದಾಯವಾಗಿ, ಸಣ್ಣ ಸಣ್ಣ ವಿಕೇಂದ್ರಿಕೃತ ಯೋಜನೆಗಳ ಮೂಲಕ ದೇಶವನ್ನು ಕಟ್ಟುವುದನ್ನು ಇವರೆಲ್ಲ ಓಬೀರಾಯನ ಕಾಲದ, ಚಾಲ್ತಿಯನ್ನು ಕಳೆದುಕೊಂಡ ಸಮಾಜವಾದಿ ಚಿಂತನೆಗಳೆಂದು ನಿರಾಕರಿಸುತ್ತಿರುವ ರೀತಿ ಅಪಾಯಕಾರಿಯಾದದ್ದು.

ಕಡೆಗೆ ಕೇಂದ್ರ ಸರ್ಕಾರವು ತನ್ನ ಎಲ್ಲಾ ವೈಫಲ್ಯಗಳ ನಡುವೆಯೂ ಆಹಾರ ಭದ್ರತೆ ಮಸೂದೆಯನ್ನು ಜಾರಿಗೆ ತಂದು (ಅನೇಕ ಮಿತಿಗಳ ನಡುವೆಯೂ) ಬಡತನ ರೇಖೆಗಿಂತ ಕೆಳಗಿರುವ ಪ್ರತಿ ಕುಟುಂಬದ ಪ್ರತಿಯೊಬ್ಬ ಪ್ರಜೆಗೆ, ಪ್ರತಿ ತಿಂಗಳಿಗೆ ಕನಿಷ್ಟ 5 ಕೆ.ಜಿ.ಧಾನ್ಯ, ಅಕ್ಕಿ, ಬೇಳೆ, ಗರ್ಭಿಣಿ ಮತ್ತು ಬಾಣಂತಿ ಹೆಂಗಸರಿಗೆ ಪ್ರತಿ ತಿಂಗಳು ರೂ. 1000 ಸಹಾಯಧನ (6 ತಿಂಗಳವರೆಗೆ), ಪ್ರತಿಯೊಂದು ಮಗುವಿಗೂ ಮೂರು ವರ್ಷಗಳವೆರೆಗೆ ಪೌಷ್ಟಿಕ ಆಹಾರ, ಹೀಗೆ ಅನೇಕ ಜನಪರ ಆಶಯಗಳನ್ನು ಒಳಗೊಂಡ ಈ ಆಹಾರ ಭದ್ರತೆ ಮಸೂದೆಯ ಮೂಲಕ ದೇಶದ ಸುಮಾರು ಶೇಕಡ 67 ರಷ್ಟು ಜನಸಂಖ್ಯೆಗೆ ಖಾಯಂ ಆಗಿ ಸಬ್ಸಿಡಿ ರೂಪದಲ್ಲಿ ಧಾನ್ಯ ಕಾಳುಗಳು ಮತ್ತು ಅಕ್ಕಿ, ಬೇಳೆ ಸಿಗುವಂತೆ ಮತ್ತು ಅವರ ದಿನಿತ್ಯದ ಹೊಟ್ಟೆ ತುಂಬುವಂತೆ ಕಾನೂನನ್ನು ರೂಪಿಸಬಹುದೆಂದು ಒತ್ತಾಯಿಸುತ್ತಿದ್ದಾರೆ, ಅಲ್ಲದೆ ಇಂಡಿಯಾದಲ್ಲಿ ಆಹಾರ ಉತ್ಪಾದನೆಯ ಕೊರತೆ ಎಂದಿಗೂ ಕಾಡಿಲ್ಲ. ಇಲ್ಲಿ ಅಗತ್ಯಕ್ಕಿಂತಲೂ ಹೆಚ್ಚಿಗೆ ಬೆಳೆಯುತಿದ್ದೇವೆ. food-security-wasted-grainsಆದರೆ ಅದನ್ನು ನಿರ್ವಹಿಸಲು, ವಿತರಿಸಲು ಸೋತಿದ್ದೇವೆ. ಬೆಳೆದ ಧಾನ್ಯ, ಅಕ್ಕಿ, ಬೇಳೆಗಳನ್ನು ತಿಂಗಳುಗಟ್ಟಲೆ ಸಂಗ್ರಸಿಡಲು ಸುರಕ್ಷಿತ ವ್ಯವಸ್ಥೆ ನಮ್ಮಲಿಲ್ಲ. ಹೀಗಾಗಿಯೇ ಟನ್‌ಗಟ್ಟಲೆ ಆಹಾರ ಧಾನ್ಯಗಳು ಕೊಳೆತು ಹೋಗುತ್ತವೆ. ಮತ್ತೊಂದು ಕಡೆ ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿನ ಭ್ರಷ್ಟತೆ. ಇದನ್ನು ಸಂಪೂರ್ಣವಾಗಿ ತೊಲಗಿಸಬೇಕು. ಮುಖ್ಯವಾಗಿ ಸಣ್ಣ ರೈತರು ತಾವು ಬೆಳೆದ ಧಾನ್ಯಕ್ಕೆ ಕನಿಷ್ಟ ಬೆಂಬಲ ಬೆಲೆಗೆ ಧಕ್ಕೆ ಬರದಂತೆ ಎಚ್ಚರವಹಿಸಬೇಕು.

ಈ ಹಿನ್ನೆಲೆಯಲ್ಲಿ ಈ ಆಹಾರ ಭದ್ರತೆ ಮಸೂದೆಯನ್ನು ಭವಿಷ್ಯದ ಹೂಡಿಕೆಯಾಗಿ (Future Investment) ನೋಡಬೇಕೆಂಬ ಕನಿಷ್ಟ ಅರಿವಿಲ್ಲದೆ ಬಹುಪಾಲು ಮಾಧ್ಯಮಗಳು ಮತ್ತು ಮಧ್ಯಮ, ಮೇಲ್ವರ್ಗದ ಜನತೆ ಇದನ್ನು ಒಂದು ಖರ್ಚನ್ನಾಗಿ ನೋಡುತ್ತಿದ್ದಾರೆ. ಇದನ್ನು ಜಾರಿಗೊಳಿಸಲು ದೇಶದ ಎಲ್ಲ ಪಟ್ಟಭದ್ರ ಹಿತಾಸಕ್ತಿಗಳು ಒಂದಾಗಿ ವಿರೋಧಿಸುತ್ತಿವೆ. ರೂಪಾಯಿ ಅಪಮೌಲ್ಯದ ಗುಮ್ಮನನ್ನು ಹುಟ್ಟು ಹಾಕಿವೆ. ಇನ್ನೇನು ಭಾರತ ವರ್ಲ್ಡಬ್ಯಾಂಕ್‌ನ ಮುಂದೆ ಮಂಡಿಯೂರಬೇಕಾಗುತ್ತದೆ ಎಂದು ಅಪಪ್ರಚಾರ ನಡೆಸುತ್ತಿವೆ. ಅನಗತ್ಯವಾಗಿ ಭಯದ, ಹತಾಶೆಯ ವಾತಾವರಣವನ್ನು ಫ್ಯಾಬ್ರಿಕೇಟ್ ಮಾಡುತ್ತಿವೆ.

ಈ ಆಹಾರ ಭದ್ರತೆ ಮಸೂದೆಯಿಂದ ಸರ್ಕಾರದ ಬೊಕ್ಕಸಕ್ಕೆ 1 ಲಕ್ಷ ಕೋಟಿ ಖರ್ಚಾಗುತ್ತದೆ. ಅಂದರೆ ವಾರ್ಷಿಕ ಜಿಡಿಪಿಯ ಶೇಕಡ 1.2 ರಷ್ಟು ಮಾತ್ರ. ಆದರೆ ಭಾರತದ ಕಾರ್ಪೋರೇಟ್ ವಲಯಗಳು ಸುಮಾರು 12 ಸಾವಿರ ಕೋಟಿಯಷ್ಟು ತೆರಿಗೆ ವಿನಾಯ್ತಿಯನ್ನು ಪಡೆದುಕೊಳ್ಳುತ್ತವೆ (ಶ್ ! ಯಾರೂ ಕೇಳಬೇಡಿ), ಈ ಕಾರ್ಪೋರೇಟ್ ವಲಯಗಳಿಗೆ ದೊರಕುವ ಇಂಧನ ವಿನಾಯ್ತಿ ಸುಮಾರು 1 ಲಕ್ಷ ಕೋಟಿ (ಇದನ್ನು ಚರ್ಚಿಸುವ ಹಾಗಿಲ್ಲ, ದೊಡ್ಡವರಿಗೆ ಸಂಬಂಧಿಸಿದ್ದು!!), ಇನ್ನು ವಿಜಯ್ ಮಲ್ಯರಂತಹ ವಂಚಕರು ಸರ್ಕಾರಕ್ಕೆ ಹಾಕುವ ಪಂಗನಾಮ ನೂರಾರು ಕೋಟಿ!! ಪ್ರತಿ ವರ್ಷದ ಮುಂಗಡ ಪತ್ರದಲ್ಲಿ ಮತ್ತೇನಾದರೂ ವಿನಾಯ್ತಿಗಳಿವೆಯೇ ಎಂದು ಬೇರೆ ಬಕಪಕ್ಷಿಯಂತೆ ಕಾದು ಕುಳಿಯುತ್ತಾರೆ ಈ ವರ್ಗಗಳು. ಇವರ ಈ ಬಗೆಯ ತೆರಿಗೆ ವಿನಾಯ್ತಿಗಳು, ವಂಚನೆಗಳು ಇನ್ನೂ ನೂರಾರಿವೆ. ಇದಲ್ಲದೆ ಈ ಕಾರ್ಪೋರೇಟ್ ವರ್ಗಗಳು ಶಾಸಕಾಂಗ ಮತ್ತು ಕಾರ್ಯಾಂಗಗಳೊಂದಿಗೆ ಮಿಲಕಾಯಿಸಿ ಹುಟ್ಟುಹಾಕಿದ ನೂರಾರು ಹಣಕಾಸು ಅವ್ಯವಹಾರಗಳು, ಹಗರಣಗಳು ಆ ಮೂಲಕ ಸರ್ಕಾರಕ್ಕೆ ಸಾವಿರಾರು ಕೋಟಿಯ ವಂಚನೆಗಳನ್ನು ಮರೆಯಲು ಸಾಧ್ಯವೇ?

ಆದರೆ ಸ್ವತಃ ಈ ಕಾರ್ಪೋರೇಟ್ ವಲಯಗಳು ಕೇಂದ್ರ ಸರ್ಕಾರದ ಸಂಸ್ಥೆಗಳಿಗೆ, ಬ್ಯಾಂಕುಗಳಿಗೆ ಕೋಟ್ಯಾಂತರ ರೂಪಾಯಿಗಳ ಮೊತ್ತದ ಅಸಲು ಸಾಲವನ್ನು ಮತ್ತು ಅವುಗಳ ಮೇಲಿನ ಬಡ್ಡಿಯನ್ನು ವರ್ಷಗಟ್ಟಲೆ ಪಾವತಿಸದೆ ಆ ಮೂಲಕ ದೇಶದ ಹಣಕಾಸಿನ ಸಮತೋಲನವನ್ನೇ ಹದಗೆಡಿಸಿ ತಮ್ಮ ದುಷ್ಟತನವನ್ನು ತೋರಿಸುತ್ತಿವೆ. ಸರ್ಕಾರಗಳು ಇವರನ್ನು ಪ್ರಶ್ನಿಸಲು ಧೈರ್ಯ ಮಾಡುತ್ತಿಲ್ಲ. ಆದರೆ ಬಡವರಿಗೆ ಸಬ್ಸಿಡಿ ಮಟ್ಟದಲ್ಲಿ ಆಹಾರ ಧಾನ್ಯಗಳು ಹಂಚಿದಾಕ್ಷಣ ಇನ್ನೇನು ಮುಳುಗಿಹೋಯಿತೆಂದು ಅಪಪ್ರಚಾರ ನಡೆಸುತ್ತವೆ ಈ ಭ್ರಷ್ಟ, ಅಮಾನವೀಯ ಗುಂಪು. ಇಂತಹ ಸ್ವಾರ್ಥ, ಹಿಂಸಾತ್ಮಕ ವ್ಯವಸ್ಥೆಯನ್ನು ಬೇರೆಲ್ಲಾದರೂ ಕಾಣಲು ಸಾಧ್ಯವೇ?

ತೊಂಬತ್ತರ ದಶಕದಲ್ಲಿ ಜಾಗತೀಕರಣಕ್ಕೆ ಸಂಪೂರ್ಣವಾಗಿ ಒಡ್ಡಿಕೊಂಡ ಇಂಡಿಯಾ ದೇಶ ಇಪ್ಪತ್ತೆರಡು ವರ್ಷಗಳ ನಂತರ ಇಂದು ತನ್ನ ಅತ್ಯುತ್ತಮ, ಜೀವಪರ ಮೂಲಧಾರೆಗಳು ಮತ್ತು ಸೂಕ್ಷ್ಮವಾದ ಜೀವಸಂಕುಲ ಮತ್ತು ಅವುಗಳ ಸರಪಣಿ, ನದಿಗಳು ಎಲ್ಲವೂ ನಾಶಗೊಂಡು ಇಂದು ಬಂಜರುಗೊಂಡು ನಿಂತಿವೆ. ಗ್ರಾಮೀಣ ಬದುಕು ಸಂಪೂರ್ಣವಾಗಿ ನಿರ್ಜೀವಗೊಂಡು ಶಕ್ತಿಹೀನವಾಗಿದ್ದರೆ, ನಗರಗಳು ಸುಖಲೋಲುಪ್ತತೆಯಲ್ಲಿ ವಿಕಾರಗೊಂಡಿವೆ. starved-peopleಏಕೆಂದರೆ ಅಧಿಕಾರಿ ವರ್ಗ ಮತ್ತು ಪ್ರಭುತ್ವ ಜಾಗತೀಕರಣವನ್ನು ಕೇವಲ ಒಂದು ಉಪಭೋಗ ಪ್ರಕ್ರಿಯೆಯಾಗಿ ಪರಿಗಿಣಿಸಿರುವುದು. 1991 ರಿಂದ ಇಲ್ಲಿಯವರೆಗೂ ಕಳೆದ ಇಪ್ಪತ್ತೆರೆಡು ವರ್ಷಗಳಲ್ಲಿ ಇಂಡಿಯಾದ ಎಲ್ಲಾ ಸರ್ಕಾರಗಳು ಮತ್ತು ಮಧ್ಯಮ ಮತ್ತು ಮೇಲ್ವರ್ಗಗಳು ಈ ಜಾಗತೀರಣವನ್ನು ಸುಖಲೋಲುಪ್ತ, ವಿಲಾಸೀಜೀವನಕ್ಕೆ ತೆರೆದ ಹೆಬ್ಬಾಗಿಲಾಗಿ ಪರಿವರ್ತಿಸಿ ಕೇವಲ ಶೇಕಡ 15 ರಿಂದ 20 ರಷ್ಟಿರುವ ಈ ವರ್ಗಗಳು ಇಂಡಿಯಾ ದೇಶವನ್ನೇ ಕೊಳ್ಳುಬಾಕ ಸಂಸ್ಕೃತಿಗೆ ದೂಡಿಬಿಟ್ಟವು. ಜಾಗತೀಕರಣವಿರಲಿ ಇಲ್ಲದಿರಲಿ, ಮುಕ್ತ ಆರ್ಥಿಕ ನೀತಿ ಇರಲಿ, ಇಲ್ಲದಿರಲಿ ಮೂಲಭೂತವಾಗಿ ಪ್ರಜಾಪ್ರಭುತ್ವದ ದೇಶವೊಂದರ ಆರ್ಥಿಕ ನೀತಿ ವ್ಯವಸಾಯ ಮತ್ತು ಎಲ್ಲ ಬಗೆಯ ಸಣ್ಣ ಕೈಗಾರಿಕ ವಲಯಗಳ ಉತ್ಪಾದನೆಯ ಮೇಲೆ ಮತ್ತು ಅವುಗಳ ವ್ಯಾಪಾರ ಸರಪಣಿಗಳ ಮೇಲೆ ಅವಲಂಬಿತವಾಗಿರಬೇಕೆಂಬ ಮೂಲನೀತಿಯನ್ನೇ ತಿರಸ್ಕರಿಸಿ ಶೇಕಡ 20 ರಷ್ಟು ಜನತೆಯ ಕೊಳ್ಳುವಿಕೆಯನ್ನೇ, ಅವರ ಈ ಕೊಳ್ಳುವಿಕೆಯ ಸಾಮರ್ಥ್ಯವನ್ನೇ ದೇಶದ ಆರ್ಥಿಕ ಪ್ರಗತಿಗೆ ಮಾನದಂಡವಾಗಿ ಬಳಸಿಕೊಂಡಿತು. ಅದನ್ನೇ ಜಿಡಿಪಿ ಎಂದು ಬಿಂಬಿಸಿತು.

ಇದರ ಫಲವಾಗಿ ದೇಶದ ಕೇವಲ ಶೇಕಡ 15 ರಿಂದ 20 ರಷ್ಟು ಜನಸಂಖ್ಯೆಯ ಬಳಿ ಮಾತ್ರ ಈ ಕೊಳ್ಳುವಿಕೆಯ ಸಾಮರ್ಥ್ಯ ಕೇಂದ್ರೀಕೃತಗೊಂಡಿತು. ಅದರ ಫಲವೇ ಈ ಕೊಳ್ಳುಬಾಕುತನದ ವಿಷವೃತ್ತಕ್ಕೆ ಸಿಲುಕಿಕೊಂಡ ಈ ವರ್ಗಗಳು ಬಕಾಸುರನಂತೆ ಬದುಕತೊಡಗಿದರೆ ಅವರ ಈ ಹೊಟ್ಟೆಬಾಕುತನವನ್ನು ತಣಿಸಲು ಕೇಂದ್ರ ಸರ್ಕಾರವು ಆಮದಿನ ಮೇಲಿನ ಹಿಡಿತವನ್ನು, ಕರಗಳನ್ನು ಸಡಿಲಿಸಿ ಮುಕ್ತ ಮಾರುಕಟ್ಟೆಯನ್ನು ನಿರ್ಮಿಸಿಕೊಟ್ಟಿತು. ಇದರ ಫಲವಾಗಿ ದೇಸಿ ಸರಕಿನ ಉತ್ಪಾದನೆಯ ಪ್ರಮಾಣ ಕ್ರಮೇಣವಾಗಿ ಕುಂಠಿತಗೊಂಡು ಆಮದು ವಸ್ತುಗಳು ನಮ್ಮ ಮನೆ ಬಾಗಿಲ ಬಳಿಗೆ ಬಂದು ಬೀಳತೊಡಗಿದವು. ಜಾಗತೀಕರಣದ ಆರಂಭದಲ್ಲಿ ದೇಸಿ ಸರಕುಗಳ ರಫ್ತನ್ನು ಅಭೂತಪೂರ್ವವಾಗಿದೆ ಎಂದು ಉತ್ಪ್ರೇಕ್ಷಿತಗೋಳಿಸಿ, ಸ್ವತಃ ಸರ್ಕಾರಗಳೇ ಇದನ್ನು ಪುಷ್ಟೀಕರಿಸಲು ಉತ್ಪ್ರೇಕ್ಷಿತ ಅಂಕಿಅಂಶಗಳನ್ನು ತೋರಿಸಿದವು. ನೋಡಿ ಈ ದೇಸಿ ರಫ್ತು ನೀತಿ ಇದೇ ವೇಗದಲ್ಲಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಇದು ಆಮದಿನ ಪ್ರಮಾಣವನ್ನು ಮೀರಿ ದೇಶಕ್ಕೆ ವಿದೇಶಿ ವಿನಿಮಯದ ಮೂಲಕ ಹಣಕಾಸು ಭದ್ರತೆಯನ್ನು ಹೆಚ್ಚಿಸುತ್ತದೆ ಎಂದು ಬೂಸಿ ಬಿಟ್ಟಿತು. ಆದರೆ ಇದೇ ಸರ್ಕಾರ ಮತ್ತೊಂದು ಕಡೆ ದೇಸಿ ಉತ್ಪಾದನೆಗೆ ಪೂರಕವಾಗುವಂತಹ, expensive-wedding-banquetsದೇಸಿ ಸರಕುಗಳು ದೇಶದಲ್ಲಿಯೇ ಮಾರಾಟಗೊಳ್ಳುವಂತಹ ವಿಕೇಂದ್ರಿಕೃತ ಸಣ್ಣ ಕೈಗಾರಿಕ ಯೋಜನೆಗಳನ್ನು ನಿಷ್ಕ್ರಿಯೆಗೊಳಿಸಿ ಭಾರಿ ಕೈಗಾರಿಕೆಗಳಿಗೆ ಸಂಪೂರ್ಣ ಬೆಂಬಲ ನೀಡಿ ಇಡೀ ಸಂಪತ್ತಿನ ವಹಿವಾಟು ಮರಳಿ ಕೆಲವೇ ಪ್ರತಿಷ್ಟಿತ, ಶ್ರೀಮಂತ ಮನೆತನಗಳಿಗೆ, ಕಂಪನಿಗಳಿಗೆ ಸೀಮಿತವಾಗುವಂತೆ ಆರ್ಥಿಕ ನೀತಿಯನ್ನು ಜಾರಿಗೊಳಿಸಿತು. ಇದರಿಂದಾಗಿ ಸಣ್ಣ ಕೈಗಾರಿಕೆಗಳು ತಮ್ಮದೇ ಬ್ರಾಂಡಿನ ಸರಕನ್ನು ಉತ್ಪಾದಿಸಿ ಅದನ್ನು ಮಾರುಕಟ್ಟೆ ಮಾಡುವ, ರಫ್ತು ಮಾಡುವ ಸಾಧ್ಯತೆಗಳೇ ನಾಶಗೊಂಡು ದೇಶದ ಸಣ್ಣ ಕೈಗಾರಿಕ ವಲಯ ಕೇವಲ ಜಾಬ್ ವರ್ಕಗಳ ಮಟ್ಟಕ್ಕೆ ಸೀಮಿತಗೊಂಡು ಕ್ರಮೇಣ ನಾಶಗೊಂಡಿತು.

ಉದಾಹರಣೆಗೆ ತೊಂಬತ್ತರ ದಶಕದಲ್ಲಿ ಮತ್ತು ಕಳೆದ ದಶಕದಲ್ಲಿ ಉಚ್ಷ್ರಾಯ ಸ್ಥಿತಿಯಲ್ಲಿದ್ದ ಗಾರ್ಮೆಂಟ್ ವಲಯವನ್ನು ಗಮನಿಸಿ. ಇಲ್ಲಿನ ಕಂಪನಿಗಳು ಆಧುನಿಕ ರೆಡಿಮೇಡ್ ಬಟ್ಟೆಗಳನ್ನು ಉತ್ಪಾದಿಸುತ್ತಿದ್ದವು. ಆದರೆ ಅವನ್ನು ತಮ್ಮ ಬ್ರಾಂಡ್‌ನಲ್ಲಿ ಮಾರಲಿಕ್ಕಲ್ಲ. ಬದಲಾಗಿ ವಿದೇಶಿ ಕಂಪನಿಗಳಿಗೆ ಜಾಬ್ ವರ್ಕ ರೂಪದಲ್ಲಿ ಮಾರಲಿಕ್ಕೆ. ಇದನ್ನು ಕೈಗಾರಿಕೆಯ ಭಾಷೆಯಲ್ಲಿ ಹೊರಗುತ್ತಿಗೆ (Out Sourcing) ಎಂದು ಕರೆಯುತ್ತಾರೆ. ನಮ್ಮಲ್ಲಿಂದ ಅತ್ಯಂತ ಕನಿಷ್ಟ ಬೆಲೆಯಲ್ಲಿ ಈ ಬಟ್ಟೆಗಳನ್ನು ಕೊಂಡುಕೊಂಡ ಈ ವಿದೇಶಿ ಕಂಪನಿಗಳು ನಂತರ ಹತ್ತರಷ್ಟು ಹೆಚ್ಚಿನ ಬೆಲೆಯಲ್ಲಿ, ತಮ್ಮ ಬ್ರಾಂಡ್‌ನ ಹೆಸರಿನಲ್ಲಿ ಮರಳಿ ನಮಗೇ ಮಾರಾಟ ಮಾಡುತ್ತವೆ. ಇದರ ಫವಾಗಿ ನಮ್ಮ ದೇಸಿ ಕಂಪನಿಗಳು ಕಡಿಮೆ ಬೆಲೆಯಲ್ಲಿ ಬಟ್ಟೆಗಳನ್ನು ರಫ್ತು ಮಾಡಿದರೆ ಮರಳಿ ನಮ್ಮ ವ್ಯವಸ್ಥೆಯೇ ಈ ವಿದೇಶಿ ಕಂಪನಿಗಳಿಂದ ಅದರ ಹತ್ತರಷ್ಟು ಹೆಚ್ಚಿನ ಬೆಲೆಯಲ್ಲಿ ಆಮದು ಮಾಡಿಕೊಳ್ಳುತ್ತವೆ. ಇದು ನಮ್ಮ ವಿದೇಶಿ ವಿನಿಮಯದ ನೀತಿ!

ಇಲ್ಲಿ ಕೇವಲ ಹಣಕಾಸಿನ ಲಾಭನಷ್ಟದ ಅಂಶ ಮಾತ್ರವಿಲ್ಲ. ಮಹಿಳಾ ಕಾರ್ಮಿಕರ ಶೋಷಣೆಯಿದೆ. ಅವರ ಘನತೆಯನ್ನೇ ನಾಶಮಾಡಲಾಗಿದೆ. ಅಸಂಘಟಿತ ಕಾರ್ಮಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಅವರಿಗೆ ಕೆಲಸದ ಭದ್ರತೆಯಿಲ್ಲ. ಅದೇ ರೀತಿಯಾಗಿ ಯಾವುದೇ ಕಾರುಗಳ, autopartsದ್ವಿಚಕ್ರ ವಾಹನಗಳ ಬಿಡಿಭಾಗಗಳ ತಯಾರಕರು ಹೊರಗುತ್ತಿಗೆದಾರರೆಂದೇ (Sub contractors) ಪರಿಗಣಿಸಲ್ಪಡುತ್ತಾರೆ. ಅವರಿಗೆ ತಾವು ತಯಾರಿಸುವ ವಾಹನದ ಬಿಡಿಭಾಗಗಳ ಮೇಲೆ ಯಾವುದೇ ಹಕ್ಕಿರುವುದಿಲ್ಲ. ಅದೆಲ್ಲ ಕೇವಲ ಜಾಬ್ ವರ್ಕ ಮಾತ್ರ!! ಒಮ್ಮೆ ಮಾರುಕಟ್ಟೆ ಕುಸಿದರೆ ಈ ಎಲ್ಲ ಕಂಪನಿಗಳು ಮುಚ್ಚಬೇಕಾಗುತ್ತವೆ. ಏಕೆಂದರೆ ಸಾಮರ್ಥ್ಯವಿದ್ದರೂ ತಮ್ಮದೇ ಬ್ರಾಂಡಿನ ಹೆಸರಿನಲ್ಲಿ ಬಿಡಿಭಾಗಗಳನ್ನು ತಯಾರಿಸಿ ಮಾರಲು ನಮ್ಮಲ್ಲಿನ ಕಂಪನಿಗಳಿಗೆ ಅಧಿಕಾರವಿರುವುದಿಲ್ಲ. ಏಕೆಂದರೆ ಅವುಗಳ ತಂತ್ರಜ್ಞಾನವನ್ನು, ಡಿಸೈನ್‌ನನ್ನು ಪೇಟೆಂಟ್ ಮಾಡಿಕೊಂಡಿರುತ್ತವೆ ವಿದೇಶಿ ಕಂಪನಿಗಳು.

ಇದು ಕೇವಲ ಉದಾಹರಣೆಯಷ್ಟೆ. ಇಂತಹ ಸಾವಿರಾರು ದುರಂತಗಳಿವೆ. ಇಂತಹ ಹಳಿ ತಪ್ಪಿದ ಆರ್ಥಿಕ ನೀತಿಗಳಿಂದ ಜಾಗತೀಕರಣದಿಂದ ಪುನಶ್ಚೇತನಗೊಳ್ಳಬಹುದಾದಂತಹ ಸಣ್ಣ ಕೈಗಾರಿಕೆಗಳ ಬೆನ್ನೆಲುಬನ್ನೇ ಮುರಿದು ಹಾಕಿದೆ ನಮ್ಮ ಸರ್ಕಾರ. ಕಡೆಗೆ ಈ ಆರ್ಥಿಕ ನೀತಿಯಿಂದಾಗಿ ದೇಶದ ಆರ್ಥಿಕ ಭದ್ರತೆಯು ಅನಗತ್ಯವಾಗಿ ಸೆನ್ಸೆಕ್ಸ್‌ಗೆ ತಳುಕು ಹಾಕಿಕೊಂಡು ಅದರ ಏರಿಳಿತಗಳೇ ದೇಶದ ಆರ್ಥಿಕ ಭದ್ರತೆಯ ನಾಡಿಮಿಡಿತವೆಂಬಂತೆ ಇಡೀ ಹುಸಿ ವ್ಯವಸ್ಥೆಯೇ ರೂಪುಗೊಂಡಿದ್ದು ನಮ್ಮ ದೇಶದ ದುರಂತ ಅಧ್ಯಾಯವೇ ಸರಿ. ಇದರ ಫಲವಾಗಿ ಸ್ವಾವಲಂಬನೆಯ ಮೂಲಭೂತ ಸ್ವರೂಪವೇ ಕುರೂಪಗೊಂಡು ಕಳೆದ ಇಪ್ಪತ್ತು ವರ್ಷಗಳಲ್ಲಿ ಇಡೀ ಸಣ್ಣ ಕೈಗಾರಿಕ ವಲಯವೇ ನಾಶಗೊಂಡಿದೆ. ಇನ್ನು ಇಲ್ಲಿನ ವ್ಯವಸಾಯ ವೃತ್ತಿಯನ್ನು ನಾಶಗೊಳಿಸಿರುವುದರ ಕುರಿತಾಗಿ ಚರ್ಚಿಸಲು ಮತ್ತೊಂದು ವೇದಿಕೆಯೇ ಬೇಕಾಗುತ್ತದೆ. ಇದರ ಫಲವೇ ಇಂದಿನ ಆರ್ಥಿಕ ಸ್ಥಿತಿ.

ಈ ಆರ್ಥಿಕ ನೀತಿಯ ಹಿಪೋಕ್ರೆಸಿಯನ್ನು ಗಮನಿಸಿ. ಒಂದು ಕಡೆ ಮಧ್ಯಮ ವರ್ಗಕ್ಕೆ ಸರಕುಗಳನ್ನು ಕೊಳ್ಳಲು, ಮತ್ತಷ್ಟು ಕೊಳ್ಳಲು, ಮಗದಷ್ಟು ಕೊಳ್ಳಲು ಸರ್ಕಾರವು ಅನೇಕ ಆಮಿಷಗಳನ್ನು ರೂಪಿಸುತ್ತದೆ. ಈ ಕೊಳ್ಳುಬಾಕುತನಕ್ಕೆ ಬಲಿಬಿದ್ದ ಈ ವರ್ಗಗಳು ನಿರಂತರವಾಗಿ ಕೊಳ್ಳುತ್ತಲೇ ಇರುತ್ತಾರೆ. ಅದಕ್ಕೆ ಕೊನೆಯೇ ಇಲ್ಲ. ಈ ಕೊಳ್ಳುವಿಕೆಯನ್ನು ಸರಿತೂಗಿಸಲು ಸರ್ಕಾರವು ಅಮದು ನೀತಿಯನ್ನು ಹುರಿದುಂಬಿಸುತ್ತದೆ. ಅನೇಕ ವೇಳೆ ಸ್ವತಃ ದುಪ್ಪಟ್ಟು ಬೆಲೆ ತೆತ್ತು ಆಮದು ಮಾಡಿಕೊಳ್ಳುತ್ತದೆ. ಉದಾಹರಣೆಗೆ ತೈಲದ ಆಮದು. ಅದರ ಖರ್ಚು ಮತ್ತು ಬಂಗಾರದ ಆಮದಿನ ಖರ್ಚು ಇಂದಿನ ರುಪಾಯಿಯ ಕುಸಿತಕ್ಕೆ ಮೂಲಭೂತ ಕಾರಣಗಳು.

ಮತ್ತೊಂದು ಕಡೆ ಮುಖ್ಯವಾಗಿ ರೂಪಾಯಿ ಮೌಲ್ಯವು ಡಾಲರ್ ಎದುರು ಕುಸಿಯುತ್ತಿರುವುದಕ್ಕೆ ಆತಂಕಪಡಬೇಕಾಗದ ಅಗತ್ಯವೇ ಇಲ್ಲ. Rupee-vs-dollarಅದರ ಬದಲಾಗಿ ಇಂದಿನ ಡಾಲರ್‌ನ ಎದುರು ರೂಪಾಯಿಯ ಕುಸಿತದಿಂದಾಗಿ ವಿದೇಶಿ ಸರಕುಗಳ ಆಮದು ಕಡಿಮೆಯಾಗಿ ನಮ್ಮಲ್ಲಿನ ದೇಸಿ ವಸ್ತುಗಳ ಖರೀದಿ ಹೆಚ್ಚಾಗುತ್ತದೆ. ಹಾಗಾಗುವಂತೆ ಅಂದರೆ ನಮ್ಮಲ್ಲಿನ ಉತ್ಪಾದನಾ ಸಾಮರ್ಥ್ಯವು ಹೆಚ್ಚಾಗುವಂತೆ ಆ ಮೂಲಕ ಉತ್ಪಾದನೆಗೊಂಡ ದೇಸಿ ಸರಕುಗಳು ಹೆಚ್ಚು ಮಾರಲ್ಪಡುವಂತೆ ಸರ್ಕಾರವು ಸ್ಪಷ್ಟ ಆರ್ಥಿಕ ನೀತಿಯನ್ನು ರೂಪಿಸಬೇಕು. ಆ ಮೂಲಕ ದೇಸಿ ಸರಕುಗಳ ಬಳಕೆಯ ಪ್ರಮಾಣವನ್ನು ಹೆಚ್ಚಿಸಿ ಹೆಚ್ಚುವರಿ ವಸ್ತುಗಳನ್ನು ರಫ್ತು ಮಾಡಬಹುದು.ಈ ಮೂಲಕ ಉದ್ಯೋಗದ ಅವಕಾಶಗಳನ್ನು ಹೆಚ್ಚಿಸಬಹುದು. ಸಣ್ಣ ಕೈಗಾರಿಕೆಗಳನ್ನು ಅಭಿವೃದ್ಧಿ ಪಡಿಸಬಹುದು. ಆ ಮೂಲಕ ಸಮಾಜದ ಎಲ್ಲ ಸ್ಥರದ ವರ್ಗಗಳಿಗೂ ಉದ್ಯಮಪತಿಗಳಾಗುವ ಅವಕಾಶ ದೊರಕಿಸಿ ಇಡೀ ಉದ್ಯಮವನ್ನೇ ವಿಕೇಂದ್ರಿಕರಣಗೊಳಿಸಬಹುದು. ಇದೇ ಸಂದರ್ಭವನ್ನು ಬಳಸಿಕೊಂಡು ಮೊಟ್ಟಮೊದಲು ಮಧ್ಯಮವರ್ಗಗಳ ಕೊಳ್ಳುಬಾಕತನಕ್ಕೆ ಕಡಿವಾಣ ಹಾಕಬಹುದು. ಆ ಮೂಲಕ ಸಂಪನ್ಮೂಲದ ಹಂಚಿಕೆಯನ್ನು ಸಮಾನ ಮಟ್ಟದಲ್ಲಿ ಅಂದರೆ ಸರ್ವರಿಗೂ ಸಮಬಾಳು ನೀತಿಯ ಹತ್ತಿರಕ್ಕೆ ಕೊಂಡೊಯ್ಯಬಹುದು. ಇದು ಇಂದಿನ ಸಂದರ್ಭದಲ್ಲಿ ಯಾವುದೇ ಸರ್ಕಾರವು ಕೈಗೊಳ್ಳಬಹುದಾದ ತೀರಾ ಸರಳೀಕೃತ ಗ್ರಹಿಕೆಯ ಸಮಾಜವಾದದ ಆರ್ಥಿಕ ನೀತಿ. ಇದಕ್ಕೆ ರಾಜಕೀಯ ಇಚ್ಛಾಶಕ್ತಿ ಖಂಡಿತ ಅಗತ್ಯ. ಆದರೆ ಇದಾಗುತ್ತಿಲ್ಲ. ಕೇವಲ ಹುಸಿ ಆರ್ಥಿಕ ಅರಾಜಕತೆಯನ್ನು ಹುಟ್ಟು ಹಾಕುತ್ತಿದ್ದಾರೆ.

ದೇಶದ ಶೇಕಡ 10 ರಷ್ಟಿರುವ ಉಳ್ಳವರ ಈ ವರ್ಗಗಳು ಈ ಸಾಮಾಜಿಕ ನ್ಯಾಯದ, ಸಮಾನತೆಯ ನೀತಿಗಳಗನ್ನು ಹತ್ತಿಕ್ಕಲು ತಮ್ಮಲ್ಲಿ ವಿಟೋ ಇದೆ ಎಂಬಂತೆ ವರ್ತಿಸುತ್ತಿದ್ದಾರೆ. ದೇಶದ ಪ್ರತಿಯೊಬ್ಬ ಪ್ರಜೆಯ ಪರಸ್ಪರ ಅನುಮೋದನೆಯೊಂದಿಗೆ ಸಮಾಜವನ್ನು ಕಟ್ಟಬೇಕು ಮತ್ತು ಅದನ್ನು ಸಮರ್ಥಿಸಿಕೊಳ್ಳುವಂತಹ ನ್ಯಾಯವಂತಿಕೆಯೂ ಜೊತೆಗೂಡಬೇಕೆಂಬ ಸಮತಾವಾದದ ಆಶಯಗಳ ಹಿನ್ನೆಲೆಯಲ್ಲಿ ನಿಮ್ಮ “ವೆಲ್‌ಫೇರ್ ಸ್ಟೇಟ್” ಅರ್ಥಾತ್ “ಕಲ್ಯಾಣ ರಾಜ್ಯ”ದಲ್ಲಿ ನಮ್ಮ ವೆಲ್‌ಫೇರ್‌ನ ಪ್ರಮಾಣ ಎಷ್ಟಿದೆ ಎಂದು ದೇಶದ ಬಡವರು, ತಳ ಸಮುದಾಯಗಳು, ಆದಿವಾಸಿಗಳು ಪ್ರಶ್ನಿಸಿದರೆ ಈ ಉಳ್ಳವರು ಅದನ್ನು ನೀನು ದುಡಿದು ತಿನ್ನಯ್ಯಾ ಎಂದು ವಿವೇಚನೆಯಿಲ್ಲದೆ ಅಮಾನವೀಯತೆಯಿಂದ ಮಾತನಾಡುವಷ್ಟರ ಮಟ್ಟಿಗೆ ದೇಶದ ಕಾನ್ಸಿಯಸ್ ಅತ್ಮವಿನಾಶಕವಾಗಿದೆ. ಸಂಕುಚಿತಗೊಳ್ಳುತ್ತಿದೆ. SEZಆರ್ಥಿಕ ಪುನಶ್ಚೇತನದ ಸೋಗಿನಲ್ಲಿ ಯಾವುದೇ ಪೂರ್ವ ಯೋಜನೆ, ವಿವೇಚನೆ, ಸಾಮಾಜಿಕ ಬದ್ಧತೆಗಳಿಲ್ಲದೆ ನಮ್ಮ ಸರ್ಕಾರವು ವಿಶೇಷ ಆರ್ಥಿಕ ವಲಯವನ್ನು (SEZ) ರೂಪಿಸಿ ಬಡವರ ಜಮೀನನ್ನು ಕಿತ್ತುಕೊಂಡು ಉದ್ದಿಮೆದಾರರಿಗೆ ಅತ್ಯಂತ ಕನಿಷ್ಟ ಬೆಲೆಯಲ್ಲಿ ಮಾರಲು ಹೊರಟಾಗ ಯಾವ ಮಾನವಿಲ್ಲದೇ ಅದನ್ನು ಕಬಳಿಸಲು ಹೊರಟ ಈ ಕಾರ್ಪೋರೇಟ್ ವರ್ಗಗಳಿಗೆ ತಾವು ಬಡಜನರ ದುಡಿದು ತಿನ್ನುವ ಅವಕಾಶವನ್ನು ಸಹ ಕಿತ್ತುಕೊಳ್ಳುತಿದ್ದೇವೆ ಎಂಬಂತಹ ಕನಿಷ್ಟ ನ್ಯಾಯ ಪ್ರಜ್ಞೆಯಿಲ್ಲದೆ, ಉಲ್ಟಾ ಬಡವರಿಗೆ ದುಡಿದು ಬದುಕಲಿಕ್ಕೆ ಹೇಳುತ್ತಿದ್ದಾರೆ. ಆದರೆ ತಮ್ಮ ಈ ದುರಹಂಕಾರಕ್ಕೆ ನಂದಿಗ್ರಾಮ್, ರಾಯಗಡ್, ದಾದ್ರಿ, ಮುಂಡರಿಗಿಗಳಲ್ಲಿ ತಕ್ಕ ಶಾಸ್ತಿ ಅನುಭವಿಸಿದ್ದಾರೆ. ಅಲ್ಲೆಲ್ಲಾ ಬಡವರ ಜಮೀನು ಕಬಲಿಸಲು ಹೋಗಿ ಸರಿಯಾಗಿಯೇ ಹೊಡೆತ ತಿಂದಿದ್ದಾರೆ. ಈ ಶಕ್ತಿ ಕೇಂದ್ರಗಳನ್ನು ಒಡೆಯಲು ಇದು ಸಕಾಲ. ಇದು ನಿರಂತರವಾಗಿರುವಂತೆ ನೋಡಿಕೊಳ್ಳಬೇಕಾಗಿದೆ.

ದಲಿತರು ಮತ್ತು ಉದ್ಯಮಶೀಲತೆ : ಈ ವಿಚಾರಗಳ ಬಗ್ಗೆಯೂ ಚರ್ಚೆಯಾಗಲಿ

– ಎನ್.ರವಿಕುಮಾರ್, ಶಿವಮೊಗ್ಗ

“ದಲಿತರು ಮತ್ತು ಉದ್ಯಮಶೀಲತೆ” ಕುರಿತಾದ ವಿಚಾರ ಸಂಕೀರ್ಣ-ಸಂವಾದ ನಿಜಕ್ಕೂ ಇಂದಿನ ಅಗತ್ಯವಾಗಿದೆ. ದಲಿತರಿಗೆ ಶಿಕ್ಷಣದ ಜೊತೆಗೆ ಜಾಗತಿಕ ಮತ್ತು ಆರ್ಥಿಕ ಪ್ರಪಂಚದ ಅರಿವನ್ನು ಮೂಡಿಸುವ ಅಗತ್ಯತೆ ಇದ್ದೇ ಇದೆ. ಜಾತಿಯ ತಾರತಮ್ಯ ಔದ್ಯೋಗಿಕ ಜಗತ್ತಿನಲ್ಲಿ ಯಥಾ ರೀತಿ ಭಿನ್ನ ಸ್ವರೂಪಗಳಲ್ಲಿ ದೊಡ್ಡ ಪಿಡುಗಾಗಿ ದಲಿತ ಉದ್ಯಮಿಗಳನ್ನು ಕಾಡುತ್ತಿವೆ. ಆರ್ಥಿಕ ಸಂಪನ್ಮೂಲ ನೆರವು ನೀಡುವ ಆರ್ಥಿಕ ಸಂಸ್ಥೆಗಳು (ಬ್ಯಾಂಕ್‌ಗಳು) ಯಾರ ಕೈಯಲ್ಲಿವೆ ಎಂಬುದನ್ನು ನಾವು ಯೋಚಿಸಬೇಕಾಗಿದೆ.

ಆರ್ಥಿಕ ಶಕ್ತಿಯ ಕ್ರೋಢೀಕರಣ ಕೂಡ ಜಾತಿಯ ನೆಲೆಯಲ್ಲಿಯೆ ಆರಂಭವಾದದ್ದು ಎಂಬುದನ್ನು ಚರಿತ್ರೆ ಸ್ಪಷ್ಟ ಪಡಿಸುತ್ತದೆ. 1987 ರ ಅವಧಿಯಲ್ಲಿ ಅಂದಿನ ಕೇಂದ್ರದ ಹಣಕಾಸು ಸಚಿವರಾಗಿದ್ದ ಜನಾರ್ಧನ ಪೂಜಾರಿ ಅವರು ದಲಿತರು, ಹಿಂದುಳಿದ ವರ್ಗಗಳಿಗೆ ಮೈಕ್ರೊ ಸಾಲ (ಪೂಜಾರಿ ಸಾಲ) ಯೋಜನೆ ರೂಪಿಸುವ ಮೂಲಕ vartamaana-sahamata-invitationಈ ಸಮುದಾಯಗಳನ್ನು ಮೊಟ್ಟ ಮೊದಲ ಬಾರಿಗೆ ಬ್ಯಾಂಕ್‌ಗಳ ಮೆಟ್ಟಿಲು ಹತ್ತಿಸಿದರು. ಇಂದು ಪರಿಸ್ಥಿತಿ ಬದಲಾಗಿದೆ ನಿಜ, ಆದರೆ ಭೂಮಿ, ಬಂಡವಾಳದ ಸಮಸ್ಯೆಗಳು ದಲಿತರು, ಹಿಂದುಳಿದ ವರ್ಗಗಳಲ್ಲಿನ ಉದ್ಯಮಶೀಲತೆಯನ್ನು ಹತ್ತಿಕ್ಕುತ್ತಿವೆ. ಇನ್ನೂ ಮಾರುಕಟ್ಟೆಯನ್ನು ಆವರಿಸಿಕೊಂಡಿರವ ಸಂತತಿಗಳು ಒಬ್ಬ ಯಶಸ್ವಿ ಉದ್ಯಮಶೀಲನಾಗುವಲ್ಲಿ ದಲಿತನನ್ನು ಹೈರಾಣಗೊಳಿಸುವ ಸಾಧ್ಯತೆಗಳು ಜಾತಿ ಜಿದ್ದಿನ ಮತ್ತೊಂದು ಸ್ವರೂಪವೆ ಆಗಿರುತ್ತದೆ.

ದಲಿತರು ಕಾರ್ಮಿಕರಾಗಿರುವುದನ್ನೆ ಬಯಸುವ ಔದ್ಯೋಗಿಕ ಕ್ಷೇತ್ರದ ಬಹುಸಂಖ್ಯಾತ ಕುಳಗಳು ಮಾಲೀಕನಾಗುವ ಹಾದಿಗೆ ಅಡ್ಡಗೋಡೆಗಳನ್ನು ಕಟ್ಟುತ್ತಲೆ ಇರುತ್ತವೆ. ಇಂದು ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿಯನ್ನು ವಿರೋಧಿಸುವ ಶಕ್ತಿಗಳೆ ದಲಿತರಲ್ಲಿನ ಉದ್ಯಮಶೀಲತೆಯನ್ನೂ ಸಹಿಸುವುದಿಲ್ಲ. ಸರ್ಕಾರಗಳು ದಲಿತರು, ಹಿಂದುಳಿದವರ್ಗಗಳಿಗಾಗಿ ಸ್ವಯಂ ಉದ್ಯೋಗ ಯೋಜನೆಗಳನ್ನು ಜಾರಿಗೆ ತಂದರೂ ಅವುಗಳನ್ನು ದಕ್ಕಿಸಿಕೊಳ್ಳುವುದು ದುಸ್ತಃರವಾಗಿದೆ. ಇಂದು ಮಾಧಮ ಕ್ಷೇತ್ರ ಕೂಡ ಉದ್ಯಮವಾಗಿ ಬೆಳೆಯತೊಡಗಿದ್ದು ಸಾಮಾಜಿಕ ಹೊಣೆಗಾರಿಕೆಗಿಂತ ವ್ಯಾಪಾರಿ ಮನೋಭಾವ ಹೆಚ್ಚು ಆಕ್ರಮಿಸಿಕೊಳ್ಳತೊಡಗಿರುವುದು ಅಪಾಯಕಾರಿ ಎನಿಸುತ್ತದೆ. ಈ ಕ್ಷೇತ್ರದಲ್ಲೂ ದಲಿತರು ಉದ್ಯಮಿಯಾಗಿ ಪೈಪೋಟಿ ನಡೆಸುವುದು ಕಷ್ಟಕರ.

ಇಂದು ದಲಿತರಲ್ಲೂ ಔದ್ಯೋಗಿಕ ಜ್ಞಾನದ ಕೊರತೆ ಇಲ್ಲ, ಬೇಕಿರುವುದು ಬಂಡವಾಳ, ಭೂಮಿ ಮತ್ತು ಜಾತಿ ಮುಕ್ತ ಮಾರುಕಟ್ಟೆ ಮಾತ್ರ. ಈ ನಿಟ್ಟಿನಲ್ಲಿ ಸರ್ಕಾರಗಳು ದಲಿತರಲ್ಲಿನ ಉದ್ಯಮಶೀಲತೆಯನ್ನು ಜಾಗತಿಕ ಮಟ್ಟದಲ್ಲಿ ಕಾಯುವ ಕೆಲಸವನ್ನು ಕರ್ತವ್ಯದಂತೆ ಮಾಡಬೇಕಿದೆ. ಈ ಸಂಗತಿಗಳ ಬಗ್ಗೆ ಯೂ ಸೆ. 7 ರಂದು ಹಾಸನದಲ್ಲಿ ನಡೆಯಲಿರುವ ವಿಚಾರ ಸಂಕಿರಣದಲ್ಲಿ ಮಂಥನ ನಡೆಯಲಿದೆ ಎಂಬ ಭರವಸೆ ನನಗಿದೆ.

 

ಅಕ್ಷೀ – ಒಂದು ಸೀನಿನ ವೃತ್ತಾಂತ…

ಮೂಲ: ಆಂಟೊನ್ ಚೆಕೊವ್
ಅನುವಾದ: ಜೆ.ವಿ.ಕಾರ್ಲೊ

ಅದೊಂದು ಸುಂದರ ಸಂಜೆ. ಒಂದು ಸರಕಾರಿ ಧಫ್ತರಿನಲ್ಲಿ ಕಾರಕೂನನಾಗಿದ್ದ ದಿಮಿಟ್ರಿಚ್ ಚೆರ್ವಾಕ್ಯೊವ್ ರಂಗಮಂದಿರದ ಎರಡನೇ ಸಾಲಿನಲ್ಲಿ ಕುಳಿತುಕೊಂಡು ಒಂದು ಸಂಗೀತ ನಾಟಕವನ್ನು ನೋಡುವುದರಲ್ಲಿ ತಲ್ಲೀನನಾಗಿದ್ದ. ಅವನು ತುಂಬಾ ಹರ್ಷಚಿತ್ತನಾಗಿದ್ದ. ಆದರೆ, ಇದ್ದಕ್ಕಿದ್ದಂತೆ… ಹೌದು, ಸಾಮಾನ್ಯವಾಗಿ ಈ ಇದ್ದಕ್ಕಿದ್ದಂತೆ ಎನ್ನುವ ಪದ ಹೆಚ್ಚಾಗಿ ಕತೆ ಪುಸ್ತಕಗಳಲ್ಲಿ ಧುತ್ತನೇ ನಮ್ಮೆದುರು ಎದ್ದು ನಿಲ್ಲುತ್ತದೆ! ಈ ಲೇಖಕರು ಹೇಳುವುದೂ ದಿಟವೇ. ಜಿವನದಲ್ಲಿ ಏನೆಲ್ಲಾ ಅನೀರಿಕ್ಷಿತ ತಿರುವುಗಳು!

ಹೌದು, ಇದ್ದಕ್ಕ್ಕಿದ್ದಂತೆ ದಿಮಿಟ್ರಿಚಿಯ ಕಣ್ಣುಗಳು ಕಿರಿದಾದವು. ಹಣೆಯ ಮೇಲೆ ನೆರಿಗೆಗಳು ಮೂಡಿದವು. ಒಂದು ಕ್ಷಣ ಉಸಿರೇ ನಿಂತು ಹೋದಂತೆ… ಅವನು ಶಿರವನ್ನು ಬಾಗಿಸಿ.. “ಅಕ್ಷೀ..” ಎಂದು ಭಯಂಕರವಾಗಿ ಸೀನಿದ!

ಸೀನುವುದೇನು ಮಹಾಪರಾಧವಲ್ಲ. ಎಲ್ಲರೂ ಸೀನುತ್ತಾರೆ. ಎಲ್ಲೆಂದರಲ್ಲಿ ಸೀನುತ್ತಾರೆ. ರೈತನಿಂದಿಡಿದು ಪೋಲಿಸ್ ಅಧಿಕಾರಿ, ರಾಜಕಾರಣಿವರೆಗೆ ಎಲ್ಲರೂ ಸೀನುತ್ತಾರೆ. ಸೀನುವ ಕ್ರಿಯೆಯಲ್ಲಿ ನಾಚಿಕೆಪಡುವಂತದೇನಿರಲಿಲ್ಲ. ಜೇಬಿನಿಂದ ಕರವಸ್ತ್ರವನ್ನು ಹೊರತೆಗೆದು ಚೆರ್ವಾಕ್ಯೊವ್ ಮುಖವನ್ನು ಒರೆಸಿದ. ಅವನೊಬ್ಬ ಸುಸಂಸ್ಕೃತ ಮನುಷ್ಯನಾದುದರಿಂದ ತನ್ನ ಅನೀರಿಕ್ಷಿತ ಸೀನಿನಿಂದ ಯಾರಿಗಾದರೂ ತೊಂದರೆಯಾಯ್ತೇನೋ ಎಂಬ ದಿಗಿಲಿನಿಂದ ಸುತ್ತಲೂ ಒಮ್ಮೆ ಕಣ್ಣಾಡಿಸಿದ..

ತನ್ನ ಮುಂದಿನ ಸಾಲಿನಲ್ಲಿ ಕುಳಿತಿದ್ದ ವೃದ್ದನೊಬ್ಬ ವಟಗುಟ್ಟುತ್ತಾ ಕರವಸ್ತ್ರದಿಂದ ತನ್ನ ಬೋಳು ತಲೆಯನ್ನು ಒರೆಸಿಕೊಳ್ಳುತ್ತಿರುವುದು ಅವನ ಗಮನಕ್ಕೆ ಬಂತು. ಆ ಮುದುಕ ಸಾರಿಗೆ ಇಲಾಖೆಯ ಮುಖ್ಯಾಧಿಕಾರಿ ಜನರಲ್ ಬ್ರಿಜ್ಝಾಲೊವ್ ಎಂದು ಗುರುತು ಹಿಡಿಯಲು ಚೆರ್ವಾಕ್ಯೊವಾನಿಗೆ ತಡವಾಗಲಿಲ್ಲ.

‘ನನ್ನ ಸೀನು ಖಂಡಿತಾ ಅವನ ಮೇಲೆ ಹಾರಿದೆ!’ ಚೆರ್ವಾಕ್ಯೊವ್ ದಿಗಿಲುಗೊಂಡ. ‘ಅವನು ನನ್ನ ಇಲಾಖೆಯ ಅಧಿಕಾರಿಯಲ್ಲದಿದ್ದರೂ ಕ್ಷಮೆ ಕೇಳುವುದು ಶಿಷ್ಠಾಚಾರ..’

ಚೆರ್ವಾಕ್ಯೊವ್ ಮುಂದಕ್ಕೆ ಬಾಗಿ, ಅಪರಾಧಿ ಪ್ರಜ್ಞೆಯಿಂದ ಜನರಲ್ ಬ್ರಿಜ್ಝಾಲೊವಾನ ಬಲಗಿವಿಯಲ್ಲಿ ಮೆಲ್ಲಗೆ ಉಸುರಿದ:
“ಸರ್, ದಯವಿಟ್ಟು ಕ್ಷಮಿಸಿ. ಅನೀರಿಕ್ಷಿತವಾಗಿ ಸೀನಿದ್ದು ನಿಮ್ಮ ಮೇಲೆ ಹಾರಿತು.”
“ಪರವಾಯಿಲ್ಲ..ಪರವಾಯಿಲ್ಲಾ!” ಜನರಲ್ ಉತ್ತರಿಸಿದ.
“ಸರ್.. ಖಂಡಿತವಾಗಿಯೂ ನಾನು…”
“ಛೆ!.. ಏನಿದು? ನನಗೆ ನಾಟಕ ನೋಡಲು ಬಿಡುವೆಯಾ?” ಮುದುಕ ಕಿರಿಕಿರಿಗೊಂಡು ಬೈದ.

ಚೆರ್ವಾಕ್ಯೊವ್ ಲಜ್ಜೆಯಿಂದ ಮುದುರಿಕೊಂಡ. ಅವನು ಬಲವಂತದಿಂದ ರಂಗ ಮಂಚದ ಕಡೆಗೆ ದೃಷ್ಟಿ ಹರಿಸಿದ. ಅವನ ಖುಷಿ ಮಾಯವಾಗಿತ್ತು. ಅವನು ಮಾನಸಿಕವಾಗಿ ನರಳತೊಡಗಿದ. ಮಧ್ಯಂತರದ ವೇಳೆಯಲ್ಲಿ ಅವನು ಎದ್ದು ಜನರಲ್ ಬ್ರಿಜ್ಝಾಲೊವಾನ ಬಳಿ ಎದ್ದು ಹೊದ. ಲಜ್ಜೆಯನ್ನು ಅದುಮಿಡುತ್ತಾ,

“ಸರ್, ನಾನು ನಿಮ್ಮ ಮೇಲೆ ಸೀನಿದೆ…ಆದರೆ ನನ್ನ ಉದ್ದೇಶ..” ಎಂದು ಶುರು ಮಾಡಿದ.

ಜನರಲ್ ಬ್ರಿಜ್ಝಾಲೊವ್ ಕೈಯನ್ನು ಮೇಲೆತ್ತುತ್ತಾ, “ಆದದ್ದು ಆಗಿ ಹೋಯ್ತು. ನೀನು ಸುಖಾಸುಮ್ಮನೆ ನನ್ನ ಗೋಳು ಹುಯ್ಕೋಬೇಡ.. ನಾನಾಗಲೇ ಅದನ್ನು ಮರೆತುಬಿಟ್ಟಿದ್ದೇನೆ.” ಎಂದರು ಖಾರವಾಗಿ. ಅವರು ಸಹನೆ ಕಳೆದುಕೊಳ್ಳುವ ಹಂತದಲ್ಲಿದ್ದರು.

’ಮುದುಕ ಅಷ್ಟರಲ್ಲೇ ಮರೆತುಬಿಟ್ಟಿದ್ದಾನಂತೆ! ಆದರೆ ಅವನ ಕಣ್ಣುಗಳಲ್ಲಿ ಹಾಗೆ ಕಾಣುತ್ತಿಲ್ಲ. ಸಿಟ್ಟಿನ ಜ್ವಾಲೆ ಇನ್ನೂ ಉರಿಯುತ್ತಿದೆ! ಆದರೂ ಮಾತನಾಡಲು ಮುದುಕನಿಗೆ ಏನೋ ಬಿಗುಮಾನ! ನಾನು ಅವನಿಗೆ ಸರಿಯಾಗಿ ಮನದಟ್ಟು ಮಾಡಿಕೊಡಬೇಕು. ಸೀನುವುದು ಒಂದು ಪ್ರಾಕೃತಿಕ ಘಟನೆ. ಯಾರಿಂದ ತಡೆಯಲು ಸಾಧ್ಯ? ಈ ಕ್ಷಣ ಮದುಕನಿಗೆ ಇದು ಅನುಚಿತವೆಂದು ತೋರುತ್ತಿಲ್ಲದಿರಬಹುದು. ಆದರೆ ಮನೆಗೆ ಹೋದ ನಂತರ ಅವನ ಅಭಿಪ್ರಾಯ ಬದಲಾಗುವುದಿಲ್ಲವೆಂದು ಏನು ಖಾತ್ರಿ.’

ಅಂದು ರಾತ್ರಿ ಚೆರ್ವಾಕ್ಯೊವ್ ರಂಗಮಂದಿರದಲ್ಲಿ ಘಟಿಸಿದ ಸಂಗತಿಯನ್ನು ಮಡದಿಯ ಬಳಿ ಕೂಲಂಕುಷವಾಗಿ ತಿಳಿಸಿದ. ಮೊದಲಿಗೆ ಅವಳು ಇಂತ ಕ್ಷುಲ್ಲಕ ಸಂಗತಿಯನ್ನು ತನ್ನ ಗಂಡ ಅನಾವಶ್ಯವಾಗಿ ದೊಡ್ಡದು ಮಾಡುತ್ತಿದ್ದಾನೆ ಎಂದುಕೊಂಡಳಾದರೂ, ಮುದುಕ, ಜನರಲ್ ಎಂದು ಗೊತ್ತಾದಾಕ್ಷಣ ಸಹಜವಾಗಿ ಆತಂಕಗೊಂಡಳು. ಮುದುಕ ಬೇರೊಂದು ಇಲಾಖೆಯ ಜನರಲ್ ಎಂದು ತಿಳಿದಾಗ ಕೊಂಚ ನಿರಾಳಳಾದಳು.

“ಏನಾದರೂ ಆಗಲಿ. ನಾಳೆ ಮತ್ತೊಮ್ಮೆ ಕಂಡು ಅವನ ಕ್ಷಮೆ ಕೇಳಿ. ಸಾರ್ವಜನಿಕವಾಗಿ ಹೇಗೆ ನಡೆದುಕೊಳ್ಳಬೇಕೆಂದು ಅರಿಯದ ಅನಾಗರಿಕ ಎಂದುಕೊಂಡಾನು.” ಎಂದಳು.

“ನಿಜ ಕಣೆ! ನಾನು ಹಾಗೇ ಅಂದುಕೊಂಡೆ. ಅವನೊಬ್ಬ ವಿಕ್ಷಿಪ್ತ ಮನುಷ್ಯ. ನಾನು ಎಷ್ಟೊಂದು ಭಾರಿ ಕ್ಷಮೆ ಕೇಳಿಕೊಂಡರೂ ಅವನ ಪ್ರತಿಕ್ರಿಯೆ ನನಗ್ಯಾಕೋ ಸರಿ ಕಾಣಬರಲಿಲ್ಲ.”

ಮರುದಿನ ನೀಟಾಗಿ ಶೇವ್ ಮಾಡಿಕೊಂಡು, ಗರಿಗರಿಯಾಗಿ ಇಸ್ತ್ರಿ ಮಾಡಿದ ಸಮವಸ್ತ್ರವನ್ನು ಧರಿಸಿ ಚೆರ್ವಾಕೊವ್ ಜನರಲ್ ಬ್ರಿಜ್ಝಾಲೋವನ ಕಚೇರಿಗೆ ಹೋದ. government-clerkಜನರಲನ ಕಚೇರಿ ಅಹವಾಲು ಸಲ್ಲಿಸುವ ಜನರಿಂದ ಕಿಕ್ಕಿರಿದು ತುಂಬಿತ್ತು. ಕೊನೆಗೂ ಜನರಲ್ ಬ್ರಿಜ್ಝಾಲೊವಾನ ದೃಷ್ಟಿ ಚೆರ್ವಾಕ್ಯೊವಾನ ಮೇಲೆ ಹರಿಯಿತು. ಏನೆಂಬಂತೆ ಜನರಲ್ ಹುಬ್ಬು ಏರಿಸಿದರು.

“ಸರ್..” ಚೆರ್ವಾಕೊವ್ ಶುರುವಿಟ್ಟುಕೊಂಡ. “ನಿನ್ನೆ ಸಂಜೆ ಆಕಸ್ಮಿಕವಾಗಿ ನಾನು ನಿಮ್ಮ ಮೇಲೆ ಸೀನಿದೆ ಸರ್,.. ಖಂಡಿತವಾಗಿಯೂ ನಾನು ಉದ್ದೇಶಪೂರ್ವಕವಾಗಿ.. ಸರ್, ನನ್ನನ್ನು ನಂಬಿ. ಖಂಡಿತವಾಗಿಯೂ ಇದೊಂದು ಆಕಸ್ಮಿಕ..”

ಜನರಲ್‌ನ ವದನ ಕೆಂಪಗಾಗತೊಡಗಿತು. “ಓಹ್..” ಅವನು ಅವಡುಗಚ್ಚಿದ. “ಇನ್ಯಾರಾದರೂ ಇದ್ದಾರೆಯೇ?” ಸುತ್ತಾ ದೃಷ್ಟಿ ಹರಿಸುತ್ತಾ ಅವನು ಕೇಳಿಕೊಂಡ.

’ಜನರಲ್ ಸಾಹೇಬರು ಮುನಿಸಿಕೊಂಡಿದ್ದಾರೆ!’ ಚೆರ್ವಾಕ್ಯೊವ್ ತನ್ನಷ್ಟಕ್ಕೆ ಹೇಳಿಕೊಂಡ. ಅವನು ಹತಾಶನಾದ. ಇಷ್ಟಕ್ಕೆ ಬಿಡಬಾರದು. ಅವನಿಗೆ ಸರಿಯಾಗಿ ಅರ್ಥ ಮಾಡಿಸಬೇಕು. ಚೆರ್ವಾಕ್ಯೊವ್ ನಿಶ್ಚಯಿಸಿದ.

ಜನರಲ್ ಕಟ್ಟ ಕಡೆಯ ಮನುಷ್ಯನೊಬ್ಬನ ಅಹವಾಲನ್ನು ಕೇಳಿ ಎದ್ದು ತನ್ನ ಖಾಸಗಿ ಕಛೇರಿಯ ಕಡೆ ಹೆಜ್ಜೆ ಹಾಕತೊಡಗಿದ. ಚೆರ್ವಾಕ್ಯೊವ್ ಸರಸರನೆ ಹೆಜ್ಜೆ ಹಾಕುತ್ತಾ, ಜನರಲನ ಬಳಿಗೆ ಧಾವಿಸಿದ.

“ಸರ್.., ನಿಜವಾಗಿಯೂ ಹೇಳುತ್ತಿದ್ದೇನೆ.. ನನ್ನನ್ನು ನಂಬಿ..”

ಜನರಲ್ ಬ್ರಿಜ್ಝಾಲೊವ್ ಹತಾಶೆಯಿಂದ ತಲೆಯನ್ನಾಲ್ಲಾಡಿಸಿದ.

“ಸರ್.. ನೀವು ನನ್ನನ್ನು ಅಣಕಿಸುತ್ತಿದ್ದೀರಿ!..” ಜನರಲ್ ಬ್ರಿಜ್ಝಾಲೊವ್ ಕಚೇರಿಯ ಬಾಗಿಲನ್ನು ರಪ್ಪನೇ ಅವನ ಮುಖದ ಮೇಲೆಂಬಂತೆ ಅಪ್ಪಳಿಸಿದಾಗ ಚೆರ್ವಾಕ್ಯೊವ್ ಅವಲತ್ತುಕೊಂಡ.

ಚೆರ್ವಾಕೊವ್ ನಖಶಿಖಾಂತ ಕಂಪಿಸುತ್ತಿದ್ದ. ’ಮುದುಕ ನನ್ನ ಮಾತು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿಲ್ಲ. ಅವನಿಗೆ ದೈಯ್ಯ ಹೊತ್ತುಕೊಂಡು ಹೊಗಲಿ!.. ಅವನಿಗೊಂದು ಪತ್ರ ಬರೆಯುತ್ತೇನೆ.. ಸುಮ್ಮನೇ ಕೂರುವವನಲ್ಲ ನಾನು.. ನಾಳೆ ಮತ್ತೆ ಭೇಟಿಯಾಗುತ್ತೇನೆ..’ ಹೀಗೆಂದುಕೊಳ್ಳುತ್ತಾ ಚೆರ್ವಾಕ್ಯೊವ್ ಆ ಸಂಜೆ ಮನೆಗೆ ಹೋದ.

ಎಷ್ಟು ತಲೆಕೆಡಿಸಿಕೊಂಡರು ಪತ್ರವನ್ನು ಹೇಗೆ ಆರಂಬಿಸುವುದೆಂದೇ ಅವನಿಗೆ ಗೊತ್ತಾಗಲಿಲ್ಲ. ನಾಳೆ ಜನರಲನಿಗೆ ಭೇಟಿಯಾಗುವುದೇ ಲೇಸೆಂದು ನಿರ್ಧರಿಸಿದ.

“ಸರ್.., ದಯವಿಟ್ಟು ನಿಮ್ಮನ್ನು ಗೇಲಿ ಮಾಡುತ್ತಿದ್ದೇನೆಂದು ಭಾವಿಸಬೇಡಿ…” ಮಾರನೆಯ ಬೆಳಿಗ್ಗೆ ಜನರಲ್‌ನ ಆಫೀಸಿಗೆ ಕಾಲಿಡುತ್ತಿದ್ದಂತೆಯೇ ಚೆರ್ವಾಕ್ಯೊವ್ ಹೇಳತೊಡಗಿದ. “ನಿಮ್ಮ ಮೇಲೆ ಆಕಸ್ಮಿಕವಾಗಿ ಸೀನಿದ ನನ್ನನ್ನು ದಯವಿಟ್ಟು ಕ್ಷಮಿಸಬೇಕು..”

“ತೊಲಗಾಚೆ ಮೂರ್ಖ!! “ಜನರಲ್ ಬ್ರಿಜ್ಝಾಲೊವ್ ಸಿಟ್ಟಿನಿಂದ ಕಿರುಚಿದ. ಅವನು ಕಂಪಿಸುತ್ತಿದ್ದ. ಅವನ ಮುಖ ಕಪ್ಪಿಟ್ಟಿತ್ತು.

“ಸರ್..!!” ಚೆರ್ವಾಕ್ಯೊವಾನ ಬಾಯಿಂದ ಮಾತುಗಳೇ ಹೊರಡಲಿಲ್ಲ.

“ತೊಲಗಾಚೆ..!!” ಜನರಲ್ ನೆಲಕ್ಕೆ ಕಾಲನ್ನು ಗುದ್ದುತ್ತಾ ಮತ್ತೊಮ್ಮೆ ಅರಚಿದ.

ಚೆರ್ವಾಕ್ಯೊವಾನ ಹೊಟ್ಟೆ ತೊಳಸಿದಂತಾಯ್ತು. ಅವನು ತೂರಾಡುತ್ತಾ ಹೊರಬಂದ. ಅವನ ದೃಷ್ಟಿ ಮಂದವಾಗಿತ್ತು. ಕಿವಿಗಳು ಕೇಳಿಸುತ್ತಿರಲಿಲ್ಲ. ಅವನು ಹೇಗೆ ಮನೆಯನ್ನು ತಲುಪಿದ ಎನ್ನುವುದೇ ಆಶ್ಚರ್ಯದ ವಿಷಯ. ಸಮವಸ್ತ್ರವನ್ನು ಧರಿಸಿಕೊಂಡೇ ಅವನು ಸೋಫಾದ ಮೇಲೆ ಅಡ್ಡಾದ. ಹಾಗೆಯೇ ಸತ್ತು ಹೋದ.

***

(Anton Chekov ನ ‘The Death of a Government Clerk’ ಕತೆಯ ಅನುವಾದ)

ಹಸು ಹುಲ್ಲನ್ನಷ್ಟೇ ತಿನ್ನುವುದಿಲ್ಲ : ಗಂಗೆ, ಗೌರಿ,.. ಭಾಗ–8

– ಎಚ್.ಜಯಪ್ರಕಾಶ್ ಶೆಟ್ಟಿ

ಭಾಗ – 1: ಗಂಗೆ, ಗೌರಿ, ಕೆಂಪಿ, ಬುಡ್ಡಿಯರನ್ನು ಕೂಗಿ…
ಭಾಗ – 2: ಹಟ್ಟಿಯ ಅವತಾರ, ಹಕ್ಕಿಯ ಕೂಗು
ಭಾಗ – 3: ನಮ್ಮ ಅಪ್ಪ ಎಮ್ಮೆ ಸಾಕಣೆ ಸಾಕುಮಾಡಿದ್ದು
ಭಾಗ – 4: ನಿಂಗಮ್ಮನ ಹರಕೆ, ಸೂರಿದೇವರ ಗೂಳಿ
ಭಾಗ–5 : ಹೊಳೆಗಟ್ಟಿದ ಶೆಟ್ಟಿ, ದಡಮುಟ್ಟಿಸಿದ ಖಾದರ್
ಭಾಗ–6 : ಕೊರಳಿನ ಕುಂಟಿ, ಮೂತಿಯ ಚುಳ್ಳಿ, ಶೀಲ ಸರ್ಕಸ್
ಭಾಗ–7 : ದಾನದ ಪಾತ್ರೆ ಪಂಚೆ ಹಾಗೆಯೆ ಗೋವು

ಭಾಗ–8 : ಹಸು ಹುಲ್ಲನ್ನಷ್ಟೇ ತಿನ್ನುವುದಿಲ್ಲ

ಶಾಲೆಯಿಲ್ಲದ ದಿನಗಳಲ್ಲಿ ದಿನಪೂರ್ತಿ ಬಯಲಲ್ಲಿರುತ್ತಿದ್ದ ನಮ್ಮ ನಿತ್ಯದ ನಿಗಧಿತ ಕಾಯಕವೆಂದರೆ ದನಮೇಯಿಸುವುದೇ ಆಗಿತ್ತು. ಬೆಳಗಿನ ಕಾಯಕದಲ್ಲಿ ಏರುಪೇರಾದರೂ ಇಳಿಹೊತ್ತಿನಲ್ಲಿಯ ಈ ಅವಕಾಶವನ್ನು ನಾವುಗಳು ಮಿಸ್‌ಮಾಡಿಕೊಳ್ತಿರಲಿಲ್ಲ. ಯಾಕೆಂದರೆ ತೆರೆದ ವಿಶಾಲವಾದ ಬಯಲಿನಲ್ಲಿರುವ ಗದ್ದೆಗಳೇ ಲಗೋರಿ ಮತ್ತಿತರ ಆಟಗಳ ಅಂಗಣವಾಗಿ ಆಕ್ಷೇಪಣಾರಹಿತವಾಗಿ ಒದಗಿಬರುತ್ತಿದ್ದ ಘಳಿಗೆಯದು.ಹೊತ್ತುಮುಳುಗಲು ಇನ್ನೇನು ಘಳಿಗೆ ಹೊತ್ತಿದೆ ಎನ್ನುತ್ತಿರುವಂತೆ ಅಥವಾ ಬಯಲಿನಲ್ಲಿ ಆಟವಾಡುತ್ತಾ ಮೈಮರೆಯುತ್ತಿದ್ದ ನಮ್ಮ ಆಟಗಳಿಗೆ ಬ್ರೇಕ್‌ಬೀಳುವ ಹೊತ್ತು ಕರೆಯುವ ಹಸುಗಳಿಗಾಗಿ ತಾಯಂದಿರುಗಳು ಹಸಿಹುಲ್ಲನ್ನು ಸಂಗ್ರಹಿಸಿಕೊಂಡು ಬರುತ್ತಿದ್ದ ದೃಶ್ಯ ಅಂದು ಸಾಮಾನ್ಯವಾಗಿತ್ತು. ಅಮ್ಮಂದಿರ ಸೊಂಟದಲ್ಲಿನ ಹುಲ್ಲಬುಟ್ಟಿಗಳನ್ನು Cows-pastureನೋಡುತ್ತಿದ್ದಂತೆಯೇ ಕರೆಯುವ ಹಸುಗಳು ಅಥವಾ ಮುದ್ದಿನ ಎಳೆಗರುಗಳು ಚಂಗುಹಾರಿಕೊಳ್ಳುತ್ತಾ ಬೆನ್ನಟ್ಟುತ್ತಿದ್ದುವು. ಅಮ್ಮಂದಿರಿಗೂ ಇದು ಬೇಸರದ ಸಂಗತಿಯಲ್ಲ. ಅವರುಗಳು ಸಂಭ್ರಮವನ್ನೇ ಅನುಭವಿಸುತ್ತಿದ್ದರು. ನಮ್ಮಮ್ಮನೂ ಹರ್ಲಿಹುಲ್ಲನ್ನೋ, ನೆಲಗೊಣ್ಣೆಯನ್ನೋ ಮಟ್ಟ್ಹುಲ್ಲನ್ನೋ ಕಿತ್ತು ಹೊಳೆಯಲ್ಲಿ ತೊಳೆದು ಕುಕ್ಕೆಯಲ್ಲಿಹಾಕಿ, ಸೊಂಟದ ಮೇಲೇರಿಸಿಕೊಂಡು ಬರುತ್ತಿದ್ದ ಆ ದಿನಗಳಲ್ಲಿ ಶಾಲೆಯಿಲ್ಲದ ಹೊತ್ತು ಬಯಲಲ್ಲಿ ದನ ಮೇಯಿಸಿಕೊಂಡು ಲಗೋರಿ ಆಡುತ್ತಿದ್ದ ಸರದಿ ನನ್ನದಾಗಿರುತ್ತಿತ್ತು. ನಮ್ಮ ಅಮ್ಮನ ಹುಲ್ಲಹೆಡಿಗೆ ನೋಡುತ್ತಿದ್ದಂತೆಯೇ ಕೊಂಗಾಟದ ಕುಣಿತ ಕುಣಿದು ಸೊಂಟದೆತ್ತರದಲ್ಲಿಯೇ ಬಾಯಿಗೆ ಸಿಕ್ಕುತ್ತಿದ್ದ ಕುಕ್ಕೆಯ ಹುಲ್ಲನ್ನು ಮುಕ್ಕಲು ನಮ್ಮ ಹಸುಗಳಾಗಿದ್ದ ಕೆಂಪಿ, ಬುಡ್ಡಿಯರುಗಳು ಓಡುತ್ತಿದ್ದವು. ಈ ದನಗಳು ಓಡಿಬರುತ್ತಿದ್ದಂತೆಯೇ ನನ್ನಮ್ಮ ಅವುಗಳಿಗೆ ಕೈತುತ್ತು ತಿನಿಸುವಂತೆ ಅವುಗಳ ಬಾಯಿಗೆ ನಾಲ್ಕೆಳೆ ಹುಲ್ಲು ಇರಿಸಿ, ಕೆಚ್ಚಲಿಂದ ಹಾಲೆಳೆಯುವ ಹೊತ್ತು ಅವುಗಳೆದುರು ಕ್ಯಾಡಬರಿ ಚಾಕಲೇಟು ಇಡುವಂತೆ ಇಡಲೇಬೇಕಾಗಿದ್ದ ಹುಲ್ಲನ್ನು ಜೋಪಾನವಾಗಿ ಉಳಿಸಿಕೊಂಡು ಬಯಲಿನಿಂದ ದಾಟಿಹೋಗಲು ಹರಸಾಹಸಪಡುತ್ತಿದ್ದಳು. ನಮ್ಮ ಹಾಗೂ ಅಮ್ಮನ ಅಕ್ಕರೆಯಲ್ಲಿ ಮಿಂದ ಇವುಗಳನ್ನು ಕೆಲವೊಮ್ಮೆ ಹೀಗೆ ಓಡಿಬಂದಾಗ ಹತ್ತಿರಬರುವುದಕ್ಕೇ ಅವಳು ಬಿಡುತ್ತಿದ್ದುದಿಲ್ಲ. ಕೊಂಗಾಟದ ಬೈಗುಳ ಬೈಯ್ದು ಮೂಗು ಮುಚ್ಚಿಕೊಳ್ಳುತ್ತಾ, ದೂರವೇ ಉಳಿಯುವಂತೆ ಸಣ್ಣ ಕೋಲು ಹಿಡಿದು ಗದರುತ್ತಾ ದೂರದಿಂದಲೇ ನಾಲ್ಕೆಳೆ ಹುಲ್ಲನ್ನು ನಾಯಿಗೆ ಎಸೆಯುವಂತೆ ಎಸೆದು ಪಾರಾಗುತ್ತಿದ್ದಳು. ಯಾಕೆಂದರೆ ಅವು ಅವಳಿಗೂ, ನಮಗೂ ಗೊತ್ತಿರುವಂತೆ ಹುಲ್ಲನ್ನಷ್ಟೇ ತಿನ್ನುವವುಗಳಾಗಿರಲಿಲ್ಲ.ಅವುಗಳ ಅಹಾರ ಬಹುಮಾದರಿಯದಾಗಿತ್ತು. ಯಾರ್‍ಯಾರೋ ತಿನ್ನುವ ಏನೇನೋ ಆಹಾರಗಳು, ಆಹಾರಗಳೇ ಆಗಿದ್ದರೂ ಕೇಳುವ ಕಿವಿ, ಅನುಭವಿಸುವ ಮೈ ಒಲ್ಲೆಯೆನ್ನುವುದು ಉಂಟಲ್ಲವೇ? ಒಲ್ಲೆಯೆಂದರೂ ನಿಜವನ್ನೂ ಒಪ್ಪಿಕೊಳ್ಳಬೇಕಲ್ಲವೇ?ಅವು ನಮ್ಮ ಹಸುಗಳಲ್ಲವೇ?

ಹುಲ್ಲು ತಿನ್ನುವ ಸಂಗತಿಯೊಂದಿಗೆ ತಗಲು ಹಾಕಿಕೊಂಡ ಹಸು ಹುಲ್ಲನ್ನು ಮಾತ್ರ ತಿನ್ನುತ್ತದೆಯೆ ಎಂದು ಕೇಳಿದರೆ ಉತ್ತರ ಏನೆನ್ನಬೇಕು? cows-garbageಪವಿತ್ರವಾದ ಗೋವು ಪವಿತ್ರವೂ, ಶುದ್ಧವೂ ಆದ ಹುಲ್ಲನ್ನು ಮಾತ್ರ ತಿನ್ನುತ್ತದೆ ಎಂದು ಹೇಳುವವರಿದ್ದರೆ ಒಂದೋ ಅವರ ಉದ್ದೇಶವನ್ನು ಅನುಮಾನಿಸಬೇಕು ಇಲ್ಲವೇ ಅವರ ಲೋಕಾನುಭವಕ್ಕೆ ಕನಿಕರಪಡಬೇಕು. ಯಾಕೆಂದರೆ ಹಸುವನ್ನು ಶುದ್ಧ ಸಸ್ಯಾಹಾರಿ ಎಂದು ವರ್ಗೀಕರಿಸುವುದೂ ಪೂರ್ಣ ಪ್ರಮಾಣದಲ್ಲಿ ಸರಿಯೆನಿಸಲಾರದು. ಯಾವೊಂದು ಪ್ರಾಣಿ ಸಮುದಾಯವೂ ಮುಖ್ಯಾಹಾರದಲ್ಲಿ ಸಮಾನತೆ ತೋರಬಹುದಲ್ಲದೆ, ಇಡಿಯ ಆ ಜೀವಸಮುದಾಯವೇ ಆಹಾರದಲ್ಲಿ ಏಕರೂಪಿಯಾಗಿ ವರ್ತಿಸುತ್ತದೆ ಎಂಬ ತರ್ಕ ತಳಬುಡವಿಲ್ಲದ ತರ್ಕವೇ ಸರಿ. ಎಲ್ಲವೂ ಹುಲ್ಲು ತಿನ್ನುತ್ತವೆ ಎಂಬಲ್ಲಿ ಅನುಮಾನವಿಲ್ಲ. ಆದರೆ ತರಾವರಿ ಆಹಾರಾಸಕ್ತಿಯಿರುವ ಹಸುಗಳು ಒಂದು ತಿನ್ನುವುದನ್ನೇ ಮತ್ತೊಂದು ತಿಂದೇ ತಿನ್ನುತ್ತದೆ ಎಂದು ಪ್ರಮೇಯ ಕಟ್ಟಲು ಸಾಧ್ಯವಿಲ್ಲ. ನಾಡಾಡಿ ಹೋರೆಮ್ಮೆ, ಹಸು ಕರುವಿನ ಆಹಾರ ಲೋಕವು ಮನುಷ್ಯರ ಹೇಲಿನಿಂದ ತೊಡಗಿ, ಕರುಹಾಕುವ ವೇಳೆಯ ಮಾಸು (ಕಸ),ಅವುಗಳದ್ದೇ ಕರುಗಳ ವಿಸರ್ಜನೆಯಾದ ಕಂದಿ, ಒಣಗಿದ ಮೂಳೆ, ಮಣ್ಣು, ಬಟ್ಟೆ, ಕಂಬಳಿ, ಪ್ಲಾಸ್ಟಿಕ್‌ಡಬ್ಬ, ಹೊಗೆಸೊಪ್ಪು, ಕಾಸರಕನ (ಕಾಯೆರ್) ಬೀಜ, ಗೊಬ್ಬರಗಳ ತನಕವೂ ವಿಸ್ತರಿತವಾಗಿದೆ ಎಂದರೆ ಅನೇಕರು ಹುಬ್ಬೇರಿಸಬಹುದು, ಕೆಲವರಿಗೆ ಅಸಹ್ಯ ಅನಿಸಬಹುದು. ಇನ್ನು ಕೆಲವರು ಸುತರಾಂ ಒಪ್ಪದೆಯೂ ಇರಬಹುದು. ಯಾಕೆಂದರೆ ಶುದ್ಧವಾದ (?) ಹಾಲುಕೊಡುವ ಹಸು, ಪವಿತ್ರವಾದ ಭಾವನೆಯ ಹೂರಣವಾಗಿರುವ ಹಸು ಚಿ ಕೊಳಕನ್ನೆಲ್ಲಾ ತಿನ್ನುತ್ತದೆ ಎಂಬುದು ಕಣ್ಣೆದುರು ಕಾಣಬಾರದ ಸತ್ಯ. ಆದರೂ ಅವು ಅದನ್ನು ಹಿಂದಿನಿಂದ ತಿನ್ನುತ್ತಿದ್ದವು ಮತ್ತು ಈಗಲೂ ತಿನ್ನುತ್ತಿವೆ. ಪದವಿ ಮುಗಿಸುವತನಕ ಮತ್ತು ಆ ಮೇಲೂ ಕೂಡ ಇಂತಹ ಹಸುಗಳನ್ನು ಹಟ್ಟಿಯಲ್ಲಿ ಕಟ್ಟುವವೇಳೆ ಅವುಗಳ ಮೂತಿ ತಗುಲಿದಾಗ ಮೈಯೆಲ್ಲಾ ಹೇಸಿಕೊಂಡು ಸ್ನಾನದ ಮೇಲೆ ಮತ್ತೆ ಸ್ನಾನಮಾಡಿದ ಅನುಭವ ನನಗಿದೆ.

ಮನುಷ್ಯರ ಸೆಗಣಿ ಹೋರೆಮ್ಮೆ, ಹಸು, ಎತ್ತುಗಳೆಲ್ಲವುದರ ಬಹಳ ಪ್ರಿಯವಾದ ಆಹಾರಗಳಲ್ಲೊಂದು. ಆದರೆ ಎಲ್ಲವೂ ಶತಸಿದ್ಧವಾಗಿ cows-garbage-paperಇದನ್ನು ತಿಂದೇ ತೀರುತ್ತವೆ ಎನ್ನುವುದು ಅಪಚಾರವಷ್ಟೇ ಅಲ್ಲ ಸುಳ್ಳು ಕೂಡಾ ಆಗುತ್ತದೆ. ನಮ್ಮ ಹಟ್ಟಿಯಲ್ಲಿ ನಾನು ಕಂಡಂತೆ ಶೇ.80 ರಷ್ಟು ಜಾನುವಾರುಗಳು ಹೇಲುಬಾಕಗಳು. ಕೆಲವಂತೂ ಇದನ್ನು ತಿನ್ನುವುದಕ್ಕಾಗಿಯೇ ವಿಶೇಷ ತಂತ್ರ ಮಾಡುತ್ತಿದ್ದವು. ನಮ್ಮ ಮನೆಯಲ್ಲಿ ಕೆಂಪಿ ಅಂತ ಒಂದು ದನ ಬಹಳ ವರ್ಷಗಳವರೆಗೂ ಇತ್ತು. ಹತ್ತಿಂಚು ಉದ್ದದ ಮುಂದಕ್ಕೆ ಬಾಗಿದ ಎರಡು ಕೋಡುಗಳಿಂದ ಇದು ಕೆಲವೊಮ್ಮೆ ನಮಗೆ ಆತಂಕವನ್ನೂ ಉಂಟುಮಾಡುತ್ತಿತ್ತು. ಇದರ ಮೈಬಣ್ಣ ಅತ್ಯಂತ ಸೊಗಸು. ಜಾಜಿಕೆಂಪು ಬಣ್ಣದ ಈ ಹಸುವಿನ ಬೆಳ್ಳನೆಯ ಮುಸುಡಿಯ ಮೇಲೆ ಕಪ್ಪುಮಚ್ಚೆಗಳಿದ್ದವು. ಹೆಚ್ಚು ಹರಾಮಿಯೂ ಅಲ್ಲದ, ತೊಂಡು ಮೇಯುವ ಕೆಟ್ಟಸ್ವಭಾವದ್ದೂ ಅಲ್ಲದ ಈ ಹಸುವಿಗೆ ಇದೊಂದು ಕೆಟ್ಟಚಾಳಿಯಿತ್ತು. ಇದಕ್ಕೆಂದೇ ಮೇವಿಗೆ ಬಿಡುವುದಕ್ಕಾಗಿ ಕೊರಳುಬಳ್ಳಿ ತಪ್ಪಿಸಿ ಹಟ್ಟಿಯಿಂದ ಹೊರಗೆ ಎಬ್ಬುವಾಗಲೇ ಉಳಿದವುಗಳಿಗಿಂತ ಮುಂದೆ ಹೊರಟು, ತನ್ನ ಇಷ್ಟದ ಒಣಕುತಿಂಡಿ ಸಿಕ್ಕುವ ಪರಿಚಿತ ಜಾಗಕ್ಕೆ ನುಗ್ಗಿ ಬಿಡುತ್ತಿತ್ತು. ಸಾರ್ವತ್ರಿಕವಾಗಿ ಶೌಚಾಲಯರಹಿತ ಹಳ್ಳಿಯಾಗಿದ್ದ, ಆಂಶಿಕವಾಗಿ ಈಗಲೂ ಹಾಗೆಯೇ ಇರುವ ನಮ್ಮೂರಿನಲ್ಲಿ ಇದಕ್ಕೇನೂ ಬರಗಾಲವೂ ಇರಲಿಲ್ಲ. ಈ ಜಾಗಗಳಲ್ಲಿ ಕಾಲು ಹಾಕಲು ಸರ್ಕಸ್ ಮಾಡಿಕೊಂಡು ಹೋಗಬೇಕಾಗಿದ್ದ ನಮಗೆ ಆ ಪ್ರಕ್ರಿಯೆಯನ್ನು ತಡೆಯಲೂ ಸಾಧ್ಯವಾಗುತ್ತಿರಲಿಲ್ಲ. ಇದೇ ತೆರನಾದ ವರ್ತನೆಯನ್ನು ಹಟ್ಟಿಗೆ ಎಬ್ಬುವಾಗಲೂ ಪುನರಾವರ್ತಿಸುತ್ತಿದ್ದ ಚಂದದ ಮೈಬಣ್ಣದ ಈ ಹಸು ಗೋಧೂಳಿಯಲ್ಲಿ ಉಳಿದವುಗಳಂತೆ ಹಟ್ಟಿಗೆ ಬಾರದೇ ಗ್ವಾಯ್‌ಒಳಾಲ್(ಗೇರುತೋಟ)ಗೆ ನುಗ್ಗಿ ತನ್ನ ಕೆಲಸ ನಿರ್ವಹಿಸುತ್ತಿತ್ತು. ಕೆಂಪಿಯೂ ಸೇರಿದಂತೆ ಅನೇಕ ಜಾನುವಾರುಗಳು ಶೌಚಾಲಯವೇ ಇಲ್ಲದೇ ಎಲ್ಲೆಂದರಲ್ಲಿ ಅವತರಿಸುತ್ತಿದ್ದ ಈ ಮಲಿನದ ಕುರುಹೂ ಸಿಕ್ಕದಂತೆ ನೆಕ್ಕಿ ಬಿಡುತ್ತಿದ್ದವು. ಕಣ್ತಪ್ಪಿ ಉಳಿದುದನ್ನು ಒಣಕಲು ತಿಂಡಿ ತಿನ್ನುವಂತೆ ತಿನ್ನುತ್ತಿದ್ದವು. ಇದೇ ಸ್ಥಿತಿ ಬೇಸಿಗೆಯ ಕಾಲದಲ್ಲಿ ಹೊಳೆಗೆ ಮತ್ತು ಹೊಳೆಯಿಂದ ಹೋರೆಮ್ಮೆಗಳನ್ನು ಎಬ್ಬಿಕೊಂಡು ಬರುತ್ತಿದ್ದ ತೋಡಿನಲ್ಲಿಯೂ ಎದುರಾಗುತ್ತಿತ್ತು. ಲೋಕಕ್ಕೆ ತೋರದಂತೆ ಮರೆಯಿರುವ ಈ ಜಾಗ ಮಬ್ಬು ಹೊತ್ತಿನಲ್ಲಿ ಆಪ್ಯಾಯಮಾನವಾದ ಶೌಚಕ್ರಿಯೆಯ ತಾಣವಾಗುತ್ತಿದ್ದುದರಿಂದ ಜಾನುವಾರುಗಳನ್ನು ಈ ಜಾಗೆಯ ಮೂಲಕ ಎಬ್ಬಿಕೊಂಡು ಬರುವಾಗ ನಾವು ಯಾರೂ ಅವುಗಳ ಹಿಂದೆ ಬರುತ್ತಿರಲಿಲ್ಲ. ಹಾಗಾಗಿ ದೂರನಿಂತು ಹೈ, ಹೋ . . ಎಂದು ಬೊಬ್ಬಿಡುವ ನಮ್ಮ ಕೂಗಿಗೆ ಅವು ಕ್ಯಾರೆ ಅನ್ನದೆ ಅವುಗಳ ಪಾಡಿಗೆ ಓಣಿ ಸ್ವಚ್ಛಗೊಳಿಸುವ ಕೆಲಸದಲ್ಲಿ ತೊಡಗುತ್ತಿದ್ದವು. ಹಾಗಾಗಿ ಹಟ್ಟಿಯಲ್ಲಿ ಇವುಗಳನ್ನು ಕಟ್ಟುವವೇಳೆ ಮೈ ಕೈ ತಾಗದಂತೆ ಸರ್ಕಸ್ ಮಾಡುವ ಜತೆಗೂ ಉಸಿರನ್ನು ಬಿಗಿಹಿಡಿದುಕೊಂಡು ಬೈಯ್ದುಕೊಳ್ಳುತ್ತಾ ಅವುಗಳ ಕೊರಳಿಗೆ ದಾಂಬು (ಹಗ್ಗ) ಸಿಕ್ಕಿಸುತ್ತಿದ್ದೆವು.

ಇನ್ನು ಕೆಲವು ಜಾನುವಾರುಗಳ ಆಹಾರದ ಆಯ್ಕೆ ಮತ್ತು ಬಯಕೆಯೇ ವಿಚಿತ್ರ ತೆರನಾಗಿದೆ. ನಮ್ಮ ಮನೆಯಲ್ಲಿದ್ದ ಬುಡ್ಡಿ ಎಂಬ ಹೆಸರಿನ ಹಸು ಕಾಸರಕದಕಾಯಿ ಆಗುವ ವೇಳೆ ಅದರ ಹಣ್ಣು ಮತ್ತು ಬೀಜ ತಿನ್ನಲು ಹುಡುಕಾಡುತ್ತಿತ್ತು. ಇದರ ಪರಿಣಾಮವಾಗಿ ಹೀಗೆ ತಿಂದಾಗಲೆಲ್ಲಾ ಅದು ಕೊಡುತ್ತಿದ್ದ ಹಾಲು ಕಾಸರಕನ ಬೀಜದ ಕಹಿಯಂಶ ತೋರಿಸುತ್ತಿತ್ತು. ಅದು ಕಾಸಾನ್(ಕಾಯೆರ್) ಹಣ್ಣುಬೀಜ ತಿಂದುದನ್ನು ಕಾಣದೆಯೂ ಅದರ ಹಾಲಿನ ಮೂಲಕ ಅದು ನಿನ್ನೆ ಏನನ್ನು ತಿಂದಿತ್ತು ಎಂಬುದನ್ನು ಗುರುತಿಸುತ್ತಿದ್ದೆವು. ಹಾಗೆಯೇ ಶೇ. 90ಕ್ಕೂ ಮಿಕ್ಕಿದ ಹಸು-ಎಮ್ಮೆಗಳು ಕರುಹಾಕುವಾಗ ಬೀಳುವ ತಮ್ಮದೇ ದೇಹದ ಮಾಸು (ಕಸ) ತಿನ್ನಲು ಹಪಹಪಿಸುತ್ತವೆ. cows-garbageಹೀಗೆ ತಿಂದರೆ ಹಾಲು ಖೋತಾ ಆಗುತ್ತದೆ ಎಂಬ ನಂಬುಗೆಯ ಮೇರೆಗೆ ಅವು ಅದನ್ನು ತಿನ್ನದಂತೆ ಕಾಯುತ್ತಾರೆ. ರಾತ್ರಿವೇಳೆ ಕರುಹಾಕಿದರೆ ತಿನ್ನದಿರಲಿ ಎಂದು ಎಚ್ಚರಿಕೆವಹಿಸಿ ಎರಡೆರಡು ಕಡೆಯಿಂದ ಹಗ್ಗ ಕಟ್ಟಿದರೂ ಕೆಲವು ಹಸುಗಳು ಏನಾದರೂ ಸರ್ಕಸ್ ಮಾಡಿ ತಿಂದುಬಿಡುತ್ತವೆ. ಅಷ್ಟೇ ಅಲ್ಲದೆ ಕರುಹಾಕಿದಾಗ ಕರುವಿನ ಮೈಮೇಲಿನ ಪೊರೆಯನ್ನು ಕೆಲವು ಹಸುಗಳು ನೇರವಾಗಿಯೇ ನೆಕ್ಕಿ ಸಾಫು ಮಾಡುತ್ತವೆ. ಇನ್ನು ಕೆಲವು ಹಸುಗಳಿಗೆ ಹಾಗೆ ನೆಕ್ಕಲಿ ಎಂದು ಕರುವಿನ ಮೈಮೇಲೆ ಭತ್ತದ ತೌಡುಹಾಕಬೇಕಾಗುತ್ತದೆ. ತಮ್ಮದೇ ಕರುಗಳ ಕಂದಿಯನ್ನು ಸಹಜವಾಗಿಯೇ ತಾಯಿಹಸು ಮತ್ತು ಎಮ್ಮೆಗಳು ತಿನ್ನತ್ತವೆ. ಕರುಹಾಕಿದ ವೇಳೆಯಲ್ಲಿ ಕರುಗಳ ಕಾಲಿನ ಎಳೆಗೊರಸುಗಳ ಮೇಲ್ಪದರವನ್ನು ಉಗುರಿನಿಂದಲೋ, ಹಲ್ಲುಕತ್ತಿಯಿಂದಲೋ ಚಿವುಟಿತೆಗೆದು ಅದನ್ನು ತಾಯಿಹಸು/ಎಮ್ಮೆಗೇ ಕೊಡುತ್ತಾರೆ. ಹಾಗೆಯೇ ಕರುಗಳು ಮಣ್ಣು ತಿನ್ನುವುದು ಸಾಮಾನ್ಯ. ಕೆಲವೊಮ್ಮೆ ಈ ಚಾಳಿ ದೊಡ್ಡವಾದ ಮೇಲೂ ಮುಂದುವರೆಯಬಹುದು.

ಈ ಮೇಲಣ ವಿಲಕ್ಷಣ ಆದರೆ ಸಹಜ ಆಹಾರಾಸಕ್ತಿಗಳಲ್ಲದೆ ಇನ್ನು ಕೆಲವೊಂದು ಕಡೆ ಉಳುವ ಜಾನುವಾರುಗಳಿಗೆ ಚೆನ್ನಾಗಿ ಮೈಬರಲಿ ಎಂಬ ಉದ್ದೇಶದಿಂದ ಅವುಗಳು ಬಾಯರು ಕುಡಿಯುವ ಬಾಣೆಗೆ ರಾತ್ರಿ ಉಚ್ಚೆ ಹೊಯ್ದು ಅವು ಕುಡಿಯುವಂತೆ ಮಾಡುವುದುಂಟು. ಈ ರೂಢಿ ಅಧಿಕವಾಗಿ ಕಾಣುವುದು ಕೋಣಗಳಿಗೆ ಸಂಬಂಧಿಸಿದಂತೆ. ಉಳುವ ವೇಳೆ ಉಳುವಾತನೇ ಉಳುಮೆ ನಿಲ್ಲಿಸಿ ಅವುಗಳ ಬಾಯಿಗೆ ಉಚ್ಚೆ ಹೊಯ್ಯುವ ರೂಢಿಯನ್ನು ನಾನೂ ಸಾಮಾನ್ಯವಾಗಿ ಕಂಡಿದ್ದೇನೆ. ಹೀಗೆ ಮೂತ್ರ ಕುಡಿದ ಜಾನುವಾರುಗಳು ಆ ರೂಢಿಯಿಲ್ಲದವರ cattle-feedಮನೆಗೆ ಹೋದಾಗ ಮೈತೆಗೆಯುತ್ತವೆಯೆಂದೂ ಹೇಳಲಾಗುತ್ತದೆ. ಆ ಕಾರಣಕ್ಕಾಗಿ ಈ ಮೂತ್ರ ಕುಡಿಸುವ ರೂಢಿಯನ್ನು ಯಾರೂ ಮುಕ್ತವಾಗಿ ಹೇಳಿಕೊಳ್ಳೋದಿಲ್ಲವಂತೆ. ಉಳುವ ಜಾನುವಾರುಗಳ ಖರೀದಿಯಲ್ಲಿ ಅವುಗಳ ಮೈಗೆ (ದಪ್ಪಕ್ಕೆ) ಪ್ರಾಶಸ್ತ್ಯ ನೀಡುವುದರಿಂದ ಇದೊಂದು ಗೌಪ್ಯತಂತ್ರ. ಆಹಾರಕ್ಕೆ ಸಂಬಂಧಿಸಿದಂತೆ ಈ ವಾಸ್ತವದ ಅರಿವಿನ ನಡುವೆಯೂ ಮೀನು ತಿಂದು ತೊಳೆದ ಪಾತ್ರೆಯ ನೀರನ್ನಾಗಲೀ, ಮೀನು ಕುದಿಸಿದ ಪಾತ್ರೆಯ ನೀರನ್ನಾಗಲೀ ಜಾನುವಾರುಗಳ ಬಾಯರಿಗೆ ಸೇರಿಸುವುದಿಲ್ಲ. ಅವು ಮೂಳೆಯನ್ನು ಕಡಿಯುವುದು, ಮಾಸು ತಿನ್ನುವುದರ ಅರಿವಿದ್ದೂ, ತಾವು ತಿನ್ನುವ ಮಾಂಸದ ಸಾರಿನ ಉಳಿಕೆಯನ್ನು ಅವುಗಳು ತಿನ್ನುವ ಆಹಾರದೊಂದಿಗೆ ಸೇರಿಸುವುದಿಲ್ಲ. ಆದರೆ ತರಕಾರಿ ಸಾರು, ಅಕ್ಕಿ, ಅನ್ನದ ನೀರನ್ನು ಧಾರಾಳವಾಗಿ ಸೇರಿಸಿ ನೀಡುತ್ತಾರೆ. ತಾವು ತಿನ್ನಲು ಕೊಡದೆಯೂ ಕೊಳಕನ್ನು ತಿನ್ನುವ ಹಸುಗಳ ಬಾಯಿಯನ್ನು ಶಾಸ್ತ್ರಗ್ರಂಥಗಳೇ ಅಪವಿತ್ರ ಎಂಬ ಅರ್ಥದಲ್ಲಿ ಹೇಳಿದ ಉಲ್ಲೇಖಗಳು ಸ್ಮೃತಿ, ಪುರಾಣದ ಓದುಗರಿಗೆ ಬರವಣಿಗೆಯ ಮೂಲಕ ಪರಿಚಿತವಾದದು. ಆದರೆ ಜನಸಾಮಾನ್ಯರಿಗೆ ಜೀವನಾನುಭವದ ಮೂಲಕವೇ ಆ ಹೇಳಿಕೆಗಳ ನಿಖರವಾದ ಕಾರಣಗಳು ದಕ್ಕಿವೆ. ಈ ತರಾವರಿ ಆಹಾರಾಸಕ್ತಿಯನ್ನು ಕಣ್ಣಾರೆ ಕಂಡೂ ಅವರಿಗೆ ಹಸುಗಳನ್ನು ಹೇಸದೆಯೇ ಪ್ರೀತಿಸುವುದು ಹೇಗೆಂದು ಗೊತ್ತಿದೆ. ಹಾಗೆ ಯಾಕೆ ಪ್ರೀತಿಸುತ್ತೇವೆ ಎಂಬುದೂ ಗೊತ್ತಿದೆ. ಅದು ಹಾಕುವ ಸೆಗಣಿ, ಎಳೆಯುವ ನೇಗಿಲು, ಕೊಡುವ ಹಾಲು ಎಲ್ಲವೂ ಅವರ ಅನ್ನವೇ ಅಲ್ಲವೇ?

(ಮುಂದುವರೆಯುವುದು…)