Monthly Archives: September 2013

ದಲಿತರು ಮತ್ತು ಉದ್ಯಮಶೀಲತೆ…

ಸ್ನೇಹಿತರೇ,

ವರ್ತಮಾನ.ಕಾಮ್‌ಗೆ ಎರಡು ವರ್ಷ ತುಂಬಿದ ಸಂದರ್ಭದಲ್ಲಿ ವ್ಯಕ್ತಪಡಿಸಿದ ಆಶಯದಂತೆ ವರ್ತಮಾನ.ಕಾಮ್ ಬಳಗ ಇತರೆ ಸಮಾನಮನಸ್ಕ ಗುಂಪು ಮತ್ತು ಸಂಘಟನೆಗಳ ಜೊತೆಗೂಡಿ ರಾಜ್ಯದ ಹಲವು ಕಡೆ ಸಂವಾದ ಮತ್ತು ವಿಚಾರಸಂಕಿರಣಗಳನ್ನು ಆಯೋಜಿಸಲು ಪ್ರಯತ್ನಿಸುತ್ತಿದೆ. ಮೊದಲ ಕಾರ್ಯಕ್ರಮ ಹಾಸನದಲ್ಲಿ ಇದೇ ಶನಿವಾರ (07-09-2013) ನಡೆಯುತ್ತಿದೆ. ವಿಷಯ: “ದಲಿತರು ಮತ್ತು ಉದ್ಯಮಶೀಲತೆ”.

ದಲಿತರು ಉದ್ಯಮಿಗಳಾಗಬೇಕೆ ಬೇಡವೆ, ಅವರೂ ಅಂತಿಮವಾಗಿ ಬಂಡವಾಳಶಾಹಿಯ ಶೋಷಕವರ್ಗದ ಪಾಲುದಾರರಾಗಬೇಕೆ, ಎನ್ನುವುದರಿಂದ ಹಿಡಿದು ಹೆಚ್ಚಿನ ಸಂಖ್ಯೆಯಲ್ಲಿ ದಲಿತರು ಉದ್ಯಮಿಗಳಾಗಲು ಇರುವ ಅಡೆತಡೆಗಳೇನು, ಬಂಡವಾಳ ಹೂಡಿಕೆ ಯಾರಿಂದ, ಇತ್ಯಾದಿ ವಿಷಯಗಳ ಬಗ್ಗೆ ಇಂದು ದೇಶದಲ್ಲಿ ಚರ್ಚೆಗಳಾಗುತ್ತಿವೆ. ಈ ನಡುವೆ ಅನೇಕ ದಲಿತರು ಉದ್ಯಮಿಗಳಾಗಿ ಯಶಸ್ಸನ್ನೂ ಪಡೆಯುತ್ತಿದ್ದಾರೆ. ಅವರ ಸಂಖ್ಯೆ ಇನ್ನೂ ಹೆಚ್ಚಾಗಬೇಕಾದರೆ ಸರ್ಕಾರ ಮತ್ತು ಸಮಾಜದಲ್ಲಿ ಆಗಬೇಕಾದ ನೀತಿನಿರೂಪಣೆಗಳು, ಸುಧಾರಣೆಗಳು, ಮನಸ್ಥಿತಿಯ ಬದಲಾವಣೆ, ಇತ್ಯಾದಿಗಳ ಬಗ್ಗೆ ಮತ್ತು ಉದ್ಯಮಿಗಳಾಗಿ ಪರಿವರ್ತಿತರಾಗುವ ದಲಿತರ ಮೇಲಿರುವ ಸಾಮಾಜಿಕ ಹೊಣೆಗಾರಿಕೆಗಳು ಮತ್ತು ಸಮಾಜ ಅವರಿಂದ ಬಯಸುವ ಅತಿಯಾದ ಜವಾಬ್ದಾರಿತನ ಮತ್ತು ನೈತಿಕತೆ, ಇತ್ಯಾದಿಗಳ ಬಗ್ಗೆ ಇನ್ನೂ ಹೆಚ್ಚಿನ ಚರ್ಚೆ, ಸಂವಾದಗಳು ಆಗಬೇಕಿದೆ. ಅಂತಿಮವಾಗಿ ಉದ್ಯಮಕ್ಷೇತ್ರದಲ್ಲಿ ಅವರಿಗಿರುವ ಅವಕಾಶಗಳ ಬಗ್ಗೆ ಜಾಗೃತಿ ಮೂಡಿಸಬೇಕಿದೆ.

ಈ ನಿಟ್ಟಿನಲ್ಲಿ ವರ್ತಮಾನ.ಕಾಮ್ ಹಾಸನದ “ಸಹಮತ ವೇದಿಕೆ”ಯ ಜೊತೆಗೂಡಿ ಈ ಕಾರ್ಯಕ್ರಮ ಆಯೋಜಿಸಿದೆ. vartamaana-sahamata-invitationಕಾರ್ಯಕ್ರಮದ ಅಧ್ಯಕ್ಷತೆಯನ್ನು ಖ್ಯಾತ ಕಲಾವಿದ ಮತ್ತು ದಲಿತಪರ ಹೋರಾಟಗಾರ ಕೆ.ಟಿ..ಶಿವಪ್ರಸಾದ್ ವಹಿಸುತ್ತಾರೆ. ಸಾಹಿತಿಗಳೂ, ಮಾಜಿ ವಿಧಾನಪರಿಷತ್ ಸದಸ್ಯರೂ, ರಾಜ್ಯ ಎಸ್.ಸಿ/ಎಸ್.ಟಿ ಉದ್ಯಮಿಗಳ ಸಂಘದ ಅಧ್ಯಕ್ಷರೂ ಆದ ಎಲ್.ಹನುಮಂತಯ್ಯನವರು ಮತ್ತು ಉದ್ಯಮಿಗಳೂ, Dalit Indian Chamber of Commerce & Industry (DICCI)ಯ ರಾಜ್ಯಾಧ್ಯಕ್ಷರೂ ಆದ ರಾಜಾ ನಾಯಕರು ಸಂವಾದದಲ್ಲಿ ಪಾಲ್ಗೊಳ್ಳುತ್ತಾರೆ. ದಯವಿಟ್ಟು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ.

ಈ ಸಭೆಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿನಿಂದ ರಾಜ್ಯ ಎಸ್.ಸಿ/ಎಸ್.ಟಿ ಉದ್ಯಮಿಗಳ ಸಂಘದ ಕಾರ್ಯಾಧ್ಯಕ್ಷರಾದ ಸಿ.ಜಿ.ಶ್ರೀನಿವಾಸನ್‌‌ರು, ನಮ್ಮ ವರ್ತಮಾನ.ಕಾಮ್ ಬಳಗದ  ಬಿ.ಶ್ರೀಪಾದ್ ಭಟ್ಟರೂ ಸಹ ಬರಲಿದ್ದಾರೆ.

ಹಾಸನದ “ಸಹಮತ ವೇದಿಕೆ”ಯ ಬಗ್ಗೆ ಒಂದೆರಡು ಮಾತು. ಹಾಸನದಲ್ಲಿರುವ ಕೆಲವು ಸಮಾನಮಸ್ಕ ಸ್ನೇಹೊತರು ಸೇರಿ ಕಟ್ಟಿಕೊಂಡಿರುವ ಈ ವೇದಿಕೆ ಅವರೇ ಹೇಳುವಂತೆ: “ಜಾಗತಿಕ ಮಾರುಕಟ್ಟೆಯ ಭಾಗವೇ ಆಗಿರುವ ಬದುಕಿನಲ್ಲಿ ಉಳಿವಿಗಾಗಿ ತುರುಸಿನ ಪೈಪೋಟಿ ನಡೆಸುತ್ತಲೇ ತಮ್ಮೊಡಲಿನ ಜೀವದ್ರವ್ಯವನ್ನು ಜತನದಿಂದ ಕಾಯ್ದುಕೊಳ್ಳುವ ತುಡಿತವಿರುವ ಕೆಲವು ಸ್ನೇಹಿತರು ಸೇರಿ ಹಾಸನದಲ್ಲಿ ಹುಟ್ಟುಹಾಕಿದ ‘ಸಹಮತ ವೇದಿಕೆ’ ಸಾಹಿತ್ಯ, ಸಿನಿಮಾ, ನಾಟಕ ಮತ್ತು ವಿಚಾರ ಮಂಥನಗಳಂತಹ ಚಟುವಟಿಕೆಗಳನ್ನು ನಿರಂತರವಾಗಿ ಸಂಘಟಿಸುತ್ತಿದೆ.” ಅವರ ಇತ್ತೀಚಿನ ತಿಂಗಳುಗಳ ಕಾರ್ಯಕ್ರಮಗಳ ವಿವರಗಳು ಅವರ ಬ್ಲಾಗಿನಲ್ಲಿ ಇವೆ (sahamathasana.blogspot.in). ಪ್ರಾಮಾಣಿಕರೂ, ಬದ್ಧತೆಯುಳ್ಳ ಸಮಾಜಮುಖಿಗಳೂ ಆದ “ಸಹಮತ ವೇದಿಕೆ”ಯ ಸ್ನೇಹಿತರೊಡನೆಗೂಡಿ ವರ್ತಮಾನ.ಕಾಮ್‌ನ ಈ ತರಹದ ಮೊದಲ ಕಾರ್ಯಕ್ರಮ ಆಯೋಜಿಸುತ್ತಿರುವುದಕ್ಕೆ ನಿಜಕ್ಕೂ ಸಂತೋಷವಿದೆ.

ಇನ್ನು ಇದೇ ಸಂದರ್ಭದಲ್ಲಿ “ದಲಿತರು ಮತ್ತು ಉದ್ಯಮಶೀಲತೆ” ವಿಷಯದ ಬಗ್ಗೆ ಲೇಖನಗಳನ್ನು ಕಳುಹಿಸಿದಲ್ಲಿ ಪ್ರಕಟಿಸಲಾಗುವುದು. ದಯವಿಟ್ಟು ಬರೆಯಿರಿ ಎಂದು ನಮ್ಮ ಬಳಗದ ಲೇಖಕರಲ್ಲಿ ಮತ್ತು ಓದುಗರಲ್ಲಿ ವಿನಂತಿಸುತ್ತೇನೆ. ಹಾಗೆಯೇ, ನಿಮ್ಮ ಅಭಿಪ್ರಾಯಗಳನ್ನು ಇಲ್ಲಿ ಕಾಮೆಂಟ್ ರೂಪದಲ್ಲಿ ವ್ಯಕ್ತಪಡಿಸಿ. ಮತ್ತು, ಸಂವಾದದಲ್ಲಿ ನಿಮ್ಮ ಪರವಾಗಿ ಏನಾದರೂ ಪ್ರಶ್ನೆಗಳನ್ನು ಎತ್ತಬೇಕಿದ್ದಲ್ಲಿ ಅವನ್ನೂ ಕಾಮೆಂಟ್‌ ರೂಪದಲ್ಲಿ ಹಾಕಿ. ಅವನ್ನು ಕಾರ್ಯಕ್ರಮದಲ್ಲಿ ಮತ್ತು ಸಂವಾದದಲ್ಲಿ ಪಾಲ್ಗೊಂಡವರಿಗೆ ತಲುಪಿಸಲಾಗುವುದು.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ
ಸಂಪಾದಕ, vartamaana.com

 

ಪ್ರಭುತ್ವ ಮತ್ತು ಅದರ ದಮನಕಾರಿಗುಣ


– ಡಾ.ಎಸ್.ಬಿ. ಜೋಗುರ


 

ಪ್ರಭುತ್ವ ಬಹುತೇಕವಾಗಿ ಜನಜಾಗೃತಿಯನ್ನು, ಆಂದೋಲನವನ್ನು ಸಹಿಸುವದಿಲ್ಲ. ಅದರಲ್ಲೂ ಬಂಡುಕೋರರು ಬೀದಿಗಿಳಿದು ಅರಾಜಕತೆಗೆ ಕಾರಣರಾದವರ ಹೆಸರಿಡಿದು ಕೂಗುತ್ತಾ ಪ್ರತಿಭಟಿಸುವವರನ್ನು ಮೊದಲು ಸಹಿಸುವದಿಲ್ಲ. ಪ್ರಜಾಸತ್ತೆಯನ್ನು ಅಣಕಿಸಲೆಂಬಂತೆ ಅದರ ಗರ್ಭದಲ್ಲಿಯೇ ಸರ್ವಾಧಿಕಾರಿ ಧೋರಣೆಯ ಬೀಜಗಳು ನಿಧಾನವಾಗಿ ಆವೀರ್ಭವಿಸುವುದು ಬಹುದೊಡ್ಡ ವಿಪರ್ಯಾಸ. ಹಿಂದೆ 1988 ರ ಸಂದರ್ಭದಲ್ಲಿ ತಿಕ್ಕಲು ಸರ್ವಾಧಿಕಾರಿ ಸದ್ದಾಂ ಹುಸೇನ ವಿಷಕಾರಿ ಅಸ್ತ್ರಗಳನ್ನು ಬಂಡುಕೋರರ ಮೇಲೆ ಬಳಸುವ ಮೂಲಕ, ಐದಾರು ಸಾವಿರ ಜನರ ಸಾವಿಗೆ ಕಾರಣವಾಗಿ ಇಡೀ ಜಗತ್ತಿನಲ್ಲಿಯೇ ಒಂದು ಬಗೆಯ ನಿಶೇಧಾತ್ಮಕ ಪ್ರತಿಕ್ರಿಯೆಯನ್ನು ಪಡೆಯಬೇಕಾಗಿ ಬಂದಿತ್ತು. syria-chemical-attackಈಗ 24 ವರ್ಷಗಳ ನಂತರ ಮತ್ತೆ ಅಂತಹದೇ ರಾಸಾಯನಿಕ ಅಸ್ತ್ರದ ಬಳಕೆ ಸಿರಿಯಾದಲ್ಲಿ ಸರ್ವಾಧಿಕಾರಿ ಬಸರ್ ಅಲ್-ಅಸದ್ ಆಳ್ವಿಕೆಯಲ್ಲಿ ನಾಗರಿಕ ಹೋರಾಟಗಾರರ ಮೇಲೆ ಪ್ರಯೋಗಿಸಲಾಗಿದೆ. ಸಾವಿರಾರು ಜನ ಬಂಡುಕೋರರ ಜೊತೆಯಲ್ಲಿ ಯಾವುದೇ ವಿದ್ಯಮಾನಗಳನ್ನು ಅರಿಯದ ಅಸಂಖ್ಯಾತ ಎಳೆಯ ಜೀವಗಳು ಈ ರಾಸಾಯನಿಕ ಅಸ್ತ್ರದ ಬಳಕೆಗೆ ಬಲಿಯಾಗಿವೆ. ಕಣ್ಣು ಊದಿರುವ, ಬಾಯಿಗೆ ನೊರೆ ಮೆತ್ತಿರುವ, ಮುಖ ಊದಿ ವಿಕಾರವಾಗಿ ಅಸು ನೀಗಿರುವ ಶರೀರಗಳು ರಾಶಿ ರಾಶಿಯಾಗಿ ಡಮಾಸ್ಕಸ್ ಸುತ್ತಮುತ್ತಲೂ ಬಿದ್ದಿರುವದಿತ್ತು. ಆ ಸನ್ನಿವೇಶ ಇಡೀ ಜಗತ್ತನ್ನೇ ಒಂದು ಸಾರಿ ಕಂಪಿಸುವಂತೆ ಮಾಡಿತು. ಅತ್ಯಂತ ಅಮಾನವೀಯ ಎನ್ನಬಹುದಾದ ಈ ಆಯ್ಕೆ ಮತ್ತು ತೀರ್ಮಾನಕ್ಕೆ ಇಡೀ ಜಗತ್ತೇ ಖಂಡಿಸಿತು. ಹಾಗೆ ನೋಡಿದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಈ ಬಗೆಯ ಜೈವಿಕ ಇಲ್ಲವೇ ರಸಾಯನಿಕ ಶಸ್ತ್ರಗಳನ್ನು ಯಾವುದೇ ಕಾರಣಕ್ಕೂ ಬಳಸುವಂತಿಲ್ಲ. ಹಾಗೆ ಒಂದೊಮ್ಮೆ ತೀರಾ ಅನಿವಾರ್ಯವಾಗಿ ಬಳಸಲೇಬೇಕು ಎಂದಾಗ ಹೇಗ್ ನಲ್ಲಿರುವ ಅದಕ್ಕೆ ಸಂಬಂಧಿಸಿದ ಸಂಸ್ಥೆಯೊಂದರ ಅನುಮತಿಯನ್ನು ಪಡೆಯಬೇಕು. ಇಂಥಾ ಯಾವುದೇ ಬಗೆಯ ಅನುಮತಿಗಳಿಲ್ಲದೇ ಹೀಗೆ ಬೇಕಾಬಿಟ್ಟಿಯಾಗಿ ರಸಾಯನಿಕ ಅಸ್ತ್ರದ ಪ್ರಯೋಗವಾಗಿರುವುದು ಅಸದ್ ಆಡಳಿತ ಜಗತ್ತಿನ ಪ್ರಮುಖ ರಾಷ್ಟ್ರಗಳಿಂದ ಟೀಕೆಗೆ ಒಳಗಾಗಬೇಕಾಯಿತು.

ಈಗಾಗಲೇ ಸಿರಿಯಾದ ಅಧ್ಯಕ್ಷನ ಆಡಳಿತ ವೈಖರಿ ಮತ್ತು ತೀರ್ಮಾನಗಳ ಬಗ್ಗೆ ಸಂಯುಕ್ತ ರಾಷ್ಟ್ರ ಸಂಘ ಕೆಂಡಾಮಂಡಲವಾಗಿದೆ. Basharal-Assad-syrianಸುಮಾರು 35 ರಾಷ್ಟ್ರಗಳ ಈ ಒಕ್ಕೂಟದಲ್ಲಿ ಫ಼್ರಾನ್ಸ್ ಮತ್ತು ಇಂಗ್ಲಂಡದಂಥ ರಾಷ್ಟ್ರಗಳೂ ಇವೆ. ಸಂಯುಕ್ತ ರಾಷ್ಟ್ರ ಸಂಘದ ಸೆಕ್ರೆಟರಿ ಜನರಲ್ ಬನ್-ಕಿ-ಮೂನ್ ಅವರು ಈ ಬಗೆಯ ರಸಾಯನಿಕ ಅಸ್ತ್ರಗಳ ಬಳಕೆ ಇಡೀ ಮನುಕುಲಕ್ಕೆ ಮಾರಕ, ಅದನ್ನು ಇಡೀ ವಿಶ್ವವೇ ಖಂಡಿಸುತ್ತದೆ, ಈ ವಿಷಯವಾಗಿ ತಡ ಮಾಡದೇ ತನಿಖೆಯಾಗಬೇಕು ಎಂದು ಒಕ್ಕೂಟದಲ್ಲಿಯ ಕೆಲ ಪ್ರಮುಖ ರಾಷ್ಟ್ರಗಳು ಆಗ್ರಹಿಸುತ್ತಿವೆ ಎಂದು ಹೇಳಿರುವದಿದೆ. ಈಗಾಗಲೇ ವಿಶ್ವ ಸಂಸ್ಥೆ ತನಿಖೆಗಾಗಿ ಸಿರಿಯಾ ತಲುಪಿರುವದಿದೆ. ಕುಟುಂಬದ ರಾಜಕಾರಣ ಮತ್ತು ಅಧಿಕಾರವನ್ನು ಪ್ರಶ್ನಿಸುವದೇ ಮಹಾಪ್ರಮಾದ ಎನ್ನುವ ವಾತಾವರಣ ಇಂದಿಗೂ ಕೆಲ ಮುಸ್ಲಿಂ ರಾಷ್ಟ್ರಗಳಲ್ಲಿ ಇದ್ದದ್ದೇ ಒಂದು ದೊಡ್ಡ ವಿಪರ್ಯಾಸ. ಪ್ರಜಾಪ್ರಭುತ್ವದ ಬಗೆಗಿನ ಹಂಬಲವೇ ಅನೇಕ ಕಡೆಗಳಲ್ಲಿ ಈ ಬಗೆಯ ಬಂಡುಕೋರರನ್ನು ಹುಟ್ಟುಹಾಕಿರುವದಿದೆ. ಸಿರಿಯಾದ ಅಧ್ಯಕ್ಷ ಅಸದ್ ಕುಟುಂಬ ಕಳೆದ ನಾಲ್ಕು ದಶಕಗಳಿಂದಲೂ ರಾಜಕೀಯ ಸತ್ತೆಯನ್ನು ತನ್ನ ಕೈಯಲ್ಲಿಟ್ಟುಕೊಂಡು ನಿಯಂತ್ರಿಸುತ್ತಾ, ನಿಭಾಯಿಸುತ್ತಾ ಬಂದದ್ದಿದೆ. ಈಜಿಪ್ತ ಮತ್ತು ಇರಾಕ್ ಗಳಲ್ಲಿ ಪ್ರಜಾಪ್ರಭುತ್ವದ ಹಂಬಲಕ್ಕಾಗಿ ನಡೆದ ಹೋರಾಟದ ಪ್ರಭಾವದ ಹಿನ್ನೆಲೆಯಲ್ಲಿ ಸಿರಿಯಾದಲ್ಲಿಯೂ ಆ ಬಗೆಯ ಹೋರಾಟ ಆರಂಭವಾಯಿತು. ನಾಗರಿಕರು ದೊಡ್ದ ಪ್ರಮಾಣದಲ್ಲಿ ಬೀದಿಗಿಳಿದು ಆ ಬಗ್ಗೆ ಹೋರಾಟ ಆರಂಭಿಸಿದ್ದೇ ತಡ ಮಿಲಿಟರಿ ನೆರವಿನೊಂದಿಗೆ ಈ ರಸಾಯಕ ಅಸ್ತ್ರ ಪ್ರಯೋಗದ ಅಹಿತಕರವಾದ ತೀರ್ಮಾನವನ್ನು ಕೈಗೊಳ್ಳಲಾಯಿತು ಎನ್ನುವುದು ಮಾಧ್ಯಮಗಳ ವರದಿಯಾದರೆ, ರಷ್ಯಾ ಮಾತ್ರ ಈ ಬಗೆಯ ರಸಾಯನಿಕ ಅಸ್ತ್ರದ ಬಳಕೆಯ ಹಿಂದೆ ಬಂಡುಕೋರ ಹೋರಾಟಗಾರರ ಕೈವಾಡವಿದೆ, ಆದಾಗ್ಯೂ ಸಂಯುಕ್ತ ರಾಷ್ಟ್ರ ಸಂಘದ ತನಿಕೆಗೆ ಸಿರಿಯಾದ ಅಧ್ಯಕ್ಷ ಅಸದ್ ಸಹಕರಿಸಬೇಕು ಎಂದು ಕರೆ ನೀಡಿರುವದಿದೆ. ಇದರೊಂದಿಗೆ ವಿಶ್ವದ ಬೇರೆ ಬೇರೆ ರಾಷ್ಟ್ರಗಳು ಸಿರಿಯಾದ ಮೆಲೆ ಕ್ರಮ ಜರುಗಿಸುವಂತೆ ಒತ್ತಡವನ್ನೂ ಹೇರುತ್ತಿರುವುದೂ ಸತ್ಯ. obamaಇದರ ಹಿಂದೆ ಯಾರ ಕೈವಾಡ ಇದೆಯೋ.. ಗೊತ್ತಿಲ್ಲ. ಒಟ್ಟಾರೆ ಸಾವಿರಾರು ಜನ ಅಮಾಯಕರು ಹೆಣವಾದದ್ದು, ಲಕ್ಷಾನುಗಟ್ಟಲೆ ಮಕ್ಕಳು ನಿರಾಶ್ರಿತರಾದದ್ದು ಮಾತ್ರ ಸುಳ್ಳಲ್ಲ. ಸುಮಾರು 1 ದಶಲಕ್ಷ ಮಕ್ಕಳು ನಿರಾಶ್ರಿತರಾಗಿ ಲೆಬಿನಾನ್, ಜೋರ್ಡಾನ್, ಟರ್ಕಿ, ಇರಾಕ್ , ಈಜಿಪ್ತ, ಉತ್ತರ ಆಫ್ರಿಕಾ ಹಾಗೂ ಯುರೋಪ ಮುಂತಾದ ಕಡೆಗೆ ತೆರಳಿರುವದಿದೆ. ಲೆಬಿನಾನಂತೂ ನಿರಾಶ್ರಿತರ ಪಾಲಿನ ಮುಖ್ಯ ತಾಣ.

ಸಿರಿಯಾ ನಾಗರಿಕ ಹೋರಾಟದ ಸಂದರ್ಭದಲ್ಲಿ ಈ ಬಗೆಯ ಅಸ್ತ್ರಗಳನ್ನು ಯಾವುದೇ ಕಾರಣಕ್ಕೆ ಬಳಸಬಾರದೆಂದು ಅಂತರರಾಷ್ಟ್ರೀಯ ಮಟ್ಟದ ಒಪ್ಪಂದಕ್ಕೆ ಸಹಿ ಹಾಕಿದ್ದರೂ ಆ ರೆಡ್‌ಲೈನ್ ನ್ನು ದಾಟಿರುವದಿದೆ. ಆಮೂಲಕ ಮಾನವ ಹಕ್ಕುಗಳ ಉಲ್ಲಂಘನೆಗೂ ಅದು ಕಾರಣವಾಗಿದೆ. ಸಿರಿಯಾದ ಲಕ್ಷಾನುಗಟ್ಟಲೆ ಜನರು ಈ ಬಗೆಯ ರಸಾಯನಿಕ ಅಸ್ತ್ರದ ಧಾಳಿಗೆ ಹೆದರಿ ಇರಾಕನ ಖುರ್ದಿಸ್‌ನಲ್ಲಿ ನಿರಾಶ್ರಿತರಾಗಿ ಆಶ್ರಯಪಡೆದಿರುವದಿದೆ. 2011 ರ ಮಾರ್ಚ್ ತಿಂಗಳಿನಿಂದಲೂ ಈ ನಾಗರಿಕ ಹೋರಾಟ ಸರ್ವಾಧಿಕಾರಿ ಆಡಳಿತದ ವಿರುದ್ಧ ನಡದೇ ಇತ್ತು. ಹಾಗೆಯೇ ಅದನ್ನು ದಮನ ಮಾಡಲು, ಹತ್ತಿಕ್ಕಲು ಅನೇಕ ಬಗೆಯ ಹಲ್ಲೆಗಳು ನಡೆಯುತ್ತಲೇ ಬಂದಿವೆ. ಈ ಬಗೆಯ ಹೋರಾಟದಲ್ಲಿ ಅಲ್ಲಿಂದ ಇಲ್ಲಿಯವರೆಗೆ ಸಿರಿಯಾದಲ್ಲಿ ಸುಮಾರು 1 ಲಕ್ಷ ಹೋರಾಟಗಾರರು ಸಾವು ನೋವುಗಳನ್ನು ಅನುಭವಿಸಬೇಕಾಯಿತು. ಸದ್ಯದ ಸಂದರ್ಭದಲ್ಲಿ ಇಡೀ ಗ್ಲೋಬ್ ತೀರಾ ಗರಂ ಆಗಿರುವ ಸ್ಥಿತಿಯಲ್ಲಿದೆ. ಗ್ಲೋಬಿನ ಯಾವುದೇ ಬದಿಗೆ ನೀವು ಬೆರಳು ತಾಗಿಸಿದರೂ ಚುರ್ ಎನ್ನುವಷ್ಟು ಗರಂ ಆಗಿರುವ ಸ್ಥಿತಿಯಲ್ಲಿ ನಾವು ಬದುಕುತ್ತಿದ್ದೇವೆ. syria-chemical-attacksಹೀಗಿರುವಾಗ ಯಾವುದೇ ಒಂದು ರಾಷ್ಟ್ರದ ಸರ್ವಾಧಿಕಾರಿ ಧೋರಣೆ ಇಲ್ಲವೇ ಹೇಗಾದರೂ ಸರಿ ತನ್ನ ಇಜಂ ನ್ನು ಬಲಪಡಿಸಿಕೊಳ್ಳಲೇಬೇಕು ಎಂಬ ಹುಂಬತನದಿಂದ ಇಂಥಾ ಮಾರಕ ಅಸ್ತ್ರಗಳನ್ನು ಬಳಸುತ್ತಾ ನಡೆದರೆ ಭವಿಷ್ಯದಲ್ಲಿ ಭೂಮಿಯ ಮೇಲೆ ಬರೀ ವಿಷಪೂರಿತ ಕಲ್ಲು, ಮಣ್ಣು ಮಾತ್ರ ಉಳಿಯುವ ಸಾಧ್ಯತೆಯಿದೆ. ಮನುಷ್ಯನನ್ನು ಅತ್ಯಂತ ತುಚ್ಚವಾದ ಕ್ರಿಮಿಗಳನ್ನು ಒರೆಸಿಹಾಕುವಂತೆ ಸಾಯಿಸಲು ಬಳಸಲಾಗುವ ಈ ಬಗೆಯ ಅಸ್ತ್ರಗಳ ಸೃಷ್ಟಿಗಾಗಿಯೇ ನಾಗರಿಕತೆ ಎನ್ನುವುದು ಜನ್ಮ ತಾಳಿರಲಿಕ್ಕಿಲ್ಲ. ಇಂಥಾ ಅಸ್ತ್ರಗಳ ಬಳಕೆಯನ್ನು ಜೀವಪರ ಹಂಬಲ ಮತ್ತು ಖಾಳಜಿ ಇರುವ ಯಾರೂ ಸಹಿಸುವದಿಲ್ಲ. ಜಾಗತೀಕರಣದ ಸಂದರ್ಭದಲ್ಲಿ ಇಡೀ ಜಗತ್ತನ್ನು ಗ್ಲೋಬಲ್ ವಿಲೇಜ್ ಎಂದು ಸಂಬೋಧಿಸುವ ನಮಗೆ ಈ ಬಗೆಯ ಮಾರಣಹೋಮ ಭೂಮಂಡಲದ ಮೇಲೆ ಎಲ್ಲಿಯೇ ಜರುಗಿದರೂ ಈ ಗ್ಲೋಬಲ್ ವಿಲೇಜನ್ನು ಮಾನಸಿಕವಾಗಿ ಬಾಧಿಸುತ್ತದೆ. ಹೀಗೆ ಪ್ರಭುತ್ವ ಜನರ ಹೋರಾಟವನ್ನು ದಮನ ಮಾಡುವಲ್ಲಿ ತನ್ನ ಅಸಹಾಯಕತೆಯ ಸಾಧನವಾಗಿ ಇಂಥಾ ರಸಾಯನಿಕ ಅಸ್ತ್ರಗಳ ಬಳಕೆಯನ್ನು ಯಾವುದೇ ಕಾರಣಕ್ಕೂ ಮಾಡಬಾರದು.