Monthly Archives: October 2013

ವೈದ್ಯಕೀಯ ನಿರ್ಲಕ್ಷ್ಯ ಮತ್ತು ಕೋರ್ಟ್ ತೀರ್ಪಿನ ಸುತ್ತಮುತ್ತ


– ಡಾ. ಅಶೋಕ್ ಕೆ.ಆರ್.


 

ವೈದ್ಯಕೀಯ ನಿರ್ಲಕ್ಷ್ಯದ ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್ ಅಬ್ಬಬ್ಬಾ ಎನ್ನಿಸುವ 6 ಕೋಟಿ ಪರಿಹಾರ ಘೋಷಿಸಿದೆ. ಪ್ರಕರಣ ದಾಖಲಾದ ದಿನದಿಂದ ಬಡ್ಡಿಯನ್ನೂ ಸೇರಿಸಿ ಕೊಡಬೇಕಿರುವುದರಿಂದ ಈ ಪರಿಹಾರದ ಮೊತ್ತ ಹನ್ನೊಂದು ಕೋಟಿಯನ್ನು ದಾಟಿದೆ. ವೈದ್ಯಕೀಯ ನಿರ್ಲಕ್ಷ್ಯದಿಂದ ಹದಿನೈದು ವರುಷಗಳ ಹಿಂದೆ ಮರಣಹೊಂದಿದ ಡಾ.ಅನುರಾಧಾ ಸಹಾರ ಪತಿ ಡಾ.ಕುನಾಲ್ ಸಹಾ ನಡೆಸಿದ ದೀರ್ಘ ಹೋರಾಟಕ್ಕೆ ಜಯ ಸಂದಿದೆ. ತಪ್ಪು ಮಾಡಿದ ವೈದ್ಯರಿಂದ medical-malpracticeಲಕ್ಷಗಳ ಲೆಕ್ಕದಲ್ಲಿ ಮತ್ತು ಆ ವೈದ್ಯರು ಕಾರ್ಯನಿರ್ವಹಿಸುತ್ತಿದ್ದ ಕೋಲ್ಕತ್ತಾದ ಎ.ಎಮ್.ಆರ್.ಐ ಆಸ್ಪತ್ರೆ (ಇದೇ ಗುಂಪಿನ ಆಸ್ಪತ್ರೆಗೆ ಇತ್ತೀಚೆಗೆ ಬೆಂಕಿ ಬಿದ್ದು ತೊಂಬತ್ತು ರೋಗಿಗಳು ಅಸುನೀಗಿದ್ದರು) ಕೋಟಿಗಳ ಲೆಕ್ಕದಲ್ಲಿ ಪರಿಹಾರ ನೀಡಬೇಕೆಂದು ಕೋರ್ಟ್ ಆದೇಶಿಸಿದೆ. ದಿನವಹಿ ನಡೆಯುವ ನೂರಾರು ವೈದ್ಯಕೀಯ ನಿರ್ಲಕ್ಷ್ಯದ ಪ್ರಕರಣಗಳಲ್ಲಿ ಅಪರೂಪಕ್ಕೆ ಒಂದರಲ್ಲಿ ಪರಿಹಾರ ಘೋಷಣೆಯಾಗಿದೆ. ಆದರೀ ಪ್ರಕರಣದಲ್ಲಿ ಗಮನಿಸಬೇಕಾದದ್ದೆಂದರೆ ಪರಿಹಾರಕ್ಕಾಗಿ ಕೋರ್ಟಿನ ಮೊರೆಹೊಕ್ಕವರೂ ಕೂಡ ವೈದ್ಯರೇ ಆಗಿರುವುದು. ತನ್ನ ಪತ್ನಿಗೆ ಯಾವ ರೀತಿ ತಪ್ಪು ಚಿಕಿತ್ಸೆಯನ್ನು ನೀಡಲಾಯಿತು ಎಂಬುದನ್ನು ಅರಿಯಲು ತಾವು ಕೂಡ ವೈದ್ಯರಾಗಿದ್ದು ಅವರಿಗೆ ಅನುಕೂಲವಾಯಿತು. ಕೊಟ್ಟಿರುವುದು ತಪ್ಪು ಚಿಕಿತ್ಸೆಯೋ ಅಲ್ಲವೋ ಎಂಬುದನ್ನು ಅರಿಯಲಾಗದ ಜನಸಾಮಾನ್ಯರ ಪಾಡೇನು?

ವೈದ್ಯಕೀಯ ನಿರ್ಲಕ್ಷ್ಯವೆಂಬುದು ಭಾರತದಲ್ಲಿ ಸರ್ವೇ ಸಾಮಾನ್ಯವೆಂಬಂತೆ ನಡೆಯುತ್ತದೆ. ಬಹುತೇಕ ಪ್ರಕರಣಗಳಲ್ಲಿ ನಿರ್ಲಕ್ಷ್ಯ ನಡೆದಿರುವ ಕುರುಹೂ ಕೂಡ ರೋಗಿ ಮತ್ತವರ ಸಂಬಂಧಿಕರಿಗಿರುವುದಿಲ್ಲ. ವೈದ್ಯರ ಅಜಾಗರೂಕ ಮನೋಭಾವ, ಎಲ್ಲವೂ ನನಗೇ ಗೊತ್ತು ಎಂಬ ಅತಿಯಾದ ಆತ್ಮವಿಶ್ವಾಸ, ಮತ್ತು ಬಹಳಷ್ಟು ಸಲ ರೋಗಿಗೆ ಕೊಡುತ್ತಿರುವ ಔಷಧಿಯ ಬಗ್ಗೆ ಸ್ವತಃ ವೈದ್ಯರಿಗೇ ಸರಿಯಾದ ತಿಳುವಳಿಕೆ ಇರದಿರುವುದು ವೈದ್ಯಕೀಯ ನಿರ್ಲಕ್ಷ್ಯಕ್ಕೆ ಕಾರಣ. ಇಂಥಹುದೊಂದು ನಿರ್ಲಕ್ಷ್ಯ ಮನೋಭಾವ ಎಲ್ಲ ವೃತ್ತಿಯಲ್ಲಿರುವವರಲ್ಲಿಯೂ ಇರುತ್ತದಾದರೂ ವೈದ್ಯಕೀಯ ವೃತ್ತಿ ಒರ್ವ ವ್ಯಕ್ತಿಯ ಜೀವದ ಜೊತೆಗೆ ಸಂವಹನ ನಡೆಸುವುದರಿಂದ ಚಿಕ್ಕದೊಂದು ತಪ್ಪೂ ಪ್ರಾಣಹರಣಕ್ಕೆ ಕಾರಣವಾಗಿಬಿಡಬಹುದು. ವೈದ್ಯರೂ ಕೂಡ ಮನುಷ್ಯಜಾತಿಗೇ ಸೇರಿರುವುದರಿಂದ ವೈಯಕ್ತಿಕ ತೊಂದರೆಗಳು, ಅವರ ಮನಸ್ಥಿತಿ, ಕೊಡುತ್ತಿರುವ ಚಿಕಿತ್ಸೆಯ ಬಗೆಗಿನ ಅಜ್ಞಾನ Surgery at Apollo Private Hospitalಅವರ ಕೆಲಸದ ಮೇಲೂ ಪರಿಣಾಮ ಬೀರಿ ತಪ್ಪು ಚಿಕಿತ್ಸೆಯನ್ನು ನೀಡುವಂತೆ ಮಾಡಿಬಿಡಬಹುದು. ಗೊತ್ತಿಲ್ಲದೆ ಮಾಡಿಬಿಡುವ ತಪ್ಪಿನಿಂದ ರೋಗಿಯ ಪ್ರಾಣಹರಣವಾಗಿಬಿಟ್ಟಲ್ಲಿ ಕೋರ್ಟಿನಿಂದ ರೋಗಿಯ ಸಂಬಂಧಿಗಳಿಗೆ ಪರಿಹಾರ ದೊರಕಬಹುದು ಆದರೆ ವೈದ್ಯರ ಎಲ್ಲ ತಪ್ಪುಗಳೂ ಅವರಿಗೆ ಗೊತ್ತಿಲ್ಲದಂತೆಯೇ ನಡೆದುಬಿಡುತ್ತವೆಯೇ?

ಯಾವಾಗ ಶಿಕ್ಷಣವೆಂಬುದು ಸರಕಾರದ ಹತೋಟಿ ಮೀರಿ ಖಾಸಗೀಕೊರಣಗೊಂಡು ಮತ್ತದಕ್ಕಿಂತ ಹೆಚ್ಚಾಗಿ ವ್ಯಾಪಾರೀಕರಣಗೊಂಡಿತೋ ವೈದ್ಯವೃತ್ತಿ ಕೂಡ ಸೇವಾವಲಯದಿಂದ ಹೊರಬಂದು ಉದ್ಯಮವಲಯಕ್ಕೆ ಸೇರಿಬಿಟ್ಟಿತು. ಇವತ್ತು ವೈದ್ಯ ವೃತ್ತಿಯೆಂಬುದು ಪಕ್ಕಾ ಬ್ಯುಸಿನೆಸ್. “ನಾನಿಷ್ಟು ಹಣ ಹೂಡಿಕೆ ಮಾಡಿದ್ದೀನಿ, ಇದು ನನ್ನ ಬಂಡವಾಳ, ತಿಂಗಳಿಗೆ ಇಷ್ಟು ಲಕ್ಷದ ಖರ್ಚಿದೆ ಆಸ್ಪತ್ರೆ ಸಾಗಿಸಲು, ಹಾಗಾಗಿ ನನಗೆ ದಿನಕ್ಕಿಷ್ಟು ಬ್ಯುಸಿನೆಸ್ ನಡೆಯಬೇಕು” ಇದು ಇಂದಿನ ಬಹುತೇಕ ಖಾಸಗಿ ಆಸ್ಪತ್ರೆಯ ಮೀಟಿಂಗುಗಳಲ್ಲಿ ಕೇಳಿ ಬರುವ ಮಾತು! ಮುಂಚಿನಿಂದಲೂ ವೈದ್ಯಕೀಯ ವೃತ್ತಿಯಲ್ಲಿ ಖಾಸಗಿ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿದ್ದವಾದರೂ ಅದಕ್ಕೊಂದು ಉದ್ಯಮದ ರೂಪ ಬಂದಿದ್ದು ಕಾರ್ಪೋರೇಟ್ ಉದ್ಯಮ ಆಸ್ಪತ್ರೆಗಳಲ್ಲಿ ಬಂಡವಾಳ ಹೂಡಲಾರಂಭಿಸಿ ದೊಡ್ಡ ಮತ್ತು ಸಣ್ಣ ಊರುಗಳಲ್ಲಿ ಸರಣಿ ಆಸ್ಪತ್ರೆಗಳನ್ನು ತೆರೆಯಲಾರಂಭಿಸಿದ ಮೇಲೆ. ಹಳೆಯ ಸರಕಾರಿ ಹಾಗೂ ಖಾಸಗೀ ಆಸ್ಪತ್ರೆಗಳ ಒಳಗೆ ಹೋಗುತ್ತಿದ್ದಂತೆ ಬರುತ್ತಿದ್ದ ‘ಆಸ್ಪತ್ರೆ’ ವಾಸನೆ ಈ ನವ ಉದ್ಯಮದ ಆಸ್ಪತ್ರೆಗಳಲ್ಲಿಲ್ಲ! ಹವಾನಿಯಂತ್ರಿತ ಕಟ್ಟಡ, ಮೇಲ್ನೋಟಕ್ಕೆ ಅಚ್ಚುಕಟ್ಟು ವ್ಯವಸ್ಥೆ, ಅತ್ಯಾಧುನಿಕ ಸೌಲಭ್ಯವಿರುವ wockhardthospitalbgtbangaloreಈ ಆಸ್ಪತ್ರೆಗಳಲ್ಲಿ ರೋಗಿಗಳ ಮೇಲೆ ವಿಧಿಸುವ ವೆಚ್ಚವೂ ಅಧಿಕ. ನಾವು ಕೊಡುವ ಸೇವೆಗೆ ಈ ವೆಚ್ಚ ಕಡಿಮೆಯೆಂಬುದು ಆಸ್ಪತ್ರೆಯವರ ಅನಿಸಿಕೆ. ರೋಗಿಗಳಿಗೆ ತಿಳಿಯದ, ಹೊರಪ್ರಪಂಚಕ್ಕೆ ಗೊತ್ತಾಗದ ಅತಿ ಹೆಚ್ಚು ವೈದ್ಯಕೀಯ ನಿರ್ಲಕ್ಷ್ಯ ನಡೆಯುವುದು ಇಂತಹ ಆಸ್ಪತ್ರೆಗಳಲ್ಲೇ. ಹಳೆಯ ಸರಕಾರಿ – ಹಳೆಯ ಖಾಸಗಿ ಆಸ್ಪತ್ರೆಗಳಲ್ಲಿ ಇರುವ ಸೀಮಿತ ಸೌಕರ್ಯಗಳಲ್ಲೇ ಚಿಕಿತ್ಸೆ ನೀಡಬೇಕಾದ ಕರ್ಮ. ಒಂದಿದ್ದರೆ ಹಲವಿಲ್ಲ ಎಂಬ ಪರಿಸ್ಥಿತಿ. ಮೇಲಾಗಿ ಬಹುತೇಕ ಸರಕಾರಿ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಕೊರತೆಯೂ ಇದ್ದು ತಮಗಿರುವ ಜ್ಞಾನದಲ್ಲೇ ಎಲ್ಲ ರೋಗಗಳಿಗೂ ಚಿಕಿತ್ಸೆ ನೀಡಬೇಕಾದ ಅನಿವಾರ್ಯತೆಯೂ ಇದೆ. ನಗರಗಳ ಝಗಮಗಿಸುವ ಆಸ್ಪತ್ರೆಗಳಲ್ಲಿ ಈ ಯಾವ ಕೊರತೆಯೂ ಇರುವುದಿಲ್ಲ, ಉನ್ನತಾನಿಉನ್ನತ ಶಿಕ್ಷಣ ಪಡೆದಿರುವ ತಜ್ಞರ ಉಪಸ್ಥಿತಿಯಲ್ಲೂ ಇಂಥ ಆಸ್ಪತ್ರೆಗಳಲ್ಲಿ ನಿರ್ಲಕ್ಷ್ಯ ನಡೆದುಬಿಡುವುದಾದರೂ ಯಾಕೆ? ರೋಗಿಗಳನ್ನು ದುಡ್ಡು ಕೊಡುವ ಮಿಷಿನ್ನುಗಳು ಎಂಬ ಈ ಆಸ್ಪತ್ರೆಗಳ ಆಡಳಿತವರ್ಗದ ಮನಸ್ಥಿತಿಯೇ ಇದಕ್ಕೆ ಕಾರಣ.

ಅದು ಮೈಸೂರಿನ ಖ್ಯಾತ ಖಾಸಗಿ ಕಾರ್ಪೋರೇಟ್ ಆಸ್ಪತ್ರೆ. ಬಹುತೇಕ ಎಲ್ಲ ಖಾಸಗಿ ಕಾರ್ಪೋರೇಟ್ ಆಸ್ಪತ್ರೆಯ ಆಡಳಿತ ವರ್ಗ ತನ್ನಲ್ಲಿ ಕೆಲಸಕ್ಕಿರುವ ವೈದ್ಯರಿಗೆ ಥೇಟ್ ಸಾಫ್ಟ್‌ವೇರ್ ಕಂಪನಿಗಳಂತೆಯೇ ಟಾರ್ಗೆಟ್ ನೀಡುತ್ತದೆ! ತಿಂಗಳಿಗಿಷ್ಟು ಆಪರೇಷನ್ ನಡೆಸಬೇಕು, ತಿಂಗಳಿಗಿಷ್ಟು ಡಯಾಲಿಸಿಸ್ ಮಾಡಿಸಬೇಕು, ತಿಂಗಳಿಗಿಷ್ಟು ಎಂ.ಆರ್.ಐ, ಸಿಟಿ ಸ್ಕ್ಯಾನ್ ಮಾಡಿಸಬೇಕು ಎಂಬ ಟಾರ್ಗೆಟ್ ವಿಧಿಸುತ್ತದೆ! ಸತತವಾಗಿ ಟಾರ್ಗೆಟ್ ಮುಟ್ಟಿಸದ ವೈದ್ಯರಿಗೆ ‘ಪಿಂಕ್ ಸ್ಲಿಪ್’ ನೀಡುವ ಪದ್ಧತಿಯೂ ಉಂಟು! ಇದೇ ರೀತಿಯ ಟಾರ್ಗೆಟ್ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿಯೂ ಇದೆ. ಜನರೆಲ್ಲ ಆರೋಗ್ಯದಿಂದಿದ್ದು ಅವರ ಕಿಡ್ನಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರೆ ತಿಂಗಳಿಗಿಷ್ಟು ಡಯಾಲಿಸಿಸ್ ಮಾಡಿ ಟಾರ್ಗೆಟ್ ತಲುಪಿ ಆಡಳಿತವರ್ಗದಿಂದ ಶಹಬ್ಬಾಸ್ಗಿರಿ ಪಡೆಯುವುದು ಹೇಗೆ ಸಾಧ್ಯ? ಲ್ಯಾಸಿಕ್ಸ್ ಎಂಬ ದೇಹದ ನೀರು ಹೆಚ್ಚು ಹೊರ ಹೋಗುವಂತೆ ಮಾಡುವ ಇಂಜೆಕ್ಷನ್ ನೀಡಿ ದೇಹದ ಖನಿಜಾಂಶಗಳಲ್ಲಿ ಏರುಪೇರು ಸೃಷ್ಟಿಸಿ ಅದರ ಲ್ಯಾಬ್ ರಿಪೋರ್ಟನ್ನು ಪಡೆದು ತದನಂತರ ರೋಗಿಯಲ್ಲಿ ತಾನೇ ಸೃಷ್ಟಿಸಿದ ರೋಗವನ್ನು ಮತ್ತಷ್ಟು ಭಯಭೀತ ದನಿಯಲ್ಲಿ ‘ಕಿಡ್ನಿ ಹೋಗಿಬಿಟ್ಟಿದೆ’ ಎಂದು ವಿವರಿಸಿ ಡಯಾಲಿಸಿಸ್ ಮಾಡಲಾಗುತ್ತದೆ! ತನಗಿದ್ದ “ಭಯಂಕರ” ರೋಗ ವಾಸಿಯಾದ ಖುಷಿಯಲ್ಲಿ ರೋಗಿ, ಟಾರ್ಗೆಟ್ ತಲುಪಿದ ಖುಷಿಯಲ್ಲಿ ವೈದ್ಯ, ಹೂಡಿದ ಬಂಡವಾಳಕ್ಕೆ ತಕ್ಕಂತೆ ಲಾಭ ಮಾಡುತ್ತಿರುವ ಖುಷಿಯಲ್ಲಿ ಆಸ್ಪತ್ರೆಯ ಆಡಳಿತ ವರ್ಗ…… ಇದು ಇಂದಿನ ಬಹುತೇಕ ಆಸ್ಪತ್ರೆಗಳಲ್ಲಿ ನಡೆಯುತ್ತಿರುವ ಸಂಗತಿ. ಇದನ್ನು ವೈದ್ಯಕೀಯ ನಿರ್ಲಕ್ಷ್ಯವೆನ್ನಬೇಕೋ ಅಥವಾ ದಂಧೆಯೆಂದು ಕರೆಯಬೇಕೋ? ವೈದ್ಯಕೀಯ ನಿರ್ಲಕ್ಷ್ಯಕ್ಕೆ ಹಣದ ರೂಪದ, ನಿಷೇಧದ ರೂಪದ ದಂಡ ವಿಧಿಸಬಹುದು, ಆದರೀ ದಂಧೆಗೆ?

ಡಾ ಅನುರಾಧ ಸಹಾ ಪ್ರಕರಣ ನ್ಯಾಯಲಯದ ಮೆಟ್ಟಿಲೇರಿದ್ದು ಅವರ ಪತಿ ಕೂಡ ವೈದ್ಯರಾಗಿದ್ದರಿಂದ. ಮತ್ತದು ಗೆಲುವು ಕಂಡಿದ್ದು ಡಾ ಕುನಾಲ್ Supreme_court_of_indiaಸಹಾ ಹಲವು ಸಲ ತಾವೇ ವಾದ ಮಾಡಿದ್ದರಿಂದಾಗಿ. ಎಷ್ಟು ಜನಸಾಮಾನ್ಯರಿಗೆ ಇದು ಸಾಧ್ಯವಿದೆ? ಅಲ್ಲದೆ ಈ ಪ್ರಕರಣ ಇತ್ಯರ್ಥವಾಗಲು ಹದಿನೈದು ವರುಷಗಳು ಹಿಡಿದವು. ಎಷ್ಟು ಜನರಿಗೆ ಅಷ್ಟು ವರುಷಗಳ ಕಾಲ ಹೋರಾಡಲು ಸಾಧ್ಯವಿದೆ? ಈ ಪ್ರಕರಣದಿಂದ ವೈದ್ಯಕೀಯ ನಿರ್ಲಕ್ಷ್ಯ ಕಡಿಮೆಯಾಗುತ್ತದಾ? ಬಹುಶಃ ಇಲ್ಲ. ಕೋರ್ಟಿನ ಭಯದಿಂದ ಮತ್ತಷ್ಟು ಮಗದಷ್ಟು ಅನವಶ್ಯಕ ಲ್ಯಾಬ್ ಪರೀಕ್ಷೆಗಳನ್ನು ಅನಿವಾರ್ಯವೆಂಬಂತೆ ಬಿಂಬಿಸಿ ರೋಗಿಗಳಿಂದ ಇನ್ನಷ್ಟು ಹಣ ವಸೂಲು ಮಾಡಲು ದೊಡ್ಡ ದೊಡ್ಡ ಆಸ್ಪತ್ರೆಗಳಿಗೆ ಮತ್ತು ವೈದ್ಯರಿಗೆ ಅನುಕೂಲವಾಗುತ್ತದೆಯಷ್ಟೇ.

ಮೋದಿಯ ಹಿಂದಣ ಸತ್ಯ, ಮಿಥ್ಯಗಳು…


– ಸಂಜ್ಯೋತಿ ವಿ.ಕೆ.


 

ಪ್ರಜಾಪ್ರಭುತ್ವ ವ್ಯವಸ್ಥೆ (ತನ್ನೆಲ್ಲ ಕೊರೆಗಳಿದ್ದಾಗ್ಯೂ) ಮನುಷ್ಯನ ಅತ್ಯುನ್ನತ ಸಾಮಾಜಿಕ ಆವಿಷ್ಕಾರಗಳಲ್ಲೊಂದು. ಮನುಷ್ಯನ ಸ್ವಾತಂತ್ರ್ಯ, ಘನತೆ ಮತ್ತು ಸಮಾನತೆಯ ಮೌಲ್ಯಗಳನ್ನು ಎತ್ತಿಹಿಡಿಯುವ ಮತ್ತೊಂದು ಪರ್ಯಾಯವಿಲ್ಲದಿರುವುದರಿಂದ ಈ ವ್ಯವಸ್ಥೆಯ ಕೊರೆಗಳನ್ನು ಮುಂದಿಟ್ಟುಕೊಂಡು ಇದನ್ನು ನಿರಾಕರಿಸಲು ಸಾಧ್ಯವಿಲ್ಲ. ಬದಲಿಗೆ ಆ ಕೊರೆಗಳನ್ನು ಸರಿಪಡಿಸಿ ಇದನ್ನು ಮತ್ತಷ್ಟು ಬಲಪಡಿಸುವುದೇ ನಮ್ಮ ಮುಂದಿರುವ ಸವಾಲು ಮತ್ತು ಸಾಧ್ಯತೆ.

ಈ ವ್ಯವಸ್ಥೆಯ ಅತಿ ಮುಖ್ಯ ಹಕ್ಕು ಮತ್ತು ಭಾದ್ಯತೆ ಅಡಗಿರುವುದು ಚುನಾವಣೆ ಮತ್ತು ಮತದಾನದಲ್ಲಿ. ಭಾರತದಂತಹ ಬಹುಧರ್ಮೀಯ, ಬಹುಸಂಸ್ಕೃತಿಯ, ಶ್ರೇಣೀಕೃತ ಅಸಮಾನ ಸಮಾಜದಲ್ಲಿ; ವಿಚಾರ-ಮಾಹಿತಿಗಳ ಪ್ರಸರಣ ಕೆಲವೇ ವ್ಯಕ್ತಿ, ಸಂಸ್ಥೆ, ವ್ಯವಸ್ಥೆಗಳ ಮರ್ಜಿಗೆ ಸಿಲುಕಿರುವಾಗ; grass-map-indiaಸಂಪೂರ್ಣ ಸಾಕ್ಷರತೆಯನ್ನೇ ಇನ್ನೂ ಸಾಧಿಸದ, ಅಕ್ಷರಸ್ಥರಾದರೂ ವಿದ್ಯಾವಂತರಾಗದ, ವಿದ್ಯೆಯ ಜೊತೆಗೆ ಜ್ಞಾನ ವಿವೇಚನೆಗಳನ್ನು ಸಮಾನವಾಗಿ ನಿರೀಕ್ಷಿಸಲಾಗದ ವ್ಯವಸ್ಥೆಯಲ್ಲಿ ಚುನಾವಣೆ-ಮತದಾನದ ಹಕ್ಕುಗಳು ನಿಚ್ಚಳವಾಗಿ ಚಲಾಯಿಸಲ್ಪಡುತ್ತವೆ ಮತ್ತು ಬಾಧ್ಯತೆಗಳು ನಿಭಾಯಿಸಲ್ಪಡುತ್ತವೆ ಎಂದು ನಿರೀಕ್ಷಿಸಲಾಗದು. ಜೊತೆಗೆ ತೃತೀಯ ರಂಗ ಎಂಬುದು ಇನ್ನೂ ಒಂದು ಆದರ್ಶ ಕನಸಾಗಿಯೇ ಉಳಿದಿರುವಾಗ ಚುನಾವಣೆ ಎನ್ನುವುದು ಭಾಜಪ ಮತ್ತು ಕಾಂಗ್ರೆಸ್ ಎಂಬ ಎರಡು ಧೃವಗಳ ನಡುವಣ ಪೈಪೋಟಿಯಾಗಿರುವಾಗ ಚುನಾವಣಾ ಫಲಿತಾಂಶಗಳು ಜನರ ನೈಜ ಆಯ್ಕೆಯನ್ನು ಸಂಪೂರ್ಣವಾಗಿ ಬಿಂಬಿಸುತ್ತದೆಂದು ಹೇಳಲಾಗದು.

ಇಷ್ಟೆಲ್ಲ ಸಂಕೀರ್ಣತೆಗಳ ನಡುವೆಯೂ 2004 ರ ಸಾರ್ವತಿಕ ಚುನಾವಣೆಯಲ್ಲಿ ಜನರನ್ನು ಮತ-ಧರ್ಮಗಳ ಹೆಸರಿನಲ್ಲಿ ಒಡೆಯುವ, ಭಾರತ ಹೊಳೆಯುತ್ತಿದೆ ಎಂಬ ಮಂಕುಬೂದಿ ಎರಚಲು ಹೊರಟ ಭಾಜಪವನ್ನು ಸೋಲಿಸಿದ್ದು ಇದೇ ಮತದಾರರು ದೇಶವನ್ನು ಅವೈಜ್ಞಾನಿಕ ರೀತಿಯಲ್ಲಿ ಉದಾರೀಕರಣ, ಖಾಸಗೀಕರಣ, ಜಾಗತೀಕರಣಗಳಿಗೆ (LPG) ಒಡ್ಡಿ ಅನೂಹ್ಯ ಆರ್ಥಿಕ, ಸಾಮಾಜಿಕ ಪರಿಣಾಮಗಳಿಗೆ ಕಾರಣವಾದ ಕಾಂಗ್ರೆಸ್ಸಿನ ಮೇಲೆ ಕಮ್ಯುನಿಸ್ಟರ ಕಣ್ಗಾವಲನ್ನು ಇರಿಸಲು ಸಾಧ್ಯವಾಗಿಸಿದ್ದು ಸಹ ಇದೇ ಮತದಾರರು. ಪಶ್ಚಿಮ ಬಂಗಾಳದಲ್ಲಿ ದೀರ್ಘಾವಧಿಯ ಅಧಿಕಾರ ದೊರೆತರೂ ಭ್ರಷ್ಟಾಚಾರವನ್ನು ವೈಯುಕ್ತಿಕ ನೆಲೆಯಲ್ಲಿ ಹತ್ತಿರ ಸುಳಿಯಗೊಡದಿದ್ದ ಕಮ್ಯುನಿಸ್ಟರು ತಮ್ಮದೇ ಸಿದ್ಧಾಂತಗಳನ್ನು ಸ್ವವಿಮರ್ಶೆಗೊಳಪಡಿಸಿ ಆಧುನಿಕತೆಗೆ ತೆರೆದುಕೊಳ್ಳದೆ ಸಂಕೋಲೆಗಳಾಗಿಸಿಕೊಂಡಾಗ ಅವರನ್ನು ನಿರಾಕರಿಸಿದ್ದು ಇದೇ ಪ್ರಜಾತಂತ್ರ ವ್ಯವಸ್ಥೆ. ನಂತರದ ಬೆಳವಣಿಗೆಗಳು ಇತಿಹಾಸದಲ್ಲಿ ಕಲಿಯಬೇಕಾದ ಪಾಠಗಳಾಗಿ ದಾಖಲಾಗಿದ್ದು ನಿಜ (ರಾಜಕೀಯ ಪಕ್ಷಗಳಿಗೆ ಆ ಪಾಠಗಳನ್ನು ಕಲಿಯುವ ಮನಸ್ಸಿಲ್ಲದಿರುವುದು ವಿಷಾದನೀಯ). ಆದರೆ ಇಂತಹ ಅನಾಮಿಕ ಮತದಾರನ ಗುಪ್ತಗಾಮಿ ಶಕ್ತಿ (under current) ಯಾವಾಗಲೂ ಸರಿಯಾದ ದಿಕ್ಕಿನಲ್ಲೇ ಹರಿಯುತ್ತದೆ ಎನ್ನಲಾಗದು. ಧರ್ಮಾಂದತೆಯ ಅಫೀಮು ತಲೆಗೆ ಹತ್ತಿರುವ ಬಹುಸಂಖ್ಯಾತರ ಮತಗಳು ಧ್ರುವೀಕರಣಗೊಂಡು ಗುಜರಾತಿನಲ್ಲಿ ಮೋದಿ ಮೂರು ಬಾರಿ ಮುಖ್ಯಮಂತ್ರಿಯಾಗಿ ಆಯ್ಕೆಯಾದದ್ದು.

ಈಗ ಈ ಗುಜರಾತ್ ಮಾದರಿಯನ್ನು ಇಡೀ ದೇಶಕ್ಕೆ ವಿಸ್ತರಿಸುವ ಉಮೇದಿನಲ್ಲಿ ಭಾಜಪ ಮೋದಿಯನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸುತ್ತಿದೆ. ಭಾಜಪ ಮುಖ್ಯವಾಗಿ ನೆಚ್ಚಿಕೊಂಡಿರುವುದು ಒಂದು ಕಡೆ ಮತಾಂಧತೆಯ ಅಮಲು ಹತ್ತಿರುವ ಹಿಂದೂಗಳ ಮತಗಳನ್ನು; ಮತ್ತೊಂದೆಡೆ ಅಭಿವೃದ್ಧಿ ಮಾದರಿಯನ್ನು ಮುಂದಿಟ್ಟುಕೊಂಡು ಮಧ್ಯಮವರ್ಗದ ಮತಗಳನ್ನು. ಇದಲ್ಲದೆ ಮಾಧ್ಯಮಗಳು ಸೃಷ್ಟಿಸುವ ಭ್ರಮಾಲೋಕದಲ್ಲಿ, ಜಾಲತಾಣಗಳಲ್ಲಿ ವಿಹರಿಸುತ್ತ ತಮಗೆ Modiಅನುಕೂಲವೆನಿಸುವ ಸತ್ಯಗಳನ್ನು ಅನುಮೋದಿಸುವ ವಿದ್ಯಾವಂತರೆನಿಸಿಕೊಂಡ ಅಕ್ಷರಸ್ಥರ ಮತಗಳನ್ನು ಸೆಳೆಯಲು ಇತ್ತೀಚಿನ ದಿನಗಳಲ್ಲಿ ಮೋದಿಯನ್ನು ‘ಸೆಕ್ಯುಲರ್’, ‘ಭ್ರಷ್ಟಾಚಾರ ವಿರೋಧಿ’ ಎಂದು ಬಿಂಬಿಸುವ ಪ್ರಯತ್ನಗಳು ನಡೆಯುತ್ತಿವೆ.

ಆದರೆ ಕನಿಷ್ಠ ವಿವೇಚನಾಶಕ್ತಿಯಿಂದ ನೈಜ ಸ್ಥಿತಿಯನ್ನು ವಸ್ತುನಿಷ್ಠವಾಗಿ ನೋಡುವ ಮನಸ್ಸಿದ್ದರೆ ಸಾಕು ಮತಾಂಧತೆಯಿಂದ ಜನಮಾನಸವನ್ನು ವಿಷಮಯವಾಗಿಸುವ, ದೇಶವನ್ನು ಧರ್ಮದ ಹೆಸರಿನಲ್ಲಿ ಒಡೆಯುವ ‘ದೇಶಭಕ್ತ’ ಭಾಜಪವನ್ನು; ‘ಭಾರತೀಯ ಸಂಸ್ಕೃತಿ’ ಎಂಬ ಮಾಯಾಜಿಂಕೆಯನ್ನು ತೋರಿ ಬಹುಸಂಸ್ಕೃತಿಯನ್ನು ಅಳಿಸಿ ಶ್ರೇಣೀಕೃತ ಜಾತಿವ್ಯವಸ್ಥೆಯನ್ನು ಮರುಸ್ಥಾಪಿಸಬಯಸುವಂತ ರಾಷ್ಟ್ರೀಯ ಸ್ವಯಂಸೇವಕ ಸಂಘ, ವಿಶ್ವಹಿಂದೂಪರಿಷತ್‌ಗಳನ್ನು; ಮತ್ತು ಭಾರತದ ಸಂವಿಧಾನ ಕಾನೂನುಗಳ ಬಗ್ಗೆ ಯಾವುದೇ ಗೌರವವಿರದೆ ಉಳ್ಳವರ ಸೇವೆಗಾಗಿ ಇಡೀ ವ್ಯವಸ್ಥೆಯನ್ನು ಬಗ್ಗಿಸಲು ಹಿಂಜರಿಯದ ಭಾಜಪದ ಉತ್ಸವಮೂರ್ತಿ ಮೋದಿಯನ್ನು ಖಡಾಖಂಡಿತವಾಗಿ ನಿರಾಕರಿಸಲೇಬೇಕಾದ ಅನಿವಾರ್ಯತೆ ಏಕಿದೆ ಎಂದು ತಿಳಿಯುತ್ತದೆ.

ಗುಜರಾತ್ ಅಭಿವೃದ್ಧಿ ಎಂಬ ಭ್ರಮೆ

ಒಂದು ದೇಶ/ ರಾಜ್ಯದ ಒಟ್ಟಾರೆ ಆದಾಯ ಅಥವಾ ಸರಾಸರಿ ತಲಾವಾರು ಆದಾಯ ಹೆಚ್ಚಾಗುವುದನ್ನು Poverty_4C_--621x414ಆರ್ಥಿಕ ಬೆಳವಣಿಗೆ (economic growth) ಎಂದೂ, ಹಾಗೆ ಹೆಚ್ಚಾಗುವ ಆದಾಯ ಹೆಚ್ಚು ಸಮಾನವಾಗಿ ಹಂಚಿಕೆಯಾಗಿ ಉಳ್ಳವರ ಮತ್ತು ಬಡವರ ನಡುವಣ ಅಂತರವನ್ನು ಕಡಿಮೆಮಾಡಿದರೆ ಅದನ್ನು ಆರ್ಥಿಕ ಅಭಿವೃದ್ಧಿ (economic development) ಎಂದೂ ಗುರುತಿಸಬಹುದು. ಹೀಗೆ ಸಮಾನವಾಗಿ ಹಂಚಿಕೆಯಾದ ಆದಾಯವು ಜನರ ಜೀವನ ಮಟ್ಟವನ್ನು ಉತ್ತಮಗೊಳಿಸುವುದನ್ನು ಮಾನವ ಅಭಿವೃದ್ಧಿ ಸೂಚ್ಯಂಕ (HDI) ಸೂಚಿಸುತ್ತದೆ. ಮೋದಿ ಆಳ್ವಿಕೆಯಲ್ಲಿ ‘HDI’ ನ ಬಹುತೇಕ ಎಲ್ಲ ಸೂಚಕಗಳೂ ಹಿಮ್ಮುಖ ಚಲನೆಯನ್ನೇ ತೋರುತ್ತವೆ. ಮೋದಿ ಮತ್ತು ಭಾಜಪ ಹೇಳಿಕೊಳ್ಳುವಂತೆ ಗುಜರಾತ್ ಹೊಳೆಯುತ್ತಲೂ ಇಲ್ಲ, ಅಭಿವೃದ್ಧಿಯ ಮುಂಚೂಣಿಯಲ್ಲೂ ಇಲ್ಲ.

  • ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಗುಜರಾತಿಗೆ ದೇಶದಲ್ಲಿ 11 ನೇ ಸ್ಥಾನ.
  • 2004-10 ರ ನಡುವಣ ಶೇಕಡವಾರು ಬಡತನ ನಿವಾರಣೆಯಲ್ಲಿ ಗುಜರಾತ್ ಕೊನೆಯ ಸ್ಥಾನದಲ್ಲಿದೆ. (8.6%).
  • 1990-95 ರ ನಡುವೆ ರಾಜ್ಯದ ಒಟ್ಟಾರೆ ವೆಚ್ಚದ 4.25 %ರಷ್ಟಿದ್ದ ಸಾರ್ವಜನಿಕ ಆರೋಗ್ಯದ ಮೇಲಣ ಖರ್ಚು 2005-10 ರ ನಡುವೆ ಕೇವಲ 0.77 %ಕ್ಕೆ ಇಳಿದಿದೆ.
  • ಕಳೆದ ಹತ್ತು ವರ್ಷಗಳಲ್ಲಿ ರೈತರಿಗೆ ವಿದ್ಯುತ್ ಲಭ್ಯತೆ ದಿನಂಪ್ರತಿ 10 ರಿಂದ 6 ಗಂಟೆಗಳಿಗೆ ಇಳಿದಿದೆ.
  • ಕಳೆದ ಹನ್ನೆರಡು ವರ್ಷಗಳಲ್ಲಿ ಔದ್ಯೋಗಿಕ ಬೆಳವಣಿಗೆ ದರ ಶೂನ್ಯದಲ್ಲಿ ನಿಂತಿದೆ.
  • ಗುಜರಾತಿನಲ್ಲಿ ಕೇವಲ 16.7 % ಜನರಿಗೆ ಸಾರ್ವಜನಿಕ ಕೊಳಾಯಿಯ ಮೂಲಕ ಸಂಸ್ಕರಿಸಿದ ನೀರು ಪೂರೈಸಲಾಗುತ್ತಿದೆ.
  • ಇಲ್ಲಿನ 47% ಕ್ಕೂ ಹೆಚ್ಚಿನ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ (ಇದು ಆಫ್ರಿಕಾದ ಅತೀ ಬಡ ರಾಷ್ಟ್ರಗಳ ಸರಾಸರಿಯನ್ನು ಮೀರಿಸಿದೆ).
  • ಶಿಶುಮರಣ ಅನುಪಾತ ಕಡಿತಗೊಳಿಸುವಲ್ಲಿ ಗುಜರಾತ್ ಹನ್ನೊಂದನೆ ಸ್ಥಾನದಲ್ಲಿದೆ.
  • ಇಲ್ಲಿ ಕೇವಲ 45% ರಷ್ಟು ಮಕ್ಕಳಿಗೆ ಜೀವರಕ್ಷಕ ಲಸಿಕೆಗಳನ್ನು ಕೊಡಲಾಗುತ್ತದೆ. ಗುಜರಾತಿಗೆ ಇದರಲ್ಲಿ 19 ನೇ ಸ್ಥಾನ.
  • ದೇಶದಲ್ಲಿ ನಾಲ್ಕನೇ ಅತಿಹೆಚ್ಚು ಬಾಲ್ಯವಿವಾಹಗಳು ನಡೆಯುವುದು ಗುಜರಾತಿನಲ್ಲಿ.
  • ಗುಜರಾತಿನಲ್ಲಿ ಶಾಲೆ ಬಿಡುವ ಮಕ್ಕಳ ಅನುಪಾತ 59%. ಮಕ್ಕಳು ಶಾಲೆ ಬಿಡುವುದನ್ನು ತಡೆಯುವ ನಿಟ್ಟಿನಲ್ಲಿ ಗುಜರಾತ್ 18 ನೇ ಸ್ಥಾನದಲ್ಲಿದೆ.
  • ಹೆಣ್ಣು-ಗಂಡು ಮಕ್ಕಳ ಅನುಪಾತದ ಅನುಸಾರ ಗುಜರಾತ್‌ಗೆ 24 ನೇ ಸ್ಥಾನ.
  • ಸಾಕ್ಷರತೆಯ ಸಾಧನೆಯಲ್ಲಿ ಗುಜರಾತ್ 12 ನೇ ಸ್ಥಾನದಲ್ಲಿದೆ.
  • ಯೋಜಿತ ಕಾರ್ಯಕ್ರಮಗಳ (ವಿಶೇಷವಾಗಿ ಅಭಿವೃದ್ಧಿ-ಬಡತನ ನಿರ್ಮೂಲನ ಕಾರ್ಯಕ್ರಮಗಳು) ಅನುಷ್ಟಾನದ ಅನುಪಾತ 73% ರಿಂದ (2003) 13% ಕ್ಕೆ (2011) ಕುಸಿದಿದೆ.
  • ಗುಜರಾತಿನ 28.2% ರಷ್ಟು ಪುರುಷರು ಮತ್ತು 32,3 %ರಷ್ಟು ಮಹಿಳೆಯರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ.
  • ಮೂಲಸೌಕರ್ಯದ ಅಭಿವೃದ್ಧಿಯಲ್ಲಿ ಮೋದಿಯ ಗುಜರಾತ್ ದೇಶಕ್ಕೆ ಮಾದರಿ ಉತ್ತರಾಖಂಡದ ಪ್ರವಾಹಕ್ಕೆ ಸಿಲುಕಿದ್ದ 15,000 ಜನರನ್ನು ಮೋದಿ ಒಂದೇ ದಿನದಲ್ಲಿ ರಕ್ಷಿಸಿದರು ಎಂಬೆಲ್ಲ ಸುಳ್ಳುಗಳು ಸರಾಗವಾಗಿ ಹರಿದಾಡುತ್ತಿರುವಾಗಲೇ ರಾತ್ರಿಯಿಡೀ ಸುರಿದ ಮಳೆಗೆ ಅಹiದಾಬಾದ್ ನಗರ ನೀರಿನಲ್ಲಿ ಮುಳುಗಿದ್ದ ಚಿತ್ರಗಳು (ಸೆಪ್ಟಂಬರ್ 25) ಜಾಲತಾಣದಲ್ಲಿ ಹರಿದಾಡುತ್ತಿತ್ತು.

ಭೂಸುಧಾರಣೆಯಲ್ಲ, ಇದು ಭೂ ಕಬಳಿಕೆ

ಗುಜರಾತ್ ಅಭಿವೃದ್ಧಿ ಪ್ರಾಧಿಕಾರ (GIDC) ೮೦ರ ದಶಕದಲ್ಲಿ ಮುಖ್ಯವಾಗಿ ಎರಡು ಉದ್ದೇಶಗಳಿಗಾಗಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುತ್ತಿತ್ತು. (1) ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸ್ಥಾಪನೆ ಮತ್ತು ಅಭಿವೃದ್ಧಿಗಾಗಿ ಭೂಮಿ ಒದಗಿಸುವುದು. (2) ಹೆಚ್ಚುವರಿ ಭೂಮಿಯನ್ನು ಭೂರಹಿತರಿಗೆ ವಿತರಿಸುವುದು. GIDC ವತಿಯಿಂದ ಪ್ರಾರಂಭವಾದ 262 ಕೈಗಾರಿಕಾ ಪ್ರದೇಶಗಳಲ್ಲಿ ಈಗ ಚಾಲ್ತಿಯಲ್ಲಿರುವುದು 182. ಅದೂ ಸಹ ದೊಡ್ಡ ಕೈಗಾರಿಕೆಗಳ/ಉದ್ದಿಮೆದಾರರ ಕೈ ಕೆಳಗೆ. ಸಾರ್ವಜನಿಕ ಉದ್ದೇಶಗಳಿಗಾಗಿ ಎಂದು ವಶಪಡಿಸಿಕೊಂಡ ರೈತರ ಭೂಮಿಯನ್ನು ಈಗ ಅಕ್ರಮವಾಗಿ ಖಾಸಗಿ ಉದ್ದಿಮೆದಾರರಿಗೆ ಮಾರುಕಟ್ಟೆದರದಲ್ಲಿ ಮಾರಿ ಲಾಭಗಳಿಸುತ್ತಿರುವುದು. ಅಂದು ಭೂಮಿ ಕಳೆದುಕೊಂಡ ರೈತರಿಗೆ ಎಸಗುತ್ತಿರುವ ದ್ರೋಹ.

ಗೋಮಾಳದ ಭೂಮಿಯನ್ನು ವಶಪಡಿಸಿಕೊಳ್ಳುವಾಗಲೂ ಮೋದಿ ಸರ್ಕಾರ ಎಲ್ಲ ನಿಯಮಗಳನ್ನು ಗಾಳಿಗೆ ತೂರಿದೆ. ಗೋಮಾಳಗಳು ಗ್ರಾಮಸಭೆ/ಪಂಚಾಯ್ತಿಗಳ ಒಡೆತನದಲ್ಲಿದ್ದು ಅವುಗಳನ್ನು ಅತೀ ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಮಾರುಕಟ್ಟೆಯ ದರಕ್ಕಿಂತ 30% ಹೆಚ್ಚಿನ ಬೆಲೆ ಕೊಟ್ಟು ಸರ್ಕಾರ ವಶಪಡಿಸಿಕೊಳ್ಳಬಹುದು. ಗುಜರಾತಿನಲ್ಲಿ ಹಳ್ಳಿಗಳ ಭೂರಹಿತರ (ಸಾಮಾನ್ಯವಾಗಿ ದಲಿತರು ಮತ್ತು ಮುಸ್ಲಿಂರು) ಆರ್ಥಿಕತೆ ಬಹುತೇಕ ಈ ಗೋಮಾಳಗಳನ್ನು ಅವಲಂಭಿಸಿದೆ. ಆದಾಗ್ಯೂ ಗ್ರಾಮಸಭೆ/ಪಂಚಾಯಿತಿಯ ಅನುಮತಿ ಪಡೆಯದೆಯೆ ಸಾಕಷ್ಟು ಗೋಮಾಳದ ಜಾಗವನ್ನು ಖಾಸಗಿ ಕೈಗಾರಿಕೆಗಳಿಗೆ ನೀಡಲು/SEZ ಗಳಿಗಾಗಿ ವಶಪಡಿಸಿಕೊಳ್ಳಲಾಗಿದೆ. Reliance-Gujarathಹಾಗೆ ವಶಪಡಿಸಿಕೊಳ್ಳುವಾಗ ಅವುಗಳ ಮಾರುಕಟ್ಟೆ ದರವನ್ನು ಬಹಳ ಕಡಿಮೆಯಾಗಿ ನಮೂದಿಸಲಾಗಿದೆ.

ಭಾವ್‌ನಗರದ ಮಹುವ ಕಡಲತೀರದ ಭೂಮಿಯನ್ನು ಕೃಷಿಯೋಗ್ಯವಲ್ಲದ ಜೌಳುಭೂಮಿಯೆಂದು ವರ್ಗೀಕರಿಸಿ ನಿರ್ಮಾ ವಿಶೇಷ ಆರ್ಥಿಕ ವಲಯದ ಸ್ಥಾಪನೆಗಾಗಿ ಮಂಜೂರು ಮಾಡಲಾಗಿದೆ. ಆದರೆ ಇದು ಗುಜರಾತಿನ ಅತ್ಯಂತ ಫಲವತ್ತಾದ ಭೂಪ್ರದೇಶಗಳಲ್ಲೊಂದು. ಮಹಾರಾಷ್ಟ್ರದ ನಾಸಿಕ್‌ನ ನಂತರ ಭಾರತದ ಎರಡನೇ ಅತಿ ಹೆಚ್ಚು ಈರುಳ್ಳಿ ಬೆಳೆಯುವ ಪ್ರದೇಶ ಈ ಮಹುವ. ಗುಜರಾತಿನ ಬಹುತೇಕ ಕಡಲತೀರ ಸುಣ್ಣದ ಕಲ್ಲಿನಿಂದ ಆವೃತ್ತವಾಗಿದ್ದು ಇದು ಸಮುದ್ರದ ನೀರಿನಿಂದ ಉಪ್ಪನ್ನು ಹೀರಿ ತೀರಕ್ಕೆ ಹೊಂದಿಕೊಂಡ ಸುಮಾರು 50 ಕಿ.ಮೀ. ಪ್ರದೇಶಕ್ಕೆ ಶುದ್ಧ ಸಿಹಿ ನೀರನ್ನು ಬಿಡುಗಡೆ ಮಾಡುತ್ತದೆ. ಇದರಿಂದ ತೀರ ಪ್ರದೇಶದ ರೈತರು ವರ್ಷದಲ್ಲಿ ಮೂರು ಬೆಳೆ ತೆಗೆಯುವಷ್ಟು ಈ ಭೂಮಿ ಫಲವತ್ತಾಗಿದೆ. ನಿರ್ಮಾದ ಲೆಕ್ಕಾಚಾರವೇ ಬೇರೆ. ಇಲ್ಲಿ ಸಿಮೆಂಟ್ ಕಾರ್ಖಾನೆ ಸ್ಥಾಪಿಸಿದರೆ ಈ ಸುಣ್ಣದ ಕಲ್ಲುಗಳನ್ನು ಒಡೆದು ಸಿಮೆಂಟ್ ತಯಾರಿಸಿ ಇಲ್ಲೇ ಅಭಿವೃದ್ಧಿ ಪಡಿಸುವ ಬಂದರಿನ ಮೂಲಕ ಸಾಗಿಸಬಹುದಾದ್ದರಿಂದ ಸಾಗಾಣಿಕಾ ವೆಚ್ಚವೂ ಉಳಿಯಿತು. ಅಲ್ಲಿಗೆ ಫಲವತ್ತಾದ ಈ ಭೂಮಿ ನಿಜಕ್ಕೂ ಜೌಳು ಭೂಮಿಯೇ ಆಗುವುದಲ್ಲ! ಈ SEZ ಸ್ಥಾಪಿಸಿದರೆ ತೀರ ಪ್ರದೇಶದ ರೈತರು ಮಾತ್ರವಲ್ಲದೆ ಮೀನುಗಾರರು ಸೇರಿದಂತೆ ಸುಮಾರು 15,000 ಜನರ ಆರ್ಥಿಕತೆಗೆ ಕುತ್ತು ಬರುತ್ತದೆ. ಆದರೆ ಮೋದಿ ಸರ್ಕಾರ ನಿರ್ಮಾಕ್ಕೆ ಜಮೀನು ಮಂಜೂರು ಮಾಡಲು ನೀಡಿರುವ ಕಾರಣ ‘ಇದರಿಂದ ಸುಮಾರು 416 ಜನರಿಗೆ ಉದ್ಯೋಗಾವಕಾಶ ದೊರೆಯುವುದು’ ಎಂದು!

ಕಛ್‌ನ ಮುಂದ್ರಾದಲ್ಲಿ ಅದಾನಿ ಸಮೂಹ ಸಂಸ್ಥೆಗೆ ಬಂದರು ಮತ್ತು ವಿಶೇಷ ವ್ಯಾಪಾರ ವಲಯ ಸ್ಥಾಪನೆಗಾಗಿ ಅರಣ್ಯಹಕ್ಕು ಕಾಯ್ದೆ (2008) ಯನ್ನು ಧಿಕ್ಕರಿಸಿ 56 ಮೀನುಗಾರಿಕಾ ಗ್ರಾಮಗಳನ್ನು, 126 ಠರಾವಣೆಗಳನ್ನು ಈಗಾಗಲೇ ಒಕ್ಕಲೆಬ್ಬಿಸಲಾಗಿದೆ. ಇದು ಮೀನುಗಾರರ ಸಮುದ್ರದ ಮೇಲಣ ಸಹಜ ಹಕ್ಕನ್ನು ಕಸಿದುಕೊಳ್ಳುವುದು ಮಾತ್ರವಲ್ಲದೆ ಅರಣ್ಯ ಉತ್ಪನ್ನಗಳ ಅವಲಂಬಿತರ, ದನಗಾಹಿಗಳ ಹಾಗೂ ತೀರ ಪ್ರದೇಶದ ರೈತರ ಜೀವನಾಧಾರವನ್ನೇ ಕಸಿಯುತ್ತವೆ. ಒಟ್ಟಾರೆಯಾಗಿ ಮೋದಿಯ ಈ ಮಾದರಿ ಗ್ರಾಮೀಣ ಆರ್ಥಿಕತೆಯ ಮೇಲೆ ಗದಾಪ್ರಹಾರ.

ಅದಾನಿ ಸಂಸ್ಥೆಗೆ ಈಗಾಗಲೇ ಪ್ರತಿ ಚ.ಮೀ.ಗೆ ರೂ.1 – ರೂ.32 ರಂತೆ (ಮಾರುಕಟ್ಟೆ ಬೆಲೆ ರೂ.1500) 5 ಕೋಟಿ ಚ.ಮೀ. ಕಡಲ ತೀರದ ಭೂಮಿಯನ್ನು ಮಂಜೂರು ಮಾಡಲಾಗಿದೆ. ಬಂದರು ಅಭಿವೃದ್ಧಿ ಮತ್ತು ಕೈಗಾರಿಕಾ ಉದ್ದೇಶಗಳಿಗಾಗಿ ಪಡೆದ ಈ ಭೂಮಿಯ ಸಾಕಷ್ಟು ಭಾಗವನ್ನು ಅದಾನಿ ಸಂಸ್ಥೆ ಬೇರೆ ಕಾರ್ಪೊರೆಟ್ ಸಂಸ್ಥೆಗಳಿಗೆ ಮಾರಿದೆ/ಭೋಗ್ಯಕ್ಕೆ ನೀಡಿದೆ. ಇದು ಸರ್ಕಾರದೊಂದಿಗಿನ ಖರೀದಿ ಒಪ್ಪಂದದ ಸ್ಪಷ್ಟ ಉಲ್ಲಂಘನೆಯಾಗಿದೆ.

ಹಾಜೀರಾ ಪ್ರದೇಶದಲ್ಲಿ ಪ್ರತಿ ಚ.ಮೀ.ಗೆ ಜಿಲ್ಲಾ ಭೂಮೌಲ್ಯಮಾಪನ ಸಮಿತಿ (DLVC) ರೂ.1000 – ರೂ.1050 ಎಂದೂ ರಾಜ್ಯ ಭೂಮೌಲ್ಯಮಾಪನ ಸಮಿತಿ (SLVC) ರೂ.2020 ಎಂದೂ ಬೆಲೆ ನಿಗದಿ ಮಾಡಿದ್ದರೂ L&T ಸಂಸ್ಥೆಗೆ ರೂ.700/ ಚ.ಮೀ.ಯಂತೆ 8.53 ಲಕ್ಷ ಚದುರ ಕಿಮೀ ಭೂಮಿಯನ್ನು ಹಸ್ತಾಂತರಿಸುವ ನಿರ್ಧಾರವನ್ನು ಮೋದಿಯ ಸಂಪುಟ (2008) ಅನುಮೋದಿಸಿತು. ಇದರಿಂದ ಉತ್ತೇಜನಗೊಂಡು 2009 ರಲ್ಲಿ ಯೋಜನೆಯ ವಿಸ್ತರಣೆಗಾಗಿ ಇನ್ನೂ 12.14 ಲಕ್ಷ ಚ.ಮೀ. ಭೂಮಿಗಾಗಿ L&T ಸಂಸ್ಥೆ ಕೋರಿಕೆ ಸಲ್ಲಿಸಿತು. ಈ ಬಾರಿ DVLC ನಿಗದಿಪಡಿಸಿದ ಬೆಲೆ ರೂ.2400-ರೂ.2800. ಆಗಲೂ ಮೋದಿಯ ಸಂಪುಟ ಹಳೆಯ ದರದಲ್ಲೇ 5.8 ಲಕ್ಷ ಚ.ಮೀ. ಭೂಮಿಯನ್ನು L&T ಸಂಸ್ಥೆಗೆ ನೀಡಿತು. ಇದರಿಂದ ಸರ್ಕಾರಕ್ಕಾದ ನಷ್ಟ ರೂ.128.71 ಕೋಟಿ. ಇದು ಇಲ್ಲಿಗೇ ನಿಲ್ಲದೆ ಹಾಜಿರಾದಲ್ಲಿ ಅಕ್ರಮವಾಗಿ ಸರ್ಕಾರಿ ಭೂಮಿಯನ್ನು ಆವರಿಸಿಕೊಂಡಿದ್ದ ಎಸ್ಸಾರ್ ಸ್ಟೀಲ್ ಅದನ್ನು ಸಕ್ರಮಗೊಳಿಸಿಕೊಳ್ಳಲು ಅರ್ಜಿ ಹಾಕಿದಾಗ ಇದೇ ರಿಯಾಯಿತಿ ದರದಲ್ಲಿ ಅದನ್ನು ಸಕ್ರಮಗೊಳಿಸಿ ಸರ್ಕಾರ ರೂ.238.5 ಕೋಟಿ ನಷ್ಟಮಾಡಿಕೊಂಡಿತು.

ಮೋದಿ ಸರ್ಕಾರದ ವಿವೇಚನಾರಹಿತ (ಅಥವ ಉದ್ದೇಶಪೂರ್ವಕ) ಯೋಜನೆಗಳಿಗೆ ಮತ್ತೊಂದು ನಿದರ್ಶನ ವಾಗ್ರಾ ಮತ್ತು ಭರೂಛ್‌ನ ರೈತರ ಪರಿಸ್ಥಿತಿ. ಈ ಭಾಗದ ರೈತರಿಗೆ ನೀರಾವರಿ ಸೌಲಭ್ಯ ಒದಗಿಸಲೆಂದೇ ಸರ್ದಾರ್ ಸರೋವರ್ ಅಣೆಕಟ್ಟು ನಿರ್ಮಿಸಲಾಯಿತಾದರೂ ಈಗ ಇದೇ ಭಾಗದ ನರ್ಮದಾ ಅಚ್ಚುಕಟ್ಟು ಪ್ರದೇಶದ 14,977 ಹೆಕ್ಟೇರ್ ಭೂಮಿಯನ್ನು ಪೆಟ್ರೋಲಿಯಂ ಮತ್ತು ರಾಸಾಯನಿಕಗಳ ವಿಶೇಷ ಹೂಡಿಕೆ ವಲಯ ಸ್ಥಾಪನೆಗೆಂದು ವಶಪಡಿಸಿಕೊಳ್ಳಲಾಗಿದೆ. ನರ್ಮದಾ ನದಿಯ ಬಹುತೇಕ ನಾಲೆಗಳ ನೀರು ಜನರ ದಾಹವನ್ನು, ರೈತರ ಬವಣೆಯನ್ನು ತೀರಿಸುವ ಬದಲು ಬೃಹತ್ ಕೈಗಾರಿಕೆಗಳ ಉದ್ದೇಶಕ್ಕೆ ಬಳಕೆಯಾಗುತ್ತಿದೆ. ಉದಾ: ವಡೋದರ ಬಳಿ ಸ್ಥಾಪಿಸಲಾಗಿರುವ ರಾಸಾಯನಿಕ ಕೈಗಾರಿಕೆಗಳು ಶ್ರಮವೇ ಇಲ್ಲದೆ ನರ್ಮದಾ ನಾಲೆಯ ನೀರನ್ನು ಬಳಸಿಕೊಂಡು ನಗರದ ಸಂಸ್ಕರಿತ ಕೊಳಚೆ ನೀರನ್ನು ಒಯ್ಯುವ ನಾಲೆಗೆ ತಮ್ಮ ಸಂಸ್ಕರಿಸದ ತ್ಯಾಜ್ಯ ನೀರನ್ನು ಸುರಿಯುತ್ತದೆ. ಇದು ಮಾಹಿ ನದಿಯನ್ನು ಸೇರುತ್ತದೆ. ಗುಜರಾತ್ ಮಾಲಿನ್ಯ ನಿಯಂತ್ರಣ ಮಂಡಳಿಯ ಯಾವ ಕಾನೂನೂ ಇವರನ್ನು ಅಲುಗಿಸಲಾರದು. ದೇಶದ ಅತಿ ಹೆಚ್ಚು ಮಲಿನಗೊಂಡ ೮೮ ಪ್ರದೇಶಗಳ ಪೈಕಿ 8 ಗುಜರಾತಿಗೆ ಸೇರಿರುವುದು ಸಹಜವೇ ಆಗಿದೆ. ಗುಜರಾತಿನ ವಾಪಿ ಮತ್ತು ಅಂಕಲೇಶ್ವರ ನಗರಗಳು ಈ ಪಟ್ಟಿಯಲ್ಲಿ ಮೊದಲೆರಡು ಸ್ಥಾನ ಪಡೆದುಕೊಂಡಿವೆ.

ಸರ್ಕಾರಿ ಉದ್ದಿಮೆಗಳ ಅವನತಿ ಮತ್ತು ಖಾಸಗಿ ಉದ್ದಿಮೆದಾರರ ಪರಿಚಾರಿಕೆ

ಮೋದಿ ಮತ್ತವರ ಪ್ರಚಾರಕರು ಗುಜರಾತಿನಲ್ಲಿ ಸರ್ಕಾರಿ ಉದ್ದಿಮೆಗಳಿಗೆ ವೃತ್ತಿಪರತೆ ತಂದಿರುವುದಾಗಿ ಸಾರುತ್ತಿದ್ದರೂ ಸಿಎಜಿಯ ಇತ್ತೀಚಿನ ಮೂರು ವರದಿಗಳು ಬೇರೆಯದೇ ಕಥೆ ಹೇಳುತ್ತವೆ. ಇದರ ಪ್ರಕಾರ ಗುಜರಾತಿನ ಸರ್ಕಾರಿ ಉದ್ದಿಮೆಗಳು ಅನುಭವಿಸಿದ ರೂ.4052.37 ಕೋಟಿ ನಷ್ಟವನ್ನು ಉತ್ತಮ ಆಡಳಿತ ನಿರ್ವಹಣೆ ಮತ್ತು ನಿಯಂತ್ರಿಸಬಹುದಾದ ನಷ್ಟಗಳನ್ನು ತಡೆಯುವುದರಿಂದ ತಪ್ಪಿಸಬಹುದಾಗಿತ್ತು. ಇಂತಹ ನಷ್ಟಗಳು ವರ್ಷದಿಂದ ವರ್ಷಕ್ಕೆ ಏರುತ್ತಿರುವುದನ್ನು ಈ ವರದಿಗಳು ತೋರುತ್ತವೆ. 2006-11 ರವರೆಗಿನ ಗುಜರಾತ್ ಸ್ಟೇಟ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿ., (GSPCL) ಒಟ್ಟಾರೆ ಆದಾಯ 19245.39 ಕೋಟಿ. ಅದರಲ್ಲಿ ತನ್ನ ಸ್ವಂತ ಉತ್ಪಾದನೆಯ ಮಾರಾಟದಿಂದ ಬಂದ ಆದಾಯ ಕೇವಲ ರೂ.1563.63 ಕೋಟಿ (ಶೇ.8) ಮಾತ್ರ. ಉಳಿದ ಆದಾಯ ಇತರ ಖಾಸಗಿ ಉತ್ಪಾದಕರ ಉತ್ಪನ್ನಗಳ ಮಾರಾಟದಿಂದ ಬಂದದ್ದು.

ಮೋದಿ ತಾನು ಉದ್ಯಮಸ್ನೇಹಿ ಪರಿಸರ ನಿರ್ಮಿಸಿ ಗುಜರಾತನ್ನು ಅಭಿವೃದ್ಧಿ ಪರವಾಗಿಸಿರುವುದಾಗಿ ಹೇಳಿಕೊಳ್ಳುತ್ತಿದ್ದರೂ ಸಿಎಜಿ ವರದಿಗಳು ambani-modiಮೋದಿ ಸಾರ್ವಜನಿಕರ ಹಾಗೂ ಸರ್ಕಾರ ಉದ್ದಿಮೆಗಳ ಬೆಲೆ ತೆತ್ತು ಖಾಸಗಿ ಉದ್ದಿಮೆದಾರರ ಪರಿಚಾರಿಕೆ ಮಾಡುತ್ತಿರುವುದನ್ನು ನಿಚ್ಚಳವಾಗಿ ತೋರಿಸುತ್ತದೆ. GSPCL ಹಾಗೂ ರಿಲೆಯನ್ಸ್ ಇಂಡಸ್ಟ್ರೀಸ್ ಲಿ., ನಡುವಣ ಒಪ್ಪಂದದ ಪ್ರಕಾರ (2007) ರೂ.52.27 ಕೋಟಿ ಸಾಗಾಣಿಕಾ ವೆಚ್ಚವನ್ನು ಸಂಗ್ರಹಿಸಬೇಕಿತ್ತು. ಮತ್ತೊಂದೆಡೆ ಹಲವು ಖಾಸಗಿ ಸಂಸ್ಥೆಗಳು ಒಪ್ಪಿಕೊಂಡ ಸರಕನ್ನು ಕೊಳ್ಳದ ಕಾರಣಕ್ಕೆ ರೂ.502.19 ಕೋಟಿಯನ್ನು ಸಂಗ್ರಹಿಸಬೇಕಿತ್ತು. ಆದರೆ ಅದರ ಮೇಲಿನ ದಂಡವನ್ನೂ ಸೇರಿಸಿ ಇದನ್ನು ಮಾಫಿ ಮಾಡಲಾಗಿದೆ. (ಮುಖ್ಯ ಫಲಾನುಭವಿಗಳು ಎಸ್ಸಾರ್ ಪವರ್ ಲಿ., ಮತ್ತು ಗುಜರಾತ್ ಪಗುನಾನ್ ಎನರ್ಜಿ ಕಾರ್ಪೊರೇಷನ್ ಲಿ.,) ಇದೆಲ್ಲವನ್ನೂ ಬಿಟ್ಟುಕೊಟ್ಟು ನಷ್ಟಮಾಡಿಕೊಂಡಿದ್ದೇಕೆ ಎಂಬ ಸಿಎಜಿ ಪ್ರಶ್ನೆಗೆ ಸಮರ್ಪಕ ಉತ್ತರವೇ ಇಲ್ಲ. ಅನಿಲ ವಹಿವಾಟಿನಲ್ಲಿ (2006-09) ಕೊಂಡ ಬೆಲೆಗಿಂತ ಕಡಿಮೆ ಬೆಲೆಗೆ ಅದಾನಿ ಎನರ್ಜಿಸ್‌ಗೆ ಅನಿಲ ಮಾರಿ ರೂ.20.54 ಕೋಟಿ ನಷ್ಟ ಅನುಭವಿಸಿದ್ದು ದಾಖಲಾಗಿದೆ. ಒಪ್ಪಂದ ನಿರ್ವಹಣೆಯಲ್ಲಿನ ತಪ್ಪಿನಿಂದ ಎಸ್ಸಾರ್ ಆಯಿಲ್ ಲಿ.,ಗೆ ಆದ ಲಾಭ ಅಥವಾ GSPCL ಗೆ ಆದ ನಷ್ಟ 106.71 ಕೋಟಿ. ಈ ರೀತಿ ಸರ್ಕಾರಿ ಉದ್ದಿಮೆಗಳ ಉತ್ಪಾದನಾ ಚಟುವಟಿಕೆಗಳನ್ನು ಕುಗ್ಗಿಸುವುದು ಹೀಗೆ ಕಣ್ಣು ಮುಚ್ಚಿಕೊಂಡು ನಷ್ಟ ಹೆಚ್ಚಾಗುವಂತೆ ನೋಡಿಕೊಳ್ಳುವುದು, ಮುಂದೊಂದು ದಿನ ನಿರಂತರ ನಷ್ಟದ ನೆಪ ಒಡ್ಡಿ ಇಂತಹ ಉದ್ದಿಮೆಗಳನ್ನು ಖಾಸಗೀಕರಣಕ್ಕೆ ತೆರೆದಿಡುವುದು ಇವೆಲ್ಲ ಕಣ್ಣಮುಂದಿನ ತೆರೆದ ರಹಸ್ಯಗಳು.

ಮೋದಿ ಸರ್ಕಾರದ ಇಷ್ಟೆಲ್ಲ ಹಗರಣಗಳನ್ನು ಮಾಧ್ಯಮಗಳು ಜಾಣಕುರುಡಿನಿಂದ ನಿರ್ಲಕ್ಷಿಸುತ್ತ ಮೋದಿ ಕುರಿತಾದ ಕ್ಷುಲ್ಲಕ ವಿಷಯಗಳನ್ನು ದೊಡ್ಡ ವಿಷಯವೆಂಬಂತೆ ಬಿಂಬಿಸುತ್ತ ಆತ ನಿರಂತರ ಪ್ರಚಾರದಲ್ಲಿರುವಂತೆ ನೋಡಿಕೊಳ್ಳುತ್ತಿವೆ. ಈ ರೀತಿ ಮಾಧ್ಯಮಗಳ ನೈತಿಕ ಪ್ರಜ್ಞೆಯನ್ನು ಮಂಕಾಗಿಸಿರುವುದು ಮೋದಿ ಸರ್ಕಾರದ ಕಾರ್ಪೋರೇಟ್ ಫಲಾನುಭವಿಗಳ ಹಣ ಮತ್ತು ಸನಾತನಿಗಳ ಮನಸ್ಸು.

“ಸಿಎಜಿ ವರದಿಯಲ್ಲಿನ ಉಲ್ಲೇಖಗಳು ಭ್ರಷ್ಟಾಚಾರವಲ್ಲ ಕೇವಲ ಆಡಳಿತಾತ್ಮಕ ತಪ್ಪುಗಳು. ಅವನ್ನು ಸರಿಪಡಿಸಿಕೊಳ್ಳಲಾಗುವುದು,” ಎಂಬುದು ಮೋದಿ ಸರ್ಕಾರದ ಪ್ರತಿಕ್ರಿಯೆ. ಸಿಎಜಿ ವರದಿಯನ್ನೇ ಆಧರಿಸಿದ 2ಜಿ ಹಗರಣ, ಕಲ್ಲಿದ್ದಲು ಗಣಿ ಹಂಚಿಕೆ ಹಗರಣಗಳಲ್ಲಿನ ಕಾಂಗ್ರೆಸ್ಸಿನ ಭ್ರಷ್ಟಾಚಾರವನ್ನು ಚುನಾವಣಾ ವಿಷಯವನ್ನಾಗಿಸಿಕೊಂಡ ಭಾಜಪ ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ ಇದೇ ಮೋದಿಯನ್ನು ಅನುಮೋದಿಸಬೇಕೆನ್ನುತ್ತದೆ!

ಭ್ರಷ್ಟಾಚಾರ ವಿರೋಧಿ ಮುಖವಾಡ

ಸಿಎಜಿ ವರದಿಯಲ್ಲಿ ಬಯಲಾದ ಭ್ರಷ್ಟಾಚಾರಗಳು ಒತ್ತೊಟ್ಟಿಗಿರಲಿ, ಮೋದಿಯ ಭ್ರಷ್ಟಾಚಾರ ವಿರೋಧಿ ಮುಖವಾಡವನ್ನು ಕಿತ್ತೊಗೆಯಲು ಭ್ರಷ್ಟಾಚಾರ ನಿಯಂತ್ರಣಕ್ಕಾಗಿಯೇ ಇರುವ ಸ್ವಾಯತ್ತ ಸಂಸ್ಥೆ ಲೋಕಾಯುಕ್ತವನ್ನು ಈತ ನಿಯಂತ್ರಿಸಲು ಹೊರಟಿರುವ ರೀತಿಯೇ ಸಾಕು. 2004 ರಿಂದಲೂ ಗುಜರಾತಿನಲ್ಲಿ ಲೋಕಾಯುಕ್ತರ ಹುದ್ದೆ ಖಾಲಿ ಇದೆ. ಲೋಕಾಯುಕ್ತರ ನೇಮಕಾತಿ ವಿಚಾರದಲ್ಲಿ ಸರ್ಕಾರದ ವಿಳಂಬ ಧೋರಣೆಯನ್ನು ವಿರೋಧಿಸಿ ರಾಜ್ಯಪಾಲೆ ಕಮಲಾ ಬಿನಿವಾಲ್ ಸಂಪುಟ Narendra_Modiಮತ್ತು ಮುಖ್ಯಮಂತ್ರಿ ಮೋದಿಯನ್ನು ಕಡೆಗಣಿಸಿ 2011ರಲ್ಲಿ ನಿವೃತ್ತ ನ್ಯಾ.ವಿ.ಆರ್.ಮೆಹ್ತಾರನ್ನು ಈ ಹುದ್ದೆಗೆ ನೇಮಕಮಾಡಿದರು. ಇದನ್ನು ವಿರೋಧಿಸಿ ಮೋದಿ ಸರ್ಕಾರ ಹೈಕೋರ್ಟ್ ಮೆಟ್ಟಿಲೇರಿತು. ಹೈಕೋರ್ಟ್‌ನಲ್ಲಿ ನಂತರ ಸುಪ್ರೀಂ ಕೋರ್ಟ್‌ನಲ್ಲಿಯೂ ಲೋಕಾಯುಕ್ತರ ನೇಮಕಾತಿ ಊರ್ಜಿತವಾಯಿತು (ಖಟ್ಲೆ ಖರ್ಚಿಗಾಗಿ ಮೋದಿ ಸರ್ಕಾರ ವ್ಯಯಿಸಿದ ಸಾರ್ವಜನಿಕರ ಹಣ ರೂ.45 ಕೋಟಿ). ಆದರೆ ನ್ಯಾ.ವಿ.ಆರ್.ಮೆಹ್ತಾ ಆ ಹುದ್ದೆಯ ಘನತೆಯನ್ನು ಕಾಪಾಡಲಾಗದ ಸರ್ಕಾರದಲ್ಲಿ ಲೋಕಾಯುಕ್ತರಾಗಿ ಕಾರ್ಯನಿರ್ವಹಿಸಲು ನಿರಾಕರಿಸಿದರು.

ಇಷ್ಟೆಲ್ಲ ಆದಮೇಲೂ ಮೋದಿ ಮಾಡಿದ್ದು ಬಲಿಷ್ಠ ಲೋಕಾಯುಕ್ತವನ್ನು ಸಹಿಸಲಾಗದ ಭ್ರಷ್ಟ ಸರ್ಕಾರ ಅಥವಾ ಅಹಂ ಪೆಟ್ಟಾದ್ದನ್ನು ಸಹಿಸಲಾಗದ ಸರ್ವಾಧಿಕಾರಿ ಮಾಡುವಂತದ್ದನ್ನೇ. 1986 ರ ಲೋಕಾಯುಕ್ತ ಕಾಯ್ದೆಗೆ ಬದಲಾವಣೆ ತಂದು ಲೋಕಾಯುಕ್ತರ ನೇಮಕಾತಿಯಲ್ಲಿ ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮತ್ತು ರಾಜ್ಯಪಾಲರ ಪಾತ್ರವನ್ನು ಗೌಣವಾಗಿಸಿ ಅದನ್ನು ಮುಖ್ಯಮಂತ್ರಿಯ ಕೆಳಗೆ ತರಲಾಗಿದೆ. ಅಷ್ಟೇ ಅಲ್ಲದೆ ಹೊಸ ಕಾಯ್ದೆಯ ಪ್ರಕಾರ ಸರ್ಕಾರ ಬಯಸಿದಲ್ಲಿ ಯಾವುದೇ ಸರ್ಕಾರಿ ಯಂತ್ರವನ್ನು ಲೋಕಾಯುಕ್ತ ವ್ಯಾಪ್ತಿಯಿಂದ ಹೊರಗಿಡಬಹುದಾಗಿದೆ. ಈ ಕಾಯ್ದೆಗೆ ಸದನದ ಅನುಮೋದನೆ ದೊರೆತರೂ ರಾಜ್ಯಪಾಲರ ಸಹಿಗಾಗಿ ಇನ್ನೂ ಕಾಯುತ್ತಿದೆ. (ಇದೇ ಮೋದಿ ಕೇಂದ್ರದಲ್ಲಿ ತಾನು ಅಣ್ಣಾ ಹಜಾರೆಯ ಲೋಕಪಾಲ ಕಾಯ್ದೆಯನ್ನು ಬೆಂಬಲಿಸುವುದಾಗಿ ಹೇಳುತ್ತಾರೆ.)

ಹಳಿತಪ್ಪಿದ ಆಡಳಿತ

ಭಾಜಪ ಮೋದಿಯನ್ನು ಅತ್ಯುತ್ತಮ ಆಡಳಿತಗಾರ ಎಂದು ಹಾಡಿ ಹೊಗಳುತ್ತಿದೆ. ಆದರೆ 2008-11 ರ ನಡುವೆ ರಾಜ್ಯದ ಹೂಡಿಕೆಗಳ ಮೇಲಣ ಗಳಿಕೆ (ROI) ಕೇವಲ 0.25%. ಸರ್ಕಾರ ಈ ಅವಧಿಯಲ್ಲಿ ಪಾವತಿಸಿದ ಸಾಲದ ಮೇಲಣ ಬಡ್ಡಿ ಸರಾಸರಿ 7.67%ರಷ್ಟು. ಇದು ರಾಜ್ಯದ ಮಧ್ಯಮ ಮತ್ತು ದೀರ್ಘಕಾಲೀನ ಆರ್ಥಿಕತೆಯ ಮೇಲೆ ಋಣಾತ್ಮಕ ಪ್ರಭಾವ ಬೀರುವುದು ನಿಶ್ಚಿತ. ಸರ್ದಾರ್ ಸರೋವರ್ ಯೋಜನೆಯನ್ನು ಒಳಗೊಂಡಂತೆ ಬಹುತೇಕ ಸರ್ಕಾರಿ ಯೋಜನೆಗಳಲ್ಲಿನ ಅತಿಹೆಚ್ಚಿನ ಖರ್ಚು (55%) ಸಾಲದ ಮೇಲಣ ಬಡ್ಡಿಯೇ ಆಗಿರುವುದು ಅತ್ಯಂತ ಆತಂಕಕಾರಿ ವಿಚಾರ. ಒಂದು ಕಡೆ ಶಿಕ್ಷಣ ಆರೋಗ್ಯದಂತಹ ಮೂಲಭೂತ ಸೌಕರ್ಯಗಳಿಗೆ ಸರ್ಕಾರದ ವೆಚ್ಚ ಕಡಿಮೆಯಾಗುತ್ತಿರುವುದು, ಉತ್ಪಾದನಾ ಸಾಮರ್ಥ್ಯ ಕುಗ್ಗುತ್ತಿರುವುದು ಮತ್ತೊಂದೆಡೆ ರಾಜ್ಯದ ಮೇಲಿನ ಸಾಲ, ಬಡ್ಡಿಗಳ ಹೊರೆ ಹೆಚ್ಚಾಗುತ್ತಿರುವುದು ಗುಜರಾತಿನ ಆರ್ಥಿಕತೆ ಅವನತಿಯತ್ತ ಸಾಗುತ್ತಿರುವುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ.

ದಲಿತವಿರೋಧಿ ಧೋರಣೆ

“ನನಗೆ ಇವರು (ದಲಿತರು) ತಮ್ಮ ಕೆಲಸವನ್ನು ಕೇವಲ ಜೀವನೋಪಾಯಕ್ಕಾಗಿ ಮಾಡುತ್ತಿದ್ದಾರೆ ಅನ್ನಿಸುವುದಿಲ್ಲ. ಹಾಗಿದ್ದಲ್ಲಿ ಇವರು ತಲತಲಾಂತರದಿಂದ ಇದೇ ಕೆಲಸಗಳನ್ನು ಮಾಡಿಕೊಂಡಿರುತ್ತಿರಲಿಲ್ಲ… ಯಾವುದೋ ಒಂದು ಗಳಿಗೆಯಲ್ಲಿ ಅವರಿಗೆ ‘ಸಮಾಜದ ಹಾಗೂ ದೇವರ ಸಂತೋಷಕ್ಕಾಗಿ ದುಡಿಯುವುದು ತಮ್ಮ ಕೆಲಸ, ದೇವರು ತಮಗೆ ಕೊಟ್ಟಿರುವ ಕೆಲಸವನ್ನು ಮಾಡುವುದು ತಮ್ಮ ಕರ್ತವ್ಯ. ಶುಚಿಗೊಳಿಸುವ ಈ ಕೆಲಸ ತಮ್ಮೊಳಗಣ ಆಧ್ಯಾತ್ಮಿಕ ಕಸುವು’ ಎಂದು ಜ್ಞಾನೋದಯವಾಗಿದ್ದಿರಬೇಕು.” ಇವು ತನ್ನ ಕರ್ಮಯೋಗ ಪುಸ್ತಕದಲ್ಲಿ (2007) ಮೋದಿ ಹೇಳಿರುವ ಮಾತುಗಳು. ಇವು ಸ್ಪಷ್ಟವಾಗಿ ಮೋದಿಯ ಫ್ಯಾಸಿಸ್ಟ್, ದಲಿತವಿರೋಧಿ, ಸನಾತನವಾದಿ modi-advaniಮನಸ್ಥಿತಿಯನ್ನು ಬಿಂಬಿಸುತ್ತದೆ. ಹಾಗಾಗಿಯೇ ಆತನ ಎಲ್ಲ “ಅಭಿವೃದ್ಧಿ” ಯೋಜನೆಗಳೂ ಬಲ್ಲಿದರ ಪರವಾಗಿಯೂ ಶೋಷಿತರ, ದಲಿತರ ವಿರುದ್ಧವಾಗಿಯೂ ಇರುತ್ತವೆ.

2011 ರ ಸಿಎಜಿ ವರದಿ ಪ್ರಕಾರ ಗುಜರಾತ್ ಭೂಸ್ವಾಧೀನ ಕಾಯ್ದೆ ಅಡಿಯಲ್ಲಿ ವಶಪಡಿಸಿಕೊಂಡ ಭೂಮಿಯಲ್ಲಿ ಪರಿಶಿಷ್ಟ ಜಾತಿ/ಪಂಗಡಗಳಿಗೆ ಸೇರಿದ ಭೂರಹಿತರಿಗೆ ಹಂಚಬೇಕಿದ್ದ 15,587 ಹೆಕ್ಟೇರ್ ಹೆಚ್ಚುವರಿ ಭೂಮಿಯನ್ನು ತನ್ನಲ್ಲಿಯೇ ಉಳಿಸಿಕೊಂಡಿದ್ದಕ್ಕೆ ಸರಿಯಾದ ಕಾರಣ ಕೊಡುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ. 2008-11 ರ ನಡುವೆ ನಡೆದ ಭೂಹಂಚಿಕೆಯಲ್ಲಿ ಕೇವಲ 52% ಫಲಾನುಭವಿಗಳಿಗೆ (1003 ರಲ್ಲಿ 520 ಜನರಿಗೆ) ಮಾತ್ರ ಹೆಕ್ಟೇರಿಗೆ ರೂ.5,000 ಸಹಾಯಧನ ನೀಡಲಾಗಿದೆ. ಉಳಿದವರಿಗೆ ಈ ಸೌಲಭ್ಯ ವಿಸ್ತರಿಸದಿರುವುದಕ್ಕೆ ಯಾವುದೇ ಸೂಕ್ತ ವಿವರಣೆ ಇಲ್ಲ. ಇಂತಹ ಮೋದಿಯ ಪರಿವಾರಕ್ಕೆ ಅಧಿಕಾರ ಸಿಕ್ಕರೆ ಭಾರತದ ಹಿಮ್ಮುಖ ಚಲನೆ ಬಹುವೇಗವಾಗಿ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಅಲ್ಪಸಂಖ್ಯಾತರು ಎರಡನೇ ದರ್ಜೆ ಪ್ರಜೆಗಳು

ಭಾರತ ಭಾರತೀಯರೆಲ್ಲರ ರಾಷ್ಟ್ರವೆಂಬ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ‘ಇದು ಬಹುಸಂಖ್ಯಾತ ಹಿಂದೂಗಳ ರಾಷ್ಟ್ರ. ಇಲ್ಲಿ ಮುಸ್ಲಿಮರಾದಿಯಾಗಿ ಇತರ ಎಲ್ಲ ಧರ್ಮೀಯರು ಇವರ ಪಾರಮ್ಯವನ್ನು ಒಪ್ಪಿ ಇವರಿಗೆ ಬಗ್ಗಿ ಭಯದ ನೆರಳಲ್ಲೇ ಬದುಕಬೇಕು’ ಎನ್ನುವ ಆರ್‌ಎಸ್‌ಎಸ್, ಭಾಜಪಾದ ಜೀವವಿರೋಧಿ ಸಿದ್ಧಾಂತ ಅಕ್ಷರಶಃ ಅನುಷ್ಟಾನಗೊಂಡಿರುವುದು ಮೋದಿ ಆಳ್ವಿಕೆಯ ಗುಜರಾತಿನಲ್ಲಿ.

ಇತ್ತೀಚಿನ ಸಾಕಷ್ಟು ಅಧ್ಯಯನಗಳು ಗುಜರಾತಿನ ಮುಸ್ಲಿಮರು ದೇಶದ ಕಡುಬಡವರ ಗುಂಪಿಗೆ ಸೇರಿರುವುದಲ್ಲದೆ ಧರ್ಮದ ಹೆಸರಿನಲ್ಲಿ ಅತ್ಯಂತ ಹೆಚ್ಚು ಪಕ್ಷಪಾತಕ್ಕೆ ಒಳಗಾದವರು ಎಂಬುದನ್ನು ಸಾಬೀತು ಪಡಿಸಿದೆ.

ಕೇಂದ್ರ ಸರ್ಕಾರದ ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಯಾಗದಂತೆ ನೋಡಿಕೊಳ್ಳುವುದರಲ್ಲಿ ಮೋದಿ ವಿಶೇಷ ಮುತುವರ್ಜಿ ವಹಿಸುತ್ತಾರೆ. ಅಲ್ಪಸಂಖ್ಯಾತರ ಮೆಟ್ರಿಕ್ಯುಲೇಷನ್‌ಪೂರ್ವ ವಿದ್ಯಾರ್ಥಿವೇತನ ಯೋಜನೆಯಡಿ ಕೇಂದ್ರಸರ್ಕಾರ 55,000 ಮಂದಿಗೆ ವಿದ್ಯಾರ್ಥಿವೇತನವನ್ನು (ಅದರಲ್ಲಿ 53,000 ಅರ್ಹ ಮುಸ್ಲಿಂ ವಿದ್ಯಾರ್ಥಿಗಳಿದ್ದಾರೆ) ಗುಜರಾತಿಗೆ ಮಂಜೂರು ಮಾಡಿತ್ತು. ’ಇತರ ಧರ್ಮದ ವಿದ್ಯಾರ್ಥಿಗಳ ವಿರುದ್ಧ ಪಕ್ಷಪಾತ’ ಎಂಬ ಕಾರಣ ನೀಡಿ ಮೋದಿ ಸರ್ಕಾರ ಅದನ್ನು ತಡೆಹಿಡಿದಿತ್ತು. ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೂಲಕ ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿ ಯೋಜನೆಯ ಪರವಾಗಿ ತೀರ್ಪು ಬಂದಿದೆ. ಕೇವಲ 26% ರಷ್ಟು ಗುಜರಾತಿ ಮುಸ್ಲಿಮರು ಮೆಟ್ರಿಕ್ಯುಲೇಷನ್ ಹಂತ ತಲುಪುತ್ತಾರೆ. ಶಾಲೆ ಬಿಡುವ ಮಕ್ಕಳ ಶೇಕಡವಾರು ಲೆಕ್ಕದಲ್ಲಿ ಮುಸ್ಲಿಮರದು ಅತಿದೊಡ್ಡಪಾಲು.

ರಾಷ್ಟ್ರೀಯ ಆನ್ವಯಿಕ ಅರ್ಥಶಾಸ್ತ್ರ ಮಂಡಳಿ (NCAER) ಯ 2011 ರ ವರದಿ ರಾಜ್ಯಸರ್ಕಾರದ ಮುಸ್ಲಿಂ ವಿರೋಧಿ Gujarat_muslimಧೋರಣೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ. ಇದರನ್ವಯ ಮೇಲ್ಜಾತಿ ಹಿಂದೂಗಳ ಹೋಲಿಕೆಯಲ್ಲಿ ನಗರವಾಸಿ ಮುಸ್ಲಿಮರ ಬಡತನ 8 ಪಟ್ಟು (800%) ಮತ್ತು ಹಿಂದೂ ಪರಿಶಿಷ್ಟ ಜಾತಿ, ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳ ಹೋಲಿಕೆಯಲ್ಲಿ 50% ರಷ್ಟು ಹೆಚ್ಚು ಇದೆ. ಗ್ರಾಮವಾಸಿ ಮುಸ್ಲಿಮರ ಬಡತನ ಮೇಲ್ಜಾತಿಯಲ್ಲಿ ಹಿಂದೂಗಳ ಹೋಲಿಕೆಯಲ್ಲಿ 200% ಹೆಚ್ಚಾಗಿದೆ. ಗುಜರಾತಿನ 60% ರಷ್ಟು ಮುಸ್ಲಿಮರು ನಗರವಾಸಿಗಳಾಗಿದ್ದು ಇವರು ರಾಜ್ಯದ ಅತ್ಯಂತ ನಿರ್ಲಕ್ಷಿತ ಗುಂಪಿಗೆ ಸೇರಿದ್ದಾರೆ.

ಸರ್ದಾರ್‌ಪುರ ಮತೀಯ ಗಲಭೆಯ 22 ಸಂತ್ರಸ್ತ ಕುಟುಂಬಗಳಿಗಾಗಿ ಹಿಮ್ಮತ್‌ನಗರದಲ್ಲಿ ದಲಿತ ಕಾಲೋನಿಗೆ ಹೊಂದಿಕೊಂಡಂತೆ ನಿರ್ಮಿಸಿರುವ ‘ಸುರಕ್ಷಿತ ಕಾಲೋನಿ’ ಎಲ್ಲ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿ ಸಾಮಾಜಿಕ ಬಹಿಷ್ಕಾರದ ವಿಸ್ತರಿಸಿದ ರೂಪವಾಗಿ ಕಾಣುತ್ತದೆ.

ಸಂವಿಧಾನ ದತ್ತ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನೇ ಅಣಕ ಮಾಡುವಂತೆ ‘ಗುಜರಾತ್ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ’ (2003)ಯ ಪ್ರಕಾರ ರಾಜ್ಯದಲ್ಲಿ ಮತ್ತೊಂದು ಧರ್ಮಕ್ಕೆ ಮತಾಂತರ ಹೊಂದಲು ಬಯಸುವವರು ಸರ್ಕಾರದ ಅನುಮತಿ ಪಡೆಯಬೇಕಿದೆ. ‘ಸ್ಥಳಾಂತರದ ವಿರುದ್ಧ ಗಲಭೆ ಪೀಡಿತ ಪ್ರದೇಶದ ನಿವಾಸಿಗಳ ರಕ್ಷಣೆ ಮತ್ತು ಸ್ಥಿರಾಸ್ತಿ ಹಸ್ತಾಂತರ ನಿಯಂತ್ರಣ ಕಾಯ್ದೆ-1991 ಕ್ಕೆ 2009ರಲ್ಲಿ ಬದಲಾವಣೆ ತಂದು ಅದನ್ನು ಅಲ್ಪಸಂಖ್ಯಾತರ ವಿರುದ್ಧ ಅಸ್ತ್ರವಾಗಿ ಬಳಸಲಾಗುತ್ತಿದೆ.

ಮೋದಿಯ ಜೀವವಿರೋಧಿ, ಪ್ರತಿಗಾಮಿ ಸಾಧನೆಗಳ ಪಟ್ಟಿ ಇನ್ನೂ ಬಹುದೊಡ್ಡದಿದೆ. ಆದರೆ ಯಾವುದೇ ಪ್ರಜ್ಞಾವಂತ ಮನಸ್ಸಿಗೆ ಮೋದಿ ನಮಗೆ ಯಾಕೆ ಬೇಡ ಎಂದು ಅರಿವಾಗಲು ಇವೇ ಬಹಳಷ್ಟಾಯಿತು ಅನ್ನಿಸುತ್ತದೆ. ಕಾಂಗ್ರೆಸ್/ಯುಪಿಎ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ), ಶಿಕ್ಷಣ ಹಕ್ಕು ಕಾಯ್ದೆ(ಆರ್‌ಟಿಇ), ಆಹಾರ ಭದ್ರತಾ ಕಾಯ್ದೆಯಂತಹ ಹಲವು ಜನಪರ (ಅವು ತಮ್ಮಷ್ಟಕ್ಕೆ ಪರಿಪೂರ್ಣವಲ್ಲದಿದ್ದರೂ) ಯೋಜನೆಗಳನ್ನು ಜಾರಿಗೆ ತಂದಿದೆಯಾದರೂ ಆರಂಭದಲ್ಲಿ ಹೇಳಿದಂತೆ ಇವರ ಭ್ರಷ್ಟಾಚಾರದ ಪ್ರಕರಣಗಳು, ಅವೈಜ್ಞಾನಿಕ ಜಾಗತೀಕರಣ, ಉದಾರೀಕರಣ, ಖಾಸಗೀಕರಣದ ಯೋಜನೆಗಳು ದೇಶದಲ್ಲಿ ಅನೇಕ ಆರ್ಥಿಕ, ಸಾಮಾಜಿಕ ತಲ್ಲಣಗಳಿಗೆ ಕಾರಣವಾಗಿದೆ. ಹಾಗಾಗಿ ಕಾಂಗ್ರೆಸ್ಸೇ ಅಧಿಕಾರಕ್ಕೆ ಬಂದರೂ ಜನಶಕ್ತಿಯು ನಿರಂತರ ವಿರೋಧ ಪಕ್ಷವಾಗಿ ಜನ/ಜೀವ ಪರವಾಗಿ ದನಿಯೆತ್ತುತ್ತಲೇ ಇರಬೇಕಾಗುತ್ತದೆ. ಅದಕ್ಕಾಗಿಯಾದರೂ ಮತಾಂಧತೆಯ ಅಫೀಮು ದ್ವೇಷದ ದಳ್ಳುರಿ ಹಬ್ಬಿಸದೆ ಸಾಮರಸ್ಯ ಉಳಿಯಬೇಕಿದೆ. ಬಡವರು ‘ದೈನೇಸಿ’ ಸ್ಥಿತಿ ತಲುಪದೆ ದನಿಯೆತ್ತುವಷ್ಟಾದರೂ ಸಾಮರ್ಥ್ಯ ಉಳಿಸಿಕೊಂಡಿರಬೇಕಿದೆ.

“ಮೋದಿಯೆಂಬ ಭಯವನ್ನು ಬಿತ್ತಿ ನಮ್ಮ ಮತ ಕೇಳುವುದು ಬಿಟ್ಟು ನಿಮ್ಮ ಯೋಜಿತ ಕಾರ್ಯಕ್ರಮಗಳ ಮೂಲಕ ನಮ್ಮ ಮತ ಗೆಲ್ಲಿ” ಎಂಬ ಮುಸ್ಲಿಮರ ಮಾತುಗಳು ಕಾಂಗ್ರೆಸ್ಸಿಗೆ ಸರಿದಾರಿ ತೋರಲೆಂದು ಆಶಿಸೋಣ.

’ನಾವು ನಮ್ಮಲ್ಲಿ’ಯ “ಅಭಿವ್ಯಕ್ತಿ ಕರ್ನಾಟಕ” : ಹಾಸನದಲ್ಲಿ, ನವೆಂಬರ್ 16-17, 2013

ಸ್ನೇಹಿತರೇ,

ಸುಮಾರು 30-40ರ ವಯೋಮಾನದ ಆಸುಪಾಸಿನಲ್ಲಿರುವ ಪ್ರಗತಿಪರ ಮನೋಭಾವದ ಕನ್ನಡ ಲೇಖಕ ಮತ್ತು ಪತ್ರಕರ್ತರ ಒಂದು ಗುಂಪು ಹಲವು ವರ್ಷಗಳಿಂದ “ಬಯಲು ಸಾಹಿತ್ಯ ವೇದಿಕೆ ಕೊಟ್ಟೂರು” ಇದರ ಆಶ್ರಯದಲ್ಲಿ ಪ್ರತಿವರ್ಷವೂ ಎರಡು ದಿನಗಳ ಚರ್ಚೆ-ಸಂವಾದ-ವಿಚಾರಸಂಕಿರಣಗಳನ್ನು ಏರ್ಪಡಿಸಿಕೊಂಡು ಬರುತ್ತಿದೆ. ಎರಡು ವರ್ಷದ ಹಿಂದೆ ಇವರು ಚಿತ್ರದುರ್ಗದಲ್ಲಿ ನಡೆಸಿದ “ಮಾಧ್ಯಮ ಕರ್ನಾಟಕ” ನಾನು ಪಾಲ್ಗೊಂಡ ಮೊದಲ ಕಾರ್ಯಕ್ರಮ. ಆ ಸಂದರ್ಭದಲ್ಲಿ ನಾನು “ಪರ್ಯಾಯ ಮಾಧ್ಯಮ”ದ ಕುರಿತು ಮಾತನಾಡಿದ್ದೆ. ಅದಕ್ಕೆ ಸಿದ್ದವಾಗುವ ವೇಳೆಯಲ್ಲಿಯೇ “ವರ್ತಮಾನ.ಕಾಮ್”ನ ಯೋಚನೆ ಮೊಳೆತದ್ದು ಮತ್ತು ಆ ಸಭೆಯ ನಂತರದ ಕೆಲವು ಚರ್ಚೆಗಳಲ್ಲಿ ಅದು ಗಟ್ಟಿಯಾದದ್ದು ಎನ್ನುವುದು ನಮ್ಮ ಬಳಗದ ಅನೇಕರಿಗೆ ಗೊತ್ತಿರುವ ವಿಚಾರ. 2011 ರ “ಮಾಧ್ಯಮ ಕರ್ನಾಟಕ” ಕಾರ್ಯಕ್ರಮ ನಡೆದ ಎರಡು ತಿಂಗಳಿಗೆಲ್ಲ “ವರ್ತಮಾನ.ಕಾಮ್” ಆರಂಭವಾಗಿತ್ತು.

ಕಳೆದ ವರ್ಷ (2012) ಇದೇ ಗುಂಪು ಕುಪ್ಪಳಿಯಲ್ಲಿ “ಚಳವಳಿ ಕರ್ನಾಟಕ” ಕುರಿತು ಕಾರ್ಯಕ್ರಮ ಏರ್ಪಡಿಸಿತ್ತು. ಪ್ರಾಮಾಣಿಕತೆ ಮತ್ತು ಬದ್ಧತೆ ಉಳಿಸಿಕೊಂಡ ನಾಡಿನ ಅನೇಕ ಜನಪರ ಮನಸ್ಸುಗಳು, ಲೇಖಕರು, ಪತ್ರಕರ್ತರು, ಹೋರಾಟಗಾರರು ಅಲ್ಲಿ ನೆರೆದಿದ್ದರು. ಈ ವರ್ಷದ ಕಾರ್ಯಕ್ರಮ ಕಾರಣಾಂತರಗಳಿಂದ ಕೆಲ ತಿಂಗಳುಗಳ ಕಾಲ ಮುಂದೂಡಲ್ಪಟ್ಟರೂ ಇದೇ ನವೆಂಬರ್ ತಿಂಗಳ 16 ಮತ್ತು 17 ರಂದು ಹಾಸನದಲ್ಲಿ ನಡೆಯಲಿದೆ. ವಿಷಯ : “ಅಭಿವ್ಯಕ್ತಿ ಕರ್ನಾಟಕ”. ದೇವನೂರು ಮಹಾದೇವ, ದಿನೇಶ್ ಅಮೀನ್‌ಮಟ್ಟು, ಹೆಚ್.ನಾಗವೇಣಿ, ಸುಗತ ಶ್ರೀನಿವಾಸರಾಜು, ರಹಮತ್ ತರೀಕೆರೆ, ಫಣಿರಾಜ್, ಇನ್ನೂ ಅನೇಕ ಚಿಂತಕರು, ಲೇಖಕರು, ಪತ್ರಕರ್ತರು ಪಾಲ್ಗೊಳ್ಳಲಿದ್ದಾರೆ ಮತ್ತು ಮಾತನಾಡಲಿದ್ದಾರೆ. ವರ್ತಮಾನದ ಓದುಗರಿಗೂ ಈ ಮೂಲಕ ಆಹ್ವಾನಿಸಲಾಗುತ್ತಿದೆ. ವರ್ತಮಾನ ಬಳಗದ ಹಲವು ಲೇಖಕರು ಮತ್ತು ಮಿತ್ರರೂ ಅಲ್ಲಿ ಬರಲಿದ್ದಾರೆ. ದಯವಿಟ್ಟು ಬಂದು, ಭಾಗವಹಿಸಿ. ಕಾರ್ಯಕ್ರಮಕ್ಕೆ ಯಾವುದೇ ಶುಲ್ಕ ಇರುವುದಿಲ್ಲ. ಶನಿವಾರದ ರಾತ್ರಿ ವಸತಿ ಸೌಕರ್ಯ ಇರುತ್ತದೆ, ಮತ್ತು ಎರಡೂ ದಿನ ತಿಂಡಿ-ಊಟದ ವ್ಯವಸ್ಥೆ ಇರುತ್ತದೆ. ವಿವರಗಳಿಗೆ ಕೆಳಗಿನ ಆಹ್ವಾನ ಪತ್ರಿಕೆಯಲ್ಲಿರುವ ಆಯೋಜಕರನ್ನು ಸಂಪರ್ಕಿಸಿ ಮತ್ತು ಬರುವಿರಾದರೆ ಅವರಿಗೆ ತಿಳಿಸಿ. ಆಯೋಜನೆ ಮಾಡಲು ಅವರಿಗೂ ಸುಲಭವಾಗುತ್ತದೆ.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ, ವರ್ತಮಾನ.ಕಾಮ್

’ನಾವು ನಮ್ಮಲ್ಲಿ’ಯ “ಅಭಿವ್ಯಕ್ತಿ ಕರ್ನಾಟಕ” ಕಾರ್ಯಕ್ರಮಕ್ಕೆ ಆಹ್ವಾನ

ಆತ್ಮೀಯರೇ,

“ಬಯಲು ಸಾಹಿತ್ಯ ವೇದಿಕೆ ಕೊಟ್ಟೂರು” ಸಮಾನ ಮನಸ್ಕ ಬರಹಗಾರರ, ಚಿಂತಕರ ಒಕ್ಕೂಟ. ಇದು ಪ್ರತಿವರ್ಷ ’ನಾವು ನಮ್ಮಲ್ಲಿ’ ಎಂಬ ಕಾರ್ಯಕ್ರಮ ನಡೆಸುವುದರ ಮೂಲಕ ರಾಜ್ಯದ ಬರಹಗಾರರನ್ನು, ಸಮಾನ ಮನಸ್ಕ ಗೆಳೆಯರನ್ನು ಒಂದೆಡೆ ಸೇರಿಸಿ ಅವರ ತುಡಿತಗಳಿಗೆ, ಮುಕ್ತ ಸಂವಾದಕ್ಕೆ ವೇದಿಕೆ ಒದಗಿಸುತ್ತ ಬಂದಿದೆ. ರಾಜಕೀಯವಾಗಿ, ಸಾಂಸ್ಕೃತಿಕ, ಸಾಮಾಜಿಕವಾಗಿ ಕರ್ನಾಟಕ ಎತ್ತ ಸಾಗುತ್ತಿದೆ ಎಂಬ ಬಗ್ಗೆ ಚರ್ಚಿಸಿದ್ದೇವೆ. ಬಂಡವಾಳಶಾಹಿಗಳ ಕೈ ಸೇರಿ ಮಾಧ್ಯಮ ಕ್ಷೇತ್ರ ಹೇಗೆ ಸ್ಥಿತ್ಯಂತರವಾಗುತ್ತಿದೆ ಎಂಬ ಆತಂಕಗಳನ್ನು ಹಂಚಿಕೊಂಡಿದ್ದೇವೆ. ಹಕ್ಕು, ದನಿ, ಸ್ಥಾನಮಾನ, ಸಾಮಾಜಿಕ ಬದಲಾವಣೆಗೆ ಕಾರಣವಾದ ಚಳವಳಿಗಳ ಬಗ್ಗೆ ವಿಚಾರ ವಿನಿಮಯ ಮಾಡಿಕೊಂಡೆವು. ಈಗ `ಅಭಿವ್ಯಕ್ತಿ’ಯನ್ನು ಕುರಿತು ಒಂದಿಷ್ಟು ಆಲೋಚಿಸಬೇಕಾದ ಹೊತ್ತು. ಮುಕ್ತವಾಗಿ ನಮ್ಮ ಅಭಿಪ್ರಾಯವನ್ನು ದಾಖಲಿಸಲಾಗದ, ಅಸೂಕ್ಷ್ಮವಾದ, ಸಂಯಮವೇ ಇಲ್ಲದ ಕಾಲಘಟ್ಟದತ್ತ ಸಮಾಜ ಹೊರಳುತ್ತಿದೆ. ಮಾಧ್ಯಮ ಕೇಂದ್ರಿತವಾದ ಈ ಕಾಲದಲ್ಲಿ ಅಭಿವ್ಯಕ್ತಿಗೆ ಧಕ್ಕೆ ತರುವಂತಹ ಹಲವು ಘಟನೆಗಳು ಭಯ ಹುಟ್ಟಿಸುವಂತೆ ನಡೆಯುತ್ತಿದ್ದರೆ, ಪ್ರಚೋದಕವಾದ, ಆವೇಶದ, ಹಿಂಸಾತ್ಮಕ ಮಾತು ಮತ್ತು ದೃಶ್ಯಗಳು ಇನ್ನೊಂದೆಡೆ ಅಭಿವ್ಯಕ್ತಿಯ ಹೆಸರಿನಲ್ಲೇ ಎಡಬಿಡದೇ ಭಿತ್ತರಗೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಸವಾಲು ಮತ್ತು ಅಭಿವ್ಯಕ್ತಿಯ ಹಲವು ಮಜಲುಗಳ ಸುತ್ತ ಚರ್ಚೆ ಮತ್ತು ಸಂವಾದ ನಡೆಸಲು ಎರಡು ದಿನಗಳ ವಿಚಾರ ಗೋಷ್ಠಿಗಳನ್ನು ಆಯೋಜಿಸಲಾಗಿದೆ. ಕನ್ನಡದ ಆರೋಗ್ಯವಂತ ಮನಸ್ಸುಗಳು ಪಾಲ್ಗೊಂಡು ಈ ಸಮಾವೇಶ ಒಂದು ಮಹತ್ವದ ಹೆಜ್ಜೆಯಾಗಬೇಕು ಎಂಬುದು ನಮ್ಮೆಲ್ಲರ ಆಶಯ. ಕಾರ್ಯ ಕ್ರಮದ ರೂಪುರೇಷೆಯನ್ನು ತಿಳಿಸುವ ಪತ್ರವನ್ನು ಇದರೊಂದಿಗೆ ಇರಿಸಿದ್ದೇವೆ.

ನಾವೆಲ್ಲರೂ ಜೊತೆಗಿದ್ದು ಸಂವಾದವನ್ನು ಯಶಸ್ವಿಯಾಗಿಸೋಣ.

ನಿಮ್ಮ ಬರವನ್ನು ನಿರೀಕ್ಷಿಸುವ
ನಾವು ನಮ್ಮಲ್ಲಿ ಬಳಗ

ನಾವು ನಮ್ಮಲ್ಲಿ - ಅಭಿವ್ಯಕ್ತಿ ಕರ್ನಾಟಕನಾವು ನಮ್ಮಲ್ಲಿ - ಅಭಿವ್ಯಕ್ತಿ ಕರ್ನಾಟಕ

ಸಮಾನ ಶಿಕ್ಷಣದೆಡೆಗಿನ ಪಯಣ…….


– ರೂಪ ಹಾಸನ


 

ಹಳ್ಳಿಗಳ ಸರ್ಕಾರಿ ಶಾಲೆಗಳ ಮಕ್ಕಳಿಗಾಗಿ ನಮ್ಮ ಪ್ರೇರಣಾ ವಿಕಾಸ ವೇದಿಕೆಯಿಂದ ನಡೆಸುವ ನಿರಂತರ ಕಾರ್ಯಕ್ರಮಗಳಿಂದಾಗಿ ಬಹಳಷ್ಟು ವಿಶೇಷಗಳು, ವೈರುಧ್ಯಗಳೂ ಕಣ್ಣಿಗೆ ಬೀಳುತ್ತಿರುತ್ತವೆ. ಈಗ್ಗೆ 3-4 ವರ್ಷದ ಹಿಂದೆ ಹಳ್ಳಿಯ ಶಾಲೆಯೊಂದರಲ್ಲಿ ಕಾರ್ಯಕ್ರಮದಲ್ಲಿದ್ದಾಗ ಹೆಣ್ಣುಮಕ್ಕಳೇ ಹೆಚ್ಚಾಗಿದ್ದರು. ಈಗ ಹೆಣ್ಣುಮಕ್ಕಳಿಗೂ ಶಿಕ್ಷಣ ಕೊಡಬೇಕೆಂದು ಜನರಲ್ಲೂ ಜಾಗೃತಿ ಮೂಡಿದೆ ಎನಿಸಿ ಸಮಾಧಾನವಾಗಿತ್ತು. ಆದರೆ ಮುಂದೆ ಬೇರೆ ಹಳ್ಳಿಗಳ ಶಾಲೆಗಳಿಗೆ ಹೋದಾಗಲೂ ಹೆಣ್ಣುಮಕ್ಕಳೇ ಹೆಚ್ಚಾಗಿ ಕಾಣಲಾರಂಭಿಸಿದಾಗ ಸಂದೇಹ ಕಾಡಲಾರಂಭಿಸಿತು. ಸಮಾಜದಲ್ಲಿ ಹೆಣ್ಣುಮಕ್ಕಳು ಹುಟ್ಟುವ ಸಂಖ್ಯೆಯೇ ಗಣನೀಯ ಪ್ರಮಾಣದಲ್ಲಿ ಕುಸಿದಿರುವಾಗ, ಶಾಲೆಗಳಲ್ಲಿ ಹೆಣ್ಣುಮಕ್ಕಳು ಹೆಚ್ಚಾಗಿರಲು ಹೇಗೆ ಸಾಧ್ಯ? ಅನುಮಾನದಿಂದ ಶಿಕ್ಷಕ ಮಿತ್ರರನ್ನು ಅಡ್ಡಪ್ರಶ್ನೆ ಮಾಡಲಾರಂಭಿಸಿದಾಗ ತಿಳಿದದ್ದು…… ಈಗ ಹೆಚ್ಚಿನ ಸರ್ಕಾರಿ ಶಾಲೆಗಳಲ್ಲಿ ಉಳಿದಿರುವವರು ಬಡ ಹೆಣ್ಣುಮಕ್ಕಳು ಮತ್ತು ತಳಸಮುದಾಯದ ಮಕ್ಕಳು! ಹತ್ತಿರದಲ್ಲೆಲ್ಲೂ ಖಾಸಗಿ ಶಾಲೆಗಳಿಲ್ಲದೇ, ಅನಿವಾರ್ಯವಾಗಿ ಸರ್ಕಾರಿ ಶಾಲೆಯನ್ನೇ ಅವಲಂಬಿಸಬೇಕಾದಲ್ಲಿ ಮಾತ್ರ ಜಾತಿ, ವರ್ಗ, ಲಿಂಗ ಭೇದವಿಲ್ಲದೇ kannada-schoolಎಲ್ಲರೂ ಸರ್ಕಾರಿ ಶಾಲೆಗೇ ಬರುತ್ತಾರಷ್ಟೇ. ಆಯ್ಕೆ ಇದ್ದರೆ ಹೆಚ್ಚಿನ ಉಳ್ಳವರು ಬಯಸುವುದು ಕಾನ್ವೆಂಟ್‌ಗಳನ್ನೇ. ಅದರಲ್ಲೂ ಒಂದೇ ಮನೆಯಲ್ಲಿ ಗಂಡು-ಹೆಣ್ಣುಮಕ್ಕಳಿಬ್ಬರೂ ಇದ್ದರೆ, ಬಡತನವಿದ್ದರೂ ಕಷ್ಟಪಟ್ಟಾದರೂ ಗಂಡನ್ನು ಕಾನ್ವೆಂಟ್ ಶಾಲೆಗೆ ಸೇರಿಸಿ, ಹೆಣ್ಣನ್ನು ಸರ್ಕಾರಿ ಶಾಲೆಗೆ ಸೇರಿಸಲಾಗುತ್ತದೆ! ಸಮಾನ ಶಿಕ್ಷಣ ವ್ಯವಸ್ಥೆ ಇಲ್ಲದಿದ್ದರೆ, ದುರ್ಬಲರು, ಶೋಷಿತರು ಹೇಗೆ ಅಂಚಿಗೆ ತಳ್ಳಲ್ಪಡುತ್ತಾರೆ ಎಂಬುದಕ್ಕೆ ಇದೊಂದು ಉದಾಹರಣೆಯಷ್ಟೇ.

ಸ್ವಾತಂತ್ರ್ಯ ದೊರೆತ ಎರಡು ದಶಕಗಳ ನಂತರ ಹುಟ್ಟಿ, ಗ್ರಾಮೀಣ ಪ್ರದೇಶದ ಸಾಮಾಜಿಕ ಭೇದವಿಲ್ಲದೇ ಕಿಕ್ಕಿರಿದು ತುಂಬಿರುತ್ತಿದ್ದ ಸರ್ಕಾರಿ ಶಾಲೆಗಳಲ್ಲಿ ಓದಿದ ನನ್ನಂತವರಿಗೆ, ಕಳೆದೆರಡು ದಶಕಗಳಿಂದ ಆಗುತ್ತಿರುವ ವೇಗದ ಬದಲಾವಣೆ ದಿಗ್ಭ್ರಮೆ ಮೂಡಿಸುತ್ತಿದೆ. ನಮ್ಮ ಭಾರತಕ್ಕೆ ಇದೆಲ್ಲಾ ಏನಾಗಿ ಹೋಯ್ತು? ಎಲ್ಲೆಲ್ಲೂ ಅಸಮಾನತೆಯೇ ತಾಂಡವವಾಡುತ್ತಿರುವಂತೆ ಯಾಕೆ ಕಾಣುತ್ತಿದೆ? ಇದನ್ನು ಎಲ್ಲಿಂದ ಸರಿಪಡಿಸುವುದು? ಸರಿಪಡಿಸುವವರಾರು? ಹೇಗೆ ಸರಿಪಡಿಸುವುದು? ಎಂಬ ಪ್ರಶ್ನೆಗಳು ಕಾಡಲಾರಂಭಿಸುತ್ತವೆ.

ಸಮ ಸಮಾಜವೆಂಬ ಬಂಗಲೆಯ ಅಡಿಪಾಯವಾದ, ಸಮಾನ ಶಿಕ್ಷಣ ವ್ಯವಸ್ಥೆ ಎಂಬುದೇ ಒಂದು ಆದರ್ಶದ ಸ್ಥಿತಿ ಇರಬಹುದೇ? ಅದನ್ನು ಎಂದಿಗೂ ಸಾಧಿಸಲು ಸಾಧ್ಯವಾಗುವುದಿಲ್ಲವೇ? ಆದರೆ ಸಮಾನ ಶಿಕ್ಷಣ ವ್ಯವಸ್ಥೆಯನ್ನು ಉಳ್ಳ ಅಮೆರಿಕಾ, ಕ್ಯೂಬಾ, ಚೈನಾ, ರಷ್ಯಾ, ಬ್ರಿಟನ್ ರಾಷ್ಟ್ರಗಳು ಕಣ್ಣೆದುರಿಗಿವೆಯಲ್ಲಾ? ಅಲ್ಲಿ ಸಾಧ್ಯವಾಗಿದ್ದು ಇಲ್ಲೇಕೆ ಸಾಧ್ಯವಾಗುತ್ತಿಲ್ಲ? ಇಲ್ಲಿ ಅಂತಹ ಪ್ರಯತ್ನಗಳು ಆಗಲೇ ಇಲ್ಲವೇ? – ಚರಿತ್ರೆಯ ಗರ್ಭವನ್ನು ಬಗೆಯುತ್ತಾ ಹೊರಟರೆ, ಅಸಹನೀಯ ಸತ್ಯಗಳು ಕಣ್ಣ ಮುಂದೆ ನಿಲ್ಲುತ್ತವೆ.

ನಿಜವಾದ ಸಮಾನತೆಯ ಅಡಿಪಾಯದ ಶಿಕ್ಷಣ ಹಕ್ಕು ಕಾಯ್ದೆ ಮೊದಲು ಮಂಡನೆಯಾದದ್ದು ಸ್ವಾತಂತ್ರ್ಯಪೂರ್ವದ 1882 ರಲ್ಲಿ ಜ್ಯೋತಿ ಬಾ ಫುಲೆ ಅವರಿಂದ. phuleಅದುವರೆಗೆ ಕೆಲವೇ ಕೆಲವು ಮೇಲ್ಜಾತಿ, ಮೇಲ್ವರ್ಗದ ಪುರುಷರಿಗೆ ಸೀಮಿತವಾಗಿದ್ದ ಶಿಕ್ಷಣ, ಎಲ್ಲರ ಹಕ್ಕು ಎಂದು ಪ್ರತಿಪಾದಿಸಿದ್ದು, ಜೊತೆಗೆ ತಮ್ಮ ಪತ್ನಿ ಸಾವಿತ್ರಿಬಾಯಿ ಫುಲೆ ಅವರೊಡಗೂಡಿ ಮಹಿಳೆ ಮತ್ತು ತಳಸಮುದಾಯದವರಿಗಾಗಿಯೇ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದು, ಶಿಕ್ಷಣ ಮತ್ತು ಸಮಾನತೆ ಕುರಿತ ಅವರ ನಿಜವಾದ ಕಾಳಜಿಯನ್ನು ತೋರಿಸುತ್ತದೆ. ಆ ನಂತರ ಗೋಪಾಲಕೃಷ್ಣ ಗೋಖಲೆಯವರು 1911 ರಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣ ಬಿಲ್ ಮಂಡನೆ ಮಾಡಿದಾಗ ಬಹುಸಂಖ್ಯಾತರ ವಿರೋಧವನ್ನು ಎದುರಿಸಬೇಕಾಯ್ತು. ಇದರ ವಿರುದ್ಧವಾಗಿ ೧೧೦೦೦ ವಿರೋಧಿ ಸಹಿಗಳನ್ನು ಸಂಗ್ರಹಿಸಲಾಯ್ತು. 1937 ರವರೆಗೂ ಈ ಬಿಲ್ ಪಾಸ್ ಆಗಲಿಲ್ಲ. ಮಹಾತ್ಮಾ ಗಾಂಧಿ ಎಲ್ಲರಿಗೂ ಶಿಕ್ಷಣ ಎಂಬುದಕ್ಕೆ ಪರವಾಗಿ ವಾದಿಸಿದ್ದು ಗಟ್ಟಿಯಾಗಿ ನಿಂತಿದ್ದು ಒಂದು ಇತಿಹಾಸ. ರಾಜ ಮಹಾರಾಜರು, ಸಾಮಂತರು, ಭೂಮಾಲಿಕರು ಎಲ್ಲರಿಗೂ ಶಿಕ್ಷಣ ಕೊಟ್ಟರೆ ಆಳುಗಳ ಕೆಲಸವನ್ನು ಮಾಡುವವರ್‍ಯಾರು ಎಂದು ಪ್ರತಿರೋಧ ಒಡ್ಡಿದರು. ಸ್ವಾತಂತ್ರ್ಯಾ ನಂತರ 1948-49 ರಲ್ಲಿ ಅಸೆಂಬ್ಲಿಯಲ್ಲಿ ಮತ್ತೆ ಉಚಿತ ಶಿಕ್ಷಣದ ಕುರಿತು ಚರ್ಚೆಗಳಾಯ್ತು. ಅಲ್ಲಿಯವರೆಗೆ 14 ವರ್ಷದವರೆಗಿನ ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕೆಂದಿದ್ದು 11 ವರ್ಷಕ್ಕೆ ಇಳಿಸಬೇಕೆಂದು ಭೂಮಾಲೀಕರು ವಾದ ಮಾಡಿದರು. ಆದರೆ ಅಂಬೇಡ್ಕರ್ ಅವರು 11 ವರ್ಷದ ನಂತರ ಮಕ್ಕಳು ಬಾಲಕಾರ್ಮಿಕರಾಗುತ್ತಾರೆಂಬ ಭವಿಷ್ಯವನ್ನು ಮುಂದಾಲೋಚಿಸಿ 14 ವರ್ಷದವರೆಗಿನ ಶಿಕ್ಷಣವನ್ನು ಕಡ್ಡಾಯಗೊಳಿಸಲು ಒಪ್ಪಿಸಿದರು. ಆದರೆ ನಮ್ಮ ಅಸಮಾನ ಭಾರತದ ಸಾಮಾಜಿಕ ವ್ಯವಸ್ಥೆಗೆ ಇದರೊಂದಿಗೇ ಸಮಾನ ಶಿಕ್ಷಣ ವ್ಯವಸ್ಥೆಯೂ ಕಡ್ಡಾಯವಾಗಿ ಜಾರಿಗೊಳ್ಳಬೇಕಿತ್ತು. ಏಕೋ ಕಡ್ಡಾಯ ಶಿಕ್ಷಣದ ಕುರಿತೇ ನಡೆದ ಸುದೀರ್ಘ ಚರ್ಚೆಗಳು ಸಮಾನ ಶಿಕ್ಷಣದವರೆಗೆ ಆ ಹಂತದಲ್ಲಿ ತಲುಪಲೇ ಇಲ್ಲ.

ಭಾರತದಲ್ಲಿ ಬಹುಶಃ ಅತಿ ಹೆಚ್ಚು ಚರ್ಚೆಗೊಳಗಾಗಿದ್ದು ನಮ್ಮ ಶಿಕ್ಷಣ ವ್ಯವಸ್ಥೆ. ದೇಶದ ವಿವಿಧ ನ್ಯಾಯಾಲಯಗಳಲ್ಲಿ ಇಂದಿಗೂ ಶಿಕ್ಷಣಕ್ಕೆ ಸಂಬಂಧಿಸಿದ 3000 ಕೇಸುಗಳು ಜೀವಂತವಾಗಿರುವುದೇ ಇದಕ್ಕೆ ಸಾಕ್ಷಿ. ಎಷ್ಟೆಲ್ಲಾ ಸಂಘರ್ಷಗಳಾದರೂ ಸಂವಿಧಾನದ ಮೂಲ ಆಶಯವಾದ ಸಮಾನತೆ, ಸಾಮಾಜಿಕ ನ್ಯಾಯ, govt-school-kidsತಾರತಮ್ಯರಹಿತವಾದ ಶಿಕ್ಷಣದಿಂದ ನಿಧಾನಕ್ಕೆ ದೂರ ಸರಿಯುತ್ತಾ, ಇವುಗಳನ್ನೇ ಒಡೆದು ದೊಡ್ಡ ಗೋಡೆಗಳನ್ನು ಕಟ್ಟಿ ಶ್ರೇಣೀಕೃತ ಶಿಕ್ಷಣ ವ್ಯವಸ್ಥೆಯನ್ನು ಬೆಳೆಸಲಾಗುತ್ತಿದೆಯೆಂಬುದೇ ದುರಂತ. ವರ್ಗ ಹಾಗೂ ಪಟ್ಟಭದ್ರಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವ ಬಂಡವಾಳಶಾಹಿಗಳ ಕಪಿಮುಷ್ಟಿಗೆ ಸಿಕ್ಕಿ ಇಂದು ಶಿಕ್ಷಣವೂ ಒಂದು ವ್ಯಾಪಾರವಾಗಿಬಿಟ್ಟಿದೆ. ಸಾಮಾಜಿಕ-ಆರ್ಥಿಕತೆಯ ದಟ್ಟವಾದ ತಾರತಮ್ಯಕ್ಕೆ ಒಳಗಾಗಿದ್ದ, ಅಸಮಾನತೆಯೇ ತಾಂಡವವಾಡುತ್ತಿದ್ದ ನಮ್ಮ ದೇಶ, ಸಮಾನತೆಯ ಆಶಯದ ಸಂವಿಧಾನವನ್ನು ರೂಪಿಸಿಕೊಂಡ ನಂತರವಾದರೂ ಇದನ್ನೆಲ್ಲಾ ಮೀರಲು ತನ್ನದೇ ಆದ ಸಶಕ್ತ ಸಮಾನ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಿಕೊಳ್ಳಬೇಕಿತ್ತಲ್ಲವೇ? ಪ್ರಯತ್ನಗಳು ಆಗಲೇ ಇಲ್ಲವೆಂದಲ್ಲ……

ಸಮಾನ ಶಾಲಾ ವ್ಯವಸ್ಥೆಯನ್ನು ಪ್ರತಿಪಾದಿಸುವ 1964-66 ರ ಕೊಥಾರಿ ಆಯೋಗ ಸಮಾನ ಶಿಕ್ಷಣದ ಆಶಯದ ಸಾರ್ವಜನಿಕ ಶಾಲಾ ವ್ಯವಸ್ಥೆಯ ಮೂಲಕ ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಿ, ಸಾಮಾಜಿಕ ಬದಲಾವಣೆಯನ್ನು ತರುವ ದೊಡ್ಡ ಕನಸನ್ನು ಕಂಡಿತ್ತು. ಸಮಾನ ಶೈಕ್ಷಣಿಕ ವ್ಯವಸ್ಥೆಯು ದೇಶದ ಅಭಿವೃದ್ಧಿಗೆ ಭದ್ರ ತಳಪಾಯವಾಗುವುದಲ್ಲದೇ ರಾಷ್ಟ್ರೀಯ ಐಕ್ಯತೆಯನ್ನು ಸಾಧಿಸುವ ಆಶಯವಿತ್ತು. ಅದು ಸಾಕಾರವಾಗಿದ್ದರೆ ಬಹುಶಃ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಮಾತ್ರವಲ್ಲ ಸಾಮಾಜಿಕವಾಗಿಯೂ ಮಹತ್ತರವಾದ ಬದಲಾವಣೆಗಳಾಗಿರುತ್ತಿದ್ದವು. ಸಮಾನ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳ ಜಾತಿ, ಮತ, ಲಿಂಗ, ಆರ್ಥಿಕ-ಸಾಮಾಜಿಕ ಸ್ಥಿತಿ ಯಾವುದನ್ನೂ ಪರಿಗಣನೆಗೆ ತೆಗೆದುಕೊಳ್ಳದೇ ಎಲ್ಲರಿಗೂ ಶಿಕ್ಷಣವೆಂಬುದಕ್ಕೆ ಮಾತ್ರ ಪ್ರಾಮುಖ್ಯತೆ ನೀಡುವ ಆರೋಗ್ಯಕರವಾದ ಆಶಯವಿತ್ತು. ನೆರೆಹೊರೆ ಶಾಲಾ ಪದ್ಧತಿಯ ಮೂಲಕ ಒಂದು ಪ್ರದೇಶದ ಮಕ್ಕಳು rte_schoolಯಾವುದೇ ಭೇದವಿಲ್ಲದೇ, ಒಂದೇ ಶಾಲೆಯಲ್ಲಿ ಓದುವ ವ್ಯವಸ್ಥೆಯ ಜೊತೆಗೆ ಸಂಪೂರ್ಣವಾಗಿ ಉಚಿತವಾದ ಶಿಕ್ಷಣವನ್ನು ಸರ್ಕಾರವೇ ನೀಡುವುದರೊಂದಿಗೆ ಕನಿಷ್ಠ ಮಟ್ಟದ ಮೂಲಭೂತ ಸೌಕರ್ಯಗಳನ್ನು ಎಲ್ಲಾ ಶಾಲೆಗಳೂ ಹೊಂದಬೇಕೆಂದು ವಿಧಿಸಲಾಗಿತ್ತು. ಎಲ್ಲಕ್ಕಿಂಥಾ ಮುಖ್ಯವಾಗಿ ಪ್ರಾಥಮಿಕ ಹಂತದವರೆಗೆ ಮಾತೃಭಾಷಾ ಶಿಕ್ಷಣವನ್ನು ಕಡ್ಡಾಯಗೊಳಿಸಲಾಗಿತ್ತು. ಇವು ಸಮಾನತೆಯನ್ನು ಬಯಸುವವರೆಲ್ಲರೂ ಒಪ್ಪಿಕೊಳ್ಳುವಂತಹಾ ಆಶಯಗಳೇ.

ಈ ಕೊಥಾರಿ ಆಯೋಗದ ಶಿಫಾರಸ್ಸಿನಂತೆ ಸಮಾನ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೊಳಿಸಲು 1968, 1986 ಮತ್ತು 1992 ರ ರಾಷ್ಟ್ರೀಯ ಶಿಕ್ಷಣ ನೀತಿಗಳು ಭರವಸೆಯನ್ನೇನೋ ನೀಡಿದವು. ಆದರೆ ಅದನ್ನು ಜಾರಿಗೊಳಿಸುವ ಪ್ರಾಮಾಣಿಕ ಪ್ರಯತ್ನಗಳು ಆಗಲೇ ಇಲ್ಲ. ಈ ಉನ್ನತ ಕನಸಿನ ಸಾಕಾರಕ್ಕಾಗಿ ದೇಶದ ಒಟ್ಟು ಉತ್ಪನ್ನದ ಶೇಕಡ 6 ರಷ್ಟನ್ನು ಶಿಕ್ಷಣಕ್ಕೆ ಮೀಸಲಿಡಬೇಕೆಂದು ಕೊಥಾರಿ ಆಯೋಗ ಸೂಚಿಸಿದ್ದರೂ, ಇದುವರೆಗೂ ಯಾವ ಸರ್ಕಾರವೂ ಶೇಕಡ 3 ರ ಮೀಸಲನ್ನೂ ಮೀರಿಲ್ಲದಿರುವುದು ನಮ್ಮ ಪಟ್ಟಭದ್ರಹಿತಾಸಕ್ತಿಗಳಿಗೆ ಶೈಕ್ಷಣಿಕ ಕ್ಷೇತ್ರದ ಬಗೆಗಿನ ನಿರ್ಲಕ್ಷ್ಯವನ್ನೂ, ಮಾನವ ಸಂಪನ್ಮೂಲದ ಅಭಿವೃದ್ಧಿ ಕುರಿತು ಆಮೂಲಾಗ್ರ ಬದಲಾವಣೆಯ ಕನಸುಗಳಿಲ್ಲದಿರುವುದನ್ನು ಸೂಚಿಸುತ್ತದೆ. ಆಳುವ ವರ್ಗವಾಗಲೀ ಅಧಿಕಾರಶಾಹಿಯಾಗಲೀ ಕೊಥಾರಿ ಆಯೋಗದ ಮಹತ್ವವನ್ನು ಅರಿಯಲೇ ಇಲ್ಲ. ಅಥವಾ ಅರಿತರೂ ಅಸಮಾನತೆಯನ್ನೇ ಉಂಡುಡುವ ಪೂರ್ವಾಗ್ರಹಪೀಡಿತ ಮನಸ್ಸುಗಳು ಅದನ್ನು ಸದ್ದಿಲ್ಲದೇ ಪಕ್ಕಕ್ಕಿಟ್ಟವೋ? ಒಟ್ಟಿನಲ್ಲಿ ಶಿಫಾರಸ್ಸು ಮೂಲೆಗುಂಪಾಯ್ತು.

1986 ರಲ್ಲಿ ಎಚ್ಚೆತ್ತ ಸರ್ಕಾರ, ಈ ಶಿಫಾರಸ್ಸು ಜಾರಿಯಾಗದೇ ಇರುವುದಕ್ಕೆ ಕಾರಣಗಳನ್ನು ಹುಡುಕಲು ಆಚಾರ್ಯ ರಾಮಮೂರ್ತಿ ಸಮಿತಿಯನ್ನು ನೇಮಿಸಿತು. ಅದು ಸಮುದಾಯದಲ್ಲಿ ತಾರತಮ್ಯ ಮತ್ತು ಸಾಮಾಜಿಕ ಅಸಮಾನತೆ ಆಳವಾಗಿ ಬೇರೂರಿರುವುದರಿಂದ ಪರಸ್ಪರರಲ್ಲಿ ಅಸಹನೆ ಬೆಳೆಯುತ್ತಿದೆ. ಇಂತಹ ಸಂದರ್ಭದಲ್ಲಿ ಸಮಾನ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಹೇರಲಾಗುವುದಿಲ್ಲ, ಗುಣಾತ್ಮಕ ಶಿಕ್ಷಣ ಬೇಕೆನಿಸಿದ ಪೋಷಕರು ತಮಗೆ ಬೇಕೆನಿಸಿದ ಕಾನ್ವೆಂಟ್‌ಗಳಿಗೆ ಮಕ್ಕಳನ್ನು ಕಳಿಸುತ್ತಾರೆ ಅಲ್ಲಿ ಜಾತಿ-ಮತಗಳ ತಾರತಮ್ಯವಿಲ ಎಂದು ಹೇಳಿತು. ಆದರೆ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಮಕ್ಕಳ ನಡುವಿನ ವರ್ಗ ತಾರತಮ್ಯ, ಹಾಗೂ ಆಂಗ್ಲಭಾಷೆ ಹಾಗೂ ಮಾತೃಭಾಷಾ ಮಾಧ್ಯಮದ ಮಕ್ಕಳ ನಡುವಿನ ವ್ಯತ್ಯಾಸ ದಿನದಿಂದ ದಿನಕ್ಕೆ ಅಧಿಕವಾಗುತ್ತಾ ಈಗ ಅಗಾಧವಾಗಿ ಬೆಳೆದು ನಿಂತಿದೆ. private-schoolಸಮಾನ ಶಿಕ್ಷಣವೆಂಬುದು ಅಸಮಾನತೆಯನ್ನು ತೊಡೆಯುವಲ್ಲಿನ ಪ್ರಮುಖ ಅಸ್ತ್ರವಾಗಿರುವುದರಿಂದ, ಅದು ಹೇರಿಕೆ ಎಂದೆನಿಸದೇ ಕಷ್ಟವಾದರೂ ಎಲ್ಲರೂ ಅನುಸರಿಸಲೇ ಬೇಕಾದ ಕಾನೂನಾಗಬೇಕು. ಆಗ ಸಾಮಾಜಿಕ ಅಸಮಾನತೆಯನ್ನು ಮೀರುವ ಸ್ಪಷ್ಟ ಮಾರ್ಗಗಳು ಕಾಣಲಾರಂಭಿಸುತ್ತದೆ. ಸಮುದಾಯದಲ್ಲಿ, ಸಮಾಜದಲ್ಲಿ ಅಸಮಾನತೆಯನ್ನು ತೊಡೆಯಲೆಂದೇ ಸಮಾನ ಶಿಕ್ಷಣ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ನಿರ್ಧರಿಸಿದ್ದು ಎಂಬುದನ್ನು ನಾವು ಮರೆಯಬಾರದು. ಅಸಮಾನತೆಯ ಯಥಾಸ್ಥಿತಿಯೇ ಮುಂದುವರೆಯುವುದಾದರೆ ಇದನ್ನು ಸಂವಿಧಾನಬದ್ಧ ಪ್ರಜಾಪ್ರಭುತ್ವವಾದಿ ದೇಶವೆಂದು ಏಕೆ ಹೇಳಬೇಕು?

ಜೊತೆಗೆ ತಮ್ಮದೇ ಆದ ಶಾಲೆಗಳನ್ನು ತೆರೆದು ನಿರ್ವಹಿಸುವ ಹಕ್ಕು ಸಂವಿಧಾನದಲ್ಲಿಯೇ ಭಾಷಾ ಮತ್ತು ಧಾರ್ಮಿಕ ಅಲ್ಪಸಂಖ್ಯಾತರಿಗೆ ದೊರಕಿರುವುದರಿಂದ ಇದೂ ಸಮಾನ ಶಿಕ್ಷಣ ವ್ಯವಸ್ಥೆಗೆ ಮಾರಕ ಮತ್ತು ಸರ್ಕಾರವೇ ಒಂದು ಸೀಮಿತ ವರ್ಗಕ್ಕಾಗಿ ಸೈನಿಕ ಶಾಲೆ, ನವೋದಯ ವಿದ್ಯಾಶಾಲೆ, ಕೇಂದ್ರೀಯ ಶಾಲೆಗಳನ್ನು ನಡೆಸುವುದೇ ಸಂವಿಧಾನ ವಿರೋಧಿ ನಿಲುವು ಎಂದು ಸಮಿತಿ ಆರೋಪಿಸಿದ್ದರಲ್ಲಿ ಕೊಂಚ ವಾಸ್ತವಾಂಶವಿದೆ. ಆದರೆ ಅಲ್ಪಸಂಖ್ಯಾತರ ಹಕ್ಕುಗಳನ್ನು ಗೌರವಿಸುತ್ತಲೇ ಐಕ್ಯತೆಯ ಆಶಯವನ್ನೂ ಅಳವಡಿಸಿಕೊಳ್ಳಲು ಸಂವಿಧಾನದಲ್ಲೇ ಇರುವ ಅಪಾರ ಸಾಧ್ಯತೆಗಳೆಡೆಗೆ ನಾವಿಂದು ಗಮನಹರಿಸಬೇಕಾಗಿದೆ. ಇದರೊಂದಿಗೇ ಕಾನ್ವೆಂಟ್‌ಗಳು ದುಬಾರಿ ವಂತಿಗೆ, ಶುಲ್ಕ ಪಡೆದು ಉತ್ತಮ ಶೈಕ್ಷಣಿಕ ಹಾಗೂ ಮೂಲಭೂತ ಸೌಕರ್ಯವನ್ನು ನೀಡಲಾರಂಭಿಸಿದ್ದು, ಆ ಮಟ್ಟದ ವ್ಯವಸ್ಥೆಯನ್ನು ಒದಗಿಸಲು ಸರ್ಕಾರ ಸೋತಿದ್ದು, ಖಾಸಗಿಗೆ ಕಡಿವಾಣವಿಲ್ಲದ ಸರ್ಕಾರಿ ನುಸುಳುಗಳು ಸಮಾನ ಶಿಕ್ಷಣ ವ್ಯವಸ್ಥೆಯ ಆಶಯಕ್ಕೆ ಧಕ್ಕೆಯಾಗಿವೆ. ಖಾಸಗಿ ಶಾಲಾ ವ್ಯವಸ್ಥೆ ಈ 15-20 ವರ್ಷಗಳಲ್ಲಿ ಉಳ್ಳವರು-ಇಲ್ಲದವರ ಮಧ್ಯೆ ಬೃಹತ್ ಕಂದಕ ಸೃಷ್ಟಿಸಿಬಿಟ್ಟಿದೆ.

ಸಂವಿಧಾನದ 350[ಎ] ಕಲಂ ಪ್ರಾಥಮಿಕ ಹಂತದವರೆಗಾದರೂ ಮಾತೃಭಾಷೆ ಶಿಕ್ಷಣಕ್ಕೆ ಆಯಾ ರಾಜ್ಯ ಸರ್ಕಾರಗಳು ಅನುವು ಮಾಡಿಕೊಟ್ಟು tribal-schools-educationಮಕ್ಕಳ ಹಕ್ಕನ್ನು ಕಾಪಾಡಬೇಕೆಂದು ಪ್ರತಿಪಾದಿಸುತ್ತದೆ. 2009 ರಲ್ಲಿ ಜಾರಿಯಾದ ಶಿಕ್ಷಣ ಹಕ್ಕು ಕಾಯ್ದೆ ಕೂಡ ಇದನ್ನೇ ಹೇಳುತ್ತದೆ. 19[ಎ] ಕಲಂ ಮಗುವಿನ ಮಾತೃಭಾಷೆಯ ಕಲಿಕೆಗೆ ಒತ್ತು ನೀಡುತ್ತದೆ. ಅದನ್ನು ನಿರ್ಲಕ್ಷಿಸಿ ಬೇರೆ ಭಾಷೆಯನ್ನು ಹೇರುವುದರಿಂದ ಮಕ್ಕಳ ನಿಜವಾದ ವ್ಯಕ್ತಿತ್ವ ಪೂರ್ಣಪ್ರಮಾಣದಲ್ಲಿ ಹೊರಹೊಮ್ಮಲು ಸಾಧ್ಯವಾಗುವುದಿಲ್ಲ. ಹೀಗಾಗಿ ಮಗು ತನ್ನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು, ಕ್ರಿಯಾಶೀಲತೆಯನ್ನೂ ಕಳೆದುಕೊಳ್ಳುತ್ತದೆ. ಆದರೆ ನಮ್ಮ ಸರ್ಕಾರಗಳು, ಜೊತೆಗೆ ನ್ಯಾಯಂಗವೂ ಈ ಆಶಯಕ್ಕೆ ಗಂಭೀರವಾದ ಒತ್ತನ್ನು ನೀಡದಿರುವುದು ನಿಜಕ್ಕೂ ಖೇದಕರ.

ಜಾಗತೀಕರಣದ ದಾಳಿಯಿಂದಾಗಿ ಪ್ರಾದೇಶಿಕ ಸಂಸ್ಕೃತಿ, ಭಾಷೆ, ಜಾನಪದೀಯ ಸತ್ವ ನಿಧಾನಕ್ಕೆ ಕಣ್ಮರೆಯಾಗುತ್ತಿರುವುದನ್ನು ಕಾಣುತ್ತಿದ್ದೆವೆ. ಆಧುನಿಕ ಅವಶ್ಯಕತೆಗಳ ನೆಪ ಹೇಳಿ ನಾವೂ ಆಂಗ್ಲಭಾಷೆ ಕಲಿಕೆಯೆಡೆಗೆ ಮುಖ ಮಾಡುತ್ತಿದ್ದೇವೆ. ನಮ್ಮ ಉಚ್ಛ ನ್ಯಾಯಾಲಯವೂ ಶಾಲೆ ಹಾಗೂ ಭಾಷಾ ಮಾಧ್ಯಮದ ಆಯ್ಕೆಯನ್ನು ಪೋಷಕರಿಗೇ ಕೊಟ್ಟಿದ್ದು ಸಮಾನ ಶಿಕ್ಷಣ ವ್ಯವಸ್ಥೆಯೆಡೆಗಿನ ಹಿನ್ನೆಡೆಯಾಗಿದೆ. ಕಳೆದ 19 ವರ್ಷದಿಂದ ನಡೆಯುತ್ತಿರುವ ಕರ್ನಾಟಕದ ಭಾಷಾ ಮಾಧ್ಯಮದ ವಿವಾದವನ್ನು ಮೊನ್ನೆ ಸರ್ವೋಚ್ಛ ನ್ಯಾಯಾಲಯ, ಇದರಲ್ಲಿ ಸಂವಿಧಾನಾತ್ಮಕ ತೊಡಕುಗಳಿರುವುದರಿಂದ ಸಾಂವಿಧಾನಿಕ ಪೀಠವೇ ಇದನ್ನು ಬಗೆಹರಿಸಲೆಂದು ಹೇಳಿ ಕೈ ತೊಳೆದುಕೊಂಡಿದೆ. ತೀರ್ಪು ಭಾಷಾಮಾಧ್ಯಮದ ಪರವಾಗಿ ಬಂದರೆ ಭಾರತದ ಒಟ್ಟು ಶೈಕ್ಷಣಿಕ ವ್ಯವಸ್ಥೆಯೇ ಬದಲಾಗುವ ಸಾಧ್ಯತೆಗಳಿವೆ. ಹೀಗೆ ಸಮಾನ ಶಿಕ್ಷಣಕ್ಕಾಗಿ ನಡೆದ ಪ್ರಯತ್ನಗಳೆಲ್ಲವೂ ವಿಫಲವಾಗಿದ್ದಕ್ಕೆ ಬಹುಶಃ ನಮ್ಮನ್ನಾಳುವ ಪ್ರಭುಗಳಿಗೆ ಇಚ್ಛಾಶಕ್ತಿ ಇಲ್ಲದ್ದು, ಆಡಳಿತಯಂತ್ರದ ವೈಫಲ್ಯ, ನ್ಯಾಯಾಂಗದ ವ್ಯತಿರಿಕ್ತ ತೀರ್ಪುಗಳು, ಜನರ ನಿರಾಸಕ್ತಿ ಎಲ್ಲವೂ ಕಾರಣವಿರಬಹುದೆನಿಸುತ್ತದೆ.

ಜಾಗತಿಕ ಮಾರುಕಟ್ಟೆಯ ಪ್ರಭಾವದಿಂದಲೇ ರೂಪಿತವಾದ 2009 ರ ಶಿಕ್ಷಣ ಹಕ್ಕು ಕಾಯ್ದೆಯಿಂದ ಸಮಾನ ಶಿಕ್ಷಣ ಸಾಧ್ಯವೆಂದು ಸರ್ಕಾರ ಹೇಳುತ್ತಿದೆ. ಆದರೆ ಇಲ್ಲಿ ನಾವು ಮುಖ್ಯವಾಗಿ ಗಮನಿಸಬೇಕಾದ್ದೆಂದರೆ ಇದು ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆಯೇ ಹೊರತು ಸಮಾನ ಶಿಕ್ಷಣ ಕಾಯ್ದೆಯಲ್ಲ! ನಮ್ಮ ಸಂವಿಧಾನದಲ್ಲೇ ಶಿಕ್ಷಣವನ್ನು ಒಂದು ಹಕ್ಕಾಗಿ ಪರಿಗಣಿಸಿದ ನಂತರ ಇದಕ್ಕಾಗಿ ಇನ್ನೊಂದು ಕಾಯ್ದೆಯ ಅವಶ್ಯಕತೆಯೂ ಇರಲಿಲ್ಲ. ಜೊತೆಗೆ ಶೇಕಡಾ 25 ರ ಹಿಂದುಳಿದ ವರ್ಗಗಳ ಮೀಸಲಾತಿ, ಶಿಕ್ಷಣ ಖಾಸಗೀಕರಣದ ಸ್ಪಷ್ಟ ನಿದರ್ಶನವಾಗಿದೆ. ಈ ಮೀಸಲಾತಿಯೇ ಕೆಲವೇ ವರ್ಷಗಳಲ್ಲಿ ಸರ್ಕಾರಿ ಶಿಕ್ಷಣ ವ್ಯವಸ್ಥೆಗೆ ಮಾರಕವಾಗಿ ಶಾಲೆಗಳು ಮುಚ್ಚಲ್ಪಟ್ಟರೆ, ಇನ್ನೂ ಶಾಲೆಯಿಂದ ಹೊರಗುಳಿದ ಲಕ್ಷಾಂತರ ಮಕ್ಕಳಿಗೆ ಶಿಕ್ಷಣ ಕೊಡುವವರಾರು? ಲಾಭಕ್ಕಾಗಿ ಶಾಲೆಯೆಂಬ ಅಂಗಡಿಗಳನ್ನು ತೆರೆದಿರುವ ಖಾಸಗಿಯವರು ಕಾಳಜಿಯಿಂದ ಮಕ್ಕಳನ್ನು ಹುಡುಕಿ ತಂದು ಶಿಕ್ಷಣ ನೀಡುವ ಜವಾಬ್ದಾರಿ ಹೊರುತ್ತಾರೆಯೇ? ಎಲ್ಲವನ್ನೂ ಖಾಸಗಿಯವರೇ ನಿರ್ವಹಿಸುವುದಾದರೆ ಸರ್ಕಾರದ ಹೊಣೆಗಾರಿಕೆಯೇನು? ಜೊತೆಗೆ 6 ವರ್ಷದ School_children_line_Cochin_Kerala_Indiaಒಳಗಿನ ಮಕ್ಕಳ ವಿದ್ಯಾಭ್ಯಾಸದ ಕುರಿತು ಈ ಕಾಯ್ದೆ ಮತ್ತು ಇದುವರೆಗಿನ ಎಲ್ಲಾ ಸರ್ಕಾರಿ ಶೈಕ್ಷಣಿಕ ನೀತಿಗಳೂ ಮೌನವಾಗಿರುವುದು ಏನನ್ನು ಸೂಚಿಸುತ್ತದೆ? ಸರ್ಕಾರದಿಂದ ಈ ವಯಸ್ಸಿನ ಮಕ್ಕಳಿಗೆ ಯಾವುದೇ ಶೈಕ್ಷಣಿಕ ವ್ಯವಸ್ಥೆ ಇಲ್ಲದಿರುವುದರಿಂದ ಸಹಜವಾಗಿ ಅವರು ಖಾಸಗಿ ವ್ಯವಸ್ಥೆಯ ಮೊರೆ ಹೋಗುತ್ತಾರೆ. ಇಂತಹವರು 6 ವರ್ಷ ತುಂಬಿದ ನಂತರ ಮತ್ತೆ ಸರ್ಕಾರಿ ಶಾಲೆಗಳಿಗೆ ಹಿಂದಿರುಗುತ್ತಾರೆ ಎಂಬ ನಿರೀಕ್ಷೆಯೇ ಮೂರ್ಖತನದ್ದಾಗುತ್ತದೆ. ಖಾಸಗಿಗೆ ಕಡಿವಾಣ ಸಾಧ್ಯವಿಲ್ಲವೆಂದಾದರೆ ಶಿಕ್ಷಣ ರಾಷ್ಟ್ರೀಕರಣವೊಂದೇ ಅಂತಿಮ ಮದ್ದೇನೋ ಎನಿಸುತ್ತದೆ. ಈ ಶಿಕ್ಷಣ ಹಕ್ಕು ಕಾಯ್ದೆಗೇ ನೆರೆಹೊರೆ ತತ್ವವನ್ನು ಮೂಲವಾಗಿಟ್ಟುಕೊಂಡು ಖಾಸಗಿ ಹಾಗೂ ಸರ್ಕಾರಿ ಶಾಲೆಗಳೆರಡಕ್ಕೂ ಅನ್ವಯಿಸುವಂತೆ ಸಮಾನ ಶಾಲಾ ವ್ಯವಸ್ಥೆ, ಸಮಾನ ಪಠ್ಯ, ಸಮಾನ ಮೂಲಭೂತ ಸೌಲಭ್ಯಗಳಿರುವ, ಆಯಾ ರಾಜ್ಯಗಳ ಮಾತೃಭಾಷೆಯನ್ನು ಪ್ರಾಥಮಿಕ ಹಂತದವರೆಗಾದರೂ ಶಿಕ್ಷಣ ಮಾಧ್ಯಮವಾಗಿಸಿ ಇಂಗ್ಲಿಷನ್ನು ಒಂದನೇ ತರಗತಿಯಿಂದಲೇ ಒಂದು ಭಾಷೆಯಾಗಿ ಕಲಿಸುವ ಸಮಾನ ಶಿಕ್ಷಣವನ್ನು ಪ್ರತಿಪಾದಿಸುವ ತಿದ್ದುಪಡಿ ತಂದರೆ ಮಾತ್ರ ಏನಾದರೂ ಬೇರುಮಟ್ಟದ ಗುಣಾತ್ಮಕ ಬದಲಾವಣೆಗಳಾಗಬಹುದೆನಿಸುತ್ತದೆ.

“ಮಾತೃಭಾಷೆ ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ಒಳಗೊಂಡೇ ಸಮಾನ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಬೇಕು. ಖಾಸಗಿ ಶಿಕ್ಷಣ ವ್ಯವಸ್ಥೆ ತಾರತಮ್ಯಕ್ಕಾಗಿಯಲ್ಲದೇ, ಲಾಭಕ್ಕಾಗಿಯಲ್ಲದೇ ಸರ್ಕಾರದ ನಿಯೋಜಿತ ಸಂಸ್ಥೆಯಾಗಿ ಕಾರ್ಯನಿರ್ವಹಿಸಬೇಕು. ರಾಜ್ಯ ಸರ್ಕಾರದ ಆದೇಶ-ಶಿಸ್ತು ಮತ್ತು ರಾಷ್ಟ್ರೀಯ ಶೈಕ್ಷಣಿಕ ನೀತಿಯಡಿಯೇ ಕೆಲಸ ಮಾಡಬೇಕು. ೬ವರ್ಷಕ್ಕೆ ಮೊದಲಿನಿಂದ ಹಿಡಿದು ೧೪ವರ್ಷದವರೆಗೆ ಸಂಪೂರ್ಣ ಉಚಿತ ಶಿಕ್ಷಣ, ಸರ್ಕಾರ ನೀಡಬೇಕು ಮತ್ತು ವಿಕೇಂದ್ರಿತ ನೆಲೆಯಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಹಣಕಾಸು ನೆರವನ್ನು ಸರ್ಕಾರವೇ ನೀಡಬೇಕು. ಸಂವಿಧಾನದ ಸಮಾನತೆಯ ತತ್ವಕ್ಕೆ ಬದ್ಧವಾಗಿ ಶಿಕ್ಷಣ ವ್ಯವಸ್ಥೆಯಿರಬೇಕು. ಸಮಾನ ಶಿಕ್ಷಣವನ್ನು ಏಕರೂಪ ಶಿಕ್ಷಣವೆಂದು ಗ್ರಹಿಸಿದ್ದರಿಂದ ಇದರ government_schoolಬಗ್ಗೆ ದ್ವಂದ್ವವೇರ್ಪಟ್ಟಿದೆ. ಅದನ್ನು ಸರಿಯಾದ ಕ್ರಮದಲ್ಲಿ ತಿಳಿಹೇಳಿ ಜನಾಭಿಪ್ರಾಯ ಮೂಡಿಸಬೇಕು,” ಎನ್ನುತ್ತಾರೆ ಖ್ಯಾತ ಶಿಕ್ಷಣತಜ್ಞ ಅನಿಲ್ ಸದ್ಗೋಪಾಲ್.

ಇತ್ತೀಚೆಗೆ ಕರ್ನಾಟಕ ಸರ್ಕಾರ ನೆರೆಹೊರೆ ಶಾಲಾ ನಿಯಮವನ್ನು ಅನುಸರಿಸಿ ಪಬ್ಲಿಕ್ ಶಾಲೆಗಳನ್ನು ಸದ್ಯಕ್ಕೆ ಪ್ರತಿ ಜಿಲ್ಲೆಯ ಒಂದು ಗ್ರಾಮಪಂಚಾಯಿತಿಯಲ್ಲಿ ಪ್ರಾಯೋಗಿಕವಾಗಿ ಸ್ಥಾಪಿಸುವ ಪ್ರಸ್ತಾಪ ಮಾಡಿದೆ. ಸುತ್ತಲಿನ ಸರ್ಕಾರಿ ಶಾಲೆಗಳನ್ನು ಇದರಲ್ಲಿ ವಿಲೀನಗೊಳಿಸುವ ಉದ್ದೇಶವಿದೆ. ಆದರೆ ಈ ನೆರೆಹೊರೆ ನಿಯಮ ಸರ್ಕಾರಿ ಶಾಲೆಗಳಿಗೆ ಮಾತ್ರ ಅನ್ವಯಿಸಿ ಖಾಸಗಿ ಶಾಲೆಗಳನ್ನು ಇದರಿಂದ ಹೊರಗಿಟ್ಟರೆ ಅದು ಅಸಮಾನತೆಯನ್ನು ಮತ್ತಷ್ಟು ವೃದ್ಧಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

ವೈವಿಧ್ಯತೆಯ ಭಾರತ ದೇಶಕ್ಕೆ ಐಕ್ಯತೆಯನ್ನು ಕಲಿಸಲಾಗುವುದು ಸಮಾನ ಶಿಕ್ಷಣ ವ್ಯವಸ್ಥೆಯಿಂದ. ಇದನ್ನು ಗುರಿಯೆಡೆಗಿನ ಪಯಣವಾಗಿಸಿ, ಹಂತ ಹಂತವಾಗಿ ಸಮಾನತೆಯನ್ನು ಅನುಷ್ಠಾನಗೊಳಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ರೂಪಿಸಲು ಸರ್ಕಾರ ಗಟ್ಟಿ ಮನಸು ಮಾಡಿದರೆ ಮಾತ್ರ ಈ ಆಶಾವಾದ ಉಳಿದೀತೇನೋ?

“ಬೆಂದಕಾಳೂರು” – ಗಾಂಧಿ ಜಯಂತಿ ಕಥಾ ಸ್ಪರ್ಧೆ 2013 ರ ಬಹುಮಾನಿತ ಕತೆ

– ವಿಜಯ್ ಹೂಗಾರ್

ಯಾವುದೂ ಪೂರ್ಣವಾಗಿಲ್ಲ, ಯಾವುದೂ ಪೂರ್ಣವಾಗುವದಿಲ್ಲ. ನನ್ನೊಳಗೆ ಒಬ್ಬ ಸೃಷ್ಟಿಕರ್ತನಿದ್ದಾನೆ ಎಂದುಕೊಂಡೆ ನನ್ನ ಬರವಣಿಗೆಯನ್ನ ಆರಂಭಿಸಿದ್ದೇನೆ. ಕೆಲವು ಕಥೆಗಳಾಗಿ ನನ್ನಿಂದ ಮುಕ್ತಿ ಪಡೆದವು. ಇನ್ನು ಕೆಲವು ಆತ್ಮಕಥೆಯಾಗಲು ನನ್ನಲ್ಲೇ ಬಂಧಿಯಾಗಿವೆ. ಬೆಂಗಳೂರಿಗೆ ಬಂದು ಅದೆಷ್ಟೋ ವರ್ಷಗಳಾಗಿಯೇ ಹೋಗಿದ್ದವು. ಅಂದುಕೊಂಡ ಕೆಲಸ ಇದ್ದ ಜಾಗದಲ್ಲೇ ಸತ್ತು ಹೋಗಿತ್ತು. ಸಾವೇ ಇಲ್ಲದ ಯುಗಕ್ಕೆ ದಿನಗಳು ಸಂತಾನವಾಗಿ ಹುಟ್ಟುತ್ತಿದ್ದವು. ದಿನದ ಸಾವು ಮರುದಿನಕ್ಕೆ ‘ಖೋ’ ಕೊಟ್ಟಂತೆ. ಈ ಆಟದಲ್ಲಿ ನಮ್ಮ ಓಟ ನಿರಂತರ. ಮೈ ಮರೆಯುವ ಹಾಗಿಲ್ಲ. ಮರೆತರೆ ಅಂದಿನ ದಿನದ ಸಾವು ತನ್ನ ಜೊತೆಗೆ ನಮ್ಮನ್ನು ಕರೆದೊಯ್ಯುತ್ತದೆ.

***

ಚಿರತೃಷೆ

ಕತ್ತಲಿಗೆ ಸದಾ ಹಲ್ಲು ಕಿರಿದು ನಿಂತ ಬೀದಿ ದೀಪಕ್ಕೆ ಶಾಂತಿ ಸಿಕ್ಕಿದ್ದು ಹಗಲು ತನ್ನ ಕಾಲಿಂದ ನಸುಕು ಅಳಿಸಿ ಹಾಕಿದಾಗ. ಅಂದಿನ ಮುಂಜಾವಿನ ತುಂತುರು ಮಳೆ, ಗುರಿಯಿಟ್ಟು ಕಾಲಿಡುತ್ತಾ ರಸ್ತೆ ದಾಟುವ ಸಕಲ ಮನುಕುಲದ ಬೈಗುಳಕ್ಕೆ ಬಲಿಯಾಗಿತ್ತು ಮಳೆ. ನೆರಿಗೆಯಲಿ ತೋಯ್ದು ಒದ್ದೆಯಾದ ಬೆಳಕು ಕೆಳಗಿಳಿಯದೆ ಮೋಡದಲ್ಲೇ ಅಡಗಿಕೊಂಡಿತ್ತು. ಅಕ್ಟೋಬರ್ ಎರಡರ ಪ್ರಯುಕ್ತ ಇಡಿ ಬೆಂಗಳೂರೇ ರಜೆಯ ಮಜೆಯಲ್ಲಿತ್ತು. ಕೆಲವು ಶಾಲೆಯ ಆವರಣಗಳು, ಸರಕಾರಿ ದಫ್ತರುಗಳು ಬೆಳಗಿನ ಕೆಲ ಕಾಲ ಬಿಗಿ ಹಿಡಿದ ಉಸಿರಿನಂತೆ ಜಾಗೃತವಾಗಿದ್ದವು. ಅಲ್ಲಲ್ಲಿ ಬಿಳಿ ಬಟ್ಟೆ ಧರಿಸಿ ಅಮ್ಮನ ಕೈ ಹಿಡಿದು ನಾಜೂಕಾಗಿ ಹೆಜ್ಜೆ ಇಡುತ್ತ ನಡೆಯುವ ಮಕ್ಕಳು ಶಾಲೆಯ ತಲುಪುವ ಅವಸರದಲ್ಲಿದ್ದರು.

ಮುಂಜಾವ ಮಳೆ ಕೆಲವರಿಗೆ ಕಾಫಿ ಕುಡಿಯುವ ನಶೆ ಏರಿಸುತ್ತದೆ. ರಾತ್ರಿಯಿಡಿ ಫ್ಲೈ ಓವರ್ ಕೆಳಗೆ ನಡಗುತ್ತ ಕುಳಿತ ಜನರಿಗೆ ಚಿರನಿದ್ರೆಗೆ ಕೈ ಬೀಸಿ ಕರೆಯುತ್ತದೆ. ಇನ್ನೂ ಕೆಲವರಿಗೆ ಹಳೆ ನೆನಪಿನ ಹೊಸ ಹೊನಲು ತರಿಸುತ್ತದೆ. ಪೇಪರ್ ಹಾಕುವ ಹುಡುಗನಿಗೆ ಜೊತೆಗೊಂದು ಪ್ಲಾಸ್ಟಿಕ್ ಕವರ್ ಜೊತೆ ತರಲು ನೆನಪಿಸುತ್ತದೆ. ಕೆಲವರಿಗೆ ಮೊದಲ ಮಳೆಯಲಿ ಪ್ರೇಯಸಿಗೆ ಮುತ್ತಿಡುವಂತೆ ಒತ್ತಾಯಿಸುತ್ತದೆ. ಇನ್ನೂ ಕೆಲವರಿಗೆ ಕೊರೆವ ಚಳಿ ಮೈ ಮುಚ್ಚುವ ಬಟ್ಟೆಗೆ ಪರಿತಪಿಸುವಂತೆ ಮಾಡುತ್ತದೆ. ಮಳೆಯ ಲೀಲೆಯೇ ಅಪಾರ. ಅವರವರ ಗ್ರಹಿಕೆಗೆ ಮಳೆ ತನ್ನ ಮಗ್ಗುಲು ಬದಲಾಯಿಸುತ್ತದೆ.

ಭಗ್ನ ಸೇತುವೆಯಂತೆ ಅರ್ಧಕ್ಕೆ ನಿಂತ ಫ್ಲೈ ಓವರ್ ಪಕ್ಕ ಎರಡು ಅಂತಸ್ತಿನ ವಾಣಿಜ್ಯ ಮಳಿಗೆಯ ಮೂಲೆಯಲ್ಲಿ ವಿನಾಯಕ್ ಇಂಟರ್ನೆಟ್ ಬ್ರೌಸಿಂಗ್ ಸೆಂಟರ್ ಅನ್ನುವ ಮಳೆಗೆಯೊಂದು ಬಹುದಿನದಿಂದ ನೆಲೆಯುರಿತ್ತು. ವಿಶಾಲವಾದ ಒಳಗಂಗಣದಲ್ಲಿ ಸುಮಾರು ಇಪ್ಪತ್ತು ಕಂಪ್ಯೂಟರ್ ಇಟ್ಟಿಕೊಳ್ಳುವ ಸಾಮರ್ಥ್ಯ ಹೊಂದಿತ್ತು. artಒಂದು ಸಾಲಿನಲ್ಲಿ ಹತ್ತು ಕಂಪ್ಯೂಟರ್ ಮತ್ತದರ ಅಭಿಮುಖವಾಗಿ ಮಿಕ್ಕ ಹತ್ತು ಕಂಪ್ಯೂಟರ್‌ಗಳು ನಡುವೆ ಓಡಾಡುವ ಜನರ ಅನಾಗರಿಕ ದೃಷ್ಟಿಯ ಪಾಲಾಗಿತ್ತು. ಇದರ ಮಾಲೀಕ ವಿನಾಯಕ ಮದುವೆಯಾಗಿ ಕೆಲ ವರ್ಷಗಳ ಬಳಿಕ ಹೆಂಡತಿಯನ್ನು ಕಳೆದುಕೊಂಡಿದ್ದ. ಬದುಕಿದ್ದಾಗ ಆಗಾಗ ಬಂದು ಲೆಕ್ಕ ಸಂಭಾಳಿಸುತ್ತಿದ್ದಳು. ಕಂಪ್ಯೂಟರ್ ಬಳಸುವ ಇನ್ ಟೈಮ್, ಔಟ್ ಟೈಮ್ ಎಲ್ಲ ವ್ಯವಸ್ಥಿತವಾಗಿ ಬರೆದಿಡುತ್ತಿದ್ದಳು. ಅವಳ ಆಕಸ್ಮಿಕ ಸಾವಿನ ನಂತರ ಲೆಕ್ಕ ಬರೆದಿಡಲು ಕೆಲ ಹುಡುಗರಿಗೆ ಕೆಲಸಕ್ಕೆ ಇಟ್ಟುಕೊಂಡಿದ್ದ. ಆದರೆ ಯಾರೂ ಅಲ್ಲಿ ತುಂಬಾ ದಿವಸ ಕೆಲಸ ಮಾಡುತ್ತಿರಲಿಲ್ಲ. ಕಾರಣ ಮಾತ್ರ ತಿಳಿಯುತ್ತಿರಲಿಲ್ಲ. ಅದೇ ಹೊತ್ತಲ್ಲಿ ಗೆಳೆಯ ಸುಧಾಂಶುವಿನ ಶಿಫಾರಸಿನಿಂದ ನಿಶೀಥ ಅಲ್ಲಿ ಕೆಲಸಕ್ಕೆ ಸೇರಿದ್ದ.

ನಿಶೀಥ ಬೆಂಗಳೂರಿನಲ್ಲಿ ಮಾಡಿರದ ಕೆಲಸವೇ ಉಳಿದಿರಲಿಲ್ಲ. ಬೂಟ್ ಪಾಲಿಶು, ಬ್ಲಾಕ್ ಟಿಕೆಟ್ ಮಾರೋದು, ‘ರೇ ಬ್ಯಾನ್’ ಹೆಸರಿನ ಖೋಟಾ ತಂಪು ಕನ್ನಡಕ ಮಾರೋದು, ತಳ್ಳು ಗಾಡಿಯಲಿ ಸೋವಿ ದರದ ಇಂಗ್ಲಿಷ್ ಪುಸ್ತಕ ಮಾರೋದು, ಫುಟ್‌ಪಾತಿನಲ್ಲಿ ಹತ್ತು ರೂಪಾಯಿಗೆ ಎರಡು ಬಿಳಿ ಬಣ್ಣದ ಕರ್ಚಿಫು ಮಾರೋದು, ಹೀಗೆ ಹತ್ತು ಹಲವಾರು ಕೆಲಸಗಳನ್ನು ಮಾಡಿ ಕೊನೆಗೆ ಇಲ್ಲಿ ಬಂದು ನಿಂತಿದ್ದ. ಇರಲು ಮನೆ ಇರಲಿಲ್ಲ. ಅದಕ್ಕೆ ಮಾಲೀಕ ಅದೇ ಮಹಡಿಯ ಅವನ ಸ್ಟೋರ್ ರೂಮ್‌ನಲ್ಲಿ ಸ್ವಲ್ಪ ಜಾಗ ಮಾಡಿ ಸೂರು ಕೊಟ್ಟಿದ್ದ.

ಬೆಂಗಳೂರಿಗೆ ಬಂದು ಅದೆಷ್ಟೋ ವರ್ಷಗಳೇ ಆದ ನಿಶೀಥನಿಗೆ ತಾನು ಬಂದ ಕಾರಣವೇ ಮರೆತು ಹೋದಂತಾಗಿತ್ತು. ಪಿಯುಸಿಯಲ್ಲಿ ಪ್ರೀತಿ ಮಾಡಿ ಓಡಿ ಮದುವೆಯಾಗಿ ಬಂದು ಸ್ವಲ್ಪ ದಿವಸ ಸಂಸಾರ ಮಾಡಿದ್ದ. ಮದುವೆಯಾದ ಕೆಲವು ದಿನಗಳಲ್ಲಿ ಹುಡುಗಿ ಮತ್ತೆ ತವರು ಮನೆಗೆ ಓಡಿ ಹೋಗಿದ್ದಳು. ವರ್ಷಗಳ ಹಿಂದೆ ಹಾಕಿದ್ದ ಡೈವೋರ್ಸ್ ಮೊನ್ನೆ ಕ್ಲಿಯರ್ ಆಗಿ ಈಗ ಒಂಟಿಯಾಗಿದ್ದಾನೆ. ಊರಿಗೆ ಹೋಗಬಹುದಲ್ಲ ಅಂತ ಯಾರಾದರು ಕೇಳಿದರೆ ಅವನು ಇನ್ಯಾವ ಮುಖ ಇಟ್ಕೊಂಡ್ ಹೋಗಲಿ ಇಲ್ಲೇ ಏನಾದ್ರು ಮಾಡಿ ಜೀವನ ಸಾಗಸ್ತಿನಿ ಅಂತ ಹೇಳ್ತಿದ್ದ. ಕೊನೆಗೂ ಇಂಟರ್ನೆಟ್ ಬ್ರೌಸಿಂಗ್ ಸೆಂಟರ್‌ನಲ್ಲಿ ಸಿಕ್ಕ ಕೆಲಸ ಅವನಿಗೆ ಸೂರು ಮತ್ತು ಊಟಕ್ಕೆ ಸರಿ ಹೋಗುತ್ತಿತ್ತು. ಪ್ರತಿ ದಿನ ಸಾವಿರಾರು ರೂಪಾಯಿಗಳ ವ್ಯವಹಾರ ಆಗುತ್ತಿತ್ತು. ಮಳಿಗೆಯ ಪಕ್ಕದ ರಸ್ತೆಯಲ್ಲೇ ಒಂದು ಪಿಯು ಕಾಲೇಜ್ ಇದ್ದುದ್ದರಿಂದ ಸೀಸನ್‌ಗಳ ಹಂಗಿಲ್ಲದೆ ಸದಾ ಜನಭರಿತ ವಾಗಿರುತ್ತಿತ್ತು.‍

ಕೆಲಸಕ್ಕೆ ಸೇರಿದ ಮೊದಮೊದಲು ಕೆಲಸದ ಮೇಲೆ ತುಂಬಾ ಆಸಕ್ತಿ ಇಟ್ಟಿಕೊಂಡಿದ್ದ. ಬಂದವರ ಐ.ಡಿ ಕಾರ್ಡ್ ಕೇಳಿಯೇ ಕಂಪ್ಯೂಟರ್ ಮುಂದೆ ಕುಳಿತುಕೊಳ್ಳಲು ಕೊಡುತ್ತಿದ್ದ. ಸಮಯ ಮುಗಿದ ತಕ್ಷಣ ಮಾಸ್ಟರ್ ಕಂಪ್ಯೂಟರ್‌ನಿಂದ ಕನೆಕ್ಷನ್ ಕೀಳುತ್ತಿದ್ದ. ಗೋಡೆಗಳ ಮೇಲೆಲ್ಲಾ ‘ಧೂಮಪಾನ ನಿಷೇಧಿಸಿದೆ’, ‘ಇಲ್ಲಿ ಉಗುಳಬಾರದು’, ‘ಗಂಟೆಗೆ ಇಂತಿಷ್ಟು ಮತ್ತೆ ಮಿನಿಮಂ ಇಂತಿಷ್ಟು’ ಅಂತ ನಾಮಫಲಕಗಳೆಲ್ಲ ಹಾಕಿಸಿದ್ದ. ಒತ್ತಾಯದ ಮೇರೆಗೆ ಮಾತ್ರ ಹೆಡ್‌ಫೋನ್ ಕೊಡುತ್ತಿದ್ದ. ಮಾಲೀಕ ಬಂದ ತಕ್ಷಣ ಎಲ್ಲ ಲೆಕ್ಕ ಸರಿಯಾಗಿ ನೀಡುತ್ತಿದ್ದ.

ದಿನ ಕಳೆದಂತೆ ಕೆಲವು ಅಹಿತಕರವಾದ ಘಟನೆಗಳು ಅವನ ಗಮನಕ್ಕೆ ಬರುತ್ತಾ ಹೋದವು. ಕೀ ಬೋರ್ಡ್ ಮತ್ತು ಮೌಸ್ ಯಾವಾಗಲು ಹಸಿಯಾಗಿ ಜಿಗುಟಾಗಿರುತ್ತಿತ್ತು. ಕ್ಯಾಬಿನ್‌ನಿಂದ ವಿಚಿತ್ರವಾದ ಸದ್ದು ಬರುತ್ತಿತ್ತು. ಸಂಜೆ ಬಾಗಿಲು ಹಾಕಲು ಹೋಗುವ ಮೊದಲು ಎಲ್ಲ ಕಂಪ್ಯೂಟರ್ ಆಫ್ ಮಾಡುವಾಗ ಅಸಂಖ್ಯಾತ ನೀಲಿಚಿತ್ರಗಳು ಡೌನ್ಲೋಡ್ ಆಗಿ ಬಿದ್ದಿರುತ್ತಿದ್ದವು.

ದಿನ ಕಳೆದಂತೆ ಎಲ್ಲವು ಸರ್ವೇ ಸಾಮಾನ್ಯ ಅಂತ ತಿಳಿಯುತ್ತಾ ಬಂತು. ಅಲ್ಲಿಗೆ ಬರುವ ಹುಡುಗರು ಒಳ ಹೊಕ್ಕರೆ ಎರಡು, ಮೂರು ಗಂಟೆಗಳು ಹೊರ ಬರುತ್ತಲೇ ಇರಲಿಲ್ಲ. ಕಣ್ಣಲ್ಲಿ ವಿಪರೀತ ದಾಹವೊಂದರ ನಾಲಿಗೆ ಸದಾ ಹೊರಚಾಚಿರುತ್ತಿತ್ತು. ಮರಭೂಮಿಯ ಚಿರತೃಷೆಯಂತೆ. ಅದೇನೋ ಸಂತೃಪ್ತವಲ್ಲದ ಭಾವ. ಅದ್ಯಾವದೋ ತುರ್ತು ಪರಿಸ್ಥಿತಿಯಲ್ಲಿ ಸಿಕ್ಕಿಬಿದ್ದವರ ಹಾಗೆ, ಏನೋ ಕಳೆದುಕೊಂಡ ಹಾಗೆ. ಇನ್ಯಾವದೋ ಹುಡುಕುವ ಹಾಗೆ. ಯಾವುದೊ ಮಾಯಮೃಗದ ಹಿಂದೆ ಜೋತು ಬಿದ್ದಂಗೆ. ವಯಸ್ಸಿನ ಹಂಗಿಲ್ಲದೆ ಜನರ ದಂಡೆ ಅಲ್ಲಿಗೆ ಬರುತ್ತಿತ್ತು. ಅದರಲ್ಲೂ ಕಾಲೇಜಿನ ಹುಡುಗ ಹುಡುಗಿಯರು ಮುಂಚೂಣಿಯಲ್ಲಿದ್ದರು. ಮಾನಸಿಕವಾಗಿ ಅಸ್ವಸ್ಥ ಜನ ತುಂಬಾ ಹೊತ್ತು ಕಳೆಯುತ್ತಿದ್ದರು. ತಮ್ಮ ಕೊಳಕು ನೋಟದಲ್ಲಿ ಸುಂದರ ಜಗತ್ತನ್ನು ನೋಡಲು ಯತ್ನಿಸುತ್ತಿದ್ದರು.

ಹೀಗೆ ನಡೆಯುತ್ತಿರುವಾಗ ಒಂದು ದಿನ ಅಷ್ಟಾಗಿ ಹೆಚ್ಚು ಜನ ಇರಲಿಲ್ಲ. ಭಾನುವಾರವಾಗಿದ್ದರಿಂದ ಜನರ ಓಡಾಟ ಕಡಿಮೆಯೇ ಇತ್ತು. ಶಾಂತವಾಗಿದ್ದರಿಂದ ಇದ್ದಕ್ಕಿದ್ದಂತೆ ಒಂದು ಕ್ಯಾಬಿನ್‌ನಿಂದ ವಿಚಿತ್ರವಾದ ಸದ್ದೊಂದು ಜೋರಾಗಿ ಬರಲಾರಂಭಿಸಿತು. ಇನ್ನೊಬ್ಬರ ಪ್ರೈವಸಿಗೆ ಧಕ್ಕೆ ತರಬಾರದೆಂದು ತುಸು ಹೊತ್ತು ಸುಮ್ಮನಿದ್ದ. ಸಾರ್ವಜನಿಕವಾಗಿ ಆ ಸದ್ದು  ಅನಾಗರಿಕ. ಆದರೆ ಆ ಸದ್ದು ಎಲ್ಲರ ಕಿವಿ ಮುಟ್ಟುವ ಹಾಗೆ ಕೇಳಿ ಬರುತ್ತಿತ್ತು. ಎದ್ದು ಕ್ಯಾಬಿನ್ ತೆರೆದರೆ ಇಬ್ಬರು ಹುಡುಗರು ಅರ್ಧ ಪ್ಯಾಂಟ್ ಬಿಚ್ಚಿ ತಮ್ಮ ಲೋಕದಲ್ಲೇ ಮುಳುಗಿದ್ದರು. ನಿಶೀಥನಿಗೆ ದಂಗು ಬಡಿದಂತಾಯಿತು. ಇನ್ನೇನು ತನ್ನ ಮಾತು ಹೊರ ಹಾಕುವ ಮುನ್ನವೇ ಆ ಹುಡುಗರು ಅಲ್ಲಿಂದ ಪರಾರಿಯಾದರು. ಅವರು ಪ್ರತಿ ದಿನ ಇಲ್ಲಿಗೆ ಬರುವ ಕಾಲೇಜಿನ ಹುಡುಗರೇ ಆಗಿದ್ದರು. ತುಂಬಾ ಹೇಸಿಗೆ ಎನಿಸಿ.ವಾಂತಿ ಬಂದ ಹಾಗೆ ಭಾಸವಾಯಿತು. ಆವಾಗಿನಿಂದ ಆ ಕೆಲಸದ ಮೇಲೆ ಆಸಕ್ತಿಯೇ ಕಳೆದುಕೊಂಡಿದ್ದ.

ಅದಾದ ಮರುದಿನವೇ ಮಾಲಿಕನ ಮುಂದೆ ವಿಷಯ ಪ್ರಸ್ತಾಪಿಸಿದ. ಅದಕ್ಕೆ ಅವನು ಇದೆಲ್ಲ ಇಲ್ಲಿ ಸಾಮಾನ್ಯ ಸಂಗತಿ. ನನಗೂ ತುಂಬಾ ದಿವಸದ ಹಿಂದೆಯೇ ಗೊತ್ತಾಗಿತ್ತು. ನನ್ನ ಹೆಂಡತಿ ಹೇಳಿದ್ದಳು. ಅದನ್ನು ತಡೆಯುವ ಹಾಗಿಲ್ಲ. ಇಲ್ಲಿಗೆ ಬರುವ ಎಲ್ಲಾ ಹುಡುಗರಿಗೆ ಅದೇ ಬೇಕು. ಅದಕ್ಕೆ ಬಂದಿರುತ್ತಾರೆ. ಅದನ್ನೆಲ್ಲ ತಡೆ ಹಿಡಿದರೆ ಮುಂದೆ ಯಾರು ಇಲ್ಲಿ ತಲೆ ಹಾಕಲ್ಲ. ಇಡೀ ಸುತ್ತಮುತ್ತಲಿನ ಬ್ರೌಸಿಂಗ್ ಸೆಂಟರ್‌ಗಳಿಗಿಂತಲೂ ನಮ್ಮದೇ ಹೆಚ್ಚು ಲಾಭ. ಅಂತ ಬುದ್ಧಿಮಾತು ಹೇಳಿದ್ದ.

ಮಾಲಿಕನೆ ಹೇಳಿದ ಮೇಲೆ ಇವನು ಕೂಡ ಅದನ್ನ ನಿರ್ಲಕ್ಷಿಸುತ್ತ ಹೋದ. ಬರು ಬರುತ್ತಾ ಸ್ವಯಂಲಿಂಗ, ಸಲಿಂಗ, ಬಹುಲಿಂಗ, ನಾನಾ ಪ್ರಕಾರದ ಕ್ರೀಡೆಗಳು ಜರಗುತ್ತಲೇ ಹೋದವು. ಕೊನೆಗೆ ‘ಧೂಮಪಾನ ನಿಷೇಧಿಸಲಾಗಿದೆ’ ಎಂಬ ನಾಮಫಲಕ ತೆಗೆದು ‘ಧೂಮಪಾನ ಮತ್ತು ಮೈಥುನ ನಿಷೇಧಿಸಲಾಗಿದೆ’ ಅಂತ ಬದಲಿಸಿದ. computer-pornಆದರೂ ಯಾವುದೇ ಪರಿಣಾಮ ಬೀರಲಿಲ್ಲ. ಎಲ್ಲವು ಗಮನಿಸಿ ಗಮನಿಸದ ಹಾಗೆ ಅನ್ಯಮನಸ್ಕನಂತೆ ಸುಮ್ಮನಾಗಿದ್ದ. ಅಲ್ಲಿಗೆ ಬರುವ ಎಲ್ಲಾ ಗಿರಾಕಿಗಳಿಗೆ ನೋಡಿದರೆ ಏನೋ ಒಂಥರಾ ವಾಕರಿಕೆ ಬಂದ ಹಾಗೆ ಭಾಸವಾಗುತ್ತಿತ್ತು. ಬರು ಬರುತ್ತಾ ಮಾಡುವ ಕೆಲಸ ಹೇಸಿಗೆ ಅನಿಸತೊಡಗಿತು. ಹಾಗೋ ಹೇಗೋ ಅಲ್ಲಿಂದ ಹೊರ ಬರಬೇಕು ಅನ್ನುತ್ತಲೇ ಇದ್ದ. ಆದರೆ ಬಿಟ್ಟಿಯಾಗಿ ಸಿಗುವ ಸೂರು ಮತ್ತೆ ತಕ್ಕ ಮಟ್ಟಿಗೆ ಸಿಗುವ ಸಂಬಳ ಬಿಡುವ ಪರಿಸ್ಥಿತಿಯಲ್ಲಿರಲಿಲ್ಲ.

ಈ ಹಿನ್ನೆಲೆಯಲಿ ಅಂದು ಗಾಂಧಿ ಜಯಂತಿ ಇದ್ದುದ್ದರಿಂದ ಅಷ್ಟೊಂದು ಜನ ಬರುವದಿಲ್ಲವೆಂದು ತಿಳಿದ ನಿಶೀಥ್ ಸ್ವಲ್ಪ ತಡವಾಗಿಯೇ ಹೋದರಾಯಿತು ಅಂತ ಇನ್ನು ಮಲಗಿಯೇ ಇದ್ದ. ತುಂತುರು ಮಳೆ ನಿದ್ದೆ ತನ್ನ ಆಳದ ಅರಮನೆಯನ್ನೇ ಪರಿಚಯಿಸುತ್ತಿತ್ತು. ತಾನು ಮಲಗಿರುವ ಸ್ಟೋರ್ ರೂಮಿಗೆ ಬಾಗಿಲನ್ನೆ ಲೇವಡಿ ಮಾಡುವಂತಹ ಬಾಗಿಲೊಂದು ನೇತಾಡುವಂತೆ ನಿಂತಿತ್ತು. ಒಳಹೊಕ್ಕರೆ ಕಂಪ್ಯೂಟರ್ ಬೆವರು ವಾಸನೆ ಭಗ್ಗೆಂದು ಮುಗು ಹಿಡಿಯುತ್ತಿತ್ತು. ಇವನು ಮಲಗಿದ ಮಂಚದ ಸುತ್ತ ಸುತ್ತುವರಿದು ಪ್ರಜ್ಞೆ ಕಳೆದುಕೊಂಡು ಬಿದ್ದ ಕಂಪ್ಯೂಟರ್ ಗಳು ಬಿಕೋ ಅಂತ ಮೌನ ರಾಗ ಹಾಡುತ್ತಿದ್ದವು.

ಇವತ್ತು ಗೆಳೆಯ ಸುಧಾಂಶು ಇಲ್ಲಿಗೆ ಬರುತ್ತೇನೆಂದು ಹೇಳಿದ್ದು ನೆನಪಾಯಿತು. ಅವನ ಮುಂದೆ ಈ ವಿಷಯ ಹೇಳಿ ಸ್ವಲ್ಪ ಮನಸಿನ ಭಾರ ಇಳಿಸಿಕೊಂಡು ಬೇರೆ ಎಲ್ಲಾದರೂ ಕೆಲಸಕ್ಕೆ ನೋಡು ಅಂತ ಹೇಳುವ ನಿರ್ಧಾರ ಮಾಡಿಕೊಂಡ. ಎದ್ದೇಳುವ ಮನಸ್ಸಿರಲಿಲ್ಲ. ಆದರು ಎದ್ದು ಸ್ನಾನಕ್ಕೆ ಹೋಗಿ ಕೆಳಗಡೆ ಬಂದು ನಿಂತ. ಮಳಿಗೆಯ ಪಕ್ಕದ ಮನೆಯ ಪುಟಾಣಿಗಳೆಲ್ಲ ಆಗಷ್ಟೇ ಶಾಲೆಯಿಂದ ಬಂದು ಧ್ವಜ ಹಿಡಿದು ಆಡುತ್ತ ನಿಂತಿದ್ದವು. ಅವುಗಳ ತಲೆಗೊಂದು ಏಟು ಮಟುಕಿ ತಿಂಡಿ ತಿನ್ನಲು ಪಕ್ಕದ ಹೋಟೆಲ್‌ಗೆ ಹೋಗಿ ಸರಿಯಾಗಿ ತಿಂದು ಮತ್ತೆ ಎಂದಿನಂತೆ ಮಳಿಗೆ ತೆರೆದು ತನ್ನ ದೈನಂದಿನ ಕೆಲಸ ಮುಗಿಸಿ ಉದೂ ಹಚ್ಚಿ ಕುಳಿತುಕೊಂಡ.

ರಜೆ ಇರುವದರಿಂದ ಜನರ ಓಡಾಟ ಕಡಿಮೆ ಇತ್ತು. ಬ್ರೌಸಿಂಗ್ ಸೆಂಟರ್‌ಗೂ ಅವತ್ತು ಜನ ಕಡಿಮೆಯಿತ್ತು. ತುಸು ಹೊತ್ತಾದ ಮೇಲೆ ಚೆಕ್ಕಿಂಗ್ ಮಾಸ್ಟರ್ ತರಹ ಮಾಲಿಕ ಒಳಗಡೆ ಬಂದ. ನಿಶೀಥ ಎಲ್ಲ ಲೆಕ್ಕ ಒಂದೊಂದಾಗಿಯೇ ನೀಡುತ್ತ ಹೋದ. ಮಾಲಿಕ ಲೆಕ್ಕ ನೋಡುವ ಮೂಡಿನಲ್ಲಿರಲಿಲ್ಲ. ‘ಆಯ್ತು ಆಯ್ತು ಎಲ್ಲ ಸರಿಯಾಗಿ ಬರೆದಿಡು’ ಅಂತ ಹೇಳಿದ. ಸ್ವಲ್ಪ ಅರ್ಜೆಂಟ್ ಆಗಿ ಏನೋ ಬ್ರೌಸ್ ಮಾಡಬೇಕಿತ್ತು. ಸಿಸ್ಟಮ್ ಖಾಲಿ ಇದಿಯಾ ಅಂತ ಕೇಳಿದ. ಅದಕ್ಕೆ ನಿಶೀಥ ಅಲ್ಲೇ ಪಕ್ಕದ ಸಿಸ್ಟಮ್‌ಗೆ ಲಾಗಿನ್ ಕೊಟ್ಟ. ಯಾರನ್ನು ನನ್ನ ಕ್ಯಾಬಿನ್ ಒಳಗಡೆ ಬಿಡಬೇಡ ಅಂತ ಒಳಗಡೆ ಹೋಗುವಾಗ ಹೇಳಿದ. ಮಾಲಿಕನ ಕಣ್ಣಲ್ಲಿ ಕಂಡ ಸಂತೃಪ್ತವಲ್ಲದ ತುರ್ತು ಪರಿಸ್ಥಿತಿಯ ಭಾವ ಕಂಡು ಹಿಡಿಯಲು ನಿಶೀಥನಿಗೆ ಹೆಚ್ಚು ಸಮಯ ಹಿಡಿಯಲಿಲ್ಲ. ಈ ತರಹದ ಅದೆಷ್ಟೋ ಕಣ್ಣಗಳನ್ನು ಪ್ರತಿದಿನ ನೋಡುತ್ತಿದ್ದ.

ಬದುಕಿನ ಹೆಚ್ಚುವರಿ ಭಾಗ ಇರದುದೆಡೆಗೆ ತುಡಿಯುವದೆ ಆಯಿತಲ್ಲ ಅಂತ ಬೇಸತ್ತು ಕುಳಿತಿದ್ದ. ಅಷ್ಟರಲ್ಲೇ ಗೆಳೆಯ ಸುಧಾಂಶು ಆಟವಾಡುತ್ತಿದ್ದ ಪುಟ್ಟ ಮಗುವನ್ನು ಎತ್ತಿ ಹಿಡಿದು ಮುತ್ತಿಟ್ಟು ಚಾಕಲೇಟ್ ಕೊಡಿಸಿ ನಿಶೀಥನ ಹತ್ತಿರ ಬಂದ. ಅದಕ್ಕೆ ನಿಶೀಥ ‘ಹಾಗೆಲ್ಲ ಚಾಕಲೇಟ್ ಆಸೆ ತೋರಿಸಬೇಡಪ್ಪ, ನಾಳೆ ನೀನು ಇಲ್ಲಿ ಇರುವದಿಲ್ಲ ನಾನು ಕೊಡಿಸಬೇಕಾಗುತ್ತದೆ’ ಅಂತ ಹೇಳುತ್ತಿದ್ದ. ‘ಥೂ ಈ ಅಂಕಲ್ ಸರಿ ಇಲ್ಲ’ ಅಂತ ನಿಶೀಥನಿಗೆ ಬೈಯುತ್ತಿರುವಾಗ. ಆ ಪಾಪುವನ್ನು ಹಿಡಿಯಲು ಓಡಿದಾಗ ಅದು ಯಾರ ಕೈಗೂ ಸಿಗದೇ ಓಡಿ ಮಾಯವಾಯಿತು.

ಬಂದ ವಿಷಯ ಶುರು ಮಾಡುವ ಮೊದಲು ನನಗೆ ಇದರ ಪ್ರಿಂಟ್ ಔಟ್ ಕೊಡು ಅಂತ ಮೊದಲೇ ನಿಶೀಥನಿಗೆ ಹೇಳಿದ. ಏನಿದು ಅಂತ ಕೇಳಿದ್ದಕ್ಕೆ. ನಾ ಬರೆದಿರುವ ಹೊಸ ಕಥೆ. ಪ್ರೊಡ್ಯುಸೆರ್ ಕರೆದಿದ್ದಾರೆ ಅದಕ್ಕೆ ಹೋಗ್ತಾ ಇದ್ದೀನಿ ಅಂತ ಹೇಳಿದ. ಅವನಿಗೆ ಪ್ರಿಂಟ್ ಔಟ್ ಕೊಟ್ಟಮೇಲೆ, ಟೀ ಕುಡಿಯಲು ಮತ್ತು ತುಸು ಹೊತ್ತು ಮಾತಾಡಲು ಪಕ್ಕದ ಟೀ ಅಂಗಡಿಗೆ ಹೋದರು. ಹೋಗುವ ಮುನ್ನ ಒಳಗಡೆ ಕುಳಿತಿರುವ ಮಾಲಿಕನಿಗೆ ಒಂದು ಮಾತು ಹೇಳಿ ಬಂದನು.

ಇಲ್ಲಿ ನಡೆದಿರುವ ಘಟನೆಯನ್ನು ವಿಸ್ತಾರವಾಗಿ ಹೇಳಿದ. ಬೇರೆ ಎಲ್ಲಾದರು ಕೆಲಸ ಇದ್ದಾರೆ ನೋಡು ಅಂತ ಸುಧಾಂಶುಗೆ ಕೇಳಿದ. ಆಯ್ತು ಈ ಕೆಲಸ ಬಿಡುವಂತೆ ಕೊನೆ ಪಕ್ಷ ಈ ತಿಂಗಳ ಸಂಬಳನಾದ್ರು ಸಿಗುವರೆಗೂ ಕೆಲಸ ಮಾಡು. ಅಲ್ಲಿಯವರೆಗೆ ಏನಾದರೂ ವ್ಯವಸ್ಥೆ ಮಾಡುತ್ತೇನೆ ಅಂತ ಅವನಂದ. ಅವನ ಮಾತು ಕೂಡ ನಿಶೀಥನಿಗೆ ಸರಿಯೆನಿಸಿತು. ಸರಿ ನಾನೀಗ ಹೊರಡುತ್ತೇನೆ  ಪ್ರೊಡ್ಯುಸೆರ್ ಕಾಯ್ತಾ ಇರ್ತಾನೆ ಅಂತ ಹೇಳಿ ಅವನು ಅಲ್ಲಿಂದ ಹೊರಟ.

ಟೀ ಅಂಗಡಿಯವನು ‘ಇತ್ತೀಚಿಗೆ ನಮ್ ಹೋಟೆಲ್ ಕಡೆಗೆ ಕಾಣ್ತಾನೆ ಇಲ್ವಲ್ಲ?’ ಅಂತ ನಿಶೀಥನಿಗೆ ಕೇಳಿದಾಗ. ‘ನೀವು ಯಾವತ್ತಾದರೂ ನಮ್ ಬ್ರೌಸಿಂಗ್ ಸೆಂಟರ್‌ಗೆ ಬಂದಿದ್ದಿರಾ?’  ಅಂತ ಮರು ಪ್ರಶ್ನೆ ಹಾಕಿ ಅಲ್ಲಿಂದ ಬ್ರೌಸಿಂಗ್ ಸೆಂಟರ್‌ಗೆ ಮರಳಿದ.

ಮರಳಿ ಬರಬೇಕಾದರೆ ಏನೋ ಒಂದು ಅಪಶಕುನ ಕಾದಂತೆ ಹೆಜ್ಜೆ ಹೆಜ್ಜೆಗೂ ಭಾಸವಾಗುತ್ತಿತ್ತು. ಹತ್ತಿರ ಹೋದಂತೆ ತನ್ನ ಬ್ರೌಸಿಂಗ್ ಸೆಂಟರ್ ಹತ್ತಿರ ಜನ ಜಮಾಯಿಸಿರುವದು ಕಣ್ಣಿಗೆ ಕಾಣುತ್ತಿತ್ತು. ಓಡುತ್ತ ಹೋಗಿ ನೋಡಿದಾಗ

ಬ್ರೌಸಿಂಗ್ ಸೆಂಟರ್‌ನ ಅರ್ಧ ಶಟರ್ ಮುಚ್ಚಿತ್ತು.
ತ್ರಿವರ್ಣ ಧ್ವಜ ಹೊಸ್ತಿಲ ಮೇಲೆ ಬಿದ್ದಿತ್ತು.
ಅರ್ದ ತಿಂದು ಬಿಟ್ಟ ಚಾಕಲೇಟ್ ದ್ವಜದ ಪಕ್ಕ ಬಿದ್ದಿತ್ತು.

ಒಳಗಡೆ ಹೋಗುವ ಧೈರ್ಯ ಆಗಲಿಲ್ಲ. ಶಟರ್ ಪೂರ್ಣವಾಗಿ ಎಳೆದು ಒಳಗೆ ನೋಡಿದನು. ಚಿಕ್ಕ ಪಾಪುವಿನ ಸ್ಕೂಲ್ ಯುನಿಫಾರ್ಮ್ ಮೂಲೆಯಲ್ಲಿ ಬಿದ್ದಿತ್ತು. ನಿಶೀಥ ತಟಸ್ಥವಾಗಿ ನಿಂತು ಬಿಟ್ಟ. ಕಣ್ಣಿರು ಹರಿಯತೊಡಗಿತು. ಆಕಾಶವೇ ಎದೆಯ ಮೇಲೆ ಇಟ್ಟಂತೆ ಭಾಸವಾಯಿತು. ಮಾಲೀಕ ಎಲ್ಲೋ ಮಾಯವಾಗಿದ್ದನು .ಹಿನ್ನೆಲೆಯಲ್ಲಿ ಪೋಲಿಸು ಬರುವ ಶಬ್ದವಾಯಿತು. ನಿಂತಲ್ಲೇ ವಿಗ್ರಹವಾದ. ಮಾತು ಕಳೆದು ಹೋಯಿತು.

 ***

ಪದಬಂಧ

ಎಂಎಸ್‌ಸಿ ರಸಾಯನಶಾಸ್ತ್ರದಲ್ಲಿ ಪದವಿ ಮುಗಿಸಿದ ಸುಧಾಂಶುಗೆ ಊರಲ್ಲೇ ಇದ್ದು ಪಿಯು ಕಾಲೇಜಿನಲ್ಲಿ ಲೆಕ್ಚರರ್ ಆಗಿ ಕೆಲಸ ಮಾಡುವುದು ಸ್ವಲ್ಪವು ಇಷ್ಟವಿರಲಿಲ್ಲ. ಮನೆಯಲ್ಲಿ ತಂಗಿ, ಅಮ್ಮ, ಚಿಕ್ಕಪ್ಪ, ದೊಡ್ಡಪ್ಪ, ಗೆಳೆಯರು, ಗುರುಗಳು ಎಷ್ಟೇ ಹೇಳಿದರು ಒಪ್ಪಿರಲಿಲ್ಲ. ಮೊನ್ನೆ ತಾನೇ ಎಂಎಸ್‌ಸಿ ಮೇಲೆ ಸುಮಾರು ಸರಕಾರಿ ಪೋಸ್ಟ್‌ಗಳು ಬಿಟ್ಟಿದ್ದವು. ಅಮ್ಮನ ಒತ್ತಾಯದ ಮೇರೆಗೆ ಹಾಕಿದ್ದ. ಆದರೆ ಎಕ್ಸಾಮ್ ಮಾತ್ರ ಬರೆದಿರಲಿಲ್ಲ. ಅವನ ಜೊತೆಗಿನ ಗೆಳೆಯರು ಈಗ ಅದೇ ಪೋಸ್ಟಿನ ಮೇಲೆ ಆಯ್ಕೆಯಾಗಿ ಒಂದು ಟೂ ವೀಲರ್ ಬೈಕ್ ಅನ್ನು ಕಂತುಗಳಲ್ಲಿ ಖರೀದಿಸಿ ರಾಜಾರೋಷವಾಗಿ ಊರಲ್ಲೇ ತಿರುಗುತ್ತಿದ್ದರು. ಆದರೆ ಅವನಿಗೆ ಅದರ ಯಾವುದೇ ಕೊರಗು ಇರಲಿಲ್ಲ. ಅವನ ಗುರಿಯೇ ಬೇರೆಯಾಗಿತ್ತು. ಸಿನಿಮಾದಲ್ಲಿ ಒಬ್ಬ ಬರಹಗಾರನಾಗಿ ಹೆಸರು ಮಾಡುವದು.

ಚಿಕ್ಕಂದಿನಿಂದಲೂ ಸುಧಾಂಶುವಿಗೆ ಬರವಣಿಗೆಯಲ್ಲಿ ತುಂಬಾ ಆಸಕ್ತಿ. ಪುಸ್ತಕದಲ್ಲಿ ಖಾಲಿ ಹಾಳೆ ಅದ್ದಿದ ಮೇಲೆ ಅದರ ಮೇಲೆ ಮೂಡುವ ಅಕ್ಷರದಂತೆ ಬರೆಯುತ್ತಿದ್ದ. ಕನ್ನಡ ಮೇಷ್ಟ್ರು ತುಂಬಾ ಚನ್ನಾಗಿ ಬರೀತಿಯ ಅಂತ ಹೋಗುಳುತ್ತಿದ್ದರು. ಅವರು ಹೊಗಳಿದ್ದು ದುಂಡಾಗಿ ಬರೆದಿದ್ದಕ್ಕೆ ವಿನಹ ಬರೆದಿರುವ ವಿಷಯಕ್ಕೆ ಅಲ್ಲ ಅಂತ ಗೊತ್ತಾಗುತ್ತಿರಲಿಲ್ಲ. ಆದರು ಮನಸಿಗೆ ತೋಚಿದ್ದೆಲ್ಲ ಗೀಚುತ್ತ ಹೋಗುತ್ತಿದ್ದ. ದೈನಂದಿನ ಡೈರಿ ಬರೆಯುವದಕ್ಕೆ ಶುರುಮಾಡಿದ.

ಬರವಣಿಗೆಯ ಮೂಲ ಓದಿನಲ್ಲಿ ಅಡಗಿರುತ್ತದೆ ಅನ್ನುವ ಮಾತು ಅರಿವಾದದ್ದೆ ಅವನು ಬರೆದಿರುವ ಕಥೆ ಒಂದು ಕಥಾ ಸ್ಪರ್ಧೆಯಲ್ಲಿ ಕೊನೆಯವನಾಗಿ ನಿಂತಿರುವಾಗ. ಆವಾಗ ಓದಿನ ಬಂಡಿ ಹತ್ತಿದ್ದ. ಮೊದಮೊದಲು ಇಷ್ಟೆಲ್ಲಾ ಓದಬೇಕಾ ಅಂತ ನಟನೆ ಶುರುವಾಯಿತು. ಮೊದಲಿಗೆ ಪುಸ್ತಕ ಕೈಗೆತ್ತಿಕೊಂಡು ಒಟ್ಟು ಪುಟಗಳು ಎಣಿಸಿ ಉಗುಳು ನುಂಗಿ ಒಮ್ಮೆ ಫರ್ರನೆ ಎಲ್ಲ ಪುಟಗಳು ತಿರುವಿ ಹಾಕುತ್ತಿದ್ದ. ಓದಿನ ಪ್ರತಿ ಪುಟ ಮುಗಿಸಿದ ಮೇಲೆ ಒಟ್ಟು ಪುಟದ ಸಂಖ್ಯೆಯ ಜೊತೆ ಕಳೆದು ಉಸಿರು ಬಿಡುತ್ತಿದ್ದ. ಓದಿನ ಮೊದಲನೆಯ ದಿನಗಳ ವೈವಿಧ್ಯಮಯ ತಿಕಲಾಟಗಳು ಹೋಗಲಾಡಿಸಲು ಒಂದು ಉಪಾಯ ಹೂಡಿ ಶೃಂಗಾರ ಕಥೆಗಳು ಓದಲು ಶುರು ಮಾಡಿದ. ಹತ್ತು ರೂಪಾಯಿಗೆ ರೈಲ್ವೆ ನಿಲ್ದಾಣದಲ್ಲಿLonely-Lady ತಳ್ಳು ಗಾಡಿಯ ಮೇಲೆ ರಾಜಾರೋಷವಾಗಿ ಸಿಗುವ ಕಾಡತಾವ್ ನೆನಪುಗಳು, ರೂಪಸಿ, ಮೋಜು ಮಜಾ, ರತಿ ಶೃಂಗಾರ, ಹೀಗೆ ಹಲವಾರು ಅನಾಮಿಕ ಬರಹಗಾರರ ಪುಸ್ತಕಗಳನ್ನು ಪಾಪಪ್ರಜ್ಞೆಯ ಭಾವದಿಂದ ಕೇಳಿ, ಹೊಟ್ಟೆಯ ಒಳಗೆ ಗೌಪ್ಯವಾಗಿ ಇಟ್ಟು ರಾತ್ರಿಯ ಹೊತ್ತಲ್ಲಿ ಲೈಟ್ ಆರಿಸಿ ಬ್ಯಾಟರಿ ಬೆಳಕಲ್ಲಿ ಓದುವ ರೋಮಾಂಚನ ಕಸುಬು ಶುರು ಮಾಡಿದ. ಓದಿನ ತೀವ್ರತೆ ಹೆಚ್ಚಾಗಿ ಈ ತರಹದೆ ಒಂದು ಕಾಲ್ಪನಿಕ ಕಥೆ ಬರೆಯುವ ಮನಸಾಗಿ ಹಳೆ ಕಥೆಗೆ ಶೃಂಗಾರ ಸೇರಿಸಿ ಒಂದು ಕಮರ್ಷಿಯಲ್ ಕಥೆ ಬರೆದು ನಮ್ಮ ಗೆಳಯ ವೃಂದದ ಮುಂದಿಟ್ಟ. ಕಥೆಯ ವಾಸನೆ ಗೆಳೆಯರ ಮುಂದೆ ಅಲ್ಲದೆ ಶಾಲೆಯಲ್ಲೂ ಸಂಚಲನ ಮೂಡಿಸಿತು. ಆ ಕಥೆಯನ್ನ ಹುಡುಗಿಯರೂ ಬೇಡಿಕೆಯ ಮೇಲೆ ಓದಿದ್ದಾರೆ ಅನ್ನು ಸುದ್ದಿ ಕೂಡ ಬಂದು ಮುಟ್ಟಿತು. ಈ ತರಹ ಸಂಚಲನ ಮೂಡಿಸಿದ ಸಂಚಾರಿ ಯಾರು ಅಂತ ಶಾಲೆಯ ಮುಖ್ಯ ಗುರುಗಳು ಕರೆದು ಅಮ್ಮನ ಮುಂದೆ ಕಪಾಳಕ್ಕೆ ಬೀಸಿದ್ದರು. ಆದರೆ ಆ ಕಥೆ ಓದಿ ಮುಖ್ಯ ಗುರುಗಳೂ ಕೂಡ ವಿಚಲಿತರಾಗಿದ್ದರು ಅಂತ ಗೊತ್ತಾಗಿದ್ದೆ ಮರುದಿನ ಕರೆದು ‘ಚನ್ನಾಗಿಯೇ ಬರಿತಿಯ, ಆದರೆ ಒಳ್ಳೆಯದು ಬರಿ’ ಅಂತ ಹೇಳಿದಾಗಲೇ. ಆಗ ನನ್ನ ಕೈಗೆ ‘ಗೃಹಭಂಗ’ ಕಾದಂಬರಿ ಕೊಟ್ಟು ‘ಒಳ್ಳೆಯದನ್ನು ಬರೆಯಬೇಕಾದರೆ ಒಳ್ಳೆಯದು ಓದಬೇಕು’ ಅಂತ ಹೇಳಿದ್ದರು.

ಒಮ್ಮೆ ಶಾಲೆಯ ದೈಹಿಕ ಶಿಕ್ಷಕ ಶಾಮಣ್ಣರ ಜೀವನದಲ್ಲಿ ನಡೆದ ಅನೈತಿಕ ಸಂಬಧವನ್ನು ಕಥೆಯಲ್ಲಿ ಸೇರಿಸಿ ಬರೆದು. ಅದು ಪತ್ರಿಕೆಯಲ್ಲು ಪ್ರಕಟವಾಗಿತ್ತು. ಪತ್ರಿಕೆಯಲ್ಲಿ ಕಥೆ ಬಂದಿದೆ ಅಂದ ತಕ್ಷಣ ಶಾಲೆಯ ಎಲ್ಲರು ಹೆಮ್ಮೆಯಿಂದ ಕಥೆ ಓದಿದರು. ಓದುತ್ತ ಹೋದಂತೆ ಕಥೆಯೊಳಗಿನ ಪಾತ್ರಗಳು, ಹೆಸರುಗಳು ಎಲ್ಲವೂ ತಮ್ಮ ಶಾಲೆಯದ್ದೆ ಅಂತ ಎಲ್ಲರಿಗೂ ಗೊತ್ತಾಗಿ ಇಡಿ ಶಾಲೆಯ ಮರ್ಯಾದೆ ಹರಾಜಾಗಿ ಹೋಗಿತ್ತು. ಅದೇ ದಿನ ಶಾಮಣ್ಣರ ಕೈಯಿಂದ ಮೈತುಂಬ ಒದೆ ತಿನಿಸಿಕೊಂಡಿದ್ದ. ಅವತ್ತಿನ ದಿನವೇ ಬರವಣಿಗೆಯ ಶಕ್ತಿ ತಿಳಿಯಿತು. ಸುಧಾಂಶುವಿನ ಸಂಚಲನಗಳನ್ನ ನೋಡಿ ಮುಖ್ಯ ಗುರುಗಳು ಕರೆದು ‘ಬರವಣಿಗೆ ಒಂದು ಕಲೆ, ಆ ಕಲೆ ಎಲ್ಲರಿಗೂ ಒಲೆಯುವದಿಲ್ಲ. ನಿನ್ನಲ್ಲಿ ಆ ಕಲೆ ಕರಗತವಾಗಿದೆ’ ಎಂದು ಎಂಎಸ್‌ಸಿ ಮುಗಿಸಿ ಊರು ಬಿಟ್ಟು ಬೆಂಗಳೂರಿಗೆ ಬರುವಾಗ ಹೇಳಿದ್ದರು.

ಎಲ್ಲರೂ ಬೆಂಗಳೂರಿಗೆ ನಟ ಇಲ್ಲವೇ ನಿರ್ದೇಶಕ ಆಗಬೇಕೆಂದು ಕನಸು ಹೊತ್ತು ಬರುತ್ತಾರೆ, ಆದರೆ ಸುಧಾಂಶು ಬರಹಗಾರ ಆಗಬೇಕೆಂದು ಬಂದವನು. ಇದೇ ಒಂದು ಕಾರಣಕ್ಕಾಗಿ ಊರಲ್ಲಿ ಸಿಗುತ್ತಿರುವ ಎಲ್ಲ ಸೌಕರ್ಯ, ಸರಕಾರಿ ನೌಕರಿ ತ್ಯಜಿಸಿ ಬೆಂಗಳೂರಿಗೆ ಬಂದು ನೆಲೆಸಿದ್ದ.

ಎಂಎಸ್‌ಸಿ ರಸಾಯನ ಶಾಸ್ತ್ರದಲ್ಲಿ ಪರಿಣಿತಿ ಪಡೆದಿದ್ದರಿಂದ ತಮ್ಮ ಗುರುಗಳ ಕೃಪಾಕಟಾಕ್ಷದಿಂದ ಹೆಸರುಘಟ್ಟ ಸಮೀಪದ ಭಾರತಿಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯಲ್ಲಿ (IIHR) ಜೂನಿಯರ್ ವಿಜ್ಞಾನಿಯಾಗಿ ಕೆಲಸ ದೊರಕಿತು. ಕೆಲಸದ ಜೊತೆ ಕ್ವಾರ್ಟರ್ಸ್ ಕೂಡ ಸಿಕ್ಕಿತು. ಸಂಬಳ ತುಂಬಾ ಕಡಿಮೆಯಾದರು ತನ್ನ ಕನಸಿನ ಊರಲ್ಲಿರುವದು ಅವನಿಗೆ ಸಮಾಧಾನವಿತ್ತು. ಬರುವ ಸಂಬಳದಲ್ಲಿ ಊರಿಗೆ ಅರ್ದಕ್ಕೂ ಹೆಚ್ಚಿಗೆ ಕಳುಹಿಸಿ ತಿಂಗಳ ಕೊನೆಗೆ ಸಾಲ ಮಾಡಿ ಮತ್ತೆ ಸಂಬಳಕ್ಕೆ ಕಾಯುತ್ತಿದ್ದ.

ದಿನ ಕಳೆದಂತೆ ಕೆಲಸ ಬೋರ್ ಆಗತೊಡಗಿತು. ಬಿಎಸ್‍ಸಿ ಮತ್ತು ಎಂಎಸ್‌ಸಿ ಓದುವಾಗಲೇ ಕನ್ನಡದ ಎಲ್ಲಾ ಕಥೆ, ಕಾದಂಬರಿ, ಕವನಗಳನ್ನೂ ಓದಿ ಮುಗಿಸಿದ್ದ. ಇಲ್ಲಿ ಬಂದು ಖಾಲಿ ಖಾಲಿ ಅನಿಸತೊಡಗಿತು. ಅವನ ಪಾಲಿಗೆ ಉಳಿದಿದ್ದು ಬರವಣಿಗೆ ಮತ್ತು ಪದಬಂಧ ಬಿಡಿಸುವದು. ಪದಬಂಧ ಬಿಡಿಸುವದರಿಂದ ನಮ್ಮ ಶಬ್ದ ಸಂಗ್ರಹ ಹೆಚ್ಚಾಗುತ್ತದೆ, ಅದು ಬರಹಗಾರಿನಿಗೆ ಉಸಿರಿನಷ್ಟೇ ಅವಶ್ಯಕ ಅನ್ನುವ ಮಾತು ತನ್ನ ಗುರುಗಳಿಂದ ತಿಳಿದಿದ್ದ. IIHR ಎದುರುಗಡೆ ಟೀ ಅಂಗಡಿಯಲ್ಲಿ ಸಿಗುವ ಪೇಪರ್‌ನಲ್ಲಿ ಬರುವ ಪದಬದದ ಇರುವ ಜಾಗವಷ್ಟೇ ಯಾರಿಗೂ ಗೊತ್ತಾಗದೆ ಹರಿದು ಮನೆಯಲ್ಲಿ ತಂದು ಅದನ್ನು ಬಿಡಿಸುತ್ತಿದ್ದ. ಮಿಕ್ಕ ಸಮಯದಲ್ಲಿ ಬರೆಯಲು ಆರಂಭಿಸಿದ. ಸಿನಿಮಾ ಕ್ಷೇತ್ರಕ್ಕೆ ಸಂಭಂಧಿಸಿದ ಯಾವುದೇ ಕಾರ್ಯಕ್ರಮ ಸಿಕ್ಕರೂ ತಪ್ಪದೆ ಹೋಗಿ ಸಂಪಲ್ಮೂನ ವ್ಯಕ್ತಿಗಳನ್ನ ಪರಿಚಯ ಮಾಡಿಕೊಳ್ಳುತ್ತಿದ್ದ. ಫೇಸ್‌ಬುಕ್‌ನಲ್ಲಿ ಎಲ್ಲ ಬರಹಗಾರರು, ನಿರ್ದೇಶಕರ ಗೆಳೆಯರ ಲಿಸ್ಟ್‌ನಲ್ಲಿ ಒಬ್ಬನಾಗಲು ಹಂಬಲಿಸುತ್ತಿದ್ದ. ದೀಪಾವಳಿ, ಯುಗಾದಿ, ಗಾಂಧಿ ಜಯಂತಿ, ಕರವೇ ನಲ್ನುಡಿ ಕಥಾ ಸ್ಪರ್ಧೆಗೆ ತಪ್ಪದೆ ತನ್ನ ಕಥೆ ಕಳುಹಿಸುತ್ತಿದ್ದ.

ಇದು ಸುಧಾಂಶುವಿನ ಮೊದಲ ದಿನಗಳ ಪರಿಚಯ. ಇವತ್ತಿಗೆ ಬಂದು ಅವನಿಗೆ ಆರು ವರ್ಷವೇ ಆಯಿತು. ಬದುಕಿನಲ್ಲಿ ಹಲವಾರು ಬದಲಾವಣೆ ಆಗಿವೆ .ಬರಹದಲ್ಲೂ. ಬರಹದ ಮೇಲೆ ಮೊದಲು ಇದ್ದ ತುಡಿತ ಈಗ ಕಡಿಮೆಯಾಗಿತ್ತು. ಹೀಗೆ ತನ್ನ ಇತಿಹಾಸ ನೆನೆಯುತ್ತ ಬೆಚ್ಚನೆ ಮಲಗಿರುವಾಗ. ಗೆಳೆಯ ಗೌರೀಶ, ಸುಧಾಂಶು ಮನೆಯ ಡೋರ್ ಬೆಲ್ ಬಾರಿಸುತ್ತಾನೆ. ಬಾಗಿಲ ಮೇಲೆ ‘ತೆರೆದಿದೆ ಮನೆ ಓ ಬಾ ಅತಿಥಿ’ ನೋಡಿ ಬಾಗಿಲು ತಳ್ಳಲು ಪ್ರಯತ್ನಿಸುತ್ತಾನೆ. ಆದರೆ ಒಳಗಡೆಯಿಂದ ಬಾಗಿಲು ಮುಚ್ಚಿರುತ್ತದೆ. ಇನ್ನೊಂದು ಎರಡು ಮೂರು ಸಾರಿ ಬೆಲ್ ಬಾರಿಸಿದ ಮೇಲೆ ಎದ್ದರಾಯಿತು ಅಂತ ಸುಧಾಂಶು ಹಾಗೆಯೇ ಮಲಗುತ್ತಾನೆ. ಮತ್ತೆ ಶಬ್ದವಾಗುತ್ತದೆ.ಎದ್ದು ಗೆಳೆಯನನ್ನ ‘ರಜೆ ದಿವಸ ಕೂಡ ನಿದ್ದೆ ಮಾಡಲು ಬಿಡುವದಿಲ್ಲ’ ಅಂತ ಮುಖದ ತುಂಬಾ ಉಗಿದು ಬರಮಾಡಿಕೊಳ್ಳುತ್ತಾನೆ.

ಸುಧಾಂಶು ಶೌಚಕ್ಕೆ ಹೋದಾಗ ಗೌರೀಶ್ ‘ತೆರೆದಿದೆ ಮನೆ ಓ ಬಾ ಅತಿಥಿ’ ಬರಹದ ಕೆಳಗೆ ‘ಕಡ್ಡಾಯವಾಗಿ ಮೂರು ಬೆಲ್ ಒತ್ತಿದರೆ ಮಾತ್ರ’ ಅಂತ ಟ್ಯಾಗ್ ಲೈನ್ ಸೇರಿಸುತ್ತಾನೆ. ಅಡುಗೆ ಮನೆಯಲ್ಲಿ ಏನಾದರೂ ತಿನ್ನಲು ಸಿಗುತ್ತಾ ಅಂತ ಒಳಗಡೆ ಹೋಗುತ್ತಾನೆ. ಎಷ್ಟೋ ದಿವಸದ ಒರೆಗೆ ತೊಳೆಯದೇ ಇದ್ದ ಪಾತ್ರೆಗಳಿಂದ ಗಬ್ಬು ನಾತ ಒಳಗಡೆ ಕಾಲಿಡುವ ಮುನ್ನವೇ ಅರಿವಾಗುತ್ತದೆ. ಪರಿಸ್ಥಿಯ ಗಂಭೀರತೆ ಗಮನಿಸಿ ಒಳ ಹೋಗದೆ ಹೊರ ಬರುತ್ತಾನೆ. ಟೇಬಲ್ ಮೇಲೆ ಪುಸ್ತಕಗಳ ರಾಶಿಯೇ ನೋಡುತ್ತಾನೆ. ಅದರ ಮೇಲೊಂದು ಬಿಳಿ ಹಾಳೆಯ ಮೇಲೆ ಬರೆದ ನಾಲ್ಕು ಸಾಲಿನ ಕವಿತೆ.

ಹೂವು ಕೈಯ ಚಾಚಿದೆ
ನಿನ್ನ ಅಂದ ನೀಡಲೇ
ನೀನು ನನ್ನ ಪಾಲಿಗೆ
ದೇವರೆಂದು ತಿಳಿಯಲೇ
ರೆಪ್ಪೆ ಕಾದು ಸೋತಿದೆ ಮುಚ್ಚಿಬಿಡಲೇ.

ಅಬ್ಬಾ ತುಂಬಾ ಭಾರವಾಗಿದೆ. ನನ್ ಹುಡುಗಿಗೆ ಹೇಳಿದ್ರೆ ಪಕ್ಕಾ ಬಿಳ್ತಾಳೆ. ಡೌಟೇ ಇಲ್ಲ.

ಹೊರಬಂದ ಸುಧಾಂಶು ‘ಹಾ ತೊಗೊಳಪ್ಪ ಯಾವ ಕೆಲಸಕ್ಕಾದ್ರು ಬರಲಿ ನಾ ಬರ್ದಿರೋದು.’ ಅಂತ ಹೇಳಿ ಅರ್ಧಕ್ಕೆ ನಿಲ್ಲಿಸಿದ ನೆನ್ನೆಯ ಪದಬಂಧ ಬಿಡಿಸುತ್ತ ಕುಳಿತುಕೊಳ್ಳುತ್ತಾನೆ.

ಹೌದು ಅದೇನೋ ಹೇಳ್ತಿದ್ದಿಯಲ್ಲ….ಯಾರೋ ಪ್ರೊಡ್ಯುಸರ್ ಸಿನಿಮಾ ಹಾಡು ಬರೆಯೋದಕ್ಕೆ ಚಾನ್ಸ್ ಕೊಟ್ಟಿದ್ದಾರೆ ಅಂತ, ಏನಾಯ್ತು….?

ಎಲ್ಲ ಚಂಬು…! ಚಂಬು ಪದ ತುಂಬುತ್ತಾನೆ.

ಅದಕ್ಕೆ ಗೌರೀಶ್ ಅದೇನದು ಚಂಬು? ಅಂತ ಕೇಳುತ್ತಾನೆ.

ಏನಿಲ್ಲ…..! ಅದಾ….? ಹಾಡು ಬರೆದಿದ್ದೆ ಆದ್ರೆ…. ಹಾಡು ಇಷ್ಟ ಆಯ್ತು ಆದ್ರೆ ನನ್ನ್ ಹೆಸರು ಇಷ್ಟ ಆಗಲಿಲ್ಲ.

ಹೆಸರು ಇಷ್ಟ ಆಗಲಿಲ್ಲ ಅಂದ್ರೆ?

ಗ್ರಹಚಾರ….! ಗ್ರಹಚಾರ ಪದ ತುಂಬುತ್ತಾನೆ.

ಅಂದ್ರೆ….ಆ ಪ್ರೊಡ್ಯುಸರ್ ಮಗ ಮೂವಿ ಡೈರೆಕ್ಟ್ ಮಾಡ್ತಾ ಇರೋದು. ಅದಕ್ಕೆ ಅವನಿಗೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ಸಂಕಲನ, ವ್ಯವಕಲನ ಎಲ್ಲ ಅವನ ಮಗನ ಹೆಸರಲ್ಲೇ ಇರಬೇಕಂತೆ. ನಿರ್ದೇಶಕ ಬರಹಗಾರನಾಗಿದ್ರೆ ಇಂಡಸ್ಟ್ರಿಯಲ್ಲಿ ತುಂಬಾ ಬೆಲೆ ಅದಕ್ಕೆ ‘ದುಡ್ಡು ಕೊಡ್ತೀವಿ ಎರಡು ಸಾವಿರ ನಿಮ್ ಹಾಡು ಮಾರ್ಬಿಡಿ’ ಅಂತ ಕೇಳ್ದ .ನಾ ಆಗಲ್ಲ ಅಂದೇ .ಅಂತ ತುಂಬಾ ಬೇಜಾರಿಂದ ಉತ್ತರಿಸಿದ.

ಈ ಹಾಡು ಅದಕ್ಕೆ ಬರೆದಿರೋದಾ……? ಅಂತ ಹಾಳೆ ನೋಡುತ್ತಾ ಕೇಳುತ್ತಾನೆ.

ಅದಕ್ಕೆ ಗ್ರಹಚಾರ ಅಂತ ಹೇಳಿದ್ದು…!

ಮುಂದೆ ಏನು ಮಾಡಬೇಕು? ಮತ್ತೆ ಯಾರಾದರು, ಯಾರಿಗಾದರು ಕಥೆ ಹೇಳಿದ್ದಿಯ ಅಂತ ಕೇಳುವನು.

ಪರಿಸ್ಥಿತಿ……! ಪರಿಸ್ಥಿತಿ ಪದ ತುಂಬುತ್ತಾನೆ.

ಎಲ್ಲದಕ್ಕೂ ಟೈಮ್ ಬರತ್ತೆ. ಎರಡು ತಿಂಗಳಿಂದ ಮನೆಗೆ ದುಡ್ಡೇ ಕಳಿಸಿಲ್ಲ. ಮೊದ್ಲು ಅದಕ್ಕೆ ಏನಾದ್ರು ಒಂದು ವ್ಯವಸ್ಥೆ ಮಾಡಬೇಕು. ಬಾ ಟೀ ಕುಡಿದು ಬರೋಣ ಅಂತ ಹೇಳುತ್ತಾನೆ.

ಆ ಹೋಟಲಿನಿಂದ ಪೇಪರ್ ಹರ್ಕೊಂಡು ಬರೋನು ನೀನೇನಾ? ಅಂತ ನಗುತ್ತ ಗೌರೀಶ್ ಕೇಳಿದಾಗ. ನಗುತ್ತಲೇ ‘ಪರಿಸ್ಥಿತಿ ಕಣಪ್ಪ’ ಅಂತ ಹೇಳಿ ಹೊರನಡೆಯುವರು. ತುಂತುರು ಮಳೆಯಲಿ ತಲೆಯ ಮೇಲೆ ಕೈಯಿಟ್ಟು ಓಡುತ್ತ ಟೀ ಅಂಗಡಿಯ ತಲುಪುವರು.

ಇವತ್ತು ಅಕ್ಟೋಬರ್ ಎರಡಲ್ಲಾ? ನೀನ್ ಬಂದು ಇವತ್ತಿಗೆ ಆರು ವರ್ಷ ಆಯಿತು. ಎಷ್ಟು ಬದಲಾಗಿದೆ ಅಲ್ಲ? ಅಂತ ಹೇಳುತ್ತಾನೆ ಗೌರೀಶ್. ಟೀ ಕುಡಿಯುತ್ತ ‘ಇವತ್ತು ಒಬ್ಬ ಪ್ರೊಡ್ಯುಸರ್ ಬಾ ಅಂತ ಹೇಳಿದ್ದಾನೆ. ರಿಮೇಕ್ ಚಿತ್ರಕ್ಕೆ ಸಂಭಾಷಣೆ ಬರೆಯಲು. ಸ್ವಂತ ಬರೆದದ್ದು ಕಳಿಸಿದ್ದೆ ಅವರಿಗೆ ರಿಸ್ಕ್ ತೆಗೆದುಕೊಳ್ಳುವದು ಇಷ್ಟ ಇಲ್ಲ ಅಂತೆ.’

ಒಹ್ ಒಳ್ಳೆಯದು….ಎಷ್ಟು ಗಂಟೆಗೆ ಹೊರಡುವದು?

ಇನ್ನೇನು ಸ್ನಾನ ಮುಗಿಸಿ ಹೋಗೋದೇ.

ನಿನ್ನ ಕಥೆ ಕೂಡ ಜೊತೆಯಲ್ಲಿ ತೆಗೆದುಕೊಂಡು ಹೋಗು. ಈ ಸಲ ಇಷ್ಟ ಆಗಬಹುದೇನೋ. ಹೋಪ್ ಫಾರ್ ದಿ ಬೆಸ್ಟ್. ಸಾಫ್ಟ್ ಕಾಪಿ ಇರಲಿ ಅಂತ ಸಲಹೆ ನೀಡುವನು.

ಆಯ್ತು ಅಂತ ಇವತ್ತಿನ ಖರ್ಚಿಗೆ ನೂರು ರುಪಾಯಿ ಗೌರೀಶನ ಹತ್ತಿರ ತೆಗೆದುಕೊಂಡು ಸುಧಾಂಶು ಮತ್ತೆ ರೂಮಿಗೆ ಮರಳುವನು.

ಮತ್ತದೇ ಜಡಿ ಮಳೆಯಲಿ ಬಿಎಂಟಿಸಿ ಬಸ್ಸು ಹತ್ತಿ ಮೆಜೆಸ್ಟಿಕ್ ಹತ್ರಾ ಇರುವ ವಿನಾಯಕ್ ಇಂಟರ್ನೆಟ್ ಸೆಂಟರ್ ಅಲ್ಲಿ ಕೆಲಸ ಮಾಡುವ ಗೆಳೆಯನ ಹತ್ತಿರ ಹೋಗಿ ಈ ಕಥೆಯ ಒಂದು ಹಾರ್ಡ್ ಕಾಪಿ ಪ್ರಿಂಟ್ ಔಟ್ ತೆಗೆದುಕೊಂಡು ಪ್ರೊಡ್ಯುಸರ್ ಮನೆಯ ಕಡೆಗೆ ಹೋಗುತ್ತಾನೆ. ಅವನ ದುರದೃಷ್ಟಕ್ಕೆ ಪ್ರೊಡ್ಯುಸರ್ ಮನೆ ಬೀಗ ಹಾಕಿತ್ತು. ಪಕ್ಕದ ಮನೆಯ ಒಬ್ಬ ಅಜ್ಜ ಆಗಷ್ಟೇ ಬಿಸಿ ಬಿಸಿ ಕಾಫಿ ಕುಡಿದು ಇವತ್ತಿನ ಪೇಪರ್ ಹಿಡಿದು ಕುಳಿತಿದ್ದ. ಸುಧಾಂಶು ಅವರ ಹತ್ತಿರ ಹೋಗಿ ಪ್ರೊಡ್ಯುಸರ್ ಯಾವಾಗ ಬರುತ್ತಾರೆ ಅಂತ ವಿಚಾರಿಸಲು ಹೋಗುವನು.

ಸುಧಾಂಶು ಹತ್ತಿರ ಬರುವದನ್ನು ನೋಡಿ ‘ಏನಾಗಬೇಕಿತ್ತು?’ ಅಂತ ಕೇಳುತ್ತಾನೆ.

ಪ್ರೊಡ್ಯುಸರ್ ಬರ ಹೇಳಿದ್ರು.ಯಾವಾಗ ಬರ್ತಾರೆ?

ಅಜ್ಜ: ‘ಗೊತ್ತಿಲ್ಲ ಮಗ….ಇವತ್ತು ಅವರ ಪಿಕ್ಚರ್ ರಿಲೀಸು…ಬ್ಯುಸಿ ಇರ್ತಾರೆ, ಬಂದ್ರೆ ಬರಬಹುದು. ಏನು ಕೆಲಸ ಇತ್ತು?’

ಸುಧಾಂಶು: ರೈಟರ್ ಕೆಲಸಕ್ಕೆ.

ಒಳ್ಳೆಯದಾಗಲಿ…. ಅಂತ ಹೇಳಿ ಅಜ್ಜ ಪೇಪರ್‌ನಲ್ಲಿ ಬಂದಿರುವ ಪದಬಂಧ ಬಿಡಿಸಲು ಕುಳಿತುಕೊಳ್ಳುತ್ತಾನೆ. ರೈಟರ್ ಸಾಹೇಬ್ರೆ ಸ್ವಲ್ಪ ಪೆನ್ನು ಇದ್ರೆ ಕೊಡಿ ಅಂತ ಕೇಳುತ್ತಾನೆ.

ಸುಧಾಂಶು ಪೆನ್ ಕೊಟ್ಟು ಅಜ್ಜನ ಪಕ್ಕ ಕುಳಿತುಕೊಳ್ಳುತ್ತಾನೆ.

ಅಜ್ಜ: ‘ನಿಮ್ ಪ್ರೊಡ್ಯುಸರ್ ಬರುವವರೆಗೂ ನಾನು ನಿನ್ನ ಇಂಟರ್ವ್ಯೂ ತೆಗೆದುಕೊಳ್ಳುತ್ತೇನೆ’ ಅಂತ  ನಗುತ್ತ ಸುಧಾಂಶುವಿಗೆ ಹೇಳುವನು.

ಸುಧಾಂಶು: ಹೇಯ್ ತೊಗೊಳ್ಳಿ ಅದಕ್ಕೇನಂತೆ…!

ಅಜ್ಜ: ರೈಟರ್ ಕೆಲಸಕ್ಕೆ ಬಂದಿರುವ ಮಾನ್ಯ ಕನ್ನಡ ಪಂಡಿತರೆ ಇದಕ್ಕೆ ಉತ್ತರ ಹೇಳಿ
‘ಗಡಿ ಭಾಗದಲ್ಲಿ ವಸ್ಥಾದ ವ್ಯಾಯಾಮ ಶಾಲೆ’ .ಮೂರು ಅಕ್ಷರ.

ಸುಧಾಂಶು ಠಕ್ಕನೆ ‘ಗರಡಿ’ ಎಂದು ಉತ್ತರಿಸುವನು.

ಅಜ್ಜ: ಪರವಾಗಿಲ್ಲ ಕಣಯ್ಯಾ….ಕನ್ನಡ ವ್ಯಾಯಾಮ ಚನ್ನಾಗೇ ಮಾಡಿದ್ದಿಯ. (ಗರಡಿ ಪದ ತುಂಬುತ್ತಾನೆ )
ಇದನ್ನ ಹೇಳು. ಕಾವೇರಿದಂತೆ ಕಂಡ ಉತ್ತರ ಕರ್ನಾಟಕದ ಜಿಲ್ಲಾ ಕೇಂದ್ರ.

ಸುಧಾಂಶು: ಕೆಂಗೇರಿ……?

ಅಜ್ಜ: ಕೆಂಗೇರಿ ಬೆಂಗಳೂರಿನಲ್ಲಿ ಇರೋದು…..ಉತ್ತರ ಕರ್ನಾಟಕದಲ್ಲಿ ಅಲ್ಲ.

ಸುಧಾಂಶು: ಶೃಂಗೇರಿ……?

ಅಜ್ಜ: (ಸಿಟ್ಟಿನಿಂದ) ಶೃಂಗೇರಿ ಉತ್ತರ ಕರ್ನಾಟಕಕ್ಕೆ ಯಾವಾಗ ಕೊಟ್ರು…..?

ಸುಧಾಂಶು (ತುಂಬಾ ಯೋಚನೆ ಮಾಡಿ):  ಹಾವೇರಿ…..!

ಅಜ್ಜ: (ಆಶ್ಚರ್ಯದಿಂದ) ಹಾ …..ಹಾವೇರಿ…..ಕರೆಕ್ಟ್….! (ಹಾವೇರಿ ಪದ ತುಂಬುತ್ತಾನೆ)
ಇದನ್ನ ಹೇಳಪ್ಪ ‘ಇದು ಪ್ರಣಯದಂತೆ ಅನ್ಯರ ಎದುರು ಮಾಡಲಾಗುವದಿಲ್ಲ’ ಮೂರು ಅಕ್ಷರ.

ಹೀಗೆ ಒಂದೊಂದು ಪದಗಳನ್ನು ಸುಧಾಂಶುವಿನಿಂದ ಪಡೆದು ತುಂಬಾ ಹೊತ್ತು ಕಳೆಯುತ್ತಾರೆ. ಅಜ್ಜ ಕೂಡ ತುಂಬಾ ಕ್ಯಾಶುಯಲ್ ಆಗಿ ಸಮಯ ಕಳೆಯುತ್ತಾನೆ. ಪದಬಂಧದ ಎಲ್ಲವೂ ಬಿಡಿಸಿ ಕೊನೆಯದಾಗಿ ಒಂದು ಉಳಿದಿರುತ್ತದೆ.

ಅಜ್ಜ: ಇದನ್ನ ಹೇಳಪ್ಪ ‘ಇದು ಪ್ರಣಯದಂತೆ ಅನ್ಯರ ಎದುರು ಮಾಡಲಾಗುವದಿಲ್ಲ’ ಮೂರು ಅಕ್ಷರ.

ಸುಧಾಂಶು: (ಯೋಚನೆ ಮಾಡುತ್ತಾನೆ) ‘ಪ್ರಣಯದಂತೆ…ಅನ್ಯರ ಎದುರು ಮಾಡಲಾಗುವದಿಲ್ಲ’ ಮೂರು ಅಕ್ಷರ….. ?!!!

ಅಷ್ಟರಲ್ಲೇ ಪ್ರೊಡ್ಯುಸರ್ ಕಾರು ಒಳಗಡೆ ಹೋಗುತ್ತದೆ. ಸುಧಾಂಶು ಎದ್ದೋ ಬಿದ್ದು ನಗುತ್ತ ಹಿಂದೆ ಓಡಿ ಹೋಗುವನು. ಅಜ್ಜ ಅಲ್ಲೇ ಕುಳಿತು ಪದಬಂಧ ತುಂಬುತ್ತ ಕುಳಿತಿರುತ್ತಾನೆ.

ಪ್ರೊಡ್ಯುಸರ್ ಓಹ್ ಬನ್ನಿ ಬನ್ನಿ ರೈಟರ್ ಸಾಹೇಬ್ರೆ. ತುಂಬಾ ಕಾಯಿಸಿದ್ನಾ? ಏನ್ ಮಾಡೋದು ನಮ್ ಕೆಲಸಾನೆ ಹಿಂಗೆ ಅಂತ ಹೇಳಿ ತಮ್ಮ ಕ್ಯಾಬಿನ್ ಒಳಗಡೆ ಕರೆದುಕೊಂಡು ಹೋಗುವರು. ನೀವು ಅದೇನೋ ನಿಮ್ ಸ್ವಂತ ಕಥೆ ಕಳಿಸಿದ್ರಂತೆ. ನನಗೆ ತಲುಪೇ ಇಲ್ಲ. ನನಗು ಟೈಮ್ ಇರಲಿಲ್ಲ. ನೋಡಿ ಸ್ವಂತ ಕಥೆ ಚನ್ನಾಗಿದ್ರೆ ಮಾಡೋಣ ಅದಕ್ಕೇನಂತೆ. ಏನಂತೀರಿ ಸೋಮಣ್ಣ? ಅಂತ ತಮ್ಮ ಅಸಿಸ್ಟೆಂಟ್ ಕಡೆಗೆ ಹಲ್ಲು ಕಿರಿಯುವರು. ಸೋಮಣ್ಣ ಅವರ ಮಾತಿಗೆ ಹೂಂಕಾರ ಹಾಕಿ ನಿಲ್ಲುವರು.

ವಿಷಯಕ್ಕೆ ಬರೋಣ, ಅದೇನೆಂದ್ರೆ ನಿಮ್ಮ ಬರವಣಿಗೆ ನಾನು ನೋಡಿಲ್ಲ. ಈಗ ಯೇನಾದ್ರು ನಮ್ಮ ಎದುರಿಗೆ ಬರೆದು ತೋರಿಸಿದರೆ ನಮಗೂ ಖುಷಿ. ಯಾಕೆಂದ್ರೆ ಕೋಟ್ಯಾಂತರ ರುಪಾಯಿ ಬಂಡವಾಳ ಹಾಕಿ ಸಿನಿಮಾ ಮಾಡಬೇಕಾದ್ರೆ ಎಲ್ಲೂ ಎಡವ ಬಾರದು ಅದಕ್ಕೆ ನೋಡಿ ಅಂತ ಹೇಳಿ ಒಂದು ಹಾಳೆ ಮತ್ತು ಪೆನ್ನು ಸುಧಾಂಶುವಿನ ಮುಂದಿಟ್ಟು ತಮ್ಮ ಅಸಿಸ್ಟೆಂಟ್ ಜೊತೆ ಮಾತಾಡುತ್ತ ಕುಳಿತರು.

ಸುಧಾಂಶುವಿಗೆ ಒಂಥರಾ ಮುಜುಗರವಾಗುತ್ತದೆ. ಏನು ಬರೆಯಬೇಕು ಅನ್ನುವದೇ ತೋಚುವದಿಲ್ಲ. ಸ್ವಲ್ಪ ಸಮಯದ ನಂತರ ಮತ್ತೆ ಪ್ರೊಡ್ಯುಸರ್ ಯಾಕ್ರೀ ಆಗ್ತಾ ಇಲ್ವಾ? ನಾವು ಹೊರಗಡೆ ಹೋಗಬೇಕಾ? ಅಂತ ಕೇಳುವರು. ಇಲ್ಲ ಪರವಾಗಿಲ್ಲ ಅಂತ ಸುಧಾಂಶು ಗೋಣು ಅಲುಗಾಡಿಸುವನು. ಒಂಥರಾ ಕಣ್ಣಲ್ಲಿ ನೀರು ಬಂದಂಗಾಗಿ ಕೈಯಲ್ಲಿ ಹಿಡಿದ ಪೆನ್ನು ಕೆಳಗಿಡುವನು.

ಏನ್ರೀ ನಿಮಗೆ ನಾಲ್ಕು ಅಕ್ಷರ ಬರೆಯುವದಕ್ಕಾಗುವದಿಲ್ವಾ? ನಿಮ್ಮನ್ನ ನಂಬಿ ನಾನು ದುಡ್ಡು ಹಾಕಿದ್ರೆ ಅಷ್ಟೇ ನಮ್ ಕಥೆ. ರೀ ಯಾರ್ರಿ ಇವರನ್ನೆಲ್ಲ ಸೆಲೆಕ್ಟ್ ಮಾಡೋದು……ಸ್ವಲ್ಪ ಫಿಲ್ಟರ್ ಮಾಡಿ ಕಳಸ್ರಿ ಅಂತ ತನ್ನ ಅಸಿಸ್ಟೆಂಟ್ ಮೇಲೆ ಪ್ರೊಡ್ಯುಸರ್ ಕೆಟ್ಟದಾಗಿ ರೇಗುವರು.

ಅಲ್ಲಿಂದ ಎದ್ದು ಬರಲು ಸಜ್ಜಾಗಿ ತನ್ನ ಹಿಂಬ್ಯಾಗು ಹಿಡಿದು ಕೊನೆಗೆ ‘ಬರಹ ಒಂದು ಪ್ರಣಯದಂತೆ, ಅದನ್ನು ಅನ್ಯರ ಎದುರುಗಡೆ ಮಾಡಲಾಗುವದಿಲ್ಲ’ ಅಂತ ಬರೆದು. ಅಲ್ಲಿಂದ ಹೊರಬರುತ್ತಾನೆ. ಪ್ರೊಡ್ಯುಸರ್ ಅದನ್ನ ಓದಿ ‘ಪ್ರಣಯ’ ಅಂದ್ರೆನ್ರಿ ಅಂತ ಸೋಮಣ್ಣನಿಗೆ ಕೇಳುತ್ತಾರೆ.

ಹೊರ ಬಂದ ಸುಧಾಂಶುವಿಗೆ ಯಾವುದೊ ಒಂದು ಬಂಧನದಿಂದ ಕಳಚಿ ಹೊರಬಂದಂತೆ ಭಾಸವಾಯಿತು. ಅಜ್ಜನಿಗೆ ಕೊಟ್ಟ ಪೆನ್ನು ವಾಪಸ್ಸು ತೆಗೆದುಕೊಳ್ಳಬೇಕೆಂದು ಆ ಜಾಗಕ್ಕೆ ಹೋದರೆ ಅಜ್ಜ ಪೇಪರ್ ಮತ್ತು ಪೆನ್ನು ಅಲ್ಲೇ ಬಿಟ್ಟು ಒಳಗಡೆ ಹೋಗಿರುತ್ತಾನೆ. ಜಾಣ ಅಜ್ಜ ಪದಬಂಧದ ಎಲ್ಲ ಸ್ಥಳಗಳನ್ನು ತುಂಬಿರುತ್ತಾನೆ ಒಂದನ್ನು ಬಿಟ್ಟು. ಆ ಖಾಲಿ ಜಾಗದಲ್ಲಿ ‘ಬರಹ’ ಅಂತ ಬರೆದು ಪೆನ್ನು ಅಜ್ಜನಿಗಾಗಿ ಅಲ್ಲೇ ಇಟ್ಟು, ಅತ್ತಿತ್ತ ಅಜ್ಜನಿಗಾಗಿ ನೋಡುತ್ತಾನೆ. ಆ ಮನೆಯ ಹಿಂಭಾಗದಲ್ಲಿ ಜನರ ಗುಂಪೊಂದು ನೋಡುತ್ತಾನೆ. ಯಾರೋ ಹಾವಾಡಿಗರು ಇಲ್ಲಾ ಇನ್ಯಾರೋ ಸರ್ಕಸ್ ಮಾಡುತ್ತಿರಬೇಕು ಅಂತ ಸುಧಾಂಶು ಅಲ್ಲಿಂದ ತನ್ನ ಮನೆ ಕಡೆಗೆ ಹೆಜ್ಜೆ ಇಡುತ್ತಾನೆ.

***

ಆತ್ಮಹತ್ಯೆ

ಜೀವಿತ ಏನೆಂದು ತಿಳಿಯದೆ ಜೀವಿಸುವ, ಸುಖ ಏನೆಂದು ತಿಳಿಯದೆ ಸುಖಿಸುವ, ಮರಣ ಏನೆಂದು ತಿಳಿಯದೆ ಸಾಯುವ, ಕೋಟ್ಯಾನುಕೋಟಿ ಜೀವರಾಶಿಗಳ ಮಧ್ಯೆ ಒಂದು ಆಶ್ಚರ್ಯಚಕಿತ ಮನಸ್ಸು ಜೀವಿತದ ಅರ್ಥವನ್ನು ತಿಳಿಯಲು ಪ್ರಶ್ನೆಗಳನ್ನು ಹಾಕಿದಾಗಲೇ ಜಟಿಲವಾದ ಅನೇಕಾನೇಕ ಸಮಸ್ಯಗಳು ಹುಟ್ಟಿಕೊಳ್ಳುತ್ತವೆ. ಉತ್ತರಗಳು ಹುಟ್ಟಿಕೊಳ್ಳುತ್ತವೆ. ರಾಮರಾಯರ ಬದುಕಿನಲ್ಲೂ ಈ ತರಹದ ಪ್ರಶ್ನೆಗಳೇ ಹುಟ್ಟಿದ್ದು, ಮಗನ ಓದಿಗಾಗಿ ಇದ್ದ ಆಸ್ತಿಯನ್ನೆಲ್ಲ ಮಾರಿ ಮಗನನ್ನೇ ಒಂದು ಆಸ್ತಿಯನ್ನಾಗಿಸಿದಾಗ, ಅದೇ ಮಗ ಅಳಿದುಳಿದ ಹೊಲ ಮನೆ ಆಸ್ತಿಯನ್ನು ಮಾರಿ ಬೆಂಗಳೂರಿಗೆ ಬಾ ಎಂದು ಹಠ ಮಾಡಿದಾಗ.

ರಿಟೈರ್ಮೆಂಟ್ ಆದಮೇಲೆ ಹೊಲ ಗದ್ದೆ ಸಂಪೂರ್ಣವಾಗಿ ನೋಡಿಕೊಂಡು ಇರೋಣವೆಂದು ಅಂದುಕೊಂಡಿದ್ದರು. ಆದರೆ ಮಗನ ಮೇಲಿನ ಪ್ರೀತಿ ಒತ್ತಾಯ ಬೆಂಗಳೂರಿಗೆ ದರದರನೆ ಎಳೆದುಕೊಂಡು ಬಂದಿತ್ತು. ರಾಮರಾಯರ ಹೆಂಡತಿಗೂ ಮಗನ ಜೊತೆ ಇರುವ ಆಸೆ ಬಹು ಬೇಗನೆ ಊರಿಂದ ಇಲ್ಲಿಗೆ ಸ್ಥಳಾಂತರ ಮಾಡುವಂತಾಯಿತು.

ಬೆಂಗಳೂರಿನ ಕತ್ರಿಗುಪ್ಪೆಯ ನಾಲ್ಕನೆಯ ಕ್ರಾಸ್‌ನಲ್ಲಿ ಒಂದು ವಿಶಾಲವಾದ ಮನೆಯಲ್ಲಿ ಮಗ ಮತ್ತು ಸೊಸೆ ವಾಸಿಸುತ್ತಿದ್ದರು. ಮಗನ ಮದುವೆಯಾಗಿ ಒಂದು ವರ್ಷವಾಗಿತ್ತು. ಸೊಸೆ ಮೇರಿ. ಇವರ ಅಂತರ್ಜಾತಿ ವಿವಾಹಕ್ಕೆ ಊರಿಗೂರೇ ವಿರೋಧಿಸಿದರು. ಇವರಿಬ್ಬರು ಎರಡು ಮಾತಿಲ್ಲದೆ ಒಪ್ಪಿಕೊಂಡಿದ್ದರು.

ಬೆಂಗಳೂರಿನ ಮನೆ ಸೊಸೆ ಮತ್ತು ಮಗನಿಗೆ ವಿಶಾಲವಾದ ಆಕಾಶ ಸಿಕ್ಕಿದಂತೆ ರಾಮರಾಯ ಮತ್ತು ಅವರ ಹೆಂಡತಿಗೆ ಸಿಕ್ಕಿರಲಿಲ್ಲ. ಪದೇ ಪದೇ ಡಿಕ್ಕಿಯಾಗುವ ಗೋಡೆಗಳ ಮಧ್ಯ ಬಹು ಬೇಗನೆ ಖೈದಿಯಾದರು. ಕಿಟಕಿ ಆಕಾಶಕ್ಕೆ ತೆರೆದುಕೊಳ್ಳುತ್ತಿತ್ತು. ಥಳಥಳನೆ ಹೊಳೆಯುವ ವಿಶಾಲ ಮನೆ ಇವರನ್ನು ಇನ್ನಷ್ಟು ಒಂಟಿಯಾಗಿಸಿತು. ಬೆಳಕು, ಆಕಾಶದ ತುಣುಕು ಮತ್ತು ಸದಾ ಶಬ್ದಿಸುವ ನಗರದ ಯಾಂತ್ರಿಕ ಸದ್ದುಗಳು ಇವರಿಗೆ ಕಿವುಡರನ್ನಾಗಿ ಮಾಡಿತ್ತು.

ಇವರು ಬಂದ ಕೆಲವು ತಿಂಗಳಲ್ಲಿ ಮಗ ಮತ್ತು ಸೊಸೆ ಅಮೇರಿಕಾಕ್ಕೆ ಹೊರಡಲು ನಿಂತಿದ್ದರು. ಒಂದೈದು ವರ್ಷ ಅಷ್ಟೇ ಮತ್ತೆ ತಿರುಗಿ ಬರುತ್ತೇನೆ ಅಂತ ಅಪರವಯಸ್ಸಿನ ಹಿರಿಯರನ್ನ ಮನೆಯ ಕಾವಲುಗಾರರನ್ನಾಗಿ ಬಿಟ್ಟು ಹೋದರು. ಮಗನ ಪ್ರೀತಿ ಮತ್ತು ಒತ್ತಾಯದ ಮೇರೆಗೆ ಊರು ಬಿಟ್ಟು ಬಂದ ರಾಮರಾಯರು ತಾವು ಬಂದದ್ದು ವ್ಯರ್ಥವಾಯಿತು ಅನ್ನುವಂತೆ ಅವರಿಗೆ ಬಂದ ಕೆಲವು ದಿನಗಳಲ್ಲಿಯೇ ಭಾಸವಾಯಿತು. ರಾಯರ ಹೆಂಡತಿಗೆ ಅದನ್ನು ಸಹಿಸಿಕೊಳ್ಳಲು ಆಗಲಿಲ್ಲ.

ಬೆಂಗಳೂರಿನಲ್ಲೇ ಇದ್ದರೂ ಮಗನಿಗೆ ದಿನಕ್ಕೆ ಒಂದೈದು ನಿಮಿಷ ಮಾತಡುವದಕ್ಕೆ ಸಿಗುವದೇ ಅಪರೂಪ. ಆ ಐದು ನಿಮಿಷದ ತರಾತುರಿ ಮಾತುಕತೆಗೆ ಇಡಿ ದಿನ ಎರಡು ಮುಡಿ ಜೀವ ಜೀವಂತವಾಗಿರುತ್ತಿದ್ದವು. ಪಕ್ಕದ ಮನೆಯವರ ಜೊತೆ ಮಾತಾಡಲು ವಿಷಯಗಳು ಹುಡುಕುತ್ತಿದ್ದರು. ಆದರೆ ಈಗ ಒಮ್ಮೆಗೆ ಇವರ ಅನುಪಸ್ಥಿತಿ ಉಮ್ಮಳಿಸಿ ಬಂದ ಸಂಕಟ ಒಳಗೆ ಮಣ್ಣಾದಂತೆ ಮುಳುಗಿಹೋಯಿತು.

ರಾಯರು ಸಮಯ ಕಳೆಯಲು ಸಮಯ ಹುಡುಕುತ್ತಿದ್ದರು. ಬೆಳಗಿನ ಎರಡು ಮೂರು ಗಂಟೆ ಪೇಪರ್ ಓದುವದರಲ್ಲಿ ಕಳೆಯುತ್ತಿದ್ದರು. ಪಾರ್ಕಿಗೆ ಬರುವ ಸಮವಯಸ್ಕ ಜನರ ಜೊತೆ ಹರಟೆ ಹೊಡೆಯುತ್ತಿದ್ದರು. ಅವರ ಬದುಕಿನ ಕಥೆಗಳನ್ನು ಕಿವಿಗೊಟ್ಟು ಕೇಳುತ್ತಿದ್ದರು. ಬಂದು ಆ ಕಥೆಗಳನ್ನು ರಸವತ್ತಾಗಿ ಹೆಂಡತಿಗೆ ಹೇಳುತ್ತಿದ್ದರು. ಆದರೆ ಹೆಂಡತಿಗೆ ಸಮಯ ಕಳೆಯುವ ಯಾವುದೇ ಸಾಧನ ಸಿಕ್ಕಿರಲಿಲ್ಲ. ಕುಳಿತಲ್ಲೇ ಕುಳಿತು ಭ್ರಾಂಥಳಾಗುತ್ತಿದ್ದಳು. ನಗಬೇಕಾದಲ್ಲಿ ಅಳು, ಅಳಬೇಕಾದಲ್ಲಿ ನಗು. ಹೀಗೆ ಬದುಕಿನ ಅಂತಿಮ ದಿನಗಳು ಸಾಗುತ್ತಿದ್ದವು.

ತಿಂಗಳು ತಿಂಗಳು ಅಮೇರಿಕಾದಿಂದ ಹಣ ಬರುತ್ತಿತ್ತು. ಮೊದಮೊದಲಿಗೆ ವಾರಕ್ಕೆ ಬರುವ ಫೋನ್ ಈಗ ತಿಂಗಳಿಗೆ ಬರುತ್ತಿತ್ತು. ನೆನ್ನೆ ಮಗನಿಂದ ಫೋನ್ ಬರಬೇಕಿತ್ತು, ಬಂದಿರಲಿಲ್ಲ. ರಾಯರ ಹೆಂಡತಿ ಫೋನಿನ ಪಕ್ಕ ಕುಳಿತು ಜಪಿಸುತ್ತಿದ್ದಳು. ಯಾಕೆಂದರೆ ಮುಂಚೆ ಫೋನು ಮಾಡಿದಾಗ ಯಾವುದೊ ಕಷ್ಟದಲ್ಲಿ ಇರುವಂತೆ ಮಗನ ಧ್ವನಿ ಕಂಪಿಸುತ್ತಿತ್ತು. ಮಗನ ಸೊಲ್ಲಿಗಾಗಿ ಕಾತರಿಸಿದ್ದಳು. ರಾಯರಿಗೆ ಮನೆಯ ಬಂಧನದಲ್ಲಿ ಕುಳಿತುಕೊಳ್ಳಲಾಗಲಿಲ್ಲ. ಪೇಪರ್ ಹಿಡಿದು ಎದ್ದು ಹೊರಬಂದರು. ಎಂದಿನನತೆ ಮನೆಯ ಎದುರುಗಡೆ ಪೇಪರ್ ಓದುತ್ತ ಕುಳಿತಿದ್ದರು. ಸರಕಾರೀ ರಜೆ ಇರುವದರಿಂದ ಜನಪ್ರವಾಹ ಕಡಿಮೆಯಾಗಿತ್ತು. ಒಂದೆರೆಡು ಬಾರಿ ಮಗನಿಗೆ ರಿಂಗಣಿಸಿ ನೋಡಿದಳು. ಆ ಕಡೆಯಿಂದ ಬ್ಯುಸಿ ಬರುತ್ತಿತ್ತು. ಇತ್ತ ರಾಯರು ಯಾರದೋ ಜೊತೆಗೆ ಕುಳಿತು ಪದಬಂಧ ಬಿಡಿಸುತ್ತಿದ್ದರು. ಅವಳ ಆತಂಕ ಏರುತ್ತಲೇ ಇತ್ತು. ತುಂಬಾ ಹೊತ್ತಿನ ನಂತರ ಅಮೇರಿಕಾದಿಂದ ಫೋನು ರಿಂಗಣಿಸಿತು.

ಎದ್ದು ಓಡೋಡಿ ರಾಯರನ್ನು ಕರೆದು ಫೋನು ಕೈಗೆತ್ತಿಕೊಂಡರು. ಲೌಡ್ ಸ್ಪೀಕರ್ ಇಟ್ಟು ಮಾತಿಗಿಳಿದರು. ಇಲ್ಲಿ ಹಗಲು, ಅಲ್ಲಿ ರಾತ್ರಿ. ‘ಪಪ್ಪಾ ನಾನು ಹೋಗುತ್ತಿದ್ದೇನೆ’ ಅಂತ ಮಗನ ಸದ್ದು ಕೇಳಿಸಿತು .’ಅಮ್ಮ ನಾನು ಸಾಯುತ್ತಿದ್ದೇನೆ’, ‘ನಾನು ನಾಶವಾದೆ’ ಅನ್ನುವ ಧ್ವನಿ ಕೇಳಿ ಬರುತ್ತಿತ್ತು. ಇಲ್ಲಿ ಇಬ್ಬರು ದಿಗ್ಭ್ರಾಂತರಾಗಿ ಮೈಯಿಂದ ರಕ್ತ ಕಳಚಿ ಹೋದಂತೆ ಕೇಳುತ್ತ ಕುಳಿತ್ತಿದ್ದರು. ‘ಮಗನೇ ಹಾಗೆನ್ನಬೇಡ ನೀನು ಬದುಕಬೇಕು. ನೀನು ನಮ್ಮ ಜೀವ’ ಎಂದು ಕಂಪಿಸುವ ಧನಿಯಲ್ಲೇ ಧೈರ್ಯ ತುಂಬಲು ಯತ್ನಿಸಿದ್ದರು. ‘ಮೇರಿ ದ್ರೋಹ ಮಾಡಿದಳು. ಅವಳ ಮೋಹಕ ಮಾತು ನನ್ನನ್ನು ಸೆಳೆಯಿತು. ಅವಳು ಅವಳ ಉದ್ದೇಶಕ್ಕಾಗಿ ನನ್ನ ಇಲ್ಲಿಗೆ ಕರೆ ತಂದಿದ್ದಳು. ಕೇಳಿಸಿಕೊಳ್ಳುತ್ತಿದ್ದಿಯಾ ಪಪ್ಪಾ? ಇದು ನನ್ನ ಕೊನೆಯ ಹೇಳಿಕೆ. ನಿಮ್ಮೊಂದಿಗೆ ಇದ್ದಾಗಲೂ ಮಾತನಾಡಲು ಆಗಲಿಲ್ಲ ಅಮ್ಮಾ. ಒಂದು ಸುಳಿಯಲ್ಲಿ ಸಿಲುಕಿಕೊಂಡಿದ್ದೆ. ಅದರಿಂದ ಬಿಡಿಸಿಕೊಳ್ಳುತ್ತಿದ್ದೆ. ಸದಾ ಅದೇ ಚಿಂತೆ’ ಎಂದ. ’ಚಿಂತೆ ಬೇಡ ಮಗನೇ ಇಲ್ಲಿ ಬಾ ಹೊಸ ಬದುಕು ಬದುಕೋಣ’ ಎಂದರು.

‘ಇಲ್ಲ ಪಪ್ಪಾ, ನನ್ನ ಪಪ್ಪಾ ಇನ್ನು ನೀವು ಈ ಕೈಗಳನ್ನು ಹಿಡಿದು ನಡೆಸಲಾರಿರಿ. ಮೇರಿ ಇಲ್ಲಿ ಬಂದು ಪೂರ್ತಿ ಬದಲಾದಳು. suicide-paintingಅವಳ ಪೂರ್ವಕಾಲದ ಪ್ರೇಮಿಯನ್ನು ಹುಡುಕುತ್ತ ಇಲ್ಲಿ ಬಂದಿದ್ದಳು. ನನ್ನನ್ನು ಒಂದು ವಾಹನವನ್ನಾಗಿ ಉಪಯೋಗಿಸಿಕೊಂಡಳು. ನನ್ನೆದುರೇ ಅವರ ಪ್ರಣಯದಾಟ ನಡೆಯುತ್ತಿತ್ತು. ಆ ವಿಘ್ನವಿನೋದ ನನ್ನ ಪೂರ್ತಿ ಕಂಗೆಡಿಸುತ್ತ ಬಂತು. ಭಯಾನಕ ಡಿಪ್ರೆಷನ್. ಕೆಲಸ ಕಳೆದುಕೊಂಡೆ. ಈ ರಾತ್ರಿಯೂ ಇನ್ನೊಂದು ಕೋಣೆಯಲ್ಲಿ ಅವರಿಬ್ಬರೂ ಇದ್ದಾರೆ. ಮಣಿಗಂಟಿನ ಬಳಿ ಬ್ಲೇಡಿನಿಂದ ರಕ್ತನಾಳವನ್ನು ಈಗ ತಾನೇ ಕೊಯ್ದು ಕೊಂಡಿದ್ದೇನೆ. ಪ್ಲೀಸ್ ಪಪ್ಪಾ ದಯವಿಟ್ಟು ಫೋನ್ ಇಡಬೇಡಿ. ಬಹಳ ಒಂಟಿಯಾಗಿದ್ದೇನೆ. ಈ ಕೊನೆಯ ಹೆಜ್ಜೆಗಳಲ್ಲಿ ನನ್ನ ಜೊತೆಯಾಗಿರಿ. ಪಪ್ಪಾ ಅಮ್ಮ. ಎಂದ.

‘ಅಮ್ಮಾ ನೋವು……. ನಿಮ್ಮನ್ನು ಬಿಟ್ಟು ಹೋಗಲು ಮನಸ್ಸಾಗುತ್ತಿಲ್ಲ….. ಬೇರೆ ವಿಧಿಯಿಲ್ಲ…… ಅಯ್ಯೋ ರಕ್ತ…..! ನೋವು ಹೆಚ್ಚಾಗುತ್ತಿದೆ ಪಪ್ಪಾ… .ಆಯ್ತು ಇನ್ನೇನು ನನ್ನ ಪ್ರಾಣ ನನ್ನ ಬಿಟ್ಟು ಹೋಗಲು ಸಿದ್ಧವಾಗಿದೆ……. ಪಪ್ಪಾ ಮಾತಾಡು ಪಪ್ಪಾ………! ನಿನ್ನ ಧ್ವನಿ ಕೇಳಬೇಕು ನಾನು ಪಪ್ಪಾ….!’ ಮೊಬೈಲ್ ಬಿದ್ದು ಸದ್ದಾಗುವವರೆಗೂ ಕೊನೆ ಕೊನೆಗೆ ನೋವಿನ ಚಿತ್ಕಾರ ಮಾತ್ರ ಇತ್ತು. ಕೊನೆಗೂ ಫೋನ್ ಬಿದ್ದ ಸದ್ದಾಯಿತು. ಮಾತು ನಿಂತು ಹೋಯಿತು, ಜೀವವೂ. ರಾಯರಿಗೂ ಮಾತು ನಿಂತು ಹೋಯಿತು. ಕುಳಿತಲ್ಲೇ ವಿಗ್ರಹವಾದರು. ರಾಯರ ಹೆಂಡತಿ ಎದ್ದು ಹೊರಗಡೆ ನಡೆದರು. ಎಲ್ಲಿಗೆ ಅನ್ನುವದು ಗೊತ್ತಿಲ್ಲ. ಯಾರು ಕಿಟಾರನೆ ಚೀರಿದ ಸಾವಿನ ಶಬ್ದ ಕೇಳಿಸಿತು. ತುಸು ಹೊತ್ತು ಕಳೆದ ಮೇಲೆ ರಾಯರು ತಮ್ಮ ಹೆಂಡತಿಯನ್ನು ಹುಡುಕತೊಡಗಿದರು. ಎರಡಂತಸ್ತಿನ ಮನೆಯ ಮಾಳಿಗೆಯ ಮೇಲೆ ನೋಡಿದರು. ಮನೆಯ ಹಿತ್ತಲುಕಡೆ ಇಣುಕಿ ನೋಡಿದರು.

ಜನರ ಗುಂಪು ರಕ್ತದ ಸುತ್ತ ಸುತ್ತುವರೆದಿದ್ದರು. ರಾಯರು ಓಡತೊಡಗಿದರು. ಮುದಿ ವಯಸ್ಸಿನಲ್ಲಿ ಇನ್ನು ಜೋರಾಗಿ ಓಡತೊಡಗಿದರು.