Daily Archives: October 5, 2013

ಮರೆಯಲಾಗದ ಕೋಮು ಹತ್ಯಾಕಾಂಡಗಳ ಗಾಯಗಳು – ಮರೆಯೆಂದರೂ ಮರೆಯಲಿ ಹ್ಯಾಂಗ?

– ಬಿ.ಶ್ರೀಪಾದ ಭಟ್

1989 ಅಕ್ಟೋಬರ್ 24: ಬಿಹಾರ್ ರಾಜ್ಯದ ಭಾಗಲ್ಪುರ್ ಜಿಲ್ಲೆ ಮತ್ತು ಸುತ್ತಮುತ್ತಲ 250 ಹಳ್ಳಿಗಳಲ್ಲಿ ಸಂಭವಿಸಿದ ಹಿಂದೂ ಮತ್ತು ಮುಸ್ಲಿಂರ ನಡುವಿನ ಕೋಮುಗಲಭೆಯಲ್ಲಿ ಸುಮಾರು 1000 ನಾಗರಿಕರು ಸಾವನ್ನಪ್ಪಿದರು. ಇವರಲ್ಲಿ ಅಂದಾಜು 900 ಮುಸ್ಲಿಂ ನಾಗರಿಕರು. ಅಧಿಕೃತ ಮಾಹಿತಿಗಳ bhagalpur-riotsಪ್ರಕಾರ ಸುಮಾರು ಎರಡು ತಿಂಗಳುಗಳ ಕಾಲ ನಿರಂತರವಾಗಿ ನಡೆದ ಈ ಕೋಮು ಗಲಭೆಯ ಹಿಂಸೆಯ ಕರಾಳತೆ ಅಂದಾಜು 250 ಹಳ್ಳಿಗಳಿಗೆ ವ್ಯಾಪಿಸಿತ್ತು. ಈ ಹಳ್ಳಿಗಳ 15000 ಮನೆಗಳು ಧ್ವಂಸಗೊಂಡವು. 50000 ನಾಗರಿಕರು ನಿರಾಶ್ರಿತರಾದರು. ಜಿಲ್ಲೆಯಾದ್ಯಾಂತ ಬಹುಪಾಲು ಮುಸ್ಲಿಂ ಸಮುದಾಯದ ಜೀವನೋಪಾಯವಾಗಿದ್ದ ಸುಮಾರು 1700 ಕೈಮಗ್ಗಗಳು, 700 ಪವರ್‌ಲೂಂಗಳನ್ನು ಸಂಪೂರ್ಣವಾಗಿ ಸುಟ್ಟು ಬೂದಿ ಮಾಡಲಾಯಿತು. ಸುಮಾರು 70 ಮಸೀದಿಗಳನ್ನು ಧ್ವಂಸಗೊಳಿಲಾಯಿತು.

ಚಿಂತಕ ಫ್ರೊ.ವಾರಿಶಾ ಫರತ್ ಬರೆದ The Forgotten Carnage of Bhagalpur (January 19, 2013, Economic & Political Weekly ) ಲೇಖನದ ಸಾರಾಂಶ:

“ಅಧಿಕೃತ ಸುದ್ದಿಯ ಪ್ರಕಾರ ಕೋಮು ಗಲಭೆಗಳು 1989 ರ ಅಕ್ಟೋಬರ್ 24 ರಂದು ಪ್ರಾರಂಭಗೊಂಡು 30 ನೇ ನವೆಂಬರ್ 1989 ರವರೆಗೆ ಮುಂದುವರೆಯಿತು. ಮತ್ತೆ 1990 ರ ಮಾರ್ಚ 22-23 ರಂದು ಇದೇ ಕೋಮುಗಲಭೆಗಳು ಪುನರಾವರ್ತನೆಗೊಂಡವು. 12 ಮತ್ತು 22 ನೇ ಆಗಸ್ಟ್ 1989 ರಂದು ಅಂದರೆ ಈ ಗಲಭೆಯ ಎರಡು ತಿಂಗಳು ಮೊದಲು ಕೋಮು ಗಲಭೆಗಳಿಗೆ ಕುಖ್ಯಾತವಾಗಿದ್ದ ಭಾಗಲ್ಪುರ ಜಿಲ್ಲೆಯಲ್ಲಿ ತೀವ್ರವಾದ ಕೋಮುದ್ವೇಷದ ವಾತಾವರಣವು ನಿರ್ಮಾಣಗೊಂಡಿತ್ತು. ಆದರೆ ಆಗ ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಐದು ದಿನಗಳ ರಾಮಶಿಲಾ ಕಾರ್ಯಕ್ರಮ ಭಾಗಲ್ಪುರದ ಈ ಗಲಭೆಗಳಿಗೆ ಬೀಜವನ್ನು ಬಿತ್ತಿತ್ತು. ಆಗ ದೇಶಾದ್ಯಾಂತ ವ್ಯಾಪಿಸಿದ್ದು ಮಂದಿರ ನಿರ್ಮಾಣದ ರಾಮಜನ್ಮಭೂಮಿ ಚಳುವಳಿ ಮತ್ತು ಅದರ ಭಾಗವಾದ ಇಟ್ಟಿಗೆಯ ಮೆರವಣಿಗೆ.ಈ ಇಟ್ಟಿಗೆಯ ಮೆರವಣಿಗೆಯನ್ನು ಭಾಗಲ್ಪುರ ಟೌನ್ ಮತ್ತು ಸುತ್ತಲ ಹಳ್ಳಿಗಳಲ್ಲಿ ನಡೆಸಲಾಗಿತ್ತು. ಧರ್ಮದ ಆಧಾರದ ಮೇಲೆ ಜನರನ್ನು ಧ್ರುವೀಕರಣಗೊಳಿಸುವ ಈ ಬಲಪಂಥೀಯ ಪಕ್ಷಗಳ ಧೋರಣೆಗಳು ಭಾಗಲ್ಪುರ ಜಿಲ್ಲೆಯಾದ್ಯಾಂತ ಸೂಕ್ಮವಾದ, ಪ್ರಚೋದನಾತ್ಮಕವಾದ ವಾತಾವರಣವನ್ನು ನಿರ್ಮಿಸಿತ್ತು. ಈ ಹಿನ್ನೆಯಲ್ಲಿ ಗಲಭೆಗಳು ಸ್ಪೋಟಗೊಂಡಂತಹ ಸಂದರ್ಭದಲ್ಲಿಯೇ ಕೆಲವು ಫೆನಟಿಕ್ ಗುಂಪುಗಳು ಭಾಗಲ್ಪುರ ಪಟ್ಟಣದ ಲಾಡ್ಜ್‌ಗಳಲ್ಲಿ ವಾಸಿಸುತ್ತಿರುವ ಸುಮಾರು 200 ಹಿಂದೂ ವಿಧ್ಯಾರ್ಥಿಗಳನ್ನು ಮುಸ್ಲಿಂರು ಕೊಂದಿದ್ದಾರೆ ಎಂದು ಸುಳ್ಳು ವಂದಂತಿಗಳನ್ನು ಹಬ್ಬಿಸಿದವು. ಇನ್ನೂ ಮುಂದುವರೆದು 31 ಹಿಂದೂ ಹುಡುಗರನ್ನು ಕೊಂದು ಸಂಸ್ಕೃತ ಕಾಲೇಜಿನ ಬಾವಿಯಲ್ಲಿ ಎಸೆದಿದ್ದಾರೆ ಎಂಬಂತಹ ಮಾತುಗಳನ್ನು ಸಹ ತೇಲಿ ಬಿಡಲಾಗಿತ್ತು. ನಂತರ ಇದಕ್ಕೆ ಯಾವ ಪುರಾವೆ ಇಲ್ಲ, ಇದು ಸಂಪೂರ್ಣವಾಗಿ ಕಪೋಲಕಲ್ಪಿತವಾದದೆದ್ದಂದು ಪತ್ರಿಕೆಗಳಲ್ಲಿ ವರದಿಯಾದರೂ, ಅಷ್ಟರಲ್ಲಿ ಇಡೀ ಭಾಗಲ್ಪುರ ಜಿಲ್ಲೆ Communal violence ನ ಹಿಂಸಾತ್ಮಕ ವಾತಾವರಣಕ್ಕೆ ಸಜ್ಜಾಗಿತ್ತು (Minority Commission,1990 : 242). ಬಿಹಾರ ಸರ್ಕಾರವು ರಚಿಸಿದ್ದ ಮೂವರು ಸದಸ್ಯರ ತನಿಖಾ ತಂಡವು ಇಡೀ ಕೋಮು ಗಲಭೆಗೆ ರಾಮಶಿಲಾನ್ಯಾಸಕ್ಕಾಗಿ ನಡೆದ ಮೆರವಣಿಗೆಯೇ ಕಾರಣವೆಂದು ತನ್ನ ವರದಿಯಲ್ಲಿ ತಿಳಿಸಿತ್ತು (ಸಿನ್ಹ & ಹಸನ್ 1995:14). bhagalpur_setencing_313ಅಲ್ಲದೆ ಆಗಿನ ಪೋಲೀಸ್ ಸೂಪರಿಂಟೆಂಡೆಂಟ್ ದ್ವಿವೇದಿ ಮತ್ತು ಇತರೇ ಪೋಲೀಸ್ ಅಧಿಕಾರಿಗಳೂ ಸಹ ಈ ಕೋಮುಗಲಭೆಯ ಹೊಣೆಗಾರರು ಎಂದು ತನಿಖಾ ತಂಡವು ಅಭಿಪ್ರಾಯ ಪಟ್ಟಿತ್ತು. 1989ರಲ್ಲಿ ಭಾಗಲ್ಪುರದಲ್ಲಿ ಈ ಕೋಮುಗಲಭೆ ಜರುಗಿದಾಗ ರಾಜೀವ್ ಗಾಂಧಿ ಇಂಡಿಯಾದ ಪ್ರಧಾನ ಮಂತ್ರಿಯಾಗಿದ್ದರು ಮತ್ತು ಕಾಂಗ್ರೆಸ್‌ನ ಜಗನ್ನಾಥ್ ಮಿಶ್ರಾ ಬಿಹಾರ್‌ನ ಮುಖ್ಯಮಂತ್ರಿಯಾಗಿದ್ದರು. ಆಗ ಗಲಭೆಗ್ರಸ್ಥ ಪ್ರದೇಶಗಳಿಗೆ ಭೇಟಿ ನೀಡಿದ್ದ ರಾಜೀವ್ ಗಾಂಧಿ ಗಲಭೆಗಳ ಸಂದರ್ಭದಲ್ಲಿ ಹಿಂದೂಗಳ ಪರವಾಗಿ ಪಕ್ಷಪಾತದಿಂದ ಕಾರ್ಯನಿರ್ವಹಿಸಿದ ಪೋಲೀಸ್ ಅಧಿಕಾರಿ ದ್ವಿವೇದಿಯನ್ನು ಕೂಡಲೆ ಅಲ್ಲಿಂದ ಬದಲಾಯಿಸುವಂತೆ ಆದೇಶಿಸಿದರು. ಆದರೆ ವಿಶ್ವಹಿಂದೂ ಪರಿಷತ್ ಮತ್ತು ಸಂಘ ಪರಿವಾರದ ಗುಂಪುಗಳು ಇದನ್ನು ತೀವ್ರವಾಗಿ ವಿರೋಧಿಸಿ ದ್ವಿವೇದಿಯ ವರ್ಗಾವಣೆಯನ್ನು ತಡೆಹಿಡಿಯುವಲ್ಲಿ ಯಶಸ್ವಿಯಾದವು (ಛೋಪ್ರ & ಝಾ 2012). ಅಂದಿನ ಗಲಭೆಗಳಿಂದ ಬದುಕುಳಿದ ಕೆಲವರ ಪ್ರಕಾರ ಒಂದು ವೇಳೆ ಈ ಪೋಲೀಸ್ ಅಧಿಕಾರಿ ದ್ವಿವೇದಿಯ ವರ್ಗಾವಣೆಯನ್ನು ತಡೆಹಿಡಿಯದಿದ್ದರೆ ಅನೇಕ ನಾಗರಿಕರ ಪ್ರಾಣವನ್ನು ಉಳಿಸಬಹುದಾಗಿತ್ತೆಂದು ಅಭಿಪ್ರಾಯ ಪಡುತ್ತಾರೆ. (The subsequent Commission of Inquiry constituted to probe the riots indicted Dwivedi and noted in its report: “We would hold Dwivedi, the then superintendent of police, Bhagalpur, wholly responsible for whatever happened before 24 October 1989, on 24th itself and [after the] 24th. His communal bias was fully demonstrated not only by his manner of arresting the Muslims and by not extending them adequate help to protect them (Sinha and Hasan 1995: 114).”)

“ಆದರೆ ಆಗಿನ ಕಾಂಗ್ರೆಸ್ ಸರ್ಕಾರವೂ ಕೂಡ ಈ ಕೋಮು ಗಲಭೆಗಳನ್ನು ನಿಯಂತ್ರಿಸಲು ಯಾವುದೇ ಕ್ರಮ ಕೈಗೊಳ್ಳಲಿಲ್ಲ, ಅಥವಾ ಗಲಭೆಯಿಂದ ನಿರಾಶ್ರಿತರಾದವರಿಗೆ ಸೂಕ್ತ ಪುನರ್ವಸತಿಯನ್ನು ಸಹ ಕಲ್ಪಿಸಲಿಲ್ಲ. ಅಷ್ಟೇಕೆ 1990 ರಲ್ಲಿ ಸೆಕ್ಯುಲರ್‌ನ ಪ್ಲಾಟ್‌ಫಾರ್ಮ ಮೇಲೆ ಅಧಿಕಾರಕ್ಕೆ ಬಂದ ಲಾಲೂ ಪ್ರಸಾದ್ ಯಾದವ್ ಸಹ ಆರೋಪಿಗಳಿಗೆ ಶಿಕ್ಷೆಯನ್ನು ಕೊಡಿಸಲು ಯಾವುದೇ ಪ್ರಯತ್ನವನ್ನು ಮಾಡಲಿಲ್ಲ. ಏಕೆಂದರೆ ಬಹುಪಾಲು ಆರೋಪಿಗಳು ಲಾಲೂಪ್ರಸಾದರ ಯಾದವ್ ಜಾತಿಗೆ ಸೇರಿದವರಾಗಿದ್ದರು. ಕಳೆದ ಎಂಟು ವರ್ಷಗಳಿಂದ ಅಧಿಕಾರದಲ್ಲಿರುವ ನಿತೀಶ್ ಕುಮಾರ್ ನೇತೃತ್ವದ ಸರ್ಕಾರವೂ ಸಹ ಗಲಭೆಗಳಿಂದ ಬುದುಕುಳಿದ ಸಂತ್ರಸ್ಥರಿಗೆ ನ್ಯಾಯ ದೊರಕಿಸಿಕೊಡಲಿಲ್ಲ. 23 ವರ್ಷಗಳ ನಂತರವೂ ಭಾಗಲ್ಪುರ ಕೋಮು ಗಲಭೆಯ ಗಾಯಗಳು ಇನ್ನೂ ಹಸಿಯಾಗಿವೆ. ಕೋಮು ಗಲಭೆಗಳಿಂದ ಬಲಿಪಶುಗಳಾಗಿ ಬದುಕುಳಿದ ಸಾವಿರಾರು ನಿರಾಶ್ರಿತರು ಆ ದಿನಗಳನ್ನು ನೆನೆಸಿಕೊಂಡು ಇಂದಿಗೂ ಬೆಚ್ಚಿಬೀಳುತ್ತಾರೆ. 23 ವರ್ಷಗಳ ನಂತರವೂ ಅವರ ಅಸಹಾಯಕತೆ, ಸಾಮಾಜಿಕ ಮತ್ತು ಆರ್ಥಿಕ ಸಂಕಷ್ಟಗಳು ಕೊನೆಗೊಂಡಿಲ್ಲ. ಚಾಂದೇರಿ ಹಳ್ಳಿಯೊಂದರಲ್ಲಿ 65 ಮುಸ್ಲಿಂರನ್ನು ಕೊಲೆಗೈಯಲಾಯಿತು ಮತ್ತು ಆ ಮೃತ ದೇಹಗಳನ್ನು ಕೆರೆಗೆ ಎಸೆಯಲಾಗಿತ್ತು. bhagalpur_case_study_313ಮಲ್ಲಿಕಾ ಬೇಗಂ ಇಂದು ಆ ಹತ್ಯಾಕಾಂಡದಲ್ಲಿ ಬದುಕುಳಿದ ಏಕೈಕ ಸಾಕ್ಷಿ. ಆಕೆ ಎದೆಗುಂದೆ ಧೈರ್ಯದಿಂದ ಎಲ್ಲಾ ಬಗೆಯ ಬೆದರಿಕೆಗಳು ಮತ್ತು ಪ್ರಲೋಭನೆಗಳನ್ನು ಎದುರಿಸಿ ಹತ್ಯಾಕಾಂಡಕ್ಕೆ ಹೊಣೆಗಾರರಾದ ಸುಮಾರು 16 ಆರೋಪಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಂಡಳು.

“ಲೋಗೇನ್ ಹಳ್ಳಿಯಲ್ಲಿ 118 ನಾಗರಿಕರನ್ನು ಹತ್ಯೆ ಮಾಡಲಾಯಿತು. ತಮ್ಮ ಹತ್ಯಾಕಾಂಡವನ್ನು ಮುಚ್ಚಿ ಹಾಕಲು ಕೊಲೆಗಾರರು ಹೆಣಗಳನ್ನು ಹೊಲಗಳಲ್ಲಿ ಹೂಳಿ ಆ ಶವಗಳ ಮೇಲೆ ತರಕಾರಿಯ ಗಿಡಗಳನ್ನು ಬೆಳೆಸಿದರು. ಗಲಭೆಗಳಿಂದ ಬದುಕುಳಿದ ಅನೇಕ ಕುಟುಂಬಗಳು ಇಂದಿಗೂ ಭಯದ ನೆರಳಿನಲ್ಲಿ ಬದುಕುತ್ತಿವೆ. ಉದಾಹರಣೆಗೆ ಹತ್ತಾರು ಕೊಲೆಗಳಲ್ಲಿ ಭಾಗಿಯಾಗಿದ್ದ ಕಮಲೇಶ್ವರ್ ಯಾದವ್ ಎನ್ನುವ ಕೊಲೆಗಾರ ಕುಖ್ಯಾತ ಪಾರ್ಬತ್ತಿ ಕೇಸಿನಲ್ಲಿ ಮಹಮದ್ ಮುನ್ನಾ ಎನ್ನುವವರ ಹತ್ಯೆಯಲ್ಲಿ ಆರೋಪಿಯೆಂದು ಸಾಬೀತಾಗಿದೆ. ಆದರೆ ಕೊಲೆಯಾದ ಮುನ್ನಾನ ಕುಟುಂಬಕ್ಕೆ ಇಂದಿಗೂ ರಕ್ಷಣೆ ಒದಗಿಸಿಲ್ಲ. ಆದರೆ 23 ವರ್ಷಗಳ ಹಿಂದಿನ ಅಸಹಾಯಕ ಮುಸ್ಲಿಂ ನಾಗರಿಕರ ವಿರುದ್ಧದ ಆ ಸಾಮೂಹಿಕ ಅತ್ಯಾಚಾರದ ಆ ಭೀಕರತೆ ಸಾರ್ವಜನಿಕರ ನೆನಪಿನ ಭಿತ್ತಿಯಿಂದ ಅಳಿಸಿಹೋಗಿದ್ದರೂ, ಭಾಗಲ್ಪುರ ಕೋಮುಗಲೆಭೆಗಳ ತುತ್ತಾಗಿ ತಮ್ಮ ಮಕ್ಕಳು, ಸಂಬಂಧಿಕರನ್ನು ಕಳೆದುಕೊಂಡು ಇಂದಿಗೂ ಅನಾಥರಾಗಿ ಬದುಕುತ್ತಿರುವ ಬಹುಪಾಲು ನಿರಾಶ್ರಿತರಿಗೆ 23 ವರ್ಷಗಳ ನಂತರವೂ ಆ ಹತ್ಯಾಕಾಂಡದ ಗಾಯಗಳಿಂದ, ಅದರ ಕರಾಳತೆಯಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಅದನ್ನು ಮರೆಯಲು ನಡೆಸಿದ ಪ್ರಯತ್ನಗಳೇ ಯಾತನಾಮಯವಾದವುಗಳು. ಆ ಕೋಮು ಗಲಭೆಗಳಲ್ಲಿ ಅತ್ಯಾಚಾರಕ್ಕೆ, ಹಲ್ಲೆಗೆ ತುತ್ತಾಗಿ ಮೃತರಾದ 10000 ಮುಸ್ಲಿಂ ಗಂಡಸರು, ಹೆಂಗಸರು, ಮಕ್ಕಳು ಇವರೆಲ್ಲರ ನೆನಪಿರುವುದು ಇಂದು ಒಂಟಿಯಾಗಿ ಹೋರಾಟ ಮಾಡುತ್ತಿರುವ ಅವರ ಸಂಬಂಧಿಕರಿಗಷ್ಟೇ.

“ದೆಹಲಿ ಮೂಲದ The People’s Union for Democratic Rights (PUDR) ಈ ಭಾಗಲ್ಪುರ ಕೋಮುಗಲಭೆಗಳ ಕುರಿತಾಗಿ ಸುಧೀರ್ಘವಾದ, ವಿವರವಾದ ಡಾಕ್ಯುಮೆಂಟರಿಯನ್ನು ತಯಾರಿಸಿದೆ. ಅದರಲ್ಲೂ ಅಲ್ಲಿನ ಪೋಲೀಸ್ ವ್ಯವಸ್ಥೆಯು ಒಂದು ಕೋಮಿನ ಪರವಾಗಿ ಬೆಂಬಲಕ್ಕೆ ನಿಂತಿರುವುದನ್ನು ಎಳೆಎಳೆಯಾಗಿ,ಸಾಕ್ಷಿ ಸಮೇತ ಚಿತ್ರಿಸಿದೆ.

“ಇಂದಿಗೂ ಆ ಶಾಪಗ್ರಸ್ಥ ಪಟ್ಟಣವು ಪ್ರತ್ಯೇಕವಾದ, ಒಡಕಿನ ಪಟ್ಟಣವಾಗಿಯೇ ಉಳಿದಿದೆ. ಇಂದು ಬಿಜೆಪಿಯ ಮುಸ್ಲಿಂ ಮುಖವಾಡ ಶಾನವಾಜ್ ಹುಸೇನ್ ಈ ಭಾಗಲ್ಪುರ ಕ್ಷೇತ್ರದ ಪಾರ್ಲಿಮೆಂಟ್ ಶಾಸಕ. ಬಿಜೆಪಿಯ ಈ ಮುಖವಾಡ ಕಳೆದೆರೆಡು ಬಾರಿ ಸತತವಾಗಿ ಈ ಕ್ಷೇತ್ರದಿಂದ ಗೆಲವು ಸಾಧಿಸಿರುವುದು ಕೋಮು ಸೌಹಾರ್ದತೆಗೆ ಸಾಕ್ಷಿ ಎಂದು ಬಣ್ಣಿಸಲಾಗುತ್ತಿದೆ. ಆದರೆ ವಾಸ್ತವದ ಚಿತ್ರಣವೇ ಬೇರೆಯಾಗಿದೆ. ನ್ಯಾಯ ಗಳಿಸುವ ಸಾಧ್ಯತೆಗಳು ಕ್ಷೀಣಿಸುತ್ತಿರುವ ಈ ಘಟ್ಟದಲ್ಲಿ ಮತ್ತೊಮ್ಮೆ ಈ ಕೋಮು ಗಲಭೆ ನಡೆಯಬಾರದು ಎನ್ನವಷ್ಟಕ್ಕೆ ಮಾತ್ರ ವ್ಯವಸ್ಥೆ ತನ್ನನ್ನು ಸೀಮಿತಗೊಳಿಸಿಕೊಂಡಿರುತ್ತದೆ. ಈ ಹಿನ್ನೆಲೆಯಲ್ಲಿ ಆ ಕರಾಳವಾದ ಕೋಮು ಗಲಭೆಗಳು ಮರಳುವ ಆತಂಕಗಳು ಕಡಿಯಿದ್ದರೂ ಸಹ ಕೋಮು ಗಲಭೆಗಳು ಘಟಿಸುವುದಕ್ಕಾಗಿ ನೂರಾರು ದಾರಿಗಳು ಇಂದಿಗೂ ನಿಚ್ಛಳವಾಗಿವೆ.

“1990 ರಲ್ಲಿ ಲಾಲೂ ಪ್ರಸಾದರ ನೇತೃತ್ವದ ಆಗಿನ ಬಿಹಾರ ಸರ್ಕಾರವು Commission of Inquiry Act (1952) ಅಡಿಯಲ್ಲಿ ಕೋಮು ಗಲಭೆಗಳನ್ನು ಕುರಿತಾದ ವರದಿಯನ್ನು ನೀಡಲು, ಈ ಕೋಮು ಗಲಭೆಗಳಿಗೆ ಕಾರಣಗಳನ್ನು, ವ್ಯಕ್ತಿಗಳು, ಸಂಘಟನೆಗಳ ಜವಾಬ್ದಾರಿಗಳು ಮತ್ತು ಕೋಮು ಗಲಭೆಗಳ ನಿಯಂತ್ರಣಕ್ಕೆ ಸೂಕ್ತ ಕ್ರಮಗಳನ್ನು ಸೂಚಿಸಲು ತನಿಖಾ ತಂಡವನ್ನು ರಚಿಸಿತ್ತು. ಇದರ ಭಾಗವಾಗಿ 126 ಸಾಕ್ಷಿಗಳನ್ನು ಪರೀಕ್ಷಿಸಲಾಯಿತು. ಕೂಲಂಕಷ ತನಿಖೆಯ ನಂತರ ತನಿಖಾ ತಂಡದ ಅಧ್ಯಕ್ಷ ಜಸ್ಟೀಸ್ ರಾಮ ನಂದನ ಪ್ರಸಾದ್‌ರ ವರದಿ ಮತ್ತು ತನಿಖಾ ತಂಡದ ಸದಸ್ಯರಾದ ಜಸ್ಟೀಸ್ ಚಂದ್ರ ಪ್ರಸಾದ ಸಿನ್ಹಾ ಮತ್ತು ಎಸ್.ಶಾಮ್ಸುಲ್ ಹಸನ್ ಅವರ ವರದಿ ಹೀಗೆ ಮೂರು ಭಿನ್ನ ವರದಿಗಳು ಬಿಡುಗಡೆಗೊಂಡವು. ಇವುಗಳ ಹೊರತಾಗಿ ಅಲ್ಪಸಂಖ್ಯಾತ ಆಯೋಗದ ಎಸ್.ಎಂ.ಭುರೆ ಮತ್ತು ಅವರ ಸದಸ್ಯರ ನೇತೃತ್ವದ ತಂಡವು ಸಹ ತನಿಖಾ ವರದಿಯನ್ನು ರೂಪಿಸಿತು. ತನಿಖಾ ತಂಡಗಳಿಂದ, ನ್ಯಾಯಾಂಗದಿಂದ ಈ ಕೋಮು ಗಲಭೆಗೆ ಪ್ರಚೋದಿಸಿದ್ದಾರೆ ಮತ್ತು ಮುಸ್ಲಿಂರ ವಿರುದ್ಧ ಕರ್ತವ್ಯಲೋಪ ಎಸೆಗಿದ್ದಾರೆ ಎಂದು ಆರೋಪಕ್ಕೆ ಒಳಗಾಗಿರುವ ಪೋಲೀಸ್ ಸೂಪರಿಂಟೆಂಡೆಂಟ್ ಕೆ.ಎಸ್.ದ್ವಿವೇದಿಗೆ ನಿತೀಶ್ ಕುಮಾರ್ ಸರ್ಕಾರ 2011 ರಲ್ಲಿ ಅಡಿಶನಲ್ ಡೈರೆಕ್ಟರ್ ಜನರಲ್ ಆಗಿ ಭಡ್ತಿಯನ್ನು ನೀಡಿತು. ಇದೇ ಬಗೆಯ ಕರ್ತವ್ಯ ಲೋಪದ ಆರೋಪ ಎದುರಿಸುತ್ತಿರುವ ಇತರೇ ಪೋಲೀಸ್ ಅಧಿಕಾರಿಗಳಿಗೂ ಪ್ರಮೋಶನ್ ನೀಡಲಾಗಿದೆ.”

2013 ಸೆಪ್ಟೆಂಬರ್: ಭಾಗಲ್ಪುರದ ಚಾಮನಗರದ ಅಂಗಡಿಯ ಮುಂದೆ ಕುಳಿತಿರುವ ಜಿಯಾವುದ್ದೀನ್ ಮತ್ತು ಚಂಪಾನಗರದ ರಾಜಕೀಯ ಆಕ್ಟಿವಿಸ್ಟ್ ಮೆಜಾಹತ್ ಅನ್ಸಾರಿ ಹೇಳುವುದೇನೆಂದರೆ ಮೊನ್ನೆ ಮುಜಫರ್ ನಗರದಲ್ಲಿ ನಡೆದ ಕೋಮುಗಲಭೆಗಳನ್ನು ನೋಡಿದಾಗ ನಮಗೆ ಭಾಗಲ್ಪುರದ ಕರಾಳತೆ ನೆನಪಾಗುತ್ತದೆ. ಅಂದು ನಮಗೆಲ್ಲಾ ಆಗಿದ್ದೇ ಇಂದು ಮುಜಫರ್ ನಗರದ ನಾಗರಿಕರಿಗೆ ಆಗುತ್ತಿದೆ. ಇದಕ್ಕೆ ಕೊನೆಯೆಂದೋ? (ದಿ ಹಿಂದೂ, 3 ನೇ ಅಕ್ಟೋಬರ್, 2013)

30 ನೇ ಸೆಪ್ಟೆಂಬರ್ 2013 : ಕರ್ನಾಟಕದ ಶಿರಾ ತಾಲೂಕಿನಲ್ಲಿ ಇದ್ದಕ್ಕಿಂದ್ದಂತೆ ಕೋಮುಗಲಭೆಗಳು ಶುರುವಾಗಿ ಇಡೀ ಪಟ್ಟಣವೇ ಭಯಗ್ರಸ್ಥವಾಯಿತು. sira-communal-clash1996 ರ ಜನವರಿಯಲ್ಲಿ ಜರುಗಿದ ಕೋಮು ಗಲಭೆಗಳ ನಂತರ ಇದೇ ಮೊದಲ ಬಾರಿಗೆ ಶಿರಾ ಪಟ್ಟಣ ಗಲಭೆಗೀಡಾಗಿದೆ. ಇದು ದಿಢೀರನೆ ಉಧ್ವವಿಸಿದ್ದಲ್ಲ. ಅಲ್ಲಿನ ಮುಸ್ಲಿಂ ಸಮುದಾಯಕ್ಕೆ ಸೇರಿದ ಜಾಗವೊಂದರಲ್ಲಿ ವ್ಯಾಪಾರದ ಮಳಿಗೆಗಳನ್ನು ಕಟ್ಟಲಾಯಿತು. ಆದರೆ ಇದು ಸಂಘ ಪರಿವಾರದ ಕೆಂಗಣ್ಣಿಗೆ ಗುರಿಯಾಗಿದೆ. ಈ ಚೆಡ್ಡಿಗಳು ಕೂಗುಮಾರಿಗಳಂತೆ ಕಿರುಚಾಡುತ್ತಾ ಅದು ಸ್ಮಶಾನಕ್ಕೆ ಸೇರಿದ ಜಾಗವೆಂತಲೂ ಅಲ್ಲಿ ಮಳಿಗೆಗಳನ್ನು ನಿರ್ಮಿಸಿರುವುದು ಕಾನೂನುಬಾಹಿರವೆಂತಲೂ ಪಟ್ಟಣದಲ್ಲಿ ಅಶಾಂತಿಯನ್ನು ಉಂಟು ಮಾಡುತ್ತಿದ್ದಾರೆ. ಆದರೆ ತಮಾಶೆಯೆಂದರೆ ಇಂದು ಆ ಜಾಗ ಮುಸ್ಲಿಂ ಸಮುದಾಯಕ್ಕೆ ಸೇರಿದ್ದು. ಆದರೆ ಈ ಬಿಜೆಪಿ ಏತಕ್ಕೆ ಅದರಲ್ಲಿ ಮೂಗು ತೂರಿಸುತ್ತಿದೆ? ಮತ್ತೇನಕ್ಕೆ, ಕೋಮು ಗಲಭೆಗಳನ್ನು ಹುಟ್ಟು ಹಾಕಲಿಕ್ಕೆ. ಶಿರಾ ಪಟ್ಟಣದ ಪ್ರಗತಿಪರ ಹೋರಾಟಗಾರರ ಪ್ರಕಾರ ಇಂದಿನ ಇಲ್ಲಿನ ಗಲಭೆಗೂ, ಕಳೆದ ತಿಂಗಳು ಮುಜಫರ್ ನಗರದ ಗಲಭೆಗೂ ಸಾಮ್ಯತೆ ಇದೆ. ಹಿಂದೂ ಹುಡುಗಿಯೊಬ್ಬಳನ್ನು ಮುಸ್ಲಿಂ ಯುವಕರಿಬ್ಬರು ಚುಡಾಯಿಸಿದರೆಂಬ ಗುಲ್ಲೇ ಶಿರಾ ಗಲಭೆಯ ಹುಟ್ಟಿಗೆ ಕಾರಣ. ಇದನ್ನು ಮುಂದು ಮಾಡಿ ಇಡೀ ಪಟ್ಟಣದ ಶಾಂತಿ ಕದಡುವಂತೆ ಮಾಡಿತು ಈ ಸಂಘ ಪರಿಪಾರ. ಮುಸ್ಲಿಂ ಮಳಿಗೆಗಳನ್ನು ಈ ಬೆಂಕಿಗೆ ತುಪ್ಪದಂತೆ ಬಳಸಿಕೊಳ್ಳುತ್ತಿದೆ ಈ ಬಿಜೆಪಿ. ಕಾಂಗ್ರೆಸ್ ಪಕ್ಷಕ್ಕೆ ರಾಜಕೀಯ ಇಚ್ಛಾಶಕ್ತಿಯಿದ್ದರೆ ಇದನ್ನು ಸಣ್ಣದರಲ್ಲೇ ತುಂಡು ಮಾಡಬಹುದೆಂದು ಅಲ್ಲಿನ ಪ್ರಗತಿಪರ ಹೋರಾಟಗಾರರು ನೊಂದು ನುಡಿಯುತ್ತಾರೆ.deccanherald-sira-town-clash ಆದರೆ ಸ್ಥಳೀಯ ಕಾಂಗ್ರೆಸ್ ಶಾಸಕರಿಗೆ ಈ ಕಮ್ಯೂನಲ್ ಗಲಭೆಗಳ ಆಳಗಳ ಕುರಿತಾದ ಇರುವ ಸೆನ್ಸಿಟಿವಿಟಿಯ ಕೊರತೆ ಇಂದಿನ ಸಂದರ್ಭದಲ್ಲಿ ಗೋಚರವಾಗುತ್ತಿದೆ. ಮತ್ತೊಂದು ಆತಂಕದ ವಿಚಾರವೆಂದರೆ ಗಲಭೆಯ ಹಿನ್ನೆಲೆಯಲ್ಲಿ ಸಂಘ ಪರಿವಾರದಿಂದ ಬಂಧಿತರಾದ ಹುಡುಗರ ಸರಾಸರಿ ವಯಸ್ಸು ಸುಮಾರು 20 ರಿಂದ 23. ಈ ಲುಂಪೆನ್ ಗುಂಪೆಲ್ಲ ಓಬಿಸಿ ಗುಂಪಿಗೆ ಸೇರಿದವರು. ಪ್ರಗತಿಪರ ಹೋರಾಟಗಾರರು ಹೇಳಿದ್ದು ಈ ಹುಡುಗರು ಮೋದಿಯ ಮಂತ್ರವನ್ನು ಕತ್ತಿಯಂತೆ ಝಳಪಿಸುತ್ತಿದ್ದಾರೆ.

ನೆನಪಿರಲಿ ಗುಜರಾತ್ ಹತ್ಯಾಕಾಂಡದಲ್ಲೂ ಸಂಘ ಪರಿವಾರದ ಪರವಾಗಿ ಹೋರಾಡಿದವರು ಓಬಿಸಿ ಮತ್ತು ದಲಿತ ಹುಡುಗರು. ಇಡೀ ಕೋಮು ಗಲಭೆಗಳ ರಕ್ತಸಿಕ್ತ ಹಿತಿಹಾಸದುದ್ದಕ್ಕೂ ಇದು ನಿಜ. ಕಳೆದ ಎಂಬತ್ತು ವರ್ಷಗಳಲ್ಲಿ ಮೇಲ್ಜಾತಿ ಆರೆಸಸ್‌ನ ರಾಜಕೀಯ ಆಕಾಂಕ್ಷೆಗೆ ಬಾಣಗಳಾಗಿ ಬಳಕೆಗೊಂಡು ಗೋಣು ಮರಿದುಕೊಂಡು ಹಳ್ಳಕ್ಕೆ ಬೀಳುತ್ತಿರುವುವರು ಓಬಿಸಿ ಮತ್ತು ದಲಿತರು.

2002 ರಲ್ಲಿ ಜರುಗಿದ ಗುಜರಾತ್ ಹತ್ಯಾಕಾಂಡವನ್ನು ಒಳಗೊಂಡು ಇಂಡಿಯಾದಲ್ಲಿ ಕಳೆದ ಎಂಬತ್ತು ವರ್ಷಗಳಲ್ಲಿ ಘಟಿಸಿದ ನೂರಾರು ಕೋಮು ಗಲಭೆಗಳಿಗೂ ಒಂದಕ್ಕೊಂದು ಅಪಾರ ಸಾಮ್ಯತೆಗಳಿವೆ. ಈ ಎಲ್ಲ ಗಲಭೆಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಅಂಶವೆಂದರೆ ಸಂಘ ಪರಿವಾರದ ಪಾತ್ರ. ಸಂಘ ಪರಿವಾರದ ಎಲ್ಲ ಅಂಗ ಪಕ್ಷಗಳು ಒಂದಕ್ಕೊಂದು ಪೂರಕವಾಗಿ, ಪ್ರೇರಕ ಶಕ್ತಿಯಾಗಿ ಕಾರ್ಯ ನಿರ್ವಹಿಸುತ್ತ ಹತ್ಯಾಕಾಂಡಗಳ ಷಡ್ಯಂತ್ರಗಳನ್ನು ರೂಪಿಸುತ್ತವೆ. ಈಗ ಹೇಳಿ, ಇಂದು ಈ ಮತೀಯವಾದಿಗಳ ಗುಂಪಿನ ನಾಯಕನಾದ ನರೇಂದ್ರ ಮೋದಿಯ ನೇತೃತ್ವದಲ್ಲಿ ಗುಜರಾತ್‌ನಲ್ಲಿ ಜರುಗಿದ ಹತ್ಯಾಕಾಂಡಗಳನ್ನು ಒಂದು ಘಟನೆಯಷ್ಟೇ ಅದನ್ನು ಮರೆತುಬಿಡಿ ಎಂದು ಮಾನವಿಲ್ಲದೆ ಬೊಗಳುತ್ತಿರುವ ಮಾಧ್ಯಮಗಳು ಮತ್ತು ಮಧ್ಯಮವರ್ಗಗಳಿಗೆ ಆತ್ಮಸಾಕ್ಷಿಯೆಂಬುದಿದೆಯೇ? ಇವರೆಂದಾರೂ ಈ ಕೋಮು ಗಲಭೆಗಳಿಗೆ ತುತ್ತಾಗಿದ್ದವರೇ? ಓಬಿಸಿ ಮತ್ತು ದಲಿತರನ್ನು ಬಳಸಿಕೊಂಡು ಈ ಬ್ರಾಹ್ಮಣ್ಯದ ಆರೆಸಸ್ ಅಧಿಕಾರದ ಹತ್ತಿರಕ್ಕೆ ನಿಧಾನವಾಗಿ ತೆವಳುತ್ತಿದೆ. ಮೋದಿ ಕಂಡ ಕಂಡಲ್ಲಿ ಮತಾಂಧತೆಯ ಬೆಂಕಿಯುಗುಳುತ್ತಿದ್ದಾನೆ. ಕಳೆದ ದಶಕದಲ್ಲಿ ಹೆಚ್ಚೂ ಕಡಿಮೆ ತಣ್ಣಗಿದ್ದ ಕೋಮುವಾದ ಇಂದು ದೇಶದ ಅನೇಕ ಭಾಗಗಳಲ್ಲಿ ಪುನರಾವರ್ತನೆಯಾಗುತ್ತಿದೆ. ಇಂದು ಮೋದಿಯ ಬೆಂಬಲಿಗರು ಸಂವಿಧಾನವನ್ನೇ ತಿರಸ್ಕರಿಸುತ್ತಿದ್ದಾರೆ. ಮಧ್ಯಮ ವರ್ಗಕ್ಕೆ ಇಂದು ಸರ್ವಾಧಿಕಾರ ಅಪ್ಯಾಯಮಾನವಾಗಿ ಗೋಚರಿಸುತ್ತಿದೆ. ಫ್ಯಾಸಿಸ್ಟ್ ನಾಯಕ ಹಿಂದೂ ಧರ್ಮದ ಪುನರುದ್ಧಾರಕನಂತೆ ಕಂಗೊಳಿಸುತ್ತಿದ್ದಾನೆ.

ಕಂದಾಚಾರಗಳ ಬೆಂಕಿಯಲ್ಲಿ ಬೇಯುವ ವಿಧವೆಯರು ಅರ್ಚಕಿಯರಾಗುತ್ತಿರುವುದು…


– ಚಿದಂಬರ ಬೈಕಂಪಾಡಿ


 

ಮಂಗಳೂರು ದಸರಾ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಮೂಲಕ ಈಗ ಮನೆ ಮಾತಾಗಿದೆ. ಸಾಮಾಜಿಕ ಸುಧಾರಕ ನಾರಾಯಣಗುರುಗಳ ಮೂಲಕ kudroli-temple-wodows-facilitated-poojaryಸ್ಥಾಪನೆಯಾದ ಈ ಕ್ಷೇತ್ರದಲ್ಲಿ ಈಗ ಬದಲಾವಣೆಯ ಬೆಳಕು ಕಾಣಿಸುತ್ತಿದೆ. ಇತಿಹಾಸ ಪ್ರಸಿದ್ಧಿ ಪಡೆದ ಈ ಕ್ಷೇತ್ರ ಈಗ ಮತ್ತೊಂದು ಕ್ರಾಂತಿಕಾರಿ ಹೆಜ್ಜೆಗೆ ನಾಂದಿಯಾಗಿದೆ. ವಿಧವೆಯರು ಸಾಮಾಜಿಕವಾಗಿ ಯಾವುದೇ ಪುಣ್ಯ ಕಾರ್ಯಗಳಲ್ಲಿ ಪಾಲ್ಗೊಳ್ಳುವುದು ಸಮಾಜ ಸಮ್ಮತವಲ್ಲ. ಇದು ಮನುಷ್ಯರೇ ಹಾಕಿರುವ ಬಂಧನ. ಆದರೆ ಈ ಬಂಧವನನ್ನು ಕಳಚಿಕೊಂಡು ವಿಧವೆಯರು ಕೂಡಾ ಪುಣ್ಯ ಕಾರ್ಯಗಳಲ್ಲಿ ಪಾಲ್ಗೊಳ್ಳಬಹುದು ಎನ್ನುವುದಷ್ಟೆ ಅಲ್ಲ, ದೇವರ ಪೂಜೆ ಮಾಡುವ ಅರ್ಚಕರ ಸ್ಥಾನಕ್ಕೂ ಅರ್ಹರು ಎನ್ನುವುದನ್ನು ಈ ಬಾರಿಯ ದಸರಾದಲ್ಲಿ ಜಾರಿಗೆ ತರಲಾಗುತ್ತಿದೆ.

ಇಬ್ಬರು ವಿಧವೆಯರು ಇನ್ನು ಮುಂದು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಶಾಶ್ವತ ಅರ್ಚಕರಾಗಿ ದೇವರ ಪೂಜಾ ಕೈಂಕರ್ಯಗಳನ್ನು ಕೈಗೊಳ್ಳಲಿದ್ದಾರೆ. ಈ ಮೊದಲು ವಿಧವೆಯರು ಗೋಕರ್ಣನಾಥ ಕ್ಷೇತ್ರದಲ್ಲಿ ರಥ ಎಳೆದಾಗ ಸಂಪ್ರದಾಯವಾದಿಗಳು ಹೌಹಾರಿದ್ದರು. ಮತ್ತೊಮ್ಮೆ ಈ ಕ್ಷೇತ್ರದಲ್ಲಿ ವಿಧವೆಯರೇ ಚಂಡಿಕಾಯಗದಲ್ಲಿ ಪಾಲ್ಗೊಳ್ಳುವ ಮೂಲಕ ವಿಧವೆಯರು ಅಮಂಗಳೆಯರಲ್ಲ ಎನ್ನುವ ಸಂದೇಶ ಸಾರಿದ್ದರು. ಈಗ ವಿಧವೆಯರು ಅರ್ಚಕರಾಗಿ ನಿತ್ಯವೂ ಇಲ್ಲಿ ಪೂಜೆ ನೆರವೇರಿಸಲಿದ್ದಾರೆ. ಈಗಾಗಲೇ ಇಬ್ಬರು ವಿಧವೆಯರನ್ನು ಆಯ್ಕೆ ಮಾಡಿ ಕಳೆದ ಆರು ತಿಂಗಳಿನಿಂದ ಅರ್ಚಕರ ತರಬೇತಿ ಪಡೆಯುತ್ತಿದ್ದಾರೆ.

ಇದೆಲ್ಲವೂ ಸಾಧ್ಯವಾಗಿರುವುದು ಮಾಜಿ ಕೇಂದ್ರ ಸಚಿವ ಹಾಗೂ ಕುದ್ರೋಳಿ ಕ್ಷೇತ್ರದ ನವೀಕರಣದ ರೂವಾರಿ ಬಿ.ಜನಾರ್ಧನ ಪೂಜಾರಿ ಅವರ ಛಲ ಮತ್ತು ಸ್ವತಂತ್ರ ನಿಲುವಿನಿಂದ.

ಶತಮಾನಗಳ ಇತಿಹಾಸವಿರುವ ಕುದ್ರೋಳಿ ಕ್ಷೇತ್ರವನ್ನು ನವೀಕರಿಸಲು ಜನಾರ್ಧನ ಪೂಜಾರಿ ಅವರು ಅದಕ್ಕಾಗಿ ನಾಡಿನಾದ್ಯಂತ ಸಂಚರಿಸಿ ಜನರಿಂದ kudroli-templeದೇಣಿಗೆ ಸಂಗ್ರಹಿಸಿದರು. ತಾವೇ ನವೀಕರಣದ ಸಂದರ್ಭದಲ್ಲಿ ಕಲ್ಲು, ಮಣ್ಣು ಹೊರುವ ಮೂಲಕ ಕರಸೇವೆಯಲ್ಲಿ ಜನಸಾಗರವೇ ಪಾಲ್ಗೊಳ್ಳುವಂತೆ ಮಾಡಿದರು. ಇದೆಲ್ಲವನ್ನೂ ಒಂದು ವರ್ಗ ಪೂಜಾರಿಯವರ ಇಮೇಜ್ ವೃದ್ಧಿಗೆಂದು ಗೇಲಿ ಮಾಡಿತ್ತು. ನಂತರ ಮಂಗಳೂರು ದಸರಾ ಮೆರವಣಿಗೆಗೆ ಹೊಸ ರೂಪಕೊಟ್ಟು ಪ್ರತೀ ವರ್ಷ ಅದ್ದೂರಿ ದಸರಾಕ್ಕೆ ಸ್ಫೂರ್ತಿಯಾಗಿದ್ದಾರೆ. ಇವಿಷ್ಟೇ ಆಗಿದ್ದರೆ ಮಾಮೂಲಿ ಅಂದುಕೊಳ್ಳಬಹುದಿತ್ತು.

ಶೂದ್ರರಿಗೆ ದೇವಸ್ಥಾನ ಮೆಟ್ಟಿಲು ಹತ್ತುವ ಅವಕಶಾವಿಲ್ಲ ಎನ್ನುವ ಕಾಲಘಟ್ಟದಲ್ಲಿ ಸಾಮಾಜಿಕವಾಗಿ ಹಿಂದುಳಿದವರು ಅಸ್ಪೃಶ್ಯರಿಗೂ ದೇವಸ್ಥಾನಕ್ಕೆ ಹೋಗುವ ಹಕ್ಕಿದೆ, ದೇವರನ್ನು ಪೂಜಿಸುವುದಕ್ಕೆ ಅವಕಾಶವಿದೆ ಎನ್ನುವ ಮೂಲಕ ಈ ಕ್ಷೇತ್ರ ಸ್ಥಾಪನೆ ಮಾಡಿದರು ನಾರಾಯಣಗುರುಗಳು. ಮಾನವತಾವಾದದ ಪ್ರತಿಪಾದಕರಾಗಿ, ಮೇಲು-ಕೀಳು ಎನ್ನುವ ಮನುಷ್ಯ ನಿರ್ಮಿತ ಗೋಡೆಗಳನ್ನು ಕೆಡವಿ ಕೆಳವರ್ಗದವರಲ್ಲೂ ಸ್ವಾಭಿಮಾನದ ಬೀಜ ಬಿತ್ತಿದರು. ಕುದ್ರೋಳಿ ಗೋಕರ್ಣನಾಥ ಕ್ಷೇತ್ರ ಕೇವಲ ಆರಾಧನಾ ಸ್ಥಳವಾಗಲಿಲ್ಲ, ಸ್ವಾಭಿಮಾನದ ಪ್ರತೀಕವಾಗಿ ಬೆಳೆಯಿತು. ಈಗ ಅಂಥ ಸ್ವಾಭಿಮಾನವನ್ನು ಬೆಳೆಸುವ ಭಾಗವಾಗಿ hindu-widowವಿಧವೆಯರಿಗೂ ಮಂಗಳ ಕಾರ್ಯಗಳಲ್ಲಿ ಭಾಗವಹಿಸುವ ಅವಕಾಶವಿದೆ ಎನ್ನುವುದನ್ನು ಪ್ರತಿಪಾದಿಸಿದ ಜನಾರ್ಧನ ಪೂಜಾರಿ ವಿಧವೆಯರಿಂದಲೇ ರಥ ಎಳೆಯಿಸಿ ಕ್ರಾಂತಿಕಾರಿ ಹೆಜ್ಜೆಗೆ ನಾಂದಿಯಾದರು. ಚಂಡಿಕಾ ಯಾಗದಲ್ಲಿ ವಿಧವೆಯರೇ ಪಾಲ್ಗೊಳ್ಳುವಂತೆ ಮಾಡಿ ಸಾಮಾಜಿಕ ಅಸಮಾನತೆಯಲ್ಲಿ, ಕಂದಾಚಾರಗಳ ಬೆಂಕಿಯಲ್ಲಿ ಬೇಯುವ ವಿಧವೆಯರ ಮುಖದಲ್ಲಿ ಮುಗುಳು ನಗು ಅರಳಲು ಕಾರಣರಾದರು. ಹೆತ್ತ ತಾಯಿ ವಿಧವೆಯಾದರು ಮಕ್ಕಳಿಗೆ ಆಕೆ ಪೂಜ್ಯಳು ಎಂದು ಪ್ರತಿಪಾದಿಸುತ್ತೇವೆ. ಆದರೆ ಆಕೆಯನ್ನು ಮಂಗಳ ಕಾರ್ಯಗಳಿಂದ ದೂರ ಇಟ್ಟು ಸಂಪ್ರದಾಯದ ಹೆಸರಲ್ಲಿ ಪ್ರತ್ಯೇಕಿಸುತ್ತೇವೆ. ಮಾನಸಿಕವಾಗಿ ವಿಧವೆಯರನ್ನು ಕುಬ್ಜರಾಗಿಸುವ ನಮ್ಮ ನಂಬಿಕೆ, ಆಚರಣೆಗಳು ಅಮಾನವೀಯ ಎನ್ನುವ ಪರಿವೆಯೇ ಇಲ್ಲದವರಂತೆ ವರ್ತಿಸುತ್ತೇವೆ.

ಕನ್ನಡದ ಮೊಟ್ಟಮೊದಲ ಕಾದಂಬರಿ ಗುಲ್ವಾಡಿ ವೆಂಕಟರಾಯರ ‘ಇಂದಿರಾಬಾಯಿ ಅಥವಾ ಸದ್ಧರ್ಮ ವಿಜಯ’ ಓರ್ವ ವಿಧವೆಯ ಬದುಕನ್ನು ಮನಮಿಡಿಯುವಂತೆ ಹೇಳುತ್ತದೆ. ಆಕೆಗೆ ಮರುಮದುವೆ ಮಾಡಿಸುವ ಮೂಲಕ ನಿಜವಾದ ಧರ್ಮದ ವಿಜಯ ಎನ್ನುವ ಸಂದೇಶ ಸಾರುತ್ತಾರೆ. ಶತಮಾನಗಳ ಹಿಂದೆಯೇ ಇಂಥ ಕ್ರಾಂತಿಕಾರಿ ನಿಲುವು ತಳೆಯುವ ಎದೆಗಾರಿಕೆ ಓರ್ವ ಲೇಖಕರು ತೋರಿಸಿದ್ದಾರೆ. ಸಂಪ್ರದಾಯ, ಆಚರಣೆಗಳೇ ಅತೀಮುಖ್ಯ ಎನ್ನುವ ಕಾಲಘಟ್ಟದಲ್ಲಿ ಗುಲ್ವಾಡಿ ಅವರು ಸಂಪ್ರದಾಯದ ಗೋಡೆ ಕೆಡವುವ ಸಾಹಸ ಮಾಡಿದ್ದರು.

ಜನಾರ್ಧನ ಪೂಜಾರಿ ಓರ್ವ ರಾಜಕಾರಣಿಯಾಗಿ ಕೇಂದ್ರದಲ್ಲಿ ಹಣಕಾಸು ಖಾತೆ ಮಂತ್ರಿಯಾಗಿ ಸಾಲಮೇಳ ನಡೆಸುವ ಮೂಲಕ ಸುದ್ದಿಯಾದರು ಎನ್ನುವುದು ಕ್ಲೀಷೆಯ ಮಾತಾಗುತ್ತದೆ. ಬಡವರು, ಮಹಿಳೆಯರು ಸ್ವಾವಲಂಬಿಯಾಗಬೇಕು ಎನ್ನುವ ಕಾರಣಕ್ಕೆ ಸಾರ್ವಜನಿಕವಾಗಿ ಸಾಲಮೇಳ ನಡೆಸುವ poojaryಮೂಲಕ ಬ್ಯಾಂಕಿನ ಬಾಗಿಲುಗಳು ಬಡವರಿಗೆ ಮುಕ್ತವಾಗುವಂತೆ ಮಾಡಿದವರು ಎನ್ನುವುದನ್ನು ನಿರಾಕರಿಸಲಾಗದು. ಈ ಸಾಲಮೇಳದ ಕಾನ್ಸೆಪ್ಟ್ ಪರಿಷ್ಕರಣೆಗೆ ಒಳಪಡಬೇಕಿತ್ತು ಎನ್ನುವುದು ಚರ್ಚೆಯ ಭಾಗವಾಗಿದ್ದರೂ ದೇಶದಲ್ಲಿ ಕ್ರಾಂತಿಕಾರಿ ಹೆಜ್ಜೆ ಎನ್ನುವುದನ್ನು ನಿರಾಕರಿಸುವಂತಿಲ್ಲ. ಅಂತೆಯೇ ಮಂಗಳೂರು ಗೋಕರ್ಣನಾಥ ಕ್ಷೇತ್ರದಲ್ಲಿ ವಿಧವೆಯರಿಗೆ ಪೂಜಾರಿ ಅವರು ಕಲ್ಪಿಸಿಕೊಟ್ಟಿರುವ ಹೊಸ ಅವಕಾಶಗಳು ಮತ್ತು ತೆಗೆದುಕೊಂಡಿರುವ ನಿಲುವುಗಳು ನಾರಾಯಣಗುರುಗಳ ತತ್ವ, ಆದರ್ಶ ಮತ್ತು ಅವರು ಪ್ರತಿಪಾದಿಸಿದ ಮೌಲ್ಯಗಳಿಗೆ ಪೂರಕ ಎನ್ನುವುದನ್ನು ಯಾರೂ ನಿರಾಕರಿಸುವಂತಿಲ್ಲ. ಮನುಷ್ಯರೇ ಮಾಡಿದ ಕಟ್ಟುಪಾಡುಗಳಿಗೆ ದೇವರು ಪರಿಹಾರ ಕೊಡಲು ಸಾಧ್ಯವಿಲ್ಲ, ಮನುಷ್ಯರೇ ಪರಿಹಾರ ಕೊಡಬೇಕಾಗಿದೆ. ಮಂಗಳ ಕಾರ್ಯಗಳಿಂದ ದೂರ ಇಟ್ಟು ಸಂಪ್ರದಾಯದ ಹೆಸರಲ್ಲಿ ಪ್ರತ್ಯೇಕಿಸಿ, ಸಾಮಾಜಿಕ ಅಸಮಾನತೆಯಲ್ಲಿ, ಕಂದಾಚಾರಗಳ ಬೆಂಕಿಯಲ್ಲಿ ಬೇಯುವ ವಿಧವೆಯರ ವಿಚಾರದಲ್ಲಿ ಜನಾರ್ಧನ ಪೂಜಾರಿ ಅವರು ತಳೆದಿರುವ ನಿಲುವುಗಳು ಮನುಷ್ಯತ್ವ, ಮಾನವೀಯತೆಯನ್ನು ಪ್ರತಿಪಾದಿಸುವವರು ಮೆಚ್ಚಿದರೆ ಅತಿಶಯೋಕ್ತಿಯಲ್ಲ ಮತ್ತು ಅಪರಾಧವೂ ಅಲ್ಲ.

“ಗಾಂಧಿ ಜಯಂತಿ ಕಥಾ ಸ್ಪರ್ಧೆ – 2013″ರ ಫಲಿತಾಂಶ

ಸ್ನೇಹಿತರೇ,

“ಗಾಂಧಿ ಜಯಂತಿ ಕಥಾ ಸ್ಪರ್ಧೆ – 2013″ರ ಫಲಿತಾಂಶ ಮೂರು ದಿನ ತಡವಾಗಿ ಪ್ರಕಟಿಸುತ್ತಿರುವುದಕ್ಕೆ ವಿಷಾದವಿದೆ. ಈ ಬಾರಿ ಸುಮಾರು 50+ ಕತೆಗಳು katha-sprade-2013ಬಂದಿದ್ದವು. ಕಳೆದ ಸಾರಿಗೆ ಹೋಲಿಸಿದರೆ ಒಂದಿಪ್ಪತ್ತು ಕಮ್ಮಿ. ಆದರೆ ಕಳೆದ ಬಾರಿ ನಮ್ಮ ಕಥಾ ಸ್ಪರ್ಧೆಯ ಪ್ರಕಟಣೆ ಮತ್ತು ಕತೆಗಳ ಆಹ್ವಾನ ಪ್ರಜಾವಾಣಿ, ಕನ್ನಡ-ಒನ್‌ಇಂಡಿಯಾ, ಅವಧಿ ಒಳಗೊಂಡಂತೆ ಇತರೆ ಒಂದೆರಡು ಕಡೆ ಪ್ರಕಟವಾಗಿತ್ತು. ಕೆಲವೊಂದು ಕಡೆ, ವಿಶೇಷವಾಗಿ ಮುದ್ರಣ ಮಾಧ್ಯಮದಲ್ಲಿ, ನಿಯಮಗಳು ಸ್ಪಷ್ಟವಾಗಿ ಪ್ರಕಟವಾಗಿಲ್ಲದಿದ್ದ ಕಾರಣ ಆಗ ಅನೇಕ ಕತೆಗಳು ಕಾಗದದಲ್ಲಿ ಅಂಚೆಯ ಮೂಲಕ ಬಂದವುವಾಗಿದ್ದವು ಮತ್ತು ಅವು ನಮಗೆ ಒಂದಷ್ಟು ತಾಂತ್ರಿಕ ಸಮಸ್ಯೆಗಳನ್ನು ತಂದೊಡ್ಡಿದ್ದವು. ಹಾಗಾಗಿ ಈ ಬಾರಿ ಪ್ರಕಟಣೆಯನ್ನು ಎಲ್ಲಿಯೂ ಕಳುಹಿಸಲಿಲ್ಲ. ಈ ಸಾರಿ ಬಂದ ಎಲ್ಲಾ ಕತೆಗಳೂ ಇಮೇಲ್‌ನಲ್ಲಿ ಬಂದ ಸಾಫ್ಟ್‌ಕಾಪಿಗಳು.

ಕತೆಗಳು ಕಮ್ಮಿ ಸಂಖ್ಯೆಯಲ್ಲಿ ಬಂದಿದ್ದರೂ, ಬಂದ ಬಹುತೇಕ ಎಲ್ಲಾ ಕತೆಗಳು ಉತ್ತಮವಾಗಿವೆ ಎಂದು ನನಗೆ ಮೊದಲ ದಿನದಿಂದಲೇ ಅನ್ನಿಸಿತ್ತು. ನಮ್ಮ ಬಳಗದ ಶ್ರೀಪಾದ ಭಟ್ಟರು ಮತ್ತು ನಾನು ಒಂದು ದಿನ ಕುಳಿತು ಕತೆಗಳತ್ತ ಕಣ್ಣಾಡಿಸಿದೆವು. ಒಳ್ಳೆಯ ಕತೆಗಳು ಬಂದಿವೆ ಎಂದು ನಮಗೆ ಮೇಲ್ನೋಟಕ್ಕೇ ಗೊತ್ತಾಯಿತು. ನಾವಿಬ್ಬರೂ ಸೇರಿ ಕಥಾ ಸ್ಪರ್ಧೆಯ ನಿಬಂಧನೆಗಳಿಗೆ ಒಳಪಡದ ಮತ್ತು ಪಕ್ಕಕ್ಕಿಡಬಹುದು ಎನ್ನಿಸಿದ ಕೆಲವನ್ನು ಪ್ರತ್ಯೇಕಿಸಿ ಒಟ್ಟು 39 ಕತೆಗಳನ್ನು ತೀರ್ಪುಗಾರರಾದ ಸಾಹಿತಿ ಮತ್ತು ಪ್ರಾಧ್ಯಾಪಕ ರಾಮಲಿಂಗಪ್ಪ ಬೇಗೂರುರವರಿಗೆ ಮುದ್ರಿಸಿ ಕಳುಹಿಸಿದೆವು. ತೀರ್ಪುಗಾರರ ಇಚ್ಚೆಯಂತೆ ಅವರಿಗೆ ಕಳುಹಿಸಿದ ಕತೆಗಳಲ್ಲಿ ಯಾವುದರಲ್ಲೂ ಲೇಖಕರ ಹೆಸರುಗಳು ಇರಲಿಲ್ಲ. ಇಂದು ಅಂತಿಮವಾಗಿ ತೀರ್ಪುಗಾರರು ಫಲಿತಾಂಶ ಕಳುಹಿಸಿದ್ದಾರೆ.

ಮೊದಲ ಬಹುಮಾನ : “ಮಹಾತ್ಮ” – ವಿಶ್ವಾಸ್ ಭಾರದ್ವಾಜ್
ಎರಡನೆಯ ಬಹುಮಾನ : “ಗಲೀಜು” – ಗಿರಿ ರಾಜ್
ಮೂರನೆಯ ಬಹುಮಾನ : “ಬೆಂದಕಾಳೂರು” – ವಿಜಯ್ ಹೂಗಾರ್
ಪ್ರೋತ್ಸಾಹಕ ಬಹುಮಾನಗಳು :
ಮುಗಿಲ ಮಾಯೆಯ ಕರುಣೆ” – ಪಿ. ಮಂಜುನಾಥ
ಹುಲಿ ಸಾಕಣೆ” – ಗೋಪಿನಾಥ ರಾವ್

ಕಥಾ ಸ್ಪರ್ಧೆಗೆ ಕತೆಗಳನ್ನು ಕಳುಹಿಸಿದ ಎಲ್ಲಾ ಕತೆಗಾರರಿಗೂ ಧನ್ಯವಾದಗಳು ಮತ್ತು ಕೃತಜ್ಞತೆಗಳು. ಮತ್ತು ವಿಜೇತರಿಗೆ ಅಭಿನಂದನೆಗಳು. ತೀರ್ಪುಗಾರರಾದ ರಾಮಲಿಂಗಪ್ಪ ಬೇಗೂರುರವರಿಗೆ ಹೃತ್ಪೂರ್ವಕ ಧನ್ಯವಾದಗಳು. ಈ ಕಥಾ ಸ್ಪರ್ಧೆಯ ಆಯೋಜನೆಯಲ್ಲಿ ವಿಶೇಷವಾಗಿ ಸಹಕರಿಸಿದ ಶ್ರೀಪಾದ ಭಟ್ಟರಿಗೆ ಮತ್ತು ದೀಪಕ್ ಸಿ.ಎನ್.ರಿಗೆ ಧನ್ಯವಾದಗಳು.

ತೀರ್ಪುಗಾರರ ಅಭಿಪ್ರಾಯದ ಲೇಖನವನ್ನು ಸೋಮವಾರ ಪ್ರಕಟಿಸಲಾಗುವುದು.

ಬಹುಮಾನಿತ ಕತೆಗಳನ್ನು ಮುಂದಿನ ದಿನಗಳಲ್ಲಿ ವಾರಕ್ಕೊಂದರಂತೆ ಪ್ರಕಟಿಸಲಾಗುವುದು.

ಮತ್ತೊಮ್ಮೆ ಇದಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಮತ್ತು ವಿಜೇತರಿಗೆ ಅಭಿನಂದನೆಗಳು.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ
ವರ್ತಮಾನ.ಕಾಮ್.