Daily Archives: November 21, 2013

ಮೋದಿ ಅಂತಃಪುರದಲ್ಲಿ ಬೆಂಗಳೂರು ಯುವತಿ : ಸರ್ವಾಧಿಕಾರಿ ರಾಜ್ಯದಲ್ಲಿ ಸ್ವಾತಂತ್ರ್ಯ ಇಲ್ಲ

– ಸುಧಾಂಶು ಕಾರ್ಕಳ

ತನ್ನ ಮಗಳು ಹೊತ್ತಲ್ಲದ ಹೊತ್ತಲ್ಲೂ ಆಸ್ಪತ್ರೆಗೆ ಅಮ್ಮನನ್ನು ಭೇಟಿಯಾಗೋಕೆ ಹೋಗಬೇಕಾಗುತ್ತೆ. ಹಾಗಾಗಿ ಅವಳಿಗೆ ಸೂಕ್ತ ಭದ್ರತೆ ಕೊಡಿ ಅಂತ ತಂದೆಯೊಬ್ಬರು ತನಗೆ ಪರಿಚಿಯ ಇರುವ ಮುಖ್ಯಮಂತ್ರಿಗೆ ಪತ್ರ ಬರೆಯುತ್ತಾರೆ. ಅದು ದೇಶದ ಬಹುದೊಡ್ಡ ಸಮಸ್ಯೆ ಏನೋ ಎಂಬಂತೆ, ಮುಖ್ಯಮಂತ್ರಿ ತನ್ನ ಮಂತ್ರಿಮಂಡಲದ ಪ್ರಮುಖ ಮಂತ್ರಿಗೆ ಭದ್ರತೆಯ ಜವಾಬ್ದಾರಿ ವಹಿಸುತ್ತಾರೆ. amit-shahಆ ಮನುಷ್ಯ ತನ್ನ ಇಲಾಖೆಯ ಅಧೀನದಲ್ಲಿರುವ ಇಂಟೆಲಿಜೆನ್ಸ್ ವಿಭಾಗದ ಹಿರಿಯ ಅಧಿಕಾರಿಯನ್ನು ಬಳಸಿಕೊಂಡು ಆ ಯುವತಿಗೆ ಭದ್ರತೆ ಕೊಡುತ್ತಾರೆ.

ಅದು ಎಷ್ಟರ ಮಟ್ಟಿಗೆ ಎಂದರೆ… ಸ್ವತಃ ಮಂತ್ರಿಯವರೇ ಪದೇ ಪದೇ ಸಂಬಂಧ ಪಟ್ಟ ಅಧಿಕಾರಿಗಳಿಗೆ ಫೋನ್ ಮಾಡಿ ಹುಡುಗಿ ಎಲ್ಲಿದ್ದಾಳೆ, ಅವಳ ಜೊತೆ ಯಾರಿದ್ದಾರೆ, ಅವಳು ಯಾರಿಗೆ ಫೋನ್ ಮಾಡಿದಳು, ಯಾವ ವಿಮಾನದಲ್ಲಿ ಪ್ರಯಾಣಿಸಿದಳು, ಯಾವ ರೆಸ್ಟೊರೆಂಟ್‌ನಲ್ಲಿ ಊಟ ಮಾಡಿದಳು, ಜೊತೆಯಲ್ಲಿದ್ದ ಹುಡುಗನ ವಯಸ್ಸೆಷ್ಟು.. ಹೀಗೆ ನಾನಾ ಮಾಹಿತಿ ಕಲೆ ಹಾಕುತ್ತಾರೆ. ಅಷ್ಟೇ ಅಲ್ಲ ಅವಳಿಗೆ ’ಭದ್ರತೆ’ ನೀಡುತ್ತಿರುವ ಅಧಿಕಾರಿಗಳಿಂದ ತಪ್ಪಿಸಿಕೊಂಡು ಬಿಡಬಹುದು ಅಂತ ಸ್ವತಃ ಮಂತ್ರಿ ಆತಂಕ ವ್ಯಕ್ತಪಡಿಸುತ್ತಾರೆ. ಜೊತೆಗೆ ಅವಳು ಐಎಎಸ್ ಅಧಿಕಾರಿಯನ್ನು ಸಂಪರ್ಕಿಸುತ್ತಾಳಾ ಎಂಬುದನ್ನೂ ಕರ್ತವ್ಯ ನಿರತ ಅಧಿಕಾರಿಗಳು ಪರಿಶೀಲಿಸಬೇಕು. ಆದರೂ ಆ ಪಕ್ಷದವರು ಸರಕಾರದ ’ಭದ್ರತೆ’ ಬಗ್ಗೆ ಆಕೆಗೆ ಗೊತ್ತಿತ್ತು ಎಂದು ಸುಳ್ಳೇ ಹೇಳುತ್ತಾರೆ.

ದೇಶದ ಪ್ರಧಾನಿಯಾಗಲು ಹೊರಟಿರುವ ನರೇಂದ್ರ ಮೋದಿ ಸದ್ಯ ಮುಖ್ಯಮಂತ್ರಿಯಾಗಿರುವ modi_amit_shahಗುಜರಾತ್ ರಾಜ್ಯದಿಂದ ಕೇಳಿ ಬಂದಿರುವ ಕತೆ ಇದು. ’ಭದ್ರತೆ’ಗೆ ಆದೇಶ ಕೊಟ್ಟವರು ಮುಖ್ಯಮಂತ್ರಿ, ಹೊಣೆ ಹೊತ್ತವರು ಅಮಿತ್ ಶಾ ಮತ್ತು ಆದೇಶವನ್ನು ಶಿರಸಾವಹಿಸಿ ಪಾಲಿಸಿದವರು ಪೊಲೀಸ್ ಅಧಿಕಾರಿ ಜಿ.ಎಲ್. ಸಿಂಘಾಲ್.

ಜಿ.ಎಲ್. ಸಿಂಘಾಲ್ ಸಿಐಡಿಗೆ ಸಲ್ಲಿಸಿರುವ ಫೋನ್ ರೆಕಾರ್ಡಿಂಗ್ ದಾಖಲೆಗಳಲ್ಲಿ ಅಮಿತ್ ಶಾ ಮತ್ತು ಆತನ ನಡುವೆ ನಡೆದ ಸಂಭಾಷಣೆಯ ಪೂರ್ಣ ವಿವರಗಳಿವೆ. ಕೋಬ್ರಾಪೋಸ್ಟ್.ಕಾಂ ಆ ಧ್ವನಿ ಮುದ್ರಿಕೆಗಳನ್ನು ಪ್ರಕಟಿಸಿದೆ. ಆ ಮಾತುಗಳನ್ನು ಒಮ್ಮೆ ಕೇಳಿದರೆ, ಗುಜರಾತ್ ಮುಖ್ಯಮಂತ್ರಿಯ ಇದುವರೆಗೆ ಅಷ್ಟಾಗಿ ಹೊರಬಾರದ ಮುಖ ಸ್ಪಷ್ಟವಾಗಿ ಕಾಣುತ್ತದೆ.

ಬೆಂಗಳೂರು ಮೂಲದ ಆರ್ಕಿಟೆಕ್ಟ್ ಒಬ್ಬಳು ಭೂಕಂಪದಿಂದ ತತ್ತರಿಸಿದ್ದ ಕಛ್ ಪುನರ್ನಿಮಾಣ ಸಂಬಂಧ ಅಲ್ಲಿನ ಜಿಲ್ಲಾಧಿಕಾರಿ ಪ್ರದೀಪ್ ಶರ್ಮ ಅವರ ಸಂಪರ್ಕಕ್ಕೆ ಬರುತ್ತಾಳೆ. ಭುಜ್ ನಗರದ ಗುಡ್ಡ ಪ್ರದೇಶವನ್ನು ಸುಂದರಗಾಣಿಸುವ ಯೋಜನೆಗೆ ಆಕೆ ಲ್ಯಾಂಡ್‌ಸ್ಕೇಪ್ ಆರ್ಕಿಟೆಕ್ಟ್ ಆಗಿ ಆಯ್ಕೆ ಆಗಿರುತ್ತಾಳೆ. ಆ ಯೋಜನೆ ಮುಗಿದು ಉದ್ಘಾಟನೆಯಾಗುವ ಸಂದರ್ಭದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿಗೆ ಪರಿಚಿತಳಾಗುತ್ತಾಳೆ. ಮೊದಲ ಭೇಟಿಯಲ್ಲಿ ಮೋದಿ ತನ್ನ ಖಾಸಗಿ ಇ-ಮೇಲ್ ಅವಳಿಗೆ ನೀಡುತ್ತಾರೆ.

ಸದ್ಯ ವಿವಿಧ ಆರೋಪಗಳನ್ನು ಹೊತ್ತು ಸೇವೆಯಿಂದ ಅಮಾನತ್ತಾಗಿರುವ ಪ್ರದೀಪ್ ಶರ್ಮ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅಫಿಡವಿಟ್ಟಿನಲ್ಲಿ ಈ ಎಲ್ಲಾ ಮಾಹಿತಿಗಳಿವೆ. ತನ್ನ ವಿರುದ್ಧದ ಪ್ರಕರಣಗಳ ತನಿಖೆಯನ್ನು ಬೇರೆ ರಾಜ್ಯಕ್ಕೆ ವರ್ಗಾಯಿಸಬೇಕೆಂದು ಸುಪ್ರಿಂಕೋರ್ಟ್‌ನಲ್ಲಿ ಅವರು ಮನವಿ ಮಾಡಿಕೊಂಡಿದ್ದರೆ. ನರೇಂದ್ರ ಮೋದಿ ಮತ್ತು ಆರ್ಕಿಟೆಕ್ಟ್ ನಡುವಿನ ’ಸಂಬಂಧ’ದ ಬಗ್ಗೆ ತನಗೆ ಖಚಿತ ಮಾಹಿತಿ ಇರುವುದು modi-for-women-powerಕೂಡಾ ತನ್ನ ವಿರುದ್ಧ ’ಸುಳ್ಳು’ ಆರೋಪಗಳನ್ನು ಹೊರಿಸಿ ಬಂಧಿಸಲು ಮತ್ತು ಅಮಾನತ್ತು ಮಾಡಲು ಕಾರಣ ಎನ್ನುವುದು ಅವರ ವಾದ.

ತಮ್ಮ ಅಫಿಡವಿಟ್ಟಿನಲ್ಲಿ ಅವರು ಹೇಳುವಂತೆ, ಆರ್ಕಿಟೆಕ್ಟ್ ಆಗಾಗ ತನ್ನ ಮತ್ತು ಮೋದಿ ನಡುವಿನ ಸಂಬಂಧದ ಬಗ್ಗೆ ಅವರೊಂದಿಗೆ ಹಂಚಿಕೊಂಡಿದ್ದಾಳೆ. ಅವಳು ತನ್ನ ಘನತೆಯನ್ನು ಹೆಚ್ಚಿಸಿಕೊಳ್ಳಲು ಹಾಗೆ ಹೇಳುತ್ತಿರಬಹುದು ಎಂದು ಮೊದಮೊದಲು ಸಂಶಯಿಸಿದ್ದ ಪ್ರದೀಪ್ ಶರ್ಮಾಗೆ ಅವಳ ಮಾತು ಸತ್ಯ ಎಂದು ಗೊತ್ತಾಗುವುದು ಸರಕಾರಿ ಕಾರ್ಯಕ್ರಮವೊಂದರಲ್ಲಿ ಮೋದಿ ಮತ್ತು ಆ ಯುವತಿ ಆಪ್ತವಾಗಿ ಖಾಸಗಿ ಸಂಗತಿಯನ್ನು ಹಂಚಿಕೊಂಡದ್ದನ್ನು ಆಕಸ್ಮಿಕವಾಗಿ ಅವರು ಕೇಳಿಸಿಕೊಂಡಾಗ.

2006 ರ ಮಾರ್ಚ್‌ನಲ್ಲಿ ಒಮ್ಮೆ ಬೆಂಗಳೂರಿನಿಂದ ಅಹ್ಮದಾಬಾದ್‌ಗೆ ಬಂದ ಆ ಯುವತಿ ಪ್ರದೀಪ್ ಶರ್ಮಾರನ್ನು ಫೋನ್ ಮೂಲಕ ಸಂಪರ್ಕಿಸಿ ಭುಜ್‌ಗೆ ಭೇಟಿ ನೀಡುವ ಉದ್ದೇಶ ಇದೆ ಎಂದು ಹೇಳುತ್ತಾಳೆ. ಆದರೆ ನಂತರ ಪ್ರದೀಪ್ ಅವಳನ್ನು ಸಂಪರ್ಕಿಸಲು ಎಷ್ಟೇ ಪ್ರಯತ್ನ ಪಟ್ಟರೂ ಸಾಧ್ಯವಾಗುವುದಿಲ್ಲ. ಕಾರಣ ಅವಳ ದೂರವಾಣಿ ಆಫ್ ಆಗಿರುತ್ತದೆ. modi-bangalore-rallyನಂತರ ಭೇಟಿಯಾದಾಗ ಅವಳು ಹೇಳುವುದು ಆ ಎರಡು ದಿನ ಅವಳು ಇದ್ದದ್ದು ಮುಖ್ಯಮಂತ್ರಿಯ ನಿವಾಸದಲ್ಲಿ. ಅವಳನ್ನು ಹಿಂದಿನ ಬಾಗಿಲಿನಿಂದ ಒಳಗೆ ಕರೆದುಕೊಂಡು ಹೋಗಿದ್ದರಂತೆ. ಮುಖ್ಯಮಂತ್ರಿ ಮಲಗುವ ಕೋಣೆ ಸಮೀಪದಲ್ಲಿಯೇ ಅವಳನ್ನು ಉಳಿಸಿದ್ದರಂತೆ. ಅಂದು ಹೋಳಿ. ಮುಖ್ಯಮಂತ್ರಿ ಭೇಟಿ ಮಾಡಲು ಅನೇಕ ಗಣ್ಯರು ಬಂದಿದ್ದರು. ಆದರೂ, ಅವರು ಬೇಗನೆ ಮನೆಗೆ ಹಿಂತಿರುಗಿ ಅವಳೊಂದಿಗೆ ಕಾಲ ಕಳೆಯುತ್ತಾರೆ. ಆಗ ಅವಳಿಗೆ ಸ್ವಲ್ಪ ಜ್ವರ ಕಾಣಿಸಿಕೊಳ್ಳುತ್ತೆ. ತಕ್ಷಣ ಒಬ್ಬ ವೈದ್ಯರನ್ನು ಕರೆಸಬಹುದೇ ಎಂದು ಅವಳು ಕೇಳಿದಾಗ, ತನ್ನ ಆ ಹೊತ್ತಿನ ವಿಚಿತ್ರ ಸ್ಥಿತಿಯಲ್ಲಿ ಅದು ಸಾಧ್ಯವಿಲ್ಲ ಎನ್ನುತ್ತಾರಂತೆ ಸದ್ಯ ’ಭಾರತವನ್ನೇ ಉಳಿಸಲು’ ಹೊರಟಿರುವ ಪ್ರಧಾನಿ ಅಭ್ಯರ್ಥಿ!

ಆ ಯುವತಿ ಮೋದಿಯೊಂದಿಗೆ ಸಂಪರ್ಕಿಸಲು ಕರೆ ಮಾಡುತ್ತಿದ್ದ ಮೊಬೈಲ್ ದೂರವಾಣಿ ಸಂಖ್ಯೆಯನ್ನು (99099-23400) ಪ್ರದೀಪ್ ಶರ್ಮಾ ಅವಳಿಂದಲೇ ಪಡೆದು ತನ್ನ ಒಂದು ಮೊಬೈಲ್‌ನಲ್ಲಿ ಸೇವ್ ಮಾಡಿಕೊಳ್ಳುತ್ತಾರೆ. ಅದೊಂದು ದಿನ ಆಕಸ್ಮಿಕವಾಗಿ ಯಾರಿಗೋ ಕರೆ ಮಾಡಲು ಹೋಗಿ, ಆ ನಂಬರ್ ಡಯಲ್ ಆಗಿ ಬಿಡುತ್ತದೆ. ಅತ್ತ ಕಡೆಯಿಂದ ಕರೆ ರಿಸೀವ್ ಮಾಡಿದವರು ಮಾತನಾಡುವುದಿಲ್ಲ. ಪ್ರದೀಪ್ ಶರ್ಮಾರ ಪ್ರಕಾರ ತನ್ನ ವಿರುದ್ಧ ಪ್ರಕರಣಗಳು ದಾಖಲಾಗಿ ಜೈಲು ಸೇರಲು ಈ ಘಟನೆ ಪ್ರಮುಖ ಕಾರಣ.

ಶರ್ಮಾ ಹೇಳುವಂತೆ ತಮ್ಮ ಕರೆಯ ನಂತರ ಮೋದಿ ಆ ನಂಬರ್‌ನ ವಾರಸುದಾರರನ್ನು ಹುಡುಕಿಸಿ ಹಿಂದಿನ ಕರೆ ದಾಖಲೆಗಳನ್ನು ಪರಿಶೀಲಿಸಿದರು. ಆ ಮೂಲಕ ಆ ಯುವತಿ ಇವರೊಂದಿಗೆ ಸಂಪರ್ಕದಲ್ಲಿರುವುದನ್ನು ತಿಳಿದುಕೊಂಡರು. ಆ ನಂತರವೇ ಮೋದಿ ಸರಕಾರ ಆ ಯುವತಿಯ ಚಲನವಲನಗಳ ಮೇಲೆ ತೀವ್ರ ನಿಗಾ ವಹಿಸಲು ತೀರ್ಮಾನಿಸಿದ್ದು. ಆ ಕೆಲಸಕ್ಕೆ ಅಮಿತ್ ಶಾ ನೇಮಿಸಿದ್ದು ಜಿ.ಎಲ್.ಸಿಂಘಾಲ್‌ರನ್ನು. ಅವರು ಎಲ್ಲಾ ಕಾನೂನುಗಳನ್ನು ಸುಟ್ಟು ಹಾಕಿ ಅನೇಕರ ಫೋನ್‌ಗಳನ್ನು ಕದ್ದಾಲಿಸಿದ್ದಾರೆ. ಒಬ್ಬ ಯುವತಿಯನ್ನು ಎಡಬಿಡದಂತೆ ಫಾಲೋ ಮಾಡಿದ್ದಾರೆ. ಅವಳು ಸಂಪರ್ಕಿಸುವ ಎಲ್ಲರ ಹಿನ್ನೆಲೆ ಜಾಲಾಡಿದ್ದಾರೆ. ಇದನ್ನೆಲ್ಲಾ ನಾಗರಿಕ ಸಮಾಜ ಒಪ್ಪಿಕೊಳ್ಳಬೇಕೆ? ಆದರೂ ಆ ಯುವತಿಯ ಅಪ್ಪನ ಮನವಿ ಮೇರೆಗೆ ಸರಕಾರ ರಕ್ಷಣೆ ಕೊಟ್ಟಿತ್ತು ಎಂದು ಬಿಜೆಪಿ ವಕ್ತಾರರಾದ ಮೀನಾಕ್ಷಿ ಲೇಖಿ ಮತ್ತು ನಿರ್ಮಲಾ ಸೀತಾರಾಮನ್ ಸಮರ್ಥಿಸಿಕೊಳ್ಳುತ್ತಾರೆಂದರೆ ಅವರನ್ನು ಏನನ್ನಬೇಕು?

ಒಬ್ಬ ಯುವತಿ ತನ್ನ ತಾಯಿಯನ್ನು ಭೇಟಿಯಾಗಲು ಆಸ್ಪತ್ರೆಗೆ ಆಗಾಗ ಹೋಗುತ್ತಿರುತ್ತಾಳೆ ಎಂಬ ಕಾರಣಕ್ಕೆ ಒಬ್ಬ modi-rakhidayತಂದೆ ಮುಖ್ಯಮಂತ್ರಿಗೆ ಹೇಳಿ ಭದ್ರತೆ ಬೇಡಿದರು ಎಂದು ಬೂಸಿ ಬೀಡುವವರನ್ನು ಮುಂದಿನ ನಗೆಹಬ್ಬಕ್ಕೆ ಆಹ್ವಾನಿಸುವುದು ಸೂಕ್ತ. ನಮ್ಮ ಜನರಿಗೆ ಒಂದಿಷ್ಟು ಮನರಂಜನೆ ಸಿಗುತ್ತೆ. ಭದ್ರತೆ ನೀಡುವವರು ಕಾನೂನು ಉಲ್ಲಂಘಿಸಿ ಎಲ್ಲರ ಫೋನ್ ಕದ್ದು ಆಲಿಸಬಹುದೇ? ಇದನ್ನು ಹೇಗೆ ಒಪ್ಪಿಕೊಳ್ಳೋದು? ಇಷ್ಟೇ ಅಲ್ಲ.. ಹೀಗೆ ಅದೆಷ್ಟು ಜನರಿಗೆ ಈ ಗುಜರಾತ್ ಸರಕಾರ ಇಂತಹ “ವಿಶೇಷ ಭದ್ರತೆ” ನೀಡಿದೆಯೋ? ಎಷ್ಟು ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು, ಹೋರಾಟಗಾರರು ಈ “ಭದ್ರತೆ”ಯಿಂದ ಬಳಲಿದ್ದಾರೋ?

ಅಮಲುಗಣ್ಣುಗಳಿಗೆ ಮಾತ್ರ ಈ ಮೋದಿ ಅಪ್ರತಿಮ ನಾಯಕನಂತೆ ಕಾಣಬಹುದು. ಬೆಂಗಳೂರಿಗೆ ಬಂದಾಗ ಹೆಲಿಪ್ಯಾಡ್‌ನಲ್ಲಿ ಅವರ ಜೊತೆ ನಿಂತು ಫೋಟೋ ತೆಗೆಸಿಕೊಳ್ಳಲು ಆಸಕ್ತಿ ತೋರಬಹುದು. ಆದರೆ ಜನಸಾಮಾನ್ಯರು ಇಂತಹವರ ರಾಜ್ಯದಲ್ಲಿ ಎಷ್ಟು ಸುರಕ್ಷಿತ? ಮೋದಿ ಮುಖದಲ್ಲಿ ಒಬ್ಬ ಸರ್ವಾಧಿಕಾರಿ ಕಂಡರೆ ನಿಮ್ಮ ಕಣ್ಣುಗಳು ಆರೋಗ್ಯವಾಗಿದ್ದಾವೆ ಎಂದೇ ಅರ್ಥ.


ಸಿಂಘಾಲ್ ಮತ್ತು ಅಮಿತ್ ಶಾ ನಡುವೆ ನಡೆದ ಮಾತುಕತೆಯ ಸಂಪೂರ್ಣ ವಿವರಗಳು

ದೆಹಲಿಯಲ್ಲಿ ಮೌಲ್ಯಾಧಾರಿತ ರಾಜಕೀಯದ ಸತ್ವಪರೀಕ್ಷೆ

– ಆನಂದ ಪ್ರಸಾದ್

ದೆಹಲಿಯಲ್ಲಿ ಡಿಸೆಂಬರ್ 4 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮೌಲ್ಯಾಧಾರಿತ ರಾಜಕೀಯಕ್ಕಾಗಿ ಜನ್ಮ ತಳೆದ ಆಮ್ ಆದ್ಮಿ ಪಕ್ಷವು ಮೊದಲನೆಯ ಬಾರಿಗೆ ಎಲ್ಲಾ 70 ವಿಧಾನಸಭಾ ಸ್ಥಾನಗಳಿಗೂ ಸ್ಪರ್ಧಿಸುತ್ತಿದೆ. ಬಲಿಷ್ಠ ಲೋಕಪಾಲ್ ಮಸೂದೆಯ ಜಾರಿಗೆ ಆಂದೋಲನ ನಡೆಸಿದ ಅಣ್ಣಾ ಅವರ ಹೋರಾಟದ ತಂಡದಲ್ಲಿ ಪ್ರಧಾನ ಆಧಾರಸ್ಥಂಭವಾಗಿದ್ದ ಕೇಜ್ರಿವಾಲ್, ಪ್ರಶಾಂತ್ ಭೂಷಣ್ AAP-manifesto-PTIಮೊದಲಾದವರು ಅಂದೋಲನದ ಮೂಲಕ ನಡೆಸಿದ ಭ್ರಷ್ಟಾಚಾರ ವಿರೋಧಿ ಹೋರಾಟ ಗುರಿ ತಲುಪಲು ವಿಫಲವಾದಾಗ ಹಾಗೂ ಸರ್ಕಾರವು ಹೋರಾಟಕ್ಕೆ ಸಮರ್ಪಕವಾಗಿ ಸ್ಪಂದಿಸದೇ ಇರುವ ಕಾರಣ ರಾಜಕೀಯ ಹೋರಾಟದ ನಿರ್ಧಾರ ತೆಗೆದುಕೊಂಡು ಆಮ್ ಆದ್ಮಿ ಪಕ್ಷವನ್ನು ಕಟ್ಟಿದ್ದು ಅದು ಈಗ ಪ್ರಥಮ ಹೆಜ್ಜೆಯಾಗಿ ದೆಹಲಿಯಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಿದೆ. ಈ ಪಕ್ಷವು ಬಹಳ ದೊಡ್ಡ ಕ್ರಾಂತಿಕಾರಿ ಹೆಜ್ಜೆಯಾಗಿ ಜನರಿಂದಲೇ ಚುನಾವಣೆಗೆ ಸ್ಪರ್ಧಿಸಲು ಬೇಕಾಗುವ ಹಣವನ್ನು ಪಾರದರ್ಶಕವಾಗಿ ಪಡೆದುಕೊಂಡಿದೆ. ಚುನಾವಣಾ ವೆಚ್ಚ ಹಾಗೂ ಪಕ್ಷ ಕಟ್ಟುವ ವೆಚ್ಚವಾಗಿ 20 ಕೋಟಿ ರೂಪಾಯಿಗಳನ್ನು ಜನರ ದೇಣಿಗೆಯಿಂದಲೇ ಸಂಗ್ರಹಿಸುವ ಗುರಿಯನ್ನು ಪಕ್ಷ ಹಾಕಿಕೊಂಡಿತ್ತು. ಈ ಗುರಿಯನ್ನು ಪಕ್ಷವು ತಲುಪಿದ್ದು ಇದೀಗ ಪಕ್ಷವು ಹಣಸಂಗ್ರಹವನ್ನು ನಿಲ್ಲಿಸಿದೆ. ಪಕ್ಷವು ಪಡೆದ ಹಣದಲ್ಲಿ 14 ಕೋಟಿ ರೂಪಾಯಿ ಭಾರತದ ವಿವಿಧ ಭಾಗಗಳ ಜನರು ನೀಡಿದ್ದರೆ 2.17 ಕೋಟಿ ರೂಪಾಯಿ ಅಮೇರಿಕಾದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು, ಹಾಂಗ್‌ಕಾಂಗ್ ಅನಿವಾಸಿ ಭಾರತೀಯರು 1. 1 4 ಕೋಟಿ, ಯುನೈಟೆಡ್ ಅರಬ್ ಎಮಿರೇಟ್ಸ್ ಅನಿವಾಸಿ ಭಾರತೀಯರು 62 ಲಕ್ಷ, ಸಿಂಗಾಪುರದ ಅನಿವಾಸಿ ಭಾರತೀಯರು 58 ಲಕ್ಷ, ಇಂಗ್ಲೆಂಡ್ ಅನಿವಾಸಿ ಭಾರತೀಯರು 38 ಲಕ್ಷ ರೂಪಾಯಿ ದೇಣಿಗೆಯನ್ನು ನೀಡಿದ್ದು ಈ ಎಲ್ಲ ವಿವರಗಳನ್ನೂ ಪಕ್ಷದ ವೆಬ್ ಸೈಟಿನಲ್ಲಿ ಸಾರ್ವಜನಿಕರು ವೀಕ್ಷಿಸಬಹುದು. ಇದು ಭಾರತದಲ್ಲಿ ಇದುವರೆಗೆ ನಡೆದ ಅತ್ಯಂತ ಪಾರದರ್ಶಕವಾದ ಪಕ್ಷಕ್ಕೆ ನಿಧಿ ಜನರಿಂದಲೇ ಪಡೆದಿರುವ ನೈತಿಕ ರಾಜಕೀಯದ ಹೆಜ್ಜೆಯಾಗಿದೆ.

ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಸಮಾಜವಾದಿ ಶಾಂತವೇರಿ ಗೋಪಾಲಗೌಡರಿಗೆ ಚುನಾವಣೆಗೆ ಸ್ಪರ್ಧಿಸಲು ಜನರೇ ಹಣ ನೀಡಿದ್ದರು. ಹೀಗಾಗಿಯೇ ಅವರು ಜನರ ಪರವಾಗಿ ವಿಧಾನಸಭೆಯಲ್ಲಿ ಪ್ರಬಲವಾಗಿ ಮತ್ತು ಜನಪರವಾಗಿ ಹೋರಾಡಲು ಸಾಧ್ಯವಾಯಿತು. kejriwal_aap_pti_rallyಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ಜನರ ಪಾಲುದಾರಿಕೆ ಅತಿ ಮುಖ್ಯ. ಜನರಿಂದಲೇ ಯಾವುದೇ ಅನೈತಿಕ ಶರತ್ತುಗಳಿಲ್ಲದೆ ಒಂದು ಪಕ್ಷವು ಹಣ ಪಡೆದು ಸ್ಪರ್ಧಿಸಿ ಗೆದ್ದಾಗ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸುಧಾರಿಸಲು ಬೇಕಾದ ಆನೆಬಲ ಸಿಗುತ್ತದೆ. ಬಂಡವಾಳಶಾಹಿಗಳಿಂದ ಗುಪ್ತ ಶರತ್ತುಗಳಿಗೆ ಮಣಿದು ಪಡೆದ ಹಣ , ವಿವಿಧ ಲಾಬಿಗಳ ಮೂಲಕ ರಾಜಕೀಯ ನಾಯಕರು ಪಡೆದ ಹಣ (ಉದಾಹರಣೆಗೆ ಅಬಕಾರಿ ಲಾಬಿ, ಗ್ರಾನೈಟ್ ಲಾಬಿ, ಅಕ್ರಮ ಗಣಿ ಲಾಬಿ, ಕ್ಯಾಪಿಟೇಶನ್ ಲಾಬಿ, ಸಕ್ಕರೆ ಕಾರ್ಖಾನೆಗಳ ಲಾಬಿ ಇತ್ಯಾದಿ) , ಅಧಿಕಾರಿಗಳು ಜನರಿಂದ ಲಂಚವಾಗಿ ಸುಲಿದ ಹಣದಲ್ಲಿ ರಾಜಕೀಯ ನಾಯಕರು ಪಾಲು ಪಡೆದು ಪಕ್ಷದ ವೆಚ್ಚ ಭರಿಸುವ ಹಣ ಮೊದಲಾದ ಅನೈತಿಕ ಮಾರ್ಗಗಳಿಂದ ಪಡೆದ ಹಣದ ಮೂಲಕ ರಾಜಕೀಯ ನಡೆಸುವ ಪಕ್ಷಗಳಿಂದ ಪ್ರಜಾಪ್ರಭುತ್ವ ವ್ಯವಸ್ಥೆಯ ಸುಧಾರಣೆ ಸಾಧ್ಯವಾಗುವುದಿಲ್ಲ. ಹೀಗಾಗಿ ಕೇಜ್ರಿವಾಲ್ ಅವರ ನೇತೃತ್ವದ ಆಮ್ ಆದ್ಮಿ ಪಕ್ಷವು ನೈತಿಕ ಹಾಗೂ ಮೌಲ್ಯಾಧಾರಿತ ರಾಜಕೀಯದೆಡೆಗೆ ಇಟ್ಟಿರುವ ಈ ಹೆಜ್ಜೆ ಅತ್ಯಂತ ಮಹತ್ವಪೂರ್ಣವಾಗಿದ್ದು ಇದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಹಳಷ್ಟು ಮೇಲ್ಮಟ್ಟಕ್ಕೆ ಎತ್ತುವ ಸಂಭವ ಸ್ಪಷ್ಟವಾಗಿ ಕಂಡುಬರುತ್ತದೆ.

ದೆಹಲಿ ವಿಧಾನಸಭಾ ಚುನಾವಣೆಗಳ ವಿವಿಧ ಚುನಾವಣಾಪೂರ್ವ ಸಮೀಕ್ಷೆಗಳು ವಿವಿಧ ರೀತಿಯ ಫಲಿತಾಂಶವನ್ನು ನೀಡಿವೆ. ಆಮ್ ಆದ್ಮಿ ಪಕ್ಷವು ಸಿಸ್ರೋ ಅಸೋಸಿಯೇಟ್ಸ್ ಜೊತೆಗೂಡಿ ಸೆಪ್ಟೆಂಬರಿನಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ Arvind_Kejriwal_party_launchಆಮ್ ಆದ್ಮಿ ಪಕ್ಷವು 32% ಮತಗಳನ್ನು ಪಡೆಯುವ ಸಾಧ್ಯತೆಯನ್ನು ಹೇಳಿದೆ. ಸಿಎನ್ನೆನ್-ಐಬಿಎನ್, ದ ವೀಕ್ ಪತ್ರಿಕೆ, ಸಿಎಸ್ಡಿಎಸ್ ಜಂಟಿಯಾಗಿ ಅಕ್ಟೋಬರಿನಲ್ಲಿ ಕೈಗೊಂಡ ಸಮೀಕ್ಷೆ ಪ್ರಕಾರ ಆಮ್ ಆದ್ಮಿ ಪಕ್ಷ 28% ಮತ ಪಡೆಯುವ ಸಂಭವ ಇದೆ. ಹಿಂದೂಸ್ತಾನ್ ಟೈಮ್ಸ್ – ಸಿ ಫೋರ್ ಸೆಪ್ಟೆಂಬರಿನಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ ಆಮ್ ಆದ್ಮಿ ಪಕ್ಷವು 20% ಮತಗಳನ್ನು ಪಡೆಯುವ ಸಂಭವವಿದೆ. ಇಂಡಿಯಾ ಟಿವಿ – ಸಿ ವೋಟರ್ – ಟೈಮ್ಸ್ ನೌ ಸೆಪ್ಟೆಂಬರಿನಲ್ಲಿ ನಡೆಸಿದ ಜಂಟಿ ಸಮೀಕ್ಷೆ ಪ್ರಕಾರ ಆಮ್ ಆದ್ಮಿ ಪಕ್ಷವು 16% ಮತಗಳನ್ನು ಪಡೆಯುವ ಸಂಭವವಿದೆ. ಎಬಿಪಿ ನ್ಯೂಸ್ – ಏಸಿ ನೀಲ್ಸನ್ ಜಂಟಿಯಾಗಿ ಸೆಪ್ಟೆಂಬರಿನಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ ಆಮ್ ಆದ್ಮಿ ಪಕ್ಷ 15% ಮತಗಳನ್ನು ಪಡೆಯಬಹುದು ಎಂದು ಹೇಳಲಾಗಿದೆ. ಇವುಗಳಲ್ಲಿ ಆಮ್ ಆದ್ಮಿ ಪಕ್ಷ -ಸಿಸ್ರೋ ಅಸೋಸಿಯೇಟ್ಸ್ ಜೊತೆಗೂಡಿ ನಡೆಸಿದ ಸಮೀಕ್ಷೆ ಹೆಚ್ಚು ವ್ಯಾಪಕ ಹಾಗೂ ವೈಜ್ಞಾನಿಕ ಸಮೀಕ್ಷೆಯಾಗಿದ್ದು ಖ್ಯಾತ ಚುನಾವಣಾ ವಿಶ್ಲೇಷಕ ಹಾಗೂ ಪಕ್ಷದ ಪ್ರಮುಖ ನೇತಾರರೂ ಆದ ಯೋಗೇಂದ್ರ ಯಾದವ್ ಇದರಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇವರು ನಡೆಸಿದ ಸಮೀಕ್ಷೆಯ ಸಂಪೂರ್ಣ ವಿವರವು ಆಮ್ ಆದ್ಮಿ ಪಕ್ಷದ ವೆಬ್ ಸೈಟಿನಲ್ಲಿ ಸಾರ್ವಜನಿಕರಿಗೆ ನೋಡಲು ಲಭ್ಯವಿದೆ. ಇವುಗಳಲ್ಲಿ ಕಡಿಮೆ ಪ್ರತಿಶತ ಮತ ಗಳಿಸಬಹುದಾದ 15% ಅನ್ನು ತೆಗೆದುಕೊಂಡರೂ ಪ್ರಥಮವಾಗಿ ಸ್ಪರ್ಧಿಸುತ್ತಿರುವ ಆಮ್ ಆದ್ಮಿ ಪಕ್ಷದ ಸಾಧನೆ ಉತ್ತಮವಾಗಿ ಮೂಡಿಬರುವ ಸಂಭವ ಇದೆ. ಆಮ್ ಆದ್ಮಿ ಪಕ್ಷವು ಗೆಲ್ಲಬಹುದಾದ ವಿಧಾನಸಭಾ ಸಂಖ್ಯೆಯ ಲೆಕ್ಕದಲ್ಲಿ ಹೇಳುವುದಾದರೆ ಇಂಡಿಯಾ ಟುಡೇ- ಒಆರ್ಜಿ ನವೆಂಬರಿನಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ 6 ವಿಧಾನಸಭಾ ಸ್ಥಾನಗಳಲ್ಲಿ ಗೆಲ್ಲಬಹುದು. ಇಂಡಿಯಾ ಟಿವಿ – ಸಿ ವೋಟರ್ – ಟೈಮ್ಸ್ ನೌ ಸೆಪ್ಟೆಂಬರಿನಲ್ಲಿ ನಡೆಸಿದ ಜಂಟಿ ಸಮೀಕ್ಷೆ ಪ್ರಕಾರ ಪಕ್ಷವು 7 ಸ್ಥಾನಗಳನ್ನು ಗೆಲ್ಲಬಹುದು. ಇಂಡಿಯಾ ಟಿವಿ – ಸಿ ವೋಟರ್ – ಟೈಮ್ಸ್ ನೌ ಸೆಪ್ಟೆಂಬರಿನಲ್ಲಿ ನಡೆಸಿದ ಜಂಟಿ ಸಮೀಕ್ಷೆ ಪ್ರಕಾರ ಆಮ್ ಆದ್ಮಿ ಪಕ್ಷವು 7ರಿಂದ 12 ಸ್ಥಾನ ಗೆಲ್ಲಬಹುದು. ಎಬಿಪಿ ನ್ಯೂಸ್ – ಏಸಿ ನೀಲ್ಸನ್ ಜಂಟಿಯಾಗಿ ಸೆಪ್ಟೆಂಬರಿನಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ ಆಮ್ ಆದ್ಮಿ ಪಕ್ಷ 18 ಸ್ಥಾನ ಗೆಲ್ಲಬಹುದು. ಸಿಎನ್ನೆನ್-ಐಬಿಎನ್, ದ ವೀಕ್ ಪತ್ರಿಕೆ, ಸಿಎಸ್ಡಿಎಸ್ ಜಂಟಿಯಾಗಿ ಅಕ್ಟೋಬರಿನಲ್ಲಿ ಕೈಗೊಂಡ ಸಮೀಕ್ಷೆ ಪ್ರಕಾರ ಆಮ್ ಆದ್ಮಿ ಪಕ್ಷ 19ರಿಂದ 25 ಸ್ಥಾನ ಗೆಲ್ಲಬಹುದು. ಟೈಮ್ಸ್ ನೌ – ಸಿ ವೋಟರ್ ನವೆಂಬರಿನಲ್ಲಿ ಕೈಗೊಂಡ ಸಮೀಕ್ಷೆ ಪ್ರಕಾರ ಆಮ್ ಆದ್ಮಿ ಪಕ್ಷವು 18 ಸ್ಥಾನ ಗೆಲ್ಲುವ ಸಾಧ್ಯತೆ ಇದೆ. ಆಮ್ ಆದ್ಮಿ-ಸಿಸ್ರೋ ಅಸೋಸಿಯೇಟ್ಸ್ ಕೈಗೊಂಡ ಸಮೀಕ್ಷೆಯಲ್ಲಿ ಆಮ್ ಆದ್ಮಿ ಪಕ್ಷವು ಗೆಲ್ಲಬಹುದಾದ ಸ್ಥಾನಗಳ ಸಂಖ್ಯೆಯನ್ನು ವೆಬ್‌ಸೈಟಿನಲ್ಲಿ ನಮೂದಿಸಿಲ್ಲ.

ಆಮ್ ಆದ್ಮಿ ಎಷ್ಟೇ ಮತ ಪ್ರತಿಶತ ಹಾಗೂ ಸ್ಥಾನಗಳನ್ನು ಪಡೆದರೂ ಅದು ಪ್ರಥಮವಾಗಿ ಸ್ಪರ್ಧಿಸುತ್ತಿರುವ ಕಾರಣ ಅದು ಉತ್ತಮ ಸಾಧನೆಯೇ ಆಗುತ್ತದೆ. ಅದರಲ್ಲೂ ಮುಖ್ಯವಾಗಿ ಬಿಜೆಪಿ ಪಕ್ಷದ ನರೇಂದ್ರ ಮೋದಿಯ ಒಂದೊಂದು ರ್‍ಯಾಲಿಗೆ ಖರ್ಚು ಮಾಡುವ 15-20 ಕೋಟಿ ರೂಪಾಯಿ ಹಣದಲ್ಲಿ ಆಮ್ ಆದ್ಮಿ ಪಕ್ಷವು ಇಡೀ ದೆಹಲಿ ವಿಧಾನಸಭಾ ಚುನಾವಣೆಯನ್ನು ಎದುರಿಸುತ್ತಿದೆ ಎಂಬುದು ಬಹಳ ಮುಖ್ಯ ಅಂಶ. anna-kejriwalಅಣ್ಣಾ ಅವರಿಂದ ಬೇರ್ಪಟ್ಟು ಕೇಜ್ರೀವಾಲ್ ರಾಜಕೀಯ ಪಕ್ಷ ಸ್ಥಾಪಿಸುವ ನಿರ್ಧಾರ ತೆಗೆದುಕೊಂಡ ನಂತರ ಕೇಜ್ರೀವಾಲರನ್ನಾಗಲೀ, ಅವರ ನೂತನ ಪಕ್ಷವನ್ನಾಗಲೀ, ಅದು ಎತ್ತಿ ಹಿಡಿಯಲು ಹೊರಟಿರುವ ಸಾರ್ವಕಾಲಿಕ ಮೌಲ್ಯಗಳನ್ನಾಗಲೀ ಮಾಧ್ಯಮಗಳು ಕಡೆಗಣಿಸಿರುವ ಪರಿಸ್ಥಿತಿಯಲ್ಲಿ ಆಮ್ ಆದ್ಮಿ ಪಕ್ಷವು 6 ಸ್ಥಾನಗಳನ್ನು ಪಡೆದರೂ ಉತ್ತಮ ಸಾಧನೆಯೇ ಆಗುತ್ತದೆ. ತಮ್ಮ ಹಾದಿಗಳು ಬೇರ್ಪಟ್ಟ ನಂತರ ಅಣ್ಣಾ ಹಜಾರೆಯವರು ಕೂಡ ಆಮ್ ಆದ್ಮಿ ಪಕ್ಷದ ಬಗ್ಗೆ ಹಾಗೂ ಕೇಜ್ರೀವಾಲಾರ ಬಗ್ಗೆ ಅತ್ಯಂತ ಕಠಿಣವಾಗಿ ವರ್ತಿಸುತ್ತಿರುವುದು ಕಂಡುಬರುತ್ತಿದ್ದು ಇದರಿಂದ ಅಣ್ಣಾ ಹಜಾರೆಯವರು ಸಣ್ಣವರಾಗುತ್ತಿದ್ದಾರೆ. ಇಂಥ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಕೇಜ್ರೀವಾಲ್ ಹಾಗೂ ಸಂಗಡಿಗರು ಪಕ್ಷ ಕಟ್ಟಲು, ಚುನಾವಣೆಗೆ ಸ್ಪರ್ಧಿಸಲು ಅತ್ಯಂತ ಕಠಿಣ ಪರಿಶ್ರಮ ಪಡುತ್ತಿರುವುದು ಶ್ಲಾಘನೀಯ. ನಮ್ಮ ದೇಶದ ರಾಜಕೀಯಕ್ಕೆ ಇಂದು ಇಂಥ ಪ್ರತಿಭಾವಂತರ ಅಗತ್ಯ ಇದೆ. ಬಿಜೆಪಿಯ ಸುಷ್ಮಾ ಸ್ವರಾಜ್ ಅವರು ಆಮ್ ಆದ್ಮಿ ಪಕ್ಷದ ಹೆಸರನ್ನು ಅಮೀರ್ ಆದ್ಮಿ ಪಾರ್ಟಿ (ಶ್ರೀಮಂತ ಜನರ ಪಕ್ಷ) ಎಂದು ಬದಲಿಸುವುದು ಒಳ್ಳೆಯದು ಎಂದು ಹೇಳಿದ್ದಾರೆ. ಇದಕ್ಕೆ ಕಾರಣ ಆಮ್ ಆದ್ಮಿ ಪಕ್ಷದ ಕೆಲವು ಅಭ್ಯರ್ಥಿಗಳು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ವಿವರಗಳಲ್ಲಿ ತಮ್ಮ ನಿಜವಾದ ವಿವರಗಳನ್ನು ನೀಡಿದ್ದು ಇರಬಹುದು. ಉಳಿದ ಪಕ್ಷಗಳ ಅಭ್ಯರ್ಥಿಗಳಂತೆ ಸುಳ್ಳು ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ಅವರು ನೀಡಿರಲಾರರು. ಹೀಗಾಗಿ ಪಕ್ಷದಲ್ಲಿ ಕೆಲವರು ಕೋಟ್ಯಾಧೀಶರೆಂದು ಕಂಡು ಬರಬಹುದು. ಕೋಟ್ಯಾಧೀಶರಿಗೆ ಜೀವನೋಪಾಯಕ್ಕೆ ಬೇಕಾದ ಗಟ್ಟಿಯಾದ ಆದಾಯ ಮೂಲ ಇರುವ ಕಾರಣ ಅವರು ಚುನಾವಣೆಗೆ ಸ್ಪರ್ಧಿಸುವುದು ಒಳ್ಳೆಯದೇ, ಆದರೆ ಅವರು ತಮ್ಮ ಶಾಸಕ ಸ್ಥಾನವನ್ನು ತಮ್ಮ ಉದ್ಯಮ ಅಥವಾ ಆಸ್ತಿಪಾಸ್ತಿ ಬೆಳೆಸಿಕೊಳ್ಳಲು ಬಳಸಬಾರದು ಅಷ್ಟೇ. ಜೀವನೋಪಾಯಕ್ಕೆ ದಿನನಿತ್ಯ ದುಡಿದೇ ಹಣ ಗಳಿಸಬೇಕಾದವರು ಚುನಾವಣೆಗೆ ಸ್ಪರ್ಧಿಸುವುದು ಕಷ್ಟವೇ. ಹೀಗಾಗಿ ಜನತೆಗೆ ಹಾಗೂ ದೇಶಕ್ಕೆ ಸೇವೆ ಸಲ್ಲಿಸಬೇಕು ಎಂಬ ಮನೋಭಾವ ಇರುವ ಶ್ರೀಮಂತರು ಚುನಾವಣೆಗೆ ಸ್ಪರ್ಧಿಸುವುದನ್ನು ಸ್ವಾಗತಿಸಬೇಕು. ಇದನ್ನು ವ್ಯಂಗ್ಯ ಮಾಡಬೇಕಾದ ಅಗತ್ಯ ಇಲ್ಲ ಎಂದು ಸುಷ್ಮಾ ಸ್ವರಾಜ್ ಅವರಂಥ ನಾಯಕರಿಗೆ ಹೇಳಬೇಕಾಗಿದೆ.

ಆಮ್ ಆದ್ಮಿ ಪಕ್ಷವು ವಿದೇಶಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರಿಂದ ಹೆಚ್ಚೆಂದರೆ ಐದಾರು ಕೋಟಿ ರೂಪಾಯಿಗಳ ದೇಣಿಗೆ ಪಡೆದಿರಬಹುದು, ಅದೂ ಪಾರದರ್ಶಕವಾಗಿ, ಅದನ್ನು ಅದು ತನ್ನ ವೆಬ್‌ಸೈಟಿನಲ್ಲಿ ಸ್ಪಷ್ಟವಾಗಿ ತೋರಿಸಿದೆ. AAP-websiteಆಮ್ ಆದ್ಮಿ ಪಕ್ಷದ ವ್ಯವಹಾರಗಳು ತೆರೆದ ಪುಸ್ತಕದಂತೆ ಇರುವಾಗ ಅದು ಪಡೆದ ಅನಿವಾಸಿ ಭಾರತೀಯರ ಹಣದ ಬಗ್ಗೆ ತನಿಖೆ ನಡೆಸುವುದು ನಿಜಕ್ಕೂ ದೊಡ್ಡ ಕುಚೋದ್ಯ. ಇಂಥ ವಿಷಯಗಳ ಬಗ್ಗೆ ಪ್ರತಿಪಕ್ಷಗಳು ಸುಮ್ಮನೆ ತಗಾದೆ ತೆಗೆಯುವುದು ನೀಚತನವಲ್ಲದೆ ಮತ್ತೇನೂ ಅಲ್ಲ ಎನ್ನದೆ ವಿಧಿಯಿಲ್ಲ. ಇತ್ತೀಚೆಗೆ ಅಣ್ಣಾ ಹಜಾರೆಯವರನ್ನು ಕೇಜ್ರೀವಾಲ್ ವಿರುದ್ಧ ಎತ್ತಿ ಕಟ್ಟಲು ಕೆಲವು ಸ್ಥಾಪಿತ ಹಿತಾಸಕ್ತಿಗಳು ಪ್ರಯತ್ನಿಸುತ್ತಿರುವಂತೆ ಕಂಡುಬರುತ್ತದೆ. ಮುಖ್ಯವಾಗಿ ಅಣ್ಣಾ ಹೆಸರನ್ನು ಕೇಜ್ರಿವಾಲ್ ಚುನಾವಣೆಗೆ ಹಾಗೂ ಪಕ್ಷ ಕಟ್ಟಲು ಬಳಸುತ್ತಿದ್ದಾರೆ ಎಂದು, ಅಣ್ಣಾ ಹಜಾರೆ ಹೋರಾಟದ ಸಮಯದಲ್ಲಿ ಸಂಗ್ರಹವಾದ ಹಣವನ್ನು ಕೇಜ್ರೀವಾಲ್ ಚುನಾವಣೆಗೆ ಬಳಸುತ್ತಿದ್ದಾರೆ ಎಂದು ಅಪಪ್ರಚಾರ ಮಾಡುವುದು ಇತ್ಯಾದಿ ಅಪಪ್ರಚಾರವೂ ನಡೆಯುತ್ತಿದೆ ಮತ್ತು ಇದಕ್ಕೆ ಕೇಜ್ರಿವಾಲ್ ಪಕ್ಷದ ವೆಬ್ ಸೈಟಿನಲ್ಲಿ ಹಾಗೂ ಪತ್ರಿಕಾಗೋಷ್ಠಿ ನಡೆಸಿ ಇಂಥ ಆರೋಪಗಳನ್ನು ಅಲ್ಲಗಳೆದಿದ್ದಾರೆ. ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಉತ್ತಮವಾಗಬೇಕಾದರೆ, ಆರೋಗ್ಯಕರವಾಗಿ ಬೆಳೆಯಬೇಕಾದರೆ ಆಮ್ ಆದ್ಮಿ ಪಕ್ಷವನ್ನು ಹಾಗೂ ಅದು ಎತ್ತಿ ಹಿಡಿಯುತ್ತಿರುವ ಮೌಲ್ಯಗಳನ್ನು ಗೆಲ್ಲಿಸುವುದು ಅಗತ್ಯ. ಹೀಗಾಗಿ ದೆಹಲಿ ವಿಧಾನಸಭಾ ಚುನಾವಣೆಗಳಲ್ಲಿ ಆಮ್ ಆದ್ಮಿ ಪಕ್ಷವು ಗೆದ್ದು ಸರ್ಕಾರ ರಚಿಸುವ ಸಾಮರ್ಥ್ಯ ಪಡೆದರೆ ಭಾರತದ ರಾಜಕೀಯದಲ್ಲಿ ಗಮನಾರ್ಹ ಬದಲಾವಣೆಗಳನ್ನು ತರಲು ಅದು ಕಾರಣವಾಗಬಹುದು. ಅಲ್ಲಿ ಅದು ಗೆಲುವನ್ನು ಸಾಧಿಸಿದರೆ ಆ ಪಕ್ಷವನ್ನು ಮತ್ತು ಅದು ಪ್ರತಿನಿಧಿಸುವ ಮೌಲ್ಯಾಧಾರಿತ ರಾಜಕೀಯವನ್ನು ದೇಶಾದ್ಯಂತ ಬೆಳೆಸಲು, ವಿಸ್ತರಿಸಲು ಪ್ರೋತ್ಸಾಹ ದೊರೆಯಲಿರುವುದು ಖಚಿತ. ಹೀಗಾಗಿ ದೆಹಲಿ ವಿಧಾನಸಭಾ ಚುನಾವಣೆಗಳಲ್ಲಿ ಆಮ್ ಆದ್ಮಿ ಪಕ್ಷವನ್ನು ಗೆಲ್ಲಿಸುವಂತೆ ದೇಶದ ಪ್ರಖ್ಯಾತ ಚಿಂತಕರು, ವಿಜ್ಞಾನಿಗಳು, ಸಮಾಜ ಸುಧಾರಕರು, ಸಮಾಜ ಸೇವಕರು, ಸಾಹಿತಿಗಳು ಹಾಗೂ ಬುದ್ಧಿಜೀವಿಗಳು ಜನರನ್ನು ಪ್ರೋತ್ಸಾಹಿಸುವುದು ಇಂದಿನ ಅಗತ್ಯ.