Monthly Archives: November 2013

ಮೂಢನಂಬಿಕೆ ಪ್ರತಿಬಂಧಕ ಮಸೂದೆ – ಆತಂಕದಲ್ಲಿ ಮೌಢ್ಯದ ಫಲಾನುಭವಿಗಳು

– ಬಿ.ಜಿ.ಗೋಪಾಲಕೃಷ್ಣ ಹಾಸನ

ಮಾನವನ ನಾಗರಿಕತೆಯ ಪ್ರಾರಂಭದ ಹಂತವನ್ನು ಆದಿಸಮತಾ ಸಮಾಜ ಎಂದು ಕರೆಯಬಹುದು. ಆ ಒಂದು ಕಾಲಘಟ್ಟದಲ್ಲಿ ಯಾವುದೇ ಆಧಿಕಾರ, ಅಂತಸ್ತು, ಜಾತಿ ಮತ್ತು ಲಿಂಗ ಭೇದಗಳ ತಾರತಮ್ಯ ಇಲ್ಲದೆ ಮಾನವರೆಲ್ಲರೂ ಸಮಾನ ಮನಸ್ಕ, ದ್ವೇಷ ಅಸೂಯೆ ರಹಿತ ನಿಷ್ಕಳಂಕ ಪರಿಪೂರ್ಣ ವ್ಯಕ್ತಿತ್ವದವರಾಗಿದ್ದರು. ಅಂದು ಮುಂದಿನ ದಿನಗಳಿಗೆ ಕೂಡಿಡುವ ಕ್ರಮವಾಗಲಿ, ಕೊಳ್ಳುಬಾಕ ಸಂಸ್ಕೃತಿಗಳ ಪರಿಕಲ್ಪನೆಗಳಾಗಲಿ ಇರಲಿಲ್ಲ.

ತದನಂತರದ ಕಾಲಘಟ್ಟದ ಬೆಳವಣಿಗೆಯೇ ಪಾಳೇಗಾರಿಕೆ ವ್ಯವಸ್ಥೆ. ಈ ವ್ಯವಸ್ಥೆಯಲ್ಲಿ ಇಡೀ ಸಮಾಜವೇ ದುಡಿಯುವವರ ವರ್ಗ ಮತ್ತು ದುಡಿಸಿಕೋಳ್ಳುವವರ ವರ್ಗ ಎಂದು ಎರಡು ಭಾಗಗಳಾಗಿ ವಿಂಗಡಣೆಯಾದ ಕಾಲವದು. made-snanaದುಡಿಯುವ ವರ್ಗ ಸಂಖ್ಯೆಯಲ್ಲಿ ಬಹುಸಂಖ್ಯೆಯಲ್ಲಿದ್ದು, ಭೌತಿಕವಾಗಿ ಸಶಕ್ತರಾಗಿದ್ದರೂ ಭೌದ್ಧಿಕವಾಗಿ, ಸಾಂಸ್ಕೃತಿಕವಾಗಿ, ಆರ್ಥಿಕವಾಗಿ, ಸಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರಾದರು. ಆದರೆ ದುಡಿಸಿಕೋಳ್ಳುವ ವರ್ಗ ಇದಕ್ಕೆ ತದ್ವಿರುದ್ದ. ಸಂಖ್ಯೆಯಲ್ಲಿ ಕಡಿಮೆ ಇದ್ದು ಭೌತಿಕವಾಗಿ ಅಶಕ್ತರಾಗಿರದಿದ್ದರೂ ಭೌದ್ಧಿಕವಾಗಿ, ಸಾಂಸ್ಕೃತಿಕವಾಗಿ, ಆರ್ಥಿಕವಾಗಿ, ಸಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಮುಂದುವರೆದವರಾದರು.

ಇದೇ ಪರಿಸ್ಥಿತಿಯನ್ನು ಮುಂದುವರೆಸುವುದು ದುಡಿಸಿಕೊಳ್ಳುವ ವರ್ಗಕ್ಕೆ ಅನಿವಾರ್ಯವಾಗಿತ್ತು. ಪ್ರಕೃತಿಯನ್ನೇ ದೇವರೆಂದು ಪೂಜಿಸುತಿದ್ದ ಆ ಸಂದರ್ಭದ ಜನಮಾನಸದಲ್ಲಿ ಭೇದಭಾವಗಳ ವಿಷಬೀಜ ಬಿತ್ತಲು ಜಾತಿ, ಧರ್ಮ ಮತ್ತು ದೇವರುಗಳನ್ನು ಸೃಷ್ಟಿಸಿ ಅಸ್ತ್ರಗಳನ್ನಾಗಿ ಬಳಸಿ ತಮ್ಮ ತಮ್ಮುಗಳಲ್ಲೇ ಭೇದಭಾವಗಳ ಜೊತೆ ಜೊತೆಯಲ್ಲಿ ದ್ವೇಶ, ತಾರತಮ್ಯ ಅಸ್ಪೃಶ್ಯತೆ ಬೆಳೆಸಿದುದರಿಂದ, ಮೇಲ್ವರ್ಗದವರೆಂದು ಬಿಂಬಿತರಾದ ದುಡಿಸಿಕೊಳ್ಳುವ ವರ್ಗದ ಹಾದಿ ಸುಗಮವಾಯಿತು.

ಆದರೆ ಕಾಲಾನಂತರ ದುಡಿಯುವ ವರ್ಗದಲ್ಲೂ ಹಂತಹಂತವಾಗಿ ಪ್ರಜ್ಞೆಮೂಡಲು, ಆ ಪ್ರಜ್ಞೆಯನ್ನು ನಿರ್ಲಿಪ್ತಗೂಳಿಸಲು ಪೂರ್ವಜನ್ಮ, ಪುನರ್‌ಜನ್ಮ , ಕರ್ಮಸಿದ್ದಾಂತಗಳಂತಹ ಹೊಸ ಹೊಸ ಸಿದ್ಧಾಂತಗಳನ್ನು ಪ್ರಕಟಿಸಲೇಬೇಕಾಯಿತು. ಆ ಸಿದ್ಧಾಂತಗಳನ್ನು ಸಾಕ್ಷಾತ್ ಸೃಷ್ಟಿಕರ್ತನ ಸಂದೇಶಗಳೆಂದು, ಅವನ ಬಾಯಿಂದಲೇ ಹೇಳುತ್ತಿರುವಂತೆ ಪ್ರಚುರ ಪಡಿಸಿದರು. ಈ ಕರ್ಮಸಿದ್ಧಾಂತಗಳಿಕೆ ಪೂರಕವಾಗಿ ಮೂಡಿಬಂದವುಗಳೇ ಮೂಢನಂಬಿಕೆಗಳು. ನಂಬಿದವರ ಕತ್ತುಕುಯ್ಯಲು ಸಹಜವಾಗೇ ಮೂಢನಂಬಿಕೆಗಳಂತಹ ನಯವಂಚಕ ಅಸ್ತ್ರಗಳಿಗಿಂತ ಮತ್ತಾವುದು ಪ್ರಬಲ ಅಸ್ತ್ರವಾಗಲಾರದು.

ಹಿಂದುಳಿದವರಲ್ಲೂ ಪ್ರಜ್ಞೆಮೂಡಿ ಆರ್ಥಿಕವಾಗಿ ಸಬಲನಾದರೆ ನಮ್ಮ ಮನೆಯ ಕಕ್ಕಸ್ಸನ್ನು ನೂರು ರೂಪಾಯಿ ಕೂಲಿಗೆ ಸ್ವಚ್ಚಗೊಳಿಸಿಯಾನೇ? Manual_scavanging1[1]ಆಥವಾ ಶಿಕ್ಷಣ ಕಲಿತ ಆರ್ಥಿಕವಾಗಿ ಸಬಲನಾದ ಪ್ರಜ್ಞಾವಂತರು ಹತ್ತರಷ್ಟು ಕೂಲಿ ಕೊಟ್ಟರೂ ಕಕ್ಕಸ್ಸು ಸ್ವಚ್ಚಗೊಳಿಸುವ ಕೆಲಸ ಮಾಡಿಯಾರೇನು? ಆ ಸಂದರ್ಭಗಳಲ್ಲಿ ತಾವುಗಳೇ ಕಾರ್ಯಪ್ರವೃತ್ತರಾಗ ಬೇಕಾಗುತ್ತದೆ ಎಂಬ ಸರಳ ಸಮೀಕರಣ ತಿಳಿಯದೇ ಅವರುಗಳಿಗೇ. ಸಮಾಜದಲ್ಲಿ ಮೌಢ್ಯತೆ, ಆಂಧಾನುಕರಣೆ, ಅಂಧಶ್ರದ್ಧೆ, ಮೂಢನಂಬಿಕೆಗಳಿರುವವರೆಗೆ ತಮ್ಮುಗಳ ಶ್ರಮರಹಿತ ಬದುಕಿಗೇನು ಅಡ್ಡಿಯಿಲ್ಲ ಎಂಬ ಸರಳ ವಸ್ತು ಸ್ಥಿತಿಯನ್ನು ತಳಿಯದಷ್ಟು ಮುಟ್ಠಾಳರೇ ಈ ಮೌಢ್ಯದ ಫಲಾನುಭವಿಗಳುಸ.

ಪ್ರಸ್ತುತ ಅಂಧಶ್ರದ್ದೆಗಳು ಮನುಷ್ಯನ ಹುಟ್ಟಿನಿಂದ ಪ್ರಾರಂಭಗೊಂಡು, ಜೀವಿತ ಅವಧಿಯಲ್ಲಿ ಜೊತೆ ಜೊತೆಯಲ್ಲೇ ಪರಾವಲಂಬಿಗಳಂತೆ ರಕ್ತವನ್ನು ಹೀರಿ ಬದುಕುತ್ತಾ, ನಮ್ಮ ಸಾವಿಗೆ ಮೊದಲೇ ಇತರರಿಗೂ ರಕ್ತ ಬೀಜಾಸುರನಂತೆ ದ್ವಿಗುಣಗೊಳ್ಳುತ್ತಾ ಇತರ ಮನುಜ ದೇಹಗಳನ್ನು ಮಾತ್ರ (ಇತರೆ ಪ್ರಾಣಿಗಳನ್ನು ದೇಹಗಳನ್ನು ಪ್ರವೇಶಿಸದೆ) ಪ್ರವೇಶಿಸಿ ವಾಸಮಾಡಲು ಪ್ರಾರಂಭಿಸುತ್ತವೆ, ಮೇಲ್ವರ್ಗದವರು ನೀರು ಗೊಬ್ಬರ ಹಾಕಿ ಪೋಷಿಸಲು ಮುಂದಾಗುತ್ತಾರೆ.

ಈ ಭೂಮಿಯ ಮೇಲೆ ವಾಸಿಸುವು ಪ್ರತಿಯೂಂದು ಜೀವಿಯೂ ಸಮಾನ ಎನ್ನುವುದಾದರೆ. ಬುದ್ದಿವಂತ ಜೀವಿಯಾಗಿರುವ ಮನುಷ್ಯನೇಕೆ ಮೌಢ್ಯತೆಯ ಅಂಧಕಾರದಲ್ಲಿ ತನ್ನನ್ನೇ ತಾನು ಬಂಧಿಸಿಕೊಂಡು ತೋಳಲಾಡುತ್ತಾನೆ ಅಥವ ಬೇರೆಯವರ ತೋಳಲಾಟದಲ್ಲಿ ತನ್ನ ಹೋಟ್ಟೆ ತುಂಬಿಸಿ ಕೊಳ್ಳುತ್ತಾನೆ.

ಮೂಢನಂಭಿಕೆಗಳ ಪ್ರಕಾರ ಮತ್ತು ಆಯಾಮಗಳನ್ನು ತಿಳಿಯುವುದೇ ಕಷ್ಟ ಸಾಧ್ಯವಾಗಿದೆ. ಮನುಜನ ಜೀವಿತ ಅವಧಿಯ ಪ್ರತಿ ಹಂತದಲ್ಲೂ ಹಾಸುಹೊಕ್ಕಾಗಿವೆ. ಅಂಧಶ್ರದ್ದೆಗೆ ಹೆಚ್ಚು ಬಲಿಯಾಗುವರು ಈ ಸಮಾಜದ ಅರ್ಧ ಭಾಗವೇ ಆಗಿರುವ ಮಹಿಳೆಯರು. KPN photoಅವಳು ಶಿಕ್ಷಣ ಪಡೆಯುವುದೆ ಒಂದು ಅಪವಾದ. ಅವಳು ಮನೆಯಿಂದ ಹೊರ ಹೋಗಕೂಡುದು. ಅವಳು ಮುಟ್ಟಾದಾಗ ಮತ್ತು ಬಾಣಂತನವಾದಾಗ ಊರ ಹೊರಗೆ ಪಶುಗಳಂತೆ ಇರಿಸುವುದು, ಬಾಲ್ಯ ವಿವಾಹದಂತಹ ಶಿಕ್ಷೆ ಇವಳೆಗೇ ಹೆಚ್ಚು. ಊರಿಗೆ ಕಷ್ಟ ಬಂದರೆ ಇವಳದೇ ಬಲಿ ಬೇಕು. ಸತಿ ಪದ್ಧತಿ, ದೇವರ ಹೆಸರಿನಲ್ಲಿ ಬೆತ್ತಲೆ ಸೇವೆ. ವರದಕ್ಷಣೆ ನೆಪದಲ್ಲಿ ಜೀವಂತ ಸುಡುವುದು, ಹೆಣ್ಣು ಮಗುವಿನ ಹುಟ್ಟಿಗೆ ತಾಯಿಯೇ ಕಾರಣ ಎಂಬ ಅಪವಾದ, ತಾನು ಅನುಭವಿಸಿದ ಕಷ್ಟಗಳನ್ನು ನನ್ನ ಹೆಣ್ಣು ಮಗು ಅನುಭವಿಸಬಾರದೆಂದು ತನ್ನ ಕರುಳಕುಡಿಯು ಭ್ರ್ರೂಣ ಹಂತದಲ್ಲಿರುವಾಗಲೇ ಹತ್ಯೆಗೆ ಸಹಕರಿಸಬೇಕಾದ ಅನಿವಾರ್ಯತೆ. ದೇವಸ್ಥಾನಗಳಿಗೆ ಪ್ರವೇಶದ ನಿರಾಕರಣೆ. ಒಂದೇ ಎರಡೇ ಇದು ಹೆಣ್ಣಾಗಿ ಹುಟ್ಟಿದ್ದಕ್ಕೆ ಈ ಸಮಾಜದ ಕೊಡಿಗೆ.

ಅಂಧಶ್ರದ್ಧೆಗಳಿಂದ ಮಾನಸಿಕವಾಗಿ ನೋವನ್ನು ಅನುಭವಿಸುತ್ತಿರುವ ದಲಿತರ ಸ್ಥಿತಿ ಹೇಳತೀರದು. ಅಸ್ಪೃಶತೆ, ಅವರುಗಳಿಗೇ ಒಂದು ಕೇರಿ, ದೇಸ್ಥಾನಗಳಿಗೆ ಪ್ರವೇಶವಿಲ್ಲ, ಜಮೀನಿನ ಒಡತನವಿಲ್ಲ, ಮೇಲ್ವರ್ಗದವರು ಹೇಳಿದಾಗ ಪ್ರತಿಫಲ ಅಪೇಕ್ಷಿಸದೆ ಅವರುಗಳ ಮನೆಯಲ್ಲಿ ಬಂದು ದುಡಿಯಬೇಕು ಕೊಟ್ಟಷ್ಟು ಕೂಲಿ ಪಡೆದು ತೊಲಗಬೇಕು. ಒಟ್ಟಿನಲ್ಲಿ ಸ್ವತಂತ್ರದ ಬದುಕೆ ಇಲ್ಲದೆ ಬದುಕು ಅವರದು.

ಮಡೆಸ್ನಾನದ ಮುಂದುವರೆದ ಭಾಗವಾಗಿ ಎಡೆಸ್ನಾನ, ಗುಪ್ತವಾಗಿ ಬೆತ್ತಲೆ ಸೇವೆಯ ಮುಂದುವರೆದ ಭಾಗವಾಗಿ ಮೈಗೆ ಸೊಪ್ಪು ಕಟ್ಟಿಕೊಳ್ಳುವುದು. ದೇವದಾಸಿ ಪದ್ದತಿ, ಪಾದಪೂಜೆಗಳು, ಪಾಪ ಪರಿಹಾರಕ್ಕೆ ಅಥವಾ ಶಾಂತಿಗಾಗಿ ಪೂಜೆಗಳು, ಕ್ಷುದ್ರ ಶಕ್ತಿಗಳನ್ನು yellamma-neem-leaves-devadasiಒಲಿಸಿಕೊಳ್ಳಲು ನರಬಲಿ, ಪ್ರಾಣಿಬಲಿ, ಮನೆಗಳಲ್ಲಿ ಶೌಚಾಲಯಗಳನ್ನು ಹೊಂದದೇ ಇರುವುದು. ತೆರೆಮರೆಯಲ್ಲಿ ಹುಣ್ಣಿಮೆಯ ದಿನ ಸವದತ್ತಿಯಲ್ಲಿ ಮುತ್ತು ಕಟ್ಟುವುದು. ಶಾಂತಿ ಹೋಮ ಹವನಗಳನ್ನು ಮಾಡಿಸುವುದು. ಪಂಕ್ತಿ ಭೇದ, ಅಜಲು ಪದ್ದತಿ. ಉಳ್ಳವರು ತಮ್ಮ ಆನಾಚಾರಗಳ ವಿರುದ್ದ ಧ್ವನಿ ಎತ್ತಿದವರನ್ನು ಭಾನಾಮತಿ ಮಾಡುತ್ತಿದ್ದಾರೆಂದು ಆಪಾದಿಸಿ ಜೀವಂತ ಸುಡುವುದು. ನಿಧಿ ತೆಗೆಯಲು ಮಕ್ಕಳನ್ನು ಬಲಿ ಕೂಡುವುದು. ಶ್ರೀಮಂತ ಪುರುಷರು ಚಿಕ್ಕವರೊಂದಿಗೆ ಸಂಭೋಗ ಮಾಡಿದರೆ ಹರೆಯ ಹೆಚ್ಚುತ್ತದೆಯಂದು ಮತ್ತು ಗುಪ್ತರೋಗಗಳು ವಾಸಿಯಾಗುತ್ತವೆಯಂದು, ಹೀಗೆ ಹೇಳುತ್ತಾ ಹೊದರೆ ಮಾಹಾನ್ ಗ್ರಂಥಗಳನ್ನೇ ರಚಿಸಬಹುದು.

ಮೂಲಭೂತವಾದಿಗಳು, ಪುರೋಹಿತಶಾಹಿಗಳು, ಅವಕಾಶವಾದಿ ಪಾಳೇಗಾರಿಕೆ ವ್ಯವಸ್ಥೆಯ ನಾಯಕರುಗಳು, ಬಂಡವಾಳಶಾಹಿಗಳು, ಜಾತಿ ಮತ್ತು ಧರ್ಮಗಳ ಹೆಸರಿನಲ್ಲಿ ರಾಜಕೀಯ ನಡೆಸುವವರು, ಜನರ ನಂಬಿಕೆಯ ಹೆಸರಿನಲ್ಲಿ ಪ್ರಜ್ಞಾಪೂರ್ವಕವಾಗಿಯೇ ಮೌಢ್ಯತೆಯನ್ನು ಪೋಷಿಸಿಕೊಂಡು ಬರುತ್ತಿದ್ದಾರೆ. ಅವರುಗಳ ಅಸ್ತಿತ್ವದ ಪ್ರಶ್ನೆ. ಸೈದ್ದಾಂತಿಕ ಸಿದ್ಧಾಂತ, ನೈತಿಕತೆ , ಸಾಮಾಜಿಕ ಪ್ರಜ್ಞೆ, ಸಾಮಾಜಿಕ ಕಳಕಳಿ ಇಲ್ಲದವರುಗಳಿಗೆ ಅಂಧಶ್ರದ್ದೆಗಳೆ ಮೂಲಾಧಾರ. ಇವರುಗಳ ಅಭಿವೃದ್ದಿ ಅಂಧಶ್ರದ್ಧೆಯ ಅಭಿವೃದ್ದಿಯ ಮೇಲೆ ಅವಲಂಬಿತವಾಗಿರುತ್ತವೆ. ಅವರುಗಳಿಗೆ ಮೂಢನಂಬಿಕೆ ಪ್ರತಿಬಂಧಕ ಮಸೂದೆ ಅಘಾತಕಾರಿ ಮತ್ತು ಅತಂಕದ ಮಸೂದೆಯಾಗಿದೆ.

ಭಯೋತ್ಪಾದಕಿ ಆಯಿಶಾ ಬಾನು !? ಸುದ್ದಿಯ ಇನ್ನೊಂದು ಮುಖ

– ನಸೂ 

ಅಯಿಶಾ ಬಾನು. ಮಂಗಳೂರಿನ ಈ ಹೆಣ್ಣು ಮಗಳು ಇಡೀ ದೇಶದಲ್ಲಿ ಈಗ ಸುದ್ದಿಯಲ್ಲಿರುವ ಹೆಣ್ಣು. ಭಯೋತ್ಪಾದಕರಿಗೆ ಹಣ ಪೂರೈಕೆ ಮಾಡಿ ನರೇಂದ್ರ ಮೋದಿಯ ಹೂಂಕಾರ್ ರ್‍ಯಾಲಿಗೆ ಬಾಂಬಿರಿಸಲು ಸಹಕರಿಸಿದ ಆರೋಪ ಹೊತ್ತು ಜೈಲು ಸೇರಿದ ಮಹಿಳೆ. Aysha-Banuಲವ್ ಜೆಹಾದ್‌ನ ಭಾಗವಾಗಿ ಮುಸ್ಲಿಂ ಯುವಕನೊಬ್ಬ ಈಕೆಯನ್ನು ಮದುವೆಯಾಗಿ ಭಯೋತ್ಪಾದನಾ ಕೃತ್ಯಗಳಿಗೆ ಬಳಸಿದ್ದ ಎಂಬುದು ಸಂಘಪರಿವಾರಿಗಳ ಆರೋಪ. ಆದರೆ ಈ ಆಯಿಶಾ ಬಾನು ಜೆಹಾದಿ ಅಲ್ಲವೇ ಅಲ್ಲ. ಆಕೆ ತನ್ನ ಮತ್ತು ಮಕ್ಕಳ ಹೊಟ್ಟೆಗಾಗಿ ತನ್ನ ಬದುಕಿನುದ್ದಕ್ಕೂ “ಜೆಹಾದಿ” ನಡೆಸಿದ ಓರ್ವ ತಾಯಿ.

ಸರಿಸುಮಾರು 5 ವರ್ಷಗಳ ಹಿಂದಿನ ಮಾತು. ಡಿವೈಎಫ್‌ಐ ಜಿಲ್ಲಾಧ್ಯಕ್ಷ, ಗೆಳೆಯ ಮುನೀರ್ ಕಾಟಿಪಳ್ಳ ಮತ್ತು ’ದ ಹಿಂದೂ’ ಪತ್ರಿಕೆಯ ಸುದೀಪ್ತೋ ಮೊಂಡಲ್ ಜೊತೆ ನಾನು ಮಂಗಳೂರು ವಿಶೇಷ ಆರ್ಥಿಕ ವಲಯ ಯೋಜನೆಯ ನಿರ್ವಸಿತ ಕಾಲನಿಗೆ ಬೇಟಿ ನೀಡಿ ಸಮಸ್ಯೆಗಳ ಪರಿಶೀಲನೆ ನಡೆಸುತ್ತಿದ್ದೆವು. ಅಲ್ಲಿಂದ ಮರಳಿ ವಾಪಾಸ್ಸಾಗುವ ಸಂದರ್ಭ ಮುನೀರ್ ಕಾಟಿಪಳ್ಳ “ಹಿಂದೂ ಯುವತಿಯೊಬ್ಬಳು ಮತಾಂತರಗೊಂಡು ಪಡುತ್ತಿರುವ ಕಷ್ಟದ” ಬಗ್ಗೆ ವಿವರಗಳನ್ನು ನೀಡುತ್ತಿದ್ದರು. ಸಂಘಪರಿವಾರದ ಮಂದಿ “ಲವ್ ಜೆಹಾದ್” ಬಗ್ಗೆ ಆಂದೋಲನ ಶುರುವಿಟ್ಟುಕೊಂಡಿದ್ದ ದಿನಗಳವು. ಹಿಂದೂ ಯುವತಿಯೊಬ್ಬಳು ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡು ಜೀವನ ನಡೆಸುತ್ತಿರುವ ಬಗ್ಗೆ ನಮಗೂ ಕುತೂಹಲಗಳಿದ್ದವು.Muneer Katipalla ಎಸ್‌ಇಝಡ್ ನಿರ್ವಸಿತ ಕಾಲನಿಯಿಂದ ಕೆಲವೇ ಕಿಮಿ ದೂರದಲ್ಲಿ ಹಿಂದೂ ಮತಾಂತರಿ ಯುವತಿಯ ಮನೆಯೂ ಇದ್ದಿದ್ದರಿಂದ ಅವಳ ಮನೆಗೆ ತೆರಳಿ ಮಾತಿಗೆ ಶುರುವಿಟ್ಟುಕೊಂಡೆವು.

ಆಕೆಯ ಹೆಸರು ಆಶಾ. ಕೊಡಗಿನ ವಿರಾಜಪೇಟೆ ತಾಲೂಕಿನ ದೇವಣಗೇರಿ ಗ್ರಾಮದವಳು. ದಲಿತ ಕುಟುಂಬಕ್ಕೆ ಸೇರಿದ ಆಶಾ 1995 ರಲ್ಲಿ ಮಂಗಳೂರಿನ ಬಜಪೆ ನಿವಾಸಿ ಜುಬೇರ್ ಮಹಮ್ಮದ್ ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದಳು. ಆಶಾಳು ವಿರಾಜಪೇಟೆಯಲ್ಲಿ ಪಿಯುಸಿ ಪೂರೈಸಿ ಮಡಿಕೇರಿಯಲ್ಲಿ ಪದವಿ ಓದುತ್ತಿದ್ದಳು. ಈ ಸಂದರ್ಭ ಮಡಿಕೇರಿಯಲ್ಲಿ ಟ್ಯಾಕ್ಸಿ ಚಾಲಕನಾಗಿದ್ದ ಮಂಗಳೂರಿನ ಜುಬೇರ್ ಮಹಮ್ಮದ್ ಪರಿಚಯವಾಗಿ ಪ್ರೀತಿ ಅಂಕುರಿಸಿತ್ತು. ಆದರೆ ಎರಡೂ ಮನೆಯವರಿಗೂ ಮದುವೆ ಇಷ್ಟವಿರಲಿಲ್ಲ. ಜುಬೇರ್ ತಂದೆ ಬೀಡಿ ಕಾಂಟ್ರಾಕ್ಟರ್ ಆಗಿದ್ದರು. ತಕ್ಕಮಟ್ಟಿಗೆ ಸಿರಿವಂತರಾಗಿದ್ದರು. ಆಶಾ ಮನೆಯವರು ಅಂತರ್‌ಮತೀಯ ಮದುವೆಗೆ ಸಿದ್ದವಿರಲಿಲ್ಲ. ಈ ಸಂದರ್ಭ ಇಬ್ಬರೂ ತಮ್ಮ ಮನೆಯವರನ್ನು ಧಿಕ್ಕರಿಸಿ ಮದುವೆಯಾಗಿದ್ದರು.

ಪ್ರೀತಿ ಪ್ರೇಮ ಪ್ರಕರಣಗಳಲ್ಲಿ ಸಹಜವಾಗಿ ಪುರುಷನ ಧರ್ಮಕ್ಕೆ ಮಹಿಳೆ ಮತಾಂತರವಾಗುವುದು ಪುರುಷ ಪ್ರಧಾನ ಸಮಾಜದಲ್ಲಿರುವ ರೂಢಿ. ಅದರಂತೆ ಆಶಾಳನ್ನು ಇಸ್ಲಾಂಗೆ ಮತಾಂತರಗೊಳಿಸಿ ಆಯಿಶಾ ಬಾನು ಎಂದು ಮರುನಾಮಕರಣಗೊಳಿಸಲಾಯಿತು. ಸ್ನೇಹಿತರ ಸಹಕಾರದೊಂದಿಗೆ ಇಸ್ಲಾಂ ಪದ್ದತಿಯಂತೆ ಮದುವೆಯೂ ನಡೆಯಿತು. ನಂತರ ಜುಬೇರ್ ತನ್ನ ಪತ್ನಿ ಆಶಾಳನ್ನು ಮಂಗಳೂರಿನ ಬಜಪೆಗೆ ಕರೆದುಕೊಂಡು ಬಂದು ಬಾಡಿಗೆಗೆ ಮನೆ ಪಡೆದು ಸಂಸಾರ ಶುರುವಿಟ್ಟುಕೊಂಡ. ಆರಂಭದ ಮೂರು ನಾಲ್ಕು ವರ್ಷ ಅವರದ್ದು ಸುಖೀ ದಾಂಪತ್ಯ. ಈ ಮಧ್ಯೆ ಜುಬೇರ್‌ಗೆ ತಂದೆ ತಾಯಿಯ ಜೊತೆ ರಾಜಿಯಾಯಿತು. ತಂದೆ ತಾಯಿಯ ಮನೆಗೆ ಜುಬೇರ್ ನಿತ್ಯ ಹಾಜರಿ ಹಾಕತೊಡಗಿದ. ತನ್ನ ಹಿಂದೂ ಸೊಸೆ ಇಸ್ಲಾಂಗೆ ಮತಾಂತರ ಹೊಂದಿದ್ದರೂ ಆಕೆಯನ್ನು ಜುಬೇರ್ ತಂದೆ ತಾಯಿಗಳು ಸ್ವೀಕರಿಸಲು ಸುತರಾಂ ಸಿದ್ದರಿರಲಿಲ್ಲ. “ನೀನು ನಾನು ನೋಡಿದ ಮುಸ್ಲಿಂ ಹುಡುಗಿಯನ್ನೇ ಮದುವೆಯಾಗಬೇಕು” ಎಂದು ಜುಬೇರ್‌ಗೆ ಆತನ ತಂದೆ ತಾಯಿ ಒತ್ತಡ ಹೇರ ತೊಡಗಿದರು. ಕೊನೆಗೂ ಈ ಒತ್ತಡಕ್ಕೆ ಮಣಿದ ಜುಬೇರ್ ತಂದೆ ತಾಯಿ ನೋಡಿದ್ದ ಮುಸ್ಲಿಂ ಯುವತಿಯನ್ನೇ ಇನ್ನೊಂದು ಮದುವೆಯಾದ. ಆಕೆ ಜುಬೇರ್‌ನ ತಂದೆ ತಾಯಿಯ ಮುದ್ದಿನ ಸೊಸೆಯಾಗಿ ಅವರ ಜೊತೆಯೇ ಇರತೊಡಗಿದಳು.

ಇತ್ತ ಬಾಡಿಗೆ ಮನೆಯಲ್ಲಿದ್ದ ಆಶಾ ಯಾನೆ ಆಯಿಶಾಬಾನು ಒಂದು ಮಗುವಿನ ತಾಯಿಯಾಗಿದ್ದಳು. ತನ್ನ ಗಂಡನ ಎರಡನೇ ವಿವಾಹವನ್ನು ಅಸಹಾಯಕಳಾಗಿ ಸಹಿಸಿಕೊಂಡು ಗಂಡನೊಂದಿಗೆ ಹೊಂದಾಣಿಕೆಯಲ್ಲಿ ಸಂಸಾರ ನಡೆಸುತ್ತಿದ್ದಳು. ಈ ಮಧ್ಯೆ ಜುಬೇರ್ ಎರಡೂ ಕುಟುಂಬಗಳನ್ನು ನಿರ್ವಹಿಸಲಾಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ. ಆಯಿಶಾ ಬಾನು ಎರಡನೇ ಮಗುವಿನ ತಾಯಿಯಾದಳು. saudi-arabiaತನ್ನ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಜುಬೇರ್ ಸೌದೀ ಅರೇಬಿಯಾಕ್ಕೆ ಹೊರಟು ನಿಂತ. ಆ ಸಂದರ್ಭದಲ್ಲಿ ಸೌದಿಗೆ ಹೋಗುವ ಖರ್ಚು ನಿಭಾಯಿಸಲು ಆಯಿಶಾ ಬಾನು ತನ್ನಲ್ಲಿದ್ದ ಅಲ್ಪಸ್ವಲ್ಪ ಚಿನ್ನವನ್ನು ಮಾರಾಟ ಮಾಡಿ ಗಂಡನ ಕೈಗಿತ್ತಳು. ಜುಬೇರನು ಆಯಿಶಾ ಬಾನು ನೀಡಿದ ಹಣದಲ್ಲೇ ಸೌದಿಗೆ ತೆರಳಿದ.

ಸೌದಿಯಲ್ಲಿ ಉದ್ಯೋಗ ಶುರುವಿಟ್ಟುಕೊಂಡ ಜುಬೇರ್ ಕಾಲಕ್ರಮೇಣ ಆಯಿಶಾ ಬಾನುವಿನ ಸಂಪರ್ಕ ಕಡಿತಗೊಳಿಸತೊಡಗಿದ. ಆಯಿಶಾಳನ್ನು ಮರೆತುಬಿಡಬೇಕು ಎನ್ನುವ ತನ್ನ ತಂದೆ ತಾಯಿಯ ಒತ್ತಡಕ್ಕೆ ಆತ ನಿಧಾನವಾಗಿ ಪ್ರತಿಕ್ರಿಯಿಸತೊಡಗಿದ. ಬಜಪೆಯ ಬಾಡಿಗೆಯಲ್ಲಿ ತನ್ನ ಇಬ್ಬರು ಪುಟ್ಟ ಮಕ್ಕಳೊಂದಿಗಿದ್ದ ಆಯಿಶಾ ಬಾನು ಈಗ ಪೂರ್ಣ ಕಂಗಾಲಾಗಿದ್ದಳು. ಒಂದೆಡೆ ತನ್ನ ಹುಟ್ಟೂರು, ಧರ್ಮ, ತಂದೆ ತಾಯಿ, ಕುಟುಂಬವನ್ನು ತನ್ನ ಪ್ರೀತಿಗಾಗಿ ತೊರೆದು ಬಂದಿದ್ದಳು. ಈಗ ಅತ್ತಲೂ ಸಲ್ಲದೆ ಇತ್ತಲೂ ಸಲ್ಲದೆ ಪರದಾಡಲಾರಂಬಿಸಿದಳು. ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಇಬ್ಬರು ಪುಟ್ಟ ಮಕ್ಕಳಿಗೆ ದಿನದ ತುತ್ತು ತಿನ್ನಿಸುವುದೂ ಕಷ್ಟವಾಗತೊಡಗಿತು. ಗಂಡ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ. ಗಂಡನ ಮನೆಯ ಬಳಿ ಹೋದರೆ ಗೇಟಿನ ಒಳಗೆ ಪ್ರವೇಶವಿರಲಿಲ್ಲ. ಅಕ್ಷರಶಃ ಬೀದಿಪಾಲಾದ ಆಯಿಶಾ ಇಬ್ಬರು ಮಕ್ಕಳೊಂದಿಗೆ ಹೇಗಾದರೂ ಬದುಕಬೇಕು ಎಂದು ಹಠಕ್ಕೆ ಬಿದ್ದಿದ್ದಳು.

ಇಬ್ಬರು ಪುಟ್ಟ ಮಕ್ಕಳ ಹೊಟ್ಟೆಗೆ ತುತ್ತಿಲ್ಲದೆ ಹೊಟ್ಟೆ ಬೆನ್ನಿಗಂಟಲಾರಂಭಿಸಿದಾಗ ಅಲ್ಲಿದ್ದ ಕೆಲ ಕಾಳಜಿಯ ಮನಸ್ಸುಗಳು ಆಯಿಶಾ ಬಾನುವಿಗೆ ಅಷ್ಟೋ ಇಷ್ಟೋ ಸಹಾಯಕ್ಕೆ ಧಾವಿಸಿದವು. ಬಜಪೆಯ ಬಾಡಿಗೆ ಮನೆಗೆ ಬಾಡಿಗೆ ನೀಡಲು ಸಾಧ್ಯವಾಗದೆ ಆಕೆಯನ್ನು ಬಾಡಿಗೆ ಮನೆಯಿಂದ ಹೊರದಬ್ಬಲಾಯಿತು. ಕೆಲವರ ಸಹಕಾರ ಪಡೆದುಕೊಂಡ ಆಯಿಶಾ ಬಾನು ತೀರಾ ಕಡಿಮೆ ಬಾಡಿಗೆಯ ಮನೆಯಂತಿರುವ ಪುಟ್ಟ ಗುಡಿಸಲಿಗೆ ಸ್ಥಳಾಂತರಗೊಂಡಳು. ಈ ಗುಡಿಸಲು ಸುರತ್ಕಲ್ ಸಮೀಪದ ಕುಳಾಯಿ ಎಂಬ ಪ್ರದೇಶ ರಸ್ತೆ ಬದಿಯಲ್ಲಿತ್ತು.

ಸುರತ್ಕಲ್‌ನ ಕುಳಾಯಿ ಪ್ರದೇಶ ಮತೀಯ ಶಕ್ತಿಗಳ ಕೇಂದ್ರ. ಈ ಭಾಗದಲ್ಲಿ ಮುಸ್ಲಿಂ ಹುಡುಗಿಯರು ಹೊರಗಡೆ ಕೆಲಸಕ್ಕೆ ಹೋಗುವುದನ್ನು ಈ ಮತೀಯವಾದಿಗಳು ಸಹಿಸುತ್ತಿರಲಿಲ್ಲ. ಒಂದೆಡೆ ಈಕೆ ಹಿಂದೂ ಎಂದು ಮನೆಯೊಳಗೆ ಸೇರಿಸದ ಅತ್ತೆ ಮಾವ. ಮತ್ತೊಂದೆಡೆ ಈಕೆ ಮುಸ್ಲಿಂ ಎಂದು ಮುಸ್ಲಿಂ ಕಟ್ಟುಪಾಡುಗಳನ್ನು ಈಕೆಯ ಮೇಲೆ ಹೇರಿ ಅನ್ನ ಕಸಿದುಕೊಳ್ಳುತ್ತಿದ್ದ ಮತೀಯವಾದಿ ಜನ. ಮತಾಂತರಗೊಂಡ ಹಿಂದೂ ಯುವತಿ ಎಂದು ಹಿಂದೂ ಮತೀಯವಾದಿಗಳ ಕಾಕದೃಷ್ಠಿಯಿಂದ ತಪ್ಪಿಸಿಕೊಳ್ಳಲು ನಿತ್ಯ ಹೆಣಗಾಟ. ಒಟ್ಟು ಈ ಆಯಿಶಾ ಭಾನುವಿಗೆ ಉರಿಯುವ ಒಲೆಯ ಮೇಲಿದ್ದ ಬಾಣಲೆಯಲ್ಲಿ ಬದುಕು ನಿರ್ವಹಿಸುವ ಸ್ಥಿತಿಯಾಗಿತ್ತು. ಕೊನೆಗೂ ಆಕೆ ತನ್ನ ಪುಟ್ಟ ಮಕ್ಕಳ ಹೊಟ್ಟೆ ತುಂಬಿಸಲು ಕೆಲಸ ಮಾಡಲು ನಿರ್ಧರಿಸಿದಳು. ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ ಇಸ್ಪಿಟ್ ಎಲೆಗಳ ಪ್ಯಾಕಿಂಗ್ ಫ್ಯಾಕ್ಟರಿಗೆ ತೆರಳಿ, ತಾನು ಮನೆಯಲ್ಲೇ ಪ್ಯಾಕಿಂಗ್ ಮಾಡಿ ನೀಡುವುದಾಗಿ ಕೆಲಸ ಕುದುರಿಸಿಕೊಂಡಳು. ಇಸ್ಪಿಟ್ ಎಲೆಗಳನ್ನು ಮನೆಗೆ ತಂದು ಪ್ಯಾಕ್ ಮಾಡಿ ನೀಡಿ ಸಂಬಳ ಪಡೆದು ಮಕ್ಕಳನ್ನು ಸಾಕತೊಡಗಿದಳು. ಅದು ಇಬ್ಬರು ಮಕ್ಕಳ ಒಂದೊತ್ತಿನ ಊಟಕ್ಕೂ ಸಾಲುತ್ತಿರಲಿಲ್ಲ. ತೀರಾ ಕಡಿಮೆ ಬಾಡಿಗೆಯಾದರೂ ಬಾಡಿಗೆ ಕೊಡುವುದು ದೊಡ್ಡ ಸಾಹಸವಾಗತೊಡಗಿತ್ತು.

ಬಜಪೆಯ ಕೆಲವು ಸಹೃದಯೀ ಮುಸ್ಲಿಂ ಯುವಕರು ಆಗಾಗ ಅಕ್ಕಿ ಬೇಳೆ, ಸಕ್ಕರೆ ಕೊಟ್ಟು ಮಕ್ಕಳು ಉಪವಾಸ ಬೀಳುವುದನ್ನು ತಪ್ಪಿಸುತ್ತಿದ್ದರು. muslim-womanಈ ಮುಸ್ಲಿಂ ಯುವಕರು ಒಂಟಿಯಾಗಿದ್ದ “ಮುಸ್ಲಿಂ” ಮಹಿಳೆಯ ಮನೆಗೆ ಅಕ್ಕಿ ಬೇಳೆ ಹೊತ್ತುಕೊಂಡು ಬರುವುದು ಮುಸ್ಲಿಂ ಧರ್ಮ ರಕ್ಷಕ ಸಂಘಟನೆಗಳಿಗೆ ಕಣ್ಣು ಕೆಂಪಾಗುವಂತೆ ಮಾಡಿತ್ತು. ಅದೊಂದು ದಿನ ಅವರು ಆಯಿಶಾ ಬಾನುವಿನ ಮನೆಗೆ ನುಗ್ಗಿ ಆಕೆಯ ಮೇಲೆ ಹಲ್ಲೆ ನಡೆಸಿದ್ದರು. ಪರಪುರಷರ ಜೊತೆ ಮಾತನಾಡಬಾರದು ಮತ್ತು ಪರಪುರಷರಿಂದ ಏನನ್ನೂ ಪಡೆದುಕೊಳ್ಳಬಾರದು ಎಂದು ಮುಸ್ಲಿಂ ಧರ್ಮ ರಕ್ಷಕರು ಫರ್ಮಾನು ಹೊರಡಿಸಿ ಹೊರಟಿದ್ದರು.

ಮುಸ್ಲಿಂ ಧರ್ಮರಕ್ಷಕರ ಈ ಕಾರ್‍ಯಾಚರಣೆ ಕುಳಾಯಿ ಪ್ರದೇಶದಲ್ಲಿದ್ದ ಜಾತ್ಯಾತೀತ ಮನೋಭಾವನೆಯ ಹಿಂದೂ-ಮುಸ್ಲಿಂ ಯುವಕರನ್ನು ಕೆರಳಿಸಿತ್ತು. ಆಯಿಶಾ ಬಾನುವಿನ ಮೇಲೆ ಹಲ್ಲೆ ನಡೆಸಿದ ಮುಸ್ಲಿಂ ನೈತಿಕ ಪೋಲೀಸರ ಮೇಲೆ ಏರಿ ಹೋದರು. ನಂತರ ಈ ಯುವಕರು ಡಿವೈಎಫ್‌ಐ ಜಿಲ್ಲಾಧ್ಯಕ್ಷ ಮುನೀರ್ ಕಾಟಿಪಳ್ಳರನ್ನು ಸಂಪರ್ಕಿಸಿ ಆಕೆಗೆ ಸಹಾಯ ಮಾಡುವಂತೆ ಕೇಳಿದರು. ಇದಿಷ್ಟೂ ಸಂಗತಿಯನ್ನು ಆಶಾ ಯಾನೆ ಆಯಿಶಾ ಬಾನು ಕಣ್ಣೀರು ಹಾಕುತ್ತಾ ನಮ್ಮ ಮುಂದೆ ಹೇಳಿದಳು.

ನಾವು ಅಸಹಾಯಕರಾಗಿದ್ದೆವು. ಮಹಿಳೆ ಮತ್ತು ಮಗು ಧರ್ಮದ ಸುಳಿಗೆ ಸಿಲುಕಿ ನರಳಾಡುತ್ತಿರುವುದನ್ನು ನೋಡಿಯೂ ಏನೂ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿದ್ದೆವು. ಮುನೀರ್ ಕಾಟಿಪಳ್ಳ ಮಾತ್ರ ದೈರ್ಯ ತೆಗೆದುಕೊಂಡು “ನೀನೇನೂ ಹೆದರಬೇಡ. ನಿನಗೆ ಏನೇ ತೊಂದರೆ ಆದರೂ ಫೋನ್ ಮಾಡು. ನಿನ್ನ ಗಂಡ ವಿದೇಶದಿಂದ ಬರುವ ದಿನಾಂಕ ಗೊತ್ತಾದರೆ ತಿಳಿಸು. ಅದಕ್ಕೂ ಮೊದಲು ನಿನ್ನ ಅತ್ತೆ ಮತ್ತು ಮಾವನನ್ನು ಭೇಟಿಯಾಗಲು ಯತ್ನಿಸುತ್ತೇನೆ” ಎಂದು ಆಕೆಗೆ ಧೈರ್ಯ ನೀಡಿದರು. “ನೀನು ಮರಳಿ ನಿನ್ನ ತಂದೆ ತಾಯಿಯ ಮನೆಗೆ ಹೋಗುವುದಾದರೂ ಅದಕ್ಕೂ ವ್ಯವಸ್ಥೆ ಮಾಡಲು ಸಿದ್ದರಿದ್ದೇವೆ. ಒಟ್ಟು ನಿನ್ನ ಮತ್ತು ಮಕ್ಕಳ ಬದುಕು ಮುಖ್ಯವೇ ಹೊರತು ಧರ್ಮಗಳಲ್ಲ” ಎಂದು ಹೇಳಿದಾಗಲೂ ಆಕೆ ಮರಳಿ ತಂದೆ ತಾಯಿಯನ್ನು ಸೇರಲು ಧೈರ್ಯ ತೋರಲಿಲ್ಲ.

ನಾವು ಭೇಟಿ ನೀಡಿದ ಒಂದೆರಡು ತಿಂಗಳಲ್ಲಿ ಆಯಿಶಾ ಬಾನು ಮುನೀರ್ ಕಾಟಿಪಳ್ಳಗೆ ದೂರವಾಣಿ ಕರೆ ಮಾಡಿದ್ದಳು. ಮುಸ್ಲಿಂ ಮತೀಯವಾದಿಗಳು ಬಾಡಿಗೆ ಮನೆ ಮಾಲೀಕನಿಗೆ ಒತ್ತಡ ಹಾಕಿ ಆಯಿಶಾ ಬಾನುವನ್ನು ಮನೆಯಿಂದ ಹೊರ ಹಾಕಿಸಿದ್ದರು. ಬಾಡಿಗೆ ಮನೆ ಮಾಲೀಕನೂ ಮುಸ್ಲೀಮನಾಗಿದ್ದರಿಂದ ಆತ ಧರ್ಮ ರಕ್ಷಕರಿಗೆ ಹೆದರಿ ಅವರ ಆಜ್ಞೆಯನ್ನು ಪಾಲಿಸಿದ್ದ. ಒರ್ವ ಮಹಿಳೆ ತನ್ನಿಬ್ಬರು ಮಕ್ಕಳ ಜೊತೆ ಬೀದಿ ಪಾಲಾಗಿದ್ದಳು.

ಆಕೆಯನ್ನು ಡಿವೈಎಫ್‌ಐ ಜಿಲ್ಲಾ ಕಚೇರಿ “ವಿಕಾಸ” ಕ್ಕೆ ಕರೆಸಿಕೊಂಡ ಮುನೀರ್ ಆಕೆಗೆ ವಸತಿ ವ್ಯವಸ್ಥೆ ಮಾಡುವ ಸಲುವಾಗಿ ತನ್ನ ಸಂಘಟನೆಯ ಕಾರ್‍ಯಕರ್ತರ ಬಳಿ ಸಮಾಲೋಚನೆ ನಡೆಸಿ ಕೂಳೂರಿನ ಪಂಜಿಮೊಗೇರಿನಲ್ಲಿ ಬಾಡಿಗೆ ಮನೆಯನ್ನು ಕೊಡಿಸಿದರು. ಪಂಜಿಮೊಗೆರು ಪ್ರದೇಶ ಕಮ್ಯೂನಿಷ್ಠರ ಭದ್ರ ಕೋಟೆ. ಇಲ್ಲಿನ ವಾರ್ಡ್ ಕಾರ್ಪೋರೇಟರ್ ಕೂಡ ಸಿಪಿಐಎಂನಿಂದ ಆಯ್ಕೆಗೊಂಡವರು. ಪಂಜಿಮೊಗರಿನಲ್ಲಿ ಯಾವುದೇ ಕೋಮುವಾದಿಗಳ ಆಟ ನಡೆಯುವುದಿಲ್ಲ ಎಂಬ ಕಾರಣಕ್ಕಾಗಿ ಆಯಿಶಾ ಬಾನು ಎರಡೂ ಕೋಮುವಾದಿಗಳಿಂದ ಸೇಫ್ ಆಗಿದ್ದಳು.

ಇಷ್ಟೆಲ್ಲಾ ಆಗುವಾಗ ಆಯಿಶಾಳ ಎರಡೂ ಮಕ್ಕಳು ಶಾಲೆಗೆ ಹೋಗುವ ಮಟ್ಟಕ್ಕೆ ಬೆಳೆದು ನಿಂತಿದ್ದರು. ಸಿಪಿಐಎಂ ಮತ್ತು ಡಿವೈಎಫ್‌ಐ ಕಾರ್‍ಯಕರ್ತರ ನೆರವಿನಲ್ಲಿ ಇಬ್ಬರು ಮಕ್ಕಳನ್ನು ಕೂಡಾ ಒಳ್ಳೆಯ ವಿದ್ಯಾಭ್ಯಾಸ ಸಿಗಲೆಂಬ ಕಾರಣಕ್ಕಾಗಿ ಖಾಸಗಿ ಶಾಲೆಗೆ ಸೇರಿಸಿದರು. ಖಾಸಗಿ ಶಾಲೆಯ ಫೀಸು ಕಟ್ಟುವ ಕೊನೆಯ ದಿನಾಂಕ ಸಮೀಪಿಸುತ್ತಿತ್ತು. ಈ ಸಂಧರ್ಭ ಡಿವೈಎಫ್‌ಐ ಮುಖಂಡ (ಈಗ ಕಾರ್ಪೋರೇಟರ್) ದಯಾನಂದ ಶೆಟ್ಟಿಯವರನ್ನು ಆಯಿಶಾ ಸಂಪರ್ಕಿಸಿ ತನ್ನ ಕಷ್ಟವನ್ನು ಹೇಳಿಕೊಂಡಿದ್ದಳು. “ಗಂಡ ವಿದೇಶದಿಂದ ಊರಿಗೆ ಬಂದು ಹದಿನೈದು ದಿನಗಳಾಗಿದ್ದು ತನ್ನನ್ನು ಸಂಪರ್ಕಿಸಿಲ್ಲ” ಎಂದೂ ದಯಾನಂದ ಶೆಟ್ಟಿಯವರಲ್ಲಿ ದೂರಿಕೊಂಡಳು. ದಯಾನಂದ ಶೆಟ್ಟರು ಇದನ್ನು ಡಿವೈಎಫ್‌ಐ ಜಿಲ್ಲಾಧ್ಯಕ್ಷ ಮುನೀರ್ ಕಾಟಿಪಳ್ಳ ಗಮನಕ್ಕೆ ತಂದರು.

ಮುನೀರ್ ಕಾಟಿಪಳ್ಳರವರು ಬಜಪೆಯ ಸ್ಥಳೀಯ ಯುವಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಜೊತೆಗೂಡಿ ನೇರ ಆಯಿಶಾಳ ಪತಿ ಜುಬೇರ್ ಮನೆಗೆ ತೆರಳಿದರು. ಜುಬೇರ್ ಮಹಮ್ಮದ್ ಮನೆಯಲ್ಲಿರಲಿಲ್ಲ. ಆತನನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಮುನೀರ್ ಕಾಟಿಪಳ್ಳ “ಆಯಿಶಾ ಬಾನು ನಿನ್ನನ್ನು ನಂಬಿಕೊಂಡು ಜಾತಿ, ಧರ್ಮ, ತಂದೆ ತಾಯಿಯನ್ನು ಬಿಟ್ಟು ಬಂದಿದ್ದಾಳೆ. ಆಕೆ ಈಗ ಮರಳಿ ತವರಿಗೆ ಹೋಗುವುದು ಅಷ್ಟು ಸುಲಭವಲ್ಲ. ಆದುದರಿಂದ ಅವಳ ಬದುಕಿಗೊಂದು ವ್ಯವಸ್ಥೆಯಾಗಬೇಕು” ಎಂದು ವಿನಂತಿಸಿದರು. ಆದರೆ ಆತ ಈ ಬಗ್ಗೆ ಬೇಜವಾಬ್ದಾರಿಯಿಂದ ವರ್ತಿಸಿ ದೂರವಾಣಿ ಕರೆಯನ್ನು ಕಡಿತಗೊಳಿಸಿದಾಗ ಮನೆಯಲ್ಲಿದ್ದ ಜುಬೇರ್‌ನ ಕುಟುಂಬಸ್ಥರಿಗೆ ಎಚ್ಚರಿಕೆ ನೀಡಲಾಯಿತು. “ಆಯಿಶಾಳ ಇಡೀ ಬದುಕಿನ ಜವಾಬ್ದಾರಿ ಜುಬೇರ್‌ನದ್ದು. ಅದೆಲ್ಲಾ ಮತ್ತೆ ಚರ್ಚೆ ಮಾಡುವ. ಎಲ್ಲಕ್ಕಿಂತ ಮೊದಲು ನಾಳೆ ಬೆಳಿಗ್ಗೆ 10 ಗಂಟೆಯ ಒಳಗಾಗಿ ಆಕೆಯ ಪಂಜಿಮೊಗರಿನ ಮನೆಗೆ ತೆರಳಿ ಆಕೆಯ ಮಕ್ಕಳ ಸ್ಕೂಲ್ ಫೀಸ್ ಮತ್ತು ಮನೆ ಬಾಡಿಗೆ ನೀಡಬೇಕು. ಇಲ್ಲದೇ ಇದ್ದರೆ ಸಂಘಟನೆಯ ವತಿಯಿಂದ ನಿಮ್ಮ ಮನೆಯ ಎದುರು ಧರಣಿ ನಡೆಸಲಾಗುವುದು” ಎಂದು ಎಚ್ಚರಿಕೆ ನೀಡಲಾಯಿತು.

ಮಂಗಳೂರಿನಲ್ಲಿ ಡಿವೈಎಫ್‌ಐ ಹೋರಾಟದ ಹಿನ್ನಲೆ ಮತ್ತು ಶೋಷಣೆಗೊಳಗಾದ ವ್ಯಕ್ತಿಗಳ ಪರವಾಗಿ ನಡೆಸುತ್ತಿರುವ ನಿರಂತರ ಹೋರಾಟದ ಬಗ್ಗೆ ತಿಳಿದುಕೊಂಡ ಜುಬೇರ್ ಮಹಮ್ಮದ್ ಮರುದಿನ ಬೆಳಿಗ್ಗೆ 7 ಗಂಟೆಗೇನೇ ನೇರವಾಗಿ ತನ್ನ ಮೊದಲ ಪತ್ನಿ ಆಯೀಶಾಳ ಮನೆಗೆ ಭೇಟಿ ನೀಡಿ ಅವಳ ಜೊತೆ ಒಂದಿಷ್ಟು ಹೊತ್ತು ಪ್ರೀತಿಯಿಂದ ಕಳೆದಿದ್ದ. ನಂತರ ಹತ್ತು ಗಂಟೆಯ ವೇಳೆಗೆ ಮಕ್ಕಳನ್ನು ಆಯಿಶಾಳ ಜೊತೆ ಶಾಲೆಗೆ ಕರೆದುಕೊಂಡು ಹೋಗಿ ಬಾಕಿ ಉಳಿಸಿದ್ದ ಸ್ಕೂಲ್ ಫೀಸ್‌ಗಳನ್ನು ಪಾವತಿಸಿ ಅಲ್ಲಿಂದ ಆಯಿಶಾಳನ್ನು ಮಂಗಳೂರು ನಗರಕ್ಕೆ ಕರೆದೊಯ್ದು ಬಟ್ಟೆ ಬರೆ, ಮಕ್ಕಳ ಆಟಿಕೆ, ಮನೆ ಸಾಮಾಗ್ರಿ ಖರೀಸಿದ್ದ. ಕಷ್ಟ ಮತ್ತು ನೋವಿನಿಂದ ಕಂಗಾಲಾಗಿದ್ದ ಆಯಿಶಾ ಬಾನುವಿಗೆ ಇದು ಕನಸೆಂಬಂತೆ ಕಂಡಿರಬಹುದು. ಆದೇನೇ ಆದರೂ ಆಯಿಶಾ ಬಾನು ಕಷ್ಟದ ಜೀವನ ಮುಗಿದು ಪ್ರೀತಿ ಪ್ರೇಮದ ಎರಡನೇ ಭಾಗ ಆರಂಭವಾಯಿತೆಂದುಕೊಂಡಳು.

ಬೀಡಿ ಕಾಂಟ್ರಾಕ್ಟರ್ ಆಗಿದ್ದ ಜುಬೇರ್ ತಂದೆ ಇದೇ ಸಂದರ್ಭದಲ್ಲಿ ಸಾವನ್ನಪ್ಪಿದ್ದರು. ಮಂಗಳೂರು ನಗರ ಮತ್ತು ಬಜಪೆಯಲ್ಲಿ ಉತ್ತಮ ಆದಾಯ ತರುತ್ತಿದ್ದ ಬೀಡಿ ಬ್ರಾಂಚುಗಳನ್ನು ಹೊಂದಿದ್ದ ಜುಬೇರ್ ತಂದೆಯ ಅಕಾಲಿಕ ಮರಣದ ನಂತರ ಬೀಡಿ ಬ್ರಾಂಚುಗಳನ್ನು ಮುಚ್ಚುವಂತಿರಲಿಲ್ಲ. beedi-workerಸೌದಿಗೆ ಹೋಗುವುದನ್ನು ರದ್ದುಪಡಿಸಿದ ಜುಬೇರ್ ಬೀಡಿ ಬ್ರಾಂಚಿನ ಉಸ್ತುವಾರಿ ವಹಿಸಿಕೊಂಡ. ಆಯಿಶಾ ಬಾನು ಜೊತೆಗೆನೇ ಸಂಸಾರ ಹೂಡಿಕೊಂಡ ಜುಬೇರ್, ಪತ್ನಿ ಆಯಿಶಾಳನ್ನೂ ಕೂಡಾ ಬೀಡಿ ಬ್ರಾಂಚಿನ ವ್ಯಾಪಾರದಲ್ಲಿ ತೊಡಗಿಸಿಕೊಂಡ. ಎರಡನೇ ಪತ್ನಿಯ ಮನೆಗೆ ಆಗೊಮ್ಮೆ ಈಗೊಮ್ಮೆ ಹೋಗಿ ಬರುತ್ತಿದ್ದ ಜುಬೇರ್ ಈ ಬಾರಿ ಎರಡೂ ಸಂಸಾರಗಳನ್ನು ನಿಭಾಯಿಸುವುದರಲ್ಲಿ ಯಶಸ್ವಿಯಾದಂತೆ ಕಂಡು ಬಂದ. ಎರಡು ಮೂರು ವರ್ಷ ಆಯಿಶಾ ಮತ್ತು ಜುಬೇರ್ ಸುಖೀ ಸಂಸಾರ. ವರ್ಷದ ಹಿಂದೆ ಗರ್ಭಿಣಿಯಾಗಿದ್ದ ಆಯಿಶಾಳಿಗೆ ನಾಲ್ಕು ತಿಂಗಳ ಹಿಂದೆ ಪುಟ್ಟ ಮಗುವೊಂದರ ಜನನವಾಗಿತ್ತು.

ಕಳೆದ ಒಂದು ವರ್ಷದಿಂದ ಆಯಿಶಾ ಮತ್ತು ಜುಬೇರ್ ಸಂಸಾರದಲ್ಲಿ ದಿಡೀರ್ ಬದಲಾವಣೆಗಳು ಕಾಣಲಾರಂಭಿಸಿದವು. ಬೀಡಿ ಕಾಂಟ್ರಾಕ್ಟರ್ ಆಗಿದ್ದ ಜುಬೇದ್‌ಗೆ ಎರಡೂ ಕುಟುಂಬ ನಿರ್ವಹಿಸಲು ತಕ್ಕಮಟ್ಟಿನ ಆರ್ಥಿಕತೆ ಇತ್ತು. ನಾವೂ ಎಲ್ಲರಂತೆ ಬದುಕಬೇಕು. ಕಾರು, ಸ್ವಂತ ಮನೆ ಹೊಂದಬೇಕು ಎಂಬ ಆಸೆ ಎಲ್ಲರಂತೆ ಜುಬೇರ್ ಮತ್ತು ಆಯಿಶಾ ದಂಪತಿಗಳಲ್ಲೂ ಇತ್ತು. ಹೇಗೋ ಹುಂಡಿ ವ್ಯವಹಾರ ಶುರುವಿಟ್ಟುಕೊಂಡ ಜುಬೇರ್ ಚಿಲ್ಲರೆ ಹಣ ಸಂಪಾದನೆಗೆ ತೊಡಗಿಕೊಂಡ. ಹವಾಲ ವ್ಯವಹಾರವನ್ನು ಮಂಗಳೂರಿನಲ್ಲಿ ಹುಂಡಿ ವ್ಯವಹಾರ ಎನ್ನುತ್ತಾರೆ. ಇದು ಕಾನೂನಿನ ಪ್ರಕಾರ ಕಾನೂನು ಬಾಹಿರವಾದರೂ ಗಲ್ಫ್ ರಾಷ್ಟ್ರಗಳಲ್ಲಿನ ಉದ್ಯೋಗವನ್ನೇ ನೆಚ್ಚಿಕೊಂಡಿರುವ ಮಂಗಳೂರಿನ ಮುಸ್ಲಿಂ ಸಮುದಾಯದಲ್ಲಿ ಹವಾಲ ವ್ಯವಹಾರ ತಪ್ಪು ಅನ್ನಿಸೋದೇ ಇಲ್ಲ. ಸೌದಿ ಆರೇಬಿಯಾ, ದುಬೈಗಳಲ್ಲಿ ಕೂಲಿ ಕೆಲಸ ಮಾಡುವ ಮಂಗಳೂರಿನ ಯುವಕರು ಅಷ್ಟೋ ಇಷ್ಟೋ ಸಂಪಾದಿಸಿದ್ದನ್ನು ಕಾನೂನು ರೀತಿಯಲ್ಲಿ ಮಂಗಳೂರಿನ ಹೆತ್ತವರಿಗೆ ಕಳುಹಿಸಿದರೆ ಕಳುಹಿಸಿದ ಹಣದ ಅರ್ಧದಷ್ಟು ಮಾತ್ರ ಹೆತ್ತವರ ಕೈಸೇರುತ್ತದೆ. ಪ್ರಾಮಾಣಿಕವಾಗಿ ದುಡಿದ ಹಣವನ್ನು ಈ ಪರಿ ತೆರಿಗೆಗಳನ್ನು ತಪ್ಪಿಸಲು ಹವಾಲಾ ಮೂಲಕ ಮಂಗಳೂರಿಗೆ ಹಣ ರವಾನೆ ಮಾಡುತ್ತಾರೆ. ಇದೇ ವ್ಯವಹಾರ ಶುರುವಿಟ್ಟುಕೊಂಡ ಜುಬೇರ್ ಮತ್ತು ಆಯಿಶಾ ಹವಾಲಾದಲ್ಲಿ ಬಂದ ಕಮಿಷನ್ ಹಣದಲ್ಲಿ ಒಂದು ಪುಟ್ಟ ಮನೆ ಖರೀದಿ ಮಾಡುತ್ತಾರೆ. ಬೀಡಿ ಬ್ರಾಂಚು ವ್ಯವಹಾರ, ಸುತ್ತಾಡಲೆಂದು ಕಾರು ಖರೀದಿಸುತ್ತಾರೆ. ಒಟ್ಟು ಆಯಿಶಾ ಮತ್ತು ಜುಬೇರ್ ಕಷ್ಟದ ದಿನಗಳು ಮುಗಿದು ತಕ್ಕಮಟ್ಟಿಗೆ ಐಶಾರಾಮಿಯಾಗಿಯೇ ಬದುಕಲಾರಂಭಿಸುತ್ತಾರೆ. ಆದರೆ ಕಮಿಷನ್ ಆಸೆಗಾಗಿ ತಾನು ಮಾಡುತ್ತಿದ್ದ ಹವಾಲಾ ದುಡ್ಡು ಯಾರೆಲ್ಲರ ಕೈ ದಾಟುತ್ತಿದೆ ಎಂಬುದು ಆಯಿಶಾಳಿಗಾಗಲೀ, ಜುಬೇರ್‌ಗಾಗಲೀ ಗೊತ್ತಿರಲಿಲ್ಲ.

ಬಿಹಾರದ ಪಾಟ್ನಾದಲ್ಲಿ ನರೇಂದ್ರ ಮೋದಿ ನಡೆಸಿದ್ದ ಹೂಂಕಾರ್ ರ್‍ಯಾಲಿಯಲ್ಲಿ ನಡೆದ patnablast_hunkar_rallyಸರಣಿ ಸ್ಪೋಟದ ಆರೋಪಿಗಳಿಗೆ ಹಣ ಸರಬರಾಜು ಮಾಡಿದ್ದಾರೆ ಎಂಬ ಆರೋಪದ ಹಿನ್ನಲೆಯಲ್ಲಿ ಆಯಿಶಾ ಮತ್ತು ಆಕೆಯ ಪತಿ ಜುಬೇರ್‌ರನ್ನು ತಮ್ಮ ನಾಲ್ಕು ತಿಂಗಳ ಪುಟ್ಟ ಮಗುವಿನ ಜೊತೆ ಅರೆಸ್ಟ್ ಮಾಡಿದ್ದಾರೆ ಎಂಬುದು ಸುದ್ದಿ. ಆದರೆ ಪೊಲೀಸರು ಈ ಬಗ್ಗೆ ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಬಿಹಾರದಲ್ಲಿ ಹವಾಲ ಹಣದ ಸಂಬಂಧ ನಾಲ್ಕು ಮಂದಿಯನ್ನು ಬಂಧಿಸಿದ್ದು, ಅವರ ಅಕೌಂಟ್‌ಗಳಿಗೆ ಆಯಿಶಾ 2 ಕೋಟಿ ಜಮೆ ಮಾಡಿದ್ದಾಳೆ. ಆಯಿಶಾಳ ಪತಿ ಜುಬೇರ್ ಎಕೌಂಟ್‌ನಿಂದ 5 ಕೋಟಿ ವ್ಯವಹಾರವಾಗಿದೆ ಎಂಬುದಷ್ಟೇ ಬಿಹಾರ ಪೊಲೀಸ್ ಇನ್ಸ್‌ಸ್ಪೆಕ್ಟರ್ ರಾಜ್ ಕಿಶೋರ್ ಹೇಳುತ್ತಾರೆ. ಆದರೆ ಯಾವ ಅಧಿಕಾರಿಯೂ ದೃಢೀಕರಿಸದೆ ಮಾಧ್ಯಮಗಳಲ್ಲಿ “ಆಯಿಶಾ ಭಯೋತ್ಪಾದಕಿ” ಎಂಬ ಸುದ್ದಿ ಹರಡಿದ್ದು ಹೇಗೆ ಎಂಬುದು ಮಾಧ್ಯಮಗಳಿಗೇ ಗೊತ್ತಿಲ್ಲ! ಆಯಿಶಾಳನ್ನು ಬಂಧಿಸಲು ಬಿಹಾರದಿಂದ ಇನ್ಸ್‌ಸ್ಪೆಕ್ಟರ್ ರಾಜ್ ಕಿಶೋರ್ ಮತ್ತು ಓರ್ವ ಕಾನ್ಸ್‌ಸ್ಟೇಬಲ್ ಮಾತ್ರ ಮಂಗಳೂರಿಗೆ ಬಂದಿದ್ದರು. ಒಂದು ಸರಳ ವಿಚಾರವೆಂದರೆ ದೇಶದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿ ಹಣ ಸರಬರಾಜು ಮಾಡಿದ ಅತೀ ಮುಖ್ಯ ಆರೋಪಿಯನ್ನು ಬಂಧಿಸಲು ಇಬ್ಬರು ಸಿವಿಲ್ ಪೊಲೀಸರು ಮಾತ್ರ ಬರುತ್ತಾರೆ ಎಂಬುದೇ ಆಶ್ಚರ್‍ಯಕರ. ಎನ್‌ಐಎ, ಎಟಿಎಸ್, ಐಬಿ ಮಟ್ಟದಲ್ಲಿ ನಡೆಯಬೇಕಾಗಿದ್ದ ಕಾರ್‍ಯಾಚರಣೆಯನ್ನು ಒಬ್ಬನೇ ಒಬ್ಬ ಇನ್ಸ್‌ಸ್ಪೆಕ್ಟರ್ ಮಾಡುತ್ತಾರೆ ಎಂದರೇ ಇಡೀ ಸುದ್ದಿಯ ಬಗ್ಗೆ ಅನುಮಾನಗಳಿವೆ. ಅಂತೂ ಇಂತೂ ಮಕ್ಕಳ ಹೊಟ್ಟೆ ತುಂಬಿಸಲು ಪ್ರತೀ ಗಳಿಗೇನೂ ಹರಸಾಹಸ ಪಡುತ್ತಿದ್ದ ತಾಯಿಯೊಬ್ಬಳು ಭಯೋತ್ಪಾದಕಿ ಎಂದು ಬಂಧನದಲ್ಲಿರುವ ಹಿನ್ನೆಲೆಯಲ್ಲಿ ಘಟನೆಯ ಸತ್ಯಾಸತ್ಯತೆಯನ್ನು ವಿಶ್ಲೇಷಿಸಬೇಕಿದೆ.

ತುಮಕೂರಿನಲ್ಲಿ “ದಲಿತರು ಮತ್ತು ಉದ್ಯಮಶೀಲತೆ” ಬಗ್ಗೆಯ ವಿಚಾರ ಸಂಕಿರಣ ಮತ್ತು ಸಂವಾದ

ಸ್ನೇಹಿತರೆ,

ಹಾಸನದಲ್ಲಿ 07-09-2013 ರಂದು ನಡೆದ “ದಲಿತರು ಮತ್ತು ಉದ್ಯಮಶೀಲತೆ” ಕಾರ್ಯಕ್ರಮದ ಬಗ್ಗೆ ನಿಮಗೆಲ್ಲ ತಿಳಿದಿದೆ. ಈಗ ಅದರ ಮುಂದುವರೆದ ಭಾಗವಾಗಿ ಎರಡನೆಯ ವಿಚಾರ ಸಂಕಿರಣ ಮತ್ತು ಸಂವಾದವನ್ನು ಇದೇ ತಿಂಗಳ 24 ರಂದು ತುಮಕೂರಿನಲ್ಲಿ ಆಯೋಜಿಸಲಾಗಿದೆ. ನಮ್ಮ ವರ್ತಮಾನ ಬಳಗದ ಶ್ರೀಪಾದ ಭಟ್ಟರು ಈ ಕಾರ್ಯಕ್ರಮವನ್ನು ಏರ್ಪಡಿಸಲು ಹಲವಾರು ದಿನಗಳಿಂದ ತೊಡಗಿಸಿಕೊಂಡಿದ್ದರು. ಈ ಸಾರಿ ನಮ್ಮ ಬಳಗದ ಜೊತೆಗೂಡಿರುವವರು ತುಮಕೂರಿನ “ಭೀಮರಾವ್ ಸಮಾಜ ಕಲ್ಯಾಣ ಸಂಸ್ಥೆ”ಯವರು. ಹೆಚ್ಚಿನ ವಿವರಗಳು ಕೆಳಗಿನ ಆಮಂತ್ರಣ ಪತ್ರದಲ್ಲಿದೆ. ದಯವಿಟ್ಟು ಸಾಧ್ಯವಾದವರೆಲ್ಲ ಭಾಗವಹಿಸಬೇಕೆಂದು ಕೋರುತ್ತೇನೆ. ಹಾಗೆಯೇ, ಈ ವಿಷಯವನ್ನು ಇತರೆ ಸಮಾನಮನಸ್ಕರ ಜೊತೆ ಮತ್ತು ಇದರ ಉಪಯೋಗ ಪಡೆಯಬಹುದಾದವರ ಜೊತೆ ಹಂಚಿಕೊಳ್ಳಬೇಕೆಂದು ವಿನಂತಿಸುತ್ತೇನೆ.

(ಹಾಸನದಲ್ಲಿ ನಾವು ಮೊದಲ ಕಾರ್ಯಕ್ರಮ ಆಯೋಜಿಸಿದಾಗ ಈ ವಿಷಯದ ಬಗ್ಗೆ ನಾನು ಬರೆದಿದ್ದ ಒಂದು ಟಿಪ್ಪಣಿ ಇಲ್ಲಿದೆ.)

ನಮಸ್ಕಾರ,
ರವಿ ಕೃಷ್ಣಾರೆಡ್ಡಿ
www.vartamaana.com

dalit-entrepreneurship-tumkur

ಮೂಢನಂಬಿಕೆ ನಿಷೇಧ ಕಾನೂನು – ವಿರೋಧ ಪಕ್ಷಗಳ ಅಪಪ್ರಚಾರ

– ಆನಂದ ಪ್ರಸಾದ್

ಭಾರತದಲ್ಲಿ ಸರ್ಕಾರ ವೇಶ್ಯಾವಾಟಿಕೆಯನ್ನು ನಿಷೇಧಿಸಿದೆ. ವೇಶ್ಯಾವಾಟಿಕೆಗೆ ಹೋಗುವುದು ಜನರಿಗೆ ನೆಮ್ಮದಿ ಹಾಗೂ ಸಂತೋಷ ಕೊಡುತ್ತದೆ ಮತ್ತು ಜನ ತಮ್ಮ ಇಚ್ಛೆಯಿಂದಲೇ ವೇಶ್ಯಾವಾಟಿಕೆಗಳಿಗೆ ಹೋಗುತ್ತಾರೆ ಹಾಗಾಗಿ ಇದನ್ನು ನಿಷೇಧಿಸಬೇಡಿ, ಇದು ಜನರ ಸ್ವಾತಂತ್ರ್ಯದ ಹರಣ ಎಂದು ಬೊಬ್ಬೆ ಹಾಕಿದರೆ ಇದನ್ನು ನಿಷೇಧಿಸುವುದು ಸಾಧ್ಯವಿತ್ತೇ? ಅದೇ ರೀತಿ ಭಾರತದಲ್ಲಿ ಮಾದಕ ದ್ರವ್ಯಗಳನ್ನು drugsಮಾರಾಟ ಮಾಡುವುದನ್ನು ಕಾನೂನಿನ ಮೂಲಕ ನಿಷೇಧಿಸಲಾಗಿದೆ. ತಮ್ಮ ದುಡ್ಡಿನಲ್ಲಿ ಮಾದಕ ಪದಾರ್ಥ ಸೇವಿಸಿ ಜನ ನೆಮ್ಮದಿ ಹಾಗೂ ಸಂತೋಷ ಪಡೆಯುವುದಾದರೆ ಅದನ್ನು ತಡೆಯಲು ನೀವು ಯಾರು ಎಂದು ರಾಜಕಾರಣಿಗಳು ಅಬ್ಬರಿಸಿದ್ದಿದ್ದರೆ ಇಂಥ ಕಾನೂನು ತರುವುದು ಸಾಧ್ಯವಿತ್ತೇ? ಅಥವಾ ಭಾರತದಲ್ಲಿ ಥಿಯೇಟರುಗಳಲ್ಲಿ, ಟಿವಿ ಮಾಧ್ಯಮಗಳಲ್ಲಿ ನೀಲಿ ಚಿತ್ರ ತೋರಿಸುವುದನ್ನು ನಿಷೇಧಿಸಲಾಗಿದೆ. ಜನ ತಮ್ಮ ದುಡ್ಡಿನಲ್ಲಿ ಥಿಯೇಟರಿಗೆ ಹೋಗಿ ನೀಲಿ ಚಿತ್ರ ನೋಡಿ ಸಂತೋಷ ಪಡೆಯುವುದಾದರೆ ಅದನ್ನು ತಡೆಯುವುದು ಜನರ ಸ್ವಾತಂತ್ರ್ಯ ಹರಣ ಎಂದು ವಿರೋಧ ಪಕ್ಷಗಳು ಬೊಬ್ಬೆ ಹೊಡೆದಿದ್ದರೆ ಹೀಗೆ ಮಾಡಲು ಸಾಧ್ಯವಾಗುತ್ತಿತ್ತೇ?

ಇನ್ನೊಂದು ದೃಷ್ಟಿಕೋನದಿಂದ ನೋಡುವುದಾದರೆ ಮಾದಕ ವಸ್ತುಗಳನ್ನು ಮಾರಾಟ ಮಾಡುವುದನ್ನು ತಡೆಯುವ ಕಾನೂನು ಮಾಡುವುದು ಬೇಡ, ಜನ ಜಾಗೃತಿ ಮಾಡಿ ಮಾದಕ ವಸ್ತುಗಳನ್ನು ಮಾರಾಟ ಮಾಡುವುದನ್ನು ತಡೆಯುವುದು ಒಳ್ಳೆಯದು ಎಂದು ಹೇಳಿದರೆ ಅದನ್ನು ಒಪ್ಪಬಹುದೇ? ಅಮಾಯಕ ಜನರಿಗೆ ರುಚಿ ಹಿಡಿಸಿ ಅವರನ್ನು ಮಾದಕ ದ್ರವ್ಯಗಳ ಗುಲಾಮರಾಗುವಂತೆ ಮಾಡಿ ತಮ್ಮ ವ್ಯಾಪಾರ ಕುದುರಿಸಿಕೊಂಡು ದುಡಿಯದೆ ದುಡ್ಡು ಮಾಡಿ ಐಶಾರಾಮದಲ್ಲಿ ಮೆರೆಯುವ ಮಂದಿಯನ್ನು ತಡೆಯುವ, ಅಂಥವರಿಗೆ ಕಠಿಣ ಶಿಕ್ಷೆ ವಿಧಿಸುವ ಕಾನೂನು ರೂಪಿಸದೆ ಕೇವಲ ಜಾಗೃತಿಯಿಂದ ಇದನ್ನು ತಡೆಯಬೇಕು ಎಂದು ಹೇಳುವುದು ಎಷ್ಟು ಅಸಂಗತವೋ ಅದೇ ರೀತಿ ಮೂಢ ನಂಬಿಕೆಗಳನ್ನು ತಡೆಯುವ ಶಾಸನ ಮಾಡುವುದು ಬೇಡ, ಅವುಗಳನ್ನು ಜಾಗೃತಿ ಮೂಡಿಸಿ ತಡೆಯಬೇಕು ಎಂದು superstitionsಹೇಳುವುದೂ ಅಷ್ಟೇ ಅಸಂಗತ ಧೋರಣೆಯಾಗುತ್ತದೆ. ಯೋಚನಾಶಕ್ತಿಯಿಲ್ಲದ ಅಮಾಯಕ ಜನರನ್ನು ಪರೋಕ್ಷವಾಗಿ ದೇವರು, ಧರ್ಮ, ಗ್ರಹಚಾರ, ಜ್ಯೋತಿಷ್ಯ, ವಾಸ್ತುಗಳ ಹೆಸರಿನಲ್ಲಿ ನಂಬಿಸಿ ತಾವು ಐಶಾರಾಮದಲ್ಲಿ ಮೆರೆಯುವ ವ್ಯಕ್ತಿಗಳ ನಡವಳಿಕೆ ಮಾದಕ ದ್ರವ್ಯಗಳ ವ್ಯಸನ ಹಿಡಿಸಿ ತಮ್ಮ ಸರಕನ್ನು ಮಾರಿ ಹಣ ಮಾಡುವ ವ್ಯಕ್ತಿ ಗಳಂತೆ ಸಮಾಜದ ಹಾಗೂ ದೇಶದ ಹಿತಕ್ಕೆ ಮಾರಕವಾಗಿದೆ.

ಅಮಾಯಕ ಜನರಿಗೆ ತಿಳುವಳಿಕೆ ಕೊಡಬೇಕಾದ ವಿದ್ಯಾವಂತರು ಇಂದು ಮೂಢನಂಬಿಕೆಗಳ ದಾಸರಾಗಿ ಇತರರನ್ನೂ ವಾಸ್ತು, ಜ್ಯೋತಿಷ್ಯ, ಅರ್ಥಹೀನ ಆಚರಣೆಗಳ ದಾಸರನ್ನಾಗಿ ಮಾಡಲು ಹವಣಿಸುತ್ತಿದ್ದಾರೆ. ಮೂಢನಂಬಿಕೆಗಳನ್ನು ಹಬ್ಬಿಸುವ ಹಾಗೂ ಸಮರ್ಥಿಸುವ ಕೆಲಸದಲ್ಲಿ made-snanaಕೆಲವು ರಾಜಕೀಯ ಪಕ್ಷಗಳು ಹಾಗೂ ದೇಶಭಕ್ತ ಎಂದು ಹೇಳುವ ಸಂಘಟನೆಗಳು ಹೆಚ್ಚಿನ ಶ್ರದ್ಧೆಯಿಂದ ತೊಡಗಿಸಿಕೊಂಡಿದ್ದು ದೇಶದ ಆರೋಗ್ಯಕರ ಬೆಳವಣಿಗೆಗೆ ಮಾರಕವಾಗಿ ಕೆಲಸ ಮಾಡುತ್ತಿದ್ದಾರೆ. ಸ್ವಾಮಿ ವಿವೇಕಾನಂದರು ಪುರೋಹಿತಶಾಹಿಯ ಮೂಲೋತ್ಪಾಟನೆ ಮಾಡಿ ಎಂದು ಕರೆ ನೀಡಿದ್ದರೆ ಇಂದು ಅದಕ್ಕೆ ತದ್ವಿರುದ್ಧವಾಗಿ ವಿವೇಕಾನಂದರ ವಾರಿಸುದಾರರು ತಾವೇ ಎಂದು ಬೊಬ್ಬೆ ಹೊಡೆಯುವ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು ಪುರೋಹಿತಶಾಹೀ ವ್ಯವಸ್ಥೆಯನ್ನು ಬಲಪಡಿಸುವ ರೀತಿಯಲ್ಲಿ ನಡೆದುಕೊಳ್ಳುತ್ತಿರುವುದು ಎಷ್ಟರ ಮಟ್ಟಿಗೆ ಸಮಂಜಸ? ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಬೇಕಾದರೆ ಸಮಾಜದಲ್ಲಿ ಪುರೋಹಿತಶಾಹಿ ಹಿಡಿತವನ್ನು ದುರ್ಬಲಗೊಳಿಸುವುದು ಅನಿವಾರ್ಯ. ಸಮಾಜದಲ್ಲಿ ಪುರೋಹಿತಶಾಹಿ ಹಿಡಿತ ಬಲವಾಗಿದ್ದರೆ ಅಲ್ಲಿ ಊಳಿಗಮಾನ್ಯ ವ್ಯವಸ್ಥೆ ಹಾಗೂ ಪಾಳೇಗಾರಿ ವ್ಯವಸ್ಥೆಗಳು, ದಬ್ಬಾಳಿಕೆ ನೆಲೆಯೂರುತ್ತದೆ. ಹೀಗಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಬೆಳವಣಿಗೆ ಆಗಬೇಕಾದರೆ ಪುರೋಹಿತಶಾಹೀ ಹಿಡಿತವನ್ನು ಸಮಾಜದಲ್ಲಿ ದುರ್ಬಲಗೊಳಿಸ ಬೇಕಾಗಿರುವುದು ಅತೀ ಅಗತ್ಯ. ಇಂದು ಜ್ಯೋತಿಷ್ಯ, ವಾಸ್ತು, ಪವಾಡಗಳ ಹೆಸರಿನಲ್ಲಿ ಮಾಧ್ಯಮಗಳ ಮೂಲಕ ಪುರೋಹಿತಶಾಹಿ ವ್ಯವಸ್ಥೆಯನ್ನು ಬಲಗೊಳಿಸುವ ಪ್ರಯತ್ನ ನಡೆಯುತ್ತಿದೆ. ಇದು ಆಧುನಿಕ ದೇಶದ ನಿರ್ಮಾಣಕ್ಕೆ ಬಹಳ ದೊಡ್ಡ ಅಡ್ಡಿಯಾಗಿದೆ.

ಇತ್ತೀಚಿಗೆ ಒಂದು ಟಿವಿ ವಾಹಿನಿಯ ಜ್ಯೋತಿಷ್ಯ ಸಲಹೆ ಕಾರ್ಯಕ್ರಮದಲ್ಲಿ ಒಬ್ಬ ರೈತರು ತಾವು ಎಷ್ಟೇ ಪ್ರಯತ್ನಪಟ್ಟು ಬೆಳೆ ಬೆಳೆದರೂ ಸೂಕ್ತ ಉತ್ಪನ್ನ ಬರುತ್ತಿಲ್ಲ ಎಂದು ಅದನ್ನು ಸರಿಪಡಿಸಲು ತನ್ನ ಜನ್ಮ ದಿನಾಂಕ ಹಾಗೂ ಹುಟ್ಟಿದ ವೇಳೆಯನ್ನು ತಿಳಿಸಿ ಸೂಕ್ತ ಸಲಹೆಯನ್ನು ಕೇಳಿದರು. ಅದಕ್ಕೆ ಪಂಡಿತರು ಎಂದು ಕರೆಯಲ್ಪಡುವ ಜ್ಯೋತಿಷಿಗಳು ನೀವು ಎಷ್ಟೇ ಪ್ರಯತ್ನ ಪಟ್ಟರೂ ಬೆಳೆ ಚೆನ್ನಾಗಿ ಬರದೆ ಇರಲು ನಿಮ್ಮಲ್ಲಿ ಇರುವ idiotic-brahmandaದೋಷ ಹಾಗೂ ದೇಶದ ಆಳುವವರ ದೋಷ ಎರಡೂ ಕಾರಣ. ಇದರಲ್ಲಿ ನಿಮ್ಮ ದೋಷವನ್ನು ಸರಿಪಡಿಸಲು ಭೂವರಾಹ ಪೂಜೆ ಮಾಡಿಸಿ ಎಂದು ಸಲಹೆ ಕೊಟ್ಟರು. ವಾಸ್ತವವಾಗಿ ಇಲ್ಲಿ ಪ್ರಶ್ನೆ ಕೇಳಿದ ರೈತನಿಗೆ ಅನುಭವೀ ಪ್ರಗತಿಪರ ಕೃಷಿಕರಿಗೆ ತನ್ನ ಭೂಮಿಯನ್ನು ತೋರಿಸಿ ಬೆಳೆ ಬರದೆ ಇರಲು ಇರಬಹುದಾದ ಕಾರಣಗಳನ್ನು ತಿಳಿದುಕೊಂಡು ಅವರಿಂದ ಸಲಹೆ ಪಡೆಯಲು ತಿಳಿಸುವುದು ಸೂಕ್ತವಾಗುತ್ತಿತ್ತು ಅಥವಾ ಮಣ್ಣು ಪರೀಕ್ಷೆ ಮಾಡಿಸಿ ಮಣ್ಣಿನಲ್ಲಿ ಇರುವ ಪೋಷಕಾಂಶಗಳ ಕೊರತೆಯನ್ನು ಸರಿಪಡಿಸಲು ಕೃಷಿ/ತೋಟಗಾರಿಕೆ ತಜ್ಞರಿಂದ ಮಾಹಿತಿ ಪಡೆಯಲು ತಿಳಿಸುವುದು ವೈಜ್ಞಾನಿಕ ಸಲಹೆಯಾಗುತ್ತಿತ್ತು. ಅಂಥ ಸಲಹೆ ಕೊಡದೆ ಭೂವರಾಹ ಪೂಜೆ ಮಾಡಿದರೆ ರೈತನ ಕೃಷಿ ವಿಧಾನದಲ್ಲಿರುವ ನ್ಯೂನತೆ ಅಥವಾ ಮಣ್ಣಿನಲ್ಲಿ ಇರುವ ಪೋಷಕಾಂಶಗಳ ಕೊರತೆ ನೀಗುತ್ತದೆಯೇ? ಇಂಥ ಸಲಹೆ ಕೊಡುವುದರಿಂದ ಪುರೋಹಿತಶಾಹಿಗಳ ವ್ಯಾಪಾರ ಹೆಚ್ಚಿ ಅವರಿಗೆ ಹೆಚ್ಚಿನ ಲಾಭ ಆಗಬಹುದೇ ಹೊರತು ಕೃಷಿಕನಿಗೆ ಮೂರು ಕಾಸಿನ ಪ್ರಯೋಜನವೂ ಆಗಲಿಕ್ಕಿಲ್ಲ ಬದಲಿಗೆ ಪೂಜೆ ಪುನಸ್ಕಾರ ಎಂದು ಹೆಚ್ಚಿನ ಹಣ ಕೈಬಿಡಬಹುದು ಅಷ್ಟೇ. ಮಾಧ್ಯಮಗಳು ಅಮಾಯಕ ಜನರಿಗೆ ಯಾವ ರೀತಿ ಜ್ಯೋತಿಷ್ಯದ ಹೆಸರಿನಲ್ಲಿ ಮೋಸ ಮಾಡುತ್ತಿವೆ ಎಂಬುದಕ್ಕೆ ಇದು ಒಂದು ಉದಾಹರಣೆ. ಟಿವಿ ಮಾಧ್ಯಮ ಇಂದು ಮೂಢ ನಂಬಿಕೆಗಳನ್ನು ಮಾರುವ ಜ್ಯೋತಿಷಿಗಳಿಗೆ, ವಾಸ್ತು ಹೆಸರಿನಲ್ಲಿ ವ್ಯಾಪಾರ ನಡೆಸಿ ಹಣ ದೋಚುವ ಕಪಟಿಗಳಿಗೆ ಮಧ್ಯವರ್ತಿಗಳಂತೆ ಕೆಲಸ ಮಾಡುತ್ತಿದ್ದು ಇದಕ್ಕೆ ಕಡಿವಾಣ ಹಾಕುವುದು ದೇಶದ ಹಿತದೃಷ್ಟಿಯಿಂದ ಅತೀ ಅಗತ್ಯವಾಗಿದೆ.

ಇತ್ತೀಚಿಗೆ ಮಾಜಿ ಪ್ರಧಾನಿ ಗೌಡರು ನಾನು ನಾಸ್ತಿಕರ ಬಗ್ಗೆ ಮಾತಾಡುವುದಿಲ್ಲ , ಅವರಿಗೆ ಹೇಳಿ ಪ್ರಯೋಜನ ಇಲ್ಲ ಎಂದು ನಾಸ್ತಿಕರು ಎಂದರೆ ಕೀಳು, ನಾಸ್ತಿಕತೆ ಎಂದರೆ ಅಪರಾಧ ಎಂಬ ಅರ್ಥವನ್ನು ಧ್ವನಿಸುವ ರೀತಿಯಲ್ಲಿ ಹೇಳಿದ್ದಾರೆ. ಗೌಡರ ಈ ಅಭಿಪ್ರಾಯ ಒಪ್ಪತಕ್ಕದ್ದಲ್ಲ. 12Fir16.qxpನಾಸ್ತಿಕರು ಅಪರಾಧಿಗಳೇನೂ ಅಲ್ಲ. ದೇವರನ್ನು ನಂಬದವರು ಕೀಳೇನೂ ಅಲ್ಲ. ದೇವರನ್ನು ನಂಬದೆ ವಾಸ್ತವವನ್ನು ಎದುರಿಸಿ ಬದುಕುವ ನಾಸ್ತಿಕರಾಗಲು ಹೆಚ್ಚಿನ ಮನೋಸ್ಥೈರ್ಯ ಬೇಕಾಗುತ್ತದೆ. ಹೀಗಾಗಿ ನಾಸ್ತಿಕರನ್ನು ಕೀಳಾಗಿ ಕಾಣುವುದು ಸಮಂಜಸವಲ್ಲ. ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಬೆಳೆಯಲು ವಾಸ್ತವವನ್ನು ಎದುರಿಸಿ ಯಾವುದೇ ನಂಬಿಕೆಗಳಿಗೆ ಜೋತು ಬೀಳದೆ ವೈಚಾರಿಕತೆಯಿಂದ ಸಮಸ್ಯೆಯನ್ನು ಎದುರಿಸುವ ನಾಸ್ತಿಕರ ಸಂಖ್ಯೆ ಬೆಳೆಸುವುದು ಅಗತ್ಯ ಕೂಡ ಹೌದು. ರಾಜ್ಯದಲ್ಲಿ ಮೂಢನಂಬಿಕೆಗಳನ್ನು ನಿಷೇಧಿಸುವ ಕಾನೂನು ತರುವ ಪ್ರಗತಿಪರ ಹೆಜ್ಜೆಗೆ ವಿರೋಧ ಪಕ್ಷಗಳು ಅನಗತ್ಯವಾಗಿ ಜನರನ್ನು ಕೆರಳಿಸುವ ರೀತಿಯಲ್ಲಿ ಹೇಳಿಕೆಗಳನ್ನು ಕೊಡುತ್ತಿರುವುದು ಸಮಂಜಸವಲ್ಲ. ಮೂಢನಂಬಿಕೆಗಳನ್ನು ನಿಷೇಧಿಸುವ ಕಾನೂನು ತಂದರೆ ಜನರ ನಂಬಿಕೆಗೆ ಯಾವ ರೀತಿಯಲ್ಲಿಯೂ ತೊಂದರೆ ಆಗಲಾರದು. ದೇವರನ್ನು ನಂಬಲು ಎಲ್ಲರೂ ಸ್ವತಂತ್ರರು. ನಂಬಿಕೆಗಳ ಹೆಸರಿನಲ್ಲಿ ಜ್ಯೋತಿಷ್ಯ, ವಾಸ್ತುವಿನಂಥ ಅವೈಚಾರಿಕ ಆಚರಣೆಗಳು ಮಾನವನನ್ನು ದುರ್ಬಲನನ್ನಾಗಿ ಮಾಡುತ್ತವೆ. ದೇವರನ್ನು ನಂಬಿ ಯಾವುದೇ ಕೆಲಸ ಮಾಡುವುದು ದುರ್ಬಲ ಮನಸ್ಸಿಗೆ ಧೈರ್ಯ ತುಂಬಲು ಧಾರಾಳ ಸಾಕಾಗಿರುವಾಗ ಜ್ಯೋತಿಷ್ಯ, ವಾಸ್ತುವಿನಂಥ ಅವೈಜ್ಞಾನಿಕ ಅಂಶಗಳನ್ನು ಟಿವಿ ಮಾಧ್ಯಮದಲ್ಲಿ ವೈಭವೀಕರಿಸಿ ಜನರನ್ನು ಅವುಗಳಿಗೆ ದಾಸರನ್ನಾಗಿ ಮಾಡುವುದು ದೇಶ ಹಿತದೃಷ್ಟಿಯಿಂದ ಮಾರಕ. ಹೀಗಾಗಿ ನೀಲಿ ಚಿತ್ರಗಳ ಪ್ರಸಾರವನ್ನು tv-mediaಯಾವ ರೀತಿಯಲ್ಲಿ ಟಿವಿ ಮಾಧ್ಯಮದಲ್ಲಿ ದೇಶದ ಹಿತದೃಷ್ಟಿಯಿಂದ ನಿಷೇಧಿಸಲಾಗಿದೆಯೋ ಅದೇ ರೀತಿ ಜ್ಯೋತಿಷ್ಯ, ವಾಸ್ತುವಿನಂಥ ದೌರ್ಬಲ್ಯ ಅಥವಾ ಗೀಳನ್ನು ಜನರಲ್ಲಿ ಬೆಳೆಸುವುದನ್ನು ತಡೆಯಲು ಟಿವಿ ಮಾಧ್ಯಮದಲ್ಲಿ ಜ್ಯೋತಿಷ್ಯ, ವಾಸ್ತು ಸಂಬಂಧಿ ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ಕಾನೂನಿನ ಮೂಲಕ ನಿಷೇಧಿಸಬೇಕಾದ ಅಗತ್ಯ ಇದೆ. ಇವುಗಳಲ್ಲಿ ಶ್ರದ್ಧೆ ಇರುವವರು ಖಾಸಗಿಯಾಗಿ ಹೋಗಿ ಸಂಬಂಧಪಟ್ಟ ಜ್ಯೋತಿಷಿಗಳನ್ನು ಕಂಡು ಮಾತಾಡಿದರೆ ಸಾಕು. ಇವುಗಳನ್ನು ಸಾರ್ವಜನಿಕವಾಗಿ ಟಿವಿ ಮಾಧ್ಯಮದಲ್ಲಿ ಬಿತ್ತರಿಸಿ ಅಮಾಯಕ ಜನರಲ್ಲಿ ಗೀಳನ್ನು ಬೆಳೆಸಬೇಕಾದ ಅಗತ್ಯವಿಲ್ಲ.

ನಾವು ಮಕ್ಕಳನ್ನು ಪ್ರೀತಿಸುತ್ತೇವೆಯೇ?


– ರೂಪ ಹಾಸನ


 

ನಾವು ನಮ್ಮ ಮಕ್ಕಳನ್ನು ಪ್ರೀತಿಸುತ್ತೇವೆಯೇ? ಇದು ನಾವೆಲ್ಲರೂ ನಮ್ಮ ಒಳ ಮನಸುಗಳನ್ನು ಕೇಳಿಕೊಳ್ಳಬೇಕಾದ ಪ್ರಶ್ನೆ. ಬಹುಶಃ “ಹೌದು” ಎಂಬುದು ಬಹುತೇಕರ ಉತ್ತರ. ಆದರೆ ನಮ್ಮ ಸಮಾಜದಲ್ಲಿ ಅತಿ ಹೆಚ್ಚಿನ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿರುವವರು ಮಕ್ಕಳು. ಅವರನ್ನೂ ನಾವು ವ್ಯಕ್ತಿಗಳೆಂದು ಗುರುತಿಸಿಯೇ ಇಲ್ಲವಾದ್ದರಿಂದ ಅವರೆಡೆಗೆ ಗಮನ ಕೊಟ್ಟಿದ್ದೂ ಯಾವತ್ತೂ ಕಡಿಮೆಯೇ. ಹಾಗಿದ್ದರೆ ಮಕ್ಕಳೆಡೆಗಿನ ಪ್ರೀತಿ ಎಂದರೇನು? ಎಂಬುದು ಇನ್ನೊಂದು ಪ್ರಶ್ನೆ. ಮಕ್ಕಳು ಕೇಳಿದ್ದನ್ನು ಕೊಡಿಸುತ್ತೇವೆ. ಹೆಚ್ಚಿನ ಡೊನೇಶನ್ ಕೊಟ್ಟು, ಹೆಚ್ಚು ಫೀಸ್ ಕಟ್ಟಿ, ಒಳ್ಳೆಯ ಕಿಂಡರ್‌ಗಾರ್ಟನ್-ಡೇ ಕೇರ್ ಸೆಂಟರ್‌ಗೆ ಸೇರಿಸಿದ್ದೇವೆ. ಉಂಡುಡಲು ಯಾವ ಕೊರತೆಯೂ ಇಲ್ಲ. ಅದಕ್ಕಾಗಿಯೇ ಗಂಡ ಹೆಂಡತಿ ಇಬ್ಬರೂ ಹಗಲಿರುಳೂ ದುಡಿಯುತ್ತೇವೆ……..ಹೀಗೆ ಪೋಷಕರಿಂದ ವಿವರಣೆಗಳು ಮುಂದುವರೆಯುತ್ತದೆ.

ಪ್ರೀತಿಯನ್ನು ನಾವಿಂದು ಹಣದ ಮೌಲ್ಯದಲ್ಲಿ ಅಳೆಯಲು ಪ್ರಾರಂಭಿಸಿಬಿಟ್ಟಿದ್ದೇವೆ! Streetchildrenಮಕ್ಕಳ ಬೇಕು-ಬೇಡ, ಇಷ್ಟಾನಿಷ್ಟಗಳನ್ನು ಗುರುತಿಸಲು, ಅವರಿಗೆ ಅವಶ್ಯಕವಾಗಿ ನೀಡಬೇಕಾದಂತಾ ಗಂಭೀರ ಲಕ್ಷ್ಯ, ಪೋಷಣೆ ಹಾಗೂ ಕಾಳಜಿಗಾಗಿ ಕನಿಷ್ಠ 0-6 ವರ್ಷಗಳ ಮಕ್ಕಳೊಂದಿಗಾದರೂ ನಿಗದಿತ ಗುಣಾತ್ಮಕ ಸಮಯವನ್ನು ಕಳೆಯುವುದು ಮುಖ್ಯ ಎಂಬುದನ್ನೂ ನಾವಿಂದು ಮರೆತೇ ಬಿಟ್ಟಿದ್ದೇವೆ. ಅಥವಾ ಅದಕ್ಕೆಲ್ಲಾ ನಮಗೆ ಸಮಯವೇ ಇಲ್ಲ! ಬದಲಿಗೆ ಅದನ್ನು ವಸ್ತು ಆಧಾರಿತವಾದ ಸುಖಸಾಧನದಿಂದ ಅಳೆದು ಹೆಮ್ಮೆ ಪಟ್ಟುಕೊಳ್ಳುತ್ತಿದ್ದೇವೆ. ಆದರೆ ಮಕ್ಕಳಿಗೆ ನಿಜಕ್ಕೂ ನಮ್ಮಿಂದ ಬೇಕಾಗಿರುವುದೇನು? ಇದು ಪೋಷಕರು, ಸಮಾಜ, ಸರ್ಕಾರ ತಮ್ಮನ್ನು ಕೇಳಿಕೊಳ್ಳಬೇಕಾದ ಪ್ರಶ್ನೆ.

ಅಪ್ಪ ಅಮ್ಮ ಇಬ್ಬರೂ ಕೆಲಸಕ್ಕೆ ಹೋಗಿ ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳುವವರು ಯಾರೂ ಇಲ್ಲವಾಗುತ್ತಿರುವ ಇಂದಿನ ಆಧುನಿಕ ಯುಗದಲ್ಲಿ ಇಂತಹ ಎಳೆಯ ಕಂದಮ್ಮಗಳಿಂದ ಹಿಡಿದು 5-6 ವರ್ಷಗಳವರೆಗಿನ ಮಕ್ಕಳನ್ನು ನೋಡಿಕೊಳ್ಳಲು ನಗರ ಪ್ರದೇಶಗಳಲ್ಲೆಲ್ಲಾ ಕ್ರಷ್, ಡೇ ಕೇರ್ ಸೆಂಟರ್‌ನಂತಹ ಮಕ್ಕಳ ಪಾಲನಾ ಕೇಂದ್ರಗಳು ಹುಟ್ಟಿಕೊಂಡಿವೆ. ಬಹಳಷ್ಟು ಕೇಂದ್ರಗಳು ಶ್ರದ್ಧೆ, ಕಾಳಜಿಯಿಂದಲೇ ಕಾರ್ಯ ನಿರ್ವಹಿಸುತ್ತವೆ ಕೂಡ. ಆದರೆ ಇಂತಹ ಪಾಲನ ಕೇಂದ್ರಗಳನ್ನು ಸರ್ಕಾರದಿಂದ ದಾಖಲಿಸುವ, ಕನಿಷ್ಟ ಅವಶ್ಯಕ ನಿಯಾಮಾವಳಿಗಳನ್ನು ಅವುಗಳಿಗೆ ರೂಪಿಸುವ ಕೆಲಸ ಸರ್ಕಾರದಿಂದ ಆಗಿಲ್ಲ. ಅತ್ಯಂತ ಚಿಕ್ಕ ಕೊಠಡಿಗಳಲ್ಲಿ, ಮಕ್ಕಳನ್ನು ನೋಡಿಕೊಳ್ಳಲು ಬೇಕಾದ ತಕ್ಕಷ್ಟು ಆಯಾಗಳಾಗಲಿ, ಅವರಿಗೆ ಕನಿಷ್ಠ ನಿಗದಿತ ತರಬೇತಿಯಾಗಲಿ, ಆಟಿಕೆಗಳಾಗಲಿ, ಶೌಚಾಲಯ, ಸ್ವಚ್ಛ ಹಾಸಿಗೆ ಹೊದಿಕೆ, ಶುದ್ಧ ಕುಡಿಯುವ ನೀರು, ಆಟದ ಬಯಲು ಇನ್ನಿತರ ಮೂಲಭೂತ ಸೌಕರ್ಯಗಳೂ ಇಲ್ಲದಂತಹ ಪಾಲನಾ ಸಂಸ್ಥೆಗಳ ಸಂಖ್ಯೆ ಇಂದು ಹೆಚ್ಚುತ್ತಿವೆ. ಸ್ವಚ್ಛಂದವಾಗಿ ಆಡಿ ನಲಿಯ ಬೇಕಾಗಿದ್ದ ಮಕ್ಕಳು ಉಸಿರುಗಟ್ಟಿಸುವ ವಾತಾವರಣದಲ್ಲಿ, ಪರಿಪೂರ್ಣವಾಗಿ ವಿಕಸಿತಗೊಳ್ಳದೆ ನಲುಗಿ ಹೋಗುತ್ತಿರುವಾಗ ಇದಕ್ಕಾಗಿ ಯಾರನ್ನು ದೂರುವುದು? ಮಕ್ಕಳ ಸಹಜ ಬಾಲ್ಯವನ್ನು ಕಸಿಯುತ್ತಿರುವ ಅಪರಾಧಿಗಳು ಯಾರು? ಯಾರನ್ನಿಲ್ಲಿ ಶಿಕ್ಷಿಸುವುದು?

ಮಧ್ಯಮ ವರ್ಗದವರ ಮಕ್ಕಳನ್ನು ನೋಡಿಕೊಳ್ಳಲು ನಗರ ಪ್ರದೇಶದಲ್ಲಿ ಇಂತಹ ವ್ಯವಸ್ಥೆಗಳಾದರೂ ಇವೆ. child-labourಆದರೆ ಗ್ರಾಮೀಣ ಪ್ರದೇಶಗಳ ಕೆಳ ಮಧ್ಯಮ ಹಾಗೂ ಬಡ ಕುಟುಂಬಗಳಲ್ಲಿ ದಂಪತಿಗಳಿಬ್ಬರೂ ಹೊರಗೆ ಹೋಗಿ ದುಡಿಯುತ್ತಿರುವ ಸಂದರ್ಭಗಳಲ್ಲಿ, ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳುವವರು ಯಾರೂ ಇಲ್ಲದಾಗ ಮಕ್ಕಳು ತೀವ್ರ ನಿರ್ಲಕ್ಷ್ಯಕ್ಕೆ ಗುರಿಯಾಗುತ್ತಿದ್ದಾರೆ. ಹೆಚ್ಚಿನ ಕೆಲಸದ ಕೇಂದ್ರಗಳಲ್ಲಿ ಮಕ್ಕಳನ್ನೂ ಪಾಲಕರು ತಮ್ಮೊಂದಿಗೆ ಕರೆತರುವುದನ್ನು ಒಪ್ಪುವುದಿಲ್ಲ. ಅಕ್ಕಪಕ್ಕದ ಮನೆಗಳಲ್ಲಿಯೋ ಸ್ವಲ್ಪ ದೊಡ್ಡವಾಗಿದ್ದರೆ ತಮ್ಮದೇ ಮನೆಗಳಲ್ಲಿಯೋ ಬಿಟ್ಟು ಹೋಗಬೇಕಾದಂತಹ ಪರಿಸ್ಥಿತಿ ಇದೆ. ಇಂತಹ ಸಂದರ್ಭಗಳಲ್ಲಿ ಮಕ್ಕಳು ಅನೇಕ ರೀತಿಯ ಅನಾರೋಗ್ಯಕ್ಕೆ, ಅಪಾಯಗಳಿಗೆ, ಸಂಕಷ್ಟಗಳಿಗೆ ಸಿಕ್ಕಿ ಹಾಕಿಕೊಳ್ಳುತ್ತಿದ್ದಾರೆ. ಮಕ್ಕಳ ನಾಪತ್ತೆ ಪ್ರಕರಣಗಳು ದಾಖಲಾಗುತ್ತಿರುವುದು ಇಂತಹ ಕುಟುಂಬಗಳಲ್ಲಿಯೇ ಹೆಚ್ಚಾಗಿದೆ ಎಂಬುದನ್ನು ಗಮನಿಸಬೇಕು. ಹೆಚ್ಚು ಮಕ್ಕಳ ಕಾರಣಕ್ಕೋ, ಹೆಣ್ಣು ಎಂಬ ಕಾರಣಕ್ಕೋ ಮಕ್ಕಳೆಡೆಗೆ ನಿಷ್ಕಾಳಜಿ ಹಾಗೂ ಗಂಡು ಹೆಣ್ಣು ಮಕ್ಕಳ ನಡುವೆ ತಾರತಮ್ಯ ಅತ್ಯಂತ ಸಹಜವಾಗಿ ನಡೆಯುತ್ತಿದೆ. ಇಲ್ಲೆಲ್ಲಾ ಮಕ್ಕಳ ಹಕ್ಕು ಎಂಬ ಪರಿಕಲ್ಪನೆಯೇ ಅಪಹಾಸ್ಯಕ್ಕಿಡಾಗುತ್ತಿರುವುದನ್ನು ಸಂಕಟದಿಂದ ನೋಡಬೇಕಾಗಿದೆಯಷ್ಟೇ.

“ವಿಶ್ವದಲ್ಲೇ ಅತಿ ಹೆಚ್ಚು ಮಕ್ಕಳನ್ನು ಹೊಂದಿರುವ ದೇಶ ಭಾರತ. ಭಾರತದ ಸಂವಿಧಾನವು ದೇಶದ ಎಲ್ಲಾ ಮಕ್ಕಳಿಗೂ ಮೂಲಭೂತ ಹಕ್ಕುಗಳನ್ನು ಖಾತ್ರಿಗೊಳಿಸಿದೆ ಮತ್ತು ಸರ್ಕಾರವು ವಿಶೇಷ ಯೋಜನೆಗಳನ್ನು ರೂಪಿಸುವುದನ್ನು ಉತ್ತೇಜಿಸುತ್ತದೆ. Street_Child,_Srimangal_Railway_Stationಸಂವಿಧಾನದ ರಾಜ್ಯ ನಿರ್ದೇಶಕ ತತ್ವಗಳು ವಿಶೇಷವಾಗಿ ಮಕ್ಕಳ ಬಾಲ್ಯತನವನ್ನು ದುರುಪಯೋಗದಿಂದ ರಕ್ಷಿಸಲು ಮತ್ತು ಮಕ್ಕಳು ಸ್ವತಂತ್ರವಾಗಿ ಮತ್ತು ಗೌರವಯುತವಾದ ಆರೋಗ್ಯಕರವಾದ ವಾತಾವರಣದಲ್ಲಿ ಅಭಿವೃದ್ಧಿ ಹೊಂದಲು ಅವರಿಗೆ ಅವಕಾಶಗಳನ್ನು ಮತ್ತು ಸೌಲಭ್ಯಗಳನ್ನು ಖಾತ್ರಿಪಡಿಸುವುದನ್ನು ಸೂಚಿಸುತ್ತದೆ. ಮಕ್ಕಳ ಬಾಲ್ಯ ಶೋಷಣೆಗೆ ಗುರಿಯಾಗದಂತೆ ಮತ್ತು ಅವರು ನೈತಿಕವಾಗಿ ಮತ್ತು ಐಹಿಕವಾಗಿ/ಪ್ರಾಪಂಚಿಕವಾಗಿ ಪಡೆಯಲೇ ಬೇಕಾದ ಸೌಲಭ್ಯಗಳಿಂದ ವಂಚಿತರಾಗದಂತೆ ರಕ್ಷಿಸಬೇಕು………

“ಮಕ್ಕಳು ದೇಶದ ‘ಅತ್ಯಂತ ಪ್ರಮುಖ ಆಸ್ತಿ’ ಎಂದು ರಾಷ್ಟ್ರೀಯ ಮಕ್ಕಳ ನೀತಿ 1974 ರಲ್ಲಿ ಘೋಷಿಸಿರುವ ಭಾರತ ಸರ್ಕಾರವು ತನ್ನ ಮಕ್ಕಳ ಹಕ್ಕುಗಳನ್ನು ರಕ್ಷಿಸುವ ಬದ್ಧತೆಯನ್ನು ಅಂತಾರಾಷ್ಟ್ರೀಯ ಒಡಂಬಡಿಕೆಗಳು ಮತ್ತು ಒಪ್ಪಂದಗಳಿಗೆ ಒಪ್ಪುವ ಮೂಲಕ ಪುನರುಚ್ಚರಿಸಿದೆ. ಇವುಗಳಲ್ಲಿ ಮಕ್ಕಳ ಹಕ್ಕುಗಳ ಘೋಷಣೆ, ಸಾರ್ವತ್ರಿಕ ಮಾನವ ಹಕ್ಕುಗಳ ಘೋಷಣೆ ಮತ್ತು ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಗಳು ಸೇರಿವೆ. ಬಹಳ ಪ್ರಮುಖವಾಗಿ ಈ ಸಮಾಜವು ಕೊಡಮಾಡುವ ಎಲ್ಲ ರೀತಿಯ ಕೌಶಲ್ಯಗಳು, ಪ್ರೋತ್ಸಾಹ ಮತ್ತು ಪ್ರಚೋದನೆಯನ್ನು ಬಳಸಿಕೊಂಡು ಮಕ್ಕಳೆಲ್ಲರೂ ದೈಹಿಕವಾಗಿ ಮಾನಸಿಕವಾಗಿ ಚುರುಕಾಗಿರಬೇಕು, ನೈತಿಕವಾಗಿ ಆರೋಗ್ಯಕರವಾಗಿ ಸದೃಢ ನಾಗರೀಕರಾಗಿ ಬೆಳೆಯಬೇಕು. ಆ ಮೂಲಕ ಮಕ್ಕಳ ಮಾನವ ಸಂಪನ್ಮೂಲದ ಅಭಿವೃದ್ಧಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಗುರುತಿಸಿದೆ. ಬೆಳೆಯುತ್ತಿರುವ/ವಿಕಾಸ ಹೊಂದುತ್ತಿರುವ ಎಲ್ಲ ಮಕ್ಕಳಿಗೆ ಸಮಾನ ಅವಕಾಶಗಳನ್ನು ಕಲ್ಪಿಸುವುದರತ್ತಲೂ ರಾಷ್ಟ್ರೀಯ ಮಕ್ಕಳ ನೀತಿ ಒತ್ತು ನೀಡುತ್ತದೆ.”

– ಇದು ರಾಷ್ಟ್ರೀಯ ಮಕ್ಕಳ ನೀತಿ 2013 ರ ಘೋಷ ವಾಕ್ಯ! ಕೇಳಲು ಎಷ್ಟು ಸುಂದರವಾಗಿದೆಯಲ್ಲವೇ? ನಮ್ಮ ದೇಶದ ಮಕ್ಕಳೆಲ್ಲರೂ ನಿಜಕ್ಕೂ ಇಂತಹ ಅಪೂರ್ವ ಅವಕಾಶಗಳನ್ನು ಪಡೆದು ತಮ್ಮ ಬಾಲ್ಯವನ್ನು ಮುಕ್ತವಾಗಿ ಅನುಭವಿಸುವಂತಾದರೆ……… ಏನು ಮಾಡುವುದು? ನಮ್ಮ ದೇಶದ ಸಾಮಾಜಿಕ ಸಂದರ್ಭದಲ್ಲಿ ಕನಿಷ್ಠ ಅಂತಹ ದುಬಾರಿ ಕನಸು ಕೂಡ ಬೀಳುವುದಿಲ್ಲವಲ್ಲ! ಇನ್ನು ಮಕ್ಕಳ ದಿನಾಚರಣೆಯನ್ನು ಆಚರಿಸುವ ಸಂಭ್ರಮವನ್ನು ಎಲ್ಲಿಂದ ಕಡ ತರುವುದು?

ನಮ್ಮ ದೇಶದಲ್ಲಿ ಕಳೆದ ಒಂದೆರಡು ದಶಕದಲ್ಲಿ ಮಕ್ಕಳ ಶಿಕ್ಷಣ, ಆರೋಗ್ಯ, ಮತ್ತು ಪೌಷ್ಟಿಕತೆ ವಿಚಾರದಲ್ಲಿ ಸಾಕಷ್ಟು ಸುಧಾರಣೆಯಾಗಿದ್ದರೂ ಮಧ್ಯಮ ಆದಾಯವಿರುವ ದೇಶಗಳಿಗೆ ಹೋಲಿಸಿದರೆ ಬಾರತದಲ್ಲಿ ಮಕ್ಕಳ ಪೋಷಣೆ ಅಷ್ಟೊಂದು ತೃಪ್ತಿಕರವಾಗಿಲ್ಲ. ಮಕ್ಕಳ ಪೋಷಣೆ ವಿಚಾರದಲ್ಲಿ 1995 ರವರೆಗೆ ಭಾರತ ವಿಶ್ವದಲ್ಲಿಯೇ 12ನೇ ಸ್ಥಾನದಲ್ಲಿ ಇತ್ತು. ನಂತರದ ಇತ್ತೀಚೆಗಿನ ವರ್ಷಗಳಲ್ಲಿ ಅದು 112ನೇ ಸ್ಥಾನಕ್ಕೆ ಇಳಿದಿದೆ ಎಂದು ಮಕ್ಕಳ ಹಕ್ಕುಗಳ ಬಗ್ಗೆ ಕಾರ್ಯ ನಿರ್ವಹಿಸುತ್ತಿರುವ “ಸೇವ್ ದಿ ಚೈಲ್ಡ್” ಅಂತರಾಷ್ಟ್ರೀಯ ಸ್ವಯಂಸೇವಾ ಸಂಸ್ಥೆಯು ಬಿಡುಗಡೆ ಮಾಡಿರುವ ವರದಿ ತಿಳಿಸುತ್ತದೆ.

ಶಿಕ್ಷಣ, ಆರೋಗ್ಯ, ಮತ್ತು ಪೌಷ್ಟಿಕಾಂಶಗಳನ್ನು ಮಾನದಂಡವಾಗಿ ಇಟ್ಟುಕೊಂಡು ಎಲ್ಲ ರಾಷ್ಟ್ರಗಳಲ್ಲಿ ಮಕ್ಕಳ ಪೋಷಣೆಯ ಗುಣಮಟ್ಟವನ್ನು ಸಮೀಕ್ಷೆ ಮಾಡಲಾಗಿದೆ. ಭಾರತದಲ್ಲಿ ಆರ್ಥಿಕಾಭಿವೃದ್ಧಿಯ ಸಾಧನೆಯಾಗಿದ್ದರೂ ಈ ಪ್ರಗತಿ ಬಡವರು ಮತ್ತು ಕಡುಬಡವರಿಗೆ ತಲುಪದೇ ಈ ವರ್ಗದ ಮಕ್ಕಳ ಅಭಿವೃದ್ಧಿಯಾಗಿಲ್ಲ ಎಂದು ಸಂಸ್ಥೆಯ ವರದಿ ತಿಳಿಸುತ್ತದೆ. ಮಕ್ಕಳನ್ನು ಉತ್ತಮವಾಗಿ ಪೋಷಣೆ ಮಾಡುವ ವಿಚಾರದಲ್ಲಿ ಜಪಾನ್ ವಿಶ್ವದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಸ್ಪೇನ್, ಜರ್ಮನಿ, ಇಟಲಿ, ಫ್ರಾನ್ಸ್, ಕೆನಡಾ, ಸ್ವಿಟ್ಜರ್‌ಲ್ಯಾಂಡ್, ಬ್ರಿಟನ್,ಮತ್ತು ನಾರ್ವೆ ದೇಶಗಳಿವೆ.

ಭಾರತದಲ್ಲಿ ಅದೇ ಮೊದಲ ಬಾರಿಗೆ ಜಾರಿಯಾದ 1974 ರ ಮಕ್ಕಳ ರಾಷ್ಟ್ರೀಯ ನೀತಿ, ಮಕ್ಕಳನ್ನೂ ವ್ಯಕ್ತಿಗಳೆಂದು ಗಣಿಸಿದ್ದಕ್ಕೊಂದು ಉದಾಹರಣೆ. ಅಲ್ಲಿಂದ ಮುಂದೆ 1986 ರ ರಾಷ್ಟ್ರೀಯ ಶಿಕ್ಷಣ ನೀತಿ, 1993 ರ ರಾಷ್ಟ್ರೀಯ ಪೌಷ್ಟಿಕಾಂಶ ನೀತಿ, 2000 ದ ರಾಷ್ಟ್ರೀಯ ಜನಸಂಖ್ಯಾ ನೀತಿ, 2003 ರ ರಾಷ್ಟ್ರೀಯ ಮಕ್ಕಳ ಶಾಸನಾಧಿಕಾರ, 2005 ರ ರಾಷ್ಟ್ರೀಯ ಮಕ್ಕಳ ಕಾರ್ಯಯೋಜನೆ, ಮತ್ತೆ ಇತ್ತೀಚೆಗಿನ 2013 ರ ರಾಷ್ಟ್ರೀಯ ಮಕ್ಕಳ ನೀತಿ……. ಎಲ್ಲವೂ ಮಕ್ಕಳ ವಿವಿಧ ರೋಗನಿರೋಧಕ ಲಸಿಕೆಯನ್ನು ಕಡ್ಡಾಯವಾಗಿ 100 ಶೇಕಡಾ ಹಾಕಿಸಬೇಕೆಂದು, ಜನನ-ಮರಣ-ವಿವಾಹ ನೋಂದಣಿ, ಗರ್ಭಿಣಿ ಹಾಗು ಮಗುವಿನ ಸುರಕ್ಷತೆ, ಮಕ್ಕಳ ಶಿಕ್ಷಣ, ಹೆಣ್ಣುಭ್ರೂಣಹತ್ಯೆಯ ಸಂಪೂರ್ಣ ನಿಷೇಧ, ಹೆಣ್ಣುಮಗುವಿನ ಮರಣ ಪ್ರಮಾಣ ಕಡಿಮೆ ಮಾಡುವುದು, ಬಾಲ್ಯವಿವಾಹ ನಿಷೇಧ, ಎಲ್ಲ ರೀತಿಯ ದೌರ್ಜನ್ಯ ನಿಷೇಧ, ಆರೈಕೆ, ಪೋಷಣೆ ಮತ್ತು ರಕ್ಷಣೆ ಬಗ್ಗೆ ಮಕ್ಕಳ ಮೂಲಭೂತ ಅವಶ್ಯಕತೆ ಪೂರೈಸಲು ಸಂವಿಧಾನಾತ್ಮಕ ಹಕ್ಕುಗಳನ್ನಾಧರಿಸಿ ರೂಪಿಸಲಾಗಿದೆ. ಇದರಲ್ಲಿ ಸಾಮುದಾಯಿಕವಾದ ಮಕ್ಕಳೆಲ್ಲರ ಜೊತೆಗೆ ಬಡತನರೇಖೆಗಿಂತಾ ಕೆಳಗಿರುವ ಮಕ್ಕಳು, ಬೀದಿಮಕ್ಕಳು, ಹೆಣ್ಣುಮಕ್ಕಳು, ಅಂಗವಿಕಲ ಮಕ್ಕಳು, ಗುಡ್ಡಗಾಡಿನ ಮಕ್ಕಳು, ತಳಸಮುದಾಯದ ಮಕ್ಕಳ ಕುರಿತು ವಿಶೇಷ ಯೋಜನೆಗಳನ್ನು ರೂಪಿಸಲಾಗಿದೆ. ಆದರೆ……

ಇಲ್ಲಿ ದಿನದಿಂದ ದಿನಕ್ಕೆ ಮಕ್ಕಳ ಬದುಕು ಅಪಾಯಕಾರಿಯಾಗುತ್ತಾ ಸಾಗಿದೆ. ಜನ್ಮ ನೀಡುವ ತಾಯಿ ಹಾಗೂ ನವಜಾತ ಶಿಶು ಇಬ್ಬರ ಪಾಲಿಗೂ ಭಾರತ ಜಗತ್ತಿನಲ್ಲೇ ಅತ್ಯಂತ ಅಪಾಯಕಾರಿ ರಾಷ್ಟ್ರವಾಗಿದೆ. ಭಾರತದಲ್ಲಿ ಹುಟ್ಟುವ ಪ್ರತಿ ಮೂರರಲ್ಲಿ ಒಂದು ಮಗು ಹುಟ್ಟಿದ ದಿನದಂದೇ ಅಸುನೀಗುತ್ತದೆಂದರೆ, ಈ ದೇಶದಲ್ಲಿ ಮಕ್ಕಳು ಸುಪುಷ್ಟರಾಗಿ, ಆರೋಗ್ಯವಾಗಿದ್ದಾರೆಂದು ಹೇಳಲು ಸಾಧ್ಯವೇ? ನಮ್ಮ ರಾಷ್ಟ್ರದಲ್ಲಿ ಪ್ರತಿ ವರ್ಷ 3,09,000 ಶಿಶುಗಳು ಹುಟ್ಟಿದ ದಿನದಂದೇ ಸಾವಿಗೀಡಾಗುತ್ತಿವೆ. ಹುಟ್ಟಿದ ದಿನದಂದೇ ಶಿಶುಗಳು ಅತ್ಯಧಿಕವಾಗಿ ಸಾವನ್ನಪ್ಪುವ 10 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ ಎಂದರೆ ಮಕ್ಕಳ ಪಾಲಿಗೆ ಇದಕ್ಕಿಂಥಾ ನಿಷ್ಕಾಳಜಿಯ ವಿಷಯ ಇನ್ಯಾವುದಿದೆ? ಹಾಗಾದರೆ ನಮ್ಮ ಮಕ್ಕಳ ಪರವಾದ ನೀತಿ, ಕಾಯ್ದೆ, ಕಾರ್ಯಕ್ರಮ, ಯೋಜನೆಗಳು, ಅದರ ಅನುಷ್ಠಾನಕ್ಕಿರುವ ವಿವಿಧ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸಚಿವಾಲಯ, ಇಲಾಖೆಗಳು, ಸಮಿತಿಗಳು, ಆಯೋಗಗಳು ಏನು ಮಾಡುತ್ತಿವೆ? ವರ್ಷಕ್ಕೆ ಕೋಟ್ಯಾಂತರ ರೂಪಾಯಿಗಳನ್ನು ಮಕ್ಕಳ ರಕ್ಷಣೆ, ಪೋಷಣೆಗಾಗಿಯೇ ವ್ಯಯಿಸುತ್ತಿದ್ದರೂ ನಿರೀಕ್ಷಿತ ಫಲ ಇನ್ನೂ ಕಾಣಲಾಗಿಲ್ಲವೆಂದರೆ ಇದಕ್ಕಿಂತಾ ದುರಂತ ಬೇರೇನಿದೆ?

ಭಾರತದಲ್ಲಿ 0-6 ವರ್ಷದವರೆಗಿನ ಮಕ್ಕಳ ಪ್ರಮಾಣ 2001 ರಲ್ಲಿ ಒಟ್ಟು ಜನಸಂಖ್ಯೆಯ ಶೇಕಡಾ 15.9 ರಷ್ಟಿದ್ದುದು ಈಗ 2011 ರ ಜನಗಣತಿಯ ಪ್ರಕಾರ ಅದು ಶೇಕಡಾ 13.1 ಕ್ಕೆ ಕುಸಿದಿದೆ. ಅಂದರೆ ಮಕ್ಕಳ ಜನನ ಪ್ರಮಾಣದಲ್ಲಿ ಈ ಹತ್ತು ವರ್ಷಗಳಲ್ಲಿ ತೀವ್ರ ಕುಸಿತ ಉಂಟಾಗಿದೆ. ಒಳ್ಳೆಯದೇ ಆಯ್ತು. ಕುಟುಂಬ ಯೋಜನೆಯ ಪ್ರತಿಫಲವಿರಬಹುದು ಎಂದು ಬೀಗುವಂತೆಯೂ ಇಲ್ಲ! ಈ ಸಮಸ್ಯೆ ಮೇಲ್ನೋಟಕ್ಕೆ ಕಾಣುವಷ್ಟು ಸರಳವಾಗಿದ್ದರೆ ಪರವಾಗಿಲ್ಲ. ಆದರೆ ವಸ್ತುಸ್ಥಿತಿ ಅತ್ಯಂತ ಭೀಕರವಾಗಿದೆ.

ಕೇಂದ್ರ ಸರ್ಕಾರ ರೂಪಿಸಿರುವ ಭ್ರೂಣಲಿಂಗ ಪತ್ತೆ ಮಾಡುವ ತಂತ್ರ-1994 [ದುರ್ಬಳಕೆ ಮತ್ತು ತಡೆ] ಕಾಯ್ದೆ ಜಾರಿಯಲ್ಲಿದ್ದರೂ ಕಟ್ಟುನಿಟ್ಟಾಗಿ ಅನುಷ್ಠಾನಗೊಂಡಿಲ್ಲವಾದ ಕಾರಣ ಅಪರಾಧ ಎಸಗಿದ ವೈದ್ಯರು ಶಿಕ್ಷೆಗೊಳಗಾಗುವುದು ಅಪರೂಪ. ಹೀಗಾಗಿ ಗಂಡು ಮತ್ತು ಹೆಣ್ಣು ಮಕ್ಕಳಲ್ಲಿ ಲಿಂಗ ಅನುಪಾತ ಅಸಮತೋಲನ ಮಿತಿಮೀರುತ್ತಿರುವುದು ಆತಂಕಕಾರಿಯಾದ ಬೆಳವಣಿಗೆಯಾಗಿದೆ. ಕಳೆದೊಂದು ದಶಕದಲ್ಲಿ ನಡೆದ ವೈದ್ಯಕೀಯ ಕ್ಷೇತ್ರದ ಕ್ಷಿಪ್ರ ಬೆಳವಣಿಗೆ, ಅಲ್ಟ್ರಾಸೌಂಡ್ ಸ್ಕ್ಯಾಂನಿಂಗ್ ಸೇರಿ ಇತರೆ ಆಧುನಿಕ ಪರಿಕ್ಷಾ ವಿಧಾನಗಳಿಂದ ಭ್ರೂಣಲಿಂಗ ಪತ್ತೆ ಅಥವಾ ಆಯ್ಕೆ ಚಟುವಟಿಕೆ ಸದ್ದಿಲ್ಲದೇ ನಡೆಯುತ್ತಿದೆ. ಇದರ ಪರಿಣಾಮವಾಗಿ ಹೆಣ್ಣುಶಿಶುಗಳು ಗರ್ಭದಲ್ಲೇ ನಿಷ್ಕರುಣೆಯಿಂದ ಹತ್ಯೆಗೀಡಾಗುತ್ತಿವೆ. ಇದರಿಂದ ಗಂಡು ಮಕ್ಕಳ ಜನನ ಪ್ರಮಾಣಕ್ಕೆ ಹೋಲಿಸಿದರೆ ಹೆಣ್ಣುಮಕ್ಕಳ ಜನನ ಪ್ರಮಾಣ ಗಣನೀಯವಾಗಿ ಇಳಿಮುಖವಾಗುತ್ತಿದೆ. ಕಟುಕರು ಯಾರು? ಎಂದರೆ ನಾವಲ್ಲ ಎಂಬ ಉತ್ತರ ಎಲ್ಲರಿಂದಲೂ ಬರುತ್ತದೆ. ಹಾಗಾದರೆ ಹೆಣ್ಣುಮಕ್ಕಳೇಕೆ ಮತ್ತು ಹೇಗೆ ಗರ್ಭದಲ್ಲೇ ಕರಗಿ ಹೋಗುತ್ತಿದ್ದಾರೆ?

ಪ್ರತಿ 1000 ಗಂಡುಮಕ್ಕಳಿಗೆ ನಮ್ಮ ರಾಜ್ಯದಲ್ಲಿ 1991 ರಲ್ಲಿ 960 ಹೆಣ್ಣುಮಕ್ಕಳಿದ್ದುದು, 2001 ರಲ್ಲಿ 946 ಕ್ಕೆ ಕುಸಿದಿದೆ. 2011 ರಲ್ಲಿ 943 ಆಗಿದೆ! ಹಾಗೇ ದೇಶದಲ್ಲಿ ಈ ಅನುಪಾತ 1991 ರಲ್ಲಿ 945 ಇದ್ದುದು 2001 ರಲ್ಲಿ 927 ಕ್ಕೆ ಇಳಿದು 2011 ರಲ್ಲಿ 914 ಕ್ಕೆ ಕುಸಿದಿದೆ. ಹೆಣ್ಣುಮಕ್ಕಳ ಪ್ರಮಾಣ ಹೀಗೇ ಕುಸಿಯುತ್ತಾ ಹೋದರೆ ಸಮಾಜದಲ್ಲಿ ಸಮತೋಲನ ಬರಲು ಹೇಗೆ ಸಾಧ್ಯ? ಹೆಣ್ಣು ಮಕ್ಕಳ ಸಂಖ್ಯೆ ಕುಸಿಯುತ್ತಿರುವುದು ಕುಟುಂಬ ಯೋಜನೆಯಿಂದಲ್ಲ ಬದಲಿಗೆ ಸಮಾಜದ ಕ್ರೌರ್ಯದಿಂದ ಎಂದು ಯಾವ ನಾಲಿಗೆಯಿಂದ ಹೇಳಿಕೊಳ್ಳೋಣ? ಭಾರತದಲ್ಲಿ ಪ್ರತಿ ವರ್ಷ ಅಂದಾಜು 6 ರಿಂದ 10 ಲಕ್ಷ ಹೆಣ್ಣು ಭ್ರೂಣ ಹತ್ಯೆಯಾಗುತ್ತಿದೆ. ಕಳೆದ ಒಂದು ದಶಕದಲ್ಲಿ ಸುಮಾರು 2 ಕೋಟಿಗೂ ಹೆಚ್ಚು ಹೆಣ್ಣು ಜೀವಗಳನ್ನು ಭೂಮಿಗೇ ಕಾಲಿಡದಂತೆ ಹೊಸಕಿ ಹಾಕಲಾಗಿದೆ ಎಂದರೆ ಹೆಣ್ಣಿನ ಕುರಿತು ನಮ್ಮ ಸಮಾಜಕ್ಕಿರುವ ಮನೋಧೋರಣೆ ಬದಲಿಸಲು ಯಾವ ದೇವರಿಗೆ ಮೊರೆಯಿಡೋಣ? infant-mortalityಸದ್ಯ ಗಂಡು-ಹೆಣ್ಣಿನ ಅನುಪಾತ 100;84 ಕ್ಕೆ ಇಳಿದಿದ್ದು ಅದು ಸಮಾಜದಲ್ಲಿ ಅಸಮತೋಲನವನ್ನು ಸೃಷ್ಟಿಸಿ, ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ, ದೌರ್ಜನ್ಯ, ಶೋಷಣೆ ಹೆಚ್ಚಳಕ್ಕೆ ಕಾರಣವಾಗುತ್ತಿದ್ದರೂ ನಮ್ಮ ಸರ್ಕಾರಗಳು ಇದನ್ನೊಂದು ಗಂಭೀರ ವಿಷಯವೆಂದೇ ಪರಿಗಣಿಸುತ್ತಿಲ್ಲವೆಂದರೆ ಮತ್ತೆ ಯಾರಲ್ಲಿ ನಾವು ನ್ಯಾಯ ಕೇಳಬೇಕು?

ಭ್ರೂಣಹತ್ಯೆಯ ತೂಗುಕತ್ತಿಯಿಂದ ಅಪ್ಪಿತಪ್ಪಿ ಮಕ್ಕಳು ಪಾರಾಗಿ ಬಂದರೂ ಅಸಮಾನ ಭಾರತದ ನೆಲದಲ್ಲಿ ಉಂಡುಡಲು ನೆಟ್ಟಗಿಲ್ಲದ ಮಕ್ಕಳು ಅಪೌಷ್ಠಿಕತೆ, ರಕ್ತಹೀನತೆಯಲ್ಲಿ ನರಳಿ ರೋಗಿಷ್ಟಗೊಳ್ಳುವ ಸಂದರ್ಭಗಳೂ ಹೆಚ್ಚಿವೆ. ಕೇಂದ್ರ ಸರ್ಕಾರದ ಯೋಜನೆಯಂತೆ 0-6 ವರ್ಷದ ಮಕ್ಕಳ ಪೋಷಣೆಗಾಗಿ ಕರ್ನಾಟಕ ರಾಜ್ಯದಲ್ಲಿ ಹಳ್ಳಿಗಳು ಹಾಗೂ ನಗರ ಪ್ರದೇಶದ ಸ್ಲಂಗಳಲ್ಲಿ 64,518 ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ 39,54,292 ಮಕ್ಕಳು ದಾಖಲಾಗಿದ್ದಾರೆ. ಅದರಲ್ಲಿ 43,951 ಮಕ್ಕಳು ತೀವ್ರ ಅಪೌಷ್ಟಿಕತೆಯನ್ನು ಎದುರಿಸುತ್ತಿದ್ದರೆ, 10,86,820 ಮಕ್ಕಳು ಸಾಧಾರಣ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ! ಈ ಮಕ್ಕಳಿಗೆ ಬಿಸಿಯೂಟ, ಹಾಲಿನ ಜೊತೆಗೇ ಮೊಟ್ಟೆ ಕೂಡ ಕೊಡಲಾಗುತ್ತಿದೆ. ಆದರೂ ಅಧಿಕಾರಿಗಳ ಕಾರ್ಯಕ್ಷಮತೆ ಉತ್ತಮವಿದ್ದ ಕಡೆಗಳಲ್ಲಿ ಮಾತ್ರ ಇಂತಹ ಮಕ್ಕಳ ಪೋಷಣೆ ಸಮರ್ಥವಾಗಿ ನಡೆಯುತ್ತಿದ್ದು, ಮಿಕ್ಕ ಕಡೆಗಳಲ್ಲಿ ಹೆಚ್ಚಿನ ಲೋಪಗಳು ಕಂಡು ಬರುತ್ತಿವೆ. ಮೊನ್ನೆಯಷ್ಟೇ ಕೊಪ್ಪಳದಲ್ಲಿ ಇಂತಹ ಮಕ್ಕಳಿಗೆ ಕೊಳೆತ ಮೊಟ್ಟೆಗಳನ್ನು ನೀಡುತ್ತಿರುವುದು ವರದಿಯಾಗಿದೆ. ನಿಗದಿತ ಪ್ರಮಾಣಕ್ಕಿಂತಾ ಕಡಿಮೆ ದರ ಹಾಗೂ ಕಡಿಮೆ ಗುಣಮಟ್ಟದ ಆಹಾರ ಪದಾರ್ಥಗಳನ್ನು ನೀಡಿ ಮಕ್ಕಳ ಪೌಷ್ಟಿಕಾಂಶದಲ್ಲೂ ಲಾಭ ಮಾಡಿಕೊಳ್ಳುವ ಸರ್ಕಾರಿ ಬಕಾಸುರರಿಂದ ಅಸಹಾಯಕ ಮಕ್ಕಳನ್ನು ಕಾಪಾಡುವವರ್‍ಯಾರು?

ಅನೇಕ ಅಂಗನವಾಡಿ ಕೇಂದ್ರಗಳಲ್ಲಿ ಇಂದಿಗೂ ಮಕ್ಕಳ ತೂಕವನ್ನು ಅಳೆಯುವ ತೂಕದ ಯಂತ್ರವೇ ಇಲ್ಲ! ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆ ಮಕ್ಕಳ ವಯಸ್ಸು ಮತ್ತು ತೂಕದ ಸಮೀಕರಣದ ನಕ್ಷೆಯನ್ನು ನೀಡಿದ್ದು ಅದನ್ನು ಅಂಗನವಾಡಿಗಳಿಗೆ ವಿತರಿಸಲಾಗಿದೆ. ಅಂತರಾಷ್ಟ್ರೀಯ ಮಟ್ಟದ ಮಾನದಂಡ ಹೊಂದಿರುವ ಆ ನಕ್ಷೆಯ ಪ್ರಕಾರ ಮಕ್ಕಳ ತೂಕವನ್ನೇನಾದರೂ ಸರಿಯಾಗಿ ನೋಡಿ ದಾಖಲಿಸಿದರೆ, ಅಪ್ಪಟ ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿ ಮಕ್ಕಳ ಆರೋಗ್ಯ, ರಕ್ತಹೀನತೆ, ಅಪೌಷ್ಟಿಕತೆಯನ್ನು ಅಳೆದರೆ ಅನಾರೋಗ್ಯ ಹೊಂದಿದ ಮಕ್ಕಳ ಸಂಖ್ಯೆ ದುಪ್ಪಟ್ಟೋ, ಮೂರು ಪಟ್ಟೋ ಹೆಚ್ಚಾಗಬಹುದೇನೋ! ಈಗಲೂ ಕಾರ್ಯಕರ್ತೆಯರಿಗೆ ಅಳೆಯಲು ಬರುವುದಿಲ್ಲವೆಂದು ಮಕ್ಕಳ ಎತ್ತರವನ್ನು ಅಳೆಯುವ ಕೋಷ್ಟಕ ಅಂಗನವಾಡಿಗಳಲ್ಲಿ ಇಲ್ಲ. ಅಪರಿಪೂರ್ಣ ವಿಧಾನದಲ್ಲೇ ಇಂದಿಗೂ ಮಕ್ಕಳ ಪೌಷ್ಟಿಕತೆಯನ್ನು ಅಂದಾಜಿಸಲಾಗುತ್ತಿದೆಯಷ್ಟೇ ಹೊರತು ಸರಿಯಾದ ಸಮೀಕ್ಷೆಗಳು ಆಗಿಯೇ ಇಲ್ಲ. ೧೯೭೫ರಲ್ಲೇ ಕರ್ನಾಟಕದಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಜಾರಿಯಾಗಿದೆ. ಅದಕ್ಕಾಗಿ ಕೋಟ್ಯಾಂತರ ರೂಪಾಯಿಗಳನ್ನು ವ್ಯಯಿಸುತ್ತಿದ್ದರೂ ಇನ್ನೂ ಮಕ್ಕಳ ಆರೋಗ್ಯ ಹಾಗೂ ಪೌಷ್ಟಿಕತೆಯ ಮಟ್ಟದಲ್ಲಿ ನಿರೀಕ್ಷಿತ ಬದಲಾವಣೆಗಳಾಗಿಲ್ಲ. ಅಪೌಷ್ಟಿಕತೆಯಿಂದ ನಿತ್ರಾಣಗೊಂಡು ಮಕ್ಕಳು ಸಾವನ್ನಪ್ಪುವುದು ನಿಂತಿಲ್ಲ. ಹಿಂದಿನ ವರ್ಷಗಳ ಅಂಕಿಅಂಶಗಳನ್ನು ಹೋಲಿಸಿ ಈ ವರ್ಷ ಸುಧಾರಿಸಿದೆ ಎಂದು ಬೆನ್ನು ತಟ್ಟಿಕೊಳ್ಳುತ್ತಾರೆ ಮಕ್ಕಳ ಸಂಬಂಧಿತ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರಿ ಅಧಿಕಾರಿಗಳು!

ಪೋಷಣೆಯ ಜೊತೆಗೆ ಅಂಗನವಾಡಿ ಕೇಂದ್ರಗಳು 3 ರಿಂದ 6 ವರ್ಷದ ಮಕ್ಕಳಿಗೆ ಶಾಲಾ ಪೂರ್ವ ಶಿಕ್ಷಣ ನೀಡುವ ಜವಾಬ್ದಾರಿಯನ್ನೂ ಹೊತ್ತಿವೆ. ಆದರೆ ಇದಕ್ಕೆ ವಯೋಮಾನಕ್ಕೆ ತಕ್ಕಂತೆ, ಶಿಸ್ತುಬದ್ಧ ನಿಗದಿತ ನಮೂನೆಯ ಪಠ್ಯವಾಗಲಿ, ಪ್ರತ್ಯೇಕ ಶಾಲಾ ಕೊಠಡಿಯಾಗಲಿ ಇಲ್ಲ. ಹೀಗಾಗಿ ಅದೊಂದು ಪಾಲಿಸುವ, ಪೋಷಿಸುವ, ಆಡಿಸುವ ಮನೆಯಷ್ಟೇ! ಅದೇ ವಯಸ್ಸಿನ ಖಾಸಗಿ ಕಿಂಡರ್‌ಗಾರ್ಡನ್‌ನಲ್ಲಿ ಕಲಿಯುವ ಮಕ್ಕಳು ನರ್ಸರಿ, ಎಲ್‌ಕೆಜಿ, ಯುಕೆಜಿಗಳನ್ನು ಈ ಶಿಕ್ಷಣಕ್ಕಾಗಿಯೇ ಸಿಧ್ಪಡಿಸಿದ ನಿಗದಿತ ನಮೂನೆಯ ಪಠ್ಯವನ್ನಾಧರಿಸಿ ಶಿಸ್ತುಬದ್ಧವಾಗಿ ಕಲಿಯುತ್ತಾರೆ. ವಿಪರ್ಯಾಸವೆಂದರೆ ನಮ್ಮ 3-6 ವರ್ಷಗಳ ಮಕ್ಕಳ ವಿದ್ಯಾಭ್ಯಾಸದ ಕುರಿತು ಎಲ್ಲಿಯೂ ದಾಖಲಿಸಬೇಕಾದ ಅವಶ್ಯಕತೆ ಇಲ್ಲ! ಖಾಸಗಿಯವರು ತಾವೇ ಗುತ್ತಿಗೆ ಪಡೆದವರಂತೆ ನಡೆಸುತ್ತಿರುವ ಈ ಪೂರ್ವಪ್ರಾಥಮಿಕ ಹಂತದ ಶಿಕ್ಷಣ ಸಂಸ್ಥೆಗಳು ಸರ್ಕಾರದ ಯಾವುದೇ ಇಲಾಖೆಯಡಿಯೂ ನೋಂದಣಿಯಾಗುವ ಅವಶ್ಯಕತೆಯಿಲ್ಲ. ಯಾವ ಯಾರ ಒಪ್ಪಿಗೆಯನ್ನೂ ಪಡೆಯದೇ ಕನಿಷ್ಟ ಮೂಲಭೂತ ಸೌಲಭ್ಯಗಳೂ ಇಲ್ಲದೇ ಎಲ್ಲೆಂದರಲ್ಲಿ ಬೇಕಾಬಿಟ್ಟಿಯಾಗಿ ಇಂತಹ ಖಾಸಗಿ ಪೂರ್ವ ಪ್ರಾಥಮಿಕ ಶಿಕ್ಷಣ ಸಂಸ್ಥೆಗಳು ಹುಟ್ಟಿಕೊಳ್ಳುತ್ತಿದ್ದರೂ ಕೇಳುವವರೇ ಇಲ್ಲ! ಇಲ್ಲಿ ಕಲಿಯುತ್ತಿರುವ ಲಕ್ಷಾಂತರ ಮಕ್ಕಳ ಪೌಷ್ಟಿಕತೆಯ ಬಗ್ಗೆಯಾಗಲಿ, ರಕ್ಷಣೆಯ ಬಗ್ಗೆಯಾಗಲಿ, ಶಿಕ್ಷಣದ ಬಗ್ಗೆಯಾಗಲಿ, ಮಕ್ಕಳ ಹಕ್ಕುಗಳ ಉಲ್ಲಂಘನೆಯ ಬಗ್ಗೆಯಾಗಲೀ ಸರ್ಕಾರ ಒಮ್ಮೆಯೂ ಯೋಚಿಸಿಯೇ ಇಲ್ಲ! 800px-Children_at_the_Bannu_Jail[1]ಇನ್ನು ಅಧ್ಯಯನ, ಸಮೀಕ್ಷೆ, ದಾಖಲೀಕರಣ ದೂರದ ಮಾತು! ಅಂತಹ ಶಾಲೆಗಳ ಮೇಲೆ ಸರ್ಕಾರಕ್ಕೆ ಯಾವ ನಿಯಂತ್ರಣವೂ ಇಲ್ಲವೆಂದರೆ, ಇದನ್ನು ದುರಂತವೆನ್ನದೇ ಏನೆನ್ನೋಣ? ಖಾಸಗಿಯಲ್ಲಿ ಕಲಿಯುತ್ತಿರುವ ಮಕ್ಕಳು ಮಕ್ಕಳಲ್ಲವೇ? ಹಾಗಿದ್ದರೆ ಸರ್ಕಾರದ ನೀತಿ ನಿಯಮ ಯೋಜನೆಗಳು ಈ ಮಕ್ಕಳಿಗೇಕೆ ಅನ್ವಯವಾಗುವುದಿಲ್ಲ? ಅಪೌಷ್ಟಿಕತೆಯೂ ಸರ್ಕಾರ ನಡೆಸುವ ಅಂಗನವಾಡಿ ಮಕ್ಕಳಿಗೆ ಮಾತ್ರ ಅನ್ವಯಿಸುತ್ತದೆಯೇ ಹೊರತು ಖಾಸಗಿ ಸಂಸ್ಥೆಗಳಲ್ಲಿ ಕಲಿಯುತ್ತಿರುವ ಮಕ್ಕಳಿಗಲ್ಲ ಎಂದು ಸರ್ಕಾರವೇ ನಿರ್ಧರಿಸಿಬಿಟ್ಟಿದೆ! ಅಲ್ಲಿಯೂ ಸಾವಿರಾರು ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿರುವ ಸಾಧ್ಯತೆಗಳು ಖಂಡಿತಾ ಹೆಚ್ಚಿವೆ. ಈ ಅಸಮಾನತೆ ಎರಡೂ ನೆಲೆಗಳಲ್ಲಿ, ಶಿಕ್ಷಣ ಹಾಗೂ ಆರೋಗ್ಯ ಎರಡೂ ಕ್ಷೇತ್ರಗಳಲ್ಲಿ ಅತ್ಯಂತ ಸಹಜವೆಂಬಂತೆ ನಡೆಯುತ್ತಿದ್ದರೂ ಸರ್ಕಾರ ಕುರುಡಾಗಿದೆ. ಸಾರ್ವತ್ರಿಕವಾಗಿ ಎಲ್ಲ ಮಕ್ಕಳ ಆರೋಗ್ಯ,-ಶಿಕ್ಷಣದ ಬಗ್ಗೆ ಕೂಡ ಸರ್ಕಾರ ನಿಯಂತ್ರಣ ಹೊಂದುವುದು ಯಾವಾಗ?

ಹಾಗೆ ನೋಡಿದರೆ, ಮನೋವಿಜ್ಞಾನಿಗಳ ಪ್ರಕಾರ 5 ವರ್ಷದವರೆಗಿನ ಮಗುವಿಗೆ ಶಾಲೆಯೇ ಬೇಡ. ಈ ವಯಸ್ಸಿನಲ್ಲಿ ಮಗು ನಡವಳಿಕೆಯ ಶಿಕ್ಷಣ, ಶೌಚ ನಿಯಮ, ಆಹಾರ ತೆಗೆದುಕೊಳ್ಳುವ ಕ್ರಮ, ಸಣ್ಣಪುಟ್ಟ ಶಿಷ್ಟಾಚಾರವನ್ನು ಮಾತ್ರ ಕಲಿಯಬೇಕಿರುತ್ತದೆ. ಅದನ್ನು ಹಾಡುತ್ತಾ, ಆಡುತ್ತಾ, ಕಟ್ಟುತ್ತಾ ಮುರಿಯುತ್ತಾ ಮಗು ತನ್ನಷ್ಟಕ್ಕೆ ತಾನೇ ಕಲಿಯಬೇಕು. ಆದರೆ ಈಗ ಅದನ್ನು ಶಾಲಾ ಪೂರ್ವ ಅವಧಿಯ ಶಿಕ್ಷಣದಲ್ಲಿ ಶಿಕ್ಷೆ, ಗದರಿಸುವಿಕೆ, ಬಲವಂತದಿಂದ ಹೇರಲಾಗುತ್ತಿದೆ. ಬಲವಂತದ ಯಾವುದೇ ಶಿಕ್ಷಣ ಮಗುವಿನಲ್ಲಿ ಪ್ರೀತಿಯನ್ನು ಮೂಡಿಸುವ ಬದಲಿಗೆ ಮನೋದೈಹಿಕ ಸಮಸ್ಯೆಗಳಾಗಿ ಕಾಡಲಾರಂಭಿಸಿವೆ. ಅವುಗಳನ್ನು ನಿರ್ಲಕ್ಷಿಸಿದರೆ ಮಗು ಅಸ್ವಸ್ಥ ಮನಸಿನ ವ್ಯಕ್ತಿಯಾಗಿ ರೂಪುಗೊಂಡು ಕುಟುಂಬಕ್ಕೆ, ಸಮಾಜಕ್ಕೆ ಹೊರೆಯಾಗುತ್ತದೆ. ಇದನ್ನು ಪೋಷಕರಿಗೆ ಅರ್ಥ ಮಾಡಿಸುವುದಾದರು ಯಾರು? ಮತ್ತು ಹೇಗೆ? ಬಾಲ್ಯದಲ್ಲಿನ ಪ್ರೀತಿ ಕಾಳಜಿ, ಉತ್ತಮ ಗಮನಿಸುವಿಕೆಯಲ್ಲಿ ಬೆಳೆದ ಮಗು ಮಾತ್ರ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯ. ಆದರೆ ಅಂಥಹಾ ಪ್ರೀತಿ, ಕಾಳಜಿ, ಗಮನಿಸುವಿಕೆಗೆ ಈಗ ಸಮಯವಾದರೂ ಯಾರಿಗಿದೆ? ಇದೆಲ್ಲಾ ಮಾರುಕಟ್ಟೆಯಲ್ಲಿ ಸಿಕ್ಕುವಂತಿದ್ದರೆ, ಎಷ್ಟು ದರವಾದರೂ ಸರಿ ಉಳ್ಳವರು ಕೊಂಡು ತಂದು ಕೊಟ್ಟು ಬಿಡುತ್ತಿದ್ದರೇನೋ! ಇಂದು ಎಲ್ಲವೂ ವ್ಯಾಪಾರಿ ಮನೋಭಾವದ ಕೊಡು-ಕೊಳುವ ವ್ಯವಹಾರದ ಮಟ್ಟಕ್ಕೆ ಬಂದು ನಿಂತು ಬಿಟ್ಟಿರುವುದರಿಂದ ಮಕ್ಕಳೂ ಸರಕುಗಳಾಗಿ ಮಾತ್ರ ಕಾಣುತ್ತಿದ್ದಾರೆ! ಈ ಸ್ಥಿತಿಯಿಂದ ಅವರನ್ನು ಕಾಪಾಡುವವರ್‍ಯಾರು?

ಮಕ್ಕಳೆಂದರೆ ಅರಳಲು ಕಾದಿರುವ ಮೊಗ್ಗುಗಳು. ಅದಕ್ಕೆ ತಕ್ಕ ಗಾಳಿ ನೀರು ಬೆಳಕಿನ ಪೂರಕ ವಾತಾವರಣವನ್ನು ಮುಕ್ತವಾಗಿ, ಕಡು ಎಚ್ಚರಿಕೆಯಿಂದ ನಿರ್ಮಾಣ ಮಾಡುವ ಬಹು ದೊಡ್ಡ ಜವಾಬ್ದಾರಿ ಪೋಷಕರು, ಸಮಾಜ, ಸರ್ಕಾರದ ಮೇಲಿದೆ. ಈ ಹೊಣೆಯನ್ನು ಹೊತ್ತು ಕೊಂಡರೆ ಮಾತ್ರ, ‘ನಾವು ಮಕ್ಕಳನ್ನು ಪ್ರೀತಿಸುತ್ತೇವೆ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದೇನೋ!