Daily Archives: December 6, 2013

ನೆಲ್ಸನ್ ಮಂಡೇಲ ಮತ್ತು ಇಂದಿನ ದಕ್ಷಿಣ ಆಫ್ರಿಕ


– ಮುನೀರ್ ಕಾಟಿಪಳ್ಳ


 

ದಕ್ಷಿಣ ಆಫ್ರಿಕಾ ದೇಶದ ಕರಿಯರಿಗೆ ರಾಜಕೀಯ ಅಧಿಕಾರ ಕೊಡಿಸಿದ, ವರ್ಣಭೇದ ನೀತಿಯನ್ನು ಅಧಿಕೃತವಾಗಿ ಕೊನೆಗೊಳಿಸಿದ ಜಗತ್ತು ಕಂಡ ಮಹಾನ್ ನಾಯಕ, ಅಪ್ರತಿಮ ಹೋರಾಟಗಾರ ನೆಲ್ಸನ್ ಮಂಡೇಲಾ ತನ್ನ ಸಾರ್ಥಕ ಬದುಕನ್ನು ಕೊನೆಗೊಳಿಸಿ ಜಗತ್ತಿಗೆ ವಿದಾಯ ಹೇಳಿದ್ದಾರೆ. Nelson_Mandelaಆತನಿಗೊಂದು ಗೌರವಪೂರ್ವಕ ಸಲಾಂ.

ನೆಲ್ಸನ್ ಮಂಡೇಲಾನ ನಾಡು ದಕ್ಷಿಣ ಆಫ್ರಿಕಾ ದೇಶದಲ್ಲಿ ಮೂರು ವರ್ಷದ ಹಿಂದೆ ನಡೆದ ಸಾಮ್ರಾಜ್ಯಶಾಹಿ ವಿರೋಧಿ “ವಿಶ್ವ ವಿದ್ಯಾರ್ಥಿ ಯುವಜನ ಉತ್ಸವ“ದಲ್ಲಿ ನಾನು ಪ್ರತಿನಿಧಿಯಾಗಿ ಭಾಗವಹಿಸಿದ್ದೆ. ನೆಲ್ಸನ್ ಮಂಡೇಲಾ ಸಮಾವೇಶವನ್ನು ಪರೋಕ್ಷವಾಗಿ ಉದ್ಘಾಟಿಸಿದ್ದರು. ಆ ಸಂದರ್ಭದಲ್ಲಿ ನಾನು ಕಂಡ ದಕ್ಷಿಣ ಆಫ್ರಿಕಾ, ಅಲ್ಲಿನ ಕರಿಯರನ್ನು ಹಿನ್ನೆಲೆಯಾಗಿಟ್ಟುಕೊಂಡು ಒಂದೆರಡು ಮಾತುಗಳು.

“ವಿಶ್ವ ವಿದ್ಯಾರ್ಥಿ ಯುವಜನ ಉತ್ಸವ” ಜೋಹಾನ್ಸ್‌ಬರ್ಗ್ ಸಮೀಪದ ಪ್ರಿಟೋರಿಯಾದಲ್ಲಿ ಆಯೋಜಿಸಲಾಗಿತ್ತು. ಅನಾರೋಗ್ಯದ ನಿಮಿತ್ತ ಮಂಡೇಲಾ ಅವರ ಧ್ವನಿ ಮುದ್ರಿತ ಭಾಷಣದ ಮೂಲಕ ಅವರ ಅನುಪಸ್ಥಿತಿಯಲ್ಲಿ ಸಮಾವೇಶವನ್ನು ಉದ್ಘಾಟಿಸಲಾಯಿತು. World-Festival-of-Youth-and-Students((Johannesburg_2010)ಮುದ್ರಿತ ಸಂದೇಶದಲ್ಲಿ ಮಂಡೇಲಾ ಸಂದೇಶದ ಧ್ವನಿ ಕೇಳಿದಾಗ ಜಗತ್ತಿನಾದ್ಯಂತದಿಂದ ಬಂದ ಯುವ ಪ್ರತಿನಿಧಿಗಳಲ್ಲಿ ರೋಮಾಂಚನ, ಅದರಲ್ಲೂ ಆಫ್ರಿಕಾ ಖಂಡದ ಕಪ್ಪು ಯುವಜನತೆಯ ಉತ್ಸಾಹವಂತೂ ಮೇರೆ ಮೀರುತ್ತಿತ್ತು. ಅಂತಹಾ ಅಗಾಧ ಪ್ರಭಾವವನ್ನು ಮಂಡೇಲಾ ಕರಿಯ ಜನತೆಯಲ್ಲಿ ಮೂಡಿಸಿದ್ದಾರೆ.

ನಾನು ದಕ್ಷಿಣ ಆಫ್ರಿಕಾದಲ್ಲಿ ಕಳೆದ ಹನ್ನೆರಡು ದಿನಗಳಲ್ಲಿ ದಕ್ಷಿಣ ಆಫ್ರಿಕಾದ ಇಂದಿನ ಪರಿಸ್ಥಿತಿ ವರ್ಣಭೇದ ನೀತಿ ಕೊನೆಗೊಂಡ ನಂತರದ ಅಲ್ಲಿನ ಕರಿಯರ ಸ್ಥಿತಿಗತಿಯನ್ನು ಅರಿಯಲು ಒಂದಿಷ್ಟು ಪ್ರಯತ್ನಿಸಿದೆ. ಸದಾ ಹಾಡು ಹೇಳುತ್ತಾ, ಸಣ್ಣ ಮ್ಯೂಸಿಕ್ ಕೇಳಿದರೂ ಸಾಕು ನಿಂತಲ್ಲೇ ಕುಣಿಯಲು ತೊಡಗುವ ಕರಿಯ ಯುವಜನರು ಅಗಾಧ ಜೀವನ ಪ್ರೀತಿ ಉಳ್ಳ ಸ್ನೇಹಜೀವಿಗಳು. ಅಲ್ಲಿನ ಮಹಿಳೆಯರಿಗೆ ಸಾಮಾಜಿಕವಾಗಿ ಸಮಾನ ಸ್ಥಾನಮಾನವಿದೆ. ಹೆಣ್ಣು ಗಂಡು ಎಂಬ ಭೇದಭಾವ ಅಲ್ಲಿ ಕಾಣಿಸುವುದಿಲ್ಲ. ಕರಿಯರಿಗೆ ರಾಜಕೀಯ ಸ್ವಾತಂತ್ರ್ಯ ಸಿಕ್ಕಿದೆ. ಕರಿಯರೇ ಪ್ರಧಾನಿ, ಅಧ್ಯಕ್ಷರಾಗಿ ದೇಶವನ್ನು ಆಳುತ್ತಿದ್ದಾರೆ. ದಕ್ಷಿಣ ಆಫ್ರಿಕಾದ ರಸ್ತೆಗಳು ಅತ್ಯುತ್ತಮವಾಗಿದೆ. ಕಟ್ಟಡಗಳು, ಮಾಲ್‌ಗಳು ಯಾವುದೇ ಫಿಲಂ ಸಿಟಿಯನ್ನು ನಾಚಿಸುವಷ್ಟು ಅದ್ಭುತವಾಗಿದೆ. ಜಗತ್ತಿನ ಎಲ್ಲಾ ಬ್ರಾಂಡ್‌ನ ಐಷಾರಾಮಿ ಕಾರುಗಳು ಅಲ್ಲಿನ ರಸ್ತೆಯಲ್ಲಿ ಓಡಾಡುತ್ತದೆ. ಆದರೆ ಅಂತಹ ಮಾಲ್‌ಗಳಲ್ಲಿ, ಕಾರ್‌ಗಳಲ್ಲಿ ಕರಿಯರು ಕಾಣಸಿಗುವುದು ಅಪರೂಪ. ಜಗತ್ತಿನ ವೈಭವೋಪೋತ ನಗರಗಳಲ್ಲಿ ಒಂದಾಗಿರುವ ಜೋಹಾನ್ಸ್‌ಬರ್ಗ್ ಸಂಜೆ ಐದು ಗಂಟೆಯಾದರೆ ಸಾಕು ಬಾಗಿಲೆಳೆಯತೊಡಗುತ್ತದೆ. Johannesburgಆರು ಗಂಟೆಗೆ ರಸ್ತೆಗಳು ಸಂಪೂರ್ಣ ನಿರ್ಜನ. ನಿರ್ಗತಿಕರಿಗೆ, ನಿರುದ್ಯೋಗಿಗಳಿಗೆ ಪ್ರಿಟೋರಿಯಾ, ಜೋಹಾನ್ಸ್‌ಬರ್ಗ್‌ನಲ್ಲಿ ಗಂಜಿ ಕೇಂದ್ರಗಳಿವೆ. ಅಲ್ಲಿನ ಮಾರುದ್ಧದ ಸರತಿ ಸಾಲಿನಲ್ಲಿ ಬಿಳಿಯರು ಒಬ್ಬರೂ ಕಾಣಸಿಗುವುದಿಲ್ಲ. ಅಲ್ಲಿನ ಆಧುನಿಕ ಡಿಸ್ಕೋತೆಕ್, ಡಿ.ಜೆ. ಡ್ಯಾನ್ಸ್‌ಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಶ್ರೀಮಂತರಾಗಿರುವ ಕರಿಯ ಕುಟುಂಬಗಳ ಕೆಲ ಯುವಜನತೆ ಕಂಡು ಬರುತ್ತಾರೆ. ಅದೇ ಸಂದರ್ಭದಲ್ಲಿ ಕಾಲೇಜು ಓದುವ, ಡಿಗ್ರಿ ಪಡೆದು ನಿರುದ್ಯೋಗಿಗಳಾಗಿರುವ ಕರಿಯ ಯುವತಿಯರು ಚಿಲ್ಲರೆ ದುಡ್ಡಿಗೆ ಯಾವುದೇ ಸಂಕೋಚ ಇಲ್ಲದೆ ಮೈಮಾರುತ್ತಾರೆ. ಯುವಕರು ಲೂಟಿಗಿಳಿದು ಕ್ರಿಮಿನಲ್‌ಗಳಾಗುತ್ತಾರೆ. ಮಾರುಕಟ್ಟೆ ಸಂಸ್ಕೃತಿ, ಕೊಳ್ಳುಬಾಕ ಸಂಸ್ಕೃತಿಗೆ ತನ್ನತನ, ಪರಂಪರೆಯನ್ನು ಮರೆತು ಬಲಿ ಬಿದ್ದಿದ್ದಾರೆ. ರಾಜಕೀಯ ಅಧಿಕಾರ ದಕ್ಕಿದ್ದರೂ ಉದ್ಯೋಗಗಳು ಕರಿಯರಿಗೆ ದಕ್ಕುತ್ತಿಲ್ಲ. ನಿರುದ್ಯೋಗ ಕರಿಯ ಯುವಜನತೆಯನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಖಾಸಗೀಕರಣದ ಕಾರುಬಾರಿನಲ್ಲಿ ಸರಕಾರಿ ಉದ್ಯೋಗ ತೀರಾ ಕಡಿಮೆ. ಖಾಸಗಿ ಉದ್ಯೋಗ ದೊರಕುವುದಿಲ್ಲ.

“ಇದೆಲ್ಲಾ ಯಾಕೆ ಹೀಗೆ, ನಿಮ್ಮವರೇ ಅಧಿಕಾರದಲ್ಲಿದ್ದಾರಲ್ಲ? ಇಷ್ಟು ಶ್ರೀಮಂತಿಕೆ ಇದ್ದರೂ ನಿಮಗ್ಯಾಕೆ ಇಂತಹ ಬಡತನ,” south-africa_povertyಅಂತ ಇಂಜಿನಿಯರಿಂಗ್ ಓದಿರುವ ನಮ್ಮ ಕರಿಯ ಟ್ಯಾಕ್ಸಿ ಡ್ರೈವರ್‌ನಲ್ಲಿ ಪ್ರಶ್ನಿಸಿದರೆ ಆತನ ಉತ್ತರ ಹೀಗಿತ್ತು. “ಹೌದು ನಮಗೆ ರಾಜಕೀಯ ಸ್ವಾತಂತ್ರ್ಯ ಸಿಕ್ಕಿದೆ. ನಮ್ಮವರೇ ದೇಶ ಆಳುತ್ತಿದ್ದಾರೆ. ಆದರೆ ಆರ್ಥಿಕ ಸ್ವಾತಂತ್ರ್ಯ ಸಿಕ್ಕಿಲ್ಲ. ಇಲ್ಲಿ ಎಲ್ಲವೂ ಖಾಸಗಿ ಒಡೆತನದಲ್ಲಿದೆ. ಜಾಗತೀಕರಣಕ್ಕೆ ನಾವು ಬಹು ಹಿಂದೆಯೇ ತೆರೆದುಕೊಂಡಿದ್ದೇವೆ. ಹೆಚ್ಚಿನ ದೇಶೀಯ ಸೇರಿದಂತೆ ಬಹುರಾಷ್ಟ್ರೀಯ ಕಂಪೆನಿಗಳ ಆಡಳಿತ ಬಿಳಿಯರ ಕೈಯ್ಯಲ್ಲಿದೆ. ವರ್ಣಭೇದ ನೀತಿ ಅಧಿಕೃತವಾಗಿ ಇಲ್ಲದಿದ್ದರೂ ಅವರು ನಮ್ಮನ್ನು ಒಳ್ಳೆಯ ಉದ್ಯೋಗಕ್ಕೆ ಸೇರಿಸಿಕೊಳ್ಳುವುದಿಲ್ಲ. ಅದು ಬಿಳಿಯರಿಗೆ ಮೀಸಲು. ಇನ್ನು ಉದ್ಯಮಗಳನ್ನು, ವ್ಯಾಪಾರಗಳನ್ನು ನಡೆಸುವಷ್ಟು ಆರ್ಥಿಕವಾಗಿ ನಾವು ಬಲಿಷ್ಠರಲ್ಲ. ಇಲ್ಲಿ ಹೊಟೇಲ್‌ಗಳೆಂದರೆ ’ಕೆಎಫ್‌ಸಿ’ , ’ಮೆಕ್ ಡೋನಾಲ್ಡ್’ ಮಾರುಕಟ್ಟೆಗಳೆಂದರೆ ವಾಲ್ ಮಾರ್ಟ್, ಜೆಸ್ಕೋ ಮುಂತಾದವು. ಇಲ್ಲಿ ಅಪಾರ ಗಣಿ ಸಂಪತ್ತಿದ್ದರೂ ಅದೆಲ್ಲವೂ ಬಹುರಾಷ್ಟ್ರೀಯ ಕಂಪೆನಿಗಳ, ಬಿಳಿಯರ ಕೈಯಲ್ಲಿದೆ. ಅಲ್ಲಿ ಯಾವುದೇ ಕಾರ್ಮಿಕ ಕಾನೂನುಗಳಿಗೆ ಬೆಲೆ ಇಲ್ಲ. ಅಲ್ಲಿ ಗುಲಾಮರ ರೀತಿ ನಮ್ಮ ಕಪ್ಪು ಕಾರ್ಮಿಕರು ದುಡಿಯುತ್ತಾರೆ. ಇದರಿಂದಾಗಿ ನಮ್ಮ ಯುವಜನತೆ ಹತಾಶರಾಗಿದ್ದಾರೆ. ಹಸಿವು ಅವರನ್ನು ಕಿತ್ತು ತಿನ್ನುತ್ತಿದೆ. ಆಧುನಿಕ ಮಾಲ್‌ಗಳು, ಡಿಸ್ಕೋತೆಕ್‌ಗಳು ಅವರನ್ನು ಆಕರ್ಷಿಸುತ್ತಿದೆ. ಅಣಕಿಸುತ್ತಿದೆ. ಇದರಿಂದಾಗಿ ಇಲ್ಲಿ ಅಪರಾಧ ಪ್ರಕರಣಗಳು ಜಾಸ್ತಿಯಾಗುತ್ತಿದೆ. ಶ್ರೀಮಂತ ಜೀವನಕ್ಕಾಗಿ ಮಾತ್ರ ಅಲ್ಲ ಒಂದು ತುಂಡು ಬ್ರೆಡ್‌ಗಾಗಿಯೂ ಇಲ್ಲಿ ಕೊಲೆಗಳಾಗುತ್ತವೆ, ಹಾಡುಹಗಲೇ ಅಪಹರಣಗಳಾಗುತ್ತವೆ. ಇದನ್ನು ನಿಭಾಯಿಸಲಾಗದ ಸರಕಾರ ಐದು ಗಂಟೆಗೆ ಮಾರುಕಟ್ಟೆ, ಅಂಗಡಿ, ಮಾಲ್‌ಗಳನ್ನು ಬಂದ್ ಮಾಡಿಸುತ್ತದೆ. ಆರು ಗಂಟೆಯ ನಂತರ ಯಾರೂ ಬೀದಿಗೆ ಬರುವುದಿಲ್ಲ,” ಎಂದು ನಿಟ್ಟುಸಿರು ಬಿಟ್ಟ. ಇದು ಇಂದಿನ ನೆಲ್ಸನ್ ಮಂಡೇಲಾ ನಾಡಿನ ಸ್ಥಿತಿ.

ದಕ್ಷಿಣ ಆಫ್ರಿಕಾದ ಯುವ ತಲೆಮಾರಿನ ಕಾರ್ಯಕರ್ತರಲ್ಲಿ ಈ ಕುರಿತು ಚರ್ಚಿಸಿದಾಗ ಹಲವು ಗಂಭೀರ ವಾದಮಾತುಗಳನ್ನು ತೆರೆದಿಟ್ಟರು. Poverty_and_Policy_in_Post_Apartheid_South_Africaನೆಲ್ಸನ್ ಮಂಡೇಲಾ ಸಾಮಾಜಿಕ, ರಾಜಕೀಯ ಸ್ವಾತಂತ್ರ್ಯಕ್ಕಾಗಿ ಅಪ್ರತಿಮ ಹೋರಾಟ ನಡೆಸಿದರು. ಆದರೆ ಆರ್ಥಿಕ ಸ್ವಾತಂತ್ರ್ಯದ ಪ್ರಶ್ನೆಯನ್ನು ಕಡೆಗಣಿಸಿದ್ದರಿಂದ ಈ ಪರಿಸ್ಥಿತಿ ಎದುರಾಗಿದೆ. ಇಂದು ಕರಿಯರ ಸರಕಾರ ಅಧಿಕಾರದಲ್ಲಿ ಇದ್ದರೂ ಆರ್ಥಿಕ ನೀತಿಗಳನ್ನು ರೂಪಿಸುವುದು ವಿಶ್ವಬ್ಯಾಂಕ್, ಬಹುರಾಷ್ಟ್ರೀಯ ಕಂಪೆನಿಗಳು ಸೇರಿದಂತೆ ಅಮೇರಿಕಾ ಮುಂತಾದ ಮುಂದುವರಿದ ದೇಶಗಳು. ಇಂದು ಚಿಲ್ಲರೆ ಮಾರುಕಟ್ಟೆ, ಹೊಟೇಲ್‌ಗಳು ಸೇರಿದಂತೆ ಇಲ್ಲಿನ ಗಣಿಗಾರಿಕೆಯನ್ನು, ಆರ್ಥಿಕ ಕ್ಷೇತ್ರವನ್ನು ವಿದೇಶಿಯರು ಆಳುತ್ತಿದ್ದಾರೆ. ಅಲ್ಲಿ ಬಿಳಿಯರದ್ದೇ ಕಾರುಬಾರು. ಆರ್ಥಿಕ ಆಯಾಮವನ್ನು ನೆಲ್ಸನ್ ಮಂಡೇಲಾ ನೇತೃತ್ವದ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಕಡೆಗಣಿಸಿದ್ದರಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. ವರ್ಣಭೇದ ನೀತಿ ಕೊನೆಗೊಂಡ ನಂತರವೂ ಎರಡು ದಶಕಗಳ ಆಳ್ವಿಕೆಯಲ್ಲೂ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಅಮೇರಿಕನ್ ಪ್ರಣೀತಿ ಬಂಡವಾಳ ಶಾಹಿ ನೀತಿಯನ್ನೇ ಮುಂದುವರಿಸುತ್ತಿದೆ. ಈ ನೀತಿಗಳ ಬದಲಾವಣೆಗೆ ಅವರು ಮುಂದಾಗುತ್ತಿಲ್ಲ ಎಂದು ಆರೋಪಿಸುತ್ತಾರೆ. ಅಷ್ಟೇ ಅಲ್ಲ ಗಣಿಗಳಲ್ಲಿ ಉತ್ತಮ ವೇತನಕ್ಕಾಗಿ, ನಗರಗಳಲ್ಲಿ ಉದ್ಯೋಗಕ್ಕಾಗಿ ಹೋರಾಟಗಳು ನಡೆಯದಂತೆ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ತಡೆಯುತ್ತಿದೆ. ಯುವಜನತೆಗೆ ಉದ್ಯೋಗ ಸೃಷ್ಟಿಸಲು, ಜೀವನ ಭದ್ರತೆಗೆ ಸರಕಾರ ಮುಂದಾಗುತ್ತಿಲ್ಲ. ಮಂಡೇಲಾ ಕೂಡಾ ಈ ಕುರಿತು ಏನೂ ಮಾಡುತ್ತಿಲ್ಲ ಎಂಬುದು ಇವರ ಆರೋಪ.

ಹೌದು ಮಂಡೇಲಾ ಒಂದು ಮಹಾನ್ ಹೋರಾಟವನ್ನು ನಡೆಸಿದ್ದಾರೆ. ಅದರಲ್ಲಿ ಮಿತಿಗಳೂ ಇರಬಹುದು. ಆ ಹೋರಾಟದಲ್ಲಿ ಅವರು ಗೆಲ್ಲುವಾಗ ಮುಂದೆ ನಡೆಯಬೇಕಾದ ಹೋರಾಟಗಳನ್ನು ನಡೆಸುವಷ್ಟು ಪ್ರಾಯ, ದೈಹಿಕ ಶಕ್ತಿ ಅವರಲ್ಲಿ ಉಳಿದಿರಲಿಲ್ಲ. ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುವುದು, ಅದರಲ್ಲಿ ಗೆಲ್ಲುವುದು ಈಗಿನ ಕಾಲಘಟ್ಟದಲ್ಲಿ ಅಷ್ಟು ಸುಲಭ ಅಲ್ಲ. ಅಲ್ಲಿನ ಸರಕಾರ ನೆಲ್ಸನ್ ಮಂಡೇಲಾ ಮನೆಯ ಸಂದರ್ಶನಕ್ಕೂ ಸಹ ದುಬಾರಿ ಶುಲ್ಕ ಇಟ್ಟು ಅದರಲ್ಲೂ mandela-house-ticketಲಾಭ ನಷ್ಟದ ಲೆಕ್ಕಾಚಾರ ನೋಡುತ್ತಿರುವ ಈ ಸಂದರ್ಭದಲ್ಲಿ, ಮಂಡೇಲ ಶಾಂತಿ ಮಂತ್ರವನ್ನು ಪಠಿಸುತ್ತಾ ಕರಿಯರ ಹೋರಾಟದ ಕೆಚ್ಚನ್ನು ಕುಂಠಿತಗೊಳಿಸಿದ್ದಾರೆ ಎಂಬ ಆರೋಪದ ನಡುವೆಯೂ ಮಂಡೇಲಾ ಹೋರಾಟದಿಂದ ಸ್ಫೂರ್ತಿ ಪಡೆದು ಅಲ್ಲಿನ ಕರಿಯ ಯುವಜನತೆ ಇಂದಿನ ಕಾಲಘಟ್ಟಕ್ಕೆ ಅಗತ್ಯವಾದ ಹೋರಾಟವನ್ನು ಕಟ್ಟಬೇಕಾಗಿದೆ. ಅದು ಅಪ್ರತಿಮ ನಾಯಕ ನೆಲ್ಸನ್ ಮಂಡೇಲರಿಗೆ ಕೊಡುವ ನಿಜವಾದ ಶ್ರದ್ಧಾಂಜಲಿ.

ಯಾರಿಗೆ ಬೇಕಿರಲಿ, ಬೇಡದಿರಲಿ, ಮುಂದೆ ನಡೆಯುವ ಎಲ್ಲಾ ರೀತಿಯ ವಿಮೋಚನಾ ಹೋರಾಟಗಳಲ್ಲಿಯೂ ಮಂಡೇಲಾ ಇದ್ದೇ ಇರುತ್ತಾನೆ. ನಿನಗೊಂದು ಸಲಾಂ, ಸಂಗಾತಿ ನೆಲ್ಸನ್ ಮಂಡೇಲಾ.

ಮಡೆ (ಎಂಜಲು) ಸ್ನಾನ ಆಚರಣೆ ಇರಲಿ ಎನ್ನುವುದಾದರೆ ಬೆತ್ತಲೆ ಸೇವೆಯೂ ಇರಲಿ ಬಿಡಿ


– ಚಿದಂಬರ ಬೈಕಂಪಾಡಿ


 

ಆಧುನಿಕತೆಯನ್ನು ಅಪ್ಪಿಕೊಳ್ಳುವ ಮನಸ್ಸುಗಳು ಕುಕ್ಕೆಯಲ್ಲಿ ಮಡೆ ಮಡೆ ಸ್ನಾನಕ್ಕೆ ಅಂಟಿಕೊಂಡಿರುವುದು ವಿಷಾದನೀಯ. ಬದಲಾವಣೆಯನ್ನು ಬಯಸುತ್ತಲೇ ಒಂದು ಕಾಲದಲ್ಲಿ ಮಾಡಿದ ಕಟ್ಟುಪಾಡುಗಳನ್ನು ಮರು ಮೌಲ್ಯಮಾಪನ ಮಾಡದೆ ಸಂದ್ರದಾಯ ಮತ್ತು ಪಾವಿತ್ರ್ಯ ಎನ್ನುವ ಕಾರಣಕ್ಕೆ ಅನುಸರಿಸಲು ಮುಂದಾಗಿರುವುದು ಮೌಢ್ಯತೆಯ ಪರಾಕಾಷ್ಠೆ.

ಮಡೆ ಮಡೆ ಸ್ನಾನಕ್ಕೆ ದೇವಸ್ಥಾನ ಮಂಡಳಿ ಅಥವಾ ಭಕ್ತರು ಕೊಡುತ್ತಿರುವ ಕಾರಣಗಳನ್ನು ಸರ್ಕಾರವೂ ಕಣ್ಣುಮುಚ್ಚಿ ಒಪ್ಪಿಕೊಂಡಿರುವುದು ದುರಂತ ಮಾತ್ರವಲ್ಲ ತನಗಿರುವ ಅಧಿಕಾರವನ್ನು ಚಲಾಯಿಸಲಾಗದ ಅಪವಾದಕ್ಕೆ ಗುರಿಯಾಗಿದೆ.

ಮೌಢ್ಯಗಳನ್ನು ನಿವಾರಿಸಲು ಸುಧಾರಣೆ ಬಯಸುವ ಸರ್ಕಾರ ಅನಾದಿ ಕಾಲದಿಂದ ಕೆಳ ವರ್ಗ ಅನುಸರಿಸಿಕೊಂಡು ಬರುತ್ತಿರುವ ಅಥವಾ ಅನುಸರಿಸಿಕೊಂಡು ಬರಬೇಕೆಂದು ಒತ್ತಡ ಹಾಕಿರುವ ಮನಸ್ಸುಗಳಿಗೆ ಕಡಿವಾಣ ಹಾಕಲಾಗದೆ ಮಕಾಡೆ ಮಲಗಿತು ಎನ್ನಬೇಕೇ?

ಚಂದ್ರಗುತ್ತಿಯಲ್ಲಿ ನಡೆಯುತ್ತಿದ್ದ ಬೆತ್ತಲೆ ಸೇವೆ ಕೂಡಾ ದೇವರಿಗೆ ಹರಕೆ ಎನ್ನುವ ವ್ಯಾಖ್ಯೆ ಕೊಡಲಾಗುತ್ತಿತ್ತು. yellamma-neem-leaves-devadasiಬೆತ್ತಲೆ ಸೇವೆ ಅಮಾನವೀಯ ಎನ್ನುವುದನ್ನು ಒಪ್ಪಿಕೊಳ್ಳುವುದಾದರೆ ಎಂಜಲು ಎಲೆಯ ಮೇಲೆ ಹೊರಳಾಡಿ ಹರಕೆ ತೀರಿಸಲು ಅವಕಾಶ ಮಾಡಿಕೊಡುವುದು ಎಷ್ಟರ ಮಟ್ಟಿಗೆ ಸರಿ?

ಮಡೆ ಮಡೆ ಸ್ನಾನ ಮಾಡುತ್ತಿರುವವರು ಕೆಳವರ್ಗದ ಜನರು ಎನ್ನುವುದನ್ನು ನಿರ್ಲಕ್ಷಿಸುವಂತಿಲ್ಲ. ನಾಗಾರಾಧನೆ, ಭೂತಾರಾಧನೆಯನ್ನು ಅನಾದಿ ಕಾಲದಿಂದ ಅನುಸರಿಸಿಕೊಂಡು ಬರುತ್ತಿರುವ ಈ ಭಾಗದ ಜನರು ಬದಲಾವಣೆಯನ್ನು ನಿರಾಕರಿಸಿದ್ದಾರೆಯೇ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಇಂಥ ಹರಕೆಯನ್ನು ದೇವರಿಗೆ ಅರ್ಪಿಸಬೇಕು ಎಂದು ಹೇಳಿರುವವರು ಯಾರು, ಯಾವ ಗ್ರಂಥದಲ್ಲಿ ಇಂಥ ಹರಕೆಯನ್ನು ಅನೂಚಾನವಾಗಿ ಅನುಸರಣೆ ಮಾಡಿಕೊಂಡು ಬರಬೇಕೆಂದು ಹೇಳಲಾಗಿದೆ ಎನ್ನುವ ಪ್ರಶ್ನೆಗಳಿಗೆ ಉತ್ತರ ಹುಡುಕಬೇಕಾಗಿದೆ.

ಚರ್ಮ ರೋಗ ವಾಸಿಯಾಗುತ್ತದೆ, ಸಂತಾನ ಭಾಗ್ಯ ಬರುತ್ತದೆ ಎನ್ನುವ ವಾದಗಳನ್ನು ಒಪ್ಪಿಕೊಳ್ಳಲೇ ಬೇಕೆಂಬ ಕಟ್ಟುಪಾಡುಗಳಿಲ್ಲ. ಆದರೆ ಕೆಳವರ್ಗದ ಮನಸ್ಸುಗಳಿಗೆ ಇಂಥ ವಾದಸರಣಿಯನ್ನು ಅರೆದು ಕುಡಿಸಿಬಿಟ್ಟಿದ್ದಾರೆ. ಮಡೆಸ್ನಾನವನ್ನು ಸಮರ್ಥಿಸಿಕೊಳ್ಳುವವರು ಸಾಮೂಹಿಕ ಸಹಭೋಜನ ಆಯೋಜಿಸಿ ಎಲ್ಲರೂ ಊಟ ಮಾಡಿ ಉಳಿದ ಎಂಜಲು ಎಲೆಯ ಮೇಲೆ ದಿನಪೂರ್ತಿ ಉರುಳುಸೇವೆ ಮಾಡಲು ಅವಕಾಶ ಮಾಡಿಕೊಡುವರೇ?

ಇಂಥ ಆಚರಣೆಗಳು ಶತಮಾನಗಳ ಹಿಂದೆ ಇದ್ದ ತಲೆ ಮೇಲೆ ಮಲಹೊರುವಂಥ ಮತ್ತು ಮಲತಿನ್ನಿಸುವಂಥ made-snanaಘಟನೆಯಷ್ಟೇ ಅಪಾಯಕಾರಿ.

ಈ ಆಚರಣೆಗಳು ನಿಲ್ಲಬಾರದು ಎನ್ನುವ ಮನಸ್ಸುಗಳು ಕೆಳವರ್ಗದವರ ಬಾಯಿಂದ ಇಂಥ ಮಾತುಗಳನ್ನು ಆಡಿಸುತ್ತಿವೆಯೇ ಹೊರತು ಆ ಜನ ತಮ್ಮ ಹೃದಯಾಂತರಾಳದಿಂದ ಹೇಳುತ್ತಿರುವ ಮಾತುಗಳಲ್ಲ. ಮಡೆಸ್ನಾನದ ಹರಕೆ ಹೇಳಿಕೊಳ್ಳುವ ಜನರು ಯಾವ ವರ್ಗದವರು ಎನ್ನುವುದನ್ನು ಅವಲೋಕಿಸಿದರೆ ಭಯಾನಕ ಸತ್ಯ ಬೆಳಕಿಗೆ ಬರುತ್ತದೆ.

ಇಂಥ ಆಚರಣೆಗಳು ಸರ್ಕಾರದ ಅಧೀನದ ದೇವಸ್ಥಾನದಲ್ಲೇ ನಡೆಯಲು ಅವಕಾಶವಾಗಿರುವುದು ವಿಪರ್ಯಾಸ. ಪುರೋಗಾಮಿ ಚಿಂತನೆಯನ್ನು ಮೈಗೂಡಿಸಿಕೊಂಡಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಡೆಸ್ನಾನ ನಿಷೇಧಿಸುವ ಎದೆಗಾರಿಕೆ ತೋರಬೇಕಾಗಿದೆ. ಇಲ್ಲವಾದರೆ ನೂರಾರು ವರ್ಷಗಳ ಹಿಂದೆ ಚಲಾವಣೆಯಲ್ಲಿದ್ದ ಆಚರಣೆಗಳನ್ನು ಮತ್ತೆ ಜಾರಿಗೆ ತಂದು ದೇವರ `ಕೃಪೆ’ಗೆ ಪಾತ್ರರಾಗಲಿ.

ಸ್ವಾತಂತ್ರಕ್ಕಾಗಿ ಜೀವನಪರ್ಯಂತ ನಡೆದ ಮಹಾಪುರುಷ ಇನ್ನಿಲ್ಲ

– ಬಿ.ಶ್ರೀಪಾದ ಭಟ್

“During my lifetime I have dedicated myself to this struggle of the African people. I have fought against white domination, and I have fought against black domination.” – Nelson Mandela

ಮಾನವತಾವಾದಿ, ದಕ್ಷಿಣ ಆಫ್ರಿಕಾದ ಬಾಪೂಜಿ ಎಂದೇ ಪ್ರಖ್ಯಾತರಾಗಿದ್ದ ನೆಲ್ಸನ್ ಮಂಡೇಲ ತಮ್ಮ 95 ರ ಇಳಿ Nelson_Mandelaವಯಸ್ಸಿನಲ್ಲಿ ತೀರಿಕೊಂಡಿದ್ದಾರೆ. ಅವರು ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ನೆಲ್ಸನ್ ಮಂಡೇಲ ಎಂದರೆ ಒಂದು Legacy, ಪರಂಪರೆ. ವರ್ಣಬೇಧ ನೀತಿಯ ವಿರುದ್ಧ ಮತ್ತು ಆ ಪ್ರಭುತ್ವದ ದೌರ್ಜನ್ಯದ ವಿರುದ್ಧ 1944 ರಿಂದಲೇ ತಮ್ಮ ಹೋರಾಟವನ್ನು ಪ್ರಾರಂಭಿಸಿದ ಮಂಡೇಲ 1994 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ವರ್ಣಬೇಧ ನೀತಿಯ ಪ್ರಭುತ್ವ ತೊಲಗುವವರೆಗೂ ತಮ್ಮ ಹೋರಾಟವನ್ನು ನಿಲ್ಲಿಸಲಿಲ್ಲ. ಆರಂಭದಲ್ಲಿ ಗೆರಿಲ್ಲಾ ಮಾದರಿಯ ಸಶಸ್ತ್ರ ಹೋರಾಟಕ್ಕೆ ಒಲವು ತೋರಿಸಿದ ಮಂಡೇಲ ಬಲು ಬೇಗನೆ ಅಂಹಿಸಾ ಮಾರ್ಗಕ್ಕೆ ಹೊರಳಿಕೊಂಡರು. ಎಂಬತ್ತರ ದಶಕದ ವೇಳೆಗೆ ಗಾಂಧಿವಾದಿಯಾಗಿ ರೂಪುಗೊಂಡರು. 1993 ರಲ್ಲಿ ನೊಬೆಲ್ ಶಾಂತಿ ಪುರಸ್ಕಾರ ಪಡೆದ ನೆಲ್ಸನ್ ಮಂಡೇಲ 1994 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಮೊಟ್ಟ ಮೊದಲ ಸರ್ವ ಜನಾಂಗಗಳನ್ನೊಳಗೊಂಡಂತಹ ಪ್ರಜಾಪ್ರಭುತ್ವದ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲವು ಸಾಧಿಸಿ ದೇಶದ ಅಧ್ಯಕ್ಷರಾಗಿ ಆಯ್ಕೆಯಾದರು. ಆದರೆ ಈ ಮಹಾನ್ ನಾಯಕ ಯಾವುದೇ ರಾಜಕೀಯ ಮಹಾತ್ವಾಕಾಂಕ್ಷೆಯನ್ನು ಸಾರ್ವಜನಿಕವಾಗಿ ತೋರ್ಪಡಿಸಿಕೊಳ್ಳದೆ 1999 ರಲ್ಲಿ ರಾಜಕೀಯದಿಂದ ನಿವೃತ್ತಿ ಹೊಂದಿದರು. ದಕ್ಷಿಣ ಆಫ್ರಿಕಾದ ಪ್ರಶ್ನಾತೀತ ನಾಯಕನಾಗಿ ಕಡೆ ಉಸಿರಿರುವವರೆಗೂ ಅಧಿಕಾರ ಚಲಾಯಿಸುವ ಎಲ್ಲಾ ಪ್ರಲೋಭನೆಗಳನ್ನು ತಿರಸ್ಕರಿಸಿ ಕೇವಲ ಐದು ವರ್ಷಗಳ ಕಾಲ ಅಧ್ಯಕ್ಷರಾಗಿ ತುಂಬ ಘನತೆಯಿಂದ ತಮಗೆ ಸಹಜವಾದ ಆದರ್ಶವನ್ನು ನಿರೂಪಿಸಿ ತಮ್ಮ ರಾಜಕೀಯ ಅಧಿಕಾರವನ್ನು ಮೊಟಕುಗೊಳಿಸಿಕೊಂಡರು. ಇವರ ಈ ಸಂಯಮ ನಮ್ಮನ್ನು ಬೆರಗುಗೊಳಿಸುತ್ತದೆ. ಭಾರತೀಯರಿಗೆ ಮತ್ತು ತೃತೀಯ ಜಗತ್ತಿನ ಇತರೆ ಅನೇಕ ರಾಷ್ಟ್ರಗಳ ಸರ್ವಾಧಿಕಾರ ಮತ್ತು ಅಮರಣಾಂತ ಅಧಿಕಾರದ ಹುಚ್ಚಿನ ನಾಯಕರನ್ನು ಕಂಡ ದೇಶಗಳ ಜನತೆಗಂತೂ ಇದೂ ಹೀಗೂ ಉಂಟೆ ಎನ್ನುವ ವಿಸ್ಮಯ!!

“ಬಿಳಿಯರ ದೌರ್ಜನ್ಯದ ವಿರುದ್ಧ ಹೋರಾಡಿದ ನಾನು ಕಪ್ಪು ವರ್ಣೀಯರ ಪ್ರತೀಕಾರದ ದೌರ್ಜನ್ಯದ ವಿರುದ್ಧವೂ ಹೋರಾಡುತ್ತೇನೆ” ಎಂದು ಅಧಿಕಾರ ವಹಿಕೊಂಡಾಗ ಪಣ ತೊಟ್ಟ ಮಂಡೇಲ ಗಾಂಧಿವಾದದ ನಿಜ ನಾಯಕ. ನುಡಿದಂತೆ ನಡೆದ ಮಂಡೇಲ ಮಾದರಿಯಾಗಿ ಬದುಕಿದರು. 1962 ರಲ್ಲಿ ಸ್ವಾತಂತ್ರ ಹೋರಾಟಗಾರನಾಗಿ ಜೈಲು ಸೇರಿದ ಮಂಡೇಲ ಜೈಲಿನಿಂದ ಬಿಡುಗಡೆಗೊಂಡಿದ್ದು 1990 ರಲ್ಲಿ. Long_Walk_to_Freedomಸುಮಾರು ಇಪ್ಪತ್ತೆಂಟು ವರ್ಷಗಳ ಕಾಲ ಸೆರೆಮನೆವಾಸ ಅನುಭವಿಸಿದ್ದ ಮಂಡೇಲ ಎಲ್ಲಿಯೂ ನೈತಿಕವಾಗಿ ಕುಗ್ಗಲೇ ಇಲ್ಲ. ಯಾವುದೇ ಬಗೆಯ ಸಂಧಾನವನ್ನು ನಿರಾಕರಿಸಿದರು. ಹೋರಾಟದ ಮಾರ್ಗವನ್ನು ಅನುಸರಿಸುವ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾದಾಗ ತನ್ನ ಎರಡನೇ ಪತ್ನಿ ವಿನ್ನಿ ಮಂಡೇಲ ಅವರೊಂದಿಗೆ 1996 ರಲ್ಲಿ ವಿಚ್ಛೇದನೆ ಪಡೆದುಕೊಂಡ ಮಂಡೇಲ ಬಿಳಿಯರ ಸರ್ಕಾರದ ಕಾಲಘಟ್ಟದಲ್ಲಿ ನಡೆದ ದೌರ್ಜನ್ಯ, ಅತ್ಯಾಚಾರ, ಕೊಲೆಗಳ ತನಿಖೆ ನಡೆಸಲು ಡೆಸ್ಮಂಡ್ ಟುಟು ನಾಯಕತ್ವದಲ್ಲಿ “Truth and Reconciliation Commission” ಅನ್ನು ಸ್ಥಾಪಿಸಿದರು. ಇದರ ತನಿಖೆಯ ವ್ಯಾಪ್ತಿಗೆ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಜರುಗಿದ ದೌರ್ಜನ್ಯಗಳ ವಿರುದ್ಧವೂ ತನಿಖೆ ನಡೆಸಬೇಕೆಂದು ಆದೇಶಿಸಿದ್ದರು. ಒಂದು ವೇಳೆ ಮಂಡೇಲ ಅವರು ಅಧ್ಯಕ್ಷರಾಗಿ ಆಯ್ಕೆಗೊಂಡಂತಹ ಸಂದರ್ಭದಲ್ಲಿ ಈ ಬಗೆಯ ಸಮತೋಲನದ ನಿರ್ಧಾರಗಳನ್ನು ತೆಗೆದುಕೊಳ್ಳದೇ ಹೋಗಿದ್ದಲ್ಲಿ ಶತಮಾನಗಳಿಂದ ಬಿಳಿಯರ ಕೈಯಲ್ಲಿ ಕ್ರೌರ್ಯಕ್ಕೆ ತುತ್ತಾಗಿದ್ದ ಬಹುಸಂಖ್ಯಾತ ಕಪ್ಪುವರ್ಣೀಯರ ಆಕ್ರೋಶಕ್ಕೆ ಅಲ್ಪಸಂಖ್ಯಾತ ಬಿಳಿಯರು ಗುರಿಯಾಗುತ್ತಿದ್ದರು. ಆದರೆ ಅತ್ಯಂತ ನಿರ್ಣಾಯಕ ಘಟ್ಟದಲ್ಲಿ ತನ್ನ ಸಮಯಪ್ರಜ್ಞೆ, ರಾಜಕೀಯ ಮುತ್ಸದ್ದಿತನ ಮತ್ತು ಸಮತಾವಾದದ ತತ್ವಕ್ಕೆ ಬದ್ಧರಾಗಿ ಜರುಗಬಹುದಾಗಿದ್ದ ಜನಾಂಗೀಯ ಘರ್ಷಣೆ ಮತ್ತು ಪ್ರತೀಕಾರದ ರಕ್ತಪಾತವನ್ನು ತಡೆದರು. ಇದು ಮಂಡೇಲಾ ಅವರ ಮಹಾನ್ ಸಾಧನೆಗಳಲ್ಲೊಂದು.

“ಮಡಿಬಾ” ಎಂದು ಪ್ರೀತಿಯಿಂದ ಕರೆಯಲ್ಪಡುತ್ತಿದ್ದ ಮಂಡೇಲ ಕುರಿತು ಅವರ ಸಹವರ್ತಿ ಡೆಸ್ಮಂಡ್ ಟುಟು ಕೆಲವು ಗಂಟೆಗಳ ಹಿಂದೆ ಹೇಳಿದ್ದು ಇದು: “He was not only an amazing gift to humankind, he made South Africans and Africans feel good about being who we are. He made us walk tall.”

ಇನ್ನು ಮುಂದಿನ ಕೆಲವು ದಿನಗಳ ಕಾಲ ಜಗತ್ತಿನಾದ್ಯಂತ ಈ “ಮಡಿಬಾ ಮ್ಯಾಜಿಕ್” ಕುರಿತು ಚರ್ಚೆಗಳು ನಡೆಯುತ್ತಿರುತ್ತವೆ. ಇದು ಇಂದು ತುರ್ತಾಗಿ ಅವಶ್ಯಕವಿರುವ ಆಕ್ಸಿಜನ್.