– ಮುನೀರ್ ಕಾಟಿಪಳ್ಳ
ಕರಾವಳಿ ಜಿಲ್ಲೆ ಮಂಗಳೂರಿನಲ್ಲಿ ಮತ್ತೆ ಮತೀಯ ರಕ್ಕಸರ ರಾಜಕೀಯ ಚದುರಂಗದಾಟ ಶುರುವಾಗಿದೆ. ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಇಂತಹ ಬೆಳವಣಿಗೆ ನಿರೀಕ್ಷಿತವೇ ಆಗಿದ್ದರೂ ಏಕಾಏಕಿ ಮತೀಯ ಶಕ್ತಿಗಳು ಮೇಲುಗೈ ಸಾಧಿಸಿರುವುದು. ಸಿದ್ದರಾಮಯ್ಯನವರ ಕಾಂಗ್ರೆಸ್ ಸರಕಾರ ಈ ನಿಟ್ಟಿನಲ್ಲಿ ಯಾವುದೇ ಗಂಭೀರ ಕ್ರಮಕೈಗೊಳ್ಳದೆ ಎದುರಾಳಿಗಳಿಗೆ ಆಟ ಬಿಟ್ಟು ಕೊಟ್ಟಿರುವುದು ಅನಿರೀಕ್ಷಿತ. ವಿಧಾನ ಸಭಾ ಚುನಾವಣೆಯ ಸೋಲಿನಿಂದ ಕಂಗೆಟ್ಟಿದ್ದ ಬಿಜೆಪಿ ಪರಿವಾರ ಇಂತಹದ್ದೊಂದು ಆಟಕ್ಕೆ ಸ್ಕೆಚ್ ಹಾಕಿ ಸಮಯ ಕಾಯುತ್ತಾ ಕೂತದ್ದು ಅವರ ನಡೆಗಳನ್ನು ಬಲ್ಲ ಎಲ್ಲರಿಗೂ ಗೊತ್ತಿರುವಂತದ್ದೆ. ಆದರೆ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಹುಟ್ಟಿಕೊಂಡ ಹೋರಾಟ ಇಲ್ಲಿನ ಕೋಮುಶಕ್ತಿಗಳ ಆಶ್ರಯದಾತರಾಗಿರುವ ಆಗೋಚರ ಸರಕಾರಗಳ ವಿರುದ್ಧದ ಜನ ಚಳುವಳಿಯಾಗಿ ಪರಿವರ್ತನೆಗೊಂಡಿದ್ದು, ಜನ ಚಳುವಳಿಗಳು ಜನಸಾಮಾನ್ಯರ ಮಧ್ಯೆ ಸಕ್ರಿಯಗೊಂಡಿದ್ದು, ನುಡಿಸಿರಿ, ಜನನುಡಿ ಕಾರ್ಯಕ್ರಮಗಳು ಹುಟ್ಟು ಹಾಕಿದ ವೈಚಾರಿಕ ಸಂಘರ್ಷಗಳ ಮಧ್ಯೆ ಏಕಾಏಕಿ ಮತೀಯ ಶಕ್ತಿಗಳಿಗೆ ಪ್ರಬಲವಾಗಿ ಎದ್ದು ನಿಲ್ಲಲು ಸಾಧ್ಯವಾದುದರ ಹಿಂದೆ ಆಳವಾದ ಪಿತೂರಿಯ ವಾಸನೆ ಬಡಿಯುತ್ತದೆ.
ಕರಾವಳಿಯ ಜಿಲ್ಲೆಗಳಲ್ಲಿ ನೈತಿಕ ಪೊಲೀಸ್ಗಿರಿ, ಭೂಗತ ಜಗತ್ತು, ಕ್ರಿಮಿನಲ್ ಚಟುವಟಿಕೆ, ಮತೀಯ ಹಿಂಸೆ ಹೊಸದಲ್ಲ. ಕಳೆದ ಒಂದು ದಶಕದಲ್ಲಿ ಇಲ್ಲಿನ ಜನತೆ ಈ ಕೂಟಗಳ ಅಪವಿತ್ರ ಮೈತ್ರಿಯಿಂದ ಹೈರಾಣಗೊಂಡಿರುವುದರಿಂದ ಪಕ್ಕನೆ ಇವರು ಹಣೆದ ಬಲೆಗೆ ಬೀಳಲಾರರು ಎಂಬ ನಿರೀಕ್ಷೆ ಜಾತ್ಯಾತೀತರದ್ದು. ಕಾಂಗ್ರೆಸ್ ಸರಕಾರವು ಹಳೆಯ ನೆನಪುಗಳಿಂದ ಪಾಠ ಕಲಿತು ಇಂತಹ ಶಕ್ತಿಗಳ ಬಗ್ಗೆ ನಿರ್ದಾಕ್ಷಿಣ್ಯವಾಗಿ ವರ್ತಿಸುತ್ತದೆ ಎಂಬ ನಿರೀಕ್ಷೆಯು ಸಹಜ.
ಆದರೆ ಈಗ ನಡೆದಿರುವ ಬೆಳವಣಿಗೆಗಳು ಆತಂಕ ಉಂಟುಮಾಡುವಂತಿದೆ. ಹಿಂದುತ್ವವಾದಿ ಶಕ್ತಿಗಳಿಗೆ ಪರ್ಯಾಯ ಎಂಬಂತೆ ಬಿಂಬಿಸಿಕೊಂಡು ಮುಸ್ಲಿಮರ ಮಧ್ಯೆ ನೆಲೆ ಕಂಡುಕೊಂಡಿರುವ ಮತ ತೀವ್ರವಾದಿ ಶಕ್ತಿಗಳು ಈ ಬಾರಿಯ ಆಟದಲ್ಲಿ ನಿರ್ವಹಿಸುತ್ತಿರುವ ಪಾತ್ರ ಸಂಘ ಪರಿವಾರದ ಕೆಲಸವನ್ನು ಸುಲಭಗೊಳಿಸಿದೆ. ಅದರ ಜೊತೆಯಲ್ಲಿ ಮುಸ್ಲಿಂ ಭೂಗತ ಜಗತ್ತಿಗೆ ಎಂಟ್ರಿ ಕೊಟ್ಟಿರುವ ಹೊಸ ತಲೆಮಾರಿನ ಕ್ರಿಮಿನಲ್ ಹುಡುಗರ ಅಮಾನವೀಯ ವಿಕೃತ ಕೃತ್ಯಗಳು ಪರಿವಾರದ ರೊಟ್ಟಿಯನ್ನು ಅನಾಯಾಸವಾಗಿ ತುಪ್ಪಕ್ಕೆ ಜಾರಿಸಿದೆ.
ವಿಟ್ಲದಲ್ಲಿ ಕರಾವಳಿ ಅಲೆ ಪತ್ರಿಕೆಯ ವರದಿಗಾರ ವಿ.ಟಿ. ಪ್ರಸಾದ್ಗೆ ಪಿಎಫ್ಐ ಕಾರ್ಯಕರ್ತರು ಎನ್ನಲಾದ ಗುಂಪು ಮುಸ್ಲಿಂ ಮಹಿಳೆಗೆ ಸಹಾಯ ಮಾಡಿದ ಕಾರಣಕ್ಕೆ ಮಾಡಿದ ಬರ್ಬರ ಹಲ್ಲೆ, ಬಂಟ್ವಾಳದ ಗಡಿಯಾರ ಎಂಬಲ್ಲಿ ಮುಸ್ಲಿಂ ಮಹಿಳೆಯೊಂದಿಗೆ ಮಾತನಾಡಿಸಿದ್ದಕ್ಕೆ ಜಯರಾಮ ಎಂಬ ಲಾರಿ ಚಾಲಕನಿಗೆ ಗುಂಪು ಕಟ್ಟಿಕೊಂಡು ಅನಾಗರಿಕ ರೀತಿಯಲ್ಲಿ ನಡೆಸಿದ ಹಲ್ಲೆ, ಮಂಗಳೂರು ನಗರದ ಕೇಂದ್ರ ಭಾಗದಲ್ಲಿ ಕೇರಳ ಮೂಲದ ಇಬ್ಬರು ಹಿಂದು ವಿದ್ಯಾರ್ಥಿಗಳಿಗೆ ಅವರ ಸಹಪಾಠಿ ಮುಸ್ಲಿಂ ವಿದ್ಯಾರ್ಥಿನಿಗೆ ಡ್ರಾಪ್ ಕೊಟ್ಟದ್ದಕ್ಕೆ ನಡೆಸಿದ ಬಹಿರಂಗ ಹಲ್ಲೆಗಳು ಬಜರಂಗ ದಳ, ವಿಶ್ವ ಹಿಂದೂ ಪರಿಷತ್ ಮುಂತಾದ ಹಿಂದುತ್ವವಾದಿ ಸಂಘಟನೆಗಳಿಗೆ ಅಕಾಲದಲ್ಲಿ ಹಬ್ಬ ಆಚರಿಸುವಷ್ಟು ಸಂಭ್ರಮವನ್ನು ಉಂಟುಮಾಡಿದೆ. ಅದರೊಂದಿಗೆ ಹದಿಹರೆಯದ ಮುಸ್ಲಿಂ ಕ್ರಿಮಿನಲ್ಗಳ ಗುಂಪೊಂದು ಕೊಣಾಜೆ ಎಂಬಲ್ಲಿ ಹಿಂದೂ ಧರ್ಮಕ್ಕೆ ಸೇರಿದ ವೈದ್ಯಕೀಯ ವಿದ್ಯಾರ್ಥಿನಿ ಮತ್ತಾಕೆಯ ಮುಸ್ಲಿಂ ಸಹಪಾಠಿಯನ್ನು ಅಪಹರಿಸಿ ಅವರನ್ನು ಕೂಡಿ ಹಾಕಿ ಬಲವಂತವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಮಾಡಿ ಆ ದೃಶ್ಯವನ್ನು ವಿಡಿಯೋ ರೆಕಾರ್ಡ್ ಮಾಡಿ ಲಕ್ಷಾಂತರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿತ್ತು. ಆ ಸಂದರ್ಭದಲ್ಲಿ ನರೇಂದ್ರ ನಾಯಕ್ ಮತ್ತವರ ಪ್ರಗತಿಪರ ಬಳಗಕ್ಕೆ ವಿದ್ಯಾರ್ಥಿನಿಯ ಆಪ್ತರಿಂದ ಮಾಹಿತಿ ಸಿಕ್ಕಿದ್ದರಿಂದ ಪೊಲೀಸರು ಸಕಾಲಿಕ ಕಾರ್ಯಾಚರಣೆ ನಡೆಸಿ ವಿದ್ಯಾರ್ಥಿಗಳನ್ನು ಬಂಧಮುಕ್ತಗೊಳಿಸಿ ಕ್ರಿಮಿನಲ್ ಗ್ಯಾಂಗ್ ಅನ್ನು ಬಂಧಿಸಿ ಜೈಲಿಗಟ್ಟಿದರು. ಪೊಲೀಸರ ನಿಷ್ಕೀಯತೆ, ಕಾಂಗ್ರೆಸ್ ಮಂತ್ರಿಗಳ, ಪುಡಿನಾಯಕರ ಸ್ನೇಹದಿಂದಾಗಿ ಇಲ್ಲಿನ ಭೂಗತ ಜಗತ್ತು ಇತ್ತೀಚೆಗೆ ಸ್ವಲ್ಪ ಹೆಚ್ಚೇ ಅನ್ನುವಷ್ಟು ಚಿಗಿತುಕೊಂಡಿದೆ. ದುಬಾಯ್ ಡಾನ್ಗಳಿಗೆ, ಅವರ ಒಂದು ಮೊಬೈಲ್ ಕರೆಗೆ ಇಲ್ಲಿನ ಉದ್ಯಮಿಗಳು ದೈವದೇವರುಗಳಿಗಿಂತಲೂ ಜಾಸ್ತಿ ಭಯ ಪಡುತ್ತಾರೆ.
ಕೊಣಾಜೆ ಘಟನೆ ನಡೆದದ್ದೇ ತಡ ಸಂಘ ಪರಿವಾರದ ಗುಂಪುಗಳು ವಿದ್ಯಾರ್ಥಿ ಜೋಡಿಗೆ ನೀಡಿದ ವಿಕೃತ ಹಿಂಸೆಯನ್ನು ಹಿಂದೂ ಧರ್ಮದ ಮೇಲಿನ ಸಂಘಟಿತ ದಾಳಿ ಎಂಬಂತೆಯೂ, ಕರಾವಳಿಯ ಇಡೀ ಬ್ಯಾರಿ ಮುಸ್ಲಿಂ ಸಮುದಾಯ ಇದಕ್ಕೆ ಹೊಣೆಯೆಂಬಂತೆಯೂ ಬೀದಿಗಿಳಿದು ಬಿಟ್ಟಿದೆ. ಇವರು ಆರ್ಭಟಕ್ಕೆ ಪೂರಕ ಎಂಬಂತೆ ಮುಸ್ಲಿಂ ನೈತಿಕ ಪೊಲೀಸರ ಸರಣಿ ದಾಳಿಗಳು ಇದೇ ಸಂದರ್ಭದಲ್ಲಿ ನಡೆದದ್ದು ಪರಿವಾರದ ಧರ್ಮರಕ್ಷಕರಿಗೆ ಆನೆಬಲ ಬಂದಂತಾಗಿದೆ. ಇಂತಹ ಸಂದರ್ಭದಲ್ಲಿ ತಕ್ಷಣ ಕ್ರಿಯಾಶೀಲ ಆಗಬೇಕಾದ ಪೊಲೀಸ್ ಇಲಾಖೆ, ಜಿಲ್ಲಾಡಳಿತ, ಮೂವರು ಮಂತ್ರಿಗಳ ನಿಧಾನ ಪ್ರತಿಕ್ರಿಯೆ ಜಿಲ್ಲೆಯ ಜನತೆಯ ಆತಂಕವನ್ನು ಹೆಚ್ಚಿಸಿದೆ. ವಿಟ್ಲ, ಗಡಿಯಾರ, ಪಳ್ನೀರ್ ಮುಂತಾದೆಡೆ ದಾಳಿಗಳನ್ನು ಸಂಘಟಿಸಿದ್ದ ಮುಸ್ಲಿಂ ಮತೀಯವಾದಿ ಗುಂಪುಗಳ ಮೇಲೆ ದೃಢವಾದ ಕ್ರಮಗಳನ್ನು ಕೈಗೊಳ್ಳದೇ ಇದ್ದುದಕ್ಕೆ ಕಾಂಗ್ರೆಸ್ಪಕ್ಷ ಮಾತ್ರ ಅಲ್ಲ ಜಿಲ್ಲೆಯ ಜನಸಾಮಾನ್ಯರೂ ಬೆಲೆ ತೆರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಬಜರಂಗದಳ, ಹಿಂದೂ ಜಾಗರಣಾ ವೇದಿಕೆಗಳು ಪ್ರತಿಭಟನೆಯ ನೆಪದಲ್ಲಿ ಮುಸ್ಲಿಮರನ್ನು, ಜಾತ್ಯಾತೀತರನ್ನು ಹೀನಾಯವಾಗಿ ನಿಂದಿಸುತ್ತಿವೆ. ರಕ್ತಪಾತಕ್ಕೆ ಕರೆ ಕೊಡುತ್ತಿವೆ, ಹಿಂದೂ ಯುವಕರನ್ನು ಗಲಭೆಗೆ ಪ್ರಚೋದಿಸುತ್ತಿದೆ. ತಾವು ನೈತಿಕ ಪೊಲೀಸ್ಗಿರಿಯ ವಿರೋಧಿಗಳು ಎಂಬಂತೆ ಬಿಂಬಿಸಿಕೊಳ್ಳುವ ದೃಶ್ಯಗಳನ್ನು ಸೃಷ್ಟಿಸುತ್ತಿವೆ.
ಈ ಬಾರಿಯ ಧರ್ಮದಾಟದ ವಿಶೇಷತೆ ಏನೆಂದರೆ ಆಟದಲ್ಲಿ ಕಾಯಿ ಉರುಳಿಸುತ್ತಿರುವುದು ಮುಸ್ಲಿಂ ತೀವ್ರವಾದಿ ಗುಂಪು ಮತ್ತು ಕ್ರಿಮಿನಲ್ ಗುಂಪುಗಳು. ಹಿಂದೆಲ್ಲಾ ಇಂತಹ ಪರಿಸ್ಥಿತಿ ನಿರ್ಮಿಸಲು ಪರಿವಾರದ ಗೇಮ್ ಫ್ಲಾನರ್ಗಳು ಕಾಲ್ಪನಿಕ ಸುಳ್ಳಿನ ಕಂತೆಯನ್ನು ಕಟ್ಟಲು ಹರಸಾಹಸ (ಆಗೆಲ್ಲ ಜಿಲ್ಲೆಯ ಕೆಲ ಪತ್ರಿಕೆಗಳು ಅವರ ಕಥೆಗಳಿಗೆ ಜೀವತುಂಬಿದೆ)ಪಡಬೇಕಿತ್ತು. ಈಗ ಮುಸ್ಲಿಮರ ಮಧ್ಯೆ ಇಂತಹ ಘಟನೆಗಳನ್ನು ಸೃಷ್ಟಿಸಲು ಇವರ ದಯಾದಿಗಳು ರಣೋತ್ಸಾಹದಲ್ಲಿ ಮುಂದುವರಿಯುತ್ತಿರುವುದರಿಂದ ಅಷ್ಟರ ಮಟ್ಟಿಗೆ ಸಂಘ ಪರಿವಾರ ನಿರಾಳ.
ಮುಸ್ಲಿಂ ಮತೀಯವಾದಿಗಳು ಮತ್ತು ಹಿಂದುತ್ವವಾದಿಗಳು ಪರಸ್ಪರ ಹೊಂದಾಣಿಕೆಯಿಂದಲೇ (ಕಳೆದ ಚುನಾವಣೆಯ ಸಂದರ್ಭದಲ್ಲಿ ಇಂತಹ ಆರೋಪಿಗಳು ಸಕಾರಣವಾಗಿಯೇ ಕೇಳಿ ಬಂದಿದ್ದವು) ಇಂತಹ ಪರಿಸ್ಥಿತಿಯನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ ಎಂಬ ಮಾತುಗಳು ಜಿಲ್ಲೆಯಲ್ಲಿ ಕೇಳಿ ಬರುತ್ತಿದೆ. ಇದು ನಿಜವಾಗಿದ್ದರೆ ಆಶ್ಚರ್ಯಪಡುವಂತಹದ್ದು ಏನೂ ಇಲ್ಲ. ಆದರೆ ಎರಡೂ ಕಡೆಯ ಕೋಮುಶಕ್ತಿಗಳು ಕೈ ಹಾಕುತ್ತಿರುವುದು ತಮ್ಮ ಮತ ಬುಟ್ಟಿಗೆ ಎಂಬ ಅರಿವಿನಿಂದಲಾದರೂ ಮತೀಯವಾದಿಗಳ, ಅವರಿಗೆ ಪೂರಕವಾಗಿ ವರ್ತಿಸುತ್ತಿರುವ ಕ್ರಿಮಿನಲ್ಗಳನ್ನು ಮಟ್ಟಹಾಕದೆ ನಿರ್ಲಿಪ್ತರಾಗಿ ವರ್ತಿಸುತ್ತಿರುವ ತ್ರಿಮೂರ್ತಿ ಮಂತ್ರಿಗಳಾದ ರೈ, ಖಾದರ್, ಜೈನ್ಗಳ ವರ್ತನೆಯ ಬಗ್ಗೆ ಏನನ್ನೋಣ…