Monthly Archives: December 2013

ಜಿ.ಎಸ್. ಶಿವರುದ್ರಪ್ಪನವರ “ಭೀಮಾಲಾಪ” ಕವಿತೆ

ಭೀಮಾಲಾಪ

– ಜಿ.ಎಸ್. ಶಿವರುದ್ರಪ್ಪ

ಸೀರೆ ಉಟ್ಟು, ಬಳೆ ತೊಟ್ಟು, ಕಾಲಿಗೆ
ಗೆಜ್ಜೆ ಕಟ್ಟಿದ್ದಾನೆ ಒಬ್ಬ;
ಇನ್ನೊಬ್ಬ ಕಾವಿ ಉಟ್ಟು ಮೂಲೆಗೆ ಕೂತಿದ್ದಾನೆ
ದನದ ಕೊಟ್ಟಿಗೆಯಲ್ಲಿ ಒಬ್ಬ, ಕುದುರೆಲಾಯದಲ್ಲಿ
ಮತ್ತೊಬ್ಬ.
ಇದ್ದಾಳೆ ಇವಳು ಅವರಿವರ ತಲೆಯGSS
ಹೇನು ಹೆಕ್ಕುತ್ತಾ
ಆಗಾಗ ನಮ್ಮನ್ನೂ ಕುಕ್ಕುತ್ತಾ

ನಾನು ಇದ್ದೇನೆ ಅಡುಗೆ ಮನೆಯಲ್ಲಿ
ಉರಿವ ಸೌದೆಗಳ ಜೊತೆಗೆ
ಪಾತ್ರೆಗಳಲ್ಲಿ ಕೊತ ಕೊತ ಕುದಿದು
ಹಳೆಯ ನೆನಪುಗಳನ್ನು ರುಬ್ಬುತ್ತಾ;

ಕಣ್ಣೆದುರು ತೇಲಿ ಬರುತ್ತವೆ;
ಕಂಡದ್ದು, ಕಲಿತದ್ದು; ಬೆಂಕಿಗೆ ಬಿದ್ದು ಪಾರಾದದ್ದು;
ಪಗಡೆ ದಾಳದ ಜೊತೆಗೆ ಉರುಳಿ ಬಿದ್ದದ್ದು ; ಬಿಚ್ಚಿದ
ಜಡೆಯ ನೆರಳಿನ ಕೆಳಗೆ ಭುಸುಗುಟ್ಟಿ ನರಳಿದ್ದು;
ಕಾಡು ಪಾಲಾಗಿ ಅಲೆದದ್ದು

ನಿಟ್ಟುಸಿರಲ್ಲಿ ಪಟ ಬಿಚ್ಚಿ ತೇಲುತ್ತವೆ ಊರುಗಳು;
ಮಹಾರಣ್ಯಗಳು, ಋಷಿಗಳು, ರಾಕ್ಷಸರು;
ಬೆಳಗು ಬೈಗುಗಳು, ಇನ್ನೂ ಏನೇನೋ
ಸುರುಳಿ ಬಿಚ್ಚುತ್ತವೆ
ಜೀವ ಹಿಂಡುತ್ತವೆ.

ಅಲ್ಲಿ ಊರಾಚೆ ಮಸಣದಲ್ಲಿ
ಇದ್ದ ಪೌರುಷವನ್ನು ದುಂಡಗೆ ಸುತ್ತಿ
ಹೆಣವಾಗಿ ಮಲಗಿಸಿದ್ದೇವೆ, ಮರದ ಕೊಂಬೆಯ ಮೇಲೆ.

ನೋಡುತ್ತೇನೆ, ಸುತ್ತಲೂ ಎಂತೆಂಥವೋ
ವಿಜೃಂಭಿಸಿ ಮೀಸೆ ತಿರುವುತ್ತವೆ
ಏರಬಾರದ ಕಡೆ ಏರಿ, ಇಳಿಯಬಾರದ ಕಡೆಗೆ
ಇಳಿದು ಕೆಡೆಸಿ ಹೊಲಸೆಬ್ಬಿಸಿವೆ.

ಗೆರೆ ದಾಟಬಾರದ ನಾನು ಕಾಯುತ್ತಿದ್ದೇನೆ
ಉರಿವ ಸೌದೆಗಳ ಜೊತೆಗೆ
ಪಾತ್ರೆಗಳಲಿ ಕೊತ ಕೊತ ಕುದಿದು
ಕಾಯುತ್ತಿದ್ದೇನೆ.

“ನುಡಿಸಿರಿ”ಯ ನಂತರ

– ಪ್ರಸಾದ್ ರಕ್ಷಿದಿ

“ಆಳ್ವಾಸ್ ನುಡಿಸಿರಿ” ಮತ್ತು ಅಲ್ಲಿನ ವಿಚಾರಗಳ ಬಗೆಗೆ ನಡೆಯುತ್ತಿರುವ ಚರ್ಚೆ ಹಾಗೂ ರವಿ ಕೃಷ್ಣಾರೆಡ್ಡಿಯವರ ಲೇಖನ ಇವುಗಳನ್ನು ನೋಡಿ ಕೆಲವು ವಿಷಯಗಳನ್ನು ಹಂಚಿಕೊಳ್ಳಬೇಕೆನಿಸಿತು. ರವಿಯವರ ನಿಲುವು ಸರಿಯಾಗಿಯೇ ಇದೆ. ಇದಕ್ಕೆ ಪೂರಕವಾಗಿ ನಾನು ಕೆಲವು ಸಂಗತಿಗಳನ್ನು ಹೇಳಬಯಸುತ್ತೇನೆ.

ಮೊದಲನೆಯದಾಗಿ ಆಳ್ವಾಸ್ ಪ್ರತಿಷ್ಟಾನ ಮತ್ತು ಅದರ ಚಟುವಟಿಕೆಗಳ ಬಗ್ಗೆ. alvas-nudisiri-3ಆಳ್ವರ ಸಾಂಸ್ಕೃತಿಕ ಆಸಕ್ತಿಗಳನ್ನು ನಮ್ಮಂತವರು ಹಲವು ವರ್ಷಗಳಿಂದ ನೋಡುತ್ತ ಬಂದಿದ್ದೇವೆ. ಬಹುಶಃ ಮೋಹನ ಆಳ್ವರ ಅಭಿರುಚಿಗಳ ಬಗ್ಗೆ ಮತ್ತು ಅವರ ಸಾಂಸ್ಕೃತಿಕ ಆಸಕ್ತಿಗಳ ಬಗ್ಗೆ ಯಾರದೂ ತಕರಾರು ಇರಲಾರದು. ಆದರೂ ಹೀಗೇಕೆ ಆಗುತ್ತಿದೆ. ಎನ್ನುವುದಕ್ಕೆ ಹಲವು ಕಾರಣಗಳಿವೆ. ಮೊದಲನೆಯದಾಗಿ ಆಳ್ವರು ನಮ್ಮ ಊಳಿಗಮಾನ್ಯ ಪದ್ಧತಿಯ ತುಂಡರಸರ ಪರಂಪರೆಯಲ್ಲಿ ಬಂದವರು. ಅವರ ಮಾತಿನ ಕ್ರಮ, ನಿಲುವುಗಳು, ಹಾವಭಾವಗಳು ಕೂಡಾ ಇದೇ ರೀತಿ ಇವೆ. ಆದರೆ ವೈಯಕ್ತಿವಾಗಿ ಅವರು ತುಂಬ ವಿನಯವಂತರೆಂದೇ ಕೇಳಿದ್ದೇನೆ. (ನನಗೆ ವೈಯಕ್ತಿಕವಾಗಿ ಆಳ್ವರ ಪರಿಚಯ ಇಲ್ಲ. ನಾನು ಇದುವರೆಗೂ ಅಲ್ಲಿಯ ಯಾವುದೇ ಕಾರ್ಯಕ್ರಮದಲ್ಲೂ ಭಾಗವಹಿಸಿಲ್ಲ.)

ಮೋಹನ ಆಳ್ವರ ವಿದ್ಯಾಸಂಸ್ಥೆಗಳ ಪ್ರಚಾರಕ್ಕೆ ಅವರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಬಳಸಿಕೊಳ್ಳುತ್ತಾರೆ ಎಂಬ ದೂರಿದೆ. ಅದು ನಿಜ ಕೂಡಾ, ಆದರೆ ಹಲವಾರು ವಿದ್ಯಾಸಂಸ್ಥೆಗಳನ್ನು ಹೊಂದಿ, ಜಾತಿ-ರಾಜಕೀಯ, ಅಧಿಕಾರಗಳನ್ನು ಬಳಸಿ ನಡೆಸುವ (ಅವರೂ ಕೂಡಾ ತೋರಿಕೆಗಾದರೂ ಕೆಲವು ಬಡಮಕ್ಕಳಿಗೆ ಉಚಿತ ವಿದ್ಯೆಯನ್ನೊ ಅಥವಾ ರಿಯಾಯಿತಿಗಳನ್ನೋ ಕೊಡುತ್ತಾರೆ) ಮಠಮಾನ್ಯರು, ಮಂತ್ರಿಗಳಿಗಿಂತ ಯಾವುದೇ ತಾರತಮ್ಯ ತೋರದೆ ಎಲ್ಲ ವರ್ಗ-ಜಾತಿಗಳ ನೂರಾರು Alvas-Campusವಿದ್ಯಾರ್ಥಿಗಳಿಗೆ ಉಚಿತ ವಿದ್ಯೆ ನೀಡಿದ, ನೀಡುತ್ತಿರುವ ಮೋಹನ ಆಳ್ವರ ಬಗ್ಗೆ ನಾವು ಅಷ್ಟೊಂದು ಕಠಿಣರಾಗಬೇಕಿಲ್ಲವೆನಿಸುತ್ತದೆ. ಆದರೆ ಆಳ್ವರು ಇದಕ್ಕೆ ಯಾವರೀತಿಯಲ್ಲಿ ಹಣಸಂಗ್ರಹ ಮಾಡುತ್ತಾರೆ. ಮತ್ತು ಇವರ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹಣವೆಲ್ಲಿಂದ ಬರುತ್ತದೆಯೆಂಬ ಬಗ್ಗೆ ತಿಳಿದುಕೊಳ್ಳುವ ಹಕ್ಕು ಖಂಡಿತ ನಮಗೆಲ್ಲರಿಗೂ ಇದೆ. ಯಾಕೆಂದರೆ ನನಗೆ ಕೋಟ್ಯಂತರ ರೂಪಾಯಿಗಳ ಸಾಲವಿದೆಯೆಂದು ಆಳ್ವರು ಅನೇಕ ವೇದಿಕೆಗಳಲ್ಲಿ ಹೇಳಿದ್ದಾರೆ. ಅಲ್ಲದೆ ಆಳ್ವರ ಸಾಲದಲ್ಲಿ ಬಹುಪಾಲು ಹಣ ಧರ್ಮಸ್ಥಳದ್ದೆಂದು ಜನ ಅಲ್ಲಲ್ಲಿ ಮಾತಾಡಿಕೊಳ್ಳುತ್ತಿದ್ದಾರೆ. ಇದರ ಸತ್ಯಾಸತ್ಯತೆಯನ್ನು ಆಳ್ವರೇ ತಿಳಿಸಬೇಕು. ಆಳ್ವರ ವಿದ್ಯಾಸಂಸ್ಥೆಗಳ ಆಡಳಿತದ ವಿಚಾರದಲ್ಲಿ ಯಾರದ್ದಾದರೂ ತಕರಾರಿದ್ದರೆ ಅದಕ್ಕೂ ಆಳ್ವರು ಉತ್ತರಿಸಬೇಕು. ನಾಡು ನುಡಿಯ ಸೇವೆ ಮಾಡುತ್ತೇನೆನ್ನುವ ಆಳ್ವರು ಅಷ್ಟಾದರೂ ಪಾರದರ್ಶಕರಾಗಿರುವದು ಅತೀ ಅಗತ್ಯ. ಹಿಂದೆ ನಮ್ಮ ಒಬ್ಬ ಹಿರಿಯ ರಂಗ ನಿರ್ದೇಶಕರು ತಾನು ’ನಾಟಕ ಮಾಡಿಸಿ ನಷ್ಟಪಟ್ಟುಕೊಂಡೆ’ vijaykarnataka-mohan-alva-22122013ಎಂದು ದೂರಿದಾಗ ’ನಿಮ್ಮಲ್ಲಿ ನಾಟಕ ಮಾಡಿಸಿ ಎಂದು ಕನ್ನಡಿಗರು ಕೇಳಿಕೊಂಡಿದ್ದರೇ’ ಎಂದು ಲಂಕೇಶರು ಮೊಟಕಿದ್ದರು.

ಇದಲ್ಲದೆ ಆಳ್ವರು ತಮ್ಮ ಕಾರ್ಯಕ್ರಮಗಳಿಗೆ “ಆಳ್ವಾಸ್ ವಿರಾಸತ್”. “ಆಳ್ವಾಸ್ ನುಡಿಸಿರಿ” ಇವುಗಳಿಗೆ ಬದಲಾಗಿ ಕನ್ನಡ ನುಡಿಸಿರಿ ಎಂದೋ ಕರಾವಳಿ ವಿರಾಸತ್ ಎಂದೋ ಅಥವಾ ಬೇರೇನಾದರೂ ಹೆಸರಿನಿಂದ ಕರೆದಿದ್ದರೆ ಅದು ಇನ್ನು ಹೆಚ್ಚು ವಿಸ್ತ್ರುತವಾಗುತ್ತಿತ್ತು, ಆಳ್ವರು ಇನ್ನೂ ದೊಡ್ಡವರಾಗುತ್ತಿದ್ದರು. ಆದರೆ ಅದು ಅವರ ವಿವೇಚನೆಗೆ ಬಿಟ್ಟ ವಿಷಯ.

ಇನ್ನು ಆಳ್ವರ ವೈಚಾರಿಕ ದೃಷ್ಟಿಕೋನಗಳ ಬಗ್ಗೆ, ಅವರು ನಡೆಸುತ್ತಿರುವ ಪಲ್ಲಕ್ಕಿಸೇವೆ ಸನ್ಮಾನಗಳು ಇತ್ಯಾದಿಗಳ ಬಗ್ಗೆ, ಹಾಗೇ ಶ್ರೀಮಂತಿಕೆಯ ವೈಭವೀಕರಣ ಇತ್ಯಾದಿ ವಿಚಾರವಾಗಿ ಅವರಲ್ಲಿ ಯಾರಾದರೂ ಹಿರಿಯರು ಕುಳಿತು ತಿಳಿಹೇಳಿದರೆ ಅವರು ಖಂಡಿತ ಬದಲಾಗುತ್ತಾರೆಂಬ ನಂಬಿಕೆ ನನಗಿನ್ನೂ ಉಳಿದಿದೆ. ಯಾಕೆಂದರೆ ಆಳ್ವರಂಥ ಸಂಘಟಕರನ್ನು ಒಂದಿಷ್ಟು ಒಳ್ಳೆಯ ಅಭಿರುಚಿ ಹೊಂದಿದವರನ್ನು ಅಪ್ಪಟ ಕೋಮುವಾದಿಗಳ ಬಲೆಗೆ ಬೀಳದಂತೆ ಪ್ರಯತ್ನಿಸುವ ಕೆಲಸವೂ ನಮ್ಮದಾಗಬೇಕು.

ಇನ್ನು ಬರಗೂರು ರಾಮಚಂದ್ರಪ್ಪನವರು ಮತ್ತು ಇನ್ನು ಕೆಲವರು ನಡೆದುಕೊಂಡ ರೀತಿ ನಮ್ಮಂತವರಿಗೆ ಖಂಡಿತ ಬೇಸರವೆನಿಸುತ್ತದೆ. ಬರಗೂರಿಗೆ ಆಳ್ವಾಸ್ ನುಡಿಸಿರಿಯ ಬಗ್ಗೆ ಎಲ್ಲ ವಿವರಗಳೂ ಮೊದಲೇ ಇತ್ತು. ಅವರು ಸನ್ಮಾನವನ್ನು ನಿರಾಕರಿಸಿ, alva-nudisiri-baraguru-mohan-alva-veerendra-heggade-vivek-raiನಂತರ ಭಾಷಣದಲ್ಲಿ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದರೆ ಸಾಕಿತ್ತು. ಈ ಎಲ್ಲ ಗೊಂದಲ ಸೃಷ್ಟಿಯಾಗುತ್ತಿರಲಿಲ್ಲ. ಆದರೆ ಆಳ್ವರ ವಿಚಾರದಲ್ಲಿ ಕೊಡಬಯಸುವ ರಿಯಾಯತಿಯನ್ನು ನಾನು ಬರಗೂರರಿಗೆ ಕೊಡಬಯಸುವುದಿಲ್ಲ. ಯಾಕೆಂದರೆ ಬರಗೂರರ ಶಕ್ತಿ ಮತ್ತು ಜವಾಬ್ದಾರಿ ಆಳ್ವರಿಗಿಂತ ದೊಡ್ಡದು. (ಆಳ್ವರೊಳಗೊಬ್ಬ ಒಳ್ಳೆಯ ಹುಂಬ ಇನ್ನೂ ಇದ್ದಾನೆ ಎಂದೇ ನನ್ನ ಅನಿಸಿಕೆ. ಹಿಂದೊಮ್ಮೆ ಅವರ ಕಾಲೇಜಿನ ವಿದ್ಯಾರ್ಥಿಗಳು ರಾತ್ರಿ ಏನೋ ಗಲಾಟೆ ಮಾಡಿದಾಗ, ಪೋಲಿಸ್ ಕರೆಸಿದ್ದರು. ಆಗ ಪೋಲಿಸರಿಂದ ಏಟುತಿಂದ ವಿದ್ಯಾರ್ಥಿಗಳನ್ನು ನೋಡಿ ಆಳ್ವರು ’ನನ್ನ ಮಕ್ಕಳಿಗೆ ನಾನೇ ಹೊಡೆಸಿದೆನಲ್ಲ’ ಎಂದು ಗಳಗಳನೆ ಅತ್ತರಂತೆ. ಇದು ನನ್ನ ಗೆಳೆಯನೊಬ್ಬನ ಮಗ ಹೇಳಿದ ವಿಷಯ.)

ನನ್ನದೇ ಅನುಭವದ ಎರಡು ಉದಾಹರಣೆ ನೀಡುತ್ತೇನೆ. ಎರಡು ವರ್ಷಗಳ ಹಿಂದೆ ನಮ್ಮೂರಿನ ಕೆಲವರು ಯುವಕರು, ಬಜರಂಗದಳ-ಆರ್.ಎಸ್.ಎಸ್.ವತಿಯಿಂದ ಗುರುವಂದನೆ ಕಾರ್ಯಕ್ರಮವಿದೆ. ನೀವು ಬಂದು ಮಾತಾಡಬೇಕು ಎಂದರು. ನಾನು ತುಸು ಗೊಂದಲಕ್ಕೊಳಗಾದೆ. ಎಲ್ಲರೂ ನಮ್ಮೂರಿನ ಸುತ್ತಲಿನ ಹಳ್ಳಿಗಳ ಯುವಕರು. ಕೆಲವರು ನನ್ನ ಸ್ನೇಹಿತರ ಮಕ್ಕಳೇ. ಯೋಚಿಸಿ ನಂತರ ಅಲ್ಲಿಗೆ ಹೋದೆ. ನಮ್ಮೂರಿನ ಹೈಸ್ಕೂಲ್ ಒಳಗಡೆ ಸಣ್ಣ ಕಾರ್ಯಕ್ರಮ. ಅಲ್ಲಿ ವಿವೇಕಾನಂದರ ಹಾಗೇ ಭಗತ್ ಸಿಂಗರ ಫೋಟೋಗಳಿದ್ದವು. ಹೊರಗಿನಿಂದ ಬಂದ ಒಂದಿಬ್ಬರು ಕಾರ್ಯಕರ್ತರೂ ಇದ್ದರು. ನನ್ನ ಮಾತಿನ ಸರದಿ ಬಂದಾಗ ಭಗತ್ ಸಿಂಗ್ ಹೇಗೆ ಉಗ್ರ ಕ್ರಾಂತಿಕಾರಿ ಮತ್ತು ತೀವ್ರ ಮಾರ್ಕ್ಸವಾದಿ ಎಂದೂ, ವಿವೇಕಾನಂದರು ನಮ್ಮ ಜಾತಿ ಪದ್ಧತಿಗಳಬಗ್ಗೆ ಆಹಾರಗಳ ಬಗ್ಗೆ ಏನು ಹೇಳಿದ್ದರೆಂದೂ ವಿವರಿಸಿದೆ. ಇವೆಲ್ಲ ಅವರಿಗೆ ಹೊಸ ಸಂಗತಿಗಳಾಗಿದ್ದವು. ಅಲ್ಲದೆ ಕೊನೆಯಲ್ಲಿ ನಾನು ಗುರುಕಾಣಿಕೆಯೆಂಬ ಚಂದಾವನ್ನೂ ನಿಮಗೆ ಕೊಡಲಾರೆ ಎಂದೆ. ಈಗ ಆ ಹುಡುಗರಲ್ಲಿ ಹೆಚ್ಚಿನವರು ಪುಸ್ತಕಗಳನ್ನು ಓದಲು ತೊಡಗಿದ್ದಾರೆ. ಮತ್ತು ಆ ಸಂಘಟನೆಗಳಿಂದ ದೂರವಿದ್ದಾರೆ.

ಇನ್ನೊಂದು ಘಟನೆ ಇಷ್ಟು ಸರಳವಾದದ್ದಲ್ಲ. ಇದೂ ಸುಮಾರು ಎರಡು ವರ್ಷ ಹಿಂದಿನ ಘಟನೆಯೇ. ಉಡುಪಿ ಜಿಲ್ಲೆಯ ಹಳ್ಳಿಯಲ್ಲಿ ಸಂಘ ಪರಿವಾರ, ಮತ್ತು ಗೋಸಂರಕ್ಷಣಾ ಸಂಘಟನೆ, ಕೆಲವು ಮಠಗಳ ಆಶ್ರಯದಲ್ಲಿ ಗೋಸಂರಕ್ಷಣೆ, ಸಾವಯವ ಕೃಷಿ ಬಗ್ಗೆ ಕಾರ್ಯಕ್ರಮ, ನಾರಾಯಣರೆಡ್ಡಿಯವರೂ ಸೇರಿದಂತೆ ಕರ್ನಾಟಕದ ಹಲವು ಗಣ್ಯ ಸಾವಯವ ಕೃಷಿಕರೂ ಅತಿಥಿಗಳಾಗಿದ್ದರು. ಆ ಕಾರ್ಯಕ್ರಮಕ್ಕೆ ನಾನು ನನ್ನ ಗೆಳೆಯ ಹಮೀದ್ರೊಂದಿಗೆ (ಇವರು ಒಳ್ಳೆಯ ಸಾವಯವ ಕೃಷಿಕರು) ಅಲ್ಲಿಗೆ ಹೋಗಿದ್ದೆ. Two old and weak cows looking hungry, weak and unhealthy standinನಾವಿಬ್ಬರೂ ಅಲ್ಲಿ ಮಾತನಾಡಲು ಆಹ್ವಾನಿತರಾಗಿದ್ದೆವು. ಹಮೀದ್ ಕಾಫಿ-ಮೆಣಸಿನ ಬೆಳೆಯಲ್ಲಿ ಸಾವಯವ ಕೃಷಿಯ ಬಗ್ಗೆ, ಹಾಗೇ ಜೀವಾಮೃತ ಇತ್ಯಾದಿಗಳ ಬಗ್ಗೆ ಮಾತನಾಡಿದರು. ನನ್ನ ಸರದಿ ಬಂದಾಗ ಮಲೆನಾಡಿನಲ್ಲೂ ಕೂಡಾ ಇಂದು ದನಕರುಗಳನ್ನು ಸಾಕುವ ಕಷ್ಟಗಳ ಬಗ್ಗೆ (ನಮ್ಮ ಮನೆಯಲ್ಲೂ ಒಂದು ಕಾಲದಲ್ಲಿ ಹತ್ತು ಹಸುಗಳಿದ್ದವು, ನಂತರ ನಾನು ಹದಿನಾಲ್ಕು ವರ್ಷಕಾಲ ನಮ್ಮೂರಿನ ಖಾಸಗಿ ಡೇರಿ ಫಾರಂನಲ್ಲಿ ನೌಕರನಾಗಿದ್ದೆ.) ಹೇಳುತ್ತ ಅದರಲ್ಲೂ ಹೈಬ್ರಿಡ್ ಹಸು ಸಾಕಣೆ ಅದಕ್ಕೆ ಖಾಯಿಲೆಯಾದರೆ ಆಗುವ ತೊಂದರೆಗಳ ಬಗ್ಗೆ ಹೇಳುತ್ತ ನಾನು ನೌಕರನಾಗಿದ್ದ ಸಂದರ್ಭದಲ್ಲಿ (ಹದಿನಾಲ್ಕು ವರ್ಷಗಳಲ್ಲಿ) ತೀವ್ರ ಖಾಯಿಲೆಗೊಳಗಾಗಿದ್ದ ಸುಮಾರು ಅರುವತ್ತು ಹಸುಗಳನ್ನು ಇಂಜೆಕ್ಷನ್ ನೀಡಿ ಸಾಯಿಸಬೇಕಾಯಿತು. ಹೀಗಾಗಿ ಹಸು ಸಾಕಣೆ ಅದರಲ್ಲೂ ಮುದಿಯಾದ ಮತ್ತು ಬರಡಾದ ಹಸುಗಳ, ಹೋರಿಗಳ ವಿಚಾರದಲ್ಲಿ ನಾವು ಹೆಚ್ಚು ವಾಸ್ತವ ಪ್ರಜ್ಞೆ ಹೊಂದಿರುವುದು ಸೂಕ್ತ ಎಂದೆ. ಆಗಲೇ ಜನರ ನಡುವೆ ಗುಜು ಗುಜು ಚರ್ಚೆ ಆರಂಭವಾಯಿತು. ಕಾರ್ಯಕ್ರಮದ ನಂತರ ಅನೇಕರು ನನ್ನಲ್ಲಿ ’ನೀವು ಸರಿಯಾಗಿಯೇ ಹೇಳಿದಿರಿ’ ಎಂದರು. ಹಾಗೇ ಗೋಶಾಲೆಗಳ ಹೆಸರಲ್ಲಿ ನಡೆಯತ್ತಿರುವ ಅವ್ಯವಹಾರಗಳ ಬಗ್ಗೆಯೂ ಹೇಳಿದರು. ಆದರೆ ಮರುದಿನ ಕಾರ್ಯಕ್ರಮದ ಸಂಘಟಕರ ನಡುವೆ ಆ ಕಾರ್ಯಕ್ರಮಕ್ಕೆ ನನ್ನನ್ನು ಕರೆಸಿದ ಬಗ್ಗೆ ದೊಡ್ಡ ಜಗಳ ನಡೆಯಿತೆಂದು ತಿಳಿದುಬಂತು.

ಇದನ್ನೆಲ್ಲ ನಾನು ಯಾಕೆ ಹೇಳುತ್ತಿದ್ದೇನೆಂದರೆ ನಾವು ಯಾರ ವಿರುದ್ಧವಾಗಿಯೂ ಕಾರ್ಯಕ್ರಮಗಳನ್ನು ಮಾಡಬೇಕಾಗಿಲ್ಲ. abhimata-page5ಹಾಗೇ ನಮ್ಮ ನಿಲುವನ್ನು ಹೇಳಲು ಸದಾಕಾಲ ಇನ್ನೊಬ್ಬರನ್ನು ಬಯ್ಯುವ ಅಗತ್ಯವೂ ಇಲ್ಲ. (ನಾವು ಬೇಕಾದರೇ ನಮ್ಮದೇ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳೋಣ.) ನಮ್ಮ ನಿಲುವು ಹಾಗೇ ಬದುಕು ಪಾರದರ್ಶಕವಾಗಿದ್ದರೆ ಜನ ಖಂಡಿತ ಅರ್ಥಮಾಡಿಕೊಳ್ಳುತ್ತಾರೆ. ನಮಗೀಗ ಬೇಕಾಗಿರುವುದು ಎಲ್ಲರನ್ನೂ ಒಳಗೊಳ್ಳುತ್ತ ಹಾಗೇ ನಮ್ಮ ವಿಚಾರಧಾರೆಯಿಂದ ವಿಮುಖರಾಗದೆ ನಡೆ-ನುಡಿ ಒಂದಾಗಿರುವ ರಾಜಕಾರಣ. ಇದಕ್ಕೆ ಪ್ರಬಲ ಇಚ್ಛಾಶಕ್ತಿಯೂ ನಿರಂತರ ಜನಸಂಪರ್ಕವೂ ಬೇಕು. ನಾವು ಭ್ರಷ್ಟರಾಗದೇ (ಎಲ್ಲ ರೀತಿಯ) ಉಳಿದರೆ ಸಾಲದು, ಪ್ರತಿ ಚುನಾವಣೆಯಲ್ಲಿ ಕೆಲವು ನೂರು-ಸಾವಿರ ಮತಗಳನ್ನು ಪಡೆದು ಸಂತೃಪ್ತಿಗೊಳ್ಳಬಾರದು. ನಿಧಾನವಾಗಿಯಾದರೂ ಅಧಿಕಾರದತ್ತ ಚಲಿಸಿ ಅದರ ಮೂಲಕವೇ ಏನನ್ನಾದರೂ ಸಾಧಿಸುವ ಪ್ರಯತ್ನ ಮಾಡಬೇಕು. ಯಾಕೆಂದರೆ ಪ್ರಜಾಪ್ರಭುತ್ವಕ್ಕೆ ಮತ್ತು ನಮ್ಮ ಬಹುಸಂಸ್ಕೃತಿಯ ಉಳಿವಿಗೆ ಬೇರೆದಾರಿ ಇಲ್ಲ. ಪ್ರಜಾಪ್ರಭುತ್ವ ಶಕ್ತಿಗುಂದಿದಾಗ, ತನ್ನ ಜವಾಬ್ದಾರಿಯನ್ನು ನಿರ್ವಹಿಸದಿದ್ದಾಗ ಮಾತ್ರ ಎಲ್ಲ ರೀತಿಯ ಖಾಸಗಿ ಸಾಹಸಗಳು ಮೆರೆದಾಡಲು ಸಾಧ್ಯವಾಗುತ್ತದೆ.

ಈ ವಿಚಾರದಲ್ಲಿ ’ಆಮ್ ಆದ್ಮಿ ಪಾರ್ಟಿ’ಯಿಂದ ಖಂಡಿತ ಇಡೀ ದೇಶಕ್ಕೆ ಒಂದು ಪಾಠವಿದೆ. Arvind_Kejriwal_party_launchಸದ್ಯಕ್ಕಂತೂ ಆ ಪಾರ್ಟಿ ಒಂದು ಊದಿದ ಬೆಲೂನಿನಂತೆ ಗೋಚರಿಸಿದರೂ ಅವರೇನು ಮಾಡುತ್ತಾರೆಂದು ಕಾದುನೋಡಬೇಕು. ಆದರೆ ಸಂಘಟನೆ ದೃಷ್ಟಿಯಿಂದ ಖಂಡಿತ ನಮ್ಮ ಸರ್ವೋದಯ ಪಕ್ಷದಂತವರೂ (ತಮ್ಮ ವಿಚಾರ ಬಿಟ್ಟುಕೊಡದೆ) ಅವರಿಂದ ಕಲಿಯುವುದಿದೆ ಅನ್ನಿಸುತ್ತದೆ.

ಇದೆಲ್ಲ ಒಂದಕ್ಕೊಂದು ಸಂಬಂಧವಿಲ್ಲದ ವಿಚಾರಗಳಂತೆ ಕಾಣಿಸುತ್ತದೆ. ಆದರೆ ಇವೆಲ್ಲದರ ಹಿಂದೆ ನಮ್ಮ ಸಾಂಸ್ಕೃತಿಕ ರಾಜಕಾರಣವಿದೆಯೆಂದೇ ನನ್ನ ನಂಬಿಕೆ. ಇಲ್ಲದಿದ್ದರೆ ನಾವು ಎಲ್ಲರನ್ನೂ ಉಗ್ರವಾಗಿ ಖಂಡಿಸುತ್ತಾ, ವೇದಿಕೆಯೇರಿ ದೊಡ್ಡಗಂಟಲಿನಲ್ಲಿ ಕೂಗಾಡುತ್ತ ಇದ್ದಲ್ಲಿಯೇ ಇರುತ್ತೇವೆ.

ಜಿ.ಎಸ್. ಶಿವರುದ್ರಪ್ಪನವರ “ಅಗ್ನಿಪರ್ವ” ಕವಿತೆ

ಅಗ್ನಿಪರ್ವ

– ಜಿ.ಎಸ್. ಶಿವರುದ್ರಪ್ಪ

ಕಾಲಿನ ಕೆಳಗೆ ನಾನಿದುವರೆಗೆ ನಿಂತ
ಹಚ್ಚನೆ ಹಸಿರು ಯಾವತ್ತೋ ಮರು-
ಭೂಮಿಯಾಗಿ ಹೋಗಿದೆ. ಮೇಲಿನಾ
ಕಾಶದಲ್ಲಿ ಒಂದಾದರೂ ಮೋಡಗಳಿಲ್ಲ.
ತಲೆ ಎತ್ತಿ ನೋಡಿದರೆ ರಣ ಹದ್ದು
ಗಳ ರೆಕ್ಕೆಯ ನೆರಳು. ನೆಲ ಹತ್ತಿ
ಉರಿಯುತ್ತಿದೆ ನಂದಿಸಲು ನೀರೆ ಇಲ್ಲ!

ಒಲೆ ಹತ್ತಿ ಉರಿದಡೆ ನಿಲ್ಲಬಹುದ
ಲ್ಲದೆ ಧರೆ ಹತ್ತಿ ಉರಿದಡೆ ಎಲ್ಲೋಡ
ಬಹುದೋ? ಧಗದ್ ಧಗದ್ ಧಗಾ-
ಯಮಾನವಾದ ಈ ಬಕಾಸುರ ಬೆಂಕಿಗೆ
ಭಯಂಕರ ಹಸಿವು. ತಳಿರುಗಳನ್ನು
ಹೂವುಗಳನ್ನು, ಹೀಚುಗಳನ್ನು, ಹಣ್ಣು-
ಗಳನ್ನು ಒಂದೇ ಸಮನೆ ತಿನ್ನುವುದೆ
ಕೆಲಸ. ಹೊತ್ತಿಕೊಂಡಿದೆ ಬೆಂಕಿ ಮಂ-
ದಿರಕ್ಕೆ, ಮಸೀದಿಗೆ, ಚರ್ಚಿಗೆ, ಚಲಿಸು-
ತ್ತಿರುವ ರೈಲಿಗೆ, ಓಡುತ್ತಿರುವ ಬಸ್ಸಿಗೆ,
ಹಾರುವ ವಿಮಾನಕ್ಕೆ, ಆಕಾಶಕ್ಕೆ ಮುಡಿ-
ಯೆತ್ತಿ ನಿಂತಿರುವ ಸೌಧಗಳಿಗೆ, ಬಡ-
ವರ ಜೋಪಡಿಗಳಿಗೆ, ತಿನ್ನುವ
ಅನ್ನಕ್ಕೆ, ಕುಡಿಯುವ ನೀರಿಗೆ, ಉಸಿ-
ರಾಡುತ್ತಿರುವ ಗಾಳಿಗೆ, ಬಹುಕಾಲದಿಂದ
ಹೇಗೋ ಕಾಪಾಡಿಕೊಂಡು ಬಂದಿರುವ
ಪಾರಿವಾಳಗಳ ಕನಸಿನ ಗೂಡಿಗೆ.

ಈ ಉರಿವ ಬೆಂಕಿಯ ಸುತ್ತ ಛಳಿ ಕಾ-
ಯಿಸಿಕೊಳ್ಳುತ್ತ, ಆಗಾಗ ಎಣ್ಣೆ ಹೊ-
ಯ್ಯುತ್ತ ಕೂತ ಮಹನೀಯರೆ, ನೀವು
ಯಾರು? ಮಾತನಾಡಿಸಲೆಂದು ಬಂದರೆ
ಹತ್ತಿರ, ನಿಮಗೆ ಮುಖವೇ ಇಲ್ಲ! ಬರೀ
ಮುಖವಾಡ. ಸಾಧ್ಯವೇ ಸಂವಾದ ಮುಖ
ವಾಡಗಳ ಜತೆಗೆ? ಆಡಬೇಕೆಂದಿದ್ದ
ಮಾತೆಲ್ಲವೂ ಸವೆದ ನಾಣ್ಯಗಳಾಗಿ ವ್ಯರ್ಥ-
ವಾಗಿವೆ ಕೊನೆಗೆ. ಇಷ್ಟೊಂದು ಹತ್ತಿರವಿದ್ದೂ
ದೂರಕ್ಕೆ ನಿಲ್ಲುವ ನೆರಳುಗಳೇ ನೀವು ಯಾರು?
ಏನೂ ಅನ್ನಿಸುವುದಿಲ್ಲವೇ ನಿಮಗೆ ನಿರ್ದಯ-
ವಾಗಿ ದಹಿಸುತ್ತಿರುವ ಈ ಬೆಂಕಿಯನ್ನು
ಕುರಿತು. ಏನೂ ಅನ್ನಿಸುವುದಿಲ್ಲವೇ ಈ ಅಗ್ನಿ
ಯಲ್ಲಿ ದಗ್ಧವಾಗುತ್ತಿರುವ ಸರ್ವೋ
ದಯದ ಸ್ವಪ್ನಗಳನ್ನು ಕುರಿತು?  ಏನೂ
ಅನ್ನಿಸುವುದಿಲ್ಲವೇ ನಿಮಗೆ ರಕ್ತಸಿಕ್ತವಾ-
ಗುತ್ತಿರುವ ಈ ಚರಿತ್ರೆಯನ್ನು ಕುರಿತು?

ಏನೆಂದು ಗುರುತಿಸಲಿ ಹೇಳಿ ನಿಮ್ಮನ್ನು?
ಈ ಮಹಾಜನದ ಪ್ರತಿನಿಧಿಗಳೆಂದೇ?
ಗದ್ದುಗೆ ಏರಿ ಕೂತಿರುವ ಪ್ರಭುಗಳೆಂದೇ?
ಅಥವಾ ನಮ್ಮೊಳಗೆ ಮನೆ ಮಾಡಿರುವ
ತಲಾ ತಲದ ವಿಕೃತಿಗಳ ಮೂರ್ತ
ರೂಪಗಳೆಂದೆ? ಹಳೆಯ ಗುಡಿಗೋಪು-
ರದ ಕಲಶಗಳನ್ನು ಈಟಿಯ ಮಾಡಿ ನೀಲಾ-
ಕಾಶದೆದೆ ಸೀಳಿ ಕತ್ತಲನು ಕರೆದವರೆ,
ಗರ್ಭಗುಡಿಯೊಳಗುರಿವ ನಂದಾದೀಪ-
ಗಳಿಂದ ಪಂಜು ಹೊತ್ತಿಸಿಕೊಂಡು ದೆವ್ವಂ-
ಗುಣಿವ ತಮಸ್ಸಿನಾರಾಧಕರೆ, ಹಿಂಸಾ
ರತಿಯ ಪೂಜಾರಿಗಳೆ, ಎಲ್ಲಿದ್ದರೂ ನೀವು
ಒಂದೆ ಜಾತಿಯ ಜನವೆ! ಜಗತ್ತಿನಾ-
ದ್ಯಂತ ಭಯೋತ್ಪಾದನೆಯ ಬಲೆನೆಯ್ದ
ಪೆಡಂಭೂತ ಜೇಡಗಳೆ, ಏನಾಗಿದೆ ನಿಮಗೆ,
ಇನ್ನೂ ಏನಾಗಬೇಕಾಗಿದೆ ಈ ಮನುಕುಲಕ್ಕೆ?

ಪಾಚಿಗಟ್ಟುತ್ತಿರುವ ಈ ನೀರುಗಳನ್ನು
ಶುದ್ಧೀಕರಿಸುವುದು ಹೇಗೆ? ಶತ
ಚ್ಛಿದ್ರವಾಗುತ್ತಿರುವ ಈ ಮನಸ್ಸುಗಳನ್ನು
ಹಿಡಿದು ಕೂಡಿಸುವುದು ಹೇಗೆ? ಪುರಾಣ-
ಗಳಲ್ಲಿ ಸ್ಥಗಿತಗೊಳ್ಳುತ್ತಿರುವ ಬುದ್ಧಿ-
ಗಳನ್ನು ವರ್ತಮಾನದ ವಾಸ್ತವದೊಳಕ್ಕೆ
ತರುವುದು ಹೇಗೆ? ಗುಡಿ-ಚರ್ಚು ಮಸ
ಜೀದಿಗಳನ್ನು ಬಿಟ್ಟು ಹೊರ ಬರುವಂತೆ
ಮಾಡುವುದು ಹೇಗೆ? ವೇದ-ಖುರಾನು-ಬೈ-
ಬಲ್ಲಿನಿಂದಾಚೆ ಬಯಲ ಬೆಳಕಿನ ಕೆಳಗೆ
ಬದುಕುವುದನ್ನು ಇನ್ನಾದರೂ ಕಲಿಯು-
ವುದು ಹೇಗೆ?

ಜನ ನುಡಿ, ನುಡಿಸಿರಿ, ವರ್ತಮಾನ.ಕಾಮ್


– ರವಿ ಕೃಷ್ಣಾರೆಡ್ಡಿ


 

ಕಳೆದ ವಾರ ಮಂಗಳೂರಿನಲ್ಲಿ ನಡೆದ “ಜನ ನುಡಿ” ಕಾರ್ಯಕ್ರಮಕ್ಕೆ ಮೊದಲೇ ಒಂದು ವಿಸ್ತೃತವಾದ ಲೇಖನವನ್ನು, ಮುಖ್ಯವಾಗಿ ಪ್ರಗತಿಪರ ಎಂದು ಭಾವಿಸುವ ಯುವಮಿತ್ರರನ್ನು ಗಮನದಲ್ಲಿಟ್ಟುಕೊಂಡು ಬರೆಯಬೇಕೆಂದು ತೀರ್ಮಾನಿಸಿದ್ದೆ. ಆದರೆ, ದೆಹಲಿ ಚುನಾವಣೆಯ ಫಲಿತಾಂಶದ ನಂತರ ನನಗೆ ಸ್ವಲ್ಪ ಬಿಡುವಿಲ್ಲದೆ ಹೋಯಿತು. ಅದೇ ಸಮಯದಲ್ಲಿ ಸರ್ಕಾರಿ ನೇಮಕಾತಿಯಲ್ಲಿ ಕೆಪಿಎಸ್‌ಸಿಯ ಕರ್ಮಕಾಂಡದ ಬಗ್ಗೆ ಸಿಐಡಿ ವರದಿ ಕೈಗೆ ಸಿಕ್ಕ ಪರಿಣಾಮವಾಗಿ ಅದರ ಕುರಿತೂ ಒಂದಷ್ಟು ಕೆಲಸಗಳಾದವು. western-ghats-as-seen-from-BLR-Karwar-trainಮತ್ತೆ ಸಕಲೇಶಪುರದಿಂದ ಮಂಗಳೂರಿಗೆ ಪಶ್ಚಿಮಘಟ್ಟಗಳ ಮಧ್ಯೆ ಹಾದು ಹೋಗುವ ರೈಲಿನಲ್ಲಿ ಹೋಗುವ ಕಾರಣಕ್ಕಾಗಿ ನಾನು ಮತ್ತು ನಮ್ಮ ಬಳಗದ ಶ್ರೀಪಾದ ಭಟ್ಟರು ಒಂದು ದಿನ ಮೊದಲೇ ಬೆಂಗಳೂರು ಬಿಟ್ಟಿದ್ದೆವು. ಮೂರು ದಿನದ ನಂತರ ಬೆಂಗಳೂರಿಗೆ ಬಂದಂದಿನಿಂದ ಲೋಕಸತ್ತಾ ಪಕ್ಷದ ಮೂಲಕ ಕೆಪಿಎಸ್‌ಸಿ ಹಗರಣದ ಬಗ್ಗೆ ಹಮ್ಮಿಕೊಂಡ ಚಟುವಟಿಕೆಗಳ ಕಾರಣವಾಗಿ ಏನನ್ನೂ ಬರೆಯಲು ಬಿಡುವಿಲ್ಲದೆ ಹೋಗಿತ್ತು. ಇದೇ ಕಾರಣವಾಗಿ ನೆನ್ನೆ ನಡೆದ ಪ್ರತಿಭಟನೆಯಲ್ಲಿ ಮೊದಲಬಾರಿಗೆ ಬಂಧನಕ್ಕೊಳಪಟ್ಟು ಸಂಜೆ ಆರರ ತನಕ ಆಡುಗೋಡಿಯ ಪೋಲಿಸ್ ಗ್ರೌಂಡ್ಸ್‌ನ ಶೆಡ್‌ನಲ್ಲಿ ಇರಬೇಕಾಯಿತು. ಇದೆಲ್ಲದರ ಮಧ್ಯೆ ಮುಂದಕ್ಕೆ ಹಾಕಲಾಗದ ವೈಯಕ್ತಿಕ ಕಾರ್ಯಕ್ರಮವೊಂದು ಇಂದು.

ಕಳೆದ ಎರಡು-ಮೂರು ದಿನಗಳಿಂದ ಮೂಡಬಿದ್ರೆಯಲ್ಲಿ “ಆಳ್ವಾಸ್ ನುಡಿಸಿರಿ” ಮತ್ತು “ಆಳ್ವಾಸ್ ವಿರಾಸತ್” ವಿಜೃಂಭಣೆಯಿಂದ ನಡೆಯುತ್ತಿದೆ. ಈ ಕಾರ್ಯಕ್ರಮದ ಬಗ್ಗೆ ಇರಬಹುದಾದ ಸಂಶಯಗಳು ಮತ್ತು ಆರೋಪಗಳು ಮೊದಲ ಬಾರಿಗೆ ರಾಜ್ಯದ ಜನರ ಗಮನಕ್ಕೆ ವಿಸ್ತೃತವಾಗಿ ಬಂದದ್ದು ಕಳೆದ ವರ್ಷ ನವೀನ್ ಸೂರಿಂಜೆ ನಮ್ಮ ವರ್ತಮಾನ.ಕಾಮ್‌ನಲ್ಲಿ “ಆಳ್ವಾಸ್ ನುಡಿಸಿರಿಗೆ ಅನಂತಮೂರ್ತಿ ಹೋಗುವುದು ಯುಕ್ತವೇ?” ಲೇಖನ ಬರೆದಾಗ. ಆ ಸಮಯದಲ್ಲಿ ಈ ವೇದಿಕೆಯಲ್ಲಿ nudisiri-ananthamurthyಅದು ಬಹಳ ಗಂಭೀರ ಚರ್ಚೆಗೆ ಒಳಪಟ್ಟಿತು ಮತ್ತು ಅದಕ್ಕೆ ತಾತ್ವಿಕ ಮಟ್ಟದಲ್ಲಿ ವಿರೋಧ ಮತ್ತು ವಿಮರ್ಶೆ ಆರಂಭವಾಯಿತು. ಧನಂಜಯ ಕುಂಬ್ಳೆ ಎನ್ನುವವರು ಸೂರಿಂಜೆಯವರ ಲೇಖನವನ್ನು ವಿಮರ್ಶಿಸಿ “ಆಳ್ವಾಸ್, ನುಡಿಸಿರಿ, ಅನಂತಮೂರ್ತಿ ಲೇಖನ : ಋಣಾತ್ಮಕ ಮತ್ತು ಪೂರ್ವಾಗ್ರಹಪೀಡಿತ” ಲೇಖನ ಬರೆದರು. ಅದಕ್ಕೆ ಉತ್ತರಿಸಿ ಸೂರಿಂಜೆ “ಆಳ್ವ ಮತ್ತು ನುಡಿಸಿರಿ ಸಮರ್ಥಕರ ಲೇಖನ ಪಕ್ಷಪಾತಪೀಡಿತ ಮತ್ತು ಅಸಾಂದರ್ಭಿಕ ಸುಳ್ಳುಗಳ ಕಂತೆ…” ಎಂಬ ಇನ್ನೊಂದು ಲೇಖನ ಬರೆದರು. ತೇಜ ಸಚಿನ್ ಪೂಜಾರಿ ಎಂಬ ಮಂಗಳೂರಿನ ಯುವಕ ಇದೇ ವಿಷಯದ ಮೇಲೆ ಅದ್ಭುತವೆನ್ನಿಸುವಂತಹ “ಅನಂತಮೂರ್ತಿ, ಆಳ್ವಾಸ್, ಹಾಗೂ ಅಸೋಸಿಯೇಶನ್” ಲೇಖನ ಬರೆದ. (ಅದಾದ ಮೇಲೆ ನಾಲ್ಕೈದು ಲೇಖನಗಳನ್ನು ಬರೆದ ತೇಜ ಸಚಿನ್ ಪೂಜಾರಿ, ಕೆಲಸವೊಂದು ಸಿಕ್ಕಿ ಬೆಂಗಳೂರಿಗೆ ಬಂದ ತಕ್ಷಣ ನಾಪತ್ತೆಯಾಗಿದ್ದಾರೆ. ಸಾಧ್ಯವಾದರೆ ಯಾರಾದರೂ ಹುಡುಕಿಕೊಡಬೇಕಾಗಿ ಮನವಿ!!)

ಮೂಡಬಿದ್ರೆಯ “ನುಡಿಸಿರಿ” ಎನ್ನುವುದನ್ನು ಅದರ ಆರಂಭದ ದಿನಗಳಲ್ಲಿ ಕೆಲವು ಮಂಗಳೂರಿನ ಲೇಖಕರು ಮತ್ತು ಪತ್ರಕರ್ತರು “ಕುಡಿಸಿರಿ” ಎಂದು ತಮಾಷೆ ಮಾಡುತ್ತಿದ್ದರು ಎಂದು ಹೊರಗಿನ ಜನರಿಗೆ ಗೊತ್ತಾಗಿದ್ದೇ ವರ್ಷದ ಹಿಂದೆ ಅದು ವರ್ತಮಾನ.ಕಾಮ್‌ನಲ್ಲಿ ಚರ್ಚೆಗೊಳಗಾದಾಗ.

ಅಂದಹಾಗೆ, ನುಡಿಸಿರಿಯ ಬೆಂಬಲಿಗರ ಹೇಳಿಕೊಳ್ಳುವ ಹಾಗೆ “ಆಳ್ವಾಸ್ ನುಡಿಸಿರಿ” ಹುಟ್ಟಿದ್ದೇ ಒಂದು ರೀತಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ “ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ”ಕ್ಕೆ ಪರ್ಯಾಯವಾಗಿ.alvas-nudisiri-2 ಆಳ್ವಾಸ್‌ನ ಮೋಹನ ಆಳ್ವರು ದಶಕದ ಹಿಂದೆ ಮೂಡಬಿದ್ರೆಯಲ್ಲಿ ನಡೆದ “ಕನ್ನಡ ಸಾಹಿತ್ಯ ಸಮ್ಮೇಳನ”ದ ಸ್ಥಳೀಯ ಉಸ್ತುವಾರಿ ಹೊತ್ತಿದ್ದರು. ಅವರ ಪ್ರಕಾರ ಬಹಳ ಅದ್ಭುತವಾಗಿ ಅದನ್ನು ನಡೆಸಿಕೊಟ್ಟರು. ಆದರೆ ಆ ಅನುಭವ ಮತ್ತು ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿರುವ ಅಶಿಸ್ತು ಅವರಿಗೆ ಬೇಸರ ಮೂಡಿಸಿತು. ಹಾಗಾಗಿ ಅಂತಹ ಒಂದು ಕಾರ್ಯಕ್ರಮವನ್ನು ಹೇಗೆ “ಅಚ್ಚುಕಟ್ಟಾಗಿ” ಮಾಡುವುದು ಎನ್ನುವುದನ್ನು ತೋರಿಸುವುದಕ್ಕಾಗಿಯೇ “ಆಳ್ವಾಸ್ ನುಡಿಸಿರಿ”ಯನ್ನು ಸಾಹಿತ್ಯ ಪರಿಷತ್ತಿನ ಜನರ “ಸಾಹಿತ್ಯ ಸಮ್ಮೇಳನ”ಕ್ಕೆ ಪರ್ಯಾಯವಾಗಿ ಆರಂಭಿಸಲಾಯಿತು. ಈ ವಿಚಾರವನ್ನು “ಜನ ನುಡಿ” ಕಾರ್ಯಕ್ರಮ “ನುಡಿ ಸಿರಿ”ಗೆ ಪರ್ಯಾಯ ಎಂಬ ಮಾತು ಬಂದಾಕ್ಷಣ “ಜನ ನುಡಿ”ಯನ್ನು ವಿರೋಧಿಸಲು ಆರಂಭಿಸಿದವರು ಗಮನಿಸಬೇಕು. ತನ್ನೆಲ್ಲಾ ಸಮಯಪ್ರಜ್ಞೆಯ ಅಭಾವ, ಗೊಂದಲ, ಇತ್ಯಾದಿಗಳ ನಡುವೆ ಸಾಹಿತ್ಯ ಪರಿಷತ್ತಿನ “ಕನ್ನಡ ಸಾಹಿತ್ಯ ಸಮ್ಮೇಳನ” ಜನರದ್ದು. ನಾಡಿನ ಎಲ್ಲರಿಗೂ ಸೇರಿದ್ದು. kannada-sahithya-sammelanaಯಾವೊಬ್ಬ ವ್ಯಕ್ತಿಯ ಮೇಲೂ ಅವಲಂಬಿತವಲ್ಲ. ಏಳೆಂಟು ದಶಕಗಳಿಂದ ನಿರಂತರವಾಗಿ ನಡೆದುಬರುತ್ತಿದೆ. ತನ್ನೆಲ್ಲಾ ಇತಿಮಿತಿಗಳ ನಡುವೆಯೂ ಅದು ನಾಡಿನ ಪ್ರಜಾಸತ್ತಾತ್ಮಕ ಆಶಯಗಳನ್ನು ಎತ್ತಿಹಿಡಿಯುತ್ತ ಬರುತ್ತಿದೆ.

ಆದರೆ, “ಆಳ್ವಾಸ್ ನುಡಿಸಿರಿ” ಎನ್ನುವುದು ಸಂಪೂರ್ಣವಾಗಿ “one man show”. ಮೋಹನ ಆಳ್ವರ ಅನೇಕ ಹಿಂಬಾಲಕರು ಅವರ ನಾಯಕತ್ವದಲ್ಲಿ ಅದನ್ನು ನಡೆಸಿಕೊಡುತ್ತಾರೆ. ಬಹುಶಃ ಆ ಕಾರ್ಯಕ್ರಮದಲ್ಲಿ “ಮುಂಡಾಸು” ಧರಿಸುವುದು, ಅಧ್ಯಕ್ಷರನ್ನು ಹುಡುಗರ ಹೆಗಲ ಮೇಲೆ “ಅಡ್ಡ ಪಲ್ಲಕ್ಕಿ” ಹೊರೆಸಿ ಮೆರವಣಿಗೆ ಮಾಡುವುದು, ಇತ್ಯಾದಿ ಕೆಲವು ವಿಚಾರಗಳು ಹೇಗೆ “ಪ್ರಜಾಪ್ರಭುತ್ವ ವಿರೋಧಿ ಆಶಯ”ಗಳನ್ನು ಹೊಂದಿದೆ ಎನ್ನುವುದು ಅನೇಕರಿಗೆ ಬಹಳ ಬೇಗ ಹೊಳೆಯುವುದಿಲ್ಲ. ಸ್ಥಳೀಯ ಮೇಲ್ಜಾತಿಗಳ ಕೆಲವು ಪಾಳೇಗಾರಿಕೆ ಮತ್ತು ಪುರೋಹಿತಶಾಹಿ ಅಂಶಗಳು ಇಲ್ಲಿ ಸ್ವಲ್ಪವೂ ಹಿಂಜರಿಕೆಯಿಲ್ಲದೆ ಹೇಗೆ ಅಲ್ಲಿಯ ಎಲ್ಲರಿಗೂ ಒಪ್ಪಿತವೆಂಬಂತೆ ಮುನ್ನೆಲೆಗೆ ಬರುತ್ತವೆ ಎನ್ನುವುದನ್ನು ಸ್ಥಳೀಯ ಸೂಕ್ಷ್ಮಜ್ಞರು ಮಾತ್ರವೇ ಹೇಳಬಲ್ಲರು. ಯಾವುದಾದರೂ ಊರಿನಲ್ಲಿಯ ಸ್ಥಳೀಯ ಜನತೆ ಅಲ್ಲಿ ಒಂದು ಸುಂದರ ಸಾಂಸ್ಕೃತಿಕ ಮತ್ತು ಸಾಹಿತ್ಯಕ ವಾತಾವರಣ ರೂಪಿಸಿಕೊಳ್ಳುವುದರ ಬಗ್ಗೆ ನಾವೆಲ್ಲ ಸಂತಸ ಪಡಬೇಕು ಮತ್ತು ಅದು ಇತರ ಕಡೆಗೂ ಹರಡುವಂತೆ ಆಶಿಸಬೇಕು. ಆದರೆ, alva-veerendra-heggadeಮೂಡಬಿದ್ರೆಯಲ್ಲಿ ಆಗುತ್ತಿರುವ ಕಾರ್ಯಕ್ರಮ ಇನ್ನೊಂದು ಕಡೆ ನಕಲು ಅಥವ ಪುನರಾವರ್ತನೆ ಆಗಲು ಸಾಧ್ಯವಾಗದಂತಹ ಕಾರ್ಯಕ್ರಮ. ಇದು ಒಬ್ಬ ಮನುಷ್ಯನ ದುಡ್ಡು ಮತ್ತು ನಿಲುವು-ಒಲವುಗಳ ಮೇಲೆ ಆಗುವ ಕಾರ್ಯಕ್ರಮವೇ ಹೊರತು ಹಲವಾರು ಜನರ ಅಭೀಪ್ಸೆ ಮತ್ತು ಸಾಮೂಹಿಕ-ಸಾಮುದಾಯಿಕ ಪಾಳ್ಗೊಳ್ಳುವಿಕೆಯಿಂದ ಅಲ್ಲ.

ಮತ್ತೊಂದು, ತಾನು ಎಂಬತ್ತು ಕೋಟಿ ಸಾಲದಲ್ಲಿದ್ದೇನೆ ಎಂದು ಮೋಹನ ಆಳ್ವರು ಅಲವತ್ತುಕೊಂಡಿರುವುದು ಇಂದೂ ಸಹ ಕೆಲವು ಪತ್ರಿಕೆಗಳಲ್ಲಿ ಬಂದಿದೆ. ಅವರು “ನುಡಿಸಿರಿ” ಕಾರ್ಯಕ್ರಮ ಮಾಡಿ ಈ ಸಾಲ ಹೊತ್ತುಕೊಂಡಿದ್ಡಾರೊ ಅಥವ ತಮ್ಮ ಶಿಕ್ಷಣ ಸಂಸ್ಥೆಯ ಕಾರಣಕ್ಕಾಗಿಯೊ ಗೊತ್ತಾಗಿಲ್ಲ. ಮತ್ತು ಈ ಪರಿ ಸಾಲದಲ್ಲಿರುವಾಗಲೂ ಹತ್ತಿಪ್ಪತ್ತು ಕೋಟಿಗಳ ವೆಚ್ಚದಲ್ಲಿ ನುಡಿಸಿರಿ ನಡೆಸುವುದಾದರೂ ಏಕೆ? ಸಾಲವನ್ನು ಮುಂದಿನ ದಿನಗಳಲ್ಲಿ ಹೇಗೆ ಭರಿಸಲಿದ್ದಾರೆ? ಅವರು ಈ ಸಾಲದ ಬಗ್ಗೆ ಸಾರ್ವಜನಿಕವಾಗಿ ಮಾತನಾಡುತ್ತಿರುವುದರಿಂದ ಒಂದು ಪ್ರಶ್ನೆಯನ್ನು ಸಾರ್ವಜನಿಕರೂ ಅವರಿಗೆ ಕೇಳಬಹುದು ಮತ್ತು ಪ್ರಾಮಾಣಿಕವಾದ ಉತ್ತರವನ್ನು ನಿರೀಕ್ಷಿಸಬಹುದು: “ಈ ವರ್ಷದ ನುಡಿಸಿರಿ ಮತ್ತು ವಿರಾಸತ್ ಕಾರ್ಯಕ್ರಮಕ್ಕೆ ಆಗುವ ಖರ್ಚೆಷ್ಟು, ಯಾವ ಬಾಬತ್ತಿಗೆ ಎಷ್ಟೆಷ್ಟು, ಇದಕ್ಕಾಗಿ ಸಂಗ್ರಹಿಸಿದ ಹಣವೆಷ್ಟು, vijaykarnataka-mohan-alva-22122013ಮತ್ತು ಆ ಹಣದ ಮೂಲ ಯಾವುದು?” ತಮ್ಮ ಊರುಗಳಲ್ಲಿಯೂ ಇಂತಹ ಕಾರ್ಯಕ್ರಮ ಮಾಡಬೇಕೆಂದು ಬಯಸುವವರಿಗೂ ಈ ಮಾಹಿತಿ ಸ್ವಲ್ಪ ಸಹಾಯ ಮಾಡುತ್ತದೆ.

ಈ ಸಾಲಿನ ಅಧ್ಯಕ್ಷರು ಕರಾವಳಿಯವರೇ ಆದ ವಿವೇಕ ರೈ. ಸಜ್ಜನ ಎಂದು ಹೆಸರು ಗಳಿಸಿದ ವಿದ್ವಾಂಸರು. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಉಪಕುಲಪತಿ ಅವಧಿ ಇನ್ನೂ ಒಂದು ವರ್ಷ ಇರುವಾಗಲೇ ಅಲ್ಲಿಯ ರಾಜಕೀಯ ಮತ್ತು ಭ್ರಷ್ಟತೆಗೆ ರೋಸಿಹೋಗಿ (!?) ದೂರದ ಜರ್ಮನಿಗೆ ವರ್ಷಕ್ಕೆ ಹತ್ತಿಪ್ಪತ್ತು ವಿದ್ಯಾರ್ಥಿಗಳಿಗೆ ಕನ್ನಡ ಕಲಿಸುವಂತಹ ಯಾವುದೇ ಅಧಿಕಾರ ಮತ್ತು ಠೇಂಕಾರಗಳಿಲ್ಲದ ಕೆಲಸಕ್ಕೆ ಹೊರಟವರು. ಇಂತಹ ಗುಣದ ವಿವೇಕ ರೈರವರು ಕಳೆದ ವರ್ಷ ನವೀನ್ ಸೂರಿಂಜೆ ಬರೆದ “ಆಳ್ವಾಸ್ ನುಡಿಸಿರಿಗೆ ಅನಂತಮೂರ್ತಿ ಹೋಗುವುದು ಯುಕ್ತವೇ?” ಲೇಖನವನ್ನು ಬಹುವಾಗಿ ಮೆಚ್ಚಿಕೊಂಡು ಸ್ವತಃ ಜರ್ಮನಿಯಿಂದಲೇ ಸೂರಿಂಜೆಯವರಿಗೆ ಕರೆಮಾಡಿ ಅಭಿನಂದಿಸಿದವರು. ಅಷ್ಟೇ ಸಾಲದೆಂಬಂತೆ ಸೂರಿಂಜೆಯವರ ಫೇಸ್‌ಬುಕ್ ಖಾತೆಗೆ ದೀರ್ಘ ಪತ್ರವನ್ನೂ ಬರೆದಿದ್ದವರು. ಈ ವರ್ಷ ಯಾವೊಂದೂ ಹಿಂಜರಿಕೆ ಇಲ್ಲದೆ ಮತ್ತು ತಾವು ಹಿಂದೆ ಹೊಂದಿದ್ದ ನಿಲುವಿಗೆ ಸ್ಪಷ್ಟೀಕರಣ ನೀಡದೆ “ಆಳ್ವಾಸ್ ನುಡಿಸಿರಿ”ಗೆ ಸಮ್ಮೇಳನಾಧ್ಯಕ್ಷರಾಗಿದ್ದಾರೆ. ಕನ್ನಡ ಅಂತರ್ಜಾಲದಲ್ಲಿ ರೈರವರು ಸಕ್ರಿಯರೂ ಆಗಿದ್ದಾರೆ. ಅವರಿಗೆ ಬಹುಶಃ ವರ್ತಮಾನ.ಕಾಮ್ ಬಗ್ಗೆಯೂ ತಿಳಿದಿರಬಹುದು. ಹ್ಮೂ, ತಿಳಿದಿರದೇ ಏನು? ಇಲ್ಲಿ ಪ್ರಕಟವಾದ ಸೂರಿಂಜೆಯವರ ಲೇಖನಕ್ಕೇ ಅಲ್ಲವೇ ಅವರು ಆ ಲೇಖಕರೊಂದಿಗೆ ಪ್ರತಿಕ್ರಿಯೆ ಹಂಚಿಕೊಂಡಿದ್ದು. ಹಾಗಾಗಿ ತಾವು ಹಿಂದೆ ಹೇಳಿದ್ದೇನು ಮತ್ತು ತಮ್ಮ ಇಂದಿನ ನಿಲುವೇನು ಎನ್ನುವುದರ ಬಗ್ಗೆ ಅವರು ವರ್ತಮಾನ.ಕಾಮ್‌ಗೆ ಅಥವ ನವೀನ್ ಸೂರಿಂಜೆಯವರಿಗೆ ಒಂದು ಸ್ಪಷ್ಟೀಕರಣ ನೀಡಬೇಕೆಂದು ಬಯಸುವುದು ಅಸೌಜನ್ಯವಲ್ಲ ಎಂದು ನಾನು ಭಾವಿಸುತ್ತೇನೆ.

ಇನ್ನು “ಆಳ್ವಾಸ್ ನುಡಿಸಿರಿ”ಯ ಮೊದಲ ಅಧ್ಯಕ್ಷರಾಗಿದ್ದ ಬರಗೂರು ರಾಮಚಂದ್ರಪ್ಪನವರು alva-nudisiri-baraguru-mohan-alva-veerendra-heggade-vivek-raiಈ ವರ್ಷದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿದ ಬಗ್ಗೆ ಖಾರದ (ತುಸು ಹೆಚ್ಚೇ ಖಾರದ) “ಬರಗೂರು ಸನ್ಮಾನದ ಶಾಲಿನಲ್ಲಿ ಮೆತ್ತಿಕೊಂಡಿದ್ದ ರಕ್ತದ ಕಲೆಗಳು” ಲೇಖನವನ್ನು ಮಂಗಳೂರಿನ ಜೀವನ್ ಎನ್ನುವವರು ಬರೆದಿದ್ದಾರೆ. ಬರಗೂರರು ಈ ವರ್ಷದ ಸಮ್ಮೇಳನದಲ್ಲಿ ಅರ್ಧಕ್ಕೇ ಹಿಂದಿರುಗಿರುವುದೂ ಅದರಲ್ಲಿದೆ.

ಕಳೆದ ಶನಿವಾರ (14-12-13) ಮಂಗಳೂರಿನಲ್ಲಿ “ಜನ ನುಡಿ” ಆರಂಭವಾದ ದಿನದಂದೆ ಪ್ರಜಾವಾಣಿಯಲ್ಲಿ ನಾಗತಿಹಳ್ಳಿ ಚಂದ್ರಶೇಖರರ ಅಂಕಣ ಪ್ರಕಟವಾಗಿತ್ತು. ಇತ್ತೀಚಿನ ದಿನಗಳಲ್ಲಿ ಅಂಕಣ ಲೇಖನಗಳನ್ನು ಹುಮ್ಮಸ್ಸಿನಿಂದ ಓದದ ನಾನೂ ತಪ್ಪದೇ ಕಣ್ಣಾಡಿಸುವ ಕೆಲವೇ ಅಂಕಣಗಳಲ್ಲಿ ನಾಗತಿಹಳ್ಳಿಯವರದೂ ಒಂದು. ಅದನ್ನು ಈ ಬಾರಿ ಅವರು ಆಳ್ವರ ನುಡಿಸಿರಿ ಬಗ್ಗೆ ಮೀಸಲಿಟ್ಟಿದ್ದು ಮತ್ತು ಹಿಂದೆ ಅವರು ಅಲ್ಲಿ ಮಾಡಿದ್ದ ಭಾಷಣವನ್ನು ಅಚ್ಚುಹಾಕಿದ್ದು ನಿಜಕ್ಕೂ ಚೆನ್ನಾಗಿರಲಿಲ್ಲ. ಅದು ಅವರದಾಗಲಿ, ಅವರ ಅಂಕಣದ್ದಾಗಲಿ, ಘನತೆ ಹೆಚ್ಚಿಸುವ ಲೇಖನವಾಗಿರಲಿಲ್ಲ ಎನ್ನುವುದು ನನ್ನ ಅಭಿಪ್ರಾಯ. ಅದೇ ಅಥವ ಅದಕ್ಕಿಂತ ತೀಕ್ಷ್ಣವಾದ ಅಭಿಪ್ರಾಯ ಹಲವು ಗೆಳೆಯರು ಹಂಚಿಕೊಂಡರು.

ನಮ್ಮ ಬಹುತೇಕ ಸಾಹಿತಿಗಳಿಗೆ ವೇದಿಕೆ-ಭಾಷಣ ಎಂದರೆ ಪ್ರಿಯವೇ. ಅದರಲ್ಲೂ ಕೆಲವರಿಗೆ ಸನ್ಮಾನ ಎಂದರೆ ಇನ್ನೂ ಎಲ್ಲಿಲ್ಲದ ಪ್ರೀತಿ. ಅದರಲ್ಲೂ ಫ್ಲೈಟ್‌ನಲ್ಲಿ, ಟ್ರೈನ್‌ನಲ್ಲಿ, ಕಾರಿನಲ್ಲಿ ಕರೆಸಿಕೊಳ್ಳುತ್ತಾರೆ ಎಂದರೆ ಇನ್ನೂ ಪ್ರೀತಿ. ಅಲ್ಲಿ ಎಣ್ಣೆ ಸಿಗುತ್ತದೆ ಎಂದರೆ ಕೇಳಲೇ ಬೇಡಿ. (ಆಳ್ವಾಸ್‌ನ ಕಾರ್ಯಕ್ರಮಕ್ಕೆ ಹೋಗಿದ್ದ ಅತಿಥಿಯೊಬ್ಬರ ಕೊಠಡಿಗೆ ಆಯೋಜಕ ಸಮಿತಿಯಲ್ಲೊಬ್ಬರು ಮದ್ಯದ ಬಾಟಲಿ ಕೊಂಡೊಯ್ದು ಕೊಟ್ಟಿದ್ದರು ಮತ್ತು ಆ ಬಗ್ಗೆ ಅತಿಥಿಗಳು ಬಹಳ ಪ್ರೀತಿಯಿಂದ ತಮ್ಮ ಲೇಖನವೊಂದರಲ್ಲಿ ಸ್ಮರಿಸಿದ್ದರು ಎಂದು ಯಾರೋ ಒಬ್ಬರು ಹೇಳುತ್ತಿದ್ದರು.) ಪಾಪ ಮೋಹನ ಆಳ್ವರು ಸಾಲಸೋಲ ಮಾಡಿ ಈ ಪರಿಯ ಆತಿಥ್ಯ ಕೊಡುವಾಗ ತೆಗೆದುಕೊಳ್ಳುವವರು ಯೋಚಿಸಿ ತೆಗೆದುಕೊಳ್ಳಬೇಕು. ಆದರೆ, ಸನ್ಮಾನ ಮತ್ತು ಬಿರುದಿನ ಪ್ರಶ್ನೆ ಬಂದಾಗ ನಮ್ಮ ಸಾಹಿತಿಗಳಿಗೆ ದೇಶ-ಕಾಲದ ಪರಿವೆ ಇಲ್ಲದಂತಾಗಿಬಿಡುವುದು ಅವರ ತಪ್ಪಲ್ಲ. ಬಹಳಷ್ಟು ಸಲ ಅದು ವಯೋಮಾನದ ತಪ್ಪು. ನವೀನ್ ಸೂರಿಂಜೆಯವರ ಲೇಖನದಲ್ಲಿ ಪ್ರಸ್ತಾಪವಾದಂತೆ “ಜಮೀನ್ದಾರರ ಮನೆಯ ಜಿಲೇಬಿ ಎಂದರೆ ಎಲ್ಲರಿಗೂ ಇಷ್ಟ”. ಸ್ವಹಿತಾಸಕ್ತ ಸಾಹಿತಿಗಳಿಗಂತೂ ತುಸು ಹೆಚ್ಚೇ ಇಷ್ಟ.

ಗಂಭೀರವಾಗಿ ಹೇಳಬಹುದಾದರೆ, ಒಬ್ಬರು ತಮ್ಮ ವೈಯಕ್ತಿಕ ಹಣ ಮತ್ತು ಅಂತಸ್ತಿನಿಂದ ಇಂತಹ ಕಾರ್ಯಕ್ರಮ ಮಾಡಿದರೆ ಅದರಲ್ಲಿ ಭಾಗವಹಿಸುವುದರ ಬಗ್ಗೆ ಎಲ್ಲರೂ ಸ್ವಲ್ಪ ಗಂಭೀರವಾಗಿ ಯೋಚಿಸಬೇಕು. (ಯಾಕೆ ಎಂದು ವಿವರಿಸಬೇಕು ಎಂದು ಇಲ್ಲಿ ಯಾರಾದರೂ ಓದುಗರು ಬಯಸಿದರೆ ಬಹುಶಃ ಅವರಿಗೆ ವಿವರಿಸಿದರೂ ಅರ್ಥವಾಗದು. ಅದಕ್ಕಾಗಿ ಅದನ್ನು ಅಲ್ಲಿಗೇ ಬಿಡುತ್ತೇನೆ.)

ಈಗ “ಜನ ನುಡಿ” ಕಾರ್ಯಕ್ರಮಕ್ಕೆ ಬರುತ್ತೇನೆ. “ಆಳ್ವಾಸ್ ನುಡಿಸಿರಿ”ಯನ್ನು ಆಳ್ವರ ಆಳದಲ್ಲಿರುವ ಮತೀಯ ತಾತ್ವಿಕತೆ ಮತ್ತು ತುಷ್ಟೀಕರಣವನ್ನು ಹಾಗೂ ಅದನ್ನು ತಮ್ಮ ಶಿಕ್ಷಣ ಸಂಸ್ಥೆಯ ಮಾರ್ಕೆಟಿಂಗ್ ತಂತ್ರವಾಗಿಯೂ ಬಳಸುತ್ತಾರೆ abhimata-page1ಎಂದು ಪ್ರಾಮಾಣಿಕವಾಗಿ ನಂಬಿರುವ ಮಂಗಳೂರಿನ ಅನೇಕ ಯುವಮಿತ್ರರು ಕಳೆದ ಒಂದು ವರ್ಷದಲ್ಲಿ ಆದ ಚರ್ಚೆಗಳ ಮೂಲಕ ಗಟ್ಟಿಯಾಗಿ ರೂಪುಗೊಂಡ ಅಭಿಪ್ರಾಯದ ಹಿನ್ನೆಲೆಯಲ್ಲಿ “ಅಭಿಮತ ಮಂಗಳೂರು” ವೇದಿಕೆಯ ಮೂಲಕ “ಜನ ನುಡಿ” ಕಾರ್ಯಕ್ರಮ ಆಯೋಜಿಸಿದ್ದರು. ಮುನೀರ್ ಕಾಟಿಪಳ್ಳ, ನವೀನ್ ಸೂರಿಂಜೆ, ಹೊನ್ನಾವರದ ಡಾ.ಎಚ್.ಎಸ್.ಅನುಪಮ ಸೇರಿದಂತೆ ಅನೇಕರ ಶ್ರಮ ಮತ್ತು ಕಾಳಜಿ ಈ ಕಾರ್ಯಕ್ರಮದ ಆಯೋಜನೆಯಲ್ಲಿತ್ತು. ನಾಡಿನ ಮೂಲೆಮೂಲೆಗಳಿಂದ ಬಂದಿದ್ದ ಸುಮಾರು 400-500 ಜನ ಎರಡು ದಿನಗಳ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅನೇಕರ ನೈತಿಕ ಬೆಂಬಲ ಮಾತ್ರವಲ್ಲದೆ ಬಹುಶಃ ನೂರಕ್ಕೂ ಹೆಚ್ಚು ಜನ ಸ್ವಯಂಇಚ್ಛೆಯಿಂದ ಕಾರ್ಯಕ್ರಮದ ಖರ್ಚುವೆಚ್ಚಗಳನ್ನು ನೋಡಿಕೊಂಡರು. ಯಾರು ಯಾರಿಗಾಗಿಯೂ ಸಾಲ ಮಾಡಿಕೊಳ್ಳಲಿಲ್ಲ. ಪ್ರತಿಷ್ಟೆ ಮೆರೆಸಲಿಲ್ಲ. ಯಾವುದೇ ರೀತಿಯ ಶುಲ್ಕವಿಲ್ಲದ ಮತ್ತು ಮೊದಲೇ ನೊಂದಾಯಿಸಬೇಕಾದ ಜರೂರತ್ತಿಲ್ಲದ ಈ ಕಾರ್ಯಕ್ರಮಕ್ಕೆ ಹೊರ ಊರುಗಳಿಂದ ಬಂದಿದ್ದವರಿಗೆ ಉಚಿತವಾಗಿ ಯಾವೊಂದೂ ತೊಂದರೆ ಇಲ್ಲದಂತೆ ಉಚಿತವಾಗಿ ಊಟ ಮತ್ತು ವಸತಿ ಸೌಕರ್ಯವನ್ನು ಕಾಟಿಪಳ್ಳ ಮತ್ತು ಗೆಳೆಯರು ಕಲ್ಪಿಸಿದ್ದರು. ಅಲ್ಲಿ ಬಂದು ಮಾತನಾಡಿದ ಬಹುತೇಕರು ಒಂದು ಪೈಸೆಯನ್ನೂ ತೆಗೆದುಕೊಳ್ಳದೆ ಪ್ರೀತಿಯಿಂದ ಭಾಷಣ ಮಾಡಿ, ಬೆರೆತು, ಮಾತನಾಡಿ ಹೋದರು. ಅಲ್ಲಿ abhimatha-mangalooru-jananudi-2ಭಯ-ಭಕ್ತಿ ಇರಲಿಲ್ಲ. ಹಾಗೆಯೇ ಪಂಕ್ತಿಭೇದಕ್ಕೆ ಹೆಸರಾದ ಅವಿಭಜಿತ ಮಂಗಳೂರು ಜಿಲ್ಲೆಯಲ್ಲಿಯೇ ಇದು ನಡೆದರೂ, ಕೇವಲ ಸಸ್ಯಾಹಾರ ಮಾತ್ರವಲ್ಲದೆ ಮೀನು ಮತ್ತು ಕೋಳಿ ಮಾಂಸದ ಪದಾರ್ಥಗಳಿದ್ದರೂ ಅಲ್ಲಿ ಯಾವುದೇ ಪಂಕ್ತಿಭೇದವಿರಲಿಲ್ಲ. ಯಾರೊಬ್ಬರೂ ಇನ್ನೊಬ್ಬರ ಊಟಾಹಾರದ ವಿಚಾರದ ಬಗ್ಗೆ ಅಸಹ್ಯ ಪಡಲಿಲ್ಲ. ಬದಲಿಗೆ ಪ್ರೀತಿ, ವಿಶ್ವಾಸ, ಪ್ರಾಮಾಣಿಕ ವಿಮರ್ಶೆಗಳು ಅಲ್ಲಿದ್ದವು. ಕಾಳಜಿ ಇತ್ತು. ಆಶಾವಾದವಿತ್ತು. ಉತ್ಸಾಹವಿತ್ತು. ನೈತಿಕತೆ ಇತ್ತು. ಒಬ್ಬರನ್ನೊಬ್ಬರು ಬೌದ್ಧಿಕವಾಗಿ ಬೆಳೆಸುವ ವಾತಾವರಣವಿತ್ತು. ಏನಿಲ್ಲದಿದ್ದರೂ “ಜನ ನುಡಿ”ಯಲ್ಲಿ ಪ್ರಜಾಸತ್ತಾತ್ಮಕ ಆಶಯವಿದೆ ಮತ್ತು ಅದರ ಆಯೋಜಕರಿಗೆ ಯಾರೊಬ್ಬರನ್ನೂ ಮೆರೆಸುವ ಅಥವ ಬಳಸಿಕೊಳ್ಳುವ ಉಮೇದಿದ್ದಂತಿಲ್ಲ. ಈಗ ಸಂಘಟಕರ ಮುಂದಿರುವ ದೊಡ್ಡ ಸವಾಲು ಅದನ್ನು ಮುಂದಿನ ವರ್ಷಗಳಲ್ಲಿ ಮುಂದುವರೆಸುವುದು ಮತ್ತು ಇನ್ನೂ ಚೆನ್ನಾಗಿ ಮಾಡುವುದು.

ಹಾಗೆಂದು ಇಲ್ಲಿ ಕುಂದುಕೊರತೆಗಳೇ ಇರಲಿಲ್ಲ ಎಂತಲ್ಲ. ಸಾಂಸ್ಕೃತಿಕ ಕಾರ್ಯಕ್ರಮಗಳು ಇಲ್ಲವೇ ಇಲ್ಲ ಎನ್ನುವ ರೀತಿ ಇದ್ದವು. ಗೋಷ್ಟಿಗಳಲ್ಲಿಯ ಬಹುತೇಕ ಎಲ್ಲಾ ಭಾಷಣಗಳೂ ಏಕಮುಖಿಯಾಗಿದ್ದವು. ಪ್ರತಿಕ್ರಿಯೆ ನೀಡುವುದು ಎನ್ನುವುದು ನಾಮಕಾಸ್ತೆಯಾಗಿ ಎಲ್ಲರೂ ವಿಷಯಮಂಡಕರಾಗುವ ವಾತಾವರಣ ಸೃಷ್ಟಿಸಲಾಗಿತ್ತು. abhimatha-mangalooru-jananudiಒಂದೊಂದು ಗೋಷ್ಟಿಯಲ್ಲಿ ಎಂಟೊಂಭ‌ತ್ತು ಭಾಷಣಕಾರರು. (ಮತ್ತು ಕೆಲವು ಭಾಷಣಕಾರರ ಅಗತ್ಯ ಇದ್ದಂತಿರಲಿಲ್ಲ.) ಸಭಿಕರು ಭಾಷಣ ಮಾಡಿದವರೊಂದಿಗೆ ವೇದಿಕೆಯಲ್ಲಿ ಸಂವಾದದಲ್ಲಿ ಪಾಳ್ಗೊಳ್ಳುವ ಅವಕಾಶವೇ ಇರಲಿಲ್ಲ. ಮಾತನಾಡಿದವರು ಬಹುತೇಕ ಒಂದೇ ತರಹದ ಜನ. ಅಂದರೆ, ಬಹುತೇಕರು ಲೇಖಕರು, ಅಧ್ಯಾಪಕರು, ಮತ್ತು ಪತ್ರಕರ್ತರು. ಒಂದೆರಡು ಗೋಷ್ಟಿಗಳಲ್ಲಿ ಚಳವಳಿಯಲ್ಲಿ ತೊಡಗಿಸಿಕೊಂಡವರಿದ್ದರು. ಸಾಹಿತಿ-ಪತ್ರಕರ್ತರನ್ನು ಹೊರತುಪಡಿಸಿ ರಂಗಭೂಮಿಯಲ್ಲಿ ತೊಡಗಿಸಿಕೊಂಡ ಕೆಲವೇ ಕೆಲವು ಮಂದಿ ಹಾಗೂ ಪಿಚ್ಚಳ್ಳಿ ಶ್ರೀನಿವಾಸ್ ಮತ್ತು ಇಪ್ಟಾ ಜೊತೆ ಸ್ಥಳೀಯ ಹಾಡುಗಾರರು (ಸೌಜನ್ಯಾ ಘಟನೆ ಕುರಿತು ಹಾಡಿದವರು) ಇದ್ದರು. ಬರಹ – ಪತ್ರಕರ್ತ ಹಾಗೂ ಕೆಲ ಹೋರಾಟಗಾರರಲ್ಲದೆ ಬೇರೆ ಯಾರೂ ಇರಲಿಲ್ಲ ಎನ್ನುವುದು ಸತ್ಯ. ಆದರೆ ನನ್ನ ಪ್ರಶ್ನೆ ಈ ವೇದಿಕೆಗೆ ಸೂಕ್ತವಾಗಬಲ್ಲ – ಸಂವೇದನಾಶೀಲ ನಟ-ನಟಿಯರು, ಧಾರಾವಾಹಿ-ಸಿನೆಮಾ ನಿರ್ದೇಶಕರು, ಮುಖ್ಯವಾಹಿನಿಯ ಟಿ.ವಿ. ಪತ್ರಕರ್ತರು ಇದ್ದಾರಾ? ಬರವಣಿಗೆ ಒಂದೇ ಅಭಿವ್ಯಕ್ತಿಯ ಮಾದರಿ ಅಲ್ಲ ಮತ್ತು ಅದರ ಆಚೆಗೂ ವಿಶಾಲ ಜನಸಮೂಹವನ್ನು ಪ್ರಭಾವಿಸುವ ಮತ್ತು ಪ್ರಚೋದಿಸುವ ಪ್ರಬಲ ಮಾಧ್ಯಮ ವಿಭಾಗಗಳಿವೆ ಎನ್ನುವುದನ್ನು ಆಯೋಜಕರು ಮರೆಯಬಾರದು. ಅಲ್ಲಿಗೆ ಬಂದಿರುವವರು ಇಂತಹ ಬೇರೆಬೇರೆ ಮಾಧ್ಯಮಗಳೊಂದಿಗೆ ಅನುಸಂಧಾನ ಮಾಡುವುದಾಗಲಿ, ಅಲ್ಲಿಗೆ ಹೋಗುವುದರ ಬಗ್ಗೆ ಆಗಲಿ ಕೆಲವು ಮಾತುಕತೆ ಚರ್ಚೆ ಯೋಜನೆಗಳು ಆಗಬೇಕಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಒಂದು ಮೂರು-ನಾಲ್ಕು ಗಂಟೆಗಳ ಕಾಲದ ಮುಕ್ತ ಚರ್ಚೆ ಇರಬೇಕಿತ್ತು. ಅಲ್ಲಿ ಮುಂದಿನ ನಡಾವಳಿ ಮತ್ತು ಯೋಜನೆಗಳ ಬಗ್ಗೆ ಅಭಿಪ್ರಾಯಕ್ಕೆ ಬರಬೇಕಿತ್ತು. ಪ್ರತಿಕ್ರಿಯಾತ್ಮಕವಾಗಿಯಷ್ಟೇ ಅಲ್ಲದ ಸೃಜನಶೀಲವಾಗಿ ಕಾರ್ಯಪ್ರವೃತ್ತರಾಗುವ ಮತ್ತು ಒಟ್ಟಾಗಿ ಕೆಲಸ ಮಾಡುವ ಬಗೆಗಳ ಹುಡುಕಾಟ ಇರಬೇಕಿತ್ತು. ಇದು ಮುಂದಿನ ವರ್ಷದಲ್ಲಾದರೂ ಆಗಬೇಕು.

ಇಂತಹ ಸಭೆಗಳಲ್ಲಿ ಮಾತನಾಡುವವರಿಗೆ ಸಲಹೆ ಅಥವ ಕೋರಿಕೆ ಅಂದರೂ ಆದೀತು. ಎಡಪಂಥೀಯ–ಅದರಲ್ಲೂ ಕಮ್ಯುನಿಸ್ಟ್ ವಿಚಾರಧಾರೆಯ ಚಿಂತನೆಗಳ–ಚಿಂತಕ ಮಹಾಶಯರು “ಕೋಮುವಾದ” ಮತ್ತು “ಬಂಡವಾಳಶಾಹಿ” ಎಂಬ ಎರಡು ಪದಗಳ ಬಳಕೆಯನ್ನು ಕಮ್ಮಿ ಮಾಡಿ ವಿಷಯ ಮಂಡಿಸಲು ಪ್ರಯತ್ನಿಸಬೇಕು. ರೇಜಿಗೆ ಹುಟ್ಟಿಸುವಷ್ಟು ಸಲ ಅದನ್ನು ಬಳಸುತ್ತಾರೆ. ಹಾಗೆಯೇ ಮಹಾತ್ಮ ಗಾಂಧಿಯ ನಾಡಿನ ಇತ್ತೀಚಿನ ರಾಜಕೀಯ ವ್ಯಕ್ತಿಯೊಬ್ಬರ ಹೆಸರನ್ನೂ ಸಹ ತಮ್ಮ ಭಾಷಣಗಳಲ್ಲಿ ಅನಗತ್ಯವಾಗಿ ಮತ್ತು ವಿಪರೀತವಾಗಿ ಉಲ್ಲೇಖಿಸದ ಹಾಗೆ ಸ್ವಯಂನಿಯಂತ್ರಣ ಹೇರಿಕೊಳ್ಳಬೇಕು. ವಿಷಯ ಮತ್ತು ಹೆಸರುಗಳ ಪುನರಾವರ್ತನೆ ಎರಡು ದಿನಗಳ ಕಾರ್ಯಕ್ರಮದಲ್ಲಿ ಆಗುವುದು ಅಸಹನೀಯ. ನಮ್ಮ ಪರಂಪರೆಯಲ್ಲಿ ಇದ್ದಿರಬಹುದಾದ ಉನ್ನತ ವ್ಯಕ್ತಿ ಮತ್ತು ವಿಚಾರಗಳನ್ನು ಪ್ರಸ್ತಾಪಿಸುತ್ತ ಸಮಕಾಲೀನ ಸಂದರ್ಭದ ಕೆಟ್ಟದ್ದರ ಬಗ್ಗೆ ಮಾತನಾಡುವುದು ಹೇಗೆ ಎನ್ನುವುದನ್ನು ಸಮಾಜದ ಬಗ್ಗೆ ಕಾಳಜಿಯುಳ್ಳ ಜನ ಕಲಿಯಬೇಕಿದೆ. ಇಲ್ಲದಿದ್ದರೆ ನಮ್ಮ ಭಾಷಣಗಳು ಕೇವಲ ವೈಯಕ್ತಿಕ ರಾಗ-ದ್ವೇಷಗಳ ಅಭಿವ್ಯಕ್ತಿಯಾಗುತ್ತದೆ.

“ಜನ ನುಡಿ”ಗೆ ಮತ್ತು ತಿಂಗಳ ಹಿಂದೆ ಹಾಸನದಲ್ಲಿ ನಡೆದ “ನಾವು-ನಮ್ಮಲ್ಲಿ” ಕಾರ್ಯಕ್ರಮಕ್ಕೆ ಹೋಗಿಬಂದ ನಂತರ ವರ್ತಮಾನ.ಕಾಮ್‌ನ ಪ್ರಸ್ತುತತೆ ಮತ್ತು ಅಗತ್ಯದ ಬಗ್ಗೆ ನನಗೆ ಯಾವ ಸಂಶಯಗಳೂ ಇಲ್ಲ. New-Logo1-01-022.jpgವರ್ತಮಾನ.ಕಾಮ್ ಯಾವುದೇ ಒಬ್ಬ ವ್ಯಕ್ತಿಯದ್ದಲ್ಲ. ನಮ್ಮಲ್ಲಿ ಬರೆದಿರುವ ನೂರಾರು ಜನ ಲೇಖಕರು ಸೇರಿ ಕಟ್ಟಿರುವ ವೇದಿಕೆ ಇದು. ಒಬ್ಬಿಬ್ಬರದೇ ಆಗಿದ್ದರೆ ಒಂದು ಬ್ಲಾಗ್ ಸಾಕಿತ್ತು. ಆದರೆ ಇದು ಒಂದು ರೀತಿಯಲ್ಲಿ ಸಾಮೂಹಿಕ ಜವಾಬ್ದಾರಿಯ, ಸಾಮೂಹಿಕ ಪ್ರಯತ್ನದ ಫಲ. ನಾವು ಹಾಕಿಕೊಂಡಿರುವ ಆಶಯಗಳಿಗೆ ತಕ್ಕನಾಗಿ ನಡೆಯುವ ತನಕ ಇದು ಮುಂದುವರೆಯುತ್ತದೆ. ಅದಾಗದ ದಿನ ನಿಲ್ಲುತ್ತದೆ.

ಅಂದಹಾಗೆ, ಇತ್ತೀಚಿನ ದಿನಗಳಲ್ಲಿಯ ನನ್ನ ಕಾರ್ಯದೊತ್ತಡದ ಕಾರಣಕ್ಕಾಗಿ ಇಲ್ಲಿ ಕೆಲವೊಂದು ನಿಯಮಗಳು ನಮಗೆ ಗೊತ್ತಿಲ್ಲದೆ ಮುರಿದಿವೆ. ಬೇರೆ ಕಡೆ, ಅದರಲ್ಲೂ ಬೇರೆ ವೆಬ್‌ಸೈಟ್-ಬ್ಲಾಗುಗಳಲ್ಲಿ ಈಗಾಗಲೆ ಪ್ರಕಟವಾಗಿರುವ ಲೇಖನಗಳನ್ನು courtesy-announcementಇಲ್ಲಿ ಪ್ರಕಟಿಸುವುದಿಲ್ಲ ಎನ್ನುವುದು. ಕೆಲವು ಉತ್ಸಾಹಿ ಲೇಖಕರು ಇತರೆ ಕಡೆಗಳಿಗೂ ಕಳುಹಿಸಿ ನಮಗೂ ಕಳುಹಿಸಿರುವಂತಹ ಸಂದರ್ಭದಲ್ಲಿ ಸರಿಯಾಗಿ ಪರಿಶೀಲಿಸದೆ ಇಲ್ಲಿ ಪ್ರಕಟಿಸಿಬಿಟ್ಟಿದ್ದೇವೆ. ವರ್ತಮಾನ.ಕಾಮ್‌ಗೆ ತನ್ನದೇ ಆದ ಐಡೆಂಟಿಟಿ ಇದೆ. ನಮ್ಮಲ್ಲಿ ಪ್ರಕಟವಾಗುವ ಲೇಖನಗಳನ್ನು ಇಲ್ಲಿ ಓದುವುದಕ್ಕಿಂತ ಹೆಚ್ಚಾಗಿ ರಾಜ್ಯದ ಅನೇಕ ಕಡೆ ಮರುಮುದ್ರಿಸುವ ಸ್ಥಳೀಯ ಪತ್ರಿಕೆಗಳಲ್ಲಿ ಜನ ಓದುತ್ತಾರೆ. ಹಾಗಾಗಿ ನಮ್ಮಲ್ಲಿ ಪ್ರಕಟವಾಗುವ ಲೇಖನಗಳಿಗೆ ಒಂದು ಶಿಸ್ತಿಲ್ಲದೆ ಹೋದರೆ ಕಷ್ಟ. ಲೇಖಕರು ಇದನ್ನು ಗಮನಿಸಿ ಸಹಕರಿಸಬೇಕೆಂದು ಕೋರುತ್ತೇನೆ.

ಹಾಗೆಯೇ, ನಮ್ಮಲ್ಲಿ ಪ್ರಕಟವಾದ ಲೇಖನಗಳನ್ನು ಕನ್ನಡದ ಇತರೆ ಕೆಲವು ವೆಬ್‌ಸೈಟ್ ಮತ್ತು ಬ್ಲಾಗುಗಳವರು ಮರುಪ್ರಕಟಿಸುತ್ತಾರೆ. ನಾವು ಈಗಾಗಲೆ ಹೇಳಿರುವ ಹಾಗೆ ಲೇಖನದ ಹಕ್ಕುಗಳು ಲೇಖಕರದು. ಇತರೆ ಕಡೆ ಪ್ರಕಟಿಸುವವರಲ್ಲಿ ಕೆಲವರು ಕೃಪೆ ವರ್ತಮಾನ.ಕಾಮ್ ಎಂದೋ, ಅಥವ ನೇರವಾಗಿ ಇಲ್ಲಿಯ ಲಿಂಕ್ ಅನ್ನೋ ಕೊಡುತ್ತಾರೆ. ಹಾಗೆ ಮಾಡದವರು ದಯವಿಟ್ಟು ಕೃಪೆ ಎಂದು ಇನ್ನು ಮುಂದಾದರೂ ಸೂಚಿಸಿ ಸ್ಪಷ್ಟವಾಗಿ ಇಂಗ್ಲಿಷಿನಲ್ಲಿ www.vartamaana.com ಎಂದು ಕೊಟ್ಟರೆ ಉತ್ತಮ. ಹೀಗಾದಲ್ಲಿ ಮಾತ್ರ ವರ್ತಮಾನ.ಕಾಮ್‌ನ ಓದುಗರೂ ಹೆಚ್ಚುತ್ತಾರೆ, ಹೆಚ್ಚುಹೆಚ್ಚು ಲೇಖಕರೂ ಬರೆಯುತ್ತಾರೆ, ನಮ್ಮ ಸಮಕಾಲೀನ ಸಂದರ್ಭದ ವಿಷಯಗಳೂ ಸಶಕ್ತವಾಗಿ ಚರ್ಚೆಗೊಳಪಡುತ್ತವೆ, ಮತ್ತು ಅದು ಕ್ರಿಯಾಶೀಲತೆಯೆಡೆಗೆ ನಮ್ಮ ಲೇಖಕರನ್ನು ಮತ್ತು ಓದುಗರನ್ನು ಒಯ್ಯುತ್ತದೆ. ಹಾಗಾಗಿ ದಯವಿಟ್ಟು ಎಲ್ಲರೂ ಸಹಕರಿಸಬೇಕೆಂದು ಮತ್ತೊಮ್ಮೆ ಕೋರುತ್ತೇನೆ.

ಕ್ರಿಸ್ಮಸ್ ಉಡುಗೊರೆ

ಓ. ಹೆನ್ರಿ
– ಕನ್ನಡಕ್ಕೆ: ಜೆ.ವಿ.ಕಾರ್ಲೊ

[ಕ್ರಿಸ್ಮಸ್‌ಗೆ ಸಂಬಂಧಿಸಿದಂತೆ ಹೇರಳ ಸಾಹಿತ್ಯವಿದ್ದರೂ, ಹೆಸರಾಂತ ಅಮೆರಿಕನ್ ಸಣ್ಣ ಕತೆಗಾರ ಓ. ಹೆನ್ರಿಯ “The Gift of Magi” ಇಂದಿಗೂ ಜನಪ್ರಿಯ. ಇದು ಹೆಚ್ಚು ಕಮ್ಮಿ ಎಲ್ಲಾ O.Henryಭಾಷೆಗಳಿಗೂ ಅನುವಾದಗೊಂಡಿರುವ ಸಣ್ಣ ಕತೆ. ಕನ್ನಡದಲ್ಲೂ ಅನುವಾದಗೊಂಡಿರಬಹುದು.

ಜಿಮ್ ಮತ್ತು ಡೆಲ್ಲಾ ಪ್ರೀತಿಸಿ ಮದುವೆಯಾದ ಒಂದು ಯುವಜೋಡಿ. ಜಿಮ್ಮನಿಗೆ ಕೇವಲ ಇಪ್ಪತೆರಡು ವರ್ಷಗಳು! ಆ ವಯಸ್ಸಿನ ಪ್ರೀತಿಯೇ ಅಂತಾದ್ದು. ಪ್ರೀತಿಯೇ ಸರ್ವಸ್ವ. ಪ್ರೀತಿಯ ಮುಂದೆ ಎಲ್ಲವೂ ತೃಣ ಸಮಾನ! ಬಡತನ ಕೂಡ, ಎಂಬ ಹುಚ್ಚು ವಯಸ್ಸಿನ ಮುಗ್ಧ ಆದರ್ಶ ಯಾರನ್ನೂ ತಮ್ಮ ಆ ದಿನಗಳಿಗೆ ಕೊಂಡೊಯ್ಯಬಹುದಾದದ್ದು. ಎಂತಾ ಕಠಿಣ ತ್ಯಾಗಗಳಿಗೂ ಹಿಂದುಮುಂದು ನೋಡದ ವಯಸ್ಸು. ಈ ಯುವ ಜೋಡಿಗಳು ಒಬ್ಬರನ್ನೊಬ್ಬರು ಮೆಚ್ಚಿಸಲು ಅವರು ಆರಿಸಿಕೊಂಡ ಉಡುಗೊರೆ, ಅದಕ್ಕಾಗಿ ಅವರು ಮಾಡುವ ತ್ಯಾಗ, ತಿರುವು ಪಡೆದ ಅಂತ್ಯ.. ವಯಸ್ಸಾದವರಿಗೆ ಇಲ್ಲೊಂದು ವಿಷಾದವಿದ್ದರೆ, ಯುವಕರಿಗೆ ಒಂದು ಆದರ್ಶವಿದೆ.]

ಒಂದು ಡಾಲರ್ ಮತ್ತು ಎಂಭತ್ತೇಳು ಸೆಂಟುಗಳು. ಅಷ್ಟೇ. ಇದರಲ್ಲಿ ಅರವತ್ತೇಳು ಸೆಂಟುಗಳು ಬರೇ ಒಂದು ಪೆನ್ನಿಯ ನಾಣ್ಯಗಳಲ್ಲಿದ್ದವು. ದಿನ ನಿತ್ಯ ಒಂದೆರಡು ಪೆನ್ನಿಗಳು ಅಂಗಡಿಯವನತ್ತಿರವೋ, ತರಕಾರಿ ಮಾರುವವನತ್ತಿರವೋ ಗಂಟೆಗಳ ಕಾಲ ಚೌಕಾಸಿ ಮಾಡಿ ಕೂಡಿ ಹಾಕಿದ್ದವು. ಈಗ ನೆನೆಸಿಕೊಂಡಾಗ ಲಜ್ಜೆಯಿಂದ ಮುಖ ಕೆಂಪಾಗಾಗುತ್ತದೆ. ಬೇರಾವ ದಾರಿ ಇರಲಿಲ್ಲ. ಡೆಲ್ಲಾ ಮೂರನೇ ಬಾರಿ ಹಣ ಲೆಕ್ಕ ಮಾಡಿದಳು. ಅಷ್ಟೇ. ಒಂದು ಡಾಲರ್, ಎಂಭತ್ತೇಳು ಸೆಂಟುಗಳು. merry-christmasನಾಳೆ ಕ್ರಿಸ್ಮಸ್ ಹಬ್ಬ!

ಮುರಿದು ಸುಕ್ಕಾಗಿ ಹೋದ ಸೋಫಾದ ಮೇಲೆ ಕುಳಿತುಕೊಂಡು ತನ್ನ ಅದೃಷ್ಟವನ್ನು ನೆನೆದು ಅಳುವುದಲ್ಲದೆ ಬೇರಾವ ದಾರಿಯೂ ಡೆಲ್ಲಾಳಿಗೆ ಕಾಣಿಸಲಿಲ್ಲ. ಸಮದಾನವಾಗುವಷ್ಟೂ ಅತ್ತಳು. ಜೀವನ ಅಂದರೆ ಇಷ್ಟೇಯಾ: ಕೆಲವೊಮ್ಮೆ ಖುಷಿ, ಕೆಲವೊಮ್ಮೆ ದುಃಖ. ವ್ಯತ್ಯಾಸವೇನೆಂದರೆ, ದುಃಖದ ಪಾಲೇ ಹೆಚ್ಚು!

ಮನೆಯೊಡತಿ ಎಷ್ಟೊತ್ತು ಅಳುತ್ತಾ ಕೂರಬಹುದು? ಡೆಲ್ಲಾ ಎದ್ದು, ಕಣ್ಣೀರನ್ನು ಒರೆಸುತ್ತಾ ಸುತ್ತ ಒಮ್ಮೆ ಕಣ್ಣಾಡಿಸಿದಳು. ವಾರಕ್ಕೆ ಎಂಟು ಡಾಲರ್ ಬಾಡಿಗೆಯ ಫರ್‍ನಿಶ್ ಮಾಡಿದ ಅಪಾರ್ಟ್‌ಮೆಂಟ್ ಅವಳದು. ಕೆಳಗೆ, ಮೇಲೆ ಹತ್ತುವ ಜಾಗದಲ್ಲಿ ತುಕ್ಕು ಹಿಡಿದ ಲೆಟರ್ ಬಾಕ್ಸೊಂದು ಗೋಡೆಗೆ ತೂಗುತ್ತಿತ್ತು. ಅದು ಉಪಯೋಗಿಸದೆ ಎಷ್ಟು ಕಾಲವಾಗಿತ್ತೋ? ಲೆಟರ್ ಬಾಕ್ಸಿನ ಮಗ್ಗುಲಲ್ಲೇ, ಸಂಪರ್ಕ ಕಳೆದುಕೊಂಡಿದ್ದ ಕರೆಗಂಟೆಯ ಗುಂಡಿಯೊಂದು ಕೀವು ತುಂಬಿದ ವೃಣದಂತೆ ಎದ್ದು ಕಾಣುತ್ತಿತ್ತು. ಅದರ ಮಗ್ಗುಲಲ್ಲೇ. “ಮಿ. ಜೇಮ್ಸ್ ಡಿಲ್ಲಿಂಗ್ಯಾಮ್ ಯಂಗ್” ಎಂಬ ಮಾಸಿ ಹೋದ ಅಕ್ಷರಗಳ ಬೋರ್ಡೊಂದು ಕಾಣಿಸುತ್ತಿತ್ತು. ಮನೆಯೊಡೆಯನಿಗೆ ವಾರಕ್ಕೆ ಮುವ್ವತ್ತು ಡಾಲರ್ ಸಂಬಳ ಸಿಗುತ್ತಿರುವವರೆಗೆ ಹೆಸರಿನ ಫಲಕ ಮಿನುಗುತ್ತಿತ್ತು! oil-paintingಮನೆಯೊಡೆಯನ ಸಂಬಳ ಈಗ ಇಪ್ಪತ್ತು ಡಾಲರ್‌ಗಳಿಗೆ ಇಳಿದಿತ್ತು. ಆದರೂ, ನಿಮಗೀಗಷ್ಟೇ ಪರಿಚಿತಳಾದ ಮಿಸೆಸ್ ಜೇಮ್ಸ್ ಡಿಲ್ಲಿಂಗ್ಯಾಮಾ ಳಿಂದ, ಮನೆಯೊಡೆಯ ಮೆಟ್ಟಿಲು ಹತ್ತಿ ಬರುವಾಗ, “ಜಿಮ್ ಡಿಯರ್!” ಎಂಬ ಹೃತ್ಪೂರ್ವಕ ಬೆಚ್ಚನೆಯ ಸ್ವಾಗತ ದೊರಕುತ್ತಿತ್ತು.

ಮನಸಾರೆ ಅತ್ತು ಎದ್ದ ಡೆಲ್ಲಾ ಮುಖ ತೊಳೆದುಕೊಂಡಳು. ತೆಳುಪಾಗಿ ಪೌಡರನ್ನು ಹಚ್ಚಿ ಕಿಟಕಿಯ ಬಳಿ ನಿಂತು ಹೊರಗೆ ನೋಡಿದಳು. ಬಣ್ಣ ಮಾಸಿದ ಕಾಂಪೌಡಿನ ಮೇಲೆ ಬೆಕ್ಕೊಂದು ಆಲಸ್ಯದಿಂದ ಕಳ್ಳ ಹೆಜ್ಜೆ ಇಡುತ್ತಾ, ಏನೋ ಹೊಂಚು ಹಾಕಿತ್ತು. ನಾಳೆ ಕ್ರಿಸ್ಮಸ್ ಹಬ್ಬ. ಜಿಮ್ಮನಿಗೆ ಉಡುಗೊರೆ ಕೊಡಲು ಬಹಳಷ್ಟು ತಿಂಗಳುಗಳಿಂದ ಉಳಿಸುಕೊಂಡು ಬಂದ ಹಣ ಕೇವಲ ಒಂದು ಡಾಲರ್ ಎಂಭತ್ತೇಳು ಸೆಂಟ್‌ಗಳಾಗಿದ್ದವು. “ಜಿಮ್. ನನ್ನ ಜಿಮ್.” ಜಿಮ್ಮನಿಗೆ ಏನು ಉಡುಗೊರೆ ಕೊಡುವುದೆಂದು ಅವಳು ಬಹಳಷ್ಟು ಯೋಚಿಸಿದ್ದಳು. ಜಿಮ್ಮನ ಘನತೆಗೆ ತಕ್ಕುದಾದಂತ, ಅವನು ಹೆಮ್ಮೆ ಪಡುವಂತ, ಸದಾಕಾಲ ಅವನಲ್ಲಿರುವಂತ ಉಡುಗೊರೆ ಕೊಡಲು ಅವಳು ಬಹಳಷ್ಟು ಯೋಚಿಸಿದ್ದಳು.
ಅಪಾರ್ಟ್‌ಮೆಂಟಿನ ಎರಡು ಕಿಟಕಿಗಳ ಮಧ್ಯೆ ಒಂದು ಮಾಸಲಾದ ಕನ್ನಡಿ ನೇತುಹಾಕಲಾಗಿತ್ತು. ಅದರಲ್ಲಿ ಡೆಲ್ಲಾ ಒಬ್ಬಳೇ ತನ್ನ ಪ್ರತಿರೂಪವನ್ನು ಅಂದಾಜು ಮಾಡಲು ಶಕ್ತಳಾಗಿದ್ದಳು.

ಹಠಾತ್ತನೆ ಕಿಟಕಿಯಿಂದ ಸರಿದು ಅವಳು ಕನ್ನಡಿಯ ಎದುರಿಗೆ ನಿಂತುಕೊಂಡಳು. ಅವಳು ಉದ್ವೇಗಗೊಂಡಿದ್ದಳು. ಕಣ್ಣುಗಳು ಕಾಂತಿಯಿಂದ ಹೊಳೆಯುತ್ತಿದ್ದವು. ಆದರೆ ಮುಂದಿನ ಕ್ಷಣದಲ್ಲೇ ಅವಳ ಮುಖ ಕಳೆಗುಂದಿತು. ಕತ್ತಿನ ಮೇಲ್ಭಾಗಕ್ಕೆ ಕಟ್ಟಿದ್ದ ಕೂದಲ ರಾಶಿಯನ್ನು ಬಿಚ್ಚಿ ಒಮ್ಮೆ ತಲೆ ಕೊಡವಿಕೊಂಡಳು.

ಡಿಲ್ಲಿಂಗ್ಯಾಮ್ ಕುಟುಂಬದಲ್ಲಿ ಎರಡು ಬೆಲೆ ಬಾಳುವ ವಸ್ತುಗಳಿದ್ದವು. ಅದರ ಬಗ್ಗೆ ಅವರಿಬ್ಬರಿಗೂ ಹೆಮ್ಮೆ ಇತ್ತು. ಒಂದು, ಜಿಮ್ಮಿಯ ಬಂಗಾರದ ಜೇಬು ಗಡಿಯಾರ. ಅದು ಅವನ ಪೂರ್ವಜರಿಂದ ಅವನಿಗೆ ಬಂದಿತ್ತು. ಎರಡನೆಯದು ಡೆಲ್ಲಾಳ ಅಪೂರ್ವ ಕೇಶರಾಶಿ. ಒಂದು ವೇಳೆ ಶೀಬಾದ ರಾಣಿ ಡೆಲ್ಲಾಳ ಎದುರು ಫ್ಲ್ಯಾಟಿನಲ್ಲಿ ವಾಸಿಸುತ್ತಿದ್ದಲ್ಲಿ, ಅವಳಿಗೆ ಹೊಟ್ಟೆ ಉರಿಸಲೆಂದೇ ಇವಳು ಕೂದಲನ್ನು ಕಿಟಕಿಯ ಹೊರಗೆ ಹರವಿಕೊಂಡು ಬಿಸಿಲಿಗೆ ನಿಂತಿರುತ್ತಿದ್ದಳೇನೋ! ಹಾಗೆಯೇ ಸೋಲೊಮನ್ ರಾಜನೇನಾದರೂ ಜಿಮ್ಮನಿಗೆ ದಿನಾಲು ಎದುರು ಸಿಗುವಂತಿದ್ದರೆ ಅವನೂ ಕೂಡ ರಾಜನಿಗೆ ಹೊಟ್ಟೆಯುರಿ ಭರಿಸಲು ಗಡಿಯಾರವನ್ನು ಹೊರತೆಗೆಯುತ್ತಿದ್ದನೇನೋ!

ಡೆಲ್ಲಾ ತಲೆ ಕೊಡವಿಕೊಂಡಿದ್ದೇ ತಡ, ಬಂಧನದಲ್ಲಿದ್ದ ಕೂದಲ ರಾಶಿ ಸಮುದ್ರದ ದಂಡೆಯ ಮೇಲೆ ಮುಗಿ ಬೀಳುವ ತೆರೆಗಳಂತೆ ಅವಳ ಮೊಣಕಾಲವರೆಗೆ ಬಂದು ಬಿದ್ದಿತು. ಕೇಶಗಳಲ್ಲೇ ಕಸೂತಿ ಮಾಡಿದ ವಸ್ತ್ರದಂತೆ ಅದು ಡೆಲ್ಲಾಳ ಮೇಲೆ ಶೋಭಿಸುತ್ತಿತ್ತು. ಕೂದಲನ್ನೆಲ್ಲಾ ಆಯ್ದು ಅವಳು ಮೊದಲಿನಂತೆ ಕತ್ತಿನ ಹಿಂಭಾಗಕ್ಕೆ ಗಂಟು ಕಟ್ಟಿದಳು. ತಾನಾಗಿಯೇ ಎರಡು ಕಣ್ಣೀರ ಹನಿಗಳು ಅವಳ ಕೆನ್ನೆಯನ್ನು ಸವರಿಕೊಂಡು ಸವೆದು ಹೋದ ಕೆಂಪು ಕಾರ್ಪೆಟಿನೊಳಗೆ ಅಂತರ್ಧಾನವಾದವು. ಕೆಲವು ಕ್ಷಣ ಅವಳ ಮನಸ್ಸು ಚಂಚಲಗೊಂಡಿತಾದರೂ ತುಟಿ ಕಚ್ಚಿಕೊಂಡು ತನ್ನ ಭಾವನೆಗಳನ್ನು ಹತ್ತಿಕ್ಕಿ ಕೊಂಡಳು.

ಅವಳು ಅವಸರದಿಂದ ತನ್ನ ಹಳೆಯ ಕಂದು ಬಣ್ಣದ ಕೋಟನ್ನು ಧರಿಸಿದಳು. ತಲೆಗೆ ಅದೇ ವರ್ಣದ ಹ್ಯಾಟು ಏರಿಸಿದಳು. ಕನ್ನಡಿಯ ಎದುರು ನಿಂತು ಒಂದು ಗಿರಿಕಿ ಹೊಡೆದು ಹೊರನಡೆದಳು. ಅವಳ ಕಣ್ಣುಗಳು ಮೊದಲಿನಂತೆಯೇ ಮಿನುಗುತ್ತಿದ್ದವು.

ರಸ್ತೆಗೆ ಬಿದ್ದ ಅವಳು ಅವಸರದಿಂದಲೇ ಮೇಡಂ ಸೊಪ್ರೋನಿಕಾಳ ಕೇಶಾಲಂಕಾರದ ಅಂಗಡಿಗೆ ಬಂದು ತಲುಪಿದಳು. ಮೆಟ್ಟಿಲುಗಳನ್ನು ಏರಿ ಏದುಸಿರು ಬಿಡುತ್ತಾ, ದಷ್ಟಪುಷ್ಟವಾಗಿದ್ದ ಮೇಡಂ ಸೊಪ್ರೋನಿಕಾಳ ಕೌಂಟರಿನ ಎದುರಿಗೆ ಬಂದು ನಿಂತಳು.

“ನನ್ನ ಕೂದಲು ಕೊಂಡ್ಕೋತೀರಾ?” ಡೆಲ್ಲಾ ಮೇಡಮಳನ್ನು ಕೇಳಿದಳು.

“ಹೌದು. ನಾನು ಕೂದಲು ಖರಿದಿಸುತ್ತೇನೆ.” ಮೇಡಂ ಗಂಭೀರಳಾಗಿ ಉತ್ತರಿಸಿದಳು.

ಡೆಲ್ಲಾ ತನ್ನ ಕೂದಲಿನ ಗಂಟನ್ನು ಬಿಚ್ಚಿ ಮೇಡಮ್ಮಳ ಮುಂದೆ ಹರವಿದಳು.

“ಇಪ್ಪತ್ತು ಡಾಲರುಗಳು.” ಮೇಡಂ ಸೊಪ್ರೋನಿಕಾ ಬೆಲೆ ಕಟ್ಟಿದಳು.

“ಆಯ್ತು. ಬೇಗ ಕೊಡಿ.” ಡೆಲ್ಲಾ ಅವಸರಿಸಿದಳು.

ಡೆಲ್ಲಾಳ ಮುಂದಿನ ಎರಡು ತಾಸುಗಳು ಹೇಗೆ ಕಳೆದು ಹೋದವು ಎಂದು ವಿವರಿಲಸಾಧ್ಯ. ಅವಳಿಗೆ ಹೊಸದಾಗಿ ಎರಡು ರೆಕ್ಕೆಗಳು ಮೂಡಿದ್ದವೆಂದರೂ ಅತಿಶಯೋಕ್ತಿಯಾಗಲಾರದು. ಜಿಮ್ಮಿಗೆ ಉಡುಗೊರೆ ಹುಡುಕುತ್ತಾ ಅವಳು ಸುತ್ತದ ಅಂಗಡಿಗಳೇ ಉಳಿದಿರಲಿಲ್ಲ!

ಅವಳು ಹುಡುಕುತ್ತಿದ್ದ ವಸ್ತು ಕೊನೆಗೂ ಅವಳಿಗೆ ಸಿಕ್ಕಿತು. ಖಂಡಿತವಾಗಿಯೂ ಅದು ಅವಳ ಜಿಮ್ಮನಿಗೆಂದೇ ಮಾಡಿದ್ದೆಂದು ಅದರ ಮೇಲೆ ಕಣ್ಣು ಹಾಯಿಸಿದಾಗಲೇ ಅವಳಿಗನಿಸಿತ್ತು. ಅದರಲ್ಲಿ ಸಂಶಯವೇ ಇರಲಿಲ್ಲ. ಅದೊಂದು ತುಂಬಾ ಸರಳವಾದ ಪ್ಲ್ಯಾಟಿನಂ ಲೋಹದಿಂದ ಮಾಡಿದ್ದ ಜೇಬು ಗಡಿಯಾರದ ಚೇಯ್ನ್ ಆಗಿತ್ತು. ಯಾವುದೇ ಕೃತಕತೆಯಿಲ್ಲದೆ ತಯಾರಿಸಿದ್ದ ಆ ಚೇಯ್ನು ತನ್ನ ಸರಳತೆಯಿಂದಲೇ ತನ್ನ ಮೌಲ್ಯವನ್ನು ಹೆಚ್ಚಿಸಿಕೊಂಡಿತ್ತು. ಅವಳಿಗೆ ಕೊಂಚ ದುಬಾರಿಯೆಂದೇ ಅನಿಸಿತು. ಆದರೂ, ಜಿಮ್ಮಿಯ ವಾಚಿಗೆ, ಅವನ ವ್ಯಕ್ತಿತ್ವಕ್ಕೆ ಆ ಚೇಯ್ನು ಸರಿಸಾಟಿಯಾಗಿತ್ತು. ಅವಳು ಖುಷಿಯಿಂದಲೇ ಅದಕ್ಕೆ ಇಪ್ಪತ್ತೊಂದು ಡಾಲರುಗಳನ್ನು ತೆತ್ತು ಮನೆಯ ಹಾದಿ ಹಿಡಿದಳು. ಅವಳ ಬಳಿ ಕೇವಲ ಎಂಭತ್ತೇಳು ಸೆಂಟುಗಳು ಉಳಿದಿದ್ದವು. ಸ್ನೇಹಿತರೊಂದಿಗಿದ್ದಾಗ ಜಿಮ್ಮನಿಗೆ ಇನ್ನೆಂದಿಗೂ ಗಡಿಯಾರ ಹೊರತೆಗೆದು ವೇಳೆ ನೋಡಲು ಸಂಕೋಚವಾಗಲಾರದು. ಜಿಮ್ಮಿಯ ಗಡಿಯಾರ ಬಂಗಾರದಾಗಿದ್ದರೂ ಅದಕ್ಕೆ ಕಟ್ಟಿದ್ದ ಚರ್ಮದ ದಾರದಿಂದಾಗಿ ವೇಳೆ ನೋಡುವಾಗ ಅವನು ಯಾರೂ ಗಿಡಿಯಾರವನ್ನು ನೋಡದಂತೆ ಮರೆಗೆ ಹೋಗುತ್ತಿದ್ದ.

ಮನೆ ತಲುಪುತ್ತಿದ್ದಂತೆ ಡೆಲ್ಲಾಳಿಗೆ ವಾಸ್ತವದ ಅರಿವಾಯಿತು. ದೀಪ ಹೊತ್ತಿಸಿ ಅವಳು ಕೂದಲಿನ ರಿಪೇರಿಗೆ ಕೈ ಹಚ್ಚಿದಳು. ಪ್ರೀತಿಗಾಗಿ ಮಾಡಿದ ತ್ಯಾಗ ಕೊಂಚ ದುಬಾರಿಯೇ ಆಗಿತ್ತು.

ನಲವತ್ತು ನಿಮಿಷಗಳಲ್ಲಿ ಅವಳ ಕೂದಲು ಕರ್ಲರ್‌ಗಳಿಂದ ತುಂಬಿಕೊಂಡು ಅವಳು ನೋಡಲು ತುಂಟ ಸ್ಕೂಲ್ ಹುಡುಗಿಯಂತೆ ಕಾಣಿಸುತ್ತಿದ್ದಳು. ಬಹಳ ಹೊತ್ತು ತನ್ನನ್ನು ಕನ್ನಡಿಯಲ್ಲಿ ಪರೀಕ್ಷಿಸಿಕೊಂಡಳು.

“ಈ ವೇಷದಲ್ಲಿ ನನ್ನನ್ನು ನೋಡಿ ಜಿಮ್ಮಿ ಸಾಯಿಸದಿದ್ದರೆ, ಖಂಡಿತವಾಗಿಯೂ ನಾಟಕ ಕಂಪೆನಿಯ ಹುಡುಗಿ ಎಂದು ಭಾವಿಸುವುದರಲ್ಲಿ ಸಂಶಯವಿಲ್ಲ!” ಎಂದುಕೊಂಡಳು ಮನಸ್ಸಿನಲ್ಲೇ. ಒಂದು ಡಾಲರ್ ಎಂಭತ್ತೇಳು ಸೆಂಟುಗಳಲ್ಲಿ ಏನು ತಾನೇ ಮಾಡಲು ಸಾಧ್ಯ ಎಂದು ತನ್ನನ್ನೇ ಸಮಾದಾನ ಮಾಡಿಕೊಂಡಳು.

ಏಳು ಗಂಟೆಗೆ ಅವಳು ಕಾಫಿ ಕಾಯಿಸಿ ಒಲೆಯ ಮೇಲೆ ಕಾವಲಿಯನ್ನು ಏರಿಸಿದಳು. ಜಿಮ್ಮ್ ಒಳಗೆ ಬರುವಾಗ ಅದು ಚಾಪ್ಸ್ ಹುರಿಯಲು ಕಾದು ತಯಾರಾಗಿರುತ್ತಿತ್ತು.

ಜಿಮ್ಮ್ ತಡಮಾಡಿಕೊಂಡು ಬರುತ್ತಿರಲಿಲ್ಲ. ಚೇಯ್ನಾನ್ನು ಮುಚ್ಚಿದ್ದ ಮುಷ್ಠಿಯಲ್ಲಿಡಿದು ಡೆಲ್ಲಾ ಬಾಗಿಲ ಮರೆಯಲ್ಲೇ ಮೇಜಿನ ಮೇಲೆ ಕುಳಿತುಕೊಂಡಳು. ಅಷ್ಟರಲ್ಲಿ ಕೆಳಗಿನಿಂದ ಜಿಮ್ಮಿ ಮೆಟ್ಟಿಲು ಹತ್ತುವ ಸಪ್ಪಳ ಕೇಳಿಸಿತು. ಡೆಲ್ಲಾ ಬಿಳಿಚಿಕೊಂಡಳು. ದಿನದ ಮಧ್ಯೆ ಹಲವಾರು ಭಾರಿ ಅವಳಿಗೆ ಪ್ರಾರ್ಥಿಸುವ ಅಭ್ಯಾಸವಾಗಿತ್ತು. ಅವಳು ಬೇಡಿಕೊಳ್ಳತೊಡಗಿದಳು: ದೇವರೇ, ನನ್ನ ಜಿಮ್ಮಿಗೆ ನಾನು ಇವತ್ತೂ ಚಂದ ಕಾಣಿಸುವ ಹಾಗೆ ಮಾಡು!

ಬಾಗಿಲು ತೆರೆದು ಒಳ ಬಂದ ಜಿಮ್ ಹಾಗೆಯೇ ಬಾಗಿಲನ್ನು ಮುಚ್ಚಿ ಅಗುಳಿ ಹಾಕಿದ. ಜಿಮ್ಮ್ ದೈಹಿಕವಾಗಿ ಸಪೂರನಾಗಿ ಗಂಭೀರ ವ್ಯಕ್ತಿತ್ವದವನಂತೆ ಕಾಣಿಸುತ್ತಿದ್ದ. ಅವನಿಗೆ ಕೇವಲ ಇಪ್ಪತ್ತೆರಡು ವರ್ಷ ವಯಸ್ಸಾಗಿತ್ತು. ಆದರೆ, ಅನುಭವದಿಂದ ಮಾಗಿದ ಹಿರಿಯನಂತೆ ಕಾಣಿಸುತ್ತಿದ್ದ. ಅವನಿಗೊಂದು ಓವರ್‌ಕೋಟಿನ ಅಗತ್ಯತೆ ಖಂಡಿತಾ ಇತ್ತು. ಹಾಗೆಯೇ ಕೈಗವಸುಗಳು ಕೂಡ. ಒಳ ಬಂದಂತೆ ಜಿಮ್ ಕೆಲವು ಕ್ಷಣ ಅವಕ್ಕಾದ. ಅವನ ದೃಷ್ಠಿ ಡೆಲ್ಲಾಳ ಮೇಲೆ ಕೇಂದ್ರಿತವಾಗಿತ್ತು. ಡೆಲ್ಲಾ ಕಸಿವಿಸಿಗೊಂಡಳು. ಭೀತಳಾದಳು. ಆದರೂ ಅವನ ದೃಷ್ಠಿಯೊಳಗೆ ಕೋಪ, ಅಚ್ಚರಿ, ಹತಾಶೆ.. ಯಾವುದೇ ಭಾವಗಳನ್ನು ಅವಳು ಗುರುತಿಸಲಿಲ್ಲ. ಅವನು ನೆಟ್ಟ ನೋಟದಿಂದ, ಇವತ್ತೇ ಡೆಲ್ಲಾಳನ್ನು ಮೊದಲ ಭಾರಿ ನೋಡಿದಂತೆ ಗಮನಿಸುತ್ತಿದ್ದ.

ಮೇಜಿನಿಂದ ಇಳಿದು ಡೆಲ್ಲಾ, ಜಿಮ್ಮನ ಬಳಿ ಧಾವಿಸಿ ಬಂದಳು. “ಜಿಮ್ಮ್ ಡಾರ್ಲಿಂಗ್, ನೀ ನನ್ನ ಹಿಂಗ ನೋಡಬ್ಯಾಡ! ನಾನು ನನ್ನ ಕೂದಲನ್ನು ಮಾರಿದೆ. ಯಾಕೆಂದರೆ, ನಿನಗೊಂದು ಕ್ರಿಸ್‌ಮಸ್ ಉಡುಗೊರೆ ಕೊಡದಿದ್ದರೆ ನನಗೆ ಸಮಾಧಾನವಾಗುತ್ತಿರಲಿಲ್ಲ. ಕೂದಲಿನದೇನು ಮಹಾ? ದಯವಿಟ್ಟು ಹೀಗೆ ನೋಡಬೇಡ. ಕೂದಲು ಮತ್ತೆ ಬೆಳೀತಾವೆ. ನನಗೆ ಬೇರೆ ದಾರಿಯಿರಲಿಲ್ಲ. ನೀನೇನೂ ಆತಂಕಪಡುವುದು ಬೇಡ. ನನ್ನ ಕೂದಲು ಬೇಗ ಬೆಳೆಯುತ್ತವೆ. ನನಗೆ ಕ್ರಿಸ್ಮಸ್ ಶುಭಾಶಯಗಳನ್ನು ಕೋರು ಜಿಮ್ಮ್! ನಾನು ನಿನಗೆ ಯಾವ ಕ್ರಿಸ್ಮಸ್ ಉಡುಗೊರೆ ತಂದಿದ್ದೇನೆಂದು ನೀನರಿಯೇ!”

“ನೀನು ಕೂದಲು ಕತ್ತರಿಸಿದೆ?!” ಜಿಮ್ಮ್ ಹತಾಶಗೊಂಡವನಂತೆ ಉದ್ಘರಿಸಿದ.

“ಹೌದು. ನಾನು ಕೂದಲು ಕತ್ತರಿಸಿ ಮಾರಿದೆ. ನನ್ನ ಕೂದಲ ಹೊರತಾಗಿ ನನ್ನನ್ನು ಪ್ರೀತಿಸಲಾರೆಯಾ ಜಿಮ್ಮ್?” ಅವಳ ದನಿ ಕಂಪಿಸುತ್ತಿತ್ತು.

ಜಿಮ್ಮ್, ಏನನ್ನೂ ಹೇಳದ ಸ್ಥಿತಿಯಲ್ಲಿದ್ದ. ಅವನು ಸುತ್ತ ಮುತ್ತಲು ನೋಡತೊಡಗಿದ.

“ನೀ ಸುತ್ತಮುತ್ತ ಹುಡುಕಾಬ್ಯಾಡ ಜಿಮ್ಮ್. ನಾನು ಕೂದಲು ಮಾರಿದೆ. ಇಂದು, ಕ್ರಿಸ್ಮಸ್ ಹಿಂದಿನ ರಾತ್ರಿ. ನಿನಗಾಗಿ ಮಾರಿದೆ. ಹಟ ತೊಟ್ಟು ನನ್ನ ಕೇಶಗಳನ್ನು ಎಣಿಸಬಹುದಿತ್ತೇನೋ? ಆದರೆ, ನಿನ್ನ ಮೇಲಣ ನನ್ನ ಪ್ರೀತಿ ಯಾರಿಗೂ ಅಳೆಯಲು ಸಾಧ್ಯವಿಲ್ಲ! ಈಗ ಚಾಪ್ಸ್ ಹುರಿಯಲೇ ಜಿಮ್ಮ್?”

ನಿದ್ರೆಯಿಂದ ಎಚ್ಚೆತ್ತವನಂತೆ ಜಿಮ್ಮ್ ಕಣ್ಣು ಬಿಟ್ಟು ಡೆಲ್ಲಾಳನ್ನು ಬಿಗಿದಪ್ಪಿಕೊಂಡ. ಕೆಲವು ಕ್ಷಣಗಳಿಗೆ ನಾವು ದೃಷ್ಠಿ ಬೇರೆ ಕಡೆ ಹೊರಳಿಸೋಣ! ವಾರಕ್ಕೆ ಎಂಟು ಡಾಲರೋ, ವರ್ಷಕ್ಕೆ ಹತ್ತು ಲಕ್ಷ ಡಾಲರೋ, ಏನಂತೆ?

ಜಿಮ್ಮ್ ತನ್ನ ಕೋಟಿನ ಜೇಬಿನಿಂದ ಪ್ಯಾಕ್ ಮಾಡಿದ್ದ ವಸ್ತುವೊಂದನ್ನು ಹೊರತೆಗೆದು ಮೇಜಿನ ಮೇಲೆಸೆದ.

“ನನ್ನನ್ನು ತಪ್ಪು ತಿಳಿದುಕೊಳ್ಳಬೇಡ ಡಿಯರ್! ಕೂದಲ ಹೊರತಾಗಿಯೂ ನಾನು ನಿನ್ನನ್ನು ಪ್ರೀತಿಸುತ್ತೇನೆ. ಈ ಪೊಟ್ಟಣವನ್ನು ಬಿಚ್ಚಿ ನೋಡು. ನಾನೇಕೆ ಕೆಲವು ಕ್ಷಣ ದಂಗಾಗಿ ಹೋದೆ ಎಂದು ನಿನಗೇ ಅರ್ಥವಾಗುತ್ತದೆ.”

ಡೆಲ್ಲಾ, ಸರಸರನೇ ಪೊಟ್ಟಣ ಬಿಚ್ಚುತ್ತಿದ್ದಂತೇ ಅವಳಿಂದ ಖುಷಿಯ ಚೀತ್ಕಾರವೊಂದು ಹೊರಟಿತು. ಮರುಕ್ಷಣದಲ್ಲೇ ದುಃಖ ಉಮ್ಮಳಿಸಿ ಬಿಕ್ಕಲಾರಂಭಿಸಿದಳು. ಅವಳಿಗೆ ಸಮಾಧಾನಗೊಳಿಸಲು ಅವನು ಹರ ಸಾಹಸಪಡಬೇಕಾಯ್ತು.

ತೆರೆದ ಪೊಟ್ಟಣದಿಂದ ತಲೆಗೆ ಮುಡಿಯುವ ಬಾಚಣಿಗೆಯ ಸೆಟ್ಟೊಂದು ಹೊರ ಕಾಣುತ್ತಿತ್ತು. ಅದನ್ನು ಧರಿಸುವ ಆಸೆಯನ್ನು ಎಂದೋ ಒಮ್ಮೆ ಅವಳು ಜಿಮ್ಮನ ಕಿವಿಗಳಲ್ಲಿ ಉಸುರಿದ್ದಳು. ಅದೊಂದು ದುಬಾರಿ ಸೆಟ್ಟಾಗಿತ್ತು. ಆಮೆಯ ಚಿಪ್ಪಿನಲ್ಲಿ ಕುಸುರಿ ಕೆಲಸದಿಂದ ತಯಾರಿಸಲಾಗಿದ್ದ ಆ ಬಾಚಣಿಗೆಯ ಮಧ್ಯೆ ಸುಂದರವಾದ ಹರಳುಗಳನ್ನು ಜೋಡಿಸಲಾಗಿತ್ತು. ಡೆಲ್ಲಾಳ ಹೆರಳಿಗೆ ತಕ್ಕ ಬಾಚಣಿಗೆ ಅದಾಗಿತ್ತು. ಇದುವರೆಗೆ ಅದನ್ನು ಖರೀದಿಸುವ ಸಾಹಸಕ್ಕೆ ಅವನು ಕೈಹಾಕಿರಲಿಲ್ಲ. ಕೊನೆಗೂ ಅವನ ಕನಸು ನನಸಾದಾಗ ಡೆಲ್ಲಾಳಿಗೆ ಕೂದಲಿರಲಿಲ್ಲ!

ಬಾಚಣಿಗೆಯನ್ನು ಒಂದು ಮಗುವಿನಂತೆ ಎತ್ತಿ ಎದೆಗವುಚಿಕೊಂಡಳು. ಕೃತಕ ನಗೆ ಬರಿಸುತ್ತಾ, “ಜಿಮ್ಮ್, ಬೇಜಾರು ಮಾಡಿಕೊಳ್ಳಬೇಡ. ನನ್ನ ಕೂದಲು ಬೇಗ ಬೆಳೆಯುತ್ತವೆ.” ಎಂದು ಧಡಕ್ಕನೆ ಎದ್ದಳು. ಅವಳ ಮರೆ ಮಾಚಿದ ಕೈಯಲ್ಲೂ ಒಂದು ವಸ್ತುವಿತ್ತು. ಅದುವರೆಗೆ ಜಿಮ್ಮನಿಗೆ ಅದರ ಬಗ್ಗೆ ಗೊತ್ತಿರಲಿಲ್ಲ. ಅವಳು, ಅವನ ಮುಂದೆ ಬಿಗಿದ ಮುಷ್ಟಿಯನ್ನು ತೆರೆಯುತ್ತಾ ಅವನ ಮುಖ ನೋಡಿದಳು. ಮಂದ ಹೊಳಪಿನ ಪ್ಲ್ಯಾಟಿನಮ್ ಲೋಹ ಅವಳ ಪ್ರೀತಿಯ ಹೊಳಪು ಪಡೆದು ಅವನ ಮುಂದೆ ನಳನಳಿಸಿತು.

“ಏನಂತೀಯಾ, ಜಿಮ್ಮ್? ಇದಕ್ಕಾಗಿ ಎಷ್ಟೊಂದು ಹುಡುಕಾಡಿದೆ ಗೊತ್ತಾ? ಇನ್ಮುಂದೆ ನೀನು ದಿನಕ್ಕೆ ನೂರು ಭಾರಿಯಾದರೂ ನಿನ್ನ ಗಡಿಯಾರವನ್ನು ಹೊರತೆಗೆದು ನೋಡಬಹುದು! ತೆಗೇ ನಿನ್ನ ಗಡಿಯಾರ. ಈ ಚೇಯ್ನು ಹೇಗೆ ಕಾಣಿಸುತ್ತೆ ನೋಡಬೇಕು ನನಗೆ!” affection-paintingಅವಳು ಉತ್ಸಾಹದ ಬುಗ್ಗೆಯಾಗಿದ್ದಳು.

ಜಿಮ್ಮ್ ಸೋಫಾದ ಮೇಳೆ ಕುಸಿದು ಬಿದ್ದ. ತಲೆಯ ಹಿಂಭಾಗಕ್ಕೆ ಎರಡೂ ಕೈಗಳನ್ನು ಆಸರಿಸುತ್ತಾ ಅವಳನ್ನು ನೋಡಿ ಪೆದ್ದು ಪೆದ್ದಾಗಿ ನಕ್ಕ.

“ಡೆಲ್ಲಾ ಡಿಯರ್! ಕೆಲವು ಕ್ಷಣ ನಮ್ಮ ಕ್ರಿಸ್ಮಸ್ ಉಡುಗೊರೆಗಳನ್ನು ಮರೆತು ಬಿಡೋಣ. ಸದ್ಯಕ್ಕೆ ಅವುಗಳನ್ನು ನಾವು ಬಳಸುವಂತಿಲ್ಲ. ನಿನ್ನ ಬಾಚಣಿಗೆ ಸೆಟ್ಟನ್ನು ಕೊಳ್ಳಲು ನಾನು ನನ್ನ ವಾಚನ್ನು ಮಾರಿದೆ. ಹೋಗಲಿ ಬಿಡು. ಊಟ ತಯಾರು ಮಾಡು!”