Monthly Archives: December 2013

ಬರಗೂರು ಸನ್ಮಾನದ ಶಾಲಿನಲ್ಲಿ ಮೆತ್ತಿಕೊಂಡಿದ್ದ ರಕ್ತದ ಕಲೆಗಳು

– ಜೀವನ್ ಮಂಗಳೂರು

ಆಳ್ವಾಸ್ ವಿಶ್ವ ನುಡಿಸಿರಿ ಮತ್ತು ವಿರಾಸತ್ ಕಾರ್‍ಯಕ್ರಮಗಳನ್ನು ಯಾಕಾಗಿ ಪ್ರಗತಿಪರ ಸಾಹಿತಿಗಳು ಬಹಿಷ್ಕರಿಸಬೇಕು ಎಂದು ಮಂಗಳೂರಿನಲ್ಲಿ ಸಮಾನ ಮನಸ್ಕ ಯುವ ಚಳುವಳಿಗಾರರು, ಪತ್ರಕರ್‍ತರು, ಸಾಹಿತಿಗಳು ಅಭಿಯಾನ ನಡೆಸುತ್ತಿರುವಂತೆಯೇ ರಾಜ್ಯದ ಬಹುದೊಡ್ಡ ಚಿಂತಕರು ಎನಿಸಕೊಂಡವರು ಆಳ್ವಾಸ್ ನುಡಿಸಿರಿಗೆ ಸಾಲುಗಟ್ಟಿ ಬಂದಿದ್ದಾರೆ. abhimata-page1ಈ ಬಾರಿಯಂತೂ ಮಂಗಳೂರಿನಲ್ಲಿ ಆಳ್ವಾಸ್ ನುಡಿಸಿರಿಗೆ ಪರ್‍ಯಾಯವಾಗಿ “ಜನನುಡಿ” ಕಾರ್‍ಯಕ್ರಮ ನಡೆಸಿದ್ದು ರಾಜ್ಯದ ಪ್ರಗತಿಪರ ಮನಸ್ಸುಗಳು “ಅಭಿಮತ ಮಂಗಳೂರು” ಜೊತೆ ದನಿಗೂಡಿಸಿದ್ದರು.

ವಿಶ್ವ ಹಿಂದೂ ಪರಿಷತ್‌ನ ರಾಷ್ಟ್ರೀಯ ಸಲಹೆಗಾರ ಡಾ.ಎಂ. ಮೋಹನ ಆಳ್ವ, ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯ ಮುತಾಲಿಕೆಯಲ್ಲಿ ನಡೆಯುತ್ತಿರುವ ಆಳ್ವಾಸ್ ವಿಶ್ವ ನುಡಿಸಿರಿಯನ್ನು ವಿರೋಧಿಸಲು ಪ್ರಗತಿಪರರಿಗೆ ಯಾವ ಕಾರಣಗಳೂ ಬೇಕಿಲ್ಲ. ಆದರೂ ಮೋಹನ ಆಳ್ವ ನಡೆಸಿರುವ ಹಿಂದೂ ಸಮಾಜೋತ್ಸವ, ಕೋಮು ಗಲಭೆಯ ಸಂದರ್ಭದಲ್ಲಿ ಆತ ನೀಡಿರುವ ಹೇಳಿಕೆಗಳು, ಆಳ್ವಾಸ್ ನುಡಿಸಿರಿಯ ಹಿಡನ್ ಅಜೆಂಡಾಗಳನ್ನು ವರ್ತಮಾನ.ಕಾಮ್ (ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ, ಮತ್ತು ಇಲ್ಲಿ), ಲಡಾಯಿ ಪ್ರಕಾಶನ, ಲಂಕೇಶ್, ಅಗ್ನಿ ಪತ್ರಿಕೆಗಳಲ್ಲಿ ವ್ಯಾಪಕ ಚರ್ಚೆ ನಡೆಸಲಾಗಿತ್ತು. ಈ ಬಾರಿಯ ಆಳ್ವಾಸ್ ನುಡಿಸಿರಿಯ ಆಮಂತ್ರಣ ಪತ್ರಿಕೆಯಲ್ಲಿ ನಮ್ಮ ಪ್ರೀತಿಯ ಡಾ. ಅರುಣ್ ಜೋಳದ ಕೂಡ್ಲಿಗಿ, ಡಾ.ಕೆ. ಷರೀಫಾ, ಜೆನ್ನಿ ಹೆಸರುಗಳಿದ್ದರೂ ಅವರು ಕಾರ್‍ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ. ಮತ್ತು ಈ ಬಗೆಗಿನ ನಿಲುವನ್ನು ಅವರು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ. ಇಷ್ಟಾದರೂ ಅರ್ಥವಾಗದ ಸಾಹಿತಿಗಳಿಗೆ ಅರ್ಥವಾಗಲೆಂದು ನುಡಿಸಿರಿಗೆ ಪರ್‍ಯಾಯವಾಗಿ ಮಂಗಳೂರಿನಲ್ಲಿ ಎರಡು ದಿನಗಳ “ಜನನುಡಿ” ಕಾರ್‍ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಇಷ್ಟೆಲ್ಲಾ ಬೆಳವಣಿಗೆಯ ನಂತರವೂ ಕರ್ನಾಟಕದ ಬಂಡಾಯ ಸಾಹಿತಿ ಎಂದೇ ಖ್ಯಾತನಾಮರಾಗಿರುವ ಬರಗೂರು ರಾಮಚಂದ್ರಪ್ಪನವರು ಆಳ್ವಾಸ್ ನುಡಿಸಿರಿಯಲ್ಲಿ ಗುರುವಾರ ಡಿಸೆಂಬರ್ 19 ರಂದು ಸನ್ಮಾನ ಸ್ವೀಕರಿಸಿದ್ದಾರೆ. ಮೋಹನ ಆಳ್ವ, ಬಿ.ಎ. ವಿವೇಕ ರೈ, ಡಾ.ಡಿ. ವಿರೇಂದ್ರ ಹೆಗ್ಗಡೆಯವರು ಬರಗೂರು ರಾಮಚಂದ್ರಪ್ಪನವರನ್ನು ಶಾಲು ಹೊದೆಸಿ ಸನ್ಮಾನಿಸಿದ್ದಾರೆ. ಜೊತೆಗೆ ಎಸ್.ಎಲ್. ಭೈರಪ್ಪನವರನ್ನೂ ಕುಳ್ಳಿರಿಸಿಕೊಂಡು “ಜೋಡಿ ಸನ್ಮಾನ” ಮಾಡಿದ್ದಾರೆ. ಅಲ್ಲಿಗೆ ಬಂಡಾಯ “ಬಡಾಯಿ”ಯಾಯಿತು.

ಮರುದಿನ ಮಂಗಳೂರಿನ ಅಭಿಮತದ ಕಾರ್‍ಯಕರ್‍ತರು ಬರಗೂರು ರಾಮಚಂದ್ರಪ್ಪ ವಿರುದ್ದ ಮೆಸೇಜ್ ಅಭಿಯಾನ ನಡೆಸಿದರು.alva-nudisiri-baraguru-mohan-alva-veerendra-heggade-vivek-rai ಸುಮಾರು 20 ಅಧಿಕ ಯುವ ಪತ್ರಕರ್ತರು, ಚಳುವಳಿಗಾರರು, ಸಾಹಿತಿಗಳು ಈ ಅಭಿಯಾನದಲ್ಲಿ ಪಾಲ್ಗೊಂಡು ಬರಗೂರು ರಾಮಚಂದ್ರಪ್ಪಗೆ ಮೆಸೇಜ್ ಕಳುಹಿಸಲಾರಂಭಿಸಿದರು. ಬರಗೂರುಗೆ ಕಳುಹಿಸಿದ ಮೊದಲ ಮೆಸೇಜ್ ಹೀಗಿದೆ :

ಅಭಿಮತ ಸದಸ್ಯರು : “ಆರ್‌ಎಸ್‌ಎಸ್ ಸಂಘಟಕ ಮೋಹನ ಆಳ್ವ ಮತ್ತು ಧಾರ್ಮಿಕ ಸರ್ವಾಧಿಕಾರಿ, ದಲಿತ, ಮಹಿಳಾ ಶೋಷಕ, ಮಾತನಾಡುವ ದೇವರಿಂದ ಸನ್ಮಾನ ಸ್ವೀಕರಿಸಿದ ನಮ್ಮ ಪ್ರೀತಿಯ ಬರಗೂರು ಸರ್‌ಗೆ ಅಭಿನಂದನೆಗಳು.”

ಬರಗೂರು : “ಆಳ್ವಾಸ್ ನುಡಿಸಿರಿ ಸಮ್ಮೇಳನದ ಮೊದಲ ಅಧ್ಯಕ್ಷನಾಗಿದ್ದಂದಿನಿಂದ ಇಲ್ಲಿಯವರೆಗೆ ಒಬ್ಬನೇ ಒಬ್ಬ ಪ್ರಗತಿಪರ ಈ ಬಗ್ಗೆ ಆಕ್ಷೇಪ ಮಾಡಿಲ್ಲ. ಈ ಬಾರಿಯೂ ಹೋಗ್ಬೇಡಿ ಎಂದು ಯಾರೂ ಹೇಳಿಲ್ಲ. ಅದೂ ಬೇಡ. ನುಡಿಸಿರಿಯ ವಿರುದ್ದ ಯಾರೂ ನನಗೆ ಮಾಹಿತಿ ನೀಡಿಲ್ಲ. ನನಗೆ ಮನವರಿಕೆ ಮಾಡಿದ್ದಿದ್ದರೆ ಖಂಡಿತ ಹೋಗ್ತಿರಲಿಲ್ಲ. ಹಾಗಾಗಿ ನುಡಿಸಿರಿಯ ಮೊದಲ ಅಧ್ಯಕ್ಷ ಎಂಬ ಕಾರಣಕ್ಕೆ ಹೋದೆ. ಹಾಗಂತ ನನ್ನ ವಿಚಾರಗಳನ್ನು ಬಿಟ್ಟುಕೊಡುವುದಿಲ್ಲ. ಯಾವ ವೇದಿಕೆಯಲ್ಲಾದರೂ ನಾನು ಪ್ರತಿಪಾದಿಸೋದು ನಮ್ಮ ವಿಚಾರಗಳನ್ನೇ. ಮುಂದೆಯೂ ಇದೇ ಬದ್ಧತೆ ಇರುತ್ತದೆ. ಇಷ್ಟಾದರೂ ನಿಮ್ಮ ಮನಸ್ಸಿಗೆ ಬೇಸರ ಮಾಡಿದ ನನ್ನ ನಡೆಗೆ ತೀವ್ರವಾಗಿ ವಿಷಾಧಿಸುತ್ತೇನೆ.”

ಅಭಿಮತ : “ಪ್ರಗತಿಪರರು ಆಳ್ವ, ಹೆಗ್ಗಡೆ, ಪೇಜಾವರರ ಬಗ್ಗೆ ನಿಮಗೆ ಹೇಳಿಕೊಡಬೇಕಿತ್ತೇ? ಆಳ್ವ ಯಾರು, ಹೆಗ್ಗಡೆ ಯಾರು, ಪೇಜಾವರ ಯಾರು? ಅವರ ಕಾರ್‍ಯಕ್ರಮಗಳೇನು? ಹಿಡನ್ ಅಜೆಂಡಾಗಳೇನು ಎಂಬುದನ್ನು ಪ್ರಗತಿಪರರಿಗೆ ಪಾಠ ಮಾಡುವ ಅರ್ಹತೆ ಇರುವವರು ನೀವು ಎಂದು ನಾವಂದುಕೊಂಡಿದ್ದೆವು.”

ಬರಗೂರು : “ಪ್ರಗತಿಪರರ ನಡುವೆ ಗೊಂದಲಗಳು ಇದೆ. ದಯವಿಟ್ಟು ನನ್ನನ್ನು ಅರ್ಥ ಮಾಡಿಕೊಳ್ಳಿ. ನಾನು ಆತ್ಮಾವಲೋಕನದಿಂದ ತಿದ್ದಿಕೊಳ್ಳುವ ಸ್ವಭಾವದವನು. ಈಗ ನನಗೆ ಇಷ್ಟು ಸಾಕು. ಮುಂದೆ ಮಾತನಾಡೋಣ.”

ಅಭಿಮತ : “456 ಮಹಿಳೆಯರ ರಕ್ತ ಕುಡಿದ ಮಾತನಾಡುವ ದೇವರ ಜೊತೆ ವೇದಿಕೆ ಹಂಚಿಕೊಂಡಿದ್ದೇ ಅಲ್ಲದೆ ಅವರಿಂದ ಸನ್ಮಾನ ಸ್ವೀಕರಿಸಿದವರ ಜೊತೆ ಮುಂದೆ ಮಾತನಾಡಲು ಏನಿದೆ ಸಾರ್ ? ಎನಿವೇ… ಥ್ಯಾಂಕ್ಯೂ ಸರ್..”

ಬರಗೂರು :: “ಪ್ರಗತಿಪರರ ನಡುವೆ ಗೊಂದಲಗಳು ಇದೆ. ದಯವಿಟ್ಟು ನನ್ನನ್ನು ಅರ್ಥ ಮಾಡಿಕೊಳ್ಳಿ. ನಾನು ಆತ್ಮಾವಲೋಕನದಿಂದ ತಿದ್ದಿಕೊಳ್ಳುವ ಸ್ವಭಾವದವನು. ಈಗ ನನಗೆ ಇಷ್ಟು ಸಾಕು. ಮುಂದೆ ಮಾತನಾಡೋಣ.” (ಮತ್ತೆ ಅದೇ ಮೆಸೇಜು.)

ಅಭಿಮತ : “ನಿಮಗೆ ಹೊದಿಸಿದ ಶಾಲನ್ನು ಡ್ರೈ-ವಾಶ್ ಗೆ ಕೊಡಿ ಸರ್. ಅದರಲ್ಲಿ ಮಹಿಳೆಯರ ಮತ್ತು ದಲಿತರ ರಕ್ತದ ಕಲೆಗಳಿವೆ ಸರ್.”

ಕೊನೇ ಮೆಸೇಜ್‌ಗೆ ಬರಗೂರು ರಾಮಚಂದ್ರಪ್ಪ ಉತ್ತರ ನೀಡಿಲ್ಲ. ಉತ್ತರವಾಗಿ ಶುಕ್ರವಾರ ನುಡಿಸಿರಿಯಲ್ಲಿ alva-nudisiri-baraguru-bhairappaಪಾಲ್ಗೊಳ್ಳಬೇಕಿದ್ದ “ಸಮಾಜ” ಎಂಬ ವಿಚಾರಗೋಷ್ಠಿಗೆ ಗೈರು ಹಾಜರಾಗಿ ಬೆಂಗಳೂರು ಬಸ್ಸು ಹಿಡಿದರು. ಪ್ರಜಾವಾಣಿ ಜೊತೆ ಮಾತನಾಡುತ್ತಾ ರಾಮಚಂದ್ರಪ್ಪ ಹೀಗೆ ಹೇಳುತ್ತಾರೆ “ ಆಳ್ವಾಸ್ ನುಡಿಸಿರಿಯಲ್ಲಿ ಕೋಟಿಗಟ್ಟಲೆ ಸಂಪತ್ತಿನ ವೈಭವೀಕರಣವೇ ಮನಸ್ಸಿಗೆ ತೀರಾ ಕಿರಿಕಿರಿ ಉಂಟು ಮಾಡಿದೆ. ಸಂಪತ್ತಿನ ವಿಜೃಂಭಣೆಯಿಂದ ವಿವೇಕ ನಾಶವಾಗಿ ವಿಕಾರತೆಯೇ ಮುನ್ನಲೆಗೆ ಬರುತ್ತದೆ. ಆದುದರಿಂದ ನಾನು ಉಪನ್ಯಾಸ ಕಾರ್‍ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ. ನಾನು ನುಡಿಸಿರಿಯ ಮೊದಲನೇ ಅಧ್ಯಕ್ಷ ಎನ್ನುವ ನೆಲೆಯಲ್ಲಿ ಭಾಗವಹಿಸಿದ್ದೆ. ಆದರೆ ಇಲ್ಲಿ ಜನಪರ ವಿಚಾರಗಳಿಗೆ ಮನ್ನಣೆ ಇಲ್ಲ. ಮೊದಲ ಅಧ್ಯಕ್ಷ ಎನ್ನುವ ನೆಲೆಯಲ್ಲಿ ಮಾತನಾಡಲು ಅವಕಾಶ ನೀಡಿದ್ದರೆ ಇದನ್ನೇ ಹೇಳುತ್ತಿದೆ. ಇಷ್ಟು ವರ್ಷದ ನುಡಿಸಿರಿಯಲ್ಲಿ ವಿರೇಂದ್ರ ಹೆಗ್ಗಡೆಯಂತವರು ಸಭೆಯಲ್ಲಿ ಕುಳಿತು ಕಾರ್‍ಯಕ್ರಮ ವೀಕ್ಷಿಸುತ್ತಿದ್ದರು. ಈ ಬಾರಿ ಸೌಜನ್ಯ ಪ್ರಕರಣ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರೂ ಅವರ ಭಾಗವಹಿಸುವಿಕೆಯನ್ನು ಅತಿಯಾಗಿ ಮಾಡಲಾಗಿದೆ. ಮಾತಿಗೆ ಅವಕಾಶ ಸಿಕ್ಕಿದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಅತ್ಯಾಚಾರ ಪ್ರಕರಣದ ಬಗ್ಗೆ ಮಾತನಾಡುತ್ತಿದ್ದೆ,” ಎಂದಿದ್ದಾರೆ.

ಮೊದಲನೆಯದಾಗಿ ಬರಗೂರು ರಾಮಚಂದ್ರಪ್ಪನವರು ಕನ್ನಡದ ಸಾಕ್ಷಿಪ್ರಜ್ಞೆಯಂತಿರುವವರು. ಅವರಿಗೆ ಕನ್ನಡ ಭಾಷೆ ಓದಲು ಬರೆಯಲು ಬರುತ್ತದೆ ಎಂದು ಎಲ್ಲರಿಗೂ ಗೊತ್ತಿದೆ. ಆಳ್ವಾಸ್ ನುಡಿಸಿರಿಯ ಆಮಂತ್ರಣ ಪತ್ರಿಕೆಯಲ್ಲಿ ಡಾ.ಡಿ. ವಿರೇಂದ್ರ ಹೆಗ್ಗಡೆಯವರ ಹೆಸರು ಮಾತ್ರವಲ್ಲ ಫೋಟೋ ಕೂಡಾ ಅಚ್ಚಾಗಿದೆ. ಆಮಂತ್ರಣ ಪತ್ರಿಕೆಯಲ್ಲಿ ಸಾಹಿತ್ಯ-ನಾಡು-ನುಡಿಗಿಂತಲೂ ವಿರೇಂದ್ರ ಹೆಗ್ಗಡೆಯನ್ನು ವೈಭವೀಕರಿಸಲಾಗಿದೆ. ಸ್ವಾಗತ ಸಮಿತಿಯ ಗೌರವ ಮಾರ್ಗದರ್ಶಕರು ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಎಂದಿದೆ. ವೀರೇಂದ್ರ ಹೆಗ್ಗಡೆ ಪತ್ನಿ ಹೇಮಾವತಿ ಹೆಗ್ಗಡೆ ಹೆಸರು ಒಂದು ಉಪನ್ಯಾಸದಲ್ಲಿದೆ. ಎಲ್ಲೆಲ್ಲಿ ವೇದಿಕೆಯಲ್ಲಿ ಜಾಗ ಇದೆಯೋ ಅಲ್ಲಲ್ಲಿ ವೀರೇಂದ್ರ ಹೆಗ್ಗಡೆಯ ತಮ್ಮಂದಿರಾದ ಹರ್ಷೇಂದ್ರ ಹೆಗ್ಗಡೆ, ಸುರೇಂದ್ರ ಹೆಗ್ಗಡೆಯ ಹೆಸರನ್ನು ತೂರಿಸಿ ತೂರಿಸಿ ಹಾಕಲಾಗಿದೆ. ಹೆಗ್ಗಡೆಯ ಇಡೀ ಫ್ಯಾಮಿಲಿ ಈ ಕಾರ್‍ಯಕ್ರಮದಲ್ಲಿ ಇನ್ವಾಲ್ವ್ ಆಗಿರುವುದು ಎಂತಹ ಮೂರ್ಖನಿಗೂ ಅರ್ಥ ಆಗುವಂತದ್ದು. “ನನಗೆ ಗೊತ್ತಿರಲಿಲ್ಲ. ಹೇಳಬೇಕಿತ್ತು” ಎಂದೆಲ್ಲಾ ಹೇಳುವುದನ್ನು ನಂಬಲಾಗುವುದಿಲ್ಲ. ಏನೇ ಆಗಲಿ. ಫಲ ಪುಷ್ಪ ತಾಂಬೂಲ, ಶಾಲು, ನಗದಿನ ಜೊತೆ ಸನ್ಮಾನ ಸ್ವೀಕರಿಸಿ ಉಪನ್ಯಾಸ ನೀಡದ ಬರಗೂರು ಬಂಡಾಯಕ್ಕೆ ಅಭಿನಂದನೆಗಳು.

ನಾಳೆ ಡಿಸೆಂಬರ್ 22 ರಂದು ಫಕೀರ್ ಮಹಮ್ಮದ್ ಕಟ್ಪಾಡಿ, ಟಿ.ಎನ್. ಸೀತಾರಾಂ ಆಳ್ವಾಸ್ ವಿಶ್ವನುಡಿಸಿರಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಫಕೀರ್ ಮಹಮ್ಮದ್ ಕಟ್ಪಾಡಿ, ಟಿ.ಎನ್. ಸೀತಾರಾಂ ಸೇರಿದಂತೆ 16 ಮಂದಿಗೆ ಪ್ರಶಸ್ತಿ ಪ್ರಧಾನ ನಡೆಯಲಿದೆ. ಸುರತ್ಕಲ್‌ನ ಕೋಮುಗಲಭೆಗೆ ಕಾರಣನಾಗಿದ್ದ ರಾಜಕಾರಣಿ ಕುಂಬ್ಳೆ ಸುಂದರರಾವ್‌ಗೂ, ಆರ್‌ಎಸ್‌ಎಸ್‌‍ನ ಮುಖ್ಯ ಫೈನಾನ್ಸಿಯರ್ ದಯಾನಂದ ಪೈಗೂ ಇವರ ಜೊತೆ ಪ್ರಶಸ್ತಿ ಮತ್ತು ಸನ್ಮಾನ ಸಮಾರಂಭ ನಡೆಯಲಿದೆ. ಫಕೀರ್ ಮಹಮ್ಮದ್ ಕಟ್ಪಾಡಿಯವರಂತೂ ಕೋಮುವಾದದ ಬಗ್ಗೆ ದಿನಗಟ್ಟಲೆ ಮಾತನಾಡುವವರು, ಬರೆಯುವವರು. ಕೋಮುಸೌಹಾರ್ಧ ವೇದಿಕೆಯಲ್ಲಿ ಗುರುತಿಸಿಕೊಂಡಿರುವ ಕಟ್ಪಾಡಿಯವರು ಆಳ್ವಾಸ್ ನುಡಿಸಿರಿಗೆ ತೆರಳಬಾರದು ಎಂದು ಕೋಮುಸೌಹಾರ್ದ ವೇದಿಕೆಯ ರಾಜ್ಯ ಕಾರ್‍ಯದರ್ಶಿ ಕೆ.ಎಲ್. ಅಶೋಕ್ ಮನವಿ ಮಾಡಿದ್ದರೂ ಹೋಗುತ್ತಿದ್ದಾರೆ ಎಂಬ ಮಾಹಿತಿ ಬಂದಿದೆ. ನಾಳೆ ಪ್ರಶಸ್ತಿ ಸ್ವೀಕರಿಸಿದರೆ “ಅಭಿಮತ ಮಂಗಳೂರು”ನ ನೂರಾರು ಯುವ ಪತ್ರಕರ್ತ, ಚಳುವಳಿಗಾರರು, ಸಾಹಿತಿ ಸದಸ್ಯರು ಫಕೀರ್ ಮಹಮ್ಮದ್ ಕಟ್ಪಾಡಿ ವಿರುದ್ಧ ನಿರ್ಣಯ ಕೈಗೊಳ್ಳುತ್ತಾರೆ….

ಆಮ್ ಆದ್ಮಿ ಪಾರ್ಟಿ – ಭಾರತದ ಟೀ ಪಾರ್ಟಿ ಮೂವ್‌ಮೆಂಟ್

– ಮೂಲ : ಶೃತಿ ಕಪಿಲ
– ಅನುವಾದ: ಬಿ.ಶ್ರೀಪಾದ ಭಟ್

ಆಮ್ ಆದ್ಮಿ ಪಾರ್ಟಿಯಲ್ಲಿ ಅಮ್ (ಸಾಮಾನ್ಯ) ಅನ್ನುವಂತಹದ್ದೇನು ಕಾಣಿಸುತ್ತಿಲ್ಲ. ಆದರೆ ಈ ಪಕ್ಷವು ಸಾಮಾನ್ಯ ಮನುಷ್ಯನ ಹೆಸರಿನಲ್ಲಿ ದೇಶದ ರಾಜಧಾನಿಯನ್ನು ಅಭೂತಪೂರ್ವವಾಗಿ ಗೆದ್ದು ಭಾರತದ ಪ್ರಜಾಪ್ರಭುತ್ವದ ನಕ್ಷೆಯಲ್ಲಿ ಪ್ರವೇಶಿಸಿರುವುದನ್ನು ಒಪ್ಪಿಕೊಳ್ಳಲೇಬೇಕು. ಇಂಡಿಯಾದ ರಾಜಕೀಯ ವಾತಾವರಣಕ್ಕೆ arvind-kejriwal-delhi-electionsಈ ಬಗೆಯ ಗೆಲುವು ಮಹತ್ವದ್ದಾಗಿದ್ದರೂ ಸಮಕಾಲೀನ ರಾಜಕೀಯ ಸಂದರ್ಭದಲ್ಲಿ ಮಾತ್ರ ಈ ರೀತಿಯ ರಾಜಕೀಯ ಪ್ರವೇಶ ಸಾಮಾನ್ಯವಾದದ್ದು. ಕಳೆದ ದಶಕದಿಂದ ತಹ್ರೀರ್ ಚೌಕದಿಂದ ತಾಸ್ಕಿಮ್ ಚೌಕದವರೆಗಿನ ಜಾಗತಿಕ ಮಟ್ಟದ ರಾಜಕೀಯ ಮತ್ತು ಸಾಮಾಜಿಕ ವಿದ್ಯಾಮಾನಗಳನ್ನು ಅವಲೋಕಿಸಿದಾಗ ನೇಪಥ್ಯದಲ್ಲಿದ್ದ ಸಾಮಾನ್ಯ ಮನುಷ್ಯನು ದಿಢೀರನೆ ಈ ಬಗೆಯ ಸಾರ್ವಜನಿಕವಾದ ಅತ್ಯಂತ ಮಹತ್ವದ ವೇದಿಕೆಗೆ ಬಂದು ನಿಲ್ಲವುದನ್ನು ನಾವು ಕಾಣಬಹುದು. ಆದರೆ ಇದು ಜಾಗತಿಕವಾಗಿ ವಿವಿಧ ದೇಶಗಳಲ್ಲಿ ಒಂದೇ ಬಗೆಯ pattern ನಲ್ಲಿ ಸಂಭವಿಸುತ್ತದೆ ಎನ್ನುವ ಚಿಂತನೆ ಮೋಸಗೊಳಿಸುವಂತಹದ್ದು. ಕಡಿವಾಣದ ಮನಸ್ಥಿತಿ ಇಲ್ಲದಿದ್ದರೂ ದೆಹಲಿಯ ಚಲ್ತಾ ಹೈ ಚಿಂತನೆಯ ಸಮಾಜವು ಮತ್ತು ನಿರ್ಣಾಯಕ ರಾಜಕೀಯ ಶಕ್ತಿಗಳು ಸ್ವಘೋಷಿತ ಆಮ್ ಆದ್ಮಿ ಅರ್ಥಾತ್ ಸಾಮಾನ್ಯ ಮನುಷ್ಯನ ಹೆಸರಿನಲ್ಲಿ ಒಂದು ಬಗೆಯ ಬದಲಾವಣೆಗಾಗಿ ಒಗ್ಗಟ್ಟಾಗಿ ಗುಂಪುಗೂಡುತ್ತಿದ್ದದು ಕಳೆದೆರಡು ವರ್ಷಗಳಲ್ಲಿ ಕಂಡುಬರುವ ಸಾಮಾನ್ಯ ನೋಟವಾಗಿತ್ತು.

ಈ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷವು ಈ ದಿನಕ್ಕೆ,ಈ ಕ್ಷಣಕ್ಕೆ ತುರ್ತಾಗಿ ಇದು ಆಗಲೇಬೇಕೆಂಬ rhetoric ರಾಜಕೀಯ ವಾತಾವರಣವನ್ನು ನಿರ್ಮಿಸಿತ್ತು. ಪ್ರಭುತ್ವ ಮತ್ತು ಪ್ರಜೆಗಳ ನಡುವಿನ ಸಂಬಂಧದ ಇತಿಹಾಸವನ್ನು ಅವಲೋಕಿಸಿದರೆ kejriwal_aap_pti_rallyನಾವು ಇದರ ವಿರೋಧಿ, ನಾವು ಅದರ ವಿರೋಧಿ ಎನ್ನುವಂತಹ rhetoric ರಾಜಕೀಯ ಭಾಷೆ ಇಂದಿನ ಸಮಕಾಲೀನ ಸಂದರ್ಭದಲ್ಲಿ ಅತ್ಯಂತ ಮಹತ್ವವನ್ನು ಪಡೆದುಕೊಂಡಿದೆ. ಕೇಂದ್ರದಲ್ಲಿ ಅನೇಕ ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ವಿರುದ್ಧದ ಕಾಂಗ್ರೆಸ್ ವಿರೋಧಿ rhetoric ರಾಜಕೀಯ ಭಾಷೆಯು ಈ ಆಮ್ ಆದ್ಮಿ ಪಕ್ಷಕ್ಕೆ ಗಟ್ಟಿಯಾದ ನೆಲೆಗಟ್ಟನ್ನು ತಂದುಕೊಟ್ಟಿತು.

ಐವತ್ತರ ದಶಕದ, ನೆಹರೂ ಅವರ ಆಡಳಿತಾವಧಿಯ ಕಾಲಘಟ್ಟದಲ್ಲಿ, ಇಡೀ ದೇಶವೇ ಪ್ರಧಾನಿ ನೆಹರೂ ಅವರನ್ನು ಅಭಿಮಾನದಿಂದ ಪೂಜಿಸುತ್ತಿದ್ದಂತಹ ಅಂದಿನ ದಿನಗಳಲ್ಲಿ ಸಮಾಜವಾದಿ ನಾಯಕ ರಾಮಮನೋಹರ ಲೋಹಿಯ ಅವರು ವಂಶಾಡಳಿತದ ವಿರುದ್ಧ, ಏಕಮಾದ್ವೇತೀಯವಾದ ರಾಜಕೀಯ ಅಧಿಕಾರದ ವಿರುದ್ಧ “ಕಾಂಗ್ರೆಸ್ ವಿರೋಧಿ” ಆಂದೋಲನವನ್ನು ಕಟ್ಟುತ್ತಿದ್ದರು. 60 ರ ದಶಕದಲ್ಲಿ ಲೋಹಿಯಾ ನೇತೃತ್ವದ ಈ ಕಾಂಗ್ರೆಸ್ ವಿರೋಧಿ ಆಂದೋಲವು ಭಾರತದ ಕೆಲವು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪರ್ಯಾಯವಾಗಿ ಇತರೇ ವಿರೋಧಿ ಪಕ್ಷಗಳು ಅಧಿಕಾರಕ್ಕೆ ಬರುವಂತಹ ವಾತಾವರಣ ನಿರ್ಮಿಸಿತ್ತು. ಇಂದಿನ ಪರಿಸ್ಥಿತಿಯನ್ನು ಅಂದಿನ 60 ರ ದಶಕದ ರಾಜಕೀಯ ವಾತಾವರಣಕ್ಕೆ ಹೋಲಿಸಿದಾಗ ಅನೇಕ ಸಾಮ್ಯತೆಗಳು ಕಂಡುಬರುತ್ತವೆ. ಆಗ ಭೂಮಿ ಹಂಚಿಕೆಯಲ್ಲಿನ ತಾರತಮ್ಯ ಮತ್ತು ವ್ಯವಸಾಯ ಉತ್ಪನ್ನಗಳ ಇಳಿಮುಖವು ತಾರಕಕ್ಕೇರಿತು. ಇಂದಿನ ಪರಿಸ್ಥಿತಿಯೂ ಅಂದಿನದಕ್ಕಿಂತ ಭಿನ್ನವಾಗೇನಿಲ್ಲ. Lohialಆಗಲೂ ಹಿಂಸಾತ್ಮಕ ನಕ್ಸಲೈಟ್ ಮೂವ್‌ಮೆಂಟ್ ಶುರುವಾಗಿದ್ದರೆ ಇಂದಿನ ದಿನಗಳಲ್ಲಿಯೂ ಹಿಂಸಾತ್ಮಕ ಮಾವೋವಾದಿ ಚಳುವಳಿಯು ದೇಶದ ಅನೇಕ ಕಡೆಗಳಲ್ಲಿ ಕ್ರಿಯಾಶೀಲವಾಗಿದೆ.

“ಕಾಂಗ್ರೆಸ್ ವಿರೋಧಿ, ಇಂಗ್ಲೀಷ್ ವಿರೋಧಿ, ಜಾತಿ ವಿರೋಧಿ” ಚಳುವಳಿಗಳು ಮತ್ತು ಸಿದ್ಧಾಂತಗಳು ರಾಮಮನೋಹರ ಲೋಹಿಯಾರವರ ರಾಜಕೀಯ ಮಾನಿಫೆಸ್ಟೋಗಳಾಗಿದ್ದವು. ಪರಿಣಾಮದ ಮಟ್ಟದಲ್ಲಿ ಗಾಂಧಿ, ಮಾರ್ಕ್ಸರವರ ಸಿದ್ಧಾಂತ, ಚಳುವಳಿಗಿಂತ ಲೋಹಿಯಾರ ಈ ಸಿದ್ಧಾಂತಗಳು ಮತ್ತು ಚಳುವಳಿಗಳು ತುಂಬಾ ಕಡಿಮೆಯಿದ್ದರೂ ಸಮಾಜವನ್ನು, ವ್ಯವಸ್ಥೆಯನ್ನು ಮುಟ್ಟುವ ಮಟ್ಟದಲ್ಲಿ ಪ್ರಭಾವಶಾಲಿಯಾಗಿತ್ತು. ಈ ಹಿನ್ನೆಲೆಯಲ್ಲಿ ರಾಮಮನೋಹರ ಲೋಹಿಯಾ ಅವರು ದೇಶದ ಬುದ್ಧಿಜೀವಿ ರಾಜಕಾರಣಿಯಾಗಿ ತೀವ್ರವಾದ ಬದಲಾವಣೆಗಳ ಹರಿಕಾರರಾಗಿದ್ದರು. ಸೋಷಿಯಲಿಸ್ಟ್ ಚಿಂತಕರಾಗಿದ್ದ ಲೋಹಿಯಾರವರು ಸಿದ್ಧ ಮಾದರಿಯ ರಾಜಕೀಯ ವ್ಯವಸ್ಥೆಯ ವಿರುದ್ಧ ಸೆಡ್ಡು ಹೊಡೆದು ಅದನ್ನು ತಿರಸ್ಕರಿಸಿದರು. ಅದಕ್ಕೆ ಪರ್ಯಾಯವಾಗಿ ಸಾಮಾಜಿಕ ಆಶಯಗಳೇ ಪ್ರಧಾನವಾಗಿದ್ದ ರಾಜಕೀಯ ಚಿಂತನೆಗಳನ್ನು ಜಾರಿಗೆ ತಂದರು. ಸಾರ್ವಜನಿಕ ಖರ್ಚುವೆಚ್ಚಗಳಿಂದ ಹಿಡಿದು ಮಾನವ ಹಕ್ಕುಗಳವರೆಗೂ, ಹಿಂಸಾತ್ಮಕ ಸಾಮಾಜಿಕ ವಾತಾವರಣದ ವಿರುದ್ಧದಿಂದ ಹಿಡಿದು ವಿದೇಶಾಂಗ ನೀತಿಗಳವರೆಗೂ ತಮ್ಮ ಸಿದ್ಧಾಂತಗಳನ್ನು ರೂಪಿಸಿದರು. ಇದಕ್ಕಾಗಿ ನ್ಯಾಯಾಂಗ ಮತ್ತು ಪ್ರಜಾಪ್ರಭುತ್ವದ ಜೀವ ಪ್ರಜೆಗಳನ್ನು ಒಳಗೊಳ್ಳುವಂತಹ ರಾಜಕೀಯ ವಾತಾವರಣಕ್ಕಾಗಿ ಶ್ರಮಿಸಿದರು.

ಆದರೆ ರಾಮಮನೋಹರ ಲೋಹಿಯಾ ಅವರನ್ನು ಇತರೇ ಹಿಂದುಳಿದ ಜಾತಿಗಳ ಸಾಮಾಜಿಕ ಮತ್ತು ರಾಜಕಾರಣವು ಪ್ರವರ್ಧಮಾನಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಮತ್ತು ಅದರ ಅದ್ಯಪ್ರವರ್ತಕರಾಗಿದ್ದರು ಎಂದೇ ವಿಶ್ಲೇಷಿಸಲಾಗುತ್ತದೆ. ಹಿಂದುಳಿದ ಜಾತಿಗಳು ಮತ್ತು “ಸಾಮಾಜಿಕ” ಐಡೆಂಟಿಟಿಯನ್ನು ಮುಖ್ಯ ಧಾರೆಯಲ್ಲಿ ಚರ್ಚೆಗೆ ಬರುವಂತೆ ಈ ಓಬಿಸಿ ರಾಜಕಾರಣವನ್ನು ರೂಪಿಸಲಾಗಿತ್ತು. ಆಗಾಗ ರಾಮಮನೋಹರ ಲೋಹಿಯಾ ಅವರು “ಆಮ್ ಆದ್ಮಿ” ಪದವನ್ನು, ಅದರ ಅಗತ್ಯತೆಯನ್ನು ಪ್ರಯೋಗಿಸುತ್ತಿದ್ದರೂ ಅದು ಈ “ಓಬಿಸಿ” ರಾಜಕಾರಣದ ಮುಂದೆ ಆ ನುಡಿಕಟ್ಟು ಮತ್ತು ಐಡೆಂಟಿಟಿ ಪ್ರಾಮುಖ್ಯತೆ ಪಡೆದುಕೊಳ್ಳಲಿಲ್ಲ. ಅಂದರೆ ಅಂದಿನ ಕಾಲಘಟ್ಟದಲ್ಲಿ, ಅಂದಿನ ಸಂದರ್ಭಕ್ಕೆ ಈ “ಆಮ್ ಆದ್ಮಿ” ನುಡಿಕಟ್ಟು ಪ್ರಸ್ತುತವಾಗಿರಲಿಲ್ಲವೇ? ಸಾಮಾಜಿಕ ನ್ಯಾಯದ ಚಿಂತನೆಗಳಲ್ಲಿ ಸ್ಥಾನ ಪಡೆದುಕೊಳ್ಳದೆ ಕೇವಲ ಜನಪ್ರಿಯ ಪದಪುಂಜವಾಗಿತ್ತೇ??

ಮುಂದಿನ ದಶಕಗಳಲ್ಲಿ ರಾಮಮನೋಹರ ಲೋಹಿಯಾ ಅವರು ಬಳಕೆಗೆ ತಂದ, ಪ್ರತಿಪಾದಿಸಿದ “ಸಂಯುಕ್ತ ಸರ್ಕಾರ”ದ ಕಲ್ಪನೆಗಳು, ಆಶಯಗಳು ಪ್ರಾಮುಖ್ಯತೆ ಪಡೆದುಕೊಳ್ಳತೊಡಗಿತು. ಇದರಲ್ಲಿ “ಓಬಿಸಿ” ಮೆಜಾರಿಟಿಯಲ್ಲಿತ್ತು. Advani-Rath-Yatraತೊಂಬತ್ತರ ದಶಕದ ವೇಳೆಗೆ ಅಡ್ವಾನಿಯವರ ರಥಯಾತ್ರೆ ತೀವ್ರವಾಗಿದ್ದಂತಹ ಸಂದರ್ಭದಲ್ಲಿ ಪರ್ಯಾಯವಾಗಿ “ಓಬಿಸಿ” ರಾಜಕಾರಣ ತನ್ನ ಪ್ರಭಾವನ್ನು ಹೆಚ್ಚಿಸಕೊಳ್ಳತೊಡಗಿತು. ಈ “ಕಮಂಡಲ”ಕ್ಕೆ ಪರ್ಯಾಯವಾಗಿ “ಮಂಡಲ್” ರಾಜಕಾರಣ ಪ್ರವರ್ಧಮಾನಕ್ಕೆ ಬರತೊಡಗಿತು. ಕಾಲಕಳೆದಂತೆ ಇದು ಮತ್ತಷ್ಟು ಸಂಕೀರ್ಣವಾಗತೊಡಗಿತು. ಇಂದಿನ ಆಮ್ ಆದ್ಮಿ ಪಕ್ಷದಂತೆಯೇ ಅಂದಿನ ದಿನಗಳಲ್ಲಿ ಈ ಜನಪ್ರಿಯ rhetoric ಬಳಸಿಕೊಂಡು ಎನ್.ಟಿ.ರಾಮರಾವ್ ನೇತೃತ್ವದ ತೆಲುಗುದೇಶಂ ಪಕ್ಷ ಅಧಿಕಾರಕ್ಕೆ ಬಂದಿತು.ಇದೇ ಬಗೆಯಲ್ಲಿಯೇ ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಸಹ ಉದಾಹರಿಸಬಹುದು.

ದೆಹಲಿ ರಾಜ್ಯದ ಎರಡು ವಿಭಿನ್ನ ಮಾದರಿಯ ಧ್ರುವಗಳ ನಡುವೆ ಹುಟ್ಟಿಕೊಂಡ “ಆಮ್ ಆದ್ಮಿ ಪಕ್ಷ”ವು ಜನತೆಯ ಸಿಟ್ಟು ಮತ್ತು ಅಸಹಾಯಕತೆಯನ್ನು ಸಂಪೂರ್ಣವಾಗಿ ಬಳಸಿಕೊಂಡಿತು. ಆರಂಭದಲ್ಲಿ underdog ಪ್ರಾದೇಶಿಕ ಪಕ್ಷವಾಗಿಯೇ ಗುರುತಿಸಿಕೊಂಡಿದ್ದ “ಆಮ್ ಆದ್ಮಿ” ಪಕ್ಷಕ್ಕೆ ಇಂದಿನ ವಿದ್ಯಾಮಾನಗಳ ಹಿನ್ನೆಲೆಯಲ್ಲಿ ಧಿಢೀರನೆ ಮಾಧ್ಯಮಗಳ ಪ್ರಚಾರ ದೊರಕಿಬಿಟ್ಟಿತು. ವಿವಿಧ ಬೇಡಿಕೆಗಳು ಮತ್ತು ವಿವಿಧ ವಿಚಾರಗಳ ನಡುವೆ ಒಂದು ಸಮಾನ ಕೊಂಡಿಯನ್ನು ನಿರ್ಮಿಸಿದ್ದು ಈ “ಆಮ್ ಆದ್ಮಿ ಪಕ್ಷ”. ಭ್ರಷ್ಟಾಚಾರ, ಕುಟುಂಬ ರಾಜಕಾರಣ, ಬೆಲೆಯೇರಿಕೆ, ತುಟ್ಟಿಯಾದ ವಿದ್ಯುತ್ ಬಿಲ್ಲುಗಳು, AAP-manifesto-PTIಅತ್ಯಾಚಾರ ಮತ್ತು ಸೆಕ್ಸ್ ಎಲ್ಲವನ್ನೂ ಪೋಣಿಸಿ ಒಂದೇ ನೆಲೆಯಲ್ಲಿ ಚರ್ಚೆಗೆ ತರುವಲ್ಲಿ ಆಮ್ ಆದ್ಮಿ ಪಕ್ಷವು ಯಶಸ್ವಿಯಾಯಿತು

ಜನಪ್ರಿಯ ಸಿದ್ಧಾಂತವನ್ನು ಒಳಗೊಳ್ಳುತ್ತಲೇ ಮಧ್ಯಮವರ್ಗಗಳ ಸೆಂಟಿಮೆಂಟಲ್ ನೆಲೆಯಲ್ಲಿ ಇತರೇ ಬಲಾಢ್ಯ ಪಕ್ಷಗಳ ಓಲೈಸುವಿಕೆ ರಾಜಕಾರಣವನ್ನು ಟೀಕಿಸುತ್ತಾ ತನ್ನ ಪ್ರಸ್ತುತತೆಯನ್ನು ಗಟ್ಟಿಗಳಿಸಿಕೊಂಡಿದ್ದು ಆಮ್ ಆದ್ಮಿ ಪಕ್ಷದ ಗೆಲುವಿಗೆ ಮೂಲಭೂತ ಕಾರಣ. ಅಲ್ಲದೆ ಅಧಿಕಾರದಲ್ಲಿರುವ ಪಕ್ಷಗಳನ್ನು ಶತೃಗಳನ್ನಾಗಿ ಬಿಂಬಿಸುವಲ್ಲಿ ಮತ್ತು ಅದನ್ನು ಮಧ್ಯಮವರ್ಗಗಳಿಗೆ ನಂಬಿಸುವಲ್ಲಿಯೂ ಆಮ್ ಆದ್ಮಿ ಪಕ್ಷ ಯಶಸ್ವಿಯಾಯಿತು.

ಅದರೆ ಕೆಲವು ರಾಜಕೀಯ ವಿಶ್ಲೇಷಕರ ಪ್ರಕಾರ ಸಾಮಾಜಿಕ ನ್ಯಾಯ ಮತ್ತು ಸಮತಾವಾದದೊಂದಿಗೆ ಇಂದಿನ ಜನಪ್ರಿಯ ನಂಬಿಕೆಯಾದ ಕಾರ್ಯಕ್ಷಮತೆ ಮತ್ತು ಪಾರದರ್ಶಕತೆಯನ್ನು ಮುಖಾಮುಖಿಯಾಗಿಸುವುದರಲ್ಲಿ ಯಶಸ್ವಿಯಾಗಿರುವ ಮಧ್ಯಮವರ್ಗಗಳಿಗೆ ರಾಜಕೀಯವಾಗಿ ಅಂಬೆಗಾಲಿಡುತ್ತಿರುವ ಆಮ್ ಆದ್ಮಿ ಪಕ್ಷವು ಹೊಸ ಬೆಳಕಾಗಿದ್ದು ಸುಳ್ಳಲ್ಲ. ಆದರೆ ಹಿಂದುತ್ವದ ರಾಜಕಾರಣ ತಲೆಯೆತ್ತುತ್ತಿರುವಂತಹ ಇಂದಿನ ದಿನಗಳಲ್ಲಿ, ಕೋಮುವಾದದ ಗಲಭೆಗಳು ಮರುಕಳುಸಿತ್ತಿರುವಂತಹ ಇಂದಿನ ದಿನಗಳಲ್ಲಿ ಈ ಆಮ್ ಆದ್ಮಿ ಪಕ್ಷವು ಐಡೆಂಟಿಟಿ ರಾಜಕಾರಣಕ್ಕೆ ಅಂತ್ಯ ಹಾಡಿದೆ ಎಂಬಂತಹ ಚಿಂತನೆಗಳು ಇಂದು ಚರ್ಚಾರ್ಹವಾಗಿವೆ.

ಆದರೆ ರಾಜಕೀಯ ಅಧಿಕಾರವೇ ಈ ಆಮ್ ಆದ್ಮಿ ಪಕ್ಷಕ್ಕೆ ಐಡೆಂಟಿಟಿ ಕ್ರೈಸಿಸ್ ತಂದೊಡ್ಡಲಿದೆ. ತನ್ನ ಮ್ಯಾನಿಫೆಸ್ಟೋದಲ್ಲಿ ನೀಡಿದ ಭರವಸೆಗಳನ್ನು ಸಂಪೂರ್ಣವಾಗಿ ಈಡೇರಿಸುವಲ್ಲಿ ಈ ಪಕ್ಷವು ಪಟ್ಟಭಧ್ರ ಹಿತಾಸಕ್ತಿಗಳನ್ನು, ಅಧಿಕಾರದ ಲಾಬಿಗಳನ್ನು ಹೇಗೆ ಪಳಗಿಸುತ್ತದೆ ಎಂಬುದಕ್ಕೆ ಇಲ್ಲಿ ಉತ್ತರವಿಲ್ಲ.

ಆದರೆ ಪ್ರಜಾಪ್ರಭುತ್ವದ ದೇಶವೊಂದರ ಪ್ರಜೆಗಳು ಯಾವುದೇ ಜಾತಿಗೆ ಸೇರಿದವರಲ್ಲ ಅಥವಾ ಯಾವುದೇ ವರ್ಗಗಳಲ್ಲ, arvind-kejriwal-campaigningಬದಲಾಗಿ ತಳಮಳಗಳನ್ನು, ಸಿಟ್ಟನ್ನು ವ್ಯಕ್ತಪಡಿಸುವ ಸಾಮಾನ್ಯ ನಾಗರಿಕರು ಎನ್ನುವ ಸಿದ್ಧಾಂತವನ್ನು ಹೊಂದಿರುವ ಈ ಆಮ್ ಆದ್ಮಿ ಪಕ್ಷವನ್ನು ನಾವು ಅಮೇರಿಕಾ ದೇಶದ “ಟೀ ಪಾರ್ಟಿ”ಗೆ ಹೋಲಿಸಬಹುದು. ಅಷ್ಟೇಕೆ ಈ ಆಮ್ ಆದ್ಮಿ ಪಕ್ಷದ ನೇತಾರ ಅರವಿಂದ್ ಕೇಜ್ರಿವಾಲ್ ಹಲವಾರು ಬಾರಿ ಅಮೇರಿಕ ಮಾದರಿಯ ಡೆಮಾಕ್ರಸಿಯನ್ನು ಓಲೈಸಿರುವುದರಿಂದ ಸಾಮಾನ್ಯ ಜನರ ಕುಂದು ಕೊರತೆಗಳಿಗಾಗಿಯೇ ಹೋರಾಡಲು ಹುಟ್ಟಿಕೊಂಡಿರುವ ಅಲ್ಲಿನ ಟೀ ಪಾರ್ಟಿಯೊಂದಿಗೆ ಈ ಆಮ್ ಆದ್ಮಿ ಪಕ್ಷಕ್ಕೆ ಹಲವಾರು ಸಾಮ್ಯತೆಗಳಿವೆ. ಈ ಈ ಆಮ್ ಆದ್ಮಿ ಪಕ್ಷವು ಈ ಹೋರಾಟಕ್ಕಾಗಿ ಗಾಂಧಿ ಟೋಪಿಯನ್ನು ಸಾಂಕೇತಿಕವಾಗಿ ಬಳಸಿದಂತೆಯೇ ಅಲ್ಲಿನ ಟೀ ಪಾರ್ಟಿಯು ಕಲೋನಿಯಲ್ ವಿರೋಧಿ ಸಂಕೇತವನ್ನು ಬಳಸಿಕೊಂಡಿತ್ತು.

ಕಡೆಗೆ ವಿಭಿನ್ನ ಧ್ರುವಗಳಲ್ಲಿರುವ ರಾಜಕೀಯ ವ್ಯವಸ್ಥೆಯನ್ನು ಒಂದೇ ಪಾತಳಿಯಲ್ಲಿ ಪೋಣಿಸುವುದು ಈ ಆಮ್ ಆದ್ಮಿ ಪಕ್ಷದ ಸಾಧನೆ ಅಲ್ಲವೇ ಅಲ್ಲ. ತನ್ನ ಪಕ್ಷದ ಹೆಸರನ್ನು ರಾಜಕೀಯಕ್ಕಾಗಿ ಬಳಸಿಕೊಂಡಿರುವುದರಲ್ಲಿ ಮಾತ್ರ ಇದರ ಸಾಧನೆ ಇರುವುದು. ಆದರೆ ಸಧ್ಯಕ್ಕಂತೂ ಇದು ಯಾವುದೇ ಹೂರಣವಿಲ್ಲದ ಹೆಸರಾಗಿ ಉಳಿದಿದೆ

( ಕೃಪೆ: ಎಕನಾಮಿಕ್ಸ್ ಟೈಮ್ಸ್, 18 ಡಿಸೆಂಬರ್, 2013)

ಆಮ್ ಆದ್ಮಿ ಪಕ್ಷ ವ್ಯವಸ್ಥೆ ಬದಲಾವಣೆಯ ಹರಿಕಾರ ಆಗಲಿ

– ಆನಂದ ಪ್ರಸಾದ್

ಅರವಿಂದ ಕೇಜ್ರಿವಾಲ್ ಆಮ್ ಆದ್ಮಿ ಪಕ್ಷವನ್ನು ಸ್ಥಾಪಿಸಿ ದೆಹಲಿಯಲ್ಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಉತ್ತಮ ಸಾಧನೆ ಮಾಡಿದುದನ್ನು ನೋಡಿ ಪರಂಪರಾಗತ ರಾಜಕಾರಣಿಗಳು ಬೆಚ್ಚಿಬಿದ್ದಿದ್ದಾರೆ. ಈ ಪಕ್ಷವೆಲ್ಲಿಯಾದರೂ ಇದೇ ರೀತಿ ದೇಶಾದ್ಯಂತ ಬೆಳೆದರೆ ತಮ್ಮ ಅಸ್ತಿತ್ವಕ್ಕೆ ಎಲ್ಲಿ ಧಕ್ಕೆಯಾಗುವುದೋ ಎಂಬ ಗಾಬರಿಯಿಂದ ಸಂಸತ್ತಿನಲ್ಲಿ ಲೋಕಪಾಲ್ ಮಸೂದೆಯನ್ನು ಅದು ದುರ್ಬಲವಾಗಿದ್ದರೂ ತರಾತುರಿಯಲ್ಲಿ ಮಂಡಿಸಿ ಪಾಸು ಮಾಡಿಸಿಕೊಂಡಿದ್ದಾರೆ. ಈ ತರಾತುರಿಗೆ ಕಾರಣ ಅಣ್ಣಾ ಹಜಾರೆಯವರ anna-hazareಉಪವಾಸ ಸತ್ಯಾಗ್ರಹವೇನೂ ಅಲ್ಲ. ಅಣ್ಣಾ ಹಜಾರೆಯವರ ಉಪವಾಸ ಸತ್ಯಾಗ್ರಹ ಇದಕ್ಕೆ ಕಾರಣವೆಂದಾದರೆ ಈ ಮಸೂದೆ ಎರಡು ವರ್ಷಗಳ ಹಿಂದೆಯೇ ಪಾಸಾಗಬೇಕಿತ್ತು. ಎರಡು ವರ್ಷಗಳ ಹಿಂದೆ ಉಪವಾಸ ಸತ್ಯಾಗ್ರಹ ಮಾಡಿದ ನಂತರ ಅಣ್ಣಾ ಹಜಾರೆಯವರೂ ಉಪವಾಸ ಕುಳಿತುಕೊಳ್ಳದೆ ಲೋಕಸಭಾ ಚುನಾವಣೆ ಹತ್ತಿರ ಆಗುತ್ತಿದ್ದಂತೆ ಮಸೂದೆಯನ್ನು ಪಾಸು ಮಾಡುವಂತೆ ಉಪವಾಸ ಕುಳಿತುಕೊಂಡದ್ದು ಕಾಕತಾಳೀಯ ಇರಲಾರದು. ಅಣ್ಣಾ ಹಜಾರೆಯವರ ರಾಜಕೀಯ ನಿಲುವು ನೋಡಿದಾಗ ಅವರು ಬಿಜೆಪಿ ಹಾಗೂ ಸಂಘ ಪರಿವಾರದ ಸಿದ್ಧಾಂತಗಳಿಗೆ ಹತ್ತಿರವಿರುವುದು ಕಂಡುಬರುತ್ತದೆ. ಭ್ರಷ್ಟಾಚಾರ ವಿರೋಧಿ ಹೋರಾಟದ ಫಲವಾಗಿ ದೇಶಾದ್ಯಂತ ಎದ್ದ ಜನಜಾಗೃತಿಯ ಫಲ ಬಿಜೆಪಿ ಪಕ್ಷಕ್ಕೆ ದೊರಕಲಿ ಎಂಬ ಒಳ ಆಶಯ ಅಣ್ಣಾ ಅವರಲ್ಲಿ ಹಾಗೂ ಅವರ ಸಂಗಡಿಗರಾದ ಕೆಲವರಲ್ಲಿ ಇರುವಂತೆ ಕಾಣುತ್ತದೆ. ಹೀಗಾಗಿಯೇ ಅರವಿಂದ ಕೇಜ್ರಿವಾಲ್ ಪ್ರತ್ಯೇಕ ಪಕ್ಷ ಸ್ಥಾಪಿಸಿ ರಾಜಕೀಯ ಹೋರಾಟದ ನಿರ್ಧಾರ ತೆಗೆದುಕೊಂಡಾಗ ಅದನ್ನು ಬೆಂಬಲಿಸಲು ಹಜಾರೆ ನಿರಾಕರಿಸಿದುದು ಹಾಗೂ ದೆಹಲಿ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನ ಬಾಕಿ ಇದೆ ಎಂದಿರುವಾಗ ಭ್ರಷ್ಟಾಚಾರ ವಿರೋಧಿ ಹೋರಾಟದ ಸಮಯದಲ್ಲಿ ಸಂಗ್ರಹವಾದ ನಿಧಿಯನ್ನು ಕೇಜ್ರಿವಾಲ್ ಚುನಾವಣೆಗೆ ಬಳಸುತ್ತಿದ್ದಾರೆಯೋ ಎಂಬ ಗೊಂದಲವನ್ನು ಸೃಷ್ಟಿಸಿ ಜನತೆಯಲ್ಲಿ anna-kejriwalಕೇಜ್ರಿವಾಲ್ ಹಾಗೂ ಸಂಗಡಿಗರ ಬಗ್ಗೆ ಅಪನಂಬಿಕೆಯನ್ನು ಹುಟ್ಟು ಹಾಕಿದ್ದು ಕೂಡ ಇದೇ ಉದ್ಧೇಶದಿಂದ ಇರಬಹುದು. ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಹೋರಾಟದ ಫಲ ಆಮ್ ಆದ್ಮಿ ಪಕ್ಷವು ಎಲ್ಲಿ ತನ್ನಿಂದ ಕಿತ್ತುಕೊಳ್ಳುವುದೋ ಎಂಬ ಭೀತಿಯಿಂದಲೇ ಬಿಜೆಪಿಯವರು ಅಣ್ಣಾ ಹಜಾರೆಗೆ ಕೇಜ್ರಿವಾಲ್ ಬೆನ್ನಿಗೆ ಚೂರಿ ಹಾಕಿದರು, ವಿಶ್ವಾಸ ದ್ರೋಹ ಮಾಡಿದರು ಎಂಬಂಥ ಅಪ್ರಪ್ರಚಾರದಲ್ಲಿ ತೊಡಗಿದರು. ಈ ಎಲ್ಲಾ ಅಪಪ್ರಚಾರದ ಹೊರತಾಗಿಯೂ ಕೇಜ್ರಿವಾಲರ ಆಮ್ ಆದ್ಮಿ ಪಕ್ಷ ದೆಹಲಿ ಚುನಾವಣೆಯಲ್ಲಿ ಉತ್ತಮ ಸಾಧನೆಯನ್ನು ಮಾಡಿತು.

ಕೇಜ್ರಿವಾಲ್ ಹಾಗೂ ಸಂಗಡಿಗರು ರಾಜಕೀಯ ಪಕ್ಷ ಸ್ಥಾಪನೆ ಮಾಡಿರುವುದು ಭಾರತದ ಪಾಲಿಗೆ ಒಂದು ಒಳ್ಳೆಯ ನಿರ್ಧಾರವಾಗಿದೆ. ಇಂದು ದೇಶಕ್ಕೆ ಪರ್ಯಾಯ ರಾಜಕೀಯದ ಅಗತ್ಯವಿದೆ. ರಾಜಕೀಯ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆ ತರದೇ ಹೋದರೆ ಭಾರತದಲ್ಲಿ ಹೆಚ್ಚಿನ ಬದಲಾವಣೆ ತರಲು ಸಾಧ್ಯವಿಲ್ಲ. ಸಾಂಪ್ರದಾಯಿಕ ಪಕ್ಷಗಳಿಗೆ ಕ್ರಾಂತಿಕಾರಕ ಬದಲಾವಣೆ ತರುವುದು ಬೇಡವಾಗಿದೆ. ಅಂಥ ಬದಲಾವಣೆ ತರುವ ಮನಸ್ಸಿದ್ದರೆ ಈಗ ಇರುವ ಲೋಕಸಭೆ ಹಾಗೂ ರಾಜ್ಯಸಭೆಗಳೇ ಸೂಕ್ತ ಕಾನೂನುಗಳನ್ನು ಈಗಲೇ ಮಾಡುವುದು ಸಾಧ್ಯವಿದೆ. ಅದನ್ನೆಂದಾದರೋ ಅವುಗಳು ಮಾಡಿವೆಯೇ? ಇಲ್ಲ. ಪ್ರತಿಯೊಂದು ವಿಷಯಕ್ಕೂ ಜನರು ನಿರಂತರ ಒತ್ತಡ ಹಾಕಿದರೆ ಮಾತ್ರ ಕಾನೂನು ಮಾಡುವುದು ಎಂದಾದರೆ ಜನಪ್ರತಿನಿಧಿಗಳ ಅಗತ್ಯ ಏನು? aam-admi-partyರಾಜಪ್ರಭುತ್ವವನ್ನೇ ಮುಂದುವರಿಸಬಹುದಿತ್ತಲ್ಲವೇ? ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಒಂದೇ ನಾಣ್ಯದ ಎರಡು ಮುಖಗಳು ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಾ ಬಂದಿದೆ. ದೇಶಕ್ಕೆ ಇಂದು ಪ್ರಾಮಾಣಿಕ, ಜವಾಬ್ದಾರಿಯುತ, ಉದಾರವಾದಿ ನಾಯಕತ್ವದ ಅಗತ್ಯ ಇದೆ. ಇದನ್ನು ಆಮ್ ಆದ್ಮಿ ಪಕ್ಷವು ನೀಡುವ ಹಾಗೂ ಉಳಿದೆಲ್ಲ ಪಕ್ಷಗಳಿಗಿಂತ ತಾನು ಭಿನ್ನ ಎಂದು ತೋರಿಸುವ ಅಗತ್ಯ ಇದೆ. ಆಮ್ ಆದ್ಮಿ ಪಕ್ಷದ ಇದುವರೆಗಿನ ನಿಲುವನ್ನು ನೋಡಿದರೆ ಅದು ಉಳಿದ ಪಕ್ಷಗಳಿಗಿಂತ ಭಿನ್ನ ಎಂದು ತೋರಿಸಿಕೊಂಡಿದೆ. ಪಕ್ಷ ಕಟ್ಟಲು ಹಾಗೂ ಚುನಾವಣೆಗೆ ಸ್ಪರ್ಧಿಸಲು ಬೇಕಾದ ಹಣವನ್ನು ಜನರ ದೇಣಿಗೆಯಿಂದಲೇ ಪ್ರಾಮಾಣಿಕವಾಗಿ ಪಡೆದು ಅದನ್ನು ತನ್ನ ವೆಬ್ ಸೈಟಿನಲ್ಲಿ ಹಾಕಿ ಪಾರದರ್ಶಕತೆಯನ್ನು ಮೆರೆದಿದೆ. ಮತಗಳಿಗಾಗಿ ಹಣ, ಹೆಂಡ, ಇನ್ನಿತರ ಆಮಿಷಗಳನ್ನು ಮತದಾರರಿಗೆ ಒಡ್ಡಿಲ್ಲ. ಜಾತಿ ಹಾಗೂ ಧರ್ಮ, ದೇವರ ಹೆಸರಿನಲ್ಲಿ ರಾಜಕಾರಣ ಮಾಡಿಲ್ಲ. ಅಧಿಕಾರವು ತನ್ನ ಕೈಗೆಟಕುವ ಹತ್ತಿರ ಇದ್ದರೂ ಉನ್ನತ ನೈತಿಕ ಧೈರ್ಯವನ್ನು ತೋರಿಸಿ ಅನೈತಿಕ ರಾಜಕೀಯ ಮಾಡುವುದಿಲ್ಲ ಎಂದು ನಡೆದಂತೆ ನುಡಿದಿದೆ. ದೆಹಲಿ ಚುನಾವಣೆಗೂ ಮೊದಲು ಪೂರ್ಣ ಬಹುಮತ ಪಡೆಯದೇ ಇದ್ದ ಪಕ್ಷದಲ್ಲಿ ತಾನು ಯಾರಿಗೂ ಬೆಂಬಲ ಕೊಡುವುದಿಲ್ಲ ಹಾಗೂ ಯಾರಿಂದಲೂ ಬೆಂಬಲ ಪಡೆಯುವುದಿಲ್ಲ ಎಂದು ಹೇಳಿತ್ತು. ಹೀಗಾಗಿ ಆಮ್ ಆದ್ಮಿ ಪಕ್ಷವು ಕಾಂಗ್ರೆಸ್ ಬಾಹ್ಯ ಬೆಂಬಲ ಕೊಡಲು ಮುಂದೆ ಬಂದಿದ್ದರೂ ಸರಕಾರ ರಚಿಸಬೇಕೋ ಬೇಡವೋ ಎಂಬ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಿಕ್ಕಿಕೊಂಡಿದೆ. ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಸರ್ಕಾರ ಮಾಡಿದರೂ ಟೀಕೆ ತಪ್ಪಿದ್ದಲ್ಲ, ಸರ್ಕಾರ ಮಾಡದಿದ್ದರೂ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ ಎಂಬ ಟೀಕೆಯೂ ತಪ್ಪಿದ್ದಲ್ಲ. ಇದೀಗ ಈ ಕುರಿತು ದೆಹಲಿಯ ಜನತೆಯನ್ನೇ ಕೇಳಿ ಅಂತಿಮ ತೀರ್ಮಾನ ತೆಗೆದುಕೊಳ್ಳುವ ದಿಟ್ಟ ನಿಲುವು ತೆಗೆದುಕೊಂಡಿರುವುದು ಅತ್ಯಂತ ಪಕ್ವ, ಪ್ರಬುದ್ಧ ನಿಲುವು ಎಂದೇ ಹೇಳಬೇಕಾಗುತ್ತದೆ. ಇದರಿಂದಾಗಿಯೂ ಇದು ಉಳಿದ ಪಕ್ಷಗಳಿಗಿಂತ ಸಂಪೂರ್ಣ ಭಿನ್ನ ಎಂದು ಕಂಡುಬರುತ್ತದೆ. ಪರಿವರ್ತನೆಯ ಹಾದಿಯಲ್ಲಿ ಒಮ್ಮೆ ಅರಾಜಕ ಪರಿಸ್ಥಿತಿ ತಲೆದೋರುತ್ತದೆ. ಒಂದು ವ್ಯವಸ್ಥೆಯಿಂದ ಇನ್ನೊಂದು ವ್ಯವಸ್ಥೆಗೆ ಬದಲಾವಣೆ ಆಗುವಾಗ ಇದು ಅನಿವಾರ್ಯ. ಉದಾಹರಣೆಗೆ ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬದಲಾವಣೆ ಹೊಂದುವಾಗ ಗೊಂದಲ, ಅರಾಜಕ ಪರಿಸ್ಥಿತಿ ತಲೆದೋರುತ್ತದೆ. ಇದರಿಂದ ವಿಚಲಿತರಾಗಬೇಕಾಗಿಲ್ಲ. ಊಳಿಗಮಾನ್ಯ ವ್ಯವಸ್ಥೆಯಿಂದ ಸಮತಾವಾದಿ ವ್ಯವಸ್ಥೆಗೆ ರಷ್ಯ ಬದಲಾಗುವ ವೇಳೆಯಲ್ಲಿ ಕೆಲವು ವರ್ಷಗಳವರೆಗೆ ಅರಾಜಕ ಪರಿಸ್ಥಿತಿ ಇತ್ತು. ಹೀಗೆಯೇ ಇದೀಗ ದೆಹಲಿಯಲ್ಲಿ ಪಾರಂಪರಿಕ ಭ್ರಷ್ಟ ಪಕ್ಷಗಳ ವ್ಯವಸ್ಥೆಯಿಂದ ನೈತಿಕ ಹಾಗೂ ಮೌಲ್ಯಾಧಾರಿತ ವ್ಯವಸ್ಥೆಗೆ ಬದಲಾಗುವ ಈ ಸಂಧಿ ಕಾಲದಲ್ಲಿ ದೆಹಲಿಯಲ್ಲಿ ಸ್ವಲ್ಪ ಸಮಯ ರಾಷ್ಟ್ರಪತಿ ಆಳ್ವಿಕೆ ಬಂದರೆ ಅದನ್ನು ಜನತೆಯ ಮೇಲಿನ ಹೊರೆ ಎಂದು ತಿಳಿದುಕೊಳ್ಳಬೇಕಾಗಿಲ್ಲ. ಮೌಲ್ಯಗಳನ್ನು ಎತ್ತಿ ಹಿಡಿಯಬೇಕಾದರೆ ಇದನ್ನು ಸಹಿಸಿಕೊಳ್ಳಬೇಕಾಗುತ್ತದೆ. ರಾಷ್ಟ್ರಪತಿ ಆಳ್ವಿಕೆ ಎಂದರೆ ಅರಾಜಕ ಪರಿಸ್ಥಿತಿಯೇನೂ ಉಂಟಾಗುವುದಿಲ್ಲ. ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವಲ್ಲಿ ಸ್ವಲ್ಪ ವಿಳಂಬ ಆಗಬಹುದು ಅಷ್ಟೇ.

ಆಮ್ ಆದ್ಮಿ ಪಕ್ಷವು ಭಾರತಾದ್ಯಂತ ಒಂದು ಪರ್ಯಾಯ ಶಕ್ತಿಯಾಗಿ ಬೆಳೆಯಬೇಕಾದ ಅಗತ್ಯ ಇಂದು ಇದೆ. ಸಮಾನ ಮನಸ್ಕ ರಾಜಕೀಯ ಪಕ್ಷಗಳ ಜೊತೆ ಈ ನಿಟ್ಟಿನಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದು ಅಗತ್ಯ. ಲೋಕಪಾಲ್ ಸಂಸ್ಥೆಯ ಸ್ಥಾಪನೆ ಆಗುವ ಕಾರಣ ಪಕ್ಷದ ಬೆಳವಣಿಗೆ ದೆಹಲಿಗೆ ಸೀಮಿತ ಆಗಲಾರದು. ಉನ್ನತ ರಾಜಕೀಯ ಮೌಲ್ಯಗಳನ್ನು ಎತ್ತಿಹಿಡಿಯುವ ಪರ್ಯಾಯ ರಾಷ್ಟ್ರೀಯ ಪಕ್ಷವೊಂದರ ಅಗತ್ಯ ಇಂದು ಈ ದೇಶಕ್ಕೆ ಇದೆ. ಅದನ್ನು ಆಮ್ ಆದ್ಮಿ ಪಕ್ಷವು ತುಂಬುವ ಸಂಭವ ಇದೆ ಮತ್ತು ಇದನ್ನು ದೇಶಾದ್ಯಂತ ಬೆಳೆಸಲು ಸಮಾಜದ ಎಲ್ಲಾ ವರ್ಗಗಳ ಜನ ಮುಂದೆ ಬಂದರೆ ಇದು ಅಸಾಧ್ಯವೇನೂ ಅಲ್ಲ. ಇದು ಕೆಲವು ವರ್ಷಗಳನ್ನು ತೆಗೆದುಕೊಳ್ಳಬಹುದು. ಕೇಜ್ರಿವಾಲರು ಅಣ್ಣಾ ಹಜಾರೆಯವರನ್ನು ಗುರುವೆಂದು ತಿಳಿದುಕೊಳ್ಳಬೇಕಾದ ಅಗತ್ಯ ಇಲ್ಲ ಮತ್ತು ಅವರು ಅಣ್ಣಾ ಅವರ ಬೆಂಬಲ ಇಲ್ಲದೆಯೂ ತನ್ನ ಸ್ವಂತ ಪ್ರತಿಭೆಯಿಂದಲೇ ಬೆಳೆಯಬಲ್ಲರು. arvind-kejriwal-campaigningಗುರು-ಶಿಷ್ಯ ಎಂಬ ಪರಿಕಲ್ಪನೆ ಪ್ರಜಾಪ್ರಭುತ್ವಕ್ಕೆ ಸರಿಹೊಂದುವುದಿಲ್ಲ ಮತ್ತು ಅದು ಬೇಕಾಗಿಯೂ ಇಲ್ಲ. ಅಣ್ಣಾ ಹಜಾರೆಯವರು ವೈಜ್ಞಾನಿಕ ಮನೋಭಾವ ಇಲ್ಲದ ಹಳೆಯ ತಲೆಮಾರಿನ ವ್ಯಕ್ತಿ ಆದ ಕಾರಣ ಅವರ ಬೆಂಬಲ ಇಂದಿನ ತಲೆಮಾರಿನ ಪ್ರಜಾಪ್ರಭುತ್ವ, ಸಮಾನತೆ, ವೈಚಾರಿಕ ಮನೋಭಾವ, ಉದಾರವಾದಿ ವ್ಯಕ್ತಿತ್ವ ಹೊಂದಿರುವ ಕೇಜ್ರಿವಾಲ್ ಹಾಗೂ ಸಂಗಡಿಗರಿಗೆ ದೊರೆಯಲಾರದು. ಹೀಗಾಗಿ ಅವರು ಅಣ್ಣಾ ಅವರನ್ನು ಗುರು ಎಂದು ಹೇಳಿಕೊಳ್ಳುವುದು, ಅವರ ಬೆಂಬಲ ಪಡೆದುಕೊಳ್ಳಲು ಪ್ರಯತ್ನಿಸುವುದು ವ್ಯರ್ಥ. ಹಾದಿಗಳು ಬೇರೆ ಬೇರೆಯಾದ ಕಾರಣ ಕೇಜ್ರಿವಾಲ್ ಹಾಗೂ ಸಂಗಡಿಗರು ತಮ್ಮ ಸ್ವಂತ ಪ್ರತಿಭೆಯಿಂದಲೇ ಬೆಳೆಯುವುದು ಉತ್ತಮ ಹಾಗೂ ಅಂಥ ಪ್ರತಿಭೆ ಹಾಗೂ ಮುನ್ನೋಟ ಅವರಲ್ಲಿ ಇದೆ. ಯಾವುದೇ ಕಾರಣಕ್ಕೂ ಕೇಜ್ರಿವಾಲ್ ಹಿಂಜರಿಯಬೇಕಾದ ಅಗತ್ಯ ಇಲ್ಲ. ಕಾಂಗ್ರೆಸ್ ಹಾಗೂ ಬಿಜೆಪಿ ಈ ಎರಡೂ ಪಕ್ಷಗಳಲ್ಲಿಯೂ ಸನಾತನವಾದಿ, ಪುರೋಹಿತಶಾಹಿ, ಯಥಾಸ್ಥಿತಿವಾದಿ, ಪಟ್ಟಭದ್ರ ಹಿತಾಸಕ್ತಿಗಳು ನೆಲೆಯೂರಿರುವ ಕಾರಣ ಭಾರತವು ಸರಿಯಾದ ಹಾದಿಯಲ್ಲಿ ಸಾಗಲು ಸಾಧ್ಯವಿಲ್ಲ. ಭಾರತವನ್ನು ಮುನ್ನಡೆಸಲು ಆಧುನಿಕ ನಿಲುವಿನ ಪ್ರತಿಭಾವಂತರು ಕೇಜ್ರಿವಾಲ್ ಹಾಗೂ ಸಂಗಡಿಗರ ಜೊತೆ ರಾಜಕೀಯಕ್ಕೆ ಇಳಿಯಬೇಕಾದ ಅಗತ್ಯ ಇದೆ.

ಕೇಜ್ರಿವಾಲ್ ಅವರಲ್ಲಿ ಇರುವ ದೃಢತೆ, ಚಿಂತನೆ ನೋಡುವಾಗ ಭಗತ್ ಸಿಂಗ್, ಸುಭಾಷಚಂದ್ರ ಬೋಸ್ ಅವರ ಹೋಲಿಕೆ ಕಂಡುಬರುತ್ತದೆ. ಪ್ರಾಮಾಣಿಕ ಹಾಗೂ ಜವಾಬ್ದಾರಿಯುತ ಜನ ಇದ್ದರೆ ಜನ ಜಾತಿ, ಮತ, ಧರ್ಮ ಭೇದ ಮರೆತು; ಕೆಳವರ್ಗ, ಮಧ್ಯಮ ವರ್ಗ, ಶ್ರೀಮಂತ ವರ್ಗ ಎಂಬ ಭೇದವಿಲ್ಲದೆ ಬೆಂಬಲಿಸುತ್ತಾರೆ ಮತ್ತು ಮೆಚ್ಚುತ್ತಾರೆ. ಲಾಲ್ ಬಹದ್ದೂರ್ ಶಾಸ್ತ್ರಿ ಇದಕ್ಕೊಂದು ಉತ್ತಮ ಉದಾಹರಣೆ. ಆಮ್ ಆದ್ಮಿ ಪಕ್ಷವು ಪ್ರಾಮಾಣಿಕ, ಜವಾಬ್ದಾರಿಯುತ ಜನರನ್ನು ಗುರುತಿಸಿ ಬೆಳೆಸುವ ಕಾರ್ಯ ಮಾಡಬೇಕು. ಪಕ್ಷದಲ್ಲಿ ಎರಡನೆಯ ಹಾಗೂ ಮೂರನೆಯ ಪೀಳಿಗೆಯ ನಾಯಕರನ್ನು ತಯಾರು ಮಾಡಬೇಕು. ಕೇಜ್ರಿವಾಲ್ ನಂತರ ಯಾರು ಎಂಬ ಪ್ರಶ್ನೆ ಎಂದೂ ಬರಬಾರದು. ವಂಶಪಾರಂಪರ್ಯ ರಾಜಕೀಯಕ್ಕೆ ಆಸ್ಪದ ಕೊಡುವುದಿಲ್ಲ ಎಂಬ ನಿಯಮವನ್ನು ಆಮ್ ಆದ್ಮಿ ಪಕ್ಷವು ಹೊಂದಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬೆಳೆಸಲು ಅಗತ್ಯವಾಗಿ ಬೇಕಾಗಿತ್ತು. ಒಬ್ಬನೇ ವ್ಯಕ್ತಿ ನಿರಂತರವಾಗಿ ಪದೇ ಪದೇ ಮುಖ್ಯಮಂತ್ರಿಯೋ, ಪ್ರಧಾನ ಮಂತ್ರಿಯೋ ಆಗಬಾರದು. ಹೀಗೆ ಒಬ್ಬನೇ ಮತ್ತೆ ಮತ್ತೆ ಮುಖ್ಯ ಮಂತ್ರಿ ಅಥವಾ ಪ್ರಧಾನ ಮಂತ್ರಿ ಆಗುವುದು ಕೂಡ ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾದದ್ದು. ಉದಾಹರಣೆಗೆ ಜೀವಂತ ಇರುವವರೆಗೋ ನೆಹರೂ ಅವರೇ ಪ್ರಧಾನ ಮಂತ್ರಿ ಆಗಿದ್ದದ್ದು, ಇಂದಿರಾ ಗಾಂಧಿಯೂ ಜೀವಂತ ಇದ್ದಷ್ಟು ದಿನ ಕಾಂಗ್ರೆಸ್ಸಿನಿಂದ ಪ್ರಧಾನ ಮಂತ್ರಿಯಾಗಿದ್ದದ್ದು. ಇದು ಪ್ರಜಾಪ್ರಭುತ್ವವಲ್ಲ, ರಾಜಪ್ರಭುತ್ವದ ಇನ್ನೊಂದು ಅವತಾರವಷ್ಟೇ. ಈ ರೋಗ ಕಾಂಗ್ರೆಸ್ಸಿಗೆ ಮಾತ್ರ ಸೀಮಿತವಲ್ಲ ಬಿಜೆಪಿ, ಸಮಾಜವಾದಿ, ಅಣ್ಣಾಡಿಎಂಕೆ, ಡಿಎಂಕೆ, ಟಿಡಿಪಿ, ಬಿಜು ಜನತಾದಳ, ಜಾತ್ಯಾತೀತ ಜನತಾದಳ ಹೀಗೆ ಎಲ್ಲ ಪಕ್ಷಗಳನ್ನೂ ಆವರಿಸಿಕೊಂಡಿದೆ. ಬಿಜೆಪಿಯಲ್ಲಿಯೂ ನರೇಂದ್ರ ಮೋದಿಯೇ ನಾಲ್ಕನೆಯ ಸಲ ಮುಖ್ಯಮಂತ್ರಿಯಾಗಿರುವುದು ಕೂಡ ನೈಜ ಪ್ರಜಾಪ್ರಭುತ್ವವಲ್ಲ. ಅದೇ ರೀತಿ ಎಡ ಪಕ್ಷಗಳಲ್ಲಿ ಜ್ಯೋತಿ ಬಸು ಐದು ಸಲ ಮುಖ್ಯಮಂತ್ರಿ ಆಗಿದ್ದು ಕೂಡ. ಒಬ್ಬನೇ ಸಾಯುವವರೆಗೆ ಅಧಿಕಾರಕ್ಕೆ ಅಂಟಿಕೊಂಡಿರುವುದು ಪ್ರಜಾಪ್ರಭುತ್ವಕ್ಕೆ ಯೋಗ್ಯವಲ್ಲ. ಹೆಚ್ಚೆಂದರೆ ಒಬ್ಬನಿಗೆ ಎರಡು ಅವಕಾಶಗಳಷ್ಟೇ ಮುಖ್ಯಮಂತ್ರಿ ಹಾಗೂ ಪ್ರಧಾನ ಮಂತ್ರಿಯಾಗಲು ಇರಬೇಕು. ಅದಕ್ಕಿಂತಲೂ ಹೆಚ್ಚು ಬಾರಿ ಒಬ್ಬನೇ ಅಧಿಕಾರ ಸ್ಥಾನಕ್ಕೆ ಏರುವುದು ಕೂಡ ರಾಜಪ್ರಭುತ್ವದ ಮುಂದುವರಿಕೆಯಾಗುತ್ತದೆ. ಇದು ಸರ್ವಾಧಿಕಾರಿ ಹಾಗೂ ವಂಶವಾಹೀ ಅಧಿಕಾರಕ್ಕೆ ಎಡೆಮಾಡಿಕೊಡುತ್ತದೆ. ಹೀಗಾಗಿ ಒಬ್ಬನೇ ಒಂದು ಪಕ್ಷದಿಂದ ಎರಡಕ್ಕಿಂತ ಹೆಚ್ಚು ಬಾರಿ ಮುಖ್ಯ ಮಂತ್ರಿಯೋ, ಪ್ರಧಾನ ಮಂತ್ರಿಯೋ ಆಗದಂತೆ ಪಕ್ಷಗಳು ನಿಯಮ ರೂಪಿಸುವ ಅಗತ್ಯ ಇದೆ. ಅದೇ ರೀತಿ ಪಕ್ಷದ ಅಧ್ಯಕ್ಷರ ವಿಚಾರದಲ್ಲಿಯೂ ಕೂಡ ನಿಯಮ ಮಾಡಬೇಕು. ಹಾಗಾದಾಗ ಮಾತ್ರ ಪ್ರಜಾಪ್ರಭುತ್ವ ಬೆಳೆಯಲು ಸಾಧ್ಯ.

ಲೋಕಪಾಲ್ ಸಂಸ್ಥೆ ಸ್ಥಾಪನೆ ಆಗುವ ಕಾರಣ ಭ್ರಷ್ಟಾಚಾರ ಸ್ವಲ್ಪ ನಿಯಂತ್ರಣಕ್ಕೆ ಬರಬಹುದು ಆದರೆ ಪ್ರಾಮಾಣಿಕ ಹಾಗೂ ಜವಾಬ್ದಾರಿಯುತ ಜನ ಅಧಿಕಾರಕ್ಕೆ ಬರುವ ಪರಿಸ್ಥಿತಿ ರೂಪುಗೊಳ್ಳುವವರೆಗೆ ಹೆಚ್ಚಿನ ಬದಲಾವಣೆ ನಿರೀಕ್ಷಿಸಲಾಗದು. ಉದಾಹರಣೆಗೆ ಕರ್ನಾಟಕದಲ್ಲಿ ಲೋಕಾಯುಕ್ತ ಸಂಸ್ಥೆ ಇದೆ. ಆದರೆ ಭ್ರಷ್ಟಾಚಾರ ನಿಯಂತ್ರಣ ಆಗಿದೆಯೇ? corruption-india-democracyಇಲ್ಲವೆಂದೇ ಹೇಳಬೇಕಾಗುತ್ತದೆ. ವಿಜಯಕರ್ನಾಟಕ ಪತ್ರಿಕೆಯಲ್ಲಿ ಬರುವ ‘ಲಂಚ ಪ್ರಪಂಚ’ ಎಂಬ ಅಂಕಣದಲ್ಲಿ ಪ್ರಕಟವಾಗುವ ಬರಹಗಳನ್ನು ನೋಡಿದರೆ ಲೋಕಾಯುಕ್ತ ಸಂಸ್ಥೆ ನಿಷ್ಪ್ರಯೋಜಕ ಎಂಬ ಭಾವನೆ ಬರುವುದಿಲ್ಲವೇ? ಎಲ್ಲಿಯವರೆಗೆ ಪ್ರಾಮಾಣಿಕ ಹಾಗೂ ಜವಾಬ್ದಾರಿಯುತ ಜನರು ಅಧಿಕಾರ ಸ್ಥಾನಕ್ಕೆ ಬರುವ ಪರಿಸ್ಥಿತಿ ರೂಪುಗೊಳ್ಳುವು ದಿಲ್ಲವೋ ಅಲ್ಲಿಯವರೆಗೆ ನೂರು ಲೋಕಾಯುಕ್ತಗಳು, ನೂರು ಲೋಕಪಾಲಗಳು ಬಂದರೂ ಪರಿಸ್ಥಿತಿಯಲ್ಲಿ ಸುಧಾರಣೆ ಆಗುವ ಲಕ್ಷಣ ಕಾಣುವುದಿಲ್ಲ. ಬಿಜೆಪಿ ಆಡಳಿತದಲ್ಲಿಯೂ ಇದೇ ಪರಿಸ್ಥಿತಿ, ಕಾಂಗ್ರೆಸ್ ಆಡಳಿತದಲ್ಲಿಯೂ ಇದೇ ಪರಿಸ್ಥಿತಿ, ಜೆಡಿಎಸ್ ಆಡಳಿತದಲ್ಲಿಯೂ ಇದೇ ಪರಿಸ್ಥಿತಿ. ಕ್ರಾಂತಿಕಾರಕ ಪ್ರಜಾಸತ್ತಾತ್ಮಕ ಬದಲಾವಣೆಗಳನ್ನು ವ್ಯವಸ್ಥೆಯಲ್ಲಿ ತರದಿದ್ದರೆ ಹೀಗೇ ಆಗುವುದು, ಯಾರು ಅಧಿಕಾರಕ್ಕೆ ಬಂದರೂ ವ್ಯವಸ್ಥೆ ಬದಲಾವಣೆ ಆಗುವುದಿಲ್ಲ. ನ್ಯಾಯಾಂಗ ಸುಧಾರಣೆ, ಚುನಾವಣಾ ಸುಧಾರಣೆ, ಕೆಲಸ ಮಾಡದ ಜನಪ್ರತಿನಿಧಿಗಳನ್ನು ವಾಪಸ್ ಕರೆಸಿಕೊಳ್ಳುವ ಹಕ್ಕು, ಮತದಾನದಲ್ಲಿ ‘ಯಾರಿಗೂ ಇಲ್ಲ’ (NOTA) ಎಂಬ ಮತ ನೀಡುವ ಅವಕಾಶ ಹಾಗೂ ಹಾಗೆ ಯಾರಿಗೂ ಇಲ್ಲ ಎಂಬ ಮತಗಳ ಸಂಖ್ಯೆ ಗೆದ್ದ ಅಭ್ಯರ್ಥಿಯ ಮತಗಳಿಗಿಂತ ಹೆಚ್ಚಾದರೆ ಅಲ್ಲಿ ಪುನಃ ಮತದಾನ ನಡೆಸುವ ವ್ಯವಸ್ಥೆ ಮೊದಲಾದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುವ ಕ್ರಾಂತಿಕಾರಕ ಚಿಂತನೆಗಳನ್ನು ಆಮ್ ಆದ್ಮಿ ಪಕ್ಷವು ಹೊಂದಿದೆ. ಬೇರೆ ಯಾವ ರಾಜಕೀಯ ಪಕ್ಷಗಳಲ್ಲಿಯೂ ಇಂಥ ಕ್ರಾಂತಿಕಾರಕ ಚಿಂತನೆ ಕಂಡುಬರುವುದಿಲ್ಲ. ಈ ನಿಟ್ಟಿನಿಂದಲೂ ಆಮ್ ಆದ್ಮಿ ಪಕ್ಷವನ್ನು ರಾಷ್ಟ್ರೀಯ ಪಕ್ಷವಾಗಿ ಬೆಳೆಸುವ ಅಗತ್ಯ ಇದೆ.

ಎದೆಗೆ ಬೀಳಬೇಕಾದ ಅಕ್ಷರಗಳು : “ನಾವು-ನಮ್ಮಲ್ಲಿ” ದೇವನೂರು ಮಹಾದೇವರ ಮಾತುಗಳು

[ದೇವನೂರು ಮಹಾದೇವ ಅವರು “ನಾವು-ನಮ್ಮಲ್ಲಿ” ಕಾರ್ಯಕ್ರಮದ ಉದ್ಘಾಟನಾ ಗೋಷ್ಟಿಯ ಮುಖ್ಯ ಅತಿಥಿ. ಸಭೆಯಲ್ಲಿ ಮಾತನಾಡ ಬೇಕೆಂದರೆ ಅವರು ಥಟ್ಟನೆ ಒಪ್ಪಿಕೊಳ್ಳುವವರಲ್ಲ. ಸಂಘಟಕರ ಮನವಿಗೆ ಒಪ್ಪಿ ಮಾತನಾಡಲು ಬಂದರು. ಅವರ ಭಾಷಣದ ಕೆಲವು ಆಯ್ದ ಭಾಗಗಳ ಪಠ್ಯ ಕೆಳಗಿದೆ.]

– ‘ನಮ್ಮ ಮಾತುಗಳು ಸೋಲುತ್ತಿವೆಯೆ?’ ಜೊತೆಗೆ ‘ಜನಪರ ದನಿಗಳು ಕ್ಷೀಣಿಸುತ್ತಿವೆಯೆ?’ ಎನ್ನುವುದರ ಚರ್ಚೆಯೂ ಇದೆ. devanurಈ ಎರಡನ್ನು ಒಟ್ಟಾಗಿ ನೋಡಿದರೆ ಒಂದಿಷ್ಟು ಹೊಳಹುಗಳು ಸಿಗಬಹುದೇನೋ?

– ಗೆಳೆಯ ರಾಜೇಂದ್ರ ಚೆನ್ನಿ ತಮ್ಮ ‘ದಂತ ಗೋಪುರ ಮತ್ತು ಮಾರುಕಟ್ಟೆ ರಾಜಕೀಯ’ ಲೇಖನದಲ್ಲಿ ಕಾಮಿಕ್ಸ್‌ಗಳಲ್ಲಿ ವಸಾಹತುಶಾಯಿಯ ಒಳಚರಿತ್ರೆಗಳಿವೆ ಎಂದು ಹೇಳುತ್ತಾ ‘ಆದಿವಾಸಿಗಳ ಮೇಲೆ ಹುಕುಂ ಮಾಡುವ ಫ್ಯಾಂಟಮ್ ಆಫ್ರಿಕಾವನ್ನು ವಸಾಹತುವನ್ನಾಗಿ ಮಾಡಿದ ಬಿಳಿಯನ ಮೂಲಮಾದರಿ ಎನ್ನುವುದನ್ನೂ, ಹಾಗೇ ನಿಸರ್ಗ ಮತ್ತು ಪ್ರಾಣಿಗಳ ಮೇಲೆ ರಮ್ಯವಾದ ರೀತಿಯಲ್ಲಿ ಆಳ್ವಿಕೆ ಟಾರ್ಜನ್, ನಿಸರ್ಗದ ಮೇಲೆ ದಾಳಿ ಮಾಡಿ ಅದನ್ನು ಬಳಸಿಕೊಳ್ಳುವ ಯುರೋಪಿಯನ್ ಮನುಷ್ಯನ ಸಂಕೇತವೆನ್ನುವುದನ್ನು ಮರೆಯುತ್ತೇವೆ’ ಎಂದು ಅಪೂರ್ವ ಒಳನೋಟ ನೀಡುತ್ತಾರೆ. ಟಾರ್ಜನ್ ಎಂದರೆ ಬಿಳಿಯ ಚರ್ಮದವನು ಅಂತವೂ ಅರ್ಥವಂತೆ.

– ಒಟ್ಟಿನಲ್ಲಿ, ಸುಲಿಗೆ ಇಂದು ಸುಲಿಗೆಯಾಗಿ ಸುಲಿಯುತ್ತಿಲ್ಲ ರಕ್ಷಕನ ಮುಖವಾಡ ಹಾಕಿ ಸುಲಿಯುತ್ತಿದೆ. ಇದನ್ನು ಮಕ್ಕಳಲ್ಲೆ ಅದರೆ ಗಿಡವಾಗಿದ್ದಾಗಲೆ ಬಗ್ಗಿಸಿ ಸುಲಿಗೆಯನ್ನು ಒಪ್ಪಿತ ಮೌಲ್ಯವಾಗಿಸುವ ಹೊಸ ಬಲೆಗಳನ್ನು ಈ ಭೂಮಿ ಮೇಲೆ ನೇಯಲಾಗುತ್ತಿದೆ. ಜೆರೆಮಿ ಸೀಬೋಕ್ ಬರೆಯುತ್ತ – “‘ಜಗತ್ತಿನ ಕಾರ್ಮಿಕರೆಲ್ಲರೂ ಒಟ್ಟಾಗಿ ಜಗತ್ತನ್ನು ದಾಸ್ಯಯಿಂದ ಮುಕ್ತಗೊಳಿಸಬಲ್ಲರು’ ಎಂಬ ಚಿಂತನೆ ದುರ್ಬಲಗೊಂಡಾಗ ಈಗ ‘ನಮಗೆ ಬೇಕಿರುವುದೆಲ್ಲವನ್ನೂ ಬಂಡವಾಳಶಾಯಿಯ ಮೂಲಕ ಮಾತ್ರ ಪಡೆದುಕೊಳ್ಳಲು ಸಾಧ್ಯ’ ಎಂಬ ಪುರಾಣ ಸೃಷ್ಟಿಸಲಾಗಿದೆ”- ಎನ್ನುತ್ತಾರೆ. ಇಂದು ಜೀವನ ಎಂದರೆ ಹಣದಿಂದ ಹಣಕ್ಕಾಗಿ ಹಣಕ್ಕೋಸ್ಕರ ಎಂಬಂತಾಗಿಬಿಟ್ಟಿದೆ. ಸಮಾನತೆ ಆಶಯಗಳ ಸೈದ್ಧಾಂತಿಕತೆ ಕಣ್ಣುಬಾಯಿ ಬಿಡುತ್ತಿದೆ. ಇಂದಿನ ಜಾಗತೀಕರಣದ ಮಾಯಾಬಜಾರ್ ಖಾಸಗೀಕರಣದ ಬಂಡವಾಳವೆ ಇಂದು ಜಗತ್ತಿನ ಹಸಿವಿನ ಬಗ್ಗೆ ಮಾತಾಡುತ್ತಿದೆ, ಉದ್ಯೋಗದ ಬಗ್ಗೆ ಮಾತಾಡುತ್ತಿದೆ, ಬಡವರ ಉದ್ಧಾರ ತನ್ನ ಕೈಲಿ ಮಾತ್ರ ಎಂಬಂತೆ ಬಿಂಬಿಸಬೇಕೆಂದು ನಂಬಿಸುತ್ತಿದೆ. ಮಾಟ ಮಂತ್ರ ಮಾಯಾ ಬಜಾರ್ ಎಲ್ಲವೂ ವಿಜ್ಞಾನದ ಭಾಷೆಯಲ್ಲೂ ಮಾತಾಡುತ್ತಿದೆ.

ಹೀಗಿರುವಾಗ ವಿಮೋಚನೆ ಹೇಗೆ? ಅಥವಾ ಯಾರಿಂದ? ಖಳನಾಯಕನು ನಾಯಕನನ್ನು ತುಳಿದಿಟ್ಟು ತಾನೇ ನಾಯಕನ ಮಾತುಗಳನ್ನಾಡುತ್ತಿದ್ದಾನೆ. ಇದಕ್ಕೆ ಜಗತ್ತು ಮರುಳಾಗುತ್ತಿದೆ. ಜೊತೆಗೆ ಈ ಕಾಲ ಮಾಹಿತಿ ಯುಗ. ಮನುಷ್ಯ ಹೆಚ್ಚೆಚ್ಚು ಎಚ್ಚರವನ್ನೂ ಪಡೆಯುತ್ತಿದ್ದಾನೆ. ಎಚ್ಚರ ಇಲ್ಲದಿದ್ದಾಗ ಅಸಮಾನತೆ ತಾರತಮ್ಯಗಳು ಇದ್ದರೂ ಎಂಥದೋ ನೆಮ್ಮದಿಯಾದರೂ ಇರುತ್ತಿತ್ತು. ಈಗ ಎಚ್ಚರದೊಡನೆ ತಾರತಮ್ಮಗಳೂ, ಅಸಮಾನತೆಗಳೂ ಹೆಚ್ಚುತ್ತಿದ್ದುವೆಂದರೆ ಕ್ಷೆಭೆಯೂ ಉಲ್ಬಣಗೊಳುತ್ತ ಒಟ್ಟಿನಲ್ಲಿ ನೆಮ್ಮದಿ ಕೆಟ್ಟಿದೆ, ಬಿಡುಗಡೆ ಹೇಗೆ?

– ಯಾಕೆಂದರೆ ಸಮಾನತೆ ಕನಸನ್ನು ಸಾಕ್ಷಾತ್ಕರಿಸಬೇಕಾಗ ನಮ್ಮ ಸೈದ್ಧಾಂತಿಕ ನಾಯಕರು ಅವರೇ ತುಳಿತಕ್ಕೊಳಗಾಗಿದ್ದಾರೆ. ಇವರೂ ಒಟ್ಟಾಗುತ್ತಿಲ್ಲ. ಹೀಗಿರುವಾಗ ತುಳಿತಕ್ಕೊಳಗಾದ ಜನತೆ ಒಟ್ಟಾಗುವುದೆಲ್ಲಿ ಬಂತು? ಒಂದೊಂದು ಸೈದ್ಧಾಂತಿಕತೆಯೂ ತನ್ನದೇ ಶತ್ರುಗಳನ್ನು ಗುರುತಿಸಿಕೊಂಡು ಆ ಶತ್ರುಗಳಿಗೆ ತಕ್ಕಂತೆ ತಮ್ಮ ಪ್ರತ್ಯೇಕತೆ ಆಚರಿಸುತ್ತಿವೆ. ಮಡಿ, ಶತೃತ್ವ ಅಭ್ಯಾಸವಾಗಿಬಿಟ್ಟರೆ, ಕಾಲಾನುಕ್ರಮದಲ್ಲಿ ಜಡತೆ ಆವರಿಸಿಕೊಂಡಾಗ ಅವರು ಗುರುತಿಸಿಕೊಂಡಿದ್ದ ಶತ್ರು, ಮರೆತುಹೋಗಿ ಅವರ ಅಕ್ಕಪಕ್ಕದವರೇ ಶತ್ರುಗಳಾಗಿಬಿಡಬಹುದು.

– ಇದರೊಡನೆ ಖಾಸಗಿ ಬಂಡವಾಳದ ಕೃಪಾಪೋಷಿತ ಎನ್.ಜಿ.ಒಗಳು ಜನಪರ ಶಕ್ತಿಗಳಿಗಿಂತಲೂ ಹೆಚ್ಚು ಜನಪರವಾಗಿ ಮಾತನಾಡುತ್ತ ಜನಪರ ಆಂದೋಲನಗಳಿಗೆ ತೊಡರುಗಾಲು ಹಾಕುತ್ತಿವೆ. ಜೊತೆಗೆ ಸಮಾನತೆ ಆಶಯದ ದಲಿತ, ಮಹಿಳೆ, ಪರಿಸರ, ರೈತ, ಇಂಥ ಸಂಘಟನೆಗಳು, ಪಕ್ಷಗಳು ತಂತಮ್ಮ ಐಡೆಂಟಿಟಿ ರಾಜಕಾರಣವನ್ನೆ ಆನೆಕಾಲುರೋಗದಂತೆ ದೊಡ್ಡದು ಮಾಡಿಕೊಂಡು ಸಮಾನತೆಯನ್ನು ಮರೆತು ತೆವಳುತ್ತಿವೆ. ಇದುವರೆಗಿನ ಭೂಮಿ ಮೇಲಿನ ಶೋಷಣೆಯ ಇತಿಹಾಸದಲ್ಲಿ ಪ್ರಕೃತಿ ನಾಳೆಗೂ ಉಳಿಯುತ್ತಿತ್ತು. ಇಂದಿನ ಜಾಗತಿಕರಣ, ಖಾಸಗಿಕರಣದ ದಾಹದಲ್ಲಿ ನಾಳೆಗೆ ಪ್ರಕೃತಿ ಏನೂ ಉಳಿಯುವುದಿಲ್ಲವೇ ಎಂಬಷ್ಟು ವೇಗವಾಗಿ ಧ್ವಂಸೀಕರಣ ನಡೆಯುತ್ತಿದೆ.

– ಇತ್ತೀಚೆಗೆ, ‘ಗ್ರಾಮ ಸ್ವರಾಜ್, ಗಾಂಧಿ ಮತ್ತು ಅಂಬೇಡ್ಕರ್ – ಒಂದು ಅನುಸಂಧಾನ’ ಎಂಬ ಚರ್ಚೆ ನಡೆಯಿತು. ನಾನು ಆ ಸಂಘಟಕರಿಗೆ ‘ಏನು ಜಗಳವನ್ನು ಸರಸ ಮಾಡಬೇಕು ಅಂತಿದ್ದೀರಾ ಹೇಗೆ?’ ಎಂದು ತಮಾಷೆ ಮಾಡಿದೆ. ಈ ಇಬ್ಬರ ನಡುವೆ ಇಂದು ಜಗಳ ನಡೆಯುತ್ತಿದೆ. ಅದು ತೀವ್ರವಾಗೂ ಇದೆ. ಇದರ ಅರ್ಥ ಈ ಇಬ್ಬರೂ ಇನ್ನೂ ಸತ್ತಿಲ್ಲ ಅಂತಲೇ ಅರ್ಥ. ಇಂದೂ ಅವರು ಹೆಚ್ಚು ಜೀವಂತವಾಗಿದ್ದಾರೆ ಅಂತಲೂ ಅರ್ಥ. ನಾವು ಈ ಇಬ್ಬರ ಸಮಕಾಲೀನರಾದರೆ ಜಗಳ ಅನಿವಾರ್ಯ,..ಆದರೆ ಸಮಗ್ರವಾಗಿ ನೋಡಿದರೆ ಅವರಿಬ್ಬರ ನಡುವೆ ಸರಸ ಆಗಲೂಬಹುದು. ಅವರಲ್ಲಿ ಯಾರು ಗಂಡು, ಯಾರು ಹೆಣ್ಣು ನಿರ್ಧರಿಸಲು ಅವರವರ ಭಾವಕ್ಕೆ ಬಿಡುವೆ. ಯಾಕೆಂದರೆ ‘ಅಂಬೇಡ್ಕರ್ ತಾರತಮ್ಯಕ್ಕೆ ಒಳಗಾಗಿ ಮುನಿಸಿಕೊಂಡು ಹೊರಗೆ ಇರುವ ಮಗ’ ಎಂದು ನಾನು ಹೇಳಿದ್ದರಲ್ಲಿ ಮಗ ಎಂದರೆ ಹಕ್ಕಿರುವ ವಾರಸುದಾರ ಔಟ್‌ಕಾಸ್ಟ್ ಆಗಿದ್ದಾನೆ ಎಂಬರ್ಥದಲ್ಲಿ ಗ್ರಹಿಸದೆ ಕೆಲವರು ಪದಶಃ ಅರ್ಥ ಅರ್ಥಮಾಡಿಕೊಂಡರು. ಅದಕ್ಕಾಗಿ ಅವರವರ ಭಾವಕ್ಕೆ ಬಿಡುವೆ.

ನಾವು ಗಾಂಧಿಯವರ ಸಮಕಾಲೀನರಾಗಿ ನೋಡಿದರೆ ಗಾಂಧಿಯವರ 1921-22 ಇಸವಿ ಅಭಿಪ್ರಾಯಗಳನ್ನು –

  • ಹಿಂದೂ ಧರ್ಮ ಜಾತಿ ಪದ್ಧತಿಯ ಆಧಾರದ ಮೇಲೆ ಸ್ಥಾಪಿತ
  • ಸ್ವರಾಜ್ಯದ ಬೀಜಗಳು ಜಾತಿಪದ್ಧತಿಯಲ್ಲಿದೆ
  • ಸಮಾಜ ನಿಯಂತ್ರಣಕ್ಕೆ ಮತ್ತೊಂದು ಹೆಸರೇ ಜಾತಿ
  • ಸಮಾಜ ನಿಯಂತ್ರಣಕ್ಕೆ ಮತ್ತೊಮದು ಹೆಸರೇ ಜಾತಿ
  • ರಾಷ್ಟ್ರೀಯ ಐಕ್ಯತೆಗೆ ಸಹಭೋಜನ, ಅಂತರ್ಜಾತಿ ವಿವಾಹಗಳ ಅಗತ್ಯವಿಲ್ಲ
  • ಜಾತಿ ಪದ್ಧತಿ ಬಿಡುವುದೆಂದರೆ ಹಿಂದೂಗಳು ವಂಶಪಾರಂಪರ್ಯ ಉದ್ಯೋಗ ಕಳೆದುಕೊಂಡಂತೆ
  • ಜಾತಿ ಪದ್ಧತಿ ಸಮಾಜವೊಂದರ ಸ್ವಾಭಾವಿಕ ಶ್ರೇಣೀಕರಣ
  • ಜಾತಿ ಪದ್ಧತಿ ನಾಶ ಪಡಿಸಲು ಯತ್ನಿಸುವ ಯಾರದೇ ಪ್ರಯತ್ನಕ್ಕೂ ನನ್ನ ವಿರೋಧವಿದೆ
  • ಇತ್ಯಾದಿ..ಇತ್ಯಾದಿಗಳು.

ಮೇಲಿನ 1920 ರ ಆಜುಬಾಜಿನ ಗಾಂಧಿ ಆಲೋಚನೆಗಳನ್ನು ನಾವು ಆ ಕಾಲಮಾನದಲ್ಲಿದ್ದರೆ ವಿರೋಧಿಸಬೇಕಾಗುತ್ತದೆ, ಪ್ರತಿಭಟಿಸಬೇಕಾಗುತ್ತೆ. ಅಂಬೇಡ್ಕರ್ ಅವರಷ್ಟೇ ಉಗ್ರವಾಗಿ. ಆದರೆ ಆ ಕರ್ಮಠ ಸನಾತನಿ ಗಾಂಧಿ ಅಲ್ಲೇ ಉಳಿಯುವುದಿಲ್ಲ. ದಿನದಿನವೂ ಸತ್ತು ದಿನದಿನವೂ ಹುಟ್ಟುತ್ತಾನೆ. 1928 ರ ಹೊತ್ತಿಗೆ ಒಂದೇ ವರ್ಣದ ಉಪಜಾತಿಗಳ ಜೊತೆ ಅಂತರ್ಜಾತಿ ವಿವಾಹವಾಗುವುದನ್ನು ಪ್ರೋತ್ಸಾಹಿಸುವ ಗಾಂಧಿ ಒಂದೊಂದೇ ಹೆಜ್ಜೆ ಇಡುತ್ತ 1946 ರ ಹೊತ್ತಿಗೆ ಸವರ್ಣ ಹಿಂದು ಮತ್ತು ಹರಿಜನರ ನಡುವೆ ನಡೆಯುವ ಅಂತರ್‌ಜಾತಿ ವಿವಾಹಗಳಿಗೆ ಮಾತ್ರವೆ ತಾವು ಹೋಗುವುದಾಗಿ ನೇಮ ಮಾಡಿಕೊಳ್ಳುತ್ತಾರೆ. ವಧು ವರರಲ್ಲೊಬ್ಬರು ಹರಿಜನರಲ್ಲದ ಪಕ್ಷದಲ್ಲಿ ಸೇವಾಗ್ರಾಮದಲ್ಲಿ ಮದುವೆಯಾಗುವ ಅವಕಾಶವನ್ನು ನಿರಾಕರಿಸುತ್ತಾರೆ. ನಾವು ಅಸ್ಪೃಶ್ಯತೆಯನ್ನು ನಿರ್ಮೂಲ ಮಾಡಬೇಕೆಂದರೆ ಜಾತಿಯು ಹೋಗಲೇಬೇಕು ಎಂಬಲ್ಲಿಗೆ ಬಂದು ನಿಲ್ಲುತ್ತಾರೆ. 1946 ರ ಗಾಂಧಿ ಆಲೋಚನೆಗಳು 1920ರಲ್ಲಿಯೇ ಕಾಣಿಸಿಕೊಂಡಿದ್ದರೆ ಏನಾಗುತ್ತಿತ್ತು? ಭಾರತದ ಜಾತಿ ಧರ್ಮಗಳು ಆ ಗಾಂಧಿಯನ್ನು ನುಂಗಿ ನೊಣೆದು ಬಿಡುತ್ತಿದ್ದವು. ಈ ಗಾಂಧಿಯೇ ಇರುತ್ತಿರಲಿಲ್ಲ!

– ಅಷ್ಟೊಂದು ಬೆಳವಣಿಗೆ ಒಂದೇ ಜೀವಿತದಲ್ಲಿ ಆಗುವ ಗಾಂಧಿ ವೃತ್ತಿ ಬಗ್ಗೆ ಮಾತ್ರ ಕೌಶಲ್ಯದ ಕಾರಣವಾಗಿ ವಂಶವೃತ್ತಿಯನ್ನು ಹೇಳುತ್ತಿದ್ದುದನ್ನು ಕೊನೆವರೆಗೂ ಉಳಿಸಿಕೊಂಡರೇ ಹೇಗೋ ನನಗೆ ಗೊತ್ತಿಲ್ಲ. ಇಲ್ಲಿ ಜೀವನ ನಿರ್ವಹಣೆಗಾಗುವಷ್ಟು ಮಾತ್ರ ವೇತನ ಎಂ ಆಶಯ ಉಳಿಸಿಕೊಳ್ಳಬೇಕಾಗುತ್ತದೆ. ಆದರೆ ವಂಶವೃತ್ತಿ ಕೌಶಲ್ಯ ಯಾಂತ್ರಿಕತೆ ತಂದುಕೊಟ್ಟರೆ ವಂಶವೃತ್ತಿ ಬದಲಾವಣೆಯೂ, ವೃತ್ತಿಗಳಿಗೇನೆ ಸೃಷ್ಟ್ಯಾತ್ಮಕತೆ ತಂದುಕೊಡುತ್ತದೆ ಎಂಬುದನ್ನು ಸದಾ ಮುನ್ನಡೆಯುವ ಗಾಂಧಿಗೆ ಮನದಟ್ಟು ಮಾಡಬೇಕಾಗಿದೆ. ಅಥವಾ 1946 ರಲ್ಲಿ ವರ್ಗರಹಿತವಾದ, ಜಾತಿರಹಿತವಾದ ಇಂಡಿಯಾ ನಿರ್ಮಿಸಲು ತಾನು ಪ್ರಯತ್ನಿಸುತ್ತಿರುವುದಾಗಿ ಗಾಂಧಿ ಹೇಳುತ್ತ ಒಂದೇ ಜಾತಿಯು ಉಳಿದಿರುವಂಥ ಮತ್ತು ಬ್ರಾಹ್ಮಣರು ಹರಿಜನರನ್ನು ಮದುವೆಯಾಗುವಂತಹ ದಿನಕ್ಕಾಗಿ ಗಾಂಧಿ ಹಂಬಲಿಸುತ್ತ ಗಾಂಧಿ ಒಂದು ನುಡಿ ನುಡಿಯುತ್ತಾರೆ: ‘ಅಸಮಾನತೆಯಿಂದ ಹಿಂಸೆಯು ಹುಟ್ಟಿಕೊಳ್ಳುತ್ತದೆ ಮತ್ತು ಸಮಾನತೆಯಿಂದ ಅಹಿಂಸೆಯು ಹುಟ್ಟಿಕೊಳ್ಳುತ್ತೆ’ ಎಂದು ಅಹಿಂಸೆ ಮತ್ತು ಸಮಾನತೆಯನ್ನು ಒಂದೇ ನಾಣ್ಯ ಮಾಡುತ್ತಾರೆ. ತನ್ನ ದರ್ಶನದ ಅಚಿತಿಮ ಸ್ಥಿತಿಯಲ್ಲಿ “ಸ್ಟೇಟ್ ವಿದರ್ ಅವೆ” ಮಹಾವಾಕ್ಯ ನೀಡಿದ ಮಾರ್ಕ್ಸನ ಸಮಸಮವಾಗಿದೆ.

– ಇಂದು ಸಾವಿರಾರು ಅಸಮಾನತೆಗಳು ಭೂಮಿ ಮೇಲೆ ಬಲೆ ಹಾಕಿವೆ. ಎಷ್ಟು ಅಸಮಾನತೆಗಳು ಇವೆಯೋ ಅಷ್ಟೇ ಸಂಖ್ಯೆಗಳಲ್ಲಿ ಹಿಂಸೆಗಳೂ ಕತ್ತು ಹಿಸುಕುತ್ತಿವೆ. ಮುಖಾಮುಖಿಯಾಗುವುದು ಹೇಗೆ?

– ನನ್ನ ಗೆಳೆಯ ಡಿ.ಆರ್. ನಾಗರಾಜರ ಒಂದು ಒಗಟಿನಂತಹ ನುಡಿಗಟ್ಟಲ್ಲಿ ಒಂದು ನಿಧಿ ಇರಬಹುದೇನೋ ಎಂಬಂತೆ ಭಾಸವಾಗುತ್ತದೆ. ಡಿ.ಆರ್ ತಮ್ಮ ಲೇಖನವೊಂದರಲ್ಲಿ “ಹಳ್ಳಿಯ ಜೀವಂತ ಸಂದರ್ಭದೊಳಗೆ ಅಂಬೇಡ್ಕರ್‌ವಾದಿಯಾಗಿ ಹಾಗೂ ಅದರ ಹೊರಗೆ ಗಾಂಧಿವಾದಿಯಾಗಿ ಕಂಡರೆ ಅದು ಅಧಿಕೃತವಾದದ್ದು” ಅನ್ನುತ್ತಾರೆ. ಈ ಬೀಜವಾಕ್ಯದಿಂದ ನಾವು ಬೆಳೆ ತೆಗೆಯಬೇಕಾಗಿದೆ.

ಕೊನೆಗೂ ಅನುಮೋದನೆಗೊಂಡ ಲೋಕಪಾಲ್ ಮಸೂದೆ…


– ರವಿ ಕೃಷ್ಣಾರೆಡ್ಡಿ


 

ಕೊನೆಗೂ ನಮ್ಮ ಸಂಸದರು ಲೋಕಪಾಲ್ ಮಸೂದೆಯನ್ನು ಅನುಮೋದಿಸಿಯೇಬಿಟ್ಟರು. ಮೂರ್ನಾಲ್ಕು ದಶಕಗಳಿಂದ ಮರೀಚಿಕೆಯಾಗಿದ್ದ ಈ ಮಸೂದೆ ಕಳೆದ ಐದಾರು ದಿನಗಳಲ್ಲಿ ಪಡೆದುಕೊಂಡ ವೇಗ ನೋಡಿ ದಂಗಾಗದೆ ಹೋದವರು ವಿರಳ. ಹಾಲಿ ಲೋಕಸಭೆ ಮತ್ತು ರಾಜ್ಯಸಭೆಯ “ಗೌರವಾನ್ವಿತ”, “ಅರ್ಹ”, “ಜವಾಬ್ದಾರಿಯುತ” ಸಂಸದರಿಗೆ ಇಂತಹ ಪ್ರಮುಖ ಮಸೂದೆಯನ್ನು parliamentಗಂಭೀರವಾಗಿ ಚರ್ಚಿಸಿ ಅದನ್ನು ಅನುಮೋದನೆ ಮಾಡುವ ಪರಿಸ್ಥಿತಿ ಉದ್ಭವಿಸಿದ್ದು ಸ್ವಯಂಸ್ಫೂರ್ತಿಯಿಂದ ಮತ್ತು ಕರ್ತವ್ಯಪ್ರಜ್ಞೆಯಿಂದೇನಲ್ಲ. ಸಂಸತ್ತಿನ ಹೊರಗೆ ನಡೆದ ಘಟನೆಯೊಂದರ ಮೂಲಕವಾಗಿ. ಒಂದು ಸಣ್ಣ ರಾಜ್ಯದ ಚುನಾವಣೆಯಿಂದಾಗಿಯೇ ಇದು ಸಾಧ್ಯವಾಗಿದ್ದು ಎನ್ನುವ ಅಂಶ ನಮ್ಮ ಸಂಸದರ ಕರ್ತವ್ಯಪ್ರಜ್ಞೆ ಮತ್ತು ಯೋಗ್ಯತೆಯನ್ನು ಅಳೆಯುವಂತಾಗಿದ್ದು ದುರಂತ.

ಈಗಿನ ಲೋಕಪಾಲ್ ಎಷ್ಟು ಸಶಕ್ತ ಎನ್ನುವ ಅಂಶವನ್ನು ಹೊರಗಿಟ್ಟು ನೋಡಿದರೆ, ಇದು ನಿಜಕ್ಕೂ ಸ್ವಾಗತಾರ್ಹ ಬೆಳವಣಿಗೆ. ಯಾವುದೇ ಮಸೂದೆಗಾಗಲಿ ತಿದ್ದುಪಡಿಗೊಳಗಾಗುವ ಅವಕಾಶ ಇದ್ದೇ ಇರುತ್ತದೆ. ಇದು ಸಾಕಷ್ಟು ಬಲಿಷ್ಟವಲ್ಲ ಎಂತಾದರೆ ಮತ್ತೆ ಅದಕ್ಕೆ ಜನ ಒತ್ತಡ ತಂದೇ ತರುತ್ತಾರೆ. ಆ ಆಶಾವಾದ ಮತ್ತು ಕ್ರಿಯಾಶೀಲತೆಯಲ್ಲಿ ನಾವು ಇದನ್ನು ಗಮನಿಸಬೇಕಿದೆ. ಅದನ್ನು ಬಲಿಷ್ಟಗೊಳಿಸುವ ಹೋರಾಟವನ್ನು ಆಮ್ ಆದ್ಮಿ ಪಕ್ಷ ಮುಂದುವರೆಸುವ ಎಲ್ಲಾ ಲಕ್ಷಣಗಳೂ ಇವೆ.

ಈ ಲೋಕಪಾಲ್ ಮಸೂದೆ ಅನುಮೋದನೆಗೊಂಡದ್ದರ ಶ್ರೇಯಸ್ಸು ಸಂಸದರಿಗಿಂತ ಹೆಚ್ಚಾಗಿ ಹೊರಗಿನವರಿಗೇ ಸಲ್ಲಬೇಕು. ಅಣ್ಣಾ ಹಜಾರೆ ಮತ್ತು ಅವರೊಡನೆ ಸೇರಿಕೊಂಡು “ಭ್ರಷ್ಟಾಚಾರ ವಿರುದ್ಧ ಭಾರತ” ಆಂದೋಳನ ರೂಪಿಸಿದ ಅವರೆಲ್ಲ ಸಹವರ್ತಿಗಳು, ದೇಶದಾದ್ಯಂತ ಅವರ ಕರೆಗೆ ಓಗೊಟ್ಟು ಆ ಚಳವಳಿಯಲ್ಲಿ ಪಾಲ್ಗೊಂಡ ಉಪವಾಸ ಸತ್ಯಾಗ್ರಹಿಗಳು, anna-kejriwalಕಾರ್ಯಕರ್ತರು, ಬೆಂಬಲಿಗರು, ಅರವಿಂದ್ ಕೇಜ್ರಿವಾಲ್ ಮತ್ತವರ ಆಮ್ ಆದ್ಮಿ ಪಕ್ಷ, ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸಿದ ದೆಹಲಿಯ ಮತದಾರರು. ಲೋಕಪಾಲ್ ಮಸೂದೆ ಇಂದಲ್ಲ ನಾಳೆ–ಅದು ಯಾವುದೇ ರೂಪದಲ್ಲಾಗಲಿ–ಬಂದೇ ಬರುತ್ತಿತ್ತು. ಆದರೆ ಅದು ಇಂದೇ ಅನುಮೋದನೆಗೊಳ್ಳಲು ಕಾರಣ ದೆಹಲಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಓಟು ಹಾಕಿದ ಮತದಾರ. ಬಹುಮುಖ್ಯವಾಗಿ ಅಭಿನಂದಿಸಬೇಕಿರುವುದು ಅವರನ್ನು.

ಈ ಲೋಕಪಾಲ್ ಮಸೂದೆ ಜಾರಿಗೆ ಬಂದ ತಕ್ಷಣ ಈ ದೇಶದಲ್ಲಿ ಭ್ರಷ್ಟಾಚಾರ ನಿಂತೇ ಬಿಡುತ್ತದೆ ಎಂಬ ಭ್ರಮೆ ಯಾರಿಗೂ ಇಲ್ಲ. ಆದರೆ ಉನ್ನತ ಮಟ್ಟದಲ್ಲಿಯ ಭ್ರಷ್ಟಾಚಾರವನ್ನು ತಡೆಯುವಲ್ಲಿ ಸಹಕಾರಿಯಾಗಿರುತ್ತದೆ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಡುವವರಿಗೆ ಇಲ್ಲಿಯವರೆಗೂ ಇಲ್ಲದಿದ್ದಂತಹ ಕಾನೂನಿನ ಮತ್ತು ಸಂವಿಧಾನಿಕ ಸಂಸ್ಥೆಯೊಂದರ ಬೆಂಬಲ ಇನ್ನು ಮುಂದಕ್ಕೆ ಇರುತ್ತದೆ ಎನ್ನುವುದು ಪರಿಗಣಿಸಬೇಕಾದ ಅಂಶ. ರಾಜಕೀಯ ಭ್ರಷ್ಟಾಚಾರಕ್ಕೊಂದಕ್ಕೆ ಮುಕ್ತಿ ಸಿಕ್ಕಿದರೆ ಸಾಲದು. ಒಟ್ಟಾರೆ ಸಮಾಜದಲ್ಲಿಯ arvind-kejriwal-campaigningನೈತಿಕ ಮೌಲ್ಯಗಳ ಪ್ರಜ್ಞೆ ಎತ್ತರಕ್ಕೇರಿದರೆ ಮಾತ್ರ ಇಲ್ಲಿ ಭ್ರಷ್ಟಾಚಾರ ತೀವ್ರಗತಿಯಲ್ಲಿ ಕಡಿಮೆಯಾಗುತ್ತದೆ. ನಮ್ಮ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ನಾಯಕರ ಮುಂದಿರುವ ಬಹುದೊಡ್ಡ ಸವಾಲು ಅದು.

ದೇಶದಲ್ಲಿಯ ಇಂದಿನ ರಾಜಕೀಯ ಸಂಚಲನ ಉತ್ತಮವಾದ, ನೈತಿಕವಾದ, ಜವಾಬ್ದಾರಿಯುತವಾದ ಪ್ರಜಾಪ್ರಭುತ್ವವೊಂದನ್ನು ಕಟ್ಟಿಕೊಳ್ಳುವ ಅವಕಾಶವನ್ನು ನಮಗೆ ಕಲ್ಪಿಸುತ್ತಿದೆ. ಸಮಾಜಕ್ಕಾಗಿ, ಈ ದೇಶದ ಪ್ರಜೆಗಳಿಗಾಗಿ, ನಮ್ಮ ವರ್ತಮಾನದ ಮತ್ತು ಮುಂದಿನ ತಲೆಮಾರುಗಳಿಗಾಗಿ ನಾವು ರಾಜಕೀಯ ಮಾಡಬೇಕಿದೆ ಎಂದು ಭಾವಿಸುವವರು ಮುನ್ನೆಲೆಗೆ ಬರಲು, ಕಾರ್ಯಪ್ರವೃತ್ತರಾಗಲು ಇದು ಪ್ರಶಸ್ತವಾದ ಸಮಯ. ಕಳೆದ ಮೂರು-ನಾಲ್ಕು ದಶಕಗಳಲ್ಲಿ ಕಂಡಂತಹ ಜನಪ್ರತಿನಿಧಿಗಳಿಗಿಂತ ಉತ್ತಮರಾದ, ಯೋಗ್ಯರಾದ, ಪ್ರಾಮಾಣಿಕರಾದ ಜನಪ್ರತಿನಿಧಿಗಳನ್ನು ನಾವು ಮುಂದಿನ ಐದಾರು ವರ್ಷಗಳಲ್ಲಿಯೇ ಕಾಣುತ್ತೇವೆ ಎನ್ನುವ ವಿಶ್ವಾಸ ನನ್ನದು.

ಆದರೆ, ಇದೇ ಸಮಯದಲ್ಲಿ ಅನೇಕ ತೋಳಗಳು ಕುರಿವೇಷ ತೊಟ್ಟು ಜನರ ಮುಂದೆ ಬರಲು ಸನ್ನದ್ಧರಾಗುತ್ತಿದ್ದಾರೆ.india ಇವರನ್ನು ಗುರುತಿಸಲು ಮತ್ತು ಅಂತಹವರನ್ನು ನಿರಾಕರಿಸಲು ಜನರೂ ಪ್ರಯತ್ನಿಸಬೇಕು. ದೇಶದ ಬಗ್ಗೆ ಕಾಳಜಿ ಇರುವ ನನ್ನ ಯುವಮಿತ್ರರಲ್ಲಿ ಒಂದು ಮನವಿ: ನೀವು ಇಷ್ಟೂ ದಿನ ನೋಡಿದ್ದಕ್ಕಿಂತ ಬೇರೆಯದೇ ರಾಜಕಾರಣವನ್ನು ಈ ದೇಶದಲ್ಲಿ ನೀವು ಇನ್ನು ಮುಂದಕ್ಕೆ ನೋಡಲಿದ್ದೀರಿ. ಅದು ಗೌರವಾನ್ವಿತವಾದದ್ದೂ ಆಗಿರಲಿದೆ. ಮತ್ತು ನೀವು ಯೋಗ್ಯರಾಗಿದ್ದಲ್ಲಿ ಮತ್ತು ಪ್ರಾಮಾಣಿಕರಾಗಿದ್ದಲ್ಲಿ ರಾಜಕೀಯ ಮತ್ತು ಚುನಾವಣೆಗಳು ಸುಲಭವೂ ಆಗಲಿದೆ. ನಿಮ್ಮ ಆಶಯಗಳಿಗೆ ಸ್ಪಂದಿಸುವ, ಸಂಕುಚಿತತೆಯನ್ನೇ ತಮ್ಮ ಬಂಡವಾಳವಾಗಿಟ್ಟುಕೊಂಡಿಲ್ಲದ, ಪ್ರಜಾಸತ್ತೆಯಲ್ಲಿ ಪ್ರಶ್ನಾತೀತ ವಿಶ್ವಾಸ ಹೊಂದಿರುವ, ಸಾರ್ವಕಾಲಿಕ ಮೌಲ್ಯಗಳನ್ನು ಗೌರವಿಸುವಂತಹ, ಆಂತರಿಕ ಪ್ರಜಾಪ್ರಭುತ್ವ ಹೊಂದಿರುವಂತಹ, ಈ ದೇಶದ ಬಹುತ್ವವನ್ನು ಮತ್ತು ಪರಂಪರೆಯನ್ನು ಒಪ್ಪಿಕೊಳ್ಳುವಂತಹ, ಭಾರತ ದೇಶದ ಸಂವಿಧಾನಕ್ಕೆ ನಿಷ್ಟವಾಗಿರುವಂತಹ, ಮತ್ತು ನಿಮ್ಮ ಮನಸ್ಸಿಗೆ ಒಪ್ಪುವಂತಹ ಯಾವುದಾದರೂ ಒಂದು ಪಕ್ಷದಲ್ಲಿ ಗುರುತಿಸಿಕೊಳ್ಳಲು ಆರಂಭಿಸಿ. ಕೆಲಸ ಮಾಡಿ. ಈ ದೇಶಕ್ಕೆ ಲಕ್ಷಾಂತರ ಜನಪ್ರತಿನಿಧಿಗಳ ಮತ್ತು ರಾಜಕೀಯ ನಾಯಕರ ಅಗತ್ಯ ಇದೆ. ಉತ್ತಮ ಜನಪ್ರತಿನಿಧಿಗಳಲ್ಲಿ ನೀವೂ ಒಬ್ಬರಾಗಲು ಪ್ರಯತ್ನಿಸಿ. ಆ ದಿಸೆಯಲ್ಲಿ ನಡೆಯುವ ಮೂಲಕ ನೀವೂ ಬೆಳೆಯುತ್ತೀರಿ, ದೇಶವೂ ವಿಕಾಸವಾಗುತ್ತದೆ.