Monthly Archives: December 2013

ವಿಧಾನಸಭೆಯಲ್ಲಿ ಕೊಳೆತು ನಾರುತ್ತಿರುವ ಶಾಸಕರು…


– ರವಿ ಕೃಷ್ಣಾರೆಡ್ಡಿ


 

ಕಳೆದ ಹತ್ತಿಪ್ಪತ್ತು ವರ್ಷಗಳಿಂದ ಅನರ್ಹರನ್ನು ಮತ್ತು ಅಯೋಗ್ಯರನ್ನೇ ಹೆಚ್ಚಿಗೆ ಶಾಸನಸಭೆಗೆ ಕಳುಹಿಸಿದ ದೌರ್ಭಾಗ್ಯಕ್ಕೆ ಕರ್ನಾಟಕ ಈಡಾಗಿದೆ. ಇದಕ್ಕೆ ನಮ್ಮ ರಾಜ್ಯದ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಆಯಾಮಗಳನ್ನು ವಿಶ್ಲೇಷಿಸಬೇಕೆ ಹೊರತು ಅದಕ್ಕೆ ಅಲ್ಲಿ ವಿಧಾನಸಭೆ ಮತ್ತು ವಿಧಾನಪರಿಷತ್ತಿನಲ್ಲಿರುವ ಶಾಸಕರನ್ನೇ ಸಂಪೂರ್ಣವಾಗಿ ಹೊಣೆ ಮಾಡಲಾಗದು. ಅದರೂ ನಾವು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮತ್ತು ಶಾಸಕರ ಕಾರ್ಯವೈಖರಿ ಉತ್ತಮಗೊಳಿಸಲು ಅವರನ್ನೇ ಹೊಣೆಗಾರರನ್ನಾಗಿ ಮಾಡಿಕೊಂಡು ಟೀಕಿಸಬೇಕಿದೆ.

ರಾಜ್ಯದ ಆಡಳಿತದಲ್ಲಿನ ಸ್ವಚ್ಚಂದ ಭ್ರಷ್ಟಾಚಾರಕ್ಕೆ ಕಾರಣ ಸರ್ಕಾರಿ ಅಧಿಕಾರಿಗಳು. ಸಚಿವರ ಮತ್ತು ಶಾಸಕರ ಭ್ರಷ್ಟಾಚಾರವನ್ನು ಬದಿಗಿಟ್ಟು ನೋಡಿದರೆ, ದಿನನಿತ್ಯದ ಭ್ರಷ್ಟಾಚಾರ ಮತ್ತು ಅದ್ವಾನದ ಆಡಳಿತದಲ್ಲಿ ನೇರ ಪಾತ್ರಧಾರಿಗಳು ಅಧಿಕಾರಿಗಳೇ. ಈ ಅಧಿಕಾರಿಗಳು “ಭ್ರಷ್ಟಾಚಾರ ಮಾಡಲೇಬೇಕು, ಲಂಚ ತೆಗೆದುಕೊಳ್ಳಲೇಬೇಕು, ಕೆಳಗಿನ ಅಧಿಕಾರಿಗಳಿಂದ ಮಾಮೂಲು ಪಡೆಯಲೇಬೇಕು” kpsc-krishna-bangalore-metroಎನ್ನುವ ಸ್ಥಿತಿಗೆ ತಾವು ಕೆಲಸಕ್ಕೆ ಸೇರಿದ ಮೊದಲ ದಿನದಿಂದಲೇ ಬಂದಿದ್ದರೆ ಅದಕ್ಕೆ ಮುಖ್ಯ ಕಾರಣ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ). ಈ ಕೆಪಿಎಸ್‌ಸಿ ಎನ್ನುವ ಪರಮ ಭ್ರಷ್ಟಾಚಾರಿ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರು ಮತ್ತು ಅಲ್ಲಿಯ ನೌಕರರ ಹೀನ ಮತ್ತು ಅನೈತಿಕ ಕೃತ್ಯಗಳು ಕಳೆದ ಐದು-ಹತ್ತು ವರ್ಷಗಳಿಂದ ರಾಜ್ಯದ ವಿವಿಧ ಮಾಧ್ಯಮಗಳಲ್ಲಿ ಪ್ರಸ್ತಾಪವಾಗುತ್ತಲೇ ಇದೆ. ಈ ಆಯೋಗದ ಅಧ್ಯಕ್ಷರಾಗಿದ್ದ ಎಚ್.ಎನ್.ಕೃಷ್ಣ ಎನ್ನುವವರು ತಮ್ಮ ಅಧಿಕಾರಾವಧಿಯಲ್ಲಿ ನಡೆದ ಭ್ರಷ್ಟಾಚಾರದ ಆರೋಪದ ಮೇಲೆ ವಿಚಾರಣಾಧೀನ ಖೈದಿಯಾಗಿ ಪರಪ್ಪನ ಅಗ್ರಹಾರದ ಬಂಧೀಖಾನೆಯಲ್ಲಿ ಕೆಲವು ತಿಂಗಳುಗಳು ಇದ್ದರು, ಆದರೆ, ಅವರ ನಂತರ ಅಧ್ಯಕ್ಷರಾಗಿ ಬಂದ ಭೀಮಪ್ಪ ಗೋನಾಳ ಎಂಬ ಪರಮಭ್ರಷ್ಟರಿಗೆ ತಮ್ಮ ಹಿಂದಿನವರ ರೀತಿಯೇ ತಾನೂ ಮಾಡಿದರೆ ತಾನೂ ಖೈದಿಯಾಗಬೇಕಾಗಬಹುದು ಎಂಬ ಸಣ್ಣ ಭಯವೂ ಇದ್ದಂತಿರಲಿಲ್ಲ. ಅವರು ತಮ್ಮ ಅಧಿಕಾರದ ಕೊನೆಯ ದಿನಗಳ ತನಕವೂ ಹೀನಾತಿಹೀನ ಕೃತ್ಯಗಳಲ್ಲೇ ತೊಡಗಿಕೊಂಡಿದ್ದದ್ದು ಸಿಐಡಿ ತನಿಖೆಯ ವರದಿಯಲ್ಲಿ ದಾಖಲಾಗಿದೆ. ನಮ್ಮ ರಾಜ್ಯದಲ್ಲಿ ನ್ಯಾಯವ್ಯವಸ್ಥೆ ತನ್ನ ಪಾಲಿನ ಕೆಲಸದಲ್ಲಿ ಕಾಲು ಭಾಗದಷ್ಟನ್ನಾದರೂ ಮಾಡಿದರೆ Gonal-Bheemappa-kpsc-chairmanಗೋನಾಳ್ ಭೀಮಪ್ಪ ಮತ್ತವರ ಸಹಚರರು ತಾವು ಅರಿತಿದ್ದೂ ಮಾಡಿದ ತಪ್ಪಿಗೆ ಜೈಲು ಶಿಕ್ಷೆ ಅನುಭವಿಸುವುದರಲ್ಲಿ ಸಂಶಯವಿಲ್ಲ. ರಾಜ್ಯದ ಸಾವಿರಾರು, ಲಕ್ಷಾಂತರ ಯುವಜನರ ನೈತಿಕ ಮೌಲ್ಯಗಳನ್ನು ಹಾಳುಮಾಡಿದ ಮತ್ತು ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಾಗುವಂತೆ ಮಾಡಿದ ಪಾಪ ಈ ಆಯೋಗದ ಅಧ್ಯಕ್ಷರ ಮತ್ತು ಸದಸ್ಯರ ಮೇಲಿದೆ.

ನಮ್ಮ ವರ್ತಮಾನ.ಕಾಮ್‌ನಲ್ಲಿಯೂ ಕೆಪಿಎಸ್‌ಸಿಯ ಹಗರಣಗಳ ಬಗ್ಗೆ ಕೆಲವು ಲೇಖನಗಳು ಪ್ರಕಟವಾಗಿವೆ. ಇವು ಕೆಪಿಎಸ್‌ಸಿಯ ಹೀನಚರಿತ್ರೆಯನ್ನು ನಿಮಗೆ ಸ್ಪಷ್ಟ ಮಾಡುತ್ತವೆ:

ಈಗ ವಿಧಾನಸಭಾ ಅಧಿವೇಶನ ನಡೆಯುತ್ತಿದೆ. ಇತ್ತೀಚೆಗೆ ಲೀಕ್ ಆಗಿರುವ ಸಿಐಡಿ ತನಿಖೆಯ ವರದಿಯ ಆಧಾರದ ಮೇಲೆ ಪ್ರಜಾವಾಣಿಯಲ್ಲಿ ಪತ್ರಕರ್ತ ರವೀಂದ್ರ ಭಟ್ಟರು ಬರೆಯುತ್ತಿರುವ ಲೇಖನ ಸರಣಿ ನವೆಂಬರ್ 28, 2013 ರಿಂದ ಬರುತ್ತಿದೆ. ಕೆಲವು ವರದಿಗಳು ಮುಖಪುಟದಲ್ಲೂ ಪ್ರಕಟವಾಗಿವೆ. ಏಳೆಂಟು ದಿನಗಳಿಂದ ಪ್ರಕಟವಾಗುತ್ತಿರುವ ಈ ಲೇಖನಗಳಲ್ಲಿ ಯಾವೊಂದನ್ನೂ ನಮ್ಮ ಶಾಸಕರು ಗಮನಿಸಿಲ್ಲವೇ? belgaum vidhanasoudhaರಾಜ್ಯದಲ್ಲಿ ಇಂದು ಸಚಿವರಲ್ಲದ ಸುಮಾರು 195+ ವಿಧಾನಸಭಾ ಸದಸ್ಯ ಶಾಸಕರು ಮತ್ತು ಸುಮಾರು 70+ ವಿಧಾನಪರಿಷತ್ ಸದಸ್ಯ ಶಾಸಕರಿದ್ದಾರೆ. ಇಂದು ಚಳಿಗಾಲದ ಅಧಿವೇಶನದ ಕೊನೆಯ ದಿನದ ಹಿಂದಿನ ದಿನ. ಈಗಿನವರೆಗೂ ಆ ವಿಷಯ ಪ್ರಸ್ತಾಪವಾಗಿಲ್ಲ. ನಾಳೆ ಎಲ್ಲರೂ ಬೀಳ್ಕೊಳ್ಳುವ ಆತುರದಲ್ಲಿರುತ್ತಾರೆ. ನಾಳೆಯೂ ಅದು ಪ್ರಸ್ತಾಪವಾಗುವುದಿಲ್ಲ. ರಾಜ್ಯದ ಆಡಳಿತ ಮತ್ತು ನೈತಿಕತೆಯನ್ನು ಎತ್ತಿಹಿಡಿಯುವ ವಿಚಾರಕ್ಕೆ ಸಂಬಂಧಿಸಿದಂತೆ ಬಹಳ ಪ್ರಮುಖವಾದ ಈ ಗಂಭೀರ ವಿಷಯವನ್ನು 270+ ಶಾಸಕರಲ್ಲಿ ಯಾರೊಬ್ಬರೂ ಎತ್ತಿಲ್ಲ ಎನ್ನುವುದು ನಮ್ಮ ಶಾಸನಸಭೆಯ ಸದಸ್ಯರ ಅರ್ಹತೆ ಮತ್ತು ಕಾಳಜಿಯನ್ನು ತೋರಿಸುತ್ತದೆ. ಸರಳವಾಗಿ ಹೇಳಬೇಕೆಂದರೆ, ಈ ಕೆಪಿಎಸ್‌ಸಿಯ ದುರಾಚಾರದ ಫಲಾನುಭವಿಗಳು ಎಲ್ಲಾ ಪಕ್ಷಗಳಲ್ಲಿ ಇರುವುದೇ ಇಲ್ಲಿಯ ಸಮಸ್ಯೆಯ ಮೂಲ. ಆದರೆ ಫಲಾನುಭವಿಗಳಲ್ಲದ ಶಾಸಕರು ಈ ವಿಚಾರವನ್ನು ಎತ್ತದಂತೆ ಇರುವ ತಡೆಗಳಾದರೂ ಏನು? ಪಟ್ಟಭದ್ರ ಹಿತಾಸಕ್ತಿಗಳು ಅದಕ್ಕೆ ಅವಕಾಶ ಮಾಡಿಕೊಡುವುದಿಲ್ಲ.

ಇನ್ನು, ಮಸೂದೆಗಳ ಮಂಡನೆಯ ವಿಚಾರ. ಹಿಂದಿನ ಬಿಜೆಪಿ ಸರ್ಕಾರ ಒಂದೇ ದಿನದಲ್ಲಿ ಹತ್ತು-ಹದಿನೈದು ಮಸೂದೆಗಳನ್ನು ಮಂಡಿಸಿ ಯಾವೊಂದು ಚರ್ಚೆಯೂ ಇಲ್ಲದೆ ವಿರೋಧಪಕ್ಷಗಳ ಅನುಪಸ್ಥಿತಿಯಲ್ಲಿ (ಪಾಪ ಅವರಿಗೂ ಚರ್ಚೆ ಮಾಡುವಷ್ಟು ತಾಳ್ಮೆ ಮತ್ತು ತಿಳಿವಳಿಕೆ ಇರುತ್ತಿರಲಿಲ್ಲ) ಸದನದ ಅನುಮೋದನೆ ಪಡೆದುಕೊಳ್ಳುತ್ತಿತ್ತು. ಅಂತಹ ಹೀನ, ಅಪ್ರಜಾಸತ್ತಾತ್ಮಕ ಪರಂಪರೆಯನ್ನು Karnataka-assembly-sessionಇಂದಿನ ಕಾಂಗ್ರೆಸ್ ಸರ್ಕಾರವೂ ಮುಂದುವರೆಸುತ್ತಿದೆ. ನೆನ್ನೆ ಸರ್ಕಾರ ಸದನದಲ್ಲಿ ಅನೇಕ ಮಸೂದೆಗಳನ್ನು ಮಂಡಿಸಲು ಪ್ರಯತ್ನಿಸಿದೆ. ಒಂದಷ್ಟು ಶಾಸಕರು ಮಾತ್ರ ಪೂರ್ವಸಿದ್ಧತೆ ಅಥವ ಕಾಮನ್-ಸೆನ್ಸ್‌ನಿಂದ ಮಾತಾಡಿರುವ ವಿಚಾರಗಳು ವರದಿಯಾಗಿವೆ. ಬಹುತೇಕರದು ಮಾಮೂಲಿ ತಂತ್ರಗಾರಿಕೆ: ವಿರೋಧಪಕ್ಷದಲ್ಲಿರುವ ಕಾರಣಕ್ಕೆ ವಿರೋಧ ಮತ್ತು ಆಡಳಿತ ಪಕ್ಷಕ್ಕೆ ಸೇರಿರುವುದರಿಂದ ಬೆಂಬಲ. ಇನ್ನು ವಿರೋಧ ಪಕ್ಷದ ನಾಯಕರಾದ ಕುಮಾರಸ್ವಾಮಿಯವರ ಮಾತು ನೋಡಿ: “ಮಸೂದೆಗಳನ್ನು ಮಂಡಿಸದೇ ಹೋದರೆ ದೇಶ ಮುಳುಗಿ ಹೋಗೋದಿಲ್ಲ. ಮಸೂದೆ ಮಂಡನೆಯನ್ನು ಮುಂದೂಡಿ ಕೃಷ್ಣಾ ನ್ಯಾಯ ಮಂಡಳಿ ತೀರ್ಪಿನ ಚರ್ಚೆಗೆ ಅವಕಾಶ ನೀಡಬೇಕು.” ಕೃಷ್ಣಾ ನದಿನೀರು ಹಂಚಿಕೆಯ ವಿಷಯವೂ ಮುಖ್ಯವೇ. ಆದರೆ ಮಸೂದೆಗಳ ಬಗ್ಗೆ ಚರ್ಚೆ ಬೇಡ, ಕೃಷ್ಣಾದಷ್ಟೇ ಚರ್ಚೆಯಾಗಲಿ ಎನ್ನುವುದರಲ್ಲಿ ರಾಜಕೀಯ ಹಿತಾಸಕ್ತಿ ಮತ್ತು ಬೇಜವಾಬ್ದಾರಿತನವಿದೆಯೇ ಹೊರತು ಬೇರೇನಲ್ಲ. ಮಸೂದೆಗಳ ಬಗ್ಗೆ ಚರ್ಚೆ ಮಾಡಬೇಕಾದರೆ ಸಿದ್ಧತೆ ಮಾಡಿಕೊಳ್ಳಬೇಕು. ಮೆದುಳಿಗೆ ಕೆಲಸ ಕೊಡಬೇಕು. ಅದು ನಮ್ಮ ಶಾಸಕರಿಗೆ ಪರಮಹಿಂಸೆಯ ಕೆಲಸ. ಆದರೆ ಕೃಷ್ಣಾ ನದಿಯ ಬಗ್ಗೆ ರೋಷಾವೇಷದಿಂದ ಭಾವನಾತ್ಮಕವಾಗಿ ಮಾತಾಡಿದರೆ ಸಾಕು.

ಮತ್ತು ಸದನದಲ್ಲಿ ಮಸೂದೆಗಳು ವಿಸ್ತೃತವಾಗಿ ಚರ್ಚೆಯಾಗದೆ ಅನುಮೋದನೆಯಾಗಿ ಬಿಡುವುದು ಆ ಸದನದ ಸ್ಪೀಕರ್‌ರ ಕುರಿತು ಒಳ್ಳೆಯ ಅಭಿಪ್ರಾಯ ಮೂಡಿಸುವುದಿಲ್ಲ. ಹಿಂದಿನ ಶಾಸನಸಭೆಯ ಸ್ಪೀಕರ್ ಬಗ್ಗೆ ಇಡೀ ರಾಜ್ಯದ ಜನತೆ ಯಾವೊಂದು ಭರವಸೆಯನ್ನೂ ಇಟ್ಟುಕೊಂಡಿರಲಿಲ್ಲ. ಸ್ಪೀಕರ್‌ಗೆ ಬೇಕಾದ ನಿಷ್ಪಕ್ಷಪಾತತನ ಮತ್ತು ಸ್ವತಂತ್ರ್ಯ ಆಲೋಚನೆ-ನಡವಳಿಕೆ ಇಲ್ಲದ ವ್ಯಕ್ತಿಯಾಗಿದ್ದು, ಸ್ಪೀಕರ್ ಹುದ್ದೆಯ ಘನತೆಯನ್ನು ಕಳೆದವರು ಕೆ.ಜಿ.ಬೋಪಯ್ಯ. ಬಿಜೆಪಿ ಸರ್ಕಾರ ಉಳಿಸಲು ಕೆಲವು ಶಾಸಕರನ್ನು ಕಾನೂನುಬಾಹಿರವಾಗಿ ಅನರ್ಹಗೊಳಿಸಿದ ವಿಚಾರದಲ್ಲಿ ಸುಪ್ರೀಮ್‌ಕೋರ್ಟ್‌ನಿಂದ ಛೀಮಾರಿ ಮಾಡಿಸಿಕೊಂಡವರವರು. ಕೆಲವು ಶಾಸಕರು ರಾಜೀನಾಮೆ ಕೊಡಲು ಬಂದಾಗ ನಾಪತ್ತೆ ಪ್ರಕರಣ ಸೃಷ್ಟಿಸಿಕೊಂಡು ನಗೆಪಾಟಲಾದವರು.  bhopayyaಯಾವುದೇ ಪ್ರಜಾಪ್ರಭುತ್ವವನ್ನು ಗೌರವಿಸುವ ಪಕ್ಷ  ಇಂತಹ ವ್ಯಕ್ತಿಯನ್ನು ಪಕ್ಷದಿಂದ ಉಚ್ಚಾಟಿಸಬೇಕಿತ್ತು. ಆದರೆ ಅಂತಹ ಪ್ರಬುದ್ಧ ಪ್ರಜಾಪ್ರಭುತ್ವದ ಸಂದರ್ಭ ನಮ್ಮ ದೇಶದಲ್ಲಿ ಇನ್ನೂ ಉದಯಿಸಿಲ್ಲ. ಆದರೆ ಈಗಿನ ಸಭಾಧ್ಯಕ್ಷರಾದ ಕಾಗೋಡು ತಿಮ್ಮಪ್ಪನವರ ಬಗ್ಗೆ ಒಂದಷ್ಟು ಸದಭಿಪ್ರಾಯ ಮತ್ತು ಆಶಾವಾದ ಇದೆ. ಹಿರಿಯ ಸಂಸದೀಯಪಟು ಅವರು. ಅವರು ಮಸೂದೆಗಳ ಮಂಡನೆಯ ವಿಚಾರಕ್ಕೆ ಸರ್ಕಾರಕ್ಕೆ ನೇರ ನಿರ್ದೇಶನ ಕೊಡಬೇಕು, ಯಾವುದೇ ಕಾರಣಕ್ಕೂ ಅಧಿವೇಶನದ ಕೊನೆಯ ಒಂದೆರಡು ದಿನಗಳಲ್ಲಿ ಮಸೂದೆಗಳ ಮಂಡನೆಗೆ ಅವಕಾಶ ಕೊಡಬಾರದು, ಮತ್ತು ಪ್ರತಿಮಸೂದೆಯನ್ನೂ ವಿಸ್ತೃತ ಚರ್ಚೆಯ ನಂತರವೇ ಮತಕ್ಕೆ ಹಾಕಬೇಕು. ಹಾಗೆಯೇ, ಪ್ರತಿಯೊಂದು ಮಸೂದೆಗೂ ಯಾವ ಶಾಸಕ ಪರ ಹಾಕಿದ್ದಾನೆ, ವಿರುದ್ಧ ಹಾಕಿದ್ದಾನೆ, ಮತ್ತು ಮತಚಲಾಯಿಸದೆ ಗೈರುಹಾಜರಾಗಿದ್ದಾನೆ ಎನ್ನುವುದು ದಾಖಲಾಗಬೇಕು. ಈ ರಾಜ್ಯದ ಸಂಸದೀಯ ವ್ಯವಸ್ಥೆಯ ಘನತೆಯನ್ನು ಎತ್ತಿಹಿಡಿಯುವ ವಿಚಾರಕ್ಕೆ ರಾಜ್ಯದ ಪ್ರಜ್ಞಾವಂತ ಜನತೆ ಕಾಗೋಡು ತಿಮ್ಮಪ್ಪನವರತ್ತ ನೋಡುತ್ತಿದೆ.

ಇದೇ ಸಂದರ್ಭದಲ್ಲಿ ಮಾಜಿ ಸ್ಪೀಕರ್ ರಮೇಶ್‌ಕುಮಾರರ ನಡವಳಿಕೆಯನ್ನೂ ನಾವು ವಿಮರ್ಶಿಸಬೇಕಿದೆ. rameshkumarರಾಜ್ಯದ ಅಧಿಕಾರರೂಢರ ಭ್ರಷ್ಟಾಚಾರದ ವಿರುದ್ಧ ಸತತವಾಗಿ ಹೋರಾಟ ಮಾಡಿಕೊಂಡು ಬರುತ್ತಿರುವ ಎಸ್.ಆರ್.ಹಿರೇಮಠರ ವಿರುದ್ಧ ಸದನದಲ್ಲಿ ಇವರು ಹಕ್ಕುಚ್ಯುತಿ ಮಂಡಿಸಿದ್ದಾರೆ. ತಮ್ಮ ಮೇಲೆ ಬಂದಿರುವ ವೈಯಕ್ತಿಕ ಆರೋಪಗಳನ್ನು ರಮೇಶ್‌ಕುಮಾರರು ಎದುರಿಸಬೇಕಿರುವುದು ಸದನದ ಹೊರಗಡೆ, ಒಳಗಲ್ಲ. ಶಾಸಕರ ಹಕ್ಕುಗಳ ಮರೆಯಲ್ಲಿ ನಿಂತು ಅವರು ಹೋರಾಡಬಾರದು. ಸದನದ ಮತ್ತು ಶಾಸಕಾಂಗದ ಸಮಯವನ್ನು ತಮ್ಮ ವೈಯಕ್ತಿಕ ವಿಚಾರಕ್ಕೆ ಬಳಸಿಕೊಳ್ಳಬಾರದು ಎಂಬ ವಿವೇಚನೆಯನ್ನು ಆವರು ಕಳೆದುಕೊಂಡಂತಿದೆ. ಚಿಕ್ಕವಯಸ್ಸಿಗೇ ಸ್ಪೀಕರ್ ಅಂತಹ ಉನ್ನತ ಜವಾಬ್ದಾರಿ ಹೊತ್ತು ಅದನ್ನು ಅತ್ಯುತ್ತಮವಾಗಿ ನಿರ್ವಹಿಸಿ ರಾಜ್ಯದ ಜನರ ಪ್ರೀತಿ ಮತ್ತು ವಿಶ್ವಾಸಗಳನ್ನು ಪಡೆದಿದ್ದ ರಮೇಶ್‌ಕುಮಾರರು ಶಾಸಕರಾಗಿ ಬಹಳ ಕೆಟ್ಟ ರೀತಿಯಲ್ಲಿ ಸೋಲುತ್ತಿದ್ದಾರೆ. ಬಹುಶಃ ಅವರಿಗೆ ಒಳ್ಳೆಯ ಸ್ನೇಹಿತರ ಅವಶ್ಯಕತೆ ಇದೆಯೇ ಹೊರತು ಶಾಸಕರ ಹಕ್ಕಿನ ಅವಶ್ಯಕತೆಯಲ್ಲ.

ನಮ್ಮ ಶಾಸಕರು ತಮ್ಮ ನೈಜ ಮತ್ತು ಮೂಲಭೂತ ಜವಾಬ್ದಾರಿಗಳನ್ನು ಬಿಟ್ಟು ಮಿಕ್ಕೆಲ್ಲವನ್ನೂ ಮಾಡುತ್ತಿದ್ದಾರೆ. ಹಸು ಮೇಯಿಸುವ ಕೆಲಸಕ್ಕೆ ನೇಮಿಸಿದರೆ ಅವನು ಹಸುಗಳನ್ನು ಮರೆತು ಅಲೆಮಾರಿ ಕತ್ತೆಗಳ ಹಿಂದೆ ಹೊರಟಂತೆ ಇದು. ಸದನದಲ್ಲಿ ತಪ್ಪದೇ ಪಾಲ್ಗೊಳ್ಳುವುದು, ಜವಾಬ್ದಾರಿಯಿಂದ ವಿಷಯಗಳನ್ನು ಪ್ರಸ್ತಾಪಿಸುವುದು, ಚರ್ಚಿಸುವುದು, ಸರ್ಕಾರ ಮಂಡಿಸುವ ಪ್ರತಿಯೊಂದು ಮಸೂದೆಯ ಸಾಧಕಬಾಧಕಗಳ ಚರ್ಚೆ ಮಾಡುವುದು, ಪರ ಅಥವ ವಿರುದ್ಧವಾಗಿ ಮತ ಹಾಕುವುದು, ಅತ್ಯವಶ್ಯಕವಾದ ಯಾವುದಾದರೂ ಮಸೂದೆಯನ್ನು ಸರ್ಕಾರ ಮಂಡಿಸಲು ಹಿಂದೇಟು ಹಾಕುತ್ತಿದ್ದಾರೆ ತಾವೇ ಒಂದು ಮಸೂದೆ ರಚಿಸಿ ಖಾಸಗಿ ಮಸೂದೆಯಾಗಿ ಅದನ್ನು ಮಂಡಿಸುವುದು, assembly-speaker-kagoduಹೀಗೆ ಶಾಸಕರು ಮಾಡಬೇಕಾದ ಮೂಲಭೂತ ಕರ್ತವ್ಯಗಳನ್ನು ಬಿಟ್ಟು ನಮ್ಮ ಬಹುತೇಕ ಶಾಸಕರು ಕರ್ತವ್ಯಲೋಪದಲ್ಲಿ ತೊಡಗಿದ್ದಾರೆ. ಅವರು ಚುನಾವಣೆಯಲ್ಲಿ ಗೆದ್ದುಬಂದು ಶಾಸಕರಾಗಿದ್ದಾರೆ. ಆದರೆ ಶಾಸಕನಾಗಿ ಮುಂದುವರೆಯಲು ಬೇಕಾದ ನೈಜ ಅರ್ಹತೆಯನ್ನು ಗಳಿಸುವ ಮತ್ತು ಉಳಿಸಿಕೊಳ್ಳುವ ಕೆಲಸದಲ್ಲಿ ಅವರು ಜನಪ್ರತಿನಿಧಿಯಾಗಿರುವ ತನಕವೂ ಮಾಡಬೇಕಾಗಿರುತ್ತದೆ. ಇದನ್ನು ಅವರು ಅರಿಯಬೇಕಾಗುತ್ತದೆ ಅಥವ ಸ್ಪೀಕರ್ ಆದವರು ಪಾಠ ಮಾಡಬೇಕಿರುತ್ತದೆ. ಇಲ್ಲವಾದಲ್ಲಿ ಈ ಸದಸ್ಯರು ಕೊಳೆತು ನಾರುತ್ತಾರೆ. ಅದು ರಾಜ್ಯದ ಮತ್ತು ಪ್ರಜಾಪ್ರಭುತ್ವದ ಹಿತದೃಷ್ಟಿಯಿಂದ ಒಳ್ಳೆಯದಲ್ಲ.

ಮುಸ್ಲಿಂ ಮೂಲಭೂತವಾದವನ್ನು ಖಂಡಿಸೋಣ, ಜೊತೆಗೆ ಮುಸ್ಲಿಂ ಸಮುದಾಯದ ತಲ್ಲಣವನ್ನು ಅರ್ಥೈಸೋಣ

– ಆಸೀಫ್ ಅಸನ್, ಬೆಂಗಳೂರು

ಕೆಲ ದಿನಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಪಂಜಿಮೊಗೆರು ಎಂಬ ಗ್ರಾಮದ ನಿವಾಸಿ ಆಯೆಷಾ ಭಾನು ಹಾಗೂ ಆಕೆಯ ಪತಿ ಜುಬೈರ್ ಎಂಬುವವರನ್ನು ಬಿಹಾರ ಪೊಲೀಸರು ಬಂಧಿಸಿದ್ದರು. ಮರುದಿನ ರಾಜ್ಯದ ಪ್ರಮುಖ ಮಾಧ್ಯಮಗಳಲ್ಲಿ ಬಿಹಾರದ ಪಾಟ್ನಾದಲ್ಲಿ ಮೋದಿಯ “ಹೂಂಕಾರ್ ರ್‍ಯಾಲಿ”ಯಲ್ಲಿ ನಡೆದ ಬಾಂಬ್ ಸ್ಟೋಟಕ್ಕೆ ಸಂಬಂಧಿಸಿದಂತ್ತೆ ಮಂಗಳೂರಿನಲ್ಲಿ ಮಹಿಳೆಯೊಬ್ಬಳನ್ನು ಬಂಧಿಸಲಾಗಿದೆ ಎಂಬ ಸುದ್ದಿ ವಿವಿಧ ಆಯಾಮಗಳನ್ನು ಪಡೆದು ಮಾಧ್ಯಮಗಳಿಗೆ ಆಹಾರವಾಯಿತು. ಆಯೆಷಾಳನ್ನು “ಲೇಡಿ ಟೆರರಿಸ್ಟ್” ಎಂದು ಕೆಲವರು ಬಿಂಬಿಸಿದರು, ಇನ್ನು ಕೆಲವರು ಆಯೆಷಾ ಮೋದಿ ಹತ್ಯೆಗೆ ಸ್ಕೆಚ್ ರೂಪಿಸಿದ್ದಳು ಎಂಬ ಅರ್ಥದಲ್ಲೇ ವಿಶೇಷ ವರದಿಗಳನ್ನು ಪುಂಕಾನುಪುಂಕವಾಗಿ ಪ್ರಕಟಿಸತೊಡಗಿದರು. ನೈಜ್ಯವಾಗಿ ಮಾಧ್ಯಮಗಳಲ್ಲಿ ಪ್ರಕಟವಾದಂತಹಾ ಶೇ 90 ರಷ್ಟು ಸುದ್ದಿಗಳು ಊಹೆಗಳಿಂದ ಕೂಡಿದ್ದವು. ಬಿಹಾರದ ಲಕೆಶರಾಯಿ Aysha-Banuಪೊಲೀಸ್ ಠಾಣೆಯ ಅಧಿಕಾರಿಗಳ ಹೇಳಿಕೆಗಳಿಂದ ಇದೆಲ್ಲಾ ಸ್ಪಷ್ಟಗೊಳ್ಳುತ್ತದೆ. ಆಯೆಷಾ ಹಾಗೂ ಜುಬೈರ್ ದಂಪತಿ ಮಾಡುತ್ತಿದ್ದದ್ದು ಹವಾಲ ವ್ಯಾಪಾರ. ಕಾನೂನುಬಾಹಿರವಾಗಿ ತೆರಿಗೆ ವಂಚಿಸಿ ನಡೆಸುವಂತಹಾ ಈ ವ್ಯವಹಾರದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ದೇಶಾದ್ಯಂತ ಇದರ ಜಾಲ ವಿಸ್ತರಿಸಿದೆ. ವಿದೇಶದಲ್ಲಿರುವವರು ಸರ್ಕಾರಕ್ಕೆ ತೆರಿಗೆ ವಂಚಿಸಿ ಹುಂಡಿ ಮೂಲಕ ವ್ಯವಹಾರ ನಡೆಸಿ ಊರಲ್ಲಿರುವ ಸಂಬಂಧಿಕರಿಗೆ ಹಣವನ್ನು ತಲುಪಿಸುತ್ತಾರೆ. ಇದಕ್ಕಾಗಿ ಹುಂಡಿ ವ್ಯವಹಾರಸ್ಥರಲ್ಲಿ ಸಾಕಷ್ಟು ಸಂಖ್ಯೆಯ ಏಜಂಟ್‌ಗಳಿರುತ್ತಾರೆ. ಅಂಥಹದ್ದೇ ಏಜಂಟ್‌ಗಳಲ್ಲಿ ಒಬ್ಬ ಜುಬೈರ್ ಹಾಗೂ ನಂತರದ ದಿನಗಳಲ್ಲಿ ಬಂಧಿತವಾದ ಆಸೀಫ್ ಹಾಗೂ ಮುಸ್ತಾಕ್. ಪೊಲೀಸರೇ ನೀಡುವ ಮಾಹಿತಿ ಪ್ರಕಾರ ಪಾಟ್ನಾ ಸ್ಟೋಟಕ್ಕೂ ಬಂಧಿತರಿಗೂ ಯಾವುದೇ ಲಿಂಕ್ ಇರುವುದು ಇದುವರೆಗೂ ಸಾಬೀತಾಗಿಲ್ಲ. ಅವರ ಬಂಧನವಾಗಿರುವುದು ಅಕ್ರಮ ಹವಾಲ ಜಾಲಕ್ಕೆ ಸಂಬಂಧಿಸಿದಂತೆ ಎಂಬುವುದನ್ನು ಬಿಹಾರದ ಪೊಲೀಸರು ಸ್ಪಷ್ಟಪಡಿಸಿರುತ್ತಾರೆ.

ಆಯೆಷಾ ಜುಬೈರ್ ಒಂದೇ ಪ್ರಕರಣ ಅಲ್ಲ, ಇಂತಹಾ ನೂರಾರು ಪ್ರಕರಣಗಳು ದೇಶಾದ್ಯಂತ ಪ್ರತಿದಿನ ನಡೆಯುತ್ತಲೇ ಇದೆ. ಭಯೋತ್ದಾಧನೆಯ ಆರೋಪದ ಅಡಿಯಲ್ಲಿ ಅದೆಷ್ಟೋ ಮುಗ್ದರು ಜೈಲಲ್ಲಿ ಜೀವನ ಪರ್ಯಂತ ಕೊಳೆಯುವ ಸ್ಥಿತಿಯಲ್ಲಿದ್ದಾರೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಸ್ಟೋಟಗಳು ಹೆಚ್ಚಾಗಿ ಸಂಭವಿಸುತ್ತಿವೆ. ಸ್ಟೋಟದ ಬೆನ್ನಲ್ಲೇ ಅವುಗಳನ್ನು ಮುಸ್ಲಿಂಮರ ತಲೆಗೆ ಕಟ್ಟಿಬಿಡಲಾಗುತ್ತಿದೆ. malegaon_blastಇನ್ನೊಂದೆಡೆ ಮಲೆಗಾಂವ್, ಬುದ್ಧಗಯಾ, ನಾಂದೇಡ್, ಮಕ್ಕಾ ಮಸೀದಿ ಸ್ಟೋಟ ಪ್ರಕರಣಗಳಲ್ಲೂ ಪೊಲೀಸರು ಮುಸ್ಲಿಂಮರ ಸುತ್ತ ತನಿಖೆಯನ್ನು ಕೇಂದ್ರೀಕರಿಸುತ್ತಾರೆಯೆ ಹೊರತು ತನಿಖೆಯ ದಿಕ್ಕನ್ನು ಬದಲಾಯಿಸುತ್ತಿಲ್ಲ. ಹೀಗೆ ತಾನು ಮಾಡದ ತಪ್ಪಿಗೆ ಮಾಧ್ಯಮಗಳಲ್ಲಿ, ಪೊಲೀಸರ ಹಿಟ್‌ಲಿಸ್ಟ್‌ಗಳಲ್ಲಿ ಮುಸ್ಲಿಂಮರು ಡೇಂಜರಸ್ ವ್ಯಕ್ತಿಗಳಾಗಿಯೇ ಬಿಂಬಿತವಾಗುತ್ತಿದ್ದಾರೆ. ಇನ್ನೊಂದೆಡೆಯಲ್ಲಿ ಸಂಘಪರಿವಾರ ಮುಸ್ಲಿಂ ಸಮುದಾಯವನ್ನು ತಮ್ಮ ಮೊದಲ ಟಾರ್ಗೆಟ್ ಮಾಡಿ ವ್ಯವಸ್ಥಿತವಾಗಿ ಹಂತಹಂತವಾಗಿ ಅಲ್ಪಸಂಖ್ಯಾತರ ಸಮುದಾಯದ ವಿರುದ್ಧ ಪಿತೂರಿ ನಡೆಸುತ್ತಾ ಬಂದಿದೆ. ಮುಸ್ಲಿಂ ಸಮುದಾಯದ ಮೇಲೆ ನಡೆಯುತ್ತಿರುವ ಹಲ್ಲೆಗಳು, ಆಸ್ತಿಪಾಸ್ತಿ ಧ್ವಂಸ, ಕೋಮು ಗಲಭೆಗಳನ್ನು ಸೃಷ್ಟಿಸಿ ವ್ಯವಸ್ಥಿತ ಮಾರಣ ಹೋಮ ನಡೆಸುತ್ತಾ ಬಂದಿದೆ. ಈ ಎಲ್ಲದರ ಪಾಲೂ ಹೆಚ್ಚುತ್ತಿರುವ ಮುಸ್ಲಿಂ ಕೋಮುವಾದ ಅಥವಾ ಮೂಲಭೂತವಾದದಲ್ಲಿದೆ.

ಸದಾ ಹಿಂಸೆಗೊಳಗಾದ ಸಮಾಜ, ಅಭದ್ರತೆಯಲ್ಲಿ ಜೀವನ ಕಂಡುಕೊಳ್ಳುವ ಸಮುದಾಯ, ಬಹುಸಂಖ್ಯಾತರ ದಬ್ಬಾಳಿಕೆ, ಮತ್ತು ದೌರ್ಜನ್ಯ, ಯಾವುದೇ ದೇಶದಲ್ಲಿರುವ ಅಲ್ಪಸಂಖ್ಯಾತರನ್ನು ಹೆಚ್ಚಾಗಿ ಸಂಘಟಿತರಾಗುವಂತೆ ಮಾಡುತ್ತದೆ. ಅದು ಧಾರ್ಮಿಕ ನೆಲೆಯಲ್ಲಿರಬಹುದು ಅಥವಾ ಸಾಮಾಜಿಕ ನೆಲೆಯಲ್ಲಿರಬಹುದು. ಭಾರತದಲ್ಲಿ ಅಲ್ಪಸಂಖ್ಯಾತರಾಗಿರುವ ಮುಸ್ಲಿಂಮರ ಹಾಗೆಯೇ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ಅಲ್ಪಸಂಖ್ಯಾತ ಹಿಂದೂಗಳದ್ದೂ ಇದೇ ಪರಿಸ್ಥಿತಿ. ಕರ್ನಾಟಕದ ಇತಿಹಾಸವನ್ನೇ ನೋಡೋಣ. ಹಿಂದೂ ಮೂಲಭೂತವಾದ ಸಂಘಪರಿವಾರದ ಮೂಲಕ ಕರ್ನಾಟಕದಲ್ಲಿ ಪ್ರಬಲವಾಗಿ ಬೇರೂರಲು ಸಾಧ್ಯವಾಗಿದ್ದು ಬಾಬರೀ ಮಸೀದಿ ಧ್ವಂಸದ ನಂತರದಲ್ಲಿ. adi-udupi-naked-parade1990 ನಂತರದಲ್ಲಿ ಸಂಘ ಪರಿವಾರದಿಂದ ವ್ಯವಸ್ಥಿತವಾಗಿ ಮುಸ್ಲಿಂಮರ ಹಾಗೂ ಕ್ರೈಸ್ತರ ಮೇಲೆ ಹಲ್ಲೆಗಳು ಅಧಿಕವಾದವು. 1997 ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ಗಲಭೆ. ಆದಿ ಉಡುಪಿ ಬೆತ್ತಲೆ ಪ್ರಕರಣ, ಚರ್ಚ್ ದಾಳಿ, ಹೀಗೆ ಒಂದಲ್ಲಾ ಒಂದು ರೀತಿಯಲ್ಲಿ ಗಲಭೆಗಳನ್ನು ಸೃಷ್ಟಿಸಿ ಅಲ್ಪಸಂಖ್ಯಾತ ಸಮುದಾಯದ ಮೇಲೆ ದಾಳಿಗಳು ನಡೆಯುತ್ತಿದ್ದವು. ಇಂಥಹಾ ದಾಳಿಗಳಲ್ಲಿ ಅಧಿಕ ಪ್ರಮಾಣದಲ್ಲಿ ಹಾನಿಗೊಳಗಾಗುತ್ತಿದ್ದದ್ದು ಮುಸ್ಲಿಂ ಸಮುದಾಯ ಎಂಬುವುದು ಗಮನಾರ್ಹ.

ಸಂಘಪರಿವಾರ ಪ್ರಾಯೋಜಿತ ಕೋಮು ಹಿಂಸಾಚಾರದಲ್ಲಿ ಅನ್ಯಾಯಕ್ಕೆ ಒಳಗಾದ ಮುಸ್ಲಿಂ ಸಮುದಾಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯದ ನಿರೀಕ್ಷೆಯಲ್ಲಿದ್ದರೂ ಅವುಗಳೆಲ್ಲವೂ ಹುಸಿಯಾದವು. ಪರಿಣಾಮ ದೇವರ ಆಸ್ಥಾನದಲ್ಲಿ ನ್ಯಾಯದ ನಿರೀಕ್ಷೆಯನ್ನು ಆ ಸಮುದಾಯ ಇಟ್ಟುಕೊಳ್ಳತೊಡಗಿತು. ಇದುವೇ ಮುಸ್ಲಿಂ ಮೂಲಭೂತವಾದಕ್ಕೆ ಆರಂಭಿಕ ವೇದಿಕೆಯನ್ನು ಕಲ್ಪಿಸಿತು. ಹಿಂದೂ ಮಹಾ ಸಭಾ ಸಂಘಟನೆಗೆ ಪರ್ಯಾಯವಾಗಿ ಮುಸ್ಲಿಂ ಲೀಗ್ ಹುಟ್ಟಿದರೂ ಮುಸ್ಲಿಂ ಸಮುದಾಯದ ಬಹುಜನ ಒಪ್ಪಿತ ಪಕ್ಷವಾಗಿ ಇದು ಮಾರ್ಪಡಲಿಲ್ಲ. ನಂತರದಲ್ಲಿ ಅಂದರೆ 1942 ರಲ್ಲಿ ಅಬೂಲಾಬ್ ಮೊಯ್ದೂದಿ ನೇತ್ರತ್ವದಲ್ಲಿ ’ಜಮಾತೆ ಇಸ್ಲಾಂ ಹಿಂದ್’ ಜನ್ಮ ತಾಳಿತು. ಜಮಾತ್ ಶಿಯಾ ಚಿಂತನೆಗಳನ್ನು ಅಲ್ಪಮಟ್ಟಿಗೆ ಮೈಗೂಡಿಸಿಕೊಂಡಿತ್ತು. ಭಾರತದ ಬಹುಸಂಖ್ಯಾತ ಸಂಪ್ರದಾಯ ಸುನ್ನಿ ಸಮುದಾಯದ ಆಚಾರ ವಿಚಾರಗಳನ್ನು ಜಮಾತ್ ವಿರೋಧಿಸುತ್ತಿತ್ತು. ಮುಸ್ಲಿಂ ಸಮುದಾಯದ ಸಾಮಾಜಿಕ ಹಾಗೂ ಸಮಕಾಲಿನ ಸಮಸ್ಯೆಗಳಿಗೆ ಸ್ಪಂದಿಸುವ ಬದಲಾಗಿ ಜಮಾತ್ ಧಾರ್ಮಿಕ ಜಾಗೃತಿಯತ್ತ ಹೆಚ್ಚು ಗಮನ ನೀಡಿತು. Bodh_Gaya_blastಅಂತಿಮವಾಗಿ ಜಮಾತ್ ಇಸ್ಲಾಂ ರಾಜ್ಯ ಸ್ಥಾಪನೆಯ ಅಜೆಂಡಾವನ್ನು ಇಟ್ಟುಕೊಂಡರೂ ಅದನ್ನು ಸಾಧಿಸಲು ಜಮಾತ್ ಅನುಸರಿಸುತ್ತಿರುವ ದಾರಿ ಆರ್.ಎಸ್.ಎಸ್. ಹಿಂದೂ ರಾಷ್ಟ್ರ ಸ್ಥಾಪನೆಗೆ ಅನುಸರಿಸುತ್ತಿರುವ ದಾರಿಗಿಂತ ಭಿನ್ನ. ಇಷ್ಟಾದರೂ ಜಮಾತ್ ಮುಸ್ಲಿಂಮರ ಸಾಮಾಜಿಕ ನಾಯಕತ್ವವನ್ನು ವಹಿಸಿಕೊಳ್ಳಲು ಸಾಧ್ಯವಾಗಿಲ್ಲ. ಅದೇ ಮಾರ್ಗವನ್ನು ಅಹ್ಲೆ ಹದೀಸ್, ತಬ್ಲೀಗ್ ಜಮಾತ್, ಸಲಫೀ ಧಾರ್ಮಿಕ ಮೂಲಭೂತವಾದಿ ಸಂಘಟನೆಗಳು ಅನುಸರಿಸಿದವು. (ಇವುಗಳ ನಿಲುವುಗಳಲ್ಲಿ ಕೊಂಚ ಭಿನ್ನತೆ ಇದೆಯಾದರೂ ಇಸ್ಲಾಂ ಧರ್ಮವನ್ನು ಜಾಗತಿಕವಾಗಿ ಪಸರಿಸುವ ಮೂಲಕ ಧರ್ಮ ಸ್ಥಾಪನೆ ಇವರ ಮೂಲ ಅಜೆಂಡಾ.) ಈ ಎಲ್ಲಾ ಸಂಘಟನೆಗಳನ್ನು ಮುಸ್ಲಿಂ ಸಮುದಾಯದ ಬಹುಪಾಲು ಜನರು ಸಂಶಯದ ದೃಷ್ಟಿಯಿಂದಲೇ ನೋಡುತ್ತಿದ್ದರು.

ಮುಸ್ಲಿಂ ಸಮುದಾಯದ ಪಾಲಿಗೆ ಇವರೆಲ್ಲಾ ನೂತನವಾದಿಗಳಾಗಿ ಕಂಡರು. ಮುಸ್ಲಿಂಮರ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಮುಸ್ಲಿಂ ಸಮುದಾಯ ಧಾರ್ಮಿಕ ಪ್ರಜ್ಞೆಯಿಂದ ದೂರ ಉಳಿದಿರುವುದೇ ಕಾರಣ ಎನ್ನುವುದೇ ಈ ಎಲ್ಲಾ ಸಂಘಟನೆಗಳ ವಾದದಲ್ಲಿರುವ ಪ್ರಮುಖವಾದ ಅಂಶವಾಗಿತ್ತು. ಇಂಥಹಾ ಸಂಧರ್ಭದಲ್ಲೇ ಹಿಂದುತ್ವ ಮೂಲಭೂತವಾದಿಗಳ ಅಟ್ಟಹಾಸಕ್ಕೆ ಪ್ರತಿಗಾಮಿ ಸಂಘಟನೆಯೊಂದರ ಅವಶ್ಯಕತೆ ಮುಸ್ಲಿಂ PFI-mangaloreಸಮುದಾಯದ ಬಹುತೇಕ ಜನರಲ್ಲಿ ಕಾಣಿಸತೊಡಗಿತು. ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಮುಸ್ಲಿಂ ಸಮುದಾಯವನ್ನು ಕೇವಲ ಓಟ್ ಬ್ಯಾಂಕ್ ಗಳಾಗಿ ಮಾತ್ರ ಬಳಸಿಕೊಳ್ಳುತ್ತಿವೆ, ಇನ್ನು ಎಡಪಂಥೀಯ ಪಕ್ಷಗಳು, ಸಂಘಟನೆಗಳು ಕರ್ನಾಟಕದ ಶೋಷಿತ ಮುಸ್ಲಿಂ ಸಮುದಾಯದ ಪರ ಅಲ್ಪ ಪ್ರಮಾಣದಲ್ಲಿ ಮಾತ್ರ ಧ್ವನಿ ಎತ್ತುತ್ತಿತ್ತು. ಮುಸ್ಲಿಂಮರ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಪ್ರತಿರೋಧ ಒಡ್ಡುವ, ಸಮುದಾಯದ ಜೊತೆ ನಿಂತು ಸಾಮಾಜಿಕವಾಗಿ, ಕಾನೂನಾತ್ಮಕವಾಗಿ, ಪೂರ್ಣ ಪ್ರಮಾಣದ ಪ್ರತಿರೋಧ ಹೋರಾಟ ನಡೆಸುವ ಸಂಘಟನೆಯನ್ನು ಹುಟ್ಟುಹಾಕುವ ಕಲ್ಪನೆ ಹುಟ್ಟಿದ್ದೇ ಇಲ್ಲಿ. ಪರಿಣಾಮ ಉದಯವಾಗಿದ್ದು ಮತ್ತೊಂದು ಮೂಲಭೂತವಾದದ ಪ್ರತಿಗಾಮಿ ಶಕ್ತಿ “ಪಾಪ್ಯುಲರ್ ಪ್ರಂಟ್ ಆಫ್ ಇಂಡಿಯಾ”.

ಪಾಪ್ಯುಲರ್ ಪ್ರಂಟ್ ಆಫ್ ಇಂಡಿಯಾ:

ಪಿಎಫ್‌ಐ ಹುಟ್ಟಿನ ಹಿಂದೆ ಸಾಕಷ್ಟು ಪ್ರಯತ್ನಗಳಿವೆ. ಈ ಸಂಘಟನೆಯ ಮೂಲ ಸಿಮಿ. ಅಂದರೆ ಸ್ಟೂಡೆಂಟ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ. ಒಂದು ಕಾಲದಲ್ಲ ಜಮಾತೆ ಇಸ್ಲಾಮಿ ಹಿಂದ್ ಸಂಘಟನೆಯ ವಿದ್ಯಾರ್ಥಿ ಸಂಘಟನೆಯೇ ಸಿಮಿ. ಪ್ರಪಂಚದ ಇತರ ದೇಶಗಳಲ್ಲಿ ಅಂದರೆ ಬಾಂಗ್ಲಾದೇಶ ಹಾಗೂ ಪಾಕಿಸ್ಥಾನದಲ್ಲಿ ಜಮಾತ್ ಸಂಘಟನೆ ಪ್ರಬಲವಾಗಿದ್ದು ಇಸ್ಲಾಮಿಕ್ ಶರಿಯಾ ಕಾನೂನು ಆಧಾರವಾಗಿಯೇ ದೇಶದ ಕಾನೂನು ವ್ಯವಸ್ಥೆ ಜಾರಿಯಾಗಬೇಕೆಂಬುವುದು ಇವರ ಮೂಲ ಅಜೆಂಡಾ. (ಜಮಾತ್ ಸ್ಥಾಪಕ ಅಬೂಲಾಬ್ ಮೌದೂರಿಯವರ “ಜಿಹಾದ್” ಗ್ರಂಥದಿಂದ ಇದು ಸ್ಪಷ್ಟವಾಗುತ್ತದೆ.) ಆ ಅಜೆಂಡಾವನ್ನು ಹೊಂದಿದ್ದರೂ ಭಾರತದಲ್ಲಿ ಜಮಾತ್ ಇಸ್ಲಾಮಿ ತನ್ನನ್ನು ನೂತನವಾದಿ ಹಾಗೂ ಸೌಮ್ಯವಾದಿ ಸಂಘಟನೆಯನ್ನಾಗಿ ಬಿಂಬಿಸಿಕೊಳ್ಳಲು ಹೊರಟಿದೆ. pfiಆದರೆ ಸಿಮಿ ಸಂಘಟನೆ ಇದಕ್ಕೆ ವಿರುದ್ಧವಾದ ನಿಲುವಿನಲ್ಲಿ ಗುರುತಿಸಿಕೊಳ್ಳತೊಡಗಿತು. ಈ ವಿಚಾರವಾಗಿಯೇ ಜಮಾತ್ ಹಾಗೂ ಸಿಮಿ ನಡುವೆ ಬಿರುಕು ಉಂಟಾಗಿ ಸಿಮಿ ಪ್ರತ್ಯೇಕ ಸಂಘಟನೆಯಾಗಿ ಬೆಳೆಯತೊಡಗಿತು. ಸಿಮಿಯ ಈ ಬೆಳವಣಿಗೆಯನ್ನು ಅಥೈಸಿಕೊಂಡ ಸರ್ಕಾರ ಬಾಬರೀ ಮಸೀದಿ ಧ್ವಂಸದ ನಂತರದಲ್ಲಿ ಈ ಸಂಘಟನೆಯನ್ನು ನಿಷೇಧಿಸಿತು. ಆದ್ರೆ ಅದರ ಫುಲ್ ಟೈಂ ಸದಸ್ಯರು ನಂತರದ ದಿನಗಳಲ್ಲಿ ಗುಪ್ತವಾಗಿಯೇ ಆರ್‌ಎಸ್‌ಎಸ್‌ಗೆ ಪರ್ಯಾಯವಾಗಿ ಪ್ರತಿರೋಧ ಸಂಘಟನೆಯನ್ನು ಹುಟ್ಟುಹಾಕತೊಡಗಿದರು. ಪರಿಣಾಮ ಕೇರಳದಲ್ಲಿ ಎನ್‌ಡಿ‌ಎಫ್, ತಮಿಳು ನಾಡಿನಲ್ಲಿ ಮನಿದ ನೀತಿ ಪಸರೈ, (ಆರಂಭದಲ್ಲಿ ಬೇರೆ ಬೇರೆ ಹೆಸರುಗಳಿಂದ ಈ ಸಂಘಟನೆಗಳು ಗುರುತಿಸಿಕೊಂಡಿದ್ದವು) ಕರ್ನಾಟಕದಲ್ಲಿ ಕೆ‌ಎಫ್‌ಡಿ (ಆರಂಭದಲ್ಲಿ ಎಮ್‌ವೈಎಫ್) ಸಂಘಟನೆಗಳು ಆರಂಭವಾದವು. ತಮ್ಮ ಪ್ರಾರಂಭದ ದಿನಗಳಲ್ಲಿ ಬಹಳ ಗುಪ್ತವಾಗಿ ಇವರು ಸಂಘಟನೆಯನ್ನು ಕಟ್ಟತೊಡಗಿದರು. ವಿದ್ಯಾರ್ಥಿಗಳನ್ನು ಕೇಂದ್ರವಾಗಿಟ್ಟುಕೊಂಡು ಗುಪ್ತ ಮೀಟಿಂಗ್‌ಗಳನ್ನು ಕರೆದು ಅವರನ್ನು ಸಂಘಟನೆಯ ಸದಸ್ಯರನ್ನಾಗಿ ಪರಿವರ್ತಿಸತೊಡಗಿದರು.

ಗುಜರಾತ್ ಗಲಭೆ, ಭಯೋತ್ಪಾದನೆಯ ಆರೋಪದಲ್ಲಿ ಮುಗ್ದ ಯುವಕರನ್ನು ಬಂಧಿಸುವುದು, ಮುಸ್ಲಿಂ ಸಮಾಜದ ಮೇಲೆ ನಡೆಯುತ್ತಿರುವ ಫ್ಯಾಸಿಸ್ಟ್ ದಬ್ಬಾಳಿಕೆ, ಮುಸ್ಲಿಮರ ಆರ್ಥಿಕ-ಶೈಕ್ಷಣಿಕ-ಸಾಮಾಜಿಕ ಪರಿಸ್ಥಿತಿ, ಮುಸ್ಲಿಂ ಯುವಕರಲ್ಲಿರುವ ಅಭದ್ರತೆ, ಆರ್‌ಎಸ್‌ಎಸ್ ಸ್ಥಾಪಿಸ ಹೊರಟಿರುವ ಹಿಂದೂ ರಾಷ್ಟ್ರದ ಪರಿಕಲ್ಪನೆ, ಹಾಗಾದಲ್ಲಿ ಮುಸ್ಲಿಮರ ಪರಿಸ್ಥಿತಿ, ಮುಸ್ಲಿಂ ಸಮಾಜ ಓಟ್‌ಬ್ಯಾಂಕ್ ಆಗಿರುವ ಪಕ್ಷಗಳು ಮುಸ್ಲಿಮರನ್ನು ಬಳಸಿಕೊಳ್ಳುತ್ತಿರುವ ರೀತಿ, ಈ ಎಲ್ಲಾ ವಿಚಾರಗಳನ್ನು ಮುಂದಿಟ್ಟು ಈ ಸಮುದಾಯದ ಪರ ಧ್ವನಿಯೆತ್ತುವ ಸಂಘಟನೆಯ ಅಗತ್ಯ ಎಷ್ಟಿದೆ ಎಂಬುವುದನ್ನು ಮುಸ್ಲಿಂ ಯುವಕರಿಗೆ ಮನದಟ್ಟು ಮಾಡಿಸಿ ಅವರನ್ನು ತಮ್ಮತ್ತ ಸೆಳೆಯತೊಡಗಿದರು. ಇವರ ಪ್ರಯತ್ನ ಫಲ ನೀಡಲು ಪೂರಕವಾದ ವಾತಾವರಣ ಕರ್ನಾಟಕದಲ್ಲಿತ್ತು. 270579-gujarat-riotsಆಗಷ್ಟೇ ಗುಜರಾತ್‌ನಲ್ಲಿ ನಡೆದ ಕೋಮು ಗಲಭೆಯಲ್ಲಿ ಮುಸ್ಲಿಮರ ಮಾರಣ ಹೋಮ, ಕರ್ನಾಟಕದಲ್ಲಿ ಹಿಂದುತ್ವವಾದಿಗಳಿಂದ ಆಗುತ್ತಿದ್ದ ಹಲ್ಲೆಗಳು, ಹಿಂಸಾಚಾರಗಳು, ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿದ್ದ ದಬ್ಬಾಳಿಕೆಗಳು, ಜೊತೆಗೆ ಅಗ್ರೆಸ್ಸಿವ್ ಆಗಿ ಬೆಳೆಯುತ್ತಿರುವ ಹಿಂದುತ್ವ ಪರ ಸಂಘಟನೆಗಳು. ಈ ಎಲ್ಲಾ ವಿಚಾರಗಳು ಸಹಜವಾಗಿ ಮುಸ್ಲಿಂ ಸಮಾಜದಲ್ಲಿ ಅಭದ್ರತೆಗೆ ಕಾರಣವಾಗಿತ್ತು. ಅಲ್ಲದೆ ಕೆಲವೊಂದು ಬಿಸಿರಕ್ತದ ಯುವಕರಿಗೆ ಸಂಘಪರಿವಾರದ ಕ್ರಿಯೆಗೆ ಪ್ರತಿಕ್ರಿಯೆ ನೀಡುವ ಛಲವಿತ್ತು. ಇನ್ನು ಸುಶಿಕ್ಷಿತವಾಗಿಯೂ, ಯಾವುದೇ ಗಲಭೆ, ಜಂಜಾಟಗಳಲ್ಲಿ ತಮ್ಮನ್ನು ಗುರುತಿಸಿಕೊಳ್ಳದೆ ತಾವಾಯಿತು ತಮ್ಮ ಕೆಲಸವಾಯಿತು ಎಂಬಂತಿದ್ದ ಯುವಕರಿಗೂ ಮನಸ್ಸಿನ ಆಳದಲ್ಲಿದ್ದ ನೋವು, ಭಯ ಎಲ್ಲವೂ ಕೆಎಫ್‌ಡಿ ಸಂಘಟನೆಯ ಹುಟ್ಟಿಗೆ ವರದಾನವಾಗಿ ಪರಿಣಮಿಸಿತು. ಮೊದಲೇ ಭಯದಲ್ಲಿದ್ದ ಮುಸ್ಲಿಂ ಸಮಾಜದ ಯುವಕರ ಮನಸ್ಸಿನಲ್ಲಿ ಇನ್ನಷ್ಟು ಭಯ ಆತಂಕವನ್ನು ತುಂಬಿ ಅವರನ್ನು ಸಂಘಟಿಸಿ ಸಂಘಟನೆಯನ್ನು ಬಲಪಡಿಸುವುದು ಕೆ‌ಎಫ್‌ಡಿ ಉದ್ದೇಶವಾಗಿತ್ತು. ಸಂಘಟನೆ ಆರಂಭದಲ್ಲಿ ಸಮಾಜಸೇವೆ, ಮುಸ್ಲಿಂ ಸಮಾಜದಲ್ಲಿದ್ದ ವರದಕ್ಷಿಣೆ ಸೇರಿದಂತೆ ಸಾಮಾಜಿಕ ಕಾರ್ಯದತ್ತ ಗಮನ ಕೇಂದ್ರೀಕರಿಸಿತು. ಜೊತೆಗೆ ಗಾಂಜಾ, ಕುಡಿತದಂತಹ ದುರಭ್ಯಾಸದಿಂದ ಕೂಡಿದ್ದ ಯುವಕರನ್ನು ಅದರಿಂದ ಮುಕ್ತಗೊಳಿಸಿ ಧಾರ್ಮಿಕ ಪ್ರಜ್ಞೆಯನ್ನು ಜಾಗೃತಗೊಳಿಸತೊಡಗಿತು. ಪರಿಣಾಮ ಎಲ್ಲಾ ಮಸೀದಿಗಳಲ್ಲಿ ಬೆಳಗ್ಗಿನ ನಮಾಜ್ ಪ್ರಾರ್ಥನೆಗೆ ಯುವಕರ ಸಂಖ್ಯೆಯೂ ಅಧಿಕವಾಗತೊಡಗಿತು. ಈ ಯುವಕರೆಲ್ಲಾ ಮಸೀದಿ ಕಡೆ ಮುಖ ಮಾಡಲು ಪರೋಕ್ಷ ಕಾರಣ ಹಿಂದೂ ಮೂಲಭೂತವಾದಿಗಳ ಭಯ ಎಂದರೆ ತಪ್ಪಿಲ್ಲ.

ಇನ್ನೂ ಪ್ರಮುಖವಾದ ವಿಷಯವೇನೆಂದರೆ ಕೆ‌ಎಫ್‌ಡಿ ಆರಂಭದಲ್ಲಿ ಬರೀ ಮುಸ್ಲಿಂ ಸಮಾಜದ ಸಮಸ್ಯೆ ಮಾತ್ರ ಅಲ್ಲ, pfi-keralaಶೋಷಿತ ಸಮುದಾಯವಾದ ದಲಿತ ಹಾಗೂ ಕ್ರೈಸ್ತರ ಪರ ಧ್ವನಿ ಎತ್ತುವಂತಹ ಕೆಲವೊಂದು ಕಾರ್ಯಕ್ರಮಗಳನ್ನು ರೂಪಿಸಿತು. ದಲಿತ ಸಂಘಟನೆಗಳೊಂದಿಗೆ ಸೇರಿಕೊಂಡು ಹೋರಾಟ ನಡೆಸತೊಡಗಿತು. ಈ ಸಂದರ್ಭದಲ್ಲೇ ಕೋಮು ಸೌಹಾರ್ದ ವೇದಿಕೆಯಲ್ಲೂ ಹಾಗೂ ಎಡಪಂಥೀಯ ಸಂಘಟನೆಗಳ ಜೊತೆಗೂ ಸಖ್ಯ ಬೆಳೆಸಲು ಪ್ರಯತ್ನಿಸುತ್ತಿತ್ತು. ಸದಸ್ಯರಿಗೆ ತಮ್ಮ ಹೋರಾಟ ಆರ್‌ಎಸ್‌ಎಸ್ ವಿರುದ್ಧವೇ ಹೊರತಾಗಿ ಹಿಂದೂ ಸಮುದಾಯದ ಮೇಲಲ್ಲ ಎಂಬ ನೀತಿ ಪಾಠಗಳನ್ನೂ ಬೋಧಿಸುತ್ತಿತ್ತು. ಆದರೆ ಬರಬರುತ್ತಾ ಪಿಎಫ್‌ಐ ಪ್ರಬಲವಾಗುತ್ತಿದ್ದಂತೆ ತನ್ನ ಅಜೆಂಡಾಗಳಲ್ಲೂ ಬದಲಾವಣೆಯಾಗತೊಡಗಿದವು. ಸದಸ್ಯರ ನಡವಳಿಕೆಗಳಲ್ಲೂ ಬದಲಾವಣೆಯಾಗತೊಡಗಿದವು. ಸಂಘಟನೆಯ ಪ್ರತಿರೋಧಕ ಶಕ್ತಿಯ ಪ್ರದರ್ಶನವಾಗತೊಡಗಿದವು. ಸಂಘಪರಿವಾರದ ದುಷ್ಕೃತ್ಯಗಳನ್ನು ಖಂಡಿಸುತ್ತಿದ್ದ ಸಂಘಟನೆ ಅದೇ ರೀತಿಯ ಭಯದ ವಾತಾವರಣವನ್ನು ತಾನೂ ನಿರ್ಮಿಸತೊಡಗಿತು. vt-prasad-PFI-attackತನ್ನ ಸದಸ್ಯರನ್ನು ಆರ್‌ಎಸ್‌ಎಸ್ ಮಾದರಿಯಲ್ಲಿ ಸೈನಿಕರ ರೀತಿಯಲ್ಲಿ ತರಬೇತುಗೊಳಿಸತೊಡಗಿತು. ಹೀಗೆ ಧಾರ್ಮಿಕವಾಗಿ, ಬೌದ್ಧಿಕವಾಗಿ, ಶಾರೀರಿಕವಾಗಿ ಬಲವಾಗಿರುವ ಒಂದು ಪ್ರತಿರೋಧಕ ಶಕ್ತಿಯಾಗಿರುವ ಒಂದು ಪಡೆಯನ್ನು ನಿರ್ಮಿಸುತ್ತಿದೆ ಪಿ‌ಎಫ್‌ಐ. ಯಾವುದೇ ತ್ಯಾಗ ಬಲಿದಾನಕ್ಕೂ ಸಿದ್ದವಾಗಿರುವ ಒಂದು ಪಡೆಯಾಗುತ್ತಿದೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ. ಇದಕ್ಕೆ ಉದಾಹರಣೆಯಾಗಿ ಸಂಘಪರಿವಾರಕ್ಕೆ ಪ್ರತಿರೋಧವನ್ನು ಕೊಡುವುದರ ಜೊತೆಗೆ ಅಮಾಯಕರ ಮೇಲೂ ಅದು ನಡೆಸಿದಂತಹ ಹಲ್ಲೆಗಳು, ಇತ್ತೀಚಿನ ನೈತಿಕ ಪೊಲೀಸ್ ಗಿರಿ ಸಾಕ್ಷಿಯಾಗಿ ನಮ್ಮ ಮುಂದಿದೆ. ಅಂದು ಕೇವಲ ಶೋಷಣೆಯ ವಿರುದ್ಧದ ಹೋರಾಟಕ್ಕಾಗಿ ಸಂಘಟಿತವಾದ ಸಂಘಟನೆ ಇಂದು ಇಸ್ಲಾಂ ಶರೀಯತ್ ಕಾನೂನು ಜಾರಿಗೂ ಹೋರಾಟ ನಡೆಸುವಂತಹಾ ರೀತಿಯಲ್ಲೇ ಮುಂದುವರಿಯುತ್ತಿದೆ.

ಮುಸ್ಲಿಂ ಮೂಲಭೂತವಾದದ ಹುಟ್ಟು ಮತ್ತು ಎಡಪಂಥೀಯ ಪಕ್ಷಗಳ ಧೋರಣೆ:

“ಮುಸ್ಲಿಮರು ಧಾರ್ಮಿಕ ಭಾವನೆಗಳನ್ನು ಬಿಟ್ಟು ನಮ್ಮ ಪಕ್ಷದಲ್ಲಿ ಸೇರಿ ಜಾತ್ಯಾತೀತವಾದಿಗಳಾಗಿ. ಇಲ್ಲವಾದಲ್ಲಿ ನೀವೂ ಭಯೋತ್ಪಾದಕರ Pinarayi-Vijayan-cpimಸಾಲಿಗೆ ಸೇರಲಿರುವಿರಿ.” ಇದು ನವಂಬರ್ 7 ರಂದು ಕಲ್ಲಿಕೋಟೆಯ ಮರೈನ್ ಗ್ರೌಂಡ್‌ನಲ್ಲಿ ನಡೆದ ಅಲ್ಪಸಂಖ್ಯಾತರಿಗಾಗಿ ಏರ್ಪಡಿಸಲಾದ ಕಾರ್ಯಕ್ರಮವೊಂದರಲ್ಲಿ ಸಿಪಿಐ(ಎಂ) ನೇತಾರ ಪಿಣರಾಯ್ ವಿಜಯನ್ ನೀಡಿದ ಹೇಳಿಕೆ. ಇತ್ತೀಚೆಗೆ ಎಡಪಂಥೀಯ ಗೆಳೆಯರೊಂದಿಗೆ ಮುಸ್ಲಿಮರಲ್ಲಿ ಬೆಳೆಯುತ್ತಿರುವ ಮೂಲಭೂತವಾದ ಕುರಿತಾಗಿ ಚರ್ಚೆ ನಡೆಸುತ್ತಿರುವಾಗ ಪಿಣರಾಯ್ ವಿಜಯನ್ ನೀಡಿದ ಹೇಳಿಗೆ ಗಮನಕ್ಕೆ ಬಂತು. ಒಂದೆಡೆಯಲ್ಲಿ ಫ್ಯಾಸಿಸ್ಟ್ ಸಿದ್ದಾಂತವನ್ನು ಹರಡಿ ಭಾರತ ದೇಶವನ್ನು ಹಿಂದೂ ರಾಷ್ಟ್ರವನ್ನಾಗಿಸಬೇಕು ಎಂದು ಪಣ ತೊಟ್ಟಿರುವ ಸಂಘಪರಿವಾರ, ಮತ್ತೊಂದೆಡೆ ಮುಸ್ಲಿಮರ ಓಟನ್ನು ಪಡೆಯಲು ತಮಗೆ ಹೇಗೆ ಬೇಕೋ ಹಾಗೆ ಉಪಯೋಗಿಸುತ್ತಿರುವ ಕಾಂಗ್ರೆಸ್ ಹಾಗೂ ಇತರ ಸ್ವಯಂಘೋಷಿತ ಜಾತ್ಯಾತೀತ ಪಕ್ಷಗಳು, ಮಗದೊಂದೆಡೆ ತಮ್ಮದೇ ಆದ ಧೋರಣೆಗಳನ್ನಿಟ್ಟುಕೊಂಡಿರುವ ಎಡಪಂಥೀಯ ಪಕ್ಷಗಳು. ಇವುಗಳ ಜೊತೆಗೆ ಮುಸ್ಲಿಂಮರ ಆರ್ಥಿಕ, ಸಾಮಾಜಿಕ ,ಶೈಕ್ಷಣಿಕ ಹಾಗೂ ಬೆಳೆಯುತ್ತಿರುವ ಮೂಲಭೂತವಾದಗಳನ್ನು ಸೂಕ್ಷವಾಗಿ ಗಮಸಬೇಕಾದ ಅಗತ್ಯ ಇದೆ. ಮುಸ್ಲಿಂ ಮೂಲಭೂತವಾದ ಭಾರತದಲ್ಲಿ ಹುಟ್ಟಲು ಎಡಪಂಥೀಯ ಪಕ್ಷಗಳ ಧೋರಣೆಗಳೂ ಕಾರಣವಾಗಿವೆ. ಯಾವುದೇ ಶೋಷಿತ ವರ್ಗದ ಮೇಲೆ ದಬ್ಬಾಳಿಕೆ ನಡೆಯುತ್ತಿರುವಾಗ ಅವು ಆ ಪ್ರಭುತ್ವದ ನ್ಯಾಯವ್ಯವಸ್ಥೆಯಲ್ಲಿ ಆರಂಭದಲ್ಲಿ ನಂಬಿಕೆ ವಿಶ್ವಾಸ, ನಿರೀಕ್ಷೆಗಳನ್ನೂ ಇಟ್ಟಿರುತ್ತದೆ. ಆದರೆ ಅವೆಲ್ಲವೂ ಹುಸಿಯಾಗತೊಡಗಿದಾಗ ಕೊನೆಗೆ ದೇವರ ನ್ಯಾಯವ್ಯವಸ್ಥೆಯಲ್ಲಾದರೂ ನಮಗೆ ವಿಜಯ ಸಿಗಬಹುದು ಎಂಬ ಭ್ರಮೆಯಲ್ಲಿರುತ್ತವೆ. ಇಂಥಹಾ ಸಂಧರ್ಭದಲ್ಲಿ ದೇವರ ಹೆಸರಲ್ಲಿ ಶೋಷಿತರ ಪರ ನಿಂತು ಹೋರಾಡಲು ಮುಂದಾದ ಸಂಘಟನೆಗಳು ಅಥವಾ ಶಕ್ತಿ ಆ ಶೋಷಿತ ವರ್ಗಕ್ಕೆ ಹತ್ತಿರವಾಗತೊಡಗುತ್ತದೆ.

ಭಾರತದ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಿಲ್ಲ. ಅನ್ಯಾಯಕ್ಕೆ ಒಳಗಾಗುತ್ತಿದ್ದ ಶೋಷಿತರ ಪರ ಪೂರ್ಣಪ್ರಮಾಣದಲ್ಲಿ ಎಡಪಂಥೀಯ ಸಂಘಟನೆಗಳು ಧ್ವನಿ ಎತ್ತಿಲ್ಲ ಎಂಬುವುದನ್ನು ಎಡಪಂಥೀಯ ಚಳುವಳಿಗಾರರು ಕಂಡುಕೊಳ್ಳಬೇಕು. ಅಂಗನವಾಡಿ ಕಾರ್ಯಕರ್ತರ ಸಮಸ್ಯೆ, Beedi-workers-protest-cpimಬೀಡಿ ಕಾರ್ಮಿಕರ ಸಮಸ್ಯೆ, ಇತರ ಸಾಮಾಜಿಕ ಸಮಸ್ಯೆಗಳಿಗೆ ನೀಡಿದ ಒತ್ತನ್ನು ಶೋಷಿತರಿಗೆ ನ್ಯಾಯ ಒದಗಿಸಿಕೊಡುವಲ್ಲಿ ನೀಡಿಲ್ಲ. ಈ ನಿಟ್ಟಿನಲ್ಲಿ ಮುಸ್ಲಿಂ ಯುವಕರ ಸಂಘಟನೆಯನ್ನು ಮಾಡುವಲ್ಲಿ ಎಡಪಂಥಿಯ ಪಕ್ಷಗಳು ಎಡವಿದೆ. ಕೇರಳ, ಪಶ್ವಿಮ ಬಂಗಾಳದಲ್ಲಿ ಸಾಕಷ್ಟು ಮುಸ್ಲಿಂ ಸಮುದಾಯದ ನಾಯಕರುಗಳು ಎಡಪಂಥೀಯ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಆದರೆ ಕರ್ನಾಟಕದ ಪಾಲಿಗೆ ಇದು ಸಾಧ್ಯವಾಗಿಲ್ಲ. ಎಡಪಕ್ಷಗಳು ಮುಸ್ಲಿಮರ ಮೇಲೆ ನಡೆಯುತ್ತಿರುವ ಶೋಷಣೆ ದಬ್ಬಾಳಿಕೆಯನ್ನು ರಾಜಕೀಯ ಹೋರಾಟವಾಗಿ ನೋಡಿಲ್ಲ. ಅಲ್ಪಸಂಖ್ಯಾತರ ಮೇಲೆ ಹಲ್ಲೆಗಳು, ಹಿಂಸೆಗಳಾದಾಗ ಆ ಘಟನೆಗಳನ್ನು ಎಡಪಕ್ಷಗಳು ಖಂಡಿಸಿವೆ, ಹೋರಾಟವನ್ನೂ ನಡೆಸಿವೆ. ಆದರೆ ಇದು ಪೂರ್ಣ ಪ್ರಮಾಣದ್ದಾಗಿರಲಿಲ್ಲ. ಶೋಷಿತ ವರ್ಗಕ್ಕೆ ನಾಯಕತ್ವ ನೀಡಿ ಹೋರಾಟವನ್ನು ಮುಂದುವರಿಸಿಸಲಿಲ್ಲ. ನಕ್ಸಲೈಟ್‌ಗಳೆಂದು ಅಮಾಯಕ ಆದಿವಾಸಿ ಯುವಕರ ಮೇಲೆ ಪ್ರಭುತ್ವ ದೌರ್ಜನ್ಯ ನಡೆಸಿದಾಗ ಅದನ್ನು ಖಂಡಿಸಿದ ರೀತಿಯಲ್ಲಿ ಅದರ ವಿರುದ್ಧ ಹೋರಾಟ ನಡೆಸಿದ ರೀತಿಯಲ್ಲಿ ಭಯೋತ್ಪಾದನೆಯ ಆರೋಪದಲ್ಲಿ ಸಾಲು ಸಾಲು ಮುಗ್ದ ಯುವಕರನ್ನು ಬಂಧಿಸಿ ಅವರ ಮೇಲೆ ದೌರ್ಜನ್ಯ ನಡೆಸಿದಾಗ ಎಡಪಕ್ಷಗಳು ಹೋರಾಟ ನಡೆಸಿಲ್ಲ.

ಇಂಥಹಾ ಸಂದರ್ಭದಲ್ಲಿ ಮುಸ್ಲಿಮರ ಮುಂದೆ ಇರುವ ಮಾರ್ಗ ಯಾವುದು? golwalkarಆರ್‌ಎಸ್‌ಎಸ್ ನಾಯಕ ಗೋವಲ್ಕರ್ ತಮ್ಮ ’ಚಿಂತನಾ ಗಂಗಾ’ ಪುಸ್ತಕದಲ್ಲಿ ಉಲ್ಲೇಖಿಸಿದಂತೆ. ಮುಸ್ಲಿಂ ಸಮುದಾಯ ಇಸ್ಲಾಂ ಧರ್ಮದಿಂದ, ಮತ್ತದರ ಆಚಾರ ವಿಚಾರಗಳಿಂದ ದೂರವಾಗಿ ಭಾರತದಲ್ಲಿ ಎರಡನೇ ದರ್ಜೆಯ ಪ್ರಜೆಗಳಾಗಿ ಬದುಕಬೇಕೆ ಅಥವಾ ಭಾರತ ಬಿಟ್ಟು ತೊಲಗಬೇಕೆ? ತಮ್ಮ ಮೇಲೆ ಶೋಷಣೆ, ದಬ್ಬಾಳಿಕೆ, ಅಪನಂಬಿಕೆಗಳು ನಿರಂತರವಾಗಿ ನಡೆಯುತ್ತಿದ್ದರೂ ಅವುಗಳನ್ನು ಸಹಿಸಿಕೊಂಡು ಜೀವನ ನಡೆಸಬೇಕೆ? ಇದು ಸಾಮಾನ್ಯ ಮುಸಲ್ಮಾನನೊಬ್ಬನ ಮನಸ್ಸಿನಲ್ಲಿರುವ ಪ್ರಶ್ನೆ ಮತ್ತು ಆತಂಕ ಕೂಡಾ. ಎಡಪಂಥೀಯ ಪಕ್ಷಗಳು ಇದಕ್ಕೆ ಏನು ಉತ್ತರ ನೀಡುತ್ತದೆ? 2002 ರಲ್ಲಿ ಗುಜರಾತ್‌ನಲ್ಲಿ ನಡೆದ ಹತ್ಯಾಕಾಂಡದ ನಂತರದ ದಿನಗಳಲ್ಲಿ ಶೋಷಿತರ ಪರ ಅಲ್ಲಿನ ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆತಲ್ವಾಡ್ ಹಾಗೂ ಸಂಗಾತಿಗಳು ಜೊತೆಯಾಗಿ ನಿಂತು ನ್ಯಾಯಕ್ಕಾಗಿ ಪೂರ್ಣ ಪ್ರಮಾಣದಲ್ಲಿ ಹೋರಾಡಿದ ಪರಿಣಾಮ ಅಲ್ಲಿ ಮುಸ್ಲಿಂ ಮೂಲಭೂತವಾದಿಗಳು ತಮ್ಮದೇ ಸಮುದಾಯದ ಮೇಲೆ ಹಿಡಿತ ಸಾಧಿಸಲು ಸಾಧ್ಯ ಆಗಲಿಲ್ಲ. ಅಲ್ಲಿನ ಮುಸ್ಲಿಮರಿಗೆ ತೀಸ್ತಾ ಸೆತಲ್ವಾಡ್ ನಾಯಕಿಯಾಗಿ ಕಂಡರು. ಕರ್ನಾಟಕದಲ್ಲಿ ಕೋಮು ಸೌಹಾರ್ದ ವೇದಿಕೆಯ ಕೆ.ಎಲ್.ಅಶೋಕ್, ಗೌರಿ ಲಂಕೇಶ್, ಫಣಿರಾಜ್, ಜಿ.ರಾಜಶೇಖರ್, ಸುರೇಶ್ ಭಟ್ ಭಾಕ್ರಬೈಲ್ PFI_mangalore_protestಮತ್ತಿತರರು ಈ ಪ್ರಯತ್ನ ಮಾಡುತ್ತಿದ್ದರೂ, ಪಿಎಪ್‌ಐ ಮುಸ್ಲಿಂ ಸಮುದಾಯದ ಶೋಷಿತ ಮನಸ್ಸುಗಳನ್ನು ತನ್ನತ್ತ ಆಕರ್ಷಿಸುವಲ್ಲಿ ಸಫಲವಾಯಿತು. ವಿಪರ್ಯಾಸವೆಂದರೆ ಮೂಲಭೂತವಾದದ ವಿರುದ್ಧ ಹೋರಾಟದಲ್ಲಿ ಮೂತಭೂತವಾದದ ಮತ್ತೊಂದು ಮುಖದೊಂದಿಗೆ ಕೋಮು ಸೌಹಾರ್ದ ವೇದಿಕೆ ಗುರುತಿಸಿಕೊಳ್ಳಬೇಕಾಗುವಂತಾಯಿತು.

ಶೋಷಕರ ವಿರುದ್ಧ ಶೋಷಿತರ ಹೋರಾಟ ಅತ್ಯಗತ್ಯ. ಆದರೆ ಆ ಹೋರಾಟ ಸಾಗುವ ದಿಕ್ಕು ಬದಲಾಗಬೇಕಾಗಿದೆ. ಮುಸ್ಲಿಂ ಸಮುದಾಯದಲ್ಲಿರುವ ಧಾರ್ಮಿಕ ಸಂಕುಚಿತ ಭಾವನೆ ದೂರವಾಗಬೇಕಾಗಿದೆ. ಎಲ್ಲವನ್ನೂ ಧರ್ಮದ ಆಧಾರದಲ್ಲಿ ವಿಶ್ಲೇಷಣೆ ಮಾಡುವುದು, ಅಲ್ಲಾನನ್ನು ಹೊರತುಪಡಿಸಿ ಬೇರೆ ದೇವರಿಲ್ಲ ಎಂಬ ಧೃಡ ವಿಶ್ವಾಸ ಹಾಗೂ ಆ ಕುರಿತು ವಾದಿಸುವಂತಹಾ ಮನೋಭಾವ ಮುಸ್ಲಿಂ ಸಮುದಾಯವನ್ನು ಇನ್ನಷ್ಟು ಮೂಲಭೂತವಾದದತ್ತ ಕೊಂಡೊಯ್ಯುತ್ತದೆ. (ವಾಸ್ತವದಲ್ಲಿ ದೇವರ ಅಸ್ತಿತ್ವವೇ ಇಲ್ಲ.) ಇನ್ನು ಭಾರತದಲ್ಲಿ ಮುಸ್ಲಿಂ ಸಮುದಾಯದ ಮೇಲೆ ನಡೆಯುತ್ತಿರುವ ಹೋರಾಟವನ್ನು ಬರೀ ಧಾರ್ಮಿಕ ನೆಲೆಯಲ್ಲಿ ವಿಶ್ಲೇಷಣೆ ಮಾಡುವುದುನ್ನು ಎಡಪಂಥೀಯ ಪಕ್ಷಗಳು ಬಿಡಬೇಕಾಗಿದೆ. ಆರ್‌ಎಸ್‌ಎಸ್ ಹುಟ್ಟಿಗೂ ಪಿಎಫ್‌ಐ ಹುಟ್ಟಿಗೂ ಸಾಕಷ್ಟು ವ್ಯತ್ಯಾಸಗಳಿವೆ. ಹಿಂದೂ ರಾಷ್ಟ್ರ ಸ್ಥಾಪನೆಗಾಗಿ 1925 ರಲ್ಲಿ ಆರ್‌ಎಸ್‌ಎಸ್ ಜನ್ಮ ತಾಳಿದ್ದರೆ ಮತ್ತು ಅದಕ್ಕಾಗಿ ಅದು ಕಂಡುಕೊಂಡ ಮಾರ್ಗವೇ ಭಾರತದಲ್ಲಿ ಮುಸ್ಲಿಂ ತೀವ್ರಗಾಮಿಗಳ ಹುಟ್ಟಿಗೂ ಬಹುಪಾಲು ಕಾರಣವಾಗಿದೆ ಎಂಬುವುದನ್ನು, PFI-eventಮತ್ತು ಹಿಂದು ಮೂಲಭೂತವಾದಕ್ಕೆ ಸರಿಸಮಾನವಾಗಿ ಮುಸ್ಲಿಂ ಮೂಲಭೂತವಾದವನ್ನು ವಿಶ್ಲೇಷಿಸುವ ಎಡಪಂಥೀಯ ನಾಯಕರು ಅರ್ಥೈಸಿಕೊಳ್ಳಬೇಕಾಗಿದೆ. ಮೂಲಭೂತವಾದಿಗಳ ಕೈವಶವಾಗುತ್ತಿರುವ ಮುಸ್ಲಿಂ ಸಮುದಾಯದ ಶೋಷಿತ ಮನಸ್ಸುಗಳನ್ನು ತಮ್ಮತ್ತ ಸೆಳೆಯುವ ಪ್ರಯತ್ನ ಕರ್ನಾಟಕದ ಎಡಪಕ್ಷಗಳು ಮಾಡಬೇಕಾಗಿದೆ. ನಾಸ್ತಿಕ ವಾದವನ್ನು ಮುಂದಿಟ್ಟು ಎಡಪಕ್ಷಗಳನ್ನು ಒಪ್ಪಿಕೊಳ್ಳಲು ಮುಸ್ಲಿಂ ಸಮುದಾಯ ಹಿಂದೇಟು ಹಾಕುತ್ತಿದೆ ಎಂಬ ವಾದದಲ್ಲಿ ಹುರುಳಿಲ್ಲ. ಪಶ್ಚಿಮ ಬಂಗಾಳ, ಕೇರಳದಲ್ಲಿ ಹಾಗೂ ಸ್ವಾತಂತ್ರಪೂರ್ವ ಹೋರಾಟಗಳಲ್ಲಿ ಎಡಪಕ್ಷಗಳ ಜೊತೆಗೆ ಸಾಕಷ್ಟು ಮುಸ್ಲಿಂ ನಾಯಕರು ಗುರುತಿಸಿಕೊಂಡಿದ್ದಾರೆ. ಜೊತೆಗೆ ಹಿಂದೂರಾಷ್ಟ್ರವಾದಿಗಳ ವಿರುದ್ಧದ ಹೋರಾಟ ಸಾಮಾಜಿಕ ನೆಲೆಯಲ್ಲಿರಬೇಕೇ ಹೊರತು ಅದನ್ನು ಧಾರ್ಮಿಕ ನೆಲೆಯಲ್ಲಿ ಅಲ್ಲ ಎಂಬುವುದನ್ನು ಮುಸ್ಲಿಂ ಶೋಷಿತ ಮನಸ್ಸುಗಳು ಅರ್ಥೈಸಿಕೊಳ್ಳಬೇಕಾಗಿದೆ.

ಅವಳ ಬಸಿರು ಸುತ್ತಲ ರಾಜಕಾರಣ


– ರೂಪ ಹಾಸನ


 

ಈಚೆಗೆ ರಾಜ್ಯದ ಹಲವು ದಿನಪತ್ರಿಕೆ ಹಾಗೂ ವಾರಪತ್ರಿಕೆಗಳಲ್ಲಿ ಅತ್ಯಂತ ಆಕರ್ಷಕ ಪದಗಳೊಂದಿಗೆ ತುರ್ತು ಗರ್ಭನಿರೋಧಕ/ಗರ್ಭನಿವಾರಕ ಮಾತ್ರೆಯೊಂದರ ಜಾಹಿರಾತು ಪ್ರಕಟವಾಗುತ್ತಿದೆ. i-pillಅದು ಹಲವು ದಿನಗಳು ಮತ್ತೆ ಮತ್ತೆ ಪ್ರಕಟಗೊಂಡಾಗ ಸಾಮಾನ್ಯ ಓದುಗರ ಗಮನ ಸೆಳೆಯುವುದೂ ನಿಜ.

ಅನಿರೀಕ್ಷಿತ, ಅನಪೇಕ್ಷಿತ ಲೈಂಗಿಕ ಸಂಪರ್ಕ ಉಂಟಾದಾಗ (ಹೆಚ್ಚಾಗಿ ಅತ್ಯಾಚಾರಕ್ಕೊಳಗಾದಾಗ) ಹೆಣ್ಣಿನ ಗರ್ಭಧಾರಣೆಯನ್ನು ತಡೆಯುವ ಹಿನ್ನೆಲೆಯಲ್ಲಿ ಈ ಐ-ಪಿಲ್ ಎಂಬ ಮಾತ್ರೆಯನ್ನು ಮಾರುಕಟ್ಟೆಗೆ ತರಲಾಗಿದೆ. ಆದರೆ ಜಾಹಿರಾತಿನಲ್ಲಿ ಇದನ್ನೊಂದು “ತುರ್ತು ಗರ್ಭನಿರೋಧಕ” ಎಂಬುದನ್ನಷ್ಟೇ ಎತ್ತಿಹಿಡಿದು ಅದಕ್ಕೆ ಸಂಬಂಧಿಸಿದ ಮಿಕ್ಕ ವಿವರಗಳನ್ನು ಚಿಕ್ಕದಾಗಿ, ಅಪ್ರಮುಖವೆಂಬಂತೆ ಬಿಂಬಿಸಿದ್ದು ಈ ಮಾತ್ರೆಯ ಮತ್ತೊಂದು ಕರಾಳ ಮುಖವನ್ನು ಮುಚ್ಚಿಟ್ಟಂತಾಗಿದೆ. ಈ ಮಾತ್ರೆ ಔಷಧಿ ಅಂಗಡಿಗಳಲ್ಲಿ, ವೈದ್ಯರ ಪ್ರಿಸ್ಕ್ರಿಪ್ಶನ್ ಇಲ್ಲದೇ ಮುಕ್ತವಾಗಿ ಮಾರಾಟಗೊಳ್ಳಲಾರಂಭಿಸಿದ್ದು ಅದರ ಕ್ರಯವನ್ನು ನಿರೀಕ್ಷಿತ ಪ್ರಮಾಣಕ್ಕಿಂತಾ ಹೆಚ್ಚಿಸಿದ್ದರೂ, ಅದರ ವಿಕ್ರಯ ಭರದಿಂದ ನಡೆಯುತ್ತಿದೆ! ಆತಂಕಕಾರಿಯಾದ ಅಂಶವೆಂದರೆ ಇದನ್ನು ಹೆಚ್ಚಾಗಿ ಬಳಸುತ್ತಿರುವವರು ಶಾಲಾ ಕಾಲೇಜುಗಳ ಹದಿಹರೆಯದ ಯುವತಿಯರು ಎಂಬುದು! ಬೇರೆಲ್ಲಕ್ಕಿಂಥಾ ಔಷಧಿ ಮಾರಾಟದ ಜಾಲ ಶಕ್ತಿಯುತವಾಗಿರುವುದರಿಂದ ನಗರ ಪಟ್ಟಣವೆನ್ನದೇ ಇಂತಹ ಉತ್ಪನ್ನಗಳು ಏಕಕಾಲಕ್ಕೆ ಎಲ್ಲೆಡೆ ಲಭ್ಯವಾಗುತ್ತಿವೆ.

ಈ ಕುರಿತು ಸಮೀಕ್ಷೆ ನಡೆಸಿರುವ ರಾಷ್ಟ್ರಮಟ್ಟದ ಪತ್ರಿಕೆಯೊಂದರ ಪ್ರಕಾರ ದೇಶಾದ್ಯಂತ ಸುಮಾರು ಎರಡು ಲಕ್ಷ ಐ-ಪಿಲ್ ಮಾತ್ರೆಗಳು ಪ್ರತಿ ತಿಂಗಳೂ ಮಾರಾಟವಾಗುತ್ತಿವೆ. ಹಾಸನದ ನನ್ನ ಸ್ತ್ರೀರೋಗ ತಜ್ಞ ಗೆಳತಿಯರ ಪ್ರಕಾರ ಸರಿಯಾದ ಸೇವನಾ ಕ್ರಮದ ಅರಿವಿರದೇ ತಿಂಗಳಿಗೆ 3-4 ಬಾರಿ ಈ ಮಾತ್ರೆ ಸೇವಿಸುವ ಹೆಣ್ಣುಮಕ್ಕಳಿಗೆ ಹೊಟ್ಟೆನೋವು, ವಿಪರೀತ ರಕ್ತಸ್ರಾವ, ಸುಸ್ತು, ವಾಕರಿಕೆಗಳು ಪ್ರಾರಂಭಿಕ ಹಂತದಲ್ಲಿ ಕಂಡು ಬರುತ್ತಿದ್ದರೂ ಇದನ್ನು ವೈದ್ಯರ ಸಲಹೆ ಇಲ್ಲದೇ ವಿವೇಚನಾರಹಿತವಾಗಿ ಮಾಮೂಲಿ ಗರ್ಭನಿರೋಧಕದಂತೆ ಪ್ರತಿಬಾರಿಯೂ ಬಳಸಿದಾಗ ತೀವ್ರ ತೆರನಾದ ಪಾರ್ಶ್ವ ಪರಿಣಾಮಗಳು ಕಾಲಾಂತರದಲ್ಲಿ ಆಗುವ ಸಾಧ್ಯತೆಗಳು ಹೆಚ್ಚಾಗಿವೆ. ಏಕೆಂದರೆ ಇದು ಮಾಮೂಲಿ ಗರ್ಭನಿರೋಧಕಗಳ ನಾಲ್ಕುಪಟ್ಟು ಪ್ರಭಾವಶಾಲಿಯಾಗಿರುತ್ತದೆ. ಅದನ್ನು ಮತ್ತೆ ಮತ್ತೆ ತಡೆದುಕೊಳ್ಳುವ ಸಾಮರ್ಥ್ಯ ದೇಹಕ್ಕಿರುವುದಿಲ್ಲ. ಜೀವಮಾನದಲ್ಲಿ 1-2 ಬಾರಿ ಅನಿವಾರ್ಯ ಸಂದರ್ಭದಲ್ಲಿ ಬಳಸಬಹುದಾದ ಈ ಮಾತ್ರೆಯನ್ನು ಗರ್ಭಧಾರಣೆಯ ಸಾಧ್ಯತೆಯನ್ನು ತಡೆಯುತ್ತದೆಂದು ಭ್ರಮಿಸಿ ನಿರಂತರವಾಗಿ ಸೇವಿಸಲಾರಂಭಿಸಿದರೆ ಹೆಣ್ಣು ಮಕ್ಕಳ ಗತಿ ಏನಾಗಬೇಕು? ಸಂಕೋಚ, ಹೆದರಿಕೆಗಳಿಂದ ವೈದ್ಯರ ಬಳಿಗೆ ತಪಾಸಣೆಗೆ ಹೋಗಲೂ ಹಿಂಜರಿವ ಹೆಣ್ಣುಮಕ್ಕಳು ಮುಂದಿನ ದಿನಗಳಲ್ಲಿ ಆರೋಗ್ಯ ಹಾಗೂ ಬಸಿರು ಸಂಬಂಧಿ ಮುಖ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆಂಬ ಆತಂಕ ವೈದ್ಯರದು.

ಆದರೆ ಸೂಕ್ಷ್ಮವಾಗಿ ಗಮನಿಸಬೇಕಾದ ಅಂಶವೆಂದರೆ ಮಾಧ್ಯಮಗಳಲ್ಲಿ ಎಲ್ಲೆಂದರಲ್ಲಿ ಪ್ರಕಟಗೊಳ್ಳುತ್ತಿರುವ safe-sex-campaignಯಾವುದೇ ಗರ್ಭನಿರೋಧಕಗಳ ಅಥವಾ ಏಡ್ಸ್ ಕುರಿತ ಎಚ್ಚರಿಕೆಯ ಜಾಹಿರಾತುಗಳಲ್ಲಿ ಸೆಕ್ಸ್‌ನ ಮುಕ್ತತೆ ತಪ್ಪಲ್ಲವೆಂದು ಪ್ರತಿಪಾದಿಸುತ್ತಲೇ ಅದು “ಸುರಕ್ಷಿತವಾಗಿದ್ದರೆ” ಸಾಕು ಎಂದು ಸಮರ್ಥಿಸುತ್ತಿರುವ ಸಂದೇಶದ ಹಿನ್ನೆಲೆಯಲ್ಲಿ ವ್ಯಾಪಾರಿ ಜಗತ್ತಿನ ಕ್ರೂರ ಚಾಣಾಕ್ಷತೆಯೊಂದಿಗೆ, ಹೆಣ್ಣಿನ ದೇಹವನ್ನು ಸರಕೆಂಬಂತೆ ವೈಭವೀಕರಿಸುತ್ತಿರುವ ಪುರುಷ ವಿಕೃತಿಯೂ ಎದ್ದು ತೋರುತ್ತದೆ. ಇವು ಸದ್ದಿಲ್ಲದೇ ಮುಕ್ತಕಾಮವನ್ನು ಪ್ರಚೋದಿಸುವಂತವೂ ಆಗಿವೆ. ಅಥವಾ ಕಾಲಕ್ಕೇ ಇಂತಹ ತುರ್ತು ಬಂದೊದಗಿದೆ ನಾವಿನ್ನೂ ಓಬಿರಾಯನ ಕಾಲದಲ್ಲಿದ್ದೇವೆಯೇ ಎಂದು ಮನಸು ಆತಂಕದಿಂದ ಪ್ರಶ್ನಿಸಿಕೊಳ್ಳುತ್ತಿದೆ.

ಗಂಡು-ಹೆಣ್ಣಿನ ಖಾಸಗಿ, ಕೌಟುಂಬಿಕ ಸುಖದ ಪ್ರತೀಕವಾದ ಬಸಿರು ಇಂದು ಸಾಮಾಜಿಕ ಬದಲಾವಣೆಯ ಸಂಕೇತವಾಗಿ, ಸಾರ್ವಜನಿಕವಾಗಿಬಿಟ್ಟಿರುವುದು ವಿಪರ್ಯಾಸ! ಭಾರತದಲ್ಲಿ ವರ್ಷವೊಂದಕ್ಕೆ 30-40 ಲಕ್ಷ ಭ್ರೂಣಗಳು ಹತ್ಯೆಗೀಡಾಗುತ್ತಿವೆಯೆಂದು ವರದಿಯೊಂದು ತಿಳಿಸುತ್ತದೆ. (ಹೆಣ್ಣು ಭ್ರೂಣಹತ್ಯೆಯದು ಬೇರೆಯದೇ ಲೆಕ್ಕಾಚಾರ.) ಭೋಗ ಸಂಸ್ಕೃತಿಯೆಡೆಗಿನ ವಿಪರೀತದ ಆಕರ್ಷಣೆ, ಸೆಕ್ಸ್‌ನ್ನು ಎಲ್ಲಕ್ಕೂ ಮಿಗಿಲೆಂಬಂತೆ ಎತ್ತಿ ಹಿಡಿಯುತ್ತಿರುವ ದೃಶ್ಯ ಮಾಧ್ಯಮಗಳು, ಬದಲಾದ ಆರ್ಥಿಕ, ಸಾಮಾಜಿಕ ಪರಿಸರ ಹಾಗೂ ಶೈಕ್ಷಣಿಕ-ವೈಜ್ಞಾನಿಕ ಸೌಲಭ್ಯಗಳ ಹಿನ್ನೆಲೆಯಲ್ಲಿ ನೈತಿಕತೆಯ-ಲೈಂಗಿಕತೆಯ ಪರಿಕಲ್ಪನೆಯಲ್ಲಿ ವೇಗದ ಬದಲಾವಣೆಗಳಾಗುತ್ತಿರುವುದು, ಸಮಾಜದ ಹಿತಕ್ಕಿಂಥಾ ವೈಯಕ್ತಿಕತೆಯೇ ಮೇಲುಗೈ ಸಾಧಿಸುತ್ತಿರುವುದು, ಸ್ವಂತ ಸ್ವಾತಂತ್ರ್ಯದ ಪರಿಧಿ ಗಂಡು-ಹೆಣ್ಣುಗಳಿಬ್ಬರಿಗೂ ವಿಸ್ತಾರವಾಗುತ್ತಿರುವುದು, ಇದು ಮಿತಿಯಿರದ ಸ್ವಾತಂತ್ರ್ಯವಾಗಿ ಬದಲಾಗುತ್ತಿರುವುದು, ಇದೇ ಈ ಪ್ರಮಾಣದ ಭ್ರೂಣ ಹತ್ಯೆಗೆ ಕಾರಣ ಎಂದು ಸಮಾಜ ವಿಜ್ಞಾನಿಗಳು ವಿಶ್ಲೇಷಿಸುತ್ತಾರೆ.

ಜೊತೆಗೆ ಭಾವನಾತ್ಮಕ ಅಪಕ್ವತೆ, ಸಂಬಂಧಗಳ ನಿರ್ವಹಣೆಯಲ್ಲಿನ ಬೇಜವಾಬ್ದಾರಿತನ, ಲೈಂಗಿಕತೆ ಕುರಿತು ಅವಸರದ ಕುತೂಹಲ, ಮಾಧ್ಯಮಗಳ ಪ್ರಭಾವ, ಸರಿಯಾದ ಮಾದರಿ-ಮಾರ್ಗದರ್ಶನಗಳ ಕೊರತೆ, ಉಸಿರುಕಟ್ಟಿಸುವ ಸಂಪ್ರದಾಯಗಳು, ಆಧುನಿಕತೆ ಹಾಗೂ ಹಳೆಯ ಸಂಪ್ರದಾಯಗಳ ಸಂಘರ್ಷದಲ್ಲಿ ಮೂರನೆಯ, ಸಮಾಜ ಒಪ್ಪಿತ ದಾರಿ ಇಲ್ಲದಿರುವುದು, ಸಮಾಜದ ವಿರೋಧ ಕಟ್ಟಿಕೊಂಡು, ಅದನ್ನು ಎದುರಿಸಿ ನಿಲ್ಲುವ ಸಾಮರ್ಥ್ಯಹೀನತೆ, ಶಿಶುವಿನ ಹೊಣೆಗಾರಿಕೆ ಹೊರಲು ಸಿದ್ಧವಿಲ್ಲದ ಸ್ವತಂತ್ರ ಮನಸ್ಸುಗಳು….. ಇಂಥಹ ಹತ್ತು ಹಲವು ಮನಃಶಾಸ್ತ್ರೀಯ ನೆಲೆಯ ಕಾರಣಗಳು ಬಸಿರನ್ನು ಘಾಸಿಗೊಳಿಸಿ ಹತ್ಯೆಗೊಳಿಸುವ ಹಿನ್ನೆಲೆಯಲ್ಲಿ ಕೆಲಸ ಮಾಡುತ್ತವೆ.

ಅತ್ಯಾಚಾರಕ್ಕೆ, ಗೌಪ್ಯ ಲೈಂಗಿಕ ಕಿರುಕುಳಕ್ಕೆ, ತಮ್ಮನ್ನು ತಾವೇ ನಿಭಾಯಿಸಿಕೊಳ್ಳಲಾಗದ ದೌರ್ಬಲ್ಯಕ್ಕೆ, india-foeticideಮದುವೆಯಾಗುವುದಾಗಿ ನಂಬಿಸಿ ಮೋಸ ಹೋದ ತಪ್ಪಿಗೆ ಬಸಿರಾದ ಹೆಣ್ಣು ಮಕ್ಕಳ ಕಥೆಗಳು, ಹೆಣ್ಣು ಮಗು ಬೇಡವೆಂಬ ಕುಟುಂಬದವರ ಒತ್ತಡ ಹೀಗೆ ಹಲವಾರು ಬಸಿರು ಸಂಬಂಧಿ ಸಮಸ್ಯೆಯ ಹಲವು ಮುಖಗಳು ವೈದ್ಯರಲ್ಲಿ “ಆಫ್ ದಿ ರೆಕಾರ್ಡ್” ಆಗಿ ದಾಖಲಾಗಿರುತ್ತವೆ. ನಿತ್ಯ ದಾಖಲಾಗುತ್ತಿವೆ.

ಯಾವುದೇ ಪ್ರಾಣಿಸಂತತಿಯ ಆರೋಗ್ಯವಂತ ಬಸಿರು ಮತ್ತು ಆರೋಗ್ಯಪೂರ್ಣ ಪೀಳಿಗೆಯ ದೃಷ್ಟಿಯಿಂದ ನಿಸರ್ಗವೇ ಅಗೋಚರವಾಗಿ ಹಲವು ಪ್ರಾಕೃತಿಕ ನಿಯಮಗಳನ್ನು ರೂಪಿಸಿದೆ. ಹೆಣ್ಣಿನ ಬಸಿರು ಅದರ ಎಲ್ಲಾ ಧಾರ್ಮಿಕ, ನೈತಿಕ ಚೌಕಟ್ಟುಗಳಿಂದಾಗಿ ಭಾರತೀಯ ಸಂದರ್ಭದಲ್ಲಿ ಪಾವಿತ್ರ್ಯತೆಯ ಹೆಸರಿನಲ್ಲಿಯೇ ಗುಣಾತ್ಮಕತೆಯನ್ನು ಪಡೆದುಕೊಂಡಿತ್ತು. ಆದರೆ ಇತ್ತೀಚೆಗಿನ ಕೆಲ ದಶಕಗಳಿಂದ ಆಧುನಿಕತೆಯ ಪ್ರಭಾವ, ಮಾಧ್ಯಮಗಳ ಅಬ್ಬರ, ಎಗ್ಗಿಲ್ಲದೇ ಕೈಗೆಟುಕುತ್ತಿರುವ ವೈದ್ಯಕೀಯ ಮುನ್ನೆಚ್ಚರಿಕೆಯ ಲೈಂಗಿಕ ಸಾಧನ, ಸೌಲಭ್ಯಗಳಿಂದಾಗಿ ಹಲವಾರು ಹದಿಹರೆಯದ ಯುವಕ-ಯುವತಿಯರು ಸೆಕ್ಸ್‌ನ್ನು ಮೋಜಿಗಾಗಿ ಬಳಸುತ್ತಿರುವುದು, ನಿರಂತರವಾಗಿ ಹೊಸ ಸಮಸ್ಯೆಗಳಿಗೆ ದಾರಿಮಾಡಿಕೊಡುತ್ತಿದೆ. ಅವು ಅನೈತಿಕ ನೆಲೆಯ, ಉತ್ತರಗಳೇ ಇಲ್ಲದ ಬೃಹತ್ ಸಮಸ್ಯೆಗಳಾಗಿ ಕುಟುಂಬ-ಸಮಾಜದ ಎದುರು ನಿಲ್ಲುತ್ತಿವೆ.

ಹೆಣ್ಣಿನ ಬಸಿರನ್ನು ಪ್ರಧಾನವಾಗಿರಿಸಿಕೊಂಡು ವೈದ್ಯಕೀಯ ಪ್ರಾಯೋಗಿಕ ಪರೀಕ್ಷೆಗಾಗಿ ಅನೈತಿಕ ನೆಲೆಗಳಲ್ಲಿ ಭಾರತದ ಬಡ ಹೆಣ್ಣುಮಕ್ಕಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಕುರಿತು ಇಂದಿನ ಹಲವು ಸಮೀಕ್ಷೆಗಳು ಬೆಳಕು ತೋರುತ್ತಿವೆ. save-girl-childಹಾಗೇ 2002 ರಲ್ಲಿ “ಬಾಡಿಗೆ ತಾಯಂದಿರ” ಹಕ್ಕನ್ನು ಕಾನೂನುಬದ್ಧಗೊಳಿಸಿದ ನಂತರ ಭಾರತದ ಕೆಲವು ಬಡ ಹೆಣ್ಣುಮಕ್ಕಳು ಹಣಗಳಿಕೆಯ ಮಾರ್ಗವಾಗಿ ಇದನ್ನು ಬಳಸಿಕೊಳ್ಳುತ್ತಿದ್ದಾರೆ. ಇದೂ ಕೂಡ ಶೋಷಣೆಯ ಇನ್ನೊಂದು ಮುಖವೆಂದು ವಾದಿಸುವವರಿದ್ದಾರೆ. ಆದರೆ ಬಡತನ, ಅಸಹಾಯಕತೆಗಳು ನಮ್ಮ ಹೆಣ್ಣು ಮಕ್ಕಳಿಂದ ಏನೆಲ್ಲಾ ಕುಕೃತ್ಯಗಳನ್ನು ಮಾಡಿಸುತ್ತದೆ ಎಂಬುದಕ್ಕೆ ಅನೇಕ ಉದಾಹರಣೆಗಳು ನಮ್ಮ ಮುಂದಿವೆ. ಹೆಣ್ಣುಮಕ್ಕಳ ಮಾರಾಟ, ವೇಶ್ಯಾವಾಟಿಕೆ, ಅಕ್ರಮ ಸಂಬಂಧ, ಬಲವಂತದ ವಿವಾಹ….. ಇತ್ಯಾದಿಗಳ ಮೂಲಕ ಬಾಡಿಗೆ ತಾಯಂದಿರಿಗಿಂಥಾ ಕ್ರೂರವಾಗಿ, ಆಘಾತಕಾರಿ ಪ್ರಮಾಣದಲ್ಲಿ ಅವರು ಶೋಷಣೆಗೊಳಗಾಗುತ್ತಿದ್ದಾರೆ.

ಬದಲಾಗುತ್ತಿರುವ ಪರಿಸರದಂತೆ ವೈದ್ಯಕೀಯ ಕ್ಷೇತ್ರದಲ್ಲೂ ಅಗಾಧ ಪ್ರಮಾಣದಲ್ಲಿ ಪ್ರಗತಿಯಾಗಿದೆ. ಹುಟ್ಟಲಿರುವ ಮಗು ಅನಾರೋಗ್ಯ ಹೊಂದಿರುವಂತಹುದು, ಅದರ ಭವಿಷ್ಯದ ದೃಷ್ಟಿಯಿಂದ ಯಾತನಾದಾಯಕವಾದುದೂ ಮತ್ತು ಅಂತಹ ಮಗುವನ್ನು ನೋಡಿಕೊಳ್ಳಲು ವೈದ್ಯಕೀಯ ವೆಚ್ಚಕ್ಕಾಗಿ ಹೆಚ್ಚು ಹಣ ಖರ್ಚುಮಾಡಬೇಕಾದ ಹಾಗೂ ಜೀವನ ಪರ್ಯಂತ ಅಂಥಹಾ ಮಗುವನ್ನು ಸಾಕುವಾಗ ಅನುಭವಿಸಬೇಕಾಗುವ ಮಾನಸಿಕ ಹಿಂಸೆಯಿಂದ ತಪ್ಪಿಸಿಕೊಳ್ಳಲು ಅದನ್ನು ಭ್ರೂಣದ ಹಂತದಲ್ಲಿಯೇ ಗರ್ಭಪಾತ ಮಾಡಿಸಲು ಕಾನೂನಿನಲ್ಲಿ ಅವಕಾಶವಿರುವುದು ಎಲ್ಲ ರೀತಿಯಲ್ಲಿಯೂ ಸಮಂಜಸವಾದುದು. ಆದರೆ ಕಾನೂನುಬಾಹಿರವಾಗಿ ಯಾವ ಎಗ್ಗೂ ಇಲ್ಲದೇ ಇಷ್ಟೊಂದು ಪ್ರಮಾಣದಲ್ಲಿ ನಡೆಯುವ ಭ್ರೂಣಹತ್ಯೆಯಂಥ ಚಟುವಟಿಕೆಗೆ ನಿಯಂತ್ರಣ ತರದಿದ್ದಾಗ ಕಾನೂನಿಗೆ ಯಾವ ಬೆಲೆ ಇರುತ್ತದೆ?

ಇಂದಿನ ಮಹಿಳೆ, ಮತ್ತವಳ ಆರೋಗ್ಯ ಪೂರ್ಣ ಬಸಿರಿನ ಹಿತದೃಷ್ಟಿಯಿಂದ ಯಾವುದೇ ರೀತಿಯ ಗರ್ಭನಿರೋಧಕಗಳನ್ನು ವೈದ್ಯರ ಸಲಹೆ ಇಲ್ಲದೇ ಕೊಂಡುಕೊಳ್ಳುವ ಮತ್ತು ಬಳಸುವ ವಿಧಾನವನ್ನು ಕಾನೂನುಬಾಹಿರವೆಂದು ಪರಿಗಣಿಸಿ, ಮೊದಲಿಗೆ ಕಟ್ಟುನಿಟ್ಟಿನ ಕಾನೂನಿನ ಕ್ರಮ ಕೈಗೊಳ್ಳಬೇಕು. ನಿರಂತರವಾದ ಗರ್ಭನಿರೋಧಕದಂಥ ಪ್ರಖರವಾದ ಔಷಧಿ ಸೇವನೆಯಿಂದ ಪಾರ್ಶ್ವ ಪರಿಣಾಮಗಳಾಗಿ ಸರಿಪಡಿಸಲಾಗದ ಭೀಕರ ಆರೋಗ್ಯ ಸಮಸ್ಯೆಗಳು ಹಾಗೂ ಅನಾರೋಗ್ಯಕರ ಪೀಳಿಗೆಯ ಹುಟ್ಟಿಗೆ ಕಾರಣವಾಗಬಹುದೆಂದು ಸ್ತ್ರೀರೋಗ ತಜ್ಞರು ಎಚ್ಚರಿಸುತ್ತಲೇ ಬಂದಿದ್ದಾರೆ. moodsಔಷಧಿ ಅಂಗಡಿಗಳ ಕೌಂಟರ್‌ಗಳಲ್ಲಿ ಮುಕ್ತವಾಗಿ ಮಾರಾಟ ಮಾಡುವ ವಿಧಾನದ ಬಗ್ಗೆಯೂ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ಅಂತಹ ಮಾರಾಟಗಾರರಿಗೆ ಕಠಿಣ ಶಿಕ್ಷೆ ವಿಧಿಸುವಂತಹಾ ನಿಯಮ ಜಾರಿಯಾಗಬೇಕು. ಮಾಧ್ಯಮಗಳಲ್ಲಿ ವಿವೇಚನಾರಹಿತವಾಗಿ ಜಾಹಿರಾತು ನೀಡುವ ಮೂಲಕ ಯುವಜನರು ದಾರಿತಪ್ಪುವ ಸಾಧ್ಯತೆಗಳು ಹೆಚ್ಚಿರುವುದರಿಂದ ಜಾಹಿರಾತುಗಳಿಗೆ ಕಡಿವಾಣ ಅಗತ್ಯ. ಮಾಧ್ಯಮಗಳೂ ಹೆಚ್ಚು ಸಾಮಾಜಿಕ ಜವಾಬ್ದಾರಿಯಿಂದ, ವಿವೇಕಯುತವಾಗಿ ನಡೆದುಕೊಳ್ಳಬೇಕಿರುವುದು ಮುಖ್ಯ. ಜಾಹಿರಾತುಗಳು ಎಲ್ಲಿ? ಹೇಗೆ? ಯಾವ ರೀತಿಯಲ್ಲಿ ಎಚ್ಚರಿಕೆಯಿಂದ ಪ್ರಕಟಗೊಳ್ಳಬೇಕೆಂಬ ಚರ್ಚೆಗಳಾಗಬೇಕು. ಇದನ್ನು ವೈದ್ಯಕೀಯ ಸಂಸ್ಥೆಗಳು ಮಾಡಿದರೆ ಉತ್ತಮ.

ಇದೆಲ್ಲಕ್ಕಿಂತಾ ಮುಖ್ಯವಾಗಿ ಹದಿಹರೆಯದ ಪ್ರಾರಂಭದಲ್ಲೇ ಹೆಣ್ಣು ಮಗುವಿಗೆ ಅವಳ ದೇಹ, ಅದರ ಕುರಿತ ಎಚ್ಚರಿಕೆ, ಸೆಕ್ಸ್ ಸಂಬಂಧದಿಂದಾಗುವ ಪರಿಣಾಮ, ಗರ್ಭನಿರೋಧಕ ಮತ್ತದರ ಪ್ರಭಾವವೆಲ್ಲವನ್ನು ಮನೆಯಲ್ಲಿ, ಶಿಕ್ಷಣದ ಭಾಗವಾಗಿ ತಿಳಿಹೇಳುವುದು ಮುಖ್ಯವಾದುದು. ಇದರೊಂದಿಗೆ ಗಂಡು ಮಕ್ಕಳಿಗೂ ಲೈಂಗಿಕ ಬದುಕಿನ ನೈತಿಕ ಜವಾಬ್ದಾರಿ, ಅದರ ಪರಿಣಾಮಗಳ ಕುರಿತು ಎಚ್ಚರಿಕೆ, ಆರೋಗ್ಯಪೂರ್ಣ, ಹೊಣೆಗಾರಿಕೆಯ ಜೀವನದ ಮಹತ್ವದ ಅರಿವು ಮೂಡಿಸುವುದು ಅಷ್ಟೇ ಮುಖ್ಯವಾದುದು.

ಬಡತನ, ಅಸಹಾಯಕತೆ, ಶಿಕ್ಷಣ ಮತ್ತು ಮುಖ್ಯವಾಗಿ ಅರಿವಿನ ಕೊರತೆ, ಇಂತಹ ಬಹಳಷ್ಟು ಸಮಸ್ಯೆಗಳಿಗೆ ಕಾರಣವಾದ್ದರಿಂದ ಮೊದಲು ಈ ಮೂಲ ಸಮಸ್ಯೆಗಳಿಂದ ವಿಮುಕ್ತಗೊಳಿಸುವುದು ಸರ್ಕಾರ, ಸಮಾಜ ಮತ್ತು ಮಹಿಳಾ ಸಂಘಟನೆಗಳ ಮುಖ್ಯ ಗುರಿಯಾಗಬೇಕಿದೆ. ಅದಾಗದಿದ್ದಾಗ ಹೆಣ್ಣಿನ ಬಸಿರು ಮತ್ತೆ ಮತ್ತೆ ಹೀಗೇ ಹಲ್ಲೆಗೊಳಗಾಗುತ್ತಲೇ ಇರುತ್ತದೆ. ಹೆಣ್ಣು ಮಕ್ಕಳಿಗೆ ಎಲ್ಲಿಯವರೆಗೂ ತಾವೊಂದು ವಸ್ತುವಲ್ಲ, ತಾವೊಂದು ’ವ್ಯಕ್ತಿ’ ಎನ್ನುವ, ಮತ್ತು ತನ್ನ ವ್ಯಕ್ತಿತ್ವಕ್ಕೆ ಗೌರವ ಪಡೆಯಬೇಕೆಂಬ ವಿವೇಚನೆ ಮೂಡುವುದಿಲ್ಲವೋ ಅಲ್ಲಿಯವರೆಗೂ ಜಾಗೃತಿ ಮೂಡಿಸುವ ಪ್ರಯತ್ನಗಳು ನಡೆಯುತ್ತಲೇ ಇರಬೇಕಾಗುತ್ತದೆ.

ನಮ್ಮ ಪ್ರಜಾಪ್ರಭುತ್ವ: ಒಂದೆರಡು ಪ್ರಶ್ನೆಗಳು

– ಶೌರೀಶ್ ಕುದ್ಕುಳಿ

ನಾವು ಒಪ್ಪಿಕೊಂಡಿರುವ ಪರೋಕ್ಷ ಪ್ರಜಾಪ್ರಭುತ್ವದಲ್ಲಿ ಇಂದು ಎರಡು ಸಾಂವಿಧಾನಿಕ ಪ್ರಶ್ನೆಗಳು ಕಾಣಿಸಿಕೊಂಡಿವೆ. ಲಿಖಿತ ಸಂವಿಧಾನದ ಆಶಯಕ್ಕೆ ವಿರೋಧವಾಗಿ ಪ್ರಧಾನ ಮಂತ್ರಿ ಅಭ್ಯರ್ಥಿಯನ್ನು ರಾಜಕೀಯ ಪಕ್ಷಗಳು grass-map-indiaಘೋಷಿಸಿಕೊಂಡಿರುವುದು ಮತ್ತು ಓರ್ವ ಸಾಮಾನ್ಯ (ಚಹಾ ಮಾರುವ/ಮಾರುತ್ತಿದ್ದ) ವ್ಯಕ್ತಿ ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯನ್ನು ನಿರ್ವಹಿಸಬಹುದೇ? ಎಂಬುದು ಆ ಎರಡು ಪ್ರಶ್ನೆಗಳು. ಈ ಲೇಖನದಲ್ಲಿ, ಭಾರತದ ಪ್ರಜಾಪ್ರಭುತ್ವದ ಬಗೆಗಿನ ತಾತ್ವಿಕ ಅಡಿಪಾಯವನ್ನು ಚರ್ಚಿಸುತ್ತಾ, ಈ ಎರಡು ಸಾಂವಿಧಾನಿಕ ಪ್ರಶ್ನೆಗಳನ್ನು ವಿಶ್ಲೇಷಿಸಲಾಗಿದೆ.

ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ 66 ವರ್ಷಗಳನ್ನು ಪೂರೈಸಿದೆ. ವಿಶ್ವದಲ್ಲಿ ಅತಿ ದೊಡ್ಡ ಪ್ರಜಾಪ್ರಭುತ್ವವನ್ನು ಹೊಂದಿದ ದೇಶ ಎಂಬುದನ್ನು ಒಪ್ಪಿಕೊಂಡು, ಅನುಷ್ಠಾನಗೊಳಿಸಿದ ಭಾರತ, ಈ ಸುದೀರ್ಘ ಸಮಯದಲ್ಲಿ ಹಲವಾರು ಏಳುಬೀಳುಗಳನ್ನು ಕಂಡಿದೆ. ನಮಗೆ ನಾವೇ ಲಿಖಿತ ಸಂವಿಧಾನವನ್ನು ರಚಿಸಿಕೊಂಡು, ನಮ್ಮ ಪ್ರಜಾಪ್ರಭುತ್ವ ಈ ದಿಕ್ಕಿನಲ್ಲಿಯೇ ಸಾಗಬೇಕೆಂಬ ಚೌಕಟ್ಟನ್ನೂ ಹಾಕಿಕೊಂಡಿದ್ದೇವೆ. ಅಂದರೆ ಸಂವಿಧಾನದ ಆಶಯಗಳನ್ನು ನಮಗೆ ನಾವೇ ಒಪ್ಪಿಕೊಂಡಿರುವಂತಹದ್ದು. ಪರೋಕ್ಷ ಪ್ರಜಾಪ್ರಭುತ್ವದ ಸಂಸದೀಯ ಮಾದರಿಯನ್ನು ಆರಿಸಿಕೊಂಡ ನಾವು, ನಮ್ಮ ಆಡಳಿತವನ್ನು ನಮ್ಮ ಪ್ರತಿನಿಧಿಗಳ ಮೂಲಕ ಜಾರಿಗೊಳಿಸಿಕೊಳ್ಳುತ್ತಿದ್ದೇವೆ.

ಈ ಸುದೀರ್ಘ ಅವಧಿಯಲ್ಲಿ, ನಮ್ಮ ಪ್ರಜಾಪ್ರಭುತ್ವವು ಹಲವು ಸಿದ್ಧಾಂತಗಳ ಅಡಿಯಲ್ಲಿ ಪರೀಕ್ಷಿಲ್ಪಟ್ಟಿದೆ. ಇದು ಬಹಳ ಕುತೂಹಲಕಾರವಾದ ಸಂಗತಿ. ರಾಜ್ಯಶಾಸ್ತ್ರವನ್ನು ಅಧ್ಯಯನ ವಿಷಯವಾಗಿ ಅಭ್ಯಸಿಸುವ ವಿದ್ಯಾರ್ಥಿಗಳಿಗಂತೂ ಪ್ರಜಾಪ್ರಭುತ್ವದ ಹಬ್ಬಕ್ಕೆ ಬೇಕಾದ ತುಣುಕುಗಳು ಒಂದರ ಮೇಲೊಂದರಂತೆ ನಮ್ಮ ದೇಶದ ಪ್ರಜಾಪ್ರಭುತ್ವದಲ್ಲಿ ಲಭ್ಯವಿದೆ. ಅವುಗಳಲ್ಲಿ ಪ್ರಮುಖವಾಗಿ, ಪ್ರಜಾಪ್ರಭುತ್ವದ ಮೂಲಭೂತ ತಳಹದಿಗಳಾದ ಚುನಾವಣೆ, ಪ್ರತಿನಿಧಿಗಳ ಆಯ್ಕೆ, ಸರಕಾರ ಮತ್ತು ಮಂತ್ರಿ ಮಂಡಲದ ರಚನೆ, ಪ್ರಧಾನಮಂತ್ರಿ-ಮುಖ್ಯಮಂತ್ರಿಗಳ ನೇಮಕ, ರಾಷ್ಟ್ರಪತಿ-ರಾಜ್ಯಪಾಲರ ಆಯ್ಕೆ, ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳ ಕಾರ್ಯವೈಖರಿ, ಮೂಲಭೂತ ಹಕ್ಕುಗಳ ಪ್ರಜ್ಞೆ, ಮಾಧ್ಯಮಗಳ ಪಾತ್ರ, ಸರಕಾರೇತರ ಸಂಸ್ಥೆಗಳ ಗಮನಿಸುವಿಕೆ, ಜನತೆಯ ರಾಜಕೀಯ ಚಲನಶೀಲತೆ ಮತ್ತು ಅರಿವು ಇತ್ಯಾದಿಗಳಲ್ಲಿ ಆಗುತ್ತಿರುವ ಏರಿಳಿತಗಳ ಬಗ್ಗೆ ಭಾರತದ ಪ್ರತಿ ಪ್ರಜೆಯೂ ಗಮನಿಸಲೇಬೇಕಾದ ಸ್ಪಂದನವಿದೆ. ರಾಜಕೀಯ ಪಂಡಿತರು, ವಿದ್ಯಾರ್ಥಿಗಳು ಈ ಬಗ್ಗೆ ತಾತ್ವಿಕ ಮತ್ತು ಸೈದ್ಧಾಂತಿಕ ನೆಲೆಗಟ್ಟಿನಲ್ಲಿ, ನಮ್ಮ ಪ್ರಜಾಪ್ರಭುತ್ವವನ್ನು ಅರ್ಥೈಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.

ಪ್ರಜಾಪ್ರಭುತ್ವದ ಜೀವಂತ ನೆಲೆಯಾಗಿರುವ ಮುಂಬರುವ ಲೋಕಸಭಾ ಚುನಾವಣೆಯ ಒಟ್ಟು ಪ್ರಕ್ರಿಯೆಯ ನೆರಳಲ್ಲಿ, ನಮ್ಮ ರಾಜಕೀಯ ವ್ಯವಸ್ಥೆಯಾದ ಪ್ರಜಾಪ್ರಭುತ್ವವನ್ನು ಇಂದು ಒಳಹೊಕ್ಕು ನೋಡಬೇಕಾಗಿದೆ. ಇಲ್ಲಿ ಜನತೆ ತಮ್ಮ ಹಕ್ಕನ್ನು ಮತದಾನ ಮಾಡುವ ಮೂಲಕ ಚಲಾಯಿಸುತ್ತಿದ್ದಾರೆ. ಅಂದರೆ ಜನತೆಯ ನೇರ ಪಾಲ್ಗೊಳ್ಳುವಿಕೆಯನ್ನು ನಮ್ಮ ಚುನಾವಣೆಗಳು ದೃಢೀಕರಿಸುತ್ತವೆ. ಸಂಸದೀಯ ಮಾದರಿಯ ಸರಕಾರದಲ್ಲಿ, ಜನತೆಯ ನೇರ ಪಾಲ್ಗೊಳ್ಳುವಿಕೆಗೆ ಇದೇ ಉತ್ತಮ ಅವಕಾಶ.

ಬಹುಪಕ್ಷೀಯ ಪದ್ಧತಿಯನ್ನು ಹೊಂದಿರುವ ಭಾರತದ ರಾಜಕೀಯ ವ್ಯವಸ್ಥೆಯು, ಭಿನ್ನ ಭಿನ್ನವಾದ ಸಿದ್ಧಾಂತಗಳನ್ನು, ರಾಜಕೀಯ ಪಕ್ಷಗಳ ಸಿದ್ಧಾಂತಗಳನ್ನಾಗಿ ಹೊಂದಿವೆ. ಈ ರೀತಿ ಸಿದ್ಧಾಂತಗಳನ್ನು ಕಾರ್ಯರೂಪಕ್ಕೆ ತರುವಲ್ಲಿ, ಸಂವಿಧಾನದ ಮೂಲ ಆಶಯಗಳನ್ನು ಬದಿಗೆ ಸರಿಸುವ ಪ್ರಯತ್ನಗಳೂ ನಡೆದಿವೆ. ಪ್ರಮುಖವಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಮತ್ತು ಭಾರತೀಯ ಜನತಾ ಪಕ್ಷಗಳು, ಪ್ರಮುಖ ರಾಷ್ಟ್ರೀಯ ಪಕ್ಷಗಳಾಗಿರುವ ಕಾರಣಕ್ಕಾಗಿ ಅನುಕೂಲ ರಾಜಕಾರಣವನ್ನು ಮಾಡಿಕೊಂಡು ಬಂದಿವೆ.

ಪ್ರಸ್ತುತ ಎದುರಾಗಿರುವುದು ಲೋಕಸಭಾ ಚುನಾವಣೆಯ ಪೂರ್ವ ತಯಾರಿ. ಹೆಚ್ಚಿನ ಎಲ್ಲಾ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳು ಪ್ರಾರಂಭದ ತಾಲೀಮನ್ನು ನಡೆಸುತ್ತಿವೆ. ಜಾತಿ, ಧರ್ಮ, ವರ್ಗ, ಪ್ರಾದೇಶಿಕವಾದಗಳು ಪಕ್ಷಗಳ ಮೂಲ ಆಶಯಗಳಿಗಿಂತ ಹೆಚ್ಚಿನ ಪ್ರಚಾರ ಮತ್ತು ಪರಿಣಾಮಕಾರಿ ಮಹತ್ವವನ್ನು ಪಡೆದುಕೊಳ್ಳುತ್ತಿವೆ. ಈ ಪ್ರಕ್ರಿಯೆಗೆ ಮಾಧ್ಯಮಗಳೂ ಹೆಚ್ಚಿನ ಒತ್ತನ್ನು ನೀಡುತ್ತಿವೆ. ಮಾಧ್ಯಮಗಳು, ಭಾರತದ ಪ್ರಜಾಪ್ರಭುತ್ವದ ದಿಕ್ಕನ್ನು ಮುನ್ನಡೆಸುವ ವಾಹಕಗಳಾಗಿಯೂ ಗೋಚರಿಸುತ್ತಿವೆ. ನಮ್ಮ ಪ್ರಜಾಪ್ರಭುತ್ವ ಎತ್ತ ಕಡೆ ಸಾಗುತ್ತಿದೆ ಎಂಬ ಅರಿವೂ ಸಿಗದ ರೀತಿಯಲ್ಲಿ ಮತ್ತು ಕೆಲವೊಂದು ಸಂದರ್ಭಗಳಲ್ಲಿ ವಿವೇಚನಾರಹಿತವಾಗಿ ನಮ್ಮ ಮಾಧ್ಯಮಗಳು ಕಾರ್ಯಾಚರಿಸುತ್ತಿರುವುದನ್ನು ನಾವು ಕಾಣಬಹುದು.

ಯಾವುದೇ ರಾಜಕೀಯ ಪಕ್ಷವು ಇಂದು ಪ್ರಧಾನಮಂತ್ರಿಯನ್ನು ಚುನಾವಣಾ ಪೂರ್ವದಲ್ಲಿಯೇ ಘೋಷಣೆ ಮಾಡಬಹುದೇ ಎಂಬುದು ಲಿಖಿತ ಸಂವಿಧಾನದಲ್ಲಿ ನಮೂದಿಸಲ್ಪಟ್ಟಿಲ್ಲ. ಆದರೆ ನಮ್ಮ ರಾಜಕೀಯ ಪಕ್ಷಗಳು ಅಧಿಕೃತವಾಗಿಯೇ ಇದನ್ನು ಘೋಷಿಸಿಬಿಟ್ಟಿವೆ. rahul-gandhi-ordinanceಸಂವಿಧಾನ ಹೇಳುವ ಪ್ರಕಾರ, ಕೆಳಮನೆಗೆ (ಲೋಕಸಭೆ), ಜನರಿಂದ ಆಯ್ಕೆಯಾದ ಸದಸ್ಯರು ಒಗ್ಗೂಡಿ ತಮ್ಮ ನಾಯಕನನ್ನು ಆರಿಸಿಕೊಳ್ಳುತ್ತಾರೆ. ಹೀಗೆ ಆರಿಸಲ್ಪಟ್ಟ ನಾಯಕ ಒಂದು ರಾಜಕೀಯ ಪಕ್ಷದ ಮುಖಂಡನೂ ಆಗಿರುತ್ತಾನೆ. ಕೆಳಮನೆಯ ಒಟ್ಟು ಸದಸ್ಯರಲ್ಲಿ ಬಹುಮತ ಹೊಂದಿದ ರಾಜಕೀಯ ಪಕ್ಷವು ಇಂತಹ ನಾಯಕನ ನೇತೃತ್ವದಲ್ಲಿ, ರಾಷ್ಟ್ರಪತಿಯವರಲ್ಲಿ ಸರಕಾರ ರಚನೆಗೆ ಅವಕಾಶವನ್ನು ಕೋರುತ್ತದೆ. ಆತನ ಪಕ್ಷಕ್ಕಿರುವ ಬಹುಮತವನ್ನು ಪರಿಗಣಿಸಿ, ರಾಷ್ಟ್ರಪತಿಯವರು ಕೇಂದ್ರದಲ್ಲಿ ಸರಕಾರ ರಚನೆಗೆ ಆಹ್ವಾನವನ್ನು ನೀಡುತ್ತದೆ. ಆದರೆ ಭಾರತೀಯ ಜನತಾ ಪಕ್ಷ ನರೇಂದ್ರ ಮೋದಿಯವರನ್ನು, ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷ ರಾಹುಲ್ ಗಾಂಧಿ (ಭಾಗಶ:) ಯವರನ್ನು ತಮ್ಮ ಪಕ್ಷದ ಪ್ರಧಾನಿ ಅಭ್ಯರ್ಥಿಗಳನ್ನಾಗಿ ಘೋಷಿಸಿವೆ. ಜನತೆಯ ತೀರ್ಪನ್ನು ಇನ್ನೂ ಪಡೆಯದ ಈ ಇಬ್ಬರೂ ನಾಯಕರೂ ವ್ಯಕ್ತಿಗತವಾಗಿ ಮುಂಬರುವ 16 ನೇ ಲೋಕಸಭೆಯ ಜನಪ್ರತಿನಿಧಿಗಳೇ ಅಲ್ಲ! ಇಂತಹ ವ್ಯಕ್ತಿಗಳನ್ನು ಭಾರತದ ಪ್ರಧಾನಮಂತ್ರಿ ಅಭ್ಯರ್ಥಿಗಳು ಎಂದು ಘೋಷಿಸಿರುವುದು ಅಸಂವಿಧಾನಿಕ. ಇದು ಸಂವಿಧಾನಕ್ಕೆ ವಿರುದ್ಧವಾದದ್ದು. ಇಂತಹ ವ್ಯವಸ್ಥೆ ಸಂಸದೀಯ ಮಾದರಿ ಸರಕಾರದಲ್ಲಿ ಕಾಣಸಿಗುತ್ತದೆ ಎಂದಾದಲ್ಲಿ ಅದು ನೈಜ ಪ್ರಜಾಪ್ರಭುತ್ವಕ್ಕೆ ವಿರುದ್ಧವಾದದ್ದು. ರಾಷ್ಟ್ರಪತಿ ಮಾದರಿಯ ಸರಕಾರದಲ್ಲಿ (ಉದಾ: ಅಮೆರಿಕಾ) ಇಂತಹ ಮಾದರಿಗಳು ಕಾಣಸಿಗುತ್ತವೆ.

ಎರಡನೇ ಪ್ರಮುಖ ಪ್ರಶ್ನೆ ಚಹಾ ಮಾರುತ್ತಿದ್ದವನು ಈ ದೇಶದ ಪ್ರಧಾನಿಯಾಗಬಲ್ಲನೇ ಎನ್ನುವಂತಹದ್ದು. 395 ಪರಿಚ್ಚೇದಗಳು, 22 ವಿಭಾಗಗಳು ಮತ್ತು 12 ಶೆಡ್ಯೂಲ್‌ಗಳನ್ನು ಹೊಂದಿರುವ ನಮ್ಮ ಲಿಖಿತ ಸಂವಿಧಾನದಲ್ಲಿ, Narendra_Modiಭಾರತೀಯ ಸಾಮಾನ್ಯ ಪ್ರಜೆಯೂ ದೇಶದ ಉನ್ನತ ಸಾಂವಿಧಾನಿಕ ಹುದ್ದೆಗಳನ್ನು ಅಲಂಕರಿಸಲು ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ರಾಜಕೀಯ ಪಕ್ಷಗಳ ಇಂತಹ ಹೇಳಿಕೆಗಳು, ನಮ್ಮ ಪ್ರಜಾಪ್ರಭುತ್ವದ ದಿಕ್ಕನ್ನು ಸಂವಿಧಾನಕ್ಕೆ ವಿರುದ್ಧವಾಗಿ ತೆಗೆದುಕೊಂಡು ಹೋಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಈ ಕಾರ್ಯ ಪಕ್ಷಾತೀತ ನೆಲೆಗಟ್ಟಿನಲ್ಲಿ ಆಗಬೇಕಾಗಿದೆ. ದೇಶದಲ್ಲಿ ಇಂದು ನಡೆಯುತ್ತಿರುವ ರಾಜಕೀಯ ಸಮಾವೇಶಗಳು, ಪ್ರಜಾಪ್ರಭುತ್ವದ ಆತ್ಮದಂತಿರುವ ರಾಜಕೀಯ ಪಕ್ಷಗಳ ಮುಖಂಡರು ಮತ್ತು ನಾಯಕರಿಂದ ಹೊರಹೊಮ್ಮುವ ಹೇಳಿಕೆಗಳು, ನಾವು ಒಪ್ಪಿಕೊಂಡಿರುವಂತಹ ಸಂವಿಧಾನಕ್ಕೆ ಪೂರಕವಾಗಿರಬೇಕು. ಆಗ ಮಾತ್ರ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿದಂತಾಗುತ್ತದೆ. ಅಂದರೆ ಜನತೆಯ ಆಶೋತ್ತರಗಳನ್ನು ಗೌರವಿಸಿದಂತೆ ಆಗುತ್ತದೆ.

ಈ ನಿಟ್ಟಿನಲ್ಲಿ, ದೇಶದ ಜನತೆ ರಾಜಕೀಯ ಪಕ್ಷಗಳ ಒಟ್ಟು ಕಾರ್ಯವೈಖರಿಯ ಕುರಿತು ಚರ್ಚಿಸಬೇಕಾದ ಅನಿವಾರ್ಯತೆ ಇದೆ. ಏಕೆಂದರೆ, ಭಾರತದ ಪ್ರಜಾಪ್ರಭುತ್ವ ಎಂದರೆ ಪ್ರತಿಯೋರ್ವ ಭಾರತೀಯನ ಪ್ರಜಾಪ್ರಭುತ್ವ. ಇದರ ಲಕ್ಷಣಗಳನ್ನು ನಾವು ಜನಪ್ರತಿನಿಧಿಯನ್ನು ಆರಿಸುವ ಪ್ರಕ್ರಿಯೆ, ಚುನಾವಣೆ, ಸರಕಾರ ರಚನೆಯ ಸಂದರ್ಭ, ಯೋಜನೆಗಳನ್ನು ಜಾರಿಗೊಳಿಸಿ, ಅನುಷ್ಠಾನಿಸುವ ಹಂತಗಳಲ್ಲಿ ಕಾಣುತ್ತೇವೆ. ನ್ಯಾಯಯುತವಾಗಿ, ಜಾತ್ಯಾತೀತವಾಗಿ, ಸಮಾನವಾಗಿ, ಗಣರಾಜ್ಯವಾಗಿ ನಮಗೆ ನಾವೇ ಒಪ್ಪಿಕೊಂಡಿರುವ ರಾಜಕೀಯ ವ್ಯವಸ್ಥೆ ನಮ್ಮದು. ಇದನ್ನು ರಾಜಕೀಯ ವ್ಯವಸ್ಥೆಯ ಸಮಾಜಕ್ಕೆ ಮಾತ್ರವೇ ಸೀಮಿತಗೊಳಿಸಿಕೊಳ್ಳದೇ, ಪ್ರಜಾಪ್ರಭುತ್ವದ ಪರಿಣಾಮಕಾರಿ ಅನುಷ್ಠಾನಕ್ಕೆ ನಾವೆಲ್ಲಾ ಕೈಜೋಡಿಸಬೇಕಿದೆ. ಇಲ್ಲದೇ ಹೋದಲ್ಲಿ, ಪ್ರಜಾಪ್ರಭುತ್ವವನ್ನು ಕಳೆದ ಆರು ದಶಕಗಳಿಂದ ಅರ್ಥೈಸಿಕೊಳ್ಳುವುದಕ್ಕೆ ಹೆಣಗಾಡುತ್ತಿರುವ ನಾವು ಇನ್ನಷ್ಟು ಹಿಂದಕ್ಕೆ ಹೋಗಬಹುದು. ಇದು ಬಹುಸಂಸ್ಕೃತಿ, ಬಹುಭಾಷೆ, ಬಹುಜನಾಂಗ ಮತ್ತು ಬಹು ಪಕ್ಷಗಳಿಂದ ಕೂಡಿದ ಭಾರತಕ್ಕೆ ಅಪಾಯವನ್ನೇ ತಂದೊಡ್ಡಬಹುದು. ಪ್ರಜಾಪ್ರಭುತ್ವ ಸಿದ್ಧಾಂತಗಳಿಗೆ ಒಗ್ಗಿಕೊಂಡು ಸಂವಿಧಾನ ರಚನೆಗೊಂಡಿರುವಾಗ, ಅದರ ಅನುಷ್ಠಾನ ಹಂತದಲ್ಲಿ ರಾಜಕೀಯ ಪಕ್ಷಗಳು ವಿಭಿನ್ನ ನಿಲುವು ತಾಳುತ್ತಿರುವುದನ್ನು ಬಹಳಷ್ಟು ಸಂದರ್ಭಗಳಲ್ಲಿ ಗಮನಿಸಲಾಗಿದೆ. ಸಂವಿಧಾನದ ಆಶಯ ಮತ್ತು ನೈಜವಾಗಿ ಘಟಿಸುವ ಇಂತಹ ಕಾರ್ಯಗಳ ನಡುವೆ ಕಂದಕ ಅಗಲವಾಗುತ್ತಾ ಹೋದಂತೆ, ನಮ್ಮ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಕೇವಲ ಆಶಯವಾಗಿಯೇ ಉಳಿಯಬೇಕಾದ ಪ್ರಮೇಯ ಬರಬಹುದು.