ರಾಜ್ಯದಲ್ಲಿ ಆಮ್ ಆದ್ಮಿ ಪಾರ್ಟಿಗಿರುವ ಸವಾಲುಗಳು ಮತ್ತು ಸಾಧ್ಯತೆಗಳು…

– ರವಿ ಕೃಷ್ಣಾರೆಡ್ಡಿ

[ಪ್ರಜಾವಾಣಿಯಲ್ಲಿ ದಿ: ಫೆಬ್ರವರಿ 8, 2014 ರಂದು ಪ್ರಕಟವಾದ “ ‘ಆಮ್ ಆದ್ಮಿ’ಯಿಂದ ಆಶಾವಾದದ ಅಲೆ ” ಲೇಖನದ ವಿಸ್ತೃತ ರೂಪ.]

ಇಡೀ ದೇಶದಲ್ಲಿ ಆಶಾವಾದದ ಅಲೆಯೊಂದು ಬೀಸುತ್ತಿದೆ. ರಕ್ತರಹಿತ ಕ್ರಾಂತಿಯೊಂದು ಜಾರಿಯಲ್ಲಿದೆ. ಕಳೆದ ಹತ್ತಾರು ವರ್ಷಗಳ ಅನೈತಿಕ ರಾಜಕಾರಣ, ಭ್ರಷ್ಟಾಚಾರ, ದುರಾಡಳಿತಗಳಿಂದ ರೋಸಿಹೋಗಿರುವ ಜನಸಾಮಾನ್ಯನಿಗೆ ಭ್ರಷ್ಟಾಚಾರದ ವಿರುದ್ಧ ಭಾರತ ಆಂದೋಳನ ತನ್ನ ಅತೃಪ್ತಿಯನ್ನು ಮತ್ತು ರಾಜಕೀಯ ಸಕ್ರಿಯತೆಯನ್ನು ದಾಖಲಿಸಲು ಅವಕಾಶ ಮಾಡಿಕೊಟ್ಟಿತು. ಅದರ ಮುಂದುವರೆದ ಭಾಗವಾಗಿ ದೆಹಲಿಯ ಜನ ಎರಡು ತಿಂಗಳ ಹಿಂದೆ ಅಭೂತಪೂರ್ವವೆನ್ನುವಂತಹ ಪ್ರಜಾಸತ್ತಾತ್ಮಕ ತೀರ್ಪನ್ನು ನೀಡಿ ಕೊಳಚೆಯಲ್ಲಿ ಮುಳುಗಿ ಹೋಗಿದ್ದ ಪರಂಪರಾಗತ ರಾಜಕಾರಣಕ್ಕೆ ತೀವ್ರವಾದ ಕೊಡಲಿ ಪೆಟ್ಟನ್ನು ಕೊಟ್ಟರು.

ಈಗ ಆ ಸದಾಶಯ ಮತ್ತು ಆಶಾವಾದದ ಗಾಳಿ ದೇಶದಾದ್ಯಂತ ಇರುವಂತೆ ಕರ್ನಾಟಕದಲ್ಲೂ ಇದೆ. ಆಮ್ ಆದ್ಮಿ ಪಾರ್ಟಿಯ ದೆಹಲಿ ಯಶಸ್ಸಿನಲ್ಲಿ ಕರ್ನಾಟಕದ, ಅದರಲ್ಲೂ ಬೆಂಗಳೂರಿನ ಪಾಲು ಬಹಳಷ್ಟಿದೆ. ಇಲ್ಲಿಂದ ನೂರಾರು ಕಾರ್ಯಕರ್ತರು ದೆಹಲಿಗೆ ಹೋಗಿ ತಮ್ಮ ತನುಮನಧನಗಳನ್ನು ಅರ್ಪಿಸಿ ಪ್ರಚಾರ ಕಾರ್ಯದಲ್ಲಿ ವಾರ-ತಿಂಗಳುಗಳ ಕಾಲ ತೊಡಗಿಸಿಕೊಂಡಿದ್ದರು. ಇಲ್ಲಿಯ ಸಾವಿರಾರು ಜನ ಪಕ್ಷಕ್ಕೆ ದೇಣಿಗೆ ನೀಡಿ ಸ್ವಚ್ಚ ಮತ್ತು ಮೌಲ್ಯಾಧಾರಿತ ರಾಜಕಾರಣವನ್ನು ಬೆಂಬಲಿಸಿದರು. ದೆಹಲಿಯ ನಂತರ ಈ ಹೋರಾಟಕ್ಕೆ ಅತಿಹೆಚ್ಚು ದೇಣಿಗೆ ಹರಿದಿದ್ದು ಬೆಂಗಳೂರಿನ ನಿವಾಸಿಗಳಿಂದ. ಈಗ ಆಮ್ ಆದ್ಮಿ ಪಾರ್ಟಿ ಕರ್ನಾಟಕದಲ್ಲೂ ಲೋಕಸಭೆ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುವ ಮೂಲಕ ದೆಹಲಿಯಲ್ಲಾದ ಬದಲಾವಣೆಯನ್ನು ಕರ್ನಾಟಕದಲ್ಲೂ ಸಾಧ್ಯವಾಗಿಸಲು ಪ್ರಯತ್ನಿಸುತ್ತಿದೆ.

ಕರ್ನಾಟಕದ ಮಟ್ಟಿಗೆ ಹೇಳುವುದಾದರೆ AAP ಮಾಡುತ್ತಿರುವ ರಾಜಕೀಯ ಹೋರಾಟದ ರೀತಿ ಅಪರಿಚಿತವಾದದ್ದೇನೂ ಅಲ್ಲ. ಅದು ಇತ್ತೀಚೆಗೆ ಅಪರಿಚಿತವಾಗಿದೆ ಅಷ್ಟೇ. ಐವತ್ತು-ಅರವತ್ತರ ದಶಕದಲ್ಲಿಯೇ ಸಾಮಾನ್ಯ ರೈತಾಪಿ ಮನೆಯ ಶಾಂತವೇರಿ ಗೋಪಾಲಗೌಡರನ್ನು ಸಾಗರ-ಶಿವಮೊಗ್ಗದ ಜನ ತಾವೇ ದೇಣಿಗೆ ಕೊಟ್ಟು, ಪ್ರಚಾರ ಮಾಡಿ ಶಾಸನಸಭೆಗೆ ಆರಿಸಿಕಳುಹಿಸಿದ್ದರು. ಶಾಂತವೇರಿಯವರು ಅನಾರೋಗ್ಯದ ಕಾರಣದಿಂದ ಸ್ಪರ್ಧಿಸಲು ಸಾಧ್ಯವಾಗದೇ ಹೋದಾಗ ಕೊಣಂದೂರು ಲಿಂಗಪ್ಪನವರನ್ನು ಜಾತ್ಯಾತೀತವಾಗಿ ಬೆಂಬಲಿಸಿ ಯಾವೊಂದೂ ಆಮಿಷಕ್ಕೆ ಒಳಗಾಗದೆ ಅವರನ್ನು ಶಾಸನಸಭೆಗೆ ಕಳುಹಿಸಿದ್ದರು. ತನ್ನೆಲ್ಲ ಜಾತಿವಾದ ಮತ್ತು ಭ್ರಷ್ಟಾಚಾರಗಳ ಮಧ್ಯೆಯೂ ಈ ರಾಜ್ಯ ಪ್ರಗತಿಪರ ವಿಚಾರಧಾರೆಗಳಿಗೆ, ರಾಜಕೀಯ-ಸಾಮಾಜಿಕ ಸುಧಾರಣೆಗಳಿಗೆ ಹೆಸರಾಗಿತ್ತು. ಇಲ್ಲಿ ಘಟಿಸಿದ ದಲಿತ-ರೈತ-ಬಂಡಾಯ ಚಳವಳಿಗಳು ಎಲ್ಲಾ ವರ್ಗದ ಜನರಲ್ಲಿ ರಾಜಕೀಯ ಮತ್ತು ಸಾಮಾಜಿಕ ಮೇಲ್ಮುಖ ಚಲನೆಗೆ ಕಾರಣೀಭೂತವಾಗಿತ್ತು. ಆದರೆ, ಕಳೆದ ಎರಡು ದಶಕಗಳಿಂದ ಈಚೆಗೆ ರಾಜ್ಯದ ರಾಜಕೀಯ ರಂಗದಲ್ಲಿ ಆದ ಮೌಲ್ಯಗಳ ಅಧ:ಪತನ ಕಾಂಗ್ರೆಸ್-ಜೆಡಿಎಸ್, ಜೆಡಿಎಸ್-ಬಿಜೆಪಿ, ಮತ್ತು ಬಿಜೆಪಿ ಸರ್ಕಾರಗಳ ಸಮಯದಲ್ಲಿ ಪ್ರಪಾತಕ್ಕೆ ಬಿದ್ದು ಇಡೀ ದೇಶದಲ್ಲಿ ಅತಿ ಕೆಟ್ಟ ಮತ್ತು ಭ್ರಷ್ಟ ಸರ್ಕಾರವಿರುವ ರಾಜ್ಯ ಕರ್ನಾಟಕ ಎಂಬ ಕುಖ್ಯಾತಿ ಪಡೆಯಿತು.

ಈ ಎಲ್ಲಾ ಕುಖ್ಯಾತಿಯನ್ನು ಹೋಗಲಾಡಿಸಿಕೊಳ್ಳುವುದಕ್ಕೆ ಮತ್ತು ಸಾರ್ವಜನಿಕ ಜೀವನದಲ್ಲಿಯ ಮೌಲ್ಯಗಳ ಪುನರುತ್ಥಾನಕ್ಕೆ 2013 ರ ವಿಧಾನಸಭಾ prajavani-feb082014ಚುನಾವಣೆ ರಾಜ್ಯದ ಜನಕ್ಕೆ ಒಂದು ಅವಕಾಶ ಒದಗಿಸಿತ್ತು. ಆದರೆ, ಇಲ್ಲಿ ಸಶಕ್ತವಾದ ರಾಜಕೀಯ ಚಳವಳಿಯನ್ನಾಗಲಿ, ಪರ್ಯಾಯವನ್ನಾಗಲಿ ರಾಜ್ಯದ ಮುಂಚೂಣಿ ಚಿಂತಕರು, ಚಳವಳಿಕಾರರು, ಸಾಮಾಜಿಕ-ರಾಜಕೀಯ ಹೋರಾಟಗಾರರು ಕಟ್ಟಲಾಗದೇ ಹೋದರು. ಇರುವ ರಾಜಕೀಯ ಪಕ್ಷಗಳಲ್ಲೇ ಒಂದನ್ನು ಆರಿಸಿಕೊಳ್ಳುವ ಸ್ಥಿತಿ ಜನರದಾಯಿತು. ಭ್ರಷ್ಟ ಬಿಜೆಪಿಯನ್ನು ತೊಲಗಿಸುವ ನಿರ್ಧಾರ ಮಾಡಿದ್ದ ಜನ ಏಳು ವರ್ಷಗಳಿಂದ ಅಧಿಕಾರದಿಂದ ಹೊರಗಿದ್ದ ಕಾಂಗ್ರೆಸ್ ಪಕ್ಷವನ್ನು ಅನಿವಾರ್ಯವಾಗಿ ಅಧಿಕಾರಕ್ಕೆ ತಂದರು. ಈ ಸರ್ಕಾರದ ಆಡಳಿತಾವಧಿಯಲ್ಲಿ ಘಟಿಸುತ್ತಿರುವ ದೊಡ್ಡಹಗರಣಗಳು ಬಯಲಾಗದೇ ಇರುವುದನ್ನು ಹೊರತುಪಡಿಸಿದರೆ, ರಾಜ್ಯದ ಕಾಂಗ್ರೆಸ್ ಸರ್ಕಾರದ ನಿಷ್ಕಿಯತೆ, ಸರ್ಕಾರಿ ಕಛೇರಿಗಳಲ್ಲಿ ಕಮ್ಮಿಯಾಗದ ಲಂಚಗುಳಿತನ, ಭ್ರಷ್ಟಾಚಾರದ ವಿರುದ್ಧ ಸರ್ಕಾರಕ್ಕಿಲ್ಲದ ಚಿತ್ತಶುದ್ಧಿ, ಕಳಂಕಿತರು ಸಚಿವರಾಗಿರುವುದು, ಇತ್ಯಾದಿಗಳಿಂದಾಗಿ ರಾಜ್ಯದ ಜನತೆ ಭ್ರಮನಿರಸನಗೊಂಡಿದ್ದಾರೆ ಮತ್ತು ದೆಹಲಿಯಲ್ಲಿ ಒದಗಿದಂತೆ ಇಲ್ಲಿಯೂ ಕಾಂಗ್ರೆಸ್-ಬಿಜೆಪಿ-ಜೆಡಿಎಸ್ ಪಕ್ಷಗಳಿಗೆ ಆಮ್ ಆದ್ಮಿ ಪಾರ್ಟಿ ಪರ್ಯಾಯವಾದೀತು ಎಂಬ ಆಶಾವಾದದಲ್ಲಿದ್ದಾರೆ.

ಈಗಾಗಲೆ ರಾಜ್ಯದಲ್ಲಿ AAPಗೆ ನಿರೀಕ್ಷೆಗೂ ಮೀರಿದ ಜನಬೆಂಬಲ ವ್ಯಕ್ತವಾಗುತ್ತಿದೆ. ಜನ ತಾವಾಗಿಯೇ ಎಸ್‍ಎಮ್‌ಎಸ್ ಕಳುಹಿಸಿ ಸದಸ್ಯರಾಗುತ್ತಿದ್ದಾರೆ. ಒಳ್ಳೆಯದರ ಪರ ನಿಲ್ಲಬೇಕು ಎನ್ನುವ ಅನೇಕ ನಾಗರಿಕರು–ಗಣ್ಯರೂ ಸೇರಿದಂತೆ–ಸದ್ದಿಲ್ಲದೆ ಪಕ್ಷದ ಸದಸ್ಯರಾಗಿದ್ದಾರೆ. ಇತ್ತೀಚಿನ ಮಾಹಿತಿಗಳ ಪ್ರಕಾರ ರಾಜ್ಯದಲ್ಲಿ ಸುಮಾರು ಮೂರು ಲಕ್ಷ ಜನ ಆಮ್ ಅದ್ಮಿ ಪಕ್ಷದ ಸದಸ್ಯರಾಗಿದ್ದಾರೆ, ಮತ್ತು ಅರ್ಧಕ್ಕೂ ಹೆಚ್ಚು ಜನ ಬೆಂಗಳೂರಿನಲ್ಲಿಯೇ ಇದ್ದಾರೆ. ಭ್ರಷ್ಟಾಚಾರದ ವಿರುದ್ಧ ಪ್ರಾಮಾಣಿಕ ಹೊರಾಟದಲ್ಲಿ ತೊಡಗಿಕೊಂಡಿರುವವರು ಮತ್ತು ಯಾವುದೇ ವೈಯಕ್ತಿಕ ಲಾಭ-ಫಲಾಪೇಕ್ಷೆಯ ಆಕಾಂಕ್ಷೆ ಇಲ್ಲದ, ಈ ದೇಶವನ್ನು ಪ್ರೀತಿಸುವ ಯುವಕರು ತಮ್ಮ ನೌಕರಿಗಳಿಂದ ರಜೆ ಪಡೆದು, ಇಲ್ಲವೆ ತ್ಯಜಿಸಿ, ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಅನೈತಿಕ ರಾಜಕೀಯ ವ್ಯವಸ್ಥೆ ಬದಲಾಗಬೇಕು, ಭ್ರಷ್ಟಾಚಾರ ಕೊನೆಗೊಳ್ಳಬೇಕು, ಅ ಮೂಲಕ ದೇಶವಾಸಿಗಳ ಜನಜೀವನ ಸುಧಾರಿಸಬೇಕು ಮತ್ತು ಸುಂದರವಾಗಬೇಕು ಎಂಬ ಕನಸು ಹೊತ್ತವರು ಇವರು. ತಮ್ಮ ಇಡೀ ಜೀವಮಾನದಲ್ಲಿ ಯಾವೊಂದೂ ಚಳವಳಿಯಲ್ಲಿ ಪಾಲ್ಗೊಂಡಿರದ ಅಥವ ಅಂತಹ ಅವಕಾಶ ಸಿಕ್ಕಿಲ್ಲದ ಯುವಕಯುವತಿಯರು ಇದನ್ನು ದೇಶಸೇವೆಯ ಕರೆ ಮತ್ತು ಅದಕ್ಕೆ ಓಗೊಡುವುದು ನನ್ನ ಕರ್ತವ್ಯ ಎಂದು ಭಾವಿಸಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ. ರೈತ ಮತ್ತು ಜನಪರ ಚಳವಳಿಗಳಲ್ಲಿ ಪಾಲ್ಗೊಂಡಿದ್ದ ಅನೇಕ ಮುಖಂಡರು, ಚಳವಳಿಗಳ ಬಗ್ಗೆ ಬದ್ಧತೆ ಹೊಂದಿರುವ ಚಿಂತಕರು ಮತ್ತು ಕಾರ್ಯಕರ್ತರು ರಾಜ್ಯದಲ್ಲಿ ಆಮ್ ಆದ್ಮಿ ಪಾರ್ಟಿಯನ್ನು ತಮ್ಮಂತಹದೇ ಚಳವಳಿಗಳ ಮುಂದುವರೆದ ರೂಪ ಎಂದು ಭಾವಿಸಿ ಬೆಂಬಲಿಸುತ್ತಿದ್ದಾರೆ. ಎಚ್.ಎಸ್.ದೊರೆಸ್ವಾಮಿ, ಎಸ್.ಆರ್.ಹಿರೇಮಠ್, ಕಡಿದಾಳು ಶಾಮಣ್ಣ, ರಾಘವೇಂದ್ರ ಕುಷ್ಟಗಿ, ಆ.ನ.ಯಲ್ಲಪ್ಪ ರೆಡ್ಡಿ, ಮತ್ತು ಇನ್ನೂ ಅನೇಕ ಹೋರಾಟಗಾರರು ಪಕ್ಷದ ಸದಸ್ಯರಾಗಿದ್ದಾರೆ, ಇಲ್ಲವೇ ಅದನ್ನು ಬೆಂಬಲಿಸುತ್ತಿದ್ದಾರೆ.

ಆದರೆ, ಇದೇ ಸಂದರ್ಭದಲ್ಲಿ ಕೇವಲ ಚುನಾವಣೆಗೆ ಸ್ಪರ್ಧಿಸುವ ಉದ್ದೇಶವನ್ನೇ ಮುಖ್ಯವಾಗಿಸಿಕೊಂಡು ಕೆಲವು ಜನ ಪಕ್ಷವನ್ನು ಸೇರುತ್ತಿದ್ದಾರೆ. ಇನ್ನೊಂದು ರಾಜಕೀಯ ಪಕ್ಷದ ಸದಸ್ಯನಾಗಿರದ ದೇಶದ ಯಾವೊಬ್ಬ ನಾಗರಿಕನಾಗಲಿ ಆಮ್ ಆದ್ಮಿ ಪಕ್ಷದ ಸದಸ್ಯನಾಗುವುದಕ್ಕೆ ಯಾವುದೇ ನಿರ್ಬಂಧ ಇರಬಾರದು. ಆದರೆ ಯಾರು ಪಕ್ಷವನ್ನು ಎಲ್ಲಿ ಮುನ್ನಡೆಸಬೇಕು ಮತ್ತು ಅವರ ಇತಿಮಿತಿಗಳೇನು, ದೀರ್ಘಕಾಲದ ರಾಜಕೀಯ ಸಂಘಟನೆ ಮತ್ತು ಹೋರಾಟದಲ್ಲಿ ಯಾರು ಎಲ್ಲಿ ನಿಲ್ಲುತ್ತಾರೆ ಎನ್ನುವ ಸ್ಪಷ್ಟ ಕಲ್ಪನೆ ಪಕ್ಷಕ್ಕಿರಬೇಕು. ಇಲ್ಲದಿದ್ದರೆ ಅವಕಾಶವಾದಿಗಳು ಪಕ್ಷದ ನಿಸ್ವಾರ್ಥಿ ಕಾರ್ಯಕರ್ತರನ್ನು ಬಳಸಿಕೊಂಡು ಈ ಆಂದೋಳನದ ಧ್ಯೇಯೋದ್ದೇಶಗಳನ್ನು ಮತ್ತು ಪಾವಿತ್ರ್ಯವನ್ನು ಹಾಳುಮಾಡುವ ಸಾಧ್ಯತೆಗಳಿರುತ್ತವೆ. ಅಂತಹ ದ್ರೋಹ ಪಕ್ಷದ ಕಾರ್ಯಕರ್ತರಿಗೆ ಎಸಗಿದ ದ್ರೋಹವಷ್ಟೇ ಆಗುವುದಿಲ್ಲ, ಬದಲಿಗೆ ಚಾರಿತ್ರಿಕ ಅವಕಾಶವೊಂದನ್ನು ಮಣ್ಣುಗೂಡಿಸಿದ ಆರೋಪವನ್ನೂ ಹೊರಬೇಕಾಗುತ್ತದೆ. ಈ ನಿಟ್ಟಿನಲ್ಲಿ ರಾಜ್ಯದ ಹಿರಿಯ ಹೋರಾಟಗಾರರ ಮತ್ತು ಪ್ರಾಮಾಣಿಕ ಮನಸ್ಸುಗಳ ಮಾರ್ಗದರ್ಶನ ಪಕ್ಷಕ್ಕೆ ತೀರಾ ಅಗತ್ಯವಾಗಿದೆ. ಪದಾಧಿಕಾರಿಗಳ ನೇಮಕಾತಿಯಲ್ಲಿ ಆಂತರಿಕ ಪ್ರಜಾಪ್ರಭುತ್ವ ರೂಢಿಸಿ, ಅಧಿಕಾರಾವಧಿಗೆ ಮಿತಿಯನ್ನೂ (Term Limit) ಹೇರಿದರೆ ಈ ಪಕ್ಷ ತಾನೂ ಗುಣಾತ್ಮಕವಾಗಿ ಬೆಳೆಯುವದೇ ಅಲ್ಲದೆ ಪರೋಕ್ಷವಾಗಿ ಬೇರೆ ಪಕ್ಷಗಳಲ್ಲಿಯೂ ಗುಣಾತ್ಮಕ ಬದಲಾವಣೆಗಳನ್ನು ತರಬಲ್ಲುದಾಗಿದೆ.

ಈ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಹಲವು ನಗರಕೇಂದ್ರಿತ ಕ್ಷೇತ್ರಗಳಲ್ಲಿ ಆಮ್ ಆದ್ಮಿ ಪಕ್ಷದ ಉಮೇದುವಾರಿಕೆಯಿಂದಾಗಿ ಖಂಡಿತವಾಗಿ ತ್ರಿಕೋನ ಅಥವ ಚತುಷ್ಕೋನ ಸ್ಪರ್ಧೆ ಏರ್ಪಡಲಿದೆ. ರಾಜ್ಯದ ಸಮಸ್ಯೆಗಳ ಪರಿಹಾರಕ್ಕೆ ಈ ಪಕ್ಷ ದುಡಿಯುತ್ತದೆ ಮತ್ತು ಈ ಪರ್ಯಾಯ ಯಾವುದೇ ಕಾರಣಕ್ಕೂ ಭ್ರಷ್ಟವಾಗುವುದಿಲ್ಲ ಮತ್ತು ಇದರ ಅಭ್ಯರ್ಥಿಗಳು ಚುನಾವಣಾ ಅಕ್ರಮಗಳನ್ನು ಎಸಗುವುದಿಲ್ಲ ಎನ್ನುವ ಸಂದೇಶ ಮತ್ತು ವಾಸ್ತವವನ್ನು ರಾಜ್ಯದ ಜನತೆಗೆ ಮುಟ್ಟಿಸುವಲ್ಲಿ ಯಶಸ್ವಿಯಾದರೆ, ರಾಷ್ಟ್ರ ರಾಜಧಾನಿಯಲ್ಲಾದ ರಾಜಕೀಯ ಕ್ರಾಂತಿ ರಾಜ್ಯ ರಾಜಧಾನಿಯಲ್ಲೂ ಈ ಬಾರಿಯೇ ಆಗುತ್ತದೆ, ಮತ್ತದು ಕರ್ನಾಟಕದ ಉದ್ದಗಲಕ್ಕೂ ಪಸರಿಸುತ್ತದೆ. ಇನ್ನು ಒಂದೂವರೆ ವರ್ಷದಲ್ಲಿ ಬೆಂಗಳೂರು ಮಹಾನಗರ ಪಾಲಿಕೆಗೆ ಚುನಾವಣೆ ನಡೆಯಲಿದೆ. ಇವತ್ತಿನ ಸಂಘಟನೆ ಮತ್ತು ಜನಬೆಂಬಲದ ದೃಷ್ಟಿಯಿಂದ ನೋಡಿದರೆ ಮಹಾನಗರಪಾಲಿಕೆಯಲ್ಲಿ ಅತಿದೊಡ್ಡ ಗುಂಪಾಗಿ ಆಮ್ ಆದ್ಮಿ ಪಾರ್ಟಿ ಹೊಮ್ಮುವ ಸಾಧ್ಯತೆ ಇದೆ. ದೂರದೃಷ್ಟಿಯಿಂದ ಕೆಲಸ ಮಾಡುತ್ತ, ಪಕ್ಷ ಸಂಘಟನೆಯ ಜೊತೆಜೊತೆಗೆ ರಚನಾತ್ಮಕ ಕಾರ್ಯಗಳನ್ನೂ ಹಮ್ಮಿಕೊಳ್ಳುತ್ತ, ಇದೇ ನೈತಿಕತೆ ಮತ್ತು ಪರಿಶುದ್ಧತೆಯನ್ನೂ ಉಳಿಸಿಕೊಂಡು ರಾಜ್ಯದ ಜನರ ಪರ ಕೆಲಸ ಮಾಡುತ್ತ ಹೋದರೆ 2018 ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ನಾವೆಲ್ಲರೂ ಹೆಮ್ಮೆಪಡಬಹುದಾದ ಫಲಿತಾಂಶ ನೀಡಲು ರಾಜ್ಯದ ಜನತೆ ಸಿದ್ಧವಿದ್ದಾರೆ ಎನ್ನುವುದು ಇಂದಿನ ವಾಸ್ತವ.

One thought on “ರಾಜ್ಯದಲ್ಲಿ ಆಮ್ ಆದ್ಮಿ ಪಾರ್ಟಿಗಿರುವ ಸವಾಲುಗಳು ಮತ್ತು ಸಾಧ್ಯತೆಗಳು…

  1. Ananda Prasad

    ಮಹಾತ್ಮಾ ಗಾಂಧಿಯವರ ಮೊಮ್ಮಗ ಹಾಗೂ ಖ್ಯಾತ ಚಿಂತಕ, ಲೇಖಕ ರಾಜಮೋಹನ ಗಾಂಧಿ ಆಮ್ ಆದ್ಮಿ ಪಕ್ಷಕ್ಕೆ ಇಂದು ಅಧಿಕೃತವಾಗಿ ಸೇರಿದ್ದಾರೆ. ಈ ವೇಳೆ ಸಿಎನ್ನೆನ್ ಐಬಿಎನ್ ವಾಹಿನಿಯವರು ನಿಮ್ಮನ್ನು ಆಪ್ ಪಾರ್ಟಿಗೆ ಆಕರ್ಷಿಸಿದ ಅಂಶಗಳಾವುವು ಎಂದು ಕೇಳಿದಾಗ ಅವರು ಹೇಳಿದ್ದು – ಇದು ಭಾರತದ ಮಣ್ಣಿನ ಪಕ್ಷ ಅಂದರೆ ರಾಜಕೀಯ ಹಿನ್ನೆಲೆ ಇಲ್ಲದ ಸಾಮಾನ್ಯ ಜನರೇ ಕಟ್ಟಿದ ಪಕ್ಷ, ಇದು ಭ್ರಷ್ಟಾಚಾರದ ವಿರುದ್ಧ ಅಂಜಿಕೆ ಇಲ್ಲದೆ ಹೋರಾಟ ನಡೆಸುತ್ತಿದೆ, ಜನ ಇದರಲ್ಲಿ ಒಂದು ಭರವಸೆ ಕಾಣುತ್ತಿದ್ದಾರೆ, ಇದು ಸಾಕಷ್ಟು ರಾಜಕೀಯದಲ್ಲಿಲ್ಲದ ಜನರಲ್ಲೂ ರಾಜಕೀಯಕ್ಕೆ ಸೇರಿ ಒಂದು ಹೊಸ ಬದಲಾವಣೆ ತರುವ ಕನಸು ಪ್ರೇರೇಪಿಸಿದೆ, ಅದೇ ರೀತಿ ಇದು ನನ್ನನ್ನೂ ಪ್ರೇರೇಪಿಸಿದೆ ಎಂದು ಹೇಳಿದ್ದಾರೆ.

    Reply

Leave a Reply

Your email address will not be published. Required fields are marked *