ಗಾಂಧಿ ಸಾವು ಮತ್ತು ಬೇಂದ್ರೆ ಕವನ

– ಜಯಪ್ರಕಾಶ್ ಶೆಟ್ಟಿ

ಇದು ‘ಸಂಭವಾಮಿ ಯುಗೇಯುಗೇ..’ ಎಂದು ನಂಬಿಸುತ್ತಲೇ ಬಂದ ದೇಶ. ಯಾವ ಯಾವುದೋ ಹೊಸಹೊಸ ಹರಿಕಾರರು, ಅವತಾರಪುರುಷರು, ಏನೇನನ್ನೋ ಮಾರುವವರು, ಕೊಳ್ಳುವವರು, ಬಿಡುಗಡೆಯ ಭಾಗ್ಯದಾತರುಗಳನ್ನು ಎದುರಿಗಿಟ್ಟು ಮತ್ತದೇ ಯುಗ ಯುಗದ ಅವತಾರದ ಕಥನಗಳನ್ನು ಪಠಿಸುತ್ತಲೇ ಬರುತ್ತಿರುವ ದೇಶವೂ ಹೌದು. ಆದರೆ ಏನೆಲ್ಲಾ ಕಸರತ್ತುಗಳ ನಡುವೆಯೂ ದೇಶದ ನರನಾಡಿಗಳಲ್ಲಿ ಬೆರೆತುಹೋದ ಗಾಂಧಿ ಮತ್ತು ಅಂಬೇಡ್ಕರ್ ಎಂಬೆರಡು ಹೆಸರುಗಳನ್ನು ಪ್ರಾಯಶಃ ಇನ್ನೂ ಕೆಲಕಾಲದವರೆಗೆ ಅಳಿಸಿ ಹಾಕಲಾಗದು. ಪ್ರಕಾಶಿಸುವ ಭಾರತದ ಕೋರೈಸುವ ಬೆಳಕಾಗಲೀ, ಗೆಲ್ಲಬೇಕಾದ ಭಾರತದ ಆರ್ಭಟವಾಗಲೀ ಗಾಂಧಿ ಮತ್ತು ಅಂಬೇಡ್ಕರರನ್ನು ನಾಪತ್ತೆ ಮಾಡುವಷ್ಟು ಎಂದಿಗೂ ಸಶಕ್ತವಲ್ಲ. ಆದರೆ ಇವರುಗಳಲ್ಲೊಬ್ಬರಾದ ಗಾಂಧಿಯನ್ನು ಈ ದೇಶದ ಕೆಟ್ಟಮನಸ್ಸೊಂದು “ಬಲಿ” ಪಡೆಯಿತು. gandhi_dead_bodyಅದು ಒಬ್ಬ ವ್ಯಕ್ತಿ ಮಾಡಿದ ಕೊಲೆಯಲ್ಲ. ಅಸಹನೆಯ ಮನೋಧರ್ಮವೊಂದರ ಹಿಂಸೆ. ಆದರೆ ಅದರ ಹೊಣೆ ಅಷ್ಟಕ್ಕೇ ಸೀಮಿತವಲ್ಲ. ಮೌನಸಮ್ಮತಿ ನೀಡುತ್ತಲೇ ಬಂದ “ಸಜ್ಜನಿಕೆಯ” ಭಾರತೀಯರೆಲ್ಲರೂ ಅದರ ಹೊಣೆಗಾರರು. ಅದು ನಾವೇ ಮಾಡಿದ ಕೊಲೆ. ಹೀಗಾಗಿ ಪ್ರತೀವರ್ಷದ ಫೆಬ್ರವರಿಗೆ ಕಾಲಿಡುತ್ತಿದ್ದಂತೆಯೇ, ಉತ್ತರಾಯಣದ ಆದಿಯಲ್ಲಿನ ಈ ನರಳಾಟದಿಂದ ನಮಗೆ ಬಿಡುಗಡೆಯಿಲ್ಲ. ದೇಶಸಮಸ್ತವೂ ತಲೆತಗ್ಗಿಸಬೇಕಾದ ಈ “ಪಾಪದಹೂರಣ” ನಮಗೆ ಅಂಟಿ ಕೂತಿರುವ ಬಿಡುಗಡೆಯೇ ಇಲ್ಲದ “ಹತ್ಯೆಯಕೆಸರು”. ರಾಷ್ಟ್ರಪಿತನನ್ನು ಗುಂಡಿಟ್ಟುಕೊಂದ ಕೊಲೆಯ ಕಪ್ಪುಕಲೆಯನ್ನು ಹೀಗೆ ಬೆತ್ತಲಾಗಿ ಒಪ್ಪಿಕೊಳ್ಳಲೇಬೇಕಾದುದರಿಂದ “ಗಾಂಧೀ ಸಾವಿನ” ಈ ನೋವಿನಿಂದ ಯಾರಿಗೂ ಮುಕ್ತಿ ಇಲ್ಲದಾಗಿದೆ.

ದೇಶಸ್ಮೃತಿಯ ಭಾಗವೇ ಆಗಿಹೋದ ಆ ಅರೆಬೆತ್ತಲೆಯ ಫಕೀರನ ಕೊಲೆ, ಯಾವ ಗಂಗೆಯಲ್ಲಿಯೂ ತೊಳೆದು ತೀರದ ಪಾಪ. ಇದಕ್ಕೂ ಸಿಹಿ ಹಂಚಿ ಸಂಭ್ರಮಿಸಿದವರಿದ್ದರೆಂಬುದು ಕೇಳಬಾರದ ಮಾತು. ಅದು ಬೇರೆ ಸಂಗತಿ. ಆದರೆ “ರಕ್ತ-ಮಾಂಸ ಸಹಿತವಾಗಿ ಇಂತಹದ್ದೊಂದು ಜೀವ ಲೋಕದಲ್ಲಿ ಓಡಾಡಿಕೊಂಡಿತ್ತೇ?” ಎಂಬುದು ಈ ಜೀವದ ಕುರಿತು ವಿಶ್ವವಿಖ್ಯಾತ ವಿಜ್ಞಾನಿ ಐನ್‌ಸ್ಟಿನ್ ತೆಗೆದ ಉದ್ಗಾರ. ಆದರೆ ಆ ಜೀವವೂ ನರಳಿ ನೆಲಕ್ಕುರುಳಿದ್ದು, “ಹೇ ರಾಮ್” ಎಂಬ ಸೊಲ್ಲಿನೊಂದಿಗೇ. ಅದು “ದೇವರೇ, ಕ್ಷಮೆ ಮಾಡು, ಕೊಲೆಗಡುಕರಾರೇ ಇರಲಿ; ಸರ್ವೇಜನರು ಸುಖವಾಗಿರಲಿ ಎಂದು ರಾಮನಲಿ ಮೊರೆಯಿಟ್ಟು” (ಔದುಂಬರಗಾಥೆ,ಸಂ-1,ಪು.446) ಪ್ರಾಣಬಿಟ್ಟಿತ್ತು. ವಿಚಿತ್ರವೆಂದರೆ ಕೊಂದವನ ಹೆಸರಲ್ಲಿಯೂ ರಾಮನೇ ಅಂಟಿಕೊಂಡಿತ್ತು! Gandhi's Funeralಅವನೂ ರಾಮನೇ! ಕೊಲೆಗಾರ ನಾಥೂರಾಮ. ಸ್ವತಂತ್ರಭಾರತದ ಮೊತ್ತಮೊದಲ ಭಯೋತ್ಪಾದಕ. ಮೊಟ್ಟೆ ಮಾಂಸವನ್ನೂ ತಿನ್ನದ ಶುದ್ಧ ಶಾಖಾಹಾರಿ! ಸಾತ್ವಿಕ ಆಹಾರದೊಳಗಿಂದಲೇ ತೂರಿಬಂದ ನೆತ್ತರ ಹಸಿಹಸಿವು. ಆದರೆ ನಾಥೂರಾಮನ ಮೂಲಕ ಸಿಡಿದ ಗುಂಡು, ಅದನ್ನು ಹೊರಚಲ್ಲಿದ ಕೋವಿಯ ನಳಿಕೆ, ಕುದುರೆಯನ್ನು ಅಮುಕಿದ ಗೋಡ್ಸೆಯ ಕೈಗಳು ಕೇವಲ ಬಹಿರಂಗಕ್ಕೊದಗಿದ ಸಾಕ್ಷಿಗಳು. ಇದು ಲೋಕಕ್ಕೇ ಗೊತ್ತಿದೆ. ಆತ ಸಾಧನ ಅಷ್ಟೇ. ಸೂತ್ರವಾದರೋ “ಹಿಂಸೆಯ ಹೆಪ್ಪು”. ಆ ಹೆಪ್ಪೇ, ಅಹಿಂಸೆಯೆಂಬ ಗೋಡೆಯ ಮೇಲೆ ಮತ್ತೆಮತ್ತೆ ಅರಳಿ ಉದುರುತ್ತಲೇ ಇರುವ ಹೊಸಚಿತ್ರಗಳ ಮೂಲಬಿಂದು. ಆ ಹೆಪ್ಪಿನ್ನೂ ಕರಗಿಲ್ಲ. ಗಟ್ಟಿಯಾಗಿಯೇ ಉಳಿದು ಚಿಗುರೊಡೆಯುತ್ತಲೇ ಇದೆ.

ಕನ್ನಡದಲ್ಲಿ ಗಾಂಧೀ ಕುರಿತ ತೀವ್ರಾನುಭವಕ್ಕೆ ತುತ್ತಾದವರಲ್ಲಿ ವರಕವಿ ಬೇಂದ್ರೆಯವರೊಬ್ಬರು. ಹಿಂಸೆಯ ಮಾಸದ ವಿಕರಾಳ ಚಿತ್ರವಾಗುಳಿದ ಗಾಂಧೀ ಸಾವನ್ನೇ ಕೇಂದ್ರೀಕರಿಸಿ ಬೇಂದ್ರೆಯವರ ಸುಮಾರು ಹದಿನೆಂಟು ಕವಿತೆಗಳಿವೆ. ಅವು ಆ ಕಾಲದ ಕನ್ನಡಕವಿತೆಗಳಲ್ಲಿ ಕಾಣಸಿಗದ ತಾತ್ವಿಕ ಖಚಿತತೆಯೊಂದಿಗೆ ಗಾಂಧೀ ಸಾವನ್ನು ಮುಖಾಮುಖಿಯಾಗುತ್ತವೆ. ಗಾಂಧಿ ಕೊಲೆಯನ್ನು ತಮ್ಮ ವಿಜಯವೆಂದೇ ಭಾವಿಸಿ ಇಂದಿಗೂ ಒಳಗೊಳಗೇ ಗುಟ್ಟಾಗಿ ಸಂಭ್ರಮಿಸುತ್ತಿರುವ ನೀಚ ಮನಸ್ಸುಗಳನ್ನು ತೀಕ್ಷ್ಣವಾಗಿ ಇರಿಯುತ್ತವೆ. ಬೇಂದ್ರೆ ಈ ಕೊಲೆಯನ್ನು ಒಂದು ಘಟನೆಯಂದಷ್ಟೇ ನೋಡಿಲ್ಲ. ಅವರ ಪಾಲಿಗೆ ಅದೊಂದು ವಿದ್ಯಮಾನ. ಗುಂಡು ಹಾರಿಸಿದ ಕೈಗಿಂತ ಮಿಗಿಲಾಗಿ ಅವರು ಎದುರಾಗುವುದು ಆಯುಧವಾಗಿಸಿಕೊಂಡ ಮನಸ್ಸುಗಳನ್ನು. ಅವರ ಕವನಗಳಲ್ಲಿರುವುದು ಆ ಮನಸ್ಸುಗಳ ನಿರಂತರ ಸೋಲಿನ ಗೇಲಿಯ ಚಿತ್ರ.. ಸತ್ತೂ ಸಶಕ್ತವಾದ ಗಾಂಧಿ. DRBendreಪ್ರಸ್ತುತ ಲೇಖನವು “ಪೂತಾತ್ಮ-ಹೂತಾತ್ಮ-ಹುತಾತ್ಮ-ಮಹಾತ್ಮ” ಕವನದ ವಿವರಗಳನ್ನು ಈ ಹಿನ್ನೆಲೆಯಲ್ಲಿ ಸಂಕ್ಷಿಪ್ತ ಚರ್ಚೆಗೊಡ್ಡಿದೆ.

ರಾಷ್ಟ್ರೀಯ ಹೋರಾಟದ ಉರುಬಿನ ಕಾಲವೇ ಕನ್ನಡ ನವೋದಯದ ಕಾಲವೂ ಹೌದು. ಆಧುನಿಕ ಕನ್ನಡಕಾವ್ಯದ ಈ ಯುಗ ಗಾಂಧೀಯುಗದ ಜೊತೆಗೇ ಆರಂಭಗೊಂಡಿತ್ತು. ಇದರಿಂದಾಗಿ ಈ ಯುಗ ಗಾಂಧಿ ಕುರಿತು ಪ್ರತಿಕ್ರಿಯಿಸಲೇಬೇಕಾದ ಒತ್ತಡವನ್ನು ಅನುಭವಿಸಿತು. 20ನೇ ಶತಮಾನದ ಆರಂಭದ ದಶಕಗಳಲ್ಲಿ ಬದುಕಿದ ಕವಿಯೊಬ್ಬನಿಗೆ ಗಾಂಧಿಯೊಂದಿಗಿನ ಮುಖಾಮುಖಿ ಎಂಬುದು ತಪ್ಪಿಸಿಕೊಳ್ಳಲಾಗದ ವಾಸ್ತವ ಎನಿಸಿತು. ಆದರೆ ಹೀಗೆ ಗಾಂಧಿಯನ್ನು ಆವಾಹಿಸಿಕೊಳ್ಳುವಲ್ಲಿ ಅಲ್ಲಿ ಮೈತಳೆದುದು ಏಕಾಕಾರಿ ಮಾದರಿಯ ಗಾಂಧಿ ಅಲ್ಲ ಎಂಬುದನ್ನೂ ಮರೆಯಲಾಗದು. ಜೊತೆಗೆ ಗಾಂಧೀಜಿ ಅಲ್ಲಿ ಕೇವಲ ಒಬ್ಬ ವ್ಯಕ್ತಿಯಾಗದೆ, ಭಾರತದ ರಾಷ್ಟ್ರೀಯತೆಯನ್ನು ವಿವರಿಸಿಕೊಳ್ಳಲಾದ ಮಾದರಿಯೊಂದರ ಪ್ರತಿನಿಧಿಯಾಗಿಯೇ ದಾಖಲಾಗುತ್ತಾರೆ. ಹೀಗೆ ಒಂದು ಶಕ್ತಿಯಂತೆ ದೇಶದ ಮನಸ್ಸನ್ನು ಆವರಿಸಿಕೊಂಡಿದ್ದ ಕಾಲದಲ್ಲೇ ಹಠಾತ್ತಾಗಿ ಗಾಂಧೀಕೊಲೆ ಸಂಭವಿಸಿತ್ತು. ಅವರು ಕೊಲೆಗಡುಕನ ಗುಂಡಿಗೆ ಬಲಿಯಾಗಿ ಸಾಯಬಾರದ ಸಾವು ಸತ್ತಿದ್ದರು. “ಬೆಳಗುಜಾವಕೆ ಬಿದಿರು ಸಿಳ್ಳುಹಾಕಿದ ಹಾಗೆ” ಬಂದ ಈ ದುರಂತ ಸಾವಿನ ಸುದ್ದಿ ಆಧುನಿಕ ಕನ್ನಡಕಾವ್ಯವನ್ನು ವಿಶೇಷವಾಗಿ ಬಾಧಿಸಿತ್ತು. ಇದು ನವೋದಯ ಕಾಲದ ಕನ್ನಡ ಕಾವ್ಯದಲ್ಲಿ ದಾಖಲಾದ ಘಟನೆಗಳಲ್ಲಿಯೇ ಅತಿಮುಖ್ಯ ಘಟನೆ ಎನಿಸಿತು.

ಗಾಂಧಿಯನ್ನು ಒಪ್ಪಿಕೊಳ್ಳುವುದೆಂದರೆ ಮತೀಯವಾದಿ, ಅಸಹಿಷ್ಣುತೆಯ ಮಾದರಿಯ ರಾಷ್ಟ್ರೀಯತೆಯ ನಿರಾಕರಣವೂ ಹೌದು. ಯಾಕೆಂದರೆ ರಾಷ್ಟ್ರೀಯತೆಯ ಪರಿಭಾಷೆಯನ್ನು ಗಾಂಧಿ ವಿವರಿಸಿಕೊಂಡ ಬಗೆಗೂ, ರಾಷ್ಟ್ರೀಯ ಹೋರಾಟದ ಇತರ ಮುಂಚೂಣಿ ನಾಯಕರು ವಿವರಿಸಿಕೊಂಡ ಬಗೆಗೂ ಮೂಲಭೂತ ವ್ಯತ್ಯಾಸವೊಂದಿದೆ. gandhiಈ ಎರಡು ಕವಲುಗಳು ಭಾರತದ ರಾಷ್ಟ್ರೀಯತೆಯನ್ನು ಮರುಸಂಘಟಿಸಿಕೊಳ್ಳುವಲ್ಲಿ, ಗತ ಅಥವಾ ಮಧ್ಯಯುಗೀನ ಭಾರತವನ್ನು ವಿವರಿಸಿಕೊಂಡ ಕ್ರಮದಲ್ಲಿ ಅಗಾಧ ವ್ಯತ್ಯಾಸವಿದೆ. ಡಿ.ಆರ್.ನಾಗರಾಜ ಅವರು ಗುರುತಿಸುವಂತೆ, ಈ “ಪರಕೀಯ ಸಾಮ್ರಾಜ್ಯದ ಗರ್ಭದಲ್ಲಿದ್ದವರಿಗೆ ತಮ್ಮ ಗತಕಾಲದ ‘ಸಾಮ್ರಾಜ್ಯ’ದ ಬಗೆಗೆ ತೀವ್ರ ಹಂಬಲ, ಭಾರತೀಯ ರಾಷ್ಟ್ರೀಯವಾದಿಗಳಲ್ಲಿ ಗಾಂಧಿ ಒಬ್ಬರಿಗೆ ಬಿಟ್ಟರೆ ಇನ್ನುಳಿದವರಿಗೆ ಬಲಿಷ್ಠ ಸಾಮ್ರಾಜ್ಯ ರಾಷ್ಟ್ರೀಯತೆಯ ಹುಚ್ಚು” (ಡಿ.ಆರ್.ನಾಗರಾಜ, ಸಾಹಿತ್ಯ ಕಥನ, ಪು.257). ಮತೀಯ ನೆಲೆಯಲ್ಲಿ ಭಾರತದ ರಾಷ್ಟ್ರೀಯತೆಯನ್ನು ವಿವರಿಸಿಕೊಂಡ ಗುಂಪು ಗತವನ್ನು ವೀರ್‍ಯವತ್ತಾದ ಕ್ಷಾತ್ರ ಮಾದರಿಯಲ್ಲಿ ವಿವರಿಸಿಕೊಂಡಿತು. ಅದು ಹೆಣ್ಣಿಗನಲ್ಲದ ವೀರಭಾರತವನ್ನು ಸಂಘಟಿಸಿಕೊಂಡಿತು. ಅಹಿಂಸೆ ಈ ಪಥಕ್ಕೆ ಕ್ಲೈಬ್ಯದ ಮಾದರಿಯಾಗಿ ಕಂಡಿತ್ತು, ಹೇಡಿತನದ ಲಕ್ಷಣವಾಗಿತ್ತು. ದೇಶದ ಬಹುಸಂಖ್ಯಾತರ ವಕ್ತಾರನಂತೆ ಮಾತನಾಡುವ, ಸಾಂಸ್ಕೃತಿಕ ರಾಷ್ಟ್ರೀಯತೆಯೆಂದು ಕರೆಯಲಾಗುವ ಇದನ್ನು ತಿಲಕ್‌ ಮಾದರಿಯ ರಾಷ್ಟ್ರೀಯತೆ ಎಂದೇ ಗುರುತಿಸಲಾಗುತ್ತದೆ. ವೀರಭಾರತವನ್ನು ಸಂಘಟಿಸಿಕೊಳ್ಳಬಯಸುವ ಈ ಮತೀಯನೆಲೆಯ ರಾಷ್ಟ್ರೀಯತೆ ಸಹಜವಾಗಿ ಹಿಂಸಾಮಾದರಿಯದು. ಈ ಹಿಂಸಾ ಮಾದರಿಗೆ ಪ್ರತಿಯಾಗಿ ಗಾಂಧಿಯದು ಅಹಿಂಸೆ ಮತ್ತು ಒಳಗೊಳ್ಳುವ ಮಾದರಿಯ ರಾಷ್ಟ್ರೀಯತೆಯಾಗಿತ್ತು.

ಗಾಂಧಿ ಮಾದರಿಗೆ ಬಲಕ್ಕಿಂತ ಸಾಮರಸ್ಯ, ಆಯ್ಕೆ ಮತ್ತು ಪ್ರತ್ಯೇಕತೆಗಿಂತ ಸಹಬಾಳ್ವೆಯ ಒಡಬದುಕು ಮುಖ್ಯವಾಗಿತ್ತು. ಭಾರತದ ಸಂಕರಶೀಲ ಸಾಂಸ್ಕೃತಿಕ ಸಂದರ್ಭದ ಸಹಜ ಸಾಹಚರ್‍ಯ ಹೊಂದಿದ್ದ ಈ ಮಾದರಿ ಬಲಿಷ್ಠ ಸಾಮ್ರಾಜ್ಯದ ಹುಚ್ಚಿನಿಂದ ತನ್ನನ್ನು ದೂರವಿರಿಸಿಕೊಂಡಿತ್ತು. ತಿಲಕ್‌ ಮಾದರಿಯಲ್ಲಿ ಮಧ್ಯಕಾಲೀನ ಚರಿತ್ರೆಯ ವಲಸೆಯ ಮೂಲಕ ಕೋಮುವಾರು ವಿಂಗಡಣೆಯಲ್ಲಿ ರೂಪುಪಡೆದ ‘ಸ್ವ’ ಮತ್ತು ‘ಅನ್ಯ’ವೆಂಬ ಸಮುದಾಯ ವಿಘಟನೆಯ ಶಕ್ತಿಗಳು ಸಕ್ರಿಯವಾಗಿದ್ದವು. ಅಲ್ಲಿ ಮತೀಯ ಅಂತಃಕಲಹವನ್ನು ಹುಟ್ಟುಹಾಕುವ ಅಪಾಯವಿತ್ತು. ಆದರೆ ಗಾಂಧೀಜಿ ಉಪವಾಸಗಳ ಮೂಲಕ ಅವುಗಳನ್ನು ಮೆಟ್ಟಿನಿಂತವರು. ಈ ಮಾದರಿಗಳು ಒಂದನ್ನೊಂದು ಅನುಸರಿಸಲಿಲ್ಲ, ಒಂದನ್ನೊಂದು ಆಂತರಿಕವಾವಾಗಿ ವಿರೋಧಿಸಿದುವು. ಹೀಗೆ ಭಾರತದ ರಾಷ್ಟ್ರೀಯ ಹೋರಾಟಕ್ಕೆ ಕೋಮುವಾದ ಮತ್ತು ಗಾಂಧಿವಾದದ ನಡುವಿನ ಸಂಘರ್ಷದ ಆಂತರಿಕ ಆಯಾಮವಿದೆ. ಈ ಸಂಘರ್ಷದ ಹೇತುವಾದ ಕ್ಷಾತ್ರದ ಹುಚ್ಚೇ ಆತ್ಯಂತಿಕವಾಗಿ ಗಾಂಧಿಯನ್ನು ಬಲಿಪಡೆದಿತ್ತು.

ಪ್ರಸ್ತುತ ಚರ್ಚಿಸಲಾಗಿರುವ ಬೇಂದ್ರೆಯವರ ಈ ಕವನವು ಮರಣೋತ್ತರವಾಗಿ ಗಾಂಧೀಜಿಯನ್ನು ಆವಾಹಿಸಿಕೊಳ್ಳುತ್ತದೆ. ಮಹಾತ್ಮನನ್ನು ನೆನೆಯುತ್ತಲೇ, ಗಾಂಧಿಯನ್ನು ತಾತ್ವಿಕವಾಗಿ ವಿರೋಧಿಸಿದ ರಾಷ್ಟ್ರೀಯತೆಯ ಅನ್ಯಧಾರೆಯ ಜೊತೆಗಿನ ಮುಖಾಮುಖಿಯಲ್ಲಿ ವಿಶಿಷ್ಟವಾಗುತ್ತದೆ. ಸಾವಿನ ನೋವಿನಲ್ಲೂ, “ಅಹಿಂಸೆ ಎಂಬುದು ಗೋಡೆ ಹಿಂಸೆ ಎಂಬುದು ಚಿತ್ರ” da.ra.bendreಎನ್ನುವ ಮೂಲಕ ಗಾಂಧೀಯತೆಯ ಯಶವನ್ನು ಭಿನ್ನನೆಲೆಯಲ್ಲಿ ದಾಖಲಿಸುತ್ತದೆ. ಮರಣಿಸಿದ ಗಾಂಧಿಯನ್ನು ಜೀವಂತ ಗಾಂಧಿಗಿಂತ ಹೆಚ್ಚು ಶಕ್ತಿಶಾಲಿಯಾಗಿ ವಿವರಿಸಿಕೊಳ್ಳುವ ಅವರ “ಶೃದ್ಧಾಂಜಲಿ” ಕವನವಂತೂ ಗಾಂಧೀ ತರುವಾಯ ದೇಶ ಕತ್ತಲೆಯಲ್ಲಿ ಮುಳುಗಿತೆಂಬ ರಾಷ್ಟ್ರನಾಯಕರುಗಳ ನೈರಾಶ್ಯಕ್ಕೆ ಪ್ರತಿಕ್ರಿಯೆಯಂತೆಯೇ ಇದೆ. ಗೋವಿಂದ ಪೈ ಅವರಲ್ಲಿರುವ ‘ಮಹಾತ್ಮ ನೀನು ಇನ್ನೂ ಒಂದಿಷ್ಟು ಕಾಲ ಬದುಕಬೇಕಿತ್ತೆ’ನ್ನುವ ಶೂನ್ಯತೆ, ನಿರ್ವಾತದ ದನಿ ಬೇಂದ್ರೆಯವರಲ್ಲಿಲ್ಲ. ಅದರ ಬದಲಿಗೆ ಉದಾರವಾದಿ ನಿಲುವಿನಲ್ಲಿ ತಿಲಕ ಮಾದರಿಯ ರಾಷ್ಟ್ರೀಯತೆಯನ್ನು ಧಿಕ್ಕರಿಸುವ ಬೇಂದ್ರೆಯವರ ಕವನಗಳು, ಕೋಮುವಾದದ ಖಚಿತ ವಿರೋಧದಲ್ಲಿ ಗಾಂಧೀಜಿಯ ಸಂಕರಶೀಲ ರಾಷ್ಟ್ರೀಯತೆಯ ಪರವಾಗಿ ನಿಲ್ಲುತ್ತವೆ. ಅಲ್ಲಿ ಗಾಂಧಿ ಎನ್ನುವುದು ವ್ಯಕ್ತಿಯಾಗದೆ ಒಂದು ತತ್ವವಾಗುತ್ತದೆ. ಕೊಲೆಯ ಆಪಾದನೆ ವ್ಯಕ್ತಿಯ ನೆಲೆಗೆ ಸೀಮಿತಗೊಳ್ಳದೆ, ಒಂದು ವಿದ್ಯಮಾನವಾಗಿ ಗಣಿತವಾಗುತ್ತದೆ. ಅವರ “ಮಹಾತ್ಮಾ” ಕವನವಾದರೋ, “ಕೊಂದರೋ ಲೋಕಕಾಶೀರ್ವಾದ ಪ್ರಾರ್ಥಿಸುವ ಸಮಯಕ್ಕೆ” ಎಂದೆನ್ನುವ ಮೂಲಕ ಅದನ್ನೊಂದು ಕಾಲವಲ್ಲದ ಕಾಲದಲ್ಲಿ ನಡೆದ ಕೂಟವೊಂದರ ಕಾರ್‍ಯಾಚರಣೆಯೆಂದೇ ಪರಿಗಣಿಸುತ್ತದೆ. ಹಾಗಾಗಿ ಪೈ ಅವರಲ್ಲಿರುವ ಆಪಾದಿತರಪರ ಸಹಾನುಭೂತಿ ಬೇಂದ್ರೆ ಅವರಲ್ಲಿಲ್ಲ.

ಈ ಕವನ ಆರಂಭವಾಗುವುದೇ “ಓ ಮಹಾತ್ಮ! ಶತಸಾಂವತ್ಸರಿಕಕ್ಕೆ ಸತ್ಯ ವರದಿ ಮಾಡೋಣ” ಎಂದು. ಮಹಾತ್ಮನಿಲ್ಲದ ಜಗತ್ತಿನಿಂದ ಮಹಾತ್ಮನಿಗೆ ವರದಿಯೊಪ್ಪಿಸುವ ಮಾದರಿಯಲ್ಲಿ. ಗಾಂಧೀತತ್ವಗಳಿಗೆ ಬೆನ್ನುಹಾಕಿ ನಡೆಯುತ್ತಿರುವ ಭಾರತದ ಪರದೇಶಿಸ್ಥಿತಿ ಹಾಗೂ gandhi-art“ಪಶುಯಜ್ಞ ಅಡಗಿ, ನರಯಜ್ಞ ದಿನದ ಪಾಕ”ವಾದ ಹಿಂಸೆಯ ವಿಸ್ತರಣೆಗೆ ಹೇಸಿ. ಆದರೆ ಈ ನೈರಾಶ್ಯವೇ ಕವನದ ಸ್ಥಾಯಿ ಅಲ್ಲ. ಯಾಕೆಂದರೆ ಅಲ್ಲಿಯ ನಿರೂಪಣೆ ಮುಂಬರಿಯುವುದು “ನಿನಗೆ ಗೊತ್ತಿಲ್ಲದ್ದೇನು? ನಿನ್ನ ಕಣ್ಣಿಗೆ ಇವೆಲ್ಲಾ ಬಿದ್ದಿಲ್ಲಾ-ಎಂದಲ್ಲಾ” ಎಂದು, ನಮ್ಮ ನಡುವೆಯೇ ಇರುವ ಗಾಂಧೀಜಿಗೆ ಮಾಡುವ ವರದಿಯಾಗಿ. ಇಲ್ಲಿ ಗಾಂಧಿ ಒಂದು ತಾತ್ವಿಕತೆಯಾಗಿ, ನಮ್ಮೊಳಗಿನ ನಾವಾಗುತ್ತದೆ. ನಮ್ಮೊಳ:ಗಿನ ತಿಳುವಳಿಕೆಯಾಗುತ್ತದೆ. ಗಾಂಧಿ ಬಿತ್ತಿದ ಅರಿವಿನ ಬೆಳಕನ್ನು ಪ್ರಸ್ತಾಪಿಸಿ, “ಬೆಂಕಿ ಬೇರೆ! ಬೆಳಕು ಬೇರೆ! ಬಣ್ಣ ಬೇರೆ! ಬಿಡಿಬಿಡಿಸಿ, ತಿಳಿತಿಳಿಸಿ ಹೇಳಿದ ಮಹಾತ್ಮ” ಎಂದು ಕೃತಜ್ಞತೆ ಸೂಚಿಸುವ ಕವನ, ನಮ್ಮೊಳಗಡೆಯೇ ಉಳಿದು ಹೋದ ಗಾಂಧಿಗೆ ನಾವೇ ಸಲ್ಲಿಸುವ ವರದಿಯಾಗುತ್ತದೆ. ಈ ನೆನಕೆ ಒಂದು ಕಡೆಯಿಂದ ಗುರುವಿನಂತೆ ಎಚ್ಚರವನ್ನು ಬೋಧಿಸಿದ ಗಾಂಧಿಗೆ ಕೃತಜ್ಞತೆ ಸಲ್ಲಿಸುತ್ತದೆ. ಇನ್ನೊಂದು ಕಡೆಯಿಂದ ಗಾಂಧಿ ಬಿತ್ತಿದ ಅರಿವಿನಲ್ಲಿರುವ ಗೊಂದಲವಿಲ್ಲದ ಖಚಿತತೆಯ ಹೂರಣವನ್ನು ದಾಖಲಿಸುತ್ತದೆ.

ಗಾಂಧೀ ಕೊಲೆಯನ್ನು ಆ ಹೊತ್ತಿನ ಅಗತ್ಯವೆಂದವರೂ, ಎನ್ನುತ್ತಿರುವವರೂ ಇಂದಿಗೂ ಇದ್ದಾರೆ. ಆ ಸಮರ್ಥನೆಯ ಭಾಗವಾಗಿ ಒದಗಿಬಂದದ್ದು ಅಖಂಡ ಭಾರತದ ವಿಭಜನೆಯ ನೆಪ. ಆದರೆ ಕವನ ಆ ಸಮರ್ಥನೆಯನ್ನೇ ಕೆಣಕಿ ಲೇವಡಿ ಮಾಡುವಂತೆ, “ಪಾಲಿನ ನ್ಯಾಯ ಇನ್ನೂ ತೀರಿಯೇ ಇಲ್ಲ” ಎನ್ನುತ್ತದೆ. ಹೀಗೆ ಕೊಲೆಯ ಘೋಷಿತ ಕಾರಣವನ್ನು ನಿರಾಕರಿಸಿ, ಅದನ್ನೊಂದು ಸುದೀರ್ಘ ಕಾರ್‍ಯಾಚರಣೆಯ ಭಾಗವೆಂದೇ ಸೂಚಿಸುತ್ತದೆ. ಬೇಂದ್ರೆಯವರ ಕವನದಲ್ಲಿ ಭಾರತ ವಿಭಜನೆಯ ಕಾರಣದೊಂದಿಗೆ Mahatma-Gandhiಗಾಂಧೀ ಕೊಲೆಯನ್ನು ವಿವರಿಸಿಕೊಳ್ಳುವ ಯತ್ನವಿಲ್ಲ. ಹಾಗೆಯೇ ಅದು ಯಾವುದೋ ಒಂದು ಕಾಲದ ಉರುಬಿನ ಫಲಿತವೆಂಬ ಪರಿಭಾವನೆಯೂ ಇಲ್ಲ. ಅಲ್ಲಿರುವುದು ಅಹಿಂಸೆಯ ಗೋಡೆಯನ್ನೆ ಬಳಸಿ ಬರೆಯುತ್ತಾ ಬಂದ ಕೊಲೆಯ ಈ ’ಚಿತ್ರ’ಗಳಿಗೆ ಶತಮಾನಗಳ ಇತಿಹಾಸವಿದೆ ಎಂಬ ಅರಿವು. ಹಾಗಾಗಿಯೇ ಗೋವಿಂದ ಪೈ ಅವರಂತೆ ಬೇಂದ್ರೆಗೆ ಅದೊಂದು ವ್ಯಕ್ತಿಗತ ಮಟ್ಟದ ಹತ್ಯಾಯತ್ನವಲ್ಲ. ಅವರಲ್ಲಿ ಅದು ಭಿನ್ನ ಬಗೆಯ ಅಲೋಚನೆಗಳ ಸಂಘರ್ಷ. ಹಿಂಸೆ-ಅಹಿಂಸೆಗಳ ಮುಖಾಮುಖಿ. ಅಹಿಂಸೆಯ ಸ್ಥಿರಭಿತ್ತಿಯಲ್ಲಿ ಮಾನವವಿಕೃತಿ ಬಿಡಿಸಿದ ಹಿಂಸೆ ಎಂಬ ಕೃತಕಚಿತ್ರ. ಆ ಕಾರ್‍ಯಾಚರಣೆ ಇನ್ನೂ ನಿಂತಿಲ್ಲ ಎಂಬಂತೆ ಅವರಲ್ಲಿ ಹಿಂಸೆ-ಅಹಿಂಸೆಗಳು ಅವಳಿ ವೈರುಧ್ಯಗಳಾಗಿ ಎದುರು-ಬದುರು ನಿಲ್ಲುತ್ತವೆ. ಆದರೆ ಅಷ್ಟೇ ರಾಜಕೀಯ ಖಚಿತತೆಯೊಂದಿಗೆ ಹಿಂಸೆಯ ವಿಜಯದ ನಿರಾಕರಣೆಯೂ ಅವರಲ್ಲಿದೆ. ಅಹಿಂಸೆಯ ಎದುರು ಯುದ್ಧ ಹೂಡುವ ಹಿಂಸೆಗೆ ಪ್ರತೀಬಾರಿಯೂ ನೆತ್ತರು ಸಿಗಬಹುದಲ್ಲದೆ, ಜಯವಲ್ಲ ಎಂಬ ಖಚಿತ ಸಂದೇಶ ರವಾನಿಸುವಂತೆ, “ಹೊತ್ತಿಸಿದ ಬೆಂಕಿ ಹೊತ್ತಿಸದವನನ್ನೂ ನೆಕ್ಕುವುದು, ಹೊತ್ತಿಸಿದವರನ್ನೂ ಮುಕ್ಕುವುದು” ಎಂದು ಅವರು ಕೋಮುವಾದಿ ಅಸಹಿಷ್ಣುತೆಯ ರಾಜಕಾರಣದ ವಿನಾಶಮುಖೀ ಗುಣವನ್ನು ದಾಖಲಿಸುತ್ತಾರೆ. ವಿಶ್ವದ ವಿನಾಶ ನಾಯಕರುಗಳಾದ ಹಿಟ್ಲರ್, ಮುಸೋಲಿನಿಯರುಗಳ ಲೋಕನಾಶ ಮತ್ತು ಸ್ವನಾಶಗಳೆರಡನ್ನೂ ಒಟ್ಟೊಟ್ಟಿಗೇ ಧ್ವನಿಸುತ್ತಾರೆ.

ಈ ಕವನವು ಗಾಂಧೀವಿರೋಧಿ ಸ್ವಘೋಷಿತ ದೇಶಪ್ರೇಮಿ ರಾಷ್ಟ್ರೀಯವಾದಿಗಳ ಪೊಳ್ಳುತನವನ್ನು ಎಳೆ ಎಳೆಯಾಗಿ ಬಯಲಿಗಿಡುತ್ತದೆ. “ಅಹಿಂಸೆಯ ಹಚ್ಚಿದಬಣ್ಣ ಉದುರಿ, ಹಿಂಸೆಯ ಉಗ್ರರೂಪ ಉರಿದೇಳುವ” ಅದರ ನಯವಂಚಕತೆಯನ್ನು ವಿವರವಾಗಿ ಬಿಡಿಸಿಡುತ್ತದೆ. ಪಂಜು ಹೊತ್ತಿಸಿ ಹಿಲ್ಲಾಲು ಹಿಡಿದವರೂ ಅಹಿಂಸೆ, ಶಾಂತಿ ಮಂತ್ರವನ್ನು ಪಠಿಸುವ ವಿಸಂಗತಿಯನ್ನು ಎದುರಿಗಿಡುತ್ತದೆ. ಕೋಮುವಾದಿ ರಾಜಕಾರಣದ ವಿರುದ್ಧದ ನಿರ್ಣಾಯಕ ಪ್ರತಿದಾಳಿಯ ಭಾಗವಾಗಿ, “ಹೇಳಿದ್ದು-ಅಹಿಂಸಾ-ಪುರಾಣ ತಿಂದದ್ದು ಹಿಂಸೆಯ ಯಮ-ಬದನೆಕಾಯಿ” ಎಂದು ನಡೆಗೂ- ನುಡಿಗೂ ಸಂಬಂಧವಿರದ ಬಿರುಕನ್ನು ತೋರುತ್ತದೆ. ಜೀವದಯೆಯ ಉಪನ್ಯಾಸ ನೀಡುತ್ತಲೇ ಕೊಲೆಯ ಕಲೆಯಲ್ಲಿ ಪಳಗಿರುವ ಅದರ ಸಂಸ್ಕೃತಿ ಪ್ರೀತಿಯನ್ನು, “ಹೂವಿಗೆ ಬೇಗೆ ಹಚ್ಚಿದರು, ಅದರ ಸೌಂದರ್‍ಯ ಮೆಚ್ಚಿದರು, ಸಂಸ್ಕೃತಿ ಜಂಭ ಕೊಚ್ಚಿದರು” ಎಂದು ಸ್ಪಷ್ಟವಾಗಿಯೇ ವ್ಯಾಖ್ಯಾನಕ್ಕೊಳಪಡಿಸುತ್ತದೆ. ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಆ ಗುಂಪನ್ನು ಹಿಂಸಾಭಕ್ತರೆಂದೇ ಹೆಸರಿಸುತ್ತದೆ. ಗಾಂಧಿಯನ್ನು ಕುರಿತ ಅವರ “ಮಹಾತ್ಮಾ” ಕವನವಾದರೋ, ಈ ಕೊಲೆಗಡುಕ ಮಂದಿಯನ್ನು “ಮುಗಿದ ಕೈಗಳಲಿ ಮುಚ್ಚಿದ ದೊಣ್ಣಿ!”, “ರೇಸಿಮೆಯ ತೊಟ್ಟವರು, ಬಂಗಾರ ಇಟ್ಟವರು, ಬೆರಳಾಡಿಸಿದಲ್ಲಲ್ಲಿ ’ವಂದೇ ಮಾತರಂ’ ಗೀತ” ಎಂದು ನಿಖರವಾಗಿ ವಿವರಿಸಿಕೊಡುತ್ತದೆ. ಗಾಂಧಿಯನ್ನು ಇಲ್ಲವಾಗಿಸಿದ ಈ ಅವಿವೇಕಿ ಗುಂಪನ್ನು “ಆ ಜನ ದನ, ತಾಯಿ” ಎಂಬ ಸೊಲ್ಲಂತೂ “ಮಹಾತ್ಮ” ಕವನದುದ್ದಕ್ಕೂ ಪಲ್ಲವಿಯಂತೆ ಅನುರಣಿಸುತ್ತದೆ.

ಚಾರಿತ್ರಿಕವಾಗಿ ಗಾಂಧೀಜಿಯ ರಾಜಕೀಯ ಪ್ರವೇಶ ಕಾಂಗ್ರೆಸಿನೊಳಗಿನ ಹಿಂದೂ ಮೂಲಭೂತವಾದಿ ಶಕ್ತಿಗಳಿಗೊಂದು ಹಿನ್ನಡೆಯೇ. 200px-MKGandhi[1]ಕೋಮುವಾದವು ನಿರೂಪಿಸಿದ ಧರ್ಮಾಧಾರಿತ ರಾಷ್ಟ್ರೀಯತೆಗೆ ಪ್ರತಿಯಾಗಿ ಗಾಂಧಿ ಎಲ್ಲ ಮತೀಯರನ್ನು ಸಮಾನವಾಗಿ ಒಳಗೊಳ್ಳುವ ಚಿಂತನೆಗಾಗಿ ತಮ್ಮ ಜೀವಿತವನ್ನೇ ಪಣಕ್ಕಿಟ್ಟವರು. ಆದರೆ ಮುಸ್ಲಿಂ ಮೂಲಭೂತವಾದವೂ ಇಷ್ಟೇ ಅಪಾಯಕಾರಿಯಾಗಿ ಬೆಳೆದು, ಅಸಹಾಯಕತೆಯ ಕಟ್ಟಕಡೆಯಲ್ಲಿ ಗಾಂಧಿ ದೇಶವಿಭಜನೆಗೆ ಸಮ್ಮತಿಸಬೇಕಾಗಿ ಬಂದುದು ಚಾರಿತ್ರಿಕ ಸತ್ಯ. ‘ಭಾರತದ ವಿಭಜನೆಯಲ್ಲಿ ನಾನೂ ಪಾಲುಗಾರನೆಂದು ಜನ ಹೇಳದಿದ್ದರೆ ಸಾಕು’ (ಬೊಳುವಾರು ಮಹಮ್ಮದ್ ಕುಂಞಿ, ಪಾಪು ಗಾಂಧಿ ಆದ ಕಥೆ,ಪು.173)ಎಂದು ಸಂಕಟಪಟ್ಟ ಗಾಂಧೀ ಕೈಮೀರಿ ವಿಭಜನೆ ಸಂಭವಿಸಿತ್ತು. ಅದು ಗಾಂಧೀ ಕನಸಿನ “ಸಾಮರಸ್ಯ ಪರಂಪರೆ”ಗೆ ಕೊಟ್ಟ ದೊಡ್ಡ ಏಟಾಗಿತ್ತು. ಗಾಂಧಿಯನ್ನು ಖಳನಾಯಕನಂತೆ ಬಿಂಬಿಸಲು ಒದಗಿದ ಕಾರಣವಾಗಿತ್ತು. ಮತೀಯವಾದಿ ರಾಷ್ಟ್ರೀಯತೆಯ ಪ್ರಸರಣಕ್ಕೆ ಒದಗಿದ ನೀರು ಗೊಬ್ಬರವಾಗಿತ್ತು. ವಿಭಜನೆಯನ್ನೇ ಬಯಸಿದ್ದ ವಿಭಜಕವಾದಿಗಳು ಹೇಳುತ್ತಲೇ ಬಂದ ತೋರಿಕೆಯ ಅಖಂಡ ಭಾರತವು ಗಾಂಧಿ ಪಾಲಿಗೆ ಬರಿಯ ಭೂಖಂಡವಾಗಿರಲಿಲ್ಲ. ಅದು ಮನುಷ್ಯರ ನಡುವಿನ ಸಾಮರಸ್ಯವನ್ನು ಉಳಿಸಿಕೊಡಬಲ್ಲ ಸೌಹಾರ್ದತೆಯ ಮನುಷ್ಯ ಸಂಬಂಧವಾಗಿತ್ತು. ಈ ಸೌಹಾರ್ದತೆಯನ್ನು ವಿರೋಧಿಸಿಕೊಂಡೇ ಬಂದ ಮತೀಯವಾದ ಗಾಂಧಿಯನ್ನೇನೋ ಬಲಿಪಡೆಯಿತು. ಆದರೆ ಅದಕ್ಕೆ ಗಾಂಧೀವಾದವನ್ನು ಬಲಿಪಡೆಯಲಾಗಿಲ್ಲ. ಇದು ಬೇಂದ್ರೆ ಕವನದ ಕೇಂದ್ರಧ್ವನಿಯೂ ಹೌದು.

2 thoughts on “ಗಾಂಧಿ ಸಾವು ಮತ್ತು ಬೇಂದ್ರೆ ಕವನ

  1. Ananda Prasad

    ಕರ್ಮಠ ಹಿಂದೂಗಳಿಗೆ ಗಾಂಧೀಜಿ ಒಬ್ಬ ಶತ್ರುವಾಗಿದ್ದರು ಏಕೆಂದರೆ ಅವರು ಹಿಂದೂ ಧರ್ಮದಲ್ಲಿ ನಿಧಾನವಾಗಿ ಸುಧಾರಣೆ ತರುವ ಒಬ್ಬ ರಾಜಕೀಯ ಸಂತನಂತೆ ಜನತೆಯ ಮೇಲೆ ಪರಿಣಾಮ ಬೀರುವಲ್ಲಿ ಯಶಸ್ವಿಯಾಗುತ್ತಿದ್ದರು. ಗಾಂಧೀಜಿಯನ್ನು ಅನುಸರಿಸಿ ಹಲವು ಮೇಲ್ವರ್ಗದ ಜನರು ಜಾತೀಯ ಮೇಲು ಕೀಳು ಕಲ್ಪನೆಯನ್ನು, ಮಡಿ ಮೈಲಿಗೆಯ ಕರ್ಮಠ ಆಚರಣೆಗಳನ್ನು ತ್ಯಜಿಸಲಾರಂಭಿಸಿದ್ದರು. ಇದು ಮೇಲು ಕೀಳು ದೇವನಿರ್ಮಿತ ಎಂಬ ಸಿದ್ಧಾಂತ ಹೊಂದಿದ ಕರ್ಮಠ ಹಿಂದೂಗಳಿಗೆ ಒಪ್ಪಿತವಾಗಿರಲಿಲ್ಲ. ಅವರು ಸದಾಕಾಲ ಮೇಲು ಕೀಳು ಎಂಬ ಭೇದ ಭಾವನೆಯನ್ನು ದೇಶದಲ್ಲಿ ಮುಂದುವರಿಸುವುದರ ಪರವಾಗಿದ್ದರು. ಇಂಥ ಜನಗಳೇ ಗಾಂಧಿ ಹತ್ಯೆಯಾದಾಗ ಸಂಭ್ರಮಿಸಿದ್ದು. ಗಾಂಧೀ ಹತ್ಯೆಯ ಬಗ್ಗೆ ಮೇಲ್ನೋಟಕ್ಕೆ ಈ ಕರ್ಮಠ ಹಿಂದೂಗಳು ಅವರು ಮುಸ್ಲಿಂ ಪಕ್ಷಪಾತಿಯಾಗಿ ನಡೆದುಕೊಳ್ಳುತ್ತಿದ್ದುದು ಕಾರಣ ಎಂದು ಹೇಳಿದರೂ ಅವರ ಆಳದಲ್ಲಿದ್ದುದು ಗಾಂಧೀಜಿ ಹಿಂದೂ ಧರ್ಮದಲ್ಲಿರುವ ಮೇಲು ಕೀಳು ಎಂಬ ‘ದೇವನಿರ್ಮಿತ’ ಜೀವನ ವಿಧಾನವನ್ನು ತೊಡೆದು ಹಾಕುತ್ತಿದ್ದರಲ್ಲ ಎಂಬ ಆಕ್ರೋಶವೇ. ಇಂದು ಕಾಂಗ್ರೆಸ್ ಮುಕ್ತ ಭಾರತ ನಿರ್ಮಿಸಬೇಕು ಘೋಷಣೆ ಮಾಡುತ್ತಿರುವವರಲ್ಲಿಯೂ ಇಂಥ ಆಕ್ರೋಶವಿದೆ. ಸರ್ದಾರ್ ಪಟೇಲರು ಮೂಲತಃ ಕರ್ಮಠ ಹಿಂದೂ ಧರ್ಮದ ಸಿದ್ಧಾಂತವನ್ನು ಹೊಂದಿದ್ದವರೇ. ಹೀಗಾಗಿಯೇ ಇವರು ಇಂದು ಕರ್ಮಠ ಹಿಂದೂಗಳಿಗೆ ಅವರು ಕಾಂಗ್ರೆಸ್ ಪಕ್ಷದಲ್ಲಿ ಇದ್ದವರಾದರೂ ಪ್ರಿಯರಾಗುತ್ತಿದ್ದಾರೆ. ಪಟೇಲರ ಕರ್ಮಠ ಹಿಂದೂ ಭಾವನೆಗಳ ಅರಿವಿದ್ದೇ ಗಾಂಧೀಜಿಯವರು ವೈಚಾರಿಕವಾಗಿ ಹಾಗೂ ವೈಜ್ಞಾನಿಕವಾಗಿ ವಿಶಾಲ ಮನೋಭಾವನೆ ಹೊಂದಿದ್ದ ನೆಹರೂರವರನ್ನು ಬೆಂಬಲಿಸಿದ್ದು.

    Reply

Leave a Reply

Your email address will not be published. Required fields are marked *