ಸಾಹಿತ್ಯವನ್ನು ಸಾಂಪ್ರದಾಯೀಕರಣಗೊಳಿಸುತ್ತಿರುವ ಕವಿಕುಲತಿಲಕರು

– ಬಿ.ಶ್ರೀಪಾದ ಭಟ್

ಯೇಟ್ಸ್ ಕವಿಯ ಒಂದು ಜನಪ್ರಿಯ ಕವಿತೆ

Crazy Jane Talks with the Bishop

I met the Bishop on the road
And much said he and I.
‘Those breasts are flat and fallen now,wbyeats
Those veins must soon be dry;
Live in a heavenly mansion,
Not in some foul sty.’

‘Fair and foul are near of kin,
And fair needs foul,’ I cried.
‘My friends are gone, but that’s a truth
Nor grave nor bed denied,
Learned in bodily lowliness
And in the heart’s pride.

‘A woman can be proud and stiff
When on love intent;
But Love has pitched his mansion in
The place of excrement;
For nothing can be sole or whole
That has not been rent.’

ಕನ್ನಡದ ಖ್ಯಾತ ಮಕ್ಕಳ ಸಾಹಿತಿ ಎಂದು ಬೆಂಗಳೂರು ಸುತ್ತಮುತ್ತ ಜಗತ್ಪ್ರಸಿದ್ಧಿ ಪಡೆದ ಸಾಹಿತಿ ಎಚ್.ಎಸ್. ವೆಂಕಟೇಶಮೂರ್ತಿ ಅವರು ಯೇಟ್ಸ್‌ನ ಮೇಲಿನ ಕವಿತೆಯನ್ನು ಈ ಕೆಳಗಿನಂತೆ ಅನುವಾದ ಮಾಡಿದ್ದಾರೆ. (ಕೃಪೆ : ಸಂಚಯ 103, ಜನವರಿ – ಫೆಬ್ರವರಿ 2014)

ಪಾದ್ರಿಗೆ ತಿಕ್ಕಲು ಜೀನ್ ಮಾಡಿದ ಬೋಧನೆ

ಬೀದಿಯಲ್ಲೊಬ್ಬ ಪಾದ್ರಿ ಸಿಕ್ಕು
ಅದೂಇದೂ ಮಾತನಾಡಿದೆವು

ಜೋತುಬೀಳುವವು ಮೊಲೆಗಳೊಂದು ದಿನ
ಒಳನಾಳಗಳು ಒಣಗುವವು
ಅದ್ದರಿಂದ ಬಾ ಭಗವಂತನ ದಿವ್ಯಸನ್ನಿಧಿಗೆ
ಬಿಟ್ಟು ಪಡುವ ಪಟ್ಟೆ ಪಲ್ಲಂಗ

ಸ್ವಾಮಿ ಭಗವಂತನ ಹೆಸರಲ್ಲೇ ಇದೆ ಭಗವು
ಭಗವಿಲ್ಲದೆ ಇಲ್ಲ ಭಗವಂತ
ಪಿತ್ತ ಕೆರಳಿ ಕೂಗಿದೆ ಆ ಪಾದ್ರಿಗೆ; ಮಲಗಲಿಕ್ಕೇನೆ
ಮಂಚವೂ ಚಿತೆಯೂ !

ಪುಟಿಯುವೆದೆಯ ತರುಣಿಗೆ ತುಪ್ಪಳದ ಮಂಚದೆಲ್ಲಂಥ ಪೊಗರು!
ಮೂತ್ರಾಮೇಧ್ಯವ ಬಿಡುವ ಕಡೆಯಲ್ಲೇ ಮತ್ತೆ ಪ್ರೀತಿಯ ಮಹಾ ಮಹಲ್ಲು!

ಒಂದನ್ನು ಬಿಟ್ಟೊಂದಿಲ್ಲ, ಈ ಅರಿವು
ತಮಗೂ ಆಗಲಿಕ್ಕುಂಟು!
ಭಗವೂ ಭಗವಂತನ ನಿವಾಸ
ನೆನಪಿಗಿರಲಿ ಉಡಿಯಲ್ಲೊಂದು ಗಂಟು

ಯೇಟ್ಸ್‌ನಂತಹ ಸೂಕ್ಷ್ಮ ಸಂವೇದನೆಯ, ಮಹಾನ್ ಕವಿಗೆ ಸಂಪೂರ್ಣ ಅಪಚಾರದಂತಿದೆ ಈ ಅನುವಾದ. ಹಿಂದೊಮ್ಮೆ “ಯೇಟ್ಸ್ ಮುಟ್ಟಿದರೆ ಮುನಿಯಂಥ ಕವಿ” ಎಂದು ಪಿ.ಲಂಕೇಶ್ ಹೇಳಿದ್ದರು. ಇಂತಹ ಕವಿಯ ಸಂವೇದನೆಗಳನ್ನು, ಒಳನೋಟಗಳನ್ನು, ಕವಿತೆಗಳ ಸಾಲುಗಳ ಧ್ವನಿಯನ್ನು ಅರ್ಥ ಮಾಡಿಕೊಳ್ಳದ ಈ ವೆಂಕಟೇಶಮೂರ್ತಿಗಳಂತಹ ಕವಿಗಳು ಅತ್ಯಂತ ಶುಷ್ಕವಾಗಿ, ಜಡವಾದ ಅನುವಾದ ಮಾಡಿದ್ದಾರೆ. ಇಲ್ಲಿ ಯೇಟ್ಸ್‌ನ ತಲ್ಲಣಗಳು ನಮ್ಮದಾಗದಿದ್ದರೆ ಇಂತಹ ಕೆಟ್ಟದಾದ ಅನುವಾದ ಸಾಧ್ಯವಷ್ಟೆ.

ಆಕೆ ಜೇನ್ ಎಂಬ ಹೆಸರಿನಿಂದ ಯೇಟ್ಸ್‌ನನ್ನು ನಿದ್ದೆಗೆಡಿಸಿದವಳು. ಯೇಟ್ಸ್ ತನ್ನ ಖಿನ್ನತೆಯ ದಿನಗಳಲ್ಲಿ ಈ ಜೇನ್‌ಳ ಮೇಲೆ ಪದ್ಯಗಳನ್ನು ಬರೆದ. ತನ್ನ ಸ್ನೇಹಿತನಿಗೆ ಬರೆವ ಪತ್ರದಲ್ಲಿ ಯೇಟ್ಸ್ “I have begun a longish poem called “wisdom” in the attempt to shake off “Crazy Jane” and I begun to think that I shall take to religion unless you save me from it.” ಎನ್ನುತ್ತಾನೆ.

ಯೇಟ್ಸ್‌ನ ಈ ಯಾವುದೇ ಸಂವೇದನೆಗಳು ಕನ್ನಡದ ಈ ಸೋ ಕಾಲ್ಡ್ ಮಕ್ಕಳ ಕವಿಗೆ ಅರ್ಥವಾದಂತಿಲ್ಲ. ನೋಡಿ ’ಜೇನ್’ ಎನ್ನುವ ಹೆಸರನ್ನೇ ತಿರುಚಿ ’ಜೀನ್’ ಎಂದು ಅನುವಾದ ಮಾಡಿದ್ದಾರೆ. ಅಲ್ಲಿಗೇ ಹೂರಣವು ಬಿದ್ದು ಹೋಯಿತು.

ಮೊದಲನೇ stanza ದಲ್ಲಿ ಜೇನ್‌ಳಿಗೆ ನೀನು ನಿನ್ನ ಹಳೆಯ ಉನ್ಮಾದದ, Lust ನ ದಿನಗಳನ್ನು ಬಿಟ್ಟು ಚರ್ಚಿನ ಕಡೆಗೆ ಬಾ ಎನ್ನುವ ಪಾದ್ರಿ ಮುಂದುವರೆದು ಹೇಳುವ those breasts are flat and fallen now ಎನ್ನುವ ಸಾಲುಗಳು ಅನುವಾದದಲ್ಲಿ “ಜೋತುಬೀಳುವವು ಮೊಲೆಗಳೊಂದು ದಿನ” ಎಂದಿದೆ. ಇದಕ್ಕೆ ವಿವರಣೆ ಬೇಕಿಲ್ಲ. ನಿನ್ನ ಮೊಲೆಗಳು ಜೋತು ಬಿದ್ದು ನೀನೀಗ ಮುದಿಯಾಗಿದ್ದೀಯ ಎಂದು ಪಾದ್ರಿ ಹೇಳುತ್ತಿದ್ದರೆ ಅದನ್ನು ಕನ್ನಡದ ಕವಿ “ಮುಂದೊಂದು ದಿನ ಮುದಿಯಳಾಗುತ್ತೀಯ” ಎಂದು ಅನುವಾದಿಸುತ್ತಾನೆ. ಸೂಕ್ಷ್ಮ ಓದುಗರಿಗೆ ಇಲ್ಲಿ ಸದರಿ ಕವಿಯ ಬಾಲಿಶ ಅನುವಾದ ಮಾಡಿದ ಅನಾಹುತದ ವಿವರಣೆ ಕೊಡಬೇಕೆ?

ಎರಡನೇ stanza ದಲ್ಲಿ opposite go together ಎನ್ನುವ ಅರ್ಥದಲ್ಲಿ ಜೇನ್ ಪಾದ್ರಿಗೆ ಉತ್ತರಿಸುತ್ತಾಳೆ: fair goes with foul. ಈ ವೆಂಕಟೇಶಮೂರ್ತಿಯವರು ಇದನ್ನು
’ಸ್ವಾಮಿ ಭಗವಂತನ ಹೆಸರಲ್ಲೇ ಇದೆ ಭಗವು
ಭಗವಿಲ್ಲದೆ ಇಲ್ಲ ಭಗವಂತ’ ಎಂದೆಲ್ಲ ಜಾಳು ಜಾಳಾಗಿ, ಸನಾತನವಾದಿಯಂತೆ ಅನುವಾದಿಸುತ್ತಾರೆ. ಅಪಾರವಾದ ಮುಕ್ತತೆಯನ್ನು, ಸೃಜನಶೀಲತೆಯನ್ನು, ಬದುಕಿನ ಸಂಕೀರ್ಣತೆಯ ಕುರಿತಾದ ಆಳವಾದ ಕಾಮನ್‌ಸೆನ್ಸ್ ಅನ್ನು ಬೇಡುವ ಜೇನ್‌ಳ ಇಂತಹ ಸಾಲುಗಳನ್ನು ಕಾವ್ಯರೂಪವಾಗಿ ಅನುವಾದಿಸುವಾಗ ಅನುವಾದಕ ಯೇಟ್ಸ್‌ನ ಸಂವೇದನೆಗಳಿಗೆ ಹತ್ತಿರವಿದ್ದು ಕವಿಯ ಭಾವಕೋಶದೊಳಗೆ ಪ್ರಯಾಣಿಸಿ ಅನುವಾದಿಸಬೇಕಾದಂತಹ ಸಂದರ್ಭದಲ್ಲಿ ಸದರಿ ಕವಿಗಳು ಮಾಡಿದ್ದಾರೂ ಏನು?? ಇಲ್ಲಿನ ಅಪಚಾರಗಳನ್ನು ಸೂಕ್ಷ್ಮ ಓದುಗರಿಗೆ ಇಲ್ಲಿ ಬಿಡಿಸಿ ಹೇಳಬೇಕಿಲ್ಲ.

ಮುಂದುವರೆದು ಜೇನ್ ತನ್ನ ಸ್ನೇಹಿತರು ತನ್ನಂತೆಯೇ ದೇಹವನ್ನು ತೀವ್ರವಾಗಿ ಆರಾಧಿಸಿದರೂ ಆ ಕಾರಣಕ್ಕಾಗಿ ಅವರಿಗೆ ಗೋರಿಗಳನ್ನು ನಿರಾಕರಿಸಿಲ್ಲ ಎಂದು ಮಾರ್ಮಿಕವಾಗಿ ನುಡಿಯುತ್ತಾಳೆ. Nor grave nor bed denied. ಇದರ ಅನುವಾದ ನೋಡಿ “ಪಿತ್ತ ಕೆರಳಿ ಕೂಗಿದೆ ಆ ಪಾದ್ರಿಗೆ; ಮಲಗಲಿಕ್ಕೇನೆ ಮಂಚವೂ ಚಿತೆಯೂ!” ಯಾರಾದರೂ ಯೇಟ್ಸ್‌ನನ್ನು ಈ ರೀತಿ ಅಸೂಕ್ಷ್ಮತೆಯಿಂದ, ಅಸಂಬದ್ಧವಾಗಿ ಕಿರುಚಾಡುತ್ತಾ, ಸಾಂಪ್ರದಾಯಿಕ ಮನಸ್ಥಿತಿಯಿಂದ ಮುಟ್ಟಲು ಸಾಧ್ಯವೆ?? ಮುಟ್ಟಿದರೆ ಅದು ಬೂದಿಯಾಗುವುದು ಖಂಡಿತ. ಇಲ್ಲಿ ಕನ್ನಡದ ಇಡೀ ಸಾಲುಗಳು ಬೂದಿಯಾಗಿವೆ.

ಮೂರನೇ stanza ದಲ್ಲಿ ಜೇನ್ ಪ್ರೀತಿಯ passion ನ ಕುರಿತಾಗಿ ಅದ್ಭುತವಾಗಿ ಮಾತನಾಡುತ್ತಾ ಹೋಗುತ್ತಾಳೆ. ‘A women can be proud and stiff When on love intent’. ಕೆಲವೊಂದನ್ನು ಕಳೆದುಕೊಂಡಾಗಲೇ ಮನುಷ್ಯ ತನ್ನ ಬದುಕಿನ ಪರಿಪೂರ್ಣತೆಯನ್ನು ಸಾಧಿಸಲು ಸಾಧ್ಯ ಎಂದು ಜೇನ್ ಅನುಭವದಿಂದ ಉದ್ಗರಿಸುತ್ತಾಳೆ. ಶೀಲದ ಪಾವಿತ್ರ್ಯದ ಪರಿಕಲ್ಪನೆಯನ್ನು ಅಪಮೌಲ್ಯಗೊಳಿಸಿದಾಗಲೇ ಪ್ರೀತಿಯನ್ನು ಮೊಗೆದು ಕುಡಿಯಲು ಸಾಧ್ಯವೆನ್ನುತಾಳೆ ಜೇನ್. ವ್ಯವಸ್ಥೆಯು ಒಳ್ಳೆಯತನದೊಂದಿಗೆ ಅನೈತಿಕತೆಯನ್ನು ಸಮಭಾವದಿಂದ ಸ್ವೀಕರಿಸಿದಾಗಲೇ ಅದು ಒಂದು ಯಶಸ್ವೀ ನಾಗರಿಕ ಸಮಾಜವೆನಿಸಿಕೊಳ್ಳುತ್ತದೆ ಎಂದು ಜೇನ್ ಹೇಳುತ್ತಾಳೆ.

ಇದನ್ನು ಈ ಕನ್ನಡದ ಕವಿಗಳು ಅರ್ಥ ಮಾಡಿಕೊಂಡಿರುವ ರೀತಿ ನೋಡಿ:
“ಒಂದನ್ನು ಬಿಟ್ಟೊಂದಿಲ್ಲ, ಈ ಅರಿವು
ತಮಗೂ ಆಗಲಿಕ್ಕುಂಟು!
ಭಗವೂ ಭಗವಂತನ ನಿವಾಸ
ನೆನಪಿಗಿರಲಿ ಉಡಿಯಲ್ಲೊಂದು ಗಂಟು”

ಯಾರಾದರೂ ನಮ್ಮನ್ನು ಈ ಕವಿಪುಂಗವರಿಂದ ಪಾರು ಮಾಡಿ !!!

ಜೇನ್‌ಳ ಫಿಲಾಸಫಿಯನ್ನು, ಸ್ವಗತವನ್ನು, ಕ್ರಿಯಾಶೀಲತೆಯನ್ನು, ಭಾವಕೋಶಗಳನ್ನು ಒಂದು ಹರಿಕತೆಯ ಅಸಂಬದ್ಧ hsvenkateshmurthyಪ್ರಲಾಪವನ್ನಾಗಿಸಿದ್ದಾರೆ ಈ ವೆಂಕಟೇಶಮೂರ್ತಿಗಳು. ಇಂತಹ ಸಾಂಪ್ರದಾಯಿಕ ಮನಸ್ಥಿತಿಯ ಕವಿ ಜೇನ್‌ಳನ್ನು ಮುಟ್ಟಲು ಸಾಧ್ಯವೇ?? ಸಾಧ್ಯವೇ ಇಲ್ಲ.

ಈ ಎಚ್.ಎಸ್.ವೆಂಕಟೇಶ್ ಮೂರ್ತಿಯವರು ಇನ್ನೂ ಹಲವಾರು ಕವಿತೆಗಳನ್ನು ಅನುವಾದಿಸಿದ್ದಾರೆ. ಆದರೆ ಇದನ್ನು ಓದಿ ಬೇರೆ ಅನುವಾದಗಳನ್ನು ಓದಲು ಧೈರ್ಯ ಬರಲಿಲ್ಲ. ಏಕೆಂದರೆ ಯೇಟ್ಸ್ ಮುಟ್ಟಿದರೆ ಮನಿ.

ಇದನ್ನು ಇಲ್ಲಿ ಬರೆಯಲು ಕಾರಣ ನನ್ನ ಆರಾಧ್ಯ ಕವಿ ಯೇಟ್ಸ್ ಸಂಪೂರ್ಣವಾಗಿ ಕುಲಗೆಟ್ಟಿದ್ದಕ್ಕೆ. ಮುಖ್ಯವಾಗಿ ವೆಂಕಟೇಶ್‌ಮೂರ್ತಿಗಳಂತಹ ಕವಿಗಳು ಇಂದು ಕನ್ನಡ ಸಾಹಿತ್ಯಲೋಕದಲ್ಲಿ ಪಡೆದುಕೊಳ್ಳುತ್ತಿರವ ಪ್ರಾಧಾನ್ಯತೆಯ ಹಿನ್ನೆಲೆಯಲ್ಲಿ ಇದನ್ನು ಬರೆಯಬೇಕಾಯಿತು. ಏಕೆಂದರೆ ಅಪ್ರಾಮಾಣಿಕತೆಗೆ, ಭಟ್ಟಂಗಿತನಕ್ಕೆ ಕುಖ್ಯಾತಿಯಾದ ನಮ್ಮ ಕನ್ನಡ ಸಾಹಿತ್ಯ ಲೋಕ ಇಂದು ವಟುಗಳ ನಿರಂತರ ಪ್ರಯತ್ನದಿಂದ ಬಹಳ ಜನಪ್ರಿಯರಾಗಿರುವ ವೆಂಕಟೇಶಮೂರ್ತಿಯವರನ್ನು (ಇವರ ಆತ್ಮೀಯ ಸ್ನೇಹಿತರು ಇಂದು ಕೇಂದ್ರ ಸಾಹಿತ್ಯ ಅಕಾಡೆಮಿಯಲ್ಲಿದ್ದಾರೆ ಬೇರೆ ) ನಿಷ್ಟುರ ಕಟ್ಟಿಕೊಳ್ಳುವುದು ಸಾಧ್ಯವೇ ಇಲ್ಲ. ಹೀಗಾಗಿ ಇವರು ಬರೆದದ್ದೇ ಭಗವದ್ಗೀತೆಯಾಗುವ ಅಪಾಯದ ದಿನಗಳಿವು.

ನಮ್ಮ ವಿಮರ್ಶಕರು ವೇದಿಕೆಗಳ, ಬಿರುದು ಬಾವಲಿಗಳ ಕುರಿತಾದ ಮೋಹಕತೆಯನ್ನು ತೊರೆದು ನಿಷ್ಠುರವಾದಿಗಳಾಗಬೇಕಾದಂತಹ ಅವಶ್ಯಕತೆ ಹಿಂದೆಂದಿಗಿಂತಲೂ ಇಂದು ಹೆಚ್ಚಿದೆ.

6 thoughts on “ಸಾಹಿತ್ಯವನ್ನು ಸಾಂಪ್ರದಾಯೀಕರಣಗೊಳಿಸುತ್ತಿರುವ ಕವಿಕುಲತಿಲಕರು

  1. Anonymous

    ಜೀವನ ಸಂಕೀರ್ಣವಾದುದು. ಸಾಹಿತ್ಯ ಪಟ್ಟಭದ್ರರ ಪ್ರಭಾವಕ್ಕೆ ಸಿಲುಕಿ ನರಳುವ ಅಪಾಯವಿರುವ ಕಾಲದಲ್ಲಿ, ಯಾವುದೇ ಸಂಪ್ರದಾಯ ಲಿಮಿಟೆಡ್ ಆಗಿಬಿಡುವ ಅಪಾಯ ಇರುತ್ತದೆ. ಇದೇ ಸಂಪ್ರದಾಯ ಕಲೆಯಾಗಿ ನಮ್ಮನ್ನೇ ಪ್ರತಿನಿಧಿಸಿ ಬಿಡುವಂಥ ಆಪಾಯಕಾರಿ ಸನ್ನಿವೇಶಗಳು ಹುಟ್ಟಿಬಿಡುತ್ತವೆ. ಆದರೆ ನಿಮ್ಮ ಲೇಖನ ಎಚ್ಚರಿಕೆಯ ಚಾಟಿಯೇಟಿನಂತಿದೆ. ಧನ್ಯವಾದಗಳು – ಪ್ರಸನ್ನ ರೇವನ್

    Reply
  2. Naveen H

    ಈ ವೆಂಕಟೇಶಮೂರ್ತಿ ವಟುವೋ ಮತ್ತೊಂದೋ ಗೊತ್ತಿಲ್ಲಾ. ಹಾಗೂ ಅದು ಅಪ್ರಸ್ತುತ ಕೂಡ. ಆದರೆ ಈತ ಅತೀ ಕೆಟ್ಟ ಭಾಶಂತಕಾರ ಎನ್ನುವದು ಮಾತ್ರ ಈತನ ಮೊದಲ ಸಾಲಿನಿಂದಲೇ ಗೊತ್ತಾಗತ್ತೆ. ಸಾಹಿತ್ಯದ ಲವಲೇಶವೂ ಗೊತ್ತಿಲ್ಲದ ನಾನೂ ಕೂಡ ಯೇಟ್ಸ್ ಕವಿಯ ಸಂವೇದನೆಗಳನ್ನು ಮನ್ನುಗೂಡಿಸಿದ್ದಾನೆ ಎಂದು ಗಮನಿಸಬಹುದೆಂದರೆ ಈತ ಎಷ್ಟೊಂದು ಕೆಟ್ಟದಾಗಿ ಬರೆದಿದ್ದಾನೆ ಎಂದು ಗಮನಿಸಬಹುದು
    .

    Reply
  3. kgbeuSrinivasamurthy BG

    ಸುನಾತ್ ಎಂಬುವವರು http://sallaap.blogspot.in/
    ರಲ್ಲಿ
    ಯೇಟ್ಸ ಕವಿಯ ಕವನವೊಂದರ ಮೂರು ಅನುವಾದಗಳನ್ನು ವಿಮರ್ಶೆ ಮಾಡಿದ್ದಾರೆ. ಅವನ್ನು ಇಲ್ಲಿಯೇ ಹಾಕಿದ್ದೇನೆ. ದಯವಿಟ್ಟು ಎಚ್.ಎಸ್. ವೆಂಕಟೇಶಮೂರ್ತಿ ರವರು ಅನುವಾದಿಸಿರೋದರ ಈ ಕವಿತೆಯನ್ನು ಇವುಗಳ ಜೊತೆಗೆ ತಾಳೆ ಮಾಡಿ ಮತ್ತೊಂದು ವಿಮರ್ಶೆಯನ್ನು ಈ ಕುರಿತು ಬರೆಯುವಿರ?

    ಇಂಗ್ಲಿಶ್ ಸಾಹಿತ್ಯದ ಮಹಾನ್ ಕವಿಯಾದ ಯೇಟ್ಸ್ ಅವರು ಬರೆದ ಕವನವೊಂದು ಇಲ್ಲಿದೆ. ಮೂಲಕವನದ ಜೊತೆಗೆ ಆ ಕವನದ ಮೂರು ಅನುವಾದಗಳನ್ನೂ ಸಹ ಇಲ್ಲಿ ಕೊಡುತ್ತಿದ್ದೇನೆ. ಮೊದಲಿನ ಎರಡು ಅನುವಾದಗಳು ಕನ್ನಡದ ಉದ್ದಾಮ ಸಾಹಿತಿಗಳು ಮಾಡಿದ ಭಾಷಾಂತರಗಳಾಗಿವೆ. ಮೂರನೆಯ ಅನುವಾದವು ಬ್ಲಾ*ಗ್ ಲೋಕದಲ್ಲಿ ಸುಪರಿಚಿತರಾದ ಶ್ರೀ ಮಂಜುನಾಥ ಕೊಳ್ಳೇಗಾಲರದು.
    Crazy Jane talks with the Bishop
    I met the Bishop on the road
    And much said he and I.
    Those breasts are flat and fallen now,
    Those veins must soon be dry;
    Live in a heavenly mansion,
    Not in some foul sty.’
    `Fair and foul are near of kin,
    And fair needs foul,’ I cried.
    ‘My friends are gone, but that’s a truth
    Nor grave nor bed denied,
    Learned in bodily lowliness
    And in the heart’s pride.
    `A woman can be proud and stiff
    When on love intent;
    But love has pitched his mansion in
    The place of excrement;
    For nothing can be sole or whole
    That has not been rent.’
    ಈ ಕವನವನ್ನು ಅನಂತಮೂರ್ತಿಯವರು ಅನುವಾದಿಸಿದ ಬಗೆ ಹೀಗಿದೆ:
    ಮರಳಿ ಜೇನ್ ಗೌರವಾನ್ವಿತ ಬಿಶಪ್‍ಗೆ
    ಬೀದಿಯಲ್ಲಿ ಬಿಶಪ್ ಸಿಕ್ಕ
    ಅವನು ಅಂದ, ನಾನೂ ಅಂದೆ;
    ‘ಎಂಥ ಮೊಲೆಗಳೂ ಸೊರಗಿವೆ, ಜೋತಿವೆ,
    ಅನಾಳಗಳೂ ಬತ್ತಲಿವೆ.
    ನಿರ್ಮಲ ಸೌಧದಿ ಬಾಳೇ ಹೆಣ್ಣೆ,
    ಮಲದ ಕೂಪ ತೊರೆಯೆ.
    ನಿಜದ ಠಾವು ಅರಿಯೆ.’
    ನಾನದ ಕೊಡೆ: ಕೇಳೋ ತಂದೆ
    ಮಲ ನಿರ್ಮಲ ನೆಂಟರಂತೆ
    ಮಲವಿದ್ದೇ ಅಮಲ;
    ಸಖರೆಷ್ಟೋ ಸತ್ತರು—ನಿಜ
    ಗೋರಿಯಷ್ಟೇ ಸುಖದ ಶಯ್ಯೆ
    ಮರೆಮಾಚದ ನಿಜವದು.
    ಅರಿತದ್ದೋ ಅದು—
    ಪಾಪದ ತನು ವಿನಯದಲ್ಲಿ
    ಹೃದಯ ಹೆಮ್ಮೆಯಲ್ಲಿ.
    ರತ್ಯಾತುರ ಹೆಣ್ಣಿಗು ಇದೆ
    ಲಜ್ಜೆಯ ಬಿಗುಮಾನ;
    ಪ್ರೇಮವೆಬ್ಬಿಸಿದ ಸಿರಿಸೌಧದ ಠಾವೊ
    ಮಲಮೂತ್ರದ ಜಘನ;
    ಬಿಡಿ ನಿಂತಿದ್ದೂ ಇಡಿ ತುಂಬಿದ್ದೂ
    ಬಗೆದದ್ದೇ ಎಲ್ಲ—ಹರಿಯದೆ
    ಬಗೆದದ್ದೂ ಇಲ್ಲ.’
    ಇದೇ ಕವನವನ್ನು ಲಂಕೇಶರು ಹೀಗೆ ಅನುವಾದಿಸಿದ್ದಾರೆ:
    ಮಳ್ಳಿ ಜೇನ್ ಮತ್ತು ಬಿಶಪ್ ಮಾತಾಡಿದ್ದು
    ಬೀದಿಯಲ್ಲೊಬ್ಬ ಪಾದ್ರಿ ಸಿಕ್ಕಿದ್ದ,
    ಆಡಿದೆವು ಅದೂ ಇದೂ ಮಾತು.
    ಅವನೆಂದ, ‘ಎಂಥ ಮೊಲೆ ಬತ್ತಿವೆ, ನರ
    ಒಣಗಿ ಬೀಳಲಿವೆ ಜೋತು;
    ಹೊಲಸು ಹಕ್ಕೆಯ ತೊರೆ, ಕಳೆ
    ದಿನಗಳ ದೇವಾಲಯದಿ ಕೂತು.’
    ಚೀರಿದೆ ನಾನು, ‘ಹೊಲಸಿಗೂ ಸೊಗಸಿಗೂ
    ಬಿಡಿಸಲಾರದ ಮಿಲಾಖತ್ತು;
    ಸಖರು ಹೊರಟುಹೋದರು—ಈ ವಾಸ್ತವ
    ಹಾಸಿಗೆ, ಗೋರಿಗೂ ಗೊತ್ತು;
    ದೇಹದ ಪತನಕೆ ಹಿಗ್ಗಿದೆ ಹೃದಯ,
    ಪಡಕೊಂಡಿದೆ ಸುಖಸಂಪತ್ತು.’
    ಹೆಣ್ಣು ಪ್ರೇಮಕ್ಕೆ ಮನದ ನೆಟ್ಟರೆ
    ಉಬ್ಬಿ ಹೋಗುವುಳು ಸೆಡೆದು
    ಕಾಮ ಮಾಡಿದ್ದೇನು, ಹಾಕಿದೆ ಡೇರೆ
    ಮಲಮೂತ್ರ ಸ್ಥಾನ ಹಿಡಿದು,
    ಇಲ್ಲಿ ಚಿಂದಿಯಾಗದೆ ಕಷ್ಟ, ಮತ್ತೆ
    ಒಂದಾಗಿಸುವುದು ಹೊಲೆದು.’
    ಈಗೊಂದು ಪ್ರಶ್ನೆ. ಮೂಲಕವನವು ಅರ್ಥವಾಗುವಷ್ಟು ಸರಳವಾಗಿ, ಮೂಲಕವನದ ಭಾವವು ಮನಸ್ಸಿಗೆ ತಟ್ಟುವಷ್ಟು ಸಮರ್ಥವಾಗಿ ಈ ಭಾಷಾಂತರಗಳು ಅರ್ಥವಾಗುತ್ತಿವೆಯೆ? ಈ ಎರಡೂ ಅನುವಾದಗಳು ಮೂಲಕವನದ ಛಂದಸ್ಸನ್ನು ನಿಖರವಾಗಿ ಹಿಂಬಾಲಿಸಿವೆ. ಎರಡೂ ಕವನಗಳಲ್ಲಿ ಪದಲೋಪವಾಗಿಲ್ಲ. ಆದರೆ ಕವನದ ಭಾವ(Spirit of the poem) ಹಾಗು ಸ್ವಭಾವ(Tone of the poem)ಗಳ ನಿರ್ಮಾಣದಲ್ಲಿ ಅನಂತಮೂರ್ತಿಯವರ ಅನುವಾದವು ಸಂಪೂರ್ಣವಾಗಿ ಸೋತು ಹೋಗಿದೆ. ಲಂಕೇಶರ ಅನುವಾದವು ಸ್ವಲ್ಪ ಮಟ್ಟಿಗೆ ಉತ್ತಮ.
    ಈ ಮಾತನ್ನು ಚರ್ಚಿಸಲು ಕವನದ ಹಿನ್ನೆಲೆಯನ್ನು ಗಮನಿಸೋಣ. ಈ ಕವನದ ನಾಯಕಿ ಮೈಮಾರಿಕೊಂಡು ಜೀವಿಸುತ್ತಿರುವ,  ಹರೆಯವನ್ನು ದಾಟಿದ ಓರ್ವ ಸೂಳೆ. ಸಮಾಜದ ಚರಂಡಿಯಲ್ಲಿ ಬಿದ್ದುಕೊಂಡು ಬದುಕು ಕಟ್ಟಬೇಕಾದ ಪರಿಸ್ಥಿತಿ ಅವಳದು. ಅವಳು ದಾರಿಯಲ್ಲಿ ಹೋಗುತ್ತಿರುವಾಗ  ಅಕಸ್ಮಾತ್ತಾಗಿ ಆ ಭಾಗದ ಧರ್ಮಬೋಧಕನು ಅವಳನ್ನು ನೋಡುತ್ತಾನೆ. ‘ಪಾಪಿ’ಗಳನ್ನು ಉದ್ಧರಿಸುವುದೇ ಅವನ ಕರ್ತವ್ಯವಲ್ಲವೆ! ಈ ಸೂಳೆಯನ್ನು ಉದ್ಧರಿಸುವ ದಿವ್ಯ ಅಪೇಕ್ಷೆಯನ್ನು ಹೊಂದಿದ ಧರ್ಮಬೋಧಕನೇ ಅವಳೊಡನೆ ಮಾತನ್ನು ಪ್ರಾರಂಭಿಸುತ್ತಾನೆ ಹಾಗು ಇವಳು ಎಗ್ಗಿಲ್ಲದೆ ಅವನಿಗೆ ಪ್ರತಿಯಾಡುತ್ತಾಳೆ. ಇಷ್ಟೆಲ್ಲವನ್ನೂ ಏಟ್ಸ್ ಒಂದೇ ವಾಕ್ಯದಲ್ಲಿ ಹೇಳಿದ್ದಾನೆ:
    I met the Bishop on the road
    And much said he and I.
    ಈ ಮಾತನ್ನು ಅನಂತಮೂರ್ತಿಯವರು ಅನುವಾದಿಸಿದ್ದು ಹೀಗೆ:
    ಬೀದಿಯಲ್ಲಿ ಬಿಶಪ್ ಸಿಕ್ಕ
    ಅವನು ಅಂದ, ನಾನೂ ಅಂದೆ;
    ಬಿಶಪ್ಪನ ನೀತಿಬೋಧೆಯ ಆತುರವು ಈ ಅನುವಾದದಲ್ಲಿ ವ್ಯಕ್ತವಾಗುವುದಿಲ್ಲ. ಆ ನೀತಿಬೋಧೆಯಿಂದಾಗಿಯೇ ನಮ್ಮ ನಾಯಕಿಯು ಕೆರಳುತ್ತಾಳೆ ಎನ್ನುವುದೂ ಇಲ್ಲಿ ತಿಳಿಯುವುದಿಲ್ಲ!
    ಇನ್ನು ಲಂಕೇಶರ ಅನುವಾದವನ್ನು ನೋಡೋಣ:
    ಬೀದಿಯಲ್ಲೊಬ್ಬ ಪಾದ್ರಿ ಸಿಕ್ಕಿದ್ದ,
    ಆಡಿದೆವು ಅದೂ ಇದೂ ಮಾತು.
    ‘ಬೀದಿಯಲ್ಲೊಬ್ಬ’ ಎಂದಾಗ ಅವನು ಯಾವುದೋ ಒಬ್ಬ ಪಾದ್ರಿ ಎನ್ನುವ ಗ್ರಹಿಕೆಯಾಗುವುದೇ ಹೊರತು, ಆ ಭಾಗದ ಧರ್ಮೋಪದೇಶಕ ಎನ್ನುವ ವಿಷಯ ತಿಳಿಯುವುದಿಲ್ಲ. ಇದು ತಪ್ಪು ಭಾಷಾಂತರ. ‘ಅದೂ ಇದೂ ಮಾತಾಡಿದೆವು’ ಎನ್ನುವಾಗ, ಆ ಪಾದ್ರಿ ಮತ್ತು ಸೂಳೆ ಲೋಕಾಭಿರಾಮವಾಗಿ ಮಾತನಾಡಿದರು ಎನ್ನುವ ಅರ್ಥವನ್ನು ಈ ಅನುವಾದವು ಕೊಡುತ್ತದೆ! ಇಲ್ಲಿ ಲಂಕೇಶರು ಅನಂತಮೂರ್ತಿಗಿಂತ ಕೆಟ್ಟದಾಗಿ ಅನುವಾದಿಸಿದ್ದಾರೆ.
    ಮುಂದಿನ ನುಡಿಯಲ್ಲಿ, ನಮ್ಮ ಸೂಳೆಯ ಈಗಿನ ಅನಾಕರ್ಷಕ ರೂಪವನ್ನು ಆ ಧರ್ಮಬೋಧಕನು ನೇರವಾಗಿ ಹೀಗಳೆಯಲು ಪ್ರಾರಂಭಿಸುತ್ತಾನೆ. ಇದು ಅವನಿಗಿರುವ ಸಾಮಾಜಿಕ ಪ್ರತಿಷ್ಠೆಯ ಅಹಮ್ ಅನ್ನು ತೋರಿಸುತ್ತದೆ.
    Those breasts are flat and fallen now,
    Those veins must soon be dry;
    Live in a heavenly mansion,
    Not in some foul sty.’
    ಈ ಮಾತನ್ನು ಬೋಧಿಸುವಾಗ ಒಬ್ಬ ಹೆಣ್ಣುಮಗಳಿಗೆ (–ಅವಳು ಸೂಳೆಯೇ ಯಾಕಾಗಿರಲಿ–) ಗೌರವ ಕೊಡುವ ಅವಶ್ಯಕತೆ ಅವನಿಗೆ ಕಾಣುವದಿಲ್ಲ.
    ಧರ್ಮಬೋಧಕನ ಇಂತಹ ಪ್ರತಿಷ್ಠಿಕೆಯ ಮನೋಭಾವ ಅನಂತಮೂರ್ತಿಯವರ ಅನುವಾದದಲ್ಲಿ ಕಾಣುವುದಿಲ್ಲ. ಬದಲಾಗಿ ಓರ್ವ ನಿರಪೇಕ್ಷ ವ್ಯಕ್ತಿಯ ನೈಜ ಉಪದೇಶದಂತೆ ಭಾಸವಾಗುತ್ತದೆ. ಯಾಕೆಂದರೆ ಅನಂತಮೂರ್ತಿಯವರು ಈ ಬೋಧನೆಯನ್ನು ಶಿಷ್ಟ, ಸುಸಂಸ್ಕೃತ ಭಾಷೆಯಲ್ಲಿ ಅನುವಾದಿಸಿದ್ದಾರೆ:
    ‘ಎಂಥ ಮೊಲೆಗಳೂ ಸೊರಗಿವೆ, ಜೋತಿವೆ,
    ಅನಾಳಗಳೂ ಬತ್ತಲಿವೆ.
    ನಿರ್ಮಲ ಸೌಧದಿ ಬಾಳೇ ಹೆಣ್ಣೆ,
    ಮಲದ ಕೂಪ ತೊರೆಯೆ.
    ನಿಜದ ಠಾವು ಅರಿಯೆ.’
    ಈ ಮಾತನ್ನು ಲಂಕೇಶರು ಅನುವಾದಿಸಿದ್ದು ಹೀಗೆ:
    ಅವನೆಂದ, ‘ಎಂಥ ಮೊಲೆ ಬತ್ತಿವೆ, ನರ
    ಒಣಗಿ ಬೀಳಲಿವೆ ಜೋತು;
    ಹೊಲಸು ಹಕ್ಕೆಯ ತೊರೆ, ಕಳೆ
    ದಿನಗಳ ದೇವಾಲಯದಿ ಕೂತು.’
    ಲಂಕೇಶರ ಅನುವಾದದಲ್ಲಿ ಧರ್ಮಬೋಧಕನು ಬಳಸುವ ಅಶಿಷ್ಟ ಭಾಷೆಯು ಮೂಲಕವನದಲ್ಲಿ ಕಾಣಬರುವ ವ್ಯಂಗ್ಯಕ್ಕೆ ಸಮಾಂತರವಾಗಿದೆ. ಮೂಲಕವನದಲ್ಲಿ ಧರ್ಮಾಧಿಕಾರಿಯು ಬಳಸುವ ಚುಚ್ಚುಮಾತು ಹಾಗು ಅವಳ ಬಗೆಗೆ ಅವನಿಗೆ ಇರುವ ತಾತ್ಸಾರವು ಲಂಕೇಶರ ಅನುವಾದದಲ್ಲಿ ವ್ಯಕ್ತವಾದಂತೆ, ಅನಂತಮೂರ್ತಿಯವರ ಅನುವಾದದಲ್ಲಿ ವ್ಯಕ್ತವಾಗಿಲ್ಲ.
    ಧರ್ಮಬೋಧಕನು ಮಾಡುವ ನಾಯಕಿಯ ತುಚ್ಛೀಕರಣಕ್ಕೆ ಅವಳ ಪ್ರತಿಕ್ರಿಯೆ ಏನು? ‘I cried’ ಎಂದರೆ ಆ ಸೂಳೆಯು ಚೀರುತ್ತಾಳೆ.
    `Fair and foul are near of kin,
    And fair needs foul,’ I cried.
    ‘My friends are gone, but that’s a truth
    Nor grave nor bed denied,
    Learned in bodily lowliness
    And in the heart’s pride.
    ಧರ್ಮಬೋಧಕನ ನೀತಿಪಾಠವು ಅವಳನ್ನು ಕೆಣಕಿದೆ ಹಾಗು ಕೆರಳಿಸಿದೆ. ಕೊಳಚೆಯಲ್ಲಿ ಒತ್ತಲ್ಪಟ್ಟ ಆ ನಾಗಿಣಿಯ ಹೆಡೆಯನ್ನು ಅವನು ತುಳಿದಿದ್ದಾನೆ. ಈ ‘ಪ್ರತಿಷ್ಠಿತ, ಸಭ್ಯ ಪುರುಷನ’ ಪ್ರತಿಯಾಗಿ ಇರುವ ಅಸಹಾಯಕತೆ ಹಾಗು ರೋಷ ಅವಳನ್ನು ಭುಸುಗುಟ್ಟುವಂತೆ ಮಾಡಿದೆ
    ಇದು ಅವಳ ಸಹಜ ಸ್ವಭಾವ ಇರಬಹುದು ಅಥವಾ ಧರ್ಮಾಧಿಕಾರಿಯ ಚುಚ್ಚು ಮಾತಿಗೆ ಪ್ರತಿಕ್ರಿಯೆಯಾಗಿರಬಹುದು. ಅಲ್ಲದೆ ತನ್ನ ಬದುಕು ಎಂತಹದೇ ಇದ್ದರೂ ಸಹ, ಇದು ಸಮಾಜದ್ದೇ ಸೃಷ್ಟಿ ಎನ್ನುವ ಅರಿವಿನಿಂದ ಅವಳು ಕುದಿಯುತ್ತಾಳೆ. ಆದುದರಿಂದಲೇ, ಸೊಗಸು ಹಾಗು ಕೊಳಕು ಎರಡೂ ಸಂಬಂಧಿಗಳು ಎಂದು ಕುಟುಕುತ್ತಾಳೆ. ಅರ್ಥಾತ್ ಉದಾತ್ತ ಪ್ರೇಮ ಹಾಗು ಕೊಳಕು ಕಾಮ ಇವೆರಡೂ ಬಿಡಿಸಲಾರದ ಜೋಡಿ ಎಂದು ಅವನ ಮುಖಕ್ಕೆ ರಾಚಿದಂತೆ ಹೇಳುತ್ತಾಳೆ. ತನ್ನ ಕಸುಬಿನ ದೈಹಿಕ ಅವಮಾನ ಏನೇ ಇದ್ದರೂ ಸಹ, ತನ್ನ ಆತ್ಮಗೌರವಕ್ಕೆ ಅದರಿಂದ ಚ್ಯುತಿ ಇಲ್ಲ ಎಂದು ಗಂಭೀರವಾಗಿ ಉಸುರುತ್ತಾಳೆ.
    ನಾನದ ಕೊಡೆ: ಕೇಳೋ ತಂದೆ
    ಮಲ ನಿರ್ಮಲ ನೆಂಟರಂತೆ
    ಮಲವಿದ್ದೇ ಅಮಲ;
    ಸಖರೆಷ್ಟೋ ಸತ್ತರು—ನಿಜ
    ಗೋರಿಯಷ್ಟೇ ಸುಖದ ಶಯ್ಯೆ
    ಮರೆಮಾಚದ ನಿಜವದು.
    ಆ ಧರ್ಮಬೋಧಕನ ಮೇಲೆ ಇಷ್ಟೆಲ್ಲ ತಿರಸ್ಕಾರವಿರುವ ಆ ಹೆಣ್ಣು, ಅವನನ್ನು ‘ತಂದೆ’ ಎಂದು ಸಂಬೋಧಿಸಲು ಸಾಧ್ಯವೆ? ಕವನದ meter ಉಳಿಸಿಕೊಳ್ಳಲು ಅನಂತಮೂರ್ತಿಯವರು ಹಾಕಿರುವ ತಿಪ್ಪರಲಾಗ ಇದು! ಅಲ್ಲದೆ ಧರ್ಮಬೋಧಕನ ವಿರುದ್ಧ ಫೂತ್ಕರಿಸುತ್ತಿರುವ, ಕೊಳಚೆಯಲ್ಲಿ ಬದುಕುತ್ತಿರುವ ನಮ್ಮ ಸೂಳೆಯ ಬಾಯಿಯಿಂದ ಎಂತಹ ಅಭಿಜಾತ ಭಾಷೆ ಬರುತ್ತಿದೆ, ನೋಡಿರಿ!
    ಮೂಲ ಇಂಗ್ಲಿಶ್ ಕವನವನ್ನು ಓದದೆ, ಈ ನುಡಿಯ ಅನುವಾದವನ್ನು ಮಾತ್ರ ಓದಿದರೆ, ಏನಾದರೂ ಅರ್ಥವಾದೀತೆ?  ಅಲ್ಲದೆ, ಧರ್ಮಬೋಧಕನ ಮಾತಿನಿಂದ ಆ ಹೆಣ್ಣಿಗೆ(–ಸೂಳೆಯಲ್ಲ, ಹೆಣ್ಣು–) ಆದ hurt ಕನ್ನಡ ಅನುವಾದದಲ್ಲಿ ಪ್ರತಿಫಲಿಸಿದೆಯೆ?
    ಇನ್ನು ಈ ನುಡಿಯನ್ನು ಲಂಕೇಶರು ಹೇಗೆ ಅನುವಾದಿಸಿದ್ದಾರೆ?
    ಚೀರಿದೆ ನಾನು, ‘ಹೊಲಸಿಗೂ ಸೊಗಸಿಗೂ
    ಬಿಡಿಸಲಾರದ ಮಿಲಾಖತ್ತು;
    ಸಖರು ಹೊರಟುಹೋದರು—ಈ ವಾಸ್ತವ
    ಹಾಸಿಗೆ, ಗೋರಿಗೂ ಗೊತ್ತು;
    ದೇಹದ ಪತನಕೆ ಹಿಗ್ಗಿದೆ ಹೃದಯ,
    ಪಡಕೊಂಡಿದೆ ಸುಖಸಂಪತ್ತು.’
    ಲಂಕೇಶರ ಅನುವಾದದ ಮೊದಲ ಎರಡು ಸಾಲುಗಳು ಮೂಲಕವನದ ಭಾವಕ್ಕೆ ಹೆಚ್ಚು ಹತ್ತಿರವಾಗಿದೆ ಎನ್ನಬಹುದು. ಆದರೆ ಕೊನೆಯ ಎರಡು ಸಾಲುಗಳ ಅನುವಾದದಲ್ಲಿ ಅವರು ಎಡವಿದ್ದಾರೆ. ‘Learned in bodily lowliness,
    And in the heart’s pride’ ಎನ್ನುವಾಗ ಆ ಸೂಳೆಯು ‘ಹೊಲಸಿಗೂ ಸೊಗಸಿಗೂ ಬಿಡಿಸಲಾರದ ಮಿಲಾಖತ್ತು’ ಎನ್ನುವುದನ್ನು justify ಮಾಡುತ್ತಿರುವಳೇ ಹೊರತು, ‘ದೇಹದ ಪತನಕೆ ಹಿಗ್ಗಿದ ಹೃದಯ’ ಎಂದು ಭಾವಿಸುತ್ತಿಲ್ಲ.
    ಕೊನೆಯ ನುಡಿಯಲ್ಲಿ ಯೇಟ್ಸ ಕವಿಯು ಪ್ರೇಮ-ಕಾಮಗಳ ವಾಸ್ತವತೆಯನ್ನು ಬಯಲು ಪಡಿಸುತ್ತಾನೆ.
    `A woman can be proud and stiff
    When on love intent;
    But love has pitched his mansion in
    The place of excrement;
    For nothing can be sole or whole
    That has not been rent.’
    ಈ ನುಡಿಯಲ್ಲಿಯ ಈ ಸಾಲುಗಳನ್ನು ಗಮನಿಸಿ:
    `A woman can be proud and stiff
    When on love intent;’
    ಯೇಟ್ಸರ ನಾಯಕಿ ಸೂಳೆಯೇ ಆದರೂ ಸಹ ಅವಳಿಗೂ ಪ್ರೇಮಿಸಬಲ್ಲ ಹೃದಯ ಹಾಗು ಆತ್ಮಗೌರವ ಇವೆ. ತನ್ನ ನೈಜಪ್ರೇಮಿಯ ಜೊತೆಗೆ ಕೂಡುವಾಗ ಅವಳಿಗೆ ಪ್ರೇಮ ಹಾಗು ಕಾಮದ ಉತ್ಕಟತೆಯ ಅನುಭವ ಆಗಬಹುದು. ಅಂತಹ ಸ್ಥಿತಿಯನ್ನು ಅನಂತಮೂರ್ತಿಯವರು ‘ರತ್ಯಾತುರ ಹೆಣ್ಣು’ ಎಂದು ವರ್ಣಿಸುತ್ತಿದ್ದಾರೆ. ಅಂದರೆ ಮೂಲಕವನದಲ್ಲಿ ಇಲ್ಲದ ಅರ್ಥವನ್ನು ಅನಂತಮೂರ್ತಿಯವರು ತಮ್ಮ ಕವನದಲ್ಲಿ ಅನವಶ್ಯಕವಾಗಿ ಸೇರಿಸಿದ್ದಾರೆ. ಆದರೆ ‘ಹೆಣ್ಣು ಪ್ರೇಮಕ್ಕೆ ಮನದ ನೆಟ್ಟರೆ ಉಬ್ಬಿ ಹೋಗುವುಳು ಸೆಡೆದು’ ಎಂದು ಲಂಕೇಶರು ಅನುವಾದಿಸಿದ್ದು ಮೂಲಕ್ಕೆ ಹೆಚ್ಚು ಹತ್ತಿರವಾಗಿದೆ!
    ಯೇಟ್ಸನ ಕವನದ ಕೊನೆಯ ನಾಲ್ಕು ಸಾಲುಗಳು ಹೀಗಿವೆ:
    But love has pitched his mansion in
    The place of excrement;
    For nothing can be sole or whole
    That has not been rent.’
    ಕೊನೆಯ ಸಾಲುಗಳು ತುಂಬ ಅರ್ಥಗರ್ಭಿತವಾಗಿವೆ. ಯಾವುದನ್ನು ನಾವು ‘ಪ್ರೇಮ’ ಎಂದು ಕರೆಯುತ್ತೇವೆಯೋ, ಅದಕ್ಕೆ ಕಾಮದ drive ಬೇಕು.  ದಿವ್ಯಪ್ರೇಮವೆಂದು ಕರೆಯುವ ಭಾವವು ಮಲದ ಗುಂಡಿಯಲ್ಲಿಯೇ ತನ್ನ ಡೇರೆಯನ್ನು ಹೊಡೆದಿದೆ. ಇಲ್ಲಿ ಮತ್ತೊಂದು ಶ್ಲೇಷೆಯನ್ನು ಗಮನಿಸಬೇಕು:
    ಇಂಗ್ಲೀಶಿನಲ್ಲಿ ನಪುಂಸಕಲಿಂಗದ ವಸ್ತುಗಳನ್ನು ಪುಲ್ಲಿಂಗ ಅಥವಾ ಸ್ತ್ರೀಲಿಂಗದಲ್ಲಿ ಯೋಜಿಸುವುದು ವಾಡಿಕೆಯ ಮಾತಾಗಿದೆ. ಉದಾಹರಣೆಗೆ ship ಇದನ್ನು ಸ್ತ್ರೀಲಿಂಗದಲ್ಲಿ she ಎಂದು ಅವರು ಕರೆಯುತ್ತಾರೆ. ಇಲ್ಲಿ loveಅನ್ನು ಪುಲ್ಲಿಂಗದಲ್ಲಿ ಬಳಸುತ್ತ, `ಅವನು’ ತನ್ನ ಭವ್ಯಸೌಧವನ್ನು …..’ ಎಂದು ಹೇಳಲಾಗಿದೆ. ಅರ್ಥಾತ್ ಈ ಪ್ರೇಮ-ಕಾಮದ ವಿಪರ್ಯಾಸವು ಗಂಡಸರ ಕರಾಮತ್ತು ಎನ್ನುವ ಭಾವನೆ ಇಲ್ಲಿ ವ್ಯಕ್ತವಾಗುತ್ತಿದೆ.  ಎರಡನೆಯದಾಗಿ ಮೊದಲನೆಯ ನುಡಿಯಲ್ಲಿ ಧರ್ಮಬೋಧಕನು ಹೇಳುವ ‘Live in a heavenly mansion..’ ಎನ್ನುವಲ್ಲಿಯ mansionಗೆ ವ್ಯಂಗ್ಯವಾಗಿ, ನಮ್ಮ ನಾಯಕಿಯು  ‘But love has pitched his mansion..’ ಎಂದು ಹೇಳುತ್ತಿದ್ದಾಳೆ. ಈ ಎರಡು mansionಗಳ ನಡುವಿನ ಅಂತರವನ್ನು ಗಮನಿಸಬೇಕು! ಈ ವ್ಯಂಗ್ಯ ಅನಂತಮೂರ್ತಿಯವರ ಅನುವಾದದಲ್ಲಾಗಲೀ, ಲಂಕೇಶರ ಅನುವಾದದಲ್ಲಾಗಲೀ ಕಾಣುವದಿಲ್ಲ.
    ಒಟ್ಟಿನಲ್ಲಿ, ಈ ಸಾಲುಗಳಲ್ಲಿರುವ ಅಡಗಿರುವ ಅರ್ಥವನ್ನು ಅನುವಾದದಲ್ಲಿ ತರಲು ಅನಂತಮೂರ್ತಿ ಹಾಗು ಲಂಕೇಶರು ಸೋತು ಹೋಗಿದ್ದಾರೆ. ಆದರೆ ಈ ಸಾಲುಗಳಲ್ಲಿರುವ ಭಾವವನ್ನು ಸೂಚಿಸುವಂತಹ ತ್ರಿಪದಿಯೊಂದು ಕನ್ನಡದಲ್ಲಿ ಇದೆ! ಆ ತ್ರಿಪದಿಯನ್ನು ಓದುವ ಮೊದಲು ಅದರ ಹಿಂದಿನ ಕತೆಯನ್ನಷ್ಟು ಕೇಳೋಣ:
    ಹದಿನೇಳನೆಯ ಶತಮಾನದ ಮಹಾನ್ ಕವಿ ಹಾಗು ಲೋಕಶಿಕ್ಷಕನಾದ ಸರ್ವಜ್ಞನು ವೇಶ್ಯೆಯರ ಬಗೆಗೆ ಅನುದಾರವಾಗಿ ವಚನಿಸುವುದನ್ನು ಕಂಡ ಹೆಣ್ಣುಮಗಳೊಬ್ಬಳು ಅವನಿಗೆ ವಚನರೂಪದಲ್ಲಿಯೇ ಈ ರೀತಿಯಾಗಿ ತಿವಿಯುತ್ತಾಳಂತೆ:
    ಉಚ್ಚೆಯಾ ಬಚ್ಚಲವು ತುಚ್ಛವೆನ್ನಲು ಬೇಡ    
    ಅಚ್ಯುತನು ಬಿದ್ದ, ಅಜ  ಬಿದ್ದ, ನಿಮ್ಮಪ್ಪ
    ಎಚ್ಚತ್ತೆ ಬಿದ್ದ, ಸರ್ವಜ್ಞ!
    ಈ ತ್ರಿಪದಿಯನ್ನು ಹೇಳಿದ ಹೆಣ್ಣಿಗೆ ಇರುವ ಆತ್ಮಗೌರವ ಹಾಗು ಅವಳು ಬಳಸುವ ಭಾಷೆಗೂ, ಯೇಟ್ಸನ ನಾಯಕಿಗೆ ಇರುವ ಆತ್ಮಗೌರವ ಹಾಗು ಅವಳು ಬಳಸುವ ಭಾಷೆಗೂ ಸಾಮ್ಯತೆ ಇದೆಯಲ್ಲವೆ? ಯೇಟ್ಸನ ಕವನದಂತೆ ಈ ತ್ರಿಪದಿಯೂ ಸಹ ಭಾಷೆಯಲ್ಲಿ ಸರಳವಾಗಿ ಹಾಗು ಭಾವದಲ್ಲಿ ಸಂಕೀರ್ಣವಾಗಿ ಇರುವುದಲ್ಲವೆ! ಮೂಲಕವನದಲ್ಲಿ ಇರುವ ಸರಳತೆಯು ಅನಂತಮೂರ್ತಿಯವರ ಅನುವಾದದಲ್ಲಿ ಮಾಯವಾಗಿದೆ; ಅನುವಾದವು ಅರ್ಥವಾಗದಂತೆ ಜಟಿಲವಾಗಿದೆ. ಒಟ್ಟಿನಲ್ಲಿ ಅನಂತಮೂರ್ತಿ ಹಾಗು ಲಂಕೇಶರ ಅನುವಾದಗಳು ತಿಣುಕಾಟದ ಭಾಷಾಂತರಗಳಾಗಿವೆ.
    ಹಾಗಿದ್ದರೆ ಸಮರ್ಪಕ ಅನುವಾದ ಅಥವಾ ‘ಸಾರ್ಥಕ ಅನುವಾದ’ವೆಂದು ಯಾವುದಕ್ಕೆ ಹೇಳಬೇಕು? ಪದಶಃ ಅನುವಾದವು ಕೇವಲ ಭಾಷಾಂತರವಾಗುತ್ತದೆಯೇ ಹೊರತು ‘ಸಾರ್ಥಕ ಅನುವಾದ’ವಾಗುವುದಿಲ್ಲ. ಮೂಲಕವನದ ಭಾವ(Spirit) ಹಾಗು ಸ್ವಭಾವ(Tone) ಇವು ಅನುವಾದದಲ್ಲಿ ಮೂಡಬೇಕು. ಯೇಟ್ಸನ ಕವನವು ಸರಳವಾಗಿದೆ. ಅದರ ಭಾವವು ಸ್ಪಷ್ಟವಾಗಿದೆ. ಆದರೆ ಅನಂತಮೂರ್ತಿಯವರ ಕವನದಲ್ಲಿ ಮೂಲಕವನದ ಭಾವವು ಕಾಣದಾಗಿದೆ. ಸಮಾಜದ ದೃಷ್ಟಿಯಲ್ಲಿ ಪತಿತಳಾದ ಈ ಹೆಣ್ಣಿನ Self, ಭದ್ರಸಮಾಜದವರಿಗಿಂತ ಕಡಿಮೆಯದಲ್ಲ ಎನ್ನುವ ಭಾವವು ಅನಂತಮೂರ್ತಿಯವರ ಅನುವಾದದಲ್ಲಿ ವ್ಯಕ್ತವಾಗುವುದಿಲ್ಲ. ಲಂಕೇಶರ ಅನುವಾದದ ಹಣೆಬರಹವೂ ಅಷ್ಟೇ. ಅನಂತಮೂರ್ತಿ ಹಾಗು ಲಂಕೇಶ ಇವರೀರ್ವರೂ ಈ ಕವನದಲ್ಲಿ ಕಾಮಕ್ಕೆ ನೀಡಲಾದ ಸ್ಥಾನದ ಬಗೆಗೆ ಹೆಚ್ಚು ಉತ್ಸುಕರಾಗಿದ್ದಾರೆಯೇ ಹೊರತು, ಆ ಸೂಳೆಯು ಸಮಾಜದ ದ್ವಂದ್ವ ಮುಖದಿಂದ ತ್ರಸ್ತಳಾಗಿದ್ದಾಳೆ ಎನ್ನುವ ಮಹತ್ವದ ಅಂಶವನ್ನು ನಿರ್ಲಕ್ಷಿಸಿದ್ದಾರೆ.
    ಇನ್ನು ಕವನದ ಸ್ವಭಾವವನ್ನು (Tone) ನಿಶ್ಚಿತಗೊಳಿಸುವದು ಅಲ್ಲಿ ಬಳಸಲಾದ ಭಾಷೆಯ ಕೆಲಸ. ಈ ಉದ್ದೇಶದಿಂದ ಯೇಟ್ಸ ಕವಿಯು ಸೂಳೆಯಾಡುವ ಭಾಷೆಯಲ್ಲಿ ಗಾವಿಲತನವನ್ನು ಬಳಸಿದ್ದಾನೆ. ಆದರೆ, ಅನಂತಮೂರ್ತಿಯವರದಾದರೋ ಸುಸಂಸ್ಕೃತ ಪಾಂಡಿತ್ಯಭರಿತ ಭಾಷೆ! ಎಂತಹ ಆಭಾಸ! ಲಂಕೇಶರ ಭಾಷೆಯು ಅನಂತಮೂರ್ತಿಯವರ ಭಾಷೆಗಿಂತ ಮೂಲಕವನಕ್ಕೆ ಹತ್ತಿರವಾಗಿದೆ ಎಂದಷ್ಟೇ ಹೇಳಬಹುದು.
    ಸಮರ್ಪಕ ಅನುವಾದವನ್ನು ಹೇಗೆ ಮಾಡಬೇಕೆಂದು ಅರಿಯಬೇಕಾದರೆ, ಬೇಂದ್ರೆಯವರ ಅನುವಾದಗಳ ಅಧ್ಯಯನವನ್ನು ಮಾಡಬೇಕು. ವಿವೇಕಾನಂದರು ರಚಿಸಿದ ಕವನವೊಂದರ ಅನುವಾದವನ್ನು ಇಲ್ಲಿ ನೋಡಬಹುದು. ಅದರಂತೆ ಫಿಲಿಪೀನಾದ ಸ್ವಾತಂತ್ರ್ಯಯೋಧನಾದ ಜೋಸೆ ರಿಝಾಲನು ಗಲ್ಲಿಗೇರುವ ಮೊದಲು ರಚಿಸಿದ ಕವನದ ಅನುವಾದವನ್ನು ಬೇಂದ್ರೆ ಮಾಡಿದ್ದಾರೆ. ವಿಶ್ವಸಾಹಿತ್ಯದ ಶ್ರೇಷ್ಠ ಅನುವಾದಗಳಲ್ಲಿ ಈ ಅನುವಾದವನ್ನು ಸೇರಿಸಬಹುದು.
    ಇನ್ನು ಕಾಳಿದಾಸನ ‘ಮೇಘದೂತ’ ಕಾವ್ಯದ ಬೇಂದ್ರೆಯವರ ಅನುವಾದವನ್ನು ಸ್ವಲ್ಪ ಪರಿಶೀಲಿಸೋಣ. ಆ ಕಾವ್ಯದ ನುಡಿಯೊಂದು ‘ಆಷಾಢಸ್ಯ ಪ್ರಥಮೇ ದಿವಸೇ’ (=ಆಷಾಢಮಾಸದ ಮೊದಲ ದಿನದಂದು) ಎಂದು ಪ್ರಾರಂಭವಾಗುತ್ತದೆ. ಬೇಂದ್ರೆಯವರು ಈ ಸಾಲನ್ನು ಪದಶಃ ಅನುವಾದಿಸದೆ, ‘ಕಾರಹುಣ್ಣಿವೆಯ ಮಾರನೆಯ ದಿನ’ ಎಂದು ಅನುವಾದಿಸಿದ್ದಾರೆ. ಇದರ ಕಾರಣವೆಂದರೆ, ಉತ್ತರ ಭಾರತದಲ್ಲಿ ಪ್ರತಿ ಮಾಸವು ಹುಣ್ಣಿವೆಯ ಮಾರನೆಯ ದಿನದಿಂದ ಪ್ರಾರಂಭವಾದರೆ, ದಕ್ಷಿಣ ಭಾರತದಲ್ಲಿ ಅಮವಾಸ್ಯೆಯ ಮಾರನೆಯ ದಿನದಿಂದ ಪ್ರಾರಂಭವಾಗುತ್ತದೆ. ಅನುವಾದಕರಿಗೆ ಇಂತಹ ಔಚಿತ್ಯಪ್ರಜ್ಞೆ ಅವಶ್ಯವಾಗಿದೆ. ಈ ಸಾಲನ್ನು ಪದಶಃ ಭಾಷಾಂತರಿಸಿದ್ದರೆ, ಅರ್ಥವು ಅನರ್ಥವಾಗುತ್ತಿತ್ತು!
    ಯೇಟ್ಸ ಕವಿಯ ಕವನವನ್ನು ಅನುವಾದಿಸಿದವರು ವಿಶ್ವವಿದ್ಯಾಲಯದ ಬೋಧಕವರ್ಗದಲ್ಲಿದ್ದಂತಹ ಪಂಡಿತರು. ಆವರ ಅನುವಾದಗಳನ್ನಲ್ಲದೆ, ಶ್ರೀ ಮಂಜುನಾಥ ಕೊಳ್ಳೇಗಾಲರು ತಮ್ಮ ಬ್ಲಾಗಿನಲ್ಲಿ ಪ್ರಕಟಿಸಿದ ಅನುವಾದವೊಂದನ್ನು ಇಲ್ಲಿ ಕೊಡುತ್ತಿದ್ದೇನೆ. ಇವರ ಅನುವಾದವು  ಅನಂತಮೂರ್ತಿ ಹಾಗು ಲಂಕೇಶ ಇವರ ಭಾಷಾಂತರಗಳಿಗಿಂತ ಉತ್ತಮವಾಗಿರುವದನ್ನು ಗಮನಿಸಬಹುದು. ಇದರ ತಾತ್ಪರ್ಯವೇನೆಂದರೆ, ಒಂದು ಕವನದ ‘ಸಾರ್ಥಕ ಅನುವಾದ’ಕ್ಕೆ ಬೇಕಾದದ್ದು ಸರಿಯಾದ ಮನೋಧರ್ಮವೇ ಹೊರತು ವಿಶ್ವವಿದ್ಯಾಲಯದ ಪಾಂಡಿತ್ಯವಲ್ಲ!

    ದಾರಿಯಲ್ಲಿ ಆ ಪಾದ್ರಿ ಸಿಕ್ಕಿದ್ದ
    ಅದೂ ಇದೂ ಮಾತಾಡಿದೆವು.
    “ಎಂಥ ಮೊಲೆ, ಹೇಗೆ ಬತ್ತಿಹೋಗಿವೆ ನೋಡು,
    ನರಗಳಿನ್ನೇನು ಸೊರಗುವುವು;
    ನಡೆಯಿನ್ನಾದರು ಸ್ವರ್ಗದಲಿ ಬದುಕು
    ಸಾಕೀ ನರಕದ ಕೊಳೆ ಬದುಕು”
    “ಕೊಳಕಿಗು ಥಳುಕಿಗು ಬಿಡದಿಹ ನಂಟು
    ಅಗಲಿ ಇರವು ಅವು” – ಚೀರಿದೆ ನಾನು,
    “ಸಖರು ಹೋದರೂ ಗೋರಿಯೂ ತಿಳಿದಿದೆ
    ಸುಖದ ಶಯ್ಯೆಯೂ ನಿಜವಿದನು.
    ಈ ಪತಿತ ದೇಹದಲೆ, ವಿನಯದಿ ಹೆಮ್ಮೆಯ
    ಮನದಿ ಅರಿತೆನೀ ಸತ್ಯವನು”
    “ಹೆಣ್ಣು ಉಬ್ಬುವಳು ಸೆಡೆತು ಬೀಗುವಳು
    ಪ್ರೇಮದುನ್ನತಾವಸ್ಥೆಯಲಿ;
    ಆದರಾ ಪ್ರೇಮ ಸೌಧದ ನೆಲೆಯೋ
    ಹೊಲಸೇ ತುಂಬಿದ ಠಾವಿನಲಿ!
    ಹರಿಯದ ಬಿರಿಯದ ಒಂದಿದ್ದರೆ ಅದ
    ಹೊಲೆವುದು ತಾನೇ ಎಲ್ಲಿ?”

    ಮೂಲಕವನದ ಭಾವಕ್ಕೆ ಮಂಜುನಾಥರ ಅನುವಾದವು ಹತ್ತಿರದಲ್ಲಿದೆ ಎನ್ನಬಹುದು.
    ಯೇಟ್ಸ ಕವಿಯ ಈ ಕವನದಲ್ಲಿ ಸಾಮಾಜಿಕ ವೈಷಮ್ಯದ ಜೊತೆಗೆ, ಪುರುಷಪ್ರಧಾನ ಸಮಾಜವ್ಯವಸ್ಥೆಯ ಭಂಡತನವೂ ಸಹ ವ್ಯಕ್ತವಾಗುತ್ತಿದೆ ಎನ್ನುವುದನ್ನು ಗಮನಿಸಬೇಕು.

    Reply
    1. ವಿಜಯ್

      ಧನ್ಯವಾದಗಳು ಶ್ರೀನಿವಾಸಮೂರ್ತಿಯವರಿಗೆ..ನುನಾಥ ವರ ಲೇಖನವನ್ನು ಗಮನಕ್ಕೆ ತಂದಿದ್ದಕ್ಕೆ. ಈಗಲಾದರೂ ಶ್ರೀಪಾದ ಭಟ್ಟರ ಹಳಹಳಿಕೆ ಸ್ವಲ್ಪ ಕಡಿಮೆ ಆಗಬಹುದೇನೊ ತಮಗೆ ಬೇಕಾದವರ, ವಟುವಲ್ಲದವರ ಸೂಕ್ಷ್ಮ ಅನುವಾದಗಳನ್ನು ಓದಿ!.

      Reply
    2. ವಿಜಯ್

      ನನಗೂ ಈ ನಾಲ್ಕೂ ಅನುವಾದಗಳಲ್ಲಿ ಮಂಜುನಾಥ್ ಕೊಳ್ಳೆಗಾಲರ ಅನುವಾದ ನೈಜವೆನಿಸಿತು.

      Reply
  4. ಲಕ್ಷ್ಮೀನಾರಾಯಣ ವಿ.ಎನ್

    ಅನುವಾದದ ಬಗೆಗಿನ ಶ್ರೀನಿವಾಸಮೂರ್ತಿಯವರ ಗ್ರಹಿಕೆ ಸಮಂಜಸವಾಗಿದೆ. ಈ ಚರ್ಚೆಯಲ್ಲಿ ಬಳಸಿರುವ ಸರ್ವಜ್ಞ ನ ಹೆಸರಿನಲ್ಲಿರುವ ಪದ್ಯದ, ನನಗೆ ಗೊತ್ತಿರುವ ಪಾಠಾಂತರ ಹೀಗಿದೆ” ಉಚ್ಚೆಯಾ ಬಚ್ಚಲದು ತುಚ್ಛವೆಂದೆನಬೇಡ/ಅಚ್ಚುತನು ಬಿದ್ದ ಅಜ ಬಿದ್ದ ಶಿವನು ತಾ/ನೆಚ್ಚೆತ್ತು ಬಿದ್ದ ಸರ್ವಜ್ಞ. ಇಲ್ಲಿ ಸಂಗತ ವಾದ ಅಂಶ, ತ್ರಿಮೂರ್ತಿಗಳೂ (ಕಣ್ಮುಚ್ಚಿ ಕುಳಿತಿದ್ದ, ಕಾಮಹರನೆಂದು ಹೆಸರು ಪಡೆಯುವ ಮೊದಲು, ಶಿವ ಕಣ್ತೆರೆದು ಉಮೆಯನ್ನು ಕಂಡು ‘ಬಿದ್ದ’) ಕಾಮಕ್ಕೆ ಅತೀತರಲ್ಲ ಎನ್ನುವುದು. ಇಂಗ್ಲಿಷ್ ನಲ್ಲಿ to fall in love ಎನ್ನುವುದೂ ಕಾಮದ ಬಗೆಗಿನ ನೇತ್ಯಾತ್ಮಕ ನಿಲುವನ್ನೇ ಪ್ರಕಟಿಸುತ್ತದೆ.

    Reply

Leave a Reply to ವಿಜಯ್ Cancel reply

Your email address will not be published. Required fields are marked *