Daily Archives: March 4, 2014

ದಿನೇಶ್ ಅಮಿನ್‌ಮಟ್ಟು ಪ್ರತಿಕ್ರಿಯೆ : ಸಿದ್ಧಾಂತದ ಮಡಿವಂತಿಕೆಗಿಂತ ಸಾರ್ವಜನಿಕ ಹಿತ ನನಗೆ ಮುಖ್ಯ

– ದಿನೇಶ್ ಅಮಿನ್‌ಮಟ್ಟು

ತನಗೆ ತಪ್ಪೆಂದು ಕಂಡ ನನ್ನ ನಡವಳಿಕೆಯನ್ನು ಮುಲಾಜಿಲ್ಲದೆ ಪ್ರಶ್ನಿಸಿದ್ದ ನನ್ನ ಮೆಚ್ಚಿನ ಕಿರಿಯ ಗೆಳೆಯ ನವೀನ್ ಸೂರಿಂಜೆ ಅವರಿಗೆ ಅಭಿನಂದನೆಗಳು. ಆದರೆ ಸದಾ ಶಿಷ್ಯಾವಸ್ಥೆಯಲ್ಲಿಯೇ ಉಳಿದುಬಿಡಬೇಕೆಂದು ನಾನು ನಿರ್ಧರಿಸಿರುವುದರಿಂದ ನವೀನ್ ನೀಡಿರುವ ‘ಗುರು’ವಿನ ಪಟ್ಟವನ್ನು ವಿನಮ್ರತೆಯಿಂದ ನಿರಾಕರಿಸುತ್ತಿದ್ದೇನೆ.

ನವೀನ್ ನನಗೆ ಮೇಲ್ ಮಾಡಿದ್ದ ಪತ್ರವನ್ನು ಓದದೆ ಇದ್ದದ್ದು ನನ್ನ ಮೊದಲ ತಪ್ಪು. naveen-shettyಇಂತಹ ಸಂದರ್ಭದಲ್ಲಿ ಪೋನ್ ಮಾಡುವ ನವೀನ್ ಅದನ್ನು ಮಾಡದೆ ಇದ್ದದ್ದು ಅವರದ್ದೂ ತಪ್ಪು. ಆ ಪತ್ರವನ್ನು ಓದಿದ್ದರೂ “ಮುಸ್ಲಿಮ್ ಲೇಖಕರ ಸಂಘ”ದ ಸಮಾರಂಭಕ್ಕೆ ಹೋಗುತ್ತಿದ್ದೆ. ಆದರೆ ನವೀನ್ ಕೇಳಿರುವ ಪ್ರಶ್ನೆಗಳನ್ನು ಖಂಡಿತ ಭಾಷಣದಲ್ಲಿ ಎತ್ತುತ್ತಿದ್ದೆ. ಬೇರೆ ಯಾರೋ ಗೆಳೆಯರು ‘ಲೇಖಕರು ಕೂಡಾ ಜಾತಿ-ಧರ್ಮದ ಹೆಸರಲ್ಲಿ ಸಂಘಟನೆಯನ್ನು ಕಟ್ಟಿಕೊಳ್ಳುವುದು ಎಷ್ಟು ಸರಿ?’ ಎನ್ನುವ ಇನ್ನೂ ಒಂದು ಪ್ರಶ್ನೆಯನ್ನೂ ಎತ್ತಿದ್ದರು. ಯೋಚಿಸಬೇಕಾದ ಪ್ರಶ್ನೆ. ಆದರೆ ಈ ಪ್ರಶ್ನೆಗಳನ್ನು ಕೇಳುವವರು, ನಮ್ಮ ಪ್ರಕಾಶನ ಸಂಸ್ಥೆಗಳು ಮುಸ್ಲಿಮ್ ಲೇಖಕರ ಎಷ್ಟು ಪುಸ್ತಕಗಳನ್ನು ಪ್ರಕಟಿಸಿವೆ? ಮಾಧ್ಯಮ ಕ್ಷೇತ್ರದಲ್ಲಿ ಎಷ್ಟು ಮುಸ್ಲಿಮ್ ಪತ್ರಕರ್ತರಿಗೆ ವೃತ್ತಿಯ ಅವಕಾಶವನ್ನು ಕಲ್ಪಿಸಿವೆ? ಎಷ್ಟು ಮುಸ್ಲಿಮ್ ಲೇಖಕರ ಕತೆ-ಕವನ, ಕಾದಂಬರಿ, ಲೇಖನಗಳನ್ನು ಪ್ರಕಟಿಸುತ್ತಿವೆ? ಹಿಂದೂ ಮೂಲಭೂತವಾದದ ನಂಜು ಕಾರುವ ಪುಸ್ತಕಗಳನ್ನು ಸಾಲುಸಾಲು ಜೋಡಿಸಿಡುವ ಪುಸ್ತಕದಂಗಡಿಗಳಲ್ಲಿ ಮುಸ್ಲಿಮ್ ಲೇಖಕರ ಎಷ್ಟು ಪುಸ್ತಕಗಳನ್ನು ಮಾರಾಟಕ್ಕಿಟ್ಟಿವೆ? ಎಂಬ ಪ್ರಶ್ನೆಗಳಿಗೂ ಉತ್ತರ ನೀಡಬೇಕಾಗುತ್ತದೆ.

ಮುಸ್ಲಿಮ್ ಲೇಖಕರ ಸಂಘ ನನಗೆ ಅಪರಿಚಿತವಾದುದೇನಲ್ಲ, ಅದರ ಚಟುವಟಿಕೆಗಳ ಬಗ್ಗೆ ಒಂದಷ್ಟು ಮಾಹಿತಿ ನನಗಿತ್ತು. ಮೊದಲನೆಯದಾಗಿ ಇದನ್ನು ಸ್ಥಾಪಿಸಿದವರು ಜಮಾತೆ ಇಸ್ಲಾಮ್ ಹಿಂದ್ ಅಲ್ಲ. ಇದರ ಸ್ಥಾಪಕ ಅಧ್ಯಕ್ಷ ಸಿ.ಕೆ.ಹುಸೇನ್ ಎನ್ನುವ ಪತ್ರಕರ್ತ ಜಮಾತೆ ಇಸ್ಲಾಮ್ ಸಂಘಟನೆಯವರಲ್ಲ ಎನ್ನುವುದು ಗೊತ್ತಿತ್ತು. ಈಗ ಈ ಸಂಘದ ಸದಸ್ಯರಾಗಿರುವವರೆಲ್ಲರೂ ಜಮಾತೆ ಇಸ್ಲಾಮ್‌ಗೆ ಸೇರಿದವರಲ್ಲ, ಉಳಿದವರ ಜತೆಯಲ್ಲಿ ಅವರೂ ಸದಸ್ಯರಾಗಿರಬಹುದು. ಜಮಾತೆ ಇಸ್ಲಾಮ್ ಗೆ ಸೇರಿರುವ ‘ಹಿದಾಯತ್ ಸೆಂಟರ್’ ಕಟ್ಟಡದಲ್ಲಿ ಸಂಘದ ಕಚೇರಿ ಇರುವುದೊಂದೇ ಆ ಸಂಘಟನೆಯ ಜತೆಗೆ ಮುಸ್ಲಿಮ್ ಲೇಖಕರ ಸಂಘದ ಸಂಬಂಧ ಇರುವುದಕ್ಕೆ ನಮಗೆ ಮೇಲ್ನೋಟಕ್ಕೆ ಸಿಗುವ ಪುರಾವೆ.

ಮುಸ್ಲಿಮ್ ಲೇಖಕರ ಸಂಘ ಮುಸ್ಲಿಮ್ ಲೇಖಕರಿಗೆ ನೀಡಿದ್ದ ಮೊದಲ ಪ್ರಶಸ್ತಿಯನ್ನು ಪ್ರದಾನ ಮಾಡಿದವರು nudisiri-ananthamurthyಹಿರಿಯ ಸಾಹಿತಿಗಳಾಗಿರುವ ಯು.ಆರ್.ಅನಂತಮೂರ್ತಿ, ಆ ವರ್ಷ ಪ್ರಶಸ್ತಿ ಸ್ವೀಕರಿಸಿದವರು ಇನ್ನೊಬ್ಬ ಪ್ರಖ್ಯಾತ ಮುಸ್ಲಿಮ್ ಲೇಖಕ ಅಬ್ದುಲ್ ರಷೀದ್, ನಂತರದ ದಿನಗಳಲ್ಲಿ ಪ್ರಶಸ್ತಿ ಸ್ವೀಕರಿಸಿದವರಲ್ಲಿ ಬಿ.ಎ.ಸನದಿ, ಅಕ್ಬರ್ ಅಲಿ, ರಮ್ಜಾನ್ ದರ್ಗಾ, ಪ್ರೊ.ಶೇಖ್ ಅಲಿ, ಪ್ರೊ.ಗಜೇಂದ್ರಗಢ, ಕವಿ ನಿಸಾರ್ ಅಹ್ಮದ್ ಮೊದಲಾದವರು ಸೇರಿದ್ದಾರೆ. ಸಾಹಿತಿಗಳಾದ ದೇವನೂರು ಮಹಾದೇವ, ಜವರೇಗೌಡ ಹಾಗೂ ನಿಡುಮಾಮಿಡಿ ಸ್ವಾಮಿಗಳು, ತರಳಬಾಳು ಸ್ವಾಮಿಗಳು ಸಂಘದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿದ್ದರು. ಇದೇ ಸಂಘ ಆಯೋಜಿಸಿದ್ದ ಕರ್ನಾಟಕ ಮುಸ್ಲಿಮ್ ಲೇಖಕರು ಮತ್ತು ಪತ್ರಕರ್ತರ ಸಮ್ಮೇಳನದ ಅಧ್ಯಕ್ಷರಾಗಿದ್ದವರು ಕವಿ ನಿಸಾರ್ ಅಹ್ಮದ್. ಅದರಲ್ಲಿ ಬಾನು ಮುಷ್ತಾಕ್ ಸೇರಿದಂತೆ ಅನೇಕ ಮುಸ್ಲಿಮ್ ಲೇಖಕ-ಲೇಖಕಿಯರು ಪಾಲ್ಗೊಂಡಿದ್ದರು. ಸಂಘದ ಸಮಾರಂಭಗಳಲ್ಲಿ ನಮ್ಮ ನಡುವಿನ ಪ್ರಗತಿಪರ ಚಿಂತಕರಾದ ಶಿವಸುಂದರ್, ಫಣಿರಾಜ್, ಜಿ.ರಾಜಶೇಖರ್ ಅವರಲ್ಲದೆ ಪತ್ರಕರ್ತರಾದ ಈಶ್ವರಯ್ಯ, ಮನೋಹರ ಪ್ರಸಾದ್, ಚಿದಂಬರ ಬೈಕಂಪಾಡಿ, ಎನ್.ಎ.ಎಂ.ಇಸ್ಮಾಯಿಲ್ ಮೊದಲಾದವರು ಭಾಗವಹಿಸಿದ್ದರು. ನಾನು ಮುಸ್ಲಿಮ್ ಲೇಖಕರ ಸಂಘದ ಕಾರ್ಯಕ್ರಮದಲ್ಲಿ ಭಾಗವಹಿಸಲು ಈ ಹಿನ್ನೆಲೆ ಮೊದಲ ಕಾರಣ. ನಾನು ಉಲ್ಲೇಖಿಸಿರುವ ಸಾಹಿತಿಗಳು, ಚಿಂತಕರು, ಪತ್ರಕರ್ತರೆಲ್ಲರೂ “ಸಮಯ ಸಾಧಕರು’ ಎನ್ನುವುದಾದರೆ (ನವೀನ್ ಪತ್ರಕ್ಕೆ ಪ್ರತಿಕ್ರಿಯಿಸಿದವರೊಬ್ಬರು ಈ ಆರೋಪ ಮಾಡಿದ್ದರು) ‘ಸಮಯಸಾಧಕ’ ನೆಂಬ ಕೀರ್ತಿಕಿರೀಟ ನನ್ನ ತಲೆಯ ಮೇಲೂ ಇರಲಿ.

ಸಾರಾ ಅಬೂಬಕರ್, ಬೊಳುವಾರು, ಕಟ್ಪಾಡಿ ಮೊದಲಾದವರನ್ನು ಯಾಕೆ ಗುರುತಿಸಿ ನೀವು ಗೌರವಿಸಿಲ್ಲ ಎಂದು ನಾನೂ ಸಂಘಟಕರನ್ನು Sara-Abubakarಪ್ರಶ್ನಿಸಿದ್ದೆ. ‘ಈ ಬಾರಿ ಬೊಳುವಾರು ಅವರನ್ನು ಸನ್ಮಾನಿಸಲು ಕಾರ್ಯಕಾರಿ ಸಮಿತಿಯಲ್ಲಿ ನಿರ್ಧಾರವಾಗಿತ್ತು. ಆದರೆ ಅವರು ಅಮೆರಿಕದಲ್ಲಿರುವುದರಿಂದ ಸಾಧ್ಯವಾಗಲಿಲ್ಲ. ಸಾರಾ ಅಬೂಬಕರ್ ಒಪ್ಪಿಕೊಂಡರೆ ನಾವು ಖಂಡಿತ ಅವರನ್ನು ಕರೆಸಿ ಗೌರವಿಸುತ್ತೇವೆ’ ಎಂದು ಸಂಘದ ಕಾರ್ಯದರ್ಶಿ ಉಮರ್ ನನಗೆ ತಿಳಿಸಿದರು. ಅದೇ ರೀತಿ ಪ್ರಗತಿಪರರೆನಿಸಿಕೊಂಡ ಲೇಖಕರ ಕೃತಿಗಳಿಗೆ ಯಾಕೆ ಪ್ರಶಸ್ತಿ ನೀಡಿಲ್ಲ ಎಂದೂ ಅವರನ್ನು ಕೇಳಿದ್ದೆ. ‘ಪ್ರಶಸ್ತಿಗೆ ಅರ್ಜಿ ಹಾಕಲು ಪತ್ರಿಕಾ ಪ್ರಕಟಣೆ ನೀಡುತ್ತೇವೆ, ಆ ಅರ್ಜಿಗಳ ಆಧಾರದಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಅವರು ಪ್ರಶಸ್ತಿಗೆ ಆಯ್ಕೆಯಾಗದಿರಲು ಅರ್ಜಿ ಹಾಕದಿರುವುದು ಕಾರಣ ಇರಬಹುದು’ ಎಂದು ಉಮರ್ ಹೇಳಿದರು. ಪ್ರಶಸ್ತಿಯ ಆಯ್ಕೆಗಾಗಿ ಅವರು ರೂಪಿಸಿರುವ ವ್ಯವಸ್ಥೆ ತಪ್ಪಿರಬಹುದು, ಆದರೆ ಪೂರ್ವಗ್ರಹದಿಂದ ಇಂತಹದ್ದೊಂದು ವ್ಯವಸ್ಥೆ ರೂಪಿಸಿದ್ದಾರೆಂದು ನನಗೆ ಅನಿಸುತ್ತಿಲ್ಲ.

ಇಷ್ಟಕ್ಕೆ ಸುಮ್ಮನಾಗದ ನಾನು ‘ಮುಸ್ಲಿಮ್ ಲೇಖಕರ ಸಂಘ’ದ ಸಂವಿಧಾನವನ್ನು ತರಿಸಿ ಓದಿದೆ. ಅದರಲ್ಲಿರುವ ಸಂಘದ ಉದ್ದೇಶದ ಮುಖ್ಯಾಂಶಗಳು ಹೀಗಿವೆ:

  1. ಮುಸ್ಲಿಮ್ ಸಮುದಾಯದಲ್ಲಿ ಸಾಹಿತ್ಯದ ಅಭಿರುಚಿಯನ್ನು ಬೆಳೆಸುವುದು
  2. ಮುಸ್ಲಿಮ್ ಸಮುದಾಯದಲ್ಲಿ ಧರ್ಮದ ನೈಜ ತಿಳುವಳಿಕೆಯನ್ನು ಮೂಡಿಸುವುದು ಮತ್ತು ಮೂಢನಂಬಿಕೆ, ಕಂದಾಚಾರಗಳನ್ನು ಹೋಗಲಾಡಿಸಲು ಪ್ರಯತ್ನಿಸುವುದು
  3. ದೇಶಬಾಂಧವರಲ್ಲಿ ಇಸ್ಲಾಮ್ ಧರ್ಮದ ಬಗ್ಗೆ ಸರಿಯಾದ ತಿಳುವಳಿಕೆ ಮೂಡಿಸುವುದು ಮತ್ತು ಅವರಲ್ಲಿರಬಹುದಾದ ತಪ್ಪು ಕಲ್ಪನೆಯನ್ನು ದೂರೀಕರಿಸಲು ಪ್ರಯತ್ನಿಸುವುದು.
  4. ಮಾಧ್ಯಮಗಳಲ್ಲಿ ಪ್ರಕಟವಾಗುವ ಧಾರ್ಮಿಕ ವಿಧಿನಿಯಮಗಳ ಬಗೆಗಿನ ಅಪಪ್ರಚಾರಕ್ಕೆ ಸೂಕ್ತ ಉತ್ತರ ನೀಡುವುದು
  5. ಒಳಿತಿನ ಕಾರ್ಯಗಳಲ್ಲಿ ಸಂಘ ಸಂಸ್ಥೆಗಳೊಂದಿಗೆ ಸಹಕರಿಸುವುದು
  6. ಮುಸ್ಲಿಮ್ ಸಂಘ ಸಂಸ್ಥೆಗಳ ನಡುವ ಐಕ್ಯ ಸಾಮರಸ್ಯ ಮೂಡಿಸಲು ಪ್ರಯತ್ನಿಸುವುದು
  7. ದೇಶಬಾಂಧವರ ಮಧ್ಯೆ ಕೋಮು ಸಾಮರಸ್ಯವನ್ನು ಬಲಪಡಿಸಲು ಪ್ರಯತ್ನಿಸುವುದು….

ಈ ಸಂವಿಧಾನದ ಆಧಾರದಲ್ಲಿ ಮುಸ್ಲಿಮ್ ಲೇಖಕರ ಸಂಘ ‘ಕೋಮುವಾದಿ ಸಂಘಟನೆ’ ಎಂಬ ತೀರ್ಮಾನಕ್ಕೆ ಬರಲು ನನಗೆ ಸಾಧ್ಯವಾಗಲಿಲ್ಲ. ಇನ್ನು ನವೀನ್ ಸೂರಿಂಜೆ ಅವರು ಉಲ್ಲೇಖಿಸಿರುವುದು ‘ಶಾಂತಿ ಪ್ರಕಾಶನ’ದ ಪುಸ್ತಕಗಳನ್ನು. ಇದೇ ಚರ್ಚೆಗೆ ಹೆಚ್ಚು ಗ್ರಾಸ ಒದಗಿಸಿರುವುದು. ಈ ಪ್ರಕಾಶನ ಸಂಸ್ಥೆಗೂ ಮುಸ್ಲಿಮ್ ಲೇಖಕರ ಸಂಘಕ್ಕೂ ಸಂಬಂಧ ಇರುವುದಕ್ಕೆ ನನಗೆ ಪುರಾವೆಗಳು ಸಿಕ್ಕಿಲ್ಲ. shantiprakashanaಸಂಘದ ಪದಾಧಿಕಾರಿಗಳು ಕೂಡಾ ಈ ಸಂಬಂಧವನ್ನು ನಿರಾಕರಿಸುತ್ತಾರೆ. ನಾನು ಭಾಗವಹಿಸಿದ್ದ ಸಮಾರಂಭದ ವೇದಿಕೆಯಲ್ಲಿ ಜಮಾತೆ ಇಸ್ಲಾಮ್ ಹಿಂದ್ ಇಲ್ಲವೇ ಶಾಂತಿ ಪ್ರಕಾಶನದ ಯಾವ ಬ್ಯಾನರ್, ಭಿತ್ತಿಪತ್ರಗಳಿರಲಿಲ್ಲ. ಸಮಾರಂಭದ ಸಂಘಟಕರಲ್ಲಿ ಯಾರೂ ತಪ್ಪಿಯೂ ಈ ಸಂಸ್ಥೆಗಳ ಹೆಸರನ್ನೂ ಉಲ್ಲೇಖಿಸಿಲ್ಲ. ಆದರೆ ತುಂಬಿತುಳುಕಾಡುತ್ತಿದ್ದ ಪುರಭವನದಲ್ಲಿ ಸೇರಿದವರಲ್ಲಿ ಬಹುಸಂಖ್ಯೆಯಲ್ಲಿ ಜಮಾತೆ ಇಸ್ಲಾಮ್ ಸದಸ್ಯರಿದ್ದರು ಎಂಬ ಸ್ನೇಹಿತರ ಸಂಶಯವನ್ನು ಸಂಘಟಕರೂ ನಿರಾಕರಿಸಿಲ್ಲ.

ಕೊನೆಯದಾಗಿ ನಾನು ಮುಸ್ಲಿಮ್ ಲೇಖಕರ ಸಂಘದ ಸಮಾರಂಭದಲ್ಲಿ ಭಾಗವಹಿಸಲು ಇನ್ನೂ ಒಂದು ಕಾರಣ ಇದೆ. ಸಿದ್ದಾಂತಗಳ ಬಗ್ಗೆ ನನಗೆ ಮಡಿವಂತಿಕೆ ಇಲ್ಲ. ಸಾರ್ವಜನಿಕ ಹಿತ ಮತ್ತು ಸಿದ್ದಾಂತಗಳ ನಡುವೆ ಆಯ್ಕೆ ಎದುರಾದಾಗ ನಾನು ಸಾರ್ವಜನಿಕ ಹಿತವನ್ನೇ ಆಯ್ಕೆ ಮಾಡುತ್ತೇನೆ. ಯಾಕೆಂದರೆ ಕಾಲಾಂತರದಲ್ಲಿ ಸಿದ್ಧಾಂತಗಳು ಬದಲಾಗುತ್ತವೆ. ‘ಜಾತಿಯೇ ಇಲ್ಲ, ವರ್ಗವೇ ಎಲ್ಲ’ ಎನ್ನುತ್ತಿದ್ದ ಕಮ್ಯುನಿಸ್ಟ್ ಗೆಳೆಯರು ಈಗ ಜಾತಿ ಆಧಾರದಲ್ಲಿಯೇ ಚುನಾವಣೆಯಲ್ಲಿ ಟಿಕೆಟ್ ಹಂಚುವ ಸಿದ್ದಾಂತವನ್ನು ಒಪ್ಪಿಕೊಂಡ ನಂತರ ಅದನ್ನು ಜಾತಿವಾದಿ ಪಕ್ಷ ಎಂದು ಹೀಗಳೆಯಬಹುದೇ? ಅದೇ ರೀತಿ ಬ್ರಾಹ್ಮಣ-ಬನಿಯಾ ಪಕ್ಷ ಎಂಬ ಆರೋಪಕ್ಕೆ ಬಲಿಯಾಗಿದ್ದ ಭಾರತೀಯ ಜನತಾ ಪಕ್ಷ ಶೂದ್ರವರ್ಗಕ್ಕೆ ಸೇರಿರುವ ನರೇಂದ್ರ ಮೋದಿಯನ್ನು ಮುಂದಿನ ಪ್ರಧಾನಿ ಎಂದು ಘೋಷಿಸುವ ಮೂಲಕ ಸಾಮಾಜಿಕ ನ್ಯಾಯದ ಸಿದ್ದಾಂತವನ್ನು ಒಪ್ಪಿಕೊಂಡಿದ್ದೇವೆ ಎಂದು ಹೇಳುವ ಕಾರಣಕ್ಕೆ ಅದನ್ನು ಜಾತ್ಯತೀತ ಪಕ್ಷ ಎಂದು ಸ್ವೀಕರಿಸಬಹುದೇ?

ಕ್ಷಿಪ್ರಗತಿಯಲ್ಲಿ ಬದಲಾಗುತ್ತಲೇ ಇರುವ ಭಾರತದ ಸಾಮಾಜಿಕ ಮತ್ತು ರಾಜಕೀಯ ಸ್ಥಿತಿ-ಗತಿಗಳು ಒಮ್ಮೊಮ್ಮೆ ನಮ್ಮನ್ನು ತಕ್ಷಣಕ್ಕೆ ನಿರ್ಧಾರಕ್ಕೆ ಬರಲಾಗದಷ್ಟು ಸಂಕೀರ್ಣತೆಯ ಕಗ್ಗಂಟಿನಲ್ಲಿ ಕಟ್ಟಿಹಾಕುತ್ತವೆ. ಕಾಲವೊಂದೇ ನಮ್ಮ ಸರಿ-ತಪ್ಪುಗಳ ನಿಜವಾದ ತೀರ್ಪುಗಾರ. ಮುಸ್ಲಿಮ್ ಲೇಖಕರ ಸಂಘದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನನ್ನ ನಿರ್ದಾರದ ಸರಿ-ತಪ್ಪುಗಳನ್ನು ಈ ಕಾಲವೇ ನಿರ್ಧರಿಸಬಹುದು.

ಆದರೆ ಮೊನ್ನೆಯ ಸಮಾರಂಭದಲ್ಲಿ ಪುರುಷರಷ್ಟೆ ಸಮಸಂಖ್ಯೆಯಲ್ಲಿ ಸೇರಿರುವ ಬುರ್ಖಾಧಾರಿ ಸೋದರಿಯರನ್ನು ಕಂಡಾಗ ನನ್ನಲ್ಲೊಂದು ಆಶಾವಾದ ಹುಟ್ಟಿಕೊಂಡದ್ದನ್ನು ನಾನು ಹೇಳದಿರಲಾರೆ. ಸಂಘದ ಕಾರ್ಯಕ್ರಮಕ್ಕೆ ಪ್ರಾರಂಭದ ದಿನಗಳಲ್ಲಿ ಮುಸ್ಲಿಮ್ ಮಹಿಳೆಯರೇ ಬರುತ್ತಿರಲಿಲ್ಲವಂತೆ. ನಂತರದ ದಿನಗಳಲ್ಲಿ ಬಂದರೂ ಅವರು ಕೆಳಗೆ ಗಂಡಸರ ಜತೆ ಕೂರದೆ ಮೇಲಿನ ಮಹಡಿಯಲ್ಲಿ ಪ್ರತ್ಯೇಕವಾಗಿ ಕೂರುತ್ತಿದ್ದರಂತೆ, ಅದರ ನಂತರ ಅವರನ್ನು ಕೆಳಗೆ ಕೂರಿಸಿ ಅವರೆದುರು ಪರದೆಯೊಂದನ್ನು ನೇತುಹಾಕುತ್ತಿದ್ದರಂತೆ, ಕಳೆದ ವರ್ಷ ಹಿಂದಿನ ಸಾಲಿನಲ್ಲಿ ಬಂದು ಕೂತಿದ್ದರಂತೆ. ಈ ಬಾರಿ ಪುರುಷರಷ್ಟೇ ಸಂಖ್ಯೆಯಲ್ಲಿ ಮುಸ್ಲಿಮ್ ಮಹಿಳೆಯರೂ ಭಾಗವಹಿಸಿದ್ದರು. ವೇದಿಕೆಯಲ್ಲಿ ಇಬ್ಬರು ಮುಸ್ಲಿಮ್ ಮಹಿಳೆಯರು ನಮ್ಮೊಡನಿದ್ದರು. dinesh-amin-mattu-2ಅವರಲ್ಲೊಬ್ಬರಿಗೆ ನನ್ನ ಕೈಯಿಂದಲೇ ಪ್ರಶಸ್ತಿಯನ್ನು ಕೊಟ್ಟೆ. ಇನ್ನೊಬ ಕವಯಿತ್ರಿ ಎರಡು ಕವನಗಳನ್ನು ಓದಿದರು. ಮೊದಲ ಪುಟ್ಟ ಕವನ ‘ಪರಪುರುಷ’ನಾದ ನನ್ನ ಹೆಸರನ್ನು ಪೂರ್ಣವಾಗಿ ಉಲ್ಲೇಖಿಸಿ ನನ್ನ ಬರವಣಿಗೆಯ ಕುರಿತು ಬರೆದುದಾಗಿತ್ತು. ಯಾರಿಗೂ ಕಾಣದ ರೀತಿಯಲ್ಲಿ ಪರದೆಯಾಚೆ ಕೂತಿದ್ದ ಮುಸ್ಲಿಮ್ ಮಹಿಳೆಯರು ಕಣ್ಣುಕುಕ್ಕುವ ಫ್ಲಡ್ ಲೈಟ್ ಮುಂದೆ ವೇದಿಕೆಯಲ್ಲಿ ಅನ್ಯಧರ್ಮದ ಪುರುಷರ ಜತೆ ಕೂರುವ ಮತ್ತು ಕವನ ಓದುವ ವರೆಗೆ ಸಾಗಿಬಂದಿರುವ ಮಂಗಳೂರಿನ ಮುಸ್ಲಿಮ್ ಸೋದರಿಯರ ಬಾಳಪಯಣದ ಬಗ್ಗೆ ಆಶಾವಾದ ಇಟ್ಟುಕೊಳ್ಳದೆ ಇರಲು ಸಾಧ್ಯವೇ? ಮಹಿಳಾ ದಿನಾಚರಣೆಯನ್ನು ಇನ್ನಷ್ಟು ಭರವಸೆಯಿಂದ ಆಚರಿಸಲು ಬೇರೆ ಕಾರಣಗಳು ಯಾಕೆ ಬೇಕು?

ಸಣ್ಣ ಪತ್ರಿಕೆಗಳ ಉಳಿವು ಮತ್ತು ಸರ್ಕಾರದ ಇಚ್ಚಾಶಕ್ತಿ

 -ಎನ್. ರವಿಕುಮಾರ್, ಶಿವಮೊಗ್ಗ

ಭಾರತದ ಮಾಧ್ಯಮ ಲೋಕ (Electronic & Print Media) ತನ್ನ ಸ್ವರೂಪವನ್ನು ಬದಲಿಸಿಕೊಂಡಿದೆ. ತಂತ್ರಜ್ಞಾನ ಆಧುನೀಕರಣ ದ ನಾಗಾಲೋಟಕ್ಕೆ ತನ್ನನ್ನು ತಾನು ಸಮರ್ಥವಾಗಿ ಒಡ್ಡಿಕೊಳ್ಳುವತ್ತ ದಾಪುಗಾಲು ಹಾಕತೊಡಗಿದೆ. ಭಾರತದ ಮಾಧ್ಯಮಕ್ಷೇತ್ರಕ್ಕೆ ವಿದೇಶಿ ಬಂಡವಾಳ ಹೂಡಿಕೆಯಿಂದ ಪ್ರಸ್ತಾಪಗಳು ನಡೆಯುತ್ತಿರುವ ಸಂದರ್ಭದ ಜೊತೆಗೆ ದೇಶದ ಬಂಡವಾಳ ಶಾಹಿಗಳು, ರಾಜಕೀಯ ಅಧಿಕಾರಸ್ಥರು ಮಾಧ್ಯಮ ಕ್ಷೇತ್ರದಲ್ಲಿ ಬಂಡವಾಳ ಹೂಡಿ ಲಾಭದ ವೃತ್ತಿಪರ ಕ್ಷೇತ್ರವನ್ನಾಗಿಸಿಕೊಳ್ಳತೊಡಗಿದ್ದಾರೆ. ಮಾಧ್ಯಮ ಕ್ಷೇತ್ರ ಇಂದು tv-mediaಉದ್ದಿಮೆಯಾಗಿ ಬೆಳಯತೊಡಗಿದೆ. ಒಂದು ಕಾಲದಲ್ಲಿ ಸೇವಾಕ್ಷೇತ್ರವಾಗಿ ಗುರುತಿಸಲ್ಪಡುತ್ತಿದ್ದ ಮಾಧ್ಯಮ ಕ್ಷೇತ್ರ ಇಂದು ಕೋಟ್ಯಾಂತರ ರೂ.ಗಳ ಬಂಡವಾಳ ಹೂಡಿಕೆಯ, ಲಾಭ ತೆಗೆಯುವ ಕೈಗಾರಿಕೆ ಮತ್ತು ವಾಣಿಜ್ಯ ವಲಯವಾಗಿ ಎದ್ದು ನಿಲ್ಲತೊಡಗಿದೆ.

ಭಾರತದ ಪತ್ರಿಕೋದ್ಯಮ ದೇಶದ ಸ್ವಾತಂತ್ರ್ಯದ ಮಹಾಆಶಯಗಳ ನೆಲೆಯಲ್ಲಿ ಸೈದ್ದಾಂತಿಕ ಪ್ರಜ್ಞೆಯಿಂದ ಹುಟ್ಟಿದ್ದು ಇತಿಹಾಸ. ಸ್ವತಂತ್ರ ಭಾರತದ ಪತ್ರಿಕೋದ್ಯಮ ತನ್ನದೆ ಆದ ವಿಶಿಷ್ಟ ರೂಪದಲ್ಲಿ ಬೆಳೆದು ನಿಂತಿದೆ. ದೇಶದಲ್ಲಿ ಈಗ 94067 ಪತ್ರಿಕೆಗಳು ಭಾರತೀಯ ವೃತ್ತ ಪತ್ರಿಕೆ ನೋಂದಣಿ ಇಲಾಖೆಯಲ್ಲಿ (Registrar of Newspapers for India) ನೋಂದಣಿಯಾಗಿವೆ. ಇತರೆ ಕ್ಷೇತ್ರಗಳಲ್ಲಿರುವಂತೆ ಮಾಧ್ಯಮ ಕ್ಷೇತ್ರದಲ್ಲೂ ಪೈಪೋಟಿಯ ಯುಗ ಆರಂಭಗೊಂಡಿದೆ. ಇಂತಹ ಕಾಲ ಘಟ್ಟದಲ್ಲಿ ಕನ್ನಡ ಭಾಷಾ ಪತ್ರಿಕೋದ್ಯಮಕ್ಕೆ ಗಟ್ಟಿ ನೆಲೆಯನ್ನು ಕೊಟ್ಟಿರುವ ಸಣ್ಣ (ಜಿಲ್ಲಾ ಮಟ್ಟ) ಮತ್ತು ಮಧ್ಯಮ ಪತ್ರಿಕೆಗಳ (ಪ್ರಾದೇಶಿಕ) ಬೇರುಗಳು ಸಡಿಲಗೊಳ್ಳತೊಡಗಿವೆ. ಅಧುನೀಕರಣದ ನಾಗಾಲೋಟ, ಸಣ್ಣ ಪತ್ರಿಕೆಗಳ ಅಸ್ತಿತ್ವವನ್ನೆ ಅಲುಗಾಡಿಸತೊಡಗಿದ್ದರೆ, ಇಂದಿನ ಸ್ಪರ್ಧಾತ್ಮಕ ಯುಗ ಸಣ್ಣ ಪತ್ರಿಕಗಳಿಗೆ ಬಹುದೊಡ್ಡ ಸವಾಲುಗಳನ್ನೆ ಮುಂದಿಟ್ಟಿದೆ. ಕ್ಷಿಪ್ರವಾಗಿ ಬೆಳೆಯುತ್ತಿರುವ ತಂತ್ರಜ್ಞಾನ. ಇಂದಿನ ವಾಣಿಜ್ಯೀಕರಣದ ಮನೋಧರ್ಮದ ಇಕ್ಕಟ್ಟಿನಲ್ಲಿ ಸಿಲುಕಿರುವ ಸಣ್ಣ ಪತ್ರಿಕೆಗಳು ಅವಸಾನದ ಆತಂಕವನ್ನೆ ಎದುರಿಸುವಂತಾಗಿದೆ.

ಆತ್ಮ ವಂಚನೆಯಿಲ್ಲದೆ ನಾವುಗಳು ನಮ್ಮನ್ನು ವಿಮರ್ಶೆಗೊಳಪಡಿಸಿಕೊಳ್ಳಬೇಕಿದೆ. ಟಿಆರ್‌ಪಿ ಹಿಂದೆ ಬಿದ್ದಿರುವ ವಾಹಿನಿಗಳು, ಜಾಹೀರಾತು ಕಂಪನಿಗಳ ಮರ್ಜಿಯನ್ನೆ ಅವಲಂಬಿಸಿಕೊಂಡರುವ ಪತ್ರಿಕೆಗಳು ಸಮಾಜ ಮುಖಿಯಾದ ನೈಜ ಆಶಯಗಳನ್ನು, ಸಧೃಢ ಜನಾಭಿಪ್ರಾಯವನ್ನು ಜನರ ಮನಸ್ಸಿನಲ್ಲಿ ಬಿತ್ತುವಲ್ಲಿ ವಿಮುಖರಾಗುತ್ತಿವೆ ಎಂಬುದನ್ನು ನೋವಿನಿಂದ ಅರಗಿಸಿಕೊಳ್ಳುತ್ತಲೆ ಇವುಗಳ ಮಧ್ಯೆಯೆ ಈಜುತ್ತಿರುವ ಸಣ್ಣ ಮತ್ತು tv-mediaಮಧ್ಯಮ ಪತ್ರಿಕೆಗಳ ಪಾಡು ಹೇಳತೀರದಂತಾಗಿದೆ. ಕನ್ನಡ ಭಾಷೆಯ ಬೆಳವಣಿಗೆ ಮತ್ತು ಅಸ್ತಿತ್ವಕ್ಕೆ ಕನ್ನಡ ಸಾಹಿತ್ಯದಷ್ಟೆ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಭಾಷಾ ಪತ್ರಿಕೋದ್ಯಮದ ಕೊಡುಗೆ ಇದೆ. ಕೇವಲ ಒಂದು ಸೀಮಿತ ಪ್ರದೇಶ, ಜಿಲ್ಲಾ ಅಥವಾ ಪ್ರಾದೇಶಿಕ ಮಟ್ಟಕ್ಕೆ ಸೀಮಿತವಾಗಿರುವ ಸಣ್ಣ ಪತ್ರಿಕೆಗಳು ದಿನೆ ದಿನೆ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳತೊಡಗಿವೆ. ತಂತ್ರಜ್ಞಾನದ ವೇಗಕ್ಕೆ ತಕ್ಷಣವೆ ತನ್ನನ್ನು ತಾನು ತುರ್ತಾಗಿ ಒಗ್ಗಿಸಿಕೊಳ್ಳಲಾಗದ, ಮತ್ತೊಂದೆಡೆ ಬಂಡವಾಳಶಾಹಿಗಳ ಕಂಪನಿ ಶೇರ್‌ಗಳಲ್ಲಿ ನಡೆಯುವ ರಾಜ್ಯ ಮಟ್ಟದ ಪತ್ರಿಕೆಗಳ ದಾಳಿಯಿಂದಾಗಿ ಸಣ್ಣ ಪತ್ರಿಕೆಗಳು ನೆಲೆ ಕಳೆದುಕೊಳ್ಳತ್ತಿವೆ. ಬೇಕು-ಬೇಡಗಳ ಆಯ್ಕೆಗೆ ಅವಕಾಶವಿಲ್ಲದಂತೆ ಅಮರಿಕೊಳ್ಳತ್ತಿರುವ ತಂತ್ರಜ್ಞಾನ ಬೆಳೆದಷ್ಟೆ ದುಬಾರಿಕೂಡ. ಸಣ್ಣ ಪತ್ರಿಕೆಗಳು ಮೂಲತಃ ಬಂಡವಾಳದ ಕೊರತೆಯನ್ನು ಎದುರಿಸುತ್ತಲೆ ಉಸಿರಾಡುತ್ತಿರುತ್ತವೆ. ಮಾರುಕಟ್ಟೆಯ ಸೀಮಿತ ವಿಸ್ತರಣೆಯ ಮಿತಿಯನ್ನು ಅವಲಂಬಿಸಿಕೊಂಡು ತಂತ್ರಜ್ಞಾನದ ವೇಗಕ್ಕೆ ಒಡ್ಡಿಕೊಳ್ಳುವುದು ಕಷ್ಟಕರ. ಇತ್ತ ಬದುಕಲೂ ಆಗದೆ, ಸಾಯಲೂ ಆಗದೆ ವಿಲವಿಲ ಒದ್ದಾಡುವ ಸ್ಥಿತಿ ಸಣ್ಣ ಪತ್ರಿಕೆಗಳದ್ದಾಗಿದೆ. ಆಯಾ ಕಾಲಕ್ಕೆ ಮಾಧ್ಯಮ ಕ್ಷೇತ್ರದಲ್ಲಿ ಬದಲಾಗುತ್ತಿರುವ ತಂತ್ರಜ್ಞಾನವನ್ನು ಸಣ್ಣ ಪತ್ರಿಕೆಗಳು ಮೈಗೊಡಿಸಿಕೊಂಡು ಎದ್ದು ನಿಲ್ಲಬೇಕಾದರೆ ಇಂದು ಸರ್ಕಾರದ ನೆರವು ಬೇಕೆ ಬೇಕು.

ಸಣ್ಣ ಪತ್ರಿಕೆಗಳ ಸ್ವರೂಪವಾದರೂ ಹೇಗಿದೆ ಗೊತ್ತಾ? ಬಹಳಷ್ಟು ಸಣ್ಣ ಪತ್ರಿಕೆಗಳು ಒನ್ ಮ್ಯಾನ್ ಆರ್ಮಿಯಂತೆ ಓದುಗನ ಅಕ್ಷರ ದಾಹವನ್ನು ತೀರಿಸುತ್ತಿವೆ. ಇಲ್ಲಿ ಪತ್ರಿಕೆಯ ಮಾಲೀಕ, ಪ್ರಕಾಶಕ, ಸಂಪಾದಕ ಹುದ್ದೆಯಿಂದ ಹಿಡಿದು ಪತ್ರಿಕಾಲಯದ ಕಸ ಹೊಡೆಯುವ ಕೆಲಸವನ್ನು ಒಬ್ಬನೆ ನಿರ್ವಹಿಸುವ ಸ್ಥಿತಿ ಇದ್ದೆ ಇದೆ. ಅಥವಾ ಒಂದು ಕುಟುಂಬವೆ ದಿನವಿಡಿ ದುಡಿದು ಧಣಿಯುವ ಸನ್ನಿವೇಶಗಳು ಕಾಣಸಿಗುತ್ತವೆ. ಸಣ್ನ ಪತ್ರಿಕೆಗಳು ದೊಡ್ಡ ದೊಡ್ಡ ಪತ್ರಿಕೆಗಳಿಗೆ, ಚಾನಲ್‌ಗಳಿಗೆ ಗುಣ ಮಟ್ಟದ ವರದಿಗಾರರನ್ನು ಅಣಿಗೊಳಿಸಿಕೊಡುವ ಕಾರ್ಖಾನೆಗಳಂತಾಗಿವೆ. ಪತ್ರಿಕೋದ್ಯಮ ಪದವಿ ಮುಗಿಸಿಕೊಂಡು ಪ್ರಥಮವಾಗಿ ಸಣ್ಣ ಪತ್ರಿಕೆಗಳನ್ನು ಎಡತಾಕುವವರನ್ನು ತಿದ್ದಿ ತೀಡಿ ನಿಪುಣಗೊಳಿಸುತ್ತಿದ್ದಂತೆ ಭರ್ಜರಿ ಸಂಬಳ, ಸವಲತ್ತುಗಳ ರಾಜ್ಯ ಮಟ್ಟದ ಪತ್ರಿಕೆ, ವಾಹಿನಿಗಳಿಗೆ ವಲಸೆ ಹೋಗುತ್ತಿದ್ದಾರೆ. ಸಣ್ಣ ಪತ್ರಿಕೆಗಳಲ್ಲಿನ ಅಲ್ಪ ಭವಿಷ್ಯದೊಂದಿಗೆ ಯಾರು ತಾನೆ ಕೆಲಸ ಮಾಡಲು ಇಷ್ಟ ಪಡುತ್ತಾರೆ? ಅದೆಲ್ಲಕ್ಕಿಂತ ಆರ್ಥಿಕ ಸಂಪನ್ಮೂಲದ ಕೊರತೆ ಸಣ್ಣ ಪತ್ರಿಕೆಗಳನ್ನು ಹೈರಾಣಗೊಳಿಸಿದೆ.

ರಾಜ್ಯ ಮಟ್ಟದ ಪತ್ರಿಕೆಗಳಿಗಿರುವಂತೆ ಸಣ್ಣ ಪತ್ರಿಕೆಗಳಿಗೆ ಜಾಹೀರಾತಿನ ದೊಡ್ಡ ಹರಿವು ಇರುವುದಿಲ್ಲ. ಸ್ಥಳೀಯ ಸಂಸ್ಥೆಗಳು, kannada-news-channelsಉದ್ದಿಮೆದಾರರನ್ನು (ಜಾಹೀರಾತಿಗಾಗಿ) ಅವಲಂಬಿಸಿದರೂ ಪ್ರಾದೇಶಿಕ ಮಿತಿಯ ಕಾರಣ ನಿರೀಕ್ಷಿತ ಆದಾಯ ಬರುವುದು ಸಾಧ್ಯವಿಲ್ಲ. ಅಲ್ಲದೆ ರಾಜ್ಯ ಮಟ್ಟದ ಪತ್ರಿಕೆಗಳ ಜಿಲ್ಲಾ ಅವೃತ್ತಿಗಳು ಜಾಹೀರಾತುದಾರರನ್ನು ಆಕರ್ಷಿಸುತ್ತಾ ತಮ್ಮಡೆಗೆ ಸೆಳೆದುಕೊಳ್ಳತೊಡಗಿವೆ. ಇನ್ನೂ ಉಳಿದಿರುವುದು ಸಣ್ಣ ಪತ್ರಿಕೆಗಳ ಪಾಲಿಗೆ ಚಂದಾದಾರರು ಮಾತ್ರ. ಆದರೆ ಇಂದಿನ ತಂತ್ರಜ್ಞಾನ- ಆಧುನೀಕರಣದ ಬಿರುಗಾಳಿ ನಮ್ಮ ಓದುಗ ಸಮೂಹವನ್ನೆ ಸಮ್ಮೋಹನಗೊಳಿಸಿ ಬಿಟ್ಟಿದೆ. ಟಿ.ವಿ, ಮೊಬೈಲ್ , ಐಪ್ಯಾಡ್, ಪೋರ್ಟಲ್‌ಗಳಲ್ಲಿ ಇಂದಿನ ಪೀಳಿಗೆ ಮೈಮರೆತು ಹೋಗಿದೆ. ಅತ್ಯಂತ ಅಪಾಯಕಾರಿ ಎಂದರೆ ಓದುಗ ಸಂಸ್ಕೃತಿಯನ್ನೆ ಇಂದಿನ ತಂತ್ರಜ್ಞಾನ ನಾಶ ಮಾಡತೊಡಗಿದೆ. “ನೋಡುವ” ಮತ್ತು “ಕೇಳುವ” ಸಂವಹನವನ್ನಷ್ಟೆ ಮೈಗೂಡಿಸಿಕೊಳ್ಳುತ್ತಿರುವ ಇಂದಿನ ಯುವ ಸಮುದಾಯ ಓದುವ ಮತ್ತು ಬರೆಯು ಕ್ರೀಯಶೀಲತೆಯನ್ನು ಮರೆಯ‍ತೊಡಗಿದೆ. ದಿನಪತ್ರಿಕೆಗಳಿಗೆ ದಿನಬೆಳಗ್ಗೆ ಕಾಯುವ ಕಾಲ ಮುಗಿದು ಹೋಗಿದೆ. ಓದುಗ ವಲಯ ಜಾಗತೀಕರಣದ ಆಧುನಿಕ ಸಂವಹನ ಸಾಧನಗಳನ್ನು ಅವಲಂಬಿಸಿ ಕೊಂಡು ತನ್ನ ಸ್ವರೂಪವನ್ನು ಬದಲಿಸಿಕೊಂಡು ಸಣ್ಣ ಪತ್ರಿಕೆಗಳಿಂದ ದೂರವೆ ಉಳಿದಿದೆ. ಇಂದು ಸಣ್ಣ ಪತ್ರಿಕೆಗಳು ಉಚಿತವಾಗಿ ಹಂಚಿ ತನ್ನ ಜೀವಂತಿಕೆಯನ್ನು ಉಳಿಸಿಕೊಳ್ಳುವ ಅನಿವಾರ್‍ಯತೆಗೆ ಬಿದ್ದಿವೆ. ಹೀಗಿರುವಾಗ ಸಣ್ಣ ಪತ್ರಿಕೆಗಳ ಉಳಿವಾದರೂ ಹೇಗೆ?

ಪ್ರಜಾಪ್ರಭುತ್ವದ ನಾಲ್ಕನೆ ಅಂಗ ಮಾಧ್ಯಮ. ಆರೋಗ್ಯ ಪೂರ್ಣ ಪ್ರಜಾಪ್ರಭುತ್ವಕ್ಕೆ ಇದಲ್ಲದೆ ಮತ್ತೊಂದು ಕಾವಲು ನಾಯಿ ಇರಲು ಸಾಧ್ಯವಿಲ್ಲ. ಆದರೆ ಇದರ ಹಿತ ಕಾಪಾಡ ಬೇಕಾದ ಸರ್ಕಾರ (ಶಾಸಕಾಂಗ) ಅನುಸರಿಸುತ್ತಿರುವ ನೀತಿ ಸಣ್ಣ ಪತ್ರಿಕೆಗಳ ಪಾಲಿಗೆ ಮಾರಕವಾಗುತ್ತಿರುವುದು ದುರದೃಷ್ಟಕರ. ಕರ್ನಾಟಕದ ರಾಜ್ಯ ಸರ್ಕಾರ ಕಳೆದ ವರ್ಷ “ಜಾಹೀರಾತು ನೀತಿ-2013” ವೊಂದನ್ನು ಜಾರಿಗೊಳಿಸಲು ಮುಂದಾಯಿತು. ಹೌದು ಯಾವುದೇ ಸರ್ಕಾರಕ್ಕೆ ಯಾವುದೇ ವಲಯದ ಬಗ್ಗೆ ಒಂದು ನಿರ್ಧಿಷ್ಟ ನೀತಿ-ನಿರೂಪಣೆಗಳು ಇರಬೇಕು. ಆದರೆ ನೀತಿ -ನಿರೂಪಣೆಗಳು ಸಾಮಾಜಿಕ ಜವಾಬ್ದಾರಿಗಳನ್ನು ಫ್ರತಿಫಲಾಪೇಕ್ಷೆ ಇಲ್ಲದೆ ನಿರ್ವಹಿಸುತ್ತಿರುವ ವಲಯದ ಹಿತವನ್ನು ಮತ್ತು ಅವುಗಳ ಬಲವರ್ಧನೆಯ ಕಲ್ಯಾಣವನ್ನು ಒಳಗೊಳ್ಳುವಿಕೆಯಾಗಿರಬೇಕು. ಜಾಹೀರಾತು ನೀತಿ-2013 ಬಹುತೇಕ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಕತ್ತು ಹಿಸುಕುವ ಹಿಡನ್ ಅಜೆಂಡಾವೆ ಆಗಿತ್ತು ಎಂಬುದರಲ್ಲಿ ಎರಡು ಮಾತಿಲ್ಲ. (ಜಾಹೀರಾತು ನೀತಿ ವಿರೋಧಿಸಿ ಕರ್ನಾಟಕ ರಾಜ್ಯ ಕಾರ್‍ಯನಿರತ ಪತ್ರಕರ್ತರ ಸಂಘ ಸೇರಿದಂತೆ ವಿವಿಧ ಪತ್ರಿಕಾ ಸಂಘಟನೆಗಳ ಪ್ರತಿಭಟನೆಯ ಫಲವಾಗಿ ಸರ್ಕಾರ ಪರಿಷ್ಕರಿಸಲು ಮುಂದಾಗಿದೆ.) ಪತ್ರಿಕೆಗಳಿಗೆ ಜಾಹೀರಾತು ಮತ್ತಿತರ ಸವಲತ್ತುಗಳನ್ನು ನೀಡಲು ಸರ್ಕಾರ ಜಾರಿಗೆ ತಂದ ಜಾಹಿರಾತು ನೀತಿ ವಿಶೇಷವಾಗಿ ಸಣ್ಣ ಅದರಲ್ಲೂ ಭಾಷಾ ಪತ್ರಿಕೋದ್ಯಮಕ್ಕೆ ದುಬಾರಿಯೆ ಆಗಿತ್ತು. ಯಾವುದೇ ಸರ್ಕಾರ ಕೇವಲ ಆರ್ಥಿಕ ಹೊರೆ ತಗ್ಗಿಸುವ ಕಾರಣ ಮುಂದಿಟ್ಟುಕೊಂಡು ಪತ್ರಿಕೆಗಳಿಗೆ ನೀತಿಯ ಹೆಸರಿನಲ್ಲಿ ಕಡಿವಾಣ ಹಾಕಲು ಹೊರಟ್ಟಿದ್ದು ಮಾತ್ರ ಕ್ಷುಲ್ಲಕ ವೆನಿಸಿತ್ತು.

ಸರ್ಕಾರದ ಜನಪರ ಕೆಲಸಗಳನ್ನು, ಜನರಿಗೆ ಮತ್ತು ಸರ್ಕಾರದ ಬಗ್ಗೆ ಜನರಿಗಿರಬಹುದಾದ ಜನಾಭಿಪ್ರಾಯಗಳನ್ನು ಸರ್ಕಾರಕ್ಕೆ ತಲುಪಿಸುವ ಕೆಲಸ ಮಾಡುವ ಪತ್ರಿಕೆಗಳ ಹಿತ ಕಾಯುವುದು ಸರ್ಕಾರದ ಕರ್ತವ್ಯ ಕೂಡ, ಸರ್ಕಾರದ ಸಾಧನೆಗಳನ್ನು ಜನರಿಗೆ ಜಾಹೀರಾತು ಮೂಲಕ ತಲುಪಿಸುವಾಗ ಪತ್ರಿಕೆಗಳಿಗೆ ಆರ್ಥಿಕ ಸಹಾಯ ದಕ್ಕುವುದಲ್ಲದೆ ಅಧಿಕಾರದಲ್ಲಿರುವ ಪಕ್ಷಗಳಿಗೆ ರಾಜಕೀಯ ಲಾಭವೂ ಇರುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಮುಂದಿನ ದಿನಗಳು ಉಳ್ಳವರ ಪಾಲಿಗೆ ಮಾತ್ರ ಇರುತ್ತವೆ. ಯಾವೂಬ್ಬ ಬಂಡವಾಳಗಾರ ಮಾತ್ರ ಜಿಲ್ಲಾ ಮಟ್ಟದ ಯಾ ಪ್ರಾದೇಶಿಕ ಮಟ್ಟದ ಪತ್ರಿಕೆಗಳ ಸ್ಥಾಪನೆಗೆ ಮುಂದಾಗುತ್ತಾನೆ. ಅದೂ ಉದ್ಯಮವಾಗಿ ಲಾಭತರುವ ಷರತ್ತಿನ ಮೇಲೆಯೆ. ಇದಲ್ಲದೆ ಸಣ್ಣ ಪತ್ರಿಕೆಗಳನ್ನು ನಡೆಸಲು ಯಾರೂ ಮುಂದೆ ಬರುವುದಿಲ್ಲ ,

ನಿಜ, ಎಲ್ಲಾ ಕ್ಷೇತ್ರಗಳಲ್ಲಿರುವಂತೆ ಪತ್ರಿಕಾ ಕ್ಷೇತ್ರದಲ್ಲೂ “ಕಪ್ಪು ಕುರಿಗಳು” ಇದ್ದೆ ಇವೆ. ಅವುಗಳ ನಿಯಂತ್ರಣಕ್ಕೆ ಮೇಟಿ ಬೇಕೆ ಬೇಕು. ಇಂದು ಪತ್ರಿಕೋದ್ಯಮದ ಗಂಧ-ಗಾಳಿ ಗೊತ್ತಿಲ್ಲದವರೆಲ್ಲಾ ಪತ್ರಿಕೆ ಶುರುವಿಟ್ಟುಕೊಂಡು ಏನೆಲ್ಲಾ ಮಾಡುತ್ತಿರುವುದನ್ನು ಮರೆ ಮಾಚಿದರೆ ಅದು ಆತ್ಮ ವಂಚನೆಯಾದೀತು. ಪೀತ ಪತ್ರಿಕ್ಯೋದ್ಯಮ ನೈಜ ಪತ್ರಿಕೋದ್ಯಮವನ್ನೂ ಅನುಮಾನಿಸುವಂತಹ ಸನ್ನಿವೇಶವನ್ನು ತಂದಿಟ್ಟಿದೆ. ಭ್ರಷ್ಟ ರಾಜಕಾರಣಿಗಳಂತೆ, ಅಧಿಕಾರಶಾಹಿಗಳಂತೆ ಭ್ರಷ್ಟ ಪತ್ರಕರ್ತರು ಇಲ್ಲಿದ್ದಾರೆ. ಇಲ್ಲಿ ಕಾನೂನಿಗೆ ಯಾರೂ ಅತೀತರಲ್ಲ. ಅಂತಹವರನ್ನು ಹತ್ತಿಕ್ಕದಿದ್ದರೆ ಪತ್ರಿಕಾ ಕ್ಷೇತ್ರ ಕೂಡ ಇನ್ನಷ್ಟು ಕಲುಷಿತ ಗೊಳ್ಳುತ್ತವೆ. ಪತ್ರಿಕಾ ಕ್ಷೇತ್ರದ ಘನತೆ-ಗೌರವ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಬದ್ದತೆ ತೋರಿಸುವುದನ್ನು ಸ್ವಾಗತಿಸುತ್ತೇವೆ. ಆದರೆ ಜಾಹೀರಾತು ನೀತಿ ಹೆಸರಿನಲ್ಲಿ ಸಣ್ಣ ಪತ್ರಿಕೆಗಳನ್ನು ಹತ್ತಿಕ್ಕುವ ಧೋರಣೆ ಸಲ್ಲದು. ಸಣ್ಣ ಮೀನುಗಳನ್ನು ಕೊಂದು ದೊಡ್ಡ ಮೀನುಗಳಿಗೆ ಉಣ ಬಡಿಸುವುದರ ಹಿಂದೆ ಹಿತಾಸಕ್ತಿ ಇಲ್ಲವೆನ್ನಲಾಗದು.

ಇನ್ನು ಪ್ರಸರಣದ ವಿಷಯಕ್ಕೆ ಬಂದಾಗ ಒಂದು ನಿರ್ದಿಷ್ಟ ಪ್ರದೇಶಕ್ಕೆ ಸೀಮಿತವಾಗಿ ಪ್ರಕಟಗೊಳ್ಳುವ ಸಣ್ಣ ಪತ್ರಿಕೆಗಳು ಪ್ರಸಾರ ಸಂಖ್ಯೆಯೊಂದೆ ಅದಕ್ಕೆ ಮಾನದಂಡವಾಗಬಾರದು. ಭೌದ್ದಿಕ ವಿಸ್ತರಣೆ ಕೇವಲ ಪತ್ರಿಕಗಳ ಭೌತಿಕ ವಿತರಣೆಯಿಂದ ಅಳೆಯಲು ಸಾಧ್ಯವಿಲ್ಲ. ಕೇವಲ ಐದು ಅಂಕೆಗಳನ್ನು ದಾಟದ ಇಂಗ್ಲೀಸ್ ಭಾಷೆಯ ನಿಯತಕಾಲಿಕೆಗಳು ಇಂದು ಬಹುದೊಡ್ಡ ಪತ್ರಿಕೆಗಳು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದನ್ನು ನೋಡುತ್ತಿದ್ದೇವೆ. ಎಬಿಸಿ ವರದಿಗಳನ್ನೆ ಪತ್ರಿಕೆಯ ದೊಡ್ಡ ಸಾಧನೆಯೆಂದು ಬಿಂಬಿಸಿಕೊಂಡು ಸ್ವಕುಚಮರ್ಧನ ಮಾಡಿಕೊಳ್ಳುತ್ತಿರುವ ದೊಡ್ಡ ಪತ್ರಿಕೆಗಳ ಲಾಭಕೋರತನಗಳು ಕಣ್ಣ ಮುಂದೆ ಇದೆ.

ಕರ್ನಾಟಕದ ಒಟ್ಟಾರೆ ಸಾಕ್ಷರತೆ ಪ್ರಮಾಣ ಶೇ.75.36 ರಷ್ಟಿದೆ. ಇನ್ನೂ ಜಿಲ್ಲೆಗಳಲ್ಲಿನ ಸಾಕ್ಷರತೆ ಸರಾಸರಿ ಶೇ.60. ಹೀಗಿರುವಾಗ ಪತ್ರಿಕೆ ಕೊಂಡು ಓದುವ ವಲಯದ ಪ್ರಮಾಣ ಅತ್ಯಂತ ತಳದಲ್ಲಿದೆ. ಪಕ್ಕದ ತಮಿಳುನಾಡು ಶೇ.80.09, ಕೇರಳ ಶೇ.94 ರಷ್ಟು ಸಾಕ್ಷರತೆ ಹೊಂದಿದ್ದು ಓದುಗ ಸಂಸ್ಕೃತಿ ಶ್ರೀಮಂತವಾಗಿದೆ. ಈ ಕಾರಣದಿಂದಲೆ ಆ ರಾಜ್ಯಗಳ ಸಣ್ಣ ಪತ್ರಿಕೆಗಳು ಸರ್ಕಾರಕ್ಕಿಂತ ಓದುಗರನ್ನು (ಚಂದಾದಾರರನ್ನು ) ಅವಲಂಬಿಸಿಯೆ ಬೆಳೆಯತೊಡಗಿವೆ. ಆದರೂ ಆಯಾ ರಾಜ್ಯ ಸರ್ಕಾರಗಳು ಸಣ್ಣ ಅಂದರೆ ಭಾಷಾ ಪತ್ರಿಕೋದ್ಯಮ ವನ್ನು ಅಸ್ಥೆಯಿಂದ ಸಾಕತೊಡಗಿವೆ. ನೆರೆ ರಾಜ್ಯಗಳಲ್ಲಿ ಸರ್ಕಾರಗಳು ಸಣ್ಣ ಪತ್ರಿಕೆಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕದಲ್ಲಿ ಸಣ್ಣ ಪತ್ರಿಕೆಗಳ ಪಾಲಿಗೆ ಏನೇನೂ ಇಲ್ಲ ಎನ್ನಬಹುದು. ಹಿರಿಯ ಪತ್ರಕರ್ತ ಪಿ.ರಾಮಯ್ಯ ನೇತೃತ್ವದ ಸಮಿತಿ (2002) ಸಣ್ಣ ಪತ್ರಿಕೆಗಳ ಹಿತಕ್ಕಾಗಿ ಸರ್ಕಾರ ನೀಡಬಹುದಾದ ನೆರವುಗಳನ್ನು ಶಿಫಾರಸ್ಸು ಮಾಡಿದ್ದರೂ ವರದಿ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡಿಲ್ಲ. ಸಣ್ಣ ಪತ್ರಿಕೆಗಳು ತಮ್ಮ ವ್ಯಾಪ್ತಿಯಲ್ಲಿಯೆ ಜನರ ಸಂಕಷ್ಟಗಳಿಗೆ ಧ್ವನಿಯಾಗುವ , ಸ್ಥಳಿಯ ಜನಪ್ರತಿನಿಧಿಗಳನ್ನು ಸದಾ ಜನಪರಗೊಳಿಸುವ ಹಾಗೂ ಸರ್ಕಾರದ ಯೋಜನೆಗಳನ್ನು ಜನರಿಗೆ ವಿವರಿಸುವ ಕೆಲಸ ವನ್ನು ನಿಷ್ಠೆಯಿಂದಲೆ ಮಾಡುತ್ತಿವೆ. ಸರ್ಕಾರ, ಆಳುವ ಜನ ಸಣ್ಣ ಪತ್ರಿಕೆಗಳ ಬಗ್ಗೆ ತಮಗಿರುವ ತಾತ್ಸಾರ ಮನೋಭಾವದಿಂದ ಹೊರಬರಬೇಕಿದೆ. ರಾಜ್ಯದ ಹಿರಿಯ ಅನುಭವಿ ಪತ್ರಕರ್ತರು, ವಿಶೇಷವಾಗಿ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಅನುಭವಿ ಸಂಪಾದಕ/ಮಾಲೀಕರನ್ನೊಳಗೊಂಡ ಸಮಿತಿಯನ್ನು ನೇಮಿಸಿ ವಾಸ್ತವಿಕ ನೆಲಗಟ್ಟಿನಲ್ಲಿ ಪರಿಪೂರ್ಣ ವರದಿಯೊಂದನ್ನು ಪಡೆದು ಸಣ್ಣ ಪತ್ರಿಕೆಗಳ ಉಳಿವನ್ನೂಳಗೊಂಡಂತೆ ಮಾಧ್ಯಮಕ್ಷೇತ್ರದ ಸಮಗ್ರ ಹಿತಕ್ಕಾಗಿ ಮಾಧ್ಯಮ ನೀತಿಯೊಂದನ್ನು ರೂಪಿಸುವ ತುರ್ತು ಇದೆ. ಈ ದಿಕ್ಕಿನಲ್ಲಿ ಸರ್ಕಾರ ಇಚ್ಚಾಶಕ್ತಿಯನ್ನು ತೋರಬೇಕಿದೆ.

ಭಾಷಾ ಪತ್ರಿಕೋದ್ಯಮದ ದೊಡ್ಡ ಜೀವ ಜಲದಂತಿರುವ ಸಣ್ಣ ಪತ್ರಿಕೆಗಳ ಉಳಿವಿಗೆ ಸರ್ಕಾರ ಉದಾತ್ತ ಧೋರಣೆಯಿಂದಲೆ ಸ್ಪಂದಿಸಬೇಕಾಗಿದೆ.