– ಅಕ್ಷತಾ ಹುಂಚದಕಟ್ಟೆ
ನಾನು ತುಂಬಾ ಮೆಚ್ಚುವ, ಗೌರವಿಸುವ ಇಬ್ಬರು ಪತ್ರಕರ್ತರು ದಿನೇಶ ಮಟ್ಟು ಮತ್ತು ನವೀನ ಸೂರಿಂಜೆ. ಅವರಿಬ್ಬರ ನಡುವಿನ ವಾಗ್ವಾದ ಸ್ವರೂಪದ ಸಂವಾದ ಸರಣಿ ನನ್ನನ್ನು ಇದಕ್ಕೆ ಪ್ರತಿಕ್ರಿಯಿಸಲು ಹಚ್ಚಿತು.
ನವೀನ ಹೇಳುತ್ತಿರುವುದು ಜಮಾತೆ ಇಸ್ಲಾಮಿ ಹಿಂದ್ ಮುಸ್ಲಿಂ ಲೇಖಕರ ಸಂಘ ಮತ್ತು ಶಾಂತಿ ಪ್ರಕಾಶನ ಎಲ್ಲವು ಒಂದೇ ಸಂಘಟನೆಯ ವಿವಿಧ ಕವಲುಗಳು. ಮತ್ತೆ ಈ ಎಲ್ಲ ಸಂಘಟನೆಗಳು ಮೂಲಭೂತವಾದಿಗಳಿಂದ ಕೂಡಿದ್ದು, ಅದರ ಪ್ರಸರಣೆಯಲ್ಲೂ ತೊಡಗಿವೆ ಅನ್ನೋದು. ದಿನೇಶ್ ಸರ್ ಅಂಥಹ ಪ್ರಗತಿಪರರು ಅಲ್ಲಿ ಹೋಗಿ ಮಾತಾಡುವುದರಿಂದ, ಅವರು ಇಂಥವರು ನಮ್ಮ ವೇದಿಕೆಗೆ ಬಂದು ಮಾತಾಡಿದ್ರು ಅನ್ನೋ ವಿಷಯವನ್ನೇ ತೆಗೆದುಕೊಂಡು ನಾಳೆ ತಮ್ಮ ಅಜೆಂಡಾವನ್ನು ನೆರವೇರಿಸಿ ಕೊಳ್ಳಲು ಬಳಸುತ್ತಾರೆ. ಈ ಮೂಲಕ ಯಾರು ಮೂಲಭೂತವಾದವನ್ನು ವಿರೋಧಿಸುತಿದ್ದೆವೆಯೋ ಅವರೇ ಅದರ ಬೆಳವಣಿಗೆಗೂ ಕಾರಣರಾಗುವ ಸಂಭವ ಉಂಟಾಗಬಹುದು ಎನ್ನುವುದು ನವೀನನ ಆತಂಕ…
ಇವೆಲ್ಲ ಸರಿಯೇ ಇರಬಹುದು ನವೀನ. ನಾನು ಸರ್ ವಾದ ಮಾಡಿದ ಹಾಗೆ ಜಮಾತೆಗು ಲೇಖಕರ ಸಂಘಕ್ಕೂ ಸಂಬಂಧ ಇಲ್ಲ ಅಂತಲೂ ವಾದಿಸುವುದಿಲ್ಲ. ಏಕೆಂದರೆ ಆ ಸಂಘದಲ್ಲಿ ಲೇಖಕರು ಯಾರು ಇಲ್ಲದೆ ಇರುವುದರಿಂದ (ಇಲ್ಲ ಅಲ್ಲಿರುವವರು ಲೇಖಕರೆ ಅಂತ ಅಂದರೆ ಕನ್ನಡ ಸಾಹಿತ್ಯದ ನನ್ನ ಓದು ಅಷ್ಟೇನು ಖರಾಬಿಲ್ಲ ಅಂತ ಮಾತ್ರ ಹೇಳಬಲ್ಲೆ) ಅಂಥದೊಂದು ಸಂಘ ಇಂಥ ಸಂಘಟನೆಗಳ ನೆರವು ಅಥವಾ ಸರ್ಕಾರಿ ಕೃಪಾಪೋಷಿತವಾಗಿ ಮಾತ್ರ ಇಲ್ಲಿ ಹುಟ್ಟುವುದಕ್ಕೆ ಸಾದ್ಯ. ಇದು ಯಾರಿಗಾದರು ಮೇಲ್ನೋಟಕ್ಕೆ ಕಾಣುವ ಸತ್ಯ. ನವೀನ ನೀನು ಸಾಕ್ಷ್ಯಾಧಾರದ ಸಮೇತ ಇಟ್ಟಿದಿಯಲ್ಲ ಶಾಂತಿ ಪ್ರಕಾಶನ ಎಂಥ ಪುಸ್ತಕಗಳನ್ನು ಪ್ರಕಟಿಸುತ್ತದೆ… ಆ ಪುಸ್ತಕಗಳ ವಸ್ತು ವಿಷಯ… ಅಲ್ಲಿರುವ ಸಾಲುಗಳು `ಮಹಿಳೆಯರು ತಮ್ಮ ಮನೆಯಲ್ಲಿರಬೇಕು. ಸೌಂದರ್ಯ ಪ್ರದರ್ಶನ ಮಾಡುತ್ತಾ ತಿರುಗಾಡಬಾರದು ಅಥವ `ಸ್ತ್ರೀ ಪುರುಷರು ಒಟ್ಟಿಗೆ ಸೇರಬಾರದು…’ ಅಥವಾ` ಓರ್ವ ಮುಸ್ಲಿಂ ಮಹಿಳೆ ಸೈನಿಕ ತರಬೇತಿಯಲ್ಲಾಗಲಿ, ಆಟೋಟದಲ್ಲಾಗಲಿ ಭಾಗವಹಿಸುವಂತಿಲ್ಲ. ಪೇಟೆಯಿಂದ ಪಾರ್ಲಿಮೆಂಟ್ ತನಕ ಮಹಿಳೆಯು ಪುರುಷನೊಂದಿಗೆ ಬೆರೆಯುವುದು ಇಸ್ಲಾಂ ವಿರೋಧಿಯಾಗಿದೆ….’ ಇಂಥ ಸಾಲುಗಳು ಶಾಂತಿ ಪ್ರಕಾಶನ ಅಥವಾ ಇನ್ಯಾವುದೇ ಕೋಮುವಾದಿ ಪ್ರಕಾಶನದ ಪುಸ್ತಕಗಳಲ್ಲಿ ಮಾತ್ರ ಕಂಡು ಬರುತ್ತದೆ ಎಂಬುದು ನಿನ್ನ ನಂಬಿಕೆಯೇ? ಆದರೆ ಈ ಸಾಲುಗಳು ಸೂಚಿಸುವ ಮತ್ತು ಹೊಮ್ಮಿಸುವ ಮನಸ್ತಿತಿ ಇದೆಯಲ್ಲ ಅದು ಎಲ್ಲಿ ಕಂಡು ಬರುವುದಿಲ್ಲ ಎಂಬುದೇ ಹೆಣ್ಣಾಗಿ ನನ್ನನ್ನು ಕಾಡುವ ಪ್ರಶ್ನೆ… ಮತ್ತೆ ಇಂಥ ಮನಸ್ಥಿತಿ ಯಾರಲ್ಲಿ ಕಂಡು ಬರುವುದಿಲ್ಲ ಅಂತೇನಾದರೂ ಹುಡುಕುತ್ತಾ ಹೊರಟರೆ ಸಾವಿಲ್ಲದ ಮನೆಯ ಸಾಸಿವೆಯ ಹುಡುಕಾಟ ಆದೀತೆ ಎಂಬ ಅನುಮಾನವೂ ನನ್ನದು. ಮತ್ತೆ ಇಂಥ ಮನಸ್ಥಿತಿ ಎಂಥ ಹೊತ್ತಲ್ಲೂ ಉದ್ಭವಿಸಿ ಬಿಡಬಹುದೆಂಬ ಭಯವು ಜೊತೆಗೆ… ನನ್ನ ಒಂದು ಪದ್ಯದ ಎರಡು ಸಾಲು ಹೀಗಿದೆ: “ನಿಮಗೆ ಶಿಲಾಯುಗಕ್ಕೆ ದಾರಿಯಾದರೂ ಇದೆ. ನಮಗೆ ಶಿಲೆಯಾಗುವುದೇ ಉಳಿದಿದೆ”. ಹಾಗೂ ಭಯ; ರಾಮ ಬರುವ ಬದಲು ಅವನ ಸೇನೆ ಬಂದರೆ??? ನನಗಂತೂ ಈ ಮನಸ್ಥಿತಿ ಹಲವು ಹತ್ತು ವೇದಿಕೆಗಳಲ್ಲಿ ಕಂಡಿದೆ…
ತುಂಬಾ ಪ್ರಗತಿಪರ ಅಂತ ಕರೆಯೋ ಮಠಗಳು ಮತ್ತು ಮನುಷ್ಯರು ಸಹ ಹೆಣ್ಣಿನ ವಿಷಯದಲ್ಲಿ ಇ ಮನಸ್ಥಿತಿಯಿಂದಲೇ ನಡೆದುಕೊಳ್ಳುವುದು ಹಲವು ಹತ್ತು ಬಾರಿ. ತುಂಬಾ ಪ್ರಗತಿಪರ ಎಂದು ಕರೆಸಿಕೊಳ್ಳುವ ಮಠ ಒಂದಕ್ಕೆ ಪ್ರೀತಿಸಿದ ಯುವಜೋಡಿಯೊಂದು ಸಾವು ಬದುಕಿನ ಸನ್ನಿವೇಶದಲ್ಲಿ ಮದುವೆ ಮಾಡಿಸಲು ಬೇಡಿದಾಗ ಹುಡುಗ ಲಿಂಗಾಯಿತನಾದ ಕಾರಣಕ್ಕೆ ಮದುವೆ ಮಾಡಲು ಒಪ್ಪಿದ ಮಠದ ಧನಿಗಳು ಹುಡುಗಿ ಲಿಂಗ ಕಟ್ಟಿ ಲಿಂಗಾಯಿತಲಾದರೆ ಮಾತ್ರ ಎಂಬ ಅಲಿಖಿತ ನಿಯಮವನ್ನು ಮುಂದಿಟ್ಟರು. ಚೂರು ಇಷ್ಟವಿಲ್ಲದಿದ್ದರೂ ಹುಡುಗಿ ಅದಕ್ಕೆ ಒಪ್ಪಬೇಕಾಯಿತು. ಏಕೆಂದರೆ ನಮಗೆ ಬಿನ್ನ ಅಯ್ಕೆಗಳಿರುವುದಿಲ್ಲ. ಇದ್ದರು ಅವು ಒಂದಕಿಂತ ಇನ್ನೊಂದು ಭಯಂಕರವಾಗಿರುತ್ತದೆ.
ಇವೆಲ್ಲ ಇರಲಿ ಏಕೆಂದರೆ ಕೊನೆಗೂ ಇವೆಲ್ಲದರಿಂದ ಪಾರಾಗಬೇಕಾದದ್ದು ನಮ್ಮ ಪ್ರಯತ್ನಗಳಿಂದಲೇ. ಅಂತ ಮನಸ್ಥಿತಿ ಒಂದು ನಿರ್ವಾತದಲ್ಲಂತೂ ನಿರ್ಮಾಣ ಆಗುವುದಿಲ್ಲ. ನೀನು ಹೇಳುತ್ತಿರುವೆಯಲ್ಲ ಜಮಾತೆಯವರು ಎಂಥ ಮೂಲಭೂತವಾದದ ಒಂದು ಪರಿಸರ ನಿರ್ಮಾಣಕ್ಕೆ ಶ್ರಮಿಸುತಿದ್ದಾರೆ ಅಂತ… ಅದಕಿಂತ ಚೂರು ಪಾರು ಉದಾರವಗಿದ್ದರೂ ಅಂಥದ್ದೇ ಧೋರಣೆಯ ಪರಿಸರದಲ್ಲೇ ನನ್ನಂತಹ ಎಸ್ಟೋ ಹೆಣ್ಣುಮಕ್ಕಳು ಹುಟ್ಟಿ ಬೆಳೆದಿದ್ದು… ಅಂಥದೊಂದು ಕಿಟಕಿ ಬಾಗಿಲುಗಳು ಮುಚ್ಚಿದ ಪರಿಸರದಲ್ಲಿ ನಮ್ಮ ಶಾಲೆ, ಪಾಠ, ಇವೆಲ್ಲ ತುಸು ತುಸುವೇ ಬೆಳಕನ್ನು ನಮಗೆ ತೋರಿಸ್ತಿದ್ದ್ರು ಆದರೆ ಅಲ್ಲೇ ಇಂಥದರ ಜೊತೆಗೆ ನಾವೇನು ಮಾತಾಡುತಿದ್ದೆವೆಯೋ ಅಂತ ಮನಸ್ಥಿತಿಯಾ ಪೋಷಣೆ ಸಹ ನಡೆಯುತ್ತಿತ್ತು. ಮತ್ತೆ ಅದು ಹೆಣ್ಣುಮಕ್ಕಳ ಕ್ಷೇಮ ಮತ್ತು ಹಿತಚಿಂತನೆಗಾಗಿ ಎಂಬ ನಂಬಿಕೆ ಹಿಂದೆಯೂ… ಈಗಲೂ ಇರುವುದು. ಅಂಥದ್ರಲ್ಲಿ ಎಲ್ಲೋ ಸಿಕ್ಕಿದ ಲಂಕೇಶ್ ಎಂಬ ಪತ್ರಿಕೆ, ಅಲ್ಲಿನ ಬರಹಗಳು ತೂರಿದ ಬೆಳಕು ನಿಧಾನಕ್ಕೆ ನಮ್ಮನ್ನು ಬುರ್ಕಾ (ಮನಸಿಗೆ ಹಾಕಿದ್ದು) ದ ಒಳಗಿಂದ ಇಣುಕಲು ಪ್ರೇರೇಪಿಸಿತು…
ಇದನೆಲ್ಲ ನಾನು ಯಾಕೆ ಹೇಳುತಿದ್ದೆನೆಂದರೆ ದಿನೇಶ್ ಸರ್ ಆ ಕಾರ್ಯಕ್ರಮಕ್ಕೆ ಹೋಗಿದ್ರಿಂದ ಅದರ ಸಂಘಟಕರು, ಅಷ್ಟೇ ಯಾಕೆ ಅಲ್ಲಿ ಸೇರಿದ ಅಸಂಖ್ಯಾತ ಮಂದಿಯ ದೃಷ್ಟಿ ಕೋನ ಬದಲಾಗಲಾರದು ನನಗೆ ಗೊತ್ತಿದೆ . ಮತ್ತೆ ದಿನೇಶ್ ಸರ್ ಕೂಡ ಇಷ್ಟು ವರ್ಷದಲ್ಲಿ ಎಲ್ಲೂ ಯಾರ ಅಮಿಷಕ್ಕು ಸಿಲುಕದವರು ಜಮಾತೆಯವ್ರ ಆಮಿಷಕ್ಕೆ ಸಿಲುಕುವ ಸಾಧ್ಯತೆಯೇ ಇಲ್ಲ ಇದು ನಿನಗೂ ಗೊತ್ತಿದೆ. ಆದರೆ ನವೀನ ಅಲ್ಲಿ ಬುರ್ಖಾದಡಿ ಮುಖ ಮರೆಸಿ ಕೂತಿದ್ದರಲ್ಲ (ಅಥವಾ ಅವರನ್ನು ಹಾಗೆ ಮಾಡಿ ಕೂರಿಸಲಾಗಿತ್ತು) (ಮತ್ತೆ ಸರ್ ಬರೆದ ಮಾತುಗಳನ್ನು ಓದಿ ಜೋರು ನಗು ಬಂತು ಸಂಘಟಕರು ಹೇಳಿದರಂತೆ ಮೊದಲೆಲ್ಲ ಹೆಣ್ಣುಮಕ್ಕಳು ಎಲ್ಲೋ ಮೂಲೆಯಲ್ಲಿ ಮುಖ ಮರೆಸಿ ಕೂತಿರುತಿದ್ದರು ಈ ಹೊತ್ತು ವೇದಿಕೆಯ ಎದುರಿಗೆ ಕೂರುವ ದೈರ್ಯ ಮಾಡಿದಾರೆ ….’ ಅಲ್ಲ ದಿನೇಶ್ ಸರ್ ಅದನ್ನು ಬಹಳ ಹೆಮ್ಮೆಯಿಂದ ನೀವು ಅವರ ಮಾತುಗಳನ್ನು ಕಾಣಿಸಿದಿರಲ್ಲ ನಿಜಕ್ಕೂ ಆ ಹೆಣ್ಣುಮಕ್ಕಳೇ ಮುದುಡಿ ಕಣ್ಣಿಗೆ ಕಾಣದಂತೆ ಕೂತಿದ್ದರೆ ಅಥವಾ ಅವರನ್ನು ಹಾಗೆ ಮಾಡಲಾಗಿತ್ತೆ ? ಹೋಗಲಿ ಈಗ ಕೂಡ ಅವರಿಸ್ಟದಂತೆ ಆ ಹೆಣ್ಣುಮಕ್ಕಳು ಅಲ್ಲಿ ಇದ್ದಾರೆಂದು ನಿಮಗೆ ಅನ್ನಿಸುತ್ತದೆಯೇ? ಆದರೆ ಇಸ್ಟಾದರು ಸಾದ್ಯವಾದ್ದು ದೊಡ್ಡದೇ) ಆ ಹೆಣ್ಣು ಮಕ್ಕಳಲ್ಲಿ ಒಂದೈದಾರು ಮಂದಿಯಾದರೂ ದಿನೇಶ್ ಸರ್ ಮಾತಿನಿಂದ ಪ್ರೇರೇಪಿತರಾಗಿ ಇವರು ಬರೆದಿದ್ದನೆಲ್ಲ ಓದುವ ಕುತೂಹಲಕ್ಕೆ ಸಿಲುಕಿದರೆ ಅದು ತರುವ ಬದಲಾವಣೆ ದೊಡ್ಡದು ನವೀನ್ . ಅದಕ್ಕಾಗಿ ಸರ್ ಅಲ್ಲಿ ಹೋಗಿ ಮಾತಾಡಿದ್ದು ಇಷ್ಟಕಾದರು ಕಾರಣವಾಗಬಲ್ಲದಾದರೆ ಅದು ದೊಡ್ಡ ಬದಲಾವಣೆಯೇ ಎಂಬುದು ನನ್ನ ಸ್ಪಸ್ಟ ಅಭಿಪ್ರಾಯ. `ಮುಸ್ಲಿಂ ಲೇಖಕರ ಸಂಘ ಮತ್ತು ಜಮಾತೆ ಮತ್ತು ಶಾಂತಿ ಪ್ರಕಾಶನ ಎಲ್ಲವು ಒಂದೇ ಬೇರಿನ ಬೇರೆ ಬೇರೆ ಕವಲುಗಳು’ ಎಂದು ನವೀನ್ ಸೂರಿಂಜೆ `ಅಲ್ಲವೇ ಅಲ್ಲ. ನಾನು ಹೋಗಿದ್ದು ಮುಸ್ಲಿಂ ಲೇಖಕರ ಸಂಘದ ಕಾರ್ಯಕ್ರಮಕ್ಕೆ ಅದಕ್ಕೂ ಜಮಾತೆಗು ಸಂಬಂಧವೇ ಇಲ್ಲ’ ಎಂದು ದಿನೇಶ್ ಮಟ್ಟು ಹೇಳುತಿದ್ದಾರೆ . ನವೀನ್ ಅವರೆಡರ ನಡುವಿನ ಸಂಬಂದಕ್ಕೆ ಬೇಕಾದ ಸಾಕ್ಷ್ಯಗಳನ್ನು ಇಟ್ಟಿದಾರೆ… ಆದರೆ ದಿನೇಶ್ ಸರ್ ಅವರನ್ನು ಲೇಖಕರ ಸಂಘದ ಕಾರ್ಯಕ್ರಮಕ್ಕೆ ಸಂಘಟಕರು ಕರೆದರು. ಸರ್ ಅಲ್ಲಿಗೆ ಹೋಗಿದಾರೆ ಮಾತಾಡಿ ಬಂದಿದ್ದಾರೆ… ಅಲ್ಲಿ ಜಮಾತೆಯವ್ರ ವಿಷಯ ಬಂದಿಲ್ಲದೇ ಇರೋದ್ರಿಂದ, ಸರ್ ಮುಸ್ಲಿಂ ಲೇಖಕರ ಸಂಘವನ್ನು ಉದ್ದೇಶಿಸಿ ಮಾತಾಡಿದ್ರಿಂದ ಅವರಿಗೆ ಮುಸ್ಲಿಂ ಲೇಖಕರ ಸಂಘದ ಕಾರ್ಯಕ್ರಮಕ್ಕೆ ತಾನು ಹೋಗಿದ್ದು ಅಸ್ಟೆ ಎಂಬ ನಂಬಿಕೆ ಇದೆ. ನಾವು ಈಗ ಏನೇ ಸಾಕ್ಷ್ಯಾಧಾರ ಪುರಾವೆಗಳನ್ನು ಒದಗಿಸಿ ಅವೆರಡು ಸಂಸ್ಥೆಗಳು ಒಟ್ಟಿಗಿದಾವೆ ಎಂಬುದನ್ನು ನಿರುಪಿಸಬಹುದು ಆದರೆ ಅವು ಒಂದೇ ಅಲ್ಲ ಎನ್ನುವ ನಂಬಿಕೆಯಿಂದ ದಿನೇಶ ಸರ್ ಅಲ್ಲಿಗೆ ಹೋಗಿ ಮಾತಾಡಿ ಬಂದಮೇಲು ಅದೇ ನಂಬಿಕೆ ಅವರದಾಗಿ ಉಳಿದಿದಿದ್ದರೆ… ಮತ್ತಲ್ಲಿ ಅವರಿಗೆ ಅಂತ ಯಾವ ಪುರಾವೆಗಳು ದೊರೆಯದರಿಂದ ಅವರ ನಂಬಿಕೆ ಸುಳ್ಳು ಎಂದು ನಂಬಿಸುವ ಪ್ರಯತ್ನಕಿಂತ ಅವರ ನಂಬಿಕೆಯನ್ನು ಗೌರವಿಸೋಣ. ಮತ್ತು ಅವರ ನಂಬಿಕೆಯೇ ಸತ್ಯವಾಗಲಿ ಎಂದು ಆಶಿಸೋಣ.
ತೀರ ಸಾಕ್ಷಿಗಳನ್ನು ಹಿಡಿದು ಇಲ್ಲಿ ನೋಡಿ ಇಲ್ಲಿದೆ ಸಾಕ್ಷಿ… ಅಂತೆಲ್ಲ ಮುಖಕ್ಕೆ ಹಿಡಿಯುವ ಕೆಲಸ ಮಾಡುತ್ತಾ ಹೋದರೆ ಅದು ನಿಲ್ಲುವುದೇ ಇಲ್ಲ… ಏನಕ್ಕೂ ಸಾಕ್ಷಿ ಕಲೆ ಹಾಕಬಹುದು ಎಂಬುದು ನಮಗೆಲ್ಲ ನೆನಪಿರಬೇಕು. ಒಬ್ರಿಗೆ ಸಾಕು ನಾನು ಹೇಳುವುದೆಲ್ಲ ಹೇಳಿಯಾಗಿದೆ ಅನಿಸಿದರೆ ಅದಕ್ಕೂ ಅವಕಾಶವಿರಬೇಕು ಮತ್ತು ಇನ್ನೊಬ್ರಿಗೆ ನಾನು ಹೇಳುವುದೇನೋ ಉಳಿದಿದೆ ಅನಿಸಿದರೆ ಅದಕ್ಕೂ ಅವಕಾಶ ಇರಬೇಕು. ಇಬ್ಬರೂ ಪ್ರಬುದ್ದರಾಗಿ ಯೋಚಿಸುವರಿದ್ದಾಗ ಒಬ್ರ ಮೌನವನ್ನು ಇನ್ನೊಬ್ಬರ ಮಾತು ಮುರಿಯುವಂತೆ ಮಾಡಬಾರದು. ಇದು ಇಬ್ಬರು ಪ್ರಬುದ್ಧರ ನಡುವಿನ ಸಂವಾದ. ಈ ಹೊತ್ತಿನ ಅತ್ಯಗತ್ಯ ಕೂಡ. ಆದರೆ ಜಾಸ್ತಿ ಎಳೆದರೆ ಮೂಲ ಉದ್ದೇಶವೇ ಮರೆಯಾಗುವ ಸಾದ್ಯತೆ ಇರುತ್ತದೆ.
ಕೊನೆಯದಾಗಿ ಸಿದ್ದಾಂತದ ಮಡಿವಂತಿಕೆ ಬಿಡಬೇಕೆ ಬೇಡವೇ ಎಂಬುದಕಿಂತ ಮುಖ್ಯವಾಗಿ ನಾವೆಲ್ಲಾ ನಂಬಿರುವ ಪ್ರಗತಿಪರ ಸಿದ್ದಾಂತದ ಪ್ರಸಾರವಾಗಲಿ ಎಂದು ಆಶಿಸುವವಳು ನಾನು. ಯಾಕೆಂದರೆ ಹೆಣ್ಣು ದನಿಯ ಅಭಿವ್ಯಕ್ತಿಗೆ ತಳಹದಿಯೇ ಅದು. ಎಲ್ಲರಿಗೂ ಮಹಿಳಾ ದಿನದ ಶುಭಾಶಯಗಳು.