ವರ್ತಮಾನ.ಕಾಮ್ನ ಓದುಗರೇ ಮತ್ತು ಸ್ನೇಹಿತರೇ,
ಆಮ್ ಆದ್ಮಿ ಪಕ್ಷವು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ನನ್ನನ್ನು ಅಭ್ಯರ್ಥಿಯಾಗಿ ಘೋಷಿಸಿರುವುದು ತಮಗೆಲ್ಲಾ ತಿಳಿದಿರಬಹುದು. ಈ ಹಿನ್ನೆಲೆಯಲ್ಲಿ ವರ್ತಮಾನ.ಕಾಮ್ನ ಕೆಲವು ಚಟುವಟಿಕೆಗಳು ಕುಂಠಿತವಾಗಬಹುದು ಎಂಬ ಸಂಶಯಗಳಿದ್ದವು. ಆದರೆ, ಹಲವು ಸ್ನೇಹಿತರು ಈ ಸಂದರ್ಭದಲ್ಲಿ ಇದರ ಕೆಲಸಗಳನ್ನು ಹಂಚಿಕೊಳ್ಳಲು ಮುಂದೆ ಬಂದಿದ್ದಾರೆ. ಹಾಗಾಗಿ, ಎಂದಿನಂತೆ ನಮಗೆ ಲೇಖನಗಳು ಬಂದ 1-3 ದಿನಗಳಲ್ಲಿಯೇ ಅವನ್ನು ಪ್ರಕಟಿಸುವ ಕೆಲಸಗಳು ನಡೆಯುತ್ತವೆ.
ಇನ್ನು ಈ ಚುನಾವಣೆಗಳ ಬಗ್ಗೆ ಹೇಳುವುದಾದರೆ, ನನ್ನ ವೈಯಕ್ತಿಕ ಜವಾಬ್ದಾರಿ ಈಗ ಹಲವು ಪಟ್ಟು ಹೆಚ್ಚಿದೆ. ಸಾದ್ಯವಾದಲ್ಲಿ ನಿಮ್ಮೆಲ್ಲರ ಸಲಹೆ-ಸಹಕಾರ-ಬೆಂಬಲವೂ ಬೇಕಿದೆ. ಏನೇ ಆಗಲಿ, ಈ ಲೋಕಸಭಾ ಚುನಾವಣೆ ಕರ್ನಾಟಕದಲ್ಲಿ ಗಂಭೀರವಾದ ಗುಣಾತ್ಮಕ ಬದಲಾವಣೆಗಳನ್ನು ತರಲಿದೆ. ಯಾವುದನ್ನು ಈವತ್ತಿನ ಸಂದರ್ಭದಲ್ಲಿ ಅವಾಸ್ತವ ಎನ್ನುತ್ತಿದ್ದರೊ ಅದನ್ನು ಈ ಬಾರಿ ಆಮ್ ಜನತೆ ನಿಜ ಮಾಡಲಿದ್ದಾರೆ ಎನ್ನುವ ವಿಶ್ವಾಸ ನನ್ನದು. ಕಳೆದ ಹಲವಾರು ದಶಕಗಳಿಂದ ಭ್ರಷ್ಟಾಚಾರ, ಅಕ್ರಮ, ಅಧಿಕಾರ ದುರುಪಯೋಗ, ಸ್ವಜನಪಕ್ಷಪಾತ, ವಂಶಪಾರಂಪರ್ಯ ರಾಜಕಾರಣದಿಂದ ನಲುಗಿದ್ದ ನಮ್ಮ ಈ ನಾಡು ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ಬದಲಾಗಲಿದೆ. ಆ ನಿಟ್ಟಿನಲ್ಲಿ ಆಶಾವಾದಿಗಳಾಗಿರುವ ಬಹುತೇಕ ಜನ ಕ್ರಿಯಾಶೀಲರಾಗಿ ದುಡಿಯುತ್ತಿರುವುದನ್ನು ನಾನು ಪ್ರತಿದಿನ ನೋಡುತ್ತಿದ್ದೇನೆ ಮತ್ತು ಅನುಭವಿಸುತ್ತಿದ್ದೇನೆ.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಬಹುಶಃ ರಾಜ್ಯದಲ್ಲಿಯೇ ಹೆಚ್ಚು ಮತದಾರರನ್ನು ಹೊಂದಿರುವ ಕ್ಷೇತ್ರ, ದೊಡ್ಡ ಕ್ಷೇತ್ರ. ರಾಜರಾಜೇಶ್ವರಿ ನಗರ, ಬೆಂಗಳೂರು ದಕ್ಷಿಣ, ಆನೇಕಲ್, ಕನಕಪುರ, ರಾಮನಗರ, ಚನ್ನಪಟ್ಟಣ, ಮಾಗಡಿ, ಮತ್ತು ಕುಣಿಗಲ್ ಸೇರಿದಂತೆ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳು ಈ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ. ಇದರಲ್ಲಿ ರಾಜರಾಜೇಶ್ವರಿ ನಗರ, ಬೆಂಗಳೂರು ದಕ್ಷಿಣ, ಮತು ಆನೇಕಲ್ ವಿಧಾನಸಭಾ ಕ್ಷೇತ್ರಗಳು ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಗೆ ಬಂದರೆ, ಕನಕಪುರ, ರಾಮನಗರ, ಚನ್ನಪಟ್ಟಣ, ಮತ್ತು ಮಾಗಡಿ ಕ್ಷೇತ್ರಗಳು ರಾಮನಗರ ಜಿಲ್ಲೆಯ ವ್ಯಾಪ್ತಿಗೆ ಬರುತ್ತವೆ; ಕುಣಿಗಲ್ ಕ್ಷೇತ್ರ ತುಮಕೂರು ಜಿಲ್ಲೆಯ ವ್ಯಾಪ್ತಿಗೆ ಬರುತ್ತದೆ. ನಿಮ್ಮಲ್ಲಿ ಯಾರಾದರೂ ಈ ಕ್ಷೇತ್ರಗಳ ಮತದಾರರಾಗಿದ್ದಲ್ಲಿ ಅಥವ ತಿಳಿದವರು ಗೊತ್ತಿದ್ದಲ್ಲಿ ದಯವಿಟ್ಟು ಅಂತಹವರು ನಮ್ಮ ಚುನಾವಣಾ ಪ್ರಚಾರಕ್ಕೆ ನೆರವಾದರೆ ಬಹಳ ಅನುಕೂಲವಾಗುತ್ತದೆ. ಈಗಾಗಲೆ ವೈಯಕ್ತಿಕ ಕೆಲಸ ಕಾರ್ಯಗಳನ್ನು ಬಿಟ್ಟು, ಕೆಲವರು ತಮ್ಮ ನೌಕರಿಗಳಿಗೆ ರಾಜೀನಾಮೆ ನೀಡಿ, ಮತ್ತೆ ಕೆಲವರು ರಜೆ ತೆಗೆದುಕೊಂಡು, ಪ್ರಚಾರ ಕಾರ್ಯದಲ್ಲಿ, ಈ ಚಳವಳಿಯಲ್ಲಿ ಭಾಗಿಯಾಗಿದ್ದಾರೆ. ಈ ಚಳವಳಿ ಮತ್ತು ರಕ್ತರಹಿತ ಕ್ರಾಂತಿಯಲ್ಲಿ ಭಾಗೀದಾರನಾಗಿರುವುದಕ್ಕೆ ನನಗೆ ನಿಜಕ್ಕೂ ಖುಷಿಯಾಗುತ್ತಿದೆ, ಹೆಮ್ಮೆಯಾಗುತ್ತಿದೆ. ನಮ್ಮ ಮುಂದಿನ ದಿನಗಳ ಬಗ್ಗೆ ಆಶಾವಾದ ಹೆಚ್ಚುತ್ತಿರುವ ಸಮಯ ಇದು.
ಅಂದ ಹಾಗೆ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಇತಿಹಾಸ ಮತ್ತು ವರ್ತಮಾನ ತಮಗೆ ತಿಳಿದಿದೆ ಎಂದು ಭಾವಿಸುತ್ತೇನೆ.
ಈ ಸಂದರ್ಭದಲ್ಲಿ ನಿಮ್ಮ ಕ್ರಿಯಾಶೀಲತೆ, ಬೆಂಬಲ, ನೆರವನ್ನು ಆಶಿಸುತ್ತಾ,.. ಈ ಹೋರಾಟದಲ್ಲಿ ನಿಮ್ಮ ಸಾಹಚರ್ಯವನ್ನು ಬಯಸುತ್ತೇನೆ.
ನಮಸ್ಕಾರ,
ರವಿ…