ಉರಿಯುವ ಬೆಂಕಿಗೆ ಮೈಯೆಲ್ಲಾ ಬಾಯಿ – ನಿಲ್ಲದ ನೆತ್ತರ ದಾಹ


-ಬಿ. ಶ್ರೀಪಾದ್ ಭಟ್


 

 

ನಮ್ಮ ದೇಶದ ಸೋಕಾಲ್ಡ್ ಮೀಡಿಯಾಗಳ ಅತ್ಯುತ್ಸಾಹದ ಮಾತನ್ನೇ ನಂಬುವುದಾದರೆ, ಅವರ ಸಮೀಕ್ಷೆಗಳನ್ನೇ ಅಂತಿಮ ಎನ್ನುವುದಾದರೆ ಇನ್ನು 2014ರ ಚುನಾವಣೆಯಲ್ಲಿ ನಮೋಗೆ ಮತಗಟ್ಟೆ ಕಾಯುತ್ತಿದೆ ಅಷ್ಟೇ. ಇನ್ನೇನು ಉಳಿದಿಲ್ಲ. ಮಾಧ್ಯಮಗಳು ಉತ್ಸಾಹದ ಎಲ್ಲೆ ಮೀರಿ ಆಗಲೇ ಆಗಸ್ಟ್ 15ರಂದು ನಮೋ ಕೆಂಪುಕೋಟೆಯಿಂದ ಏನು ಭಾಷಣ ಮಾಡಬಹುದು ಎಂದು ಚರ್ಚಿಸುತ್ತಿದ್ದಾರೆ. ಚುನಾವಣಾ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ತಮ್ಮ ಗೆಲುವಿಗಾಗಿ1 ರಣತಂತ್ರವನ್ನು ರೂಪಿಸುವುದು ಮಾಮೂಲಿ ವಿಚಾರ. ಆದರೆ ಇಂದು ಬಹುಪಾಲು ಮೀಡಿಯಾ ಅದರಲ್ಲೂ ದೃಶ್ಯ ಮಾಧ್ಯಮಗಳು ತಮ್ಮ ಪತ್ರಿಕಾ ಧರ್ಮವನ್ನೇ ಮರೆತು ಏಕಪಕ್ಷಿಯವಾಗಿ ನಮೋನ ಗೆಲುವಿಗಾಗಿ ರಣತಂತ್ರ ರೂಪಿಸುತ್ತಿವೆ. ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದು ಕರೆಯಲ್ಪಡುವ ಮಾಧ್ಯಮಗಳು ಅದರ ಮೌಲ್ಯಗಳ ರಕ್ಷಣೆಗಾಗಿ ತನ್ನನ್ನು ತಾನು ಕಾವಲುಗಾರನಂತೆ ರೂಪಿಸಿಕೊಳ್ಳುವುದರ ಬದಲಾಗಿ ಇಂದು ತನ್ನ ನೀತಿಗಳನ್ನು ಅಪಮೌಲ್ಯೀಕರಣಗೊಳಿಸಿಕೊಂಡು ಅನೈತಿಕತೆಯನ್ನು ಮೆರೆಯುತ್ತಿರುವುದು ಮಾತ್ರ ಆಧುನಿಕ ಇಂಡಿಯಾದ ಕರಾಳ ಅಧ್ಯಾಯವೆಂದೇ ದಾಖಲಾಗಲಿದೆ. ಇದಕ್ಕೆ ಪೂರಕವಾಗಿ ಕಾಂಗ್ರೆಸ್ ಯುದ್ಧಕ್ಕಿಂತ ಮೊದಲೇ ಸೋಲನ್ನೊಪ್ಪಿಕೊಂಡಂತೆ ವರ್ತಿಸುತ್ತಿದೆ. ಹೆಚ್ಚೂ ಕಡಿಮೆ ಮಕಾಡೆ ಮಲಗಿದಂತೆಯೇ ವರ್ತಿಸುತ್ತಿರುವ ಕಾಂಗ್ರೆಸ್ ಪಕ್ಷದ ನಕಾರಾತ್ಮಕ ನಡವಳಿಕೆ ಮಾತ್ರ ದಯನೀಯವಾಗಿದೆ. ಕಳೆದ ಒಂದು ದಶಕದುದ್ದಕ್ಕೂ ಪೊರೆದಿದ್ದ ಸೋನಿಯಾ ಗಾಂಧಿಯವರ silent ರಾಜಕಾರಣದ ಶೈಲಿಯ ಅಂತ್ಯ ಮೇಲ್ನೋಟಕ್ಕಂತೂ ಕಾಣುತ್ತಿದೆ. ಅದಕ್ಕೆ ಪ್ರತಿಯಾಗಿ ನಮೋ ಬ್ರಿಗ್ರೇಡ್ ನ rhetoric ಅಬ್ಬರದ ಶೈಲಿ ಇಂದು ದೇಶದಾದ್ಯಂತ ವ್ಯಾಪಿಸುತ್ತಿದೆ. ಸಂಘಪರಿವಾರದ ’ಏಕ್ ಧಕ್ಕ ಔರ್ ದೋ” ಮಾದರಿಯ ಮತೀಯವಾದದ ಪುಂಡಾಟಿಕೆಯ ದಿನಗಳು ಪ್ರಾಮುಖ್ಯತೆಗೆ ಮರಳುತ್ತಿವೆ.

ತಮ್ಮ ಲೇಖನವೊಂದರಲ್ಲಿ ಡಿ.ಆರ್.ನಾಗರಾಜ್ ಅವರು ಠಾಗೋರರ ಕುರಿತಾಗಿ “ಒಬ್ಬ ಸಾರ್ವಜನಿಕ ವ್ಯಕ್ತಿಗೆ ಸುತ್ತಲೂ ಜನತೆಯ ಕನ್ನಡಿ ಇರುತ್ತದೆ. ಆತ ಯಾವಾಗಲೂ ಅವರ ನಿರೀಕ್ಷೆಗೆ ತಕ್ಕಂತೆ ಇರಬೇಕು. ಠಾಗೋರರ ಕಷ್ಟ ಪ್ರಾರಂಭವಾದದ್ದು ಇಲ್ಲಿಯೇ. ಭಾಷೆ ಆತನಿಗೆ ಸಾರ್ವಜನಿಕ ದಂಧೆಯಾಗಿ ಮಾತ್ರ ಕಾಣತೊಡಗಿತು. ಎಂಥದೇ ಹೆಣ್ಣಿನ ಬಗ್ಗೆ ಬರೆದರೂ ಆಕೆ ಭಾರತ ಮಾತೆಯ ಹಾಗೆ ಕಾಣತೊಡಗಿದಳು. ಎಲ್ಲವೂ ಸಾರ್ವಜನಿಕವೇ ಆಗಿ ಬಯಲಿನಲ್ಲಿ ಬದುಕಿದ ಹಾಗೆ ಅನ್ನಿಸತೊಡಗಿತು” ಎಂದು ಬರೆಯುತ್ತಾರೆ. ಇದು ವಿಚಿತ್ರ. ಒಳ ಮನಸ್ಸು ಸೋಲೊಪ್ಪಿಕೊಂಡು ಬಾಹ್ಯ ವರ್ತನೆಯೇ ಮುಖವಾಡವಾಗಿ ಜನಪ್ರಿಯತೆ ಗಳಿಸುತ್ತಿರುವುದು ಇಂಡಿಯಾದ ಸಾರ್ವಜನಿಕ ಜೀವನ ಮರಳಿ ಊಳಿಗಮಾನ್ಯ ವ್ಯವಸ್ಥೆಗೆ ಮರಳುತ್ತಿರುವುದರ ಸೂಚನೆಯಂತೆ ಭಾಸವಾಗುತ್ತಿದೆ. ಇಂದು ಇಲ್ಲಿ ನೈತಿಕತೆ ಅತ್ಯಂತ ದುಬಾರಿ ವಸ್ತುವಾಗಿರುವುದರ ಫಲವಾಗಿ ಅಸಮಾನತೆ ಒಪ್ಪಿತ ಮೌಲ್ಯವಾಗಿ ಜಾರಿಗೊಂಡಿದೆ. ಘನತೆ ಕಳೆದುಕೊಳ್ಳುವುದು ಆತ್ಮವಂಚನೆಯ ದ್ಯೋತಕವಲ್ಲ. ಬದಲಾಗಿ ಅದು ಕತ್ತಲ ದಾರಿಯಲ್ಲಿ ಉಳಿದಿರುವ ಒಂದೇ ಒಂದು ಬೆಳಕಿನ ದಾರಿ. ಅದು ಅನಿವಾರ್ಯ ಎಂದು ನಂಬಿಸಲಾಗುತ್ತಿದೆ.

ಚಿಂತಕ ಹಸನ್ ಸುರೂರ್ ದ ಹಿಂದೂ ಪತ್ರಿಕೆ(10 ಮಾರ್ಚ 2014)ಯಲ್ಲಿ ಹೀಗೆ ಬರೆಯುತ್ತಾರೆ “ಕಳೆದ ವಾರ ದೃಶ್ಯ ಮಾಧ್ಯಮವೊಂದಕ್ಕೆ ಸಂದರ್ಶನ ನೀಡುತ್ತಾ ಸಂಘ ಪರಿವಾರದ ಅರಣ್ ಜೇಟ್ಲಿ ’ನಿಜ, ಬಿಜೆಪಿಗೆ ಮುಸ್ಲಿಂ ತೊಂದರೆ ಇದೆ. ಆದರೆ ಇದು ಇಬ್ಬಗೆಯದಾಗಿದೆ. ಮೊದಲನೆಯದಾಗಿ ಅವರು ನಮ್ಮನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಎರಡನೆಯದಾಗಿ ನಾವು ಇದನ್ನು ಒಪ್ಪಿಕೊಳ್ಳಬೇಕಾಗಿದೆ. ಆದರೆ ಇಂದು ವಾತಾವರಣ ಬದಲಾಗಿದೆ’ ಎಂದು ಹೇಳಿದರು. ಇದಕ್ಕೂ ಕೆಲವು ದಿನಗಳ ಹಿಂದೆ ಬಿಜೆಪಿಯ ಅಧ್ಯಕ್ಷ ರಾಜನಾಥ ಸಿಂಗ್ ತಮ್ಮ ಭಾಷಣವೊಂದರಲ್ಲಿ ಮುಸ್ಲಿಮರಲ್ಲಿ ಕ್ಷಮೆ ಕೇಳುವಂತಹ ಧಾಟಿಯಲ್ಲಿ ಮಾತನಾಡಿ ಬಿಜೆಪಿಗೆ ಅವಕಾಶ ನೀಡಿ ಎಂದು ಕೇಳಿಕೊಂಡಿದ್ದರು. ಸಂಘ ಪರಿವಾರದ ಕಾರ್ಯತಂತ್ರವೇನೆಂದರೆ ತಾವಾಗಲೇ ಧಾರ್ಮಿಕ ಅಲ್ಪಸಂಖ್ಯಾತರಾದ ಸಿಖ್ಖರನ್ನು ಮತ್ತು ಕೆಲ ಕ್ರಿಶ್ಚಿಯನ್ನರನ್ನು ಗೆದ್ದಿದ್ದಾಗಿದೆ. ಇನ್ನು ಮುಸ್ಲಿಮರನ್ನು ಕೊಳ್ಳಬೇಕಾಗಿದೆ ಅಷ್ಟೇ. ಸೂಡೋ ಸೆಕ್ಯುಲರ್ ಗಳು ಹುಟ್ಟು ಹಾಕಿದ ‘ಕೋಮುವಾದದ’ ಬೋಗಿ ಮಾತ್ರ ಇದಕ್ಕೆ ಅಡ್ಡವಾಗಿದೆ. ಆದರೆ ಫ್ಯಾಸಿಸಂ ಶೈಲಿಯು ಪ್ರಚಾರಕ್ಕೆ ಬರುತ್ತಿರುವ ಇಂದಿನ ದಿನಗಳಲ್ಲಿ sense of alarmism ನ ಸ್ಥಿತಿಯಲ್ಲಿರುವ ಮುಸ್ಲಿಮರ ಈ ಭಯವನ್ನು ಉಪಯೋಗಿಸಿಕೊಂಡು ಈ ಕೋಮುವಾದದ ಬೋಗಿಯನ್ನು ಅಂಚಿಗೆ ತಳ್ಳಬಹುದೆಂಬ ವಿಶ್ವಾಸ ಬಿಜೆಪಿಯಲ್ಲಿದೆ. ಆದರೆ ವಾಸ್ತವದಲ್ಲಿ ಕೋಮುವಾದದ ಅಪಾಯವು ಕೇವಲ ಒಂದು ಬೋಗಿಯಲ್ಲ. ಇದಕ್ಕೆ ಆಧಾರಸಹಿತವಾದ ಸಾಕ್ಷಿಗಳಿವೆ. ದೇಶದೆಡೆಗೆ ಮುಸ್ಲಿಂರ ಬದ್ಧತೆಯನ್ನು ಇಂದಿಗೂ ಪ್ರಶ್ನಿಸುತ್ತಿರುವ ಸಂಘಪರಿವಾರದ ಬೆಂಕಿಯುಗುಳುವಿಕೆಯೇ ಇದಕ್ಕೆ ಪುರಾವೆ. ಹಾಗಿದ್ದರೆ ಅರುಣ್ ಜೇಟ್ಲಿ ‘ಹೇಳುವ ಮುಸ್ಲಿಮರು ಒಪ್ಪಿಕೊಳ್ಳಬೇಕು,ನಾವು ಅರ್ಥ ಮಾಡಿಕೊಳ್ಳಬೇಕು’ ಎನ್ನುವ ಮಾತುಗಳ ಅರ್ಥವೇನು ?”

ಮೇಲಿನ ಸಾಲುಗಳು ಏನನ್ನು ಹೇಳುತ್ತವೆ? ಫ್ಯಾಸಿಸಂ ಶಕ್ತಿ ವರ್ಧಿಸಿಕೊಳ್ಳುತಿರುವ ಇಂದಿನ ದಿನಗಳಲ್ಲಿ ತಮ್ಮ ಡಿಎನ್ಎನಲ್ಲಿಯೇ modi_bjp_conclaveಮುಸ್ಲಿಂ ದ್ವೇಷದ ಗುಣಗಳನ್ನು ತುಂಬಿಕೊಂಡಿರುವ ಸಂಘಪರಿವಾರದ ಎದುರು ಮುಸ್ಲಿಮರು ತಮ್ಮ ಘನತೆ ಕಳೆದುಕೊಳ್ಳುವುದು ಆತ್ಮವಂಚನೆಯ ದ್ಯೋತಕವಲ್ಲ. ಬದಲಾಗಿ ಅದು ಕತ್ತಲ ದಾರಿಯಲ್ಲಿ ಉಳಿದಿರುವ ಒಂದೇ ಒಂದು ಬೆಳಕಿನ ದಾರಿ ಎಂದು ಸಂಘ ಪರಿವಾರ ತಾಕೀತು ಮಾಡುತ್ತಿದೆಯಲ್ಲವೇ? ತನ್ನ ಫ್ಯಾಸಿಸಂ ಗುಣಗಳನ್ನು ಮತ್ತೆ ಮತ್ತೆ ಬಿಚ್ಚಿಡುತ್ತಿರುವ ನರೇಂದ್ರ ಮೋದಿ ಕಾಶ್ಮೀರದಲ್ಲಿ ಭಾಷಣ ಮಾಡುತ್ತ ಮತ್ತೊಮ್ಮೆ ತನ್ನ ನೆತ್ತರ ದಾಹವನ್ನು ತೋರಿಸಿದ್ದಾನೆ. ಹಿಂದೊಮ್ಮೆ ಮೇಡಂ ಮಾರಿಯಾ, ಮಿಯಾ ಮುಶ್ರಾಫ್, ಮೈಕೆಲ್ ಲಿಂಗ್ಡೋ ಎಂದು ಅಹಂಕಾರದಿಂದ ಮಾತನಾಡಿದ್ದ ಮೋದಿ ಅತ್ಯಂತ ಕ್ರೂರವಾದ ಭಾಷೆ ಬಳಸುತ್ತಾ ತನ್ನ ರಾಜಕೀಯ ಎದುರಾಳಿಗಳನ್ನು ಕುರಿತಾಗಿ “ಎಕೆ 47, ಎಕೆ ಅಂಟೊನಿ, ಎಕೆ 49” ಎಂದು ವ್ಯಂಗವಾಡಿದ್ದಾನೆ.ಆಧುನಿಕ ಭಾರತದ ಇತಿಹಾಸದಲ್ಲಿ ರಾಜಕೀಯ ನಾಯಕನೊಬ್ಬ ಇಷ್ಟೊಂದು ಕ್ರೌರ್ಯದ ಭಾಷೆಯಲ್ಲಿ ಮಾತನಾಡಿದ್ದು ಇದೇ ಮೊದಲು. ನೆತ್ತರ ದಾಹದ ಈ ಕ್ರೌರ್ಯ ಸಾರ್ವಜನಿಕ ಸಜ್ಜನಿಕೆಯನ್ನು ಸಂಪೂರ್ಣವಾಗಿ ಧ್ವಂಸಗೊಳಿಸುತ್ತದೆ. ಇದನ್ನು ಆಳವಾಗಿ ವಿಶ್ಲೇಶಿಸದೆ ಅತ್ಯಂತ ಉತ್ಸಾಹದಿಂದ ಮುಖಪುಟದಲ್ಲಿ ಪ್ರಕಟಿಸಿರುವ ಮಾಧ್ಯಮಗಳು ಮೋದಿಯ ಈ ನೆತ್ತರ ಬೇಟೆಯ ಶೈಲಿಯನ್ನು ಮರೆತಂತಿವೆ. ಮತ್ತೊಮ್ಮೆ ನಾವು ಪಾಲಿಸಬೇಕಾದ ಧರ್ಮದ ಬಗ್ಗೆ ಗುಡುಗಿರುವ ಮೋದಿಯ ಹುಸಿ ಮುಖವಾಡ ಮತ್ತೆ ಮತ್ತೆ ಕಳಚಿಕೊಳ್ಳುತ್ತಿದೆ. ಆದರೆ ಪ್ರತಿ ಬಾರಿಯೂ ಕಳಚಿದ ಮುಖವಾಡವನ್ನು ಉತ್ಸಾಹದಿಂದ ಮರಳಿ ಮೋದಿಗೆ ತೊಡಿಸುತ್ತಿರುವುದು ಸಂಘ ಪರಿವಾರವಲ್ಲ. ಬದಲಾಗಿ ಆ ಕಾರ್ಯ ಮಾಡುತ್ತಿರುವುದು ಮಾಧ್ಯಮಗಳು. ಧರ್ಮ ಮತ್ತು ರಾಜಕಾರಣ ಮತ್ತೊಮ್ಮೆ ಪರಸ್ಪರ ಬೆರೆಯಲು ಮಾಧ್ಯಮಗಳು ಕೈ ಜೋಡಿಸುತ್ತಿವೆ .

ಇಂದು ಮೋದಿಗೆ ಮತ ಹಾಕುವುದು ದೇಶಪ್ರೇಮದ ದ್ಯೋತಕ ಎಂದು ಆರೆಸ್ಸೆಸ್ ಪ್ರಚಾರ ನಡೆಸುತ್ತಿದೆ. ಕಳೆದ ದಶಕದಲ್ಲಿ ಕುಂದಿದಂತಿದ್ದ ಆರೆಸ್ಸೆಸ್ ಇಂದು ಮತ್ತೆ ಗರಿಗೆದರಿ ನಿಂತುಕೊಂಡಿದೆ. ‘ಮಿಷನ್ 272’ ಎನ್ನುವ ಘೋಷಣೆಯೊಂದಿಗೆ ತನ್ನ ಸ್ವಯಂಸೇವಕರನ್ನು ದೇಶಾದ್ಯಂತ ಪ್ರಚಾರ ಕಾರ್ಯದಲ್ಲಿ ತೊಡಗಿಸಿದೆ. India272-banner-image-promotion-250x250ಪ್ರಸ್ತುತ ಚುನಾವಣೆಯಲ್ಲಿ ತಾನು ಬಿಜೆಪಿಯ ಸಾರಥಿಯ ಪಟ್ಟವನ್ನು ವಹಿಸಿಕೊಂಡಿರುವುದನ್ನು ಆರೆಸ್ಸೆಸ್ ಅಲ್ಲಗೆಳೆಯುತ್ತಿಲ್ಲ. ಅದು ಹಿಂದೂ ಮೇಲ್ಜಾತಿಯ ಓಟುಗಳೊಂದಿಗೆ ಇತರೆ ಹಿಂದುಳಿದ ವರ್ಗಗಳ ಮತಗಳಿಗೆ ಕೂಡಾ ಲಗ್ಗೆಯಿಟ್ಟಿದೆ. ಇದು ಆರೆಸ್ಸೆಸ್ ಸಂಘಟನೆಯ ಕೋಮುವಾದಿ ಇತಿಹಾಸದಲ್ಲಿಯೇ ಪ್ರಥಮ. ಬೆಲೆಯೇರಿಕೆ, ಭ್ರಷ್ಟಾಚಾರದ ನೆಲೆಯಲ್ಲಿ ಮೇಲ್ಜಾತಿಗಳ ಮತಗಳನ್ನು ಮತ್ತು ಮುಸ್ಲಿಂ ವಿರೋಧಿ ನೆಲೆಗಟ್ಟಿನಲ್ಲಿ ಇತರೇ ಹಿಂದುಳಿದ ವರ್ಗಗಳ ಮತಗಳನ್ನು ಬೇಟೆಯಾಡಲು ಆರೆಸ್ಸೆಸ್ ಕಾರ್ಯತಂತ್ರ ರೂಪಿಸಿದೆ. ಔಟ್ಲುಕ್ (17ಮಾರ್ಚ 2014) ಪತ್ರಿಕೆಯಲ್ಲಿ ವರದಿಯಾಗಿರುವಂತೆ ಡೆಲ್ಲಿ ಗದ್ದುಗೆಗಾಗಿ ಆರೆಸ್ಸೆಸ್ ನ ಹಿರಿಯ ನಾಯಕರೇ ಈ ಕಾರ್ಯತಂತ್ರದ ನೇತೃತ್ವ ವಹಿಸಿದ್ದಾರೆ. ಆರೆಸ್ಸೆಸ್ ಮುಖ್ಯಸ್ಥ ಭಾಗವತ್ ಉತ್ತರ ಪ್ರದೇಶ,ಮಧ್ಯಪ್ರದೇಶ ಮತ್ತು ರಾಜಸ್ತಾನದ ನೇತೃತ್ವ ವಹಿಸಿದ್ದರೆ, ಸುರೇಶ್ ಭೈಯ್ಯಾ ಗುಜರಾತ್ ಹಾಗೂ ಮಹಾರಾಷ್ಟ್ರ, ದತ್ತಾತ್ರೇಯ ಹೊಸಬಾಲೆ ಕರ್ನಾಟಕ ಮತ್ತು ಬಿಹಾರ್, ಕ್ರಷ್ಣಗೋಪಾಲ್ ಅಸ್ಸಾಂ, ಸುರೇಶ್ ಸೋನಿ ಛತ್ತೀಸ್ ಗಡದ ನೇತೃತ್ವ ವಹಿಸಿದ್ದಾರೆ. ಆರೆಸ್ಸೆಸ್ ಜೊತೆಗೆ ಅದರ ಅಂಗ ಸಂಸ್ಥೆಗಳಾದ ವಿ ಎಚ್ ಪಿ, ಎಬಿವಿಪಿ, ಭಾರತೀಯ ಕಿಸಾನ್ ಸಂಘ, ಸ್ವದೇಶಿ ಜಾಗರಣ ಮಂಚ್ ಮತ್ತು ಇನ್ನಿತರ ಗುಂಪುಗಳು ನಿರಂತರವಾಗಿ ಶ್ರಮಿಸುತ್ತಿವೆ. ಮೋದಿ ಅಭಿವೃದ್ಧಿ ಅಥವಾ ಭಯೋತ್ಪಾದನೆಯ ಕುರಿತಾಗಿ ಮಾತನಾಡುತ್ತಾನೆಂದರೆ ಅವೆಲ್ಲ ಹಿಂದುತ್ವದೊಂದಿಗೆ ನೇರವಾಗಿ ಸಂಪರ್ಕದಲ್ಲಿವೆಯೆಂದೇ ಅರ್ಥ. ಇವುಗಳ ಕುರಿತಾಗಿ ಮಾತನಾಡಿದರೆ ಹಿಂದುತ್ವದ ಅಜೆಂಡಾ ಜಾರಿಗೊಳಿಸುತ್ತಿದ್ದೇವೆ ಎಂದೇ ಅರ್ಥ. ಶಬ್ದಗಳು ಅದಲುಬದಲಾಗಿವೆ ಅಷ್ಟೇ ಎಂದು ಹಿರಿಯ ಆರೆಸಸ್ ನಾಯಕರು ಹೇಳಿದ್ದಾರೆ. ಇಂತಹ ತಂತ್ರದ ಭಾಗವಾಗಿಯೇ ಉಮಾಭಾರತಿ ಕಾಲಕಾಲಕ್ಕೆ ಗಂಗಾ ಬಚಾವ್ ಆಂದೋಲನದ ಮಂತ್ರ ಜಪಿಸುತ್ತಿರುತ್ತಾರೆ, ವಿ ಎಚ್ ಪಿ, ‘ಹಿಂದೂ ಜಾಗೋ’ ಮಂತ್ರವನ್ನು ಇನ್ನೂ ನಿಲ್ಲಿಸಿಲ್ಲ, ಹಿಂದೂ ರಕ್ಷಾ ದಳ ‘ಕಾಶ್ಮೀರ ಬಚಾವ್’ ಆಂದೋಲನ ಕಟ್ಟುತ್ತಿದೆ. ಜೊತೆಗೆ 2002ರ ಗುಜರಾತ್ ರಾಜ್ಯದಲ್ಲಿ ನಡೆದ ಹತ್ಯಾಕಾಂಡದ ಕುರಿತಾಗಿ ಯಾವ ಕಾರಣಕ್ಕೂ ಕ್ಷಮೆ ಕೇಳಬಾರದೆಂದು ಆರೆಸೆಸ್ ಮೋದಿ ಮತ್ತು ಬಿಜೆಪಿಗೆ ತಾಕೀತು ಮಾಡಿದೆ. ಕ್ಷಮಾಪಣೆ ಕೇಳಿದಲ್ಲಿ ಕಷ್ಟಪಟ್ಟು ಗಳಿಸಿದ ಗೆಲುವಿನ ವೇದಿಕೆಯನ್ನು ಕಳೆದುಕೊಳ್ಳುತ್ತೇವೆ ಎಂದು ಹೆದರಿಸಿದೆ ಎಂದು ಔಟ್ಲುಕ್ ಪತ್ರಿಕೆಯಲ್ಲಿ ವರದಿಯಾಗಿದೆ.

ಉತ್ರರ ಪ್ರದೇಶದ ಮುಜಫ್ಫರ್ ನಗರದ ಕೋಮು ಗಲಭೆ ಇಂಡಿಯಾದಲ್ಲಿ ಅಭಿವೃದ್ಧಿ-ಹಿಂದುತ್ವದ ರಾಜಕೀಯ ಭವಿಷ್ಯಕ್ಕೆ ನಾಂದಿ ಹಾಡಿದೆ09a671d9-189f-4b8a-893f-4833f370ce93HiRes ಎನ್ನುವ ಕ್ರೂರ ವ್ಯಂಗ್ಯ ಸತ್ಯವಾದರೆ ಅದು ದಶಕಗಳ ಕಾಲ ಪ್ರಜ್ಞಾವಂತರನ್ನು ಕಾಡಲಿದೆ. ಹಾಗಿದ್ದಲ್ಲಿ ಅಭಿವೃದ್ಧಿ-ಹಿಂದುತ್ವದ ಈ ಅಪಾಯಕಾರಿ ಕಾಂಬಿನೇಷನ್ ಎಲ್ಲಿ ಮುಟ್ಟುತ್ತದೆ ? ಸಂಘ ಪರಿವಾರದ ಹೊಸ ಮಂತ್ರವೇನೆಂದರೆ ‘ಎಲ್ಲರಿಗೂ ನ್ಯಾಯ, ಯಾರಿಗೂ ಓಲೈಕೆ ಇಲ್ಲ’. ಇದು ಇದೇ ರೀತಿಯಲ್ಲಿ ಜನಪ್ರಿಯಗೊಂಡರೆ ಸಾಚಾರ್ ಕಮಿಟಿಯಲ್ಲಿ ವರದಿಯಾದಂತಹ ಮುಸ್ಲಿಮರ ಒಟ್ಟಾರೆ ದುಸ್ಥಿತಿ, ಕುಲುಮೆಯಲ್ಲಿ ನಿರಂತರ ಬೇಯುವಿಕೆ, ಸಾಮಾಜಿಕ ಬಹಿಷ್ಕಾರದ ತೂಗುಗತ್ತಿ ಹಾಗೂ ಮೂರನೇ ದರ್ಜೆಯ ನಾಗರಿಕತೆ ಇನ್ನು ಮುಂದೆಯೂ ಮುಂದುವರೆಯಲಿದೆ. ಇದನ್ನು ಇಂದಿನ ಮುಸ್ಲಿಂ ಯುವಕರು ಅವಲೋಕಿಸಬೇಕಾಗಿದೆ. ’ಆಗಿದ್ದು ಆಗಿಹೋಗಿದೆ ನಾವು ಅಭಿವೃದ್ಧಿಯೊಂದಿಗೆ ಕೈಜೋಡಿಸೋಣ” ಎಂದು ಈ ಯುವಕರು ಬಿಜೆಪಿಯೊಂದಿಗೆ ಹೊರಟರೆ ಅವರು ತಲಪುವುದು ಮತ್ತಷ್ಟು ಕಗ್ಗತ್ತಲಿಗೆ. ಇದು ಆತ್ಮಹತ್ಯೆ ಎಂದು ಅರಿವಾಗುವಷ್ಟರಲ್ಲಿ ಹಳ್ಳಕ್ಕೆ ಬಿದ್ದಾಗಿರುತ್ತದೆ. ಏಕೆಂದರೆ ಇಂದಿನ ಫ್ಯಾಸಿಸಂ ಹಿನ್ನೆಲೆಯ sense of alarmism ನ ಸ್ಥಿತಿಯಲ್ಲಿ ಪ್ರತಿಯೊಬ್ಬ ಅಲ್ಪಸಂಖ್ಯಾತನಾದವನು ಪ್ರಬಲ ಬಹುಸಂಖ್ಯಾತ ಧರ್ಮೀಯರ ನೀತಿಗಳನ್ನು ಇದು ನನ್ನ ಮೌಲ್ಯಗಳು ಎಂದೇ ಅಪ್ಪಿಕೊಳ್ಳಬೇಕಾಗುತ್ತದೆ. ಇಂತಹ ಸಂದಿಗ್ಧತೆಯಲ್ಲಿ ಸಂಘ ಪರಿವಾರದ ಹಿಂದುತ್ವದಡಿಯಲ್ಲಿ ಇತರೆ ಹಿಂದುಳಿದ ವರ್ಗಗಳು ಮತ್ತು ದಲಿತರು ಒಂದಾಗಿ ಬಾಣಗಳಾಗಿ ಸಜ್ಜುಗೊಳ್ಳುತ್ತಾರೆ. ಪ್ರಬಲ ಜಾತಿಗಳು ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಈ ಬಾಣಗಳನ್ನು ಮುಸ್ಲಿಮರ ವಿರುದ್ಧ ಪ್ರಯೋಗಿಸುತ್ತಿರುತ್ತದೆ. ಎಂಬತ್ತರ ದಶಕದಲ್ಲಿ ಬಿಹಾರನ ಭಾಗಲ್ಪುರದಲ್ಲಿ, ಮಹಾರಾಷ್ಟ್ರದ ಭಿವಂಡಿಯಲ್ಲಿ, 2002ರ ಗುಜರಾತ್ ಹತ್ಯಾಕಾಂಡದಲ್ಲಿ ಮೇಲಿನ ಬಾಣಗಳೇ ಸಂಪೂರ್ಣವಾಗಿ ಪ್ರಯೋಗಗೊಂಡಿದ್ದು. ಆಗಿನ್ನೂ ಫ್ಯಾಸಿಸಂ ಅಧಿಕಾರದ ಹತ್ತಿರಕ್ಕೂ ಸುಳಿದಿರಲಿಲ್ಲ. ಆದರೆ ಇಂದು? ಎಂಬತ್ತರ ದಶಕದ ಕೊನೆ ಭಾಗದಲ್ಲಿ ಮೀಸಲಾತಿ ವಿರೋಧಿ ಚಳುವಳಿಯ ನೇತೃತ್ವ ವಹಿಸಿದ್ದು ಆರೆಸ್ಸೆಸ್ ನ ಅಂಗಪಕ್ಷ ಎಬಿವಿಪಿ. ಮೇಲ್ನೋಟಕ್ಕೆ ಅದು ಹಿಂದುಳಿದ ವರ್ಗಗಳ ವಿರೋಧದಂತೆ ಕಂಡರೂ ಅವರ ಗುರಿ ದಲಿತರಾಗಿದ್ದರು. ಇವತ್ತು ಕೇರಳದ ಚುನಾವಣಾ ಪ್ರಚಾರದಲ್ಲಿ ಹಿಂದುಳಿದ ಜಾತಿಗಳ ಗುರು ಮತ್ತು ಸಮಾಜ ಸುಧಾರಕ ನಾರಾಯಣ ಗುರು ಅವರನ್ನು ಓಲೈಸುವ ಮೋದಿ ತಮಿಳುನಾಡಿನಲ್ಲಿ ದಲಿತ ಸಮುದಾಯದವರನ್ನು ಕೆರಳಿಸುತ್ತಿದ್ದಾನೆ. ತನ್ನ ಭಾಷಣಗಳಲ್ಲಿ ಮುಂದಿನ ದಶಕ ಹಿಂದುಳಿದ ವರ್ಗಗಳು ಮತ್ತು ದಲಿತರಿಗೆ ಸೇರಿದ್ದು ಎಂದು ಹಿಂದುತ್ವದ ಹೆಸರಿನಲ್ಲಿ ಮತ ಯಾಚಿಸುತ್ತಿದ್ದಾನೆ. ಮಹಾರಾಷ್ಟ್ರದಲ್ಲಿ ದಲಿತ ನಾಯಕ ರಾಮದಾಸ್ ಅಟವಳೆ ಮೋದಿಯ ತೆಕ್ಕೆಗೆ ಜಾರಿದ್ದಾಯಿತು. ಹಾಗೆಯೇ ಅಖಿಲ ಭಾರತ ದಲಿತ ನೌಕರರ ಒಕ್ಕೂಟದ ಅಧ್ಯಕ್ಷ ಉದಿತ್ ರಾಜ್ ಕಳೆದ ವಾರ ಬಿಜೆಪಿಗೆ ಸೇರಿಕೊಂಡಿದ್ದಾರೆ.

ಒಂದು ಕಾಲದ ಮಾತಾಗಿದ್ದ ಫ್ಯೂಡಲ್ ಹಿಂಸಾಚಾರ ಅತ್ಯಂತ ತ್ವರಿತಗತಿಯಲ್ಲಿ ಮರಳಿ ತನ್ನ ಹಕ್ಕು ಸ್ಥಾಪಿಸುತ್ತಿದೆ. ಬಿಹಾರದಂತಹ ರಾಜ್ಯದಲ್ಲಿ ಪ್ಯೂಡಲ್ ಪಡೆ ರಣವೀರ ಸೇನಾ ಮತ್ತೆ ತಲೆಯತ್ತಲಿದೆ. 27 ಮಾರ್ಚ 2014ರ ಹಿಂದೂ ಪತ್ರಿಕೆಯಲ್ಲಿ “ಬಿಹಾರದ ಬಟಾನಿ ತೋಲಾದಲ್ಲಿ ರಣವೀರ ಸೇನ ಪಡೆ ದಲಿತ ಹೆಣ್ಣು ಮಕ್ಕಳು ಮತ್ತು ಮಕ್ಕಳನ್ನು, ಹಿಂದುಳಿದ ಮುಸ್ಲಿಂರನ್ನು ಕೊಚ್ಚಿ ಹಾಕಿ ಹತ್ಯೆ ಮಾಡಿತ್ತು. ತೊಂಭತ್ತರ ದಶಕದಲ್ಲಿ ರಣವೀರ ಸೇನಾ ಪಡೆ ಬಿಜೆಪಿಯ ಎಲೆಕ್ಷನ್ ಕರಪತ್ರಗಳನ್ನು ಗ್ರಾಮಗಳಲ್ಲಿ ಹಂಚಿ ಬಿಜೆಪಿಗೆ ಮತ ಹಾಕಲು ಆದೇಶಿಸಿತು. 2012ರಲ್ಲಿ ಹತ್ಯೆಗೊಂಡ ಈ ರಣವೇರ ಸೇನೆಯ ಮುಖ್ಯಸ್ಥ ಭ್ರಹ್ಮೇಶ್ವರ ಸಿಂಗ್ ತಾನು ಬಾಲ್ಯದಿಂದಲೂ ಆರೆಸ್ಸೆಸ್ ಸ್ವಯಂಸೇವಕಾನಾಗಿದ್ದೆ ಎಂದು ಒಪ್ಪಿಕೊಂಡಿದ್ದ. ಆತ ಮೋದಿ ಪ್ರಧಾನಿ ಆಗುವ ಆಸೆ ಕಂಡಿದ್ದ. ಬಿಹಾರಿನ ಬಿಜೆಪಿ ನಾಯಕ ಗಿರಿರಾಜ ಸಿಂಗ್ ಈ ಭ್ರಹ್ಮೇಂದ್ರ ಸಿಂಗ್ ಅವರನ್ನು ಬಿಹಾರದ ಗಾಂಧಿ ಎಂದು ಕರೆದಿದ್ದ. ರಣವೀರ ಸೇನೆ ಪಡೆಯ ಪಠ್ಯಗಳು ಹೆಚ್ಚೂ ಕಡಿಮೆ ಆರೆಸ್ಸೆಸ್ ಸಿದ್ಧಾಂತಗಳು. ಗೋಹತ್ಯೆ ನಿಷೇಧ, 370 ಕಲಮನ್ನು ರದ್ದುಗೊಳಿಸುವುದು, ಸ್ಯೂಡೋ ಸೆಕ್ಯುಲರ್ ಗಳ ಹುಟ್ಟಡಗಿಸುವುದು ಇವುಗಳಲ್ಲಿ ಮುಖ್ಯವಾದವು” ಎಂದು ವರದಿಯಾಗಿದೆ.

ಇನ್ನು ಮಹಾರಾಷ್ಟ್ರದಲ್ಲಿ ಶಿವಸೇನಾ ಮತ್ತು ರಾಜಠಾಕ್ರೆಯnarendra ಎಂಎನ್ಎಸ್, ಕರ್ನಾಟಕದ ಶ್ರೀರಾಮ ಸೇನೆ ಮತ್ತು ಭಜರಂಗ ದಳ, ಉತ್ತರ ಪ್ರದೇಶದ ಟೋಟಲ್ ಶೂದ್ರ ಶಕ್ತಿಗಳು ಹಾಗೂ ಒಡಿಸ್ಸಾದ ಹಿಂದುತ್ವದ ಪಡೆಗಳು ಇವೇ ಮೊದಲಾದ ಹೊಸ ಫ್ಯಾಸಿಸಂ ಸಾಮ್ರಾಜ್ಯದಲ್ಲಿ ಗರಿಗೆದರುವ ಸಾಧ್ಯತೆಗಳು ಮುಂದೆ ನಡೆಯಲಿರುವ ರಕ್ತದ ಓಕಳಿಯ ಅಂದಾಜು ನೀಡುತ್ತವೆ. ಇವುಗಳ ನೆತ್ತರ ದಾಹ ಶುರುವಾದರೆ ನಿಲ್ಲಿಸಲು ಕಷ್ಟಸಾಧ್ಯ. ಮುಸ್ಲಿಮರ ಮಿತ್ರ ಅರ್ಥಾತ್ ಹಿಂದೂಗಳ ಶತ್ರು ಎಂದು ಆರೋಪಿಸಿ ಗಾಂಧಿಯನ್ನು ಕೊಂದಿದ್ದು ಇದೇ ಫ್ಯಾಸಿಸ್ಟ್ ಸಂಘ ಪರಿವಾರದ ಅಂಗ ಸಂಸ್ಥೆ ಹಿಂದೂ ಮಹಾಸಭಾದ ಘೋಡ್ಸೆ. ಅಂದರೆ ಪ್ರತಿಯೊಂದು ಆರೋಪಕ್ಕೂ ಈ ಸಂಘ ಪರಿವಾರ ಪರಿಹಾರ ಕಂಡುಕೊಳ್ಳುವುದು ನೆತ್ತರ ಹರಿಸುವುದರ ಮೂಲಕವೇ. ನಾಥುರಾಮ್ ಘೋಡ್ಸೆಯ ನೆತ್ತರ ದಾಹದ ಚಿಂತನೆಗಳು ಮರಳಿ ಗೂಡು ಕಟ್ಟುತ್ತಿವೆ. ಮೋದಿಯ ಬಾಯಲ್ಲಿ ಎಕೆ 47, ಎಕೆ ಅಂಟನಿ, ಎಕೆ 49 ಎಂದು ನೆತ್ತರ ದಾಹದ ಮಾತನ್ನು ಆಡಿಸಿದ್ದೂ ಇದೇ ಘೋಡ್ಸೆಯ ಚಿಂತನೆಗಳು. ‘ಒಂದು ದೇಶ, ಒಂದು ಭಾಷೆ, ಒಂದು ಜನಾಂಗ’ ಎನ್ನುವ ಮತೀಯವಾದಿ ರಾಷ್ಟ್ರೀಯತೆಯೂ ಸಹ ನೆತ್ತರ ದಾಹದೊಂದಿಗೆ ದಾಪುಗಾಲಿಡುತ್ತಲಿದೆ. ‘ವೈವಿಧ್ಯತೆಯಲ್ಲಿ ಏಕತೆ, ಬಹುತ್ವವೇ ಸಂವಿಧಾನದ ಆಶಯ, ಬಹುರೂಪತೆ ನಮ್ಮ ಹಕ್ಕು’ ಎನ್ನುವ ಧ್ವನಿಗಳನ್ನು ಅಡಗಿಸಲಾಗುತ್ತದೆ.

ನನಗಂತೂ ಇಡೀ ಮೀಡಿಯಾದ ಹೈಪ್ ಸುಳ್ಳಾಗುತ್ತದೆಂಬ ಭರವಸೆ ಇತ್ತೀಚೆಗೆ ಬಲವಾಗುತ್ತಿದೆ. ಏಕೆಂದರೆ ನಮ್ಮ ದೇಶದಲ್ಲಿ ಪ್ರತಿಯೊಬ್ಬ ನಮೋಗೆ ಪ್ರತಿಯಾಗಿ ಒಬ್ಬ ಕಬೀರನಿದ್ದಾನೆ. ಈ ನಮ್ಮ ಕಬೀರನಿರುವ ಸ್ಥಳದಲ್ಲಿ ನಮೋಗೆ ಸ್ಥಾನವೇ ಇಲ್ಲ.

26 thoughts on “ಉರಿಯುವ ಬೆಂಕಿಗೆ ಮೈಯೆಲ್ಲಾ ಬಾಯಿ – ನಿಲ್ಲದ ನೆತ್ತರ ದಾಹ

  1. bhatmahesht

    ಏ ಆರ್ ಅಂತುಳೆಯವರು 1980 ರಿಂದ 1982 ರವರೆಗೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದ ಮುಸ್ಲಿಂ ನಾಯಕರಾಗಿದ್ದರು. ಇಂದಿರಾ ಗಾಂಧಿಯವರ ಟ್ರಸ್ಟ್ ಗೆ ಬಿಲ್ಡರ್ ಗಳಿಂದ ಹಣ ಕೊಡಿಸಿದ ವಿಷಯದಲ್ಲಿ ಕೋರ್ಟ್ ದೋಷಿ ಎಂದು ಹೇಳಿದಾಗ ರಾಜೀನಾಮೆ ನೀಡಬೇಕಾಯಿತು. ಅದರಿಂದೀಚೆಗೆ ಅಂದರೆ ಸುಮಾರು 30 ವರ್ಷಗಳಲ್ಲಿ ಕಾಶ್ಮೀರ ಹೊರತುಪಡಿಸಿ ದೇಶದ ಯಾವುದೇ ರಾಜ್ಯದಲ್ಲಿ ಯಾವುದೇ ಪಕ್ಷದ ಆಡಳಿತವಿದ್ದರೂ ಮುಸ್ಲಿಂ ನಾಯಕರು ಮುಖ್ಯಮಂತ್ರಿಯಾಗಿಲ್ಲ. ಭಾರತದ ಬಹುತೇಕ ರಾಜಕೀಯ ಪಕ್ಷಗಳು ಮುಸ್ಲಿಂರನ್ನು ವ್ಯವಸ್ಥಿತವಾಗಿ ದೂರವಿಡುತ್ತಿವೆಯೇ ?

    Reply
  2. Ananda Prasad

    ದೇಶದಲ್ಲಿ ಇಂದು ಮೋದಿ ಅಲೆ ಇದೆಯೇ ಎಂದು ನೋಡಿದರೆ ಅಂಥ ಅಲೆಯೇನೂ ಕಾಣಿಸುವುದಿಲ್ಲ. ಒಂದು ಪಕ್ಷ ಅಥವಾ ವ್ಯಕ್ತಿಯ ಅಲೆ ಇರುವ ಸಂದರ್ಭದಲ್ಲಿ ಆ ಪಕ್ಷಕ್ಕೆ/ವ್ಯಕ್ತಿಗೆ ಅನಾಯಾಸವಾಗಿ ಬಹುಮತ ದೊರೆಯುವ ಸನ್ನಿವೇಶ ನಿರ್ಮಾಣವಾಗುತ್ತದೆ. ಉದಾಹರಣೆಗೆ ಇಂದಿರಾ ಗಾಂಧಿ ಹತ್ಯೆಯ ಸಂದರ್ಭದಲ್ಲಿ ಉಂಟಾದ ಅಲೆಯನ್ನು ಗಮನಿಸಬಹುದು. ಅಂಥ ಅಲೆಯ ಯಾವ ಲಕ್ಷಣಗಳೂ ಈಗ ದೇಶದಲ್ಲಿ ಹುಡುಕಿದರೂ ಕಾಣಸಿಗುತ್ತಿಲ್ಲ. ದೇಶದಲ್ಲಿ ನಿಜವಾಗಿ ಮೋದಿ ಅಲೆ ಇರುವುದು ನಿಜವೇ ಆಗಿದ್ದರೆ ಬಿಜೆಪಿಯು ಸ್ವಚ್ಛ ಹಿನ್ನೆಲೆ ಇರುವ ಸಮಾಜಸೇವಕರು, ವಿಜ್ಞಾನಿಗಳು, ಚಿಂತಕರು ಮೊದಲಾದ ಹೊಸಬರಿಗೆ ಚುನಾವಣೆಗೆ ಟಿಕೆಟ್ ನೀಡಬೇಕಾಗಿತ್ತು. ಆ ರೀತಿಯ ವಿದ್ಯಮಾನ ನಡೆದಿರುವುದು ಕಂಡುಬರುವುದಿಲ್ಲ. ಬದಲಿಗೆ ವಿಧಾನಸಭೆ ಚುನಾವಣೆಗಳಲ್ಲಿ ಜನ ತಿರಸ್ಕರಿಸಿದ ಕಳಂಕಿತರನ್ನೇ ಮತ್ತೆ ಪಕ್ಷಕ್ಕೆ ಕರೆತಂದು ಅಲೆ ಅಲೆ ಎಂದು ಬೊಬ್ಬೆ ಹಾಕುತ್ತಿದ್ದಾರೆ. ಅಲೆಯಿರುವ ಸಂದರ್ಭದಲ್ಲಿ ಪಕ್ಷದಿಂದ ಯಾರೇ ನಿಂತರೂ ಗೆಲ್ಲುವ ವಾತಾವರಣ ಇರುತ್ತದೆ. ಹೀಗಿರುವಾಗ ಮೋದಿ ಅಲೆ ಇರುವುದು ನಿಜವೇ ಆಗಿದ್ದರೆ ಅಲೆಯ ಸದುಪಯೋಗ ಪಡೆದು ಸ್ವಚ್ಛ ಜನರಿಗೆ ಅವಕಾಶ ಕೊಟ್ಟು ರಾಜಕೀಯವನ್ನು ಸ್ವಚ್ಛ ಮಾಡುವ ಅವಕಾಶವನ್ನು ಏಕೆ ಬಿಜೆಪಿ ಬಳಸಿಕೊಂಡಿಲ್ಲ ಎಂದು ಕೇಳಬೇಕಾಗುತ್ತದೆ. ಈ ಸಲದ ಚುನಾವಣೆಗಳಲ್ಲಿ ಸ್ವಚ್ಛ ಹಿನ್ನೆಲೆಯ ಜನರನ್ನು ಕಣಕ್ಕೆ ಇಳಿಸಿರುವುದರಲ್ಲಿ ಎದ್ದು ಕಾಣುತ್ತಿರುವುದು ಆಮ್ ಆದ್ಮಿ ಪಕ್ಷ ಮಾತ್ರ. ಮೋದಿಗೆ ಅಲೆಯನ್ನು ಉಂಟುಮಾಡುವಂಥ ಸ್ವಚ್ಛ ಹಿನ್ನೆಲೆ ಇಲ್ಲ ಎಂಬುದು ದೇಶದಲ್ಲಿ ಎಲ್ಲರಿಗೂ ತಿಳಿದಿರುವ ಸತ್ಯ. ಸ್ವಚ್ಛ ಹಿನ್ನೆಲೆ ಇರುವ ವ್ಯಕ್ತಿಗಳನ್ನು ಎತ್ತಿ ಹಿಡಿಯದೆ ಮಾಧ್ಯಮಗಳು ಹಾಗೂ ಬಿಲಿಯಾಧಿಪತಿ ಬಂಡವಾಳಗಾರರು ಎಷ್ಟೇ ದುಡ್ಡು ಸುರಿದು ಮೇರೆಯಿಲ್ಲದ ಜಾಹೀರಾತು ಪ್ರಸಾರ ಮಾಡಿ, ಸಾವಿರಾರು ರ್ಯಾಲಿಗಳನ್ನು ನಡೆಸಿದರೂ ಅಲೆಯನ್ನು ಸೃಷ್ಟಿಸಲು ಸಾಧ್ಯವಿಲ್ಲ ಎಂಬ ಸತ್ಯವನ್ನು ನಮ್ಮ ಮಾಧ್ಯಮದ ಮಂದಿ ಅರಿಯದೆ ಇರುವುದು ಶೋಚನೀಯ. ಮೋದಿಯ ಅಭಿವೃದ್ಧಿ ಕೂಡ ಪೊಳ್ಳು ಎಂಬುದು ಕೇಜ್ರಿವಾಲರು ದೇಶದ ಮುಂದೆ ಬಹಿರಂಗಪಡಿಸಿದ್ದಾರೆ. ಮೋದಿಗೆ ಕಾಂಗ್ರೆಸ್ಸಿನ ವಿರುದ್ಧ ಹರಿಹಾಯಲು ಬೇಕಷ್ಟು ಸರಕು ಸಿಗಬಹುದು ಆದರೆ ಸ್ವಚ್ಛ ಹಿನ್ನೆಲೆ ಇರುವ ಕೇಜ್ರಿವಾಲ್ ಹಾಗೂ ಸಂಗಡಿಗರ ವಿರುದ್ಧ ಹರಿಹಾಯಲು ಸರಕು ಸಿಗುತ್ತಿಲ್ಲ. ಮೋದಿ ಕೇಜ್ರಿವಾಲರನ್ನು ಪಾಕಿಸ್ತಾನದ ಏಜೆಂಟ್ ಎಂದು ಹೇಳಿರುವುದು ಹತಾಶೆಯ ಹೇಳಿಕೆ ಹಾಗೂ ಪ್ರಧಾನಿ ಸ್ಥಾನದ ಆಕಾಂಕ್ಷಿಗೆ ಒಪ್ಪುವ ಮಾತಲ್ಲ. ಈ ಸಲ ಮೋದಿಯ ಜೊತೆಗೆ ಸಂಘ ಪರಿವಾರದವರು ರಾಜಾರೋಷವಾಗಿ ಪ್ರಚಾರಕ್ಕೆ ಇಳಿದಿರುವುದು ಕಂಡುಬರುತ್ತಿದೆ. ಇದರಿಂದ ಬಿಜೆಪಿಗೆ ಹೆಚ್ಚಿನ ಹಾನಿಯೂ ಆಗಲಿದೆ ಏಕೆಂದರೆ ಸಂಘದ ಹಿಡಿತ ಪಕ್ಷದ ಮೇಲೆ ಇದರಿಂದ ಹೆಚ್ಚಲಿದೆ ಹಾಗೂ ಅಭಿವೃದ್ಧಿಯ ಕಾರಣವಾಗಿ ಭ್ರಮಿತರಾಗಿ ಬಿಜೆಪಿಗೆ ವೋಟು ಹಾಕಬಹುದಾದ ಉದಾರವಾದಿ ಮತದಾರರು ಕೂಡ ಮತ ಹಾಕಲು ಹಿಂಜರಿಯುವ ಪರಿಸ್ಥಿತಿ ರೂಪುಗೊಳ್ಳಲಿದೆ

    Reply
  3. sanju

    ಬದಲಾವಣೆ ಒಪ್ಪಿಕೊಳ್ಳಲಾಗದ ಮನಸ್ಥಿತಿ ಅಥವಾ ಬದಲಾದರೆ ಏನಪ್ಪಾ ಮಾಡುವುದು ಎಂಬ ಆತಂಕ ನಿಮ್ಮ ಪೂರ್ಣ ಬರಹದಲ್ಲಿ ಅಡಕವಾಗಿದೆ ಅಷ್ಟೇ. ಕಾರಣ, ಒಬ್ಬ ಮನುಷ್ಯ ಹೆದರಿಕೊಂಡಾಗ ಮಾತ್ರ ಕೆಟ್ಟ ಭಾಷೆ ಬಳಸುತ್ತಾನೆ ಮತ್ತು ಕೆಟ್ಟದಾಗಿ ಚಿಂತಿಸುತ್ತಾನೆ. ನೀವು ಮೋದಿ ಕುರಿತಾಗಿ ಬಳಸಿರುವ ಭಾಷೆ ಕೂಡ ಅಂಥದ್ದೇ. ಮೋದಿಗೆ ಕೋಟ್೯ಗಳೇ ಕ್ಲೀನ್ ಚಿಟ್ ಕೊಟ್ಟಾದ ಮೇಲೂ ಅವರೇ ಕಾರಣ ಎನ್ನುವುದು, 1984ರ ಸಿಖ್ ವಿರೋಧಿ ದಂಗೆಯ ಕಾರಣಕತ೯ರನ್ನು ನೆನೆಯುವುದೇ ಇರುವುದು, ಆಗಿನ ರಾಜೀವ್ ಗಾಂಧಿ ಭಾಷೆಯನ್ನು ಹಾಗೆಯೇ ಒಪ್ಪಿಕೊಳ್ಳುವುದು, ಅವರೇಳಿರುವುದು ಸರಿ ಇದ್ದರೂ ಇರಬಹುದು ಎಂಬ ನಿಮ್ಮ ಬುದ್ಧಿವಂತಿಕೆ ಇದರಲ್ಲಿ ಪ್ರದಶ೯ನವಾಗುತ್ತಿದೆ. 1947ರ ನಂತರ, ಆಗೊಮ್ಮೆ, ಈಗೊಮ್ಮೆ ಬೇರೆ ಸಕಾ೯ರಗಳು ಬಂದಿವೆ ಎನ್ನೋದು ಬಿಟ್ಟರೆ ಉಳಿದೆಲ್ಲಾ ಸಂದಭ೯ಗಳಲ್ಲೂ ದೇಶವನ್ನಾಳಿರುವುದು ಕಾಂಗ್ರೆಸ್ಸೇ. ಇದನ್ನು ನೀವು ಮರೆತಿರಿ ಅನ್ನಿಸುತ್ತೆ. ಮುಜಾಫರನಗರ ಗಲಭೆಗೆ ಉತ್ತರ ಪ್ರದೇಶ ಸಕಾ೯ರದ ನಿಲ೯ಕ್ಷ್ಯವೇ ಕಾರಣ ಎಂದು ಸುಪ್ರೀಂಕೋಟ್೯ ಹೇಳಿದ್ದರೂ ಅದನ್ನು ನೀವು ಯಾರೋ ಆರೆಸ್ಸೆಸ್ಸ್ ನ ಜಡ್ಜ್ ಇರಬೇಕು ಎಂದು ಜರಿದು ಬಿಡುತ್ತೀರಾ, ಇದಕ್ಕೆ ಕಾರಣ ನಿಮ್ಮ ಒಗ್ಗಿಕೊಳ್ಳದ ಬದಲಾಗದ ಮನಸ್ಥಿತಿ. ಹೋಗಲಿ ನಿಮ್ಮ ಬರಹದ ಬಗ್ಗೆ ಬೇಜಾರಿಲ್ಲ, ಆದರೆ ಮೋದಿ ಕುರಿತಾಗಿ ಏಕವಚನ ಬಳಸಿರುವ ಭಾಷೆ ಮಾತ್ರ ನಿಮ್ಮ ಕೆಟ್ಟ ಮನಸ್ಥಿತಿಯ ಪ್ರತಿಬಿಂಬವಷ್ಟೇ. ಶ್ರೀಪಾದ ಭಟ್ಟರೇ ಬರಹಗಳ ಮೂಲಕ ಮನಗೆಲ್ಲೋದು ತುಂಬಾ ಕಷ್ಟನೇ, ವ್ಯಕ್ತಿಯೊಬ್ಬರ ವಿರುದ್ಧ ಹೇಗೆ ಮಾತನಾಡಬೇಕು ಎಂಬುದನ್ನು ದೊಡ್ಡವರನ್ನು ನೋಡಿ ತಿಳಿದುಕೊಳ್ಳಿ.

    Reply
  4. born_smart

    “ಹಿಂದೊಮ್ಮೆ ಮೇಡಂ ಮಾರಿಯಾ, ಮಿಯಾ ಮುಶ್ರಾಫ್, ಮೈಕೆಲ್ ಲಿಂಗ್ಡೋ ಎಂದು ಅಹಂಕಾರದಿಂದ ಮಾತನಾಡಿದ್ದ ಮೋದಿ ಅತ್ಯಂತ ಕ್ರೂರವಾದ ಭಾಷೆ ಬಳಸುತ್ತಾ ತನ್ನ ರಾಜಕೀಯ ಎದುರಾಳಿಗಳನ್ನು ಕುರಿತಾಗಿ “ಎಕೆ 47, ಎಕೆ ಅಂಟೊನಿ, ಎಕೆ 49″ ಎಂದು ವ್ಯಂಗವಾಡಿದ್ದಾನೆ.ಆಧುನಿಕ ಭಾರತದ ಇತಿಹಾಸದಲ್ಲಿ ರಾಜಕೀಯ ನಾಯಕನೊಬ್ಬ ಇಷ್ಟೊಂದು ಕ್ರೌರ್ಯದ ಭಾಷೆಯಲ್ಲಿ ಮಾತನಾಡಿದ್ದು ಇದೇ ಮೊದಲು. ”

    Sir, whatever weightage your article might have had was lost with above statement. If that was “ಕ್ರೌರ್ಯದ ಭಾಷೆ” what do you call Sonia’s ‘mouth ka saudagar’ & Siddaramaiah’s ‘narahantaka/ Hitler’ statement on Modi. In comparison Modi’s statement are subdued.

    Reply
  5. ManjunathptlManjun

    Sanju avre nivu heliddu sariyagide, bhat avaru modi bagge ekavachana balaiddare. Nanna prakar bhata avru baviyallin mondu kappeya hage barediddare, tane doddavanu tanaginta bere prapanchavilla matte doddavarilla ennuva ritiyalli. Matte e ella vartaman writers Muslims bagge istu kalaji vahisutiddaralla yake ivarenu avar agentargalaa hege ondu artah agtaa illa.innondu writerge buddi bramaneyagirbeku adke hige adta iddare. Ondu matu matra satya modi namma mundin PM idanna a brahmanindalu tappisalu sadyavilla. Ninenu puttgoshi.

    Reply
  6. nijam

    ಅತ್ಯುತ್ತಮ ಲೇಖನ. ಮೋದಿಯ ಮಂಕು ಬೂದಿಯಲ್ಲಿ ಮುಚ್ಚಿರುವ ಕೆಂಡಗಳ ಕುರಿತು ಬೆಳಕು ಚೆಲ್ಲಿದ್ದೀರಾ ಶ್ರೀ ಪಾದ್ ಭಟ್ ಅವರೇ . ಇಲ್ಲಿ ಮೋದಿ ಒಂದು ಉದಾಹರಣೆಯಷ್ಟೇ ಇಂಥಹಾ ಸಾಕಷ್ಟು ಮೋದಿಗಳನ್ನು ಸಂಘ ಪರಿವಾರ ಈ ಪುಣ್ಯನೆಲದಲ್ಲಿ ಬಿತ್ತುತ್ತಿದೆ. ಮೋದಿ ಮಾಯೆ ಎಂಬ ಭ್ರಮಾಲೋಕದಲ್ಲಿ ತೇಲುತ್ತಿರುವ ಅನೇಕ ಯುವಕರಿಗೆ ನೈಜ್ಯ ವಿಚಾರಗಳು ತಿಳಿದೇ ಇಲ್ಲ. ಸಂಘಪರಿವಾರದ ಸುಳ್ಳಿನ ಪ್ರಚಾರ ತಂತ್ರಗಾರಿಕೆಗೆ ಅವರು ಬಲಿಯಾಗುತ್ತಿದ್ದಾರಷ್ಟೇ. ದೇಶದಲ್ಲಿ ಎಲ್ಲಾ ಧರ್ಮ ಭಾಂಧವರು ಒಮ್ಮತದಿಂದ ಬದುಕುವುದು ಮುಖ್ಯ ನಂತರ ಅಭಿವೃದ್ಧಿಯ ಮಾತು. ರಕ್ತದ ಕಲೆ ಮೆತ್ತಿಕೊಂಡಿರುವ, ಆರ್.ಎಸ್.ಎಸ್ ಫ್ಯಾಸಿಸಂ ಸಿದ್ದಾಂತವನ್ನು ಜೀವಾಳವನ್ನಾಗಿಸಿಕೊಂಡಿರುವ ವ್ಯಕ್ತಿ ಈ ದೇಶದ ಆಡಳಿತ ಚುಕ್ಕಾಣಿ ಹಿಡಿಯುವ ತಯಾರಿ ನಡೆಸುತ್ತಿರುವುದು ಸಹಜವಾಗಿ ಇಲ್ಲಿಯ ಅಲ್ಪಸಂಖ್ಯಾತ ಶಾಂತಿ ಪ್ರಿಯ ಜ್ಯಾತ್ಯಾತೀತ ಹಿಂದು ಮುಸ್ಲಿಂ ಕ್ರೈಸ್ತ ಜನಸಾಮಾನ್ಯರಲ್ಲಿ ಆತಂಕ ಭಯ ಕಾಡುತ್ತಿದೆ. ಹಿಂದುತ್ವ ಪೋಷಕರ ಕೂಸಾದ ಮೋದಿಯ ಮಾದರಿ ಅಭಿವೃದ್ಧಿಗೆ ಬೆಲೆ ತೆತ್ತಿರುವ ಮುಸ್ಲಿಮರನ್ನು ಮೋದಿ ಎಂಬ ಭೂತವನ್ನು ತೋರಿಸಿ ಮುಸ್ಲಿಂ ಚೆಡ್ಡಿಗಳು (ಮೂಲಭೂತವಾದಿ ಕೋಮುವಾದಿ) ಇನ್ನೊಬ್ಬ ಪರ್ಯಾಯ ಮುಸ್ಲಿಂ ಮೋದಿಯನ್ನು ತೆರೆಗೆ ತಂದರೆ ಏನು ಗತಿ ಎಂಬ ಆತಂಕ ಕಾಡುತ್ತಿದೆ.ಈ ನಿಟ್ಟಿನಲ್ಲಿ ಜ್ಯಾತ್ಯಾತೀತ ಮನಸ್ಸುಗಳ ಯುವಕರು ಮೋದಿ ಮೋಡಿ ಎಂಬ ಸುಳ್ಳಿನ ಕಂತೆಗೆ ಬಲಿಯಾಗದೆ ಮೋದಿಮಾದರಿಯ ಕುರಿತಾಗಿ ಅಧ್ಯಯನ ನಡೆಸಿ ಬಂಡವಾಳ ಶಾಹಿಗಳಿಗೆ ದೇಶವನ್ನು ಮಾರದ, ಎಲ್ಲಾಜಾತಿ ಮತಗಳಲ್ಲಿ ಸೌಹಾರ್ದವನ್ನು ಬಿತ್ತುವ , ಬಡ ಜನರ, ಕಾರ್ಮಿಕರ ಏಳಿಕೆಗೆ ದುಡಿಯುವ ಜನ ಸರ್ಕಾರವನ್ನು ಅಧಿಕಾರಕ್ಕೆ ತರುವಲ್ಲಿ ಮುಂದಾಗಿ.

    Reply
  7. sanju

    ಕೋಮುವಾದ ಎಂಬುದು ಎಲ್ಲ ಧಮೀ೯ಯರಿಗೂ ಬೇಡವಾದದ್ದೇ. ಹಾಗಂತ ಆರೆಸ್ಸೆಸ್ಸ್ ಕೋಮುವಾದ ಬಿತ್ತುತ್ತಿದೆ. ಮೋದಿ ಆಡಳಿತಕ್ಕೆ ಬಂದರೆ ದೇಶದ ಮುಸ್ಲಿಮರೆಲ್ಲಾ ಏನೋ ಆಗಿ ಬಿಡ್ತಾರೆ ಎಂಬುದೆಲ್ಲಾ ಸುಳ್ಳು. 2002ರ ನಂತರ ಗುಜರಾತ್ ನಲ್ಲಿ ಎಷ್ಟು ಗಲಭೆ ಸಂಭವಿಸಿವೆ ಮತ್ತು ಇದೇ ಸಂದಭ೯ದಲ್ಲಿ ಬೇರೆ ರಾಜ್ಯಗಳಲ್ಲಿ ಯಾವ ರೀತಿಯ ಕೋಮುಗಲಭೆಗಳಾಗಿವೆ ಎಂಬುದನ್ನು ಅರಿಯಬೇಕು. ಇನ್ನೊಂದು ವಿಚಾರ, ಈ ವೆಬ್ ಸೈಟ್ ನ ಸಂಪಾದಕರಾಗಿರುವ ರವಿಕೖಷ್ಣಾ ರೆಡ್ಡಿ ಅವರು ಎಎಪಿಯಿಂದ ಬೆಂಗಳೂರು ಗ್ರಾಮಾಂತರದಲ್ಲಿ ಸ್ಪಧಿ೯ಸಿದ್ದಾರೆ. ಇವರದ್ದು ಯಾವ ಸಿದ್ಧಾಂತ ಸ್ವಾಮಿ? ಇಂದು ಕೇಜ್ರಿವಾಲ್ ಎಂಬ ಮನುಷ್ಯ ಪ್ರಚಾರದ ಹುಚ್ಚಿಗೆ ಸಿಲುಕಿ ಏನೇನನ್ನೋ ಮಾಡುತ್ತಿದ್ದಾರೆ. ಇಂದು ಪ್ರತಿಭಟಿಸಿದರೆ ನಾಳೆಯೇ ಸಮಸ್ಯೆ ಬಗೆಹರಿಯಬೇಕು ಎಂಬುದು ಯಾವ ಸಿದ್ಧಾಂತ? ಯಾವೊಂದು ಪ್ರಜಾಪ್ರಭುತ್ವ ದೇಶದಲ್ಲೂ ಇಂದು ಪ್ರತಿಭಟಿಸಿ, ಅದಕ್ಕೆ ನಾಳೆಯೇ ಪರಿಹಾರ ಸಿಕ್ಕ ಉದಾಹರಣೆಗಳಿಲ್ಲ. ಪ್ರಜಾಪ್ರಭುತ್ವದ ಲಕ್ಷಣ ಕೂಡ ಇದೇ. ಇದನ್ನು ನೀವು ಅಥ೯ ಮಾಡಿಕೊಂಡಿಲ್ಲ. ನಿಮ್ಮ ಈ ಹೆದರಿಕೆ ಇನ್ನೂ 2002ರ ಅಂಚಿನಲ್ಲಿಯೇ ಇದೆ. ಕಾಲ ಬದಲಾಗಿದೆ, 2002 ಅನ್ನು ಬಿಟ್ಟು 12 ವಷ೯ ಮುಂದೆ ಬಂದಿದ್ದೇವೆ. ಈ 12 ವಷ೯ಗಳ ಕಡೆಗೆ ಕಣ್ಣು ಹಾಯಿಸಿ. ಕಳೆದ 10 ವಷ೯ಗಳಲ್ಲಿ ಕಾಂಗ್ರೆಸ್ ಮಾಡಿದ್ದೇನು? ಭ್ರಷ್ಟಾಚಾರಗಳೇ ಅಲ್ಲವೇ. ಹೋಗಲಿ, ಈ ಸಕಾ೯ರ ಯಾರಿಗೇನು ಕೊಟ್ಟಿದೆ? ಮೋದಿ ಪ್ರಧಾನಿಯಾದರೆ ದೇಶದಲ್ಲಿನ ಮುಸ್ಲಿಮರಿಗೆ ಕಷ್ಟವಾಗುತ್ತೆ ಎಂಬುದರಲ್ಲಿ ಅಥ೯ವಿಲ್ಲ. 1947ರ ಕಹಿನೆನಪು ಈಗ ಮರುಕಳಿಸಲ್ಲ, ಅಷ್ಟೇ ಅಲ್ಲ, ಪಾಕ್ ನಲ್ಲಿರುವ ಹಿಂದೂಗಳನ್ನು ಆ ದೇಶ ಹೇಗೆ ನಡೆಸಿಕೊಳ್ಳುತ್ತಿದೆ ಎಂಬುದರ ಬಗ್ಗೆ ಒಮ್ಮೆ ಯೋಚಿಸಿ. ಅವರ ಪರವಾಗಿಯೂ ನಾವು ಒಮ್ಮೆ ಕೂಡ ಮಾತನಾಡಲ್ಲ. ಅವರೂ ನಮ್ಮದೇ ಜನವಲ್ಲವೇ?

    Reply
  8. ವಿಜಯ್

    ಈ ಲೇಖಕರ ಸಮಸ್ಯೆಯನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಸ್ವಂತ ಬಲದ ಮೇಲೆ ಹೋರಾಡೋಣವೆಂದರೆ, ಈಗೀಗ ಎಡಪಕ್ಷಗಳನ್ನು ಮೂಸಿ ನೋಡುವವರೇ ಇಲ್ಲವಾಗಿದ್ದಾರೆ. ಅತ್ತ ತಾತ್ಕಾಲಿಕವಾಗಿ ನಂಬಿದ ಕಾಂಗ್ರೇಸ್ ಆದರೂ ಹೋರಾಡಲಿ ಎಂದು ಕಳೆದೊಂದು ವರ್ಷದಿಂದ ಗಾಳಿ ತುಂಬುವ ಕೆಲಸ ಮಾಡಿದರೂ, ಪಂಕ್ಚರ್ ನಿಲ್ಲುತ್ತಿಲ್ಲ!..ಗಾಲಿ ಉರುಳುವ ಸೂಚನೆ ಕಾಣುತ್ತಿಲ್ಲ!!.. ಆಪ್ ನ್ನು ಪ್ರೊಜೆಕ್ಟ್ ಮಾಡೋಣವೆಂದರೆ, ಅರವಿಂದ ಕೇಜ್ರಿವಾಲ್ ನಾಮಪತ್ರ ಕೊಡುವ ಮೊದಲು ಪಕ್ಕಾ ‘ವಟು’ವಿನ ಹಾಗೆ ಗಂಗಾನದಿಯಲ್ಲಿ ಮುಳುಗು ಹಾಕುತ್ತಿದ್ದಾನೆ!.

    ಉಳಿದೆಲ್ಲ ಹತಾಶೆಗಳ ಜೊತೆಗೆ ಮತಾಂಧರಲ್ಲದ, ಆಭಿವೃಧ್ದಿಪರವಾದ ಮುಸ್ಲಿಂ ಯುವಕರು ಬಿಜೆಪಿಯನ್ನು ಬೆಂಬಲಿಸಬಹುದು ಎಂಬ ಸೂಚನೆ ಲೇಖಕರಿಗೆ ಸಿಕ್ಕಿದೆ. ಅದನ್ನು ನೋಡಿಯೇ ತಮ್ಮ ತಲೆಬುಡವಿಲ್ಲದ, ಅರ್ಥವಿಲ್ಲದ ವಾದವನ್ನು ಮಂಡಿಸಿದ್ದಾರೆ.
    [ ಸಂಘ ಪರಿವಾರದ ಹೊಸ ಮಂತ್ರವೇನೆಂದರೆ ‘ಎಲ್ಲರಿಗೂ ನ್ಯಾಯ, ಯಾರಿಗೂ ಓಲೈಕೆ ಇಲ್ಲ’. ಇದು ಇದೇ ರೀತಿಯಲ್ಲಿ ಜನಪ್ರಿಯಗೊಂಡರೆ ಸಾಚಾರ್ ಕಮಿಟಿಯಲ್ಲಿ ವರದಿಯಾದಂತಹ ಮುಸ್ಲಿಮರ ಒಟ್ಟಾರೆ ದುಸ್ಥಿತಿ, ಕುಲುಮೆಯಲ್ಲಿ ನಿರಂತರ ಬೇಯುವಿಕೆ, ಸಾಮಾಜಿಕ ಬಹಿಷ್ಕಾರದ ತೂಗುಗತ್ತಿ ಹಾಗೂ ಮೂರನೇ ದರ್ಜೆಯ ನಾಗರಿಕತೆ ಇನ್ನು ಮುಂದೆಯೂ ಮುಂದುವರೆಯಲಿದೆ. ಇದನ್ನು ಇಂದಿನ ಮುಸ್ಲಿಂ ಯುವಕರು ಅವಲೋಕಿಸಬೇಕಾಗಿದೆ. ’ಆಗಿದ್ದು ಆಗಿಹೋಗಿದೆ ನಾವು ಅಭಿವೃದ್ಧಿಯೊಂದಿಗೆ ಕೈಜೋಡಿಸೋಣ” ಎಂದು ಈ ಯುವಕರು ಬಿಜೆಪಿಯೊಂದಿಗೆ ಹೊರಟರೆ ಅವರು ತಲಪುವುದು ಮತ್ತಷ್ಟು ಕಗ್ಗತ್ತಲಿಗೆ. ಇದು ಆತ್ಮಹತ್ಯೆ ಎಂದು ಅರಿವಾಗುವಷ್ಟರಲ್ಲಿ ಹಳ್ಳಕ್ಕೆ ಬಿದ್ದಾಗಿರುತ್ತದೆ. ]
    ‘ಎಲ್ಲರಿಗೂ ನ್ಯಾಯ, ಯಾರಿಗೂ ಓಲೈಕೆ ಇಲ್ಲ’. ಎಂಬುದು ಜಾರಿಗೆ ಬಂದರೆ, ಮುಸ್ಲಿಂ ರು ಮೂರನೆಯ ದರ್ಜೆ ನಾಗರಿಕರಾಗುತ್ತಾರೆ ಎಂಬುದರ ಹಿಂದಿನ ತರ್ಕವೇನು ಎಂಬುದು ಮಹಾನ ‘ಜಾತ್ಯತೀತ’ರಿಗೆ ಮಾತ್ರ ಹೊಳೆಯಲು ಸಾಧ್ಯ. ಸಾಚಾರ ವರದಿಯ ಪ್ರಕಾರವೇ ಗುಜರಾತ್ ನ ಮುಸ್ಲಿಂ ರ ಸ್ಥಿತಿ ಹೇಗಿದೆ ಎಂಬುದು ಅಂತರಜಾಲದಲ್ಲಿ ಸ್ವಲ್ಪ ಜಾಲಾಡಿದರೆ ಸಿಗುತ್ತದೆ. ಹತ್ತು ವರ್ಷದ ಹಿಂದಾದರೆ ಸುಳ್ಳಿನ ಪುಂಗಿಯೂದಿ ದಕ್ಕಿಸಿಕೊಳ್ಳಬಹುದಿತ್ತು…ಈಗಲ್ಲ!.

    ಬಿಹಾರದ ರಣವೀರಸೇನೆಯ ಬಗ್ಗೆ ಮಾತನಾಡುವಾಗ, ಎಡಸಿದ್ಧಾಂತ ಬೆಂಬಲಿಗ ನಕ್ಸಲರ ‘ಅಹಿಂಸಾ’ ಕಾರ್ಯಾಚರಣೆಯ ಬಗ್ಗೆಯೂ ಲೇಖಕರು ಚಿಂತಿಸಿದ್ದರೆ ಒಳ್ಳೆಯದಿತ್ತು. ಅಲ್ಲಿಯ ಕ್ರೈಮ್ ರೇಟ್ ನ ಅಂಕಿ-ಅಂಶಗಳು Economic Freedom States of India – 2013″ ರಿಪೋರ್ಟನಲ್ಲಿದೆ. ಸಂಪಾದಿಸಿದವರು ನಿಮ್ಮವರೇ ಆದ Bibek Debroy, Lavlesh Bhandari, Swamynathan S. Anklesaria Aiyar. ಹಿಂಸಾಚಾರ ಯಾರು ಮಾಡಿದರೂ ಅಕ್ಷಮ್ಯವೆ..ಇದನ್ನೂ ಸಹ ‘ಸಿದ್ಧಾಂತ’ ದ ಕನ್ನಡಕ ತೊಟ್ಟು ನೋಡಬೇಕಿಲ್ಲ.

    Reply
  9. praveen shetty

    ಗುಜರಾತ್ ನಲ್ಲಿ ಮೋದಿ ಏನು ಅಭಿವೃದ್ಧಿ ಮಾಡಿದ್ದಾರೆ ಎಂಬುವುದದನ್ನು ಮೋದಿಯ ಅಂಧಾಭಿಮಾನಿಗಳಲ್ಲಿ ತಿಳಿದುಕೊಳ್ಳಬೇಕಾದ ಅವಶ್ಯಕತೆ ಇಲ್ಲ.
    ಆರೋಗ್ಯ – 2013 ಮಾರ್ಚ್ ವರೆಗೆ 808 ಹಂದಿ ಜ್ವರ ಪ್ರಕರಣಗಳು ದಾಖಲು. 149 ಸಾವು . ಇದು ದೇಶದಲ್ಲೇ ಅತೀ ಹೆಚ್ಚು. ಕಳೆದ ಒಂದು ದಶಕಗಳಲ್ಲಿ ಗುಜರಾತ್ ನಲ್ಲಿ ಮಹಿಳೆಯರ ಮಕ್ಕಳ ಪೌಷ್ಠಿಕ ಆಹಾರ ಸೇವನೆಯಮಟ್ಟ ತೀರಾ ಕಡಿಮೆ. 0-6 ಹರೆಯದ ಮಕ್ಕಳ ತೂಕದ ವಿಚಾರಕ್ಕೆ ಬಂದರೆ ಗುಜರಾತ್ ನಲ್ಲಿ ಅರೆವಾಸಿ ಮಕ್ಕಳು ತೂಕ ಕಡಿಮೆ ಇದೆ. ದೇಶದಲ್ಲಿ ಗುಜರಾಥ್ 15 ಸ್ಥಾನದಲ್ಲಿದೆ. ( ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷಾ ವರದಿ)
    ಪ್ರಸೂತಿ ಮರಣ ತಡೆಗಟ್ಟುವಿಕೆ ವಿಚಾರದಲ್ಲಿ ಗುಜರಾತ್ 9 ನೇ ಸ್ಥಾನದಲ್ಲಿದೆ. ಶಿಶು ಮರಣ ತಡೆಗಟ್ಟುವಿಕೆಯಲ್ಲಿ 21 ನೇ ಸ್ಥಾನ. ಸಾಕ್ಷರತೆಯಲ್ಲಿ 17 ನೇ ಸ್ಥಾನ. ಒಟ್ಟು ಸಾಕ್ಷರತೆಯ ಪ್ರಮಾಣ : 79.31 ಶೇ. ಬಡತನ ನಿರ್ಮೂಲನೆ ವಿಚಾರದಲ್ಲಿ 8 ನೇ ಸ್ಥಾನದಲ್ಲಿದೆ.( ಟೈಮ್ ಆಫ್ ಇಂಡಿಯಾ 1 ಜನವರಿ 2013) ವಾರ್ಷಿಕ ಆದಾಯ ವಿಚಾರದಲ್ಲಿ 5 ನೇ ಸ್ಥಾನದಲ್ಲಿದೆ. ( ಪ್ಲಾನಿಂಗ್ ಕಮಿಷನ್ ರಿಪೋರ್ಟ್ ) ರಸ್ತೆಗಳ ಅಭಿವೃದ್ಧಿ ವಿಚಾರದಲ್ಲಿ “ ಗುಜರಾತ್ ರಾಜ್ಯದ 90 ಶೇಖಡಾ ರಸ್ತೆಗಳು ಕೆಟ್ಟು ಹೋಗಿವೆ ಎಂದು ಗುಜರಾತ್ ರಸ್ತೆ ಮತ್ತು ಕಟ್ಟಡ ಇಲಾಖೆಗೆ ನೋಟೀಸ್ ಜಾರಿ ಗೊಳಿಸಿದನ್ಯಾಯಮೂರ್ತಿ ಜೆ.ಬಿ ಪರ್ಡಿವಾಲಾ ವಿಚಾರ ಪ್ರಮುಖವಾಗಿದೆ. ಕಾರ್ಮಿಕರ ಸ್ಥಿತಿಯಂತ್ತೂ ಶೋಚನೀಯಶೇ. 89 ರಷ್ಟು ಪುರುಷರು ಶೇ. 98 ರಷ್ಟು ಮಹಿಳೆಯರು ಅಸಂಘಟಿತ ಕಾರ್ಮಿಕರಾಗಿದ್ದಾರೆ. ಇವರ ಸಂಬಳಾನೂ ಕಡಿಮೆ, ಭದ್ರತೆಯೂ ಇಲ್ಲ, ಕಾರ್ಮಿಕರ ಕಲ್ಯಾಣ ವಿಚಾರದಲ್ಲಿ ಗುಜರಾತ್ 14 ನೇ ಸ್ಥಾನದಲ್ಲಿದೆ ( ಟೈಮ್ಸ್ ರಿಪೋರ್ಟ್ 2013 ಜನವರಿ 1 ಅಹಮ್ಮದಾಬಾದ್ )
    ಹೆಚ್ಚುವರಿ ವಿದ್ಯುತ್ ರಾಜ್ಯದಲ್ಲಿ ಇದೆ ಎಂದು ಬೊಗಳೆ ಬಿಡುತ್ತಿರುವ ಮೋದಿಯ ರಾಜ್ಯದಲ್ಲಿ 11 ಲಕ್ಷ ಮನೆಗಳಿಗೆ ವಿದ್ಯುತ್ ಸಂಪರ್ಕ ಇನ್ನೂ ಬಂದಿಲ್ಲ. 3, 75, 000 ರೈತರು ವಿದ್ಯುತ್ ಸಂಪರ್ಕಕ್ಕಾಗಿ ಕಾಯುತ್ತಿದ್ದಾರೆ. ರೈತರ ಆತ್ಮಹತ್ಯೆ : ಕಳೆದ ಒಂದು ದಶಕದಲ್ಲಿ 600 ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗೆ ದಲಿತ ವಿರೋಧಿಯಾಗಿ, ರೈತ ವಿರೋಧಿಯಾಗಿ ಕೇವಲ ರತ್ನ ಕಂಬಳಿ ಹಾಕಿ ಸಣ್ಣ ಮೊತ್ತಕ್ಕೆ ರೈತರ ಎಕರೆಗಟ್ಟಲೆ ಭೂಮಿಯನ್ನು ಬಂಡವಾಳಶಾಹಿಗಳಿಗೆ ಮಾರಿ ರಾಜ್ಯ ಅಭಿವೃದ್ಧಿಯಾಗಿದೆ ಎಂದು ಬೊಗಳೆ ಬಿಡುತ್ತಿರುವ ಮೋದಿಯ ನಿಜಬಣ್ಣ ತಿಳಿಯಲು ದಯಮಾಡಿ ಆತನ ಅಭಿಮಾನಿಗಳು ಗುಜರಾತ್ ಭೇಟಿ ನೀಡಿ ಪರಿಶೀಲನೆ ಮಾಡಿ. ಹಿಂದೂ ರಾಷ್ಟ್ರ ಮಾಡುವ ಪರಿಕಲ್ಪನೆಯನ್ನು ಹೊತ್ತ ಹಿಟ್ನರ್ ವಾದಿ ಸಂಘಟನೆಯ ಸದಸ್ಯ ತನ್ನ ಹಿಡನ್ ಅಂಜೆಡಾಗಳನ್ನು ಇಟ್ಟುಕೊಂಡು ಹೊರ ಮಾದರಿಯ ದೇಶ ಕಟ್ಟಲು ಹೊರಟಿರುವುದು ಅಪಾಯಕಾರಿ. ( ಸೋರ್ಸ್ : ಮೋದಿ ಮಂಕು ಬೂದಿ ಪುಸ್ತಕ ಸುರೇಶ್ ಭಟ್ ಭಾಕ್ರಬೈಲ್ ) ಇದಷ್ಟೇ ಇಲ್ಲ ಮೋದಿ ಮಂಕು ಬೂದಿಯ ಇನ್ನಷ್ಟು ಅಂಕಿ ಅಂಶಗಳಿವೆ ಚರ್ಚೆ ಮಾಡೋಣ…….. ಮೊದಲು ತಪ್ಪದೇ ಆ ಪುಸ್ತಕ ಓದಿ. ಧನ್ಯವಾದಗಳು

    Reply
    1. ವಿಜಯ್

      [ಾಜ್ಯ ಅಭಿವೃದ್ಧಿಯಾಗಿದೆ ಎಂದು ಬೊಗಳೆ ಬಿಡುತ್ತಿರುವ ಮೋದಿಯ ನಿಜಬಣ್ಣ ತಿಳಿಯಲು ದಯಮಾಡಿ ಆತನ ಅಭಿಮಾನಿಗಳು ಗುಜರಾತ್ ಭೇಟಿ ನೀಡಿ ಪರಿಶೀಲನೆ ಮಾಡಿ.]
      ಪುಕ್ಕಟೆ ಸಲಹೆಗೆ ಧನ್ಯವಾದಗಳು. ನಿಮ್ಮ ಸೋರ್ಸ ಗೃಂಥದ ಲೇಖಕರು ಗುಜರಾತ ಬಗ್ಗೆ ಪುಸ್ತಕ ಬರೆಯುವ ಮೊದಲು ಪೂರ್ತಿ ಗುಜರಾತ್ ಸುತ್ತು ಹೊಡೆದು, ತಿಂಗಳಾರು ವಾಸ್ತವ್ಯ ಹೂಡಿ ಆಮೇಲೆ ಬರೆದರೆ?. ನೀವು ಅದನ್ನೇ ಅಧಿಕೃತ ಮಾಹಿತಿ ಭಂಡಾರ ಅಂದುಕೊಂಡಿದ್ದು ಮತ್ತು ಅದನ್ನು ಓದಿ ಚರ್ಚೆ ಮಾಡೋಣ ಅನ್ನುತ್ತಿರುವುದು ತಮಾಶೆಯಾಗಿದೆ. ಕನಿಷ್ಟ ಪಕ್ಷ ನಿಮ್ಮವರೆ ಬರೆದ Economic Freedom States of India – 2013″ ರಿಪೋರ್ಟನ್ನು ಓದಿ.

      Reply
    2. Ananda Prasad

      ಗುಜರಾತಿನ ಅಭಿವೃದ್ಧಿಯ ನೈಜ ಚಿತ್ರಣದ ಬಗ್ಗೆ ಅಲ್ಲಿಗೆ ಕೆಲಸದ ನಿಮಿತ್ತ ಹೋಗಿ ತಿರುಗಾಡಿದ ಓದುಗರೊಬ್ಬರು ಕರಾವಳಿ ಅಲೆ ಪತ್ರಿಕೆಯಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಓದಿ http://epaper.karavaliale.net/Epaper.aspx?d=4&m=4&y=2014&pg=4#pdf

      Reply
      1. ವಿಜಯ್

        ಆನಂದಪ್ರಸಾದ್..
        ಹೋಗಿ ಹೋಗಿ ಈ ಕರಾವಳಿ ಅಲೆ ಯ ಲಿಂಕ್ ಕೊಡುವುದೆ?. ಒಂದು ಸಲ ಒಬ್ಬ ಮನುಷ್ಯ ತನ್ನ ಸಂಬಂಧಿಕರ ಮನೆಗೆ ಹೋಗಿದ್ದನಂತೆ, ಹೋದಾಗ ಮಧ್ಯಾಹ್ನ ಒಂದು ಗಂಟೆಯಾಗಿತ್ತು. ಇವನು ಹೋದ ದಿವಸವೇ, ಆ ಸಂಬಂಧಿಕರ ಮನೆಯಲ್ಲಿ ಅಕ್ಕಿ ಖಾಲಿಯಾಗಿ ಬಿಟ್ಟಿತ್ತು,,ಅಂಗಡಿಗೆ ಹೋಗಿ ತಂದು, ಆಮೇಲೆ ಅನ್ನಕ್ಕಿಡುವ ಪ್ರಸಂಗ ಬಂತು. ಅದನ್ನು ಗಮನಿಸಿದ ಈ ಮನುಷ್ಯ ವಾಪಸ ಬಂದಮೇಲೆ ತನ್ನ ಮನೆಯವರಿಗೆ ರಿಪೋರ್ಟ ಮಾಡಿದನಂತೆ,,ಆ ಸಂಬಂಧಿಕರ ಪರಿಸ್ಥಿತಿ ಸರಿಯಿಲ್ಲ..ಅನ್ನ ಮಾಡಲು ಅಕ್ಕಿ ಇರಲಿಲ್ಲ ಎಂದು!.. ಕರಾವಳಿ ಅಲೆಯಲ್ಲಿ ಬರೆದ ಮಹಾನುಭಾವರಿಗೆ ತಾವು ಬರೆಯುತ್ತಿರುವುದು ಗುಜರಾತನ ಅಭಿವೃದ್ಧಿ ಬಗ್ಗೆಯೊ ಅಥವಾ ಗುಜರಾತಿ ಜನರ ಬಗ್ಗೆ ತನಗಿರುವ ಅಭಿಪ್ರಾಯವನ್ನೋ ಎನ್ನುವ ಗೊಂದಲವನ್ನು ಮೊದಲು ಪರಿಹರಿಸಿಕೊಳ್ಳುವುದು ಒಳ್ಳೆಯದು!.

        ಇರಲಿ ವಿಷಯಕ್ಕೆ ಬರೋಣ..
        http://www.thehindu.com/opinion/lead/poverty-amid-prosperity/article4147478.ece ಈ ಲೇಖನ ಮತ್ತು ಅಲ್ಲಿರುವ ಪ್ರತಿಕ್ರಿಯೆಗಳನ್ನು ಓದಿ.
        http://timesofindia.indiatimes.com/india/Power-full-Gujarat-gives-24-hour-electricity/articleshow/18786012.cms
        https://www.facebook.com/VoteForChange2014GeneralElection/posts/476971042425581

        ಗುಜರಾತ ಸ್ವರ್ಗವಾಗಿ ಬಿಟ್ಟಿದೆ ಅಂದರೆ ಅದು ಮೂರ್ಖತನವೆ..ಕೇವಲ ಸರಕಾರ ಮಾತ್ರದಿಂದ ಯಾವುದೇ ಪ್ರದೇಶವನ್ನು ಸ್ವರ್ಗ ಮಾಡಲು ಬರುವುದಿಲ್ಲ. ಸರಕಾರ ಮೂಲಭೂತ ಸೌಲಭ್ಯಗಳನ್ನು ಕೊಡುವ ಕೆಲಸ ಮಾಡಬಹುದು ಅಷ್ಟೇ. ಗುಜರಾತ ಕೇವಲ ಐವತ್ತು ಪ್ರತಿಶತ ಪ್ರಗತಿ ಸಾಧಿಸಿದೆ ಅಂದುಕೊಳ್ಳೋಣ…ಆ ಐವತ್ತು ಪ್ರತಿಶತವೇ ಕಣ್ಣಿಗೆ ಕಾಣುವಂತಿದೆ ಅಂದರೆ ಮೊದಲು ಗುಜರಾತ್ ನ ಮೂಲಭೂತ ಸೌಲಭ್ಯಗಳ ಪರಿಸ್ಥಿತಿ ಹೇಗಿತ್ತು ಎಂದು ಊಹಿಸಿಕೊಳ್ಳಬಹುದು. ಹೊಗಳಬೇಕೆಂದೇ ಅತಿಶಯವಾಗಿ ಹೊಗಳದೇ, ಅಜೆಂಡ ಪ್ರೇರಿತರಾಗಿ ತೆಗಳಬೇಕೆಂದೇ ತೆಗಳದೇ..ನಿರ್ಲಿಪ್ತವಾಗಿ ನೋಡಿದರೇ ಗುಜರಾತ ಹೇಳಿಕೊಳ್ಳುವ ಮಟ್ಟಿಗೆ ಸುಧಾರಣೆ ತಂದು ಕೊಂಡಿದೆ ಅನ್ನುವುದು ಗೊತ್ತಾಗುತ್ತದೆ.

        ಈ ಸಲ ನನ್ನ ಮತ ಮೋದಿಗೆ..ಮುಂದೆಂದಾದರೂ ಆಪ್ ನ ನಾಯಕರುಗಳು ತಮ್ಮ ಬಾಲಿಶತನವನ್ನು ಬಿಟ್ಟು ಗಂಭೀರ ರಾಜಕಾರಣ ಮಾಡಲು ಸುರು ಮಾಡಿದಾಗ, ಈ ಎಡ/ನಕ್ಸಲ್ ರ ಕಾಟದಿಂದ ಮುಕ್ತವಾಗಿದೆ ಎನಿಸಿದಾಗ ಸ್ವಿಚ್ ಒವರ್ ಮಾಡುವ ವಿಚಾರ ಮಾಡುವುದು. ಈ ಸಲದ ಚುನಾವಣೆಯಲ್ಲಿ ಸಾಕಷ್ಟು ಒಳ್ಳೆಯ ಕ್ಯಾಂಡಿಡೇಟ್ ಗಳು ಈ ಚುನಾವಣೆಯಲ್ಲಿ ಆಪ್ ನಿಂದ ನಿಂತಿದ್ದಾರೆ ಎನ್ನುವ ವಿಷಯ ಒಪ್ಪುವಂತದ್ದು.

        Reply
        1. Ananda Prasad

          ಆಮ್ ಆದ್ಮಿ ಪಕ್ಷವು ಸದ್ಯದ ಮಟ್ಟಿಗೆ ಭಾರತದಲ್ಲಿ ಇರುವ ರಾಜಕೀಯ ಪಕ್ಷಗಳ ಮಟ್ಟಿಗೆ ಮೇಲ್ಮಟ್ಟದಲ್ಲಿ ನಿಲ್ಲುವ ಅರ್ಹತೆಯನ್ನು ಹೊಂದಿದೆ. ಹೀಗಾಗಿ ನನ್ನ ಮತ ಆಮ್ ಆದ್ಮಿ ಪಕ್ಷಕ್ಕೆ ಅದು ಸೋತರೂ ಪರವಾಗಿಲ್ಲ, ನೈತಿಕ ಹಾಗೂ ಸಾತ್ವಿಕ ರಾಜಕೀಯಕ್ಕೆ ಮತ ಕೊಟ್ಟಿದ್ದೇನೆ ಎಂಬ ಆತ್ಮತೃಪ್ತಿ ಇದರಿಂದ ನನಗೆ ಸಿಗುತ್ತದೆ. ಆಮ್ ಆದ್ಮಿ ಪಕ್ಷದ ಪ್ರಣಾಳಿಕೆ ಉತ್ತಮವಾಗಿದ್ದು ಭಾರತದ ಸಂವಿಧಾನದ ಆಶಯಗಳನ್ನು ಬಹುತೇಕ ತನ್ನ ಪ್ರಣಾಳಿಕೆಯಲ್ಲಿ ಅಳವಡಿಸಿಕೊಂಡಿದೆ. ಬೇರಾವುದೇ ಪಕ್ಷ ಇಷ್ಟು ಉತ್ತಮವಾದ ಪ್ರಣಾಳಿಕೆ ಹೊಂದಿಲ್ಲ. ಭಾರತದ ಸಂವಿಧಾನ ತನ್ನ ಮುನ್ನುಡಿಯಲ್ಲಿ ಸಂಕ್ಷಿಪ್ತವಾಗಿ ಹೀಗೆ ಹೇಳುತ್ತದೆ – “ WE, THE PEOPLE OF INDIA, having solemnly resolved to constitute India into a SOVEREIGN SOCIALIST SECULAR DEMOCRATIC REPUBLIC and to secure to all its citizens:

          JUSTICE, social, economic and political;

          LIBERTY of thought, expression, belief, faith and worship;

          EQUALITY of status and of opportunity;

          and to promote among them all

          FRATERNITY assuring the dignity of the individual and the unity and integrity of the Nation;

          IN OUR CONSTITUENT ASSEMBLY this twenty-sixth day of November, 1949,DO HEREBY ADOPT, ENACT AND GIVE TO OURSELVES THIS CONSTITUTION.
          ” ಇದು ಆಮ್ ಆದ್ಮಿ ಪಕ್ಷದ ಪ್ರಣಾಳಿಕೆಯಲ್ಲಿ ಸ್ಪಷ್ಟವಾಗಿ ಕಂಡುಬರುತ್ತಿದೆ. ಭಾರತದಲ್ಲಿ ಮೂಲಭೂತ ಆಡಳಿತಾತ್ಮಕ, ನ್ಯಾಯಾಂಗ, ಚುನಾವಣಾ ಸುಧಾರಣೆಗಳನ್ನು ತರುವ ಗುರಿ ಹೊಂದಿರುವ ಆಮ್ ಆದ್ಮಿ ಪಕ್ಷ ಭಾರತದಲ್ಲಿ ಬೆಳೆಯಬೇಕಾಗಿದೆ.

          ಗುಜರಾತಿನ ಅಭಿವೃದ್ಧಿ ಅಸಮತೋಲಿತ ಅಭಿವೃದ್ಧಿ. ಇದು ಒಂದು ರೀತಿ ಹೊಟ್ಟೆ ಮಾತ್ರ ಬೆಳೆದು ಮೆದುಳು ಬೆಳವಣಿಗೆಯಾಗದೆ ಇರುವ ರೀತಿಯ ಅಭಿವೃದ್ಧಿ. ಕೆಲವೇ ಅಂಗಗಳು ಮಾತ್ರ ಬೆಳೆದು ಉಳಿದ ಅಂಗಗಳು ಬೆಳವಣಿಗೆಯಾಗದಿದ್ದರೆ ಆರೋಗ್ಯಕರ ವ್ಯಕ್ತಿಯ ಬೆಳವಣಿಗೆ ಸಾಧ್ಯವಿಲ್ಲ. ಅದೇ ರೀತಿ ಸರ್ವರ ಬೆಳವಣಿಗೆಯ ಕನಸು ಇಲ್ಲದೆ ಕೇವಲ ಬಂಡವಾಳಗಾರರ ಅಭಿವೃದ್ಧಿಯಾದರೆ ಅದು ಕ್ಯಾನ್ಸರ್ ರೀತಿ ಇದೇ ಸಮಾಜದ ಹಿತಕ್ಕೆ ಮಾರಕ. ಕ್ಯಾನ್ಸರಿನಲ್ಲಿ ಅದು ತಗಲಿದ ಅಂಗ ಮಿತಿ ಮೀರಿ ಬೆಳೆಯುತ್ತದೆ. ಅದೇ ರೀತಿ ಗುಜರಾತಿನಲ್ಲಿ ಬಂಡವಾಳಶಾಹಿಯ ಅಭಿವೃದ್ಧಿಗೆ ಮೋದಿ ಒತ್ತು ನೀಡಿರುವುದು ಎದ್ದು ಕಾಣುತ್ತದೆ. ಮೋದಿಯ ರಾಜಕೀಯವೂ ಕೂಡ ಪಾರದರ್ಶಕವಾಗಿಲ್ಲ. ಚುನಾವಣೆ ಪ್ರಚಾರಕ್ಕೆ ಮೋದಿಗೆ ಸಾವಿರಾರು ಕೋಟಿ ರೂಪಾಯಿ ಎಲ್ಲಿಂದ ಬರುತ್ತದೆ ಎಂಬುದಕ್ಕೆ ಉತ್ತರ ಇಲ್ಲ. ಇದು ಒಳ್ಳೆಯ ರಾಜಕೀಯ ಮಾಡುವ ವಿಧಾನವೂ ಅಲ್ಲ. ಮೋದಿಯ ಅಪಾರದರ್ಶಕ ರಾಜಕೀಯಕ್ಕಿಂಥ ಕೇಜ್ರಿವಾಲರ ಪಾರದರ್ಶಕ, ಸಾತ್ವಿಕ ರಾಜಕೀಯ ಇಷ್ಟವಾಗುತ್ತದೆ.

          Reply
          1. ವಿಜಯ್

            [ಆಮ್ ಆದ್ಮಿ ಪಕ್ಷವು ಸದ್ಯದ ಮಟ್ಟಿಗೆ ಭಾರತದಲ್ಲಿ ಇರುವ ರಾಜಕೀಯ ಪಕ್ಷಗಳ ಮಟ್ಟಿಗೆ ಮೇಲ್ಮಟ್ಟದಲ್ಲಿ ನಿಲ್ಲುವ ಅರ್ಹತೆಯನ್ನು ಹೊಂದಿದೆ. ]
            ಆಮ್ ಆದ್ಮಿ ಪಕ್ಷ ಈಗಷ್ಟೇ ಹುಟ್ಟಿದ್ದು. ಈ ಲೋಕಸಭಾ ಚುನಾವಣೆ ಆಪ್ ಎದುರಿಸುತ್ತಿರುವ ಎರಡನೆಯ ನೇರ ಚುನಾವಣೆ. ಒಂದು ಪಕ್ಷದ ಚುನಾಯಿತ ಪ್ರತಿನಿಧಿಗಳ ನಿಜವಾದ ಬಣ್ಣ ತಿಳಿಯುವುದು ಅವರು ಆಯ್ಕೆಯಾದ ಮೇಲೆ. ದಿಲ್ಲಿಯಲ್ಲಿ ಆಪ್ ನ ಸರಕಾರದ ಮತ್ತು ಪ್ರತಿನಿಧಿಗಳು ಸರಕಾರ ನಡೆಸಿದ ರೀತಿಯನ್ನು ನಾವೆಲ್ಲ ನೋಡಿದ್ದೇವೆ. ಸಾವಧಾನವಾಗಿ ಮತ್ತು ಸಧೃಢವಾಗಿ ಅಧಿಕಾರ ಚಲಾಯಿಸಿ, ಗಂಭೀರತೆಯಿಂದ ಸರಕಾರ ನಡೆಸಿದ್ದಿದ್ದರೆ..ಅದು ಒಂದು ಯಶಸ್ವಿ ಮೊದಲ ಮೆಟ್ಟಿಲಾಗಿ ಬದಲಾಗುವ ಎಲ್ಲ ಸಾಧ್ಯತೆಯೂ ಇತ್ತು. ಆಪ್ ನ ಸರಕಾರವನ್ನು ತಾವಾಗಿಯೇ ಕೆಡವಿ ಹೆಸರು ಕೆಡಿಸಿಕೊಳ್ಳುವ ಸಾಹಸಕ್ಕೆ ಕಾಂಗೈ, ಬಿಜೆಪಿ ಇಳಿಯುತ್ತಿರಲಿಲ್ಲ. ಕಾಂಗೈಯಂತೂ ಆಪ್ ನ್ನು ಬೆಂಬಲಿಸಬೇಕಾದ ತೀರ ಅನಿವಾರ್ಯತೆಯಲ್ಲಿ ಸಿಲುಕಿತ್ತು. ಅಂತಹ ಹೊತ್ತಿನಲ್ಲಿ ‘ಉಳಿದೆಲ್ಲ ಪಕ್ಷಗಳಿಂದ ತಾನು ಬೇರೆ ಅಂದುಕೊಂಡ ಆಪ್ ಸುರುಮಾಡಿದ್ದು ಬಾಲಿಶವೆನಿಸುವ, ಗಂಭೀರತೆ ಇಲ್ಲದ ಅಪ್ರಬುದ್ಧ ಉಢಾಪೆ ರಾಜಕೀಯ. ತಾನು ಕೊಟ್ಟ ಭರವಸೆಗಳು (ವಿದ್ಯುತ್ ದರ ಇಳಿಕೆ, ನೀರು ಪೂರೈಕೆ) ಈಡೇರಿಸಲು ಸುಲಭವಿದಲ್ಲಿ ಸಾಧ್ಯವಿಲ್ಲದ್ದು, ಈ ಸಮಸ್ಯೆಗೆ ತಾವು ತಿಳಿದಂತೆ ತಟ್ಟನೆ ಪರಿಹಾರ ಸಾಧ್ಯವಿಲ್ಲ ಎಂದು ತಿಳಿದ ಮೇಲೆ..ಹೇಗಾದರೂ ಈ ಜವಾಬ್ದಾರಿಯಿಂದ ನುಣುಚಿಕೊಂಡು ಓಡಬೇಕು ಎಂಬ ತಂತ್ರ ತಯಾರಾಯಿತು. ಆಗ ಬಂದದ್ದೆ ತರಾತುರಿಯ ಜನಲೋಕಪಾಲ ಬಿಲ್ ಮಂಡನೆ. ಹಾಗೆ ನೋಡಿದರೆ ಇದು ಆ ಕ್ಷಣದ ಅವಶ್ಯಕತೆಯೂ ಆಗಿರಲಿಲ್ಲ. ಇದನ್ನು ಆಪ್ ಆಡಳಿತದಲ್ಲಿ ಸಾಲ್ಕಾರು ತಿಂಗಳುಗಳು ಕಳೆದ ಮೇಲೆ ತರಬಹುದಾಗಿತ್ತು. ಆಪ್ ನವರು ಮಾಡುತ್ತಿರುವ ತರಾತುರಿ ನೋಡಿದರೆ ಚುನಾಯಿತ ಸರಕಾರದ ಅವಧಿ ಐದು ವರ್ಷದ್ದಲ್ಲ..ನೂರು ದಿನದ್ದು ಎಂಬತ್ತಿತ್ತು. ತಮಗೆ ಬೆಂಬಲ ಕೊಟ್ಟ ಪಕ್ಷವನ್ನೇ (ಅನಿವಾರ್ಯತೆಯಿಂದ ಕೊಟ್ಟಿದ್ದು ಹೌದಾದರೂ) ಸುಮ್ಮ-ಸುಮ್ಮನೆ ಕೆಣಕುವುದು, ತಮ್ಮನ್ನು ಬಿಟ್ಟು ಉಳಿದವರೆಲ್ಲರೂ ಕಳ್ಳರು ಎನ್ನುವ ಅತಿಶಯ ನಾಟಕ ಪ್ರಾರಂಭವಾಯಿತು. ಕೆಣಕುವುದರ ಮುಖ್ಯ ಉದ್ದೇಶ ತಮ್ಮ ಸರಕಾರ ಬಿದ್ದು ಈ ಜವಾಬ್ದಾರಿಯಿಂದ ಮುಕ್ತಿ ಸಿಗಬೇಕು ಎಂಬುದೇ ಆಗಿತ್ತು ಎಂಬುದು ಈ ಪ್ರಹಸನ ನೋಡಿದ ಯಾರಿಗಾದರೂ ವೇದ್ಯವಾಗುತ್ತದೆ.

            ನನಗನಿಸುವಂತೆ..ಆಪ್ ನ ಮೊದಲ ತಪ್ಪು ದಿಲ್ಲಿಯಲ್ಲಿ ಜನ ತನಗೆ ಕೊಟ್ಟ ಅವಕಾಶವನ್ನು ಉಪಯೋಗಿಸಿಕೊಳ್ಳದೇ, ತನಗೆ ಮತ ನೀಡಿದ ಜನರಿಗೆ ನಿರಾಸೆ ಮಾಡಿದ್ದು. ತನ್ಮೂಲಕ ದೀರ್ಘಕಾಲೀನ ರಾಜಕೀಯಕ್ಕೆ ಅಡಿಪಾಯವಾಗಬಹುದಾಗಿದ್ದ, ಅತ್ಯುತ್ತಮ ಅವಕಾಶವನ್ನು ತನ್ನ ಕೈಯಾರೆ ಹಾಳುಮಾಡಿಕೊಂಡಿದ್ದು. ಆಪ್ ದಿಲ್ಲಿಯಲ್ಲಿ ಮಾದರಿ ಸರಕಾರ ನಡೆಸಿ ( ಬಾಹ್ಯ ಬೆಂಬಲ ಇದ್ದಿದ್ದರಿಂದ, ಸ್ವಲ್ಪ ಚಾಣಾಕ್ಷತೆಯಿಂದಲೇ ನಡೆಸಿ) , ಸದೃಢ ಪಕ್ಷವಾಗಿ, ಸ್ವಲ್ಪ ಕಾಲದ ನಂತರ ರಾಷ್ಟ್ರ ರಾಜಕಾರಣಕ್ಕಿಳಿದಿದ್ದರೆ, ಅದಕ್ಕೊಂದು ಅರ್ಥವಿರುತ್ತಿತ್ತು. ಇಂತಹ ಸಂದರ್ಭದಲ್ಲಿ ಲೋಕಸಭಾ ಚುನಾವಣೆಗೆ ಇಳಿದಿರುವ ಆಪ್ ನ ನಡೆ ಅಂಗಳಕ್ಕೆ ಹಾರಲು ಆಗದವನು, ಮಂಗಳಕ್ಕೆ ಹಾರಲು ಯೋಜನೆ ಹಾಕಿಕೊಂಡಂತೆ.

            [ಇದು ಆಮ್ ಆದ್ಮಿ ಪಕ್ಷದ ಪ್ರಣಾಳಿಕೆಯಲ್ಲಿ ಸ್ಪಷ್ಟವಾಗಿ ಕಂಡುಬರುತ್ತಿದೆ. ಭಾರತದಲ್ಲಿ ಮೂಲಭೂತ ಆಡಳಿತಾತ್ಮಕ, ನ್ಯಾಯಾಂಗ, ಚುನಾವಣಾ ಸುಧಾರಣೆಗಳನ್ನು ತರುವ ಗುರಿ ಹೊಂದಿರುವ ಆಮ್ ಆದ್ಮಿ ಪಕ್ಷ ಭಾರತದಲ್ಲಿ ಬೆಳೆಯಬೇಕಾಗಿದೆ.]
            ಮುಂಬರುವ ದಿನಗಳಲ್ಲಿ ತನ್ನ ತಪ್ಪುಗಳನ್ನು ತಿದ್ದಿಕೊಂಡು ಅದೊಂದು ಉತ್ತಮ ಪರ್ಯಾಯ ರಾಜಕೀಯ ಪಕ್ಷವಾದರೆ ದೇಶಕ್ಕೆ ಒಳ್ಳೆಯದೆ. ಆದರೆ ಈಗಿನ ಮಟ್ಟಿಗೆ ನೀವು ಹೇಳಿದ “ಆಮ್ ಆದ್ಮಿ ಪಕ್ಷವು ಸದ್ಯದ ಮಟ್ಟಿಗೆ ಭಾರತದಲ್ಲಿ ಇರುವ ರಾಜಕೀಯ ಪಕ್ಷಗಳ ಮಟ್ಟಿಗೆ ಮೇಲ್ಮಟ್ಟದಲ್ಲಿ ನಿಲ್ಲುವ ಅರ್ಹತೆಯನ್ನು ಹೊಂದಿದೆ” ಎಂಬ ವಾಕ್ಯ ಕೇವಲ ನಿಧಿ ಸ್ವೀಕಾರದ ಅಂಕಿ-ಅಂಶಗಳನ್ನು ವೆಬ್ ಸೈಟಿನಲ್ಲಿ ಪ್ರಕಟಿಸುವ ಪಾರದರ್ಶಕ ನೆಲೆಯಿಂದ ಬಿಟ್ಟರೆ, ಬೇರೆ ಯಾವ ನೆಲೆಯಿಂದಲೂ ಸಿದ್ಧವಾಗಿಲ್ಲ. ಆದ್ದರಿಂದ ಈಗಿನ ಎಲೆಕ್ಷನ್ ನಲ್ಲಿ ಅಭಿವೃದ್ಧಿಯಲ್ಲಿ ತಕ್ಕಮಟ್ಟಿಗಾದರೂ ಪ್ರಮಾಣಿತ ಸಾಧನೆಗಳಿರುವ, ಸ್ವಯಂ ಬ್ರಷ್ಟನಲ್ಲದ, ದೇಶದ ಬಗ್ಗೆ ಚಿಂತಿಸಬಲ್ಲ ಮೋದಿ ನನ್ನ ಆಯ್ಕೆ.

            ಒಮ್ಮಿಂದೊಮ್ಮೆಲೇ ಎಲ್ಲ ವಿಭಾಗಗಳು ಅಭಿವೃದ್ದಿಯಾಗಬೇಕು, ಸ್ವರ್ಗವಾಗಬೇಕು ಎಂಬ ಕಲ್ಪನೆ ಸಾಧುವಲ್ಲ. ಸರ್ವತೋಮುಖ, ಸುಸ್ಥಿರ ಅಭಿವೃದ್ದಿ ಒಂದು ದೀರ್ಘಕಾಲೀನ ನಡೆ. ಒಂದು ಪ್ರದೇಶದ ಅಭಿವೃದ್ಧಿಗೆ ಸರಕಾರ ಎಷ್ಟು ಕಾರಣವೋ, ಅಷ್ಟೇ ಜನ ಕೂಡ ಕಾರಣ. ಮೊದಲು ಹೊಟ್ಟೆ ತುಂಬಿ, ಹೊಟ್ಟೆಯ ಚಿಂತೆ ತಪ್ಪಿದರೆ, ಆಮೇಲೆ ಮಿದುಳು ಹೆಚ್ಚು ಕಾರ್ಯಶೀಲವಾಗುತ್ತದೆ..ದೇಹದ ಉಳಿದ ಭಾಗಗಳನ್ನು ಆರೋಗ್ಯಕರವಾಗಿ ಬೆಳೆಸುವತ್ತ ಯೋಚನೆ ಮಾಡುತ್ತದೆ. ಗುಜರಾತಿನಲ್ಲಿ ಕೇವಲ ದೊಡ್ಡ ಉದ್ದಿಮೆಗಳು ಬೆಳೆದಿವೆಯೆ? ಕೃಷಿ ಕ್ಷೇತ್ರ ಬೆಳೆಯಲಿಲ್ಲವೆ? ಇದನ್ನು ನೋಡಿ..
            [A revolution in agriculture has converted around 15 lakh hectare of additional lands in largely semi-arid Gujarat fit for farming, thereby establishing the State on the top in systematic and scientific development of the farm sector.] Source : http://www.thehindubusinessline.com/industry-and-economy/article2221709.ece
            ಗ್ರಾಮೀಣ ಪ್ರದೇಶದಲ್ಲಿ ಅಭಿವೃದ್ದಿ ಆಗಿಲ್ದವೆ? ಇದನ್ನು ನೋಡಿ..
            [The decline in rural poverty, at the rate of 2.5 per cent per annum in the last five years in Gujarat is better than the national average]
            Source : http://www.thehindu.com/opinion/lead/poverty-amid-prosperity/article4147478.ece

            [ಅದೇ ರೀತಿ ಗುಜರಾತಿನಲ್ಲಿ ಬಂಡವಾಳಶಾಹಿಯ ಅಭಿವೃದ್ಧಿಗೆ ಮೋದಿ ಒತ್ತು ನೀಡಿರುವುದು ಎದ್ದು ಕಾಣುತ್ತದೆ.]
            ಬಂಡವಾಳಶಾಹಿಗಳ ಅಭಿವೃದ್ಧಿ ಎಂದರೆ ಏನು? ಸರಕಾರ ಅವರಿಗೆ ಉದ್ದಿಮೆ ಸ್ಥಾಪನೆ ಮಾಡಲು ರಿಯಾಯತಿ ದರದಲ್ಲಿ ಜಮೀನನ್ನು, ಅವಶ್ಯಕ ಸೌಲಭ್ಯಗಳನ್ನು ಒದಗಿಸಿ ಕೊಟ್ಟಿತು ಎಂದೆ? ಹಾಗಾದರೆ ಉಳಿದ ರಾಜ್ಯ ಸರಕಾರಗಳು ಇದನ್ನು ಮಾಡುವುದಿಲ್ಲವೆ? ಆ ಪ್ರದೇಶದಲ್ಲಿ ಸ್ಥಾಪಿತ ಉದ್ಯಮಗಳಿಂದ ಸ್ಥಳೀಯರಿಗೆ ಗರೀಷ್ಟ ಲಾಭ ಅಂದರೆ ಅವರು ಬೆಳೆದ ಉತ್ಪನ್ನಗಳಿಗೆ ಮಾರುಕಟ್ಟೆ, ಸ್ಥಳೀಯರಿಗೆ ಉದ್ಯೋಗಾವಕಾಶ ದೊರಕಿದರೆ ತಪ್ಪೇನು? ಇನ್ನು ಯಾರಿಗೊ ಲಾಭ ಮಾಡಿ ಕೊಡಲು ಹಸಿರಾಗಿದ್ದ, ನೀರಾವರಿ ಜಮೀನುಗಳನ್ನು ( ಹಿಂದೆ ಬಳ್ಳಾರಿಯ ಸಿರಿವಾರದಲ್ಲಿ ವಿಮಾನ ನಿಲ್ದಾಣ ಮಾಡಲು ಹೊರಟ ಪ್ರಹಸನ ನೆನೆಯಬಹುದು) ಓದಗಿಸಿದರೆ ಅದು ತಪ್ಪು.

            [ಮೋದಿಯ ರಾಜಕೀಯವೂ ಕೂಡ ಪಾರದರ್ಶಕವಾಗಿಲ್ಲ. ಚುನಾವಣೆ ಪ್ರಚಾರಕ್ಕೆ ಮೋದಿಗೆ ಸಾವಿರಾರು ಕೋಟಿ ರೂಪಾಯಿ ಎಲ್ಲಿಂದ ಬರುತ್ತದೆ ಎಂಬುದಕ್ಕೆ ಉತ್ತರ ಇಲ್ಲ. ಇದು ಒಳ್ಳೆಯ ರಾಜಕೀಯ ಮಾಡುವ ವಿಧಾನವೂ ಅಲ್ಲ.]
            ಎಲ್ಲ ದೊಡ್ಡ ರಾಷ್ಟ್ರೀಯ ಪಕ್ಷಗಳ ಕಥಯೂ ಇದೆ. ಅಧಿಕಾರ, ಸರಕಾರ ಮಾಡಬೇಕೆಂಬ ಆಸೆಯಿದ್ದಲ್ಲಿ ರಾಜಿ ಇರುತ್ತದೆ. ಅಧಿಕಾರ ನಡೆಸುವ ಹೊಣೆಯಿಂದ ನುಣುಚಿಕೊಂಡು, ಹೊರಗಿದ್ದು ಆದರ್ಶ ಹೇಳುವವರು ಸರಳವಾಗಿರಬಹುದು..ಆದರೆ ವಾಸ್ತವದಲ್ಲಿ ಈ ಸರಳರು ದೇಶಕ್ಕೆ ದುಬಾರಿಯಾಗಿರುತ್ತಾರೆ.

            [ಮೋದಿಯ ಅಪಾರದರ್ಶಕ ರಾಜಕೀಯಕ್ಕಿಂಥ ಕೇಜ್ರಿವಾಲರ ಪಾರದರ್ಶಕ, ಸಾತ್ವಿಕ ರಾಜಕೀಯ ಇಷ್ಟವಾಗುತ್ತದೆ.]
            ಇನ್ನೊಂದಿಷ್ಟು ಸಮಯ ಕಾದು ನೊಡೋಣ .ನೀವು ಕೆಜ್ರಿವಾಲ್ ನಲ್ಲಿ ಕಂಡ ಗುಣಗಳು ಎಷ್ಟು ಗಟ್ಟಿ..ಎಷ್ಟು ಜೊಳ್ಳು ಎಂದು ತಿಳಿಯಲು 🙂

  10. Nawaj Beary

    The Modi phenomenon and the resurrection of the ‘Fuhrer Principle’ in India.

    The fuhrer principle came to dominate Nazi Germany after Adolf Hitler was chancellor on January 30th 1933.it is a very simple concept .Rudolf Hess probably best summarised the Fuhrer principle when he said in a public speech’ Hitler is Germany and Germany is Hitler, whatever he does is necessary, whatever he does is successful Every one in Nazi Germany required to accept that Hitler had all the solutions to Germany’s problems and whatever he said had to be right.

    The propaganda machine went in to overdrive to portray Hitler the leader who put his country before anything else, hence why he was not married until the very end as he was ‘married ‘to Germany.

    Such was the effectiveness of Goebbels propaganda machine, that a great many people in Nazi Germany never even knew that Hitler had a girlfriend /mistress until after the end of World war two in Europe.

    Sounds familiar doesn’t it?- such is the case and scenario in present India and
    Modi. Unfortunately ,those who forget the past are doomed to repeat it.
    Come on wake up-Indians

    Reply
  11. Nagshetty Shetkar

    ಅಸುರ ಪ್ರವೃತ್ತಿಯ ನಮೋ ಎಂಬ ರಾಜಕಾರಣಿಗೆ ಏಕೆ ವೋಟು ಹಾಕಕೂಡದು ಅಂತ ಪ್ರೊ. ಡಿ. ಎಸ್. ನಾಗಭೂಷಣ ನೇತೃತ್ವದಲ್ಲಿ ಕನ್ನಡ ಹಲವಾರು ಅತ್ಯುತ್ತಮ ಮನಸ್ಸುಗಳು ‘ಹೊಸ ಮನುಷ್ಯ’ ಪತ್ರಿಕೆಯ ಎಪ್ರಿಲ್ ಸಂಚಿಕೆಯಲ್ಲಿ ತಮ್ಮ ವಿಚಾರಗಳನ್ನು ಮಂಡಿಸಿದ್ದಾರೆ. ನಮೋ ನಮೋ ಎಂದು ಜಪ ಮಾಡುತ್ತಿರುವವರೆಲ್ಲರೂ ‘ಹೊಸ ಮನುಷ್ಯ’ ಪತ್ರಿಕೆಯನ್ನೋದಿ ಭೂತ ಬಿಡಿಸಿಕೊಳ್ಳತಕ್ಕದ್ದು.

    ರಾಜೀವ ತಾರಾನಾಥ: “ಬಹಳ ಜಾಣ, ಹಿಟ್ಲರನಂತೆ!”
    ಗಿರೀಶ್ ಕಾಸರವಳ್ಳಿ: “ತಾನು ಮತ್ತು ತಾನು ಮಾತ್ರ ಎಂಬ ಧೋರಣೆ”
    ಪ್ರಸನ್ನ: “ಅಪಾಯಕಾರಿಯಾದ ಶ್ರೇಷ್ಠತೆಯ ವ್ಯಸನ”
    ಜೀಕೆ ಗೋವಿಂದರಾವ್: “ಸಂಸದ್ ಭವನದೊಳಗೆ ಘೋದ್ಸೆಗಳು ಬಂದಾರು!”
    ಎಚ್ಚೆಸ್ ರಾಘವೇಂದ್ರ ರಾವ್: “ಮನುಷ್ಯನನ್ನು ಪ್ರಾಣಿ ನೆಲೆಗೆ ಇಳಿಸುವ ಪ್ರಯತ್ನ”
    ಸವಿತಾ ನಾಗಭೂಷಣ: “ಕರಗದ ಕಲ್ಲುಬಂಡೆ”
    ಪ್ರೊ. ಡಿ ಎಸ್ ನಾಗಭೂಷಣ: “ಏನೋ ಒಂದು ವಿಕ್ಷಿಪ್ತತೆ ಇದೆ”

    Reply
  12. Salam Bava

    ಶ್ರೀ ನಾಗಶೆಟ್ತಿ ಮತ್ತು ಇಲ್ಲಿ ಹೇಳಿದ ಸಹ್ರದಯ,ಮಾನವೀಯ ಗುಣದ ,ಅದೆಲ್ಲದಕ್ಕಿ೦ತ ಮಿಗಿಲಾಗಿ ಯಾವುದೇ ತರಹದ ಹಿ೦ಸೆ,ಶೋಷಣೆ,ದಬ್ಬಾಳಿಕೆಯನ್ನು ವಿರೋದಿಸುವ ಪ್ಯರುಷ
    ತೋರಿಸುವವರಿ೦ದಲೇ ಇ೦ದು ಸಮಾಜದಲ್ಲಿ ಒಳಿತಿನ ಸೆಳವು ಇದೆ. ಆದರೆ ಒ೦ದೇ ಬೇಶರ- ಹೆಚ್ಚಿನ ಸಹ್ರದಯೀ ಬಹು ಸ೦ಖ್ಯಾತರ silence ಮೋದಿ ಪೀಳಿಗೆಯನ್ನು ಬೆಳೆಸುತ್ತದೆ.ನನ್ನ ಕೆಲವು ಮಿತ್ರರು(ಮುಸ್ಲಿ೦) ಅತೀ ಗ೦ಭೀರವಾದ ಭೀತಿ ಪೂರ್ವಕವಾದ ಚರ್ಚೆಯಲ್ಲಿ ತೊಡಗಿದನ್ನು ಕ೦ಡೆ. ಅವರಲ್ಲಿ ಒ೦ದು ಹತಾಶೆಯ ಭಾವನೆ ಮನೆ ಮಾಡಿದೆ,ಮತ್ತು ಅವರು ಹೇಳುವುದು-ನಮ್ಮ generation ಹೇಗಾದರೂ ಇಲ್ಲಿಯೆ ನಿ೦ತು ಪರಿಸ್ಥಿತಿಯನ್ನು ಎದುರಿಸುವುದು,ಮತ್ತು
    ಅಮೇರಿಕಾ, ಯೊರೋಪಿನಲ್ಲಿ ವಿದ್ಯಾಬ್ಯಾಶ ಮಾಡುವ ಮಕ್ಕಳು ಅಲ್ಲಿಯೇ ನೆಲಸಲಿ. ಮತ್ತುಇ
    ಸಾದ್ಯಾವಾದಷ್ಟು ಮು೦ದಿನ ಪೀಳಿಗೆ ದುಬೆ,ಅಮೇರಿಕಾ,ಯುರೋಪ್ ಅಥವಾ ಕ್ಕೇ ವಲಸೆ
    ಹೋಗಲು ತಯಾರು ಈಗಿನಿ೦ದಲೇ ಮಾಡಲಿ ಎ೦ದು. ಈ category ಯವರು ಕೇವಲ ೧% ಸಹಾ
    ಇರಲಿಕ್ಕಿಲ್ಲ,ಆದರೆ ಅದು ನನ್ನ ಭಾರತದ ತಾನೇ! ಲೆಬನಾನೆನಲ್ಲಿ civil war ಸುರುವಾದ ಅನ೦ತರ
    ೨/೩ ಲೆಬನಾನಿಗಳು ,ಅದರಲ್ಲೂ christian ಮತ್ತು cream of layer ರು ವಲಸೆ ಹೋಗಿ ಆಗಿದೆ.
    ಈ ಪರಿಸ್ಥ್ತಿ ಭಾರತೀಯ ಮುಸ್ಲಿ೦ಗಳಿಗೆ ಬರದಿರಲಿ ಎ೦ದು ಸಹ್ರದಯೀ ಕೋರಿಕೆ.

    Reply
  13. Ananda Prasad

    @ ವಿಜಯ್ – ಮೋದಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಹೆಚ್ಚಿನ ಬದಲಾವಣೆ ಆದೀತು ಎಂದು ನನಗೆ ಅನಿಸುತ್ತಿಲ್ಲ ಏಕೆಂದರೆ ಮೋದಿ ಸ್ವಯಂ ಭ್ರಷ್ಟನಲ್ಲದಿದ್ದರೂ ಹಲವು ಭ್ರಷ್ಟರು ಅವರ ಪಕ್ಷದಲ್ಲಿ ಇದ್ದಾರೆ. (ಇದೇ ರೀತಿ ಮನಮೋಹನ್ ಸಿಂಗ್ ಕೂಡ ಸ್ವಯಂ ಭ್ರಷ್ಟನಲ್ಲ ಅದರೂ ಅವರ ಸರ್ಕಾರದಲ್ಲಿ ಭಾರೀ ಭ್ರಷ್ಟಾಚಾರಗಳು ನಡೆದವು.) ಮೋದಿಯೂ ಭ್ರಷ್ಟಾಚಾರದ ಬಗ್ಗೆ ಗಂಭೀರ ನಿಲುವು ಹೊಂದಿದವರಲ್ಲ ಏಕೆಂದರೆ ಅವರು ಗುಜರಾತಿನಲ್ಲಿ ಲೋಕಾಯುಕ್ತ ಹುದ್ಧೆಯನ್ನು ಹಲವು ವರ್ಷ ಖಾಲಿ ಬಿಟ್ಟಿದ್ದರು ಮತ್ತು ಕೊನೆಗೆ ಲೋಕಾಯುಕ್ತ ವ್ಯವಸ್ಥೆಯನ್ನು ದುರ್ಬಲಗೊಳಿಸುವ ತಿದ್ದುಪಡಿಯನ್ನು ಮಾಡಿ ಲೋಕಾಯುಕ್ತರ ನೇಮಕದಲ್ಲಿ ಆಡಳಿತ ಪಕ್ಷಕ್ಕೆ ಬೇಕಾದ ವ್ಯಕ್ತಿಯನ್ನು ನೇಮಿಸುವ ಅನುಕೂಲ ಮಾಡಿಕೊಂಡಿದ್ದಾರೆ. ಗುಜರಾತಿನಲ್ಲಿ ಈ ರೀತಿ ಮಾಡಿದ ವ್ಯಕ್ತಿ ಕೇಂದ್ರದಲ್ಲಿ ಒಳ್ಳೆಯ ಲೋಕಪಾಲ್ ವ್ಯವಸ್ಥೆ ರೂಪಿಸುವ , ಸಿಬಿಐ ಸಂಸ್ಥೆಯನ್ನು ಸ್ವತಂತ್ರ ಸಂಸ್ಥೆಯಾಗಿ ಮಾಡುವ ಯಾವುದೇ ಸಂಭಾವ್ಯತೆ ಕಾಣುವುದಿಲ್ಲ. ಮೋದಿಯ ಗುಜರಾತ್ ಮಂತ್ರಿ ಮಂಡಲದಲ್ಲಿಯೂ ಕೆಲವು ಭ್ರಷ್ಟ ಸಚಿವರಿದ್ದಾರೆ. ಇವರನ್ನು ಅವರು ಮಂತ್ರಿಮಂಡಲದಿಂದ ಕೈಬಿಟ್ಟಿಲ್ಲ. ಮೋದಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ದೇಶವು ಸಾಮಾಜಿಕವಾಗಿ ಹಿಂದಕ್ಕೆ ಚಲಿಸುವ, ಪುರೋಹಿತಶಾಹಿ ವ್ಯವಸ್ಥೆ ದೇಶದಲ್ಲಿ ಇನ್ನಷ್ಟು ಬಲಗೊಳ್ಳಬಹುದೇ ಹೊರತು ಉಳಿದಂತೆ ಯಥಾಸ್ಥಿತಿ ಮುಂದುವರಿಯಬಹುದು. ಭಾರತವು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜಾರಿಗೊಳಿಸುವ ಮೊದಲು ಇದ್ದ ಊಳಿಗಮಾನ್ಯ ಸ್ವರೂಪದ ಸರ್ವಾಧಿಕಾರಿ ಸಾಮ್ರಾಜ್ಯಶಾಹಿ ವ್ಯವಸ್ಥೆ ಭಾರತದಲ್ಲಿ ಮತ್ತೆ ತಲೆಯೆತ್ತುವ ಸಂಭವ ಕಂಡುಬರುತ್ತದೆ. ಮೋದಿಯ ಈಗಿನ ಚುನಾವಣಾ ಪ್ರಚಾರ ವೈಖರಿ ಕೂಡ ದೊಡ್ಡ ಸಾಮ್ರಾಟ ತಾನೆಂಬ ಅಹಂಕಾರದಿಂದ ತುಂಬಿ ತುಳುಕುತ್ತಿದ್ದು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಮುಂಬರುವ ದಿನಗಳಲ್ಲಿ ಇನ್ನಷ್ಟು ದುರ್ಬಲವಾಗಿ ಹಿಂದೂ ಸಾಮ್ರಾಜ್ಯಶಾಹಿ ಆಡಳಿತಕ್ಕೆ ಭಾರತ ಬಲಿಯಾಗಬಹುದು.

    ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷಕ್ಕೆ ಸ್ಪಷ್ಟ ಜನಾದೇಶ ಇರಲಿಲ್ಲವಾದ ಕಾರಣ ಅವರು ಜವಾಬ್ದಾರಿಯಿಂದ ನುಣುಚಿಕೊಂಡಿದ್ದಾರೆ ಎಂಬುದು ಅಪಪ್ರಚಾರವಷ್ಟೇ. ಹಾಗೆ ನೋಡಿದರೆ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿದ್ದದ್ದು ಬಿಜೆಪಿ ಏಕೆಂದರೆ ಅವರು ದೆಹಲಿಯಲ್ಲಿ ದೊಡ್ಡ ಪಕ್ಷವಾಗಿ ಬಂದದ್ದು ಅವರೇ. ಪ್ರಥಮ ಜವಾಬ್ದಾರಿ ನಿರ್ವಹಿಸಬೇಕಾಗಿದ್ದದ್ದು ಅವರೇ. ಅವರು ತಾವು ಜವಾಬ್ದಾರಿಯಿಂದ ನುಣುಚಿಕೊಂಡು ಕಡಿಮೆ ಸ್ಥಾನ ಗಳಿಸಿದ ಬೇರೆ ಪಕ್ಷದ ಮೇಲೆ ಅಪಪ್ರಚಾರ ಮಾಡುವುದು ಸೂಕ್ತವಲ್ಲ. ಆಮ್ ಆದ್ಮಿ ಪಕ್ಷವನ್ನು ಬೆಳೆಸಿದರೆ ಭವಿಷ್ಯದಲ್ಲಿ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಬಲಗೊಳ್ಳಲಿದೆ. ಅದನ್ನು ಬೆಳೆಸುವ ಪ್ರಬುದ್ಧತೆಯನ್ನು ಜನತೆ ಬೆಳೆಸಿಕೊಳ್ಳದಿದ್ದರೆ ಮುಂಬರುವ ದಿನಗಳಲ್ಲಿ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಇನ್ನಷ್ಟು ದುರ್ಬಲಗೊಳ್ಳಲಿದ್ದು ಹಿಂದೆ ಇದ್ದ ರಾಜರ ಆಳ್ವಿಕೆಯ ರೀತಿಯ ನಿರಂಕುಶಪ್ರಭುತ್ವ ಭಾರತದಲ್ಲಿ ರೂಪುಗೊಳ್ಳಬಹುದು.

    Reply
    1. Nagshetty Shetkar

      ಆಮ್ ಆದ್ಮಿ ಪಕ್ಷ ಭಾರತ ರಾಜಕೀಯ ಭವಿಷ್ಯದ ಹೊಸ ಭಾಷ್ಯ ಹಾಡಲಿದೆ. ನೋಟ್ ಡೌನ್ ಮೈ ವರ್ಡ್ಸ್.

      Reply
  14. ವಿಜಯ್

    [ಏಕೆಂದರೆ ಮೋದಿ ಸ್ವಯಂ ಭ್ರಷ್ಟನಲ್ಲದಿದ್ದರೂ ಹಲವು ಭ್ರಷ್ಟರು ಅವರ ಪಕ್ಷದಲ್ಲಿ ಇದ್ದಾರೆ. ]
    ಒಪ್ಪೋಣ. ಹೋದ ಸಲದ ವಿಧಾನಸಭೆಯ ಚುನಾವಣೆಯಲ್ಲಿ ಬಿಜೆಪಿಯ ಬೃಷ್ಟಾಚಾರವೇ ಮುಖ್ಯ ವಿಷಯವಾಗಿ ಬಿಜೆಪಿಯ ಒಲವಿದ್ದ ನಮ್ಮಂತವರು ಕೂಡ ಕರ್ನಾಟಕ ಬಿಜೆಪಿಯ ವಿರುದ್ಧವಾಗಿ ಮತ ಹಾಕಿ, ಅದನ್ನು ಸೋಲಿಸಿ ಪಾಥ ಕಲಿಸಿದೆವು.. ಆದರೆ ಆಮೇಲೆ ಆಗಿದ್ದೇನು? ಬಿಜೆಪಿ ಇದ್ದಾಗ ‘ಬೃಷ್ಟಾಚಾರ, ಬೃಷ್ಟಾಚಾರ’ ಎಂದು ದಿನವಿಡಿ ಬೊಬ್ಬೆ ಹೊಡೆಯುತ್ತಿದ್ದ ಜನ ಈಗ ಎಲ್ಲಿದ್ದಾರೆ? ಸಂಪಾಗಿ ಕಾಂಗ್ರೆಸ್ ಮೊಗಸಾಲೆಯಲ್ಲಿ ಜಾಗ ಸಂಪಾದಿಸಿಕೊಂಡಿದ್ದಾರೆ. ಆ ಪಕ್ಷದ ಪ್ರಚಾರಕ್ಕೂ ಇಳಿದಿದ್ದಾರೆ. ಇವರಿಗೆ ಬೃಷ್ಟಾಚಾರ ದೇಶವ ತಿನ್ನುವ ಮುಖ್ಯ ಸಮಸ್ಯೆ ಎನಿಸಿದ್ದಲ್ಲಿ, ಈಗಿವರು ಆಪ್ ಗೆ ಬೆಂಬಲ ಕೊಡಬೇಕಿತ್ತು ತಾನೆ?? ಹೊರಗಡೆ ಇವರಿಗೆ ತಿರುಗಾಡಲು ಆಗುವುದಿಲ್ಲ ಎಂದುಕೊಳ್ಳೋಣ..ಬೆಂಗಳೂರೇ ಸಾಕು…ಇವರಿಗೆ ಬೆಂಬಲ ಕೊಡಲು ಗೋಪಾಲಕೃಷ್ಣ, ನೀನಾ ನಾಯಕ, ರವಿಕೃಷ್ಣಾರೆಡ್ಡಿಯಂತಕ ಅಭ್ಯರ್ಥಿಗಳು ಇರಲಿಲ್ಲವೆ?..ಏಕೆ ಈ ಆಷಾಡಭೂತಿತನ? ಇದರಲ್ಲಿ ಒಬ್ಬರಂತೂ ಆಪ್ ಚಳುವಳಿಯನ್ನು ಬೆಂಬಲಿಸುತ್ತಾರಂತೆ..ಆಪ್ ಪಕ್ಷವನ್ಣಲ್ಲವಂತೆ!..ಆದರೆ ಆಪ್ ಚಳುವಳಿಗೆ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕಂತೆ!!.

    [ಮೋದಿಯೂ ಭ್ರಷ್ಟಾಚಾರದ ಬಗ್ಗೆ ಗಂಭೀರ ನಿಲುವು ಹೊಂದಿದವರಲ್ಲ ಏಕೆಂದರೆ ಅವರು ಗುಜರಾತಿನಲ್ಲಿ ಲೋಕಾಯುಕ್ತ ಹುದ್ಧೆಯನ್ನು ಹಲವು ವರ್ಷ ಖಾಲಿ ಬಿಟ್ಟಿದ್ದರು ]
    ಮೋದಿ ಆಡಳಿತದ ಅವಧಿಯಲ್ಲಿ ಮಿಡಿಯಾಗಳನ್ನು, ತನ್ನ ಹಿಡಿತವಿರುವ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಕೇಂದ್ರ ಕೊಟ್ಟ ತೊಂದರೆ, ಮಾಡಿದ ಅಪಪ್ರಚಾರ ಯಾರಿಗೂ ಗೊತ್ತಿಲ್ಲದ್ದೇನಲ್ಲ. ಅಂತದರಲ್ಲಿ ಕೇಂದ್ರ ಹೇರಿದ ರಾಜ್ಯಪಾಲರು ಮತ್ತು ಈ ರಾಜ್ಯಪಾಲರು ಹೇರಿದ ಲೋಕಾಯುಕ್ತ ಸೇರಿಕೊಂಡರೆ..ಕೇಳುವುದೇ ಬೇಡ..ಸರಕಾರ ನಡೆಸಿದಂತೆಯೆ!. ಹಾಗೆ ನೋಡಿದರೇ, ಮೋದಿ ಆಡಳಿತ ಇರುವ ತನಕ ಗುಜರಾತಿಗೆ ಲೋಕಾಯುಕ್ತದ ಅವಶ್ಯಕತೆ ಇಲ್ಲವೇ ಇಲ್ಲ..ಕೆಲವು ಎಡಪಂತೀಯ ‘ಪತ್ರಕರ್ತ’ರು ಊಟ ನಿದ್ದೆ ಬಿಟ್ಟು ದಿನದ ೨೪ ತಾಸು ಆ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಮೋದಿ ಸರಕಾರದ ಬೃಷ್ಟಾಚಾರದ ಮಾಹಿತಿ ಇದ್ದರಂತೂ ಈ ಜನ ಲೋಕಾಯುಕ್ತಕ್ಕಿಂತ ಸಮರ್ಥ ಕಾರ್ಯ ನಿರ್ವಹಿಸುತ್ತಾರೆ. ಆದರೆ ವಿಪರ್ಯಾಸವೆಂದರೆ, ಇವರು ಅಪಾದಿಸಿದವರೆಲ್ಲರಿಗೂ ಸುಪ್ರಿಂ ಕೋರ್ಟ ಕ್ಲೀನ್ ಚಿಟ್ ಕೊಡುತ್ತಿದೆ!.

    [ಮೋದಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ದೇಶವು ಸಾಮಾಜಿಕವಾಗಿ ಹಿಂದಕ್ಕೆ ಚಲಿಸುವ, ಪುರೋಹಿತಶಾಹಿ ವ್ಯವಸ್ಥೆ ದೇಶದಲ್ಲಿ ಇನ್ನಷ್ಟು ಬಲಗೊಳ್ಳಬಹುದೇ ಹೊರತು ಉಳಿದಂತೆ ಯಥಾಸ್ಥಿತಿ ಮುಂದುವರಿಯಬಹುದು. ಭಾರತವು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜಾರಿಗೊಳಿಸುವ ಮೊದಲು ಇದ್ದ ಊಳಿಗಮಾನ್ಯ ಸ್ವರೂಪದ ಸರ್ವಾಧಿಕಾರಿ ಸಾಮ್ರಾಜ್ಯಶಾಹಿ ವ್ಯವಸ್ಥೆ ಭಾರತದಲ್ಲಿ ಮತ್ತೆ ತಲೆಯೆತ್ತುವ ಸಂಭವ ಕಂಡುಬರುತ್ತದೆ. ]
    ಇದು ಶುದ್ಧ ಹೈಪೊಥಿಸಿಸ್.. ಇವಕ್ಕೆ ಆಧಾರವೇನಾದರೂ ಇದೆಯೆ? ಇಂತಹ ಊಹೆಗಳನ್ನು, ಕಲ್ಪನೆಗಳನ್ನು ನಾವು ಯಾವುದೇ ಪಕ್ಷ/ಸಂಘಟನೆ/ವ್ಯಕ್ತಿಯ ಮೇಲೆ ಹೇರಬಹುದು.

    [ಮೋದಿಯ ಈಗಿನ ಚುನಾವಣಾ ಪ್ರಚಾರ ವೈಖರಿ ಕೂಡ ದೊಡ್ಡ ಸಾಮ್ರಾಟ ತಾನೆಂಬ ಅಹಂಕಾರದಿಂದ ತುಂಬಿ ತುಳುಕುತ್ತಿದ್ದು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಮುಂಬರುವ ದಿನಗಳಲ್ಲಿ ಇನ್ನಷ್ಟು ದುರ್ಬಲವಾಗಿ ಹಿಂದೂ ಸಾಮ್ರಾಜ್ಯಶಾಹಿ ಆಡಳಿತಕ್ಕೆ ಭಾರತ ಬಲಿಯಾಗಬಹುದು.]
    ಇತ್ತ ಕಡೆ ನಿಂತ ನನಗೆ ಕೇಜ್ರಿವಾಲ್ ಕೇವಲ ಆಟ ಕೆಡಿಸಲು ಬಂದವನಂತೆ, ಈ ಕೆಲಸಕ್ಕಾಗಿ ಯಾರಿಂದಲೋ ಸುಫಾರಿ ತೆಗೆದುಕೊಂಡವನಂತೆ, ತನ್ನಂತಹ ಪ್ರಾಮಾಣಿಕರು ಜಗತ್ತಿನಲ್ಲಿ ಇನ್ನಾರೂ ಇಲ್ಲ ಎನ್ನುವವನಂತೆ, ಚಂಚಲ ಮನಸ್ಥಿತಿಯ ಸರದಾರನಂತೆ ಕಾಣುತ್ತಾನೆ. ಸಿಂಪಲ್ ..ನೀವು ಎಲ್ಲಿ ನಿಂತಿದ್ದೀರಿ ಎನ್ನುವುದರ ಮೇಲೆ ನಿಮ್ಮ ನಿಲುವು. ಇದರಲ್ಲಿ ತಪ್ಪೇನಿಲ್ಲ.

    [ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷಕ್ಕೆ ಸ್ಪಷ್ಟ ಜನಾದೇಶ ಇರಲಿಲ್ಲವಾದ ಕಾರಣ ಅವರು ಜವಾಬ್ದಾರಿಯಿಂದ ನುಣುಚಿಕೊಂಡಿದ್ದಾರೆ ಎಂಬುದು ಅಪಪ್ರಚಾರವಷ್ಟೇ. ಹಾಗೆ ನೋಡಿದರೆ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿದ್ದದ್ದು ಬಿಜೆಪಿ ಏಕೆಂದರೆ ಅವರು ದೆಹಲಿಯಲ್ಲಿ ದೊಡ್ಡ ಪಕ್ಷವಾಗಿ ಬಂದದ್ದು ಅವರೇ. ಪ್ರಥಮ ಜವಾಬ್ದಾರಿ ನಿರ್ವಹಿಸಬೇಕಾಗಿದ್ದದ್ದು ಅವರೇ. ಅವರು ತಾವು ಜವಾಬ್ದಾರಿಯಿಂದ ನುಣುಚಿಕೊಂಡು ಕಡಿಮೆ ಸ್ಥಾನ ಗಳಿಸಿದ ಬೇರೆ ಪಕ್ಷದ ಮೇಲೆ ಅಪಪ್ರಚಾರ ಮಾಡುವುದು ಸೂಕ್ತವಲ್ಲ.]
    ಸರಳ ಬಹುಮತಕ್ಕೆ ಬಿಜೆಪಿಯವರಿಗೆ ಬೆಂಬಲ ಕೊಡುವವರು ಯಾರಿದ್ದರು? ಆಪ್ ಕೊಡುತ್ತಿತ್ತೆ?. ಸರಕಾರ ಮಾಡುವ ಅವಕಾಶ ನಿರಾಯಾಸವಾಗಿ ಸಿಕ್ಕಿದ್ದು ಆಪ್ ಗೆ. ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ಅದನ್ನು ಅನವಶ್ಯಕವಾಗಿ ಕೆಡವುವ ಗೋಜಿಗೆ ಬಿಜೆಪಿ, ಕಾಂಗೈ ಎರಡೂ ಹೋಗುತ್ತಿರಲಿಲ್ಲ. ಅವು ಆಪ್ ನ್ನು ಹಾಗೆಯೇ ಅಧಿಕಾರದಲ್ಲಿ ಮುಂದುವರೆಯಲು ಬಿಟ್ಟು, ಆಪ್ ತಾನು ಕೊಟ್ಟ ಭರವಸೆಗಳನ್ನು ಈಡೇರಿಸಲಾಗದೇ ಮತದಾರರ ಮುಂದೆ ತಾನಾಗಿಯೇ ತಲೆ ತಗ್ಗಿಸುವಂತೆ ಮಾಡುತ್ತಿದ್ದವು. ಇದು ಗೊತ್ತಾಗಿಯೇ ಆಪ್ ನುಣುಚಿಕೊಂಡಿದ್ದು.

    [ಆಮ್ ಆದ್ಮಿ ಪಕ್ಷವನ್ನು ಬೆಳೆಸಿದರೆ ಭವಿಷ್ಯದಲ್ಲಿ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಬಲಗೊಳ್ಳಲಿದೆ. ಅದನ್ನು ಬೆಳೆಸುವ ಪ್ರಬುದ್ಧತೆಯನ್ನು ಜನತೆ ಬೆಳೆಸಿಕೊಳ್ಳದಿದ್ದರೆ ಮುಂಬರುವ ದಿನಗಳಲ್ಲಿ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಇನ್ನಷ್ಟು ದುರ್ಬಲಗೊಳ್ಳಲಿದ್ದು ಹಿಂದೆ ಇದ್ದ ರಾಜರ ಆಳ್ವಿಕೆಯ ರೀತಿಯ ನಿರಂಕುಶಪ್ರಭುತ್ವ ಭಾರತದಲ್ಲಿ ರೂಪುಗೊಳ್ಳಬಹುದು.]
    ಆಮ್ ಆದ್ಮಿ ಪಕ್ಷ ರಾಜಕೀಯವಾಗಿ ಗಂಭೀರತೆಯನ್ನು , ಪ್ರಭುದ್ಧತೆಯನ್ನು ಬೆಳೆಸಿಕೊಂಡರೆ ಮಾತ್ರ ಅದಕ್ಕೆ ಭವಿಷ್ಯ ,,ಆದರೂ ಒಂದು ಒಳ್ಳೆಯ ಪರ್ಯಾಯವಾಗಿ ಆಮ್ ಆದ್ಮಿ ಪಕ್ಷ ಬೆಳೆಯಲಿ ಮತದಾರನಿಗೆ ಯಾವತ್ತೂ ಎರಡು ಉತ್ತಮ ಆಯ್ಕೆಗಳು ದೊರೆತರೆ ಒಳ್ಳೆಯದೆ.

    Reply
    1. Nagshetty Shetkar

      “ಇವರಿಗೆ ಬೆಂಬಲ ಕೊಡಲು ಗೋಪಾಲಕೃಷ್ಣ, ನೀನಾ ನಾಯಕ, ರವಿಕೃಷ್ಣಾರೆಡ್ಡಿಯಂತಕ ಅಭ್ಯರ್ಥಿಗಳು ಇರಲಿಲ್ಲವೆ?”

      ಉಳಿದವರ ವಿಚಾರ ಬಿಡಿ ಮಿ. ವಿಜಯ್. ತಾವು ಆಮ್ ಆದ್ಮಿ ಪಕ್ಷದ ಈ ಅಭ್ಯರ್ಥಿಗಳಿಗೆ ವೋಟು ಹಾಕಿ. ಬ್ರಾಹ್ಮಣ್ಯದ ಪಾರಮ್ಯವೇ ಪರಮ ಗುರಿಯಾಗಿರುವ ಕೋಮುವಾದಿ ಪಕ್ಷಕ್ಕೆ ಏಕೆ ವೋಟು ಹಾಕುತ್ತೀರಿ?

      Reply
      1. ವಿಜಯ್

        @ನಾಗಶೆಟ್ಟಿ ಶೆಟ್ಕರ್..

        ೧) ಸಲಹೆಗೆ ಧನ್ಯವಾದ. [ಬ್ರಾಹ್ಮಣ್ಯದ ಪಾರಮ್ಯವೇ ಪರಮ ಗುರಿಯಾಗಿರುವ ಕೋಮುವಾದಿ ಪಕ್ಷಕ್ಕೆ]. ನಿಮ್ಮ ಈ ಸವಕಲು ಸಿದ್ಧಾಂತಕ್ಕೆ ನಾನು ಗಿರಾಕಿಯಲ್ಲ. ನನಗೆ ಸ್ವಂತ ಮಿದುಳಿದೆ.
        ೨) ಇಲ್ಲಿ ನಾನು ಮತ್ತು ಆನಂದಪ್ರಸಾದ..ಯಾರನ್ನು ಬೆಂಬಲಿಸಬೇಕು ಎಂಬ ಬಗ್ಗೆ ನಿರ್ದಿಷ್ಟ ನಿರ್ಧಾರಕ್ಕೆ ಬಂದಿದ್ದೇವೆ. ನಮ್ಮ ಆಯ್ಜೆ ಬೇರೆ-ಬೇರೆಯಾದರೂ ಕನಿಷ್ಟ ಆ ಮಟ್ಟಿಗಾದರೂ ಪ್ರಾಮಾಣಿಕವಾಗಿದ್ದೇವೆ.
        ೩) ಇಲ್ಲಿ ಬರೆದಿರುವುದು,,ಬಾಯಲ್ಲಿ ಆಮ್ ಆದ್ಮಿ ಯನ್ನು ಹೊಗಳುತ್ತ, ಬೃಷ್ಟಾಚಾರದ ವಿರುದ್ಧ ಭಾಷಣ ಬಿಗಿಯುತ್ತ ಒಳಗಿಂದೊಳಗೆ ಅಥವಾ ನಂಬಲಾಗದ ಪಿಳ್ಳೆ ನೆಪ ಹೇಳಿ ಕಾಂಗ್ರೆಸ್ ಪರವಾಗಿ ಕೆಲಸ ಮಾಡುವ ಹಿಪೊಕ್ರೈಟ್ ಗಳ ಬಗ್ಗೆ.

        ಈಗ ವಿಷಯ ಕ್ಲೀಯರ್ ಅಂದುಕೊಳ್ಳುತ್ತೇನೆ .

        Reply
        1. Nagshetty Shetkar

          ಕೋಮುವಾದಿ ಪಕ್ಷಕ್ಕೆ ಪರೋಕ್ಷವಾಗಿಯಾದರೂ ಬೆಂಬಲ ನೀಡುವುದು ಹಾಗೂ ನರಹಂತಕತನವನ್ನು ಅಭಿವೃದ್ಧಿಯ ಕಾರಣಕ್ಕೆ ಸಮರ್ಥಿಸಿಕೊಳ್ಳುವುದು ಶುದ್ಧ ಅನೈತಿಕ ಮಿ. ವಿಜಯ್. ತಾನು ಅನೈತಿಕವಾದ ಕೆಲಸ ಮಾಡುವುದು ಜೊತೆಗೆ ಮಿಕ್ಕವರ ಹಿಪಾಕ್ರಸಿ ಬಗ್ಗೆ ಲೆಕ್ಚರ್ ಕೊಡುವುದು – ಇದೂ ಸಹ ಹಿಪಾಕ್ರಸಿ ಮಿ. ವಿಜಯ್.

          Reply
          1. ವಿಜಯ್

            @ನಾಗಶೆಟ್ಟಿ ಶೆಟ್ಕರ್..
            ಬಹುಶ: ನಾನು ಹೇಳಿದ್ದು ನಿಮಗೆ ಅರ್ಥವೇ ಆಗುವುದಿಲ್ಲವೆನಿಸುತ್ತದೆ!. ನಿಮ್ಮ ಎಡಬಿಡಂಗಿ ಕನ್ನಡಕದ ಅವಶ್ಯಕತೆ ನನಗಿಲ್ಲ..ನಾನು ನನ್ನ ಈ ಬಾರಿಯ ಆಯ್ಕೆಯನ್ನು ಸ್ಫಷ್ಟ ಮಾಡಿಕೊಂಡಿದ್ದೇನೆ ದೇಶವನ್ನು ಕಾಡುತ್ತಿರುವ ಕೋಮುವಾದಿಗಳು/ಜಾತಿವಾದಿಗಳು ಯಾರು ಎಂಬುದು ನನಗೆ ಸ್ಫಷ್ಟವಿದೆ. ಮೋದಿ ಮತ್ತು ಬಿಜೆಪಿಯ ಗುಮ್ಮನನ್ನು ತೋರಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವವರ ಬಗ್ಗೆ ಮತ್ತು ಅವರ ಹಿಪಾಕ್ರಸಿಯ ಬಗ್ಗೆ ಅರಿವಿದೆ. ಹೊಟ್ಟೆಪಾಡಿಗಾಗಿ ಕಾಂಗೈ ಚಾವಡಿಯಲ್ಲಿ ಕುಳಿತು “ಆಮ್ ಆದ್ಮಿ ಪಕ್ಷ ಭಾರತ ರಾಜಕೀಯ ಭವಿಷ್ಯದ ಹೊಸ ಭಾಷ್ಯ ಹಾಡಲಿದೆ. ನೋಟ್ ಡೌನ್ ಮೈ ವರ್ಡ್ಸ್.” ಎನ್ನುವವರ ಬಗ್ಗೆ ನನಗೆ ಕನಿಕರವಿದೆ.

Leave a Reply

Your email address will not be published. Required fields are marked *