Monthly Archives: April 2014

ಹಳ್ಳಿಗಳ ಒಡನಾಟ ಮತ್ತು ಗ್ರಹಿಕೆಯೇ ಬರವಣಿಗೆಯ ಜೀವದ್ರವ್ಯ


– ಡಾ.ಎಸ್.ಬಿ. ಜೋಗುರ


ಕೆ.ಎನ್.ಪಣಿಕ್ಕರ್ ಎನ್ನುವ ಸಂಸ್ಕೃತಿ ಚಿಂತಕರು ಭಾರತೀಯ ಸಮಾಜ ಮೂರು ಪ್ರಮುಖ ಸಂಗತಿಗಳನ್ನು ಆಧರಿಸಿ ನಿಂತಿದೆ ಎಂದಿರುವರು ಒಂದನೆಯದು ಜಾತಿ ಪದ್ಧತಿ, ಎರಡನೆಯದು ಗ್ರಾಮಗಳು, ಮೂರನೇಯದು ಅವಿಭಕ್ತ ಕುಟುಂಬ. ಸದ್ಯದ ಸಂದರ್ಭದಲ್ಲಿಯೂ ಅವಿಭಕ್ತ ಕುಟುಂಬವನ್ನು ಹೊರತು ಪಡಿಸಿದರೆ ಮಿಕ್ಕೆರಡು ಸಂಗತಿಗಳಾದ ಜಾತಿ ಮತ್ತು ಗ್ರಾಮಗಳು ಈಗಲೂ ನಿರ್ಣಾಯಕವೇ.. ನೆಮ್ಮಲ್ಲರ ಬೇರುಗಳು ಬಹುತೇಕವಾಗಿ ಗ್ರಾಮ ಮೂಲವೇ ಆಗಿರುವದರಿಂದ ನಮ್ಮ ಸಾಂಸ್ಕೃತಿಕ ಬದುಕಿನ ವಿವಿಧ ಸಂದರ್ಭಗಳಲ್ಲಿ ಆ ಅಸ್ಮಿತೆ ಅನಾವರಣಗೊಳ್ಳುವ ಪ್ರಕ್ರಮವೊಂದು ಇದ್ದೇ ಇದೆ. ರಾಜಕಪೂರನ ಶ್ರೀ ೪೨೦ ಸಿನೇಮಾ ಹಾಡಲ್ಲಿ ಬರುವ ಮೇರಾ ಜೂಥಾ ಹೈ ಜಪಾನಿ, naxalite24fo4ಪಥಲೂನ್ ಇಂಗ್ಲಿಷಥಾನಿ…ಫ಼ಿರ್ ಭೀ ದಿಲ್ ಹೈ ಹಿಂದುಸ್ಥಾನಿ ಎನ್ನುವ ಹಾಡಿನ ತಾತ್ಪರ್ಯದ ಹಾಗೆಯೇ ನಮ್ಮ ಬದುಕು ಗ್ರಾಮೀಣ ಸಂಸ್ಕೃತಿಯಿಂದ ಬಿಡಿಸಲಾಗದಂತಿರುತ್ತದೆ. ಇಂದು ನಮ್ಮನ್ನು ಆವರಿಸಿಕೊಂಡಿಕೊಂಡಿರುವ ನಗರಗಳು ಮತ್ತು ಅಲ್ಲಿನ ಥಳುಕು ಬಳುಕಿನ ಜೀವನ ಗ್ರಾಮ ಸಮೂಹ ಎನ್ನುವ ತೊಟ್ಟಿಲಲ್ಲಿ ಜೋಗುಳ ಕೇಳುತ್ತಲೇ ರೂಪ ಗೊಂಡಿರುವಂಥವುಗಳು.

ನಾನು ಹುಟ್ಟಿ ಬೆಳೆದ ಬಿಜಾಪುರ ಜಿಲ್ಲೆಯ ಸಿಂದಗಿ ನನ್ನ ಬಾಲ್ಯದಲ್ಲಿ ಒಂದು ದೊಡ್ಡ ಹಳ್ಳಿಯಂತಿತ್ತು. ಇದು ಕೇವಲ ನನ್ನ ಪಾಲಿನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ತಾಣ ಮಾತ್ರವಾಗಿರದೇ ಆಗಾಗ ಶಾಲೆ ತಪ್ಪಿಸಿ ಅಂಡಲೆಯುವ ನೆಲವೂ ಆಗಿತ್ತು. ಮನೆಯಲ್ಲಿ ಅಪ್ಪ- ಅವ್ವ ಹೇಳಿಕೊಟ್ಟ ಮೌಲ್ಯಗಳಿಗಿಂತಲೂ, ಶಾಲೆಯಲ್ಲಿ ಮೇಷ್ಟರು ಹೇಳಿಕೊಟ್ಟದ್ದಕ್ಕಿಂತಲೂ ಅಗಾಧವಾದುದನ್ನು ನನಗೆ ಈ ಊರು ಕಲಿಸಿಕೊಟ್ಟಿದೆ. ಹಾಗೆಯೇ ಇದರ ಸಹವಾಸದಲ್ಲಿರುವ ನೂರಾರು ಹಳ್ಳಿಗಳಲ್ಲಿ ಹತ್ತಾರು ಊರುಗಳೊಂದಿಗೆ ಮತ್ತೆ ಮತ್ತೆ ನಾನು ಒಡನಾಡಿ ಬೆಳೆದ ಕಾರಣ, ನನ್ನ ಬಾಲ್ಯದ ಬುನಾದಿಯಲ್ಲಿ ಚೀಪುಗಲ್ಲುಗಳಂತೆ ಅವು ಕೆಲಸ ಮಾಡಿರುವುದಿದೆ. ಕಟ್ಟಡ ಎಷ್ಟೇ ದೊಡ್ಡದಾಗಿದ್ದರೂ ಈ ಚೀಪುಗಲ್ಲುಗಳ ಪಾತ್ರ ನಗಣ್ಯವಂತೂ ಅಲ್ಲ. ನನಗೆ ತಿಳುವಳಿಕೆ ಬಂದ ನಂತರ ನಾನು ದಿಟ್ಟಿಸಿದ್ದು ನನ್ನ ಆ ವಿಶಾಲ ಮನೆಯನ್ನು. ಅದು ನಮ್ಮ ಅಜ್ಜ ಕಟ್ಟಿದ್ದು. ಭವ್ಯವಾದ ಅರಮನೆಯಂಥಿರುವ ಆ ಮನೆಯಲ್ಲಿ ಆಗ ನಾಲ್ಕು ಸಂಸಾರಗಳು. ನಮ್ಮ ಅಪ್ಪ ಮೂರನೇಯವರು. ಅವರಿಗೆ ನಾನು ಐದನೇಯ ಸಂತಾನ. ಬರೊಬ್ಬರಿ ಲೆಕ್ಕ ಒಪ್ಪಿಸುವಂತೆ ಮೂರು ಗಂಡು ಮೂರು ಹೆಣ್ಣು ಮಕ್ಕಳಿಗೆ ಜನುಮ ನೀಡಿದ ಜನುಮದಾತ. ಮಿಕ್ಕಂತೆ ನಮ್ಮ ಚಿಕ್ಕಪ್ಪ.. ದೊಡ್ಡಪ್ಪ ಅವರಿಗೂ ಹೀಗೆ ಐದೈದು..ಆರಾರು ಮಕ್ಕಳು. ಹೆಚ್ಚೂ ಕಡಿಮೆ ಮನೆ ತುಂಬ ಮಕ್ಕಳು. ಇಂಥಾ ಭವ್ಯ ಮನೆಯನ್ನು ಕಟ್ಟಿದ್ದು ಕರಿ ಕಲ್ಲಿನಲ್ಲಿ. ಮನೆಗೆ ಬರುವವರೆಲ್ಲಾ ಅದರ ಗೋಡೆಯ ಗಾತ್ರ, ಕಂಬಗಳ ಕೆತ್ತನೆ, ತೊಲೆ ಬಾಗಿಲು ಅದರ ಮೇಲೆ ಎರಡೂ ಬದಿ ಇರುವ ಕುದುರೆಯ ಮುಖ, ತೊಲೆಗೆ ಸಾಲಾಗಿ ಬಡಿದ ಹಿತ್ತಾಳೆಯ ಹೂವುಗಳು, ಮಧ್ಯದಲ್ಲಿ ಗಣಪತಿಯ ಕೆತ್ತನೆ ಕೆಳಗಿನ ಹೊಸ್ತಲಿನ ಮಧ್ಯಭಾಗದಲ್ಲಿ ಆಮೆಯ ಚಿತ್ರ ಹೀಗೆ ಇಡೀ ಮನೆಯೇ ಒಂದು ರೀತಿಯಲ್ಲಿ ಕಲಾತ್ಮಕವಾಗಿತ್ತು. ಒಕ್ಕಲುತನದ ಕುಟುಂಬವಾಗಿದ್ದರಿಂದ ಒಳಗೆ ಪ್ರವೇಶಿಸುತ್ತಿರುವಂತೆ ಹುಲ್ಲು, ಜೋಳದ ಕಣಿಕೆ, ಉರುವಲು ಕಟ್ಟಿಗೆ, ಅಲ್ಲಲ್ಲಿ ಗೂಟಗಳಿಗೆ ನೇತು ಹಾಕಿದ ಹಳಗಿನ ಹಗ್ಗಗಳು, ಕೊಟ್ಟಿಗೆಯಲ್ಲಿ ನಿಲ್ಲಿಸಿದ ಬಲರಾಮು, ಎಡೆ ಹೊಡೆಯುವ ದಿಂಡು, ಕುಂಟಿ ದಿಂಡು, ನೊಗ, ಲೊಗ್ಗಾಣಿ, ಬಾರುಕೋಲು, ವತಗೀಲ, ಜತ್ತಗಿ, ಮಗಡ, ದಾಂಡು, ದನಗಳ ಬಾಯಿಗೆ ಹಾಕುವ ಚಿಕ್ಕಾ, ದಾವಣಿಯಲ್ಲಿ ಕಲ್ಲಿನಲ್ಲೇ ಮಾಡಿದ ಗೂಟಗಳು, rural-cricket-indiaಕಟ್ಟಿದ ಸರಪಳಿಗಳು ಹೀಗೆ ಮನೆಯೊಳಗಡೆ ಕೃಷಿ ಪರಿಕರಗಳೇ ತುಂಬಿರುತ್ತಿದ್ದವು. ಪಡಸಾಲೆಯಲ್ಲಿ ಬೀಜಕ್ಕೆ ಹಿಡಿದ ಬದನೆಕಾಯಿ, ಹೀರೆಕಾಯಿ, ಕುಂಬುಳಕಾಯಿಯನ್ನು ಅಲ್ಲಲ್ಲಿ ಜಂತಿಗೆ ಜೋತು ಬಿಟ್ಟದ್ದು ಸಾಮಾನ್ಯವಾಗಿರುತಿತ್ತು. ಹೊಸ ಬೆಳೆ ಬಂದಾಗ ಅದರ ಸ್ಯಾಂಪಲ್ ನ್ನು ಅಲ್ಲಲ್ಲಿ ಕಟ್ಟಲಾಗಿರುತ್ತಿತ್ತು. ಒಂದೈದು ಜೋಳದ ತೆನೆ, ಸಜ್ಜಿಯ ತೆನೆ, ನವಣಿ ತೆನೆ, ಸಾವಿಯ ತೆನೆ, ಬಳ್ಳೊಳ್ಳಿ, ಉಳ್ಳಾಗಡ್ಡಿ, ಗೋವಿನ ಜೋಳದ ತೆನೆ ಹೀಗೆ ತರಾವರಿ ಬೆಳೆಯೇ ಅಲ್ಲಿರುತ್ತಿತ್ತು. ಪಡಸಾಲೆಯಲ್ಲಿ ಜೋಳದ ಚೀಲಗಳ ತೆಪ್ಪೆ ಹಚ್ಚುತ್ತಿದ್ದರು. ಇನ್ನು ಆ ಬಾರಿ ಬಂಪರ್ ಬೆಳೆ ಬಂದಿದೆ ಎಂತಾದರೆ ಉಳಿದ ಜೋಳವನ್ನು ಅಂಗಳದಲ್ಲಿರುವ ಎರಡು ದೊಡ್ದದಾದ ಹಗೆಯೊಳಗೆ ಸುರುವಲಾಗುತ್ತಿತ್ತು. ನೂರಾರು ಚೀಲ ಅನಾಮತ್ತಾಗಿ ನುಂಗುವ ಈ ಹಗೆಗಳದ್ದೇ ಒಂದು ದೊಡ್ಡ ಕತೆ. ಗಾಡಿ ಅನ್ನ ಉಣ್ಣುವ ಭಕಾಸುರನಿಗಿಂತಲೂ ಇವು ಮಿಗಿಲು. ಇವುಗಳ ಒಳಗಿಳಿದು ಜೋಳ ತೆಗೆಯುವವನು ಸಾಮಾನ್ಯ ಆಸಾಮಿ ಆಗಿರುವಂತಿಲ್ಲ. ಅಲ್ಲಿಯ ಝಳವನ್ನು ಧಕ್ಕಿಸಿಕೊಳ್ಳುವ ಗಟ್ ಉಳ್ಳವನಾಗಿರಬೇಕು.

ನಮ್ಮ ಮನೆ ದೇವ್ರು ವೀರಭದ್ರ. ಮಾತೆತ್ತಿದರೆ ನಮ್ಮ ಅವ್ವ ನಮ್ಮದು ಬೆಂಕಿಯಂಥಾ ದೇವರು. ಅಂತ ಹೇಳುವವಳು. ಅದಕ್ಕೆ ಕಾರಣ ವೀರಭದ್ರ ದೇವರ ಪುರವಂತದ ವೇಳೆ ಪುರವಂತ ಆಡುವವನು ಅಸ್ತ್ರ ಹಾಕಿಕೊಳ್ಳುವಾಗ ಅದು ಸಲೀಸಾಗಿ ಜರುಗದಿದ್ದರೆ ಯಾರೋ ಮೈಲಿಗೆಯಾಗಿರಬೇಕು ಇಲ್ಲವೇ ಏನೋ ತಿನ್ನಬಾರದ್ದು ತಿಂದು ಅಲ್ಲಿ ಬಂದಿರಬೇಕು ಅನ್ನೋ ನಂಬುಗೆ. ಹಾಗಾಗಿಯೇ ನಮ್ಮವ್ವ ಆವಾಗಾವಾಗ ಅದು ಬೆಂಕಿಯಂಥಾ ದೇವರು ಅದನ್ನ್ ಇದನ್ನ ತಿಂದು ಬರಬ್ಯಾಡ್ರಿ ಅನ್ನೂವಕ್ಕಿ. ವೀರಶೈವರಾದ ನಾವು ಮನೆಯೊಳಗೆ ಪಕ್ಕಾ ಸಸ್ಯಾಹಾರ ಪರಂಪರೆಯವರು. ತಪ್ಪಿಯೂ ಮೊಟ್ಟೆ ಸಹಿತ ತಿನ್ನುವ ಹಾಗಿರಲಿಲ್ಲ. ನಮ್ಮ ಅಪ್ಪ ಮಾತ್ರ ಐತವಾರ ಸಂತೆ ದಿನ ನಾಲ್ಕು ಜವಾರಿ ಮೊಟ್ಟೆ ಕಿಸೆಗೆ ಇಳಿಸಿಕೊಂಡು ಬಂದು ಬಿಡವನು. ಆಗ ನನ್ನವ್ವಳೇ ಖುದ್ದಾಗಿ ಅವುಗಳನ್ನು ಬೇಯಿಸಿ ಕೊಡುತ್ತಿದ್ದಳು. ಆ ಗಳಿಗೆಯಲ್ಲಿ ಬೆಂಕಿಯಂಥಾ ನನ್ನ ದೇವರು ಹೇಗೆ ನೀರಾದ..? ಎನ್ನುವುದೇ ಒಂದು ದೊಡ್ಡ ಕುತೂಹಲವಾಗುತ್ತಿತ್ತು. ಕೇಳುವ ಧೈರ್ಯವಿರಲಿಲ್ಲವೇ..? ದೇವರ ಕೋಣೆಯೊಳಗೆ ಪ್ರವೇಶ ಮಾಡಿದರೆ ಅಲ್ಲಿ ಯಾವುದೇ ಜಗುಲಿ ಇರಲಿಲ್ಲ. ಗೋಡೆಗೆ ಮನೆ ದೇವರ ಫೋಟೊ ಒಂದು ನೇತು ಹಾಕಲಾಗಿತ್ತು. ಅದರ ಪಕ್ಕದಲ್ಲಿ ಒಂದು ಲಕ್ಷ್ಮಿ ಫೋಟೋ, ಇನ್ನೊಂದು ಘತ್ತರಗಿ ಬಾಗಮ್ಮನ ಫೋಟೋ, ಅಲ್ಲೇ ಬದಿಯಲ್ಲಿ ನಮ್ಮ ಅತ್ತೆ ಮಾವನ ಫೋಟೊ ಅದರ ಬದಿಯಲ್ಲಿ ಒಂದಿಬ್ಬರು ನಟ ನಟಿಯರ ದೊಡ್ಡ ಫೋಟೊಗಳಿದ್ದವು. ನಮ್ಮಪ್ಪ ಓದಿರಲಿಲ್ಲ ಆದರೂ ಆಗಿನ ಕಾಲದಲ್ಲಿಯೇ ಆತ ಹೀರೋ ಹೀರೋಯಿನ್ ಫೋಟೊಗಳನ್ನು ಕಟ್ ಹಾಕಿಸಿ ಪಕ್ಕಾ ಸಮತಾವಾದಿಯಂತೆ ದೇವರ ಕೋಣೆಯೊಳಗೆ ನಾಲ್ಕು ಬೆಟ್ಟು ಅಂತರದಲ್ಲಿಯೇ ಆ ಇಬ್ಬರ ಫೋಟೊ ನೇತು ಹಾಕಿರುವುದಿತ್ತು. ಕುತೂಹಲಕ್ಕೆ ನಾನು ಚಿಕ್ಕವನಿದ್ದಾಗ ಅವ್ವಳನ್ನು ಅದು ಯಾರ ಫೋಟೊ ಅಂತ ಕೇಳಿದ್ದೆ ಅವಳು ಮತ್ತೂ ಮುಗದೆ. ನನಗೇನು ಗೊತ್ತು ನಿಮ್ಮಪ್ಪಗ ಕೇಳು ಅಂದಿದ್ದಳು. ಅಪ್ಪಗೆ ಕೇಳುವಂಥಾ ಧೈರ್ಯ ಮನೆಯಲ್ಲಿ ಯಾರಿಗೂ ಇರಲಿಲ್ಲ. ನಾನು ಪಿ.ಯು.ಸಿ.ಗೆ ಬರೋವರೆಗೂ ಆ ಫೋಟೊಗಳು ಹಿಂದಿ ಸಿನೇಮಾದ ದಿಲೀಪಕುಮಾರ ಮತ್ತು ವೈಜಯಂತಿಮಾಲಾ ರದು ಅಂತ ಗೊತ್ತಾಗಿರಲಿಲ್ಲ. ಅದೇ ದೇವರ ಕೋಣೆಯಲ್ಲಿ ಮೇಲಿನ ಬದಿ ಅವ್ವ ಸಾವಿಗೆ ಹೊಸೆಯುವ ಮಣೆಗಳನ್ನು ಹೊಂದಿಸಿಟ್ಟಿದ್ದಳು. ಮೂಲೆಯಲ್ಲಿ ದೊಡ್ದದಾದ ಒಂದು ಕಟ್ಟಿಗೆಯ ಕಂಬವಿತ್ತು. ಆ ಕಟ್ಟಿಗೆಯ ಸೊಂಟಕ್ಕೆ ಒಂದು ಹಗ್ಗವಿತ್ತು. ಅದರ ಮಧ್ಯ ಭಾಗದಲ್ಲಿ ಮೂರು ವಿಭೂತಿ ಗೆರೆಗಳು ಮತ್ತು ಐದು ಕುಂಕುಮದ ಬೊಟ್ಟುಗಳಿದ್ದವು. ಅದನ್ನು ಕರೆಯುವುದೇ ಮಜ್ಜಿಗೆ ಕಂಬ ಅಂತ. ಅದರ ಬದಿಯಲ್ಲೇ ಮಜ್ಜಿಗೆ ಕಡಿಯುವ ರೇವಿಗೆ ಒಂದಿರುತ್ತಿತ್ತು. ಮನೆಯೊಳಗೆ ಹೈನಿರುವುದು ಸಾಮಾನ್ಯ. ಅವ್ವ ನಸುಕಿನಲ್ಲೆದ್ದು ಸರಕ್ ಬುರಕ್..ಸರಕ್ ಬುರಕ್.. ಅಂತ ಮಜ್ಜಿಗೆ ಕಡಿಯೋ ನಾದಕ್ಕೆ ಜೋಗುಳದ ತ್ರಾಣವಿರುತ್ತಿತ್ತು.

ಅವ್ವನ ಅಡುಗೆ ಮನೆಯಲ್ಲಿ ಇಣಿಕಿದರೆ ಒಂದೆರಡು ಒಲೆ. ಮೂಲೆಯಲ್ಲಿ ಮೊಸರಿಡಲು ಒಂದೆರಡು ನಿಲುವುಗಳು, ರೊಟ್ಟಿ ಬಡಿದಾದ ನಂತರ ಬುಟ್ಟಿಗೆ ಹಾಕಿ ಮೇಲೆ ಎತ್ತಿಡುವ ಒಂದೆರಡು ಮಾಡುಗಳು, cowನುಚ್ಚು ಮಾಡುವ ಮಡಿಕೆಗಳು, ಹಿಂಡಿಪಲ್ಲೆ, ಪುಂಡಿ ಪಲ್ಲೆ ಮಾಡುವ ಮಡಿಕೆ, ಮುಗುಚುವ ಹುಟ್ಟು, ರೊಟ್ಟಿ ಬಡಿಯುವ ಕಲ್ಲು, ಹಂಚು, ಒಲೆಗೆ ಹಾಕಲು ವಡಗಟಿಕೆ ಇಲ್ಲವೇ ಚಿಪಾಟಿ. ಕುಂಡಾಳಿಯಲ್ಲಿ ಈರುಳ್ಳಿ ಮೆಣಸಿನಕಾಯಿ, ಬಳ್ಳೊಳ್ಳಿ ಹಾಕಿ ಕುಟ್ಟಿದ ಕೆಂಪು ಚಟ್ನಿ, ಗೂಟಕ್ಕೆ ಸಿಗಿಸಿದ ಕುಸುಬಿ ಎಣ್ಣೆಯ ಬಾಟಲಿ, ಕಾರಬ್ಯಾಳಿ ತೆಗೆದುಕೊಂಡು ಹೊಲಕ್ಕೆ ಹೋಗಲು ಸಜ್ಜಾಗಿರುವ ಕಿಟ್ಲಿ ಇವಿಷ್ಟು ಅಡುಗೆ ಮನೆಗೆ ಇಣುಕಿದರೆ ಕಾಣುವ ಚಿತ್ರಣ. ಅತಿ ಮುಖ್ಯವಾಗಿ ಅಡುಗೆ ಮನೆಯ ಬಗ್ಗೆ ಮಾತಾಡುತ್ತಿರುವುದರಿಂದ ಒಂದರ ಬಗ್ಗೆ ಹೇಳಲೇ ಬೇಕು. ಅದು ಮುಟಗಿ. ನಮ್ಮ ಭಾಗದಲ್ಲಿ ರೊಟ್ಟಿ ಬಡಿಯುವ ವೇಳೆಯಲ್ಲಿ ಮಾಡೋ ಒಂದು ಬಗೆಯ ಆಹಾರ. ಇದು ತುಂಬಾ ಮಜಭೂತಾದ ಆಹಾರ ಅನ್ನೋ ನಂಬುಗೆ. ಹಾಗಾಗಿಯೇ ಇದನ್ನು ಮಾಡಿ ಹಾಲು ಸಾಲುವದಿಲ್ಲ, ಕಡಿಮೆ ಬೀಳುತ್ತವೆ ಎನಿಸಿದ ಎಮ್ಮೆಯ ಕರುಗಳಿಗೆ ತಿನ್ನಿಸಲಾಗುತ್ತಿತ್ತು. ಇದನ್ನು ಮಾಡುವ ವಿಧಾನವೂ ಸರಳವೇ.. ತುಸು ದಪ್ಪನೆಯ ಜೋಳದ ರೊಟ್ಟಿಯನ್ನು ಮಾಡಿ ಹಂಚಿಗೆ ಹಾಕುವುದು. ಅದು ಬೇಯುತ್ತಿರುವಾಗಲೇ ಕಲಿಗಲ್ಲಿನಲ್ಲಿ ಬೆಳ್ಳೊಳ್ಳಿ, ಉಪ್ಪು, ಮೆಣಸಿನ ಕಾಯಿ, ಜೀರಗಿ ಹಾಕಿ ಹದವಾಗಿ ಕುಟ್ಟಬೇಕು. ರೊಟ್ಟಿ ಬೇಯಿದ ಮೇಲೆ ಅದನ್ನೆತ್ತಿ ಆ ಕಲಗಲ್ಲಿಗೆ ಹಾಕಬೇಕು. ಅದನ್ನು ಹದವಾಗಿ ಕುಟ್ಟಿ ಗುಂಡಗೆ ಮುದ್ದೆ ಮಾಡಿ ಅದರ ಹೊಟ್ಟೆಗೊಂದು ತೂತು ಹಾಕಿ ಅದರಲ್ಲಿ ಒಂದಷ್ಟು ಕುಸುಬಿ ಎಣ್ಣೆ ಸುರಿದು ತಿಂದರೆ ಅದರ ರುಚಿ ಹೆಳಲಿಕ್ಕಾಗಲ್ಲ..ಅಷ್ಟು ಸ್ವಾದ..! ಕೇವಲ ಇದು ಮಾತ್ರವಲ್ಲ ಜೊಳದ ನುಚ್ಚು, ಕಿಚಡಿ, ನವಣಿ ಅನ್ನ, ಸಾವಿ ಬಾನ, ಮಜ್ಜಗಿ ಆಂಬರ, ಹುಳ್ಳಾನುಚ್ಚು, ಸಂಗಟಿ, ಹುರುಳಿ ಖಾಡೆ ಹೀಗೆ ಅವ್ವ ತಯಾರಿಸೋ ಆ ಆಹಾರದ ರುಚಿ ವೈವಿಧ್ಯ ಈಗ ಬರೀ ನೆನಪು ಮಾತ್ರ.

ಇಲ್ಲಿ ನಾನು ಮೇಲೆ ಹೇಳಲಾದ ಅನೇಕ ಸಂಗತಿಗಳು ನನ್ನ ಕತೆ ಮತ್ತು ಕಾದಂಬರಿಯ ಬರವಣಿಗೆಯಲ್ಲಿ ಸಾಥ್ ನೀಡಿರುವುದಿದೆ. ನನ್ನ ಬಾಲ್ಯದ ಊರಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿಸರದ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ.. ಅವೆಲ್ಲ ನೆನಪುಗಳು ನನ್ನ ಅನುಭವದ ಮೂಸೆಯಲ್ಲಿ ಅಪರೂಪದ ಕಚ್ಚಾ ಸರಕಿನಂತೆ ಉಳಿದಿರುವುದಿದೆ. ಒಂದು ಮಾತಿದೆ ಅನುಭವವಿಲ್ಲದವನ ಜ್ಞಾನವೆಂದರೆ ಪಾತ್ರೆ ಇಲ್ಲದವನ ಕೈಯಲ್ಲಿ ನೀರು ಸಿಕ್ಕಂತೆ ಎಂದು. ನಮ್ಮ ಗ್ರಾಮೀಣ ಪರಿಸರದಲ್ಲಿ ದಕ್ಕಿದ ಅನುಭವಗಳೇ ಅನೇಕ ಉತ್ಕೃಷ್ಟ ಕೃತಿಯ ಸೃಷ್ಟಿಗೆ ಕಾರಣಗಳಾಗಿವೆ. ನಮ್ಮ ಮನೆಯ ಎದುರು ದೊಡ್ದದಾದ ಒಂದು ಬಸರೀ ಗಿಡವಿತ್ತು. ಬಿರುಬಿಸಿಲಿನ ನೆಲವಾದ ನನ್ನೂರಲ್ಲಿ ಬೇಸಿಗೆಯಲ್ಲಂತೂ ಅದಕ್ಕೆ ವಿಪರೀತ ಬೇಡಿಕೆ. ಓಣಿಯಲ್ಲಿರುವ ದಮ್ಮಿನ ರೋಗಿಗಳು ಉಶ್.. ಉಶ್.. ಅನ್ನುತ್ತಾ ಅದರ ನೆರಳಿಗೆ ಬರುವವರು. ಅದಾಗಲೇ ಕೆಲವು ಮಹಿಳೆಯರು ಅಲ್ಲಿ ಕುಳಿತು ಕೌದಿ ಹೊಲೆಯುವವರು, ಮತ್ತೆ ಕೆಲವರು ಲ್ಯಾವಿ ಗಂಟು ಬಿಚ್ಚಿ ತಮ್ಮ ಕೌದಿಯ ನೀಲನಕ್ಷೆ ತಯಾರಿಸುವವರು, ಗರ್ದಿ ಗಮ್ಮತ್ತಿನವನು, ಹೇರಪಿನ್, ಸೂಜಿ, ದಬ್ಬಣ ಮಾರುವವರು, ಬೊಂಬಾಯಿ ಮಿಟಾಯಿ, ಲಾಲವಾಲಾ ಮಾರುವವ ಹೀಗೆ ಆ ಗಿಡದ ನೆರಳು ಅದೆಷ್ಟು ಬದುಕುಗಳಿಗೆ ಆಸರೆಯಾಗಿತ್ತೋ ಗೊತ್ತಿಲ್ಲ. ಊರು ಉರುಳಿದಂತೆ ಎಲ್ಲವೂ ಬದಲಾಗಿ ಈ ಆ ಗಿಡವೂ ಉರುಳಿತು. ಆ ಗಿಡದ ನೆರಳಿಗೆ ಬರುವ ಜೀವಗಳೂ ಉರುಳಿದವು. ನಮ್ಮ ಓಣಿಯಲ್ಲಿ ಒಬ್ಬಳು ಮುದುಕಿ ಇದ್ದಳು. ಆಗ ಅವಳಿಗೆ ಹೆಚ್ಚೂ ಕಡಿಮೆ ಎಂಬತ್ತು ವರ್ಷ ಹಾಗೆ ನೋಡಿದರೆ ಸಂಬಂಧದಲ್ಲಿ ಆಕೆ ನಮ್ಮ ಅಪ್ಪನ ಅತ್ತೆಯೇ ಆಗಬೇಕು. ಅವಳಿರೋದೇ ಒಬ್ಬಳು. ಆಕೆಯ ಗಂಡ ಅಂಚೆ ಇಲಾಖೆಯಲ್ಲಿದ್ದು ತೀರಿದವನು. ಅವನ ಹೆಸರಲ್ಲಿ ಆಗಿನ ಕಾಲದಲ್ಲಿ ೨೦೦ ರೂಪಾಯಿ ಪೆನ್ಶನ್ ಬರುತ್ತಿತ್ತು. ಆ ಮುದುಕಿ ಯಾವತ್ತೂ ಬ್ಯುಸಿ ಆಗಿರುವದನ್ನು ಕಂಡು ನಾವೆಲ್ಲಾ ಆಕೆಗೆ ತಮಾಷೆ ಮಾಡುತ್ತಿದ್ದೆವು. ಇರೋದೇ ಒಂದು ಜೀವ ಇಷ್ಟೆಲ್ಲಾ ಕಟಿಬಿಟಿ ಮಾಡಬೇಕಾ..? ಅನ್ನೋದು ಓಣಿಯಲ್ಲಿದ್ದವರ ಪ್ರಶ್ನೆ. ಆಡು ಮುಟ್ಟದ ಸೊಪ್ಪಿಲ್ಲ ಎನ್ನುವ ಹಾಗೆ ಈ ಮುದುಕಿ ಮಾಡದ ಸೊಪ್ಪಿನ ಪಲ್ಯೆ ಇರಲಿಲ್ಲ. ಬಹುಷ: ಬೇವಿನ ಗಿಡದ ಸೊಪ್ಪೊಂದು ಬಿಟ್ಟು. ಸುಮ್ಮನೇ ಅಲ್ಲಿ ಇಲ್ಲಿ ಬೆಳೆಯುವ ಸೊಪ್ಪು ಕೂಡಾ ಈಕೆಯ ಅಡುಗೆಯ ಸಾಮಗ್ರಿಯಾಗುತ್ತಿತ್ತು. ಬೇಸಿಗೆ ಬಂದ್ರೆ ಸಾಕು ಈ ಮುದುಕಿ ತುಂಬಾ ಬ್ಯುಜಿ. ತಿಂಗಳಾನು ಗಟ್ಟಲೆ ಹಪ್ಪಳ, ಸಂಡಗಿ, ಕುರುಡಗಿ, ಗವಲಿ, ಉಗರತ್, ಪರಡಿ, ಸೌತೆ ಬೀಜ ಅನ್ನೋ ದೀನಸುಗಳನ್ನು ಮಾಡಿಡುವವಳು. ಮಳೆಗಾಲದಲ್ಲಿ ಅವುಗಳನ್ನು ಬೇಯಿಸಿ ಬಸಿದು ಬಳಸುವವಳು. ಆ ಮುದುಕಿ ಒಂದೇ ದಿನ ಕುಳಿತು ಕೆಟ್ಟವಳಲ್ಲ. ಕೈ ಸೊಟ್ಟಾದ ಮೇಲೂ ಅವಳು ಕೌದಿ ಹೊಲಿಯುವದನ್ನು ಬಿಟ್ಟವಳಲ್ಲ.

ನಮ್ಮೂರಲ್ಲಿ ನೀಲಗಂಗವ್ವ ಎನ್ನುವ ಗ್ರಾಮದೇವತೆಯ ಜಾತ್ರೆ ವರ್ಷಕ್ಕೊಮ್ಮೆ ಗೌರಿ ಹುಣ್ಣಿಮೆ ಸಂದರ್ಭದಲ್ಲಿ ಜರುಗುತ್ತದೆ. ಈ ಜಾತ್ರೆ ಈಗಿನಂತೆ ಕೇವಲ ವ್ಯಾಪಾರ- ವಹಿವಾಟಿನ ಇಲ್ಲವೇ ಪೋರ-ಪೋರಿಯರ ಸುತ್ತಾಟದ ನೆಲೆಯಾಗಿ ರಲಿಲ್ಲ. ಅದನ್ನು ಮೀರಿ ಒಂದು ಜನಸಮುದಾಯದ ಸಾಂಸ್ಕೃತಿಕ ಸಡಗರ, ಆಚರಣೆಯ ಭಾಗವಾಗಿತ್ತು. ಅದು ಸಂಪ್ರದಾಯಕ್ಕಿಂತಲೂ ಮಿಗಿಲಾಗಿ ಒಂದು ಪರಂಪರೆಯೇ ಆಗಿತ್ತು. rural-indiaಅಲ್ಲಿ ಸೇರುವ ಮಿಠಾಯಿ ಅಂಗಡಿಗಳು, ತೊಟ್ಟಿಲು, ಚಿರಕೀಗಾಣ, ಆಟಿಕೆ ಸಾಮಾನುಗಳ ಅಂಗಡಿ, ಗುಡ ಗುಡಿ ಆಟಗಳು, ಟೆಂಟ್ ಸಿನೇಮಾ, ನಾಟಕ, ಎರಡು ತಲೆಯ ಮನುಷ್ಯ, ಬಳೆ ಅಂಗಡಿ, ಬೆಂಡು ಬತ್ತಾಸು, ಚುರುಮುರಿ ಚೀಲಗಳು, ಬಟ್ಟೆ ಅಂಗಡಿಗಳು, ಬಲೂನು.. ಪೀಪಿಗಳು, ಗೊಂಬೆಗಳು ಹೀಗೆ ಒಂದೇ ಎರಡೇ ಇಡೀ ಒಂದು ವಾರ ನನ್ನಂಥಾ ಹುಡುಗರಿಗೆ ಕನಸಾಗಿ ಕಾಡುವ ಈ ಜಾತ್ರೆ ಮುಗಿಯುತ್ತಿದ್ದಂತೆ ಬೇಸರ ಆವರಿಸಿಕೊಳ್ಳುತ್ತಿತ್ತು. ಜಾತ್ರೆಯಲ್ಲಿ ಮುದ್ದಾಂ ಜಾತ್ರೆಯ ಸಲುವಾಗಿ ಎಂದು ಪೋಸ್ಟರ್ ಮೇಲೆ ಬರೆಯಿಸಿಕೊಂಡು ಊರಲ್ಲಿ ಅಲ್ಲಲ್ಲಿ ಅಂಟಿಸಲಾಗುವ ರಾಜಕುಮಾರ, ವಿಷ್ಣು ವರ್ಧನನ ಸಿನೇಮಾ ಜಾತ್ರೆಗೆ ಬಂದ ಸಂಬಂಧಿಗಳೊಡನೆ ನೋಡುವುದೇ ಒಂದು ಉಮೇದು. ಊರ ಹೊರಗಿನ ದರ್ಗಾ ಬೈಲಿನಲ್ಲಿ ನಡೆಯುವ ಖಡೆದ ಕುಸ್ತಿಗೆ ಸುತ್ತ ಮುತ್ತಲ್ಲಿನ ಹಳ್ಳಿಗಳ ಪೈಲ್ವಾನರು ಬಂದು ಸೇರುತ್ತಿದ್ದರು. ಒಬ್ಬರಿಗಿಂತಲೂ ಒಬ್ಬರು ಕಸರತ್ತು ಮಾಡಿದವರು. ಅವರ ಗಂಟಾದ ಕಿವಿಗಳು, ಕುತ್ತಿಗೆಯ ಶಿರ, ಮೈಕಟ್ಟು ನೋಡುವುದು ಇನ್ನೊಂದು ಖುಷಿ. ಆ ಖಡೆದ ಕುಸ್ತಿ ಮುಗಿದ ನಂತರ ಒಂದು ವಾರದ ವರೆಗೆ ಮನೆಯಲ್ಲಿ ಊಟಾಬಸ್ಕಿ ಹೊಡೆದು ನೋವಾಗಿ ತೊಡೆ ಹಿಡಿದು ಶಾಲೆಗೆ ಚಕ್ಕರ್ ಹಾಕಿದ ನೆನಪು ಈಗಲೂ ನೆನಪಿದೆ. ಜಾತ್ರೆಯ ಕಡೆಯ ದಿನ ನಡೆಯುವ ಬಯಲಾಟ ಇಡೀ ಊರಿಗೂರೇ ಸುದ್ದಿಯಾಗಿರುತ್ತಿತ್ತು. ಸಂಜೆಯಾಗುತ್ತಿರುವಂತೆ ವೇದಿಕೆ ಸಜ್ಜಾಗುತ್ತಿತ್ತು. ಅತ್ತ ವೇದಿಕೆ ಸಜ್ಜಾಗುತ್ತಿರುವಂತೆ ಇತ್ತ ಜನರು ತಮ್ಮ ಮನೆಯಲ್ಲಿಯ ಸಣ್ಣ ಹುಡುಗರ ಕೈಯಲ್ಲಿ ಚಾಪೆ, ಗುಡಾರ, ತಾಡಪಾಲ ಮುಂತಾದವುಗಳನ್ನು ಕೊಟ್ಟು ಜಾಗವನ್ನು ರಿಜರ್ವ್ ಮಾಡಿಸುತ್ತಿದ್ದರು. ಮುಖ್ಯ ಬೀದಿಯಲ್ಲಿ ನಡೆಯುವ ಈ ದೊಡ್ಡಾಟಕ್ಕಾಗಿ ಏನೆಲ್ಲಾ ತಯಾರಿಗಳಾಗಿರುತ್ತಿದ್ದವು. ಸೀತೆಯನ್ನು ರಾವಣ ಅಪಹರಿಸಿಕೊಂಡು ಹೋಗುವ ಸನ್ನಿವೇಶಕ್ಕಾಗಿ ಅಲ್ಲೇ ಹತ್ತಿರದಲ್ಲಿದ್ದ ಮರವೊಂದಕ್ಕೆ ಸೇತುವೆಯನ್ನೇ ಕಟ್ಟಲಾಗುತ್ತಿತ್ತು. ಆ ಬಯಲಾಟ ಬೆಳ್ ಬೆಳತನಕ ನಡೆಯುವದರಿಂದ ಸಾಲಾಗಿ ಚಹಾದ ಅಂಗಡಿಗಳು ತಯಾರಾಗಿ ನಿಂತಿದ್ದವು. ಆ ಬಯಲಾಟದಲ್ಲಿದ್ದ ರಾವಣನ ಪಾತ್ರಧಾರಿ, ರಾಮನ ಪಾತ್ರಧಾರಿಗಳು ಓದಲು ಬರೆಯಲು ಬಾರದವರು. ಅವರಿಗೆ ಬಯಲಾಟದ ಮಾತುಗಳನ್ನು ಹೇಳಿ ಕೊಟ್ಟಿದ್ದೇ ನಮ್ಮಂಥಾ ಹುಡುಗರು. ಹೀಗಾಗಿ ಅವರು ವೇದಿಕೆಯಲ್ಲಿ ಕುಣಿದು ಕುಪ್ಪಳಿಸಿ ಡೈಲಾಗ್ ಹೇಳಾಕ್ ಶುರು ಮಾಡಿದ್ದೇ ನಮ್ಮ ಬಾಯಲ್ಲೂ ಡೈಲಾಗ್ ಉದುರುತ್ತಿದ್ದವು. jatreನಮ್ಮ ಹೊಲದಲ್ಲಿ ಕೆಲಸ ಮಾಡುವ ಲಚ್ಚಪ್ಪನೂ ಒಂದು ಪಾತ್ರ ಮಾಡಿರುತ್ತಿದ್ದ. ಅಪ್ಪ ಅವನಿಗೆ ಬಟ್ಟೆ ಬರೆ ಆಯೇರಿ ಮಾಡುತ್ತಿದ್ದ. ತೋಮತ ತಜನತೋ ತಯಾ ಧೀಮತತಜನತೋ.. ಅಂತ ಸಾರಥಿ ರಾಗ ಸುರು ಮಾಡಿದ್ದೇ ಮುಂದ ಕುಳಿತ ಮಂದಿ ಕೂಗು..ಸಿಳ್ಳು ಇಡೀ ಊರಿಗೂರೇ ರಂಗೇರುವಂತೆ ಮಾಡುತ್ತಿತ್ತು. ಇಂಥಾ ಒಂದೆರಡಲ್ಲ, ಹತ್ತಾರು ಸಂಗತಿಗಳು ನಮ್ಮೂರಲ್ಲಿ, ಸುತ್ತ ಮುತ್ತಲಿನ ಹಳ್ಳ್ಲಿಗಳಲ್ಲಿ ನಡೆಯುವದಿತ್ತು. ಆಗ ಹಳ್ಳಿಗಳು ಬಹುತೇಕವಾಗಿ ಉತ್ಪಾದನೆ ಮತ್ತು ಉಪಭೋಗದ ಘಟಕಗಳಾಗಿ ಕೆಲಸ ಮಾಡುತ್ತಿದ್ದವು. ಎಲ್ಲೂ ಯಾರ ವರ್ತನೆಯಲ್ಲೂ.. ಮಾತಿನಲ್ಲೂ ಕೃತ್ರಿಮವಾದ ಸಂಬಂಧಗಳು ಇರಲಿಲ್ಲ. ಜಾತಿ..ಧರ್ಮಗಳ ಗೊಡವೆಯಿಲ್ಲದೇ ಊರವರ ಸಂಬಂಧಗಳು ಸ್ಥಾಪನೆಯಾಗಿರುತ್ತಿದ್ದವು. ಯಾವುದೇ ಲಾಭ, ಸ್ವಾರ್ಥವನ್ನು ಆಧಾರವಾಗಿಟ್ಟುಕೊಳ್ಳದೇ ಅತ್ಯಂತ ಯತಾರ್ಥವಾಗಿ ಅವು ಹುಟ್ಟುತ್ತಿದ್ದವು. ಅವರು ಸಂಬಂಧಿಗಳಲ್ಲದಿದ್ದರೂ ಕಾಕಾ.. ಮಾಮಾ..ಯಕ್ಕಾ.. ಅಣ್ಣ ಅನ್ನೋ ಮೂಲಕ ವ್ಯವಹರಿಸುವ ರೀತಿಯೇ ನಮಗೆ ಅನೂಹ್ಯವಾದ ಮನುಷ್ಯ ಸಂಬಂಧಗಳ ಬಗ್ಗೆ ಪಾಠ ಕಲಿಸಿಕೊಟ್ಟಿತು.

ಮೊಹರಂ ದಂಥಾ ಹಬ್ಬಗಳ ಆಚರಣೆಯಲ್ಲಿ ಇಡೀ ಊರು ಒಂದಾಗುತ್ತಿತ್ತು. ಎಲ್ಲ ಕೇರಿಗಳಲ್ಲೂ ಅದನ್ನು ಆಚರಿಸುತ್ತಿದ್ದರು. ಬೆಳಿಗ್ಗೆಯಿಂದಲೇ ಆರಂಭವಾಗುವ ಅಲಾಬ್ ಆಡುವಲ್ಲಿ ಎಲ್ಲರೂ ಪಾಲ್ಗೊಳ್ಳುತ್ತಿದ್ದರು. ಆ ಅಲಾಬ್ ಕುಣಿತ, ಅದರ ಜೊತೆಗಿರುವ ಹಲಿಗೆ, ಸನಾದಿ ನಾದ, ತಾಳ ಈಗಲೂ ಏಕಾಂತದಲ್ಲಿರುವಾಗ ನೆನಪು ಮಾಡಿಕೊಂಡರೆ ನನ್ನನ್ನು ಗಾಢವಾಗಿ ಆವರಿಸಿಬಿಡುತ್ತದೆ. ಹೋಳಿ ಹುಣ್ಣಿವೆಯ ಸಂದರ್ಭದಲ್ಲಂತೂ ಎದುರು ಬದುರು ಕುಳಿತು ಹೇಳುವ ಸವಾಲು ಜವಾಬಿನ ಹಾಡುಗಳು ಅದ್ಭುತವಾಗಿರುತ್ತಿದ್ದವು. ಆದರೆ ಇವೆಲ್ಲವೂ ಬಹುತೇಕವಾಗಿ ಸೊಂಟದ ಕೆಳಗಿನ ಸಾಹಿತ್ಯವಾದ ಕಾರಣ ಮಹಿಳೆಯರಾರೂ ಅಲ್ಲಿ ಸೇರುತ್ತಿರಲಿಲ್ಲ. ನಮ್ಮ ಮನೆಯ ಪಕ್ಕದಲ್ಲೇ ಒಂದು ಮುಸ್ಲಿಂ ಮನೆಯಿತ್ತು. ಅವರು ಎಲೆ, ಅಡಿಕೆ, ಲಿಂಬು, ಮೋಸಂಬಿ ಹೀಗೆ ಹಣ್ಣಿನ ವ್ಯಾಪಾರವನ್ನು ಮಾಡುವವರು .ನಮ್ಮ ಕೇರಿಯಲ್ಲಿ ಅವರೇ ಮೊಟ್ಟ ಮೊದಲ ಬಾರಿಗೆ ೧೪ ಇಂಚಿನ ಕಪ್ಪು ಬಿಳುಪು ಟಿ.ವಿ. ಮನೆಗೆ ತಂದವರು. ಚಿತ್ರಹಾರ ಮತ್ತು ಸಿನೇಮಾ ನೋಡಲು ನನ್ನಂಥಾ ಹುಡುಗರು ಮುಗಿ ಬೀಳುವದಿತ್ತು. ನಾವೆಲ್ಲರೂ ಅವರನ್ನು ಕರೆಯುವುದು ಕಾಕಾ.. ಅವ್ವ.. ಅಕ್ಕ.. ಎಂದೇ ಆಗಿತ್ತು. ಅವರು ತುಸು ಡಾಗು ಬಿದ್ದ ಮೋಸಂಬಿ ಹಣ್ಣನ್ನು ನನ್ನಂಥಾ ಹುಡುಗರಿಗೆ ತಿನ್ನಲು ನೀಡುತ್ತಿದ್ದರು. ನಮಗೆ ತುಂಬಾ ಖುಷಿಯಾಗುತ್ತಿತ್ತು. ಹೀಗಾಗಿ ನಾವು ವಾರದಲ್ಲಿ ಎರಡು ದಿನ ಸಿನೇಮಾ ಕಮ್ ಮೋಸಂಬಿ ಹಣ್ಣು ಅನ್ನೋ ಇರಾದೆಯಿಂದ ಅವರ ಮನೆ ಮುಂದೆ ಸುತ್ತುವದಿತ್ತು. ತೀರಾ ಸಣ್ಣ ಪುಟ್ಟ ಸಂಗತಿಗಳು ಕೂಡಾ ಹೇಗೆ ನಮ್ಮ ಬರವಣಿಗೆಗೆ ಸ್ಫೂರ್ತಿಯಾಗುತ್ತವೆ ಎನ್ನಲಿಕ್ಕೆ ನಾನು ಮೇಲೆ ಹೇಳಲಾದ ಅನೇಕ ಸಂಗತಿಗಳನ್ನು ನನ್ನ ಬರವಣಿಗೆಗೆ ಬಳಸಿಕೊಂಡಿರುವುದಿದೆ. ನನಗಿನ್ನೂ ನೆನಪಿದೆ ಆಗ ನಾನು ಬಹುತೇಕವಾಗಿ ಎಂಟನೆಯ ತರಗತಿಯಲ್ಲಿರಬೇಕು. ಆಗ ನಮ್ಮೂರಿನಲ್ಲಿ ದಾರಿ ತಪ್ಪಿದ ಮಗ ಸಿನೇಮಾ ಬಂದಿತ್ತು. ನನ್ನ ಗೆಳೆಯರೆಲ್ಲರೂ ಅದನ್ನು ನೋಡಿ ಬಂದು ಭಯಂಕರ ರೋಚಕವಾಗಿ ತರಗತಿಯಲ್ಲಿ ಕತೆ ಹೇಳುವುದನ್ನು ಕೇಳಿ ಹೇಗಾದರೂ ಮಾಡಿ ನಾನೂ ನೋಡಬೇಕು ಎಂದು ಅನಿಸಿರುವುದು ಸಹಜವೇ.. ಆದರೆ ಆ ಸಿನೇಮಾ ನೋಡಲು rural-karnataka-2ನಾನು ದಾರಿ ತಪ್ಪಿದ ಮಗನೇ ಆದದ್ದು ಮಾತ್ರ ನನ್ನನ್ನು ಈಗಲೂ ಚುಚ್ಚುತ್ತದೆ. ನಮ್ಮಲ್ಲಿ ಮಾಳಿಗೆಯ ಮೇಲೆ ಬೆಳಕಿಂಡಿ ಮುಚ್ಚಲು ತಗಡುಗಳನ್ನು ಇಟ್ಟಿರುತ್ತಾರೆ. ನಮ್ಮ ಅಪ್ಪನಂತೂ ಸಿನೇಮಾ ನೋಡಲು ದುಡ್ದು ಕೊಡುವದಿಲ್ಲ ಎನ್ನುವ ಖಾತ್ರಿಯಿತ್ತು. ಪಕ್ಕದ ಓಣಿಯ ಹುಡುಗನೊಬ್ಬನ ಜೊತೆಗೆ ಒಂದು ಅಗ್ರೀಮೆಂಟ್ ಮಾಡಿಕೊಂಡೆ. ಇಬ್ಬರೂ ಸಿನೇಮಾ ನೋಡುವುದು, ಆದರೆ ಆ ಬೆಳಕಿಂಡಿಯ ತಗಡನ್ನು ಹೊತ್ತೊಯ್ದು ಮಾರುವ ಜವಾಬ್ದಾರಿ ಅವನದು. ಅಷ್ಟಕ್ಕೂ ಆ ತಗಡು ಬೇರೆ ಯಾರದೋ ಮನೆಯ ಬೆಳಕಿಂಡಿಯದಲ್ಲ ಎನ್ನುವುದೇ ಒಂದು ದೊಡ್ಡ ಸಮಾಧಾನ. ಅದು ನಮ್ಮದೇ ಮನೆಯ ಬೆಳಕಿಂಡಿಯ ತಗಡು. ಪ್ಲ್ಯಾನ್ ಮಾಡಿಕೊಂಡಂತೆ ನಾನು ತಗಡು ತೆಗೆದು ಎತ್ತಿ ಕೆಳಗೆ ಒಗೆಯುವದು ಮಾತ್ರ. ಆಮೇಲೆ ಅದನ್ನವನು ತೆಗೆದುಕೊಂಡು ಹೋಗಿ ಮಾರಾಟ ಮಾಡುವುದು. ನಂತರ ಇಬ್ಬರೂ ಕೂಡಿ ಸಿನೇಮಾ ನೋಡುವುದು. ಅಂದುಕೊಂಡಂತೆ ನಡೆದು ಸಿನೇಮಾ ನೋಡಿಯೂ ಆಯ್ತು. ಆದರೆ ನಂತರ ಆ ತಗಡು ಕದ್ದಿದ್ದು ನಾನೇ ಎಂದು ಅದನ್ನು ಮಾರಿ ಬಂದವನೇ ನಮ್ಮ ಅಪ್ಪನ ಎದುರಲ್ಲಿ ಮಾಹಿತಿ ಬಿಚ್ಚಿಟ್ಟಿದ್ದೇ ವಡಗಟಿಗೆಯಿಂದ ನನಗೆ ಹೊಡೆತ ಬಿದ್ದಿದ್ದೂ ಇದೆ. ನಾನು ಆಗಾಗ ಅಂದುಕೊಳುತ್ತೇನೆ. ನಾವು ತಪ್ಪು ಮಾಡಿದಾಗ ನಮ್ಮ ಅಪ್ಪ ಕೈಗೆ ಏನು ಸಿಗುತ್ತೋ ಅದರಿಂದಲೇ ಹೊಡೆಯುವದಿತ್ತು. ಆದರೂ ನಮಗೆ ಏನೂ ಅನಿಸುತ್ತಿರಲಿಲ್ಲ. ಆ ಗಳಿಗೆಯಲ್ಲಿ ಸ್ವಲ್ಪ ಹೊತ್ತು ಅಳುತ್ತಿದ್ದೆವು.. ಮಿಕ್ಕಂತೆ ಮತ್ತೆ ಗೆಳೆಯರೊಂದಿಗೆ ಆಟಕ್ಕೆ ರೆಡಿ. ಈಗ ಪರಿಸ್ಥಿತಿ ಪೂರ್ಣ ಪ್ರಮಾಣದಲ್ಲಿ ಬದಲಾಗಿದೆ ಈಚೆಗೆ ಹತ್ತು ವರ್ಷದ ಎರಡು ಮಕ್ಕಳು ಆತ್ಮ ಹತ್ಯೆ ಮಾಡಿಕೊಂಡದ್ದನ್ನು ಪತ್ರಿಕೆಯಲ್ಲಿ ಓದಿದೆ. ಅವರ ಕಾರಣಗಳೇ ಅತ್ಯಂತ ಮಳ್ಳತನದಿಂದ ಕೂಡಿದ್ದವು. ಒಬ್ಬಾತ ಹುಡುಗ ಶಾಲೆಗೆ ಹೋಗು ಎಂದ ಕಾರಣಕ್ಕೆ ಹಾಗೆ ಮಾಡಿಕೊಂಡರೆ, ಇನ್ನೊಂದು ಟಿ.ವಿ.ನೋಡಬೇಡ ಎಂದು ಹೇಳಿದ ಕಾರಣಕ್ಕೆ ಇವೆರಡೂ ಕಾರಣಗಳನ್ನು ನೆನೆದರೆ ನಗಬೇಕೋ.. ಅಳಬೇಕೋ ತಿಳಿಯುತ್ತಿಲ್ಲ.

ಇಂದು ಗ್ರಾಮೀಣ ಪ್ರದೇಶಗಳಲ್ಲಿಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಜೀವನ ಮುಂಚಿನಂತಿಲ್ಲ. ಅಲ್ಲೀಗ ನಾವು ಬಾಲ್ಯದಲ್ಲಿ ಆಡಿದ ಆಟಗಳಿಲ್ಲ, ನೋಡಿದ ನೋಟಗಳಿಲ್ಲ. ಊರ ಮುಂದಿನ ಅನೇಕ ಮಾವಿನ ತೋಟಗಳು ಹಣದ ಹಪಾಪಿತನಕ್ಕೆ ಸೈಟ್ ಆಗಿ ಮಾರ್ಪಟ್ಟಿವೆ. ಎಲ್ಲರ ಮನೆಯಲ್ಲೂ ಆಕಳುಗಳಿವೆ.. ಎಮ್ಮೆಗಳಿವೆ.. ಆದರೆ ಯಾರಾದರೂ ಮನೆಗೆ ಅತಿಥಿಗಳು ಬಂದರೆ ಚಾ ಮಾಡಲು ಹಾಲಿಲ, ಎಲ್ಲರೂ ಡೈರಿ ಗೆ ಹಾಕುವವರೇ.. ಮನೆಯ ಪಡಸಾಲೆಯಲ್ಲಿರುವ ಟಿ.ವಿ. ಯಲ್ಲಿಯ ಜಾಹೀರಾತುಗಳು ಇವತ್ತು ಗ್ರಾಮೀಣರನ್ನೂ ಕೂಡಾ ಒಂದು ಕಮಾಡಿಟಿ ಯ ಮಟ್ಟದಲ್ಲಿ ತಂದು ನಿಲ್ಲಿಸಿಬಿಟ್ಟಿವೆ. ಪರಿಣಾಮವಾಗಿ ಅಲ್ಲೂ ಕೂಡಾ ಮನುಷ್ಯ ಸಂಬಂಧಗಳು ಅರ್ಥವಂತಿಕೆಯನ್ನು ಕಳೆದುಕೊಳ್ಳುತ್ತಿವೆ. ಆಲ್ಬರ್ಟ್ ಕಾಮು ೧೯೪೬ ರ ಸಂದರ್ಭದಲ್ಲಿ ಹೇಳಿರುವಂಥಾ ಮಾತು ನೆನಪಾಗುತ್ತಿದೆ. rural-karnatakaಮನುಷ್ಯ ಮುಂಬರುವ ದಿನಗಳಲ್ಲಿ ನಡುಗಡ್ಡೆಯಂತೆ ಬದುಕುತ್ತಾನೆ. ಎನ್ನುವ ಮಾತು ಈಗ ಸತ್ಯವಾಗಿದೆ. ಇಂದಿನ ಸೃಜನಶೀಲ ಬರಹಗಾರರಿಗೆ ಗ್ರಾಮೀಣ ಮತ್ತು ನಗರ ಬದುಕಿನ ಮಧ್ಯೆ ಇರುವ ಸಾಂಸ್ಕೃತಿಕ ವ್ಯತ್ಯಾಸಗಳು ಸ್ಪಷ್ಟವಾಗಿ ಗೋಚರವಾಗುತ್ತಿಲ್ಲ. ಹೀಗಾಗಿ ಖರೆ ಖರೆ ಹಳ್ಳಿಗಳ ಸಾಂಸ್ಕೃತಿಕ ಚಹರೆಯನ್ನು ಕಟ್ಟಿಕೊಡುವುದು ಅವರಿಂದ ಸಾಧ್ಯವಾಗುತ್ತಿಲ್ಲ. ಒಂದು ಗ್ರಾಮದ ಬಗೆಗಿನ ಕೃತಿಯನ್ನು ಓದಿ ಅದನ್ನು ಗ್ರಹಿಸುವದಕ್ಕೂ, ಖುದ್ದಾಗಿ ಗ್ರಾಮದ ಜೀವನಾನುಭವವನ್ನು ಅಂತರಂಗೀಕರಣಗೊಳಿಸಿಕೊಂಡು ಸೃಜನಶೀಲ ಬರವಣಿಗೆಯನ್ನು ಮಾಡುವುದಕ್ಕೂ ತುಂಬಾ ವ್ಯಸ್ತಾಸಗಳಿವೆ. ಮೊದಲನೆಯದು ಕುರುಡರು ಆನೆಯನ್ನು ಗ್ರಹಿಸುವ ಪರಿಯಾದರೆ, ಇನ್ನೊಂದು ಮಾವುತ ಆನೆಯನ್ನು ಗ್ರಹಿಸುವ ಪರಿ. ಸಮಾಜಶಾಸ್ತ್ರದ ವಿದ್ಯಾರ್ಥಿಯಾದ ನನಗೆ ಜಾಗತೀಕರಣದ ಹಾವಳಿಯ ಸಂದರ್ಭದಲ್ಲಿ ಗ್ರಾಮಗಳನ್ನು ಸಂಸ್ಕೃತಿ ಸಂಂಪೋಷಣಾ ತಾಣಗಳೆಂದು ಕರೆಯಲು ಸಾಧ್ಯವಾಗುತ್ತಿಲ್ಲ. ಇಂದು ಗ್ರಾಮಗಳು ನಾನು ಬಾಲ್ಯದಲ್ಲಿ ಕಂಡ ಸ್ಥಿತಿಯಲ್ಲಿಲ್ಲ. ಗ್ರಾಮಗಳನ್ನು ಮರು ವ್ಯಾಖ್ಯಾಯಿನಿಸುವ ತುರ್ತು ಈಗಿದೆ ಎನಿಸುತ್ತದೆ. ನನ್ನ ಊರು.. ಅದರೊಂದಿಗಿನ ಬಾಲ್ಯದ ಒಡನಾಟ ನನ್ನ ಬಹುತೇಕ ಬರವಣಿಗೆಗಳ ಹಿಂದಿನ ಜೀವಸೆಲೆಯಾಗಿ ಕೆಲಸ ಮಾಡಿದೆ ಎನ್ನುವುದಂತೂ ಹೌದು. ಅದು ಒಬ್ಬ ಬರಹಗಾರನ ಸೃಜನಶೀಲ ಬರವಣಿಗೆ ಎನ್ನಬೇಕೋ ಅಥವಾ ಅವನಿಗೆ ದಕ್ಕಿದ ಹಸಿ ಹಸಿ ಜೀವನಾನುಭವದ ತಿರುಳು ಎನ್ನಬೇಕೋ ತಿಳಿಯದು. ಕೊನೆಯದಾಗಿ ಹೇಳುವದಾದರೆ ಗ್ರಾಮೀಣ ಪರಿಸರದ ಒಡನಾಟ ಮತ್ತು ಸಂಸ್ಕೃತಿಯ ಸಹವಾಸವಿಲ್ಲದ ಬರಹ ಒಂದು ಸುಂದರವಾದ ಪ್ಲಾಸ್ಟಿಕ್ ಹೂವನ್ನು ಮಾತ್ರ ರೂಪಿಸಲು ಸಾಧ್ಯ.

ಇಂಧನ ಸಚಿವರಿಂದ ವಿಶ್ವಮಾನವ ಸಂದೇಶಕ್ಕೆ ಬೆಂಕಿ

– ಮಹೇಶ್ ಎಂ.

“ಅಧಿಕಾರಿಗಳನ್ನು ನಾವು ಒಳ್ಳೆಯ ಹುದ್ದೆಗೆ ನಿಯೋಜನೆ ಮಾಡುತ್ತೇವೆ. ಆದರೆ, ಅಧಿಕಾರಿ­ಗಳು ಕುರ್ಚಿಯ ಮೇಲೆ ಕುಳಿತರೆ ವಿಶ್ವಮಾನವರಾಗಿ ಬಿಡುತ್ತಾರೆ. ಕೈಯಲ್ಲಿ ಕಾಗದ, ಪೆನ್ನು ಸಿಕ್ಕ ಮೇಲೆ ಇಲ್ಲಸಲ್ಲದ ಕಾನೂನು ಮಾತಾಡುತ್ತಾರೆ. ಅಂಥ ಅಧಿಕಾರಿ­ಗಳ ಹೆಸರು ಹೇಳಲು ಇಷ್ಟಪಡು­ವುದಿಲ್ಲ. ಅವರವರ ಜನಾಂಗಕ್ಕೆ ಅಧಿಕಾರಿಗಳು ಸಹಾಯ ಮಾಡಬೇಕಾದ್ದು ಅಗತ್ಯ”.

ಇಂಧನ ಸಚಿವ ಡಿ.ಕೆ. ಶಿವಕುಮಾರ್ ಭಾನುವಾರ ಒಕ್ಕಲಿಗರ ಸಂಘದ ಕಾರ್ಯಕ್ರಮದಲ್ಲಿ ಹೇಳಿದ ಮಾತುಗಳಿವುDKS. ಅಧಿಕಾರಿಗಳು ವಿಶ್ವಮಾನವರಾಗುತ್ತಾರೆ ಎನ್ನುವ ಮೂಲಕ ಈ ಮಂತ್ರಿ ಮಹೋದಯ ಏಕಕಾಲಕ್ಕೆ ವಿಶ್ವಮಾನವ ಸಂದೇಶ ಸಾರಿದ ಕುವೆಂಪು ಅವರನ್ನೂ ಮತ್ತು ಒಕ್ಕಲಿಗ ಸಮುದಾಯದ ಪ್ರಾಮಾಣಿಕ, ನಿಷ್ಪಕ್ಷಪಾತಿ ಅಧಿಕಾರಿಗಳನ್ನು ಅವಮಾನಿಸಿದ್ದಾರೆ. ವಿಪರ್ಯಾಸ ಎಂದರೆ ಇವರು ಮಾತನಾಡಿದ ಹಾಲ್ ನಲ್ಲಿಯೇ ರಾಷ್ಟ್ರಕವಿ ಕುವೆಂಪು ಅವರ ಭಾವಚಿತ್ರವೂ ಇತ್ತು!

ಇತ್ತೀಚೆಗೆ ಈ ಮಂತ್ರಿಯವರ ಶಿಫಾರಸ್ಸಿನಿಂದ ಆಯಕಟ್ಟಿನ ಹುದ್ದೆಗಳಿಗೆ ನೇಮಕ ಆದ ಅಧಿಕಾರಿಗಳ ಕಾರ್ಯವೈಖರಿಯನ್ನು ಸೂಕ್ಷ್ಮವಾಗಿ ಅವಲೋಕಿಸುವ ಅಗತ್ಯವಿದೆ. ಶಿವಕುಮಾರ್ ಗೆ ಮುಂದೆ ಪಕ್ಷದ ನೇತೃತ್ವ ವಹಿಸಿ ಚುನಾವಣೆ ಎದುರಿಸುವ ಅವಕಾಶ ದೊರೆತಾಗ ಒಕ್ಕಲಿಗ ಸಮುದಾಯ ಒಗ್ಗಟ್ಟಾಗಿ ಇವರ ಬೆನ್ನಿಗೆ ನಿಲ್ಲಬೇಕಂತೆ. ಆದರೆ ಸದ್ಯಕ್ಕೆ ಮುಖ್ಯಮಂತ್ರಿಯಾಗುವ ಪ್ರಯತ್ನ ಮಾಡುವುದಿಲ್ಲ ಎಂದು ಸಿದ್ದರಾಮಯ್ಯನವರಿಗೆ ಮಾತು ಕೊಟ್ಟಿದ್ದಾರಂತೆ. ಈ ಮಾತುಗಳು ಸೂಕ್ಷ್ಮವಾಗಿ ರಾಜ್ಯ ರಾಜಕೀಯದಲ್ಲಿ ಬರುವ ದಿನಗಳಲ್ಲಿ ನಡೆಯಬಹುದಾದ ಘಟನಾವಳಿಗಳನ್ನು ಸೂಚಿಸುತ್ತವೆ.

ತಾನು ಒಕ್ಕಲಿಗರ ಪ್ರತಿನಿಧಿಯಾಗಿ ಮಂತ್ರಿಯಾಗಿದ್ದಾರಂತೆ. ಹಾಗಾದರೆ, ಕನಕಪುರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದವರ ಗತಿಯೇನು? ಅಷ್ಟೇ ಅಲ್ಲ, ಇಂತಹವರು ಮಂತ್ರಿ ಸ್ಥಾನದಲ್ಲಿ ಕುಳಿತಾಗ ಸಾಮಾಜಿಕ ನ್ಯಾಯ ಎತ್ತಿ ಹಿಡಿಯುತ್ತಾರಾ? ಅದೆಲ್ಲಾ ಬೇಡ, ಶಾಸಕನಾಗಿ, ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವಾಗ ಯಾವುದೇ ರಾಗ-ದ್ವೇಷಗಳಿಲ್ಲದೆ ಕೆಲಸ ನಿರ್ವಹಿಸುತ್ತೇನೆ ಎಂದಿದ್ದರಲ್ಲ..ಅದೂ ಮರೆತುಹೋಯಿತೆ? ಇವರ ಮಾತುಗಳು ಸ್ಪಷ್ಟವಾಗಿ ಸಂವಿಧಾನದ ಆಶಯಗಳಿಗೆ ವಿರೋಧ.

ಅದೇ ಕಾರ್ಯಕ್ರಮದಲ್ಲಿ ಡಿಕೆಶಿಯಂತಹವರಿಗೆ ಬುದ್ಧಿಹೇಳುವಂತೆ ಮಾತನಾಡಿದವರು. ಆದಿಚುಂಚನಗಿರಿ ಸಂಸ್ಥಾನದ ನಿರ್ಮಲಾನಂದನಾಥ ಸ್ವಾಮೀಜಿ. “ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ‘ಕೆಂಪೇಗೌಡರು ಒಕ್ಕಲಿಗರಿ­ಗಾಗಿ ಮಾತ್ರ ಬೆಂಗಳೂರನ್ನು ಕಟ್ಟಲಿಲ್ಲ. ಒಂದು ಜಾತಿಯ ನಾಶ ಅಥವಾ ಇನ್ನೊಂದು ಜಾತಿಯ ಉಳಿವಿನಿಂದ ಸಮಾಜ ಉದ್ಧಾರವಾಗುವುದಿಲ್ಲ. ಎಲ್ಲ ಜಾತಿಗಳಿಗೂ, ಎಲ್ಲ ಕಸುಬುಗಳಿಗೂ ಮಾನ್ಯತೆ ದೊರೆತಾಗ ಮಾತ್ರ ಸಮಾಜ ಅಭಿವೃದ್ಧಿ ಹೊಂದುತ್ತದೆ’ ಎಂದರು.

ಸ್ವಾಮೀಜಿ, ಒಳ್ಳೆ ಮಾತುಗಳನ್ನೇ ಹೇಳಿದ್ದೀರಿ. ನಿಮ್ಮ ಮಾತುಗಳನ್ನು ನಿಮ್ಮ ಜೊತೆ ಸಭೆಯಲ್ಲಿ ಕೂರುವವರೆಲ್ಲ ಕೇಳಿ, ಅರ್ಥಮಾಡಿಕೊಳ್ಳುವಂತಾಗಲಿ.

ಮಂಕುತಿಮ್ಮನ ಕಗ್ಗ ಮತ್ತು ಗೋಮಾಂಸ


ಸಂವರ್ತ ‘ಸಾಹಿಲ್’


ನಾನು ಹೊರನೆಡೆದೆ.

ಸಿಟ್ಟು ಮತ್ತು ಅಸಹಾಯಕತೆ ಒಟ್ಟೊಟ್ಟಿಗೆ ಆಗಿ, ಸಿಟ್ಟೂ ಅಸಹಾಯಕತೆಯೂ ಮತ್ತಷ್ಟೂ ಹೆಚ್ಚುತ್ತಿತ್ತು.

ಮಂಕುತಿಮ್ಮನ ಕಗ್ಗದ ಓದು ಮತ್ತು ವ್ಯಾಖ್ಯಾನ ನಡೆದಿತ್ತು. ಅಮ್ಮ ಅಪ್ಪನ ಸಂಗಡ ಹೋಗಿದ್ದೆ. ಕಗ್ಗದ ಸಾಲುಗಳನ್ನ cowಹಾಡುತ್ತ ಅದನ್ನ ವ್ಯಾಖ್ಯಾನಿಸುತ್ತಿದ್ದಾತ ಸಜ್ಜನಿಕೆಗೆ ಹಸುವಿನ ಉದಾಹರಣೆ ಕೊಡುತ್ತ, “ದನವನ್ನು ಕಡಿಯುತ್ತಾರಲ್ಲ ಇಂದು ಅವರಿಗೆ ಏನನ್ನಬೇಕು?” ಎಂದ. ಆ ಸಾಲು ಹೇಳಬೇಕಾದರೆ ಅವನ ಮುಖದಲ್ಲಿ ಕಂಡ ರೋಷ ಸುಳ್ಳಲ್ಲ. ಕೇಳಲು ಬಂದಿದ್ದ ಜನರಲ್ಲಿ ಕೆಲವರು ಚಪ್ಪಾಳೆ ತಟ್ಟಿದರು. ಚಪ್ಪಾಳೆ ಸಮ್ಮತಿಯ ಸೂಚಕವಾಗಿತ್ತು.

ನಾನು ಹೊರನೆಡೆದೆ.

ಹೊರಗೆ ನಿಂತು ಕಾರ್ಯಕ್ರಮ ಮುಗಿಯಲಿ ಎಂದು ಕಾಯುತ್ತಿದ್ದೆ. ಅಮ್ಮ ಅಪ್ಪ ಇಬ್ಬರೂ ಒಳಗೆ ಕೂತು ಕಗ್ಗದ ಗಾಯನ ವ್ಯಾಖ್ಯಾನ ಆಲಿಸುತ್ತಾ ಇದ್ದರು. ಅವರಿಗಾಗಿ ಕಾಯುತ್ತಾ ನಿಂತೆ.

ಸ್ವಲ್ಪ ಹೊತ್ತಿನಲ್ಲೇ ಕಾರ್ಯಕ್ರಮ ಮುಗಿಯಿತು. ನೆರೆದಿದ್ದ ಜನರೆಲ್ಲಾ ಸಭಾಂಗಣದಿಂದ ಹೊರಬರಲಾರಂಬಿಸಿದರು. ನನ್ನ ಪೂರ್ವಾಶ್ರಮದ ಸಹೋದ್ಯೋಗಿ ಒಬ್ಬರು ಸಿಕ್ಕು ಅವರೊಂದಿಗೆ ಮಾತು ಶುರು ಮಾಡುತ್ತಿದ್ದಂತೆ ಅಮ್ಮ ಹತ್ತಿರ ಬಂದರು. ಅಮ್ಮನಿಗೆ ಇವರ ಪರಿಚಯ ಮಾಡಿಸಿ ಅವರಿಗೆ ಅಮ್ಮನ ಪರಿಚಯ ಮಾಡಿಸಿದೆ. ಆಗ ಅವರು ಅಮ್ಮನನ್ನು ನೋಡುತ್ತಾ, “ತುಂಬಾ ಚೆನ್ನಾಗಿತ್ತಲ್ಲ?” ಎಂದು ಪ್ರಶ್ನಿಸಿದರು. “ತುಂಬಾ ಚೆನ್ನಾಗಿತ್ತು,” ಎಂದು ಅಮ್ಮ ಉತ್ತರಿಸಿದರು. ಅವರ ದೃಷ್ಟಿ ನನ್ನತ್ತ ತಿರುಗಲು ನಾನು, “ವ್ಯಾಖ್ಯಾನದಲ್ಲಿ ಹೊಸದೇನು ಇರಲಿಲ್ಲ. ಆದರೆ ಚೆನ್ನಾಗಿ ಹಾಡ್ತಾ ಇದ್ದರು. ಆದರೆ ದನದ ವಿಷಯ ಹೇಳಿದ್ದು ನನಗೆ ರೇಗಿ ಹೋಯ್ತು,” ಎಂದೇ.

ಮಾತು ಆಡುತ್ತಿರಲು ಸ್ವರ ನನಗರಿವಿಲ್ಲದಂತೆ ಏರಿತ್ತು. “ಅದ್ಕೆ ಸಿಟ್ಟು ಯಾಕ್ ಮಾಡ್ಕೋತಿಯೋ?” ಅಂತ ಕೇಳಿದ ನನ್ನ ಪೂರ್ವಾಶ್ರಮದ ಸಹೋದ್ಯೋಗಿ, “ಅದು ಅವರ ದೃಷ್ಟಿಕೋನ ಅಂತ ಗೌರವಿಸಬೇಕಪ್ಪ,” ಎಂದು ಮುಂದುವರಿಸಲು ಈ ಕಡೆಯಿಂದ ಅಮ್ಮ, “ಹೌದಲ್ವಾ? ನೋಡಿ ಯಾವಾಗಲು ಹೀಗೆ,” ಎಂದರು.

ನಾನು ಗಾಡಿ ಪಾರ್ಕ್ ಮಾಡಿದ್ದ ಕಡೆಗೆ ಹೊರಟೆ. ಗಾಡಿ ಶುರು ಮಾಡಿ ಹೊರಟೆ.

ರಾತ್ರಿ ಊಟ ಮಾಡುವಾಗ ಅಮ್ಮ, “ನಮ್ಮ ಅಭಿಪ್ರಾಯ ತಿಳಿಸುವಾಗ ರೊಚ್ಚಿಗೇಳಬಾರದು. ಅದು ಒಳ್ಳೆಯ ಲಕ್ಷಣ ಅಲ್ಲ,” ಎಂದರು.

ಇನ್ನೊಬ್ಬರ ದೃಷ್ಟಿಕೋನ ಗೌರವಿಸಬೇಕು ಎಂದವರು ಇನ್ನೊಬರ ಆಹಾರ ಪದ್ಧತಿ ಇನ್ನೊಬರ ಜೀವನ ಪದ್ಧತಿ ಗೌರವಿಸಬೇಕು ಎಂದು ಯಾಕೆ ಯಾವತ್ತೂ ಹೇಳಲಿಲ್ಲ? ನಾನು ಸಿಟ್ಟು ಮಾಡಿಕೊಂಡರೆ ಅದು ಸರಿಯಲ್ಲ ಎಂದು ಹೇಳುವ ಅಮ್ಮನಿಗೆ ವ್ಯಾಖ್ಯಾನಕಾರನ ಮುಖದಲ್ಲಿ ಕಂಡ ರೋಷ ತಪ್ಪು ಎಂದು ಯಾಕೆ ಅನ್ನಿಸಲಿಲ್ಲ? — ಪ್ರಶ್ನೆ ಎದೆಯೊಳಗೆ ಇಟ್ಟುಕೊಂಡು ನನ್ನ ಕೋಣೆಯೊಳಕ್ಕೆ ನಡೆದೆ.

ಕಬೀರ್, ಹಾಜಬ್ಬ, ಹಸನಬ್ಬ, ನಜೀರ್ ಹೀಗೆ ಒಬ್ಬೊಬ್ಬರಾಗಿ ಮನದ ಓಣಿಯಲ್ಲಿ ಹಾದು ಹೋದರು… ನಿದ್ದೆ ಬರಲಿಲ್ಲ. anti cow slaughterಯಾಕೋ ಅತ್ತು ಬಿಡಬೇಕು ಅಂತ ಅನ್ನಿಸಿತು. ಅನ್ಯಾಯ ಅಸತ್ಯ ಎಲ್ಲದರ ನಡುವೆ ನಿಂತಾಗ ಸಿಟ್ಟಾಗುವುದು ತಪ್ಪು ಎಂದಾದಮೇಲೆ ಅಳದೆ ಮತ್ತಿನ್ನೇನು ಮಾಡಲು ಸಾಧ್ಯ?

ನಾನೇ ಇಷ್ಟು ಅಸಹಾಯಕನಾಗಿದ್ದರೆ ಇನ್ನು ನೇರವಾಗಿ ಅನ್ಯಾಯ ಎದುರಿಸಿದವರ ಅಸಹಾಯಕತೆ ಹೇಗಿರಬೇಕು? ಅವರ ಸಿಟ್ಟು ಹೇಗಿರಬೇಕು? — ಯೋಚಿಸಿದೆ. ಕಲ್ಪಿಸಿಕೊಳ್ಳಲಾಗಲಿಲ್ಲ.

ವಾಸ್ತವ ಕಲ್ಪನೆಗಳಿಗಿಂತ ಹೆಚ್ಚು ಭಯಾನಕವಾಗಿರುತ್ತದೆ ಎಂದು ಎಲ್ಲೋ ಕೇಳಿದ್ದೆ… ಅರಿವಾಗತೊಡಗಿತು.

ಎ.ಎನ್.ಎಫ್ ನಿಂದ ಕಬೀರ್ ಹತ್ಯೆ ಹಾಗೂ ದಿಕ್ಕು ತಪ್ಪುತ್ತಿರುವ ಹೋರಾಟ


-ಇರ್ಷಾದ್


 

 

 

ಎಪ್ರಿಲ್ 19ರಂದು ಚಿಕ್ಕಮಗಳೂರಿನ ಶೃಂಗೇರಿ ಕೆರೆಕಟ್ಟೆ ತನಿಕೋಡು ತಪಾಸಣಾ ಕೇಂದ್ರದಲ್ಲಿ ನಕ್ಸಲ್ ಎಂಬ ಶಂಕೆಗೆAnti-Naxal-Force ಅಮಾಯಕ ಜೀವವೊಂದು ಬಲಿಯಾಯಿತು. ಮಂಗಳೂರಿನ ಕಾಟಿಪಳ್ಳ ನಿವಾಸಿ ಕಬೀರ್ ಎದೆಯನ್ನು ನಕ್ಸಲ್ ನಿಗೃಹ ದಳದ ಸಿಬಂದಿಯ ಬಂದೂಕಿನ ಗುಂಡು ಸೀಳಿತ್ತು. ಕಬೀರ್ ಸಾವು ರಾಜ್ಯಾದ್ಯಂತ ಭಾರೀ ಸುದ್ದಿಯಾಗುತ್ತಿದೆ. ಒಂದರ ಹಿಂದೆ ಒಂದರಂತೆ ಕಬೀರ್ ಸಾವಿಗೆ ನ್ಯಾಯ ಕೋರಿ ಹೋರಾಟಗಳು, ಪ್ರತಿಭಟನೆಗಳು ನಡೆಯುತ್ತಿವೆ. ಆದರೆ ಪ್ರಭುತ್ವದ ದಬ್ಬಾಳಿಕೆ, ಬಡ ಆದಿವಾಸಿಗಳ ಮೇಲಿನ ದೌರ್ಜನ್ಯ ವಿರುದ್ಧ ದಂಗೆ ಎದ್ದು ಹೋರಾಟ ನಡೆಸುತ್ತಿರುವ ಶಕ್ತಿಗಳನ್ನು ಹುಟ್ಟಡಗಿಸುವ ಮನಸ್ಥಿತಿಯ ಬಂದೂಕಿನ ನಳಿಕೆಯಿಂದ ಹೊರ ಬಂದ ಗುಂಡಿನ ವಿರುದ್ಧ ನಡೆಯಬೇಕಾಗಿದ್ದ ಹೋರಾಟ ದಿಕ್ಕು ತಪ್ಪುತ್ತಿದೆ ಎಂದನಿಸುತ್ತಿದೆ. ಜಾತಿ ಧರ್ಮದ ಹೊರತಾಗಿ, ಪ್ರಭುತ್ವದ ಧೋರಣೆಯ ವಿರುದ್ಧ ಧ್ವನಿ ಎತ್ತುತ್ತಾ ಹೋರಾಟಕ್ಕಿಳಿದಿರುವ ನಕ್ಸಲರ ದಮನದ ಹೆಸರಲ್ಲಿ ನಡೆದ ಕಬೀರ್ ಹತ್ಯೆಯನ್ನು ಧರ್ಮದ ಬೇಲಿ ಕಟ್ಟಿ ಅದರ ನೆಲೆಗಟ್ಟಿನಲ್ಲಿ ನ್ಯಾಯ ಕೋರಿ ಹೋರಾಟ ನಡೆಯುತ್ತಿರುವುದು ಪ್ರಭುತ್ವದ ದಮನಕಾರಿ ನೀತಿಯ ವಿರುದ್ಧದ ಹೋರಾಟಕ್ಕೆ ಹಿನ್ನಡೆಯಾಗುವಂತಿದೆ.

ಜಾನುವಾರು ಸಾಗಾಟ ಸಂಧರ್ಭದಲ್ಲಿ ಗೋ ಮಾತೆ ಸಂರಕ್ಷಣೆ ಹೆಸರಲ್ಲಿ ಸಂಘ ಪರಿವಾರದ ಧರ್ಮಾಂಧರು ನಡೆಸುವ ದೌರ್ಜನ್ಯಕ್ಕೂ, ಪ್ರಭುತ್ವ ಬಡ ಜನರ ಮೇಲೆ, ಆದಿವಾಸಿಗಳ ಮೇಲೆ ನಡೆಸುತ್ತಿರುವ ದೌರ್ಜನ್ಯದ ವಿರುದ್ಧ ಸಿಡಿದೇಳುವ ಧ್ವನಿಯನ್ನು ಹತ್ತಿಕ್ಕಲು ನಡೆಸುತ್ತಿರುವ ದಮನಕಾರಿ ನೀತಿಗೂ ವ್ಯತ್ಯಾಸಗಳಿವೆ. ಕರ್ನಾಟದ ಪಶ್ವಿಮ ಘಟ್ಟದಲ್ಲಿ ನಕ್ಸಲ್ ಸಮಸ್ಯೆಯನ್ನು ಹತ್ತಿಕ್ಕಲು ಕಾರ್ಯಾಚರಣೆಗಿಳಿದಿರುವ ನಕ್ಸಲ್ ನಿಗ್ರಹ ಪಡೆಯ ಶಂಕೆಗೆ ಬಲಿಯಾಗಿರುವುದು ಕಬೀರ್ ಮಾತ್ರ ಅಲ್ಲ. ಇಂಥಹಾ ಹತ್ತಾರು ಕಬೀರರು ಈಗಾಗಲೇ ಪಶ್ವಿಮ ಘಟ್ಟದ ಅರಣ್ಯಗಳಲ್ಲಿ ನೆತ್ತರು ಸುರಿಸಿದ್ದಾರೆ. ಪ್ರಭುತ್ವದ ದಮನಕಾರಿ ನೀತಿಗೆ ಬಲಿಯಾದ ಅಮಾಯಕರಲ್ಲಿ ಇದೀಗ ಕಬೀರ್ ಕೂಡಾ ಒಬ್ಬ.

ನಕ್ಸಲ್ ನಿಗೃಹ ಪಡೆ ಹಾಗೂ ಆದಿವಾಸಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ

ಪಶ್ವಿಮ ಘಟ್ಟದಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಯೋಜನೆ ಜಾರಿಗೆ ಬಂದ ದಿನದಿಂದ ಈ ಭಾಗದಲ್ಲಿರುವ ಆದಿವಾಸಿಗಳು ತಮ್ಮ ನೆಲೆಯನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಕಾಡಿನ ಮಕ್ಕಳನ್ನು ಕಾಡಿಂದ ಹೊರದಬ್ಬುವ ಕಾರ್ಯ ವ್ಯವಸ್ಥಿತವಾಗಿ ನಡೆಯುತ್ತಾ ಬಂದಿದೆ. ಒಂದೆಡೆ ಪ್ರಭುತ್ವ ಬಲಪ್ರದರ್ಶನದಿಂದ ಈ ಕಾರ್ಯವನ್ನು ನಡೆಸುತ್ತಾ ಬರುತ್ತಿದ್ದರೆ ಇನ್ನೊಂದೆಡೆ ವಿದೇಶಿ ಹಣಕಾಸುVittal Malekudiya ನೆರವಿನಿಂದ ಕಾರ್ಯಾಚರಿಸುತ್ತಿರುವ ಸ್ವಯಂ ಸೇವಾ ಸಂಘಗಳು ಆದಿವಾಸಿಗಳನ್ನು ಕಾಡಿಂದ ಹೊರ ಹಾಕಲು ಪ್ರಯತ್ನಪಡುತ್ತಿವೆ. ಆನಾದಿ ಕಾಲದಿಂದ ಅರಣ್ಯದಲ್ಲೇ ನೆಲೆಕಂಡಿರುವ ಆದಿವಾಸಿ ಕುಟುಂಬಗಳು ಯಾವಾಗ ಪ್ರಭುತ್ವದ ಧೋರಣೆಯನ್ನು ವಿರೋಧಿಸಲಿಕ್ಕೆ ಆರಂಭಿಸಿದವೋ ಅಲ್ಲಿಂದ ನಕ್ಸಲ್ ನಿಗ್ರಹದ ಹೆಸರಲ್ಲಿ ಆದಿವಾಸಿಗಳ ಮೇಲೆ ನಿರಂತರ ದೌರ್ಜನ್ಯ ಆರಂಭವಾಗಿದೆ. ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕುತ್ಲೂರು ಗ್ರಾಮದಲ್ಲಿ ವಾಸವಾಗಿರುವ ಪತ್ರಿಕೋದ್ಯಮ ವಿದ್ಯಾರ್ಥಿ ವಿಠಲ ಮಲೆಕುಡಿಯ ಹಾಗೂ ಸ್ಥಳೀಯ ಕೆಲ ಯುವಕರು ಪ್ರಭುತ್ವದ ದೌರ್ಜನ್ಯಕ್ಕೆ ತುತ್ತಾಗಿದ್ದಾರೆ. ಇವರು ಹೇಳುವ ಪ್ರಕಾರ ಕೆಲ ವರ್ಷಗಳ ಹಿಂದೆ ಪ್ರತಿ ಶನಿವಾರ ಗ್ರಾಮದ ಜನರು ನಾರಾವಿ ಪೇಟೆಗೆ ಬಂದು ದಿನಬಳಕೆಯ ಸಾಮಾಗ್ರಿಗಳನ್ನು ಕೊಂಡ್ಯೊಯುವ ಸಂಧರ್ಭದಲ್ಲಿ ಎ.ಎನ್.ಎಫ್ ನಿಂದ ನಿರಂತರ ದಬ್ಬಾಳಿಕೆ ಇವರ ಮೇಲೆ ನಡೆಯುತ್ತಿತ್ತು. ಅಗತ್ಯಕ್ಕಿಂತ ಹೆಚ್ಚಾಗಿ ಧವಸ ಧಾನ್ಯಗಳನ್ನು ಖರೀದಿಸಿದಲ್ಲಿ ನಕ್ಸಲರಿಗೆ ಸಹಕಾರ ನೀಡುತ್ತಿದ್ದಾರೆ ಎಂಬ ಶಂಕೆಯಲ್ಲಿ ಎ.ಎನ್.ಎಫ್ ಸಿಬಂದಿಗಳು ಕಿರುಕುಳ ನೀಡುತ್ತಿದ್ದರು. ರಾತ್ರೋ ರಾತ್ರಿ ಮನೆಗಳಿಗೆ ನುಗ್ಗುವುದು, ನಕ್ಸಲರ ಬೆಂಬಲಿಗರು ಎಂಬ ಶಂಕೆಯಲ್ಲಿ ಸ್ಥಳೀಯ ಯುವಕರನ್ನು ಕಸ್ಟಡಿಯಲ್ಲಿ ಕೂಡಿ ಹಾಕಿ ಹಿಂಸೆ ನೀಡುವುದು ಇಲ್ಲಿ ಮಾಮೂಲಾಗಿತ್ತು. ಕುತ್ಲೂರು ನಿವಾಸಿಗಳಾದ ಪೂವಪ್ಪ ಮಲೆಕುಡಿಯ, ಲಿಂಗಣ್ಣ ಮಲೆ ಕುಡಿಯ , ವಿಠಲ್ ಮಲೆ ಕುಡಿಯ , ಶಶಿಧರ್ ಮಲೆ ಕುಡಿಯ ಎ.ಎನ್.ಎಫ್ ದೌರ್ಜನ್ಯದ ಬಲಿಪಶುಗಳು. ನಕ್ಸಲರ ಜೊತೆ ನಂಟು ಹೊಂದಿದ್ದಾರೆ ಎಂಬ ಶಂಕೆಯ ಕಾರಣಕ್ಕಾಗಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿರುವ ವಿಠಲ್ ಮಲೆಕುಡಿಯ ಮನೆಗೆ ನುಗ್ಗಿದ ಎ.ಎನ್.ಎಫ್ ವಿಠಲ ಮಲೆಕುಡಿಯ ಹಾಗೂ ಆತನ ತಂದೆ ಲಿಂಗಣ್ಣ ಮಲೆಕುಡಿಯ ಎಂಬಿಬ್ಬರನ್ನು 2012 ಮಾರ್ಚ್ 3 ರಂದು ಬಂಧಿಸಿದ್ದರು. ಇವರ ಮನೆಯಲ್ಲಿ ಶೋಧ ಮಾಡಿದಾಗ ಶಂಕಿತ ನಕ್ಸಲ್ ಎಂಬುವುದಕ್ಕೆ ಸಿಕ್ಕಿದ ಸಾಕ್ಷಿ ಚಾ ಹುಡಿ, ಸಕ್ಕರೆ, ಪೇಪರ್ ಕಟ್ಟಿಂಗ್ಸ್, ಮಕ್ಕಳು ಆಟವಾಡುವ ಬೈನಾಕ್ಯುಲರ್ !

ಶಂಕೆಗೆ ಬಲಿಯಾದ ಜೀವಗಳು

ಇವರಷ್ಟೇ ಅಲ್ಲ,  ನಕ್ಸಲ್ ನಿಗ್ರಹ ದಳದ ಶಂಕೆಗೆ ಕರ್ನಾಟಕದಲ್ಲಿ ಅಮಾಯಕ ಜೀವಗಳು ಬೆಲೆ ತೆತ್ತಿವೆ.

  •  2003 ನವಂಬರ್ 17- ಉಡುಪಿ ಜಿಲ್ಲೆಯ ಈದು ಗ್ರಾಮದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಹಾಜಿಮಾ -ಪಾರ್ವತಿ ಹತ್ಯೆ
  •  2005 ಜೂನ್ – ಉಡುಪಿ ಜಿಲ್ಲೆಯ ದೇವರ ಬಾಳು ಎನ್ ಕೌಂಟರ್ ನಲ್ಲಿ ಅಜಿತ್ ಕುಸುಬಿ – ಉಮೇಶ್ ಹತ್ಯೆ
  • 2006 ಡಿಸೆಂಬರ್ – ಶೃಂಗೇರಿ –ಕೆಸುಮುಡಿಯಲ್ಲಿ ನಾರಾವಿಯ ದಿನಕರ್ ಹತ್ಯೆ
  •  2007 ಜುಲೈ 10 – ಚಿಕ್ಕಮಗಳೂರು ಜಿಲ್ಲೆಯ ಮೆಣಸಿನ ಹಾಡ್ಯ ದಲ್ಲಿ ಒಬ್ಬ ಶಂಕಿತ ನಕ್ಸಲ್ ಹಾಗೂ ನಾಲ್ವರು ಆಮಾಯಕ ಆದಿವಾಸಿಗಳ ಹತ್ಯೆ.
  •  2008 ಚಿಕ್ಕಮಗಳೂರಿನ ಶೃಂಗೇರಿಯಲ್ಲಿ ಶಂಕಿತ ನಕ್ಸಲ್ ಮನೋಹರ್ ಹತ್ಯೆ .
  •  2010 ಮಾರ್ಚ್ 1 – ಕಾರ್ಕಳ ಅಂಡಾರು ಗ್ರಾಮಪಂಚಾಯತ್ ವ್ಯಾಪ್ತಿಯಯಲ್ಲಿ ಕುತ್ಲೂರು ಗ್ರಾಮದ ನಿವಾಸಿ ವಸಂತ್ ಹತ್ಯೆ
  •  2012- ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯದ ಚೇರು ಅರಣ್ಯ ಪ್ರದೇಶದಲ್ಲಿ ಶಂಕಿತ ನಕ್ಸಲ್ ಯಲ್ಲಪ್ಪ ಹತ್ಯೆ.
  •  2014 ಎಪ್ರಿಲ್ 19- ನಕ್ಸಲ್ ಶಂಕೆಯಲ್ಲಿ ಕಬೀರ್ ಹತ್ಯೆ.

ನಕ್ಸಲ್ ನಿಗ್ರಹ ಪಡೆ ನಡೆಸಿದ ಈ ಎಲ್ಲಾ ಹತ್ಯೆಗಳು ಶಂಕೆಯ ಆಧಾರದಲ್ಲಿ ನಡೆದ ಹತ್ಯೆಗಳಾಗಿವೆ. ಇದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ.  ವ್ಯಕ್ತಿಯೊಬ್ಬ ನಕ್ಸಲ್ ಎಂದು ಸಂಶಯ ಬಂದರೆ ಸಾಕು, ಆತನ ಬಂಧನಕ್ಕಿಂತ ಹತ್ಯೆ ಮಾಡಿ ಕೈತೊಳೆದುಬಿಡುವುದೇ ಲೇಸು ಎಂಬುವಂತಿದೆ ಎ.ಎನ್.ಎಫ್ ಕಾರ್ಯವೈಖರಿ. ಕಳೆದ 10 ವರ್ಷಗಳಿಂದ ನಕ್ಸಲ್ ನಿಗ್ರಹದ ಹೆಸರಲ್ಲಿ ನಡೆದ ಎಲ್ಲಾ ಹತ್ಯೆಗಳು ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕುವಂತಹದ್ದು, ಹತ್ಯಗೀಡಾದ ಶಂಕಿತ ನಕ್ಸಲರನ್ನು ತೀರಾ ಹತ್ತಿರದಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ ಎಂಬ ಆರೋಪವನ್ನು ಸತ್ಯಶೋಧನಾ ಸಮಿತಿಗಳು ಮಾಡುತ್ತಿವೆ. ಕಬೀರ್ ಹತ್ಯೆಯಲ್ಲೂ ಇಂಥಹ ಅನೇಕ ಅನುಮಾನಗಳು, ಪ್ರಶ್ನೆಗಳು ಕಾಡುತ್ತಿವೆ.

  • ನಕ್ಸಲ್ ಎಂಬ ಅನುಮಾನ ಬಂದ ಕೂಡಲೇ ಎದೆಗೆ ಗುರಿಯಿಟ್ಟು ಹತ್ಯೆ ಮಾಡುವ ಅವಷ್ಯಕತೆ ಏನಿತ್ತು?
  • ಯಾವುದೇ ದಾಳಿ ನಡೆಯದೇ ಇದ್ದರೂ ಪ್ರತಿದಾಳಿ ನಡೆಸುವಂತಹ ಅಧಿಕಾರ ಎ.ಎನ್.ಎಫ್ ಗೆ ಇದೆಯಾ?
  • ವ್ಯವಸ್ಥೆಯ ಅನ್ಯಾಯದ ವಿರುದ್ಧ ಧ್ವನಿ ಎತ್ತುವವರು, ಆದಿವಾಸಿಗಳು, ದಲಿತರು, ಹಿಂದುಳಿದವರು, ಬಡವರ ಕುರಿತಾದ ಪ್ರಭುತ್ವದ ಧೋರಣೆಗೆ ಎ.ಎನ್.ಎಫ್ ಗುಂಡಿನ ದಾಳಿ ಸಾಕ್ಷಿಯಾಗಿದೆಯೇ?
  •  ಪೊಲೀಸ್ ವ್ಯವಸ್ಥೆಯಲ್ಲಿರುವ ಮತಾಂಧ ಮನಸ್ಥಿತಿ ಕಬೀರ್ ಹತ್ಯೆಗೆ ಪ್ರೆರಣೆ ನೀಡಿತೇ ?
  •  ರಾಷ್ಟ್ರೀಯ ಹೆದ್ದಾರಿಯಲ್ಲೇ ಅನುಮಾನದಿಂದ ಅಮಾಯಕನನ್ನು ನಕ್ಸಲ್ ಹೆಸರಲ್ಲಿ ಹತ್ಯೆಗೈದ ಎ.ಎನ್.ಎಫ್ ದಟ್ಟ ಅರಣ್ಯದಲ್ಲಿ ನಕ್ಸಲ್ ನಿಗೃಹದ ಹೆಸರಲ್ಲಿ ನಡೆಸುತ್ತಿರುವ ಕಾರ್ಯಾಚರಣೆ ಹೇಗಿರಬಹುದು?

ಕಬೀರ್ ಹತ್ಯೆ ಇಂಥಹ ಹತ್ತು ಹಲವಾರು ಪ್ರೆಶ್ನೆಗಳು, ಅನುಮಾನಗಳು ಎ.ಎನ್.ಎಫ್ ಕಾರ್ಯವೈಖರಿಯ ಕುರಿತಾಗಿ ಹುಟ್ಟುಹಾಕಿದೆ. ಪಶ್ವಿಮ ಘಟ್ಟದಲ್ಲಿ ನಕ್ಸಲ್ ಚಟುವಟಿಕೆ ನಿಯಂತ್ರಿಸುವಲ್ಲಿ ಎ.ಎನ್.ಎಫ್ ಅಗತ್ಯ. ಆದರೆ ನಕ್ಸಲ್ ನಿಗ್ರಹದ ಹೆಸರಲ್ಲಿ ಅಮಾಯಕರ ನೆತ್ತರು ಹರಿಸುವ ಕಾಯಕದಲ್ಲಿ ತೊಡಗಿಕೊಂಡರೆ ನಕ್ಸಲ್ ನಿಯಂತ್ರಣ ಸಾಧ್ಯಾನಾ?

ಕಬೀರ್ ಹತ್ಯೆ ದಿಕ್ಕು ತಪ್ಪುತ್ತಿರುವ ಹೋರಾಟ

ಪಶ್ವಿಮ ಘಟ್ಟದಲ್ಲಿ ನಕ್ಸಲ್ ನಿಗ್ರಹದ ಹೆಸರಲ್ಲಿ ನಡೆದ ಹತ್ಯಾಕಾಂಡದ ಸರದಿಗೆ ಎಪ್ರಿಲ್ 19 ರಂದು ಶೃಂಗೇರಿಯ ಕೆರೆಕಟ್ಟೆ ತನಿಕೋಡು ಚೆಕ್ ಪೋಸ್ಟ್ ನಲ್ಲಿ ನಡೆದ ಕಬೀರ್ ಹತ್ಯೆ ಮತ್ತೊಂದು ಸೇರ್ಪಡೆಯಷ್ಟೇ. ವಿಪರ್ಯಾಸವೆಂದರೆ ಪ್ರಭುತ್ವದ ದಮನಕಾರಿ ನೀತಿಯ ವಿರುದ್ಧ ನಡೆಯಬೇಕಾದ ಹೋರಾಟ ಎಲ್ಲೋ ದಾರಿ ತಪ್ಪುತ್ತಿದೆ ಎಂದನಿಸುತ್ತಿದೆ. ಹೋರಾಟಕ್ಕೆ ಧರ್ಮದ “ ಫ್ರೇಮ್ ” ಕೊಡುವ ಕಾರ್ಯ ನಡೆಯುತ್ತಿದೆ. ಎ.ಎನ್.ಎಫ್ ನಿಂದ ಕಬೀರ್ ಹತ್ಯೆಯ ನಂತರ ನಡೆದ ತೀರಾ ಅಮಾನವೀಯ ಘಟನಾವಳಿಗಳು ಕಬೀರ್ ಹತ್ಯೆಯ ಹೋರಾಟವನ್ನು ಧರ್ಮದ ಫ್ರೇಮ್ ನೊಳಕ್ಕೆ ತಳ್ಳಿ ಪ್ರಭುತ್ವದ ದಮನಕಾರಿ ನೀತಿಯ ವಿರುದ್ಧ ನಡೆಯಬೇಕಾಗಿದ್ದ ಹೋರಾಟವನ್ನು ದಿಕ್ಕು ತಪ್ಪುವಂತೆ ಮಾಡಲಾಗುತ್ತಿದೆ.

ಪಶ್ವಿಮ ಘಟ್ಟದಲ್ಲಿ ಇದುವರೆಗೂ ಎ.ಎನ್.ಎಫ್ ದೌರ್ಜನ್ಯಕ್ಕೆ ಒಳಗಾದರು ಕೇವಲ ಮುಸ್ಲಿಮರಲ್ಲ, ಹಿಂದುಗಳಲ್ಲKabeer_ANF ಬದಲಾಗಿ ಇದನ್ನು ಮೀರಿ ನಿಂತ ಬಡವರು, ಆದಿವಾಸಿಗಳು, ಸಾಮಾಜಿಕ ಕಾರ್ಯಕರ್ತರು. ಪ್ರಭುತ್ವದ ಜನವಿರೋಧಿ ಯೋಜನೆಗಳಾದ ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಆನೆ ಕಾರಿಡಾರ್ , ಪುಷ್ಪಗಿರಿ ವನ್ಯಧಾಮ ಮೊದಲಾದವುಗಳು ಈ ಭಾಗದ ಹಿಂದುಗಳು, ದಲಿತರು, ಮುಸ್ಲಿಮರು, ಆದಿವಾಸಿಗಳು ಎಲ್ಲರ ಜೀವನವನ್ನು ಕಸಿದುಕೊಳ್ಳುವ ಯೋಜನೆಗಳಾಗಿದೆ. ಇಂತಹ ಯೋಜನೆಗಳಿಂದಾಗಿ ಈಗಾಗಲೇ ಅರಣ್ಯವಾಸಿಗಳು ನಾನಾ ರೀತಿಯಲ್ಲಿ ದೌಜನ್ಯಗಳನ್ನು ಅನುಭವಿಸುತ್ತಾ ಬಂದಿದ್ದಾರೆ. ಇನ್ನಷ್ಟು ಯೋಜನೆಗಳು ಜಾರಿಗೆ ಬಂದಲ್ಲಿ ಎಲ್ಲಾ ಧರ್ಮ, ಸಂಸ್ಕೃತಿಗಳ ಬಡ ಜನರು ತಮ್ಮ ಮನೆ ಮಠ ಆಸ್ತಿ, ನೆಲೆಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಸರ್ಕಾರದ ಇಂಥಹ ಯೋಜನೆಗಳನ್ನು ವಿರೋಧಿಸಿಯೇ ಈ ಭಾಗದಲ್ಲಿ ಚಳುವಳಿಗಳು ಹಟ್ಟುಕೊಂಡಿದ್ದು. ವಿರೋಧದ ಧ್ವನಿಗಳನ್ನು ಶಸ್ತ್ರದ ಮೂಲಕ ದಮನ ಮಾಡುವ ಉದ್ದೇಶದಿಂದ ಎ.ಎನ್.ಎಫ್ ಜನ್ಮ ತಾಳಿದೆ. ಪರಿಣಾಮ ಸಾಕಷ್ಟು ರಕ್ತ ಪಾತಗಳು ಪಶ್ವಿಮ ಘಟ್ಟದ ದಟ್ಟಾರಣ್ಯದಲ್ಲಿ ನಡೆಯುತ್ತಿವೆ. ಪ್ರಭುತ್ವದ ಇಂಥಹ ಮನಸ್ಥಿತಿಯೇ ಕಬೀರ್ ಹತ್ಯೆಗೆ ಕಾರಣವಾಗಿರುವುದು. ಯಾರನ್ನೂ ನಕ್ಸಲ್ ಎಂಬ ಶಂಕೆಯ ಹೆಸರಲ್ಲಿ ಗುಂಡಿಕ್ಕಿ ಕೊಲ್ಲುವುದು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ನ್ಯಾಯಸಮ್ಮತ ಹಾಗೂ ಅನಿವಾರ್ಯ ಎಂಬ ಭಾವನೆ ಪ್ರಭುತ್ವದ ಆದೇಶ ಪಾಲಕರಿಗಿದ್ದಂತಿದೆ. ಇಂಥಹ ಮನಸ್ಥಿತಿಯ ವಿರುದ್ಧ ಎಲ್ಲಾ ಜನಸಾಮಾನ್ಯರು ಹೋರಾಟ ನಡೆಸಬೇಕಾಗಿದೆ. ಕಬೀರ್ ಒಬ್ಬ ಮುಸ್ಲಿಮ್ ದನದ ವ್ಯಾಪಾರಿ ಎಂಬ ಕಾರಣಕ್ಕಾಗಿ ಆತನ ಹತ್ಯೆಯನ್ನು ಸಮರ್ಥಿಸುವುದು ತೀರಾ ಅಮಾನವೀಯ. ಅದೇ ರೀತಿ ಮುಸ್ಲಿಂ ಯುವಕನ ಹತ್ಯೆ ಮಾಡಲಾಗಿದೆ ಎಂಬ ಕಾರಣಕ್ಕಾಗಿ ಧರ್ಮದ ಲೇಪನ ಕೊಟ್ಟು ಹೋರಾಟ ಮಾಡುವುದು ಸಮ್ಮತವಲ್ಲ.

ಮನುಷ್ಯನ ರಕ್ತ ಚೆಲ್ಲಿದಕ್ಕೆ ಪಾರಿತೋಷಕ ಕೊಡುವ ಅಮಾನವೀಯತೆ ಬೇಡ

‘ಸ್ವಾಮಿ ವಿವೇಕಾನಂದ ಸಮಾಜಮುಖಿ ಚಿಂತಕ’ ಪುಸ್ತಕದ 43 ನೇ ಪುಟದಲ್ಲಿ ದಾಖಲಾದಂತೆ ಗೋ ರಕ್ಷಣಾ ಸಭೆಯ ಪ್ರಚಾರಕರೊಂದಿಗೆ ಮಾತನಾಡುತ್ತಾ ಸ್ವಾಮಿ ವಿವೇಕಾನಂದ ಹೀಗನ್ನುತ್ತಾರೆ. “ಮಧ್ಯ ಹಿಂದೂಸ್ಥಾನದಲ್ಲಿ ಭಯಂಕರವಾದ ಕ್ಷಾಮ ಬಂದಿದೆ. ಹೊಟ್ಟೆಗಿಲ್ಲದೆ ಒಂದು ಲಕ್ಷ ಜನರು ಸತ್ತುಹೋದರೆಂದು ಇಂಡಿಯಾ ಸರ್ಕಾರದವರು ಪಟ್ಟಿಕೊಟ್ಟಿದ್ದಾರೆ. ನಿಮ್ಮ ಸಭೆ ದುರ್ಭೀಕ್ಷ ಕಾಲದಲ್ಲಿ ಏನಾದರೂ ಸಹಾಯ ಮಾಡುವುದಕ್ಕೆ ಏರ್ಪಾಡು ಮಾಡಿದೆಯೇನೋ?”

ಪ್ರಚಾರಕ: ನಾವು ದುರ್ಭೀಕ್ಷ ಮೊದಲಾಲಾದವುಗಳಿಗೆ ಸಹಾಯ ಮಾಡುವುದಿಲ್ಲ. ಕೇವಲ ಗೋ ಮಾತೆಯ ರಕ್ಷಣೆಗೆ ಈ ಸಭೆ ಸ್ಥಾಪಿಸಲ್ಪಟ್ಟಿರುವುದು.

ಸ್ವಾಮೀಜಿ :ಅಣ್ಣ ತಮ್ಮಂದಿರಾದ ನಿಮ್ಮ ದೇಶದ ಜನರು ಲಕ್ಷ ಗಟ್ಟಲೆ ಮೃತ್ಯುವಿನ ಬಾಯಲ್ಲಿ ಬೀಳುತ್ತಿದ್ದಾರೆ, ಕೈಯಲ್ಲಾಗುತ್ತಿದ್ದರೂ ಇಂಥಹ ಭಯಂಕರವಾದ ದುಷ್ಕಾಲದಲ್ಲಿ ಅವರಿಗೆ ಅನ್ನ ಕೊಟ್ಟು ಸಹಾಯ ಮಾಡುವುದು ಯುಕ್ತವೆಂದು ನಿಮಗೆ ಅನ್ನಿಸುವುದಿಲ್ಲವೇ ?

ಪ್ರಚಾರಕ : ಇಲ್ಲ; ಕರ್ಮ ಫಲದಿಂದ, ಪಾಪದಿಂದ ಈ ಕ್ಷಾಮ ಬಂದಿದೆ. ಕರ್ಮಕ್ಕೆ ತಕ್ಕ ಫಲವಾಗಿದೆ.

ಸ್ವಾಮೀಜಿ: ಯಾವ ಸಭಾ ಸಮಿತಿಗಳು ಮನುಷ್ಯನಲ್ಲಿ ಸಹಾನುಭೂತಿಯನ್ನು ತೋರದೆ ತಮ್ಮ ಅಣ್ಣ ತಮ್ಮಂದಿರು ಹೊಟ್ಟೆಗಿಲ್ಲದೆ ಸಾಯುತ್ತಿತ್ತಿರುವುದನ್ನು ನೋಡಿಯೂ ಅವರ ಜೀವವನ್ನು ಉಳಿಸಲಿಕ್ಕೆ ಒಂದು ತುತ್ತು ಅನ್ನವನ್ನು ಕೊಡದೆ ಪಶು ಪಕ್ಷಿಗಳ ರಕ್ಷಣೆಗಾಗಿ ರಾಶಿ ರಾಶಿ ಅನ್ನವನ್ನು ದಾನ ಮಾಡುತ್ತವೆಯೋ ಅವುಗಳೊಡನೆ ನನಗೆ ಸ್ವಲ್ಪವೂ ಸಹಾನುಭೂತಿಯಿಲ್ಲ.

ಇಂಥಹ ಮಹಾನ್ ಸಂತ ಜನ್ಮ ತಾಳಿದ ಈ ನಾಡಿನಲ್ಲಿ ಎ.ಎನ್.ಎಫ್ ನಿಂದ ಹತ್ಯೆಗೀಡಾದ ಯುವಕ ಕಬೀರ್ ಗೋ ಸಾಗಾಟ ಮಾಡಿದ ಎಂಬ ಕಾರಣಕ್ಕಾಗಿ ಆತನ ಸಾವನ್ನು ಸಮರ್ಥಿಸಿಕೊಳ್ಳುವುದು, ಕಬೀರ್ ಸಾವಿಗೆ ಕಾರಣಕರ್ತನಾದ ಎ.ಎನ್.ಎಫ್ ಸಿಬಂಧಿಗೆ ಪಾರಿತೋಷಕಗಳನ್ನು ಘೋಷಣೆ ಮಾಡುವುದು ಅಮಾನವೀಯ ಅಲ್ಲವೇ? ಸ್ವಾಮಿ ವಿವೇಕಾನಂದರ ತತ್ವಾದರ್ಶದಲ್ಲಿ ಯಾರು ನಂಬಿಕೆ ಇಡುತ್ತಾರೋ ಅಂಥವರು ‘ಹತ್ಯೆಗೆ ಬಹುಮಾನ ಕೊಡುವ’ ನೀಚ ಮನಸ್ಥಿತಿಯನ್ನು ಖಂಡಿತಾ ಒಪ್ಪಲು ಸಾಧ್ಯವಿಲ್ಲ. ಎ.ಎನ್.ಎಫ್ ದೌರ್ಜನ್ಯಕ್ಕೆ ಬಲಿಯಾಗುತ್ತಿರುವ ಆದಿವಾಸಿಗಳು ಮುಸ್ಲಿಮರಲ್ಲ. ಇವರಲ್ಲಿ ಅನೇಕರು ಹಿಂದೂ ಧಾರ್ಮಿಕ ವಿಧಿ ವಿಧಾನಗಳಲ್ಲಿ ನಂಬಿಕೆ ಇಟ್ಟುಕೊಂಡವರು. ಕಬೀರ್ ಹತ್ಯೆಯನ್ನು ಅಭಿನಂದಿಸುವ ಹಿಂದೂ ಪರ ಸಂಘಟನೆಗಳು ಆದಿವಾಸಿಗಳ ಮೇಲಿನ ದಬ್ಬಾಳಿಕೆಗೆ ಪಾರಿತೋಷಕ ಕೊಡುತ್ತಾರೆಯೇ? ( ವಾಸ್ತವದಲ್ಲಿ ನಕ್ಸಲ್ ನಿಗ್ರಹದ ಹೆಸರಲ್ಲಿ ಆದಿವಾಸಿಗಳ ಮೇಲಿನ ಪ್ರಭುತ್ವದ ದೌರ್ಜನ್ಯಕ್ಕೆ ಬೆಂಬಲವಾಗಿ ನಿಂತವರು ಈ ಧರ್ಮ ರಕ್ಷಕರು) ಕಬೀರ್ ಹತ್ಯೆಯನ್ನು ಹಿಂದೂ – ಮುಸ್ಲಿಂ ಸಂಘಟನೆಗಳು ಧರ್ಮದ ಆಧಾರದಲ್ಲಿ ವಿಭಜಿಸ ಹೊರಟಿರುವುದು ಪ್ರಭುತ್ವದ ಆದೇಶ ಪಾಲಕರಿಗೆ ಇನ್ನಷ್ಟು ಬಲ ಬಂದತಾಗಿದೆ. ಶಂಕೆಯ ಆಧಾರದಲ್ಲಿ ನಡೆದ ಅಮಾಯಕರ ಹತ್ಯೆಯನ್ನು ನಾಗರಿಕ ಸಮಾಜ ವಿರೋಧಿಸಬೇಕಾಗಿದೆ. ಇಂದು ಕಬೀರ್ ನಾಳೆ ಸುರೇಶ್ ನಾಡಿದ್ದು ಜೋಕಬ್ ಹೀಗೆ ಆಡಳಿತ ವರ್ಗದ ದಮನಕಾರಿ ನೀತಿಗೆ ಬಲಿಯಾಗುತ್ತಲೇ ಇರಬೇಕಾಗುತ್ತದೆ. ಕಬೀರ್ ಹತ್ಯೆ ವಿರುದ್ಧ ಧ್ವನಿ ಎತ್ತುವ ನೆಪದಲ್ಲಿ ಮುಸ್ಲಿಮ್ ಮತೀಯ ಸಂಘಟನೆಗಳು ಹೋರಾಟವನ್ನು ಧಾರ್ಮಿಕ ಚೌಕಟ್ಟಿಗೆ ಸೀಮಿತಗೊಳಿಸುವುದು ಹಾಗೂ ಕಬೀರ್ ಹತ್ಯೆ ಒಬ್ಬ ಮುಸ್ಲಿಮ್ ಯುವಕನ ಹತ್ಯೆ ಎಂಬ ಕಾರಣಕ್ಕಾಗಿ ಕೊಲೆಯನ್ನು ಸಮರ್ಥಿಸಿಕೊಳ್ಳುವುದು ಇವೆರಡು ತೀರಾ ಅಪಾಯಕಾರಿ.

ಕಬೀರ್ ಹತ್ಯೆ: ಪ್ರಶ್ನೆಗಳಿರುವುದು ಪೊಲೀಸರಿಗೆ!

ಕಬೀರ್

– ಸತ್ಯ, ಶೃಂಗೇರಿ

ದನ ಸಾಗಿಸುತ್ತಿದ್ದ ವಾಹನದಲ್ಲಿದ್ದ ಕಬೀರ್ ನಕ್ಸಲ್ ನಿಗ್ರಹ ಪಡೆಯ ಗುಂಡು ತಗುಲಿ ಅಸುನೀಗಿದ್ದಾನೆ. ಅದು ಕೊಲೆ. ನಕ್ಸಲ್ ನಿಗ್ರಹ ಪಡೆ ಅಂತ ರೂಪಿಸಿ ಅಧಿಕಾರಿಗಳ ಕೈಗೆ ಗನ್ ಕೊಟ್ಟು ಅಮಾಯಕರನ್ನು ಹಿಡಿದು ಅವರ ಎದೆಗೆ ಗುಂಡಿಕ್ಕಿ ಎಂದು ಅಲ್ಲಿಗೆ ಕಳುಹಿಸಿದೆಯೇ ಸರಕಾರ? ಸರಕಾರಕ್ಕೆ, ಮುಖ್ಯಮಂತ್ರಿಗೆ, ಗೃಹಮಂತ್ರಿಗೆ ಕಲ್ಯಾಣ ರಾಜ್ಯದ ಕನಿಷ್ಟ ಪ್ರಜ್ಞೆ ಇದ್ರೆ ಮುಲಾಜಿಲ್ಲದೆ ಈ ಹೊತ್ತಿಗೆ ಗುಂಡು ಹೊಡೆದ ಸಿಬ್ಬಂದಿ ವಿರುದ್ಧ ಕೊಲೆ ಕೇಸು ದಾಖಲಿಸಿ ಮುಂದಿನ ಕ್ರಮ ತೆಗೆದುಕೊಳ್ಳಬೇಕಿತ್ತು. ಅವರಲ್ಲಿ ಅಂತಹದೊಂದು ಪ್ರಜ್ಞೆ ಕಾಣುತ್ತಿಲ್ಲ.

ಕಬೀರ್ ತನ್ನ ಇತರ ಗೆಳೆಯರೊಂದಿಗೆ ತನಿಕೋಡು ಚೆಕ್ ಪೋಸ್ಟ್ ಗೆ ಬಂದಾಗ ಪೊಲೀಸರು ಮತ್ತು ಅರಣ್ಯ ಸಿಬ್ಬಂದಿ (ಅದು ಅರಣ್ಯ ಇಲಾಖೆಯ ಚೆಕ್ ಪೋಸ್ಟ್) ವಾಹನ ತಡೆದಿದ್ದಾರೆ. ಅವರು ತಡೆಯುವ ಅಗತ್ಯವೇನಿಲ್ಲ, ಗೇಟು ಇರುವ ಕಾರಣ ಯಾರೇ ಹೋಗುವವರಿದ್ದರೂ ನಿಲ್ಲಿಸಲೇಬೇಕು. ಅಂತಹವರ ಮೇಲೆ ಸಿಬ್ಬಂದಿ ಗುಂಡು ಹಾರಿಸಿ ಒಬ್ಬ ಹುಡುಗನನ್ನು ಸಾಯಿಸಿದ್ದಾರೆ. ಈಗ ಪೊಲೀಸ್ ಅಧಿಕಾರಿಗಳು ಹೇಳುವ ಕತೆಯೇನೆಂದರೆ…

 

– ಆ ಪ್ರದೇಶದಲ್ಲಿ ನಕ್ಸಲರು ದಾಳಿ ನಡೆಸುವ ಸೂಚನೆ ಇತ್ತು. ಆ ಕಾರಣಕ್ಕೆ ಪೊಲೀಸರು ಹೆಚ್ಚಿನ ನಿಗಾ ವಹಿಸಿದ್ದರು. ಮೊದಲು ಬಂದ ಸೂಚನೆ ಪ್ರಕಾರ ನಕ್ಸಲರು ಅದೇ ಚೆಕ್ ಪೋಸ್ಟ್ ಮೇಲೆ ಚುನಾವಣೆ ಸಂದರ್ಭದಲ್ಲಿ ದಾಳಿ ನಡೆಸುವವರಿದ್ದರು. ಆ ನಂತರದ ಬಂದ ಮಾಹಿತಿ ಎಂದರೆ ಚುನಾವಣೆ ನಂತರ ಪೊಲೀಸರ ಪಡೆ ಕಡಿಮೆಯಾಗಿರುತ್ತದೆ ಎಂಬ ಲೆಕ್ಕಾಚಾರದಲ್ಲಿ ಚುನಾವಣೆ ನಂತರ ದಾಳಿ ಮಾಡಲು ಸಂಚು ರೂಪಿಸಿದ್ದರು.

– ಈ ಹಿನ್ನೆಲೆಯಲ್ಲಿ ಪೊಲೀಸರು ತೀವ್ರ ನಿಗಾ ವಹಿಸಿದ್ದರು. ದನ ಸಾಗಿಸುವ ವಾಹನ ಬಂದು ನಿಂತಾಕ್ಷಣ ಸಹಜವಾಗಿ ಅವರು ವಿಚಾರಿಸಿದರು. ಆದರೆ ಕೆಲವೇ ಕ್ಷಣಗಳಲ್ಲಿ, ವಾಹನದಿಂದ ಇಳಿದವರು ಅಲ್ಲಿದ್ದ ಸಿಬ್ಬಂದಿ ಮೇಲೆ ದಾಳಿ ಮಾಡಿ ಓಡಿಹೋಗಲು ಪ್ರಯತ್ನಿಸಿದರು. ಅವರ ವರ್ತನೆಯಿಂದ ಗಾಬರಿಗೊಂಡ ಸಿಬ್ಬಂದಿ, ಇವರು ನಕ್ಸಲರೇ ಇರಬೇಕು. ಹೀಗೆ ಓಡಿ ಹೋಗಿ ಚೆಕ್ ಪೋಸ್ಟ್ ಸುತ್ತ ಕವರ್ ಮಾಡಿ ದಾಳಿ ಮಾಡಬಹುದು ಎಂದು ಭಾವಿಸಿ ಗುಂಡು ಹಾರಿಸಿದರು. ದಾಳಿಯಲ್ಲಿ ಒಬ್ಬ ಹುಡುಗ ಸತ್ತ. ಇನ್ನೊಬ್ಬ ವಾಹನದ ಹಿಂಬದಿ ಕುಳಿತಿದ್ದ. ಅವನನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡರು. ಉಳಿದ ಮೂವರು ಅಲ್ಲಿಂದ ಓಡಿ ಹೋದರು.

ನಕ್ಸಲರ ದಾಳಿ ಬಗ್ಗೆ ಮಾಹಿತಿ ಇತ್ತು ಎನ್ನುವುದು ಪೊಲೀಸರ ಹೇಳಿಕೆ. ಈ ಹೇಳಿಕೆಗೆ ಯಾವ ಪುರಾವೆಗಳೂ ಸಿಗುವುದಿಲ್ಲ. ಇಂತಹ ಮಾಹಿತಿಗಳನ್ನು ಪೊಲೀಸರು ತಮ್ಮ ಸಂಬರ್ಭಕ್ಕನುಗುಣವಾಗಿ ಸೃಷ್ಟಿಸುವ ಮಟ್ಟಿಗೆ ಚಾಣಾಕ್ಷರು ಎಂಬುದರ ಬಗ್ಗೆ ಯಾರಿಗೂ ಸಂಶಯ ಬೇಡ. ಓಡಿಹೋಗುವವರಿಗೆ ಗುಂಡು ಹೊಡೆದೆವು ಎನ್ನುತ್ತಾರಲ್ಲ ಪೊಲೀಸರು, ಅವರು ಯಾರ ಕಿವಿ ಮೇಲೆ ಹೂ ಇಡಲು ಹೊರಟಿದ್ದಾರೆ? ಬೇಕಿದ್ದರೆ, ಅವರ ಮಂತ್ರಿ ಕೆ.ಜೆ. ಜಾರ್ಜ್ ಕಿವಿ ಮೇಲೆ ಇಡಲಿ, ಆ ಮನುಷ್ಯ ನಂಬ ಬಹುದೇನೋ? ಓಡಿ ಹೋಗುವವರಿಗೆ ಗುಂಡು ಹೊಡೆಯುವುದಾದರೆ ಅದು ನೇರವಾಗಿ ಎದೆಗೆ ಬೀಳಲು ಹೇಗೆ ಸಾಧ್ಯ?

ಒಂದು ಖ್ಯಾತ ಸುದ್ದಿ ವಾಹಿನಿಯವರು ಈ ಪ್ರಕರಣವನ್ನು ಸುದ್ದಿ ಮಾಡುವಾಗ “ನಕ್ಸಲರು ಅಲ್ಲದಿದ್ದರೆ, ಅವರೇಕೆ ಓಡಿಹೋದರು..?” ಎಂಬ ಪ್ರಶ್ನೆಯನ್ನು ಕೇಳಿದರು. ಇದು, “ನೀವು ಕಳ್ಳರಲ್ಲದಿದ್ರೆ, ನಿಮ್ಮನ್ನು ಅಟ್ಟಿಸಿಕೊಂಡು ಬಂದ ನಾಯಿಯನ್ನು ಕಂಡು ಏಕೆ ಓಡಿದಿರಿ” ಎಂಬ ಧಾಟಿಯಲ್ಲಿ ಕೇಳಿದಂತೆ. ತನ್ನ ಸಹಚರರಿಗೆ ಏಕಾಏಕಿ ಗುಂಡು ಹೊಡೆದು ಸಾಯಿಸುತ್ತಿದ್ದರೆ, ಅಲ್ಲಿ ಇರಬೇಕಿತ್ತು ಎಂದು ಬಯಸುತ್ತಾರಲ್ಲ, ಇವರೆಲ್ಲಾ ಸಾಮಾನ್ಯ ಪ್ರಜ್ಞೆಯನ್ನು ಎಲ್ಲಿ ಮಾರಿಕೊಂಡರು?

ಪೊಲೀಸ್ ಅಧಿಕಾರಿಗಳು ಒಪ್ಪಿಕೊಳ್ಳುವಂತೆ, ಎಎನ್ಎಫ್ ಸಿಬ್ಬಂದಿಯ ತಪ್ಪು ಗ್ರಹಿಕೆಯಿಂದ ಈ ಪ್ರಕರಣ ನಡೆದಿದೆ. ತಪ್ಪು ಗ್ರಹಿಕೆ ಎಂದು ಒಪ್ಪಿಕೊಳ್ಳುವುದಾರೆ ಮತ್ತು ಆ ತಪ್ಪಿಗೆ 5 ಲಕ್ಷ ರೂಗಳ ಪರಿಹಾರವನ್ನು ಮೃತರ ಕುಟುಂಬಕ್ಕೆ ನೀಡಿ ಸಾಂತ್ವನ ಹೇಳುವುದಾರೆ, ಎಎನ್ಎಫ್ ಸಿಬ್ಬಂದಿ ವಿರುದ್ಧ ಇರುವರೆಗೂ ಪೊಲೀಸ್ ಠಾಣೆಯಲ್ಲಿ ಪ್ರಕರಣ ಏಕೆ ದಾಖಲಾಗಿಲ್ಲ? ಸರಕಾರದ ಬಂದೂಕು ಎಂದರೆ, ಯಾರನ್ನಾದರೂ ಅನುಮಾನದ ಮೇಲೆ ಕೊಂದು ಶಿಕ್ಷೆ ತಪ್ಪಿಸಿಕೊಳ್ಳಬಹುದೇ? ಪೊಲೀಸರನ್ನು ಹಾಗಾದರೆ ಸರಕಾರ ಪ್ರಾಯೋಜಿತ ಗುಂಡಾಗಳೆಂದು ಕರೆಯಬೇಕೆ?

ಇನ್ನೂ ಘೋರ ಘಟನೆ ಎಂದರೆ, ಸಾವನ್ನಪ್ಪಿದ ಕಬೀರ್ ಕುಟುಂಬದವರು ಶೃಂಗೇರಿಗೆ ಹೋದಾಗ, ಅಲ್ಲಿಯ ಬಜರಂಗದಳ ಹುಡುಗರು ಅವರ ಮೇಲೆ ಹಲ್ಲೆ ನಡೆಸಿದ್ದು! ಅದೂ ಪೊಲೀಸರ ಎದುರೇ. ಮಗನನ್ನು ಕಳೆದುಕೊಂಡ ದು:ಖದಲ್ಲಿರುವವರಿಗೆ ಸಾಂತ್ವನ ಹೇಳುವುದು ಮನುಷತ್ವ. ಆದರೆ, ಅಂತಹವರಿಗೆ ಕಲ್ಲು ಹೊಡೆಯುವುದು, ಹೀಯಾಳಿಸುವುದು, ಹೊಡೆಯುವುದು, ಅವರ ವಾಹನ ಪುಡಿ-ಪುಡಿ ಮಾಡುವುದನ್ನು ಏನೆಂದು ಅಥೈಸಬೇಕು? ಇವರು ದನದ ವ್ಯಾಪಾರದಲ್ಲಿರುವವರು ಎಂಬ ಕಾರಣಕ್ಕೆ ಅವರ ಮೇಲೆ ಇಂತಹ ಹಲ್ಲೆ ನಡೆದಿದೆ. ಆ ಮೂಲಕ ಪೊಲೀಸರ ಹತ್ಯೆಯನ್ನು ಈ ಬಜರಂಗದಳ ಸಮರ್ಥಿಸುತ್ತದೆ!

ಪೊಲೀಸರ ಹತ್ಯೆ ಮತ್ತು ಬಜರಂಗದಳದವರ ಕೃತ್ಯಗಳಲ್ಲಿ ಢಾಳಾಗಿ ಕಾಣಿಸುವುದು ಮುಸ್ಲಿಮರನ್ನು ಈ ವ್ಯವಸ್ಥೆ ಹಾಗೂ ಕೋಮುವಾದಿ ಮನಸುಗಳು ಕಾಣುವ ಬಗೆ. ಇಂತಹ ಘಟನೆಗಳು ಅಲ್ಪಸಂಖ್ಯಾತ ಸಮುದಾಯದವರಲ್ಲಿ ಅನಾಥ ಪ್ರಜ್ಞೆ ಮೂಡಿಸಿದರೆ ಅಚ್ಚರಿಯೇನಿಲ್ಲ. ಈ ಭಾವನೆಗಳನ್ನು ಮೆಟ್ಟಿ ನಿಲ್ಲಲು ಸಾಧ್ಯವಾಗದೇ ಹೋಗುವವರು ಹೆಚ್ಚೆಚ್ಚು ಸಂಘಟಿತರಾಗಲು ಆ ಮೂಲಕ ರಕ್ಷಣೆ ಪಡೆಯಲು ಮೂಲಭೂತವಾದದ ಕಡೆಗೆ ಮುಖ ಮಾಡಬಹುದು. ಆ ಕಾರಣಕ್ಕಾಗಿಯೇ ಅಲ್ಪಸಂಖ್ಯಾತರ ಮೂಲಭೂತವಾದಿ ಚಟುವಟಿಕೆಗಳನ್ನು ಗ್ರಹಿಸಲು, ಬಹುಸಂಖ್ಯಾತ ವರ್ಗದ ಮೂಲಭೂತವಾದಿ ಚಟುವಟಿಕೆಗಳನ್ನು ಗ್ರಹಿಸುವಾಗ ಅನುಸರಿಸುವ ಮಾನದಂಡವನ್ನೇ ಅನುಸರಿಸುವುದು ಅಷ್ಟು ಸರಿ ಅಲ್ಲವೇನೋ ಎನಿಸುತ್ತದೆ.