ಹಿಂದುತ್ವ ಮಾದರಿಯ ನವ ಉದಾರೀಕರಣ

– ಇಂಗ್ಲೀಷ್ ಮೂಲ : ವರ್ಗೀಸ್ ಕೆ.ಜಾರ್ಜ
– ಅನುವಾದ : ಬಿ.ಶ್ರೀಪಾದ ಭಟ್

‘ಯಾರು ಹಿಂದೂಗಳ ಪರವಾಗಿ ಮಾತನಾಡುತ್ತಾರೋ ಅವರೇ ಈ ದೇಶವನ್ನು ಆಳುತ್ತಾರೆ’ ಎಂಬ ಘೋಷಣೆ ಹಾಗೂ ಮೋದಿಯ  ಮೋದಿಯ ಮುಖಪುಟವನ್ನು ಹೊತ್ತಂತmodi_bjp_conclave ದೊಡ್ಡ ಭಿತ್ತಿಪತ್ರಗಳು 2007 ರಲ್ಲಿ ಗುಜರಾತ್ ನಲ್ಲಿ ರಾರಾಜಿಸುತ್ತಿದ್ದವು. ಈ ಭಿತ್ತಿಪತ್ರಗಳನ್ನು 2007ರ ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ನಂತರ ಅದರ ಪಕ್ಷದ ಕಛೇರಿಯ ಮುಂದೆ ಪ್ರಚಾರಕ್ಕಾಗಿ ಅಂಟಿಸಲಾಗಿತ್ತು. 2012ರ ಮೂರನೇ ಗೆಲುವಲ್ಲ; 2007ರ ಗುಜರಾತ್ ವಿಧಾನ ಸಭಾ ಚುನಾವಣೆಯ ಎರಡನೇ ಗೆಲುವೇ ಮೋದಿ ಮಾದರಿಯ ಹಿಂದುತ್ವದ ಪಥಕ್ರಮಣದ ಮುನ್ನುಡಿಯಾಗಿತ್ತು. ಈ ಮುನ್ನುಡಿಯು ಮೂಲ ಹಿಂದುತ್ವದ ಮುಂದುವರೆದ ಅವತರಿಣಿಕೆಯಾಗಿತ್ತು. ರಾಜಕೀಯ ವ್ಯಾಖ್ಯಾನಕಾರರು ಇಂದಿನ 2014ರ ಚುನಾವಣೆಯ ಚರ್ಚೆಯನ್ನಾಗಿರಿಸಿಕೊಂಡಿರುವ ‘ಹಿಂದುತ್ವದ ಮೇಲೆ ಅಭಿವೃದ್ಧಿಯು ಮೇಲುಗೈ ಸಾಧಿಸಿದೆ’  ಎನ್ನುವ ಚಿಂತನೆ ಮತ್ತೇನಲ್ಲದೆ ಹಿಂದುತ್ವ 2.0 ಅಷ್ಟೇ. ಬಹುಪಾಲು ವ್ಯಾಖ್ಯಾನಕಾರರು ಮೋದಿ ಮಾದರಿಯ ರಾಜಕೀಯ ಎನ್ನುವುದು ಇದೆ ಎಂದು ಒಪ್ಪಿಕೊಂಡಿದ್ದಾರೆ. ಆದರೆ ಈ ಮಾದರಿಯನ್ನು ಅರ್ಥ ಮಾಡಿಕೊಂಡಿಲ್ಲ. ಕಳೆದ ಕೆಲವು ವರ್ಷಗಳಿಂದ  ನರೇಂದ್ರ ಮೋದಿಯ ರಾಜಕೀಯ ಮಾತುಗಳು ಮತ್ತು ನಡೆಗಳನ್ನು ಗಮನಿಸಿದರೆ ಧಾರ್ಮಿಕ ರಾಷ್ಟ್ರೀಯತೆಯನ್ನು ಆರ್ಥಿಕ ಅಭಿವೃದ್ಧಿಯೊಂದಿಗೆ ಬೆರೆಸುವುದೇ ಈ ಹಿಂದುತ್ವ 2.0ರ ಹೊಸ ಸಿದ್ಧಾಂತ ಎಂಬ ಅಂಶ ತಿಳಿಯುತ್ತದೆ.

ಇಂಡಿಯಾದಲ್ಲಿ ಹಿಂದುತ್ವದ ಬಲಪಂಥೀಯ ಸಿದ್ಧಾಂತದ ಬೆಳವಣಿಗೆ ಕುಂಠಿತಗೊಳ್ಳುತ್ತಿರುವುದಕ್ಕೆ ಮೂರು ಪ್ರಮುಖ ಸಂಧಿಗ್ಧತೆಗಳು ಮುಖ್ಯ ಕಾರಣಗಳಾಗಿವೆ. ಮೊದಲನೆಯದು ಹಿಂದು ಸಂಪ್ರದಾಯವಾದಿಗಳು ಮತ್ತು ಮಧ್ಯಮವರ್ಗಗಳ ನಡುವಿನ ಕಂದಕ. ಹಿಂದೂ ಧರ್ಮದ ಶ್ರೇಣೀಕೃತ ಸಮಾಜದ ಜಾತಿ ಪದ್ಧತಿಯಲ್ಲಿ ಅಲ್ಪಸಂಖ್ಯಾತರಾದ ಮೇಲ್ಜಾತಿಗಳ ಅಧಿಕಾರವನ್ನು ಇಂದಿನ ಪ್ರಜಾಪ್ರಭುತ್ವದ ಗಟ್ಟಿಯಾದ ನೆಲೆಯಲ್ಲಿ ನಿರಂತರವಾಗಿ ವಿರೋಧಿಸುತ್ತಿರುವ ಬಹುಸಂಖ್ಯಾತ ತಳ ಸಮುದಾಯಗಳು. ಮೂರನೆಯದು ತನ್ನ ಇಂದಿನ ಸಂಘಟನೆಯನ್ನು ಬಿಜೆಪಿಯ ರಾಜಕೀಯದೊಂದಿಗೆ ಬೆರೆಸುವುದು ಹೇಗೆ ಎನ್ನುವ ಜಿಜ್ಞಾಸೆಯಲ್ಲಿರುವ ಆರೆಸ್ಸೆಸ್.

ಕಳೆದ ಕೆಲವು ವರ್ಷಗಳ ರಾಜಕೀಯವನ್ನು ಗಮನಿಸಿದರೆ ಬಿಜೆಪಿಯ ಬೆಳವಣಿಗೆ ಭೌಗೋಳಿಕವಾಗಿ ಅಲ್ಲಲ್ಲಿ ತೇಪೆ ಹಚ್ಚಿದಂತಿದ್ದರೆ, ಚುನಾವಣಾ ಸಂಧರ್ಭದಲ್ಲಿ ಒಂದು ಎಪಿಸೋಡಿನಂತಿದೆ. ಇಂಡಿಯಾದಲ್ಲಿನ ಹಿಂದೂ ರಾಷ್ಟ್ರೀಯತೆಯ ಇತಿಹಾಸವನ್ನು ಗಮನಿಸಿದಾಗ ರಾಜಕೀಯ ವಿಶ್ಲೇಷಕರು ಮೋದಿಯು ತನ್ನ ಹಿಂದಿನ ತಲೆಮಾರಿನ ನಾಯಕರಾದ ವಾಜಪೇಯಿ ಮತ್ತು ಅಡ್ವಾಣಿನಿಗಿಂತಲೂ ಭಿನ್ನವಾಗಿರುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ‘ತಮ್ಮ ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗಲೇ ವಾಜಪೇಯಿಯವರನ್ನು ನಾವು ಸೋಲಿಸಿದ್ದೇವೆ; ಇನ್ನು ಈ ಮೋದಿ ಯಾವ ರೀತಿಯಲ್ಲಿಯೂ ವಾಜಪೇಯಿಯವರಿಗೆ ಸಮಾನರಲ್ಲ’ ಎಂದು ಕಾಂಗ್ರೆಸ್ ಪಕ್ಷದ ಜೈರಾಮ್ ರಮೇಶ್ ಹೇಳುತ್ತಾರೆ.

ಇತಿಹಾಸವು ಭವಿಷ್ಯದ ಮುನ್ಸೂಚಿ ಎನ್ನುವುದೇನೋ ನಿಜ. ಆದರೆ ಮೊದಲನೇ ಬಾರಿ ಎನ್ನುವ ಸಂಗತಿಯೂ ಇರುತ್ತದೆ ಎಂಬ ಪಾಠವನ್ನೂ ನಮಗೆ ಇತಿಹಾಸವು middleclass-indiaಕಲಿಸುತ್ತದೆ. ಕಳೆದ ಒಂದು ದಶಕದಲ್ಲಿ ಗುಜರಾತ್ ನಲ್ಲಿ ಜರುಗಿದ ಈ ಹಿಂದುತ್ವ  2.0 ದ ಸಾಮಾಜಿಕ ಲ್ಯಾಬೋರೇಟರಿಯು ಮೇಲಿನ ಮೂರು ಸಂಧಿಗ್ಧತೆಗಳನ್ನು ಮೀರಲು ಸಹಕಾರಿಯಾಗುತ್ತದೆ ಎನ್ನುವುದು ಸಣ್ಣ ವಿಷಯವೇನಲ್ಲ. ಈ ಆಧುನಿಕತೆಯ ಅಭಿವೃದ್ಧಿ ಮತ್ತು ಹಿಂದುತ್ವದ ಸಂಪ್ರದಾಯವನ್ನು ಒಂದಕ್ಕೊಂದು ಬೆರಸುವುದರಲ್ಲಿ ಮೋದಿ ನಿಪುಣ. ಟಾಟಾ ಕಂಪನಿಯ ನ್ಯಾನೋ ಕಾರಿನ ಕಾರ್ಖಾನೆ ಪಶ್ಚಿಮ ಬಂಗಾಳದಿಂದ ಗುಜರಾತ್ ಗೆ ಸ್ಥಳಾಂತರಗೊಂಡಾಗ ಮೋದಿಯು ಇದನ್ನು ಕ್ರಷ್ಣ ಪರಮಾತ್ಮನು ಉತ್ತರ ಪ್ರದೇಶದ ಮುಥುರಾದಲ್ಲಿ ಹುಟ್ಟಿ ದ್ವಾರಕೆಯಲ್ಲಿ ಬೆಳೆದದ್ದಕ್ಕೆ ಹೋಲಿಸಿದ್ದರು.

ಒಂದು ದಶಕದ ಹಿಂದೆ ಸಂಘಪರಿವಾರವು ವಾಜಪೇಯಿಯವರ ಮುಕ್ತ ಮಾರುಕಟ್ಟೆಯ ಆರ್ಥಿಕ ನೀತಿಯನ್ನು ತೀವ್ರವಾಗಿ ವಿರೋಧಿಸಿತ್ತು. ಇದಕ್ಕಾಗಿ ತನ್ನ ಅಂಗ ಸಂಸ್ಥೆ ಸ್ವದೇಶಿ ಜಾಗರಣ ಮಂಚವನ್ನು ಬಳಸಿಕೊಂಡಿತ್ತು. ಆದರೆ ಮೋದಿಯು ಈ ಸ್ವದೇಶಿ ಜಾಗರಣ ಮಂಚವನ್ನು ಗುಜರಾತ್ ರಾಜ್ಯದಿಂದಲೇ ಓಡಿಸಿಬಿಟ್ಟರು. ಬಲಪಂಥೀಯರ ಬಂಡವಾಳಶಾಹಿ ವಿರೋಧಿ ಧ್ವನಿಯು ಇಂದು ಕಾಣಿಸುತ್ತಿಲ್ಲ ಮತ್ತು ಕೇಳಿಸುತ್ತಿಲ್ಲ. ಆದರೆ ಸಾಂಪ್ರದಾಯಿಕತೆಯನ್ನು ಬಿಟ್ಟುಕೊಟ್ಟಿಲ್ಲ. ಎಪ್ರಿಲ್ ೨ ರಂದು ತನ್ನ ಬಿಹಾರಿನ ಚುನಾವಣಾ ಭಾಷಣದಲ್ಲಿ ಈ ಜನ್ಮಭೂಮಿಯು ಗೋವುಗಳನ್ನು ಪೂಜಿಸುವವರ ದೇಶ. ಹಾಗಾಗಿ ಗೋವು ಹತ್ಯೆ ಮಾಡುವವರನ್ನು ನೀವು ಹೇಗೆ ಬೆಂಬಲಿಸುತ್ತೀರಿ? ಎಂದು ಮೋದಿಯು ಸಭಿಕರನ್ನು ಪ್ರಶ್ನಿಸುತ್ತಾರೆ. ಆ ಮೂಲಕ ಕಳೆದ ಒಂದು ಶತಮಾನದ ಹಿಂದುತ್ವ ರಾಜಕೀಯದ ಫೇವರಿಟ್ ವಿಷಯವನ್ನು ಮರಳಿ ಎತ್ತಿಕೊಂಡು ಪ್ರಚೋದಿಸುತ್ತಾರೆ.

ಮತ್ತೊಂದೆಡೆ ಮೋದಿಯ ಹಿಂದುಳಿದ ವರ್ಗದ ಹಿನ್ನೆಲೆಯು ತಳ ಸಮುದಾಯಗಳು ಈ ಹಿಂದುತ್ವದ ಕುರಿತಾದ ಗುಮಾನಿಗಳನ್ನು ಕಳಚಿಕೊಳ್ಳಲು ಸಹಾಯ ಮಾಡುತ್ತಿದೆ. ರಾಜಕೀಯ ಪಕ್ಷವೊಂದು ತನ್ನ ಮಾತೃಪಕ್ಷದ ಸಿದ್ಧಾಂತ ಮತ್ತು ನಿಯಂತ್ರಣಕ್ಕೆ ಆದ್ಯತೆ ಕೊಡಬೇಕೆ ಅಥವಾ ಹೊಂದಾಣಿಕೆ ಮತ್ತು ಮುಕ್ತ ತತ್ವಗಳಿಗೆ ದಾರಿ ಮಾಡಿಕೊಡಬೇಕೆ ಎನ್ನುವ ಜಿಜ್ಞಾಸೆ ಸಂಘ ಪರಿವಾರದಲ್ಲಿ ಕಳೆದ ದಶಕದಿಂದಲೂ ನಡೆಯುತ್ತಿದೆ. 2009ರಲ್ಲಿನ ಸೋಲಿನ ನಂತರ ಈ ವಿಷಯಗಳು ಮತ್ತೆ ಚರ್ಚೆಗೆ ಬಂದವು. ಅರುಣ್ ಜೇಟ್ಲಿಯಂತವರು ಎರಡನೆಯದಕ್ಕೆ ಪ್ರಾಮುಖ್ಯತೆಯನ್ನು ಕೊಡಬೇಕೆಂದು ವಾದಿಸುತ್ತಿದ್ದಾರೆ. ಸ್ವತಃ ಮೋದಿಯೇ 2012ರವರೆಗೂ ಅನೇಕ ಬಾರಿ ತನ್ನ ಮಾತೃಪಕ್ಷ ಆರೆಸ್ಸೆಸ್ ನ ಹುಕುಂಗಳನ್ನು ಉಲ್ಲಂಘಿಸಿದ್ದರು. ಆದರೆ ಕಳೆದ ಎರಡು ವರ್ಷಗಳಿಂದ ತನ್ನದೇ ನೆಲೆಗಟ್ಟನ್ನು ಕಂಡುಕೊಳ್ಳಲು ಸೋತಿದ್ದ ಬಿಜೆಪಿ ಪಕ್ಷವು ದಯನೀಯವಾಗಿ ಆರೆಸ್ಸೆಸ್ ಗೆ ಶರಣಾಗತವಾಯಿತು. ಹಳೆ ತಲೆಮಾರಿನವರು ಇಂದಿಗೂ ಸಂಘ ಪರಿವಾರದಲ್ಲಿ ಪ್ರಾಮುಖ್ಯತೆ ಹೊಂದಿದ್ದಾರೆ ಎಂದು ಪರಸ್ಪರ ಮೋಸಗೊಳಿಸುವ ವಿಚಿತ್ರವಾದ ಹೊಂದಾಣಿಕೆ ಸಧ್ಯಕ್ಕೆ ಈ ಆರೆಸಸ್-ಬಿಜೆಪಿಯ ನಡುವೆ ಏರ್ಪಟ್ಟಿದೆ.ಆದರೆ ಇವರಿಬ್ಬರೂ ಮಾಡುತ್ತಿರುವ ಏಕೈಕ ಕೆಲಸವೆಂದರೆ ಮೋದಿಯನ್ನು ಪೈಪೋಟಿಯಲ್ಲಿ ಓಲೈಸುವುದು.

ಆರೆಸ್ಸೆಸ್ ನ ಸಂಚಾಲಕ ರಾಮ ಮಾಧವ ಅವರು “ಇಲ್ಲಿ ಎರಡು ವಿಷಯಗಳಲ್ಲಿ ನಮ್ಮಲ್ಲಿ ಸಹಭಾಗಿತ್ವವಿದೆ. ಮೊದಲನೆಯದು ನಾವೆಲ್ಲರೂ ನಂಬಿರುವ, ಒಪ್ಪಿರುವ narender_modi_rssನಮ್ಮ ಹಿಂದುತ್ವದ ಸಿದ್ಧಾಂತ. ಎರಡನೆಯದು ಮಾನವ ಸಂಪನ್ಮೂಲವನ್ನು ಹಂಚಿಕೊಳ್ಳುವುದು. ಈ ಎರಡೂ ವಿಷಯಗಳಲ್ಲಿಯೂ ಆರೆಸಸ್ ಮತ್ತು ಬಿಜೆಪಿಯ ನಡುವೆ ಮೊದಲಿನಿಂದಲೂ ಇರುವ ಸೌಹಾರ್ದಯುತವಾದ ಮತ್ತು ಸಾಂಪ್ರದಾಯಿಕವಾದ ಸಂಬಂಧಗಳನ್ನು ಮುಂದುವರೆಸುತ್ತೇವೆ.” ಎಂದು ಹೇಳುತ್ತಾರೆ. ಮೋದಿಯನ್ನು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಏಕೈಕ ನಾಯಕನೆಂದು ಬಿಂಬಿಸುವುದರ ಅಗತ್ಯತೆಯ ಕುರಿತಾದ ಪ್ರಶ್ನೆಗೆ ಉತ್ತರಿಸುತ್ತಾ “ಆರೆಸಸ್ ಒಬ್ಬ ವ್ಯಕ್ತಿಯನ್ನು ನಾಯಕನನ್ನಾಗಿ ಬಿಂಬಿಸಲು ಎಂದಿಗೂ ವಿರೋಧಿಸುವುದಿಲ್ಲ. ನಿಜಕ್ಕೂ ಹೇಳಬೇಕೆಂದರೆ ಅದು ಇಂದು ಅಗತ್ಯವಾಗಿದೆ. 2009ರ ನಮ್ಮ ’ಅಡ್ವಾಣಿ ನಮ್ಮ ಪ್ರಧಾನ ಮಂತ್ರಿ’ ಸ್ಲೋಗನ್ ಅನ್ನು ಜನ ಮರೆತಿದ್ದಾರೆ.  ಹೀಗಾಗಿ ಮೋದಿಯವರ ಏಕೈಕ ನಾಯಕನೆಂದು ಓಲೈಸುವುದರಲ್ಲಿ ಅಂತಹ ಅಭೂತಪೂರ್ವವಾದದ್ದೇನು ಇಲ್ಲ” ಎಂದು ವಿವರಿಸಿದರು. ಇಂದು ಮೋದಿಯ ವ್ಹಿಪ್ ಅನ್ನು ಈಡೇರಿಸಲು ಆರೆಸಸ್ ತನ್ನ ವ್ಹಿಪ್ ಅನ್ನು ಬಳಸುತ್ತಿದೆ.

ಆರ್ಥಿಕ ಸುಧಾರಣೆಯ ಸಂಬಂಧದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ನಡುವೆ ಕೆಲವು ಸಾಮ್ಯತೆಗಳಿದ್ದರೂ ಅನೇಕ ಭಿನ್ನತೆಗಳಿವೆ. ಅದರಲ್ಲಿ ಪ್ರಮುಖವಾದದ್ದು ಹಿಂದೂಗಳ ಒಳಗೊಳ್ಳುವಿಕೆಯೇ ಆರ್ಥಿಕ ಪ್ರಗತಿ ಮತ್ತು ಅಭಿವೃದ್ಧಿಯ ಮೂಲ ಉದ್ದೇಶವಾಗಿರಬೇಕೆಂಬುದು ಹಿಂದುತ್ವ 2.0ದ ಮೂಲಭೂತ ಆಶಯ. ಇಂದಿನ ಗುಜರಾತ್ ರಾಜ್ಯ ಸರಕಾರವು ಮುಸ್ಲಿಂಮರಿಗೆ ಸ್ಕಾಲರ್ಶಿಪ್ ಸೌಲಭ್ಯವನ್ನು ವಿರೋಧಿಸಿ ಸುಪ್ರೀಂ ಕೋರ್ಟನಲ್ಲಿ ಕೇಸ್ ನಡೆಸುತ್ತಿದೆ. ಬಡವರಿಗಾಗಿ ಹಮ್ಮಿಕೊಳ್ಳಲಾಗುವ ಕಲ್ಯಾಣ ಕಾರ್ಯಕ್ರಮಗಳನ್ನು ಒಂದು ವ್ಯರ್ಥವಾದ, ಹಣ ಪೋಲು ಮಾಡುವ ಕಾರ್ಯಕ್ರಮವೆಂದು ಮೋದಿ ಖಂಡಿಸಿದ್ದಾರೆ.  ‘ಆಹಾರ ಭದ್ರತೆ ಕಾಯ್ದೆ’ಯನ್ನು ಕೇವಲ ಒಂದು ಕಾಗದದ ತುಂಡು ಮಾತ್ರ ಎಂದು ಟೀಕಿಸಿದ್ದಾರೆ. ಅಲ್ಲದೆ  ಕೊಳ್ಳುಬಾಕುತನದ ಆರ್ಥಿಕ ಅಭಿವೃದ್ಧಿಯ ಜೊತೆ ಜೊತೆಗೆ ಹಿಂದೂಗಳ ಅಭಿವೃದ್ಧಿಯೂ ಸಹ ಆದ್ಯತೆಯಾಗಿ ಪರಿಗಣಿತವಾಗಿದೆ.

ಮೋದಿಯ ಹೇಳಿಕೆಗಳನ್ನು Deconstruct ಮಾಡಬಯಸುವವರು ಕೆಲವು ಸಾದೃಶ್ಯಗಳನ್ನು ಸೂಕ್ಷ್ಮವಾಗಿ ಗ್ರಹಿಸಬೇಕಾಗಿದೆ. ಮೋದಿಗಾಗಿ ‘ಗುಜರಾತ್  2002’ ಅನ್ನು cut off point ಆಗಿ ಪರಿಗಣಿಸುತ್ತಾರೆ. ಎಲ್ಲಾ ಹೋಲಿಕೆಗಳನ್ನು 2002ರ ಮುಂಚೆ ಮತ್ತು ನಂತರ ಎಂದು ಚರ್ಚಿಸಲಾಗುತ್ತದೆ. “2002 ರ ಮುಂಚೆ ಇಷ್ಟೊಂದು ಶಾಲೆಗಳು, ಇಷ್ಟೊಂದು ನೀರಾವರಿ ಯೋಜನೆಗಳು; 2002ರ ನಂತರ ಎಷ್ಟೊಂದು ಶಾಲೆಗಳು ಹಾಗೂ ಇನ್ನೂ ಎಷ್ಟೊಂದು ಯೋಜನೆಗಳು.” ಹಾಗೆಯೇ ಕೋಮು ಗಲಭೆಗಳು ಸಹ. “2002ರ ಮುಂಚೆ ಎಷ್ಟೊಂದು ಕೋಮು ಗಲಭೆಗಳು; 2002ರ ನಂತರ ಒಂದೂ ಕೋಮು ಗಲಭೆಗಳಿಲ್ಲ.”

ಆಮೆ ವೇಗದ ಆರ್ಥಿಕ ಪ್ರಗತಿಯನ್ನು ‘ಹಿಂದೂ ಮಾದರಿಯ ಪ್ರಗತಿ’ ಎನ್ನುವ ಅಪಹಾಸ್ಯಕ್ಕೆ ವ್ಯತಿರಿಕ್ತವಾಗಿ ಹಿಂದೂ ಪ್ರತಿಪಾದನೆ, ಕೊಳ್ಳು ಬಾಕುತನದ ಉತ್ಕರ್ಷ, ಆರ್ಥಿಕ ಅಭಿವೃದ್ಧಿ ಎನ್ನುವ ಅಂಶಗಳು ಹಿಂದುತ್ವದ ಬೆಳವಣಿಗೆಯ ದಿಕ್ಸೂಚಿ ಎಂದು ಪರಿಗಣಿಸಲಾಗುತ್ತಿದೆ. ಏಕೆಂದರೆ ‘ಹಿಂದೂ ಪುಕ್ಕಲುತನ’ ಎನ್ನುವ ಅಪಮಾನದ ಸ್ಥಿತಿಗೆ ಈ ದೇಶವೆಲ್ಲಿ ಮರಳುತ್ತೇವೆಯೋ ಎನ್ನುವ ಆತಂಕ ಇಂಡಿಯಾದ ಮಧ್ಯಮವರ್ಗಗಳಲ್ಲಿ ಮನೆಮಾಡಿದೆ. ಈ ಆತಂಕವನ್ನು ಮೀರುವ ಪ್ರಕ್ರಿಯೆಯೇ ಹಿಂದುತ್ವ 2.0ದ ಹುಟ್ಟಿಗೆ ಕಾರಣವಾಗಿದೆ.

 ಹಿಂದುತ್ವ 2.0 ದ ಸಹಾಯದಿಂದ ತನ್ನೆಲ್ಲ ದೌರ್ಬಲ್ಯಗಳನ್ನು ಮೀರಿ ಬೆಳೆಯಲು ಹಿಂದೂ ರಾಷ್ಟ್ರೀಯವಾದಿ ರಾಜಕಾರಣವು ತವಕಿಸುತ್ತಿದೆ.

( ಕೃಪೆ : ದ ಹಿಂದೂ, 4,ಎಪ್ರಿಲ್, 2014)

Leave a Reply

Your email address will not be published. Required fields are marked *