ಮಂಕುತಿಮ್ಮನ ಕಗ್ಗ ಮತ್ತು ಗೋಮಾಂಸ


ಸಂವರ್ತ ‘ಸಾಹಿಲ್’


ನಾನು ಹೊರನೆಡೆದೆ.

ಸಿಟ್ಟು ಮತ್ತು ಅಸಹಾಯಕತೆ ಒಟ್ಟೊಟ್ಟಿಗೆ ಆಗಿ, ಸಿಟ್ಟೂ ಅಸಹಾಯಕತೆಯೂ ಮತ್ತಷ್ಟೂ ಹೆಚ್ಚುತ್ತಿತ್ತು.

ಮಂಕುತಿಮ್ಮನ ಕಗ್ಗದ ಓದು ಮತ್ತು ವ್ಯಾಖ್ಯಾನ ನಡೆದಿತ್ತು. ಅಮ್ಮ ಅಪ್ಪನ ಸಂಗಡ ಹೋಗಿದ್ದೆ. ಕಗ್ಗದ ಸಾಲುಗಳನ್ನ cowಹಾಡುತ್ತ ಅದನ್ನ ವ್ಯಾಖ್ಯಾನಿಸುತ್ತಿದ್ದಾತ ಸಜ್ಜನಿಕೆಗೆ ಹಸುವಿನ ಉದಾಹರಣೆ ಕೊಡುತ್ತ, “ದನವನ್ನು ಕಡಿಯುತ್ತಾರಲ್ಲ ಇಂದು ಅವರಿಗೆ ಏನನ್ನಬೇಕು?” ಎಂದ. ಆ ಸಾಲು ಹೇಳಬೇಕಾದರೆ ಅವನ ಮುಖದಲ್ಲಿ ಕಂಡ ರೋಷ ಸುಳ್ಳಲ್ಲ. ಕೇಳಲು ಬಂದಿದ್ದ ಜನರಲ್ಲಿ ಕೆಲವರು ಚಪ್ಪಾಳೆ ತಟ್ಟಿದರು. ಚಪ್ಪಾಳೆ ಸಮ್ಮತಿಯ ಸೂಚಕವಾಗಿತ್ತು.

ನಾನು ಹೊರನೆಡೆದೆ.

ಹೊರಗೆ ನಿಂತು ಕಾರ್ಯಕ್ರಮ ಮುಗಿಯಲಿ ಎಂದು ಕಾಯುತ್ತಿದ್ದೆ. ಅಮ್ಮ ಅಪ್ಪ ಇಬ್ಬರೂ ಒಳಗೆ ಕೂತು ಕಗ್ಗದ ಗಾಯನ ವ್ಯಾಖ್ಯಾನ ಆಲಿಸುತ್ತಾ ಇದ್ದರು. ಅವರಿಗಾಗಿ ಕಾಯುತ್ತಾ ನಿಂತೆ.

ಸ್ವಲ್ಪ ಹೊತ್ತಿನಲ್ಲೇ ಕಾರ್ಯಕ್ರಮ ಮುಗಿಯಿತು. ನೆರೆದಿದ್ದ ಜನರೆಲ್ಲಾ ಸಭಾಂಗಣದಿಂದ ಹೊರಬರಲಾರಂಬಿಸಿದರು. ನನ್ನ ಪೂರ್ವಾಶ್ರಮದ ಸಹೋದ್ಯೋಗಿ ಒಬ್ಬರು ಸಿಕ್ಕು ಅವರೊಂದಿಗೆ ಮಾತು ಶುರು ಮಾಡುತ್ತಿದ್ದಂತೆ ಅಮ್ಮ ಹತ್ತಿರ ಬಂದರು. ಅಮ್ಮನಿಗೆ ಇವರ ಪರಿಚಯ ಮಾಡಿಸಿ ಅವರಿಗೆ ಅಮ್ಮನ ಪರಿಚಯ ಮಾಡಿಸಿದೆ. ಆಗ ಅವರು ಅಮ್ಮನನ್ನು ನೋಡುತ್ತಾ, “ತುಂಬಾ ಚೆನ್ನಾಗಿತ್ತಲ್ಲ?” ಎಂದು ಪ್ರಶ್ನಿಸಿದರು. “ತುಂಬಾ ಚೆನ್ನಾಗಿತ್ತು,” ಎಂದು ಅಮ್ಮ ಉತ್ತರಿಸಿದರು. ಅವರ ದೃಷ್ಟಿ ನನ್ನತ್ತ ತಿರುಗಲು ನಾನು, “ವ್ಯಾಖ್ಯಾನದಲ್ಲಿ ಹೊಸದೇನು ಇರಲಿಲ್ಲ. ಆದರೆ ಚೆನ್ನಾಗಿ ಹಾಡ್ತಾ ಇದ್ದರು. ಆದರೆ ದನದ ವಿಷಯ ಹೇಳಿದ್ದು ನನಗೆ ರೇಗಿ ಹೋಯ್ತು,” ಎಂದೇ.

ಮಾತು ಆಡುತ್ತಿರಲು ಸ್ವರ ನನಗರಿವಿಲ್ಲದಂತೆ ಏರಿತ್ತು. “ಅದ್ಕೆ ಸಿಟ್ಟು ಯಾಕ್ ಮಾಡ್ಕೋತಿಯೋ?” ಅಂತ ಕೇಳಿದ ನನ್ನ ಪೂರ್ವಾಶ್ರಮದ ಸಹೋದ್ಯೋಗಿ, “ಅದು ಅವರ ದೃಷ್ಟಿಕೋನ ಅಂತ ಗೌರವಿಸಬೇಕಪ್ಪ,” ಎಂದು ಮುಂದುವರಿಸಲು ಈ ಕಡೆಯಿಂದ ಅಮ್ಮ, “ಹೌದಲ್ವಾ? ನೋಡಿ ಯಾವಾಗಲು ಹೀಗೆ,” ಎಂದರು.

ನಾನು ಗಾಡಿ ಪಾರ್ಕ್ ಮಾಡಿದ್ದ ಕಡೆಗೆ ಹೊರಟೆ. ಗಾಡಿ ಶುರು ಮಾಡಿ ಹೊರಟೆ.

ರಾತ್ರಿ ಊಟ ಮಾಡುವಾಗ ಅಮ್ಮ, “ನಮ್ಮ ಅಭಿಪ್ರಾಯ ತಿಳಿಸುವಾಗ ರೊಚ್ಚಿಗೇಳಬಾರದು. ಅದು ಒಳ್ಳೆಯ ಲಕ್ಷಣ ಅಲ್ಲ,” ಎಂದರು.

ಇನ್ನೊಬ್ಬರ ದೃಷ್ಟಿಕೋನ ಗೌರವಿಸಬೇಕು ಎಂದವರು ಇನ್ನೊಬರ ಆಹಾರ ಪದ್ಧತಿ ಇನ್ನೊಬರ ಜೀವನ ಪದ್ಧತಿ ಗೌರವಿಸಬೇಕು ಎಂದು ಯಾಕೆ ಯಾವತ್ತೂ ಹೇಳಲಿಲ್ಲ? ನಾನು ಸಿಟ್ಟು ಮಾಡಿಕೊಂಡರೆ ಅದು ಸರಿಯಲ್ಲ ಎಂದು ಹೇಳುವ ಅಮ್ಮನಿಗೆ ವ್ಯಾಖ್ಯಾನಕಾರನ ಮುಖದಲ್ಲಿ ಕಂಡ ರೋಷ ತಪ್ಪು ಎಂದು ಯಾಕೆ ಅನ್ನಿಸಲಿಲ್ಲ? — ಪ್ರಶ್ನೆ ಎದೆಯೊಳಗೆ ಇಟ್ಟುಕೊಂಡು ನನ್ನ ಕೋಣೆಯೊಳಕ್ಕೆ ನಡೆದೆ.

ಕಬೀರ್, ಹಾಜಬ್ಬ, ಹಸನಬ್ಬ, ನಜೀರ್ ಹೀಗೆ ಒಬ್ಬೊಬ್ಬರಾಗಿ ಮನದ ಓಣಿಯಲ್ಲಿ ಹಾದು ಹೋದರು… ನಿದ್ದೆ ಬರಲಿಲ್ಲ. anti cow slaughterಯಾಕೋ ಅತ್ತು ಬಿಡಬೇಕು ಅಂತ ಅನ್ನಿಸಿತು. ಅನ್ಯಾಯ ಅಸತ್ಯ ಎಲ್ಲದರ ನಡುವೆ ನಿಂತಾಗ ಸಿಟ್ಟಾಗುವುದು ತಪ್ಪು ಎಂದಾದಮೇಲೆ ಅಳದೆ ಮತ್ತಿನ್ನೇನು ಮಾಡಲು ಸಾಧ್ಯ?

ನಾನೇ ಇಷ್ಟು ಅಸಹಾಯಕನಾಗಿದ್ದರೆ ಇನ್ನು ನೇರವಾಗಿ ಅನ್ಯಾಯ ಎದುರಿಸಿದವರ ಅಸಹಾಯಕತೆ ಹೇಗಿರಬೇಕು? ಅವರ ಸಿಟ್ಟು ಹೇಗಿರಬೇಕು? — ಯೋಚಿಸಿದೆ. ಕಲ್ಪಿಸಿಕೊಳ್ಳಲಾಗಲಿಲ್ಲ.

ವಾಸ್ತವ ಕಲ್ಪನೆಗಳಿಗಿಂತ ಹೆಚ್ಚು ಭಯಾನಕವಾಗಿರುತ್ತದೆ ಎಂದು ಎಲ್ಲೋ ಕೇಳಿದ್ದೆ… ಅರಿವಾಗತೊಡಗಿತು.

9 thoughts on “ಮಂಕುತಿಮ್ಮನ ಕಗ್ಗ ಮತ್ತು ಗೋಮಾಂಸ

  1. Naveen

    What you mean by Poorvashramada snehita? Now you are in which aashrama and what is your poorvashrama?? Why only friend is from poorvashrama and not parents as you not mentioned that word for them??

    Reply
  2. ವಿಜಯ್

    ಈ ಲೇಖನ ಓದಿ ಮುಗಿಸಿದ ಮೇಲೆ ನನಗೂ ಅಳು ಬಂತು.. ಎದ್ದು ಕನ್ನಡಿ ನೋಡಿಕೊಂಡೆ..ತಲೆಯ ಮೇಲೆ ಕೋಡು, ಬಾಯಿಯಲ್ಲಿ ಕೋರೆದಾಡೆಗಳು ಮೂಡಿವೆಯೇನೊ ಅಂತ..ಮೂಡಿರಲ್ಲಿಲ್ಲ. ನನ್ನ ಕನ್ನಡಿ ‘ನನ್ನದೇ’ ಆಗಿರುವುದರಿಂದ ಇವನ್ನೆಲ್ಲ ತೋ ರಿಸದಿರಬಹುದೆಂದು ಸ್ನೇಹಿತರ ಮನೆಗೆ ಹೋಗಿ, ಅವರಿಗೆ ಕೇಳಿದೆ..ಅವರ ಕನ್ನಡಿಯಲ್ಲಿ ನೋಡಿಕೊಂಡೆ..ಅಲ್ಲೂ ಕಾಣಲಿಲ್ಲ. ಮಿದುಳಿನೊಳಗಡೆ ಏನಾದರೂ ಮೂಡಿರಬಹುದೆ ಎಂದುಕೊಂಡರೆ, ಅದು ಅವರಿವರಿಗೆ ಪಾಪ ಎಂದು ಮರಗುವುದನ್ನು ಇನ್ನೂ ಉಳಿಸಿಕೊಂಡಿತ್ತು. ಹೊರಗೆ ಗಾಯ ಕಾಣದ ಹಾಗೆ, ಮಿದುಳು ಉಪಯೋಗಿಸಿ ಅಮಾನವೀಯವಾಗಿ ತಿವಿದ ಎಂದು ಹೆಚ್ಚಿನ ಜನ ಇನ್ನುವರೆಗೂ ಹೇಳಿಲ್ಲ. ಇದೇನೇ ಇದ್ದರೂ ನನಗೆ ಕೆಲವರಿಗೆ ಇರುವಷ್ಟು ಮಾನವೀಯತೆ ಇಲ್ಲವಲ್ಲ, ಇವರ ಹಾಗೆ ನಾನು ‘ಸುಧಾರಿಸು’ವ ಸಾಧ್ಯತೆಯೂ ಇಲ್ಲವಲ್ಲ ಎಂದು ತಿಳಿದು ಮತ್ತೆ ಬಿಕ್ಕಿ ಬಿಕ್ಕಿ ಅತ್ತೆ…

    Reply
    1. BNS

      “…ತಲೆಯ ಮೇಲೆ ಕೋಡು, ಬಾಯಲ್ಲಿ ಕೋರೆ ದಾಡೆಗಳು ಮೂಡಿವೆಯೇನೋ ಅಂತ..”, “…ಹೊರಗೆ ಗಾಯ ಕಾಣದ ಹಾಗೆ <> ತಿವಿದ..”, “…ಇವರ ಹಾಗೆ ನಾನು ಸುಧಾರಿಸುವ ಸಾಧ್ಯತೆಯೂ ಇಲ್ಲವಲ್ಲ ಎಂದು ತಿಳಿದು ಮತ್ತೆ ಬಿಕ್ಕಿ ಬಿಕ್ಕಿ ಅತ್ತೆ..” ಹ ಹಾ..ಸೊಗಸಾಗಿದೆ ಸರ್ ತಮ್ಮ ವ್ಯಂಗ್ಯ..ಇದು ಈ ಖೊಟ್ಟಿ ಅಂತಃಕರಣದವರಿಗೆ ಮುಟ್ಟುವುದು ಸಂದೇಹ!

      Reply
  3. ಕೀರ್ತಿ ಬೆಂಗಳೂರು

    ಅದ್ಭುತವಾದ ಲೇಖನ ಸಂವರ್ತ ಸಾಹಿಲ್ ಅವರೇ , ಧನ್ಯವಾದಗಳು ತಮಗೆ. ನಿರೂಪನೆಯೂ ಅಧ್ಬುತವಾಗಿದೆ. ಮನಮುಟ್ಟುವಂತಿದೆ. ತಮ್ಮ ಸಂಸ್ಕೃತಿ , ಭಾಷೆ ಆಚಾರ ವಿಚಾರಗಳನ್ನು , ತಮ್ಮ ಸೋ ಕಾಲ್ಡ್ ದೇವರು, ಧರ್ಮಗಳನ್ನು ಇತರರ ಮೇಲೆ ಹೇರುವ ಮನಸ್ಸುಗಳ ವಿರುದ್ಧ ನಿಮ್ಮ ಹೋರಾಟದಲ್ಲಿ ನಮ್ಮ ಧ್ವನಿಯೂ ನಿಮ್ಮೊಂದಿಗಿದೆ.

    Reply
  4. VinData

    Looks like last couple of paras were written to instigate people of certain sections. Guess what that is “secularism”.

    Reply
  5. Godbole

    ಕೃತಕ ಮಾನವೀಯತೆ ತೋರಿಸಲು ಹೋಗಿ ಲೇಖನ ಹಾಸ್ಯಾಸ್ಪದವಾಗಿಬಿಟ್ಟಿದೆ.

    Reply
  6. M A Sriranga

    ಸಂವರ್ತ ಸಾಹಿಲ್ ಅವರಿಗೆ—-ಮಂಕುತಿಮ್ಮನ ಕಗ್ಗದ ಯಾವ ಪದ್ಯದದಲ್ಲಿ (stanza) ಗೋಮಾಂಸ ಸೇವನೆ ನಿಷಿದ್ಧ ಎಂಬ ಅರ್ಥದಲ್ಲಿ ಡಿ. ವಿ ಜಿ ಅವರು ಹೇಳಿದ್ದಾರೆ ಎಂದು ತಿಳಿಸಿದ್ದರೆ ಚೆನ್ನಾಗಿತ್ತು. ಏಕೆಂದರೆ ಡಿ. ವಿ ಜಿ ಅವರ ನೆನಪಿನ ಸಂಪುಟಗಳಾದ “ಜ್ಞಾಪಕಚಿತ್ರಶಾಲೆ” ಯಲ್ಲಿ ಅವರು ಎಷ್ಟು liberal ಆಗಿ ಯೋಚಿಸುತ್ತಿದ್ದರು ಎಂಬುದನ್ನು ತಿಳಿಯಬಹುದು. ಗೋಮಾಂಸ ಸೇವನೆ ಬಗ್ಗೆ ಇತ್ತೀಚಿನ ಕೆಲವು ವರ್ಷಗಳಲ್ಲಿ ಎದ್ದಿರುವ ಪರ-ವಿರೋಧದ ಬಿಸಿ ಬಿಸಿ ಚರ್ಚೆಗಳು ಡಿ ವಿ ಜಿ ಅವರ ಕಾಲದಲ್ಲಿ ಒಂದು issue ಆಗಿರಲಿಲ್ಲ. ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಮೂಲ ಪದ್ಯಕ್ಕೂ ಅದನ್ನು ವ್ಯಾಖ್ಯಾನಿಸುವ ರೀತಿಗೂ ಸಾಕಷ್ಟು ವ್ಯತ್ಯಾಸಗಳಿರುತ್ತವೆ. ಮಹಾಭಾರತದಲ್ಲಿ ಬರುವ ದ್ಯೂತ ಪ್ರಸಂಗದಲ್ಲಿನ ದ್ರೌಪದಿ ವಸ್ತ್ರಾಪಹರಣದಿಂದ ದುರ್ಯೋಧನ ದುಶ್ಯಾಸನರನ್ನು ಖಳನಾಯಕರನ್ನಾಗಿ ಕಾಣುವುದು ಸಾಮಾನ್ಯವಾಗಿದೆ. ಆದರೆ ಜೂಜಿನ ನಿಯಮಾವಳಿಯ ಪ್ರಕಾರ ಹೆಂಡತಿಯನ್ನು ಪಣಕ್ಕಿಟ್ಟು ಸೋತಮೇಲೆ ಗಂಡನಾದವನಿಗೆ ಯಾವ ಹಕ್ಕೂ ಇಲ್ಲ. ಆಕೆ ದಾಸಿ. ಹೊಸ ಯಜಮಾನನ ಅಪ್ಪಣೆಯಂತೆ ನಡೆಯಬೇಕು ಹಾಗಾದರೆ ಕೌರವರದ್ದು ತಪ್ಪೇನು ಇಲ್ಲ ಅಲ್ಲವೇ? ಆ ಪ್ರಸಂಗದಲ್ಲಿ ಈ ಅಂಶವೇ ಭೀಷ್ಮ,ವಿದುರ ಇತ್ಯಾದಿಗಳ ಮೌನಕ್ಕೆ ಕಾರಣ. ಇದನ್ನ್ನು ಅರಿಯಬೇಕು. ಪುಣ್ಯಕೋಟಿಯ ಕಥೆಯ ಬಗ್ಗೆಯೂ ಒಂದು ವಿವಾದವನ್ನು ನವ ಬುದ್ಧಿಜೀವಿಗಳು ಎರಡು ಮೂರು ವರ್ಷಗಳ ಹಿಂದೆ ಎಬ್ಬಿಸಿದ್ದರು. . ಗೋವು ಹುಲಿಯ ಆಹಾರ. ಹೀಗಾಗಿ ಹುಲಿಯು ಪುಣ್ಯಕೋಟಿಯನ್ನು ಮೊದಲನೇ ಸಲ ವಾಪಸ್ಸು ಕಳುಹಿಸಿದ್ದೆ ತಪ್ಪು. ಹುಲಿಯ ಆಹಾರಕ್ಕೆ ಭಂಗ ಬಂದಹಾಗೆ ಆಗಲಿಲ್ಲವೇ? ನಂತರ ಮಾತು ತಪ್ಪದೆ ಪುಣ್ಯಕೋಟಿ ವಾಪಸ್ಸು ಬಂದಾಗ ಹುಲಿಯು ಗುಡ್ಡದಿಂದ ಹಾರಿ ಪ್ರಾಣ ಬಿಡುವ ಮೂಲಕ ಗೋವಿನ ಬಗ್ಗೆ ಪೂಜ್ಯ ಭಾವನೆ ಬರುವ ರೀತಿಯಲ್ಲಿ ಹಿಂದಿನಿಂದ ವ್ಯಾಖ್ಯಾನಿಸುತ್ತಾ ಬರಲಾಗಿದೆ. ಇದು ತಪ್ಪು ಎಂಬುದು “ಆಹಾರ ನೀತಿ ನಿರೂಪಣೆ ನಿರ್ಮಾಪಕರಾದ” ಆ ಬುದ್ಧಿಜೀವಿಗಳ ವಾದ. ಅಲ್ಲಿ ಕೊಟ್ಟ ಮಾತಿಗೆ ತಪ್ಪಬಾರದು ಎಂಬ ಸಾಮಾನ್ಯ ನೀತಿ ಅಷ್ಟೇ ಇದೆಯೇ ಹೊರತು ಆಹಾರ ಸೇವನೆಯಲ್ಲಿನ ವಿಧಿ-ನಿಷೇಧಗಳ ಪ್ರಸ್ತಾಪ ಬರುವುದಿಲ್ಲ. ನಾವು ಪ್ರೈಮರಿ ಶಾಲೆಗಳಲ್ಲಿ ಓದಿದ್ದೂ, ಈಗ ಅದನ್ನು ಮತ್ತೊಮ್ಮೆ ಓದಿದರೂ ಅದೇ ಅರ್ಥ ಕಾಣುತ್ತದೆ. ಆದರೆ ನಮಗಿಷ್ಟಬಂದ ಹಾಗೆ ವ್ಯಾಖ್ಯಾನಿಸಿದರೆ ಈ ರೀತಿಯ ಹೊಸ ಅರ್ಥಗಳನ್ನು ಸಂಶೋಧಿಸಬಹುದು. ಬೇಂದ್ರೆ ಅವರ “ಇನ್ನೂ ಯಾಕ ಬರಲಿಲ್ಲ ಹುಬ್ಬಳಿಯಾಂವ ” ಕವನವನ್ನು ಸಹ ಅಶ್ಲೀಲಾರ್ಥದಲ್ಲಿ ಸಭೆಯೊಂದರಲ್ಲಿ ಬೇಂದ್ರೆಯವರ ಸಮ್ಮುಖದಲ್ಲೇ ವ್ಯಾಖ್ಯಾನಿಸಿದಾಗ ಅದು “ಆ ರೀತಿಯ ಕವನ ಅಲ್ಲ” ಎಂದು ಬೇಂದ್ರೆಯವರು ಹೇಳಿದ್ದುಂಟು. ಹೀಗಾಗಿ ಡಿ ವಿ ಜಿ ಅವರ ಮಂಕುತಿಮ್ಮನ ಕಗ್ಗದ ಆ ಪದ್ಯವನ್ನು ತಾವು ತಿಳಿಸಿದರೆ ಚರ್ಚೆಗೆ ಅನುಕೂಲ.

    Reply
  7. Salam Bava

    ‘ನಾನೇ ಇಷ್ಟು ಅಸಹಾಯಕನಾಗಿದ್ದರೆ ಇನ್ನು ನೇರವಾಗಿ ಅನ್ಯಾಯ ಎದುರಿಸಿದವರ ಅಸಹಾಯಕತೆ ಹೇಗಿರಬೇಕು? ಅವರ ಸಿಟ್ಟು ಹೇಗಿರಬೇಕು? — ಯೋಚಿಸಿದೆ. ಕಲ್ಪಿಸಿಕೊಳ್ಳಲಾಗಲಿಲ್ಲ.’
    ಇಂಥಃ ಒಂದು ಲೇಖನ ಕೊಟ್ಟದ್ದಕ್ಕೆ ಧನ್ಯವಾದಗಳು ಮೇಲಿನ ನಿಮ್ಮ ವಾಕ್ಯದಲ್ಲ್ಲಿ ಇರುವ ನೋವು ,ಅದನ್ನೇ ಸ್ವತಹ ಅನುಭವಿಸುವವರಿಗೆ ಎಂಥಾ ನೋವು ಕೊಟ್ಟಿರಬಹುದು ?
    ಶಾಲೆಗೇ ಹೋದ ಮಕ್ಕಳು,ಬದುಕು ಸಂಪಾದಿಸಲು ಹೋದ ಗಂಡ ತಿರುಗಿ ಮನೆಗೆ ಬರುವ ವರೆಗೂ ದಿನವೂ ಆತಂಕದಿಂದ ಕಳೆಯುವ ಓರ್ವ ಮಹಿಳೆಯ ಮನಸ್ಥಿತಿ ಆಲೋಚಿಸಿ ನೋಡಿ . ಸ್ವಂತ ನಾಡಿನಲ್ಲಿ ,ಸ್ವದೇಶಿಯರನ್ನು ಯಾವಗಲೂ ಸಂಶಯದಿನ್ದಲೇ ನೋಡುವ,ಅವರ ಮೇಲೆ ದೌರ್ಜನ್ಯ ಎಸಗುವ ಒಂದು ಬಲಿಷ್ಟ ಗುಂಪು ಇರುವಾಗ ,ಈ ಸಮುದಾಯ ಯಾವಗಲೂ ಭೀತಿಯ ನೆರಳಲ್ಲೇ ಬದುಕುವ ಒಂದು ಅಸಹನೀಯ ಸಂಧರ್ಭ ಹೇ ಗಿರಬಹುದೆಂದು ವಿವರಿಸುವ ನಿಮ್ಮ ಪ್ರಯತ್ನ ಸ್ವಾಗತನೀಯ .ಸಹೋದರರಲ್ಲಿ ಮಾನವೀಯತೆ ಇನ್ನೂ ಪಸರಿಸುತ್ತ್ತಿದೆ , ಎಂಬುದರ ದ್ಯೋತಕ . ಇದು ಯಾರ ಸಹಾನುಭೂತಿಗೆ ಬೇಕಾಗಿ ಬರೆದದ್ದಲ್ಲ ..ಈ ನೋವು ಸಹಾ ಕೆಲವರ ಗೇಲಿಗೆ ಕಾರಣವಾಗುವ ಬಗ್ಗೆ ವಿರೋದವಿದೆ

    Reply

Leave a Reply

Your email address will not be published. Required fields are marked *