Monthly Archives: May 2014

ಮತದಾರನಿಂದ ದೂರ ಸರಿದಷ್ಟು ಪಕ್ಷ ಸೊರಗುತ್ತದೆ


– ಡಾ.ಎಸ್.ಬಿ. ಜೋಗುರ


 

ಕಳೆದ ಲೋಕಸಭಾ ಚುನಾವಣೆಯ ಫ಼ಲಿತಾಂಶ ಅದೇಕೋ ಮರೆತೆನಂದರೂ ಮರೆಯುತ್ತಿಲ್ಲ. ಈ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಅತ್ಯಂತ ಅಗ್ರಗಣ್ಯ ಪಾತ್ರ ನಿರ್ವಹಿಸಿದ ನೂರಾರು ವರ್ಷಗಳ ರಾಜಕೀಯ ಚರಿತ್ರೆಯಿರುವ ಕಾಂಗ್ರೆಸ್ ಪಕ್ಷ ಹೀಗೆ ಕೇವಲ ೪೪ ಸ್ಥಾನಗಳನ್ನು ಗೆಲ್ಲುವ ಮೂಲಕ ದೇಶವ್ಯಾಪಿಯಾಗಿ ಸಂಕೋಚವನ್ನು ಅನುಭವಿಸಬೇಕಾಯಿತು. ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಈ ಬಗೆಯ ಸೋಲಿನ ಹೊಣೆಯನ್ನು ಖುದ್ದಾಗಿ ತಾವೇ ಹೊರುತ್ತೇವೆ ಎಂದರೂ ಅವರ ಸುತ್ತ ಮುತ್ತಲಿರುವ ಅನೇಕ ಹಿರಿ-ಕಿರಿಯ ಕಾಂಗೈ ನಾಯಕರು ಅದು ಹೇಗೆ ಆದೀತು.. ಸೋಲಿಗೆ ನಾವೂ ಹೆಗಲು ಕೊಡುತ್ತೇವೆ ಎನ್ನುವಂತೆ ರಾಗ ತೆಗೆದಿರುವದೂ ಇತ್ತು. ಹೀಗೆ ಕುಟುಂಬ ರಾಜಕಾರಣವನ್ನು ಕಾಂಗ್ರೆಸ್ಸಿನ ಹಿರಿಯರು ಮನಸಿಲ್ಲದ ಮನಸ್ಸಿನಿಂದ ಒಪ್ಪಿದ್ದರಿಂದಲೇ ಕಾಂಗ್ರೆಸ್ ನಲ್ಲಿ ಮತ್ತೆ ಮತ್ತೆ ಒಳಜಗಳ, ಗುಂಪುಗಾರಿಕೆ, ಬೆನ್ನಲ್ಲಿ ಚಾಕು ಹಾಕುವ ತಂತ್ರಗಳು ಆರಂಭವಾದವು. ನಮ್ಮವರೇ ನಮ್ಮನ್ನು ಸೋಲಿಸಿದರು ಎನ್ನುವ ಮಾತು ಕಾಂಗ್ರೆಸ್ ಪಕ್ಷದಲ್ಲಿ ಇಂದು ನಿನ್ನೆಯದಲ್ಲ. ಹೀಗಿದ್ದಾಗಲೂ ಹಗ್ಗ ಹದಿನಾರು ಮಾರು ಇದ್ದರೂ ಅದರ ಕುಣಿಕೆ ಮಾತ್ರ ನನ್ನ ಕೈಯಲ್ಲಿರಲಿ ಎನ್ನುವ ಹೈ ಕಮಾಂಡ್ ಯಾವ ತಂತ್ರಗಳನ್ನು ತನ್ನದೇ ಪಕ್ಷದ ಒಳಗಿನ ವೈರಿಗಳನ್ನು ಸದೆ ಬಡಿಯಲು ಅನುಸರಿಸಿತು..? ಎನ್ನುವ ಪ್ರಶ್ನೆ ಏಳದೇ ಇರದು. ಜೊತೆಗೆ ಚುನಾವಣೆಯ ಸಂದರ್ಭದಲ್ಲಿ ಪಕ್ಷದ ಹಿರಿಯರನ್ನು ಹೋಲ್ಸೇಲಾಗಿ ಬದಿಗಿಟ್ಟು Rahul-Gandhiರಾಹುಲ್ ನೇತೃತ್ವವನ್ನು ಮತ್ತೆ ಮತ್ತೆ ಬಿಂಬಿಸುವಂಥಾದದ್ದು ಮತದಾರನ ಮೇಲೆ ಮೋದಿ ಅಲೆಯಿರುವ ಸಂದರ್ಭದಲ್ಲಿ ಮಾಡಬೇಕಾದ ಕೆಲಸವನ್ನು ಮಾಡಲಿಲ್ಲ. ಮೋದಿಯ ರಾಜಕೀಯ ಅನುಭವ, ಸಂಘಟನಾ ಶಕ್ತಿ, ನಾಟಕೀಯವಾದ ಭಾಷಣ ಶೈಲಿ ಆ ಮೂಲಕ ಸೃಷ್ಟಿ ಮಾಡುತ್ತಿದ್ದ ಸಮೂಹಸನ್ನಿ ಇದು ರಾಹುಲ್‌ಗೆ ಸಾಧ್ಯವಾಗಲಿಲ್ಲ ಎನ್ನುವುದು ಕಟುವಾಸ್ತವ. ಕಾಂಗ್ರೆಸ್ ನ ಅನೇಕ ಹಿರಿಯರು ಹೈ ಕಮಾಂಡ್ ಹೆಸರಲ್ಲಿ ಒಂದು ಕುಟುಂಬದ ರಾಜಕಾರಣವನ್ನು ಓಲೈಸಲು ಮಾಡಿದ ಪರಿಣಾಮವೇ ಕಾಂಗ್ರೆಸ್ ಈ ಮಟ್ಟಕ್ಕೆ ತಲುಪಲು ಒಂದು ಪ್ರಮುಖ ಕಾರಣ. ಸರಿ ಇರುವುದನ್ನು ಸರಿ, ತಪ್ಪಿರುವುದನ್ನು ತಪ್ಪು ಎನ್ನುವ ದೃಢವಾದ ಮನ:ಸ್ಥಿತಿ ಕಾಂಗ್ರೆಸ್ ಪಕ್ಷದ ಕಕ್ಷೆಯಲ್ಲಿರುವ ನಾಯಕರಲ್ಲಿಲ್ಲ. ಹಾಗಾಗಿ ಪ್ರತಿಯೊಂದನ್ನು ಹೈ ಕಮಾಂಡ್ ಎಂಬ ದುರ್ಬೀನ್ ಮೂಲಕ ನೋಡುವ, ಅನುಭವಿಸುವ, ತೀರ್ಮಾನಿಸುವ ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆಯ ಸಂದರ್ಭದಲ್ಲಿಯೂ ಪಕ್ಷದ ಚಟುವಟಿಕೆಗಳ ಚುರುಕುತನ, ವ್ಯಾಪಕತೆ ಏನಾಗಿರಬೇಕು ಎನ್ನುವದರ ಮೇಲೆಯೂ ಹಿಡಿತಗಳು ಹೇರಲ್ಪಡುತ್ತವೆ. ಮೋತಿಲಾಲ್ ನೆಹರು, ಜವಾಹರಲಾಲ್ ನೆಹರು, ಮಗಳು ಇಂದಿರಾ ಗಾಂಧಿ, ಮೊಮ್ಮಗ ರಾಜೀವ ಗಾಂಧಿ ಈಗ ಮರಿ ಮೊಮ್ಮಗ ರಾಹುಲ ಗಾಂಧಿ ಮತ್ತು ಅಜ್ಜಿ ಇಂದಿರಾಳಂತೆಯೇ ಕಾಣುತ್ತಾಳೆನ್ನುವ ಪ್ರಿಯಾಂಕಾ ಗಾಂಧಿ. ಹೀಗೆ ಕಾಂಗ್ರೆಸ್ ಪಕ್ಷ ಎನ್ನುವುದು ಒಂದು ಕುಟುಂಬದ ಉತ್ತರಾಧಿಕಾರದ ಪ್ರಾತಿನಿಧಿಕತೆಯಾಗಿ ಪರಿಣಮಿಸಿರುವುದೇ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಬಹು ದೊಡ್ಡ ಅಣಕ.

ಯಾವುದೇ ಒಂದು ರಾಜಕೀಯ ಪಕ್ಷ ಅದು ಪ್ರಾದೇಶಿಕವಾಗಿರಲಿ ಇಲ್ಲವೇ ರಾಷ್ಟ್ರೀಯವಾಗಿರಲಿ ಅದಕ್ಕೆ ಅದರದೇಯಾದ ಒಂದಷ್ಟು ಸಾಮಾಜಿಕ ಮತ್ತು ಸಾಂಸ್ಕೃತಿಕ ಆಯಾಮಗಳಿರುತ್ತವೆ. ಅದು ಆ ಪಕ್ಷದ ಸಾಂಸ್ಥಿಕ ರೂಪವೂ ಆಗಿರಬಹುದು. ಈ ರೂಪರೇಷೆಗಳು, ಧರ್ಮ, ಜಾತಿ, ಭಾಷೆ, ಜನಾಂಗಗಳೊಂದಿಗೂ ಥಳುಕು ಹಾಕಿಕೊಂಡಿರುತ್ತವೆ. ಈ ಬಗೆಯ ಸಾಂಸ್ಥಿಕ ಮೂಲಗಳಿಗೆ ಕೆಲ ಬಾರಿ ತತ್ವ ಸಿದ್ಧಾಂತಗಳ ಲೇಪನವೂ ಸಾಧ್ಯವಾಗಿರುತ್ತದೆ. ಕಾಂಗ್ರೆಸ್ ಪಕ್ಷ ಪ್ರತಿ ಬಾರಿ ಚುನಾವಣೆಯನ್ನು ಎದುರಿಸುವಾಗಿನ ಸಹಜತೆಯಲ್ಲಿಯೇ ಈ ಬಾರಿಯೂ ಚುನಾವಣೆಯನ್ನು ಎದುರಿಸುವ ಮೂಲಕ ತನ್ನ ಎಂದಿನ ಓವರ್ ಕಾನ್ಫಿಡನ್ಸ್ ಪ್ರದರ್ಶನ ಮಾಡಿದ್ದು ವರ್ಕೌಟ್ ಆಗಲಿಲ್ಲ. ಅಗಾಧವಾದ ಚಾರಿತ್ರಿಕ ಹಿನ್ನೆಲೆಯಿರುವ ರಾಷ್ಟ್ರೀಯ ಪಕ್ಷವೊಂದು ಹೀಗೆ ಕೇವಲ 44 ಸ್ಥಾನಗಳನ್ನು ಮಾತ್ರ ಪಡೆಯುತ್ತದೆ ಎನ್ನುವುದೇ ದೊಡ್ಡ ಅಚ್ಚರಿ..! ಈ ಬಗೆಯ ಬಿ.ಜೆ.ಪಿ. ಪರ ಬೃಹತ್ ಫ಼ಲಿತಾಂಶವನ್ನು ಯಾವುದೇ ಮಾಧ್ಯಮವಾಗಲೀ ಇಲ್ಲವೇ ಖ್ಯಾತ ಜ್ಯೋತಿಷಿಯಾಗಲಿ ಭವಿಷ್ಯ ನುಡಿದದ್ದು ಇರಲಿಲ್ಲ. ಹೆಚ್ಚೆಂದರೆ 225-275 ವರೆಗೆ ಮಾತ್ರ ಕೇಳಿಬಂದಿರುವುದಿತ್ತು. ಈ ಎಲ್ಲ ಬಗೆಯ ಲೆಕ್ಕಾಚಾರಗಳನ್ನು ಮೀರಿಯೂ 340 ಸೀಟುಗಳನ್ನು ಗೆಲ್ಲುವಲ್ಲಿ ಮೋದಿ ಅಲೆ ಕೆಲಸ ಮಾಡಿದೆ ಎನ್ನುವುದನ್ನು ನಮಗೆ ಇಷ್ಟವೋ ಕಷ್ಟವೋ ಒಪ್ಪಿಕೊಳ್ಳಬೇಕಾಗಿದೆ. modi_bjp_conclaveಇನ್ನು ನಾನು ಮೇಲೆ ಹೇಳಲಾದ ಪಕ್ಷವೊಂದರ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಗತಿಗಳು ಬಿ.ಜೆ.ಪಿ.ಯಲ್ಲಿ ಕೆಲಸ ಮಾಡುವ ಹಾಗೆ ಇತರೆ ಪಕ್ಷಗಳಲ್ಲಿ ಕೆಲಸ ಮಾಡುವುದು ಕಡಿಮೆ. ಬಿ.ಜೆ.ಪಿ.ಯ ಒಬ್ಬ ಮತದಾರ ಯಾವುದೇ ಕಾರಣಕ್ಕೂ ಆ ಪಕ್ಷವನ್ನು ಹೊರತು ಪಡಿಸಿ ಇತರೆ ಪಕ್ಷಗಳಿಗೆ ಮತ ಹಾಕಲಾರ. ಹಾಗೆಯೇ ಯಾವುದೇ ಕಾರಣಕ್ಕೂ ತಾನು ನಂಬಿರುವ ಪಕ್ಷವನ್ನು ಬೇರೆ ಬೇರೆ ಕಾರಣಗಳಿಗಾಗಿ ಸಮರ್ಥನೆ ಮಾಡಿಕೊಳ್ಳುವುದನ್ನು ಬಿಡಲಾರ. ಈ ಬಗೆಯ ಮತದಾರರನ್ನು ಮಿಕ್ಕ ಪಕ್ಷಗಳು ರೂಪಿಸುವಲ್ಲಿ ವಿಫ಼ಲವಾಗಿವೆ. ಅದಕ್ಕೆ ಕಾರಣ ಆಯಾ ಪಕ್ಷಗಳ ಕಾರ್ಯವೈಖರಿ ಮತ್ತು ಸಿದ್ಧಾಂತಗಳಲ್ಲಿಯೇ ಹುಡುಕುವ ಯತ್ನವಾಗಬೇಕು. ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸುವ ಕಾರ್ಯಕರ್ತ ಮತ್ತು ಬೆಂಬಲಿಗರು ಒಂದು ಬಗೆಯ ಸೇಫ಼್ಟಿಯನ್ನು ಫ಼ೀಲ್ ಮಾಡುತ್ತಾರೆ. ಇದು ಕಾಂಗ್ರೆಸ್ ಮತ್ತು ಇತರೆ ಪಕ್ಷಗಳಲ್ಲಿ ಅಷ್ಟಾಗಿ ಕಾಣುವುದಿಲ್ಲ. ದುರಂತವೆಂದರೆ ಮೂರ್ನಾಲ್ಕು ದಶಕಗಳಿಂದಲೂ ಕಾಂಗ್ರೆಸ್ ನ್ನು ಬೆಂಬಲಿಸುವ ಮತದಾರನೊಬ್ಬನ ಬಗ್ಗೆ ಆ ಪಕ್ಷಕ್ಕೆ ಯಾವ ದರ್ದೂ ಇರುವದಿಲ್ಲ. ಇದು ಕ್ರಮೇಣವಾಗಿ ಆ ಮತದಾರನ ಅಂತರ್ಯದಲ್ಲಿ ಪಕ್ಷದ ಸಾಂಸ್ಕೃತಿಕ ಸ್ವರೂಪವನ್ನು ಅನಾದರದಿಂದ ಕಾಣುವಂತೆ ಮಾಡುತ್ತದೆ. ಇದೂ ಕೂಡಾ ಈ ಬಾರಿಯ ಚುನಾವಣೆಯ ಫ಼ಲಿತಾಂಶ ಹೀಗಾಗಲು ಒಂದು ಕಾರಣ. ನರೇಂದ್ರ ಮೋದಿಯನ್ನು ಮುಂಚೆಯೇ ಬಿ.ಜೆ.ಪಿ. ಯವರು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದ ಪರಿಣಾಮ ಮತ್ತು ಮೋದಿಯ ಮಾತುಗಾರಿಕೆ ಮತ್ತು ಪಕ್ಷದ ತಂತ್ರಗಾರಿಕೆ ಇವೆರಡನ್ನು ಮೀರಿ ಮಾಧ್ಯಮಗಳನ್ನು ಬಳಸಿಕೊಂಡ ರೀತಿ ಹೀಗೆ ಮೋದಿಯ ಪ್ರಚಂಡ ಅಲೆ ಸುನಾಮಿಯಾಗಿ ಮಾರ್ಪಡಲು ಕಾರಣವಾಯಿತು. ತುಸು ಅತಿಯಾಯಿತೆನಿಸುವಷ್ಟು ಮಾಧ್ಯಮಗಳು ಮೋದಿಗೆ ಪ್ರಚಾರ ನೀಡಿದವು. ಆರಂಭದಿಂದಲೂ ಕಾಂಗ್ರೆಸ್ ಮೋದಿಯನ್ನು ತೀರಾ ಹಗುರವಾಗಿ ಪರಿಗಣಿಸಿದ್ದು ಈ ಬಗೆಯ ಫ಼ಲಿತಾಂಶಕ್ಕೆ ಇನ್ನೊಂದು ಕಾರಣ. ಎದುರಾಳಿಗಳನ್ನು ಯಾರೂ ಹಗುರವಾಗಿ ಪರಿಗಣಿಸಬಾರದು. ಯಾಕೆಂದರೆ ತಾಮ್ರದ ತಂತಿಯೊಂದು ಖುಲ್ಲಾ ಬಿದ್ದಿರುವಾಗ ಅದೇನೂ ಅಲ್ಲ ಆದರೆ ಅದು ಯಾವಾಗ ವಿದ್ಯುತ್ ತಂತಿಯಾಗಿ ಮಾರ್ಪಾಡು ಹೊಡುತ್ತದೆಯೋ ಆಗ ಅದರ ಶಕ್ತಿಯೇ ಬೇರೆ. ಆಗಲೂ ಅದು ತಂತಿಯೇ ಆದರೆ ಅದರಲ್ಲಿ ವಿದ್ಯುತ್ ಪ್ರವಹಿಸುವ ಶಕ್ತಿ ಇದೆ ಎನ್ನುವ ಸತ್ಯವನ್ನು ಮರೆತು ವ್ಯವಹರಿಸಿದರೆ ಅಪಾಯ ಖಾತ್ರಿ. ಮೋದಿಯ ಮೋಡಿ ಈ ಮಟ್ಟಕ್ಕೆ ಕೆಲಸ ಮಾಡುತ್ತದೆ ಎನ್ನುವುದನ್ನು ಯಾರೂ ಊಹಿಸಿರಲಿಲ್ಲ. ಮೋದಿ ಪರವಾಗಿ ಯಾವ ಬಗೆಯ ಅಲೆ ಸೃಷ್ಟಿಯಾಗಿತ್ತೆಂದರೆ ಆತನ ಬಗ್ಗೆ ಮಾಡಲಾಗುವ ಆರೋಪಗಳು ಕೂಡಾ ಪಕ್ಷವನ್ನು ಇನ್ನಷ್ಟು ಬಲಗೊಳಿಸಿದಂತಾಯೊತು.

ಕಾಂಗ್ರೆಸ್ ನ ಪ್ರಚಾರ ತಂತ್ರವೇ ನೆಟ್ಟಗಿರಲಿಲ್ಲ. ಅದು ಎಂಥಾ ಹಳೆಯ ರಾಜಕೀಯ ಪಕ್ಷ.. ಏನು ಕಥೆ.. ಆದರೆ ಪ್ರಚಾರದಲ್ಲಿ ಮಾತ್ರ ಕೇವಲ ರಾಹುಲನನ್ನೇ ಅವಲಂಬಿಸಬೇಕಾಗಿ ಬಂದುದು ದೊಡ್ಡ ವಿಪರ್ಯಾಸ. ಅಷ್ಟಕ್ಕೂ ಈ ದೇಶದ ಮತದಾರನಿಗೆ ಕುಟುಂಬ ರಾಜಕಾರಣ ಅಲರ್ಜಿಯಾಗಿದೆ. Manmohan-Sonia-Rahulನೆಹರು, ಇಂದಿರಾ ಸಂದರ್ಭದಲ್ಲಿಯ ಮತದಾರನಿಗೂ ರಾಜೀವ ಮತ್ತು ರಾಹುಲ ಸಂದರ್ಭದ ಮತದಾರನಿಗೂ ಸಾಕಷ್ಟು ಅಂತರಗಳಿವೆ. ಅವರ ಮನ:ಸ್ಥಿತಿಯಲ್ಲೂ ವ್ಯಪರೀತ್ಯಗಳಿವೆ. ಅವರನ್ನು ಅರಿಯುವ ಅವರ ಪಲ್ಸ್ ರೀಡ್ ಮಾಡುವ ತಂತ್ರಗಾರಿಕೆ ಕಾಂಗ್ರೆಸ್ ಪಕ್ಷದಿಂದ ಸಾಧ್ಯವಾಗಲಿಲ್ಲ. ಪಕ್ಷದ ಆಂತರಿಕ ಕಚ್ಚಾಟ ಮತ್ತು ಎಲ್ಲದಕ್ಕೂ ಹೈ ಕಮಾಂಡ್ ಎನ್ನುವ ಧೋರಣೆಯೂ ಅದೇಕೋ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಒಂದು ಪ್ಲಸ್ ಪಾಯಿಂಟ್ ಆಗಿ ಕಾಣುವುದಿಲ್ಲ. ಮತದಾರನೊಂದಿಗೆ ಒಂದು ಬಗೆಯ ಮಾನಸಿಕ ಸಂಬಂಧವನ್ನು ಸ್ಥಾಪಿಸುವಲ್ಲಿ, ಹಾಗೆ ಸಾಧ್ಯವಾಗಿಸುವಲ್ಲಿ ಕಾಂಗ್ರೆಸ್ ಸೋತಿರುವದರಿಂದಾಗಿಯೇ ಬಿ.ಜೆ.ಪಿ. ಯಂಥಾ ರಾಜಕೀಯ ಪಕ್ಷಗಳು ಅದನ್ನು ಸರಿಯಾಗಿ ಬಳಸಿಕೊಂಡವು. ಯಾವುದಕ್ಕೂ ಒಂದು ತಾಲೀಮು ಅಂತ ಬೇಕಾಗುತ್ತದೆ. ಇದು ತಂತ್ರಗಾರಿಕೆಯನ್ನೂ ಒಳಗೊಂಡಿರುತ್ತದೆ. ಇದೊಂಥರಾ ಕುಸ್ತಿಯೊಳಗಿನ ಡಾವ್ ಪೇಚ್ ಇದ್ದಂಗೆ ಇದನ್ನು ಮಾಡದೇ ಅತಿಯಾದ ಆತ್ಮ ವಿಶ್ವಾಸದಿಂದ ಮಾತ್ರ ಗೆಲ್ಲಬಲ್ಲೆವು ಎನ್ನುವುದು ಅಸಮಂಜಸವಾಗುತ್ತದೆ.

ಇನ್ನು ಕರ್ನಾಟಕದ ವಿಷಯವಾಗಿ ಹೇಳುವುದಾದರೆ ಇಲ್ಲಿಯೂ ಅದೇ ತಂತ್ರಗಾರಿಕೆಯ ಕೊರತೆಯ ಹಿನ್ನೆಲೆಯಲ್ಲಿಯೇ ಕಾಂಗ್ರೆಸ್ ಕಡಿಮೆ ಸೀಟುಗಳನ್ನು ಗೆಲ್ಲುವಂತಾಯಿತು. ಚುನಾವಣೆಯ ಸಂದರ್ಭದಲ್ಲಿ ಅನೇಕ ಒಳಹೊಡೆತಗಳು ಮೇಳೈಸಿಕೊಳ್ಳುತ್ತವೆ. ಅಲ್ಲಿ ಜಾತಿ, ಧರ್ಮ, ಹಣ, ಅಧಿಕಾರ ಮುಂತಾದವುಗಳು ಕೆಲಸ ಮಾಡುತ್ತವೆ. ಕೆಲ ಬಾರಿ ನಾ ನಿನಗಾದರೆ ನೀ ನನಗೆ ಎನ್ನುವ ತತ್ವದ ಅಡಿಯಲ್ಲೂ ಪ್ರಚಾರ, ಮತದಾನ ನಡೆಯುತ್ತವೆ. ಈ ಬಗೆಯ ಅನೇಕ ತುಂಡು ತುಂಡಾದ ಒಳ ಸಂಗತಿಗಳು ಪಕ್ಷದ ಆಂತರಿಕ ಬಲವನ್ನು ಕುಗ್ಗಿಸುವ ಜೊತೆಗೆ ಅದರ ಗೆಲುವಿನ ಸಾಧ್ಯತೆಯನ್ನು ಕಡಿಮೆ ಮಾಡುತ್ತವೆ. ಹೇಗೆ ಕೇಂದ್ರದಲ್ಲಿ ಅಲ್ಲಿಯ ವರಿಷ್ಟರು ಅದನ್ನು ತಿಳಿದೂ ತಿಳಿಯದಂತೆ ಮೌನವಹಿಸಿದರೋ ರಾಜ್ಯದಲ್ಲೂ ಅದೇ ಸ್ಥಿತಿ ನಿರ್ಮಾಣವಾಗಿ ಆಮೇಲೆ ನಮ್ಮವರೇ ನಮಗೆ ಮುಳುವಾಗಿ ಸೋತೆವು ಎನ್ನುವ ಮಾತುಗಳು ಮಾತ್ರ ಉಳಿದವು. ರಾಜ್ಯದ ಕಾಂಗ್ರೆಸ್ ಕೈಯಲ್ಲಿ ಇನ್ನೂ ನಾಲ್ಕು ವರ್ಷಗಳಿವೆ. ಅಗಾಧವಾದುದನ್ನು ಮಾಡಿ ತೋರಿಸಲು ಅವಕಾಶಗಳಿವೆ. ಅತ್ಯಂತ ಚುರುಕುತನದಿಂದ ಆಡಳಿತ ಯಂತ್ರ ಕಾರ್ಯನಿರ್ವಹಿಸಬೇಕಾಗಿದೆ. ಎಲ್ಲ ಬಗೆಯ ವಿರೋಧಗಳ ನಡುವೆಯೂ ಕರ್ನಾಟಕದ ಕಾಂಗ್ರೆಸ್ ಸರಕಾರವನ್ನು ಮೆಚ್ಚುವಂಥಾ ಪರಿಸರವನ್ನು ನಿರ್ಮಾಣ ಮಾಡಬೇಕಿದೆ.

ಮೋದಿ ತನ್ನದೇಯಾದ ವಿಶಿಷ್ಟ ವ್ಯಕ್ತಿತ್ವದ ಮೂಲಕ ಒಂದು ಶಕ್ತಿಯಾಗಿ ಈ ಲೋಕಸಭಾ ಚುನಾವಣೆಯಲ್ಲಿ ಹೊರ ಹೊಮ್ಮಿದ್ದು ನಿಜ. narender_modi_rssಆದರೆ ಈಗಲೂ ಮೋದಿಯ ಬಗ್ಗೆ ಅಲ್ಪಸಂಖ್ಯಾತರಲ್ಲಿ ಒಂದು ಭಯ ಇದ್ದೇ ಇದೆ. ಆದರೆ ಮೋದಿ ಪ್ರಧಾನಿ ಅಬ್ಯರ್ಥಿ. ಹಾಗಾಗಿ ಅಂಥಾ ಯಾವ ಭಯಗಳನ್ನೂ.. ದಿಗಿಲುಗಳನ್ನು ಆರಂಭದ ಎರಡು ಮೂರು ವರ್ಷಗಳ ಮಟ್ಟಿಗೆ ಮಾತ್ರ ಹುಟ್ಟು ಹಾಕುವುದಿಲ್ಲ ಎನ್ನುವುದು ಅನೇಕ ರಾಜಕೀಯ ವಿಶ್ಲೇಷಕರ ಅಂಬೋಣ. ಮೋದಿಯ ಎಲ್ಲ ಬಗೆಯ ಎಡವಟ್ಟುಗಳು ಆ ಐದನೆಯ ವರ್ಷದ ಅವಧಿಯಲ್ಲಿ ಅನಾವರಣಗೊಳ್ಳಬಹುದೇನೋ..? ಆದರೆ ಅಲ್ಲಿಯವರೆಗೂ ಮೋದಿಯೇ ಪ್ರಧಾನಿಯಾಗಿ ಉಳಿಯುತ್ತಾರೆ ಎನ್ನುವ ವಿಶ್ವಾಸ ಇಡುವ ರಾಜಕೀಯ ಪರಿಸರವಾದರೂ ನಮ್ಮಲ್ಲಿದೆಯೇ..? ಎನ್ನುವ ಪ್ರಶ್ನೆಯೂ ಕಾಡುತ್ತದೆ. ಅಭಿವೃದ್ಧಿಯನ್ನೇ ಮೂಲ ಮಂತ್ರವನ್ನಾಗಿ ಹೇಳುತ್ತಾ ಅಧಿಕಾರಕ್ಕೆ ಬಂದ ಮೋದಿ ಕಾರ್ಪೋರೇಟ್ ವಲಯದವರ ಪ್ರೀತಿ ಪಾತ್ರರಾಗುವದಂತೂ ಇದ್ದೇ ಇದೆ. ಇದರ ಜೊತೆಗೆ ಈ ದೇಶದ ಆರ್ಥಿಕ ಸ್ಥಿತಿಗಳ ಸುಧಾರಣೆಯಲ್ಲಿ, ಅಂತರರಾಷ್ಟ್ರೀಯ ಬಾಂಧವ್ಯಗಳ ಸುಧಾರಣೆಯಲ್ಲಿಯೂ ನಿರ್ಣಾಯಕ ಪಾತ್ರವನ್ನು ಮೋದಿ ಆಡಬೇಕಿದೆ. ಇಷ್ಟು ಬೃಹತ್ ಪ್ರಮಾಣದ ಬೆಂಬಲದೊಂದಿಗೆ ಆಯ್ಕೆಯಾದ ಬಿ.ಜೆ.ಪಿ. ಮುಂದೆ ಏನಾದರೂ ಮಹತ್ತರವಾದುದನ್ನು ಈ ದೇಶ ನೆನಪಿಡುವ ಹಾಗೆ ಮಾಡಲೇಬೇಕು ಎನ್ನುವ ಇರಾದೆಯನ್ನು ಹೊಂದಿರುವದಂತೂ ಹೌದು. ಮೋದಿ ಮೊದಲ ದಿನವೇ ತಾನು ಆಯ್ಕೆಯಾದ ವಾರಣಾಸಿಗೆ ತೆರಳಿ ಗಂಗಾ ನದಿಯ ಶುದ್ದೀಕರಣ ಮಾಡುವ ಬಗ್ಗೆ ಮಾತನಾಡಿರುವುದಿದೆ. ಅಂಥಾ ಕಾರ್ಯಗಳು ಪಕ್ಷಾತೀತವಾಗಿ ಮನ್ನಣೆ ಗಳಿಸುವಂಥವುಗಳು. ಈ ಬಗೆಯ ಮತ್ತು ಇದಕ್ಕಿಂತಲೂ ಜನಪರವಾದ ಇಂಥಾ ಹತ್ತಾರು ಕೆಲಸಕಾರ್ಯಗಳನ್ನು ಮಾಡಿ ತೋರಿಸಬೇಕಿದೆ. ಅದೇ ವೇಳೆಗೆ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ನಂಬುಗೆಯಿರುವ ಈ ದೇಶದ ಜನರ ಮನಸಿಗೆ ನೋವಾಗುವ ಯಾವುದೇ ಕೆಲಸಗಳನ್ನು ಮೋದಿ ಮಾಡದಿರಲಿ. ಭಾರತ ಸರ್ವ ಜನಾಂಗಗಳ ಶಾಂತಿಯ ತೋಟ. ಎಲ್ಲ ಜಾತಿ, ಧರ್ಮ, ಜನಾಂಗ ಗಳು ನೆಮ್ಮದಿಯಿಂದ ಬದುಕುವ ಪರಿಸರವನ್ನು ನಿರ್ಮಿಸಿಕೊಡುವ ಮೂಲಕ ಮೋದಿ ಒಂದು ಹೊಸ ಇಮೇಜಿನೊಂದಿಗೆ ಬಿಂಬಿತವಾಗಲಿ. ಕಾಂಗ್ರೆಸ್ ಇನ್ನು ಮುಂದಾದರೂ ಪಕ್ಷವನ್ನು ಅರ್ಥವತ್ತಾಗಿ ರೂಪಿಸಲಿ. ಯಾವುದೇ ಪಕ್ಷವಿರಲಿ ಮತದಾರನಿಂದ ದೂರ ಸರಿದಷ್ಟು ಸೊರಗುವುದು ಗ್ಯಾರಂಟಿ.

ಬಂಡವಾಳಶಾಹಿ ಮಾದರಿಯ ಅಭಿವೃದ್ಧಿ ಮತ್ತು ಪರಿಸರ ಅಸಮತೋಲನ

– ಆನಂದ ಪ್ರಸಾದ್

ಕಮ್ಯುನಿಷ್ಟ್ ಸೋವಿಯತ್ ಒಕ್ಕೂಟದ ಪತನದ ನಂತರ ಪ್ರಪಂಚದಾದ್ಯಂತ ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಗೆ ಹೆಚ್ಚಿನ ಬಲ ಬಂದು ಎಲ್ಲೆಡೆ ಅಭಿವೃದ್ಧಿಯ ಹುಚ್ಚು ಓಟ ಆರಂಭವಾಗಿದೆ.  ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಮನುಷ್ಯನ ಬೇಕು ಬೇಡಗಳಿಗೆ ಮಿತಿಯೇ ಇಲ್ಲವಾಗಿ ಮನುಷ್ಯನ ಸುಗಮ ಜೀವನಕ್ಕೆ ಅವಶ್ಯಕ ಅಲ್ಲದಿದ್ದರೂ ಐಶಾರಾಮಿ ಭೋಗಸಾಮಗ್ರಿಗಳನ್ನು ಹೊಂದುವ ಅವಿವೇಕಿ ಪ್ರವೃತ್ತಿ ಇಂದು ಎಲ್ಲೆಡೆ ಕಂಡುಬರುತ್ತಿದೆ.  ಉದಾಹರಣೆಗೆ ಮನುಷ್ಯನಿಗೆ ವಾಸಕ್ಕೆಮನೆ ಬೇಕು.  ಐದಾರು ಸದಸ್ಯರು ಇರುವ ಒಂದು ಸಂಸಾರದ ಸುಗಮ ಜೀವನಕ್ಕೆ ಹೆಚ್ಚೆಂದರೆ ಏಳೆಂಟು ಕೊಠಡಿಗಳಿರುವ ಮನೆ ಧಾರಾಳ ಸಾಕು.  ಆದರೆ ಹಣದ ಮದ ತಲೆಗೇರಿದ ಧನಿಕರು ಇಂದು ಹಲವಾರು ಅಂತಸ್ತುಗಳುಳ್ಳ ಹಲವು ಕೊಠಡಿಗಳನ್ನು ಹೊಂದಿರುವ ಮನೆಗಳನ್ನು ಕಟ್ಟಿಸುತ್ತಿದ್ದಾರೆ.  ಹಣ ಉಳ್ಳವರು ತಮಗೆ ಬೇಕಾದಷ್ಟು ದೊಡ್ಡ ಮನೆ ಕಟ್ಟಿಸುತ್ತಾರೆ ಇದರಿಂದ ಏನು ತೊಂದರೆ, ನಿಮಗೇಕೆ ಹೊಟ್ಟೆಕಿಚ್ಚು ಎಂದು ಬಂಡವಾಳಶಾಹಿ ವ್ಯವಸ್ಥೆಯ ಸಮರ್ಥಕರು ಕೇಳುತ್ತಾರೆ.  ವಾಸ್ತವವಾಗಿ ಇದರಿಂದ ಪರಿಸರ ಸಮತೋಲನಕ್ಕೆ ನಿಶ್ಚಿತವಾಗಿಯೂ ತೊಂದರೆ ಇದೆ ಹೇಗೆಂದರೆ ದೊಡ್ಡ ದೊಡ್ಡ ಬಂಗಲೆ ಕಟ್ಟಿಸಿದಷ್ಟೂ ಪರಿಸರದ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ, ಪರಿಸರ ಮಾಲಿನ್ಯ ಹೆಚ್ಚುತ್ತದೆ.  ದೊಡ್ಡ ದೊಡ್ಡ ಬಂಗಲೆಗಳನ್ನು ಕಟ್ಟಲು ಅಪಾರ ಪ್ರಮಾಣದಲ್ಲಿ ಕಬ್ಬಿಣ, ಸಿಮೆಂಟು, ಮರಳು, ಜಲ್ಲಿ ಇತ್ಯಾದಿಗಳು ಬೇಕಾಗುತ್ತವೆ.  ambani-houseಇದರಿಂದಾಗಿ ಹೆಚ್ಚು ಹೆಚ್ಚು ಗಣಿಗಾರಿಕೆ ಮಾಡಬೇಕಾಗುತ್ತದೆ.  ಕಬ್ಬಿಣ ಅದಿರು ಅಗೆಯಲು, ಅದನ್ನು ಸಾಗಿಸಲು, ಅದಿರನ್ನು ಕರಗಿಸಿ ಕಬ್ಬಿಣವಾಗಿ ಮಾಡಲು ಅಪಾರ ಪ್ರಮಾಣದಲ್ಲಿ ಪಳೆಯುಳಿಕೆ ಇಂಧನ ಬಳಕೆಯಾಗುತ್ತದೆ.  ಇದರಿಂದ ಇಂಗಾಲನಿಲ ಪರಿಸರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆಯಾಗಿ ಹಸಿರು ಮನೆ ಪರಿಣಾಮ ಉಂಟಾಗುತ್ತದೆ.  ವಾತಾವರದಲ್ಲಿ ಇಂಗಾಲನಿಲಗಳು ಸೂರ್ಯನ ಶಾಖವನ್ನು ಹಿಡಿದು ಇಡುವುದನ್ನು ಹಸಿರು ಮನೆ ಪರಿಣಾಮ ಎನ್ನಲಾಗುತ್ತದೆ.  ಇದರಿಂದಾಗಿ ಭೂಮಿಯ ಉಷ್ಣಾಂಶದಲ್ಲಿ ಹೆಚ್ಚಳ ಆಗುತ್ತಿದೆ.  ಭೂಮಿಯ ಉಷ್ಣಾಂಶದಲ್ಲಿ ಹೆಚ್ಚಳ ಆಗುವುದರ ಪರಿಣಾಮ ಎಲ್ಲರ ಮೇಲೆಯೂ ಆಗುತ್ತದೆ.  ಅವಶ್ಯಕತೆ ಇಲ್ಲದಿದ್ದರೂ ಭಾರೀ ಬಂಗಲೆಗಳನ್ನು ಕಟ್ಟಿ ಪರಿಸರ ಸಮತೋಲನ ಕೆಡಿಸುವ ಶ್ರೀಮಂತರ ದೊಡ್ಡಸ್ಥಿಕೆಯ ಪ್ರದರ್ಶನದಿಂದ ಎಲ್ಲರ ಮೇಲೆಯೂ ದುಷ್ಪರಿಣಾಮ ಆಗುತ್ತದೆ.  ಹೀಗಾಗಿ ಇದನ್ನು ಬಡವರ ಹೊಟ್ಟೆಕಿಚ್ಚು ಎಂದು ತಳ್ಳಿಹಾಕುವಂತಿಲ್ಲ.  ರಿಲಯನ್ಸ್ ಕಂಪನಿಯ ಒಡೆಯ ಮುಖೇಶ್ ಅಂಬಾನಿ ಮುಂಬಯಿಯಲ್ಲಿ 27 ಅಂತಸ್ತುಗಳುಳ್ಳ 4,00,000  ಚದರ ಮೀಟರ್ ವಿಸ್ತೀರ್ಣದ 6,000 ಕೋಟಿ ರೂಪಾಯಿ ವೆಚ್ಚದಲ್ಲಿ ಕಟ್ಟಿಸಿದ ಭಾರೀ ಬಂಗಲೆಯನ್ನು ಈ ದೃಷ್ಟಿಯಿಂದ ನೋಡಬೇಕು.  ಕೆಲವರು ಇದನ್ನು ಇನ್ನೊಂದು ದೃಷ್ಟಿಕೋನದಿಂದ ನೋಡುತ್ತಾರೆ.  ಇದರಿಂದಾಗಿ ಉದ್ಯೋಗಾವಕಾಶ ಹೆಚ್ಚುತ್ತದೆ, ಹೆಚ್ಚು ಹೆಚ್ಚು ನಿರ್ಮಾಣ ಚಟುವಟಿಕೆ ನಡೆದಷ್ಟೂ ಆರ್ಥಿಕತೆಗೆ ಹೆಚ್ಚಿನ ಬಲ ದೊರೆಯುತ್ತದೆ ಎಂದು ಅವರು ಹೇಳುತ್ತಾರೆ.  ಇದು ನಿಜವಾಗಿಯೂ ಒಂದು ಅತ್ಯಂತ ಬೇಜವಾಬ್ದಾರಿಯ ಮೂರ್ಖ ಚಿಂತನೆಯಾಗಿದೆ.  ಈ ರೀತಿಯ ಚಿಂತನೆ ಆತ್ಮಹತ್ಯಾಕಾರಕ ಎಂದೇ ಹೇಳಬೇಕಾಗುತ್ತದೆ.  ಇದು ಭೂಮಿಯ ಮೇಲೆ ಇರುವ ಎಲ್ಲ ಜೀವಿಗಳ, ಎಲ್ಲ ಮಾನವರ ಹಿತಚಿಂತನೆಯನ್ನು ಗಮನದಲ್ಲಿ ಇಟ್ಟುಕೊಂಡು ಮಾಡುವ ಚಿಂತನೆ ಆಗಿರುವುದಿಲ್ಲ.

ಹೆಚ್ಚು ಹೆಚ್ಚು ಐಶಾರಾಮಿ ವಾಹನಗಳ ತಯಾರಿಕೆ ಹಾಗೂ ಬಳಕೆ ಕೂಡ ಪರಿಸರ ಅಸಮತೋಲನಕ್ಕೆ ಕಾರಣವಾಗುತ್ತಿದೆ.  ಉದಾಹರಣೆಗೆ ಮನುಷ್ಯನ ಅನುಕೂಲಕ್ಕೆ ಒಂದು ಕುಟುಂಬಕ್ಕೆ ಒಂದು ಸಾಮಾನ್ಯ ಕಾರು ಧಾರಾಳ ಸಾಕು ಅದೂ ಹೆಚ್ಚೆಂದರೆ ಏಳೆಂಟು ಲಕ್ಷ ಬೆಲೆಯ ಕಾರು ಸಾಕು.  ಆದರೆ ಇಂದು ಶ್ರೀಮಂತರು 20 ಲಕ್ಷ, 50 ಲಕ್ಷ ಬೆಲೆಯ ಬೃಹದಾಕಾರದ ಕಾರುಗಳನ್ನು ಕೊಂಡು ಆ ಕಾರುಗಳಲ್ಲಿ ಒಬ್ಬನೇ ಓಡಾಡುತ್ತಾ ಪರಿಸರಕ್ಕೆ ಅಪಾರ ಹಾನಿ ಮಾಡುತ್ತಿದ್ದಾರೆ.  ಇಂಥ ಹಾನಿಯನ್ನು ಮನುಷ್ಯನು ವಿವೇಕವನ್ನು ಬಳಸಿದರೆ ತಡೆಯಲು ಸಾಧ್ಯ ಆದರೆ ಪ್ರಪಂಚದಲ್ಲಿ ಇರುವ ಶ್ರೀಮಂತರಿಗೆ ಇಂದು ವಿವೇಕದ ಅಭಾವ ಇದೆ.  ದೊಡ್ಡ ದೊಡ್ಡ ಐಶಾರಮಿ ಕಾರುಗಳು ಮಾನವನಿಗೆ ಅಗತ್ಯವೇ ಇಲ್ಲ.  ದೊಡ್ಡ ದೊಡ್ಡ ಕಾರುಗಳ ಉತ್ಪಾದನೆ ಹಾಗೂ ಬಳಕೆ ಹೆಚ್ಚಾದಷ್ಟೂ ಪರಿಸರಕ್ಕೆ ಹಾನಿ ತಪ್ಪಿದ್ದಲ್ಲ.  ಹೇಗೆಂದರೆ ದೊಡ್ಡ ದೊಡ್ಡ ಐಶಾರಾಮಿ ಕಾರುಗಳನ್ನು ತಯಾರಿಸಲು ಕಬ್ಬಿಣ, ಫೈಬರ್, ಪ್ಲಾಸ್ಟಿಕ್ ಇನ್ನಿತರ ಘಟಕಗಳು ಹೆಚ್ಚು ಹೆಚ್ಚು ಬೇಕಾಗುತ್ತದೆ.  ಇವುಗಳನ್ನು ಹೆಚ್ಚು ಹೆಚ್ಚು ಬಳಸಿದಷ್ಟೂ ಅದರ ದುಷ್ಪರಿಣಾಮ ಪರಿಸರದ ಮೇಲೆ ಆಗುತ್ತದೆ ಎಂಬ ಚಿಂತನೆ ಬಂಡವಾಳಶಾಹಿ ಆರ್ಥಿಕ ಚಿಂತಕರಿಗೆ ಇಲ್ಲ.  ಅವರ ದೃಷ್ಟಿ ಇರುವುದು ಹೆಚ್ಚು ಹೆಚ್ಚು ಉತ್ಪಾದನೆ, ಹೆಚ್ಚು ಹೆಚ್ಚು ಉದ್ಯೋಗಾವಕಾಶ, ಜನರು ಹೆಚ್ಚು ಹೆಚ್ಚು ಶ್ರೀಮಂತರಾಗುವುದು ಮಾತ್ರ.  ಹೀಗಾದರೆ ಮಾತ್ರ ಅದು ಅಭಿವೃದ್ಧಿ ಎಂಬುದು ಬಂಡವಾಳಶಾಹಿ ಆರ್ಥಿಕ ಚಿಂತಕರ ದೂರದೃಷ್ಟಿಯಿಲ್ಲದ ಚಿಂತನೆಯಾಗಿದೆ.  ಯೋಚನಾಶಕ್ತಿಯಿರುವ ಏಕೈಕ ಪ್ರಾಣಿಯಾದ ಮಾನವನಿಗೆ ಭಾರೀ ಐಶಾರಾಮಿ ಬಂಗಲೆ, ಐಶಾರಾಮಿ ಕಾರುಗಳು ಇಲ್ಲದೆಯೂ ಆರಾಮವಾಗಿ ಬದುಕಬಹುದು ಎಂಬ ಚಿಂತನೆ ಇಲ್ಲದೆ ಇರುವುದು ಶೋಚನೀಯ.

ಮನುಷ್ಯನ ವಿವೇಕ ಮರೆಯಾಗಿ ಪ್ರದರ್ಶನದ ಹುಚ್ಚು ಹೆಚ್ಚಾಗಲು ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆ ಕಾರಣವಾಗುತ್ತಿದ್ದು ಮೇರೆಯಿಲ್ಲದ ಭೋಗ ಜೀವನ ಜಗತ್ತಿನಾದ್ಯಂತ ಹೆಚ್ಚುತ್ತಿದೆ.  ಈ ರೀತಿಯ ಅಭಿವೃದ್ಧಿಯ ಹುಚ್ಚು ಕಡಿವಾಣವಿಲ್ಲದ ಕುದುರೆಯಂತೆ ಓಡುತ್ತಿದೆ.  ಬಹಳಷ್ಟು ಶ್ರೀಮಂತರಿಗೆ ವಿವೇಕ ಪ್ರಜ್ಞೆ ಇಲ್ಲದೆ ಇರುವುದರಿಂದಾಗಿ ಭೂಮಿಯ ಮೇಲಿನ ಎಲ್ಲ ಜೀವಿಗಳಿಗೂ ತೊಂದರೆಯಾಗುವ ಸಂಭವ ಕಂಡುಬರುತ್ತಿದೆ.  ಭೂಮಿಯ ಉಷ್ಣಾಂಶ ಏರುತ್ತಿರುವುದರಿಂದಾಗಿ ಹಲವು ಪ್ರಾಣಿ, ಸಸ್ಯ ಪ್ರಭೇದಗಳು ಕಣ್ಮರೆಯಾಗುತ್ತಿವೆ.  ಎಲ್ಲರ ಹಿತಚಿಂತನೆ ಮಾಡದ ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಯೇ ಇದಕ್ಕೆ ಕಾರಣ.   ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಯಲ್ಲಿ ಶ್ರೀಮಂತರಿಗೆ ಮಾತ್ರ ಗೌರವ ಇರುವುದರಿಂದಾಗಿ ಎಲ್ಲರೂ ಶ್ರೀಮಂತರಾಗುವ ಹುಚ್ಚು ಓಟದಲ್ಲಿ ಸ್ಪರ್ಧಿಸುತ್ತಿದ್ದಾರೆ.  ಈ ಹುಚ್ಚು ಸ್ಪರ್ಧೆಯ ಪರಿಣಾಮವಾಗಿ ಅವಶ್ಯಕತೆ ಇಲ್ಲದಿದ್ದರೂ ಭಾರೀ ಬಂಗಲೆಗಳು, ಐಶಾರಾಮಿ ವಾಹನಗಳನ್ನು ಹೊಂದುವ ಚಟ ಮನುಷ್ಯನಲ್ಲಿ ಬೆಳೆಯುತ್ತಿದೆ.  ಇದು ಅವಶ್ಯಕತೆ ಇದ್ದು ನಡೆಯುವ ಓಟವಲ್ಲ ತಾನು ಇತರರಿಗಿಂತ ಮೇಲು ಎಂದು ತೋರಿಸುವ ಸಲುವಾಗಿ ನಡೆಯುತ್ತಿರುವ ಮಾನವನ ಅವಿವೇಕವಾಗಿದೆ.  ಬಂಡವಾಳಶಾಹಿ ವ್ಯವಸ್ಥೆಯ ಚಿಂತಕರು ಲಂಗುಲಗಾಮಿಲ್ಲದ ಅಭಿವೃದ್ಧಿಯ ಹುಚ್ಚನ್ನು ನಿಯಂತ್ರಿಸದೆ ಇದ್ದರೆ ಭವಿಷ್ಯ ಅದರಲ್ಲೂ ಮುಂದಿನ ಪೀಳಿಗೆಯ ಭವಿಷ್ಯ ಕರಾಳವಾಗಬಹುದು.

ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಯಲ್ಲಿ ಹೆಚ್ಚು ಹೆಚ್ಚು ಉತ್ಪಾದನೆ, ಹೆಚ್ಚು ಹೆಚ್ಚು ಉತ್ಪನ್ನಗಳನ್ನು ಬಳಸಿ ಬಿಸಾಡುವುದು ಅಭಿವೃದ್ಧಿಯ ಮಾನದಂಡವಾಗಿದೆ.  ಇದರಿಂದ ಹೆಚ್ಚು ಹೆಚ್ಚು ಉದ್ಯೋಗಾವಕಾಶ ಸೃಷ್ಟಿಯಾಗುತ್ತದೆ, ಬೆಳವಣಿಗೆಯ ದರ ಹೆಚ್ಚುತ್ತದೆ ಎಂಬುದು ಈ ತರಹದ ಅಭಿವೃದ್ಧಿಯ ಸಮರ್ಥಕರ ದೂರದೃಷ್ಟಿಯಿಲ್ಲದ ವಾದವಾಗಿದೆ.   Hindustan_petroleumಹೀಗಾಗಿ ಮಾನವನ ಸುಗಮ ಜೀವನಕ್ಕೆ ಅನಿವಾರ್ಯವಲ್ಲದ ಹಲವು ವಸ್ತುಗಳು ಇಂದು ಮಾರುಕಟ್ಟೆಯಲ್ಲಿದ್ದು ಅವುಗಳ ಮಾರಾಟಕ್ಕಾಗಿ ಬಂಡವಾಳಶಾಹಿಗಳಿಂದ ನಿಯಂತ್ರಿಸಲ್ಪಡುವ ಟಿವಿ ಮಾಧ್ಯಮ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದೆ.  ಜಾಹೀರಾತುಗಳೇ ಟಿವಿ ಮಾಧ್ಯಮದ ಜೀವಾಳವಾಗಿರುವ ಕಾರಣ ನೈತಿಕತೆ ಎಂಬುದು ಟಿವಿ ಮಾಧ್ಯಮದಿಂದ ಬಹುತೇಕ ಕಣ್ಮರೆಯಾಗಿದೆ.  ಹೀಗಾಗಿ ಅವಶ್ಯಕವಲ್ಲದ ಹಲವು ಸಾಮಗ್ರಿಗಳ ಜಾಹೀರಾತುಗಳು ಟಿವಿ ಹಾಗೂ ಇತರ ಮಾಧ್ಯಮಗಳಲ್ಲಿ ಕಾಣಿಸುತ್ತಿದ್ದು ಜನರ ಕೊಳ್ಳುಬಾಕ ಸಂಸ್ಕೃತಿಯನ್ನು ಉತ್ತೇಜಿಸಿ ಪರಿಸರದ ಮೇಲೆ ಹಾನಿ ಮಾಡಲು ಪರೋಕ್ಷ ಕಾರಣವಾಗಿದೆ.  ನಗರಗಳಲ್ಲಿ ಹೆಚ್ಚು ಹೆಚ್ಚು ವಿದ್ಯುತ್ ಬಳಕೆ ಮಾಡಿದಷ್ಟೂ ಅದು ಅಭಿವೃದ್ಧಿ ಎಂದು ಬಿಂಬಿಸಲಾಗುತ್ತಿದೆ.  ಅವಶ್ಯಕತೆ ಇಲ್ಲದಿದ್ದರೂ ನಗರಗಳಲ್ಲಿ ವಿದ್ಯುತ್ ದೀಪಗಳು ಹಗಲು ರಾತ್ರಿ ಎಂಬ ಪರಿವೆ ಇಲ್ಲದೆ ಉರಿಯುತ್ತಿರುತ್ತವೆ.  ಚಳಿಗಾಲ, ಮಳೆಗಾಲದಲ್ಲಿಯೂ ಸೆಕೆ ಇಲ್ಲದಿದ್ದರೂ ಹವಾನಿಯಂತ್ರಣ ಸಾಧನ ಬಳಕೆ, ಫ್ಯಾನುಗಳ ಬಳಕೆ ನಿರಂತರವಾಗಿ ನಡೆಯುತ್ತಿರುತ್ತದೆ ಮತ್ತು ಈ ರೀತಿಯ ಜೀವನವೇ ಶ್ರೇಷ್ಠ ಎಂಬ ಚಿಂತನೆಯನ್ನು ಬಂಡವಾಳಶಾಹಿ ವ್ಯವಸ್ಥೆ ಜನರಲ್ಲಿ ಬಿತ್ತಿ ಬೆಳೆಸಿದೆ.  ಹೀಗಾಗಿ ಎಷ್ಟು ವಿದ್ಯುತ್ ಉತ್ಪಾದನೆ ಆದರೂ ಸಾಕಾಗುವುದಿಲ್ಲ.  ಹೆಚ್ಚುತ್ತಿರುವ ಬೇಡಿಕೆಗೆ ಅನುಗುಣವಾಗಿ ಅಗ್ಗದ ವಿದ್ಯುತ್ ಉತ್ಪಾದಿಸಲು ಉಷ್ಣ ವಿದ್ಯುತ್ ಒಂದೇ ಮಾರ್ಗವಾಗಿರುವುದರಿಂದ ವಾತಾವರಣದಲ್ಲಿ ಹಸಿರು ಮನೆ ಅನಿಲ ಪರಿಣಾಮ ಉಂಟು ಮಾಡುವ ಇಂಗಾಲದ ಅನಿಲಗಳು ನಿರಂತರವಾಗಿ ಹೆಚ್ಚುತ್ತಲೇ ಇವೆ.  ಯಾವುದು ಜೀವನಕ್ಕೆ ಅವಶ್ಯಕ, ಯಾವುದಕ್ಕೆಜೀವನದಲ್ಲಿ ಮಹತ್ವ ನೀಡಬೇಕು ಎಂಬುದು ಅತ್ಯ್ನಂತ ಹೆಚ್ಚು ವಿದ್ಯಾವಂತ ಹಾಗೂ ಉನ್ನತ ಹುದ್ದೆಗಳಲ್ಲಿ ಇರುವ ಜನತೆಗೂ ತಿಳಿಯದೆ ಹೆಚ್ಚು ಹೆಚ್ಚು ಹಣ ಮಾಡುವುದು, ಹೆಚ್ಚು ಹೆಚ್ಚು ಆಸ್ತಿಪಾಸ್ತಿ ಮಾಡಿಡುವುದು, ಹೆಚ್ಚು ಹೆಚ್ಚು ಭೋಗಸಾಧನಗಳನ್ನು ಕೊಂಡು ಪೇರಿಸುವುದು ಶ್ರೇಷ್ಠ ಜೀವನ ವಿಧಾನ ಎಂಬ ಸಮೂಹ ಸನ್ನಿಯನ್ನು ಆಧುನಿಕ ಬಂಡವಾಳಶಾಹಿ ಹಾಗೂ ಮುಕ್ತ ಮಾರುಕಟ್ಟೆ ವ್ಯವಸ್ಥೆ ಹುಟ್ಟು ಹಾಕಿದೆ.  ಹೀಗಾಗಿ ಬಂಡವಾಳಶಾಹಿ ವ್ಯವಸ್ಥೆ ಹಾಗೂ ಮುಕ್ತ ಮಾರುಕಟ್ಟೆಯು ಹುಟ್ಟು ಹಾಕಿರುವ ಎಂದೆಂದೂ ತೀರದ ದಾಹದ ಬಗ್ಗೆ ಮರುಚಿಂತನೆ ಮಾಡದೆ ಇದ್ದರೆ ಪ್ರಾಕೃತಿಕ ವಿಕೋಪಗಳು ಹೆಚ್ಚಿನ ಪ್ರಮಾಣದಲ್ಲಿ ಸಂಭವಿಸಿ ಜನರ ಜೀವನ ದುರ್ಬರವಾಗಲಿದೆ.  ಇದರ ಮುನ್ಸೂಚನೆ ಈಗಾಗಲೇ ಹೆಚ್ಚುತ್ತಿರುವ ಬರಗಾಲ, ಚಂಡಮಾರುತ, ಸುಂಟರಗಾಳಿ, ಅತಿವೃಷ್ಟಿ, ವಿಪರೀತ ಸೆಕೆ, ಹೆಚ್ಚುತ್ತಿರುವ ಕಾಡ್ಗಿಚ್ಚು ಮೊದಲಾದವುಗಳ ರೂಪದಲ್ಲಿ ಆರಂಭವಾಗಿದೆ.  ಆದರೂ ಅಭಿವೃದ್ಧಿಯ ಹುಚ್ಚಿಗೆ ಬಲಿಯಾಗಿರುವ ನಮಗೆ ಈ ಬಗ್ಗೆ ಯೋಚಿಸಲೂ ಪುರುಸೊತ್ತಿಲ್ಲ.  ಇದನ್ನೆಲ್ಲಾ ಜನತೆಯ ಮುಂದೆ ಚರ್ಚಿಸಿ ಜಾಗೃತಿ ಮೂಡಿಸಬೇಕಾಗಿರುವ ಮಾಧ್ಯಮಗಳೇ ಬಂಡವಾಳಶಾಹಿ ಹಾಗೂ ಜಾಹೀರಾತುಗಳ ಕೃಪೆಯಲ್ಲಿ ಬದುಕಿರುವುದರಿಂದ ಜನರನ್ನು ಎಚ್ಚರಿಸುವವರೇ ಇಂದು ಇಲ್ಲವಾಗಿದ್ದಾರೆ.  ಈ ಬಗ್ಗೆ ಪರ್ಯಾಯ ಮಾಧ್ಯಮಗಳು ಇಂದು ಚಿಂತಿಸುವುದು ಅಗತ್ಯವಿದೆ.

1998, 1999, 2004 ರ ಕೆಪಿಎಸ್‌ಸಿ ಕರ್ಮಕಾಂಡ : ಸಂಪೂರ್ಣ ವಿವರಗಳು


– ರವಿ ಕೃಷ್ಣಾರೆಡ್ಡಿ


[ನೆನ್ನೆ (22-05-2014) ಆಮ್ ಆದ್ಮಿ ಪಕ್ಷ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಲಾದ ಪತ್ರಿಕಾಟಿಪ್ಪಣಿಯ ಪರಿಷ್ಕೃತ ರೂಪ ಈ ಲೇಖನ.]

ರಾಜ್ಯದ ಆಡಳಿತದಲ್ಲಿಯ ಸ್ವಚ್ಛಂದ ಭ್ರಷ್ಟಾಚಾರಕ್ಕೆ ಕಾರಣ ಸರ್ಕಾರಿ ಅಧಿಕಾರಿಗಳು. ಸಚಿವರ ಮತ್ತು ಶಾಸಕರ ಭ್ರಷ್ಟಾಚಾರವನ್ನು ಬದಿಗಿಟ್ಟು ನೋಡಿದರೆ, ದಿನನಿತ್ಯದ ಭ್ರಷ್ಟಾಚಾರ ಮತ್ತು ದುರಾಡಳಿತದಲ್ಲಿ ನೇರ ಪಾತ್ರಧಾರಿಗಳು ಅಧಿಕಾರಿಗಳೇ. ಈ ಅಧಿಕಾರಿಗಳು “ಭ್ರಷ್ಟಾಚಾರ ಮಾಡಲೇಬೇಕು, ಲಂಚ ತೆಗೆದುಕೊಳ್ಳಲೇಬೇಕು, ಕೆಳಗಿನ ಅಧಿಕಾರಿ-ಸಿಬ್ಬಂದಿಯಿಂದ ಮಾಮೂಲು ಪಡೆಯಲೇಬೇಕು”ಎನ್ನುವ ಸ್ಥಿತಿಗೆ ತಾವು ಕೆಲಸಕ್ಕೆ ಸೇರಿದ ಮೊದಲ ದಿನದಿಂದಲೇ ಬಂದಿದ್ದರೆ ಅದಕ್ಕೆ ಮುಖ್ಯ ಕಾರಣ ಕರ್ನಾಟಕ ಲೋಕಸೇವಾ ಆಯೋಗ ಮತ್ತು ರಾಜ್ಯ ಸರ್ಕಾರವೇ.

1998, 1999, 2004ರ ಕೆಎಎಸ್​ ಮತ್ತಿತರ ಪತ್ರಾಂಕಿತ ಅಧಿಕಾರಿಗಳ ನೇಮಕಾತಿಗೆ ಸಂಬಂಧಿಸಿದಂತೆ ಭಾರೀ ಭ್ರಷ್ಟಾಚಾರ, ಅವ್ಯವಹಾರ ಮತ್ತು kpsc-scandalಅಕ್ರಮಗಳು ಜರುಗಿರುವುದು ಸಿಐಡಿ ತನಿಖೆ ಮತ್ತು ಹೈಕೋರ್ಟ್ ನೇಮಿಸಿದ್ದ ಸತ್ಯಶೋಧನೆ ಸಮಿತಿಯ ವರದಿಗಳಿಂದ ಬಹಿರಂಗವಾಗಿದೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ರಾಜ್ಯದ ಉಚ್ಚ ನ್ಯಾಯಾಲಯದಲ್ಲೂ ವಿಚಾರಣೆ ನಡೆಯುತ್ತಿದೆ. ಆದರೆ ಸರ್ಕಾರ, ಅಂದರೆ ನಮ್ಮ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಮತ್ತು ಮಂತ್ರಿಗಳು, ಹಾಗೂ ಅಧಿಕಾರಿ ವರ್ಗ, ಸಂವಿಧಾನಬದ್ಧವಾಗಿ ತಾವು ನಿರ್ವಹಿಸಬೇಕಾಗಿದ್ದ ಕರ್ತವ್ಯವನ್ನು ಮಾಡದೇ, ಈಗಲೂ ಸಹ ಭ್ರಷ್ಟ ಮಾರ್ಗದಿಂದ ನೇಮಕಗೊಂಡ ಅಧಿಕಾರಿಗಳನ್ನು ಮತ್ತು ಆಯ್ಕೆ ಮಾಡಿದ ಭ್ರಷ್ಟರನ್ನು ರಕ್ಷಿಸುತ್ತಿದೆ, ಮತ್ತು ಇವರೆಲ್ಲರ ಪಿತೂರಿಯಿಂದಾಗಿ ಅನ್ಯಾಯಕ್ಕೊಳಗಾದ ಅರ್ಹ, ಪ್ರಾಮಾಣಿಕ, ಮತ್ತು ಪ್ರತಿಭಾವಂತ ಅಭ್ಯರ್ಥಿಗಳಿಗೆ ಆಗಿರುವ ಅನ್ಯಾಯವನ್ನು ಮುಂದುವರೆಸುತ್ತಿದೆ. ಆ ಮೂಲಕ ರಾಜ್ಯದ ಜನತೆಯ ಮೇಲೆ ಭ್ರಷ್ಟರನ್ನು ಹೇರಿ, ಭ್ರಷ್ಟಾಚಾರದ, ಅನೈತಿಕತೆಯ ಆಡಳಿತ ನೀಡುತ್ತಿದೆ.

ಈಗಾಗಲೆ ಸತ್ಯಶೋಧನಾ ಸಮಿತಿಯು ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯ ಪ್ರಕಾರ ಇಡೀ ನೇಮಕಾತಿ ಪ್ರಕ್ರಿಯೆಯಲ್ಲಿ ಎಲ್ಲಾ ಹಂತಗಳಲ್ಲಿ ಅಕ್ರಮಗಳಾಗಿರುವುದು ಸಾಬೀತಾಗಿದೆ. ಅರ್ಜಿಯ ಸ್ವೀಕಾರದ ಹಂತದಿಂದ ಹಿಡಿದು, ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆ, ಹಾಗೂ ವ್ಯಕ್ತಿತ್ವ ಪರೀಕ್ಷೆ / ಸಂದರ್ಶನ ಒಳಗೊಂಡಂತೆ ಅಂತಿಮ ಪಟ್ಟಿಯ ಬಿಡುಗಡೆಯವರೆಗೂ ಕಾನೂನು ಮತ್ತು ನಿಯಮ ಬಾಹಿರ ಕೃತ್ಯಗಳು ನಡೆದಿರುವುದನ್ನು ಸತ್ಯಶೋಧನಾ ಸಮಿತಿ ವರದಿ ಮಾಡಿದೆ. ಹಣ, ಸ್ವಜನಪಕ್ಷಪಾತ ಮತ್ತು ಪ್ರಭಾವದ ಕಾರಣಕ್ಕಾಗಿಯೇ ಈ ಅವ್ಯವಹಾರಗಳು ನಡೆದಿವೆಯೇ ಹೊರತು ಬೇರೆ ಯಾವುದೇ ತಾಂತ್ರಿಕ ದೋಷದಿಂದಾಗಲಿ ಅಲ್ಲ. ಮತ್ತು ಈ ಎಲ್ಲಾ ಅಪಕೃತ್ಯಗಳನ್ನೂ ಭಾಗಿಯಾದವರೆಲ್ಲಾ ಪ್ರಜ್ಞಾಪೂರ್ವಕವಾಗಿ, ವ್ಯವಸ್ಥಿತವಾಗಿ ಎಸಗಿದ್ದಾರೆ.

ಎಸ್,ಎಮ್.ಕೃಷ್ಣ, ಧರಮ್ ಸಿಂಗ್, ಮತ್ತು ಎಚ್.ಡಿ. ಕುಮಾರಸ್ವಾಮಿಯವರ ಆಡಳಿತಾವಧಿಯಲ್ಲಿ ಈ ಎಲ್ಲಾ ಕೃತ್ಯಗಳು ನಡೆದಿರುವುದು ಕಂಡುಬಂದಿದ್ದು, ಈಗಲೂ ಸರ್ಕಾರದ ಆಯಕಟ್ಟಿನ ಸ್ಥಳದಲ್ಲಿರುವ ಪ್ರಭಾವಿ ವ್ಯಕ್ತಿಗಳು ಆಗ ಕೆಪಿಎಸ್‌ಸಿ ಆಯೋಗದಲ್ಲಿ ಪ್ರಮುಖ ಹುದ್ದೆಗಳಲ್ಲಿದ್ದದ್ದನ್ನು ನಾವು ನೋಡಬಹುದಾಗಿದೆ. ಅನೇಕ ವರ್ಷಗಳಿಂದ ಆಯೋಗದ ಸದಸ್ಯರಾಗಿದ್ದ ಮತ್ತು 2001 ರಿಂದ 2007 ರವರೆಗೆ ಅಧ್ಯಕ್ಷರಾಗಿದ್ದ ಡಾ.ಎಚ್.ಎನ್.ಕೃಷ್ಣ ಈ ಎಲ್ಲಾ ಹಗರಣಗಳ ರೂವಾರಿಯಾಗಿದ್ದರು ಮತ್ತು ಅವರು ಎಸ್.ಎಂ.ಕೃಷ್ಣ ಮತ್ತು ಕುಮಾರಸ್ವಾಮಿಯವರಿಗೆ ಪರಮಾಪ್ತರೂ ಆಗಿದ್ದರು. ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕಾರ್ಯದರ್ಶಿಗಳಾಗಿರುವ ಹಿರಿಯ ಐಎಎಸ್​ ಅಧಿಕಾರಿ ಕೆ.ಆರ್.ಶ್ರೀನಿವಾಸ್​ ಫೆಬ್ರವರಿ 2001ರಿಂದ ಸೆಪ್ಟಂಬರ್​ 12, 2002ರವರೆಗೆ ಕೆಪಿಎಸ್‍ಸಿ ಆಯೋಗದಲ್ಲಿ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸಿದ್ದರು. ಇವರ ನಂತರದ ಅವಧಿಯಲ್ಲಿ ಕಾಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದವರು ಈಗ ನಿವೃತ್ತರಾಗಿರುವ ಮಾಜಿ ಐಎಎಸ್ ಅಧಿಕಾರಿ ಹರೀಶ್ ಗೌಡ. ಇವರ ನಂತರ, ಅಂದರೆ, ಆಗಸ್ಟ್​​ 5, 2004ರಿಂದ ಫೆಬ್ರುವರಿ 2, 2007ರವರೆಗೆ ಕೆಪಿಎಸ್‌ಸಿ ಕಾರ್ಯದರ್ಶಿಗಳಾಗಿದ್ದ ರಾಮಪ್ರಸಾದ್​ ಈಗ ರಾಜ್ಯಪಾಲರಿಗೆ ಕಾರ್ಯದರ್ಶಿ. ಹೈಕೋರ್ಟ್​ ರಚಿಸಿದ್ದ ಸತ್ಯಶೋಧನೆ ಸಮಿತಿಯ ವರದಿಯಲ್ಲಿ ಈ ನಾಲ್ವರ ಅಧಿಕಾರವಧಿಯಲ್ಲಿ ಜರುಗಿದ ಲೋಪ ಮತ್ತು ಅಕ್ರಮಗಳ ಬಗ್ಗೆ ವಿಸ್ತೃತವಾಗಿ ದಾಖಲಾಗಿದೆ.

ಹಾಗೆಯೇ, ಈ ಮೂರೂ ಪಟ್ಟಿಯಲ್ಲಿ ಅಕ್ರಮವಾಗಿ ಆಯ್ಕೆಯಾಗಿರುವ ಅನೇಕ ಅಧಿಕಾರಿಗಳು ಇಂದು ರಾಜ್ಯ ಸರ್ಕಾರದ ಪ್ರಮುಖ ಹುದ್ದೆಗಳಲ್ಲಿದ್ದಾರೆ ಮತ್ತು ಕಳೆದ ಎಂಟು ವರ್ಷಗಳಿಂದ ರಾಜ್ಯದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್, ಜೆಡಿಎಸ್, ಮತ್ತು ಬಿಜೆಪಿ ಪಕ್ಷಗಳ ನಾಯಕರೊಂದಿಗೆ ಮತ್ತು ಮಾಜಿ ಮಂತ್ರಿಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದಾರೆ. ಇದು ಕೇವಲ ಕಾರ್ಯನಿರ್ವಹಣೆಯ ಕಾರಣಕ್ಕಾಗಿಯಷ್ಟೇ ಅಲ್ಲದೆ ತಾವು ಆಯ್ಕೆಯಾದ ಅಕ್ರಮ ಮಾರ್ಗಗಳನ್ನು ಮುಚ್ಚಿಹಾಕುವುದಕ್ಕಾಗಿಯೂ ಬಳಸಿಕೊಳ್ಳುತ್ತಿದ್ದಾರೆ. ಇಂದಿನ ಸಿದ್ಧರಾಮಯ್ಯನವರ ಸರ್ಕಾರ ಸಹ ಹೈಕೋರ್ಟಿಗೆ ತಾವು ಇಡೀ ಪ್ರಕ್ರಿಯೆಯಲ್ಲಾಗಿರುವ ಭ್ರಷ್ಟಾಚಾರ ಮತ್ತು ಅಕ್ರಮಗಳ ವಿರುದ್ಧ ಯಾವ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಲಾಗದಿರುವುದಕ್ಕೆ ಈ ಹಿನ್ನೆಲೆಯೆಲ್ಲ ಕಾರಣವಾಗಿದೆ. ಹಾಗೆಯೇ, ಇಂದು ನ್ಯಾಯ ಜರುಗಿಸಬೇಕಾದ ಸ್ಥಳದಲ್ಲಿ ಕುಳಿತು ಅನ್ಯಾಯವನ್ನು ಎತ್ತಿಹಿಡಿಯುವ ಕೆಲಸವನ್ನು ಹೀಗೆ ಅಕ್ರಮವಾಗಿ ಆಯ್ಕೆಯಾದವರೇ ಮಾಡಬೇಕಾದ ವಿಚಿತ್ರ ಮತ್ತು ದೌರ್ಭಾಗ್ಯದ ಪರಿಸ್ಥಿತಿ ಸೃಷ್ಟಿಯಾಗಿದೆ. ಉದಾಹರಣೆಗೆ, ಸತ್ಯಶೋಧನಾ ಸಮಿತಿಯ ವರದಿಯಲ್ಲಿ ಉಲ್ಲೇಖಿಸಿರುವ ಪ್ರಕಾರ ಉತ್ತರಪತ್ರಿಕೆಯ ಅಂಕಗಳನ್ನು ಹಾಗೂ ಕಂಪ್ಯೂಟರ್‌ನಲ್ಲಿ ಅದರ ಸರಾಸರಿಯನ್ನು ತಿದ್ದಿ, 40.5 ರಷ್ಟು ಹೆಚ್ಚುವರಿಯಾಗಿ ಸುಳ್ಳು ಅಂಕಗಳನ್ನು ಪಡೆದು, ಆ ಮೂಲಕ ನೌಕರಿ ಪಡೆದುಕೊಂಡ ಅಕ್ರಮ ಫಲಾನುಭವಿ ಡಾ. ಜಿ.ಎಸ್. ಮಂಗಳ (ಸತ್ಯಶೋಧನಾಸಮಿತಿ ವರದಿ -ಪುಟ 255) ಈಗ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಲ್ಲಿ ಅಧೀನ ಕಾರ್ಯದರ್ಶಿ ಹುದ್ದೆಯಲ್ಲಿದ್ಡಾರೆ. ಅನ್ಯಾಯಕ್ಕೊಳಗಾದ ಅರ್ಜಿದಾರರು ಸಿಐಡಿ ವರದಿಯ ಆಧಾರದ ಮೇಲೆ ಅಕ್ರಮ ಎಸಗಿರುವವರ ವಿರುದ್ಧ ಕ್ರಮ ಜರುಗಿಸಲು ಸರ್ಕಾರಕ್ಕೆ ಕೊಟ್ಟ ಮನವಿಗೆ “ತಮ್ಮ ಮನವಿಯನ್ನು ಪುರಸ್ಕರಿಸಲು ಆಸ್ಪದವಿರುವುದಿಲ್ಲ” ಎಂದು ಉತ್ತರ ಕೊಟ್ಟವರು ಇದೇ ಅಧಿಕಾರಿಯಾಗಿರುತ್ತಾರೆ.

ಪಿ.ಎಸ್.ಮಂಜುನಾಥ್​ ಎನ್ನುವವರು (ಸತ್ಯಶೋಧನಾಸಮಿತಿ ವರದಿ -ಪುಟ 255) ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಯಲ್ಲಿ ಕೋರಿದ್ದ ಮೀಸಲಾತಿ ಪ್ರವರ್ಗ 3-ಬಿ. ಆದರೆ ಪ್ರವರ್ಗ 3-ಬಿ ಪ್ರಮಾಣ ಪತ್ರ ಸಲ್ಲಿಸುವಲ್ಲಿ ವಿಫಲರಾಗಿ ಸಾಮಾನ್ಯ ವರ್ಗ ಕೋಟಾದಲ್ಲಿ ಸಂದರ್ಶನಕ್ಕೆ ಹಾಜರಾಗಿ ಮೀಸಲಾತಿಯನ್ನು ಬಹಳ ಕೆಟ್ಟ ರೀತಿಯಲ್ಲಿ ದುರುಪಯೋಗಪಡಿಸಿಕೊಂಡಿರುತ್ತಾರೆ. ಸಾಮಾನ್ಯ ವರ್ಗದಲ್ಲಿರಬೇಕಾಗಿದ್ದ ಇವರು, ಲಿಖಿತ ಪರೀಕ್ಷೆಯ ಸಂದರ್ಭದಲ್ಲೆಲ್ಲಾ ತಮಗೆ ಅರ್ಹತೆ ಇಲ್ಲದಿದ್ದರೂ ಮಿಸಲಾತಿ ಪಡೆದುಕೊಂಡು ಸಂದರ್ಶನದ ಸಮಯದಲ್ಲಿ ಪ್ರಭಾವ ಬಳಸಿ ಸಾಮಾನ್ಯ ವರ್ಗದಲ್ಲಿ ಆಯ್ಕೆಯಾಗಿ, ಇತರೆ ಸಾಮಾನ್ಯ ವರ್ಗದ ಪ್ರತಿಭಾವಂತರ ಅವಕಾಶಕ್ಕೆ ಮೋಸ ಮಾಡಿರುತ್ತಾರೆ. ಇಡೀ ಪ್ರಕರಣದಲ್ಲಿ ಕೆಪಿಎಸ್‌ಸಿಯ ಅಧಿಕಾರಿ ಮತ್ತು ಆಯೋಗದ ಸದಸ್ಯರ ಕೃಪಾಕಟಾಕ್ಷಗಳಿಲ್ಲದೆ ಈ ಮಟ್ಟದ ನಿಯಮಾವಳಿಗಳ ದುರುಪಯೋಗ ಸಾಧ್ಯವಿಲ್ಲ. ಹೀಗೆ ಅಕ್ರಮವಾಗಿ ಆಯ್ಕೆಯಾದ ಮಂಜುನಾಥ್‌ರ ಹೆಸರು, ಅಕ್ರಮ ಗಣಿಗಾರಿಕೆಯ ಬಗ್ಗೆ ಲೋಕಾಯುಕ್ತ ಕೊಟ್ಟಿರುವ ವರದಿಯಲ್ಲಿ ಸದ್ಯ ಜೈಲಿನಲ್ಲಿರುವ ಖಾರದಪುಡಿ ಮಹೇಶ ಅಧಿಕಾರಿಗಳಿಗೆ ವಿವಿಧ ರೀತಿಯಲ್ಲಿ ಲಂಚ ಕೊಟ್ಟಿರುವ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಈಗ ಅವರು ಸಹಾಯಕ ಆಯುಕ್ತರಾಗಿ ಕೊಪ್ಪಳದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೇ ರೀತಿಯ ಇನ್ನೊಂದು ಪ್ರಕರಣ ಮಂಜುನಾಥ ಬಳ್ಳಾರಿ (ಸತ್ಯಶೋಧನಾಸಮಿತಿ ವರದಿ -ಪುಟ 135) ಎನ್ನುವವರದು. ಅಂಕಗಳ ವ್ಯತ್ಯಾಸದಿಂದಾಗಿ ಅಧಿಕಾರಿಯಾಗಿ ಆಯ್ಕೆಯಾದ ಇವರೂ ಸಹ ಲೋಕಾಯುಕ್ತ ವರದಿಯಲ್ಲಿ ಲಂಚ ಪಡೆದ ಅಧಿಕಾರಿಗಳ ಪಟ್ಟಿಯಲ್ಲಿದ್ದಾರೆ.

ಅಕ್ರಮವಾಗಿ ಆಯ್ಕೆಯಾದ ಅಧಿಕಾರಿಗಳು ನೌಕರಿಗೆ ಸೇರಿದ್ದು 2006 ರಲ್ಲಿ. ಈ ಹಗರಣದಲ್ಲಿ ಆಗಿರುವ ಅಕ್ರಮಗಳ ಬಗ್ಗೆ 2000 ಇಸವಿಯಿಂದಲೇ ಕಾನೂನು ಹೋರಾಟ ಆರಂಭವಾಗಿತ್ತು. ಇಷ್ಟಿದ್ದರೂ ಸಹ, ಇವೆಲ್ಲಾ ವಿಚಾರಗಳ ಬಗ್ಗೆ ಸರ್ಕಾರಕ್ಕೆ ಮಾಹಿತಿ ಇದ್ದರೂ ಅಕ್ರಮವಾಗಿ ಆಯ್ಕೆಯಾದವರಿಗೆ ಪ್ರಮುಖ ಹುದ್ದೆ ಕೊಡುವುದಷ್ಟೇ ಅಲ್ಲದೆ ಬಡ್ತಿಯನ್ನೂ ನೀಡುತ್ತ ಬಂದಿದೆ. ಇಡೀ ಹಗರಣದಲ್ಲಿ ಆಗಿರುವ ಪ್ರತಿಯೊಂದು ಅಕ್ರಮದ ಬಗ್ಗೆ ವಿಸ್ತೃತ ತನಿಖೆ ನಡೆಸಿದ ಸಿಐಡಿ, 2012 ಏಪ್ರಿಲ್‌ನಲ್ಲಿ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಮತ್ತು ಸರ್ಕಾರಕ್ಕೆ ಸಲ್ಲಿಸುತ್ತದೆ. ಆದರೆ ಆಗ ಮುಖ್ಯಮಂತ್ರಿಯಾಗಿದ್ದ ಸದಾನಂದ ಗೌಡರು ಇದರ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಮತ್ತು ಅಕ್ರಮವಾಗಿ ಆಯ್ಕೆಯಾದ ಅಧಿಕಾರಿಗಳು ಯಾರು ಎಂಬ ಬಗ್ಗೆ ಮಾಹಿತಿ ಸಿಐಡಿ ವರದಿಯಲ್ಲಿದರೂ ಸಹ ಆ ಆಧಿಕಾರಿಗಳಿಗೆ ಬಡ್ತಿ ಮತ್ತಿತರ ಅನುಕೂಲಗಳು ಮುಂದುವರೆಯುತ್ತಲೇ ಹೋದವು ಮತ್ತು ಸರ್ಕಾರ ಭ್ರಷ್ಟರನ್ನು ರಕ್ಷಿಸುವತ್ತಲೇ ತನ್ನ ಆಸಕ್ತಿ ತೋರಿಸುತ್ತಿತ್ತು.

ಇದಾದ ನಂತರ, ಹೈಕೋರ್ಟಿನಲ್ಲಿದ್ದ ಪ್ರಕರಣಕ್ಕೆ ನ್ಯಾಯಾಲಯ ಸತ್ಯಶೋಧನಾ ಸಮಿತಿಯನ್ನು ನೇಮಿಸಿತು. ಆ ಸಮಿತಿ ಮತ್ತಷ್ಟು ವಿಸ್ತೃತ ವರದಿಯನ್ನು 31, ಜನವರಿ 2014 ರಂದು ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಿತು. ಸ್ವತಃ ಸರ್ಕಾರದ ಪರ ವಾದಿಸುತ್ತಿರುವ ವಕೀಲರಾದ ದೇವದಾಸ್‌ರವರು ಆ ವರದಿಯಲ್ಲಿ ಇರುವ ಎಲ್ಲಾ ಮಾಹಿತಿಯನ್ನೂ ಮತ್ತು ಅನೇಕರು ಅಕ್ರಮವಾಗಿ ಆಯ್ಕೆಯಾಗಿದ್ದಾರೆ ಎನ್ನುವುದನ್ನು ನಾವು ಒಪ್ಪಿಕೊಂಡಿದ್ದೇವೆ ಎಂದು ಕೋರ್ಟಿಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಹೇಳಿರುತ್ತಾರೆ. ಆದರೆ ಈವರೆಗೂ ಸರ್ಕಾರ ಭ್ರಷ್ಟರ ವಿರುದ್ಧ ಕ್ರಮವನ್ನಾಗಲಿ, ಅಥವ ಅಕ್ರಮವಾಗಿ ಆಯ್ಕೆಯಾಗಿದ್ದಾರೆ ಎಂದು ಕಂಡುಬಂದ ಅಧಿಕಾರಿಗಳಿಗೆ ಕನಿಷ್ಟ ನೋಟಿಸ್ ಸಹ ಕಳುಹಿಸುವ ಧೈರ್ಯ ಮಾಡಿರುವುದಿಲ್ಲ.

ಈಗ ಅರ್ಜಿದಾರರು 26-04-2014ರಂದು ಹೈಕೋರ್ಟಿಗೆ ಕೂಲಂಕುಷವಾಗಿ ಎಲ್ಲಾ ಅಕ್ರಮ ಫಲಾನುಭವಿ ಅಧಿಕಾರಿಗಳ ಪಟ್ಟಿಯನ್ನು ತಯಾರಿಸಿ ಸಲ್ಲಿಸಿದ್ದಾರೆ. ಆದರ ಪ್ರತಿಯನ್ನು ಸರ್ಕಾರಕ್ಕೆ ಮತ್ತು ಕೆಪಿಎಸ್‍ಸಿಗೂ ಸಲ್ಲಿಸಲಾಗಿದೆ. 1998ರ ರಲ್ಲಿ ಆಯ್ಕೆಯಾದ 386 ಅಭ್ಯರ್ಥಿಗಳ ಪೈಕಿ 292 ಅಭ್ಯರ್ಥಿಗಳು ಅಕ್ರಮ ಫಲಾನುಭವಿಗಳೆಂದು ಗುರುತಿಸಲಾಗಿದೆ. ಇದು ಶೇ. 76 ರಷ್ಟಿದೆ. 1999 ರಲ್ಲಿ ಆಯ್ಕೆಯಾದ 191 ಅಭ್ಯರ್ಥಿಗಳ ಪೈಕಿ 95 ಜನ ಅಕ್ರಮ ಫಲಾನುಭವಿಗಳೆಂದು (50%), ಮತ್ತು 2004 ರ ಪಟ್ಟಿಯಲ್ಲಿ ಆಯ್ಕೆಯಾದ 152 ಅಭ್ಯರ್ಥಿಗಳ ಪೈಕಿ 97 ಅಭ್ಯರ್ಥಿಗಳು (64%) ಅಕ್ರಮ ಫಲಾನುಭಾವಿಗಳೆಂದು ಸ್ಪಷ್ಟವಾಗಿ ಗುರುತಿಸಲಾಗಿದೆ. ಒಟ್ಟಾರೆ 729 ಅಧಿಕಾರಿಗಳಲ್ಲಿ 484 ಜನ, ಅಂದರೆ ಶೇ.66 (484/729 = 66%) ಅಕ್ರಮವಾಗಿ ಆಯ್ಕೆಯಾಗಿದ್ದಾರೆ. ಹೀಗೆ ಅಕ್ರಮವಾಗಿ ಸರ್ಕಾರಿ ಹುದ್ದೆಗೆ ಸೇರಿದ ಅನೇಕ ಅಧಿಕಾರಿಗಳು ಅನೇಕ ಭ್ರಷ್ಟಾಚಾರದ ಹಗರಣಗಳಲ್ಲಿ ಭಾಗಿಯಾಗಿದ್ದಾರೆ. ಹಲವರ ಮೇಲೆ ಲೋಕಾಯುಕ್ತ ದಾಳಿ ಆಗಿದೆ. ಮತ್ತು ಕೆಲವರು ವಿಚಾರಾಣಾಧೀನ ಕೈದಿಗಳಾಗಿ ಜೈಲಿನಲ್ಲಿಯೂ ಇದ್ದಾರೆ (ರಾಜಮ್ಮ ಚೌಡರೆಡ್ಡಿ – ಬಿಡಿಎ, ಶಿವರಾಮ್ – ಮಂಡ್ಯ ಹಗರಣದ ರೂವಾರಿ, ಮಂಜುನಾಥ್ ಮತ್ತು ಮಂಜುನಾಥ್ ಬಳ್ಳಾರಿ -ಗಣಿ ಹಗರಣದಲ್ಲಿ ಮಾಮೂಲು ಪಡೆದಿರುವುದು, ಎಮ್.ಆರ್.ರವಿ – ಉಪನ್ಯಾಸಕರಿಂದ ಲಂಚ ಪಡೆದ ಹಗರಣ, ದೇವರಾಜ್ ಡಿ. -ರಿಪ್ಪನ್ ಮಲ್ಹೋತ್ರ ಅತ್ಮಹತ್ಯೆ ಪ್ರಕರಣ, ರಾಜು ಸಿ – ಅತ್ಯಾಚಾರ ಯತ್ನ ಪ್ರಕರಣದಲ್ಲಿ ಆರೋಪಿ).

ಯಾವುದೇ ನೇಮಕದಲ್ಲಿ ಶೇ.20ಕ್ಕಿಂತ ಹೆಚ್ಚು ಅಕ್ರಮ ನಡೆದಿದ್ದಲ್ಲಿ ಅಂತಹ ಅಧಿಸೂಚನೆಯನ್ನು ರದ್ದುಪಡಿಸಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪೊಂದರಲ್ಲಿ ಆದೇಶ ನೀಡಿದೆ. ಹಾಗಾಗಿ ಈ ಮೂರೂ ವರ್ಷಗಳ ನೇಮಕಾತಿ ರದ್ದಾಗುವುದು ನಿಶ್ಚಿತವಾಗಿದ್ದು, ಸರ್ಕಾರ ಭ್ರಷ್ಟರನ್ನು ರಕ್ಷಿಸುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ಮುಂದೂಡುತ್ತಿದೆ ಮತ್ತು ತನ್ನ ಸಂವಿಧಾನಬದ್ದ ಕರ್ತವ್ಯ ನಿರ್ವಹಿಸುವಲ್ಲಿ ಪದೇಪದೇ ವಿಫಲವಾಗುತ್ತಿದೆ. ಕ್ರಮ ಕೈಗೊಳ್ಳಬೇಕಿದ್ದ ಸದಾನಂದ ಗೌಡ, ಜಗದೀಶ್ ಶೆಟ್ಟರ್ ಮತ್ತು ಸಿದ್ಧರಾಮಯ್ಯನವರ ನೇತೃತ್ವದ ಸರ್ಕಾರಗಳು ಈ ರೀತಿಯಲ್ಲಿ ಭ್ರಷ್ಟರನ್ನು ರಕ್ಷಿಸುತ್ತಾ ಬಂದಿವೆ.

ಅಕ್ರಮವಾಗಿ ಆಯ್ಕೆಯಾದ ಭ್ರಷ್ಟ ಅಧಿಕಾರಿಗಳನ್ನು ಹೊರಹಾಕಿ ಭ್ರಷ್ಟಾಚಾರ ರಹಿತ ಆಡಳಿತ ನೀಡಲು ಕಟಿಬದ್ದವಾಗಬೇಕಾದ ಸರ್ಕಾರ, ಅದರ ಬದಲಿಗೆ ಅಂತಹವರನ್ನು ಉನ್ನತ ಹುದ್ದೆಗಳಿಗೆ ನೇಮಿಸುತ್ತ, ಭಡ್ತಿ ನೀಡುತ್ತ ಬರುತ್ತಿದೆ. ಕೆಳಗೆ ಇಂತಹ ಕೆಲವು ವ್ಯಕ್ತಿಗಳ ಉದಾಹರಣೆಗಳನ್ನು ಕೊಡಲಾಗಿದೆ:

1998 ರ ಸಾಲಿನಲ್ಲಿ :

  • ಮೀಸಲಾತಿ ದುರುಪಯೋಗ ಮತ್ತು ಅಂಕಗಳ ಏರುಪೇರಿನ ಮೂಲಕ ಅಕ್ರಮವಾಗಿ ಆಯ್ಕೆಯಾಗಿರುವ ಶಿವಶಂಕರ್ ಎನ್ (ಸತ್ಯಶೋಧನಾ ಸಮಿತಿ ವರದಿ -ಪುಟ 115, ಅಕ್ರಮ ಫಲಾನುಭವಿಗಳ ಪಟ್ಟಿ -ಪುಟ 2) ಈಗ ರಾಜ್ಯ ಗೃಹ ಸಚಿವ ಕೆ.ಜೆ. ಜಾರ್ಜ್‌ರವರಿಗೆ ಆಪ್ತ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಾರೆ.
  • ಸಂದರ್ಶನದ ಅಂಕಗಳನ್ನು ಅಕ್ರಮವಾಗಿ ತಿದ್ದುವುದರ ಮೂಲಕ ಹೆಚ್ಚುವರಿ ಅಂಕ ಪಡೆದು ಆಯ್ಕೆಯಾಗಿರುವ ಸಂಗಾಪುರ್ ಎಮ್.ಎಸ್ (ಅಕ್ರಮ ಫಲಾನುಭವಿಗಳ ಪಟ್ಟಿ -ಸಂಖ್ಯೆ 242) ಈಗ ಜವಳಿ, ಬಂದರು ಮತ್ತು ಒಳನಾಡು ಸಾರಿಗೆ ಸಚಿವರಾಗಿರುವ ಬಾಬುರಾವ್ ಚಿಂಚನಸೂರುರಿಗೆ ಆಪ್ತ ಕಾರ್ಯದರ್ಶಿಯಾಗಿದ್ದಾರೆ,
  • ಅಕ್ರಮ ಮಾಡರೇಷನ್ ಸ್ಕೇಲಿಂಗ್ ಮೂಲಕ ಅಧಿಕ ಅಂಕಗಳ ಲಾಭ ಪಡೆದಿರುವ ಶ್ರೀಧರ್ ನಾಯಕ್ ಕೆ.ಜೆ (ಅಕ್ರಮ ಫಲಾನುಭವಿಗಳ ಪಟ್ಟಿ -ಪುಟ 23) ಈಗ ಮುಖ್ಯಮಂತ್ರಿ ಕಚೇರಿಯಲ್ಲಿ ವಿಶೇಷ ಕರ್ತವ್ಯಾಧಿಕಾರಿಯಾಗಿದ್ದಾರೆ.
  • ಅಕ್ರಮ ಅಂಕ ತಿದ್ದುವಿಕೆಯ ಫಲಾನುಭವಿ ಎಲಿಷಾ ಆಂಡ್ರ್ಯೂಸ್ (ಅಕ್ರಮ ಫಲಾನುಭವಿಗಳ ಪಟ್ಟಿ -ಪುಟ 71) ಈಗ ಮುಖ್ಯಮಂತ್ರಿ ಕಚೇರಿಯಲ್ಲಿ ವಿಶೇಷ ಕರ್ತವ್ಯಾಧಿಕಾರಿಯಾಗಿದ್ದಾರೆ.
  • ಮೀಸಲಾತಿಯನ್ನು ದುರುಪಯೋಗ ಮಾಡಿಕೊಂಡು ಆಯ್ಕೆಯಾಗಿರುವ ವಿರೂಪಾಕ್ಷ ಕೆ.ಸಿ (ಅಕ್ರಮ ಫಲಾನುಭವಿಗಳ ಪಟ್ಟಿ -ಪುಟ 10) ಈಗ ಸಹಕಾರ ಖಾತೆ ಸಚಿವ ಮಹದೇವ ಪ್ರಸಾದ್‌ರ ವಿಶೇಷ ಕರ್ತವ್ಯಾಧಿಕಾರಿಯಾಗಿದ್ದಾರೆ.
  • ನ್ಯಾಯಾಲಯದ ನಿರ್ದೇಶನಗಳನ್ನು ಉಲ್ಲಂಘಿಸಿ ಆಗಿರುವ ಅಕ್ರಮ ಮಾಡರೇಷನ್ ಸ್ಕೇಲಿಂಗ್ ಮೂಲಕ ಲಾಭ ಪಡೆದಿರುವ ಜ್ಯೋತಿ ಕೆ (ಅಕ್ರಮ ಫಲಾನುಭವಿಗಳ ಪಟ್ಟಿ -ಪುಟ 3) ಈಗ ರಾಜ್ಯದ ಖಜಾನೆ ಇಲಾಖೆಯ ನಿರ್ದೇಶಕರಾಗಿ ಪ್ರಭಾವಿ ಹುದ್ದೆಯಲ್ಲಿದ್ದಾರೆ.
  • ಮೀಸಲಾತಿಯನ್ನು ದುರುಪಯೋಗ ಮಾಡಿಕೊಂಡು ಆಯ್ಕೆಯಾಗಿರುವ ಅಕ್ರಮ್ ಪಾಷಾ (ಅಕ್ರಮ ಫಲಾನುಭವಿಗಳ ಪಟ್ಟಿ -ಪುಟ 3) ಈಗ ಅಲ್ಪಸಂಖ್ಯಾತರ ನಿರ್ದೇಶನಾಲಯದ ನಿರ್ದೇಶಕರಾಗಿದ್ದಾರೆ.
  • ಅಕ್ರಮ ಮಾಡರೇಷನ್ ಸ್ಕೇಲಿಂಗ್ ಮೂಲಕ ಅಧಿಕ ಅಂಕಗಳ ಲಾಭ ಪಡೆದಿರುವ ಕರೀಗೌಡ (ಅಕ್ರಮ ಫಲಾನುಭವಿಗಳ ಪಟ್ಟಿ -ಪುಟ 4) ಹಿಂದೆ ವಿರೋಧಪಕ್ಷದ ನಾಯಕರಾಗಿದ್ದ ಕುಮಾರಸ್ವಾಮಿಯವರ ಅಪ್ತ ಕಾರ್ಯದರ್ಶಿಯಾಗಿದ್ದು ಈಗ ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಉಪನಿರ್ದೇಶಕರಾಗಿದ್ದಾರೆ.
  • ಇದೇ ರೀತಿ ಮೀಸಲಾತಿಯನ್ನು ದುರುಪಯೋಗ ಮಾಡಿಕೊಂಡು ಆಯ್ಕೆಯಾಗಿರುವ ಸಿಲ್ಲಿ-ಲಿಲ್ಲಿ ಟಿವಿ ಧಾರಾವಾಹಿ ಖ್ಯಾತಿಯ ಸಂಗಪ್ಪ ಉಪಾಸೆ (ಅಕ್ರಮ ಫಲಾನುಭವಿಗಳ ಪಟ್ಟಿ -ಪುಟ 6) ಇತ್ತೀಚೆಗೆ ಭಡ್ತಿ ಪಡೆದು ಈಗ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಉಪನಿಯಂತ್ರಕರಾಗಿದ್ದಾರೆ.
  • ಲಿಂಗಣ್ಣ ಕುಚಬಾಳ್ (ಅಕ್ರಮ ಫಲಾನುಭವಿಗಳ ಪಟ್ಟಿ -ಪುಟ 11) ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಸಹಾಯಕ ಆಯುಕ್ತರಾಗಿದ್ದಾರೆ.
  • ಅಕ್ರಮ ಅಂಕಗಳ ಫಲಾನುಭಾವಿಯಾಗಿರುವ ಎಚ್.ಎನ್.ಗೋಪಾಲಕೃಷ್ಣ (ಅಕ್ರಮ ಫಲಾನುಭವಿಗಳ ಪಟ್ಟಿ -ಪುಟ 2) ಈಗ ಹಾಸನದಲ್ಲಿ ಅಪರ ಜಿಲ್ಲಾಧಿಕಾರಿಯಾಗಿದ್ದಾರೆ.

1999 ರ ಸಾಲಿನಲ್ಲಿ :

  • ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಎಚ್.ಎನ್.ಕೃಷ್ಣರಿಂದ ಸಂದರ್ಶನದಲ್ಲಿ ಅತ್ಯಧಿಕ ಅಂಕಗಳನ್ನು ಪಡೆದು (194/200) ಅಕ್ರಮವಾಗಿ ಆಯ್ಕೆಯಾಗಿರುವ ರಾಜೇಂದ್ರ ಕೆ (ಅಕ್ರಮ ಫಲಾನುಭವಿಗಳ ಪಟ್ಟಿ -ಪುಟ 48) ಈಗ ಕೊಳಗೇರಿ ಅಭಿವೃದ್ಧಿ ಮಂಡಳಿಯಲ್ಲಿ ಅಧಿಕಾರಿಯಾಗಿದ್ದಾರೆ.
  • ಒಟ್ಟು ಆರು ಸಂದರ್ಶಕರ ಗುಂಪಿನಲ್ಲಿ ಕೇವಲ ಇಬ್ಬರು ಸಂದರ್ಶಕರ ಅಂಕಗಳನ್ನು ಪರಿಗಣಿಸಿ ಮತ್ತು ಅರ್ಜಿ ಸಲ್ಲಿಸುವ ವೇಳೆ ಪದವಿ ಪ್ರಮಾಣಪತ್ರಗಳು ಇಲ್ಲದಿದ್ದರೂ ಅಕ್ರಮವಾಗಿ ಆಯ್ಕೆ ಮಾಡಲಾಗಿರುವ ರಾಜೇಶ ಗೌಡ ಎಮ್.ಬಿ (ಅಕ್ರಮ ಫಲಾನುಭವಿಗಳ ಪಟ್ಟಿ -ಪುಟ 48) (ಮಾಜಿ ಶಾಸಕರೊಬ್ಬರ ಅಳಿಯ) ಇತ್ತೀಚೆಗೆ ಭಡ್ತಿ ಪಡೆದು ಅಪರ ಜಿಲ್ಲಾಧಿಕಾರಿಯಾಗಿದ್ಡಾರೆ.
  • ಅಕ್ರಮ ಅಂಕ ತಿದ್ದುವಿಕೆಯ ಫಲಾನುಭವಿಯಾಗಿರುವ ದೇವರಾಜ್ ಡಿ (ಅಕ್ರಮ ಫಲಾನುಭವಿಗಳ ಪಟ್ಟಿ -ಪುಟ 49) ಗುಲ್ಬರ್ಗದ ಸೂಪರಿಡೆಂಟ್ ಆಫ್ ಪೋಲಿಸ್ ಆಗಿದ್ದಾರೆ.
  • ಅಕ್ರಮ ಅಂಕ ತಿದ್ದುವಿಕೆಯ ಫಲಾನುಭವಿಯಾಗಿರುವ ಮಾಜಿ ಐಪಿಎಸ್ ಅಧಿಕಾರಿಯೊಬ್ಬರ ಮಗಳು ಸಿರಿಗೌರಿ (ಅಕ್ರಮ ಫಲಾನುಭವಿಗಳ ಪಟ್ಟಿ -ಪುಟ 49) ವರ್ಷದ ಹಿಂದೆಯೇ ಭಡ್ತಿ ಪಡೆದು ಎಸ್.ಪಿ.ಯಾಗಿದ್ದಾರೆ.

2004 ರ ಸಾಲಿನಲ್ಲಿ :

  • ಉತ್ತರಪತ್ರಿಕೆಯಲ್ಲಿ ಮತ್ತು ಕಂಪ್ಯೂಟರ್‌ನಲ್ಲಿ ಅಕ್ರಮವಾಗಿ ಅಂಕಗಳ ತಿದ್ದುಪಡಿಯಾಗಿ ಆಯ್ಕೆಯಾಗಿರುವ ವಿಜಯಮಹಾಂತೇಶ್ ದಾನಮ್ಮನವರ್ (ಅಕ್ರಮ ಫಲಾನುಭವಿಗಳ ಪಟ್ಟಿ -ಪುಟ 60) ಈಗ ಕಾರವಾರದಲ್ಲಿ ಅಪರ ಜಿಲ್ಲಾಧಿಕಾರಿಯಾಗಿದ್ಡಾರೆ.
  • ಅಕ್ರಮ ಅಂಕಗಳ ಫಲಾನುಭಾವಿಯಾಗಿರುವ ಗಂಗಾಧರ ಸ್ವಾಮಿ ಜಿ.ಎಮ್ (ಅಕ್ರಮ ಫಲಾನುಭವಿಗಳ ಪಟ್ಟಿ -ಪುಟ 60) (ಮಾಜಿ ನ್ಯಾಯಾಧೀಶರೊಬ್ಬರ ಅಳಿಯ) ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದಲ್ಲಿ (BMRDA) ಜಂಟಿ ಅಯುಕ್ತರಾಗಿದ್ದಾರೆ.
  • ಮಿಸಲಾತಿ ದುರುಪಯೋಗ ಮತ್ತು ಸಂದರ್ಶನದಲ್ಲಿ ಅಸಮರ್ಥನೀಯ ಅಂಕಗಳನ್ನು ಪಡೆದು ಆಯ್ಕೆಯಾಗಿರುವ ಯೋಗೀಶ್ ಎ.ಎಮ್ (ಅಕ್ರಮ ಫಲಾನುಭವಿಗಳ ಪಟ್ಟಿ -ಪುಟ 60) (ಹಾಲಿ ಶಾಸಕ ಮತ್ತು ಮಾಜಿ ಸಚಿವರ ಷಡ್ಡಕ) ಕಾಡಾ ಪ್ರಾಧಿಕಾರ (CADA), ಮೈಸೂರಿನಲ್ಲಿ  ಉನ್ನತ ಅಧಿಕಾರಿಯಾಗಿದ್ದಾರೆ.
  • ಅನುಪಾತ ನಿಯಮದ ದುರುಪಯೋಗವಾಗಿ ಆಯ್ಕೆಯಾಗಿರುವ ಪೂರ್ಣಿಮ.ಬಿ.ಆರ್ (ಅಕ್ರಮ ಫಲಾನುಭವಿಗಳ ಪಟ್ಟಿ -ಪುಟ 61) ಈಗ ಮಂಡ್ಯ ಜಿಲ್ಲಾಪರಿಷತ್‌ನಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದಾರೆ.

ಹೀಗೆ ಇಷ್ಟೆಲ್ಲಾ ಮಾಹಿತಿಯನ್ನು ಸತ್ಯಶೋಧನಾ ಸಮಿತಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರೂ ಮತ್ತು ಸರ್ಕಾರದ ವಕಿಲರೇ ಆ ಸಮಿತಿಯಲ್ಲೂ ಇದ್ದು ಅದಕ್ಕೆ ಸಹಮತ ಸೂಚಿಸಿ ಸಹಿ ಮಾಡಿದ್ದರೂ, ಈಗಲೂ ಸಿದ್ಧರಾಮಯ್ಯನವರ ಸರ್ಕಾರ ಅಕ್ರಮ ಫಲಾನುಭವಿ ಅಧಿಕಾರಿಗಳ ಪಟ್ಟಿ ನಮ್ಮಲ್ಲಿಲ್ಲ, ಅಥವ ನಮಗೆ ಗೊತ್ತಾಗುತ್ತಿಲ್ಲ ಎಂದು ಕೋರ್ಟಿಗೆ ಉತ್ತರ ಹೇಳುವ ಮೂಲಕ ಪ್ರತಿಯೊಬ್ಬ ಅಕ್ರಮ ಫಲಾನುಭವಿ ಅಧಿಕಾರಿಯನ್ನು ರಕ್ಷಿಸಲು ಹೊರಟಿದೆ. ಇದು ಸಿದ್ಧರಾಮಯ್ಯನವರಿಗಾಗಲಿ ಅಥವ ಅವರ ಸರ್ಕಾರಕ್ಕಾಗಲಿ ಶೋಭೆ ತರುವಂತಹುದ್ದಲ್ಲ ಮತ್ತು ಜನರು ಅವರ ಬಗ್ಗೆ ಇಟ್ಟುಕೊಂಡಿರುವ ವಿಶ್ವಾಸಕ್ಕೆ ಧಕ್ಕೆ ತರುವಂತಹುದ್ದಾಗಿದೆ. ನ್ಯಾಯಾಲಯ ಅನೇಕ ಬಾರಿ ಈ ವಿಚಾರದ ಬಗ್ಗೆ ನೀವು ಏನು ಕ್ರಮ ಕೈಗೊಂಡಿದ್ದೀರಾ ಎಂದು ಪದೇಪದೇ ಕೇಳಿದರೂ ಸರ್ಕಾರ ನಿರ್ಲಕ್ಷ್ಯದಿಂದ ವರ್ತಿಸುತ್ತಿದೆ. ಮಾರ್ಗದರ್ಶನಕ್ಕಾಗಿ ನ್ಯಾಯಾಲಯವನ್ನೇ ಕೇಳುತ್ತಿದೆ. “ಅಕ್ರಮ ಫಲಾನುಭವಿಗಳು ಇಂತಹವರು ಎಂದು ಗೊತ್ತಿದ್ದರೂ, ನೀವೇ ಉದ್ಯೋಗದಾತರಗಿದ್ದೀರಿ, ಹಾಗೂ ನಿಮ್ಮ ನೌಕರರಾಗಿರುವವರ ಮೇಲೆ ಕ್ರಮ ಜರುಗಿಸುವ ಅಧಿಕಾರವನ್ನು ನೀವೇ ಹೊಂದಿರುತ್ತೀರಿ, ಹೀಗಿರುವಾಗ ನೀವು ಯಾವ ಕಾರಣದಿಂದ ನ್ಯಾಯಾಲಯ ನಿಮಗೆ ಆದೇಶ ನೀಡಬೇಕೆಂದು ಬಯಸುತ್ತೀರಿ, ನಿಮಗೆ ಹಾಗೆ ಮಾಡಲು ತಾಕತ್ತು (Guts) ಇಲ್ಲವೆ?” ಎಂದು ನ್ಯಾಯಾಲಯ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಇಷ್ಟು ಹೇಳಿಸಿಕೊಂಡರೂ ಸರ್ಕಾರ ಈಗಲೂ ಅದೇ ಧೋರಣೆ ಮುಂದುವರೆಸಿ, ಅಕ್ರಮವಾಗಿ ಆಯ್ಕೆಯಾದ ಅಧಿಕಾರಿಗಳಿಗೆ ಭಡ್ತಿ ನೀಡಿ, ಜವಾಬ್ದಾರಿಯುತವಾದ ಹುದ್ದೆಗಳಿಗೆ ನೇಮಿಸಿ, ಅವರ ಅಕ್ರಮ ಮತ್ತು ಭ್ರಷ್ಟಾಚಾರಗಳನ್ನು ಪೋಷಿಸುತ್ತಾ, ಶಿಕ್ಷಿಸಬೇಕಾದ ಸಂದರ್ಭದಲ್ಲಿ ರಕ್ಷಿಸುತ್ತ, ಅನ್ಯಾಯ-ಅಕ್ರಮ-ಭ್ರಷ್ಟಾಚಾರ-ಸ್ವಜನಪಕ್ಷಪಾತಗಳನ್ನು ಗೌರವಿಸುತ್ತಿದೆ.

ಈ ಹಿನ್ನೆಲೆಯಲ್ಲಿ, ಈ ಕೂಡಲೇ ಸರ್ಕಾರ ನ್ಯಾಯಾಲಯವೇ ಮಾರ್ಗದರ್ಶನ ನೀಡಬೇಕು ಎನ್ನುವ ಕರ್ತವ್ಯದಿಂದ ನುಣುಚಿಕೊಳ್ಳುವ ಜಾಣ ಕುರುಡುತನದ ಕಳ್ಳಮಾರ್ಗ ಅನುಸರಿಸದೇ, ಈ ಮೂರೂ ವರ್ಷಗಳಲ್ಲಿ ಆಯ್ಕೆಯಾಗಿರುವ ಎಲ್ಲಾ ಅಧಿಕಾರಿಗಳನ್ನು ಕೆಲಸದಿಂದ ವಜಾ ಮಾಡಬೇಕು. ಯಾವುದೇ ನೇಮಕಾತಿ ಪ್ರಕ್ರಿಯೆಯಲ್ಲಿ ಶೇ.20ಕ್ಕಿಂತ ಹೆಚ್ಚು ಅಕ್ರಮ ನಡೆದಿದ್ದಲ್ಲಿ ಅಂತಹ ಅಧಿಸೂಚನೆಯನ್ನು ರದ್ದುಪಡಿಸಬಹುದು ಎಂಬುದನ್ನು ಸುಪ್ರೀಂ ಕೋರ್ಟ್ ತೀರ್ಪೊಂದರಲ್ಲಿ ಆದೇಶ ನೀಡಿದೆ. ಈ ಆದೇಶದ ಹಿನ್ನೆಲೆಯಲ್ಲಿ ಎಲ್ಲಾ ಮೂರೂ ನೇಮಕಾತಿ ಅಧಿಸೂಚನೆಗಳನ್ನು (1998, 1999, 2004) ರದ್ದುಪಡಿಸಿ, ತಪ್ಪು ಎಸಗಿರುವವರ ವಿರುದ್ಧ ಕೂಡಲೇ ಕಾನೂನು ಕ್ರಮಕ್ಕೆ ಮುಂದಾಗಬೇಕು. ಕೆಪಿಎಸ್‍‍ಸಿಯನ್ನು ಕೇಂದ್ರದ ಯುಪಿಎಸ್‌ಸಿ ಮಾದರಿಯಲ್ಲಿ ಅಮೂಲಾಗ್ರ ಸುಧಾರಣೆ ಮಾಡುವ ತನಕ ಆಯೋಗಕ್ಕೆ ಯಾವುದೇ ನೇಮಕಾತಿ ಜವಾಬ್ದಾರಿಗಳನ್ನು ವಹಿಸಬಾರದು. ಇಂತಹ ಕ್ರಮಗಳನ್ನು ಕೈಗೊಂಡರೆ ಮಾತ್ರ ಅನ್ಯಾಯಕ್ಕೊಳಗಾದ ಅಭ್ಯರ್ಥಿಗಳಿಗೆ ಯಾವುದೇ ನ್ಯಾಯ ದೊರಕದೇ ಇದ್ದರೂ, ಭ್ರಷ್ಟಾಚಾರ-ಮುಕ್ತ ಆಡಳಿತದತ್ತ ರಾಜ್ಯ ನಡೆಯುತ್ತದೆ ಮತ್ತು ತಪ್ಪಿತಸ್ಥರಿಗೆ ಶಿಕ್ಷೆಯೂ ಆಗುತ್ತದೆ.

ದಾಖಲೆಗಳು:
ಅಕ್ರಮ ಫಲಾನುಭವಿಗಳ ಪಟ್ಟಿ : http://www.kpscfraudselections.cu.cc/beneficiary-list-2/
ಸತ್ಯಶೋಧನಾ ಸಮಿತಿಯ ವರದಿ: http://www.kpscfraudselections.cu.cc/fact-finding-committee-report/

ಧರ್ಮ ರಕ್ಷಕರ ಮದುವೆ ಫತ್ವಾ!


-ಇರ್ಷಾದ್


 

 

 

ಮಂಗಳೂರು ಮೂಲದ ಮಾಧ್ಯಮ ಪ್ರಕಾಶನದ ಕನ್ನಡ ವಾರ ಪತ್ರಿಕೆ ಮೊಯಿಲಾಂಜಿಯನ್ನು ಓದಿದ್ದೆ. ಸ್ನೇಹಿತರೊಬ್ಬರು ಕರೆ ಮಾಡಿ ಮೊಯಿಲಾಂಜಿ ವಾರಪತ್ರಿಕೆಯನ್ನು ಓದುವಂತೆ ಹೇಳಿದ್ದರು. ಅದರಲ್ಲಿ ಪತ್ರಿಕೆಯ ಪ್ರಧಾನ ಸಂಪಾದಕರಾದ ಹಂಝ ಸಖಾಫಿ ಒಂದು ಲೇಖನವನ್ನು ಬರೆದಿದ್ದರು. ಅದು ಮುಸ್ಲಿಂ ಸಮುದಾಯದಲ್ಲಿ ನಡೆಯುತ್ತಿರುವ ಮದುವೆ ಸಮಾರಂಭದ ಕುರಿತಾದ ಲೇಖನವಾಗಿತ್ತು. ಅದರಲ್ಲೊಂದು ಕುತೂಹಲದ ಅಂಶ ನನ್ನ ಕಣ್ಣಿಗೆ ಬಿತ್ತು. ಅದನ್ನು ಓದುತ್ತಾ ಹೋದಂತೆ ನನ್ನ ಕುತೂಹಲ ಕೂಡಾ ಹೆಚ್ಚಾಗತೊಡಗಿತು. ”ಬೇಕಲ್ ಇಮ್ದಾದುದ್ದೀನ್ ಇಸ್ಲಾಮ್ ಕಮಿಟಿ ಕಾಸರಗೋಡು 2013 ರ ತುರ್ತು ಸಭೆಯಲ್ಲಿ ಕೈಗೊಂಡ ನಿರ್ಣಯಗಳಿವು” ಎಂಬ ತಲೆಬರಹದಲ್ಲಿ ಮುಸ್ಲಿಂ ಸಮುದಾಯದಲ್ಲಿ ಮದುವೆ ಸಮಾರಂಭ ಹೇಗೆ ನಡೆಯಬೇಕು, ಅದನ್ನು ಮುರಿದರೆ ಶಿಕ್ಷೆ ಏನು ಎಂಬ ಅಂಶಗಳನ್ನು ಅದರಲ್ಲಿ ಉಲ್ಲೇಖಿಸಲಾಗಿತ್ತು.

  1. ವರ ಮತ್ತು ಕುಟುಂಬದವರು ಸೇರಿ ಹೆಣ್ಣು ನೋಡುವ ಕಾರ್ಯಕ್ರಮ ನಡೆಯುವಾಗ ವರ ಮತ್ತು ಮಹಿಳೆಯರ ಹೊರತಾಗಿ ಅನ್ಯರು moilanjali_1ಭಾಗವಹಿಸುದನ್ನು ನಿಷೇಧಿಸಲಾಗಿದೆ.
  2. ವಿಡಿಯೋ, ಕ್ಯಾಮರಾ, ಪತ್ರಿಕೆಗಳಲ್ಲಿ ವಧುವಿನ ಭಾವಚಿತ್ರ, ವಿಡಿಯೋ ಜಾಹೀರಾತುಗಳಲ್ಲಿ ವದುವಿನ ಭಾವಚಿತ್ರ ನೀಡುವುದನ್ನು ನಿಷೇಧಿಸಲಾಗಿದೆ.
  3. ಗಾನ ಮೇಳ, ಡ್ಯಾನ್ಸ್ ಗಳನ್ನು ನಿಷೇಧಿಸಲಾಗಿದೆ ಮತ್ತು ಈ ನಿಷೇದವು ಮದುವೆಯ ಹಾಲ್ ಗಳಿಗೂ ಅನ್ವಯವಾಗುವುದು.
  4. ಕಪಾಟು ಕೊಂಡೊಯ್ಯುವುದನ್ನು, ಮದರಂಗಿ ಮದುವೆಯನ್ನೂ ನಿಶೇಧಿಸಲಾಗಿದೆ.
  5. ವಿವಾಹ ಕಾರ್ಯಕ್ರಮದ ಅಂಗವಾಗಿ ವರನ ಜೊತೆ ವಧುವಿನ ಮನೆಗೆ ಹೋಗುವವರು ರಸ್ತೆ ತಡೆ ಉಂಟಾಗದಂತೆ ಸಾಗುವುದನ್ನು, ಪಾದಾಚಾರಿಗಳಿಗೆ ಜೀವಭಯ ಉಂಟಾಗದಂತೆ ನಿರ್ಲಕ್ಷ ಮತ್ತು ಭಾರೀ ಸದ್ದು ಗದ್ದಲದೊಂದಿಗೆ ಬೈಕ್ ರಾಲಿ ಹೋಗುವುದನ್ನು ನಿಷೇಧಿಸಲಾಗಿದೆ. ವೇಷ ಬದಲಿಸುವುದು, ಪಟಾಕಿ ಸಿಡಿಸುವುದು, ಕಲರ್ ಸ್ಪ್ರೇ, ವಧುವಿನ ಕೋಣೆಗಳಿಗೆ ಹಾನಿ ಉಂಟುಮಾಡುವುದು, ವರನ ಯಾ ವಧುವಿನ ಮನೆಯವರೊಂದಿಗೆ ಹಣ ಕೇಳುವುದು, ವಾಹನಗಳಲ್ಲಿ ಅಸಾಮಾನ್ಯ ರೀತಿಯಲ್ಲಿ ಸೀಟುಗಳನ್ನು ಸಜ್ಜುಗೊಳಿಸಿ ಪ್ರದರ್ಶನಗಳನ್ನು ನಡೆಸುವುದು ಮುಂತಾದವುಗಳನ್ನು ನಿಷೇಧಿಸಲಾಗಿದೆ.
  6.  ಸಭ್ಯತೆಯ ಮಿತಿ ಮೇರೆಗಳನ್ನು ಮೀರಿದ , ಆಶ್ಲೀಲವನ್ನು ನೇರ ಯಾ ಪರೋಕ್ಷವಾಗಿ ಬಿಂಬಿಸುವ ಹಾಡುಗಳನ್ನು ದಾರಿಯಲ್ಲಿ ಯಾ ವಧು ಗೃಹದಲ್ಲಿ ಹಾಡುವುದು ನಿಷೇಧಿಸಲಾಗಿದೆ.
  7.  ಮದುವೆ ಮುಗಿದ ರಾತ್ರಿ ವಧು ಗೃಹದಲ್ಲಿ ತಂಗಲು ಹೋಗುವ ವರನೊಂದಿಗೆ ಸ್ನೇಹಿತರು ಜೊತೆ ಸೇರುವುದನ್ನು ನಿಷೇಧಿಸಲಾಗಿದೆ.

ಮೇಲಿನ ಕಾರ್ಯಕ್ರಮಗಳನ್ನು ಉಲ್ಲಂಘಿಸಿದಲ್ಲಿ ವಿಧಿಸಲಾಗುವ ಶಿಕ್ಷೆ :

ವಿವಾಹ ನಿಶ್ವಯ ವೇಳೆ ಮೇಲಿನ ನಿಯಮಗಳನ್ನು ಉಲ್ಲಂಘಿಸಿದರೆ ಖಾಝಿ, ಖತೀಬ್ , ಇಮಾಮ್ ( ಧರ್ಮಗುರುಗಳು) ರನ್ನು ಆ ಮನೆಗೆ ಕಲುಹಿಸಲಾಗುವುದಿಲ್ಲ. ವಿವಾಹ ದಿನದಂದು ನಿಯಮಗಳನ್ನು ಉಲ್ಲಂಘಿಸಿದರೆ ಅವರನ್ನು ಎರಡು ವರ್ಷಗಳ ಕಾಲ ಬಹಿಷ್ಕಾರ ಮಾಡಲಾಗುವುದು ಮತ್ತು ಧಾರ್ಮಿಕ ಶಿಕ್ಷಣ, ಮಯ್ಯತ್ ಪರಿಪಾಲನೆ ( ಶವ ಸಂಸ್ಕಾರ) ಹೊರತಾಗಿ ಆಡಳಿತ ಸಮಿತಿ ಮೂಲಕ ಲಭ್ಯವಾಗುವ ಎಲ್ಲಾ ಕೊಡುಗೆಗಳನ್ನು ತಡೆಹಿಡಿಯಲಾಗುವುದು.

ನಿರುತ್ಸಾಹಗೊಳಿಸಬೇಕಾದ ಕಾರ್ಯಗಳು

  1. ವರದಕ್ಷಿಣೆ ಪಡೆಯುವುದು ಮತ್ತು ಕೊಡುವುದನ್ನು ನಿರುತ್ಸಾಹಗೊಳಿಸುವುದು.
  2. ವರನು ವಧುವಿಗೆ ಹೂ ಮಾಲೆ ಹಾಕುವ ಕಾರ್ಯಕ್ರಮ ಹಾಗೂ ವಿವಾಹ ನಿಶ್ಚಿತ ಕಾರ್ಯಕ್ರಮದಲ್ಲಿ ಅನಗತ್ಯವಾಗಿ ಸ್ತ್ರೀ ಪುರುಷರು ಒಟ್ಟು ಸೇರುವುದನ್ನು ಉಪೇಕ್ಷಿಸುವುದು.
  3. ಮದುವೆಯ ಮುನ್ನಾ ದಿನ ಅನಗತ್ಯವಾಗಿ ಸತ್ಕಾರವೇರ್ಪಡಿಸುದನ್ನು ಕೈ ಬಿಡುವುದು
  4. ವಿವಾಹದ ಮರುದಿನ ಅಥವಾ ನಂತರದಲ್ಲಿ ಮದುಮಗಳನ್ನು ಮರಳಿ ಮನೆಗೆ ಕರೆದುಕೊಂಡು ಹೋಗುವ ಕಾರ್ಯಕ್ರಮವನ್ನು ತಂದೆ ತಾಯಂದಿರು ಯಾ ನಿಕಟ ಸಂಬಂಧಿಕರಿಗೆ ಮಾತ್ರ ಸೀಮಿತಗೊಳಿಸಿ ಸರಳವಾಗಿ ನಡೆಸುವುದು.
  5. ನಿಕಾಹ್ ಗೆ ಮುನ್ನ ನಿಶ್ವಿತ ವಧುವಿಗೆ ಮೊಬೈಲ್ ಕೊಡುವುದನ್ನು ಉಪೇಕ್ಷಿಸುವುದು.

ಇದು ಕಾಸರಗೋಡಿನ ಬೇಕಲ್ ಮಸೀದಿ ವ್ಯಾಪ್ತಿಗೆ ಒಳಪಡುವ ಮುಸ್ಲಿಮ್ ಸಮುದಾಯ ಜನರು ಕಡ್ಡಾಯವಾಗಿ ತಮ್ಮ ವಿವಾಹ ಸಂಧರ್ಭದಲ್ಲಿ ಪಾಲಿಸಬೇಕಾದ ನಿಯಮಗಳು. moilanjali_2ಕಳೆದ ಒಂದು ವರ್ಷಗಳಿಂದ ಈ ಫತ್ವಾ ( ಅಭಿಪ್ರಾಯ) ಜಾರಿಯಲ್ಲಿದೆ. ಇದರ ಕೆಲವೊಂದು ವಿಚಾರಗಳಲ್ಲಿ ನನಗೆ ಸಮ್ಮತಿಯಿದೆ. ಮದುವೆ ಸಮಾರಂಭಗಳನ್ನು ವೈಭವದಿಂದ ಮಾಡುವುದು, ಬೇಕಾ ಬಿಟ್ಟೆ ಖರ್ಚು ಮಾಡಿ ಐಶಾರಾಮಿತನವನ್ನು ತೋರಿಸುವುದು, ಮದುವೆಯ ಸಂಧರ್ಭದಲ್ಲಿ ವಾಹನಗಳಲ್ಲಿ ಹೋಗುವಾಗ ಜನಸಾಮಾನ್ಯರಿಗೆ ಕಿರಿ ಕಿರಿ ಉಂಟುಮಾಡುವಂತದ್ದು ನಿಜಕ್ಕೂ ತಪ್ಪು. ಸಾಮಾನ್ಯವಾಗಿ ಯುವಕರಲ್ಲಿ ಇಂಥಹ ನಡತೆ ಕಂಡುಬರುತ್ತದೆ. ಇದನ್ನು ಫತ್ವಾ ಹೊರಡಿಸುವ ಮೂಲಕ ತಡೆಯಲು ಸಾಧ್ಯವಿಲ್ಲ. ಬದಲಾಗಿ ಯುವಕರಿಗೆ ತಿಳುವಳಿಕೆ ನೀಡುವುದರ ಮೂಲಕ ಅಥವಾ ಕಾನೂನಿನ ಎಚ್ಚರಿಕೆ ನೀಡುವ ಮೂಲಕ ಇವುಗಳನ್ನು ನಿಯಂತ್ರಿಸಲು ಸಾಧ್ಯ. ಆದರೆ ಬಿ.ಐ.ಐ.ಸಿ ಮಹಾಸಭೆಯಲ್ಲಿ ತೆಗೆದುಕೊಂಡ ಇತರ ನಿರ್ಣಯಗಳು ಅಪಾಯಕಾರಿ. ಜೊತೆಗೆ ಅವುಗಳನ್ನು ಮುರಿದರೆ ಬಹಿಷ್ಕಾರ ಹಾಕುವಂತಹ ರೀತಿ ನಿರ್ಣಯಗಳನ್ನು ಕೈಗೊಂಡ ಜನರಿಗೆ ಭಾರತದ ಸಂವಿಧಾನದ ಕುರಿತಾದ ಅರಿವು ಇದೆಯಾ ಎಂಬ ಪ್ರೆಶ್ನೆ ಉದ್ಭವವಾಗುತ್ತದೆ.

ಇಸ್ಲಾಂನಲ್ಲಿ ಮದುವೆ ಸಮಾರಂಭಕ್ಕೆ ಅದರದ್ದೇ ಆದ ನಿಯಮಗಳಿಗೆ. ಸಹಜವಾಗಿ ಭಾರತೀಯ moilanjali_3ಮುಸ್ಲಿಮರು ಅವುಗಳನ್ನು ಪಾಲಿಸಿಕೊಂಡು ಬರುತ್ತಿದ್ದಾರೆ. ಅವುಗಳ ಜೊತೆಗೆ ಸ್ಥಳೀಯ ಸಂಸ್ಕೃತಿಗಳು, ಆಚಾರ ವಿಚಾರಗಳು ಭಾರತೀಯ ಮುಸ್ಲಿಮರ ಮುದುವೆಗಳಲ್ಲಿ ಸಹಜವಾಗಿಯೇ ಕಂಡುಬರುತ್ತವೆ. ಮದುವೆಯ ಮುನ್ನ ದಿನದ ಮದರಂಗಿ ಕಾರ್ಯಕ್ರಮ, ಮದುವೆಯ ರಾತ್ರಿ ವಧುವಿನ ಮನೆಗೆ ಹೋಗುವಾಗ ವರನ ಜೊತೆ ಸ್ನೇಹಿತರು ತೆರಳಿ ವಧುನಿನ ಮನೆಯಲ್ಲಿ ನಡೆಯುವ ಸತ್ಕಾರ ಕೂಟದಲ್ಲಿ ಭಾಗವಹಿಸುವಂತಹದ್ದು ಹಿಂದಿನಿಂದಲೂ ನಡೆದುಕೊಂಡು ಬರುತ್ತಿರುವ ಸಂಸ್ಕೃತಿ. ಇನ್ನು ಇತ್ತೀಚಿನ ದಿನಗಳಲ್ಲಿ ಎಲ್ಲಾ ಮದುವೆಗಳಲ್ಲಿ ವಿಡಿಯೋ ಚಿತ್ರೀಕರಣ ಕಾಮನ್ ಆಗಿ ಬಿಟ್ಟಿದೆ. ವಿದೇಶದಲ್ಲಿ ಮನೆಯ ಯುವಕರು ಉದ್ಯೋಗದಲ್ಲಿರುವುದರಿಂದ ಅವರಿಗೆ ಮನೆಯ ಮದುವೆ ನೋಡುವ ಆಸೆ ಕೂಡಾ ಇರುತ್ತದೆ. ಇದರಿಂದ ವಿಡಿಯೋ ಚಿತ್ರೀಕರಣ ಮಾಡುವುದು ಮದುವೆ ನಡೆಸುವ ಕುಟುಂಬಕ್ಕೆ ಬಿಟ್ಟಿದ್ದು. ಮದುವೆಯ ವಿಡಿಯೋ ಚಿತ್ರೀಕರಣ ಮಾಡಬಾದರು ಎಂದು ಇಸ್ಲಾಂ ಧರ್ಮದ ಧರ್ಮ ಗ್ರಂಥಗಳು ಎಲ್ಲಿ ಹೇಳಿವೆ ಎಂಬುವುದಂತೂ ನಾ ಕಾಣೆ. ಇನ್ನು ಎಲ್ಲಾ ಧರ್ಮದ ಸಂಸ್ಕೃತಿಯನ್ನು ಪಾಲಿಸುವ ಜನರ ಮದುವೆ ಸಮಾರಂಭದಲ್ಲಿ ಕನ್ನಡ ಹಾಗೂ ಹಿಂದಿ ಚಿತ್ರಗೀತೆಗಳನ್ನು ಹಾಕುವುದು ಸಾಮಾನ್ಯ. ಮುಸ್ಲಿಮ್ ಸಮುದಾಯಕ್ಕೆ ಸೇರಿದ ಮುದುವೆ ಸಮಾರಂಭಗಳು ಇದಕ್ಕೆ ಹೊರತಾಗಿಲ್ಲ. ಆದರೆ ಧರ್ಮದ ಹೆಸರಲ್ಲಿ ಸಂಸ್ಕೃತಿಯ ಹೆಸರಲ್ಲಿ ಜನರ ಸ್ಥಳೀಯ ಆಚಾರ ವಿಚಾರಗಳು ಹಾಗೂ ಅವರ ಸಂಭ್ರಮದ ಕ್ಷಣಗಳನ್ನು ಕಿತ್ತುಕೊಳ್ಳ ಹೊರಟಿರುವುದು ಆಕ್ಷೇಪಾರ್ಹ.

ಸೌದಿ ಆರೇಬಿಯಾದ ಸಂಸ್ಕೃತಿಯನ್ನು ಪರಿಶುದ್ಧ ಇಸ್ಲಾಮ್ ಎಂಬ ಹೆಸರಿನಲ್ಲಿ ಭಾರತೀಯ ಮುಸ್ಲಿಮರ ಮೇಲೆ ಹೇರಲು ಪ್ರಯತ್ನವನ್ನು ಮೊದಲು molanjali_5ಆರಂಭಿಸಿದ್ದು ಮೌದೂದಿ ಸಿದ್ದಾಂತವಾದಿಗಳು. ಅರಬ್ ರಾಷ್ಟ್ರಗಳಲ್ಲಿ ಪಾಲಿಸುವ ಆಚಾರ ವಿಚಾರಗಳು, ರೀತಿ ರಿವಾಜುಗಳನ್ನು ಇಲ್ಲಿಯ ಮುಸ್ಲಿಮರೂ ಪಾಲಿಸಬೇಕು ಎಂಬ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ. ದೇವರಿಗೆ ಮಾಡುವ ಪೂಜೆ ಪುರಸ್ಕಾರ (ನಮಾಜ್ ಹಾಗೂ ಇತರ ಧಾರ್ಮಿಕ ಕಾರ್ಯ) ದರ್ಗಾಗಳಿಗೆ ಜನಸಾಮಾನ್ಯರು ನಡೆದುಕೊಳ್ಳುವ ಪದ್ದತಿ, ಮುಸ್ಲಿಮ್ ಸಮುದಾಯದ ಪುರಷ ಮಹಿಳೆಯರ ವೇಷ ಭೂಷಣ, ಮದುವೆ, ಮುಂಜಿ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪರಿಶುದ್ದತೆಯ ಹೆಸರಿಸಲ್ಲಿ ತಮ್ಮದೇ ಆದ ಸಿದ್ದಾಂತಗಳನ್ನು ಪ್ರಚುರ ಪಡಿಸಿ ಅದನ್ನೇ ಪರಿಶುದ್ದ ಇಸ್ಲಾಮ್ ಎಂದು ವಾದಿಸಲು ಆರಂಭಿಸಿದರು. ನಂತರದ ದಿನಗಳಲ್ಲಿ ನೂತನವಾದಿಗಳೆಂದು ಕರೆಸಿಕೊಳ್ಳುವ ಇತರ ಇಸ್ಲಾಂ ಸಿದ್ದಾಂತವಾದಿಗಳು ಈ ವಾದಗಳಿಗೆ ಇನ್ನಷ್ಟು ಬಲ ನೀಡಲು ಆರಂಭಿಸಿದರು. ಇದೀಗ ಇಂಥಹ ಮೂಲಭೂತವಾದವನ್ನು ವಿರೋಧಿಸುತ್ತಾ ಸೂಫಿ ವಿಚಾರಧಾರೆಯಲ್ಲಿ ನಂಬಿಕೆಯಿಟ್ಟು ಅದನ್ನು ಪಾಲಿಸುತ್ತಾ ಬಂದಿರುವ ಸುನ್ನಿ ಪಂಡಿತರು ಮೌದೂದಿ ವಿಚಾರಧಾರೆಗಳನ್ನು ತಾವೂ ಒಪ್ಪಿಕೊಳ್ಳ ಹೊರಟಿರುವುದು ವಿಷಾದನೀಯ. ಅರಬ್ ಸಂಸ್ಕೃತಿಯನ್ನು ಪಾಲಿಸುವುದರೆ ಮಾತ್ರ ಅದು ಪರಿಶುದ್ದ ಇಸ್ಲಾಮ್ ಎಂಬುವುದು ಸರಿಯಲ್ಲ. ಆಯಾ ಪ್ರದೇಶಕ್ಕೆ ತಕ್ಕಂತೆ ಧರ್ಮದೊಂದಿಗೆ ಸ್ಥಳೀಯ ಸಂಸ್ಕೃತಿ ಸೇರಿಕೊಳ್ಳತ್ತದೆ. ಅದೇ ರೀತಿ ಕರಾವಳಿ ಭಾಗದ ಮುಸ್ಲಿಮ್ ಸಮುದಾಯದ ಜನರ ಮದುವೆ ಕಾರ್ಯಕ್ರಮದಲ್ಲಿ ಧರ್ಮದ ಕಾರ ಕಡ್ಡಾಯವಾಗಿರುವ ನಿಕಾಹ್ ಒಳಗೊಂಡತೆ ಸ್ಥಳೀಯ ಸಂಸ್ಕೃತಿಯಿಂದ ಪ್ರಭಾವಿತವಾದ ಮದರಂಗಿ , ತಾಳ (ಮದುಮಗಳ ಮನೆಯಲ್ಲಿ ಮದುವೆ ದಿನ ರಾತ್ರಿ ನಡೆಯುವ ಔತಣ ಕೂಟ), ಬೀಟ್ ಕಾರ್ಯಕ್ರಮ (ವರ ವಧುವಿಗೆ ಹೂ ಹಾರ ಹಾಕುವ ಕಾರ್ಯಕ್ರಮ ) ಒಳಗೊಂಡಿದೆ. ಉತ್ತರ ಕರ್ನಾಟಕ ಹಾಗೂ ಮಧ್ಯ ಕರ್ನಾಟಕಗಳ ಮುಸ್ಲಿಮ್ ಸಮುದಾಯದ ಜನರ ಮದುವೆ ಕಾರ್ಯಕ್ರಮಗಳಲ್ಲಿ ಅಲ್ಲಿನ ಸಂಸ್ಕೃತಿಗಳು ಒಳಗೊಂಡಿರುತ್ತದೆ. ಈ ಆಚರಣೆಗಳು ಅತಿರೇಕ ಹಾಗೂ ಅಸಭ್ಯ ಎಂಬ ಕಾರಣ ನೀಡಿ ನಿಷೇಧ ಮಾಡಲು ಮುಂದಾಗಿರುವುದು ಅತಿರೇಕದ ಪರಮಾರಧಿ. ಇಸ್ಲಾಂ ಧರ್ಮ ವಿಶಾಲವಾದ ಧರ್ಮ. ಧರ್ಮದಲ್ಲಿ ಯಾವುದೂ ಬಲವಂತವಿಲ್ಲ ಎಂದು ಪವಿತ್ರ ಗ್ರಂಥ ಕುರುಆನ್ ಹೇಳುತ್ತದೆ. ಆದರೆ ಅದಕ್ಕೆ ತದ್ವಿರುದ್ದವಾಗಿ ಇಂದು ಮೂಲಭೂತವಾದಿಗಳು ಧರ್ಮ ಜಾಗೃತಿಯ ಹೆಸರಲ್ಲಿ ಜನಸಾಮಾನ್ಯರ ಸ್ವಾತಂತ್ರ ಕಿತ್ತುಕೊಳ್ಳಲು ಇವರಿಗೆ ಧರ್ಮದ ರಕ್ಷಣೆಯ ಗುತ್ತಿಗೆ ಕೊಟ್ಟವರು ಯಾರು?

ಸಂಸ್ಥೆ ಹೊರಡಿಸಿದ ಫತ್ವಾ ಕುರಿತಾಗಿ ಅಧ್ಯಯನ ಮಾಡಲು ನಾವು ಫತ್ವಾ ಜಾರಿಯಲ್ಲಿರುವ ಕಾಸರಗೋಡು ಬೇಕಲ್ ಮಸೀದಿಗೆ ಹೋಗಿದ್ದೆವು. ಸ್ಥಳೀಯರ ಪ್ರಕಾರ ಫತ್ವಾ ಪಾಲಿಸದ ಒಂದು ಕುಟುಂಬವನ್ನು ಬಹಿಷ್ಕಾರ ಹಾಕಲಾಗಿತ್ತು. ಕೊನೆಗೆ ಫತ್ವಾ ಪಾಲಿಸದ ತಪ್ಪಿಗಾಗಿ ಕ್ಷಮೆ ಕೇಳಿದಕ್ಕಾಗಿ ಬಹಿಷ್ಕಾರ ತೆರವು ಮಾಡಲಾಗಿದೆ. ವಿಪರ್ಯಾಸವೆಂದರೆ ಬಿ.ಐ.ಐ.ಸಿ ಮಹಾಸಭೆಯಲ್ಲಿ ಕೈಗೊಂಡ ನಿರ್ಣಯಗಳಲ್ಲಿ 7 ವಿಚಾರಗಳು ಕಡ್ಡಾಯವಾಗಿ ಪಾಲಿಸಬೇಕಾಗಿವೆ. ಅದನ್ನು ಮುರಿದರೆ ಬಹಿಷ್ಕಾರದ ಶಿಕ್ಷೆ ಇದೆ. ಆದರೆ ಈ 7 ವಿಚಾರಗಳಲ್ಲಿ ವರದಕ್ಷಿಣೆ ಪಡೆಯುದನ್ನು ಕಡ್ಡಾಯ ನಿಷೇಧಮಾಡದೇ ಇರುವುದು ಆಶ್ವರ್ಯಕರ. ಫತ್ವಾದಲ್ಲಿ ವರದಕ್ಷಿಣೆ ನಿರುತ್ಸಾಹಗೊಳಿಸಬೇಕಾದ ವಿಷಯವಾಗಷ್ಟೇ ಸೇರ್ಪಡೆಯಾಗಿದೆ ಹೊರತು ವರದಕ್ಷಿಣೆಗೆ ಕಡ್ಡಾಯ ನಿಷೇಧವಿಲ್ಲ. ವರದಕ್ಷಿಣೆಯಂತಹ ಸಾಮಾಜಿಕ ಪಿಡುಗು ಮುಸ್ಲಿಮ್ ಸಮುದಾಯವನ್ನು ತೀಕ್ಷವಾಗಿ ಕಾಡುತ್ತಿರುವಂತಹ ಪಿಡುಗಾಗಿದೆ. ಅದೆಷ್ಟೋ ಹೆಣ್ಣು ಮಕ್ಕಳ ಹೆತ್ತವರು ವರದಕ್ಷಿಣೆಯ ಉಪಟಳದಿಂದಾಗಿ ಭಿಕ್ಷೆ ಬೇಡುವ ಸ್ಥಿತಿ ತಲುಪಿದ್ದಾರೆ. ಇದೇ ರೀತಿ ಇಸ್ಲಾಂ ಧರ್ಮ ನೀಡಿರುವ ಬಹುಪತ್ನಿತ್ವ ಅವಕಾಶವನ್ನು ದುರ್ಬಳಕೆ ಮಾಡಿಕೊಂಡು ಇಚ್ಚೆ ಬಂದಂತೆ ಮದುವೆಯಾಗಿ ಆಕೆಯೊಡನೆ ಕೆಲವು ದಿನ ಸಂಸಾರ ನಡೆಸಿ ಕುಲಕ್ಷ ಕಾರಣಕ್ಕಾಗಿ ತಲಾಕ್ ಕೊಟ್ಟು ಸುಮ್ಮನಾಗುವ ಮಹಾಪುರುಷರು ನಮ್ಮ ಸಮಾಜದಲ್ಲಿದ್ದಾರೆ. ಇದರಿಂದ ಅದೆಷ್ಟೋ ಬಡ ಹೆಣ್ಣುಮಕ್ಕಳು ಕಣ್ಣೀರು ಸುರಿಸುತ್ತಿದ್ದಾರೆ. ಇವುಗಳನ್ನು ಹತೋಟಿಗೆ ತರುವ ಕಾರ್ಯವನ್ನು ಮುಸ್ಲಿಮ್ ಸಮುದಾಯದ ಜಾಗ್ರತ ಜನರು ಮಾಡಬೇಕಾಗಿದೆ. ಬದಲಾಗಿ ಮುಸ್ಲಿಮ್ ಸಮುದಾಯದ ಜನರಲ್ಲಿ ಪರಿಶುದ್ದತೆಯ ಹೆಸರಲ್ಲಿ ಅವರ ಮೇಲೆ ಅರಬ್ ಸಂಸ್ಕೃತಿಯನ್ನು ಹೇರುವ ಮೂಲಕ ಸ್ಥಳೀಯ ಸಂಸ್ಕೃತಿಯನ್ನು ನಾಶ ಮಾಡಲು ಹೊರಟಿರುವುದು ಜೊತೆಗೆ ಅದನ್ನು ಪಾಲಿಸದೇ ಹೋದಲ್ಲಿ ಬಹಿಷ್ಕಾರವನ್ನು ಹಾಕುವ ಮೂಲಕ ಸಂವಿಧಾನ ವಿರೋಧಿಯಾಗಿ ನಡೆದುಕೊಳ್ಳುವುದು ತೀರಾ ಅಪಾಯಕಾರಿ. ಇಂಥಹ ಮನಸ್ಥಿತಿಗಳ ವಿರುದ್ಧ ಮುಸ್ಲಿಮ್ ಸಮುದಾಯದ ಜನರು ಜಾಗೃತಗೊಳ್ಳಬೇಕಾಗಿದೆ.

ಹಿಂಸೆಯನ್ನು ಅಪ್ಪಿಕೊಂಡ ಇಂಡಿಯಾ


-ಬಿ. ಶ್ರೀಪಾದ್ ಭಟ್


 

ಹಿಂಸೆಯ ಮೂಲಕ ಸಾಧಿಸಿದ ಪ್ರತಿಯೊಂದು ಸುಧಾರಣೆಯು ಖಂಡನೆಗೆ, ತಿರಸ್ಕಾರಕ್ಕೆ ಅರ್ಹವಾಗಿರುತ್ತದೆ. ಏಕೆಂದರೆ ಈ ಸುಧಾರಣೆಯು ದುಷ್ಟಶಕ್ತಿಗಳನ್ನು ನಿಗ್ರಹಿಸುವಂತಹ ಯಾವುದೇ ಕಾರ್ಯಕ್ರಮಗಳನ್ನು ಒಳಗೊಂಡಿರುವುದಿಲ್ಲ ಮತ್ತು ಮನುಷ್ಯರು ಯಥಾಸ್ಥಿತಿಯ ಜೀವನಕ್ರಮಕ್ಕೆ ಶರಣಾಗಿರುತ್ತಾರೆ’- ಟಾಲ್ಸ್ ಸ್ಟಾಯ್

ಆಧುನಿಕ ಭಾರತದ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಇಂಡಿಯಾ ಅತ್ಯಂತ ಕಳವಳಕಾರಿಯಾಗಿ ವರ್ತಿಸಿದೆ. 85 ವರ್ಷಗಳಿಂದ ಕಾತುರದಿಂದ, ಅಧಿಕಾರದ ದಾಹದಿಂದ ಕಾಯುತ್ತಿದ್ದ ಫ್ಯಾಸಿಸ್ಟ್ ಆರೆಸ್ಸೆಸ್ ಗುಂಪಿಗೆ ಸಂಪೂರ್ಣ ದೈತ್ಯಶಕ್ತಿಯ ಅಧಿಕಾರ ನೀಡಿದೆ. ಇದು ನಿಸ್ಸಂದೇಹವಾಗಿ ಆರೆಸ್ಸೆಸ್ ನ ಗೆಲುವು. ಮೋದಿ ಇಲ್ಲಿ ಒಂದು ಅಸ್ತ್ರವಷ್ಟೇ. ಕಳೆದ 85 ವರ್ಷಗಳಿಂದ ಧರ್ಮಗಳ, ಜಾತಿಗಳ ಧ್ರುವೀಕರಣದ ಮೂಲಕ ಹಿಂಸೆ ಮತ್ತು ಕೋಮು ಗಲಭೆಗಳನ್ನು ಸಂಘಟಿಸುತ್ತಿದ್ದ ಸಂಘ ಪರಿವಾರಕ್ಕೆ ಇಂಡಿಯಾ ಮೊನ್ನೆಯವರೆಗೂ ಸಂಪೂರ್ಣ ಅಧಿಕಾರವನ್ನು ನಿರಾಕರಿಸಿತ್ತು. ಆದರೆ ಆಳವಾದ, ಶಕ್ತಿಶಾಲಿ ಪ್ರಜಾಪ್ರಭುತ್ವ ರಾಷ್ಟ್ರವೆಂದು ಹೆಮ್ಮೆಪಡುತ್ತಿದ್ದ ಇಂಡಿಯಾಗೆ ಇನ್ನು ಆ ಹೆಗ್ಗಳಿಕೆ ಮುಗಿದ ಕತೆ. ಇಂಡಿಯಾ ಆಳವಾದ, ಶಕ್ತಿಶಾಲಿಯಾದ ಪ್ರಜಾಪ್ರಭುತ್ವ ದೇಶವೇನೋ ನಿಜ. ಆದರೆ ಪ್ರಬುದ್ಧವಾದ ಪ್ರಜಾಪ್ರಭುತ್ವವೇ ಎನ್ನುವ ಪ್ರಶ್ನೆಗೆ ಈ ಬಾರಿಯ ಲೋಕಸಭಾ ಚುನಾವಣೆಯ ಫಲಿತಾಂಶ ನಕಾರಾತ್ಮಕ ಉತ್ತರ ನೀಡಿದೆ. ಇಂದು ಪ್ರಜಾಪ್ರಭುತ್ವವೆನ್ನುವುದು ಕೇವಲ ಕೊಡುಕೊಳ್ಳುವಿಕೆಯ ವ್ಯವಹಾರಕ್ಕೆ ಇಳಿದುಬಿಟ್ಟಿದೆ. ಮೇಲ್ನೋಟಕ್ಕೆ ರಾಜಕೀಯ ಪಕ್ಷವೊಂದು ಅತ್ಯಂತ ಪರಿಶ್ರಮದಿಂದ, ಕೋಟಿಗಟ್ಟಲೆ ಹಣ ಸುರಿದು ಅಧಿಕಾರ ಪಡೆದುಕೊಂಡಿರುವುದು ಕಂಡು ಬರುತ್ತದೆ.

ಬಿಜೆಪಿಗೆ ಈ ಬಗೆಯ ದೈತ್ಯಶಕ್ತಿಯ ಅಧಿಕಾರ ನೀಡಿದವರು 20 ರಿಂದ 30 ರ ಹರೆಯದ ಇಂಡಿಯಾದ ಯುವ ಜನತೆ ಎನ್ನುವುದೇ ನಮ್ಮಲ್ಲಿ ಆತಂಕ ಹುಟ್ಟಿಸುತ್ತಿದೆ. ಯಾವುದೇ ಸೈದ್ಧಾಂತಿಕ, ಜನಪರ ಬದ್ಧತೆಗಳಿಲ್ಲದ ಈ ಯುವ ಜನತೆ ಮೋದಿಯನ್ನು ಸಂಪೂರ್ಣವಾಗಿ ಬೆಂಬಲಿಸಿದೆ. Youth_Votingಕೊಳ್ಳುಬಾಕತನದ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿದ್ದ, ಮೋದಿಗೆ ಅಧಿಕಾರ ನೀಡಿದರೆ ತಮ್ಮ ಎಲ್ಲಾ ವಯುಕ್ತಿಕ ಆಶೋತ್ತರಗಳು ನಿರಂತರವಾಗಿ ಪ್ರಜ್ವಲಿಸುತ್ತಿರುತ್ತವೆ ಎನ್ನುವ ಮೆಟೀರಿಯಲಿಸ್ಟಿಕ್ ವ್ಯಕ್ತಿತ್ವವನ್ನು ಬೆಳಸಿಕೊಂಡಿದ್ದ ಈ ಯುವ ಜನತೆ ಬೇಷರತ್ ಆಗಿಯೇ ಮೋದಿಗೆ ಈ ದೈತ್ಯ ಅಧಿಕಾರವನ್ನು ನೀಡಿದೆ. ಸಾಮಾಜಿಕ ನ್ಯಾಯ, ಸಾಮಾಜಿಕ ಇಂಜಿನಿಯರಿಂಗ್, ಮತೀಯವಾದದ ವ್ಯಾಪ್ತಿ, ಹಿಂಸೆ ಮತ್ತು ಕೊಳ್ಳುಬಾಕು ಸ್ವಾರ್ಥದ ಕುರಿತಾಗಿ ಹೊಸ ಚಿಂತನೆಗಳನ್ನು ಇಂಡಿಯಾದ ಪ್ರಜ್ಞಾವಂತರಾದವರು ಈ ಯುವಜನತೆಗೆ ತಿಳಿಸಿಕೊಡಲಿಲ್ಲ. ಪರ್ಯಾಯ ರಾಜಕೀಯ, ಸಾಮಾಜಿಕ ಹುಡುಕಾಟಗಳನ್ನು ಮಾಡದೆ ಬಿಜೆಪಿಗೆ ಪರ್ಯಾಯ ಸದ್ಯಕ್ಕೆ ಕಾಂಗ್ರೆಸ್ ಮಾತ್ರ ಎಂದು ಇಲ್ಲಿನ ಪ್ರಜ್ಞಾವಂತರು ಹತಾಶೆಯಿಂದ ಕೈಚೆಲ್ಲಿದ್ದನ್ನು ತಿರಸ್ಕರಿಸಿದ ಯುವಜನತೆ ಈ ವೈಫಲ್ಯವನ್ನು ಒಪ್ಪಿಕೊಳ್ಳದೆ ನೇರವಾಗಿ ಮೋದಿಯ ಕಡೆಗೆ ವಾಲಿದರು.ಇದು ಪರೋಕ್ಷವಾಗಿ ಆರೆಸ್ಸೆಸ್ ಗೆ ಬಲು ದೊಡ್ಡ ಶಕ್ತಿಯನ್ನೇ ತಂದುಕೊಟ್ಟಿದೆ.ಕಳೆದ ಎಂಬತ್ತೈದು ವರ್ಷಗಳಿಂದ ಸದಾ ಅಸ್ಥಿರತೆಯಲ್ಲಿ, ಕೀಳರಿಮೆಯಲ್ಲಿ ಬಳಲುತ್ತಿದ್ದ ಆರೆಸ್ಸೆಸ್ ಮೊಟ್ಟ ಮೊದಲ ಬಾರಿಗೆ ಗೆಲುವಿನ, ಹೆಮ್ಮೆಯ ನಗು ಬೀರುತ್ತಿದೆ. ಮತೀಯವಾದಿ ಆರೆಸ್ಸೆಸ್ ಈ ಆತ್ಮವಿಶ್ವಾಸದ ಮುಗುಳ್ನಗೆಗೆ ಕಾರಣರಾದವರು ಹೊಸ ತಲೆಮಾರಿನ ಯುವ ಜನತೆ ಎಂಬುದೇ ನಮ್ಮ ಹೃದಯ ತಲ್ಲಣಿಸುವಂತೆ ಮಾಡುತ್ತದೆ. ತನ್ನ ಸದಸ್ಯರ ಸಂಖ್ಯೆ ಕ್ರಮೇಣ ಕುಂಠಿತಗೊಳ್ಳುತ್ತಿರುವುದು ಆರೆಸ್ಸೆಸ್ ಗೆ ಆತಂಕದ ವಿಷಯವಾಗಿತ್ತು. ಮುಂಚಿನಂತೆ ಶಾಲಾ ಬಾಲಕರನ್ನು, ಕಾಲೇಜು ವಿಧ್ಯಾರ್ಥಿಗಳನ್ನು ಆಕರ್ಷಿಸುವಲ್ಲಿ ಆರೆಸ್ಸೆಸ್ ಸೋಲತೊಡಗಿತ್ತು. ಹಿಂದುತ್ವದ ಫ್ಯಾಸಿಸ್ಟ್ ಸಂಸ್ಕೃತಿ ತನ್ನ ಉಳಿವಿಗಾಗಿ ಹೋರಾಟ ನಡೆಸುತ್ತಿದ್ದಂತಹ ಸಂದರ್ಭದಲ್ಲಿಯೇ ಈ ಮತೀಯವಾದಿಗಳಿಗೆ ಬೆಳ್ಳಿ ತಟ್ಟೆಯಲ್ಲಿ ಅಧಿಕಾರ ನೀಡಿದ ಈ ಯುವ ಜನತೆಯ ನಿಜದ ಸಂಸ್ಕೃತಿ ಮತ್ತು ರಾಷ್ತ್ರದ ಒಟ್ಟಾರೆ ಸಂರಚನೆಯ ಕುರಿತಾದ ಅಜ್ಞಾನವನ್ನು ಕಂಡು ತಳಮಳವಾಗುತ್ತದೆ.

ಜನವರಿ 31,1948ರಲ್ಲಿ ನಡೆದ ಗಾಂಧಿ ಹತ್ಯೆಯ ನಂತರ ಆ ಹತ್ಯೆಯ ಸಂಚಿನಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಿ 4, ಫೆಬ್ರವರಿ 1948 ರಂದು ಮತೀಯವಾದಿ ಸಂಘಟನೆಯೆಂದು ಆರೆಸಸ್ ಅನ್ನು ನಿಷೇಧಿಸಲಾಯಿತು. ಅದರ ಮುಖ್ಯಸ್ಥರಾದ ಸಾವರ್ಕರ್ ಅವರನ್ನು ಒಳಗೊಂಡಂತೆ ಇತರೇ ನಾಯಕರನ್ನು ಜೈಲಿನಲ್ಲಿ ಇರಿಸಲಾಯಿತು. ನಂತರ ಪ್ರಮುಖ ಸಾಕ್ಷಾಧಾರಗಳ ಕೊರತೆಯಿಂದಾಗಿ 1949 ರಲ್ಲಿ ಆ ನಿಷೇಧವನ್ನು ಹಿಂತೆಗೆಯಲಾಯಿತು. ಗಾಂಧಿಯವರನ್ನು ಕೊಲೆ ಮಾಡುವ ಕೆಲವು ತಿಂಗಳುಗಳ ಮುಂಚೆಯಷ್ಟೇ ನಾಥುರಾಮ್ ಗೋಡ್ಸೆ ಆರೆಸ್ಸೆಸ್ ತೊರೆದು ಅದರ ಅಂಗ ಪಕ್ಷವಾದ ಹಿಂದೂ ಮಹಾಸಭಾಗೆ ಸೇರಿಕೊಂಡಿದ್ದ. ಇಲ್ಲಿ ಕುತೂಹಲಕರವಾದ ವಿಷಯವೇನೆಂದರೆ ಆರೆಸ್ಸೆಸ್ ಗೆ ಸೇರುವ, ತೊರೆಯುವ ಯಾವುದೇ ಸದಸ್ಯರ ಹೆಸರನ್ನು ಆ ಪಕ್ಷ ನೊಂದಾವಣಿ ಮಾಡಿಕೊಳ್ಳುವುದಿಲ್ಲ. ಅದೆಲ್ಲಿಯೂ ದಾಖಲಾಗುವುದಿಲ್ಲ. ಹೀಗಾಗಿ ನಾಥುರಾಮ್ ಗೋಡ್ಸೆ ಆರೆಸ್ಸೆಸ್ ಬಿಟ್ಟಿದ್ದೂ ಸಹ ಕೇವಲ ಬಾಯಿ ಮಾತಿನ ಹೇಳಿಕೆಯಷ್ಟೇ. ವಿಚಾರಣೆಯ ಸಂದರ್ಭದಲ್ಲಿ ಕೋರ್ಟಿನಲ್ಲಿ ಸಾಕ್ಷ ನುಡಿಯುತ್ತಾ ನಾಥುರಾಮ್ ಗೋಡ್ಸೆ ‘ತಾನು ಹಲವಾರು ವರ್ಷಗಳ ಕಾಲ ಆರೆಸ್ಸೆಸ್ ಸದಸ್ಯನಾಗಿ ಕಾರ್ಯ ನಿರ್ವಹಿಸಿದ್ದು ಇತ್ತೀಚೆಗಷ್ಟೇ ಹಿಂದೂ ಮಹಾಸಭಾಗೆ ಸೇರಿಕೊಂಡೆ’ ಎಂದು ಹೇಳಿಕೆ ಕೊಡುತ್ತಾನೆ. ತಾನು ಗಲ್ಲುಗೇರುವ ಸಂದರ್ಭದಲ್ಲಿ ಕಡೆಯ ಕ್ಷಣಗಳಲ್ಲಿ ಈ ಗೋಡ್ಸೆ ‘ನಮಸ್ತೇ ಸದಾ ವತ್ಸಲೇ ಮಾತೃಭೂಮೇ’ ಎನ್ನುವ ಶ್ಲೋಕ ಪಠಿಸುತ್ತಾನೆ. ಇದು ಇಂದಿಗೂ ಆರೆಸ್ಸೆಸ್ ಪ್ರಾರ್ಥನಾ ಗೀತೆ. (ಆರ್.ಡಿ.ಗೋಯಲ್ – ರಾಷ್ಟ್ರೀಯ ಸ್ವಯಂ ಸೇವಕ ಸಂಘ).

ನಂತರ ಆರೆಸಸ್ ನಾಯಕರು ಆಗಿನ ಗೃಹ ಮಂತ್ರಿ ವಲ್ಲಭಾಯಿ ಪಟೇಲರಿಗೆ ಆರೆಸ್ಸೆಸ್ ಸಂಪೂರ್ಣವಾಗಿ ಸಾಂಸ್ಕೃತಿಕ ಸಂಘಟನೆಯಾಗಿಯೇ ಉಳಿಯುವುದೇ ಹೊರತಾಗಿ ರಾಜಕೀಯವಾಗಿ ಯಾವುದೇ ಕಾರಣಕ್ಕೆ ಸಕ್ರಿಯವಾಗುವುದಿಲ್ಲ 09a671d9-189f-4b8a-893f-4833f370ce93HiResಎಂದು ವಾಗ್ದಾನ ನೀಡಿತು ( ದ ಹಿಂದೂ,13, ಅಕ್ಟೋಬರ್ 2013). ಆದರೆ ಇಂದು ಸರ್ದಾರ್ ವಲ್ಲಭಾಯಿ ಪಟೇಲರನ್ನು ತಮ್ಮ ಏಕಮೇವಾದ್ವಿತೀಯ ನಾಯಕರೆಂದು ಕೊಂಡಾಡುತ್ತಿರುವ ಆರೆಸ್ಸೆಸ್ 2014 ಚುನಾವಣೆಯ ಸಂದರ್ಭದಲ್ಲಿ ತನ್ನನ್ನು ಸಕ್ರೀಯ ರಾಜಕಾರಣದಲ್ಲಿ ತೊಡಗಿಸಿಕೊಂಡಿದೆ. ಅದೂ ಪ್ರತ್ಯಕ್ಷವಾಗಿ. ಈ ಬಾರಿ ಯಾವುದೇ ಗುಪ್ತಸೂಚಿಗಳಿಲ್ಲ. ಎಲ್ಲವೂ ಪಾರದರ್ಶಕವಾಗಿದೆ. ಡಿ.ಆರ್.ಗೋಯಲ್ ಅವರು ‘ಜನಸಂಘ ಮತ್ತು ಬಿಜೆಪಿ ಎಂದಿಗೂ ರಾಜಕೀಯದಲ್ಲಿ ಬೆಳೆಯಲಿಲ್ಲ. ಆರೆಸ್ಸೆಸ್ ನಲ್ಲಿ ಬೆಳೆದವು. ಆರೆಸಸ್ ಅವರನ್ನು ರಾಜಕೀಯದಲ್ಲಿ ಬೆಳೆಸಿತು’ ಎಂದು ಹೇಳುತ್ತಾರೆ. ಜನತಾ ಪಕ್ಷ ಅಧಿಕಾರದಲ್ಲಿದ್ದ 1979ರ ಸಂದರ್ಭದಲ್ಲಿ ಆ ಸರ್ಕಾರದಲ್ಲಿ ಮಂತ್ರಿಗಳಾಗಿದ್ದ ವಾಜಪೇಯಿ ಮತ್ತು ಅಡ್ವಾನಿಯವರ ಮೇಲೆ ಆರೆಸ್ಸೆಸ್ ಮತ್ತು ಸರ್ಕಾರದ ಮಂತ್ರಿಯ ದ್ವಿಸದಸ್ಯತ್ವವನ್ನು ತೊರೆದು ಒಂದನ್ನು ಆರಿಸಿಕೊಳ್ಳಬೇಕೆಂದು ಒತ್ತಾಯ ಬಂದಾಗ ಇವರಿಬ್ಬರೂ ಸರ್ಕಾರವನ್ನೇ ಇಬ್ಭಾಗ ಮಾಡಿದರೇ ಹೊರತು ಆರೆಸಸ್ ಸದಸ್ಯತ್ವ ಬಿಡಲಿಲ್ಲ.

ಈ ಆರೆಸ್ಸೆಸ್ ನ ಹುಟ್ಟೇ ಅತ್ಯಂತ ಕುತೂಹಲಕರ. ಡಾ.ಹೆಡಗೇವಾರ್, ಬಿ.ಎಸ್.ಮೂಂಜೆ, ಎಲ್.ವಿ.ಪರಾಂಜಪೆ, ಬಿ.ಪಿ.ಥಾಲ್ಕರ್, ಸಾವರ್ಕರ್ ಇವರೆಲ್ಲಾ ಬ್ರಾಹ್ಮಣತ್ವದ ಪುನರುಜ್ಜೀವನಕ್ಕಾಗಿ ಪಣ ತೊಟ್ಟವರು. 1925ರಲ್ಲಿ ಒಟ್ಟಾಗಿ ಸೇರಿ ಆರೆಸ್ಸೆಸ್ ಪಕ್ಷವನ್ನು ಸ್ಥಾಪಿಸಿದರು. ಮುಸ್ಲಿಂರ ಬೆಳವಣಿಗೆ ಮತ್ತು ದಲಿತರ ಹೋರಾಟಗಳಿಂದ ಆತಂಕಕ್ಕೆ ಒಳಗಾಗಿ ಆರೆಸ್ಸೆಸ್ ಅನ್ನು ಸಂಘಟಿಸಲಾಯಿತು ಎಂದು ಹೆಡಗೇವಾರ್ ಹೇಳುತ್ತಾರೆ (ಸಂಘವೃಕ್ಷಕೀ ಬೀಜ್ – ಸಿ.ಪಿ.ಭಿಷಿಕರ್). ಅಂಬೇಡ್ಕರ್ ಅವರು ಸಂಸತ್ತಿನಲ್ಲಿ ಮಂಡಿಸಿದ ಕ್ರಾಂತಿಕಾರಿ ಹಿಂದೂ ಮಹಿಳಾ ಮಸೂದೆಯನ್ನು ಗೋಳ್ವಲ್ಕರ್ ಮತ್ತಿತರ ಆರೆಸಸ್ ನಾಯಕರು ವಿರೋಧಿಸುತ್ತಾರೆ. ಏಕೆಂದರೆ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಸ್ತ್ರೀಗೆ ಸಮಾನ ಹಕ್ಕನ್ನು ಕೊಡುವ ಈ ಮಸೂದೆ ಹಿಂದೂ ಧರ್ಮದ ಸನಾತನ ಪದ್ಧತಿಗೆ ವಿರುದ್ಧವಾದದ್ದು ಎಂದು ಇವರು ವಾದಿಸುತ್ತಾರೆ. ಇಂದು ಇದೇ ಆರೆಸ್ಸೆಸ್ ಬಹುಮತ ಸಾಧಿಸಿದೆ.

ಹಿಂದೂ ರಾಷ್ಟ್ರವೇ ತನ್ನ ಪ್ರಮುಖ ಗುರಿಯೆಂದು ಹೇಳಿಕೊಳ್ಳುವ ಆರೆಸಸ್ ಅಂದಿನಿಂದಲೂ ಬಹುಸಂಸ್ಕೃತಿಯನ್ನು, ಸರ್ವಧರ್ಮ ಸಮಾನತೆಯನ್ನು, ಸಮತಾವಾದವನ್ನು ವಿರೋಧಿಸುತ್ತಲೇ ಬಂದಿದೆ. ಆರೆಸ್ಸೆಸ್ ನ ಹಿಂದುತ್ವದ ಪರಿಕಲ್ಪನೆಯೆಂದರೆ ಏಕರೂಪಿ ಸಂಸ್ಕೃತಿ, ಮರಳಿ ವರ್ಣಾಶ್ರಮದ ಜಾತಿ ಪದ್ಧತಿಯ ಪರಂಪರೆಗೆ ಮರಳುವುದು. ಇದು ಅದರ ಮೂಲಭೂತ ಐಡಿಯಾಲಜಿ. ಈ ಹಿಂದೂ ರಾಷ್ಟ್ರದಲ್ಲಿ ದಲಿತರು ಮತ್ತೊಮ್ಮೆ ಊರ ಹೊರಗೆ ಬದುಕಬೇಕಾಗುತ್ತದೆ. ಅಲ್ಪಸಂಖ್ಯಾತರನ್ನು ಅಧಿಕೃತವಾಗಿಯೇ ಎರಡನೇ ದರ್ಜೆಯ ನಾಗರಿಕರೆಂದೇ ಪರಿಗಣಿಸುತ್ತದೆ. ಆರೆಸ್ಸೆಸ್ ಸಂಸ್ಥಾಪಕರಾದ ಹೆಡ್ಗೇವಾರ್, ಸಾವರ್ಕರ್, ಗೋಳ್ವಲ್ಕರ್ ಅವರ ಹಿಂದುತ್ವದ ಪರವಾಗಿ, ಅಲ್ಪಸಂಖ್ಯಾತರನ್ನು ವಿರೋಧಿಸಿ ಬರೆದ ಬೆಂಕಿಯುಗುಳುವ ಪಠ್ಯಗಳ ಕುರಿತು ಮತ್ತೆ ಮತ್ತೆ ಇಲ್ಲಿ ಪ್ರಸ್ತಾಪಿಸುವ ಅಗತ್ಯವಿಲ್ಲ. ಆ ಗ್ರಂಥಗಳು ಇಂದಿಗೂ ಆರೆಸ್ಸೆಸ್ ನ ಬೈಬಲ್, ಭಗವದ್ಗೀತೆ. ಹಿಂದೊಮ್ಮೆ ಸಂಘ ಪರಿವಾರದ ವಿಜಯರಾಜೇ ಸಿಂಧ್ಯಾ ಅವರು ಸತಿ ಪದ್ಧತಿಯನ್ನು ಸಮರ್ಥಿಸಿ ಮಾತನಾಡಿದ್ದರು. ಆರೆಸ್ಸೆಸ್ ನ ಪ್ರಮುಖರಾದ ಬಾಳಾಸಾಹೇಬ್ ದೇವರಸ್, ಸುದರ್ಶನ್, ಮೋಹನ್ ಭಾಗವತ್ ಹಿಂದೂ ಧರ್ಮದಲ್ಲಿನ ಜಾತಿ ಪದ್ಧತಿಯ ಕುರಿತಾಗಿ ಕಳವಳ ವ್ಯಕ್ತಪಡಿಸುತ್ತಾರೆ. ಆದರೆ ಅದರ ಜಾತಿ ವಿನಾಶದ ಕುರಿತಾಗಿ ಎಲ್ಲಿಯೂ ಮಾತನಾಡದೆ ಕೇವಲ ಸುಧಾರಣೆಯ ಕುರಿತಾಗಿ ಹೇಳಿಕೆ ಕೊಡುತ್ತಾರೆ. ಇದು ಇವರ ಸನಾತನ ಮನಸ್ಥಿತಿಯನ್ನು ಬಯಲುಗೊಳಿಸುತ್ತದೆ. ಆರೆಸ್ಸೆಸ್ ವಲಯಗಳಲ್ಲಿ ಪರಮ ಪೂಜ್ಯ ಎಂದೇ ಕರೆಯಲ್ಪಡುವ ಮೋಹನ್ ಭಾಗವತ್ ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರಗಳಿಗೆ ಪ್ರತಿಕ್ರಿಯಿಸುತ್ತಾ ಈ ರೇಪ್ ಕೇಸುಗಳು ಇಂಡಿಯಾದಲ್ಲಿ ಮಾತ್ರ ನಡೆಯುತ್ತವೆ; ಭಾರತದಲ್ಲಿ ಅಲ್ಲ ಎಂದು ಹೇಳಿಕೆ ಕೊಡುತ್ತಾರೆ. ಅಂದರೆ ದೇಶ ಆಧುನಿಕಗೊಂಡಷ್ಟೂ ಈ ಅತ್ಯಾಚಾರಗಳು ಜರಗುತ್ತಿರುತ್ತವೆ. ಆದರೆ ಭಾರತ ದೇಶವು ಕರ್ಮಠತನವನ್ನು ಮೈಗೂಡಿಸಿಕೊಂಡು ಸನಾತನ ಪರಂಪರೆಗೆ ಮರಳಿದರೆ ರೇಪ್ ನಡೆಯುವುದಿಲ್ಲ ಎಂದು ಈ ಸರ ಸಂಚಾಲಕರ ಮುತ್ತಿನ ನುಡಿಗಳು. ಉರ್ದು ಭಾಷೆ ಆರೆಸಸ್ ಪ್ರಕಾರ ವಿದೇಶಿ ಭಾಷೆ. ಅದಕ್ಕೆ ಇಲ್ಲಿ ಸ್ಥಳವಿಲ್ಲ. ಇಂದು ಇವರಿಗೆ ಬಹುಮತ ದೊರಕಿದೆ.

ಆರೆಸ್ಸೆಸ್ ನ ಅಖಂಡ ಭಾರತದ ನಕ್ಷೆಯ ಪ್ರಕಾರ ಹಿಮಾಲಯದಿಂದ ಕನ್ಯಾಕುಮಾರಿಯAkhand bharatವರೆಗೆ ಮತ್ತು ಗಾಂಧಾರ್ ನಿಂದ ಭ್ರಹ್ಮದೇಶದವರೆಗೆ ಅಂದರೆ ಇದು ಉತ್ತರದ ಟಿಬೆಟ್, ಪಶ್ಚಿಮದ ಅಫಘಾನಿಸ್ತಾನ, ಪಾಕಿಸ್ತಾನ, ಮಯನಾರ್,ಕಾಂಬೋಡಿಯ ಎಲ್ಲವೂ ಅಖಂಡ ಭಾರತದ ಅಡಿಯಲ್ಲಿ ಬರುತ್ತವೆ. ಇನ್ನು ಕಾಂಗ್ರೆಸ್ನ ಹೈಕಮಾಂಡ್ ಸಂಸ್ಕೃತಿಯನ್ನು ಟೀಕಿಸುವ ಆರೆಸ್ಸೆಸ್ ನ ಅದರ ಮುಖ್ಯಸ್ಥನನ್ನು ಚುನಾಯಿಸುವುದಿಲ್ಲ. ಬದಲಾಗಿ ಹೇರಲ್ಪಡುತ್ತಾನೆ. ಆರೆಸಸ್ ಸ್ಥಾಪಕರಾದ ಹೆಡ್ಗೇವಾರ್ ಮತ್ತು ಗೋಳ್ವಲ್ಕರ್ ಅವರ ಫೋಟೋಗಳು ಇಂದಿಗೂ ಎಲ್ಲಾ ಶಾಖಾಗಳಲ್ಲಿಯೂ ಗುರೂಜಿಯ ಹೆಸರಿನಲ್ಲಿ ಶ್ರದ್ಧಾ ಭಕ್ತಿಯಿಂದ ಪೂಜಿಸಲ್ಪಡುತ್ತದೆ. ಇಂದು ಇಂತಹ ಫ್ಯಾಸಿಸ್ಟ್ ಆರೆಸ್ಸೆಸ್ ಗೆ ಬಹುಮತ ದೊರಕಿದೆ.

ಈ ಆರೆಸ್ಸೆಸ್ ನ ಪ್ರಮುಖ ಅಂಗ ಪಕ್ಷಗಳೆಂದರೆ ಬಿ.ಜೆ.ಪಿ (ರಾಜಕೀಯ ಪಕ್ಷ), ವಿ.ಎಚ್.ಪಿ (ಧಾರ್ಮಿಕ ಘಟಕ), ಭಜರಂಗ ದಳ (ಮಿಲಿಟೆಂಟ್ ಘಟಕ), ಅಖಿಲಭಾರತ ವಿಧ್ಯಾರ್ಥಿ ಪರಿಷತ್ (ಎಬಿವಿಪಿ), ಹಿಂದೂ ಜಾಗರಣ ಮಂಚ್,  ಸೇವಾ ದಳ – ಸಾಮಾಜಿಕ ಸೇವಾ ದಳ.  ಇದರ ಅಡಿಯಲ್ಲಿ ಬರುವ ಇತರ ಘಟಕಗಳೆಂದರೆ ಸೇವಾ ಇಂಟರನ್ಯಾಷನಲ್, ಸೇವಾ ಭಾರತಿ, ವಿದ್ಯಾ ಭಾರತಿ, ವನವಾಸಿ ಕಲ್ಯಾಣ ಆಶ್ರಮ, ಏಕಲ ವಿದ್ಯಾಲಯ, ವಿಕಾಸ ಭಾರತಿ, ಸಂಸ್ಕೃತ ಭಾರತಿ. ಇವಲ್ಲದೇ ವಿದೇಶಗಳಲ್ಲಿಯೂ ಫ್ರೆಂಡ್ಸ್ ಆಫ್ ಹಿಂದೂ ಸೊಸೈಟಿ, ಹಿಂದೂ ಯೂನಿಟಿ, ಐಡಿಆರ್ಎಫ್, ವಿ.ಎಚ್.ಪಿ (ಅಮೇರಿಕ), ಹಿಂದೂ ಸ್ವಯಂಸೇವಕ ಸಂಘ ಹೀಗೆ ಅನೇಕ ಹಿಂದೂ ಸಂಘಟನೆಗಳಿವೆ.ಇವೆಲ್ಲಾ ಆರೆಸ್ಸೆಸ್ ಗೆ ಬದ್ಧವಾಗಿವೆ. ತನ್ನ ಶಿಷ್ಯರಿಂದ, ದಾನಿಗಳಿಂದ, ಅನಿವಾಸಿ ಭಾರತೀಯರಿಂದ ಆರ್ಥಿಕ ಅನುದಾನವನ್ನು ಸ್ವೀಕರಿಸುವ ಆರೆಸ್ಸೆಸ್ ಇದಕ್ಕೆ ಗುರುದಕ್ಷಿಣ ಎಂದು ಕರೆದುಕೊಳ್ಳುತ್ತದೆ.

ಈ ಎಲ್ಲಾ ಅಂಗ ಸಂಸ್ಥೆಗಳನ್ನು ಆರೆಸ್ಸೆಸ್ ನಿಯಂತ್ರಿಸುತ್ತದೆ. ಬಿಜೆಪಿ ರಾಜಕೀಯವಾಗಿ ಅತ್ಯಂತ ಬಲಿಷ್ಠ ಅಂಗ ಪಕ್ಷವಾಗಿದ್ದರೆ ಇತರೇ ಗುಂಪುಗಳು ಸಂಪೂರ್ಣವಾಗಿ ಆರೆಸ್ಸೆಸ್ ನ ಹಿಡಿತದಲ್ಲಿವೆ. ಈ ಎಲ್ಲಾ ಅಂಗ ಸಂಸ್ಥೆಗಳ ಮುಖ್ಯ ಉದ್ದೇಶ ಬಲಿಷ್ಠ ಹಿಂದೂ ರಾಷ್ಟ್ರದ ಸ್ಥಾಪನೆ. ಅದಕ್ಕಾಗಿ ಸಮಾಜದ ವಿವಿಧ ವಲಯಗಳಾದ ಶಿಕ್ಷಣ, ಹಣಕಾಸು, ಅನೇಕ ಎನ್.ಜಿ.ಓ ಗಳ ಅಡಿಯಲ್ಲಿ ಈ ಸಂಘ ಪರಿವಾರದ ಅಂಗ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತವೆ. ಇವುಗಳ ನೆಟ್ ವರ್ಕಿಂಗ್ ಅತ್ಯಂತ ಶಕ್ತಿಶಾಲಿಯಾಗಿದೆ. 2014ರ ಚುನಾವಣಾ ಫಲಿತಾಂಶದ ನಂತರ ಈಗ ಕೇಂದ್ರದಲ್ಲಿ ಆರೆಸ್ಸೆಸ್ ಸಂಪೂರ್ಣ ಬಹುಮತ ಹೊಂದಿದೆ. ಮುಂದಿನ ದಿನಗಳಲ್ಲಿ ಮೇಲಿನ ಎಲ್ಲಾ ಘಟಕಗಳು ಮತ್ತಷ್ಟು ಬಲಗೊಳ್ಳುತ್ತವೆ. ಪ್ರಭಾವಶಾಲಿಯಾಗಿ ದೈತ್ಯ ಸ್ವರೂಪದಲ್ಲಿ ಬೆಳೆಯುತ್ತವೆ. ಸಂದೇಹವೇ ಬೇಡ. ಇವೆಲ್ಲವೂ ಹಿಂದುತ್ವದ ಹೆಸರಿನಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ತಮ್ಮ ಪ್ರಭಾವವನ್ನು ಬಳಸಿಕೊಳ್ಳುವುದಂತೂ ಸತ್ಯ. ಇವರು ಮೊಟ್ಟ ಮೊದಲು ಕೈ ಹಾಕುವುದೇ ಪಠ್ಯಪುಸ್ತಕಗಳ ಕೇಸರೀಕರಣಕ್ಕೆ. ಇಡೀ ಶಿಕ್ಷಣ ವ್ಯವಸ್ಥೆಯನ್ನೇ ಕೇಸರೀಕರಣಗೊಳಿಸುವವರೆಗೂ ಆರೆಸ್ಸೆಸ್ ವಿಶ್ರಮಿಸುವುದಿಲ್ಲ. ಇಂಡಿಯಾದ ಜನತೆಯನ್ನು ಮಾನಸಿಕವಾಗಿ ಸಂಪೂರ್ಣವಾಗಿ ಕಬ್ಜಾ ಮಾಡಿಕೊಳ್ಳುವುದೇ ಆರೆಸ್ಸೆಸ್ ನ ಪ್ರಮುಖ ಅಜೆಂಡಾ. ಏಕೆಂದರೆ ಆರೆಸ್ಸೆಸ್ ಗೆ ಆಡಳಿತ ನಡೆಸುವುದಕ್ಕಿಂತಲೂ ಮುಖ್ಯ ಮಾನಸಿಕ ಹಿಡಿತವನ್ನು ಸಾಧಿಸುವುದು.

ಇನ್ನು ಕಳೆದ ಐವತ್ತು ವರ್ಷಗಳಲ್ಲಿ ಆರೆಸ್ಸೆಸ್ ನ ಬಲಿಷ್ಠ ಅಂಗ ಪಕ್ಷಗಳಾದ ಬಿಜೆಪಿ, ಬಜರಂಗದಳ, ವಿ.ಎಚ್.ಪಿ ಗಳು ನಡೆಸಿದ ಹಿಂಸಾಚಾರ, ಮತೀಯ ಗಲಭೆಗಳು, ಹತ್ಯಾಕಾಂಡಗಳ ಕುರಿತಾಗಿ ತನಿಖೆ ನಡೆಸಿದ, ನಡೆಸುತ್ತಿರುವ ಕೆಲವು ಆಯೋಗಗಳ ವಿವರ ಈ ರೀತಿ ಇದೆ. 1969ರಲ್ಲಿ ಅಹಮದಾಬಾದಿನಲ್ಲಿ ನಡೆದ ಗಲಬೆಗಳ ತನಿಖೆಗಾಗಿ ಜಗಮೋಹನ್ ರೆಡ್ಡಿ ಕಮಿಷನ್, 1970ರಲ್ಲಿ ಭಿವಂಡಿಯಲ್ಲಿ ನಡೆದ ಕೋಮು ಗಲಭೆಗಳ ತನಿಖೆಗಾಗಿ ಮದನ್ ಕಮಿಷನ್, 1971ರಲ್ಲಿ ತೆಲ್ಲಿಚೆರಿ ಕೋಮು ಗಲಭೆಗಳ ತನಿಖೆಗಾಗಿ ವಿಠ್ಯಾತಿಲ್ ಕಮಿಷನ್, 1979ರಲ್ಲಿ ಜೆಮ್ ಶೆಡ್ಪುರದಲ್ಲಿ ನಡೆದ ಗಲಭೆಗಳ ತನಿಖೆಗಾಗಿ ಜಿತೇಂದ್ರ ನಾರಾಯಣ ಕಮಿಷನ್, 1982ರಲ್ಲಿ ಕನ್ಯಾಕುಮಾರಿಯಲ್ಲಿ ನಡೆದ ಕೋಮು ಗಲಬೆಗಳ ತನಿಖೆಗಾಗಿ ಪ.ವೇಣುಗೋಪಾಲ್ ಕಮಿಷನ್-ಇವು ಕೆಲವು ಉದಾಹರಣೆಗಳು ಮಾತ್ರ. ಇನ್ನು ಬಾಬರಿ ಮಸೀದಿ ಧ್ವಂಸ ಮತ್ತು ನಂತರದ ಹತ್ಯಾಕಾಂಡದ ಸಂಬಂಧ ಮತ್ತು 2002ರ ಗುಜರಾತ್ ಹತ್ಯಾಕಾಂಡದ ಸಂಬಂಧದ ತನಿಖೆಗಳು ಇಂದಿಗೂ ಪ್ರಗತಿಯಲ್ಲಿವೆ.

ಅಮೇರಿಕದ ಅಧ್ಯಕ್ಷನಾಗಿದ್ದ ಬುಷ್ ಹಿಂದೊಮ್ಮೆ ‘ನೀವು ನಮ್ಮೊಡನೆ ಇದ್ದೀರಿ, ಇಲ್ಲ ನಮ್ಮ ವಿರುದ್ಧ ಇದ್ದೀರಿ’ ಎಂದು ಅಹಂಕಾರದಿಂದ ನುಡಿಯುತ್ತಾನೆ. ಇಂದು ಆರೆಸ್ಸೆಸ್ ಕೂಡ ಅದೇ ಭಾಷೆಯನ್ನು ಬಳಸುತ್ತಿದೆ. ಹಿಂದೂ ರಾಷ್ಟ್ರೀಯತೆಯನ್ನು ಒಪ್ಪಿಕೊಂಡರೆ ನೀವು ನಮ್ಮೊಡನೆ ಇದ್ದೀರಿ, ಇಲ್ಲದಿದ್ದರೆ ನಮ್ಮ ವಿರುದ್ಧ ಇದ್ದೀರಿ ಎಂದೇ ಅದು ಧಮಕಿ ಹಾಕುವುದು ನಿಶ್ಚಿತ. ಫ್ಯಾಸಿಸ್ಟ್ ಸಮಾಜದಲ್ಲಿ ವಿರೋಧಿಗಳ ಗತಿ ಏನೆಂದು ಎಲ್ಲರಿಗೂ ಗೊತ್ತು.