Monthly Archives: June 2014

ಇತಿಹಾಸದ ಸಮೂಹಸನ್ನಿಯನ್ನು ಅರಿತುಕೊಳ್ಳಲು ನಿರಾಕರಿಸುತ್ತಿರುವ ನೀರೋಗಳು


-ಬಿ. ಶ್ರೀಪಾದ್ ಭಟ್


 

 

 

Today every invention is received with a cry of triumph which soon turns into a cry of fear -Brecht

ಜಾಗತೀಕರಣದ ಪ್ರಕ್ರಿಯೆಗೆ ತೆರದುಕೊಂಡು 23 ವರ್ಷಗಳಾಗಿರುವ ಇಂದಿನ ಇಂಡಿಯಾದ ಈಗಿನ ನವ ಕಲೋನಿಯಲ್ ವ್ಯವಸ್ಥೆಗೂ ಮತ್ತು ಸಂಘಪರಿವಾರದ ಧಾರ್ಮಿಕತೆಯನ್ನಾಧರಿಸಿದ ಆಧುನಿಕ ಮತೀಯವಾದಕ್ಕೆ ನೇರ ಸಂಬಂಧಗಳಿವೆ. ಇಲ್ಲಿ ಕೋಮುವಾದಿಗಳು ಮತ್ತು ಜಾಗತೀಕರಣದ ನಡುವೆ ಒಂದು ರೀತಿಯ ಅನುಬಂಧ ಏರ್ಪಟ್ಟಿದೆ. 2014ರ ಚುನಾವಣೆಯ ಸಂದರ್ಭದಲ್ಲಿ ಇಂಡಿಯಾದ ಕಾರ್ಪೋರೇಟ್ ವಲಯ ಬಿಜೆಪಿ ಪಕ್ಷಕ್ಕೆ ಪ್ರಚಾರಕ್ಕಾಗಿ ಕೋಟಿಗಟ್ಟಲೆ ಹಣವನ್ನು ವ್ಯಯಿಸಿದೆ.ಇದೇನು ಗುಟ್ಟಾಗಿ ಉಳಿದಿಲ್ಲ. ಬಿಜೆಪಿ ಪಕ್ಷ ಅದರಲ್ಲೂ ನರೇಂದ್ರ ಮೋದಿ ಇಂದು ಕಾರ್ಪೋರೇಟ್ ವಲಯದ ಹಂಗಿನಲ್ಲಿರುವುದು ಸಹ ಗುಟ್ಟೇನಿಲ್ಲ.ಇಂದು ಕಾರ್ಪೋರೇಟ್ ವಲಯ ಪ್ರತಿಫಲವನ್ನು ನಿರೀಕ್ಷಿಸುವುದೂ ಸಹಜ. ಬಂಡವಾಳಶಾಹಿಗಳು ಬಯಸುವ ನವ ಉದಾರೀಕರಣದ ಆರ್ಥಿಕತೆಯ ಸಿದ್ಧಾಂತಕ್ಕೆ ಮೋದಿ ಸರ್ಕಾರ ತಲೆಬಾಗಿಸಿ ಮನ್ನಣೆ ಕೊಡುವುದೂ ಸಹಜ. ಖಾಸಗೀ ಬಂಡವಾಳಶಾಹಿಗಳ ಮೇಲ್ವಿಚಾರಣೆಯಲ್ಲಿ ಹಂತಹಂತವಾಗಿ ರೂಪುಗೊಳ್ಳುವ ನವ ಉದಾರೀಕರಣದ ಆರ್ಥಿಕ ನೀತಿಯನ್ನು ಜನರಿಗಾಗಿಯೇ ಎಂದೇ ನಂಬಿಸಲಾಗುತ್ತದೆ. ಈ ರುದ್ರಪ್ರಹಸನದ ಮುಂದುವರೆದ ಭಾಗವಾಗಿ ಬಡಜನರ ಪರವಾಗಿರುವ ಕಲ್ಯಾಣ ಕಾರ್ಯಕ್ರಮಗಳೆಂದರೆ ಭ್ರಷ್ಟಾಚಾರಕ್ಕೆ ಬಾಗಿಲನ್ನು ತೆರೆದಂತೆ ಹಾಗಾಗಿ ಭ್ರಷ್ಟಾಚಾರ ಮುಕ್ತ ಭಾರತವೆಂದರೆ ಕಲ್ಯಾಣಕಾರ್ಯಕ್ರಮ ಮುಕ್ತ ಭಾರತ ಎನ್ನುವ ಹೊಸ ಆರ್ಥಿಕ ನೀತಿ ಜಾರಿಗೊಳ್ಳಲಿದೆ. ಮುಂದಿನ ಐದು ವರ್ಷಗಳಲ್ಲಿ ಕೇಂದ್ರ ಸರ್ಕಾರ ಹೆಚ್ಚೂ ಕಡಿಮೆ ಈ ಖಾಸಗೀ ಬಂಡವಾಳಶಾಹಿಗಳ ನವ ಉದಾರೀಕರಣಕ್ಕೆ ಶರಣಾಗಿರುತ್ತದೆ.

ಮೂವತ್ತರ ದಶಕದಲ್ಲಿ ಯುರೋಪಿನಲ್ಲಿ ಮೇಲಿನ ಬಗೆಯ ಇಡೀ ಖಾಸಗೀಕರಣದ ಪ್ರಕ್ರಿಯೆಯನ್ನೇ ಫ್ಯಾಸಿಸ್ಟರು ಅಧಿಕೃತವಾಗಿ ಫ್ಯಾಸಿಸಂತನವೆಂದೇ ಹೆಮ್ಮೆಯಿಂದ ಕರೆದರು. ambani-modiಮೂವತ್ತರ ದಶಕದಲ್ಲಿ ಮಸಲೋನಿ ಮತ್ತು ಹಿಟ್ಲರ್ ಮಾಡಿದ್ದು ಇದನ್ನೇ. ಇಟಲಿ ಮತ್ತು ಜರ್ಮನಿಯಲ್ಲಿ ಒಂದು ಬಗೆಯ ಸಮೂಹ ಸನ್ನಿಯನ್ನೇ ಸೃಷ್ಟಿಸಿದರು. ಇಂದು ಮೋದಿ ಅದೇ ಬಗೆಯ ಸಮೂಹ ಸನ್ನಿಯನ್ನು ಇಂಡಿಯಾದಲ್ಲಿ ಸೃಷ್ಟಿಸಿದ್ದಾರೆ. ಈ ಸಮೂಹ ಸನ್ನಿಯನ್ನೊಳಗೊಂಡ ಮೋದಿಯ ಆಡಳಿತದಲ್ಲಿ ಬಂಡವಾಳಶಾಹಿಗಳ ಬೋರ್ಡರೂಂನ ಖಾಸಗಿ ಆಡಳಿತ ಮತ್ತು ರಾಜ್ಯದ ಸರ್ಕಾರಿ ಆಡಳಿತ ವಿಲೀನಗೊಂಡು ಬಂಡವಾಳಶಾಹಿಗಳ ಖಾಸಗಿ ಸಾಮ್ರಾಜ್ಯ ಮೋದಿಯೆಂಬ ಛಾನಲ್ ನ ಮೂಲಕ ಸ್ಥಾಪಿತಗೊಳ್ಳುತ್ತದೆ. ಇದಕ್ಕಾಗಿಯೇ ಕಾರ್ಪೋರೇಟ್ ವಲಯ ಮೋದಿ ಎನ್ನುವ ಛಾನಲ್ ಮೂಲಕ ಕೋಟಿಗಟ್ಟಲೆ ಹಣವನ್ನು ಹರಿಸಿದ್ದು. ಪತ್ರಕರ್ತ ವಿನೋದ ಮೆಹ್ತಾ ಬರೆದಂತೆ ಮೋದಿಯ ಶೈಲಿಯ ಆಡಳಿತವೆಂದರೆ ಗುರಿ ಮುಟ್ಟುವುದು ಮುಖ್ಯವಾಗುತ್ತದೆಯೇ ಹೊರತು ಅದನ್ನು ತಲಪಲು ಬಳಸುವ ವಾಮಮಾರ್ಗದ, ಹಿಂಸಾಚಾರದ ದಾರಿಗಳು ಅಕ್ಷೇಪಾರ್ಹವಲ್ಲವೇ ಅಲ್ಲ. ಇಂದು ಮೋದಿಯ ಸರ್ವಾಧಿಕಾರಿ ನಡಾವಳಿಗಳು ಕ್ರಮೇಣ ವ್ಯವಸ್ಥೆಯ ಸಮೂಹ ಸನ್ನಿ ನಡುವಳಿಕೆಗಳಾಗಿಯೇ ಸ್ಥಾಪಿತಗೊಳ್ಳುತ್ತವೆ. ಸಿಇಓ ಮೋದಿಯ ಈ ಸಮೂಹಸನ್ನಿಯ ಗುಂಪಿನಿಂದ ಭಾರತ ಪ್ರಕಾಶಿಸುತ್ತಿದೆ ಎನ್ನುವ ಸ್ಲೋಗನ್ ನಮ್ಮನ್ನು ಹೊಸರೂಪದಲ್ಲಿ ಎದುರುಗೊಳ್ಳುತ್ತದೆ. ಪತ್ರಕರ್ತ ಆಕಾರ್ ಪಟೇಲ್ ಈ ಶೈಲಿಯ ಸ್ಲೋಗನ್ ಗಳ ಅಪಾಯಕಾರಿ ಧೋರಣೆಗಳ ಕುರಿತಾಗಿ ಬರೆಯುತ್ತ “ನಿಜ, ಅನೇಕ ಬಾರಿ ಸ್ಲೋಗನ್ ಗಳೇ ಮೇಲುಗೈ ಸಾಧಿಸುತ್ತವೆ. ಆದರೆ ನಾವು ಸ್ಲೋಗನ್ ಗಳನ್ನು ಸತ್ವಯುತವಾದ ಮಹತ್ವದ ತಾತ್ಪರ್ಯಗಳೆಂದು, ತಪ್ಪಾಗಿ ಅರ್ಥೈಸಬಾರದು” ಎಂದು ಬರೆದಿದ್ದರು.

ನವ ಕಲೋನಿಯಲ್ ಮತ್ತು ಮತೀಯವಾದಿಗಳ ಸಾಮ್ಯತೆ ಮತ್ತು ಹೊಂದಾಣಿಕೆಯ ಮಾದರಿಯನ್ನು ಚಿಂತಕ ಫ್ರೊ.ಜಿ.ಹರಗೋಪಾಲ್ ಅವರು ವಿವರಿಸುತ್ತ “ಇಂಡಿಯಾದಲ್ಲಿ ಈಗ ಚಾಲ್ತಿಯಲ್ಲಿರುವ ನವ ಕಲೋನಿಯಲ್ ವ್ಯವಸ್ಥೆಯ ಸಂರಚನೆಗಳು ಹೇಗಿರುತ್ತವೆಯೆಂದರೆ ಸಂವಿಧಾನದ ಮೂಲಕ ರೂಪಿತವಾದ ಎಲ್ಲಾ ಕಾನೂನನ್ನು ಪಾಲಿಸುತ್ತಿದ್ದೇವೆ ಎಂದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಗೋಚರಿಸುವಂತೆ ಇಲ್ಲಿನ ಕಾರ್ಯಾಂಗ, ಶಾಸಕಾಂಗ ಮತ್ತು ಮಾಧ್ಯಮಗಳು ಆಡಳಿತ ನಡೆಸುತ್ತಿರುತ್ತವೆ. ಆದರೆ ಮಾನಸಿಕವಾಗಿ ಇವೆಲ್ಲವೂ ಮೈಗೂಡಿಸಿಕೊಂಡಿರುವುದು ಎಲ್ಲಾ ಕಾನೂನನ್ನು ಧಿಕ್ಕರಿಸುವ ಫ್ಯೂಡಲ್ ಸಂಸ್ಕೃತಿಯನ್ನು. ಜನಸಾಮಾನ್ಯರೊಂದಿಗೆ ಇವರ ವರ್ತನೆ ಫ್ಯೂಡಲ್ ಮನೋಭಾವದ್ದು. ಸದಾ ದಬ್ಬಾಳಿಕೆಯದ್ದು. ಉದಾಹರಣೆಗೆ ಪೋಲೀಸ್ ವ್ಯವಸ್ಥೆಯನ್ನು ತೆಗೆದುಕೊಂಡರೆ ಅಲ್ಲಿ ಯಾವುದೇ ದೂರನ್ನು ಕಾನೂನಿನ ಪ್ರಕಾರವೇ ದಾಖಲಿಸಬೇಕು. ಆದರೆ ನಂತರ ಇಡೀ ಪೋಲೀಸ್ ವ್ಯವಸ್ಥೆ ಬಹಿರಂಗವಾಗಿ ನಡೆದುಕೊಳ್ಳುವುದು ಕಾನೂನುಬಾಹಿರವಾದ ಫ್ಯೂಡಲ್ ವ್ಯವಸ್ಥೆಯನ್ನು ಬಳಸುವುದರ ಮೂಲಕ. ಇದು ರಾಜ್ಯದ ಬೇರೆ ಬೇರೆ ಇಲಾಖೆಗಳಿಗೂ ಅನ್ವಯಿಸುತ್ತದೆ” ಎಂದು ಹೇಳುತ್ತಾರೆ.

“ಸಣ್ಣದಾದ ಸರ್ಕಾರ, ವಿಶಾಲವಾದ,ಪರಮಾವಧಿಯ ಆಡಳಿತ (minimum government, maximum governance)” ಎನ್ನುವುದು ಮೋದಿಯ ಜನಪ್ರಿಯ ಸ್ಲೋಗನ್ ಗಳಲ್ಲೊಂದು. ಇದನ್ನು ಗುಜರಾತ್ ಮಾಡೆಲ್ ಎನ್ನುವ ಸರ್ಕಾರಿ ಬೈಬಲ್ ನಿಂದ ಹೆಕ್ಕಿಕೊಳ್ಳಲಾಗಿದೆ. ಈ ಜನಪ್ರಿಯವಾದ ಪರಮಾವಧಿಯ ಆಡಳಿತದ ಇಂದಿನ ಒಂದು ಉದಾಹರಣೆಯನ್ನು ನೋಡಿ. greenpeaceಮೋದಿ ಸರ್ಕಾರ ಅಧಿಕಾರ ವಹಿಸಿಕೊಂಡ ನಂತರ ಇಂಟೆಲಿಜೆನ್ಸ್ ಬ್ಯೂರೋದ ಒಂದು ವರದಿ ಮಾಧ್ಯಮಗಳಲ್ಲಿ ಸೋರಿಕೆಯಾಯಿತು. ಗ್ರೀನ್ ಪೀಸ್ ಎನ್ನುವ ಎನ್.ಜಿ.ಓ ವಿದೇಶಿ ಮೂಲಗಳಿಂದ ಹಣವನ್ನು ದೇಣಿಗೆಯಾಗಿ ಪಡೆದು ಇಂಡಿಯಾದಲ್ಲಿ ಪರಮಾಣು ಸ್ಥಾವರಗಳ ವಿರುದ್ಧ ಹೋರಾಡುತ್ತ ದೇಶದಲ್ಲಿ ಆರ್ಥಿಕ ಅಭದ್ರತೆ ಉಂಟು ಮಾಡುತ್ತಿದೆ ಎಂಬುದು ಇವರ ಆರೋಪ. ಇದರ ಅಡಿಯಲ್ಲಿ ಪರಿಸರದ ಸಂರಕ್ಷಣೆಗಾಗಿ ಹೋರಾಡುತ್ತಿರುವ ದಕ್ಷಿಣ ಆಫ್ರಿಕ ಮೂಲದ ಗ್ರೀನ್ ಪೀಸ್ ಎನ್ನುವ ಎನ್.ಜಿ.ಓ ವಿರುದ್ಧ ಮೋದಿ ಸರ್ಕಾರ ಚಾಟಿ ಬೀಸುತ್ತಿದೆ. ಅದನ್ನು ಕಾನೂನುಬಾಹಿರ ಎಂದು ಆರೋಪಿಸುತ್ತಿದೆ. ಆದರೆ ಪರಮಾಣು ಶಕ್ತಿ ಇಲಾಖೆಯನ್ನು ತನ್ನ ಬಳಿಯೇ ಇರಿಸಿಕೊಂಡಿರುವ ಮೋದಿಯು ಕೂಡಂಕುಲಂ ಅಣುಸ್ಥಾವರದ ವಿರುದ್ಧ, ಜಾರ್ಖಂಡ್ ರಾಜ್ಯದ ಯುರೇನಿಯಂ ಗಣಿಗಳ ವಿರುದ್ಧ, ಒರಿಸ್ಸಾದಲ್ಲಿ ಪೋಸ್ಕೋ ಸ್ಟೀಲ್ ಕಾರ್ಖಾನೆಯ ವಿರುದ್ಧ, ಒರಿಸ್ಸಾದ ವೇದಾಂತದ ಗಣಿಗಾರಿಕೆಯ ವಿರುದ್ಧ,ದೇಶಾದ್ಯಾಂತ ಅಕ್ರಮವಾಗಿ ಪ್ರಾರಂಬಿಸಲು ಉದ್ದೇಶಿಸಿರುವ ಕಲ್ಲಿದ್ದಲು ಗಣಿಗಾರಿಕೆಯ ವಿರುದ್ಧ ಹೀಗೆ ಅನೇಕ ಪರಿಸರ ಮತ್ತು ಜನವಿರೋಧಿ ಯೋಜನೆಗಳನ್ನು ವಿರೋಧಿಸುತ್ತಿರುವ ಆದಿವಾಸಿಗಳು ಮತ್ತು ಬಡಜನರ ಪರವಾಗಿ ಹೋರಾಡುತ್ತಿರುವ ಪರಿಸರವಾದಿಗಳು, ಜನಪರ ಸಂಘಟನೆಗಳ ವಿರುದ್ಧ ಸಹ ಮೇಲಿನಂತೆಯೇ ಕತ್ತಿ ಬೀಸಲು ಕಾಯುತ್ತಿದ್ದಾರೆ. ಏಕೆಂದರೆ ಮೋದಿಯ ಅಪ್ತರಾದ ಕಾರ್ಪೋರೇಟ್ ಲೋಕದ ಹಿತಾಸಕ್ತಿ ಕಾಯಲು ಸಂಘ ಪರಿವಾರ ಯಾವುದೇ ಹಂತದ ಬೇಟೆಗೂ ತಯಾರಾಗಿದೆ. ಇದು ಬಿಜೆಪಿಯ ಅಭಿವೃದ್ಧಿ ಮಾದರಿಯ ಫ್ಯಾಸಿಸಂನ ಶೈಲಿ. ಇದಕ್ಕೆ ಇವರು ಬಳಸಿಕೊಳ್ಳುತ್ತಿರುವುದು ಸ್ವದೇಶಿ ಮಂತ್ರವನ್ನು. ಜೂನ್ ೩೦, 2014ರ ಔಟ್ಲುಕ್ ಪತ್ರಿಕೆಯ ವರದಿಯ ಪ್ರಕಾರ ಕಳೆದ ಎಂಬತ್ತೈದು ವರ್ಷಗಳಿಂದ ಚಾಲ್ತಿಯಲ್ಲಿರುವ ಆರೆಸ್ಸೆಸ್ ಇಂದೂ ತನ್ನ ಸಂಘಟನೆಯನ್ನು ನೊಂದಾಯಿಸಿಕೊಂಡಿಲ್ಲ. ಹಾಗಾಗಿ ಆರೆಸ್ಸೆಸ್ ನೇರವಾಗಿ ಅಧಿಕೃತವಾಗಿ ಯಾವುದೇ ದೇಣಿಗೆಯನ್ನು ಪಡೆಯುವಂತಿಲ್ಲ. ಹೀಗಾಗಿ ಇದು ಆದಾಯ ತೆರಿಗೆಯನ್ನು ಸಹ ಪಾವತಿಸುತ್ತಿಲ್ಲ. ಆದರೆ ಆರೆಸ್ಸೆಸ್ ನ ಇತರೇ ಅಂಗ ಸಂಸ್ಥೆಗಳು ( ಬಹುಪಾಲು ಧಾರ್ಮಿಕ ಮತ್ತು ಶಿಕ್ಷಣ ಸಂಸ್ಥೆಗಳು) ಸ್ವತಃ ಎನ್.ಜಿ.ಓ ಹೆಸರಿನಡಿಯಲ್ಲಿ ದೇಶ,ವಿದೇಶದಿಂದ ಕೋಟಿಗಟ್ಟಲೆ ಹಣವನ್ನು ಅನುದಾನದ ರೂಪದಲ್ಲಿ ಪಡೆದಿದೆ. ಈಗಲೂ ಪಡೆಯುತ್ತಿದೆ. ಆರೆಸ್ಸೆಸ್ ಅಂಗ ಸಂಸ್ಥೆಗಳಿಗೆ ಹಣದ ರೂಪದ ಕೋಟಿಗಟ್ಟಲೆ ಅನುದಾನ ಹರಿದಿರುವುದು ಬಹುಪಾಲು ಅಮೇರಿಕಾದಲ್ಲಿರುವ IDRF ( india development and relief fund)   ಎನ್ನುವ ಸಂಸ್ಥೆಯಿಂದ. ಅಲ್ಲಿನ ಅನಿವಾಸಿ ಭಾರತೀಯರಿಂದ. ಸುಮಾರು ವರ್ಷಗಳಿಂದ ಈ ವ್ಯವಹಾರ ಜಾರಿಯಲ್ಲಿದೆ. ಆರೆಸ್ಸೆಸ್ ನ ಪ್ರಕಾರ ಈ ಅನುದಾನವು ವಿದೇಶಿ ಮೂಲದಿಂದ ಬಂದಿದ್ದರೂ ಅವರು ಭಾರತದ ಸನಾತನ ಪರಂಪರೆಗಾಗಿ ಹೋರಾಡುತ್ತಿರುವವರಿಗೆ ಅನುದಾನ ನೀಡುತ್ತಿರುವುದರಿಂದ ಅವರು ವಿದೇಶಿ ಎನ್ನಿಸಿಕೊಳ್ಳುವುದಿಲ್ಲ. ಆದರೆ ಜನಪರ ಕಾಳಜಿಗಳಿಗಾಗಿ, ಬಡಜನರ ಪರವಾಗಿ ಹೋರಾಡುತ್ತಿರುವವರದ್ದು ಮಾತ್ರ ಕಾನೂನುಬಾಹಿರ ಸಂಘಟನೆ. ಇದೇ ಫ್ಯಾಸಿಸಂತನದ ಪ್ರತ್ಯಕ್ಷ ಲಕ್ಷಣಗಳು

ಆರೆಸ್ಸೆಸ್ ನ ಈ ಅನೈತಿಕತೆಯನ್ನು ಪ್ರಶ್ನಿಸಬೇಕಾದ ಬಹುಪಾಲು ಮಾಧ್ಯಮಗಳು ಸಂಘ ಪರಿವಾರದೊಂದಿಗೇ ಒಡಂಬಡಿಕೆಯಲ್ಲಿವೆ. ಇದನ್ನೇ ಚೊಮೆಸ್ಕಿ friendly Fascism  modi_ambani_tata_kamathಎಂದು ಕರೆದದ್ದು. ಈ friendly Fascism ನ ಸಿದ್ಧಾಂತದ ಅನುಗುಣವಾಗಿಯೇ ಪ್ರಧಾನ ಮಂತ್ರಿಯ ಕಾರ್ಯಾಲಯದಿಂದ ಕೇಂದ್ರದ ಎಲ್ಲಾ ಇಲಾಖೆ ಮತ್ತು ಸಂಸ್ಥೆಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸಂಪರ್ಕ ಭಾಷೆಯಾಗಿ ಹಿಂದಿಯನ್ನು ಮಾತ್ರ ಬಳಸಬೇಕೆಂಬ ಸುತ್ತೋಲೆ ಬಂದಿದೆ. ಇದಕ್ಕಾಗಿ ಬಹುಮಾನಗಳನ್ನು ಸಹ ಘೋಷಿಸಲಾಗಿದೆ. ಹಿಂದೂ ರಾಷ್ಟ್ರೀಯತೆಯನ್ನು ಹಿಂದಿ ಭಾಷೆಯ ಹೆಸರಿನಲ್ಲಿ ಜಾರಿಗೊಳಿಸುವುದು ಆರೆಸ್ಸೆಸ್ ನ ಮೂಲ ಆಶಯಗಳಲ್ಲೊಂದು.ಇದು ಗೋಳ್ವಲ್ಕರ್ ಅವರ ಚಿಂತನಗಂಗಾದ ಪ್ರಮುಖ ನೀತಿಗಳಲ್ಲೊಂದು.

ಇಂದಿನ ಸಂಘ ಪರಿವಾರದ ಸರ್ಕಾರದೊಂದಿಗೆ ಆಡಳಿತಾತ್ಮಕವಾಗಿ, ಸಾರ್ವಜನಿಕವಾಗಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಲು, ಪಾಲಸಿ ನಿರ್ಧಾರಗಳಲ್ಲಿ ನಿರಂತರವಾಗಿ ಭಾಗಿಯಾಗಲು ಆ ಮೂಲಕ ಹಿಂದುತ್ವದ ಭಾರತಕ್ಕೆ ಭಧ್ರ ಬುನಾದಿ ಹಾಕಲು ತುದಿಗಾಲಲ್ಲಿ ನಿಂತಿರುವ ಪ್ರಮುಖ ಆರೆಸಸ್ ಅಂಗ ಸಂಸ್ಥೆಗಳೆಂದರೆ ವಿವೇಕಾನಂದ ಅಂತರಾಷ್ಟ್ರೀಯ ಫೌಂಡೇಶನ್ (ದೆಹಲಿ), ಅರ್ಥಕ್ರಾಂತಿ ಪ್ರತಿಷ್ಠಾನ ( ಪುಣೆ),ನಿಥಿ ಸೆಂಟ್ರಲ್ ( ದೆಹಲಿ), ಶ್ಯಾಮ್ ಪ್ರಸಾದ್ ಸಂಶೋಧನಾ ಕೇಂದ್ರ ( ದೆಹಲಿ), ದೀನ ದಯಾಳ್ ಸಂಶೋಧನಾ ಕೇಂದ್ರ ( ದೆಹಲಿ ಮತ್ತು ಚಿತ್ರಕೂಟ), ರಾಷ್ಟ್ರೀಯ ಸೇವಾ ಭಾರತಿ ( ದೆಹಲಿ), ಫ್ರೆಂಡ್ಸ್ ಆಫ್ ಬಿಜೆಪಿ, ಇಂಡಿಯನ್ ಪಾಲಿಸಿ ಫೌಂಡೇಶನ್ (ದೆಹಲಿ), ಸೆಂಟರ್ ಫಾರ್ ಪಾಲಿಸಿ ಸ್ಟಡಿ ( ದೆಹಲಿ), ಪಬ್ಲಿಕ್ ಪಾಲಿಸಿ ಸಂಶೋಧನಾ ಕೇಂದ್ರ ( ದೆಹಲಿ), ರಾಮಭಾವೂ ಪ್ರಭೋದಿನಿ ( ಮುಂಬೈ) – ( ಕೃಪೆ ,ಔಟ್ ಲುಕ್,9-6-2014)

ಇವಲ್ಲದೆ ವಿ.ಎಚ್.ಪಿ, ಬಜರಂಗ ದಳ ಮತ್ತು ಇನ್ನಿತರ ಹಿಂದೂ ಸಾಂಸ್ಕೃತಿಕ ಮುಖವಾಡದ ಮತೀಯವಾದಿ ಸಂಘಟನೆಗಳು ಸಕ್ರಿಯಗೊಳ್ಳತೊಡಗಿವೆ. ಈ ಸಕ್ರಿಯಗೊಳ್ಳುವುದರ ಫಲವಾಗಿ ಪುಣೆಯಲ್ಲಿ ಕೋಮು ಗಲಭೆಯಿಂದಾಗಿ ಮುಸ್ಲಿಂ ಯುವಕ ಕೊಲ್ಲಲ್ಪಟ್ಟಿದ್ದಾನೆ. ಮೇ 2, 2014ರಂದು ಪುಣೆಯಲ್ಲಿ ಮೊಹಸೀನ್ ಶೇಖ್ ಎನ್ನುವ 24ರ ಹರೆಯದ ಇಂಜಿನಿಯರ್ ಒಬ್ಬನನ್ನು ‘ಹಿಂದೂ ರಾಷ್ಟ್ರೀಯ ಸೇನ’ ಎನ್ನುವ ಬಲಪಂಥೀಯ ಮತೀಯವಾದಿ ಸಂಘಟನೆಯು ಹಿಗ್ಗಾಮುಗ್ಗ ಥಳಿಸಿ ಕೊಲೆ ಮಾಡಿತು.ಈ ಕೊಲೆಯ ಆರೋಪವನ್ನು ಎದುರಿಸುತ್ತಿರುವ ಮತೀಯವಾದಿ ಸಂಘಟನೆಯೊಳಗಿರುವ ಯುವಕರೆಲ್ಲ 30 ವರ್ಷಗಳಿಗಿಂತ ಕಡಿಮೆ ವಯಸ್ಸಿನವರು. ಇದರ ಮುಖ್ಯಸ್ಥ ಧನಂಜಯ ದೇಸಾಯಿ ಕೆಲವು ತಿಂಗಳ ಹಿಂದೆ ವಿಚಾರವಾದಿ ‘ನಾರಾಯಣ ದಾಬೋಲ್ಕರ್’ ಹತ್ಯೆಯ ಆರೋಪವನ್ನು ಎದುರಿಸುತ್ತಿದ್ದಾನೆ. ಶಿವಾಜಿ ವಿಗ್ರಹಕ್ಕೆ ಯಾರೋ ಕಲ್ಲೆಸಿದಿದ್ದಾರೆ ಎನ್ನುವ ವದಂತಿಯಿಂದ ಉದ್ರಿಕ್ತಗೊಂಡ ಗುಂಪೊಂದು ಈ ಅಮಾಯಕ ಮುಸ್ಲಿಂ ಯುವಕನನ್ನು ಹತ್ಯೆ ಮಾಡಿದೆ.ಇದಕ್ಕೂ ಮುಂಚೆ ಶಿವಾಜಿ ಮತ್ತು ಬಾಳಾ ಠಾಕ್ರೆಯವರ ವಿರೂಪಗೊಂಡ ಫೋಟೋಗಳು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪ್ರಕಟಗೊಂಡು ಪುಣೆ ನಗರದಾದ್ಯಾಂತ ಕೋಮು ಗಲಭೆ ಸ್ವರೂಪದ ಉದ್ರಿಕ್ತ ವಾತಾವರಣ ಉಂಟಾಗಿತ್ತು. ನಂತರ ಈ ಮುಸ್ಲಿಂ ಯುವಕನ ಹತ್ಯೆ. ಇದಕ್ಕೆ ಪ್ರತಿಕ್ರಯಿಸುತ್ತಾ ಪುಣೆ ನಗರದ ಬಿಜೆಪಿ ಸಂಸದ ಅನಿಲ್ ಶಿರೋಲೆ “ಫೇಸ್ ಬುಕ್ ನಲ್ಲಿ ಪ್ರಕಟಗೊಂಡ ಚಿತ್ರಗಳು ಮನ ನೋಯಿಸುವಂತದ್ದು. ಇದಕ್ಕೆ ಪ್ರತೀಕಾರ ಸ್ವರೂಪವಾಗಿ ಏನಾದರೂ ಒಂದು ಸಂಭವಿಸುವುದು ಸಾಮಾನ್ಯ ಮತ್ತು ಸಹಜ” ಎಂದು ಹೇಳಿಕೆ ಕೊಟ್ಟಿದ್ದಾರೆ. 2002ರ ಗುಜರಾತ್ ಹತ್ಯಾಕಾಂಡಕ್ಕೂ ಮೋದಿ ಹೇಳಿದ್ದು ಇದನ್ನೇ, ಆರೆಸ್ಸೆಸ್ ಇಂದಿಗೂ ಬಾಯಿ ಬಿಟ್ಟಿಲ್ಲ. ಸಿಇಓ ಮೋದಿಯೂ ಸಹ.

ಮೋದಿಯ ಲೆಫ್ಟಿನೆಂಟ್ ಅಮಿತ್ ಷಾ ನೇತೃತ್ವದಲ್ಲಿ ಉತ್ತರ ಪ್ರದೇಶದಲ್ಲಿ ಇಡೀ ಜಾತಿ ವ್ಯವಸ್ಥೆಯೇ ಧೃವೀಕರಣಗೊಂಡು ಅಪಾರ ಪ್ರಮಾಣದಲ್ಲಿ ಓಬಿಸಿ ಮತಗಳು ಬಿಜೆಪಿಯ ಪಾಲಾದವು. amit-shahಇದರ ಫಲವಾಗಿ ಬಲಿಷ್ಠ ಜಾತಿಗಳು ಸಂಪೂರ್ಣ ಸಂಘ ಪರಿವಾರದ ತೆಕ್ಕೆಯೊಳಗಿವೆ. ಇವರಿಗೆಲ್ಲಾ ಏಕಮೇದ್ವೀಯ ನಾಯಕ ಅಮಿತ ಷಾ. ಮುಜಫರ್ ನಗರ ಕೋಮುಗಲಭೆ ಇಡೀ ಧೃವೀಕರಣದ ಪ್ರಕ್ರಿಯೆಯನ್ನು ಒಂದು ತಾರ್ಕಿಕ ಅಂತ್ಯಕ್ಕೆ ಮುಟ್ಟಿಸಿತು. ಮತೀಯವಾದದ ಈ ಧೃವೀಕರಣದ ಫಲವಾಗಿ ಉತ್ತರಪ್ರದೇಶದಲ್ಲಿ ಬಿಜೆಪಿ 72 ಸ್ಥಾನಗಳನ್ನು ಗೆದ್ದುಕೊಂಡಿತು. ಈ ಮುಜಫರ್ ನಗರದ ಕೋಮು ಗಲಭೆಯ ಆರೋಪಿಯಾಗಿದ್ದ ಬಿಜೆಪಿ ಸಂಸದ ಸಂಜೀವ ಬಲಿಯಾನ್ ಅವರನ್ನು ಮೋದಿ ಸರ್ಕಾರದಲ್ಲಿ ಮಂತ್ರಿಯಾಗಿ ನೇಮಕ ಮಾಡಲಾಗಿದೆ. ಇಂದು ಅಮಿತ ಷಾ ಬಿಜೆಪಿಯ ಅತ್ಯಂತ ಪ್ರಭಾವಿ ನಾಯಕರಲ್ಲೊಬ್ಬರು. ಸದ್ಯಕ್ಕೆ ಉತ್ತರ ಪ್ರದೇಶದ ಸಾಮಂತ ರಾಜ. ಧೃವೀಕರಣದ ಈ ಮಾದರಿ 2002ರಲ್ಲಿ ಗುಜರಾತ್ ನಲ್ಲಿ ಯಶಸ್ವಿಯಾಯಿತು. 2014ರಲ್ಲಿ ಉತ್ತರ ಪ್ರದೇಶದಲ್ಲಿ ಯಶಸ್ವಿಯಾಯಿತು.ಇನ್ನು ಮುಂಬರುವ ಸಾರ್ವತ್ರಿಕ ಚುನಾವಣೆಗಳಲ್ಲಿ ಇದು ಪ್ರಯೋಗಿಸಲ್ಪಡುತ್ತದೆ. ಪುಣೆಯಲ್ಲಿನ ಕೊಲೆ ಇದರ ಆರಂಭವಷ್ಟೆ.

ಕಣ್ಣು, ಮೂಗು, ಗಂಟಲು ತಜ್ಞ ದೆಹಲಿಯ ಹರ್ಷವರ್ಧನ್ ಕೇಂದ್ರ ಸರ್ಕಾರದಲ್ಲಿ ಆರೋಗ್ಯ ಮಂತ್ರಿಗಳು. ಸಂಘಪರಿವಾರದ ಈ ಮಂತ್ರಿ “ಏಡ್ಸ್ ರೋಗವನ್ನು ತಡೆಗಟ್ಟಲು ಕಾಂಡೋಮ್ ಗಳನ್ನು ಅಳವಡಿಸಿಕೊಳ್ಳಬೇಡಿ, ಬದಲಾಗಿ ಮೌಲ್ಯಗಳನ್ನು ಅಳವಡಿಸಿಕೊಳ್ಳಿ ಎಂದು ಹೇಳಿಕೆ ನೀಡಿದ್ದಾರೆ. ಆರೆಸ್ಸೆಸ್ ಪರಿಭಾಷೆಯಲ್ಲಿ ಸಂಸ್ಕೃತಿ, ಮೌಲ್ಯಗಳೆಂದರೆ ಸನಾತನ ಮೌಲ್ಯಗಳು. ಬ್ರಾಹ್ಮಣ್ಯದ ನೀತಿಗಳು.”ಅದನ್ನೇ ಬಳಸಿ ಆದರೆ ಕಾಂಡಮ್ ಬಳಸಬೇಡಿ” ಎನ್ನುತ್ತಿದ್ದಾರೆ ಈ ಆರೋಗ್ಯ ಮಂತ್ರಿ. ಅನೇಕ ವರ್ಷಗಳ ಹೋರಾಟದ ನಂತರ ಕೊಂಚ ತಹಬದಿಗೆ ಬರುತ್ತಿರುವ ಈ ಏಡ್ಸ್ ಕಾಯಿಲೆಯ ಕುರಿತಾಗಿ ಈ ಸಂಘ ಪರಿವಾರದ ಮಂತ್ರಿಯ ಬೇಜವ್ದಾರಿ ಮತ್ತು ಮತೀಯವಾದದ ಚಿಂತನೆಗಳಿಗೆ ಏನನನ್ನುವುದು?

ಸಣ್ಣದಾದ ಸರ್ಕಾರ, ವಿಶಾಲವಾದ,ಪರಮಾವಧಿಯ ಆಡಳಿತ (minimum government, maximum governance) ಎನ್ನುವ ಮೋದಿಯ ಜನಪ್ರಿಯ ಸ್ಲೋಗನ್ ಗಳ ಅರ್ಥವ್ಯಾಪ್ತಿಯು ಮೇಲ್ಕಾಣಿಸಿದ ರೀತಿಯಲ್ಲಿ ಮುಂದಿನ ವರ್ಷಗಳಲ್ಲಿ ತನ್ನ ಹೆಡೆ ಬಿಚ್ಚಲಾರಂಬಿಸುತ್ತದೆ. ಇಂದು ಹಿಂದುತ್ವವಾದಿಗಳಿಗೆ ಒಬ್ಬ messiah ನಂತೆ ಕಂಗೊಳಿಸುತ್ತಿರುವ ನರೇಂದ್ರ ಮೋದಿ ಇಂಡಿಯಾದ ಸಂವಿಧಾನದ ವಿಧಿ ನಿಯಮಗಳಲ್ಲಿ ದಿನನಿತ್ಯ ಲೋಪಗಳನ್ನು ಹುಡುಕುತ್ತಾ ಅದಕ್ಕೆ ಪರ್ಯಾಯವಾಗಿ ಮತೀಯವಾದಿ ಬಲಪಂಥೀಯ ರಾಜಕಾರಣಕ್ಕೆ ಮುನ್ನುಡಿ ಬರೆಯಲಾರಂಬಿಸಿದ್ದಾರೆ. ನಾವು ಇದಕ್ಕೆ ಪರ್ಯಾಯವಾಗಿ ಬಹು ಸಂಸ್ಕೃತಿಯ ಜನಪರ ರಾಜಕಾರಣದ ಸಾಮಾಜಿಕ-ಆರ್ಥಿಕ ಮಾದರಿಗಳನ್ನು ಮುಂದೆ ಕಟ್ಟದೇ ಹೋದರೆ ಮೋದಿಯ ಈ ಮತೀಯವಾದಿ ಮುನ್ನುಡಿ ಹಿಗ್ಗುತ್ತ ಹೋಗುತ್ತದೆ.ಆಗ ಸಂವಿಧಾನ ಕಳಚಿಕೊಳ್ಳುವುದನ್ನು ಯಾರೂ ತಪ್ಪಿಸಲಾರರು.

ಹೆಣ್ಣಿನ ದೇಹಮಾರಾಟವೆಂಬ ವೃತ್ತಿ


– ರೂಪ ಹಾಸನ


ಹಳೆಯ ಮದ್ಯವನ್ನು ಹೊಸ ಬಾಟಲಿಯಲ್ಲಿ ಹಾಕಿದಂತೆ ಇದುವರೆಗೆ ಧಾರ್ಮಿಕ ಕಟ್ಟು ಪಾಡುಗಳ ಸಂಕೋಲೆಯೊಳಗೆ ನಿಕೃಷ್ಟವಾಗಿ ನರಳುತ್ತಿದ್ದ ಹೆಣ್ಣು ದೇಹ, ಇಂದು ಶೋಷಣೆಯ ಅನೇಕ ಹೊಸ ರೂಪಗಳಲ್ಲಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳಹೊರಟಿರುವುದಕ್ಕಿಂಥಾ ಘೋರ ದುರಂತ ಮತ್ತಿನ್ನೇನಿದೆ? ಇಂದು ದೇವದಾಸಿ ಪದ್ಧತಿ, ಬಸವಿ, ಬೆತ್ತಲೆ ಸೇವೆ, ಜೋಗತಿಯಂಥಾ ಅನಿಷ್ಟ ಪದ್ಧತಿಗಳು yellamma-neem-leaves-devadasiನಿಧಾನಕ್ಕೆ ಕಡಿಮೆಯಾಗುತ್ತಿವೆ ಎನ್ನುತ್ತಿರುವಾಗಲೇ, ಅದರ ಅವಳಿ ರೂಪವಾಗಿ ವೇಶ್ಯಾವಾಟಿಕೆಯ ಜಾಲ ವಿಸ್ತೃತವಾಗಿ ನಗರ-ಪಟ್ಟಣವೆನ್ನದೇ ವ್ಯಾಪಕವಾಗಿ ಹಬ್ಬುತ್ತಿದೆ.

ದೇಶದಲ್ಲಿರುವ ಲೈಂಗಿಕ ವೃತ್ತಿ ನಿರತರ ಸಮೀಕ್ಷೆ ನಡೆಸಲು ಇತ್ತೀಚೆಗೆ ಸುಪ್ರೀಮ್ ಕೋರ್ಟ್ ಸಮಿತಿ ರಚಿಸಿರುವುದು ಅತ್ಯಂತ ಸ್ವಾಗತಾರ್ಹವಾದ ವಿಚಾರ. ಈ ಸಮಿತಿ ಲೈಂಗಿಕ ವೃತ್ತಿನಿರತರ ಪರ್ಯಾಯ ಉದ್ಯೋಗ, ಜೀವನಮಟ್ಟ ಸುಧಾರಣೆ, ಪುನರ್ವಸತಿ, ಮಾನವ ಕಳ್ಳಸಾಗಾಣಿಕೆ ತಡೆ ಸೇರಿದಂತೆ ಹಲವು ಉದ್ದೇಶಗಳನ್ನಿಟ್ಟುಕೊಂಡು ಸ್ಥಾಪಿತವಾಗಿದೆ. ಆದರೆ ವೇಶ್ಯಾವೃತ್ತಿಯ ಕಬಂಧ ಬಾಹುಗಳು ಅತ್ಯಂತ ಸೂಕ್ಷ್ಮ ಎಳೆಗಳ ಮೇಲೆ ನಿಂತಿರುವುದರಿಂದ ಇದಕ್ಕೆ ಅಷ್ಟೇ ಸೂಕ್ಷ್ಮ ತಯಾರಿ, ಕಾರ್ಯಯೋಜನೆ ಮತ್ತು ಹಿನ್ನೆಲೆಯನ್ನು ಎಳೆಎಳೆಯಾಗಿ ಅಭ್ಯಸಿಸುವ ಅವಶ್ಯಕತೆಯಿದೆ. ಇದೊಂದು ಅತ್ಯಂತ ಸಂಕೀರ್ಣವಾದ ಸಮಸ್ಯೆಯಾಗಿದ್ದು ಇದರ ಹಿಂದೆ ಧಾರ್ಮಿಕ, ಸಾಮಾಜಿಕ, ಕೌಟುಂಬಿಕ, ಆರ್ಥಿಕ, ಭೌಗೋಳಿಕ, ಚಾರಿತ್ರಿಕ, ಸಾಂಸ್ಕೃತಿಕ ಎಲ್ಲಕ್ಕೂ ಮುಖ್ಯವಾಗಿ ಮಾನಸಿಕ ಸೂಕ್ಷ್ಮತೆಗಳು ತಳುಕು ಹಾಕಿಕೊಂಡಿವೆ.

ಹೀಗಾಗಿ ಈ ಸಮೀಕ್ಷೆ ಕೇವಲ ಲೈಂಗಿಕ ಕಾರ್ಯಕರ್ತೆಯರನ್ನು ಗುರುತಿಸುವ ಕೆಲಸವಾಗದೇ, ಅವರಿಗೆ ವೃತ್ತಿ ಗೌರವ, ಸಾಮಾಜಿಕ, ಆರ್ಥಿಕ ಭದ್ರತೆ ಒದಗಿಸಿ, ಅವರ ಮಕ್ಕಳು ಈ ವೃತ್ತಿಗಿಳಿಯದಂತೆ ನೋಡಿಕೊಂಡು ಅವರಿಗೆ ಬೇರೆ ಕೆಲಸದ ಭದ್ರತೆ ದೊರೆಯುವಂತಾಗಬೇಕು. ಈಗಾಗಲೇ ಸುಪ್ರೀಮ್ ಕೋರ್ಟ್ ತಿಳಿಸಿರುವಂತೆ ಪುನರ್ವಸತಿ ಅವಳ ಆಯ್ಕೆಯೇ ಆಗಿರಬೇಕು. ಆದರೆ ಲೈಂಗಿಕವೃತ್ತಿಯನ್ನು ಮೀರಿ ಹೊಸದಾದ ಬದುಕು ಕಟ್ಟಿಕೊಳ್ಳುವಂತಾಗಲು ಸಮಾಜ, ಸರ್ಕಾರ, ಖಾಸಗಿ ಸಂಸ್ಥೆಗಳು, ನ್ಯಾಯಾಲಯಗಳೂ ಅವಳ ಸಹಾಯಕ್ಕೆ, ಸಹಕಾರಕ್ಕೆ ಬರಬೇಕು

ಈಗಾಗಲೇ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ವಿವರಣೆಯಂತೆ ಸಧ್ಯಕ್ಕೆ ದೇಶದಲ್ಲಿ 13 ಲಕ್ಷ ‘ದಾಖಲಾದ’ ಲೈಂಗಿಕ ಕಾರ್ಯಕರ್ತೆಯರಿದ್ದಾರೆಂದು ಭಾರತ ಸರ್ಕಾರ ವಿವರಣೆ ನೀಡಿದೆ. ಇದರಲ್ಲಿ ಶೇಕಡ 40 ರಷ್ಟು ಅಪ್ರಾಪ್ತ ಹೆಣ್ಣುಮಕ್ಕಳು! ‘ದಾಖಲಾಗದೇ’ ಹೊರಗುಳಿದವರ ಸಂಖ್ಯೆ ಇದರ ಮೂರರಷ್ಟಿದೆ ಎಂಬ ಅಂದಾಜಿದೆ. ಇದರಲ್ಲಿ ಕಾಲ್‌ಗರ್ಲ್‌ಗಳು, ಹೈಟೆಕ್ ವೇಶ್ಯಾವಾಟಿಕೆ, ವ್ಯಾಪಾರಿಕರಣದ ಲೇಬಲ್ ಇಲ್ಲದ ‘rape-illustrationಸಭ್ಯ-ನಾಗರಿಕ’ ವ್ಯಭಿಚಾರವೂ ಸೇರುತ್ತದೆ. ಇವರಲ್ಲಿ ಹೆಚ್ಚಿನವರು ಬಡ ಕುಟುಂಬಗಳಿಂದ ಬಂದವರು. ‘ನಮ್ಮ ಆರ್ಥಿಕ ಅವಶ್ಯಕತೆಗಳು ಬೇರೆ ರೀತಿಯಲ್ಲಿ ಪೂರೈಕೆಯಾದರೆ ನಾವು ಖಂಡಿತಾ ಈ ವೃತ್ತಿಯನ್ನು ಬಿಡುತ್ತೇವೆ’ ಎನ್ನುತ್ತಾರವರು. ಈ ದಾಖಲೆಗೆ ಒಳಪಡದ ಇನ್ನೂ ಬೃಹತ್ ಮೊತ್ತ ಹೊರಗೇ ಇರುವುದೂ ನಿರ್ವಿವಾದ. ದಾಖಲಾದವರು ಬಡತನದ ದಳ್ಳುರಿಗೆ, ಅಸಹಾಯಕತೆಗೆ, ಅನಿವಾರ್ಯತೆಗೆ, ಆಕಸ್ಮಿಕಕ್ಕೆ, ಮೋಸಕ್ಕೆ, ವಂಚನೆಯ ಜಾಲಕ್ಕೆ ಸಿಕ್ಕಿ ಈ ವೃತ್ತಿಗಿಳಿಯುತ್ತಿದ್ದಾರೆಯೇ ಹೊರತು ವೇಶ್ಯಾವಾಟಿಕೆ ಅವರ ಆಯ್ಕೆ ಅಲ್ಲ ಎಂಬುದನ್ನು ನಮ್ಮ ಸಮಾಜ ಗಂಭೀರವಾಗಿ ಪರಿಗಣಿಸಬೇಕಿದೆ. ಮಹಿಳೆಯರು ಬೇರೆ ದಾರಿಯಿಲ್ಲದೇ ಅಸಹಾಯಕರಾಗಿ ವೇಶ್ಯಾವಾಟಿಕೆಗೆ ಇಳಿಯಬೇಕಾಗಿ ಬಂದಿರುವುದು, ನಮ್ಮ ರೋಗಿಷ್ಟ ಸಮಾಜದ ದ್ಯೋತಕವಲ್ಲದೇ ಮತ್ತಿನ್ನೇನು?

ಎಳೆಯ ಬಾಲೆಯರನ್ನು, ಹದಿಹರೆಯದವರನ್ನು, ಮಹಿಳೆಯರನ್ನು ಅಪಹರಿಸಿ ಅವರನ್ನು ಅವರ ದೇಹ ಸಂಬಂಧಿ ವ್ಯಾಪಾರಗಳಲ್ಲಿ ತೊಡಗಿಸುವ ದಂಧೆ ಇಂದು ಬೃಹತ್ತಾಗಿ ಬೆಳೆದು ನಿಂತಿದೆ. ಈ ದಂಧೆಗೆ ಇಂತಹುದೇ ಎಂದು ನಿರ್ದಿಷ್ಟ ಹೆಸರಿಲ್ಲ. ಇದಕ್ಕೆ ಸೇವೆ, ಮನೆಗೆಲಸ, ಪಬ್, ಬಾರ್, ಡಾನ್ಸ್‌ಬಾರ್, ಮಸಾಜ್‌ಪಾರ್ಲರ್, ಪ್ರವಾಸೋದ್ಯಮ ಇತ್ಯಾದಿಗಳ ಮುಖವಾಡವಿದ್ದರೂ ಕೊನೆಗಿದು ವೇಶ್ಯಾವಾಟಿಕೆಯ ದಂಧೆ! ಬೇರೆ ಬೇರೆ ಹೆಸರಿದ್ದರೂ ಸೇವೆಯ ಸ್ವರೂಪ ಮಾತ್ರ ಲೈಂಗಿಕ ಸೇವೆ! ಭಾರತದ ಆರು ಮಹಾನಗರಗಳಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚು ಅಪ್ರಾಪ್ತ ಬಾಲೆಯರು ವೇಶ್ಯಾವಾಟಿಕೆಯಲ್ಲಿ ತೊಡಗಬೇಕಾಗಿ ಬಂದಿರುವುದು ನಮ್ಮ ಕಾನೂನು, ಪೊಲೀಸ್ ಇಲಾಖೆಯ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯೂ ಆಗಿದೆ. ಹೀಗಾಗೇ ವಿಶ್ವದಲ್ಲಿ ಮೂರನೆ ಅತಿ ಹೆಚ್ಚು ವ್ಯಾಪಾರಿ ವಹಿವಾಟನ್ನು ಹೊಂದಿರುವ ದಂಧೆ ಎಂದರೆ ಸೆಕ್ಸ್ ದಂಧೆ! [ಮೊದಲನೆಯದು ಮಾರಕಾಸ್ತ್ರ, ಎರಡನೆಯದು ಮಾದಕದ್ರವ್ಯ.] ಈ ಆದ್ಯತೆಗಳೇ ಮನುಷ್ಯ ಸಂಕುಲ ಎತ್ತ ಸಾಗುತ್ತಿದೆ ಎಂಬುದರ ದಿಕ್ಸೂಚಿಯಾಗಿದೆ. ನಾವು ‘ಮಾನವ ಹಕ್ಕುಗಳ ರಕ್ಷಣೆ’ಯ ಬಗ್ಗೆ ಹೆಣ್ಣನ್ನು ಪಕ್ಕಕ್ಕಿಟ್ಟು, ಗಂಟಲು ಹರಿಯುವಂತೆ ಭಾಷಣ ಮಾಡುತ್ತಿದ್ದೇವೆ. ಹೆಣ್ಣುಮಕ್ಕಳ ದೇಹ ಸದ್ದಿಲ್ಲದೇ ಬಿಕರಿಗೆ ಬಿದ್ದಿದೆ!

ಒಂದೆಡೆ ವೇಶ್ಯಾವಾಟಿಕೆ ಕಾನೂನುಬಾಹಿರವಾದರೂ ಪ್ರತಿ ಜಿಲ್ಲೆಯಲ್ಲೂ ಪೊಲೀಸ್ ಇಲಾಖೆಯ ಸಹಕಾರದೊಂದಿಗೇ ನಡೆಯುತ್ತಿರುವ ಅಡ್ಡಾಗಳಲ್ಲಿ ಹೆಣ್ಣುಮಕ್ಕಳ ಪ್ರಮಾಣ ಮಿತಿಮೀರಿ ಏರುತ್ತಿದೆ. Transexual, transgenders and Aravani gay men in Tamil Nadu, Indiaವೃತ್ತಿನಿರತ ಲೈಂಗಿಕ ಕಾರ್ಯಕರ್ತೆಯರಿಗೆ ನಿಯಮಿತ ಆರೋಗ್ಯ ತಪಾಸಣೆ, ಕಾಂಡೊಂಗಳ ವಿತರಣೆ, ಹೆಚ್‌ಐವಿ, ಏಡ್ಸ್, ಇತರ ಲೈಂಗಿಕ ಗುಪ್ತ ರೋಗಗಳ ಕುರಿತು ತಿಳಿವಳಿಕೆ ನೀಡಿ ಸಮಾಜಕ್ಕೆ ಈ ಸೋಂಕು ಹರಡದಂತೆ ‘ಸುರಕ್ಷಿತ ಲೈಂಗಿಕತೆ’ಯ ಪಾಠ ಕಲಿಸಲು ಕರ್ನಾಟಕದಲ್ಲಿ ಇತ್ತೀಚಿನ 4-5 ವರ್ಷಗಳಿಂದ ಜಿಲ್ಲಾ ಆರೋಗ್ಯ ಇಲಾಖೆಯಡಿ ಇವರನ್ನು ದಾಖಲಿಸಿಕೊಳ್ಳಲಾಗುತ್ತಿದೆ! ಸರ್ಕಾರದ ದಾಖಲಿಸುವ ಈ ಕ್ರಮವೇ ಪ್ರಶ್ನಾರ್ಹವಾದುದು! ಹಾಗಿದ್ದರೆ, ಹೆಣ್ಣಿನ ಲೈಂಗಿಕ ಜೀತವೇ ನಮ್ಮ ಸಭ್ಯ ಸಮಾಜ ಬಯಸುತ್ತಿರುವ ಮಹಿಳೆಯ ದೇಹ ಕೇಂದ್ರಿತ ಹಕ್ಕನ್ನಾಧರಿಸಿದ ಅಭಿವೃದ್ಧಿಯೇ? ಎಂಬ ಪ್ರಶ್ನೆ ನಮ್ಮನ್ನು ಕಾಡದಿರದು.

ಈ ಲೈಂಗಿಕವೃತ್ತಿನಿರತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಮಿತಿಮೀರಿದ ಪ್ರಮಾಣದಲ್ಲಿ ಏರುತ್ತಿದ್ದು, ಹೆಣ್ಣುಮಕ್ಕಳ ನಾಪತ್ತೆ ಪ್ರಕರಣಗಳಿಗೂ ಇವರ ಸಂಖ್ಯೆಯ ಹೆಚ್ಚಳಕ್ಕೂ ಖಂಡಿತಾ ನೇರವಾದ ಸಮೀಕರಣವಿದೆಯೆಂಬುದು ಗುಟ್ಟೇನಲ್ಲ! ಬಡ ಕುಟುಂಬಗಳ ವಲಸೆಯು ಹೆಣ್ಣುಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಅಪಾಯಕಾರಿಯಾಗಿದ್ದು ಆ ಸಂದರ್ಭದಲ್ಲೇ ಅನೇಕ ಹೆಣ್ಣುಮಕ್ಕಳು ಲೈಂಗಿಕ ದೌರ್ಜನ್ಯಕ್ಕೆ, ಅತ್ಯಾಚಾರಕ್ಕೆ, ಕದ್ದೊಯ್ಯುವಿಕೆಗೆ ತುತ್ತಾಗುತ್ತಿರುವುದು ಬೆಳಕಿಗೆ ಬಂದಿದೆ. ಇದನ್ನು ಪೊಲೀಸರಲ್ಲಿ ದಾಖಲಿಸುವದಕ್ಕಾಗಲಿ, ಕಾನೂನುರೀತ್ಯ ಹೋರಾಟ ಮಾಡಲಾಗಲಿ ಇವರಿಗೆ ವ್ಯವಧಾನವೂ ಇಲ್ಲ, ತಿಳಿವಳಿಕೆಯೂ ಇಲ್ಲ, ಜೊತೆಗೆ ಆರ್ಥಿಕ ಸಬಲತೆಯೂ ಇಲ್ಲ. ಇವರು ಕಾನೂನುಬದ್ಧವಲ್ಲದ ಮೈ ಮಾರಿಕೊಳ್ಳುವ ಇಂತಹ ವೃತ್ತಿಯಲ್ಲಿ ತೊಡಗಿಕೊಳ್ಳುವ ಮೂಲಕ ಸಂಘಟಿತರಾಗಲೂ ಸಾಧ್ಯವಾಗದೇ, ಅದರಲ್ಲೂ ವಯಸ್ಸಾಗುತ್ತಾ ಸಾಗಿದಂತೆ ಈ ವೃತ್ತಿಯಲ್ಲಿ ಮುಂದುವರೆಯಲಾಗದಿದ್ದಾಗ ಅವರು ಕಸಕ್ಕಿಂತಾ ಕಡೆಯಾಗಿಬಿಡುತ್ತಾರೆ. Prostitutionಹಾಗೆಂದು ಇದನ್ನು ವೃತ್ತಿಯಾಗಿ ಪರಿಗಣಿಸಬೇಕೆಂಬುದು ಈ ಮಾತುಗಳ ಆಶಯವಲ್ಲ. ಅದರದು ಬೇರೆಯದೇ ಚರ್ಚೆ. ಎಲ್ಲಿಯವರೆಗೆ ಹೆಣ್ಣಿಗೆ ತನ್ನ ದೇಹ, ಮನಸ್ಸು, ಹಾಗೂ ಬುದ್ಧಿ ಅತ್ಯಂತ ವಿಶಿಷ್ಟವಾದುದು ಮತ್ತು ಅತ್ಯಮೂಲ್ಯವಾದುದು ಎಂಬ ನಂಬಿಕೆ ಬರುವುದಿಲ್ಲವೋ, ತನ್ನ ವ್ಯಕ್ತಿತ್ವದ ಘನತೆಗಾಗಿ ಯಾವುದೇ ಕೀಳು ಕೆಲಸಕ್ಕೆ ಇಳಿಯುವುದಿಲ್ಲ ಎಂಬ ದೃಢತೆ ಬರುವುದಿಲ್ಲವೋ ಅಲ್ಲಿಯವರೆಗೆ ಮಹಿಳೆ ಮತ್ತೆ ಮತ್ತೆ ಶೋಷಣೆಗೆ ಒಳಗಾಗುತ್ತಲೇ ಇರಬೇಕಾಗುತ್ತದೆ ಎಂಬುದು ನಿರ್ವಿವಾದ.

ಲೈಂಗಿಕ ಕಾರ್ಯಕರ್ತೆಯರ ಹಿತಾಸಕ್ತಿಗಾಗಿ ದುಡಿಯುತ್ತಿರುವುದಾಗಿ ಹೇಳಿಕೊಳ್ಳುತ್ತಿರುವ ಕೆಲವು ಎನ್‌ಜಿಒಗಳು ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸುವಂತೆ ಒತ್ತಾಯಿಸುತ್ತಿವೆ. ‘ನನ್ನ ದೇಹ ನನ್ನ ಹಕ್ಕು’ ಎಂಬ ಕಲ್ಪನೆಯನ್ನು ಬಿತ್ತುತ್ತಿವೆ. ಈಗಾಗಲೇ ಹೆಣ್ಣುಮಕ್ಕಳ ಅಕ್ರಮ ಮಾರಾಟದ ದಂಧೆ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿರುವುದನ್ನು, ವ್ಯಾಪಕವಾಗಿರುವ ಹೆಣ್ಣುಮಕ್ಕಳ ಕಣ್ಮರೆ ಪ್ರಕರಣಗಳು ಎತ್ತಿ ತೋರುತ್ತಿವೆ. ಅದರಲ್ಲೂ ತನ್ನ ದೇಹವನ್ನು ಗೌರವಿಸಿಕೊಳ್ಳುವ ಯಾವ ಹೆಣ್ಣು, ಅದು ಮಾರಾಟದ ಸರಕಾಗಬೇಕು ಎಂದು ಬಯಸುತ್ತಾಳೆ? ಬಯಸುವುದೇ ಆದರೆ ಅದಕ್ಕೆ ಕಾರಣ ಅವಳನ್ನು ಹಾಗೆ ರೂಪಿಸಿದ ವ್ಯವಸ್ಥೆಯದೇ ಹೊರತು ಹೆಣ್ಣಿನದಲ್ಲ ಅಲ್ಲವೇ? ಲೈಂಗಿಕ ಕಾರ್ಯಕರ್ತೆಯರ ಪುನರ್ವಸತಿ ಸಾಧ್ಯತೆಗಳ ಕುರಿತು ಉನ್ನತ ಆರೋಗ್ಯ ಅಧಿಕಾರಿಯೊಡನೆ ಚರ್ಚಿಸುತ್ತಿದ್ದಾಗ, “ಎಲ್ಲಿಯವರೆಗೆ ‘ಡಿಮ್ಯಾಂಡ್’ ಇರುತ್ತದೋ ಅಲ್ಲಿಯವರೆಗೆ ಸಪ್ಲೈ ಇರಲೇಬೇಕು” ಎನ್ನುತ್ತಾ ಪುನರ್ವಸತಿ ಎಂಬ ಪರಿಕಲ್ಪನೆಯನ್ನೇ ಅಲ್ಲಗಳೆದುಬಿಟ್ಟರು! ಇದು ನಮ್ಮ ವ್ಯವಸ್ಥೆಯ ರಕ್ಷಣೆಯ ನೀತಿಗೊಂದು ಉದಾಹರಣೆ! ಹಾಗಿದ್ದರೆ ಮಹಿಳಾ ಹಕ್ಕುಗಳ ಗತಿಯೇನು?

ಹೆಣ್ಣು ಮಕ್ಕಳ ಕಣ್ಮರೆ ಕುರಿತ ನಮ್ಮದೊಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೆಣ್ಣುಮಕ್ಕಳಿಗೆ ನೈತಿಕ ಶಿಕ್ಷಣ ನೀಡಿ ಅವರನ್ನು “ಹದ್ದುಬಸ್ತಿನಲ್ಲಿಡುವುದು” ಮಾತ್ರ ಅವರ ಮೇಲಿನ ಎಲ್ಲ ರೀತಿಯ ದೌರ್ಜನ್ಯ ತಡೆಗೆ ಪರಿಹಾರ ಎಂದು ಹೇಳಿ ಕೈ ತೊಳೆದುಕೊಂಡು ಬಿಟ್ಟರು! ‘ಗಂಡ ಹೆಂಡತಿಗೆ ಎರಡೇಟು ಕೊಡುವುದು ವೈವಾಹಿಕ ಬದುಕಿನಲ್ಲಿ ಸಾಮಾನ್ಯ, ಅದು ದೌರ್ಜನ್ಯವಲ್ಲ’ ಎಂದು ನಮ್ಮ ಕಾರವಾರದ ತ್ವರಿತ ನ್ಯಾಯಾಲಯವೊಂದು ಮೊನ್ನೆಯಷ್ಟೇ ಆದೇಶದಲ್ಲಿ ಉಲ್ಲೇಖಿಸಿದೆ! ‘ಭೂಗತ ಜಗತ್ತಿನ ಮುಖಂಡರೂ ಮಹಿಳೆಯರನ್ನು ಗೌರವದಿಂದ ಕಾಣಲು ಬಯಸುತ್ತಾರೆ. ಗೌರವಯುತ ಮಹಿಳೆ ಮೇಲೆ ಅತ್ಯಾಚಾರ ನಡೆಯುವುದಿಲ್ಲ.’ ಇದು ದೆಹಲಿ ಸಾಮೂಹಿಕ ಅತ್ಯಾಚಾರದ ಪಾತಕಿಗಳ ಪರ ವಕಾಲತ್ತು ವಹಿಸಿರುವ ನ್ಯಾಯವಾದಿ ಮನೋಹರಲಾಲ್ ಶರ್ಮಾ ಅವರ ಹೇಳಿಕೆ. ಇಂತಹ ಅಸೂಕ್ಷ್ಮ ಹೇಳಿಕೆಗಳು, prostitution_time_coverಯಾರ್‍ಯಾರಿಂದಲೋ! ಅದಿನ್ನೆಷ್ಟೋ! ಖಾಪ್ ಪಂಚಾಯಿತಿ, ಮತೀಯವಾದಿ ಸ್ವಯಂಘೋಷಿತ ಸಂಸ್ಕೃತಿಯ ರಕ್ಷಕರ ಹೇಳಿಕೆಗಳಿಗೂ, ಇವುಗಳಿಗೂ ಹೆಚ್ಚು ವ್ಯತ್ಯಾಸವೇನಾದರೂ ಇದೆಯೇ? ಅವರಂತೂ ನಮ್ಮ ಸಂವಿಧಾನದ ಆಶಯಗಳಿಗೆ ಬದ್ಧರಾಗಿಲ್ಲದವರು, ಹೆಣ್ಣಿನ ಹಕ್ಕುಗಳ ಬಗ್ಗೆ ತಿಳಿವಳಿಕೆ ಇಲ್ಲದವರು, ವಸ್ತುಸ್ಥಿತಿಯನ್ನು ವೈಚಾರಿಕವಾಗಿ ವಿವೇಚಿಸಲರಿಯದ ಮೂರ್ಖರು ಎಂದು ನಿರ್ಲಕ್ಷಿಸಿ ಪಕ್ಕಕ್ಕಿಟ್ಟುಬಿಡಬಹುದು. ಆದರೆ……..

ಇಂದು ಕಾನೂನು, ಪೊಲೀಸ್, ಆರೋಗ್ಯ……ಹೀಗೆ ರಕ್ಷಣೆ ನೀಡಬೇಕಾದ, ಹೆಣ್ಣಿನ ಹಕ್ಕನ್ನು ಗೌರವಿಸಬೇಕಾದ ಎಲ್ಲ ವ್ಯವಸ್ಥೆಗಳೂ ಯಥಾಸ್ಥಿತಿಯನ್ನು ನಾಜೂಕಾಗಿ ಕಾಯ್ದುಕೊಳ್ಳುತ್ತಾ, ಒಂದೆಡೆ ಮಹಿಳೆಯ ಹಕ್ಕುಗಳನ್ನು ಗಾಳಿಗೆ ತೂರಿ ಹೆಣ್ಣನ್ನು ಸರಕೆಂಬಂತೆ ಬಳಸಿಕೊಳ್ಳಲು ಅನುವು ಮಾಡಿಕೊಡುತ್ತಾ, ಇನ್ನೊಂದೆಡೆ ಅವಳಿಗೆ ನೈತಿಕತೆಯ ಬೋಧೆ ನೀಡುತ್ತಾ, ಮತ್ತೊಂದೆಡೆ ಅವಳನ್ನು ಉದ್ಧರಿಸುವ, ರಕ್ಷಿಸುವ ನಾಟಕವಾಡುತ್ತಿರುವಾಗ, ಈ ವ್ಯವಸ್ಥೆಯ ಕಣ್ಣು ತೆರೆಸುವುದು ಹೇಗೆ? ‘ಮಹಿಳಾ ಸ್ನೇಹಿ’ ಹಾಗೂ ‘ಲಿಂಗ ಸೂಕ್ಷ್ಮತೆ’ಯ ಎಚ್ಚರವನ್ನು ಸಮಾಜ ಕಲಿತುಕೊಳ್ಳುವ ಮೂಲಕ ಮಾತ್ರ ಮಹಿಳೆಯ ಹಕ್ಕನ್ನಾಧರಿಸಿದ, ಮಹಿಳಾ ಸಮಾನತೆಯ ಕನಸಿನೆಡೆಗೆ ಮೊದಲ ಹೆಜ್ಜೆಯನ್ನು ಇಡಲು ಸಾಧ್ಯ ಎಂದು ನಂಬಿರುವ ಎಚ್ಚೆತ್ತ ಹೆಣ್ಣುಮಕ್ಕಳಿಂದು, ಮೊದಲಿಗೇ ಸಂವಿಧಾನಬದ್ಧವಾದ ಆಶಯಗಳಡಿಯಲ್ಲಿ ಕಾರ್ಯ ನಿರ್ವಹಿಸಬೇಕಾದ ನಮ್ಮ ನ್ಯಾಯಾಂಗಕ್ಕೆ, ಮಾಧ್ಯಮಕ್ಕೆ, ಸರ್ಕಾರಿ ಆಡಳಿತ ಯಂತ್ರಕ್ಕೆ ಈ ಪಾಠವನ್ನು ಹೇಳಿಕೊಡಬೇಕಾಗಿ ಬಂದಿರುವುದನ್ನು ಯಾವ ಕರ್ಮವೆನ್ನೋಣ? ನಾವು ಪುರುಷರಿಗೆ ಸಮಾನವಾದ ಹಕ್ಕುಗಳನ್ನು ಪಡೆದಿರುವ ಪ್ರಜಾಪ್ರಭುತ್ವವಾದಿ ದೇಶದಲ್ಲಿರುವ ಪ್ರಜೆಗಳೆಂದು ಹೇಳಿಕೊಳ್ಳಲೂ ನಾಚಿಕೆಯಾಗುತ್ತಿದೆ! ಇಂತಹುದ್ದೊಂದು ವ್ಯವಸ್ಥೆಯ ಬಗ್ಗೆ ಹೆಣ್ಣುಮಕ್ಕಳು ಸಂಪೂರ್ಣವಾಗಿ ‘ನಂಬಿಕೆ’ ಕಳೆದುಕೊಳ್ಳುವ ಮೊದಲು ಸಮಾಜ ಎಚ್ಚೆತ್ತುಕೊಳ್ಳುವುದೇ? ಎಂದು ಕಾದು ನೋಡಬೇಕಿದೆ.

ಮೈತೆರದುಕೊಂಡೇ ಉಳಿದ ಬದಲಾಗದ ಭಾರತ        


ಡಾ. ಜಯಪ್ರಕಾಶ್ ಶೆಟ್ಟಿ . ಹೆಚ್


ಭಾರತ ಇತ್ತೀಚೆಗೆ ಹಾದುಬಂದ ಮಹಾಚುನಾವಣೆಯ ಕಂಪನವನ್ನು ನಾವೆಲ್ಲರೂ ಅನುಭವಿಸಿದ್ದೇವೆ. ಈಗ ಅದರ ಪಲಿತಾಂಶವೂ ಬಂದಿದೆ. ಇಡಿಯ ದೇಶ ಬಯಸಿದ ಬದಲಾವಣೆಯನ್ನು ಕುರಿತ ವ್ಯಾಖ್ಯಾನಗಳೂ ನಡೆಯುತ್ತಿವೆ. ಜನ ಬಯಸುವ ಬದಲಾವಣೆ ಸಂಭವಿಸಿಯೇ ತೀರುತ್ತದೆ ಎಂಬಂತೆ ಮಾಧ್ಯಮಗಳೂ ದಿನಕ್ಕೊಂದರಂತೆ ಕನಸಿನ ಮಾಲೆಯ ಬಿಕರಿಯಲ್ಲಿ ತೊಡಗಿವೆ. ಸರಕು ಮಾರುಕಟ್ಟೆಯನ್ನು ಉತ್ತೇಜಿಸುತ್ತಿರುವ ಜಾಗತೀಕರಣದ ಆರ್ಥಿಕ ನೀತಿಯನ್ನೇ ಕೇಂದ್ರೀಕರಿಸಿ ತರಾವರಿ ಚರ್ಚೆಗಳು ನಡೆಯುತ್ತಿವೆ. ಆದರೆ ಆರ್ಥಿಕ ಸಂರಚನೆಯ ಪುರಾತನ ಮಾದರಿಯನ್ನಾಧರಿಸಿ ನಿರ್ಮಿತವಾದ ದೇಶವೊಂದರ ಸಾಮಾಜಿಕ ಸಂರಚನೆಯನ್ನು ಬದಲಾಯಿಸದೆ, ಸಮಷ್ಟಿಹಿತದ ಬದಲಾವಣೆಯ ಮಾತುಗಳು ಅರ್ಥಹೀನವಾದುವುಗಳೇ ಆಗುತ್ತವೆ. ಅದನ್ನೇ ಋಜುಗೊಳಿಸುವಂತೆ ‘ದೇಶಕ್ಕೆ ಒಳ್ಳೆಯ ದಿನ ಬಂದೇ ಬಿಟ್ಟಿದೆ’ ಎಂದು ಹೇಳುತ್ತಿರುವ ಹೊತ್ತಲ್ಲಿಯೇ, ದಲಿತ, ಅಪ್ರಾಪ್ತ, ಅಶಕ್ತ ಹೆಣ್ಣುಮಕ್ಕಳ ಅತ್ಯಾಚಾರದ ಸುದ್ಧಿಯಿಂದ ದೇಶ ಬೆವರಿಕೊಳ್ಳುತ್ತಲೇ ಇದೆ. ಮರ್ಯಾದಾ ಹತ್ಯೆಗಳು ಸಾಮಾನ್ಯ ಸುದ್ಧಿಗಳಾಗಿವೆ. ನಿತ್ಯದ ಈ ಘಟನೆಗಳ ವಿವರಗಳಿಗೆ ಹೋಗದೆ, ಇವುಗಳಿಗಿಂತ ಭಿನ್ನವಾದ ಆದರೆ ಬದಲಾಗದ ಭಾರತದ ವಾಸ್ತವವನ್ನು ಇನ್ನಷ್ಟು ಖಚಿತಪಡಿಸುವ ಕರ್ನಾಟಕದ ಎರಡು ಘಟನೆಗಳನ್ನಷ್ಟೇ ಇಲ್ಲಿ ಪ್ರಸ್ತಾಪಿಸುತ್ತಿದ್ದೇನೆ. ಈ ಮಹಾಚುನಾವಣೆಯ ಕುರಿತ ಚರ್ಚೆಯ ನಡುವೆ ಮತ್ತು ಅದರ ಪಲಿತಾಂಶದ ಆಜೂಬಾಜು ಕರ್ನಾಟಕದ ಕರಾವಳಿ ಹಾಗೂ ಉತ್ತರಕರ್ನಾಟಕದ ವಿಜಾಪುರದಲ್ಲಿ ನಡೆದ ಪ್ರತ್ಯೇಕ ಘಟನೆಗಳಿವು. ಒಂದು ಯಾರ ಒತ್ತಾಯವಿಲ್ಲದೆ ನಡೆದ ವ್ಯಕ್ತಿಗತ ನಡಾವಳಿ. ಇನ್ನೊಂದು ಬಲಾತ್ಕಾರಪೂರ್ವಕವಾದುದು. ಆದರೆ ಎರಡೂ ಘಟನೆಗಳು ಈ ದೇಶಕ್ಕೆ ‘ಒಳ್ಳೇ ದಿನ ಬಂದಿಲ್ಲ ಮತ್ತು ಬರುವುದಕ್ಕೂ ಬಿಡಲಾಗುವುದಿಲ್ಲ’ ಎಂಬುದನ್ನೇ ಸಾರಿ ಹೇಳುತ್ತಿವೆ. ಈ ಎರಡೂ ಘಟನೆಗಳು ಅತ್ಯಂತ ದುರ್ಬಲರಿಗೆ ಸಂಬಂಧಿಸಿದವುಗಳಲ್ಲ. ಆದರೆ ಅವೆರಡರ ಹೂರಣವಾಗಿ ಗುಡಿ, ಗದ್ದುಗೆ, ಮಡಿ-ಮೈಲಿಗೆಗಳಿಂದ ಸುತ್ತಿಕೊಂಡ ಈ ದೇಶದ ಸಾಮಾಜಿಕ ಸತ್ಯವಾದ ‘ಜಾತಿ’ ಎನ್ನುವ ಮಹಾಮಾಲಿನ್ಯವೇ ಇದೆ.

ಸಂವಿಧಾನದ ಕಾವಲುಗಾರನ ವಿಪರೀತ ಸಜ್ಜನಿಕೆ

ದಿನಾಂಕ 26-5-14ರ ಪ್ರಜಾವಾಣಿಯಲ್ಲಿ ವರದಿಯಾದಂತೆ ಬಿಜಾಪುರದ ಸಂಸದರು ಗುಡಿಯೊಂದರ ಒಳಪ್ರವೇಶ ಮಾಡದೆ ಹೊರನಿಂತು ಕೈಮುಗಿದು ಸಜ್ಜನಿಕೆ ಮೆರೆದಿದ್ದರು. ramesh_jigajinagiಅಷ್ಟೇ ಅಲ್ಲ ಹಿಂದೆ ಶಾಸಕ, ಸಚಿವ, ಸಂಸದನಾಗಿದ್ದ ದಿನದಿಂದಲೂ ಹೀಗೆಯೇ ಮಾಡುತ್ತಿರುವುದಾಗಿಯೂ, ಅದಕ್ಕೆ ತನ್ನ ತಾಯಿ ‘ದಲಿತರಾದ ತಾವುಗಳು ಗುಡಿಪ್ರವೇಶಮಾಡಿ ಮೇಲ್ಜಾತಿಯ ಮನಸ್ಸಿಗೆ ನೋವುಂಟುಮಾಡಬಾರದು’ ಎಂದಿದ್ದ ಸೂಚನೆಯೆ ಕಾರಣವೆಂದೂ ಸ್ಪಷ್ಟೀಕರಣ ನೀಡಿದ್ದರು. ಇದು ಸಂವಿಧಾನಬದ್ಧವಾದ ಮೀಸಲು ಕ್ಷೇತ್ರದಿಂದ ಆಯ್ಕೆಯಾದ ಸಂಸದರೊಬ್ಬರು, ಅಸಮಾನತೆಯ ಸಾಮಾಜಿಕ ಚರಿತ್ರೆಗೆ ಬದಲಾವಣೆ ತರುವ ದಿಸೆಯಲ್ಲಿ ಚಿಂತಿಸಬೇಕಾದವರೊಬ್ಬರು, ಸಂವಿಧಾನದ ವೈಜ್ಞಾನಿಕ ಮನೋಧರ್ಮದ ಆಶಯಕ್ಕೆ ಬದ್ಧವಾಗಿರಬೇಕಾದವರೊಬ್ಬರು ನಡೆದುಕೊಂಡ ಬಗೆ. “ಗುಡಿ ಪ್ರವೇಶಮಾಡಿ ಸವರ್ಣಿಯರ ಮನಸ್ಸು ನೋಯಿಸಬೇಡ” ಎಂದು ತಾಯಿ ಬೋಧಿಸಿದ ಭೂತಸಂವಿಧಾನವನ್ನು ಪಾಲಿಸಿ, ದೇಶದ ಸಂವಿಧಾನ ಮತ್ತು ಪ್ರಜಾತಂತ್ರವನ್ನು ಅವರು ಧಿಕ್ಕರಿಸಿದ್ದರು. ಮಂತ್ರಿಯಾಗಿದ್ದ ದಿನದಿಂದಲೂ ಇದೇ ಸಂಭಾವಿತತನದಲ್ಲಿ ನಡೆದುಕೊಂಡುದಾಗಿ ಹೇಳಿಕೊಂಡ ಅವರ ನಡತೆ, ಊಳಿಗಮಾನ್ಯ ಮತ್ತು ಪುರೋಹಿತಶಾಹಿ ಜಂಟಿ ಒಡೆತನಕ್ಕೆ ಪ್ರಿಯವಾದ ಸನ್ನಡತೆಯೇ. ಅದರಲ್ಲಿ ಅನುಮಾನವಿಲ್ಲ. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಳವರ್ಗಕ್ಕೆ ಸೇರಿದ ಸಂಸದನೊಬ್ಬ ತನ್ನದೇ ವರ್ಗದ ಮಿಕ್ಕವರಿಗೂ ಹಾಕಿಕೊಡುವ ಈ ಸಂಭಾವಿಕೆಯ ಮೇಲ್ಪಂಕ್ತಿ ಅಪಾಯಕಾರಿಯಾದುದು. ಇದು ಸಂವಿಧಾನವನ್ನು ಕಾಯಬೇಕಾದವನ ಸಜ್ಜನಿಕೆ ಅಲ್ಲವೇ ಅಲ್ಲ. ಇದು ಜನತಂತ್ರದ ಸಮಬಾಳಿನ ಆಶಯವನ್ನೇ ಮಣ್ಣುಪಾಲಾಗಿಸುವಂಥದ್ದು.

ಇನ್ನೊಂದು ನೆಲೆಯಲ್ಲಿ ಇದು ಗೋಡೆಯೊಡೆದು ಗರ್ಭಗುಡಿಯ ಒಳಗಿನಿಂದಲೇ ಕನಕನಿಗೆ ಮುಖತೋರಿದ ಉಡುಪಿ ಕೃಷ್ಣನ ಮಿಥ್ ಗೆ ಸಮೀಪವೂ ಇದೆ. ಕೃಷ್ಣ ಗೋಡೆಗೆKanakadasa_art ಆಧಾರವಾದ ನೆಲಗಟ್ಟಿನ ಆಯ(ಒಳಾಂಗಣ)ದಿಂದ ಕೆಳಕ್ಕಿಳಿಯದೆ, ಯಾವುದನ್ನೂ ಉಲ್ಲಂಘಿಸದೆ (ಧರ್ಮಗ್ಲಾನಿಯಾಗದಂತೆ) ಕನಕನಿಗೆ ದರ್ಶನದ ಅವಕಾಶ ಮಾಡಿಕೊಟ್ಟ. ಕನಕನೂ ಒಳಹೋಗಿಲ್ಲ. ಮಾನ್ಯ ಸಂಸದರು ಮಾಡಿದ್ದೂ ಇದನ್ನೇ. ಸಂಸದ ರಮೇಶ ಜಿಗಜಿಣಗಿ ತನಗೆ ಓಟು ಹಾಕಿದ ಮೇಲ್ಜಾತಿಯ ಜನ ಏನೂ ಅಂದುಕೊಳ್ಳಲು ಅವಕಾಶವಿರದಂತೆ ದೇಗುಲದ ಹೊರಗೇ ನಿಂತು ದೇವರು ಮತ್ತು ದೇವಸಂಜಾತರಿಬ್ಬರನ್ನೂ ಖುಷಿಪಡಿಸಿದರು. ಹೀಗೆ ದೇವರ ಸ್ಥಾನದಲ್ಲಿದ್ದ ಕೃಷ್ಣ, ಜನಪ್ರತಿನಿಧಿಯ ಸ್ಥಾನದಲ್ಲಿದ್ದ ಜಿಗಜಿಣಗಿ, ಈ ಇಬ್ಬರೂ ಒಂದೇ ರೀತಿ ನಡೆದುಕೊಳ್ಳುವಂತೆ ನಿಯಂತ್ರಿಸಿದ ಶಕ್ತಿ ಮಾತ್ರ ಎರಡೂ ಕಾಲಕ್ಕೆ ಒಂದೇ ಎಂಬುದು ಮುಖ್ಯ. ಅದಕ್ಕೆ ದೇವರು ಮತ್ತು ಜನಪ್ರತಿನಿಧಿ ಇಬ್ಬರನ್ನೂ ಧರ್ಮಸಂಸ್ಥಾಪನೆಗಾಗಿ ಹೇಗೆ ದುಡಿಸಿಕೊಳ್ಳಬೇಕೆಂಬುದು ಚನ್ನಾಗಿಯೇ ಗೊತ್ತು.

ಯಮನ ಮನುಷ್ಯರೇ ಮೇಲು

ಕಾಕತಾಳೀಯವಾಗಿ ಈ ಘಟನೆಗೆ ಸ್ವಲ್ಪ ಮೊದಲು ಉಡುಪಿಯ ಕೃಷ್ಣದೇಗುಲದಲ್ಲಿ ಯಾವಾಗಲೂ ಆಗುತ್ತಿರುವಂತೆಯೇ ಪಂಕ್ತಿಭೇದದ ಇನ್ನೊಂದು ಘಟನೆ ಸುದ್ಧಿಯಾಯಿತು. ಅದು ಊಟಕ್ಕೆ ಕುಳಿತ ಹೆಣ್ಣುಮಗಳೊಬ್ಬಳನ್ನು ಹೊರಹಾಕಿದ ಸುದ್ಧಿ. ನಮ್ಮ ನಡುವಿನ ನಂಬಿಕೆಯಂತೆ ‘ಊಟಕ್ಕೆ ಕುಳಿತವರನ್ನು ಯಮನ ಮನುಷ್ಯರೂ ಊಟಮಾಡಿ ಏಳುವ ತನಕ ಕಾಯ್ತಾರಂತೆ’. ಹಾಗೆಯೇ ಹೆಣ್ಣು ಮಕ್ಕಳಿಗೆ ಸಾರ್ವಜನಿಕವಾಗಿ ಅಪಮಾನ ಮಾಡುವುದನ್ನು ಬಹುಜನರ ನಂಬಿಕೆ ಸರಿ ಎನ್ನಲಾರದು. ಆದರೆ ಆ ನಂಬಿಕೆಗಳನ್ನೇ ಸುಳ್ಳು ಮಾಡುವಂತೆ ಕೃಷಮಠದ ಬ್ರಾಹ್ಮಣರಪಂಕ್ತಿಯಲ್ಲಿ ಊಟಕ್ಕೆ ಕುಳಿತಳೆನ್ನುವ ಕಾರಣಕ್ಕೆ ಶೂದ್ರ ಹೆಣ್ಣುಮಗಳೊಬ್ಬಳನ್ನು ನಿರ್ದಾಕ್ಷಿಣ್ಯವಾಗಿ ಹೊರಹಾಕಲಾಯಿತು.

ಅಚ್ಚರಿ ಎಂದರೆ ಹಾಗೆ ಹೊರಹಾಕಿಸಿಕೊಂಡಾಕೆ ಶೂದ್ರಳಾಗಿದ್ದರೂ, ತೀರಾ ತಳವರ್ಗದವಳಲ್ಲ. ಆಕೆಯದು ಮಠವಿಲ್ಲವಾಗಿಯೂ ಮತಿಕಳೆದುಕೊಳ್ಳದ ಪ್ರಭಾವೀ ಸಮಾಜವೇ. Pankti-Bheda-alleged-at-Udupi-Sri-Krishna-Muttಅದು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ನೆಲೆಗಳಲ್ಲಿ ಸ್ಥಳೀಯವಾಗಿ ಬಲಾಢ್ಯ ಎನಿಸಿಕೊಂಡ ಜಾತಿಯೂ ಹೌದು. ಉಡುಪಿಯ ಕೃಷ್ಣದೇವಸ್ಥಾನವನ್ನೂ ಒಳಗೊಂಡು ಕರಾವಳಿಯ ಹೆದ್ದಾರಿಯುದ್ದಕ್ಕೂ ಇರುವ ಬಹುಸಂಖ್ಯೆಯ ಸ್ವಾಗತಗೋಪುರ ಹಾಗೂ ದೇಗುಲ ಕಟ್ಟಡಗಳ ಮೇಲಿರುವ ದಾನಿಗಳ ಹೆಸರು ಯಾವ ಜಾತಿಗೆ ಸೇರಿದೆಯೋ, ಅದೇ ಜಾತಿಗೆ ಆಕೆಯೂ ಸೇರಿದ್ದಳು! ಆಕೆ ಓದಿಕೊಂಡ ಸುಶಿಕ್ಷಿತ ಅಧ್ಯಾಪಕಿ ಬೇರೆ. ಇಷ್ಟಿದ್ದರೂ ಎಲೆ ಇಟ್ಟುಕೊಂಡು ಊಟಕ್ಕೆ ಕುಳಿತವಳನ್ನು ಏಕಾಏಕಿ ಎಬ್ಬಿಸಿ ಹೊರಕಳಿಸಲಾಗಿತ್ತು. ಪ್ರವೇಶ ನಿರಾಕರಿಸಲ್ಪಟ್ಟ ಕನಕನ ಸಂದರ್ಭದಲ್ಲಾದಂತೆ ಇಲ್ಲಿ ಕೃಷ್ಣ ಗೋಡೆಯೊಡೆಯಲಿಲ್ಲ. ಆದರೆ ಸಾರ್ವಜನಿಕವಾಗಿ ಈ ಕುರಿತು ಸಾಕಷ್ಟು ಚರ್ಚೆ, ಪ್ರತಿಭಟನೆಗಳು ನಡೆದುವು. ಊಟದ ಪಂಕ್ತಿಯಿಂದ ಹೊರಹಾಕಲ್ಪಟ್ಟ ಹೆಣ್ಣುಮಗಳ ಜಾತಿಸಂಘಟನೆಯ ನೆಲೆಯಿಂದಲೂ ಒಂದಿಷ್ಟು ಪ್ರತಿಕ್ರಿಯೆಗಳು ಬಂದುವು. ಇದೆಲ್ಲವನ್ನೂ ಮೀರಿದ ಇನ್ನೊಂದು ವಿಚಿತ್ರವೂ ನಡೆಯಿತು. ಕುಟುಂಬದ ಹಿರೀಕರಾದ ‘ಅಜ್ಜಮಾವಂದಿ’ರನ್ನೇ ತಮ್ಮಪಾಲಿನ ದೈವಗಳೆಂದು ಭಾವಿಸಿ, ಪಾದಪೂಜೆಯಂತಹ ಅನಿಷ್ಠ ಸಂಪ್ರದಾಯದಿಂದ ಮುಕ್ತವಾಗಿ, ಗುರುವಿಲ್ಲದೆಯೂ ಗುರಿತಪ್ಪದ ‘ಅಳಿಯಕಟ್ಟಿನ’ ಆ ಸಮುದಾಯದಿಂದ ಮಠಧ್ವನಿಯೊಂದು ಮೂಡಿಬಂತು!?

ವಿಚಿತ್ರವೆಂದರೆ ಆ ಧ್ವನಿ ಅಪಮಾನಿತಳಾದ ಹೆಣ್ಣಿನ ಪರ ನಿಲ್ಲುವುದಕ್ಕಿಂತ ಎಬ್ಬಿಸಿ ಕಳುಹಿದವರ ಅಮಾನವೀಯ ನಡೆಯನ್ನು ಕುರಿತ ಸಾರ್ವಜನಿಕ ಚರ್ಚೆಯನ್ನು ತಡೆಯುವ ಆಸಕ್ತಿ ತೋರಿತು! ಜೊತೆಗೆ ‘ಶೆಟ್ಟಿ ಸಮುದ್ರ’ ಎಂಬ ಹೆಮ್ಮೆಯ ಇತಿಹಾಸ ತಮ್ಮದೆಂದು ಇಂದಿಗೂ ಅಭಿಮಾನ ಪಡುತ್ತಿರುವವರ ‘ಅಭಿಮಾನದ ಸಮದ್ರ’ವನ್ನು ಮಾಯಕಮಾಡಿ ‘ಕೆರೆ’ಯಾಗಿಸಿತ್ತು. ಹೀಗೆ ಈ ಸಂದರ್ಭದಲ್ಲಿ ಆ ಅಪಮಾನಕ್ಕೆ ಸಾಂವಿಧಾನಿಕ ಪರಿಹಾರವೂ ಸಿಗಲಿಲ್ಲ. ಸಮುದಾಯದ ಧಾರ್ಮಿಕ ಮುಖವೆಂದು ಹೇಳಿಕೊಂಡು ತನ್ನ ಹುಟ್ಟಿಗೆ ಯತ್ನಿಸುತ್ತಿರುವ ಶಕ್ತಿಯೂ ತನ್ನದೇ ಮಾತೃಮೂಲೀಯ ಪರಂಪರೆಯ ಹೆಣ್ಣುಮಗಳ ಘನತೆಗೆ ಉಂಟಾದ ಕುಂದನ್ನು ಯೋಚಿಸದಂತೆ ತಡೆಯುವ ವಿಪರೀತ ಯತ್ನವನ್ನೇ ಮಾಡಿತು. ಸಮುದಾಯ ಹಿತಚಿಂತಕನೆಂದು ಘೋಷಿಸಿಕೊಳ್ಳುತ್ತಿರುವ ಈ ಮುಖ ಸಮುದಾಯದಲ್ಲಿ ಇಲ್ಲಿಯವರೆಗೆ ಇರದ ಪಾದಪೂಜೆಯ ಅನಾಗರಿಕತೆಯನ್ನು ರೂಢಿಸುತ್ತಿರುವ ಹೊತ್ತಿನಲ್ಲೇ, ಜಾತಿಶ್ರೇಷ್ಠರ ಪಂಕ್ತಿಭೇದದ ಕಾವಲಿಗೂ ಬಳಕೆಯಾಗುತ್ತಿದೆ! ಇದು ಯಾರ ಪಾಲಿನ ಒಳ್ಳೆಯ ದಿನಗಳ ಸೂಚನೆ? (ತನ್ನ ಸ್ವಾಭಾವಿಕ ಇರುವಿಕೆಯನ್ನೇ ಕಳೆದುಕೊಳ್ಳುವಂತೆ ಬಲಾತ್ಕರಿಸುತ್ತಿರುವ ಈ ಬೆಳವಣಿಗೆಯನ್ನು ಸಮುದಾಯ ಗಂಭೀರವಾಗಿ ಪ್ರಶ್ನಿಸಿಕೊಳ್ಳಬೇಕಿದೆ.)

ಹಳೆಯ ಹುಣ್ಣೂ ಹೊಸ ಪೈಲ್ವಾನರೂ

ಇವೇನೂ ಹೊಸ ಗಾಯಗಳಲ್ಲ. ಈ ಸಮಾಜದ ಹಳೆಯ ಹುಣ್ಣುಗಳೇ. ಗುಣಕಾಣದ ಈ ಹುಣ್ಣುಗಳಿಂದಾಗಿಯೇ ಸಮಾಜವು ಆಧುನಿಕಗೊಳ್ಳುತ್ತಿರುವ ಭ್ರಮೆಯ ನಡುವೆ ಗುಡಿಯ ಹೊರಗೆ ನಿಲ್ಲಬೇಕಾದವರು ಹೊರಗೇ ನಿಂತು ವಿಧೇಯತೆ ತೋರುತ್ತಿದ್ದಾರೆ. ಹೊರನಿಲ್ಲಿಸಿದ ಗುಡಿಯೊಡೆಯರಿಂದ ಸಜ್ಜನಿಕೆಯ ಶಿಪಾರಸುಪತ್ರ ಪಡೆಯುತ್ತಿದ್ದಾರೆ! ಇದಕ್ಕೆ ಬದಲಾಗಿ ಹಳೆಯದನ್ನು ಧಿಕ್ಕರಿಸಿ ಒಳಹೋದವರು ಹೊರದಬ್ಬಿಸಿಕೊಂಡು ಸಾರ್ವಜನಿಕ ಅಪಮಾನ ಅನುಭವಿಸುತ್ತಿದ್ದಾರೆ. ಈ ಹುಣ್ಣಿಗೆ ಮುಲಾಮು ಹಚ್ಚುತ್ತಾ ಆಗಾಗ ಮತ್ತೆ ಮತ್ತೆ ಗೆಬರಿ ಗುಣವಾಗದಂತೆ ಉಳಿಸುವ ತಂತ್ರಗಾರಿಕೆ ಮಾಡುವವರು ದಲಿತರ ಕೇರಿಗೆ ಭೇಟಿಕೊಡುತ್ತಾರೆ. ಕೆಳಜಾತಿಗಳಿಗೆ ದೀಕ್ಷೆಕೊಡುವ ಮಾತಾಡುತ್ತಾರೆ. ಮಾಂಸತಿನ್ನುವವರೊಂದಿಗೆ ಸಮವಾಗಿ ಕೂತು ಉಣ್ಣಲಾಗದೆಂಬುದನ್ನೂ ದ್ವಂದ್ವವಿಲ್ಲದೆ ಸಾರಿಕೊಂಡು ಬರುತ್ತಾರೆ. ನಾವೆಲ್ಲರೂ ಒಂದೇ ಎನ್ನುತ್ತಲೇ ಶಿಷ್ಟಾಚಾರದ ಪರಂಪರೆಯನ್ನು ಮೀರಲಾಗದೆಂದೂ ಅದೇ ಉಸಿರಿನಲ್ಲಿ ಹೇಳಿ ಮುಗಿಸುತ್ತಾರೆ. ಅಷ್ಟೇ ಅಲ್ಲ, ಅದೇ ಮಾತನ್ನು ಹೊರನಿಲ್ಲಬೇಕಾದವರ ಬಾಯಿಂದಲೂ ಅವರು ಉತ್ಪಾದಿಸಬಲ್ಲರು. ವಿಧೇಯ ಸಿಪಾಯಿಗಳನ್ನು ಬೇರೆ ಬೇರೆ ರೂಪದಲ್ಲಿ ಬಿತ್ತನೆ ಮಾಡಿ ಬೆಳೆಸಿಡಬಲ್ಲರು. ಹಾಗಾಗಿಯೇ ಸಾಂವಿಧಾನಿಕ ಧ್ವನಿಯಾಗುವ ಸಂಸದನಿರಲಿ, ತಳಮೂಲ ಸಮುದಾಯದ ಮಠೀಯ ಆವೃತ್ತಿಗಳಿರಲಿ, ಎರಡೂ ಹೇಳಿಕೊಟ್ಟ ಪಾಠವನ್ನೇ ಬೇರೆ ಬೇರೆ ರೀತಿಯಲ್ಲಿ ಒಪ್ಪಿಸಿ ಯಥಾಸ್ಥಿತಿಯ ಕಾವಲಿಗೆ ನಿಲ್ಲುತ್ತಿವೆ. ಗಣತಂತ್ರವ್ಯವಸ್ಥೆಯ ಸರ್ವಮಾನ್ಯವಾದ ಸಂವಿಧಾನದ ಸಮಕ್ಷಮದಲ್ಲೇ ಎಲ್ಲವೂ ಸಾಧ್ಯವಾಗುತ್ತಿವೆ!

ಇವು ಒಂದೋ ಎರಡೋ ಜಾತಿಗಷ್ಟೇ ಸಂಭವಿಸುವ ಅಪಮಾನದ ಬಿಡಿಘಟನೆಗಳಲ್ಲ. ಇದೊಂದು ಹರಿಗಡಿಯದ ಸರಪಣಿ. ವಿರೋಧಿಸಬೇಕಾದುದು ಈ ಸರಪಣಿಯನ್ನೇ ಅಲ್ಲದೆ ಬಿಡಿತುಂಡುಗಳನ್ನಲ್ಲ. ಹಾಗಾಗಿ ಪಟ್ಟಭದ್ರರ ಹಿಡಿತಕ್ಕೆ ಪ್ರತಿಯಾಗಿ ಬಂಟರೋ, ಇನ್ನಾರೋ ತಮಗಾದ ಅನ್ಯಾಯವನ್ನು ಪ್ರತಿಭಟಿಸುವ ವೇಳೆ ತಮ್ಮಿಂದಾಗುತ್ತಿರುವ ಅನ್ಯಾಯದ ಪ್ರಾಯಶ್ಚಿತ್ತಕ್ಕೂ ತಯಾರಿರಬೇಕು. ತಮಗಿಂತ ಕನಿಷ್ಠರೆಂದು ನೀರು, ನೆಲದಿಂದ ದೂರ ಇರಿಸಿಕೊಂಡು ಬಂದವರೊಂದಿಗೆ ಒಡನಾಡುವ ಸಹತ್ವಕ್ಕೆ ತಯಾರಾಗಬೇಕು. ಉದಾಹರಣೆಗೆ ಶತಮಾನಗಳ ಕಾಲದಿಂದ ದೈವದ ಮನೆಯ ಹೊರಗೆ ನಿಂತು ದೋಲು ಹೊಡೆಯುತ್ತಾ ಇನ್ನೂ ಅಲ್ಲೇ ಕುಂತಿರುವ ಕೊರಗರಂತಹ ಮುಗ್ದರನ್ನು ಅವರು ಆಗ್ರಹಿಸುತ್ತಿರುವಂತೆಯೇ, ದೈವದಮನೆಯ ಆವರಣದೊಳಗೆ ಕೈಪ್ರಸಾದಕೊಟ್ಟು ಕರೆದುಕೊಳ್ಳುವ ಔದಾರ್ಯ ಸಾಧ್ಯವಾಗಬೇಕು. ಸಾಮಾಜಿಕ, ಆರ್ಥಿಕ, ಧಾರ್ಮಿಕವಾದ ಪಿತ್ರಾರ್ಜಿತ ಹಕ್ಕಿನ ಯಥಾಸ್ಥಿತಿಯಲ್ಲಿ ಪಲ್ಲಟ ಸಾಧ್ಯವಾಗಬೇಕು. ಇದೆಲ್ಲವನ್ನೂ ಮರೆತು ಗಂಟೆಗೆ 200 ಕಿಲೋಮೀಟರ್ ವೇಗದಲ್ಲಿ ಓಡಿಸಬಲ್ಲ ಕಾರುಗಳಿಗಾಗಿ ಹಾಸಿಬಿದ್ದ ರಸ್ತೆಯನ್ನೋ, ಎತ್ತರಕ್ಕೇರಿ ಮತ್ತೆಂದೋ ಮುರಿದು ಬೀಳುವ ಕಟ್ಟಡಗಳ ಸಂದಣಿಯನ್ನೋ ಬದಲಾದ ಭಾರತವೆಂದುಕೊಳ್ಳಲಾಗದು. ಯಾಕೆಂದರೆ ಸಾಮಾಜಿಕ ಹೊಲಸು ಮತ್ತು ಆರ್ಥಿಕ ಅಸಮಾನತೆಯಿಂದ ಪಾರಾಗುವುದಷ್ಟೇ ಬದಲಾದ ಭಾರತವನ್ನು ಕಾಣಿಸಬಲ್ಲದು.

ಆದರೆ ಮಠೀಯತೆ ಮತ್ತು ಜಢಸಾಂಪ್ರದಾಯಿಕತೆಯಲ್ಲಿ ಇಂತಹ ಕ್ರಿಯಾಗತಿಯನ್ನು ತಡೆಯುವ ಹುನ್ನಾರಗಳೇ ಇವೆ. ಅದಕ್ಕೆಂದೇ ಮಹಾಸಂಸ್ಥಾನಗಳು, parliamentಪುನರುತ್ಥಾನ, ಜೀರ್ಣೋದ್ಧಾರಗಳೆಂಬ ಹೊಸಪೈಲ್ವಾನರುಗಳ ಪಡೆಯನ್ನು ಅವು ಅಣಿಗೊಳಿಸಿಕೊಳ್ಳುತ್ತಾ ಬರುತ್ತಿವೆ. ಮೂಲಭೂತವಾಗಿ ಯಾವುದೇ ಧರ್ಮ, ಜಾತಿಯ ಸಾಂಸ್ಥಿಕಸ್ವರೂಪವು ಪ್ರತಿಷ್ಠೆಯ ಮೇಲಾಟವನ್ನು ನಡೆಸಬಹುದಲ್ಲದೆ, ಜೀವಪರತೆ, ಸಮಬಾಳಿನ ಪರವಾದ ಹೋರಾಟವನ್ನಲ್ಲ. ಅದಕ್ಕೆಂದೇ ಕುವೆಂಪು ‘ಗುಡಿ ಚರ್ಚು ಮಸೀದಿಯನ್ನು ಬಿಟ್ಟು ಹೊರಬನ್ನಿ’ ಎಂದು ಕೂಗಿ ಹೇಳಿದರು. ಯಾಕೆಂದರೆ ಯಥಾಸ್ಥಿತಿಯ ಪರವಾದ ವಿಧೇಯತೆ, ಅದರ ವಕಾಲತ್ತಿನ ಪೀಠಗಳನ್ನು ಭದ್ರಪಡಿಸುವ ಯಾವತ್ತೂ ಚಟುವಟಿಕೆಗಳು ಈ ದೇಶವನ್ನು ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್, ಜ್ಯೋತಿಭಾಪುಲೆ ಕನಸಿನ ಸಮಷ್ಟಿಹಿತದ ಭಾರತವಾಗಿಸಲಾರವು ಎಂಬ ಖಚಿತ ಅರಿವು ಅವರಿಗಿತ್ತು. ಅಂತೆಯೇ ಮೇಲಿನ ಎರಡೂ ಘಟನೆಗಳಲ್ಲೂ ಪಟ್ಟಭದ್ರರ ಹಿತಾಸಕ್ತಿಯ ಅಚ್ಚುಕಟ್ಟಾದ ಕಾವಲುಗಾರಿಕೆ ಇದೆ. ಎರಡರಲ್ಲೂ ಅಂಟೋನಿಯೋ ಗ್ರಾಮ್ಷಿ ಹೇಳುವ ಸಬಾಲ್ಟ್ರನ್(ಕಾಲಾಳುಪಡೆ)ಗಳಿವೆ. ಈ ಕಾಲಾಳು ಪಡೆಗಳ ಗಡಿಕಾವಲಿನಲ್ಲಿ ಹಾಯಾಗಿ ಮಲಗಿರುವ ಪುರೋಹಿತಶಾಹಿಯ ಪಾವಿತ್ರ್ಯದ ನಿರಾತಂಕ ನಿದ್ರೆ ಇದೆ.

ಪಾವಿತ್ರ್ಯಕ್ಕೆ ಪರಾಶಕ್ತಿ ಇಲ್ಲ

ಈ ಪಾವಿತ್ರ್ಯವಾದರೋ ಅತ್ಯಂತ ದುರ್ಬಲವಾದುದು. ದೇವರು, ದೇಗುಲ, ನೆಲ, ನೀರು ಇವೆಲ್ಲವನ್ನೂ ಮನುಷ್ಯ ಪ್ರವೇಶದಿಂದ ಕಾಯುತ್ತಾ ತಮ್ಮ ಪಾವಿತ್ರ್ಯವನ್ನು ರಕ್ಷಿಸಿಕೊಂಡಿದ್ದೇವೆ ಎಂದು ಬೀಗುವವರು ಗಮನಿಸಲೇಬೇಕಾದ ಪುಟ್ಟ ಪ್ರಕರಣವೊಂದು ಬೆಳಗೆರೆ ಕೃಷ್ಣಶಾಸ್ತ್ರಿಗಳ ‘ಯೇಗ್ದಾಗೆಲ್ಲಾ ಐತೆ’ ಕೃತಿಯಲ್ಲಿದೆ. ಪಾವಿತ್ರ್ಯದ ದುರ್ಬಲತೆಯ ಜೊತೆಗೆ ಅದರ ಕ್ರೌರ್ಯವನ್ನೂ ಮನಮುಟ್ಟುವಂತೆ ಹೇಳುವ ಆ ಭಾಗದಲ್ಲಿ, ಸಾಧಕ ಮುಕುಂದೂರು ಸ್ವಾಮಿಗಳಲ್ಲಿಗೆ ಬಂದ ಸಾಮಾನ್ಯನೊಬ್ಬ ಅಸ್ಪೃಶ್ಯ ಹುಡುಗ ಮಾಡಿದ ಗುಡಿಪ್ರವೇಶ, ಅದರಿಂದ ದೇವರಿಗಾದ ಮಾಲಿನ್ಯ, ಅದಕ್ಕೆ ಪರಿಹಾರವಾಗಿ ಆ ದಲಿತನಿಗೆ ಮಾಡಿದ ಶಿಕ್ಷೆ ಮತ್ತು ದೇವರಿಗೆ ಮಾಡಿದ ಶುದ್ಧೀಕರಣಗಳನ್ನು ಸಂಭ್ರಮದಿಂದಲೇ ಹೇಳಿಕೊಳ್ಳುತ್ತಾನೆ. ಹೀಗೆ ತಮ್ಮಲ್ಲಿ ಸಮಾಚಾರ ನಿವೇದಿಸಿಕೊಂಡ ಆತನಿಗೆ ಕೃಷ್ಣಶಾಸ್ತ್ರಿಗಳ ಎದುರಲ್ಲೇ, “….ಅರಿಜನ ಈಶ್ವರನ ಗುಡಿಯಾಕೆ ಓದ್ಮಾಲೆ ದೇವರಿಗೆ ಸೂತ್ಕ ಆಗೈತೆ ಬಿಡು. ಅಂತೂ ಅವಂಗೆ ದಂಡ ಹಾಕಿ, ಕತ್ತೆ ಮ್ಯಾಲೆ ಮೆರವಣಿಗೆ ಮಾಡಿ, ರುದ್ರಾಭಿಷೇಕ- ಅದೂ ಇದೂ ಮಾಡಿದ ಮ್ಯಾಲೆ ದೇವರು ಸುದ್ದಾಯ್ತು ಬಿಡು” ಎಂದೆನ್ನುತ್ತಲೇ ಬಂದವನು ಸ್ವಾಮಿಗಳ ಮಾತಿಗೆ ಸಂತೋಷಪಟ್ಟು ಹೌದೆನ್ನುವಂತೆ ಸಮ್ಮತಿಸುತ್ತಾನೆ. ಆದರೆ ಅಷ್ಟಕ್ಕೇ ಮಾತು ನಿಲ್ಲಿಸದ ಸ್ವಾಮಿಗಳು ಮತ್ತೆ ಕೃಷ್ಣಶಾಸ್ತ್ರಿಗಳ ಕಡೆಗೆ ತಿರುಗಿ ನಗುತ್ತಾ, “ನೋಡಪ್ಪಾ ಒಬ್ಬ ಅರಿಜನರ ಹುಡುಗ ದೇವರ್ ಗುಡಿಯಾಕೋದ್ರೆ ಆ ದೇವರಿಗೆ ಮೈಲಿಗೆ ಬಂದು ಸೂತ್ಕ ಆಯ್ತು ಅಂದ್ಮೇಲೆ ಆ ಇಂದುಳಿದೊನ ಪೌರು ಯಂತಾದ್ದಿರಬೇಕು! ದೇವರ ಪವರಿನಿಂದ ಅವನು ಸುದ್ದ ಆಗಿ ಚೊಕ್ಕವಾಗ್ಬೇಕಪ್ಪ. ಅದು ಬಿಟ್ಟು ಅವನ ಸಕ್ತೀನೇ ದೊಡ್ಡದಾಗಿ ದೇವರೇ ಕೆಟ್ಟೋಯ್ತು ಅಂದ್ರೆ ಅದೆಂತ ದೇವ್ರು?! ಸೋಜ್ಗ ನೋಡಪ್ಪ. ಇದಕ್ಕೇನೆನ್ನಬೇಕು!” ಎಂದು ಮತ್ತೆ ಮತ್ತೆ ನಕ್ಕರಂತೆ.(ಯೇಗ್ದಾಗೆಲ್ಲಾ ಐತೆ’ ಅಭಿನವ ಪ್ರಕಾಶನ, 2010, ಪು.100). ಶುದ್ಧಾಶುದ್ಧಗಳು ಎಂತಹ ಅಪಕಲ್ಪನೆಗಳು ಎಂಬುದನ್ನು ಇದಕ್ಕಿಂತ ಸೊಗಸಾಗಿ ಬೇರೆ ಹೇಳಬೇಕಿಲ್ಲ.

ಹೀಗೆ ಪರಿಶುದ್ಧರು ತಾವೆಂದುಕೊಳ್ಳುವವರು ಮೈಲಿಗೆಯವರನ್ನು ಶುದ್ಧಮಾಡುವ ಬದಲು ತಾವೇ ಮಲಿನವಾಗುತ್ತೇವೆ ಎಂದು ಬೆಚ್ಚಿಬೀಳುತ್ತಾರೆ. ಅಷ್ಟಕ್ಕೇ ನಿಲ್ಲದೆ ತಾವು ಮಲಿನವಾದರೆ ಲೋಕ ಕೆಡುತ್ತದೆ ಎಂದೂ ಬೆದರಿಸುತ್ತಾರೆ. ಈ ನೀಚತನ ಕೊಳೆತು ನಾರುವ ಗಂಗೆಯ ಮಾಲಿನ್ಯಕ್ಕಿಂತಲೂ ಅಪಾಯಕಾರಿ. ಈ ಕಠೋರ ಮಾಲಿನ್ಯದ ಹೂರಣ ದುರ್ಬಲವಾದ ಮಡಿಯ ಕೆಸರೇ. ಮೌಢ್ಯ ಮತ್ತು ಹಿತಾಸಕ್ತಿಗಳ ಮುಷ್ಟಿಯಲ್ಲಿ ಸಿಕ್ಕು ಕಿಲುಬುಗೊಂಡ ಪುರಾಣದ ಪರಿಶುದ್ಧ ಗಂಗೆಯಂತೆ, ಸಮಾಜಗಂಗೆಯೂ ಈ ಪಾವಿತ್ರ್ಯದಿಂದಲೇ ಪರಿತಪಿಸುತ್ತಿದೆ. ಹಾಗಾಗಿ ಗಂಗೆಯ ಪಾತ್ರವನ್ನು ತುಂಬಿಕೊಂಡ ಹೂಳೆತ್ತಿದಂತೆ ಸಮಾಜಗಂಗೆಯ ಒಡಲಿಗಂಟಿದ ‘ಮಡಿ’ ಎಂಬ ಹೊಲಸನ್ನು ಮೊದಲು ತೆರವು ಮಾಡಬೇಕಿದೆ. ಮೈಲಿಗೆಯ ಪವರಿಗೆ ಕೆಡುವ ದೇವರನ್ನೆಸೆದು ಮಡಿಯಿಲ್ಲದ ದೇವರನ್ನು ಸಾಧ್ಯವಾಗಿಸಿಕೊಳ್ಳಬೇಕಿದೆ. ಅಲ್ಲಿಯ ತನಕ ಮಡಿಯ ಕಾವಲಿಗೆ ನಿಂತ ಪಡೆಯ ಪಹರೆಯಲ್ಲಿ ಊಟದ ಪಂಕ್ತಿಯಿಂದ ಉಚ್ಛಾಟಿಸಿಕೊಳ್ಳುವ ಹಣೆಬರಹ, ಪಾರ್ಲಿಮೆಂಟ್ ಭವನವನ್ನು ಹೊಕ್ಕೂ ಗುಡಿಯಿಂದ ಹೊರಗುಳಿಯುವ ಸಜ್ಜನಿಕೆಗಳ ‘ಗತಭಾರತ’ ಹೀಗೆ ನಿರ್ಲಜ್ಜವಾಗಿ ಮೈತೆರೆದುಕೊಂಡಿರುತ್ತದೆ.

ಇಂತಿ ನಮಸ್ಕಾರಗಳು : ಎರಡು ಅಗಾಧ ಪ್ರತಿಭೆಗಳ ಸೃಜನಶೀಲ ನಿರೂಪಣೆ


– ಡಾ.ಎಸ್.ಬಿ. ಜೋಗುರ


 

ಇಬ್ಬರು ಪ್ರಖರ ಪಂಡಿತರ ಸಹವಾಸದಲ್ಲಿ ರೂಪಗೊಳ್ಳುವ ಆಲೋಚನೆಗಳು ಮತ್ತು ಕ್ರಿಯಾಶೀಲತೆಯ ಸೆಳಕು ಯಾವ ಬಗೆಯ ಕಥನ ಕಲೆಗೆ ನೆರವಾಗಬಲ್ಲದು ಎನ್ನಲಿಕ್ಕೆ “ಇಂತಿ ನಮಸ್ಕಾರಗಳು” ಎನ್ನುವ ಕೃತಿಯೇ ಸಾಕ್ಷಿ. ನಟರಾಜ ಹುಳಿಯಾರ ಇಲ್ಲಿಯವರೆಗೆ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಅವರ ಬಹುತೇಕ ಬರವಣಿಗೆಗಳು ಲಂಕೇಶ ಮತ್ತು ಡಿ.ಆರ್.ನಾಗರಾಜರ ಆಲೋಚನೆಯ ರೀತಿ ಮತ್ತು ಬರವಣಿಗೆಯ ಪ್ರಭಾವವನ್ನು ಮತ್ತೆ ಮತ್ತೆ ನೆನಪು ಮಾಡಿಕೊಡುತ್ತವೆ. ಅವರ “ಗಾಳಿ ಬೆಳಕು” ಕೃತಿ ಲಂಕೇಶರ ಗದ್ಯವನ್ನು ತಟ್ಟನೇ ಜ್ಞಾಪಿಸುತ್ತದೆ. “ಇಂತಿ ನಮಸ್ಕಾರಗಳು” ಪಿ.ಲಂಕೇಶ ಮತ್ತು ಡಿ.ಆರ್.ನಾಗರಾಜ ಅವರ ಒಡನಾಟದ ಬಗೆಗಿನ ಒಂದು ಸೃಜನಶೀಲ ಕಥಾನಕ ಎಂದು ಹೇಳಬಹುದಾದರೂ ಆ ಹೇಳಿಕೆಯನ್ನು ಮೀರಿಯೂ ಈ ಕೃತಿ ಇಬ್ಬರು ದಿಗ್ಗಜರ ನಡುವಿನ ಚಕಮಕಿಯ ಕಾವು..ಕಿಡಿ..ಬೆಳಕಿನ ದರ್ಶನವನ್ನು ಮಾಡಿಸಿಕೊಡುತ್ತದೆ. [ಹೊಗೆ ತೀರಾ ಕಡಿಮೆ] ನಟರಾಜರಿಗೆ ಲಂಕೇಶರಾಗಲೀ.. ಡಿ.ಆರ್ ಆಗಲೀ ಗುರುವಿನ ಸ್ಥಾನದಲ್ಲಿದ್ದವರು. ಅವರಿಬ್ಬರು ಮಾತಾಡಲು ಬಾಯಿ ಬಿಟ್ಟರೆ ಸಾಕು ಕಣ್ಣಗಲಿಸಿ, ಕಿವಿ ತೆರೆದು ಅತ್ಯಂತ ಜಾಗೃತವಾಗಿ ಅವರು ಕೇಳಲು ಕುಳಿತುಕೊಳ್ಳುತ್ತಿದ್ದ ಕಾರಣಕ್ಕೆ ಹೀಗೆ ಅವರೊಂದಿಗಿನ ಒಡನಾಟ ಬೆಚ್ಚಗಿನ inti-namaskaragalu-coverಭಾವ ಸ್ಫುರಿಸುವ ಆಪ್ತ ಬರವಣಿಗೆಯಾಗಿ ಮೈದಾಳಿದೆ. ನಟರಾಜ ಲಂಕೇಶರನ್ನು ತೀರಾ ಹತ್ತಿರದಿಂದ ಬರೀ ಬಲ್ಲವರು ಮಾತ್ರವಾಗಿರದೇ ಅವರ ಒಳಹೊರಗಣ ನಿಲುವನ್ನು ಅರಿತವರು ಹೀಗಾಗಿಯೇ ಅವರ ತೀರಾ ಸೂಕ್ಷ್ಮಾತಿಸೂಕ್ಷ್ಮ ಗುಣಗಳನ್ನು ಸಹ ಗ್ರಹಿಸಿದವರು. ಲಂಕೇಶ ಒಂದು ಸಂಕೀರ್ಣವಾದ ವ್ಯಕ್ತಿತ್ವ ಇಂಥವರು ಹೊರಗೆ ಮಾತ್ರ ಕಲಿಯದೇ ಒಳಗೂ ನೋಡಿ ಕಲಿಯುತ್ತಾರೆ ಎನ್ನುವುದು ಲೇಖಕರ ಮಾತು. ಲಂಕೇಶರ ’ದೇಶಭಕ್ತ ಸೂಳೆಮಗನ ಗದ್ಯಗೀತೆ’ಯನ್ನು ಉಲ್ಲೇಖಿಸಿ ’ಸೂಳೆಮಗನೇ, ನಿನ್ನನ್ನು ಕರೆದರೆ ನನ್ನನ್ನೇ ಕರೆದಂತಾಗುತ್ತದೆ’ ಎಂಬ ಸಾಲಿನಲ್ಲಿರುವ ಸ್ವವಿಮರ್ಶೆಯ ಪ್ರಜ್ಞೆಯಿಂದ ಅನ್ಯವನ್ನು ನೋಡಲು ಕಲಿತು, ನಮ್ಮಂಥವರಿಗೂ ಕಲಿಸಿದವರು ಲಂಕೇಶ.

ಲಂಕೇಶರಿಗೆ ಕವಿ ಯೇಟ್ಸ್ ಹೇಳುವ ’ಉತ್ತಮರಿಗೆ ಯಾವ ನಂಬುಗೆಯೂ ಇಲ್ಲ; ನೀಚರು ಮಾತ್ರ ತೀವ್ರ ಉತ್ಸಾಹದಲ್ಲಿದ್ದಾರೆ’ ಎನ್ನುವ ಮಾತಿನಲ್ಲಿ ನಂಬುಗೆಯಿದ್ದಂತಿತ್ತು. ಹಾಗಾಗಿಯೇ ಅವರು ಮತ್ತೆ ಮತ್ತೆ ಮನುಷ್ಯನಲ್ಲಿಯ ಕೇಡಿತನದ ಬಗ್ಗೆ ಯೋಚಿಸುತ್ತಿದ್ದರು.. ಬರೆಯುತ್ತಿದ್ದರು. ಚುನಾವಣೆಯ ಸಂದರ್ಭದಲ್ಲಿ ದೇವೇಗೌಡರು ಹಗಲು ರಾತ್ರಿ ನಿದ್ರಿಸದೇ ಕೆಲಸ ಮಾಡುವುದನ್ನು ಗಮನಿಸಿ, ಪತ್ರಿಕೆಯಲ್ಲಿ “ರಾಕ್ಷಸರು ನಿದ್ರಿಸುವದಿಲ್ಲ” ಎನ್ನುವ ಶೀರ್ಷಿಕೆಯಡಿ ಒಂದು ಲೇಖನವನ್ನೇ ರೂಪಿಸಿದ ಲಂಕೇಶರು ‘ಕೇಡು ಕೆಲ ಬಾರಿ ದಕ್ಷತೆಯಿಂದ ಕೂಡಿದಾಗ ಆಕರ್ಷಕವಾಗಿ ಕಾಣುತ್ತದೆ’ ಎನ್ನುತ್ತಿದ್ದರು. ಲಂಕೇಶರು ತಮ್ಮ ಜೀವನದ ಕೊನೆಯ ಘಟ್ಟದಲ್ಲಿ ಬರೆದ “ಹುಳಿಮಾವಿನ ಮರ” ಎಂಬ ಆತ್ಮಚರಿತ್ರೆ ಸತ್ಯದೊಂದಿಗೆ ನಿಷ್ಟುರವಾಗಿ ಮುಖಾಮುಖಿಯಾಗುವ ಯತ್ನದಂತಿದೆ. ಹಾಗಾಗಿಯೇ ಲೇಖಕ ನಟರಾಜರು ಅದರ ಹಸ್ತಪ್ರತಿಯನ್ನು ಓದುವಾಗಲೇ ಅದೊಂದು ಮಹತ್ತರವಾದ ಕೃತಿ ಎಂದು ಶರಾ ಎಳೆದಿರುವುದಿತ್ತು. ಖಾಲಿ ತಲೆಯ ಮನುಷ್ಯನೊಬ್ಬ ಹೆಚ್ಚೆಚ್ಚು ನೀಚನಾಗುತ್ತಾನೆ ಹಾಗೆಂದು ಅವನನ್ನು ಸುಧಾರಿಸುವ ನಿಟ್ಟ್ತಿನಲ್ಲಿ ಒಬ್ಬ ಹೀರೋ ಬರಬೇಕೆಂಬ ಇಲ್ಲವೇ ಅವನನ್ನು ಸೃಷ್ಟಿಸಿ ಈ ನೀಚರ ಮುಂದೆ ನಿಲ್ಲಿಸಿ ಅವರಲ್ಲಿ ಉದಾತ್ತತೆಯನ್ನು ತುಂಬಬೇಕೆಂಬ ಹಂಬಲ ಲಂಕೇಶರ ಬರವಣಿಗೆಗಿರಲಿಲ್ಲ. ಬದಲಾಗಿ ಈ ಖಾಲಿ ಇರುವಾತನೂ ತನ್ನನ್ನು ತಾನು ಸಂಪೂರ್ಣವಾಗಿ ತೊಡಗಿಸಿಕೊಂಡು ಕ್ರಿಯಾಶೀಲತೆಯನ್ನು ಮೆರೆಯುವ ಬಗ್ಗೆ ಲಂಕೇಶರಿಗೆ ನಂಬುಗೆಯಿತ್ತು. ಹಾಗೆಂದು ಲಂಕೇಶರು ಮನುಷ್ಯ ಸಂಪೂರ್ಣವಾಗಿ ಕೇಡಿನಿಂದ ಬಿಡುಗಡೆ ಹೊಂದಬಲ್ಲ ಎಂದು ನಂಬಿದವರಲ್ಲ.

1980 ರ ಸಂದರ್ಭದಲ್ಲಿ ಲಂಕೇಶರು ಪತ್ರಿಕೆಯನ್ನು ಹುಟ್ಟು ಹಾಕುವ ಮೂಲಕ ಕನ್ನಡ ನಾಡಿನ ಜನತೆಯನ್ನು ಸದಾ ಜಾಗೃತವಾಗಿಡುವ ನಿಟ್ಟಿನಲ್ಲಿ ಯತ್ನಿಸಿದರು. lankeshಒಂದು ವಾರಪತ್ರಿಕೆಯ ಬರುವಿಕೆಗಾಗಿ ಪ್ರತಿ ಬುಧವಾರ ದೂರದ ಊರುಗಳಲ್ಲಿ ಅಪಾರ ಸಂಖ್ಯೆಯ ಓದುಗರು ಕಾಯುವಂತೆ ಮಾಡಿದ್ದು ಬಹುಷ: ಲಂಕೇಶರು ಮಾತ್ರ. ಅದನ್ನೇ ನಟರಾಜ ಅವರು ಹೀಗೆ ಹೇಳುತ್ತಾರೆ: ‘1980 ಜುಲೈ ತಿಂಗಳಿನಿಂದ 2000 ನೇ ಇಸವಿಯ 24 ನೇ ಜನೆವರಿಯವರೆಗೆ ಸುಮಾರು ಇಪ್ಪತ್ತು ವರ್ಷಗಳ ಕಾಲ ಸಂಪಾದಿಸಿದ ತಮ್ಮ ಪತ್ರಿಕೆಯ ಮೂಲಕ ಕರ್ನಾಟಕದ ಚರಿತ್ರೆಯಲ್ಲಿ ನಿರಂತರವಾಗಿ ಮತೀಯ ಮೂಲಭೂತವಾದಿಗಳ ವಿರುದ್ಧ ಧ್ವನಿಯೆತ್ತಿ ಜಾತ್ಯಾತೀತತೆಯ ಪಾಠ ಹೇಳಿಕೊಟ್ಟವರು ಲಂಕೇಶ. ಜಾತೀಯತೆ ಭ್ರಷ್ಟತೆ, ಹಿಪೊಕ್ರಸಿ ಮತ್ತು ನಮ್ಮ ಸುತ್ತಲೂ ಸೃಷ್ಟಿಯಾಗುವ ನರಕಗಳ ಬಗ್ಗೆ ಅನೇಕ ಬಗೆಯ ಎಚ್ಚರ ಮೂಡಿಸಿದ ಲಂಕೇಶರ ಬಗ್ಗೆ ಕನ್ನಡನಾಡಿನ ಮುಸ್ಲಿಂ, ದಲಿತ, ಪ್ರಗತಿಪರ ವರ್ಗಗಳಲ್ಲಿ ತಬ್ಬಲಿ ಜಾತಿಗಳ ಸೂಕ್ಷ್ಮಜ್ಞರಲ್ಲಿ ಇವತ್ತಿಗೂ ಅಪಾರ ಕೃತಜ್ಞತೆಯಿರುವದು ಅಚ್ಚರಿಯ ವಿಷಯವಲ್ಲ. ಕನ್ನಡದಲ್ಲಿ ಜನಪ್ರಿಯ ಪತ್ರಿಕೆಗಳನ್ನು ನಡೆಸಿದವರ ಪೈಕಿ ಲಂಕೇಶರಷ್ಟು ಭಿನ್ನ ಮತೀಯ ನಿಲುವು ತಳೆದವರು ಇಲ್ಲವೇ ಇಲ್ಲ’ ಎನ್ನುವ ಅವರ ಮಾತು ಸರ್ವಕಾಲಿಕ ಸತ್ಯ. ಈ ಸಂದರ್ಭದಲ್ಲಿ ಚಿಂತಕ ಪೂರ್ಣಚಂದ್ರ ತೇಜಸ್ವಿ ಲಂಕೇಶ ಪತ್ರಿಕೆ ಕುರಿತು ಆಡಿದ ಮಾತನ್ನೂ ಇಲ್ಲಿ ನೆನೆಯುವದು ಉಚಿತ. ‘ಲಂಕೇಶ ಆ ಪೇಪರನ್ನು ಹೇಗೆ ಕ್ರಿಯೇಟ್ ಮಾಡಿದರೆಂದರೆ you can throw anything. It will digest. ಹೀಗೆ ಒಟ್ಟು human situation ಆಗಿ develop ಆಗ್ತಾ ಬಂತು.. You see every writer will have his own concept of audience. ಸಡನ್ನಾಗಿ ಯಾರಾರೋ ಸೈಕಲ್ ಶಾಪಿನವರು, ಬೀಡಿ ಅಂಗಡಿಯವರು ನನ್ನ ಕತೇನ ಓದೋಕೆ ಶುರು ಮಾಡಿದರು. ಅಂಥವರೆಲ್ಲ ನನ್ನ ಕತೆ ಓದುತ್ತಾರೆ ಅನ್ನೋದೇ ಮುಖ್ಯ ಅಂತಲ್ಲ. But psychologically there was a shift of audience. ಹೀಗೆ ಒಂದರಿಂದ ಇನ್ನೊಂದಕ್ಕೆ ಶಿಫ಼್ಟಾದ್ದರಿಂದ ಹೊಸ ಛಾಲೆಂಜ್‌ಗಳು ಎದುರಾದವು. ಅಲ್ಲಿಯತನಕ ಸಭೆಗಳು ಸೆಮಿನಾರ್ ಗಳಲ್ಲೇ ಇದ್ದ ಆಡಿಯನ್ಸ್ ಕಲ್ಪನೆ ಬದಲಾಯ್ತು.’ [ಹೊಸ ವಿಚಾರಗಳು-ಪು-736]

ಲಂಕೇಶರ ಜೊತೆ ಜೊತೆಗೆ ಮತ್ತು ಆನಂತರವೂ ಅನೇಕರು ಗದ್ಯ ಬರವಣಿಗೆಯನ್ನು ಮಾಡಿರುವದಿದೆ. ಆದರೂ ಯಾರಿಗೂ ಲಂಕೇಶರನ್ನು ಮೀರುವದು ಸಾಧ್ಯವಾಗಲಿಲ್ಲ ಎನ್ನುವ ಸತ್ಯವನ್ನು ಲೇಖಕರು ಸರಿಯಾಗಿಯೇ ಗುರುತಿಸಿದ್ದಾರೆ. ಕೇವಲ ಜೇಮ್ಸ್ ಜಾಯ್ಸ್ ಮಾತ್ರವಲ್ಲ ಲಂಕೇಶ ಕೂಡಾ ಯಾವ ಗಳಿಗೆಯಲ್ಲೂ ನಿದ್ರಿಸದ ಗದ್ಯ ಭಾಷೆಯನ್ನು ಪರಿಚಯಿಸಿದರು. nataraj-huliyarಲಂಕೇಶರು ವಿಮರ್ಶೆಯನ್ನು ಒಂದು ವಿಶಿಷ್ಟ ಜ್ಞಾನ ಎಂದು ಕರೆದಿರುವುದು ಮಾತ್ರವಲ್ಲದೇ ಯಾವುದೇ ಬಗೆಯ ಆಟೊಮೊಬೈಲ್ ಅಧ್ಯಯನದ ಶಿಸ್ತಿಲ್ಲದೇ ಮುಸ್ಲಿಂ ಹುಡುಗರು ಗ್ಯಾರೇಜ್ ನಡೆಸುವಂತೆಯೇ ಸಾಹಿತ್ಯದ ವಿದ್ಯಾರ್ಥಿಯಾಗಿರದಿದ್ದರೂ ಸಾತತ್ಯವಾದ ಅಧ್ಯಯನದ ಮೂಲಕ ವಿಮರ್ಶಾ ಜ್ಞಾನವನ್ನು ಬೆಳೆಸಿಕೊಳ್ಳಬಲ್ಲ ಎನ್ನುತ್ತಿದ್ದರು. ಲಂಕೇಶರ ವಿಮರ್ಶೆಯನ್ನು ಓದಿ ಸಿಡಿಮಿಡಿ ಗೊಂಡ ಅನೇಕ ಲೇಖಕರಿದ್ದಾರೆ. ಸತ್ಯವೇ ಹಾಗೆ. ನಟರಾಜರು ಹೇಳುವಂತೆ ‘ಲಂಕೇಶರ ವಿಮರ್ಶಾ ಕ್ರಮದ ಬಗ್ಗೆ ಎಷ್ಟೇ ಪ್ರಶ್ನೆಗಳಿರಬಹುದಾದರೂ ಅಷ್ಟೊಂದು ವಿಮರ್ಶಾ ಒಳನೋಟಗಳನ್ನು ಕೊಟ್ಟ ಕನ್ನಡ ವಿಮರ್ಶಕರು ಯಾರೂ ಇಲ್ಲವೆಂದೇ ನನ್ನ ನಂಬಿಕೆ. ನುರಿತ ಅಕ್ಕಸಾಲಿಗನೊಬ್ಬ ಒಂದೇ ಏಟಿಗೆ ಇದು ಚಿನ್ನ..ಇದು ಕಬ್ಬಿಣ ಎಂದು ಬೇರ್ಪಡಿಸುವಷ್ಟು ಚುರುಕಾಗಿ ಅವರ ನೈತಿಕ ಕಣ್ಣು ಕೆಲಸ ಮಾಡುತ್ತಿತ್ತು.’ ಲಂಕೇಶರು ಅನೇಕರನ್ನು ವಿಮರ್ಶೆಯ ಮೂಲಕ ಮರುಮೌಲ್ಯಮಾಪನ ಮಾಡಿರುವರು ಅದಕ್ಕೆಂದೇ ನಟರಾಜ ಅವರನ್ನು ‘ಲಂಕೇಶರ ವಿಮರ್ಶಾ ಪದ್ಧತಿಯಲ್ಲಿ ಇಪ್ಪತ್ತನೇ ಶತಮಾನದ ಲೀವಿಸಿಯನ್ ಮಾರ್ಗ ಇರುವಂತೆ ಹದಿನೆಂಟನೆಯ ಶತಮಾನದ ಸ್ಯಾಮುಯಲ್ ಜಾನ್ಸನ್ ರೂಪಿಸಿದ ವಿಮರ್ಶೆಯ ಒಂದು ಎಳೆಯೂ ಇದೆ.’ ಎಂದಿರುವರು.

ಲಂಕೇಶರ ಜೊತೆ ಹರಟುವ ಸುಖ ಮತ್ತು ಖುಷಿ ಕಳೆದುಕೊಂಡವರಿಗೆ ಮಾತ್ರ ಗೊತ್ತು ಅವರು ಅನೇಕ ಸಂದರ್ಭಗಳಲ್ಲಿ ಅವರು ಹಾರಿಸುತ್ತಿದ್ದ ನಗೆಚಟಾಕಿಗಳು ಅಚ್ಚರಿ ಹುಟ್ಟಿಸುವಂತಿರುತ್ತಿದ್ದವು. ಎಸ್.ಎಲ್.ಭೈರಪ್ಪರನ್ನು ಕುರಿತು ಮಾತನಾಡುತ್ತಾ ‘ಆತ ಮುಟ್ಟಾಗಿ ಮೂರು ದಿನ ಹೊರಗೆ ಕೂರುವ ಹೆಂಗಸರಿಗೆ ತಕ್ಕ ಹಾಗೆ ಬರೆಯುತ್ತಾನೆ.’ ವೈಯೆನ್ಕೆ ಯವರ ಬಗ್ಗೆ ಬರೆಯುತ್ತಾ ‘ವೈಯೆನ್ಕೆ ಇದು ಚಿಗುರಲಾರದ ಒನಕೆ’. ಹಾ.ಮ.ನಾಯಕರ ಬಗ್ಗೆ ಬರೆದ ‘ನಾಯಕ ನಾಯಕ ನಾಯಕ/ ಜನ ಫ಼ಕ ಫ಼ಕ/ ನಗಲು ಸಹಾಯಕ’. ಹುಳಿಯಾರರು ಲಂಕೇಶರ ಜೊತೆಯಲ್ಲಿ ಒಂದು ಸಂಜೆ ಹರಟೆಯಲ್ಲಿ ತೊಡಗಿದಾಗಿನ ಘಟನೆಯನ್ನು ನೆನೆದು ಬರೆಯುತ್ತಾರೆ, ‘ಒಬ್ಬ ವ್ಯಕ್ತಿ ಮಾಧ್ವನೋ..ಸ್ಮಾರ್ತನೋ ಎಂಬ ಸಣ್ಣ ಕುತೂಹಲಕ್ಕೊಳಗಾದೆ. ನನಗೆ ಅದೇ ಆಗ ಬ್ರಾಹ್ಮಣರಲ್ಲಿ ಮಾದ್ವ ಸ್ಮಾರ್ತ ಎಂಬ ಉಪಪಂಗಡಗಳ ಬಗ್ಗೆ ತಿಳುವಳಿಕೆ ಬರತೊಡಗಿತ್ತು. ನನ್ನ ಗೊಂದಲ ಕಂಡು ನಕ್ಕ ಲಂಕೇಶ ಅದನ್ನು ತಿಳಿಯೋದು ಬಹಳ ಸಿಂಪಲ್ ಕಣಯ್ಯಾ. ಮಾಧ್ವರಿಗೆ ಉಬ್ಬು ಹಲ್ಲಿರುತ್ತೆ ಅಂದರು.’ ಲಂಕೇಶ ಒಂದು ದೈತ್ಯ ಪ್ರತಿಭೆ. ಜಾಗತಿಕ ಮಟ್ಟzಲ್ಲಿ ಗುರುತಿಸಬಹುದಾದ ಪ್ರತಿಭೆ. ಸಿನೇಮಾ, ನಾಟಕ, ಕತೆ, ಕಾದಂಬರಿ, ಕಾವ್ಯ, ವಿಮರ್ಶೆ, ಪತ್ರಿಕೆ ಹೀಗೆ ಹತ್ತಾರು ವಲಯಗಳಲ್ಲಿ ಸಮರ್ಥರಾಗಿ ಕೈಯಾಡಿಸಿದ ಲಂಕೇಶರಿಗೆ ಲೇಖಕರು ಸ್ವರಕದಲ್ಲಿ ಡಿ.ಆರ್.ಮೂಲಕ ಹೇಳಿಸಿದ ‘ಕಾರ್ನಾಡ್‌ಗೆ ಬಂದಿದ್ದ ಜ್ಞಾನ ಪೀಠ ನಿಮಗೇ ಬಂದಿದ್ದರೆ..’ ಎನ್ನುವ ಮಾತಿನಲ್ಲಿ ಅದೆಷ್ಟು ಸತ್ಯವಿದೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಲಂಕೇಶರ ಬಗ್ಗೆ ಲೇಖಕರಲ್ಲಿ ಅಪಾರವಾದ ಅಭಿಮಾನವಿದೆ, ಹಾಗಾಗಿಯೇ ಕೆಲ ಕಡೆ ಹೊಗಳಿಕೆ ತೀರಾ ಸಾಂದ್ರವೆನಿಸುತ್ತದೆ. ಆದರೂ ಅತಿಯಾಗಿಲ್ಲ.

ಇನ್ನು ನಟರಾಜರ ಪಿ.ಎಚ್.ಡಿ. ಗುರು ಡಿ.ಆರ್.ನಾಗರಾಜ ಇನ್ನೊಂದು ಅಪರೂಪದ ಪ್ರತಿಭೆ. ಅವರೊಂದಿಗಿನ ಒಡನಾಟದ ಬಗ್ಗೆಯೂ ಲೇಖಕರು ಅನೇಕ ವಿಷಯಗಳನ್ನು ಬರೆದಿರುವರು. ಸ್ವತ: ಲಂಕೆಶರು ಡಿ.ಆರ್. ಕುರಿತು ಮಹಾನ್ ಬುದ್ಧಿವಂತ ಎನ್ನುವ ಮಾತುಗಳಿದ್ದವು. ಅವರಿಬ್ಬರ ನಡುವಿನ ಸೈದ್ಧಾಂತಿಕ ವಾಗ್ವಾದವನ್ನು ಕೇಳುವದೇ ಒಂದು ದೊಡ್ದ ಖುಷಿ. ಆ ಕೊರತೆಯನ್ನು ನಟರಾಜ ಈಗಲೂ ಅನುಭವಿಸುವ ಬಗ್ಗೆ ಹೇಳಿರುವದಿದೆ. ಡಿ.ಆರ್ ನಾಗರಾಜರ ಬರವಣಿಗೆಯಲ್ಲಿ ಒಂದು ಬಗೆಯ ಗಟ್ಟಿತನವಿರುತ್ತಿತ್ತು. ಅದಕ್ಕೆ ಸಾಕ್ಷಿಯಾಗಿ ನಮ್ಮೆದುರು “ಅಮೃತ ಮತ್ತು ಗರುಡ”, “ಸಾಹಿತ್ಯ ಕಥನ”, “ಸಂಸ್ಕೃತಿ ಕಥನ”, “ಅಲ್ಲಮಪ್ರಭು ಮತ್ತು ಶೈವ ಪ್ರತಿಭೆ”, ಇಂಥಾ ಭಾರವಾದ ಮೌಲಿಕ ಕೃತಿಗಳಿವೆ. ಡಿ.ಆರ್. ಅವರಲ್ಲಿ ತಾನು ಮಿಕ್ಕವರಿಗಿಂತಲೂ ಆಲೋಚನೆ ಮತ್ತು ಬರವಣಿಗೆಯಲ್ಲಿ ಭಿನ್ನವಾಗಿ ತೋರಬೇಕೆಂಬ ತುಡಿತವಿತ್ತು ಆ ಮೂಲಕವೇ ಅವರು ಸಾರಸ್ವತ ಲೋಕದ ಒಟ್ಟು ಗಮನವನ್ನು ಸೆಳೆಯಲು ಬಯಸಿದವರು. ಲಂಕೇಶ ಮತ್ತು ಡಿ.ಆರ್. ನಡುವಿನ ಮಾರ್ಗಗಳ ಬಗ್ಗೆ ಬರೆಯುತ್ತಾ ’ಡಿ.ಆರ್. ಅವರಿಗೆ ಕಷ್ಟಕರವಾದ ಸಿದ್ಧಾಂತಗಳನ್ನು ಅರಗಿಸಿಕೊಳ್ಳುವ ಹಠವಿತ್ತು. ಇದು ಬುದ್ಧಿ ಜೀವಿಗಳ ನಡುವೆ ಸಾಂಸ್ಕೃತಿಕ ನಾಯಕತ್ವ ಗಳಿಸಿಕೊಳ್ಳುವ ಏಕಮಾತ್ರ ದಾರಿ ಎಂಬ ಅರಿವೂ ಇತ್ತು. ಆದರೆ ಲಂಕೇಶ ತಮ್ಮ ಅಸಾಧಾರಣ ಪ್ರತಿಭೆ, ಗ್ರಹಿಕೆ ಹಾಗೂ ಶೂದ್ರಗನ್ನಡದ ಬನಿಯಿಂದ ನಮ್ಮನ್ನು ಗೆಲ್ಲುತ್ತಿದ್ದರು. ಇಬ್ಬರಲ್ಲೂ ವಚನಗನ್ನಡದ ಪ್ರಭಾವವಿತ್ತಾದರೂ ಲಂಕೇಶರ ಗದ್ಯಕ್ಕೆ ಹೋಲಿಸಿದರೆ ಡಿ.ಆರ್. ಬರವಣಿಗೆ ತಾಂತ್ರಿಕ ಪರಿಕಲ್ಪನೆಗಳಿಂದ ಹುಟ್ಟುವ ಗಾಂಭೀರ್ಯದಿಂದ ಹಾಗೂ ತನ್ನ ತಾತ್ವೀಕರಣದ ಶಕ್ತಿಯಿಂದ ಹಲವೆಡೆ ಲಂಕೇಶರಿಗಿಂತ ವಿಶಿಷ್ಟವಾಗಿ ಕಾಣತೊಡಗುತ್ತದೆ. ಆದರೆ ಡಿ.ಆರ್. ಶೈಲಿಯಲ್ಲಿ ಕೃತಕತೆ ಅಲ್ಲಲ್ಲಿ ಹಣಿಕಿಕ್ಕುತ್ತದೆ’ ಎನ್ನುವ ಮಾತನ್ನು ಗಮನಿಸಿದರೆ ಲಂಕೇಶರ ಗದ್ಯದ ಗಮ್ಮತ್ತೇ ಹೆಚ್ಚು ಆಕರ್ಷಕವಾಗಿರುತ್ತಿತ್ತು ಎನ್ನುವುದನ್ನು ಒಪ್ಪಿಕೊಂಡಂತಾಗುತ್ತದೆ. ಲೇಖಕರು ತನ್ನ ಗುರುವಿನ ಬಗ್ಗೆ ಬರೆದಾಗ ನಾಗರಾಜರು ಶಿಷ್ಯನ ಅಸಹನೆಯನ್ನು ಇಟ್ಟುಕೊಂಡು ಪ್ರತಿಕ್ರಿಯಿಸಿದ ರೀತಿಯಲ್ಲಿ ಅವರಿಗೆ ತಮ್ಮ ಬಗ್ಗೆ ತಮ್ಮ ಜಾಣ್ಮೆಯ ಬಗೆಗಿದ್ದ ಆತ್ಮಭಿಮಾನದ ಪರಿಚಯವಾಗದೇ ಇರದು.

ಲಂಕೇಶ ಮತ್ತು ಡಿ.ಆರ್. ನಡುವಿನ ಸಣ್ಣ ಪುಟ್ಟ ಕಲಹಗಳ ನಡುವೆ ಲೇಖಕ ಸಿಲುಕಿ ಕಕ್ಕಾಬಿಕ್ಕಿಯಾದ ಪ್ರಸಂಗಗಳನ್ನೂ ನಟರಾಜ ಅತ್ಯಂತ ಚೆನ್ನಾಗಿ ನಿರೂಪಿಸಿದ್ದಾರೆ. ಡಿ.ಆರ್. nataraj-huliyar” ಅವರ ಕಾವ್ಯದ ಒಳನೋಟಗಳ ಬಗೆಗೆ ನಟರಾಜ ಹುಳಿಯಾರರಲ್ಲಿ ಅಪಾರವಾದ ಹೆಮ್ಮೆಯಿದೆ. ಅವರದೇ ಮಾತಿನಲ್ಲಿ ಹೇಳುವದಾದರೆ ’”ಅಲ್ಲಮಪ್ರಭು ಮತ್ತು ಶೈವ ಪ್ರತಿಭೆ” ಪುಸ್ತಕವನ್ನು ಓದತೊಡಗಿದರೆ ಇಪ್ಪತ್ತನೆಯ ಶತಮಾನದ ಕೊನೆಯ ಹೊತ್ತಿಗೆ ಡಿ.ಆರ್. ಮೂಲಕ ಕನ್ನಡ ಸಾಹಿತ್ಯ ತತ್ವ ತಲುಪಿದ ಎತ್ತರ ಹಾಗೂ ಸೂಕ್ಷ್ಮತೆಗಳನ್ನು ಕಂಡು, ಅಲ್ಲಮನ ನಿಗೂಢ ಗುಹೆ ಹೊಕ್ಕ ಡಿ.ಆರ್. ಎಂಬ ಗುಹೇಶ್ವರನ ಎದುರು “ಇದಕಂಡು ಬೆರಗಾದೆ ಗುಹೇಶ್ವರಾ!” ಎಂದು ವಿಸ್ಮಯದಿಂದ ನಿವೇದಿಸಿಕೊಳ್ಳಬೇಕೆನಿಸುತ್ತದೆ.’ ಮುಂದುವರೆದು ’ಕಾವ್ಯವನ್ನಾಗಲೀ ಅಲ್ಲಮ ಲೋಕವನ್ನಾಗಲೀ, ಭಾರತದ ದಾರ್ಶನಿಕ ಸಂಘರ್ಷಗಳನ್ನಾಗಲೀ ಇಷ್ಟು ಸೂಕ್ಷ್ಮವಾಗಿ ಚರ್ಚಿಸಿರುವ ಮತ್ತೊಂದು ಕನ್ನಡ ಪುಸ್ತಕ ನನ್ನ ಕಣ್ಣಿಗೆ ಬಿದ್ದಿಲ್ಲ.’ ಎಂದಿರುವದನ್ನು ಗಮನಿಸುವ ಮೂಲಕ ಡಿ.ಆರ್. ನಾಗರಾಜರ ಪಾಂಡಿತ್ಯದ ಒಂದು ಮಗ್ಗುಲಿನ ಪರಿಚಯವಾದಂತಾಗುತ್ತದೆ. ಡಿ.ಆರ್. ಎಲ್ಲ ಬರವಣಿಗೆಗಳಲ್ಲೂ ಎಂದೂ ಬತ್ತದ ಕಾವ್ಯದ ಅಮೃತವನ್ನು ಹೀರಲು ಹಾತೊರೆಯುವ ಗರುಡನಂತೆಯೇ ತೋರುತ್ತಾರೆ. ಹಾಗೆಯೇ ತಮ್ಮ ಮನಸು ಒಪ್ಪದ ವಿಚಾರವಾಗಿ ಚಕ್ಕನೇ ಸಿಡಿದು ನಿಲ್ಲುವ ಗುನವೂ ಅವರಲ್ಲಿತ್ತು. ಒಂದು ಸಭೆಯಲ್ಲಿ ಬೀಚಿಯವರ ಬಾಯಿಂದ ಹೊರಬಂದ ಜಾತ್ಯಾತೀತತೆ ಪದದ ಸಂದರ್ಭದಲ್ಲಿ ಡಿ.ಆರ್.ಎದ್ದು ನಿಂತು ನೀವು ಹಾಗಿದ್ದರೆ ಜನಿವಾರ ಧರಿಸಿಲ್ಲವೇ..? ಎಂದಾಗ ಬೀಚಿಯವರು ಬನ್ನಿ ನೋಡಿ ಎಂದಾಗ ಎದ್ದು ಹೋಗಿ ಪರೀಕ್ಷಿಸಿ ಲಂಕೇಶರ ಎದುರು ಇಲ್ಲ ಎಂದಾಗ ಲಂಕೇಶ ತೆಗೆದು ಕಿಸೆಯಲ್ಲಿ ಇಟ್ಟುಕೊಂಡಿದ್ರೆ..? ಅದನ್ನೂ ಚೆಕ್ ಮಾಡಿ ನೋಡ್ತೀನಿ ಅಂದರಂತೆ ಆಗ ಲಂಕೇಶ, ’ಅಲ್ಲಯ್ಯಾ ಅವನು ಮೈಗೆ ಹಾಕಿಕೊಳ್ಳೊ ಜನಿವಾರನ್ನ ಮನಸಿಗೆ ಹಾಕಿಕೊಂಡಿದ್ರೆ ಏನಯ್ಯಾ ಮಾಡ್ತಿಯಾ..?’ ಅಂದರಂತೆ. ಅನೇಕ ಸಂದರ್ಭಗಳಲ್ಲಿ ಲಂಕೇಶ ಮತ್ತು ಡಿ.ಆರ್. ಸಣ್ಣ ಪುಟ್ಟ ಇರುಸು ಮುರುಸುಗಳನ್ನು ಅನುಭವಿಸಿಯೂ ಮತ್ತೆ ಒಂದಾಗುತ್ತಿದ್ದರು. ಡಿ.ಅರ್. ತಮ್ಮ ಜೀವಿತದ ಕೊನೆಯ ಅವಧಿಯಲ್ಲಿ ಲಂಕೇಶರಿಗೆ ಬರೆದ ಪತ್ರವೊಂದರಲ್ಲಿ ’ಲಂಕೇಶ ಪತ್ರಿಕೆ ನಮ್ಮ ಜೀವನದ ಒಂದು ಅನಿವಾರ್ಯವಾದ ಅಂಗ ಎಂಬಂತಾಗಿ ಬಿಟ್ಟಿದೆ’ ಎಂದು ಬರೆದಿದ್ದರು. ಆ ಪತ್ರ ಸುಮಾರು ಹದಿನೆಂಟು ವರ್ಷಗಳ ಕಾಲ ಡಿ.ಆರ್. ಲಂಕೇಶ ಮತ್ತು ಅವರ ಪತ್ರಿಕೆಯ ಜೊತೆಗಿನ ಸಂಬಂಧವನ್ನು ಕುರಿತು ಹೇಳುವಂತಿದೆ.

ಹೀಗೆ “ಇಂತಿ ನಮಸ್ಕಾರಗಳು” ಲೇಖಕ ನಟರಾಜ ಹುಳಿಯಾರರು ಈ ಇಬ್ಬರೂ ಸಾಹಿತ್ಯ ದಿಗ್ಗಜರ ಒಡನಾಟವನ್ನು ಲಂಕೇಶರ ಮತ್ತು ನಾಗರಾಜರ ಅಪಾರ ಪ್ರಮಾಣದ ಅಭಿಮಾನಿಗಳಿಗೆ inti-namaskaragaluಆಪ್ತವಾಗುವ ಹಾಗೆ ನಿರೂಪಿಸಿದ್ದು ಸ್ತುತ್ಯಾರ್ಹ ಕೆಲಸ. ಈ ಕೃತಿಯನ್ನು ಓದುವಾಗ ಎಲ್ಲೂ ಯಾವ ಪುಟವೂ ಬೇಜಾರಾಗುವ ಅನುಭವ ಬರುವದಿಲ್ಲ. ಒಂದು ಉತ್ತಮವಾದ ಕಾದಂಬರಿಯೊಂದು ಓದುಗನನ್ನು ಬಿಗಿದಪ್ಪಿಕೊಳ್ಳುವಂಥಾ ಗುಣ ಈ ಕೃತಿಗಿದೆ. ಜೊತೆಗೆ ಈ ತರದ ಪ್ರತಿಭೆಗಳು ಇನ್ನಷ್ಟು ವರ್ಷ ಬದುಕಿರಬೇಕಿತ್ತಲ್ಲ..! ಎನ್ನುವ ಹಳಹಳಿಕೆಯನ್ನೂ ಈ ಕೃತಿ ಹುಟ್ಟುಹಾಕುತ್ತದೆ. ನಮ್ಮ ಸುತ್ತಲಿನ ಸಾಹಿತ್ಯಕ ವಾತಾವರಣ ಅತ್ಯಂತ ಕಲುಷಿತವಾಗಿರುವ ಸಂದರ್ಭದಲ್ಲಿ ಈ ಇಬ್ಬರ ಜರೂರತ್ತು ಮತ್ತೆ ಮತ್ತೆ ಕಾಡದೇ ಇರದು. ಇಂಥಾ ಕೃತಿಯನ್ನು ಪ್ರಕಟಿಸಿದ ಪ್ರಕಾಶಕರಿಗೆ ಮತ್ತು ಲೇಖಕರಿಗೆ ಇಂತಿ ನಮಸ್ಕಾರಗಳು.

ಲೇಖಕ: ನಟರಾಜ ಹುಳಿಯಾರ
ಪ್ರಕಾಶಕರು : ಪಲ್ಲವ ಪ್ರಕಾಶನ
ಪುಟ: 226
ದರ: ರೂ.180

ಸಾಂಸ್ಕೃತಿಕ ಪ್ರಭುತ್ವ ಮತ್ತು ಭಾಷಾ ಮಾಧ್ಯಮ


– ಡಾ.ಎಸ್.ಬಿ. ಜೋಗುರ


 

 

ಈಚೆಗೆ ಸುಪ್ರೀಂ ಕೋರ್ಟ್ ತಮ್ಮ ಮಕ್ಕಳ ಶಿಕ್ಷಣ ಮಾಧ್ಯಮದ ಭಾಷೆಯ ಆಯ್ಕೆ ಪಾಲಕರದ್ದು ಎಂದು ಕರಾರುವಕ್ಕಾಗಿ ಹೇಳಿದೆ. ಆ ಮೂಲಕ ಈ ಭಾಷಾ ಮಾಧ್ಯಮದ ಚೆಂಡನ್ನು Supreme Courtಕೊನೆಗೂ ಪಾಲಕರ ಅಂಗಳಕ್ಕೆ ತಳ್ಳಿದೆ. ಇಲ್ಲಿ ಸರ್ವೋಚ್ಚ ನ್ಯಾಯಾಲಯ ಇಂಥದೇ ಮಾಧ್ಯಮವಾಗಿರಬೇಕೆಂದು ಹೇಳಿರದಿದ್ದರೂ ಸಹಜವಾಗಿ ನಮ್ಮ ಮಧ್ಯಮವರ್ಗದವರ ಒಲವು ಇಂಗ್ಲೀಷ್ ಭಾಷೆಯ ಕಡೆಗಿದೆ. ಪರಿಣಾಮವಾಗಿ ಮೊದಲೇ ಕ್ಯಾಲ್ಸಿಯಂ ಕೊರತೆಯಿಂದ ಬಳಲುತ್ತಿರುವ ಕನ್ನಡದಂಥಹ ಪ್ರಾದೇಶಿಕ ಭಾಷೆಗಳು, ಈಗ ಮತ್ತಷ್ಟು ಸಂದಿಗ್ದಗಳಿಗೆ ಸಿಲುಕಿದಂತಾಗಿವೆ. ಎಲ್ಲಿಯವರೆಗೆ ಭಾಷೆಯೊಂದು ಪ್ರತಿಷ್ಠೆ, ಅಂತಸ್ತು, ಅನುಕರಣೆಯ ಮಾರ್ಗವಾಗದೇ ಜನಸಮುದಾಯದ ಬಳಕೆಯ, ಸಂವಹನದ ಸಾಧನವಾದರೆ ತನ್ನಷ್ಟಕ್ಕೆ ತಾನೇ ಬೆಳೆಯುತ್ತದೆ. ವಸಾಹತುಶಾಹಿ ಕಾಲದಿಂದಲೂ ನಾವು ಅನುಕರಣೆ ಮತ್ತು ಪ್ರಭಾವದ ಮೂಲಕವೇ ಪಾಶ್ಚಾತ್ಯೀಕರಣ ಕ್ರೀಯೆಗೆ ಒಳಗಾದವರು. ಈ ಬಗೆಯ ಪ್ರಕ್ರೀಯೆಗೆ ಕೇವಲ ಅವರ ಹ್ಯಾಟು ಮತ್ತು ಬೂಟುಗಳು ಮಾತ್ರ ಒಳಪಡದೇ ಅವರ ಭಾಷೆಯೂ ಒಳಗಾದದ್ದು ಒಂದು ದೊಡ್ಡ ವಿಪರ್ಯಾಸ. ತಮ್ಮ ಆಡಳಿತದ ನಿರ್ವಹಣೆಗೆ ಅನುಕೂಲಕರವಾದ ವಾತಾವರಣದ ನಿರ್ಮಾಣದ ಹಿನ್ನೆಲೆಯಲ್ಲಿ ಪರಿಚಯಿಸಲಾದ ಇಂಗ್ಲೀಷ್ ಭಾಷೆಯ ಶಿಕ್ಷಣ ಈ ಮಟ್ಟಕ್ಕೆ, ಬಿಟ್ಟೆನೆಂದರೂ ಬಿಡದೀ ಮಾಯೆ ಎನ್ನುವ ಹಂತಕ್ಕೆ ಮುಟ್ಟುತ್ತದೆ ಎನ್ನುವುದು ಯಾರಿಗೂ ತಿಳಿದಿರಲಿಲ್ಲ. ಆಗಲೂ ಸ್ಥಳೀಯ ಭಾಷೆಗಳ ಮೂಲಕವೇ ಶಿಕ್ಷಣ ನೀಡುವುದು ಉಚಿತ ಎನ್ನುವ ವಾದವಿದ್ದರೂ ಪಶ್ಚಿಮದ ತತ್ವಜ್ಞಾನ ಮತ್ತು ಜ್ಞಾನ ಸಂಪತ್ತು ನಮ್ಮವರಿಗೆ ಉಣಬಡಿಸುವುದು ಬೇಡವೇ ಎಂದು ವಸಾಹತುಶಾಹಿ ಭಾಷೆಯನ್ನು ಬೆಂಬಲಿಸಿದವರೂ ಇದ್ದರು. ಈ ಬೆಂಬಲಕ್ಕೆ ಇನ್ನಷ್ಟು ಪುಷ್ಟಿ ದೊರೆತದ್ದು ಲಾರ್ಡ್ ವಿಲಿಯಂ ಬೆಂಟಿಂಕ್ 1935 ಮಾರ್ಚ್ 7 ರಂದು ಶಿಕ್ಷಣ ಮಾಧ್ಯಮಕ್ಕೆ ಸಂಬಂಧಿಸಿದಂತೆ ಹೊರಡಿಸಿದ ಒಂದು ಸರ್ಕಾರಿ ಆದೇಶದ ಮೂಲಕ. ಇದು ಬ್ರಿಟಿಷ ಶಿಕ್ಷಣತಜ್ಞ ಲಾರ್ಡ್ ಮೆಕಾಲೆಯವರ ಧೋರಣೆಯನ್ನು ಆಧರಿಸಿತ್ತು. ‘ಶಿಕ್ಷಣಕ್ಕೆಂದು ಮೀಸಲಾಗಿರುವ ಹಣವನ್ನು ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡುವ ಯೋಜನೆಗಳಿಗೆ ಮಾತ್ರ ನೀಡಲಾಗುವುದು’ ಎಂದು ಆ ಆದೇಶ ಹೇಳುತ್ತಿತ್ತು. ಉದ್ದೇಶ ಅಂತಿಮವಾಗಿ ಸಾಧ್ಯವಾದಷ್ಟು ಹೆಚ್ಚೆಚ್ಚು ಭಾರತೀಯ ಬ್ರಿಟಿಷರನ್ನು ರೂಪಿಸುವುದೇ ಆಗಿತ್ತು.

ಅದೇ ರೀತಿಯಾಗಿ 1853 ರಲ್ಲಿ ಜಾರ್ಜ್ ಕ್ಯಾಂಬೆಲ್ ಎನ್ನುವ ಬ್ರಿಟಿಷ ಚಿಂತಕ ತನ್ನ ಒಂದು ವರದಿಯಲ್ಲಿ ಹೀಗೆ ಹೇಳಿದ್ದಾನೆ ‘ವೃತ್ತ ಪತ್ರಿಕೆಗಳ ಹಾಗೆ ಇಂಗ್ಲೀಷ್ ಮಾತನಾಡುವ ವರ್ಗದ ಮೇಲೆ ವಸಾಹತುಶಾಹಿ ಅಧಿಕಾರಿಗಳು ಅವಲಂಬಿಸಿದ್ದರು. ಮಿಕ್ಕವರು ಗುಲಾಮರಂತೆ ಬದುಕಬೇಕಿತ್ತು.’ ಮೆಕಾಲೆಯ ಧೋರಣೆಯ ಮೂಲಕ ಇಂಗ್ಲಿಷ ಶಿಕ್ಷಣ ನಮ್ಮಲ್ಲಿ ಬಹು ಬೇಗನೇ ಜನಪ್ರಿಯವಾಯಿತಾದರೂ ಪರೋಕ್ಷವಾಗಿ ಪ್ರಾದೇಶಿಕ ಭಾಷೆಗಳ ಕತ್ತನ್ನು ಹಿಚುಕುವ ಯತ್ನವನ್ನೂ ಮಾಡಲಾಗಿತ್ತು. ಬ್ರಿಟಿಷರ ಆಳ್ವಿಕೆಯ ಅವಧಿಯಲ್ಲಿ ಜಾನ್ ವಿಲ್ಸನ್ ಹಾಗೂ ಪಾಜ್ಸನ್ ರಂಥಹ ಚಿಂತಕರು ಇಲ್ಲಿಯ ಪ್ರಾದೇಶಿಕ ಭಾಷೆಗಳ ಅಳಿವಿನ ಅಪಾಯದ ಬಗ್ಗೆಯೂ ಮಾತನಾಡಿದ್ದರು. ಆದರೆ ಅವರ ಧ್ವನಿಗೆ ಮೆಕಾಲೆಗೆ ಸಿಕ್ಕ ಬೆಂಬಲ ದೊರೆಯಲಿಲ್ಲ. ಇಂಗ್ಲೀಷ್ ಮಾಧ್ಯಮದ ಮೂಲಕ ಶಿಕ್ಷಣದ ಪ್ರಸಾರ ಸಾಧ್ಯವಾಯಿತಾದರೂ ಅದೊಂದು ಭಾಷೆಯಾಗಿ ಭಾರತೀಯರ ಎದೆಯಾಳದ ತಳಮೂಲಕ್ಕೆ ಇಳಿಯಲಿಲ್ಲ. ಭಯಂಕರ ಪ್ರಯತ್ನ ಪಟ್ಟು ಅದನ್ನು ಕಲಿಯುವುದು, ತಪ್ಪದೇ ಮಾತನಾಡುವುದು, ನುಡಿಗಟ್ಟುಗಳನ್ನು ಸರಿಯಾಗಿ ಬಳಸುವುದು ಇದರಲ್ಲಿಯೇ ಆ ಭಾಷೆ ಬಳಸುವವನ ಸಾಮರ್ಥ್ಯ ವ್ಯರ್ಥವಾಗುವುದನ್ನು ಕಂಡು ಅನೇಕ ವಿದೇಶಿಯರೇ ಪ್ರಾದೇಶಿಕ ಭಾಷೆಯಲ್ಲಿಯೇ ಶಿಕ್ಷಣ ನೀಡಬೇಕು ಅಂದಿರುತ್ತಾರೆ. ಅವರಲ್ಲಿ ಲಾರ್ಡ್ ಕರ್ಜನ್ ಕೂಡಾ ಒಬ್ಬ. ಹಾಗೆಯೇ 1917 ರಲ್ಲಿ ಮೈಕಲ್ ಸ್ಯಾಡ್ಲರ್ ಅವರ ನೇತೃತ್ವದಲ್ಲಿ ನೇಮಕವಾದ ನಿಯೋಗವು ಕೂಡಾ ಈ ಕೆಳಗಿನಂತೆ ಅಭಿಪ್ರಾಯ ಪಟ್ಟಿದೆ.

‘ತರುಣನೊಬ್ಬ ತನ್ನ ಶಿಕ್ಷಣವನ್ನು ಮುಗಿಸಿದ ನಂತರ, ತನ್ನ ತಾಯ್ನುಡಿಯಲ್ಲಿ ಸರಿಯಾಗಿ ಮತ್ತು ಸುಗಮವಾಗಿ ಓದಿ ಬರೆಯುವ ಶಕ್ತಿಯನ್ನು ಸಂಪಾದಿಸುವಂತೆ ಮಾಡದೇ ಇರುವ ಶಿಕ್ಷಣದಲ್ಲಿ ಏನೋ ಒಂದು ದೋಷವಿದೆ. ಆದ್ದರಿಂದ ಇನ್ನು ಮೇಲೆ ಪ್ರಾದೇಶಿಕ ಭಾಷೆಗಳ ಅಧ್ಯಯನವನ್ನು ಗಂಭೀರವಾಗಿ ನಡೆಸಲು ನೆರವಾಗುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕೆನ್ನುವುದು ನಿರ್ವಿವಾದವಾದ ಸಂಗತಿ’ ಎಂದಿತ್ತು. ಇದು ಕೇವಲ ಸ್ವಾತಂತ್ರ್ಯಪೂರ್ವದ ಕತೆಯಲ್ಲ; ಸ್ವತಂತ್ರ ಭಾರತದಲ್ಲಿಯೂ ಇಡೀ ದೇಶ ಒಪ್ಪಿಕೊಳ್ಳಬಹುದಾದ ರಾಷ್ಟ್ರಭಾಷೆಯನ್ನು ಗುರುತಿಸುವಲ್ಲಿಯೂ ಕೆಲವು ಅಡೆತಡೆಗಳಾದವು. ಕೊನೆಗೂ ಗಾಂಧೀಜಿಯವರ ತ್ರಿಭಾಷಾ ಸೂತ್ರ ಇಲ್ಲಿ ನೆರವಾಯಿತು. ಆರಂಭದಲ್ಲಿ ಭಾರತೀಯ ಸಂವಿಧಾನದಲ್ಲಿ ದೇವಭಾಷೆ ಎಂದು ಕರೆಯಲಾಗುವ ಸಂಸ್ಕೃತವನ್ನೊಳಗೊಂಡು ಅಧಿಕೃತವಾದ 15 ಭಾಷೆಗಳನ್ನು ಪ್ರಾದೇಶಿಕ ಭಾಷೆಗಳನ್ನಾಗಿ ಗುರುತಿಸಲಾಯಿತು.

ಸುಮಾರು ಒಂದು ಶತಮಾನ ದಾಟಿದರೂ ಶಿಕ್ಷಣದಲ್ಲಿ ಭಾಷಾ ಮಾಧ್ಯಮದ ಸಮಸ್ಯೆ ಒಂದು ಬಹುದೊಡ್ಡ ತೊಡಕಾಗಿ ಹಾಗೇ ಉಳಿದಿದೆ. ಯಾವುದೇ ಒಂದು ಜನಭಾಷೆ ಗಟ್ಟಿಯಾದುದೋ ಇಲ್ಲವೋ ಎಂದು ಗುರುತಿಸಿಕೊಳ್ಳಬೇಕಾದರೆ ಅತಿ ಮುಖ್ಯವಾಗಿ ಅದನ್ನು ಮಾತನಾಡುವ ಜನರೇ ಕಾರಣ. ಆ ಜನ ತಮ್ಮ ಭಾಷೆಯನ್ನು ಎದೆಗೆ ಹಚ್ಚಿಕೊಂಡು ಬಳಸುತ್ತಿರುವ ಮತ್ತು ಬೆಳೆಸುತ್ತಿರುವ ಸಂಗತಿಗಳು ಅಲ್ಲಿ ಮುಖ್ಯವಾಗುತ್ತವೆ. ಇನ್ನು ಅನೇಕರು ಈ ಬಗೆಯ ಸಮಸ್ಯೆಗಳು ಉದ್ಭವವಾದಾಗ ಸಾಹಿತ್ಯಕ ವಲಯದ ಕಡೆಗೆ ನೋಡುತ್ತಾರೆ. ಆ ನೋಟದಲ್ಲಿ ಅತಿ ಮುಖ್ಯವಾಗಿ ಈ ಸಮಸ್ಯೆಯ ನಿವಾರಣೆಯಲ್ಲಿ ಇವರು ನೆರವಾಗಬಹುದು ಎನ್ನುವುದು. ಆದರೆ ಪರಿಸ್ಥಿತಿ ಹಾಗಿಲ್ಲ. ಬಹಳಷ್ಟು ಸಾಹಿತಿಗಳ ಬರಹ ಬದುಕಿದಂತಿಲ್ಲ, ಇಲ್ಲವೇ ಬದುಕಿದಂತೆ ಬರೆದವರಿಲ್ಲ. ಹೀಗಾಗಿ ಸಾಹಿತ್ಯಕ ರಾಜಕಾರಣದ ಸಂದಿಗ್ದದ ಬಗ್ಗೆ ಮಾತುಗಳು ಮೂಡುತ್ತವೆಯೇ ಹೊರತು ಅದಕ್ಕಿಂತ ಹೆಚ್ಚಿನದೇನೂ ಇವರಿಂದ ಸಾಧ್ಯವಿಲ್ಲ ಎನ್ನುವ ಮಾತೂ ಇದೆ. ಇನ್ನು ಪಡೆದ ಪ್ರಶಸ್ತಿಗಳನ್ನು ಹಿಂದುರುಗಿಸುವುವಂತಹ ನಡೆಗಳು ಪರಿಹಾರವಂತೂ ಅಲ್ಲ. ಇದು ಇನ್ನೊಂದು ಬಗೆಯ ತೊಡಕಿಗೆ ಕಾರಣವಾಗುತ್ತದೆ. ಈಗಿರುವ ಸಾಹಿತ್ಯಕ ಗುಂಪುಗಾರಿಕೆಗೆ ಹೊಸ ಸೇರ್ಪಡೆಯನ್ನು ಇದು ತಂದುಕೊಡಬಲ್ಲದೇ ಹೊರತು ಬೇರೇನಲ್ಲ. ಅದೂ ಅಲ್ಲದೇ ಕೆಲವರು ಪಡೆದ ಪ್ರಶಸ್ತಿಗಳ ಹಿನ್ನೆಲೆ ಮತ್ತು ಔಚಿತ್ಯವೂ ಅವರಿಗೆ ಮನವರಿಕೆಯಿದೆ. ಹೀಗಾಗಿ ಅವುಗಳನ್ನು ಪಡೆಯುವಲ್ಲಿ ಮಾಡಿದ ಕಸರತ್ತನ್ನು, ಮರಳಿ ಕೊಡಬೇಕು ಎಂದಾಗ ಮರೆಯುವದಾದರೂ ಹೇಗೆ?

ಸಾಹಿತ್ಯಕ ಪರಿಸರ ಅದೆಷ್ಟು ಕಲುಷಿತವಾಗಿದೆಯೆಂದರೆ ಶತಮಾನದ ಹೊಸ್ತಿಲಲ್ಲಿರುವ ಪರಿಷತ್ತು ಕೂಡಾ ನೂರು ವರ್ಷಗಳನ್ನು ದಾಟುವ ಸಂದರ್ಭದಲ್ಲಿಯೂ ತನ್ನ kasapaಮೂಲ ಆಶಯವನ್ನು ಕುರಿತು ಗಂಭೀರವಾಗಿ ಆಲೋಚಿಸುವ ಪರಿಸ್ಥಿತಿ ಬಂದೊದಗಿದೆ. ತಾಲೂಕು ಮತ್ತು ಜಿಲ್ಲಾ ಮಟ್ಟದ, ರಾಜ್ಯ ಮಟ್ಟದ ಸಮ್ಮೇಳನಗಳಲ್ಲಿ ಆಯಾ ಜಿಲ್ಲೆಗಳ ಸಾಹಿತಿಗಳನ್ನೇ ಸರಿಯಾಗಿ ಗುರುತಿಸಲಾಗದ ಪರಿಷತ್ತು, ಆರಂಭದ ಒಂದೆರಡು ದಶಕಗಳನ್ನು ಹೊರತು ಪಡಿಸಿದರೆ ಸಾಂಸ್ಕೃತಿಕ-ಸಾಹಿತ್ಯಕ ರಾಜಕಾರಣದ ಮೂಲಕವೇ ಕನ್ನಡದ ತೇರನ್ನು ಈವರೆಗೆ ಎಳೆಯುತ್ತಾ ಬಂದಿದೆ. ಪ್ರತಿ ಸಮ್ಮೇಳನದಲ್ಲೂ ಅಧ್ಯಕ್ಷರನ್ನು ಹೊರತು ಪಡಿಸಿ ಮತ್ತೆ ಮತ್ತೆ ಅದೇ ಮುಖಗಳು, ಹೆಸರುಗಳು. ಪರಿಷತ್ತು ರಾಜ್ಯದ ಕೆಲವೇ ಕೆಲವು ಜನಪ್ರಿಯ ಸಾಹಿತಿಗಳನ್ನು ಗುತ್ತಿಗೆ ಹಿಡಿದಂತೆ ಸಮ್ಮೇಳನಗಳನ್ನು ನಡೆಸುವಲ್ಲಿಯೇ ಬಹುದೊಡ್ಡ ತೊಡಕುಗಳಿವೆ. ರಾಜ್ಯದ ಕೆಲ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಮೂಲತ: ರಾಜಕಾರಣಿ ಹೆಚ್ಚು, ಸಾಹಿತಿ ಕಡಿಮೆ ಎನ್ನುವ ಕೆಲ ಜಿಲ್ಲಾ ಮತ್ತು ತಾಲೂಕು ಅಧ್ಯಕ್ಷರುಗಳಿದ್ದಾರೆ. ಪರಿಷತ್ತಿನ ಆಶಯವನ್ನು ಮಣ್ಣು ಮಾಡಲು ಅವರಷ್ಟೇ ಸಾಕು. ತಳಮಟ್ಟದಲ್ಲಿಯೇ ನೆಟ್ಟಗಿಲ್ಲದ ಪರಿಷತ್ತು ನೂರು ವರ್ಷಗಳ ನಂತರವೂ ಜಾಗೃತವಾಗಿ ಅಡಿ ಇಡಬೇಕಾದ ಅವಶ್ಯಕತೆಯಿದೆ. ‘ಅವರು ತುಂಬಾ ಒಳ್ಳೆಯವರು ಹೀಗಾಗಿ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು’ ಎನ್ನುವದಾಗಲೀ, ‘ಅವರಿಗೆ ವಯಸ್ಸಾಯಿತು ಈ ಬಾರಿಯಾದರೂ ಮಾಡಿ ಬಿಡೋಣ’ ಎನ್ನುವ ಹಿನ್ನೆಲೆಯಲ್ಲಿ ಅಧ್ಯಕ್ಷರನ್ನಾಗಿ ಮಾಡೋಣ ಎನ್ನುವ ಬಾಲಿಶ ಮನ:ಸ್ಥಿತಿಯ ಬದಲು ಒಳ್ಳೆಯತನ ಮತ್ತು ವಯಸ್ಸು ಮಾನದಂಡಗಳೇ ಅಲ್ಲ ಎನ್ನುವ ಕನಿಷ್ಟ ತಿಳುವಳಿಕೆಯಾದರೂ ಬೇಡವೇ? ಆಮಂತ್ರಣ ಪತ್ರಿಕೆ ರೂಪಿಸುವವನೊಬ್ಬ, ಯಾರನ್ನು ಕರೆಯಬೇಕು ಯಾರನ್ನು ಕರೆಯಬಾರದು ಎಂದು ತೀರ್ಮಾನಿಸುವವ ಇನ್ನೊಬ್ಬ. ಗೋಷ್ಟಿಗಾಗಿ ಒತ್ತಡ ತಂದವರಾರು? ಕವಿಗೋಷ್ಟಿಯಲ್ಲಿ ಯಾರನ್ನು ತುರುಕಬೇಕಿದೆ? ತಮಗೆ ಆಪ್ತರಾದವರು ಯಾರು? ಇಂಥಾ ಎಲ್ಲಾ ಕಂತ್ರಾಟ್ ಗಳನ್ನು ಒಳಗೊಂಡು ನಡೆಯುವ ಜಿಲ್ಲಾ ಮತ್ತು ತಾಲೂಕು ಮಟ್ಟದ ಸಮ್ಮೇಳನಗಳು ಅದಾವ ಬಗೆಯ ಕನ್ನಡ ಕಾಳಜಿಯನ್ನು ಬೆಳೆಸುತ್ತವೆ ಎನ್ನುವುದೇ ದೊಡ್ದ ಜಿಜ್ಞಾಸೆ. ಪರಿಷತ್ತು ಋಣಸಂದಾಯದ ವೇದಿಕೆಯಾಗದೇ ಸಮರ್ಥರಿರುವ ಯಾರೇ ಕನ್ನಡಿಗರಾಗಲಿ ಅವರಿಗೆ ಅವಕಾಶ ಒದಗಿಸುವ ಮೂಲಕ ನಾಡು-ನುಡಿಯ ಶ್ರೆಯೋಭಿವೃದ್ಧಿಗೆ ಶ್ರಮಿಸುವ ಕೆಲಸ ಮಾಡಬೇಕು. ಗುತ್ತಿಗೆ ಸಂಸ್ಕೃತಿಯನ್ನು ಕೈ ಬಿಟ್ಟು ಹೊಸ ಹೊಸ ಮುಖಗಳನ್ನು ನಾಡಿಗೆ ಪರಿಚಯಿಸುವ ಕೆಲಸ ಮಾಡಬೇಕಿದೆ.

ಒಂದು ಕಾಲವಿತ್ತು. ಇಡೀ ರಾಜ್ಯದಲ್ಲಿ ಪ್ರಜ್ಞಾವಂತ ಮನಸುಗಳನ್ನು ರೂಪಿಸುವ ಮತ್ತು ನಿರ್ದೇಶಿಸುವ ಲಂಕೇಶ ಪತ್ರಿಕೆ ಇತ್ತು. ಇಂಥಹ ಸಂದರ್ಭಗಳಲ್ಲಿ ಅದು ಅತ್ಯಂತ ವಸ್ತು ನಿಷ್ಟವಾಗಿ ತನ್ನ ಅಭಿಪ್ರಾಯಗಳನ್ನು ಹೊರಹಾಕುವುದು ಮಾತ್ರವಲ್ಲದೇ ಏನಾಗಬೇಕು ಎನ್ನುವುದನ್ನು ಖಡಾಖಂಡಿತವಾಗಿ ಹೇಳುತ್ತಿತ್ತು. ಈಗ ಅಂಥಾ ಯಾವುದೇ ಪತ್ರಿಕೆಗಳು ನಮ್ಮಲ್ಲಿ ಆ ರೀತಿಯ ಖಂಡಿತವಾದವನ್ನು ಹುಟ್ಟುಹಾಕುವಷ್ಟು ಪರಿಣಾಮಕಾರಿಯಾಗಿ ಉಳಿದಿಲ್ಲ. ಅದನ್ನೇ ಪೂರ್ಣಚಂದ್ರ ತೇಜಸ್ವಿಯವರು ‘ಲಂಕೇಶ ಆ ಪೇಪರನ್ನು ಹೇಗೆ ಕ್ರಿಯೇಟ್ ಮಾಡಿದರೆಂದರೆ You can throw anything. It will digest. . ಹೀಗೆ ಒಟ್ಟು human situation  ಆಗಿ develop ಆಗ್ತಾ ಬಂತು. You see every writer will have his own concept of audience. ಸಡನ್ನಾಗಿ ಯಾರಾರೋ ಸೈಕಲ್ ಶಾಪಿನವರು, ಬೀಡಿ ಅಂಗಡಿಯವರು ನನ್ನ ಕತೇನ ಓದೋಕೆ ಶುರು ಮಾಡಿದರು. ಅಂಥವರೆಲ್ಲ ನನ್ನ ಕತೆ ಓದುತ್ತಾರೆ ಅನ್ನೋದೇ ಮುಖ್ಯ ಅಂತಲ್ಲ. But psychologically there was a shift of audience. ಹೀಗೆ ಒಂದರಿಂದ ಇನ್ನೊಂದಕ್ಕೆ ಶಿಫ್ಟಾದ್ದರಿಂದ ಹೊಸ ಛಾಲೆಂಜಗಳು ಎದುರಾದವು. ಅಲ್ಲ್ಲಿಯತನಕ ಸಭೆಗಳು ಸೆಮಿನಾರ್ ಗಳಲ್ಲೇ ಇದ್ದ ಆಡಿಯನ್ಸ್ ಕಲ್ಪನೆ ಬದಲಾಯ್ತು’ [ಹೊಸ ವಿಚಾರಗಳು-ಪು-736]

ಈಗ ಶಿಕ್ಷಣದಲ್ಲಿ ಪ್ರಾದೇಶಿಕ ಭಾಷೆಗಳ ಅಳಿವು-ಉಳಿವು ಪಾಲಕರನ್ನೇ ಅವಲಂಬಿಸಿದೆ. ಇಲ್ಲಿಯವರೆಗೆ ನಾವು ಇದಕ್ಕೆಲ್ಲಾ ಕಾರಣ ಸರಕಾರ ಇಲ್ಲವೇ ಯಾವುದೋ ಒಂದುenglish-school-karnataka ಸಾಂಸ್ಕೃತಿಕ ಸಂಸ್ಥೆಯನ್ನು ದೂರುವುದಿತ್ತು. ಈಗ ಹಾಗೆ ಮಾಡದೇ ಪಾಲಕರ ಕಡೆಗೆ ಬೆರಳು ಮಾಡಬೇಕಾಗುತ್ತದೆ. ಕನ್ನಡದಂಥಹ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಪಡೆದ ಪ್ರಾದೇಶಿಕ ಭಾಷೆಗಳ ಪರಿಸ್ಥಿತಿಯೇ ಹೀಗಿರಬೇಕಾದರೆ ಇನ್ನು ಅಳಿವಿನ ಅಂಚಿನಲ್ಲಿರುವ ಸಣ್ಣ ಪುಟ್ಟ ಪ್ರಾದೇಶಿಕ ಭಾಷೆಗಳ ಸ್ಥಿತಿಯೇನು? ಮಾತೃಭಾಷೆಯಲ್ಲಿ ದಕ್ಕಿದ ಶಿಕ್ಷಣದಲ್ಲಿ ಖರೆ ಖರೆ ಜ್ಞಾನವಿದೆ, ಖುಷಿಯಿದೆ. ಯಾವುದೇ ಒಂದು ಅಧ್ಯಯನದ ಶಿಸ್ತನ್ನು ತನ್ನ ಮಾತೃಭಾಷೆಯಲ್ಲಿ ಅಧ್ಯಯನ ಮಾಡಿದ ತಿಳುವಳಿಕೆ ಮತ್ತು ಗ್ರಹಿಕೆಗೂ ಅನ್ಯ ಭಾಷೆಗಳಲ್ಲಿ ಮಾಡಲಾದ ಅಧ್ಯಯನದ ಗ್ರಹಿಕೆಗೂ ತುಂಬಾ ಅಂತರಗಳಿವೆ. ಈಗಲೂ ಪದವಿ ಮತ್ತು ಪದವಿ ಪೂರ್ವ ಹಂತದ ಶಿಕ್ಷಣದಲ್ಲಿ ಬಹುತೇಕ ಮಕ್ಕಳು ಅನುತ್ತೀರ್ಣರಾಗುವುದು ಇಂಗ್ಲಿಷ ವಿಷಯದಲ್ಲಿಯೇ. ಇಂಗ್ಲೀಷ್ ಮಾಧ್ಯಮದಲ್ಲಿ ಓದುವುದು, ಓದಿಸುವುದು ಅಂತಸ್ತಿನ ಪ್ರತೀಕಗಳಾಗಿರುವ ದಿನಮಾನಗಳಲ್ಲಿ ಸರ್ವೋಚ್ಚ ನ್ಯಾಯಾಲಯ ನೀಡಿರುವ ಪಾಲಕರ ಪರವಾಗಿರುವ ತೀರ್ಪು ಎಷ್ಟರ ಮಟ್ಟಿಗೆ ಪ್ರಾದೇಶಿಕ ಭಾಷೆಗಳನ್ನು ಕಾಯುತ್ತದೆ ಎನ್ನುವುದೇ ಯಕ್ಷ ಪ್ರಶ್ನೆ.

ಜಾಗತೀಕರಣದ ಸಂದರ್ಭದಲ್ಲಿ ಇಂಗ್ಲೀಷ್ ಭಾಷೆಗೆ ಇನ್ನಷ್ಟು ಬೇಡಿಕೆ ಬಂದಿದೆ. ಕೆ.ಎಫ್.ಸಿ. ಮ್ಯಾಕಡೊನಾಲ್ಡ್ ದಂಹ ವಿದೇಶಿ ಕಂಪನಿಯ ಫುಡ್ ಗಳ ಜನಪ್ರಿಯತೆ ಈ ಇಂಗ್ಲೀಷ್ ಭಾಷೆಗಿಂತಲೂ ಭಿನ್ನ ಎನಿಸುವದಿಲ್ಲ. ಅಷ್ಟಕ್ಕೂ ಇಂಗ್ಲಿಷಿನಲ್ಲಿ ಮಾತನಾಡುವುದು ಅಥವಾ ಬರೆಯುವುದೇ ಬಹುದೊಡ್ಡ ಸಾಧನೆಯಂತೂ ಅಲ್ಲ. ಅದೇ ವೇಳೆಗೆ ಎಲ್ಲವನ್ನೂ ಹೋಲ್ಸೇಲಾಗಿ ಅನುಕರಣೆ ಮಾಡುವ ನಮ್ಮಂಥಹ ದೇಶಗಳ ಜನರಿಗೆ ಈ ಇಂಗ್ಲೀಷ್ ಭಾಷೆ ಯಜಮಾನ ಸಂಸ್ಕೃತಿಯ ಪ್ರತೀಕ. ಅದರ ಹೆಗಲ ಮೇಲೆ ಕೈ ಹಾಕಲಾಗದಿದ್ದರೂ ಅದರ ನೆರಳಲ್ಲಿರುವುದರಲ್ಲಿಯೇ ಪರಮಸುಖ ಅನುಭವಿಸುವ ನಮಗೆ ಇಂಗ್ಲಿಷ ಬರುವುದಿಲ್ಲ ಎನ್ನುವುದೇ ಒಂದು ಕೀಳರಿಮೆಯ ಸಂಗತಿಯಾಗುವಲ್ಲಿ ರೂಪಿತವಾದ ಸಾಂಸ್ಕೃತಿಕ ಯಜಮಾನತ್ವದ ಹಿಡಿತ ಸಾಮಾನ್ಯವೇ? ಸಮಾಜವಾದಿ ಲೋಹಿಯಾ ಅವರು ಹೀಗೆ ಹೇಳುತ್ತಾರೆ ‘ ಇಂಗ್ಲೀಷ್ ಭಾಷೆಯು ಭಾರತೀಯ ಪ್ರಜೆಗಳನ್ನು ಕೀಳರಿಮೆಯವರನ್ನಾಗಿ ಮಾಡಿ ಬಿಟ್ಟಿದೆ. ಇಂಗ್ಲೀಷ್ ಗೊತ್ತಿಲ್ಲದಿದ್ದರೆ ಯಾವುದೇ ಬಗೆಯ ಸಾರ್ವಜನಿಕ ಕೆಲಸಕ್ಕೂ ತಾವು ಅರ್ಹರಲ್ಲವೆಂದು ಅವರು ಭಾವಿಸಿಕೊಳ್ಳುತ್ತಾರೆ. ಮತ್ತು ಅದರಿಂದ ದೂರ ಉಳಿಯುತ್ತಾರೆ. ಜನರು ಹೀಗೆ ಸಾರ್ವಜನಿಕ ಕ್ಷೇತ್ರಗಳಿಂದ ದೂರ ಉಳಿಯುವದರಿಂದಲೇ ಒಂದು ಸಣ್ಣ ಗುಂಪಿನ ಅಥವಾ ಪಾಳೇಗಾರಿಕೆಯ ಆಡಳಿತಕ್ಕೆ ಅಸ್ತಿವಾರವೊದಗುತ್ತದೆ. ಕೇವಲ ಬಂದೂಕಿನ ಮೂಲಕವೇ ಜನರನ್ನು ಹತ್ತಿಕ್ಕುವದಲ್ಲ, ತಿಳಿಯದಿರುವ ಭಾಷೆಯೊಂದನ್ನು ಬಳಸುವ ಮೂಲಕ ಅವರನ್ನು ಮತ್ತೂ ಯಶಸ್ವಿಯಾಗಿ ಕೆಳಕ್ಕೆ ತಳ್ಳಲಾಗುತ್ತದೆ’ [ಭಾಷೆ ಮತ್ತು ಇತಿಹಾಸ ಪು-97]

ನಮ್ಮ ಪಾಲಕರಿಗೆ ಈ ಹೊತ್ತು ಇಂಗ್ಲೀಷ್ ಎನ್ನುವುದು ಉದ್ಯೋಗವನ್ನು ತಂದು ಕೊಡುವ ಭಾಷೆ. ಕನ್ನಡದ ಬಗ್ಗೆ ಅಥವಾ ಇತರೇ ಪ್ರಾದೇಶಿಕ ಭಾಷೆಗಳ ಬಗ್ಗೆ ಇಂಥಾ ಯಾವ ಭರವಸೆಗಳನ್ನೂ ನಮ್ಮ ಪ್ರಭುತ್ವಗಳು ಸೃಷ್ಟಿ ಮಾಡಿಲ್ಲ. ಪರಿಣಾಮವಾಗಿಯೇ ಸರಾಗವಾಗಿ ಮಾತನಾಡಬಹುದಾದ, ಬರೆಯಬಹುದಾದ ಪ್ರಾದೇಶಿಕ ಭಾಷೆಗಳನ್ನು ಕೈ ಬಿಟ್ಟು ವಿದ್ಯಾರ್ಥಿಯೊಬ್ಬ ಎರಡು ದಶಕಗಳ ಕಾಲ ನಮ್ಮದಲ್ಲದ ಒಂದು ಭಾಷೆಯನ್ನು ಕಲಿಯುವಲ್ಲಿಯೇ ತಿಣುಕುವ ಕ್ರಮದಲ್ಲಿ ಅದಾವ ಬಗೆಯ ಸಾಮರ್ಥ್ಯಗಳ ವಿಶ್ಲೇಷಣೆ ಸಾಧ್ಯವಾಗುತ್ತದೆಯೋ ಗೊತ್ತಿಲ್ಲ. ‘ಮಕ್ಕಳನ್ನು ಇಂಗ್ಲೀಷ್ ಮಾಧ್ಯಮದಲ್ಲಿ ಓದಿಸುವವರೇ ನಿಜವಾದ ಪಾಲಕರು’ ಎನ್ನುವುದು ಮಧ್ಯಮವರ್ಗದ ಲೌಕಿಕ ವ್ಯಾಖ್ಯಾನ. ನೆರೆಹೊರೆ ಮತ್ತು ಸಮಾಜದಲ್ಲಿ ನಿಮ್ಮ ಅಂತಸ್ತು ಮತ್ತು ಸ್ಥಾನಮಾನಗಳ ನಿರ್ಣಾಯಕ ಸಂಗತಿಗಳಾಗಿ ನಿಮ್ಮ ಮನೆ, ಪ್ಲ್ಯಾಟು, ಕಾರು, ಬೈಕುಗಳಂತೆ ನೀವು ನಿಮ್ಮ ಮಕ್ಕಳನ್ನು ಇಂಗ್ಲೀಷ್ ಮಾಧ್ಯಮದ ಶಾಲೆಗಳಲ್ಲಿ ಓದಿಸುತ್ತೀರೋ ಇಲ್ಲಾ ಕನ್ನಡ ಮಾಧ್ಯಮದ ಶಾಲೆಗಳಲ್ಲಿ ಓದಿಸುತ್ತೀರೋ ಎನ್ನುವುದು ಕೂಡಾ ಒಂದು ಪ್ರಮುಖ ಸಂಗತಿ. ಆ ಶಾಲೆಗಳಲ್ಲಿ ನೀವು ಕೊಡುವ ಫೀ ಕೂಡಾ ಅದರಲ್ಲಿ ನಿರ್ಣಾಯಕವಾಗುತ್ತದೆ ಎನ್ನುವುದನ್ನು ಅಲ್ಲಗಳೆಯಲಾದೀತೇ? ಈ ಬಗೆಯ ಒಂದು ಮಾನಸಿಕ ಸ್ಥಿತಿಯನ್ನು ನಿರ್ಮಿಸಿದವರು ಯಾರು? ಅದಕ್ಕೆ ಅವಕಾಶ ಮಾಡಿಕೊಟ್ಟವರು ಯಾರು? ಈಗ ಅತಿ ಮುಖ್ಯವಾಗಿ ಪ್ರಾದೇಶಿಕ ಭಾಷೆಗಳಲ್ಲಿ ಶಿಕ್ಷಣ ನೀಡಬೇಕೋ ಬೇಡವೋ ಎನ್ನುವುದು ಮುಖ್ಯವಾಗದೇ ಅದನ್ನು ಕೊಡಿಸಬೇಕೋ ಬೇಡವೋ ಎನ್ನುವುದನ್ನು ಪಾಲಕರು ತೀರ್ಮಾನಿಸಬೇಕು. ಕನ್ನಡ ಅನ್ನ ಮತ್ತು ಉದ್ಯೋಗದ ಗ್ಯಾರಂಟಿ ನೀಡುವ ಮಾಧ್ಯಮವಾಗುವದಾದರೆ ಸುಪ್ರೀಂಕೋರ್ಟ್ ಈ ಭಾಷಾ ಮಾಧ್ಯಮದ ಚೆಂಡನ್ನು ಪಾಲಕರ ಅಂಗಳಕ್ಕೆ ತಳ್ಳಿದ್ದೂ ಸಾರ್ಥಕ! ಈ ದಿಶೆಯಲ್ಲಿ ಅತಿ ಮುಖ್ಯವಾಗಿ ಪ್ರತಿಯೊಬ್ಬ ಪಾಲಕನೂ ಯೋಚಿಸಬೇಕಿದೆ.