Daily Archives: June 30, 2014

ಇತಿಹಾಸದ ಸಮೂಹಸನ್ನಿಯನ್ನು ಅರಿತುಕೊಳ್ಳಲು ನಿರಾಕರಿಸುತ್ತಿರುವ ನೀರೋಗಳು


-ಬಿ. ಶ್ರೀಪಾದ್ ಭಟ್


 

 

 

Today every invention is received with a cry of triumph which soon turns into a cry of fear -Brecht

ಜಾಗತೀಕರಣದ ಪ್ರಕ್ರಿಯೆಗೆ ತೆರದುಕೊಂಡು 23 ವರ್ಷಗಳಾಗಿರುವ ಇಂದಿನ ಇಂಡಿಯಾದ ಈಗಿನ ನವ ಕಲೋನಿಯಲ್ ವ್ಯವಸ್ಥೆಗೂ ಮತ್ತು ಸಂಘಪರಿವಾರದ ಧಾರ್ಮಿಕತೆಯನ್ನಾಧರಿಸಿದ ಆಧುನಿಕ ಮತೀಯವಾದಕ್ಕೆ ನೇರ ಸಂಬಂಧಗಳಿವೆ. ಇಲ್ಲಿ ಕೋಮುವಾದಿಗಳು ಮತ್ತು ಜಾಗತೀಕರಣದ ನಡುವೆ ಒಂದು ರೀತಿಯ ಅನುಬಂಧ ಏರ್ಪಟ್ಟಿದೆ. 2014ರ ಚುನಾವಣೆಯ ಸಂದರ್ಭದಲ್ಲಿ ಇಂಡಿಯಾದ ಕಾರ್ಪೋರೇಟ್ ವಲಯ ಬಿಜೆಪಿ ಪಕ್ಷಕ್ಕೆ ಪ್ರಚಾರಕ್ಕಾಗಿ ಕೋಟಿಗಟ್ಟಲೆ ಹಣವನ್ನು ವ್ಯಯಿಸಿದೆ.ಇದೇನು ಗುಟ್ಟಾಗಿ ಉಳಿದಿಲ್ಲ. ಬಿಜೆಪಿ ಪಕ್ಷ ಅದರಲ್ಲೂ ನರೇಂದ್ರ ಮೋದಿ ಇಂದು ಕಾರ್ಪೋರೇಟ್ ವಲಯದ ಹಂಗಿನಲ್ಲಿರುವುದು ಸಹ ಗುಟ್ಟೇನಿಲ್ಲ.ಇಂದು ಕಾರ್ಪೋರೇಟ್ ವಲಯ ಪ್ರತಿಫಲವನ್ನು ನಿರೀಕ್ಷಿಸುವುದೂ ಸಹಜ. ಬಂಡವಾಳಶಾಹಿಗಳು ಬಯಸುವ ನವ ಉದಾರೀಕರಣದ ಆರ್ಥಿಕತೆಯ ಸಿದ್ಧಾಂತಕ್ಕೆ ಮೋದಿ ಸರ್ಕಾರ ತಲೆಬಾಗಿಸಿ ಮನ್ನಣೆ ಕೊಡುವುದೂ ಸಹಜ. ಖಾಸಗೀ ಬಂಡವಾಳಶಾಹಿಗಳ ಮೇಲ್ವಿಚಾರಣೆಯಲ್ಲಿ ಹಂತಹಂತವಾಗಿ ರೂಪುಗೊಳ್ಳುವ ನವ ಉದಾರೀಕರಣದ ಆರ್ಥಿಕ ನೀತಿಯನ್ನು ಜನರಿಗಾಗಿಯೇ ಎಂದೇ ನಂಬಿಸಲಾಗುತ್ತದೆ. ಈ ರುದ್ರಪ್ರಹಸನದ ಮುಂದುವರೆದ ಭಾಗವಾಗಿ ಬಡಜನರ ಪರವಾಗಿರುವ ಕಲ್ಯಾಣ ಕಾರ್ಯಕ್ರಮಗಳೆಂದರೆ ಭ್ರಷ್ಟಾಚಾರಕ್ಕೆ ಬಾಗಿಲನ್ನು ತೆರೆದಂತೆ ಹಾಗಾಗಿ ಭ್ರಷ್ಟಾಚಾರ ಮುಕ್ತ ಭಾರತವೆಂದರೆ ಕಲ್ಯಾಣಕಾರ್ಯಕ್ರಮ ಮುಕ್ತ ಭಾರತ ಎನ್ನುವ ಹೊಸ ಆರ್ಥಿಕ ನೀತಿ ಜಾರಿಗೊಳ್ಳಲಿದೆ. ಮುಂದಿನ ಐದು ವರ್ಷಗಳಲ್ಲಿ ಕೇಂದ್ರ ಸರ್ಕಾರ ಹೆಚ್ಚೂ ಕಡಿಮೆ ಈ ಖಾಸಗೀ ಬಂಡವಾಳಶಾಹಿಗಳ ನವ ಉದಾರೀಕರಣಕ್ಕೆ ಶರಣಾಗಿರುತ್ತದೆ.

ಮೂವತ್ತರ ದಶಕದಲ್ಲಿ ಯುರೋಪಿನಲ್ಲಿ ಮೇಲಿನ ಬಗೆಯ ಇಡೀ ಖಾಸಗೀಕರಣದ ಪ್ರಕ್ರಿಯೆಯನ್ನೇ ಫ್ಯಾಸಿಸ್ಟರು ಅಧಿಕೃತವಾಗಿ ಫ್ಯಾಸಿಸಂತನವೆಂದೇ ಹೆಮ್ಮೆಯಿಂದ ಕರೆದರು. ambani-modiಮೂವತ್ತರ ದಶಕದಲ್ಲಿ ಮಸಲೋನಿ ಮತ್ತು ಹಿಟ್ಲರ್ ಮಾಡಿದ್ದು ಇದನ್ನೇ. ಇಟಲಿ ಮತ್ತು ಜರ್ಮನಿಯಲ್ಲಿ ಒಂದು ಬಗೆಯ ಸಮೂಹ ಸನ್ನಿಯನ್ನೇ ಸೃಷ್ಟಿಸಿದರು. ಇಂದು ಮೋದಿ ಅದೇ ಬಗೆಯ ಸಮೂಹ ಸನ್ನಿಯನ್ನು ಇಂಡಿಯಾದಲ್ಲಿ ಸೃಷ್ಟಿಸಿದ್ದಾರೆ. ಈ ಸಮೂಹ ಸನ್ನಿಯನ್ನೊಳಗೊಂಡ ಮೋದಿಯ ಆಡಳಿತದಲ್ಲಿ ಬಂಡವಾಳಶಾಹಿಗಳ ಬೋರ್ಡರೂಂನ ಖಾಸಗಿ ಆಡಳಿತ ಮತ್ತು ರಾಜ್ಯದ ಸರ್ಕಾರಿ ಆಡಳಿತ ವಿಲೀನಗೊಂಡು ಬಂಡವಾಳಶಾಹಿಗಳ ಖಾಸಗಿ ಸಾಮ್ರಾಜ್ಯ ಮೋದಿಯೆಂಬ ಛಾನಲ್ ನ ಮೂಲಕ ಸ್ಥಾಪಿತಗೊಳ್ಳುತ್ತದೆ. ಇದಕ್ಕಾಗಿಯೇ ಕಾರ್ಪೋರೇಟ್ ವಲಯ ಮೋದಿ ಎನ್ನುವ ಛಾನಲ್ ಮೂಲಕ ಕೋಟಿಗಟ್ಟಲೆ ಹಣವನ್ನು ಹರಿಸಿದ್ದು. ಪತ್ರಕರ್ತ ವಿನೋದ ಮೆಹ್ತಾ ಬರೆದಂತೆ ಮೋದಿಯ ಶೈಲಿಯ ಆಡಳಿತವೆಂದರೆ ಗುರಿ ಮುಟ್ಟುವುದು ಮುಖ್ಯವಾಗುತ್ತದೆಯೇ ಹೊರತು ಅದನ್ನು ತಲಪಲು ಬಳಸುವ ವಾಮಮಾರ್ಗದ, ಹಿಂಸಾಚಾರದ ದಾರಿಗಳು ಅಕ್ಷೇಪಾರ್ಹವಲ್ಲವೇ ಅಲ್ಲ. ಇಂದು ಮೋದಿಯ ಸರ್ವಾಧಿಕಾರಿ ನಡಾವಳಿಗಳು ಕ್ರಮೇಣ ವ್ಯವಸ್ಥೆಯ ಸಮೂಹ ಸನ್ನಿ ನಡುವಳಿಕೆಗಳಾಗಿಯೇ ಸ್ಥಾಪಿತಗೊಳ್ಳುತ್ತವೆ. ಸಿಇಓ ಮೋದಿಯ ಈ ಸಮೂಹಸನ್ನಿಯ ಗುಂಪಿನಿಂದ ಭಾರತ ಪ್ರಕಾಶಿಸುತ್ತಿದೆ ಎನ್ನುವ ಸ್ಲೋಗನ್ ನಮ್ಮನ್ನು ಹೊಸರೂಪದಲ್ಲಿ ಎದುರುಗೊಳ್ಳುತ್ತದೆ. ಪತ್ರಕರ್ತ ಆಕಾರ್ ಪಟೇಲ್ ಈ ಶೈಲಿಯ ಸ್ಲೋಗನ್ ಗಳ ಅಪಾಯಕಾರಿ ಧೋರಣೆಗಳ ಕುರಿತಾಗಿ ಬರೆಯುತ್ತ “ನಿಜ, ಅನೇಕ ಬಾರಿ ಸ್ಲೋಗನ್ ಗಳೇ ಮೇಲುಗೈ ಸಾಧಿಸುತ್ತವೆ. ಆದರೆ ನಾವು ಸ್ಲೋಗನ್ ಗಳನ್ನು ಸತ್ವಯುತವಾದ ಮಹತ್ವದ ತಾತ್ಪರ್ಯಗಳೆಂದು, ತಪ್ಪಾಗಿ ಅರ್ಥೈಸಬಾರದು” ಎಂದು ಬರೆದಿದ್ದರು.

ನವ ಕಲೋನಿಯಲ್ ಮತ್ತು ಮತೀಯವಾದಿಗಳ ಸಾಮ್ಯತೆ ಮತ್ತು ಹೊಂದಾಣಿಕೆಯ ಮಾದರಿಯನ್ನು ಚಿಂತಕ ಫ್ರೊ.ಜಿ.ಹರಗೋಪಾಲ್ ಅವರು ವಿವರಿಸುತ್ತ “ಇಂಡಿಯಾದಲ್ಲಿ ಈಗ ಚಾಲ್ತಿಯಲ್ಲಿರುವ ನವ ಕಲೋನಿಯಲ್ ವ್ಯವಸ್ಥೆಯ ಸಂರಚನೆಗಳು ಹೇಗಿರುತ್ತವೆಯೆಂದರೆ ಸಂವಿಧಾನದ ಮೂಲಕ ರೂಪಿತವಾದ ಎಲ್ಲಾ ಕಾನೂನನ್ನು ಪಾಲಿಸುತ್ತಿದ್ದೇವೆ ಎಂದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಗೋಚರಿಸುವಂತೆ ಇಲ್ಲಿನ ಕಾರ್ಯಾಂಗ, ಶಾಸಕಾಂಗ ಮತ್ತು ಮಾಧ್ಯಮಗಳು ಆಡಳಿತ ನಡೆಸುತ್ತಿರುತ್ತವೆ. ಆದರೆ ಮಾನಸಿಕವಾಗಿ ಇವೆಲ್ಲವೂ ಮೈಗೂಡಿಸಿಕೊಂಡಿರುವುದು ಎಲ್ಲಾ ಕಾನೂನನ್ನು ಧಿಕ್ಕರಿಸುವ ಫ್ಯೂಡಲ್ ಸಂಸ್ಕೃತಿಯನ್ನು. ಜನಸಾಮಾನ್ಯರೊಂದಿಗೆ ಇವರ ವರ್ತನೆ ಫ್ಯೂಡಲ್ ಮನೋಭಾವದ್ದು. ಸದಾ ದಬ್ಬಾಳಿಕೆಯದ್ದು. ಉದಾಹರಣೆಗೆ ಪೋಲೀಸ್ ವ್ಯವಸ್ಥೆಯನ್ನು ತೆಗೆದುಕೊಂಡರೆ ಅಲ್ಲಿ ಯಾವುದೇ ದೂರನ್ನು ಕಾನೂನಿನ ಪ್ರಕಾರವೇ ದಾಖಲಿಸಬೇಕು. ಆದರೆ ನಂತರ ಇಡೀ ಪೋಲೀಸ್ ವ್ಯವಸ್ಥೆ ಬಹಿರಂಗವಾಗಿ ನಡೆದುಕೊಳ್ಳುವುದು ಕಾನೂನುಬಾಹಿರವಾದ ಫ್ಯೂಡಲ್ ವ್ಯವಸ್ಥೆಯನ್ನು ಬಳಸುವುದರ ಮೂಲಕ. ಇದು ರಾಜ್ಯದ ಬೇರೆ ಬೇರೆ ಇಲಾಖೆಗಳಿಗೂ ಅನ್ವಯಿಸುತ್ತದೆ” ಎಂದು ಹೇಳುತ್ತಾರೆ.

“ಸಣ್ಣದಾದ ಸರ್ಕಾರ, ವಿಶಾಲವಾದ,ಪರಮಾವಧಿಯ ಆಡಳಿತ (minimum government, maximum governance)” ಎನ್ನುವುದು ಮೋದಿಯ ಜನಪ್ರಿಯ ಸ್ಲೋಗನ್ ಗಳಲ್ಲೊಂದು. ಇದನ್ನು ಗುಜರಾತ್ ಮಾಡೆಲ್ ಎನ್ನುವ ಸರ್ಕಾರಿ ಬೈಬಲ್ ನಿಂದ ಹೆಕ್ಕಿಕೊಳ್ಳಲಾಗಿದೆ. ಈ ಜನಪ್ರಿಯವಾದ ಪರಮಾವಧಿಯ ಆಡಳಿತದ ಇಂದಿನ ಒಂದು ಉದಾಹರಣೆಯನ್ನು ನೋಡಿ. greenpeaceಮೋದಿ ಸರ್ಕಾರ ಅಧಿಕಾರ ವಹಿಸಿಕೊಂಡ ನಂತರ ಇಂಟೆಲಿಜೆನ್ಸ್ ಬ್ಯೂರೋದ ಒಂದು ವರದಿ ಮಾಧ್ಯಮಗಳಲ್ಲಿ ಸೋರಿಕೆಯಾಯಿತು. ಗ್ರೀನ್ ಪೀಸ್ ಎನ್ನುವ ಎನ್.ಜಿ.ಓ ವಿದೇಶಿ ಮೂಲಗಳಿಂದ ಹಣವನ್ನು ದೇಣಿಗೆಯಾಗಿ ಪಡೆದು ಇಂಡಿಯಾದಲ್ಲಿ ಪರಮಾಣು ಸ್ಥಾವರಗಳ ವಿರುದ್ಧ ಹೋರಾಡುತ್ತ ದೇಶದಲ್ಲಿ ಆರ್ಥಿಕ ಅಭದ್ರತೆ ಉಂಟು ಮಾಡುತ್ತಿದೆ ಎಂಬುದು ಇವರ ಆರೋಪ. ಇದರ ಅಡಿಯಲ್ಲಿ ಪರಿಸರದ ಸಂರಕ್ಷಣೆಗಾಗಿ ಹೋರಾಡುತ್ತಿರುವ ದಕ್ಷಿಣ ಆಫ್ರಿಕ ಮೂಲದ ಗ್ರೀನ್ ಪೀಸ್ ಎನ್ನುವ ಎನ್.ಜಿ.ಓ ವಿರುದ್ಧ ಮೋದಿ ಸರ್ಕಾರ ಚಾಟಿ ಬೀಸುತ್ತಿದೆ. ಅದನ್ನು ಕಾನೂನುಬಾಹಿರ ಎಂದು ಆರೋಪಿಸುತ್ತಿದೆ. ಆದರೆ ಪರಮಾಣು ಶಕ್ತಿ ಇಲಾಖೆಯನ್ನು ತನ್ನ ಬಳಿಯೇ ಇರಿಸಿಕೊಂಡಿರುವ ಮೋದಿಯು ಕೂಡಂಕುಲಂ ಅಣುಸ್ಥಾವರದ ವಿರುದ್ಧ, ಜಾರ್ಖಂಡ್ ರಾಜ್ಯದ ಯುರೇನಿಯಂ ಗಣಿಗಳ ವಿರುದ್ಧ, ಒರಿಸ್ಸಾದಲ್ಲಿ ಪೋಸ್ಕೋ ಸ್ಟೀಲ್ ಕಾರ್ಖಾನೆಯ ವಿರುದ್ಧ, ಒರಿಸ್ಸಾದ ವೇದಾಂತದ ಗಣಿಗಾರಿಕೆಯ ವಿರುದ್ಧ,ದೇಶಾದ್ಯಾಂತ ಅಕ್ರಮವಾಗಿ ಪ್ರಾರಂಬಿಸಲು ಉದ್ದೇಶಿಸಿರುವ ಕಲ್ಲಿದ್ದಲು ಗಣಿಗಾರಿಕೆಯ ವಿರುದ್ಧ ಹೀಗೆ ಅನೇಕ ಪರಿಸರ ಮತ್ತು ಜನವಿರೋಧಿ ಯೋಜನೆಗಳನ್ನು ವಿರೋಧಿಸುತ್ತಿರುವ ಆದಿವಾಸಿಗಳು ಮತ್ತು ಬಡಜನರ ಪರವಾಗಿ ಹೋರಾಡುತ್ತಿರುವ ಪರಿಸರವಾದಿಗಳು, ಜನಪರ ಸಂಘಟನೆಗಳ ವಿರುದ್ಧ ಸಹ ಮೇಲಿನಂತೆಯೇ ಕತ್ತಿ ಬೀಸಲು ಕಾಯುತ್ತಿದ್ದಾರೆ. ಏಕೆಂದರೆ ಮೋದಿಯ ಅಪ್ತರಾದ ಕಾರ್ಪೋರೇಟ್ ಲೋಕದ ಹಿತಾಸಕ್ತಿ ಕಾಯಲು ಸಂಘ ಪರಿವಾರ ಯಾವುದೇ ಹಂತದ ಬೇಟೆಗೂ ತಯಾರಾಗಿದೆ. ಇದು ಬಿಜೆಪಿಯ ಅಭಿವೃದ್ಧಿ ಮಾದರಿಯ ಫ್ಯಾಸಿಸಂನ ಶೈಲಿ. ಇದಕ್ಕೆ ಇವರು ಬಳಸಿಕೊಳ್ಳುತ್ತಿರುವುದು ಸ್ವದೇಶಿ ಮಂತ್ರವನ್ನು. ಜೂನ್ ೩೦, 2014ರ ಔಟ್ಲುಕ್ ಪತ್ರಿಕೆಯ ವರದಿಯ ಪ್ರಕಾರ ಕಳೆದ ಎಂಬತ್ತೈದು ವರ್ಷಗಳಿಂದ ಚಾಲ್ತಿಯಲ್ಲಿರುವ ಆರೆಸ್ಸೆಸ್ ಇಂದೂ ತನ್ನ ಸಂಘಟನೆಯನ್ನು ನೊಂದಾಯಿಸಿಕೊಂಡಿಲ್ಲ. ಹಾಗಾಗಿ ಆರೆಸ್ಸೆಸ್ ನೇರವಾಗಿ ಅಧಿಕೃತವಾಗಿ ಯಾವುದೇ ದೇಣಿಗೆಯನ್ನು ಪಡೆಯುವಂತಿಲ್ಲ. ಹೀಗಾಗಿ ಇದು ಆದಾಯ ತೆರಿಗೆಯನ್ನು ಸಹ ಪಾವತಿಸುತ್ತಿಲ್ಲ. ಆದರೆ ಆರೆಸ್ಸೆಸ್ ನ ಇತರೇ ಅಂಗ ಸಂಸ್ಥೆಗಳು ( ಬಹುಪಾಲು ಧಾರ್ಮಿಕ ಮತ್ತು ಶಿಕ್ಷಣ ಸಂಸ್ಥೆಗಳು) ಸ್ವತಃ ಎನ್.ಜಿ.ಓ ಹೆಸರಿನಡಿಯಲ್ಲಿ ದೇಶ,ವಿದೇಶದಿಂದ ಕೋಟಿಗಟ್ಟಲೆ ಹಣವನ್ನು ಅನುದಾನದ ರೂಪದಲ್ಲಿ ಪಡೆದಿದೆ. ಈಗಲೂ ಪಡೆಯುತ್ತಿದೆ. ಆರೆಸ್ಸೆಸ್ ಅಂಗ ಸಂಸ್ಥೆಗಳಿಗೆ ಹಣದ ರೂಪದ ಕೋಟಿಗಟ್ಟಲೆ ಅನುದಾನ ಹರಿದಿರುವುದು ಬಹುಪಾಲು ಅಮೇರಿಕಾದಲ್ಲಿರುವ IDRF ( india development and relief fund)   ಎನ್ನುವ ಸಂಸ್ಥೆಯಿಂದ. ಅಲ್ಲಿನ ಅನಿವಾಸಿ ಭಾರತೀಯರಿಂದ. ಸುಮಾರು ವರ್ಷಗಳಿಂದ ಈ ವ್ಯವಹಾರ ಜಾರಿಯಲ್ಲಿದೆ. ಆರೆಸ್ಸೆಸ್ ನ ಪ್ರಕಾರ ಈ ಅನುದಾನವು ವಿದೇಶಿ ಮೂಲದಿಂದ ಬಂದಿದ್ದರೂ ಅವರು ಭಾರತದ ಸನಾತನ ಪರಂಪರೆಗಾಗಿ ಹೋರಾಡುತ್ತಿರುವವರಿಗೆ ಅನುದಾನ ನೀಡುತ್ತಿರುವುದರಿಂದ ಅವರು ವಿದೇಶಿ ಎನ್ನಿಸಿಕೊಳ್ಳುವುದಿಲ್ಲ. ಆದರೆ ಜನಪರ ಕಾಳಜಿಗಳಿಗಾಗಿ, ಬಡಜನರ ಪರವಾಗಿ ಹೋರಾಡುತ್ತಿರುವವರದ್ದು ಮಾತ್ರ ಕಾನೂನುಬಾಹಿರ ಸಂಘಟನೆ. ಇದೇ ಫ್ಯಾಸಿಸಂತನದ ಪ್ರತ್ಯಕ್ಷ ಲಕ್ಷಣಗಳು

ಆರೆಸ್ಸೆಸ್ ನ ಈ ಅನೈತಿಕತೆಯನ್ನು ಪ್ರಶ್ನಿಸಬೇಕಾದ ಬಹುಪಾಲು ಮಾಧ್ಯಮಗಳು ಸಂಘ ಪರಿವಾರದೊಂದಿಗೇ ಒಡಂಬಡಿಕೆಯಲ್ಲಿವೆ. ಇದನ್ನೇ ಚೊಮೆಸ್ಕಿ friendly Fascism  modi_ambani_tata_kamathಎಂದು ಕರೆದದ್ದು. ಈ friendly Fascism ನ ಸಿದ್ಧಾಂತದ ಅನುಗುಣವಾಗಿಯೇ ಪ್ರಧಾನ ಮಂತ್ರಿಯ ಕಾರ್ಯಾಲಯದಿಂದ ಕೇಂದ್ರದ ಎಲ್ಲಾ ಇಲಾಖೆ ಮತ್ತು ಸಂಸ್ಥೆಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸಂಪರ್ಕ ಭಾಷೆಯಾಗಿ ಹಿಂದಿಯನ್ನು ಮಾತ್ರ ಬಳಸಬೇಕೆಂಬ ಸುತ್ತೋಲೆ ಬಂದಿದೆ. ಇದಕ್ಕಾಗಿ ಬಹುಮಾನಗಳನ್ನು ಸಹ ಘೋಷಿಸಲಾಗಿದೆ. ಹಿಂದೂ ರಾಷ್ಟ್ರೀಯತೆಯನ್ನು ಹಿಂದಿ ಭಾಷೆಯ ಹೆಸರಿನಲ್ಲಿ ಜಾರಿಗೊಳಿಸುವುದು ಆರೆಸ್ಸೆಸ್ ನ ಮೂಲ ಆಶಯಗಳಲ್ಲೊಂದು.ಇದು ಗೋಳ್ವಲ್ಕರ್ ಅವರ ಚಿಂತನಗಂಗಾದ ಪ್ರಮುಖ ನೀತಿಗಳಲ್ಲೊಂದು.

ಇಂದಿನ ಸಂಘ ಪರಿವಾರದ ಸರ್ಕಾರದೊಂದಿಗೆ ಆಡಳಿತಾತ್ಮಕವಾಗಿ, ಸಾರ್ವಜನಿಕವಾಗಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಲು, ಪಾಲಸಿ ನಿರ್ಧಾರಗಳಲ್ಲಿ ನಿರಂತರವಾಗಿ ಭಾಗಿಯಾಗಲು ಆ ಮೂಲಕ ಹಿಂದುತ್ವದ ಭಾರತಕ್ಕೆ ಭಧ್ರ ಬುನಾದಿ ಹಾಕಲು ತುದಿಗಾಲಲ್ಲಿ ನಿಂತಿರುವ ಪ್ರಮುಖ ಆರೆಸಸ್ ಅಂಗ ಸಂಸ್ಥೆಗಳೆಂದರೆ ವಿವೇಕಾನಂದ ಅಂತರಾಷ್ಟ್ರೀಯ ಫೌಂಡೇಶನ್ (ದೆಹಲಿ), ಅರ್ಥಕ್ರಾಂತಿ ಪ್ರತಿಷ್ಠಾನ ( ಪುಣೆ),ನಿಥಿ ಸೆಂಟ್ರಲ್ ( ದೆಹಲಿ), ಶ್ಯಾಮ್ ಪ್ರಸಾದ್ ಸಂಶೋಧನಾ ಕೇಂದ್ರ ( ದೆಹಲಿ), ದೀನ ದಯಾಳ್ ಸಂಶೋಧನಾ ಕೇಂದ್ರ ( ದೆಹಲಿ ಮತ್ತು ಚಿತ್ರಕೂಟ), ರಾಷ್ಟ್ರೀಯ ಸೇವಾ ಭಾರತಿ ( ದೆಹಲಿ), ಫ್ರೆಂಡ್ಸ್ ಆಫ್ ಬಿಜೆಪಿ, ಇಂಡಿಯನ್ ಪಾಲಿಸಿ ಫೌಂಡೇಶನ್ (ದೆಹಲಿ), ಸೆಂಟರ್ ಫಾರ್ ಪಾಲಿಸಿ ಸ್ಟಡಿ ( ದೆಹಲಿ), ಪಬ್ಲಿಕ್ ಪಾಲಿಸಿ ಸಂಶೋಧನಾ ಕೇಂದ್ರ ( ದೆಹಲಿ), ರಾಮಭಾವೂ ಪ್ರಭೋದಿನಿ ( ಮುಂಬೈ) – ( ಕೃಪೆ ,ಔಟ್ ಲುಕ್,9-6-2014)

ಇವಲ್ಲದೆ ವಿ.ಎಚ್.ಪಿ, ಬಜರಂಗ ದಳ ಮತ್ತು ಇನ್ನಿತರ ಹಿಂದೂ ಸಾಂಸ್ಕೃತಿಕ ಮುಖವಾಡದ ಮತೀಯವಾದಿ ಸಂಘಟನೆಗಳು ಸಕ್ರಿಯಗೊಳ್ಳತೊಡಗಿವೆ. ಈ ಸಕ್ರಿಯಗೊಳ್ಳುವುದರ ಫಲವಾಗಿ ಪುಣೆಯಲ್ಲಿ ಕೋಮು ಗಲಭೆಯಿಂದಾಗಿ ಮುಸ್ಲಿಂ ಯುವಕ ಕೊಲ್ಲಲ್ಪಟ್ಟಿದ್ದಾನೆ. ಮೇ 2, 2014ರಂದು ಪುಣೆಯಲ್ಲಿ ಮೊಹಸೀನ್ ಶೇಖ್ ಎನ್ನುವ 24ರ ಹರೆಯದ ಇಂಜಿನಿಯರ್ ಒಬ್ಬನನ್ನು ‘ಹಿಂದೂ ರಾಷ್ಟ್ರೀಯ ಸೇನ’ ಎನ್ನುವ ಬಲಪಂಥೀಯ ಮತೀಯವಾದಿ ಸಂಘಟನೆಯು ಹಿಗ್ಗಾಮುಗ್ಗ ಥಳಿಸಿ ಕೊಲೆ ಮಾಡಿತು.ಈ ಕೊಲೆಯ ಆರೋಪವನ್ನು ಎದುರಿಸುತ್ತಿರುವ ಮತೀಯವಾದಿ ಸಂಘಟನೆಯೊಳಗಿರುವ ಯುವಕರೆಲ್ಲ 30 ವರ್ಷಗಳಿಗಿಂತ ಕಡಿಮೆ ವಯಸ್ಸಿನವರು. ಇದರ ಮುಖ್ಯಸ್ಥ ಧನಂಜಯ ದೇಸಾಯಿ ಕೆಲವು ತಿಂಗಳ ಹಿಂದೆ ವಿಚಾರವಾದಿ ‘ನಾರಾಯಣ ದಾಬೋಲ್ಕರ್’ ಹತ್ಯೆಯ ಆರೋಪವನ್ನು ಎದುರಿಸುತ್ತಿದ್ದಾನೆ. ಶಿವಾಜಿ ವಿಗ್ರಹಕ್ಕೆ ಯಾರೋ ಕಲ್ಲೆಸಿದಿದ್ದಾರೆ ಎನ್ನುವ ವದಂತಿಯಿಂದ ಉದ್ರಿಕ್ತಗೊಂಡ ಗುಂಪೊಂದು ಈ ಅಮಾಯಕ ಮುಸ್ಲಿಂ ಯುವಕನನ್ನು ಹತ್ಯೆ ಮಾಡಿದೆ.ಇದಕ್ಕೂ ಮುಂಚೆ ಶಿವಾಜಿ ಮತ್ತು ಬಾಳಾ ಠಾಕ್ರೆಯವರ ವಿರೂಪಗೊಂಡ ಫೋಟೋಗಳು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪ್ರಕಟಗೊಂಡು ಪುಣೆ ನಗರದಾದ್ಯಾಂತ ಕೋಮು ಗಲಭೆ ಸ್ವರೂಪದ ಉದ್ರಿಕ್ತ ವಾತಾವರಣ ಉಂಟಾಗಿತ್ತು. ನಂತರ ಈ ಮುಸ್ಲಿಂ ಯುವಕನ ಹತ್ಯೆ. ಇದಕ್ಕೆ ಪ್ರತಿಕ್ರಯಿಸುತ್ತಾ ಪುಣೆ ನಗರದ ಬಿಜೆಪಿ ಸಂಸದ ಅನಿಲ್ ಶಿರೋಲೆ “ಫೇಸ್ ಬುಕ್ ನಲ್ಲಿ ಪ್ರಕಟಗೊಂಡ ಚಿತ್ರಗಳು ಮನ ನೋಯಿಸುವಂತದ್ದು. ಇದಕ್ಕೆ ಪ್ರತೀಕಾರ ಸ್ವರೂಪವಾಗಿ ಏನಾದರೂ ಒಂದು ಸಂಭವಿಸುವುದು ಸಾಮಾನ್ಯ ಮತ್ತು ಸಹಜ” ಎಂದು ಹೇಳಿಕೆ ಕೊಟ್ಟಿದ್ದಾರೆ. 2002ರ ಗುಜರಾತ್ ಹತ್ಯಾಕಾಂಡಕ್ಕೂ ಮೋದಿ ಹೇಳಿದ್ದು ಇದನ್ನೇ, ಆರೆಸ್ಸೆಸ್ ಇಂದಿಗೂ ಬಾಯಿ ಬಿಟ್ಟಿಲ್ಲ. ಸಿಇಓ ಮೋದಿಯೂ ಸಹ.

ಮೋದಿಯ ಲೆಫ್ಟಿನೆಂಟ್ ಅಮಿತ್ ಷಾ ನೇತೃತ್ವದಲ್ಲಿ ಉತ್ತರ ಪ್ರದೇಶದಲ್ಲಿ ಇಡೀ ಜಾತಿ ವ್ಯವಸ್ಥೆಯೇ ಧೃವೀಕರಣಗೊಂಡು ಅಪಾರ ಪ್ರಮಾಣದಲ್ಲಿ ಓಬಿಸಿ ಮತಗಳು ಬಿಜೆಪಿಯ ಪಾಲಾದವು. amit-shahಇದರ ಫಲವಾಗಿ ಬಲಿಷ್ಠ ಜಾತಿಗಳು ಸಂಪೂರ್ಣ ಸಂಘ ಪರಿವಾರದ ತೆಕ್ಕೆಯೊಳಗಿವೆ. ಇವರಿಗೆಲ್ಲಾ ಏಕಮೇದ್ವೀಯ ನಾಯಕ ಅಮಿತ ಷಾ. ಮುಜಫರ್ ನಗರ ಕೋಮುಗಲಭೆ ಇಡೀ ಧೃವೀಕರಣದ ಪ್ರಕ್ರಿಯೆಯನ್ನು ಒಂದು ತಾರ್ಕಿಕ ಅಂತ್ಯಕ್ಕೆ ಮುಟ್ಟಿಸಿತು. ಮತೀಯವಾದದ ಈ ಧೃವೀಕರಣದ ಫಲವಾಗಿ ಉತ್ತರಪ್ರದೇಶದಲ್ಲಿ ಬಿಜೆಪಿ 72 ಸ್ಥಾನಗಳನ್ನು ಗೆದ್ದುಕೊಂಡಿತು. ಈ ಮುಜಫರ್ ನಗರದ ಕೋಮು ಗಲಭೆಯ ಆರೋಪಿಯಾಗಿದ್ದ ಬಿಜೆಪಿ ಸಂಸದ ಸಂಜೀವ ಬಲಿಯಾನ್ ಅವರನ್ನು ಮೋದಿ ಸರ್ಕಾರದಲ್ಲಿ ಮಂತ್ರಿಯಾಗಿ ನೇಮಕ ಮಾಡಲಾಗಿದೆ. ಇಂದು ಅಮಿತ ಷಾ ಬಿಜೆಪಿಯ ಅತ್ಯಂತ ಪ್ರಭಾವಿ ನಾಯಕರಲ್ಲೊಬ್ಬರು. ಸದ್ಯಕ್ಕೆ ಉತ್ತರ ಪ್ರದೇಶದ ಸಾಮಂತ ರಾಜ. ಧೃವೀಕರಣದ ಈ ಮಾದರಿ 2002ರಲ್ಲಿ ಗುಜರಾತ್ ನಲ್ಲಿ ಯಶಸ್ವಿಯಾಯಿತು. 2014ರಲ್ಲಿ ಉತ್ತರ ಪ್ರದೇಶದಲ್ಲಿ ಯಶಸ್ವಿಯಾಯಿತು.ಇನ್ನು ಮುಂಬರುವ ಸಾರ್ವತ್ರಿಕ ಚುನಾವಣೆಗಳಲ್ಲಿ ಇದು ಪ್ರಯೋಗಿಸಲ್ಪಡುತ್ತದೆ. ಪುಣೆಯಲ್ಲಿನ ಕೊಲೆ ಇದರ ಆರಂಭವಷ್ಟೆ.

ಕಣ್ಣು, ಮೂಗು, ಗಂಟಲು ತಜ್ಞ ದೆಹಲಿಯ ಹರ್ಷವರ್ಧನ್ ಕೇಂದ್ರ ಸರ್ಕಾರದಲ್ಲಿ ಆರೋಗ್ಯ ಮಂತ್ರಿಗಳು. ಸಂಘಪರಿವಾರದ ಈ ಮಂತ್ರಿ “ಏಡ್ಸ್ ರೋಗವನ್ನು ತಡೆಗಟ್ಟಲು ಕಾಂಡೋಮ್ ಗಳನ್ನು ಅಳವಡಿಸಿಕೊಳ್ಳಬೇಡಿ, ಬದಲಾಗಿ ಮೌಲ್ಯಗಳನ್ನು ಅಳವಡಿಸಿಕೊಳ್ಳಿ ಎಂದು ಹೇಳಿಕೆ ನೀಡಿದ್ದಾರೆ. ಆರೆಸ್ಸೆಸ್ ಪರಿಭಾಷೆಯಲ್ಲಿ ಸಂಸ್ಕೃತಿ, ಮೌಲ್ಯಗಳೆಂದರೆ ಸನಾತನ ಮೌಲ್ಯಗಳು. ಬ್ರಾಹ್ಮಣ್ಯದ ನೀತಿಗಳು.”ಅದನ್ನೇ ಬಳಸಿ ಆದರೆ ಕಾಂಡಮ್ ಬಳಸಬೇಡಿ” ಎನ್ನುತ್ತಿದ್ದಾರೆ ಈ ಆರೋಗ್ಯ ಮಂತ್ರಿ. ಅನೇಕ ವರ್ಷಗಳ ಹೋರಾಟದ ನಂತರ ಕೊಂಚ ತಹಬದಿಗೆ ಬರುತ್ತಿರುವ ಈ ಏಡ್ಸ್ ಕಾಯಿಲೆಯ ಕುರಿತಾಗಿ ಈ ಸಂಘ ಪರಿವಾರದ ಮಂತ್ರಿಯ ಬೇಜವ್ದಾರಿ ಮತ್ತು ಮತೀಯವಾದದ ಚಿಂತನೆಗಳಿಗೆ ಏನನನ್ನುವುದು?

ಸಣ್ಣದಾದ ಸರ್ಕಾರ, ವಿಶಾಲವಾದ,ಪರಮಾವಧಿಯ ಆಡಳಿತ (minimum government, maximum governance) ಎನ್ನುವ ಮೋದಿಯ ಜನಪ್ರಿಯ ಸ್ಲೋಗನ್ ಗಳ ಅರ್ಥವ್ಯಾಪ್ತಿಯು ಮೇಲ್ಕಾಣಿಸಿದ ರೀತಿಯಲ್ಲಿ ಮುಂದಿನ ವರ್ಷಗಳಲ್ಲಿ ತನ್ನ ಹೆಡೆ ಬಿಚ್ಚಲಾರಂಬಿಸುತ್ತದೆ. ಇಂದು ಹಿಂದುತ್ವವಾದಿಗಳಿಗೆ ಒಬ್ಬ messiah ನಂತೆ ಕಂಗೊಳಿಸುತ್ತಿರುವ ನರೇಂದ್ರ ಮೋದಿ ಇಂಡಿಯಾದ ಸಂವಿಧಾನದ ವಿಧಿ ನಿಯಮಗಳಲ್ಲಿ ದಿನನಿತ್ಯ ಲೋಪಗಳನ್ನು ಹುಡುಕುತ್ತಾ ಅದಕ್ಕೆ ಪರ್ಯಾಯವಾಗಿ ಮತೀಯವಾದಿ ಬಲಪಂಥೀಯ ರಾಜಕಾರಣಕ್ಕೆ ಮುನ್ನುಡಿ ಬರೆಯಲಾರಂಬಿಸಿದ್ದಾರೆ. ನಾವು ಇದಕ್ಕೆ ಪರ್ಯಾಯವಾಗಿ ಬಹು ಸಂಸ್ಕೃತಿಯ ಜನಪರ ರಾಜಕಾರಣದ ಸಾಮಾಜಿಕ-ಆರ್ಥಿಕ ಮಾದರಿಗಳನ್ನು ಮುಂದೆ ಕಟ್ಟದೇ ಹೋದರೆ ಮೋದಿಯ ಈ ಮತೀಯವಾದಿ ಮುನ್ನುಡಿ ಹಿಗ್ಗುತ್ತ ಹೋಗುತ್ತದೆ.ಆಗ ಸಂವಿಧಾನ ಕಳಚಿಕೊಳ್ಳುವುದನ್ನು ಯಾರೂ ತಪ್ಪಿಸಲಾರರು.