Daily Archives: August 13, 2014

ಅತ್ಯಾಚಾರವೂ ಅತಿರಂಜಿತ ಪ್ರಚಾರವೂ….

– ಡಾ. ಜಯಪ್ರಕಾಶ್ ಶೆಟ್ಟಿ ಹೆಚ್

ಕಳೆದ ಕೆಲವು ವಾರಗಳಿಂದ ನಾವಿರುವ ಕರ್ನಾಟಕ ಸುರಕ್ಷಿತವೇ ಅಥವಾ ನಾವೆಲ್ಲರೂ ಕೀಚಕರಾಗಿಬಿಟ್ಟಿದ್ದೇವೆಯೇ, ಇಲ್ಲ ಕರ್ನಾಟಕದ ತುಂಬೆಲ್ಲಾ ಅನಾಥ ಸೈರೆಂದ್ರಿಯರೇ ತುಂಬಿದ್ದಾರೆಯೇ ಎಂದು ಆತಂಕಪಡುವಂತಾಗಿದೆ. ಯಾಕೆಂದರೆ ಕರ್ನಾಟಕವನ್ನು ಕುರಿತಂತೆ ಹಿಂದೆಂದೂ ಕಂಡಿರದ ‘ಕರಾಳ ಕರ್ನಾಟಕ’, ‘ಕೀಚಕ ಕರ್ನಾಟಕ’, ‘ಕಾಮುಕ ಕರ್ನಾಟಕ’ ಎಂಬ ಸಾಮೂಹಿಕ ನೆಲೆಯ ನಾಮಫಲಕಗಳು ಈ ಅವಧಿಯಲ್ಲಿ ರಾರಾಜಿಸಿವೆ. ಆಳುವ ಸರ್ಕಾರ ಮತ್ತು ಪೋಲೀಸ್ ವ್ಯವಸ್ಥೆಗಳೇ ಸೇರಿಕೊಂಡು ಕರ್ನಾಟಕವನ್ನು ಕುಲಗೆಡಿಸಿ ಸಂಭ್ರಮಿಸುತ್ತಿವೆ ಎಂಬರ್ಥದ ಚರ್ಚಾಗೋಷ್ಠಿ rape-illustrationಹಾಗೂ ಬೀದಿ ಮಾತುಗಳನ್ನು ನಿರಂತರವಾಗಿ ಉತ್ಪಾದಿಸಲಾಗುತ್ತಿದೆ. ಇಡಿಯ ಪ್ರಚಾರದಲ್ಲಿ ಕರ್ನಾಟಕದಲ್ಲಿ ಇದೇ ಮೊದಲಬಾರಿಗೆ ಹೆಣ್ಣಿನ ಮೇಲೆ ದಾಳಿ ನಡೆಯುತ್ತಿದೆ ಎಂಬ ವರಸೆ ಇದೆ. ಟಿಆರ್‌ಪಿ ಮೇಲೆ ಕಣ್ಣಿಟ್ಟ ಮಾಧ್ಯಮಗಳಂತೂ ಎಲ್ಲವನ್ನೂ ಅತ್ಯಾಚಾರದ ಪೊಟ್ಟಣದಲ್ಲಿಯೇ ಸುತ್ತಿಟ್ಟು ಮಾರುತ್ತಿವೆ. ಈ ಎಲ್ಲಾ ಅಬ್ಬರದ ಪ್ರಚಾರಗಳು ಮನೆಯಿಂದ ಹೊರಹೋಗಿ ಬರುವ ತಮ್ಮದೇ ಮಕ್ಕಳನ್ನು ಹೆತ್ತವರು ಅನುಮಾನ ಮತ್ತು ಭಯದಿಂದ ಮೂಸಿನೋಡುವ ವಾತಾವರಣ ನಿರ್ಮಿಸಿದ್ದರೆ ಅಚ್ಚರಿಯಿಲ್ಲ. ಯಾಕೆಂದರೆ ಆ ಒಟ್ಟೂ ಪ್ರಚಾರಗಳು ಕರ್ನಾಟಕವನ್ನು ಹೆಣ್ಣಿನ ಬದುಕಿಗೆ ಅನರ್ಹವಾದ ನೆಲವೆಂದೇ ನಿರ್ಧರಿಸಿಬಿಟ್ಟಿವೆ. ಇನ್ನೊಂದು ಕಡೆಯಿಂದ ಈ ಬೊಬ್ಬೆಯನ್ನೇ ಅಪೇಕ್ಷಿಸಿದ ಕೆಲವು ಸ್ಥಾಪಿತ ಹಿತಾಸಕ್ತಿಗಳು ಹೆಣ್ಣಿನ ಮಾನ ಪ್ರಾಣದ ರಕ್ಷಣೆಯ ಹೊಣೆ ತಮ್ಮದೇ ಎಂದು ಆವಾಹನೆಗೊಳಗಾದಂತೆ ಕುಣಿದಿವೆ. ಈ ನಡುವೆ ನಿಧಾನವಾಗಿ ಒಂದೆರಡು ಖೊಟ್ಟಿ ಅತ್ಯಾಚಾರ ಪ್ರಕರಣಗಳೂ ಮೂಡಿಬಂದುವೆನ್ನಿ. ಹೆಣ್ಣ್ಣೂರಿನ ಅತ್ಯಾಚಾರದ ಸುತ್ತ ಇರುವ ಅನುಮಾನವೋ, ಬೆಳಗಾವಿಯ ಯುವಕ-ಯುವತಿಯರ ಕಿಡ್ನ್ಯಾಪ್ ತಮಾಷೆಯೋ, ಬೆಂಗಳೂರಿನ ಜ್ಯೋತಿಷಿಯ ಕಪಾಳಕ್ಕೆ ಬಾರಿಸಿದ ಮಹಿಳೆಯರ ಆಟೋಪವೋ ಸುದ್ದಿಯಾಗಿ ಸತ್ಯದ ಇನ್ನೊಂದು ಮುಖದ ಆಂಶಿಕ ದರ್ಶನವೂ ಆದುದಿದೆ. ಆದರೆ ಅಷೊತ್ತಿಗಾಗಲೇ ಕರ್ನಾಟಕಕ್ಕೆ ಆಗಬಾರದ ಅಪಮಾನವೊಂದು ಆಗಿಹೋಗಿದೆ. ಕನ್ನಡನೆಲಕ್ಕೆ ಸಲ್ಲದ ಅಪನಾಮವೊಂದನ್ನು ಅಂಟಿಸಿಯಾಗಿದೆ.

ಈ ಅಬ್ಬರದ ಪ್ರಚಾರ, ಪ್ರತಿಕ್ರಿಯೆಗಳೆಲ್ಲವನ್ನು ಬದಿಗಿರಿಸಿಕೊಂಡು ನೋಡಿದಾಗಲೂ ಲೈಂಗಿಕ ಆಕ್ರಮಣ ಮಾದರಿಯ ಘಟನಾವಳಿಗಳ ಸರಣಿಯು ಯಾವ ನಾಗರಿಕಸಮಾಜಕ್ಕೂ ಗೌರವ ತರುವಂಥದ್ದಲ್ಲ. ಅದನ್ನು ಖಂಡಿಸಿ ದಂಡಿಸುವ ಜೊತೆಗೆ ಸಂಭವಿಸದಂತೆ ತಡೆಯುವುದು, ಗೌರವದ ಬಾಳು ಬಾಳಲು ಬಯಸುವ ಎಲ್ಲರ ಕರ್ತವ್ಯ. ಅಂತಹ ಘಟನೆಗಳನ್ನು ತಹಬಂದಿಗೆ ತರುವಲ್ಲಿ ಒಂದು ಸಮೂಹವಾಗಿ ಒಟ್ಟಿಗೆ ಸೇರಿಕೊಳ್ಳಬೇಕಾದ ಜವಾಬ್ದಾರಿಯೂ ನಮಗಿದೆ. ಅತ್ಯಾಚಾರವೆಂಬ ಅನಾಗರಿಕವರ್ತನೆ ಹೊಸತಾಗಿ ನಡೆಯುತ್ತಿಲ್ಲ ಎಂಬ ಸಮರ್ಥನೆಯೂ ಇಲ್ಲಿ ಸಲ್ಲದು. ಅನಾದಿಯಿಂದ ನಡೆದು ಬಂದಿರುವ ಅಮಾನವೀಯತೆಯ ಕುರಿತ ಎಚ್ಚರಕ್ಕಾಗಿಯೇ ಈ ಎಲ್ಲಾ ಪ್ರಚಾರಗಳು ನಡೆಯುವುದಾದಲ್ಲಿ ಅದು ಸ್ವಾಗತಾರ್ಹವೇ. ಆದರೆ ಆ ವಿರೋಧವು ಯಾರನ್ನೋ ಅಪರಾಧಿಸ್ಥಾನದಲ್ಲಿ ನಿಲ್ಲಿಸಿ, ಇನ್ನಾರನ್ನೋ ಅದರ ಫಲಾನುಭವಿಯಾಗಿಸುವ ವಾಸನೆಯಿಂದ ಕೂಡಿರಬಾರದು. ‘ಹೆಣ ಇಟ್ಟುಕೊಂಡು ಹೆಗ್ಗೆ ಹುಡುಕಿದ ಹಾಗೆ ಆಗಬಾರದು’ (ಹೆಗ್ಗೆ=ಚನ್ನೆಮಾಣಿ ಆಟದಲ್ಲಿ ಬಳಕೆಯಾಗುವ ಲಾಭದ ಪರಿಭಾಷೆ). ಇದು ಆಟದ ಹೊತ್ತೂ ಅಲ್ಲ. ಆಟದ ವಿಚಾರವೂ ಅಲ್ಲ. ಇಲ್ಲಿ ಪಕ್ಷವೈರ, ಅಧಿಕಾರದ ಕುರಿತಾದ ಅಸಹನೆ ಖಂಡಿತಾ ಸಲ್ಲದು. ಮಧ್ಯರಾತ್ರಿ ಹನ್ನೆರಡರ ಅವಧಿಗೂ tv-mediaಹೆಣ್ಣೊಬ್ಬಳು ನಿರ್ಭೀತಳಾಗಿ ಸಾಗಬಹುದಾದ ಭಾರತ ನಮ್ಮದಾಗಬೇಕೆಂಬುದು ಬಾಪೂ ಕಂಡ ಕನಸು. ನಾವು ಕಾಡಿಬೇಡಿ ಪಡೆದ ಸ್ವಾತಂತ್ರ್ಯದೊಳಗೆ ಆ ಆಶಯವೂ ಇದೆ. ಅದು ಕಾಣೆಯಾಗುತ್ತಿದ್ದರೆ ನಮ್ಮ ಸ್ವಾತಂತ್ರ್ಯದ ಭಾಗವೊಂದನ್ನು ನಾವು ಕಳೆದುಕೊಳ್ಳುತ್ತಿದ್ದೇವೆ ಎಂದೇ ಅರ್ಥ. ಇಂತಹದ್ದೊಂದು ಎಚ್ಚರವನ್ನು ಜತನದಿಂದ ಕಾಪಾಡುವುದು ತಿಳುವಳಿಕೆಯನ್ನು ಹಂಚುವ ಹಾಗೂ ತಿಳುವಳಿಕೆಯ ರಕ್ಷಕರೆನಿಸಿದ ಎಲ್ಲ ವ್ಯಕ್ತಿ ಮತ್ತು ಕೇಂದ್ರಗಳ ಕರ್ತವ್ಯ. ಆದರೆ ಈ ಜವಾಬ್ದಾರಿಯನ್ನು ಮೂಡಿಸಬೇಕಾದ ಮಾಧ್ಯಮಗಳು ಹೇಗೆ ವರ್ತಿಸಿದುವು? ಸಮೂಹದ ನಾಗರಿಕ ಸ್ವಾಸ್ಥ್ಯವನ್ನು ತಮ್ಮದೇ ನೈತಿಕ ಮಾದರಿಯ ಮೂಲಕ ಎತ್ತರಿಸಬೇಕಾದ ಹೊಣೆಗಾರಿಕೆ ಇರುವವವರು ತಾವು ಈಗಾಗಲೇ ನಡೆದು ತೋರಿದ ದಾರಿಯನ್ನು ಮರೆತು ಮಾತನಾಡಿದ ಬಗೆ ಹೇಗಿತ್ತು? ಅದನ್ನು ನೆನೆದರೆ ನೋವೆನಿಸುತ್ತದೆ. ಅರಿವು ಮೂಡಿಸುವಂತೆ ವರ್ತಿಸುವುದಾಗಿ ಹೇಳಿಕೊಂಡ ಮಾಧ್ಯಮಗಳಾಗಲೀ, ಕಾವಲುಗಾರನಂತೆ ಕಾವಲು ಕಾಯಬೇಕಾದ ರಾಜಕಾರಣವಾಗಲೀ ತಮ್ಮ ಆತ್ಮಾವಲೋಕನಕ್ಕೆ ಅವಕಾಶ ಮಾಡಿಕೊಂಡಂತೆ ಕಾಣಿಸಲೇ ಇಲ್ಲ. ಒಂದೇ ಸೊಲ್ಲಿಗೆ ಕರ್ನಾಟಕವನ್ನು ಕೀಚಕರ ಆಡುಂಬೊಲ ಎಂಬಂತೆ ಹೆಸರಿಸಿಬಿಡುವ ಧಾವಂತ ತೋರಿದ ಮಾಧ್ಯಮಗಳಿಗೆ, ಈ ನಾಡು ತನ್ನ ಸೀಮಿತ ವ್ಯಾಪ್ತಿಯಲ್ಲಿಯೇ ಪುರುಷ ದೌರ್ಜನ್ಯಕ್ಕೆ ದಿಟ್ಟ ಉತ್ತರವನ್ನು ಕೊಟ್ಟ ಹೆಮ್ಮಕ್ಕಳ ಸ್ಮೃತಿಯಿಂದಲೂ ಕೂಡಿದೆ ಎಂದೆನಿಸಲಿಲ್ಲ. ಸೀರೆಯ ಮಡಿಕೆ ಕಳೆದುದಕ್ಕೆ ಗಂಡನನ್ನು ತರಾಟೆಗೆ ತೆಗೆದುಕೊಳ್ಳಬಲ್ಲ ಕರಾವಳಿಯ ಸಿರಿ; ಅನುಮಾನಕ್ಕೆ ಬಲಿಯಾಗಿ ಶೀಲಕಾಯ್ದುಕೊಳ್ಳುವ ಭಾಷೆಗೆ ಆಗ್ರಹಿಸಿದ ಗಂಡನನ್ನೇ ಮೀರಬಲ್ಲ ಮಲೆಮಹದೇಶ್ವರದ ಸಂಕವ್ವ; ‘ಸಾವಕೆಡುವ ಗಂಡರನ್ನು ಒಲೆಯೊಳಗಿಕ್ಕುವಂತೆ’ ಆರ್ಭಟಿಸಿದ ಮಹಾದೇವಿಯಕ್ಕನಂಥವರ ಸ್ಮೃತಿಯನ್ನು ಬಚ್ಚಿಟ್ಟುಕೊಂಡ ನಾಡು ಎಂಬ ಅರಿವನ್ನು ಮೆಲುಕು ಹಾಕುವ ಕೆಸವೂ ಆಗಲಿಲ್ಲ.

ಯಾಕೆಂದರೆ ಇದು ಅಬಲೆಯರ ನಾಡಲ್ಲ. ತಾಯ್ತನದ ದಟ್ಟ ಚಹರೆಯೊಂದಿಗೆ ಹೆಣ್ತನಕ್ಕೆ ಹೊರೆಯಾಗುವ ಅನೇಕ ಅನಿಷ್ಟಗಳಿಂದ ತನ್ನನ್ನು ಮುಕ್ತವಾಗಿಸಿಕೊಂಡ ನಾಡು. ಕನ್ಯಾಮಾತೆಯರನ್ನೂ ಗೌರವಿಸುವ ಆಚರಣೆಗಳನ್ನು ತನ್ನ ಒಡಲಲ್ಲಿ ಬಚ್ಚಿಟ್ಟುಕೊಂಡ ನಾಡು. woman-unchainedವಿಧವಾ ವಿವಾಹವನ್ನು ಯಾವುದೇ ಸಂಕೋಚವಿಲ್ಲದೆ ಸೀರುಡಿಕೆ, ಕೂಡಾವಳಿಯೆಂಬ ಸರಳ ನೆಲೆಯಲ್ಲಿ ಆಚರಿಸಿಕೊಂಡ ಇತಿಹಾಸವೂ ಇದಕ್ಕಿದೆ. ಇಂತಹ ಚರಿತ್ರೆಯುಳ್ಳ ನಾಡಿನ ಸಾಂಸ್ಕೃತಿಕವಿನ್ಯಾಸವು ಉಜ್ವಲವಾಗಿ ಹಾಗೆಯೇ ಉಳಿದಿದೆಯೆಂದಲ್ಲ. ಪರಂಪರೆಯ ಈ ವಿನ್ಯಾಸವನ್ನು ನಿಸ್ತೇಜಗೊಳಿಸುತ್ತಿರುವ ಶಕ್ತಿಗಳು ಸಾಂಸ್ಕೃತಿಕ ವಸಾಹತೀಕರಣ ಹಾಗೂ ಆಧುನಿಕತೆಯ ರೂಪದಲ್ಲಿ ಕ್ರಿಯಾಶೀಲವಾಗಿಯೇ ಇವೆ. ಹಾಗಿದ್ದೂ ಕರ್ನಾಟಕದ ಸಂಸ್ಕೃತಿ ಕೀಚಕಸಂಸ್ಕೃತಿ ಆಗಿಲ್ಲ. ಸೀರೆ ಎಳೆದು ಸಂಭ್ರಮಿಸುವುದು ಕನ್ನಡನೆಲೆದ ಯಾವ iಹಾಕಾವ್ಯದ ವಸ್ತುವೂ ಅಲ್ಲ. ಸೀಮಂತಕ್ಕೆ ತಂದ ಸೀರೆಯನ್ನು ಸೂಳೆಗೆ ಉಡಿಸಿ ಮಡಿಕೆ ಕಳೆದನೆಂಬ ಕಾರಣಕ್ಕೆ, ಗಂಡನನ್ನೇ ಆತನ ನೈತಿಕ ದೋಷಕ್ಕಾಗಿ ದಿಕ್ಕರಿಸಬಲ್ಲ ಹೆಣ್ತನದಚರಿತೆ ಈ ನೆಲದ ಮಹಾಕಾವ್ಯ. ನಾಡಿನುದ್ದಕ್ಕೂ ಇರುವ ಶಾಸನಗಳು, ವೀರಗಲ್ಲುಗಳು ಹೆಣ್ಣಿನ ಮಾನಕ್ಕಾಗಿ ಬಲಿಯಾದವರ ಕಥನಗಳನ್ನು ಹೇಳುತ್ತಿವೆ. ಹೆಣ್ಣನ್ನು ಹೊತ್ತೊಯ್ದ ಕಥೆಯನ್ನೋ, ಹೆಣ್ಣಿನ ಸೀರೆಯೆಳೆದ ಕಥೆಯನ್ನೋ ನೆಲದ ಕಥನವಾಗಿ ಹೊಂದಿರದ ನೆಲವೊಂದನ್ನು ಕೀಚಕರ ನಾಡಾಗಿ ಹೇಗೆ ಕರೆಯಲಾದೀತು?

ಈ ಹಿನ್ನೆಲೆಯೊಂದಿಗೆ ನಾಡೊಂದರ ಅಪನಾಮಕ್ಕೆ ಆಕ್ಷೇಪವೆತ್ತುವ ನಡುವೆ ಅತ್ಯಾಚಾರದಂತಹ ಹೆಣ್ತನದ ಮೇಲಿನ ಆಕ್ರಮಣವನ್ನು ನಿರ್ಲಕ್ಷಿಸಲಾಗದು. ಹಾಗೆಯೇ ಇಂತಹ ಸಾಮಾಜಿಕ ಪಿಡುಗೊಂದು ಘಟನೆ ಘಟಿಸಿದಲ್ಲದೆ ಪೋಲೀಸ್ ವ್ಯವಸ್ಥೆಯಂತಹ ತನಿಖಾಸಂಸ್ಥೆಯ ಸುಪರ್ದಿಗೆ ಬರಲಾರದೆಂಬುದೂ ನಮಗೆ ಅರ್ಥವಾಗಬೇಕು. ಎಷ್ಟೋವೇಳೆ ಘಟನೆಯ ನಂತರವೂ ಈ ಸಂಸ್ಥೆಯ ವ್ಯಾಪ್ತಿಗೆ ಬಾರದೆಯೂ ಉಳಿಯಬಹುದು. ಘಟನೋತ್ತರವಾಗಿ ಶಾಸನಾತ್ಮಕ ರಕ್ಷಣೆ ಪಡೆಯುವ ಬಲಿಪಶುಗಳ ಬದುಕು ಮೂರಾಬಟ್ಟೆಯಾಗಬಹುದಾದ ಅಪಾಯದ ಸಾಧ್ಯತೆ ಇದೆ. ಹಾಗಾಗಿ ಇದರ ನಿಯಂತ್ರಣಕ್ಕಿರುವ ಕ್ರಿಯಾಗತಿಗಳೇ ಹೆಚ್ಚು ಮುಖ್ಯವಾಗುತ್ತವೆ. ಅದರಲ್ಲಿ ಘಟನೆಗಳೇ ಘಟಿಸದಂತೆ ತಡೆಯುವ ಸಮುದಾಯ ಮನಸ್ಥಿತಿಯನ್ನು ರೂಪಿಸಲು ಯತ್ನಿಸುವುದು ಮೊದಲಿನದು. ಮಾಧ್ಯಮ ಮತ್ತು ರಾಜಕಾರಣವೂ ಸೇರಿದಂತೆ ಸಮುದಾಯದ ಹೊಣೆಯಿದು. ಒಂದೆರಡು ದಿನಗಳಲ್ಲಿ ಸಾಧ್ಯವಾಗಿಬಿಡುವ ಸಾಧನೆ ಇದಲ್ಲ. ಯಾವುದೇ ಸರ್ಕಾರವಷ್ಟೇ ಸಾಧಿಸಿ ಬಿಡಬಹುದಾದ ಯಶಸ್ಸೂ ಅಲ್ಲ. ಇಲ್ಲಿ ಸಮೂಹದ ಭಾಗವಹಿಸುವಿಕೆ ಮತ್ತದರ ಸಾಮಾಜಿಕ ಪ್ರಾಮಾಣಿಕತೆ ಮುಖ್ಯ. ಹೀಗಾಗಬೇಕಾದರೆ ಇದನ್ನು ರಾಜಕೀಯ ಸಮಸ್ಯೆಗಿಂತ ಸಾಮಾಜಿಕ ಸಮಸ್ಯೆಯಾಗಿ, ಯಾರ ಮನೆಗಾದರೂ ಹತ್ತಿಕೊಳ್ಳಬಲ್ಲ ಬೆಂಕಿಯಾಗಿಯೇ ಪರಿಭಾವಿಸಬೇಕಿದೆ. ಹೊರಗೆನಿಂತು ಕಲ್ಲುಹೊಡೆಯುವುದು ಸರ್ವಥಾ ಉಚಿತವಲ್ಲ. ಸಮಸ್ಯೆಯನ್ನು ನಿಭಾಯಿಸಬೇಕಾದ ಪೋಲಿಸ್ ವ್ಯವಸ್ಥೆಯ ಮನೋಸ್ಥೈರ್‍ಯ ಕೆಡಿಸುವ ಕೆಲಸವಂತೂ ಆಗಲೇಬಾರದು. ಅದು ಅಪಾಯಕಾರಿ ಪರಿಣಾಮವನ್ನು ಉಂಟುಮಾಡಬಲ್ಲುದು. ಕಾನೂನನ್ನು ಕೈಗೆತ್ತಿಕೊಳ್ಳುವ ಬೇಜವಾಬ್ದಾರಿ ಹೇಳಿಕೆಗಳಂತೂ ಅನಾಹುತಕಾರಿ.

ಇನ್ನು ಎರಡನೆಯದಾಗಿ ಸಮುದಾಯಸ್ಮೃತಿಯ ಸಾಂಸ್ಕೃತಿಕ ಎಳೆಗಳ ಮೂಲಕ ಹೆಣ್ಣುಮಕ್ಕಳಲ್ಲಿ ಮನೋಸ್ಥೈರ್‍ಯ ತುಂಬಿ Kalighat_Painting_Calcutta_19th_Century_-_Woman_Striking_Man_With_Broomಸಮಾಜದ ತಪ್ಪುಗ್ರಹಿಕೆಗಳನ್ನು ತಿದ್ದುವ ಕೆಲಸವೂ ಆಗಬೇಕಿದೆ. ಯಾಕೆಂದರೆ ಪ್ರತೀ ಜೀವಿಗೂ ಗೌರವದಿಂದ ಬದುಕುವ ಹಕ್ಕಿದೆ. ನಾಡಿನ ಸಾಂಸ್ಕೃತಿಕಪರಂಪರೆಯ ಜೀವಪರ ಎಳೆಗಳನ್ನು ಮುಂಚೂಣಿಗೆ ತಂದು, ಸಮೂಹದ ದನಿಗಳನ್ನು ಬಲವರ್ಧನೆಗೊಳಿಸುವ ಮೂಲಕ ಇದು ಸಾಧ್ಯವಿದೆ. ಅಕಸ್ಮಾತ್ತಾಗಿ ಸಂಭವಿಸಿದ ಕ್ಷುಲ್ಲಕ ಘಟನೆ ಹೆಣ್ಣೊಬ್ಬಳ ಬದುಕನ್ನೇ ಆಪೋಶನ ತೆಗೆದುಕೊಳ್ಳುವ ಅನಾಹುತವೆಂದು ನಿರ್ಧರಿಸಿಬಿಡುವ ಸಾಮಾಜಿಕ ಆವರಣವನ್ನು ಇದು ಪರಿವರ್ತನೆಗೆ ಒಗ್ಗಿಸಬಲ್ಲದು. ಆಘಾತಕ್ಕೆ ಪ್ರತಿಯಾಗಿ ಹೆಣ್ಣುಮಕ್ಕಳಲ್ಲಿ ಸ್ವಾವಲಂಬಿ ಮನಸ್ಥಿತಿಯನ್ನು ತುಂಬಬಲ್ಲದು. ಮದುವೆಯಾಗದೆ ಲೈಂಗಿಕಸಂಪರ್ಕಕ್ಕೆ ಒಳಪಡುವ, ಗರ್ಭಧರಿಸುವ ಹೆಣ್ಣನ್ನು ಒಂದು ಹೊರೆಯಾಗಿ, ತ್ಯಾಜ್ಯವಾಗಿ ಪರಿಭಾವಿಸುವ ಸಾಮಾಜಿಕ ಮನಸ್ಥಿತಿಯನ್ನು ತಿದ್ದಬಲ್ಲದು. ಇದಕ್ಕೆ ಪೂರಕವಾದ ಹೆಣ್ಣಿನ ಗೌರವದ ಬದುಕಿಗೆ ಸಂಬಂಧಿಸಿದ ಎಷ್ಟೋ ಆಚರಣೆಗಳು ಈ ನೆಲದ ಚರಿತ್ರೆಯಲ್ಲಿವೆ. ಅನೇಕ ಬುಡಕಟ್ಟು ಸಮುದಾಯದ ಆಚರಣೆಯಲ್ಲಿರುವ ‘ಕನ್ಯಾಮಾತೆ’ಯ ಕಲ್ಪನೆ ಇವುಗಳಲ್ಲೊಂದು. ಈ ಆಚರಣೆಯಲ್ಲಿ ಮದುವೆಯಾಗದೇ ಗರ್ಭಧರಿಸುವ ಹೆಣ್ಣು ದೂಷಿತೆಯಾಗದೆ ‘ಕನ್ಯಾಮಾತೆ’ ಎಂಬ ಪವಿತ್ರ ಸ್ಥಾನದಲ್ಲಿ ಗೌರವಿಸಲ್ಪಡುತ್ತಾಳೆ. (ಹಾಗೆ ನೋಡಿದರೆ ಕುಂತಿಯೂ ಒಬ್ಬ ಕನ್ಯಾಮಾತೆಯೇ ಅಲ್ಲವೇ?). ಇನ್ನು ವಿಧವೆ ಎನ್ನುವ ಸಂಸ್ಥೆಯನ್ನೇ ನಿರಾಕರಿಸಿದಂತಿರುವ ಮಾತೃಪ್ರಧಾನ ಪರಂಪರೆಯ ‘ಸೀರುಡಿಕೆ’ ಆಚರಣೆ, ಹೆಣ್ಣಿನ ಗೌರವದ ಬದುಕಿಗೆ ಒದಗಿದ ಇನ್ನೊಂದು ವಿಸ್ತರಣೆ. ಗಂಡನನ್ನು ಕಳೆದುಕೊಂಡ ಹೆಣ್ಣೊಬ್ಬಳಿಗೆ ತನ್ನ ಯೌವನಕ್ಕೆ ತಕ್ಕುದಾದ ಇನ್ನೊಂದು ಸಂಬಂಧವನ್ನು ಸಹಜವಾಗಿ ಹೊಂದಲು ಇದು ಅವಕಾಶ ಮಾಡಿಕೊಡುತ್ತದೆ. ಇಲ್ಲೆಲ್ಲಾ ಲೈಂಗಿಕತೆಯ ಕುರಿತ ಅತಿಸೂಕ್ಷ್ಮ ವಿಶ್ಲೇಷಣೆ ಇಲ್ಲ. ಮದುವೆ ಎನ್ನುವ ಸಂಸ್ಥೆಯ ಅತಿವೈಭವೀಕರಣವೂ ಇಲ್ಲ. ಇಂತಹ ಆಚರಣೆಗಳು ಈ ನೆಲದ ಸಂಸ್ಕೃತಿಯ ಭಾಗ. ಇವು ಹೆಣ್ಣನ್ನು ತ್ಯಾಜ್ಯವೆಂದು ಪರಿಗಣಿಸುವುದಿಲ್ಲ. ಇಲ್ಲಿ ಅವಳೊಂದು ಅನುಭೋಗದ ವಸ್ತುವಷ್ಠೇ ಅಲ್ಲ. ತಾಯಿಯಾಗಿಯೂ ಗೌರವಾರ್ಹಳು. ಇಂತಹ ಸಮುದಾಯಸ್ಮೃತಿಯ ಅರಿವಿನ ಮೂಲಕವೂ ಹೆಣ್ಣಿನ ಕುರಿತಾದ ಸಾಮಾಜಿಕ ಮನಸ್ಥಿತಿಯನ್ನು ಗುಣಾತ್ಮಕವಾಗಿ ಬದಲಿಸಲು ಸಾಧ್ಯವಿದೆ. ಇದು ನಿಜಕ್ಕೂ ಆಗಬೇಕಾದ ಕೆಲಸ.

ಇವೆಲ್ಲವನ್ನೂ ಮರೆತುಬಿಟ್ಟು ಕರ್ನಾಟಕವನ್ನು ಸಾರ್ವಜನಿಕವಾಗಿ ಅಪಮಾನಿಸುವ ಹಾಗೆ ಕೂಗುಹಾಕಿದ ಮಾಧ್ಯಮಗಳ ವಿಚಾರಕ್ಕೆ ಬಂದರೆ ಸಹಜವಾಗಿಯೆ ಆತಂಕವೆನಿಸುತ್ತದೆ. ಯಾಕೆಂದರೆ ಇವು ಸುದ್ದಿಮಾಡುವಾಗ ವ್ಯಕ್ತಿಯ ಖಾಸಗಿತನದ ಗೌರವವನ್ನು ಕಾಪಾಡುವಲ್ಲಿ ವಹಿಸಬೇಕಾದ ಎಚ್ಚರವನ್ನು ಮರೆತೇ ಬಿಟ್ಟಿವೆ. ಅತ್ಯಾಚಾರ ಆಕ್ರಮಣದ ಬಲಿಪಶುಗಳೆನಿಸಿದವರ ಮುಖಭಾಗವನ್ನಷ್ಟೇ ಒಂದಿಷ್ಟು ಮಸುಕುಮಾಡಿ, ಉಟ್ಟ ಸೀರೆ, ಬಟ್ಟೆ, ಬದುಕುವ ಆವರಣವೆಲ್ಲವನ್ನು ಎಗ್ಗಿಲ್ಲದೆ ತೋರುವ ಹೊಣೆಗೇಡಿತನದಲ್ಲಿ ವಿಜೃಂಭಿಸಿವೆ. ಕ್ಯಾಮರಾ ಇರುವುದೇ ಎಲ್ಲವನ್ನೂ ತೋರಿಬಿಡಲು ಎಂದು tv-mediaನಿರ್ಧರಿಸಿ, ಸುದ್ದಿಯನ್ನು ರೋಚಕಗೊಳಿಸುವ ಬರದಲ್ಲಿ ಇವು ಸಾಮಾಜಿಕಸಮಸ್ಯೆ ಹಾಗೂ ಕಾನೂನು ವ್ಯವಸ್ಥೆಯ ಆತಂಕಗಳನ್ನು ಹುಟ್ಟುಹಾಕುತ್ತಿವೆ. ಇದರ ಹಿಂದೆ ಸಮುದಾಯಗಳನ್ನು ಎತ್ತಿಕಟ್ಟುವ ರಾಜಕೀಯಸೂಕ್ಷ್ಮವೇ ಇದ್ದುದು ಹೌದಾದಲ್ಲಿ, ಇದು ಹೊಣೆಗೇಡಿತನವಲ್ಲ. ಉದ್ದೇಶಿತ. ಆದರೆ ಆಪಾಯಕಾರಿ. ಮಾಧ್ಯಮಗಳಲ್ಲಿ ಈ ಕುರಿತ ಆತ್ಮಾವಲೋಕನ ನಡೆದಂತಿಲ್ಲ. ಇನ್ನು ಈ ಮಾಧ್ಯಮಗಳ ದೈನಿಕವರ್ತನೆ ಹೇಗಿದೆ? ವಿಜ್ಞಾನದ ಉತ್ಪನ್ನಗಳಾದ ವಿಜ್ಞಾನವು ಅಗತ್ಯವಾಗಿ ಅಪೇಕ್ಷಿಸುವ ವೈಚಾರಿಕ ಮನೋಧರ್ಮಕ್ಕೆ ಇವು ಅರ್ಹವಾಗಿವೆಯೇ? ಪ್ರಜಾಪ್ರಭುತ್ವದ ಇರುವಿಕೆಯ ಕುರುಹುಗಳಲ್ಲೊಂದಾಗಿ ಪ್ರಜಾಪ್ರಭುತ್ವಕ್ಕೆ ಬೇಕಾದ ಪಾರದರ್ಶಕತೆ, ನಿಷ್ಪಕ್ಷಪಾತ ನಡವಳಿಕೆಯನ್ನು ಅವು ರೂಢಿಸಿಕೊಂಡಿವೆಯೇ? ಈ ಪ್ರಶ್ನೆಗಳೂ ಇಲ್ಲಿ ಮುಖ್ಯವಾಗುತ್ತವೆ. ಯಾಕೆಂದರೆ ದಿನಬೆಳಗಾದರೆ ಜನರ ಮೆದುಳಿಗೆ ವೈಚಾರಿಕತೆಯ ಬದಲು ಮೌಢ್ಯ, ಕ್ರೌರ್‍ಯ, ಅಜ್ಞಾನದ ಕಸದರಾಶಿಯನ್ನು ತುಂಬಿಸುತ್ತಿರುವ ಮಾಧ್ಯಮಗಳಿವು. ವಿಜ್ಞಾನದ ಸಾಧನಗಳಾಗಿಯೂ ಮೌಢ್ಯ, ಹಿಂಸೆ ಮತ್ತು ಕಾಮವನ್ನು ಹಸಿಹಸಿಯಾದ ರೋಚಕ ಕಥನಗಳಾಗಿಸಿ ಬೀದಿಯಲ್ಲಿ ಬಿಕರಿಗಿಟ್ಟವುಗಳಿವು. ಈ ಅರ್ಥದಲ್ಲಿ ಸಾಮಾಜಿಕ ಸ್ವಾಸ್ಥ್ಯದ ಕುರಿತು ಮಾತನಾಡುವ ನೈತಿಕತೆ ಹಕ್ಕನ್ನೇ ಅವು ಎಂದೋ ಕಳೆದುಕೊಂಡಿವೆ. ತಾವು ತಂದು ತುಂಬುತ್ತಿರುವ ಕಸದ ಕುರಿತಾದ ಎಚ್ಚರ ಹಾಗೂ ಕರ್ನಾಟಕದ ಸಾಂಸ್ಕೃತಿಕ ಬೇರುಗಳ ಪರಿಚಯ ಎರಡೂ ಇಲ್ಲದೆ, ಅವು ಕರ್ನಾಟಕ ಕೆಟ್ಟೇ ಹೋಗಿದೆ ಎಂದು ಕೂಗುತ್ತಿವೆ. ಕರ್ನಾಟಕ ಕೆಟ್ಟಿದ್ದರೆ ಅದು ನಮ್ಮೆಲ್ಲರಿಂದ ಕೆಟ್ಟಿದೆ. ಅದನ್ನು ಸರಿಮಾಡುವ ಹೊಣೆ ಎಲ್ಲರ ಮೇಲೆಯೂ ಇದೆ. ಈ ಆತ್ಮಾವಲೋಕನ ಮಾಧ್ಯಮ ಮತ್ತು ಸಮೂಹಗಳೆರಡರಲ್ಲೂ ಉಂಟಾಗಬೇಕಾದುದು ನಾಡಿನ ನಾಳೆಗಾಗಿ ಅಗತ್ಯವಿದೆ.

ಕೊನೆಯದಾಗಿ ಈ ಮಾಧ್ಯಮಗಳು ಎಬ್ಬಿಸುತ್ತಿರುವ ಧೂಳಿನ ಆಳದಲ್ಲಿ ಅಡಗಿರುವ ಮಾರುಕಟ್ಟೆಯ ರಾಜಕಾರಣ ಮತ್ತು ಸಾಂಸ್ಕೃತಿಕ ರಾಜಕಾರಣವನ್ನು ಮರೆಯುವಂತಿಲ್ಲ. ಯಾಕೆಂದರೆ ಮಾಧ್ಯಮಗಳು ಅತ್ಯಾಚಾರದ ಸುದ್ದಿಗಳನ್ನು ಬಿತ್ತರಿಸಿದಷ್ಟೇ ವೇಗದಲ್ಲಿ ಸಿ.ಸಿ.ಕ್ಯಾಮರಾಗಳ woman-insightಅಳವಡಿಕೆಯ ಪರವಾದ ಜನಾಭಿಪ್ರಾಯವನ್ನೂ ರೂಪಿಸುತ್ತಿವೆ. ಆತ್ಮರಕ್ಷಣೆಯ ತರಬೇತಿ ಕೋರ್ಸ್‌ಗಳನ್ನು ಗರಿಗೆದರಿಸುತ್ತಿವೆ. ಇದಕ್ಕೂ ಹೆಚ್ಚಾಗಿ ಮಹಿಳೆ ಮನೆಯಿಂದ ಹೊರಗಿರುವುದು ಅಸುರಕ್ಷಿತವೆಂಬ ಸಂಪ್ರದಾಯವಾದಿಗಳ ಕೊನೆಯಾಸೆ ಈಡೇರಿಸುವ ಕೆಲಸವನ್ನೂ ಮಾಡುತ್ತಿವೆ. ಇವೆಲ್ಲದರ ಬೆಳಕಿನಲ್ಲಿ ರಾಜಕಾರಣದಲ್ಲಿ ಇರುವವರು ಅಧಿಕಾರದಲ್ಲಿ ಇಲ್ಲದಿರುವುದು ಆಪಾದನೆ ಮಾಡಲು ರಹದಾರಿಯೆಂದು ಭಾವಿಸಿಕೊಳ್ಳಬಾರದು. ಅಧಿಕಾರದಲ್ಲಿ ಇರುವವರು ಸಮರ್ಥಿಸಿಕೊಳ್ಳುವುದನ್ನಷ್ಟೇ ಮಾಡಬಾರದು. ಬದಲಿಗೆ ಇಬ್ಬರೂ ಕೂಡಿ ಶತಮಾನದಾಚೆಯ ದೂರದೃಷ್ಟಿಯ ರಾಜಕಾರಣದಲ್ಲಿ ತೊಡಗಿಕೊಳ್ಳಬೇಕಿದೆ. ಏಕೆಂದರೆ ಆರ್ಭಟಿಸುವುದಷ್ಟೇ ಸಾಮಾಜಿಕ ಕಾಳಜಿಯ ಸಂಕೇತವಲ್ಲ. ರಾಜಕಾರಣ ಮಾಡುವವರಿಗೆ ಅಧಿಕಾರದೊಳಗೆ ಇರುವಾಗ ಮತ್ತು ಹೊರಗಿರುವಾಗ ತಾವು ಸಾರ್ವಜನಿಕವಾಗಿ ನಡೆದುಕೊಂಡ ತಮ್ಮದೇ ಮಾದರಿಗಳನ್ನು ತುಲನಾತ್ಮಕವಾಗಿ ವಿವರಿಸಿಕೊಳ್ಳುವ ನೈತಿಕತೆ ಇರಬೇಕು. ಹೀಗೆ ಕರ್ನಾಟಕ ಸಂಸ್ಕೃತಿಯ ಅರಿವು ಹಾಗೂ ತಮ್ಮದೇ ನಡವಳಿಕೆಗಳ ಕುರಿತಾದ ಆತ್ಮಾವಲೋಕನದ ಮೂಲಕ ವಿಷವನ್ನೇ ಔಷಧಿ ಎಂದು ನಂಬಿಸಬಲ್ಲ ಮಾರುಕಟ್ಟೆ ಮತ್ತು ರೂಢಿವಾದದ ಹತಾರಗಳ ಕುರಿತ ಸಾತ್ವಿಕ ಆಕ್ರೋಶವೊಂದು ನಮ್ಮಲ್ಲಿ ಸಾಧ್ಯವಾಗಬೇಕು. ಮಹಿಳಾಸುರಕ್ಷತೆಯ ನೆಪದಲ್ಲಿ ಮಹಿಳೆಯನ್ನು ನೇಪಥ್ಯಕ್ಕೆ ತಳ್ಳಲು ಹವಣಿಸುತ್ತಿರುವ ಮೂಲಭೂತವಾದಿಶಕ್ತಿಗಳ ಸಂಚುಗಳನ್ನು ಬೆತ್ತಲಾಗಿಸಬೇಕು. ಹಾಗಾದಲ್ಲಿ ಮಾತ್ರ ಒಟ್ಟು ಸಂಗತಿಗಳು ಸುದ್ದಿಯ ಸಂಭ್ರಮಕ್ಕಿಂತ ಬದ್ಧತೆಯ ಬದಲಾವಣೆಗೆ ಭೂಮಿಕೆಯಾಗಬಲ್ಲವು.