Monthly Archives: September 2014

ಹುಷಾರು, ನಾನು ಹಿಂದೂ ಆಗಿ ಮತಾಂತರಗೊಳ್ಳುತ್ತೇನೆ

ಇಂಗ್ಲೀಷ್ : ಹಸನ್ ಸುರೂರ್
ಅನುವಾದ : ಬಿ.ಶ್ರೀಪಾದ ಭಟ್ 

ಮುಸ್ಲಿಂ ತುಚ್ಛೀಕರಣವು ಕೆಲಸ ಮಾಡುತ್ತಿಲ್ಲ, ಆರೆಸಸ್ ಮುಖ್ಯಸ್ಥರಿಗೆ ಒಂದು ಬಹಿರಂಗ ಪತ್ರ

ಪ್ರೀತಿಯ ಶ್ರೀ ಮೋಹನ್ ಭಾಗವತ್‌ಜೀ,

ನಮಸ್ಕಾರ. ಎಲ್ಲಾ ಭಾರತೀಯರನ್ನು ಹಿಂದೂಗಳೆಂದೇ ಪರಿಗಣಿಸಿ ಎಂದು ಕರೆ ಕೊಟ್ಟ ನಿಮ್ಮ ಹೇಳಿಕೆಯನ್ನು ಅತ್ಯಂತ ಎಚ್ಚರಿಕೆಯಿಂದ ಪರಮಾರ್ಶಿಸಿದ ನಂತರ ನಿಮಗೆ ಖುಷಿಯ ವಿಚಾರವೊಂದನ್ನು ತಿಳಿಸಬೇಕೆಂದಿದ್ದೇನೆ. ಅದೇನು ಗೊತ್ತೆ ನಾನು ಹಿಂದೂ ಆಗಲು ನಿರ್ಧರಿಸಿದ್ದೇನೆ.ಇದನ್ನು ಸೆಕ್ಯುಲರ್ ಇಂಡಿಯಾದಲ್ಲಿನ ಮೊಟ್ಟ ಮೊದಲ “ಹಿಂದೂ ಮುಸ್ಲಿಂ” ಎಂದು ಕರೆಯಬೇಕೆ ಅಥವಾ ಅದು “ಮುಸ್ಲಿಂ ಹಿಂದೂ” ಎಂದಿರಬೇಕಿತ್ತೆ ಸರ್ ? ದಯವಿಟ್ಟು ನೀವು ನನಗೆ ಮಾರ್ಗದರ್ಶನ ಮಾಡಿ. ಏಕೆಂದರೆ ಇಂದಿನ ದಿನಗಳಲ್ಲಿ ನಿಮ್ಮ ಮಾತೇ ಕಡೆಯ ವಾಕ್ಯ. ಪ್ರಧಾನಮಂತ್ರಿಯಾಗಿ ನೀವು ತಂದು ಕೂಡಿಸಿರುವ ಈ ಮೋದಿ ಎನ್ನುವ ವ್ಯಕ್ತಿ ಕಚ್ಚುವುದರ ಬದಲಾಗಿ ಕೇವಲ ಗುರುಗುಟ್ಟುತ್ತಾನೆ. bhagvat-gadkari-modiನೀವೇ ನಿಜವಾದ ವ್ಯಾಪಾರಸ್ಥ.

ಸಾಂಸ್ಕೃತಿಕ ರಾಷ್ಟ್ರೀಯತೆಯಂತಹ ಸಂಕೀರ್ಣ ವಿಷಯವನ್ನು ತುಂಬಾ ಸರಳೀಕರಣಗೊಳಿಸಿರುವ ನೀವೆಂತಹ ಬುದ್ಧಿವಂತರು ಸ್ವಾಮಿ. ಇದಕ್ಕಾಗಿ ನೀವು ಬಳಸಿರುವ ಭಾಷೆ ಮತ್ತು ಆ ಭಾಷೆ ಕೊಡುವ ಅರ್ಥವಾದರೂ ಎಂತದ್ದು ಸ್ವಾಮಿ !

ಆದರೆ ಭಾಗವತ್‌ಜೀ ನನ್ನ ನಿರ್ಧಾರವನ್ನು ಆರೆಸಸ್‌ನ, ನಿಮ್ಮ ಜಯವೆಂದು ನೀವು ಜಂಬ ಕೊಚ್ಚಿಕೊಳ್ಳುವುದಕ್ಕಿಂತ ಮೊದಲು ಸ್ವಲ್ಪ ತಡೆಯಿರಿ, ನಾನು ನಿಮ್ಮ ಅದೇಶಕ್ಕೆ ತಲೆಬಾಗಿ ಈ ನಿರ್ಧಾರಕ್ಕೆ ಬಂದಿದ್ದೇನೆಂದು ಭಾವಿಸಬೇಡಿ. ಇದು ಸಾಧ್ಯವೇ ಇಲ್ಲ. ಅದನ್ನು ಒಂದು ಸುಳ್ಳು ನೆಪವೆಂದೇ ಕರೆಯಲಿಚ್ಚಿಸುತ್ತೇನೆ. ಏಕೆಂದು ಹೇಳುತ್ತೇನೆ, ಕೇಳಿ. ಎಲ್ಲರಿಗೂ ಗೊತ್ತಿರುವಂತೆ ಆರೆಸಸ್ ಒಂದು ಬಗೆಯ ಬೋಗಸ್ ಆದ ಸಾಂಸ್ಕೃತಿಕ ಯುದ್ಧವನ್ನು ಸಾರಿದೆ. ಈ ಯುದ್ಧದ ಮೂಲ ಉದ್ದೇಶವೇ ಅಲ್ಪಸಂಖ್ಯಾತರನ್ನು ಅದರಲ್ಲೂ ಮುಸ್ಲಿಂರನ್ನು ಸದಾಕಾಲ ಭಯದ ನೆರಳಿನಲ್ಲಿ ಬದುಕುವಂತೆ ಮಾಡುವುದು. ನಾವೆಲ್ಲ ಸೆಕ್ಯಲರಿಸಂನ ಹೆಸರಿನಲ್ಲಿ, ಸಾಂಸ್ಕೃತಿಕ ವೈವಿಧ್ಯತೆಯ ಹೆಸರಿನಲ್ಲಿ ಇದನ್ನು ವಿರೋಧಿಸಿ ಎಷ್ಟೇ ಜೋರಾಗಿ ಕಿರುಚಿದಷ್ಟೂ,ಪ್ರತಿಭಟಿಸಿದಷ್ಟೂ, ಬೇಡಿಕೊಂಡಷ್ಟೂ ಆ ಆರೆಸಸ್ ಪ್ರಣಾಳಿಕೆ ಮತ್ತಷ್ಟು ಗಟ್ಟಿಗೊಳ್ಳುತ್ತದೆ. ಒಂದು ವೇಳೆ ನಾವು ಪ್ರತಿಭಟಿಸುವುದನ್ನು, ಕಿರುಚುವುದನ್ನು, ಬೇಡಿಕೊಳ್ಳುವುದನ್ನು ನಿಲ್ಲಿಸಿದರೆ ? ಬದಲಾಗಿ ಈ ಆಟವನ್ನು ನಾವು ಒಪ್ಪಿಕೊಂಡಿದ್ದೇವೆ ಎಂದು ನಟಿಸತೊಡಗಿದರೆ?

ದಶಕಗಳ ಕಾಲ ಈ ಮುಸ್ಲಿಂ ಐಡೆಂಟಿಟಿ ಎನ್ನುವುದು ಆರೆಸಸ್‌ಗೆ ಅವರನ್ನು ದ್ವೇಷಿಸಲು ಒಂದು ಫಲವತ್ತಾದ ಭೂಮಿಕೆಯನ್ನೇ ನಿರ್ಮಿಸಿದೆ. RSS-mohanbhagwatಆದರೆ ಸರ್, ಮುಸ್ಲಿಂರು ಇಂದು ಸಾಕಷ್ಟು ಚೂಟಿಯಾಗಿದ್ದಾರೆ, ಮಸಲ ಒಂದು ವೇಳೆ ಇಂದು ನಾನು ನಿಮ್ಮ ಸ್ಥಾನದಲ್ಲಿದ್ದರೆ, ಒಂದು ಸಂಸ್ಥೆಯನ್ನು ಮುನ್ನಡೆಸುತ್ತಿದ್ದರೆ ಮತ್ತು ಆ ಸಂಸ್ಥೆಯ ಆಸ್ತಿತ್ವದ ಸಮರ್ಥನೆಯು ಮುಸ್ಲಿಂರನ್ನು ಪ್ರಚೋದಿಸಿ, ಕೆರಳಿಸಿ ಅದಕ್ಕೆ ಮತ್ತಷ್ಟು ಗಾಳಿ ಹಾಕುವ ಪ್ರಕ್ರಿಯೆಯ ಮೇಲೆ ಅವಲಂಬಿತವಾಗಿದ್ದರೆ ನಾನು ಚಿಂತಿತನಾಗುತ್ತಿದ್ದೆ. ಏಕೆಂದರೆ ಮುಸ್ಲಿಮರೇ ಸ್ವತಃ ಹಿಂದೂ ಟೆಂಟ್‌ನೊಳಗಿದ್ದಾಗ ಮೇಲಿನ ಸಾಧ್ಯತೆಗಳಿಗೆ ಅವಕಾಶ ಎಲ್ಲಿದೆ ಹೇಳಿ? ಬದಲಾಗಿ ಇದು ಒಂದು ಅರ್ಥದಲ್ಲಿ ಆರೆಸಸ್‌ಗೆ ಅದರ ಧ್ಯೇಯವು ತನ್ನ ಗುರಿ ಮುಟ್ಟಿದೆ ಎಂದೇ ಅರ್ಥ. ಏಕೆಂದರೆ ಇಲ್ಲಿ ಶತೃವನ್ನು ಪಳಗಿಸಲಾಗಿದೆ, ಹಿಂದೂಕರಣಗೊಳಿಸಲಾಗಿದೆ. ಅಂಗಡಿಯನ್ನು ಮುಚ್ಚಿ ಮನೆಗೆ ಹೋಗುವ ಕಾಲ ಬಂದಿದೆ ಅಷ್ಟೇ.

ಭಾಗವತ್‌ಜೀ, ನೀವೇನು ಹೇಳುತ್ತಿದ್ದೀರೆಂದು ನನಗೆ ಗೊತ್ತಿದೆ, ನನಗೆ ಗೊತ್ತಿದೆ. ಈ ದುರಹಂಕಾರಿ ಮುಸ್ಲಿಂರನ್ನು (ಕ್ಷಮಿಸಿ, ಬಾಬರ್ ಕಿ ಔಲಾದ್) ಪಳಗಿಸಲು, ಹದ್ದುಬಸ್ತಿನಲ್ಲಿಡಲು ಆರೆಸಸ್ ಸತತ ಪ್ರಯತ್ನದಲ್ಲಿದೆಯೆಂದು ನನಗೆ ಗೊತ್ತಿದೆ. ಮಿಕ್ಕೆಲ್ಲವೂ ಸರಿಯಾಗಿದ್ದರೆ ತನ್ನ ಕಾರ್ಯಸೂಚಿಗಳನ್ನು ಸದಾ ಜಾರಿಯಲ್ಲಿಡಲು ಅದು ಮತ್ತೊಂದು ಯೋಜನೆಯೊಂದಿಗೆ ಮಂದೆ ಬರುತ್ತದೆ (ಬಹುಶ ಮತ್ತಷ್ಟು ಪ್ರಚೋದನಕಾರಿ ಘೋಷಣೆಗಳೊಂದಿಗೆ). 1992 ರಲ್ಲಿ ಕೈಯಲ್ಲಿ ಹಾರೆ, ಗುರಾಣಿಗಳನ್ನು ಝಳಪಿಸುತ್ತ ನಿಮ್ಮ ಕಾಲಾಳುಗಳು ಅಯೋಧ್ಯೆಯಲ್ಲಿ ಕಾನೂನನ್ನು ತಮ್ಮ ಕೈಗೆ ತೆಗೆದುಕೊಂಡರು. ಸಂವಿಧಾನದ ವಿಧಿ ವಿಧಾನಗಳಿಗೆ ಕವಡೆಯಷ್ಟೂ ಕಿಮ್ಮತ್ತನ್ನು ಕೊಡದೆ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದರು. ಆದರೆ ಇದನ್ನು ನಿಮ್ಮ ಕಾಲ ಮೇಲೆ ನೀವೆ ಕಲ್ಲು ಕಲ್ಲು ಹಾಕಿಕೊಂಡಿರೆಂದೇ ಕರೆದರು. ಯಾಕೆ ಗೊತ್ತೆ, ಸದಾ ಏನಾದರೊಂದು ಮಾಡುತ್ತಾರೆ ಎನ್ನುವ ಭಯದ ವಾತಾವರಣವೇ ಹೆಚ್ಚು ಶಕ್ತಿಶಾಲಿಯೇ ಹೊರತು ಅದನ್ನು ಸಾಧಿಸಿ ತೋರಿಸಿ ಬಿಡುವುದಲ್ಲ. ಆದರೆ ದಶಕಗಳ ನಂತರ ನೀವು ಇನ್ನೂ ಇಲ್ಲಿಯೇ ಇದ್ದೀರಿ. ಮೊದಲಿಗಿಂತಲೂ ಹೆಚ್ಚು ಶಕ್ತಿಶಾಲಿಯಾಗಿ, ಮತ್ತಷ್ಟು ಸ್ಪಷ್ಟವಾಗಿ.

ಒಪ್ಪಿಕೊಂಡೆ. ಬಾಬರಿ ಮಸೀದಿಯೇ ಧ್ವಂಸಗೊಂಡ ನಂತರ ರಾಮ ಮಂದಿರದ ಪ್ರಶ್ನೆ ತನ್ನ ಹಿಂದಿನ ತೀವ್ರತೆಯನ್ನು ಕಳೆದುಕೊಂಡಿದೆ. ಇದನ್ನು ನೀವೂ ಒಪ್ಪಿಕೊಳ್ಳುತ್ತೀರಿ. ಇದು ಮುಸ್ಲಿಂರಿಗೆ ಭಾವನಾತ್ಮಕ ವಿಷಯವಾಗಿಯೂ ಉಳಿದಿಲ್ಲವೆಂದು ನಿಮಗೂ ಗೊತ್ತು. babri_masjid_demolitionಇನ್ನು ಅಳಿದುಳಿದಿರುವ ಅವಶೇಷಗಳೊಂದಿಗೆ ನೀವೇನು ಮಾಡಲಿದ್ದೀರೆಂದು ಇಂದು ಯಾರೊಬ್ಬರಿಗೂ ಆಸಕ್ತಿಯಿಲ್ಲ. ಭಾಗವತ್‌ಜೀ ಬಹುಶಃ ಸಂಘಪರಿವಾರ ಇದನ್ನು ಗಮನಿಸಲಿಲ್ಲವೇನೋ. ಏಕೆಂದರೆ ಇಂದು ನೀವು ಪ್ರಚೋದಿಸಿದಷ್ಟೂ ಆವೇಶಗೊಳ್ಳುವ ಗೂಳಿಯ ಮನಸ್ಥಿತಿಯಲ್ಲಿ ಮುಸ್ಲಿಮರಿಲ್ಲ. ಏಕೆಂದರೆ ಈ ರೀತಿಯ ಪ್ರಚೋದನೆಗೆ ಒಳಗಾಗದಿರುವಂತೆ ಮುಸ್ಲಿಮರು ಸಾಕಷ್ಟು ಕಲಿತಿದ್ದಾರೆ. ನಿಮ್ಮ ಇತ್ತೀಚಿನ ಈ ಹಿಂದೂ ಹೇಳಿಕೆಗೆ ನೀವು ನಿರೀಕ್ಷಿಸಿದಷ್ಟು ಅವರು ಪ್ರತಿಕ್ರಯಿಸಲೇ ಇಲ್ಲ ಎನ್ನವುದು ಇತ್ತೀಚಿನ ದಿನಗಳಲ್ಲಿ ಅವರ ಪ್ರತಿಕ್ರಿಯೆಗಳನ್ನು ನೀವು ತುಂಬಾ ಹತ್ತಿರದಿಂದ ಗಮನಿಸಿದರೆ ಗೊತ್ತಾಗುತ್ತದೆ, ಆದರೆ ಇದಕ್ಕೆ ಸೆಕ್ಯುಲರ್ ಹಿಂದೂಗಳ ಆಕ್ರೋಶ ಜೋರಾಗಿತ್ತು.

ನಾನು ನಿಮ್ಮ ಮೇಲೆ ಯಾವ ರೀತಿಯ ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದೇನೆಂದರೆ ಮುಸ್ಲಿಂರು ಇಂದು ಚಾಣಾಕ್ಷರಾಗುತ್ತಿದ್ದಾರೆ, ಕಾಲಕ್ಕೆ ತಕ್ಕಂತೆ ಬದಲಾಗುತ್ತಿದ್ದಾರೆ. ಬಹುಸಂಖ್ಯಾತ ತತ್ವವನ್ನು ಅತಿಯಾಗಿ ಬಳಸಿ ಅದರ ಮೊನಚೇ ಮೊಂಡಾಗಿದೆ. ಮೊದಲಿನ ಹರಿತವಿಲ್ಲ. ಇಂತಹ ಪ್ರಚೋದನೆಗಳನ್ನು ನಿರ್ಲಕ್ಷಿಸುವುದರ ಮೂಲಕ ಮುಸ್ಲಿಂರು ಅತಿ ಜಾಣತನದಿಂದ ವರ್ತಿಸುತ್ತಿದ್ದಾರೆ, ನಿಮ್ಮ ಆರೆಸಸ್ ಮಂದಿಯೇ ಕಾಲದಲ್ಲಿ ಹೂತು ಹೋಗಿದ್ದಾರೆ, ಮುಸ್ಲಿಂರು ಆರೆಸಸ್‌ನ ಕುರಿತಾದ ಹಳೆಯ ಭಯದಿಂದ ಮುಕ್ತರಾಗುತ್ತಿದ್ದಾರೆ. ಏಕೆಂದರೆ ಹೊಸ ತಲೆಮಾರಿನ ಮುಸ್ಲಿಂ ಯುವಕರಿಗೆ ಇಂದಿನ ಇಂಡಿಯಾದಲ್ಲಿ ತಮ್ಮ ಸ್ಥಾನವೇನೆಂದು ಗೊತ್ತಾಗಿ ಹೋಗಿದೆ. ಆರೆಸಸ್‌ಗೆ ನಿರಂತರ ಆಹಾರ ಒದಗಿಸುತ್ತಿದ್ದ ಮುಸ್ಲಿಂ ಮೂಲಭೂತವಾದಿಗಳ ಶಕ್ತಿಯೂ ಇಂದು ಕುಂದಿ ಹೋಗಿದೆ. ಈ ಮೂಲಕ ಮುಸ್ಲಿಂರ ಪ್ರಚೋದನೆಗಳಿಗೆ ಹಿಂದೂಗಳ ಪ್ರತಿಕ್ರಿಯೆ ಎನ್ನುವ ವಾತಾವರಣವೂ ಕ್ಷೀಣಿಸುತ್ತಿದೆ. ನೋಡುತ್ತಿರಿ ಭಾಗವತ್‌ಜೀ ಹಿಂದೂ ಹಕ್ಕುಗಳ ಏಕಮೇದ್ವತೀಯ ವಾರಸುದಾರ ಎನ್ನುವ ಪಟ್ಟವೂ ಆರೆಸಸ್‌ನಿಂದ ಕಳಚಿಕೊಳ್ಳುತ್ತಿದೆ. ನೀವು ನಿಮ್ಮ ಮುಂದಿನ ರಾಜಾಜ್ಞೆಯನ್ನು ಹೊರಡಿಸುವ ಮೊದಲು ಇಂದು ಇಸ್ಲಾಮೋಫೋಬಿಯಾಗೆ ಮೊದಲಿನ ಹಾಗೆ ಗ್ರಾಹಕರು ಇಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ನೀವು ಎಚ್ಚರಿಕೆಯಿಂದ ಇರದಿದ್ದರೆ ನೀವು ಈ ವ್ಯವಹಾರದಲ್ಲಿ ನಿಮ್ಮ ಸ್ಥಾನವನ್ನೇ ಕಳೆದುಕೊಳ್ಳುತ್ತೀರಿ. ಆದರೆ ಈಗ ಸಧ್ಯಕ್ಕೆ “ಜೈ ಹಿಂದೂ”.

ಪ್ರಜಾಪ್ರಭುತ್ವದ ನಾಲ್ಕನೇ ಸ್ಥಂಭಕ್ಕೆ ಹಣವೆಂಬ ಗೆದ್ದಲು ಹತ್ತಿದೆಯೇ..

* ಸ್ವಯಂಪ್ರಭಾ

ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಪತ್ರಿಕೋದ್ಯಮದ ಕೆಲಸ ಆಡಳಿತದ ನಡೆಯನ್ನು ಸದಾ ವಿಮರ್ಶಾತ್ಮಕವಾಗಿ ಗಮನಿಸುವುದು. ಆ ನಿಟ್ಟಿನಲ್ಲಿ ಆಡಳಿತ ನಡೆಸುವ ಜನಪ್ರತಿನಿಧಿಗಳು ತಮ್ಮ ಸ್ಥಾನದಲ್ಲಿದ್ದುಕೊಂಡು ನಿರ್ವಹಿಸುವ ಕೆಲಸಗಳನ್ನು– ಸ್ವಲ್ಪ ಸಂಶಯವನ್ನೂ ಇರಿಸಿಕೊಂಡೇ – ನೋಡುವುದು ಅನಿವಾರ್ಯವಾಗುತ್ತದೆ. ಸಚಿವರು, ಶಾಸಕರು, ಮಂತ್ರಿಗಳು ಜನರಿಗಾಗಿ ಜಾರಿ ಮಾಡುತ್ತಿರುವ ಯೋಜನೆಗಳ ಸಾಧಕ ಬಾಧಕಗಳೇನು, ಯಶಸ್ಸು ಅಪಯಶಸ್ಸುಗಳೇನು ಎಂಬುದನ್ನು ಗಮನಿಸುತ್ತಾ ಮೌಲ್ಯಮಾಪನದಂತೆ ಕೆಲಸ ಮಾಡುವ ಪತ್ರಿಕೋದ್ಯಮ ಅಂತಿಮವಾಗಿ ಜನರಪರವಾಗಿಯೇ ಇರಬೇಕು ಎನ್ನುವುದೆಲ್ಲ ನಾವು ಪತ್ರಿಕೋದ್ಯಮದ ಅನುಭವದಲ್ಲಿ ಕಲಿತ ಪಾಠ. ನಮಗೆ ಮಾರ್ಗದರ್ಶನ ಮಾಡಿದ ಹಿರಿಯ ಪತ್ರಕರ್ತರು ಕೂಡ ಇದನ್ನೇ ನಂಬಿದ್ದರು.

ಆದರೆ ಇತ್ತೀಚೆಗೆ ಪತ್ರಿಕೋದ್ಯಮದ ಸೂಕ್ಷ್ಮಗಳು ಅರಿವಾಗುತ್ತಿದ್ದಂತೆಯೇ ಹೊಸ ಬದಲಾವಣೆಯೊಂದು ನಿಚ್ಚಳವಾಗಿ ಗೋಚರಿಸುತ್ತದೆ.

ಮೊದಲನೆಯದಾಗಿ :
ಇತ್ತೀಚೆಗಷ್ಟೇ ರಾಷ್ಟ್ರಮಟ್ಟದ ಪ್ರಸಿದ್ಧ ಪತ್ರಿಕೆಯೊಂದು ತಮ್ಮ ಸಹೋದ್ಯೋಗಿಗಳಿಗೆ ಒಂದು ಆದೇಶ ನೀಡಿದೆ. KannadaPapersCollage‘ ಆಡಳಿತ ವಿರೋಧಿ ವಿಶೇಷ ವರದಿಗಳೇನೂ ಬೇಡ. ಆಡಳಿತದ ಅಲೆಯ ವಿರುದ್ಧವಾದ ಘಟನೆ ಸಂಭವಿಸಿದಾಗ ಕೇವಲ ಒಂದೇ ಸುದ್ದಿ ಪ್ರಕಟಿಸಿದರೆ ಸಾಕು. ಆ ಸುದ್ದಿಯ ವಿವಿಧ ಆಯಾಮಗಳನ್ನು ತೆಗೆದುಕೊಂಡು ಪತ್ರಕರ್ತರು ಮುತುವರ್ಜಿಯಿಂದ ವಿಶ್ಲೇಷಣೆ ನಡೆಸುವುದೇನೂ ಬೇಡ’ ಎಂದು ಸೂಚನೆ ನೀಡಿದೆ.

ಕರಾವಳಿಯ ಪತ್ರಿಕೆಯೊಂದು ಬಹಳ ಹಿಂದೆಯೇ ಇದೇ ಮಾದರಿಯ ವಿಚಾರವನ್ನು ತನ್ನ ಉದ್ಯೋಗಿಗಳಿಗೆ ಸೂಚಿಸಿದೆ. ಅದೆಂದರೆ ‘ಸಮಸ್ಯೆಗಳನ್ನೆಲ್ಲಾ ವರದಿ ಮಾಡುತ್ತಾ ಕೂರಬೇಡಿ. ಅಲ್ಲೆಲ್ಲೋ ಕಸದ ರಾಶಿ ಬಿದ್ದಿದೆ ಎಂದೋ, ರಸ್ತೆ ಕಾಮಗಾರಿ ಆಗಿಲ್ಲ, ಮೋರಿ ಸರಿಯಾಗಿಲ್ಲ, ಸಚಿವರ ನಿರ್ಧಾರ ಸರಿಯಿಲ್ಲ ಎಂದೆಲ್ಲಾ ಬರೆಯುವುದು ಬೇಡ… ಫೀಲ್‌ ಗುಡ್‌ ವರದಿ ಮಾಡಿದರೆ ನಿಮ್ಮ ವರದಿ ಬೇಗನೇ ಪ್ರಕಟವಾಗುತ್ತದೆ’ ಎಂದು ಹೇಳಲಾಗಿತ್ತು.

ಎರಡನೆಯದಾಗಿ :
ವಾಹಿನಿಗಳ ಮುಖ್ಯಸ್ಥರು ಸಹೋದ್ಯೋಗಿಗಳಿಗೆ ಏನೇನೂ ಸೂಚನೆಗಳನ್ನು ಕೊಡುತ್ತಾರೆ ಎಂಬುದು ಕೂಡ ಹೆಚ್ಚು ರಹಸ್ಯವಾಗಿ ಉಳಿದಿಲ್ಲ. ವಾಹಿನಿಗಳು, ತಾವು ಏನು ಪ್ರಸಾರ ಮಾಡಬೇಕು ಎನ್ನುವುದನ್ನು ಪರಸ್ಪರ ಸ್ಪರ್ಧೆ, ತಮ್ಮ ಮಾಲಿಕರ ರಾಜಕೀಯ ನಿಲುವುಗಳು ಮತ್ತು ಟಿಆರ್‌ಪಿಯನ್ನು ಆಧರಿಸಿ ನಿರ್ಧರಿಸುತ್ತವೆ. ಜನರ ಹಿತದೃಷ್ಟಿ ಎಲ್ಲಿಯೂ ಇಣುಕುವುದಿಲ್ಲ. ಆದರೆ ಪತ್ರಿಕೆಗಳಂತೆ ವಾಹಿನಿಗಳು ಫೀಲ್‌ಗುಡ್‌ನ ಬೆನ್ನುಬಿದ್ದಿಲ್ಲ. ಬದಲಾಗಿ ಈಗ ವಾಹಿನಿಗಳು ಶಾಸಕಾಂಗ, ಕಾರ್ಯಾಂಗಗಳ ಕಾರ್ಯವೈಖರಿಯನ್ನು ವಿಮರ್ಶೆ ಮಾಡುವ ಗೋಜಿಗೇ ಹೋಗುತ್ತಿಲ್ಲ. ಒಂದು ವೇಳೆ ಶಾಸಕಾಂಗದ ವಿಚಾರಗಳು ನುಸುಳಿದರೂ ಅವುಗಳಲ್ಲಿ ಜನಪರ ಕಾಳಜಿಯು ಮೆರುಗು ಪಡೆಯುವ ಬದಲು ಖಾಸಗಿ ವಿಚಾರಗಳನ್ನು ಚಪ್ಪರಿಸುವ, ಕ್ರೂರ ಪದಗಳನ್ನು ಬಳಸುವ, ಅವರ ಬಗ್ಗೆ ಇವರೇನಂತಾರೆ, ಇವರ ಬಗ್ಗೆ ಅವರೇನಂತಾರೆ ಎಂಬ kannada-news-channelsಬೈಟ್‌ಫೈಟ್‌ಗಳೇ ಹೆಚ್ಚಾಗಿರುತ್ತವೆ. ಬಹುತೇಕ ತಮ್ಮ ಅರೆಬರೆ ಅನುಭವಗಳ ಆಧಾರದಲ್ಲಿಯೇ ತೀರ್ಪುಗಳನ್ನು ಪ್ರಕಟಿಸುವುದರಲ್ಲೇ ತಲ್ಲೀನವಾಗಿರುತ್ತವೆ. ಇದಕ್ಕೆ ಪ್ರತಿನಿತ್ಯ ಬೇಕಾದಷ್ಟು ಉದಾಹರಣೆಗಳು ಸಿಗುತ್ತವೆ.

ಅಂದರೆ ವಾಹಿನಿಗಳು ಜನರ ಖಾಸಗಿ ವಿಚಾರಗಳನ್ನು ಪದರ ಪದರವಾಗಿ ಚಪ್ಪರಿಸುತ್ತಾ ಪ್ರಸಾರ ಮಾಡುವ ಮೂಲಕ ತಮಗೆ ದೊರೆಯುವ ಕೇವಲ 24 ಗಂಟೆಗಳ ಸೀಮಿತ ಅವಧಿಯನ್ನು ಕೊಂದು ಬಿಡುತ್ತವೆ. ಪತ್ರಿಕೆಗಳಂತೆ ಹೆಚ್ಚು ಸುದ್ದಿನೀಡುವ ಅವಕಾಶ ವಾಹಿನಿಗಳಿಗೆ ಇಲ್ಲ. ಅವುಗಳಿಗೆ ಏನಿದ್ದರೂ 12 ಗಂಟೆಯೊಳಗೇ ಹೇಳಿಮುಗಿಸುವ ಮಿತಿ ಇದೆ. ಆದರೆ ಅದೇ 12 ಗಂಟೆಯಲ್ಲಿ ವಾಹಿನಿಗಳು, ವಿಶ್ವವಿದ್ಯಾನಿಲಯವೊಂದರಲ್ಲಿ ಏನೇನು ಒಳಿತು ಕೆಡುಕು ಇದೆ, ಆಗಬೇಕಾದ ಕೆಲಸ ಏನು ಎಂಬುದನ್ನಾಗಲೀ, ಸರ್ಕಾರ ಜಾರಿ ಮಾಡಿದ ಹೊಸ ಯೋಜನೆ ತಳಮಟ್ಟದಲ್ಲಿ ಗ್ರಾಮೀಣ ಭಾಗದ ಜನರಲ್ಲಿ ಏನು ಪರಿಣಾಮ ಬೀರಿದೆ ಎಂಬುದನ್ನಾಗಲೀ, ಸರ್ಕಾರದ ನಡೆಯನ್ನು ಅಲ್ಲಲ್ಲೇ ಬ್ಲಾಕ್‌ ಮಾಡಿ ಜನಪರ ಯೋಜನೆಯನ್ನೇ ವಿಫಲಗೊಳಿಸುವ ಅಧಿಕಾರಿ ವರ್ಗಗಳ ಬಗ್ಗೆಯಾಗಲೀ ತುಟಿಪಿಟಕ್‌ ಎನ್ನುವುದಿಲ್ಲ. ಅಪವಾದಕ್ಕೆಂಬಂತೆ ಅಲ್ಲೊಂದು ಇಲ್ಲೊಂದು ಸ್ಲಾಟ್‌ಗಳನ್ನು ಪ್ರಸಾರ ಮಾಡಿ ಕೈ ತೊಳೆದುಕೊಂಡು ಬಿಡುತ್ತವೆ.

ಒಳ್ಳೆಯ ಕಾರ್ಯಕ್ರಮಗಳಿಗೆ ಟಿಆರ್‌ಪಿ ಇರುವುದಿಲ್ಲ ಎನ್ನುವುದು ವಾಹಿನಿ ಮತ್ತು ಪತ್ರಿಕೆಯನ್ನು ನಡೆಸಿದ ಹಿರಿಯ ಪತ್ರಕರ್ತರೊಬ್ಬರ ಅಭಿಪ್ರಾಯ. ಆtv-mediaದರೆ ಒಳ್ಳೆಯ ಕಾರ್ಯಕ್ರಮಗಳನ್ನು ಜನರು ನೋಡುವಂತೆ ಮಾಡುವುದು ಕೂಡ ವಾಹಿನಿಗಳ ಜವಾಬ್ದಾರಿ. ಮಾನವನ ಸಹಜ ದೌರ್ಬಲ್ಯಗಳನ್ನು ರಂಗುರಂಗಾಗಿ ಬಿಚ್ಚಿಡುವ ಖಯಾಲಿ ಬೆಳೆಸಿಕೊಂಡ ವಾಹಿನಿಗಳು ಪ್ರೇಕ್ಷಕರನ್ನೂ ಅದೇ ರೀತಿಯಲ್ಲೇ ಬೆಳೆಸಿವೆ. ಆದ್ದರಿಂದ ಮತ್ತೆ ಪ್ರೇಕ್ಷಕರನ್ನು ಪತ್ರಿಕೋದ್ಯಮದ ವ್ಯಾಪ್ತಿಯೊಳಗೆ ತಂದು, ಜನಪರ ಕಾಳಜಿಯ ಧೋರಣೆಯನ್ನು ಬೆಳೆಸುವುದಕ್ಕಾಗಿ ವಾಹಿನಿಗಳು ಕೊಂಚ ಬೆಲೆ ತೆರಲೇಬೇಕು.

ಒಟ್ಟಿನಲ್ಲಿ ವಾಹಿನಿಗಳಾಗಲೀ, ಪತ್ರಿಕೆಗಳಾಗಲೀ, ಪತ್ರಿಕೋದ್ಯಮದ ಸ್ಥಾನವನ್ನು ‘ಪ್ರಜಾಪ್ರಭುತ್ವದ ನಾಲ್ಕನೇ ಅಂಗ’ ಎಂಬ ಸ್ಥಾನದಿಂದ ಮೆಲ್ಲಮೆಲ್ಲನೇ ಕೆಳಗೆ ಇಳಿಸುತ್ತಿವೆ. ಪತ್ರಿಕೆಗಳು ಫೀಲ್‌ಗುಡ್‌ನ ಭರಾಟೆಯಲ್ಲಿ ಜಾಹೀರಾತು ಪುರವಣಿಗಳಾಗುವ ಭಯದಲ್ಲಿದ್ದರೆ, ವಾಹಿನಿಗಳು ವ್ಯಕ್ತಿಯ ಖಾಸಗಿತನ, ದೌರ್ಬಲ್ಯಗಳನ್ನು ವೈಭವೀಕರಿಸುವುದರಲ್ಲಿ ಬ್ಯುಸಿ ಆಗಿವೆ. ಮನುಷ್ಯನೊಬ್ಬ ತನ್ನ ದೌರ್ಬಲ್ಯವನ್ನು ಮೀರುವ ಬದಲಾಗಿ ಪೋಷಿಸಿಕೊಳ್ಳುವುದೇ ಉತ್ತಮವೇನೋ ಎಂಬ ಭಾವನೆಯನ್ನು ಜನರಲ್ಲಿ ಬಿತ್ತುವ ಕೆಲಸದಲ್ಲಿ ನಿರತವಾಗಿವೆ.

ಮೂಲಭೂತವಾಗಿ ವಾಹಿನಿಗಳು ಜನರಪರ ಧೋರಣೆಯನ್ನು ಅನುಸರಿಸಿದಾಗ, ಶ್ರೀಮಂತರ ಖಾಸಗಿ ಸುದ್ದಿಗಳ ಪ್ರಸಾರಕ್ಕೆ ಮಾತ್ರ ಕೋರ್ಟ್‌ ಆದೇಶದ ಮೂಲಕ ಬರುವ ತಡೆಯನ್ನು ಮನ್ನಿಸುವುದು ಹಾಗೂ ಬಡವರ ಸಂಕಷ್ಟವನ್ನು ಕಾಸು ಗಳಿಸುವ ದಾರಿ ಎಂಬುದಾಗಿ ಪರಿಗಣಿಸುವುದು ಸಹಜವಾಗಿಯೇ ನಿಲ್ಲುತ್ತದೆ.

ಬುರ್ಖಾ ಚರ್ಚೆ: ಸುಧಾರಣೆ ಅನ್ನೋದು ನಿರಂತರ ಆಗುವ ಪ್ರಕ್ರಿಯೆ…

– ಶರಣ್

ದಿನೇಶ್ ಅಮಿನ್ ಮಟ್ಟು ಅವರು ಮಂಗಳೂರಿನ ಭಾಷಣದಲ್ಲಿ ಮುಖ್ಯವಾಗಿ ಮಾತನಾಡಿದ್ದು ‘ರಿಲೆ’ ಮುಂದುವರಿಯಬೇಕು ಎಂದು. ಸದ್ಯದ ಬರಹಗಾರರು ರಿಲೆಯಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಹೇಳುತ್ತಲೇ, ಅವರು ಸೂಕ್ಷ್ಮವಾಗಿ ವ್ಯಕ್ತಪಡಿಸಿದ್ದು, “ಇದಕ್ಕೆ ಬಹಳ ಮುಖ್ಯ ಕಾರಣನೂ ಇದೆ. ಬಾಬರೀ ಮಸೀದಿ ಧ್ವಂಸದ ನಂತರ ಎದ್ದ ಹಿಂದುತ್ವದ ಅಲೆ ಅಬ್ಬರದಲ್ಲಿ ಇವರ ಧ್ವನಿಗಳು ಉಡುಗಿ ಹೋಯಿತು”. dinesh-aminmattuದಿನೇಶ್ ನೂರಾರು ಯುವಕರ ಗೌರವ ಮತ್ತು ಮೆಚ್ಚುಗೆ ಪಡೆಯುವುದೇ ಇಂತಹ ಒಳನೋಟಗಳಿಂದ. ಈ ಭಾಷಣದ ನಂತರ ನಡೆದ ಚರ್ಚೆಗಳಲ್ಲಿ ಈ ದನಿ ಉಡುಗಿ ಹೋಗಲು ಕಾರಣವಾದ ಸಂಗತಿಗಳ ಬಗ್ಗೆ ಉಲ್ಲೇಖ ನೆಪಮಾತ್ರಕ್ಕೂ ಇರಲಿಲ್ಲ. (ನನ್ನ ಗಮನಕ್ಕೆ ಬಾರದೆ ಚರ್ಚೆಯಾಗಿದ್ದರೆ, ಈ ವಾಕ್ಯವನ್ನು ಮಾರ್ಪಾಟು ಮಾಡಿಕೊಂಡು ಓದಬಹುದು).

ಸದ್ಯದ ಬರಹಗಾರರನ್ನು ಮಸೀದಿ ಧ್ವಂಸ ಪ್ರಕರಣ, ಗಲಭೆ, ಗುಜರಾತ್ ಹಿಂಸಾಚಾರ, ಮೋದಿಯ ಪಟ್ಟ – ಎಂಬೆಲ್ಲಾ ಬೆಳವಣಿಗೆಗಳು ಘಾಸಿಗೊಳಿಸಿವೆ. ಈ ಘಟನೆಗಳು ಈ ದೇಶದ ಉದಾರವಾದಿ, ಜಾತ್ಯತೀತ, ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಬೆಲೆ ಕೊಡುವ ಬಹುಸಂಖ್ಯಾತ ಕೋಮಿಗೆ ಸೇರಿದವನ ಮೇಲೆ ಮಾಡುವ ಪರಿಣಾಮಕ್ಕಿಂತ ಘೋರ ಪರಿಣಾಮವನ್ನು ಅಲ್ಪಸಂಖ್ಯಾತ ಕೋಮಿನ ಅದೇ ತೆರೆನ ವ್ಯಕ್ತಿತ್ವದ ಮೇಲೆ ಮಾಡಬಲ್ಲವು. ಆತನನ್ನು (ಅಲ್ಪಸಂಖ್ಯಾತ ಸಮುದಾಯದ) ಅತೀವ ಅಸಹಾಯಕತೆಗೆ, ಅಭದ್ರತೆಗೆ ತಳ್ಳುತ್ತವೆ. ಬಹುಸಂಖ್ಯಾತ ಕೋಮಿನ ಯುವಕನಿಗೆ ಇಂತಹ ಘಟನೆಗಳಿಂದ ಅದೆಷ್ಟೇ ಆಕ್ರೋಷ ಉಕ್ಕಿ ಬಂದರೂ, ಅಭದ್ರೆತೆ ಕಾಡುವ ಸಾಧ್ಯತೆಗಳು ಕಡಿಮೆ.

ಬಹುಸಂಖ್ಯಾತ ಸಮುದಾಯದ ಹುಡುಗನೊಬ್ಬ ಎಂಥಹದೇ ಕೇಸಿನ ಮೇಲೆ ಜೈಲುಪಾಲಾದರೂ, ಈ ದೇಶದ ಮಾಧ್ಯಮ ಅವನನ್ನು ‘ಉಗ್ರ’ ಎಂದು ಕರೆಯುವುದಿಲ್ಲ ಎಂಬ ಗ್ಯಾರಂಟಿ ಅವನ ಕುಟುಂಬಕ್ಕಿದೆ. ಆದರೆ ಅಲ್ಪಸಂಖ್ಯಾತ ಹುಡುಗನ ಪರಿಸ್ಥಿತಿ ಹಾಗಿರುವುದಿಲ್ಲ. ಪತ್ರಿಕಾಲಯದಲ್ಲಿ ರಾತ್ರಿ ಪಾಳಿ ಮುಗಿಸಿ ಮನೆಗೆ ಬಂದು ಮಲಗಿದ್ದರೆ, ಬೆಳಗಿನ ಜಾವ ಯಾರೋ ನಾಲ್ವರು ಬಾಗಿಲು ನೂಕಿ ಜೀಪಿನಲ್ಲಿ ಹಾಕಿಕೊಂಡು ಹೋಗುತ್ತಾರೆ. ಮಾರನೆಯ ದಿನ ಕುಖ್ಯಾತ ಉಗ್ರನ ಬಂಧನವಾಗಿದೆ ಎಂದು ಮಾಧ್ಯಮಗಳು ಸುದ್ದಿ ಬಿತ್ತರಿಸುತ್ತವೆ. ಅವನೊಂದಿಗೆ ಅದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದವರೇ “ಅವನು ಮೊದಲಿನಿಂದಲೂ ಹಾಗೇ. ಈಗ ಬಹಿರಂಗ ಆಗಿದೆ ಅಷ್ಟೆ…” ಎಂದು ಮಾತನಾಡುತ್ತಾರೆ. ಮತ್ತೊಬ್ಬ ಪ್ರತಿಷ್ಠಿತ ಸಂಸ್ಥೆಯಲ್ಲಿ ವಿಜ್ಞಾನಿ ಹುದ್ದೆಯನ್ನು ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇವರ ಮೇಲಿನ ಆರೋಪಗಳು ಸುಳ್ಳು ಎಂದು ಸಾಬೀತಾಗುವ ತನಕ ಅವರ ಕುಟುಂಬ, ಸ್ನೇಹಿತರು, ಆತ್ಮೀಯರು ಅನುಭಿಸಿದ ಯಾತನೆಗೆ ಪರಿಹಾರ ಇದೆಯೆ?

ಮೊನ್ನೆ ಮೊನ್ನೆ ನಡೆದ ಲೋಕಸಭಾ ಚುನಾವಣೆಯ ಫಲಿತಾಂಶದ ಬಗ್ಗೆ ವಿವಿಧ ಮಾಧ್ಯಮಗಳು ಸಮೀಕ್ಷೆModi-selfie ನಡೆಸಿ ವರದಿ ಮಾಡುತ್ತಿದ್ದರೆ, ಅಲ್ಟಸಂಖ್ಯಾತ ಸಮುದಾಯದ ಮಿತ್ರನೊಬ್ಬ ಒಂದೊಂದು ಚಾನೆಲ್ ನ ವರದಿ ಬಂದಾಗಲೂ ಮಾನಸಿಕವಾಗಿ ಕುಗ್ಗುತ್ತಿದ್ದ. ಮಾತಿನ ಮೂಲಕ ತನ್ನೊಳಗಿನ ಆತಂಕ, ಸಂಕಟ ವ್ಯಕ್ತಪಡಿಸುತ್ತಿದ್ದ. ಇವೆಲ್ಲಾ ಸಮೀಕ್ಷೆಗಳು ಸುಳ್ಳಾಗಬಹುದು ಎಂಬ ನಿರೀಕ್ಷೆ ಅವನಲ್ಲಿತ್ತು. ಚುನಾವಣಾ ಆಯೋಗ ಮತಎಣಿಕೆ ನಡೆಸಿ ಫಲಿತಾಂಶ ಪ್ರಕಟಿಸಿದಾಗ ಮಾತು ನಿಲ್ಲಿಸಿಬಿಟ್ಟ. ಯಾವುದರ ಬಗ್ಗೆಯೂ ಅಭಿಪ್ರಾಯ ವ್ಯಕ್ತಪಡಿಸಲು ಹಿಂಜರಿಯುತ್ತಾನೆ. ಅವನನ್ನು ಇತರರು ಪುಕ್ಕಲ ಎಂದು ಮೂದಲಿಸಿ ಸುಮ್ಮನಾಗುವುದು ಸುಲಭ. ಆದರೆ ಅವನ ವರ್ತನೆ ಪ್ರಾಮಾಣಿಕವಾಗಿದೆ. ನಾಟಕೀಯ ಅಲ್ಲ. ಆ ಕಾರಣಕ್ಕಾಗಿಯೇ ಅವನ ಆತಂಕಗಳಿಗೆ ಇತರರು ಮಿಡಿಯಬೇಕಿದೆ.

ಈ ದೇಶದ 110 ಕೋಟಿ ಜನರ ಪ್ರತಿನಿಧಿಯಾಗಲು ಬಯಸಿ ಪ್ರಧಾನಿ ಪಟ್ಟಕ್ಕೆ ಸ್ಪರ್ಧಿಸಿ ಹೋದ ಕಡೆಯಲ್ಲೆಲ್ಲ, ಅಲ್ಲಿನ ಸ್ಥಳೀಯ ಸಮುದಾಯದವರು ಕೊಡುವ ಪೇಟ, ಪಗೋಡ, ಮುಂಡಾಸು, ಟೋಪಿ..ಇತರೆ ಎಲ್ಲವನ್ನೂ ಸ್ವೀಕರಿಸಿ ಸಂತೋಷದಿಂದ ಧರಿಸುವ ವ್ಯಕ್ತಿ ಒಂದು ಸಮುದಾಯದ ಉಡುಗೆಯನ್ನು ನಿರಾಕರಿಸಿದಾಗ ಆ ಸಮುದಾಯ ಹೇಗೆ ಪ್ರತಿಕ್ರಿಯಿಸಬೇಕು? ಪಟ್ಟಕ್ಕೆ ಬಂದ ನಂತರ ತರುವಾಯ ದೇಶದ ಎಲ್ಲ ಸಣ್ಣ ಪುಟ್ಟ ಆಗು-ಹೋಗುಗಳಿಗೂ ಟ್ವೀಟ್ ಮಾಡುವ ಪ್ರಧಾನಿಗೆ ಪುನಾದಲ್ಲಿ ಸ್ಕಲ್ ಕ್ಯಾಪ್ ಹಾಕಿಕೊಂಡು ಸಂಜೆಯ ಪ್ರಾರ್ಥನೆ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ಯುವಕನನ್ನು ಕೆಲ ಹುಡುಗರು ನಡುಬೀದಿಯಲ್ಲಿಯೇ ಹೊಡೆದು ಸಾಯಿಸಿದ ಘಟನೆಗೆ ಪ್ರತಿಕ್ರಿಯಿಸಬೇಕು ಎನಿಸುವುದೇ ಇಲ್ಲ. ಮುಜಾಫರ್ ನಗರದ ಗಲಭೆಗಳು ನೆನಪಾಗುವುದೇ ಇಲ್ಲ. ಅಕ್ಷರಶಃ ಒಂದು ಬಹುದೊಡ್ಡ ಅಲ್ಪಸಂಖ್ಯಾತ ಸಮುದಾಯ ಈ ದೇಶದಲ್ಲಿ ಅಸ್ತಿತ್ವದಲ್ಲಿ ಇಲ್ಲವೇ ಇಲ್ಲ ಎಂಬಂತೆ ವರ್ತಿಸುತ್ತಿರುವ ಪ್ರಧಾನಿಯ ಆಳ್ವಿಕೆಯಲ್ಲಿ, ಅಭದ್ರತೆಗೆ ಒಳಗಾಗುವುದು ಸಹಜ ತಾನೆ?

ಈ ಮಧ್ಯೆ ಪ್ರಗತಿಪರರು ಎನಿಸಿಕೊಂಡು ಅಲ್ಟಸಂಖ್ಯಾತರ ಸಖ್ಯಗಳಿಸಿದ್ದ ಅನೇಕರು, “ನೋಡಿ ಮೋದಿ, ಚುನಾವಣೆ ಘೋಷಣೆ ಆದಾಗಿನಿಂದಲೂ ಒಮ್ಮೆಯೂ ಧರ್ಮ, ಕೋಮು, ಹಿಂದೂ ರಾಷ್ಟ್ರ..ಎಂದೆಲ್ಲಾ ಮಾತನಾಡಲೇ ಇಲ್ಲ…” ಎಂದು ನಮೋ ನಾಮವನ್ನು ಜಪಿಸಲು ಆರಂಭಿಸದರು. ಆದರೆ ಬಹುಸಂಖ್ಯಾತ ಹಿಂದೂಗಳ ಶ್ರದ್ಧಾ ಕೇಂದ್ರವಾದ ವಾರಣಾಸಿಯನ್ನು ತನ್ನ ಕ್ಷೇತ್ರವನ್ನಾಗಿ ಆರಿಸಿಕೊಳ್ಳುವ ಮೂಲಕ ದೇಶಾದ್ಯಂತ ತಾನು ಬಯಸುತ್ತಿರುವುದು ಧರ್ಮದ ಆಧಾರದ ಮೇಲಿನ ಮತ ವಿಭಜನೆಯನ್ನು ಎಂದು ತುಂಬಾ ನಯವಾಗಿ ಸಾರಿದ್ದ. guj-violence(ಇದು ಕೂಡ, ದಿನೇಶ್ ಅಮಿನ್ ಮಟ್ಟು ಅವರು ತಮ್ಮ ಒಂದು ಭಾಷಣದಲ್ಲಿ ಹೇಳಿದ್ದು). ಜೊತೆಗೆ ನಿಲ್ಲಬಹುದಾಗಿದ್ದ ಸೋಕಾಲ್ಡ್ ಪ್ರಗತಿಪರರು ದೂರವಾಗುತ್ತಿದ್ದಾರೆ ಎಂದೆನಿಸಿದಾಗ ಅಭದ್ರತೆ ಜೊತೆಗೆ ಒಂಟಿತನ ಕೂಡಾ ಕಾಡುತ್ತದೆ.

ಇನ್ನು ಮಾಧ್ಯಮಗಳಂತೂ (ಕೆಲವನ್ನು ಹೊರತುಪಡಿಸಿ) ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಕಸದಬುಟ್ಟಿಗೆ ಹಾಕಿ ಗದ್ದುಗೆ ಹಿಡಿದವರ ಚಾಕರಿಗೆ ನಿಂತಿವೆ. ಹಾಗಾದರೆ, ಇವರ ದನಿ ಉಡುಗದೆ ಇನ್ನೇನು ಮಾಡೀತು? ಬುರ್ಖಾ ಬಗ್ಗೆ ನಿನ್ನ ಅಭಿಪ್ರಾಯವೇನು ಎಂದು ಅಲ್ಟಸಂಖ್ಯಾತ ಸಮುದಾಯದ ಸ್ನೇಹಿತನ ಪ್ರಶ್ನೆ ಮಾಡಿ, ಆತನಲ್ಲಿರಬಹುದಾದ ಮೂಲಭೂತವಾದಿ ಮೌಲ್ಯಗಳನ್ನು ಬಹಿರಂಗಗೊಳಿಸಿ ಸಾಧಿಸುವುದೇನೂ ಇಲ್ಲ. ಈ ದೇಶದ ಬಹುಸಂಖ್ಯಾತ ಸಮುದಾಯವಾಗಿದ್ದರೂ, ಅಕ್ಷರ ಜ್ಞಾನ, ಉದ್ಯೋಗ, ಸಂಪಾದನೆ ಎಲ್ಲದರಲ್ಲೂ ಮುಂದೆ ಇದ್ದರೂ, ಸಾಕಷ್ಟು ಸಂಖ್ಯೆಯಲ್ಲಿ ಸಮಾಜ ಸುಧಾರಕರು ಅನಾದಿ ಕಾಲದಿಂದ ಆಗಾಗ ಬಂದು ಬುದ್ಧಿವಾದ ಹೇಳಿದ್ದರೂ ಇಂದಿಗೂ ಹಿಂದೂಗಳು ಅಸ್ಪೃಶ್ಯತೆಯನ್ನು ಜಾರಿಯಲ್ಲಿಟ್ಟುಕೊಂಡೇ ಇದ್ದಾರಲ್ಲ. ಮೊನ್ನೆ ಮೊನ್ನೆ ತನಕ (ಕೆಲವು ದಶಕಗಳ ಹಿಂದಿನ ತನಕ), ಈ ಸಮುದಾಯದಲ್ಲಿ ಸತೀ ಪದ್ಧತಿ ಜಾರಿಯಲ್ಲಿತ್ತಲ್ಲ! (ಉರಿವ ಬೆಂಕಿಯಲ್ಲಿ ಜೀವಂತವಾಗಿ ಸುಡುವ ದೃಶ್ಯ ಕಲ್ಪಿಸಿಕೊಂಡರೆ ಎದೆ ಝಲ್ ಎನ್ತುತ್ತದೆ.) ಅವರೇ ಇನ್ನೂ ಸುಧಾರಣೆ ಆಗಿಲ್ಲ.

ಹಾಗಂತ ತನ್ನ ತಟ್ಟೆಯಲ್ಲಿ ಸತ್ತ ಕತ್ತೆಯನ್ನಿಟ್ಟುಕೊಂಡು, ಪಕ್ಕದವರ ಎಲೆಯಲ್ಲಿರುವ ನೊಣದ ಬಗ್ಗೆ ಮಾತನಾಡಬಾರದು ಎಂದಲ್ಲ. ಇಷ್ಟೆಲ್ಲಾ ದಾರ್ಶನಿಕರು ಬಂದು ಹೋದನಂತರವೂ ಕತ್ತೆಯನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿಲ್ಲದಿರುವಾಗ, ಅಂತಹ ಸುಧಾರಣೆಯ ಪ್ರಕ್ರಿಯೆಗಳು ಕಾಲಕಾಲಕ್ಕೆ ನಡೆಯದೆ ಹಿಂದುಳಿದಿರುವ ಸಮುದಾಯಗಳ ಬಗ್ಗೆ ಸಹಾನುಭೂತಿ ಬೆಳೆಸಿಕೊಳ್ಳಬೇಕಾಗುತ್ತದೆ. ನಿನಗಾದರೂ ಊಟಮಾಡಲು ತಟ್ಟೆ ಸಿಕ್ಕಿದೆ ಪಕ್ಕದವನಿಗೆ ಇನ್ನೂ ಎಲೆಯೇ ಗತಿ ಎಂದು ತಿಳಿಯಬೇಕಲ್ಲ.

ಬದಲಾವಣೆ ಸಾಧ್ಯವೇ ಇಲ್ಲ ಎಂದೇನಲ್ಲ. ಸತಿ ಪದ್ಧತಿ ನಿಂತಿರುವುದು ಬದಲಾವಣೆ ಸಾಧ್ಯ ಎನ್ನಲು ಒಂದು ಉದಾಹರಣೆ. Manual-scavengingಅದೇ ರೀತಿ, ಕೆಲವು ಆಚರಣೆ, ಸಂಪ್ರದಾಯಗಳ ಹಾಗೂ ಕೆಲವು ಸಮುದಾಯಗಳ ವಿಚಾರದಲ್ಲಿ ಹೆಚ್ಚು ಸಮಯ ಬೇಕಾಗಬಹುದು. ಅದಕ್ಕೆ ವಿಚಾರವಂತಿಕೆ, ಶಿಕ್ಷಣ, ಪರಿಸರ, ಸಾಮಾಜಿಕ ಮತ್ತು ಆರ್ಥಿಕ ಭದ್ರತೆ, ವೈಜ್ಞಾನಿಕ ಆಲೋಚನ ಕ್ರಮ ಎಲ್ಲವೂ ಕಾರಣ. ಇವೆಲ್ಲವೂ ಹೇರಳವಾಗಿರುವ ಜಾತಿಯ ಮನೆಗಳಲ್ಲಿಯೇ ಇನ್ನೂ ಬದಲಾವಣೆ ಆಗಿಲ್ಲ. ಫೇಸ್‍ಬುಕ್‍ನಂತಹ ಸಾಮಾಜಿಕ ತಾಣಗಳಲ್ಲಿ ಕೆಲ ಮುಂದುವರಿದ (ಸಾಮಾಜಿಕ ಮತ್ತು ಆರ್ಥಿಕವಾಗಿ) ಜಾತಿಗಳ, ಉಪಜಾತಿಗಳ ಗುಂಪುಗಳು ಚಾಲ್ತಿಯಲ್ಲಿರುವುದು ಇದಕ್ಕೆ ಸಾಕ್ಷಿ.

ಅಭದ್ರತೆ ಕಾಡಬಹುದಾದ ಯಾವ ಸನ್ನಿವೇಶ ಇಲ್ಲದಿದ್ದರೂ, ಮುಂದುವರಿಗೆ ಸಮುದಾಯದವರು ತಮ್ಮ ಐಡೆಂಟಿಟಿಗಾಗಿ ಒಂದು ಜಾತಿಯ ಹೆಸರಿನಲ್ಲಿ ಗುಂಪುಗೂಡುವುದು ಸಾಮಾನ್ಯವಾಗಿರುವಾಗ, ತೀವ್ರ ಅಭದ್ರತೆಯಿಂದ ಬಳಲುತ್ತಿರುವ ಸಮುದಾಯಗಳಿಗೆ ಹೆಚ್ಚೆಚ್ಚು ಸಂಘಟಿತರಾಗುವುದು ಅನಿವಾರ್ಯವಾಗಿ ಕಾಣಬಹುದು. ಹೀಗೆ ರೂಪ ಪಡೆದುಕೊಂಡ ಗುಂಪುಗಳಿಗೆ, ಸಮಾಜ, ಧರ್ಮ, ಸಂಪ್ರದಾಯದ ಸುಧಾರಣೆಗಿಂತ ತಮ್ಮ ಮುಂದಿನ ಜನಾಂಗದ ಭದ್ರತೆ ಹೆಚ್ಚು ಮುಖ್ಯವಾಗುತ್ತದೆ. ಆ ಕಾರಣಕ್ಕಾಗಿಯೇ ಅವರಿಗೆ ಬುರ್ಖಾದ ವಿವಾದಕ್ಕಿಂತ ಶಿಕ್ಷಣ ಬೇಕು, ಉದ್ಯೋಗ ಬೇಕು, ಆಶ್ರಯಕ್ಕೆ ಮನೆ ಬೇಕು ಎಂದು ವಾದ ಮುಂದಿಡುತ್ತಾರೆ. ಅವೆಲ್ಲವೂ ದಕ್ಕದ ತನಕ ಧಾರ್ಮಿಕ ಸುಧಾರಣೆ ಬಗ್ಗೆ ಚಿಂತಿಸಲು ಸಾಧ್ಯವಾಗದೇ ಹೋಗಬಹುದು. ಒಟ್ಟಿನಲ್ಲಿ ಇದು ಆಗುವ ಪ್ರಕ್ರಿಯೆ. ಮಾಗುವ ಪ್ರಕ್ರಿಯೆ. ಅಷ್ಟೆ. ಇಲ್ಲಿ ಗುರಿ ಎನ್ನುವುದು ಇರುವುದಿಲ್ಲ. ಕೆಲವರು ಸ್ವಲ್ಪ ಮುಂದೆ ಇರಬಹುದು. ಮುಂದೆ ಸಾಗಿರುವವರು ಹಿಂದಿನವರನ್ನು ನೋಡಿ ನೀನಿನ್ನೂ ಅಲ್ಲಿಯೇ ಇದೀಯಲ್ಲ ಎಂದು ಮೂದಲಿಸುವುದಕ್ಕಿಂತ, ಆದಷ್ಟು ಬೇಗೆ ನನ್ನೊಂದಿಗೆ ಬಾ ಎಂದು ಉತ್ತೇಜಿಸಬೇಕಷ್ಟೆ.

ನಾವೆಲ್ಲ ಸೆಕ್ಯುಲರಿಸಂನಲ್ಲಿ ಇನ್ನೂ ಅಪ್ರೆಂಟಿಸ್‌ಗಳು


– ಬಿ. ಶ್ರೀಪಾದ ಭಟ್


ಬಿ.ಎಂ. ಬಶೀರ್ ಅವರ ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ದಿನೇಶ್ ಅಮೀನ್ ಮಟ್ಟು ಅವರು ಆಡಿದ ಭಾಷಣದಲ್ಲಿ “ಬುರ್ಖಾ ಕುರಿತಾದ” ಮಾತುಗಳು ವಿವಾದಕ್ಕೆ ಈಡಾಗಿರುವುದು ನಿಜಕ್ಕೂ ಅನಗತ್ಯವಾಗಿತ್ತು. ಮೊದಲನೇಯದಾಗಿ ಈ “ಮುಸ್ಲಿಂ ಲೇಖಕರು” ಎಂದು ಅಸಂಬದ್ಧ, ಅರ್ಥಹೀನ ಹಣೆಪಟ್ಟಿಯನ್ನು ಒಪ್ಪಿಕೊಂಡಾಕ್ಷಣ ಮಿಕ್ಕವರೆಲ್ಲ “ಹಿಂದೂ ಲೇಖಕರು” ಮತ್ತು “ಇತರೇ ಧರ್ಮದ ಲೇಖಕರು” ಎನ್ನುವ ಹಣೆಪಟ್ಟಿಗೆ ಒಳಗಾಗಬೇಕಾಗುತ್ತದೆ ಮತ್ತು ಒಪ್ಪಿಕೊಳ್ಳಬೇಕಾಗುತ್ತದೆ. ನಮ್ಮ ಪ್ರಗತಿಪರ ಗೆಳೆಯ/ಗೆಳತಿಯರು ಇದರ ಕುರಿತಾಗಿ ತುಂಬಾ ಎಚ್ಚರದಿಂದ, basheer-book-release-dinesh-2ಜವಾಬ್ದಾರಿಯಿಂದ ವರ್ತಿಸಬೇಕಾಗುತ್ತದೆ. ಏಕೆಂದರೆ ಬಶೀರ್‌ರ ತೊಂದರೆ ಪ್ರಾರಂಭವಾಗುವುದೇ ಆವರು “ಮುಸ್ಲಿಂ ಲೇಖಕ” ಎನ್ನುವ ಹಣೆಪಟ್ಟಿಗೆ ಬಲಿಯಾಗಿದ್ದರಿಂದ. ಒಮ್ಮೆ ಬಲಿಯಾದ ನಂತರ ಇಡೀ ಧರ್ಮದ ಮೌಡ್ಯಕ್ಕೆ ಅವನೇ ಏಕಮಾತ್ರ ವಾರಸುದಾರನಗಿಬಿಡುವ ದುರಂತ ಇದು. ಇದು ಪ್ರತಿಯೊಬ್ಬ ಲೇಖಕನ ವಿಷಯದಲ್ಲೂ ನಿಜ. ಇಲ್ಲಿಯ ದುರಂತ ನೋಡಿ. ಈ “ಹಿಂದೂ ಲೇಖಕ/ಲೇಖಕಿ”ಯರು ಹಿಂದೂ ಧರ್ಮದ ಮೌಢ್ಯ ಆಚರಣೆಗಳನ್ನು ಟೀಕಿಸುತ್ತಲೇ “ಮುಸ್ಲಿಂ ಲೇಖಕ/ಲೇಖಕಿ” ಕಡೆಗೆ ತಿರುಗಿ ’ಕಮಾನ್, ನೀನು ನಿನ್ನ ಧರ್ಮದ ವಿರುದ್ಧ ಶುರು ಮಾಡು’ ಎಂದು ಆಹ್ವಾನ ಕೊಡುವ ಶೈಲಿಯಲ್ಲಿ ಬರೆಯುತ್ತಿರುವುದು, ಟೀಕಿಸುತ್ತಿರುವುದು ನನ್ನನ್ನು ದಂಗಾಗಿಸಿದೆ. ಡಿ.ಆರ್.ನಾಗರಾಜ್ ಹೇಳಿದ ಪಿತೃಹತ್ಯೆಯ ಸಿದ್ಧಾಂತವನ್ನು ಈ ನಮ್ಮ ಪ್ರಗತಿಪರ ಗೆಳೆಯ/ಗೆಳತಿಯರು ನಿಜಕ್ಕೂ ಅರ್ಥ ಮಾಡಿಕೊಂಡಿದ್ದಾರೆಂದು ನನಗೇಕೋ ಅನಿಸುತ್ತ್ತಿಲ್ಲ.

ನಾನು ಪ್ರಜ್ಞಾಪೂರ್ವಕವಾಗಿ ಸೆಕ್ಯುಲರ್ ಆಗುತ್ತಲೇ ನನ್ನೊಳಗೆ ಸಂಪೂರ್ಣ ಇಡೀ ಜಾತ್ಯಾತೀತತೆಯನ್ನು, ಈ ನಿಜದ ಸೆಕ್ಯುಲರ್ ಅನ್ನು ಮೈಗೂಡಿಸಿಕೊಳ್ಳುತ್ತಾ ಒಂದು ಸಹಜವಾದ ಸೆಕ್ಯುಲರ್ ಆದ, ಮಾನವತಾವಾದದ ಸ್ಥಿತಿಗೆ ತೆರಳುವುದು ಮತ್ತು ಅಲ್ಲಿಂದ ಮುಂದೆ ನಮ್ಮ ಸೆಕ್ಯುಲರ್ ನಡುವಳಿಕೆಗಳು ಸಹಜವಾಗಿಯೇ ಅಪ್ರಜ್ಞಾಪೂರ್ವಕವಾಗಿರುತ್ತವೆ ಮತ್ತು ಆಗಲೇ ನಾವು ನಿಜದ ಮಾನವರಾಗುವುದು. ಅಲ್ಲಿಯವರೆಗೆ ನಾವೆಲ್ಲಾ ಈ ಪ್ರಕ್ರಿಯೆಯಲ್ಲಿ ಕೇವಲ ಅಪ್ರೆಂಟಿಸ್‌ಗಳು ಮಾತ್ರ. ಹೌದು ಕೇವಲ Photo Captionಸೆಕ್ಯುಲರ್ ಅನ್ನು ಪಾಲಿಸುತ್ತಿರುವ ಅಪ್ರೆಂಟಿಸ್‌ಗಳು. ನಾವು ಚಾರ್ವಾಕರಾದಾಗಲೇ ನಮ್ಮ ವ್ಯಕ್ತಿತ್ವ ಸ್ವಲ್ಪ, ಸ್ವಲ್ಪವಾಗಿ ಗೋಚರಿಸುತ್ತದೆ. ಇದನ್ನು ನನ್ನ ಪ್ರಗತಿಪರ ಸ್ನೇಹಿತರು ದಯವಿಟ್ಟು ನೆನಪಿನಲ್ಲಿಟ್ಟುಕೊಳ್ಳಬೇಕು. ಸೆಕ್ಯುಲರ್‌ಗಳಾದ ನಾವೆಲ್ಲ ನಾವೆಷ್ಟು ನಿಜದ ಸೆಕ್ಯುಲರ್, ನಾನೆಷ್ಟು ನಿಜದ ಜಾತ್ಯಾತೀತ ಎಂದು ನಮ್ಮೊಳಗೆ ನಮ್ಮನ್ನು ಬಿಚ್ಚುತ್ತಾ, ಬಿಚ್ಚುತ್ತಾ ನಡೆದಾಗ ನಾವು ಶೇಕಡಾ ಇಪ್ಪತ್ತರಷ್ಟು ಮಾತ್ರ ಮುಂದುವರೆದಿರಬಹುದಷ್ಟೆ. ಇನ್ನೂ ಶೇಕಡಾ ಎಂಬತ್ತರಷ್ಟು ನಡೆಯನ್ನು ನಾವು ಕ್ರಮಿಸಬೇಕಾಗಿರುವ ಎಚ್ಚರ ನಮ್ಮಲ್ಲಿ ಇಲ್ಲದೇ ಹೋದರೆ ’ನಾನು ಮಾತ್ರ ಸೆಕ್ಯುಲರ್ ಮಾರಾಯ, ಆ ಬಶೀರ್ ನೋಡು ಅವನಿಗೆ ತನ್ನ ಧರ್ಮದ ಮೂಲಭೂತವಾದಿಗಳನ್ನು ಟೀಕಿಸುವ ದಮ್ಮೆಲ್ಲಿದೆ’ ಎನ್ನುವ ಅಹಂಕಾರಕ್ಕೆ ಬಲು ಸುಲಭವಾಗಿ ಬಲಿಯಾಗುತ್ತೇವೆ. ಏಕೆ ಗೊತ್ತೆ ಸ್ನೇಹಿತರೆ, ಸೆಕ್ಯಲರಿಸಂನಲ್ಲಿ ನಾವೆಲ್ಲ ಇನ್ನೂ ಅಪ್ರೆಂಟಿಸ್‌ಗಳು. ದೇಶವೊಂದರಲ್ಲಿ ಬಹುಸಂಖ್ಯಾತರಾದ, ಸೆಕ್ಯುಲರಿಸಂನಲ್ಲಿ ಅಪ್ರೆಂಟಿಸ್‌ಗಳಾದ ನಾವು,  ’ನಾವು ಮಾತ್ರ ನಿಜದ ಪಾತಳಿಯ ಮೇಲೆ ನಿಂತಿದ್ದೇವೆ’ ಎನ್ನುವ ಭ್ರಮೆಯಲ್ಲಿ ಅಲ್ಪಸಂಖ್ಯಾತ ಲೇಖಕ/ಲೇಖಕಿಯರನ್ನು ’ಇನ್ಯಾವಾಗ ಮಾರಾಯ ನೀನು ನಿನ್ನ ಕಪ್ಪೆಚಿಪ್ಪಿನಿಂದ ಹೊರಬರುವುದು’ ಎಂದು ಕೇಳುವಾಗ (ಹೌದು ಕೇಳಬೇಕು, ಖಂಡಿತ ಕೇಳಬೇಕು) ಮಾನವೀಯತೆಯನ್ನು, ವಿನಯವನ್ನು ಮರೆಯಯಬಾರದು. ಆದರೆ ಬಶೀರ್ ವಿಷಯದಲ್ಲಿ ನನ್ನ ಸ್ನೇಹಿತರು ಆ ಗಡಿಯನ್ನು ದಾಟಿದ್ದು ನನ್ನಲ್ಲಿ ಖೇದವನ್ನು ಉಂಟು ಮಾಡಿದೆ.

ಅತ್ಯಂತ ಸೂಕ್ಷ್ಮ, ಪ್ರಾಮಾಣಿಕ, ಪ್ರತಿಭಾವಂತರಾದ ಈ ಹೊಸ ತಲೆಮಾರು ಕಾಮ್ರೇಡ್‌ಶಿಪ್‌ಗೆ ಸಂಪೂರ್ಣ ತಿಲಾಂಜಲಿಯನ್ನು ಕೊಟ್ಟು ತನ್ನ ಸಹಚರರೊಂದಿಗೆ (ಎಷ್ಟೇ ಭಿನ್ನಮತವಿರಲಿ) ಬಹಿರಂಗವಾಗಿ ಜಗಳಕ್ಕೆ ಇಳಿಯುವುದನ್ನು ನಾನು ಒಪ್ಪಿಕೊಳ್ಳಲಾರೆ. ಹಾಗೆಯೇ ಬಶೀರ್‌ನ ಪ್ರತಿಕ್ರಿಯೆನ್ನು ಸಹ ನಾನು ಒಪ್ಪಿಕೊಳ್ಳುವುದಿಲ್ಲ. basheer-book-release-dinesh-3ಅದು ಅನೇಕ ಕಡೆ ವಾದಕ್ಕಾಗಿ ವಾದ ಹೂಡಿದಂತಿದೆ. ಇದನ್ನು ಬಶೀರ್ ಬರೆದಿದ್ದಾನೆಂಬುದೇ ನನಗೆ ಆಶ್ಚರ್ಯ. “ಬಶೀರ್, ನೀನು ಬರೆದ ನಿನ್ನದೇ ಲೇಖನದ ಕೆಲವು ಭಾಗಗಳನ್ನು ಸ್ವತಃ ನೀನೇ ತಿರಸ್ಕರಿಸು.”

ನಮ್ಮ ಚಿಂತನೆಗಳಲ್ಲಿ ಸ್ಪಷ್ಟತೆ, ವಿನಯ, ಸೌಹಾರ್ದತೆ ಮತ್ತು ಕಾಮ್ರೇಡ್‌ಗಿರಿಯನ್ನು ಒಳಗೊಳ್ಳದಿದ್ದರೆ, ಈ ಕ್ಷಣದ ರೋಚಕತೆಗೆ ಬಲಿಯಾಗದೇ ಬದುಕುವುದೇ ಕಷ್ಟವಾಗಿರುವ ಇಂದಿನ ದಿನಗಳಲ್ಲಿ ಕಡೆಗೆ ಎಲ್ಲ ಧರ್ಮದ ಮೂಲಭೂತವಾದದ ವಿರುದ್ಧ ಹೋರಾಡುತ್ತಿದ್ದೇವೆ ಎನ್ನುವ ಪ್ರಾಮಾಣಿಕ ನಡೆಗಳಿಂದ ಶುರುವಾಗುವ ನಮ್ಮ ದಾರಿಗಳು ಸುಲುಭವಾಗಿ ಹಾದಿ ತಪ್ಪುವುದಂತೂ ಖಂಡಿತ. ನಾನು ನನ್ನ ಆರಂಭದ ಕಮ್ಯನಿಷ್ಟ್ ಚಳುವಳಿಗಳಲ್ಲಿ ಭಾಗವಹಿಸಿ ಕಲಿತದ್ದು ಈ ಕಾಮ್ರೇಡ್‌ಗಿರಿಯನ್ನು. ಇದು ನಮ್ಮನ್ನು ಮತ್ತಷ್ಟು ಪಕ್ವಗೊಳಿಸುತ್ತದೆ. ಚಾರ್ವಾಕದೆಡೆಗಿನ ನಡೆಗೆ ಆತ್ಮವಿಶ್ವಾಸ ಮೂಡಿಸುತ್ತದೆ. ಮತ್ತು ಮುಖ್ಯವಾಗಿ ನಮ್ಮ ಆತ್ಮದ ಸೊಲ್ಲು ಅಚ್ಚರಿ ಎನಿಸುವಷ್ಟು ನಮ್ಮಲ್ಲಿ ಖುಷಿಗೊಳಿಸುತ್ತಿರುತ್ತದೆ. ಹೌದು ಮೊದಲ ಬಾರಿಗೆ. ಈ ಮೊದಲ ಖುಷಿ ಎಂದಿಗೂ ಖುಷಿಯಲ್ಲವೇ?

ಒಮ್ಮೆ ಹೆಣ್ಣಾಗು ಪ್ರಭುವೇ…

– ಅಕ್ಷತಾ ಹುಂಚದಕಟ್ಟೆ

 

ಬಿ.ಎಮ್.ಬಶೀರ್ ಅವರೇ, ‘ದಿನೇಶ್ ಅಮೀನ್ ಮಟ್ಟು ಅವರ ಬುರ್ಖಾ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಲೇಖನ ಈಗಷ್ಟೇ ಬರೆದು ಮುಗಿಸಿದೆ. ನಾಳೆ ಗುಜರಿ ಅಂಗಡಿಯಲ್ಲಿ ಅಪ್ಡೇಟ್ ಮಾಡುವೆ’ ಎಂಬ ನಿಮ್ಮ ಫೇಸ್‌ಬುಕ್ ಸ್ಟೇಟಸ್ ಅನ್ನು ನೋಡಿ, ಇದೇನು ದಿನೇಶ್ ಅಮಿನ್ ಮಟ್ಟು ಬ್ರಾಂಡ್‌ನ ಬುರ್ಖಾ ಎಂಬ ಅಚ್ಚರಿಯೊಂದಿಗೆ ಕಾದು ಓದಿದೆ. ನಿಮ್ಮ ಬರಹ ಓದಿದಾಗ ನನಗೆ ಇಬ್ಬರು ಬೌದ್ಧ ಸನ್ಯಾಸಿಗಳು ನದಿ ದಾಟುವ ಕಥೆ ಇದೆಯಲ್ಲ –ಅದನ್ನು ನೀವು ಓದಿರುತೀರಿ– ಆ ಕಥೆ ನೆನಪಾಯಿತು. akshatha-hunchadakatteಆ ಕಥೆಯಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ನದಿ ದಾಟುವಾಗ ಅದು ತುಂಬಿ ಹರಿಯುತ್ತಿರುತ್ತದೆ. ಒಬ್ಬ ಹೆಣ್ಣುಮಗಳು ಹರಿಯುವ ನದಿಯನ್ನು ದಾಟಲಾಗದೆ ಅಸಹಾಯಕತೆಯಿಂದ ನಿಂತಿರುತ್ತಾಳೆ. ಒಬ್ಬ ಸನ್ಯಾಸಿ ಅವಳನ್ನು ಹೆಗಲ ಮೇಲೆ ಕೂರಿಸಿಕೊಂಡು ಇನ್ನೊಂದು ದಡಕ್ಕೆ ತಲುಪಿಸುತ್ತಾನೆ. ಮುಂದಿನ ಅವನ ಪ್ರಯಾಣದುದ್ದಕ್ಕೂ ಇನ್ನೊಬ್ಬ ಮಹಾನುಭಾವ `ನೀನೊಬ್ಬ ಸನ್ಯಾಸಿಯಾಗಿ ಹೆಣ್ಣು ಮಗಳನ್ನು ಹೊತ್ತು ನಡೆಯಬಹುದೇ ಹೇಳು’ ಎಂದು ಕುಟುಕುತ್ತಿರುತ್ತಾನೆ. ಹೊತ್ತು ದಡಕ್ಕೆ ತಲುಪಿಸಿದವ ಹೇಳುತ್ತಾನೆ, ’ನಾನವಳನ್ನು ಅಲ್ಲಿಯೇ ಬಿಟ್ಟು ಬಂದೆ. ನೀನ್ಯಾಕೆ ಎಲ್ಲೆಲ್ಲೂ ಅವಳನ್ನು ಹೊತ್ತು ಬರ್ತಾ ಇದೀಯ?’ ಅಂತ.

ದಿನೇಶ್ “ಸೂಕ್ತ ವೇದಿಕೆಯಲ್ಲಿ” (ನಿಮ್ಮದೇ ಮಾತು ) ಮಾತಾಡಿದರು. ಆದರೆ ಅದನ್ನು ಹೊತ್ತು ನಡೆಯುತ್ತಿರುವವರು ನೀವು. ಆದರಿಂದ ಅದು ದಿನೇಶ್ ಅವರದಲ್ಲ, ಬಶೀರ್ ಅವರ ಬುರ್ಖಾ ಎನಿಸಿತು ನಿಮ್ಮ ಲೇಖನ ಓದಿ.

ನೀವು ಲೇಖನದ ಪ್ರಾರಂಭದಲ್ಲೇ ಬುರ್ಖಾವನ್ನು ತೊಡುವುದನ್ನು ಉದ್ದೇಶಿಸಿ ’ಬಟ್ಟೆ ಎನ್ನುವುದು ಸಂವೇದನೆಗೆ ಸಂಬಂಧ ಪಟ್ಟಿದ್ದು’ ಎನ್ನುತೀರಿ. ಸರಿ, ಆದರೆ ಅದು ತೊಡುವವರ ಸಂವೇದನೆಗೆ ಸಂಬಂಧ ಪಟ್ಟಿದಲ್ಲವೇ? ಹಾಗಿದ್ದರೆ ಹೆಣ್ಣು ಮಕ್ಕಳು ಮಾತ್ರ ಬುರ್ಖಾದಡಿಯಲ್ಲಿ ಮುಖ ಮರೆಸುವ ಸಂದರ್ಭ ಯಾಕೆ ಸೃಷ್ಟಿಯಾಯಿತು? ಅಷ್ಟೊಂದು ಸಂವೇದನ ಶೀಲವಾದ ಉಡುಪು ಅದಾಗಿದ್ದರೆ ಅದನ್ನು ತೊಡುವ ಬಹುತೇಕ ಹೆಣ್ಣುಮಕ್ಕಳು ಧರ್ಮ, ನಂಬಿಕೆ, ಕಟ್ಟು ಪಾಡು ಎಂದು ಯಾಕೆ ಕಾರಣ ಕೊಡುತ್ತಾರೆ? (ಅಂದ ಹಾಗೆ, ಯಾವ ಹೆಣ್ಣುಮಗಳೂ ಬುರ್ಖಾದ ವಿಷಯದಲ್ಲಿ ನಂಬಿಕೆಯಲ್ಲ, ಸಂವೇದನೆ ಅಂದಿದ್ದಿಲ್ಲ.) ಮೈ ತುಂಬಾ ಬಟ್ಟೆ ಧರಿಸುವುದು ಎಂದರೆ ನಿಮ್ಮ ಪ್ರಕಾರ ತಲೆಯಿಂದ ಉಂಗುಷ್ಟದವರೆಗೂ ಕಪ್ಪು ಬಟ್ಟೆಯಡಿಯಲ್ಲಿ ಬೇಯುವುದೇ … ?

ನೀವು, `ನನ್ನ ಅಮ್ಮನಿಗೆ ಏಕೆ ನೀನು ಮೈ ತುಂಬಾ ಬಟ್ಟೆ ಧರಿಸುತೀಯ ಎಂಬ ಪ್ರಶ್ನೆ ಕೇಳಲಾಗುತ್ತದೆಯೇ?’ ಎಂದು ಕೇಳಿದ್ದನ್ನು ನೋಡಿ ಬಹಳ ಅಚ್ಚರಿ ಆಯಿತು. basheer-book-release-dinesh-3ನಿಮ್ಮನ್ನು ತುಂಬಾ ಉದಾರಿ ಮನುಷ್ಯ ಎಂದು ತಿಳಿದಿದ್ದೆ. ಆದರೆ ನಿಮಗಿಂತ ಯಾವ ವಿಚಾರವಾದದ ಹಿನ್ನೆಲೆ ಇಲ್ಲದ ನನ್ನ ಎಷ್ಟೋ ಗೆಳತಿಯರೆ ಪರವಾಗಿಲ್ಲ, ಅವರು ಇಂಥ ಪ್ರಶ್ನೆಗಳಿಗೆ ಅವಕಾಶ ನೀಡದೆ ಇಪ್ಪತ್ನಾಲ್ಕು ಗಂಟೆಯೂ ಸೀರೆ ಬಿಗಿದೆ ಇರುತಿದ್ದ ಅವರಮ್ಮಂದಿರಿಗೆ ತಮ್ಮ ಚೂಡಿದಾರ್ ತೊಡುವಂತೆ ಮಾಡಿದರು… ವ್ಯಾಯಾಮ, ಆಟೋಟ, ಪ್ರವಾಸ, ವಾಹನ ಚಾಲನೆ, ಹೀಗೆ ಅವರಮ್ಮಂದಿರನ್ನು ಕ್ರಿಯಾಶೀಲ ಮತ್ತು ಚೈತನ್ಯಶೀಲರಾಗಲು ಅಣಿಗೊಳಿಸಿದರು. ಇದೆಲ್ಲ ಯಾವುದೇ ಬ್ಯಾನರ್, ಪೋಸ್ಟರ್ ಇಲ್ಲದೆ ಸುಲಲಿತವಾಗಿ ನಡೆದು ಹೋಯ್ತು. ಇಂಥದಕ್ಕೆ ಅವಕಾಶ ಇರಬೇಕು ಎಂದು ಒಂದು ಪ್ರಬುದ್ದ ಸಮಾಜದಲ್ಲಿರುವವರು ಕನಸು ಕಂಡರೆ ನಿಮ್ಮಂತವರಿಗೆ ಅದು ವೈಚಾರಿಕ ಮೂಲಭೂತವಾದವಾಗಿ ಕಾಣುತ್ತದೆ. ಈ ವೈರುಧ್ಯಕ್ಕೆ ಏನು ಹೇಳೋಣ….? ಹೆಣ್ಣು ಮಕ್ಕಳ ಮಸೀದಿ ಪ್ರವೇಶ ವಿಷಯ ಬಂದಾಗಲೂ, ಬುರ್ಖಾ ಬಗ್ಗೆ ಮಾತಾಡಿದಾಗಲೂ, ನೀವು, ’ಮುಸ್ಲಿಂ ಹೆಣ್ಣು ಮಕ್ಕಳು ಶಿಕ್ಷಿತರಾಗೋದೆ ಮುಖ್ಯ. ಇವೆಲ್ಲ ಮುಖ್ಯ ಅಲ್ಲವೇ ಅಲ್ಲ’ ಎನ್ನುತೀರಿ… ಆದರೆ ನಾನೊಂದು ಪ್ರಶ್ನೆ ಕೇಳುತ್ತೀನಿ… ಕೇವಲ 15 ವರ್ಷದ ಹಿಂದೆ ಬಹಳ ಹೆಣ್ಣುಮಕ್ಕಳು ಬುರ್ಖಾ ಧರಿಸುತಿರಲಿಲ್ಲ, ಸಿನಿಮಾಗೃಹಕ್ಕೆ ಹೋಗಿ ಸಿನಿಮಾ ನೋಡಿ ಬರುತಿದ್ದರು…ದರ್ಗಾ-ಮಸೀದಿಗೂ ಆರಾಮಾಗಿ ಬಂದು ಹೋಗುವುದನ್ನು ನೋಡಿದ್ದೆ, ಆದರೆ ಅವರಲ್ಲಿ ಹೆಚ್ಚಿನವರು ಶಾಲೆ ಕೂಡ ಓದಿದವರಲ್ಲ. ಈ ಹದಿನೈದು ವರ್ಷದಲ್ಲಿ ಓದಿ ನೌಕರಿಯಲ್ಲಿರುವ ಮುಸ್ಲಿಂ ಹೆಣ್ಣುಮಕ್ಕಳ ಸಂಖ್ಯೆ ಬಹಳ ಹೆಚ್ಚಾಗಿದೆ. ಅದೇ ಸಮಯಕ್ಕೆ ಅವರಿಗೆ ಹಿಂದಿದ್ದ ಈ ಎಲ್ಲ ಸ್ವಾತಂತ್ರ್ಯಗಳು ಇಲ್ಲವಾಗಿವೆ. ಈಗ ಹೇಳಿ… ಶಿಕ್ಷಣ ಅವರಿಗೆ ಕೊಟ್ಟಿದ್ದೇನು? ನಡಿಗೆ ಮುಮ್ಮುಖವಾಗಿದೆಯೋ? ಹಿಮ್ಮುಖವಾಗಿದೆಯೋ? ನೀವು ಶಿಕ್ಷಣ ಮುಖ್ಯ ಎಂದು ಹೇಳುವುದರಲ್ಲಿ basheer-book-release-dinesh-1ಈ ಆಶಯವೇ ಅಡಗಿದೆಯೇ?

ಬುರ್ಖಾ ಬಗ್ಗೆ ಮಾತನಾಡುವವರು ನಿಮ್ಮ ಕಣ್ಣಿಗೆ ’ಮಹಿಳೆ ಧರಿಸಿದ ಉಡುಪಿಗೆ ಕೈ ಹಾಕಿದವರಾಗಿ’ ಕಾಣುತ್ತಾರೆ, `ಮಹಿಳೆ ಧರಿಸಿದ ದಿರಿಸಿಗೆ ಕೈ ಹಾಕುವುದು ಎಂದರೆ ಅದು ಪರೋಕ್ಷವಾಗಿ ಆಕೆಯ ಸೆರಗಿಗೆ ಕೈ ಹಾಕಿದಂತೆ’ ಎಂದು ನೀವು ಬರೆಯುವುದನ್ನು ನೋಡಿಯಂತೂ ಇನ್ನೇನು ಹೇಳುವುದಕ್ಕೂ ತಿಳಿಯದೆ ದಾಸಿಮಯ್ಯನ ಈ ವಚನವನ್ನು ನೆನಪಿಸಿಕೊಂಡೆ: “ಒಡಲು ಗೊಂಡವ ಹಸಿವ … ಒಡಲು ಗೊಂಡವ ಹುಸಿವ ……ನೀನೆನ್ನಂತೊಮ್ಮೆ ಒಡಲುಗೊಂಡು ನೋಡ ರಾಮನಾಥ”. ಹಾಗೆಯೇ, ಭಾನು ಮುಷ್ತಾಕ್‌ರು “ಒಮ್ಮೆ ಹೆಣ್ಣಾಗು ಪ್ರಭುವೇ” ಎಂದು ಬೇಡಿದ್ದು ನೆನಪಾಯಿತು.