Monthly Archives: October 2014

ಕೃತಿ ಚೌರ್ಯ ಮತ್ತು ಬೂಸಾ ಸಾಹಿತ್ಯ


– ಡಾ.ಎಸ್.ಬಿ. ಜೋಗುರ


 

 

ಮನುಷ್ಯ ತನ್ನ ಕ್ರಿಯಾಶೀಲತೆ ಬತ್ತತೊಡಗಿದೊಡನೆ ತನ್ನ ತಂಗಳ ವಿಚಾರ ಮತ್ತು ಸಾಧನೆಗಳನ್ನೇ ಮೆಲುಕು ಹಾಕಿ ಸುಖ ಅನುಭವಿಸತೊಡಗುತ್ತಾನೆ. ನಿಜವಾಗಿಯೂ ಕ್ರಿಯಾಶೀಲ ಸಾಮರ್ಥ್ಯ ಇರುವವನು ಎಂದೂ ಅವಕಾಶಗಳಿಗಾಗಿ ಮಾಡಬಾರದ್ದನ್ನೆಲ್ಲಾ ಮಾಡುವದಿಲ್ಲ. ಖುದ್ದಾಗಿ ತಾನೇ ಅವಕಾಶಗಳನ್ನು ಸೃಷ್ಟಿಸಿಕೊಳ್ಳುತ್ತಾನೆ. ಕೆಲವರಂತೂ ತಮ್ಮಲ್ಲಿಲ್ಲದ ಕ್ರಿಯಾಶೀಲತೆಯನ್ನು ಇದೆ ಎಂದು ತೋರಿಸುವ ಯತ್ನದಲ್ಲಿ Plagiarism-checkerಅನೇಕ ಬಗೆಯ ಛದ್ಮವೇಷಗಳನ್ನು ಧರಿಸುತ್ತಾರೆ. ಅವಕಾಶಗಳಿಗಾಗಿ ಪೀಡಿಸುತ್ತಾರೆ, ಬೇರೆಯವರ ಅವಕಾಶಗಳನ್ನು ಕಸಿಯುತ್ತಾರೆ, ನನಗೆ ದಕ್ಕದ್ದು ಅವರಿಗೂ ದಕ್ಕುವುದು ಬೇಡ ಎನ್ನುವ ನಿಟ್ಟಿನಲ್ಲಿ ಹಿತ್ತಾಳೆ ಕಿವಿಗಳಿಗೆ ಹತ್ತಿರವಾಗಿ ತೂತು ಕೊರೆಯುವ ಯತ್ನ ಮಾಡುತ್ತಾರೆ. ಕೊನೆಗೂ ಹಾಗೂ ಹೀಗೂ ಮಾಡಿ ತಾನೂ ಒಬ್ಬ ಕವಿ, ನಾಟಕಕಾರ, ಕತೆಗಾರ, ಪ್ರಬಂಧಕಾರ ಎಂದು ಸ್ವಘೋಷಿಸಿಕೊಂಡು ಬಿಡುತ್ತಾನೆ. ಅಲ್ಲಿಗೆ ಸಮ್ಮೇಳನದ ಗೋಷ್ಟಿಗಳಲ್ಲಿ, ದಸರಾ ಸಮ್ಮೇಳನದಲ್ಲಿ ತನಗೂ ಒಂದು ಖುರ್ಚಿ ಇರುವಂತೆ ಮಾಡಬಾರದ ಕಟಿಬಿಟಿ ಮಾಡುತ್ತಾನೆ. ಕೊನೆಗೂ ಅವನು ಓದಿದ ಪದ್ಯ ಅರ್ಧ ಗಂಡು ಅರ್ಧ ಹೆಣ್ಣು. ಕೆಲ ಬಾರಿ ಅದು ನೀವೆಂದೂ ಕೇಳಿರದ ಒಂದು ಅಜ್ಞಾತ ಲಿಂಗವೂ ಆಗಿಬಿಡುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಇದನ್ನೆಲ್ಲಾ ಬರೆಯಲು ಕಾರಣವಿಷ್ಟೆ. ಈಗೀಗ ಸಾಹಿತ್ಯ ಮತ್ತು ಮಾಧ್ಯಮಗಳ ವಲಯದಲ್ಲಿ ಚಿತ್ರ ವಿಚಿತ್ರವಾದ ಓರೆ ಕೋರೆಗಳು ತೋರತೊಡಗಿವೆ. ಕೆಲವು ಪತ್ರಿಕೆಗಳಂತೂ ಅವನು ತಮ್ಮ ಪ್ರಾದೇಶಿಕತೆಯವನು, ಜಾತಿಯವನು, ಊರವನು[ಳು], ಬೇಕಾದವರು, ಆತ್ಮೀಯರು ಇಲ್ಲವೇ ಯಾರೋ ಒಬ್ಬ ಉದ್ದಾಮ ಸಾಹಿತಿ ಮುದ್ದಾಮ್  ಶಿಫಾರಸು ಮಾಡಿದ ಕಾರಣಕ್ಕೆ ಪ್ರಕಟಿಸಲಾಗುವ ಭಯಂಕರ ಬರಹಗಳಿಗೂ ಬರವಿಲ್ಲ. ಮೊನ್ನೆ ನಾಡಿನ ಖ್ಯಾತ ಪತ್ರಿಕೆಯೊಂದರ ದೀಪಾವಳಿ ವಿಶೇಷಾಂಕದಲ್ಲಿ ಕೃತಿ ಚೌರ್ಯ ಮಾಡಿದ ಕವನವೊಂದು ಮೆಚ್ಚುಗೆ ಪಡೆದ ಬಗ್ಗೆ ಆ ಕವಿತೆಯ ಮೂಲ ಜನುಮದಾತ ಮನ ನೊಂದು ಫೇಸಬುಕ್ ಲ್ಲಿ ತನ್ನ ಅಳಲನ್ನು ತೋಡಿಕೊಂಡ. ಜ್ಞಾನಪೀಠ ಪ್ರಶಸ್ತಿ ಪುರಷ್ಕೃತ ಸಾಹಿತಿ ಗಿರೀಶ ಕಾರ್ನಾಡರೂ ಕೂಡಾ ತಮ್ಮ ‘ನಾಗಮಂಡಲ’ ನಾಟಕದಲ್ಲಿ ಗೋಪಾಲ ವಾಜಪೇಯಿಯವರ ಹಾಡೊಂದನ್ನು ಅವರ ಹೆಸರಿಲ್ಲದೇ ಬಳಸಿಕೊಂಡು ರಾದ್ಧಾಂತವಾಗಿದ್ದು ಘಟನೆ ಕೋರ್ಟ್ ಕಟಕಟೆ ಹತ್ತುವವರೆಗೂ ಹೋಗಿದ್ದಿತ್ತು ಎನ್ನುವದನ್ನು ಪತ್ರಿಕೆಯೊಂದು ಸವಿವರವಾಗಿ ಆ ಬಗ್ಗೆ ಲೇಖನವನ್ನೇ ಪ್ರಕಟಿಸಿದೆ. ಹೀಗಿರುವಾಗ ಕೆಲ ಪುಡಿ ಬರಹಗಾರರು ಕೃತಿ ಚೌರ್ಯ ಮಾಡಿರುವುದು, ಮಾಡುತ್ತಿರುವುದು ಸಹಜ ಎನ್ನೋಣವೇ?

ಈಗೀಗ ಸಾಹಿತ್ಯಕ ವಲಯದಲ್ಲಿ ಪಕ್ಕಾ ರಾಜಕೀಯ ಪರಿಸರ ನಿರ್ಮಾಣವಾಗಿದೆ. ಇಲ್ಲಿರುವ ಗುಂಪುಗಾರಿಕೆಯಂತೂ ಹೇಸಿಕೆ ಹುಟ್ಟಿಸುತ್ತದೆ. ಬೆಂಗಳೂರಲ್ಲಿಯ ಕೆಲ ಪ್ರಚಂಡ ಪಂಡಿತರು ಆಯಕಟ್ಟಿನ ಸ್ಥಾನದಲ್ಲಿ ಕುಳಿತು ಯಾರು ಬರೆಯುತ್ತಿದ್ದಾರೆ ಏನು ಬರೆಯುತ್ತಿದ್ದಾರೆ ಎನ್ನುವುದನ್ನು ಓದದೇ, ಪ್ರತಿಕ್ರಿಯಿಸದೇ ಅವರ ಬರಹಗಳು ಪ್ರಕಟವಾಗದ Awards-for-moneyಹಾಗೆ ತಾಮ್ರದಕಿವಿಗಳಿಗೆ ತೂತು ಕೊರೆಯುವದೇ ಅವರ ಕ್ರಿಯಾಶೀಲತೆಯಾಗಿದೆ. ಪ್ರಶಸ್ತಿಗಾಗಿ ಲಾಬಿ ಮಾಡುವುದು, ತಮ್ಮ ಪ್ರದೇಶ, ಜಿಲ್ಲೆ, ತಾಲೂಕಿನ ಪರಿಸರದ ವಾಸನೆಯ ಮೂಲಕವೇ ಅವರನ್ನು ಮೇಲೆತ್ತುವದು ಇನ್ನೊಬ್ಬನನ್ನು ಉದ್ದೇಶಪೂರ್ವಕವಾಗಿಯೇ ತುಳಿಯುವದು ಇಂಥಾ ಅರಿಷ್ಟ ಗುಣಗಳನ್ನು ಬಿಟ್ಟು ಗಟ್ಟಿಯಾಗಿ ಕುಳಿತು ಓದು ಬರಹ ಮಾಡಿದ್ದರೆ ಅವನಿಂದ ನಾಡು ನುಡಿಗೆ ಒಂದಷ್ಟು ಉತ್ತಮ ಸಾಹಿತ್ಯವಾದರೂ ದಕ್ಕುತ್ತಿತ್ತು. ಇಂದು ಪ್ರಶಸ್ತಿಯ ಮೊತ್ತ ನಿಮಗೇ ನೀಡುತ್ತೇವೆ ಆದರೆ ಪ್ರಶಸ್ತಿ ಮಾತ್ರ ನನ್ನ ಮಗಳಿಗೆ ಕೊಡಿ, ಮಗನಿಗೆ ಕೊಡಿ ಇಲ್ಲವೇ ನನಗೇ ಕೊಡಿ ಎಂದು ದುಂಬಾಲು ಬೀಳುವ ಮೂಲಕ ಹಿಂಬಾಗಿಲಿನಿಂದ ಪ್ರಶಸ್ತಿ ಪಡೆದು ಸಾಹಿತ್ಯಕ ವಲಯದಲ್ಲಿ ಅನೇಕ ಸಮರ್ಥರ ಸಮಾಧಿ ಮೇಲೆ ವಿರಾಜಮಾನರಾಗುವ ಇಂಥಾ ಖಳರಿಂದಾಗಿಯೇ ಸಾಹಿತ್ಯದಲ್ಲಿ ಖೂಳ ಸಂಸ್ಕೃತಿ ಆರಂಭವಾಗಿದೆ. ಈಚೆಗೆ ಒಂದು ಸಣ್ಣ ಪ್ರಶಸ್ತಿಗಾಗಿ ಆ ಸ್ಪರ್ಧೆಯ ನಿರ್ಣಾಯಕರು ಯಾರು ಎನ್ನುವುದನ್ನು ಅದು ಹೇಗೋ ತಿಳಿದುಕೊಂಡು ಅವರ ಬೆನ್ನಿಗೆ ಬಿದ್ದದ್ದು ಕೂಡಾ ಫೇಸ್ ಬುಕ್ ಲ್ಲಿ ಬಯಲಾಗಿತ್ತು. ಹೀಗೆ ಮಾಡಿ ಪ್ರಶಸ್ತಿ ಪಡೆಯುವ ಅವಶ್ಯಕತೆ ಇದೆಯೇ? ಹೀಗೆ ಮಾಡುವುದರಿಂದ ಗಟ್ಟಿ-ಪೊಳ್ಳುಗಳ ಅಂತರ ಸ್ಪಷ್ಟವಾಗದೇ ಮತ್ತೆ ಬೂಸಾ ಸಾಹಿತ್ಯ ಮೆರೆಯುವ ಸಾಧ್ಯತೆಯೂ ಇದೆ.

ಈಚೆಗೆ ಕವಿಗೋಷ್ಟಿಯ ಸಂಘಟಕರೊಬ್ಬರು ಅಕಾಡೆಮಿಯಿಂದ ನಡೆಯುವ ಕವಿಗೋಷ್ಟಿಗೆ ನಿಮ್ಮ ಹೆಸರನ್ನು ಸೂಚಿಸಲಾಗಿದೆ ಪಾಲ್ಗೊಳ್ಳುತ್ತೀರಾ ಎಂದು ನನ್ನನ್ನು ಕೇಳಿದರು. ಆಗ ನಾನು ಸಂಘಟಕರಿಗೆ ಧನ್ಯವಾದಗಳನ್ನು ಹೇಳುತ್ತಾ ತಪ್ಪು ತಿಳಿಯಬೇಡಿ. ನನಗಿಂತಲೂ ಅದೆಷ್ಟೋ ಉತ್ತಮವಾಗಿ ಪದ್ಯ ಬರೆಯುವ ಕವಿಗಳಿದ್ದಾರೆ. ಅವರ ಅವಕಾಶವನ್ನು ನಾನು ಕಸಿಯಲು ತಯಾರಿಲ್ಲ. ನಾನು ಕಾವ್ಯ ಕೃಷಿ ಅಷ್ಟಾಗಿ ಮಾಡಿದವನಲ್ಲ. ಹೀಗಾಗಿ ನಿಜವಾದ ಕವಿಗಳಿಗೆ ಅವಕಾಶ ಕೊಡಿ ಅಂದೆ. ಅವರಿಗೂ ತುಂಬಾ ಖುಷಿಯಾಯಿತು.ಆದರೆ ನನ್ನ ಸ್ನೇಹಿತನೊಬ್ಬ ನನ್ನನ್ನು ಉಡಾಫೆ ಮಾಡಿ ಈ ಬಗೆಯ ಔದಾರ್ಯ ಈಗಿನ ಸಂದರ್ಭದಲ್ಲಿ ಸರಿಯಲ್ಲ. ಮಹತ್ತರವಾದ ಕವಿತೆಗಳನ್ನು ಬರೆಯದಿದ್ದರೂ ದುಂಬಾಲು ಬಿದ್ದು ಟಿ.ಎ., ಡಿ.ಎ. ಗಾಗಿ ಮೈಸೂರು ದಸರಾ ಕವಿಗೋಷ್ಟಿಯಲ್ಲಿ ಭಾಗವಹಿಸಿ ಅಸಹ್ಯ ಪದ್ಯ ಓದಿ ಬರುತ್ತಾರೆ. ನಿಮಗಿನ್ನೂ ವಾಸ್ತವ ತಿಳಿದಿಲ್ಲ ಎಂದು ನಕ್ಕ. ಇರಬಹುದು ಆದರೆ ನನ್ನ ಮನಸು ಸ್ಪಷ್ಟವಾಗಿ ನೀನು ಉತ್ತಮ ಕವಿಯಲ್ಲ ಎಂದು ಹೇಳುತ್ತಿರುವಾಗಲೂ ಮನಸಿಗೆ ವಿರುದ್ಧವಾಗಿ ನಾಲ್ಕು ಸಾಲುಗಳನ್ನು ಗೀಚಿ, ಓದಿ ನಾನೂ ಕವಿ ಎಂದು ಕರೆದುಕೊಳ್ಳಲು ಮನಸು ಒಪ್ಪುವದಿಲ್ಲ ಎಂದೆ. ಯಾವುದೇ ಬಗೆಯ ವಾಮಮಾರ್ಗಗಳನ್ನು ಅನುಸರಿಸಿ ಬೆಳೆದರೂ ಒಂದು ಹಂತದಲ್ಲಿ ಬೂಸಾ ಎನ್ನುವುದು ಬೆತ್ತಲಾಗುವುದು ಗ್ಯಾರಂಟಿ. ನನಗಿಂತಲೂ ಇಲ್ಲವೇ ನನ್ನಷ್ಟೇ ಸಮರ್ಥನಾಗಿರುವವನ ಹಕ್ಕು ಕಸಿಯುವದೇ ಜಾಣತನ ಎಂದು ಬಗೆದರೆ ಅಂತ ಜಾಣತನ ನನಗೆ ಬೇಕಿಲ್ಲ ಎಂದು ಖಂಡಿತವಾಗಿ ಹೇಳಿದೆ.

ಸಾಹಿತ್ಯಕ ವಲಯದಲ್ಲಿ ಒಬ್ಬ ಕತೆಗಾರನನ್ನು ಇನ್ನೊಬ್ಬ ಕತೆಗಾರ ಸಹಿಸುವುದಿಲ್ಲ. ಒಬ್ಬ ಕವಿ ಇನ್ನೊಬ್ಬ ಕವಿಯನ್ನು ಸಹಿಸುವುದಿಲ್ಲ. ಒಬ್ಬರನ್ನೊಬ್ಬರು ಪ್ರೇರಣೆಯನ್ನಾಗಿ ಸ್ವೀಕರಿಸುವ ಮೂಲಕ ಕೃಷಿ ಮಾಡುವ ಗುಣ ಬೆಳೆಸಿಕೊಳ್ಳುವ ಅಗತ್ಯವಿದೆ. ವಿಮರ್ಶೆಗಳಿರಲಿ, nobel_awardಆದರೆ ಅನಾರೋಗ್ಯಕರ ವಾದ ಸ್ಪರ್ಧೆಯ ಮನ:ಸ್ಥಿತಿ ಬೇಡ. ಹತ್ತು ಕತೆಗಳು ಒಂದು ಪತ್ರಿಕೆಗೆ ಬಂದಾಗ ಅವುಗಳಲ್ಲಿ ಯಾವುದು ತುಂಬಾ ಗಟ್ಟಿಯಾಗಿದೆಯೋ ಅದು ಪ್ರಕಟವಾಗಲಿ. ಅದನ್ನು ಬಿಟ್ಟು ಅವರು ತನ್ನ ಜಿಲ್ಲೆಯವರು, ಜಾತಿಯವರು, ಪರಿಚಯದವರು ಎನ್ನುವ ಕಾರಣಗಳೇ ಮುಂದಾಗಿ ನೀವು ಆ ಕತೆಯನ್ನು ಎತ್ತಿಕೊಳ್ಳುವಿರಾದರೆ ನಿಮಗೆ ಗೊತ್ತಿದ್ದೂ ಗೊತ್ತಿದ್ದೂ ಮಿಕ್ಕ ಒಂಬತ್ತು ಜನರಿಗೆ ನೀವು ಅನ್ಯಾಯ ಮಾಡಿದಂತೆ. ಹಾಗಾಗಬಾರದು. ಅದು ಮುಂಬರುವ ತಲೆಮಾರುಗಳಿಗೆ ಬೂಸಾ ಸಾಹಿತ್ಯವನ್ನೇ ಗಟ್ಟಿ ಎಂದು ಹೇಳಿಕೊಟ್ಟಂತಾಗುತ್ತದೆ. ಫ್ರಾನ್ಸ್ ರಾಷ್ಟ್ರ ಗಾತ್ರದಲ್ಲಿ ತೀರಾ ಚಿಕ್ಕದು. ಅದು ಸುಮಾರು ಇಲ್ಲಿಯವರೆಗೆ ಹದಿನೈದು ನೋಬೆಲ್ ಪ್ರಶಸ್ತಿಗಳನ್ನು ಪಡೆದಿದೆ. ನೋಬೆಲ್ ಪ್ರಶಸ್ತಿ ಆರಂಭವಾದ ವರ್ಷ 1901. ಮೊಟ್ಟ ಮೊದಲ ನೊಬೆಲ್ ಪ್ರಶಸ್ತಿ ಪಡೆದ ದೇಶ ಫ್ರಾನ್ಸ್. ಮೊದಲ ನೊಬೆಲ್ ಪಡೆದವನ ಹೆಸರು ಸಲ್ಲಿ ಪ್ರಧೋಮ್. ಇನ್ನು ಈ ನೊಬೆಲ್ ಪ್ರಶಸ್ತಿಯ ಮೊತ್ತ ಈಗ ಬರೊಬ್ಬರಿ 6 ಕೋಟಿ 60 ಲಕ್ಷ ರೊಪಾಯಿ. ಈಚೆಗೆ ಸಾಹಿತ್ಯಕ್ಕಾಗಿ ನೋಬೆಲ್ ಪಡೆದ ಫೆಟ್ರಿಕ್ ಮೋದಿಲಿನೊ ಅತ್ಯಂತ ಯತಾರ್ಥವಾಗಿ ಸಾಹಿತ್ಯ ಕೃಷಿ ಮಾಡಿದವನು. ಆತ ಬರೆದ ಯಾವ ಕೃತಿಯೂ 170 ಪುಟಗಳನ್ನು ದಾಟುವದಿಲ್ಲ. ಫ್ರಾನ್ಸ್ ಮಹಿಳಾ ವಿಮೋಚನೆಯಲ್ಲಿ, ರೋಮ್ಯಾಂಟಿಸಿಜಂ ಕಾವ್ಯದಲ್ಲಿ ಕೂಡಾ ಅಗಾಧವಾದ ಕೊಡುಗೆಯನ್ನು ನೀಡಿದೆ. ನಮ್ಮಲ್ಲಿ ಪ್ರತಿಭೆ ಮತ್ತು ಸಾಮರ್ಥ್ಯಗಳಿಗೆ ಕೊರತೆಯಿಲ್ಲ. ಆದರೆ ಅವುಗಳನ್ನು ನಿರ್ಣಯಿಸುವ ಸಂಗತಿಗಳು ಮಾತ್ರ ಇವತ್ತಿಗೂ ಜಾತಿ, ಪ್ರಾದೇಶಿಕತೆ, ಧರ್ಮ, ಸ್ವಜನಪಕ್ಷಪಾತಗಳಾಗಿರುವದರಿಂದ ತೀರಾ ಅಪರೂಪಕ್ಕೆ ಯೋಗ್ಯರಾದವರಿಗೆ ಸ್ಥಾನಮಾನಗಳು ಲಭ್ಯವಾಗುತ್ತವೆ.

ಬೀಜದೊಳಗಣ ವೃಕ್ಷದಂತೆ, ಶಬ್ದದೊಳಗಣ ನಿಶ್ಯಬ್ದದಂತೆ


– ಬಿ. ಶ್ರೀಪಾದ ಭಟ್


 

 

 

There is little difference in people, but that little difference makes a big difference. The little difference is attitude and big difference is whether it is positive or negative – W.Clement stone

“ಮಾರ್ಕ್ಸ್‌ವಾದದ ಕುರಿತಾಗಿ ಪ್ರಮುಖ ಟೀಕೆಯೆಂದರೆ ಮಾರ್ಕ್ಸಿಸಂ ಒಂದು ನಿರ್ದಿಷ್ಟ ದೃಷ್ಟಿಕೋನಕ್ಕೆ ಮಾತ್ರ ಬದ್ಧವಾಗಿರುತ್ತದೆ. ಅದು ಹೆಣ್ಣು ಮತ್ತು ಗಂಡನ್ನು ಇತಿಹಾಸದ ಒಂದು ಕೈಗೊಂಬೆಯನ್ನಾಗಿ ಮಾತ್ರ ಪರಿಭಾವಿಸುತ್ತದೆ ಮತ್ತು ಹೀಗೆ ಪರಿಭಾವಿಸುವ ಮೂಲಕ ಅವರ ಸ್ವಾತಂತ್ರ್ಯದ, ವೈಯುಕ್ತಿಕ ನೆಲೆಗಳ ಬದುಕನ್ನು ನಿರಾಕರಿಸುತ್ತದೆ. ಮಾನವ ಸಂತತಿಯ ಪ್ರತಿರೋಧಿಸಲಾರದಷ್ಟು ಕಟುವಾದ, ಕನಿಕರವಿಲ್ಲದ, ಅಪಾರವಾದ ಶಕ್ತಿಯನ್ನುಳ್ಳ ಒಂದು ಬಗೆಯ ಉಗ್ರವಾದ ಕಟ್ಟುನಿಟ್ಟನ್ನೊಳಗೊಂಡ ಇತಿಹಾಸದ ಕಾನೂನುಗಳನ್ನು ಮಾರ್ಕ್ಸ್ ನಂಬುತ್ತಾನೆ. ಆತನ ಪ್ರಕಾರ ಫ್ಯೂಡಲಿಸಂ ವ್ಯವಸ್ಥೆಯು ಬಂಡವಾಳಶಾಹಿಯ ಹುಟ್ಟಿಗೆ ಕಾರಣವಾಗುತ್ತದೆ, ಬಂಡವಾಳಶಾಹಿಯು ಮುಂದೆ ಸಮಾಜವಾದಕ್ಕೆ ದಾರಿ ಮಾಡಿಕೊಡುತ್ತದೆ. ಇತಿಹಾಸ ಕುರಿತಾದ ಮಾರ್ಕ್ಸ್‌ನ ಸಿದ್ಧಾಂತವು ವಿಧಿನಿಯಮ ನಂಬುಗೆಯ ಸೆಕ್ಯುಲರ್ ಅವತರಿಣಿಕೆಯಷ್ಟೆ. ಇದು ಮಾರ್ಕ್ಸ್‌ವಾದಿ ರಾಜ್ಯಗಳಂತೆಯೇ ಮನುಷ್ಯನ ಘನತೆ ಮತ್ತು ಸ್ವಾತಂತ್ರ್ಯಕ್ಕೆ ಸದಾ ವಿರೋಧವಾಗಿರುತ್ತದೆ” ಎಂದು ಟೆರಿ ಈಗಲ್ಟನ್ ಬರೆಯುತ್ತಾನೆ.

ಆದರೆ ಇತ್ತೀಚೆಗೆ ‘ವಾರ್ತಾಭಾರತಿ’ ವಿಶೇಷಾಂಕಕ್ಕಾಗಿ ನೀಡಿದ ಸಂದರ್ಶನದಲ್ಲಿ ಕಂಚ ಐಲಯ್ಯನವರು ಕಮ್ಯುನಿಷ್ಟರ ಕುರಿತಾದ ಹೇಳಿಕೆಗಳು ತುಂಬಾ ಬೀಸು ಬೀಸಾಗಿವೆ. ಹಾಗೆಯೇ ನನ್ನ ಪತ್ರಕರ್ತ ಗೆಳೆಯರದ್ದೂ ಸಹ.

ಮುಂದುವರೆದು ಟೆರಿ ಮಾರ್ಕ್ಸ್‌ವಾದವು ಕ್ರಾಂತಿಕಾರಿ ಸಿದ್ಧಾಂತವಂತೂ ಅಲ್ಲ. ಮಾರ್ಕ್ಸ್ ಸಮಾಜವಾದದ, ಕಮ್ಯುನಿಸಂನ ಹರಿಕಾರನಂತೂ ಅಲ್ಲವೇ ಅಲ್ಲ. ಮಾರ್ಕ್ಸ್ Karl-Marxಉದಾರವಾದಿಯಾಗಿದ್ದ. ಪ್ರಾರಂಭದ ದಿನಗಳಲ್ಲಿ ಯುರೋಪ್‌ನ ರಾಷ್ಟ್ರಗಳಲ್ಲಿನ ದುಡಿಯುವ ವರ್ಗಗಳ ಚಳುವಳಿಗಳಾಗಲೇ ಸಮಾಜವಾದಿ ಚಿಂತನೆಗಳಿಗೆ ಒಗ್ಗಿಕೊಳ್ಳಲಾರಂಬಿಸಿದ್ದವು. ತಾನು ಸಮಾಜವಾದದ ಸಿದ್ಧಾಂತವನ್ನು ಬಿತ್ತಿದವನೆಂಬುದನ್ನು ಸ್ವತಃ ಮಾರ್ಕ್ಸ್‌ನೇ ನಿರಾಕರಿಸುತ್ತಾನೆ. ಆದರೆ ಮಾರ್ಕ್ಸ್ ಸಮಾಜವಾದ ಸಿದ್ಧಾಂತವನ್ನು ಮರು ರೂಪಿಸಿದ್ದಂತೂ ನಿಜ. ಮಾರ್ಕ್ಸ್‌ವಾದವು ಬಂಡವಾಳಶಾಹಿಯ ಬಲು ದೊಡ್ಡ ಟೀಕಾಕಾರ ಮತ್ತು ಬಂಡವಾಳಶಾಹಿಯ ಒಪ್ಪಿತ ಸಂಸ್ಕೃತಿಗೆ ಅದು ವಿರೋಧ ನೆಲೆಯ ಮತ್ತೊಂದು ಪ್ರತಿಸಂಸ್ಕೃತಿಯಾಗಿಯೇ ರೂಪಿತಗೊಂಡಿದೆ. ಎಲ್ಲಿಯವರೆಗೆ ಬಂಡವಾಳಶಾಹಿಯ ಸಂಸ್ಕೃತಿ ಇರುತ್ತದೆಯೋ ಅಲ್ಲಿಯವರೆಗೆ ಮಾರ್ಕ್ಸ್‌ವಾದವೂ ಪ್ರಚಲಿತವಾಗಿರುತ್ತದೆ ಎನ್ನುದರಲ್ಲಿ ಸಂಶಯವೇ ಇಲ್ಲ. ಮಾರ್ಕ್ಸ್‌ನ ವಿಮುಖನೀತಿಗಳು ಹೆಗೆಲ್‌ನಿಂದ ಪ್ರಭಾವಗೊಂಡಿದ್ದವು. ಸಹಕಾರ ತತ್ವದಡಿ ನಿರ್ಮಿತಿಗೊಳ್ಳುವ ಸಮಾಜವು ಶೋಷಣೆಯಿಂದ ಮುಕ್ತಗೊಂಡು ಸ್ವಾವಲಂಬನೆಯನ್ನು ಸಾಧಿಸಲು ಕ್ರಾಂತಿಕಾರಿ ಮಾರ್ಗವನ್ನು ಆರಿಸಿಕೊಳ್ಳುತ್ತದೆ ಎಂದು ಮಾರ್ಕ್ಸ್ ಪ್ರತಿಪಾದಿಸಿದ್ದ. ಒಕ್ಕೂಟ ವ್ಯವಸ್ಥೆಯಲ್ಲಿ ಆರ್ಥಿಕ ಪರಿಸ್ಥಿತಿಯೇ ಜೀವನದ ನಿರ್ಧಾರಕ ಅಂಶವಾಗಿರುತ್ತದೆ ಮತ್ತು ಇದಕ್ಕೆ ಪೂರಕವಾಗಿ ಇತಿಹಾಸದುದ್ದಕ್ಕೂ ಉತ್ಪಾದನ ಪದ್ಧತಿಗಳು ಬದಲಾವಣೆಗೊಳಲ್ಪಡುತ್ತಿರುತ್ತವೆ ಎಂಬುದು ಮಾರ್ಕ್ಸ್‌ನ ಎರಡು ಪ್ರಮುಖ ಚಿಂತನೆಗಳು ಸಹ ಆತ ಅವಿಷ್ಕಾರ ಮಾಡಿದ್ದಲ್ಲ. ಅದು ಅನಾದಿ ಕಾಲದಿಂದಲೂ ಚಾಲ್ತಿಯಲ್ಲಿದ್ದವು. ಹಾಗಿದ್ದರೆ ಮಾರ್ಕ್ಸಿಸಂನ ವೈಶಿಷ್ಟತೆ ಇರುವುದು ವರ್ಗಕ್ಕಿಂತಲೂ ವರ್ಗ ಹೋರಾಟ ಮುಖ್ಯ ಎನ್ನುವ ನೀತಿಯಲ್ಲೇ? ಆದರೆ ಬಹಶಃ ಇದು ಕೂಡ ಹಳೆಯದು. ಉದಾಹರಣೆಗೆ ಒಲಿವರ್ ಗೋಲ್ಡ್ ಸ್ಮಿತ್‌ನ ‘ಪಾಳುಬಿದ್ದ ಹಳ್ಳಿ’ಯ ಕವನದ ಸಾಲುಗಳಲ್ಲಿ, ಜಾನ್ ಮಿಲ್ಟನ್‌ನ ‘ಕಾಮೂಸ್’ ಪದ್ಯದಲ್ಲಿ, ಶೇಕ್ಸಪಿಯರ್‌ನ ‘ಕಿಂಗ್ ಲಿಯರ್’ ನಾಟಕದಲ್ಲಿ ವರ್ಗ ಹೋರಾಟದ ಮಾತುಗಳು ಕಾಣಿಸಿಕೊಳ್ಳುತ್ತವೆ. “‘ಬಡವರ ರಕ್ತವನ್ನು ಬಸಿದು ಸೌಧವನ್ನು ಕಟ್ಟಿದ ಜಮೀನ್ದಾರನ ಆಸ್ತಿಯೇ ಸಾಮಾಜಿಕ ಸಂಘರ್ಷದ ಕೇಂದ್ರವಾಗುತ್ತದೆ” ಎಂದು ವಾಲ್ಟೇರ್ ಹೇಳುತ್ತಾನೆ. ಆದರೆ ಪ್ರಮುಖವಾದ ವ್ಯತ್ಯಾಸವೆಂದರೆ ಸಾವಯವವಾದ ಸಾಮೂಹಿಕ ಒಗ್ಗಟ್ಟಿನಲ್ಲಿ ಮಾನವ ನಾಗರಿಕತೆಯು ರೂಪುಗೊಳ್ಳುತ್ತದೆ ಎಂದು ಅನೇಕ ಸಾಮಾಜಿಕ ಚಿಂತಕರು ಪರಿಭಾವಿಸಿದರೆ ಮಾರ್ಕ್ಸ್ ಸಾಮೂಹಿಕ ಗುಂಪಿನ ಭಿನ್ನತೆಯಲ್ಲಿ ನಾಗರೀಕತೆಯು ರೂಪುಗೊಳ್ಳುತ್ತದೆ ಎಂದು ಪ್ರತಿಪಾದಿಸುತ್ತಾನೆ. ಬಂಡವಾಳಗಾರನು ದುಡಿಯುವ ವರ್ಗಗಳ ದಿನಗೂಲಿಯನ್ನು ಕನಿಷ್ಠ ಮಟ್ಟದಲ್ಲಿ ಮುಂದುವರೆಸಿ ತನ್ನ ವ್ಯಾಪಾರದ ಹಿತಾಸಕ್ತಿಗಳನ್ನು ಮೇಲ್ಮಟ್ಟಕ್ಕೇರಿಸಿಕೊಳ್ಳಲು ಹವಣಿಸುತ್ತಾನೆ ಎನ್ನುವುದು ಮಾರ್ಕ್ಸ್‌ನ ವಾದ ಎಂದು ಬರೆಯುತ್ತಾನೆ.

ಇಂಡಿಯಾದ ಕಮ್ಯುನಿಷ್ಟರ ಆದರ್ಶಗಳು ಪ್ರಶ್ನಾತೀತವಾಗಿದ್ದವು. ತಾವು ನಂಬಿದ ತತ್ವಗಳಿಗೆ ಸಂಪೂರ್ಣ ಬದ್ಧರಾಗಿ, ಜನಸಾಮಾನ್ಯರ, ಬಡವರ ಪರವಾಗಿ, Niyamagiri_Protestsನಿಸ್ವಾರ್ಥದಿಂದ ಸಾರ್ವಜನಿಕ ಜೀವನದಲ್ಲಿ ಸಂಘಟನೆಗಳಲ್ಲಿ ತೊಡಗಿಸಿಕೊಂಡ ಇಲ್ಲಿನ ಕಮ್ಯುನಿಷ್ಟರು ಮೂಢನಂಬಿಕೆಗಳ ವಿರುದ್ಧ, ಕೋಮುವಾದದ ವಿರುದ್ಧ ನಿರಂತರ ಸಂಘಟನೆಗಳು, ಚಳುವಳಿಗಳನ್ನು ರೂಪಿಸಿದ್ದಾರೆ. ಬಂಡವಾಳಶಾಹಿಗಳ ಯಜಮಾನ್ಯವನ್ನು ದಿಟ್ಟತನದಿಂದ ಎದುರಿಸಿ, ಜೀವ ತೆತ್ತವರು ಇಂಡಿಯಾದ ಕಮ್ಯುನಿಷ್ಟರು. ಇವರಾರು ಬಂಗಲೆಗಳನ್ನು ಕಟ್ಟಲಿಲ್ಲ. ತಮ್ಮ ಸ್ವಂತದ ಬದುಕನ್ನೂ ಈ ಕ್ರಾಂತಿಕಾರಿ ಸಂಘಟನೆಗಳಿಗೆ ಮುಡಿಪಾಗಿಟ್ಟ ಇಲ್ಲಿನ ಕಮ್ಯುನಿಷ್ಟರು ಸರಳ ಬದುಕಿಗೆ ಅತ್ಯುತ್ತಮ ಮಾದರಿಯಾಗಿದ್ದಾರೆ. ಸೈದ್ಧಾಂತಿಕ ತಿಕ್ಕಾಟಗಳಲ್ಲಿ, ಸೆಮಿನಾರಿನಲ್ಲಿ ಬೌಧ್ಧಿಕ ಕಸರತ್ತುಗಳ ಮೂಲಕ ಎಡಪಂಥೀಯ ಚಿಂತನೆಗಳ ಅನೇಕ ಆಶಯಗಳ ನುಡಿಮುತ್ತನ್ನು ಉದ್ಧರಿಸುವ ನಮ್ಮ ಅಕಡೆಮಿಕ್ ಬೌದ್ಧಿಕ ವಲಯ ಒಂದು ಕಡೆಯಲ್ಲಿದ್ದರೆ ಮತ್ತೊಂದು ಕಡೆ ಸಾವಿರಾರು ಕಮ್ಯುನಿಷ್ಟ್ ಕಾರ್ಯಕರ್ತರು ಇಂದಿಗೂ ತಮಗೆ ಸಿಗುವ ಕೆಲವು ಸಾವಿರ ರೂ.ಗಳ ಸಂಬಳಕ್ಕಾಗಿ ಪ್ರಾಮಾಣಿಕ ಹೋರಾಟಗಳನ್ನು ಬದ್ಧತೆಯಿಂದ ಮಾಡುತ್ತಿದ್ದಾರೆ. ಅನೇಕ ಕಾರ್ಯಕರ್ತರು ಮತ್ತು ನಾಯಕರು ಹಣಕಾಸಿನ ಅಡಚಣೆಗಳಿಂದ ತಮ್ಮ ಆರೋಗ್ಯದ ಚಿಕಿತ್ಸೆಗಾಗಿ ಪರದಾಡುತ್ತಿರುವುದನ್ನು ನಾನೇ ಕಣ್ಣಾರೆ ಕಂಡಿದ್ದೇನೆ. ಈ ಹಿನ್ನೆಲೆಯಲ್ಲಿ ಯಾವುದೇ ಪ್ರಚೋದನೆ ಇಲ್ಲದೆ ಜನಪರವಾಗಿರುವ, ಶೋಷಣೆಯ, ಬಂಡವಾಳಶಾಹಿಗಳ ವಿರುದ್ಧ, ಮೌಢ್ಯಗಳ ವಿರುದ್ಧ ಸದಾ ಹೋರಾಡುವ ಇಲ್ಲಿನ ಎಡಪಂಥೀಯರ ಹೋರಾಟದ ಮಿತಿಗಳನ್ನು ಟೀಕಿಸುವಾಗ ನಮ್ಮ ಬುದ್ಧಿಜೀವಿಗಳು ಮತ್ತು ಪತ್ರಕರ್ತರು ಅಕಡೆಮಿಕ್ ಶಿಸ್ತನ್ನು, ಅದರ ಅವಲಂಬನೆಯ ಅವಶ್ಯಕತೆಗೆ ಎಳ್ಳು ನೀರು ಬಿಟ್ಟು ತೀರಾ ಸಾಮಾನ್ಯವಾದ ತಿಳುವಳಿಕೆಯಿಂದ ಮತ್ತು ಅನೇಕ ವೇಳೆ ವೈಯುಕ್ತಿಕ ವಿರೋಧಗಳನ್ನಾಧರಿಸಿ ಏಕಾಏಕಿ ಕಮ್ಯುನಿಷ್ಟರನ್ನು ಟೀಕಿಸಲಾರಂಭಿಸುತ್ತಾರೆ. ಇವರ ಈ ವಾಗ್ದಾಳಿಗಳು ಸಾವಿರಾರು ಕಾರ್ಯಕರ್ತರ ನೈತಿಕ ಶಕ್ತಿಯನ್ನೇ ಉಡುಗಿಸುತ್ತದೆ ಎನ್ನುವ ಪ್ರಾಥಮಿಕ ತಿಳುವಳಿಕೆ ಸಹ ಇಲ್ಲದಂತೆ ಇವರೆಲ್ಲಾ ವರ್ತಿಸುತ್ತಿರುವುದು ಪ್ರಶ್ನಾರ್ಹ.

ಕಳೆದ ಎಂಬತ್ತೈದು ವರ್ಷಗಳ ಕಮ್ಯನಿಷ್ಟ್ ಪಕ್ಷಗಳ ಹೋರಾಟಗಳನ್ನು ಆಳವಾಗಿ ಅಧ್ಯಯನ ಮಾಡಿದರೆ ಇಂಡಿಯಾದ ಸಂದರ್ಭದಲ್ಲಿ ಎಡ ಪಕ್ಷಗಳ ಹೋರಾಟವು Left _Mangaloreವರ್ಗ ಸಂಘರ್ಷವನ್ನು ಉತ್ಪಾದನಾ ಪದ್ಧತಿಯ ಸರಪಳಿಯೊಂದಿಗೆ ಬಂಧಿಸುವುದರ ಮೂಲಕ ಅಭೂತವೆನ್ನಬಹುದಾದಂತಹ ಸಂಘಟನೆಯನ್ನು ಹುಟ್ಟುಹಾಕಿರುವುದು ಇಂದು ನಮ್ಮ ಮುಂದಿದೆ. ಒಂದು ವರ್ಗವು ಉತ್ಪಾದನೆಯ ಜವಾಬ್ದಾರಿ ಮತ್ತು ನಿಯಂತ್ರಣವನ್ನು ತನ್ನದಾಗಿಸಿಕೊಂಡರೆ ದುರುಪಯೋಗಕ್ಕೆ ಒಳಪಟ್ಟಿದ್ದ ಮತ್ತೊಂದು ವರ್ಗದ ಪ್ರಾತಿನಿಧ್ಯವನ್ನು ವಹಿಸಿದ್ದ ಎಡಪಕ್ಷಗಳು ಆ ಜವಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದವು. ಇಲ್ಲಿ ಉತ್ಪಾದನಾ ಶಕ್ತಿಗಳು ತಮ್ಮ ಅಭಿವೃದ್ಧಿಗೆ ಪೂರಕವಾಗುವಂತಹ ವರ್ಗಗಳನ್ನು ತಾವೇ ಸ್ವತಃ ಆಯ್ಕೆ ಮಾಡಿಕೊಂಡಾಗ ಆದರ ಮುಂದಿನ ದಿನಗಳಲ್ಲಿ ಈ ಬಳಸಲ್ಪಟ್ಟ ವರ್ಗಗಳೇ ಉತ್ಪಾದನಾ ಶಕ್ತಿಗಳಿಗೆ ತೊಡಕಾಗುವುದರ ಪ್ರಕ್ರಿಯೆಗೆ ಚಾಲನೆ ನೀಡಿದ ಕಮ್ಯನಿಷ್ಟರು ಆ ಮೂಲಕ ವರ್ಗ ಸಂಘರ್ಷದ ಇತಿಹಾಸದಲ್ಲಿ ಒಂದು ರಾಜಕೀಯ ಕ್ರಾಂತಿಯನ್ನೇ ಸಾಧಿಸಿದರು. ಇದು ಇತಿಹಾಸದಲ್ಲಿ ದಾಖಲಾಗಿದೆ. ಇದನ್ನು ನೋಡುವ ಪ್ರಾಮಾಣಿಕ ಒಳಗಣ್ಣಿದ್ದರೆ ಸಾಕಷ್ಟೆ. ಇಲ್ಲಿ ಪಶ್ಚಿಮ ಬಂಗಾಳದ ಸಿಂಗೂರು, ನಂದಿಗ್ರಾಮ ಭೂ ಹೋರಾಟದ ಸಂದರ್ಭದಲ್ಲಿ ಕಮ್ಯುನಿಷ್ಟರ ಸೋಲನ್ನು ಕುರಿತಾಗಿ ಬರೆಯುವ ಟೀಕಾಕಾರರು ಮೂವತ್ತು ವರ್ಷಗಳ ಕಮ್ಯುನಿಷ್ಟರ ಆಡಳಿತದಲ್ಲಿ ಪಶ್ಚಿಮ ಬಂಗಾಳದಲ್ಲಿ ಹೆಚ್ಚೂ ಕಡಿಮೆ ಕೋಮುಗಲಭೆಗಳೇ ನಡೆಯಲಿಲ್ಲ. ಅದರಲ್ಲೂ ಬಾಬರಿ ಮಸೀದಿ ಧ್ವಂಸದ ಸಂದರ್ಭದಲ್ಲಿ ಕೂಡ. ಇದನ್ನು ಮರೆಯುವುದು ಮರೆಮೋಸವಲ್ಲವೇ? ಅಲ್ಲಿನ ಪಂಚಾಯ್ತಿ ರಾಜ್ ಪದ್ಧತಿ, ಭೂ ಹಂಚಿಕೆ ಚಳುವಳಿ ಅನೇಕ ದಶಕಗಳ ಕಾಲ ಇಂಡಿಯಾದ ಇತರೇ ರಾಜ್ಯಗಳಿಗೆ ಮಾದರಿಯಾಗಿದ್ದವು.

ಅಷ್ಟು ದೂರ ಬೇಡ. ಇಡೀ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಲೆನಾಡಿನ ಹಳ್ಳಿಗಳಲ್ಲಿ ಮೂವತ್ತರ ದಶಕದಿಂದ ಎಪ್ಪತ್ತರ ದಶಕದವರೆಗೂ ಅಲ್ಲಿನ ಬೀಡಿ ಕಾರ್ಮಿಕರ, Left_Mangaloreಕೂಲಿ ಕಾರ್ಮಿಕರ, ಹೋರಾಟಗಳನ್ನು ನಿರಂತರವಾಗಿ ನಡೆಸಿದ್ದು ಕಮ್ಯುನಿಷ್ಟರು. ಇದಕ್ಕೆ ನೂರಾರು ಉದಾಹರಣೆಗಳನ್ನು ಕೊಡಬಹುದು. ಅದಕ್ಕೆ ಬೇರೆ ವೇದಿಕೆಯೇ ಬೇಕಾಗುತ್ತದೆ. ಆದರೆ ಇಂತಹ ನಿಸ್ವಾರ್ಥ ಹೋರಾಟವನ್ನು ಇಂದು ಬರೆಯುವಾಗ ಎಂದೋ ನಡೆದು ಹೋದ ಘಟನೆಗಳು ಎಂದು ಮಾತ್ರ ಉದಾಹರಿಸುತ್ತಿಲ್ಲ. ಇಂದಿಗೂ ಆ ಕಾಲದ ಪ್ರಾಮಾಣಿಕ ಹೋರಾಟ ಇಂದಿನ ಕಮ್ಯುನಿಷ್ಟ್ ಕಾರ್ಯಕರ್ತರನ್ನು ಪೊರೆಯುತ್ತಿದೆ. ಆದರೆ ನವಉದಾರೀಕರಣದ ಇಂದಿನ ದಿನಗಳಲ್ಲಿ ಮತೀಯವಾದದ ಸಮಾಜವನ್ನು ಎದುರಿಸುವುದು ಪ್ರತಿಯೊಬ್ಬರಿಗೂ ಒಂದು ಸವಾಲಾಗಿ ಎದುರಾಗುತ್ತಿರುವ, ಈ ಪ್ರತಿ ಸವಾಲಿಗೂ ಹೊಸ ನುಡಿಕಟ್ಟನ್ನು ಕಂಡುಕೊಳ್ಳಬೇಕಾದಂತಹ ಬಿಕ್ಕಟ್ಟಿನ ಇಂದಿನ ಕಾಲದಲ್ಲಿ ಯಾವುದೇ ಜನಪರ ಮಾಡೆಲ್‌ಗಳನ್ನು ಕಟ್ಟಲು ವಿಫಲರಾದ ನಾವು ಇಂದಿನ ಹೋರಾಟಗಳ ಮಿತಿಗೆ ಪ್ರಾಮಾಣಿಕ ಕಾರ್ಯಕರ್ತರನ್ನು ದೂಷಿಸುವುದು ಅಮಾನವೀಯವಾಗುತ್ತದೆ.

ಆದರೆ ಇಂದಿನ ನವಉದಾರೀಕರಣದ ಕಾಲಘಟ್ಟದಲ್ಲಿ, ಕೇಂದ್ರದಲ್ಲಿ ಬಿಜೆಪಿ ಪಕ್ಷವು ಸಂಪೂರ್ಣ ಬಹುಮತದೊಂದಿಗೆ ಅಧಿಕಾರದಲ್ಲಿರುವಂತಹ ಸಂದರ್ಭದಲ್ಲಿ, ಇಡೀ ಸರ್ಕಾರಿ ಉದ್ದಿಮೆಗಳನ್ನು ಮುಂದಿನ ವರ್ಷಗಳಲ್ಲಿ ಕ್ರಮೇಣ ಖಾಸಗೀಕರಣಗೊಳಿಸುವ ಬೃಹತ್ ಯೋಜನೆಯ ಅನುಷ್ಠಾನದಲ್ಲಿರುವ ಮೋದಿಯ ರಾಜ್ಯಭಾರದಲ್ಲಿ ನಮ್ಮಲ್ಲಿನ ಎಡಪಂಥೀಯ ಪಕ್ಷಗಳು ಮತ್ತಷ್ಟು ತೀವ್ರತೆಯಿಂದ, ಈಗಿನ ಸವಕಲು ಮಾರ್ಗವನ್ನು ಕೈಬಿಟ್ಟು ವಿಭಿನ್ನ ಚಿಂತನೆಗಳಿಂದ ನಿರಂತರ ಹೋರಾಟಗಳನ್ನು ಕಟ್ಟುವ, ಮುಂದಿನ ದಶಕಕ್ಕೆ ಜನಪರ ರಾಜಕೀಯ ತಳಹದಿಯನ್ನು ರೂಪಿಸುವಂತಹ ವಿವಿಧ ಮಾಡೆಲ್‌ಗಳನ್ನು ಇಷ್ಟರಲ್ಲಾಗಲೇ ಕಟ್ಟಬೇಕಿತ್ತು. ತಮ್ಮ ಮಡಿವಂತಿಕೆಯನ್ನು ಬಿಟ್ಟು ಸಮಾನಮನಸ್ಕರೊಂದಿಗೆ ಒಳಗೊಳ್ಳುವ ಪ್ರಕ್ರಿಯೆಯನ್ನು ಈಗಾಗಲೇ ಶುರುವಾಗಬೇಕಿತ್ತು. ಆದರೆ ಇದಾವುದೂ ಕಾಣುತ್ತಿಲ್ಲ. ಚುನಾವಣಾ ಸೋಲುಗಳಿಂದ ಸಂಪೂರ್ಣ ನಿಶ್ಯಕ್ತಿಗೊಂಡಂತೆ ಕಾಣುತ್ತಿರುವ ಇಲ್ಲಿನ ಎಡ ಪಕ್ಷಗಳು ಮರುಚೇತನ ಪಡೆದುಕೊಳ್ಳುವ ಯಾವ ಲಕ್ಷಣಗಳೂ ಸದ್ಯಕ್ಕಂತೂ ಕಾಣುತ್ತಿಲ್ಲ. ಈ ಹಿನ್ನಡೆಗಳೇ ನಮ್ಮಲ್ಲಿ ಪದೇ ಪದೇ ಎಡಪಕ್ಷಗಳ ಕುರಿತಾದ ಭ್ರಮನಿರಸನವನ್ನು ಮೂಡಿಸುತ್ತವೆ. ಈ ಎಡಪಂಥೀಯ ಪಕ್ಷಗಳ ಬಿಕ್ಕಟ್ಟು ಅಂತರಿಕವಾಗಿರುವುದು ಎಷ್ಟು ನಿಜವೂ ಈ ನವಉದಾರೀಕರಣದ ಕಾಲದಲ್ಲಿ ಬಳಸಬೇಕಾದ ಸಮಕಾಲೀನ ನುಡಿಕಟ್ಟುಗಳಿಗಾಗಿ ಇವರು ಇನ್ನೂ ತಡಕಾಡುತ್ತಿರುವುದು ಕೂಡ ನಮ್ಮ ಕಣ್ಣ ಮುಂದಿದೆ.

ನಿಜ. ಜಾತಿ ಪದ್ಧತಿಯನ್ನು ಕರಾರುವಕ್ಕಾಗಿ ಅರಿಯದಿರುವುದು ನಮ್ಮ ಎಡ ಪಕ್ಷಗಳ ಒಂದು ದೊಡ್ಡ ಮಿತಿಯೇ ಸರಿ. ನಿಜಕ್ಕೂ ಹೇಳಬೇಕೆಂದರೆ ಇಲ್ಲಿನ Left_Movementsಕಮ್ಯನಿಷ್ಟ್ ಪಕ್ಷವು ಇಂಡಿಯಾದಲ್ಲಿ ಜಾತಿ ಪದ್ಧತಿ ಎನ್ನುವುದು ಇದೆ ಎನ್ನುವುದನ್ನು ಒಪ್ಪಿಕೊಂಡು ಮೂವತ್ನಾಲ್ಕು ವರ್ಷಗಳಾದವಷ್ಟೇ ಎಂದು ಲೇಖಕರು, ಪತ್ರಕರ್ತರು ಅಭಿಪ್ರಾಯ ಪಡುತ್ತಾರೆ. ವರ್ಷಗಳು ಹಿಂದು ಮುಂದಾದರೂ ಕಡೆಗೆ ಆ ಅಭಿಪ್ರಾಯ ಮಾತ್ರ ನಿಜ. ‘ಎಲ್ಲಾ ಇತಿಹಾಸವೂ ವರ್ಗ ಸಂಘರ್ಷಗಳ ಇತಿಹಾಸವಾಗಿರುತ್ತದೆ’ ಎಂದು ಹೇಳಿದ ಮಾರ್ಕ್ಸ್ ನ ಮಾತಿನ ಅರ್ಥ ಇತಿಹಾಸವೆಲ್ಲವೂ ವರ್ಗ ಸಂಘರ್ಷವೇ ಎಂದಲ್ಲ, ಬದಲಾಗಿ ಮಾನವ ಇತಿಹಾಸದಲ್ಲಿ ವರ್ಗ ಸಂಘರ್ಷವೂ ಒಂದು ಪ್ರಮುಖ ಭಾಗವಾಗಿರುತ್ತದೆ ಎಂದರ್ಥ. ಸಂಪತ್ತು ಮತ್ತು ಶಕ್ತಿಯ ಅಸಮಾನ ಹಂಚಿಕೆಯನ್ನುಳ್ಳ ಸಮಾಜವು ಅನೈತಿಕ ಎಂದು ಮಾರ್ಕ್ಸ್ ಧೃಢವಾಗಿ ನಂಬಿದ್ದ. ಇಂಡಿಯಾದ ಸಂದರ್ಭದಲ್ಲಿ ಆ ಅಸಮಾನತೆಯೆಂದರೆ ಜಾತಿ ಪದ್ಧತಿ ಮತ್ತು ವರ್ಣಾಶ್ರಮ ವ್ಯವಸ್ಥೆ. ಜಮೀನ್ದಾರನ ಬಳಿ ಜೀತಕ್ಕಿರುವ ವ್ಯಕ್ತಿ ಕೇವಲ ಬಡವ ಮಾತ್ರವಲ್ಲ ಜೊತೆಗೆ ದಮನಿತ ಜಾತಿಗೆ ಸೇರಿದವನಾಗಿರುತ್ತಾನೆ. ಆದರೆ ಇಂಡಿಯಾ ಸಮಾಜದ, ಜಾತಿ ವ್ಯವಸ್ಥೆಯ ಸಂಕೀರ್ಣ ಸ್ವರೂಪವನ್ನು, ವಾಸ್ತವವನ್ನು, ಜಾತಿ ಪದ್ಧತಿಯ ಕರಾಳತೆಯನ್ನು ನಮ್ಮ ಕಮ್ಯುನಿಷ್ಟರು ಅರಿಯದೇ ಹೋದರು ಮತ್ತು ಅರಿತುಕೊಂಡವರು ಅದನ್ನು ನಿರ್ಲಕ್ಷಿಸಿದರು. ತಮ್ಮ ಪಕ್ಷಗಳಲ್ಲಿ ಸದಸ್ಯರನ್ನು ನಾಮಕರಣ ಮಾಡುವಾಗ, ನಾಯಕರನ್ನು ಆರಿಸುವಾಗ ಸಾಮಾಜಿಕ ನ್ಯಾಯದ ಮೀಸಲಾತಿಯನ್ನು ಪರಿಗಣಿಸಲೇ ಇಲ್ಲ. ಹೀಗಾಗಿ ಅನೇಕ ದಶಕಗಳ ಕಾಲ ಬ್ರಾಹ್ಮಣರೇ ಎಡಪಂಥೀಯ ಚಳುವಳಿಗಳ ನೇತೃತ್ವ ವಹಿಸಿರುವುದು ಸಾಮಾನ್ಯ ಸಂಗತಿಯಾಗಿತ್ತು. ಸಾಮಾಜಿಕ ನ್ಯಾಯದ ಚಳುವಳಿಯ ಸಂದರ್ಭದಲ್ಲಿ ಇದು ಟೀಕೆಗೆ ಒಳಗಾಗಿದ್ದು ಸಹಜ ಮತ್ತು ನ್ಯಾಯಯುತವಾಗಿತ್ತು. ಇದಕ್ಕೆ ಮೂಲಭೂತ ಕಾರಣವೇನೆಂದರೆ ಮಾರ್ಕ್ಸ್ ಸಿದ್ಧಾಂತವನ್ನು ಗ್ರಹಿಸುವ ಕ್ರಮದಲ್ಲಿ, ಇಂಡಿಯಾದ ಜಾತಿ ಆಧಾರಿತ ಪ್ರತ್ಯೇಕತೆ ಮತ್ತು ತಾರತಮ್ಯದ ನೆಲೆಯಲ್ಲಿ ಮಾಕ್ರ್ಸವಾದವನ್ನು ವ್ಯಕ್ತಿ ಪ್ರಜ್ಞೆ ಮತ್ತು ಸಾಮಾಜಿಕತೆಯನ್ನು ಇಲ್ಲಿನ ಶ್ರೇಣೀಕೃತ ವ್ಯವಸ್ಥೆಗೆ ಅನ್ವಯಿಸಿ ಹೋರಾಟಗಳನ್ನು ಕಟ್ಟುವುದರಲ್ಲಿ ನಮ್ಮ ಕಮ್ಯುನಿಷ್ಟ್ ಪಕ್ಷದವರು ತುಂಬಾ ಮುಗ್ಧರಾಗಿ ವರ್ತಿಸಿದರು ಮತ್ತು ಅದನ್ನು ಪ್ರಾತಿನಿಧಿಕವಾಗಿ ತೆಗೆದುಕೊಳ್ಳಲೇ ಇಲ್ಲ ಎಂದೆನಿಸುತ್ತದೆ.

ವರ್ಗಗಳಲ್ಲಿಯೂ ಜಾತಿಗಳಿರುತ್ತವೆ, ಅವು ಅಸಮಾನತೆಯ ನೆಲೆಯಲ್ಲಿರುತ್ತವ. ಇಲ್ಲಿ ಜಾತಿ ಆಧಾರಿತ ಶ್ರೇಷ್ಠತೆಯ ಪ್ರಶ್ನೆ ಬಂದಾಗ ಇದೇ ದುಡಿಯುವ ವರ್ಗಗಳು ಪ್ರೊಲೆಟರಿಯೇಟ್ ನ ಸಿದ್ಧಾಂತಕ್ಕೆ antithesis ಆಗಿ ವರ್ತಿಸಲು ಶುರು ಮಾಡುತ್ತಾರೆ. ವರ್ಗವನ್ನಾಧರಿಸಿ ಕಟ್ಟಿದ ಯೂನಿಯನ್ನಿನ ಒಳಗೆ ವರ್ಣಾಶ್ರಮದ ಶ್ರೇಣಿಕೃತ ವ್ಯವಸ್ಥೆ ರೂಪುಗೊಂಡಿರುತ್ತದೆ. ಇಲ್ಲಿ ಮೇಲ್ಜಾತಿಯ ಕಾರ್ಮಿಕರು ಜಾತಿಯ ಪ್ರಶ್ನೆ ಬಂದಾಗ ಇವರು ತಮ್ಮ ತಳ ಸಮುದಾಯಗಳ ಕಾಮ್ರಡ್ ಗಳನ್ನೂ ಧಿಕ್ಕರಿಸಿ ಜಾತಿಪದ್ಧತಿಗೆ ಮಣೆ ಹಾಕುತ್ತಾರೆ ಎನ್ನುವುದು ವಾಸ್ತವ.ಇದು ಇತಿಹಾಸವೂ ಹೌದು ಮತ್ತು ವರ್ತಮಾನವೂ ಹೌದು. ಆದರೆ ಈ ಜಾತಿ ಪದ್ಧತಿಯ ಈ ಕರಾಳ ವಾಸ್ತವಕ್ಕೆ ಕುರುಡಾಗಿ ಕೇವಲ ಏಕರೂಪಿಯಾಗಿ ವರ್ಗಗಳನ್ನು ಮತ್ತು ವರ್ಗ ಸಂಘರ್ಷಗಳನ್ನು ತಮ್ಮ ಮೂಲಭೂತ ಹೋರಾಟವನ್ನಾಗಿ ಮಾಡಿಕೊಂಡರು ಇಂಡಿಯಾದ ಕಮ್ಯುನಿಷ್ಟರು. ಮತ್ತೊಂದು ಕಡೆ ಕಮ್ಯುನಿಷ್ಟ್ ಪಕ್ಷದ ಯೂನಿಯನ್ ನ ಅಡಿಯಲ್ಲಿ ಲಕ್ಷಾಂತರ ಕಾರ್ಮಿಕರು ಸದಸ್ಯರಾಗಿದ್ದಾರೆ. ಆದರೆ ಬಹುಪಾಲು ಕಾರ್ಮಿಕರಿಗೆ ಕಮ್ಯುನಿಷ್ಟ್ ಪಕ್ಷದ ಬಗ್ಗೆ ಇರುವ ಒಲವು ಮತ್ತು ಸಂಬಂಧಗಳು ಕೇವಲ ತಮ್ಮ ವೈಯುಕ್ತಿಕ ಬೇಡಿಕೆಗಳನ್ನು ಈಡೇರಿಸಿಕೊಳ್ಳುವಷ್ಟರ ಮಟ್ಟಿಗೆ ಅಷ್ಟೆ.ಆದರೆ ಕಮ್ಯನಿಷ್ಟರ ಎಡಪಂಥೀಯ ಚಿಂತನೆಗಳಿಗೆ, ಸೆಕ್ಯುಲರ್ ತತ್ವಗಳಿಗೆ ಮುಕ್ಕಾಲು ಪಾಲು ಕಾರ್ಮಿಕರು ಯಾವುದೇ ಪ್ರಾಮುಖ್ಯತೆಯನ್ನೇ ನೀಡುವುದಿಲ್ಲ. ನಮ್ಮ ಕಮ್ಯುನಿಷ್ಟ್ ಪಕ್ಷಗಳು ಇಲ್ಲಿನ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕಿನ ಜಟಿಲತೆಗಳನ್ನು ವಾಸ್ತವ ನೆಲೆಗಟ್ಟಿನಿಂದ ನೋಡದೆ ಎಲ್ಲದಕ್ಕೂ ಆರ್ಥಿಕ ವ್ಯವಸ್ಥೆಯೇ ಅಡಿಪಾಯ ಎಂದು ಸರಳರೇಖೆಯಂತೆ ಹೊರಟಿದ್ದೇ ಈ ದುರಂತಕ್ಕೆ ಕಾರಣ.

ಹೀಗಾಗಿ ಇವರ ಯೂನಿಯನ್ನಿನ ಲಕ್ಷಾಂತರ ಕಾರ್ಮಿಕರಿಗೆ ತಮ್ಮ ನೌಕರಿಯಲ್ಲಿನ ತೊಂದರೆಗಳಿಗೆ, ಇಂಕ್ರಿಮೆಂಟ್ ಗಳಿಗೆ, ಬೋನಸ್ ಗೆ ಮತ್ತು ಅಲ್ಲಿನ ವರ್ಗ ಅಸಮಾನತೆಯ ವಿರುದ್ಧ ಹೋರಾಡಲು ಮಾತ್ರ ಕಮ್ಯನಿಷ್ಟ ಪಕ್ಷದ ಯೂನಿಯನ್ ಗಳು ಬೇಕು, ಆದರೆ ರಾಜಕೀಯವಾಗಿ, ಸಾಂಸ್ಕೃತಿಕವಾಗಿ ನಿರ್ಣಯಗಳನ್ನು ನಿರ್ಧರಿಸುವಾಗ, ಮಾರ್ಕ್ಸ್ ನ ಸಮತಾವಾದದ ಚಿಂತನೆಗಳನ್ನು ಅರ್ಥೈಸಿಕೊಳ್ಳುವಾಗ ಈ ಕಾರ್ಮಿಕರು ಸಂಪೂರ್ಣವಾಗಿ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಾರೆ. ಉತ್ಪಾದನಾ ಸಾಮರ್ಥ್ಯದ General-Strike-Indiaವಿಕಸನವೆಂದರೆ ತಂತ್ರಜ್ಞಾನದ ವಿಕಸನವೂ ಹೌದು. ಇವೆರಡೂ ಪರಸ್ಪರ ಪೂರಕವಾಗಿ ಬೆಳೆಯತೊಡಗಿದಾಗ ಇಂಡಿಯಾದಂತಹ ಪ್ರತ್ಯೇಕತೆಯನ್ನೊಳಗೊಂಡ ಸಮಾಜದಲ್ಲಿ ಈ ಬೇಳವಣಿಗೆಯು ಕೇವಲ ಒಂದು ಸಮುದಾಯಗಳ, ಮೇಲ್ಜಾತಿಗಳ, ಸವರ್ಣೀಯರ ಉನ್ನತಿಯಾಗಿರುತ್ತದೆ ಎಂದು ಅರ್ಥೈಸುವಲ್ಲಿ ನಮ್ಮ ಕಮ್ಯುನಿಷ್ಟರು ತುಂಬಾ ತಡ ಮಾಡಿದರು. ಏಕೆಂದರೆ ಸಾಮಾಜಿಕ ಸಂಬಂಧಗಳೇ ಸಮಾಜದ ವಿಕಸನದ ಶೈಲಿಯನ್ನು ನಿರ್ಧರಿಸುತ್ತವೆ ಎನ್ನುವ ಸತ್ಯ ನಮ್ಮ ಎಡಪಂಥಿಯ ಹೋರಾಟಗಾರರಿಗೆ ಸ್ಪಷ್ಟವಾಗಲಿಲ್ಲವೇ ಅಥವಾ ಅದನ್ನು ನಿರ್ಲಕ್ಷಿಸಿದರೇ? ಆಂದರೆ ಆಧುನಿಕ ವಿಜ್ಞಾನ ಮತ್ತು ಮಾನವನ ಸ್ವಾತಂತ್ರ ಮತ್ತು ಆಧ್ಯಾತ್ಮ ಮತ್ತು ಧಾರ್ಮಿಕತೆ ಮತ್ತು ಆದಿವಾಸಿ, ತಳಸಮುದಾಯಗಳ ಶ್ರೀಮಂತ ಅವೈದಿಕ ಸಾಂಸ್ಕೃತಿಕ ಜಗತ್ತು ಇವೆಲ್ಲದರ ನಡುವಿನ ಪರಸ್ಪರ ವಿರೋಧಾಭಾಸಗಳು ಮತ್ತು ಇವುಗಳ ನಡುವಿನ ಸಾಮಾಜಿಕ- ಸಾಂಸ್ಕೃತಿಕ-ಆರ್ಥಿಕ ಸಂರಚನೆಗಳನ್ನು ಆಧ್ಯಯನ ಮಾಡಲು ನಮ್ಮ ಕಮ್ಯುನಿಷ್ಟರು ತೋರಿಸಿದ ನಿರಾಸಕ್ತಿಗಾಗಿ ಇಂದು ಅಪಾರ ಬೆಲೆ ತೆರಬೇಕಾಗಿ ಬಂದಿದೆ. ಈ ಅಪಾಯಗಳನ್ನು ಗ್ರಹಿಸಿಯೇ ಮಾರ್ಕ್ಸ್ ವಾದಿ  ಚಿಂತಕ ಗ್ರಾಮ್ಷಿಯು “ಸಾಂಸ್ಕೃತಿಕ ಸಂಘಟನೆಗಳು ಹೋರಾಟಗಳ ಮತ್ತು ವ್ಯವಸ್ಥೆಯ ಕೇಂದ್ರವಾಗಿರಬೇಕು ಮತ್ತು ರಾಜಕೀಯ ಮತ್ತು ಆರ್ಥಿಕ ಸಂಘಟನೆಗಳು ಸಾಂಸ್ಕೃತಿಕ ಸಂಘಟನೆಗೆ ಪೂರಕವಾಗಿ ಕೆಲಸ ಮಾಡಬೇಕು “ಎಂದು ಪ್ರತಿಪಾದಿಸಿದ. ಬೌದ್ಧಿಕ ಪ್ರೇರಣೆಗಳ ಮೂಲಕ ಜನಸಾಮಾನ್ಯರೆಲ್ಲರೂ ಬುದ್ಧಿಜೀವಿಗಳಾಗಬೇಕೆಂದು ಆಶಿಸಿದ. ಏಕೆಂದರೆ ಒಮ್ಮೆ ಪ್ರಳಯಕ್ಕೆ ತುತ್ತಾಗಿ ಇಡೀ ವಿಶ್ವವೇ ನಾಶಗೊಂಡಾಗ ಮರಳಿ ಬೂದಿಯಿಂದ ನಾಗರಿಕತೆಯನ್ನು ಕಟ್ಟಬೇಕಾದಂತಹ ಸಂದರ್ಭದಲ್ಲಿ ಈ ಬುದ್ಧಿಜೀವಿ ಜನಸಾಮಾನ್ಯರ ಅವಶ್ಯಕತೆ ಬೇಕೇ ಬೇಕು.

ಆದರೆ ಇಂಡಿಯಾದ ಕಮ್ಯುನಿಷ್ಟ್ ಪಕ್ಷದ ಕುರಿತಾಗಿ ಮಾತನಾಡುವಾಗ ಈ ಎಲ್ಲ ಸಂಕೀರ್ಣ ತರ್ಕಗಳನ್ನು ಸರಳೀಕರಿಸಿ ಹೇಳುವುದೂ ತುಂಬಾ ಕಷ್ಟ. ಇಲ್ಲಿನ ಕಮ್ಯುನಿಷ್ಟರ ನಿಸ್ವಾರ್ಥ ಹೋರಾಟಗಳನ್ನು, ಸೆಕ್ಯಲರಿಸಂ ಅನ್ನು, ಪ್ರಾಮಾಣಿಕತೆಯನ್ನು ಕಡೆಗಣಿಸಲು ಸಾಧ್ಯವೇ ಇಲ್ಲ. ಕಡೆಗಣಿಸಿದ್ದೇ ಆದರೆ ಒಂದು ಪ್ರಾಮಾಣಿಕ, ಜನಪರ ಹೋರಾಟವನ್ನು ನಾವೇ ಕೈಯಾರೆ ಕೊಂದಂತೆ. ಇಷ್ಟೆಲ್ಲಾ ಸಂಕೀರ್ಣತೆಯನ್ನು ಐಲಯ್ಯನವರು, ನಮ್ಮ ಪತ್ರಕರ್ತ ಗೆಳೆಯರು ಇಷ್ಟೊಂದು ಸರಳೀಕರಿಸಿ ಮಾತನಾಡಿರುವುದು ಅಚ್ಚರಿ ಹುಟ್ಟಿಸುತ್ತದೆ. ಸತ್ಯಾನ್ವೇಷಣೆಯಲ್ಲಿದ್ದೇವೆ ಎಂದೇ ಹೊರಡುವ ಇವರೆಲ್ಲಾ ಕಡೆಗೆ ಸ್ವತಃ ತಮ್ಮ ಮಾತಿನ ಐಭೋಗಕ್ಕೆ ತಾವೇ ಬಲಿಯಾಗಿ ಹಾದಿ ತಪ್ಪಿ ತಪ್ಪಾದ ಗಮ್ಯದ ಕಡೆಗೆ ಚಲಿಸುತ್ತಿದ್ದಾರೆ. ಆದರೆ ಇದರಿಂದಾಗುವ ಅಪಾಯವೇನೆಂದರೆ ಹೊಸ ತಲೆಮಾರಿನ ಹುಡುಗರಿಗೆ ಈ ಮೇಲ್ಪದರದ, ಗತಿ ತಪ್ಪಿದ ಹೇಳಿಕೆಗಳೇ ಸತ್ಯವಾಗಿ ಹೋದರೆ ಗತಿಯೇನು?

ಜಯ ಜಯ ಜಯ ಜಯ ಹೇ…ಶ್ರಮೇವ ಜಯತೆ : ನೊಂದ ಪ್ರಧಾನಿ


– ಶ್ರೀಧರ್ ಪ್ರಭು


 

ಈ ದೇಶದ ಮಣ್ಣು ಗೋಪಿ ಚಂದನ; ಪ್ರತೀ ಗ್ರಾಮವೂ ತಪೋ ಭೂಮಿ; ಪ್ರತಿ ಬಾಲೆ ದೇವಿಯ ಪ್ರತಿಮೆ; ಪ್ರತೀ ಬಾಲಕನೂ ಸಾಕ್ಷಾತ್ ಶ್ರೀರಾಮ.

ಬೆಳಿಗ್ಗೆ ಏಳುವಾಗ ಭೂಮಿ ತಾಯಿಯ ಮೇಲೆ ಪಾದ ಸ್ಪರ್ಶ ಮಾಡುವ ಮುಂಚೆ ಕ್ಷಮಿಸಿ ಬಿಡು ತಾಯಿ ಎಂಬ ಪ್ರಾರ್ಥನೆ ಅತ್ಯಗತ್ಯ. ಹಾಗೆಯೇ, ಮಂಚದ ಮೇಲೆ ಮಲಗುವವರು ಮಾಡಿದ ಶಾಸ್ತ್ರದಲ್ಲಿ ಅಪ್ಪಣೆಯಾಗಿದೆ ಏನೆಂದರೆ ‘ಏನೊಂದೂ ಸ್ಪರ್ಶವಾಗದೆ ಅಡ್ಡಡ್ಡ ನುಂಗಿಬಿಟ್ಟರೆ ಪಾಪವಿಲ್ಲ’. ಕರುವನ್ನು ಬೇರೆ ಕಟ್ಟಿ ಹಾಕಿ ಹಿಂಡಿ ಹಿಪ್ಪೆಯಾಗುವಷ್ಟು ಹಾಲು ಕರೆದು, ತುಪ್ಪ ಬೆಣ್ಣೆ ತೆಗೆದು ಚಪ್ಪರಿಸಿ ‘ಗೋದಾನ’ ವೆರೆದು ಧನ್ಯರಾದ ಭೂದೇವರಿಗೆ bharath-maataಗೋಮಾತೆಯಲ್ಲಿ ಮೂವತ್ತ ಮೂರು ಕೋಟಿ ದೇವರ ನಿತ್ಯ ದರ್ಶನ. ವರ ದಕ್ಷಿಣೆ ಇಲ್ಲದೆ ಮದುವೆಯೇ ಧರ್ಮ ಸಮ್ಮತ ಅಲ್ಲ; ಹಣ ಸಂದಾಯವಾಗದಿದ್ದರೆ ಒಪ್ಪಂದ ಕಾನೂನು ಬದ್ಧ ಆಗುವುದೇ? ಹಾಗಾಗಿ ಹಣ ಪಡೆದು, ಹುರಿದು ಮುಕ್ಕಿ ಕಳೆ ಬರ ಸಿಗದಹಾಗೆ ಸುಟ್ಟು ಹಾಕಬೇಕಾದಾಕೆ – ಜಗನ್ಮಾತೆ. ದಲಿತರು ‘ಹರಿ’ ಜನ. ಇತ್ತೀಚಿನ ಹೊಸ ಸೇರ್ಪಡೆ – ‘ಶ್ರಮೇವ ಜಯತೆ’. ಶ್ರಮಿಕ ದೇವರಿಗೆ ಪೂಜೆ; ದೇವಸ್ಥಾನಗಳಲ್ಲಿ ನಿತ್ಯೋತ್ಸವ.

ಬೇರೆ ದೇಶಗಳೆಲ್ಲ ಈ ಗಿರಿ, ಆ ಗಿರಿ, ಕಡೆಗೆ ಗುಲಾಮಗಿರಿಯನ್ನು ಕಿತ್ತು ಬಿಸುಟುವಾಗ ನಾವು ಶ್ರಮವೇ ಇಲ್ಲದೆ ಕಿರುಬೆರಳಲ್ಲಿ ಗೋವರ್ಧನಗಿರಿ ಎತ್ತಿದ್ದೆವು. ನಾವು ಮಹತ್ತರವಾದ ಎಲ್ಲವನ್ನೂ ಸಾಧಿಸಿದ್ದು ಶ್ರಮದಿಂದಲ್ಲ ತಪೋ ಬಲದಿಂದ. ಹಾಗಾಗಿ ಬ್ರಹ್ಮ ಬಲವೇ ಬಲ. ಹಾಗೆಂದು ನಾವು ಮಲ ಹೊರುವ ಕೆಲಸಕ್ಕೂ ಪವಿತ್ರ ಸ್ಥಾನ ಕೊಟ್ಟಿದ್ದೇವೆ.

ಪುಣ್ಯ ಕಡಿಮೆ ಸಂಪಾದಿಸಿರುವ ದೇಶಗಳಲ್ಲಿ ಶ್ರಮದ ವಿಭಜನೆ (Division of Labour) ಸಾಧ್ಯವಾದರೆ ಪುಣ್ಯ ಭೂಮಿ ಭಾರತದಲ್ಲಿ ಶ್ರಮಿಕರ ವಿಭಜನೆ (Division of Labourers) ಸಾಧ್ಯವಾಗಿದೆ. ಹೀಗಾಗಿ ನಾವು ಇಂದಿಗಿಂತ ನೆನ್ನೆಯೇ ಅಭಿವೃದ್ಧಿ ಸಾಧಿಸಿದ್ದು ಜಾಸ್ತಿ.

ಕಾರಣಾಂತರಗಳಿಂದ, ಈ ಖೊಟ್ಟಿ ರಾಜಕೀಯ ಸ್ವಾತಂತ್ರ್ಯ ಬಂದ ಮೇಲೆ ಓಬೀರಾಯನ ಕಾಲದ ಭಾರತದ ಸಂವಿಧಾನ ಮತ್ತು ಕಾರ್ಮಿಕ ಕಾನೂನುಗಳು ನಮ್ಮ ಸಾಧನೆಯನ್ನು ಮೊಟಕು ಗೊಳಿಸಿ ಅಭಿವೃದ್ಧಿ ಸಾಧಿಸಲು ಸಾಧ್ಯವಾಗಿಲ್ಲ. ಅದ್ದರಿಂದ ಕೇಂದ್ರ ಸರಕಾರ ಕಾರ್ಮಿಕ ಕಾನೂನುಗಳನ್ನು ನೀತಿ ನಿರೂಪಣೆಯ ಮೂಲಕವೇ ಬದಲಾಯಿಸುವ ಸ್ತುತ್ಯರ್ಹ ಕೆಲಸಕ್ಕೆ ಕೈ ಹಾಕಿದೆ.

ಮೊದಲ ಹಂತದಲ್ಲಿ ಕಾರ್ಮಿಕ ಪರಿಶೀಲನಾಧಿಕಾರಿ (Inspector) ಗಳ ಅಧಿಕಾರ ಮೊಟಕು ಮಾಡಲಾಗಿದೆ. ಇನ್ನು ಮೇಲೆ ಅವರು ಮನುಷ್ಯನ ಮರ್ಕಟ ಮನಸ್ಸು ಹೇಳಿದ ಕಡೆ ಹೋಗದೇ ‘ಕಂಪ್ಯೂಟರ್’ ಹೇಳಿದ ಜಾಗಕ್ಕೆ ಮಾತ್ರ ಪರಿಶೀಲನೆ ಹೋಗಬೇಕು. ಕಾರ್ಮಿಕ ಪರಿಶೀಲನಾಧಿಕಾರಿಗಳು ಎಲ್ಲಿ ಬೇಕೆಂದರಲ್ಲಿ, ಯಾವಾಗ ಬೇಕೋ ಅವಾಗ ಹೋಗುವ ಅವಾಂತರ ಇನ್ನು ಹಳೆಯ ಮಾತು.

ತಾವು ಚಿಕ್ಕಂದಿನಿಂದಲೂ ಕಾರ್ಮಿಕ ಅಧಿಕಾರಿಗಳು ಕಾರ್ಖಾನೆಯ ಮಾಲೀಕರಿಗೆ ಕೊಡುವ ಹಿಂಸೆಯ ಗಾಥೆಗಳನ್ನು ಕೇಳಿ ಮನ child-labourನೊಂದಿರುವುದಾಗಿ ಪ್ರಧಾನಿ ಮೋದಿ ತುಂಬಾ ಭಾವುಕರಾಗಿ ನುಡಿದರು. ಹೀಗಾಗಿ ಕಾರ್ಮಿಕ ಇಲಾಖೆಯಲ್ಲಿ Inspector ರಾಜ್ ಕೊನೆಗೊಳ್ಳಬೇಕು ಎಂದರು.

ಮೋದಿಯವರು ಹೆಚ್ಚು ನೊಂದು ಕೊಳ್ಳಬೇಕಿಲ್ಲ. ಈಗಾಗಲೇ ಕಾರ್ಮಿಕ ಇಲಾಖೆಯ ವ್ಯಾಪ್ತಿ ಸಾಕಷ್ಟು ಮೊಟಕು ಗೊಂಡಿದೆ. ಶೇಕಡಾ ನೂರರಷ್ಟು ರಫ್ತು ಆಧಾರಿತ ಉದ್ಯಮಗಳು, ವಿಶೇಷ ವಿತ್ತ ವಲಯಗಳು, ಐಟಿ-ಬಿಟಿ-ಕಾಲ್ ಸೆಂಟರ್ ಇನ್ನಿತರೆ ಕೆಲ ಮಹತ್ವದ ಉದ್ಯಮಗಳಿಗೆ ಕಾರ್ಮಿಕ ಇಲಾಖೆಯವರು ಕಾಲಿಡುವುದು ಇರಲಿ, ಕಾರ್ಮಿಕ ಕಾನೂನುಗಳೇ ಕಾಲಿಡಲು ಸಾಧ್ಯವಿಲ್ಲ. ಕಾರ್ಮಿಕ ಪರಿಶೀಲನ ಒಡಂಬಡಿಕೆ, 1947 (Labour Inspection Convention, 1947) ಪ್ರಕಾರ, ಕಾರ್ಮಿಕರ ಸುರಕ್ಷತೆ ದೃಷ್ಟಿಯಿಂದ, ಕಾರ್ಮಿಕ ಇಲಾಖೆಯ ಅಧಿಕಾರ ಮೊಟಕು ಗೊಳಿಸುವಂತಿಲ್ಲ. ಇದು ಅಂತರರಾಷ್ಟ್ರೀಯ ಕಾನೂನು. ಭಾರತ ಕೂಡ ಇದಕ್ಕೆ ಸಹಿ ಹಾಕಿದೆ. ಆದರೆ, ಈ ಬಹುರಾಷ್ಟ್ರೀಯ ಕಾನೂನು ದೇಶದ ಅಭಿವೃದ್ಧಿಗೆ ಮಾರಕವಾದ್ದರಿಂದ, ಗಾಳಿಗೆ ತೋರಲು ಮಾತ್ರ ಯೋಗ್ಯ.

ಈ ಅಂತರರಾಷ್ಟ್ರೀಯ ಕಾನೂನು ಹೋಗಲಿ ನಮ್ಮದೇ ಸಂವಿಧಾನದ ಅಡಿ ನಮ್ಮದೇ ಸಂಸತ್ತು ಪಾಸು ಮಾಡಿದ ಕಾರ್ಖಾನೆಗಳ ಕಾಯಿದೆ (Factories Act ), ಕನಿಷ್ಠ ವೇತನ ಕಾಯಿದೆ, ಗ್ರ್ಯಾಚುಟಿ ಕಾಯಿದೆ, ಮಾತೃತ್ವ ಅನುಕೂಲಗಳ (Maternity Benefit) ಕಾಯಿದೆ ಮತ್ತು ವೇತನ ಪಾವತಿ (Payment of Wages) ಕಾಯಿದೆ ಇತ್ಯಾದಿಗಳಲ್ಲೂ ಕಾರ್ಮಿಕ ಕಾನೂನು ಜಾರಿಗೊಳಿಸಲು ಇಲಾಖಾ ಸಿಬ್ಬಂದಿಗೆ ಸಾಕಷ್ಟು ಅಧಿಕಾರ ನೀಡಲಾಗಿದೆ. ಆದರೆ, ಈ ದೇಶದ ಪ್ರತಿ ಒಬ್ಬ ಪ್ರಜೆಯೂ ಆರಿಸಿ ಕಳಿಸಿದ ಪ್ರಧಾನಿಗಳ ಕೋಮಲ ಮನಸ್ಸು ನೋಯಿಸಿದ ಮೇಲೆ ಯಾವ ಕಾನೂನು ತಾನೇ ಪಾಲಿಸಲು ಯೋಗ್ಯವಾಗಿ ಉಳಿದೀತು? ಆದ್ದರಿಂದ ನೀತಿ ನಿರೂಪಣೆಗಳ ಮೂಲಕವೇ ಈ ರಾಕ್ಷಸೀ ಕಾನೂನುಗಳನ್ನು ಸಂಹಾರ ಮಾಡುವ ಕೋಮಲ ಪ್ರಯತ್ನ: ಶ್ರಮೇವ ಜಯತೆ.

ಕಾರ್ಮಿಕ ಕಾನೂನುಗಳ ಸುಧಾರಣೆ ವಿಚಾರ ಪ್ರಸ್ತಾಪ ಮಾಡುತ್ತಾ ಇತ್ತೀಚೆಗೆ ಪ್ರಧಾನ ಮಂತ್ರಿಗಳು ಬಹು ಮುಖ್ಯವಾದ ಒಂದು ಮಾತನ್ನು ಹೇಳಿದರು. modi_ambani_tata_kamathಅನೇಕ ಕಾರಣಗಳಿಂದ ನಮ್ಮ ದೇಶದಲ್ಲಿ ಶ್ರಮಕ್ಕೆ ಘನತೆ ಎಂಬುದಿಲ್ಲ ಎಂದು. ಈ ‘ಅನೇಕ’ ಕಾರಣಗಳಲ್ಲಿ ಒಂದನ್ನಾದರೂ ಅವರು ಬಿಡಿಸಿ ಹೇಳಬಹುದೇನೋ, ಇಲ್ಲ, ಕನಿಷ್ಠ ಪಕ್ಷ ಹೆಸರಿಸಬಹುದೇನೋ ಎಂದು ಆಸೆಯಿಂದ ಅವರ ಭಾಷಣ ಕೇಳಿದೆ. ನಿರಾಶೆ ಕಾದಿತ್ತು. ಇರಲಿ, ಆಸೆಯೇ ದುಃಖಕ್ಕೆ ಮೂಲ.

ಈ ದೇಶದಲ್ಲಿ ಕಾರ್ಮಿಕರ ವೇತನ-ಬೋನಸ್ ಹೆಚ್ಚಳವಾದಷ್ಟೂ ಎಡ ಪಕ್ಷಗಳ ಮೂಳೆ ಚಕ್ಕಳ ಹೆಚ್ಚು ಸ್ಪಷ್ಟವಾಗಿ ಕಾಣಿಸತೊಡಗಿದೆ. ಹೀಗಾಗಿ ದೇಶದ ಚಿಂತನೆಯಲ್ಲಿ ನಿತ್ಯ ನಿರತ ಸಂಘ ಪರಿವಾರಕ್ಕೆ ಸೇರಿದ ಭಾರತೀಯ ಮಜ್ದೂರ್ ಸಂಘ ಬೆಳೆದದ್ದು. ಮಜ್ದೂರ್ ಸಂಘ ಒಂದು ಕೋಟಿ ಕಾರ್ಮಿಕರನ್ನು ಸದಸ್ಯರನ್ನಾಗಿ ಹೊಂದಿರುವುದಾಗಿ ಹೇಳಿಕೊಳ್ಳುವುದಲ್ಲದೇ, ತನ್ನನ್ನು ತಾನು ಈ ದೇಶದ ಅತ್ಯಂತ ದೊಡ್ಡ ಕಾರ್ಮಿಕ ಸಂಘಟನೆ ಎಂದು ಹೇಳಿಕೊಳ್ಳುತ್ತದೆ. ಇದ್ದರೂ ಇರಬಹುದೇನೋ. ಈ ದೇಶದ ಕಾರ್ಮಿಕರಿಗೆ ಕೆಲಸದ ಸುರಕ್ಷತೆಗಿಂತ ಧರ್ಮದ ಸುರಕ್ಷತೆಯ ಚಿಂತೆ ಜಾಸ್ತಿ. ಧರ್ಮವಿದ್ದರಲ್ಲವೇ ನಾವು. ಆದರೆ ಈ ಧರ್ಮಕಾರಣದ ಮಧ್ಯೆ ಪ್ರಧಾನಿಯವರ ಜಯ ಘೋಷ ಅವರಿಗೆ ಸರಿಯಾಗಿ ಕೇಳಿಸಿದೆಯೋ ಇಲ್ಲವೋ. ಯಾವುದಕ್ಕೂ ಯಾರಾದರೂ ಒಬ್ಬರು ಕೇಳಿ ನೋಡುವುದು ಒಳ್ಳೆಯದು.

ಸಿದ್ಧಲಿಂಗಯ್ಯ ಮತ್ತು ಆಳ್ವಾಸ್ ನುಡಿಸಿರಿ : ಅಂಗೈ ಹುಣ್ಣಿಗೆ ನಿಲುಗನ್ನಡಿ ಬೇಕಿಲ್ಲ


– ಬಿ. ಶ್ರೀಪಾದ ಭಟ್


 

22 ಅಕ್ಟೋಬರ್, 1964. ಸಾಹಿತ್ಯದಲ್ಲಿನ ಸಾಧನೆಗಾಗಿ ತನಗೆ ನೀಡಿದ ನೊಬೆಲ್ ಪ್ರಶಸ್ತಿಯನ್ನು ತಿರಸ್ಕರಿಸುತ್ತ ಚಿಂತಕ ಜೀನ್ ಪಾಲ್ ಸಾರ್ತೆ, “ನಾನು ಯಾವಾಗಲೂ ಸರ್ಕಾರ ಅಥವಾ ಅಫೀಶಯಲ್ ಆಹ್ವಾನಗಳನ್ನು,ಪುರಸ್ಕಾರಗಳನ್ನು ಒಪ್ಪಿಕೊಳ್ಳುವುದಿಲ್ಲ. ತಾನು ಒಂದು ಸಂಸ್ಥೆಯಾಗುವ ಎಲ್ಲಾ ಸಾಧ್ಯತೆಗಳನ್ನು ಲೇಖಕನು ತಿರಸ್ಕರಿಸಬೇಕು. ಲೇಖಕನ ಬದ್ಧತೆಯ ಅಗತ್ಯತೆಯನ್ನಾಧರಿಸಿ ನನ್ನ ನಿಲುವನ್ನು ರೂಪಿಸಿಕೊಂಡಿದ್ದೇನೆ. ರಾಜಕೀಯ, ಸಾಮಾಜಿಕ, ಸಾಹಿತ್ಯಕ ಸ್ಥಾನಗಳನ್ನು ಅಲಂಕರಿಸುವ ಲೇಖಕ ಅದರ ಮಿತಿಯೊಳಗೊಳಪಟ್ಟೇ ವರ್ತಿಸಬೇಕು siddalingayyaಮತ್ತು ಮುಖ್ಯವಾಗಿ ಅದು ಕೇವಲ ಆತನ ಲೋಕವಾಗಿರಬೇಕು” ಎಂದು ಮಾರ್ಮಿಕವಾಗಿ ಹೇಳುತ್ತಾನೆ. ನೊಬೆಲ್ ಪ್ರಶಸ್ತಿಯನ್ನು ತಿರಸ್ಕರಿಸುವ ಸಾರ್ತೆಗೆ ಅದು ಕೇವಲ ಪಶ್ಚಿಮ ಜಗತ್ತಿನ ಲೇಖಕರಿಗಾಗಿ ಮತ್ತು ಪೂರ್ವ ಜಗತ್ತಿನ ಬಂಡಾಯ ಲೇಖಕರಿಗಾಗಿ ಮಾತ್ರ ಮೀಸಲು ಇರುವಂತಿದೆ ಎಂದು ಅಭಿಪ್ರಾಯ ಪಡುತ್ತಾನೆ.

ಇದು ನಡೆದು ಐವತ್ತು ವರ್ಷಗಳಾಗಿವೆ. ಆದರೆ ಅದರ ಆಶಯಗಳು ಇಂದಿಗೂ ಪ್ರಸ್ತುತ. ಏಕೆಂದರೆ ಇತ್ತೀಚೆಗೆ ನಮ್ಮ ಪ್ರೀತಿಯ ಕವಿಗಳು ಸಿದ್ಧಲಿಂಗಯ್ಯನವರು (ನಮ್ಮನ್ನು ರೂಪಿಸಿದ ಕವಿ ಮತ್ತು ಹೋರಾಟಗಾರ) “ಅಳ್ವಾಸ್ ನುಡಿಸಿರಿ”ಯ ಅಧ್ಯಕ್ಷತೆಯನ್ನು ಒಪ್ಪಿಕೊಂಡ ನಂತರ ಅದನ್ನು ತಾತ್ವಿಕ ಮತ್ತು ನೈತಿಕ ಕಾರಣಗಳಿಗಾಗಿ ವಿರೋಧಿಸಿದ ಗೆಳೆಯರಿಗೆ ಉತ್ತರಿಸುತ್ತಾ ಮತ್ತೊಬ್ಬ ಗೆಳೆಯರು ಆ ಭಾಗವಹಿಸುವಿಕೆಯನ್ನು ಸಮರ್ಥಿಸುತ್ತಾ ’ಅದರಲ್ಲಿ ಅಂತಹ ತಪ್ಪೇನಿಲ್ಲ, ಕೇವಲ ನಮ್ಮೊಳಗೆ ಸಿದ್ಧಾಂತಗಳನ್ನು ಮಾತನಾಡಿ ಪ್ರಯೋಜನವಿಲ್ಲ, ಆ ಪ್ರಗತಿಪರ ಚಿಂತನೆಗಳು ವಿರೋಧಿ ಬಣಗಳಿಗೂ ತಲುಪಬೇಕು, ಅಲ್ಲಿಯೂ ಚರ್ಚಿತವಾಗಬೇಕು ಎನ್ನುವ ಕಾರಣಕ್ಕಾಗಿ ಸಿದ್ಧಲಿಂಗಯ್ಯನವರ ಅಳ್ವಾಸ್ ನುಡಿಸಿರಿಯ ಅಧ್ಯಕ್ಷತೆಯನ್ನು ಗೆಳೆಯರು ಒಪ್ಪಿಕೊಂಡಿದ್ದಾರೆ ಮತ್ತು ಅಲ್ಲಿ ನಮ್ಮ ಪ್ರೀತಿಯ ಕವಿಗಳು ತಮ್ಮ ಪ್ರಗತಿಪರ ನಿಲುವುಗಳನ್ನು ಬಿಟ್ಟುಕೊಡದೆ ಆ ಗುಂಪಿಗೂ ಚಾಟಿಯೇಟನ್ನು ಬೀಸಲಿ ಎಂದು ಆಶಿಸಿದ್ದಾರೆ. ಇವರ ಒಟ್ಟಾರೆ ಆಶಯಗಳಿಗೆ ಯಾರಿಗೂ ವಿರೋಧವಿಲ್ಲ. ನಾವೆಲ್ಲ ವಿಭಿನ್ನ ನೆಲೆಯ ಜನರೊಂದಿಗೆ, ಭಿನ್ನಾಭಿಪ್ರಾಯಗಳ ಜನರೊಂದಿಗೆ ಸಂವಾದಿಸಬೇಕು ಎನ್ನುವುದೂ ನಮೆಲ್ಲರ ಆಶಯಗಳೂ ಸಹ ಅಗಿರುತ್ತದೆ. ಆದರೆ ಅದು at what cost? ಗೆಳೆಯರ ಸದುದ್ದೇಶದ ಇಡೀ ಆಶಯಗಳು ವಿತಂಡವಾದದಂತೆ ಕಾಣತೊಡಗುವುದಕ್ಕೆ ಕಾರಣ ಅವರು ಅದಕ್ಕಾಗಿ ಯಾವ ಬೆಲೆ ತೆರಬೇಕು ಎನ್ನುವುದನ್ನು ತಮ್ಮನ್ನು ತಾವು ಪ್ರಶ್ನಿಸಿಕೊಂಡಿಲ್ಲ. ತನ್ನ ಕಡೆಯ ವರ್ಷಗಳಲ್ಲಿ ತಾನು ನೊಬೆಲ್ ಪ್ರಶಸ್ತಿಯನ್ನು ತಿರಸ್ಕರಿಸಿದ್ದನ್ನು ಮತ್ತೊಮ್ಮೆ ನೆನಪಿಸಿಕೊಳ್ಳುತ್ತಾ ಸಾರ್ತೆ, “ಆ ಬಹುಮಾನದ ಹಣ (ಸುಮಾರು 21000 ಪೌಂಡ್) ಅನ್ನು ಜನಾಂಗೀಯ ವ್ಯವಸ್ಥೆಯ ವಿರುದ್ಧ ಹೋರಾಡುತ್ತಿರುವ ಸಂಘಟನೆಗೆ ಕೊಡಬಹುದಾಗಿತ್ತೇನೋ. ಏಕೆಂದರೆ ಆ ಸಂಘಟನೆಗೆ ಅದರ ಅವಶ್ಯಕತೆ ಇತ್ತು” ಎಂದು ಬರೆದುಕೊಳ್ಳುತ್ತಾನೆ ಹೊರತಾಗಿ ಪಶ್ಚತ್ತಾಪ ಮಾತ್ರ ಪಡುವುದಿಲ್ಲ. ಏಕೆಂದರೆ ಸಾರ್ತೆಗೆ ಗೊತ್ತಿತ್ತು ಒಂದು ಸದುದ್ದೇಶಕ್ಕಾಗಿ ಹಣವನ್ನು ಪಡೆದುಕೊಳ್ಳುವುದೇನೋ ಸರಿ, ಆದರೆ ಅದು at what cost?

ಮೇಲ್ನೋಟಕ್ಕೆ ಕಾಣುವಂತೆ ಅಳ್ವಾಸ್ ನುಡಿಸಿರಿಯಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಸಹಜವಾಗಿಯೇ ಟಿಎ, ಡಿಎ ಮತ್ತು ಪಾಲ್ಗೊಳ್ಳುವಿಕೆಗೆ ಕೃತಜ್ಞತೆಯಾಗಿ ಹಣವನ್ನೂ ಕೊಡುತ್ತಾರೆ. ಮತ್ತು ಅಲ್ಲಿರುವವರೆಗೂ ಊಟ, ವಸತಿಗಳ ಉಚಿತ ವ್ಯವಸ್ಥೆಯೂ ಇರುತ್ತದೆ. ಇಷ್ಟನ್ನು ಅನುಭವಿಸುವ, alva-nudisiri-baraguru-mohan-alva-veerendra-heggade-vivek-raiಪಡೆದುಕೊಳ್ಳುವ ಲೇಖಕ ಅಲ್ಲಿ ಹೋಗಿ ಅವರ ವಿರುದ್ಧ ತನ್ನ ಮಾತಿನ ಚಾಟಿಯೇಟನ್ನು ಬೀಸಬೇಕೆಂದು ಆಶಿಸುವುದು ಕೇವಲ ಮುಗ್ಧತೆಯಲ್ಲ ಅದು ಅಪಾಯಕಾರಿಯೂ ಹೌದು. ಏಕೆ ಅಪಾಯಕಾರಿಯೆಂದರೆ ಸಂಸ್ಥೆಯೊಂದರ ಎಲ್ಲ ಸವಲತ್ತುಗಳನ್ನು ಪಡೆದುಕೊಂಡು ಅದರ ವಿರುದ್ಧ ಮಾತನಾಡುವುದೇ ಆತ್ಮವಂಚನೆಯಲ್ಲವೇ? ಅದಕ್ಕೇ ಸಾರ್ತೆ ಹೇಳುವುದು “ಲೇಖಕ ಸ್ವತ ತಾನೇ ಒಂದು ಸಂಸ್ಥೆಯಾಗುವ ಅಪಾಯದಿಂದ ಸದಾ ಹೊರಗಿಬೇಕು”. ಇಲ್ಲಿ ನಮ್ಮ ಪ್ರೀತಿಯ ಸಿದ್ಧಲಿಗಯ್ಯನವರ ವಿಷಯದಲ್ಲಿ ಅದು ದಯನೀಯವಾಗಿ ಸೋತಿದೆ. ಏಕೆ ಗೊತ್ತೆ? ಪ್ರತಿಭಾವಂತರಿಗೆ, ಪ್ರಾಮಾಣಿಕರಿಗೆ ಅರ್ಥಪೂರ್ಣವಾಗಿ, ನಿಷ್ಪಕ್ಷಪಾತವಾಗಿ ಮಾತನಾಡಲು ಒಂದು ಸಂಸ್ಥೆ, ವ್ಯಕ್ತಿ, ಧರ್ಮ, ಸಮುದಾಯದ ಆಚರಣೆ ಮತ್ತು ಧೋರಣೆಗಳು ಯಾವ ಕಾಲಕ್ಕೂ ಅಡ್ಡಿಯಾಗುವುದಿಲ್ಲ. ಅಡ್ಡಿಯಾಗಿದೆ ಎಂದರೆ ಮತ್ತೇನರ್ಥ?

ಒಂದಂತೂ ನಿಜ. ಅಂಗೈ ಹುಣ್ಣಿಗೆ ನಿಲುಗನ್ನಡಿ ಬೇಕಾಗಿಲ್ಲ. ಇಲ್ಲಿ ಅಳ್ವಾಸ್ ಸಂಸ್ಥೆಯ ಪರಮೋಚ್ಛ ನಾಯಕ ಮೋಹನ್ ಅಳ್ವ ಅವರ ಇತಿಹಾಸ ಇಡೀ ಕನ್ನಡದ ಪ್ರಜ್ಞಾವಂತರಿಗೆ ಗೊತ್ತು. ಆತನ ಸರ್ವಾಧಿಕಾರ ವ್ಯಕ್ತಿತ್ವ ಎಲ್ಲರಿಗೂ ಗೊತ್ತು. ಅವರೊಬ್ಬ ಬಂಡವಾಳಶಾಹಿ ಎನ್ನುವುದೂ ಎಲ್ಲರಿಗೂ ಗೊತ್ತು. ಸಾರ್ವಜನಿಕ ಶಿಕ್ಷಣದ ಸಂವಿಧನಾತ್ಮಕ ಜೀವಪರ ಆಶಯಗಳಿಗೆ ಸ್ವಲ್ಪವೂ ಬೆಲೆ ಕೊಡದ ಶಿಕ್ಷಣದ ವ್ಯಾಪಾರಿ ಎನ್ನುವುದು ಎಲ್ಲರಿಗೂ ಗೊತ್ತು. ಅವರ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುತ್ತಿರುವ ಶೋಷಣೆಯ ಕುರಿತಾಗಿ ಅನೇಕ ಆರೋಪಗಳಿವೆ ಎನ್ನುವುದೂ ಎಲ್ಲರಿಗೂ ಗೊತ್ತು. ಅವರು ಮತೀಯವಾದಿ ಸಂಘ ಪರಿವಾರದದೊಂದಿಗೆ ನಂಟನ್ನು ಹೊಂದಿರುವುದು ಎಲ್ಲರಿಗೂ ಗೊತ್ತು. alva-veerendra-heggadeಇತ್ತೀಚೆಗೆ ಸೌಜನ್ಯ ಕೊಲೆ ಪ್ರಕರಣದ ಆರೋಪದಲ್ಲಿ ಹೆಸರು ಕೇಳಿಬರುತ್ತಿರುವ ಕುಟುಂಬದಲ್ಲೊಬ್ಬರಾದ ಧರ್ಮಸ್ಥಳದ ವೀರೇಂದ್ರ ಹೆಗಡೆಯ ಅಪ್ತ ಭಕ್ತರು ಇವರೆಂದೂ ಎಲ್ಲರಿಗೂ ಗೊತ್ತು. ಒಟ್ಟಾರೆ ಈ ಮೋಹನ್ ಆಳ್ವ ಎನ್ನುವ ಉದ್ಯಮಿಯ ಈ ಸಾಹಿತ್ಯ ಸೇವೆ ಒಂದು ದರ್ಪದ, ಸಾಮಂತ ಪಾಳೇಗಾರನ ಅದ್ದೂರಿ ಪ್ರದರ್ಶನ ಎನ್ನುವುದೂ ಎಲ್ಲರಿಗೂ ಗೊತ್ತು. ಅದರೆ ಇಷ್ಟೆಲ್ಲ ಗೊತ್ತಿದ್ದೂ ಒಂದು ತಲೆಮಾರನ್ನು, ಸಮುದಾಯದ ಪ್ರಜ್ಞೆಯನ್ನು ಬೆಳಿಸಿದ ರೂಪಿಸಿದ ಮಹತ್ವದ ಕವಿ, ಹೋರಾಟಗಾರ ಮೇಲಿನ ಅಪಾಯದ ಕರೆಗಂಟೆಯ, ಓಲಗದ ಸದ್ದನ್ನು ಕೇಳಿಸಿಕೊಳ್ಳದೆ ತನ್ನ ಈ ನಿರ್ಲಕ್ಷದ ಕಾರಣಕ್ಕಾಗಿ ತನ್ನ ಈ ವರ್ತನೆಗಳ ಮೂಲಕ ಹೊಸ ತಲೆಮಾರಿನ ಚೇತನವನ್ನೇ ಉಡುಗಿಸಿಬಿಡುತ್ತಾನೆ.

ಈ ಮೋಹನ್ ಅಳ್ವಾರ ದರ್ಪದ ದುಡ್ಡಿನ (ಇದಕ್ಕಾಗಿ, ಕನ್ನಡಮ್ಮನ ಸೇವೆಗಾಗಿ ತಾನು ಕೋಟ್ಯಾಂತರ ರೂಪಾಯಿಗಳನ್ನು ಸಾಲ ಮಾಡಿ ದಿವಾಳಿಯಾಗಿದ್ದೇನೆ ಎಂದು ಬೇರೆ ಹೇಳಿಕೊಂಡಿದ್ದಾರೆ) ಒಡ್ಡೋಲಗದಲ್ಲಿ ಭಾಗವಹಿಸುವದೆಂದರೆ ನಮ್ಮ ನಮ್ಮ ನೈತಿಕತೆ ಕಳೆದಿದೆ ಎಂದೇ ಅರ್ಥ. vijaykarnataka-mohan-alva-22122013ಇದು ತುಂಬಾ ಸರಳ. ಏಕೆ ಗೊತ್ತೆ, ಈ ಮೋಹನ ಅಳ್ವಾರಂತವರು ಪಿಂಗಾಣಿ ಅಂಗಡಿಯಲ್ಲಿ ನುಗ್ಗುವ ಗೂಳಿಯಂತೆ. ಆ ನುಗ್ಗುವಿಕೆಯೇ ಧ್ವಂಸಗೊಳಿಸಲಿಕ್ಕಾಗಿ ಮಾತ್ರ. ಇದೂ ಸಹ ತುಂಬಾ ಸರಳ. ಏಕೆ ಗೊತ್ತೆ, ಈ ನವಉದಾರೀಕರಣದ ಇಂದಿನ ಸಂದರ್ಭದಲ್ಲಿ ಈ ಬಗೆಯ ದರ್ಪದ ನಾಯಕರಿಂದ ನಡೆಯುವ ಪ್ರತಿಯೊಂದು ಸಾಂಸ್ಕೃತಿಕ ಕಾರ್ಯಕ್ರಮಗಳೂ ಮಾಕೆಟ್ ಟ್ರೆಂಡ್‌ಗಳನ್ನು ಹುಟ್ಟಿಹಾಕುತ್ತಿರುತ್ತವೆ. ಅರೇ ನೋಡಿ ಅಳ್ವಾಸ್ ನುಡಿಸರಿಯ ವೈಭವ, ಅಚ್ಚುಕಟ್ಟು, ಊಟದ ವ್ಯವಸ್ಥೆ ಆಹಾ ಏನು ಮಜಾ ಏನು ಸುಖಾ ಎನ್ನುವ ಸುಖ ಲೋಲುಪ್ತತೆಯ ಟ್ರೆಂಡ್ ಹುಟ್ಟಿ ಹಾಕುತ್ತದೆ. ಈ ಸುಖ ಲೋಲುಪ್ತತೆಯಲ್ಲಿ ಬೂಟು ಮತ್ತು ಚಾಟಿಯೇಟಿನ ವಿರುದ್ಧ ಹೋರಾಟದ ಸಾವಿರಾರು ನದಿಗಳು ಹುಟ್ಟುವುದಕ್ಕೂ ಸಾಧ್ಯವಿಲ್ಲ. ಅಲ್ಲಿಗೆ ಅದು ಮುಗಿದಂತೆ. ಸಾರ್ತೆಯ “ಶುದ್ಧ ಸಾಹಿತ್ಯ” ಎಂದರೆ ಕೇವಲ ಮಡಿವಂತಿಕೆಯ, ಶ್ರೇಷ್ಠತೆಯ ವ್ಯಸನದ ಸಾಹಿತ್ಯ ಮಾತ್ರವಲ್ಲ. ಆ ಶುದ್ದ ಸಾಹಿತ್ಯ ಆರ್ಥಿಕ ತೆವಲುಗಳನ್ನು ನಿರಾಕರಿಸುತ್ತದೆ. ಆ ಶುದ್ಧ ಸಾಹಿತ್ಯ ವಿತಂಡವಾದಗಳನ್ನು ನಿರಾಕರಿಸುತ್ತದೆ. ಕೊಳ್ಳುಬಾಕುತನವನ್ನು ನಿರಾಕರಿಸುತ್ತದೆ. ಮತ್ತು ತಾತ್ಕಾಲಿಕ ಜನಪ್ರಿಯತೆಯನ್ನು ಸಾರಾಸಗಟಾಗಿ ತಿರಸ್ಕರಿಸುತ್ತದೆ ಮತ್ತು ಮುಖ್ಯವಾಗಿ ಜನಪ್ರಿಯತೆ ಪಡೆದುಕೊಂಡಿದ್ದೆಲ್ಲವೂ ಜನಪರವಲ್ಲ ಎಂದು ಘೋಷಿಸಿಬಿಡುತ್ತದೆ ಸಾರ್ತೆಯ ಶುದ್ಧ ಸಾಹಿತ್ಯ.

ಹೀಗಾಗಿ ಅತ್ಯಂತ ಜನಪ್ರಿಯ “ಅಳ್ವಾಸ್ ನುಡಿಸಿರಿ” ಜನಪರ ಸಮ್ಮೇಳನ ಅಲ್ಲವೇ ಅಲ್ಲ. ಇದನ್ನು ಈ ನಾಡಿನ ಪ್ರಜ್ಞಾವಂತರೆಲ್ಲರೂ ನಿರಾಕರಿಸಬೇಕು. ನಿಜ ನಮ್ಮ ಗೆಳೆಯರ ಆಶಯದಂತೆ ನಾವು ಭಿನ್ನಾಭಿಪ್ರಾಯದ ಗುಂಪಿನೊಂದಿಗೆ, ವಿಭಿನ್ನ ಧೋರಣೆಗಳ, ಚಿಂತನೆಗಳ ಗುಂಪಿನೊಂದಿಗೆ ಬೆರೆತು ಸಂವಾದ ನಡೆಸಬೇಕಾಗಿದೆ. ಚರ್ಚಿಸಬೇಕಾಗಿದೆ. ನಾವೆಲ್ಲ ಕುರುಡಾಗಿ, ಕಿವುಡಾಗಿ ವರ್ತಿಸಲು ಸಾಧ್ಯವಿಲ್ಲ. ಆದರೆ ಈ ದರ್ಪದ ಸಮ್ಮೇಳನಗಳಲ್ಲಿ ಪಾಲ್ಗೊಳ್ಳುವದರ ಮೂಲಕ ಅದು ಸಾಧ್ಯವೂ ಇಲ್ಲ ಮತ್ತು ಅದರ ಅವಶ್ಯಕತೆ ಖಂಡಿತವಾಗಿಯೂ ಇಲ್ಲ.

ಒಂದು ಕಡೆ ಲಂಕೇಶ್ ಹೇಳುತ್ತಾರೆ, “ಒಂದು ವಚನ ತನ್ನ ಪ್ರೀತಿಯ ಬಲದಿಂದ ಕಾಲವನ್ನೂ ಮೀರಿ ಹರಿದು ಬರುತ್ತದೆ. ನಾಶಗೊಳ್ಳಲು ಅದು ಒಪ್ಪುವುದೇ ಇಲ್ಲ”. ಹೌದು ನಾವು ಈ ಪ್ರೀತಿಯ, ಸೌಹಾರ್ದತೆಯ ಬಲೆಯನ್ನು ನೇಯುವುದರ ಮೂಲಕ ಬಿನ್ನಾಭಿಪ್ರಾಯದ ಗುಂಪಿನೊಂದಿಗೆ, ವಿಭಿನ್ನ ಧೋರಣೆಗಳ, ಚಿಂತನೆಗಳ ಗುಂಪಿನೊಂದಿಗೆ ಚರ್ಚಿಸಬೇಕಾಗಿದೆಯೇ ಹೊರತು ಆ ಅವಾಂತಕಾರಿ ಮತ್ತು ಅಪಾಯಕಾರಿ ಆಳ್ವಾಸ್ ನುಡಿಸಿರಿಯ ವೇದಿಕೆಯಿಂದ ಮಾತ್ರ ಅಲ್ಲವೇ ಅಲ್ಲ.

ಭಾವ ಬುದ್ಧಿಗಳು ಒಂದಾಗಿ ಮೇಳೈಸಿದೊಡೆ …


 -ಎಸ್.ಗಂಗಾಧರಯ್ಯ


ಗಾಂಧಿ ಜಯಂತಿ ಪ್ರಯುಕ್ತ ವರ್ತಮಾನ ಬಳಗ ಆಯೋಜಿಸಿದ್ದ ಕಥಾ ಸ್ಪರ್ಧೆಗೆ ಬಂದಿದ್ದ ನಲವತ್ತು ಕಥೆಗಳನ್ನು ಓದಲು ನಾನು ತೆಗೆದುಕೊಂಡಿದ್ದು ಬರೋಬ್ಬರಿ ಎರಡು ತಿಂಗಳು.katha-sprade-2014-223x300 ಈ ಹೊತ್ತಿನಲ್ಲಿ ನನಗೆ ಸ್ಪಷ್ಟವಾಗಿದ್ದು- ಖುಷಿಗೆ ಕಥೆಯೊಂದನ್ನು ಓದುವುದಕ್ಕೂ, ವಿಮರ್ಶೆಗಾಗಿ ಕಥೆಯೊಂದನ್ನು ಓದುವುದಕ್ಕೂ, ಇಲ್ಲಾ ಯಾವ ದೃಷ್ಟಿಯಲ್ಲಿ ಇದು ಹೆಚ್ಚು ಪರಿಣಾಮಕಾರಿ ಅಥವಾ ಅದು ಕಥೆಯಾಗಿದೆಯೋ ಇಲ್ಲವೋ ಅನ್ನುವುದನ್ನು ಗುರುತಿಸುದಕ್ಕೂ ಇರಬಹುದಾದ ಹಾಗೂ ಇರಲೇಬೇಕಾದ ಎಚ್ಚರ. ಎಂದೂ ಇಂಥ ಇಕ್ಕಟಿಗೆ ಸಿಲುಕದಿದ್ದ ನಾನು ಅಥವಾ ಇಂಥದ್ದೊಂದು ಶಿಸ್ತಿನ ಓದಿಗೆ ಒಳಪಡಿಸಿಕೊಳ್ಳದಿದ್ದ ನಾನು ಇಲ್ಲಿನ ಅನೇಕ ಕಥೆಗಳನ್ನು ಎರಡು, ಮೂರು ಸರ್ತಿ ಓದಿದ್ದು ಒಂದು ಕಡೆಗಿದ್ದರೆ, ಕೆಲವು ಕಥೆಗಳು ಪ್ರತೀ ಓದಿನಲ್ಲೂ ಬೇರ ಬೇರೆ ರೀತಿಯಲ್ಲಿ ಓದಿಸಿಕೊಳ್ಳತೊಡಗಿದ್ದು ಹಾಗೂ ಕಥೆಯೊಂದಕ್ಕೆ ಇರಬಹುದಾದ ಸಾಧ್ಯತೆಗಳನ್ನು ಹೇಳುತ್ತಲೇ ಅದು ಓದುಗನಾದ ನನ್ನೊಳಗೆ ವಿಸ್ತರಿಸಿಕೊಳ್ಳುತ್ತಾ ಹೋಗುವ ಅಚ್ಚರಿಯ ಪರಿ ಮತ್ತೊಂದು ಕಡೆಗಿತ್ತು. ಭಾವ, ಬುದ್ಧಿಗಳು ಒಂದಾಗಿ ಮೇಳೈಸಿದೊಡೆ ಏನಾಗ ಬಹುದೋ ಅದೆಲ್ಲಾ ಇಲ್ಲಿ ಘಟಿಸಿದೆ. ಹಾಗಾಗಿ ಈ ಅಷ್ಟೂ ಕಥೆಗಳನ್ನು ಓದುವಂಥ ಹೊತ್ತಲ್ಲಿ ಅವು ಉಂಟುಮಾಡಿರುವ ತೀವ್ರತೆ, ಪರಿಣಾಮ ಹಾಗೂ ಹೊಸ ಲೋಕ, ಹೊಸ ಪರಿಭಾಷೆಗಳ ಹಿನ್ನೆಲೆಯೇ ನನ್ನ ಆಯ್ಕೆಗಳ ಹಿನ್ನೆಲೆಯಲ್ಲಿ ಕೆಲಸ ಮಾಡಿದೆ ಅನ್ನುವುದನ್ನು ಹೇಳುತ್ತಲೇ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಹಾಗೂ ಭಾಗವಹಿಸಿದ ಎಲ್ಲಾ ಕಥೆಗಾರರಿಗೂ ಅಭಿನಂದನೆ ಸಲ್ಲಿಸುತ್ತೇನೆ.

ಮೊದಲ ಬಹುಮಾನ ಪಡೆದ ಕಥೆ ‘ಕಾಲ ವ್ಯಾಧಿ’, ಕಾಲವೇ ವ್ಯಾಧಿಯಾಗುವ, ಅದೇ ಮುಂದೊಂದು ದಿನ ಅದೇ ವ್ಯಾಧಿಗೆ ಮದ್ದಾಗುವ ವಿಶೇಷ ಲೋಕವೊಂದನ್ನು ಅನಾವರಣಗೊಳಿಸುತ್ತದೆ. ಹರಿಯುವ ಕಾಲದೊಂದಿಗೆ ದೇಗುವ ಬದುಕು, ಅದರೊಳಗಿನ ಪ್ರೇಮ, ಕಾಮ, ನೆನಪು, ಕನಸು, ವಾಸ್ತವಗಳ ನಡುವೆ ತುಯ್ದಾಡುತ್ತಾ ಏಕ ಕಾಲಕ್ಕೆ ಮನಸ್ಸಿನ ಖಾಯಿಲೆಯಂತೆಯೂ, ದೇಹದ ಖಾಯಿಲೆಯಂತೆಯೂ ಭಾಸವಾಗುತ್ತಾ ತನ್ನ ಕೇಂದ್ರ ಬಿಂದುವನ್ನು ಪ್ರೇಮದ ಸುತ್ತಲೇ ಸುತ್ತಿಸಿದರೂ, ನಿರೂಪಕನ ಹೊಂಗೆ ತೋಪಿನ ನೆನಪಿನೊಂದಿಗೆ ಮತ್ತೊಂದು ಆಯಾಮದಿಂದಲೂ ತನ್ನನ್ನು ಓದುವಂತೆ ನೋಡಿಕೊಳ್ಳುವ ಪರಿಯಲ್ಲಿ ಇದರ ಸಾರ್ಥಕತೆ ಇದೆ.

ಎರಡನೆಯ ಬಹುಮಾನ ಪಡೆದ ‘ಬೋನಿಗೆ ಬಿದ್ದವರು’, ಕಥೆಯ ಶೀರ್ಷಿಕೆಯೇ ಸಾಂಕೇತಿಕವಾಗಿದೆ.ಗಂಗಾಧರಯ್ಯಬದಲಾವಣೆಯ ಗಾಳಿಯಲ್ಲಿ, ಬದುಕಿನ ಅನಿವಾರ್ಯತೆಯಲ್ಲಿ, ಅಪ್ಪಟ ದೇಸಿ ಕಸುಬೊಂದು ಅಥವಾ ದೇಸೀ ಬದುಕೊಂದು ಪಡೆದುಕೊಳ್ಳಬಹುದಾದ ತಿರುವುಗಳನ್ನೂ ಅಸಹಾಯಕತೆಯನ್ನೂ ತನ್ನದೇ ರೀತಿಯ ವ್ಯಂಗ್ಯ, ಸೆಡವು ಮುಂತಾದ ಸಮಾಜಮುಖಿ ಪರಿಕರಗಳೊಂದಿಗೆ ಓದುಗನನ್ನು ಹೊಸದೊಂದು ಅಷ್ಟೊಂದು ಪರಿಚಿತವಲ್ಲದ ಲೋಕದೊಳಗೆ ನಡೆದಾಡಿಸುತ್ತದೆ.ಇಲ್ಲಿ ಕೆಳಸ್ತರದ ಬದುಕೊಂದು ಆಧುನಿಕತೆಯ ದೆಸೆಯಿಂದಾದ ಪಲ್ಲಟಗಳಿಂದಾಗಿ ಚಡಪಡಿಸುವ ಹಾಗೂ ಅನಿವಾರ್ಯವಾಗಿ ತಮ್ಮ ಸಾಂಪ್ರದಾಯಿಕ ಜ್ಞಾನವನ್ನು ಅವಕಾಶವಾದಿತನಕ್ಕೆ ಪರಿವರ್ತಿಸಿಕೊಳ್ಳಬೇಕಾದ ಹೊತ್ತಿನಲ್ಲಿ ಆ ಬದುಕು ತೋರುವ ಸಂಯಮ, ಸಹಕಾರಗಳೆದುರು ಆಧುನಿಕತೆ ಹಾಗೂ ಸರಕಾರದ ಯೋಜನೆಗಳು ಏದುಸಿರು ಬಿಡುತ್ತವೆ.ಇಲ್ಲಿ ಬರುವ ಸರಕಾರಿ ಯೋಜನೆಗಳು, ಅವುಗಳನ್ನು ‘ಗುಳುಂ’ಮಾಡಿಬಿಡುವ ಭ್ರಷ್ಟ ಮನಸ್ಸುಗಳಿಗೆ ಬೇಕಿರುವ ನೈತಿಕ ಚಿಕಿತ್ಸೆಯ ಆಶಯ ಹಾಗೂ ನಶಿಸಿ ಹೋಗುತ್ತಿರುವ ದೇಸೀ ಜ್ಞಾನದ ಬಗೆಗಿನ ಕಾಳಜಿ ಕಥೆಯ ಹೆಚ್ಚುಗಾರಿಕೆ.

ಮೂರನೆಯ ಬಹುಮಾನ ಪಡೆದ ಕಥೆ ‘ಚಿವುಟಿದಷ್ಟೂ ಚಿಗುರು’, ಆಧುನಿಕ ಬದುಕಿನಲ್ಲಿ ಛಿದ್ರಗೊಳ್ಳುತ್ತಿರುವ ಸಂಬಂಧಗಳು ಹಾಗೂ ಅವುಗಳು ಉಂಟು ಮಾಡಬಹುದಾದ ಪರಿಣಾಮಗಳನ್ನು ಹಿಡಿದಿಡಲೆತ್ನಿಸುತ್ತದೆ.ಸಧ್ಯದ ಸ್ಥಿತಿಯಲ್ಲಿ ಸರ್ವೇ ಸಾಮಾನ್ಯವಾಗುತ್ತಿರುವ, ಅದರಲ್ಲೂ ಮಹಾನಗರಗಳಲ್ಲಿ ಇದೊಂದು ಮಹಾ ಸಮಸ್ಯೆಯೇ ಆಗುತ್ತಿರುವಾಗ ಇದರ ವಸ್ತುವೇ ಈ ಕಥೆಗೊಂದು ಸಾರ್ವತ್ರಿಕ ಗುಣ ಒದಗಿಸಿ ಕೊಟ್ಟಿದೆ.ಕೊಂಚ ಸೆಂಟಿಮೆಂಟಲ್ ಅನಿಸಬಹುದಾಗಿದ್ದಂಥ ಹಾಗೂ ಕೊಂಚ ಯಾಮಾರಿದ್ದರೂ ಒಂದು ತೀರಾ ಸಾಮಾನ್ಯ ಕಥೆಯಾಗಿ ಬಿಡಬಹುದಾಗ್ಗಿದ್ದಂಥ ವಸ್ತುವನ್ನು ಕಥೆಗಾರರು ನೀಭಾಯಿಸಿರುವ ರೀತಿಯಿಂದಾಗಿ ಆಲೋಚನೆಗೆ ಹಚ್ಚ ಬಲ್ಲಂಥ ಕಥೆಯಾಗಿ ರೂಪುಗೊಂಡಿದೆ.

ಮೆಚ್ಚಿಗೆ ಪಡೆದ ಕಥೆಗಳಲ್ಲಿ ‘ಹೇ ರಾಮ್’ ತನ್ನ ವಿಡಂಬನಾತ್ಮಕ ಗುಣದಿಂದಾಗಿ ಪರಿಣಾಮಕಾರಿಯಾಗಿದೆ.ಗಾಂಧಿ ಜಯಂತಿಯ ಆಚರಣೆಯ ಕ್ರಮದಲ್ಲಿರುವ ಕೃತಕತೆ, ಪರಸ್ಪರ ಅಪನಂಬಿಕೆ, ತೋರಿಕೆಯ ಗುಣ, ಇಡೀ ಗಾಂಧಿ ತತ್ವಗಳನ್ನು ನಗೆಪಾಟಲಿಗೀಡು ಮಾಡುವಂಥ ವಾತಾವರಣವನ್ನು ಕಟ್ಟಿಕೊಟ್ಟಿದೆ.ಇಲ್ಲಿ ಪತ್ರೆಪ್ಪ ಎಲ್ಲಾ ಜನಸಾಮಾನ್ಯನ ಪ್ರತಿನಿಧಿಯಂತೆ ಕಾಣುತ್ತಾ, ಭ್ರಷ್ಟ ವ್ಯವಸ್ಥೆಯ ಎದುರು ಕುಸಿದು ಹೋಗುವ ಕ್ರಿಯೆಯ ಸಂಕೇತವಾಗಿದ್ದಾನೆ.

ಮತ್ತೊಂದು ಮೆಚ್ಚಿಗೆ ಪಡೆದ ‘ಇಸುಮುಳ್ಳು’ ಒಂದು ನೀಳ್ಗತೆ.ಆಡು ಭಾಷೆ ಮತ್ತು ಗ್ರಾಂಥಿಕ ಭಾಷೆಗಳನ್ನು ಬಳಸಿಕೊಂಡು ಹೇಳಲೆತ್ನಿಸುವ ಹಳ್ಳಿಯ ಕುಟುಂಬವೊಂದರ ಸಂಪ್ರದಾಯ, ನಂಬಿಕೆ, ಹಾದರ, ಅಜ್ಜ ಮೊಮ್ಮಗನ ನಡುವಿನ ಆತ್ಮೀಯ ಸಂಬಂಧದೊಂದಿಗೆ ಅಲ್ಲಿನ ಪರಿಸರವೂ ಪೂರಕವಾಗಿ ಒದಗಿ ಬಂದಿರುವುದರಿಂದ ಇದು ಕಾದಂಬರಿಯ ಭಾಗವೊಂದರಂತೆ ಓದಿಸಿಕೊಳ್ಳುತ್ತದೆ. ಮಾನವೀಯ ಸಂಬಂಧಗಳ ಸಂಕೀರ್ಣತೆಯನ್ನು ಕಥೆಯಾಗಿಸುವ ಕ್ರಮದ ತುಡಿತವೇ ಇದರ ಗಾತ್ರವನ್ನು ಸಹ್ಯಗೊಳಿಸಿದೆ.

ಇನ್ನು ಕೊನೆಯ ಮಾತು : ನನ್ನನ್ನು ಇಂಥದ್ದೊಂದು ಕಥನ ಪರಂಪರೆಗೆ ಮುಖಾಮುಖಿಯಾಗಲು ಅನುವು ಮಾಡಿಕೊಟ್ಟ ಗೆಳೆಯರಾದ ಶ್ರೀಪಾದ ಭಟ್ ಹಾಗೂ ರವಿಕೃಷ್ಣಾರೆಡ್ಡಿಯವರಿಗೆ ವಂದನೆಗಳು.