“ಪೊಳ್ಳು ಪುರಾಣವನ್ನು ನಂಬಿ ನಿಜ ಹರಿಶ್ಚಂದ್ರನಾದ ಗಾಂಧಿಯೆಂಬ ಗಾರುಡಿ….”


 -ಎಚ್.ಜಯಪ್ರಕಾಶ್ ಶೆಟ್ಟಿ


ಮೊನ್ನೆ ಮೊನ್ನೆಯಷ್ಟೇ ಯಾಕೋ ಏನೋ ನಮ್ಮ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರು ಕೋಲಾರದಿಂದ ಅಹವಾಲು ಹೇಳಿಕೊಂಡು ಬಂದ ಶಿಕ್ಷಕರ ಸಾಮಾನ್ಯಜ್ಞಾನ ಪರೀಕ್ಷೆಗೆ ನಿಂತುಬಿಟ್ಟಿದ್ದರು. ಆ ಶಿಕ್ಷಕರು ಸಚಿವರೆದುರು ಹೋಮ್ ವರ್ಕ್kimmane-ratnakar ಒಪ್ಪಿಸಬೇಕಾದ ಮಕ್ಕಳಂತೆ ನಿಂತಿದ್ದರು. ಮಾಧ್ಯಮದ ಕ್ಯಾಮರಾದೆದುರಿಗೇ ಅವರುಗಳನ್ನು ಪ್ರಶ್ನಿಸಿದ ಸಚಿವರು ತಮ್ಮ ತಲೆ ತಲೆ ಚಚ್ಚಿಕೊಳ್ಳುತ್ತಿದ್ದರು. ‘ಅನ್ ಟು ದ ಲಾಸ್ಟ್’ ಕೃತಿಯ ಕುರಿತ ಸಚಿವರ ಪ್ರಶ್ನೆಗೆ ಶಿಕ್ಷಕರು ಉತ್ತರಿಸಲಾರದೆ ತಡವರಿಸಿದರು. ಸಜ್ಜನ ಸಚಿವ ಕಿಮ್ಮನೆ ತಾವು ಮಾಡುತ್ತಿರುವುದು ಸರಿಯಾದುದಲ್ಲ ಎನ್ನಿಸಿ ಅಲ್ಲಿಗೇ ನಿಲ್ಲಿಸಲೂ ಇಲ್ಲ. ಅದೇ ಕ್ಯಾಮರಾದೆದುರೇ ಗಾಂಧೀಜಿ ಜನ್ಮದಿನವನ್ನಾದರೂ ಹೇಳಿ ಎಂದು ಮತ್ತೆ ಪ್ರಶ್ನೆ ಎಸೆದರು. ಪ್ರಶ್ನೆ, ಪರಿಸರ, ಕ್ಯಾಮರಾ ಯಾವುದನ್ನೂ ನಿರೀಕ್ಷಿಸದೆ ಕಕ್ಕಾಬಿಕ್ಕಿಯಾದ ಮೇಷ್ಟ್ರುಗಳು ಉತ್ತರಿಸಲಿಲ್ಲ. ತಡವರಿಸತೊಡಗಿದರು. ಅಧ್ಯಾಪಕರ ಅಸಹಾಯಕತೆಯ ನಡುವೆ ಇಲಾಖೆಯ ದುಸ್ಥಿತಿಗೆ ಬೇಸ್ತುಬಿದ್ದಂತೆ ಕಿಮ್ಮನೆ ಸುಮ್ಮನೆ ತಲೆಮೇಲೆ ಕೈಹೊತ್ತು ಕುಳಿತರು. ಆದರೆ ಹೀಗೆ ಸಂಭವಿಸಿದ ಅಚಾನಕ್ ಗಾಂಧಿ ಕುರಿತ ಈ ಕ್ವಿಝ್ ಬ್ರೇಕಿಂಗ್ ನ್ಯೂಸ್ ಎಂಬ ಬಕಧ್ಯಾನದಲ್ಲೇ ಕಾದು ಕೂರುವ ಮಾಧ್ಯಮಗಳೆಂಬ ರಣಹದ್ದುಗಳಿಗೆ ಭರಪೂರ ಆಹಾರವೊದಗಿಸಿತ್ತು. ಸಚಿವರು ಕೇಳುವ ಪ್ರಶ್ನೆ, ಅದಕ್ಕೆ ಉತ್ತರಿಸಲಾರದ ಅಧ್ಯಾಪಕರ ಅಸಹಾಯಕತೆ, ತಲೆಮೇಲೆ ಕೈಹೊತ್ತು ಕುಳಿತ ಸಚಿವರ ಹತಾಶೆಯ ಭಂಗಿಗಳೆಲ್ಲವೂ ‘ಗಾಂಧೀ’ ಎಂಬ ವಿಸ್ಮಯ’ವೇ ಕಣ್ಮರೆಯಾದ ಮಾಧ್ಯಮಗಳ ಲೋಕವಿಸ್ಮಯದ ಬ್ರೇಕಿಂಗ್ ನ್ಯೂಸ್ ಎಂಬ ಟಿ ಆರ್ ಪಿ ಸರಕುಗಳಾದುವು! ಈ ಹರಾಜಿನ ಸರದಿಯನ್ನು ಅವು ಇಲ್ಲಿಗೇ ನಿಲ್ಲಿಸಲಿಲ್ಲ. ಸಚಿವರೇ ಉದ್ಘಾಟಿಸಿದ ಕ್ವಿಝ್ ನ ಸರಣಿ ಕಾರ್ಯಕ್ರಮವಾಗಿಸಿಕೊಂಡ ಮಾಧ್ಯಮಗಳು ಮರುದಿನ ಬೀದಿಗಿಳಿದಿದ್ದವು! ಬೀದಿ ಬೀದಿ ಸುತ್ತಿ ಅಧ್ಯಾಪಕರೆನಿಸಿಕೊಂಡವರನ್ನು ಬೆನ್ನು ಹತ್ತಿ ಬೇಟೆಯಾಡಿದ್ದುವು. ಕಂಡಕಂಡವರಿಗೆ ಗಾಂಧಿ ಹುಟ್ಟಿದ ಇಸವಿ, ವಿವೇಕಾನಂದರ ಜನ್ಮದಿನದ ಹಾದಿಬದಿಯ ಕ್ವಿಝ್ ನಡೆಸಿ ಸರ್ಕಾರಿ ಶಾಲೆಯ ಅಧ್ಯಾಪಕರ ತಲೆ ಖಾಲಿಯೆಂಬ ಪ್ರಮಾಣಪತ್ರ ಉತ್ಪಾದಿಸಿದ್ದುವು. ಹೀಗೆ ಈ ದೇಶದಿಂದ ಗಾಂಧಿ ಹಠಾವೋಗಾಗಿ ಅಪಾರ ನಿರೀಕ್ಷೆಯಲ್ಲಿರುವವರಿಗೆ ಪರೋಕ್ಷ ಸಮಾಧಾನ ಕೊಟ್ಟಿದ್ದುವು. ಸರ್ಕಾರಿ ಶಾಲೆಗಳ ಮೇಲೆ ಮುಗಿಬಿದ್ದು ಯುದ್ಧ ಸಾರಿರುವ ಖಾಸಗಿ ಶಿಕ್ಷಣೋದ್ಯಮಿಗಳಿಗೆ ಭರಪೂರ ಖುಷಿಕೊಟ್ಟಿದ್ದುವು. ಬಡ ಪೋಷಕರೆದೆಯಲ್ಲಿ ‘ಅಯ್ಯೋ… ತಪ್ಪು ಮಾಡಿಬಿಟ್ಟೆವು’ ಎನ್ನುವ ನರಳಾಟ ಹುಟ್ಟಿಸಿದ್ದವು. ಇಷ್ಟೆಲ್ಲಕ್ಕೂ ಅಂದು ‘ಗಾಂಧೀ’ ಸರಕಾಗಿ ಹೋಗಿದ್ದರು.

ಗಾಂಧಿಯ ವ್ಯಕ್ತಿತ್ವದಲ್ಲೇ ಹೊಸ ಪ್ರಶ್ನಾವಳಿಗೆ ಪಠ್ಯವಾಗುವ, ನೆಪವಾಗುವ, ಪ್ರಸಂಗವಾಗುವ ಒಂದುkannada-school ಗುಣವಿರುವುದಾಗಿ ಶಿವವಿಶ್ವನಾಥನ್ ಗುರುತಿಸುತ್ತಾರೆ. ಆದರೆ ಗಾಂಧಿಯನ್ನು ಹೀಗೆ ಪಠ್ಯವಾಗಿಸಿಕೊಳ್ಳುವ ವೇಳೆ ನಮಗೆ “ಶಿಕ್ಷಣವೆಂದರೆ ಬರೀ ಅಕ್ಷರವೆಂಬ ಭ್ರಾಂತಿಯಾಗಕೂಡದು” ಎಂದ ಗಾಂಧಿಯ ಮಾತು ತಿಳಿದರಬೇಕು. ಹಾಗೆಯೇ ಶಿಕ್ಷಣವೆಂದರೆ ಗಾಂಧಿಗೆ ನೆನಪಿಟ್ಟುಕೊಂಡು ಪಟ್ಟನೆ ಉತ್ತರಿಸಿಬಿಡುವ ನೆನಪಿನ ರೋಮಾಂಚನವಲ್ಲ. ಅದು ಆತ್ಮಗೌರವದ ಸ್ವಾಯತ್ತ ಬದುಕಿಗೆ ಸಂಬಂಧಿಸಿದ್ದಾಗಿತ್ತು ಎಂಬ ಅರಿವಿರಬೇಕು. ಈ ಕ್ವಿಝ್ ಗೆ ಸ್ಮೃತಿ ಪರಂಪರೆಯವರ ಭಜನೆಯಿಂದಾಚೆಗಿನ ಶಕ್ತಿಯಿಲ್ಲ. ಹೀಗೆ ಪ್ರಶ್ನಿಸುವ ವೇಳೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ಗ್ರಂಥಾಲಯಗಳಲ್ಲಿ ಎಂತಹ ಪುಸ್ತಕಗಳು ತುಂಬಿಕೊಳ್ಳುತ್ತಿವೆ? ಅಲ್ಲಿ ಗಾಂಧಿ ಚಿಂತನೆಗೆ ಪೂರಕವಾದ ಎಷ್ಟು ಪುಸ್ತಕಗಳು ಪೂರೈಕೆಗೊಳ್ಳುತ್ತಿವೆ? ಅಲ್ಲಿಗೆ ಎಂತಹ ಪುಸ್ತಕಗಳು ತಲುಪಿವೆ? ಗಾಂಧಿ ಕುರಿತ ಪಠ್ಯಗಳ ಬೋಧನೆಗೆ ಇಂದಿಗೂ ಏಳುತ್ತಿರುವ ಪ್ರತಿರೋಧದ ನೆಲೆಗಳ ಹಿಂದಿನ ಕಾರಣ ಮತ್ತು ಕೈಗಳಾವುವು? ಬೀದಿ ಬೀದಿಯಲ್ಲಿ ಮೈಕ್ ಹಿಡಿದು ಕ್ವಿಝ್ ಸರಣಿ ನಡೆಸುವ ಬ್ರಹಸ್ಪತಿಗಳು ಈ ಪ್ರಶ್ನೆಗಳನ್ನು ತಮಗೆ ತಾವೇ ಕೇಳಿಕೊಳ್ಳಬೇಕಿದೆ. ಒಬ್ಬ ಮಂತ್ರಿಯಾಗಿ ಕಿಮ್ಮನೆಯವರಿಗೆ ಹಾಗೂ ಪ್ರಜಾಪ್ರಭುತ್ವದ ಎಚ್ಚರದ ಕಣ್ಣಾಗಿ ಮಾಧ್ಯಮಗಳಿಗೆ ಇವೆಲ್ಲವುಗಳ ಕುರಿತ ಪ್ರ್ರಾಂಜಲವಾದ ಆತ್ಮನಿರೀಕ್ಷಣೆಯೂ ಇದ್ದಿದ್ದರೆ ಒಳ್ಳೆಯದಿತ್ತು. ಯಾಕೆಂದರೆ ಗಾಂಧಿ ತನ್ನ ಬದುಕನ್ನೇ ‘ಸತ್ಯದೊಂದಿಗಿನ ಪ್ರಯೋಗ’ ಎಂದವರು. ‘ದೇವರನ್ನು ಸತ್ಯವೆನ್ನದೆ, ಸತ್ಯವನ್ನೇ ದೇವರು’ ಎಂದವರು. ಪೊಳ್ಳು ಪುರಾಣವನ್ನು ನಂಬಿ ನಿಜ ಹರಿಶ್ಚಂದ್ರನಾದ ಗಾರುಡಿಯವರು. ಈ ಪ್ರಶ್ನೆ ಮತ್ತು ಉತ್ತರಗಳು ಏನೇ ಇರಲಿ, ಗಾಂಧಿ ಮೇಲಿನ ಪ್ರೀತಿಯ ಉಬ್ಬರದಲ್ಲಿ ಕಿಮ್ಮನೆಯವರು ಪರೋಕ್ಷವಾಗಿ ಪ್ರಾಥಮಿಕಶಾಲೆಯ ಶಿಕ್ಷಕರ ಮೆದುಳಿಂದ ಗಾಂಧೀ ಗುರುತು ಖಾಲಿಯಾದುದನ್ನು ತೋರಲು ಮಾಧ್ಯಮಗಳಿಗೆ ಅನುವು ಮಾಡಿಕೊಟ್ಟರೆಂಬುದು ಸುಳ್ಳಲ್ಲ. ಗಾಂಧಿ ಇದ್ದಿದ್ದರೆ ನಾಥೂರಾಮನ ಗುಂಡಿಗೆ ನರಳಿದಂತೆ ಇನ್ನೊಮ್ಮೆ ಖಂಡಿತವಾಗಿಯೂ ನರಳುತ್ತಿದ್ದರು. ಯಾಕೆಂದರೆ ಆತ ಮಹಾತ್ಮನಲ್ಲವೆ?

ಗಾಂಧಿ ಹುಟ್ಟಿದ ಕುಂಡಲಿಗಿಂತ ಗಾಂಧಿ ಎಂದರೇನು? ಕ್ವಿಝ್ ನ ಸರಕಾಗಿಯೋ, 200px-MKGandhi[1]ಸಂತನಾಗಿಯೋ, ದೇಶವನ್ನು ಒಡೆದ ಅಪರಾಧಿಯಾಗಿಯೋ ತುಂಡಾಗಿಸಿಕೊಂಡು ಬಳಕೆಗೆ ದಕ್ಕಿಸಿಕೊಳ್ಳುತ್ತಲೇ ಬಂದ ಈ ಗಾಂಧಿ ಎಂಬ ಗುರುತು ಮತ್ತೆ ಮತ್ತೆ ನಮ್ಮನ್ನು ಯಾಕಾದರೂ ಕಾಡುತ್ತದೆ? ಇದು ಕೇವಲ ಭಾರತೀಯರಿಗಷ್ಟೇ ಎದುರಾಗಬಹುದಾದ ಪ್ರಶ್ನೆಯಲ್ಲ. ಜಗತ್ತಿಗೆ ಎದುರಾಗಬಹುದಾದ ಪ್ರಶ್ನೆ. ಯಾಕೆಂದರೆ, ನೆಟಾಲಿನ ರಾಜಧಾನಿಯಾದ ಮೆರಿಟ್ಸ್ ಬರ್ಗ್ ನಲ್ಲಿ  ರೈಲ್ವೇ ಪ್ಲಾಟ್ ಫಾರಂನಲ್ಲಿ ಚಲ್ಲಾಪಿಲ್ಲಿಯಾದ ಹಾಸಿಗೆ ಪೆಟ್ಟಿಗೆ ಕಾಗದಗಳ ನಡುವೆ!! (ಸವಿತಾ ನಾಗಭೂಷಣ, ಸಕಾಲ ಅಕ್ಟೋಬರ್2007, ಪು.29) ಹುಟ್ಟಿದ ಈ ಗಾಂಧಿ ಮತ್ತೆ ಸಾಯಲೇ ಇಲ್ಲ!? ಆದರೆ ಹೀಗೆ, “ಒಂದೆ ಹಿಡಿಮೂಳೆ ಚಕ್ಕಳ: ಅದಕೆ ಸುರಿ ಮೂರುನಾಲ್ಕೋ ಚಮಚ ರಕ್ತ-ಮಾಂಸ-ಜೊತೆಗಿರಿಸು ಪಾಪಮಂ ನೆರೆತೊರೆದ ಕಡಲಿನಾಳದ ಮನಸ, ನೆರೆಬಂದ ಕಡಲಿನೊಲು ಪ್ರೇಮಮಂ ತುಂಬಿದೆದೆಯ, ಹಚ್ಚು- ಮೊರಕಿವಿಯೆರಡ; ಎರಡು ಪಿಳಿ ಪಿಳಿ ಕಣ್ಣ, ಹಾಲು ಹಸುಳೆಯ ಮಂದಹಾಸವನು ಲೇಪಿಸದಕೆ, ……… ಚಿಂದಿಯಂ ಸುತ್ತಿ, ಸೆಳೆಬೊಂಬಿನಾಲಂಬನವನಿತ್ತು ಬಡಿಸು ತಾ! ಅವನೆ ಕಾಣ್! ಲೋಕತಾರಕ! ನಮ್ಮ ಬಾಪೂ!” (ಟಿ.ಪಿ.ಕೈಲಾಸಂ, ಸಕಾಲ, ಅಕ್ಟೋಬರ್2007, ಪು.5) ಎಂದು ಬೇಕಾದಂತೆಲ್ಲಾ ರೇಖೆಯೆಳೆದು ಕಟ್ಟಿಕೊಳ್ಳಬಲ್ಲ ಸರಿಯಲಾರದ ಸಂತನಾಗಿ ಗಾಂಧಿ ನಮ್ಮೊಳಗೆ ಉಳಿದುದಾದರೂ ಹೇಗೆ? ರಕ್ತಮಾಂಸದ ಈ ರೂಹು ಮಾನವಪ್ರಪಂಚದಲ್ಲಿ ನಡೆದಾಡಿತ್ತೇ ಎಂಬ ವಿಜ್ಞಾನಿ ಐನ್ಸ್ ಸ್ಟಿನ್ ಉದ್ಘಾರಕ್ಕೆ ಕಾರಣವಾದ ನಿಜ ಅದ್ಭುತವೊಂದು ನಮ್ಮ ನಡುವೆಯೇ ಬಾಳಿ ಮತ್ತೀಗ ಬದುಕುತ್ತಲೇ ಉಳಿದ ಸೋಜಿಗವಾದರೂ ಹೇಗೆ ಸಾಧ್ಯವಾಯಿತು? ಕೇವಲ ಅಚ್ಚರಿ, ಅಮೂರ್ತವಷ್ಟೇ ಆಗದೆ, ಅದನ್ನೂ ಮೀರಿ ಮೂರ್ತವೂ ಮನಸ್ಸಾಕ್ಷಿಯ ಭಾಗವೂ ಆದ ನಿಜದ ಹರಿಶ್ಚಂದ್ರನಾಗಿ ಬದುಕಿ ಬಿಟ್ಟುಹೋದ ಕುರುಹುಗಳ ಸಮುಚ್ಚಯವಾದುದು ಹೇಗೆ? ಎದೆಯಾಳದ ತಂಪಿಗೆ ಕೆಂಪಾಗಿ ಕುದುರಲಾಗದೆ ಮುದಿಯೆದೆಯನ್ನು ಸುಟ್ಟು ತೂರಿದ ಆ ಬಿಸಿಗುಂಡು ಇಂದಿಗೂ ಅಸಹಾಯಕತೆಯಲ್ಲಿ ಈ ಸತ್ಯದ ಸಮಾಧಿಯೆದುರು ಯಾಕೆ ಸಲಾಮುಹಾಕಿ ಸೋಲು ಒಪ್ಪಿಕೊಳ್ಳುತ್ತಿದೆ? ನಿಜಕ್ಕೂ ಗಾಂಧಿ ಒಂದು ಪ್ರಶ್ನೆ. ಅದೊಂದು ಉತ್ತರವಲ್ಲ.

ಗಾಂಧಿ ಜಗತ್ತಿಗೊಂದು ರೋಮಾಂಚನ ಎಂಬುದು ನಿಜ. ಆದರೆ ಅದು ಭಾರತದ ಮಣ್ಣಿಗೆ ಸಹಜವೇ. ಯಾಕೆಂದರೆ ಇದು ಬುದ್ಧ, ಬಸವ, ಜ್ಯೋತಿಬಾಪುಲೆ, ಅಂಬೇಡ್ಕರ್ ಅವರುಗಳನ್ನು ಹೆತ್ತ ಮಣ್ಣು. ಈ ಮಣ್ಣಿನ ಸಹಜ ಪ್ರಸವದ ಕುಡಿ ಗಾಂಧಿ. ಮನಸಾಕ್ಷಿಯಿಲ್ಲದ ವಂಚನೆಯ ಹುಲುಸಂತಾನದ ಸಾಲು ಸಾಲು ಓಳಿಯ ನಡುವೆ ಈ ನೆಲ ಹೆತ್ತ ದೀಪದ ಬುಡ್ಡಿಗಳಿವು. ಅದರಲ್ಲಿ ಗಾಂಧಿಯಾದರೋ ಬಂದ ಬಂದವರಿಗೆಲ್ಲಾ ಕೊಟ್ಟು ಚಲ್ಲಿ ಸೂಸುವ ತನ್ನ ಮುಗುಳ್ನಗೆಯಂತೆ ಕಾಲಕಾಲಕ್ಕೆ ಲೋಕಕ್ಕೆ ಹೇಳಬೇಕಾದುದನ್ನು ದಾಖಲಿಸುತ್ತಾ ಹೋದವರು. ಕಾಲಕಾಲಕ್ಕೆ ತನ್ನನ್ನೊಡ್ಡಿಕೊಂಡ ಸತ್ಯದ ಶೋಧದಲ್ಲಿ ಕಂಡುದಕ್ಕೆ ಅನುಸಾರವಾಗಿ ಪರಿವರ್ತಿತವಾಗುತ್ತಾ ಹೋದವರು. ತಾನು ಹೇಳಿದ್ದನ್ನೇ ಬದುಕಲೆತ್ನಿಸಿದವರು. ಬದುಕಲಾರದ್ದನ್ನು ಹೇಳುವಲ್ಲಿ ಅಳುಕಿದವರು. ಪರಮ ಧಾರ್ಮಿಕನಾದ ಗಾಂಧಿ ಧರ್ಮವನ್ನು ಯಾವುದೇ ನಿರ್ದಿಷ್ಟ ಮತಕ್ಕೆ ಸಮವೆಂದು ಪರಿಗಣಿಸಿದವರಲ್ಲ. ಹಾಗಾಗಿ ಅವರಿಗೆ ಏಕಕಾಲದಲ್ಲಿ ಹಿಂದುವೂ, ಮುಸ್ಲಿಮನೂ, ಪಾರಸಿಯೂ, ಕ್ರಿಶ್ಚಿಯನನೂ ಆಗುವುದು ಅಸಾಧ್ಯವೆನಿಸಲೇ ಇಲ್ಲ. ಹೀಗೆ ಕ್ರಿಯಾಶೀಲತೆ ಮತ್ತು ಪ್ರತಿರೋಧದ ಚಿರಂತನ ರೂಪಕದಂತೆ ಉಳಿದು ಹೋದ ಗಾಂಧಿಯನ್ನೇ ತನ್ನೊಳಗೆ ಆವಾಹಿಸಿಕೊಂಡ ‘ಸೆಲೆಕ್ಟೆಡ್ ರೈಟಿಂಗ್ಸ್ ಆಫ್ ಮಹಾತ್ಮಾಗಾಂಧಿ’ ಪುಸ್ತಕದ ಸಂಪಾದಕ ರೋನಾಲ್ಡ್ ಡಂಕನ್, ತಾಜ್ ಮಹಲನ್ನು ನೋಡಬಂದವರು ಅಪ್ಪಿತಪ್ಪಿಯೂ ನೋಡದ ನಿಜವಾದ ಭಾರತವನ್ನು ಗಾಂಧೀ ತನಗೆ ಪರಿಚಯಿಸಿದ ಬಗೆಯನ್ನು ಕುರಿತು ಬರೆದ ವಿವರಗಳಂತೂ ಗಾಂಧಿಯೊಳಗಿನ ತಾಯ್ತನದ ಮಹಾರೂಪಕವನ್ನೇ ಕಟ್ಟಿಕೊಟ್ಟಂತಿದೆ (ವಿವರಗಳಿಗೆ 26-1-14ರ ಪ್ರಜಾವಾಣಿ ಸಾಪ್ತಾಹಿಕದ ಪು.2ನ್ನು ನೋಡಿ). ಹೀಗಾಗಿಯೇ ಗಾಂಧಿಯನ್ನು ಕುರಿತು ಬರೆಯುತ್ತಾ, “ಗಾಂಧೀ ಪ್ರಭೆ ಇರುವುದು ಅವರೊಬ್ಬ ಸಿದ್ಧಾಂತಿ ಎಂಬುದರಲ್ಲಿ ಅಲ್ಲ. ಅವರ ಪ್ರಶ್ನೆಬೋಧೆಗಳಲ್ಲಿ ಅಲ್ಲ. ನುಸಿ ಗುಳಿಗೆಗಳ ಮಧ್ಯೆ ಮ್ಯೂಸಿಯಂನಲ್ಲಿ ಸಂರಕ್ಷಿಸಿ ಇಟ್ಟ ಚಿಂತನೆಗಳಲ್ಲೂ ಅಲ್ಲ. ಯಾವೊತ್ತೂ ಗಾಂಧಿ ಒಂದು ಪ್ರಕ್ರಿಯೆ. ಒಂದು ಪ್ರಯೋಗ. ರಂಗದ ಒಂದು ತುಣುಕು, ಶಾಶ್ವತ ಚರ್ಚೆಯ ಒಂದು ಭಾಗ……..ಗಾಂಧಿ ಒಂದು ಪ್ರಭುತ್ವ ಅಲ್ಲ. ನೈತಿಕತೆ ಹಾಗೂ ರಾಜಕೀಯದ ನಡುವೆ ಹೊಸ ಸಂಬಂಧವನ್ನು ಕಲ್ಪಿಸುವ ಶಾಶ್ವತ ಪ್ರಕ್ರಿಯೆ” (26-1-14ರ ಪ್ರಜಾವಾಣಿ ಸಾಪ್ತಾಹಿಕ ಪುರವಣಿ, ಪು.1) ಎಂದೆನ್ನುವ ಶಿವವಿಶ್ವನಾಥನ್ ಅವರ ಮಾತಿಗೊಂದು ವಿಶೇಷ ಅರ್ಥವಿದೆ. ಈ ಪ್ರಕ್ರಿಯಾತ್ಮಕ ಗುಣದಿಂದಾಗಿಯೇ ಗಾಂಧಿಯ ಬದುಕಿಗೊಂದು ಚೌಕಟ್ಟು ಹಾಕುವುದು ಅಸಾಧ್ಯವೂ ಆಗಿದೆ. ಈ ಮಾತು ಗಾಂಧಿ ಹುಡುಕುತ್ತಾ ಹೋದ ಸತ್ಯದ ಬಗೆಗೂ, ಸ್ವಾತಂತ್ರ್ಯದ ಬಗೆಗೂ ಅನ್ವಯವಾಗುತ್ತದೆ ಎಂಬುದನ್ನು ಮರೆಯಬಾರದು.

ಗಾಂಧಿ ನೋಡಲೆಷ್ಟು ಸರಳವೋ ಅಷ್ಟೇ ನಿಷ್ಟುರಿ. ಆದರೆ ಡಿ.ಆರ್.ನಾಗರಾಜ ಅವರು ಗುರುತಿಸುವಂತೆ, mahatma_gandhi_artworkಗಾಂಧಿ ಎಂದೂ ವೀರ್ಯವತ್ತಾದ ಪರಿಭಾಷೆಯಲ್ಲಿ ಮಾತನಾಡಲಿಲ್ಲ (ಸಾಹಿತ್ಯಕಥನ, ಪು.258). ‘ಹೆಣ್ಣಿಗತನ’ವನ್ನು ಅಪಮಾನವಾಗಿ ಕಾಣದ ಈ ಅರ್ಧನಾರೀಶ್ವರ ಪ್ರತಿಮೆ ಹೇಡಿತನದ ರೂಪಕವೂ ಅಲ್ಲ. ಈ ಸತ್ವದಿಂದಾಗಿಯೇ ಅವರು ಹೇಡಿಗಳಿಗೆ ಸಾಧ್ಯವಿರದ ‘ಅಹಿಂಸೆ’ಯೆಂಬ ನಿಷ್ಠುರ ಆಯುಧವನ್ನು ಬಳಸಿದವರು. ಇಂತಹ ಗಾಂಧಿ ರೂಪುಗೊಂಡುದು ಎಲ್ಲಿ? ಈ ಪ್ರಶ್ನೆಯ ಉತ್ತರ ಮಾನವಸಂಸ್ಕೃತಿಯ ಆಳಕ್ಕೊಯ್ಯುತ್ತದೆ. ಆಗಂತುಕವಾದ ಕ್ವಿಝ್ ನ ಮೂಲಕ ತೂರಿಬಂದ ಗಾಂಧಿಯನ್ನು ಗಾಂಧೀ ಪ್ರಸ್ತಾಪವೇ ಇರದ ಇನ್ನೊಂದು ಕ್ವಿಝ್ ನ ಮೂಲಕವೇ ವಿವರಿಸಿಕೊಳ್ಳಬಹುದೋ ಏನೋ? ಅದು ಗಿಳಿಪಾಠದ ಕ್ವಿಝ್ ಅಲ್ಲ. ಅಕ್ಷರವೆಂಬ ಬ್ರಾಂತಿಯಲ್ಲಿ ಹುಟ್ಟಿದ್ದೂ ಅಲ್ಲ. ಆದರೆ ಅದು ಮಾನವಸಮಾಜವನ್ನು ನಾಗರಿಕಗೊಳಿಸುವ ಮಹತ್ ಶಕ್ತಿಯಾಗಿ ಗಾಂಧೀ ಕಂಡುಕೊಂಡ ಹೆಣ್ತನದ ಮಾದರಿಗೆ ಸಂಬಂಧಿಸಿದ್ದು. ಆಕೆಯಾದರೋ ಕೈಗೆ ನೂರರ ನೋಟಿಟ್ಟರೆ “ಇದನ್ ನಾನೇನ್ ಮಾಡ್ಲೀ” ಎಂಬಷ್ಟೂ ಎತ್ತರದವಳು. ಗಾಂಧಿ ಅಗತ್ಯಕ್ಕಿಂತ ಹೆಚ್ಚನದನ್ನು ಕಳ್ಳತನಕ್ಕೆ ಸಮವೆಂದರೆ, ಆಕೆ ಹಣದ ಅಗತ್ಯವೇ ಇಲ್ಲದೆ ಬದುಕು ಕಂಡವಳು! (ಕೃಷ್ನಮೂರ್ತಿ ಹನೂರರು ಹೇಳಿದ ಸಿರಿಯಜ್ಜಿಯ ಮಾಹಿತಿಗಳಿವು). ಈಗ ಹೇಳಹೊರಟಿರುವುದು ನೂರರ ತುಂಬು ಬದುಕು ಬದುಕಿದ ಈ ಜಾನಪದದ ಸಿರಿಯಜ್ಜಿ ನಡೆಸಿದ ಕ್ವಿಝ್! ಯಾವ ಮಾಧ್ಯಮಗಳೂ ಅದನ್ನು ಹೊತ್ತು ಮೆರೆಸಲಿಲ್ಲವೆಂಬುದು ಬೇರೆಮಾತು.

ಜಾನಪದಶ್ರೀ ಪ್ರಶಸ್ತಿ ಸಂದಾಯದ ಸಂದರ್ಭದಲ್ಲಿ ಸಿರಿಯಜ್ಜಿ ಮುಖ್ಯಮಂತ್ರಿ ಜೊತೆಗೆ ನಡೆಸಿದ ಸಂಭಾಷಣೆಯ ತುಣುಕನ್ನೇ ನಾನಿಲ್ಲಿ ಕ್ವಿಝ್ ಎಂದಿದ್ದೇನೆ ಅಷ್ಟೆ. ಜಾನಪದ ಸಂಶೋಧಕ ಡಾ.ಕೃಷ್ಣಮೂರ್ತಿ ಹನೂರ ಅವರು ನೆನಪಿಸಿಕೊಂಡಂತೆ ಅಲ್ಲಿ ನಡೆದುದಿಷ್ಟು. ತನಗೆ ಘೋಷಿತವಾದ ಪ್ರಶಸ್ತಿ ನೀಡುವ ವೇದಿಕೆಯಲ್ಲಿ ವ್ಯವಸ್ಥಾಪಕರು ಕೂರಿಸಿದಂತೆ ಅಜ್ಜಿ ಕೂತಿದ್ದರು. ಮುಖ್ಯಮಂತ್ರಿ ಬಂದಾಕ್ಷಣ ವೇದಿಕೆಯಲ್ಲಿದ್ದವರೆಲ್ಲಾ ಎದ್ದು ನಿಂತರು. ಆದರೆ ಅಜ್ಜಿಗೆ ನಿಲ್ಲುವಂತೆ ಪಿಸುಗುಟ್ಟಿದ ಹನೂರರಿಗೆ ಯಾಕೆ ನಿಲ್ಲಬೇಕು? ಎಂದು ಮರುಪ್ರಶ್ನೆ ಹಾಕಿ ಅಜ್ಜಿ ಸುಮ್ಮನೆ ಕೂತೇ ಇತ್ತು. ನಾಡಿನ ಅಧಿಕಾರದ ದೊಡ್ಡ ಗುರುತೇ ಬಂದು ಎದುರು ನಿಂತಾಗಲೂ ಏನೂ ಆಗದವಳಂತೆ ಕುಳಿತೇ ಇತ್ತು! ಅಷ್ಟೇ ಅಲ್ಲ ಮುಖ್ಯಮಂತ್ರಿಯನ್ನು ತನಗೆ ಪರಿಚಯಿಸುತ್ತಿರುವ ಹೊತ್ತು ತನ್ನೆದುರಿನ ಆ ಗಂಡುಜೀವವನ್ನು ನಿರ್ಭಾವುಕವಾಗಿ ನೋಡಿ, “ಯಾರಪ್ಪಾ ನೀನು?” ಎಂದು ಪ್ರಶ್ನಿಸುತ್ತದೆ! ಹುಷಾರಾದ ಮುಖ್ಯಮಂತ್ರಿ ನಿನ್ನ ಮಗ ಕಾಣಜ್ಜಿ ಎಂದು ಉತ್ತರಿಸುತ್ತಾರೆ. ಅದಕ್ಕೆ ಪ್ರತಿಯಾಗಿ, “ನಿನ್ನ ಹೆಂಡ್ರು ಮಕ್ಕಳೆಲ್ಲಾ ಸಂದಾಗಿದ್ದಾರೇನಪಾ?” ಎಂಬುದು ಸಿರಿಯಜ್ಜಿಯ ಇನ್ನೊಂದು ಪ್ರಶ್ನೆ. ಅದಕ್ಕೆ ಮುಖ್ಯಮಂತ್ರಿ “ಹೂಂ ಕಾಣಜ್ಜಿ” ಎಂದು ಉತ್ತರಿಸುತ್ತಾರೆ. ಇದೊಂದು ಅಪರೂಪದ ಕ್ವಿಝ್. ಇಲ್ಲಿರುವುದು ಎಲ್ಲ ಅಧಿಕಾರ, ಅಂತಸ್ತನ್ನೂ ದಾಟಿನಿಂತ ಸಾತ್ವಿಕತೆಗೆ ಸಾಧ್ಯವಾಗುವ ವಿವೇಕ ಮತ್ತು ಧೈರ್ಯ. ಕುರುಹುಗಳಿಗೆ ಲೇಶಮಾತ್ರವೂ ಬೆಲೆಕೊಡದ ಬುದ್ಧಪ್ರಜ್ಞೆಗಷ್ಟೇ ಸಾಧ್ಯವಾಗುವ ಜೀವಕರುಣೆ. ಪ್ರಾಯಶಃ ಗಾಂಧೀ ಒಳಗೆ ಜನಸಮುದಾಯದ ಈ ವಿವೇಕ ಮತ್ತು ಸಾತ್ವಿಕ ಧೈರ್ಯದ ಒಂದು ಪಾಲು ಮಡುಗಟ್ಟಿಕೊಂಡಿದ್ದರಿಂದಲೋ ಏನೋ ಅದಕ್ಕೆ ನೆಲದ ಮೇಲಿನ ರಕ್ತಮಾಂಸದ ಅದ್ಭುತವಾಗಲು ಸಾಧ್ಯವಾಯಿತು. ಗಾಂಧಿ ಸಿನಿಮಾ ನೋಡಿ “ಸಾಯಲು ಮಾನಸಿಕವಾಗಿ ದೃಢವಾಗಿ ಸಿದ್ಧನಾದವನು ಮಾತ್ರ ಗಾಂಧಿಯಾಗಬಲ್ಲ ” (ಎದೆಗೆ ಬಿದ್ದ ಅಕ್ಷರ, ಪು.292) ಎಂಬ ದೇವನೂರ ಮಹಾದೇವರ ಉದ್ಗಾರವು ಈ ಅರ್ಥದಲ್ಲಿ ಸಕಾರಣವಾದುದು. ಅದು ಸಮುದಾಯದ ವಿವೇಕದ ಕೆನೆ. ಪ್ರಾಯಶಃ ಗಾಂಧಿ ಕುರಿತ ಕ್ವಿಝ್ ಮಾಡಿದೋರು ಮತ್ತು ಅದನ್ನು ಹೊತ್ತು ಊರೆಲ್ಲಾ ಮೆರೆಸಿದವರು ಗಾಂಧಿಯೆಂಬ ಗಾರುಡಿಯನ್ನು ರೂಪುಗೊಳಿಸಿದ ಜನವಿವೇಕವನ್ನು ಒಂದಿಷ್ಟು ಇಣುಕಿ ನೋಡುವುದು ಒಳ್ಳೆಯದು. ಅದು ಅಧಿಕಾರವನ್ನೂ ಕೇಡಾಗಿಯೇ ಪರಿಭಾವಿಸುತ್ತದೆ. ಹಾಗಾಗಿ ಮಿಕ್ಕವರು ಸ್ವಾತಂತ್ರ್ಯದ ರುಚಿ ಸವಿಯುತ್ತಾ ಕೆಂಪುಕೋಟೆಯ ಮೇಲೆ ದ್ವಜಹಾರಿಸುವ ಧಾವಂತದಲ್ಲಿದ್ದರೆ, ಗಾಂಧಿಗೆ ಕೋಮುದಳ್ಳುರಿಗೆ ತುತ್ತಾದ ಕಲ್ಕತ್ತಾದ ಬೀದಿಗಳ ಬೆಂಕಿ ಆರಿಸುವುದು ಮುಖ್ಯವಾಗುತ್ತದೆ. ಹೆಂಡಿರು ಮಕ್ಕಳಿಂದ ಕೂಡಿದ ಸುತ್ತಣ ಸಂಸಾರಗಳನ್ನು ಸುಖವಾಗಿಡುವುದು ಆದ್ಯತೆಯಾಗುತ್ತದೆ.

ಆದರೆ ಗಾಂಧಿಯನ್ನು ಪ್ರಶ್ನೆಯಾಗಿಸಿಕೊಂಡು ಹುಡುಕಬೇಕಾದ ನಮಗೆ ಅವರ ಚಿಂತನೆಗಳು ಪ್ರಶ್ನೆಗೆ ಹೊರತಾಗಬೇಕಿಲ್ಲ. ಗಾಂಧಿ ಚಿಂತನೆಯ ಮಿತಿಗಳನ್ನು ನಾವು ಮುಸುಕುಹಾಕಿ ಮರೆಮಾಡಬೇಕಿಲ್ಲ. ಮುಖ್ಯವಾಗಿ ‘ಅಸ್ಪೃಶ್ಯತೆಯನ್ನು ಹಿಂದೂ ಧರ್ಮದ ಪಾಪ’ವೆಂದು ಘೋಷಿಸಿದ ಗಾಂಧಿಯನ್ನು ಅಂಬೇಡ್ಕರ್ ಯಾಕೆ ಅನುಮಾನಿಸಿದರು ಎಂಬುದನ್ನು ನಾವು ಕೆದಕಿ ಕೇಳಿಕೊಳ್ಳುವುದೂ ತಪ್ಪಲ್ಲ. ಅಸ್ಪಶ್ಯರೋ, ಮಹಿಳೆಯರೋ ಇಂದು ಪಡೆದ ಅಲ್ಪ ಬಿಡುಗಡೆಯ ಹಿಂದೆ ಇರುವುದು ಗಾಂಧೀ ಚಿಂತನೆಯೋ, ಸಂವಿಧಾನವೋ ಎನ್ನುವುದನ್ನು ನಾವು ಪ್ರಾಂಜಲವಾಗಿಯೇ ಪ್ರಶ್ನಿಸಿಕೊಳ್ಳಬೇಕಿದೆ. ಯಾಕೆಂದರೆ ಗಾಂಧಿ ಮುಂದಿಟ್ಟ ಟ್ರಸ್ಟಿಶಿಪ್ ಇರಲಿ, ವಿಧವೆಯರ ಮತ್ತು ಮಹಿಳೆಯರ ಪ್ರಶ್ನೆಗೆ ಸಂಬಂಧಿಸಿದ ನಿಲುವುಗಳಿರಲಿ, ವರ್ಣಾಶ್ರಮ, ಜಾತಿಸಂಕರ ಕುರಿತ ನಿಲುವುಗಳಿರಲಿ, ಈ ದೇಶದ ಶತಮಾನಗಳ ಇತಿಹಾಸದ ಸಾಂಸ್ಕೃತಿಕ ಕೇಡುಗಳಿಗೆ ಅಹಿತವಾದವುಗಳು ಅಲ್ಲವೆಂಬುದನ್ನು ನಾವು ಗಮನಿಸಬೇಕಾಗಿದೆ. ಗಾಂಧಿಯನ್ನು ಸಂತನನ್ನಾಗಿಸಲು, ಮೇಕಿಂಗ್ ಮಹಾತ್ಮಕ್ಕೆ ಬೇಕಾದಷ್ಟು ಸ್ಟಫ್ ಆ ಸಣಕಲು ಶರೀರದೊಳಗೇ ಇರುವಂತೆ ಚರಿತ್ರೆಯೂ ಅಪಾರ ಕರುಣೆತೋರಿದೆ. ಆದರೆ ಗಾಂಧಿಯನ್ನು ಸಂತನನ್ನಾಗಿ ಮೂರ್ತೀಕರಿಸಿ ಆ ಚಿಂತನೆಯ ನೆರಳಿನಡಿಗೆ ನಿರಾಳವಾಗುವ ಕೇಡುಗಳನ್ನು ಮರೆತೆವೆಂದರೆ ನಾವು ವಾತಾಪಿಗರ್ಭದಲ್ಲಿ ಜೀರ್ಣವಾಗುವ ಅಪಾಯವಿದೆ. ಇದರ ಅರಿವು ನಮಗಿರಬೇಕು. ಅದನ್ನು ಸ್ವಯಂ ಗಾಂಧಿಯಂತಹ ಗಾಂಧಿಯೇ ತನ್ನ ಕೊನೆಗಾಲದಲ್ಲಿ ಕಂಡುಕೊಂಡಿದ್ದರೋ ಏನೋ? ಯಾಕೆಂದರೆ ವರ್ಣಾಶ್ರಮದ ಬಗೆಗಿನ ತಮ್ಮದೇ ನಿಲುವಿಗೆ ವ್ಯತಿರಿಕ್ತವಾಗಿ ಕೊನೆಗಾಲದಲ್ಲಿ ಅಂತರ್ಜಾತಿ ವಿವಾಹಕ್ಕಷ್ಟೇ ಹೋಗಲು ನಿರ್ಧರಿಸಿದ್ದರು. ಅವರಲ್ಲಿನ ಈ ಯೂಟರ್ನ್ ಗಳು, ಅವರ ಬಗೆಗೆ ಮಾತಾಡದೆ ಉಳಿದ ಸತ್ಯಗಳು ನಮಗಿಂದು ಮುಖ್ಯವಾಗಬೇಕಿದೆ.

ಗಾಂಧಿ-ಅಂಬೇಡ್ಕರ್ ಅವರುಗಳನ್ನು ಎದುರಾಳಿಗಳಾಗಿ ನಿಲ್ಲಿಸಿ, ದೇಶದ ಸಾಂಸ್ಕೃತಿಕ ಕೇಡುಗಳನ್ನು ಮುನ್ನೆಲೆಗೆ ತಂದು ವಿವರಿಸಿಕೊಳ್ಳುವ ಮೂಲಕವೇ Young_Ambedkarಇಬ್ಬರನ್ನೂ ಸಮರಸವಾಗಿ ನಾವು ಬಳಸಿಕೊಳ್ಳಬೇಕಿದೆ. ಇದಕ್ಕೆ ಗಾಂಧೀಜಿಯ ಬದುಕೂ ಇಂಬುಕೊಡುವಂತಿದೆ. ಯಾಕೆಂದರೆ ಗಾಂಧಿ ಬದುಕೇ ಒಂದು ಚಲನಶೀಲ ನಡೆ. ಅದು ಸರಿದಾರಿಯನ್ನು ಹುಡುಕಿ ತಡಕಾಡಿಕೊಂಡು ಹೊರಟಂತೆಯೇ ಇದೆ. ಸರಿದಾರಿಗೆ ತಲುಪಿದರೋ ಅನ್ನುವ ಹೊತ್ತಿಗೆ ಅವರನ್ನು ಹೊಡೆದುರುಳಿಸಲಾಗಿತ್ತು. ಅದು ಭಾರತ-ಪಾಕಿಸ್ತಾನದ ಕಾರಣಕ್ಕಾಗಿಯಷ್ಟೇ ಸಿಡಿದ ಗುಂಡಲ್ಲ. ದೇಶದ ಸಾಂಸ್ಕೃತಿಕ ಕೇಡುಗಳ ವಿರುದ್ಧವಾಗಿ ಕೊನೆಗಾಲದಲ್ಲಿ ಅವರೆತ್ತಿದ ಧ್ವನಿಹಿಚುಕಲು ಮಾಡಿದ ಯತ್ನವಾಗಿತ್ತು. ಅದನ್ನೇ ಬೇಂದ್ರೆ “ಕೊಂದರೋ ಲೋಕಕಾಶೀರ್ವಾದ ಪ್ರಾರ್ಥಿಸುವ ಸಮಯಕ್ಕೆ ಕೊಂದರು!” (ಔದುಂಬರಗಾಥೆ,ಸಂಪುಟ-1,ಪು.444) ಎಂದು ಸೂಚ್ಯವಾಗಿ ಬರೆಯುತ್ತಾರೆ. ಹೀಗೆ ಸತ್ತು ಶಕ್ತಿಯಾದ ಗಾಂಧಿಯನ್ನು ಸಂತನ ಪದವಿಯಲ್ಲಿಟ್ಟು ಮತ್ತೆ ಸಮಾಧಿ ಕಟ್ಟುವ ಬದಲು, ಕ್ವಿಝ್ ಮಾಡಿ ಗಿಳಿಪಾಠವನ್ನು ಪರೀಕ್ಷಿಸುವ ಬದಲು, ಸಮಾಧಿಯಾಳದ ಕೇಡಿನ ದರ್ಶನವನ್ನು ಮಾಡಿಕೊಳ್ಳಬೇಕಿದೆ. ಹಾಗಾಗಿ ಪುರಾಣದ ಪೊಳ್ಳು ಕಳೆದು ನಿಜದ ತಿರುಳಾದ ಗಾಂಧಿಯನ್ನು ಪಡೆಯಲು ನಾವು ಈ ನೆಲದ ಸಾಂಸ್ಕೃತಿಕ ಕೇಡುಗಳ ಜೊತೆಗೆ ಅಪ್ಪಟ ಜೀವಕರುಣೆಯ ಮುಖಾಮುಖಿಯೊಂದನ್ನು ನಡೆಸಲೇಬೇಕಿದೆ.

Leave a Reply

Your email address will not be published. Required fields are marked *