“ಬೆಂಕಿಪಟ್ಣ” ಸಿನೆಮಾಗೆ ಯಶಸ್ಸನ್ನು ಹಾರೈಸುತ್ತ…

ಆತ್ಮೀಯರೇ,

ಕಳೆದ ಮುವ್ವತ್ತೇಳು ದಿನಗಳಿಂದ ಧರಣಿ ಸತ್ಯಾಗ್ರಹ, ಉಪವಾಸ, ಅನಾರೋಗ್ಯ, ಪಕ್ಷದ ಕೆಲಸ, ಮುಂತಾದ ಕಾರಣಗಳಿಂದಾಗಿ ಅನೇಕ ವಿಷಯಗಳ ಕಡೆ ಗಮನ ಹರಿಸಲು ಆಗುತ್ತಿಲ್ಲ. ಸುಡುತ್ತಿರುವ ಮೈ ಮತ್ತು ದೈಹಿಕ ಅಶಕ್ತಿಯ ಕಾರಣಕ್ಕೆ ಕಳೆದ 37 ದಿನಗಳಲ್ಲಿ ಮೊದಲ ದಿನ ಧರಣಿ ಸಭೆಗೆ ಹೋಗಲು ಆಗುತ್ತಿಲ್ಲ. ಆದರೆ, ಇದನ್ನು ಇಂದು ಬರೆಯಲೇಬೇಕೆಂಬ ಕಾರಣಕ್ಕೆಮನೆಯಲ್ಲಿ ಲ್ಯಾಪ್‌ಟಾಪ್ ಹಿಡಿದಿದ್ದೇನೆ.

ನಮ್ಮ ವರ್ತಮಾನ ಬಳಗಕ್ಕೆ ಮತ್ತು ನಮ್ಮ ವಾರಿಗೆಯ ಅನೇಕ ಕನ್ನಡಿಗರಿಗೆ ಪತ್ರಕರ್ತ ಮತ್ತು ಕವಿ ಎಸ್.ಸಿ. ದಿನೇಶ್‌ಕುಮಾರ್ ಗೊತ್ತು. ವರ್ತಮಾನಕ್ಕೆ ಹಲವಾರು ಲೇಖನಗಳನ್ನು ಬರೆದಿದ್ದಾರೆ. ಹಾಗೆಯೇ, ಕತೆಗಾರ, ಲೇಖಕ, ಸಾಮಾಜಿಕ ಕಾರ್ಯಕರ್ತ ಟಿ.ಕೆ.ದಯಾನಂದ್ ಸಹ. ದಯಾನಂದ್ ಬಹುಮುಖ ಪ್ರತಿಭೆಯ ದೇಸಿ ಪ್ರತಿಭೆ. ನಮ್ಮ ವರ್ತಮಾನ.ಕಾಮ್‍ನ ಗಾಂಧಿ ಜಯಂತಿ ಕಥಾಸ್ಪರ್ಧೆಯಲ್ಲಿ ಈ ಬಾರಿ ಉತ್ತಮ ಕತೆಗಾರರಾಗಿ ಆಯ್ಕೆಯಾಗಿದ್ದಾರೆ. ಪ್ರಜಾವಾಣಿ ಮತ್ತಿತರ ದೀಪಾವಳಿ ಕಥಾಸ್ಪರ್ಧೆಗಳಲ್ಲೂ ಭಾಗವಹಿಸಿ ಪ್ರಶಸ್ತಿ ಪಡೆದಿದ್ದಾರೆ. ಅಪಾರ ಕ್ರಿಯಾಶೀಲತೆಯ ಯುವಕ. ಮಲಹೊರುವವರ ಬಗ್ಗೆ ಇವರು ಬಹಳ ಕೆಲಸ, ಹೋರಾಟ ಮಾಡಿದ್ದಷ್ಟೇ ಅಲ್ಲದೆ, ಅದನ್ನು ಜನರ ಮುಂದೆ ಇತ್ತೀಚಿನ ದಿನಗಳಲ್ಲಿ ಪರಿಣಾಮಕಾರಿಯಾಗಿ ಇಟ್ಟವರು. ವರ್ತಮಾನದ ಮೊದಲ ವರ್ಷದಲ್ಲಿಯೇ ಕೆಜಿಎಫ್‌ನಲ್ಲಿ ಮಲದ ಗುಂಡಿ ಸ್ವಚ್ಚಗೊಳಿಸಲು ಹೋಗಿ ದುರ್ಮರಣಕ್ಕೀಡಾದ ವ್ಯಕ್ತಿಗಳ ಕುಟುಂಬಕ್ಕೆ ಮೂರು ವರ್ಷಗಳ ಹಿಂದೆ ಇದೇ ದಯಾನಂದ್ ಮತ್ತು ದಿನೇಶ್‌ಕುಮಾರ್ ನಮ್ಮ ವರ್ತಮಾನ.ಕಾಮ್ ಮೂಲಕ ಹಣ ಸಂಗ್ರಹಿಸಿ ಸಹಾಯ ಮಾಡಿದ್ದರು.

ಈಗ ದಿನೇಶ್‌ಕುಮಾರ್ ಕಾರ್ಯಕಾರಿ ನಿರ್ಮಾಪಕರಾಗಿರುವ “ಬೆಂಕಿಪಟ್ಣ” ಸಿನೆಮಾವನ್ನು ತಮ್ಮದೇ ಕತೆ-ಚಿತ್ರಕತೆ-ಸಂಭಾಷಣೆಗಳೊಂದಿದೆ benkipatnaಟಿ.ಕೆ.ದಯಾನಂದ್ ನಿರ್ದೇಶಿಸಿದ್ದಾರೆ. ಈಗಾಗಲೆ ಆ ಸಿನೆಮಾದ ಹಾಡುಗಳು ಮತ್ತು ಟ್ರೈಲರ್ ಅಂತರ್ಜಾಲದಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಬಹುಶಃ ಸಾವಿರಾರು ಅತ್ಯುತ್ತಮ ಮತ್ತು ಕೆಟ್ಟ ಸಿನೆಮಾಗಳನ್ನು ನೋಡಿರುವ ಟಿ.ಕೆ.ದಯಾನಂದ್, ಯಾವುದೇ ನೇರಗುರುವಿನ ಪಾಠವಿಲ್ಲದೆ ಮೊದಲ ಬಾರಿಗೆ ಸಿನೆಮಾ ನಿರ್ದೇಶನ ಮಾಡಿದ್ದಾರೆ. ಸ್ವಯಂಅಭ್ಯಾಸಿಯಾಗಿರುವ ದಯಾನಂದರದು, ಏಕಲವ್ಯ ಪ್ರತಿಭೆ.

ಈಗಾಗಲೆ ಸಾಮಾಜಿಕ ಜಾಲತಾಣಗಳಲ್ಲಿ “ಬೆಂಕಿಪಟ್ಣ”ದ ಹಾಡುಗಳು ಮತ್ತು ಟ್ರೈಲರ್ ಬಗ್ಗೆ ಒಳ್ಳೆಯ ಮಾತುಗಳು ಬರುತ್ತಿವೆ. ಜಯಂತ್ ಕಾಯ್ಕಿಣಿ, ದಿನೇಶ್‌ಕುಮಾರ್, ಯೋಗರಾಜ್ ಭಟ್ಟರು ಹಾಡು ಬರೆದಿದ್ದಾರೆ. ಬಿ.ಸುರೇಶ್, ಅರುಣ್ ಸಾಗರ್, ಸೇರಿದಂತೆ ಅನೇಕ ಅನುಭವಿ ಮತ್ತು ಹೊಸ ಪ್ರತಿಭೆಗಳು ಈ ಸಿನೆಮಾದಲ್ಲಿ ಇದ್ದಾರೆ ಎನ್ನಲಾಗುತ್ತಿದೆ. ಪ್ರಾಮಾಣಿಕ ಚಿಂತನೆಗಳ ಮತ್ತು ಜೀವಪರ ನಿಲುವಿನ ದಿನೇಶ್‌ಕುಮಾರ್ ಮತ್ತು ದಯಾನಂದರ ಈ ಚೊಚ್ಚಲ ಸಿನೆಮಾ ಪ್ರಯತ್ನ ಯಶಸ್ವಿಯಾಗಲಿ ಮತ್ತು ಕನ್ನಡಿಗರಿಗೆ ಒಳ್ಳೆಯ ಸಿನೆಮಾ ಸಿಗಲಿ, ಹಾಗೂ ಉತ್ತಮ ಅಭಿರುಚಿಯ ಜನ ಹೆಚ್ಚುಹೆಚ್ಚು ಸಿನೆಮಾ ನಿರ್ಮಾಣದಲ್ಲಿ ತೊಡಗಿಸಿಕೊಂಡು ನಾಡಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಜೀವನವನ್ನು ಸಂಪನ್ನಗೊಳಿಸಲಿ ಎಂದು ಆಶಿಸುತ್ತೇನೆ. ಎಲ್ಲರಿಗೂ ಒಳ್ಳೆಯದಾಗಲಿ.

ವಿಶ್ವಾಸದಲ್ಲಿ,
ರವಿ


“ಬೆಂಕಿಪಟ್ಣ” ಸಿನೆಮಾದ ಟ್ರೈಲರ್: http://youtu.be/8-3knn5d24c

ಸಿನೆಮಾದ ಎಲ್ಲಾ ಹಾಡುಗಳು ಕೇಳಲು ಇಲ್ಲಿ ಲಭ್ಯವಿದೆ: http://youtu.be/wkutzwqDeW8

One thought on ““ಬೆಂಕಿಪಟ್ಣ” ಸಿನೆಮಾಗೆ ಯಶಸ್ಸನ್ನು ಹಾರೈಸುತ್ತ…

  1. Gubbachchi Sathish

    ‘ರಸ್ತೆ ನಕ್ಷತ್ರ’ ದಯಾನಂದ್ ನಮ್ಮ ನಡುವಿನ ಉತ್ತಮ ಮನುಷ್ಯ. ಅವರ ಸಿನಿಮಾಗೆ ನಮ್ಮ ಶುಭ ಹಾರೈಕೆಗಳು. ತುಮಕೂರಿನಲ್ಲಿ ಸಿನಿಮಾ ಬಿಡುಗಡೆಯಾದ ಮೊದಲ ವಾರದಲ್ಲೆ ಸಿನಿಮಾ ನೋಡುತ್ತೇವೆ.
    – ಗುಬ್ಬಚ್ಚಿ ಸತೀಶ್ ಮತ್ತು ಗೆಳೆಯರು.

    Reply

Leave a Reply

Your email address will not be published. Required fields are marked *