ಅಸಮಾನ ಶಿಕ್ಷಣವೆಂಬ ಹೆಣ್ಣುಮಕ್ಕಳ ಹಕ್ಕುನಾಶಕ


– ರೂಪ ಹಾಸನ


 

ಮತ್ತೊಂದು ಮಕ್ಕಳ ದಿನಾಚರಣೆ ಬಂದಿದೆ. ಆದರೆ ಮಕ್ಕಳ ಮೇಲಿನ ದೌರ್ಜನ್ಯದ ವರದಿಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಅದರಲ್ಲೂ ಹೆಣ್ಣುಮಕ್ಕಳ ಸಾಮಾಜಿಕ ಮತ್ತು ಶೈಕ್ಷಣಿಕ ಹಕ್ಕುಗಳನ್ನು ವ್ಯವಸ್ಥೆ ಅತ್ಯಂತ ಕ್ರೂರವಾಗಿ ಕಿತ್ತುಕೊಳ್ಳುತ್ತಿರುವುದನ್ನೂ ಗಮನಿಸುತ್ತಿದ್ದೇವೆ. ನಮ್ಮ ಹೆಣ್ಣುಮಕ್ಕಳ ಶಿಕ್ಷಣಕ್ಕಿರುವ ತಡೆಗೋಡೆಗಳನ್ನು ಅಧ್ಯಯನ ಮಾಡುವ ಮೂಲಕ ಸಮಾಜ ಆತ್ಮಾವಲೋಕನ ಮಾಡಿಕೊಳ್ಳುವುದೇ ಆ ಮಕ್ಕಳಿಗೆ ನಾವು ಕೊಡಬಹುದಾದ ಮಕ್ಕಳ ದಿನಾಚರಣೆಯ ಉಡುಗೊರೆ ಎಂದು ನಾನು ಭಾವಿಸಿದ್ದೇನೆ.

ಭಾರತದ ಸಂವಿಧಾನದ ಪ್ರಕಾರ ಸ್ತ್ರೀ ಪುರುಷರಿಬ್ಬರಿಗೂ ವಿದ್ಯಾಭ್ಯಾಸ, ಉದ್ಯೋಗದ ಸರಿಸಮಾನ ಅವಕಾಶ, ಹಕ್ಕುಗಳಿವೆ. ಆದರೆ ಹುಡುಗರ ವಿದ್ಯಾಭ್ಯಾಸ ಸಾಗಿದಷ್ಟು ಹೆಚ್ಚು ಹುಡುಗಿಯರ ವಿದ್ಯಾಭ್ಯಾಸ ಸಾಗಿಲ್ಲ. ಆ ಅಂತರ ಇಂದಿಗೂ ಹೆಚ್ಚಾಗಿಯೇ ಇದೆ. ಹೆಣ್ಣುಮಕ್ಕಳಿಗೆ ಓದಲು ಅವಕಾಶಗಳು ಮಿತವಾಗಿವೆ.School_children ಸಣ್ಣ ವಯಸ್ಸಿನಲ್ಲೇ ಹುಡುಗಿಯರಿಗೆ ಮದುವೆ ಮಾಡಿ, ಮುಂದೆ ಅವಳು ಕೇವಲ ಮಕ್ಕಳನ್ನು ಹಡೆದು, ಅವನ್ನು ಸಾಕಿ ಅದಕ್ಕಾಗೇ ಬದುಕನ್ನು ಮುಡುಪಾಗಿಡಬೇಕೆಂಬ ದೃಷ್ಟಿ ಇಂದಿಗೂ ಹೆಚ್ಚಿನ ಗ್ರಾಮೀಣ ಪ್ರದೇಶದಲ್ಲಿದೆ. ಜೊತೆಗೆ ಗಂಡು ಮಗ ಓದಿ ವಿದ್ಯಾಭ್ಯಾಸ ಪಡೆದು, ಕೆಲಸಕ್ಕೆ ಸೇರಿ ತಮ್ಮನ್ನು ಸಾಕುತ್ತಾನೆ. ಹೆಣ್ಣು ಮಗಳಾದರೆ ಮದುವೆಯಾಗಿ ಗಂಡನ ಮನೆಗೆ ಹೋಗುವವಳು. ಅವಳಿಗಾಗಿ ಮಾಡುವ ಖರ್ಚು ವ್ಯರ್ಥ ಎಂಬುದು ಹಲವರ ಭಾವನೆ. ಸದ್ಯಕ್ಕೆ ಭಾರತದಲ್ಲಿ ೨೦೦ ಮಿಲಿಯ ಅನಕ್ಷರಸ್ಥ ಹೆಣ್ಣು ಮಕ್ಕಳಿದ್ದಾರೆ. ಈ ಅಂಕಿ ಅಂಶ ನಮ್ಮ ಮಹಿಳೆಯರು ಶೈಕ್ಷಣಿಕ ಅಭಿವೃದ್ಧಿಯಿಂದ ಎಷ್ಟೊಂದು ದೂರದಲ್ಲಿದ್ದಾರೆ ಎನ್ನುವುದನ್ನು ಸೂಚಿಸುತ್ತದೆ.

ಹೆಣ್ಣುಮಕ್ಕಳ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಸಮಸ್ಯೆ, ಸವಾಲುಗಳಿಗೆ ಶಿಕ್ಷಣ ಒಂದು ಪ್ರಬಲ ಅಸ್ತ್ರವಾಗಬಲ್ಲದು. ಆದರೆ ಪ್ರಸ್ತುತ ಭಾರತದಲ್ಲಿ ಹೆಣ್ಣುಮಕ್ಕಳ ವಿದ್ಯಾಭ್ಯಾಸ ಕುರಿತು ದೃಷ್ಟಿ ಹರಿಸಿದರೆ ಗಾಬರಿ ಹುಟ್ಟಿಸುವಂಥಾ ಅಂಕಿ-ಅಂಶಗಳು ಕಣ್ಣಿಗೆ ಬೀಳುತ್ತವೆ. ೨೦೧೧ನೇ ಇಸವಿಯ ಅಂಕಿ ಅಂಶಗಳಂತೆ ಪುರುಷರ ವಿದ್ಯಾಭ್ಯಾಸ ಪ್ರಮಾಣ ೭೫% ರಷ್ಟಿದ್ದರೆ, ಅದೇ ಸಮಯದಲ್ಲಿ ಮಹಿಳೆಯರ ವಿದ್ಯಾಭ್ಯಾಸದ ಪ್ರಮಾಣ ೬೫.೪೬%ರಷ್ಟಿದೆ. ೨೦೦೧ರ ಜನಗಣತಿಯಂತೆ ಮಹಿಳೆಯರ ವಿದ್ಯಾಭ್ಯಾಸ ಪ್ರಮಾಣ ೫೩.೬೩% ರಷ್ಟಿದ್ದು ಕಳೆದ ಹತ್ತು ವರ್ಷಗಳಲ್ಲಿ ಅವರ ವಿದ್ಯಾಭ್ಯಾಸ ಪ್ರಮಾಣದಲ್ಲಿ ಗಣನೀಯ ಪ್ರಮಾಣದ ಬದಲಾವಣೆ ಆಗದಿರುವುದು ನಮ್ಮ ಸಮಾಜದಲ್ಲಿ ಹೆಣ್ಣು ಮಕ್ಕಳ ವಿದ್ಯಾಭ್ಯಾಸದ ಕುರಿತು ಇರುವ ಅವಜ್ಞೆಯ ಸೂಚಕವಾಗಿದೆ.

ನಗರ ಪ್ರದೇಶದ ೬೫% ಹೆಣ್ಣುಮಕ್ಕಳು ಶಿಕ್ಷಿತರಾಗಿದ್ದರೆ, ಗ್ರಾಮೀಣ ಪ್ರದೇಶದ ೪೬% ಹೆಣ್ಣುಮಕ್ಕಳು ಶಿಕ್ಷಿತರಾಗಿದ್ದಾರೆ ಅಷ್ಟೇ. ಶೇಕಡಾ ೬೦ರಷ್ಟು ಅಕ್ಷರಸ್ಥ ಮಹಿಳೆಯರು ಕೇವಲ ಪ್ರಾಥಮಿಕ ಶಿಕ್ಷಣ ಅಥವಾ ಅದಕ್ಕಿಂಥಾ ಕಡಿಮೆ ವಿದ್ಯಾಭ್ಯಾಸ ಪಡೆದಿದ್ದಾರೆ. ಇದರಲ್ಲಿ ೧೩% ಹೆಣ್ಣುಮಕ್ಕಳು ಮಾತ್ರ ಪ್ರೌಢಶಿಕ್ಷಣಕ್ಕಿಂತಾ ಹೆಚ್ಚಿನ ಶಿಕ್ಷಣ ಪಡೆಯುತ್ತಿದ್ದಾರೆಂದರೆ ಅವರಿನ್ನೂ ಸಾಮಾಜಿಕ ಪಾಲ್ಗೊಳ್ಳುವಿಕೆಯಲ್ಲಿ ಯಾವ ಹಂತದಲ್ಲಿದ್ದಾರೆಂದು ಯೋಚಿಸಬಹುದಾಗಿದೆ. ಹಾಗೆ ಸಾಕ್ಷರತೆಯ ಪ್ರಮಾಣವನ್ನು ಅಳೆಯಲು ಯಾವುದೇ ನಿರ್ದಿಷ್ಟ ಮಾನದಂಡಗಳೂ ಇಲ್ಲದಿರುವುದರಿಂದ ಸಹಿ ಮಾಡಲು ಬರುವವರೆಲ್ಲಾ ಸಾಕ್ಷರರೆಂದೇ ಪರಿಗಣಿಸಲಾಗುತ್ತಿದೆ! ಕನಿಷ್ಟ ಪ್ರೌಢಶಾಲೆಯ ಹಂತದವರೆಗಿನ ವಿದ್ಯಾಭ್ಯಾಸವನ್ನಾದರೂ ಗಣನೆಗೆ ತೆಗೆದುಕೊಳ್ಳುವುದಾದರೆ ಈಗ ದಾಖಲಾಗಿರುವ ಪ್ರಮಾಣದಲ್ಲಿ ಅರ್ಧದಷ್ಟೂ ಸಾಕ್ಷರ ಮಹಿಳೆಯರು ನಮಗೆ ಸಿಕ್ಕುವುದಿಲ್ಲ ಎನ್ನುವುದು ವಾಸ್ತವ ಸತ್ಯ!

ಜೊತೆಗೆ ತಳ ಸಮುದಾಯದ ಹೆಣ್ಣುಮಕ್ಕಳಂತೂ ಶಿಕ್ಷಣದಿಂದ ಇನ್ನೂ ಬಹಳಷ್ಟು ದೂರದಲ್ಲಿಯೇ ಇದ್ದಾರೆ. ಇಂದಿಗೂ ಇಂತಹ ೩೧% ಹೆಣ್ಣುಮಕ್ಕಳು ಮಾತ್ರ ಶಿಕ್ಷಣ ಪಡೆದಿದ್ದಾರೆ ಎಂಬುದೇ ಪ್ರಗತಿಯ ಹಾದಿಯಲ್ಲಿರುವ ಭಾರತಕ್ಕೆ ನಾಚಿಕೆಗೇಡಿನ ವಿಷಯವಾಗಬೇಕಿದೆ. ಕರ್ನಾಟಕ ಸರ್ಕಾರ ವರ್ಷಗಳ ಕೆಳಗೆ ೩೦೦೦ಕ್ಕೂ ಅಧಿಕ ಸರ್ಕಾರಿ ಶಾಲೆಗಳನ್ನು ಮುಚ್ಚುವ ಆದೇಶ ಹೊರಡಿಸಿತ್ತು. ಇದರ ಪರಿಣಾಮವಾಗಿ ಗ್ರಾಮೀಣ ಪ್ರದೇಶದ ಬಡ ಮತ್ತು ತಳಸಮುದಾಯದ ಹೆಣ್ಣುಮಕ್ಕಳು ಶಾಶ್ವತವಾಗಿ ವಿದ್ಯಾಭ್ಯಾಸದಿಂದ ವಂಚಿತರಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆಯ ಮುಂದೆ ಇರುವ ಶಾಲೆಗಳಿಗೇ ಹೆಣ್ಣು ಮಕ್ಕಳನ್ನು ಕಳಿಸಲು ಮೀನಮೇಷ ಎಣಿಸುವ ಪೋಷಕರು ದೂರದ ಶಾಲೆಗಳಿಗೆ ಮಕ್ಕಳನ್ನು ಕಳಿಸಲು ತಯಾರಾಗುವುದು ದೂರದ ಮಾತೇ ಸರಿ. ಹೀಗಾಗೆ ನಮ್ಮ ದಲಿತ ಹಾಗೂ ಮಹಿಳಾಪರ ಹೋರಾಟಗಾರರು, ಸಂಘಟನೆಗಳು-ಚಳುವಳಿಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ.

ಸಂವಿಧಾನಾತ್ಮಕವಾಗಿ ಪ್ರಾಥಮಿಕ ಶಿಕ್ಷಣ ಕಡ್ಡಾಯವಾಗಿದ್ದರೂ, ೨೦೦೯ರ ಶಿಕ್ಷಣ ಹಕ್ಕು ಕಾಯ್ದೆಯನ್ವಯ ಈಗ ಕನಿಷ್ಟ ೧೪ರ ವಯಸ್ಸಿನವರೆಗಿನ ಶಿಕ್ಷಣ ಉಚಿತ ಮತ್ತು ಕಡ್ಡಾಯವಾಗಿದ್ದರೂ ಕಲಿಯಲು ಶಾಲೆಗೆ ಹೋಗುವ ಸಮಯದಲ್ಲಿ ಮನೆಗೆಲಸಕ್ಕೆ, ಹೊರಗಿನ ಕೆಲಸಕ್ಕೆ ಮಗಳು ಜೊತೆ ನೀಡಿದರೆ ಕೆಲಸವೂ ಹಗುರ, ಹಣವನ್ನೂ ಸಂಪಾದಿಸಬಹುದೆಂಬ children-of-Indiaಯೋಜನೆ ಹಲವರದು. ಕುಟುಂಬದಲ್ಲಿ ಆರ್ಥಿಕವಾಗಿ ಹೆಚ್ಚಿನ ಹೊರೆ ಬೀಳುತ್ತಿದ್ದರೆ ಅದಕ್ಕೆ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಕತ್ತರಿ ಹಾಕಿ ಗಂಡುಮಕ್ಕಳನ್ನು ಓದಲು ಕಳಿಸುವ ಸಂಪ್ರದಾಯ ನಮ್ಮ ಗ್ರಾಮೀಣ ಪ್ರದೇಶದಲ್ಲಿದೆ. ಶಿಕ್ಷಣದಿಂದ ವಂಚಿತರಾದ ಅತಿ ಹೆಚ್ಚು ಕೂಲಿಕಾರ್ಮಿಕ ಹೆಣ್ಣುಮಕ್ಕಳು ವಿಶ್ವದಲ್ಲೇ ಅತಿ ಹೆಚ್ಚಾಗಿ ಇರುವುದು, ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಎನ್ನುವುದು ಗಮನಾರ್ಹವಾದ ಅಂಶವಾಗಿದೆ. ಇಂದು ಭಾರತದಲ್ಲಿ ನಿರುದ್ಯೋಗಿ ಅಶಿಕ್ಷಿತ ಹುಡುಗಿಯರ ಸಂಖ್ಯೆ ನಾಲ್ಕು ಕೋಟಿ ಎಂದು ಒಂದು ಅಧ್ಯಯನ ತಿಳಿಸುತ್ತದೆ. ಗಂಡೊಂದು ಕಲಿತರೆ ಅದು ಅವನ ವಿದ್ಯಾಭ್ಯಾಸ ಮಾತ್ರ. ಆದರೆ ಹೆಣ್ಣು ವಿದ್ಯಾವಂತಳಾದರೆ ಇಡೀ ಕುಟುಂಬವೇ ಸಾಕ್ಷರವಾಗುತ್ತದೆ ಎಂದು ಗಾಂಧೀಜಿ ಹೇಳುತ್ತಿದ್ದ ಮಾತು ಸತ್ಯವಾಗಲು ಇನ್ನೂ ಎಷ್ಟು ವರ್ಷಗಳು ಕಾಯಬೇಕೋ?

ಇತ್ತೀಚೆಗೆ ನಮ್ಮ ರಾಜ್ಯ ಸರ್ಕಾರ ಉಚ್ಛ ನ್ಯಾಯಾಲಯದ ಆದೇಶದಂತೆ ಶಾಲೆಯಿಂದ ಹೊರಗಿರುವ ೭-೧೪ವರ್ಷ ವಯಸ್ಸಿನ ಮಕ್ಕಳ ಸಮೀಕ್ಷೆಯನ್ನು ಮತ್ತೊಮ್ಮೆ ಮಾಡಿದೆ, ಅದರಲ್ಲಿ ನಮ್ಮ ಹೆಣ್ಣುಮಕ್ಕಳ ಶಿಕ್ಷಣಕ್ಕೆ ತೊಡಕಾಗಿರುವ ಅನೇಕ ಅಂಕಿಅಂಶಗಳು ದಾಖಲಾಗಿವೆ. ಶಾಲೆ ದೂರವಿರುವುದರಿಂದ ೨೮೩೨ ಹುಡುಗಿಯರು, ತಮ್ಮದೇ ಮನೆಗೆಲಸದಲ್ಲಿ ತೊಡಗಿರುವುದರಿಂದ ೧೪೬೭೧ ಬಾಲೆಯರು, ದುಡಿಮೆಯಲ್ಲಿ ತೊಡಗಿರುವುದರಿಂದ ೫೧೧ ಹೆಣ್ಣುಮಕ್ಕಳು, ಬೇರೆ ಕೆಲಸದಲ್ಲಿ ತೊಡಗಿರುವುದರಿಂದ ೨೮೭೩ ಹುಡುಗಿಯರು, ಬಾಲ್ಯವಿವಾಹವಾದ ಕಾರಣಕ್ಕೆ ೧೩೬೫ ಬಾಲೆಯರು, ಮೈನೆರೆದ ಕಾರಣಕ್ಕೆ ೫೨೩೮, ಹೆಣ್ಣುಮಗುವಿಗೆ ಸಂಬಂಧಿಸಿದ ಇತರೆ ಕಾರಣಗಳಿಗಾಗಿ ೨೮೫೮, ಅನಾಕರ್ಷಕ ಶಾಲಾ ವಾತಾವರಣದ ಕಾರಣಕ್ಕೆ ೭೮, ವಲಸೆಯ ಕಾರಣಕ್ಕೆ ೧೪೨೭೬, ಶಿಕ್ಷಕರ ಹೆದರಿಕೆಯಿಂದ ೬೨, ಮನೆ ಬಿಟ್ಟು ಓಡಿ ಹೋದ ಕಾರಣಕ್ಕೆ ೮೮, ಬೀದಿಯಲ್ಲಿ ಚಿಂದಿ ಆಯುವ ಕಾರಣದಿಂದ ೧೧೪ ಮಕ್ಕಳು, ಅಂಗವೈಕಲ್ಯದಿಂದ ೧೫೦೮ ಮಕ್ಕಳು, ಸಾವಿನ ಕಾರಣಕ್ಕೆ ೮೨೪ ಮತ್ತು ಬೇರೆ ಕಾರಣಗಳಿಗಾಗಿ ೩೬೫೭೧ ಹೆಣ್ಣಮಕ್ಕಳು ಶಾಲೆ ತೊರೆದಿರುವುದು ತಿಳಿಯುತ್ತದೆ. ಅಂದರೆ ಒಟ್ಟು ಸುಮಾರು ೮೩,೮೬೯ ಹೆಣ್ಣುಮಕ್ಕಳು ಈ ಎಲ್ಲಾ ವಿವಿಧ ಕಾರಣಗಳಿಗಾಗಿ ಶಾಲೆ ತೊರೆದಿರುವುದು ತಿಳಿಯುತ್ತದೆ. ಇದರಲ್ಲಿ ಹೆಚ್ಚಿನ ಹೆಣ್ಣುಮಕ್ಕಳು ತಳಸಮುದಾಯದವರು ಹಾಗೂ ಹಿಂದುಳಿದ ವರ್ಗಗಳವರೇ ಆಗಿದ್ದಾರೆ ಎಂಬುದು ವಿಪರ್ಯಾಸ.

ಈ ಎಲ್ಲಾ ಕಾರಣಗಳನ್ನು ಇಟ್ಟುಕೊಂಡು ಸಮಗ್ರವಾಗಿ ಹೆಣ್ಣುಮಕ್ಕಳ ಶಿಕ್ಷಣದ ಕುರಿತು ಆಮೂಲಾಗ್ರ ಬದಲಾವಣೆ ತರುವ ನಿಟ್ಟಿನಲ್ಲಿ ತಕ್ಷಣವೇ ಸರ್ಕಾರ ಮುಂದಾಗಬೇಕು. ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆ, ಸಮಗ್ರ ಮಕ್ಕಳ ರಕ್ಷಣಾ ಘಟಕ, ಆರೋಗ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಎಲ್ಲವೂ ಒಟ್ಟಾಗಿ ಸೇರಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲು ಮನಃಪೂರ್ವಕವಾಗಿ ಶ್ರಮಿಸಬೇಕಿದೆ. ಆಗ ಮಾತ್ರ ಹೆಣ್ಣುಮಕ್ಕಳ ಶೈಕ್ಷಣಿಕ ಹಕ್ಕಿನ ಸಾಕಾರವಾಗಲು ಸಾಧ್ಯವಿದೆ.

ಹೆಣ್ಣುಮಕ್ಕಳಿಗೂ ಸಮಾನ ವಿದ್ಯಾಭ್ಯಾಸ ನೀಡುವ ನೆಲೆಯಲ್ಲಿ ಸರ್ಕಾರದ ಪ್ರಯತ್ನಗಳೇನೋ ನಿರಂತರವಾಗಿ ಸಾಗಿವೆ. ಹೆಣ್ಣುಮಕ್ಕಳನ್ನು ಮತ್ತೆ ಶಾಲೆಗೆ ಕರೆತರಲು, ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಮನವೊಲಿಸಲು ಅನೇಕ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ. ಉಚಿತ ಊಟ, ಪುಸ್ತಕದ ಜೊತೆಗೆ, ಸೈಕಲ್ ವಿತರಿಸಲಾಗುತ್ತಿದೆ. ಅದರ ಜೊತೆಗೆ ಒಂದನೇ ತರಗತಿಯ ಹೆಣ್ಣುಮಕ್ಕಳ ದಿನವೊಂದರ ಹಾಜರಾತಿಗೆ ೨ರೂಪಾಯಿಗಳನ್ನು ನೀಡುವ ಯೋಜನೆಯೂ ಸರ್ಕಾರದಿಂದ ಜಾರಿಯಾಗಿದೆ. ಅದರ ಫಲವಾಗಿ ಹೆಣ್ಣುಮಕ್ಕಳು ಹೆಚ್ಚಾಗಿ ಶಾಲೆಗಳೆಡೆಗೆ ಮುಖಮಾಡಬಹುದೆಂಬ ಆಶಾಭಾವನೆ ಇದೆ. ಆದರೆ ಇದರ ಹೊರತಾಗಿಯೂ ಹೆಣ್ಣುಮಕ್ಕಳ ಸೂಕ್ಷ್ಮ ಸಮಸ್ಯೆಗಳನ್ನು ಗುರುತಿಸಿ ಹೆಚ್ಚು ಸಮರ್ಥವಾದ ಯೋಜನೆಗಳನ್ನು ಸರ್ಕಾರ ರೂಪಿಸಬೇಕಿದೆ.

ಭಾರತದಂತಾ ದೇಶದಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಕೌಟುಂಬಿಕ, ಧಾರ್ಮಿಕ, ಸಾಮಾಜಿಕ, ಭೌಗೋಳಿಕ, ರಾಜಕೀಯ ಕಾರಣಗಳ ಜೊತೆಗೆ child-marriage-indiaಗೊಡ್ಡು ಸಂಪ್ರದಾಯ, ವಿವಾಹ, ಆಚರಣೆ, ಕಂದಾಚಾರಗಳು ಮತ್ತು ಅವರನ್ನು ದುಡಿಮೆಯ ಯಂತ್ರಗಳೆಂದು ಭಾವಿಸಿರುವುದೂ ಕಾರಣವಾಗಿದೆ. ಅದರಲ್ಲೂ ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳ ವಿದ್ಯಾಭ್ಯಾಸದ ಪ್ರಮಾಣ ಕಡಿಮೆ ಇರುವುದಕ್ಕೆ ಅನೇಕ ಕಾರಣಗಳಿವೆ. ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳು ಓದಿನೊಂದಿಗೆ ನಿತ್ಯದ ಬಿಡುವಿಲ್ಲದ ಕೆಲಸದಲ್ಲಿಯೂ ತೊಡಗಿಕೊಳ್ಳಬೇಕು. ಪೌಷ್ಟಿಕ ಆಹಾರದ ಕೊರತೆಯೊಂದಿಗೆ ಹೊಲಗದ್ದೆ, ಕಸಮುಸುರೆ, ಕೊಟ್ಟಿಗೆ ಕೆಲಸಗಳಲ್ಲಿ ಭಾಗಿಯಾಗುತ್ತಲೇ ಶಾಲೆಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಾಗ ಆಯಾಸ, ಒತ್ತಡಗಳಾಗುವುದು ಸಹಜ. ಇದನ್ನೂ ಮೀರಿ ವಿದ್ಯಾಭ್ಯಾಸವನ್ನು ಮುಂದುವರೆಸಿದರೂ ಶಾಲೆಗಳು ಹತ್ತಿರವಿದ್ದಾಗ ನಿರಾತಂಕವಾಗಿ ಕಳುಹಿಸುವ ಪೋಷಕರು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಪಕ್ಕದ ಊರಿಗೆ ಕಳಿಸಬೇಕಾದಾಗ ಸುರಕ್ಷತೆಯ ದೃಷ್ಟಿಯಿಂದ ಹೆದರುತ್ತಾರೆ. ಬೆಳೆದ ಹೆಣ್ಣುಮಕ್ಕಳ ಶೀಲ ರಕ್ಷಣೆ ಸಧ್ಯದ ಸಮಾಜದಲ್ಲಿ ಪೋಷಕರನ್ನು ಕಾಡುವ ಗಂಭೀರ ವಿಷಯ. ಭಾರತೀಯ ಸಮಾಜದಲ್ಲಿ ಹೆಣ್ಣುಮಕ್ಕಳ ಶೀಲದ ಪರಿಕಲ್ಪನೆ ಅವರು ಮುಕ್ತವಾಗಿ ಸಮಾಜದಲ್ಲಿ ಬೆರೆಯದ, ಬೆಳೆಯದ ಒಂದು ಚೌಕಟ್ಟನ್ನು ಹಾಕಿಬಿಟ್ಟಿದೆ. ಅದೊಂದು ಆತಂಕ ನೆಪವಾಗಿ ಹೆಣ್ಣುಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸ ಗ್ರಾಮೀಣ ಪ್ರದೇಶದ ಜನರಿಗೆ ರಿಸ್ಕ್ ಎನ್ನಿಸಿದೆ. ಇಲ್ಲೆಲ್ಲಾ ಹೆಣ್ಣುಮಕ್ಕಳು ತಮಗೇ ಅರಿವಿಲ್ಲದೇ ತಮ್ಮ ಶೈಕ್ಷಣಿಕ ಹಕ್ಕನ್ನು ಕಳೆದುಕೊಳ್ಳುತ್ತಿರುತ್ತಾರೆ. ಅವರಿಗೆ ನಿಜಕ್ಕೂ ತಮಗಾಗಿ ಇಂತಹದೊಂದು ಹಕ್ಕಿರುವ ಅರಿವೂ ಇಲ್ಲ.

ಮಹಿಳೆಯನ್ನು ಒಂದು ಆಸ್ತಿಯನ್ನಾಗಿ ಪರಿಗಣಿಸುವ ಪರಿಪಾಠದಿಂದಾಗಿ ಅವಳನ್ನು ಸಂರಕ್ಷಿಸುವ ಕೆಲಸದ ಮುಖಾಂತರ ಅವಳ ಶೀಲವನ್ನು ಜೋಪಾನ ಮಾಡುವ ಕೆಲಸ ತಲೆತಲಾಂತರದಿಂದ ನಡೆಯುತ್ತಾ ಬಂದಿದೆ. ಎಲ್ಲಿಯವರೆಗೆ ಪಾತಿವ್ರತ್ಯದ, ಕೌಮಾರ್ಯದ, ಶೀಲದ ಕಲ್ಪನೆಗಳು ನಮ್ಮ ಸಮಾಜವನ್ನು ಬಿಟ್ಟು ಹೋಗುವುದಿಲ್ಲವೋ ಅಲ್ಲಿಯವರೆಗೆ ಹೆಣ್ಣುಮಕ್ಕಳಿಗೆ ಉನ್ನತ ಶಿಕ್ಷಣವಿರಲಿ, ಮೂಲಭೂತ ಶಿಕ್ಷಣವನ್ನೂ ಸಮರ್ಪಕವಾಗಿ ನೀಡಲು ಸಾಧ್ಯವಾಗದ ಜೊತೆಗೆ ಮಹಿಳೆಯ ಸಬಲೀಕರಣ ತಳಮಟ್ಟದಿಂದ ಸಾಧ್ಯವಾಗುವುದಿಲ್ಲ. ಹಾಗೂ ಹೆಚ್ಚುತ್ತಿರುವ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರಗಳೂ ಕೂಡ ಹೆಣ್ಣುಮಕ್ಕಳ ಶಿಕ್ಷಣದ ತೊಡಕಿನಲ್ಲಿ ಗಮನಾರ್ಹವಾದ ಸಮಸ್ಯೆಯಾಗಿದೆ. ಜೊತೆಗೆ ಇದೇ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಬಹು ಮುಖ್ಯವಾದ ತಡೆಗೋಡೆಯೂ ಹೌದು.

ಇಂದಿಗೂ ಬಹುಜನರ ದೃಷ್ಟಿಯಲ್ಲಿ ಹೆಣ್ಣುಮಕ್ಕಳ ಶಿಕ್ಷಣವೆಂದರೆ ಮದುವೆಯಾಗುವವರೆಗೆ ಹೊತ್ತು ಕಳೆಯುವ ಸಾಧನ ಎಂಬಂತಾ ಭಾವನೆ ಇದೆ. ಈಗಲೂ ಗ್ರಾಮೀಣ ಪ್ರದೇಶಗಳಲ್ಲಿ ಹೆಣ್ಣುಮಕ್ಕಳು ಋತುಮತಿಯಾದ ನಂತರ ಶಾಲೆಗೆ ಕಳುಹಿಸುವುದನ್ನೇ ನಿಲ್ಲಿಸುವ ಪೋಷಕರೂ ಇದ್ದಾರೆ. ಹಬ್ಬ ಹರಿದಿನಗಳಲ್ಲಿ, ಮಾಸಿಕ ಸ್ರಾವದ ದಿನಗಳಲ್ಲಿ, ಮನೆಯಲ್ಲಿ ಹೆಚ್ಚಿನ ಕೆಲಸಗಳಿದ್ದಾಗ, ಹೆಣ್ಣುಮಕ್ಕಳು ಶಾಲೆಗೆ ಹೋಗದೇ ಉಳಿದು ಬಿಡುತ್ತಾರೆ. ಕುಟುಂಬದಲ್ಲಿ ಹೆಚ್ಚಿನ ಮಕ್ಕಳಿದ್ದ ಸಂದರ್ಭದಲ್ಲಿ ಹೆಚ್ಚಿನ ಹೊರೆ ಅನಿವಾರ್ಯವಾಗಿ ಸ್ವಲ್ಪ ದೊಡ್ಡ ಹೆಣ್ಣುಮಕ್ಕಳ ಮೇಲೇ ಬೀಳುವುದರಿಂದ ಹಾಗೂ ಪಕ್ಕದ ಹಳ್ಳಿಗಳಿಗೆ ಓದಲು ಹೋಗಬೇಕಾದಾಗ ಆಗುವ ತೊಂದರೆ-ಆಯಾಸದಿಂದ, ಬಸ್ ಸೌಕರ್ಯಗಳು ಇಲ್ಲದಿದ್ದಾಗ, ಶಾಲೆಗೆ ಹೋಗುವ ದಾರಿಯಲ್ಲಿ ಸುರಕ್ಷತೆ ಇಲ್ಲದಿದ್ದಾಗ ಕೂಡ ಹೆಣ್ಣುಮಕ್ಕಳ ವಿದ್ಯಾಭ್ಯಾಸ ನಿರೀಕ್ಷಿತ ಪ್ರಮಾಣದಲ್ಲಿ ಆಗುವುದಿಲ್ಲ. ಎಷ್ಟು ಓದಿದರೇನು ಅಡಿಗೆ ಮಾಡಿಕೊಂಡಿರೋದು ತಾನೇ? ಎಂಬ ಉದಾಸೀನವು ಇರುತ್ತದೆ. ಇಂತಹ ಸಂದರ್ಭದಲ್ಲಿ ಹೆಣ್ಣುಮಕ್ಕಳ ವಿದ್ಯಾಭ್ಯಾಸದ ಮಹತ್ವವನ್ನು ನಿರಂತರವಾಗಿ ತಿಳಿಹೇಳಿ ಪೋಷಕರ ಮನ ಒಲಿಸಬೇಕಾಗುತ್ತದೆ.

ಶಾಲೆಗಳಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲದಿರುವುದೂ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಮುಖ್ಯ ಹಿನ್ನಡೆ ಎಂದು ಭಾವಿಸಲಾಗಿದೆ. ಇದೊಂದು ಅತ್ಯಂತ ಅನಿವಾರ್ಯವಾದ ಮತ್ತು ಸೂಕ್ಷ್ಮವಾದ ವಿಚಾರವಾಗಿರುವುದರಿಂದ ಇದನ್ನು ಯಾರೊಂದಿಗೂ ಚರ್ಚಿಸುವುದನ್ನೂ ಗ್ರಾಮೀಣ ಪ್ರದೇಶದ ಮಹಿಳೆಯರು ಇಷ್ಟ ಪಡುವುದಿಲ್ಲ. ಸರ್ಕಾರಿ ಶಾಲೆಗಳಲ್ಲಿ ಡಿ ದರ್ಜೆ ನೌಕರರು ಇಲ್ಲದಿರುವುದರಿಂದ ಶೌಚಾಲಯ ಶುದ್ಧಿಯಿಂದ ಹಿಡಿದು ಶಾಲೆಯ ಕಸ ಗುಡಿಸಿ ಒರೆಸುವುದನ್ನೂ ಮಕ್ಕಳಿಂದಲೇ ಮಾಡಿಸುವುದು, ಸರ್ಕಾರಿ ಶಾಲೆಯಿಂದ ಮಕ್ಕಳು ದೂರಾಗುವುದಕ್ಕೆ ಒಂದು ಕಾರಣ. ಜೊತೆಗೆ ಮಹಿಳಾ ಶಿಕ್ಷಕರ ಕೊರತೆಯೂ ಹೆಣ್ಣುಮಕ್ಕಳ ಶಿಕ್ಷಣದ ಆಸಕ್ತಿಯನ್ನು ಪೋಷಕರಲ್ಲಿ ಕಡಿಮೆ ಮಾಡುತ್ತದೆ. ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯಲ್ಲಿ ಕೇವಲ ೨೯% ಮಹಿಳಾ ಶಿಕ್ಷಕರು ಹಾಗೂ ಪ್ರೌಢ ಶಿಕ್ಷಣದ ಹಂತದಲ್ಲಿ ಕೇವಲ ೨೨% ಮಹಿಳಾ ಶಿಕ್ಷಕರಿರುವುದೂ ಪರೋಕ್ಷವಾಗಿ ಹೆಣ್ಣುಮಕ್ಕಳ ಶಿಕ್ಷಣದ ಮೇಲೆ ಪ್ರಭಾವ ಬೀರುತ್ತದೆ. ಈ ಯಾವ ಸಮಸ್ಯೆಗಳೂ ಗಂಡು ಮಕ್ಕಳನ್ನು ಕಾಡದೇ ಇರುವುದರಿಂದ ಅವರ ಶಿಕ್ಷಣ ಮುಂದುವರೆಯುವ ಸಾಧ್ಯತೆಗಳು ಹೆಚ್ಚಿರುತ್ತದೆ.

ಸರ್ಕಾರದ ವತಿಯಿಂದ ಗ್ರಾಮಾಂತರ ಪ್ರದೇಶದ ಹೆಣ್ಣುಮಕ್ಕಳಿಗಾಗಿ ಶಿಕ್ಷಣದ ಸೌಲಭ್ಯ ದೊರಕುವಂತೆ ಮಾಡಲು ಪ್ರತಿ ಹಳ್ಳಿಯಲ್ಲಿಯೂ schoolಶಾಲೆಗಳನ್ನು ತೆರೆಯಬೇಕು. ಇದು ಸಾಧ್ಯವಾಗದಿದ್ದರೆ ಉಚಿತ ಸರ್ಕಾರಿ ಬಸ್ ಸೌಲಭ್ಯವನ್ನು ಒದಗಿಸಬೇಕು. ಅವರ ಉನ್ನತ ವ್ಯಾಸಂಗಕ್ಕೆ ಅನುಕೂಲವಾಗುವಂತೆ ಕೆಲವು ಹಳ್ಳಿಗಳನ್ನು ಒಳಗೊಂಡಂತೆ ಕಾಲೇಜು ಶಿಕ್ಷಣ ವ್ಯವಸ್ಥೆ, ವೃತ್ತಿ ತರಬೇತಿ ಕೇಂದ್ರಗಳು, ಕಂಪ್ಯೂಟರ್ ಕೇಂದ್ರಗಳನ್ನು ತೆರೆಯಬೇಕು. ಹೆಣ್ಣುಮಕ್ಕಳಿಗೆ ಅನುಕೂಲವಾಗುವಂತೆ ಎಲ್ಲಾ ರೀತಿಯ ಸೌಕರ್ಯವಿರುವ ವಿದ್ಯಾರ್ಥಿನಿಲಯಗಳನ್ನು ದೊಡ್ಡ ಪ್ರಮಾಣದಲ್ಲಿ ಉಚಿತವಾಗಿ ಅಥವಾ ಕಡಿಮೆ ವೆಚ್ಚದಲ್ಲಿ ಒದಗಿಸಬೇಕು. ಹೆಣ್ಣುಮಕ್ಕಳ ಶಿಕ್ಷಣವೆಂದರೆ ಅವಶ್ಯಕ ಮೂಲ ಶಿಕ್ಷಣ ಮಾತ್ರವಲ್ಲ. ಅವರು ಸಂಪೂರ್ಣವಾಗಿ ಸ್ವಾವಲಂಬಿಗಳಾಗುವ ನೆಲೆಯಲ್ಲಿ ಎಲ್ಲ ರೀತಿಯ ಅನುಕೂಲವನ್ನೂ ಸರ್ಕಾರ ಮಾಡಿಕೊಡಬೇಕು. ಅದಕ್ಕಾಗಿ ನಿಗದಿತ ವಿದ್ಯಾಭ್ಯಾಸದ ನಂತರ ವೃತ್ತಿ ಶಿಕ್ಷಣ ಪಡೆಯಲು ಅನುಕೂಲವಾಗುವಂತಹಾ ಸಾದ್ಯತೆಗಳನ್ನು ಸರ್ಕಾರ ರೂಪಿಸಬೇಕು. ಆಗ ಮಾತ್ರ ಆರ್ಥಿಕ ದಾಸ್ಯವನ್ನು ಮೀರಿ ಆತ್ಮ ಸ್ವಾತಂತ್ರ್ಯದ ಸಿದ್ಧಿಯೆಡೆಗೆ ಸಾಗಲು ನಮ್ಮ ಹೆಣ್ಣುಮಕ್ಕಳಿಗೆ ಸಾಧ್ಯವಾಗುತ್ತದೆ.

ಇಂದು ಕಾಲ ವೇಗವಾಗಿ ಓಡುತ್ತಿದೆ. ಜೊತೆಗೆ ಅದು ಇಂದು ಸ್ಪರ್ಧಾತ್ಮಕವಾಗಿದೆ. ಅದಕ್ಕೆ ತಕ್ಕಂತೆ ನಮ್ಮ ಹೆಣ್ಣುಮಕ್ಕಳು ಅದರ ಮಹತ್ವವನ್ನು ಅರಿತು ನಡೆಯಬೇಕಿದೆ. ಶಿಕ್ಷಣದ ಹಕ್ಕು ಹೆಣ್ಣುಮಕ್ಕಳಿಗೆ ಆತ್ಮವಿಶ್ವಾಸ, ಛಲ, ಧೈರ್ಯವನ್ನು ತುಂಬುವುದರೊಂದಿಗೆ ಬದುಕನ್ನು ಯಾವುದೇ ಸಂದಿಗ್ಧ ಪರಿಸ್ಥಿತಿಯಲ್ಲೂ ಎದುರಿಸುವ ಮನೋಸ್ಥೈರ್ಯವನ್ನು ನೀಡಬೇಕಿದೆ. ಅಂತಹ ಶಿಕ್ಷಣ ವ್ಯವಸ್ಥೆ ನಮ್ಮದಾಗಬೇಕಿದೆ. ಉನ್ನತ ವ್ಯಾಸಂಗ ಮಾಡಿದ ನಮ್ಮ ಅನೇಕ ಮಹಿಳೆಯರು ಇಂದಿಗೂ ಮೂಢನಂಬಿಕೆಗಳ ದಾಸರೂ, ಕಂದಾಚಾರಿಗಳೂ ಗೊಡ್ಡು ಸಂಪ್ರದಾಯಸ್ಥರು ಆಗಿರುತ್ತಾರೆ. ಹಾಗಿದ್ದರೆ ನಮ್ಮ ಶಿಕ್ಷಣ ನಮಗೆ ನೀಡುತ್ತಿರುವುದಾದರೂ ಏನನ್ನು? ಎಂಬ ಪ್ರಶ್ನೆ ಏಳುತ್ತದೆ.

ಶಿಕ್ಷಣ ಜ್ಞಾನದ ಪರಿಧಿಯನ್ನು ವಿಸ್ತರಿಸುವುದರೊಂದಿಗೆ ಅರಿವಿನ ಬಾಗಿಲನ್ನು ಬೇರೆ ಬೇರೆ ಕ್ಷೇತ್ರಗಳಿಗೆ ವಿಸ್ತರಿಸಬೇಕು. ಹೆಣ್ಣುಮಕ್ಕಳು ವೈಚಾರಿಕವಾಗಿ, ಚೌಕಟ್ಟುಗಳಿಂದ ಮುಕ್ತವಾಗಿ ಚಿಂತಿಸುವ ನೆಲೆಯಲ್ಲಿ ನಮ್ಮನ್ನು ತಯಾರು ಮಾಡಬೇಕು. ಮಹಿಳಾ ಸಬಲೀಕರಣದ ಮೊದಲ ಮೆಟ್ಟಿಲು, ಸ್ವಾವಲಂಬನೆಯ ಮೊದಲ ಹೆಜ್ಜೆ ಹೆಣ್ಣುಮಕ್ಕಳ ಶಿಕ್ಷಣವಾಗಿರುವುದರಿಂದ ಭವಿಷ್ಯದಲ್ಲಿ ದೃಢತೆಯನ್ನು ಬಯಸುವ ಹೆಣ್ಣುಮಕ್ಕಳೆಲ್ಲರಿಗೂ ಇದು ಅತ್ಯಂತ ಅವಶ್ಯಕ. ಈ ತಿಳಿವನ್ನು ಪ್ರತಿ ಹೆಣ್ಣು ಮಗುವಿನಲ್ಲೂ ಮೂಡಿಸಬೇಕಿರುವುದೇ ಇಂದಿನ ತುರ್ತು. ಯಾವಾಗ ಈ ಅರಿವು ಒಳಗಿನಿಂದಲೇ ಅವರಲ್ಲಿ ಮೂಡಿ ಬಂದು ಮಾನಸಿಕ ಹಾಗೂ ಬೌದ್ಧಿಕವಾಗಿ ಸಬಲರಾಗುತ್ತಾರೋ ಆಗ ಮಹಿಳೆಯರ ಸಮಾನತೆ ಹಾಗೂ ಸ್ವಾತಂತ್ರ್ಯಕ್ಕೆ ಪರಿಪೂರ್ಣವಾದ ಅರ್ಥ ಬರುತ್ತದೆ. ಅದು ಸಾಧ್ಯವಾಗುವುದು ಗುಣಾತ್ಮಕ, ವೈಚಾರಿಕ ಶಿಕ್ಷಣದಿಂದ ಮಾತ್ರ. ಇಂತಹ ಶೈಕ್ಷಣಿಕ ಹಕ್ಕು ನಮ್ಮ ಹೆಣ್ಣುಮಕ್ಕಳಿಗೆ ದೊರಕಿದಾಗ ಮಾತ್ರ ನಿಜವಾದ ಅರ್ಥದಲ್ಲಿ ಅವರು ಈ ದೇಶದ ಆಸ್ತಿಯಾಗಿ ಹೊರಹೊಮ್ಮುತ್ತಾರೆ.

One thought on “ಅಸಮಾನ ಶಿಕ್ಷಣವೆಂಬ ಹೆಣ್ಣುಮಕ್ಕಳ ಹಕ್ಕುನಾಶಕ

  1. AHANI

    ATHYANTA SUKSHMA GRAHIKE MATTU GAMANISUVIKE IRUVA NIMMANTAVARIGE MAATRA ISTU SUKSHMAVAAGI BAREYALU SAADHYA MADAM> THANQ.

    AHANI

    Reply

Leave a Reply to AHANI Cancel reply

Your email address will not be published. Required fields are marked *