ಸದಾನಂದ ಲಕ್ಷ್ಮೀಪುರ
ಪತ್ರಕರ್ತರು ಮೊದಲು ಓದಬೇಕು. ಭಾರತದ ಸಂವಿಧಾನವನ್ನು, ಗಾಂಧಿ, ಅಂಬೇಡ್ಕರ್ ಹಾಗೂ ಲೋಹಿಯಾರ ಬರಹಗಳನ್ನು ಓದದೆ ಭಾರತದ ಸಂದರ್ಭದಲ್ಲಿ ಉತ್ತಮ ಪತ್ರಕರ್ತರಾಗಲು ಸಾಧ್ಯವಿಲ್ಲ ಎಂದು ಖಡಕ್ ಸಂದೇಶ ಕೊಟ್ಟವರು ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು. ಅವರು ಮಂಗಳವಾರ ಬೆಂಗಳೂರಿನ ಪತ್ರಕರ್ತರ ಅಧ್ಯಯನ ಕೇಂದ್ರ ಹೊರವಲಯದ ಸ್ಫೂರ್ತಿಧಾಮದಲ್ಲಿ ನಡೆಸಿದ ಒಂದು ದಿನದ ಪತ್ರಕರ್ತರ ಶಿಬಿರದಲ್ಲಿ ಮಾತನಾಡಿದರು.
ಅನೇಕ ಪತ್ರಕರ್ತರಲ್ಲಿ ಓದುವ ಅಭ್ಯಾಸವೇ ಇಲ್ಲ. ಅನೇಕರಿಗೆ ಭಾರತೀಯ ಸಂವಿಧಾನದ ಪರಿಚಯ ಇಲ್ಲ. ನಮ್ಮ ಶಾಲೆಗಳೂ ಅದನ್ನು ಕಲಿಸಿಲ್ಲ. ಉತ್ತಮ ಪತ್ರಕರ್ತರಾಗಬೇಕೆಂದಿರುವವರೆಲ್ಲ ಮೊದಲು ಸಂವಿಧಾನ ಓದಬೇಕು. ವೈವಿಧ್ಯಮಯ ಭಾರತವನ್ನು ಅರ್ಥ ಮಾಡಿಕೊಳ್ಳಲು ಎಲ್ಲಾ ಪತ್ರಕರ್ತರು ಓದಲೇಬೇಕಾದ ಮೂರು ವ್ಯಕ್ತಿಗಳು ಮಹಾತ್ಮ ಗಾಂಧಿ, ಅಂಬೇಡ್ಕರ್ ಹಾಗೂ ಲೋಹಿಯಾ. ಈ ಮೂವರ ಬರಹಗಳು ಸುಲಭ ಬೆಲೆಗೆ ದೊರಕುವ ವ್ಯವಸ್ಥೆಯನ್ನು ಸರಕಾರಗಳೂ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಮಾಡಿವೆ. “ಉತ್ತಮ ಪತ್ರಕರ್ತರಾಗಲು ಸಲಹೆ ಕೊಡಿ ಎಂದು ನನ್ನನ್ನು ಕೇಳುವ ಎಲ್ಲರಿಗೂ ನಾನು ಹೇಳುವುದು ಇದನ್ನೇ. ಜೊತೆಗೆ ದಿನಕ್ಕೆ ಎರಡು ಪತ್ರಿಕೆಗಳನ್ನಾದರೂ ಸಂಪೂರ್ಣವಾಗಿ ಓದಬೇಕು”, ಎಂದರು.
ಮೋದಿ ಪ್ರಧಾನಿಯಾದ ನಂತರದಲ್ಲಿ ಮಾಧ್ಯಮಗಳ ನಡೆಯನ್ನು ಟೀಕಿಸುತ್ತಾ ಅಮೀನ್ ಮಟ್ಟು ಅವರು, “ಬಹುತೇಕರಿಗೆ ಕುರುಡು ಆವರಿಸಿಕೊಂಡಿದೆ ಎನಿಸುತ್ತದೆ. ವಿನೋದ್ ಮೆಹ್ತಾ ಅಂತಹವರು ತಮ್ಮ ಬರಹವೊಂದರಲ್ಲಿ, ಮೋದಿ ಪತ್ರಕರ್ತರೊಂದಿಗೆ ಮಾತನಾಡಬೇಕು ಅದರಿಂದ ದೇಶಕ್ಕೂ ಒಳಿತು ಎಂದು ಹೇಳುತ್ತಾರೆ. ಇದುವರೆಗಿನ ಪತ್ರಿಕೋದ್ಯಮ ವರದಿ ಮಾಡಿದ ಯಾವುದೇ ಹಗರಣವಾಗಲಿ, ಅದು ಬಹಿರಂಗವಾದದ್ದು ಪತ್ರಕರ್ತರ ಶ್ರಮದಿಂದ. ಇಂತಹ ಹಿನ್ನೆಲೆ ಇರುವಾಗ, ಪ್ರಧಾನ ಮಂತ್ರಿಯನ್ನು ಪತ್ರಕರ್ತರೊಂದಿಗೆ ಮಾತನಾಡಿ ಎಂದು ಗೋಗರೆಯುವ ಪರಿಸ್ಥಿತಿ ಏಕೆ..?” ಎಂದು ಪ್ರಶ್ನಿಸಿದರು.
ನರೇಂದ್ರ ಮೋದಿ ವಿದೇಶ ಪ್ರವಾಸದಲ್ಲಿದ್ದಾರೆ. ಹಲವು ದೇಶಗಳ ನಾಯಕರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಆದರೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಭಾರತದಲ್ಲಿಯೇ ಉಳಿದಿದ್ದಾರೆ. ಹಾಗಾದರೆ, ಸರಕಾರದಲ್ವಿಲಿ ದೇಶಾಂಗ ಸಚಿವರ ಪಾತ್ರವೇನು. “ಯಾವ ಮಾಧ್ಯಮವೂ ಇಂತಹ ಪ್ರಶ್ನೆಯನ್ನು ಕೇಳುತ್ತಿಲ್ಲ. ವಿದೇಶಾಂಗ ಸಚಿವರು ಗೌಣ ಆಗುತ್ತಿರುವುದು ನನ್ನ ಪ್ರಕಾರ ಸಂಪಾದಕೀಯ ಬರಹಕ್ಕೆ ಅರ್ಹವಾದ ಸಂಗತಿ ಆದರೆ, ಯಾರಿಗೂ ಇದು ಸುದ್ದಿ ಎನಿಸುತ್ತಿಲ್ಲ. ಕುರುಡು ಆವರಿಸುತ್ತಿದೆ” ಎಂದರು.
ಶಿಬಿರಕ್ಕೆ ಚಾಲನೆ ಕೊಟ್ಟು ಮಾತನಾಡಿದ ವಿಜಯ ಕರ್ನಾಟಕ ಸಂಪಾದಕ ಸುಗತ ಶ್ರೀನಿವಾಸರಾಜು ಭಾರತದ ಹೆಗ್ಗಳಿಕೆಯೇ ಅದರ ವೈವಿಧ್ಯತೆ. ಆದರೆ ಇತ್ತೀಚೆಗೆ ಆ ವೈವಿಧ್ಯತೆಯನ್ನು ನಿರಾಕರಿಸುವಂತಹ ಅಭಿಪ್ರಾಯಗಳಿಗೆ ಅಲ್ಲಲ್ಲಿ ಮನ್ನಣೆ ಪಡೆಯುತ್ತಿವೆ. ಪತ್ರಿಕೆಗಳು ಕೂಡಾ ಈ ವೈವಿಧ್ಯತೆಯನ್ನು ಎತ್ತಿಹಿಡಿಯಲು ಸೋಲುತ್ತಿವೆ. ಅಂತಹ ಪ್ರಯತ್ನಗಳು ಅಲ್ಲಲ್ಲಿ ನಡೆದರೂ ಅವು ಕೇವಲ ಟೋಕನಿಸಂ ಹಂತಕ್ಕೆ ನಿಂತುಬಿಟ್ಟಿವೆ ಎಂದರು.
ಚರ್ಚೆ ಸಂದರ್ಭದಲ್ಲಿ ಸುದ್ದಿ ವಾಹಿನಿಗಳ ಅವಾಂತರದ ಮಾತು ಬಂದಾಗ, ಭಾರತದಲ್ಲಿ ಟಿ.ವಿ ಮಾಧ್ಯಮ ಇನ್ನೂ ತನ್ನ ಪ್ರೌಢಾವಸ್ಥೆಯಲ್ಲಿದೆ (adolescence). ಮುದ್ರಣ ಮಾಧ್ಯಮಕ್ಕೆ ಸುದೀರ್ಘ ಇತಿಹಾಸವಿದೆ, ಗಾಂಭೀರ್ಯವಿದೆ. ಆದರೆ ಟಿ.ವಿ ಮಾಧ್ಯಮಕ್ಕೆ ಅದಾವುದೂ ಇಲ್ಲ ಎಂದರು. ಪ್ರಜಾವಾಣಿ ಸಮೂಹದ ಸಹಾಯಕ ಸಂಪಾದಕಿ ಹಾಗೂ ಹಿರಿಯ ಪತ್ರಕರ್ತೆ ಆರ್.ಪೂರ್ಣಿಮಾ ಅವರು ಶಿಬಿರದಲ್ಲಿ ಪಾಲ್ಗೊಂಡಿದ್ದ ಪತ್ರಕರ್ತರೊಂದಿಗೆ ಸಂವಾದ ನಡೆಸಿದರು.