ಸ್ನೇಹಿತರೇ,
ಕಳೆದ ವರ್ಷದ ಡಿಸೆಂಬರ್ನಲ್ಲಿ ಮಂಗಳೂರಿನಲ್ಲಿ “ಜನ ನುಡಿ” ಎಂಬ ಕಾರ್ಯಕ್ರಮ ನಡೆದಿದ್ದು, ಅದರ ಚಾರಿತ್ರಿಕ ಹಿನ್ನೆಲೆ ಮತ್ತು ಅದರ ಅಗತ್ಯದ ಬಗ್ಗೆ ತಮಗೆಲ್ಲ ತಿಳಿದಿದೆ ಎಂದು ಭಾವಿಸುತ್ತೇನೆ. (ಇಲ್ಲವಾದಲ್ಲಿ ನೀವು “ಜನ ನುಡಿ” ಪದವನ್ನು ನಮ್ಮ ಸರ್ಚ್ ಬಾಕ್ಸ್ನಲ್ಲಿ ಹಾಕಿ ಹುಡುಕಿದರೆ ಸಿಗುತ್ತದೆ. ಕಳೆದ ಬಾರಿಯ ಜನ ನುಡಿಯ ಕಾರ್ಯಕ್ರಮದ ಆಯೋಜನೆಯ ಹಿನ್ನೆಲೆಯಲ್ಲಿ ಬರೆದಿದ್ದ ಒಂದು ಟಿಪ್ಪಣಿ ಇಲ್ಲಿದೆ.)
ಈಗ ಜನ ನುಡಿಯ ಎರಡನೇ ವರ್ಷದ ಕಾರ್ಯಕ್ರಮವನ್ನು ಇದೇ ಶನಿವಾರ ಮತ್ತು ಭಾನುವಾರ (ಡಿಸೆಂಬರ್ 13-14, 2014) ಆಯೋಜಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ವರ್ತಮಾನ.ಕಾಮ್ ಬಳಗ ನೈತಿಕ ಬೆಂಬಲ ಕೊಡುತ್ತಿದೆ ಮತ್ತು ವರ್ತಮಾನದ ಓದುಗರಿಗೂ ಈ ಮೂಲಕ ಆಹ್ವಾನಿಸಲಾಗುತ್ತಿದೆ. ನಮ್ಮ ಬಳಗದ ಹಲವು ಲೇಖಕರು ಮತ್ತು ಮಿತ್ರರೂ ಅಲ್ಲಿ ಬರಲಿದ್ದಾರೆ. ನೀವುಗಳೂ ಸಹ ದಯವಿಟ್ಟು ಬಂದು, ಭಾಗವಹಿಸಿ. ಕಾರ್ಯಕ್ರಮಕ್ಕೆ ಯಾವುದೇ ಶುಲ್ಕ ಇರುವುದಿಲ್ಲ. ಶನಿವಾರದ ರಾತ್ರಿ ವಸತಿ ಸೌಕರ್ಯ ಇರುತ್ತದೆ, ಮತ್ತು ಎರಡೂ ದಿನ ತಿಂಡಿ-ಊಟದ ವ್ಯವಸ್ಥೆ ಇರುತ್ತದೆ. ಕಾರ್ಯಕ್ರಮದ ಪೂರ್ಣ ವಿವರಗಳ ಆಹ್ವಾನ ಪತ್ರವನ್ನು ಕೆಳಗೆ ಲಗತ್ತಿಸಲಾಗಿದೆ.
ನಮಸ್ಕಾರ,
ರವಿ,
ವರ್ತಮಾನ.ಕಾಮ್
ನಾಡಿನ ಪ್ರಗತಿಪರ ಮನಸ್ಸುಗಳು ಒಂದುಗೂಡಿ ಸಮಕಾಲೀನ ತಲ್ಲಣಗಳಿಗೆ ಮದ್ದನ್ನು ಹುಡುಕಲು ಪೂರಕವಾಗಿ ಆಯೋಜಿತವಾಗಿರುವ ಈ ಜನ ನುಡಿ ಕಾರ್ಯಕ್ರಮಕ್ಕೆ ಯಶಸ್ಸನ್ನು ಕೋರುತ್ತೇನೆ. ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಎಲ್ಲಾ ಪ್ರಗತಿಪರ ಸ್ನೇಹಿತರಿಗೆ ಜನನುಡಿ ಕಾರ್ಯಕ್ರಮ ಉತ್ತಮ ಅನುಭವವನ್ನು ಕೊಡಲಿ ಎಂದು ಆಶಿಸುತ್ತೇನೆ. ಕಾರ್ಪರೇಟ್ ಮೌಲ್ಯಗಳ ಮುಖಾಮುಖಿಯಲ್ಲಿ ಸಾಹಿತ್ಯ ಎಂಬ ವಿಷಯದ ಮೇಲೆ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಕಾರ್ಪರೇಟ್ ಒಡನಾಟದ ಸಾಹಿತಿ ಕಾರ್ನಾಡರ ತಲೆದಂಡ ನಾಟಕಕ್ಕಿಂತ ಲಂಕೇಶರ ಸಂಕ್ರಾಂತಿ ಉತ್ತಮ ಆಯ್ಕೆ ಆಗಬಹುದಿತ್ತು ಅಂತ ಅನ್ನಿಸಿದೆ.