Daily Archives: December 18, 2014

ದೇವನೂರ ಮಹಾದೇವರಿಂದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಿಗೆ ಒಂದು ಬಹಿರಂಗ ಪತ್ರ

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಿಗೆ ಒಂದು ಬಹಿರಂಗ ಪತ್ರ

-ದೇವನೂರ ಮಹಾದೇವ

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಪ್ರೀತಿಯ ಶ್ರೀ ಪುಂಡಲೀಕ ಹಾಲಂಬಿಯವರಿಗೆ ವಂದನೆಗಳು.

ಭಾರತದ ಸಂವಿಧಾನವು ಅಂಗೀಕರಿಸಲ್ಪಟ್ಟ ೨೨ ದೇಶೀ ಭಾಷೆಗಳು ಹಾಗೂ ದೇಶದಾದ್ಯಂತ ಇರುವ ಅನೇಕಾನೇಕ ಅಲ್ಪಸಂಖ್ಯಾತ ಭಾಷೆಗಳು ಇತ್ತೀಚಿನ ಸುಪ್ರೀಂಕೋರ್ಟ್ ತೀರ್ಪಿನಿಂದಾಗಿ ಕಾಲು ಕತ್ತರಿಸಿಕೊಂಡು ಚಲನೆ ಇಲ್ಲದ ಸ್ಥಿತಿಗೆ ತಲುಪಿರುವ ಈ ಸಂದರ್ಭದಲ್ಲಿ ಏನು ಹೇಳುವುದು? ಹೇಗೆ ಹೇಳುವುದು?

ಯಾಕೆಂದರೆ ಸುಪ್ರೀಂಕೋರ್ಟ್‌ನಲ್ಲಿ ಭಾಷಾಮಾಧ್ಯಮದ ವಾದ-ವಿವಾದ ನಡೆಯುತ್ತಿದ್ದಾಗ ನ್ಯಾಯಾಧೀಶರೊಬ್ಬರು “ಡೆಲ್ಲಿಗೆ ಬಂದಿದ್ದ ಜಪಾನ್ ದೇಶದ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರೊಬ್ಬರು ಇಂಗ್ಲಿಷ್‌ನಲ್ಲಿ ಮಾತಾಡಿದರು, ಅವರು ಇಂಗ್ಲಿಷ್‌ನಲ್ಲಿ ಮಾತಾಡದೇ ಹೋಗಿದ್ದರೆ ಯಾರಿಗೂ ತಿಳಿಯುತ್ತಿರಲಿಲ್ಲ, ಭಾಷೆಯ ಕುರಿತು ಮಡಿವಂತಿಕೆ ಹೊಂದಿದ್ದ ಚೈನಾದೇಶವೂ ಈಗೀಗ ಇಂಗ್ಲಿಷ್‌ನ ಸಾಧ್ಯತೆಗಳಿಗೆ ತೆರೆದುಕೊಳ್ಳುತ್ತಿದೆ” ಎಂದದ್ದು ಪತ್ರಿಕೆಗಳಲ್ಲಿ ವರದಿಯಾಗಿತ್ತು. ಬಹಳ ಹಿಂದೆ ಕನ್ನಡಿಗರೊಬ್ಬರು ಇಂಗ್ಲೆಂಡ್‌ಗೆ ಹೋಗಿ ಬಂದು ‘ಅಬ್ಬಬ್ಬಾ ಇಂಗ್ಲೆಂಡ್‌ನಲ್ಲಿ ಚಿಕ್ಕ ಚಿಕ್ಕ ಮಕ್ಕಳೂ ಕೂಡ ಇಂಗ್ಲಿಷ್‌ನಲ್ಲಿ ಮಾತಾಡ್ತಾರೆ’ ಅಂದಿದ್ದ ಆ ಮುಗ್ಧತೆಯಂತೆಯೇ ಇದೂ ಕಾಣಿಸುತ್ತದೆ. ಇದರ ಬದಲು ಆ ಸುಪ್ರೀಂಕೋರ್ಟ್‌ನ ನ್ಯಾಯಾಧೀಶರು ‘ತಾನು ಭಾರತದ ಸರ್ವೋಚ್ಛ ನ್ಯಾಯಾಧೀಶ, ಅವರೂ ಜಪಾನ್‌ನ ಸರ್ವೋಚ್ಛ ನ್ಯಾಯಾಧೀಶರು, ಈಗ ತಮ್ಮ ಮುಂದೆ ಪ್ರಾಥಮಿಕ ಶಿಕ್ಷಣ ಮಾಧ್ಯಮ ವಿಚಾರ ಚರ್ಚೆಗೆ ಬಂದಿದೆ. ಜಪಾನ್‌ನಲ್ಲಿ ಹೇಗಿರಬಹುದು?’ ಎಂಬ ಕೂತೂಹಲಕ್ಕಾದರೂ ಚರ್ಚಿಸಿದ್ದರೆ. ಆಗ ಜಪಾನ್‌ನಲ್ಲಿರುವುದು ಜಪಾನಿ ಭಾಷಾ ಶಿಕ್ಷಣ ಮಾಧ್ಯಮ ಎಂಬುದಾದರೂ ತಿಳಿದುಬರುತ್ತಿತ್ತು. ಜಗತ್ತಿನ ಯಾವುದೇ ಭಾಷೆಯ ಶ್ರೇಷ್ಠ ಕೃತಿಯು ಪ್ರಕಟವಾದ ಒಂದು ವಾರದೊಳಗೆ ಅದು ಜಪಾನಿ ಭಾಷೆಗೆ ಅನುವಾದಗೊಂಡು ಪ್ರಕಟಗೊಳ್ಳುವ ವಿದ್ಯಮಾನವೂ ತಿಳಿದುಬರುತ್ತಿತ್ತು. ಹಾಗೇ ಚೈನಾದಲ್ಲೂ ಶಿಕ್ಷಣ ಮಾಧ್ಯಮವು ಚೈನೀಸ್ ಭಾಷೆಯಲ್ಲಿ ಇದ್ದು ಚೈನಾ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಲು ಭಾಷೆಯಾಗಿ ಇಂಗ್ಲಿಷ್, ಸ್ಪಾನಿಷ್ ಹೀಗೆ ಮಾರ್ಕೆಟ್‌ನ ಪ್ರಮುಖ ಭಾಷೆಗಳನ್ನೆಲ್ಲಾ ಕಲಿಸಲು ಸಿಕ್ಕಾಪಟ್ಟೆ ಖರ್ಚು ಮಾಡುತ್ತಿರುವುದು ಗೋಚರಿಸುತ್ತಿತ್ತು. ಹೀಗೇ ದಕ್ಷಿಣ ಕೊರಿಯಾ, ಥೈಲಾಂಡ್, ಸ್ಕಾಂಡಿನೇವಿಯನ್ ದೇಶಗಳು, ಜಿ-೮ ದೇಶಗಳು ಹೀಗೆ ಸ್ವತಂತ್ರವಾಗಿರುವ ದೇಶಗಳಲ್ಲೆಲ್ಲಾ ಅವರವರ ಮಾತೃಭಾಷೆಯ ಶಿಕ್ಷಣ ಮಾಧ್ಯಮ ಸಹಜ ಆಯ್ಕೆಯಾಗಿದೆ. ಇಸ್ರೇಲ್‌ನಲ್ಲೂ ಯಹೂದಿಗಳ ಹೀಬ್ರೂ ಮಾತೃಭಾಷೆಯೇ ಶಿಕ್ಷಣಮಾಧ್ಯಮ. ಉನ್ನತ ಶಿಕ್ಷಣದಲ್ಲಿ ಕೆಲವು ಕಡೆ ಅಲ್ಪಸ್ವಲ್ಪ ಬದಲಾವಣೆ ಇರಬಹುದಷ್ಟೇ. ಅಷ್ಟೇಕೆ, ಮಲೇಷಿಯಾದ ರಾಷ್ಟ್ರೀಯ ಶಾಲೆಗಳಲ್ಲಿ ’ಬಹಾಸ ಮಲೇಷಿಯಾ’ ಮತ್ತು ಸ್ಥಳೀಯ ಶಾಲೆಗಳಲ್ಲಿ ಚೈನೀಸ್ ಮತ್ತು ತಮಿಳು ಭಾಷಾಮಾಧ್ಯಮದಲ್ಲಿ ಗಣಿತ ಮತ್ತು ವಿಜ್ಞಾನಗಳನ್ನು ಬೋಧಿಸಲಾಗುತ್ತಿದೆ. ಇಲ್ಲಿ ಭಾರತದಲ್ಲಿ ತಮಿಳರು ’ತಮಿಳ್ ತಮಿಳ್’ ಎಂದು ಎದೆಚಚ್ಚಿಕೊಂಡು ತಮಿಳು ಪದ ಉಚ್ಛಾರಣೆ ಮಾಡುವುದರಲ್ಲೇ ಸಂತೋಷಪಡುತ್ತಿದ್ದಾರೆ. ತಮಿಳು ಶಿಕ್ಷಣ ಮಾಧ್ಯಮವಾಗಿ ಬೆಳೆದಿದ್ದರೆ ಆ ನೆರಳಲ್ಲಿ ನಾವೂ ಬೆಳೆಯಬಹುದಿತ್ತು.

ಒಟ್ಟಿನಲ್ಲಿ ಯಾವ ಸ್ವತಂತ್ರ ದೇಶವೂ ತನ್ನ ಮಾತೃಭಾಷೆಗಳನ್ನು ಕೊಂದು ಪರಭಾಷೆಯನ್ನು ಸ್ವೀಕರಿಸಿಲ್ಲ. ತಮ್ಮ ಮಾತೃಭಾಷೆಯನ್ನು ಶಿಕ್ಷಣ ಮಾಧ್ಯಮ ಕೇಂದ್ರ ಮಾಡಿಕೊಂಡು ಪರಭಾಷೆಯನ್ನು ಒಂದು ಭಾಷೆಯಾಗಿ ಒಳಗೊಂಡು ಒಟ್ಟಾಗಿ ಜೊತೆಗೂಡಿ ಬೆಳೆಯುವ ಪ್ರಕ್ರಿಯೆ ಜಗತ್ತಿನಾದ್ಯಂತ ಜರುಗುತ್ತಿದೆ.

ಹಾಗಾದರೆ ಭಾರತಕ್ಕೇನಾಗಿದೆ? ನಾವು ಗುಲಾಮಗಿರಿಯಿಂದ ಭೌತಿಕವಾಗಿ ಬಿಡುಗಡೆ ಹೊಂದಿದ್ದರೂ ಮಾನಸಿಕ ಗುಲಾಮಗಿರಿ ಸೋಂಕು ಇನ್ನೂ ಗುಣವಾಗಿಲ್ಲವೇನೋ. devanurಇಂದು ಈ ಜಗತ್ತಿನ ಓಟ ಅಂದರೆ ಅಭಿವೃದ್ಧಿ ಮತ್ತು ಸ್ಪರ್ಧೆ – ಈ ದೃಷ್ಟಿಯಲ್ಲಿ ನೋಡಿದರೂ ಈ ಓಟದಲ್ಲಿ ದಾಪುಗಾಲು ಹಾಕುತ್ತಿರುವ ಚೈನಾ, ಜಪಾನ್, ಕೊರಿಯಾ, ಥಾಯ್‌ಲೆಂಡ್ ದೇಶಗಳಲ್ಲಿ ಸಮಾನ ಮತ್ತು ಮಾತೃಭಾಷಾ ಶಿಕ್ಷಣ ಮಾಧ್ಯಮ ಇರುವುದಕ್ಕೂ ಅವುಗಳ ಅಭಿವೃದ್ಧಿ ಮತ್ತು ಸ್ಪರ್ಧೆ ಓಟಕ್ಕೂ ಸಂಬಂಧವಿರಬೇಕೇನೋ ಅನ್ನಿಸುತ್ತದೆ. ಯಾಕೆಂದರೆ ಮಾತೃಭಾಷಾ ಸಮಾನ ಶಿಕ್ಷಣದಲ್ಲಿ ಇಡೀ ಸಮುದಾಯದೊಳಗಿಂದ ಎಲ್ಲೆಲ್ಲಿಂದಲೋ ಯಾರ್‍ಯಾರೋ ಪ್ರತಿಭಾವಂತರು ಕುಶಲಿಗಳು ಹುಟ್ಟಿಕೊಂಡು ದೇಶದ ಸಂಪತ್ತಾಗುತ್ತಾರೆ. ಮನೆಮನೆಯಲ್ಲೂ ಜ್ಞಾನಾಧಾರಿತ ಕೌಶಲ್ಯ ಉಳ್ಳವರ ಆರ್ಥಿಕ ಚಟುವಟಿಕೆ ಹೆಚ್ಚುತ್ತದೆ. ಇಂಥವು ಯಾಕೆ ನಮ್ಮ ರಾಜ್ಯಾಂಗ, ಕಾರ್ಯಾಂಗ, ನ್ಯಾಯಾಂಗಗಳಿಗೆ ಕಾಣುತ್ತಿಲ್ಲ? ಇದು ದೇಶಕೋಶ ತಿರುಗುವ ಐಟಿಬಿಟಿ ಮಂದಿಗಾದರೂ ಅವರ ಲಾಭದ ದೃಷ್ಟಿಯಿಂದಲಾದರೂ ಯಾಕೆ ಕಾಣಲಿಲ್ಲ? ಇದು ಚಿದಂಬರ ರಹಸ್ಯವೇನೂ ಅಲ್ಲ. ಭಾರತವು ಹಿಂದೆ ಶೂದ್ರ ಸಮುದಾಯಕ್ಕೆ ಶಿಕ್ಷಣವನ್ನೇ ಕೊಡಬಾರದು ಎಂಬ ನಿರಾಕರಣೆಯನ್ನು ಮೀರಿ ಈಗ ಎಲ್ಲರಿಗೂ ಶಿಕ್ಷಣ ಎಂಬ ಮಾತನ್ನೇನೋ ಹೇಳುತ್ತಿದೆ. ಆದರೆ ಶಿಕ್ಷಣದೊಳಗೇ ತಾರತಮ್ಯದ ಜಾತಿ-ವರ್ಗ ರೋಗದ ಪಂಚವರ್ಣ ಪದ್ಧತಿ ಅಳವಡಿಸಿಕೊಂಡಿದೆ, ಚಾತುರ್ವರ್ಣದ ಸ್ವಭಾವವಾದ ಪ್ರತ್ಯೇಕತೆ, ತಾರತಮ್ಯ ಉಳಿಸಿಕೊಂಡಿದೆ. ೧೯೬೩-೬೪ ರ ಕೊಠಾರಿ ಶಿಕ್ಷಣ ಆಯೋಗವು ಹೇಳಿದ್ದ “ಸಮಾನ ಶಿಕ್ಷಣ ಅನುಷ್ಠಾನ ಮಾಡದಿದ್ದರೆ ಶಿಕ್ಷಣವೇ ಸಾಮಾಜಿಕ ಪ್ರತ್ಯೇಕತೆ ಮತ್ತು ವರ್ಗಗಳನ್ನು ಹೆಚ್ಚಿಸಿ ಮತ್ತಷ್ಟು ಕಂದರ ಉಂಟುಮಾಡುತ್ತದೆ” ಎಂಬ ಮಾತು ನಮ್ಮೆದುರು ಇದ್ದೂ ಕೂಡಾ ಭಾರತ ಪಂಚವರ್ಣ ಶಿಕ್ಷಣವನ್ನು ನೀಡುತ್ತಿರುವುದು ಏನನ್ನು ಹೇಳುತ್ತದೆ? ಬಹುಶಃ ಭಾರತಕ್ಕೆ ತಾರತಮ್ಯ ಪ್ರತ್ಯೇಕತೆ ಮೇಲುಕೀಳು ಇಲ್ಲದಿದ್ದರೆ ನಿದ್ದೆ ಬರುವುದಿಲ್ಲವೇನೋ. ಒಂದು ಕಡೆ ಗುಲಾಮಗಿರಿಯ ಸೋಂಕು, ಇನ್ನೊಂದು ಕಡೆ ವರ್ಗ-ಜಾತಿಯ ಸೋಂಕು, ಇದು- ಕಾರ್‍ಯಾಂಗ, ರಾಜ್ಯಾಂಗ, ನ್ಯಾಯಾಂಗ ಅಂತ ಏನೇನು ಇದೆಯೋ ಅಲ್ಲೆಲ್ಲಾ ಈ ಅಂಟುರೋಗ ಅಂಟಿರಬೇಕು.

ಹಾಗಾಗೇ ಭಾರತದಲ್ಲಿ ಇಂದು ’ಪಂಕ್ತಿಭೇದ ಶಿಕ್ಷಣಪದ್ಧತಿ’ ನಮ್ಮ ಮುಂದಿದೆ. ಜಾತಿ ತಾರತಮ್ಯದ ಭಾರತದಲ್ಲಿ ಎಳೆಯ ಮಕ್ಕಳ ಮನಸ್ಸು ಆಕಾರ ಪಡೆಯುವಾಗಲಿನ ಪ್ರಾಥಮಿಕ ಶಿಕ್ಷಣದಲ್ಲಿ ನಮ್ಮ ಎಲ್ಲಾ ಜಾತಿ ಜನಾಂಗ ಧರ್ಮ ವರ್ಗಗಳ ಎಳೆಯರು ಜೊತೆಗೂಡಿ ಒಡನಾಡುವುದೇ ಭಾರತಕ್ಕೆ ಬಲುದೊಡ್ಡ ಶಿಕ್ಷಣ ಎಂಬುದನ್ನು ಮನಗಾಣದೆ ಸೋಲುತ್ತಿದ್ದೇವೆ. ನೆರೆಹೊರೆ ಸಮಾನ ಮಾತೃಭಾಷಾ ಮಾಧ್ಯಮ ಶಿಕ್ಷಣ ಪದ್ಧತಿ ಪ್ರಾಥಮಿಕದಲ್ಲಿಲ್ಲದ ಕಾರಣವಾಗಿ – ಸರ್ಕಾರಿ ಶಾಲೆಗಳ ಗುಣಮಟ್ಟ ದಿನದಿನಾ ಕುಸಿಯುತ್ತಿದೆ. ಕಾರಣವನ್ನು ಬೇರೆಲ್ಲೋ ಹುಡುಕುತ್ತಿದ್ದೇವೆ. ನೆರೆಹೊರೆಯ ಸಮಾನ ಶಿಕ್ಷಣ ಪದ್ಧತಿ ಅನುಷ್ಠಾನಗೊಂಡರೆ ಆ ಶಾಲೆಗೆ ಹೇಳುವವರು ಕೇಳುವವರು ಸುತ್ತಲೂ ಹುಟ್ಟಿಕೊಂಡು ಆ ಕಳಪೆ ಶಾಲೆಯೂ ತಂತಾನೆ ಉನ್ನತೀಕರಣಗೊಳ್ಳುತ್ತದೆ. ಕಳಪೆ ಶಾಲಾ ಉನ್ನತೀಕರಣಕ್ಕೆ ಯಾವ ತರಬೇತಿ ಅನುಕೂಲಗಳೂ ಬೇಕಾಗಿಲ್ಲ. ಇಂಥ ಪ್ರಾಥಮಿಕ ಶಿಕ್ಷಣದಲ್ಲಿ, ಶಿಕ್ಷಣ ಮಾಧ್ಯಮವಾಗಿ ಮಾತೃಭಾಷೆಯನ್ನು ಅಳವಡಿಸಿಕೊಂಡರೆ ಅದಷ್ಟೇ ಸಾಕು. ಯಾಕೆಂದರೆ ಈ ಅರೆಮನಸ್ಸಿನ ಅಸಮಾನ ಶಿಕ್ಷಣದಿಂದಾಗಿ ಹಳ್ಳಿ ಮಕ್ಕಳು, ಗಲ್ಲಿ ಮಕ್ಕಳು, ತಳಸಮುದಾಯಗಳ ಮಕ್ಕಳು ಶಿಕ್ಷಣದಿಂದಲೇ ಉದುರಿ ಬೀಳುತ್ತಿದ್ದಾರೆ. ಹಾಗಾಗಿ ಈ ಶಿಕ್ಷಣ ಪದ್ಧತಿಯು ’ಒಳಗೊಂಡು ಹೊರಹಾಕುವಿಕೆ’ಯ (Inclusive Exclusion) ಜಾತಿ-ವರ್ಗ ಸೋಂಕಿನ ಶಿಕ್ಷಣ ಪದ್ಧತಿಯಾಗಿಬಿಟ್ಟಿದೆ. ಇದು ಸೌಲಭ್ಯವಂಚಿತ ಮಕ್ಕಳು ಶಿಕ್ಷಣದಲ್ಲಿ ಮುಂದೆ ದಾಟದಂತೆ ಉದುರಿಸುತ್ತಿದೆ. ಈ ಫಿಲ್ಟರ್ ಕೆಲಸದಲ್ಲಿ ಇಂಗ್ಲಿಷ್ ಒಂದು ದೊಡ್ಡ ಫಿಲ್ಟರ್ ಆಗಿ ಭಾಗಿಯಾಗಿದೆ.

ಈಗ ನ್ಯಾಯದ ಕಡೆ ನೋಡಿದರೂ ಆಸೆ ಭರವಸೆಗಳು ಕ್ಷೀಣವಾಗಿವೆ. ಪ್ರಾಥಮಿಕ ಶಿಕ್ಷಣ ಮಾಧ್ಯಮದ ತೀರ್ಪು ನೀಡುತ್ತ ನಮ್ಮ ಸರ್ವೋಚ್ಛ ನ್ಯಾಯಾಲಯವು ‘ಅಭಿವ್ಯಕ್ತಿ ಸ್ವಾತಂತ್ರ್ಯವು ಮಾತಿನ ಮಾಧ್ಯಮದ ಆಯ್ಕೆಯನ್ನು ಒಳಗೊಂಡಿರುತ್ತದೆ ಹಾಗೂ ತರಗತಿಗಳು ಅಭಿವ್ಯಕ್ತಿಯ ಜಾಗಗಳಾಗಿರುತ್ತವೆ ಎಂದಿದೆ. ಮೂಲಭೂತ ಹಕ್ಕನ್ನು ಕಿತ್ತುಹೋಗುವಷ್ಟು ಹಿಗ್ಗಾಮುಗ್ಗಾ ಎಳೆದುಬಿಟ್ಟಿದೆ ಹಾಗೂ ಸ್ವಾತಂತ್ರ್ಯ ಮತ್ತು ಸ್ವೇಚ್ಛೆಯ ನಡುವಿನ ಗೆರೆಯನ್ನು ಮಸುಕಾಗಿಸಿದೆ. ತಮಾಷೆ ನೋಡಿ-ಶಿಷ್ಟವಾಗಿ ಕಲಿಯುವ ಮುನ್ನ, ಮಗು ತಾನು ಹುಟ್ಟಿದ ಪರಿಸರದೊಳಗಿಂದ ಒಡಮೂಡಿಸಿಕೊಂಡ ಭಾಷೆಯೇ ಮಾತೃಭಾಷೆ- ಎಂಬ ಪ್ರಾಥಮಿಕ ಭಾಷಾ ಜ್ಞಾನಕ್ಕೆ ನಮ್ಮ ನ್ಯಾಯಾಲಯ ಕತ್ತು ಹಿಸುಕಿದಂತಿದೆ. ಶಿಕ್ಷಣ ಮಾಧ್ಯಮದ ಆಯ್ಕೆ ಮಗುವಿಗೆ ಆ ಮಗುವಿನ ಪರವಾಗಿ ಪೋಷಕರಿಗೆ ಸೇರಿದೆ ಅನ್ನುತ್ತದೆ. ಆಯ್ಕೆ ಪ್ರಶ್ನೆ ಬರುವುದು ಯಾವಾಗ? ಎರಡು ಮೂರು ಇದ್ದಾಗ ಮಾತ್ರ. ಒಂದೇ ಇದ್ದಾಗ ಆಯ್ಕೆ ಎಲ್ಲಿ ಬರುತ್ತದೆ? ಅಭಿವ್ಯಕ್ತಿ ಸ್ವಾತಂತ್ರ್ಯ ಅಂದರೂ ಇರುವುದನ್ನು ಅಭಿವ್ಯಕ್ತಿಗೊಳಿಸುವುದು ತಾನೇ? ಇದೂ ಇರಲಿ – ಗೊತ್ತಿಲ್ಲದಿರುವುದರಿಂದ ಗೊತ್ತಿಲ್ಲದ ಕಡೆಗೆ ಕ್ರಮಿಸುವುದು- ಇದು ಶಿಕ್ಷಣದ ಪ್ರಾಥಮಿಕ ತಿಳಿವಳಿಕೆ. ಇದನ್ನಾದರೂ ನಮ್ಮ ನ್ಯಾಯಾಲಯ ಲಕ್ಷಿಸಬೇಕಾಗಿತ್ತು. ಹಾಗೆಯೇ ಭಾಷಾವಾರು ಪ್ರಾಂತ್ಯ ರಚನೆ ಸಂದರ್ಭದಲ್ಲಿ ಮುಂಬರುವ ಅಪಾಯವನ್ನೂ ಮನಗಂಡು ಅಂದರೆ ರಾಜ್ಯಭಾಷೆಗಳು ಪಾಳೆಗಾರರಂತೆ ವರ್ತಿಸುತ್ತಾ ಆಯಾ ರಾಜ್ಯದೊಳಗೆ ಬರುವ ಹತ್ತಾರು ಮಾತೃಭಾಷೆ (ಉದಾ: ಕರ್ನಾಟಕದಲ್ಲಿ ತುಳು, ಉರ್ದು, ಕೊಂಕಣಿ, ಮರಾಠಿ, ತಮಿಳು, ತೆಲುಗು, ಕೊಡವ ಇತ್ಯಾದಿ)ಗಳನ್ನು ಕತ್ತು ಹಿಸುಕಿ ಬಿಡುತ್ತವೆ ಎಂಬ ಆತಂಕದಿಂದ ಅಲ್ಪಸಂಖ್ಯಾತ ಭಾಷೆಗಳ ರಕ್ಷಣೆಗೆ ಕತ್ತಿಯಂತೆ ಕೊಟ್ಟ ವಿಧಿಗಳನ್ನು ಬಳಸಿಯೇ ಆ ಅಲ್ಪಸಂಖ್ಯಾತ ಭಾಷೆಗಳನ್ನೂ ಜೊತೆಗೇ ಎಲ್ಲಾ ದೇಶಿ ಭಾಷೆಗಳನ್ನು ಕೊಲ್ಲಲು ಬಳಸಿದಂತಾಗಿಬಿಟ್ಟಿದೆ! ಉಳಿಗಾಲವಿಲ್ಲ.

ಹೀಗಿರುವಾಗ ನಾವು ಯಾವ ಕಡೆ ನೋಡಬೇಕು? ಈಗ ಪಾರ್ಲಿಮೆಂಟ್‌ಗೇ ಚಾಟಿ ಬೀಸಬೇಕಾಗಿದೆ. ಜನಾಂದೋಲನ, ರಾಜಕೀಯದ ಮೇಲೆ ಒತ್ತಡ ವ್ಯಾಪಕವಾಗಬೇಕಾಗಿದೆ. ಸಾಹಿತ್ಯ ಪರಿಷತ್‌ನಿಂದಲೂ ಈ ನಡೆಯನ್ನೇ ನಿರೀಕ್ಷಿಸುತ್ತೇನೆ. ಪರಿಷತ್ತಿಗೆ ನೂರು ವರ್ಷಗಳ ಹಿರಿಮೆ ಜತೆ ನೂರು ವರ್ಷದ ಜಡ್ಡೂ ಇರಬಹುದು. ಆದರೆ ಜೀವವಿದೆ. ಪೊರೆ ಕಳಚಬೇಕಾಗಿದೆ ಅಷ್ಟೇ. ಆಗ ಮಾತ್ರ – ಗುಣಮುಖವಾಗಿಸಲು ಕರೆಂಟ್ ಷಾಕ್ ಕೊಡುವಂತಹ ನಿರ್ಧಾರಗಳನ್ನು ತೆಗೆದುಕೊಳ್ಳಲು ಶಕ್ಯವಾಗಬಹುದು.

ಸಾಹಿತ್ಯ ಪರಿಷತ್ ಹೊಸ ಹುಟ್ಟು ಪಡೆದರೆ ಅದಕ್ಕೆ ಪೂರಕ ವಾತಾವರಣ ಈಗ ಕರ್ನಾಟಕ ರಾಜ್ಯದಲ್ಲಿ ಇದೆ. ಯಾಕೆಂದರೆ ನನ್ನಷ್ಟೇ ಅಥವಾ ನಿಮ್ಮಷ್ಟೆ ಮಾತೃಭಾಷೆ ಪ್ರಾಥಮಿಕ ನೆರೆಹೊರೆ ಸಮಾನಶಿಕ್ಷಣದ ಕಳಕಳಿ ಇರುವ ಮುಖ್ಯಮಂತ್ರಿಗಳನ್ನು ಈ ರಾಜ್ಯ ಈಗ ಪಡೆದಿದೆ. ಬಹುಶಃ ಹಿಂದೆ ಇಂಥ ಸಂದರ್ಭ ಇರಲಿಲ್ಲ ಎನ್ನಬಹುದು. ಹಾಗೇ ಮುಂದೆ ಗೊತ್ತಿಲ್ಲ. ಶ್ರೀ ಸಿದ್ದರಾಮಯ್ಯ, ಶ್ರೀ ನಿತೀಶ್‌ಕುಮಾರ್‌ರಂಥ ಮುಖ್ಯಮಂತ್ರಿಗಳು ಮುಖವಾಡ ಇಲ್ಲದವರು, ಹೃತ್ಪೂರ್ವಕತೆ ಇರುವವರು ಜೊತೆಗೆ ಧೈರ್ಯವಂತರೂ ಕೂಡ. ಹಾಗಾಗಿ ಈ ರಾಜಕಾರಣದೊಳಗೂ ಇಂಥವರಿಂದ ಒಂದಿಷ್ಟು ನಿರೀಕ್ಷಿಸಬಹುದು. ಇಂಥವರಿಗೆ ಪಂಕ್ತಿಬೇಧವೂ ಗೊತ್ತು. ನೆರೆಹೊರೆ ಸಮಾನ ಮಾತೃಭಾಷಾ ಪ್ರಾಥಮಿಕ ಶಿಕ್ಷಣವಿಲ್ಲದ ಕಾರಣವಾಗಿ ಹಳ್ಳಿಮಕ್ಕಳು, ಗಲ್ಲಿಮಕ್ಕಳು, ತಳಸಮುದಾಯದ ಮಕ್ಕಳು ಶಿಕ್ಷಣದಿಂದಲೇ ಉದುರಿಹೋಗುತ್ತಿರುವುದೂ ಗೊತ್ತು. ಈ ಸಂದರ್ಭದಲ್ಲಿ ಈಗ ಸಾಹಿತ್ಯ ಪರಿಷತ್ ಧೈರ್ಯ ಮಾಡಿ ಹೊಸ ಹುಟ್ಟು ಪಡೆದು ಸರ್ಕಾರಕ್ಕೆ ಸವಾಲೆಸೆದರೆ ಒಂದಿಷ್ಟು ಬದಲಾವಣೆ ಆಗಲೂಬಹುದು. ಹೊಸ ಸಾಧ್ಯತೆಗಳು ಗೋಚರಿಸಲೂ ಬಹುದು.

ಅದಕ್ಕಾಗಿ, ಸಂವಿಧಾನ ತಿದ್ದುಪಡಿಗೆ ರಾಜಕೀಯ ಒತ್ತಡವನ್ನು ನಿರಂತರವಾಗಿ ಉಂಟು ಮಾಡುತ್ತಾ, ಜೊತೆಗೆ ಇಂಗ್ಲಿಷ್ ಅನ್ನು ಒಂದನೇ ತರಗತಿಯಿಂದಲೇ ಒಂದು ಕಲಿಕೆಯ ಭಾಷೆಯಾಗಿ ಒಪ್ಪಿಕೊಂಡು ಚರ್ಚಿಸಬಹುದಾದ ಒಂದಿಷ್ಟು ವಿಚಾರಗಳನ್ನು ತಮ್ಮ ಮುಂದಿಡುವೆ:

  1. ಭಾರತವನ್ನು ಐಕ್ಯಗೊಳಿಸಲು ಹಾಗೂ ಶಿಕ್ಷಣ ಗುಣಮಟ್ಟವನ್ನು ಉನ್ನತಗೊಳಿಸಲು ಪೂರಕವಾದ ನೆರೆಹೊರೆ ಶಿಕ್ಷಣವನ್ನು ಕಟ್ಟುನಿಟ್ಟಾಗಿ ಪಾಲಿಸುವಂತಾಗಬೇಕು. ಇದಕ್ಕಾಗಿ ಮಕ್ಕಳ ಪ್ರವೇಶಾತಿಯನ್ನು ಆಯಾ ಶಿಕ್ಷಣ ಸಂಸ್ಥೆಗಳಿಗೆ ವಹಿಸಿಕೊಟ್ಟು ದಂಧೆಗೆ ಅವಕಾಶ ನೀಡಬಾರದು. ಬದಲಿಗೆ ಆ ಪ್ರದೇಶದ ಶಿಕ್ಷಣ ಅಧಿಕಾರಿ, ಚುನಾಯಿತ ಪ್ರತಿನಿಧಿ ಹಾಗೂ ಪೋಷಕರ ಸಮಿತಿ ಸಮ್ಮುಖದಲ್ಲಿ – ಲಾಟರಿ ವ್ಯವಸ್ಥೆ ಮೂಲಕ ನಿರ್ಧರಿಸಬೇಕು.
  2. ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಲ್ಲಿ ಶೇಕಡ ೫೧ರಷ್ಟು ಅಲ್ಪಸಂಖ್ಯಾತ ವಿದ್ಯಾರ್ಥಿಗಳೇ ಇರುವಂತೆ ತಿದ್ದುಪಡಿಯಾಗಬೇಕು.
  3. ಖಾಸಗಿ (ಅನುದಾನ ಸಹಿತ-ರಹಿತ) ಶಿಕ್ಷಣ ಸಂಸ್ಥೆಗಳು ಸರ್ಕಾರದ ಏಜೆನ್ಸಿಯಂತೆ ಕಾರ್‍ಯನಿರ್ವಹಿಸುವಂತಹ ಕಾನೂನು ರೂಪಿಸಲು ಒತ್ತಾಯಿಸಬೇಕು.
  4. ಮಕ್ಕಳ ಶಿಕ್ಷಣ ಹಕ್ಕು ಕಾಯಿದೆ -ಕಲಂ ೨೯ (ಎಫ್)ನಲ್ಲಿ medium of instructions shall, as for as practicable, be in child`s mother tongue; -ಎಂದಿದೆ. ಇಲ್ಲಿ as for as practicable ಎಂದು ಇರುವುದು ಮಾತೃಭಾಷಾ ಶಿಕ್ಷಣ ಮಾಧ್ಯಮಕ್ಕೆ ತೊಡರುಗಾಲಾಗಿದೆ. ಆದ್ದರಿಂದ as for as practicable ಅನ್ನುವುದನ್ನು ಕಿತ್ತು ಹಾಕಿ ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷೆ ಅಥವಾ ಸಂವಿಧಾನದಿಂದ ಅಂಗೀಕರಿಸಲ್ಪಟ್ಟ ಇಪ್ಪತ್ತೆರಡು ಭಾಷೆಗಳಲ್ಲಿ ಯಾವುದಾದರೂ ಎಂದು ಆಯ್ಕೆ ನೀಡುವ ಕಾನೂನು ರೂಪಿಸುವಂತಾಗಲು ನಮ್ಮ ಶಾಸಕಾಂಗವನ್ನು ಒತ್ತಾಯಿಸಬೇಕಾಗಿದೆ.
  5. ಮಕ್ಕಳ ಮನಸ್ಸು ಆಕಾರ ಪಡೆಯುವ ಅಂಗನವಾಡಿಯಿಂದ ಮೂರನೇ ತರಗತಿಯವರೆಗೆ ಆಯಾ ರಾಜ್ಯದ ಮಾತೃಭಾಷೆಗಳಲ್ಲಿ ಅಂದರೆ ಮಗುವಿನೊಳಗೆ ಪರಿಸರದಿಂದ ಒಡಮೂಡಿ ಉಂಟಾದ ಭಾಷೆಗಳಲ್ಲಿ (ಉದಾ : ಕರ್ನಾಟಕದಲ್ಲಿ ಅಲ್ಪಸಂಖ್ಯಾತರ ಭಾಷೆಗಳಾದ ತುಳು, ಕೊಂಕಣಿ, ಮರಾಠೀ, ಉರ್ದು, ತಮಿಳು, ಇತ್ಯಾದಿಗಳೊಡನೆ ಸಂವಿಧಾನ ಅಂಗೀಕರಿಸಲ್ಪಟ್ಟ ಭಾಷೆ ಕನ್ನಡವೂ ಸೇರಿದಂತೆ) ಶಿಕ್ಷಣ ಮಾಧ್ಯಮ; ಮುಂದಿನ ಪ್ರಾಥಮಿಕ ಶಿಕ್ಷಣದಲ್ಲಿ ಅಪೇಕ್ಷೆ ಪಟ್ಟವರಿಗೆ ಸಂವಿಧಾನ ಅಂಗೀಕರಿಸಲ್ಪಟ್ಟ ಭಾಷೆಗಳಲ್ಲಿ ಶಿಕ್ಷಣಮಾಧ್ಯಮವನ್ನು -ಮೊದಲ ಹೆಜ್ಜೆಯಾಗಿ ಜಾರಿಯಾಗಿಸಲು ಒತ್ತಾಯಿಸಬೇಕು.
  6. ಸರ್ಕಾರಿ ಶಾಲೆಗಳನ್ನು ಮುಚ್ಚಬಾರದು. ಮುಚ್ಚಿರುವ ಶಾಲೆಗಳನ್ನು ಬೇರೆ ಉದ್ದೇಶಕ್ಕೆ ವಹಿಸಿಕೊಡುವುದು ಅಥವಾ ಪರಭಾರೆ ಮಾಡಬಾರದು. ಇನ್ನು ಮುಂದೆ ಖಾಸಗಿ ಶಿಕ್ಷಣಸಂಸ್ಥೆಗಳಿಗೆ ಪ್ರಾಥಮಿಕ ಶಿಕ್ಷಣಕ್ಕೆ ಅನುಮತಿ ನೀಡದೇ ಸಾರ್ವಜನಿಕ ಶಾಲೆಗಳನ್ನೇ ಹೆಚ್ಚು ಮಾಡಬೇಕು. ಭಾರತದ ಐಕ್ಯತೆಯ ದೃಷ್ಟಿಯಿಂದ ಶಿಕ್ಷಣ ಹಕ್ಕು ಕಾಯಿದೆಯಲ್ಲಿ ತಿದ್ದುಪಡಿ ತಂದು ಪ್ರಾಥಮಿಕ ಶಿಕ್ಷಣದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಸರ್ಕಾರಿ ಕೋಟಾವನ್ನು ಶೇಕಡಾ ೫೦ಕ್ಕೆ ಏರಿಸಿ ಎಲ್ಲಾ ಜಾತಿ, ವರ್ಗ, ಧರ್ಮಗಳ ಮಕ್ಕಳು ಒಡನಾಡುವಂತಾಗಲು ಕಾನೂನು ರೂಪಿಸಲು ಒತ್ತಾಯಿಸಬೇಕು.

ಇಂಥವು. ಇವುಗಳೇ ಅಂಥೇನಲ್ಲ. ಆದರೆ ಮನವಿ ಮಾಡಿದರೆ ತಂತಾನೇ ಯಾವುದೂ ಈಡೇರುವುದಿಲ್ಲ. ಕನ್ನಡ ಸಾಹಿತ್ಯ ಪರಿಷತ್ ಪೊರೆ ಕಳಚಿಕೊಂಡು ಎಲ್ಲರನ್ನು ಒಡಗೂಡಿ ಹೋರಾಡಿದರೆ ಒಂದಿಷ್ಟು ಈಡೇರಬಹುದು. ಹೀಗಿರುವಾಗ ಯಥಾಸ್ಥಿತಿಯಲ್ಲಿ ಯಾಂತ್ರಿಕವಾಗಿ ಜರುಗುತ್ತಿರುವ ಸಮ್ಮೇಳನಗಳಲ್ಲಿ ಭಾಗವಹಿಸುವುದಕ್ಕೆ ನನ್ನ ಮನಸ್ಸು ಹಿಂದೆಗೆಯುತ್ತದೆ. ಪರಿಷತ್ ಪೊರೆ ಕಳಚಿ ನಿಂತರೆ ನಾನೂ ಜೊತೆಗೂಡುತ್ತೇನೆ. ಅಷ್ಟೇ ಅಲ್ಲ ಭಾರತದ ಅನಾಥ ಅಬ್ಬೇಪಾರಿ ದೇಶೀ ಭಾಷೆಗಳ ಪ್ರಜ್ಞಾವಂತರೂ ತಮ್ಮೊಡನೆ ಜೊತೆಗೂಡುತ್ತಾರೆ.

ಈ ಎಲ್ಲಾ ಹಿನ್ನೆಲೆಯಲ್ಲಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗಲು ನಾನು ಸಮ್ಮತಿಸುತ್ತಿಲ್ಲ. ಇದರಿಂದ ಸಾಹಿತ್ಯ ಪರಿಷತ್‌ನ ಒಂದು ಹಲ್ಲಿಗೆ ನೋವು ಮಾಡಿಬಿಟ್ಟಿರುವೆ! ಈ ನೋವಿನ ಕಡೆಗೆ ಪರಿಷತ್‌ನ ಹಾಗೂ ದೇಶಿ ಭಾಷಿಗರ ನಾಲಿಗೆಯು ಆಗಾಗಲಾದರೂ ಹೊರಳುತ್ತಿರಲಿ ಎಂಬ ಆಸೆಯಿಂದ. ಇದರಿಂದಲೂ ಒಂದಿಷ್ಟು ಸಾಧ್ಯತೆಗಳು ಹುಟ್ಟಬಹುದೇನೋ ಎಂಬ ಆಸೆಯಿಂದ.

ದೇವನೂರ ಮಹಾದೇವ
೧೮/೧೨/೨೦೧೪

ಉಗ್ರರಿಗೆ ಬಲಿಯಾದ ಮಕ್ಕಳಿಗೊಂದು ನಿಜವಾದ ಸಂತಾಪ!


– ಪ್ರಶಾಂತ್ ಹುಲ್ಕೋಡು


‘ಭಯವನ್ನು ಉತ್ಪಾದಿಸುವುದೇ ಭಯೋತ್ಪಾದನೆ’ ಎಂಬ ಪರಿಭಾಷೆ ಬದಲಾಗುತ್ತಿರುವ ಸಂದರ್ಭವಿದು. ಮೊನ್ನೆ ಪಾಕಿಸ್ತಾನದ ಪೇಶಾವರದ ಸೈನಿಕ ಶಾಲೆಯ ಮುದ್ದು peshawar-terrorists-attack-classroomಕಂದಮ್ಮಗಳ ಮೇಲೆ ಗುಂಡು ಮತ್ತು ಬಾಂಬ್ ದಾಳಿ ನಡೆಸುವ ಮೂಲಕ ಪಾಕಿಸ್ತಾನಿ ತಾಲಿಬಾನ್ ಸಂಘಟನೆ (ಟಿಟಿಪಿ), ಜನರ ಭಾವನೆ ಜತೆ ಆಟ ಆಡುವ ವಿಕೃತ ರೂಪವನ್ನು ಪ್ರದರ್ಶಿಸಿದೆ. ಈ ದಾಳಿ ಜನರ ಮನಸ್ಸಿನಲ್ಲಿ ಮೂಡಿಸಿದ ಅಸಹನೆಯ ಪ್ರಮಾಣ ದೊಡ್ಡದಿದೆ. ಎಲ್ಲರ ಹೃದಯಗಳನ್ನೂ ಒಂದು ಕ್ಷಣ ತಬ್ಬಿಬ್ಬುಗೊಳಿಸಿದ್ದು 132 ಮಕ್ಕಳ ಸಾವು ಮತ್ತು ಸೈನಿಕ ಶಾಲೆಯ ಆವರಣದಲ್ಲಿ ನಡೆದ ರಕ್ತಪಾತ. ‘ಭಯೋತ್ಪಾದನೆಗೆ ಧರ್ಮವಿಲ್ಲ’ ಎಂಬ ಮಾತುಗಳು ಈ ದಾಳಿಯ ನಂತರ ಹೆಚ್ಚು ಪ್ರಸ್ತುತತೆ ಪಡೆದುಕೊಂಡವು. ಸಾಮಾಜಿಕ ಜಾಲತಾಣದ ಕನ್ನಡ ಸಮುದಾಯ ಘಟನೆಗೆ ಸ್ಪಂದಿಸಿದ ರೀತಿ ಗಮನಿಸುವ ಹಾಗಿತ್ತು. ಮಾನ್ವಿಯ ಮಜೀಬ್‍ ಎಂಬುವವರು ಪೇಶಾವರದ ಸೈನಿಕ ಶಾಲೆಯ ದಾಳಿ ನಂತರ ಬರೆದ ‘ಫೇಸ್‍ಬುಕ್‍ ಬರಹ’ಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ‘ಧರ್ಮದ ನೆಲೆಯನ್ನು ಮೀರಿ ಮಾನವರಾಗೋಣ ಎಂಬ ಸಂದೇಶ’ ಆ ಪೈಶಾಚಿಕ ದಾಳಿಯಲ್ಲಿ ಮಡಿದ ಮಕ್ಕಳಿಗೆ ಸಲ್ಲಿಸಿದ ಸಂತಾಪದ ಅಭಿವ್ಯಕ್ತಿಯಾಗಿತ್ತು.

ಪೇಶಾವರದ ಸೈನಿಕ ಶಾಲೆಯ ಒಳಗೆ ದಾಳಿ ನಡೆಯುತ್ತಿದ್ದ ವೇಳೆಗೆ ಜಾಗತಿಕ ಮಾಧ್ಯಮಗಳು ಹಾಗೂ ನಮ್ಮ ರಾಷ್ಟ್ರೀಯ ಸುದ್ದಿವಾಹಿನಿಗಳು ಪದೇ ಪದೇ ಟಿಟಿಪಿಯ ಟ್ವೀಟ್‍ಗಳನ್ನು ಪ್ರಸ್ತಾಪಿಸುವ ಕೆಲಸವನ್ನು ಮಾಡುತ್ತಿದ್ದವು. ಇದು 2013ರ ಸೆಪ್ಟೆಂಬರ್‍ನಲ್ಲಿ ಕೀನ್ಯಾ ರಾಜಧಾನಿ ನೈರೋಭಿಯಲ್ಲಿ ನಡೆದ ಮಾಲ್‍ ಮೇಲಿನ ಭಯೋತ್ಪಾದನಾ ದಾಳಿಯನ್ನು ನೆನಪಿಸುತ್ತಿತ್ತು. ಅಂದು ಅಲ್ಲಿನ ವೆಸ್ಟ್‍ಗೇಟ್‍ ಮಾಲ್‍ಗೆ ಅಲ್‍-ಶಬಾಬ್‍ ಎಂಬ ಉಗ್ರ ಸಂಘಟನೆಯ ಕಾರ್ಯಕರ್ತರು ನುಗ್ಗಿದ್ದರು. ಮೂರು ದಿನಗಳ ಕಾಲ ನಡೆದ ಈ ಕಾರ್ಯಾಚರಣೆ ಜಾಗತಿಕ ಮಾಧ್ಯಮಗಳ ಗಮನ ಸೆಳೆದಿತ್ತು. ಮಾಲ್‍ ಮುಂಭಾಗದಲ್ಲಿ ನೂರಕ್ಕೂ ಹೆಚ್ಚು ಮಾಧ್ಯಮ ಸಂಸ್ಥೆಗಳ ಕ್ಯಾಮೆರಾಗಳಿದ್ದವು. ವಿಶೇಷ ಎಂದರೆ, ಕೀನ್ಯಾ ಮಿಲಿಟರಿ ತನ್ನ ಕಾರ್ಯಾಚರಣೆ ಮುಗಿಸುವ peshawar-terror-attack1ವೇಳೆಗೆ ಅಲ್‍- ಶಬಾಬ್‍ ದಾಳಿ ನಡೆಸಿದ ಉದ್ದೇಶದ ಕುರಿತು ಮಾಧ್ಯಮಗಳಲ್ಲಿ ದೊಡ್ಡಮಟ್ಟದ ಚರ್ಚೆಯಾಗುತ್ತಿತ್ತು. ಅದಕ್ಕೆ ಕಾರಣವಾಗಿದ್ದು, ಅಲ್‍-ಶಬಾಬ್‍ನ ಟ್ವಿಟರ್‍ ಅಕೌಂಟ್‍. ಒಂದು ಕಡೆ ದಾಳಿ ನಡೆಯುತ್ತಿದ್ದರೆ, ಅಲ್‍-ಶಬಾಬ್‍ ದಾಳಿಯ ಕ್ಷಣಕ್ಷಣದ ಅಪ್‍ಡೇಟ್‍ನ್ನು ಟ್ವಿಟರ್‍ನಲ್ಲಿ ನೀಡುತ್ತಿತ್ತು. ಅನಿವಾರ್ಯವಾಗಿ ಮಾಧ್ಯಮಗಳು ಇದನ್ನು ಸುದ್ದಿಯ ರೂಪದಲ್ಲಿ ಭಿತ್ತರಿಸುತ್ತ ಹೋದವು. ದಾಳಿ ಮುಗಿಯುವ ವೇಳೆಗೆ ಅಲ್‍-ಶಬಾಬ್‍, ಕೇವಲ ಬಂದೂಕಿನ ದಾಳಿ ಮಾತ್ರವಲ್ಲ, ಮಾಹಿತಿ ಯುದ್ಧದಲ್ಲೂ ಕೀನ್ಯಾ ಸರಕಾರವನ್ನು ಮಣಿಸಿತ್ತು. ಅದು ಭಯೋತ್ಪಾದಕ ಸಂಘಟನೆಗಳು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುತ್ತಿರುವ ಪರಿಗೆ ಸಾಕ್ಷಿಯಾಯಿತು.

ಮೊನ್ನೆ, ಪೇಶಾವರದ ಸೈನಿಕ ಶಾಲೆ ಮೇಲಿನ ದಾಳಿಯಲ್ಲೂ ಇದು ಪುನಾರಾವರ್ತೆಯಾಯಿತು. ಒಂದು ಕಡೆದ ಮಕ್ಕಳಿಗೆ ಗುಂಡಿಕ್ಕಿವ ಕೆಲಸ ನಡೆಯುತ್ತಿದ್ದರೆ, ತೆಹ್ರಿಕ್‍-ಇ-ತಾಲಿಬಾನ್‍ ಪಾಕಿಸ್ತಾನ್‍ (ಟಿಟಿಪಿ) ತನ್ನ ಟ್ವಿಟರ್‍ ಖಾತೆಯಲ್ಲಿ ದಾಳಿಯ ಕುರಿತು ಮಾಹಿತಿ ನೀಡುತ್ತಿತ್ತು. ಇದನ್ನು ಮಾಧ್ಯಮಗಳು ಪಾಕಿಸ್ತಾನದ ಜನಪ್ರತಿನಿಧಿಗಳಿಗೆ, ಮಿಲಿಟರಿ ಅಧಿಕಾರಿಗಳಿಗೆ ಪ್ರಶ್ನೆಯ ರೂಪದಲ್ಲಿ ತಲುಪಿಸುವ ಕೆಲಸ ಮಾಡಿದವು. ಇವತ್ತು ಭಯೋತ್ಪಾದಕ ಸಂಘಟನೆಗಳು ತಮ್ಮ ಕಾರ್ಯತಂತ್ರವನ್ನು ಬದಲಾಯಿಸಿಕೊಂಡಿದ್ದನ್ನು ಇಲ್ಲಿ ಗಮನಿಸಬೇಕಿದೆ. ಕೇವಲ ದಾಳಿ ನಡೆಸುವುದು, ಒಂದಷ್ಟು ಜನರನ್ನು ಬಲಿ ತೆಗೆದುಕೊಂಡು ಮತ್ತೆ ಹಿನ್ನೆಲೆಗೆ ಸರಿಯುತ್ತಿದ್ದ ಕಾಲ ಇವತ್ತು ಬದಲಾಗಿದೆ. ದಾಳಿಯ ಜತೆಗೆ ತಮ್ಮ ಉದ್ದೇಶವನ್ನೂ ಅವು ಮುನ್ನಲೆಗೆ ತರಲು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುತ್ತಿವೆ. ಕೇವಲ ಶಸಸ್ತ್ರ ಯುದ್ಧ ಮಾತ್ರವಲ್ಲ, ಮಾಹಿತಿಯ ಯುದ್ಧಕ್ಕೂ ಅವು ನೀಡುತ್ತಿರುವ ಪ್ರಾಶಸ್ತ್ಯಕ್ಕೆ ಇತ್ತೀಚೆಗೆ ಸಾಕಷ್ಟು ಉದಾಹರಣೆಗಳು ಸಿಗುತ್ತಿವೆ.

ಲಂಡನ್‍ ಮೂಲಕ ಟೆಲಿಗ್ರಾಫ್‍ ಪತ್ರಿಕೆ ಭಯೋತ್ಪಾದಕ ಸಂಘಟನೆಗಳು ಯೂಟ್ಯೂಬ್, ಟ್ವಿಟರ್, ಫೇಸ್‍ಬುಕ್‍, ಇನ್ಟಾಗ್ರಾಮ್‍ನಂತಹ ಸಾಮಾಜಿಕ ತಾಣಗಳನ್ನು ಬಳಸಿಕೊಳ್ಳುತ್ತಿರುವ ಕುರಿತು ವಿಶ್ಲೇಷಣಾತ್ಮಕ ವರದಿಯೊಂದನ್ನು ಪ್ರಕಟಿಸಿತ್ತು. ಅದರ ಪ್ರಕಾರ, “ಸುಮಾರು 7 ಲಕ್ಷ ಸಾಮಾಜಿಕ ತಾಣಗಳ ಖಾತೆಗಳಲ್ಲಿ ಭಯೋತ್ಪಾದಕ ಸಂಘಟನೆಗಳ ಸಿದ್ಧಾಂತಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಐಸಿಸ್‍ನಂತಹ ಉಗ್ರ ಸಂಘಟನೆ ಕಳೆದ ವರ್ಷ ಉತ್ತರ ಇರಾಕ್‍ನ ನಗರವೊಂದರ ಮೇಲಿನ ದಾಳಿ ಸಮಯದಲ್ಲಿ ಒಂದೇ ದಿನ ಸುಮಾರು 40 ಸಾವಿರ ಟ್ವೀಟ್‍ಗಳನ್ನು ಮಾಡಿತ್ತು. ಭಯೋತ್ಪಾದಕ ಚಟುವಟಿಕೆಗಳಿಗೆ ಪೂರಕವಾಗಿವೆ ಎಂಬ ಕಾರಣಕ್ಕೆ ಸುಮಾರು ಒಂದು ಸಾವಿರ ಖಾತೆಗಳನ್ನು ಟ್ವಿಟರ್‍ ಮುಚ್ಚಿದೆ.’’ ಕೀನ್ಯಾದ ಮಾಲ್‍ ಮೇಲಿನ ದಾಳಿಗೆ ಎರಡು ದಿನ ಮುಂಚೆ ಅಷ್ಟೆ ಅಲ್‍-ಶಬಾಬ್‍ ಹೊಸ ಟ್ವಿಟರ್‍ ಖಾತೆಯನ್ನು ತೆರೆಯಿತು. ಅದನ್ನು ಮಾಧ್ಯಮಗಳಿಗೆ ತಲುಪಿಸುವ ಕೆಲಸವನ್ನೂ ಮಾಡಿತ್ತು. ದಾಳಿ ಆರಂಭಿಸುತ್ತಿದ್ದಂತೆ ಹೊಸ ಖಾತೆಯಲ್ಲಿ ಮಾಹಿತಿ peshawar-terror-attack2ನೀಡುವ ಮೂಲಕ ಕೀನ್ಯಾ ಸರಕಾರದ ಅಧಿಕೃತ ಹೇಳಿಕೆಗಳನ್ನೂ ಮೀರಿ ತನ್ನ ನಿಲುವನ್ನು ಜಗತ್ತಿಗೆ ಸಾರಿ ಹೇಳಿತು. ಇವತ್ತು ಇರಾಕ್‍, ಮಧ್ಯಪ್ರಾಚ್ಯ ದೇಶಗಳಲ್ಲಿ ಭಯೋತ್ಪಾದಕ ದಾಳಿಯ ದೃಶ್ಯಗಳನ್ನು ಯೂ-ಟ್ಯೂಬ್‍ಗೆ ಅಪ್‍ಲೋಡ್‍ ಮಾಡಲಾಗುತ್ತಿದೆ. ಇದನ್ನು ಮುಖ್ಯವಾಹಿನಿಯ ಮಾಧ್ಯಮಗಳು ಜಗತ್ತಿಗೆ ಭಿತ್ತರಿಸುವ ಅನಿವಾರ್ಯ ಕರ್ಮಕ್ಕೆ ಸಿಲುಕಿವೆ.

ಇತ್ತೀಚಿಗೆ ಬೆಂಗಳೂರಿನಿಂದ ‘ಐಸಿಸ್‍ ಪರ ಪ್ರಚಾರ’ ಮಾಡುವ ಟ್ವಿಟರ್‍ ಖಾತೆಯೊಂದು ಚಟುವಟಿಕೆ ನಡೆಸುತ್ತಿದೆ ಎಂಬ ಮಾಹಿತಿಯನ್ನು ಲಂಡನ್‍ ಮೂಲಕ ಚಾನಲ್‍ 4 ಭಿತ್ತರಿಸಿತ್ತು. ಇಲ್ಲಿ ಐಸಿಸ್‍ ಪರ ಪ್ರಚಾರವೇ ಹೊರತು ಐಸಿಸ್‍ನ ಅಧಿಕೃತ ಖಾತೆ ಅಲ್ಲ ಎಂಬುದನ್ನು ಗಮನಿಸಬೇಕಿದೆ. ಸುದ್ದಿ ಭಿತ್ತರಗೊಂಡ ಬೆನ್ನಿಗೇ ಬೆಂಗಳೂರು ಪೊಲೀಸರು ಪಶ್ಚಿಮ ಬಂಗಾಳ ಮೂಲದ ಮೆಹದಿ ಮಸ್ರೂರ್ ಬಿಸ್ವಾಸ್‍ ಎಂಬ ಯುವಕನನ್ನು ಬಂಧಿಸಿದ್ದರು. ಮೆಹದಿಯ ಬಂಧನ ಮತ್ತು ಅದರ ವಿವರಗಳು ಈ ಭಯೋತ್ಪಾದಕ ಚಟುವಟಿಗೆಳ ಮಾಹಿತಿ ಯುದ್ಧದ ಕುರಿತು ಹೊಸ ಆಯಾಮವನ್ನು ನೀಡುತ್ತವೆ. ಚಾನಲ್‍ 4 ನಲ್ಲಿ ಭಿತ್ತರಗೊಂಡ ಸುದ್ಧಿಯನ್ನು ಆಧಾರವಾಗಿ ಇಟ್ಟುಕೊಂಡು ಹೇಳುವುದಾದರೆ, ಸುದ್ದಿವಾಹಿನಿ ‘ಶಮಿ ವಿಟ್ನೆಸ್‍’ ಎಂಬ ಹೆಸರಿನಲ್ಲಿ ಮುಸ್ಲಿಂ ಧಾರ್ಮಿಕತೆಯ ಕುರಿತು ಟ್ವೀಟ್‍ಗಳು ಹರಿದಾಡುತ್ತಿರುವುದನ್ನು ಗಮನಿಸಿದೆ. ಅದಕ್ಕೆ ಟಿಪ್‍ ಸಿಕ್ಕಿರುವುದು ಈ ಕುರಿತು ಅಧ್ಯಯನ ನಡೆಸುತ್ತಿರುವ ಲಂಡನ್‍ನ ಕಿಂಗ್ಸ್‍ ಯೂನಿವರ್ಸಿಟಿಯಿಂದ ಅನ್ನಿಸುತ್ತದೆ. ಈ ಖಾತೆಯ ಮಾಹಿತಿಯಿಂದ ಪ್ರೇರಣೆಗೊಂಡ ಲಂಡನ್‍ ಮೂಲದ ಯುವಕನೊಬ್ಬ ಐಸಿಸ್‍ ಸೇರಿ ಹತನಾದ ಕುರಿತು ಮಾಹಿತಿ ಕಲೆ ಹಾಕಿದೆ. ನಂತರ ‘ಶಮಿ ವಿಟ್ನೆಸ್‍’ ಖಾತೆಯ ಮೂಲವನ್ನು ಹುಡುಕಿದೆ. ಬೆಂಗಳೂರಿನಲ್ಲಿ ನೆಲೆ ನಿಂತಿರುವ ಮೆಹದಿಯನ್ನು ಅದು ಸಂಪರ್ಕಿಸಿದೆ. ಈ ಸಮಯದಲ್ಲಿ ಮೆಹದಿ ಜತೆ ದೂರವಾಣಿಯಲ್ಲಿ ಮಾತನಾಡಿರುವ ಸುದ್ದಿ ವಾಹಿನಿ ಆತನ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಕೆಲವು ಪ್ರಶ‍್ನೆಗಳನ್ನು ಹಾಕಿದೆ. ವಾಹಿನಿಗೆ ದೂರವಾಣಿ ಮೂಲಕ ಮೆಹದಿ ನಡೆಸಿದ ಮಾತುಕತೆ ಹೀಗಿದೆ:

ಮೆಹದಿ: ನನಗೆ ಅವಕಾಶ ಇದ್ದಿದ್ದರೆ ಎಲ್ಲವನ್ನೂ ಬಿಟ್ಟು ಅವರ (ಐಸಿಸ್‍) ಜತೆ ಸೇರಿಕೊಳ್ಳುತ್ತಿದ್ದೆ ಅನ್ನಿಸುತ್ತದೆ.
ಚಾನಲ್‍ 4: ನಿನ್ನನ್ನು ತಡೆದಿದ್ದು ಏನು?
ಮೆಹದಿ: ಕುಟುಂಬಕ್ಕೆ ನನ್ನ ಅಗತ್ಯವಿದೆ. ನನ್ನ ತಂದೆ ತಾಯಿ ನನ್ನ ಮೇಲೆ ಅವಲಂಬಿತರಾಗಿದ್ದಾರೆ.
ಚಾನಲ್‍ 4: ಅಂದ್ರೆ, ನಿನಗೆ ಅವಕಾಶ ಇದ್ದಿದ್ದರೆ ನೀನು ಐಸಿಸ್‍ ಸೇರಿಕೊಳ್ಳುತ್ತಿದ್ದೆ ಅಲ್ವಾ?
ಮೆಹದಿ: ಬಹುಶಃ…
ಚಾನಲ್‍ 4: ಹಾಗಾದ್ರೆ, ಐಸಿಸ್‍ನ ಮೆಥೆಡ್ಸ್‍ಗಳ ಬಗ್ಗೆ ನಿನಗೆ ಒಪ್ಪಿಗೆ ಇದೆ?
ಮೆಹದಿ: ನಾಟ್‍ ಆಲ್‍ ಮೆಥೆಡ್ಸ್‍…ನೋ…ಬಟ್‍ ಮೋಸ್ಟ್ಲಿ…
ಚಾನಲ್‍ 4: ಯಾವ ಮೆಥೆಡ್ಸ್‍…ಕೊಲ್ಲುವುದು, ತಲೆ ಕಡಿವುಯುದು…?
ಮೆಹದಿ: ತಲೆ ಕಡಿಯುವ ಕುರಿತು ಕುರಾನ್‍ ಮತ್ತು ಹಾದಿಥ್‍ನಲ್ಲೂ ಉಲ್ಲೇಖ ಇದೆ. ನನಗನ್ನಿಸುತ್ತದೆ ನಿಜವಾದ ಮುಸ್ಲಿಂ ಸಕಾರಣಕ್ಕೆ ತಲೆ ಕಡಿಯುವ ವಿಚಾರದಲ್ಲಿ ಭಿನ್ನಾಭಿಪ್ರಾಯ ಹೊಂದಿರಲು ಸಾಧ್ಯವಿಲ್ಲ.
ಚಾನಲ್‍ 4: ನೀನು ಪ್ರಾಮಾಣಿಕ ಮುಸ್ಲಿಂ…?
ಮೆಹದಿ: ಪ್ರಯತ್ನ ಪಡುತ್ತಿದ್ದೇನೆ…ನಾನು ಇರಬಹುದಾ ಅಂಥ ಖಾತ್ರಿ ಇಲ್ಲ…
(ಚಾನಲ್‍ 4 ಕಾಮೆಂಟರಿ: ಈತ ಲಂಡನ್‍ ಮೂಲದ ಜಿಹಾದಿಗಳ ಜತೆ ಸಂಪರ್ಕದಲ್ಲಿ ಇದ್ದಾನೆ ಎಂದು ಒಪ್ಪಿಕೊಳ್ಳುತ್ತಾನೆ. ಆದರೆ, ಅವರು ಐಸಿಸ್‍ ಸೇರಲು ಪ್ರೇರೇಪಣೆ ನನ್ನಿಂದ ಸಿಗುತ್ತಿದೆ ಎಂಬುದನ್ನು ನಿರಾಕರಿಸುತ್ತಾನೆ.)
ಮೆಹದಿ: ಯಾರೋ ನನ್ನನ್ನು ಫಾಲೋ (ಟ್ವಿಟರ್‍ನಲ್ಲಿ) ಮಾಡುತ್ತಾರೆ ಎಂಬ ಕಾರಣಕ್ಕೆ ನಾನು ಅವರು ಐಸಿಸ್‍ ಕಡೆ ಹೋಗುತ್ತಿರುವುದಕ್ಕೆ ಹೊಣೆಯಾಗುವುದಿಲ್ಲ. ಜನರು ಯಾಕೆ “radicalized” ಆಗುತ್ತಿದ್ದಾರೆ ಎಂಬುದಕ್ಕೆ ನಿಜವಾದ ಕಾರಣಗಳಿವೆ.

ಚಾನಲ್‍ 4 ನಲ್ಲಿ ಈ ಸುದ್ದಿ ಭಿತ್ತರಗೊಳ್ಳುತ್ತಿದ್ದಂತೆ ನಮ್ಮ ಮಾಧ್ಯಮಗಳು ಐಸಿಸ್‍ ಖಾತೆ ಬೆಂಗಳೂರಿನ ಮೂಲಕ ಕಾರ್ಯಾಚರಣೆ ನಡೆಸುತ್ತಿದೆ ಎಂಬಂತೆ ಸುದ್ದಿಯನ್ನು ಭಿತ್ತರಿಸಿದವು. ಬೆಂಗಳೂರು ಉಗ್ರರ ಮುಂದಿನ ಗುರಿ ಎಂದು ಜನ ಮನಸ್ಸಿನಲ್ಲಿ ಭಯ ಮೂಡಿಸುವ ಕೆಲಸ ನಡೆಯಿತು. ಇರಾಕ್‍ನಲ್ಲಿ ತಮ್ಮ ನೆಲೆಯನ್ನು ಉಳಿಸಿಕೊಳ್ಳಲು ಇವತ್ತು ಬಡಿದಾಡುತ್ತಿರುವ ಐಸಿಸ್‍ ಎಂಬ ಸಂಘಟನೆಗೆ ಅನಾವಶ್ಯಕವಾಗಿ ಪ್ರಾಮುಖ್ಯತೆ ನೀಡಿದವು. ಮೆಹದಿ ಬಂಧನ ನಂತರ ಆತ ಬೆಂಗಳೂರಿನಲ್ಲಿ ನೆಲೆಸಿದ್ದ ಮನೆಗೆ ತೆರಳಿದ್ದ ನನ್ನ ಪತ್ರಕರ್ತ ಮಿತ್ರರೊಬ್ಬರು ಆತನ ಮನಸ್ಥಿತಿಯನ್ನು ಹೀಗೆ ಊಹಿಸಿದ್ದರು. “ಬಹುಶಃ ಆತ ಟೆಕ್‍ಸ್ಸೇವಿಯಾಗಿದ್ದ ಅನ್ನಿಸುತ್ತದೆ. ಸುತ್ತಮುತ್ತಲಿನವರ ಪ್ರಕಾರ ಆತ ಧರ್ಮದ ಕುರಿತು ಹೆಚ್ಚು ಓದುತ್ತಿದ್ದ. ಯಾವುದೇ ಸಮಸ್ಯೆ ಎಂದರೂ, ಅದಕ್ಕೆ ಖುರಾನ್‍ನಲ್ಲಿ ಪರಿಹಾರ ಇದೆ ಎನ್ನುತ್ತಿದ್ದ. ಆತನ ಟ್ವಿಟರ್‍ ಖಾತೆಯಲ್ಲೂ ಇದೇ ಬರೆಯುತ್ತಿದ್ದ. ತಾತ್ವಿಕವಾಗಿ ಆತ ಐಸಿಸ್‍ನ್ನು ಸಮರ್ಥಿಸಿಕೊಳ್ಳಲು ಆರಂಭಿಸಿದ್ದ. ಆದರೆ, ಆತ ತನ್ನನ್ನು ತಾನು ನಿಗೂಢವಾಗಿ ಇಟ್ಟುಕೊಳ್ಳುವ ಪ್ರಯತ್ನವನ್ನು ಮಾಡಿದಂತೆ ಕಾಣುತ್ತಿಲ್ಲ,’’ ಎಂಬುದು ಅವರು ಗಮನಿಸಿದ ಅಂಶಗಳು. ಮೆಹದಿಗೆ ನಿಜವಾಗಿಯೂ ಐಸಿಸ್‍ ಜತೆ ಸಂಪರ್ಕ ಇತ್ತಾ? Peshawar_school_injuredKidಆತನ ಮನಸ್ಥಿತಿ ಧಾರ್ಮಿಕ ಭಾವನೆಗಳನ್ನು ಕೆರಳಿಸುವಂತೆ ಇತ್ತಾ? ಇದನ್ನು ಹೇಗೂ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ. ಆತ ತಪ್ಪು ಮಾಡಿದ್ದರೆ ಶಿಕ್ಷಿಸಲು ಕಾನೂನು ಇದೆ. ಆದರೆ, ನಾವು ಗಮನಿಸಬೇಕಿರುವುದು ಮೆಹದಿ ಮತ್ತು ಆತ ಪ್ರತಿನಿಧಿಸುವ ವಿಚಾರಗಳ ಮೂಲ ಉದ್ದೇಶವೇ ಮಾಹಿತಿ ಪ್ರಸಾರ ಮಾಡುವುದು. ಹೆಚ್ಚು ಹೆಚ್ಚು ಜನರಿಗೆ ತನ್ನ ಅಸ್ಥಿತ್ವವನ್ನು ಸಾರುವುದು. ಮೆಹದಿ ಘಟನೆಯನ್ನು ಸುದ್ದಿ ಮಾಡುವ ಭರಾಟೆಯಲ್ಲಿ ಮಾಧ್ಯಮಗಳೂ ಕೂಡ ಪರೋಕ್ಷವಾಗಿ ಇದೇ ಕೆಲಸ ಮಾಡಿದ್ದನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ.

ಕೊನೆಯದಾಗಿ ಇನ್ನೊಂದು ವಿಚಾರ ಇದೆ. ಅದು ಭಯೋತ್ಪಾದಕ ಚಟುವಟಿಕೆಗಳ ಕುರಿತು ಕಾನೂನು ಕ್ರಮಗಳ ಕುರಿತಾಗಿದ್ದು. ಕೀನ್ಯಾ ಮಾಲ್‍ ದಾಳಿಯ ನಂತರ ಅಲ್ಲಿನ ಪಾರ್ಲಿಮೆಂಟರಿ ಸಮಿತಿ ನೀಡಿದ ವರದಿಯ ಕುರಿತು ವ್ಯಾಪಕ ಟೀಕೆಗಳು ಬಂದಿದ್ದವು. ಇವತ್ತಿಗೂ ಆ ದಾಳಿಯ ಕುರಿತು ಸ್ಪಷ್ಟತೆ ಸಿಕ್ಕಿಲ್ಲ. ಎಷ್ಟು ಜನ ಉಗ್ರರು ದಾಳಿ ನಡೆಸಿದ್ದರು? ಅವರ ತಪ್ಪಿಸಿಕೊಂಡು ಹೋದರಾ ಅಥವಾ ಎಲ್ಲರೂ ಹತರಾದರಾ ಎಂಬ ಕುರಿತೇ ಗೊಂದಲಗಳಿವೆ. ಕೆಲವು ದಿನಗಳ ಹಿಂದೆ ಅದೇ ನೈರೋಭಿಯ ವಿಮಾನ ನಿಲ್ದಾಣದಿಂದ ಹಾರಿದ್ದ ಅಲ್‍-ಶಬಾಬ್‍ನ ಮೂವರು ಉಗ್ರರನ್ನು ಆಸ್ಟ್ರೇಲಿಯಾದಲ್ಲಿ ಬಂಧಿಸಲಾಯಿತು. ಅಷ್ಟರ ಮಟ್ಟಿಗೆ ಅಲ್ಲಿನ ಸರಕಾರ ಭಯೋತ್ಪಾದಕರ ವಿರುದ್ಧದ ಸಮರದಲ್ಲಿ ಎಲ್ಲಾ ಆಯಾಮಗಳಲ್ಲೂ ಹಿನ್ನಡೆ ಅನುಭವಿಸುತ್ತಿದೆ. ನಮ್ಮಲ್ಲೂ ಚಿನ್ನಸ್ವಾಮಿ ಬಾಂಬ್‍ ಸ್ಫೋಟ ಪ್ರಕರಣ, ಸರಣಿ ಸ್ಫೋಟ ಪ್ರಕರಣಗಳು ಏನಾಗಿವೆ ಎಂಬ ಕುರಿತು ಮಾಹಿತಿ ಇಲ್ಲ. ಪೊಲೀಸರು ಸಲ್ಲಿರುವ ಸಾವಿರಾರು ಪುಟಗಳ ದೋಷಾರೋಪ ಪಟ್ಟಿ ತನಿಖೆಯನ್ನು ನಿಧಾನಗತಿಯಲ್ಲಿ ಇಟ್ಟಿದೆಯಾದರೂ, ಇವತ್ತಿಗೂ ಯಾವಬ್ಬ ಆರೋಪಿಗೂ ಶಿಕ್ಷೆಯಾಗಿಲ್ಲ. ಹೀಗಿರುವಾಗಲೇ ಭಯೋತ್ಪಾದಕ ಸಂಘಟನೆಗಳು ಮಾಹಿತಿ ಯುದ್ಧಕ್ಕೆ ಅಣಿಯಾಗಿವೆ. ತಂತ್ರಜ್ಞಾನವನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳುತ್ತಿವೆ. ಈ ಸಂದರ್ಭದಲ್ಲಿ ನಮ್ಮ ತನಿಖಾ ಸಂಸ್ಥೆಗಳು, ಸರಕಾರ ಮತ್ತು ನ್ಯಾಯಾಂಗ ವ್ಯವಸ್ಥೆ ಭಯೋತ್ಪಾದಕ ಚಟುವಟಿಕೆಗಳ ಕಡಿವಾಣಕ್ಕೆ ಸಮಗ್ರವಾದ ಯೋಜನೆಗೆ ಆಲೋಚನೆ ಮಾಡಬೇಕಿದೆ. ಬದಲಾದ ಕಾಲಕ್ಕೆ ತಕ್ಕಂತೆ ಕಾರ್ಯತಂತ್ರಗಳನ್ನು ಅಳವಡಿಸಿಕೊಳ್ಳಬೇಕಾದ ಅಗತ್ಯ ಇವತ್ತಿನ ಅಗತ್ಯ ಮತ್ತು ಅನಿವಾರ್ಯತೆ. ಆಗ ಮಾತ್ರವೇ ಉಗ್ರರ ಪೈಶಾಚಿಕ ಕೃತ್ಯಗಳಿಗೆ ಬಲಿಯಾಗುವ ಮುಗ್ಧ ಮನಸ್ಸುಗಳಿಗೆ ನಿಜವಾದ ಸಂತಾಪ ಸಲ್ಲಿಸಿದಂತೆ ಆಗುತ್ತದೆ.