– ಶಿವರಾಜ್
ನಿಮಗೆ ನೆನಪಿರಬಹುದು. ಅಂದು ಅಕ್ಟೋಬರ್ 27, 2006. ಮೈಸೂರಿನ ಪೊಲೀಸರು ಇಬ್ಬರು ಶಂಕಿತ “ಉಗ್ರರನ್ನು” ನಾಟಕೀಯ ಸನ್ನವೇಶದಲ್ಲಿ ಬಂಧಿಸುತ್ತಾರೆ. ಅವರು ಫಹಾದ್ (24) ಮತ್ತು ಮೊಹಮ್ಮದ್ ಅಲಿ ಹುಸೇನ್ (24). ಬಂಧನ ಆಗುವಾಗ ಗುಂಡಿನ ಚಕಮಕಿ ಆಯಿತು. ಮೈಸೂರಿನ ಜನ ಭಯಭೀತರಾಗಿದ್ದರು. ಅಲ್ ಬದರ್ ಸಂಘಟನೆ ಜೊತೆ ಅವರು ಗುರುತಿಸಿಕೊಂಡಿದ್ದರು, ಕರ್ನಾಟಕದ ಹಲವೆಡೆ ದುಷ್ಕೃತ್ಯಗಳನ್ನು ನಡೆಸಲು ಸಂಚು ಹೂಡಿದ್ದರು ಎಂಬ ವರದಿಗಳು ಅಕ್ಟೋಬರ್ 27 ಹಾಗೂ 28ರ ದಿನಪತ್ರಿಕೆಗಳಲ್ಲಿ ಪ್ರಕಟವಾದವು.
ಈಗ ಎಂಟು ವರ್ಷಗಳ ಹಿಂದಿನ ಘಟನೆಯನ್ನು ನೆನಪಿಸಿಕೊಳ್ಳಲು ಕಾರಣವಿದೆ. ಆ ಘಟನೆ ನಡೆದ ಒಂದು ದಿನದ ಹಿಂದೆಯಷ್ಟೆ ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯ ಮಗ ನಿಖಿಲ್ ಗೌಡ ಸುದ್ದಿಯಲ್ಲಿದ್ದರು. ನಿಖಿಲ್ ತನ್ನ ಇಬ್ಬರು ಸ್ನೇಹಿತರೊಂದಿಗೆ ಬೆಳಗಿನ ಜಾವ 2 ಗಂಟೆಯಲ್ಲಿ ಚರ್ಚ್ ಸ್ಟ್ರೀಟ್ ಹೊಟೇಲ್ ಒಂದಕ್ಕೆ ಹೋಗಿ ಚಿಕನ್ ಸರ್ವ್ ಮಾಡಿ ಎಂದು ಕೇಳಿದ್ದಾರೆ. ತಿನಿಸುಗಳೆಲ್ಲಾ ಖಾಲಿಯಾಗಿದೆ ಎಂದು ಹೊಟೇಲ್ನವರು ಹೇಳಿದ್ದ ಕಾರಣಕ್ಕೆ ಮಾತಿನ ಚಕಮಕಿ ನಡೆದು, ಕೆಲ ಗ್ಲಾಸುಗಳು ಪುಡಿಪುಡಿಯಾದವು. ನಂತರ ಇದೇ ಘಟನೆ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾದವು. ಅಕ್ಟೋಬರ್ 26 ರ ಬೆಳಗಿನ ಜಾವ ನಡೆದ ಘಟನೆಯಾದ್ದರಿಂದ, ಅದೇ ದಿನ ಸುದ್ದಿವಾಹಿನಿಗಳಲ್ಲಿ ಮಾತ್ರ ಅದು ಸುದ್ದಿಯಾಯಿತು. ಆಗ ವಾಹಿನಿಗಳು ಈಗಿನಷ್ಟು ಪ್ರಭಾವಿಯಾಗಿರಲಿಲ್ಲ.
ಆದರೆ ಅದೇ ದಿನ ರಾತ್ರಿ 10.30 ರ ಸುಮಾರಿಗೆ ಈ ಎನ್ಕೌಂಟರ್ ನಾಟಕ ಮೈಸೂರಿನಲ್ಲಿ ನಡೆಯಿತು. ನಾಟಕ ಏಕೆಂದರೆ, ಅಂದು ಗುಂಡಿನ ಚಕಮಕಿ ಮೂಲಕ ಬಂಧನವಾದ ಆ ಇಬ್ಬರು ಯುವಕರು ಆ ಹೊತ್ತಿಗಾಗಲೇ ಪೊಲೀಸರ ಅನಧಿಕೃತ ಕಸ್ಟಡಿಯಲ್ಲಿ ಇಪ್ಪತ್ತು ದಿನ ಕಳೆದಿದ್ದರು. ಬಂಧನದ ನಾಟಕದ ನಂತರ ಆ ಹುಡುಗರು ಬಾಡಿಗೆಗಿದ್ದ ಮನೆಯ ಮಾಲೀಕರೇ “ಅರೇ ಈ ಹುಡುಗ್ರಾ..20 ದಿನದ ಹಿಂದೆನೇ ಪೊಲೀಸರು ಬಂದು ಹಿಡ್ಕೊಂಡು ಹೋಗಿದ್ರು. ಈಗ ಮತ್ತೆ ಎನ್ ಕೌಂಟರ್ ಆಯ್ತಾ..?” ಎಂದು ಮಾಧ್ಯಮದವರ ಮುಂದೆ ಪ್ರಶ್ನೆ ಮಾಡಿದ್ದರು. (http://www.thehindu.com/todays-paper/albadr-terrorist-plot-unearthed/article3066969.ece)
ಇದೇ ಘಟನೆಯ ಹಿನ್ನೆಲೆಯಲ್ಲಿ ಒಂದು ಇಂಟರೆಸ್ಟಿಂಗ್ ಮಾಹಿತಿ ಇದೆ. ಅದೇ ದಿನ ಕೆಲ ಪತ್ರಕರ್ತರಿಗೂ ಮಾಹಿತಿ ಗೊತ್ತಾಗಿದೆ. ಸಿಟಿ ಎಡಿಷನ್ಗಾಗಿ ಸಾಧ್ಯವಾದಷ್ಟು ಸುದ್ದಿ ಕಳುಹಿಸಿದ್ದಾರೆ. ಬಹುತೇಕ ಪತ್ರಿಕೆಗಳಲ್ಲಿ ಅದು ಒಂದು ಕಾಲಂನಷ್ಟು ಮಾತ್ರ ವರದಿಯಾಗಿತ್ತು. ಹೆಚ್ಚು ವಿವರವಾಗಿ ಕಳುಹಿಸಲು ಯಾರಿಗೂ ಸಮಯ ಇರಲಿಲ್ಲ ನೋಡಿ. ಘಟನೆ ನಡೆದದ್ದೇ 10.30 ರಾತ್ರಿ ಆದರೆ, ಪತ್ರಕರ್ತರಿಗೆ ತಿಳಿಯಲು ಒಂದು ಗಂಟೆಯಾದರೂ ಬೇಕು. ಆ ನಂತರ ಖಾತ್ರಿ ಪಡಿಸಿಕೊಂಡು, ಕಚೇರಿಗೆ ಸುದ್ದಿ ಮುಟ್ಟಿಸುವಲ್ಲಿ ತುಂಬಾ ತಡವಾಗುತ್ತದೆ. ರಾತ್ರಿಯೆಲ್ಲಾ ಇದೇ ಸುದ್ದಿಯ ಹಿಂದೆ ಬಿದ್ದಿದ್ದ ಪತ್ರಕರ್ತರಿಗೆ ಪೊಲೀಸರು ಪತ್ರಿಕಾಗೋಷ್ಟಿ ನಡೆಸಿ ಅಧಿಕೃತವಾಗಿ ಮಾಹಿತಿ ನೀಡುವ ಹೊತ್ತಿಗೆ ಮಾರನೆಯ ದಿನ (ಅಕ್ಟೋಬರ್ 27) ಬೆಳಗಾಗಿತ್ತು. ಪತ್ರಿಕಾ ಗೋಷ್ಟಿ ಮುಗಿಸಿಕೊಂಡು ಮನೆಗೆ ಹೋದವರಿಗೆ ಅಚ್ಚರಿ ಕಾದಿತ್ತು. ಆ ಹೊತ್ತಿಗೆ ಮನೆಗೆ ಬಂದಿದ್ದ ರಾಜ್ಯ ಮಟ್ಟದ ಕನ್ನಡದ ಪ್ರಮುಖ ಪತ್ರಿಕೆಯಲ್ಲಿ ಅದೇ ಘಟನೆ ಲೀಡ್ ಸುದ್ದಿಯಾಗಿ ಮುಖಪುಟದಲ್ಲಿ ಸಾಕಷ್ಟು ವಿವರವಾಗಿ ಪ್ರಕಟವಾಗಿತ್ತು!
ಆಗ ಪತ್ರಿಕಾ ವಲಯದಲ್ಲಿ ದಟ್ಟವಾಗಿ ಹರಡಿದ್ದ ಮಾತುಗಳನ್ನು ನಂಬುವುದಾದರೆ, ಅಂದು ರಾತ್ರಿ ನಡೆದ ಘಟನೆ ಬಗ್ಗೆ ಆ ಪತ್ರಿಕೆಯ ಪ್ರತಿಭಾವಂತ ಸಂಪಾದಕರಿಗೆ ಆ ಮೊದಲೇ ಮಾಹಿತಿ ಇತ್ತು. ಮೈಸೂರಿನ ತಮ್ಮ ವರದಿಗಾರರಿಗೆ ಆ ಬಗ್ಗೆ ಮೊದಲೇ ಹೇಳಿ, ಇಂತಹದೊಂದು ಘಟನೆ ನಡೆಯುವುದಿದೆ. ಆ ಬಗ್ಗೆ ನಿಗಾ ಇಡಿ ಎಂದು ಸೂಚಿಸಿದ್ದರು. ಹಾಗೂ ಮುಕ್ಕಾಲು ಪಾಲು ಸುದ್ದಿಯನ್ನು ಅವರೇ ಬೆಂಗಳೂರಿನಲ್ಲಿ ಕೂತು, ಬಹುಶಃ ಘಟನೆ ನಡೆಯುವ ಹೊತ್ತಿಗಾಗಲೇ, ರೆಡಿ ಮಾಡಿದ್ದರು! ನಂತರದ ದಿನಗಳಲ್ಲಿ ಎಲ್ಲಾ ಸುದ್ದಿ ಮಾಧ್ಯಮಗಳು ಆ ಇಬ್ಬರು ಬಂಧನವಾದವರ ಹಿನ್ನೆಲೆ, ದೂರಾಲೋಚನೆಗಳನ್ನು ಹುಡುಕುತ್ತಾ ಹೊರಟರು. ಹೊಟ್ಟೆಗೆ ಕೂಳಿಲ್ಲದೆ, ಚರ್ಚ್ ಸ್ಟ್ರೀಟ್ ನಲ್ಲಿ ಅನ್ನಕ್ಕಾಗಿ ಬಡಿದಾಡಿದವರ ಸುದ್ದಿ ಮೂಲೆ ಸೇರಿತು.
ಇದೇ ಧಾಟಿಯಲ್ಲಿ ಇರುವ ಮತ್ತೊಂದು ಘಟನೆ ನೆನಪಾಗುತ್ತಿದೆ. ಅದು ನಡೆದದ್ದು 1998 ರಲ್ಲಿ.
ಅಮೆರಿಕಾ ಅಧ್ಯಕ್ಷ ಬಿಲ್ ಕ್ಲಿಂಟನ್ ತನ್ನ ಕಚೇರಿಯಲ್ಲಿ ಯುವತಿಯೊಂದಿಗೆ ಹೊಂದಿದ್ದ ಸಂಬಂಧದ ಕಾರಣ ವಿವಾದಕ್ಕೆ ಸಿಲುಕಿರುತ್ತಾರೆ. ಕಾಂಗ್ರೆಸ್ ಆತನ ತಪ್ಪುಗಳನ್ನು ಸಾರುವ ವರದಿಯೊಂದನ್ನು ಬಿಡುಗಡೆ ಮಾಡುವ ಮುನ್ನಾ ದಿನ (ಡಿಸೆಂಬರ್ 16, 1998), ಬಿಲ್ ಕ್ಲಿಂಟನ್ ಇರಾಕ್ ರಾಷ್ಟ್ರದ ಮೇಲೆ ವಾಯುದಾಳಿಗೆ ಆದೇಶಿಸುತ್ತಾರೆ. ಕಾಂಗ್ರೆಸ್ ನ ರಿಪಬ್ಲಿಕ್ ಪಾರ್ಟಿ ಸದಸ್ಯರು ಆಗ, ಕ್ಲಿಂಟನ್ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಇಂತಹ ದಾಳಿ ನಡೆಸಿದರು ಎಂದು ಆರೋಪಿಸುತ್ತಾರೆ. ಆ ಹೊತ್ತಿಗೆ ಕ್ಲಿಂಟನ್ ವಿರುದ್ಧ ಇಂಪೀಚ್ಮೆಂಟ್ ಪ್ರಕ್ರಿಯೆ ಆರಂಭವಾಗಿರುತ್ತೆ. (http://www.politico.com/news/stories/1207/7390.html)
ಅಧಿಕಾರದಲ್ಲಿರುವವರು ಮುಜುಗರದ ಪ್ರಕರಣಗಳಿಂದ ತಪ್ಪಿಸಿಕೊಳ್ಳಲು ಆಗಾಗ ಇಂತಹ ಪ್ರಕರಣಗಳನ್ನು ಸೃಷ್ಟಿಸುತ್ತಾರೆ. ಪೊಲೀಸರ ಭಾಷೆಯಲ್ಲಿ ಹೇಳುವುದಾದರೆ, ಇವೆಲ್ಲವೂ ‘ಅಟೆಂಷನ್ ಡೈವರ್ಶನ್ ಪ್ರಕರಣಗಳು” – ಗಮನ ಬೇರೆಡೆಗೆ ಸೆಳೆದು ಕಳುವು, ಮೋಸ ಮಾಡುವ ಕೃತ್ಯಗಳು. ಬ್ಯಾಂಕ್ ನಿಂದ ಹಣವನ್ನು ಆಗಷ್ಟೆ ಬಿಡಿಸಿ ತರುವವರ ಮೈಮೇಲೆ ಏನನ್ನೋ ಎಸೆದು, ಅವರ ಗಮನ ಅತ್ತ ಹೋದಾಗ ಕೈಯಲ್ಲಿದ್ದ ಬ್ಯಾಗನ್ನು ಎತ್ತಿಕೊಂಡ ಪ್ರಕರಣಗಳು ಗೊತ್ತಲ್ಲ. ಈ ಅಧಿಕಾರಸ್ಥರು ಇಂತಹದೇ ಪ್ರಕರಣಗಳನ್ನು ದೊಡ್ಡ ಮಟ್ಟದಲ್ಲಿ ಮಾಡುತ್ತಾರೆ. ಮೋಸ ಹೋಗುವವರ ಸಂಖ್ಯೆಯೂ ದೊಡ್ಡದೇ.
ಸದ್ಯ ಒಂದು ವಾರದಿಂದ ನರೇಂದ್ರ ಮೋದಿ ಸರಕಾರ ಅಲ್ಲಲ್ಲಿ ಟೀಕೆಗಳಿಗೆ ಒಳಗಾಗಿದ್ದು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಉದ್ದೇಶಿಸಿರುವ ಭೂಸ್ವಾಧೀನ ತಿದ್ದುಪಡಿ ಕಾಯಿದೆ ವಿಚಾರವಾಗಿ. ದಿನೇ ದಿನೇ ಜನ, ರಾಜಕೀಯ ಪಕ್ಷಗಳು ಈ ವಿಚಾರದ ಬಗ್ಗೆ ಮಾತನಾಡಲು ಆರಂಭಿಸಿದ್ದಾರೆ. ಸರಕಾರಕ್ಕೆ ರೈತರ ಕಾಳಜಿ ಇಲ್ಲ ಎನ್ನುವುದು ಸಾಬೀತಾಗುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲದ ದರ ತೀರಾ ಇಳಿದಿದ್ದರೂ ಅದರ ಲಾಭವನ್ನು ಜನಸಾಮಾನ್ಯರಿಗೆ ನೀಡುತ್ತಿಲ್ಲ. ಬದಲಿಗೆ ಅಬಕಾರಿ ಸುಂಕವನ್ನ ಹೆಚ್ಚಿಸಿ ಮತ್ತಷ್ಟು ಕಡಿಮೆಯಾಗುವುದನ್ನು ತಡೆದಿದ್ದಾರೆ. ಇನ್ನೊಂದು ತಿಂಗಳಲ್ಲಿ ದೆಹಲಿ ಚುನಾವಣೆ ಇದೆ. ಸದ್ಯ ಆಡಳಿತದಲ್ಲಿರುವ ಪಕ್ಷ ತನ್ನ ಇತಿಹಾಸದುದ್ದಕ್ಕೂ ಮತ ಕೇಳುತ್ತಾ ಬಂದಿರುವುದು ಭಾವನೆಗಳನ್ನು ಕೆರಳಿಸಿ, ಹುಸಿ ರಾಷ್ಟ್ರಭಕ್ತಿಯನ್ನು ಪ್ರಚೋದಿಸಿ. ಈ ಹಿನ್ನೆಲೆಯಲ್ಲಿ ಕಳೆದ ಐದು ದಿನಗಳಲ್ಲಿ ನಡೆದ ದೋಣಿ ಸ್ಫೋಟ ಪ್ರಕರಣವನ್ನು ಹಾಗೂ ಇಂದಿರಾಗಾಂಧಿ ವಿಮಾನ ನಿಲ್ದಾಣದದಲ್ಲಿ ವಿಮಾನ ಅಪಹರಣ ಪ್ರಕರಣದ ಪ್ರಹಸನಗಳನ್ನು ನೋಡಬೇಕಾಗಿದೆ.
ಇಂಡಿಯನ್ ಎಕ್ಸ್ ಪ್ರೆಸ್ ನ ಹಿರಿಯ ಪತ್ರಕರ್ತ ಪ್ರವೀಣ್ ಸ್ವಾಮಿ ಹೊಸ ವರ್ಷ ಆರಂಭದ ಹಿಂದಿನ ದಿನ ನಡೆದ ದೋಣಿ ಸ್ಫೋಟ ಪ್ರಕರಣದ ಬಗೆಗಿನ ವರದಿಯಲ್ಲಿ ದೋಣಿಯಲ್ಲಿ ಸ್ಫೋಟಕಗಳು ಇದ್ದವು ಎಂದು ಹೇಳಲು ಯಾವುದೇ ಆಧಾರಗಳಿಲ್ಲ. ಅದರಲ್ಲಿದ್ದವರು ಭಯೋತ್ಪಾದಕರು ಆಗಿರಲಿಕ್ಕಿಲ್ಲ, ಬದಲಿಗೆ ಯಾವುದೋ ಸಾಮಾಗ್ರಿಯನ್ನು ಕದ್ದು ಸಾಗಿಸುತ್ತಿರುವವರು ಇರಬಹುದು ಎಂದಿದ್ದರು. (http://indianexpress.com/article/india/india-others/little-evidence-of-terror-link-may-have-been-petty-smugglers/) ಅಷ್ಟಕ್ಕೆ ಬಿಜೆಪಿ ಕಾರ್ಯಕರ್ತರು ಸೋಮವಾರ ಪತ್ರಿಕಾ ಕಚೇರಿ ಎದುರು ಪ್ರತಿಭಟನೆ ನಡೆಸಿ, ಪ್ರವೀಣ್ ಸ್ವಾಮಿ ವಿರುದ್ಧ ಘೋಷಣೆ ಕೂಗಿದರು. ಅಷ್ಟೇ ಅಲ್ಲ ಸ್ವಾಮಿಯ ಪ್ರತಿಕೃತಿಯನ್ನೂ ದಹಿಸಿದರಂತೆ! ದೋಣಿ ಸ್ಫೋಟದ ಪ್ರಕರಣದ ಬಗ್ಗೆ ಅನೇಕ ಗೊಂದಲಗಳಿವೆ. ರಕ್ಷಣಾ ಇಲಾಖೆ ಆ ಗೊಂದಲಗಳನ್ನು ನಿವಾರಿಸುವ ಹೇಳಿಕೆ ಕೊಡಬೇಕು. ಅದು ಬಿಟ್ಟು ಅದೇ ಪಕ್ಷದ ಕಾರ್ಯಕರ್ತರನ್ನು ವರದಿಗಾರನ ವಿರುದ್ಧ ಪ್ರತಿಭಟನೆ ಮಾಡಿಸಬೇಕೆ?
ಪ್ರವೀಣ್ ಸ್ವಾಮಿ ದೇಶದ ರಕ್ಷಣಾ ಕ್ಷೇತ್ರದ ವರದಿಗಾರರ ಪೈಕಿ ಪ್ರಮುಖ ಹೆಸರು. ಆಯಕಟ್ಟಿನ ತಾಣಗಳಲ್ಲಿರುವ ಅಧಿಕಾರಿಗಳ (ಸುದ್ದಿ ಮೂಲಗಳ) ಸಂಪರ್ಕ ಹೊಂದಿರುವ ಪ್ರತಿಭಾವಂತ ಪತ್ರಕರ್ತ. ಅವರು ತಮ್ಮ ವರದಿಯಲ್ಲಿ ಈ ಘಟನೆ ಬಗ್ಗೆ ಸರಕಾರ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆ ಹಾಗೂ ಕೆಲ ಹಿರಿಯ ಅಧಿಕಾರಿಗಳ ಹೇಳಿಕೆಗಳನ್ನು ಉಲ್ಲೇಖಿಸಿದ್ದಾರೆ. ಪತ್ರಿಕಾ ಹೇಳಿಕೆ ಪ್ರಕಾರ, ಆ ದೋಣಿಯಲ್ಲಿ ಸ್ಫೋಟಕಗಳು ಇದ್ದ ಕಾರಣ, ಕರಾವಳಿ ಪಡೆ ಅದನ್ನು ಒಂದು ಗಂಟೆ ಕಾಲ ಫಾಲೋ ಮಾಡಿ ತಡೆಯಲು ಪ್ರಯತ್ನಿಸಿ ನಂತರ ದಾಳಿ ನಡೆಸಿ ಉಡಾಯಿಸಿತು. ಪ್ರವೀಣ್ ಸ್ವಾಮಿ ಪ್ರಶ್ನೆ ಪತ್ರಿಕೆ ಬಿಡುಗಡೆ ಮಾಡಿರುವ ದೋಣಿಯ ಚಿತ್ರದಲ್ಲಿ ಸ್ಪೋಟಕಗಳು ಕಾಣುತ್ತಿಲ್ಲ. ಒಂದು ಪಕ್ಷ ಅವು ಇದ್ದವು ಎಂದುಕೊಂಡರೂ, ಬೆಂಕಿಗೆ ಆಹುತಿಯಾದಾಗ, ಅವು ಚಿಮ್ಮಿ, ದೋಣಿಯ ಭಾಗಗಳು ತುಂಡು ತುಂಡಾಗಬೇಕಿತ್ತು. ಹಾಗೂ 25 ಮೀಟರ್ ಗಿಂತ ಉದ್ದನೆಯ ದೋಣಿಗಳು 30ಹೆಚ್.ಪಿ ಎಂಜಿನ್ ಗಳಿಂದ ಓಡುತ್ತಿರುತ್ತವೆ. ಅವುಗಳನ್ನು ತಡೆಯಲು ಕರಾವಳಿ ಪಡೆಯ ಅತ್ಯಾಧುನಿಕ ಹಡಗುಗಳು ಒಂದು ಗಂಟೆಗೂ ಹೆಚ್ಚು ಕಾಲ ಅಟ್ಟಿಸಿಕೊಂಡು ಹೋಗಬೇಕಾಯಿತೆ?
ಇದುವರೆಗೂ ಆ ಘಟನೆ ಸಂಭವಿಸಿದ ಸ್ಥಳದಿಂದ ತಾಂತ್ರಿಕ ತಪಾಸಣೆಗಾಗಿ ಯಾವುದೇ ಸ್ಯಾಂಪಲ್ ಗಳನ್ನು ಸಂಗ್ರಹಿಸಿಲ್ಲ. ರಕ್ಷಣಾ ಇಲಾಖೆ ಪ್ರತಿಕೂಲ ಹವಾಮಾನ ಇರುವ ಕಾರಣ ಅದು ಸಾಧ್ಯವಾಗಿಲ್ಲ ಎಂದು ಹೇಳಿಕೆ ನೀಡುತ್ತದೆ. ಆದರೆ, ಹವಾಮಾನ ಇಲಾಖೆ ನಿಯಮಿತವಾಗಿ ತನ್ನ ವೆಬ್ ತಾಣದಲ್ಲಿ ನೀಡುವ ಮಾಹಿತಿ ಪ್ರಕಾರ ಆ ಪ್ರದೇಶದಲ್ಲಿ ಸಾಧಾರಣ ಹವಾಗುಣ ಇದೆ. ಪ್ರತಿಕೂಲ ಸನ್ನಿವೇಶ ಇಲ್ಲ. ಮೇಲಾಗಿ ಗುಜರಾತ್ ನ ಮೀನುಗಾರರು ಮೀನು ಹಿಡಿಯಲು ಸಮುದ್ರಕ್ಕೆ ಹೋಗುವ ಸಮಯವೇ ಇದು. ಹಾಗಾಗಿ ಪ್ರತಿಕೂಲ ಹವಾಮಾನದ ಪ್ರಶ್ನೆಯೇ ಇಲ್ಲ. ಇಂತಹ ಪ್ರಶ್ನೆಗಳನ್ನು ಸ್ವಾಮಿ ಎತ್ತಿದ್ದಾರೆ. ಹಾಗೂ ಈ ಎಲ್ಲಾ ಕಾರಣಗಳಿಗಾಗಿ ಈ ಪ್ರಕರಣದ ಬಗ್ಗೆ ವಿವರವಾದ ತನಿಖೆಯಾಗಬೇಕೆಂದು ತಮ್ಮ ವರದಿಯಲ್ಲಿ ಒತ್ತಾಯಿಸಿದ್ದಾರೆ. ಉತ್ತರಿಸುವ ಜವಾಬ್ದಾರಿ ಸರಕಾರದ್ದು. ಆದರೆ, ಅವರು ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ. ಪ್ರವೀಣ್ ಸ್ವಾಮಿ ಬರೆದಿರುವುದು ಸುಳ್ಳೆಂದಾದರೆ, ರಕ್ಷಣಾ ಇಲಾಖೆ ಸಾಬೀತು ಮಾಡಲಿ.
ಈ ಘಟನೆಯ ಹಿನ್ನೆಲೆಯಲ್ಲಿ ಮೇಲಿನ ಕುಮಾರಸ್ವಾಮಿ ಅವಧಿಯ ಪ್ರಕರಣ ಹಾಗೂ ಬಿಲ್ ಕ್ಲಿಂಟನ್ ನೆನಪಾದರು. ಮೈಸೂರಿನಲ್ಲಿ ಬಂಧನವಾದ ಆ ಉಗ್ರರು ಈಗ ಎಲ್ಲಿದ್ದಾರೆ? ಅವರ ಬಂಧನವಾದ ಎಂಟು ವರ್ಷಗಳ ಮೇಲಾದರೂ, ಅವರ ತಪ್ಪುಗಳು ಸಾಬೀತಾದವಾ? ಶಿಕ್ಷೆಯಾಯಿತಾ? ಗಮನ ಬೇರೆಡೆಗೆ ಸೆಳೆಯಲು ಇರಾಕ್ ಮೇಲೆ ದಾಳಿ ನಡೆಸಿ ಕೆಲವರ ಸಾವಿಗೆ ಕಾರಣರಾದ ಕ್ಲಿಂಟನ್ ಗೆ ಶಿಕ್ಷೆ ಇಲ್ಲವೇ? ದೋಣಿ ಸ್ಫೋಟದಲ್ಲಿ ಸತ್ತವರು ಯಾರು? ಚರ್ಚ್ ಸ್ಟ್ರೀಟ್ ನಲ್ಲಿ ಚಿಕನ್ ಕೇಳಿದವರ ವಿರುದ್ಧ ಚಾರ್ಜ್ ಶೀಟ್ ದಾಖಲಾಯಿತೆ? ಹೀಗೆ ನೂರೆಂಟು ಪ್ರಶ್ನೆಗಳು ಏಳುತ್ತವೆ.