Monthly Archives: February 2015

ಮತೀಯ ಅಲ್ಪಸಂಖ್ಯಾತರು : ಇಲ್ಲಿರುವುದು ಸುಮ್ಮನೆ, ಎಲ್ಲಿದೆ ನಮ್ಮನೆ?

– ಬಿ.ಶ್ರೀಪಾದ ಭಟ್

ತನ್ನ ದೇಶದ ಅಲ್ಪಸಂಖ್ಯಾತರನ್ನು ಹೇಗೆ ನಡೆಸಿಕೊಳ್ಳುತ್ತದೆ ಎನ್ನುವುದರ ಮೇಲೆ ಆ ದೇಶವನ್ನು ಅರಿತುಕೊಳ್ಳಬಹುದು.

– ಮಹಾತ್ಮ ಗಾಂಧಿ

ಇಂಡಿಯಾದಲ್ಲಿ ಮುಸ್ಲಿಂ ಸಮುದಾಯದ ಐಡೆಂಟಿಟಿ, ಪ್ರಶ್ನೆಗಳನ್ನು ಎತ್ತಿಕೊಂಡು ಆ ಮೂಲಕ ಬಹು ಸಂಸ್ಕೃತಿ, ಪ್ರಜಾಪ್ರಭುತ್ವ, ಮತ್ತು ಜಾಗತಿಕ ಪ್ರಜಾಪ್ರಭುತ್ವದೊಂದಿಗೆ ಇಂಡಿಯಾದ ಹೋಲಿಕೆ ಗಳಂತಹ ಮುಖ್ಯ ಸಂಗತಿಗಳನ್ನು ಜೋಯಾ ಹಸನ್, ಅನ್ವರ್ ಆಲಮ್, ಬಾಜಪೇಯಿ, ಬಸರೂರು, ಮಹಾಜನ್ ಮತ್ತು ಜೋಡ್ಕ, ವೋರ ಮತ್ತು ಪಲ್ಶೀಕರ್ ರಂತಹ ಸಂಶೋದಕರು, ಚಿಂತಕರು ಎಣೆಯಿಲ್ಲದಷ್ಟು ಅಧ್ಯಯನ ಮಾಡಿದ್ದಾರೆ, ಬರೆದಿದ್ದಾರೆ. 2006ರಲ್ಲಿ ಸಾರ್ವಜನಿಕವಾಗಿ ಮಂಡಿತವಾದ ಸಾಚಾರ್ ಕಮಿಟಿ (ಇಂಡಿಯಾದಲ್ಲಿ ಮುಸ್ಲಿಂ ಸಮುದಾಯದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿ ಅಧ್ಯಯನದ ಕುರಿತು ಪ್ರಧಾನಮಂತ್ರಿಗಳ ಉನ್ನತ ಮಟ್ಟದ ಕಮಿಟಿ), 2006ರಲ್ಲಿ ಮಂಡಿತವಾದ ರಂಗನಾಥ್ ಮಿಶ್ರ ಕಮಿಟಿ (ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರ ರಾಷ್ಟ್ರೀಯ ಕಮಿಟಿಯ ವರದಿ) muslim-womanಎನ್ನುವ ಎರಡು ವರದಿಗಳು ಸ್ವಾತಂತ್ರಾನಂತರ ಮುಸ್ಲಿಂ ಸಮುದಾಯದ ಮತ್ತು ಇತರೇ ಅಲ್ಪಸಂಖ್ಯಾತರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿಗಳ ಕುರಿತು ಅತ್ಯಂತ ವೈಜ್ಞಾನಿಕ, ಅಥೆಂಟಿಕ್ ಆದ ಅಧಿಕೃತ ಸಂಶೋಧನೆಗಳು ಎಂದೇ ಪರಿಗಣಿಸಲ್ಪಡುತ್ತದೆ. ಮುಸ್ಲಿಂ ಸಮುದಾಯವು ತಾರತಮ್ಯ ನೀತಿ, ಪ್ರತ್ಯೇಕತೆಯ ತತ್ವಗಳಿಗೆ ಬಲಿಯಾಗಿ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಸಮುದಾಯವೆಂದು ಈ ಕಮಿಟಿಗಳ ಸಂಶೋಧನೆಯು ವಿವರಿಸುತ್ತದೆ. ಭಾರತ ಸಂವಿಧಾನದ 3ನೇ ಅನುಚ್ಛೇದದಲ್ಲಿ ಮೂಲಭೂತ ಹಕ್ಕುಗಳ ಅಡಿಯಲ್ಲಿ ಧಾರ್ಮಿಕ, ಸಾಂಸ್ಕೃತಿಕ, ಆರ್ಥಿಕವಾಗಿ ಅಲ್ಪಸಂಖ್ಯಾತರಿಗೆ ವಿಶೇಷ ಹಕ್ಕುಗಳನ್ನು ಕಲ್ಪಿಸಲಾಗಿದೆ. ಮುಸ್ಲಿಂರನ್ನು ಒಳಗೊಂಡಂತೆ ಎಲ್ಲಾ ಅಲ್ಪಸಂಖ್ಯಾತರಿಗೆ ಭಾರತದ ಸಂವಿಧಾನವು ಘನತೆ ಮತ್ತು ಸಮಾನತೆಯನ್ನು ಕಲ್ಪಿಸುವ ಮತ್ತು ಅದನ್ನು ಕಾಪಾಡುವ ಜವಾಬ್ದಾರಿಯನ್ನು ಚುನಾಯಿತ ಸರ್ಕಾರ ಮೇಲಿದೆ ಎಂದು ಸ್ಪಷ್ಟವಾಗಿ ಹೇಳಿದೆ.

ಅಲ್ಪಸಂಖ್ಯಾತ ಸಮುದಾಯಗಳಿಗೆ ಭಾರತದ ಸಂವಿಧಾನದ ಅಡಿಯಲ್ಲಿ ಕಲ್ಪಿಸಲಾಗಿರುವ ಕೆಲವು ಪ್ರಮುಖ ಅವಕಾಶಗಳು:

  1. ಕಲಮು 14 : ಕಾನೂನಿನ ಮುಂದೆ ಎಲ್ಲರೂ ಸಮಾನರು ಮತ್ತು ಕಾನೂನು ಸಹ ಸಮಾನ ರಕ್ಷಣೆಯನ್ನು ಕೊಡಬೇಕು
  2. ಕಲಮು 15 : ಧರ್ಮ, ಬಣ್ಣ, ಲಿಂಗ, ಜಾತಿ, ಪ್ರಾದೇಶಿಕ ಆಧಾರಧ ಮೇಲೆ ತಾರತಮ್ಯ ನೀತಿ ಆಚರಿಸುವುದನ್ನು ನಿಷೇಧಿಸಲಾಗಿದೆ
  3. ಕಲಮು 25 : ಪ್ರತಿಯೊಬ್ಬ ನಾಗರಿಕ (ಪುರುಷ ಮತ್ತು ಮಹಿಳೆ)ಗೂ ಧಾರ್ಮಿಕ ಆಚರಣೆಯ ಸ್ವಾತಂತ್ರವನ್ನು ಕೊಡಲಾಗಿದೆ
  4. ಕಲಮು 29 : ಅಲ್ಪ ಸಂಖ್ಯಾತರು ತಮ್ಮ ಭಾಷೆ, ಲಿಪಿ, ಸಂಸ್ಕೃತಿಯನ್ನು ಕಾಪಾಡಿಕೊಳ್ಳುವ ಹಕ್ಕನ್ನು ಕೊಡಲಾಗಿದೆ

1948 ರಲ್ಲಿ ಜಾಗತಿಕ ಮಟ್ಟದಲ್ಲಿ “ಘನತೆ ಮತ್ತು ಹಕ್ಕುಗಳ ನೆಲೆಯಲ್ಲಿ ಎಲ್ಲ ನಾಗರಿಕರೂ ಸಮಾನರು” ಎಂದು ಘೋಷಿಸಲಾಗಿದೆ. 1992 ರಲ್ಲಿ ವಿಶ್ವಸಂಸ್ಥೆಯ ಘೋಷಣೆಯಲ್ಲಿ “ಅಲ್ಪಸಂಖ್ಯಾತರ ಆಸ್ತಿತ್ವ ಮತ್ತು ಐಡೆಂಟಿಟಿಯನ್ನು ಕಾಪಾಡುವ ಜವಾಬ್ದಾರಿ ಆಯಾ ಸರ್ಕಾರಗಳ ಮೇಲಿದೆ ಮತ್ತು ಅವರ ಜೀವನ ಮಟ್ಟವನ್ನು ಉತ್ತಮಗೊಳಿಸುವ ಜವಾಬ್ದಾರಿಯೂ ಸರ್ಕಾರಗಳ ಮೇಲಿದೆ” ಎಂದು ಘೋಷಿಸಲಾಗಿದೆ.

ಇಂಡಿಯಾದ ಮುಸ್ಲಿಂ ಸಮುದಾಯದಲ್ಲಿ ಶೇಕಡಾ 47 ರಷ್ಟು ಮಹಿಳೆಯರು ಮತ್ತು ಶೇಕಡಾ 35 ರಷ್ಟುಚಿತ್ರಕೃಪೆ: ಗಾರ್ಡಿಯನ್ಪುರುಷರು ಅನಕ್ಷರಸ್ತರು. ಶೇಕಡಾ 23 ರಷ್ಟು ಬಾಲಕಿಯರು, ಶೇಕಡಾ 19 ರಷ್ಟು ಬಾಲಕರು ಶಾಲೆಯಿಂದ ಹೊರ ಉಳಿದಿದ್ದಾರೆ. ಶೇಕಡಾ 50 ರಷ್ಟು ಮುಸ್ಲಿಂ ಮನೆಗಳಲ್ಲಿ ಶೌಚಾಲಯ ಸೌಲಭ್ಯವಿಲ್ಲ. ಶೇಕಡಾ 100 ರಷ್ಟು ಮುಸ್ಲಿಂರಿಗೆ ಈ ದೇಶದ ಸಂವಿಧಾನತ್ಮಕವಾದ ಸಮಾನತೆ, ಘನತೆ, ನಾಗರಿಕ ಹಕ್ಕುಗಳನ್ನು ನಿರಾಕರಿಸಲಾಗಿದೆ. ಮುಕ್ತ ಆರ್ಥಿಕ ನೀತಿ ಮತ್ತು ನವ ಉದಾರೀಕರಣದ ಭಾರತದಲ್ಲಿ ಮುಸ್ಲಿಂರು ಮುಖ್ಯವಾಹಿನಿಯಿಂದ ಸಂಪೂರ್ಣವಾಗಿ ಹೊರಗುಳಿದಿದ್ದಾರೆ.

ಯಾವುದೇ ಆರ್ಥಿಕ ನೀತಿಗಳು ಮುಸ್ಲಿಂ ಸಮುದಾಯಕ್ಕೆ ಒಳಗೊಳ್ಳುವಿಕೆಯ ಸ್ಪೇಸ್ ಅನ್ನು ಕೊಡಲೇ ಇಲ್ಲ. ಆದರೆ ಕಳೆದ ಅರವತ್ತು ವರ್ಷಗಳಲ್ಲಿನ ಇಂಡಿಯಾದ ರಾಜಕೀಯ, ಸಾಮಾಜಿಕ ವರ್ತನೆಗಳನ್ನು ಅಧ್ಯಯನ ಮಾಡಿದಾಗ ಅಲ್ಪಸಂಖ್ಯಾತರ ಸಂವಿಧಾನಿಕ ಹಕ್ಕುಗಳನ್ನು ಶ್ರೇಣೀಕರಣಗೊಳಿಸಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ. ಅವರ ಬದುಕುವ ಕ್ರಮ ಮತ್ತು ಹಕ್ಕನ್ನು ವರ್ಗೀಕರಿಸಲಾಗಿದೆ. ಈ ವರ್ಗೀಕರಣದಲ್ಲಿ ಮುಸ್ಲಿಂ ಸಮುದಾಯವನ್ನು ಅನ್ಯರನ್ನಾಗಿ ವರ್ಗೀಕರಿಸಿ ಅವರಿಗೆ ಎಲ್ಲಾ ಬಗೆಯ ಸಂವಿಧಾನಿಕ ಸೌಲಭ್ಯಗಳಿಂದ ವಂಚಿತರನ್ನಾಗಿ ಮಾಡಲಾಗಿದೆ. ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯನ್ನು ತಂದುಕೊಡುವುದರ ಮೂಲಕ ಭದ್ರತೆಯನ್ನು ಕಲ್ಪಿಸಿಕೊಡಬೇಕಾದ ಸರ್ಕಾರಗಳು ಕಳೆದ 60 ವರ್ಷಗಳಲ್ಲಿ ಮುಸ್ಲಿಂ ಸಮುದಾಯಕ್ಕೆ ಅಭದ್ರತೆ, ಅಸಹಾಯಕತೆ, ಬಿಕ್ಕಟ್ಟುಗಳನ್ನು ಕೊಡುಗೆಯಾಗಿ ನೀಡಿವೆ. ಇದರ ಎಲ್ಲಾ ಸಂಗತಿಗಳನ್ನು ಸಾಚಾರ್ ಮತ್ತು ರಂಗನಾಥ್ ಮಿಶ್ರ ಕಮಿಷನ್ ನಲ್ಲಿ ವಿವರಿಸಲಾಗಿದೆ. ರಂಗನಾಥ್ ಮಿಶ್ರ ಕಮಿಷನ್ ಅಲ್ಪಸಂಖ್ಯಾತ ಸಮುದಾಯಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹುದ್ದೆಯಲ್ಲಿ ಶೇಕಡಾ 15 ರಷ್ಟು ಮೀಸಲಾತಿಯನ್ನು ಕಲ್ಪಿಸಬೇಕು. ಅದರಲ್ಲಿ ಶೇಕಡ 10 ಮುಸ್ಲಿಂ ಸಮುದಾಯಕ್ಕೆ ಕಲ್ಪಿಸಬೇಕು ಎಂದು ಶಿಫಾರಸ್ಸು ಮಾಡಿದೆ.

“ಧಾರ್ಮಿಕ ಅಲ್ಪಸಂಖ್ಯಾತರಾದ ಮುಸ್ಲಿಂರಿಗೆ ಧಾರ್ಮಿಕ ಸ್ವಾತಂತ್ರವನ್ನು ಕೊಡಲಾಗಿದ್ದರೂ ಅವರ ಪ್ರಾತಿನಿಧ್ಯದಲ್ಲಿ ಯಾವುದೇ ಸುರಕ್ಷತೆಯನ್ನು ಒದಗಿಸಿಲ್ಲ, ಏಕೆಂದರೆ ಮುಸ್ಲಿಂರು ಗತಕಾಲದಲ್ಲಿ ಅನ್ಯಾಯವನ್ನು ಅನುಭವಿಸಿಲ್ಲ, ಅದಕ್ಕೇ ಎಂದು ಷರಾ ಬರೆಯಲಾಗಿದೆ” Gujarat_muslimಎಂದು ಚಿಂತಕಿ ಜೋಯಾ ಹಸನ್ ಹೇಳುತ್ತಾರೆ. ಹೀಗಾಗಿ ಅವಶ್ಯಕವಾದ ಸಮಾನ ಅವಕಾಶಗಳು ಮುಸ್ಲಿಂ ಸಮುದಾಯಗಳನ್ನು ಒಳಗೊಳ್ಳುವಂತೆ ಸಮಾನವಾಗಿ ಹಂಚಿಕೆ ಆಗಲೇ ಇಲ್ಲ. ಮುಸ್ಲಿಂರಿಗೆ ಈ ಒಳಗೊಳ್ಳುವಿಕೆಯನ್ನು ನಿರಾಕರಿಸಲು ಸಂಘ ಪರಿವಾರಕ್ಕೆ ಅವರು ಇತರೇ ಧರ್ಮದವರು ಮತ್ತು ಪರಕೀಯರು ಎನ್ನುವ ಧೋರಣೆಗಳು ಕಾರಣವಾಗಿದ್ದರೆ ಇತರೇ ರಾಜಕೀಯ ಪಕ್ಷಗಳಿಗೆ ಈ ಒಳಗೊಳ್ಳುವಿಕೆ ಅವಶ್ಯಕ ಎಂದು ಅನಿಸಿಯೇ ಇಲ್ಲ.

ಸ್ವತಂತ್ರ ಬಂದು ಅರವತ್ತೇಳು ವರ್ಷಗಳ ನಂತರವೂ ಸಾಮಾಜಿಕ-ಆರ್ಥಿಕ ಸ್ವಾವಲಂಬನೆ ಮತ್ತು ಮೂಲಭೂತ ಅವಶ್ಯಕತೆಗಳಿಗೆ, ಘನತೆಯುಕ್ತ ಬದುಕಿಗೆ ಹಕ್ಕುದಾರರೆಂದು ಮುಸ್ಲಿಂ ಸಮುದಾಯವನ್ನು ಮಾನ್ಯತೆಯನ್ನು ಸಹ ಮಾಡಲಾಗಿಲ್ಲ. ಅವರಿಗೆ ಸಂವಿಧಾನಿಕವಾದ ನ್ಯಾಯಸಮ್ಮತ ಹಕ್ಕನ್ನು ನಿರಾಕರಿಸಲಾಗಿದೆ. ಮುಸ್ಲಿಂರು ಧರ್ಮ ಮತ್ತು ಬಡತನದ ಆಧಾರದಲ್ಲಿ ಡಬಲ್ ತಾರತಮ್ಯಕ್ಕೆ ಒಳಗಾಗಿದ್ದಾರೆ ಎಂದು ಸಾಚಾರ್ ಕಮಿಟಿಯಲ್ಲಿ ಹೇಳಿದ್ದಾರೆ.

1947 ರಿಂದ 2013 ರವರೆಗಿನ ತನ್ನ ಆಡಳಿತದ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರವು ಅಲ್ಪಸಂಖ್ಯಾತರ ಮಂತ್ರಿ, ಅಲ್ಪಸಂಖ್ಯಾತರ ರಾಷ್ಟ್ರೀಯ ಕಮಿಷನ್, ಅಲ್ಪಸಂಖ್ಯಾತರ ಶಿಕ್ಷಣಕ್ಕಾಗಿ ರಾಷ್ಟ್ರೀಯ ಕಮಿಷನ್, 2006 ರಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ 15 ಅಂಶಗಳ ಕಾರ್ಯಕ್ರಮ ಹೀಗೆ ಹಲವಾರು ಯೋಜನೆಗಳನ್ನು ಮತ್ತು ಸಂವಿಧಾನಿಕ ಅವಕಾಶಗಳನ್ನು ರೂಪಿಸಿದೆ. ಆದರೆ ಈ ಎಲ್ಲಾ ಮಂತ್ರಾಲಯಗಳು, ಕಮಿಟಿಗಳ ಚಿಂತನೆಗಳಲ್ಲಿ ಅಲ್ಪಸಂಖ್ಯಾತರಲ್ಲಿ ಬರುವ ಮುಸ್ಲಿಂರನ್ನು ಶ್ರೇಣೀಕರಣಕೊಳ್ಳಪಡಿಸಿ ಅವರನ್ನು ಕೆಳಹಂತದಲ್ಲಿ ನಿಲ್ಲಿಸಲಾಗಿದೆ. ಇಂದಿಗೂ ರಾಜ್ಯ ಸರ್ಕಾರಗಳು ಮುಸ್ಲಿಂರನ್ನು “ಹಿಂದುಳಿದ ವರ್ಗಗಳು” ಎಂದು ಗುರುತಿಸುವಲ್ಲಿ ಅನೇಕ ಅಸಮಾನತೆಗಳು, ತಾರತಮ್ಯ ನೀತಿಗಳಿವೆ. ಫ್ರೊ. ಮನೀಷ್ ಠಾಕೂರ್ ಅವರು’ಸಾಚಾರ್ ಕಮಿಟಿ ವರದಿಯು ಮುಸ್ಲಿಂ ಸಮುದಾಯಕ್ಕೆ ಹಿಂದುಳಿದ ವರ್ಗಗಳ ಪ್ರವರ್ಗದಲ್ಲಿ ಗುರುತಿಸಲು ವಿವಿಧ ರಾಜ್ಯಗಳು ರೂಪಿಸಿದ ಕೇರಳ ಮಾಡೆಲ್, ಆಂದ್ರ ಪ್ರದೇಶ ಮಾಡೆಲ್ (ಅವಿಭಜಿತ ರಾಜ್ಯ), ತಮಿಳು ನಾಡು ಮಾಡೆಲ್, ಬಿಹಾರ್ ಮಾಡೆಲ್ ಹೀಗೆ ಅನೇಕ ವಿವಿಧ ಮಾಡೆಲ್‌ಗಳನ್ನು ಆಳವಾಗಿ ಪರಿಶೀಲಿಸಿತು. ಉದಾಹರಣೆಗೆ ಆವಿಭಜಿತ ರಾಜ್ಯವಾಗಿದ್ದ ಸಂದರ್ಭದಲ್ಲಿ ಆಂದ್ರ ಪ್ರದೇಶ ಸರ್ಕಾರ ಮುಸ್ಲಿಂ ಸಮುದಾಯದ ಹಿಂದುಳುವಿಕೆಯನ್ನು ಗುರುತಿಸಿ ಮೀಸಲಾತಿ ನೀಡಲು ನಿರ್ಧರಿಸಿದಾಗ ಸಂವಿಧಾನದ ಸೆಕ್ಯುಲರ್ ತತ್ವದ ಅಡಿಯಲ್ಲಿ ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ನ್ಯಾಯಾಂಗವು ಮಧ್ಯ ಪ್ರವೇಶಿಸಿ ಅದಕ್ಕೆ ತಡೆಯೊಡ್ಡಿತು. ಮತ್ತೊಂದು ಚಿಂತನೆಯ ಪ್ರಕಾರ ಸಮತಾವಾದವನ್ನು ಪ್ರತಿಪಾದಿಸುವ, ಜಾತಿ ತಾರತಮ್ಯವಿಲ್ಲದ ಧರ್ಮವಾದ ಇಸ್ಲಾಂ ಅನ್ನು ಹಿಂದುಳಿದ ವರ್ಗಕ್ಕೆ ಸೇರಿಸುವುದನ್ನು ಚರ್ಚಿಸಬೇಕು ಎಂದು ಹೇಳುತ್ತಿದ್ದರೆ, ಕೇಂದ್ರದಲ್ಲಿ ಈ ಕುರಿತು ಇನ್ನೂ ಚರ್ಚೆ ನಡೆಯುತ್ತಿದೆ’ಎಂದು ಹೇಳಿದ್ದಾರೆ.

ಆದರೆ ನ್ಯಾಯಾಂಗ ವ್ಯವಸ್ಥೆಯು ಅಲ್ಪಸಂಖ್ಯಾತ ಸಮುದಾಯವೊಂದು ಹಿಂದುಳಿದಿದೆ ಎನ್ನುವ ವಾಸ್ತವ ಅಂಶವನ್ನು ಮಾನ್ಯ ಮಾಡಲು ಅಡ್ಡಗಾಲು ಹಾಕಿರುವುದು ಒಂದು ವೈರುಧ್ಯವಾದರೆ ಇಂದು ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಮುಸ್ಲಿಂ ಸಮುದಾಯದ ಕುರಿತಾಗಿ ಯಾವುದೇ ಬಗೆಯ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದನ್ನು ನಿರೀಕ್ಷಿಸಲು ಸಾಧ್ಯವೇ ಇಲ್ಲ. ಅದು ಮುಗಿದ ಕಥೆ. ಹಿಂದುಸ್ತಾನ ಎಂದರೆ ಹಿಂದೂಗಳ ರಾಷ್ಟ್ರ, ಇಂಡಿಯಾದ ರಾಷ್ಟ್ರೀಯತೆ ಎಂದರೆ ಹಿಂದುತ್ವದ ರಾಷ್ಟ್ರೀಯತೆ ಎಂದು ಘೋಷಿಸುವುದರ ಮೂಲಕ ಆರೆಸ್ಸಸ್ ಸರಸಂಚಾಲಕ ಮೋಹನ್ ಭಾಗವತ್ ಬಹು ಸಂಸ್ಕೃತಿ, ವೈವಿಧ್ಯತೆ, ಧರ್ಮ ನಿರಪೇಕ್ಷತೆ ಎನ್ನುವ ಎಲ್ಲಾ ವಿಶ್ಲೇಷಣೆಗಳಿಗೆ ತೆರೆ ಎಳೆದಿದ್ದಾರೆ. 56 ಇಂಚಿನ ಎದೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದಿಗೂ ಇದಕ್ಕೆ ಪ್ರತಿಕ್ರಿಯಿಸಿಲ್ಲ. ನಿರ್ದಿಷ್ಟ ಕೋಮಿನ ಪುರುಷರು ಬಹುಸಂಖ್ಯಾತರ ಧರ್ಮಕ್ಕೆ ಸೇರಿದ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದರೆ ಅದನ್ನು ಕಾಕತಾಳೀಯ ಎಂದು ನಂಬಲು ಸಾಧ್ಯವಿಲ್ಲ. ಅದು ಪೂರ್ವಯೋಜಿತ ಸಂಚು ಎಂದೇ ಕರೆಯಬೇಕಾಗುತ್ತದೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ ಸಂಘ ಪರಿವಾರದ ಸದಸ್ಯರ ವರ್ತನೆಗಳಿಗೆ ಪೂರಕವಾಗಿ ಉತ್ತರ ಪ್ರದೇಶದ ಬಿಜೆಪಿ ಅಧ್ಯಕ್ಷ ಲಕ್ಷ್ಮಿಕಾಂತ್ ಬಾಜಪೇಯಿ ’ಅವರು ಒಂದು ನಿರ್ದಿಷ್ಟ ಕೋಮಿಗೆ ಸೇರಿದವರಾದ ಮಾತ್ರಕ್ಕೆ ನಮ್ಮ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಲು, Muslim-women-mosqueಮಹಿಳೆಯರನ್ನು ತಮ್ಮ ಮತಕ್ಕೆ ಮತಾಂತರ ಮಾಡಲು ಅವರಿಗೆ ಉಚಿತ ಸರ್ಟಿಫಿಕೇಟ್ ಕೊಡಲಾಗಿದೆಯೇ? ಯುವಕರು ಈ ’ಲವ್ ಜಿಹಾದ್’ ಕುರಿತು ಎಚ್ಚರದಿಂದರಬೇಕು’ ಎಂದು ಎಚ್ಚರಿಸಿದ್ದಾರೆ. ಫ್ರೊ.ಜೋಯಾ ಹಸನ್ ಅವರು ’ಸಬ್ಕಾ ಸಾಥ್,ಸಬ್ಕಾ ವಿಕಾಸ್’ ಎಂದು ಹೇಳುತ್ತಿರುವ ಮೋದಿ ತನ್ನ ಪರಿವಾರದ ಲುಂಪೆನ್ ಮತೀಯವಾದಿಗಳೊಂದಿಗೆ ಮತ್ತು ಅವರ ಕೋಮುವಾದಿ ಹೇಳಿಕೆಗಳೊಂದಿಗೆ ಇಂದಿಗೂ ಗುರುತಿಸಿಕೊಂಡಿದ್ದಾರೆ. ಯಾವುದನ್ನೂ ನಿರಾಕರಿಸಿಲ್ಲ. ತಮಗೆ ಬಹುಮತ ಗಳಿಸಲು ಕಾರಣರಾದ ಶೇಕಡ 31ರಷ್ಟು ಮತದಾತರಿಗೆ ಮಾತ್ರ ಪ್ರಧಾನ ಮಂತ್ರಿಯಂತೆ ವರ್ತಿಸುತ್ತಿರುವ ಈ ನರೇಂದ್ರ ಮೋದಿ, ’ಅಲ್ಪಸಂಖ್ಯಾತ(ಮುಸ್ಲಿಂ)ರಹಿತ ರಾಜಕೀಯ’ ಎನ್ನುವ ಮಾಡೆಲ್ ಅನ್ನು ನಿರ್ಮಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಮತ್ತೊಂದೆಡೆ ರಾಜಕೀಯ ಮತ್ತು ಸಾಮಾಜಿಕ ಕಾರಣಗಳಿಂದಾಗಿ ಸಾಚಾರ್ ಕಮಿಟಿ ಮತ್ತು ರಂಗನಾಥ್ ಮಿಶ್ರ ಕಮಿಟಿ ವರದಿಗಳನ್ನು ಒಪ್ಪಿಕೊಂಡು ಮುಸ್ಲಿಂ ಸಮುದಾಯದ ಪರವಾಗಿ ಹಂತಹಂತವಾಗಿ ಸುಧಾರಣೆಗಳನ್ನು ಜಾರಿಗೊಳಿಸುವ ರಾಜಕೀಯ ಇಚ್ಛಾಶಕ್ತಿ ಇಂದಿನ ಸಂದರ್ಭದಲ್ಲಿ ಸಂಪೂರ್ಣವಾಗಿ ಗೌಣಗೊಂಡಿದೆ. ಈ ವರದಿಗಳಿಗೆ ಕಾನೂನು ಚೌಕಟ್ಟನ್ನು ಹಾಕಿಕೊಟ್ಟು ಆ ಮೂಲಕ ಜಾರಿಗೊಳಿಸಬಹುದಾದ ಸಾಧ್ಯತೆಗಳೂ ಕ್ಷೀಣವಾಗಿವೆ.

ಇಂಡಿಯಾದಲ್ಲಿ ಬಲು ದೊಡ್ಡ ಅಲ್ಪಸಂಖ್ಯಾತ ರಿಲಿಜನ್ ಆದ ಇಸ್ಲಾಂ ಇಂದು ರಾಜಕೀಯ, ಸಾಮಾಜಿಕ, ಆರ್ಥಿಕ ಕ್ಷೇತ್ರಗಳನ್ನು ಒಳಗೊಂಡಂತೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಶೋಷಣೆಗೆ, ದೌರ್ಜನ್ಯಕ್ಕೆ ಒಳಗಾದ ಧರ್ಮವೂ ಹೌದು. ಮುಸ್ಲಿಂರಿಗೆ ಹೊರಗಿನವರಾದ (ಅನೇಕ ಕಾರಣಗಳಿಗೆ) ಬಹುಸಂಖ್ಯಾತ ಹಿಂದೂ ಮತಾಂಧರ ಲುಂಪೆನ್ ಗುಂಪು ಮತ್ತು ಮತೀಯವಾದಿ ಸಂಘ ಪರಿವಾರದವರು ನಡೆಸುವ ದೈಹಿಕ inidan-muslim-womanಹಲ್ಲೆಗಳು, ಮಾನಸಿಕ ಹಿಂಸೆಗಳು, ಅವರನ್ನು ಅನುಮಾನಿತರನ್ನಾಗಿ ಪರಿಭಾವಿಸುವ ಮಧ್ಯಮವರ್ಗದ ಸಂಕುಚಿತ ಮನಸ್ಸು ಮುಸ್ಲಿಂರ ಘನತೆಯನ್ನೇ ನಾಶಗೊಳಿಸಿ ಅವರನ್ನು ದ್ವಿತೀಯ ದರ್ಜೆಯ ನಾಗರಿಕನ್ನಾಗಿಸಿದ್ದರೆ ಒಳಗಿನವರಾದ ಮೂಲಭೂತವಾದಿ ಧಾರ್ಮಿಕ ಗುರುಗಳು ಮತ್ತು ಪಿಎಫ್‌ಐ, ಎಸ್‌ಡಿಪಿಐ ನಂತಹ ಮತೀಯವಾದಿ ರಾಜಕೀಯ ಪಕ್ಷಗಳು ಮುಸ್ಲಿಂರ ಐಡೆಂಟಿಟಿಯನ್ನು ಹೆಚ್ಚೂ ಕಡಿಮೆ ಪ್ರಶ್ನಾರ್ಹವಾಗುವಂತೆ ವರ್ತಿಸುತ್ತಿದ್ದಾರೆ. ಸೆಕ್ಯುಲರ್ ತತ್ವವನ್ನು ಮೈಗೂಡಿಸಿಕೊಂಡಿರುವ ಮುಸ್ಲಿಂ ಸಮುದಾಯದ ಎಲೈಟ್ ಗುಂಪು ತನ್ನನ್ನು ಐಡೆಂಟಿಟಿ ರಾಜಕಾರಣದಲ್ಲಿ ತೊಡಗಿಸಿಕೊಂಡಿರುವುದು ದುರಂತವೇ ಸರಿ. ಏಕೆಂದರೆ ಚಿಂತಕ ಅಲಮ್ ಅವರು ’ಈ ಎಲೈಟ್ ಮುಸ್ಲಿಂ ಸಮುದಾಯ ತನ್ನನ್ನು ಅಲಿಘರ್ ಮುಸ್ಲಿಂ ಯೂನಿವರ್‍ಸಿಟಿ, ಉರ್ದು ಭಾಷೆ, ಮುಸ್ಲಿಂ ಪರ್ಸನಲ್ ಲಾ ದಂತಹವುಗಳೊಂದಿಗೆ ಗುರುತಿಸಿಕೊಳ್ಳುತ್ತದೆಯೇ ವಿನಃ ಮುಸ್ಲಿಂ ಸಮುದಾಯದ ಶಿಕ್ಷಣ, ಸಾಮಾಜಿಕ, ಆರ್ಥಿಕ ಸಬಲೀಕರಣಗಳಂತಹ ಸೂಕ್ಷ್ಮ ಮತ್ತು ಪ್ರಮುಖ ವಿಷಯಗಳನ್ನು ನಿರ್ಲಕ್ಷಿಸಿದೆ’ ಎಂದು ಮಾರ್ಮಿಕವಾಗಿ ಹೇಳುತ್ತಾರೆ. ಮಧ್ಯಯುಗೀನ ಕಾಲದಲ್ಲಿ ಮುಸ್ಲಿಂ ದೊರೆಗಳು EGGS 2ನಡೆಸಿದ ಯುಧ್ದಗಳನ್ನು ಮತ್ತು ಆ ಸಂದರ್ಭದಲ್ಲಿನ ಲೂಟಿಗಳನ್ನು ಇತಿಹಾಸದ ವಸ್ತುನಿಷ್ಠ ದೃಷ್ಟಿಕೋನದಿಂದ,ವಿವಿಧ ಆಯಾಮಗಳಿಂದ ಅರ್ಥೈಸಲು ನಿರಾಕರಿಸುವ ಮತೀಯವಾದಿ ಸಂಘ ಪರಿವಾರ ಮತ್ತು ಮಧ್ಯಮವರ್ಗ 700 ವರ್ಷಗಳ ನಂತರವೂ ಇಂದಿನ ಮುಸ್ಲಿಂರನ್ನು ಆ ದಾಳಿಕೋರರೊಂದಿಗೆ ಸಮೀಕರಿಸಿ ಹಂಗಿಸುವುದನ್ನು ಮುಂದುವರೆಸಿದ್ದರೆ ಮುಸ್ಲಿಂ ಮೂಲಭೂತವಾದಿಗಳು ತಮ್ಮ ಪರಂಪರೆಯನ್ನು ಮೊಘಲ ದೊರೆಗಳೊಂದಿಗೆ ವೈಭವೀಕರಿಸಿ ಇಂಡಿಯಾದ ಇಸ್ಲಾಂ ಮತವನ್ನು ಅರೇಬಿಯಾ ರಾಷ್ಟ್ರಗಳ ಧಾರ್ಮಿಕತೆಗೆ ಗಂಟು ಹಾಕಿದ್ದಾರೆ. ಆದರೆ ಅಭಿವೃದ್ಧಿ ಮತ್ತು ಆಧುನಿಕತೆ ಮುಸ್ಲಿಂರ Ghetto ಗಳಿಂದ  ಸಾವಿರಾರು ಮೈಲಿಗಳಷ್ಟು ದೂರದಲ್ಲಿದೆ. ಪ್ರತಿದಿನ ಮುಂಜಾನೆ ಅತ್ಯಂತ ಆತಂಕ ಮತ್ತು ಭಯದಿಂದ ಬಾಗಿಲನ್ನು ತೆರೆಯಬೇಕಾದಂತಹ ಸಂಧಿಗ್ಧತೆ ಮತ್ತು ದುಸ್ಥಿತಿಯಲ್ಲಿರುವ ಇಂಡಿಯಾದ ಮುಸ್ಲಿಂರು ಪ್ರತಿ ಕ್ಷಣವೂ ತಮ್ಮ ರಾಷ್ಟ್ರೀಯತೆ ಮತ್ತು ದೇಶಪ್ರೇಮವನ್ನು ಸಾಬೀತುಪಡಿಸುತ್ತಲೇ ಬದುಕಬೇಕಾದಂತಹ ದುರಂತದಲ್ಲಿದ್ದಾರೆ. ಇಲ್ಲಿಯವರೆಗೆ ಕನಿಷ್ಠ ವೋಟ್ ಬ್ಯಾಂಕ್ ರಾಜಕಾರಣಕ್ಕಾದರೂ ಅವರನ್ನು ಓಲೈಸುತ್ತಿದ್ದ ಇಂಡಿಯಾದ ರಾಜಕಾರಣದ ದಿಕ್ಸೂಚಿ 2014 ರ ಲೋಕಸಭೆ ಚುನಾವಣೆಯ ನಂತರ ಸಂಪೂರ್ಣವಾಗಿ ಬದಲಾಗಿದೆ. ಮುಸ್ಲಿಂರ ಮತದ ಅವಶ್ಯಕತೆ ಇಲ್ಲದೆಯೇ ಸರಳ ಬಹುಮತವನ್ನು ಸಾಧಿಸಿರುವ ಬಿಜೆಪಿ ಪಕ್ಷಕ್ಕೆ ಇಂದು ಮುಸ್ಲಿಂರು ಯಾವುದೇ ಕಾರಣಕ್ಕೂ ಅವಶ್ಯಕತೆ ಇಲ್ಲ. ಮುಸ್ಲಿಂ ಧಾರ್ಮಿಕ ಹಬ್ಬಗಳ ಸಂದರ್ಭದಲ್ಲಿ ಔಪಾಚಾರಿಕವಾಗಿ ಈದ್ ಶುಭಾಶಯ ಹೇಳದ ಮೊಟ್ಟ ಮೊದಲ ಪ್ರಧಾನಿ ಎಂದರೆ ಈ ನರೇಂದ್ರ ಮೋದಿ. ನೀವು ಇರುವ ಹಾಗಿದ್ದರೆ ಇರಿ ಇಲ್ಲದಿದ್ದರೆ ನಿಮ್ಮಿಷ್ಟ ಎನ್ನುವಂತಹ ಧೋರಣೆಯನ್ನು ವ್ಯಕ್ತಪಡಿಸುತ್ತಿರುವ ಪ್ರಧಾನಿ ಮೋದಿ ಮತ್ತು ಸಂಘ ಪರಿವಾರದ ಆಡಳಿತದಲ್ಲಿ ಮುಸ್ಲಿಂ ಸಮುದಾಯ ಘನತೆಯನ್ನು ಕಳೆದುಕೊಂಡು ಕ್ರಮೇಣ ನಗಣ್ಯವಾಗುವ ಹಂತಕ್ಕೆ ತಲಪುತ್ತಿದ್ದಾರೆ.

ಮತ್ತೊಂದೆಡೆ ಹಿಂದೂ ಧರ್ಮದ ಜಾತಿ ಪದ್ಧತಿಯ ದೌರ್ಜನ್ಯಕ್ಕೆ ನಲುಗಿದ ತಳ ಸಮುದಾಯಗಳು ಸೆಮೆಟಿಕ್ ರಿಲಿಜನ್‌ಗಳಾದ ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಗಳಿಗೆ ಮತಾಂತರಗೊಳ್ಳುತ್ತಿರುವುದು ಈ ಸೆಮೆಟಕ್ ರಿಲಿಜನ್‌ಗೆ ತಾತ್ವಿಕವಾಗಿ ಬಲ ತಂದುಕೊಡುವುದರ ಬದಲಾಗಿ ಮತ್ತಷ್ಟು ದ್ವೇಷಕ್ಕೆ ಬಲಿಯಾಗುತ್ತಿರುವುದು ಮತ್ತೊಂದು ದುರಂತ.

ಈ ಮತಾಂತರ ಪ್ರಕ್ರಿಯೆ ರಾಜಕೀಯ ವಾತಾವರಣವನ್ನೇ ಧಗಧಗಿಸುವಂತೆ ಮಾಡಿದೆ. ಇಲ್ಲೊಂದು ನೈಜ ಸತ್ಯವನ್ನು ನಾವು ಅರಿಯಬೇಕು. ತಳ ಸಮುದಾಯಗಳು ಇಂಡಿಯಾದ ಜಾತೀಯತೆಗೆ, ತಾರತಮ್ಯಕ್ಕೆ ಸೆಮೆಟಿಕ್ ರಿಲಿಜನ್‌ಗಳಾದ ಕ್ರಿಶ್ಚಿಯನ್ ಮತ್ತು ಇಸ್ಲಾಂ ಧರ್ಮಗಳು ಮಾತ್ರ ಮುಕ್ತಿ ಒದಗಿಸಬಲ್ಲವು ಎಂದು ಮುಗ್ಧವಾಗಿ ನಂಬುತ್ತಾರೆ.  ನಮ್ಮ ಬುದ್ಧಿಜೀವಿಗಳು ಸಹ ಈ ಕ್ರಿಶ್ಚಿಯನ್ ಮತ್ತು ಇಸ್ಲಾಂ ಧರ್ಮಗಳನ್ನು ನೋಡುವುದು ಮತ್ತು ಅರ್ಥೈಸಿಕೊಂಡಿರುವುದು ಸಹ ಯುರೋಪಿಯನ್ ಕನ್ನಡಕದ ಮೂಲಕ. ಏಕ ದೈವೋಪಾಸಕ ಮತಗಳಾದ ಸೆಮೆಟಿಕ್ ರಿಲಿಜನ್‌ಗಳು ಕುಲೀನತನದ ಶ್ರೇಷ್ಟತೆಯನ್ನು ತಿರಸ್ಕರಿಸಿ ಜನಸಾಮಾನ್ಯರ ಪರವಾಗಿ ನಿಲ್ಲುತ್ತವೆ ಮತ್ತು ಅವುಗಳ ತತ್ವಗಳು ಜೀವಪರವಾಗಿವೆ, ಸೆಕ್ಯುಲರಿಸಂ ಅಲ್ಲಿನ ಜೀವನ ಕ್ರಮವಾಗಿದೆ ಮತ್ತು  ಈ ಸೆಮೆಟಿಕ್ ರಿಲಿಜನ್‌ಗಳು  ಸಮತಾವಾದವನ್ನು ಧ್ಯಾನಿಸುತ್ತವೆ. ಆದರೆ ವಸಾಹತುಶಾಹಿಯ ದುರಹಂಕಾರಕ್ಕೆ, ನವ ಉದಾರೀಕರಣದ ಬಂಡವಾಳಶಾಹಿಯ ಯಜಮಾನಿಕೆಗೆ ಹಿಂದೂ ಧರ್ಮದಂತೆಯೇ ಬಲು ಸುಲಭವಾಗಿ ಈ ಸೆಮೆಟಿಕ್ ರಿಲಿಜನ್‌ಗಳೂ ಕೂಡ ಬಲಿಯಾಗಿಬಿಡುತ್ತವೆ ಎನ್ನುವ ಅಪಾಯದ ಕುರಿತಾಗಿ ನಮ್ಮ ಬುದ್ಧಿಜೀವಿಗಳ ಬಳಿ ಉತ್ತರವಿದ್ದಂತಿಲ್ಲ. ಪಟ್ಟಭದ್ರ ಹಿತಾಸಕ್ತಿಗಳನ್ನು ಈ ಸೆಮೆಟಿಕ್ ರಿಲಿಜನ್‌ಗಳೂ ಪೋಷಿಸುತ್ತವೆ ಮತ್ತು ದಲಿತರಿಗೆ ವಿಮೋಚನೆಯ ಅಂತಿಮ ಗಮ್ಯ ಸ್ಥಾನವಾಗಿ ತಮ್ಮೊಳಗೆ, ತಮ್ಮ ಸಮಾಜದೆಡೆಗೆ ತುಂಬು ಹೃದಯದಿಂದ, ಮಾನವೀಯತೆಯಿಂದ ಬರ ಮಾಡಿಕೊಂಡ ಈ ಸೆಮೆಟಿಕ್ ರಿಲಿಜನ್‌ಗಳು ಕಡೆಗೆ ದಲಿತರಿಗೆ ಘನತೆ ಮತ್ತು ಆತ್ಮಾಭಿಮಾನವನ್ನು ತಂದು ಕೊಟ್ಟವೇ ಎನ್ನುವುದು ಇಂದಿಗೂ ಚರ್ಚೆಗೆ ಒಳಪಡುತ್ತಿದೆ. ದಲಿತ ಕ್ರಿಶ್ಚಿಯನ್ನರು ನಿಜಕ್ಕೂ ಪಡೆದಿದ್ದೇನು, ಎನ್ನುವ ಪ್ರಶ್ನೆಗೆ ಅತ್ಯಂತ ಸಂಕೀರ್ಣವಾದ ಉತ್ತರಗಳು ದೊರಕುತ್ತವೆ. ಈ ಸೆಮೆಟಿಕ್ ರಿಲಿಜನ್‌ಗಳು ಸಹ ಹಿಂದೂ ಧರ್ಮದಂತೆಯೇ ಅನೇಕ ಬಾರಿ ಪುರುಷಾಧಿಕಾರಕ್ಕೆ ಬಲಿಯಾಗಿಬಿಡುತ್ತವೆ ಎನ್ನುವ ಆರೋಪಗಳಿವೆ. ಈ ಎಲ್ಲಾ ಹಿನ್ನೆಲೆಯಲ್ಲಿ ಸಂಘ ಪರಿವಾರವದ “ಘರ್ ವಾಪಸಿ” ಎನ್ನುವ ಹಿಂದೂ ಬಹುಸಂಖ್ಯಾತತ್ವ ಕಾರ್ಯಕ್ರಮ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಬೇರೆ ಧರ್ಮದವರು ಮಾಡಬಹುದಾದರೆ ಹಿಂದೂಗಳು ಯಾಕೆ ಮಾಡಬಾರದು ಎನ್ನುವ ತತ್ವದ ಅಡಿಯಲ್ಲಿ ಈ “ಘರ್ ವಾಪಸಿ” ಅನ್ನು ಸಂಘ ಪರಿವಾರ ಸಮರ್ಥಿಸಿಕೊಳ್ಳುತ್ತಿದೆ. 56 ಇಂಚಿನ ಎದೆಯ ಮೋದಿ ಇಲ್ಲಿಯೂ ಬಾಯಿ ಬಿಟ್ಟಿಲ್ಲ.

ಸಿಎನ್‌ಎನ್ ಛಾನಲ್‌ನ ಫರೀದ್ ಜಕಾರಿಯಾಗೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ಮೋದಿ ಭಾರತದ ಮುಸ್ಲಿಂರು ದೇಶಕ್ಕಾಗಿ ಪ್ರಾಣ ಕೊಡುತ್ತಾರೆ ಎಂದು ಹೇಳಿದ ಮಾತನ್ನು ಕುರಿತಾಗಿ ಹಸನ್ ಸುರೂರ್ ಅವರು ಮುಸ್ಲಿಂರ ಕುರಿತಾಗಿ ಮೋದಿಯ ಈ ಮಾತನ್ನು ಮತ್ತು ಅದಕ್ಕೆ ಬಂದ ಪ್ರತಿಕ್ರಿಯೆಗಳನ್ನು ಕೇಳಿದಾಗ “ಮುಸ್ಲಿಂರ ಬದ್ಧತೆಯ ಪ್ರಶ್ನೆ ಈ ಮಟ್ಟದಲ್ಲಿ ರಾಜಕೀಯ ಚರ್ಚೆ ಆಗುತ್ತಿರುವುದು ಇದೇ ಮೊದಲು ಎಂದೆನಿಸುತ್ತಿದೆ. ದೃಶ್ಯ ಮಾಧ್ಯಮಗಳಲ್ಲಿ ಸೆಕ್ಯುಲರಿಸಂ ಅನ್ನು ದೇಶಭಕ್ತ ಹಿಂದೂಗಳು ಒಂದು ಕಡೆ, ಅನುಮಾನಿತ ಮುಸ್ಲಿಂರು ಮತ್ತೊಂದೆಡೆ ಎನ್ನುವ ನೆಲೆಯಲ್ಲಿಯೇ ಚರ್ಚೆಗೊಳಪಡಿಸಲಾಗುತ್ತಿದೆ. ಹಿಂದೂ-ಮುಸ್ಲಿಂರ ಸಂಬಂಧಗಳ ಸ್ವರೂಪವು ಸಂಪೂರ್ಣವಾಗಿ ಧೃವೀಕರಣಗೊಳ್ಳುತ್ತಿದೆ. ಪ್ರತಿ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ಶಾಹಿ ಇಮಾಮ್ ಬುಖಾರಿಯ ಫತ್ವವನ್ನು ಬಳಸಿಕೊಳ್ಳುವುದರ ಮೂಲಕ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ಬಿಜೆಪಿ ಪಕ್ಷವು ಬಹುಸಂಖ್ಯಾತ ಹಿಂದೂಗಳನ್ನು ಧೃವೀಕರಣಗೊಳಿಸುವಲ್ಲಿ ಯಶಸ್ವಿಯಾಗುವುದಕ್ಕೆ ಸಹಕರಿಸುತ್ತಿವೆ. ಮತ್ತೊಂದೆಡೆ ಶಾಹಿದ್ ಸಿದ್ದಿಕಿಯಂತಹ ಪತ್ರಕರ್ತರು ’ಮುಸ್ಲಿಂರು ಕಾಂಗ್ರೆಸ್. ಸಮಾಜವಾದಿ ಪಕ್ಷಗಳ ಬೋಗಸ್ ಸೆಕ್ಯುಲರಿಸಂನ ಗುಲಾಮರಾಗಿದ್ದಾರೆ. ಈ ಪಕ್ಷಗಳೇ ಮುಸ್ಲಿಂರ ಶತೃಗಳು’ ಎಂದು ಟೀಕಿಸುತ್ತಿದ್ದಾರೆ. ಸಿದ್ದಿಕಿಯಂತಹ ಪತ್ರಕರ್ತರ ಈ ಟೀಕೆಗಳು ಸಂಘಪರಿವಾರದ ’ಸಿಕ್ಯುಲರಿಸ್ಟ್’ ಎನ್ನುವ ಲೇವಡಿ ಮತ್ತು ಟೀಕೆಗಳಿಗೆ ನೀರೆರೆದು ಪೋಷಿಸುತ್ತಿವೆ” ಎಂದು ಬರೆಯುತ್ತಾರೆ. ತಮ್ಮ ಜಪಾನ್ ಪ್ರವಾಸದ ಸಂದರ್ಭದಲ್ಲಿ ನರೇಂದ್ರ ಮೋದಿ ಅಲ್ಲಿನ ಪ್ರದಾನಿಗೆ ಭಗವದ್ಗೀತೆ ಪುಸ್ತಕವನ್ನು ಉಡುಗೊರೆಯಾಗಿ ಕೊಡುತ್ತ “ಭಾರತದಲ್ಲಿ ಸೆಕ್ಯುಲರಿಸ್ಟ್‌ಗಳು ಇದಕ್ಕೆ ಆಕ್ಷೇಪಿಸುತ್ತಾರೆ” ಎಂದು ಲೇವಡಿ ಮಾಡಿದ್ದರು. ನಿಜ. ನೇಪಾಳದ ಪ್ರವಾಸದ ಸಂದರ್ಭದಲ್ಲಿ ಅಲ್ಲಿನ ಅಧ್ಯಕ್ಷರಿಗೆ ಕುರಾನ್ ಅನ್ನು ಉಡುಗೊರೆಯಾಗಿ ಕೊಡುವಷ್ಟು ಬಹುತ್ವದ ಪಾಠವೇ ಗೊತ್ತಿಲ್ಲದಂತಹ ಹಿಂದೂ ರಾಷ್ಟ್ರೀಯವಾದಿ ನರೇಂದ್ರ ಮೋದಿ ಸೆಕ್ಯುಲರಿಸಂ ಕುರಿತಾಗಿ ಮಾತನಾಡುವುದೇ ಒಂದು ವ್ಯಂಗ.

ಕಾರ್ಪೋರೇಟ್ ಶಕ್ತಿಗಳ ಕ್ಯಾಪಿಟಲಿಸಂ ಮತ್ತು ಬಹುಸಂಖ್ಯಾತತ್ವದ ಕೋಮುವಾದಿ ರಾಜಕಾರಣಗಳ ಸಮ್ಮಿಶ್ರ ಸರ್ಕಾರವು ಇಂಡಿಯಾದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವುದು ಇದೇ ಮೊದಲು. ಮೋದಿ ಪ್ರಧಾನಿ ಆಗುವುದರ ಮೂಲಕ ತನ್ನ ಅಸ್ತಿತ್ವವನ್ನು ಗಳಿಸಿಕೊಂಡ ಬಲಪಂಥೀಯ ಫೆನಟಿಸಂ ಆಧುನಿಕತೆ ಮತ್ತು ಕೋಮು ಸೌಹಾರ್ದತೆಯನ್ನು ಸಂಪೂರ್ಣವಾಗಿ ನಾಶಗೊಳಿಸುವತ್ತ ದಾಪುಗಾಲು ಇಟ್ಟಿದೆ. ಇತ್ತೀಚೆಗೆ ಶೇಖರ್ ಗುಪ್ತ, ಸುಮನ್ ದೇಬ್ ರಂತಹ ಪತ್ರಕರ್ತರು “centre rightists” ಎನ್ನುವ ಹಣೆಪಟ್ಟಿಯೊಂದಿಗೆ  ನರೇಂದ್ರ ಮೋದಿಯೊಂದಿಗೆ ಕೈಜೋಡಿಸಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಇವರ ಜನಸಂಖ್ಯೆ ಹೆಚ್ಚುವ ನಿರೀಕ್ಷೆ ಇದೆ. ಒಂದು ಕಡೆ ಪ್ರಭಾವಶಾಲಿ ಕ್ಯಾಪಿಟಲಿಸ್ಟ್, ಮತ್ತೊಂದು ಕಡೆ ಬಲಪಂಥೀಯ ಫೆನಟಿಸಂ, ಬೆನ್ನ ಹಿಂದೆ “centre rightists” ಕಟ್ಟಿಕೊಂಡಿರುವ ನರೇಂದ್ರ ಮೋದಿಯ ಮಿಷನ್ ಒಂದು ಭಯಾನಕ ಸ್ವಪ್ನದಂತೆ ಪ್ರಜ್ಞಾವಂತರಲ್ಲಿ ಬೆಚ್ಚಿಬೀಳಿಸುತ್ತಿದೆ.

ಸ್ನೇಹಕ್ಕೆ ಅಡ್ಡಿಯಾಗದ ಧರ್ಮ ಭವಿಷ್ಯಕ್ಕೆ ಮುಳ್ಳಾಯಿತು!


-ಇರ್ಷಾದ್ ಉಪ್ಪಿನಂಗಡಿ


ಈ ವಿದ್ಯಾರ್ಥಿಯ ಹೆಸರು ಮುಹಮ್ಮದ್ ಸ್ವಾಲಿ. ಮಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ಅಂತಿಮ ಪದವಿ ಶಿಕ್ಷಣMoralPol_Mangalore_1 ಪಡೆದುಕೊಳ್ಳುತ್ತಿರುವ ಮುಹಮ್ಮದ್ ಸ್ವಾಲಿ ಇಂದು ತಾನು ಓದುತ್ತಿರುವ ಕಾಲೇಜು, ಮನೆ ಹಾಗೂ ತನ್ನೂರಿನಿಂದಲೇ ದೂರವಿರುವಂತಹ ಪರಿಸ್ಥಿತಿಯಲ್ಲಿದ್ದಾನೆ. ಮುಹಮ್ಮದ್ ಸ್ವಾಲಿ ತಾನು ಓದುತ್ತಿರುವ ಕಾಲೇಜಿನಲ್ಲಿ ತನ್ನ ಸಹಪಾಠಿ ಅನ್ಯಧರ್ಮೀಯ ವಿದ್ಯಾರ್ಥಿನಿಯರೊಂದಿಗೆ ತೆಗೆಸಿಕೊಂಡ ಪೋಟೋ ಇಂದು ಈತನ ಭವಿಷ್ಯಕ್ಕೆ ಮುಳುವಾಗಿ ಮಾರ್ಪಟ್ಟಿದೆ. ಸ್ವಾಲಿ ಮಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ಅಂತಿಮ ಬಿ.ಸಿ.ಎ ಪದವಿ ಓದುತ್ತಿದ್ದಾನೆ. ಇತ್ತೀಚೆಗೆ ಕಾಲೇಜು ತರಗತಿಯಲ್ಲಿ ತನ್ನ ಸಹಪಾಠಿ ಸ್ನೇಹಿತೆಯರೊಂದಿಗೆ ತಮಾಷೆಗಾಗಿ ಅವರ ತೊಡೆಗಳಲ್ಲಿ ಮಲಗಿಕೊಂಡ ರೀತಿಯಲ್ಲಿ ಪೋಟೋ ತೆಗೆಸಿಕೊಂಡಿದ್ದ. ಈ ಪೋಟೋವನ್ನು ಯಾರೋ ಕಿಡಿಕೇಡಿಗಳು ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ ಹಾಗೂ ವ್ಯಾಟ್ಸ್ ಆಫ್ ಗಳಲ್ಲಿ ಹರಿಯಬಿಟ್ಟಿದ್ದರು.

ಹಿಂದೂ ವಿದ್ಯಾರ್ಥಿನಿಯರ ಜೊತೆ ಮುಸ್ಲಿಮ್ ಯುವಕ ಈ ರೀತಿಯಾಗಿ ತೆಗೆಸಿಕೊಂಡ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿತ್ತು. ಜಿಲ್ಲೆಯಲ್ಲಿ ಲವ್ ಜಿಹಾದ್ ನಡೆಯುತ್ತಿದೆ ಎಂದು ಹುಯಿಲೆಬ್ಬಿಸುತ್ತಾ ಭಿನ್ನ ಕೋಮಿನ ಯುವಕ- ಯುವತಿ ಜೊತೆಗಿದ್ದರೆ ಅವರನ್ನು ನೈತಿಕ ಪೊಲೀಸ್ ಗಿರಿಯ ಹೆಸರಲ್ಲಿ ಹಿಂಸಿಸುವ ಹಿಂದೂಪರ ಸಂಘಟನೆಗಳ ಯುವಕರಂತೂ ಸಾಮಾಜಿಕ ಜಾಲತಾಣಗಳಲ್ಲಿ ಅವ್ಯಾಚ್ಯ ಶಬ್ಧಗಳ ಮೂಲಕ ತಮ್ಮ ದಾಳಿಯನ್ನು ಶುರುಹಚ್ಚಿಕೊಂಡಿದ್ದರು. ಪೋಟೋ ಬಹಿರಂಗವಾಗಿ ವಿವಾದ ಎಬ್ಬಿಸಿದ ಬೆನ್ನಲ್ಲೇ ನೈತಿಕ ಪೊಲೀಸರು ಎಚ್ಚೆತ್ತುಕೊಂಡು ಪೋಟೋದ ಹಿಂಭಾಗದಲ್ಲಿ ಕಾಣಿಸಿಕೊಂಡಿದ್ದ ಮುಹಮ್ಮದ್ ಸ್ವಾಲಿ ಸ್ನೇಹಿತ ರಿಯಾಜ್ ಎಂಬಾತನನ್ನು ಆತನ ಮನೆ ಸುರತ್ಕಲ್ ನಿಂದ ಉಪಾಯವಾಗಿ ಅಪಹರಿಸಿ ಹಿಗ್ಗಾ ಮುಗ್ಗಾ ಥಳಿಸಿ ತಮ್ಮ ಕೋಪವನ್ನು ತೀರಿಸಿಕೊಂಡರು. ಇದಿಷ್ಟೇ ಸಾಲದೆಂಬುವುದಕ್ಕೆ ಇನ್ನೊಂದು ಕಡೆಯಲ್ಲಿ ಪೋಟೋದಲ್ಲಿ ಕಾಣಿಸಿಕೊಂಡ ಎಲ್ಲಾ ವಿದ್ಯಾರ್ಥಿಗಳನ್ನು ಕಾಲೇಜು ಆಡಳಿತ ಮಂಡಳಿ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.

ಇದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೈತಿಕ ಪೊಲೀಸ್ ಗಿರಿಯಂತಹ ಪ್ರಕರಣಗಳಿಗೆ ಬಲಿಯಾಗುತ್ತಿರುವ ಯುವಕ-ಯುವತಿಯ ಪಾಡು MoralPol_Mangalore_2ಹೇಗಿರುತ್ತದೆ ಎಂಬುವುದಕ್ಕೆ ಒಂದು ಸಣ್ಣ ಉದಾಹರಣೆಯಷ್ಟೇ. 2014 ಹಾಗೂ 2015 ಫೆಬ್ರವರಿ 1 ರ ವರೆಗೆ ಜಿಲ್ಲೆಯಲ್ಲಿ ಮಾದ್ಯಮಗಳಲ್ಲಿ ವರದಿಯಾದ ನೈತಿಕ ಪೊಲೀಸ್ ಗಿರಿ ಪ್ರಕರಣಗಳ ಸಂಖ್ಯೆ ಒಟ್ಟು 37. ಇವುಗಳ ಪೈಕಿ ಹಿಂದೂಪರ ಸಂಘಟನೆಗಳು ನಡೆಸಿದ ನೈತಿಕ ಪೊಲೀಸ್ ಗಿರಿಯ ಸಂಖ್ಯೆ 30 ಹಾಗೂ ಮುಸ್ಲಿಮ್ ಪರ ಸಂಘಟನೆಗಳು ನಡೆಸಿದ ನೈತಿಕ ಪೊಲೀಸ್ ಗಿರಿಯ ಸಂಖ್ಯೆ 7. ಇವು ಮಾಧ್ಯಮಗಳಲ್ಲಿ ವರದಿಯಾದ ಪ್ರಕರಣಗಳಷ್ಟೇ. ಇವುಗಳನ್ನು ಹೊರತುಪಡಿಸಿ ಜಿಲ್ಲೆಯಲ್ಲಿ ಸಾಕಷ್ಟು ನೈತಿಕ ಪೊಲೀಸ್ ಗಿರಿ ಪ್ರಕರಣಗಳು ಅಲ್ಲಲ್ಲಿ ನಡೆಯುತ್ತಲೇ ಇವೆ. ನೈತಿಕ ಪೊಲೀಸರು ನಡೆಸುತ್ತಿರುವ ಅನೈತಿಕ ಪೊಲೀಸ್ ಗಿರಿಯಿಂದಾಗಿ ಬಲಿಪಶುಗಳಾದ ಯುವಕ –ಯುವತಿಯರು ಒಂದು ಕಡೆಯಲ್ಲಿ ಹಲ್ಲೆಗೊಳಗಾಗಿ ಇನ್ನೊಂದು ಕಡೆಯಲ್ಲಿ ತಮಗಾದ ಅವಮಾನವನ್ನು ಸಹಿಸಿಕೊಳ್ಳಲಾಗದೆ ಸಮಾಜದ ಮುಂದೆ ತನ್ನ ಮುಖತೋರಿಸಿಕೊಳ್ಳಲಾಗದೆ ಇತ್ತ ಮನೆಯಲ್ಲೂ ಮೂದಳಿಕೆ ಅವಮಾನವನ್ನು ಸಹಿಸಿಕೊಂಡು ಬದುಕಬೇಕಾದಂತಹ ಪರಿಸ್ಥಿತಿಯಲ್ಲಿದ್ದಾರೆ.

ಅಷ್ಟಕ್ಕೂ ಇಲ್ಲಿ ಮುಹಮ್ಮದ್ ಸ್ವಾಲಿ ಮಾಡಿದ ತಪ್ಪಾದರೂ ಏನು? ಸಹಜವಾಗಿ ಇಂದಿನ ದಿನಗಳಲ್ಲಿ ಕಾಲೇಜುಗಳಲ್ಲಿ ಯುವಕ-ಯುವತಿಯರು ಸಾಕಷ್ಟು ಆತ್ಮೀಯರಾಗಿರುತ್ತಾರೆ. ಕಾಲೇಜು ವಠಾರದಲ್ಲಿ ಸಹಪಾಠಿಗಳು ಧರ್ಮಬೇಧವಿಲ್ಲದೆ ಬೆರೆಯುವುದು ಸಹಜ ಪ್ರಕ್ರಿಯೆ. ಕಾಲೇಜು ಶೈಕ್ಷಣಿಕ ಪ್ರವಾಸ ಹೋಗುವ ಸಂಧರ್ಭಗಳಿರಬಹುದು ಅಥವಾ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸೇರಿಕೊಂಡು ಹುಟ್ಟುಹಬ್ಬ ಪಾರ್ಟಿಗಳನ್ನು ಮಾಡೋದಿರಬಹುದು ಅಥವಾ ತರಗತಿ ಸ್ನೇಹಿತರೆಲ್ಲಾ ಸೇರಿಕೊಂಡು ಟ್ರಕ್ಕಿಂಗ್ ಹೋಗೋದಿರಬಹುದು ಈ ಎಲ್ಲಾ ಸಂಧರ್ಭಗಳಲ್ಲೂ ಎಲ್ಲರೂ ಪರಸ್ಪರ ಸ್ನೇಹದಿಂದ ಬೆರೆಯೋದು, ಜೊತೆ ನಿಂತಿಕೊಂಡು ಪೋಟೋ ತೆಗೆಸಿಕೊಳ್ಳುವುದು ಹಾಡುವುದು, ಕುಣಿಯುವುದು ಇವೆಲ್ಲಾ ಕಾಲೇಜು ಶಿಕ್ಷಣದ ಅನುಭವಗಳಲ್ಲೊಂದು. ಇಂಥಹ್ ಹುಡುಗಾಟಿಕೆಯ ಸಹಜ ಪ್ರಕ್ರಿಯೆ ಇಲ್ಲೂ ಆಗಿರುವಂತಹದ್ದು. ಇಲ್ಲಿ ಮುಹಮ್ಮದ್ ಸ್ವಾಲಿ ಮಾಡಿದ ತಪ್ಪು ಅನ್ಯಧರ್ಮೀಯ ಸಹಪಾಠಿ ಸ್ನೇಹಿತೆಯರ ತೊಡೆಗಳಲ್ಲಿ ಮಲಗಿಕೊಂಡು ಪೋಟೋ ತೆಗೆಸಿಕೊಂಡಿದ್ದು.

ಮುಹಮ್ಮದ್ ಸ್ವಾಲಿ ಸ್ನೇಹಿತ ನೈತಿಕ ಪೊಲೀಸರಿಂದ ಹಲ್ಲೆಗೊಳಗಾದ ರಿಯಾಜ್ ಹೇಳುವ ಪ್ರಕಾರ ಪೋಟೋದಲ್ಲಿ ಕಾಣಿಸಿಕೊಂಡMoralPol_Mangalore_3 ಹುಡುಗಿಯರು ಹಾಗೂ ಮುಹಮ್ಮದ್ ಸ್ವಾಲಿ ಮತ್ತು ರಿತೇಶ್ ಎಂಬ ಹುಡುಗ ಇವರೆಲ್ಲರೂ ತುಂಬಾನೇ ಆತ್ಮೀಯ ಸ್ನೇಹಿತರು. ಜೊತೆಗೆ ಊಟಮಾಡುವುದು, ಕಾಲೇಜು ಕಾರ್ಯಕ್ರಮಗಳಲ್ಲಿ ಜೊತೆಜೊತೆಗೆ ಭಾಗವಹಿಸುವುದು, ಹರಟೆ ಹೊಡೆಯುವುದು, ಪರಸ್ಪರ ಹುಟ್ಟುಹಬ್ಬದ ಪಾರ್ಟಿಗಳನ್ನು ಆಚರಿಸುವುದು, ತಮಾಷೆ ಮಾಡಿಕೊಂಡು ಆತ್ಮೀಯತೆಯಲ್ಲಿ ವಿದ್ಯಾಭ್ಯಾಸ ಮಾಡಿಕೊಂಡು ಬರುತ್ತಿದ್ದರು. ಈ ಹುಡುಗ-ಹುಡುಗಿಯರ ನಡುವಿನ ಸ್ನೇಹಕ್ಕೆ ಎಂದಿಗೂ ಧರ್ಮ ಅಡ್ಡಿಯಾಗಲಿಲ್ಲ. ಇನ್ನು ಈ ವಿದ್ಯಾರ್ಥಿಗಳ ಕುರಿತಾಗಿ ಆ ಕಾಲೇಜಿನ ಪ್ರಾಂಶುಪಾಲರೂ ಉತ್ತಮ ಮಾತನ್ನಾಡುತ್ತಾರೆ. ಆದರೆ ತಮಾಷೆಗಾಗಿ ಸ್ನೇಹಿತರು ತೆಗೆಸಿಕೊಂಡ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಧರ್ಮದ ಅಮಲು ತುಂಬಿಸಿಕೊಂಡ ಧರ್ಮರಕ್ಷಕರ ಕಣ್ಣಿಗೆ ಬಿದ್ದಾಗ ಈ ಪೋಟೋ ಅಶ್ಲೀಲವಾಗಿ ಗೋಚರಿಸಿತು. ಹೆಣ್ಮಕ್ಕಳ ತೊಡೆಯಲ್ಲಿ ಮಲಗಿಕೊಂಡ ಈ ಪೋಟೋ ಹೆಣ್ಮಕ್ಕಳ ಪೋಷಕರಿಗೂ ಅಶ್ಲೀಲಾಗಿ ಕಂಡಿಲ್ಲ, ಗಂಡು ಮಕ್ಕಳ ಪೋಷಕರಿಗೂ ಅಶ್ಲೀಲವಾಗಿ ಕಂಡಿಲ್ಲ. ಆದರೆ ಧರ್ಮರಕ್ಷಕರಿಗೆ ಅಶ್ಲೀಲವಾಗಿ ಕಂಡಿರುವುದು ವಿಪರ್ಯಾಸ. ಪರಿಣಾಮ ಪೋಟೋದಲ್ಲಿ ಕಾಣಿಸಿಕೊಂಡ ವಿದ್ಯಾರ್ಥಿಗಳು ಇಂದು ಮನೆಯಿಂದ ಹೊರಗಡೆ ಕಾಲಿಡದಂತಹ ಪರಿಸ್ಥಿತಿಯಲ್ಲಿದ್ದಾರೆ. ಮುಹಮ್ಮದ್ ಸ್ವಾಲಿ ನೈತಿಕ ಪೊಲೀಸರು ಹಲ್ಲೆ ನಡೆಸುವ ಭಯದಿಂದ ಮಂಗಳೂರಿನ ಸುರತ್ಕಲ್ ಸಮೀಪವಿರುವ ತನ್ನ ಮನೆಯಲ್ಲಿರದೆ ಬೇರೆ ಕಡೆ ಆಶ್ರಯ ಪಡುತ್ತಿದ್ದಾನೆ. ಮುಹಮ್ಮದ್ ಸ್ವಾಲಿಯ ಮನೆಯವರು ಭಯದ ವಾತಾವರಣದಲ್ಲಿ ಜೀವಿಸುವಂತ್ತಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ನೇಹವನ್ನೂ ಧರ್ಮದ ಕನ್ನಡಿ ಧರಸಿಕೊಂಡು ನೋಡುತ್ತಿರುವುದರಿಂದ ಯುವಕ –ಯುವತಿ ಸ್ನೇಹಿತರೂ ಪರಸ್ಪರ ಭೇಟಿಯಾಗಿ ಮಾತನಾಡಲಾಗದ ಪರಿಸ್ಥಿತಿ ಇದೆ. ಜನವರಿ 24 ರಂದು ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕದಲ್ಲಿ ನೈತಿಕ ಪೊಲೀಸ್ ಘಟನೆ ನಡೆದಿತ್ತು. ಕುಂದಾಪುರದ ಮಹಿಳೆಯೊಬ್ಬರು ಕಲ್ಲಡ್ಕದಲ್ಲಿರುವ ತನ್ನ ಮುಸ್ಲಿಮ್ ಸ್ನೇಹಿತೆಗೆ ಹೆರಿಗೆಯಾದಾಗ ಬಾಣಂತಿಯನ್ನು ಹಾಗೂ ಆಕೆಯ ಮಗುವನ್ನು ನೋಡಿ ಆರೋಗ್ಯ ವಿಚಾರಿಸಿಕೊಂಡು ಹೋಗಲು ಕಲ್ಲಡ್ಕಕ್ಕೆ ಬಂದಿದ್ದಳು. ಮಹಿಳೆಯ ಮುಸ್ಲಿಮ್ ಸ್ನೇಹಿತೆಯ ಪತಿ ಬಸ್ ನಿಲ್ದಾಣಕ್ಕೆ ಬಂದು ಮಹಿಳೆಯನ್ನು ತನ್ನ ಕಾರಿನಲ್ಲಿ ಕೂರಿಸಿ ಮನೆಗೆ ಕರೆದುಕೊಂಡು ಹೋಗುವ ಸಂಧರ್ಭದಲ್ಲಿ ಮುಸ್ಲಿಮ್ ಪುರುಷನ ಕಾರಿನಲ್ಲಿ ಹಿಂದೂ ಮಹಿಳೆಯಿದ್ದದನ್ನು ಅಪಾರ್ಥ ಮಾಡಿಕೊಂಡ ನೈತಿಕ ಪೊಲೀಸರು ಅವರನ್ನು ತರಾಟೆಗೆ ತೆಗೆದುಕೊಂಡು ಹಲ್ಲೆಗೆ ಮುಂದಾಗಿದ್ದರು. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಇವರಿಬ್ಬರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಹಿಂದೂ ಮಹಿಳೆ ತನ್ನ ಮುಸ್ಲಿಮ್ ಸ್ನೇಹಿತೆ ಹಾಗೂ ಆಕೆಯ ಮಗುವನ್ನು ನೋಡೋದಕ್ಕೆ ಬಂದಿರುವ ಸತ್ಯ ತಿಳಿದು ಆಕೆಯನ್ನು ಮುಸ್ಲಿಮ್ ಸ್ನೇಹಿತೆಯ ಮನೆಗೆ ಹೋಗೋದಕ್ಕೆ ಅವಕಾಶ ಕಲ್ಪಿಸಲಾಯಿತು.

ಇನ್ನು ಹಿಂದೂ ಸಂಘಟನೆಗಳಿಗೆ ಪರ್ಯಾಯವೆಂಬುವಂತೆ ಮುಸ್ಲಿಮ್ ಸಂಘಟನೆಗಳೂ ತಮ್ಮ ಧರ್ಮದ ಹೆಣ್ಮಕ್ಕಳMoralPol_Mangalore_4 ರಕ್ಷಣೆಯ ಹೊಣೆಹೊತ್ತುಕೊಂಡವರಂತೆ ವರ್ತಿಸುತ್ತಿದ್ದಾರೆ. ಇತ್ತೀಚೆಗೆ ಬಂಟ್ವಾಳ ತಾಲೂಕಿನ ನಿವಾಸಿ ಮುಸ್ಲಿಮ್ ಮಹಿಳಾ ವಕೀಲೆಯೊಬ್ಬರನ್ನು ಆಕೆಯ ಸಹಪಾಠಿ ಹಿಂದೂ ಧರ್ಮೀಯ ವಕೀಲರೊಬ್ಬರು ಬಸ್ ನಿಲ್ದಾಣಕ್ಕೆ ಬೈಕ್ ನಲ್ಲಿ ಡ್ರಾಪ್ ನೀಡಿದರು ಎಂಬ ಕಾರಣಕ್ಕಾಗಿ ಆಕೆಯನ್ನು ಹಿಂಬಾಳಿಸಿದ ಮುಸ್ಲಿಮ್ ನೈತಿಕ ಪೊಲೀಸರು ಆ ಮಹಿಳೆಯ ಮನೆವರೆಗೂ ಹೋಗಿ ತರಾಟೆಗೆ ತೆಗೆದುಕೊಂಡ್ಡಿದ್ದರು. ಆದರೆ ಆಕೆಯ ಮನೆ ಮಂದಿ ನೈತಿಕ ಪೊಲೀಸರ ವಿರುದ್ಧ ತಿರುಗಿ ಬಿದ್ದಾಗ ಅಲ್ಲಿಂದ ಬಂದ ದಾರಿಗೆ ಸುಂಕವಿಲ್ಲವೆಂದು ಕಾಲ್ಕಿತ್ತರು. ಇದು ಜಿಲ್ಲೆಯ ನೈತಿಕ ಪೊಲೀಸರ ಉಪಟಳದಿಂದಾಗಿ ಆಗುತ್ತಿರುವ ಅವಾಂತರಗಳಿಗೆ ಸಾಕ್ಷಿ. ಜಿಲ್ಲೆಯಲ್ಲಿ ನಡೆಯುತ್ತಿರುವ ಅನೇಕ ನೈತಿಕ ಪೊಲೀಸ್ ಗಿರಿ ಘಟನೆಗಳು ಪೊಲೀಸ್ ಠಾಣೆಯ ಮೆಟ್ಟಿಲೇರೋದೆ ಇಲ್ಲ. ಅನೇಕ ಘಟನೆಗಳಲ್ಲಿ ಪೊಲೀಸರು ನೈತಿಕ ಪೊಲೀಸರಿಂದ ಹಲ್ಲೆಗೊಳಗಾದ ಜೋಡಿಯನ್ನು ರಕ್ಷಿಸಿ ಬುದ್ದಿವಾದ ಹೇಳಿ ಬಿಟ್ಟುಬಿಡುತ್ತಾರೆ ಹೊರತುಪಡಿಸಿ ದೂರು ದಾಖಲು ಮಾಡಿಕೊಳ್ಳುವುದಿಲ್ಲ. ಕೆಲವೊಂದು ಪ್ರಕರಣಗಳಲ್ಲಿ ದಾಳಿಗೊಳಗಾದ ಸಂತ್ರಸ್ತರು ಮರ್ಯಾದೆಗೆ ಅಂಜಿ ದೂರು ನೀಡಲೂ ಮುಂದಾಗುವುದಿಲ್ಲ. ಇವು ಜಿಲ್ಲೆಯ ನೈತಿಕ ಪೊಲೀಸರಿಗೆ ವರದಾನವಾಗಿ ಮಾರ್ಪಡುತ್ತಿವೆ.

ಪ್ರಸ್ತುತ ಪೋಟೋ ಪ್ರಕರಣದ ನೈತಿಕ ಪೊಲೀಸ್ ಗಿರಿಗೆ ಸಂಬಂಧಪಟ್ಟಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಒಟ್ಟಾರೆಯಾಗಿ ಕರಾವಳಿಯಲ್ಲಿ ಎರಡೂ ಧರ್ಮದ ನೈತಿಕ ಪೊಲೀಸರ ಕಾಟದಿಂದಾಗಿ ಒಂದು ಧರ್ಮದ ಯುವಕ ಅಥವಾ ಯುವತಿ ಮತ್ತೊಂದು ಧರ್ಮದ ಯುವಕ ಅಥವಾ ಯುವತಿಯ ಜೊತೆ ಮಾತನಾಡುವುದಕ್ಕೆ ಹಿಂದೂ ಮುಂದು ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮುಹಮ್ಮದ್ ಸ್ವಾಲಿ ಹಾಗೂ ಗೆಳೆಯರ ಪ್ರಕರಣದಲ್ಲೂ ಇದೇ ಆಗಿದ್ದು. ಪರಸ್ಪರ ಆತ್ಮೀಯ ಸ್ನೇಹಿತರಾದ ಈ ಯುವಕ-ಯುವತಿಯರ ಸ್ನೇಹಕ್ಕೆ ಯಾವತ್ತೂ ಅಡ್ಡಿಯಾಗದ ಧರ್ಮ ಇಂದು ನೈತಿಕ ಪೊಲೀಸರಿಂದಾಗಿ ಈ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮುಳ್ಳಾಗಿ ಪರಿಣಮಿಸುತ್ತಿರುವುದು ವಿಪರ್ಯಾಸ.

ಪೇಡ್ ನ್ಯೂಸ್ ಎಂಬ ಭೂತ: ಕೆ.ಎನ್.ಶಾಂತಕುಮಾರ್

(“ಪ್ರಜಾವಾಣಿ” ಪತ್ರಿಕೆಯ ಸಂಪಾದಕ ಹಾಗೂ ಮಾಲೀಕರಲ್ಲಿ ಒಬ್ಬರಾದ ಕೆ.ಎನ್.ಶಾಂತಕುಮಾರ್‌ರು ಇತ್ತೀಚೆಗೆ ಹಾಸನದ ಪತ್ರಿಕೋದ್ಯಮ ವಿದ್ಯಾರ್ಥಿಗಳೊಂದಿಗೆ ಪ್ರಸ್ತುತ ಪತ್ರಿಕೋದ್ಯಮದ ಕುರಿತು ಮಾತನಾಡಿದರು, ಸಂವಾದ ಮಾಡಿದರು ಹಾಗೂ ಅವರು ತೆಗೆದ ಅಪರೂಪದ ಚಿತ್ರಗಳನ್ನು ಪ್ರದರ್ಶಿಸಿದರು. ಅವರ ಮಾತುಗಳಿಂದ ಆಯ್ದ ಭಾಗಗಳು ಇಲ್ಲಿವೆ.)

ನಾನು ಪತ್ರಿಕೋದ್ಯಮ ಕ್ಷೇತ್ರಕ್ಕೆ ಪ್ರವೇಶ ಪಡೆಯಲು ಕಾರಣ – ನನ್ನ ಹುಟ್ಟು.. KN-Shanthakumar-prajavani-Hasana-1ವಿದ್ಯಾರ್ಥಿಯಾಗಿದ್ದಾಗಲೇ ಪತ್ರಿಕಾ ಕಚೇರಿಗೆ ಹೋಗುತ್ತಿದ್ದೆ. ನನ್ನ ತಾತ, ನನ್ನ ಅಣ್ಣಂದಿರು, ಹಾಗೂ ಬಹು ಮುಖ್ಯವಾಗಿ ನನ್ನ ಸಹೋದ್ಯೋಗಿಗಳಿಂದ ತುಂಬಾ ಕಲಿತೆ. ನಿಮ್ಮಂತೆ ನನಗೆ ಪತ್ರಿಕೋದ್ಯಮದ ಯಾವುದೇ ಪದವಿ ನಾನು ಪಡೆದಿಲ್ಲ.

1.
ಪತ್ರಿಕೋದ್ಯಮ ಕ್ಷೇತ್ರಕ್ಕೆ ಪ್ರವೇಶ ಪಡೆಯುವುದು ಹಿಂದೆ ಅಷ್ಟು ಸುಲಭವಾಗಿರಲಿಲ್ಲ. ತಂತ್ರಜ್ಞಾನ ಸುಧಾರಿಸಿರಲಿಲ್ಲ. ಹಾಗೂ ಭಾರೀ ಹೂಡಿಕೆ ಅಗತ್ಯವಿತ್ತು. ಕ್ರಮೇಣ ತಂತ್ರಜ್ಞಾನ ಬೆಳೆಯಿತು. ಇಂದು ಹೊಸ ಹೊಸ ಮಾಧ್ಯಮಗಳು ಬಂದಿವೆ. ಸ್ಪರ್ಧೆ ಹೆಚ್ಚಿದೆ. ರೇಡಿಯೊ ಬಂದಾಗ ಅಥವಾ ಟಿವಿ ಬಂದಾಗ ಮುದ್ರಣ ಮಾಧ್ಯಮ ಇಲ್ಲವಾಗುತ್ತೆ ಎಂಬ ಮಾತಿತ್ತು. ಹಾಗೆ ಆಗಲಿಲ್ಲ. ಇತ್ತೀಚೆಗೆ ಕೆಲವೆಡೆ ಮುದ್ರಣ ಮಾಧ್ಯಮ ಭಾರೀ ಬೆಲೆ ತೆತ್ತಿದೆ. ಪ್ರಮುಖ ಪತ್ರಿಕೆಗಳು ಬಾಗಿಲು ಹಾಕಬೇಕಾದ ಪರಿಸ್ಥಿತಿ ಬಂದಿದೆ. ನಮ್ಮ ದೇಶದ ಅತಿ ಹೆಚ್ಚು ಪ್ರಸರಣ ಹೊಂದಿರುವ ಪತ್ರಿಕೆಯ ವೆಬ್‌ಸೈಟ್ ಗೆ ಕಳೆದ ಎರಡು ವರ್ಷಗಳಲ್ಲಿ ಭೇಟಿ ಕೊಟ್ಟವರಲ್ಲಿ ಶೇಕಡ 50 ಕ್ಕೂ ಹೆಚ್ಚು ಮಂದಿ ಮೊಬೈಲ್ ಮೂಲಕ ವೆಬ್‌ಸೈಟ್ ಗೆ ವಿಸಿಟ್ ಮಾಡಿದ್ದರು. ಮೊಬೈಲ್ ಮೂಲಕ ಸುದ್ದಿ ಸ್ವೀಕರಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ.

2.
ನಮ್ಮ ದೇಶದ ಒಂದು ವಿಶೇಷ ಎಂದರೆ – ನಮ್ಮ ಪತ್ರಿಕೆಗಳ ಮುಖಬೆಲೆ ಅತೀ ಕಡಿಮೆ. ಈ ಬೆಲೆಗೆ ಬೇರೆಲ್ಲೂ ಪತ್ರಿಕೆಗಳು ದೊರೆಯುವುದಿಲ್ಲ. ಇದಕ್ಕೆ ಕಾರಣ ಪೈಪೋಟಿ. ಈ ಬೆಳವಣಿಗೆಯಿಂದ ಒಳ್ಳೆಯದೂ ಆಗಿದೆ, ಕೆಟ್ಟದೂ ಆಗಿದೆ. ಒಳ್ಳೆಯದು ಎಂದರೆ, ಓದುಗರ ಸಂಖ್ಯೆ ಹೆಚ್ಚಾಗಿದೆ. KannadaPapersCollageಆದರೆ ಹತ್ತು-15 ವರ್ಷಗಳ ಹಿಂದೆ ಪ್ರಸರಣದಿಂದ ಪತ್ರಿಕೆಗೆ ಬರುತ್ತಿದ್ದ ಒಟ್ಟು ಆದಾಯದ ಶೇಕಡ 50 ರಷ್ಟಿತ್ತು. ಅದರರ್ಥ ಜಾಹಿರಾತು ಮತ್ತು ಪತ್ರಿಕೆಯ ಮಾರಾಟದಿಂದ ಸಮನಾದ ಆದಾಯ ಬರುತ್ತಿತ್ತು. ಈಗ ಶೇಕಡ 70 ರಷ್ಟು ಆದಾಯ ಕೇವಲ ಜಾಹೀರಾತುಗಳಿಂದ ಬರುತ್ತಿದೆ. ಆ ಕಾರಣಕ್ಕೆ ಪತ್ರಿಕೆ ಸಂಸ್ಥೆಗಳು ಜಾಹಿರಾತುದಾರರ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ.

3.
ಜಾಹೀರಾತುಗಳಿಂದ ಬರುವ ಆದಾಯ ಪತ್ರಿಕಾ ಸಂಸ್ಥೆಗೆ ಬಹುಮುಖ್ಯ ಎಂದಾದುದರ ಪರಿಣಾಮವಾಗಿ ಜಾಹಿರಾತುದಾರರು, ಅದು ಸರಕಾರ ಅಥವಾ ಖಾಸಗಿ ಕಂಪನಿಗಳಿರಬಹುದು – ಪತ್ರಿಕೆಯ ಮೇಲೆ ಪ್ರಭಾವ ಬೀರಲು ಆರಂಭಿಸಿದರು. ಜಾಹಿರಾತುದಾರರು ಅವರಿಗೆ ಅಪಥ್ಯವಾಗುವಂತಹ ಸುದ್ದಿಗಳು ಬರಬಾರದು ಎಂದು ಬಯಸುತ್ತಾರೆ. ಪತ್ರಿಕಾಲಯಗಳು ಕೂಡ ಜಾಹಿರಾತು ವಿಚಾರವಾಗಿ ತುಂಬಾ ಸೂಕ್ಷ್ಮ ವಾಗಿರುತ್ತವೆ. ಒಂದು ಜಾಹಿರಾತು ಮಿಸ್ ಆದರೆ, ಪತ್ರಿಕಾ ಸಂಸ್ಥೆಯವರು ತಲೆ ಕೆಡಿಸಿಕೊಳ್ಳುತ್ತಾರೆ. ಏಕೆಂದರೆ ಅದರಿಂದ ಆದಾಯದ ಮೇಲೆ ಪರಿಣಾಮಗಳಿರುತ್ತವೆ.

ಸರಕಾರದ ವಿರುದ್ಧ ಒಂದು ಲೇಖನ ಬಂದರೆ, ಅಂತಹ ಲೇಖನ ಪ್ರಕಟಿಸಿದ ಪತ್ರಿಕೆಗೆ ಸರಕಾರ ಜಾಹೀರಾತುಗಳನ್ನು ನಿಲ್ಲಿಸಿದ ಉದಾಹರಣೆಗಳು ನಮ್ಮ ದೇಶದಲ್ಲಿಯೇ ಬೇಕಾದಷ್ಟಿವೆ. ಖಾಸಗಿ ಕಂಪನಿಗಳೂ ಹೀಗೆ ಮಾಡಿರುವ ಅನೇಕ ಉದಾರಹಣೆಗಳಿವೆ. ಇದು ಬೆಲೆ ಸಮರದಿಂದಾದ ದುಷ್ಪರಿಣಾಮ.

4.
ಜೊತೆಗೆ ಇತ್ತೀಚೆಗೆ ಪತ್ರಿಕಾ ಸಂಸ್ಥೆಗಳು ಸುದ್ದಿ ಸಂಗ್ರಹಣೆಗಾಗಿ ತೊಡಗಿಸುವ ವೆಚ್ಚವನ್ನು ಗಣನೀಯವಾಗಿ ಕಡಿತ ಮಾಡಿವೆ. ಆ ಕಾರಣಕ್ಕಾಗಿ ಆರಾಮ್ ಚೇರ್ ಗಳಲ್ಲಿ ಕೂತು, ಎಂತಹದೇ ಸುದ್ದಿಯನ್ನು ಹೆಣೆಯುವ ಪ್ರವೃತ್ತಿ ಇದೆ. ಮೇಲಾಗಿ ಈಗ ಸಂಪರ್ಕ ತುಂಬಾ ಸುಲಭ. ಮೊದಲೆಲ್ಲಾ, ಪತ್ರಕರ್ತರಿಗೆ ಫೋನ್ ಸಂಪರ್ಕ ಸಿಗುತ್ತಿದ್ದುದು ಕಚೇರಿಗೆ ಬಂದರಷ್ಟೆ. ಇಲ್ಲವಾದರೆ ಅವರು ಪಬ್ಲಿಕ್ ಬೂತ್ ಮುಂದೆ ನಿಂತು ಕಾಯಬೇಕಿರುತ್ತಿತ್ತು. ಆದರೆ ಈಗ ಹಾಗಿಲ್ಲ, ಬಹುತೇಕರ ಹತ್ತಿರ ಮೊಬೈಲ್ ಇದೆ. ಕೆಲವರ ಹತ್ತಿರ ಎರಡೆರಸು ಮೊಬೈಲ್ ಗಳಿವೆ. ಅಷ್ಟಲ್ಲದೆ ಇಂಟರ್ ನೆಟ್ ಲಭ್ಯವಿದೆ. ಗೂಗಲ್ ಮಾಡಿ ಸಿಕ್ಕಿದ ಮಾಹಿತಿಯನ್ನೇ ಸತ್ಯ ಎಂದು ತಿಳಿದು ಸುದ್ದಿಯ ಮರುಪರಿಶೀಲನೆ ಮಾಡದೆ, ಅದನ್ನೇ ಸುದ್ದಿ ರೂಪಕ್ಕಿಳಿಸುವುದು ಇತ್ತೀಚೆಗೆ ಹೆಚ್ಚಾಗುತ್ತಿದೆ.

ನಾನು ನಮ್ಮ ಪತ್ರಿಕೆಯನ್ನು ಹೊಗಳಿಕೊಳ್ಳಲು ಹೇಳುತ್ತಿಲ್ಲ. ಕಳೆದ ವಾರ ನಮ್ಮ ’ಕರ್ನಾಟಕ ದರ್ಶನ’ ಪುರವಣಿಯಲ್ಲಿ ಭಟ್ಕಳ ಪಟ್ಟಣದ ಬಗ್ಗೆ ವಿಸ್ತೃತವಾದ ವರದಿ ಪ್ರಕಟವಾಯಿತು. ನಿಮ್ಮಲ್ಲಿ ಯಾರಾದರೂ ಓದದೇ ಇದ್ದರೆ, ಅದನ್ನು ಓದಬೇಕು ಅಂತ ಬಯಸುತ್ತೇನೆ. ಅಂತಹ ಪ್ರಯೋಗಗಳನ್ನು ಬೇರೆಯವರೂ ಮಾಡುತ್ತಿರಬಹುದು. ಆದರೆ, ಅಂತಹವು ಹೆಚ್ಚಾಗಬೇಕು ಎನ್ನುವುದಷ್ಟೇ ನನ್ನ ಅಭಿಪ್ರಾಯ.

ಆಮೇಲೆ ಇದನ್ನು ಮಾಡಬೇಕು ಅಂದರೆ ಇದಕ್ಕೆ ಅಡ್ಡದಾರಿ ಇಲ್ಲ. ಒಬ್ಬ ವರದಿಗಾರ್ತಿ ಅಲ್ಲಿಗೆ ಹೋಗಿ, ಮೂರ್ನಾಲ್ಕು ದಿನಗಳ ಕಾಲ ಪ್ರವಾಸ ಮಾಡಿ ಸುದ್ದಿ ಬರೆದರು. ನಂತರ ಹಲವರೊಂದಿಗೆ ಮಾತನಾಡಿ, ವಿಷಯ ಸಂಗ್ರಹಿಸಿ ಸುದ್ದಿ ಬರೆದರು. paidmedia2ಒಂದು-ಎರಡು ದಿನಗಳಲ್ಲಿ ಆಗುವ ಕೆಲಸವಲ್ಲ

5.
ಹೊಸ ದೆವ್ವ: ಪೇಡ್ ನ್ಯೂಸ್
ಆದಾಯದ ಏರುಪೇರು (ಜಾಹಿರಾತುಗಳ ಮೇಲೆ ಅತಿಯಾದ ಅವಲಂಬನೆ) ಪರಿಣಾಮವಾಗಿ ದೇಶಾದ್ಯಂತ ಹುಟ್ಟಿಕೊಂಡಿರುವ ಹೊಸ ದೆವ್ವ ಪೇಡ್ ನ್ಯೂಸ್. ಇದೊಂದು ಅರ್ಥಹೀನ ಪದ-ಪ್ರಯೋಗ ಅನ್ನಿಸುತ್ತೆ. ಆದರೆ ಅದು ಸೃಷ್ಟಿಯಾಗಿದೆ. ನ್ಯೂಸ್ ಗೂ ದುಡ್ಡಿಗೂ ಸಂಬಂಧವಿರಬಾರದು. ನ್ಯೂಸ್ ಅಂದರೆ, ಯಾವುದೋ ಒಂದು ಘಟನೆ, ಬೆಳವಣಿಗೆ..ಹೀಗೆ ಘಟಿಸುವಂತಹದ್ದು ಸುದ್ದಿ. ಅದು ಪೇಡ್ ಆಗುವುದೆಂದರೆ!!

ಇತ್ತೀಚೆಗೆ ಮಾಧ್ಯಮ ಸಂಸ್ಥೆಗಳೇ ಪೇಡ್ ನ್ಯೂಸ್ ಗೆ ಅಧಿಕೃತತೆಯ ಮುದ್ರೆ ಒತ್ತುತ್ತಿದ್ದಾರೆ. ಇದು ಹೆಚ್ಚಾಗಿ ನಡೆಯುವುದು ಚುನಾವಣಾ ಸಮಯದಲ್ಲಿ. ಭ್ರಷ್ಟ ರಾಜಕಾರಣಿಗಳು, ಪತ್ರಕರ್ತರನ್ನೂ ಭ್ರಷ್ಟರನ್ನಾಗಿಸ ಬಯಸುತ್ತಾರೆ. ಇದು ಪತ್ರಿಕೋದ್ಯಮವನ್ನು ಮೀರಿ, ಪ್ರಜಾಪ್ರಭುತ್ವಕ್ಕೆ ಮಾರಕ. ಚುನಾವಣೆ ಸಂದರ್ಭದಲ್ಲಿ ಪ್ರಕಟವಾಗುವ ’ಪೇಡ್ ನ್ಯೂಸ್’ ಅನ್ನೇ ’ನಿಜವಾದ ಸುದ್ದಿ’ ಎಂದು ಮತದಾರ ತಿಳಿದುಬಿಟ್ಟರೆ ಪ್ರಜಾಪ್ರಭುತ್ವ ವ್ಯವಸ್ಥೆಗೇ ಪೆಟ್ಟು. ಇಂತಹವು, ದುರ್ದೈವ ಅಂದ್ರೆ, ನಮ್ಮಲ್ಲೂ ಆಗಿವೆ. ಇದಕ್ಕೆ ಕಡಿವಾಣ ಹಾಕೋದು ಹೇಗೆ ಅಂತ ಚಿಂತನೆಗಳು ನಡೆಯುತ್ತಿವೆ.

KN-Shanthakumar-prajavani-Hasana-2ಈ ಬೆಳವಣಿಗೆಗಳಿಗೆ ಇನ್ನೊಂದು ಮುಖ ಇದೆ. ಸಮಾಜ ಹೇಗಿರುತ್ತೋ. ಹಾಗೆಯೇ ಸಮಾಜದ ಭಾಗವಾಗಿರುವ ಪತ್ರಕರ್ತರೂ. ಪತ್ರಕರ್ತರಲ್ಲೂ ಭ್ರಷ್ಟರಿದ್ದಾರೆ.

6.
ಇದು ಮಹಿಳೆಯರ ಕಾಲೇಜು. ಹಾಗಾಗಿ ಮಹಿಳೆಯರು ಮತ್ತು ಪತ್ರಿಕೋದ್ಯಮಕ್ಕೆ ಸಂಬಂಧಪಟ್ಟಂತೆ ಮಾತನಾಡಿ ನನ್ನ ಮಾತು ಮುಗಿಸುತ್ತೇನೆ. 70 ರ ದಶಕದಲ್ಲಿ, ನಮ್ಮಣ್ಣ ಹರಿಕುಮಾರ್ ಸಂಪಾದಕರಾಗಿದ್ದಾಗ ಮಹಿಳೆಯರೂ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವುದು ಆರಂಭವಾಯಿತು. ಆ ಹೊತ್ತಿಗೆ ಕನ್ನಡದ ಪತ್ರಿಕೋದ್ಯಮದಲ್ಲಿ ಅದೇ ಮೊದಲು. ಅದೇ ಪರಂಪರೆ ಇಂದಿಗೂ ಮುಂದುವರೆದಿದೆ. ಸಮಾಜದಲ್ಲಿ ಮಹಿಳೆಯರು ಶೇಕಡ 50 ರಷ್ಟು ಇದ್ದಾರೆ. ಆದರೆ, ಪತ್ರಿಕೋದ್ಯಮದಂತಹ ಗಂಭೀರ ಕ್ಷೇತ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ತೊಡಗಿಸಿಕೊಳ್ಳಬೇಕು.

ಕಸಾಯಿ ಖಾನೆ ವಿರೋಧಿ ಹೋರಾಟದಲ್ಲಿ ಧರ್ಮಸೂಕ್ಷ್ಮ : ಎಚ್.ಎಸ್.ದೊರೆಸ್ವಾಮಿ

– ಎಚ್.ಎಸ್.ದೊರೆಸ್ವಾಮಿ

ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕು ಹಾರೋಹಳ್ಳಿಯಲ್ಲಿ 400 ಎಕರೆ ಪ್ರದೇಶದಲ್ಲಿ ಕೈಗಾರಿಕಾ ನಗರವನ್ನು ನಿರ್ಮಿಸಲಾಗಿದೆ. ಈ ಪ್ರದೇಶದಲ್ಲಿ ನೂರಾರು ಕಾರ್ಖಾನೆಗಳು ಈಗಾಗಲೆ ತಲೆ‌ಎತ್ತಿದ್ದು ಹತ್ತು ಸಾವಿರ ಜನ ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಕೈಗಾರಿಕಾ ನಗರದ ಮಧ್ಯೆ ಒಂದು ಸ್ವಯಂಚಾಲಿತ ಕಸಾಯಿ ಖಾನೆಯನ್ನು ಆರಂಭಿಸಲು harohalli-slaughter-house-areaಬೆಂಗಳೂರು ಮಹಾನಗರ ಪಾಲಿಕೆಯು ಕೆಐಎಡಿಬಿಯಿಂದ ಸುಮಾರು 40 ಎಕರೆ ಜಮೀನನ್ನು ಕ್ಯಾಪ್ರಿ ಮೀಟ್ ಹೌಸ್ ಪ್ರೈವೇಟ್ ಲಿಮಿಟೆಡ್ ಎನ್ನುವ ಖಾಸಗಿ ಕಂಪನಿಗೆ ಮಂಜೂರು ಮಾಡಿಸಿಕೊಟ್ಟಿದೆ.

ಬೆಂಗಳೂರು ಮಹಾನಗರ ಪಾಲಿಕೆಯು ಬೆಂಗಳೂರಿನ ತನ್ನ ವ್ಯಾಪ್ತಿಯಲ್ಲಿ ಈ ಕಸಾಯಿ ಖಾನೆಯನ್ನು ಕಟ್ಟುವುದನ್ನು ಬಿಟ್ಟು ತನ್ನ ವ್ಯಾಪ್ತಿಗೆ ಬರದ ಹಾರೋಹಳ್ಳಿಯಲ್ಲಿ ಈ ಕಸಾಯಿ ಖಾನೆಯನ್ನು ಕಟ್ಟಲು ಹೊರಟಿರುವುದು ಬೆಂಗಳೂರು ಶ್ರೀಮಂತರ ನಗರ, ಅದರ ಪ್ರಜೆಗಳ ಆರೋಗ್ಯ ಭಾಗ್ಯವನ್ನು ಕೆಡಿಸುವುದು ಬೇಡ, ಆದ್ದರಿಂದ ಈ ಅನಿಷ್ಠ ಕಸಾಯಿ ಖಾನೆಯನ್ನು ಹಾರೋಹಳ್ಳಿಯಲ್ಲಿ ಕಟ್ಟಿ ಅಲ್ಲಿಯ ಕಾರ್ಮಿಕರ ಮತ್ತು ಜನತೆಯ ಆರೋಗ್ಯವನ್ನು ಕೆಡಿಸುವ ಹುನ್ನಾರ ಮಾಡಲು ಹೊರಟಿದೆ.

ಈ ಕಸಾಯಿ ಕಾರ್ಖಾನೆ ಆರಂಭವಾಗುವುದೆಂಬ ಸುಳಿವು ಸಿಕ್ಕಿದ ದಿನದಿಂದ ಹಾರೋಹಳ್ಳಿಯ ಜನ ಇದರ sheep-at-slaughter-houseವಿರುದ್ಧ ದನಿ ಎತ್ತುತ್ತಲೇ ಇದ್ದಾರೆ. ನಾಲ್ಕಾರು ಸಾರಿ ಧರಣಿ ಸತ್ಯಾಗ್ರಹವನ್ನು ನಡೆಸಿ ತಮ್ಮ ಪ್ರತಿಭಟನೆಯನ್ನೂ, ಆಕ್ರೋಶವನ್ನೂ ವ್ಯಕ್ತಪಡಿಸಿದ್ದಾರೆ.

ಈ ಮಧ್ಯೆ ಸ್ವಯಂಚಾಲಿತ ಕಸಾಯಿ ಖಾನೆ ಸ್ಥಾಪಿಸಲು ಹೊರಟಿರುವ ಉದ್ಯಮಿಗಳು ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಕೆಐಎಡಿಬಿ ವಿರುದ್ಧ ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ಖಟ್ಲೆ ಹೂಡಿದರು. ಹೈಕೋರ್ಟು, 10 ದಿನಗಳಲ್ಲಿ ಕೆಐಎಡಿಬಿ ಸಂಸ್ಥೆ ನೆಲವನ್ನು ಕಾರ್ಖಾನೆಯವರ ವಶಕ್ಕೆ ನೀಡಬೇಕೆಂದೂ, ಅವರು ಕಾಮಗಾರಿ ನಡೆಸಲು ಪೋಲೀಸ್ ರಕ್ಷಣೆಯನ್ನು ನೀಡಬೇಕೆಂದೂ ತೀರ್ಪಿತ್ತಿತು. ಈ ತೀರ್ಪು ಹೊರಬಿದ್ದು ಒಂದು ವರ್ಷವೇ ಕಳೆದಿದ್ದರೂ ಕೆಐಎಡಿಬಿಯು ಭೂಮಿಯನ್ನು ಹಸ್ತಾಂತರಿಸಿರಲಿಲ್ಲ. ಹಾರೋಹಳ್ಳಿ ಜನತೆಯ ಅವಿರತ ಹೋರಾಟವೇ ಈ ಪ್ರಕ್ರಿಯೆ ಕಾರ್ಯಗತವಾಗಲು ಅಡ್ಡಿಯಾಯಿತು.

ಈಗ ಇದ್ದಕ್ಕಿದ್ದಂತೆ ಬಿಬಿಎಂಪಿ, ಕೆಐಎಡಿಬಿ, ಮತ್ತು ಪೋಲೀಸರು ಮೈಕೊಡವಿಕೊಂಡು Workers process chickens at a slaughterhouse, Newmarket, Kolkata, India.ಎದ್ದು ಕಸಾಯಿ ಖಾನೆಯ ಕಾಮಗಾರಿ ಆರಂಭವಾಗಲು ನೆರವಾಗಿದ್ದಾರೆ. ಹತ್ತು ದಿನದ ಒಳಗಾಗಿ ಜಮೀನನ್ನು ಹಸ್ತಾಂತರಿಸಬೇಕೆಂದು ಮಾಡಿದ ಹೈಕೋರ್ಟ್ ಆಜ್ಞೆಯನ್ನು ನೆನೆಗುದಿಗೆ ಹಾಕಿದ್ದ ಈ ಮೊದಲು ಹೇಳಿದ ಸರ್ಕಾರಿ ಸಂಸ್ಥೆಗಳು ಇದ್ದಕ್ಕಿದ್ದಂತೆ ಒಂದು ವರ್ಷದ ನಂತರ ಕಾರ್ಯನಿರತವಾಗಿರುವುದನ್ನು ನೋಡಿದರೆ ಅನೀತಿಯುತ ವ್ಯವಹಾರಗಳು ಬಿಬಿಎಂಪಿ, ಕೆಐಎಡಿಬಿ, ಮತ್ತು ಕಸಾಯಿ ಖಾನೆ ನಿರ್ಮಾಪಕರ ಮಧ್ಯೆ ನಡೆದಿರಬಹುದೇ ಎಂಬ ಸಂಶಯ ಮೂಡುತ್ತದೆ.

ಹಾರೋಹಳ್ಳಿಯ ಜನತೆ ಈ ಪರಿಸ್ಥಿತಿಯಿಂದ ಕಂಗಾಲಾಗಿದ್ದಾರೆ. ಹೋರಾಟವನ್ನು ಮುಂದುವರೆಸುವುದು ಅನಿವಾರ್ಯ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.

ಆದರೆ ಅವರನ್ನು ಈಗ ಧರ್ಮಸೂಕ್ಷ್ಮ ಕಾಡುತ್ತಿದೆ. ಚಳುವಳಿಯನ್ನು ಆರಂಭಿಸುವುದಾದರೆ ಹೈಕೋರ್ಟಿನ ತೀರ್ಮಾನ ಎದುರಾಗುತ್ತದೆ. ಹೋರಾಟ ಆರಂಭಿಸಿದರೆ ಕೋರ್ಟ್ ನಿಂದನೆ ಕಾರಣ ಒಡ್ಡಿ ಪೋಲೀಸರು ಕೋರ್ಟಿನ ಮೆಟ್ಟಲೇರಬಹುದು. ಹೈಕೋರ್ಟು ಜನ ಹೈಕೋರ್ಟ್ ಆಜ್ಞೆಯನ್ನು ಉಲ್ಲಂಘಿಸಿದ್ದಾರೆಂದು ಕೋರ್ಟ್ ನಿಂದನೆ ಆಪಾದನೆಗಾಗಿ ಸತ್ಯಾಗ್ರಹಿಗಳಿಗೆ ಶಿಕ್ಷೆ ವಿಧಿಸಬಹುದು.

ಸತಾಗ್ರಹ ಸಧ್ಯಕ್ಕೆ ಬೇಡ, ಹೈಕೋರ್ಟಿಗೆ ತಮ್ಮ ತೀರ್ಪನ್ನು ಪುನಃ ಪರಿಶೀಲಿಸಬೇಕೆಂದು ಅಪೀಲ್ ಹಾಕೋಣವೆಂದರೆ ಜನತೆಯ ವಿರುದ್ಧವಾದ ತೀರ್ಪು ಹೊರಬೀಳಬಹುದು. ಆ ಸಂದರ್ಭದಲ್ಲಿ ಚಳುವಳಿಯನ್ನು ಕೈಬಿಡುವುದು ಅನಿವಾರ್ಯ ಆಗಬಹುದು. ಅದರ ಫಲವಾಗಿ ಕಸಾಯಿ ಖಾನೆಯ ಕಾರ್ಯಾಚರಣೆ ಆರಂಭವಾಗಿ ಹಾರೋಹಳ್ಳಿ ಜನತೆಯ ಮತ್ತು ಕೈಗಾರಿಕಾ ನಗರದ ಹತ್ತಾರು ಸಾವಿರ ಜನರ ಆರೋಗ್ಯ ಕೆಟ್ಟು, ಅದರಿಂದ ಅನೇಕ ಸಾವುನೋವುಗಳು, ಖಾಯಿಲೆ ಕಸಾಯಲೆಗಳು ಈ ಅಮಾಯಯಕರನ್ನು ಕಾಡಬಹುದು.

ಈ ದ್ವಂದ ಪರಿಸ್ಥಿತಿಯಲ್ಲಿ ಹಾರೋಹಳ್ಳಿಯ ಜನ ಕೈಕಟ್ಟಿ ಕೂತುಕೊಂಡು ಆಗುವ ನೋವನ್ನು ಮೂಕಪ್ರೇಕ್ಷಕರಂತೆ ನೋಡುತ್ತಾ ಕೂಡಬೇಕೇ?

ಹೀಗಾಗಿ ಹಾರೋಹಳ್ಳಿಯ ಜನ ಎದುರಿಸುತ್ತಿರುವ ಸವಾಲು ಎಂದರೆ ಅವರು ತಮ್ಮ ಅಂತರಾತ್ಮ ಹೇಳಿದಂತೆ ಕೇಳಬೇಕೆ, ಇಲ್ಲವೇ ಕೋರ್ಟಿನ ಆಜ್ಞೆಯನ್ನು ಪಾಲಿಸಬೇಕೇ ಎಂಬುದು.

ಜನರ ಅಂತರಾತ್ಮ ಹಾರೋಹಳ್ಳಿಯ ಜನರ ಸ್ವಾಸ್ಥ್ಯ ಕೆಡಿಸುವ ಕಸಾಯಿ ಖಾನೆಯ ವಿರುದ್ಧ ದನಿKarnataka High Courtಎತ್ತುತ್ತೀಯಾ ಇಲ್ಲವೇ ಹೈಕೋರ್ಟಿನ ತೀರ್ಮಾನಕ್ಕೆ ತಲೆ ಬಾಗುತ್ತೀಯಾ ಎಂಬುದು. ಊರಿನ ಜನರ ಆರೋಗ್ಯ ಕಾಪಾಡುವುದು ನಮ್ಮ ಕರ್ತವ್ಯವಾಗಿರುವುದರಿಂದ, ನ್ಯಾಯಾಲಯದ ತೀರ್ಪನ್ನು ಮೀರಿ ನಡೆಯುವುದು ಅನಿವಾರ್ಯವಾದೀತಲ್ಲವೇ ಎಂಬ ಯಕ್ಷಪ್ರಶ್ನೆ ಹಾರೋಹಳ್ಳಿಯ ಸತ್ಯಾಗ್ರಹಿಗಳನ್ನು ಇಂದು ಕಾಡುತ್ತಿದೆ.

ಇದು ಧರ್ಮಸೂಕ್ಷ್ನದ ವಿಚಾರ. ನಮ್ಮ ಧರ್ಮಗ್ರಂಥಗಳು ಹೇಳುತ್ತವೆ, ಇಂತಹ ಧರ್ಮಸೂಕ್ಷ್ಮಗಳು ನಮ್ಮನ್ನು ಎದುರಾದಾಗ ನಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳಬೇಕೆಂದು.

ಹಾರೋಹಳ್ಳಿಯ ನಾವು ಸತ್ಯಾಗ್ರಹಿಗಳು ಧರ್ಮಗ್ರಂಥಗಳು ತಿಳಿಸುವಂತೆ ನಮ್ಮ ಅಂತರಾತ್ಮ ಹೇಳುವ ರೀತಿ ನಡೆದುಕೊಳ್ಳಬೇಕಲ್ಲವೇ?

ಕಾಣದಾಗಿದೆ ರೈತಪರ ಕಾಳಜಿ, ಹುಡುಕಿಕೊಡಿ ಪ್ಲೀಜ್

– ಸದಾನಂದ ಲಕ್ಷ್ಮೀಪುರ

ಹಾಸನದಲ್ಲಿ ರೈತಪರ ಹೋರಾಟಗಾರರ ಬಂಧನ:

ಅಡವಿ ಬಂಟೇನಹಳ್ಳಿ ಹಾಸನ ತಾಲೂಕಿನ ಗ್ರಾಮ. ಹೆಸರೇ ಹೇಳುವಂತೆ ಅಡವಿಯೇ ಆ ಊರು. ಹತ್ತಾರು ಊರುಗಳಿಂದ ಐವತ್ತು ವರ್ಷಗಳ ಹಿಂದೆ ಇಲ್ಲಿಗೆ ಬಂದ ಭೂರಹಿತ ಕೃಷಿ ಕಾರ್ಮಿಕರು ಕಟ್ಟಿಕೊಂಡ ಊರದು. ಸೀಗೆಗುಡ್ಡ ಎಂಬ ಎತ್ತರದ ಪ್ರದೇಶದ ಸುತ್ತಲಲ್ಲಿರುವ ಭೂಮಿಯನ್ನು ಸಮತಟ್ಟು ಮಾಡಿಕೊಂಡು ಬಹಳ ಕಾಲದಿಂದ ಕೃಷಿ ಮಾಡುತ್ತಿದ್ದಾರೆ. ಅವರಲ್ಲಿ ಕೆಲವರು ಕರ್ನಾಟಕ ಭೂ ಸುಧಾರಣೆ ಕಾಯಿದೆಯಡಿ ಅದೇ ಭೂಮಿಯ ಮಂಜೂರಿಗಾಗಿ ಅರ್ಜಿ ಹಾಕಿದ್ದಾರೆ.HRN ಬೆರಳೆಣಿಕೆಯಷ್ಟು ಜನರಿಗೆ ಮಂಜೂರೂ ಆಗಿದೆ, ಮತ್ತೆ ಕೆಲವರ ಅರ್ಜಿಗಳು ಇತ್ಯರ್ಥವಾಗದೆ ಬಾಕಿ ಉಳಿದಿವೆ.

ಈಗ್ಗೆ ನಾಲ್ಕು ದಿನಗಳ ಹಿಂದೆ (ದಿನಾಂಕ ಫೆ.12) ಅರಣ್ಯ ಇಲಾಖೆಯ ಸಿಬ್ಬಂದಿ ಆ ಭೂ ಪ್ರದೇಶ ಕಾಯ್ದಿಟ್ಟ ಅರಣ್ಯ ಎಂದು ತಮ್ಮ ವಶಕ್ಕೆ ತೆಗೆದುಕೊಳ್ಳಲು ಮುಂದಾದರು. ಒಂದು ದಿನದ ಮಟ್ಟಿಗೆ ಅವರ ಕಾರ್ಯಾಚರಣೆ ಯಾವುದೇ ಅಡೆತಡೆ ಇಲ್ಲದೆ ನಡೆಯಿತು. ಮಾರನೆಯ ದಿನವೂ ಅವರು ಕಾರ್ಯಾಚರಣೆ ಮುಂದುವರಿಸಿದರು. ಆ ಹೊತ್ತಿಗೆ ರೈತರು ಸಂಘಟಿತರಾಗಿದ್ದರು. ಕರ್ನಾಟಕ ಪ್ರಾಂತ ರೈತ ಸಂಘದ ಎಚ್.ಆರ್.ನವೀನ್ ಕುಮಾರ್, ಎಂ.ಜಿ. ಪೃಥ್ವಿ, ರಾಘವೇಂದ್ರ ಮತ್ತಿತರರ ನೇತೃತ್ವದಲ್ಲಿ ಸೀಗೆಗುಡ್ಡದ ತಪ್ಪಲಲ್ಲಿ ಧರಣಿ ಕೂತರು. ಅರಣ್ಯಾಧಿಕಾರಿಗಳು ತಮ್ಮ ಕಾರ್ಯ ಮುಂದುವರಿಸಲಾಗದೆ, ಪೊಲೀಸರನ್ನು ಕರೆಸಿದರು. ಪೊಲೀಸ್ ಮೀಸಲು ಪಡೆ ಸ್ಥಳಕ್ಕೆ ಧಾವಿಸಿತು. ರೈತರು ಜೆಸಿಬಿಗಳನ್ನು ನಿಲ್ಲಿಸಿ ಪ್ರತಿಭಟನೆ ಮಾಡಿದರು.

ಕಳೆದ 50 ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದಿದ್ದೇವೆ. ಹೀಗೆ ಏಕಾಏಕಿ ನುಗ್ಗಿ ಎತ್ತಂಗಡಿ ಮಾಡಿಸುವುದೆಂದರೆ ಹೇಗೆ, ಎನ್ನುವುದು ಅವರ ವಾದ. ಅಷ್ಟಲ್ಲದೆ ತೆಂಗಿನ ತೋಟದ ಮಧ್ಯೆ ಜೆಸಿಬಿ ಸಹಾಯದಿಂದ ಗುಂಡಿ ತೋಡಿ ರೈತನ ಆಕ್ರೋಷಕ್ಕೆ ಕಿಡಿ ಹತ್ತಿಸಿದರು.

ಅಧಿಕಾರಿಗಳು ತಮ್ಮ ಕಾರ್ಯಾಚರಣೆಗೂ ಮುನ್ನ ಯಾರಿಗೂ ನೊಟೀಸ್ ನೀಡಿಲ್ಲ. ಕೇಳಿದರೆ, ನೊಟೀಸ್ ನೀಡುವ ಪ್ರಮೇಯವೇ ಸೃಷ್ಟಿಯಾಗುವುದಿಲ್ಲ, ಏಕೆಂದರೆ ಇದು ಅರಣ್ಯ ಭೂಮಿ. 1940 ರಷ್ಟು ಹಿಂದೆಯೇ ಕಾಯ್ದಿಟ್ಟ ಅರಣ್ಯ ಎಂದು ಘೋಷಿಸಿಯಾಗಿದೆ. ಮುಲಾಜಿಲ್ಲದೆ ಎತ್ತಂಗಡಿ ಮಾಡಿಸದೇ ಬೇರೆ ದಾರಿ ಇಲ್ಲ ಎನ್ನುವುದು ಅಧಿಕಾರಿಗಳ ವಾದ. ಆದರೆ ಮಂಜೂರಾದ ಬಗ್ಗೆ ಕೆಲವರ ಬಳಿ ದಾಖಲೆಗಳಿವೆ. ಅವುಗಳನ್ನು ಪರಿಶೀಲಿಸಿ. ಮೇಲಾಗಿ ಸರಕಾರದ ನೇತಾರರು ಆಗಾಗ ಹೇಳುತ್ತಾ ಬಂದಿರುವುದೆಂದರೆ, ಐದು ಎಕರೆಗಿಂತ ಕಡಿಮೆ ಕಂದಾಯ ಭೂಮಿ ಒತ್ತುವರಿ ಮಾಡಿರುವವರನ್ನು ಹಾಗೂ ಮೂರು ಎಕರೆಗಿಂತ ಕಡಿಮೆ ಅರಣ್ಯ ಭೂಮಿ ಒತ್ತುವರಿ ಮಾಡಿರುವವರನ್ನು ಒತ್ತುವರಿ ತೆರವು ಕಾರ್ಯಾಚರಣೆಯಿಂದ ಕೈ ಬಿಡಲಾಗುವುದು. ಇದೇ ಅಭಿಪ್ರಾಯವನ್ನು ಕರ್ನಾಟಕ ಹೈಕೋರ್ಟ್ ಕೂಡ ವ್ಯಕ್ತಪಡಿಸಿದೆ. ಹೀಗಿರುವಾಗ ಒತ್ತುವರಿ ತೆರವು ಮಾಡಬಾರದು ಎನ್ನುವುದು ಪ್ರತಿಭಟನಾಕಾರರ ವಾದ.

ಆರೋಪಗಳು:
ಫೆ.13 ರ ಸಂಜೆ ಹೊತ್ತಿಗೆ ಎಲ್ಲವೂ ಶಾಂತವಾಯ್ತು. ರೈತರ ಬಳಿ ಇರುವ ದಾಖಲೆಯನ್ನು ಪರಿಶೀಲಸಿ ಮುಂದಿನ ಕ್ರಮ ತೆಗೆದುಕೊಳ್ಳುವುದು ಎಂದು ಅಧಿಕಾರಿಗಳು ಹಿಂದೆ ನಡೆದರು. ಕೆಪಿಆರ್‌ಎಸ್ ನೇತಾರರೂ ಹಾಸನಕ್ಕೆ ಹಿಂತಿರುಗಿದರು. ನಗರದ ಸಿಐಟಿಯು ಕಚೇರಿಯಲ್ಲಿ ಪ್ರತಿಭಟನೆಯಲ್ಲಿ ನೇತೃತ್ವ ವಹಿಸಿದ್ದ ನವೀನ್, ಪೃಥ್ವಿ, ರಾಘವೇಂದ್ರ ಇತರರು ಸಭೆ ನಡೆಸುತ್ತಿರುವಾಗ, ಅಂದರೆ ರಾತ್ರಿ 9 ರ ಹೊತ್ತಿಗೆ, ಧಾವಿಸಿದ ಪೊಲೀಸರು ಮೂವರನ್ನೂ ಬಂಧಿಸಿದರು. ಯಾಕೆ…ಏನು? ಎಂದು ವಿಚಾರಿಸಿದರೆ, ಅರಣ್ಯ ಇಲಾಖೆ ಅಧಿಕಾರಿಗಳು ಅವರ ವಿರುದ್ಧ ದೂರು ದಾಖಲಿಸಿದ್ದಾರೆ. ಹಾಗಾಗಿ ಬಂಧನ ಆಗಲೇಬೇಕು ಎನ್ನುವುದು ಪೊಲೀಸರ ವಾದ. ಆ ಹೊತ್ತಿಗೆ ವಿರೂಪಾಕ್ಷ ಎನ್ನುವ ಮತ್ತೋರ್ವ ಪ್ರತಿಭಟನಾಕಾರರನ್ನು ಬಂಧಿಸಿಯಾಗಿತ್ತು.

ಬಂಧನವಾಗಿದ್ದು ಶುಕ್ರವಾರ ರಾತ್ರಿ. ನಂತರ ಶನಿವಾರ ರಜೆ (ಎರಡನೇ ಶನಿವಾರ), ಭಾನುವಾರವೂ ರಜೆ. ಸೋಮವಾರ ಒಂದು ದಿನ ಕೋರ್ಟ್-ಕಚೇರಿಗಳು ತೆರೆದಿರುತ್ತವೆ, ಮತ್ತೆ ಮಂಗಳವಾರ ಶಿವರಾತ್ರಿ ರಜೆ. ಚಳವಳಿಯ ಸಂಗಾತಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿಸಲು ಯಾರಿಗೂ ಕನಿಷ್ಟ ಮೂರ್ನಾಲ್ಕು ದಿನಗಳ ಮಟ್ಟಿಗಾದರೂ ಸಾಧ್ಯವಾಗಬಾರದು ಎನ್ನುವುದು ಪೊಲೀಸರ ಸಂಚು! ಇಲ್ಲವಾದರೆ ಶುಕ್ರವಾರ ರಾತ್ರಿ ಬಂಧಿಸಿ, ಅದೇ ದಿನ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ತಳ್ಳುವಂತಹದ್ದೇನಿತ್ತು..? ಮುಖ್ಯವಾಗಿ ಇವರೆಲ್ಲರೂ ಪ್ರತಿದಿನ ಒಂದಲ್ಲ ಒಂದು ಜನಪರ ಹೋರಾಟದಲ್ಲಿ ತೊಡಗಿಸಿಕೊಂಡವರು. ಹಿಂದಿನ ದಿನದ ತನಕವೂ ಅಂಗನವಾಡಿ ನೌಕರರ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಹಾಗೂ ಪೊಲೀಸರ ಬಂಧನಕ್ಕೆ ಹೆದರಿ ತಲೆಮರೆಸಿಕೊಳ್ಳಲು ಅವರೇನು ಕಳ್ಳತನವನ್ನೋ, ಸುಲಿಗೆಯನ್ನೋ ಮಾಡಿರಲಿಲ್ಲವಲ್ಲ. ಹಾಗಿದ್ದೂ ಅವರನ್ನು ರಾತ್ರೋರಾತ್ರಿ ಬಂಧಿಸುವ ತರಾತುರಿ ಪ್ರದರ್ಶನ ಯಾಕೆ..? ಹಾಗೂ ಪೊಲೀಸರು ಇವರ ವಿರುದ್ಧ ದಾಖಲಿಸಿಕೊಂಡಿರುವ ದೂರಿನಲ್ಲಿ ನಮೂದಿಸಿರುವ ಆರೋಪಗಳು ಎಂಥವು ಒಮ್ಮೆ ನೋಡಿ. ಅಕ್ರಮ ಕೂಟ (ಐಪಿಸಿ ಸೆ.143 ), ಗಲಭೆ (147), ಮಾರಕಾಸ್ತ್ರಗಳಿಂದ ಗಲಭೆ (147), ಅಕ್ರಮ ಬಂಧನ (341), ಶಾಂತಿ ಭಂಗಕ್ಕೆ ಪ್ರಚೋದನೆ (504) ಹಾಗೂ ಸರಕಾರಿ ನೌಕರರು ತಮ್ಮ ಕರ್ತವ್ಯ ಮಾಡದಂತೆ ತಡೆ (353).IMG-20150213-WA0014

ಜನಪರ, ರೈತಪರ ಹೋರಾಡುವವರನ್ನು ವ್ಯವಸ್ಥಿತವಾಗಿ ಹತ್ತಿಕ್ಕುವ ಪ್ರಯತ್ನವಿದು. ಸಿದ್ದರಾಮಯ್ಯನವರೇ, ಕೇಳಿಸಿಕೊಳ್ಳಿ ರಾಜ್ಯದ ರೈತರ ಹಿತ ಕಾಯುತ್ತೇನೆಂದು ಅಧಿಕಾರಕ್ಕೆ ಬಂದ ನೀವು, ಆ ಕೆಲಸ ಮರೆತು ನಿದ್ರೆ ಹೋಗಿರುವಾಗ, ಆ ಬಗ್ಗೆ ಹೋರಾಟಕ್ಕೆ ಇಳಿದವರು ಈ ಚಳವಳಿಗಾರರು. ನೀವು ಸಂವಿಧಾನಬದ್ಧವಾಗಿ ಮಾಡಬೇಕಿದ್ದ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಈ ಮೂವರಲ್ಲಿ ಯಾರಿಗೂ, ಸೀಗೆಗುಡ್ಡದ ಬುಡದಲ್ಲಿ ಒಂದು ಇಂಚಿನಷ್ಟು ಭೂಮಿಯ ಅಗತ್ಯ ಇಲ್ಲ. ಅಂತಹವರನ್ನು ಬಂಧಿಸಿ, ಜೈಲಿಗಟ್ಟಿ ನೀವು ಸಾಧಿಸುವುದೇನು?

ಅಧಿಕಾರಿಗೆ ‘ಕರುಣೆ’:
ಅಷ್ಟಕ್ಕೂ, ಅರಣ್ಯ ಇಲಾಖೆ ಒತ್ತುವರಿ ತೆರವಿಗೆಂದು ಮುಂದಾದ ಭೂಮಿ ದಾಖಲೆ ಪ್ರಕಾರ ‘ಕಾಯ್ದಿಟ್ಟ ಅರಣ್ಯ’. ಅವರು ಕಾಯ್ದಿಟ್ಟು ದಶಕಗಳೇ ಆಗಿ ಹೋಗಿವೆ. ಆದರೆ ಇದುವರೆಗೂ ಅಲ್ಲಿ ಅರಣ್ಯದ ಯಾವ ಲಕ್ಷಣಗಳೂ ಇಲ್ಲ. ದಾಖಲೆಗಳು, ನ್ಯಾಯಾಲಯದ ತೀರ್ಪುಗಳನ್ನು ಒಂದು ಕ್ಷಣ ಆಚೆಗಿಟ್ಟು ಯೋಚಿಸೋಣ. ಸರಕಾರ ಇದುವರೆಗೂ ಕಾಯ್ದಿಟ್ಟ ಪ್ರದೇಶವನ್ನು ಅರಣ್ಯವನ್ನಾಗಿ ಅಭಿವೃದ್ಧಿ ಪಡಿಸಲು ಸಾಧ್ಯವಾಗದ ಮೇಲೆ, ರೈತರು ಅದನ್ನು ಸದುಪಯೋಗ ಪಡಿಸಿಕೊಂಡು ದೇಶಕ್ಕೆ ಅಗತ್ಯವಾದ ಕಾಳು-ಕಡಿ ಬೆಳೆದು ರಾಷ್ಟ್ರದ ಉತ್ಪನ್ನಕ್ಕೆ ಕೊಡುಗೆ ನೀಡಿದರೆ ತಪ್ಪೇನು..? ಆ ಭೂಮಿಯನ್ನು ಹಾಗೆ ಪಾಳು ಬಿಟ್ಟು, ದಾಖಲೆಯಲ್ಲಿ ಕಾಯ್ದಿಟ್ಟ ಅರಣ್ಯ ಎಂದು ತೋರಿಸಿದರೆ, ವಾತಾವರಣದಲ್ಲಿ ಆಮ್ಲಜನಕದ ಉತ್ಪಾದನೆ ಹೆಚ್ಚಾಗುತ್ತದೆಯೆ? ಈ ಭೂಮಿಯನ್ನು ಇದುವರೆಗೆ ಕಾಪಾಡಿಕೊಂಡು ಬಂದಿದ್ದಕ್ಕೆ ರೈತರಿಗೆ ಸರಕಾರ ಮೊದಲು ಧನ್ಯವಾದ ಹೇಳಬೇಕು. ಸರಕಾರದ ಅಧಿಕಾರಕ್ಕೆ ಹತ್ತಿರದಲ್ಲಿರುವ ಯಾರಾದರೂ ಆ ಭೂಮಿಯನ್ನು ಲಪಟಾಯಿಸಿ ಕಾಫಿ ಪ್ಲಾಂಟೇಶನ್ನೋ..ರಿಯಲ್ ಎಸ್ಟೇಟ್ ಆಗಿಯೋ ಪರಿವರ್ತಿಸಿಲ್ಲವಲ್ಲ..ಅದಕ್ಕೆ ಖುಷಿಪಡಿ.

ಇತ್ತೀಚಿನ ವರ್ಷಗಳ ವರೆಗೂ ಉನ್ನತ ಅಧಿಕಾರ ಅನುಭವಿಸಿದ ನಿವೃತ್ತ ಐಎಎಸ್ ಅಧಿಕಾರಿ ಐ.ಎಂ.ವಿಠ್ಠಲಮೂರ್ತಿ ಬೇಲೂರು ತಾಲೂಕಿನಲ್ಲಿ 19 ಎಕರೆ 20 ಗುಂಟೆಯಷ್ಟು ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿದ್ದಾರೆ. ಅವರ ಪ್ರಕರಣದಲ್ಲಾದರೆ, ಅರಣ್ಯ ಇಲಾಖೆಯವರು ನೊಟೀಸ್ ನೀಡುತ್ತಾರೆ. ಒಂದು ವಾರದೊಳಗೆ ತೆರವು ಮಾಡಬೇಕು ಎಂದು ಹೇಳಿದ ಮೇಲೂ, ನಿವೃತ್ತ ಅಧಿಕಾರಿ ಸುಮ್ಮನಿರುತ್ತಾರೆ. ತಮ್ಮ ವಕೀಲರ ಮೂಲಕ ನೊಟೀಸ್ ಗೆ ಉತ್ತರ ನೀಡುತ್ತಾರೆ. ಆ ನಂತರ ತಿಂಗಳುಗಳೇ ಉರುಳಿದರೂ, ಅಲ್ಲಿ ತೆರವು ಕಾರ್ಯಾಚರಣೆ ಮಾಡಲು ಈ ಸರಕಾರದ ಅಧಿಕಾರಿಗಳು ಮುಂದಾಗುGVSವುದಿಲ್ಲ. ಆದರೆ ಬಡ ರೈತರ ವಿಚಾರ ಬಂದಾಗ ಆ ‘ಕರುಣೆ’ ಇಲ್ಲ.

ಪೊಲೀಸರ ದೌರ್ಜನ್ಯ:
ಈ ಘಟನೆಯಲ್ಲಿ ಪೊಲೀಸರು ತೋರಿದ ವರ್ತನೆ ಚಳವಳಿಕಾರರಲ್ಲಿ ಆಕ್ರೋಷ ಹುಟ್ಟಿಸಿದೆ. ಅವರು ಈ ಹೋರಾಟಗಾರರನ್ನು, ಕೊಲೆ ಆರೋಪಿಗಳಂತೆ ನಡೆಸಿಕೊಂಡಿದ್ದಾರೆ. ಇಲ್ಲವಾದಲ್ಲಿ, ರಾತ್ರೋರಾತ್ರಿ ಬಂಧಿಸಿ, ಮೂರ್ನಾಲ್ಕು ದಿನಗಳ ಮಟ್ಟಿಗೆ ಜೈಲಿನಲ್ಲಿಡಬೇಕೆಂಬ ಯೋಚನೆ ಬಂದದ್ದೇಕೆ? ಇದೇ ಹಾಸನದ ಪೊಲೀಸರ ಮುಂದೆ ಹಲವು ಗಂಭೀರ ಪ್ರಕರಣಗಳು ದಾಖಲಾಗಿವೆ. ಆರೋಪಿಗಳು ಇಡೀ ದಿನ ಇವರ ಮುಂದೆ ಎದೆಯುಬ್ಬಿಸಿಕೊಂಡು ಅಡ್ಡಾಡುತ್ತಿದ್ದರೂ, ಅವರನ್ನು ಬಂಧಿಸುವ ಛಾತಿ ತೋರಿಸದ ಪೊಲೀಸರು, ಚಳವಳಿಕಾರರನ್ನು ಬಂಧಿಸುವ ದಾಷ್ಟ್ಯ ತೋರಿಸಿದ್ದೇಕೆ?

ಹಾಸನದ ಶಾಸಕ ಎಚ್.ಎಸ್. ಪ್ರಕಾಶ್ ಸಹೋದರ ಎಚ್.ಎಸ್.ಅನಿಲ್ ಕುಮಾರ್. ಅವರು ಹಾಸನ ನಗರಸಭೆಯ ಸದಸ್ಯರೂ ಹೌದು. ಅವರ ವಿರುದ್ಧ ನಗರಸಭೆ ಆಯುಕ್ತ ದೂರು ದಾಖಲಿಸಿದ್ದಾರೆ. ನಗರಸಭೆಯ ಇಮೇಲ್ ಅಕೌಂಟನ್ನು ದುರುಪಯೋಗ ಪಡಿಸಿಕೊಂಡು ಸುಳ್ಳು ಮಾಹಿತಿಯನ್ನು ಮಾಧ್ಯಮ ಸಂಸ್ಥೆಗಳೂ ಸೇರಿದಂತೆ, ಹಲವರಿಗೆ ರವಾನಿಸಿದ ಆರೋಪ ಇದೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಅಂತಹದೊಂದು ಮೇಲ್ ರವಾನೆಯಾಗಿದ್ದು ಆ ಸದಸ್ಯರಿಗ ಸೇರಿರುವ ಶಿಕ್ಷಣ ಸಂಸ್ಥೆಗೆ ಸೇರಿದ್ದ ಇಂಟರ್ನೆಟ್ ಖಾತೆ (ಐಪಿ ವಿಳಾಸ) ಯಿಂದ ಹೋದದ್ದು ಎಂಬುದು ಗೊತ್ತಾಗಿದೆ. ಆದರೆ, ಇದುವರೆಗೂ ಬಂಧನವಿರಲಿ.., ಸಣ್ಣ ಮಟ್ಟದ ಕ್ರಮ ಕೂಡ ಕೈಗೊಂಡಿಲ್ಲ. ನೆನಪಿಸಿಕೊಳ್ಳುತ್ತಾ ಹೋದರೆ, ಪ್ರಭಾವಿಗಳನ್ನು ಬಚಾವು ಮಾಡುವ, ಮಾಡಿದ ಅನೇಕ ಉದಾಹರಣೆಗಳು ಸಿಗುತ್ತವೆ. ಹಾಗಾದರೆ, ಪೊಲೀಸರು ಇರಬೇಕಾದ್ದು ಯಾರ ಪರ..?