Monthly Archives: February 2015

ಯಾರು ಕಳೆ..ಯಾವುದು ಬೆಳೆ..?

– ಭಾರತೀ ದೇವಿ.ಪಿ

ಜನರ ನಿಜವಾದ ಸಮಸ್ಯೆಗೆ ಉತ್ತರ ನೀಡುವುದು ಧರ್ಮದಿಂದ ಸಾಧ್ಯವೇ?

ಆಗ್ರಾದಲ್ಲಿ ಹಿಂದೂ ಸಂಘಟನೆ ‘ಘರ್ ವಾಪಸಿ’ ಎನ್ನುವ ಹೆಸರಿನಲ್ಲಿ ಬಡಜನರ ಅಸಹಾಯಕತೆಯನ್ನು ತಮ್ಮ ಧರ್ಮದ ಬೇಳೆ Agra Conversionಬೇಯಿಸಿಕೊಳ್ಳಲು ಬಳಸಿದ್ದು ದೊಡ್ಡ ಸುದ್ದಿಯಾಗಿತ್ತು. ಇಲ್ಲಿ ಗಮನಿಸಬೇಕಾದ ಸಂಗತಿ, ರೇಷನ್ ಕಾರ್ಡ್ ಗಾಗಿ ಅಥವಾ ಜೀವನೋಪಾಯಕ್ಕಾಗಿ ಮತವನ್ನೇ ಬದಲಾಯಿಸಲು ಒಂದುವೇಳೆ ಜನ ಸಿದ್ಧರಿರುವುದೇ ಆದಲ್ಲಿ, ಆ ಜನ ಅದರ ಮೂಲಕ ಮೌನವಾಗಿ ಸಾರುತ್ತಿರುವ ಸತ್ಯಕ್ಕೆ ನಮ್ಮ ಒಳಗಿವಿಗಳನ್ನು ತೆರೆದುಕೊಳ್ಳಬೇಕಾಗಿದೆ. ಇಲ್ಲಿ ಇವರು ಸಾರುತ್ತಿರುವ ಮಹತ್ವದ ವಿಚಾರ “ಮತಕ್ಕಿಂತ ಬದುಕು ಮುಖ್ಯ”. ಆದರೆ ಹೊಟ್ಟೆಬಟ್ಟೆಯ ಅಗತ್ಯಗಳನ್ನು ಮೀರಿ ದುರ್ವರ್ತನೆಗಳಿಗೆ ಇಳಿದ ಜನಕ್ಕೆ ತಮ್ಮ ಸೋದರರ ಬದುಕಿನ ಅಸಹಾಯಕತೆ ರಾಜಕೀಯವಾಗಿ, ಧಾರ್ಮಿಕವಾಗಿ ದಾಳದಂತೆ ಕಂಡದ್ದು ಮನುಕುಲದ ವಿಕೃತತೆಗೆ ಸಾಕ್ಷಿ.

ಇಂಥದ್ದೇ ಇನ್ನೊಂದು ಸಂಗತಿ ಪತ್ರಿಕೆಯಲ್ಲಿ ಪ್ರಕಟವಾಗಿದೆ. (ವಿ.ಕ. 01-02-2015) ಭಾರತೀಯ ಕ್ರೈಸ್ತರ ಒಕ್ಕೂಟ ವೇದಿಕೆಯ ಅಧ್ಯಕ್ಷ ಟಿ.ಜೆ.ಅಬ್ರಹಾಂ ಅವರು ಬೆಂಗಳೂರಿನಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಘರ್ ವಾಪಸಿಯನ್ನು ಸ್ವಾಗತಿಸುತ್ತಾ ಇದರಿಂದ ಕ್ರೈಸ್ತ ಧರ್ಮದ ಕಳೆ ನಿರ್ಮೂಲನೆ ಆಗಲಿ ಎಂದಿದ್ದಾರೆ. ಇವರು ‘ಕಳೆ’ ಎಂದಿರುವುದು ಬಡತನ,ಅಸ್ಪೃಶ್ಯತೆ ಒಡ್ಡಿದ ಅಸಹಾಯಕತೆಯಿಂದ ಕ್ರೈಸ್ತ ಧರ್ಮಕ್ಕೆ ಬಂದ ಜನರನ್ನು. vijaykarnataka-feb0115“ಯಾರು ಪಡಿತರ ಚೀಟಿ, ಆಧಾರ್ ಕಾರ್ಡ್, ಬೇಳೆ, ಹಾಲಿನ ಪುಡಿಗಾಗಿ ಧರ್ಮಗಳನ್ನು ಬದಲಿಸುತ್ತಾರೋ ಅಂಥವರ ಅಗತ್ಯತೆ ಕ್ರೈಸ್ತ ಧರ್ಮಕ್ಕೆ ಇಲ್ಲ. ಅವರು ಬೆಳೆಯಲ್ಲ, ಕಳೆ ಇದ್ದಂತೆ. ಅಂತಹ ಕಳೆಗಳನ್ನು ಕೀಳಬೇಕು ಎನ್ನುವಾಗಲೇ ಘರ್ ವಾಪಸಿ ಹೆಸರಿನಲ್ಲಿ ಕ್ರೈಸ್ತ ಧರ್ಮವನ್ನು ಸ್ವಚ್ಛಗೊಳಿಸುವ ಕೆಲಸ ನಡೆಯುತ್ತಿದೆ” ಎಂದು ಪತ್ರಿಕಾಗೋಷ್ಟಿಯಲ್ಲಿ ನುಡಿದ ಇವರ ಮಾತುಗಳು ದಿಗಿಲು ಹುಟ್ಟಿಸುತ್ತವೆ. ದಯಾಮೂಲವಾಗಿ ಪಸರಿಸಿದ ಕ್ರೈಸ್ತಧರ್ಮದ ಧಾರ್ಮಿಕ ನಾಯಕ ಆಡಿರುವ ಈ ಮಾತುಗಳು ಧರ್ಮದ ಮೂಲ ಉದ್ದೇಶ ಉಳ್ಳವರನ್ನು ಪೋಷಿಸುವುದೇ ಆಗಿದೆ ಎಂಬುದನ್ನು ಶ್ರುತಪಡಿಸುವಂತಿವೆ.

ಧರ್ಮ ಮತ್ತು ಪ್ರಭುತ್ವ ಈ ಎರಡಕ್ಕೂ ಬಡವರು ‘ಕಳೆ’ಗಳಂತೆ ಕಾಣುತ್ತಿದ್ದಾರೆ ಎಂಬುದು ಕಳೆದ ಕೆಲವು ತಿಂಗಳುಗಳಿಂದ ತುಂಬಾ ಸ್ಪಷ್ಟವಾಗುತ್ತಿದೆ. ಇವರನ್ನು ಆಳಕ್ಕೆ ತಳ್ಳುವ ಈ ಧರ್ಮದ ಕೂಪಗಳು ಬೇರೆ ಬೇರೆ ಹೆಸರಿನಲ್ಲಿ ವಿಭಿನ್ನ ಮುಖಗಳಲ್ಲಿ ಕಾಣುತ್ತಿದ್ದರೂ ಜನರ ನಿಜವಾದ ಸಮಸ್ಯೆಗೆ ಉತ್ತರ ನೀಡುವುದು ಧರ್ಮದಿಂದ ಸಾಧ್ಯವೇ? ಎಂಬ ಪ್ರಶ್ನೆ ಎಲ್ಲರೂ ಮತ್ತೆ ಮತ್ತೆ ತಮ್ಮ ಸಾಮಾನ್ಯ ಜ್ಞಾನವನ್ನು ಅರಳಿಸಿಕೊಂಡು ಕೇಳಿಕೊಳ್ಳಬೇಕಾಗಿದೆ. ಕುವೆಂಪು ಹೇಳಿದSakshi Maharaj ‘ನೂರು ಮತದ ಹೊಟ್ಟತೂರಿ’ ಮನುಷ್ಯನಾಗಿ ಬದುಕುವ ಸಹಜತೆಗೆ ಮರಳಬೇಕಿದೆ. ಆಗ ಆಗ್ರಾದ ಬಡಜನ ತಮ್ಮ ಒಡಲ ಉರಿಯೊಳಗೆ ಹೊಳೆಯಿಸಿ ತೋರುತ್ತಿರುವ ದೊಡ್ಡ ಸತ್ಯ ಖಂಡಿತಾ ಎಲ್ಲರ ಅರಿವಿಗೆ ಬರುತ್ತದೆ.

ಶ್ರಮಕ್ಕೆ ತಕ್ಕ ದುಡಿಮೆ: ದಿಲ್ಲಿ ರಿಕ್ಷಾವಾಲಗಳಿಗೆ ಸಿಗಲಿ ಮನ್ನಣೆ

– ಪ್ರಶಾಂತ್ ಹುಲ್ಕೋಡು

[ದೆಹಲಿಯಿಂದ.]

‘ಹಿಂದಿನ ಸರಕಾರ ಮೆಟ್ರೊ ತಂದಿದೆ. ಹೀಗಾಗಿ ನನ್ನ ನಗರ ಅಭಿವೃದ್ಧಿಯಾಗಿದೆ. ಇದಕ್ಕಿಂತ ಹೆಚ್ಚಿನ ಅಭಿವೃದ್ಧಿಯನ್ನು ನೋಡಲು ನಾನು ಕಾಂಗ್ರೆಸ್‍ಗೆ ಮತ ನೀಡುತ್ತಿದ್ದೇನೆ’ ಎಂಬರ್ಥದ ಜಾಹೀರಾತನ್ನು ಕಾಂಗ್ರೆಸ್‍ ಪಕ್ಷ ಮಾಧ್ಯಮಗಳಿಗೆ ಬಿಡುಗಡೆ ಮಾಡಿದೆ. ದಿಲ್ಲಿ ಮತ್ತು ಇಲ್ಲಿನ ವಾಹನ ಜಂಗುಳಿಯ ರಸ್ತೆಗಳನ್ನು ನೋಡುತ್ತಿದ್ದರೆ ಮೆಟ್ರೊ ಯೋಜನೆಯನ್ನುದೃಢ ನಿಲುವಿನೊಂದಿಗೆ ಕಾರ್ಯರೂಪಕ್ಕೆ ಇಳಿಸಿದ ಶೀಲಾ ದೀಕ್ಷಿತ್‍ ನೇತೃತ್ವದ ಮಾಜಿ congress_ad_20150126ಸರಕಾರವನ್ನು ಬೆಂಬಲಿಸುವುದರಲ್ಲಿ ಯಾವುದೇ ರಾಜಕೀಯ ಕಾಣಿಸುವುದಿಲ್ಲ. ಬೃಹತ್‍ ಪ್ರಮಾಣದಲ್ಲಿ ಬೆಳೆದು ನಿಂತಿರುವ ದಿಲ್ಲಿಯ ಸಂಚಾರ ವ್ಯವಸ್ಥೆಯನ್ನು ಇಂದು ಮೆಟ್ರೊ ರೈಲು ಹೊರತುಪಡಿಸಿ ಕಲ್ಪಿಸಿಕೊಳ್ಳುವುದು ಅಸಾಧ್ಯ. ಅಷ್ಟರ ಮಟ್ಟಿಗೆ ಮೆಟ್ರೊ ರೈಲು ಇಲ್ಲಿನ ಜನರ ನಿತ್ಯ ಬದುಕಿನ ಭಾಗವಾಗಿ ಹೋಗಿದೆ. 2003ರಲ್ಲಿ ಯೋಜನೆ ತಯಾರಿಸಿ, 2006ರಲ್ಲಿ ಯೋಜನೆಗೆ ಶಂಕುಸ್ಥಾಪನೆ ಮಾಡಿ, 2014 ಆದರೂ ಇನ್ನೂ ಬೆಂಗಳೂರು ಜನರಿಗೆ ಮೆಟ್ರೊ ರೈಲನ್ನು ನೀಡಲಾಗದ ನಮ್ಮ ಸರಕಾರಗಳಿಗೆ ಇಲ್ಲಿ ಸಾಕಷ್ಟು ಪಾಠಗಳು ಸಿಗುತ್ತವೆ. ಹಾಗಂತ ದಿಲ್ಲಿ ಕೇವಲ ಮೆಟ್ರೊ ರೈಲಿನ ಮೇಲೆ ಮಾತ್ರವೇ ಅವಲಂಬಿಸಿದ್ದರೆ ಇವತ್ತು ಶೀಲಾ ದೀಕ್ಷತ್‍ ಮತ್ತವರ ಕಾಂಗ್ರೆಸ್‍ ಪಕ್ಷವನ್ನು ಇಲ್ಲಿನ ಜನ ಇಷ್ಟರ ಮಟ್ಟಿಗೆ ದೂರ ಇಡಲು ಸಾಧ್ಯವೇ ಇರಲಿಲ್ಲ. “ಅವತ್ತಿಗೆ ಶೀಲಾ ದೀಕ್ಷಿತ್‍ ದಿಲ್ಲಿ ಮೆಟ್ರೊ ನಿಗಮಕ್ಕೆ ಭಾರಿ ಬೆಂಬಲ ನೀಡಿದರು. ಈ ಮೂಲಕ ಇಷ್ಟು ದೊಡ್ಡ ಯೋಜನೆಯನ್ನು ಕಾರ್ಯರೂಪಕ್ಕೆ ತರುವಲ್ಲಿ ಮಹತ್ವದ ಪಾತ್ರವಹಿಸಿದರು, ಆದರೆ, ಮೆಟ್ರೊ ರೈಲಿನ ಆಚೆಗೂ ದಿಲ್ಲಿ ಜನರ ಸಂಚಾರ ಸಮಸ್ಯೆಗಳಿರುವುದನ್ನು ಅವರು ಗಮನಿಸದೇ ಹೋದರು,’’ ಎಂಬ ಅಭಿಪ್ರಾಯವನ್ನು ದಿಲ್ಲಿ ಮೆಟ್ರೊ ನಿಗಮದ ಅಧಿಕಾರಿಯೊಬ್ಬರು ವ್ಯಕ್ತಪಡಿಸಿದರು.

ಹಳೆ ದಿಲ್ಲಿಯ ಇಕ್ಕಟ್ಟಾದ ರಸ್ತೆಗಳು, ಸಂಚಾರ ನಿಯಮಗಳನ್ನು ಗಮನಿಸಲೂ ಹೋಗದ ಸವಾರರ ಮನಸ್ಥಿತಿ, ಸಿಕ್ಕ ಸಿಕ್ಕಲ್ಲಿ ನಿಂತು ದಂಡ ಹಾಕುವ ಟ್ರಾಫಿಕ್‍ ಪೊಲೀಸರು ಮತ್ತು ರಿಕ್ಷಾ ತುಳಿಯುವ ಜನರ ಸಂಕಷ್ಟಗಳನ್ನು ನೋಡುತ್ತಿದ್ದರೆ ಮೆಟ್ರೊ ಅಧಿಕಾರಿಯವರ ಅಭಿಪ್ರಾಯ ವಾಸ್ತವಕ್ಕೆ cyclerickshaw-delhiಹತ್ತಿರವಾಗಿರುವಂತೆ ಕಾಣಿಸುತ್ತದೆ. ದಿಲ್ಲಿಯಲ್ಲಿ ಮೆಟ್ರೊ ರೈಲನ್ನು ಹೊರತುಪಡಿಸಿದರೆ, ಸಂಚಾರ ವ್ಯವಸ್ಥೆಗೆ ತಮ್ಮ ಬೆವರಿನ ಪಾಲವನ್ನು ನೀಡುತ್ತಿರುವವರು ಇಲ್ಲಿನ ರಿಕ್ಷಾ ಚಾಲಕರು. ಸಾಮಾನ್ಯ ಸೈಕಲ್‍ಗೆ ಹಿಂದೆ ಇಬ್ಬರು ಕೂರುವ ಆಸನ ವ್ಯವಸ್ಥೆ ಇರುವ ಈ ರಿಕ್ಷಾಗಳನ್ನು ತುಳಿಯುವುದನ್ನು ನೋಡುತ್ತಿದ್ದರೆ, ಹೊಸದಿಲ್ಲಿಯ ಒಡಲು ತುಂಬಿಕೊಂಡಿರುವ ಬಡತನ ಮತ್ತು ವರ್ಗ ತಾರತಮ್ಯವನ್ನು ನೆನಪಿಸುತ್ತವೆ. ಇಂತಹ ರಿಕ್ಷಾವಾಲಗಳಲ್ಲಿ ಬಹುತೇಕರು ಬಿಹಾರ ಮತ್ತು ಛತ್ತೀಸ್‍ಘಡದಂತಹ ರಾಜ್ಯದಿಂದ ಬಂದವರು. ಬಹುಶಃ ತಲೆಯ ಮೇಲೊಂದು ಸೂರಿಲ್ಲದ ದಿಲ್ಲಿಯ ಭಿಕ್ಷುಕರನ್ನು ಹೊರತು ಪಡಿಸಿದರೆ, ಬಡತನ ಕೃಪಾಂಕದ ನಂತರದ ಸ್ಥಾನದಲ್ಲಿ ಇರುವವರು ರಿಕ್ಷಾವಾಲಾಗಳು. ದಿನಕ್ಕೆ 50 ರಿಂದ 80 ರೂಪಾಯಿ ಬಾಡಿಗೆ ನೀಡಿ ರಿಕ್ಷಾವನ್ನು ಓಡಿಸುವ ಜನರ ಸಂಖ್ಯೆಯೇ ಸುಮಾರು 2 ಲಕ್ಷಕ್ಕೂ ಹೆಚ್ಚಿದೆ. “ದಿನಕ್ಕೆ ಮುನ್ನೂರರಿಂದ ಐನೂರು ರೂಪಾಯಿ ದುಡಿಮೆ ಆಗುತ್ತದೆ. ಇದರಲ್ಲಿ ರೂಮಿನ ಬಾಡಿಗೆ ಐನೂರು, ಊಟಕ್ಕೆ ಒಂದು ಸಾವಿರ ಕಳೆದರೆ ಉಳಿದ ಹಣವನ್ನು ನಮ್ಮ ಹಳ್ಳಿಗೆ ಕಳುಹಿಸಬೇಕು,” ಎಂದು ತಮ್ಮ ದುಡಿಮೆಯ ಲೆಕ್ಕಾಚಾರವನ್ನು ನೀಡಿದ್ದು ಯುವ ರಿಕ್ಷಾವಾಲ ಗೌರವ್‍ ಗುಪ್ತಾ. ಆತ ಕರೋಲ್‍ಭಾಗ್‍ನ ಗಲ್ಲಿಯೊಂದರ ಚಿಕ್ಕ ಕೋಟೆಯಲ್ಲಿ ವಾಸವಾಗಿದ್ದಾನೆ. ಒಟ್ಟು ಆರು ಜನರು ಹಂಚಿಕೊಂಡಿರುವ ಆ ಸೂರಿನ ಬಾಡಿಗೆ ಮೂರು ಸಾವಿರ ರೂಪಾಯಿ. “ತಿಂಗಳಿಗೆ ಒಂದರಿಂದ ಒಂದೂವರೆ ಸಾವಿರದವರೆಗೆ ವಿದ್ಯುತ್‍ ಬಿಲ್‍ ಬರುತ್ತಿತ್ತು. ನೀರಿಗಾಗಿ ಆರು ನೂರು ಖರ್ಚು ಮಾಡುತ್ತಿದ್ದೆವು. ಜಾಡೂವಾಲಾ ಪಕ್ಷ ಬಂದ ನಂತರ ನಮಗೆ ಸಾವಿರ ರೂಪಾಯಿ ಉಳಿತಾಯವಾಗುತ್ತಿತ್ತು. ಹೀಗಾಗಿ ಈ ಬಾರಿ ಜಾಡುಗೆ ನಮ್ಮ ಮತ,” ಎಂದರು. ಜತೆಗೆ ಅವರ ಕುತ್ತಿಗೆಗೆ ಸುತ್ತಿಕೊಂಡಿದ್ದ ಬಿಜೆಪಿಯ ಪ್ರಚಾರ ಸಾಮಾಗ್ರಿಯನ್ನು ಸುತ್ತಿ ತಮ್ಮ ಜೇಬಿಗೆ ಹಾಕಿಕೊಂಡು ನಕ್ಕರು.

ಇತ್ತೀಚೆಗೆ ತುಳಿಯುವ ರಿಕ್ಷಾಗಳ ಜಾಗದಲ್ಲಿ ಮೋಟರ್‍ ಜೋಡಿಸಿಕೊಂಡಿರುವ ಇ-ರಿಕ್ಷಾಗಳು ಬಂದಿವೆ. e-rickshaw-delhiಯುಪಿ ಗಡಿಭಾಗದ ಗ್ಯಾರೇಜುಗಳಲ್ಲಿ ಹಳೆಯದಾದ ಕೃಷಿಗೆ ಬಳಸುವ ಮೋಟರ್‍ಗಳನ್ನು ಜೋಡಿಸಿ ತಯಾರಿಸುವ ಇ- ರಿಕ್ಷಾಗಳನ್ನು ಇನ್ನೂ ಸಾರಿಗೆ ಇಲಾಖೆ ಕಾಯ್ದೆ ಅಡಿಗೆ ತಂದಿಲ್ಲ. ದಿನಕ್ಕೆ 400 ರೂಪಾಯಿ ಬಾಡಿಗೆಗೆ ಸಿಗುವ ಇ- ರಿಕ್ಷಾಗಳ ದುಬಾರಿ ಬಾಡಿಗೆಯಿಂದಾಗಿ ಲಾಭದಾಯಕ ಅಲ್ಲ ಎಂಬುದು ಕೆಲವು ರಿಕ್ಷಾವಾಲಾಗಳ ಅಭಿಪ್ರಾಯ. “ಇ- ರಿಕ್ಷಾಗಳ ಬಾಡಿಗೆ ದುಬಾರಿ. ಹೀಗಾಗಿ ಅದರ ಸಹವಾಸಕ್ಕೆ ನಾನು ಹೋಗಿಲ್ಲ. ಜತೆಗೆ, ಅವುಗಳಿಗೆ ಜೋಡಿಸಿದ ಮೋಟರ್‍ ಶಕ್ತಿ ಹೆಚ್ಚಿರುವುದರಿಂದ ಮೊದಲು ಪೊಲೀಸರು ಅವುಗಳ ಮೇಲೆ ಕೇಸು ಹಾಕುತ್ತಿದ್ದರು. ಆಪ್‍ ಸರಕಾರ ಬಂದ ನಂತರ ಅದು ನಿಂತಿಹೋಗಿತ್ತು,” ಎಂದರು ಭರತ್‍ ಶಾಹಿ. ಬಿಹಾರ ಮೂಲಕ ಇವರು ಕಳೆದ ಇಪ್ಪತ್ತು ವರ್ಷಗಳಿಂದ ದಿಲ್ಲಿಯಲ್ಲಿ ರಿಕ್ಷಾ ತುಳಿಯುತ್ತಿದ್ದಾರೆ. ಐವತ್ತರ ಆಸುಪಾಸಿನ, ಕೃಷ ಶರೀರದ ಅವರ ಮೈಕಟ್ಟು ಯಾವ ಜಿಮ್‍ಬಾಡಿಗೂ ಕಡಿಮೆ ಇದ್ದಂತೆ ಕಾಣುವುದಿಲ್ಲ. “ಬಹುಶಃ ನಮ್ಮದೇ ಸರಕಾರ ಬಂದರೂ ಇ- ರಿಕ್ಷಾಗಳಿಗೆ ಅನುಮತಿ ನೀಡುವ ಕುರಿತು ಮಧ್ಯದ ಹಾದಿಯನ್ನು ಅನುಸರಿಸಬೇಕಿದೆ,’’ ಎಂದರು ಆಪ್‍ನ ದಿಲ್ಲಿ ನಾಯಕರೊಬ್ಬರು.

ಅಚ್ಚರಿಯ ವಿಚಾರ ಏನೆಂದರೆ ಭಾರಿ ಸಂಖ್ಯೆಯಲ್ಲಿರುವ ದಿಲ್ಲಿಯ ನಿಜವಾದ ಸಾಮಾನ್ಯ ಪ್ರಜೆಗಳಾದ ರಿಕ್ಷಾವಾಲಾಗಳ ಕುರಿತು ಕಾಂಗ್ರೆಸ್‍ ಆಗಲಿ, ಬಿಜೆಪಿ ಆಗಲಿ ಗಮನ ಸೆಳೆಯುವಂತಹ ಮಾತುಗಳನ್ನು ಆಡುತ್ತಿಲ್ಲ. ಇವರಿಗೂ ಕೂಡ, ಎರಡೂ Kiran-Bedi-vs-Arvind-Kejriwal-rickshaw-ad-2015ಪ್ರಮುಖ ರಾಷ್ಟ್ರೀಯ ಪಕ್ಷಗಳ ಬಗ್ಗೆ ಅಪ್ಪುಗೆಯ ಭಾವವೂ ಇಲ್ಲ. ಕೇಜ್ರಿವಾಲ್‍ ನೇತೃತ್ವದ ಸರಕಾರ ಬಂದರೆ ತಮ್ಮ ಬದುಕು ಬದಲಾಗುತ್ತದೆ ಎಂಬ ಬಹುದೊಡ್ಡ ಆಶಯ ಇವರಲ್ಲಿ ಎದ್ದು ಕಾಣುತ್ತಿದೆ. ಚುನಾವಣೆ, ಅಧಿಕಾರದ ರಾಜಕಾರಣ, ಆರೋಪ-ಪ್ರತ್ಯಾರೋಪ ಮತ್ತು ಟಿವಿಗಳಲ್ಲಿನ ಚರ್ಚೆಗಳ ಅಬ್ಬರಗಳಿಂದ ಈ ರಿಕ್ಷಾವಾಲಗಳು ದೂರವೇ ಉಳಿದಿದ್ದಾರೆ. ದೇಶದ ರಾಜಧಾನಿಯ ತಣ್ಣನೆಯ ರಸ್ತೆಗಳಲ್ಲಿ ಅಕ್ಷರಶಃ ಬೆವರು ಸುರಿಸುವ ರಿಕ್ಷಾವಾಲಗಳ ಆಶಯವನ್ನು ಯಾವುದೇ ಭಾವಿ ಸರಕಾರ ಒಂದು ದಿನದಲ್ಲಿ ಪೂರೈಸುವುದು ಕಷ್ಟ ಕೂಡ. ಏನೇ ಆಗಲಿ, ಪ್ರಜಾಪ್ರಭುತ್ವ ವ್ಯವಸ್ಥೆ ಇನ್ನಷ್ಟು ಸುಂದರವಾಗಿಸಬೇಕು ಎಂದರೆ ಇಂಥ ರಿಕ್ಷಾವಾಲಗಳ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವಂತೆ ನೋಡಿಕೊಳ್ಳುವುದು ದಿಲ್ಲಿಯನ್ನು ಆಳುವ ಸರಕಾರದ ಹೊಣೆಗಾರಿಕೆ. ಚುನಾವಣೆ ಭವಿಷ್ಯ ಏನೇ ಆಗಲಿ, ದಿಲ್ಲಿಯ ರಿಕ್ಷಾವಾಲಗಳ ಬದುಕು ಬದಲಾಗಲಿ ಎಂದು ಈ ಸಮಯದಲ್ಲಿ ನಾವು ತುಂಬು ಮನಸ್ಸಿನಿಂದ ಹಾರೈಸಬಹುದು ಅಷ್ಟೆ…

ದಿಲ್ಲಿ ಕಿ ದಿಲ್ ಮೇ ಕ್ಯಾ ಹೇ ಭಾಯ್ ಸಾಬ್?!

– ಪ್ರಶಾಂತ್ ಹುಲ್ಕೋಡು

[ದೆಹಲಿಯಿಂದ.]

ದೇಶದ ರಾಜಧಾನಿಯ ವಿಧಾನಸಭೆಗೆ ನಡೆಯುತ್ತಿರುವ ಚುನಾವಣೆಯ ಬಹಿರಂಗ ಪ್ರಚಾರ ಅಂತಿಮ ಹಂತದಲ್ಲಿದೆ. ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ತಮ್ಮ ಕೊನೆಯ ಹಂತದ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಕಿರಣ್ ಬೇಡಿ ತಮ್ಮ ಸ್ವಕ್ಷೇತ್ರ ಕೃಷ್ಣಾ ನಗರದಲ್ಲಿ ಇಂದು ಬೆಳಗ್ಗೆ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ‘ಪ್ರಾಮಾಣಿಕ ರಾಜಕಾರಣಕ್ಕೆ ಹಾಗೂ ಪ್ರೀತಿಯ ಆಡಳಿತ’ಕ್ಕೆ ಜನ ಮನ್ನಣೆ ನೀಡಲಿದ್ದಾರೆ gulpanang-roadshow-krishnanagarಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ಆಮ್‍ ಆದ್ಮಿ ಪಕ್ಷ ತನ್ನ ಮೇಲೆ ಬಿಜೆಪಿ ಹೊರೆಸಿರುವ ಮಹಿಳಾ ವಿರೋಧಿ ಕಳಂಕವನ್ನು ತೊಳೆದುಕೊಳ್ಳಲು ಮಹಿಳಾ ನಾಯಕಿಯರನ್ನು ಮುಂದಿಟ್ಟುಕೊಂಡು ಬೃಹತ್‍ ಸಭೆಯನ್ನು ಅದೇ ಕ್ಷೇತ್ರದಲ್ಲಿ ನಡೆಸಿದೆ. ಕಾಂಗ್ರೆಸ್‍ ಮಾತ್ರ ಎಂದಿನಂತೆ ತನ್ನ ಸಾಂಪ್ರದಾಯಿಕ ಚುನಾವಣೆ ಪ್ರಚಾರ ಶೈಲಿಗೆ ಮೊರೆಹೋಗಿದೆ. ಬೂತ್‍ ಮಟ್ಟದಲ್ಲಿ ಮೈಕ್‍ ಪ್ರಚಾರ, ರಾಹುಲ್‍ ಗಾಂಧಿ ಬಹಿರಂಗ ಪ್ರಚಾರ ಮತ್ತು ಟಿವಿ ಮಾಧ್ಯಮದಲ್ಲಿ ತನ್ನ ನಿಲುವುಗಳನ್ನು ಸಮರ್ಥಿಸಿಕೊಳ್ಳುವುದು ಬಿಟ್ಟರೆ, ಅನುಭವಿ ಪಕ್ಷದ ಬತ್ತಳಿಕೆ ಖಾಲಿಯಾದಂತೆ ಕಾಣಿಸುತ್ತಿದೆ. ಫೆ. 5ರ ಸಂಜೆಗೆ ದಿಲ್ಲಿಯಲ್ಲಿ ಬಹಿರಂಗ ಪ್ರಚಾರ ಅಂತ್ಯವಾಗಲಿದೆ. ಈ ಸಮಯದಲ್ಲಿ ಹೊರಗಿನಿಂದ ಬಂದ ಎಲ್ಲಾ ಪಕ್ಷಗಳ ಕಾರ್ಯಕರ್ತರು ಹಾಗೂ ಸ್ವಯಂ ಸೇವಕರು ದಿಲ್ಲಿ ತೊರೆಯುವಂತೆ ಈಗಾಗಲೇ ತಿಳಿಸಲಾಗಿದೆ. ಹೀಗಾಗಿ, ಕೊನೆಯ ಕೆಲವೇ ಗಂಟೆಗಳು ಬಾಕಿ ಇರುವ ಈ ಸಮಯದಲ್ಲಿ ಸಾಧ್ಯವಾದಷ್ಟು ಜನರನ್ನು ನೇರವಾಗಿ ತಲುಪುವ ಪ್ರಯತ್ನದಲ್ಲಿ ಬಿಜೆಪಿ ಮತ್ತು ಆಮ್‍ ಆದ್ಮಿ ಪಕ್ಷಗಳು ನಿರತರಾಗಿವೆ. ಇಂದು ಬೆಳಗ್ಗೆಯೇ ಆಪ್‍ನ ಸಿಎಂ ಅಭ್ಯರ್ಥಿ ಅರವಿಂದ್‍ ಕೇಜ್ರಿವಾಲ್‍ ಸ್ಪರ್ಧಿಸುತ್ತಿರುವ ನ್ಯೂ ದಿಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಬಹುತೇಕ ಸ್ವಯಂ ಸೇವಕರು ಮನೆ ಮನೆ ಪ್ರಚಾರ ಕೈಗೊಂಡಿದ್ದಾರೆ. ಬಿಜೆಪಿ ಪ್ರತಿ ಮನೆಗೆ ಪತ್ರ ಬರೆಯುವ ಕ್ರಿಯಾಶೀಲತೆ ತೋರಿಸಿದೆ. ಒಟ್ಟಾರೆ, ದಿಲ್ಲಿ ಚುನಾವಣಾ ಕಣ ಮುಖ್ಯವಾಹಿನಿಯ ಚರ್ಚೆಗಳನ್ನು ಮೀರಿ ರಂಗು ಪಡೆದುಕೊಳ್ಳುತ್ತಿದೆ.

ಈ ನಡುವೆ ಈಶಾನ್ಯ ದಿಲ್ಲಿಯ ರೊಹತಾಷ್ ನಗರ್‍ ವಿಧಾನಸಭಾ ಕ್ಷೇತ್ರದಲ್ಲಿ ಆಪ್‍ ಅಭ್ಯರ್ಥಿ ಕಾರಿನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. sarita-sing-rohtasnagar-aapಆಪ್‍ನಿಂದ ಸ್ಪರ್ಧಿಸುತ್ತಿರುವ ಸರಿತಾ ಸಿಂಗ್‍ ಅವರ ಪ್ರಚಾರ ವಾಹನವನ್ನು ಸೋಮವಾರ ರಾತ್ರಿ ಅಡ್ಡಗಟ್ಟಿದ ಸುಮಾರು ಹತ್ತಕ್ಕೂ ಹೆಚ್ಚಿದ್ದ ದುಷ್ಕರ್ಮಿಗಳ ತಂಡ ಗಾಜುಗಳನ್ನು ಒಡೆದು ಹಾಕಿತ್ತು. “ನಾನು ಈ ಕ್ಷೇತ್ರವನ್ನು ಹಿಂದಿನಿಂದ ನೋಡಿಕೊಂಡು ಬರುತ್ತಿದ್ದೇನೆ. ಆದರೆ ಇದೇ ಮೊದಲ ಬಾರಿಗೆ ತೋಳ್ಬಲದ ರಾಜಕಾರಣ ಕಾಣಿಸುತ್ತಿದೆ,’’ ಎಂದರು ಆನಂದ್‍ ಸಿಂಗ್. ಇವರು ಆಪ್ ಅಭ್ಯರ್ಥಿ ಸರಿತಾ ಸಿಂಗ್‍ ಅವರ ಕಟ್ಟಾ ಬೆಂಬಲಿಗರು. ಮಂಗಳವಾರ ಸಂಜೆ ರೋಹತಾಷ್ ನಗರದಲ್ಲಿ ಆಯೋಜಿಸಿದ್ದ ಜನ ಸಭೆಗೆ ಭಾರಿ ಸಂಖ್ಯೆಯಲ್ಲಿ ಸ್ಥಳೀಯರು ಪಾಲ್ಗೊಂಡಿದ್ದರು. ಆಪ್‍ನ ಸ್ಟಾರ್‍ ಕ್ಯಾಂಪೇನರ್‍ ಕುಮಾರ್‍ ವಿಶ್ವಾಸ್‍ ಅವರ ಮಾತುಗಳ ಆಕರ್ಷಣೆಯೂ ಇದ್ದಕ್ಕೆ ಕಾರಣ ಇರಬಹುದು. ಈ ಸಮಯದಲ್ಲಿ ಮಾತನಾಡಿದ ಆಪ್‍ ನಾಯಕ ಕುಮಾರ್‍ ವಿಶ್ವಾಸ್, “ಆಪ್‍ ಪಕ್ಷದ ಚಂದಾ ವಿಚಾರವನ್ನು ಬಿಜೆಪಿ ಅಪಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ. ನಮಗೆ ಹಣ ನೀಡಿದವರ ಕಂಪನಿಗಳನ್ನು ಭಾರತ ಸರಕಾರ ಅನುಮೋದಿಸಿದೆ. ಅವರು ನೀಡಿದ ಹಣ ಬ್ಯಾಂಕ್‍ ಮೂಲಕ ಚಲಾವಣೆ ಆಗಿದೆ. ಹೀಗಿದ್ದೂ ಇದನ್ನು ಹವಾಲ ಎನ್ನುವುದಾದರೆ ದೇಶದ ಆರ್ಥಿಕ ಸಚಿವರು ರಾಜೀನಾಮೆ ನೀಡಬೇಕು,’’ ಎಂದರು. ಜತೆಗೆ “ಸರಿತಾ ಸಿಂಗ್‍ರನ್ನು ಗೆಲ್ಲಿಸಿ ಕಳುಹಿಸಿ, ಅವರನ್ನು ಮಂತ್ರಿ ಮಾಡಲು ನಾನು ಪ್ರಯತ್ನ ಮಾಡುತ್ತೇನೆ,’’ ಎಂದು ರೋಹತಾಷ್ ನಗರದ ಜನರ ಮೂಗಿಗೆ ತುಪ್ಪವನ್ನೂ ಹಚ್ಚಿದರು.

ಉತ್ತರ ಪ್ರದೇಶ ಹಾಗೂ ದಿಲ್ಲಿಯ ಗಡಿ ಭಾಗದಲ್ಲಿ ಬರುವ ರೋಹತಾಷ್ ನಗರ ಒಂದು ಕಾಲಕ್ಕೆ ಕಾಂಗ್ರೆಸ್‍ನ ಭದ್ರಕೋಟೆಯಾಗಿತ್ತು. ದಿಲ್ಲಿ ಕಾಂಗ್ರೆಸ್‍ ಪ್ರದೇಶ್‍ ಸಮಿತಿಯ ಅಧ್ಯಕ್ಷರಾಗಿದ್ದ ರಾಮ್‍ ಬಾಬು ಶರ್ಮಾ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು.kumar-vishwas-rohtas-nagar-jansabha-feb0315 “ರಾಮ್‍ ಬಾಬು ಬದುಕಿದ್ದಾಗ ಶೀಲಾ ದೀಕ್ಷಿತ್‍ ಕೂಡ ಅವರಿಗೆ ಹೆದರಿಕೊಳ್ಳುತ್ತಿದ್ದರು. ಅವರ ಕಾಲದಲ್ಲಿ ಸಾಕಷ್ಟು ಅಭಿವೃದ್ಧಿ ಆಗಿದೆ,’’ ಎಂದರು ಲಕ್ಷಣ್‍ ಸೋನೆ. ಚಿಕ್ಕ ಬೇಕರಿ ಇಟ್ಟುಕೊಂಡಿರುವ ಇವರು ಉತ್ತರ ಪ್ರದೇಶ ಮೂಲದವರು. ಇವರಂತೆಯೇ ಯುಪಿ ಮತ್ತಿತರ ಕಡೆಗಳಿಂದ ವಲಸೆ ಬಂದವರ ಸಂಖ್ಯೆ ಈ ಕ್ಷೇತ್ರದಲ್ಲಿ ಹೆಚ್ಚಿದೆ. ಜತೆಗೆ ಬಡತನವೂ ಅಷ್ಟೇ ಪ್ರಮಾಣದಲ್ಲಿದೆ. ರಾಮ್‍ ಬಾಬು ಶರ್ಮಾ 2009ರಲ್ಲಿ ಮೃತಪಟ್ಟ ನಂತರ ನಡೆದ ಉಪಚುನಾವಣೆಯಲ್ಲಿ ಅವರ ಮಗ ವಿಪಿನ್‍ ಶರ್ಮಾರನ್ನು ಇಲ್ಲಿನ ಜನ ದಿಲ್ಲಿ ವಿಧಾನಸಭಾ ಪ್ರತಿನಿಧಿಯಾಗಿ ಕಳುಹಿಸಿಕೊಟ್ಟರು, “ಏನೇ ಹೇಳಿ, ಹಿಂದಿನ ರಾಜಕಾರಣಿಗಳಂತಲ್ಲ ಇಂದಿನ ಯುವಕರು. ಅವರಿಗೆ ಅಧಿಕಾರ ಸಿಗುತ್ತಲೇ ಕ್ಷೇತ್ರ ಮರೆತು ಹೋಗುತ್ತಾರೆ,’’ ಎಂಬುದು ರಾಜೇಶ್‍ ಮಾಜಿ ಎಂಬ ರಿಕ್ಷಾ ಚಾಲಕರೊಬ್ಬರ ಅಭಿಪ್ರಾಯ. ಬಹುಶಃ ಹೀಗಾಗಿಯೇ 2013ರಲ್ಲಿ ನಡೆದ ಚುನಾವಣೆಯಲ್ಲಿ ಈ ಕ್ಷೇತ್ರ ಬಿಜೆಪಿಯ ಜಿತೇಂದರ್‍ ಮಹಾಜನ್‍ ಪಾಲಾಯಿತು. ಎರಡನೇ ಸ್ಥಾನದಲ್ಲಿ ಆಪ್‍ನ ಮುಕೇಶ್‍ ಹೂಡ 14 ಸಾವಿರ ಮತಗಳ ಅಂತರದಿಂದ ಸೋತಿದ್ದರು. ಇದೀಗ, ರೊಹತಾಷ್ ನಗರ್‍ ಎಂಬ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‍ ತನ್ನೆಲ್ಲಾ ನೆಲೆಗಳನ್ನು ಕಳೆದುಕೊಂಡಿದೆ. ಇಲ್ಲಿನ ಸ್ಥಳೀಯ ಕಾಂಗ್ರೆಸ್‍ ನಾಯಕರು ಆಪ್‍ನ ಯುವ ಅಭ್ಯರ್ಥಿಯ ಹಿಂದೆ ನಿಂತಿದ್ದಾರೆ. ಹೀಗಾಗಿ ಇಲ್ಲೇನಿದ್ದರು ಬಿಜೆಪಿ ಮತ್ತು ಆಪ್‍ ನಡುವಿನ ನೇರ ಕದನ.

ತಳಮಟ್ಟದಲ್ಲಿ ಆಪ್‍ ಮತ್ತು ಬಿಜೆಪಿ ಸೆಣಸಾಟ ನಡೆಯುತ್ತಿದ್ದರೆ, ಮುಖ್ಯವಾಹಿನಿಯಲ್ಲಿ ಚಂದಾ ಕುರಿತು ಕಳೆದ 36 ಗಂಟೆಗಳಿಂದ ನಿರಂತರವಾಗಿ ಸುದ್ದಿಗಳು ಭಿತ್ತರಗೊಳ್ಳುತ್ತಿವೆ. ಇದರ ನಡುವೆಯೇ ಹೊರಬಂದ ನಾಲ್ಕನೇ ಹಂತದ ಚುನಾವಣಾ ಸಮೀಕ್ಷೆಗಳು ಆಮ್‍ ಆದ್ಮಿ ಪಾರ್ಟಿಗೆ ಸುಮಾರು today-cicero-poll-feb1539- 46 ಸೀಟುಗಳು ಬರಬಹುದು ಎಂದು ಅಂದಾಜಿಸಿವೆ. 70 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ದಿಲ್ಲಿಯ ವಿಧಾನ ಸಭೆಗೆ ಇದು ಸ್ಪಷ್ಟ ಬಹುಮತ. ಜತೆಗೆ, ಸಿಎಂ ಸೂಕ್ತ ಅಭ್ಯರ್ಥಿಗಳ ಸಮೀಕ್ಷೆಯಲ್ಲಿ ಕೇಜ್ರಿವಾಲ್‍ ಎಲ್ಲರನ್ನೂ ಹಿಂದಿಕ್ಕಿದ್ದಾರೆ. ಒಂದು ರೀತಿಯಲ್ಲಿ ಈ ಸಮೀಕ್ಷೆಗಳು ಆಪ್‍ ನೆಚ್ಚಿಕೊಂಡಿರುವ ಸುಮಾರು 2 ಲಕ್ಷ ಆಟೋ ಚಾಲಕರು, ಮೂರು ಲಕ್ಷದಷ್ಟಿರುವ ರಿಕ್ಷಾ ಚಾಲಕರು ಹಾಗೂ 5 ಲಕ್ಷಕ್ಕೂ ಹೆಚ್ಚಿರುವ ಕೊಳೆಗೇರಿ ಕುಟುಂಬಗಳ ಮೇಲೆ ಹೆಚ್ಚಿನ ಪರಿಣಾಮ ಬೀರುವಂತೆ ಕಾಣಿಸುತ್ತಿಲ್ಲ. ಅಥವಾ ಇವರಿಗೆ ದಿಲ್ಲಿಗೆ ರಾಜ್ಯದ ಸ್ಥಾನಮಾನ ನೀಡುವ ವಿಚಾರ ಕೂಡ ಗಮನ ಸೆಳೆಯುತ್ತಿಲ್ಲ. ಈ ವರ್ಗದ ಜನರಲ್ಲಿ ಪೊಲೀಸರ ಭ್ರಷ್ಟಾಚಾರ ಮತ್ತು ವಿದ್ಯುತ್‍ ಬಿಲ್‍ ಇಳಿಕೆ ವಿಚಾರಗಳು ಮಾತ್ರವೇ ಸ್ಥಾನ ಪಡೆದುಕೊಂಡಿವೆ. ಮತ್ತೊಂದೆಡೆ ಬುಲೆಟ್‍ ರೈಲಿನ ಮಾತನಾಡುತ್ತಿರುವ ಬಿಜೆಪಿಗೆ ಕೊಂಚ ಮೇಲ್ವರ್ಗದ ಜನರಲ್ಲಿ ಸ್ಥಾನ ಸಿಕ್ಕಂತೆ ಕಾಣಿಸುತ್ತಿದೆ. ಒಟ್ಟಾರೆ, ವರ್ಗಗಳ ಆಧಾರದ ಮೇಲೆ ನಡೆಯುತ್ತಿರುವ ಈ ಚುನಾವಣೆ ದೇಶದ ರೋಚಕ ಚುನಾವಣೆಗಳ ಸಾಲಿನಲ್ಲಿ ಅನಾಯಾಸವಾಗಿ ಸ್ಥಾನ ಪಡೆದುಕೊಳ್ಳುತ್ತದೆ.

ಆಮ್‍ ಆದ್ಮಿಯ ಹವಾಲ ಚಂದಾ ಮತ್ತು ಮತಕ್ಕಿರುವ ಕಿಮ್ಮತ್ತು!

– ಪ್ರಶಾಂತ್ ಹುಲ್ಕೋಡು

[ದೆಹಲಿಯಿಂದ.]

“ಯಾಕೆ ಬಹುತೇಕ ಮಾಧ‍್ಯಮಗಳು ಆಪ್‍ ವಿರುದ್ಧವೇ ಸುದ್ದಿಗಳನ್ನು ತಯಾರಿಸುತ್ತವೆ. ಮೋದಿ ಅಂದಾಕ್ಷಣ ಯಾವುದೇ ಅಂಕೆ ಇಲ್ಲದ ಮಾಹಿತಿ ನೀಡುತ್ತವೆ,’’ ಎಂದು ಪ್ರಶ್ನಿಸಿದರು ಕಿರಣ್‍ ವಿಸ್ಸಾ. ಆಮ್‍ ಆದ್ಮಿ ಪಾರ್ಟಿಯ ಪಟೇಲ್‍ ನಗರ ಕಚೇರಿಯಿಂದ ಕೊಂಚ ದೂರದ ಮನೆಯ modi-kiran-bedi-delhi-rallyಕೋಣೆಯೊಂದರಲ್ಲಿ ಕುಳಿತು ಮಾತನಾಡುತ್ತಿದ್ದ ಅವರು ಕೊಂಚ ಭಾವನಾತ್ಮಕವಾಗಿಯೇ ಹೀಗಂತ ಕೇಳಿದರು. ಮೂಲತಃ ಆಂಧ್ರ ಮೂಲದ ಕಿರಣ್, ಕಳೆದ ಹದಿನೈದು ವರ್ಷಗಳಿಂದ ಅಮೆರಿಕಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಜತೆಗೆ, ಅಮೆರಿಕಾದ ಕೆಲವು ಸಂಘ ಸಂಸ್ಥೆಗಳ ಮೂಲಕ ಭಾರತದ ಬಡ ಜನರ ಅಭಿವೃದ್ಧಿಗಾಗಿಯೂ ಕೆಲಸ ಮಾಡುತ್ತಿದ್ದಾರೆ. ಇತರೆ ಎನ್‍ಆರ್‍ಐಗಳಂತಲ್ಲದ ಅವರ ಆಲೋಚನೆಗಳು ಇಲ್ಲಿನ ತಳವರ್ಗದ ನಿಜಸ್ಥಿತಿಯನ್ನು ಅರ್ಥಮಾಡಿಕೊಂಡಂತೆ ಕಾಣಿಸುತ್ತದೆ. ಹೀಗೆ ಮಾಧ್ಯಮಗಳ ಕುರಿತು ಅವರ ಕೇಳಿದ ಪ್ರಶ್ನೆಗೆ ಉತ್ತರ ಹೇಳುವುದು ಕಷ್ಟ ಅಥವಾ ಆತ್ಮಾವಲೋಕನದ ವಿಚಾರ. ಆದರೆ ಅವರಲ್ಲಿ ಹೀಗೊಂದು ಪ್ರಶ್ನೆ ಏಕೆ ಹುಟ್ಟಿತು ಎಂಬುದಕ್ಕೆ ಇವತ್ತಿನ ಚುನಾವಣೆಯ ಬಿಸಿಯಲ್ಲಿ ಬೇಯುತ್ತಿರುವ ದಿಲ್ಲಿಯನ್ನೂ ಮತ್ತು ಇಲ್ಲಿನ ನ್ಯೂಸ್‍ ಚಾನಲ್‍ಗಳು ‘ಸನ್‍ಸನಿ’ಗಳನ್ನು ಭಿತ್ತರಿಸುವ ರೀತಿಯಲ್ಲಿ ಉತ್ತರ ಸಿಗುತ್ತದೆ. “ಕಳೆದ ಲೋಕಸಭೆ ಚುನಾವಣೆ ನಂತರ ಅರವಿಂದ್ ಕೇಜ್ರಿವಾಲ್‍ ದಿಲ್ಲಿಯ ಕನಿಷ್ಟchandan-adarsh-dasari-ravi-delhi-aap 70 ಕಡೆಗಳಲ್ಲಿ ಜನಸಭಾಗಳನ್ನು ಮಾಡಿರಬಹುದು. ತಾವು ನೀಡಿದ ರಾಜೀನಾಮೆಯ ಹಿನ್ನಲೆ ಮತ್ತು ಆದ ತಪ್ಪುಗಳ ಕುರಿತು ಜನರೊಂದಿಗೆ ನೇರವಾಗಿ ಮಾತುಕತೆ ನಡೆಸಿದ್ದಾರೆ. ಆದರೆ ಇವ್ಯಾವವೂ ಮುಖ್ಯವಾಹಿನಿಯ ಮೀಡಿಯಾಗಳಲ್ಲಿ ಬರಲಿಲ್ಲ. ಕೇಜ್ರಿವಾಲ್‍ ಸಭೆ ಸುದ್ದಿಯಾಗಬೇಕು ಎಂದರೆ ಮೊಟ್ಟೆಯನ್ನೋ, ಕಲ್ಲನ್ನೋ ಎಸೆಯಬೇಕಾಗುತ್ತದೆ. ಆದರೆ ಮೋದಿ ಚಿಕ್ಕ ಸಭೆ ನಡೆಸಿದರೂ ಗಂಟೆ ಗಟ್ಟಲೆ ನೇರ ಪ್ರಸಾರವನ್ನು ನೀಡುತ್ತಿದ್ದಾರೆ,’’ ಎಂದರು ಬೆಂಗಳೂರು ಮೂಲದ ಚಂದನ್‍. ಆಪ್‍ನ ಸಕ್ರಿಯ ಕಾರ್ಯಕರ್ತರಾಗಿರುವ ಅವರು ದಿಲ್ಲಿ ಚುನಾವಣೆಯ ಪ್ರಚಾರಕ್ಕಾಗಿಯೇ ಇಲ್ಲಿಗೆ ಬಂದು ತಿಂಗಳ ಮೇಲಾಗಿದೆ.

ಮತದಾನ ದಿನಕ್ಕೆ ಕ್ಷಣಗಣನೆ ಆರಂಭವಾಗಿರುವ ಈ ಸಮಯದಲ್ಲೂ ಪ್ರಧಾನಿ ಮೋದಿ ಅವರು ನಡೆಸಿದ ಬಹಿರಂಗ ಸಭೆಯಲ್ಲಿ ದಿಲ್ಲಿಯ 70 ಬಿಜೆಪಿ ಅಭ್ಯರ್ಥಿಗಳು ಹಾಜರಿರುವ ಮೂಲಕ ಅಚ್ಚರಿ ಮೂಡಿಸುತ್ತಿದ್ದಾರೆ. “ಸಾಮಾನ್ಯವಾಗಿ ಇಂತಹ ಸಮಯದಲ್ಲಿ ಅಭ್ಯರ್ಥಿಗಳು ತಮ್ಮ ಕ್ಷೇತ್ರದಲ್ಲಿ ಇದ್ದು ಮತಯಾಚನೆ ನಡೆಸುತ್ತಾರೆ. ಆದರೆ ಮೋದಿ ಅವರ ಜತೆ ಪಾಲ್ಗೊಂಡರೆ ಅವರನ್ನು ಸುತ್ತವರೆದಿರುವ ಮಾಧ್ಯಮಗಳ ಮೂಲಕ ಜನರನ್ನು ಸುಲಭವಾಗಿ ತಲುಪಬಹುದು ಎಂಬ ಲೆಕ್ಕಾಚಾರ ಇರಬಹುದು,’’ ಎಂಬುದು ಪಂಜಾಬ್‍ ಮೂಲದ ಚುನಾವಣಾ ಸಮೀಕ್ಷರೊಬ್ಬರ ಅಭಿಪ್ರಾಯ. ಹೆಸರನ್ನು ಬಹಿರಂಗಪಡಿಸಲು ಇಚ್ಚಿಸದ ಅವರು ಸಿ- ವೋಟರ್‍ಗಾಗಿ ಕಳೆದ ಕೆಲವು ತಿಂಗಳುಗಳಿಂದ ದಿಲ್ಲಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಒಂದೆಡೆ ಆಪ್‍ಗೆ ಬಂದ ಚಂದಾಹಣದ ಮೂಲದ ಕುರಿತು ಹುಯಿಲೆದ್ದಿದೆ. ಮತ್ತೊಂದೆಡೆ ಬಿಜೆಪಿ ವೈಯುಕ್ತಿಕ ಟೀಕೆಗಳನ್ನು ಮಾಡುತ್ತಿದೆ. ಮುಖ್ಯವಾಹಿನಿಯಲ್ಲಿ ಹೀಗೆ ದಿಲ್ಲಿ ಚುನಾವಣೆ ಬಿಂಬಿತವಾಗುತ್ತಿರುವ ಹೊತ್ತಿನಲ್ಲೇ ತಳಮಟ್ಟದಲ್ಲಿ ಸಾಕಷ್ಟು ಕುತೂಹಲಕಾರಿ ಬೆಳವಣಿಗೆಗಳು ನಡೆಯುತ್ತಿವೆ. ಬಿಜೆಪಿಯ ಸಿಎಂ ಅಭ್ಯರ್ಥಿ ಎಂದೇ ಬಿಂಬಿತರಾಗಿರುವ ಕಿರಣ್‍ ಬೇಡಿ ಅವರ ಚುನಾವಣ ಕಣವೇ ಬಿಜೆಪಿ ಪಾಲಿಗೆ ಡೋಲಾಯಮಾನವಾಗಿದೆ. sk.bagga-krishnanagar-aap-candidateಆರಂಭದಲ್ಲಿ ಆಪ್‍ನ ‘ಜನರ ಸಿಎಂ’ ಎಂಬ ಪ್ರಚಾರದ ಅನಿವಾರ್ಯತೆಗಳಿಂದಾಗಿ ಬಿಜೆಪಿ ತನ್ನ ಸಿಎಂ ಅಭ್ಯರ್ಥಿಯ ಘೋಷಣೆಗೆ ಮುಂದಾಯಿತು. ಕಿರಣ್‍ ಬೇಡಿ ಆಯ್ಕೆ ಆರಂಭದಲ್ಲಿ ಸಕಾರಾತ್ಮಕ ವಾತಾರಣವನ್ನೂ ಸೃಷ್ಟಿಸಿತ್ತು. ಆದರೆ, ಸ್ವತಃ ಬೇಡಿಯವರ ತಡೆರಹಿತ, ಹಿಡಿತ ತಪ್ಪಿದ ಮಾತುಗಳಿಂದಾಗಿ ಒಟ್ಟಾರೆ ಬಿಜೆಪಿಯ ಚರಿಷ್ಮಾಕ್ಕೆ ಸಮಸ್ಯೆ ಸೃಷ್ಟಿಯಾದಂತೆ ಕಾಣಿಸುತ್ತಿದೆ. ಜತೆಗೆ ಕೃಷ್ಣಾ ನಗರದಲ್ಲಿ ಆಪ್‍ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಎಸ್.ಕೆ. ಬಗ್ಗಾ ವಕೀಲರು. ಬೇಡಿ ವಿರುದ್ಧ ವಕೀಲರು ಬೀದಿಗೆ ಇಳಿದಿದ್ದಾರೆ. ಈಗಷ್ಟೆ ಅವರ ಪ್ರಚಾರದ ಕಚೇರಿ ಮೇಲೆ ದಾಳಿ ನಡೆದಿದೆ ಎಂಬ ಮಾಹಿತಿ ಬಂದಿದೆ. ನಿಧಾನವಾಗಿ ಬೇಡಿ ಅವರ ಸಕಾರಾತ್ಮಕ ವ್ಯಕ್ತಿತ್ವದ ಅಂಶಗಳೇ ಅವರಿಗೆ ಮುಳ್ಳಾಗಿ ಕಾಡಲಾರಂಭಿಸಿದೆ.

“ಆಕೆ ಮಾಜಿ ಪ್ರಧಾನಿ ಇಂದಿರಾಗಾಂಧಿ ಕಾರ್‍ನ್ನು ರಸ್ತೆ ಬದಿಯಿಂದ ಎತ್ತಿಕೊಂಡು ಹೋದವರು ಎಂದು ಪ್ರಚಾರ ಮಾಡಿದ್ದರು. ಅದೀಗ ಸುಳ್ಳು ಎಂದು ಗೊತ್ತಾಗಿದೆ. ಹೀಗಿರುವಾಗ ಬಿಜೆಪಿಗೆ ಬೇರೆ ಅಸ್ತ್ರಗಳ ಮೊರೆ ಹೋಗುವುದು ಅನಿವಾರ್ಯ,’’ ಎಂದರು ಎನ್‍. ಕೆ. ಶರ್ಮಾ. ಇವರು ಕಿರಣ್‍ ಬೇಡಿ ಸ್ಪರ್ಧಿಸುತ್ತಿರುವ ಕೃಷ್ಣಾನಗರ ಕ್ಷೇತ್ರದಲ್ಲಿಯೇ ಮೆಕ್ಯಾನಿಕ್‍ ಆಗಿ ಕೆಲಸ ಮಾಡುತ್ತಿದ್ದಾರೆ. “ಇಲ್ಲಿ ಎರಡು ದಶಕಗಳ ಕಾಲ ಇದ್ದವರು ಹರ್ಷವರ್ಧನ್‍. ಈಗ ಕ್ಷೇತ್ರ ಬಿಟ್ಟು ಓಡಿ ಹೋಗಿದ್ದಾರೆ,’’ ಎಂದವರು ತಮ್ಮ ಬಿಜೆಪಿ ವಿರೋಧಿ ನಿಲುವನ್ನು ಗಟ್ಟಿಯಾಗಿ ಪ್ರತಿಪಾಧಿಸಿದರು. ಅವರು ದನಿಯನ್ನು ಕೇಳಿಸಿಕೊಂಡು ತಮ್ಮ ಅಂಗಡಿಯಿಂದ ಹೊರಬಂದ ಗುಜರಾತ್‍ ಮೂಲದ ಹಿರಿಯ ವ್ಯಾಪಾರಿ ದಿಯಾಲ್‍ಚಂದ್, “ಕಷ್ಟವೋ ಸುಖವೋ, ಲಾಭವೋ ನಷ್ಟವೋ ಕೇಜ್ರಿವಾಲ್‍ ಸಿಕ್ಕ ಅವಕಾಶವನ್ನು ಬಿಡಬಾರದಿತ್ತು. ನಾನು ಕಳೆದ ಐವತ್ತು ವರ್ಷಗಳಿಂದ ದಿಲ್ಲಿ ಚುನಾವಣೆಗಳನ್ನು hindustan-times-surveyನೋಡುತ್ತಾ ಬಂದಿದ್ದೇನೆ. ಈ ಬಾರಿ ಇಲ್ಲಿ ಬೇಡಿ ಗೆಲ್ಲುವುದು ಗ್ಯಾರೆಂಟಿ,’’ ಎಂದರು. ಹೀಗೆ, ಇಬ್ಬರ ನಡುವೆ ಒಂದಷ್ಟು ಹೊತ್ತು ವಾಗ್ಯುದ್ಧ ನಡೆದು ಕೊನೆಗೆ ಪರಸ್ಪರ ನಕ್ಕು ಬೀಳ್ಕೊಟ್ಟರು.

ದಿಲ್ಲಿಯ ಚುನಾವಣಾ ಕಣ ವಿಶೇಷ ಎಂದು ಅನ್ನಿಸುವುದು ಈ ಕಾರಣಕ್ಕಾಗಿಯೇ. ಇಲ್ಲಿನ ಸಾಮಾನ್ಯ ಜನರಿಂದ ಹಿಡಿದು ಸಮಾಜದ ಉತ್ತಮ ಸ್ಥರಗಳನ್ನು ತಲುಪಿಕೊಂಡವರ ವರೆಗೆ ರಾಜಕೀಯ ಪ್ರಜ್ಞೆ ಎಂಬುದು ಹಾಸುಹೊಕ್ಕಾದಂತೆ ಕಾಣಿಸುತ್ತದೆ. ಒಂದು ಕಡೆ ಚಿಕ್ಕ ಪ್ರಮಾಣದಲ್ಲಾದರೂ ಆಲೋಚನೆ ಮಾಡುವ ಜನವರ್ಗ, ಮತ್ತೊಂದೆಡೆ ನಾನಾ ಭಾಷೆ, ಪ್ರದೇಶ ಮತ್ತು ಸಂಸ್ಕೃತಿಗಳ ಸಂಕರದಿಂದ ಹುಟ್ಟಿಕೊಂಡಿರುವ ಕಾಸ್ಮೊಪಾಲಿಟನ್‍ ಚಹರೆಗಳ ಹಿನ್ನೆಲೆಯಿಂದಾಗಿ, ನಮ್ಮಲ್ಲಿ ನಡೆದಂತೆ ಜಾತಿ ಆಧಾರಿತ ಚುನಾವಣೆ ಲೆಕ್ಕಚಾರಗಳು ಇಲ್ಲಿ ನಡೆಯುವುದಿಲ್ಲ. ಹೀಗಿದ್ದೂ, ಸೋಮವಾರ ಬಿಜೆಪಿ ಬಿಡುಗಡೆ ಮಾಡಿದ ವೈಯುಕ್ತಿಕ ನಿಂದನೆಯ ಜಾಹೀರಾತಿನಿಂದಾಗಿ ಜಾತಿ ಆಧಾರಿತ ಹೇಳಿಕೆಗಳು ಆಪ್‍ ಕಡೆಯಿಂದ ಹೊರಬಿದ್ದಿದೆ. ಆದರೆ, ಇದು ಚುನಾವಣೆಯ ಕಣದಲ್ಲಿ ಹೆಚ್ಚು ಪ್ರಭಾವ ಬೀರಿದಂತಿಲ್ಲ.

ಇವುಗಳ ನಡುವೆಯೇ, ದಿಲ್ಲಿಯಲ್ಲಿ ಕಾಂಗ್ರೆಸ್‍ನ ಉಪಸ್ಥಿತಿ ದಿನದಿಂದ ದಿನಕ್ಕೆ ಕಮ್ಮಿಯಾಗುತ್ತಿರುವಂತೆ ಭಾಸವಾಗುತ್ತಿದೆ. ಈ ಕುರಿತು ಕನ್ನಡ ಸುದ್ದಿವಾಹಿನಿಯೊಂದರ ದಿಲ್ಲಿ ವರದಿಗಾರರೊಬ್ಬರು, “ದಿಲ್ಲಿ ಚುನಾವಣೆ ಮುಗಿಯುತ್ತಿದ್ದಂತೆ ಬಿಹಾರ ಮತ್ತಿತರ ರಾಜ್ಯಗಳ ಚುನಾವಣೆ ಬರುತ್ತದೆ. ಒಂದುವೇಳೆ ದಿಲ್ಲಿಯಲ್ಲಿ ಆಪ್‍ ಗೆದ್ದರೆ ಬಿಜೆಪಿ ಮತ್ತು ಮೋದಿ ಹವಾಕ್ಕೆ ಬ್ರೇಕ್‍ ಹಾಕಿದಂತೆ ಆಗುತ್ತದೆ. ಹೀಗಾಗಿ ಕಾಂಗ್ರೆಸ್‍ ಅಂತರಾಳದಲ್ಲಿ ಆಪ್‍ನ ಗೆಲುವನ್ನು ನಿರೀಕ್ಷಿಸುತ್ತಿರುವ ಸಾಧ್ಯತೆ ಇದೆ,’’ ಎಂದರು. ಇದು ಮೇಲ್ನೋಟದ ಅಭಿಪ್ರಾಯ ಇದ್ದಿರಬಹುದಾದರೂ, abp-news-surveyದಿಲ್ಲಿ ಮತದಾನಕ್ಕೆ ಮೂರು ದಿನಗಳ ಬಾಕಿ ಇರುವ ಈ ಸಮಯದಲ್ಲಿ ಹೊರಬರುತ್ತಿರುವ ಸಮೀಕ್ಷೆಗಳು ಇದನ್ನೇ ಬಿಂಬಿಸುತ್ತಿವೆ. ದಿನದಿಂದ ದಿನಕ್ಕೆ ಕಾಂಗ್ರೆಸ್‍ನ ಮತಗಳಿಕೆಯ ಸರಾಸರಿ ಇಳಿಕೆಯಾಗುತ್ತಿದೆ.

ಹೀಗಿರುವಾಗಲೇ, ಕೊನೆಯ ಹಂತದ ಮಾಹಿತಿ ಯುದ್ಧಕ್ಕೆ ಪ್ರಮುಖ ಪಕ್ಷಗಳು ತಯಾರಾಗಿವೆ. “ನಾಳೆಯಿಂದ ಆಪ್‍ನ ಜಾಹೀರಾತುಗಳು ಟಿವಿ ಮತ್ತು ಎಫ್‍ಎಂನಲ್ಲಿ ಪ್ರಸಾರ ಆಗಲಿವೆ. ಇದಕ್ಕಾಗಿ ಆಪ್‍ ಎನ್‍ಆರ್‌ಐ ತಂಡ ಸುಮಾರು 5 ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ,’’ ಎಂಬ ಮಾಹಿತಿಯನ್ನು ಆಪ್‍ನ ಕಾರ್ಯಕರ್ತರೊಬ್ಬರು ನೀಡಿದರು. ಬಿಜೆಪಿ ಕೂಡ ಟಿವಿಗಳಲ್ಲಿ ಮೋದಿ ಭಾಷಣವನ್ನು ಬಿಂಬಿಸುವ ಜಾಹೀರಾತುಗಳ ಮೊರೆ ಹೋಗಿದೆ. ಮತದಾನಕ್ಕೆ ಕೇವಲ 90 ಗಂಟೆಗೂ ಕಡಿಮೆ ಅವಧಿ ಬಾಕಿ ಇರುವ ಈ ಸಮಯದಲ್ಲಿ  ಆಪ್‍ನ ಚಂದಾ ಕುರಿತು ಎದ್ದಿರುವ ವಿವಾದದ ಮರ್ಮವನ್ನು ದಿಲ್ಲಿಯ ಜನ ಅರ್ಥಮಾಡಿಕೊಳ್ಳಬೇಕು ಎಂದು ಬಿಜೆಪಿ ಹಾಗೂ ಆಮ್‍ ಆದ್ಮಿ ಪಕ್ಷಗಳು ಕೋರಿಕೊಳ್ಳುತ್ತಿವೆ. ಅವರ ನಡುವಿನ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳೇನೆ ಇರಲಿ ಅಂತಿಮವಾಗಿ ಪ್ರಜಾಪ್ರಭುತ್ವದಲ್ಲಿ ಮತಕ್ಕಿರುವ ಕಿಮ್ಮತ್ತಿಗೆ ಇದೊಂದು ತಾಜಾ ಉದಾಹರಣೆ ಅಷ್ಟೆ…

ಅಲೆಯಲ್ಲಿ ತೇಲಿಬಂದ ಬಿದ್ಲಾನ್ ಮತ್ತು ಭುಗಿಲೆದ್ದ ಬಿಜೆಪಿಯ ಅಸಮಾಧಾನ

– ಪ್ರಶಾಂತ್ ಹುಲ್ಕೋಡು

[ದೆಹಲಿಯಿಂದ.]

ಆಕೆ ನಾಲ್ಕೂವರೆ ಅಡಿ ಎತ್ತರದ, ಮಧ್ಯಮ ವರ್ಗದ ಕುಟುಂಬದಿಂದ ಬಂದ ಸಾಮಾನ್ಯ ಹೆಣ್ಣು ಮಗಳು. ಕೆಂಪು ಬಣ್ಣದ ಲೆಗ್ಗಿಂಗ್ಸ್, ಬಿಳಿ ಹೂಗಳ ಚಿತ್ತಾರ ಇದ್ದ ಹಸಿರು ಬಣ್ಣದ ಟಾಪ್ ಮತ್ತು ಅದರ ಮೇಲೆ ಖಾದಿಯ ಒಂದು ಕೋಟ್. ಇದು ದಿಲ್ಲಿ ಚುನಾವಣೆಯ ಎಪ್ಪತ್ತು ವಿಧಾನಸಭಾ ಕ್ಷೇತ್ರಗಳ Rakhi-Birlaಪೈಕಿ ಆಮ್ ಆದ್ಮಿ ಪಾರ್ಟಿ ಕಡೆಯಿಂದ ಮಂಗೋಲ್‌ಪುರಿಯ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಅಭ್ಯರ್ಥಿ ರಾಖಿ ಬಿದ್ಲಾನ್ ಅವರ ಔಟ್‌ಫಿಟ್. ಆಕೆ ಇನ್ನೂ 25ರ ಆಸುಪಾಸಿನಲ್ಲಿರುವ ಪದವೀಧರೆ. ಅಣ್ಣಾ ಹಜಾರೆ ದಿಲ್ಲಿಯ ಜಂತರ್‌ಮಂತರ್‌ನಲ್ಲಿ ಭ್ರಷ್ಟಾಚಾರದ ವಿರುದ್ಧ ಧರಣಿ ನಡೆಸುತ್ತಿದ್ದ ಸಮಯದಲ್ಲಿ ಈಕೆ ಸ್ಥಳೀಯ ನ್ಯೂಸ್ ಚಾನಲ್‌ನಲ್ಲಿ ವರದಿಗಾರ್ತಿ ಆಗಿದ್ದವರು. ಅದಕ್ಕೂ ಮುನ್ನ ದಿಲ್ಲಿಯ ಶಿವಾಜಿ ಕಾಲೇಜಿನಲ್ಲಿ ಪದವಿ ಮುಗಿಸಿ ಸಿಎನ್‌ಬಿಸಿಯಲ್ಲಿ ಕೆಲಕಾಲ ಇಂಟರ್ನ್ ಆಗಿ ಕೆಲಸ ಮಾಡಿದ್ದ ಅನುಭವ ಇತ್ತು ಅಷ್ಟೆ. ಹಾಗೆ ಒಂದು ದಿನ ಸ್ಥಳೀಯ ಚಾನಲ್‌ನ ಪ್ರತಿನಿಧಿಯಾಗಿ ಜಂತರ್‌ಮಂತರ್‌ಗೆ ಬಂದವರು ಮತ್ತೆ ಕೆಲಸಕ್ಕೆ ಹೋಗಲಿಲ್ಲ. ಮನೆಯಲ್ಲಿ ತಂದೆಯ ಜತೆ ಕೆಲಸ ಬಿಡುವ ಪ್ರಸ್ತಾಪ ಮಾಡಿದರು. ಮಿಲಿಟರಿಯಲ್ಲಿದ್ದ ತಂದೆಯ ಕೆಲವು ಗುಣಗಳನ್ನು ಬಳುವಳಿಯಾಗಿ ಪಡೆದುಕೊಂಡು ಬಂದಿದ್ದ ರಾಖಿ ತಂದೆ, ಮರು ಮಾತಿಲ್ಲದೆ ಓಕೆ ಎಂದರು. ಹಾಗೆ, ನಿನ್ನೆ ರಿಪೋರ್ಟರ್ ಬಿದ್ಲಾನ್ ಮಾರನೆ ದಿನ ಅಣ್ಣಾ ಹಜಾರೆ ನೇತೃತ್ವದ ಚಳುವಳಿಯ ಸಕ್ರಿಯ ಕಾರ್ಯಕರ್ತರಾದರು.

ಮುಂದೆ, ಅಣ್ಣಾ ಹಜಾರೆ ನೇತೃತ್ವದ ಚಳುವಳಿ ರಾಜಕೀಯ ಸ್ವರೂಪ ಪಡೆದುಕೊಂಡಿತು. 2013ರಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಮುಂದಾಳತ್ವದಲ್ಲಿ ಆಪ್ ಹೆಸರಿನಲ್ಲಿ ದಿಲ್ಲಿ ವಿಧಾನಸಭೆಗೆ ಸ್ಪರ್ಧಿಸಿತು. ಆ ಸಮಯದಲ್ಲಿ ಮಂಗೋಲ್‌ಪುರಿಗೆ ಅಭ್ಯರ್ಥಿಯಾದವರು ಇದೇ ರಾಖಿ ಬಿದ್ಲಾನ್. ಇಂಗ್ಲಿಷ್ ಮಾಧ್ಯಮಗಳ ಪಾಲಿಗೆ ಈಕೆ ರಾಖಿ ಬಿರ್ಲಾ. ಮೊಲದ ಬಾರಿಯ ಚುನಾವಣೆ ಗೆದ್ದು ಕೇಜ್ರಿವಾಲ್ ಸಂಪುಟದಲ್ಲಿ ಸಚಿವೆಯೂ ಆದರು. ಇದೀಗ ಮತ್ತದೇ ಕ್ಷೇತ್ರದಿಂದ ಪುನರ್ ಆಯ್ಕೆ ಬಯಸುತ್ತಿದ್ದಾರೆ. ಆಕೆಯ ಪ್ರಬಲ ಎದುರಾಳಿ ಕಾಂಗ್ರೆಸ್‌ನ ರಾಜ್‌ಕುಮಾರ್ ಚೌಹಾನ್. 2013ಕ್ಕೂ ಮುನ್ನ ಸುಮಾರು ಎರಡು ದಶಕಗಳ ಕಾಲ ಮಂಗೋಲ್‌ಪುರಿಯ ಅನಭಿಷಕ್ತ ದೊರೆಯಂತೆ ಇದ್ದವರು. ಮಾಜಿ ಸಚಿವೆಯ ಮನೆ ಇರುವುದು ಇಲ್ಲಿ ಇಕ್ಕಟ್ಟಾದ ಗಲ್ಲಿಯೊಂದರಲ್ಲಿ. ಇರುವ ಒಂದೇ ಕೋಣೆಯಲ್ಲಿ ಡಬಲ್ ಕಾಟ್, rakhi-bidlan-prashanth-nathuಪಕ್ಕದಲ್ಲೇ ಅಡುಗೆಯ ಸಿಲಿಂಡರ್ ಮತ್ತು ಬಂದವರಿಗೆ ಕೂರಲು ಒಂದೇ ಒಂದು ಕುರ್ಚಿ. “ನಾನು ರಾಜಕೀಯಕ್ಕೆ ಬಂದಿದ್ದು ಬದಲಾವಣೆ ಮಾಡಬೇಕು ಅನ್ನೋ ಹಂಬಲದಿಂದ. ಹೀಗಾಗಿ ನಾನು ಅಥವಾ ನನ್ನ ಮನೆ ಬದಲಾಗುವುದು ಮುಖ್ಯ ಅಂತ ಅನ್ನಿಸುವುದಿಲ್ಲ,” ಎಂದರು ರಾಖಿ. “ಹುಟ್ಟಿನಿಂದಲೇ ಹೋರಾಟ ಮಾಡಿಕೊಂಡು ಬಂದಿದ್ದೀನಿ. ಇನ್ನು ಮುಂದೆಯೂ ಹೋರಾಟವನ್ನು ಬಿಡೋಕೆ ಸಾಧ್ಯವಿಲ್ಲ,” ಎನ್ನುವ ಮೂಲಕ ತಮ್ಮ ವಯಸ್ಸಿನ ಸಹಜ ಆಲೋಚನೆಯನ್ನು ಪ್ರತಿನಿಧಿಸಿದರು.

ಚುನಾವಣೆಗಳನ್ನು ಪ್ರಜಾಪ್ರಭುತ್ವದ ಹಬ್ಬಗಳು ಎನ್ನುತ್ತಾರೆ. ಇಂತಹ ಹಬ್ಬಗಳು ರಾಖಿಯಂತಹ ಅಭ್ಯರ್ಥಿಗಳಿಂದಾಗಿ ಇನ್ನಷ್ಟು ಮೆರಗು ಪಡೆದುಕೊಳ್ಳುತ್ತವೆ. ಹೇಗೆ ಕಾಲ ಮತ್ತು ಬದಲಾವಣೆಯ ಅಲೆ ಬೀಸಲಾರಂಭಿಸಿದರೆ ಸಾಮಾನ್ಯರೂ ಕೂಡ ಪ್ರಜಾಪ್ರಭುತ್ವದ ಶಕ್ತಿಕೇಂದ್ರಗಳಿಗೆ ಅನಾಯಾಸವಾಗಿ ನಡೆದುಬರಬಲ್ಲರು ಎಂಬುದಕ್ಕೆ ರಾಖಿ ಸಾಕ್ಷಿ. ಹಾಗಂತ ಇಡೀ ಕ್ಷೇತ್ರದಲ್ಲಿ ಈ ಬಾರಿ ರಾಖಿ ಪರ ಅಲೆ ಇದೆ ಎನ್ನುವಂತಿಲ್ಲ ಮತ್ತು ಗೆಲುವು ಸುಲಭವಿಲ್ಲ. ಇಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತಿರುವುದು ಸುರ್ಜಿತ್ ಕುಮಾರ್ ಎಂಬ ಖಾಸಗಿ ಬ್ಯಾಂಕ್‌ನಲ್ಲಿ ಮ್ಯಾನೇಜರ್ ಆಗಿದ್ದ ಯುವಕ. ಇವರ ತಂದೆ ಗುತ್ತಿಗೆದಾರರು. “ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿವೆ. ನಾವು ಮನೆ ಮನೆ ಪ್ರಚಾರ ನಡೆಸಲು ಇಲ್ಲಿನ ಪೊಲೀಸರು ಅಡ್ಡಿ ಪಡಿಸುತ್ತಿದ್ದಾರೆ. ಏನೇ ಆಗಲಿ, ನನ್ನ ಮಗಳನ್ನು ದೇಶಕ್ಕಾಗಿ ಕೊಟ್ಟಿದ್ದೇನೆ. ಅವಳು ಗೆಲ್ಲಲಿ ಸೋಲಲಿ ನನಗೆ ಮುಖ್ಯವಲ್ಲ,” ಎನ್ನುತ್ತಾರೆ ರಾಖಿಯ ತಂದೆ. ಇವರು ಇಡೀ ದಿನ ಮಂಗೋಲ್ಪುರಿಯಲ್ಲಿ ಮಗಳ ಚುನಾವಣಾ ಪಾಂಪ್ಲೆಟ್ ಹಿಡಿದುಕೊಂಡು ರಸ್ತೆ ಬದಿಯಲ್ಲಿ ನಿಲ್ಲುತ್ತಿದ್ದಾರೆ. ಮಗಳು ಗೆದ್ದು ಮತ್ತೊಮ್ಮೆ ಮಂತ್ರಿಯಾದರೂ ಮನೆ ಬದಲಾಯಿಸುವ ಮನಸ್ಸು ಇದ್ದಂತೆ ಕಂಡು ಬರುವುದಿಲ್ಲ.

ದಿಲ್ಲಿಯ ಚುನಾವಣೆ ವಿಶೇಷವೇ ಇಲ್ಲಿನ ವರ್ಗ ತಾರತಮ್ಯದ ಗಾಢವಾದ ಚಹರೆ. ಒಂದು ಕಡೆ ಅತ್ಯಂತ ಐಶಾರಾಮಿತನ delhi-swacch-bharath-mangolpuriಹೊಸದಿಲ್ಲಿಯಲ್ಲಿ ಕಂಡುಬಂದರೆ, ಅದಕ್ಕೆ ತದ್ವಿರುದ್ಧವಾದ ನೆಲೆಯ ಹಳೆ ದಿಲ್ಲಿಯ ಗಲ್ಲಿಗಳಲ್ಲಿ ಕಾಣಿಸುತ್ತದೆ. ಕಡು ಬಡತನ, ಸ್ವಚ್ಚ ಭಾರತ ಅಭಿಯಾನದ ಹೃದಯ ಭಾಗದಲ್ಲೇ ಗಲೀಜು ರಾಚುತ್ತದೆ. ಕೊಳೆಗೇರಿಗಳಲ್ಲಿ ಸಂಕಷ್ಟದ ಬದುಕು ಸಾಗಿಸುವ ಲಕ್ಷಾಂತರ ಜನ ದೇಶದ ರಾಜಧಾನಿಯ ಬಹುಸಂಖ್ಯಾತರು. ಒಂದು ಕೊಳೆಗೇರಿ ಎತ್ತಂಗಡಿ ಆಗುತ್ತಿದ್ದಂತೆ ಈ ಜನರಲ್ಲಿ ಬಹುತೇಕರು ಮತ್ತೊಂದು ನಗರಕ್ಕೆ ವಲಸೆ ಹೋಗುತ್ತಾರೆ. ಇದೀಗ ಜುಗ್ಗಿ ಜನರಿಗೆ ಮನೆ ಕಟ್ಟಿಸಿಕೊಡುವ ಆಶ್ವಾಸನೆ ಎಲ್ಲಾ ಪಕ್ಷಗಳೂ ನೀಡುತ್ತಿವೆ. “ನಮ್ಮ ಜುಗ್ಗಿಯನ್ನು ಯಾರು ಎತ್ತಂಗಡಿ ಮಾಡುವುದಿಲ್ಲವೋ ಅವರಿಗೆ ನಮ್ಮ ಮತ,” ಎಂದರು ಮೀನಾಕ್ಷಿ ಸಿನ್ಹಾ. ಇವರ ಕೈಲಿ ಆಗಷ್ಟೆ ಬಂದಿದ್ದ ವಿದ್ಯುತ್ನ ಬಿಲ್ ಇತ್ತು ಮತ್ತು ಅದು ಅಚ್ಚರಿ ಎನ್ನಿಸುವಷ್ಟು ದುಬಾರಿಯಾಗಿತ್ತು. ಕೆಲವೇ ಅಂಗುಲದ ಅವರ ಮನೆಯ ವಿದ್ಯುತ್ ಬಳಕೆ ಹಾಗೂ 1841 ರೂಪಾಯಿಗಳ ಅವರ ಬಿಲ್ಗೂ ಸಂಬಂಧ ಇರುವುದು ಹೇಗೆ ಸಾಧ್ಯ ಎಂಬ ಪ್ರಶ್ನೆ ಮೂಡಿಸುತ್ತಿತ್ತು. ಈ ಬಾರಿಯ ಚುನಾವಣೆಯಲ್ಲಿ ವಿದ್ಯುತ್ ಸಮಸ್ಯೆ ಮೂರನೇ ಪ್ರಮುಖ ವಿಚಾರವಾಗಿದೆ. ಈಗಾಗಲೇ ಬಿಜೆಪಿಯ ದಿಲ್ಲಿ ರಾಜ್ಯಾಧ್ಯಕ್ಷ ಸತೀಶ್ ಉಪಾಧ್ಯಾಯ ವಿದ್ಯುತ್ ಮೀಟರ್ ತಯಾರಿಸುವ ಕಂಪನಿ ಜತೆ ವ್ಯವಹಾರಿಕಾ ಸಂಬಂಧ ಹೊಂದಿದ್ದಾರೆ ಎಂಬುದನ್ನು ಆಪ್ ಬಹಿರಂಗಪಡಿಸಿದೆ. ಹೀಗಾಗಿ, ಕೆಳವರ್ಗದ ಜನರಲ್ಲಿ ಬಿಜೆಪಿಗೆ ಇದು ಸಮಸ್ಯೆಯಾಗುವಂತೆ ಕಾಣಿಸುತ್ತಿದೆ.

ರಾಖಿಯಂತಹ ಸಾಮಾನ್ಯ ಕುಟುಂಬಗಳಿಂದ ಬಂದ ಅಭ್ಯರ್ಥಿಗಳನ್ನು ಮುಂದಿಟ್ಟುಕೊಂಡು ಕಾದಾಡುತ್ತಿರುವ ಆಪ್ ಕುರಿತು bjp-aap-minor-clash-at-rajiv-chowk-feb0115ಬಿಜೆಪಿ ಪಾಳೆಯದಲ್ಲಿ ಅಸಮಾಧಾನ ಬುಗಿಲೆದ್ದಂತೆ ಕಾಣಿಸುತ್ತಿದೆ. ಒಂದು ಕಡೆ ಮೋದಿಯಂತಹ ನಾಯಕರು ತಮ್ಮ ಭಾಷಣದಲ್ಲಿ ಆಪ್ ಕುರಿತು ಟೀಕೆಗಳ ಮಳೆಗರೆಯುತ್ತಿದ್ದಾರೆ. ಕೇಜ್ರಿವಾಲ್‌ರನ್ನು ವೈಯಕ್ತಿಕ ನಿಂದನೆಗೆ ಗುರಿಪಡಿಸುವಂತಹ ಜಾಹಿರಾತುಗಳನ್ನು ನೀಡುತ್ತಿದ್ದಾರೆ. ತಳಮಟ್ಟದಲ್ಲಿ ಆಪ್‌ನ ಬಹಿರಂಗ ಪ್ರಚಾರಗಳನ್ನು ತಡೆಯುವ ಪ್ರಯತ್ನಗಳನ್ನು ಬಿಜೆಪಿ ಕಾರ್ಯಕರ್ತರು ಮಾಡುತ್ತಿದ್ದಾರೆ. ಭಾನುವಾರ ಸಂಜೆ ಇಲ್ಲಿನ ಖನ್ನೋಟ್ ಪ್ಲೇಸ್ ಎಂಬ ಶಾಪಿಂಗ್ ಏರಿಯಾದಲ್ಲಿ ಆಪ್ ಹಮ್ಮಿಕೊಂಡಿದ್ದ ಬೀದಿ ನಾಟಕವನ್ನು, ಬಿಜೆಪಿಯ ಕೆಲವು ಯುವ ಕಾರ್ಯಕರ್ತರು ತಡೆಯುವ ವ್ಯರ್ಥ ಪ್ರಯತ್ನ ಮಾಡಿದರು. ದಿಲ್ಲಿಯ ವರ್ಗ ಸಂಘರ್ಷಗಳಂತೆ ಇಲ್ಲಿನ ಚುನಾವಣೆ ಕೂಡ ಎರಡು ಅಂಚಿನ ಕತ್ತಿನ ನಡೆಯ ಹಾದಿಯಲ್ಲಿದೆ. ಒಂದು ಕಡೆ ಗೆಲ್ಲುವ ಉತ್ಸಾಹ, ಮತ್ತೊಂದೆಡೆ ಬುಗಿಲೆದ್ದ ಅಸಮಾಧಾನಗಳ ನಡುವೆಯೇ ಕೌಂಟ್‌ಡೌನ್ ಹತ್ತಿರಾಗುತ್ತಿದೆ.