Monthly Archives: March 2015

ಡಿ.ಕೆ.ರವಿ ಪ್ರಕರಣ : ಪ್ಲಾಂಟೆಡ್ ಮತ್ತು ಎಕ್ಸ್‌ಕ್ಲೂಸಿವ್ ಗಳ ಭರಾಟೆಯಲ್ಲಿ ಸತ್ಯ ಎಲ್ಲಿ?

– ಶರ್ಮಿಷ್ಠ

ಬಹು ಸಂಖ್ಯೆಯಲ್ಲಿರುವ ಮಾಧ್ಯಮಗಳು ಸತ್ಯವನ್ನೇನು ಅರುಹದೆ, ತಮ್ಮ ‘ಟಿಆರ್‌ಪಿ’ ಗಾಗಿ, ತಮ್ಮ ಬೇಳೆ ಕಾಳು ಬೇಯಿಸಿಕೊಳ್ಳಲು, ತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ತಪ್ಪು ತಪ್ಪಾಗಿ ಜನಾಭಿಪ್ರಾಯವನ್ನು ರೂಪಿಸುವುದು ಡಿ.ಕೆ. ರವಿ ವಿಷಯದಲ್ಲೇನು ಹೊರತಲ್ಲ. ಈ ಹಿಂದೆ ಪದ್ಮಪ್ರಿಯ ಪ್ರಕರಣದಲ್ಲೂ ಮಾಧ್ಯಮಗಳು ಹೀಗೆ ಮಾಡಿದ್ದವು. ಆದರೆ ದೊಡ್ಡ ದುರಂತವಿರುವುದು ಇವು ಮುಚ್ಚಿ ಹಾಕುವ ಸತ್ಯಾಂಶದಲ್ಲಿ. tv-mediaಇವುಗಳ ಬುದ್ಧಿ ಗೊತ್ತಿರೋ ಆಡಳಿತ ವರ್ಗ ಸತ್ಯವನ್ನು ಮುಚ್ಚಿ ಹಾಕಲು ‘ಎಕ್ಸ್‌ಕ್ಲೂಸಿವ್’ ಅನ್ನೋ ಸುಳ್ಳುಗಳ ಕಂತೆಯಿಂದ ಮೂಳೆ ತುಂಡನ್ನು ಎಸಿತಾ ಇರುತ್ತವೆ, ಮಾಧ್ಯಮದ ಮಂದಿ ಇಡೀ ದಿನ ಅದನ್ನು ಅಗಿಯುತ್ತಾ ಕೂತಿರುತ್ತಾರೆ. ಅದರಲ್ಲಿ ಕೆಲವು ಸತ್ಯದ ’ಎಕ್ಸ್‌ಕ್ಲೂಸಿವ್‌’ಗಳಿರಬಹುದು, ಆದರೆ ಸುದ್ದಿಗಳ ಅಬ್ಬರದಲ್ಲಿ ಸತ್ಯ ಮೂಲೆಗುಂಪಾಗಿರುತ್ತದೆ.

ಇಂತಹ ಸಂದರ್ಭದಲ್ಲಿ ಕೆಲವು ವೃತ್ತಿ ನಿಷ್ಠರಿಗೆ ಕೆಲವು ಸಮಸ್ಯೆಗಳು ಎದುರಾಗುತ್ತವೆ. ಅವು
೧. ಬಹುಶ: ಇದು ಸತ್ಯ ಎಂದು ವರದಿ ಮಾಡಿದರೆ, ಸ್ಟೋರಿ ‘ಪ್ಲಾಂಟ್’ ಮಾಡಿದ್ದೀರಿ ಎನ್ನೋ ಆರೋಪ
೨. ಪ್ಲಾಂಟ್ ಇರಬಹುದು ಎಂದು ಬಿಟ್ಟರೆ ನಾಳೆ ಬೇರೆ ಪತ್ರಿಕೆಯಲ್ಲಿ ಬಂದಾಗ ‘ನಮ್ಮಲ್ಲಿ ಮಿಸ್’ ಅಂಥ ಬೈಗುಳ

ನನಗೆ ಗೊತ್ತಿದ್ದ ಹಾಗೆ ಡಿಕೆ ರವಿ ವಿಷಯಕ್ಕೆ ಸಂಬಂಧಿಸಿದಂತೆ ಇಂಗ್ಲಿಷ್ ಪತ್ರಿಕೆಯೊಂದು ಮಹಿಳಾ ಐಎಎಸ್ ಅಧಿಕಾರಿಯೊಬ್ಬಳು ರವಿ ಬಗ್ಗೆ ಚೀಫ್ ಸೆಕ್ರೆಟರಿಯೊಬ್ಬರಿಗೆ ಕೊಟ್ಟ ದೂರಿನ ಬಗ್ಗೆ ಬರೆಯಿತು. ಅದು ಪ್ಲಾಂಟ್ ಎಂದು ಸಾಕಷ್ಟು ಚರ್ಚೆಗಳಾದಾಗ, ಬೇಕಾದವರು ತಮಗೆ ಬೇಕಾದ ರೀತಿಯಲ್ಲಿ ಅದನ್ನು ಅರ್ಥೈಸಿದಾಗ ಆ ಪತ್ರಿಕೆಯ ಸಂಪಾದಕರು ‘ನಮ್ಮ ವರದಿಗಾರರು ಸತ್ಯವನ್ನು ಬರಿಯಲು ನಿಯೋಜಿಸಲ್ಪಟ್ಟವರು , ಅವರು ಸತ್ಯದ ನಾನಾ ಮುಖಗಳನ್ನು ಹೊರ ತೆಗೆಯಲು ಪ್ರಯತ್ನಿಸುತ್ತಿದ್ದಾರೆ ಹೊರತು ಯಾರನ್ನೂ ಸಮರ್ಥಿಸುತ್ತಿಲ್ಲ’ ಎಂದು ಮುಖಪುಟದಲ್ಲಿ ಸಂಪಾದಕೀಯ ಬರೆಯಿತು. ಇದು ಪತ್ರಿಕೋದ್ಯಮದ ಪ್ರಕಾರ ಸತ್ಯವೂ ಹೌದು. ಆದರೆ ಒವರ್‌ಆಲ್ ಆ ಸುದ್ದಿ ಸುಳ್ಳು ಎಂದೇ ಬಿಂಬಿಸಲ್ಪಟ್ಟಿತು.

ನನಗೆ ಗೊತ್ತಿರೋ ಪ್ರತಕರ್ತರೊಬ್ಬರು ಅದೇ ಸುದ್ದಿ ತಮಗೆ ಗೊತ್ತಿದ್ದರೂ ಸುಮ್ಮನಾದರು. ಅದನ್ನು ಬರೆಯುವುದು DKRavi_Kolar_PGಪತ್ರಿಕೋದ್ಯಮದ ಪ್ರಕಾರ ಸರಿ ಇದ್ದರೂ ತನಗಿರುವ ಸಾಮಾಜಿಕ ಜವಾಬ್ದಾರಿಯಿಂದ ಸುಮ್ಮನಾದರು. ವೈಯಕ್ತಿಕ ವಿಷಯವನ್ನು ಇಟ್ಟುಕೊಂಡು ಐಎಎಸ್ ಅಧಿಕಾರಿಯೊಬ್ಬರ ಮಾನಹಾನಿ ಮಾಡುವುದು ಸರಿ ಅಲ್ಲ ಎಂದು ಸುಮ್ಮನಾದರು. ಇದೆರಡರಲ್ಲಿ ಯಾವುದು ಸರಿ ನನಗಿನ್ನೂ ಅರ್ಥವಾಗಿಲ್ಲ. ಪತ್ರಕರ್ತರಾಗಿ ಅವರು ಸತ್ಯದ ಮಜಲನ್ನು ನೋಡಬೇಕಿತ್ತೇ ಅಥವಾ ಸಾಮಾಜಿಕ ಹೊಣೆ ಮುಖ್ಯವೇ?

ಆದರೆ ನನ್ನ ಕಾಮನ್ ಸೆನ್ಸ್ ಪ್ರಕಾರ ಕಷ್ಟಪಟ್ಟು ಓದಿ ಮೇಲೆ ಬಂದ ಬಡ ಅಧಿಕಾರಿ ಒಬ್ಬ ಅದೂ ಪ್ರಾಮಾಣಿಕ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ದುರ್ಬಲ ಮನಸ್ಸಿನವನಾಗಿರುವುದಿಲ್ಲ. ಆದರೆ ಒಂದೊಂದು ಪತ್ರಿಕೆಗಳು ಒಂದೊಂದನ್ನು ಬರೆಯುತ್ತವೆ. ಅವರ ವರದಿಗಾರರಿಗೆ ಸಿಕ್ಕ ಸುದ್ದಿಯೇ ಸಾಮಾನ್ಯ ಓದುಗನಿಗೆ ಅಂತಿಮ ಸತ್ಯ. ಅದು ವರದಿಗಾರ ಅಥವಾ ಅವನ ಸಂಪಾದಕ ಸೃಷ್ಟಿಸಿದ ಸುದ್ದಿಯೂ ಆಗಿರಬಹುದು. ಕೊನೆಗೂ ಸಾಮಾನ್ಯ ಓದುಗನಿಗೆ ಸತ್ಯ ಸಿಗುವುದೇ ಇಲ್ಲ. ಅಥವಾ ಅದು ಅವನಿಂದ ಮರೆಮಾಚಲ್ಪಡುತ್ತದೆ. ಓದುಗನ ಗ್ರಹಿಕೆಗೆ ಸಿಕ್ಕಿದ್ದು ಮಾತ್ರ ಸತ್ಯ.

ಕೇಜ್ರಿ ಕ್ರಾಂತಿ 2.0 : ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಆಹ್ವಾನ

ಆತ್ಮೀಯರೇ,

ಯುವ ಪತ್ರಕರ್ತ ಪ್ರಶಾಂತ್ ಹುಲ್ಕೋಡುprashant-hulkodu ನಮ್ಮ ವರ್ತಮಾನ.ಕಾಮ್ ಓದುಗರಿಗೆ ಪರಿಚಿತರು. ಈ ವರ್ಷದ ಅರಂಭದಲ್ಲಿ ನಡೆದ ದೆಹಲಿ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ದೆಹಲಿಯಲ್ಲಿ ಸುಮಾರು ಎರಡು ವಾರ ಇದ್ದ ಅವರು ನಿಯಮಿತವಾಗಿ ಆಗ ವರ್ತಮಾನ.ಕಾಮ್‌ಗೆ ಬರೆದರು. ಆ ಚುನಾವಣೆಯ ಬಗ್ಗೆ ನಮ್ಮ ಕನ್ನಡದ ಯಾವ ಮಾಧ್ಯಮಗಳಲ್ಲೂ ಪ್ರಕಟವಾಗದೇ ಇದ್ದ ಮಾಹಿತಿಗಳನ್ನು ಆ ಲೇಖನಗಳು ನಮ್ಮ ಓದುಗರಿಗೆ ಒದಗಿಸಿದವು. ಬಹಳ ಮೆಚ್ಚುಗೆ ಪಡೆದ ಲೇಖನಗಳವು.

ದೆಹಲಿಯಿಂದ ಬೆಂಗಳೂರಿಗೆ ವಾಪಸಾದ ನಂತರ ಈ ಯುವ ಪತ್ರಕರ್ತ ಮಿತ್ರ “ಕೇಜ್ರಿ ಕ್ರಾಂತಿ 2.0” ಎಂಬ ಸಾಕಷ್ಟು ದೀರ್ಘವಾದ ಪುಸ್ತಕವನ್ನೇ ಬರೆದಿದ್ದಾರೆ. ಅಣ್ಣಾ ಹಜಾರೆ ಹೋರಾಟದಿಂದ ಆರಂಭವಾಗಿ, ಆಮ್ ಆದ್ಮಿ ಪಕ್ಷದ ಉದಯ, ಅದು ಎದುರಿಸಿದ ಮೂರು ಚುನಾವಣೆಗಳು, ಆಂತರಿಕ ಮತ್ತು ಬಾಹ್ಯ ಸವಾಲುಗಳು, ಇತ್ಯಾದಿಗಳನ್ನು ಇಟ್ಟುಕೊಂಡು ಇಲ್ಲಿಯವರೆಗೆ ಹೊರಗೆ ಎಲ್ಲೂ ದಾಖಲಾಗದ ಪಕ್ಷದ ಮತ್ತು ಅದರ ಮುಖಂಡರ ಅನೇಕ ಆಂತರಿಕ kejri-kranti-2.0-invitationವಿಚಾರಗಳು ಮತ್ತು ವಿವರಗಳನ್ನು ಈ ಪುಸ್ತಕದಲ್ಲಿ ಪ್ರಶಾಂತ್ ದಾಖಲಿಸಿದ್ದಾರೆ. ನಮ್ಮ “ಮೌಲ್ಯಾಗ್ರಹ ಪ್ರಕಾಶನ”ದಿಂದ ಇದು ಪ್ರಕವಾಗುತ್ತಿದೆ. ಕನ್ನಡಕ್ಕೆ ಬಹಳ ಅಪರೂಪದ ಪುಸ್ತಕ ಇದು ಎನ್ನುವ ಹೆಮ್ಮೆಯ ಭಾವನೆ ನನ್ನದು.

ಈ ಪುಸ್ತಕ ಅಧಿಕೃತವಾಗಿ ನಾಡಿದ್ದು ಶುಕ್ರವಾರ ಸಂಜೆ 5:30 ಕ್ಕೆ ಫ್ರೀಡಂ ಪಾರ್ಕಿನಲ್ಲಿರುವ ಓವಲ್ ಸಭಾಂಗಣದಲ್ಲಿ ಬಿಡುಗಡೆಯಾಗಲಿದೆ. ಈ ಕಾರ್ಯಕ್ರಮಕ್ಕೆ ನಮ್ಮೆಲ್ಲಾ ವರ್ತಮಾನ ಬಳಗದ ಪರವಾಗಿ ನಿಮ್ಮನ್ನು ಆಹ್ವಾನಿಸುತ್ತಿದ್ದೇನೆ. ದಯವಿಟ್ಟು ಬಿಡುವು ಮಾಡಿಕೊಂಡು ಬನ್ನಿ. ಕಾರ್ಯಕ್ರಮದ ವಿವರಗಳು ಇಲ್ಲಿ ಲಗತ್ತಿಸಿರುವ ಆಹ್ವಾನ ಪತ್ರಿಕೆಯಲ್ಲಿದೆ.

ನಿಮ್ಮ ಬರುವಿನ ನಿರೀಕ್ಷೆಯಲ್ಲಿ,
ರವಿ


kejri-kranti-2.0-coverpage

ಹುತಾತ್ಮ ಭಗತ್‌ಸಿಂಗ್‌ನ ಆದರ್ಶಗಳು

– ಎಚ್.ಆರ್.ನವೀನ್‌ಕುಮಾರ್

1919 ಏಪ್ರಿಲ್ 13 ರಂದು ಪಂಜಾಬಿನ ಅಮೃತಸರದಲ್ಲಿ ಸುಗ್ಗಿ ಹಬ್ಬ ಬೈಶಾಕಿ, “ಆಳುವವರು ಯಾರನ್ನು ಬೇಕಾದರೂ ವಿಚಾರಣೆಯಿಲ್ಲದೆ ಬಂಧಿಸಿಡುವ ಅಧಿಕಾರ”ವನ್ನು ನೀಡುವ ರೌಲಟ್ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟಿಸಲು ಅಂದು ಪಂಜಾಬಿನ ಅಮೃತ್‌ಸರದ ಉಧ್ಯಾನವನದಲ್ಲಿ ಸುಮಾರು 20 ಸಾವಿರ ಮಂದಿ ಜಮಾಯಿಸಿದ್ದರು. ಬ್ರಿಟೀಷ್ ಸಾಮ್ರಾಜ್ಯಶಾಹಿಗಳ ಕರಾಳತೆಯನ್ನು ಸಾಬೀತುಪಿಡಿಸುವಂತೆ ಬ್ರಿಗೇಡಿಯರ್ ಜನರಲ್ ರೇಜಿನಾಲ್ಡ್ ಡಯರ್ ತನ್ನ ಸೈನ್ಯದೊಂದಿಗೆ ಶಸ್ತ್ರ ಸಜ್ಜಿತನಾಗಿ ಉಧ್ಯಾನವನವನ್ನು ಸುತ್ತುವರೆದು ಯಾವುದೇ ಸೂಚನೆ ನೀಡದೆ ಗುಂಡಿನ ಮಳೆಗರೆದ. Bhagat-Singhಸುಮಾರು 1950 ಬಾರಿ ಗುಂಡು ಹಾರಿಸಿ ಅಲ್ಲಿ ನೆರದಿದ್ದವರ ಮಾರಣ ಹೋಮಮಾಡಿ ರಕ್ತದ ಹೊಳೆಯನ್ನೇ ಹರಿಸಿದ್ದ. ಈ ಸುದ್ದಿ ದೇಶದೆಲ್ಲೆಡೆ ಕಾಡ್ಗಿಚ್ಚಿನಂತೆ ಹಬ್ಬಿತು.

ಈ ಘಟನೆಯಿಂದ ಮನಸ್ಸು ತುಂಬ ಶೋಭೆಗೊಂಡಿದ್ದ ಹನ್ನೆರಡು ವರ್ಷದ ಬಾಲಕನೊಬ್ಬ ಹತ್ಯಾಕಾಂಡ ನಡೆದ ಮಾರನೇ ದಿನ ಅವನು ಶಾಲೆಮುಗಿದ ಮೇಲೆ ಮನೆಗೆ ಹೋಗಲಿಲ್ಲ. ಮನೆಯವರು ಅವನಿಗಾಗಿ ಕಾದರು, ಆತಂಕಗೊಂಡರು. ಅವತ್ತು ಶಾಲೆಗೆ ಹೋಗುವುದಕ್ಕೆ ಬದಲಾಗಿ ಅವನು ನೇರವಾಗಿ ಹೋದದ್ದು ಜಲಿಯನ್‌ವಾಲಾಭಾಗ್‌ಗೆ. ಅದು ಹೇಗೋ ಅವನು ಅಲ್ಲಿ ಕಾವಲಿದ್ದ ಸೆಂಟ್ರಿಗಳ ಕಣ್ಣು ತಪ್ಪಿಸಿ ಉಧ್ಯಾನದೊಳಕ್ಕೆ ನುಗ್ಗಿ ಒಂದು ಸಣ್ಣ ಪಾತ್ರೆಯ ತುಂಬ ಭಾರತೀಯರ ರಕ್ತದಿಂದ ಇನ್ನೂ ಒದ್ದೆ ಒದ್ದೆಯಾಗಿದ್ದ ಒಂದಿಷ್ಟು ಮಣ್ಣನ್ನು ತುಂಬಿಕೊಂಡ. ಕಡೆಗೆ ಮನೆಗೆ ಹೋದಾಗ ಅವನ ತಂಗಿ ಇದುವರೆಗು ಎಲ್ಲಿದ್ದೆ? ಅಮ್ಮ ನಿಂಗೆ ತಿಂಡಿ ಕೊಡಬೇಕೆಂದು ಕಾದಿದ್ದಾಳೆ ಎಂದಳು. ಆದರೆ ಆ ಭಾಲಕ ತಿಂಡಿ ತಿನ್ನುವುದರ ಬಗ್ಗೆ ಯೋಚಿಸುತ್ತಿರಲಿಲ್ಲ. ರಕ್ತಸಿಕ್ತವಾದ ಮಣ್ಣನ್ನು ತುಂಬಿದ್ದ ಆ ಪಾತ್ರೆಯನ್ನು ತೋರಿಸುತ್ತಾ, ‘ನೋಡಿಲ್ಲಿ, ಇದು ಬ್ರಿಟೀಷರು ಕೊಂದುಹಾಕಿದ ನಮ್ಮ ಜನರ ರಕ್ತ. ಇದಕ್ಕೆ ನಮಸ್ಕಾರ ಮಾಡು’ ಎಂದ. ಆಮೇಲೆ ಆ ಪಾತ್ರೆಯನ್ನು ಒಂದು ಗೂಡಿನೊಳಗಿಟ್ಟು ಹೂವುಗಳಿಂದ ಪೂಜಿಸಿದ.

ಇಂತಹ ಅಪ್ರತಿಮ ದೇಶಪೇಮವನ್ನು ಮೆರೆದ ಆ ಬಾಲಕ ಮತ್ತಾರು ಅಲ್ಲ, ಬ್ರಿಟೀಷ್ ಸಾಮ್ರಾಜ್ಯಶಾಹಿಗಳಿಗೆ ಸಿಂಹ ಸ್ವಪ್ನವಾಗಿ, ದೇಶದ ಸ್ವಾಸಂತ್ರಕ್ಕಾಗಿ ತನ್ನ 23 ನೇ ವಯಸ್ಸಿನಲ್ಲೇ ನಗುನಗುತ್ತ ನೇಳುಗಂಬವನ್ನೇರಿದ ಭಗತ್‌ಸಿಂಗ್. ಹೌದು ಈ ಹೆಸರನ್ನು ಕೇಳಿದಾಕ್ಷಣ ಯುವಜನರಲ್ಲಿ ಏನೋ ಒಂದು ರೀತಿಯ ಮಿಂಚಿನ ಸಂಚಲನವಾಗುತ್ತದೆ.
23 ಮಾರ್ಚ್ 1931 ಅಂದರೆ ಇಲ್ಲಿಗೆ ಸರಿಯಾಗಿ 84 ವರ್ಷಗಳ ಹಿಂದೆ ಲಾಹೋರ್‌ನ ಜೈಲಿನೊಳಗೆ ನೀರವ ಮೌನ ಆವರಿಸಿದ್ದರೆ, ಜೈಲಿನ ಹೊರಗೆ ಮತ್ತು ದೇಶದ ತುಂಬೆಲ್ಲ ಆತಂಕ ಮತ್ತು ಆಕ್ರೋಶ ಮಡುಗಟ್ಟಿತ್ತು. ಅಂದು ಕ್ರಾಂತಿಕಾರಿ ಭಗತ್‌ಸಿಂಗ್ ಮತ್ತು ಅವನ ಸಂಗಾತಿಗಳಾಗಿದ್ದ ಸುಖದೇವ್ ಮತ್ತು ರಾಜ್‌ಗುರುರವರನ್ನು ಬ್ರಟೀಷರು ನೇಣಿಕೇರಿಸಿದ ದಿನ.

ದೇಶದ ಸ್ವಾತಂತ್ರಕ್ಕಾಗಿ ಹುತಾತ್ಮನಾದಾಗ ಭಗತ್‌ಸಿಂಗ್‌ಗೆ ಕೇವಲ 23 ವರ್ಷ, ಇವತ್ತಿನ ಕಾಲಘಟ್ಟದಲ್ಲಿ ಈ ವಯಸ್ಸಿನಲ್ಲಿ ಜೀವನದ ಯಾವುದೇ ಜವಾಬ್ದಾರಿಗಳಿಲ್ಲದೆ, ಸಮಾಜದ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲದೆ, ತಾವು ಮತ್ತು ತಮ್ಮ ಬದುಕು ಎಂದು ಯೋಜಿಸಿವ ಯುವಜನರು ಹೆಚ್ಚಾಗುತ್ತಿರುವ ಇಂದಿನ ಫ್ಯಾಷನ್ ಯುಗದ ಸಂದರ್ಭದಲ್ಲಿ, ಇಷ್ಟು ಚಿಕ್ಕ ವಯಸ್ಸಿನಲ್ಲಿ ದೇಶ ಕಂಡ ಅಪ್ರತಿಮ ಕ್ರಾಂತಿಕಾರಿ ಹೋರಾಟಗಾರನಾಗಿ, ಸ್ಪಷ್ಟ ರಾಜಕೀಯ ಕಣ್ಣೋಟವನ್ನು ಬೆಳೆಸಿಕೊಂಡಿದ್ದ ಭಗತ್‌ಸಿಂಗ್ ನಿಜವಾದ ಅರ್ಥದಲ್ಲಿ ಯುವಕರಿಗೆ ಆದರ್ಶವಾಗಲೇಬೇಕಾಗಿದೆ.

ಭಗತ್‌ಸಿಂಗ್ ಇಷ್ಟು ದೃಡವಾಗಿ ಬೆಳೆಯಲು ಮುಖ್ಯವಾಗಿ ಎರಡು ಕಾರಣಗಳಿವೆ ಒಂದನೆಯದು ಅವನ ಕುಟುಂಬ ಮೂಲತಹ ಸ್ವತಂತ್ರ ಹೋರಾಟಗಾರರ ಕುಟುಂಬವಾಗಿದ್ದದ್ದು, ತಂದೆ ಕಿಷನ್‌ಸಿಂಗ್ ಮತ್ತು ತಾಯಿ ವಿದ್ಯಾವತಿ ಕೌರ್ ರವರಿಗೆ 1907 ಸೆಪ್ಟೆಂಬರ್ 28 ರಂದು ಜನಿಸಿದ. Rajguru with Bhagat Singh and Sukhdevಸಕ್ರೀಯ ಹೋರಾಟಗಾರರಾಗಿದ್ದ ಅವರ ಚಿಕ್ಕಪ್ಪನ ಮಾತುಗಳು ಮತ್ತು ಹೋರಾಟಗಳೇ ಭಗತ್‌ಗೆ ಸ್ಪೂರ್ತಿಯಾಗಿದ್ದವು. ಹಾಗಾಗಿಯೇ ಭಗತ್ ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಗಾಂಧಿಯ ಅಸಹಕಾರ ಚಳುವಳಿಯಲ್ಲಿ ಸಕ್ರೀಯವಾಗಿ ಭಾಗವಹಿಸಿ, ನಂತರ ಗಾಂಧಿ ಈ ಹೋರಾಟವನ್ನು ಹಿಂಪಡೆದಾಗ ಅತ್ಯಂತ ಅಸಮಧಾನಗೊಂಡಿದ್ದ. ಭಗತ್ ಒಂದು ಸ್ಪಷ್ಟ ರಾಜಕೀಯ ಕಣ್ಣೋಟವನ್ನು ಬೆಳಸಿಕೊಳ್ಳಲು ಕಾರಣವಾಗಿದ್ದು ಅವನ ಓದು. ಈತ ಜಗತ್ತಿನಲ್ಲಿ ನಡೆದ, ನಡೆಯುತ್ತಿದ್ದ ಎಲ್ಲ ಕ್ರಾಂತಿಗಳ ಬಗ್ಗೆ ಹೋದಲು ಪ್ರಾರಂಬಿಸಿದ ಇದರಲ್ಲಿ ಅವನಿಗೆ ಮಾರ್ಕ್ಸ್‌ವಾದ ಮತ್ತು ಲೆನಿನ್‌ರವರ ಸಾಹಿತ್ಯ, ಕಮ್ಯೂನಿಸಂ ಮತ್ತು ಕ್ರಾಂತಿಕಾರಿ ದರ್ಶನಗಳು ಅತ್ಯಂತ ಘಾಡವಾದ ಪ್ರಭಾವವನ್ನು ಬೀರಿದ್ದವು ಎಂಬುದಕ್ಕೆ ಅವನ ಮಾತುಗಳೇ ಪುಷ್ಟಿಕೊಡುತ್ತವೆ. ಇದೇ ಅವನಿಗೆ ಶಕ್ತಿಯನ್ನು, ನಂಬಿಕೆಯ ಸ್ತೈರ್ಯವನ್ನು ನೀಡಿತು.

ಭಗತ್‌ಸಿಂಗ್ ದೃಷ್ಟಿಯಲ್ಲಿ ‘ಬಡತನವನ್ನು ನಿರ್ಮೂಲನೆಗೊಳಿಸದ ಸ್ವತಂತ್ರ ಭಾರತ ಕೇವಲ ಹೆಸರಿಗಷ್ಟೇ ಸ್ವತಂತ್ರ. ಒಂದು ಯಥಾಸ್ಥಿತಿ ಇನ್ನೊಂದು ಯಥಾಸ್ಥಿತಿಗೆ ಪರ್ಯಾಯವಲ್ಲ. ಆರ್ಥಿಕ ಸ್ವಾತಂತ್ರ್ಯವಿಲ್ಲದ ರಾಜಕೀಯ ಸ್ವಾತಂತ್ರಕ್ಕೆ ಏನು ಅರ್ಥ? ಬಡವರು ಬಡವರಾಗಿಯೇ ಉಳಿಯುವಂತಾದರೆ ಅಂಥ ಸ್ವಾತಂತ್ರದಿಂದ ಏನು ಪ್ರಯೋಜನ?’. ಆತ ಜೈಲಿನಿಂದ ತನ್ನ ತಾಯಿಗೆ ಬರೆದ ಪತ್ರದಲ್ಲಿ ಹೀಗೆ ಹೇಳುತ್ತಾನೆ. ‘ಅಮ್ಮಾ, ನನ್ನ ದೇಶ ಒಂದಲ್ಲಾ ಒಂದು ದಿನ ಸ್ರತಂತ್ರವಾಗುವುದೆಂಬ ಬಗ್ಗೆ ನನಗೆ ಸಂಶಯವಿಲ್ಲ. ಆದರೆ ಬಿಳಿಯ ಸಾಹೇಬರು ಖಾಲಿ ಮಾಡಿದ ಕುರ್ಚಿಗಳಲ್ಲಿ ಕರಿಯ ಸಾಹೇಬರು ಕುಳಿತುಕೊಳ್ಳುತ್ತಾರೆಂಬ ಭಯ ನನಗೆ.’ ಹೌದು ಸುಮಾರು 80 ವರ್ಷಗಳ ಹಿಂದೆ ಭಗತ್ ಸಿಂಗ್ ತನ್ನ ತಾಯಿಗೆ ಹೇಳಿದ ಮಾತುಗಳು ಇಂದು ಅಕ್ಷರಶ: ಸತ್ಯವಾಗಿದೆ. ಅಂದು ಭಗತ್‌ನ ಆತಂಕ ಇಂದು ದೇಶದ ಎಲ್ಲ ಬಡವರ ಆತಂಕವಾಗಿ ಮಾರ್ಪಾಟಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 68 ವರ್ಷಗಳು ಕಳೆಯುತ್ತಿದ್ದರೂ ಸ್ವತಂತ್ರ ಹೋರಾಟಗಾರರ ಕನಸಾಗಿದ್ದ ಬಡತನ ನಿರ್ಮೂಲನೆ, ಸಾಕ್ಷರತೆ, ಆರ್ಥಿಕ ಮತ್ತು ಸಾಮಾಜಿಕ ಸಮಾನತೆಯನ್ನು ಸಾಧಿಸಲು ಇಂದಿಗೂ ಸಾಧ್ಯವಾಗಿಲ್ಲ. ಬದಲಾಗಿ ಬಡವ ಮತ್ತು ಸಿರಿವಂತರ ನಡುವಿನ ಅಂತರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.

ಭಗತ್‌ಸಿಂಗ್‌ಗೆ ದೇಶವನ್ನು ಧರ್ಮದ ಆಧಾರದ ಮೇಲೆ ವಿಭಾಗಿಸಬೇಕೆಂಬ ಲಜಪತ್‌ರಾಯ್ ಅವರ ವಿಚಾರವೇನಾದರು ಕಾರ್ಯಗತವಾದರೆ ಅದು ವಿನಾಶಕಾರಿಯಾಗುವುದೆಂಬ ಭಯ. ಅದರಿಂದ ರಕ್ತಪಾತವಾಗಬಹುದು. ಹಿಂದೂ ಮತ್ತು ಮುಸ್ಲಿಂ ದೇಶಗಳು ಸದಾ ಯುದ್ಧದಲ್ಲಿ ತೊಡಗುವಂತಾಗಬಹುದು. ಹಾಗಾದಲ್ಲಿ ಅವರ ಗಮನ ಹಾಗೂ ಸಂಪನ್ಮೂಲ ಪರಸ್ಪರ ಹೊಡೆದಾಡಲು ಆಯುಧಗಳನ್ನು ಕೊಳ್ಳುವುದಕ್ಕೇ ಮೀಸಲಾಗಬಹುದು Statues_of_Bhagat_Singh,_Rajguru_and_Sukhdevಎನ್ನುವ ಭಯ ಭಗತ್‌ನನ್ನು ಯಾವಾಗಲೂ ಕಾಡುತ್ತಿತ್ತು. ಅವರ ಅನುಮಾನಗಳಿಗೆ ನಾವುಗಳೇ ಇಂದು ಸಾಕ್ಷಿಗಳಾಗಿದ್ದೇವೆ. ಭಾರತ ಮತ್ತು ಪಾಕಿಸ್ತಾನ ರಾಷ್ಟ್ರಗಳು ತಮ್ಮ ದೇಶಗಳ ಜನತೆಯ ಸಮಸ್ಯೆಗಳಿಗೆ ಸ್ಪಂದಿಸದೇ ಪರಸ್ಪರ ದೇಶಗಳ ನಡುವಣ ಯುದ್ದಕ್ಕೆ ಹಾತೊರೆದು ನಿರಂತರ ಸಜ್ಜುಗೊಳ್ಳುತ್ತಿವೆ.

ಭಗತ್ ಧರ್ಮದ ಕುರಿತಾಗಿಯೂ ಒಂದು ಸ್ಪಷ್ಟ ಕಣ್ಣೋಟವನ್ನು ಬೆಳೆಸಿಕೊಂಡಿದ್ದ. ಅವನೇ ಹೇಳುವ ಪ್ರಕಾರ “ಧರ್ಮವೆನ್ನುವುದು ಇನ್ನೂ ಪರಿಪೂರ್ಣನಾಗಿರದ ಮನುಷ್ಯನಿಗೊಂದು ಆಸರೆ ಇದ್ದಂತೆ”. ಇಂದು ಭಾತರದಲ್ಲಿ ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಗಲಭೆಗಳು ಮತ್ತು ಮಾರಣಹೋಮಗಳನ್ನು ನೋಡಿದರೆ ಭಗತ್‌ನ ಈ ಮುಂದಿನ ಮಾತುಗಳು ನೆನಪಿಗೆ ಬರುತ್ತವೆ. ಭಗತ್ ಮತ್ತು ಆತನ ಸಂಗಡಿಗರು 1925 ಏಪ್ರಿಲ್‌ನಲ್ಲಿ ಸ್ಥಾಪಿಸಿದ್ದ ನೌಜವಾನ್ ಭಾರತ್ ಸಭಾ ಸಂಘಟನೆಯ ಪ್ರಣಾಳಿಕೆಯಲ್ಲಿ ಒಂದು ಮಾತು ಇದೆ ಅದೇನೆಂದರೆ. ಮನುಷ್ಯನಿಗೆ ಪ್ರಾಣಿಗಳಿಗಿಂತ ಹೆಚ್ಚಿನ ಪ್ರಾಮುಖ್ಯತೆ ಇರಬೇಕು. ಆದರೂ ಈ ಭಾರತದಲ್ಲಿ ಜನರು ಪವಿತ್ರ ಪ್ರಾಣಿಗಳ ಹೆಸರಿನಲ್ಲಿ ಪರಸ್ಪರ ರುಂಡ ಚಂಡಾಡುತ್ತಾರೆ. ನೌಜವಾನ್ ಭಾರತ್ ಸಭಾದ ಪ್ರತಿಯೊಬ್ಬ ಸದಸ್ಯನೂ ಸದಸ್ಯತ್ವ ಹೊಂದುವ ಮುಂಚೆ ಸಮುದಾಯದ ಹಿತಕ್ಕಿಂತ ದೇಶದ ಹಿತವೇ ಮಿಗಿಲಾದದ್ದು ಎಂಬ ಪ್ರತಿಜ್ಞೆಗೆ ಸಹಿ ಹಾಕಬೇಕಿತ್ತು. ಹಲಾಲ್ ಮತ್ತು ಝಟ್ಕ ಮಾಂಸವನ್ನು ಒಟ್ಟಿಗೆ ಬೇಯಿಸಿ ಹಿಂದೂಗಳು, ಮುಸ್ಲಿಮರು, ಸಿಕ್ಕರು ತಿನ್ನುತ್ತಿದ್ದರು. ಇದರಿಂದ ಸ್ಪಷ್ಟವಾಗುವ ಒಂದು ಅಂಶವೆಂದರೆ ಭಗತ್ ಮತ್ತು ಸಂಗಡಿಗರು ಕೋಮು ಸೌಹಾರ್ಧತೆ ಮತ್ತು ಸಾಮರಸ್ಯಕ್ಕೆ ಕೊಡುತ್ತಿದ್ದ ಮಹತ್ವ ಮತ್ತು ಅದನ್ನು ಸ್ವತಃ ಕಾರ್ಯಗತಗೊಳಿಸಿದ ವಿಧಾನ ಇವೆಲ್ಲವುಗಳು ಇಂದು ಧರ್ಮದ ಅಮಲಿನಲ್ಲಿರುವ ಎಲ್ಲ ಧರ್ಮದ ಯುವಜನತೆಗು ಮಾದರಿಯಾಗಬೇಕಾದದ್ದು.

ಭಗತ್ ಸಿಂಗ್ ಉತ್ತಮ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡಿದ್ದ ಅವನ ಪ್ರಕಾರ ಕ್ರಾಂತಿಕಾರಿಯಾದವನಿಗೆ ಮಾನವೀಯ ಭಾವನೆಗಳೇ ಇರಬಾರದೆಂದಿಲ್ಲ. ಹಾಗೆ ನೋಡಿದರೆ ಆ ಭಾವನೆಗಳಿಂದಲೇ ಅವನು ಭಯೋತ್ಪಾದಕನಿಂದ ಬೇರೆಯಾಗುವುದು. ಅಂಥವನ ದೃಷ್ಟಿಯಲ್ಲಿ ಸಂವೇಧನೆಯ, ಅನುಕಂಪದ ಸ್ವಭಾವವೇ ಪ್ರತಿಗಾಮಿಗಳನ್ನು ತಡೆಹಿಡಿದು ಅವರು ಅನರ್ಥಕಾರಿ ಹಿಂಸೆಯಲ್ಲಿ ತೊಡಗದಂತೆ ಮಾಡಬಲ್ಲದು. ಅವನ ಈ ಮಾತುಗಳು ಪ್ರಸ್ತುತ ಸಮಾಜದಲ್ಲಿ ಕ್ರಾಂತಿಕಾರಿಗಳನ್ನು ಮಾನವೀಯತೆಯಿಲ್ಲದವರು ಮತ್ತು ಭಯೋತ್ಪಾದಕರು ಎಂದು ಬಿಂಬಿಸುತ್ತಿರುವ ವ್ಯವಸ್ಥಿತ ಅಪಪ್ರಚಾರಕ್ಕೆ ಉತ್ತರವಾಗಬಲ್ಲದು.

ಭಗತ್ ಸ್ವಾಮಿ ವಿವೇಕಾನಂದ ಮತ್ತು ರಾಮತೀರ್ಥರಿಂದಲೂ ಸ್ಪೂರ್ಥಿ ಪಡೆದಿದ್ದನು. ಅವನ ಪ್ರಕಾರ ’ರಾಮತೀರ್ಥ ಮತ್ತು ವಿವೇಕಾನಂದ ಇಬ್ಬರಿಗೂ ಮನುಷ್ಯ ನಿರ್ಧಾರದಲ್ಲಿ ನಂಬಿಕೆಯಿತ್ತೇ ಹೊರತು ಅವನ ಸ್ವಾರ್ಥದಲ್ಲಲ್ಲ. ನಿಜವಾದ ಪ್ರಗತಿಯಾಗುವುದು ನಿಜಕ್ಕೂ ಪ್ರತಿಯೊಬ್ಬ ವ್ಯಕ್ತಿಗೂ ಇಡೀ ಸಮುದಾಯದ ಒಳಿತಿಗಾಗಿ ವಿಕಾಸಗೊಳ್ಳಲು ಒಂದು ಅವಕಾಶ ದೊರೆತಾಗ ಮಾತ್ರ. ಎಂದು ತಿಳಿದಿದ್ದವನು ಭಗತ್‌ಸಿಂಗ್. ವ್ಯಕ್ತಿಯೊಬ್ಬ ತನ್ನ ಕ್ಷುಲ್ಲಕ ಆಸೆಗಳನ್ನು ಬದಿಗೊತ್ತಿ ಎಲ್ಲರ ಒಳಿತನ್ನು ಯೋಚಿಸುವುದಕ್ಕೆ ಯಾವ ರಾಜಕೀಯ, ಸಾಮಾಜಿಕ ಅಥವಾ ಆರ್ಥಿಕ ಸಿದ್ದಾಂತ ಅವನಿಗೆ ನೆರವಾಗುತ್ತದೆ ಎಂಬುದೇ ನಿಜವಾದ ಒರೆಗಲ್ಲು.’ ಭಗತ್‌ನ ಈ ಆಲೋಜನೆ ಜಾಗತೀಕರಣ ಮತ್ತು ಉಧಾರೀಕರಣದ ಘಾಡ ಪ್ರಭಾವಕ್ಕೆ ಒಳಗಾಗಿ ಸ್ವಾರ್ಥವನ್ನೇ ತಮ್ಮ ಜೀವನದ ಪರಮಗುರಿಯನ್ನಾಗಿಸಿಕೊಳ್ಳುತ್ತಿರುವ, ಕೊಳ್ಳುಬಾಕ ಸಂಸ್ಕೃತಿಯನ್ನು ಮೈಗೋಡಿಸಿಕೊಳ್ಳುತ್ತಿರುವ, ಸಮಾಜದ ಬಗ್ಗೆ ಕಿಂಚಿತ್ತು ಆಲೋಚನೆ ಮಾಡದಂತಹ ಸ್ಥಿತಿಗೆ ತಲುಪುತ್ತಿರುವ ಇಂದಿನ ಯುವಜನತೆ ಕಲಿಯ ಬೇಕಾದ ಪಾಠ ಇದು.

“ನಾವು ದೇಶದ ಸ್ವಾತಂತ್ರಕ್ಕಾಗಿ ಹೋರಾಡ ಬಯಸಿದರೆ ಕಾರ್ಮಿಕರನ್ನು ರೈತರನ್ನು, ಸಾಮಾನ್ಯ ಜನರನ್ನು ಅಗ್ರಪಂಕ್ತಿಗೆ ತರಬೇಕು ಮತ್ತು ಈಗ ವಿದೇಶಿ ಆಳ್ವಿಕೆಯ ನೊಗದಿಂದ ಅಷ್ಟೇ ಅಲ್ಲ, ಆಸೆಬುರುಕ ಮಾಲೀಕರಿಂದ ಹಾಗೂ ನಿರುದ್ವಿಗ್ನ ಜಮೀನ್ದಾರರಿಂದ ಕೂಡಾ ಕಾರ್ಮಿಕರನ್ನು ಮತ್ತು ರೈತರನ್ನು ಬಿಡುಗಡೆಗೊಳಿಸುವ ಹೊಣೆ ಕ್ರಾಂತಿಕಾರಿಗಳ ಹೆಗಲ ಮೇಲಿದೆ” ಎಂದು ಭಗತ್‌ಸಿಂಗ್ ಯಾವಾಗಲೂ ಪ್ರತಿಪಾದಿಸುತ್ತಿದ್ದ.

“ಪ್ರಜಾಪ್ರಭುತ್ವವೆನ್ನುವುದು ಸೈದ್ದಾಂತಿಕವಾಗಿ ರಾಜಕೀಯ ಹಾಗೂ ಕಾನೂನುಗಳ ಸಮಾನತೆಗೆ ಸಂಬಂಧಿಸಿದ ಒಂದು ವ್ಯವಸ್ಥೆ. Bhagat_Singh_1922ಆದರೆ ಕಾರ್ಯ ಸಾಧನೆಯ ದೃಷ್ಟಿಯಿಂದ ನೋಡಿದಾಗ ಅದು ಅಸಮರ್ಪಕವೇ. ಎಲ್ಲಿಯವರೆಗೆ ಎದ್ದುಕಾಣುವ ಆರ್ಥಿಕ ಅಸಮಾನತೆ ಇರುವುದೋ ಅಲ್ಲಿಯವರೆಗೆ ರಾಜಕೀಯದಲ್ಲಾಗಲೀ ಕಾನೂನಿನ ಇದಿರಿನಲ್ಲಾಗಲಿ ಸಮಾನತೆಯಿರುವುದು ಸಾಧ್ಯವಿಲ್ಲ. ಎಲ್ಲಿಯವರೆಗೆ ಆಳುವ ವರ್ಗ ದೇಶದ ನೌಕರಿಗಳನ್ನು, ಪತ್ರಿಕಾರಂಗವನ್ನು, ಶಾಲೆಗಳನ್ನು ಮತ್ತು ಸಾರ್ವಜನಿಕ ಅಭಿಪ್ರಾಯದ ಅಂಗಗಳನ್ನು ನಿಯಂತ್ರಿಸುತ್ತದೋ, ಎಲ್ಲಿಯವರೆಗೆ ಅದು ತರಬೇತಿ ಪಡೆದ ಸಾರ್ವಜನಿಕ ಅಧಿಕಾರಿಗಳನ್ನು ಜಮಾಯಿಸಿಕೊಂಡು ಚುನಾವಣೆಗಳ ಮೇಲೆ ಪ್ರಭಾವ ಬೀರಲು ಅಪಾರ ಹಣ ಖರ್ಚುಮಾಡುತ್ತದೋ, ಎಲ್ಲಿಯವರೆಗೆ ಖಾಸಗಿಯಾಗಿ ಪ್ರಾಕ್ಟೀಸು ಮಾಡುವ ಲಾಯರುಗಳು ಯಾರು ಹೆಚ್ಚು ಹಣ ಕೊಡುತ್ತಾರೋ ಅವರಿಗೆ ತಮ್ಮ ಪರಿಣಿತಿಯನ್ನು ಮಾರಿಕೊಳ್ಳುತ್ತಾರೋ, ತತ್ಪರಿಣಾಮವಾಗಿ ಮೊಕದ್ದಮೆಗಳು ಪ್ರತ್ತೇಕವಾಗಿ ದುಬಾರಿಯಾಗುತ್ತವೆಯೋ ಅಲ್ಲಿಯವರೆಗೆ ಕಾನೂನಿನ ಮುಂದೆ ಕೇವಲ ಕನಿಷ್ಠ ಪ್ರಮಾಣದ ಸಮಾನತೆಯಷ್ಟೆ ಇರಲಿಕ್ಕೆ ಸಾಕು.” ಹೀಗೆಂದು ಭಗತ್‌ಸಿಂಗ್ ಮತ್ತು ಅವನ ಸಂಗಡಿಗರು, ಕ್ರಾಂತಿಕಾರಿಗಳು ನಂಬಿದ್ದರು ಮತ್ತು ಮಾತನಾಡುತ್ತಿದ್ದರು.

ಭಗತ್‌ಸಿಂಗ್ ಮತ್ತು ಆತನ ಸಂಗಡಿಗರ ಜೀವನ ವಿಧಾನ ಮತ್ತು ವಿಚಾರಗಳು ಇಂದಿನ ಯುವಜನತೆಗೆ ಸ್ಪೂರ್ತಿದಾಯಕವಾಗಿವೆ. ಅವುಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಂಡು ಪಾಲಿಸಿದರೆ, ಭಗತ್‌ಸಿಂಗ್ ಕಂಡ ಸಮಾನತೆಯ ಕನಸನ್ನು ನನಸು ಮಾಡಲು ದುಡಿದರೆ ಇದೇ ದೇಶಕ್ಕಾಗಿ ಹೋರಾಡಿ ನಗುನಗುತ್ತಲೇ ನೇಣುಗಂಬಕೆ ಪ್ರಾಣವ ನೀಡಿದ ಭಗತ್‌ಸಿಂಗ್, ಸುಖದೇವ್ ಮತ್ತು ರಾಜ್‌ಗುರುರವರಿಗೆ ನಾವು ಸಲ್ಲಿಸುವ ನಿಜವಾದ ಗೌರವ ಮತ್ತು ಶ್ರದ್ದಾಂಜಲಿ.

ಡಿ.ಕೆ.ರವಿ ಪ್ರಕರಣ: ಅಂತರಂಗ, ಆತ್ಮಶುದ್ಧಿ ಇಲ್ಲದ ಮಾಧ್ಯಮದವರು?

– ಬಿ. ಶ್ರೀಪಾದ ಭಟ್

ಡಿಸೆಂಬರ್, 2012 ರಲ್ಲಿ ಪ್ರಕಟಗೊಂಡ ಅಂಕಿಅಂಶಗಳ ಅನುಸಾರ ಇಂಡಿಯಾದಲ್ಲಿ ಸುಮಾರು 93,985 ಮುದ್ರಣ ಮಾಧ್ಯಮದ ಪತ್ರಿಕೆಗಳು ಮತ್ತು 850 ದೃಶ್ಯ ಮಾಧ್ಯಮದ ಛಾನಲ್‌ಗಳು ನೊಂದಣಿಯಾಗಿವೆ. ಈ ದೃಶ್ಯ ಮಾಧ್ಯಮಗಳಲ್ಲಿ 413 ಸುದ್ದಿ ವಿಭಾಗದ ಛಾನಲ್‌ಗಳು. ಸರ್ಕಾರದ ದೂರದರ್ಶನವು 37 ಛಾನಲ್‌ಗಳ ಒಡೆತನ ಹೊಂದಿದೆ.ಆಗ ಮುಂದಿನ ವರ್ಷಗಳಲ್ಲಿ ಶೇಕಡಾ 12 ರ ಪ್ರಮಾಣದಲ್ಲಿ ಮಾಧ್ಯಮಗಳtv-media ಬೆಳವಣಿಗೆಯನ್ನು ಅಂದಾಜು ಮಾಡಲಾಗಿತ್ತು. ಎರಡು ವರ್ಷಗಳ ನಂತರ ಇಂದು ಸಂಖ್ಯೆಯ ಆಧಾರದಲ್ಲಿ ಮತ್ತಷ್ಟು ಮುದ್ರಣ ಮತ್ತು ದೃಶ್ಯ ಮಾಧ್ಯಮಗಳು ಹೆಚ್ಚಾಗಿರುವ ಸಾಧ್ಯತೆಗಳಿವೆ.

ಸರಿ, ನೇರವಾಗಿ ವಿಷಯಕ್ಕೆ ಬರೋಣ.

ಇಂದು ಪ್ರಜ್ಞಾವಂತರು ಈ ಮಾಧ್ಯಮಗಳ ಕುರಿತಾಗಿ ತೀವ್ರವಾದ ನಿರಾಸೆ, ಆತಂಕ, ಅಸಹ್ಯ ಪಡುವಂತಾಗಿದೆ. ಸುದ್ದಿ ಸಂಪಾದಕ ಮತ್ತು ರಾಜಕೀಯ ಸಂಪಾದಕರನ್ನು ಮಾರ್ಕೆಟಿಂಗ್ ವಿಭಾಗ ನಿಯಂತ್ರಿಸುವಂತಹ ಪರಿಸ್ಥಿತಿಗೆ ಇಂದಿನ ಪತ್ರಿಕೋದ್ಯಮ ತಲುಪಿದೆ. ಸಂಪಾದಕರ ಹೆಸರನ್ನು ಬದಲಿಸಿ ’ಮ್ಯಾನೇಜರ್’ ಎಂದು ಕರೆದರೂ ಯಾವುದೇ ವ್ಯತ್ಯಾಸ ಉಂಟಾಗದಂತಹ ಸ್ಥಿತಿಯಲ್ಲಿ ಸಂಪಾದಕೀಯ ಬಳಗ ಕಾರ್ಯ ನಿರ್ವಹಿಸುತ್ತಿವೆ. ವಿನೋದ್ ಮೆಹ್ತ ಅವರು “ಎಪ್ಪತ್ತರ ದಶಕದ ಪತ್ರಿಕೋದ್ಯಮಕ್ಕೂ ಈಗಿನ ಮಾಧ್ಯಮಗಳ ಸ್ಥಿತಿಗತಿಯಲ್ಲಿನ ಪ್ರಮುಖ ವ್ಯತ್ಯಾಸವೆಂದರೆ ಸ್ಪರ್ಧೆ, ಅತ್ಯಂತ ಅಸಹ್ಯವಾದ ಸ್ಪರ್ಧೆ. ಒಂದು ವೇಳೆ ದಿನಪತ್ರಿಕೆಯೊಂದು ಸೋತರೆ ಅದಕ್ಕೆ ಸಂಪಾದಕ ಹೊಣೆಗಾರನಾಗುತ್ತಾನೆ. ಗೆದ್ದರೆ ಅದು ಮಾರ್ಕೆಟಿಂಗ್ ವಿಭಾಗದ ಹೆಗ್ಗಳಿಕೆ ಎಂದೇ ಬಿಂಬಿಸಲಾಗುತ್ತದೆ. ಇದು ಇಂದಿನ ಪತ್ರಿಕೋದ್ಯಮದ ಸ್ವರೂಪ. ಈ ಕಾಲದ ಸಂಪಾದಕ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಲು ಸೇಲ್ಸ್‌ಮನ್ ಆಗಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಪತ್ರಿಕೋದ್ಯಮವನ್ನು ಪ್ರವೇಶಿಸುವಾಗ ಬದ್ಧತೆ, ಪ್ರಾಮಾಣಿಕತೆ, ಉತ್ಸಾಹವನ್ನು ಪ್ರದರ್ಶಿಸುವ ಯುವ ಪತ್ರಕರ್ತರು ಮಾಧ್ಯಮದ ಏಣಿಯನ್ನು ಮೇಲೇರುತ್ತಾ ಹಂತಹಂತವಾಗಿ ಭ್ರಷ್ಟತನ, ಸಿನಿಕತನವನ್ನು ಮೈಗೂಡಿಸಿಕೊಳ್ಳಲಾರಂಭಿಸುತ್ತಾರೆ. Corruption-in-News-Mediaಇದಕ್ಕೆ ಇವರನ್ನು ದೂಷಿಸಲು ಸಾಧ್ಯವಿಲ್ಲ. ತಮ್ಮ ಸೀನಿಯರ್ ಸಹೋದ್ಯೋಗಿಗಳು, ಸಂಪಾದಕರು ರಾಜಕಾರಣದ, ವ್ಯಾಪಾರದ ಪ್ರಭಾವಿ ಕಾರಿಡಾರ್‌ಗಳಲ್ಲಿ ಮಧ್ಯವರ್ತಿಗಳಂತೆ ಅಲೆದಾಡುವುದನ್ನು, ಫಾರ್ಮಹೌಸ್‌ಗಳನ್ನು ಕೊಳ್ಳುವುದನ್ನು ಹತ್ತಿರದಿಂದ ಗಮನಿಸುವ ಈ ಉದಯೋನ್ಮುಖ ಪತ್ರಕರ್ತರು ಕ್ರಮೇಣ ಸಿನಿಕರಾಗುತ್ತಾ ತೆವಳತೊಡಗಿದರೆ ಅದರಲ್ಲಿ ಆಶ್ಚರ್ಯವಿಲ್ಲ. ಕುಟಿಲ ವ್ಯಕ್ತಿತ್ವದ ಮುಖ್ಯ ಸಂಪಾದಕ ತನ್ನ ಸಿಬ್ಬಂದಿ ವರ್ಗವನ್ನು ಭ್ರಷ್ಟಗೊಳಿಸುತ್ತಾನೆ. ಇಂಡಿಯಾದ ಪತ್ರಿಕಾರಂಗವು ಸ್ವಯಂನಾಶದ ಕಡೆಗಿನ ಮಾರ್ಗದಲ್ಲಿದೆ” ಎಂದು ಬರೆಯುತ್ತಾರೆ.

ಇಂದಿನ ಬಹುಪಾಲು ಪತ್ರಕರ್ತರ ನೈತಿಕ ಪೋಲೀಸ್‌ಗಿರಿ ಇಂದು ಯಾವ ಮಟ್ಟದಲ್ಲಿ ಬೆಳೆಯುತ್ತಿದೆ ಎಂದರೆ ಹೀಗಾದ್ರೆ ಮುಂದೇನು ಗತಿ ಎಂದು ಕಳವಳಪಡುವಂತಾಗಿದೆ. 1968 -1991ರವರೆಗೆ ಅಮೇರಿಕಾದ ವಾಶಿಂಗ್ಟನ್ ಪೋಸ್ಟ್‌ನ ಸಂಪಾದಕರಾಗಿದ್ದ ಬೆನ್ ಬ್ರಾಡ್ಲಿ ಅವರು ಪತ್ರಕರ್ತರಾದ ಬಾಬ್ ವುಡ್‌ವರ್ಡ ಮತ್ತು ಕಾರ್ಲ ಬರ್ನಸ್ಟೇನ್ ಅವರು ತನಿಖೆ ನಡೆಸಿ ಸಿದ್ಧಪಡೆಸಿದ “ವಾಟರ್ ಗೇಟ್” ಹಗರಣದ ವರದಿಗಳನ್ನು ಪೋಸ್ಟ್‌ನಲ್ಲಿ ಪ್ರಕಟಿಸಿದ್ದರು. ಈ ವರದಿಗಳನ್ನು ಪ್ರಕಟಿಸುವುದು ಸಂಪಾದಕನಾಗಿ ನನ್ನ ಹಕ್ಕು ಎಂದು ಹಗರಣದ ರೂವಾರಿ, ಅಮೇರಿಕಾದ ಅಧ್ಯಕ್ಷರಾಗಿದ್ದ ನಿಕ್ಸನ್ ವಿರುದ್ಧ ದಂಗೆಯನ್ನೇ ನಡೆಸಿದ್ದರು. ಈ ಬ್ರಾಡ್ಲೀ ಅವರು ಈ ದಶಕದ ಪತ್ರಿಕೋದ್ಯಮದ ಈ ಅನೈತಿಕತೆಯನ್ನು ಕಂಡು 2006ರ ಸಂದರ್ಶನವೊಂದರಲ್ಲಿ ಪತ್ರಕರ್ತರನ್ನು ಕುರಿತು “The danger is that these guys begin to look more important than they are and they think they’re more important than they are…” ಎಂದು ಹೇಳಿದ್ದರು.

ಅದು ಇರಲಿ, 2009ರ ಲೋಕಸಭಾ ಚುನಾವಣೆಯ ನಂತರ ಸರ್ಕಾರ ರಚಿಸುವುದರ ಕುರಿತು ಕಾಂಗ್ರೆಸ್ ಮತ್ತು ಡಿಎಂಕೆ ನಡುವೆ ಮಾತುಕತೆ ನಡೆಯುತ್ತಿದ್ದಾಗ ಎನ್‌ಡಿಟಿವಿ ಮುಖ್ಯಸ್ಥೆ ಬರ್ಕಾ ದತ್ ಡಿಎಂಕೆ ಸಂಸದೆ ಕನಿಮೋಳಿ ಅವರೊಂದಿಗೆ ಮಾತನಾಡುತ್ತ “ಅಯ್ಯೋ ದೇವರೆ ! ಈಗ ಏನ್ಮಾಡೋದು? ಅವರಿಗೆ ( ಕಾಂಗ್ರೆಸ್) ನಾನು ಏನು ಹೇಳಲಿ? ಹೇಳಿ ನಾನು ಅವರಿಗೆ ಏನು ಹೇಳಲಿ?” ಎಂದು ಪ್ರಶ್ನಿಸುತ್ತಿದ್ದ ಸಂಭಾಷಣೆಯ ತುಣುಕುಗಳು ನೀರಾ ರಾಡಿಯಾ ಟೇಪ್ ಹಗರಣದ ಸಂದರ್ಭದಲ್ಲಿ ಬಹಿರಂಗಗೊಂಡಿದ್ದವು. ಆದರೆ ನಂತರ ಬರ್ಕಾ ದತ್ ಇದನ್ನು ನಿರಾಕರಿಸುತ್ತ ಇದು “stringing the source” ನಂತಹ ಸಂಭಾಷಣೆ ಮತ್ತು ಸುದ್ದಿ ಮೂಲವನ್ನು ಹೊರಗೆಳೆಯಲು ತಾನು ಈ ರೀತಿ ಮಾಡಿದ್ದು ಎಂದು ಸ್ಪಷ್ಟೀಕರಣ ನೀಡಿದ್ದರು. ಆದರೆ ಯಾರು ನಂಬುತ್ತಾರೆ? ಈ ಬರ್ಕಾ ದತ್ ಅವರನ್ನು ಆಕ್ಟಿವ್ ಪತ್ರಕರ್ತೆಯಾಗಿ ನೋಡಿದ ಮೇಲೂ?

ಹಳೆಯ ವರ್ತನೆಗಳನ್ನ, ಘಟನೆಗಳನ್ನು ಹಿಂದಿಕ್ಕಿ ಈಗ ನೇರವಾಗಿ ವಿಷಯಕ್ಕೆ ಬಂದರೆ ಮೊನ್ನೆ ಐಎಎಸ್ ಅಧಿಕಾರಿ dkravi-cm-siddharamaiahಡಿ.ಕೆ.ರವಿ ಅವರ ಅಸಹಜ ಸಾವಿನ ದಿನದಿಂದ ಇಂದಿನವರೆಗೂ ಬಹುಪಾಲು ಮಾಧ್ಯಮಗಳು ಪತ್ರಿಕೋದ್ಯಮದ ಎಲ್ಲಾ ಘನತೆ, ನೈತಿಕತೆಯನ್ನು ಗಾಳಿಗೆ ತೂರಿ ಶಾಸಕಾಂಗದ ವಿರುದ್ಧ ಅತ್ಯಂತ ಕೆಟ್ಟದಾಗಿ ವರ್ತಿಸಿದವು. ಬಹುಪಾಲು ಮಾಧ್ಯಮಗಳು ಅದರಲ್ಲೂ ದೃಶ್ಯ ಮಾಧ್ಯಮಗಳು ಪತ್ರಿಕೋದ್ಯಮದ ಮೂಲ ಪಾಠಗಳಾದ ಸೂಕ್ಷ್ಮತೆ, ಖಚಿತತೆ ಮತ್ತು ನಿಷ್ಟಕ್ಷಪಾತಗಳಂತಹ ಗುಣಗಳನ್ನು ತುಂಬಾ ಎಚ್ಚರಿಕೆಯಿಂದ ಸಮತೋಲನಗೊಳಿಸಿ ವರದಿಯನ್ನು ಮಂಡನೆ ಮಾಡಿ, ಸಂವಾದ ಮತ್ತು ಚರ್ಚೆ ನಡೆಸುವುದನ್ನು ಮಾಡಲೇ ಇಲ್ಲ. ಬದಲಾಗಿ ತಮಗೆ ದೊರೆತ ಯಾವುದೇ ಸಾಕ್ಷಾಧಾರಗಳಿಲ್ಲದ, ಊಹಾಪೋಹದ ಕತೆಗಳನ್ನು ಕರಾರುವಕ್ಕಾದ ಸುದ್ದಿಗಳೆಂದು ಏರು ದನಿಯಲ್ಲಿ ವಾದಿಸುತ್ತಾ ಸೂಕ್ಷ್ಮತೆಯನ್ನು ಕೈ ಬಿಟ್ಟು ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ನಡೆಸುತ್ತಿರುವ ಏಕರೂಪದ ದಾಳಿಗಳು ನೀತಿಸಂಹಿತೆಯನ್ನು ಮೀರಿವೆ ಎಂದೇ ಹೇಳಬೇಕು. ಜನಪ್ರಿಯ ಐಎಎಸ್ ಅಧಿಕಾರಿಯೊಬ್ಬರ ಅಸಹಜ ಸಾವಿನ ಕಾರಣದಿಂದ ಸಹಜವಾಗಿಯೇ ಜನರ ಆಕ್ರೋಶವು ವ್ಯವಸ್ಥೆಯ ಕೇಂದ್ರದಲ್ಲಿರುವ ಆಡಳಿತ ಪಕ್ಷದ ವಿರುದ್ಧ ತಿರುಗುತ್ತದೆ.

ಡಿ.ಕೆ ರವಿಯವರ ಸಾವಿನ ಸಂದರ್ಭದಲ್ಲಿ ವಿವೇಚನೆಯಿಂದ, ಸಂಯಮದಿಂದ ಮತ್ತು ಪ್ರಾಮಾಣಿಕವಾಗಿ ತನ್ನ ಕರ್ತವ್ಯವನ್ನು ನಿಭಾಯಿಸಲು ಸಂಪೂರ್ಣವಾಗಿ ವಿಫವಾಗಿರುವ ಕಾಂಗ್ರೆಸ್ ಸರ್ಕಾರ ಇಡೀ ಅತ್ಮಹತ್ಯೆಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನ್ನ ಹತೋಟಿಯನ್ನು ಕಳೆದುಕೊಂಡಿದೆ. ಸಮಯಕ್ಕೆ ಸೂಕ್ತವಾದ ನಿರ್ಣಯಗಳನ್ನು ತೆಗೆದಕೊಳ್ಳದ, ಸಂಶಯಾತೀತವಾಗಿ ಮತ್ತು ಪ್ರಬುದ್ಧತೆಯಿಂದ ವರ್ತಿಸುವುದನ್ನು ತನ್ನ ಸಹೋದ್ಯೋಗಿಗಳಿಗೆ, ಅಧಿಕಾರಿಗಳಿಗೆ ಮನದಟ್ಟು ಮಾಡಿಕೊಡಲು ವಿಫಲರಾದ, ಇಡೀ ಪ್ರಕರಣವನ್ನು ನುರಿತ ಮುತ್ಸದ್ದಿಯಂತೆ ನಿಭಾಯಿಸದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು dkravi-parents-siddharamaiahಪ್ರತಿ ಹೆಜ್ಜೆಯಲ್ಲಿಯೂ ಎಡವಿದ್ದಾರೆ. ವಿರೋಧ ಪಕ್ಷಗಳ ಕೈಯಲ್ಲಿ ದಾಳವಾಗಿರುವುದಂತೂ ನಿಜ. ಆದರೆ ಈ ಎಲ್ಲಾ ಘಟನೆಗಳನ್ನು ಮಾಧ್ಯಮವು ವರದಿ ಮಾಡಿದ ರೀತಿ ತುಂಬಾ ಏಕಪಕ್ಷೀಯವಾಗಿತ್ತು ಮತ್ತು ಪೂರ್ವಗ್ರಹಪೀಡಿತವಾಗಿತ್ತು. ಕಡೆಗೆ ಇಡೀ ಅಸಹಜ ಸಾವಿನ ಕೇಂದ್ರ ಬಿಂದುವಾಗುವಂತೆ ಒಬ್ಬ ಐಎಎಸ್ ಮಹಿಳಾ ಅಧಿಕಾರಿ ಕುರಿತಾಗಿ ಸುದ್ದಿಗಳನ್ನು ಬಿತ್ತುತ್ತಿದ್ದ ನಿಗೂಢ ಕೈಗಳು ಒಂದೆಡೆಯಿದ್ದರೆ ತಮ್ಮ ಪತ್ರಿಕೋದ್ಯಮದ ನೀತಿಸಂಹಿತೆಯನ್ನು ನಿರ್ಲಕ್ಷಿಸಿ ಮಹಿಳಾ ಐಎಎಸ್ ಅಧಿಕಾರಿಯ ಹೆಸರು, ಅವರ ಕಾರ್ಯ ಕ್ಷೇತ್ರ ಮುಂತಾದ ವಿವರಗಳನ್ನು ಬಹಿರಂಗಪಡೆಸಿದ್ದು ಮಾಧ್ಯಮಗಳು ಕೆಳಮಟ್ಟಕ್ಕೆ ತಲುಪಿದ್ದರ ಸಾಕ್ಷಿಯಾಗಿತ್ತು. ತಮ್ಮ ಇಂತಹ ವರ್ತನೆಗಳಿಂದ ಆ ಮಹಿಳಾ ಐಎಎಸ್ ಅಧಿಕಾರಿಯ ಘನತೆ ಮತ್ತು ಆತ್ಮಗೌರವಕ್ಕೆ ಧಕ್ಕೆ ತಂದಿಟ್ಟ ಮಾಧ್ಯಮಗಳು ಮುಂದುವರೆದು ಅವರ ಹಿನ್ನೆಲೆಗಳನ್ನು ಕೆದಕುತ್ತಾ ಏಕಪಕ್ಷೀಯವಾಗಿ ಆಡಳಿತ ಪಕ್ಷವನ್ನು ಕಟಕಟೆಯಲ್ಲಿ ನಿಲ್ಲಿಸಲು ಮುಂದಾಗಿರುವುದನ್ನು ಕಂಡಾಗ ವಿಚಾರಶೀಲವಾದ, ನೈತಿಕ ಪತ್ರಿಕೋದ್ಯಮವು ನೆಲಕಚ್ಚುತ್ತಿರುವುದು ಸ್ಪಷ್ಟವಾಗುತ್ತದೆ.

ನಿಜ. ಬಿಜೆಪಿ ಮತ್ತು ಎಚ್.ಡಿ.ಕುಮಾರಸ್ವಾಮಿಯವರ ರಾಜಕಾರಣದ ಎಲ್ಲಾ ಒಳಹೊರಗುಗಳು, ಕುತಂತ್ರಗಳು, ಅವಕಾಶವಾದಿತನ, ಜಾತೀಯತೆ ಜನರಿಗೆ ಚೆನ್ನಾಗಿ ಗೊತ್ತು. ಈ ಜನರಿಗೆ ಎಲ್ಲಾ ಗೊತ್ತೆಂದು ಬಿಜೆಪಿ ಮತ್ತು ಕುಮಾರಸ್ವಾಮಿಯವರಿಗೆ ಗೊತ್ತು. ತಮ್ಮ ರಾಜಕೀಯ ಲಾಭದ ಲೆಕ್ಕಾಚಾರವು, ಭವಿಷ್ಯದ ವಿಧಾನಸಭೆಯ ಚುನಾವಣೆಯ ಮತಗಳಿಕೆ, ಇತ್ಯಾದಿ, ಇತ್ಯಾದಿ ವರಪ್ರಸಾದಗಳು ಈ ಸಿಐಡಿ ಮತ್ತು ಸಿಬಿಐ ಎನ್ನುವ ಪ್ರಶ್ನೆಯನ್ನು ಎತ್ತಿಕೊಳ್ಳುವುದರಲ್ಲಿದೆ, ಅದನ್ನು ಆಡಳಿತ ಪಕ್ಷ ಕಾಂಗ್ರೆಸ್‌ಗೆ ಇರಿಸುಮುರಿಸಾಗುವಂತೆ ಅದರ ವಿರುದ್ಧ ಸಾರ್ವಜನಿಕವಾಗಿ ಪ್ರಚಾರ ಮಾಡುವುದರಲ್ಲಿದೆ ಎನ್ನುವುದಂತೂ ಬಿಜೆಪಿ ಮತ್ತು ಕುಮಾರಸ್ವಾಮಿಯವರಿಗೆ ಬಲು ಬೇಗ ಅರಿವಾಗಿತ್ತು. ಹಿಂದಿನ ವಿಷಯಗಳನ್ನು ಬಿಡಿ, ಮುಖ್ಯಮಂತ್ರಿಯಾಗಿದ್ದ ಈ ಕುಮಾರಸ್ವಾಮಿಯವರ DKRavi_Kolar_PGವಿರುದ್ಧ ಜನಾರ್ಧನ ರೆಡ್ಡಿ ಪಟಾಲಂ 150 ಕೋಟಿ ಲಂಚದ ಆರೋಪ ಮಾಡಿದಾಗ, ಬಿಜೆಪಿ ಅಧಿಕಾರದಲ್ಲಿದ್ದಾಗ ಉಡುಪಿ ಶಾಸಕ ರಘುಪತಿ ಭಟ್ ಅವರ ಪತ್ನಿ ಅವರು ದೆಹಲಿಯಲ್ಲಿ ಅಸಹಜವಾಗಿ ಸಾವಿಗೀಡಾದಾಗ, ಸೌಜನ್ಯ ಕೊಲೆ ಪ್ರಕರಣದ ಸಂದರ್ಭದಲ್ಲಿ, ಅದಕ್ಕೂ ಸ್ವಲ್ಪ ಹಿಂದೆ ಯೆಡೆಯೂರಪ್ಪನವರ ಪತ್ನಿಯವರು ನೀರಿನ ತೊಟ್ಟಿಯಲ್ಲಿ ಕಾಲು ಜಾರಿ ಅಸಹಜ ಸಾವಿಗೀಡಾದಾಗ ಸಿಬಿಐ ತನಿಖೆ ನಡೆಸಬೇಕೆಂದು ಪ್ರಜ್ಞಾವಂತರು ಮತ್ತು ಆಗಿನ ವಿರೋಧ ಪಕ್ಷ ಕಾಂಗ್ರೆಸ್ ಒತ್ತಾಯ ಮಾಡಿದ್ದರು. ಆದರೆ ಬಿಜೆಪಿ ಇದಕ್ಕೆ ಕ್ಯಾರೆ ಎನ್ನಲಿಲ್ಲ. ಸಿಬಿಐ ಅನ್ನು “ಕಾಂಗ್ರೆಸ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್” ಎಂದು ಕೀಳು ಮಟ್ಟದಲ್ಲಿ ಇದೇ ಬಿಜೆಪಿ ನಾಯಕರು ಟೀಕೆ ಮಾಡಿದ್ದರು. ಇದು ಸಹ ಮಿಕ್ಕೆಲ್ಲರಿಗಿಂತಲೂ ಮಾಧ್ಯಮದವರಿಗೆ ಚೆನ್ನಾಗಿ ಗೊತ್ತು. ಇಂದು ಕೇಂದ್ರದಲ್ಲಿ ಯುಪಿಎ ಅಧಿಕಾರ ಕಳೆದುಕೊಂಡು ಬೆಜೆಪಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬಂದಾಗ ಎಲ್ಲವೂ ಅದಲುಬದಲಾಗುವುದು ಇಂಡಿಯಾದಂತಹ ಪ್ರಜಾಪ್ರಭುತ್ವದ ದೇಶದಲ್ಲಿ ತೀರಾ ಸಹಜ. ಆದರೆ ಆಳದಲ್ಲಿ ತುಂಬಾ ಸಂಕೀರ್ಣ. ಈ ಸರಳ ಮತ್ತು ಸಂಕೀರ್ಣಗಳ ವಿವಿಧ ಮುಖಗಳೂ ಸಹ ನಮ್ಮ ಮಾಧ್ಯಮಗಳಿಗೆ ಚಿರಪರಿಚಯ.

ಇಂತಹ ನೇರವಾದ ಆದರೆ ಕಗ್ಗಂಟಾದಂತಹ ಸಂಗತಿಗಳ, ಸರಳ ಆದರೆ ಸಂಕೀರ್ಣ ಎನ್ನುವ ವಿಭಿನ್ನ ಮುಖಗಳ ಎಳೆ ಹಿಡಿದು ಐಎಸ್ ಅಧಿಕಾರಿ ಡಿ.ಕೆ.ರವಿ ಅವರ ಅಸಹಜ ಸಾವಿನ ಸಂದರ್ಭದಲ್ಲಿ ಈ ಸಿ.ಐ.ಡಿ. ಬೇಡ, ಸಿಬಿಐ ಬೇಕು ಎನ್ನುವ ಬೇಡಿಕೆಯ ಹಿಂದಿನ ರಾಜಕೀಯ ಒಳಸುಳಿಗಳನ್ನು ಎಳೆ ಎಳೆಯಾಗಿ ಬಿಡಿಸಿ ಈ ನಾಡಿನ ಜನತೆಯ ಮುಂದಿಡಬೇಕಾಗಿದ್ದ ನಮ್ಮ ಪತ್ರಿಕೋದ್ಯಮದ ಮಿತ್ರರು ಈ ಸಂದರ್ಭದಲ್ಲಿ ದಯನೀಯವಾಗಿ ಸೋತಿದ್ದಾರೆ. ಇದು ನನಗೆ 1989ರಲ್ಲಿ ವಿ.ಪಿ.ಸಿಂಗ್ ಸರ್ಕಾರ ಜಾರಿಗೊಳಿಸಿದ ಮಂಡಲ್ ವರದಿಯ ಸಂದರ್ಭದ ಘಟನೆಗಳನ್ನು ನೆನಪಿಗೆ ತರುತ್ತಿದೆ. ಆಗ ಮೀಸಲಾತಿ ವಿರೋಧಿಸಿ ದೇಶಾದ್ಯಾಂತ ಈ ಮೇಲ್ಜಾತಿ ವಿದ್ಯಾರ್ಥಿಗಳು ನಡೆಸುತ್ತಿದ್ದ ಹಿಂಸಾತ್ಮಕ ಚಳುವಳಿಗೆ ಬೆಂಕಿ ಎರೆದು ಮತ್ತಷ್ಟು ಉರಿಯುವಂತೆ ಮಾಡಿದ್ದು ಇದೇ ಬಿಜೆಪಿಯ ವಿದ್ಯಾರ್ಥಿ ಸಂಘಟನೆ ಎಬಿವಿಪಿ. ಈ ಎಬಿವಿಪಿ ಆಗ ವಿದ್ಯಾರ್ಥಿಗಳನ್ನು ಪ್ರಚೋದಿಸುತ್ತ ಮೀಸಲಾತಿ ವಿರುದ್ಧದ ಗಲಾಟೆಯನ್ನು ಅನಾಮತ್ತಾಗಿ ಹಿಂದುಳಿದ ವರ್ಗ ಮತ್ತು ದಲಿತ ಸಮುದಾಯದ ವಿರುದ್ಧದ ಹೋರಾಟಕ್ಕೆ ಹೊರಳಿಸಿತು. ಈ ಕಾರ್ಯತಂತ್ರಕ್ಕೆ ಬಿಜೆಪಿ ಸಂಪೂರ್ಣ ಬೆಂಬಲಿಸಿತು ಮತ್ತು ಈ ಮೀಸಲಾತಿಯನ್ನು ವಿರೋಧಿಸಿ ವಿ.ಪಿ.ಸಿಂಗ್ ಪಕ್ಷಕ್ಕೆ ನೀಡಿದ ಬೆಂಬಲವನ್ನು ಹಿಂದಕ್ಕೆ ಪಡೆದು ಸರ್ಕಾರವನ್ನೇ ಉರುಳಿಸಿದ್ದು ಇದೇ ಬಿಜೆಪಿ ಪಕ್ಷ, ಆಗಲೂ ಬಹುಪಾಲು ಮಾಧ್ಯಮಗಳು ಇಡೀ ಮೀಸಲಾತಿ ವಿರೋಧಿ ಚಳುವಳಿಯನ್ನು ಬೆಂಬಲಿಸಿ ವರದಿಗಳನ್ನು ಪ್ರಟಿಸುತ್ತಿದ್ದವು. ಯಾವುದೇ ನಿರ್ಧಾರಗಳ ಕಡೆಗೆ ವಾಲದೆ ನಿಷ್ಪಕ್ಷಪಾತವಾಗಿ ಚರ್ಚೆ, ಸಂವಾದಗಳ ಮೂಲಕ ಇಡೀ ಮೀಸಲಾತಿ ವಿರೋಧಿ ಚಳುವಳಿಯ ಮಾನವೀಯ ವಿರೋಧಿ ಗುಣಲಕ್ಷಣಗಳನ್ನು ಸಾರ್ವಜನಿಕವಾಗಿ ವಿಶ್ಲೇಷಿಸಿ ದಿಕ್ಕುತಪ್ಪಿದ ಆ ಚಳುವಳಿಗೆ ಸಂವಿಧಾನದ ಆಶಯಗಳಿಗೆ ಅನುಗುಣವಾಗುವಂತೆ ಮತ್ತೊಂದು ನಿಖರವಾದ ದಿಕ್ಕನ್ನು ತೋರಿಸಬೇಕಾಗಿದ್ದ ಮಾಧ್ಯಮಗಳು ಬದಲಾಗಿ ಕೇವಲ ಮೇಲ್ಜಾತಿ ಹುಡುಗರ ಅತ್ಮಹತ್ಯಾತ್ಮಕ ವರ್ತನೆಗಳನ್ನು ಇಡೀ ದೇಶದ ಜನತೆಯ ಅಭಿಪ್ರಾಯ ಎನ್ನುವಂತೆ ಪ್ರಚೋದನಕಾರಿ ವರದಿಗಳನ್ನು ನಿರಂತರವಾಗಿ ಪ್ರಕಟಿಸಿ ಆ ಮೂಲಕ ನಾಗರಿಕ ಸಮಾಜವನ್ನು ದಿಕ್ಕುತಪ್ಪಿಸಿದವು. ತಮ್ಮದೇ ಆದ ಮೀಸಲಾತಿ ವಿರೋಧಿ ಸಿದ್ಧಾಂತಗಳ ಆಧಾರದ ಮೇಲೆ ರಾಜಕೀಯ ವಿಶ್ಲೇಷಣೆ ನಡೆಸಿದ ಮಾಧ್ಯಮಗಳು ಜನತೆಯ ಮೇಲೆ influence ಮಾಡಲು ವಿಫಲ ಯತ್ನವನ್ನೂ ನಡೆಸಿದವು. ಇಂದು ಇದೇ ಮಾಧ್ಯಮಗಳು ಡಿ.ಕೆ.ರವಿಯವರ ಅಸಹಜ ಸಾವಿನ ಸಂದರ್ಭದಲ್ಲಿ ಅದೇ ಮಾದರಿಯಲ್ಲಿ ವರ್ತಿಸುತ್ತಿವೆ.

ಮಾಧ್ಯಮಗಳು ನಿಷ್ಪಕ್ಷಪಾತವಾದ ಸಂವಾದಗಳ ಮೂಲಕ ಸಿಐಡಿ ಅಥವಾ ಸಿಬಿಐ ಎನ್ನುವ ರಾಜ್ಯ ಮತ್ತು ಕೇಂದ್ರದ ಗೃಹ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುವ ರಬ್ಬರ್ ಸ್ಟಾಂಪ್ ಸಂಸ್ಥೆಗಳ ಕುರಿತಾಗಿ ಆಳವಾದ, ಸೈದ್ಧಾಂತಿಕವಾದ ಚರ್ಚೆಗಳನ್ನು ನಡೆಸಬೇಕಿತ್ತು. ಎರಡೂ ಸಂಸ್ಥೆಗಳು ರಾಜಕೀಯ ಕಟ್ಟುಪಾಡಿಗೆ ಒಳಗಾದ ನಂತರ ಅವುಗಳನ್ನು ಸ್ವತಂತ್ರ ತನಿಖಾ ಸಂಸ್ಥೆಗಳಾಗಿ ಗ್ರಹಿಸುವುದೇ ದೋಷಪೂರಿತ ಎನ್ನುವುದನ್ನು tv-mediaವಿಶ್ಲೇಷಿಸಬೇಕಿದ್ದ ಮಾಧ್ಯಮಗಳು ಮೀಸಲಾತಿ ವಿರೋಧಿ ಚಳುವಳಿಯ ಸಂದರ್ಭದಲ್ಲಿ ವರ್ತಿಸಿದಂತೆ ಡಿ.ಕೆ.ರವಿ ಸಾವಿನ ಸಂದರ್ಭದಲ್ಲಿ ಸಿಬಿಐ ಪರವಾಗಿ ನಿರಂತರವಾಗಿ ಒತ್ತಡವನ್ನು ಹೇರುವುದರ ಮೂಲಕ ಅದು ಇಡೀ ರಾಜ್ಯದ ಜನತೆಯ ಒಕ್ಕೊರಲಿನ ಬೇಡಿಕೆ ಎನ್ನುವಂತೆಯೇ ರೂಪಿಸಿಬಿಟ್ಟವು. ಅವಶ್ಯಕವಾದ ದಾಖಲೆಗಳು, ಸಾಕ್ಷಾಧಾರಗಳು ಇಲ್ಲದಂತಹ ಸಂದರ್ಭದಲ್ಲಿ, ಇನ್ನೂ ತನಿಖೆಯು ಪ್ರಾರಂಭದ ಹಂತದಲ್ಲಿರುವಂತಹ ಸಂದರ್ಭದಲ್ಲಿ ಇಡೀ ಘಟನೆಯನ್ನು ಎಲ್ಲಾ ಮಗ್ಗಲುಗಳ ಮೂಲಕ ಅವಲೋಕಿಸಲು ನಿರಾಕರಿಸಿದ ಮಾಧ್ಯಮಗಳು ಪ್ರಶ್ನಾತೀತ ನ್ಯಾಯಾಧೀಶರಂತೆ ವರ್ತಿಸುತ್ತಿರುವ ದೃಶ್ಯಗಳಂತೂ ಮಾನವಂತ, ಬದ್ಧತೆಯುಳ್ಳ ಪತ್ರಕರ್ತರು ನಾಚಿಕೆಯಿಂದ ತಲೆ ತಗ್ಗಿಸುವಂತೆ ಮಾಡಿತು. ಇದೇ ಸಂದರ್ಭದಲ್ಲಿ ಬಹುಪಾಲು ದೃಶ್ಯ ಮಾಧ್ಯಮಗಳು ಕಾಂಗ್ರೆಸ್ ಪಕ್ಷದ ಶಾಸಕರನ್ನು, ಮಂತ್ರಿಗಳನ್ನು ಸಾರ್ವಜನಿಕವಾಗಿ ಅಗೌರವಸೂಚಕವಾಗಿ ಸಂಭೋದಿಸುತ್ತಿದ್ದ ರೀತಿಯಂತೂ ಅವಮಾನಕರವಾಗಿತ್ತು.

ಪ್ರಜಾಪ್ರಭುತ್ವದ ಪ್ರಮುಖ ಆಧಾರಸ್ತಂಭವಾದ ಶಾಸಕಾಂಗಕ್ಕೆ ಸೇರಿದ ಕಾಂಗ್ರೆಸ್ ಪಕ್ಷ ಒಂದು ಅನುಭವವಿಲ್ಲದ, ದಿಕ್ಕುತಪ್ಪಿದ ರಾಜಕೀಯ ಪಕ್ಷದಂತೆ ಇಡೀ ಪ್ರಕರಣವನ್ನು ನಿಭಾಯಿಸಿದ್ದು, ಫಲವಾಗಿ ಇಂದು ತನ್ನ ಮೈ ತುಂಬಾ ಗಾಯಗಳನ್ನು ಮಾಡಿಕೊಂಡು ನೆಲಕ್ಕುರುಳಿದರೆ,ಎಚ್.ಡಿ.ಕುಮಾರ ಸ್ವಾಮಿ ಮತ್ತು ಬಿಜೆಪಿ ಪಕ್ಷಗಳು ಉರಿವ ಮನೆಯ ಗಳ ಹಿಡಿಯುವ ಪಿತೂರಿಗಾರರಂತೆ ವರ್ತಿಸಿ ಡಿ,ಕೆ,ರವಿಯವರ ಅಸಹಜ ಸಾವಿನಲ್ಲಿ ಸಹಜವಾಗಿ ತಮಗೆ ದೊರಕಬಹುದಾದ ಮತಗಳಿಕೆಯ ಪ್ರಮಾಣದ ಏರಿಕೆಯನ್ನು ಊಹಿಸಿ ರೋಮಾಂಚನಗೊಳ್ಳುತ್ತಿರುವಂತಹ ಅಮಾನವೀಯ ದೃಶ್ಯಗಳು ಇಡೀ ಶಾಸಕಾಂಗ ವ್ಯವಸ್ಥೆಯ ಸೋಲನ್ನು ಧೃಢಪಡಿಸುತ್ತದೆ. ಆದರೆ ತನ್ನನ್ನು ತಾನು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ ಎಂದು ಕರೆದುಕೊಳ್ಳುವ ಪತ್ರಿಕಾರಂಗ ಇಂದು ಮಾರ್ಕೆಟ್ ಏಜೆನ್ಸಿಯ ಮಟ್ಟಕ್ಕೆ ಕುಸಿದಿದೆ.ಇದು ಮಾಧ್ಯಮವು ಸೇಲ್ಸ್‌ಮನ್‌ಗಳನ್ನು ತಯಾರಿಸುವ ಕಾರ್ಖಾನೆಯಾಗುವ ಪ್ರಕ್ರಿಯೆಗೆ ಮುನ್ನುಡಿ ಬರೆದಂತಿದೆ.

ಡಿಕೆ ರವಿ ಪ್ರಕರಣ : ಕಾಲಿಗೆ ಗುಂಡು ಕಟ್ಟಿಕೊಂಡು ನೀರಿಗಿಳಿದವರ ಪ್ರಲಾಪಗಳು…


– ರವಿ 


ಒಂದು ಅಸಹಜ ಸಾವಾಗಿದೆ. ಅದು ಆತ್ಮಹತ್ಯೆಯೊ ಕೊಲೆಯೋ? ಸತ್ಯ ಕೆಲವರಿಗಷ್ಟೇ ಗೊತ್ತು. ಜನಸಾಮಾನ್ಯರು ಕೊಲೆ ಎಂದು ಸಂಶಯ ಪಡುತ್ತಿದ್ದಾರೆ, ಯಾಕೆಂದರೆ ಸತ್ತ ವ್ಯಕ್ತಿ ದಕ್ಷನಾಗಿದ್ದ, ಪ್ರಾಮಾಣಿಕನಾಗಿದ್ದ, ಮತ್ತು ಪಟ್ಟಭದ್ರರನ್ನು ಎದುರು ಹಾಕಿಕೊಂಡಿದ್ದ. ಇದೆಲ್ಲವೂ ಮಾಧ್ಯಮಗಳಲ್ಲಿ ವರದಿಯಾಗಿತ್ತು, ಮತ್ತು ಮಾಧ್ಯಮಗಳುDKRavi_Kolar_PG ಹಾಗೆಯೇ ಜನಾಭಿಪ್ರಾಯ ರೂಪಿಸಿದ್ದವು. ಆತ್ಮಹತ್ಯೆ ಆಗಿದ್ದರೂ ಆತ ಕೇವಲ ವೈಯಕ್ತಿಕ ಕಾರಣಗಳಿಗೆ ಆತ್ಮಹತ್ಯೆ ಮಾಡಿಕೊಂಡಿರಲಾರ, ಯಾರೋ ಆತನನ್ನು ಅಂತಹ ಒಂದು ಪರಿಸ್ಥಿತಿಗೆ ದೂಡಿರಬಹುದು. ಹಾಗಿದ್ದರೆ ಅವರು ಯಾರು? ಇನ್ನು ಅದು ಕೇವಲ ವೈಯಕ್ತಿಕ ಕಾರಣಗಳಿಗೆ ಆಗಿರುವ ಆತ್ಮಹತ್ಯೆ ಆದರೆ ಏನದು ವೈಯಕ್ತಿಕ ವಿಚಾರ? ಕೊಲೆಯೋ, ಪ್ರಚೋದಿತ ಅತ್ಮಹತ್ಯೆಯೋ, ಸರಳ ಆತ್ಮಹತ್ಯೆಯೋ? ಮೂರನೆಯ ಕಾರಣದಿಂದ ಆಗಿದ್ದರೆ ಜನ ಬೇಸರ ವ್ಯಕ್ತಪಡಿಸಿ ಸುಮ್ಮನಾಗುತ್ತಾರೆ. ಮೊದಲೆರಡು ಕಾರಣದಿಂದ ಅಗಿದ್ದಾದಲ್ಲಿ ಅದು ಅವರಿಗೆ ವ್ಯವಸ್ಥೆಯ ಮೇಲೆ ಸಿಟ್ಟು ತರಿಸುತ್ತದೆ, ಅವಿಶ್ವಾಸ ಮೂಡಿಸುತ್ತದೆ, ಭ್ರಷ್ಟರ ಕಬಂಧ ಬಾಹುಗಳು ಎಲ್ಲಿಯವರೆಗೂ ಚಾಚಿರುವ ಪರಿ ನೋಡಿ ಬೆಚ್ಚಿ ಬೀಳುತ್ತಾರೆ.

ಇಂತಹ ಸಂಶಯದ ಸಮಯದಲ್ಲಿ ಸರ್ಕಾರಗಳು ತಮ್ಮ ಮೇಲೆ ಜನರ ವಿಶ್ವಾಸ ಬೆಳೆಯುವ ರೀತಿಯಲ್ಲಿ ನಡೆದುಕೊಳ್ಳಬೇಕು.

ಆದರೆ, ಈ ಪ್ರಕರಣದಲ್ಲಿ ರಾಜ್ಯ ಸರ್ಕಾರ ಮೊದಲ ದಿನದಿಂದಲೂ ತನ್ನ ವಿಶ್ವಾಸಾರ್ಹತೆಯನ್ನು ತಾನೇ ಹಾಳುಮಾಡಿಕೊಳ್ಳುವ ಕೆಲಸವನ್ನು ಪ್ರಜ್ಞಾಪೂರ್ವಕವಾಗಿ ಮಾಡುತ್ತಲೇ ಬಂತು. ಅದನ್ನು ಸರಿಪಡಿಸಲು ಅಧಿಕಾರವಾಗಲಿ, ಶಕ್ತಿಯಾಗಲಿ ಇಲ್ಲದ ಕೆಲವು ಸರ್ಕಾದ ಪರ ವಕ್ತಾರರು ಈಗ ತಮ್ಮ ಸರ್ಕಾರದ ಮತ್ತು ಪಕ್ಷದ ತಪ್ಪಿಗೆ ಬೇರೆಯವರ ಮೇಲೆ ಆರೋಪ, ಅವಿಶ್ವಾಸ, ಸಂಶಯ ವ್ಯಕ್ತಪಡಿಸುತ್ತಿದ್ದಾರೆ. ತಮ್ಮ ಅಯೋಗ್ಯತೆಗೆ, ತಪ್ಪಿಗೆ ಇನ್ನೊಬ್ಬರು ಊರುಗೋಲಾಗಬೇಕೆಂದು ಬಯಸುತ್ತಿದ್ದಾರೆ. ದೇಶದಲ್ಲಿ ಉಳಿದಿರುವ ಕಾಂಗ್ರೆಸ್ ಆಡಳಿತದ ದೊಡ್ಡ ರಾಜ್ಯ ಇದೊಂದೇ, ಇದನ್ನು ದುರ್ಬಲಗೊಳಿಸಬೇಡಿ ಎಂದು ಬೇಡುತ್ತಿದ್ದಾರೆ. ರಾಷ್ಟ್ರದಲ್ಲಿ ಅಮಿತ್ ಶಾ ಮತ್ತು ಮೋದಿಯನ್ನು ಎದುರುಗೊಳ್ಳುವುದು ಎಂದರೆ ರಾಜ್ಯದಲ್ಲಿ ಸರ್ಕಾರ ಉಳಿಸಿಕೊಳ್ಳುವುದು ಎನ್ನುವ “ಅಂತಿಮ ಸತ್ಯ”ಕ್ಕೆ ಇವರು ಶರಣಾಗಿಬಿಟ್ಟಿದ್ದಾರೆ. ನಿಜವೇ?

ವೈಯಕ್ತಿಕವಾಗಿ ನನಗೆ ಸಿದ್ಧರಾಮಯ್ಯನವರ ಬಗ್ಗೆ ಗೌರವವಿದೆ. ಅದನ್ನು ಹಲವು ವೇದಿಕೆಗಳಲ್ಲಿ ಬಹಿರಂಗವಾಗಿ ಹೇಳಿದ್ದೇನೆ. dkravi-kolar-dalitsಅದೇ ರೀತಿ ಅವರಿಂದ ಹೆಚ್ಚಿನದನ್ನು ನಿರೀಕ್ಷಿಸುತ್ತಲೇ ಬಂದಿದ್ದೇನೆ. (ಅವರಿಗೆ ನನ್ನ ಪರಿಚಯ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಮಂಡೂರಿನ ವಿಚಾರಕ್ಕೊಮ್ಮೆ ಮತ್ತು ಹಾರೋಹಳ್ಳಿಯ ವಿಚಾರಕ್ಕೊಮ್ಮೆ ಅವರ ಬಳಿ ಮಾತನಾದಲು ಎಚ್.ಎಸ್.ದೊರೆಸ್ವಾಮಿಯವರು ನನ್ನನ್ನೂ ಕರೆದೊಯ್ದಿದ್ದರು. ಆದರೆ, ಅವರಿಗೆ ನನ್ನನ್ನು ಪರಿಚಯಿಸಿದ ನೆನಪಿಲ್ಲ. ಈ ಮನುಷ್ಯನಿಗೆ ಕಾಳಜಿಗಳಿರುವುದು ನಿಜ.) ಅದರೆ ಅವರು ನಾನು ನಿರೀಕ್ಷಿಸಿದಷ್ಟು ಮತ್ತು ನಿರೀಕ್ಷಿಸಿದ್ದನ್ನು ಮಾಡುತ್ತಿದ್ದಾರೆ ಎಂದು ಹೇಳಲಾರೆ. ಹಲವು ಒಳ್ಳೆಯ ತೀರ್ಮಾನಗಳನ್ನು (ಕೆಪಿಎಸ್‌ಸಿ, ಮಂಡೂರು, ಹಲವು ಜನಪರ ಯೋಜನೆಗಳು ಮತ್ತು ಭಾಗ್ಯಗಳು, ಇತ್ಯಾದಿ) ಕೈಗೊಂಡಿದ್ದಾರೆ. ಹಾಗೆಯೆ ಹಲವು ಕೆಟ್ಟ (ಡಿಕೆ ಶಿವಕುಮಾರ್, ದಿನೇಶ್ ಗುಂಡೂರಾವ್, ಮಹದೇವಪ್ಪ, ರೋಷನ್ ಬೇಗ್, ದೇಶಪಾಂಡೆ ಯಂತಹ ಭ್ರಷ್ಟ ಮಂತ್ರಿಗಳ ರಕ್ಷಣೆ, ಕೆಪಿಎಸ್‌ಸಿ ಹಗರಣವನ್ನು ನಿಭಾಯಿಸಿದ ರೀತಿ, ಅರ್ಕಾವತಿ ಪ್ರಕರಣ ಮತ್ತು ಗಣಿ ಲೈಸನ್ಸ್ ನೀಡಿಕೆಯಲ್ಲಿಯ ಸಂಶಯಗಳು, ಲೋಕಾಯುಕ್ತವನ್ನು ಬಲಹೀನ ಮಾಡಲು ಹೋಗಿದ್ದು, ಅಧಿಕಾರಿಗಳ ನೇಮಕಾತಿಯಲ್ಲಿ ಲೋಪಗಳು, ಸರ್ಕಾರದಲ್ಲಿ ಮುಂದುವರಿದ ಮತ್ತು ಹೆಚ್ಚಿದ ಭ್ರಷ್ಟತೆ, ಇತ್ಯಾದಿ) ತೀರ್ಮಾನಗಳನ್ನೂ ತೆಗೆದುಕೊಂಡಿದ್ದಾರೆ. ಆದರೆ, ಇವರು ತಾವು ಮಾಡುತ್ತಿರುವ ತಪ್ಪಿಗಿಂತ ಹೆಚ್ಚಾಗಿ ತಮ್ಮ ಆಪ್ತರ ತಪ್ಪುಗಳನ್ನು ಪೋಷಿಸುತ್ತಿದ್ದಾರೆ. ಹಾಗೆಂದು ಜನರೂ ಭಾವಿಸುತ್ತಿದ್ದಾರೆ. ಇದಕ್ಕೆ ಸಿದ್ಧರಾಮಯ್ಯನವರೇ ಹೊಣೆಯೇ ಹೊರತು ಬೇರೆಯವರಲ್ಲ.

ಡಿಕೆ ರವಿ ಪ್ರಕರಣಕ್ಕೆ ವಾಪಸು ಬರುವುದಾದರೆ, ಈಗಾಗಲೆ ಈ ತನಿಖೆಯನ್ನು ಸಿಐಡಿ ಯವರು ನಡೆಸುತ್ತಿದ್ದಾರೆ. ಅದರೆ ರಾಜ್ಯದ ಬಹುತೇಕ ಜನ ಸಿಬಿಐ ಬೇಕು ಎಂದರು. ಯಾಕೆಂದರೆ ಈ ಪ್ರಕರಣದಲ್ಲಿ ಕೆಲವು ಪ್ರಭಾವಿ ಮಾಫಿಯಾಗಳ, ಸರ್ಕಾರದ ಕೆಲವು ಮಂತ್ರಿಗಳ, ಆಡಳಿತ ಪಕ್ಷದ ಕೆಲವು ಶಾಸಕರ ಪಾತ್ರ ಇರಬಹುದು ಎಂಬ ಗುಮಾನಿ ಜನರಿಗೆ ಬಂತು. ಅದರಲ್ಲಿ ಕೆಲವು ಗುಮಾನಿಗಳನ್ನು ಮಾಧ್ಯಮದ ಒಂದು ವರ್ಗ ಹಬ್ಬಿಸಿದ್ದೇ ಆಗಿರಬಹುದು. ಅದನ್ನು ಎಂದಿನಂತೆ ಈ ಸರ್ಕಾರ ಸತ್ಯ ಮತ್ತು ಪ್ರಾಮಾಣಿಕತೆಯ ಹಾದಿಯಲ್ಲಿ ನಿಭಾಯಿಸಲು ಸೋತೂ ಹೋಯಿತು. (ರಾಜ್ಯದ ಆಡಳಿತ ನಡೆಸುವವರು ಕೇವಲ ಸರ್ಕಾರವನ್ನು ಭ್ರಷ್ಟತೆಯಿಂದ ಮುಕ್ತವಾಗಿಡುವ ಕೆಲಸ ಮಾಡಿದರಷ್ಟೇ ಸಾಲದು; ಸಮಾಜವನ್ನು ಕೆಲವು ಭ್ರಷ್ಟತೆಗಳಿಂದ ಮುಕ್ತ ಮಾಡುವ ಕೆಲಸ ಮಾಡಬೇಕು. ಇಲ್ಲವಾದಲ್ಲಿ ಅದಕ್ಕೆ ತೊಡರುಗಾಲುಗಳು ಸಹಜ. ಸರ್ಕಾರದ ಮೌಲ್ಯಗಳು ಜನರ ಮೌಲ್ಯಗಳಾಗದಿದ್ದಲ್ಲಿ ಸರ್ಕಾರಕ್ಕೆ ಜನಬೆಂಬಲ ಕ್ಷೀಣಿಸುತ್ತದೆ. ತನ್ನ ಮೌಲ್ಯಗಳನ್ನು ಅಪಮೌಲ್ಯಗಳನ್ನಾಗಿ ತಿರುಚಿ ವರದಿ ಮಾಡುವ ಮಾಧ್ಯಮಗಳ ಕೆಲವು ಭ್ರಷ್ಟರನ್ನು ಗೊತ್ತಿದ್ದೂ ಈ ಸರ್ಕಾರ ಪೋಷಿಸುತ್ತಾ ಬಂದಿದೆ. ಅವರ ಅಕ್ರಮಗಳಲ್ಲಿ ತಾನೂ ಪಾಲು ಪಡೆದುಕೊಂಡಿದೆ. ಅಂತಹವರನ್ನೇ ಆರಿಸಿ ತನ್ನ ಸಲಹೆಗಾರರನ್ನಾಗಿಯೂ ಮಾಡಿಕೊಳ್ಳುತ್ತದೆ. dkravi-cm-siddharamaiahತಾನೇ ನೈತಿಕವಾಗಿ ಶುದ್ಧವಾಗಿರದ ಮನುಷ್ಯ ಬೇರೆಯವರನ್ನು ಶುದ್ಧ ಮಾಡುವುದು ಕಠಿಣ ಸವಾಲು.)

ಎಂದಿನಂತೆ ಜನಾಭಿಪ್ರಾಯದ ವಾಸನೆ ಹಿಡಿದ ವಿರೋಧ ಪಕ್ಷಗಳು, ಈ ಸಾವಿನಲ್ಲಿಯ ಸಂಶಯಗಳು ಸರ್ಕಾರದ ಮಂತ್ರಿಗಳ ತನಕವೂ ಹೋಗಬಹುದು ಎಂದು ಗೊತ್ತಾದಾಗ ಸರ್ಕಾರವನ್ನು ಮುಜುಗರಪಡಿಸುವ ಕಾರಣಕ್ಕೆ ಸಿಬಿಐ ತನಿಖೆ ಆಗಲೇಬೇಕು ಎಂದು ಧರಣಿ ಕೂತವು. ಆದರೆ ಸರ್ಕಾರ ಸಿಬಿಐ ಸಾಧ್ಯವೇ ಇಲ್ಲ ಎಂದಿತು. ಅದು ಸಹಜ. ಆದರೆ ಅದು ಪಟ್ಟು ಹಿಡಿದ ರೀತಿ, ಕೊಟ್ಟ ಕಾರಣಗಳು, ತೇಲಿಬಿಟ್ಟ ಮಾತುಗಳು, ಸಾಕ್ಷ್ಯಗಳನ್ನು ಕಳ್ಳತನದಲ್ಲಿ ಸೋರಿಕೆ ಮಾಡಿದ ರೀತಿ, ಕೆಲವು ಮಾಧ್ಯಮಗಳಲ್ಲಿ ನೆಟ್ಟಿಸಿದ ಸುದ್ದಿಗಳು, ಇವೆಲ್ಲವೂ ಸರ್ಕಾರದ ಬಗ್ಗೆ ಅವಿಶ್ವಾಸವನ್ನು ಬೆಳೆಸುತ್ತಲೇ ಹೋದವು. ಉಗುರಲ್ಲಿ ಹೋಗುವುದಕ್ಕೆ ಕೊಡಲಿ ಬಳಸಬೇಕಾಗಿ ಬಂದಿದೆ.

ಈ ಸರ್ಕಾರದ ಅತಿ ಅದಕ್ಷ ಮಂತ್ರಿಗಳಲ್ಲಿ ಗೃಹಮಂತ್ರಿ ಕೆ.ಜೆ. ಜಾರ್ಜ್ ಸಹ ಒಬ್ಬರು. ಅವರ ಮೇಲೆ ಭ್ರಷ್ಟಾಚಾರದ ನೇರ ಅರೋಪಗಳಿಲ್ಲದಿದ್ದರೂ ದಕ್ಷತೆಯಿಂದ ಕೆಲಸ ಮಾಡಿ ತೋರಿಸಿದ್ದನ್ನು ಈ ರಾಜ್ಯದ ಜನತೆ ಕಂಡಿಲ್ಲ. ಹಾಗೆಯೇ ಅವರೊಬ್ಬ ರಾಜಕೀಯಕ್ಕೆ ಬಂದನಂತರ ಹೆಚ್ಚು ಶ್ರೀಮಂತರಾಗಿರುವವರು ಎಂಬ ಭಾವನೆಯೂ ಇದೆ. ಅವರ ಖಾತೆಗೆ ಸಂಬಂಧಿಸಿದ ಅನೇಕ ಪ್ರಕರಣಗಳಲ್ಲಿ ಗಂಭೀರವಾಗಿ ಎಡವಿ ಜನರ ಮುಂದೆ ನಗೆಪಾಟಲಿಗೀಡಾಗಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಅವರು ರಾಜ್ಯದ ಜನತೆಯ ವಿಶ್ವಾಸ ಕಳೆದುಕೊಂಡಿದ್ದಾರೆ. ಜನತೆಯ ವಿಶ್ವಾಸ ಕಳೆದುಕೊಂಡ ಮಂತ್ರಿಯನ್ನು ತನ್ನ ಸಂಪುಟದಲ್ಲಿಟ್ಟುಕೊಳ್ಳುವ ಮುಖ್ಯಮಂತ್ರಿ ಸಹಜವಾಗಿ ತಾವೂ ಆ ವಿಶ್ವಾಸದ ಕೊರತೆಯನ್ನು ಎದುರಿಸುತ್ತಾರೆ. ಇನ್ನು ಡಿಕೆ ಶಿವಕುಮಾರ್ ಎನ್ನುವ ಇನ್ನೊಬ್ಬ ಮಂತ್ರಿಯ ಬಗ್ಗೆ ಹೇಳುವುದೇ ಬೇಡ. ಸುಮಾರು ಒಂದು ದಶಕದ ಅವಧಿಯಲ್ಲಿ ಸಹಸ್ರಾರು ಕೋಟಿ ರೂಗಳ ಒಡೆಯರಾಗಿದ್ದಾರೆ ಅವರು. ಬಹುಶಃ ಇಪ್ಪತ್ತೈದರ ವಯಸ್ಸಿಗೆಲ್ಲ ಜನಪ್ರತಿನಿಧಿಯಾಗಿ ಆಯ್ಕೆಯಾದ ಇವರು ಅಲ್ಲಿಂದ ಇಲ್ಲಿಯತನಕ ಜನಪ್ರತಿನಿಧಿಯಾಗಿಯೇ ಮುಂದುವರೆದಿದ್ದಾರೆ. ಎಲ್ಲಿಯೂ ಬ್ರೇಕ್ ಇಲ್ಲ. ಆದರೂ ಹೇಳಿಕೊಳ್ಳುವುದು “ತಾನೊಬ್ಬ ಬ್ಯುಸಿನೆಸ್ ಮ್ಯಾನ್” ಎಂದು. ಧಂಧೆ ಮಾಡುವ ಜನ ಧಂಧೆ ಮಾಡಬೇಕೆ ಹೊರತು ಸಂಪುಟದಲ್ಲಿರಬಾರದು. ಇಟ್ಟುಕೊಂಡವರ್ಯಾರು, ಸಹಿಸಿಕೊಂಡವರ್ಯಾರು? ಡಿಕೆ ರವಿಯ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಜನರ ರೊಚ್ಚು ಡಿಕೆ ಶಿವಕುಮಾರರ ಮೇಲೆ ತಿರುಗಿತ್ತು ಮತ್ತು ಅವರನ್ನು ಅಲ್ಲಿ ಸೇರಿದ್ದ ಜನ ಅವಾಚ್ಯ ಶಬ್ದಗಳಿಂದ ನಿಂದಿಸಿದರು ಎಂದು ಮಾಧ್ಯಮ ಮಿತ್ರರು ಹೇಳುತ್ತಾರೆ. ಆ ಉಗಿತದ ಅಂತಿಮ ನಿಲ್ದಾಣ ಮುಖ್ಯಮಂತ್ರಿಯ ಹೆಗಲು. ಹೀಗೆ ಇನ್ನೂ ಹಲವು ಭ್ರಷ್ಟ-ಕಳಂಕಿತ ಮಂತ್ರಿಗಳ ಪಟ್ಟಿ ಕೊಡಬಹುದು. ಇನ್ನು ಅದಕ್ಷ ಮಂತ್ರಿಗಳ ಪಟ್ಟಿಯಂತೂ ಬಹಳ ದೊಡ್ಡದಿದೆ. ತನ್ನ ಸಂಪುಟದಲ್ಲಿರುವ ಒಳ್ಳೆಯ ಸಚಿವರ ಕೆಲಸದ ಕ್ರೆಡಿಟ್ ಮುಖ್ಯಮಂತ್ರಿಗಳಿಗೆ ಸಲ್ಲುವುದು ಅಪರೂಪ. ಅದರೆ ಅದಕ್ಷ ಮತ್ತು ಭ್ರಷ್ಟ ಸಚಿವರ ಕಳಂಕಗಳು ಅವರು ಸಂಪುಟದಲ್ಲಿರುವ ತನಕ ಮುಖ್ಯಮಂತ್ರಿಗಳಿಗೇ ಅಂಟಿಕೊಳ್ಳುತ್ತಿರುತ್ತದೆ. ಈ ಮುಖ್ಯಮಂತ್ರಿ ಕಾಲಿಗೆ ಗುಂಡುಕಲ್ಲುಗಳನ್ನು ಕಟ್ಟಿಕೊಂಡು ಆಳದ ಹೊಳೆಯಲ್ಲಿ ಈಜಲು ಇಳಿದಿದ್ದಾರೆ. ಬಹುತೇಕ ಸಂದರ್ಭದಲ್ಲಿ ಅದು ಅವರದೇ ಆಯ್ಕೆ ಅಗಿದೆ. ಅದು ಅವರ ಆಯ್ಕೆ ಅಲ್ಲ, ಅದು ಹೇರಿಕೆ ಎಂದು ಹೇಳುವವರು ಆತ್ಮದ್ರೋಹ ಮಾಡಿಕೊಳ್ಳುತ್ತಿದ್ದಾರೆ.

ಸರ್ಕಾರದಲ್ಲಿರುವ ಕೆಲವರು ಮತ್ತವರ ಬೆಂಬಲಿಗರು ಕಳೆದ ಎರಡು ಮೂರು ದಿನಗಳಿಂದ ಡಿಕೆ ರವಿಯ ಸಾವು ಸಂಪೂರ್ಣವಾಗಿ ವೈಯಕ್ತಿಕ ನೆಲೆಯದ್ದು ಎಂದು ಹೇಳುತ್ತಿದ್ದಾರೆ ಮತ್ತು ಸಿಬಿಐ ತನಿಖೆ ಬೇಡ ಎನ್ನುತ್ತಿದ್ದಾರೆ. ಸಿಬಿಐಗೆ ಕೊಟ್ಟರೆ ಸಿಐಡಿ ಪೋಲಿಸರ ಸ್ಥೈರ್ಯ ಕುಗ್ಗುತ್ತದೆ ಎನ್ನುವ ಮಾತೂ ಅಡುತ್ತಿದ್ದಾರೆ. ಮತ್ತು ಅದೇ ಸಂದರ್ಭದಲ್ಲಿ ಬಿಜೆಪಿಯವರು ಸಿಬಿಐ ಅನ್ನು ದುರುಪಯೋಗ ಪಡಿಸಿಕೊಂಡು ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಸಂಚಕಾರ ತರುತ್ತಾರೆ ಎನ್ನುವ ಭಯಾತಂಕಗಳನ್ನೂ ತೋಡಿಕೊಳ್ಳುತ್ತಿದ್ದಾರೆ. ಇದರಲ್ಲಿ ಸಿಐಡಿ ಪೋಲಿಸರ ಸ್ಥೈರ್ಯ ಕುಗ್ಗುತ್ತದೆ ಎನ್ನುವ ಮಾತಂತೂ ದುರ್ಬಲ ವಾದ. ಎಷ್ಟು ನಿಷ್ಪಕ್ಷಪಾತ ಸಿಐಡಿ ತನಿಖಾ ವರದಿಗಳನ್ನು ಈ ಸರ್ಕಾರ ಒಪ್ಪಿಕೊಂಡಿದೆ ಮತ್ತು ಎಷ್ಟು ತನಿಖೆಗಳಲ್ಲಿ ಮಂತ್ರಿ-ಮುಖ್ಯಮಂತ್ರಿಗಳು ಪ್ರಭಾವ ಬೀರದೆ ಅವರ ಸ್ಥೈರ್ಯ ಮತ್ತು ಪ್ರಾಮಾಣಿಕತೆ ಹೆಚ್ಚಿಸಿದ್ದಾರೆ? ಎಷ್ಟು ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳನ್ನು ಈ ಸರ್ಕಾರ ಉತ್ತೇಜಿಸಿದೆ ಮತ್ತು ಎಷ್ಟು ಭ್ರಷ್ಟ ಮತ್ತು ಅದಕ್ಷ ಅಧಿಕಾರಿಗಳನ್ನು ಈ ಸರ್ಕಾರ ಶಿಕ್ಷಿಸಿದೆ ಅಥವ ಸರಿದಾರಿಗೆ ತಂದಿದೆ?

ಇವರ ಏಕೈಕ ಭಯ ಇರುವುದು ಸಿಬಿಐ ತನಿಖೆಗೆ ಕೊಟ್ಟರೆ ಬಿಜೆಪಿಯವರು ಅದನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ ಎನ್ನುವುದು. dkravi-parents-siddharamaiahಮೊಟ್ಟಮೊದಲಿಗೆ ಅಂತಹ ಭಯಕ್ಕೆ ಕಾರಣಕರ್ತರು ಯಾರು? ಕೇಂದ್ರದಲ್ಲಿ ಇತ್ತೀಚೆಗೆ ಹತ್ತು ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್‌ನವರೇ ತಾನೆ? ಕೇಂದ್ರ ಸರ್ಕಾರದ ಆಡಳಿತ ಪಕ್ಷ ಸಿಬಿಐ ಅನ್ನು ದುರುಪಯೋಗ ಪಡಿಸಿಕೊಳ್ಳದಂತೆ ಕಾನೂನು ತನ್ನಿ ಎಂದು ಕಾಂಗ್ರೆಸ್ ಮೇಲೆ ಇಡೀ ದೇಶದಲ್ಲಿ ಎಷ್ಟು ಒತ್ತಡ ಇರಲಿಲ್ಲ? ಆ ಬೇಡಿಕೆ ಕೆಟ್ಟ ಬೇಡಿಕೆ ಆಗಿತ್ತೆ? ಜನವಿರೋಧಿ ಆಗಿತ್ತೆ? ಅಪ್ರಜಾಸತ್ತಾತ್ಮಕ ಆಗಿತ್ತೇ? ಅನೈತಿಕವಾದದ್ದಾಗಿತ್ತೆ? ಆಗಿಲ್ಲದಿದ್ದಲ್ಲಿ ಯಾಕೆ ಮಾಡಲಿಲ್ಲ? ನೀವು ಮಾತ್ರ ಅದರ ದುರುಪಯೋಗದ ಉಪಯೋಗ ಪಡೆಯಬೇಕು. ಬೇರೆಯವರು ಅದನ್ನೇ ಪಡೆಯಲು ಹೋದಾಗ ಅಗ ನಿಮಗೆ ಭೂತಕಾಲದ ನಿಮ್ಮ ಅಕೃತ್ಯಗಳು ಮತ್ತು ಜವಾಬ್ದಾರಿಹೀನತೆ ಮರೆತುಹೋದವೇ? ಹೋಗಲಿ, ನಿಮ್ಮ ಪಕ್ಷದ ಕೇಂದ್ರದ ನಾಯಕರ ವಿಚಾರ ಬೇಡ. ಇಲ್ಲಿ ರಾಜ್ಯದಲ್ಲಿ ನೀವು ಸ್ವತಂತ್ರ ತನಿಖಾ ಸಂಸ್ಥೆಯನ್ನೇನಾದರೂ ಕಟ್ಟಲು ಮುಂದಾಗಿದ್ದೀರಾ? ಇದೇ ಸಿದ್ಧರಾಮಯ್ಯನವರು ಈಗ ಅಷ್ಟಿಷ್ಟು ಸ್ವತಂತ್ರವಾಗಿರುವ ಲೋಕಾಯುಕ್ತ ಸಂಸ್ಥೆಯನ್ನೇ ಬಲಹೀನ ಮಾಡುವ ನೀಚಕೃತ್ಯಕ್ಕೆ ಮುಂದಾಗಿದ್ದರು. ನೀವೆಂದಾದರೂ ಪ್ರಬಲ, ಬಲಿಷ್ಟ, ಸ್ವತಂತ್ರ, ಪ್ರಜಾಸತ್ತಾತ್ಮಕ, ಸಂವಿಧಾನಾತ್ಮಕ ಸಂಸ್ಥೆಗಳನ್ನು ಕಟ್ಟಲಾಗಲಿ, ಬಲಗೊಳಿಸಲಾಗಲಿ ಮುಂದಾಗಿದ್ದೀರಾ? ನೀವು ದಾರಿ ತೋರಿಸಿದ್ದರೆ, ಇನ್ನೊಬ್ಬರ ಅನೈತಿಕತೆ ಮತ್ತು ಅಕ್ರಮಗಳನ್ನು ಎತ್ತಿ ತೋರಿಸುವ ನೈತಿಕತೆ ಇರುತ್ತಿತ್ತು. ಜನ ನಿಮ್ಮ ಮಾತುಗಳನ್ನು ವಿನಾಕಾರಣ ಸಂಶಯಪಡದೆ ನಂಬುತ್ತಿದ್ದರು. ನಿಮ್ಮ ವಿಶ್ವಾಸಾರ್ಹತೆ ಕುಗ್ಗಲು ಕಾರಣ ಯಾರು?

ಇನ್ನು ಬಿಜೆಪಿಯವರು ಸಿಬಿಐ ಅನ್ನು ದುರುಪಯೋಗ ಪಡಿಸಿಕೊಳ್ಳುತ್ತಾರೆ ಎಂತಲೇ ಇಟ್ಟುಕೊಳ್ಳೋಣ. ಹೇಗೆ? ನೀವು ತಪ್ಪೇ ಮಾಡಿಲ್ಲ ಎನ್ನುತ್ತಿದ್ದೀರಿ. ಹಾಗಿದ್ದಲ್ಲಿ ಯಾವ ರೀತಿಯ ದುರುಪಯೋಗ ಆಗಬಹುದು? ಕೆಜೆ ಜಾರ್ಜ್‌ರನ್ನು, ಡಿಕೆ ಶಿವಕುಮಾರರನ್ನು, ಕೊನೆಗೆ ಮುಖ್ಯಮಂತ್ರಿಯನ್ನೂ ಸಮನ್ ಮಾಡಬಹುದು ಎನ್ನುವುದಲ್ಲವೇ ನಿಮ್ಮ ಭಯ? ಹಾಗಿದ್ದಲ್ಲಿ, ಡಿಕೆ ರವಿ ತಾನು ಮುಖ್ಯಮಂತ್ರಿಯ ಅಧೀನದಲ್ಲಿರುವ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಜಂಟಿ ಕಮಿಷನರ್ ಅಗಿದ್ದಾಗ ಕೆಜೆ ಜಾರ್ಚ್‌ರಿಗೆ ಸಂಬಂಧಿಸಿದ ಕಂಪನಿಯ ಮೇಲೆ ದಾಳಿ ಮಾಡಿದ್ದು ನಿಜ ತಾನೆ? ಆ ದಾಳಿಯ ಮೊದಲು ಅಥವ ನಂತರ ಜಾರ್ಜ್‌ರವರು ರವಿಯ ಮೇಲೆ ಅಕ್ರಮ ಒತ್ತಡಗಳನ್ನು ತರದೇ ಇದ್ದಲ್ಲಿ ಭಯ ಏಕೆ? ಅವರು ಹಾಗೆ ಮಾಡಿದ್ದೇ ಆದಲ್ಲಿ ಅವರಿಗೆ ಶಿಕ್ಷೆಯಾಗಬೇಕೆ ಬೇಡವೆ? ಇದೇ ಪ್ರಶ್ನೆಯನ್ನು ನಾವು ಡಿಕೆ ಶಿವಕುಮಾರರ ವಿಚಾರಕ್ಕೂ ಕೇಳಬಹುದು. ಇನ್ನು ತನ್ನ ಅಧೀನ ಅಧಿಕಾರಿಯಾಗಿದ್ದ ಮನುಷ್ಯ ಅಸಹಜ ಸಾವು ಅಪ್ಪಿದಾಗ ಮೇಲಧಿಕಾರಿಗಳನ್ನೂ ವಿಚಾರಣೆ ಮಾಡುವುದು ಸಹಜ ಪ್ರಕ್ರಿಯೆ. ಹಾಗಾಗಿ ಮುಖ್ಯಮಂತ್ರಿಯನ್ನೂ ಈ ಕಾರಣಕ್ಕೆ ಕರೆದು ವಿಚಾರಣೆ ಮಾಡಿದರೆ ಅದನ್ನು ತಪ್ಪೆಂದು ಭಾವಿಸಬಾರದು. ಸಿಐಡಿ ಸಂಸ್ಥೆಯು ಸ್ವತಂತ್ರವಾಗಿದ್ದ ಪಕ್ಷದಲ್ಲಿ ಅದು ಈಗಾಗಲೆ ಮುಖ್ಯಮಂತ್ರಿಯವರ ಹೇಳಿಕೆಯನ್ನೂ ಪಡೆಯುತ್ತಿತ್ತು. ಪಡೆಯದೇ ಇದ್ದರೆ, ನೀವು ನ್ಯಾಯಪಕ್ಷಪಾತಿಯಾಗಿದ್ದಲ್ಲಿ ಅದನ್ನು ಒತ್ತಾಯಿಸುತ್ತೀರಿ ಸಹ. ನಮ್ಮ ಫ್ಯೂಡಲ್ ವ್ಯವಸ್ಥೆಯ ಅಧಿಕಾರದ ಮದದಿಂದಲೋ, ಅಥವ ದುರುಪಯೋಗದಿಂದಲೋ, ಅಥವ ತನಿಖಾಧಿಕಾರಿಗಳಿಗೇ ಸ್ವತಃ ಧೈರ್ಯ ಇರದೇ ಇರುವುದರಿಂದಲೋ ಇಲ್ಲಿ ಆ ಸಹಜ ಪ್ರಕ್ರಿಯೆ ಸಾಧ್ಯವಾಗಿಲ್ಲ. ಮಾಡಬೇಕಾದ ಕೆಲಸವನ್ನು ಸಿಬಿಐ ಮಾಡಿದರೆ ಅದನ್ನು ದುರುಪಯೋಗ ಎಂದೇಕೆ ಹೇಳಬೇಕು? (ಇನ್ನು ಡಿಕೆ ರವಿಯವರನ್ನು ಕೋಲಾರದಿಂದ ಬೆಂಗಳೂರಿಗೆ ಅವಧಿಗೆ ಮುಂಚೆಯೇ ವರ್ಗ ಮಾಡಲು ಇದ್ದ ಕಾರಣಗಳೇನು, ಆಯಾಮಗಳೇನು ಎನ್ನುವುದೂ ಬಯಲಾಗಬೇಕು. ಅವರು ವರ್ಗಾವಣೆ ಅಗುವುದಕ್ಕೆ ಮೊದಲು ಮತ್ತು ಸಾಯುವ ಮೊದಲು ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಅವರು ಕೈಗೆ ತೆಗೆದುಕೊಂಡಿದ್ದ ಕೆಲಸಗಳೇನು ಎನ್ನುವುದೂ ಅ ವಿಚಾರಣೆಯಲ್ಲಿ ದಾಖಲಾಗಬೇಕು. ಇವೆಲ್ಲವೂ ಸೋಮವಾರ ಬಹಿರಂಗವಾಗಲಿರುವ ಸಿಐಡಿಯ ಪ್ರಾಥಮಿಕ ತನಿಖಾವರದಿಯಲ್ಲಿ ಇರುತ್ತದೆಯೇ? ಇಲ್ಲವೇ ಇಲ್ಲ. ಅದರೆ ಸಿಬಿಐ ಇದನ್ನು ಮಾಡುತ್ತದೆ ಎನ್ನುವ ವಿಶ್ವಾಸ ನನಗಿದೆ.)

ಇನ್ನು ಇದೇ ಮುಖ್ಯಮಂತ್ರಿ ಮತ್ತು ಗೃಹಮಂತ್ರಿಗಳ ಉಸ್ತುವಾರಿಯಲ್ಲಿ ಬಹಳ ನೀಚವೂ, ಅನೈತಿಕವೂ, ಅಕ್ರಮವೂ, ಗಂಭೀರವೂ ಆದ ಲೋಪವೊಂದನ್ನು ಎಸಗಲಾಗಿದೆ. ತನಿಖೆ ಪ್ರಗತಿಯಲ್ಲಿ ಇರುವಾಗಲೇ ಸತ್ತ ವ್ಯಕ್ತಿಯ ಫೋನ್ ಕರೆಗಳ ವಿವರಗಳನ್ನು ಮತ್ತು ಫೋನ್ ಹಾಗೂ ವಾಟ್ಸ್ಯಾಪ್ ಸಂದೇಶಗಳ ಪ್ರತಿಯನ್ನು ಎಲ್ಲಾ ಮಾಧ್ಯಮ ಸಂಸ್ಥೆಗಳಿಗೆ ತಲುಪಿಸಲಾಗಿದೆ ಎಂಬ ಮಾಹಿತಿ ಇದೆ. ಕೆಲವು ಪತ್ರಕರ್ತರು ಅದರಲ್ಲಿಯ ಕೆಲವು ಭಾಗಗಳನ್ನು ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದಾರೆ. ಕೆಲವು ಪತ್ರಿಕೆಗಳೂ ಪ್ರಕಟಿಸಿವೆ. ಇವೆಲ್ಲಾ ಯಾಕಾಗಿ? ಯಾಕಾಗಿ ಇದನ್ನು ಬಹಿರಂಗ ಪಡಿಸುತ್ತಿದ್ದೀರಾ? ಸತ್ತಿರುವ ಮನುಷ್ಯ ನೀವೆಂದುಕೊಂಡಷ್ಟು ದೊಡ್ಡ ಮನುಷ್ಯ ಅಲ್ಲ, ಹಾಗಾಗಿ ಸಿಐಡಿ ತನಿಖೆ ಸಾಕು, ಸಿಬಿಐ ಬೇಕಾಗಿಲ್ಲ ಎಂದಲ್ಲವೇ ನಿಮ್ಮ ವಾದ? ಆ ಮನುಷ್ಯ ಸತ್ತಿದ್ದು ವೈಯಕ್ತಿಕ ಕಾರಣಕ್ಕೆ ಎಂದು ಕೆಲವರು ಈಗಾಗಲೆ ಷರಾ ಬರೆದುಬಿಟಿದ್ದಾರೆ. ಅದನ್ನು ಹೇಳುವುದಕ್ಕೆ ಮೊದಲು ನೀವು ಫೋರೆನ್ಸಿಕ್ ರಿಪೋರ್ಟ್ ನೋಡಿರುತ್ತೀರಿ ಎಂದು ಭಾವಿಸುತ್ತೇನೆ. ಯಾಕೆಂದರೆ ಎಲ್ಲಕ್ಕಿಂತ ಮೊದಲು ನಾವು ಪ್ರಾಥಮಿಕವಾಗಿ ಪರಿಗಣಿಸಬೇಕಾದ ವಿವರಗಳು ಅದರಲ್ಲಿರುತ್ತವೆ. ಹಾಗಿದ್ದಲ್ಲಿ ಅದು ನಿಮಗೆ ಸಿಕ್ಕಿದೆಯೇ? ಹೇಗೆ ಸಿಕ್ಕಿತು? ಅಥವ ಅದರಲ್ಲಿ ಇದೇ ಇರುತ್ತದೆ ಎಂದು ನಿಮಗೆ ಹೇಗೆ ಗೊತ್ತು? ನೀವೇ ಬರೆಸಿದ್ದೀರಾ? ಇಂತಹ ಪ್ರಶ್ನೆಗಳು ಎದ್ದಾಗ ನಿಮ್ಮ ವಿಶ್ವಾಸಾರ್ಹತೆ ಕುಗ್ಗುತ್ತದೆ ಎನ್ನುವ ಕಲ್ಪನೆಯಾದರೂ ಈ ಪತ್ರಕರ್ತ ಮಿತ್ರರಿಗೆ ಇದೆಯೇ? ಯಾರಿಗಾಗಿ ಇವರು ತಮ್ಮ ವೈಯಕ್ತಿಕ ಗೌರವ ಮತ್ತು ನಂಬಿಕೆಯನ್ನು ಪಣಕ್ಕೊಡ್ಡುತ್ತಿದ್ದಾರೆ? ಜಾರ್ಜ್, ಡಿಕೆ ಶಿವಕುಮಾರ್, ಸಿದ್ಧರಾಮಯ್ಯ,??? (ಇನ್ನು ಮುಖ್ಯಮಂತ್ರಿಗಳು ಪೊಸ್ಟ್‌ಮಾರ್ಟಮ್ ವರದಿಯನ್ನು ಮಾರ್ಪಡಿಸಲು ಹೆಣವನ್ನು ನೋಡುವ ನೆಪದಲ್ಲಿ ವಿಕ್ಟೋರಿಯ ಆಸ್ಪತೆಗೆ ಹೋಗಿದ್ದರು ಎನ್ನುವ ಮಾತನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ಇದು ಅತ್ಯಂತ ಬಾಲಿಶ, ಬೇಜವಬ್ದಾರಿಯ, ಕೀಳು ಅಭಿರುಚಿಯ ಮಾತು. ಎಂತೆಂತಹ ಅನರ್ಹರು, ಅಪ್ರಬುದ್ಧರು, ಅಯೋಗ್ಯರು, ಭ್ರಷ್ಟರು, ಕ್ರಿಮಿನಲ್‌ಗಳು ನಮ್ಮ ಮುಖ್ಯಮಂತ್ರಿಗಳಾಗಿದ್ದರು ಎಂದರೆ, ಈಗ ಕರ್ನಾಟದಲ್ಲಿ ಜೀವಂತ ಇರುವ ಎಂಟು ಮಾಜಿ ಮುಖ್ಯಮಂತ್ರಿಗಳ ಪಟ್ಟಿ ನೋಡಿದರೆ ಸಾಕು; ಗಾಬರಿಯಾಗುತ್ತದೆ, ದುಸ್ವಪ್ನದಂತೆ ಕಾಣಿಸುತ್ತದೆ.)

ಇದೇ ಸಂದರ್ಭದಲ್ಲಿ ಕೆಲವರು ಈ ಇಡೀ ಪ್ರಕರಣವನ್ನು ಆರೆಸ್ಸೆಸ್ ಮತ್ತು ಬಿಜೆಪಿಯವರು ಅಂತರ್ಜಾಲದಲ್ಲಿ ಮತ್ತು ಎಸ್ಸೆಮ್ಮೆಸ್‌ಗಳಲ್ಲಿ ಸುಳ್ಳು ಸುದ್ಧಿಗಳನ್ನು ಹಬ್ಬಿಸುವ ಮೂಲಕ ಉದ್ಧೀಪಿಸುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಅದಕ್ಕೆ ಅಮಾಯಕ ಜನ ಬಲಿಯಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಪ್ರಶ್ನೆಗಳನ್ನು ಕೇಳುತ್ತಿರುವವರಲ್ಲಿ ಬಹುತೇಕರು ಕಾಂಗ್ರೆಸ್ಸಿಗರು ಮತ್ತವರ ಬೆಂಬಲಿಗರು. ಅವರಿಗೆ ನನ್ನ ಒಂದು ಪ್ರಶ್ನೆ, ಇಂತಹ ಒಂದು ದಾಳಿಯನ್ನು ಎದುರಿಸಲು ನಿಮ್ಮ ಸಿದ್ಧತೆಗಳೇನು? ನಿಮ್ಮ ಹೋರಾಟವನ್ನು ಅನ್ಯರು ಬಂದು ನಿಮಗಾಗಿ ಏಕೆ ಮಾಡಬೇಕು? ಇಂತಹ ದೈನೇಸಿ ಸ್ಥಿತಿಗೆ ಕಾರಣಗಳೇನು? ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೆ ಕನಿಷ್ಟ ಎಂದರೂ ಹತ್ತಾರು ಸಾವಿರ ರೂಪಾಯಿ ಜಾಹಿರಾತು ಕೊಟ್ಟು ನಿಮ್ಮದೇ ಪಕ್ಷದ ಈ ರಾಜ್ಯದ ಪರಮಭ್ರಷ್ಟ ಸಚಿವರೊಬ್ಬರು ಕ್ರಿಯಾಶೀಲರಾಗಿರುವುದು ನಿಮಗೆ ಗೊತ್ತಿಲ್ಲವೇ? ಅವರು ಅಲ್ಲಿ ಎಂದಾದರೂ ಪಕ್ಷವನ್ನಾಗಲಿ ಸರ್ಕಾರವನ್ನಾಗಲಿ ಸಮರ್ಥಿಸಿದ್ದನ್ನು ನೋಡಿದ್ದೀರಾ? ನಿಮ್ಮ ಕಾರ್ಯಕರ್ತರು ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗದೇ ಇರುವುದಕ್ಕೆ ಕಾರಣಗಳೇನು? ನಿಮ್ಮ ಸರ್ಕಾರದ ಎಡವಟ್ಟು ಕೆಲಸಗಳನ್ನು ಸಾರ್ವಜನಿಕವಾಗಿ ಸಮರ್ಥಿಸಿಕೊಳ್ಳುವುದು ಎಷ್ಟೊಂದು ಹಿಂಸೆಯ ಕೆಲಸ ಎಂದು ನಿಮಗೆ ಗೊತ್ತಿದೆಯೆ? (ಇದು ಕೆಲವರಿಗೆ ಗೊತ್ತಿದೆ. ಗೊತ್ತಿರಬೇಕಾದವರಿಗೆ ಗೊತ್ತಿಲ್ಲ.)

ಹೀಗೆ ಇಲ್ಲಿಯ ಕಾಂಗ್ರೆಸ್‍ನವರು ಮತ್ತು ಅವರ ಸರ್ಕಾರ ಕಾಲಿಗೆ ಗುಂಡುಕಲ್ಲುಗಳನ್ನು ಕಟ್ಟಿಕೊಂಡು ಹೊಳೆ ದಾಟುವ ಧೈರ್ಯದಲ್ಲಿ ತುಂಬಿದ ಹೊಳೆಗೆ ಹಾರಿದ್ದಾರೆ. ಉಸಿರುಕಟ್ಟುವ ಮುನ್ನ ಅವರು ಅವುಗಳಿಂದ ಕಳಚಿಕೊಂಡು ಮೇಲೆ ಬಂದರೆ ಉಳಿಯುತ್ತಾರೆ. ಇಲ್ಲದಿದ್ದಲ್ಲಿ ಅವರನ್ನು ಯಾರೂ ಕಾಪಾಡಲಾರರು. ಮತ್ತು ಇಂತಹ ಮೂರ್ಖರ ಅಗತ್ಯ ಈ ರಾಜ್ಯದ ಜನತೆಗೆ ಇಲ್ಲ. ಪ್ರಜಾಪ್ರಭುತ್ವದಲ್ಲಿ ಮೂರ್ಖರನ್ನು, ಭ್ರಷ್ಟರನ್ನು, ಅದಕ್ಷರನ್ನು, ಕ್ರಿಮಿನಲ್‌ಗಳನ್ನು ಜನ ಹೊಳೆಗೆ ಎಸೆಯುತ್ತಾರೆ, ಇಲ್ಲವೆ ಕಲ್ಲುಕಟ್ಟಿಕೊಂಡು ಹೊಳೆಗೆ ಇಳಿದವರನ್ನು ಅಲ್ಲಿಯೇ ಸಾಯಲು ಬಿಡುತ್ತಾರೆ. ಅಂತಹವರ ಬಗ್ಗೆ ಕನಿಕರದ ಅಗತ್ಯ ಇಲ್ಲ.

ಆದರೆ, ಈಗಲೂ ನಾನು ಸಿದ್ಧರಾಮಯ್ಯನವರ ಪರ ಆಶಾವಾದಿಯಾಗಿದ್ದೇನೆ. ಅವರಿಗೆ ಮತ್ತು ಅವರ ಪಕ್ಷಕ್ಕೆ ಇನ್ನೂ ಮೂರು ವರ್ಷಗಳ ಅವಧಿ ಇದೆ. ಸಿದ್ಧರಾಮಯ್ಯನವರು ಆ ಮೂರು ವರ್ಷದ ಅವಧಿ ಪೂರೈಸುತ್ತಾರೋ ಇಲ್ಲವೋ ಎನ್ನುವುದು ಕಾಂಗ್ರೆಸ್‌ಗೆ ಬಿಟ್ಟದ್ದು. ಆದರೆ ಮೂರು ವರ್ಷಗಳ ಒಳಗೆಯೇ ಇಲ್ಲಿ ಕಾಂಗ್ರೆಸ್ ಸರ್ಕಾರ ಹೋದರ ಅದು ಖಡಾಖಂಡಿತವಾಗಿ ಸ್ವಯಂಕೃತಾಪರಾಧ. ಆ ಪಕ್ಷದ ಬಗ್ಗೆ ನನಗೆ ನಂಬಿಕೆಯಿಲ್ಲ. ಸಿದ್ಧರಾಮಯ್ಯನವರು ಇನ್ನು ಬಹುಶಃ ಇದಕ್ಕಿಂತ ದೊಡ್ಡ ಹುದ್ದೆಗೆ ಏರಲಾರರು. ಹಾಗಾಗಿ ಇರುವಷ್ಟು ದಿನಗಳ ಕಾಲವಾದರೂ ನಾವು ಅವರ ಪರ ಸದ್ಭಾವನೆ ಉಳಿಸಿಕೊಳ್ಳುವಂತೆ ನಡೆದುಕೊಳ್ಳುವುದು ಸಿದ್ಧರಾಮಯ್ಯನವರಿಗೆ ಬಿಟ್ಟದ್ದು. ಇದನ್ನು ಅವರ ಹಿತೈಷಿಗಳು ಮತ್ತು ಸಲಹೆಕಾರರು ಅವರಿಗೆ ಮುಟ್ಟಿಸುತ್ತಾರೆ ಎನ್ನುವ ಕ್ಷೀಣ ವಿಶ್ವಾಸ ನನ್ನದು.