Monthly Archives: March 2015

ವಿನೋದ್ ಮೆಹ್ತ : ಲಿಬರಲ್, ಸ್ಯೂಡೋ ಸೆಕ್ಯುಲರ್ ಸಂಪಾದಕನ ಕಣ್ಮರೆ

– ಬಿ.ಶ್ರೀಪಾದ ಭಟ್

To deny that I shall miss being an editor would be a towering lie, if the fairy godmother granted me the luxury of choosing a profession for my next janam,I would say without hesitation, editor. – ವಿನೋದ್ ಮೆಹ್ತ

ಪತ್ರಕರ್ತ, ಮಾಜಿ ಸಂಪಾದಕ ವಿನೋದ್ ಮೆಹ್ತ ತೀರಿಕೊಂಡಿದ್ದಾರೆ. Editor plugged forever!!. 72 ರ ವಯಸ್ಸಿನ ವಿನೋದ್ ಮೆಹ್ತ ಕಳೆದ ಕೆಲವು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಕೆಲವು ತಿಂಗಳ ಹಿಂದೆಯಷ್ಟೆ ಅವರ ಪತ್ರ್ರಿಕೋದ್ಯಮದ ಅನುಭವಗಳ ನೆನಪಿನ vinod-mehta-editor-unpluggedಪುಸ್ತಕ ‘Editor Unplugged’ ಬಿಡುಗಡೆಯಾಗಿತ್ತು. ಅದರ ಕೆಲವು ಪುಟಗಳಲ್ಲಿ ‘ಇನ್ನೂ ಎಲ್ಲಾ ಮುಗಿದಂತಿದೆ, ನನಗಿನ್ನೇನು ಕೆಲಸವಿದ್ದಂತಿಲ್ಲ’ ಎನ್ನುವ ಸಂಪೂರ್ಣ ಸೋತುಹೋದ, ವಿಷಾದದ ಛಾಯೆ ಧ್ವನಿಸುತ್ತಿತ್ತು. ಅದು ನಿಜವಾಗಿದೆ. ಇಂದಿನ ಬಲಪಂಥೀಯ ಫೆನಟಿಸಂ ಮತ್ತು ಕಾರ್ಪೋರೇಟ್ ಶಾಹಿಗಳ ದೌರ್ಜನ್ಯ, ಅಸಹನೆ, ದೌಲತ್ತಿನ ದಿನಗಳಲ್ಲಿ ಮಾನವೀಯ, ಆಳವಾದ ನೈತಿಕ ಪ್ರಜ್ಞೆಯ ಮತ್ತು ಯೆಸ್ ಮಿನಿಸ್ಟರ್ ಮಾದರಿ ಪತ್ರಿಕೋದ್ಯಮವನ್ನು ತಿರಸ್ಕರಿಸಿದ್ದ ಪತ್ರಕರ್ತ ವಿನೋದ್ ಮೆಹ್ತ ಜೀವಪರ ವ್ಯವಸ್ಥೆಯ ಸಾಕ್ಷೀ ಪ್ರಜ್ಞೆಯಂತಿದ್ದರು. ಮಾರ್ಕ್ವೇಜ್ ಬಯಸಿದ್ದ ದುಂಬಿಯೊಂದಿಗಿರುವ ಝೇಂಕಾರದಂತೆ ನೈತಿಕತೆ ಪತ್ರಕರ್ತನೊಂದಿಗೆ ಇರಬೇಕು ಎನ್ನುವ ಆಶಯಕ್ಕೆ ಹತ್ತಿರವಾಗಿದ್ದರು ಪತ್ರಕರ್ತ ವಿನೋದ್ ಮೆಹ್ತ. ‘ತನಗೆ ಮುಖ್ಯ ಅನಿಸಿದ ಸಂಗತಿಗಳೆಲ್ಲಾ ಓದುಗನಿಗೂ ಮುಖ್ಯ ಅನಿಸದಿದ್ದರೆ ಅದು ಪತ್ರಕರ್ತನ ಪತನ’ ಎಂದು ಲಂಕೇಶ್ ಬರೆದಿದ್ದರು. ಇದು ವಿನೋದ್ ಮೆಹ್ತ ಅವರ ವಿಷಯಕ್ಕೂ ನಿಜ. ಜಾಹಿರಾತು ವಲಯದಿಂದ ಪತ್ರಿಕೋದ್ಯಮ ರಂಗವನ್ನು ಪ್ರವೇಶಿಸಿದ ವಿನೋದ್ ಮೆಹ್ತ ಅವರು ಡೆಬೋನೈರ್ ಮಾಸಪತ್ರಿಕೆಯ ಸಂಪಾದಕರಾಗುವದರೊಂದಿಗೆ ಪತ್ರಕರ್ತನ ವೃತ್ತಿ ಬದುಕು ಪ್ರಾರಂಬಿಸಿದರು. ಇಂಡಿಯಾದ ಮೊಟ್ಟ ಮೊದಲ ವಾರ ಪತ್ರಿಕೆ ಸಂಡೇ ಅಬ್ಸರ್‌ರ್ವರ್ ಪ್ರಾರಂಬಿಸಿದ ವಿನೋದ್ ಮೆಹ್ತ ನಂತರ ಇಂಡಿಪೆಂಡೆಂಟ್ ಮತ್ತು ಪಯೋನೀರ್ ಪತ್ರಿಕೆಗಳ ಸಂಪಾದಕರಾಗಿದ್ದರು. ನಂತರ ಹಲವಾರು ಕಡೆ ಸುತ್ತಾಡಿದ ಬಳಿಕ ತೊಂಬತ್ತರ ದಶಕದಲ್ಲಿ “ಔಟ್‌ಲುಕ್” ವಾರಪತ್ರಿಕೆಯನ್ನು ಸ್ಥಾಪಿಸಿ ಅದರೊಂದಿಗೆ 17 ವರ್ಷಗಳ ಕಾಲ ಮುಖ್ಯ ಸಂಪಾದಕರಾಗಿ ದುಡಿದಿದ್ದರು. ಈ ಕಾಲಘಟ್ಟದಲ್ಲಿ ತಮ್ಮ ಸೆಕ್ಯುಲರಿಸಂ, ಸಾರ್ವಜನಿಕ ಬದುಕಿನ ಸೂಕ್ಷ್ಮತೆ ಮತ್ತು ವರ್ಣರಂಜಿತ ವ್ಯಕ್ತಿತ್ವದ ಮೂಲಕ ಇಂಗ್ಲೀಷ್ ಪತ್ರಿಕೋದ್ಯಮದಲ್ಲಿ ಪ್ರಗತಿಪರ ಜರ್ನಲಿಸಂಗೆ ಒಂದು ವಿಭಿನ್ನವಾದ, ದಿಟ್ಟತೆಯ ದಾರಿಯನ್ನೇ ರೂಪಿಸಿದರು. ತಮ್ಮನ್ನು ಸರ್ವಾಂತರಯಾಮಿ, ಬುದ್ಧಿಜೀವಿ (ಸೋ ಕಾಲ್ಡ್ ಜನಪ್ರಿಯ ಪತ್ರಕರ್ತರ ಒಂದು ಸ್ವಘೋಷಿತ ಐಡೆಂಟಿಟಿ !!) ಎಂದು ಕರೆದುಕೊಳ್ಳಲು ನಿರಾಕರಿಸುವ ವಿನೋದ್ ಮೆಹ್ತ ಗೀತಾ ಪಾಂಡೆ, ತೇಜ್‌ಪಾಲ್, ಅನಿರುದ್ಧ್, ಮನು ಜೋಸೆಫ್, ಸಾಗರಿಕಾ ಘೋಷ್, ಅಜಿತ್ ಪಿಳ್ಳೈ, ಸಾಬಾ ನಕ್ವಿ ರಂತಹ ಸೂಕ್ಷ್ಮ ಸಂವೇದನೆಯ ಪತ್ರಕರ್ತರನ್ನು ಸಹ ತಮ್ಮ ಜೊತೆ ಜೊತೆಗೆ ಬೆಳೆಸಿದರು.

ಸಂದರ್ಶನವೊಂದರಲ್ಲಿ “ಸಂಪಾದಕನೊಬ್ಬ ಸಂಪೂರ್ಣ ಸ್ವಾತಂತ್ರ ಗಳಿಸಬೇಕಾದರೆ ಅವನು commercially viable ಆಗಿರಬೇಕು. ಹಣಕಾಸಿನ ಸಂದರ್ಭದಲ್ಲಿ ದುರ್ಬಲವಾಗಿರುವ ಪ್ರಕಾಶನ ಸಂಸ್ಥೆಗಳ ಸಂಪಾದಕ ಬಳಗವೂ ಸದಾ ಅಸ್ಥಿರತೆಯನ್ನು ಎದುರಿಸುತ್ತಿರುತ್ತದೆ. ನಿಮ್ಮ ಪ್ರಕಾಶನವು ಕಮರ್ಷಿಯಲ್ ಆಗಿ ದುರ್ಬಲವಾಗಿದ್ದರೆ ಜಾಹೀರಾತುದಾರರು ಮತ್ತು ರಾಜಕಾರಣಿಗಳು ‘ನೋಡು ನೀನು ನಮ್ಮೊಂದಿಗೆ ಕೈ ಜೋಡಿಸು ಇಲ್ಲವಾದಲ್ಲಿ vinod-mehta-2ಮುಂದಿನ ದಾರಿ ನಿನಗೆ ಬಿಟ್ಟಿದ್ದು’ ಎಂದು ದಬಾಯಿಸುವುದು ಗ್ಯಾರಂಟಿ” ಎಂದು ಸ್ಪಷ್ಟವಾಗಿ ಹೇಳಿದ್ದರು. Paid News ಎನ್ನುವ ಪೆಡಂಭೂತ ಮತ್ತು ಅದರ ರೂವಾರಿ ಕಾರ್ಪೋರೇಟ್ ಕುಟುಂಬಗಳ ದುಷ್ಟ ಹಿಡಿತಕ್ಕೆ ಸಿಲುಕಿಕೊಂಡಿರುವ ಇಂದಿನ ಪತ್ರಿಕೋದ್ಯಮದ ದಿನಗಳಲ್ಲಿ ವಿನೋದ್ ಮೆಹ್ತ ಅವರ ನಿಲುವು ತುಂಬಾ ಮಹತ್ವದ್ದು. ಆದರೆ ಈ ಹಣಕಾಸಿನ ಸ್ವಾತಂತ್ರ ಸಂಪಾದಕನಿಗೆ ತನ್ನ ಕರ್ತವ್ಯವನ್ನು ನಿಷ್ಠೆಯಿಂದ, ಮೌಲ್ಯಧಾರಿತ ಆಶಯಗಳಿಗೆ ಅನುಗುಣವಾಗಿ ನಿಭಾಯಿಸಲು ಸಾಧ್ಯವಾಗುತ್ತದೆ ಎನ್ನುವುದು ನಿಜ. ಆದರೆ ಇಂದಿನ ನವ ಉದಾರೀಕರಣದ ದಿನಗಳಲ್ಲಿ ಹಣಕಾಸಿನ ಸ್ವಾತಂತ್ರಕ್ಕೆ ಅನೇಕ ಅರ್ಥಗಳಿವೆ. ವಿವಿಧ ಮಗ್ಗಲುಗಳಿವೆ. ಅದನ್ನು ನೆಚ್ಚಿಕೊಂಡ ಸಂಪಾದಕ ಎಲ್ಲಿ ಹೋಗಿ ತಲುಪುತ್ತಾನೆ ಎನ್ನುವುದಕ್ಕೆ ನಿಖರವಾದ ಗುಣಗಳು ಮತ್ತು ಮಿತಿಗಳ ಜಾಡೇ ದೊರಕವುದಿಲ್ಲ. ಆದರ ಮೂಲದ ಕುರಿತಾಗಿಯೂ ಪ್ರಶ್ನಾರ್ಹವಾದಂತಹ ಸಂಗತಿಗಳಿರುತ್ತವೆ. ಸಂಪಾದಕನಿಗೆ ಹಣಕಾಸಿನ ಸ್ವಾತಂತ್ರವನ್ನು ದಯಪಾಲಿಸುವ ಕಾರ್ಪೋರೇಟ್ ಕುಟುಂಬ ಆತನಿಗೆ ಸ್ವಾಯುತತ್ತೆ ದಯಪಾಲಿಸುವ ಸಾಧ್ಯತೆಗಳು ತುಂಬಾ ಕಡಿಮೆ.

ಮಾರ್ಕೆಟಿಂಗ್ ವಿಭಾಗವು ಸುದ್ದಿ ಮತ್ತು ರಾಜಕೀಯ ಸಂಪಾದಕರ ಮೇಲೆ ಹಿಡಿತ ಸಾದಿಸುವ ಇಂದಿನ ಪತ್ರಿಕೋದ್ಯಮದ ದಿನಗಳಲ್ಲಿ ಸಂಪಾದಕ ತನ್ನ ನೈತಿಕತೆ ಮತ್ತು ಮೌಲ್ಯಗಳನ್ನು ಕಾಪಾಡಿಕೊಳ್ಳುವ ಸಾಧ್ಯತೆಗಳ ಕುರಿತಾಗಿ ವಿನೋದ್ ಮೆಹ್ತ ರಂತಹ ಪತ್ರಕರ್ತರಲ್ಲಿಯೂ ಹಲವು ಗೊಂದಲಗಳಿದ್ದವು. ಪತ್ರಿಕೋದ್ಯಮವು ಕಾರ್ಪೋರೇಟ್ ಕುಟುಂಬಗಳಿಗೆ ವಶವಾಗಿರುವುದನ್ನು ಮೇಲಿನ ಹಣಕಾಸಿನ ಹಿನ್ನೆಲೆಯಲ್ಲಿ ಸಮರ್ಥಿಸಿಕೊಳ್ಳುವ ವಿನೋದ್ ಮೆಹ್ತ ಅದೇ ಸಮಯಕ್ಕೆ ಈ ಮಾದರಿಯ ಪತ್ರಿಕೋದ್ಯಮವು ತನ್ನ ಸ್ವಾಯತ್ತತೆಯನ್ನು ಕಳೆದುಕೊಂಡು ಸರಕನ್ನು ಉತ್ಪಾದಿಸುವ ಕಾರ್ಖಾನೆಯಾಗುವ ಅಪಾಯದ ಕುರಿತು vinod-mehta-and-editorಎಚ್ಚರಿಸುತ್ತಾರೆ. ಯಾವುದೇ ಸಿದ್ಧಾಂತವಾದಿಯಲ್ಲದ ವಿನೋದ್ ಮೆಹ್ತರಂತಹ ಪತ್ರಕರ್ತರಿಗೆ ಕಾರ್ಪೋರೇಟ್ ಸಂಸ್ಕೃತಿಯಲ್ಲಿ ಕೆಲವು ಮಾನವೀಯ ಅಂಶಗಳಿರುತ್ತವೆ ಎನ್ನುವ ಮುಗ್ಧವಾದ ಆದರೆ ಅಪಾಯಕಾರಿಯಾದ ನಂಬಿಕೆಗಳಿತ್ತು. ಅದಕ್ಕೆ ಅವರು ಸ್ವತಃ ತಾವೇ ಔಟ್‌ಲುಕ್ ಸಂಪಾದಕನಾಗಿ ರಾಜನ್ ರಹೇಜ ಎನ್ನುವ ಮಾರ್ವಾಡಿ ಮಾಲೀಕನ ಕೆಳಗೆ 17 ವರ್ಷ ಕೆಲಸ ಮಾಡಿದ ನನ್ನ ಉದಾಹರಣೆಯನ್ನು ತೆಗೆದುಕೊಳ್ಳಿ ಎಂದು ಹೇಳುತ್ತಿದ್ದರೂ ಈ ಉದಾರವಾದಿ ಮಾರ್ಗವೇ ಅವರ ದೊಡ್ಡ ಮಿತಿಯಾಗಿತ್ತು. ಕಡೆಗೆ ನೀರಾ ರಾಡಿಯಾ ಟೇಪ್ ಹಗರಣಕ್ಕೆ ಸಂಭಂದಿಸಿದಂತೆ ಕಾರ್ಪೋರೇಟ್ ಕುಟುಂಬಗಳಾದ ಟಾಟಾ, ಅಂಬಾನಿಯವರ ಮತ್ತು ರಾಜಕಾರಣಿಗಳ ರಾಜಕೀಯ ಹಸ್ತಕ್ಷೇಪ, ಸಾರ್ವಜನಿಕ ವರ್ತನೆಗಳು, ಪೇವರಿಟಿಸಂ ನೀತಿಗಳು ಮತ್ತು ಆರ್ಥಿಕ ಭ್ರಷ್ಟಾಚಾರವನ್ನು ಔಟ್‌ಲುಕ್ ಪತ್ರಿಕೆಯ ಮೂಲಕ ಬಯಲಿಗೆಳಿದಿದ್ದ ವಿನೋದ್ ಮೆಹ್ತ ಸ್ವತಃ ಈ ಪತ್ರಿಕೋದ್ಯಮದ ಒಳಸುಳಿಗಳಿಗೆ, ನೆಕ್ಸಸ್‌ನ ಅವಾಂತಕಾರಿ ಲೋಕದ ಒಳಸಂಚಿಗೆ ಬಲಿಯಾಗಿ ಔಟ್‌ಲುಕ್ ಸಂಪಾದಕತ್ವಕ್ಕೆ ರಾಜೀನಾಮೆ ನೀಡಬೇಕಾಯ್ತು. ಇದರ ಕುರಿತು ತಮ್ಮ ‘Editor Unplugged’ ಪುಸ್ತಕದಲ್ಲಿ ವಿವರವಾಗಿ ಬರೆದಿದ್ದಾರೆ. ಆಲ್ಲಿ ತಮ್ಮ ಸಂಪಾದಕನ ಕರ್ತವ್ಯ, ಪತ್ರಿಕೋದ್ಯಮದ ಮೂಲ ಆಶಯವಾದ ಎಲ್ಲಾ ಬಗೆಯ ಒತ್ತಡ, ಲಾಭಗಳನ್ನು ಧಿಕ್ಕರಿಸಿ ಸತ್ಯದ ವಸ್ತುನಿಷ್ಠ ಮಂಡನೆ, ನ್ಯಾಯಪರವಾದ ನಿರ್ಣಯಗಳನ್ನು ತೆಗೆದುಕೊಳ್ಳಲೇಬೇಕಾದಂತಹ ಸಂದರ್ಭಗಳು ಮತ್ತು ಅನಿವಾರ್ಯತೆಯನ್ನು ಕುರಿತು ಮನೋಜ್ಞವಾಗಿ ವಿವರಿಸಿದ್ದಾರೆ.

ಪುಸ್ತಕದ ಈ ಭಾಗವು ಕಾರ್ಪೋರೇಟ್ ಸಂಸ್ಕೃತಿಯನ್ನು ಮೈಗೂಡಿಸಿಕೊಂಡ ಇಂದಿನ ಪತ್ರಿಕೋದ್ಯಮದ ವ್ಯಾಪಾರಿ ಮನೋಧರ್ಮವನ್ನು ಸಹ ದಾಖಲಿಸುತ್ತದೆ. ಆದರೆ ಈ ಬಂಡವಾಳಶಾಹಿಗಳನ್ನು ಎದುರಿಸಲಾಗದೆ ಸೋತುಹೋಗುವ ವಿನೋದ್ ಮೆಹ್ತ ಕೊನೆ ಕೊನೆಗೆ ತಮ್ಮಲ್ಲಿ ಅಪರಾಧಿ ಪ್ರಜ್ಞೆಯನ್ನು ಬೆಳೆಸಿಕೊಂಡಂತೆ ಬರೆಯುತ್ತಾ ಹೋಗುತ್ತಾರೆ. 17 ವರ್ಷಗಳ ಕಾಲ ತಮಗೆ ಸಂಪಾದಕನಾಗಿ ಸ್ವಾತಂತ್ರ ನೀಡಿದ ತಮ್ಮ “ಕಾರ್ಪೋರೇಟ್” ಮಾಲೀಕನ ಹಿತಾಸಕ್ತಿಗಾಗಿ ಸಂಧಾನ ಮಾರ್ಗಕ್ಕೆ ಮುಂದಾಗುವಂತಹ ಬಿಕ್ಕಟ್ಟಿಗೆ ಸಿಲುಕುತ್ತಾರೆ. ಬಹುಶ ಈ ಇಡೀ ಘಟನೆ ಮತ್ತು ನಂತರದ ತಿಕ್ಕಾಟಗಳು ವಿನೋದ್ ಮೆಹ್ತರವರನ್ನು ಕಂಗೆಡಸಿ ಹತಾಶರಾಗಿ ಕೈಚೆಲ್ಲುತ್ತಾರೆ. ಪತ್ರಿಕೋದ್ಯಮದ ಆಳವಾದ ಸಂಕೀರ್ಣತೆ, vinod-mehtaಮಾಲೀಕ- ರಾಜಕಾರಣಿ -ಮಾರುಕಟ್ಟೆ ರಾಜಕಾರಣದ ನಡುವಿನ ಪರಸ್ಪರ ಹೊಂದಾಣಿಕೆಗಳ ಅರಿವಿಲ್ಲದೇ ನಾನು ಸತ್ಯದ ಪ್ರತಿಪಾದಕ, ವಸ್ತುನಿಷ್ಠವಾಗಿ, ಪೂರ್ವಗ್ರಹಪೀಡಿತನಾಗದೆ, ನ್ಯಾಯದ ಪರವಾಗಿ ವರದಿ ನೀಡುತ್ತೇನೆ ಎಂದು ಮುನ್ನುಗ್ಗುವ ಯುವ ಪತ್ರಕರ್ತರಿಗೆ ಇದು ಒಂದು ಪ್ರಾಥಮಿಕ ಪಾಠದಂತಿದೆ. ಇಲ್ಲವೆಂದರೆ ಅಸಹಾಯಕ ಪ್ಯಾದೆಗಳಂತೆ ಬೀದಿ ಬೀದಿ ಅಲೆಯುವ ಪರಿಸ್ಥಿತಿಗೆ ಗುರಿಯಾಗುತ್ತಾರೆ. ಆದರೆ ಕಡೆಗೆ ಮೌಲ್ಯಾಧಾರಿತ ಪತ್ರಿಕೋದ್ಯಮಕ್ಕೆ ದಾರಿ ಯಾವುದಯ್ಯ ಎನ್ನುವ ಪ್ರಶ್ನೆಗೆ ವಿನೋದ್ ಮೆಹ್ತ ಬಳಿ ಉತ್ತರವಿರಲಿಲ್ಲ.

“ನೀವು ಭ್ರಮಾಜೀವಿಗಳಾದರೆ ಮುಗಿದ ಕತೆ, ವಾಸ್ತವವಾದಿಗಳಾಗಿ ವರ್ತಿಸಿ. ಪತ್ರಿಕೆಗಳಲ್ಲಿ ಕೆಲಸ ಮಾಡುವ ನಾವೆಲ್ಲ ನಮ್ಮ ಉತ್ಪನ್ನಗಳನ್ನು ಕಾಲಕಾಲಕ್ಕೆ ನವೀಕರಿಸಬೇಕಾಗುತ್ತದೆ. ಪ್ರತಿಯೊಬ್ಬರೂ ಒಂದು ದಿನಪತ್ರಿಕೆಯನ್ನು ಓದುತ್ತಾರೆ, ಪ್ರತಿಯೊಬ್ಬರೂ ದೃಶ್ಯ ಮಾಧ್ಯಮವನ್ನು ವೀಕ್ಷಿಸುತ್ತಾರೆ. ವಾರಪತ್ರಿಕೆ,ಮಾಸಪತ್ರಿಕೆಗಳು ಐಚ್ಛಿಕ ಆಯ್ಕೆಗಳಾತೊಡಗಿವೆ. ಸುದ್ದಿಗಳನ್ನು ಮಂಡಿಸುವ ನಮ್ಮ ಹಳೇ ಕಾಲದ ಮಾದರಿಗಳನ್ನು ಇಂದು ಪರಿಶೀಲಿಸಬೇಕಾಗುತ್ತದೆ. ನಮ್ಮ ಉತ್ಪನ್ನಗಳು ಓದುಗನನ್ನು ಆಲೋಚನೆಗೆ, ಜಿಜ್ಞಾಸೆಗೆ ಒಳಗಾಗುವಂತೆ ಮಾಡಬೇಕಾಗುತ್ತದೆ. ಮೇಜರ್ ಸರ್ಜರಿಯ ಅವಶ್ಯಕತೆ ಇದೆ. ವಾರ ಮತ್ತು ಮಾಸ ಪತ್ರಿಕೆಗಳು ನಿಧಾನವಾಗಿ ಅಂಚಿಗೆ ತಳ್ಳಲ್ಪಡುತ್ತಿವೆ. ಸಮಕಾಲೀನ ಸಂದರ್ಭಕ್ಕೆ ತಕ್ಕಹಾಗೆ vinod_vajpayee_20111121ಪ್ರಸ್ತುತಗೊಳಿಸಿಕೊಳ್ಳಬೇಕು. ಸಂಪಾದಕೀಯ ಬಳಗದ ಮೇಲೆ ಇದರ ಭವಿಷ್ಯ ನಿಂತಿದೆ. ಒಮ್ಮೆ ವಾಜಪೇಯಿ ನಮ್ಮ ಪತ್ರಿಕೆಗೆ ( ಔಟ್‌ಲುಕ್) ಸಂದರ್ಶನ ನೀಡಿದ್ದರು. ನಂತರ ಅವರನ್ನು ಭೇಟಿಯಾದ ನಾನು ಅವರಿಗೆ ಧನ್ಯವಾದಗಳನ್ನು ಹೇಳಿದೆ. ಅದಕ್ಕೆ ಪ್ರತಿಕ್ರ್ರಯಿಸುತ್ತಾ ವಾಜಪೇಯಿ ನಿಮ್ಮ ಪತ್ರಿಕೆಯನ್ನು ನಾನು ದಿಂಬಿನ ಕೆಳಗೆ ಇಟ್ಟುಕೊಳ್ಳಬೇಕು ಎಂದಾಗ ಆ ದಿನವೇ (2004) ನಾನು ಪತ್ರಿಕೋದ್ಯಮವನ್ನು ತೊರೆಯಲು ನಿರ್ಧರಿಸಿದೆ. ಆದರೆ ನಂತರದ ಏಳು ವರ್ಷಗಳನ್ನು ಮುಂದುವರೆಸಿದಾಗ ಈ ವಾರಪತ್ರಿಕೆಯನ್ನು ನಾನು ಬಯಸಿದ ಹಾಗೆ ರೂಪಿಸಲು ಸಾಧ್ಯವಾಗಲಿಲ್ಲ. ನಾನು ಸೋಲನ್ನು ಒಪ್ಪಿಕೊಂಡಿದ್ದೇನೆ” ಎಂದು ಹೇಳಿದ ವಿನೋದ್ ಮೆಹ್ತ ತಮ್ಮ ‘Editor Unplugged’ ಪುಸ್ತಕದಲ್ಲಿ ಪತ್ರಕರ್ತನ ಪತ್ರಿಕೋದ್ಯಮದ ಬದುಕನ್ನು ಅತ್ಯಂತ ನಿಷ್ಠುರವಾಗಿ, ಪ್ರಾಮಾಣಿಕವಾಗಿ ವಿವರಿಸಿದ್ದಾರೆ. “ಪತ್ರಕರ್ತನ ನಿಜವಾದ ಚೇತನ ಆತನ ಬದ್ಧತೆಯಲ್ಲಿದೆ ಅದನ್ನು ಜೀವನ್ಮರಣದ ಪ್ರಶ್ನೆಯನ್ನಾಗಿಸಿಕೊಳ್ಳುವುದರಲ್ಲಿದೆ” ಎಂದು ಹೇಳುತ್ತಾರೆ. ದೆಹಲಿಯ ಪ್ರಭಾವಶಾಲಿ ರಾಜಕೀಯ ಕಾರಿಡಾರ್‌ಗಳ ಜೊತೆಗೆ ನಿಕಟ ಪರಿಚಯವನ್ನು ಹೊಂದಿದ್ದ ವಿನೋದ್ ಮೆಹ್ತ ಅದರ ಸಲಿಗೆಯನ್ನು ವೈಯುಕ್ತಿಕ ಲಾಭಕ್ಕಾಗಿ ಬಳಸಿಕೊಳ್ಳಲಿಲ್ಲ. ಈ ಬಗೆಯ ಗಾಂಧಿ ಮಾದರಿಯ ಆದರ್ಶಗಳನ್ನು ಕಡೆವರೆಗೂ ತಮ್ಮೊಳಗೆ ಉಳಿಸಿಕೊಂಡರು.

1942 ರಲ್ಲಿ ರಾವಲ್ಪಿಂಡಿಯಲ್ಲಿ ಹುಟ್ಟಿದ ವಿನೋದ್ ಮೆಹ್ತ ಬೆಳೆದದ್ದು ಉತ್ತರಪ್ರದೇಶದ ಲಖ್ನೋದಲ್ಲಿ. ಕಡೆವರೆಗೂ ತನ್ನನ್ನು centre leftist ಪತ್ರಕರ್ತ ಎಂದು ಗುರುತಿಸಿಕೊಂಡರೂ ಆ ಟಿಪಿಕಲ್ ಎಡಪಂಥೀಯ ಚಿಂತನೆಗಳಿಂದ ಗಾವುದ ದೂರವಿದ್ದರು. ಆದರೆ ಅರುಂದತಿ ರಾಯ್ ಅವರಂತಹ ಎಡಪಂಥೀಯ ಲೇಖಕಿಯರಿಗೆ ತಮ್ಮ ಔಟ್‌ಲುಕ್ ಪತ್ರಿಕೆಯಲ್ಲಿ ಮುಕ್ತವಾದ ಸ್ಪೇಸ್ ಕೊಟ್ಟಿದ್ದು ವಿನೋದ್ ಮೆಹ್ತ ಅವರ ಲಿಬರಲ್ ಆದ ಜೀವಪರ ಮನೋಧರ್ಮಕ್ಕೆ ಸಾಕ್ಷಿ.ಬಹುಶಃ ಜಾಗತೀಕರಣದ, ಮಾರುಕಟ್ಟೆ ವ್ಯವಸ್ಥೆಗೆ ಬಲಿಯಾದ ಇಂಡಿಯಾದಲ್ಲಿ ವಿನೋದ್ ಮೆಹ್ತರಂತಹವರು ಸಂಪಾದಕರಾಗದಿದ್ದರೆ ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಅರಂದತಿ ರಾಯ್ ಅವರ ನಿರ್ಭಿಡೆಯಾದ, ಅನೇಕ ವೇಳೆ ಚರ್ಚಾರ್ಹವಾದ ಲೇಖನಗಳು ಬೆಳಕು ಕಾಣುವ, ಪ್ರಕಟಗೊಳ್ಳುವ ಸಾಧ್ಯತೆಗಳು ಕಡಿಮೆ ಇತ್ತು. ಆದರೆ ಎಲ್ಲಾ ಒತ್ತಡಗಳನ್ನು ಮೀರಿ ವಿನೋದ್ ಮೆಹ್ತ ಪತ್ರಕರ್ತನ ದಿಟ್ಟತೆ ಪ್ರದರ್ಶಿಸಿದರು. ಇದು ಅತಿಶಯೋಕ್ತಿ ಅಲ್ಲ. 15 ವರ್ಷಗಳ ಕಾಲ ಔಟ್‌ಲುಕ್ ಪತ್ರಿಕೆಯನ್ನು ಒಂದು ನಿಜದ ಸೆಕ್ಯುಲರ್ ಪತ್ರಿಕೆಯನ್ನಾಗಿ ಬೆಳಿಸಿದ ಹೆಗ್ಗಳಿಕೆ ವಿನೋದ್ ಮೆಹ್ತ ಅವರದು. ಲಿಬರಲ್, ಪ್ರಗತಿಪರ ಚಿಂತಕರಿಗೆ, ಲೇಖಕರಿಗೆ, vinod-mehta-arundhati-royಪತ್ರಕರ್ತರಿಗೆ ದೊಡ್ಡ ವೇದಿಕೆಯಾಗಿತ್ತು ಔಟ್‌ಲುಕ್ ಪತ್ರಿಕೆ. ಆದರೆ ಸಿದ್ಧಾಂತವಾದಿಯಲ್ಲದ ವಿನೋದ್ ಮೆಹ್ತ ಅದರ ಮಿತಿಗೂ ಕೆಲವೊಮ್ಮೆ ಬಲಿಯಾದದ್ದುಂಟು. ಸೂಡೋ ಸೆಕ್ಯುಲರ್, ಕಾಂಗ್ರೆಸ್ ಚೇಲಾ ಎಂದು ಸಂಘ ಪರಿವಾರದಿಂದ ಟೀಕೆಗೊಳಗಾಗುತ್ತಿದ್ದ ವಿನೋದ್ ಮೆಹ್ತ ಅದನ್ನು ಮೀರಲು ಪ್ರಯತ್ನಿಸುತ್ತಿದ್ದರು. ಆದರೆ ಮೀರುವ ಆ ಸಂದರ್ಭಗಳಲ್ಲಿ ಅವರು ನೆಚ್ಚುತ್ತಿದ್ದದ್ದು ಸುಧಾರಣವಾದಿ ಚಿಂತನೆಗಳನ್ನು. ಇದರ ಫಲವಾಗಿಯೇ ಮೋದಿಯ ಸಾಮ್ರಾಜ್ಯವನ್ನು ಅನುಮಾನದಿಂದ, ಆದಷ್ಟು ಸಂಯಮದಿಂದ, ಕ್ರಿಟಿಕಲ್ ಆಗಿ ನೋಡುವ ದೃಷ್ಟಿಕೋನವನ್ನು ಬೆಳೆಸಿಕೊಳ್ಳಲು ವಿಫಲರಾದರೇನೋ ಎಂದೆನಿಸುತ್ತದೆ. ನಾನು ಪೂರ್ವಗ್ರಹಪೀಡಿತನಾಗಲಾರೆ ಎಂದು ಹೊರಟ ವಿನೋದ್ ಮೆಹ್ತ ನರೇಂದ್ರ ಮೋದಿಯ ಸರ್ಕಾರಕ್ಕೆ ಕಡೆಯವರೆಗೂ ಉತ್ತಮ ಅಂಕಗಳನ್ನು ಕೊಡುವಷ್ಟು ಉದಾರವಾದಿಯಾಗಿದ್ದರು!!!

ಇಂಡಿಯಾ ತನ್ನ ಲಿಬರಲ್, ಪ್ರಗತಿಪರ ಪತ್ರಕರ್ತನನ್ನು ಕಳೆದುಕೊಂಡಿದೆ. ಇನ್ನು ಈ ಮಾದರಿಯ ಲಿಬರಲ್, ಸೂಡೋ ಸೆಕ್ಯುಲರ್ ಪತ್ರಕರ್ತ ದೊರಕುವ ಸಾಧ್ಯತೆಗಳು ಕಡಿಮೆಯೇನೋ ( ಇದು ಸುಳ್ಳಾಗಲಿ). ಐವರಿ ಟವರ್ ಸಂಪಾದಕರನ್ನು ಗೇಲಿಗೊಳಪಡಿಸಿ ಸಂಪಾದಕೀಯ ಹುದ್ದೆಯನ್ನು ಬೇರುಮಟ್ಟಕ್ಕೆ, ಈ ನೆಲದ ಮಣ್ಣಿಗೆ ಬಗ್ಗಿಸಿದ ವಿನೋದ್ ಮೆಹ್ತ ಅವರ ಪತ್ರಕರ್ತನ ಜೀವನ ಉದಯೋನ್ನುಖ ಪತ್ರಕರ್ತರಿಗೆ ಒಂದು ಪಠ್ಯವೇ ನಿಜ.

ಲಿಂಗಾನುಪಾತ ಮತ್ತು ಹೆಚ್ಚುತ್ತಿರುವ ಮಹಿಳೆಯ ಮೇಲಿನ ದೌರ್ಜನ್ಯ


– ರೂಪ ಹಾಸನ


ಇಂದು ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಶಿಕ್ಷಿತರಾಗುತ್ತಿದ್ದಾರೆ, ಔದ್ಯೋಗಿಕ ಕ್ಷೇತ್ರವನ್ನು ಪ್ರವೇಶಿಸುತ್ತಿದ್ದಾರೆ, ಆರ್ಥಿಕವಾಗಿ ಒಂದಿಷ್ಟು ಸಬಲರಾಗುತ್ತಿದ್ದಾರೆ ಎಂಬುದು ತಕ್ಷಣಕ್ಕೆ ಕಣ್ಣಿಗೆ ಕಾಣಿಸುವ ಸತ್ಯಗಳಾದರೂ ಇದರ ಒಳ ಹೊಕ್ಕು ವಿಶ್ಲೇಷಿಸುತ್ತಾ ಹೋದರೆ ನಿಗೂಢ ಕರಾಳತೆಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತವೆ. ಅದರ ಒಟ್ಟು ಚಿತ್ರಣವನ್ನು ನೋಡಿದಾಗ ನಮಗೆ ಮನದಟ್ಟಾಗುವುದು ಇಷ್ಟೆಲ್ಲಾ ೩-೪ ದಶಕಗಳ ಹೋರಾಟ, ಜಾಗೃತಿ, ಪ್ರತಿಭಟನೆಗಳ ನಂತರವೂ ಹೆಣ್ಣಿನ ಮೇಲಿನ ದೌರ್ಜನ್ಯ ಕಡಿಮೆಯಾಗಿಲ್ಲ, ಬದಲಿಗೆ ಹೆಚ್ಚಾಗುತ್ತಾ ಅವುಗಳ ಸ್ವರೂಪದಲ್ಲಿ ಮಾತ್ರ ಬದಲಾಗುತ್ತಿದೆ ಎಂಬುದು.

ಹೆಣ್ಣು ಜೀವ ಹಿಂದೆಂದಿಗಿಂತಲೂ ಇಂದು ಅತ್ಯಂತ ಆತಂಕದ ಸ್ಥಿತಿಯಲ್ಲಿದೆ. ನಮ್ಮ ಭಾರತದ ಪುರೋಹಿತಶಾಹಿ ಪುರುಷ ಕೇಂದ್ರಿತ ವ್ಯವಸ್ಥೆಯ ಕಬಂಧಬಾಹುಗಳ ಹಿಡಿತಕ್ಕೆ ಸಿಕ್ಕು ತಲೆತಲಾಂತರದಿಂದ ತಾರತಮ್ಯ, ಅಸಮಾನತೆ, ಶೋಷಣೆಯನ್ನು ಅನುಭವಿಸುತ್ತಲೇ ಬಂದಿರುವ woman-unchainedಹೆಣ್ಣು ೯೦ರ ದಶಕದಲ್ಲಿ ಭಾರತಕ್ಕೆ ಕಾಲಿಟ್ಟ ಜಾಗತೀಕರಣ, ಉದಾರಿಕರಣ, ಖಾಸಗೀಕರಣದ ಮುಕ್ತ ಆರ್ಥಿಕ ನೀತಿಗಳಿಂದಾಗಿ, ಆಧುನಿಕತೆ ಮತ್ತು ತಂತ್ರಜ್ಞಾನದ ಹೆಸರಿನಲ್ಲಿ ನಾವು ಊಹಿಸಲೇ ಸಾಧ್ಯವಿಲ್ಲದಂತಹ ರೀತಿಗಳಲ್ಲಿ, ರೂಪಗಳಲ್ಲಿ ದೌರ್ಜನ್ಯಕ್ಕೆ ಗುರಿಯಾಗುತ್ತಿರುವುದು ನಮ್ಮ ಕಳವಳವನ್ನು ಹೆಚ್ಚಿಸಿದೆ.

ಈ ಹಿನ್ನೆಲೆಯಲ್ಲಿ ನಮಗೆ ಖ್ಯಾತ ಅರ್ಥಶಾಸ್ತ್ರಜ್ಞ ಅಮಾರ್ತ್ಯಸೇನ್ ಅವರ ಮಾತು ಮುಖ್ಯವೆನಿಸುತ್ತದೆ. ’ಬದುಕಿನ ಎಲ್ಲಾ ಮುಖಗಳಲ್ಲೂ ಮಹಿಳೆಯರು ಒಂದೋ ಕಾಣೆಯಾಗಿದ್ದಾರೆ, ಕಳೆದು ಹೋಗುತ್ತಿದ್ದಾರೆ, ಇಲ್ಲವಾಗುತ್ತಿದ್ದಾರೆ ಇಲ್ಲವೇ ದೈನೇಸಿ ಬದುಕು ಸಾಗಿಸುತ್ತಿದ್ದಾರೆ. ಹೆಣ್ಣು ಭ್ರೂಣವಾಗಿ ತಾಯಿಯ ಗರ್ಭ ಸೇರಿದಾಗಿನಿಂದ ಅಂತಿಮವಾಗಿ ಭೂಮಿಯ ಗರ್ಭ ಸೇರುವವರೆಗೆ ತಾರತಮ್ಯ, ಪಕ್ಷಪಾತ, ದೌರ್ಜನ್ಯ ಮತ್ತು ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದ್ದಾಳೆ. ಪುರುಷಶಾಹಿಯು ವಿಜೃಂಭಿಸುವ ಈ ಸಮಾಜದಲ್ಲಿ ಅಭಿವೃದ್ಧಿಯು ಕೇವಲ ಏಕಲಿಂಗಿ ಪ್ರಕ್ರಿಯೆಯಾಗಿ ಚಿತ್ರಿಸಲ್ಪಡುತ್ತಿದೆ.ಇದನ್ನು ವಿವರಿಸಿಕೊಳ್ಳುವ ವಿವೇಕ ಸಮಾಜಕ್ಕೆ ಬರದಿದ್ದರೆ ಹೆಣ್ಣಿನ ಸ್ಥಿತಿ ಮತ್ತಷ್ಟು ಶೋಚನೀಯವಾಗುತ್ತದೆ.’ ಈ ಮಾತುಗಳನ್ನು ಕೇಂದ್ರದಲ್ಲಿರಿಸಿಕೊಂಡೇ ಮಹಿಳೆಯ ಸಮಸ್ಯೆಗಳನ್ನು ವಿವರಿಸಿಕೊಂಡಾಗ ಮಾತ್ರ ನಮಗೆ ಸತ್ಯ ಗೋಚರಿಸಬಹುದೆನಿಸುತ್ತದೆ.

ಕಣ್ಣಿಗೆ ಕಾಣುವ ದೌರ್ಜನ್ಯವನ್ನು ಪ್ರತಿಭಟಿಸಬಹುದು, ಪ್ರಶ್ನಿಸಬಹುದು, ನ್ಯಾಯ ಕೇಳಬಹುದು. ಆದರೆ ಕಣ್ಣಿಗೇ ಕಾಣದಂತೆ, ಸದ್ದೇ ಆಗದ ರೀತಿಯಲ್ಲಿ ನಡೆಯುವ ದೌರ್ಜನ್ಯಗಳನ್ನು ಗುರುತಿಸುವುದು, ಇಂತಹ ದೌರ್ಜನ್ಯಗಳನ್ನು ಎಸಗುತ್ತಿರುವ ನಿಜವಾದ ಶತ್ರು ಯಾರೆಂದು woman-insightಕಂಡು ಹಿಡಿಯುವುದೇ ದುಸ್ತರವಾದರೆ ಯಾರ ವಿರುದ್ಧ ಹೋರಾಡುವುದು? ಈ ಹಿನ್ನೆಲೆಯಲ್ಲಿ ನಾವಿಂದು ಅತ್ಯಂತ ತುರ್ತಾಗಿ ಜಾಗೃತರಾಗಬೇಕಿರುವುದು, ಬೆಚ್ಚಿಬೀಳಿಸುವ ರೀತಿಯಲ್ಲಿ ಕುಸಿಯುತ್ತಿರುವ ಲಿಂಗಾನುಪಾತ ಮತ್ತು ಗರ್ಭದಲ್ಲೇ ಹೆಣ್ಣುಜೀವ ನಾಶವಾಗುತ್ತಿರುವ ವೇಗದ ಜೊತೆಗೆ ಈ ಕಾರಣದಿಂದಲೇ ಹೆಣ್ಣುಮಕ್ಕಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳ ಕುರಿತು.

ಹೆಣ್ಣಿನ ಕುರಿತ ನಮ್ಮ ಒಟ್ಟು ಸಮಾಜ ಮತ್ತು ವಿಶ್ವದ ನಿಲುವೇ ಇತಿಹಾಸದ ಕಾಲಾನುಕ್ರಮಣಿಕೆಯಲ್ಲಿ ನಿಕೃಷ್ಟವಾಗುತ್ತಾ ಬಂದಿರುವುದಕ್ಕೆ ಅನೇಕ ದಾಖಲೆಗಳನ್ನು ನಾವು ಕಾಣುತ್ತಾ ಹೋಗಬಹುದು. ಅದನ್ನು ಇಲ್ಲಿ ಪ್ರಸ್ತಾಪಿಸುವುದಿಲ್ಲ. ಹೆಣ್ಣೆಂದರೆ ಕೀಳು ಎಂಬ ಭಾವನೆ ಬೇರೆ ಬೇರೆ ಕಾರಣಗಳಿಗಾಗಿ ಆಳವಾಗಿ ಬೇರೂರುತ್ತಾ ಬಂದಿರುವುದರ ಪರಿಣಾಮವಾಗಿ ಭಾರತದಲ್ಲಿ ಮಾತ್ರವಲ್ಲ ವಿಶ್ವದ ಅನೇಕ ದೇಶಗಳಲ್ಲೂ ಹೆಣ್ಣಿನ ಪರಿಸ್ಥಿತಿ ಪುರುಷನಿಗೆ ಹೋಲಿಸಿದರೆ ಹೀನಾಯವಾಗುತ್ತಾ ಹೋದುದಕ್ಕೆ ನಿದರ್ಶನಗಳಿವೆ. ಈ ಕಾರಣಕ್ಕೇ ಹೆಣ್ಣುಮಗು ಹುಟ್ಟಿದೊಡನೆ ಅದಕ್ಕೆ ವಿಷವುಣ್ಣಿಸಿ, ಬಾಯಿಗೆ ಭತ್ತ, ಜೊಂಡುಹುಲ್ಲು ತುಂಬಿ ಬೇರೆ ಬೇರೆ ಕ್ರೂರ ವಿಧಾನಗಳಿಂದ ಕೊಲ್ಲುತ್ತಿದ್ದುದು ಚರಿತ್ರೆಯಲ್ಲಿ ದಾಖಲಾಗಿದೆ. ಗರ್ಭದಲ್ಲಿರುವ ಶಿಶು ಹೆಣ್ಣೋ-ಗಂಡೋ ಎಂದು ಗುರುತಿಸಲು ಅನೇಕ ಅನಾಗರಿಕ ವಿಧಾನಗಳನ್ನು ಆ ಕಾಲಕ್ಕೇ ಪ್ರಯತ್ನಿಸಲಾಗಿದ್ದಕ್ಕೆ ನಿದರ್ಶನಗಳಿವೆ. ಆದರೆ ಇಂದು ಯಾವ ಕಷ್ಟವೂ ಇಲ್ಲದಂತೆ, ಆಧುನಿಕ ತಂತ್ರಜ್ಞಾನದ ಆವಿಷ್ಕಾರಗಳಾದ ಅಲ್ಟ್ರಾ ಸೋನೋಗ್ರಫಿ, ಸ್ಕ್ಯಾನಿಂಗ್ ಯಂತ್ರಗಳಿಂದ ಹೆಣ್ಣುಭ್ರೂಣ ಪತ್ತೆ ಮತ್ತು ಅದರಿಂದಾಗಿ ಹತ್ಯೆಯ ವಿಧಾನಗಳು ಸುಲಭವಾಗಿ ಅತ್ಯಂತ ಸೂಕ್ಷ್ಮವಾಗಿ, ಕಣ್ಣಿಗೆ ಕಾಣದ ರೀತಿಯಲ್ಲಿ ಹೆಣ್ಣನ್ನು ನಾಶ ಮಾಡಲು ಪಣ ತೊಟ್ಟಂತೆ ನಿಂತಿರುವಾಗ ಯಾವ ಆಯುಧದಿಂದ ಈ ಶತ್ರುವನ್ನು ನಿವಾರಿಸಿಕೊಳ್ಳುವುದು?

ಹೆಣ್ಣಿನ ಸಂತತಿಯೇ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಈ ಹಿನ್ನೆಲೆಯಲಿ ಜಗತ್ತಿನಲ್ಲೇ ಚೀನಾ ಮೊದಲ ಸ್ಥಾನದಲ್ಲಿದ್ದರೆ, ನಂತರದಲ್ಲಿ ಭಾರತ, ಮುಂದಿನ ಸ್ಥಾನಗಳಲ್ಲಿ ಶ್ರೀಲಂಕಾ, ನೇಪಾಳ, ಕೊರಿಯಾ, ಪಾಕಿಸ್ಥಾನ, ದಕ್ಷಿಣ ಆಫ್ರಿಕಾ, ದಕ್ಷಿಣ ಅಮೆರಿಕಾ ಮುಂತಾದ ರಾಷ್ಟ್ರಗಳಲ್ಲಿ woman-abstractಹೆಣ್ಣಿನ ಸಂಖ್ಯೆಯಲ್ಲಿ ಅಗಾಧ ಪ್ರಮಾಣದ ಕುಸಿತವುಂಟಾಗುತ್ತಿರುವುದು ಗೋಚರಿಸುತ್ತಿದೆ. ಈ ಪ್ರಮಾಣದ ಲಿಂಗಾನುಪಾತವನ್ನು ಗಂಭೀರವಾಗಿ ಪರಿಗಣಿಸಿರುವ ವಿಶ್ವಸಂಸ್ಥೆ ಪ್ರತಿ ವರ್ಷ ಸೆಪ್ಟೆಂಬರ್ ೨೪ನ್ನು ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನ ಎಂದು ಘೋಷಿಸಿ ಜನರಲ್ಲಿ ಹೆಣ್ಣು ಭ್ರೂಣಹತ್ಯೆಯ ವಿರುದ್ಧವಾಗಿ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದೆ.

ನಮ್ಮ ದೇಶದಲ್ಲಿ ಪ್ರತಿ ಹತ್ತು ವರ್ಷಕ್ಕೊಮ್ಮೆ ಜನಗಣತಿ ನಡೆಯುತ್ತಿದೆ. ಆರು ದಶಕಗಳ ಜನಗಣತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಹೆಣ್ಣುಮಕ್ಕಳ ಸಂಖ್ಯೆ ದೇಶದಲ್ಲಿ ಕುಸಿಯುತ್ತಿರುವ ಪ್ರಮಾಣವನ್ನು ಗುರುತಿಸಬಹುದು. ಪ್ರತಿ ೧೦೦೦ ಪುರುಷರಿಗೆ ಉಳಿದಿರುವ ಹೆಣ್ಣುಮಕ್ಕಳು ೧೯೬೧ರಲ್ಲಿ ೯೭೬, ೧೯೭೧ರಲ್ಲಿ ೯೬೪, ೧೯೮೧ರಲ್ಲಿ ೯೬೨, ೧೯೯೧ರಲ್ಲಿ ೯೪೫, ೨೦೦೧ರಲ್ಲಿ ೯೨೭ ಮತ್ತು ೨೦೧೧ರಲ್ಲಿ ೯೧೪. ಇದೇ ಜನಗಣತಿಯಲ್ಲಿ ೩೦ ವರ್ಷದೊಳಗಿನ ಪುರುಷ-ಮಹಿಳೆ ಅನುಪಾತವು ೧೦೦೦ಕ್ಕೆ ೮೯೭ ಆಗಿದೆ.೩೧-೫೦ ವರ್ಷದೊಳಗಿನವರ ಲೆಕ್ಕಾಚಾರದಲ್ಲಿ ೯೫೫ ಇದ್ದರೆ, ೫೦ ವರ್ಷ ಮೇಲ್ಪಟ್ಟವರಲ್ಲಿ ಮಾತ್ರ ೯೯೬ರಷ್ಟಿದೆ. ಆರು ವರ್ಷದೊಳಗಿನ ಮಕ್ಕಳ ಪ್ರಮಾಣ ವರ್ಷದಿಂದ ವರ್ಷಕ್ಕೆ ತೀವ್ರವಾಗಿ ಕುಸಿಯುತ್ತಿದ್ದು ಕಳೆದ ಮೂರು ದಶಕಗಳ ಅವಧಿಯಲ್ಲಿ ಲೆಕ್ಕಕ್ಕೆ ಸಿಗದಷ್ಟು ಹೆಣ್ಣುಮಕ್ಕಳ ಬದುಕನ್ನು ಹುಟ್ಟುವ ಮೊದಲೇ ಕಿತ್ತುಕೊಳ್ಳಲಾಗಿದೆ. ಕಾಕತಾಳೀಯವೆಂಬಂತೆ ಲಿಂಗಪತ್ತೆ ಹಚ್ಚುವ ಸ್ಕ್ಯಾನಿಂಗ್ ಯಂತ್ರ ದೇಶವನ್ನು ಪ್ರವೇಶಿಸಿಯೂ ಮೂರು ದಶಕವಾಯ್ತು! ಈ ಯಂತ್ರ ಮತ್ತು ಅದರಿಂದ ಭ್ರೂಣದ ಲಿಂಗ ಪತ್ತೆ ಮಾಡಿ ಕೊಲ್ಲುತ್ತಿರುವ ವೈದ್ಯರು ಹೆಣ್ಣು ಸಂತತಿಯ ಪಾಲಿಗೆ ಯಮದೂತರಾಗಿದ್ದಾರೆ.

ಕರ್ನಾಟಕದ ವಿಷಯಕ್ಕೆ ಬಂದರೆ ೧೯೯೧ರಲ್ಲಿ ೯೬೦ಇದ್ದ ಅನುಪಾತವು ೨೦೦೧ರಲ್ಲಿ ೯೪೫ಕ್ಕಿಳಿದಿತ್ತು, ಈ ೨೦೧೧ರ ಜನಗಣತಿಯಲ್ಲಿ ಅದು ೯೪೩ಕ್ಕೆ ಕುಸಿದಿರುವುದು ದಾಖಲಾಗಿದೆ. ಈ ಅಂಕಿಅಂಶಗಳು ದಶಕದಿಂದ ದಶಕಕ್ಕೆ ಹೆಣ್ಣಿನ ಪ್ರಮಾಣ ಯಾವ ಪ್ರಮಾಣದಲ್ಲಿ ಕುಸಿಯುತ್ತಿದೆ ಎಂಬುದರ ದ್ಯೋತಕವಾಗಿದೆ. ಹಾಗೇ ರಾಜ್ಯದ ಐದು ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಕೊಡಗು, ಹಾಸನ, ಚಿಕ್ಕಮಗಳೂರುಗಳಲ್ಲಿ ಪ್ರತಿ ೧೦೦೦ ಪುರುಷರಿಗೆ ಕ್ರಮವಾಗಿ ೧೦೯೪, ೧೦೨೦, ೧೦೧೯, ೧೦೧೦ ಮತ್ತು ೧೦೦೮ರಷ್ಟು ಮಹಿಳೆಯರು ಕಳೆದ ೨೦೧೧ರ ಜನಗಣತಿಯಲ್ಲಿ ದಾಖಲಾಗಿದೆ. ಆದರೆ ೨೦೦೧ ಮತ್ತು ೨೦೧೧ರ ಜನಗಣತಿಯಲ್ಲಿ ೦-೬ವರ್ಷದ ಮಕ್ಕಳ ಅನುಪಾತವನ್ನು ಗಮನಿಸಿದರೆ ಹೆಣ್ಣುಮಕ್ಕಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕುಸಿದಿದ್ದು ಈ ಜಿಲ್ಲೆಗಳಲ್ಲಿ ಕೂಡ ಹೆಣ್ಣುಮಕ್ಕಳ ಸಂಖ್ಯೆ ಸರಾಸರಿ ೯೬೦-೯೭೦ಕ್ಕೆ ಇಳಿದಿರುವುದು ಗಾಬರಿ ಹುಟ್ಟಿಸುವಂತಿದೆ. ಹಾಗಿದ್ದರೆ ಉಳಿದ ಹೆಚ್ಚು ಕಡಿಮೆ ೪೦ಕ್ಕೂ ಅಧಿಕ ಹೆಣ್ಣುಕಂದಮ್ಮಗಳು ಏನಾದವು? ಕಳೆದ ೧೦-೧೫ ವರ್ಷಗಳಲ್ಲಿ ಈ ಪ್ರಮಾಣದ ಏರುಪೇರಿಗೆ ಕಾರಣವೇನು? ಇದು ಈ ಜಿಲ್ಲೆಗಳಲ್ಲೂ ಹೆಣ್ಣುಭ್ರೂಣಹತ್ಯೆ ನಿರಾತಂಕವಾಗಿ ನಡೆಯುತ್ತಿರುವ ಸೂಚನೆಯಲ್ಲದೇ ಬೇರಿನ್ನೇನು? ಹಾಸನದಂತಾ ಕೇವಲ ೧೭ಲಕ್ಷ ಚಿಲ್ಲರೆ ಜನಸಂಖ್ಯೆ ಇರುವ ಜಿಲ್ಲೆಯಲ್ಲಿ ೫೩ ಸ್ಕ್ಯಾನಿಂಗ್ ಸೆಂಟರ್‌ಗಳು ತಲೆ ಎತ್ತಿ ನಿಂತಿವೆ. ಇಲ್ಲಿ ಹೇಗೂ ಮಹಿಳೆಯರ ಸಂಖ್ಯೆ ಪುರುಷರಿಗಿಂತ ಅಧಿಕವಾಗಿಯೇ ಇದೆ ಎಂಬ ನಿರಾಳತೆಯಲ್ಲಿರುವ child-rapeಜಿಲ್ಲಾಡಳಿತ ಈ ಕೇಂದ್ರಗಳ ಬಗೆಗೆ ಯಾವ ವಿಶೇಷ ಎಚ್ಚರಿಕೆಯನ್ನಾಗಲೀ, ಗಮನವನ್ನಾಗಲೀ ಹರಿಸಿಲ್ಲ. ಹೀಗಾಗಿ ಜಿಲ್ಲೆಯ ಗರ್ಭಿಣಿಯರ ಜೊತೆಗೆ ಅಕ್ಕಪಕ್ಕದ ಜಿಲ್ಲೆಯ ಗರ್ಭಿಣಿಯರೂ ಇಲ್ಲಿಗೆ ಬಂದು ನಿರಾತಂಕವಾಗಿ ಭ್ರೂಣ ಪತ್ತೆ ಮಾಡಿಸಿಕೊಂಡು ಹೋಗುತ್ತಿರುವ ಸುದ್ದಿ ಅಕ್ಕಪಕ್ಕದ ಜಿಲ್ಲೆಯ ಸಾಮಾಜಿಕ ಕಾರ್ಯಕರ್ತರಿಂದ ಸಿಕ್ಕುತ್ತಲೇ ಇದೆ. ನಾವು ಪ್ರಶ್ನಿಸುತ್ತಲೇ ಇದ್ದೇವೆ. ಆದರೆ ಅಧಿಕಾರಿಗಳು ಕಿವುಡಾಗಿ ಕುಳಿತಿದ್ದಾರೆ.

ಸಾಮಾಜಿಕವಾಗಿ ನೋಡಿದಾಗ ಹೆಣ್ಣು ಮತ್ತು ಗಂಡುಗಳಿಬ್ಬರೂ ಸಮಾನವಾಗಿರಬೇಕು ಮತ್ತು ಸಂತತಿಗಳೆರಡೂ ಸಮಸಂಖ್ಯೆಯಲ್ಲಿರಬೇಕೆಂಬುದು ನಮ್ಮ ನಿರೀಕ್ಷೆ. ಆದರೆ ಜೈವಿಕ ಹಾಗೂ ಪ್ರಾಕೃತಿಕವಾಗಿ ನೋಡಿದಾಗ ಪ್ರಾಣಿ, ಪಕ್ಷಿ, ಕೀಟಗಳ ಬದುಕನ್ನು ಅಧ್ಯಯನ ಮಾಡಿರುವ ವೈಜ್ಞಾನಿಕ ಸಂಶೋಧನೆಗಳ ಪ್ರಕಾರ ಹೆಣ್ಣು ಸಂತತಿ ಪುರುಷ ಸಂತತಿಗಿಂತಾ ಹೆಚ್ಚಾಗಿಯೇ ಇರುತ್ತದೆ. ಸಂತಾನಾಭಿವೃದ್ಧಿಯ ಜವಾಬ್ದಾರಿ ಹೆಣ್ಣಿನ ಮೇಲೆಯೇ ಹೆಚ್ಚಾಗಿರುವುದರಿಂದ ಸಹಜವಾಗಿ ಹೆಣ್ಣು ಸಂತತಿ ಹೆಚ್ಚಿನ ಪ್ರಮಾಣದಲ್ಲಿರಬೇಕೆಂಬ ಲೆಕ್ಕಾಚಾರ ಪ್ರಕೃತಿಗಿರಬಹುದು. ಯಾವುದೇ ರೀತಿಯ ಪೂರ್ವಗ್ರಹಗಳಿಲ್ಲದೇ, ಎಲ್ಲಾ ರೀತಿಯಲ್ಲೂ ಸಮಾನವಾದ ಅವಕಾಶಗಳಿದ್ದಾಗ ಪ್ರಕೃತಿಯಲ್ಲಿ ೧೦೦೦ ಗಂಡಿಗೆ ಪ್ರತಿಯಾಗಿ ಅಂದಾಜು ೧೦೩೩ ಹೆಣ್ಣುಮಕ್ಕಳು ಹುಟ್ಟಬೇಕೆಂದು ವಿಜ್ಞಾನಿಗಳು ಪ್ರತಿಪಾದಿಸುತ್ತಾರೆ. ಗರ್ಭಧರಿಸಿದ ನಂತರ ಆರೋಗ್ಯದಲ್ಲಿ ನೈಸರ್ಗಿಕ ಏರುಪೇರಾಗುವ ಸಂದರ್ಭದಲ್ಲಿ ಕೂಡ ಗಂಡು ಭ್ರೂಣಕ್ಕೇ ಬದುಕುವ ಸಾಧ್ಯತೆ ಹೆಣ್ಣಿಗಿಂತಾ ಕಡಿಮೆ. ನೈಸರ್ಗಿಕ ಗರ್ಭಪಾತ, ಶಿಶು ಮರಣಗಳಲ್ಲಿ ಗಂಡಿನ ಪ್ರಮಾಣವೇ ಹೆಚ್ಚು. ಹೆಣ್ಣಿನ ದೈಹಿಕ ಸಬಲತೆ ಎಲ್ಲಾ ಅಡ್ಡಿ ಆತಂಕಗಳನ್ನು ಎದುರಿಸಿ ಜನಿಸಲು ಪೂರಕವಾಗಿದೆ. ಹೀಗಿರುವಾಗ ಹೆಣ್ಣುಮಕ್ಕಳು ಹುಟ್ಟುವ ಸಂಖ್ಯೆಯಲ್ಲೇ ಈ ಪ್ರಮಾಣದ ಕುಸಿತಕ್ಕೆ ಕಾರಣವೇನೆಂದು ಹುಡುಕಬೇಕಲ್ಲವೇ? ಹೆಣ್ಣಿನ ಪರವಾದ ಪ್ರಕೃತಿಯ ನಿಯಮವನ್ನು ಮುರಿದು ನಮ್ಮ ಪುರುಷ ಪ್ರಧಾನ ವ್ಯವಸ್ಥೆ ಅತ್ಯಂತ ಕ್ರೂರವಾದ, ಅಮಾನವೀಯವಾದ ರೀತಿಯಲ್ಲಿ ಹೆಣ್ಣನ್ನು ಗರ್ಭದಲ್ಲಿಯೇ ಕೊಲ್ಲುತ್ತಿರುವುದು ಮತ್ತು ಅಸಮಾನತೆಯನ್ನು ಬಿತ್ತುತ್ತಿರುವುದರಿಂದ ಆಗುತ್ತಿರುವ ಪರಿಣಾಮಗಳೇನು ಎಂದು ನಾವೀಗ ತುರ್ತಾಗಿ ಯೋಚಿಸಿ ಕಾರ್ಯಪ್ರವರ್ತರಾಗದಿದ್ದರೆ ಮುಂದೆ ಹೆಣ್ಣು ಸಂತತಿಗೆ ಭೂಮಿ ಮೇಲೆ ಉಳಿಗಾಲವೇ ಇಲ್ಲವೆನಿಸುತ್ತದೆ. ಹೆಣ್ಣು ನಾಶದೊಂದಿಗೇ ಮನುಷ್ಯ ಸಂತತಿಯೇ ಅವನತಿಯೆಡೆಗೆ ಸಾಗಲಿದೆಯೆಂಬ ವಾಸ್ತವದೆಡೆಗೆ ಇನ್ನಾದರೂ ಸಮಾಜ ಕಣ್ಣು ತೆರೆಯುವಂತಾಗಬೇಕು.

ಮನುಷ್ಯ ಶಿಕ್ಷಿತನೂ ನಾಗರಿಕನೂ ವಿಚಾರವಂತನೂ ಆಗುತ್ತಾ ಹೋದಷ್ಟೂ ತನ್ನ ಸಹಜೀವಿಯೊಂದಿಗೆ ಸಹೃದಯತೆ ಹೆಚ್ಚಾಗಬೇಕು……ಹಾಗೆಂದು ನಮ್ಮ ನಿರೀಕ್ಷೆ. ಪ್ರಕೃತಿಯ ಹೆಣ್ಣಿನ ಪರವಾದ ಆಶಯವನ್ನು ನಾವು ಅರ್ಥ ಮಾಡಿಕೊಳ್ಳಬೇಕಿತ್ತು. ಆದರೆ ಆಗುತ್ತಿರುವುದೇನು? ’ಹೆಣ್ಣು ಸಂಗಾತಿಯಾಗಿ ಬೇಕು ಆದರೆ ಮಗಳಾಗಿ ಬೇಡ’ ಎಂಬ ಮನೋಭಾವ ಸಮಾಜದಲ್ಲಿ ಹೆಚ್ಚುತ್ತಾ ಸಾಗಿದಂತೆ ಹೆಣ್ಣಾಗಿ ಈ ಭೂಮಿ ಮೇಲೆ ಹುಟ್ಟಿದ ನಂತರ ಇದ್ದ ಅಸಮಾನತೆ ದೌರ್ಜನ್ಯದ ಕತ್ತಿ ಗರ್ಭಕ್ಕೇ ಚಾಚಿ ಕೊಂಡು ಭ್ರೂಣವನ್ನೇ ತುಂಡರಿಸಿ ಬಿಸುಟುವ ಹಂತವನ್ನು ಇಂದು ತಲುಪಿದೆ. ಹೀಗಾಗೇ ಪ್ರತಿ ವರ್ಷ ೬ ಲಕ್ಷಕ್ಕೂ ಅಧಿಕ ಹೆಣ್ಣು ಭ್ರೂಣಗಳು ಜೀವ ತಳೆಯದೇ ಮಣ್ಣಾಗಿ ಹೋಗುತ್ತಿವೆ.

ಈ ಅಗಾಧ ಪ್ರಮಾಣದ ಗಂಡು-ಹೆಣ್ಣಿನ ನಡುವಿನ ವ್ಯತ್ಯಾಸದಿಂದ ಸಂಗಾತಿಯಾಗಿ ಹೆಣ್ಣು ದೊರಕದೇ ಈಗಾಗಲೇ ರಾಜಾಸ್ಥಾನ, ಹರಿಯಾಣ, ಪಂಜಾಬ್ ಮುಂತಾದ ರಾಜ್ಯಗಳು ಹೆಣ್ಣುವಧುಗಳನ್ನು ಇತರ ರಾಜ್ಯಗಳಿಂದ ಆಮದು ಮಾಡಿಕೊಳ್ಳುತ್ತಿವೆ. ಕರ್ನಾಟಕದಲ್ಲಿ ಹೆಚ್ಚುತ್ತಿರುವ ಇನ್ನೊಂದು ಕ್ರೂರ ಪದ್ಧತಿ ’ವಧು ಮಾರಾಟ’! ’ಗುಜ್ಜರ್ ಮದುವೆ’ ಹೆಸರಿನ ಈ ಹಣದ ಒಪ್ಪಂದದ ಮದುವೆ ಕಳೆದ ೧೦-೧೨ ವರ್ಷಗಳಿಂದ ಧಾರವಾಡ, ಬೆಳಗಾವಿ, ಕೊಪ್ಪಳ ಜಿಲ್ಲೆಗಳಲ್ಲಿ ವ್ಯಾಪಿಸಿದ್ದು ಉತ್ತರ ಕರ್ನಾಟಕ ಜಿಲ್ಲೆಗಳಿಗೆ ರೋಗದಂತೆ ಹರಡುತ್ತಿದೆ. ಬಡ ಹೆಣ್ಣು ಇಲ್ಲಿ ಕೇವಲ ಮಾರಾಟದ ಸರಕು. rape-illustrationವಿವಾಹದ ಸೋಗಿನಲ್ಲಿ ಇಂತಹ ಅಮಾನವೀಯ ಕೃತ್ಯಗಳು ಹೆಣ್ಣಿನ ಪೋಷಕರು, ಮದುವೆ ದಲ್ಲಾಳಿಗಳು, ವಧು ಮಾರಾಟದ ಏಜೆಂಟರ ಸಂಘಟಿತ ಪ್ರಯತ್ನದಿಂದ ನಡೆಯುತ್ತಿದೆ. ಹೀಗೆ ಮದುವೆ ಮಾಡಿ ಕೊಂಡು ಹೋದ ಒಂದೇ ಹೆಣ್ಣು ಆ ಕುಟುಂಬದ ಹಲವು ಪುರುಷರ ಕಾಮನೆಗಳನ್ನು ತಣಿಸುವ ’ವಸ್ತು’ವಾಗಿ ಬಳಸುವಂತಾ ಸ್ಥಿತಿ ಅಲ್ಲಿದೆ. ಅಲ್ಲಿ ಹಗಲು ಹೊಲಗಳಲ್ಲಿ ದುಡಿತ, ರಾತ್ರಿ ಲೈಂಗಿಕ ಜೀತದಾಳಾಗಿ ಬಳಕೆ. ಇದಕ್ಕೆ ಒಪ್ಪಿಗೆ ಇಲ್ಲದಿದ್ದರೆ ಮತ್ತೆ ಮಾರಾಟ. ಇಲ್ಲಿ ತಮ್ಮ ಅಸ್ತಿತ್ವದ ಅರಿವಿಲ್ಲದ, ಹೆಸರೇ ಇಲ್ಲದ ಹೆಣ್ಣುಗಳ ಕೊಂಡುಕೊಳ್ಳುವಿಕೆ, ಮಾರಾಟ, ಮರು ಮಾರಾಟವನ್ನು ಯಾವುದೇ ಎಗ್ಗಿಲ್ಲದೇ, ತರಕಾರಿ ವ್ಯಾಪಾರದಂತೆ ನಡೆಸಲಾಗುತ್ತಿದೆ ಎಂದರೆ, ನಾವು ನಾಗರೀಕ ಜಗತ್ತಿನಲ್ಲಿ ಬದುಕುತ್ತಿದ್ದೇವೆಯೇ?-ಕರುಳು ಚೀರಿ ಕೇಳುತ್ತದೆ.

ಹೆಣ್ಣು ಮಕ್ಕಳ ಮೇಲಿನ ಎಲ್ಲ ರೀತಿಯ ಲೈಂಗಿಕ ದೌರ್ಜನ್ಯ ಹೆಚ್ಚಳಕ್ಕೆ ಭ್ರೂಣ ಹತ್ಯೆಯೂ ಒಂದು ಮುಖ್ಯ ಕಾರಣವೆಂದು ಸಮಾಜ ವಿಜ್ಞಾನಿಗಳು ಗುರುತಿಸುತ್ತಿದ್ದಾರೆ. ಹೆಣ್ಣಿನ ಹೊರ ದೇಹದ ಮೇಲೆ ನಡೆಯುತ್ತಿದ್ದ ಅತ್ಯಾಚಾರ ಈಗ ಗರ್ಭಕ್ಕೇ ಇಳಿದು, ಅನೈಸರ್ಗಿಕವಾಗಿ ಅವಳ ಸಂತತಿಯನ್ನು ಹೊಸಕಿ ಸಾಯಿಸುತ್ತಿದೆ. ಜೊತೆಗೆ ಬಹುಸಂಖ್ಯಾತ ಪುರುಷರಿಗೆ ಸಂಗಾತಿಯಾಗಿ ಹೆಣ್ಣು ದೊರಕದಿದ್ದಾಗ ವ್ಯಗ್ರಗೊಳುವ ಕೆಲ ಪುರುಷರು ಕಾನೂನುಬಾಹಿರ ಹಿಂಸೆ ಮತ್ತು ವಿಚ್ಛಿದ್ರಕಾರಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಪ್ರಮಾಣ ಹೆಚ್ಚುತ್ತಿದೆ ಎಂದೂ ಮನೊವಿಜ್ಞಾನಿಗಳು ಹೇಳುತ್ತಿದ್ದಾರೆ. ಇದಕ್ಕೆ ಒತ್ತು ನೀಡುವಂತೆ ಇತ್ತಿಚೆಗಿನ ಕೆಲವರ್ಷಗಳಲ್ಲಿ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಪ್ರಮಾಣ ಆತಂಕ ಹುಟ್ಟಿಸುವ ಪ್ರಮಾಣದಲ್ಲಿ ಹೆಚ್ಚಾಗಿದೆ. ಪ್ರಾಪ್ತ ಹೆಣ್ಣುಗಳ ಮೇಲೆ ಎಲ್ಲೋ ಒಮ್ಮೊಮ್ಮೆ ಮಾತ್ರ ಘಟಿಸುತ್ತಿದ್ದ ಅತ್ಯಾಚಾರ ಪ್ರಕರಣಗಳು ಈಗ ಪ್ರತೀ ಜಿಲ್ಲೆಯಲ್ಲಿ ವರ್ಷಕ್ಕೆ ಸರಾಸರಿ ೫೦-೬೦ ಮಹಿಳೆಯರ ಮೇಲೆ ಅದರಲ್ಲೂ ಅರ್ಧದಷ್ಟು ಅಪ್ರಾಪ್ತ ಹೆಣ್ಣುಮಕ್ಕಳ ಮೇಲಾಗುತ್ತಿದೆ ಎಂದರೆ ಮುಂದಿನ ದಿನಗಳನ್ನು ನೆನೆದು ಎದೆ ನಡುಗುತ್ತದೆ. ಇದು ದಾಖಲಾಗುತ್ತಿರುವ ಪ್ರಮಾಣ ಮಾತ್ರ. ಮರ್ಯಾದೆಗಂಜಿ ದಾಖಲಾಗದೇ ಉಳಿಯುವ ಪ್ರಮಾಣ ಅದಿನ್ನೆಷ್ಟಿದೆಯೋ. ಹೆಣ್ಣು ಮಕ್ಕಳು ಇನ್ನೆಂತಹ ಭೀಕರ ಸಂಕಷ್ಟಕ್ಕೀಡಾಗುತ್ತಾ ಮುರುಟಿಹೋಗುತ್ತಿದ್ದಾರೋ?

ವಧುಗಳ ಕೊರತೆ ಉಂಟಾದರೆ ಸಹಜವಾಗಿ ವರದಕ್ಷಿಣೆ ಪಿಡುಗು ಕಡಿಮೆಯಾಗಿ, ವಧುದಕ್ಷಿಣೆಯ ಕಾಲ ಬರುತ್ತದೆ. ಹೆಣ್ಣಿಗೆ ಡಿಮ್ಯಾಂಡ್ ಹೆಚ್ಚಾಗುತ್ತದೆಂಬುದು ಸಾಮಾನ್ಯ ಜನರ ಅನಿಸಿಕೆ. ಆದರೆ ವರದಕ್ಷಿಣೆಯ ಪಿಡುಗು ಬೇರೆ ಬೇರೆ ರೂಪಗಳಲ್ಲಿ ಮೈತೆರೆದುಕೊಂಡು ನಮಗೆ ಎದುರಾಗುತ್ತಿದೆ. ಭಾವನಾತ್ಮಕವಾಗಿ ಹೆಣ್ಣನ್ನು ಬ್ಲ್ಯಾಕ್‌ಮೇಲ್ ಮಾಡಿ ಆಸ್ತಿಯ ಹಕ್ಕನ್ನು ಕೇಳದಂತೆ ತಡೆಯುವ ಹುನ್ನಾರ ಒಂದು ವಿಧಾನವಾದರೆ, ಉನ್ನತ ಶಿಕ್ಷಣಕ್ಕಾಗಿ ಮಾಡಿದ ಖರ್ಚಿನ ಹೆಸರಿನಲಿ, ಅಷ್ಟೋ ಇಷ್ಟೋ ಹಣದ ರೂಪದ ನೀಡಿಕೆಯಲ್ಲಿ, ಅದ್ಧೂರಿ ಮದುವೆಯ ನೆಪದಲ್ಲಿ, ವರದಕ್ಷಿಣೆ ಕೊಟ್ಟಂತೆ ಮಾಡಿ ಅವಳನ್ನು ಸ್ಥಿರ ಆಸ್ತಿಯಿಂದ ದೂರವಿರಿಸಿ ಗಂಡುಮಕ್ಕಳೇ ಹಂಚಿಕೊಳ್ಳುವುದು ಬಹಳಷ್ಟು ಸಂದರ್ಭದಲ್ಲಿ ಕಾಣಬರುತ್ತಿದೆ. ಆಸ್ತಿ ತಮ್ಮ ಕುಟುಂಬಕ್ಕೇ ಉಳಿಸಿಕೊಳ್ಳುವ ಧೂರ್ತತನದಿಂದಾಗಿ ಹೆಣ್ಣೇ ಬೇಡವೆಂದು ನಿರ್ಧರಿಸುವ, ತಮ್ಮ ವ್ಯಾಪಾರ, ವಹಿವಾಟುಗಳನ್ನು ನೋಡಿಕೊಳ್ಳಲು ಗಂಡೇ ಸಮರ್ಥ, ಹೆಣ್ಣಾದರೆ ಅವಳೊಂದಿಗೆ ಆಸ್ತಿಯೂ ಬೇರೆ ಕುಟುಂಬಕ್ಕೆ ಸೇರಿ ಬಿಡುತ್ತದೆಂಬ ಪೂರ್ವಗ್ರಹದಿಂದ ಹೆಣ್ಣು ಬೇಡವೆಂದು ನಿರ್ಧರಿಸುವ ಪೋಷಕರು ಹೆಚ್ಚಾಗುತ್ತಿದ್ದಾರೆ. ಇದಕ್ಕೆಲ್ಲಾ ಮುಖ್ಯವಾದ ಕಾರಣ ಅಸಮಾನತೆಯ ಆಧಾರದಲ್ಲಿ ನಿಂತಿರುವ ನಮ್ಮ ಕೌಟುಂಬಿಕ ವ್ಯವಸ್ಥೆಯೇ ಆಗಿದೆ ಎಂಬುದು ನಿರ್ವಿವಾದವಾಗಿದೆ.

ಹೆಣ್ಣಿನ ಗುರುತಿಸುವಿಕೆಯ ಮಾನದಂಡಗಳೇ ಮುಕ್ಕಾಗಿರುವ ಭಾರತೀಯ ಸಂದರ್ಭದಲ್ಲಿ ನಾವು ಹೆಣ್ಣಿನ ಅಸ್ತಿತ್ವವನ್ನು ಉಳಿಸಿಕೊಳ್ಳುವುದು ಹೇಗೆಂದು ಚಿಂತಿಸಬೇಕಾಗಿದೆ. ಏಕೆಂದರೆ ಹೆಣ್ಣು ಮಕ್ಕಳು ಕಡಿಮೆಯಾಗುತ್ತಿರುವುದರಿಂದ ಎಲ್ಲ ಧರ್ಮಗಳಲ್ಲೂ ಈಗ ವಧುವಿಗೆ ಬೇಡಿಕೆ ಹೆಚ್ಚಾಗಿದೆ! ೨೦೦೧ರ ಜನಗಣತಿಯಂತೆ ಧರ್ಮಾಧಾರಿತವಾಗಿ ಪ್ರತಿ ೧೦೦೦ ಗಂಡುಮಕ್ಕಳಿಗೆ ಉಳಿದಿರುವ ಹೆಣ್ಣುಮಕ್ಕಳ ಸಂಖ್ಯೆ ಹೀಗಿದೆ….. ಸಿಖ್-೭೮೬, ಜೈನ-೮೭೦, ಹಿಂದೂ-೯೨೫, ಬೌದ್ಧ-೯೪೨, ಮುಸ್ಲಿಂ-೯೫೦, ಕ್ರೈಸ್ತ-೯೬೪. ಈ ಕಾರಣಕ್ಕೇ ಉತ್ತರಭಾರತದ ಧಾರ್ಮಿಕ ಸಂಘಟನೆಯೊಂದು ಭೇಟಿ ಬಚಾವೋ, ಬಹೂ ಲಾವೋ ಆಂದೋಲನವನ್ನು ಪ್ರಾರಂಭಿಸಿದೆಯಂತೆ! ಅಂದರೆ ತಮ್ಮ ಧರ್ಮದಲ್ಲಿ ಹುಟ್ಟಿರುವ ಹೆಣ್ಣುಮಗಳನ್ನು ತಮ್ಮ ಧರ್ಮದಲ್ಲೇ Indian Women Paintingsಉಳಿಸಿ ಬೇರೆ ಧರ್ಮದ ಹೆಣ್ಣನ್ನು ಮದುವೆಯಾಗಿ ತಮ್ಮ ಧರ್ಮಕ್ಕೆ ಕರೆತನ್ನಿ ಎಂಬ ಕ್ರೂರ ಸಂದೇಶವನ್ನು ನೀಡಲಾಗುತ್ತಿದೆ! ಈಗಾಗಲೇ ಇಲ್ಲಿ ಹೆಣ್ಣನ್ನು ಮದುವೆ ಮಾರುಕಟ್ಟೆಯಲ್ಲಿ ಮಾರಾಟವಾಗುವ ತರಕಾರಿಯಂತೆ ಭಾವಿಸಲಾಗುತ್ತಿದೆ. ಈ ರೀತಿಯ ಅಸಮಾನ ಲಿಂಗಾನುಪಾತ ಮುಂದೆ ಹೆಣ್ಣಿಗಾಗಿ ಜಾತಿ-ಧರ್ಮಗಳ ನಡುವೆ ಭೀಕರ ಕಾಳಗವನ್ನೇ ಸೃಷ್ಟಿಸುವ ಮುನ್ಸೂಚನೆಯಂತೆ ಇದು ತೋರುತ್ತಿದೆ. ಹೆಣ್ಣಿನ ಆಯ್ಕೆಯ ಹಕ್ಕನ್ನು ಎಲ್ಲ ರೀತಿಯಿಂದಲೂ ದಮನಿಸುವ ಕ್ರೌರ್ಯ ಸಮಾಜದಲ್ಲಿ ಹೆಚ್ಚಳವಾಗುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿದ್ದು, ಈಗಾಗಲೇ ಇದು ಮರ್ಯಾದಾ ಹತ್ಯೆಯ ಹೆಸರಿನಲ್ಲಿ ದೌರ್ಜನ್ಯದ ಕರಾಳ ರೂಪವನ್ನು ಪಡೆದು ಕೊಂಡಿದೆ.

ತಲೆತಲಾಂತರದಿಂದ ನಡೆದುಕೊಂಡು ಬಂದ ವೇಶ್ಯಾವಾಟಿಕೆಯೆಂಬ ಹೆಣ್ಣಿನ ಮೈಮಾರಾಟದ ದಂಧೆ ಇಂದು ಕರಾಳ ರೂಪವನ್ನು ಪಡೆದು ಬೃಹತ್ ಮಾಫಿಯಾ ಆಗಿ ಬೆಳೆದು ನಿಂತಿದೆ. ಹೆಣ್ಣುಮಕ್ಕಳ ನಾಪತ್ತೆಯೆಂಬ ಜಾಣಕುರುಡಿನ ಹುಡುಕಾಟದ ನಾಟಕ, ಮಹಿಳೆಯರ ಕಳ್ಳಸಾಗಾಣಿಕೆ ಮತ್ತು ಅಕ್ರಮ ಮಾರಾಟ ದಂಧೆ ಇದಕ್ಕೆ ಪೂರಕಾಗಿ ಹುಟ್ಟಿಕೊಂಡಿದ್ದು ಪ್ರತಿನಿತ್ಯ ಈ ವಿಷ ಜಾಲಕ್ಕೆ ನೂರಾರು ಹೆಣ್ಣುಮಕ್ಕಳು ಬಡತನದ ಅನಿವಾರ್ಯತೆ, ಅಜ್ಞಾನ, ಅನಕ್ಷರತೆ, ಪ್ರೀತಿ-ಕೆಲಸಗಳ ಆಮಿಷ, ಮೋಸ-ವಂಚನೆಗಳಿಂದಾಗಿ ನೂಕಲ್ಪಡುತ್ತಿದ್ದಾರೆ. [ಇಷ್ಟಪಟ್ಟು ಮೈಮಾರಿಕೊಳ್ಳುವ ಒಂದು ಸಮೂಹವೂ ನಮ್ಮ ಮಧ್ಯೆ ಇದ್ದು, ಅವರ ಕುರಿತು ನಾನಿಲ್ಲಿ ಪ್ರಸ್ತಾಪಿಸುತ್ತಿಲ್ಲ] ಜಾಗತಿಕವಾಗಿ ಮಹಿಳೆಯರ ಮತ್ತು ಮಕ್ಕಳ ಮಾರಾಟದಲ್ಲಿ ಭಾರತವು ಪ್ರಮುಖ ತಾಣವಾಗಿದೆಯೆಂದು ವಿಶ್ವಸಂಸ್ಥೆಯ ವರದಿ ಹೇಳುತ್ತದೆ. ಹ್ಯೂಮನ್ ರೈಟ್ಸ್ ವಾಚ್‌ನ ವರದಿಯಂತೆ ಇದುವರೆಗೆ ಅಂದಾಜು ೧೫೦ ಲಕ್ಷ ಭಾರತದ ಹೆಣ್ಣುಮಕ್ಕಳನ್ನು ವೇಶ್ಯಾವಾಟಿಕೆಗೆ ನೂಕಲಾಗಿದೆ. ಹೆಣ್ಣುಮಕ್ಕಳ ಅಕ್ರಮ ಮಾರಾಟವೆಂಬುದು ಈಗ ಸೀಮಿತ ಚೌಕಟ್ಟುಗಳನ್ನು ದಾಟಿ, ರಾಜ್ಯ-ಅಂತರ್‌ರಾಜ್ಯ ಮಿತಿಗಳನ್ನು ಮೀರಿ ರಾಷ್ಟ್ರ ಹಾಗೂ ಜಾಗತಿಕ ವಿದ್ಯಮಾನವಾಗಿ ಸದ್ದಿಲ್ಲದೇ ಬೆಳೆದು ನಿಂತಿದೆ.

ಮೈಸೂರು ವಿಶ್ವವಿದ್ಯಾಲಯದ ಸಾಮಾಜಿಕ ಒಳಗೊಳ್ಳುವಿಕೆಯ ಅಧ್ಯಯನ ತಂಡ ೨೦೧೨ರಲ್ಲಿ ಮಾಡಿರುವ ಸಮೀಕ್ಷೆಯ ಪ್ರಕಾರ ಪ್ರತಿ ಜಿಲ್ಲೆಯಲ್ಲಿ ಒಂದು ವರ್ಷಕ್ಕೆ ಸರಾಸರಿ ೨೦೦-೩೦೦ ಹೆಣ್ಣುಮಕ್ಕಳು ಕಾಣೆಯಾಗುತ್ತಿದ್ದಾರೆ. ಇದರಲ್ಲಿ ಶೇಕಡಾ ೭೦ರಷ್ಟು ಬಾಲ್ಯವನ್ನು ದಾಟದವರು ಎಂಬುದು ಅತ್ಯಂತ ಆತಂಕಕಾರಿಯಾಗಿದೆ. ನಾಪತ್ತೆಯಾಗುವ ಹೆಣ್ಣುಮಕ್ಕಳು ವೇಶ್ಯಾವಾಟಿಕೆಯ ಅಡ್ಡಗಳಲ್ಲಿ ಸಿಕ್ಕಿದರೂ ಇದರ ಹಿಂದಿರುವ ವ್ಯವಸ್ಥಿತವಾದ ಅಕ್ರಮ ಹೆಣ್ಣುಮಕ್ಕಳ ಸಾಗಾಣಿಕಾ ಜಾಲವನ್ನು ಬೇಧಿಸಲು ಯಾಕೆ ಸಾಧ್ಯವಾಗುತ್ತಿಲ್ಲ? ಹೆಣ್ಣುಮಕ್ಕಳನ್ನು ವೇಶ್ಯಾವಾಟಿಕೆ ಜಾಲದಲ್ಲಿ ಬೀಳಿಸುವ, ಅವರನ್ನು ಹುಡುಕುವ, ರಕ್ಷಿಸುವ, ಮತ್ತೆ ಅವರನ್ನು ಯಥಾಸ್ಥಿತಿಯಲ್ಲಿ ಉಳಿಸುವ ಕಣ್ಣಾಮುಚ್ಚೆ ನಾಟಕವನ್ನು ವ್ಯವಸ್ಥೆ ಉದ್ದೇಶಪೂರ್ವಕವಾಗಿಯೇ ಆಡುತ್ತಿರುವುದು ನಿರ್ವಿವಾದ. ಹೆಣ್ಣಿನ ದೇಹವನ್ನು ವಸ್ತುವಾಗಿ ಬಳಸಿಕೊಂಡು ವ್ಯಾಪಾರದ ಆಟ ಆಡುತ್ತಿರುವ ವ್ಯವಸ್ಥೆಗೆ ವೇಶ್ಯಾವಾಟಿಕೆ ಲಾಭದಾಯಕ ಉದ್ದಿಮೆಯಾಗಿದೆ. ಅಸಮತೋಲನದ ಲಿಂಗಾನುಪಾತದಿಂದ ವೇಶ್ಯಾವಾಟಿಕೆಯ ದಂಧೆ ಈಗಾಗಲೇ ವ್ಯಾಪಕವಾಗಿದ್ದು, ಇನ್ನಷ್ಟು ತೀವ್ರವಾಗಿ ಹಬ್ಬುವ, ಎಳೆಯ ಹೆಣ್ಣುಮಕ್ಕಳು ಇದರ ಕರಾಳ ಬಾಹುಗಳಲ್ಲಿ ಬಂಧಿಯಾಗುವ ಸಾಧ್ಯತೆಗಳು ಅತೀ ಹೆಚ್ಚಾಗುತ್ತಿದೆ. ಹೀಗೆಂದೇ ಇದರ ನಿಯಂತ್ರಣಕ್ಕೆ ಮತ್ತು ಅನಿವಾರ್ಯವಾಗಿ ಈ ಕೂಪದಲ್ಲಿ ಬಿದ್ದ ಹೆಣ್ಣುಜೀವಗಳ ಪುನರ್‌ವಸತಿ ಹಾಗೂ ಪುನರ್‌ಜೀವನಕ್ಕೆ ತುರ್ತಾಗಿ ಗಮನ ನೀಡಬೇಕಾಗಿದೆ.

ಇದರ ಜೊತೆಗೇ ಈಗ ವ್ಯಾಪಕವಾಗಿ ಹಬ್ಬುತ್ತಿರುವ ಹೆಚ್‌ಐವಿ, ಏಡ್ಸ್‌ನಂತಾ ಮಾರಕ ರೋಗಗಳು ವಾಣಿಜ್ಯೀಕೃತ ವೇಶ್ಯಾವಾಟಿಕೆಯ ಬಹು ದೊಡ್ಡ ಬಳುವಳಿ ಎಂಬುದನ್ನು ನಾವು ಮರೆಯುವಂತಿಲ್ಲ. ಹೆಣ್ಣುಮಕ್ಕಳ ಕೊರತೆಯಿಂದಾಗಿಯೋ, ನೈಸರ್ಗಿಕ ಅಪೇಕ್ಷೆಯಿಂದಲೋ ವೇಶ್ಯಾವಾಟಿಕೆಯಲ್ಲಿ ತೊಡಗುವ ಪುರುಷ ಸಲಿಂಗಕಾಮಿಗಳೂ ಹೆಚ್ಚಾಗುತ್ತಿದ್ದಾರೆ. ಕರ್ನಾಟಕದಲ್ಲಿ ಸದ್ಯ ೨.೫೦ಲಕ್ಷಕ್ಕೂ ಅಧಿಕ ಹೆಚ್‌ಐವಿ ಪೀಡಿತರಿದ್ದಾರೆ. ಸೋಂಕಿನ ವ್ಯಾಪಕತೆ, ಪೀಡಿತರು ಮತ್ತು ಜನಸಂಖ್ಯೆಯ ದೃಷ್ಟಿಯಿಂದ ದೇಶದಲ್ಲೇ ಕರ್ನಾಟಕ ಮೂರನೆಯ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ ೨೦೧೨ರವರೆಗೆ ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಮಂಡಳಿಯಲ್ಲಿ ತೀವ್ರ ಅಪಾಯದ ಗುಂಪಿನಲ್ಲಿ ನೋಂದಣಿಯಾದ ವೇಶ್ಯೆಯರು ೭೯,೧೬೯ ಇದ್ದರೆ, ವೇಶ್ಯಾವಾಟಿಕೆಯಲ್ಲಿ ತೊಡಗಿರುವ ತೀವ್ರ ಅಪಾಯದ ಹಂತದಲ್ಲಿರುವ ಸಲಿಂಗಕಾಮಿ ಪುರುಷರು ೨೫೨೪೪. ಇದಲ್ಲದೇ ಲಕ್ಷಾಂತರ ಮಂದಿ ರೋಗವಾಹಕರೂ ಇದ್ದು ಪ್ರತೀ ಕ್ಷಣ ಈ ರೋಗ ಹಬ್ಬುತ್ತಿರುವುದು ದಾಖಲಾಗುತ್ತಿದೆ. ರೋಗ ನಿಯಂತ್ರಣಕ್ಕೆಂದೇ ಸರ್ಕಾರ ಕೋಟ್ಯಾಂತರ ರೂಪಾಯಿಗಳನ್ನು ವೆಚ್ಚ ಮಾಡುತ್ತಿದೆ. ಜೊತೆಗೆ, ರೋಗ ನಿಯಂತ್ರಣದ ಹೆಸರಿನಲ್ಲಿ ಪ್ರತಿ ಜಿಲ್ಲೆ-ತಾಲ್ಲೂಕುಗಳಲ್ಲೂ ಹಬ್ಬಿರುವ ೧೪೩ ಎನ್‌ಜಿಓಗಳು ತನ್ನ ವಿಸ್ತ್ರತಜಾಲದ ಮೂಲಕ ಸಮುದಾಯ ಆಧಾರಿತ ಸಂಘಟನೆ ಮತ್ತು ವೇಶ್ಯಾವಾಟಿಕೆಯಲ್ಲಿ ತೊಡಗಿರುವವರ ಸಹಭಾಗಿತ್ವದಲ್ಲಿ ಯಥಾಸ್ಥಿತಿಯನ್ನು ಕಾಯ್ದಿರಿಸುತಾ, ಬೇಡಿಕೆ ಮತ್ತು ಪೂರೈಕೆಯನ್ನು ಸದ್ದಿಲ್ಲದೇ ನಿರ್ವಹಿಸುತ್ತಾ ಈ ದಂಧೆಯ ವ್ಯಾಪಕತೆಗೆ ಕಾರಣವಾಗಿರುವುದು ಮೇಲ್ನೋಟಕ್ಕೆ ಕಾಣದಿದ್ದರೂ ಆಳಕ್ಕಿಳಿದು ಅಧ್ಯಯನ ಮಾಡುತ್ತಾ ಹೋದರೆ ಕರಾಳತೆ ಗೋಚರಿಸುತ್ತಾ ದಿಗ್ಭ್ರಾಂತಗೊಳಿಸುತ್ತದೆ. ಎಲ್ಲಕ್ಕಿಂಥಾ ಆತಂಕಕಾರಿಯೆಂದರೆ ಈ ಎರಡೂ ರೀತಿಯ ವೇಶ್ಯಾವಾಟಿಕೆಯಲ್ಲಿ ಅಪ್ರಾಪ್ತ ಗಂಡು ಮತ್ತು ಹೆಣ್ಣು ಮಕ್ಕಳು ಗಾಬರಿ ಹುಟ್ಟಿಸುವಷ್ಟು ಪ್ರಮಾಣದಲ್ಲಿ ಬಳಕೆಯಾಗುತ್ತಿರುವುದು. ಮತ್ತು ಲಕ್ಷಕ್ಕೂ ಅಧಿಕ ಜನರು ಈ ರೋಗದಿಂದ ಸಾವನ್ನಪ್ಪಿರುವುದು. ಪ್ರತಿ ಜಿಲ್ಲಾ ಆರೋಗ್ಯ ಕೇಂದ್ರಗಳಲ್ಲಿಯೂ ನೋಂದಣಿಯಾಗಿ ದಾಖಲಾಗಿರುವ ಈ ಕುರಿತ ಮಾಹಿತಿಯನ್ನು ಅಧ್ಯಯನ ಮಾಡಿದರೆ ಸಾಕು ಅಸಹಾಯಕ ಅಪ್ರಾಪ್ತರು ಯಾವ ಪ್ರಮಾಣದಲ್ಲಿ ಈ ಕೂಪಕ್ಕೆ ತಳ್ಳಲ್ಪಡುತ್ತಿದ್ದಾರೆ ಎಂಬುದು ಅರಿವಾಗುತ್ತದೆ. ವ್ಯವಸ್ಥೆ ಜಾಣ ಕುರುಡನ್ನು ನಟಿಸುತ್ತಾ ಮೌನವಾಗಿದೆ.

ಹೆಣ್ಣಿನ ಮೇಲೆ ಹೆಚ್ಚುತ್ತಿರುವ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರಗಳಿಂದಾಗಿ ಹೆಣ್ಣೆಂದರೆ ಸಮಸ್ಯೆ, ಹೆಣ್ಣು ಹುಟ್ಟಿದರೆ ’ಸುರಕ್ಷತೆ’ಯೇkarnataka_women ದೊಡ್ಡ ತಲೆಬಿಸಿ ಎಂದು ಭಾವಿಸುತ್ತಿರುವ ಪೋಷಕರು ಇತ್ತೀಚೆಗೆ ಹೆಣ್ಣು ಮಗು ಹುಟ್ಟುವುದೇ ಬೇಡವೆಂದು ನಿರ್ಧರಿಸುತ್ತಿದ್ದಾರೆ. ಇದು ನಗರ-ಗ್ರಾಮೀಣ, ಅಕ್ಷರಸ್ಥ-ಅನಕ್ಷರಸ್ಥ ಎಂಬ ಬೇಧವಿಲ್ಲದೆ ಹೆಣ್ಣನ್ನು ಭ್ರೂಣದಲ್ಲೇ ಕಾಣದಂತೆ ಕೊಲ್ಲುವ ಆಲೋಚನೆಗೆ ದಾರಿ ಮಾಡಿ ಕೊಟ್ಟಿದೆ. ಲಿಂಗಪತ್ತೆಯ ಸ್ಕ್ಯಾನಿಂಗ್ ಯಂತ್ರ ಬರುವ ಮೊದಲು ಹೆಣ್ಣಿನ ಬಗೆಗೆ ವಿಭಿನ್ನ ಕಾರಣಗಳಿಂದಾಗಿ ಅಸಡ್ಡೆ ಇದ್ದರೂ ಅದನ್ನು ಕೊಂದು ಬಿಸುಟುವ ನಿರ್ಧಾರಕ್ಕೆ ಈಗಿನಂತೆ ಬಹುಸಂಖ್ಯಾತರು ಬರುತ್ತಿರಲಿಲ್ಲ. ಈಗ ಅದು ಇಂತಹ ಯಂತ್ರಗಳಿಂದ ಮತ್ತು ವೈದ್ಯರ ಸಹಕಾರದಿಂದ ಸುಲಭವಾಗುವ ಜೊತೆಗೆ ಕ್ರೌರ್ಯವನ್ನೂ ನಾಜೂಕಾಗಿ ನಡೆಸಬಹುದಾದ ನಾಗರೀಕ[!] ವಿಧಾನಗಳಿಗೆ ಕೆಂಪು ಹಾಸು ಹಾಸಿದೆ.

ಭಾರತದಲ್ಲಿ ಅತಿ ದೊಡ್ಡ ಪಿಡುಗಾಗಿ ವ್ಯಾಪಿಸಿದ್ದ ಬಾಲ್ಯವಿವಾಹ ಈಗ ಹೆಣ್ಣುಮಕ್ಕಳ ರಕ್ಷಣೆಯ ಜವಾಬ್ದಾರಿಯನ್ನು ಬೇಗನೆ ಕಳೆದುಕೊಳ್ಳುವ ನೆವದಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದೆ. ಬಾಲ್ಯವಿವಾಹದಿಂದ ಅಪ್ರಾಪ್ತ ಹೆಣ್ಣು ತನ್ನ ಎಲ್ಲಾ ರೀತಿಯ ಹಕ್ಕುಗಳಿಂದ ವಂಚಿತಳಾಗುವ ಜೊತೆಗೆ ಅನಪೇಕ್ಷಿತ ಬದುಕು, ಆಯ್ಕೆಯಲ್ಲದ ಸಂಗಾತಿಯ ಜೊತೆಗೆ ಹೊಂದಿಕೊಳ್ಳುತ್ತಾ ಅಕ್ಷರಶಃ ಲೈಂಗಿಕಜೀತದಾಳಾಗಿ ಮತ್ತು ದುಡಿಯುವ ಯಂತ್ರದಂತೆ ಬದುಕಬೇಕಿರುತ್ತದೆ. ಇದು ದೌರ್ಜನ್ಯದ ಪರಮಾವಧಿಯೇ ಸೈ.

ಇಂತಹ ಮಗುವೇ ಬೇಕು ಎಂಬ ಕಾರಣಕ್ಕೆ ಅಧಿಕ ಪ್ರಮಾಣದಲ್ಲಿ ನಡೆಯುವ ಗರ್ಭಪಾತಗಳು ಹೆಣ್ಣಿನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ತೀವ್ರ ತೆರನಾದ ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತಿರುವುದನ್ನೂ ವೈದ್ಯರು ಖಚಿತಪಡಿಸುತ್ತಾರೆ. ಮನಸ್ಸಿನ ಏರುಪೇರುಗಳಿಂದಾಗಿ ಮಹಿಳೆಯರಲ್ಲಿ ಖಿನ್ನತೆ ಮತ್ತು ಆತ್ಮಹತ್ಯಾ ಪ್ರವೃತ್ತಿಯ ಹೆಚ್ಚಳಕ್ಕೂ ಇದು ಕಾರಣವಾಗಿದೆ. ಮುಕ್ತ ಲೈಂಗಿಕ ಚಟುವಟಿಕೆಗಳ ಹೆಚ್ಚಳ ಮತ್ತು ವಿಪರೀತದ ಹೆಣ್ಣಿನ ಸೌಂದರ್ಯದ ಕುರಿತಾದ ಕಲ್ಪನೆಗಳಿಂದಾಗಿ ಅವಳ ಬಣ್ಣ, ರೂಪ, ಎತ್ತರಗಳನ್ನು ಮಾರುಕಟ್ಟೆ ಕೇಂದ್ರಿತ ಹಿತಾಸಕ್ತಿಗಳು ನಿರ್ಧರಿಸುವ, ನಿರ್ವಹಿಸುವ ವಿಧಾನಗಳಿಂದಾಗಿ ತನಗೇ ಅರಿವಿಲ್ಲದೇ ಹೆಣ್ಣು ದೌರ್ಜನ್ಯಗಳಿಗೆ ಒಳಗಾಗುತ್ತಾಳೆ. ಹೆಚ್ಚುತ್ತಿರುವ ಅತ್ಯಾಚಾರ, ಲೈಂಗಿಕ ದೌರ್ಜನ್ಯಗಳಿಂದಾಗಿ ಇತ್ತೀಚೆಗಿನ ವರ್ಷಗಳಲ್ಲಿ ಹೆಣ್ಣುಮಕ್ಕಳ ಮೇಲೆ ಒತ್ತಡಗಳು ಹೆಚ್ಚಾಗುತ್ತಿವೆ. ಸಾಮಾಜಿಕ ಭದ್ರತೆಯ ಕೊರತೆ ಹೆಚ್ಚಾಗಿದ್ದು ’ಇಲ್ಲಿಗೆ ಹೋಗಬೇಡ, ಇಲ್ಲಿಗೆ ಬರಬೇಡ, ಇಷ್ಟೊತ್ತಿನ ಒಳಗೆ ಮನೆ ಸೇರು, ಹೀಗೇ ಇರು, ಹೀಗೇ ಮಾಡು….’ ಎಂಬ ನಿರ್ದೇಶನಗಳು ಅವಳ ಬದುಕು ವ್ಯಕ್ತಿತ್ವಗಳನ್ನೇ ಕುಬ್ಜಗೊಳಿಸುತ್ತಿದೆ. ’ಹೊಸ್ತಿಲಿನೊಳಗೇ ಹೆಣ್ಣು ಇರಬೇಕು’ ’ಸೀಮಿತ ಚೌಕಟ್ಟುಗಳೊಳಗೇ ಬದುಕಬೇಕು’ ಎಂಬ ಹಿಂದಿನ ಸಂಪ್ರದಾಯ ಕಟ್ಟುಕಟ್ಟಲೆಗೇ ಮತ್ತೆ ನಮ್ಮ ಸಮಾಜ ಹಿಂದಿರುಗುತ್ತಿದೆಯೇ ಎನ್ನುವ ಅನುಮಾನ ಹುಟ್ಟುತ್ತಿದೆ. ನಮ್ಮ ಹೆಣ್ಣುಮಕ್ಕಳು ದಶಕಗಳಿಂದ ಹೋರಾಡಿ ಪಡೆದ ತಮ್ಮ ಕೆಲವಷ್ಟಾದರೂ ಹಕ್ಕು, ಸ್ವಾತಂತ್ರ್ಯಗಳನ್ನು ಅಮಾನವೀಯವಾದ ರೀತಿಗಳಲ್ಲಿ ಕಳೆದುಕೊಂಡು ಮೂಗುಬ್ಬಸ ಪಡುವ ಸ್ಥಿತಿಯನ್ನು ತಲುಪುತ್ತಿದ್ದಾರೆ.

ಬದಲಾಗುತ್ತಿರುವ ಸಂಸ್ಕೃತಿಯ ಪರಿಕಲ್ಪನೆಗಳು, ಸುಲಭವಾಗಿ ಕೈಗೆಟುಕುತ್ತಿರುವ ತಂತ್ರಜ್ಞಾನ, ಆಧುನಿಕತೆ ತಂದೊಡ್ಡುತ್ತಿರುವ ಸವಾಲುಗಳಿಂದಾಗಿ ಅಸಮಾನ ಲಿಂಗಾನುಪಾತವು ನಾವು ಊಹಿಸಲೇ ಸಾಧ್ಯವಿಲ್ಲದಂತಾ ಸಮಸ್ಯೆಗಳನ್ನು ಮಹಿಳೆಗೆ ಮತ್ತು ಸಮಾಜಕ್ಕೆ ತಂದೊಡ್ಡಬಹುದೆಂದು ಸಮಾಜವಿಜ್ಞಾನಿಗಳು ಆತಂಕಿಸುತ್ತಿದ್ದಾರೆ. ಸ್ತ್ರೀಯರಿಗೆ ಸಾಮಾಜಿಕ ಭದ್ರತೆಯ ಕುಸಿತದಿಂದ, ಸಮಾಜದ ಕಾನೂನು ಸುವ್ಯವಸ್ಥೆ ಹದಗೆಡುವ ಸಾಧ್ಯತೆಗಳ ಹೆಚ್ಚಳ ಮಾತ್ರವಲ್ಲ, ಇದು ಜೀವವಿರೋಧಿಯಾದ ವೈಜ್ಞಾನಿಕ ಬೆಳವಣಿಗೆಗೂ ಕಾರಣವಾಗುತ್ತಿದೆ. ಹೆಣ್ಣನ್ನು ಭ್ರೂಣದಲ್ಲೇ ಕೊಂದು ಬಿಸುಟುವುದು ಮಹಿಳೆಯ ಬದುಕಿನ ಹಕ್ಕಿನ ಉಲ್ಲಂಘನೆ ಮಾತ್ರವಲ್ಲ, ಇದು ಮಾನವ ಹಕ್ಕುಗಳ ಉಲ್ಲಂಘನೆಯ ಪರಮೋಚ್ಚ ಘಟ್ಟ ಎಂದು ವ್ಯವಸ್ಥೆಗೆ ತಿಳಿಹೇಳುವವರಾದರೂ ಯಾರು? ಹೆಣ್ಣು ಹುಟ್ಟುವ ಹಕ್ಕನ್ನೇ ಕಿತ್ತುಕೊಳ್ಳುತ್ತಿರುವುದಕ್ಕೆ ತಾಂತ್ರಿಕತೆಯ ಪರವಾದ ಲಾಭ-ಲೋಭ ಸಂಸ್ಕೃತಿಯ ಪ್ರತೀಕವಾದ ಧನದಾಹಿ ಬಂಡವಾಳಶಾಹಿಯ ಧೋರಣೆಯೇ ಕಾರಣವೆಂದು ಸಮಾಜಕ್ಕೆ ಮನದಟ್ಟು ಮಾಡುವುದಾದರೂ ಹೇಗೆ? ಇದು ನಮ್ಮ ಮುಂದಿರುವ ಮುಖ್ಯ ಸವಾಲು.

ನಮ್ಮ ಉಚ್ಛ ಹಾಗೂ ಸರ್ವೋಚ್ಛ ನ್ಯಾಯಾಲಯಗಳು ಮತ್ತೆ ಮತ್ತೆ ಕಟುವಾಗಿ ಹೆಣ್ಣುಭ್ರೂಣಹತ್ಯೆಯ ಹೆಚ್ಚಳ ಮತ್ತು ಅಸಮಾನ ಲಿಂಗಾನುಪಾತದ ಕುರಿತು ಎಚ್ಚರಿಸುತ್ತಲೇ ಇವೆ. ’ಹೆಣ್ಣು ಭ್ರೂಣಹತ್ಯೆ ಮಾನವ ಜನಾಂಗದ ಅತಿ ಕೆಟ್ಟ ಪದ್ಧತಿ’ ಎಂದು ಖಾರವಾಗಿ ಪ್ರತಿಕ್ರಿಯಿಸಿವೆ. ಕಾನೂನು ರಚನೆಯಾಗಿದ್ದರೂ ಅದರ ಪರಿಣಾಮಕಾರಿ ಅನುಷ್ಠಾನವೇಕಾಗಿಲ್ಲ ಎಂದು ಪ್ರಶ್ನಿಸುತ್ತಿವೆ. ’ಪ್ರಸವಪೂರ್ವ ಲಿಂಗ ಪತ್ತೆ ಮತ್ತು ಭ್ರೂಣಹತ್ಯೆ ನಿಷೇಧ ಕಾನೂನು’ ೧೯೯೪ರಲ್ಲಿಯೇ ಜಾರಿಯಾಯ್ತು. ಆದರೆ ಲಿಂಗಪತ್ತೆ ಮತ್ತು ಹೆಣ್ಣುಭ್ರೂಣಹತ್ಯೆ ಕಾರ್ಯ ಮಾತ್ರ ಅವ್ಯಾಹತವಾಗಿ ನಡೆಯುತ್ತಲೇ ಇದೆ. ದೇಶದಲ್ಲೇ ಈ ಕಾಯ್ದೆಯಡಿ ೧೮೦೦ ಕೇಸುಗಳು ದಾಖಲಾಗಿದ್ದರೂ ೧೪೩ ಜನರಿಗೆ ಮಾತ್ರ ಶಿಕ್ಷೆಯ ತೀರ್ಪು ಬಂದಿದೆ. ಅವರಲ್ಲಿ ಹೆಚ್ಚಿನವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ ಮತ್ತು ಕೇಸುಗಳನ್ನು ಇತ್ಯರ್ಥಪಡಿಸಿಕೊಂಡಿದ್ದಾರೆ.

ನ್ಯಾಯಾಲಯದ ಆದೇಶದಂತೆ ಬಹುತೇಕ ರಾಜ್ಯಗಳಲ್ಲಿ ರಾಜ್ಯಮಟ್ಟದ ಹಾಗೂ ಜಿಲ್ಲಾಮಟ್ಟದ ಹೆಣ್ಣುಭ್ರೂಣಹತ್ಯೆ ತಡೆ ಸಮಿತಿಗಳು ಜಾರಿಯಲ್ಲಿವೆ. ಆದರೆ ಬಹಳಷ್ಟು ಕಡೆ ಅವು ನಿಷ್ಕ್ರಿಯವಾಗಿವೆ. ಅನೇಕ ಸಂದರ್ಭದಲ್ಲಿ ಸಮಿತಿಯಲ್ಲಿರುವವರಿಗೇ ತಾವು ಸದಸ್ಯರೆಂದು ತಿಳಿದಿರುವುದಿಲ್ಲ. ಸದಸ್ಯರಲ್ಲೂ ಹೆಚ್ಚಿನವರು ವೈದ್ಯರೇ ಇರುತ್ತಾರೆ. ಇನ್ನುಳಿದ ಬಹುತೇಕರನ್ನು ನಿಷ್ಕ್ರಿಯರಾಗಿರುವವರನ್ನೇ ಸದಸ್ಯರನ್ನಾಗಿ ಮಾಡಿಕೊಳ್ಳಲಾಗಿರುತ್ತದೆ. ಸಮಿತಿಗೆ ಪ್ರಶ್ನೆ ಮಾಡುವವರು, ವಿವರಗಳಿಗೆ ಹೋಗುವವರು ಬೇಕಿರುವುದಿಲ್ಲ. ಕಾಟಾಚಾರಕ್ಕೆ ಸಮಿತಿಗಳಿರುತ್ತವಷ್ಟೇ. ಈ ಸಮಿತಿಗಳಲ್ಲೂ ಮುಖ್ಯವಾಗಿ ಲಿಂಗಪತ್ತೆ ತಡೆಯನ್ನು ಮುಖ್ಯ ಕಾರ್ಯ ಮಾಡಿಕೊಳ್ಳಬೇಕಿತ್ತು. ಆದರೆ ಅಲ್ಲಿ ಸ್ಕ್ಯಾನಿಂಗ್ ಮಿಶಿನ್ ನೋಂದಣಿ ಆಗಿವೆಯೆ ಎಂಬುದನ್ನು ಮಾತ್ರ ಮುಖ್ಯ ಪ್ರಶ್ನೆಯಾಗಿಸಿಕೊಂಡು ಕೆಲಸ ಮಾಡಲಾಗುತ್ತದೆ. ನಮ್ಮ ರಾಜ್ಯಾದ್ಯಂತ ಸುಮಾರು ೫೦೦೦ ಸ್ಕ್ಯಾನಿಂಗ್ ಮಿಷಿನ್‌ಗಳು ಸದ್ಯ ಕೆಲಸ ಮಾಡುತ್ತಿವೆ. ಬೆಂಗಳೂರು ನಗರದಲ್ಲೇ ೧೫೦೦ ಮಿಷಿನ್‌ಗಳಿವೆ. ಈಗ ಹಳ್ಳಿಗಳಲ್ಲಿಯೂ ಹೆಣ್ಣು ಭ್ರೂಣ ಪತ್ತೆ ಮಾಡುವ ಮೊಬೈಲ್ ಮಿಷಿನ್‌ಗಳು ಸಂಚರಿಸಲಾರಂಭಿಸಿವೆ. ಒಂದು ಸ್ಕ್ಯಾನಿಂಗ್ ಮಿಷಿನ್ ನೋಂದಣಿ ಮಾಡಿಸಲಿಕ್ಕೆ ಮೊದಲು ೪೦೦೦ ಶುಲ್ಕವಿತ್ತು. ಈಗ ಅದು ೩೫೦೦೦ ಆಗಿದೆ. ಐದು ವರ್ಷಕ್ಕೆ ನವೀಕರಣಕ್ಕೆ ೩೦೦೦ ಇದ್ದಿದ್ದು ಈಗ ೨೫೦೦೦ ಆಗಿದೆ. ನವೀಕರಣ ಮಾಡದಿದ್ದರೆ ದಂಡ ೨೦೦೦೦. ಹೀಗೆ ಜಿಲ್ಲಾ ಸಮಿತಿಗೆ ಪ್ರತಿ ಮಿಷಿನಿನಿಂದಲೂ ಆದಾಯ ಇದೆ! ಹೀಗಾಗಿ ಇದರೆಡೆಗೇ ಗಮನ ಕೇಂದ್ರೀಕರಿಸಿ ಮುಖ್ಯವಾದ ಉದ್ದೇಶವೇ ಪಕ್ಕಕ್ಕೆ ಸರಿದಿದೆ. ಎಲ್ಲಕ್ಕಿಂಥಾ ಮುಖ್ಯವಾಗಿ ಇದರ ವಿರುದ್ಧ ದೂರು ಕೊಡುವವರಾರು? ಕುಟುಂಬವೇ ಸ್ವ ಇಚ್ಛೆಯಿಂದ ಭ್ರೂಣಪತ್ತೆ ಮತ್ತು ಹತ್ಯೆಗೆ ಮುಂದಾಗಿರುತ್ತದೆ. ಸೋನೋಗ್ರಾಫಿಸ್ಟ್ ಮತ್ತು ವೈದ್ಯ ತಪ್ಪೆಂದು ಗೊತ್ತಿದ್ದೇ ಇದರಲ್ಲಿ ಭಾಗಿಗಳಾಗಿರುತ್ತಾರೆ. ಈ ನಿರ್ಧಾರಗಳು ಮತ್ತು ಕೆಲಸಗಳು ಅತ್ಯಂತ ಖಾಸಗಿಯಾಗಿ ಮತ್ತು ಗೌಪ್ಯವಾಗಿ ಜರುಗುವುದರಿಂದ ಸಾಕ್ಷಿಗಳನ್ನು ಯಾರು ಹೇಳುತ್ತಾರೆ? ದೂರು ಕೊಡಬೇಕಿರುವ, ಸಾಕ್ಷಿ ಹೇಳಬೇಕಿರುವ ಹೆಣ್ಣು ಕಂದಮ್ಮ ಅಸಹಾಯಕ ಸ್ಥಿತಿಯಲ್ಲಿ ಸಾವಿಗೆ ಕೊರಳೊಡ್ಡಲು ಗರ್ಭದೊಳಗೇ ರೋದಿಸುತ್ತಿರುತ್ತದೆ……ಹೀಗೆಂದೇ ಇದರ ಪರವಾಗಿ ದನಿಯೆತ್ತಬೇಕಾದವರು ಹೆಣ್ಣಿನ ಪರವಾದ ಕಾಳಜಿ ಇರುವ ಪ್ರಜ್ಞಾವಂತರು ಮಾತ್ರ.

ಹೆಣ್ಣುಭ್ರೂಣಹತ್ಯೆ ತಡೆ ವಿರುದ್ಧವಾಗಿ ಜನಜಾಗೃತಿ ಮೂಡಿಸುವ ಕಾರ್ಯಕ್ರಮ ಆರೋಗ್ಯ ಇಲಾಖೆಯಿಂದ ಮುಖ್ಯವಾಗಿ ಮತ್ತು ನಿರಂತರವಾಗಿ ಆಗಬೇಕಿತ್ತು. ಆದರೆ ಅಂತಹವು ನಡೆಯುತ್ತಲೇ ಇಲ್ಲ. ಆಗಿದ್ದರೂ ಅವು ಕಾಟಾಚಾರಕ್ಕೆ ಮಾತ್ರ. ಅನುಮಾನಾಸ್ಪದ ಮತ್ತು ದೂರು ಬಂದ ಸ್ಕ್ಯಾನಿಂಗ್ ಸೆಂಟರ್ ಮೇಲೆ ದಾಳಿಗಳನ್ನು ನಡೆಸಬೇಕಿರುವುದು ಸಮಿತಿಯ ಮುಖ್ಯ ಕೆಲಸ. ಆದರೆ ಅಂಥಹ ಒಂದಾದರೂ ಪ್ರಕರಣ ನಡೆದ ಸುದ್ದಿಯಿಲ್ಲ. ಇಷ್ಟಕ್ಕೂ ದಾಳಿಗಳನ್ನು ಯಾರು ನಡೆಸಬೇಕು? ಜಿಲ್ಲಾ ಆರೋಗ್ಯಾಧಿಕಾರಿಯೇ ಈ ಸಮಿತಿಗೆ ಅಧ್ಯಕ್ಷ. ಅವನು ತನ್ನ ಸಹೋದ್ಯೋಗಿಗಳ ಮೇಲೆ ಹೇಗೆ ಕ್ರಮ ಕೈಗೊಂಡಾನು? ಹೀಗಾಗಿ ಇದಕ್ಕೆ ಸಾರ್ವಜನಿಕ ಸಹಭಾಗಿತ್ವವೇ ಹೆಚ್ಚಾಗಿರುವ ಸದಸ್ಯರನ್ನೊಳಗೊಂಡ ಸಮಿತಿಗೆ ಸಂಪೂರ್ಣ ಅಧಿಕಾರವನ್ನು ನೀಡಬೇಕಿರುವುದು ಮುಖ್ಯವಾಗಿ ಆಗಬೇಕಿದೆ. ಲಿಂಗಪತ್ತೆ ಮತ್ತು ಹೆಣ್ಣು ಭ್ರೂಣಹತ್ಯೆಯಲ್ಲಿ ತೊಡಗಿಕೊಂಡಿರುವವರು ಸಮಾಜದ ಅತ್ಯಂತ ಸುಶಿಕ್ಷಿತ, ಪ್ರತಿಷ್ಠಿತ ವೈದ್ಯವರ್ಗ. ತಪ್ಪು ಮಾಡುತ್ತಿರುವವರನ್ನು ಹುಡುಕಿ ಕೇಸು ಹಾಕಿ, ದಾಳಿ ಮಾಡಬೇಕಾದವರೂ ವೈದ್ಯರು, ಕೇಸಿನಿಂದ ಬಿಡಿಸಿಕೊಳ್ಳಲು ಇರುವುದು ಇನ್ನೊಂದು ಪ್ರತಿಷ್ಠಿತ ವಕೀಲ ವರ್ಗ, ಸ್ಕ್ಯಾನಿಂಗ್ ಮಿಷಿನುಗಳನ್ನು ಉತ್ಪಾದಿಸಿ ಮಾರುತ್ತಿರುವುದು ಬಂಡವಾಳಶಾಹಿ ಉದ್ಯಮವರ್ಗ. ಇವರನ್ನೆಲ್ಲಾ ಎದುರು ಹಾಕಿಕೊಳ್ಳಲು ಇಚ್ಛಿಸದ ಸರ್ಕಾರ ಜಾಣಕುರುಡಾಗಿ ತೆಪ್ಪಗಿದ್ದುಬಿಟ್ಟಿದೆ. ಹೀಗಾಗಿಯೇ ರಾಷ್ಟ್ರ ಮತ್ತು ರಾಜ್ಯದಲ್ಲಿ ಕಳೆದ ೨-೩ ದಶಕದಿಂದ ಅವ್ಯಾಹತವಾಗಿ ಸಾಗಿರುವ ಈ ಭ್ರೂಣಹತ್ಯೆಯ ‘ಸಾಂಸ್ಕೃತಿಕ ಅತ್ಯಾಚಾರ’ ತಡೆಯಲು ಸರ್ಕಾರ ತೆಗೆದುಕೊಂಡಿರುವ ಕ್ರಮಗಳೆಲ್ಲಾ ವಿಫಲವಾಗಿವೆ.

ಎಲ್ಲಿಯವರೆಗೆ ನಮ್ಮ ಪುರುಷ ಪ್ರಧಾನ ಸಮಾಜಕೆ, ಸ್ವಸ್ಥ ಸಮಾಜ ನಿರ್ಮಾಣಕ್ಕೆ, ಹೆಣ್ಣೂ ಪುರುಷನಷ್ಟೇ ಮುಖ್ಯವೆಂಬುದು ಮನವರಿಕೆಯಾಗುವುದಿಲ್ಲವೋ ಅಲ್ಲಿಯವರೆಗೆ ಹೆಣ್ಣು ಸಂತತಿಗೆ ಉಳಿಗಾಲವಿಲ್ಲವೆನಿಸುತ್ತಿದೆ. ಹೆಣ್ಣೆಂಬ ಒಂದೇ ಕಾರಣಕ್ಕೆ ಗರ್ಭದಲ್ಲೇ ಹಲ್ಲೆಗೊಳಗಾಗುತ್ತಿರುವ ಕಂದಮ್ಮಗಳ ಆರ್ತನಾದ ನಮ್ಮ ಕರುಳನ್ನೇಕೆ ಕಲಕುತ್ತಿಲ್ಲ? ತಾಯಿಯೇ ನಿರ್ದಯವಾಗಿ ತನ್ನದೇ ಹೆಣ್ಣುಕುಲವನ್ನು ನಿರ್ದಾಕ್ಷಿಣ್ಯವಾಗಿ ಕೊಂದು ಬಿಸುಟುವಷ್ಟು ಅವಳ ಬ್ರೈನ್‌ವಾಷ್ ಮಾಡುತ್ತಿರುವ ನೀಚತನಕ್ಕೆ ಯಾರಿಗೆ ಶಿಕ್ಷೆ ಕೊಡೋಣ? ಪರಿಣಾಮಗಳ ಕುರಿತು ಅರಿತೋ ಅರಿಯದೆಯೋ ಇಂತಹ ಅಮಾನುಷ ಕ್ರೌರ್ಯದಲ್ಲಿ ಭಾಗಿಯಾಗುತ್ತಿರುವ ಕುಟುಂಬಕ್ಕೇ? ಒತ್ತಡ ಹೇರುತ್ತಿರುವ ಕುಬ್ಜ ಮನಸುಗಳಿಗೇ? ಇಂತಹದೊಂದು ಅಮಾನುಷ ಮನಸ್ಥಿತಿಯನ್ನು ನಿರ್ಮಾಣ ಮಾಡಿರುವ ಸಮಾಜಕ್ಕೇ? ಹೆಣ್ಣುಭ್ರೂಣವನ್ನು ಪತ್ತೆ ಮಾಡಿ, ಜನರ ಬುದ್ಧಿಗೋ, ಅರಿವಿಗೋ ಕುರುಡಿದ್ದರೂ, ಯಾವುದೇ ಪೂರ್ವಗ್ರಹವಿದ್ದರೂ ಅದನ್ನು ತೊಡೆದು ಹಾಕಿ ಹೆಣ್ಣಿನ ಕುರಿತು ಅವರಿಗೆ ಜಾಗೃತಿ ಮೂಡಿಸದೇ, ವರ್ಷಕ್ಕೆ ಅಂದಾಜು ೬ ಲಕ್ಷದಷ್ಟು ಹೆಣ್ಣುಭ್ರೂಣಗಳನ್ನು ಅಂತಃಕರಣವಿಲ್ಲದೇ ಹೊಸಕಿ ಹಾಕುತ್ತಿರುವ, ನಾವು ದೈವಸ್ವರೂಪಿಗಳೆಂದು ನಂಬುವ ವೈದ್ಯರಿಗೇ? ಇಂತಹ ಅಗಾಧ ಪ್ರಮಾಣದ ಕ್ರೌರ್ಯ ಹೆಣ್ಣು ಕಂದಮ್ಮಗಳ ಮೇಲೆ ಹುಟ್ಟುವ ಮೊದಲೇ ಮತ್ತು ಹೆಣ್ಣಿನ ಕೊರತೆಯ ಕಾರಣಕ್ಕೆ ಆನಂತರದಲ್ಲಿ ದೌರ್ಜನ್ಯವನ್ನು ಎದುರಿಸಬೇಕಿರುವ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸದೇ, ಎಚ್ಚೆತ್ತುಕೊಂಡಿಲ್ಲದ ಸರ್ಕಾರಕ್ಕೇ? ಯಾರಿಗೆ ಶಿಕ್ಷೆ ಕೊಡುವುದು? ಶಿಕ್ಷೆ ಕೊಡುವವರಾರು?

ಈಗ ಉಳಿದಿರುವ ದಾರಿಯೊಂದೇ- ಅದು ಜನಜಾಗೃತಿ. ಇದು ಮಹಿಳಾ ಸಂಘಟನೆಗಳ ಕೆಲಸ ಮಾತ್ರವಲ್ಲ. ಎಲ್ಲಾ ಪ್ರಗತಿಪರ, ಲಿಂಗಸೂಕ್ಷ್ಮತೆಯುಳ್ಳ, ಸ್ತ್ರೀಪರ ಕಾಳಜಿಯುಳ್ಳ ಸಂಘಟನೆಗಳು ತುರ್ತಾಗಿ ಈ ವಿಷಯದ ಕಡೆಗೆ ಗಮನಹರಿಸಿ ಕಾರ್ಯಪ್ರವರ್ತವಾಗಬೇಕಿದೆ. ಮಾಧ್ಯಮಗಳ ಮೂಲಕ, ಶಾಲಾ-ಕಾಲೇಜುಗಳ ಪಠ್ಯಪುಸ್ತಕಗಳ ಮೂಲಕ, ಜಾಹಿರಾತುಗಳ ಮೂಲಕ ಲಿಂಗಸೂಕ್ಷ್ಮತೆಯ ಅರಿವು, ಹೆಣ್ಣುಭ್ರೂಣ ಪತ್ತೆ ಮತ್ತು ಹತ್ಯೆಯ ವಿರುದ್ಧದ ಜಾಗೃತಿ ಮೂಡಿಸಬೇಕಿದೆ. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಸಮಿತಿಗಳು ರಚನೆಯಾಗುವಂತೆ, ಅದರಲ್ಲಿ ಜಾಗೃತ ನಾಗರೀಕರೂ, ಪ್ರಜ್ಞಾವಂತ ಸಾಮಾಜಿಕ ಕಾರ್ಯಕರ್ತರೂ ಇರುವಂತೆ ನೋಡಿಕೊಳ್ಳಬೇಕಿದೆ. ಹೆಣ್ಣುಭ್ರೂಣಪತ್ತೆ ಕಾರ್ಯವನ್ನು ಅನಿವಾರ್ಯವಾದ ಅನಾರೋಗ್ಯದ ಕಾರಣಕ್ಕಲ್ಲದೇ ಬೇರಾವ ಕಾರಣಕ್ಕೂ ಮಾಡದಂತೆ, ಅದರ ವಿವರಗಳನ್ನು ಗ್ರಾಹಕರಿಗೆ ತಿಳಿಸದಂತೆ ಹೆಚ್ಚಿನಂಶ ಜನರ ತೆರಿಗೆ ದುಡ್ಡಿನಲ್ಲಿ ಓದಿ ವೈದ್ಯರಾದವರ ಮನವೊಲಿಸಬೇಕಿದೆ. ಹೆಣ್ಣೆಂಬ ಕಾರಣಕ್ಕೇ ಗರ್ಭಪಾತ ಮಾಡದಂತೆ ವೈದ್ಯರಿಗೆ ತಿಳಿವು, ಕಾನೂನಿನ ಬಿಗಿ ಮತ್ತು ಎಚ್ಚರಿಕೆಗಳನ್ನೂ ನೀಡಬೇಕಿದೆ.

ಇದೆಲ್ಲದರ ಜೊತೆಗೆ, ಬಹುಶಃ ಎಲ್ಲಕ್ಕೂ ಮುಖ್ಯವಾಗಿ ಹೆಣ್ಣುಮಕ್ಕಳೇ ಎಚ್ಚೆತ್ತು ತಮ್ಮ ಸಂತತಿಯನ್ನು ಉಳಿಸಿಕೊಳ್ಳಲು ದೃಢ ಸಂಕಲ್ಪ ಮಾಡದಿದ್ದರೆ, ’ಅವಳ’ನ್ನು ಉಳಿಸಲು ಯಾವ ದೇವರಿಗೂ ಸಾಧ್ಯವಿಲ್ಲವೇನೋ? ಎಂದೆನಿಸುತ್ತಿದೆ.

ಸಮಾಜ ಸೇವೆ ಮಾಡೋಕೆ, ಪತ್ರಿಕಾ ಸಂಸ್ಥೆ ಮೊದಲು ಬದುಕಿರಬೇಕಲ್ಲ? : ಕೆ.ಎನ್.ಶಾಂತಕುಮಾರ್

ಪ್ರಜಾವಾಣಿ ಸಂಪಾದಕ ಹಾಗೂ ಡೆಕ್ಕನ್ ಹೆರಾಲ್ಡ್ ಸಮೂಹದ ಮಾಲೀಕರಲ್ಲಿ ಒಬ್ಬರಾದ ಕೆ.ಎನ್.ಶಾಂತಕುಮಾರ್ ಇತ್ತೀಚೆಗೆ ಹಾಸನದ ಪತ್ರಿಕೋದ್ಯಮ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. (ಅದಕ್ಕೆ ಪೂರ್ವಭಾವಿಯಾಗಿ ಮಾಡಿದ ಭಾಷಣದ ಕೆಲವು ಮುಖ್ಯಾಂಶಗಳು ವರ್ತಮಾನ.ಕಾಮ್‌ನಲ್ಲಿ ಈಗಾಗಲೆ ಪ್ರಕಟವಾಗಿದೆ.) ಸಂವಾದದಲ್ಲಿ ಪತ್ರಿಕಗಳ ನಡುವಿನ ಪೈಪೋಟಿ, ಪತ್ರಕರ್ತರ ಪ್ರಾಮಾಣಿಕತೆ, ಪತ್ರಿಕಾಲಯಗಳ ಸಿದ್ಧಾಂತಗಳ ಬಗ್ಗೆ ವಿದ್ಯಾರ್ಥಿಗಳಿಂದ ಪ್ರಶ್ನೆಗಳು ಬಂದವು. ಶಾಂತಕುಮಾರ್ ಅವರು ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು. ಕನ್ನಡದ ಪತ್ರಿಕೋದ್ಯಮದ ಪ್ರಸ್ತುತ ಸಂದರ್ಭದಲ್ಲಿ ಈ ಸಂವಾದದಲ್ಲಿ ಹೊರಹೊಮ್ಮಿದ ಕೆಲ ಅಂಶಗಳು ಬಹುಮುಖ್ಯ. ಸಂವಾದದ ಆಯ್ದಭಾಗಗಳು ವರ್ತಮಾನದ ಓದುಗರಿಗಾಗಿ ಇಲ್ಲಿವೆ.

ಚುನಾವಣಾ ಸಂದರ್ಭದಲ್ಲಿ ರಾಜಕಾರಣಿಗಳಿಂದ ಒತ್ತಡ ಬಂದರೆ ಏನು ಮಾಡುತ್ತೀರಿ?
ಶಾಂತಕುಮಾರ್: ಸಂಪಾದಕರಿಗೆ ಹೋಲಿಸಿದರೆ, ಸಾಮಾನ್ಯವಾಗಿ ಸ್ಥಳೀಯ ವರದಿಗಾರರಿಗೆ ಹೆಚ್ಚು ಒತ್ತಡಗಳು ಬರುತ್ತವೆ. ಅಂತಹ ಸಂದರ್ಭಗಳಲ್ಲಿ ಇಗ್ನೋರ್ (ನಿರ್ಲಕ್ಷ್ಯ) ಮಾಡಬೇಕು ಅಷ್ಟೆ. ನಾವು ಮಾಡುತ್ತಿರುವ ಕೆಲಸ ಸರಿ KN-Shanthakumar-prajavani-Hasana-2ಅನ್ನುವ ವಿಶ್ವಾಸ ಇರುವಾಗ, ತಲೆ ಕೆಡಿಸಿಕೊಳ್ಳುವ ಅಗತ್ಯ ಇರುವುದಿಲ್ಲ. ಅದರ ಪರಿಣಾಮ ಬೇರೆ ಏನೋ ಆಗಬಹುದು.
ಚುನಾವಣೆಯ ಸಂದರ್ಭಗಳಲ್ಲಿ ನಾವು ತುಂಬಾ ಎಚ್ಚರಿಕೆಯಿಂದ ಇರುತ್ತೇವೆ. ದುಡ್ಡು ಪಡೆದುಕೊಂಡು ಸುದ್ದಿ ಹಾಕುವ ಕ್ರಮ ನಮ್ಮಲ್ಲಿಲ್ಲ. ಹಾಗೆ ಯಾರಾದರೂ ಪತ್ರಿಕೆ ಹೆಸರು ಹೇಳಿಕೊಂಡು ದುಡ್ಡು ಕೇಳಿದರೆ ಮಾಹಿತಿ ಕೊಡಬೇಕೆಂದು ಪ್ರಕಟಣೆ ಕೊಡುತ್ತೇವೆ. ಕೆಲವು ದೂರುಗಳು ಬಂದಿವೆ. ಇದರ ಪರಿಣಾಮ ಒಬ್ಬರು-ಇಬ್ಬರು ಕೆಲಸ ಕಳೆದುಕೊಂಡಿದ್ದಾರೆ. ಎಚ್ಚರಿಕೆ ಕೊಟ್ಟಿದ್ದೇವೆ. ಹೀಗೆಲ್ಲಾ ಇರುತ್ತೆ. ನಾವು ಒತ್ತಡಗಳಿಗೆ ಮಹತ್ವ ಕೊಡದೆ, ನಮ್ಮ ಕೆಲಸ ನಾವು ಮಾಡಿಕೊಂಡು ಹೋಗಬೇಕು.

ಪತ್ರಿಕೋದ್ಯಮದಲ್ಲಿ ಪದವಿ ಗಳಿಸೋದು ವೃತ್ತಿಗೆ ಬಂದ ನಂತರ ಎಷ್ಟರಮಟ್ಟಿಗೆ ಸಹಕಾರಿ?
ಶಾಂತಕುಮಾರ್: ಪತ್ರಿಕೋದ್ಯಮ ಪಾಠ ಮಾಡುವ ಕಾಲೇಜಿನಲ್ಲಿ ನಿಂತು ಕೆಲವು ಮಾತುಗಳುನ್ನು ಹೇಳಬೇಕು. ನನ್ನ ಅಭಿಪ್ರಾಯದಲ್ಲಿ ಈ ಕಾಲೇಜುಗಳು, ಅಲ್ಲಿ ಪಾಠ ಮಾಡುವವರು ತೀವ್ರಗತಿಯಲ್ಲಿ ಬದಲಾಗುತ್ತಿರುವ ದಿನಗಳ ಜೊತೆಗೆ ಹೆಜ್ಜೆ ಹಾಕುತ್ತಿಲ್ಲ. ಹಿಂದೆ ಇದ್ದಾರೆ. ನನ್ನ ಮಗ ಕೊಲಂಬಿಯಾ ವಿ.ವಿಯಲ್ಲಿ ಪತ್ರಿಕೋದ್ಯಮ ಕಲಿತ. ಹಾಗಾಗಿ ನನಗೆ ಗೊತ್ತಿರುವಂತೆ, ಅಲ್ಲಿನ ಪಠ್ಯದಲ್ಲಿ ಪ್ರಾಕ್ಟಿಕಲ್ಸ್ ಗೆ ಹೆಚ್ಚಿನ ಮಹತ್ವ ಇದೆ. ಅಲ್ಲಿನ ವಿದ್ಯಾರ್ಥಿಗಳು ಡಿಜಿಟಲ್ ಪತ್ರಿಕೋದ್ಯಮದ ಬಗ್ಗೆ ಕಲಿತಾರೆ. ವೆಬ್ ಸೈಟ್ ತಯಾರಿಕೆ ಬಗ್ಗೆ ಕಲಿತಾರೆ.
ನಮ್ಮ ಕಾಲೇಜುಗಳಲ್ಲಿ ಆ ಕೊರತೆ ಇದೆ. ನಿಮ್ಮ ಕಾಲೇಜಿನ ಪ್ರಾಯೋಗಿಕ ಸಂಚಿಕೆಗಳನ್ನು ನೋಡಿದೆ. ಅದರಲ್ಲಿ ಬಹುತೇಕ ಕಾರ್ಯಕ್ರಮಗಳ ವರದಿಗಳಿವೆ. ಆದರೆ ವರದಿಗಾರಿಕೆ ಅಂದರೆ ಅಷ್ಟೇ ಅಲ್ಲ. ನೀವು ಹೊರಗೆ ಹೋಗಬೇಕು, ಜನರ ಸಮಸ್ಯೆ ಬಗ್ಗೆ ತಿಳಿದುಕೊಳ್ಳಬೇಕು, ಜನರೊಂದಿಗೆ ಮಾತನಾಡಬೇಕು ವರದಿ ಮಾಡಬೇಕು.

ನೀವು ಸಂಪಾದಕರು ಹಾಗೂ ಫೋಟೋ ಜರ್ನಲಿಸ್ಟ್ ಕೂಡ ಹೌದು. ನೀವು ನಿಮ್ಮ ಪತ್ರಿಕೆಯಲ್ಲಿ ಯಾವುದಕ್ಕೆ ಹೆಚ್ಚಿನ ಸ್ಪೇಸ್ ಕೊಡ್ತೀರಾ – ಫೋಟೋಗಾ..ಸುದ್ದಿಗಾ? ಏಕೆಂದರೆ, ಒಂದು ಫೋಟೋ ಸಾವಿರ ಪದಗಳಿಗೆ ಸಮ ಅಂತಾರಲ್ಲ..
ಶಾಂತಕುಮಾರ್: ಎಲ್ಲಾ ಫೋಟೋಗಳೂ ಸಾವಿರ ಪದಗಳಿಗೆ ಸಮ ಅಲ್ಲ. ಕೆಲವು ಫೋಟೋಗಳು ಮಾತ್ರ. ಫೋಟೋಗಳ ಬಳಗೆ ಸುದ್ದಿಯ ಮೇಲೆ ಅವಲಂಬಿತವಾಗಿರುತ್ತೆ. ಇತ್ತೀಚೆಗೆ ನಡೆದ ಏರೋ ಶೋ ಬಗ್ಗೆ ಸುದ್ದಿಯ ಜೊತೆಗೆ ಹೆಚ್ಚು ಫೋಟೋಗಳಿರಬೇಕು ಅಂತ ಜನ ಬಯಸುತ್ತಾರೆ. ಅದೇರೀತಿ ಸಿನಿಮಾ, ಸೆಲೆಬ್ರಿಟಿಗಳಿಗೆ ಸಂಬಂಧಿಸಿದ ಸುದ್ದಿಗಳು, ಕ್ರೀಡಾ ಸುದ್ದಿಗಳಗಲ್ಲಿ ಸಹಜವಾಗಿ ಫೋಟೋಗಳು ಹೆಚ್ಚು ಬಳಕೆಯಾಗುತ್ತವೆ.

ಪ್ರಜಾವಾಣಿ ಇತರೆ ಪತ್ರಿಕೆಗಳೊಂದಿಗೆ ಯಾವ ರೀತಿಯ ಸ್ಪರ್ಧೆ ಎದುರಿಸುತ್ತಿದೆ?
ಶಾಂತಕುಮಾರ್: ಯಾವ ರೀತಿ..ಅಂದರೆ…ಎಲ್ಲಾ ರೀತಿಯಲ್ಲೂ ಸ್ಪರ್ಧಿಸಬೇಕು. ಮುದ್ರಣ ಗುಣಮಟ್ಟ ಚೆನ್ನಾಗಿರಬೇಕು. ವರದಿಗಾರಿಕೆ ಚೆನ್ನಾಗಿರಬೇಕು. ಆದರೆ ಕೆಲವೊಮ್ಮೆ ಒತ್ತಡ ಬರುತ್ತೆ. ಪತ್ರಿಕೋದ್ಯಮದ ಮೂಲಭೂತ ತತ್ತ್ವಗಳನ್ನು ಬಿಟ್ಟು, ಅಂದರೆ ಉಪ್ಪು-ಕಾರ ಹಾಕಿ ಸುದ್ದಿ ಮಾಡುವವರು ಇರ್ತಾರೆ. ಎಲ್ಲರೂ ಅಲ್ಲ. ಕೆಲವರು. ಆಗ ನಾವೂ ಹಾಗೇ ಮಾಡಬೇಕು ಎನ್ನುವ ಒತ್ತಡಗಳು ಬರುತ್ತಿರುತ್ತೆ. ಆದರೆ ನಾವು ಅಂತಹ ಸಂದರ್ಭದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತೆ.
ಅಲ್ಲದೆ ಪತ್ರಿಕೆಗಳ ಪ್ರಸರಣದಲ್ಲಿ ಪೈಪೋಟಿ ಇದೆ. ಎಲ್ಲಾ ಕಡೆ ಬೆಳಗ್ಗೆ 6 ಗಂಟೆ ಪತ್ರಿಕೆಗಳು ತಲುಪಬೇಕು. ಮಾರ್ಕೆಟಿಂಗ್, ಜಾಹೀರಾತು ವಿಭಾಗಗಳಲ್ಲಿ ಪೈಪೋಟಿ ಇದೆ. ಅವೆಲ್ಲಾ ಸಹಜ. ಬದಲಾಗಬೇಕಾಗುತ್ತದೆ. ನಮ್ಮ ದೃಢವಾದ ನಿಲುವು ಏನೆಂದರೆ, ಪತ್ರಿಕೋದ್ಯಮದ ಮೂಲಭೂತ ತತ್ತ್ವಗಳನ್ನು ಬಿಡದೆ, ಬದಲಾಗಬೇಕು ಎನ್ನುವುದು.

ಸಣ್ಣ ಪತ್ರಿಕೆಗಳು ದೊಡ್ಡ ಪತ್ರಿಕೆಗಳಿಂದ ಸಾಕಷ್ಟು ಪೈಪೋಟಿ ಎದುರಿಸುತ್ತಿವೆಯಲ್ಲ?
ಶಾಂತಕುಮಾರ್: ಎಲ್ಲಾ ಪತ್ರಿಕೆಗಳಿಗೂ, ಎಲ್ಲಾ ರೀತಿಯ ಪತ್ರಿಕೆಗಳಿಗೂ ಅದರದೇ ಆದ ಸ್ಥಾನ ಇದೆ. ಪೀತ ಪತ್ರಿಕೆಗಳಿವೆ. ಆದರೆ ಅವನ್ನೂ ಓದುವ ಜನರಿದ್ದಾರಲ್ಲ? ಎಲ್ಲಾ ಪತ್ರಿಕೆಗಳೂ ಪ್ರಜಾವಾಣಿ ತರಹವೇ ಇರಬೇಕು ಎಂದರೆ, ಈ ಪ್ರಪಂಚ ಎಷ್ಟು ಬೋರಿಂಗ್ ಆಗಿರುತ್ತೆ ಅಲ್ಲವಾ?
ಎಲ್ಲದಕ್ಕೂ ಅದರದೇ ಸ್ಥಾನಮಾನ, ಬೇಡಿಕೆ ಇದ್ದೇ ಇರುತ್ತೆ. ಒಂದ ಸಣ್ಣ ಊರಿನ ಸಮುದಾಯವನ್ನು ಆಳವಾಗಿ ಪ್ರತಿನಿಧಿಸಲು ಸಣ್ಣ ಪತ್ರಿಕೆಗೆ ಸಾಧ್ಯವಾಗುವಂತೆ, ದೊಡ್ಡ ಪತ್ರಿಕೆಗೆ ಸಾಧ್ಯವಾಗದೇ ಇರಬಹುದು.

ಪತ್ರಕರ್ತರು ವೃತ್ತಿಯಲ್ಲಿದ್ದಾಗ ಸಾವು-ನೋವು ಅನುಭವಿಸಿದರೆ ನೀವು ಅವರ ಕುಟುಂಬಕ್ಕೆ ಹೇಗೆ ನೆರವು ಕೊಡ್ತೀರಿ?
ಶಾಂತಕುಮಾರ್: ನಾನು ನಮ್ಮ ಸಂಸ್ಥೆಯಲ್ಲಿರುವ ವ್ಯವಸ್ಥೆ ಬಗ್ಗೆ ಹೇಳಬಹುದು. ಬೇರೆ ಸಂಸ್ಥೆಗಳ ಬಗ್ಗೆ ಹೇಳಲಾಗುವುದಿಲ್ಲ. ನಮ್ಮ ಸಂಸ್ಥೆಯಲ್ಲಿ ಕೆಲಸದಲ್ಲಿರುವವರು ಅಪಘಾತಕ್ಕೆ ಈಡಾದಾಗ ಅವರು ವೈದ್ಯಕೀಯ ವೆಚ್ಚ ಭರಿಸಿದ್ದೇವೆ. ಅವರ ಅನಾರೋಗ್ಯದ ದಿನಗಳಲ್ಲೂ ಸಂಬಳ ನೀಡಿದ್ದೇವೆ. ಎರಡು ವರ್ಷಗಳ ಹಿಂದೆ ಡೆಕ್ಕನ್ ಹೆರಾಲ್ಡ್ ವರದಿಗಾರರೊಬ್ಬರು ಪೊಲೀಸರ ತಪ್ಪಿನಿಂದಾಗಿ ಭಯೋತ್ಪಾದಕನೆಂಬ ಹಣೆಪಟ್ಟಿ ತೊಟ್ಟು KN-Shanthakumar-prajavani-Hasana-1ನ್ಯಾಯಾಂಗ ಬಂಧನದಲ್ಲಿದ್ದ. ಆ ನಂತರ ಅವರ ವಿರುದ್ಧ ಯಾವುದೇ ಸಾಕ್ಷಿಗಳು ದೊರಕದೆ ಬಿಡುಗಡೆಯಾದರು. ವರದಿಗಾರ ಬಂಧನದಲ್ಲಿದ್ದ ಅಷ್ಟೂ ದಿನಗಳ ಸಂಬಳವನ್ನು ಸಂಸ್ಥೆ ನೀಡಿದೆ. ಆ ವರದಿಗಾರ ಇಂದಿಗೂ ನಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಓಳ್ಳೆ ಪತ್ರಕರ್ತ ಅಂದ್ರೆ ಇರಬೇಕಾದ ಮುಖ್ಯ ಗುಣಗಳೇನು..?
ಶಾಂತಕುಮಾರ್: ಮೊದಲನೆಯದು ಪ್ರಾಮಾಣಿಕತೆ. ಪ್ರಶ್ನೆ ಮಾಡದೆ ಏನನ್ನೂ ಒಪ್ಪಬಾರದು. ಇತ್ತೀಚಿನ ದಿನಗಳಲ್ಲಿ ಯುವ ಪತ್ರಕರ್ತರಲ್ಲಿ ಕಾಣುತ್ತಿರುವ ಕೊರತೆಗಳು ಅಂದರೆ ಭಾಷಾ ಜ್ಞಾನ ಕೊರತೆ. ಲೋಪದೋಷಗಳಿಲ್ಲದೆ, ಕಾಗುಣಿತ ತಪ್ಪಿಲ್ಲದೆ ಬರೆಯುವುದು ಮುಖ್ಯ. ಬಹಳ ಮುಖ್ಯವಾಗಿ ಸಾಮಾನ್ಯ ಜ್ಞಾನ ಇರಬೇಕು. ಅದಕ್ಕಾಗಿ ಹೆಚ್ಚೆಚ್ಚು ಓದಬೇಕು. ಕೇವಲ ಸಾಹಿತ್ಯ ಓದಿ ಅಂತ ಹೇಳೋಲ್ಲ. ಎಲ್ಲವನ್ನೂ ಓದಬೇಕು. ಅದು ದಿನಚರಿಯ ಭಾಗವಾಗಬೇಕು. ಹೆಚ್ಚೆಚ್ಚು ತಿಳಿದುಕೊಳ್ಳಬೇಕು ಎನ್ನುವು ಉತ್ಸಾಹ ಇರಬೇಕು.

ಸಾಮಾಜಿಕ ನ್ಯಾಯ ಕೊಡಿಸುವುದು, ಸಮಾಜ ಸೇವೆ ಮಾಡೋದು ಪತ್ರಿಕೆಗಳ ಮುಖ್ಯ ಉದ್ದೇಶ. ಆದರೆ ಇತ್ತೀಚೆಗೆ ಕೇವಲ ಲಾಭ ಮಾಡುವುದೇ ಉದ್ದೇಶ ಆಗಿದೆ ಎನ್ನುವ ಆರೋಪಗಳಿವೆಯಲ್ಲ..?
ಶಾಂತಕುಮಾರ್: ಸಮಾಜ ಸೇವೆ ಮಾಡಬೇಕು ಎಂದರೆ, ಪತ್ರಿಕಾ ಸಂಸ್ಥೆ ಮೊದಲು ಜೀವಂತವಾಗಿರಬೇಕು. ನಮ್ಮ ಪತ್ರಿಕೆಯ ಆರ್ಥಿಕ ಸ್ಥಿತಿಗತಿ ಬಹಳ ಮುಖ್ಯ. ನಷ್ಟ ಮಾಡಕೊಳ್ತಾನೇ ಇದ್ರೆ, ನಷ್ಟ ಅನುಭವಿಸಿ..ಒಂದು ದಿನ ಮುಚ್ಚಿ ಹೋಗ್ತೇವೆ ಅಷ್ಟೆ. ಕೇವಲ ಸಮಾಜ ಸೇವೆ ಮಾಡೋಕೆ ಇದು ಆಶ್ರಮ ಅಲ್ಲ. ಇದೂ ಒಂದು ಬುಸಿನೆಸ್. ಸುತ್ತೂರು ಮಠ ಅಥವಾ ಇನ್ನೊಂದು ಮಠ ಆದರೆ, ಅದಕ್ಕೆ ಭಕ್ತರು ಇರ್ತಾರೆ. ಅವರು ದಾನ ಕೊಡ್ತಾರೆ. ಅಲ್ಲಿ ಸಮಾಜ ಸೇವೆ ನಡೆಯುತ್ತೆ. ಆದರೆ ನಮ್ಮದು ಹಾಗಲ್ಲ. ಇಲ್ಲಿ ಬಂಡವಾಳ ಹೂಡಿಕೆ ಆಗಿದೆ. ಹೂಡಿಕೆ ಮಾಡಿದವರಿಗೆ ನಾವು ಹಿಂತಿರುಗಿಸಿ ಕೊಡಬೇಕಾಗುತ್ತದೆ. ಹಾಗಾಗಿ ಪತ್ರಿಕಾ ಸಂಸ್ಥೆ ಆರ್ಥಿಕವಾಗಿ ಸದೃಢವಾಗಿರಬೇಕು. ಅದರ ಜೊತೆಗೆ ಸಮಾಜದ ಒಳಿತಿಗಾಗಿ ಕೆಲಸ ಮಾಡಬೇಕು. ಎರಡರ ನಡುವೆ ಸಮತೋಲನೆ ಇರಬೇಕು. ದುಡ್ಡು ಮಾಡೋದು ಒಂದೇ ಉದ್ದೇಶ ಆಗಬಾರದು.

ಪತ್ರಿಕಾ ಸಂಸ್ಥೆಗಳು ಪತ್ರಿಕೋದ್ಯಮ ಕಾಲೇಜುಗಳ ಜೊತೆ ಕೈ ಜೋಡಿಸಿ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ಮಾಡಿದರೆ ಒಳ್ಳೆಯದಲ್ಲವಾ?
ಶಾಂತಕುಮಾರ್: ಮಾಡಬಹುದು. ನಾನು ಕೆಲವು ಸಂಸ್ಥೆಗಳ ಜೊತೆಗೆ ಇಂತಹ ಆಫರ್ ಮಾಡಿದ್ದೇನೆ. ಆದರೆ..ಇಷ್ಟು ಮಾತ್ರ ಹೇಳಬಹುದು ಅಂದರೆ, ನಾವು ಇಂತಹ ಪ್ರಯತ್ನಗಳಿಗೆ ತಯಾರಾಗಿದ್ದೇವೆ. ಕಲಿಕೆಯಲ್ಲಿ ಉದ್ಯಮದ ಸಹಭಾಗಿತ್ವ ಇರಬೇಕು.

ಒಂದು ಪತ್ರಿಕೆಗೆ ಸಂಪಾದಕ ಹಾಗೂ ಮಾಲೀಕ ಒಬ್ಬರೇ ಆಗಿರುವುದು ಒಳ್ಳೆಯದಾ..? ಅಥವಾ..?
ಶಾಂತಕುಮಾರ್: ಅದನ್ನು ನೀವು ಹೇಳಬೇಕು. ನಾವು ಕೆಲವು ಮಾಲೀಕರು-ಸಂಪಾದಕರುಗಳು ಸಂಪೂರ್ಣವಾಗಿ ಹ್ಯಾಂಡ್ಸ್-ಆನ್ ಎಡಿಟರ್ಸ್ ಅಲ್ಲ. ನಾವು ದಿನನಿತ್ಯ ಬರೆಯುವುದಿಲ್ಲ. ಸೂಪರ್ವೈಸ್ ಮಾಡ್ತೀವಿ. ನಾಯಕತ್ವ ಕೊಡ್ತೀವಿ. ಕೆಲವು ಸಂಸ್ಥೆಗಳಲ್ಲಿ prajavaniವ್ಯತ್ಯಾಸಗಳಿವೆ. ಉದಾಹರಣೆಗೆ ದಿ ಹಿಂದು. ಅಲ್ಲಿ ಮಾಲೀಕರು-ಸಂಪಾದಕರುಗಳು ಪರಿಪೂರ್ಣವಾಗಿ ಕೆಲಸ ತೊಡಗಿಸಿಕೊಂಡವರು. ದಿನನಿತ್ಯ ಕೆಲಸ ಮಾಡ್ತಾರೆ. ಅವರ ಹೊರತಾಗಿ, ಉಳಿದ ಬಹುತೇಕರು ಪಾರ್ಟ್ ಟೈಮರ್ಸ್. ಅದರಿಂದ ನನಗಂತೂ ಏನೂ ಸಮಸ್ಯೆ ಕಾಣುವುದಿಲ್ಲ. ಏನಾದ್ರೂ ಇದ್ದರೆ..ನೀವು ಹೇಳಬೇಕು.

ಪತ್ರಿಕೆಗಳು ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು ಎಂದಿರಿ. ಆದರೆ ಒಂದೊಂದು ಪತ್ರಿಕೆಯೂ ಒಂದೊಂದು ಸಿದ್ಧಾಂತಕ್ಕೆ (ಐಡಿಯಾಲಜಿಗೆ) ಅಥವಾ ಪಕ್ಷಕ್ಕೆ ಕಟ್ಟುಬಿದ್ದರೆ, ಸತ್ಯ ಮರೆಮಾಚಿದಂತಾಗುವುದಿಲ್ಲವೆ..?
ಶಾಂತಕುಮಾರ್: ಪ್ರಜಾವಾಣಿಯ ಐಡಿಯಾಲಜಿ ಏನು..ನಿಮ್ಮ ಪ್ರಕಾರ.

ಸಾಮಾಜಿಕ ತಾಣಗಳಲ್ಲಿ ಚರ್ಚೆಯಾಗುವುದನ್ನು ನೋಡಿದರೆ, ಪ್ರಜಾವಾಣಿಯಲ್ಲಿ ಪ್ರಕಟವಾಗು ಅಂಕಣಗಳೆಲ್ಲಾ ಎಡಪಂಥೀಯ ಚಿಂತನೆಗೆ ಹತ್ತಿರವಾಗಿವೆ ಎಂಬ ಅಭಿಪ್ರಾಯ ಇದೆ.
ಶಾಂತಕುಮಾರ್: ನೀವು ಹೇಳಿದ್ದು ಸ್ವಲ್ಪಮಟ್ಟಿಗೆ ಸರಿ ಇರಬಹುದು. ಆದರೆ ಸಂಪೂರ್ಣವಾಗಿ ಅಲ್ಲ. ಈ ಮೊದಲು ಸ್ವಲ್ಪ ಹೆಚ್ಚು ಇತ್ತು ಅನ್ಸುತ್ತೆ. ಈಗ ಸ್ವಲ್ಪ ಬದಲಾಗಿದೆ. ನನಗಿರುವ ಒಂದು ಸಮಸ್ಯೆ ಎಂದರೆ, ನಮ್ಮನ್ನು ಈ ತರಹ ಲೇಬಲ್ ಮಾಡಿ ಬಿಡ್ತಾರೆ. ಹೀಗೆ ಎಡಪಂಥೀಯರು ಎಂದು ಲೇಬಲ್ ಮಾಡಿಬಿಟ್ಟರೆ, ಬಲಪಂಥೀಯರು ನಮಗೆ ಬರೆಯೋಕೆ ಮುಂದೆ ಬರೋಲ್ಲ. ನಾನು ಒಂದು ಬ್ಯಾಲೆನ್ಸ್ ತರಬೇಕು ಅಂತ ಹುಡುಕ್ತಾ ಇದೀನಿ. ಹಾಗಂತ ನಾವು ರಾಡಿಕಲ್ ಬಲಪಂಥೀಯರನ್ನಾಗಲಿ, ರಾಡಿಕಲ್ ಎಡಪಂಥೀಯರನ್ನಾಗಲಿ ಸೇರಿಸಿಕೊಳ್ಳಲ್ಲ. ಬಲಪಂಥೀಯರಲ್ಲಿ. ಪತ್ರಿಕೆಗಳಲ್ಲಿ ಎಲ್ಲದಕ್ಕೂ ಸ್ಪೇಸ್ ಇರಬೇಕು.
ಆದರೆ ತಾನು ಯಾವ ಸಿದ್ಧಾಂತಕ್ಕೂ ಬದ್ಧನಲ್ಲ, ನಿಷ್ಪಕ್ಷಪಾತವಾಗಿ ಪತ್ರಿಕೆ ನಡೆಸುತ್ತೇನೆ ಎಂದು ಹೇಳಿಕೊಂಡು, ಒಳಗೊಳಗೇ.. ಮುಸುಕು ಹಾಕಿಕೊಂಡು ನಿಗೂಢವಾಗಿ ಪಕ್ಷಪಾತಿಯಾಗಿ ಕೆಲಸ ಮಾಡುತ್ತಿದ್ದರೆ.. ಅದು ಅಪಾಯಕಾರಿ. ಆದರೆ ಮುಕ್ತವಾಗಿದ್ದರೆ.. ಏನೂ ತೊಂದರೆ ಇಲ್ಲ. ಕೆಲವೆಡೆ ಪಾರ್ಟಿ ಮುಖವಾಣಿಗಳಿವೆ. ಅದು ಸರಿ. ತಪ್ಪೇನಿಲ್ಲ. ಜನರಿಗೆ ಅದ ಯಾರ ಪತ್ರಿಕೆ ಎನ್ನುವುದು ಸ್ಪಷ್ಟವಾಗಿ ಗೊತ್ತಿರುತ್ತೆ.