Monthly Archives: April 2015

ಆರ್‌ಎಸ್‌ಎಸ್ ಮತ್ತು ಅಂಬೇಡ್ಕರ್ : ಐಡಿಯಾಲಜಿಯ ವಾಸ್ತವೀಕರಣ, ವಾಸ್ತವದ ಆದರ್ಶೀಕರಣ

– ಬಿ.ಶ್ರೀಪಾದ ಭಟ್

ಇತಿಹಾಸವನ್ನು ತಮ್ಮ ಮತೀಯವಾದಿ ಸಿದ್ಧಾಂತಗಳಿಗೆ ಅನುಗುಣವಾಗಿ ಉತ್ಪಾದಿಸುವುದರಲ್ಲಿ ಸಿದ್ಧಹಸ್ತರಾದ ಸಂಘ ಪರಿವಾರ ಮತ್ತು ಮುಖ್ಯವಾಗಿ ಆರೆಸ್ಸೆಸ್ ಇಂದು ಡಾ.ಬಿ.ಆರ್.ಆಂಬೇಡ್ಕರ್ ಅವರನ್ನು appropriation ಮಾಡಿಕೊಳ್ಳಲು ಎಲ್ಲಾ ಸಿದ್ಧತೆಗಳನ್ನು ನಡೆಸಿದ್ದಾರೆ. ಅಂಬೇಡ್ಕರ್ ’ಘರ್ ವಾಪಸಿ’ ನೀತಿಯನ್ನು ಬೆಂಬಲಿಸಿದ್ದರು ಎನ್ನುವ ಸುಳ್ಳನ್ನು ಉತ್ಪಾದಿಸುತ್ತಿದ್ದಾರೆ. ಗೋಬೆಲ್ಸ್ ತಂತ್ರವನ್ನು ಅನುಸರಿಸುತ್ತಿರುವ ಸಂಘ ಪರಿವಾರ ಸಾವಿರ Young_Ambedkarಸುಳ್ಳುಗಳನ್ನು ಹೇಳುತ್ತಿದೆ. ಅಂಬೇಡ್ಕರ್ ಅವರ ೧೨೫ನೇ ಜನ್ಮ ದಿನದ ಸಂದರ್ಭದಲ್ಲಿ ೨೦೦ ಪುಟಗಳ ಅಂಬೇಡ್ಕರ್ ಕುರಿತಾದ ಕೃತಿಗಳನ್ನು ತನ್ನ ಪ್ರಕಾಶನದ ಮೂಲಕ ಹೊರತರಲು ಆರೆಸ್ಸೆಸ್ ನಿರ್ಧರಿಸಿದೆ. ಈ ಪುಸ್ತಕಗಳಲ್ಲಿ ಅಂಬೇಡ್ಕರ್ ಅವರು ಇಸ್ಲಾಮಿಕ್ ಅಗ್ರೆಶನ್, ಮತಾಂತರ, ಆರ್ಟಿಕಲ್ ೩೭೦ ಗಳ ಕುರಿತಂತೆ ಸಂಘ ಪರಿವಾರದ ಚಿಂತನೆಗಳನ್ನೆ ಹೊಂದಿದ್ದರು ಎಂದು ವಿವರಿಸಲಾಗಿದೆ. ಅವರೊಬ್ಬ ರಾಷ್ಟ್ರೀಯವಾದಿ ಎಂದೇ ಹೇಳುವ ಸಂಘ ಪರಿವಾರದ ಮುಖವಾಣಿ ’ಆರ್ಗನೈಸರ್‌’ನ ಸಂಪಾದಕ ಪ್ರಫುಲ್ಲ ಕೇಟ್ಕರ್ ’ಪಾಕಿಸ್ತಾನದ ಹೈದರಾಬಾದನಲ್ಲಿ ಪರಿಶಿಷ್ಟ ಜಾತಿಯ ಹಿಂದೂಗಳನ್ನು ಬಲವಂತವಾಗಿ ಮತಾಂತರಗೊಳಿಸಿದಾಗ ಅದನ್ನು ಕಟುವಾಗಿ ಟೀಕಿಸಿದ ಅಂಬೇಡ್ಕರ್ ಮತಾಂತರಗೊಂಡ ಹಿಂದೂಗಳು ಮರಳಿ ತಮ್ಮ ಧರ್ಮಕ್ಕೆ ಬಂದರೆ ತಾವು ಸ್ವಾಗತಿಸುತ್ತೇವೆ ಎಂದು ಹೇಳಿದರು. ಈ ಮೂಲಕ ಅವರು ’ಘರ್ ವಾಪಸಿ’ಯನ್ನು ಬೆಂಬಲಿಸಿದರು’ ಎಂದು ಹೇಳುತ್ತಾರೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡುತ್ತಾ ’ಅಂಬೇಡ್ಕರ್ ಅವರನ್ನು ರಾಜಕೀಯ ಅಸ್ಪೃಶ್ಯತೆಯಿಂದ ಬಿಡುಗಡೆಗೊಳಿಸಬೇಕಾಗಿದೆ, ಕಳೆದ ಇಪ್ಪತ್ತು ವರ್ಷಗಳಲ್ಲಿ ಅಂಬೇಡ್ಕರ್‌ಗೆ ಆದ ಅನ್ಯಾಯವನ್ನು ನಾವು ಸರಿಪಡಿಸುತ್ತೇವೆ’ ಎಂದು ಹೇಳಿದ್ದಾರೆ. narender_modi_rssಮಹಾರಾಷ್ಟ್ರದ ಮುಖ್ಯಮಂತ್ರಿ, ಬಿಜೆಪಿಯ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ ತಮ್ಮ ಐಡಿಯಾಲಜಿ ಗೋಳ್ವಲ್ಕರ್, ಸಾವರ್ಕರ್ ಹೆಸರನ್ನು ಸ್ಮರಿಸದೆ ತಾನು ಅಂಬೇಡ್ಕರ್ ಮತ್ತು ಜೋತಿಬಾ ಫುಲೆ ಮಾರ್ಗದಲ್ಲಿ ಮುನ್ನಡೆಯುತ್ತೇನೆ ಎಂದು ಹೇಳಿದರು. ಇತ್ತೀಚೆಗೆ ಮುಂದಿನ ಒಂದು ವರ್ಷದ ಕಾಲ ಅಂಬೇಡ್ಕರ್ ಅವರ ಕುರಿತಾಗಿ ಹಮ್ಮಿಕೊಂಡ ವಿವಿಧ ಕಾರ್ಯಕ್ರಮಗಳ ಪಟ್ಟಿಯನ್ನು ಸಹ ಬಿಡುಗಡೆಗೊಳಿಸಿದ್ದಾರೆ. ಇಡೀ ಸಂಘ ಪರಿವಾರವೇ ಅಂಬೇಡ್ಕರ್ ಮೂಲಕ ತಳ ಸಮುದಾಯಗಳ ಓಟ್ ಬ್ಯಾಂಕ್‌ಗೆ ಲಗ್ಗೆ ಇಟ್ಟಿದೆ ಎನ್ನುವುದು ಮಾತ್ರ ಇವೆಲ್ಲದರ ಒಟ್ಟು ಸಾರಾಂಶ. ಏಕೆಂದರೆ ದಲಿತರ ಬೆಂಬಲವಿಲ್ಲದೆ ರಾಜಕೀಯ ಅಧಿಕಾರ ಸಾಧ್ಯವಿಲ್ಲ ಎಂದು ಈ ಮತೀಯವಾದಿಗಳಿಗೆ ಅರಿವಾಗಿದೆ.

ಸುಮಾರು ೧೩೦ ವರ್ಷಗಳ ಹಿಂದೆ ಆರ್ಯ ಸಮಾಜ ಪ್ರಾರಂಬಿಸಿದ “ಜಾತ್-ಪಾತ್-ತೋಡಕ್ ಮಂಡಲ್” ಎನ್ನುವ ಒಕ್ಕೂಟ ಮೂಲಭೂತವಾಗಿ ಹಿಂದೂ ಧರ್ಮದಲ್ಲಿ ಸುಧಾರಣೆಯನ್ನು ತರಲು ಬಹುಪಾಲು ಬ್ರಾಹ್ಮಣರು ಕಟ್ಟಿಕೊಂಡ ಒಂದು ಸಂಸ್ಥೆ. ಹಿಂದೂ ಧರ್ಮದ ಜಾತಿ ಪದ್ಧತಿಯಲ್ಲಿ ಸುಧಾರಣೆ ಬಯಸುವ ಈ ಮೇಲ್ಜಾತಿಗಳ ಗುಂಪಿನಲ್ಲಿ ಒಬ್ಬ ದಲಿತನೂ ಸದಸ್ಯನಾಗಿರಲಿಲ್ಲ. ೧೯೩೫ರಲ್ಲಿ ತಮ್ಮ ಸಂಸ್ಥೆಯ ವಾರ್ಷಿಕೋತ್ಸವಕ್ಕೆ ಅಂಬೇಡ್ಕರ್ ಅವರನ್ನು ಅತಿಥಿಯಾಗಿ ಆಹ್ವಾನಿಸಿರುತ್ತಾರೆ. ಮೊದಲು ಈ ಆಹ್ವಾನವನ್ನು ತಿರಸ್ಕರಿಸುವ ಅಂಬೇಡ್ಕರ್ ನಂತರ ತಮ್ಮ ಮಾತುಗಳನ್ನು ಸೆನ್ಸಾರ್ ಮಾಡಕೂಡದು ಎನ್ನುವ ಕರಾರಿನೊಂದಿಗೆ ಸಮ್ಮತಿಸುತ್ತಾರೆ. ತಮ್ಮ ಭಾಷಣದ ಸಾವಿರ ಪ್ರತಿಗಳನ್ನು ಮುದ್ರಿಸಿ “Annihilation of Caste” ತಲೆಬರಹದ ಅಡಿಯಲ್ಲಿ ತಮ್ಮ ಭಾಷಣದ ಪ್ರತಿಯನ್ನು “ಜಾತ್-ಪಾತ್-ತೋಡಕ್ ಮಂಡಲ್”ಗೆ ಕಳುಹಿಸಿಕೊಡುತ್ತಾರೆ. ಆದರೆ ತಮ್ಮ ಈ ಲೇಖನಗಳಲ್ಲಿ ಅಂಬೇಡ್ಕರ್ ಅವರು ಮಂಡಲ್‌ನ ಈ ಸುಧಾರಣ ತಂತ್ರವನ್ನು ನಿರಾಕರಿಸಿ ಇಂಡಿಯಾದಲ್ಲಿ ಅಸ್ಪೃಶ್ಯತೆಯನ್ನು ತೊಡೆದು ಹಾಕಲು ’ಜಾತಿ ವಿನಾಶ’ ಒಂದೇ ಉಳಿದಿರುವ ಮಾರ್ಗ ಎಂದು ಹೇಳುತ್ತಾರೆ. ಹಿಂದೂ ಧರ್ಮದ ಮನುನೀತಿಯನ್ನು, ವರ್ಣಾಶ್ರಮ ಪದ್ಧತಿಯನ್ನು, ಬ್ರಾಹ್ಮಣ್ಯದ ಕುಟಿಲತೆಯನ್ನು ಕಟುವಾಗಿ ಟೀಕಿಸುತ್ತಾರೆ. ಈ ಮಂಡಲ್‌ನ ನೇತೃತ್ವವನ್ನು ವಹಿಸಿರುವ ಬ್ರಾಹ್ಮಣರಿಂದ ಜಾತಿ ಸುಧಾರಣೆ ಸಾಧ್ಯವೆ ಎಂದು ಪ್ರಶ್ನಿಸುವ ಅಂಬೇಡ್ಕರ್, ಬ್ರಾಹ್ಮಣರ ನಾಯಕತ್ವದಲ್ಲಿ ಜಾತಿ ವಿನಾಶ ಸಾಧ್ಯವಿಲ್ಲ ಎಂದು ಎಚ್ಚರಿಸುತ್ತಾರೆ. ’ನಿಮ್ಮಲ್ಲಿ ಸುಧಾರಣವಾದಿ ಬ್ರಾಹ್ಮಣರು ಇರಬಹುದು. ಆದರೆ ಇವರೆಲ್ಲ ಸಂಪ್ರದಾಯವಾದಿ ಬ್ರಾಹ್ಮಣರ ವಿರುದ್ಧ ಸಂಘಟನೆ ನಡೆಸುತ್ತಾರೆ ಎನ್ನುವುದನ್ನು ನಾನಂತೂ ನಂಬುವುದಿಲ್ಲ ಮತ್ತು ಇದು ಸಾಧ್ಯವೂ ಇಲ್ಲ’ ಎಂದು ಅಂಬೇಡ್ಕರ್ ಸ್ಪಷ್ಟ ಮಾತುಗಳಲ್ಲಿ ಮಂಡಲ್‌ನ ಒಕ್ಕೂಟವನ್ನು ಉದ್ದೇಶಿಸಿ ಹೇಳುತ್ತಾರೆ. ಅಂಬೇಡ್ಕರ್ ಅವರ ನೇರವಾದ, ಸತ್ಯನಿಷ್ಠ ಮಾತುಗಳಿಂದ ಹಿಂಜರಿದ ಬ್ರಾಹ್ಮಣರ ನೇತೃತ್ವದ ಜಾತ್-ಪಾತ್-ತೋಡಕ್ ಮಂಡಲ್ ಕೊನೆಗೂ ಆ ಸಮ್ಮೇಳವನ್ನು ನಡೆಸುವುದೇ ಇಲ್ಲ. ಅಂಬೇಡ್ಕರ್ ಅವರು ತಮ್ಮ ಭಾಷಣದ ಪ್ರತಿಯನ್ನು “Annihilation of Caste” ಹೆಸರಿನಲ್ಲಿ ಪುಸ್ತಕರೂಪದಲ್ಲಿ ಮುದ್ರಿಸುತ್ತಾರೆ.

ಹಿಂದೂ ಧರ್ಮದಲ್ಲಿನ ಜಾತಿ ವಿನಾಶವು ಅದರ ಎಲ್ಲಾ ಸೌಲಭ್ಯಗಳನ್ನು ಅನುಭವಿಸುತ್ತಿರುವ ಮೇಲ್ಜಾತಿಗಳ ಜವಾಬ್ದಾರಿ ಎನ್ನುವುದು ಅಂಬೇಡ್ಕರ್ ಮತ್ತು ಪುಸ್ತಕದ ಒಟ್ಟಾರೆ ಆಶಯವಾಗಿತ್ತು. ಸಾವಿರಾರು ವರ್ಷಗಳಿಂದ ದೌರ್ಜನ್ಯ ನಡೆಸುತ್ತಾ ಬಂದಿರುವ ಮೇಲ್ಜಾತಿಗಳು ಸ್ವತಃ ತಾವೇ ಈ ಜಾತಿ ಪದ್ಧತಿಯನ್ನು ಕೊನೆಗೊಳಿಸಬೇಕು ಎಂದು ಅಂಬೇಡ್ಕರ್ ಚಿಂತನೆಗಳು ಆಶಿಸುತ್ತವೆ. ಆದರೆ ೧೯೩೬ರಿಂದ ಇಂದಿನವರೆಗೂ ಜಾತಿ ವಿನಾಶದ ಕುರಿತಾಗಿ ಮೇಲ್ಜಾತಿಗಳಲ್ಲಿ ಯಾವುದೇ ಬಗೆಯ ಹೊಸ ಚಿಂತನೆಗಳು ಕಂಡು ಬರುತ್ತಿಲ್ಲ. ಜಾತಿ ವಿನಾಶಕ್ಕೂ ತಮಗೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿರುವ ಮೇಲ್ಜಾತಿಯ ಸಮಾಜ ಸಂಪ್ರದಾಯಸ್ಥರ ಮೂಲಕ ನೇರವಾಗಿ ಮತ್ತು ಸುಧಾರಣವಾದಿಗಳ ಮೂಲಕ ಪರೋಕ್ಷವಾಗಿ ಜಾತಿ ಪದ್ಧತಿಯನ್ನು ಪೋಷಿಸುತ್ತಿದೆ. ಬ್ರಾಹ್ಮಣರಿಂದ ಮೊದಲುಗೊಂಡು ಮುಟ್ಟಿಸಿಕೊಳ್ಳುವ ಎಲ್ಲಾ ಜಾತಿಗಳಲ್ಲಿಯೂ ಬ್ರಾಹ್ಮಣ್ಯದ ಜಾತೀಯತೆ ಮತ್ತು ಸನಾತನವಾದವು ಬೆರೆತು ಹೋಗಿದೆ. ಮೇಲ್ಜಾತಿಯ ಸಂಪ್ರದಾಯನಿಷ್ಠರು ಮತ್ತು ಸುಧಾರಣವಾದಿಗಳು ತಮ್ಮ ಜಾತಿ ಐಡೆಂಟಿಟಿಯನ್ನು ಕಳಚಿಕೊಳ್ಳಲು ವಿಫಲರಾಗಿದ್ದಾರೆ. ಇದು ಅಂಬೇಡ್ಕರ್ ಅವರ ಆಶಯಕ್ಕೆ ವಿರುದ್ಧವಾದದ್ದು. ಜಾತಿ ಐಡೆಂಟಿಟಿಯಿಂದ ಸಂಪೂರ್ಣವಾಗಿ ಹೊರಬರದೆ, ಜಾತಿ ವಿನಾಶದ ಪರಿಕಲ್ಪನೆಗೆ ಹೆಗಲು ಕೊಡದೆ ಅಂಬೇಡ್ಕರ್ ಲೆಗಸಿಯ ಉತ್ತರದಾಯಿತ್ವವನ್ನು ಹೆಗಲಗೇರಿಸಿಕೊಳ್ಳುವುದು ಕೇವಲ ಆತ್ಮವಂಚನೆ ಎನಿಕೊಳ್ಳುತ್ತದೆ. ಇವರ ಈ ಮರೆ ಮೋಸದ ಫಲವಾಗಿ ತಳ ಸಮುದಾಯಗಳು ಈ ಸುಧಾರಣವಾದಿಗಳಿಂದಲೂ ಮತ್ತಷ್ಟು ಅಂತರ ಕಾಯ್ದುಕೊಳ್ಳುತ್ತಾ ಹೊಸ ಸಾಮಾಜಿಕ-ರಾಜಕೀಯ ಪಲ್ಲಟಗಳಿಗಾಗಿ ಸಂಘಟಿತರಾಗುತ್ತಿದ್ದಾರೆ. ಆದರೆ ಸುಧಾರಣಾವಾದಿಗಳನ್ನು ಹೊರತುಪಡಿಸಿ ಹಿಂದೂ ಧರ್ಮದ ಅಡಿಯಲ್ಲಿ ರಾಜಕೀಯವಾಗಿ ಒಂದಾಗುವ ಈ ಸಂಪ್ರದಾಯನಿಷ್ಠ ಜಾತಿ ಸಮೂಹಗಳು ಇಂದು ಬಿಜೆಪಿ ಮತ್ತು ಆರೆಸ್ಸೆಸ್‌ನ ಶಕ್ತಿಕೇಂದ್ರಗಳಾಗಿವೆ. ಈ ಜಾತಿಸಂಘಟನೆಗಳನ್ನು ತಮ್ಮ ಬೆನ್ನಿಗೆ ಕಟ್ಟಿಕೊಂಡಿರುವ ಬಿಜೆಪಿ ಪಕ್ಷ ತಳ ಸಮುದಾಯಗಳನ್ನು ಸೆಳೆಯಲು ಮುಂದಾಗಿದೆ. ಅದಕ್ಕೆ ಸಂಘ ಪರಿವಾರ ಬಳಸಿಕೊಳ್ಳುತ್ತಿರುವುದು ಅಂಬೇಡ್ಕರ್ ಅವರ ಲೆಗಸಿಯನ್ನು. ಆದರೆ ಅಂಬೇಡ್ಕರ್ ಅವರ ಎಲ್ಲಾ ಹೋರಾಟಗಳು, ಸಂಘಟನೆಗಳು, ಚಿಂತನೆಗಳು ಸಂಪೂರ್ಣವಾಗಿ ಹಿಂದೂ ಧರ್ಮದ ವಿರುದ್ಧವಾಗಿತ್ತು. ಅಂಬೇಡ್ಕರ ಅವರ ಬರಹಗಳು, ಭಾಷಣಗಳಲ್ಲಿ ಇದು ನಮಗೆ ಸ್ಪಷ್ಟವಾಗಿ ಅರಿವಾಗುತ್ತದೆ.

ಆದರೆ ಮೂವತ್ತು ಮತ್ತು ನಲವತ್ತರ ದಶಕಗಳಲ್ಲಿ ಬಿ.ಆರ್.ಅಂಬೇಡ್ಕರ್ ಅವರು ಹಿಂದೂ ಮತ್ತು ಮುಸ್ಲಿಂ ಲೀಗ್‌ನ ಮತೀಯವಾದಿ ರಾಜಕಾರಣವನ್ನು ತೀವ್ರವಾಗಿ ಖಂಡಿಸಿದ್ದರು. ೧೯೪೦ರಲ್ಲಿ ಅಂಬೇಡ್ಕರ್ ಅವರು ಬರೆದ “ಪಾಕಿಸ್ತಾನ ಅಥವಾ ವಿಭಜನೆಗೊಂಡ ಇಂಡಿಯಾ” ಪುಸ್ತಕದಲ್ಲಿ ಎಲ್ಲಾ ಮಾದರಿಯ ಮೂಲಭೂತವಾದಿಗಳನ್ನು, ಕೋಮುವಾದಿ ಶಕ್ತಿಗಳನ್ನು ವಿರೋಧಿಸಿದ್ದರು ಮತ್ತು ಕಟುವಾದ ಶಬ್ದಗಳಿಂದ ಟೀಕಿಸಿದ್ದರು. ಆ ಪುಸ್ತಕದಿಂದ ಆಯ್ದ ಭಾಗಗಳು:

“ಒಂದು ವೇಳೆ ಹಿಂದೂ ರಾಜ್ ಎನ್ನುವ ತತ್ವವು ಜಾರಿಗೊಂಡರೆ, ನಿಜಕ್ಕೂ ಅದು ಈ ದೇಶದ ಬಲು ದೊಡ್ಡ ದುರ್ಘಟನೆ ಎಂದೇ ನಾನು ಭಾವಿಸುತ್ತೇನೆ. ಇದರಲ್ಲಿ ಸಂಶಯವಿಲ್ಲ. ಇದು ದುರಹಂಕಾರದ ಚಿಂತನೆಗಳು. ಈ ಕುರಿತಾಗಿ ಹಿಂದೂಗಳು ಏನೇ ಹೇಳಿಕೊಂಡರೂ ಸ್ವಾತಂತ್ರ, ಸಮಾನತೆಗೆ ಹಿಂದೂಯಿಸಂ ಒಂದು ವಿಪತ್ತು. ಈ ಹಿನ್ನೆಲೆಯಲ್ಲಿ ಈ ಮಾದರಿಯ ಚಿಂತನೆಗಳಿಗೆ ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ಅರ್ಹತೆ ಇಲ್ಲ. ಹಿಂದೂ ರಾಜ್ ಅನ್ನು ನಾವು ಯಾವುದೇ ಬೆಲೆ ತೆತ್ತಾದರೂ ಸರಿ, ತಡೆಯಬೇಕಾಗಿದೆ.

“ಮೇಲ್ಜಾತಿ ಹಿಂದೂಗಳು ಹಿಂದುತ್ವದ ಹೆಸರಿನಲ್ಲಿ ಸ್ವತಃ ಹಿಂದೂಗಳನ್ನು ನಾಶಮಾಡುವಂತಹ ವಿಶೇಷ ಗುಣಲಕ್ಷಣಗಳನ್ನು ಅವರು ಹೊಂದಿದ್ದಾರೆ. ಸಂಪತ್ತು ಮತ್ತು ಶಿಕ್ಷಣದಲ್ಲಿ ಏಕಸ್ವಾಮ್ಯತೆಯನ್ನು ಸಾಧಿಸಿದ ಈ ಮೇಲ್ಜಾತಿ ಹಿಂದೂಗಳಿಗೆ ಈ ಏಕಸ್ವಾಮ್ಯತೆಯನ್ನು ಮುಂದುವರೆಸಿಕೊಂಡು ಹೋಗುವುದು ಅವರ ಮುಖ್ಯ ಗುರಿಯಾಗಿತ್ತು. ತಮ್ಮ ಈ ಸ್ವಾರ್ಥದ ಗುಣದಿಂದಾಗಿ ತಳ ಸಮುದಾಯಗಳಿಗೆ ಶಿಕ್ಷಣ ಮತ್ತು ಆರ್ಥಿಕ ಸುಭದ್ರತೆಯಂದ ವಂಚನೆಗೊಳಿಸಿದರು. ತಳಸಮುದಾಯಗಳೊಂದಿಗೆ ಬೆಳೆಸಿದ ಪ್ರತ್ಯೇಕತೆ ಮತ್ತು ತಾರತಮ್ಯ ತತ್ವವನ್ನು ಈ ಮೇಲ್ಜಾತಿ ಹಿಂದೂಗಳು ಮುಸ್ಲಿಂ ಸಮುದಾಯಕ್ಕೂ ವಿಸ್ತರಿಸುತ್ತಿದ್ದಾರೆ. ಇವರು ಮುಸ್ಲಿಂರನ್ನು ಸಹ ಶಿಕ್ಷಣ ಮತ್ತು ಸಂಪತ್ತಿನಿಂದ ದೂರವಿಡಲು ಬಯಸುತ್ತಿದ್ದಾರೆ.

“ಮೇಲ್ನೋಟಕ್ಕೆ ಆಶ್ಚರ್ಯವೆನಿಸಿದರೂ ಸಾವರ್ಕರ್ ಮತ್ತು ಜಿನ್ನಾ ಒಂದು ರಾಷ್ಟ್ರ ವರ್ಸಸ್ ದ್ವಿರಾಷ್ಟ್ರದ ತತ್ವದ ವಿರುದ್ಧ ಪರಸ್ಪರ ವಿರೋಧಿಸುವುದರ ಬದಲು ಇಬ್ಬರೂ ಅದರ ಕುರಿತಾಗಿ ಸಮ್ಮತದಿಂದಿದ್ದಾರೆ. ಅಲ್ಲದೆ ಒಂದು ಮುಸ್ಲಿಂ ರಾಷ್ಟ್ರ ಮತ್ತು ಇನ್ನೊಂದು ಹಿಂದೂ ರಾಷ್ಟ್ರ ಎಂದು ಒಪ್ಪಿಕೊಂಡಿದ್ದಾರೆ.

“ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣದ ನೀತಿಯ ಆಧಾರದಲ್ಲಿ ಸಮಾನಮನಸ್ಕ ಸಮ್ಮಿಶ್ರ ರಾಜಕೀಯ ಪಕ್ಷಗಳು ಧೃವೀಕರಣಗೊಳ್ಳಬೇಕಾಗಿದೆ. ಈ ಮೂಲಕ ಈ ಹಿಂದೂ ರಾಜ್ ಮತ್ತು ಮುಸ್ಲಿಂ ರಾಜ್ ತತ್ವಗಳಿಗೆ ಅಂತ್ಯ ಹೇಳಬೇಕಾಗಿದೆ.ಇಂಡಿಯಾದಲ್ಲಿ ತಳ ಸಮುದಾಯಗಳು ಮತ್ತು ಮುಸ್ಲಿಂ ಸಮುದಾಯಗಳ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿ ಒಂದೇ ಆಗಿರುವುದರಿಂದ ತಮ್ಮನ್ನು ಶತಮಾನಗಳ ಕಾಲ ಅವಕಾಶವಂಚಿತರಾಗಿ ಮಾಡಿದ ಈ ಮೇಲ್ಜಾತಿ ಹಿಂದೂಗಳ ವಿರುದ್ಧ ಒಂದಾಗಬೇಕಿದೆ.”

ಹಿಂದೂಗಳ ಕುರಿತಾಗಿ ಅಂಬೇಡ್ಕರ್ ಅವರು “Annhilation of CVaste” ಪುಸ್ತಕದಲ್ಲಿ ಬರೆದ ಕೆಲವು ಭಾಗಗಳು:

“ಹಿಂದೂಗಳು ತಮ್ಮನ್ನು ತಾವು ಸಹನಾಶೀಲರೆಂದು ಕೊಚ್ಚಿಕೊಳ್ಳುತ್ತಾರೆ. ನನ್ನ ಅಭಿಪ್ರಾಯದಲ್ಲಿ ಇದು ತಪ್ಪು ಗ್ರಹಿಕೆ. ಬಹುತೇಕ ಸಂದರ್ಭಗಳಲ್ಲಿ ಅಸಹನೀಯ ಮತ್ತು ಉದ್ರೇಕಿತರಾಗಿ ವರ್ತಿಸುವ ಹಿಂದೂಗಳು ತಾವು ಬಲಹೀನರಾಗಿದ್ದಾಗ ಮಾತ್ರ ಸೈರಣೆಯಿಂದ ವರ್ತಿಸುತ್ತಾರೆ. ಹಿಂದೂಗಳು ಮುಸ್ಲಿಂರು ತಮ್ಮ ಧರ್ಮವನ್ನು ವಿಸ್ತರಿಸಿದ್ದಕ್ಕಾಗಿ ಅವರನ್ನು ಟೀಕಿಸುತ್ತಾರೆ. ಇದಕ್ಕಾಗಿ ಖಡ್ಗವನ್ನು ಬಳಸಿದ್ದಾರೆಂದು ಮುಸ್ಲಿಂರನ್ನು ದೂರುತ್ತಾರೆ. ಇದೇ ಮಾದರಿಯಲ್ಲಿ ಕ್ರಿಶ್ಚಿಯನ್ನರನ್ನು ದೂರುತ್ತಾರೆ. ಹಿಂದೂ ಆದವನು ಬೆಳಕನ್ನು ಕೊಡದಿದ್ದರೆ, ಬೇರೆಯವರನ್ನು ಶಾಶ್ವತವಾಗಿ ಕತ್ತಲಲ್ಲಿಟ್ಟರೆ, ತನ್ನ ಜ್ಞಾನವನ್ನು ಹಂಚಿಕೊಳ್ಳದಿದ್ದರೆ ಮುಸ್ಲಿಂ ಅವರ ಕುತ್ತಿಗೆಯನ್ನು ಹಿಡಿದಿದ್ದರಲ್ಲಿ ನನಗೆ ತಪ್ಪೇನು ಕಾಣುತ್ತಿಲ್ಲ. ಏಕೆಂದರೆ ಹಿಂದೂವಿನ ಈ ಸಂಕುಚಿತ ಮನೋಭಾವ ಮತ್ತು ಬೌದ್ಧಿಕ ಸರ್ವಾಧಿಕಾರ ಮುಸ್ಲಿಂನ ದಾಳಿಗಿಂತಲೂ ಕ್ರೂರವೆಂದು ನಾನು ನಂಬಿದ್ದೇನೆ.

“ಸಮಾಜ ಶಾಸ್ತ್ರಜ್ಞರು ಹಿಂದೂಗಳನ್ನು ’ಕರುಣೆಯ ಪ್ರಜ್ಞಾರೂಪ’ ಎಂದು ಕರೆಯುತ್ತಾರೆ. ಆದರೆ ಇದನ್ನು ತಿರಸ್ಕರಿಸುತ್ತೇನೆ. ಹಿಂದೂನಲ್ಲಿ ಕರುಣೆಯ ಪ್ರಜ್ಞೆ ಇಲ್ಲ. ಪ್ರತಿಯೊಬ್ಬ ಹಿಂದೂವಿನಲ್ಲಿರುವುದು ಜಾತಿಯ ಪ್ರಜ್ಞೆ. ಈ ಕಾರಣಕ್ಕಾಗಿಯೇ ಹಿಂದೂಗಳನ್ನು ಸಮಾಜ ಅಥವಾ ದೇಶವೆಂದು ಪರಿಗಣಿಸಲು ಸಾಧ್ಯವಿಲ್ಲ. ಹಿಂದೂ ಸಮಾಜವು ಒಂದು ಮಿಥ್ಯೆ ಎಂದು ನಾನು ಖಚಿತವಾಗಿ ನಂಬಿದ್ದೇನೆ. ಹಿಂದೂ ಎನ್ನುವ ಪದವೇ ವಿದೇಶಿ ಮೂಲದ್ದು. ಸ್ಥಳೀಯರನ್ನು ಗುರುತಿಸಲು ಮುಸ್ಲಿಂರು ಕೊಟ್ಟ ಪದ. ಮುಸ್ಲಿಂ ಸಾಮ್ರಾಜ್ಯಕ್ಕಿಂತಲೂ ಮೊದಲು ಸಂಸ್ಕೃತ ಪಠ್ಯಗಳಲ್ಲಿ ಈ ಪದಬಳಕೆ ಇಲ್ಲ. ಹಿಂದೂ ಸಮಾಜ ಎನ್ನುವುದೇ ಆಸ್ತಿತ್ವದಲ್ಲಿ ಇಲ್ಲ. ಇದು ಜಾತಿಗಳ ಒಂದು ಗುಂಪು ಅಷ್ಟೇ. ಪ್ರತಿಯೊಂದು ಜಾತಿಗೂ ಅದರ ಕುರಿತಾದ ಪ್ರಜ್ಞೆ ಜಾಗೃತವಾಗಿರುತ್ತದೆ.

“ಇಂದು ಧರ್ಮವೆಂದು ಕರೆಯಲ್ಪಡುವ ಹಿಂದೂ ಧರ್ಮ ಕೇವಲ ಪ್ರತಿಬಂಧನೆಗಳ, ನಿಷೇಧಗಳ, ಆಜ್ಞೆಗಳ ಒಂದು ಗೂಡು.”

ಅಂಬೇಡ್ಕರ್ ಅವರು ಬರೆದ “ಹಿಂದೂಯಿಸಂನ ಫಿಲಾಸಫಿ, ಇಂಡಿಯಾ ಮತ್ತು ಕಮ್ಯುನಿಸಂನ ಪೂರ್ವ ಕರಾರುಗಳು. ಕ್ರಾಂತಿ ಮತ್ತು ಪ್ರತಿ ಕ್ರಾಂತಿ, ಬುದ್ಧ ಅಥವಾ ಕಾರ್ಲ್ ಮಾರ್ಕ್ಸ್” ಪುಸ್ತಕದಿಂದ ಆಯ್ದ ಭಾಗಗಳು (ಅಂಬೇಡ್ಕರ್ ಬರಹಗಳು ಮತ್ತು ಭಾಷಣಗಳು, ೩ನೇ ಸಂಪುಟ):

“ಆದರೆ ನನ್ನ ಮೂಲಭೂತ ಪ್ರಶ್ನೆ ಏನೆಂದರೆ ಹಿಂದೂಗಳು ಬದುಕಿನ ಸುಖ ಮತ್ತು ದುಖಗಳನ್ನು ಹಂಚಿಕೊಳ್ಳಲು ಏಕೆ ನಿರಾಕರಿಸುತ್ತಾರೆ? ಇದಕ್ಕೆ ಉತ್ತರವೂ ಸಹ ಸರಳ ಮತ್ತು ಸ್ಪಷ್ಟ. ಹಿಂದೂಗಳು ಹಂಚಿಕೊಳ್ಳಲು ನಿರಾಕರಿಸುತ್ತಾರೆ ಏಕೆಂದರೆ ಅವರ ಧರ್ಮವು ಹಂಚಿಕೊಳ್ಳಬಾರದೆಂದು ಬೋಧಿಸುತ್ತದೆ. ಹಾಗಿದ್ದರೆ ಹಿಂದೂಯಿಸಂ ಏನನ್ನು ಬೋಧಿಸುತ್ತದೆ? ಅದು ಒಂದೇ ಪಂಕ್ತಿಯಲ್ಲಿ ಕೂತು ಊಟ ಮಾಡಬಾರದು, ಅಂತರ್ಜಾತಿ ವಿವಾಹ ಆಗಬಾರದು, ಗೆಳೆತನ ಬೆಳೆಸಬಾರದು ಇಂತಹ ತತ್ವಗಳನ್ನು ಬೋಧಿಸುತ್ತದೆ. ಭ್ರಾತೃತ್ವದ ನೇರವಾದ ನಿರಾಕರಣೆಯೇ ಹಿಂದೂಯಿಸಂನ ಫಿಲಾಸಫಿ.

“ಸಾಮಾಜಿಕ ನ್ಯಾಯದ ನೆಲೆಯಿಂದ ಹಿಂದೂಯಿಸಂ ಫಿಲಾಸಫಿಯನ್ನು ಅಧ್ಯಯನ ಮಾಡಿದಾಗ ಅದು ಸಮಾನತೆಯ ದ್ವೇಷ, ಸ್ವಾತಂತ್ರದ ಪ್ರತಿರೋಧಿ, ಭ್ರಾತೃತ್ವದ ವಿರೋಧಿ ತತ್ವಗಳನ್ನು ಬೋಧಿಸುತ್ತದೆ.

“ಸಮಾನತೆ ಮತ್ತು ಮಾನವ ಘನತೆಯ ಗೌರವಗಳಿಗೆ ಭ್ರಾತೃತ್ವ ಮತ್ತು ಲಿಬರ್ಟಿ ತತ್ವಗಳು ಅಡಿಪಾಯಗಳು. ಮೂಲ ಬೇರುಗಳು. ಸಮಾನತೆಯನ್ನು ನಿರಾಕರಿಸಿದರೆ ಬಾಕಿ ಎಲ್ಲಾ ತತ್ವಗಳನ್ನೂ ನಿರಾಕರಿಸಿದಂತೆ. ನನಗೆ ಸಂಪೂರ್ಣ ಮನವರಿಕೆ ಆದಂತೆ ಹಿಂದೂಯಿಸಂನಲ್ಲಿ ಸಮಾನತೆ ಇಲ್ಲ.

“ಹಿಂದೂಯಿಸಂನಲ್ಲಿ ಅಸಮಾನತೆ ಎನ್ನುವುದು ಧಾರ್ಮಿಕ ಸಿದ್ಧಾಂತ ಮತ್ತು ಇದನ್ನು ಅತ್ಯಂತ ಪಾವಿತ್ರ ಎಂದು ಬೋಧಿಸಲಾಗುತ್ತದೆ ಮತ್ತು ಪ್ರಜ್ಞಾಪೂರ್ವಕವಾಗಿ ಬದುಕಿನಲ್ಲಿ ಅಳವಡಿಸಿಕೊಳ್ಳಲಾಗಿದೆ. ಅಸಮಾನತೆ ಎನ್ನುವುದು ಹಿಂದೂಗಳ ಜೀವನ ಕ್ರಮ. ಅಸಮಾನತೆ ಹಿಂದೂಯಿಸಂನ ಆತ್ಮ.

“ಜಾತಿ ಎನ್ನುವ ಆದರ್ಶ ಮತ್ತು ಕೇವಲ ಆದರ್ಶ ಮಾತ್ರವಲ್ಲ. ಜಾತಿಯನ್ನು ಆಚರಣೆಯಲ್ಲಿ ಅಳವಡಿಸಿಕೊಳ್ಳಲಾಗಿದೆ. ಜರ್ಮನ್ ಫಿಲಾಸಫರ್ ನೀಟ್ಸೆ ಹೇಳಿದಂತೆ ’ಆದರ್ಶವನ್ನು ವಾಸ್ತವೀಕರಿಸು ಮತ್ತು ವಾಸ್ತವವನ್ನು ಆದರ್ಶೀಕರಿಸು’ ಎನ್ನುವ ನೀತಿಯನ್ನು ಚಾತುವರ್ಣದ ಜಾತಿಪದ್ಧತಿಯಲ್ಲಿ ಹಿಂದೂಗಳು ಶ್ರದ್ಧೆಯಿಂದ ಆದರಿಸುತ್ತಾರೆ ಮತ್ತು ಪಾಲಿಸುತ್ತಾರೆ

“ಆದರೆ ಹಿಂದೂಯಿಸಂನ ಈ ಆದರ್ಶದ ಮೌಲ್ಯವನ್ನು ಅದರ ಪರಿಣಾಮಗಳನ್ನು ವಿಮರ್ಶಿಸುವುದರ ಮೂಲಕ ಪರೀಕ್ಷಿಸಬೇಕು. ಪರಿಶುದ್ಧವಾದ ಸಾಮಾಜಿಕ ಹಿನ್ನೆಲೆಯಲ್ಲಿ ಈ ಚಾತುವರ್ಣ ಜಾತಿಪದ್ಧತಿಯನ್ನು ಖಂಡಿಸಬೇಕು. ಉತ್ಪಾದಕರ ಸಂಸ್ಥೆಯಾಗಿ ಅದರ ನಿಲುವುಗಳ ವಿರುದ್ಧ ಅವಿಶ್ವಾಸ ವ್ಯಕ್ತಪಡಿಸಬೇಕು. ಈ ಚಾತುವರ್ಣ ಜಾತಿ ಪದ್ಧತಿಯು ಸಮಾನ ಹಂಚಿಕೆ ಎನ್ನುವ ಆದರ್ಶದ ನೆಲೆಯಲ್ಲಿ ಸಂಪೂರ್ಣವಾಗಿ ಸೋತಿದೆ. ಒಂದು ವೇಳೆ ಈ ಹಿಂದೂಯಿಸಂ ಒಂದು ಆದರ್ಶ ಸಂಸ್ಥೆ ಎನ್ನುವುದಾದರೆ ಅದು ಸಾಮಾನ್ಯ ಪ್ಲಾಟ್‌ಫಾಮ್ ಅನ್ನು ಕಟ್ಟಲು ಅಸಮರ್ಥವಾಗಿರುವುದೇಕೆ ಎನ್ನುವುದಕ್ಕೆ ಉತ್ತರಿಸಬೇಕು. ಒಂದು ವೇಳೆ ಈ ಹಿಂದೂಯಿಸಂ ಉತ್ಪಾದನೆಯ ನೆಲೆಯ ಆದರ್ಶ ಎನ್ನುವುದಾದರೆ ಅದರ ತಂತ್ರಜ್ಞಾನವು ಆದಿಮಾನವನ ಕಾಲದಿಂದ ಯಾತಕ್ಕೆ ಹೊರಬಂದಿಲ್ಲ ಎನ್ನುವುದಕ್ಕೆ ಉತ್ತರಿಸಬೇಕು. ಒಂದು ವೇಳೆ ಇದು ಹಂಚಿಕೆಯ ನೆಲೆಯಲ್ಲಿ ಆದರ್ಶ ಎನ್ನುವುದಾದರೆ ಅದು ಹೇಗೆ ಸಂಪತ್ತಿನ ಅಸಮಾನ ಕ್ರೋಢೀಕರಣ ಮತ್ತು ಶ್ರೀಮಂತ ಮತ್ತು ಬಡವರ ನಡುವೆ ಅಗಾಧ ಕಂದಕ ಸೃಷ್ಟಿಸಿತು ಎನ್ನುವುದಕ್ಕೆ ಉತ್ತರಿಸಬೇಕು.

“ಜಾತಿ ಪದ್ಧತಿಯ ವ್ಯವಸ್ಥೆಗೆ ಅಪಾರವಾದ ಮೌಲಿಕತೆಯನ್ನು, ಮಹತ್ವವನ್ನು ಪ್ರತಿಪಾದಿಸುವ ಬಹುಪಾಲು ಹಿಂದೂಗಳು ಈ ಜಾತಿ ಪದ್ಧತಿಗೆ ಧಾರ್ಮಿಕ ಚೌಕಟ್ಟನ್ನು ವಿಧಿಸಿದ ಮನುವನ್ನು ಪ್ರಶಂಸಿಸುತ್ತಾರೆ.

“ಸಮಾಜವನ್ನು ತುಂಡು ತುಂಡಾಗಿ ವಿಭಜಿಸುವ, ಕೂಲಿ ಕಾರ್ಮಿಕನಿಂದ ಜ್ಞಾನದ ಕೊಂಡಿಯನ್ನು ಕತ್ತರಿಸಿ ಪ್ರತ್ಯೇಕಿಸುವ ಈ ಹಿಂದೂಯಿಸಂ ಫಿಲಾಸಫಿಯನ್ನು ಸಾಮಾಜಿಕ ಉಪಯುಕ್ತತೆಗೆ ಪೂರಕ ಎಂದು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ.ಈ ಹಿಂದೂಯಿಸಂ ಫಿಲಾಸಫಿ ಸಾಮಾಜಿಕ ಉಪಯುಕ್ತತೆಯ ಅಗತ್ಯವನ್ನು ಮತ್ತು ವೈಯಕ್ತಿಕ ನೆಲೆಯ ಸಾಮಾಜಿಕ ನ್ಯಾಯ ಪರಿಕಲ್ಪನೆಯನ್ನು ತಿರಸ್ಕರಿಸುತ್ತದೆ.”

೧೯೩೪ರಲ್ಲಿ ಯೆರವಾಡ ಜೈಲಿನಲ್ಲಿರುವ ಸಂದರ್ಭದಲ್ಲಿ ಗಾಂಧೀಜಿಯವರು ಸುಬ್ರಮಣ್ಯನ್ ಅವರ ದೇವಸ್ಥಾನ ಪ್ರವೇಶ ಮಸೂದೆಗೆ ಬೆಂಬಲ ಸೂಚಿಸುವಂತೆ ಅಂಬೇಡ್ಕರ್ ಅವರನ್ನು ಕೇಳಿಕೊಳ್ಳುತ್ತಾರೆ. ಆದರೆ ವೈಯಕ್ತಿಕ ನೆಲೆಯಲ್ಲಿ ಈ ಕೋರಿಕೆಯನ್ನು ತಿರಸ್ಕರಿಸುವ ಅಂಬೇಡ್ಕರ್ ಅವರು ಅಸ್ಪೃಶ್ಯತೆಯನ್ನು ಕಾನೂಬಾಹಿರ ಎಂದು ಘೋಷಿಸುವುದನ್ನು ಬಿಟ್ಟು ಕೇವಲ ದೇವಸ್ಥಾನ ಪ್ರವೇಶವನ್ನು ಕೈಗೆತ್ತಿಕೊಂಡಿರುವುದು ಪ್ರಾಯೋಗಿಕವಲ್ಲ ಎಂದು ಟೀಕಿಸುತ್ತಾರೆ. ನಂತರ ಗಾಂಧಿಯವರಿಗೆ ಒಂದು ಪತ್ರವನ್ನು ಸಹ ಬರೆಯುತ್ತಾರೆ. ಅದರ ಒಂದು ಭಾಗ ಹೀಗಿದೆ (ಅಂಬೇಡ್ಕರ್ ಬರಹಗಳು ಮತ್ತು ಭಾಷಣಗಳು, ಸಂಪುಟ ೧೭):

“ಕೆಲಕಾಲದ ಹಿಂದೆ ಇಂಡಿಯಾದಲ್ಲಿ ಯುರೋಪಿಯನ್ನರ ಕ್ಲಬ್‌ಗಳು, ಸಾಮಾಜಿಕ ಮನರಂಜನ ಕೂಟಗಳ ಹೊರ ಬಾಗಿಲಲ್ಲಿ ’ನಾಯಿಗಳು ಮತ್ತು ಭಾರತೀಯರಿಗೆ ಪ್ರವೇಶವಿಲ್ಲ’ ಎನ್ನುವ ಫಲಕ ನೇತಾಡುತ್ತಿತ್ತು. ಇಂದಿನ ದಿನಗಳಲ್ಲಿ ಹಿಂದೂ ದೇವಸ್ಥಾನಗಳ ಬಾಗಿಲಲ್ಲಿ ಇದೇ ಮಾದರಿಯ ಫಲಕಗಳು ನೇತಾಡುತ್ತಿರುತ್ತವೆ. ಆದರೆ ಒಂದು ಬದಲಾವಣೆ ಇರುತ್ತದೆ ಮತ್ತು ಆ ಫಲಕ ಹೀಗಿರುತ್ತದೆ: ’ಅಸ್ಪೃಶ್ಯರನ್ನು ಹೊರತುಪಡಿಸಿ ಎಲ್ಲಾ ಹಿಂದೂಗಳು ಮತ್ತು ಪ್ರಾಣಿಗಳಿಗೆ ದೇವಸ್ಥಾನದಲ್ಲಿ ಪ್ರವೇಶವಿದೆ. ಆದರೆ ಅಸ್ಪೃಶ್ಯರಿಗೆ ಮಾತ್ರ ಪ್ರವೇಶವಿಲ್ಲ.’ ಮೇಲಿನ ಎರಡೂ ಉದಾಹರಣೆಗಳಲ್ಲಿ ಸಂದರ್ಭದ ವಿಷಯದಲ್ಲಿ ಸಾಮ್ಯತೆ ಇದೆ. ಆದರೆ ಯುರೋಪಿಯನ್ನರ ಎದುರು ಹಿಂದೂಗಳು ತಮಗೆ ಕ್ಲಬ್‌ಗಳಲ್ಲಿ ಪ್ರವೇಶ ಕೊಡಿರೆಂದು ಬಿಕ್ಷೆ ಬೇಡಿರಲಿಲ್ಲ, ಹಾಗಿದ್ದ ಪಕ್ಷದಲ್ಲಿ ಅಸ್ಪೃಶ್ಯರೇಕೆ ದುರಹಂಕಾರದ ಹಿಂದೂಗಳ ಮುಂದೆ ದೇವಸ್ಥಾನ ಪ್ರವೇಶಕ್ಕೆ ಬಿಕ್ಷೆ ಬೇಡಬೇಕು? ಶಿಕ್ಷಣ, ಉನ್ನತ ಉದ್ಯೋಗ, ಉತ್ತಮ ಬದುಕಿಗಾಗಿ ದಲಿತ ಸಮುದಾಯದ ವ್ಯಕ್ತಿ ಆಶಿಸುತ್ತಾನೆ. ದಲಿತ ವ್ಯಕ್ತಿಯು ಹಿಂದೂಗಳಿಗೆ ನಿಮ್ಮ ದೇವಸ್ಥಾನಗಳಲ್ಲಿ ದಲಿತರಿಗೆ ಪ್ರವೇಶ ಕೊಡುತ್ತೀರೋ, ಇಲ್ಲವೋ ಎನ್ನುವುದು ನಿಮಗೆ ಸಂಬಂಧಪಟ್ಟ ವಿಷಯ. ಇದು ನನಗೆ ಪ್ರತಿಭಟನೆಯ ಸಂಗತಿಯಲ್ಲ. ನಿಮಗೆ ಜ್ಞಾನೋದಯವಾಗಿ ಪ್ರಜ್ಞಾವಂತರಾದರೆ, ದಲಿತರಿಗೆ ದೇವಸ್ಥಾನ ಪ್ರವೇಶ ನಿರಾಕರಣೆ ಅಮಾನವೀಯ ಎಂದು ಮನವರಿಕೆಯಾದಲ್ಲಿ ನಮಗೆ ಪ್ರವೇಶ ಕೊಡಿ. ಆದರೆ ನೀವು ಕೇವಲ ಹಿಂದೂ ಮಾತ್ರ, ಪ್ರಜ್ಞಾವಂತನಲ್ಲ ಎನ್ನುವುದಾದರೆ ನಿಮ್ಮ ದೇವಸ್ಥಾನದ ಬಾಗಿಲುಗಳನ್ನು ಶಾಶ್ವತಾಗಿ ಮುಚ್ಚಿಕೊಳ್ಳಿ. ನಾನು ಇದಕ್ಕೆ ತಲೆ ಕೆಡಿಸಿಕೊಳ್ಳಲಾರೆ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳುತ್ತಾನೆ.”

೧೯೩೦ರಲ್ಲಿ ಅಂಬೇಡ್ಕರ್ ನೇತೃತ್ವದಲ್ಲಿ ಕಲಾರಾಮ್ ದೇವಸ್ಥಾನ ಪ್ರವೇಶದ ಸತ್ಯಾಗ್ರಹಕ್ಕೆ ಸಿದ್ಧತೆಗಳು ಪ್ರಾರಂಭಗೊಂಡಿರುತ್ತವೆ. ಅದರ ಉದ್ಘಾಟನ ಭಾಷಣ ಮಾಡುವ ಅಂಬೇಡ್ಕರ್ ನಂತರ ಸತ್ಯಾಗ್ರಹವನ್ನು ವಿರೋಧಿಸಿ ಇದಕ್ಕೆ ಸಂಬಂಧಪಟ್ಟಂತೆ ೩ ಮಾರ್ಚ್, ೧೯೩೪ರಂದು ಬಾಬುರಾವ್ ಗಾಯಕವಾಡರಿಗೆ ಒಂದು ಪತ್ರವನ್ನು ಬರೆಯುತ್ತಾರೆ. ಅದರ ಒಂದು ಭಾಗ (ಅಂಬೇಡ್ಕರ್ ಬರಹಗಳು ಮತ್ತು ಭಾಷಣಗಳು, ಸಂಪುಟ ೧೭):

“ಬರುವ ರಾಮನವಮಿಯ ದಿನದಂದು ನಾಸಿಕ್‌ನ ಕಲರಾಮ ದೇವಸ್ಥಾನ ಪ್ರವೇಶ ಕುರಿತಂತೆ ಸತ್ಯಾಗ್ರಹದ ಕುರಿತಾಗಿ ನೀವು ನನ್ನ ಅಭಿಪ್ರಾಯವನ್ನು ಕೇಳಿದ್ದೀರಿ. ನನ್ನ ಅಭಿಪ್ರಾಯದಲ್ಲಿ ಇದು ಬೇಕೆ, ಬೇಡವೇ, ಸಾಧುವೇ ಎಂದು ಚರ್ಚಿಸುವುದಕ್ಕಿಂತಲೂ ಈ ಸತ್ಯಾಗ್ರಹವನ್ನು ಸಂಪೂರ್ಣವಾಗಿ ನಿಲ್ಲಿಸುವುದು ಒಳಿತು. ಆದರೆ ಈ ಸತ್ಯಾಗ್ರಹದ ನೇತೃತ್ವ ವಹಿಸಿದವನಿಂದ ಈ ಮಾತುಗಳನ್ನು ಕೇಳಿ ನಿಮಗೆ ಆಶ್ಚರ್ಯವಾಗಬಹುದು. ಆದರೆ ಹಿಂಜರಿಕೆಯಿಂದಲೆ ನನ್ನ ಬದಲಾದ ನಿಲುವನ್ನು ಪ್ರಕಟಿಸುತ್ತಿದ್ದೇನೆ. ನಾನು ದೇವಸ್ಥಾನ ಪ್ರವೇಶ ಸತ್ಯಾಗ್ರಹವನ್ನು ಒಪ್ಪಿಕೊಳ್ಳಲಾರೆ. ದಲಿತರು ಮೂರ್ತಿಗಳನ್ನು ಪೂಜಿಸಲಿ ಎನ್ನುವ ಕಾರಣಕ್ಕೋಸ್ಕರ ನಾನು ದೇವಸ್ಥಾನ ಪ್ರವೇಶದ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಿಲ್ಲ ಅಥವಾ ದೇವಸ್ಥಾನ ಪ್ರವೇಶದಿಂದ ದಲಿತರು ಹಿಂದೂ ಸಮಾಜದಲ್ಲಿ ಸಮಾನರಾಗಿ ಬದುಕುತ್ತಾರೆ ಎನ್ನುವ ಕಾರಣದಿಂದಲೂ ಅಲ್ಲ. ಆದರೆ ’ಹಿಂದೂ ಧರ್ಮವು ಸಂಪೂರ್ಣವಾಗಿ ಸುಧಾರಣೆಯಾಗಬೇಕು, ಪ್ರಗತಿಪರವಾಗಬೇಕು. ನಂತರವಷ್ಟೇ ನಾವು ಹಿಂದೂ ಧರ್ಮದ ಭಾಗವಾಗುತ್ತೇವೆ’ ಎಂದು ಹೇಳಿರೆಂದು ತಳಸಮುದಾಯಗಳಿಗೆ ಸೂಚಿಸುತ್ತಿದ್ದೇನೆ. ತಳಸಮುದಾಯಗಳು ಚೈತನ್ಯಶೀಲರಾಗಲಿ ಮತ್ತು ಅವರ ಸ್ಥಾನದ ಕುರಿತಾದ ವಾಸ್ತವ ಪ್ರಜ್ಞೆ ಅವರಲ್ಲಿ ಮೂಡಲಿ ಎನ್ನುವ ಒಂದೇ ಕಾರಣಕ್ಕೆ ನಾನು ದೇವಸ್ಥಾನ ಪ್ರವೇಶದ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದೆ. ಈಗ ನನ್ನ ಈ ಉದ್ದೇಶ ಈಡೇರಿದೆ ಎಂದು ನನಗೆ ಮನವರಿಕೆಯಾಗಿದೆ. ಇನ್ನು ದೇವಸ್ಥಾನ ಪ್ರವೇಶದ ಅವಶ್ಯಕತೆ ಇಲ್ಲ. ನಾನು ತಳಸಮುದಾಯಗಳು ಶಿಕ್ಷಣ, ರಾಜಕೀಯ ಕಡೆಗೆ ಹೆಚ್ಚು ಗಮನ ಹರಿಸಲಿ ಎಂದು ಆಶಿಸುತ್ತೇನೆ.”

ನ್ಯಾಯವಾದಿ ಸಂಜಯ ಹೆಗ್ಡೆ “ದೇಶವು ಧಾರ್ಮಿಕ ನೆಲೆಯಲ್ಲಿ ವಿಭಜನೆಗೊಂಡ ನಂತರ ತಳ ಸಮುದಾಯಗಳು ಹಿಂದೂಗಳೆಂದು ಪರಿಗಣಿಸಬೇಕೇ ಬೇಡವೇ ಎನ್ನುವ ಚರ್ಚೆ ಪ್ರಾಮುಖ್ಯತೆ ಪಡೆದುಕೊಂಡಿತು. ಬಿ.ಶಾಮಸುಂದರ್ ರಂತಹ ದಲಿತ ನಾಯಕರು ’ನಾವು ಹಿಂದೂಗಳಲ್ಲ, ನಮಗೆ ಹಿಂದುಗಳ ಜಾತಿಪದ್ಧತಿಯೊಂದಿಗೆ ಯಾವ ಸಂಬಂಧವೂ ಇಲ್ಲ, ಆದರೂ ಹಿಂದೂಗಳು ತಮಗಾಗಿ ನಮ್ಮನ್ನು ಅಲ್ಲಿ ಸೇರಿಸಿದ್ದಾರೆ’ ಎಂದು ಪ್ರತಿಪಾದಿಸಿದ್ದರು ಎಂದು ಹೇಳುತ್ತಾರೆ.

ಹಿಂದೂ ಎನ್ನುವ ವಿಶಾಲ ವೇದಿಕೆಯಲ್ಲಿ ತಳ ಸಮುದಾಯಗಳನ್ನು ಒಳಗೊಳ್ಳುವುದರ ಮೂಲಕ ಹಿಂದುತ್ವದ ಸಬಲೀಕರಣ ಮತ್ತು ವಿಸ್ತರಣೆ ಆರೆಸ್ಸೆಸ್‌ನ ಮುಖ್ಯ ಉದ್ದೇಶ. ಈಗಾಗಲೇ ಒಡಿಸ್ಸಾ ಮತ್ತು ಛತ್ತೀಸ್‌ಗಡ್ ರಾಜ್ಯಗಳಲ್ಲಿ ಆದಿವಾಸಿ ಸಮುದಾಯಗಳನ್ನು ತನ್ನ ವಿವಿಧ ಸಹಯೋಗಿ ಸಂಘಟನೆಗಳಾದ ’ವನವಾಸಿ ಕಲ್ಯಾಣ ಕೇಂದ್ರ’, ’ಏಕಲವ್ಯ ವಿದ್ಯಾ ಕೇಂದ್ರ’ಗಳ ಮೂಲಕ ತನ್ನೊಳಗೆ ಜೀರ್ಣಿಸಕೊಳ್ಳತೊಡಗಿದೆ. ಇದರ ಫಲವಾಗಿ ಛತ್ತೀಸಘಡ್ ರಾಜ್ಯದಲ್ಲಿ ಸತತವಾಗಿ ಅಧಿಕಾರಕ್ಕೆ ಮರಳಿರುವುದು ಆರೆಸ್ಸೆಸ್‌ಗೆ ಇಂದು ತಳ ಸಮುದಾಯಗಳೊಂದಿಗೆ ಹಿಂದುತ್ವದ ಜೊತೆ ಸಂಧಾನ ನಡೆಸಲು ಹುಮ್ಮಸ್ಸನ್ನು ನೀಡಿದೆ.

ಕೆ.ಎನ್.ಪಣಿಕ್ಕರ್ ಅವರು “ಅಂಬೇಡ್ಕರ್ ನಂತರದ ದಲಿತ ರಾಜಕಾರಣದ ಪ್ರಕ್ರಿಯೆಗಳೆಲ್ಲವೂ ಅಂತಿಮವಾಗಿ ಕೂಡಿದ ಸ್ತರದ ಫಲವಾಗಿ ಇಂದು ಹಿಂದುತ್ವದ ಷಡ್ಯಂತ್ರಕ್ಕೆ ಬಲಿಯಾಗುತ್ತಿದ್ದಾರೆ. ದಲಿತ ರಾಜಕಾರಣದಲ್ಲಿ ಐಡೆಂಟಿಟಿ ರಾಜಕಾರಣ, ಚಳುವಳಿಗಳ ರಾಜಕಾರಣ, ಹೊಂದಾಣಿಕೆ ರಾಜಕಾರಣ ಮತ್ತು ಹಿತಾಸಕ್ತಿಗಳ ರಾಜಕಾರಣ ಎಂಬ ನಾಲ್ಕು ಹಂತಗಳನ್ನು ಕಾಂಬ್ಳೆಯವರು ಗುರುತಿಸುತ್ತಾರೆ. ಅಂಬೇಡ್ಕರ್ ನಂತರ ಈ ನಾಲ್ಕೂ ಮುಖಗಳ ನಡುವೆ ಸಮತೋಲನವಿಲ್ಲದಂತಾದ್ದರಿಂದಲೇ ಹಿಂದುತ್ವ ಶಕ್ತಿಗಳು ದಲಿತರನ್ನು ಸಮೀಪಿಸಲು ಸಾಧ್ಯವಾಗಿದೆ. ಗೋಪಾಲ ಗುರು ತಮ್ಮ ಲೇಖನದಲ್ಲಿ ದಲಿತ ರಾಜಕಾರಣದ ಅಂತರಿಕ ಪಲ್ಲಟಗಳು ಮತ್ತು ಆರ್ಥಿಕ ಪೇಚಾಟಗಳಿಂದಾಗಿ ಅದು ಹಿಂದುತ್ವ ಶಕ್ತಿಗಳ ವಿರುದ್ಧ ಸೆಟೆದು ನಿಲ್ಲುವ ನೈತಿಕ ಬಲವನ್ನು ಕಳೆದುಕೊಂಡಿದೆ ಎಂಬ ಮತ್ತೊಂದು ಪ್ರಮುಖ ಅಂಶವನ್ನು ಮುಂದಿಟ್ಟಿದ್ದಾರೆ. ದಲಿತರ ಸಾಮಾಜಿಕ ವಿಧಿ ವಿಧಾನಗಳನ್ನು ಪೂಜಾ ವಿಧಾನಗಳನ್ನು ಸಂಸ್ಕೃತೀಕರಣಗೊಳಿಸುವುದರ ಮೂಲಕ ಸಂಘ-ಪರಿವಾರವು ಅವರ ಸಾಂಸ್ಕೃತಿಕ ಬಯಕೆಯನ್ನು ಹಿಂದುತ್ವ ರಾಜಕಾರಣದ ಬಲಸಂವರ್ಧನೆಗೆ ಬಳಸಿಕೊಳ್ಳುತ್ತಿದೆ. ಹಿಂದುತ್ವದ ಪ್ರಭಾವಿ ಯಜಮಾನ್ಯೀಕರಣಕ್ಕೆ ಒಳಗಾಗುತ್ತಿರುವ ದಲಿತರು ತಮ್ಮ ಸಾಂಸ್ಕೃತಿಕ ಬೇರುಗಳನ್ನು ಕಳೆದುಕೊಳ್ಳುತ್ತಿರುವುದರ ಜೊತೆಗೆ ಅಂತಿಮವಾಗಿ ಅವರದಲ್ಲದ, ದಮನಕಾರಿ ಸಾಂಸ್ಕೃತಿಕ ಪರಂಪರೆಗೆ ದಾರಿ ಮಾಡಿಕೊಡುತ್ತಿರುವ ಈ ಪ್ರಕ್ರಿಯೆಯ ಅಂತರಾಳವನ್ನು ಗ್ರಹಿಸುವಲ್ಲಿ ವಿಫಲರಾಗಿದ್ದಾರೆ ಎನ್ನಿಸುತ್ತದೆ” ಎಂದು ವಿವರಿಸುತ್ತಾರೆ. (ಹಿಂದುತ್ವ ಮತ್ತು ದಲಿತರು, ಚಿಂತನ ಪ್ರಕಾಶನ)

ಮನುಸ್ಮೃತಿಯನ್ನು ಸುಟ್ಟ ಡಾ.ಅಂಬೇಡ್ಕರ್ ಅವರನ್ನು ಮನುಸ್ಮೃತಿಯನ್ನು ಆರಾಧಿಸುತ್ತಿರುವ ಆರೆಸ್ಸೆಸ್ ತನ್ನ ಐಡಿಯಾಲಜಿಯಲ್ಲಿ ಸೇರಿಸಿಕೊಳ್ಳಲು ಯತ್ನಗಳನ್ನು ನಡೆಸಿದೆ. ಈ ಆತಂಕಕಾರಿ ಪ್ರಕ್ರಿಯನ್ನು ವಿಫಲಗೊಳಿಸಲು ಸಿದ್ಧ ಮಾದರಿಗಳನ್ನು ಹುಡುಕುತ್ತಾ ಹೊರಟರೆ ನಾವು ಪ್ರಾರಂಭಿಸಿದ ಜಾಗಕ್ಕೆ ಮರಳಿ ತಲುಪುತ್ತೇವೆ ಅಷ್ಟೆ.

ಅಂಬೇಡ್ಕರ್ ನಮ್ಮ ಭಾವವಲಯವನ್ನು ಪ್ರವೇಶಿಸಿದ್ದು…

– ಪ್ರಸಾದ್ ರಕ್ಷಿದಿ

[೧೪/೪/೨೦೧೫ ರಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ತಾಲ್ಲೂಕು ಆಡಳಿತ ಆಚರಿಸಿದ ಅಂಬೇಡ್ಕರ್ ಜನ್ಮದಿನಾಚರಣೆಯಲ್ಲಿ ಮಾಡಿದ ಭಾಷಣ.]

ವೇದಿಕೆಯ ಮೇಲಿರುವ ಮತ್ತು ಇಲ್ಲಿ ಸೇರಿರುವ ಎಲ್ಲ ಸಹ ಚಿಂತಕರೆ, ನಾವೆಲ್ಲ ಇಂದು ಬಾಬಾಸಾಹೇಬ್ ಅಂಬೇಡ್ಕರ್ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಒಂದಷ್ಟು ಚಿಂತಿಸಲು ಮತ್ತು ಚಿಂತನೆ ನಡೆಸಲು ಇಲ್ಲಿ ಸೇರಿದ್ದೇವೆ ಅಂದುಕೊಂಡಿದ್ದೇನೆ. ಚಿಂತೆ ಯಾಕೆಂದರೆ ಇಂದು ನಾವು ಪ್ರತಿನಿತ್ಯದ ಸಾಮಾಜಿಕ ಸಾಂಸ್ಕೃತಿಕ, ರಾಜಕೀಯ ಅಥವಾ ಇನ್ನಾವುದೇ ಕ್ಷೇತ್ರದಲ್ಲಿ ನಡೆಯುತ್ತಿರುವ ಸಂಗತಿಗಳನ್ನು ಕಂಡಾಗ ನಮ್ಮ ಇದುವರೆಗಿನ ಎಲ್ಲ ಜನಪರ ಹೋರಾಟಗಳೂ ವ್ಯರ್ಥವಾದುವೇ ಎಂಬ ಚಿಂತೆಯಾಗುತ್ತದೆ. ಇದೇ ನಮಗೆ ಚಿಂತನೆಗೂ ಕಾರಣವಾಗಬೇಕಾದ್ದರಿಂದ ನಾವಿಂದು nehru_ambedkarಈ ದಿನವನ್ನು ಅಂಬೇಡ್ಕರ್ ಅವರ ಗುಣಗಾನ ಮಾಡುತ್ತ ಕಾಲಕಳೆಯುವುದನ್ನು ಬಿಟ್ಟು, ಅಂಬೇಡ್ಕರ್ ಜೀವನ ಮತ್ತು ತತ್ವಗಳ ಬೆಳಕಿನಲ್ಲಿ ಅರಿವನ್ನು ತಂದುಕೊಳ್ಳುವ ಕೆಲಸವನ್ನು ಮಾಡಬೇಕಾಗಿದೆ.

ಸಾಮಾನ್ಯವಾಗಿ ನಾವು ಅಂಬೇಡ್ಕರ್ ಅವರ ಬಗ್ಗೆ ಮಾತನಾಡುವಾಗ, ಬರೆಯುವಾಗ, ಆಹ್ವಾನ ಪತ್ರಿಕೆಗಳಲಿ, ಪ್ರಚಾರ ಪತ್ರಿಕೆ-ಫಲಕಗಳಲ್ಲಿ ‘ಸಂವಿಧಾನ ಶಿಲ್ಪಿ’ ಎಂಬ ಪದವನ್ನು ಒಂದು ಸಂಪ್ರದಾಯವೆಂಬಂತೆ ಬಳಸುತ್ತಿದ್ದೇವೆ. ನಾನಿಂದು ನಿಮ್ಮ ಗಮನ ಸೆಳೆಯಬಯಸುವುದು ಸಂವಿಧಾನ ರಚನೆಗಿಂತ ಹೆಚ್ಚು ಪ್ರಮುಖವಾದ ವಿಷಯಗಳಲ್ಲಿ  ಅಂಬೇಡ್ಕರ್ ಅವರು ನೀಡಿರುವ ಕೊಡುಗೆಗಳ ಬಗ್ಗೆ.

ನಮ್ಮ ಸಂವಿಧಾನದಲ್ಲಿ ಅದರ ಅಡಕವಾಗಿರುವ ವಿಷಯಗಳ ಬಗ್ಗೆ ಹಾಗೂ ಅವರು ಬಯಸಿದ್ದ ಅನೇಕ ಸಂಗತಿಗಳನ್ನು ಅದರಿಂದ ಹೊರಗಿಟ್ಟ ಬಗ್ಗೆ ಅಂಬೇಡ್ಕರ್ ಅವರಿಗೆ ಸಂಪೂರ್ಣ ಒಪ್ಪಿಗೆ ಇರಲಿಲ್ಲ. ಸಂವಿಧಾನ ರಚನೆಗೆ ತನ್ನನ್ನು ಹೊಣೆಗಾರನನ್ನಾಗಿಸಿ ಮಾತನಾಡುವುದರ ಬಗ್ಗೆ ಅವರು ಯಾವಾಗಲೂ ವಿರೋಧಿಯಾಗಿದ್ದರು, ಹಿಂದೆ ರೈತ ಚಳುವಳಿ ಪ್ರಬಲವಾಗಿದ್ದ ಕಾಲದಲ್ಲಿ ಪ್ರೊಫೆಸರ್ ನಂಜುಡಸ್ವಾಮಿಯವರು ಕೂಡಾ ‘ಈ ಸಂವಿಧಾನ ರೈತರದ್ದಲ್ಲ ಅದು ನಮಗೆ ಬೇಕಿಲ್ಲ, ಕಿತ್ತೆಸೆಯಿರಿ’ ಎಂದಾಗ ಅನೇಕ ದಲಿತ ನಾಯಕರು ನಂಜಂಡಸ್ವಾಮಿಯವರನ್ನು ವಿರೋಧಿಸಿ ಟೀಕಿಸಿದರೂ periyar-ambedkarನಂತರದ ದಿನಗಳಲ್ಲಿ ನಂಜಂಡಸ್ವಾಮಿಯವರ ನಿಲುವನ್ನು ಅರ್ಥಮಾಡಿಕೊಂಡರು. ಈಎಲ್ಲ ಕಾರಣಗಳಿಂದ ನಾವಿಂದು ಅಂಬೇಡ್ಕರ್ ಅವರನ್ನು ಕುರಿತು ಹೇಳುತ್ತಿರುವ ‘ಸಂವಿಧಾನ ಶಿಲ್ಪಿ’ ಎಂಬ ಪದ ಸರಿಯಾದದ್ದಲ್ಲ ಮಾತ್ರವಲ್ಲ ಅವರ ಇತರ ಅನೇಕ ಪ್ರಮುಖ ಸಾಧನೆಗಳನ್ನು ಮರೆಮಾಚುವಂತಹ ಪದ ಪ್ರಯೋಗವೂ ಆಗಿದೆ.

ಇತ್ತೀಚೆಗೆ ಪ್ರಜಾವಾಣಿ ಪತ್ರಿಕೆಯು “ಅಂಬೇಡ್ಕರ್ ಅವರು ನಮ್ಮ ಭಾವವಲಯವನ್ನು ಪ್ರವೇಶಿದ ಬಗ್ಗೆ ಮತ್ತು ಈಗ ನಾವು ಅವರನ್ನು ಪರಿಭಾವಿಸುವ ಬಗ್ಗೆ” ಹಲವರ ಅಭಿಪ್ರಾಯಗಳನ್ನು ಪ್ರಕಟಿಸಿತ್ತು. ನಾನಿಲ್ಲಿ ಇದೇ ವಿಚಾರದಲ್ಲಿ ನನ್ನ ಅನುಭವದ ಉದಾಹರಣೆಗಳೊಂದಿಗೆ ಮಾತನಾಡಬಯಸುತ್ತೇನೆ. ನಾನು ಪ್ರಾಥಮಿಕ ಶಾಲಾವಿದ್ಯಾಭ್ಯಾಸ ಮಾಡುತ್ತಿದ್ದ ಸಮಯ. ಹಾಸನ ಜಿಲ್ಲೆಯ ಕಾಫಿ ತೋಟವೊಂದರಲ್ಲಿ ನನ್ನ ತಂದೆ ಉದ್ಯೋಗಿಯಾಗಿದ್ದರು, ನಾವು ತೋಟದಲ್ಲೇ ವಾಸವಿದ್ದೆವು. ಅದೃಷ್ಟವಶಾತ್ ತೋಟದಲ್ಲಿ ಕೆಲಸಮಾಡುತಿದ್ದ ಎಲ್ಲ ಜಾತಿಯ ಕೂಲಿಕಾರ್ಮಿಕರ ಮಕ್ಕಳೊಂದಿಗೆ ಆಟವಾಡುತ್ತ, ಅವರ ಮನೆಗಳಲ್ಲಿ ಕೊಟ್ಟದ್ದನ್ನು ತಿನ್ನುತ್ತ ಬೆಳೆದಿದ್ದ ನನಗೆ ಅಸ್ಪೃಶ್ಯತೆ ಅನ್ನುವುದೊಂದು ಇದೆ ಎಂದೇ ತಿಳಿದಿರಲಿಲ್ಲ. ನನ್ನ ತಂದೆತಾಯಿಯರೂ ಇದೇ ರೀತಿಯಲ್ಲಿ ನನ್ನನ್ನು ಬೆಳೆಸಿದ್ದರು. (ಇದ್ದನ್ನೇ ನಾನು ಅದೃಷ್ಟ ಎಂದು ಕರೆದದ್ದು ಅನೇಕ ಮೇಲ್ಜಾತಿಯವರ ಮಕ್ಕಳಿಗೆ ಈ ಸೌಭಾಗ್ಯ ದೊರೆಯದೆ ಅವರ ಅವರು ಜಾತಿಯ ಕೂಪದಲ್ಲೇ ಬೆಳೆದುಬಿಡುತ್ತಾರೆ) ಸಾಮಾನ್ಯವಾಗಿ ಆ ಕಾಲದಲ್ಲಿ ಶಾಲೆಗೆ ಮಧ್ಯಾಹ್ನದ ಊಟವನ್ನು ತರುತ್ತಿದ್ದವರ ಸಂಖ್ಯೆಯೇ ಕಡಿಮೆ. ಕೆಲವರು ಅನುಕೂಲಸ್ತರ ಮಕ್ಕಳು, ಅದೂ ಕೂಡಾ ಮನಸ್ಸಿಗೆ ಬಂದಾಗ ಮಾತ್ರ ಊಟ ತರುತ್ತಿದ್ದರು. ಮನೆಯಿಂದ ಎಂಟು ಕಿಲೋಮೀಟರ್ ದೂರದಲ್ಲಿ ನಮ್ಮ ಶಾಲೆಯಿತ್ತು. ನಾನು ಒಣಕಲಾಗಿ ಪೀಚಾಗಿ ಇದ್ದುದರಿಂದ ನನ್ನಮ್ಮ ನನಗೆ ಊಟ ಒಯ್ಯುವುದನ್ನ ಕಡ್ಡಾಯ ಮಾಡಿದ್ದಳು. ನಾನು ಪ್ರೈಮೆರಿ ಮುಗಿಸಿ ಮಿಡ್ಲ್ ಸ್ಕೂಲ್‌ಗೆ ಬಂದ ಮೊದಲನೇ ದಿನವೇ (ಆಗೆಲ್ಲ ಪ್ರೈಮೆರಿ ಮತ್ತು ಮಿಡ್ಲ್ ಸ್ಕೂಲ್ ಎಂದು ಬೇರೆ ಬೇರೆ ಶಾಲೆಗಳು ಇದ್ದವು) ಮಧ್ಯಾಹ್ನ ಊಟದ ವೇಳೆಗೆ ಕೆಲವರು ಹುಡುಗರು ‘ನೀನು ನಮ್ಮ ಜೊತೆ ಊಟಮಾಡುವಂತಿಲ್ಲ ಹೊರಗೆ ಅಂಗಳದಲ್ಲಿ ಕುಳಿತು ಊಟ ಮಾಡು’ ಎಂದು ಕ್ಲಾಸ್‌ರೂಮಿನಿಂದ ಹೊರಕ್ಕೆ ಕಳುಹಿಸಿದರು. ನಾನು ಆಳುತ್ತ ಅಂಗಳಕ್ಕೆ ಬಂದು ಕುಳಿತಿದ್ದೆ, ಇತರ ಮಕ್ಕಳಿಂದ ವಿಷಯ ತಿಳಿದ ಮುಖ್ಯೋಪಾಧ್ಯಾಯರು, ಆ ಹುಡುಗರಲ್ಲಿ ಯಾಕೆಂದು ವಿಚಾರಿಸಿದಾಗ, ‘ಅವ್ನು ಮಾಂಸ ತರ್‍ತಾನೆ ಸಾರ್’ ಎಂದರು. ಮುಖ್ಯೋಪಾಧ್ಯಾಯರು ನನ್ನನ್ನು ಆಫೀಸ್ ರೂಮಿನಲ್ಲಿ ಕುಳಿತು ಊಟಮಾಡುವಂತೆ ತಿಳಿಸಿದರು. (ಆ ಕಾಲದಲ್ಲಿ ಮಾಂಸಹಾರಿಗಳೂ ಕೂಡಾ ಶಾಲೆಗೆ ಮಾಂಸಾಹಾರ ತರುತ್ತಿರಲಿಲ್ಲ) ಮುಂದಿನ ದಿನಗಳಲ್ಲಿ, ನಾನು ಮಾಂಸ ತರುವುದಿಲ್ಲ ಎಂದು ಖಾತ್ರಿಯಾದ ಬಳಿಕ ಇತರ ಹುಡುಗರು ನನ್ನೊಂದಿಗೆ ಕುಳಿತು ಊಟಮಾಡಲು ಒಪ್ಪಿದರು. ಆ ಹುಡುಗರಲ್ಲಿ ಕೆಲವರು ಇಂದಿಗೂ ನನ್ನ ಗೆಳೆಯರಾಗಿ ಇದ್ದಾರೆ. ಮತ್ತು ಈ ಘಟನೆಯನ್ನು ನೆನಪಿಸಿಕೊಂಡು ಇಂದಿಗೂ ನಾವು ನಗುತ್ತೇವೆ. ಆದರೆ ನನಗೆ ಅಸ್ಪೃಶ್ಯತೆಯ ಪ್ರಥಮ ಪರಿಚಯವಾದದ್ದು ಆ ಮೂಲಕವೇ. ಮತ್ತು ಮುಂದೆ ಅಂಬೇಡ್ಕರ್ ಅವರ ಬಗ್ಗೆ ನಾನು ಅವರಿವರಿಂದ ಕೇಳುತ್ತ, ಓದುತ್ತ ಹೋದಂತೆ ಅಂಬೇಡ್ಕರ್ ಚಿಂತನೆಗಳು ನನ್ನೊಳಗೆ ಪ್ರವೇಶಿಸಲು ಕಾರಣವಾಯಿತು. ಹಾಗೇ ನಾನು ಕಾರ್ಮಿಕ ಸಂಘಟನೆ, ದಲಿತ-ರೈತ ಚಳುವಳಿಗಳು, ಸಾಕ್ಷರತಾ ಆಂದೋಲನ, ರಂಗಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಕಾರಣವಾಯಿತು.

ಇನ್ನೊಂದು ಘಟನೆ ನಾನು ವಿದ್ಯಾಭ್ಯಾಸವನ್ನು ಮುಗಿಸಿ ನನ್ನೂರಿನಲ್ಲೇ ಅದೇ ಕಾಫಿ ತೋಟದಲ್ಲಿ ಉದ್ಯೋಗಿಯಾಗಿ ಸೇರಿದ ನಂತರದ್ದು.

ನಾನು ಕೆಲಸ ಮಾಡುತ್ತಿದ್ದ ಹಾರ್ಲೆ ತೋಟಗಳ ಮಾಲೀಕರಾದ ಎನ್.ಕೆ.ಗಣಪಯ್ಯ ಹಲವಾರು ದಲಿತ ಕುಟುಂಬಗಳಿಗೆ ಜಮೀನು ಮಂಜೂರು ಮಾಡಿಸಿ, ತಾವೇ ನಿಂತು ತೋಟ ಮಾಡಿಸಿಕೊಟ್ಟಿದ್ದರು. ಅವರೆಲ್ಲ ಇಂದಿಗೂ ಅಲ್ಲಿ ಕೃಷಿ ಮಾಡಿಕೊಂಡಿದ್ದಾರೆ. ಇದಲ್ಲದೆ ಇನ್ನೂ ನೂರಾರು ಜನರಿಗೆ ಜನತಾ ಮನೆಗಳನ್ನು ಮಂಜೂರು ಮಾಡಿಸಿ ಕೊಟ್ಟಿದ್ದರು. ಈಮನೆಗಳ ನಿರ್ಮಾಣ ಇತ್ಯಾದಿಗಳ ಉಸ್ತುವಾರಿ ನನ್ನ ಮೇಲೆ ಬಿದ್ದಿತ್ತು. ನಾನು ಮನೆ ಕೆಲಸದ ಸ್ಥಳಗಳು, ತಾಲ್ಲೂಕು ಕಛೇರಿ, ಬಿಡಿಓ ಕಛೇರಿ ಇತ್ಯಾದಿ ಕಡೆಗಳಿಗೆ ಹೋಗಬೇಕಾಗುತ್ತಿತ್ತು.

ಈ ಮನೆಗಳನ್ನು ಕಟ್ಟಿಕೊಂಡವರಿಗೆ ಗಣಪಯ್ಯನವರ ಮಗ ಎನ್. ಜಿ. ರವೀಂದ್ರನಾಥ್ ಬ್ಯಾಂಕಿನಿಂದ ಸಾಲ ಕೊಡಿಸಿದ್ದರು. Young_Ambedkarಆದರೆ ಬ್ಯಾಂಕಿನಿಂದ ಸಾಲ ತೆಗೆದುಕೊಂಡವರಲ್ಲಿ ಅನೇಕರು ವಾಪಸ್ ಕಟ್ಟಲೇ ಇಲ್ಲ. ಹಾಗಾಗಿ ರವೀಂದ್ರನಾಥ್ ಆ ಕಡೆ ಬಂದಾಗಲೆಲ್ಲ ಈ ಸಾಲಗಾರರಲ್ಲಿಗೆ ಹೋಗಿ ಬ್ಯಾಂಕ್ ಸಾಲ ತೀರಿಸಿ ಎಂದು ಹೇಳುತ್ತಿದ್ದರು. ಅನೇಕ ಸಾರಿ ನಾನು ಅವರೊಂದಿಗೆ ಇರುತ್ತಿದ್ದೆ.

ಒಂದು ಸಾರಿ ಪಕ್ಕದ ಅಗಲಟ್ಟಿ ಗ್ರಾಮದ ಪಕ್ಕದಲ್ಲೇ ಇರುವ ಮಾವಿನಹಳ್ಳಿ ಕಾಲೊನಿಗೆ ಹೋದೆವು. ಅಲ್ಲಿ ಸುಮಾರು ನಲವತ್ತು ಮನೆಗಳನ್ನು ನಾವು ಕಟ್ಟಿಸಿದ್ದೆವು. ಅಲ್ಲಿನ ದಲಿತರಲ್ಲಿ ಸ್ವಲ್ಪ ಮುಂದಾಳತ್ವ ವಹಿಸುತ್ತಿದ್ದ ಕಾಳೀಪ್ರಸಾದ್ (ಇವರು ಮುಂದೆ ಜಿಲ್ಲಾ ಪರಿಷತ್ ಸದಸ್ಯರೂ ಆದರು.) ಮತ್ತಿತರರನ್ನು ಒಂದೆಡೆ ಸೇರಿಸಿ ರವೀಂದ್ರನಾಥರು, “ನೋಡಿ ನೀವೆಲ್ಲ ತೆಗೆದುಕೊಂಡಿರುವುದು ಬ್ಯಾಂಕ್ ಸಾಲ-ಇದು ಸಾರ್ವಜನಿಕ ಹಣ. ನೀವು ಇದನ್ನು ತೀರಿಸಿದರೆ, ನಿಮಗೆ ಇನ್ನೊಮ್ಮೆ ಸಾಲ ಬೇಕಾದರೆ ಸಿಗುತ್ತದೆ. ನೀವು ಸಾಲ ತೀರಿಸದಿದ್ದರೆ- ನಿಮ್ಮಲ್ಲೇ ಯಾರಿಗಾದರೂ ಅಗತ್ಯ ಬಿದ್ದರೂ ಸಾಲ ಸಿಕ್ಕುವುದಿಲ್ಲ. ಸಾರ್ವಜನಿಕ ಹಣವನ್ನು ದುರುಪಯೋಗ ಮಾಡಲು ಯಾರಿಗೂ ಅಧಿಕಾರ ಇಲ್ಲ” ಎಂದೆಲ್ಲ ತಿಳಿವಳಿಕೆ ಹೇಳಿ, “ನೀವೆಲ್ಲ ತಪ್ಪು ಮಾಡುತ್ತಿದ್ದೀರಿ, ಯೋಚನೆ ಮಾಡಿ, ನಿಮಗೆ ಕೆಲವು ದಿನ ಸಮಯ ಕೊಡುತ್ತೇನೆ. ಆಗಲೂ ನೀವು ಸಾಲ ವಾಪಸ್ ಕಟ್ಟದಿದ್ದರೆ ನಾನು ಇಲ್ಲಿ ಬಂದು ಧರಣಿ ಕೂರುತ್ತೇನೆ” ಎಂದರು.

ಆಗಲೇ ಸಂಜೆ ಆರು ಗಂಟೆ ಕಳೆದಿತ್ತು. ಕೆಲವರಾಗಲೇ ಕುಡಿದು ತೇಲಾಡುತ್ತಿದ್ದರು. ಇನ್ನು ಕೆಲವರು ಜಗಳ ಪ್ರಾರಂಭಿಸಿದರು. ಕಾಳೀಪ್ರಸಾದ್ ಮತ್ತಿತರರು ಅವರನ್ನು ಬೇರೆಡೆಗೆ ಕರೆದೊಯ್ಯುವ ಪ್ರಯತ್ನ ಮಾಡುತ್ತಿದ್ದರು. ಉಳಿದವರು “ಇವರು ಈ ಹೊತ್ತಿಗೆ ಇಲ್ಲಿಗ್ಯಾಕೆ ಬಂದರು? ಇವರ ಜೀಪಿಗೆ ಬೆಂಕಿ ಕೊಟ್ಟರೇನು? ಬೇಕಾದರೆ ಸಾಲವನ್ನು ಇವರೇ ಕಟ್ಟಲಿ” ಎಂದೆಲ್ಲಾ ತಲೆಗೊಂದು ಮಾತಾಡಿದರು!

ನಾವು ಹೇಗೋ ಅಲ್ಲಿಂದ ಹೊರಟು ಬಂದೆವು. ಇವರ ಹುಚ್ಚಾಟಗಳನ್ನು ನೋಡಿ ನನಗೆ ರೇಗಿಹೋಗಿತ್ತು. ದಾರಿಯಲ್ಲಿ ಬರುವಾಗ ನಾನು ರವೀಂದ್ರನಾಥರೊಡನೆ ಜಗಳ ಪ್ರಾರಂಭಿಸಿದೆ.

“ನಿಮಗೆ ಬೇರೆ ಕೆಲಸ ಇಲ್ಲ ಇಂಥವರಿಗೆಲ್ಲಾ ಸಹಾಯ ಮಾಡ್ತೀರಿ, ಇವರಿಗೆ ಅದರ ನೆನಪೇ ಇಲ್ಲ. ಯಾರಾದರೂ ನಮ್ಮಂಥವರಿಗೆ ಸಹಾಯ ಮಾಡಿ, ನೋಡಿದಿರಲ್ಲ ಇವರ ಬುದ್ಧಿ” ಎಂದೆ.

ಅವರು ಸ್ವಲ್ಪ ಹೊತ್ತು ಮಾತಾಡಲಿಲ್ಲ. ಆಮೇಲೆ,
“ನೋಡು ನಿನ್ನಂಥವರಿಗೆ ಯಾರ ಸಹಾಯವೂ ಅಗತ್ಯ ಇಲ್ಲ: ಆದರೆ ಅವರಿಗೆ ಸಹಾಯದ ಅಗತ್ಯ ಇದೆ”, ಎಂದರು.

“ಹೌದು ಅವರಿಗೆ ಅಗತ್ಯ ಇರಬಹುದು, ಆದರೆ ಅರ್ಹತೆ ಇಲ್ಲ.” ಅಸಹನೆಯಿಂದ ಜೋರಾಗಿ ಹೇಳಿದೆ. ನನಗೆ ಸಮಾಧಾನವಾಗಿರಲಿಲ್ಲ.

“ಅದು ಬೇರೇ ಮಾತು. ಅರ್ಹತೆ ಇದೆಯೋ ಇಲ್ಲವೋ ಗೊತ್ತಾಗುವುದು ತುಂಬ ನಿಧಾನ. ಆದರೆ ಅವರು ಸಾವಿರ ವರ್ಷಗಳಿಂದ ಮೋಸ ಹೋಗಿದ್ದಾರೆ. ಈಗ ಯಾರನ್ನೂ ನಂಬುವ ಸ್ಥಿತಿಯಲ್ಲಿ ಅವರಿಲ್ಲ.”

“ಯಾರೋ ಮೋಸ ಮಾಡಿದ್ದರೆ ಅದಕ್ಕೆ ನಾವೇನು ಮಾಡಬೇಕು. ಅವರು ಹೀಗೆ ಮಾಡಿದರೆ ಅವರಿಗೆ ಯಾರು ಸಹಾಯ ಮಾಡುತ್ತಾರೆ. ಅಯೋಗ್ಯರು.” ನನ್ನ ಸಿಟ್ಟು ಇಳಿದಿರಲಿಲ್ಲ.

ರವೀಂದ್ರನಾಥ್ ಮತ್ತೆ ಮೌನವಾದರು. ಕೆಲವು ಕ್ಷಣಗಳ ನಂತರ, “ನೋಡು ಅವರು ಏನು ಹೇಳಿದರು ಎನ್ನುವುದು ಮುಖ್ಯ ಅಲ್ಲ. ನಮ್ಮೆಲ್ಲರಿಗೆ ಅವರ ಸಾವಿರ ವರ್ಷಗಳ ಋಣ ಇದೆ. ಅದರಲ್ಲಿ ಸ್ವಲ್ಪ ತೀರಿತು ಅಂದುಕೊಂಡರಾಯಿತು” ಎಂದರು. ಆಗ ನನ್ನ ಸಿಟ್ಟೇನು ತಣಿಯಲಿಲ್ಲ. ಆದರೆ ಅವರು ಹೇಳಿದ ಮಾತು ನನಗೆ ಅರ್ಥವಾಗಲು ಅನೇಕ ವರ್ಷಗಳು ಬೇಕಾದವು.

ರವೀಂದ್ರನಾಥ್ ವೈದ್ಯಕೀಯ ಕಲಿತವರು. ಒಳ್ಳೆಯ ಸಂಸ್ಕೃತಾಭ್ಯಾಸಿ ಕೂಡಾ. ಅಥರ್ವವೇದವನ್ನು ಇಂಗ್ಲೀಷಿಗೆ ಭಾಷಾಂತರಿಸಿದ್ದಾರೆ. ಗಾಂಧಿ ಮತ್ತು ಅಂಬೇಡ್ಕರ್ ಇಬ್ಬರ ಬಗ್ಗೆಯೂ ಆಳವಾಗಿ ಆಧ್ಯಯನ ಮಾಡಿದವರು.

ನಾನು ಇದನೆಲ್ಲ ಯಾಕೆ ಹೇಳುತ್ತಿದ್ದೇನೆಂದರೆ, ಈಗ ಶಾ ಬಾಲುರಾವ್ ಅವರ ಸೂರ್ಯ ಇವನೊಬ್ಬನೇ ಕವನಸಂಗ್ರಹದ ಒಂದು ಪದ್ಯ ನೆನಪಾಗುತ್ತದೆ.

“ಇವ (ಸೂರ್ಯ) ಸಮಾಜವಾದಿ
ಉಳ್ಳಪ್ಪ ಇಲ್ಲಪ್ಪ ಇಬ್ಬರಿಗೂ ಇವನ ಬೆಳ್ಳಿ ತಟ್ಟೆಯಲಿ ಊಟ”

ಹಾಗೇ ನಾವು ‘ದಲಿತ ಸೂರ್ಯ’ನೆಂದು ಕರೆಯುವ ಅಂಬೇಡ್ಕರ್, ಶೋಷಿತರಿಗೆ ಮತ್ತು ಶೋಷಕರಿಗೆ ಇಬ್ಬರಿಗೂ ಬೆಳಕನ್ನು ನೀಡಿದ ಮಹಾನುಭಾವರೆನ್ನುವದಕ್ಕೆ ಈ ಮೇಲಿನ ಘಟನೆಗಳ ಉದಾಹರಣೆ ಸಾಕೆನಿಸುತ್ತದೆ.

ಇಲ್ಲಿ ಅನೇಕರು ಕಾಲೇಜು ವಿದ್ಯಾರ್ಥಿಗಳು ಮತ್ತು ತರುಣರು ಸೇರಿರುವುದರಿಂದ ಅನೇಕ ಕಡೆಗಳಲ್ಲಿ ಪ್ರಸ್ತಾಪಿತವಾಗಿರುವ ಈ ವಿಷಯವನ್ನು ಮತ್ತೊಮ್ಮೆ ನಿಮ್ಮ ಮುಂದಿಡುತ್ತೇನೆ. ಸಾಮಾನ್ಯವಾಗಿ ಗಾಂಧಿ ಮತ್ತು ಅಂಬೇಡ್ಕರ್ ಇವರಿಬ್ಬರ ಭಾವಚಿತ್ರವನ್ನು ನೋಡಿ, ಅಂಬೇಡ್ಕರ್ ಅವರು ಸೂಟು-ಬೂಟುಧಾರಿಯಾಗಿ ಪೂರ್ಣ ಉಡುಗೆಯಲ್ಲಿದ್ದರೆ, ಗಾಂಧಿ ಅರೆ ಉಡುಪಿನ ಫಕೀರನಾಗಿ ಕಾಣಿಸುತ್ತಾರೆ. ಇದು ಇವರಿಬ್ಬರ ಮಾತ್ರವಲ್ಲ ಅವರು ಪ್ರತಿನಿಧಿಸಿದ ಜನ ಸಮುದಾಯಗಳ ಮುನ್ನಡೆಯ ಸಂಕೇತ-ರೂಪಕಗಳೂ ಹೌದು. ಎಲ್ಲ ಉಳ್ಳವನಾಗಿ ಜನಿಸಿದ ಗಾಂಧಿಗೆ ಅಂತಸ್ತು, ಅಧಿಕಾರ, ಶ್ರೀಮಂತಿಕೆ, ಅಹಂಕಾರ ಎಲ್ಲವನ್ನೂ ತ್ಯಜಿಸುತ್ತಾ ಹೋದರೆ ಮಾತ್ರ ಮನುಷ್ಯನಾಗಲು ಸಾಧ್ಯವಿತ್ತು. ಅದೇ ಏನೂ ಇಲ್ಲದ ಅಂಬೇಡ್ಕರವರ ಜನ ಸಮುದಾಯ ಎಲ್ಲವನ್ನೂ ಗಳಿಸುತ್ತ ಮನುಷ್ಯರಾಗಬೇಕಿತ್ತು. ಈಗ ಇವರಿಬ್ಬರ ಉಡುಪನ್ನು ನಿಮ್ಮ ಕಲ್ಪನೆಯಲ್ಲಿ ಬದಲಿಸಿ ನೋಡಿ, ಸೂಟುಬೂಟು ತೊಟ್ಟ ಗಾಂಧಿ ಭಾರತದ ಸಾವಿರಾರು ವಕೀಲರಲ್ಲಿ ಒಬ್ಬರಾಗಿ ಬಿಡುತ್ತಾರೆ. ಗಾಂಧಿಯ ಉಡುಪಿನ ಅಂಬೇಡ್ಕರ್ ಇಲ್ಲ ಲಕ್ಷಾಂತರ ದಲಿತರಲ್ಲಿ ಒಬ್ಬರಾಗಿ ಕಳೆದುಹೋಗುತ್ತಾರೆ. ಗಾಂಧಿ ಎಲ್ಲವನ್ನೂ ತ್ಯಜಿಸಿ ಮನುಷ್ಯರಾಗಬೇಕಾದ ಮೇಲ್ವರ್ಗಕ್ಕೆ ಸಂಕೇತವಾದರೆ, ಅಂಬೇಡ್ಕರ್ ಎಲ್ಲವನ್ನೂ ಗಳಿಸಿ ಸಮಾನತೆಯತ್ತ ಸಾಗಬೇಕಾದ ಕೆಳವರ್ಗಕ್ಕೆ ದಾರಿದೀಪವಾಗಿದ್ದಾರೆ.

ಇನ್ನು ಅಂಬೇಡ್ಕರ್ ಅವರ ಅತಿ ಮುಖ್ಯವಾದ ಕೊಡುಗೆಗಳತ್ತ ಗಮನ ಹರಿಸಿದರೆ, ಅಂಬೇಡ್ಕರ್ ಅವರ ಆರ್ಥಿಕ ಚಿಂತನೆಗಳ ಬಗ್ಗೆಯಾಗಲೀ ಅವರ ಕೃತಿಗಳನ್ನಾಗಲೀ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಪ್ರಸ್ತಾಪಿಸುವುದೇ ಕಡಿಮೆ. ಭಾರತೀಯ ರಿಸರ್ವಬ್ಯಾಂಕ್‌ನ ಸ್ಥಾಪನೆ, ರೂಪಾಯಿಯ ಸಮಸ್ಯೆಗಳಬಗ್ಗೆ ಅವರು ಬರೆದ-ನೀಡಿದ ಸಲಹೆಗಳು. ಇವುಗಳಿರಲಿ ಕೃಷಿಯಲ್ಲಿ ಹೂಡಬೇಕಾದ ಭಂಡವಾಳ ಮತು ಅದರ ಪೂರೈಕೆ, ಕೈಗಾರಿಕಾ ಸಂಬಂಧಗಳು, ಕುಟುಂಬ ಯೋಜನೆ, ಆಹಾರ ಭದ್ರತಾ ಕಾನೂನು, ಮಹಿಳಾ ಸಬಲೀಕರಣ, ಭೂಸುಧಾರಣೆ, ಭೂಮಿ ಮತ್ತು ಕೈಗಾರಿಕೆಗಳ ರಾಷ್ಟ್ರೀಕರಣ ಇವೆಲ್ಲಕ್ಕಾಗಿ ಅವರು ನಡೆಸಿ ಹೋರಾಟಗಳು, ಅವರ ದುಡಿಮೆ-ಕೊಡುಗೆಗಳ ಬಗ್ಗೆಯೂ, ಅದರ ಬಗ್ಗೆ ಅಂಬೇಡ್ಕರ್ ಅವರಿಗಿದ್ದ ಅಪಾರವಾದ ಜ್ಞಾನ ಮತ್ತು ಅನುಭವಗಳ ಬಗ್ಗೆಯೂ ನಮ್ಮ ಯುವ ಪೀಳಿಗೆಗೆ ಸಾಕಷ್ಟು ತಿಳುವಳಿಕೆ ಇಲ್ಲ. ಆದರೆ ನಾವು ಪದೇಪದೇ ವೇದಿಕೆಗಳಲ್ಲಿ, ಬರಹಗಳಲ್ಲಿ ಅಂಬೇಡ್ಕರ್ ಅವರನ್ನು ‘ಸಂವಿಧಾನ ಶಿಲ್ಪಿ’, ‘ದಲಿತ ಹೋರಾಟಗಾರ’ ಇತ್ಯಾದಿಯಾಗಿ ವರ್ಣಿಸುತ್ತ, ಅವರ ನಿಜ ವ್ಯಕ್ತಿತ್ವವನ್ನು ಹಾಗೂ ಇತರ ಅನೇಕ ಪ್ರಮುಖ ಸಾಧನೆಗಳನ್ನು ಮರೆಮಾಚುತ್ತಿದ್ದೇವೆ, ಆದರೆ ಇವೆಲ್ಲವನ್ನೂ ನಾವು ಮತ್ತೆ ಅಂಬೇಡ್ಕರ್ ಬರಹಗಳನ್ನು ಓದುವ ಮೂಲಕ ತಿಳಿದುಕೊಳ್ಳಲು ಸಾಧ್ಯವಿರುವುದರಿಂದ, ನಾನು ಬೇರೆ ವಿಷಯಗಳತ್ತ ಗಮನಹರಿಸುತ್ತೇನೆ.

೧೯೩೦ರಲ್ಲೇ ಅಂಬೇಡ್ಕರ್ ಅವರು ಜಾತಿಗಣತಿಗಾಗಿ ಬ್ರಿಟಿಷ್‌ಸರ್ಕಾರವನ್ನು ಒತ್ತಾಯಿಸಿದ್ದರು. ಅದರಿಂದ ದಲಿತರ ನಿಜವಾದ ಸಂಖ್ಯೆ ದೊರೆತು ಅವರ ನ್ಯಾಯಬದ್ಧ ಹಕ್ಕು ಮಂಡಿಸಲು ಸಾಧ್ಯವಾಗುತ್ತದೆಂದು ಅವರು ವಾದಿಸಿದ್ದರು. ಇದೀಗ ಮತ್ತೊಮ್ಮೆ ಜಾತಿಗಣತಿ ನಡೆಯತ್ತಿದೆ, ಇದರೊಂದಿಗೆ ಇನ್ನೂ ಒಂದು ವಿಚಾರವನ್ನು ನಿಮ್ಮ ಮುಂದಿಡುತ್ತಿದ್ದೇನೆ. ಜಾತಿಗಣತಿಯೊಂದಿಗೆ ಭೂಮಿ ಮತ್ತು ಸಂಪತ್ತಿನ ಗಣತಿಯೂ ವೈಜ್ಞಾನಿಕವಾಗಿ ನಡೆಸಲು ಒತ್ತಾಯಿಸಬೇಕು. ಈಗ ಜಾತಿಯೊಂದಿಗೆ ಭೂಮಿಯ ಒಡೆತನದ ವಿವರವನ್ನೇನೋ ಕೇಳಿದ್ದಾರೆ. ಅದರಲ್ಲಿ ಕಾರ್ಪೋರೇಟ್ ವಲಯದ ಕಂಪೆನಿಗಳ ಹಾಗೂ ಸಹಕಾರಿ ಸಂಸ್ಥೆಗಳ ಮಠ ಮಾನ್ಯಗಳ ಹೆಸರಿನಲ್ಲಿ ಹೊಂದಿರುವ ಭೂಮಿಯ ಲೆಕ್ಕ ಸಿಗುವುದಿಲ್ಲ ಹಾಗೇ ಚಿನ್ನ ನಗದು ಷೇರುಗಳಂತಹ ಚರಾಸ್ತಿಗಳ ವಿವರವೂ ಸಿಗುವುದಿಲ್ಲ. ಇದೆಲ್ಲದರ ಗಣತಿಯೂ ನಡೆದರೆ ಯಾವ ಯಾವ ಜಾತಿಗಳಲ್ಲೇ ಸಂಪತ್ತು ಕೇಂದ್ರೀಕೃತವಾಗಿದೆ ಯಾವ ಅನುಪಾತದಲ್ಲಿ ಕೇಂದ್ರೀಕೃತವಾಗಿದೆ, ಹಾಗೂ ಜಾತಿಗಳೊಗೇ ಉಳ್ಳವರ ಇಲ್ಲದವರ ಅನುಪಾತ ಏನು ಎಂಬ ವಿವರಗಳೂ ಸಿಗುತ್ತಿತ್ತು, ಈಗ ಈ ಯಾವ ವಿವರಗಳೂ ನಮ್ಮಲ್ಲಿ ಸ್ಪಷ್ಟವಾಗಿ ಇಲ್ಲ.

ನನ್ನ ಗೆಳೆಯರೊಬ್ಬರು ಇದೀಗ ಮಾತನಾಡುತ್ತ, ನಾವು ದಿನದಿಂದ ದಿನಕ್ಕೆ ಅಸಹನೆ ಸಮಾಜವಾಗಿ ಪರಿವರ್ತನೆಯಾಗುತ್ತಿದ್ದೇವೆ. ಎಲ್ಲದರಲ್ಲೂ ಪರ ಮತ್ತು ವಿರೋಧ ಎಂಬ ಎರಡೇ ಗುಂಪುಗಳಾಗುತ್ತಿವೆ. ಎರಡೂ ಅಲ್ಲದೆ ಇರಬಹುದಾದ ಮೂರನೆಯ ಸಾಧ್ಯತೆಯನ್ನೇ ನಿರಾಕರಿಸಲಾಗುತ್ತಿದೆ ಎಂದರು. ಇದು ಇಂದು ಬಹುಷಃ ಎಲ್ಲಾ ಪ್ರಜ್ಞಾವಂತರನ್ನೂ ಕಾಡುತ್ತಿರುವ ಸಮಸ್ಯೆ. ಅವರು ಮುಂದುವರಿದು ಕೆಲವು ವ್ಯಕ್ತಿಗಳನ್ನು ಟೀಕೆಮಾಡುವುದಿರಲಿ ವಿಮರ್ಶಿಸಲೂ ಬಾರದೆಂಬ ಅಲಿಖಿತ ನಿಯಮವೊಂದು ಜಾರಿಗೆ ಬರುತ್ತಿದೆ ಎಂದರು. ಇದೂ ಕೂಡಾ ನಮ್ಮೆಲ್ಲರ ಅನುಭವವೇ ಆಗಿದೆ. ಇದಕ್ಕೆ ಕಾರಣ ನಮ್ಮ ಅನೇಕ ನಾಯಕರನ್ನು, ಮಹಾನ್ ಚೇತನರನ್ನು ಕೆಲವು ವರ್ಗ-ಜಾತಿಗಳು ತಮ್ಮ ಸ್ವತ್ತನ್ನಾಗಿ ಕಾಣುವುದು. ಇನ್ನು ಕೆಲವರನ್ನು ಉಳಿದವರೇ ಒಂದು ವರ್ಗಕ್ಕೆ ಸೀಮಿತಗೊಳಿಸಿ ನೋಡುವುದು. ಅಂಬೇಡ್ಕರ್ ಅವರ ವಿಚಾರ ಬಂದಾಗ ಅವರನ್ನು ಇತರರೇ ದಲಿತರಿಗೆ ಸೀಮಿತಗೊಳಿಸಿ ನೋಡುತ್ತಿರುವುದನ್ನು ಹೆಚ್ಚಾಗಿ ಕಾಣಬಹುದು.

ಆದರೆ ಮೇಲಿನ ಈ ಸಂಗತಿಗೆ ಇದಿಷ್ಟೇ ಕಾರಣವೆಂದು ನನಗನಿಸುತ್ತಿಲ್ಲ. ಇದರೊಂದಿಗೆ ನಾವು ಬದುಕಿನ ಎಲ್ಲ ವಿಭಾಗಗಳಲ್ಲೂ ಸಹ ಯಾವುದನ್ನೇ ಆಗಲಿ ಸಮಗ್ರವಾಗಿ ನೋಡದೆ ಬಿಡಿಬಿಡಿಯಾಗಿ ನೋಡುವದು ಕೂಡಾ ಕಾರಣವೆನ್ನಿಸುತ್ತದೆ. (ಇರಲಿ ಇದೊಂದು ಬೇರೆಯೇ ವಿದ್ಯಮಾನವಾಗಿದ್ದು ಈ ಸಂದರ್ಭದಲ್ಲಿ ಪ್ರಸ್ತುತವಲ್ಲ) ಎಲ್ಲ ಮಹಾನ್ ವ್ಯಕ್ತಿಗಳ ಜೀವನವನ್ನು (ಪ್ರಪಂಚದಾದ್ಯಂತ) ಗಮನಿಸಿದರೆ ಅವರೆಲ್ಲರೂ ತಮ್ಮ ಜೀವಿತಾವಧಿಯಲ್ಲಿ ಬೆಳೆಯುತ್ತ ಸ್ವವಿಮರ್ಶೆಗೊಳಪಡುತ್ತ ಅನೇಕಬಾರಿ ತಾವು ಹಿಂದೆ ಹೇಳಿದ ಅಭಿಪ್ರಾಯಕ್ಕೆ ವಿರುದ್ಧವಾದ ಅಭಿಪ್ರಾಯವನ್ನು ಹೊಂದಿ ತೀರ್ಮಾನಿಸಿರುವುದನ್ನು ಕಾಣುತ್ತೇವೆ. ಆದರೆ ಇಂದು ಈ ಪರ ವಿರೋಧಿ ಗುಂಪುಗಳು ಅವರು ನಡೆದುಬಂದ ದಾರಿ ಮತ್ತು ನಂತರದ ತೀರ್ಮಾನಗಳನ್ನು ಸಮಗ್ರವಾಗಿ ಗ್ರಹಿಸದೆ, ಯಾವುದೋ ಕಾಲಘಟ್ಟದಲ್ಲಿನ ಅವರ ನಡೆಯನ್ನು ಉಲ್ಲೇಖಿಸುತ್ತಿರುತ್ತಾರೆ. ಇದರಿಂದ ಸಾಕಷ್ಟು ಗೊಂದಲ ಮತ್ತು ತಪ್ಪು ಗ್ರಹಿಕೆಗಳಾಗುತ್ತಿರುತ್ತದೆ. ಗಾಂಧಿ ಅಂಬೇಡ್ಕರ್, ಕುವೆಂಪು, ವಿವೇಕಾನಂದ, ರವಿಂದ್ರನಾಥ ಟಾಗೋರ್, ಹೀಗೆ ಅನೇಕರ ಬಗ್ಗೆ ನಡೆಯುತ್ತಿರುವ. ಹಾಗೇ ಅನೇಕ ಸಾಹಿತ್ಯ-ಕಾವ್ಯ ಕೃತಿಗಳಬಗ್ಗೆ ಆಗುತ್ತಿರುವ ವಾಗ್ವಾದಗಳಲ್ಲೂ ನಾವಿದನ್ನು ಕಾಣಬಹುದು.

ಗಾಂಧಿ ಮತ್ತು ಅಂಬೇಡ್ಕರ್ ಅವರಿಬ್ಬರ ಭಿನ್ನಾಭಿಪ್ರಾಯಗಳ ಬಗ್ಗೆ ನಾವು ಸಾಕಷ್ಟು ತಿಳಿದಿದ್ದೇವೆ. gandhi-art2ಅಂಬೇಡ್ಕರ್ ಅವರಷ್ಟು ತೀಕ್ಷ್ಣವಾಗಿ ಗಾಂಧಿಯನ್ನು ವಿಮರ್ಶೆಗೊಳಪಡಿಸಿದವರು- ಟೀಕಿಸಿದವರು, ಇರಲಾರರು, ಆದರೆ ಗಾಂಧಿ ಮತ್ತು ಅಂಬೇಡ್ಕರ್ ಇಬ್ಬರಲ್ಲೂ ಕೆಲವು ಸಾಮಾನ್ಯ ಅಂಶಗಳಿದ್ದವು. ಇಬ್ಬರೂ ಅಹಿಂಸೆಯ ಪ್ರಬಲ ಪ್ರತಿಪಾದಕರಾಗಿದ್ದರು. ಗಾಂಧಿ ಹೊರಗಿನಿಂದ ಅಂದರೆ ಹಿಂಸೆಯನ್ನು ನೋಡಿ ಅಹಿಂಸಾವಾದಿಯಾದರೆ, ಅಂಬೇಡ್ಕರ್ ಒಳಗಿನಿಂದಲೇ ಹಿಂಸೆಯನ್ನು ಅನುಭವಿಸುತ್ತ ಅಹಿಂಸಾವಾದಿಯಾಗಿದ್ದರು. ಇದರಿಂದಾಗಿಯೇ ಅವರು ಕೆಲವುಸಾರಿ ಒಲ್ಲದ ಮನಸ್ಸಿನಿಂದಲೇ ತಮ್ಮ ತೀರ್ಮಾನಗಳನ್ನು ಬಿಟ್ಟುಕೊಟ್ಟಿದ್ದಾರೆ. (ಈ ಬಗ್ಗೆ ಸಾಧ್ಯವಿದ್ದವರು ಸಿ.ಬಸವಲಿಂಗಯ್ಯ ನಿರ್ದೇಶನದ ಗಾಂಧಿ ಅಂಬೇಡ್ಕರ್ ನಾಟಕವನ್ನು ನೋಡಬೇಕಾಗಿ ಕೇಳಿಕೊಳ್ಳುತ್ತೇನೆ). ಈ ಇಬ್ಬರು ವ್ಯಕ್ತಿಗಳ ಸಂಗಮದಂತಿರುವ ವ್ಯಕ್ತಿಯೋರ್ವರಿಂದ ಮುಂದೆ ಹೋರಾಟ ನಡೆಸಿದ್ದು ಭಾರತದಲ್ಲಲ್ಲ ಬದಲಿಗೆ ಗಾಂಧಿ ತನ್ನ ಹೋರಾಟವನ್ನು ಪ್ರಾರಂಭಿಸಿದ ದಕ್ಷಿಣ ಆಫ್ರಿಕಾದಲ್ಲಿ-ನೆಲ್ಸನ್ ಮಂಡೇಲಾರಿಂದ

ಈ ವಿಚಾರಗಳನ್ನು ಮಾತಾನಾಡುವಾಗ ನನ್ನ ಅನೇಕ ಗೆಳೆಯರು ಗಾಂಧಿ ಮತ್ತು ಅಂಬೇಡ್ಕರ್ ಇಬ್ಬರಿಗೂ ನೊಬೆಲ್ ಪ್ರಶಸ್ತಿ ಬರಬೇಕಿತ್ತು ಅನ್ನುತ್ತಾರೆ. ಅವರ ಅಭಿಪ್ರಾಯ ಸರಿಯೇ ಆದರೆ ನನ್ನ ಅಭಿಪ್ರಾಯದಲ್ಲಿ ಇವರಿಬ್ಬರೂ ನೊಬೆಲ್ ಪ್ರಶಸ್ತಿಗಿಂತಲೂ ದೊಡ್ಡವರು. ಹಾಗೇನಾದರೂ ಕೊಡಬೇಕೆನ್ನಿಸಿದರೆ, ಸುಡುಮದ್ದಿನ ವ್ಯಾಪಾರಿಯಾಗಿ ಕೊನೆಗೊಂದು ಒಳ್ಳೆಯ ಕೆಲಸ ಮಾಡಿದ ನೊಬೆಲ್‌ಗೆ ಇವರ ಹೆಸರಿನ ಪ್ರಶಸ್ತಿಯನ್ನು ಕೊಡಬಹುದು!

ಗೆಳೆಯರೆ ನಾನೀಗ ನನ್ನ ನಂಬಿಕೆಯ ಪ್ರಕಾರ ಅಂಬೇಡ್ಕರ್ ಅವರ ಎರಡು ಮಹೋನ್ನತ ಕೊಡುಗೆಗಳ ಬಗ್ಗೆ ಹೇಳುತ್ತೇನೆ

ಮೊದಲನೆಯದಾಗಿ ನಮ್ಮ ಎಲ್ಲ ಮೇಲ್‌ವರ್ಗದ ಜನರೂ ಅಂಬೇಡ್ಕರ್ ಅವರ ಬಗ್ಗೆ ನೆನಪಿಡಬೇಕಾದ ಹಾಗೂ ಕೃತಜ್ಞರಾಗಿಬೇಕಾದ ಸಂಗತಿಯೆಂದರೆ. ಒಂದು ವೇಳೆ ಅಂಬೇಡ್ಕರ್ ಅವರು ತಮ್ಮ ಹಿಂದಿರುವ ಬಲುದೊಡ್ಡ ಶೋಷಿತ ಸಮುದಾಯಕ್ಕೆ ಅಹಿಂಸೆಯ ದೀಕ್ಷೆ ನೀಡದಿದ್ದರೆ ಭಾರತದೇಶ ಇಂದು ಒಂದಾಗಿ ಇರುತ್ತಿರಲಿಲ್ಲ. ಮೇಲ್ವರ್ಗದ ನೆಮ್ಮದಿಯೂ ಕನಸಾಗಿರುತ್ತಿತ್ತು. ಶತಮಾನಗಳಿಂದ ನೋವು ಅವಮಾನಗಳನ್ನು ಅನುಭವಿಸಿದ ಜನಾಂಗಗಳು ಎಲ್ಲವನ್ನೂ ಭೂಮಿತಾಯಿಯಂತೆ ಸಹಿಸಿಕೊಂಡು ಇಂದೂ ಅಹಿಂಸಾತ್ಮಕವಾಗಿಯೇ ಇದ್ದರೆ, ಇದರ ಹಿನ್ನೆಲೆಯಲ್ಲಿ ಅಂಬೇಡ್ಕರ್ ಅವರ ಸಹಿಷ್ಣುತೆ, ಮಾನವೀಯತೆ, ದೂರದೃಷ್ಟಿ ಇದೆ. ಆ ಕಾರಣಕ್ಕಾಗಿಯಾದರೂ ನಾವಿಂದು ಅಂಬೇಡ್ಕರ್ ಅವರಿಗೆ ಕೃತಜ್ಞತಾರೂಪವಾಗಿ ಸಮಾನತೆಯ ಸಮಾಜದ ಅಗತ್ಯದ ಮನಗಾಣಬೇಕು.

ಎರಡನೆದಾಗಿ, ಅಂಬೇಡ್ಕರ್ ಅವರಿಗೆ ಕೊನೆಗೆ ಏನೇ ಆದರೂ ಭಾರತದ ಈ ಹಿಂದೂ ಸಮಾಜ ತಮ್ಮ ಸಮುದಾಯವನ್ನು ಮನುಷ್ಯರನ್ನಾಗಿ ಕಾಣಲಾರರು ಅನ್ನಿಸತೊಡಗಿತ್ತು. ತಮ್ಮ ಹಿಂದಿದ್ದ ದೊಡ್ಡ ಜನ ಸಮುದಾಯದ ಅಸ್ಮಿತೆಯನ್ನು ಕಾಪಾಡುತ್ತ ಅವರನ್ನು ಮಾನವರನ್ನಾಗಿ ಪರಿಗಣಿಸುವಂತ ಸಮಾಜದ- ಧರ್ಮದ ಅವರ ಹುಡುಕಾಟ ನಿರಂತರವಾಗಿತ್ತು, ಅಂತಿಮವಾಗಿ ಅವರು ತೀರ್ಮಾನಿಸಿದ್ದು ಬೌಧ್ಧದರ್ಮದತ್ತ ಪಯಣ. ಆದರೆ ಗೆಳೆಯರೆ ನನಗೆ ಅನ್ನಿಸುತ್ತಿರುವುದು ಅಂಬೇಡ್ಕರ್ ಅವರ ಎರಡು ಮಹೋನ್ನತ ಕೆಲಸಗಳಲ್ಲಿ ಅತಿ ಮುಖ್ಯವಾದದ್ದೆಂದು ನಾನು ಭಾವಿಸುವ ಈ ನಡೆಯಲ್ಲಿ ಅವರು ಬುದ್ಧಧಮ್ಮದತ್ತ ಸಾಗಲಿಲ್ಲ ಬದಲಿಗೆ ನಾವು ನಮ್ಮೊಳಗಿನಿಂದ ಓಡಿಸಿದ-ಕಳೆದುಕೊಂಡ ಬುದ್ಧನನ್ನು ಮರಳಿ ಕರೆತಂದುಕೊಟ್ಟರು. ಎಲ್ಲ ಅರಿವಿನಿಂದ, ಯಾವುದನ್ನೂ ಪ್ರಶ್ನಿಸದೆ ಒಪ್ಪಿಕೊಳ್ಳದ, ಪ್ರಬುದ್ಧರಾಗುವ ಅವಕಾಶವನ್ನು ಎಲ್ಲರಿಗೂ ಸಮಾನವಾಗಿ ನೀಡುವ ಬುದ್ಧನನ್ನು ದೊರಕಿಸಿಕೊಟ್ಟರು.

ಇಂದು ಬುದ್ಧದಮ್ಮವೂ ಕೂಡಾ ಇತರ ಧರ್ಮಗಳಂತೆ ಹಲವು ರೀತಿಯಲ್ಲಿ ಕಲುಷಿತವಾಗಿ ಹೋಮ ಹವನ ಮಾಡುವ, ಮೂಢ ನಂಬಿಕೆಗಳನ್ನು ಗಾಢವಾಗಿ ಅಪ್ಪಿಕೊಂಡಿರುವ ಪಂಥಗಳಾಗಿ ಒಡೆದಿವೆ. ಬುದ್ಧನ ಕಾಲಾನಂತರ ಹಲವು ಶತಮಾನಗಳ ಕಾಲ ಬುಧ್ಧನ ಮೂರ್ತಿಯೇ ಇರಲಿಲ್ಲ ಬುದ್ಧನನ್ನು ಸಂಕೇತಗಳಲ್ಲಿ ಪೂಜಿಸಲಾಗುತ್ತಿತ್ತು, ನಿಧಾನವಾಗಿ ಬುದ್ಧನನ್ನೂ ಆಲಯಗಳಲ್ಲಿ ಬಂಧಿಸಲಾಯಿತು. ಇಂದು ಈಗಾಗಲೇ ನಾವು ಅಂಬೇಡ್ಕರ್ ದೇವಾಲಯವನ್ನು ಕಟ್ಟಿ ಅರ್ಚಕನ್ನು ನೇಮಿಸಿದ್ದೇವೆ. ಆದ್ದರಿಂದ ಗೆಳೆಯರೆ ನಮಗೆ ಬೇಕಾಗಿರುವದು, ಅವೆಲ್ಲದರಿಂದ ಬೇರೆಯಾದ, ಅಂಬೇಡ್ಕರ್ ನಮಗೆ ದೊರಕಿಸಿಕೊಟ್ಟಿರುವ ಪ್ರಖರ ವಿಚಾರವಾದಿ ಬುದ್ಧ, ಬಯಲಿನಲ್ಲಿರುವ ಬುದ್ಧ. ಸ್ಥಾವರನಲ್ಲ- ನಮ್ಮನ್ನು ಬೆಳಕಿನತ್ತ ಕರೆದೊಯ್ಯಬಲ್ಲ ಜಂಗಮ ಬುಧ್ಧ.

ಬುದ್ಧನ ಬೆಳಕಿನಲ್ಲಿ ನಾವೆಲ್ಲ ಪ್ರಬುದ್ಧರಾಗಲು ಪ್ರಯತ್ನಿಸುವುದೇ ಅಂಬೇಡ್ಕರ್ ಅವರಿಗೆ ನಾವು ಸಲ್ಲಿಸಬಹುದಾದ ಅತಿ ದೊಡ್ಡ ಗೌರವ. ನಾವೆಲ್ಲ ಆ ದಿಕ್ಕಿನಲ್ಲಿ ಸಾಗೋಣ ಎಂದು ಹಾರೈಸುತ್ತಾ, ಅಂಬೇಡ್ಕರ್ ಜನ್ಮದಿನಾಚರಣೆಯ ದಿನದಂದು ನನ್ನನ್ನಿಲ್ಲಿಗೆ ಆಹ್ವಾನಿಸಿ, ಇಷ್ಟುಹೊತ್ತು ಆಲಿಸಿದ ನಿಮಗೆಲ್ಲರಿಗೂ ಕೃತಜ್ಞತೆಗಳು.

ಇಂಡಿಯಾದ ರಾಜಕಾರಣ, ರಾಜಕಾರಣಿಗಳು ಮತ್ತು ದಲಿತರು (೧೯೫೬ -೧೯೯೮)

ಮೂಲ : Oliver Mendelsohn & Marika Vicziany
ಅನುವಾದ : ಬಿ.ಶ್ರೀಪಾದ ಭಟ್

ಕಾಂಗ್ರೆಸ್‌ನ ಅಧಿಕಾರದ ಸಂದರ್ಭದಲ್ಲಿನ ದಲಿತ ರಾಜಕಾರಣ

ಸ್ವಾತಂತ್ರ ನಂತರ ಇಲ್ಲಿಯವರೆಗೆ (೧೯೯೮) ಕಾಂಗ್ರೆಸ್ ಸರ್ಕಾರದ ಆಡಳಿತದ ಅವಧಿಯಲ್ಲಿ ಐದು ಪ್ರಧಾನ ಮಂತ್ರಿಗಳು ಬ್ರಾಹ್ಮಣರಾಗಿದ್ದರು. ಕಾಂಗ್ರೆಸ್ಸೇತರ ಪಕ್ಷಗಳ ಅಧಿಕಾರವಿದ್ದಾಗ ಇಬ್ಬರು ಬ್ರಾಹ್ಮಣ ಮತ್ತು ಇಬ್ಬರು ರಜಪೂತ ಪ್ರಧಾನ ಮಂತ್ರಿಗಳಾಗಿದ್ದರು. ಇಬ್ಬರು ಪ್ರಧಾನ ಮಂತ್ರಿಗಳು ಶೂದ್ರರಾಗಿದ್ದರು.

೧೯೩೦, ೧೯೪೦ರ ದಶಕಗಳಲ್ಲಿ ಆಗಿನ ಕಾಂಗ್ರೆಸ್‌ನೊಂದಿಗೆ ದಲಿತ ಸಮುದಾಯದ ಬಾಂಧವ್ಯ ಸೌಹಾರ್ದಯುತವಾಗೇನು ಇರಲಿಲ್ಲ. ಆದರೆ ಸ್ವಾತಂತ್ರ ನಂತರದ ಭಾರತದಲ್ಲಿ ಅಂದರೆ ೧೯೫೨ರಿಂದ ೧೯೮೯ರವರೆಗೆ ದಲಿತರು ಮತ್ತು ಕಾಂಗ್ರೆಸ್ ನಡುವಿನ ಬಾಂಧವ್ಯ ಗಟ್ಟಿಗೊಳ್ಳತೊಡಗಿತು ಮತ್ತು ೧೯೭೭ರ ಸಾರ್ವತ್ರಿಕ ಚುನಾವಣೆಯನ್ನು ಹೊರತುಪಡಿಸಿದರೆ ದಲಿತರು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಕಾಂಗ್ರಸ್ ಪಕ್ಷದ ವೋಟ್ ಬ್ಯಾಂಕ್ ಆಗಿದ್ದರು. ಆಗ ಅವರ ಕಾಂಗ್ರೆಸ್ ಪರವಾಗಿ ನೀಡಿದ ಮತ ಪಾರ್ಟಿ ಮತ್ತು ಸರ್ಕಾರದ ಪರವಾಗಿ ನೀಡಿದ ಮತವಾಗಿತ್ತು. ಆದರೆ ಒಂದುವೇಳೆ ಕಮ್ಯ್ಠುನಿಷ್ಟರ ಪಶ್ಚಿಮ ಬಂಗಾಲ ಮತ್ತು ಕೇರಳವನ್ನು ಹೊರತುಪಡಸಿ ದೇಶದ ಇನ್ನಿತರ ರಾಜ್ಯಗಳಲ್ಲಿ ತನ್ನ ಪ್ರಭಾವವನ್ನು ಹೆಚ್ಚಸಿಕೊಂಡಿದ್ದರೆ ದಲಿತರು ಮತ್ತು ಕಾಂಗ್ರಸ್ ಪಕ್ಷದ ನಡುವಣ ಸಂಬಂಧ ಈಗಿನಂತಿರುತಿರಲಿಲ್ಲ ಬದಲಾಗಿ ಕುಂಠಿತಗೊಳ್ಳುತ್ತಿತ್ತು. ೧೯೫೨ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಸೋಷಿಯಲಿಷ್ಟರು ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲಿ ಗಮನಾರ್ಹ ಸಂಖ್ಯೆಯಲ್ಲಿ ಪರಿಶಿಷ್ಟ ಜಾತಿಗಳ ಮತಗಳನ್ನು ಗಳಿಸಿದ್ದರು. periyar-ambedkarಇಂದಿಗೂ ಇಂಡಿಯಾದ ಬಹುತೇಕ ರಾಜ್ಯಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು ಕಾಂಗ್ರೆಸ್ ಪಕ್ಷದ ಪ್ರಮುಖ ಓಟ್ ಬ್ಯಾಂಕ್ ಆಗಿದ್ದರೂ ಕಾಂಗ್ರೆಸ್ಸೇತರ ಪಕ್ಷಗಳು ಅಧಿಕಾರವಿರುವ ರಾಜ್ಯಗಳಲ್ಲಿನ ವಸ್ತುಸ್ತಿತಿ ಬೇರೆಯದೇ ಇದೆ. ಉದಾಹರಣೆಗೆ ಮತ್ತೊಂದು ರಾಜಕೀಯ ಪಕ್ಷ ಅಥವಾ ಕಾಂಗ್ರೆಸ್ ವಿರೋಧಿ ಹೋರಾಟಗಳನ್ನು ನಡೆಸಿದ ಪ್ರಾದೇಶಿಕ ಪಕ್ಷಗಳನ್ನು ಹೊಂದಿದಂತಹ ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ಮತ್ತು ಆಂಧ್ರ ಪ್ರದೇಶ ರಾಜ್ಯಗಳನ್ನೇ ಅವಲೋಕಿಸಿದರೆ ಪಶ್ಚಿಮ ಬಂಗಾಳ, ಕೇರಳದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು ರಾಜಕೀಯವಾಗಿ ಕಮ್ಯುನಿಷ್ಟರೊಂದಿಗೆ ಗುರುತಿಸಿಕೊಂಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಎಪ್ಪತ್ತರ ದಶಕದ ನಂತರ ದಲಿತರ ರಾಜಕೀಯ ಐಡೆಂಟಿಟಿ ಜಾತಿಗಳು ಮತ್ತು ವರ್ಗಗಳಾಗಿ ಕಾಂಗ್ರೆಸ್ ಮತ್ತು ಕಮ್ಯುನಿಷ್ಟರ ನಡುವೆ ಹಂಚಿ ಹೋದರೆ ಕೇರಳದಲ್ಲಿ ಪರಿಶಿಷ್ಟ ಜಾತಿಗಳು ವರ್ಗಗಳಾಗಿ ಕಮ್ಯುನಿಷ್ಟರ ಕೌನ್ಸಿಲ್‌ಗಳಲ್ಲಿ ಪ್ರತಿನಿಧಿಸಿದ್ದು ಕಡಿಮೆಯಾದರೂ ಪಶ್ಚಿಮ ಬಂಗಾಳಕ್ಕಿಂತಲೂ ಹತ್ತು ವರ್ಷಗಳ ಮುಂಚೆಯೇ ಅಧಿಕಾರದ ಮೆಟ್ಟಿಲನ್ನು ತುಳಿದಿದ್ದರು. ಅಂದರೆ ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ದಲಿತರು ಆಗಿನ ಆ ಎರಡು ರಾಜ್ಯಗಳಲ್ಲಿ ಬಹುಮತವಿರುವಂತಹ ಪಕ್ಷದೊಂದಿಗೆ ತಮ್ಮನ್ನು ಗುರುತಿಸಿಕೊಂಡಿದ್ದರೇ ಹೊರತಾಗಿ ರಾಜಕೀಯವಾಗಿ ತಮ್ಮದೇ ಆದ ಹೊಸ ಐಡೆಂಟಿಟಿಗಾಗಿ ಹುಡುಕಾಟ ನಡೆಸಿದ್ದು ಇಲ. ಏಕೆಂದರೆ ರಾಜಕೀಯ ಮತ್ತು ಸಾಂಸ್ಕೃತಿಕ ಪರಿಧಿಯೊಳಗಿನ ತಮ್ಮ ಸ್ಥಾನಮಾನಗಳ ಮಿತಿಗಳನ್ನು ಆಧರಿಸಿಯೇ ಐಡೆಂಟಿಯನ್ನು ಕಂಡುಕೊಂಡಿದ್ದರೇ ವಿನಹಃ ಮಾರ್ಕ್ಸಿಸಂ ಕುರಿತಾದ ವ್ಯಾಮೋಹದಿಂದಂತೂ ಖಂಡಿತ ಅಲ್ಲ.

ತಮಿಳುನಾಡು ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ರಾಜಕೀಯದಲ್ಲಿ ಪ್ರಾಮುಖ್ಯತೆ ಪಡೆದುಕೊಳ್ಳತೊಡಗಿದವು. ತಮಿಳು ನಾಡಿನಲ್ಲಿ ಬ್ರಾಹ್ಮಣ ವಿರೋಧಿ ಚಳುವಳಿಯು ಮೊದಲು ಜಸ್ಟೀಸ್ ಪಾರ್ಟಿ ನಂತರ ದ್ರಾವಿಡ ಮುನ್ನೇತ್ರ ಕಳಗಂದಂತಹ ಪ್ರಾದೇಶಿಕ ಪಕ್ಞಗಳಿಗೆ ಜನ್ಮ ನೀಡಿತು. ಬ್ರಾಹ್ಮಣ ವಿರೋಧಿ ಚಳುವಳಿಯು ಈ ಡಿಎಂಕೆ ಪಕ್ಷದೊಂದಿಗೆ ಬೆರೆತು ಹೋಗಿ ಹೊಸ ಬಗೆಯ ಸಾಂಸ್ಕೃತಿಕ ಹುಟ್ಟಿಗೆ ಕಾರಣವಾಯ್ತು. ನಂತರ ಡಿಎಂಕೆ ಒಡೆದು ಎಐಡಿಎಂಕೆ ಪಕ್ಷವಾಗಿ ಇಬ್ಭಾಗವಾದಾಗಲೂ ಸಹ ಈ ಬ್ರಾಹ್ಮಣ ವಿರೋಧಿ ಚಳುವಳಿ ಸ್ಥಗಿತಗೊಳ್ಳದೆ ಇವೆರೆಡೂ ಪಕ್ಷಗಳ ನಡುವೆ ಹಂಚಿಹೋಯಿತು. ಹೀಗಾಗಿ ಡಿಎಂಕೆ ಮತ್ತು ಎಐಡಿಎಂಕೆ ನಡುವೆ ರಾಜಕೀಯ ವೈರತ್ವವಿದ್ದರೂ ಅವರ ಅಜೆಂಡಗಳು ಮಾತ್ರ ಸಮಾನ ನೆಲೆಯಲ್ಲಿಯೇ ಹುದುಗಿದ್ದವು. ಏಕೆಂದರೆ ೧೯೨೦ರ ದಶಕದಲ್ಲಿಯೇ ಈ ಬ್ರಾಹ್ಮಣ ವಿರೋಧಿ ಚಳುವಳಿಯಿಂದ ಹೊರಬಂದು ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದ ದಲಿತರು ೧೯೬೦ರವರೆಗೂ ತಮ್ಮ ಈ ರಾಜಕೀಯ ನಿಲುವನ್ನು ಬದಲಿಸಿರಲಿಲ್ಲ. ೧೯೬೦ರ ದಶಕದ ನಂತರ ಡಿಎಂಕೆ ಒಂದು ರಾಜಕೀಯ ಪಕ್ಷವಾಗಿ ಚುನಾವಣಾ ಕಣಕ್ಕೆ ಧುಮುಕಿದ ನಂತರವಷ್ಟೇ ಅದರ ಕಡೆಗೆ ವಾಲತೊಡಗಿದರು. ಆದರೂ ಎಂಭತ್ತರ ದಶಕದವರೆಗೂ ರಾಜ್ಯ ಚುನಾವಣೆಗಳಲ್ಲಿ ದ್ರಾವಿಡ ಮುನ್ನೇತ್ರ ಪಕ್ಷಗಳಿಗೂ ಕೇಂದ್ರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಓಟ್ ಹಾಕುತಿದ್ದರು. ತೊಂಬತ್ತರ ದಶಕದಲ್ಲಿ ಈ ಸಂಪ್ರದಾಯವನ್ನು ಮುರಿದರು.

ಪಕ್ಕದ ಆಂದ್ರ ಪ್ರದೇಶದಲ್ಲಿ ಎನ್.ಟಿ.ರಾಮರಾವ್ ನೇತೃತ್ವದ ಟಿಡಿಪಿ ಪಕ್ಷ ಅಧಿಕಾರಕ್ಕೆ ಬಂದರೂ ಅದರ ಮೂಲಭೂತ ಅಜೆಂಡ ತೆಲುಗು ಜನರ ಆತ್ಮಾಭಿಮಾನದ ಪ್ರಶ್ನೆಯಾಗಿತ್ತು. ಎನ್.ಟಿ.ರಾಮರಾವ್ ಅವರ ಸಿನಿಮಾ ನಟನ ಆಕರ್ಷಣೆ ಮತ್ತು ಜನಪ್ರಿಯತೆಯ ಮೇಲೆಯೇ ಆ ಪಕ್ಷಕ್ಕೆ ದಲಿತರ ಮತಗಳು ದೊರಕಿದ್ದು. ಆದರೆ ಪಕ್ಕದ ತಮಿಳುನಾಡಿಗೆ ಹೋಲಿಸಿದರೆ ಚುನಾವಣಾ ರಾಜಕೀಯದಲ್ಲಿ ಕ್ರಮೇಣ ತೆಲುಗುದೇಶಂ ಪಕ್ಷದ ಪ್ರಭಾವವು ಕುಂಠಿತಗೊಂಡಿದೆ. (ಇದು ೯೦ರ ದಶಕದ ಅವಲೋಕನ : ಅನುವಾದಕ)

ತಳಸಮುದಾಯಗಳ ಪ್ರಾಮುಖ್ಯತೆ ಮತ್ತು ಓಟ್ ಬ್ಯಾಂಕ್ ಸಾಮರ್ಥ್ಯ ಕಾಂಗ್ರೆಸ್‌ನ ಪಕ್ಷದೊಳಗೆ ಮತ್ತು ಮಂತ್ರಿಮಂಡಲದಲ್ಲಿ ದಲಿತ ರಾಜಕಾರಣಿಗಳಿಗೆ ವೈಯುಕ್ತಿಕವಾಗಿ ಪ್ರಭಾವವನ್ನು ಹೆಚ್ಚಿಸಲಿಲ್ಲ ಮತ್ತು ಬಲು ದೊಡ್ಡ ಪರಿವರ್ತನೆಯನ್ನು ತಂದು ಕೊಡಲಿಲ್ಲ. ದಲಿತ ಸಮುದಾಯದ ಸಂಸದರು ಅಥವಾ ಮಂತ್ರಿಗಳ ವೈಯುಕ್ತಿಕ ಸಾಧನೆಗಳು ಮತ್ತು ವರ್ಚಸ್ಸಿಗಿಂತಲೂ ಆ ಪಕ್ಷದಲ್ಲಿ ಓಟ್ ಬ್ಯಾಂಕ್‌ನ ಚುನಾವಣಾ ರಾಜಕೀಯದ ಲೆಕ್ಕಾಚಾರಗಳೇ ಮೇಲುಗೈ ಸಾಧಿಸಿ ದಲಿತ ರಾಜಕಾರಣಿಗಳ ಪ್ರಾಮುಖ್ಯತೆಯೇ ಗೌಣಗೊಂಡಿತು. ಉದಾಹರಣೆಗೆ ಐವತ್ರರ ದಶಕದಲ್ಲಿ ಮೂರು ಬಾರಿ ಸೀಮಿತ ಅವಧಿಗೆ ಬಿಹಾರ್ ರಾಜ್ಯದ ಮುಖ್ಯಮಂತ್ರಿಯಾಗಿದ್ದ ದಲಿತ ನಾಯಕ ಭೋಲೆ ಪಾಸ್ವಾನ್ ಶಾಸ್ತ್ರಿ ಅವರು ತಮ್ಮ ಪರಿಶುದ್ಧ ರಾಜಕಾರಣ, ಸರಳತೆ, ಘನತೆವೆತ್ತ ವ್ಯಕ್ತಿತ್ವದಿಂದ ಪಕ್ಷದಲ್ಲಿ ಮತ್ತು ರಾಜ್ಯದಲ್ಲಿ ಮನ್ನಣೆ ಗಳಿಸಿದ್ದರು. ಆದರೆ ರಾಜ್ಯದ ದಲಿತ ರಾಜಕಾರಣದ ಸಂಬಂಧದಲ್ಲಿ ಅವರು ತಳಮಟ್ಟದಲ್ಲಿ, ಪಕ್ಷದ ಕಾರ್ಯಕರ್ತರ ನೆಲೆಯಲ್ಲಿ ಪ್ರಭಾವ ಬೀರಲಿಲ್ಲ. ಅಥವಾ ಪ್ರಭಾವಶಾಲಿಯಾಗಲು ಅವಕಾಶವೇ ಇರಲಿಲ್ಲ. ಇದೇ ರೀತಿ ಇತರೇ ಕೆಲವು ದಲಿತ ಮಂತ್ರಿಗಳು ರಾಜಕೀಯವಾಗಿ ಮುಂಚೂಣಿಗೆ ಬರಲಿಲ್ಲ.

ದಲಿತ ರಾಜಕಾರಣಿಗಳು ತಮ್ಮ ಸಬಲ್ಟ್ರಾನ್ ನೆಲೆಯನ್ನು ಮೀರಿ ಸ್ವಂತ ಪ್ರತಿಭೆ ಮತ್ತು ಪರಿಶ್ರಮದಿಂದ ಶಿಕ್ಷಣವನ್ನು ಪಡೆದು ಶ್ರೇಣೀಕೃತ ವ್ಯವಸ್ಥೆಯೊಳಗೆ ಮೇಲ್ಜಾತಿಯವರೊಂದಿಗೆ ಸರಿಸಮನಾಗಿ ಸ್ಪರ್ಧಿಸತೊಡಗಿದಾಗಲೂ ರಾಜಕೀಯವಾಗಿ ಸವರ್ಣೀಯರ ಮತ್ತು ದಲಿತರ ನಡುವಿನ ಕಂದಕವನ್ನು ಮಾತ್ರ ಮುಚ್ಚಲಾಗಲಿಲ್ಲ. ಉನ್ನತ ಸ್ಥಾನಗಳಲ್ಲಿ ಇಂದಿಗೂ ಮೇಲ್ಜಾತಿಗಳ ಪ್ರಮಾಣ, ಪ್ರಭಾವ ಮೇಲುಗೈ ಸಾಧಿಸಿದೆ. ಒಂದು ವೇಳೆ ಪಕ್ಷದ ಚೌಕಟ್ಟಿನೊಳಗೆ ತನ್ನ ಸಮುದಾಯದ ಹಿತಾಸಕ್ತಿಗಳಿಗಾಗಿ, ಅವರ ಒಳಿತಿಗಾಗಿ ವಕಾಲತ್ತು ವಹಿಸುತ್ತ ದಲಿತ ರಾಜಕಾರಣಿ ನಿರಂತರವಾಗಿ ಕಾರ್ಯಪ್ರವೃತ್ತನಾಗಿದ್ದರೆ, ಅವರ ಪರವಾಗಿ ಸದಾ ಧ್ಯಾನಿಸುತ್ತಿದ್ದರೆ ಪಕ್ಷದೊಳಗೆ ಆತನ ರಾಜಕೀಯ ಬೆಳವಣಿಗೆ ಹೆಚ್ಚೂ ಕಡಿಮೆ ಮುಗಿದ ಕಥೆಯಾಗುತಿತ್ತು. ಉದಾಹರಣೆಯಾಗಿ ಯೋಗೇಂದ್ರ ಮಕ್ವಾನ ಅವರ ರಾಜಕೀಯ ಜೀವನವನ್ನೇ ವಿಶ್ಲೇಷಣೆ ಮಾಡಬಹುದು. ಪ್ರತಿಭಾವಂತ ಮತ್ತು ಚೈತನ್ಯಶೀಲ ದಲಿತ ರಾಜಕಾರಣಿಯಾಗಿದ್ದ ಯೋಗೇಂದ್ರ ಮಕ್ವಾನ ಅವರು ತಳಸಮುದಾಯಗಳ ಬದುಕನ್ನು ಕಾಂಗ್ರೆಸ್ ರಾಜಕಾರಣದೊಂದಿಗೆ ಹೇಗೆ ಬೆಸೆಯಬೇಕೆಂಬುದಕ್ಕೆ ಹೆಚ್ಚು ಒತ್ತು ಕೊಟ್ಟಿದ್ದ ಕಾರಣಕ್ಕಾಗಿಯೇ ಇಂದಿರಾ ಗಾಂಧಿ ಮತ್ತು ರಾಜೀವ ಗಾಂಧಿಯವರ ನಾಯಕತ್ವದ ಅಡಿಯಲ್ಲಿ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರೂ ರಾಜಕೀಯವಾಗಿ ಪ್ರಾಮುಖ್ಯತೆ ದಕ್ಕಲೇ ಇಲ್ಲ. ಆದರೆ ಇವರ ಸಮಕಾಲೀನರಾದ ಬೂಟಾಸಿಂಗ್ ಅವರು a Mazhabi Sikh (converted from a Sweeper caste) ಇದೇ ಇಂದಿರಾ ಗಾಂಧಿ ಮತ್ತು ರಾಜೀವ ಗಾಂಧಿಯವರ ನಾಯಕತ್ವದ ಅಡಿಯಲ್ಲಿ ಗೃಹಮಂತ್ರಿಗಳಾಗಿ ನಂ ೨ ಸ್ಥಾನದಲ್ಲಿ ಕಾರ್ಯ ನಿರ್ವಹಿಸಿದ್ದರು. ಬೂಟಾಸಿಂಗ್ ಅವರು ತಳ ಸಮುದಾಯಗಳ ಒಳಿತಿಗಾಗಿ ಒಂದು ಪದವನ್ನೂ ಉದ್ಗರಿಸಲಿಲ್ಲ, ಬದಲಾಗಿ ನೆಹರೂ-ಗಾಂಧಿ ವಂಶಕ್ಕಾಗಿ ತೋರಿದ ಅಚಲ ನಿಷ್ಠೆ ಮತ್ತು ನಿರಂತರ ಭಟ್ಟಂಗಿತನಕ್ಕಾಗಿ ಎಲ್ಲ ಬಗೆಯ ರಾಜಕೀಯ ಸವಲತ್ತುಗಳನ್ನು ಗೃಹ ಮಂತ್ರಿಯಂತಹ ಅತ್ಯನ್ನತ ಸ್ಥಾನವನ್ನು ಸಹ ಅಲಂಕರಿಸಿದರು. ಅಷ್ಟೇಕೆ ಈ ನೆಹರೂ-ಗಾಂಧಿ ವಂಶದವರೂ ಸಹ ರಾಜಕಾರಣಿಯೊಬ್ಬ ವೈಯುಕ್ತಿಕ ವರ್ಚಸ್ಸಿನಿಂದ, ತನ್ನ ಜನಪ್ರಿಯತೆಯ ಆಧಾರದಿಂದ ಪಕ್ಷದೊಳಗೆ ಬೆಳೆಯುತ್ತಿದ್ದರೆ ಆತನ ಭವಿಷ್ಯವನ್ನು ಮೊಟಕುಗೊಳಿಸುವಂತಹ ಷಡ್ಯಂತ್ರಕ್ಕೆ ಹೆಚ್ಚು ಒತ್ತು ನೀಡುತ್ತಿದ್ದರು. ಕಾಂಗ್ರಸ್ ಪಕ್ಷದ ಈ ಅನಧಿಕೃತ ಪ್ರಣಾಳಿಕೆಗಳು ಮತ್ತು ಜಮೀನ್ದಾರಿ ಐಡಿಯಾಲಜಿಗಳು ತಳ ಸಮುದಾಯದವರಿಗೆ ಪಕ್ಷದೊಳಗೆ ಅಂತರಿಕವಾಗಿ ಮೇಲ್ಮುಖ ಚಲನೆಗೆ ಇರುವ ವಿವಿದ ಅವಕಾಶಗಳನ್ನು ನಿರಾಕರಿಸಿದ್ದವು. ಇದರಿಂದಾಗಿಯೇ ದಲಿತ ರಾಜಕಾರಣಿಗಳು ಪಕ್ಷದೊಳಗಿನ ಮೇಲ್ಜಾತಿ ರಾಜಕಾರಿಣಿಗಳ ಅಂತರಿಕ ಭಿನ್ನಮತದ ಹಿನ್ನೆಲೆಯಲ್ಲಿ ಅವರ ಪರ ಮತ್ತು ವಿರೋಧದ ಗುಂಪಿನಲ್ಲಿ ತಮ್ಮ ರಾಜಕೀಯ ಭವಿಷ್ಯವನ್ನು ಕಟ್ಟಿಕೊಂಡರು. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತೀಯ ದಲಿತ ರಾಜಕಾರಣಿಯನ್ನಾಗಲಿ, ಗುಂಪನ್ನಾಗಲೀ ಕಾಣಲೇ ಇಲ್ಲ. ಇದನ್ನು ಊಹಿಸಲೂ ಸಾಧ್ಯವಿಲ್ಲ

ಆದರೆ ಜಗಜೀವನ ರಾಂ ಅವರು ಇದಕ್ಕೆ ಅಪವಾದ. ಅವರು ದಲಿತ ನಾಯಕರಾಗಿ ಮತ್ತು ಸಮರ್ಥ ಕೇಂದ್ರ ಮಂತ್ರಿಯಾಗಿ ವೈಯುಕ್ತಿಕ ನೆಲೆಯಲ್ಲಿ ಜನಪ್ರಿಯತೆಯನ್ನು ಹೊಂದಿದ್ದರು. ನೆಹರೂ ಮಂತ್ರಿಮಂಡಲದಲ್ಲಿ ರಕ್ಷಣಾ ಮಂತ್ರಿಗಳಾಗಿ ಕಾರ್ಯ ನಿರ್ವಹಿಸಿದ್ದರು. ೧೯೭೯ರ ಚರಣಸಿಂಗ್ ಸರ್ಕಾರದಲ್ಲಿ ಉಪಪ್ರಧಾನ ಮಂತ್ರಿಗಳಾಗಿದ್ದರು. ಜಗಜೀವನ್ ರಾಂ ಅವರು ಕಾಂಗ್ರೆಸ್ ಪಕ್ಷದೊಳಗೆ ಸುಮಾರು ಮೂವತ್ತು ವರ್ಷಗಳ ಕಾಲ ಅತ್ಯಂತ ಪ್ರಮುಖ ಹಾಗೂ ಪ್ರಭಾವಶಾಲಿ ರಾಜಕಾರಣಿಗಳಾಗಿದ್ದರು. ಇದಕ್ಕೆ ಅವರ ವೈಯುಕ್ತಿಕ ಪರಿಶ್ರಮ ಮತ್ತು ಪ್ರತಿಭೆಯ ಮತ್ತು ನಿರಂತರ ಜನಸಂಪರ್ಕದ ಚಟುವಟಿಕಗಳು ಒಂದು ಕಾರಣವಾಗಿದ್ದರೆ ಕಾಂಗ್ರೆಸ್‌ನೊಂದಿಗಿನ ಆ ಸುಧೀರ್ಘ ಒಡನಾಟದಲ್ಲಿ ಪಕ್ಷದೊಳಗೆ ಯಾವುದೇ ಬಗೆಯ ಭಿನ್ನಮತೀಯ ರಾಜಕಾರಣಕ್ಕೆ ಕೈ ಹಾಕಲಿಲ್ಲ ಮತ್ತು ವಿವಾದಗಳಿಗೆ ಸಿಲುಕಿಕೊಳ್ಳಲಿಲ್ಲ ಮತ್ತು ಮಹಾತ್ವಾಕಾಂಕ್ಷೆ ರಾಜಕಾರಣಕ್ಕೆ ಕಡಿವಾಣ ಹಾಕಿದ್ದರು ಎನ್ನುವ ಅಂಶಗಳೂ ಸಹ ಪ್ರಮುಖ ಕಾರಣಗಳು. ಇವೆರಡೂ ಗುಣಗಳು ಮತ್ತು ಜಗಜೀವನ್ ರಾಂ ಅವರ ದಕ್ಷ ಮಂತ್ರಿಯಾಗಿ ಅವರ ಸಾಧನೆಗಳು ಕಾಂಗ್ರೆಸ್ ಪಕ್ಷವು ಅವರನ್ನು ತಮ್ಮ ಪಕ್ಷದ ದಲಿತ ಮುಖವಾಡವನ್ನಾಗಿ ಬಿಂಬಿಸಲು ಪ್ರೇರೇಪಿಸಿತ್ತು

ಸ್ವಾತಂತ್ರಪೂರ್ವ ಕಾಲದಲ್ಲಿ ೩೦ರ ದಶಕದಲ್ಲಿ ಜಗಜೀವನ ರಾಂ ಅವರು ಗಾಂಧಿಯವರ ಹರಿಜನ ಚಳುವಳಿಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದರು. ೧೯೩೫ರಲ್ಲಿ The All-India Depressed Classes League ನ ಅಧ್ಯಕ್ಷರಾಗಿ ಆಯ್ಕೆ ಆಗಿದ್ದ ಜಗಜೀವನರಾಂ ಅವರು ೧೯೩೭ರಲ್ಲಿ ಬಿಹಾರ್‌ನ ವಿಧಾನಸಭೆಗೆ ಶಾಸಕರಾಗಿ ಚುನಾಯಿತರಾದರು. ೧೯೪೬ರಲ್ಲಿ Viceroy’s Executive Council ನಲ್ಲಿ ಕಾರ್ಮಿಕ ಮಂತ್ರಿಯಾಗಿದ್ದರು. ಅಂದಿನಿಂದ ೧೯೮೦ರಲ್ಲಿ ಜನತಾ ಪಕ್ಷ ಪತನದವರೆಗೂ ಸುಮಾರು ನಲವತ್ತು ವರ್ಷಗಳ ಕ್ಯಾಬಿನೆಟ್ ಮಂತ್ರಿಯಾಗಿದ್ದರು. ಒಮ್ಮೆ ಮಂತ್ರಿಯಾದ ನಂತರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಜೆಂಡಾವನ್ನು ಒಂದು ಅಸ್ಮಿತೆಯನ್ನಾಗಿ, ಒಂದು ಅಗತ್ಯವಾದ ಚರ್ಚೆಯನ್ನಾಗಿ ಜಗಜೀವನರಾಂ ತೀವ್ರವಾಗಿ ಮಾಡಲಿಲ್ಲ. ಇವರ ಈ ಜಾತಿ ಸಂಕೀರ್ಣತೆ ಮತ್ತು ಶೋಷಣೆಯ ಕುರಿತಾಗಿ ತಮ್ಮ ಪುಸ್ತಕ Caste Challenge in India ದಲ್ಲಿ ಹೀಗೆ ಬರೆಯುತ್ತಾರೆ: “Not to hurt any class or caste but to provide a brief historical account of the Hindu social system… and the miserable condition of the Scheduled Castes and Tribes” (Ram 1980: 5-6).

ಬಾಬು ಜಗಜೀವನ ರಾಂ ಅವರು ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರವನ್ನು ತಮ್ಮ ಬಳಿ ಕೋಢೀಕರೆಸಿಕೊಂಡಿದ್ದರೆಂಬುದಕ್ಕೆ, ಅವರೊಬ್ಬ ಪ್ರಭಾವಿಶಾಲಿ ರಾಜಕೀಯ ನಾಯಕರಾಗಿದ್ದರೆಂಬುದಕ್ಕೆ ಮಹತ್ವದ ವಿಶ್ಲೇಷಣೆಗಳು ದೊರಕುತ್ತಿಲ್ಲ. ಆದರೆ ನೆಹರೂ ನಂತರದ ವರ್ಷಗಳಲ್ಲಿ ಜಗಜೀವನ ರಾಂ ಅವರು ಕಾಂಗ್ರೆಸ್ ಪಕ್ಷದ ಅತ್ಯಂತ ಸಂಧಿಗ್ಧ ಪರಿಸ್ಥಿತಿಗಳನ್ನು ನಿಭಾಯಿಸುತ್ತಾರೆ. ೧೯೬೬ರಲ್ಲಿ ಪ್ರಧಾನ ಮಂತ್ರಿ ಅಭ್ಯರ್ಥಿಯನ್ನಾಗಿ ಸ್ಪರ್ಧಿಸಿದ ಇಂದಿರಾ ಗಾಂಧಿಯವರಿಗೆ ಬೆಂಬಲ ವ್ಯಕ್ತಪಡಿಸುತ್ತಾರೆ. ೧೯೬೯ರಲ್ಲಿ ಕಾಂಗ್ರೆಸ್ ಪಕ್ಷ ವಿಭಜನೆಗೊಂಡಾಗ ಇಂದಿರಾ ಅವರ ಬೆಂಬಲಕ್ಕೆ ನಿಲ್ಲುತ್ತಾರೆ. ಬಾಬುರವರ ಇಂದಿರಾ ಕಾಂಗ್ರೆಸ್‌ನೊಂದಿಗಿನ ವಿಶ್ವಾಸ ೧೯೭೭ರವೆರೆಗೂ ಮುಂದುವರೆಯುತ್ತದೆ. ರಾಜಕೀಯ ವಿಶ್ಲೇಷಕರ ಪ್ರಕಾರ ಕಾಂಗ್ರೆಸ್ ಪಕ್ಷದಲ್ಲಿ ಬಿಹಾರ ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳ ಆಯ್ಕೆಯಲ್ಲಿ ಬಾಬುರವರು ಸಂಪೂರ್ಣ ಅಧಿಕಾರವನ್ನು ಪಡೆದಿದ್ದರು. ಅವರ ಈ ಅಧಿಕಾರ ಪಕ್ಕದ ಉತ್ತರ ಪ್ರದೇಶಕ್ಕೂ ವ್ಯಾಪಿಸಿತ್ತು ಎಂದೇ ವ್ಯಾಖ್ಯಾನಿಸುತ್ತಾರೆ. ಅವರ ಚಮ್ಮಾರ ಸಮುದಾಯವು ಉತ್ತರ ಭಾರತದಲ್ಲಿ ಬಹುಸಂಖ್ಯಾತ ಪರಿಶಿಷ್ಟ ಜಾತಿಗಳಲ್ಲೊಂದಾಗಿತ್ತು. ಇದರ ಫಲವಾಗಿ ಅನೇಕ ಸಂದರ್ಭಗಳಲ್ಲಿ ಉತ್ತರ ಭಾರತದ ಬಹುಪಾಲು ದಲಿತ ಸಂಸದರು ರಾಜಕೀಯವಾಗಿ ಬಾಬುರವರು ಅನುಯಾಯಿಗಳಾಗಿದ್ದರು ಮತ್ತು ಅನೇಕ ಕ್ಲಿಷ್ಟ ಪರಿಸ್ಥತಿಗಳಲ್ಲಿ ಬಾಬುರವರ ಸಮರ್ಥಕರಾಗಿ ಅವರನ್ನು ಬೆಂಬಲಿಸುತ್ತಿದ್ದರು. ಬಾಬು ಜಗಜೀವನ ರಾಂ ಅವರು ತಮ್ಮ ಈ ಪ್ರಭಾವವನ್ನು ಬಳಸಿಕೊಂಡು ಕಾಂಗ್ರೆಸ್ ಪಕ್ಷದೊಳಗಿನ ಅನೇಕ ಆತಂಕದ ಪರಿಸ್ಥಿತಿಗಳನ್ನು ಸಮರ್ಥವಾಗಿ ನಿಭಾಯಿಸಿದ್ದರು ಮತ್ತು ಇಂದಿರಾ ಗಾಂಧಿಯವರನ್ನು ಕೂಡ ಈ ಕ್ಲಿಷ್ಟ ಸಂದರ್ಭಗಳಿಂದ ಹೊರ ಬರಲು ನೆರವಾಗಿದ್ದರು. ರೇಲ್ವೆ ಮಂತ್ರಿಗಳಾಗಿದ್ದಾಗ ರೈಲ್ವೇ ಕಾರ್ಮಿಕರ ಮಟ್ಟದಲ್ಲಿ ದಲಿತರ workforce ಅನ್ನು ಕಟ್ಟಿದ್ದರು. ಇತರೇ ಖಾತೆಗಳ ಮಂತ್ರಿಗಳಾಗಿದ್ದಾಗಲೂ ಮೀಸಲಾತಿ ಕೋಟಾದ ಅಡಿಯಲ್ಲಿ ಬರುವ ಕಾನೂನಿಗೆ ಅನುಗುಣವಾದ ನೇಮಕಾತಿಗಳನ್ನು ನ್ಯಾಯಬದ್ಧವಾದ ನಡೆಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ೧೯೭೭ರಲ್ಲಿ ಕಾಂಗ್ರೆಸ್ ಪಕ್ಷವನ್ನು ತೊರೆದ ನಂತರ ಒಬ್ಬನೇ ಒಬ್ಬ ದಲಿತ ಸಂಸದ ಕೂಡ ಬಾಬುರವರನ್ನು ಹಿಂಬಾಲಿಸಲಿಲ್ಲ. ನಂತರ ಜನತಾ ಪಕ್ಷವನ್ನು ಸೇರಿಕೊಂಡರು. ಆದರೆ ಮರಳಿ ೧೯೮೦ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಅತ್ಯಧಿಕ ದಲಿತರ ಮತಗಳನ್ನು ಗಳಿಸುವುದನ್ನು ತಡೆಯುವಲ್ಲಿ ಸೋತರು. ಇದಕ್ಕೆ ಉತ್ತರ ಹುಡುಕುವುದು ಕಷ್ಟ. ಬಹುಶಃ ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಬಾಬುರವರು ದಲಿತ ಸಂಸದರನ್ನೊಳಗೊಂಡ ತಮ್ಮದೇ ಆದ ಒಂದು ಪ್ರಭಾಶಾಲಿ ತಂಡವನ್ನು ಕಟ್ಟಿಕೊಳ್ಳದೇ ಹೋದದ್ದು ಇದಕ್ಕೆ ಮೂಲಭೂತ ಕಾರಣವಿರಬಹುದು.

ಅಂಬೇಡ್ಕರ್ ನಂತರದ ದಲಿತರು ಮತ್ತು ಅಂಬೇಡ್ಕರ್‌ವಾದ

ಬಹುಜನ ಸಮಾಜ ಪಕ್ಷವು ಇಂಡಿಯಾದಲ್ಲಿ ರಾಜಕೀಯ ಪಕ್ಷವಾಗಿ ಪ್ರವೇಶ ಪಡೆಯುವವರೆಗೂ “ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯ” ( ಆರ್‌ಪಿಐ) ಪಕ್ಷವೊಂದೇ ದಲಿತರ ಹಿತಾಸಕ್ತಿಯನ್ನೇ ಪ್ರಮುಖವಾದ ಅಜೆಂಡವಾಗುಳ್ಳ ರಾಜಕೀಯ ಪಕ್ಷವಾಗಿತ್ತು. ಕಾಂಗ್ರೆಸ್ ತೊರೆದ ನಂತರ ಅಂಬೇಡ್ಕರ್ ಅವರು ತಮ್ಮ ಕಡೆಯ ರಾಜಕೀಯ ಚಳುವಳಿಯನ್ನು ರೂಪಿಸಿದ್ದು ಈ ಆರ್‌ಪಿಐ ಪಕ್ಷವನ್ನು ಸ್ಥಾಪಿಸುವುದರ ಮೂಲಕ. ಆದರೆ ಅಂಬೇಡ್ಕರ್ Young_Ambedkarಅವರ ನಿಧನದ ನಂತರವಷ್ಟೇ ಈ ಆರ್‌ಪಿಐ ಪಕ್ಷದ ಗಮನಾರ್ಹ ಬೆಳವಣಿಗೆಯನ್ನು ಸಾಧಿಸತೊಡಗಿತು. “ಪರಿಶಿಷ್ಟ ಜಾತಿಗಳ ಒಕ್ಕೂಟ”ವೇ ರೂಪಾಂತರಗೊಂಡು “ಆರ್‌ಪಿಐ” ಪಕ್ಷವಾಗಿ ಹುಟ್ಟು ಪಡೆಯಿತು. ಆದರೆ ತನ್ನ ಪ್ರಾರಂಭದ ದಿನಗಳಿಂದಲೆ ಆರ್‌ಪಿಐ ಪಕ್ಷವು ಐಡಿಯಾಲಜಿ, ಭಿನ್ನಮತೀಯತೆಗಳಂತಹ ಆರ್ಗನೈಸೇಷನ್ ಬಿಕ್ಕಟ್ಟಿಗೆ ತುತ್ತಾಯಿತು. ಬಹುಪಾಲು ಮಹರ್ ಸಮುದಾಯಕ್ಕೆ ಸೇರಿದ ವಿಶಾಲ ವ್ಯಾಪ್ತಿಯ ಆರ್ಥಿಕ ಮತ್ತು ವರ್ಗ ಸಂಘರ್ಷವನ್ನು ಆಧರಿಸಿ ಸಂಘಟನೆ ಕಟ್ಟಲು ಮುಂದಾಗಿದ್ದ ಹಳ್ಳಿಗಳಲ್ಲಿ ವಾಸಿಸುವ ಹಳೆ ತಲೆಮಾರಿನ ಕಾರ್ಯಕರ್ತರಿಗೂ ಮತ್ತು ಹಳ್ಳಿಗಳನ್ನು ತೊರೆದು ನಗರ ಕೇಂದ್ರಿತ ದಲಿತ ಚಳುವಳಿಯನ್ನು ಕಟ್ಟಲು ಉತ್ಸುಕರಾದಂತಹ ಶಿಕ್ಷಿತ ಹೊಸ ತಲೆಮಾರಿನ ಕಾರ್ಯಕರ್ತರ ನಡುವೆಯೂ ಮೊದಲ ಒಡಕು ಉಂಟಾಯಿತು. ೧೯೫೯ರ ವೇಳೆಗೆ ಆರ್‌ಪಿಐ ಪಕ್ಷವು ಇಬ್ಭಾಗವಾಗಿ ಎರಡು ವಿಭಿನ್ನ ಬಣಗಳು ದಲಿತ ಸಮಾವೇಶಗಳನ್ನು ಹಮ್ಮಿಕೊಂಡವು. ಆರ್‌ಪಿಐ ಪಕ್ಷದ ಈ ಒಡಕಿನಿಂದಾಗಿ ೧೯೬೨ ಲೋಕಸಭೆ ಚುನಾವಣೆಯಲ್ಲಿ ಪಕ್ಷವು ಏಕೀಕರಣಗೊಂಡ ಮಹಾರಾಷ್ಟ್ರದಲ್ಲಿ ಒಂದು ಸ್ಥಾನವನ್ನು ಗೆಲ್ಲಲೂ ವಿಫಲವಾಯಿತು. ನಂತರದ ವರ್ಷಗಳಲ್ಲಿ ಬೆರೆಳೆಣಿಕೆಯಷ್ಟು ವಿಧಾನಸಭೆ ಸ್ಥಾನಗಳನ್ನು ಗೆಲ್ಲುವಷ್ಟಕ್ಕೇ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ನಂತರ ಉತ್ತರ ಪ್ರದೇಶ, ಆಂಧ್ರ ಪ್ರದೇಶ, ಕರ್ನಾಟಕ, ಹರ್‍ಯಾಣ ರಾಜ್ಯಗಳಲ್ಲೂ ತನ್ನ ಪಕ್ಷವನ್ನು ಸಂಘಟಿಸಿತು. ಉತ್ತರ ಪ್ರದೇಶದಲ್ಲಿ ಚಮ್ಮಾರ್ ಸಮುದಾಯಕ್ಕೆ ಸೇರಿದ ಬೌದ್ಧ ಮತದ ಅನುಯಾಯಿ ಬಿ.ಪಿ.ಮೌರ್ಯ ಅವರು ಆರ್‌ಪಿಐ ಪಕ್ಷವನ್ನು ಸಂಘಟಿಸಿದರು. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ದಲಿತರ ಮತ್ತು ಮುಸ್ಲಿಂ ಮತಗಳನ್ನು ಆರ್‌ಪಿಐ ಪಕ್ಷದ ಪರವಾಗಿ ಸೆಳೆಯುವಲ್ಲಿ ಯಶಸ್ವಿಯಾದರು. ಆದರೆ ೧೯೬೯ರ ಕಾಂಗ್ರಸ್ ಪಕ್ಷದ ವಿಭಜನೆ ರಾಜಕೀಯ ಲೆಕ್ಕಚಾರಗಳನ್ನೇ ಬುಡಮೇಲು ಮಾಡಿತು. ೧೯೭೧ರ ವೇಳೆಗೆ ಆರ್‌ಪಿಐ ಪಕ್ಷದಲ್ಲಿ ತನ್ನ ಎದುರಾಳಿಯಾಗಿದ್ದ ರಾಮಜಿ ರಾಮ್ ಅವರೊಂದಿಗೆ ಬಿ.ಪಿ.ಮೌರ್ಯ ಅವರು ಆರ್‌ಪಿಐ ಪಕ್ಷವನ್ನು ತ್ಯಜಿಸಿ ಇಂದಿರಾ ಕಾಂಗ್ರಸ್ ಪಕ್ಷಕ್ಕೆ ಸೇರಿಕೊಂಡು ಮರಳಿ ಕಾಂಗ್ರೆಸ್ ಪಕ್ಷದಡಿಯಲ್ಲಿ ಲೋಕಸಬೆಗೆ ಆಯ್ಕೆಗೊಂಡರು.ಅಲ್ಲಿಗೆ ಉತ್ತರ ಪ್ರದೇಶದಲ್ಲಿ ಆರ್‌ಪಿಐ ಪಕ್ಷದ ರಾಜಕೀಯ ಆಸ್ತಿತ್ವ ಹೆಚ್ಚೂ ಕಡಿಮೆ ಅಂತ್ಯಗೊಂಡಿತು.

RPI ಪಕ್ಷದ ಸೀಮಿತ ಪ್ರಭಾವಕ್ಕೆ ಉತ್ತರವೇನೋ ಎಂಬಂತೆ ಅಮೇರಿಕಾದ ಬ್ಲಾಕ್ ಪ್ಯಾಂಥರ್‍ಸನ ಸ್ಪೂರ್ತಿಯಿಂದಾಗಿ ೧೯೭೦ರಲ್ಲಿ ಮಹಾರಾಷ್ಟದಲ್ಲಿ ದಲಿತ ಪ್ಯಾಂಥರ್‍ಸ ಸಂಘಟನೆ ಹುಟ್ಟಿಕೊಂಡಿತು.ಆಗ ಜೆ.ಪಿ. ಚಳುವಳಿ ತನ್ನ ಬಿರುಸನ್ನು, ವ್ಯಾಪ್ತಿಯನ್ನು ದೇದಾದ್ಯಾಂತ ವ್ಯಾಪಿಸಿಕೊಳ್ಳುತ್ತಿದ್ದಂತಹ ಕಾಲ.ಭ್ರಷ್ಟಾಚಾರದ ವಿರುದ್ದ ಸಂಪೂರ್ಣ ಕ್ರಾಂತಿಗೆ ಕರೆಕೊಟ್ಟಿದ್ದ ಜೆ.ಪಿ.ಯವರು ಆ ಕಾಲಕ್ಕೆ ಅತ್ಯಂತ ಪ್ರಭಾವಿಶಾಲಿ ನಾಯಕಿಯಾಗಿದ್ದ ಇಂದಿರಾ ಗಾಂಧಿಯವರಿಗೆ ಪ್ರಬಲ ಸವಾಲನ್ನು ಒಡ್ಡಿದ್ದರು. ಅತ್ಯಂತ ಜನಪ್ರಿಯತೆಯನ್ನು ಗಳಿಸಿಕೊಳ್ಳುತ್ತಿದ್ದ, ಬಹುಪಾಲು ವಿದ್ಯಾರ್ಥಿಗಳು ಹಾಗೂ ಮಧ್ಯಮ ವರ್ಗಗಳನ್ನ ಆಕರ್ಷಿಸಿದ್ದ ಈ ಜೆ.ಪಿ ಯವರ ನವನಿರ್ಮಾಣ ಚಳುವಳಿಗೆ ನವ ಅಂಬೇಡ್ಕರವಾದಿಗಳ ತರುಣರ ಗುಂಪಾದ ದಲಿತ ಪ್ಯಾಂಥರ್‍ಸ ತಮ್ಮ ಸಹಯೋಗದ ಕೊಂಡಿಯನ್ನು ಜೋಡಿಸಿಕೊಳ್ಳಲು ವಿಫಲವಾಯಿತು. ಈ ಜಾತ್ಯಾತೀತ ಪ್ರಗತಿಪರ ಗುಂಪು ಅತ್ತ ಎಡಪಂಥೀಯರೊಂದಿಗೂ ಗುರುತಿಸಿಕೊಳ್ಳದೆ, ಇತ್ತ ನವನಿರ್ಮಾಣದ ಜೆ.ಪಿ. ಚಳುವಳಿಯೊಂದಿಗೂ ಗುರುತಿಸಿಕೊಳ್ಳದೆ ತಠಸ್ಥವಾಗುಳಿದಿದ್ದು ನಿಜಕ್ಕೂ ಆಶ್ಚರ್ಯವೇ ಸರಿ. ಅತ್ಯಂತ ಪ್ರಖರ ವೈಚಾರಿಕ, ಸಮತಾವಾದದ, ಎಡಪಂಥೀಯ ಲೇಖಕರು ಮತ್ತು ಚಿಂತಕರ ಪಡೆಯೇ ಅಂದಿನ ದಲಿತ ಪ್ಯಾಂಥರ್‍ಸ ಸಂಘಟನೆಯಲ್ಲಿತ್ತು. ಆದರೆ ಎಲ್ಲಾ ಪ್ರಗತಿಪರ ಹಾಗೂ ಜಾತ್ಯಾತೀತ ಸಂಘಟನೆಗಳಿಗೂ ತಗಲುವ ಜಾಡ್ಯದಂತೆ ಈ ಸಂಘಟನೆಯ ನೇತೃತ್ವವನ್ನು ವಹಿಸಿಕೊಂಡಿದ್ದ ರಾಜಢಾಳೆ ಹಾಗೂ ನಾಮದೇವ ಢಸಾಳರ ನಡುವಿನ ಈ ವೈಯುಕ್ತಿಕ ಸಿದ್ಧಾಂತಗಳ ಭಿನ್ನತೆ ದಲಿತ ಪ್ಯಾಂಥರ್‍ಸ ಸಂಘಟನೆಯನ್ನೂ ಬಿಡಲಿಲ್ಲ. ರಾಜಢಾಳೆಯವರ ನೇತೃತ್ವದ ಗುಂಪು ಎಡಪಂಥೀಯ ಒಲವುಳ್ಳ ಸೆಕ್ಯುಲರ ರಾಜಕಾರಣವನ್ನು ಪುರಸ್ಕರಿಸಲಿಲ್ಲ. ಬದಲಾಗಿ ಅಂಬೇಡ್ಕರ ಪ್ರತಿಪಾದಿಸಿದ ಬುದ್ಧ ಧರ್ಮದ ಮಾರ್ಗದ ಕಡೆಗೆ ತನ್ನ ನಿಲುವನ್ನು ತಳೆದಿತ್ತು. ಇಲ್ಲಿ ಬುದ್ಧನ ಚಿಂತನೆಗಳ ಪ್ರಜ್ನೆಯಲ್ಲಿ ಮುನ್ನಡೆಯಬೇಕೆಂಬುದೇ ರಾಜ ಢಾಳೆಯವರ ಪ್ರಮುಖ ಆಶಯವಾಗಿತ್ತು. ಆದರೆ ನಾಮದೇವ ಢಸಾಳರವರ ನೇತೃತ್ವದ ಗುಂಪು ಮಾರ್ಕ್ಸವಾದದ ನೆಲೆಗಟ್ಟಿನಲ್ಲಿ, ತಮ್ಮ ಎಡಪಂಥೀಯ ಚಿಂತನೆಗಳನ್ನು ನೇರವಾಗಿಯೇ ಪ್ರತಿಪಾದಿಸುತ್ತಾ ಬುದ್ಧನೆಡೆಗಿನ ನಡೆಯನ್ನು ಅಷ್ಟೊಂದು ತೀವ್ರವಾಗಿ ಸಮರ್ಥಿಸಲಿಲ್ಲ. ಇಲ್ಲಿ ಢಸಾಳರು ಮಾರ್ಕ್ಸವಾದಿಗಳ ಮೂಲ ಸಿದ್ಧಾಂತವಾದ ವರ್ಗ ಸಂಘರ್ಷ ಮತ್ತು ಆರ್ಥಿಕ ಆಭಿವೃದ್ಧಿ ಮೂಲಕ ಅಸ್ಪೃಶ್ಯತೆಯ ನಿರ್ನಾಮ ಹಾಗೂ ಜಾತಿವಿನಾಶದ ಕನಸನ್ನು ಕಂಡರು.ಇದು ಅಂಬೇಡ್ಕರವಾದದ ಬುದ್ಧನಡೆಗಿನ ನಡೆಯ ಮೂಲಕ ಜಾತಿವಿನಾಶ ಮತ್ತು ದಲಿತರ ಆತ್ಮಾಭಿಮಾನದ ಕನಸಿಗೆ, ಚಿಂತನೆಗೆ ವ್ಯತಿರಿಕ್ತವಾಗಿತ್ತು. ಕಡೆಗೆ ಢಸಾಳರು ೧೯೭೭ರಲ್ಲಿ ದಲಿತರ ಪರವಾಗಿ ಇಂದಿರಾಗಾಂದಿಯವರನ್ನು ಬೆಂಬಲಿಸುವುದರೊಂದಿಗೆ ದಲಿತ ಪ್ಯಾಂಥರ್‍ಸ ಇಬ್ಭಾಗವಾಯಿತು. ನಂತರ ಮಹಾರಾಷ್ಟ್ರದಲ್ಲಿನ ದಲಿತ ಚಳುವಳಿಗಳು ಮತ್ತು ಸಂಘಟನೆಗಳು ಸೂಕ್ತವಾದ ರಾಜಕೀಯ ನೆಲೆ ದೊರಕದೆ ಅತಂತ್ರರಾಗಿ ಹೋರಾಟ ನಡೆಸಬೇಕಾಯಿತು. ಇವರ ಹೋರಾಟಕ್ಕೆ ಅಪಾರ ಜನಬೆಂಬಲ ಹಾಗೂ ಜನಪ್ರಿಯತೆ ದೊರಕಿದ್ದರೂ ಒಂದು ಗಟ್ಟಿಯಾದ ಕೇಂದ್ರ, ಸೂಕ್ತವಾದ ರಣನೀತಿ ದೊರೆಯದೆ ಒಂದು ಬಿಡಿಯಾದ ಸಂಘಟನೆಗಳಾಗಿ ಉಳಿದುಕೊಂಡವು. ಆದರೆ ೭೦ರ ದಕದ ಈ ತಲ್ಲಣಗಳು ಹಾಗೂ ದಲಿತ ಸಂಘಟನೆಗಳ ವಿಘಟನೆಗಳ ನಡುವೆಯೇ ಮರಾಠಿ ದಲಿತ ಲೇಖಕರು ಅತ್ಯಂತ ದಿಟ್ಟವಾಗಿ, ಸ್ಪಷ್ಟವಾಗಿ ಬರೆಯತೊಡಗಿದರು. ಅಂಬೇಡ್ಕರವಾದವನ್ನು ತಮ್ಮೊಳಗೆ ಬೇರು ಮಟ್ಟದಲ್ಲಿ ಬಿಟ್ಟುಕೊಂಡು ಇದರ ಸ್ಪೂರ್ತಿಯಿಂದ ೭೦ ಹಾಗು ೮೦ರ ದಶಕಗಳಲ್ಲಿ ಶ್ರೇಷ್ಟ ದಲಿತ ಸಾಹಿತ್ಯವನ್ನು ಬರೆದರು.ಹೊಸ ಚಿಂತನೆಯನ್ನೇ ರೂಪಿಸಿದರು. ಇದು ಅತ್ಯಂತ ಸೃಜನಶೀಲ ಸಾಹಿತ್ಯದ, ಜೀವಪರ ಸಾಹಿತ್ಯದ ಕಾಲಘಟ್ಟವಾಗಿತ್ತು. ದಲಿತ ಅಕ್ಷರಸ್ಥರಲ್ಲಿ ಹೊಸ ಚಿಂತನೆಗಳನ್ನು, ಬರವಣಿಗೆಯ, ಭಾಷೆಯ ಹೊಸ ನುಡಿಕಟ್ಟನ್ನೂ ಕಟ್ಟಿಕೊಟ್ಟಿತು.

ಈ ದಲಿತ ಸಾಹಿತ್ಯ ಕೇವಲ ಮಹಾರಾಷ್ಟ್ರಕ್ಕೆ ಮಾತ್ರ ಸೀಮಿತಗೊಳ್ಳಲಿಲ್ಲ. ಕರ್ನಾಟಕದಲ್ಲಿಯೂ ದಲಿತ ಲೇಖಕರ ಒಕ್ಕೂಟ ಸಂಘಟಿತಗೊಳ್ಳತೊಡಗಿತು. ಅದೇ ಸಂದರ್ಭದಲ್ಲಿ ೧೯೭೪ರಲ್ಲಿ ಆಗಿನ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿದ್ದ ಬಸವಲಿಂಗಪ್ಪನವರು ಸಮಾರಂಭವೊಂದರಲ್ಲಿ ಮಾತನಾಡುತ್ತಾ ತಳಸಮುದಾಯಗಳ ನೋವಿಗೆ, ಬಡತನಕ್ಕೆ ಸ್ಪಂದಿಸಲಾರದ ಸಾಹಿತ್ಯಕ್ಕೆ ಅರ್ಥವೇ ಇಲ್ಲ, ಈ ಹಿನ್ನೆಲೆಯಲ್ಲಿ ಒಂದು ವೇಳೆ ಕನ್ನಡದಲ್ಲಿ ಸಾಹಿತ್ಯ ರಚನೆಗೊಂಡಿದ್ದರೆ ಆಗ ಕನ್ನಡ ಸಾಹಿತ್ಯದಲ್ಲಿರುವುದೆಲ್ಲಾ ಬೂಸಾ ಎಂದು ಟೀಕಿಸಿದರು. ಆಗ ಕರ್ನಾಟಕದಲ್ಲಿ ಬಲು ದೊಡ್ಡ ವಿವಾದವೇ ಸೃಷ್ಟಿಯಾಯಿತು. ದಲಿತ ಲೇಖಕರು ಮತ್ತು ಇತರೇ ಪ್ರಗತಿಪರ ಚಿಂತಕರು ಬಸವಲಿಂಗಪ್ಪನವರನ್ನು ಸಂಪೂರ್ಣವಾಗಿ ಬೆಂಬಲಿಸಿದರು. ೧೯೭೪ರಲ್ಲಿ ದಲಿತ ಲೇಖಕರ ಸಮ್ಮೇಳನ ನಡೆಯಿತು. ಮುಂದಿನ ವರ್ಷಗಳಲ್ಲಿ ಲೇಖಕ ಇಂದೂಧರ ಹೊನ್ನಾಪುರ ಸಂಪಾದಕತ್ವದಲ್ಲಿ “ಸುದ್ದಿ ಸಂಗಾತಿ” ಪತ್ರಿಕೆ ಪ್ರಕಟಣೆಗೊಳ್ಳತೊಡಗಿತು. ಇದೇ ಸಂದರ್ಭದಲ್ಲಿ ವಿವಿಧ ದಲಿತ ಗುಂಪುಗಳು ಮತ್ತು ಸಂಘಟಣೆಗಳೆಲ್ಲ ಒಗ್ಗೂಡಿ “ದಲಿತ ಸಂಘರ್ಷ ಸಮಿತಿ” ಎನ್ನುವ ಪ್ರಗತಿಪರ ಸಂಘಟನೆಯನ್ನು ಕಟ್ಟಿದರು. ನಂತರ ೨೦ ವರ್ಷಗಳ ಕಾಲ ೮೦ರ ದಶಕದುದ್ದಕ್ಕೂ ಒಂದು ದೊಡ್ಡ ಪ್ರಗತಿಪರ, ಜಾತ್ಯಾತೀತ ಸಂಘಟನೆಯಾಗಿ ಬೆಳೆಯಿತು. ಅನೇಕ ದಲಿತ ಲೇಖಕರಲ್ಲಿ ಅನಾಥ ಪ್ರಜ್ನೆಯನ್ನು ತೊಡೆದು ಹಾಕಿತು.ಆ ಕಾಲಘಟ್ಟದ ಈ ದಲಿತ ಚಳುವಳಿಗೆ ದಕ್ಕಿದ ವೈಚಾರಿಕತೆಯ ಆಯಾಮ, ಸಿದ್ಧಾಂತದ ಹಿರಿಮೆ ನಿಜಕ್ಕೂ ಬೆರಗುಗೊಳಿಸುತ್ತದೆ. ತೊಂಬತ್ತರ ದಶಕದ ವೇಳೆಗೆ ಸಾವಿರಾರು ದಲಿತ ಕಾರ್ಯಕರ್ತರು ಬೌದ್ಧ ಧರ್ಮವನ್ನು ಸ್ವೀಕರಿಸಿದರು. ಮಹಾರಾಷ್ಟ್ರಕ್ಕೆ ಹೋಲಿಸಿದರೆ ಕನಾಟಕದ ದಲಿತ ಚಳುವಳಿ ನಗರಗಳಲ್ಲಿ ಹೆಚ್ಚು ಪ್ರಭಾವಶಾಲಿಯಾಗಿತ್ತು. ಗ್ರಾಮಗಳಲ್ಲಿನ ದಲಿತರು ಹೆಚ್ಚಾಗಿ ದಲಿತ ಸಂಘರ್ಷ ಸಮಿತಿಯ ಮೂವ್‌ಮೆಂಟನಲ್ಲಿ ಒಳಗೊಳ್ಳಲಿಲ್ಲ. ಅವರ ಪಾಲ್ಗೊಳ್ಳುವಿಕೆ ಸೀಮಿತವಾಗಿತ್ತು. ಆದರೆ ಬಿಹಾರ್ ರಾಜ್ಯದಲ್ಲಿ ಮಾರ್ಕ್ಸಿಸಂನಿಂದ ಪ್ರೇರಣೆ ಪಡೆದ ದಲಿತ ಸಂಘಟನೆಗಳು ಗ್ರಾಮಗಳಲ್ಲಿ ಪ್ರಭಾವಶಾಲಿಯಾಗಿದ್ದವು. ಅಂದರೆ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ದಲಿತ ಸಂಘಟನೆಗಳು ಮಾರ್ಕ್ಸಿಸಂ ಅನ್ನು ತಮ್ಮ ಚಳುವಳಿಗೆ ಸ್ಪೂರ್ತಿಯಾಗಲಿಲ್ಲವೆಂದರ್ಥವಲ್ಲ ಅಥವಾ ಅಂಬೇಡ್ಕರ್‌ವಾದ ಕೇವಲ ನಗರಕ್ಕೆ ಸೀಮಿತವಾಗಿತ್ತು ಎನ್ನುವುದೂ ಸತ್ಯವಲ್ಲ. ಏಕೆಂದರೆ ಕಾನ್ಸೀರಾಂ ಅವರು ಉತ್ತರಪ್ರದೇಶದಲ್ಲಿ ಅಂಬೇಡ್ಕರ್ ಅವರ ತತ್ವಗಳನ್ನು, ಚಿಂತನೆಗಳನ್ನು ಬಳಸಿಕೊಂಡು ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಬಿಎಸ್‌ಪಿ ಪಕ್ಷವನ್ನು ಯಶಸ್ವಿಯಾಗಿ ಸಂಘಟಿಸಿದರು.

ಚುನಾವಣಾ ರಾಜಕೀಯದ ಹಿನ್ನೆಲೆಯಲ್ಲಿ ಉತ್ತರ ಭಾರತ ಮತ್ತು ಪಶ್ಚಿಮ ಭಾರತಗಳಲ್ಲಿ ಅಂಬೇಡ್ಕರ್‌ವಾದದ ಚಳುವಳಿ ಅಷ್ಟೊಂದು ಪರಿಣಾಮಕಾರಿಯಾಗಿಲ್ಲದಿದ್ದರೂ ಅಂಬೇಡ್ಕರ್ ಅವರ ಚಿಂತನೆಗಳು ಹೆಚ್ಚು ಪರಿಣಾಮಕಾರಿಯಾಗಿದೆ ಮತ್ತು ಹೊಸ ತಲೆಮಾರಿನ ದಲಿತರು ಅಂಬೇಡ್ಕರ್‌ವಾದದ ಕಡೆಗೆ ಆಕರ್ಷಿತರಾಗುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ( ೯೦ರ ದಶಕ) ಅಂಬೇಡ್ಕರ್ ಅವರು ಬರೆದ ಪುಸ್ತಕ “Riddles in Hinduism” ಅತಿ ಹೆಚ್ಚು ಮುದ್ರಣಗಳನ್ನು ಮತ್ತು ಮರುಮುದ್ರಣಗಳನ್ನು ಕಂಡಿತು. ಇದನ್ನು ಸರ್ಕಾರವೇ ದಲಿತ ಚಿಂತಕರ ನೇತೃತ್ವದಲ್ಲಿ ಪ್ರಕಟಿಸಿದರು. ಅಂಬೇಡ್ಕರ್ ಅವರ ಕಾಲಘಟ್ಟದಲ್ಲಿ ಇದನ್ನು ಊಹಿಸಲೂ ಸಾಧ್ಯವಿರಲಿಲ್ಲ. ಏಕೆಂದರೆ ಆ ಕಾಲದಲ್ಲಿ ಇದು ತುಂಬಾ inflammatory ಎಂದೇ ವಿವಾದಕ್ಕೀಡಾಗಿತ್ತು.

ಮಹಾರಾಷ್ಟ್ರ ಮತ್ತು ಕರ್ನಾಟಕ ಅಂಬೇಡ್ಕರ್ legacy ಯ ಕೇಂದ್ರ ಸ್ಥಾನಗಳಾಗಿವೆ. ಅಂಬೇಡ್ಕರ್ ಅವರ ಮೂರ್ತಿಗಳು ದೇಶಾದ್ಯಾಂತ ಸ್ಥಾಪಿತಗೊಂಡಿವೆ. ಅಂಬೇಡ್ಕರ್‌ವಾದ ಇಂದು (೯೦ರ ದಶಕ) ತಳಸಮುದಾಯಗಳ ನಾಯಕರಿಗೆ, ಚಿಂತಕರಿಗೆ ತಮ್ಮನ್ನು ತಮ್ಮ ಸಮುದಾಯಗಳ ಹಕ್ಕದಾರರು ಮತ್ತು ನೇತಾರರನ್ನಾಗಿ ಬಿಂಬಿಸಿಕೊಳ್ಳಲು ಸಹಾಯಕಾರಿಯಾಗಿದೆ. ಅಂಬೇಡ್ಕರ್‌ವಾದದ ಈ ಹೊಸ ಹುಟ್ಟು ಮತ್ತು ಯಶಸ್ವೀ ಸಂಘಟನೆಯ ತೀವ್ರತೆಯಲ್ಲಿ ನಿಜಕ್ಕೂ ಘಾಸಿಗೊಂಡಿದ್ದು ಗಾಂಧಿ. ಒಂದು ಕಾಲದಲ್ಲಿ ಹರಿಜನರ ನೇತಾರ ಎಂದು ಕರೆಯಲ್ಪಡುತ್ತಿದ್ದ ಗಾಂಧೀಜಿಗೆ ಇಂದಿನ ಸಬಲ್ಟ್ರಾನ್ ನೆಲೆಯಲ್ಲಿ ಒಂದಿಂಚೂ ಜಾಗವಿಲ್ಲ.

ಕಾನ್ಸೀರಾಂ : BAMCEF ನಿಂದ ಬಹುಜನ ಸಮಾಜ್ ಪಾರ್ಟಿಯವರೆಗೆ

೧೯೩೪ರಲ್ಲಿ ಪಂಜಾಬಿ ಚಮಾರ್ ಸಮುದಾಯದಲ್ಲಿ ಜನಿಸಿದ ಕಾನ್ಸೀರಾಂ ಅವರು ತಮ್ಮ ಬಾಲ್ಯದ ವರ್ಷಗಳಲ್ಲಿ ಅಸ್ಪೃಶ್ಯತೆಯ ದೌರ್ಜ್ಯನ್ಯವನ್ನು ಹೆಚ್ಚಾಗಿ ಎದುರಿಸಲಿಲ್ಲ. ಅವರ ತಾರುಣ್ಯದ ದಿನಗಳಲ್ಲಿಯೂ ಅಸಮಾನತೆ ಮತ್ತು ತಾರತಮ್ಯ ಅವರ ಪಂಜಾಬಿನ ವ್ಯವಸ್ಥೆಯಲ್ಲಿ ತೀವ್ರವಾಗಿ ಭಾದಿಸುತ್ತಿರಲಿಲ್ಲ. ಬಿಎಸ್.ಸಿ ಪದವಿಯನ್ನು ಮುಗಿಸಿದ ನಂತರ ಸರ್ವೇ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದ ಕಾನ್ಸೀರಾಂ ನಂತರ ಡಿಫೆನ್ಸ್ ಇಲಾಖೆಯ ಪ್ರೊಡಕ್ಷನ್ ವಿಭಾಗದಲ್ಲಿ ವರ್ಗಾವಣೆಗೊಂಡರು. ನೇರವಾಗಿ ಅಸ್ಪೃಶ್ಯತೆಯ ದೌರ್ಜ್ಯನ್ಯಕ್ಕೆ ಒಳಗಾಗದಿದ್ದರೂ ೧೯೬೫ರಲ್ಲಿ ಅಂಬೇಡ್ಕರ್ ಜನ್ಮದಿನದಂದು ಅಂಗೀಕಾರವಾಗಿದ್ದ ಸರ್ಕಾರಿ ರಜವನ್ನು ರದ್ದು ಮಾಡುವ ಆದೇಶದ ವಿರುದ್ಧವಾಗಿ ಪರಿಶಿಷ್ಟ ಜಾತಿಯ ಸರ್ಕಾರಿ ನೌಕರರು ಹೋರಾಟ ನಡೆಸುತ್ತಿದ್ದಾಗ maya[1]ಈ ಹೋರಾಟಕ್ಕೆ ಪ್ರತ್ಯಕ್ಷವಾಗಿ ಸಾಕ್ಷಿಯಾಗಿದ್ದ ಕಾನ್ಸೀರಾಂ ಮೊಟ್ಟ ಮೊದಲ ಬಾರಿಗೆ ಪರಿಶಿಷ್ಟ ಜಾತಿಗಳ ಶೋಷಣೆಯ ಅನುಭವಕ್ಕೆ ಒಳಗಾದರು. ನಂತರ ಅಂಬೇಡ್ಕರ್ ಅವರ “Annihilation of Caste” ಪುಸ್ತಕವನ್ನು ಓದಿದಾಗ ಅವರಿಗೆ ಇಂಡಿಯಾದ ಜಾತಿಪದ್ಧತಿಯ ಕ್ರೂರತೆ ಆಳವಾಗಿ ಕಲುಕಿತು. ಈ ಪುಸ್ತಕವನ್ನು ಒಂದು ರಾತ್ರಿಯಲ್ಲಿ ಮೂರು ಬಾರಿ ಓದಿದ ಕಾನ್ಸೀರಾಂ ನಂತರ ಮೂರು ದಿನಗಳ ಕಾಲ ನಿದ್ರಿಸಲಿಲ್ಲ. ಅಂಬೇಡ್ಕರ್ ಅವರ ರಾಜಕೀಯ ಆಕ್ಟಿವಿಸಂಗೆ ಕಾಲಿಟ್ಟ ಕಾನ್ಸೀರಾಂ ಅವರಿಗೆ ಬುದ್ಧಿಸಂ ಕಡೆಗೆ ಆಕರ್ಷಿತರಾಗಲಿಲ್ಲ. ಆದರೆ ಆರಂಭದಲ್ಲಿ ಕಾನ್ಸೀರಾಂ ಅವರೊಂದಿಗೆ ಕೈಜೋಡಿಸಿದ್ದು ಮಹರ್ ಜಾತಿಗೆ ಸೇರಿದ ನಂತರ ಬೌದ್ಧ ಮತಕ್ಕೆ ಮತಾಂತರಗೊಂಡ ಡಿ.ಕೆ.ಖಾರ್ಪಡೆ ಅವರು. ಇವರಿಬ್ಬರೂ ಮೇಲ್ಜಾತಿ ಅಧಿಕಾರಿಗಳು ಪರಿಶಿಷ್ಟ ಜಾತಿಯ ನೌಕರರ ಮೇಲೆ ಕೆಲಸದ ವೇಳೆಯಲ್ಲಿ ನಡೆಸುವ ಶೋಷಣೆಗಳ ವಿರುದ್ಧ ದಲಿತ ಮತ್ತು ಹಿಂದುಳಿದ ಜಾತಿಯ ನೌಕರರ ಸಂಘಟನೆಗೆ ಮುಂದಾದರು. ೧೯೭೧ರ ವರೆಗೂ ಸರ್ಕಾರಿ ಸೇವೆಯಲ್ಲಿ ಮುಂದುವರೆದ ಕಾನ್ಸೀರಾಂ ಅವರು ಪರಿಶಿಷ್ಟ ಸಮುದಾಯದಕ್ಕೆ ಸೇರಿದ ಮಹಿಳಾ ಅಭ್ಯರ್ಥಿಯೊಬ್ಬರಿಗೆ ಅನ್ಯಾಯವಾಗಿರುವುದನ್ನು ಪ್ರತಿಭಟಿಸಿದರು. ಈ ಪ್ರತಿಭಟನೆ ಮುಂದುವರೆದು ಕಾನ್ಸೀರಾಂ ಅವರು ಸೀನಿಯರ್ ಅಧಿಕಾರಿಯೊಬ್ಬರಿಗೆ ಕೆನ್ನೆಗೆ ಬಾರಿಸುವವರೆಗೂ ಮುಂದುವರೆಯಿತು. ನಂತರ ಶಿಸ್ತು ಸಮಿತಿಯ ಸಭೆಗಳಿಗೂ ಹಾಜರಾಗದೆ ಪ್ರತಿಭಟಿಸಿದ ಕಾನ್ಸೀರಾಂ ತಮ್ಮ ಸರ್ಕಾರಿ ಉದ್ಯೋಗಕ್ಕೆ ರಾಜಿನಾಮೆ ನೀಡಿ ಸಂಪೂರ್ಣ ಹೋರಾಟದ ಹಾದಿಗೆ ಧುಮುಕಿದರು.

೧೯೭೧ರಲ್ಲಿ ಕಾನ್ಸೀರಾಂ ಮತ್ತು ಅವರ ಸಂಗಡಿಗರು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಇತರರೇ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಒಕ್ಕೂಟವನ್ನು ಹುಟ್ಟುಹಾಕಿದರು. ಈ ಫೆಡರೇಶನ್ ಅನ್ನು ಪೂನಾ ಚಾರಿಟಿ ಕಮಿಷನರ್ ಅಡಿಯಲ್ಲಿ ನೊಂದಾಯಿಸಿದರು. ಇದು ಸ್ಥಾಪಿತಗೊಂಡ ಒಂದು ವರ್ಷದೊಳಗೆ ಒಂದು ಸಾವಿರ ಸದಸ್ಯರು ಈ ಒಕ್ಕೂಟಕ್ಕೆ ನೊಂದಾಯಿತರಾದರು. ಬಹುಪಾಲು ಸದಸ್ಯರು ಡಿಫೆನ್ಸ್, ಅಂಚೆ ಮತ್ತು ತಂತಿ ಇಲಾಖೆಗೆ ಸೇರಿದ ನೌಕರರು. ಈ ಒಕ್ಕೂಟದ ಮೊದಲ ವಾರ್ಷಿಕ ಸಮಾವೇಶವನ್ನು ಅಂದಿನ ಡಿಫೆನ್ಸ್ ಮಂತ್ರಿಗಳಾಗಿದ್ದ ಜಗಜೀವನ ರಾಮ್ ಅವರು ಉದ್ಘಾಟಿಸಿ ಮಾತನಾಡಿದರು.

೧೯೭೩ ರಲ್ಲಿ ಕಾನ್ಸೀರಾಂ ಮತ್ತು ಸಂಗಡಿಗರು ಅಖಿಲ ಭಾರತ ಹಿಂದುಳಿದ ಮತ್ತು ಅಲ್ಪಸಂಖ್ಯಾತ ನೌಕರರ ಫೆಡರೇಶನ್ (BAMCEF) ಸ್ಥಾಪಿಸಿದರು. ಇದರ ಮುಖ್ಯ ಕಛೇರಿಯನ್ನು ದೆಹಲಿಯಲ್ಲಿ ತೆರೆಯಲಾಯಿತು. ೧೯೭೮ರಲ್ಲಿ ಅಂಬೇಡ್ಕರ್ ಪರಿನಿರ್ವಾಣ ದಿನವಾದ ಡಿಸೆಂಬರ್ ೬ರಂದು ಸುಮಾರು ೨೦೦೦ ಸದಸ್ಯರ ದೆಹಲಿಯ ಬೋಟ್ ಕ್ಲಬ್‌ನಲ್ಲಿ ಬೃಹತ್ ಸಮಾವೇಶವನ್ನು ಸಂಘಟಿಸಲಾಯಿತು. ಇದರ ಅಜೆಂಡಾಗಳು ಮತ್ತು ಪ್ರಣಾಳಿಕೆಗಳು ಮಾತೃ ಸಂಸ್ಥೆಯಾದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಇತರೇ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಒಕ್ಕೂಟದ ಸ್ವರೂಪದಲ್ಲಿ ಇದ್ದರೂ ಇದರ rhetoric ತೀವ್ರವಾಗಿತ್ತು. ಇವರ ಹೋರಾಟ ಕೇವಲ ಮೇಲ್ಜಾತಿ ಶೋಷಕರ ವಿರುದ್ಧ ಮಾತ್ರವಲ್ಲದೆ ದೌರ್ಜ್ಯನ್ಯ ನಡೆಸುವ ದಲಿತ ಅಧಿಕಾರಿಗಳ ವಿರುದ್ಧವೂ ಕೇಂದ್ರಿತವಾಗಿತ್ತು.

ಎಪ್ಪತ್ತರ ದಶಕದ ಮಧ್ಯದ ವೇಳೆಗೆ ಕಾನ್ಸೀರಾಂ ಮತ್ತು ಅವರ ಸಂಘಟನೆಗಳು ಮತ್ತು ಚಳುವಳಿಗಳು ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ರರ ಪ್ರದೇಶ, ಪಂಜಾಬ್, ಹರ್‍ಯಾಣ, ದೆಹಲಿಯವರೆಗೂ ವ್ಯಾಪಿಸಿತ್ತು. ಆಗಿನ ದಿನಗಳಲ್ಲಿ ಕಾನ್ಸೀರಾಂ ಅವರು ಪೂನಾ ಮತ್ತು ದೆಹಲಿಯ ನಡುವೆ ರೈಲ್ವೆ ಮಾರ್ಗದಲ್ಲಿ ನಿರಂತರವಾಗಿ ಪಯಣಿಸುತ್ತಿದ್ದರು. ತಮ್ಮ ಬಿಎಸ್‌ಪಿ ಪಕ್ಷದ ಪರವಾಗಿ ಒಲವಿರುವಂತಹ ಕಾರ್ಯಕರ್ತರನ್ನು ಆಯ್ಕೆ ಮಾಡಿಕೊಳ್ಳಲು ತಮ್ಮ ಈ ಪಯಣದ ಮಧ್ಯೆ ಬರುವಂತಹ ನಾಗಪುರ್, ಜಬಲ್‌ಪುರ್, ಭೂಪಾಲ್ ನಗರಗಳಲ್ಲಿ ಇಳಿದು ಅಂತಹ ಉತ್ಸಾಹಿ ಯುವಕರನ್ನು ಬೇಟಿ ಮಾಡುತ್ತಿದ್ದರು. ನಂತರ ತಮ್ಮ ವಾಸ್ತವ್ಯವನ್ನು ದೆಹಲಿಗೆ ಬದಲಾಯಿಸಿದ ನಂತರ ಮಧ್ಯಪ್ರದೇಶ, ಪಂಜಾಬ್, ಹರ್‍ಯಾಣ, ಉತ್ತರ ಪ್ರದೇಶಗಳಲ್ಲಿ ಬಿಎಸ್‌ಪಿ ಪಕ್ಷವನ್ನು ಸಂಘಟಿಸಲು ಕಾರ್ಯತಂತ್ರಗಳಲನ್ನು ರೂಪಿಸಿದರು. ತಮ್ಮ ಈ ಸಂಘಟನೆ ಮತ್ತು ಚಳುವಳಿಗಳ ಜೊತೆಜೊತೆಗೆ ಅಂಬೇಡ್ಕರ್ ಅವರ ವಿಚಾರಗಳನ್ನು ಕಾರ್ಯಕರ್ತರೊಂದಿಗೆ ಹಂಚಿಕೊಳ್ಳುತ್ತಿದ್ದರು. ಎಂಬತ್ತರ ದಶಕದಲ್ಲಿ ’Ambedkar Mela on Wheels’ ಎನ್ನುವ ಜಾಥಾವನ್ನು ಪ್ರಾರಂಬಿಸಿದರು. ಈ ಜಾಥಾದಲ್ಲಿ ಅಂಬೇಡ್ಕರ್ ಅವರ ಜೀವನ, ಚಿಂತನೆಗಳು, ಲೇಖನಗಳನ್ನು ದೃಶ್ಯರೂಪದಲ್ಲಿ, ಭಾಷಣಗಳ ರೂಪದಲ್ಲಿ ನಿರಂತರವಾಗಿ ಚರ್ಚಿಸುತ್ತಿದ್ದರು. ಅಂಬೇಡ್ಕರ್ ಅವರು ತಳಸಮುದಾಯಗಳ ಪರವಾಗಿ ಹೇಗೆ ನಿರಂತರ ಹೋರಾಡುತ್ತಿದ್ದರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು ತಮ್ಮೊಂದಿಗೆ ಕೈಜೋಡಿಸಿದರೆ ಮುಂದೊಂದು ದಿನ ಆಳುವವರಾಗಿ ರೂಪಿಸುತ್ತೇನೆ ಎಂದು ಉತ್ಸಾಹ ತುಂಬುತ್ತಿದ್ದರು.

ಮಹತ್ವಾಕಾಂಕ್ಷಿಯಾಗಿದ್ದ ಕಾನ್ಸೀರಾಮ್ BAMCEF ಫೆಡರೇಶನ್‌ನ ಕೇವಲ ಸರ್ಕಾರಿ ನೌಕರರ ಸಂಘಟನೆಯನ್ನು ಮೀರಿ ಹೊಸ ರಾಜಕೀಯ ಅವಕಾಶಗಳನ್ನು ತೆರೆಯಲು ಉತ್ಸುಕರಾಗಿದ್ದರು. ಇದರ ಮೊದಲ ಹೆಜ್ಜೆಯಾಗಿ ೧೯೮೧ರಲ್ಲಿ “ಶೋಷಿತ ಸಮಾಜ ಸಂಘರ್ಷ ಸಮಿತಿ” (DS-4) ಯನ್ನು ಸ್ಥಾಪಿಸಿದರು. ಈ ಸಂಘಟನೆಯನ್ನು BAMCEF ನ ರಾಜಕೀಯ ಘಟಕವೆಂದು ಘೋಷಿಲಾಯಿತು. ಆದರೆ ಸರ್ಕಾರಿ ನೌಕರರು ಚುನಾವಣಾ ರಾಜಕೀಯದಲ್ಲಿ ಭಾಗವಹಿಸಲು ಕಾನೂನಿನಲ್ಲಿ ಅವಕಾಶ ಇಲ್ಲದಿರುವುದರಿಂದ ಈ “ಶೋಷಿತ ಸಮಾಜ ಸಂಘರ್ಷ ಸಮಿತಿ”ಯು ಸಂಪೂರ್ಣ ರಾಜಕೀಯ ಪಕ್ಷವಾಗಿ ಬೆಳೆಯಲು ಸಾಧ್ಯವಾಗಲಿಲ್ಲ. ಹೀಗಾಗಿ BAMCEF ನ ಸದಸ್ಯರು ಶೋಷಿತ ಸಮಾಜ ಸಂಘರ್ಷ ಸಮಿತಿಯೊಂದಿಗೆ ಗುರುತಿಸಿಕೊಳ್ಳಲು ನಿರಾಕರಿಸತೊಡಗಿದರು. ಕಡೆಗೆ ಇದರ ಇಬ್ಭಾಗ ಅನಿವಾರ್ಯವಾಯ್ತು. ಆದರೆ ಕಾನ್ಸೀರಾಮ್ ಅವರು ರಾಜಕೀಯವೇ ತಮ್ಮ ಮುಂದಿನ ಗುರಿ ಎಂದು ನಿರ್ಧರಿಸಿಬಿಟ್ಟಿದ್ದರು. ೧೯೮೬ರ ವೇಳೆಗೆ ಬಹುಜನ ಸಮಾಜ ಪಕ್ಷಕ್ಕಾಗಿ ತನ್ನ ಜೀವನವನ್ನು ಮೀಸಲಿಡುತ್ತೇನೆ ಎಂದು ಘೋಷಿಸಿದರು. ಸಮಾಜ ಕಾರ್ಯಕರ್ತನ ಹೊಣೆಯಿಂದ ರಾಜಕಾರಣಿಯಾಗಿ ತಮ್ಮ ಕ್ಷೇತ್ರವನ್ನೇ ಬದಲಾಯಿಸಿಕೊಂಡರು. ಅತ್ಯತ್ತಮ ಸಂಘಟಕ ಮತ್ತು ಪರಿಣಿತ ರಾಜಕಾರಣಿಯಾಗಿದ್ದ ಕಾನ್ಸೀರಾಮ್ ಬುದ್ಧಿಜೀವಿಯಾಗಿರಲಿಲ್ಲ, ಆಕರ್ಷಕ ಮಾತುಗಾರರಾಗಿರಲಿಲ್ಲ. ೧೯೯೩ರ ಚುನಾವಣೆಯ ವೇಳೆಗೆ ಉತ್ತರ ಪ್ರದೇಶದಲ್ಲಿ “ಬ್ರಾಹ್ಮಿನ್, ಬನಿಯಾ, ಠಾಕೂರ್ ಚೊರ್, ಬಾಕಿ ಸಬ್ DS-4”, “ತಿಲಕ್, ತರಾಜು, ತಲ್ವಾರ್ ಮಾರೋ ಉನ್ಕೋ ಜೂತೆ ಚಾರ್” ಎನ್ನವ ಘೋಷಣೆಗಳು ಜನಪ್ರಿಯವಾಗಿದ್ದವು. ಇದನ್ನು ತಾವು ಹುಟ್ಟು ಹಾಕಿದ್ದಲ್ಲವೆಂದು ಕಾನ್ಸೀರಾಮ್ ಮತ್ತು ಮಾಯಾವತಿ ನಿರಾಕರಿಸಿದ್ದರೂ ಸಹ ಈ ಸ್ಲೋಗನ್‌ಗಳು ಬಿಎಸ್‌ಪಿ ಪಕ್ಷದ ಅತ್ಯಂತ ಜನಪ್ರಿಯ ಘೋಷಣೆಗಳಾಗಿದ್ದವು. ಆ ಪಕ್ಷದ ಐಡಿಯಾಲಜಿಯನ್ನೇ ಬಿಂಬಿಸುವಂತೆ ಈ ಸ್ಲೋಗನ್‌ಗಳು ಜನಪ್ರಿಯತೆ ಪಡೆದುಕೊಂಡಿದ್ದವು.

ಕಾನ್ಸೀರಾಮ್ ಅವರಿಗೆ ಸಮಾಜ ಸುಧಾರಣೆಯಲ್ಲಿ ನಂಬಿಕೆ ಇರಲಿಲ್ಲ. ರಾಜಕೀಯ ಅಧಿಕಾರವನ್ನು ಪಡೆದರೆ ಈ ಎಲ್ಲ ಸುಧಾರಣೆಗಳು ತಂತಾನೆ ಜಾರಿಗೊಳ್ಳುತ್ತವೆ ಎಂದು ಬಲವಾಗಿ ನಂಬಿದ್ದರು. ದಲಿತರಿಗೆ ಮೀಸಲಾತಿಯನ್ನು ಕೊಡುವುದನ್ನು ಭಿಕ್ಷೆ ಎಂದೇ ಟೀಕಿಸುತ್ತಿದ್ದ ಕಾನ್ಸೀರಾಮ್ ಒಮ್ಮೆ ಬಹುಜನ್ ಸಮಾಜ ಪಕ್ಷ ಅಧಿಕಾರಕ್ಕೆ ಬಂದರೆ ದಲಿತರಿಗೆ ಸಂಪೂರ್ಣ ಅಧಿಕಾರವನ್ನು ಹಸ್ತಾಂತರಿಸಲಾಗುತ್ತದೆ ಮತ್ತು ಬ್ರಾಹ್ಮಣರಿಗೆ ಮೀಸಲಾತಿಯನ್ನು ನೀಡುವಂತಹ ವ್ಯವಸ್ಥೆಯನ್ನು ಜಾರಿಗೊಳಿಸುತ್ತೇವೆ ಎಂದು ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಘೋಷಿಸಿದ್ದರು.

೧೯೮೫ರ ಉಪಚುನಾವಣೆಯಲ್ಲಿ ಉತ್ತರಪ್ರದೇಶದ ಬಿಜಿನಾರ್ ಲೋಕಸಭಾ ಕ್ಷೇತ್ರದಿಂದ ಚಮ್ಮಾರ್ ಸಮುದಾಯಕ್ಕೆ ಸೇರಿದ ಬಿ.ಎ.ಎಲ್.ಎಲ್.ಎಲ್.ಬಿ ವ್ಯಾಸಂಗ ಮಾಡಿದ ಯುವ ಮಹಿಳೆಯನ್ನು ಬಹುಜನ ಸಮಾಜ ಪಕ್ಷದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದರು. ಆಕೆಯ ಹೆಸರು ಮಾಯಾವತಿ. ೨೫ರ ಹರೆಯದ ಮಾಯಾವತಿಯ ವಿರುದ್ಧ ಕಣದಲ್ಲಿದ್ದವರು ರಾಮ್ ವಿಲಾಸ್ ಪಾಸ್ವಾನ್ ಮತ್ತು ಕಾಂಗ್ರೆಸ್ ಪಕ್ಷದಿಂದ ಜಗಜೀವನ್ ರಾಂ ಅವರ ಪುತ್ರಿ ಮೀರಾ ಕುಮಾರ್. ಆಗ ರಾಜೀವ್ ಗಾಂಧಿಯ ಜನಪ್ರಿಯತೆಯ ಅಲೆಯಲ್ಲಿ ಮೀರಾ ಕುಮಾರ್ ಆಯ್ಕೆಯಾದರು. ೧೯೮೫ ರಿಂದ ೧೯೯೧ರ ಕಾಲಘಟ್ಟ ಬಹುಜನ್ ಸಮಾಜ ಪಕ್ಷದ ಅತ್ಯಂತ ನಿರ್ಣಾಯಕ ಘಟ್ಟವಾಗಿತ್ತು. ರಾಜೀವ್ ಗಾಂಧಿಯ ಜನಪ್ರಿಯತೆ ಕ್ರಮೇಣ ಕುಸಿಯಲಾರಂಬಿಸಿದಂತೆ ಅದರ ಪ್ರಯೋಜನ ಪಡೆದುಕೊಂಡ ಕಾನ್ಸೀರಾಮ್ ಅಭೂತಪೂರ್ವವಾಗಿ ಪಕ್ಷವನ್ನು ಸಂಘಟಿಸಿದರು. ಅವರೊಂದಿಗೆ ಅಲಿಘರ್ ಯೂನಿವರ್ಸಿಟಿಯ ಲೆಕ್ಚರರ್ ಡಾ. ಮಸೂದ್ ಅಹ್ಮದ್‌ರಂತಹ ಪರಿಣಿತ ನಾಯಕರಿದ್ದರು. ೧೯೮೯-೧೯೯೧ ರ ಚುನಾವಣೆಗಳಲ್ಲಿ ಬಹುಜನ ಸಮಾಜದ ಮತಗಳಿಕೆಯ ಸರಾಸರಿ ಶೇಕಡ ೯.೪ರಷ್ಟಿತ್ತು. ಆದರೆ ೧೯೮೯ರ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‌ಪಿ ಪಕ್ಷವು ೪೨೫ ಸೀಟುಗಳ ಪೈಕಿ ಕೇವಲ ೧೪ ಸೀಟುಗಳಲ್ಲಿ ಮಾತ್ರ ಜಯ ಗಳಿಸಿತ್ತು, ೧೯೯೧ರಲ್ಲಿ ಕೇವಲ ೧೧ ಸೀಟುಗಳನ್ನು ಗಳಿಸುವಲ್ಲಿ ತೃಪ್ತಿ ಹೊಂದಬೇಕಾಯಿತು. ಅಂದರೆ ಮತಗಳಿಕೆಯ ಸರಾಸರಿ ಪ್ರಮಾಣ ಅಧಿಕವಾಗಿದ್ದರೂ ಅದಕ್ಕೆ ಪೂರಕವಾಗಿ ಕ್ಷೇತ್ರಗಳನ್ನು ಗೆಲ್ಲಲು ಬಿಎಸ್‌ಪಿ ವಿಫಲವಾಯಿತು. ಅತ್ಯತ್ತಮ ಮಟ್ಟದ ಸಂಘಟನೆಯನ್ನು ಕಟ್ಟಿದ್ದರೂ ದಲಿತರ ಸಂಪೂರ್ಣ ಮತಗಳನ್ನು ಕೂಡಿ ಹಾಕಲು ಬಿಎಸ್ಪಿ ಪಕ್ಷ ವಿಫಲಗೊಂಡಿತ್ತು. ಪಶ್ಚಿಮ ಉತ್ತರ ಪ್ರದೇಶದ ಬಹುಪಾಲು ಚಮ್ಮಾರ್ ಸಮುದಾಯದವರು ಕಾಂಗ್ರೆಸ್ ಪಕ್ಷವನ್ನೇ ಬೆಂಬಲಿಸಿದ್ದರು. ಇದಕ್ಕೆ ಮಯಾವತಿಯವರ ದುರ್ಬಲ ಸಂಘಟನೆಯೇ ಕಾರಣವೆಂದು ಆಗ ದೂರಲಾಗಿತ್ತು.

೧೯೯೨ರ ಬಾಬ್ರಿ ಮಸೀದಿಯ ಧ್ವಂಸದಿಂದ ಉಂಟಾದ ರಾಜಕೀಯ ಅನಿಶ್ಚಿತಿಯ ಸಂದರ್ಭದಲ್ಲಿ ಬಿಎಸ್ಪಿ ಪಕ್ಷವು ಸಮಾಜವಾದಿ ಪಕ್ಷದೊಂದಿಗೆ ಚುನಾವಣಾ ಹೊಂದಾಣಿಕೆ ಮಾಡಿಕೊಂಡಿತು. ಈ ಚುನಾವಣೆಯಲ್ಲಿ ಶೇಕಡಾ ೧೧ರಷ್ಟು ಪ್ರಮಾಣದಲ್ಲಿ ಮತಗಳಿಸಿದ ಬಿಎಸ್‌ಪಿ ೬೭ ಸೀಟುಗಳಲ್ಲಿ ಗೆಲುವು ಸಾಧಿಸಿತ್ತು. ಶೇಕಡಾ ೨೫.೮೩ರಷ್ಟು ಪ್ರಮಾಣದಲ್ಲಿ ಮತ ಗಳಿಸಿದ ಸಮಾಜವಾದಿ ಪಕ್ಷವು ೧೦೯ ಸೀಟುಗಳಲ್ಲಿ ಗೆಲುವು ಸಾಧಿಸಿದ್ದರೆ ಬಿಜೆಪಿ ಪಕ್ಷವು ೧೭೭ ಸೀಟುಗಳಲ್ಲಿ (ಶೇಕಡಾ ೩೩.೩ ಪ್ರಮಾಣ) ಗೆಲುವನ್ನು ಪಡೆದುಕೊಂಡಿತ್ತು. ಬಾಬರಿ ಮಸೀದಿಯ ಧ್ವಂಸದ ಅಪಖ್ಯಾತಿಯನ್ನು ಗಳಿಸಿದ್ದ ಕಾಂಗ್ರೆಸ್ ಪಕ್ಷ ಧೂಳೀಪಟವಾಗಿತ್ತು. ಸಮಾಜವಾದಿ ಮತ್ತು ಬಿಎಸ್‌ಪಿಗಳ ಸಮ್ಮಿಶ್ರ ಸರ್ಕಾರದಲ್ಲಿ ಮುಲಾಯಂ ಸಿಂಗ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಆದರೆ ಇವರಿಬ್ಬರ ಮೈತ್ರಿ ಬಹಳ ವರ್ಷಗಳ ಕಾಲ ನಿಲ್ಲಲಿಲ್ಲ. ೧೯೯೫ರ ವೇಳೆಗೆ ಈ ಸಮ್ಮಿಶ್ರ ಸರ್ಕಾರ ತನ್ನ ಬಹುಮತ ಕಳೆದುಕೊಂಡಿತು.

ಒಂದು ಕಾಲದಲ್ಲಿ ಮನುವಾದಿಗಳೆಂದು ಜರಿದಿದ್ದ ಬಿಜೆಪಿಯೊಂದಿಗೆ ಕೈಜೋಡಿಸಿದ ಕಾನ್ಸೀರಾಮ್ ೧೯೯೫ರ ಎಪ್ರಿಲ್‌ನಲ್ಲಿ ಬಿಎಸ್‌ಪಿ ಮತ್ತು ಬಿಜೆಪಿ ಪಕ್ಷಗಳ ಸಮ್ಮಿಶ್ರ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿಯಿತು. ಮಾಯಾವತಿ ಪ್ರಥಮ ದಲಿತ ಮಹಿಳಾ ಮುಖ್ಯಮತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಆದರೆ ಅಕ್ಟೋಬರ್ ೧೯೯೫ರ ವೇಳೆಗೆ ಬಿಜೆಪಿ ಪಕ್ಷವು ತನ್ನ ಬೆಂಬಲವನ್ನು ಹಿಂತೆಗೆದುಕೊಂಡಿತು. ಮಾಯಾವತಿ ನೇತೃತ್ವದ ಸರ್ಕಾರ ಆರು ತಿಂಗಳ ನಂತರ ಅಧಿಕಾರ ಕಳದುಕೊಂಡು ರಾಜ್ಯದಲ್ಲಿ ರಾಷ್ಟ್ರಪತಿ ಶಾಸನ ಜಾರಿಗೊಳಿಸಲಾಯಿತು.

ಕಡೆಗೆ ಬಿಎಎಸ್‌ಪಿ ಪಕ್ಷದ ಆತುರದ ನಡೆಗಳು, ಆತ್ಮಹತ್ಯಾತ್ಮಕ ಮತ್ತು ವಿವೇಚನಾ ಶೂನ್ಯ ನಡೆಗಳು ಆ ಪಕ್ಷವು ಅಧಿಕಾರ ಕಳೆದುಕೊಳ್ಳಲು ಕಾರಣವಾಯಿತು. ಉದಾಹರಣೆಗೆ ಗಾಂಧಿ ಮತ್ತು ಅಂಬೇಡ್ಕರ್ ನಡುವಿನ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನೇ ಬಂಡವಾಳ ಮಾಡಿಕೊಂಡು ಗಾಂಧಿಯನ್ನು ಮನುವಾದಿ ಎಂದು ಹೀಯಾಳಿಸತೊಡಗಿದ್ದು ಬಿಎಸ್‌ಪಿಗೆ ರಾಜಕೀಯವಾಗಿ, ಸಾಮಾಜಿಕವಾಗಿ ದೊಡ್ಡ ಮಿತಿಯನ್ನೇ ಸೃಷ್ಟಿಸಿತು. ಮತ್ತೊಂದು ದೊಡ್ಡ ಸೋಲೆಂದರೆ ಭ್ರಷ್ಟಾಚಾರವನ್ನು ಸಾರ್ವತ್ರೀಕರಣಗೊಳಿಸಿದ್ದು.

ಇಂದು ಭಾರತದಾದ್ಯಂತ (೧೯೯೮) ದಲಿತರಿಗೆ ಒಂದೇ ಮಾದರಿಯ ರಾಜಕೀಯ ರಣನೀತಿ ಎನ್ನುವುದು ಸಾಧ್ಯವಿಲ್ಲ. ಇಲ್ಲಿನ ವರ್ಗ ಮತ್ತು ಸಾಪೇಕ್ಷವಾದ ಪ್ರತಿಕೂಲದ ಆಧಾರದ ಮೇಲೆ ರಾಜಕಾರಣವನ್ನು ಅಭಿವೃದ್ಧಿಪಡಿಸಿದ್ದರೆ ಅದು ಬೇರೆ ಮಾತಾಗುತ್ತಿತ್ತು. ಆದರೆ ಈ ಮಾದರಿಯ ರಾಜಕಾರಣವು ದಲಿತರಿಗೆ ಪೂರಕವಾಗುತ್ತಿತ್ತು ಎಂದು ಸಾರಾಸಗಟಾಗಿ ನಂಬುವುದೂ ಸಹ ತಪ್ಪು ಗ್ರಹಿಕೆಯಾಗುತ್ತದೆ. ಇಂದಿನ ಸಂದರ್ಭದಲ್ಲಿ (೧೯೯೮) ಅಪೂರ್ಣವಾದ ಪಕ್ಷ ರಾಜಕಾರಣದ ಅರ್ಥವೇನೆಂದರೆ ಯಾವುದೇ ಪಕ್ಷವು ದಲಿತ ಸಮುದಾಯದ ಓಟನ್ನು ತಮ್ಮ ಪರವಾಗಿದೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಮತ್ತು ಅದರ ಆಧಾರದ ಮೇಲೆ ರಾಷ್ಟ್ರ ರಾಜಕೀಯದಲ್ಲಿ ಬಹುಮತವನ್ನು ಗಳಿಸಲು ಸಾಧ್ಯವಿಲ್ಲ. ಆದರೆ ಈ ತರ್ಕವೂ ಸಹ ದಲಿತರಿಗೆ ಪ್ರತಿಕೂಲವಾಗುತ್ತದೆ ಎಂದೂ ಅರ್ಥೈಸಬೇಕಿಲ್ಲ. ಒಂದು ಕಾಲದಲ್ಲಿ ದಲಿತರು ಕಾಂಗ್ರೆಸ್‌ನ ಪರವಾಗಿ ರಾಷ್ಟ್ರಾದ್ಯಾಂತ ಮತ ಚಲಾಯಿಸಿದಾಗ ಆಗ ಅವರ ಸಾಮಾಜಿಕ-ರಾಜಕೀಯ ಪರಿಸ್ಥಿತಿ ಮತ್ತು ಶಕ್ತಿ ಈಗಿನ ಸಂದರ್ಭಕ್ಕಿಂತಲೂ ತುಂಬಾ ಕಡಿಮೆಯಿತ್ತು. ಆದರೆ ದಲಿತರ ಹಕ್ಕುಗಳಿಗೆ ನ್ಯಾಯ ಒದಗಿಸಬಲ್ಲಂತಹ,ಹೊಸ ದಿಕ್ಕನ್ನು ತೋರಿಸುವಂತಹ ಒಂದು ಕಾರ್ಯತಂತ್ರ ಸಹ ಇಂದು ( ೧೯೯೮) ನಮ್ಮ ಬಳಿ ಇಲ್ಲ.

(ಕೃಪೆ: THE UNTOUCHABLES Subordination, Poverty And The State In Modern India ಪುಸ್ತಕದಿಂದ ಆಯ್ದ ಭಾಗ)

ಜಾತಿ ಗಣತಿಯ ವಿವಾದದ ಧೂಳು ಝಾಡಿಸುತ್ತಾ…..

– ದಿನೇಶ್ ಅಮಿನ್ ಮಟ್ಟು

ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ ಆರ್ಥಿಕ ಸಮೀಕ್ಷೆಗೆ ಸಂಬಂಧಿಸಿದ ಕೆಲವು ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿದ್ದ ನಾನು ಮಾತನಾಡಲು ಮಾಡಿಕೊಂಡ ಟಿಪ್ಪಣಿಗಳು ಇವು. ಈ ಸಮೀಕ್ಷೆ ಬಗ್ಗೆ ಸದುದ್ದೇಶ ಮತ್ತು ದುರುದ್ದೇಶದಿಂದ ಎತ್ತಿರುವ ಕೆಲವು ಪ್ರಶ್ನೆಗಳಿಗಾದರೂ ಉತ್ತರಿಸಲು ಇದು ನೆರವಾಗಬಹುದುdinesh-aminmattu.

1. ಜಾತಿ ಗಣತಿಗೆ ಅವಕಾಶ ಇದೆಯೇ?
ಮೊದಲನೆಯದಾಗಿ, ಸಾಮಾಜಿಕ ನ್ಯಾಯದ ಹೋರಾಟದ ಭಾಗವಾದ ಜಾತಿ ಆಧರಿತ ಮೀಸಲಾತಿ ಮತ್ತು ಜಾತಿ ಗುರುತಿಸಲು ನೆರವಾಗುವ ಜಾತಿಗಣತಿಗೆ ಸಂಬಂಧಿಸಿದ ಸರ್ಕಾರದ ನಿರ್ಧಾರಗಳ ಹಿಂದೆ ನಿರ್ಣಾಯಕ ಪಾತ್ರವನ್ನು ವಹಿಸುತ್ತಾ ಬಂದಿರುವುದು ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗ ಹಾಗೂ ಈ ಮೂರು ಕಂಬಗಳ ಮೇಲೆ ನಿಂತಿರುವ ಸಂವಿಧಾನ.

ಜಾತಿ, ವರ್ಣ, ಧರ್ಮ, ಲಿಂಗ, ಹುಟ್ಟಿದ ಸ್ಥಳ ಮತ್ತು ವಾಸಸ್ಥಾನಗಳನ್ನು ಮೀರಿ ಭಾರತೀಯರೆಲ್ಲರೂ ಸಮಾನರು ಎಂದು ಸಾರಿರುವ ಸಂವಿಧಾನವೇ ನಾಲ್ಕು ವರ್ಗಗಳಿಗೆ ನಿರ್ದಿಷ್ಟ ಕಾರಣಗಳಿಗಾಗಿ ‘ಸಮಾನತೆ’ಯಿಂದ ವಿನಾಯಿತಿಯನ್ನು ನೀಡಿದೆ. ಈ ನಾಲ್ಕು ವರ್ಗಗಳು ಯಾವುದು? ಮತ್ತು ಅವುಗಳ ಮುನ್ನಡೆಗೆ ಏನು ಮಾಡಬೇಕೆಂಬುದನ್ನು ಸಂವಿಧಾನದ 15 (3), 15 (4) 16 (4) ಮತತು 46ನೇ ಪರಿಚ್ಛೇದ ಗಳಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

ಸಂವಿಧಾನದ 15(3)ನೇ ಪರಿಚ್ಛೇದದ ಪ್ರಕಾರ ಜಾತಿ ಧರ್ಮಗಳ ತಾರತಮ್ಯ ಮಾಡದೆ ಮಹಿಳೆ ಮತ್ತು ಮಕ್ಕಳಿಗಾಗಿ ವಿಶೇಷ ಸವಲತ್ತುಗಳನ್ನು ನೀಡಬಹುದಾಗಿದೆ. ಪರಿಚ್ಛೇದ 15 (4)ರ ಪ್ರಕಾರ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮುನ್ನ
ಡೆಗೆ ವಿಶೇಷ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ. ಪರಿಚ್ಛೇದ 16 (4) ರ ಪ್ರಕಾರ ಸರ್ಕಾರಿ ಇಲಾಖೆಗಳಲ್ಲಿ ಸೂಕ್ತ ಪ್ರಾತಿನಿಧ್ಯ ಪಡೆಯದಿರುವ ಹಿಂದುಳಿದ ವರ್ಗಗಳಿಗೆ ನೇಮಕಾತಿಯಲ್ಲಿ ಆದ್ಯತೆ ಕಲ್ಪಿಸಬಹುದಾಗಿದೆ. ದುರ್ಬಲ ವರ್ಗಗಳಿಗೆ ಮುಖ್ಯವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಶೈಕ್ಷಣಿಕ ಮತ್ತು ಆರ್ಥಿಕ ಹಿತಾಸಕ್ತಿಗಳ ರಕ್ಷಣೆಗೆ ವಿಶೇಷ ಗಮನ ನೀಡುವುದರ ಜತೆಗೆ ಸಾಮಾಜಿಕ ನ್ಯಾಯ ಮತ್ತು ಎಲ್ಲ ಬಗೆಯ ಶೋಷಣೆಗಳಿಂದ ಅವರನ್ನು ರಕ್ಷಿಸಲು ಕ್ರಮ ಕೈಗೊಳ್ಳಬೇಕೆಂದು ಸಂವಿಧಾನದ 46ನೇ ಪರಿಚ್ಛೇದ ಹೇಳಿದೆ.

ಈಗಿನ ಮೀಸಲಾತಿಗೆ ಆಧಾರವಾಗಿರುವ ಆಯೋಗಗಳ ಜಾತಿ ಗಣತಿಯ ವೈಜ್ಞಾನಿಕತೆಯನ್ನು ನಿರಂತರವಾಗಿ ಸುಪ್ರೀಂಕೋರ್ಟ್ ಪ್ರಶ್ನಿಸುತ್ತಾ ಬಂದಿದೆ. ಮಂಡಲ್ ವರದಿ ಅನುಷ್ಠಾನವನ್ನು ಪ್ರಶ್ನಿಸಿದ್ದ ಅರ್ಜಿ ವಿಚಾರಣೆಯಿಂದ, ಯುಪಿಎ ಸರ್ಕಾರ ನೀಡಿದ ಉನ್ನತ ಶಿಕ್ಷಣದಲ್ಲಿನ ಮೀಸಲಾತಿ ವಿರುದ್ಧದ ಅರ್ಜಿಯ ವಿಚಾರಣೆ ವರೆಗೆ ಎಲ್ಲ ಪ್ರಕರಣಗಳಲ್ಲಿಯೂ ಸುಪ್ರೀಂ ಕೋರ್ಟ್ ಮೀಸಲಾತಿಗೆ ಆಧಾರವಾಗಿರುವ ಜಾತಿ ಮಾಹಿತಿಯನ್ನು ಪ್ರಶ್ನಿಸಿದೆ.

‘ವೈಜ್ಞಾನಿಕವಾಗಿ ಸಂಗ್ರಹಿಸಿರುವ ಜಾತಿ ಗಣತಿ ಬೇಕು ಮತ್ತು ಹಿಂದುಳಿದ ವರ್ಗಗಳ ಗುಂಪಿಗೆ ಯಾವ ಜಾತಿಯ ಸೇರ್ಪಡೆಯಾಗಬೇಕು, ಬೇರ್ಪಡೆಯಾಗಬೇಕು ಎನ್ನುವುದನ್ನು ತೀರ್ಮಾನಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶಾಶ್ವತ ಹಿಂದುಳಿದ ಆಯೋಗಗಳನ್ನು ರಚಿಸಬೇಕು’ ಎಂದು ಸುಪ್ರೀಂ ಕೋರ್ಟ್ ಇಂದಿರಾ ಸಾಹ್ನಿ ಪ್ರಕರಣದಲ್ಲಿ (ಮಂಡಲ್ ವರದಿ ಪ್ರಕರಣ) 23 ವರ್ಷಗಳ ಹಿಂದೆ ನೀಡಿದ್ದ ತೀರ್ಪಿನಲ್ಲಿ ಹೇಳಿತ್ತು.

ಜಾತಿ ಗಣತಿ ಯಾಕೆ ಬೇಕು?
ಸಂವಿಧಾನ ವಿಶೇಷವಾಗಿ ಗುರುತಿಸಿರುವ ವರ್ಗಗಳ ಪೈಕಿ ಮಹಿಳೆ, ಮಕ್ಕಳು ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಜನಸಂಖ್ಯೆಯ ಲೆಕ್ಕ ಹತ್ತುವರ್ಷಗಳಿಗೊಮ್ಮೆ ನಡೆಯುವ ಜನಗಣತಿಯಲ್ಲಿ ಸಿಗುತ್ತದೆ. ಆದರೆ ಸಂವಿಧಾನ ಹೇಳಿರುವ ಹಿಂದುಳಿದ ವರ್ಗಗಳು ಯಾವುದು? ಅದರ ರೂಪ,ಗಾತ್ರ, ಸ್ಥಿತಿಗತಿ ಏನು? ಜನಗಣತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳನ್ನು ಹೊರತುಪಡಿಸಿ ಹಿಂದೂ ಧರ್ಮಕ್ಕೆ ಸೇರಿರುವ ಉಳಿದೆಲ್ಲ ಜಾತಿಗಳನ್ನು ‘ಹಿಂದೂ’ ಹೆಸರಿನಡಿಯಲ್ಲಿಯೇ ಸೇರಿಸಲಾಗುತ್ತದೆ. ಆದರೆ ಕೇಂದ್ರ ಮತ್ತು ರಾಜ್ಯಗಳಲ್ಲಿ ಹಿಂದುಳಿದ ಜಾತಿಗಳಿಗೆ ಪ್ರ‍ತ್ಯೇಕವಾದ ಮೀಸಲಾತಿ ಕಲ್ಪಿಸಲಾಗಿದೆ, ಯೋಜನೆಗಳನ್ನು ರೂಪಿಸಲಾಗಿದೆ. ಇದಕ್ಕೆ ಅರ್ಹ ಫಲಾನುಭವಿಗಳನ್ನು ಗುರುತಿಸುವುದು ಹೇಗೆ? ಜಾತಿ ಗಣತಿ ಅಲ್ಲದೆ ಬೇರೆ ಮಾರ್ಗ ಇದೆಯೇ?

ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಲವಾರು ಯೋಜನೆಗಳು ಜಾತಿ ಆಧಾರಿತವಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಕುರುಬ,ನೇಕಾರ,ಈಡಿಗ, ಕ್ಷೌರಿಕ, ಮುಸ್ಲಿಮ್, ಕ್ರಿಶ್ಚಿಯನ್ ಹೀಗೆ ವಿವಿಧ ಬಗೆಯ ಜಾತಿ ಮತ್ತು ಧರ್ಮ ನಿರ್ದಿಷ್ಠ ಯೋಜನೆಗಳನ್ನು ಎಲ್ಲ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೂಪಿಸುತ್ತಾ ಬಂದಿವೆ.
ಒಂದೊಂದು ಜನವರ್ಗದ ಸಮಸ್ಯೆಗಳು ಒಂದೊಂದು ಬಗೆಯವು. ಪರಿಶಿಷ್ಟ ಜಾತಿ ಜನರ ಪಾಲಿಗೆ ಅಸ್ಪೃಶ್ಯತೆ ಎನ್ನುವುದೇ ದೊಡ್ಡ ಸಮಸ್ಯೆಯಾದರೆ, ಪರಿಶಿಷ್ಟ ಪಂಗಡಕ್ಕೆ ಅಸ್ಪೃಶ್ಯತೆಗಿಂತಲೂ ಪ್ರತ್ಯೇಕತೆ ಮತ್ತು ನಿರ್ಲಕ್ಷ್ಯದ ಸಮಸ್ಯೆ. ಹಿಂದುಳಿದ ಜಾತಿ ಜನರ ಸಮಸ್ಯೆ ಅಸ್ಪೃಶ್ಯತೆ ಅಲ್ಲ ಅವಕಾಶ ಮತ್ತು ಪ್ರಾತಿನಿಧ್ಯದ ಸಮಸ್ಯೆ. ಅಲ್ಪಸಂಖ್ಯಾತರನ್ನು ಭೀತಿಗೀಡುಮಾಡಿರುವುದು ಕೋ
ಮುವಾದ. ಮಹಿಳೆಯರ ಪಾಲಿಗೆ ಲಿಂಗತಾರತಮ್ಯವೇ ದೊಡ್ಡ ಸಮಸ್ಯೆ.

ನೇಕಾರರಿಗೆ ಕೈಮಗ್ಗದ ಸುಧಾರಣೆಗೆ ಪ್ಯಾಕೇಜ್ ಬೇಕು, ಮಡಿವಾಳರಿಗೆ ದೋಬಿಘಾಟ್ ನಿರ್ಮಾಣವಾಗಬೇಕು. ಕ್ಷೌರಿಕರಿಗೆ ಸಲೂನ್ ಗಳನ್ನು ತೆರೆಯಲು ಆರ್ಥಿಕ ನೆರವು ಬೇಕು, ಕುರುಬರಿಗೆ ಕುರಿಸಾಕಾಣಿಕೆಗೆ ಕಾರ್ಯಕ್ರಮಗಳ ಅವಶ್ಯಕತೆ ಇದೆ. ಮೀನುಗಾರರಲ್ಲಿ ಮೀನುಗಾರಿಕೆಯ ಸಮಸ್ಯೆಗಳಿವೆ. ಜಾತಿವಾರು ಆರ್ಥಿಕ-ಶೈಕ್ಷಣಿಕ ಸಮೀಕ್ಷೆಯ ಮೂಲಕ ಪಡೆಯುವ ಮಾಹಿತಿ ಇಲ್ಲದೆ ಇವರ ಸಮಸ್ಯೆಗಳನ್ನು ಬಗೆಹರಿಸುವುದು ಹೇಗೆ, ಇವರ ಬೇಡಿಕೆಗಳನ್ನು ಈಡೇರಿಸುವುದು ಹೇಗೆ?

ಇವರನ್ನೆಲ್ಲ ಒಂದೇ ಗುಂಪು ಮಾಡಿ ಇವರೆಲ್ಲರೂ ಶೋಷಿತರು, ಅವಕಾಶ ವಂಚಿತರು ಎನ್ನುವ ವರ್ಗದಡಿಯಲ್ಲಿ ಕೂಡಿಹಾಕಿ ರಾಷ್ಟ್ರಮಟ್ಟದ ಒಂದು ಸಾಮಾನ್ಯ ಯೋಜನೆಯ ಮೂಲಕ ಇವರ ಅಭಿವೃದ್ಧಿ ಮಾಡಲು ಸಾಧ್ಯ ಇಲ್ಲ. ಅರಮನೆ ಮೈದಾನದಲ್ಲಿ ಶೋಷಿತರೆಲ್ಲರ ಸಭೆ ಕರೆದು ಸಮಸ್ಯೆಗಳನ್ನೆಲ್ಲ ಚರ್ಚಿಸಲು ಸಾಧ್ಯ ಇಲ್ಲ. ಇಲ್ಲದೆ ಇದ್ದರೆ ಹಿಂದೂ, ಮುಸ್ಲಿಮ್, ದಲಿತ ಸಮಾವೇಶ ನಡೆಸಿಯೂ ಈ ವರ್ಗಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದು. ಯಾಕೆಂದರೆ ಇಲ್ಲಿರುವುದು ಜಾತಿನಿರ್ದಿಷ್ಟ ಸಮಸ್ಯೆಗಳು.

ಆದರೆ ಸ್ವತಂತ್ರ ಭಾರತದಲ್ಲಿ ವೈಜ್ಞಾನಿಕ ರೀತಿಯಲ್ಲಿ ಸಮಗ್ರ ಸ್ವರೂಪದ ಜಾತಿಗಣತಿ ನಡೆದೇ ಇಲ್ಲವಾದ ಕಾರಣ ಧರ್ಮ ಮತ್ತು ಜಾತಿ ನಿರ್ದಿಷ್ಟವಾದ ಎಲ್ಲ ಜನಕಲ್ಯಾಣ ಕಾರ್ಯಕ್ರಮಗಳು ವಿಶ್ವಾಸಾರ್ಹ ಅಲ್ಲದ ತಪ್ಪುಗಳಿಂದ ಕೂಡಿದ ಜಾತಿ ಮಾಹಿತಿಯ ಆಧಾರದಲ್ಲಿ ಅನುಷ್ಠಾನಗೊಂಡು ಸಾರ್ವಜನಿಕರ ತೆರಿಗೆ ಹಣ ಪೋಲಾಗುತ್ತಿದೆ.

ಸಾಚಾರ್ ವರದಿ ಜಾರಿಯಾಗುವ ಮೊದಲು ಮುಸ್ಲಿಮರು ರಾಜಕೀಯ ಓಲೈಕೆಯಿಂದಾಗಿ ಮಿತಿಮೀರಿ ಬೆಳೆದುಬಿಟ್ಟಿದ್ದಾರೆ. ಸರ್ಕಾರದ ಬಜೆಟ್ ಹಣದ ಬಹುಪಾಲು ಮುಸ್ಲಿಮರ ಪಾಲಾಗುತ್ತಿದೆ ಎನ್ನುವ ಅಪಪ್ರಚಾರ ವ್ಯಾಪಕವಾಗಿ ನಡೆದಿತ್ತು. ಆದರೆ ಮುಸ್ಲಿಮರ ಸಾಮಾಜಿಕ-ಆರ್ಥಿಕ-ಶೈಕ್ಷಣಿಕೆ ಸಮೀಕ್ಷೆ ನಡೆಸಿದ ಸಾಚಾರ್ ಸಮಿತಿ ಬಯಲುಗೊಳಿಸಿದ ಸತ್ಯವೇ ಬೇರೆ. ಆರ್ಥಿಕ ಮತ್ತು ಶೈಕ್ಷಣಿಕವಾಗಿ ಮುಸ್ಲಿಮರು ದಲಿತರಿಗಿಂತಲೂ ನಿಕೃಷ್ಟ ಸ್ಥಿತಿಯಲ್ಲಿದ್ದಾರೆ ಎಂದು ಸಾಚಾರ ವರದಿ ಹೇಳಿತ್ತು.

ಜಾತಿ ಗಣತಿಯಿಂದ ಜಾತೀಯತೆ ಹೆಚ್ಚಾಗುವುದಿಲ್ಲವೇ?

1931ರಿಂದ ಇಲ್ಲಿಯ ವರೆಗೆ ಜಾತಿ ಗಣತಿ ನಡೆದೇ ಇಲ್ಲ. ಹಾಗಿದ್ದರೆ ಜಾತಿ ನಾಶವಾಗಬೇಕಿತ್ತಲ್ಲವೇ? ಯಾಕೆ ಅದು ಹೆಚ್ಚಾಯಿತು? ಕಳೆದ 65 ವರ್ಷಗಳಿಂದ ಹಿಂದು,ಮುಸ್ಲಿಮ್,ಕ್ರಿಶ್ಚಿಯನ್ ಬೌದ್ಧ ,ಜೈನ ಹೀಗೆ ಧರ್ಮಗಣತಿ ಅರ್ಥಾತ್ ಕೋಮುಗಣತಿ ನಡೆಯುತ್ತಿದೆ. ದೇಶವನ್ನು ತಲ್ಲಣಕ್ಕೀಡು ಮಾಡುತ್ತಿರುವ ಕೋಮುವಾದಕ್ಕೆ ಈ ಧರ್ಮ ಇಲ್ಲವೆ ಕೋಮು ಗಣತಿ ಕಾರಣವೆಂದು ಹೇಳಬಹುದೇ?

ಕಳೆದ 60 ವರ್ಷಗಳಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನಗಣತಿ ನಡೆಯುತ್ತಿದೆ. ಇದರಿಂದಾಗಿ ದಲಿತರಲ್ಲಿ ಜಾತೀಯತೆ ಹೆಚ್ಚಾಗಿ ಅದರಿಂದಾಗಿ ದಲಿತರ ಶೋಷಣೆ ಮತ್ತು ದೌರ್ಜನ್ಯ ನಡೆಯುತ್ತಿದೆ ಎಂದು ಹೇಳಬಹುದೇ? ಮುಸ್ಲಿಮರ ಸಾಮಾಜಿಕ, ಆರ್ಥಿಕ ಸ್ಥಿತಿಗತಿಯನ್ನು ತೆರೆದಿಟ್ಟ ಸಾಚಾರ್ ವರದಿಯಿಂದಾಗಿ ಮುಸ್ಲಿಮರಲ್ಲಿ ಕೋಮುವಾದ ಬೆಳೆಯಿತೆಂದು ಹೇಳಬಹುದೇ?

ಜಾತಿ ಬೇಡ ಎನ್ನುವುದು ಒಂದು ಪುರೋಗಾಮಿ ನಿಲುವು, ಜಾತಿ ಇಲ್ಲ ಎನ್ನುವುದು ಆತ್ಮವಂಚನೆ. ನಮ್ಮದು ಆತ್ಮವಂಚಕ ಸಮಾಜ. ಇಲ್ಲಿ ಜಾತಿ ಇದೆ ಎನ್ನುವುದನ್ನು ಒಪ್ಪಿಕೊಳ್ರಯ್ಯಾ ಎನ್ನುವವರನ್ನು ಜಾತಿವಾದಿಗಳೆಂದು ಗೇಲಿಮಾಡಲಾಗುತ್ತಿದ್ದೆ. ಅಯ್ಯೋ ಎಲ್ಲಿದೆ ಜಾತಿ ಎಂದು ಉಡಾಫೆಯ ದನಿಯಲ್ಲಿ ಮಾತನಾಡುತ್ತಾ ಒಳಗಡೆ ಜಾತಿ ಎನ್ನುವ ರೋಗವನ್ನು ಕಟ್ಟಿಕೊಂಡಿರುವವರನ್ನು ಜಾತ್ಯತೀತರೆಂದು ಬಣ್ಣಿಸಲಾಗುತ್ತದೆ.

ಜಾತಿ ಮತ್ತು ಜಾತೀಯತೆ ಮೊದಲಿನಿಂದಲೂ ಇತ್ತು. ಆದರೆ ಈ ಪಟ್ಟಭದ್ರ ಜಾತಿಯನ್ನು ಯಾರೂ ಪ್ರಶ್ನಿಸದೆ ಇದಕ್ಕೆ ಶರಣಾಗಿ ಒಪ್ಪಿಕೊಂಡಿದ್ದಾಗ ಯಾರಿಗೂ ಜಾತಿ ಕಾಣಿಸುತ್ತಿರಲಿಲ್ಲ. ಜಾತಿಯಿಂದ ನೊಂದವರು ನೋವುಣ್ಣುತ್ತಿರುವವರು ಅದನ್ನು ಪ್ರಶ್ನಿಸಿದ ಕೂಡಲೇ ಜಾತಿ ಕಾಣಿಸತೊಡಗಿದೆ. ಪ್ರಶ್ನಿಸುತ್ತಿರುವವರು ಜಾತಿವಾದಿಗಳಾಗಿ ಕಾಣಿಸತೊಡಗಿದ್ದಾರೆ.

ಜಾತಿ ಎಂದರೆ ಏನು? ಎಲ್ಲಿಂದ ಬಂತು? ಹೇಗೆ ಹುಟ್ಟಿಕೊಂಡಿತು ಎನ್ನುವುದರ ಬಗ್ಗೆ ಹಲವಾರು ವ್ಯಾಖ್ಯಾನಗಳಿವೆ. ಇವುಗಳಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಪ್ರತಿಪಾದಿಸಿದ ಸಿದ್ಧಾಂತ ಮಹತ್ವದ್ದು. ಅವರ ಪ್ರಕಾರ ಜಾತಿ ಎನ್ನುವುದು ತಲೆಮರೆಸಿಕೊಂಡ ವರ್ಗ.

‘ಜಾತಿ ಪ್ರಶ್ನಾತೀತವೂ ಅಲ್ಲ, ದೋಷಾತೀತವೂ ಅಲ್ಲ. ಜಾತಿ ಕೂಡಾ ತನ್ನ ಒಡಲಲ್ಲಿ ವರ್ಗವನ್ನು ಬೆಚ್ಚಗೆ ಕಾಯ್ದುಕೊಂಡು ಬರುತ್ತದೆ.ತನ್ನ ಶ್ರಮ ಮತ್ತು ಪ್ರಯತ್ನದ ಮೂಲಕ ಒಂದು ವರ್ಗದಿಂದ ಮತ್ತೊಂದು ವರ್ಗಕ್ಕೆ ಏರುವ ಮತ್ತು ಇಳಿಯುವ ಸಾಧ್ಯತೆಯನ್ನು ನಿರಾಕರಿಸುವುದೇ ಜಾತಿಯ ಉದ್ದೇಶ ಎಂದು ಅಂಬೇಡ್ಕರ್ ಅಭಿಪ್ರಾಯಪಡುತ್ತಾರೆ.

ಇದರಿಂದಾಗಿ ಒಬ್ಬ ಕ್ಷೌರಿಕ, ನೇಕಾರ,ಕುರುಬ, ಈಡಿಗ ತನ್ನ ಜಾತಿ ಕಸುಬನ್ನು ತೊರೆದು ಬೇರೆ ವೃತ್ತಿ ಮಾಡಿದರೂ ಆತನನ್ನು ಆತ ಹುಟ್ಟಿದ ಜಾತಿಯಿಂದಲೇ ನೋಡಲಾಗುತ್ತದೆ. ಜಾತಿ ಅವನ ಚರ್ಮಕ್ಕೆ ಅಂಟಿರುತ್ತದೆ. ಅದೇ ರೀತಿ ಒಬ್ಬ ಮೇಲ್ಜಾತಿಯವ ಬ್ಯೂಟಿಪಾರ್ಲರ್, ಬಾರ್ ಎಂಡ್ ರೆಸ್ಟೋರೆಂಟ್ ಇಟ್ಟುಕೊಂಡರೂ ಅವರು ಜಾತಿಯ ಶ್ರೇಣಿಯಿಂದ ಕೆಳಗಿಳಿಯುವುದಿಲ್ಲ.

ಜಾತಿ ಎನ್ನವುದು ಒಂದು ರಾಜಕೀಯ ಪಕ್ಷ ಇಲ್ಲವೇ ಯುವಕ ಸಂಘ ಅಲ್ಲ. ಜಾತಿವ್ಯವಸ್ಥೆಯ ಸದಸ್ಯತ್ವ ಮುಕ್ತವಾಗಿಲ್ಲ. ಹುಟ್ಟಿನ ಆಧಾರದಲ್ಲಿ ಜಾತಿಯ ಸದಸ್ಯತ್ವ ನಿರ್ಧಾರವಾಗುತ್ತದೆ. ಅದರ ಸದಸ್ಯರಾದವರು ಅದರಿಂದ ಬಿಡುಗಡೆ ಪಡೆಯುವ ಹಾಗಿಲ್ಲ.

ಜಾತಿಯ ಮುಖ್ಯ ಲಕ್ಷಣವೇ ತಾರತಮ್ಯ. ಪ್ರತಿಯೊಂದು ಜಾತಿಗೂ ಒಂದು ಶ್ರೇಣಿ ಇದೆ. ಈ ಶ್ರೇಣಿಕೃತ ವ್ಯವಸ್ಥೆಯೇ ಜಾತಿ. ಎಲ್ಲರೂ ಎಲ್ಲರನ್ನು ಮುಟ್ಟಲಾಗದ, ಜತೆಯಲ್ಲಿ ಕೂತು ಊಟ ಮಾಡಲಾಗದ ಎಲ್ಲರೂ ಎಲ್ಲ ಉದ್ಯೋಗ ಮಾಡಲಾಗದ, ಎಲ್ಲರೂ ಎಲ್ಲ ಮನೆಯನ್ನು ಪ್ರವೇಶಿಸಲಾಗದ ವ್ಯವಸ್ಥೆಯೇ ಜಾತಿ. ನಿರ್ದಿಷ್ಟ ಜಾತಿಯಲ್ಲಿ ಹುಟ್ಟಿದ ಕಾರಣಕ್ಕೆ ಒಬ್ಬ ಉತ್ತಮನಾಗುತ್ತಾನೆ, ಇನ್ನೊಬ್ಬ ಅಧಮನಾಗುತ್ತಾನೆ. ಹಿಂದಿನ ಕಾಲದಲ್ಲಿ ಜಾತಿ ಎನ್ನುವುದು ಶ್ರೇಣಿಕೃತ ವ್ಯವಸ್ಥೆಗಷ್ಟೇ ಕಾರಣವಾಗಿದ್ದರೆ ಈಗ ಅದು ಸಾರ್ವಜನಿಕ ಮತ್ತು ಖಾಸಗಿ ಸವಲತ್ತುಗಳನ್ನು ಹಂಚುವ ವಿತರಣಾ ವ್ಯವಸ್ಥೆಯಾಗಿದೆ.

ಜಾತಿ ಗಣತಿಯಿಂದ ಜಾತಿ ನಾಶ ಸಾಧ್ಯವೇ?
ಸಂಪೂರ್ಣ ಸಾಧ್ಯ ಇಲ್ಲದೆ ಇದ್ದರೂ ಜಾತಿ ನಾಶದ ಹಾದಿಯಲ್ಲಿ ಇದೊಂದು ಉತ್ತಮ ಪ್ರಯತ್ನ ಎಂದು ಹೇಳಬಹುದು. ಇದೊಂದು ವಿಚಿತ್ರವಾದ ವಾದವೆಂದು ಮೇಲ್ನೋಟಕ್ಕೆ ಅನಿಸಬಹುದು. ಜಾತಿಯ ಎರಡು ಅನಿಷ್ಠ ಲಕ್ಷಣಗಳೆಂದರೆ ಅಸ್ಪೃಶ್ಯತೆ ಮತ್ತು ಅಸಮಾನತೆ. ಅಸ್ಪೃಶ್ಯತೆ ಆಚರಣೆಯನ್ನು ಕಾನೂನಿನ ಮೂಲಕ ನಿಷೇಧಿಸಲಾಗಿದೆ. ಅಂತಿಮವಾಗಿ ಈ ಮಾನವ ವಿರೋಧಿ ನಡವಳಿಕೆ ಕೂಡಾ ಮನುಷ್ಯನ ಮನಪರಿರ್ತನೆಯಿಂದ ಆಗುವಂತಹದ್ದು. ಇಲ್ಲದೆ ಹೋದರೆ ಈಗಿನಂತೆ ಗೋಚರ ಅಸ್ಪೃಶ್ಯತೆ ಕಡಿಮೆಯಾಗಿ, ಅಗೋಚರ ಅ
ಸ್ಪೃಶ್ಯತೆ ಹೆಚ್ಚಾಗುತ್ತದೆ.

ಜಾತಿಯ ಇನ್ನೊಂದು ಅನಿಷ್ಠ ಲಕ್ಷಣವಾದ ಅಸಮಾನತೆಯನ್ನು ಆರ್ಥಿಕ ಸಬಲೀಕರಣದ ಮೂಲಕ ನಿವಾರಿಸಲು ಸಾಧ್ಯ. ಇದರಿಂದ ಜಾತಿ ಸಂಪೂರ್ಣವಾಗಿ ನಾಶವಾಗದೆ ಇದ್ದರೂ ಅದರ ಪರಿಣಾಮ ಮತ್ತು ಪ್ರಭಾವ ಕಡಿಮೆಯಾಗಬಹುದು.

ಉದಾಹರಣೆಗೆ, ಹಳ್ಳಿಯಲ್ಲಿರುವ ಒಬ್ಬ ಸಾಮಾನ್ಯ ದಲಿತ ಮತ್ತು ಐಎ ಎಸ್-ಐಪಿಎಸ್ ದಲಿತನನ್ನು ಒಂದೇ ದೃಷ್ಟಿಕೋನದಲ್ಲಿ ಸಮಾಜ ನೋಡುವುದಿಲ್ಲ.ಐಎಎಸ್-ಐಪಿಎಸ್ ದಲಿತ ಅಧಿಕಾರಿಯನ್ನು ಯಾವುದೇ ಮುಜುಗರ ಇಲ್ಲದೆ ಬ್ರಾಹ್ಮಣರು ಸೇರಿದಂತೆ ಮೇಲ್ಜಾತಿ ಹೆಣ್ಣುಮಕ್ಕಳು ಮದುವೆಯಾಗಿಬಿಡುತ್ತಾರೆ. (ಉದಾಹರಣೆಯ ಅಗತ್ಯ ಇಲ್ಲ ಎಂದೆನಿಸುತ್ತದೆ). ಆದರೆ ಹಳ್ಳಿಯಲ್ಲಿರುವ ಒಬ್ಬ ಬಡ ದಲಿತ ಯುವಕ ಮೇಲ್ಜಾತಿಯ ಯುವತಿಯನ್ನು ಪ್ರೀತಿಸಿ ಮದುವೆಯಾದರೂ ಆತನನ್ನು ಸಾಯಿಸಿಬಿಡುತ್ತಾರೆ. (ಇದಕ್ಕೂ ಉದಾಹರಣೆ ಬೇಡ ಎಂದೆನಿಸುತ್ತದೆ).

ಬಡತನ ಮತ್ತು ಶ್ರೀಮಂತಿಕೆಗೆ ಜಾತಿ ಇಲ್ಲ ಎನ್ನುವುದು ಎಷ್ಟು ನಿಜವೋ, ಶ್ರೀಮಂತಿಕೆ ಮತ್ತು ಬಡತನಕ್ಕೆ ಜಾತಿ ಕೂಡಾ ಕಾರಣ ಎನ್ನುವುದು ಅಷ್ಟೇ ನಿಜ. ಬಿಪಿಎಲ್ ವರ್ಗಕ್ಕೆ ಸೇರಿರುವ ಕುಟುಂಬಗಳ ಸಮೀಕ್ಷೆ ನಡೆಸಿದರೆ ಅವರಲ್ಲಿ ಬಹುಸಂಖ್ಯೆಯಲ್ಲಿ ದಲಿತ,ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗಕ್ಕೆ ಸೇರಿರುವ ಕುಟುಂಬಗಳೇ ಹೆಚ್ಚಿರುವುದನ್ನು ಕಾಣಬಹುದು.

ಜಾತಿ ವ್ಯವಸ್ಥೆಯನ್ನು ಯಾರು ನಾಶ ಮಾಡಬೇಕು? ಜಾತಿಯಿಂದಾಗಿ ಅನ್ಯಾಯ, ಅವಮಾನ,ಹಿಂಸೆ, ಉಪವಾಸ ಅನುಭವಿಸಿದವರೋ ಇಲ್ಲವೇ ಜಾತಿಯ ಬಲದಿಂದ ಶ್ರಮ ಇಲ್ಲದ ಆದಾಯ, ಅರ್ಹತೆ ಇಲ್ಲದೆ ಸ್ಥಾನಮಾನ, ಮತ್ತು ಜನಬೆಂಬಲ ಇಲ್ಲದ ಅಧಿಕಾರ ಪಡೆದವರೋ? ಜಾತಿಯನ್ನು ಯಾರಾದರೂ ಅಪರಾಧ ಎಂದು ಪರಿಗಣಿಸುವುದಾದರೆ ಅದನ್ನು ತೊಡೆದುಹಾಕುವ ಪ್ರಯತ್ನವನ್ನುಮೊದಲು ಜಾತಿಯ ಅಪರಾಧಿಗಳು ಮಾಡಬೇಕೇ ಹೊರತು ಜಾತಿ ವ್ಯವಸ್ಥೆಗೆ ಬಲಿಯಾದವರಲ್ಲ.ಜಾತೀಯತೆಗೆ ಬಲಿಯಾದವರು ಜಾತಿ ಬಿಡುತ್ತೇನೆ ಎಂದರೂ ಜಾತಿ ಅವರನ್ನು ಬಿಡುವುದಿಲ್ಲ, ಕಳೆದುಕೊಂಡವರು ತ್ಯಾಗ ಮಾಡಲಿಕ್ಕಾಗುವುದಿಲ್ಲ ಪಡೆದುಕೊಂಡವರು ಮಾಡಬೇಕು.

ಜಾತೀಯತೆ ಅಳಿಯುವುದು ಜಾತಿ ಕುರುಡಿನಿಂದಲ್ಲ, ಕಣ್ತೆರೆದು ಅದಕ್ಕೆ ಮುಖಾಮುಖಿಯಾಗುವ ಮೂಲಕ. ಜಾತಿಯನ್ನು ಕಣ್ಣುಬಿಟ್ಟು, ಭಯಬಿಟ್ಟು ,ಎದೆಗೆ ಕಿವಿಕೊಟ್ಟು ಎದುರಿಸಬೇಕು. ತಿಳಿದುಕೊಳ್ಳಬೇಕು. ಇದನ್ನು ಮಾಡುತ್ತಲೇ ಅದರ ನಾಶಕ್ಕೆ ಪ್ರಯತ್ನ ಮಾಡಬೇಕು.ಜಾತಿ ಎನ್ನುವುದು ಒಂದು ರೋಗ. ರೋಗಕ್ಕೆ ಚಿಕಿತ್ಸೆ ನೀಡಬೇಕಾದರೆ ಮೊದಲು ರೋಗಿ ರೋಗ ಇದೆ ಎನ್ನುವುದನ್ನು ಒಪ್ಪಿಕೊಳ್ಳಬೇಕು. ಅದೇ ರೀತಿ ಜಾತಿರೋಗವನ್ನು ಸಮಾಜ ಒಪ್ಪಿಕೊಳ್ಳಬೇಕು. ಮೀಸಲಾತಿ ಎನ್ನುವುದು ಔಷಧಿಯಾದರೆ ಜಾತಿ ಗಣತಿ ಎಂದರೆ ರೋಗ ನಿದಾನ, ಡಯಗ್ನಾಸಿಸ್. ಮೇಲ್ಜಾತಿ ಮನಸ್ಸುಗಳು ಮೇಲರಿಮೆಯ ಶ್ರೇಷ್ಟತೆಯ ವ್ಯಸನದಿಂದ ಮುಕ್ತರಾಗಬೇಕು, ಅದೇ ರೀತಿ ತಳಸಮುದಾಯದ ಮನಸ್ಸುಗಳು ಕೀಳರಿಮೆಯ ದೈನೇಸಿ ಭಾವದಿಂದ ಬಿಡುಗಡೆ ಹೊಂದಬೇಕು.

ಜಾತಿ ಗಣತಿಯಿಂದ ಮೀಸಲಾತಿಯ ಬೇಡಿಕೆ ಹೆಚ್ಚಾಗುವುದೇ?
ಖಂಡಿತ ಹೆಚ್ಚಾಗುವುದಿಲ್ಲ. ಮೀಸಲಾತಿಗೆ ಅರ್ಹವಾದ ಜಾತಿಗಳು ತಿಪ್ಪರಲಾಗ ಹಾಕಿದರೂ ಒಟ್ಟು ಮೀಸಲಾತಿಯ ಪ್ರಮಾಣ ಶೇಕಡಾ 50 ಅನ್ನು ಮೀರಿಲ್ಲ. ಹಾಗೆಂದು ಸುಪ್ರೀಂಕೋರ್ಟ್ ತೀರ್ಪು ನೀಡಿಬಿಟ್ಟಿದೆ. ಆದರೆ ಜಾತಿಗಣತಿಯಿಂದ ಮೀಸಲಾತಿಯ ದುರುಪಯೋಗವನ್ನು ತಡೆಯಬಹುದಾಗಿದೆ. ಇದರ ಉದ್ದೇಶ ಮೀಸಲಾತಿಯನ್ನು ವಿಸ್ತರಿಸುವುದಲ್ಲ, ಮೀಸಲಾತಿಯ ದುರುಪಯೋಗವನ್ನು ತಡೆದು ಅದರ ಲಾಭ ಅರ್ಹರಿಗೆ ತಲುಪುವಂತೆ ಮಾಡುವುದು.

ಮೀಸಲಾತಿ ದುರುಪಯೋಗದ ಹಲವಾರು ಪ್ರಕರಣಗಳು ಇತ್ತೀಚೆಗೆ ವ್ಯಾಪಕವಾಗಿ ಚರ್ಚೆಗೀಡಾಗಿವೆ. 2009ರ ಅಕ್ಟೋಬರ್ 27ರಂದು ಹಿಂದಿನ ಬಿಜೆಪಿ ಸರ್ಕಾರ ವೀರಶೈವ/ಲಿಂಗಾಯತ ಉಪಜಾತಿಗಳಾದ ಕುಡುಒಕ್ಕಲ, ಲಾಳಗೊಂಡ, ಹೂಗಾರ, ಆದಿಬಣಜಿಗ, ಬಣಗಾರ, ಗಾಣಿಗ, ನಗರ್ತ, ವೀರಶೈವ ಜಂಗ, ವೀರಶೈವ ಬೇಡುವ ಜಂಗಮ, ಶಿವಚಾರ ನಗರ್ತ, ಆದಿವೀರಶೈವ, ವೀರಶೈವ ಪಂಚಮಸಾಲಿ, ಕುರುಹಿನಶೆಟ್ಟಿ/ನೇಕಾರ/ಜಾಡ, ವೀರಶೈವ ಸಿಂಪಿ, ರೆಡ್ಡಿ ,ಸಾದರ, ಆರಾಧ್ಯ, ಗುರುವ/ಗುರವ ಈ 19 ಉಪಜಾತಿಗಳನ್ನು ಪ್ರವರ್ಗ -3 (ಬಿ) ಪಟ್ಟಿಗೆ ಸೇರಿಸಿತು.

3(ಬಿ)ಯಲ್ಲಿ ಕ್ರಿಶ್ಚಿಯನ್, ಜೈನ (ದಿಗಂಬರ), ಮರಾಠ ಜಾತಿಗಳಲ್ಲದೆ ಲಿಂಗಾಯತ ಉಪಜಾತಿಗಳಾದ ಹೆಳವ, ಅಂಬಿಗ,ಬೋಯಿ, ಗಂಗಾಮತ, ಸುಣಗಾರ, ಅಗಸ, ಮಡಿವಾಳ, ಕುಂಬಾರ,ಕುರುಬ, ಭಜಂತ್ರಿ, ಭಂಡಾರಿ, ಹಡಪದ,ನಾಯಿಂದ, ಅಕ್ಕಸಾಲಿ, ಬಡಿಗೇರ, ಕಮ್ಮಾರ, ಪಾಂಚಾಳ, ಮೇದಾರ,ಉಪ್ಪಾರ, ಗೌಳಿ ಮೊದಲಾದ ಜಾತಿಗಳಿವೆ. ಇದಕ್ಕೆ ವಿರೋಧ ವ್ಯಕ್ತವಾದ ಕಾರಣ ಯಾವುದೇ ಕಾರಣವನ್ನು ನೀಡದೆ ಸರ್ಕಾರ ತನ್ನ ಆದೇಶವನ್ನು ಹಿಂದಕ್ಕೆ ಪಡೆಯಿತು. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಪಟ್ಟಿಯಲ್ಲಿರುವ ‘ಬುಡ್ಗಜಂಗಮ’ ಎಂಬ ಅಲೆಮಾರಿ ಜಾತಿಯ ಹೆಸರಿನಲ್ಲಿ ‘ಬೇಡುವ ಜಂಗಮ’ರು ಜಾತಿ ಪ್ರಮಾಣ ಪತ್ರ ಪಡೆಯುತ್ತಿರುವುದು ಸಾಮಾನ್ಯವಾಗಿ ಬಿಟ್ಟಿದೆ.

ರಾಜ್ಯದಲ್ಲಿ ಈಗಿರುವ ಮೀಸಲಾತಿ ನೀತಿ ಪ್ರಕಾರ ಹಿಂದುಳಿದ ಜಾತಿಗಳಿಗೆ ಶೇಕಡಾ 32ರಷ್ಟು ಮೀಸಲಾತಿ ಇದೆ. ಈ ಹಿಂದುಳಿದ ಜಾತಿಗಳಲ್ಲಿ ಲಿಂಗಾಯತ ಮತ್ತು ಒಕ್ಕಲಿಗ ಉಪಜಾತಿಗಳೂ ಇವೆ ಎನ್ನುವುದು ಗಮನಾರ್ಹ. ಹಿಂದೂಗಳಲ್ಲಿರುವ ಅನೇಕ ಜಾತಿಗಳು ಲಿಂಗಾಯತ ಉಪಜಾತಿಗಳಲ್ಲಿವೆ. ಆದರೆ ಲಿಂಗಾಯತರಲ್ಲಿರುವ ಈ ಹಿಂದುಳಿದ ಉಪಜಾತಿಗಳಿಗೆ ಹಿಂದೂಗಳಲ್ಲಿರುವ ಉಪಜಾತಿಗಳಿಗೆ ಇರುವ ಪ್ರಮಾಣದ ಮೀಸಲಾತಿ ಇಲ್ಲ.

ಪ್ರವರ್ಗ 2(ಎ)ಯಲ್ಲಿ ಹಿಂದೂ ಧರ್ಮಕ್ಕೆ ಸೇರಿರುವ 103 ಉಪಜಾತಿಗಳಿಗೆ ಶೇಕಡಾ 15ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ಆದರೆ ಲಿಂಗಾಯತರಲ್ಲಿರುವ ಇದೇ ಜಾತಿಗಳಿಗೆ ಪ್ರವರ್ಗ 3(ಬಿ)ಯಲ್ಲಿ ಶೇಕಡಾ ಐದರಷ್ಟು ಮೀಸಲಾತಿ ಮಾತ್ರ ಇದೆ. ಜಾತಿ ಗಣತಿನಡೆಯಬೇಕಾಗಿರುವುದು ಮೀಸಲಾತಿ ಹೆಚ್ಚಳಕ್ಕಲ್ಲ, ಅದರ ದುರುಪಯೋಗವನ್ನು ತಡೆಯಲು ಎನ್ನುವುದು ಗಮನಾರ್ಹ.

ಜಾತಿ ಗಣತಿ ಕೋಮುವಾದಿಗಳಿಗೆ ನೆರವಾಗಬಹುದೇ?
ಜಾತಿ ಗಣತಿ ಎನ್ನುವುದು ಆರ್ ಎಸ್ ಎಸ್‍ ನ ಹಿಂದೂ ರಾಷ್ಟ್ರ ಸ್ಥಾಪನೆಯ ಪ್ರಯತ್ನಕ್ಕೆ ನೆರವಾಗಬಹುದು ಎಂದು ಕೆಲವರು ಕಳವಳ ವ್ಯಕ್ತಪಡಿಸುತ್ತಾರೆ. ನಮ್ಮ ತಥಾಕಥಿತ ಹಿಂದೂ ರಾಷ್ಟ್ರವಾದಿಗಳು ಜಾತಿಯ ಪ್ರಶ್ನೆ ಎದುರಾದಾಗ ಓಡಿಹೋಗುತ್ತಾರೆ. ಯಾಕೆಂದರೆ ಜಾತಿಯ ಜತೆ ಎದುರಾಗುವ ಅಸ್ಪೃಶ್ಯತೆ, ಅಸಮಾನತೆ, ಪಂಕ್ತಿಭೇದ, ಮೂಡನಂಬಿಕೆ, ಕಂದಾಚಾರಗಳ ಪ್ರಶ್ನೆಗಳಿಗೆ ಅವರಲ್ಲಿ ಉತ್ತರ ಇಲ್ಲ. ಇದಕ್ಕಾಗಿ ಅವರು ಜಾತಿಯ ಹುಣ್ಣನ್ನು ಒಳಗೆ ಕೊಳೆಯಲು ಬಿಟ್ಟು ಮೇಲೆ ಧರ್ಮದ ಮುಲಾಮು ಹಚ್ಚುವ ಪ್ರಯತ್ನ ಮಾಡುತ್ತಿದ್ದಾರೆ. ಜಾತಿ ಗಣತಿ ನಡೆದರೆ ಈ ಹಿಂದೂಗಳಲ್ಲಿ ಕಳೆದುಕೊಂಡವರು ಯಾರು? ಪಡೆದುಕೊಂಡವರು ಯಾರು? ಎಂಬ ಲೆಕ್ಕ ಸಿಕ್ಕಿದರೆ ಬಯಲಾಗುವುದು ಯಾರ ಮುಖಗಳು ಎನ್ನುವುದನ್ನು ಬಿಡಿಸಿ ಹೇಳಬೇಕೇ?

ಜಾತಿ ಗಣತಿಯಿಂದ ಏನು ಲಾಭ?
ಈಗಾಗಲೇ ಹೇಳಿದ ಹಾಗೆ ಸರ್ಕಾರಿ ಸೌಲಭ್ಯಗಳ ಸದ್ಬಳಕೆ ಮತ್ತು ಮೀಸಲಾತಿ ದುರುಪಯೋಗ ತಡೆಯುವ ಜತೆಗೆ ಈಗಿನ ಸರ್ಕಾರಿ ಮೀಸಲಾತಿಗಿಂತ ಆಚೆಗೆ ನೋಡಲು ಈ ಜಾತಿ ಗಣತಿ ನೆರವಾಗಬಹುದು. ಜಾತಿ ಗಣತಿ ನಡೆದರೆ ಪ್ರತಿಯೊಬ್ಬರ ಉದ್ಯೋಗದ ವಿವರ ಕೂಡಾ ಲಭ್ಯ ಇರುವುದರಿಂದ ಖಾಸಗಿ ಕ್ಷೇತ್ರಗಳಲ್ಲಿರುವ ಉದ್ಯೋಗಿಗಳ ಜಾತಿ-ಧರ್ಮದ ಬಹುಮುಖ್ಯ ಮಾಹಿತಿ ಲಭ್ಯವಾಗುತ್ತದೆ. ಇಲ್ಲಿಯ ವರೆಗೆ ಖಾಸಗಿ ಕಂಪೆನಿಗಳು ಈ ಮಾಹಿತಿಯನ್ನು ಒದಗಿಸಲು ನಿರಾಕರಿಸುತ್ತಾ ಬಂದಿವೆ.

ಸರ್ಕಾರ ಬಹುತೇಕ ತನ್ನ ಸೇವೆಗಳನ್ನು ಖಾಸಗಿಕರಣಗೊಳಿಸಿರುವುದರಿಂದ ಸರ್ಕಾರಿ ಉದ್ಯೋಗಗಳ ಸಂಖ್ಯೆ ಕ್ಷೀಣಿಸುತ್ತಿದೆ. ಈ ಪರಿಸ್ಥಿತಿಯಲ್ಲಿ ಮೀಸಲಾತಿಯನ್ನು ಖಾಸಗಿ ಕ್ಷೇತ್ರಕ್ಕೆ ವಿಸ್ತರಿಸದೆ ನಿರುದ್ಯೋಗ ನಿವಾರಣೆ, ಉದ್ಯೋಗದ ಸಮಾನ ಅವಕಾಶ ಸಾಧ್ಯ ಇಲ್ಲ.

ಖಾಸಗಿ ಎನ್ನುವುದು ಎಷ್ಟು ಖಾಸಗಿ ಎನ್ನುವ ಪ್ರಶ್ನೆಯನ್ನು ಕೂಡಾ ನಾವು ಕೇಳಬೇಕಾಗಿದೆ. ಸರ್ಕಾರ ನೀಡುವ ಅಗ್ಗದ ದರದಲ್ಲಿ ಭೂಮಿ, ಕಡಿಮೆ ಬಡ್ಡಿದರದಲ್ಲಿ ಸಾಲ, ಟ್ಯಾಕ್ಸ್ ಹಾಲಿಡೇ, ವಿದ್ಯುತ್, ನೀರು, ತೆರಿಗೆ ವಿನಾಯಿತಿ, ಸಬ್ಸಿಡಿ ಬೆಂಬಲ ಇಲ್ಲದೆ ಖಾಸಗಿ ಕ್ಷೇತ್ರದ ಬಂಡವಾಳ ಬೆಳೆಯಲು ಸಾಧ್ಯವೇ ಇಲ್ಲ.
ಈ ಖಾಸಗಿ ಕಂಪೆನಿಗಳಲ್ಲಿ ಷೇರುಗಳಲ್ಲಿ ತಮ್ಮ ಅಲ್ಪ ಉಳಿತಾಯವನ್ನು ಹೂಡುತ್ತಿರುವವರು ಸಾಮಾನ್ಯ ಜನರು. ಹರ್ಷದ್ ಮೆಹ್ತಾನ ವಂಚನೆಯಿಂದ, ಸತ್ಯ ಕಂಪ್ಯೂಟರ್ ನ ಮೋಸಕ್ಕೆ ಬಲಿಯಾದವರು ಅದರ ಷೇರುಗಳನ್ನು ಖರೀದಿಸಿದ್ದ ಸಾಮಾನ್ಯ ಜನ.

ಭಾರತದಲ್ಲಿ ಮೀಸಲಾತಿ ಸರ್ಕಾರಿ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿದ್ದರೆ ಅನೇಕ ದೇಶಗಳಲ್ಲಿ ಉದಾಹರಣೆಗೆ ಅಮೆರಿಕಾ, ಉತ್ತರ ಐರ್ಲಾಂಡ್, ದಕ್ಷಿಣ ಆಫ್ರಿಕಾ, ಮಲೇಷಿಯಾ ಮೊದಲಾದ ದೇಶಗಳಲ್ಲಿ ಮೀಸಲಾತಿಯಂತಹ ದೃಡ ಸಂಕಲ್ಪ (Affirmative Action) ನೀತಿಗಳು ಸಾರ್ವಜನಿಕ ಮತ್ತು ಖಾಸಗಿ ವಲಯಗಳಲ್ಲಿ ಜಾರಿಯಲ್ಲಿವೆ.

ಸರ್ಕಾರದ ವಿವಿಧ ಸವಲತ್ತುಗಳನ್ನು ಅನುಭವಿಸುವ ಸಾರ್ವಜನಿಕ ಹಣಕಾಸು ಸಂಸ್ಥೆಗಳಿಂದ ಸಾಲಪಡೆಯುವ ಎಲ್ಲ ಕೈಗಾರಿಕೆಗಳು, ವಸತಿ, ಶಿಕ್ಷಣ, ರಾಜಕೀಯ ಪಕ್ಷಗಳು ಇತ್ಯಾದಿ ಎಲ್ಲ ಕ್ಷೇತ್ರಗಳಲ್ಲಿ Affirmative Action ಜಾರಿಯಲ್ಲಿದೆ. ಇದು ಕೇವಲ ಔಪಚಾರಿಕ ಮಟ್ಟದಲ್ಲಿ ಉಳಿಯದೆ ಇವುಗಳ ಚಾಲನೆ ಮತ್ತು ಕಾರ್ಯಗತಕ್ಕೆ ಸಂಬಂದಪಟ್ಟ ಕಾನೂನುಗಳು ಮತ್ತು ಸಂಸ್ಥೆಗಳಿರುವುದನ್ನು ಕಾಣಬಹುದು.
ಅಮೆರಿಕಾದಲ್ಲಿ Equal Opportunity (employment) Laws , Equal Employment Opportunity Commission, ದಕ್ಷಿಣ ಆಫ್ರಿಕಾದಲ್ಲಿ The Promotion of Equality and Prevention of Unfair Discrimination Act 2000 ನೆದರ್ ಲ್ಯಾಂಡಿನಲ್ಲಿ ‍‍‍Fair Employment Act ಗಳಿವೆ.

ಜಾತಿ ಸಮೀಕ್ಷೆಯಿಂದ ಮೇಲ್ಜಾತಿಯವರಿಗೆ ಏನು ಲಾಭ?
ಮೊದಲನೆಯದಾಗಿ ಈಗ ನಡೆಯುತ್ತಿರುವ ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಬಳಕೆಯಲ್ಲಿ ಜಾತಿ ಗಣತಿ ಎಂದು ಹೇಳಿದರೂ ಇದಕ್ಕೆ ಅಷ್ಟು ಸೀಮಿತವಾದ ಅರ್ಥ ಇಲ್ಲ. ಇದು ರಾಜ್ಯದಲ್ಲಿರುವ ಒಟ್ಟು ಜನಸಂಖ್ಯೆಯ, ಎಲ್ಲ ಜಾತಿ-ಧರ್ಮಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ.
ಸಾಮಾನ್ಯವಾಗಿ ಮೀಸಲಾತಿಯ ಬಗ್ಗೆ ಚರ್ಚೆ ನಡೆದಾಗೆಲ್ಲ ಮೇಲ್ಜಾತಿಯವರಲ್ಲಿ ಬಡವರಿಲ್ಲವೇ ಎಂಬ ಪ್ರಶ್ನೆ ತೂರಿ ಬರುತ್ತದೆ. ಈ ಪ್ರಶ್ನೆ ಬಹಳ ಪ್ರಸ್ತುತವಾದುದು ಕೂಡಾ. ಖಂಡಿತ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತರಲ್ಲಿ ಮಾತ್ರವಲ್ಲ, ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗರಲ್ಲಿಯೂ ಬಡವರಿದ್ದಾರೆ. ಆದರೆ ಈ ಬಗ್ಗೆ ಸರ್ಕಾರದಲ್ಲಿ ಯಾವ ಮಾಹಿತಿಯೂ ಇಲ್ಲ.

ಈಗಿನ ಆರ್ಥಿಕ-ಶೈಕ್ಷಣಿಕ ಸಮೀಕ್ಷೆ ಪೂರ್ಣಗೊಂಡಾಗ ದಲಿತ-ಹಿಂದುಳಿದ-ಅಲ್ಪಸಂಖ್ಯಾತರಲ್ಲಿರುವ ಬಡವರ ಸಂಖ್ಯೆ ಮಾತ್ರವಲ್ಲ, ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗರಲ್ಲಿನ ಬಡವರ ಸಂಖ್ಯೆ ಮತ್ತು ಅವರ ಸ್ಥಿತಿಗತಿಯ ಮಾಹಿತಿ ಲಭ್ಯವಾಗುತ್ತದೆ. ಅದರ ಆಧಾರದಲ್ಲಿ ಮೇಲ್ಜಾತಿಗಳಲ್ಲಿರುವ ಬಡವರ ಅಭಿವೃದ್ಧಿಗಾಗಿಯೂ ಕಾರ್ಯಕ್ರಮಗಳನ್ನು ರೂಪಿಸುವಂತೆ ಒತ್ತಡ ಹೇರಲು ಸಾಧ್ಯವಿದೆ.

“ ಮೈ ಚಾಯ್ಸ್ ” ಹಾಗೂ ಪುರುಷ ಪ್ರಧಾನ ಸಮಾಜದ ಮನಸ್ಥಿತಿ


-ಇರ್ಷಾದ್ ಉಪ್ಪಿನಂಗಡಿ


ಮಹಿಳೆಯರು ಹಾಗೂ ಅವರ ಆಯ್ಕೆಯನ್ನು ಗೌರವಿಸಬೇಕು ಎಂಬ ಸಂದೇಶವನ್ನು ಹೊಂದಿದೆ ಎನ್ನಲಾಗುತ್ತಿರುವ ಹೋಮಿ ಅದ್ಜಾನಿಯಾ ನಿರ್ಮಿಸಿರುವ ಮೈ ಚಾಯ್ಸ್ ಕಿರು ಚಿತ್ರ ದೇಶದಾಧ್ಯಂತ ಬಾರೀ ಸುದ್ದಿಗೆ ಕಾರಣವಾಗುತ್ತಿದೆ. ’ಹೆಣ್ಣು ಮನೆಯ ಆವರಣ ದಾಟಿ ಹೋಗಬಾರದು, ಮನೆ ದಾಟಿ Deepika_MyChoice_Feminism_3ಹೋದರೂ ಲಜ್ಜೆಯಿಂದ ವರ್ತಿಸಿ ತನ್ನ ಧರ್ಮ ಹಾಗೂ ಸಂಸ್ಕೃತಿಯ ಚೌಕಟ್ಟಿನಲ್ಲಿರಬೇಕು. ಮನೆ, ಕುಟುಂಬ, ಸಮಾಜದ ಮರ್ಯಾದೆಗೆ ಧಕ್ಕೆ ತರುವಂತೆ ವರ್ತಿಸಬಾರದ’ ಎಂಬ ಪುರುಷ ಪ್ರಧಾನ ವ್ಯವಸ್ಥೆಯ ಕಟ್ಟುಪಾಡುಗಳನ್ನು ಮೀರಿ ಸ್ವಾತಂತ್ರ ಬಯಸುವ ಎಜುಕೇಟೆಡ್ ಮಾಡರ್ನ್ ಆಗಿ ರೂಪುಗೊಳ್ಳುತ್ತಿರುವ ಹೊಸ ತಲೆಮಾರಿನ, ಹೊಸ ಚಿಂತನೆಯ ಯುವಜನಾಂಗದ ವಲಯದಲ್ಲಿ “ಮೈ ಚಾಯ್ಸ್”  ವೈರಲ್ ಆಗಿ ಹರಡುತ್ತಿದೆ. ದೆಹಲಿಯಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಕೊಲೆ ಪ್ರಕರಣದ ಕುರಿತಾಗಿ ಇತ್ತೀಚೆಗೆ ಬಿಡುಗಡೆಗೊಂಡು ಇಂಡಿಯಾದಲ್ಲಿ ಪ್ರಸಾರಕ್ಕೆ ನಿಷೇಧ ಹೇರಲ್ಪಟ್ಟ “ಇಂಡಿಯಾಸ್ ಡಾಟರ್” ಎಂಬ ಸಾಕ್ಷ್ಯ ಚಿತ್ರದಲ್ಲಿ ಅತ್ಯಾಚಾರ ಪ್ರಕರಣದ ಆರೋಪಿ ಹಾಗೂ ಆತನ ಪರ ವಕೀಲ ಹೆಣ್ಣನ್ನು ಅತೀ ಬೆಳೆಬಾಳುವ ಆಭರಣ ವಜ್ರಕ್ಕೆ ಹೋಲಿಕೆ ಮಾಡುವ ಮೂಲಕ ಆಕೆಯನ್ನು ಹೇಗೆ ತನ್ನ ಅಂಕೆಯಲ್ಲಿಟ್ಟು ನಿಯಂತ್ರಿಸಬೇಕು ಎಂಬ ವಿತಂಡವಾದ ಹಾಗೂ ಭಾರತದ ಅಧಿಕ ಸಂಖ್ಯೆಯ ಪುರುಷರು ಬಹುತೇಕ ಅದೇ ಮನಸ್ಥಿತಿಯವರಾಗಿದ್ದಾರೆ ಎಂಬ ವಾದ ವಿವಾದಗಳ ಬೆನ್ನಲ್ಲೇ ಹೆಣ್ಣಿನ ಸ್ವಾತಂತ್ರ ಹಾಗೂ ಆಯ್ಕೆಯಯನ್ನು ಗೌರವಿಸಿ ಎಂದು ಸಾರುವ “ಮೈ ಚಾಯ್ಸ್” ಕಿರು ಚಿತ್ರ ಹೆಣ್ಣಿನ ಸಬಲೀಕರಣದ ಕುರಿತಾಗಿ ಬೆಳಕು ಚೆಲ್ಲುವ ಆಳವಾದ ಯಾವುದೇ ಸಂದೇಶ ಅದರಲ್ಲಿ ಇಲ್ಲದಿದ್ದರೂ ಪುರುಷ ಪ್ರಧಾನ ಸಮಾಜದ ಅಡಿಯಾಳುತನಕ್ಕೆ ಒಳಗೊಳ್ಳದೆ ತನ್ನ ಅಸ್ಥಿತ್ವ ಹಾಗೂ ತನ್ನ ಆಯ್ಕೆ, ಅಭಿವ್ಯಕ್ತಿಯನ್ನು ಹೆಚ್ಚು ಒತ್ತನ್ನು ನೀಡುವ ಹೊಸ ತಲೆಮಾರಿನ, ಹೊಸ ಚಿಂತನೆ ಸ್ತ್ರೀ ಸಮಾಜಕ್ಕೆ ಕೇಳುವ ಪ್ರೆಶ್ನೆಯಾಗುತ್ತದೆ “ಮೈ ಚಾಯ್ಸ್”.  ಈ ನಿಟ್ಟಿನಲ್ಲಿ ಹೊಸ ತಲೆಮಾರಿನ ಚಿಂತನೆಯನ್ನಿಟ್ಟುಕೊಂಡು ಹೆಣ್ಣಿನ ಸ್ವಾತಂತ್ರದ  ಕುರಿತಾಗಿ ಚರ್ಚೆ ನಡೆಯಬೇಕಾಗಿದೆ.

ನೈತಿಕ ಪೊಲೀಸ್ ಗಿರಿಯನ್ನು ವಿರೋಧಿಸಿ ಒಂದಿಷ್ಟು ಹೊಸ ತಲೆಮಾರಿನ ಯುವಕ-ಯುವತಿಯರು “ ಕಿಸ್  ಆಫ್ ಲವ್” ಪ್ರತಿಭಟನೆಯನ್ನುMy-Choice-Deepika-Padukone_2  ಹಮ್ಮಿಕೊಂಡಾಗ ಸಂಪ್ರದಾಯಿಕ ಸಮಾಜದಲ್ಲಿ ಭಾರೀ ವಿರೋಧ ಎದುರಾಗಿತ್ತು. ಅನೇಕ ಜನರು “ಏನಪ್ಪಾ ಆ ಗಂಡು ಮಕ್ಕಳಿಗೆ ಬುದ್ದಿ ಇಲ್ಲ ಬಿಡಿ. ಆದ್ರೆ ಈ ಹೆಣ್ಣುಮಕ್ಕಳಿಗೆ ಬುದ್ದಿ ಬೇಡ್ವಾ? ಪಬ್ಲಿಕ್ ಆಗಿ ಹೀಗಾ ನಡೆದುಕೊಳ್ಳುವುದು ? ಇವತ್ತಿನ ಈ ಹೆಣ್ಣು ಮಕ್ಕಳಿಗೆ ಹಿಂದಿನ ಹೆಣ್ಣುಮಕ್ಕಳಿಗಿದ್ದ ಮಾನ ಮರ್ಯಾದೆ ಏನೂ ಇಲ್ಲಪ್ಪಾ.. “ಎನ್ನುತ್ತಿದ್ದರು. ಹೌದು ಹೆಣ್ಣೆಂದರೆ ಹೀಗೆ ಇರಬೇಕು ಎಂಬ ಕಲ್ಪನೆ ನಮ್ಮ ಸಮಾಜದಲ್ಲಿದೆ. ಹೆಣ್ಣು ಹುಟ್ಟಿ ಆಕೆಗೆ 10 ವರ್ಷ ವಯಸ್ಸಾಗುತ್ತಿರುವಾಗಲೇ ಆಕೆಯ ಮೇಲೆ ಮನೆ, ಕುಟುಂಬ, ಸಮಾಜ ಒಂದೊಂದೇ ನಿಯಂತ್ರಣಗಳನ್ನು ಹೇರಲು ಆರಂಭಿಸುತ್ತದೆ. ಯಾವ ಆಟಿಕೆಗಳಲ್ಲಿ ಹೆಣ್ಣು ಮಗು ಆಟವಾಡಬೇಕೆಂಬ ಆಯ್ಕೆಯನ್ನು ಪೋಷಕರು ನಿರ್ಧರಿಸುವುದರಿಂದ ಆರಂಭವಾಗಿ, ಮನೆಯಿಂದ ಹೊರ ಕಾಲಿಡಬೇಕಾದರೆ ಹೇಗಿರಬೇಕು, ತನ್ನ ವಸ್ತ್ರ ಧಾರಣೆಯಲ್ಲಿ ಹೇಗೆ ಮಾರ್ಪಾಡು ಮಾಡಿಕೊಳ್ಳಬೇಕು, ನಡವಳಿಕೆಯ ರೀತಿ ನೀತಿ ಹೇಗಿರಬೇಕು, ಮನೆಯಲ್ಲಿ ಹೇಗಿರಬೇಕು, ಶಾಲಾ ಕಾಲೇಜುಗಳಲ್ಲಿ ಹೇಗಿರಬೇಕು, ಯಾವಾಗ ಮದುವೆಯಾಗಬೇಕು, ಮದುವೆಯಾದ ನಂತರ ಗಂಡನ ಮನೆಯಲ್ಲಿ ಹೇಗಿರಬೇಕು ಈ ಎಲ್ಲದರ ಕುರಿತಾದ ಆಕೆಯ ಆಯ್ಕೆಯನ್ನು ನಿರ್ಧರಿಸುತ್ತಿರುವುದು ಆಕೆಯ ಮನೆಮಂದಿ, ಆಕೆಯ ಧರ್ಮ ಹಾಗೂ ಸಂಸ್ಕೃತಿಯ ವಕ್ತಾರರಾಗಿರುವ ಪುರುಷ ಪ್ರಧಾನ ವ್ಯವಸ್ಥೆ. ಹೀಗೆ ತಾನು ಹೇಗೆ ಜೀವಿಸಬೇಕೆಂಬ ಆಕೆಯ ಆಯ್ಕೆ ಮಾಡುವ ಸ್ವಾತಂತ್ರವನ್ನು ಹೆಣ್ಣು ತನ್ನ ಎಳೆ ವಯಸ್ಸಿನಿಂದಲೇ ಕಳೆದುಕೊಂಡಿರುತ್ತಾಳೆ.

ಪ್ರಸ್ತುತ ಸಮಾಜದಲ್ಲಿ ಹೆಣ್ಣೆದಂರೆ ಕಣ್ಣಮುಂದೆ ಬರುವುದು ಪುರುಷನ ದಾಹ ತೀರಿಸುವ ಸೌಂದರ್ಯದ ಪ್ರತೀಕವಾದವಳು. ಕನ್ನಡಿ ಮುಂದೆ ನಿಂತು ತನ್ನ ಸೌಂದರ್ಯಕ್ಕೆ ಅಧಿಕ ಸಮಯ ವ್ಯರ್ಥ ಮಾಡುವಾಕೆ. ಗಂಡನ ಬೇಕು ಬೇಡ, ಮನೆ ಮಂದಿಗೆ ಅಡುಗೆ ಮಾಡಿ ಬಡಿಸಿ ಆವರ ಹಸಿವಿನ ದಾಹ ತೀರಿಸುವಾಕೆ. ನೆರೆ ಮನೆಯವರ ಜೊತೆ ಜಾಡಿ ತರಲೆಗಳನ್ನು ಮಾಡಿ, ಪರ ಸ್ತ್ರೀಯ ಜೀವನ ನೋಡಿ ಅಸೂಯೆ ಪಟ್ಟು, ಗಂಡನನ್ನು ನಿತ್ಯ ಪೀಡಿಸುವ, ಪುರುಷರ ನಡುವೆ ಪರಸ್ಪರ ಕಾಳಗಕ್ಕೆ ಕಾರಣವಾಗುವವಳು. ಪುರುಷನಾದವನ ದಬ್ಬಾಳಿಕೆಗೆ ಎದುರುತ್ತರ ನೀಡದೆ ಗಂಡ, ಮಕ್ಕಳು ಸಂಸಾರವೇ ನನ್ನ ಜೀವನ ಎಂದು ಬದುಕುವಾಕೆ. ಇಷ್ಟೆಲ್ಲಾ ಕಷ್ಟ ಕಾರ್ಪಣ್ಯಗಳನ್ನು ಅನುಭವಿಸಿದ್ದಕ್ಕೆ ಗಂಡ ದುಡಿದ ಸಂಬಳವನ್ನು ಬೇಕಾಬಿಟ್ಟಿ ಶಾಪಿಂಗ್ ಮಾಡಿ, ಉತ್ತಮ ವಸ್ತ್ರಗಳನ್ನು ಧರಿಸಿ ಚಿನ್ನಾಭರಣವನ್ನು ತೊಟ್ಟು ಇತರರಿಗೆ ತನ್ನ ಅಂದ ಚೆಂದವನ್ನು ಪ್ರದರ್ಶಿಸಿ ಇದುವೇ ನನ್ನ ಪಾಲಿನ ಜೀವನ ಎಂದು ತಿಳಿದಿರುವಾಕೆ. ಇಂದಿಗೂ ನಮ್ಮ ಸಮಾಜದ ಸಾಕಷ್ಟು ಪುರುಷರು ಹೆಣ್ಣು ಅಂದರೆ ಇಷ್ಟೇ ಹಾಗೂ ಹೀಗೆ ಇದ್ದರೆ ಚೆಂದ ಎಂದು ಬಯಸುತ್ತಾರೆ ಎಂಬುವುದಂತೂ ಸತ್ಯ. ಇದಕ್ಕೆ ಪೂರಕವಾಗಿ ಹೆಣ್ಣು ಕೂಡಾ ತಾನು ಹೀಗೆ ಇದ್ದರೆ ಚೆಂದ ಎಂಬ ಭಾವನೆಯನ್ನು ಮೈಗೂಡಿಸಿಕೊಂಡಿರುವುದು ಹೆಣ್ಣಿನ ಈ ಪರಿಸ್ಥಿತಿಗೆ ಕಾರಣ.

ಹೆಣ್ಣಿನ ಕುರಿತಾಗಿ ವ್ಯವಸ್ಥೆಯ ಈ ಮನಸ್ಥಿತಿಗೆ ಮೂಲ ಕಾರಣ ಪುರುಷಪ್ರಧಾನ ವ್ಯವಸ್ಥೆಯ ಹಿಡಿತದಲ್ಲಿರುವ ಧರ್ಮ ಹಾಗೂ ಅದು Ancient_Womenಹುಟ್ಟು ಹಾಕಿದ ಸಂಸ್ಕೃತಿಯೂ ಕಾರಣವಾಗುತ್ತದೆ. ಆಧುನಿಕ ಹೆಣ್ಣು ಸ್ವಾತಂತ್ರವನ್ನು ಬಯಸುವಾಗ ಸಂಪ್ರದಾಯವಾದಿಗಳು ಹೆಣ್ಣನ್ನು ಮಣಿಸಲು ಅಸ್ತ್ರವನ್ನಾಗಿ ಧರ್ಮವನ್ನೇ ಬಳಸುತ್ತಿದ್ದಾರೆ. ಧರ್ಮ , ಪುರಾಣಗಳಲ್ಲಿ ಬರುವ ಸನ್ನಿವೇಶಗಳಲ್ಲಿ ಸ್ತ್ರೀಯರ ಬಗ್ಗೆ ಅಂದಿನ ಸಮಾಜಕ್ಕಿದ್ದ ಕಲ್ಪನೆಗಳು ಸ್ಪಷ್ಟಗೊಳ್ಳುತ್ತದೆ. ರಾಮಾಯಣದಲ್ಲಿ ಹೆಣ್ಣಿನ ಕುರಿತಾಗಿ ರಾಮರಾಜ್ಯದ ನೀತಿಯ ಪ್ರಕಾರ  “ಸ್ತ್ರೀಯರ ವಿಷಯದಲ್ಲಿ ಜಾಗರೂಕನಾಗಿರಬೇಕು, ಅವರನ್ನೆಂದೂ ನಂಬಬಾರದು, ರಹಸ್ಯ ಹೇಳಬಾರದು. ಪರಪುರುಷನನ್ನು ನೋಡುವುದಕ್ಕೆ, ಮಾತನಾಡುವುದಕ್ಕೆ ಅವಕಾಶವಿಲ್ಲದಂತೆ ಅಂತಃಪುರದಲ್ಲಿ ಕಟ್ಟುನಿಟ್ಟಿನ ಏರ್ಪಾಡು  ಮಾಡಬೇಕು. ( ಅ.100 ಶ್ಲೊ: 58 ) . “ಭಾಗ್ಯಶಾಲಿನಿ ತಾಯಿ ನೀನು. ಗಂಡನೊಂದಿಗೆ ಅರಣ್ಯಕ್ಕೆ ಬಂದಿದ್ದೀಯ. ನಿನ್ನ ಪತಿ ಭಕ್ತಿ ಮೆಚ್ಚತಕ್ಕದ್ದು. ಗಂಡ ಬಡವನಾದರೂ ಶ್ರೀಮಂತನಾದರೂ, ಸ್ತ್ರೀ ಲೋಲನಾದರೂ, ಅವನೇ ಹೆಣ್ಣಿಗೆ ದೈವ. ಕಾಮುಕರಾದ ಸ್ತ್ರೀಯರಿಗೆ ಧರ್ಮ ತಿಳಿಯುವುದಿಲ್ಲ. ಅವರಿಗೆ ಇಹದಲ್ಲಿ ಅಪಕೀರ್ತಿಯಷ್ಟೇ ಅಲ್ಲ ಪರದಲ್ಲಿ ನರಕವೂ ಪ್ರಾಪ್ತಿಯಾಗುತ್ತದೆ. ರಾಮ ಪರಿವಾರ ಅತ್ರಿ ಮುನಿ ಆಶ್ರಮದಲ್ಲಿ ಸತಿ ಅನಸೂಯಳನ್ನು ದರ್ಶನ ಮಾಡುವಾಗ ಸೀತೆಯನ್ನು ಉದ್ದೇಶಿಸಿ ಅನಸೂಯ ಹೇಳುವ ಮಾತಿದು  (ಆಯೋಧ್ಯಾ ಕಾಂಡ ಅ.116, ಶ್ಲೊ: 10.14 )

ಇನ್ನು ಇಸ್ಲಾಮ್ ಧರ್ಮ ಸ್ತ್ರೀಯ ಕುರಿತಾದ ನಿಲುವುಗಳು ಕೂಡಾ ಇದನ್ನೇ ಸ್ಪಷ್ಟಪಡಿಸುತ್ತದೆ  “ನಿಮ್ಮಮನೆಗಳಲ್ಲೇ ಇದ್ದುಕೊಳ್ಳಿರಿ. ಗತಕಾಲದ ಅಜ್ಞಾನ ಕಾಲದಂತಹ ಸೌಂದರ್ಯ ಪ್ರದರ್ಶನ ಮಾಡುತ್ತಾ ತಿರುಗಾಡಬೇಡಿರಿ” ( ಪವಿತ್ರ ಕುರ್ ಆನ್ 33:33 ),“ಮಹಿಳೆ ಬುದ್ದಿ ಮತ್ತು ಧರ್ಮ ಎರಡೂ ವಿಧದಲ್ಲಿburkha sielence ದುರ್ಬಲರಾಗಿರುತ್ತಾರೆ” ( ಬುಖಾರಿ ) “ನಿಮ್ಮ ಸ್ರೀಯರಿಂದ ಆಜ್ಞೋಲಂಘನೆಯ ಅಶಂಕೆ ನಿಮಗಿದ್ದರೆ ಅವರಿಗೆ ನೀವು ಉಪದೇಶ ನೀಡಿರಿ. ಮಲಗುವಲ್ಲಿಂದ ಅವರಿಂದ ದೂರವಿರಿ ಮತ್ತು ಅವರಿಗೆ ಹೊಡೆಯಿರಿ.” ಪವಿತ್ರ ಕುರ್ ಆನ್ ( 4:34 ). ಹೀಗೆ ಪುರುಷಪ್ರಧಾನ ಸಮಾಜ ಹೆಣ್ಣನ್ನು ಹೇಗೆ ನಿಯಂತ್ರಿಸಬೇಕೆಂಬುವುದನ್ನು ಧರ್ಮಗಳು ಭೋಧಿಸುತ್ತವೆ. ಇದನ್ನು ಮೀರಿ ಆಕೆ ತನ್ನ ಆಯ್ಕೆ, ಅಭಿವ್ಯಕ್ತಿ, ಸ್ವಾತಂತ್ರದ ಕುರಿತು ಧ್ವನಿ ಎತ್ತಿದರೆ ಆಕೆ ಧರ್ಮ ವಿರೋಧಿ ಅಥವಾ ಸಂಪ್ರದಾಯ ಮುರಿದ ಹೆಣ್ಣಾಗಿ ಮಾರ್ಪಡುತ್ತಾಳೆ. ಸಮಾಜ ವಿಧಿಸಿದ ಈ ಕಟ್ಟಲೆಗಳನ್ನು ಮೀರಿ ಹೆಣ್ಣು ಹೊಸಿಲ ದಾಟಿದಾಗ ಸಂಪ್ರದಾಯವಾದಿಗಳಿಂದ ಹಲ್ಲೆ, ಹೋಂ ಸ್ಟೇ ದಾಳಿ, ಪಬ್ ದಾಳಿಗಳಂತಹಾ ನೈತಿಕ ಪೊಲೀಸ್ ಗಿರಿಗಳು, ಮಲಾಲ, ಗೀತಾ ಪ್ರಲ್ಹಾದ್ ಗೆ ಎದುರಾದ ದುಸ್ಥಿತಿ ಇನ್ನೂ ಮಿತಿಮೀರಿದರೆ ಸಾಮೂಹಿಕ ಅತ್ಯಾಚಾರ ಎಸಗಿ ಸಂಸ್ಕೃತಿಯ ಎಲ್ಲೆಯನ್ನು ಮೀರಿದ ಹೆಣ್ಣನ್ನು ನಿಯಂತ್ರಿಸುತ್ತಿರುವ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿವೆ.

ಆದರೆ ಇದನೆನಲ್ಲಾ ಮೀರಿ ಮಹಿಳೆ ಬೆಳೆಯುತ್ತಿದ್ದಾಳೆ, ಪುರುಷನಿಗೆ ಸಮಾನ ಎಂದು ಸಾಧಿಸಿ ತೋರಿಸುತ್ತಿದ್ದಾಳೆ, ಪುರುಷ ಕಾರ್ಯ ನಿರ್ವಹಿಸುವ ಎಲ್ಲಾ ಕ್ಷೇತ್ರಗಳಲ್ಲೂ ತನ್ನ ಇರುವಿಕೆಯನ್ನು ತೋರಿಸಿದ್ದಾಳೆ. ಗಂಡ ಹೊಡೆದರೆ ನಾನೇಕೆ ಕಟ್ಟಿಕೊಂಡಿರಬೇಕು? ನನ್ನನ್ನು ಮದುವೆಯಾದ ಪುರುಷ ಪರ ಸ್ತ್ರೀಯೊಂದಿಗೆ ಮಲಗಿದರೆ ಅದನ್ನು ನಾನ್ಯಾಕೆ ಸಹಿಸಿಕೊಳ್ಳಬೇಕು?  ಪುರುಷ ಮದುವೆಯಾದರೂ ಅನ್ಯ ಸ್ತ್ರೀಯೊಂದಿಗೆ ಸಂದಂಧವಿಡುವುದು ಸಮಾಜಕ್ಕೆ ದೊಡ್ಡ ಅಪರಾದ ಅಲ್ಲವೆಂದಾದರೆ ಹೆಣ್ಣು ಏಕೆ ವಿವಾಹಬಾಹಿರ ಸಂಬಂಧವಿಟ್ಟುಕೊಳ್ಳಬಾರದು?  ಗಂಡ ನಾಲ್ಕು ಮದುವೆಯಾಗುವುದಾದರೆ ನಾನ್ಯಾಕೆ ಆತನನ್ನು  ಒಪ್ಪಿಕೊಳ್ಳಬೇಕು? ಪುರುಷ ಮಧ್ಯ ಸೇವಿಸಬಹುದಾದರೆ ನಾನ್ಯಾಕೆ ಸೇವಿಸಬಾರದು?rape-illustration  ಮನೆ ಕೆಲಸ ಸ್ತ್ರೀಗೆ ಮಾತ್ರ ಯಾಕೆ ಮೀಸಲು ಪುರುಷನೇಕೆ ಮಾಡಬಾರದು? ನಾನು ಯಾವ ವಸ್ತ್ರವನ್ನು ಧರಿಸಬೇಕು, ನನ್ನ ನಡವಳಿಕೆ ಹೇಗಿರಬೇಕು? ಯಾಕೆ ನಾನು ಪರ್ದಾದೊಳಗೆ ಬಂಧಿಯಾಗಿರಬೇಕು? ಇವೆಲ್ಲವನ್ನು ತೀರ್ಮಾನಿಸಲು ಪುರುಷ ಯಾರು?  ಇಂಥಹಾ ಪ್ರಶ್ನೆಗಳನ್ನು ಕೇಳುವ ಹೊಸ ಪೀಳಿಗೆ ಹೆಚ್ಚಾಗುತ್ತಿದೆ. ಧರ್ಮ, ಸಂಪ್ರದಾಯದ ಹೆಸರಲ್ಲಿ ತನ್ನ ಮೇಲೆ ನಡೆಯುವ ಶೋಷಣೆಗಳನ್ನು ಆಧುನಿಕ ಸ್ತ್ರೀ ಪ್ರಶ್ನಿಸಲು ಆರಂಭಿಸಿದ್ದಾಳೆ. ಇದನ್ನು ಒಪ್ಪುವ ಹೊಸ ಚಿಂತನೆಯ ಪುರುಷ ಸಮಾಜವೂ ಸೃಷ್ಟಿಯಾಗುತ್ತಿದೆ. ಇದು ನಿಜಕ್ಕೂ ಉತ್ತಮ ಬೆಳವಣಿಗೆ. ಆದರೆ ಗ್ರಾಮೀಣ ಭಾಗಗಳಲ್ಲಿ ಮಹಿಳೆ ಆಧುನಿಕ ಸ್ತ್ರೀ ಬಹಿರಂಗವಾಗಿ ಕೇಳುವ ಪ್ರೆಶ್ನೆಗಳನ್ನು ಪುರುಷ ಪ್ರಧಾನ ಸಮಾಜಕ್ಕೆ ಕೇಳುವ ವಾತಾವರಣ ನಿರ್ಮಾಣವಾಗಿಲ್ಲ. ಗ್ರಾಮೀಣ ಭಾಗಗಳಲ್ಲಿ ಮನೆಯಲ್ಲಿ ಹೆಂಡತಿಗೆ ಗಂಡ ಏನಾದರೂ ಅಡುಗೆ ಹಾಗೂ ಮನೆ ಕೆಲಸದಲ್ಲಿ ಸಹಕಾರ ನೀಡಿದರೆ ಆತ ನೆರಮನೆಯ ಮಹಿಳೆಯರಿಗೆ ತಮಾಷೆಯ ವಸ್ತುವಾಗುತ್ತಾನೆ. ಯಾಕೆಂದರೆ ಗಂಡ ಮಕ್ಕಳ ಸೇವೆ ಮಾಡೋದೇ ನನ್ನ ಜೀವನ ಎಂಬ ಮನೋಭಾವ ಆಕೆಯಲ್ಲಿ ಬಲವಾಗಿ ಬೇರೂರಿದೆ. ಇಂಥಹಾ ಮನಸ್ಥಿತಿ ಹೆಣ್ಣಿನಲ್ಲಿ ಬದಲಾಗದೆ ಇದ್ದಲ್ಲಿ ಆಕೆ ಈ ಪುರುಷ ಪ್ರಧಾನ ಸಮಾಜದಿಂದ ಇನ್ನಷ್ಟು ಶೋಷಣೆಗೆ ಒಳಗಾಗುತ್ತಲೇ ಇರಬೇಕಾಗುತ್ತದೆ. ಇನ್ನು ಸಮೂಹ ಮಾಧ್ಯಮಗಳಲ್ಲೂ ಹೆಣ್ಣನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ಸಿನಿಮಾ, ಧಾರವಾಹಿಗಳಲ್ಲಿ ಹೆಣ್ಣನ್ನು ಬಿಂಬಿಸುವ ರೀತಿಯಲ್ಲೂ ಬದಲಾವಣೆಯಾಗಬೇಕು. ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ  ಪ್ರಸಿದ್ದ ಧಾರವಾಹಿಯೊಂದರ ನಟನ ಕುರಿತಾಗಿ ಪತ್ರಿಕೆಯೊಂದರಲ್ಲಿ ವರದಿ ಪ್ರಸಾರವಾಗಿತ್ತು. ಧಾರವಾಹಿಯಲ್ಲಿ ನಟ ಹೆಣ್ಣನ್ನು ಪೀಡಿಸುವ ಪಾತ್ರವನ್ನು ನಟನ ಮಹಿಳಾ ಅಭಿಮಾನಿಗಳು ಇಷ್ಟಪಡುತ್ತಾರೆ ಹಾಗೂ ಮೆಚ್ಚುಗೆಯನ್ನು ಸೂಚಿಸುತ್ತಾರೆ ಎಂದು ನಟನೇ ಪತ್ರಿಕಾ ಸಂದರ್ಶನದಲ್ಲಿ ಆಶ್ವರ್ಯಪಡುತ್ತಾನೆ. ಕೆಲ ಮಹಿಳೆಯರ ಇಂಥಹಾ ಮನಸ್ಥಿತಿಯೇ ಇಂದು ಮಾಧ್ಯಮಗಳಿಗೆ ಬಂಡವಾಳವಾಗುತ್ತಿವೆ.

ಸ್ವಾಮಿ ವಿವೇಕಾನಂದ ಒಂದು ಮಾತು ಹೇಳುತ್ತಾರೆ “ಅದೇಕೆ ಈ ದೇಶದಲ್ಲಿ ಸ್ತ್ರೀಪುರುಷರಲ್ಲಿ ಇಷ್ಟೊಂದು ಭೇಧವಿದೆಯೋ ಆ ದೇವನೇ ಬಲ್ಲ. ಸ್ಮೃತಿ ಮುಂತಾದವುಗಳನ್ನು ಬರೆಯುವುದು, ಕಠಿಣವಾದ ನಿಯಮಗಳಿಂದ ಅವರನ್ನು ಬಂಧಕ್ಕೀಡು ಮಾಡುವುದು, ಗಂಡಸರು ಹೆಂಗಸರನ್ನು ಕೇವಲ ಮಕ್ಕಳನ್ನು ಹೆರುವ ಯಂತ್ರವನ್ನಾಗಿ ಮಾರ್ಪಡಿಸಿದ್ದಾರೆ. ಯಾವ ದೇಶ , ಯಾವ ಜನಾಂಗ ಸ್ತ್ರೀಯರಿಗೆ ಗೌರವ ಕೊಟ್ಟಿಲ್ಲವೋ ಅದು ಖಂಡಿತವಾಗಿಯೂ ಕೀರ್ತಿ ಪಡೆದಿಲ್ಲ; ಮುಂದೆ ಪಡೆಯುವುದೂ ಇಲ್ಲ.”