Monthly Archives: April 2015

ಭಗ್ನಗೊಂಡ ಮೌಲ್ಯಾಧಾರಿತ ರಾಜಕೀಯದ ಕನಸು

– ಆನಂದ ಪ್ರಸಾದ್

ಆಮ್ ಆದ್ಮಿ ಪಕ್ಷದಲ್ಲಿ ತಾರಕಕ್ಕೇರಿದ ಭಿನ್ನಮತ ಹಾಗೂ ಸ್ಥಾಪಕ ಹಿರಿಯ ಸದಸ್ಯರೀರ್ವರಾದ ಯೋಗೇಂದ್ರ ಯಾದವ್ ಹಾಗೂ ಪ್ರಶಾಂತ್ ಭೂಷಣ್ ಅವರನ್ನು ಪ್ರಮುಖ ಸ್ಥಾನಗಳಿಂದ ಹೊರದಬ್ಬುವ ಮೂಲಕ ದೇಶದ ಪ್ರಜ್ಞಾವಂತ ಜನತೆಯಲ್ಲಿ ಮೂಡಿದ್ದ ಮೌಲ್ಯಾಧಾರಿತ ರಾಜಕೀಯದ ಕನಸಿನ ನಿರೀಕ್ಷೆ ಭಗ್ನಗೊಂಡಿದೆ. ಪಕ್ಷವು ತನ್ನ ಮೂಲಭೂತ ಆಶಯಗಳಿಂದ ಹೊರಗೆ ಸರಿದು ಅಧಿಕಾರದ ರಾಜಕೀಯಕ್ಕಾಗಿ ಮೌಲ್ಯಗಳೊಂದಿಗೆ ರಾಜಿ ಮಾಡಿಕೊಂಡಿರುವುದು ಇದಕ್ಕೆ ಮೂಲಭೂತ ಕಾರಣವಾಗಿದೆ. ವೃತ್ತಿಪರ ರಾಜಕಾರಣಿಯಲ್ಲದ ಪ್ರತಿಭಾವಂತ ವ್ಯಕ್ತಿಯಾದ ಕೇಜ್ರಿವಾಲ್ ಅಧಿಕಾರ ಸಿಕ್ಕಿದ ಕೂಡಲೇ ತಾನು ಏರಲು ಬಳಸಿದ ಎಣಿಯನ್ನೇ ಒದೆದು ದೂರ ತಳ್ಳುವ ಅವಿವೇಕ ತೋರುತ್ತಿರುವುದು ನಿಜಕ್ಕೂಅನಪೇಕ್ಷಿತ. ರಾಜಕೀಯದಲ್ಲಿ ಬದಲಾವಣೆ ತರಲು ರಾಜಕೀಯ ಪಕ್ಷ ಕಟ್ಟುವುದಾಗಿ ಘೋಷಿಸಿದ ಕೇಜ್ರಿವಾಲ್ ಹಾಗೂ ಸಂಗಡಿಗರು ರಾಜಕೀಯದಲ್ಲಿ ಬದಲಾವಣೆ ತರುವುದರ ಬದಲು ಅಧಿಕಾರ ಸಿಕ್ಕಿದ kejriwal-aap-launch-delhiಕೂಡಲೇ ತಾವೇ ಬದಲಾಗಿಹೋಗಿರುವುದು ಹಾಗೂ ಅಹಂಕಾರವನ್ನು ಮೆಟ್ಟಿನಿಲ್ಲಲಾರದೆ ಹೋಗಿರುವುದು ನಂಬಲಸಾಧ್ಯವಾದರೂ ಸತ್ಯ. ಕಾಂಗ್ರೆಸ್ ಪಕ್ಷವನ್ನು ವಂಶಪಾರಂಪರ್ಯ ಹಾಗೂ ಏಕವ್ಯಕ್ತಿಕೇಂದ್ರಿತ ಪಕ್ಷ ಎಂದು ಟೀಕಿಸುತ್ತಿದ್ದ ಕೇಜ್ರಿವಾಲ್ ಹಾಗೂ ಸಂಗಡಿಗರು ಈಗ ಮಾಡುತ್ತಿರುವುದು ಕಾಂಗ್ರೆಸ್ ಪಕ್ಷದ ಏಕವ್ಯಕ್ತಿಕೇಂದ್ರಿತ ರಾಜಕೀಯಕ್ಕಿಂಥ ಭಿನ್ನವೇನೂ ಅಲ್ಲ. ನಿಜವಾದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಬ್ಬ ವ್ಯಕ್ತಿ ಎರಡು ಹುದ್ದೆ ಹೊಂದಿರುವುದು ಸೂಕ್ತವಲ್ಲ. ನಿಜವಾದ ಬದಲಾವಣೆಯನ್ನು ತರುವ ಇಚ್ಛಾಶಕ್ತಿ ಇದ್ದಿದ್ದರೆ ಕೇಜ್ರಿವಾಲ್ ಮುಖ್ಯಮಂತ್ರಿ ಹುದ್ದೆ ವಹಿಸಿದ ಕೂಡಲೇ ಆಮ್ ಆದ್ಮಿ ಪಕ್ಷದ ಸಂಚಾಲಕ ಹುದ್ದೆಯನ್ನು ತೊರೆಯಬೇಕಾಗಿತ್ತು ಮತ್ತು ಯಾವುದೇ ಕಾರಣಕ್ಕೂ ಎರಡು ಹುದ್ದೆಗಳಲ್ಲಿ ಮುಂದುವರಿಯುದನ್ನು ಒಪ್ಪಬಾರದಾಗಿತ್ತು. ಹೀಗೆ ಮಾಡುವುದು ನೈತಿಕ ರಾಜಕೀಯ. ಪಕ್ಷದ ಹೆಚ್ಚಿನ ಸಂಖ್ಯೆಯ ಹಿಂಬಾಲಕರು ಒಪ್ಪಿದ್ದಾರೆ ಎಂದು ಎರಡು ಹುದ್ದೆಗಳಲ್ಲಿ ಮುಂದುವರಿಯುವುದು ಅನೈತಿಕ ಹಾಗೂ ಮೌಲ್ಯಾಧಾರಿತ ರಾಜಕೀಯಕ್ಕೆ ವಿರೋಧವಾದ ನಡವಳಿಕೆ ಎಂಬುದು ಸ್ಪಷ್ಟ. ಈಗ ಕಾಂಗ್ರೆಸ್ ಪಕ್ಷದ ಏಕಕೇಂದ್ರಿತ ರಾಜಕೀಯವನ್ನು ಟೀಕಿಸುವ ನೈತಿಕ ಧೈರ್ಯವನ್ನು ಆಮ್ ಆದ್ಮಿ ಪಕ್ಷವು ಕಳೆದುಕೊಂಡಿದೆ.

ಈಗ ಆಮ್ ಆದ್ಮಿ ಪಕ್ಷದಲ್ಲಿ ಉಂಟಾಗಿರುವ ಬಿರುಕಿಗೆ ಮೂಲಕಾರಣ ಏನು ಎಂದು ನೋಡಿದರೆ ಅದು ಕೇಜ್ರಿವಾಲ್ ಅವರ ಸರ್ವಾಧಿಕಾರಿ ಮನೋಭಾವ ಹಾಗೂ ಮೌಲ್ಯಗಳೊಂದಿಗೆ ರಾಜಿ ಮಾಡಿಕೊಂಡು ಅಧಿಕಾರಕ್ಕೇರುವ ಹಪಾಹಪಿ ಎಂಬುದು ಸ್ಪಷ್ಟವಾಗಿ ಗೋಚರವಾಗುತ್ತದೆ. ಮೌಲ್ಯಾಧಾರಿತ ರಾಜಕೀಯಕ್ಕೆ ವಿರುದ್ಧವಾಗಿ ಹಾಗೂ ಪಕ್ಷದ ಮೂಲಭೂತ ನಿಯಮಗಳಿಗೆ ವಿರುದ್ಧವಾಗಿ ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿಗಳನ್ನು ಆಯ್ಕೆ ಮಾಡುವಲ್ಲಿ ಕೇಜ್ರಿವಾಲ್ ಏಕಪಕ್ಷೀಯ ತೀರ್ಮಾನಗಳನ್ನು ಕೈಗೊಳ್ಳುತ್ತಿದ್ದರೆಂದು ಪ್ರಶಾಂತ್ ಭೂಷಣ್ ಆರೋಪಿಸಿದ್ದಾರೆ. ಇಲ್ಲಿಯೇ ಪಕ್ಷದ ಮೂಲಭೂತ aap-kejriwal-yogendra-yadavಮೌಲ್ಯಾಧಾರಿತ ನಿಯಮಗಳಿಗೆ ಎಳ್ಳುನೀರು ಬಿಡಲಾಗಿದೆ ಎಂಬುದು ತಿಳಿಯುತ್ತದೆ ಹಾಗೂ ಕೇಜ್ರಿವಾಲ್ ಅವರ ಅಧಿಕಾರದ ಮಹತ್ವಾಕಾಂಕ್ಷೆ ಇದಕ್ಕೆ ಕಾರಣ ಎಂಬುದು ಕಂಡುಬರುತ್ತದೆ. ಭ್ರಷ್ಟಾಚಾರದ ವಿರುದ್ಧದ ಅಣ್ಣಾ ಹಜಾರೆ ಹೋರಾಟದಲ್ಲಿ ಪ್ರಮುಖ ಅಡಿಗಲ್ಲಾಗಿದ್ದ ಕೇಜ್ರಿವಾಲ್ ಆ ಹೋರಾಟವನ್ನು ಮುನ್ನಡೆಸುವಲ್ಲಿ ಬಹಳ ಮುಖ್ಯ ಪಾತ್ರ ವಹಿಸಿದ್ದು ನಿಜವಾದರೂ ರಾಜಕೀಯದಲ್ಲಿ ಮೌಲ್ಯಗಳನ್ನು ಪಾಲಿಸದೆ ಅವುಗಳೊಂದಿಗೆ ರಾಜಿ ಮಾಡಿಕೊಂಡಿರುವುದು ಮೌಲ್ಯಾಧಾರಿತ ರಾಜಕೀಯದ ಬೆಳವಣಿಗೆಗೆ ಬಹಳ ದೊಡ್ಡ ಹಿನ್ನಡೆ ಎಂದೇ ಹೇಳಬೇಕು. ಭಾರತದಲ್ಲಿ ಭ್ರಷ್ಟಾಚಾರದ ವಿರುದ್ಧ ಹಾಗೂ ಮೌಲ್ಯಗಳ ಪರ ಹೋರಾಟ ಬಹಳ ವ್ಯವಸ್ಥಿತವಾಗಿ ನಡೆಯುವುದು ಬಹಳ ಕಡಿಮೆ ಅಥವಾ ಇಲ್ಲವೇ ಇಲ್ಲವೆಂದರೂ ನಡೆದೀತು. ಯಾವಾಗಲೋ ಒಮ್ಮೆ ಜನಸಮೂಹ ಸಮೂಹಸನ್ನಿ ಹಿಡಿದವರಂತೆ ಸ್ಪಷ್ಟ ವಿವೇಚನೆ, ಯೋಜನೆ ಇಲ್ಲದೆ ಉದ್ರೇಕಗೊಳ್ಳುವುದು ನಡೆಯುತ್ತದೆ. ಇಂಥ ಸಂದರ್ಭದಲ್ಲಿ ಒಮ್ಮೆ ರಾಜಕೀಯ ಬದಲಾವಣೆಗೆ ಅವಕಾಶವಾಗುತ್ತದೆ. ಇಂಥ ಒಂದು ಅಮೂಲ್ಯ ಅವಕಾಶ ಕೇಜ್ರಿವಾಲ್ ಅವರು ಮೌಲ್ಯಗಳೊಂದಿಗೆ ರಾಜಿಮಾಡಿಕೊಂಡು ತನ್ನ ಸಂಗಡಿಗರನ್ನೇ ಹೊರದಬ್ಬುವ ವಿಪರೀತಕ್ಕೆ ಹೋದದ್ದು ದೇಶಕ್ಕೆ ಆದ ನಷ್ಟ. ಇನ್ನು ಇಂಥ ಒಂದು ಜನಸಮೂಹದ ಎಚ್ಚರಗೊಳ್ಳುವಿಕೆ ರೂಪುಗೊಳ್ಳಲು ಎಷ್ಟು ಸಮಯ ಬೇಕಾದೀತು ಎಂದು ಹೇಳಲಾಗದು. ಕೇಜ್ರಿವಾಲ್ ರಾಜಕೀಯದಲ್ಲಿ ಮೌಲ್ಯಗಳೊಂದಿಗೆ ರಾಜಿ ಮಾಡಿಕೊಳ್ಳದೆ ಎಲ್ಲರನ್ನೂ ಜೊತೆಗೂಡಿ ಮುನ್ನಡೆಸುವ ವಿವೇಕ ತೋರಿದ್ದರೆ ಹಾಗೂ ದೆಹಲಿಯಲ್ಲಿ ಉತ್ತಮ ಆಡಳಿತ ನೀಡುವಲ್ಲಿ ದಿಟ್ಟ ನಿರ್ಧಾರಗಳನ್ನು ಕೈಗೊಂಡಿದ್ದರೆ ನಿಧಾನವಾಗಿ ಪಕ್ಷವು ರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುವ ಎಲ್ಲ ಅವಕಾಶಗಳೂ ಇದ್ದವು. ಇದೀಗ ಪಕ್ಷದ ಒಡಕಿನಿಂದ ಹಾಗೂ ಕೇಜ್ರಿವಾಲ್ ಅವರ ಸರ್ವಾಧಿಕಾರಿ ಮನೋಭಾವದಿಂದ ಅಂಥ ಅಪೂರ್ವ ಅವಕಾಶ ತಪ್ಪಿಹೋಗುತ್ತಿದೆ.

ರಾಜಕೀಯ ಪಕ್ಷಗಳಲ್ಲಿ ಒಡಕು ಉಂಟಾದಾಗಲೆಲ್ಲ ಅವುಗಳನ್ನು ಜನರು ತಿರಸ್ಕರಿಸುತ್ತಾರೆ ಹಾಗೂ ಮತ್ತೆ ಹಳೆಯ ಗಂಡನ ಪಾದವೇ ಗತಿ ಎಂದು ಮೊದಲಿನ ರಾಜಕೀಯ ಪಕ್ಷಗಳಿಗೆ ಮಣೆ ಹಾಕುತ್ತಾರೆ. ಅಂತರ್ಜಾಲದಲ್ಲಿ ಈಗ ವ್ಯಕ್ತವಾಗುತ್ತಿರುವ ಬಹುತೇಕ ಪ್ರತಿಕ್ರಿಯೆಗಳು aam-admi-party-aapಕೇಜ್ರಿವಾಲ್ ಅವರ ಸರ್ವಾಧಿಕಾರಿ ಮನೋಭಾವ ಹಾಗೂ ತಿಕ್ಕಲು ಸ್ವಭಾವದ ವಿರುದ್ಧ ಕಂಡುಬರುತ್ತಿವೆ. ಇವುಗಳ ಕಡೆಗೆ ಗಮನಹರಿಸಿದ್ದಿದ್ದರೆ ಪಕ್ಷದ ಒಡಕಿಗೆ ಯಾರು ಕಾರಣ ಹಾಗೂ ಇದನ್ನು ಹೇಗೆ ತಿದ್ದಿಕೊಳ್ಳಬಹುದು ಎಂಬುದು ಕೇಜ್ರಿವಾಲ್ ಅವರಿಗೆ ಅರಿವಿಗೆ ಬರುತ್ತಿತ್ತು. ಕೇಜ್ರಿವಾಲ್ ಟೀಕೆಗಳಿಗೆ ಉಳಿದ ರಾಜಕಾರಣಿಗಳಂತೆ ದಪ್ಪ ಚರ್ಮವನ್ನು ಬೆಳೆಸಿಕೊಂಡಿರುವ ಕಾರಣ ಜನತೆಯ ಅಭಿಪ್ರಾಯವನ್ನು ಕಡೆಗಣಿಸುತ್ತಿದ್ದಾರೆ. ಇದು ದೇಶದಲ್ಲಿ ಪಕ್ಷವನ್ನು ಬೆಳೆಸುವಲ್ಲಿ ಹಿನ್ನಡೆಯಾಗಲಿದೆ ಹಾಗೂ ಕಾರ್ಯಕರ್ತರು ತಲೆತಗ್ಗಿಸುವಂತೆ ಮಾಡಲಿದೆ ಹಾಗೂ ಪಕ್ಷದ ಕಾರ್ಯಕರ್ತರ ನೈತಿಕ ಸ್ಥೈರ್ಯವನ್ನು ಬಹುತೇಕ ಕುಂದಿಸಲಿದೆ.

ಹೊಸ ರಾಜಕೀಯ ಪಕ್ಷವೊಂದು ಈಗಾಗಲೇ ಇರುವ ಬಲಿಷ್ಠ ರಾಜಕೀಯ ಪಕ್ಷಗಳ ನಡುವೆ ಸ್ಪರ್ಧಿಸಿ ಚುನಾವಣೆ ಗೆಲ್ಲುವುದು ಕಷ್ಟ ಹಾಗೂ ಬಹುತೇಕ ಸಂದರ್ಭಗಳಲ್ಲಿ ಅಸಂಭವಾಗಿರುತ್ತದೆ. ಹೀಗೆ ಒಂದು ಪಕ್ಷ ಗೆಲ್ಲಬೇಕಾದರೆ ಅದು ಒಂದು ವ್ಯಾಪಕ ಚಳುವಳಿಯ ಹಿನ್ನೆಲೆಯಲ್ಲಿ ರೂಪುಗೊಂಡಿದ್ದರೆ ಮಾತ್ರ ಸಾಧ್ಯ. ಲೋಕಸತ್ತಾ ಪಕ್ಷವು ಮೌಲ್ಯಾಧಾರಿತ ರಾಜಕೀಯವನ್ನು ಬೆಳೆಸುವ ಕನಸಿನೊಂದಿಗೆ ರೂಪುಗೊಂಡರೂ ಅದಕ್ಕೆ ಯಾವುದೇ ಚಳುವಳಿಯ ಹಿನ್ನೆಲೆ ಇಲ್ಲದ ಕಾರಣ ಅದು ಎಷ್ಟೇ ಮೌಲ್ಯಯುತ ರಾಜಕೀಯದ ಗುಣಗಳನ್ನು ಹೊಂದಿದ್ದರೂ ಬೆಳವಣಿಗೆ ಹೊಂದುವಲ್ಲಿ ನಿರೀಕ್ಷಿತ ಯಶಸ್ಸು ಸಾಧಿಸಿಲ್ಲ ಎಂಬುದನ್ನು ಗಮನಿಸಬೇಕಾಗಿದೆ. ಒಂದು ಜನಸಮೂಹದ ಚಳುವಳಿಯ ಹಿನ್ನೆಲೆಯಲ್ಲಿ ಅದು ರೂಪುಗೊಂಡಾಗ ಅದು ಹೊಸಪಕ್ಷದ ಬೆಳವಣಿಗೆಗೆ ವೇಗವರ್ಧಕವಾಗಿ ಕೆಲಸಮಾಡುತ್ತದೆ. ಹೊಸ ರಾಜಕೀಯ ಪಕ್ಷದ ಬೆಳವಣಿಗೆಯೂ ಮಾರ್ಕೆಟಿಂಗ್ ತಂತ್ರದ ರೀತಿಯಲ್ಲಿಯೇ ಇರುತ್ತದೆ. ಈಗಾಗಲೇ ಅಸ್ತಿತ್ವದಲ್ಲಿ ಇರುವ ವಿವಿಧ ಕಂಪನಿಗಳು ಉತ್ಪಾದಿಸುವ ಒಂದು ವಸ್ತುವನ್ನೇ ಅದೇ ರೀತಿ ಉತ್ಪಾದಿಸಿ ಮಾರಾಟ ಮಾಡಲು ಹೊರಟರೆ ಅದು ಯಶಸ್ವಿಯಾಗುವುದಿಲ್ಲ. ಅದರ ಬದಲು ಬೇರೆ ಕಂಪನಿಗಳ ಉತ್ಪನ್ನದಲ್ಲಿ ಇರದ ಕೆಲವು ವಿಶೇಷ ಗುಣಗಳನ್ನು ಸೇರಿಸಿ ಅದನ್ನು ವ್ಯಾಪಕ ಪ್ರಚಾರ ಮಾಡಿದರೆ ಆ ಉತ್ಪನ್ನ ಮಾರುಕಟ್ಟೆಯಲ್ಲಿ ಯಶಸ್ವಿಯಾಗುತ್ತದೆ ಹಾಗೂ ಜನರ ಮನಗೆಲ್ಲುವಲ್ಲಿ ಮುಂಚೂಣಿಗೆ ಬರುತ್ತದೆ. ಇದೇ ರೀತಿ ರಾಜಕೀಯದಲ್ಲಿಯೂ AAP-manifesto-PTIಇತರ ರಾಜಕೀಯ ಪಕ್ಷಗಳಲ್ಲಿ ಇರದ ಮೌಲ್ಯಾಧಾರಿತ ರಾಜಕೀಯದ ಹಾಗೂ ದೇಶದ ರಾಜಕೀಯದಲ್ಲಿ ಬದಲಾವಣೆ ತರುವ ಕನಸನ್ನು ಹೊತ್ತು ರೂಪುಗೊಂಡ ಆಮ್ ಆದ್ಮಿ ಪಕ್ಷ ಜನರ ಕುತೂಹಲದ ಕೇಂದ್ರಬಿಂದು ಆಗುವಲ್ಲಿ ಯಶಸ್ವಿಯಾಯಿತು. ಇದೇ ಮೌಲ್ಯಾಧಾರಿತ ರಾಜಕೀಯವನ್ನು ಕಾಯ್ದುಕೊಂಡು ಬಂದಿದ್ದರೆ ಇದು ದೇಶದಾದ್ಯಂತ ಬೆಳವಣಿಗೆ ಆಗುವ ಎಲ್ಲ ಲಕ್ಷಣಗಳೂ ಇದ್ದವು. ಕೇಜ್ರಿವಾಲ್ ಅಧಿಕಾರ ಗಳಿಸುವ ಹಪಾಹಪಿಯಲ್ಲಿ ಯಾವಾಗ ಮೌಲ್ಯಗಳೊಂದಿಗೆ ರಾಜಿ ಮಾಡಿಕೊಂಡರೋ ಆಗಲೇ ಇದರ ಬಗ್ಗೆ ಜನರಿಗೆ ಇದ್ದ ಕುತೂಹಲ ಹಾಗೂ ಕನಸು ಭಗ್ನವಾಗಿದೆ. ಯಾವಾಗ ಉಳಿದ ಏಕವ್ಯಕ್ತಿಕೇಂದ್ರಿತ ಹಾಗೂ ವಂಶಪಾರಂಪರ್ಯ ರಾಜಕೀಯ ಪಕ್ಷಗಳಂತೆ ಆಮ್ ಆದ್ಮಿ ಪಕ್ಷ ಕೇಜ್ರಿವಾಲ್ ಕೇಂದ್ರಿತ ಪಕ್ಷ ಆಯಿತೋ ಆಗಲೇ ಇದರ ವಿಶಿಷ್ಟ ಗುಣಗಳು ಲಯವಾಗಿ ಉಳಿದ ಪಕ್ಷಗಳಂತೆ ಇದೂ ಒಂದು ಪಕ್ಷ ಎಂಬ ಭಾವನೆ ಜನತೆಯಲ್ಲಿ ಬೇರೂರುತ್ತಿದೆ. ಹೀಗಾಗಿ ಇನ್ನು ಆಮ್ ಆದ್ಮಿ ಪಕ್ಷವನ್ನು ದೇಶದಲ್ಲಿ ಬೆಳೆಸುವುದು ಬಹಳ ಕಠಿಣ ಹಾಗೂ ಬಹುತೇಕ ಅಸಂಭವವಾಗುವ ಸಾಧ್ಯತೆ ಕಂಡುಬರುತ್ತಿದೆ. ಬೇರೆ ರಾಜಕೀಯ ಪರ್ಯಾಯ ಇಲ್ಲದೆ ಇರುವ ನಿರ್ವಾತ ಪರಿಸ್ಥಿತಿಯಲ್ಲಿ ಮಾತ್ರ ಕೇಜ್ರಿವಾಲ್ ಕೇಂದ್ರಿತ ಆಮ್ ಆದ್ಮಿ ಪಕ್ಷ ಬೆಳೆದರೂ ಬೆಳೆಯಬಹುದು ಆದರೆ ಅದು ಉಳಿದ ಪಕ್ಷಗಳಿಗಿಂಥ ಭಿನ್ನ ಎಂಬ ವಿಶೇಷಣ ಮಾತ್ರ ಅದಕ್ಕೆ ದಕ್ಕಲಾರದು.

ಮೌಲ್ಯಾಧಾರಿತ ರಾಜಕೀಯದಲ್ಲಿ ಈಡೇರಿಸಲಾಗದ ಆಶ್ವಾಸನೆಗಳನ್ನು ನೀಡುವುದು ಸೂಕ್ತವಲ್ಲ. ಆಮ್ ಆದ್ಮಿ ಪಕ್ಷವು ಈಡೇರಿಸಲು ಅಸಂಭವವಾದ ಹಲವು ಆಶ್ವಾಸನೆಗಳನ್ನು ನೀಡಲು ಹೊರಟದ್ದು ಕೂಡ ಮುಂದೆ ಪಕ್ಷಕ್ಕೆ ದೊಡ್ಡ ಹಿನ್ನಡೆ ಉಂಟುಮಾಡುವ ಸಂಭವ ಇದೆ. kejriwal_aap_pti_rallyಜನರಿಗೆ ಬೇಕಾಗಿರುವುದು ಸ್ವಚ್ಛ, ದಕ್ಷ, ಪಾರದರ್ಶಕ ಆಡಳಿತ ಹಾಗೂ ನುಡಿದಂತೆ ನಡೆಯುವ ನಾಯಕರು. ತನ್ನ ನುಡಿಗೆ ವಿರುದ್ಧವಾಗಿ ನಡೆಯಲು ಹೊರಡುತ್ತಿರುವ ಆಮ್ ಆದ್ಮಿ ಪಕ್ಷದ ಬಗ್ಗೆ ಈಗಾಗಲೇ ಜನರಿಗೆ ಭ್ರಮನಿರಸನದ ಅನುಭವ ಆಗುತ್ತಿರುವುದು ಅಂತರ್ಜಾಲದಲ್ಲಿ ಆ ಪಕ್ಷದ ಬಗ್ಗೆ ಹಾಗೂ ಕೇಜ್ರಿವಾಲ್ ಬಗ್ಗೆ ವ್ಯಕ್ತವಾಗುತ್ತಿರುವ ಜನತೆಯ ಅನಿಸಿಕೆಗಳಿಂದ ಕಂಡುಬರುತ್ತಿದೆ. ಅಂತಿಮವಾಗಿ ಇದರ ಪ್ರಯೋಜನ ಕಾಂಗ್ರೆಸ್ ಪಕ್ಷದ ಪುನಶ್ಚೇತನದ ರೂಪದಲ್ಲಿ ಕಂಡುಬರುವ ಸಂಭವ ಇದೆ. ಜನತಾ ಪರಿವಾರದ ಒಳಜಗಳದ ಪರಿಣಾಮ ಮುಂದೆ ನಡೆದ ಚುನಾವಣೆಯಲ್ಲಿ ದೇಶಾದ್ಯಂತ ನೆಲಕಚ್ಚಿದ್ದ ಕಾಂಗ್ರೆಸ್ ಪಕ್ಷ ಪುನಶ್ಚೇತನ ಹೊಂದಿದ್ದು ಗಮನಾರ್ಹ. ಇದು ಆಮ್ ಆದ್ಮಿ ಪಕ್ಷಕ್ಕೆ ಏನಾದರೂ ಸಂದೇಶವನ್ನು, ಎಚ್ಚರಿಕೆಯನ್ನು, ವಿವೇಕವನ್ನು ಮೂಡಿಸೀತೇ? ಕೇಜ್ರಿವಾಲ್ ಅವರ ಹಠಮಾರಿ ಧೋರಣೆಯನ್ನು ನೋಡಿದರೆ ಆಮ್ ಆದ್ಮಿ ಪಕ್ಷ ಸುಧಾರಣೆಯಾಗುವ ಯಾವುದೇ ಲಕ್ಷಣಗಳು ಕಂಡುಬರುತ್ತಿಲ್ಲ. ಗೆಲುವಿನ ಅಹಂಕಾರದಲ್ಲಿ ಇನ್ನು ವಿವೇಕ ಮೂಡಬೇಕಾದರೆ ಚುನಾವಣೆಗಳಲ್ಲಿ ಆಮ್ ಆದ್ಮಿ ಪಕ್ಷ ಭಾರೀ ಹಿನ್ನಡೆ ಕಾಣಬೇಕೆನೋ?

2014 ರ ಭೂ ಸ್ವಾಧೀನ ಮಸೂದೆ : ರೈತ ವಿರೋಧಿ ನರೇಂದ್ರ ಮೋದಿ (ಬಂಡವಾಳಶಾಹಿಗಳಿಗೆ ಅಚ್ಛೇ ದಿನ್)

– ಬಿ. ಶ್ರೀಪಾದ ಭಟ್

ಭೂಸ್ವಾದೀನ ಮಸೂದೆ 2014 ಸಂವಿಧಾನಬಾಹಿರ ಮತ್ತು ಜನವಿರೋಧಿ ಕಾಯ್ದೆಯಾಗಿದೆ. ಇದು ರೈತರ ಅಸ್ತಿತ್ವವನ್ನೇ ನಿರ್ನಾಮ ಮಾಡುತ್ತದೆ. ಕಾರ್ಪೋರೇಟ್ ಶಕ್ತಿಗಳಿಗೆ ಮಣಿದಿರುವ ಈ 56 ಇಂಚಿನ ನರೇಂದ್ರ ಮೋದಿ ಸರ್ಕಾರ ಕಾರ್ಪೋರೇಟ್ ಅಜೆಂಡಾಗಳಿಗೆ ಅನುಗುಣವಾಗುವಂತೆ 2013ರ ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿಗಳನ್ನು ತಂದು ಸುಗ್ರೀವಾಜ್ಞೆಯ ಮೂಲಕ ಅದನ್ನು ಜಾರಿಗಳಿಸಲು ಹಠ ತೊಟ್ಟಿದೆ. modi_ambani_tata_kamathತನ್ನದೇ ಮಂತ್ರಿಮಂಡಲದೊಳಗೆ ಈ ಕರಾಳ ಮಸೂದೆಯ ಕುರಿತು ಭಿನ್ನಾಭಿಪ್ರಾಯಗಳಿದ್ದರೂ ಅದನ್ನು ಕೇರ್ ಮಾಡದ ಈ ನರೇಂದ್ರ ಮೋದಿ ತನ್ನ ಸಂಸದರು ಮತ್ತು ಮಂತ್ರಿಗಳಿಗೆ ಸರ್ವಾಧಿಕಾರದ ಧ್ವನಿಯಲ್ಲಿ ಜನರ ಮುಂದೆ ಹೋಗಿ ವಿವರಿಸಿ ಎಂದು ತಾಕೀತು ಮಾಡುತ್ತಿದ್ದಾರೆ. ಇದನ್ನು ವಿವರಗಳನ್ನು ಚರ್ಚಿಸುವ ಮೊದಲು 1894, 2013, ಮತ್ತು 2014ರ ತಿದ್ದುಪಡಿ ಭೂಸ್ವಾದೀನ ಮಸೂದೆಯ ಪ್ರಮುಖ ಅಂಶಗಳನ್ನು ಮೊದಲು ಪರಿಶೀಲಿಸಬೇಕು:

ಸಾಮಾಜಿಕ ಪರಿಣಾಮಗಳ ಮೌಲ್ಯಮಾಪನ (Social Impact Assement –SIA)
1894 : ಅವಕಾಶವಿಲ್ಲ
2013 : ಪ್ರತಿಯೊಂದು ಭೂಸ್ವಾಧೀನ ಪ್ರಕ್ರಿಯೆಯ ಮೊದಲು ಸಾಮಾಜಿಕ ಪರಿಣಾಮಗಳ ಮೌಲ್ಯಮಾಪನ (SIಂ) ಕಡ್ಡಾಯವಾಗಿರುತ್ತದೆ
2014 : ಸೆಕ್ಯುರಿಟಿ, ರಕ್ಷಣಾ ಇಲಾಖೆ, ಗ್ರಾಮೀಣ ಮೂಲಭೂತ ಸೌಕರ್ಯಗಳು, ಕೈಗಾರಿಕಾ ಕಾರಿಡಾರ್ ಮತ್ತು ಸಾಮಾಜಿಕ ಮೂಲಭೂತ ಸೌಕರ್ಯಗಳು ಈ ವಲಯಗಳಿಗೆ ಸಂಬಂಧಪಟ್ಟಂತೆ ಸಾಮಾಜಿಕ ಪರಿಣಾಮಗಳ ಮೌಲ್ಯಮಾಪನ (SIA) ಅಗತ್ಯವಿಲ್ಲ. ನೇರವಾಗಿ ಜಮೀನನ್ನು ಪಡೆದುಕೊಳ್ಳಬಹುದು.

ಸಂತ್ರಸ್ಥ ಜನರೊಂದಿಗೆ, ರೈತರೊಂದಿಗೆ ಸಮಾಲೋಚನೆ, ಅನುಮತಿ, ಒಡಂಬಡಿಕೆ
1894 : ಅವಕಾಶವಿಲ್ಲ
2013 : ಖಾಸಗಿ ಕಂಪನಿಗಳಿಗೆ ಮತ್ತು ಸಾರ್ವಜನಿಕ ಖಾಸಗಿ ಸಹಭಾಗಿತ್ವದ (PPP) ಕಂಪನಿಗಳಿಗೆ ಸಂಬಂಧಪಟ್ಟಂತೆ ಪ್ರತಿಯೊಂದು ಭೂಸ್ವಾಧೀನ ಪ್ರಕ್ರಿಯೆಯ ಮೊದಲು ಶೇಕಡಾ 80ರಷ್ಟು ಸಂತ್ರಸ್ಥ ಜನರೊಂದಿಗೆ, ರೈತರೊಂದಿಗೆ ಸಮಾಲೋಚನೆ, ಅನುಮತಿ, ಒಡಂಬಡಿಕೆ ಕಡ್ಡಾಯವಾಗಿರುತ್ತದೆ
2014 : ಸೆಕ್ಯುರಿಟಿ, ರಕ್ಷಣಾ ಇಲಾಖೆ, ಗ್ರಾಮೀಣ ಮೂಲಭೂತ ಸೌಕರ್ಯಗಳು, ಕೈಗಾರಿಕಾ ಕಾರಿಡಾರ್ ಮತ್ತು ಸಾಮಾಜಿಕ ಮೂಲಭೂತ ಸೌಕರ್ಯಗಳು ಈ ವಲಯಗಳಿಗೆ ಸಂಬಂಧಪಟ್ಟಂತೆ ಸಂತ್ರಸ್ಥ ಜನರೊಂದಿಗೆ, ರೈತರೊಂದಿಗೆ ಸಮಾಲೋಚನೆ, ಅನುಮತಿ, ಒಡಂಬಡಿಕೆ ಅವಶ್ಯಕತೆ ಇಲ್ಲ. ನೇರವಾಗಿ ಜಮೀನನ್ನು ಪಡೆದುಕೊಳ್ಳಬಹುದು.

ನೀರಾವರಿ, ಫಲವತ್ತಾದ ಭೂಮಿ (Multi Crop Land)
1984 : ಅವಕಾಶವಿಲ್ಲ
2013 : ಕಡ್ಡಾಯವಾಗಿ ಬೇರೆ ದಾರಿಯಿಲ್ಲ ಎನ್ನುವಂತಹ ಪರಿಸ್ಥಿತಿಯಲ್ಲಿ (Mandatory Situation) ಇಡೀ ಜಿಲ್ಲೆಯಲ್ಲಿನ ನೀರಾವರಿ ಭೂಮಿಯಲ್ಲಿ ಶೇಕಡಾ 5ರಷ್ಟನ್ನು ಮಾತ್ರ ಸ್ವಾಧೀನ ಪಡೆಸಿಕೊಳ್ಳಬಹುದು. ಇನ್ನುಳಿದಂತೆ ಸಾಮಾನ್ಯ ಸಂದರ್ಭಗಳಲ್ಲಿ ನೀರಾವರಿ ಪ್ರದೇಶದ ಭೂಮಿಯನ್ನು ಸ್ವಾಧೀನ ಪಡೆಸಿಕೊಳ್ಳುವಂತಿಲ್ಲ.
2014 : ಸೆಕ್ಯುರಿಟಿ, ರಕ್ಷಣಾ ಇಲಾಖೆ, ಗ್ರಾಮೀಣ ಮೂಲಭೂತ ಸೌಕರ್ಯಗಳು, ಕೈಗಾರಿಕಾ ಕಾರಿಡಾರ್ ಮತ್ತು ಸಾಮಾಜಿಕ ಮೂಲಭೂತ ಸೌಕರ್ಯಗಳು ಈ ವಲಯಗಳಿಗೆ ಸಂಬಂಧಪಟ್ಟಂತೆ ನೀರಾವರಿ, ಫಲವತ್ತಾದ ಭೂಮಿಯನ್ನು ಸಹ ನೇರವಾಗಿ ಸ್ವಾಧೀನ ಪಡೆಸಿಕೊಳ್ಳಬಹುದು.

ಮೇಲಿನ ವಿವರಗಳನ್ನು ಗಮನಿಸಿದಾಗ ಮೋದಿ ಸರ್ಕಾರ ತಿದ್ದುಪಡಿ ಮಾಡಿದ 2014ರ ಭೂಸ್ವಾದೀನ ಮಸೂದೆಯ ಕರಾಳತೆ ಸ್ಪಷ್ಟವಾಗುತ್ತದೆ. farmer-land-acquisitionಪದೇ ಪದೇ ಸೆಕ್ಯುರಿಟಿ, ರಕ್ಷಣಾ ಇಲಾಖೆ, ಗ್ರಾಮೀಣ ಮೂಲಭೂತ ಸೌಕರ್ಯಗಳು, ಕೈಗಾರಿಕಾ ಕಾರಿಡಾರ್ ಮತ್ತು ಸಾಮಾಜಿಕ ಮೂಲಭೂತ ಸೌಕರ್ಯಗಳು, ಈ ವಲಯಗಳ ಹೆಸರಿನಲ್ಲಿ ಪ್ರಜಾಪ್ರಭುತ್ವದ ಆಶಯಗಳನ್ನು ನಿರ್ನಾಮಗೊಳಿಸಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಇಂಡಿಯಾದಂತಹ ಭ್ರಷ್ಟಗೊಂಡ ದೇಶದಲ್ಲಿ ಈ ಖಾಸಗಿ ಉದ್ಯಮಿಗಳು, ರಿಯಲ್ ಎಸ್ಟೇಟ್ ಏಜಂಟರು, ದಲ್ಲಾಳಿಗಳು, ಮಧ್ಯವರ್ತಿಗಳು ತಮ್ಮ ಎಲ್ಲಾ ವ್ಯಾಪಾರದ ವಹಿವಾಟುಗಳನ್ನು ಈ ಮೇಲೆ ಹೇಳಿದ 5 ವಲಯಗಳಿಗೆ ಸಂಬಂಧಪಟ್ಟಂತೆ, ಅವುಗಳ ಅಡಿಯಲ್ಲಿಯೇ ಬರುವಂತೆ ಯೋಜನೆಗಳನ್ನು ರೂಪಿಸಿ ಅನುಮೋದನೆ ಪಡೆದುಕೊಂಡುಬಿಡುತ್ತಾರೆ. ಉದಾಹರಣೆಗೆ ಗಾಲ್ಫ್ ಮೈದಾನ, ಈಜುಕೊಳ, ರೆಸಾರ್ಟಗಳಂತಹ ಮೋಜುವಾನಿ ಕೂಟಗಳು ನಿರಾಯಾಸವಾಗಿ ‘ಸಾಮಾಜಿಕ ಮೂಲಭೂತ ಸೌಲಭ್ಯ’ಗಳ ಅಡಿಯಲ್ಲಿ ಮಾನ್ಯತೆ ಪಡೆದುಕೊಂಡುಬಿಡುತ್ತವೆ. ಇದು ಒಂದು ಸಣ್ಣ ಉದಾಹರಣೆ.

ಮುಖ್ಯವಾಗಿ ಒಮ್ಮೆ ಸಾಮಾಜಿಕ ಪರಿಣಾಮಗಳ ಮೌಲ್ಯಮಾಪನ ಷರತ್ತನ್ನು ಕಿತ್ತು ಹಾಕಿದ ನಂತರ ಈ ಭೂಸ್ವಾಧೀನ ಪ್ರಕ್ರಿಯೆಯ ಹೊಣೆ ಹೊತ್ತ ಅಧಿಕಾರಶಾಹಿ ಮತ್ತು ರಾಜಕಾರಣಿಗಳ ನೆಕ್ಸಸ್ ನೀತಿ-ನಿಯಮಗಳನ್ನು ತಮ್ಮ ಹಿತಾಸಕ್ತಿಗೆ ಅನುಕೂಲವಾಗುವಂತೆ ತಿರುಚಿ ಖಾಸಗಿ ಬಂಡವಾಳಶಾಹಿಗಳ ಎಲ್ಲಾ ಯೋಜನೆಗಳನ್ನು ಸಾರ್ವಜನಿಕ ಹಿತಾಸಕ್ತಿಯ ಅಡಿಯಲ್ಲಿ ಅನುಮೋದಿಸಿಬಿಡುತ್ತದೆ. ಸಾಮಾಜಿಕ ಪರಿಣಾಮಗಳ ಮೌಲ್ಯಮಾಪನ ಅವಶ್ಯಕತೆ ಇಲ್ಲದ ಮೇಲೆ ಅಧಿಕಾರಶಾಹಿ ಮತ್ತು ರಾಜಕಾರಣಿಗಳು ತಮ್ಮ ಮೂಗಿನ ನೇರಕ್ಕೆ, ತಮ್ಮ ವೈಯುಕ್ತಿಕ ಹಿತಾಸಕ್ತಿಗಳಿಗೆ ಅನುಗುಣವಾಗಿ ಪರಿಹಾರ ಮೊತ್ತವನ್ನು ಸಹ ನಿರ್ಧರಿಸಿಬಿಡುತ್ತಾರೆ. ಸಹಜವಾಗಿಯೇ ಅತ್ಯಂತ ಕನಿಷ್ಠ ಮೊತ್ತವನ್ನು ನಿಗದಿಪಡಿಸುವ ಈ ಅಧಿಕಾರ ವರ್ಗ ಭವಿಷ್ಯದಲ್ಲಿ ರೈತರನ್ನು ವಂಚಿಸುವ ದಿನಗಳನ್ನು ನೆನೆಸಿಕೊಂಡರೆ ಇನ್ನು ಇಂಡಿಯಾದಲ್ಲಿ ಕೃಷಿ ಉದ್ಯೋಗ ಮತ್ತು ರೈತಾಪಿ ಸಮುದಾಯಗಳು ಶೀಘ್ರದಲ್ಲೇ ಕಣ್ಮರೆಯಾಗುವ ದಿನಗಳು ದೂರವಿಲ್ಲ.

ಇನ್ನು ನೀರಾವರಿ, ಫಲವತ್ತಾದ ಭೂಮಿಯನ್ನೂ ಸಹ ಅಭಿವೃದ್ಧಿಯ ಹೆಸರಿನಲ್ಲಿ ಖಾಸಗಿಯವರಿಗೆ ಹಸ್ತಾಂತರಗೊಳಿಸಿದ ಮೇಲೆ ಇದರ ದುಷ್ಪರಿಣಾಮಗಳನ್ನು ಅಂದಾಜಿಸುವುದು ಕಷ್ಟಕರವಲ್ಲ.

ಮುಖ್ಯವಾಗಿ ಕಾರ್ಪೋರೇಟ್ ಶಕ್ತಿಗಳ ಮುಂದೆ ಶರಣಾಗಿರುವ ಮೋದಿ ಸರ್ಕಾರ ಅಧಿಕಾರದಲ್ಲಿರುವ ಸಂದರ್ಭದಲ್ಲಿ ಖಾಸಗಿ ಉದ್ಯಮಿಗಳು ಬಲು ಸುಲಭವಾಗಿ ತಮ್ಮ ಎಲ್ಲಾ ಯೋಜನೆಗಳನ್ನು ಮೇಲಿನ ವಲಯಗಳ ಅಡಿಯಲ್ಲಿ ಅನುಮೋದನೆ ಪಡೆದುಕೊಳ್ಳುತ್ತಾರೆ. ಈಗಾಗಲೇ ಈ ಕಾರ್ಪೋರೇಟ್ ಉದ್ಯಮಿಗಳಿಗೆ ರೆಡ್ ಕಾರ್ಪೆಟ್ ಹಾಸಿರುವ ಮೋದಿ ಸರ್ಕಾರ ಮುಂದಿನ ದಿನಗಳಲ್ಲಿ ಸರ್ಕಾರಿ ಸ್ವಾಮ್ಯದ ಎಲ್ಲಾ ಉದ್ದಿಮೆಗಳನ್ನು ಹಸ್ತಾಂತರಿಸಲು ತುದಿಗಾಲಲ್ಲಿ ನಿಂತಿದೆ. 2013ರ ಮಸೂದೆಯಲ್ಲಿ ಒಳಗೊಂಡಿರುವ ಪೂರ್ವ ಶರತ್ತು ಎನ್ನುವ ಮುಖ್ಯವಾದ ಪ್ರಜಾತಾಂತ್ರಿಕ ಆಶಯವನ್ನು ಮೋದಿ ಸರ್ಕಾರದ 2014ರ ತಿದ್ದುಪಡಿ ಮಸೂದೆ ಸಂಪೂರ್ಣವಾಗಿ ತಿರಸ್ಕರಿಸಿದೆ. ಈ ಮೂಲಕ ರಾಷ್ಟ್ರದ ಅಭಿವೃಧ್ಧಿಯ ಹೆಸರಿನಲ್ಲಿ ತನ್ನ ಕಾನೂನು, ಅಧಿಕಾರಶಾಹಿ, farmer-land-acquisition-2ನಿಷ್ಕರುಣಿ ನೀತಿಗಳನ್ನು ಬಳಸಿಕೊಂಡು ಬಲತ್ಕಾರವಾಗಿ ರೈತರಿಂದ ಜಮೀನನ್ನು ವಶಪಡೆಸಿಕೊಂಡು ಖಾಸಗಿ ಶಕ್ತಿಗಳಿಗೆ ಹಸ್ತಾಂತರಿಸುತ್ತದೆ. ದೇಶವನ್ನು 150 ವರ್ಷಗಳ ಹಿಂದಿನ ಬ್ರಿಟೀಷರ ಕಲೋನಿಯಲ್ ವ್ಯವಸ್ಥೆಗೆ ಕೊಂಡೊಯ್ದಿದೆ ಈ ಮೋದಿ ನೇತೃತ್ವದ ಬಿಜೆಪಿ ಸರ್ಕಾರ. ಇನ್ನು ಭೂಮಿಯನ್ನು ಖಾಸಗಿ ಉದ್ಯಮಿಗಳಿಗೆ ಉಚಿತವಾಗಿ ಹಸ್ತಾಂತರಿಸಲು ಈ ಕರಾಳ 2014 ಮಸೂದೆಯನ್ನು ಸುಗ್ರೀವಾಜ್ಞೆಯ ಮೂಲಕ ಜಾರಿಗೊಳಿಸುತ್ತಿದೆ. ಮುಖ್ಯವಾಗಿ ಬಂಡವಾಳ ಹೂಡಿಕೆದಾರರಿಗೆ, ವಿದೇಶಿ ಕಂಪನಿಗಳಿಗೆ ಇಂಡಿಯಾ ದೇಶವು ಸದಾ ಸ್ನೇಹಮಯಿಯಾಗಿರುತ್ತದೆ ಮತ್ತು ಎಲ್ಲಾ ಬಗೆಯ ಪರ್ಮಿಟ್ ರಾಜ್ ವ್ಯವಸ್ಥೆಯನ್ನು ಕೊನೆಗೊಳಿಸಿ ಸಂಪೂರ್ಣ ಮುಕ್ತ ಮಾರ್ಕೆಟ್ ವ್ಯವಸ್ಥೆಯನ್ನು ಜಾರಿಗೊಳಿಸಿದ್ದೇವೆ ಎಂದು ತೋರಿಸಿಕೊಳ್ಳಲು ಮೋದಿ ಸರ್ಕಾರ ಈ ಜನವಿರೋಧಿ ಕೃತ್ಯಕ್ಕೆ ಕೈ ಹಾಕಿದೆ. ಇದು ಹೀಗೆ ಮಂದುವರೆದರೆ ಜನರಿಗಾಗಿ ಸರ್ಕಾರ ಎನ್ನುವ ಪ್ರಜಾಪ್ರಭುತ್ವದ ಆಶಯ ಕಣ್ಮರೆಯಾಗಿ ನಾಯಕನಿಗಾಗಿ ಸರ್ಕಾರ ಎನ್ನುವ ಫ್ಯಾಸಿಸ್ಟ್ ವ್ಯವಸ್ಥೆ ಜಾರಿಗೊಳ್ಳುತ್ತದೆ.

ಒಂದು ಉದಾಹರಣೆಯ ಮೂಲಕ ವಿವರಿಸಬಹುದಾದರೆ ಮುಂಬೈ-ದೆಹಲಿ ನಗರಗಳ ಮಧ್ಯೆ ಕೈಗಾರಿಕಾ ಕಾರಿಡಾರ್ ಅನ್ನು ನಿರ್ಮಾಣ ಮಾಡಲು ಸುಮಾರು 3,90,000 ಹೆಕ್ಟೇರ್ ಭೂಮಿಯ ಅವಶ್ಯಕತೆಯ ಇದೆ. ಇದರಲ್ಲಿ ಶೇಕಡಾ ಎಂಬತ್ತರಷ್ಟು ಕೃಷಿ ಭೂಮಿ ಸೇರಿಕೊಂಡಿದೆ. ಇನ್ನು 2014ರ ಭೂಸ್ವಾಧೀನ ಮಸೂದೆಯ ಅನುಸಾರ ಈ ಕೈಗಾರಿಕಾ ಕಾರಿಡಾರ್‌ಗೆ ಸಾಮಾಜಿಕ ಪರಿಣಾಮಗಳ ಮೌಲ್ಯಮಾಪನ, ರೈತರ, ಭೂ ಮಾಲೀಕರ ಅನುಮತಿ ಮತ್ತು ನೀರಾವರಿ, ಫಲವತ್ತಾದ ಭೂಮಿಯ ಪ್ರಶ್ನೆ, ಎಲ್ಲವೂ ಕಡೆಗಣಿಸಲ್ಪಟ್ಟು ಕೇವಲ ಯೋಜನೆ ಅನುಷ್ಠಾನ ಮುಖ್ಯವಾಗಿಬಿಡುತ್ತದೆ. ಅಭಿವೃದ್ಧಿಯ ಹೆಸರಿನಲ್ಲಿ ಸಾವಿರಾರು ರೈತರು ಬೀದಿ ಪಾಲಾಗುತ್ತಾರೆ. ಇನ್ನು ದೇಶಾದ್ಯಾಂತ ನಗರಗಳ ನಡುವೆ ಕೈಗಾರಿಕಾ ಕಾರಿಡಾರ್‌ಗಳ ಯೋಜನೆಯ ದುಷ್ಪರಿಣಾಮಗಳು ಊಹೆಗೂ ನಿಲುಕುವುದಿಲ್ಲ. ಇಂತಹ ಕರಾಳ, ಪ್ರಜಾತಾಂತ್ರಿಕ ವಿರೋಧಿ ಮಸೂದೆಯ ಪರವಾಗಿ ಹಠ ತೊಟ್ಟಿರುವ ನರೇಂದ್ರ ಮೋದಿ ಒಬ್ಬ ಜನವಿರೋಧಿ ಪ್ರಧಾನ ಮಂತ್ರಿ ಎಂದು ಸಾಬೀತಾಗುತ್ತದೆ.

ಈ 2014 ಭೂಸ್ವಾಧೀನ ಮಸೂದೆಯ ಪರವಾಗಿ ವಾದಿಸುತ್ತಿರುವ ಗುಂಪು ಪರಿಹಾರ, ಪುನರ್ವಸತಿಗಳಿಗೆ ಸಂಬಂಧಪಟ್ಟಂತೆ ಸದಾಕಾಲವೂ ಜನರ ಪರವಾಗಿಯೇ ಇರುತ್ತದೆ. ಕೇವಲ ಸ್ವಾಧೀನ ಪ್ರಕ್ರಿಯೆಯನ್ನು ಸರಳಗೊಳಿಸುತ್ತಿದ್ದೇವೆ ಎಂದು ಸಮಜಾಯಿಷಿ ನೀಡುತ್ತಾರೆ. ಆದರೆ ಒಮ್ಮೆ ಭೂಮಿಯನ್ನು ಸ್ವಾಧಿನ ಪಡೆಸಿಕೊಂಡ ನಂತರ ಪರಿಹಾರ, ಪುನರ್ವಸತಿ ಎನ್ನುವುದು ಒಂದು ದೊಡ್ಡ ಮರೆಮೋಸದ ಜಾಲವಾಗಿ ಪರಿವರ್ತನೆಗೊಳ್ಳುತ್ತದೆ. ಅದು ಗಗನಕುಸುಮ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಕಳೆದ 60 ವರ್ಷಗಳ ಇತಿಹಾಸವೇ ನಮ್ಮ ಮುಂದಿದೆ. ಸಾವಿರಾರು ಉದಾಹರಣೆಗಳಿವೆ. ಯಾವುದೇ ಪೂರ್ವ ಶರತ್ತುಗಳಿಲ್ಲದೆ ಭೂಮಿಯನ್ನು ಹಸ್ತಾಂತರಗೊಳಿಸಿದ ನಂತರ ಯಾವ ಆಧಾರದ ಮೇಲೆ ಪರಿಹಾರವನ್ನು ಕೇಳುವುದು Industrial_Mangaloreಎನ್ನುವ ಯಕ್ಷಪ್ರಶ್ನೆಗೆ ಈ ಮೋದಿ ಮತ್ತವರ ಪಟಾಲಂ ಉತ್ತರಿಸುತ್ತಿಲ್ಲ. ಇದಿರಲಿ ವ್ಯವಸಾಯಕ್ಕೆ ಸಂಬಂಧಪಟ್ಟಂತೆ ಸಾವಿರಾರು ತೊಂದರೆಗಳಲ್ಲಿ ಮುಳುಗಿರುವ ಭಾರತದ ರೈತ ಪ್ರತಿ ಬಾರಿಯೂ ಈ ಭೂಸ್ವಾಧೀನ ಸಂದರ್ಭದಲ್ಲಿ ಅಧಿಕಾರಶಾಹಿ, ಖಾಸಗಿ ಉದ್ಯಮಿಗಳು, ರಾಜಕಾರಣಿಗಳ ಅಪವಿತ್ರ ನೆಕ್ಸಸ್ ಅನ್ನು, ಪಶುಸದೃಶ ಅಧಿಕಾರವನ್ನು ಮುಖಾಮುಖಿಯಾಗಲು ಸಾಧ್ಯವೇ ಇಲ್ಲ.

ಇಂದು ಕೃಷಿ ವಲಯವೇ ಸಂಪೂರ್ಣವಾಗಿ ಸೋತುಹೋಗಿರುವ, ದಿನನಿತ್ಯ ಆತ್ಮಹತ್ಯೆ ಅಥವಾ ನಗರದ ವಲಸೆಯಲ್ಲಿ ಸಿಲುಕಿ ನರಳುತ್ತಿರುವ ರೈತನ ಪರವಾಗಿ ವೈಜ್ಞಾನಿಕವಾಗಿ ಅಧ್ಯಯನ ಮಾಡದ, ದೂರಗಾಮಿ ಯೋಜನೆಗಳನ್ನು ರೂಪಿಸಲು ಸಹ ನಿರಾಕರಿಸುವ ಈ ಮೋದಿ ಸರ್ಕಾರ ಕೇವಲ ಪರಿಹಾರ, ಪುನರ್ವಸತಿ ಕುರಿತಾಗಿ ಮಾತನಾಡುತ್ತಿರುವುದು ಈ ಬಿಜೆಪಿ ಪಕ್ಷದ ದುರಹಂಕಾರ, ದರ್ಪ ಮತ್ತು ಬೌದ್ಧಿಕ ಭ್ರಷ್ಟತೆ ರೈತರಿಗೆ ಉರುಳಾಗುತ್ತಿರುವುದರ ಸಂಕೇತ.

2013ರ ಭೂಸ್ವಾಧೀನ ಮಸೂದೆಯ ಮತ್ತೊಂದು ಪ್ರಮುಖ ಅಂಶವೆಂದರೆ ಸ್ವಾಧೀನ ಪಡೆಸಿಕೊಂಡ ಭೂಮಿಯನ್ನು ನಿರ್ದಿಷ್ಠ ಅವಧಿಯೊಳಗೆ (5 ವರ್ಷ) ಸಂಬಂಧಪಟ್ಟ ಯೋಜನೆಯನ್ನು ಅನುಷ್ಠಾನಗೊಳಿಸದಿದ್ದರೆ ಆ ಭೂಮಿಯು ಮರಳಿ ಅದರ ಮಾಲೀಕನಿಗೆ ಅಥವಾ ಲೋಕಲ್ ಬ್ಯಾಂಕ್‌ಗೆ ಮರಳಿಸಬೇಕು ಮತ್ತು ಸಂಬಂಧಿತ ಅಧಿಕಾರಿಗಳು ಹಾಗೂ ಯೋಜನೆಯ ಅನುಷ್ಠಾನದ ಜವಬ್ದಾರಿ ಹೊತ್ತಿರುವ ಕಂಪನಿಗಳ ವಿರುದ್ಧ ತನಿಖೆಯನ್ನು ನಡೆಸಬೇಕು.

ಆದರೆ ಮೋದಿಯ 2014ರ ತಿದ್ದುಪಡಿ ಮಸೂದೆಯ ಅನುಸಾರ 5 ವರ್ಷಗಳ ಒಳಗೆ ಯೋಜನೆ ಪೂರ್ಣಗೊಳ್ಳದಿದ್ದರೆ ಭೂಮಿಯನ್ನು ಅದರ ಒಡೆಯನಿಗೆ ಮರಳಿಸುವ ಅಗತ್ಯವಿಲ್ಲ ಮತ್ತು ಸಂಬಂಧಿತ ಅಧಿಕಾರಿಗಳು ಹಾಗೂ ಯೋಜನೆಯ ಮಾಲೀಕರ ವಿರುದ್ಧ ತನಿಖೆಯನ್ನು ನಡೆಸಲು ಸರ್ಕಾರದ ಅನುಮತಿ ಪಡೆಯಬೇಕು. 2014ರ ಈ ತಿದ್ದುಪಡಿ ಮರಳಿ 1894ರ ಡ್ರಕೋನಿಯನ್ ಮಸೂದೆಗೆ ಮರಳುತ್ತದೆ. ಬ್ರಿಟೀಷ್ ಕಾಲದ ಕಲೋನಿಯಲ್ ಸಂದರ್ಭದ ದೌರ್ಜನ್ಯವನ್ನು ಮರಳಿ ಜಾರಿಗೊಳಿಸಲು ಮುಂದಾಗಿದೆ ಮೋದಿ ಸರ್ಕಾರ. ಆದರೆ ಇದರ ಒಳ ಹುನ್ನಾರವೇನೆಂದರೆ ಇಲ್ಲಿ ಒಂದು ವೇಳೆ ಯೋಜನೆ ಅನುಷ್ಠಾನಗೊಳ್ಳದಿದ್ದರೆ ಸಂಬಂಧಪಟ್ಟ ಭೂಮಿಯನ್ನು ರಿಯಲ್ ಎಸ್ಟೇಟ್ ಮಾಫಿಯಾಗಳಿಗೆ ಹರಾಜಿನ ಮೂಲಕ ಮಾರಾಟ ಮಾಡಲಾಗುತ್ತದೆ.

2013 ಭೂಸ್ವಾಧೀನ ಮಸೂದೆಯ ಸೆಕ್ಷನ್ 105 ರ ಅಡಿಯಲ್ಲಿ ಬರುವ 13 ಕೇಂದ್ರ ಸರ್ಕಾರ ಆಕ್ಟ್‌ಗಳಿಗೆ ಐಂಖಖ, 2013 ಮಸೂದೆ ಅನ್ವಯವಾಗುವುದಿಲ್ಲ.( ಅವು – The Coal Bearing Areas Acquisition and Development Act 1957, the National Highways Act 1956, Land Acquisition (Mines) Act 1885,   Atomic Energy Act 1962, the Indian Tramways Act 1886, the Railways Act 1989, the Ancient Monuments and Archaeological Sites and Remains Act 1958, the Petroleum and Minerals Pipelines (Acquisition of Right of User in Land) Act 1962 and the Damodar Valley Corporation Act 1948. The Electricity Act 2003, Requisitioning and Acquisition of Immovable Property Act 1952, the Resettlement of Displaced Persons (Land Acquisition) Act 1948 and the Metro Railways (Construction of Works) Act 1978.)

ಡಿಸೆಂಬರ್ 2014ರ ಒಳಗೆ ಈ 13 ಆಕ್ಟ್‌ಗಳು ತಿದ್ದುಪಡಿಗೊಳ್ಳಬೇಕು, ನಂತರವಷ್ಟೇ ಹೊಸ ಭೂಸ್ವಾಧೀನ ಮಸೂದೆಯ ಪರಿಹಾರ, ಪುನರ್ವಸತಿ ಯೋಜನೆಗಳನ್ನು ಅನುಷ್ಠಾನಗೊಳಿಸಲಿಕ್ಕೆ ಸಾಧ್ಯವಾಗುತ್ತದೆ. ಇದನ್ನು ಉದಾಹರಿಸಿ ತನ್ನ 2014ರ ಭೂಸ್ವಾಧೀನ ಮಸೂದೆಯ ಸುಗ್ರೀವಾಜ್ಞೆಯನ್ನು ಮೋದಿ ಸರ್ಕಾರ ಸಮರ್ಥಿಸಿಕೊಳ್ಳುತ್ತಿದೆ.

ಆದರೆ 2013 ಭೂಸ್ವಾಧೀನ ಮಸೂದೆ ಸೆಕ್ಷನ್ 105 (4) ರ ತಿದ್ದುಪಡಿಯು “ಸೆಕ್ಷನ್ 105 (3) ಅಡಿಯಲ್ಲಿ ಭೂಸ್ವಾಧೀನಕ್ಕಾಗಿ ನೋಟಿಫಿಕೇಶನ್ ಅನ್ನು ಮಂಡಿಸಿದ ನಂತರ ಅದನ್ನು ಸಂಸತ್ತಿನ ಉಭಯ ಸದನಗಳಲ್ಲಿ ಮಂಡಿಸಬೇಕು. ಸಂತ್ತಿನ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಇದು ಚರ್ಚೆಗೆ ಬರಬೇಕು. ಎರಡೂ ಸದನಗಳಲ್ಲಿ ಬಹುಮತದಲ್ಲಿ ಈ ನೋಟಿಫಿಕೇಶನ್ ಅನ್ನು ಅನುಮೋದನೆ ಮಾಡಲು ಒಪ್ಪದೇ ಇದ್ದ ಪಕ್ಷದಲ್ಲಿ ಈ ನೋಟಿಫಿಕೇಶನ್ ಅನ್ನು ಜಾರಿಗೊಳಿಸಲು ಅವಕಾಶವಿಲ್ಲ. ಸೂಕ್ತ ತಿದ್ದುಪಡಿಯ ನಂತರ ಮತ್ತೊಮ್ಮೆ ಬಹುಮತದ ಅನುಮೋದನೆ ಪಡೆದುಕೊಂಡ ಬಳಿಕವಷ್ಟೇ ಈ ನೋಟಿಫಿಕೇಶನ್ ಅನ್ನು ಜಾರಿಗೊಳಿಸಬಹುದು” ಎಂದು ಸ್ಪಷ್ಟವಾಗಿ ವಿವರಿಸುತ್ತದೆ. ಹೀಗಾಗಿ LARR, 2013 ಮಸೂದೆಯ ಸೆಕ್ಷನ್ 105ರ ಪರಿಣಾಮಗಳು ಜನರ ಹಿತಾಸಕ್ತಿಗೆ ಮಾರಕವಾಗಿಲ್ಲವೆಂದೇ
ಹೇಳಬೇಕು

ಕಾನೂನು ಮತ್ತು ಬಡತನದ ಹಿನ್ನಲೆಯಲ್ಲಿ ಆದಿವಾಸಿ ಸಮುದಾಯಗಳ ಸಾಮಾಜಿಕ-ಆರ್ಥಿಕತೆಯ ಕುರಿತಾಗಿ ಅಧ್ಯಯನ ಮಾಡುತ್ತಿರುವ ಉಷಾ ರಾಮನಾಥನ್ ಅವರು “ಹಿಂದಿನ ಮನಮೋಹನ್ ಸಿಂಗ್ ಸರ್ಕಾರದಂತೆಯೇ ಈಗಿನ ನರೇಂದ್ರ ಮೋದಿ ಸರ್ಕಾರವೂ ಕಾಡು, ನೀರು, ಗಾಳಿ ಮತ್ತು ಬುಡಕಟ್ಟು ಸಮುದಾಯಗಳ ರಕ್ಷಣೆಗಳನ್ನು ತನ್ನ ಆರ್ಥಿಕ ಯೋಜನೆಗಳು ಮತ್ತು ಪ್ಲಾನ್‌ಗಳ ಮೂಲಕವೇ ಅರ್ಥೈಸುತ್ತದೆ. ಈ ಪ್ರಕ್ರಿಯಯಲ್ಲಿ ಬುಡಕಟ್ಟು ಸಮುದಾಯಗಳ ಬದುಕು ಮತ್ತು ಪರಿಸರದ ಹಿತಾಸಕ್ತಿಯನ್ನು ಸಂಪೂರ್ಣ ಕಡೆಗಣಿಸುತ್ತದೆ. ತನ್ನ ಆರ್ಥಿಕ ಯೋಜನೆಗಳ ಅನುಷ್ಠಾನಕ್ಕಾಗಿ ಸುಗ್ರೀವಾಜ್ಞೆಯನ್ನು ಬಳಸಿಕೊಳ್ಳುತ್ತದೆ. ಉದಾಹರಣೆಗೆ Forest Rights Act (FRA) of 2006, ಅನುಸಾರ ಯಾವುದೇ ಬಗೆಯ ಯೋಜನೆಗಳಿಗೆ ಪೂರ್ವಭಾವಿಯಾಗಿ ಅರಣ್ಯ ಸಂರಕ್ಷಣೆಯ ನಿಯಮಗಳು ಮತ್ತು ಅದರ ಅವಲಂಬಿತರ ಹಕ್ಕುಗಳು ಉಲ್ಲಂಘನೆ ಆಗಬಾರದು. ಒಮ್ಮೆ ಆ ಹಕ್ಕುಗಳನ್ನು ಮಾನ್ಯ ಮಾಡಿ ಸೂಕ್ತ ನ್ಯಾಯ ಒದಗಿಸಿದ ನಂತರವಷ್ಟೇ ಯೋಜನೆಗಳ ಕುರಿತಾಗಿ ಚರ್ಚಿಸಬಹುದು. ಆದರೆ ಹಿಂದಿನ ಯುಪಿಎ ಸರ್ಕಾರ 2013ರಲ್ಲಿ ನೇಮಿಸಿದ ಕ್ಯಾಬಿನೆಟ್ ಕಮಿಟಿಯು ತನ್ನ ವರದಿಯಲ್ಲಿ 1000 ಕೋಟಿ ಅಥವಾ ಅದಕ್ಕಿಂತಲೂ ಅಧಿಕ ಪ್ರಮಾಣದ ಯೋಜನೆಗಳಿಗೆ ಯಾವುದೇ ಬಗೆಯ ಅರಣ್ಯ ಕಾನೂನುಗಳು, ಪರಿಸರ ರಕ್ಷಣೆಯ ಸಂಬಂದಿತ ಕಾನೂನುಗಳು, ವಾಯು ಮಾಲಿನ್ಯ ಕುರಿತಾದ ಕಾನೂನುಗಳು ಅನ್ಯವಾಗುವುದಿಲ್ಲ ಎಂದು ನಿರ್ಣಯ ನೀಡಿದೆ. ಇನ್ನೂ ಒಂದು ಹೆಜ್ಜೆ ಮುಂದುವರೆದ ಮೋದಿ ಸರ್ಕಾರ ಈ ಕಾನೂನುಗಳನ್ನೇ ನಿಷ್ಕ್ರಿಯಗೊಳಿಸಿ ಸರ್ಕಾರದ ತೀರ್ಮಾನವೇ ಅಂತಿಮ ಎಂದು ಸಾಧಿಸಲು ಹೊರಟಿದೆ. ಅರಣ್ಯಗಳ ವಿಷಯಕ್ಕೆ ಬಂದರೆ ಪರಿಶಿಷ್ಟ ವರ್ಗಗಳ ಬುಡಕಟ್ಟು ಸಮುದಾಯಗಳು ಅಧಿಕ ಜನಸಂಖ್ಯೆಯಲ್ಲಿರುವ 5ನೇ ಶೆಡ್ಯೂಲ್‌ನ ವಲಯಗಳಲ್ಲಿ ಭೂ ಹಸ್ತಾಂತರ, ambani-modiಪರಭಾರೆಗೆ ಸಂಬಂಧಪಟ್ಟಂತೆ ಬಹಳಷ್ಟು ನಿರ್ಬಂಧನೆಗಳಿವೆ ಮತ್ತು ಆದಿವಾಸಿ ಸಮುದಾಯಗಳು ಮತ್ತು ಕಾಡಿನೊಂದಿಗಿನ ಅವರ ಭಾವನಾತ್ಮಕ, ಆರ್ಥಿಕ ಸಂಬಂಧಗಳನ್ನು ರಕ್ಷಿಸುವ ವಿಷಯದಲ್ಲಿ ಆಯಾ ರಾಜ್ಯಗಳಿಗೆ ಜವಾಬ್ದಾರಿಯನ್ನು ವಹಿಸಲಾಗಿದೆ. ಆದರೆ ಈ ನಿಯಮಗಳು ಮತ್ತು ನಿರ್ಬಂಧನೆಗಳು ಈ ಅಭಿವೃದ್ಧಿಯ ಹೆಸರಿನ ಅನೇಕ ಯೋಜನೆಗಳಿಗೆ ಅಡ್ಡಗಾಲಾಗಿರುವುದರಿಂದ ಮನಮೋಹನ್ ಸಿಂಗ್ ಸರ್ಕಾರವು Forest Rights’ Act and Provisions of the Panchayats (Extension to the Scheduled Areas) Act (PESA) -1996ಗೆ ತಿದ್ದುಪಡಿ ತಂದು ರಸ್ತೆ, ಕಾಲುವೆ, ಹೈವೇ, ಬ್ರಾಡ್‌ಬಾಂಡ್, ವಿದ್ಯುತ್‌ಶಕ್ತಿ ಇತ್ಯಾದಿಗಳಂತಹ ಯೋಜನೆಗಳಿಗೆ ಈ ಮೇಲಿನ ಕಾಯ್ದೆಯಿಂದ ವಿನಾಯಿತಿ ಕೊಡಲಾಗಿದೆ. ಆದರೆ ಈಗಿನ ಮೋದಿ ಸರ್ಕಾರ ಪ್ರಜಾಪ್ರಭುತ್ವದ ವಿರೋಧಿಯಂತೆ ವರ್ತಿಸುತ್ತ ಈ ಯೋಜನೆಗಳಿಂದ ಸಂತ್ರಸ್ಥರಾಗುವ ಆದಿವಾಸಿ, ಬುಡಕಟ್ಟು ಸಮುದಾಯಗಳೊಂದಿಗೆ ಸಮಾಲೋಚಿಸುವ ಸಹನೆಯನ್ನು ಪ್ರದರ್ಶಿಸುತ್ತಿಲ್ಲ. ಇಲ್ಲಿ ನನ್ನ ಮೂಲಭೂತ ಪ್ರಶ್ನೆಯೆಂದರೆ ರಾಜ್ಯವು ಭೂಮಾಲೀಕನೇ? ಟ್ರಸ್ಟಿಯೇ?ಯಜಮಾನನೇ? ಕಾನೂನನ್ನು ಮೀರಿದ ಸಂಸ್ಥೆಯೇ? ಇಂದಿನ ಮೋದಿ ಸರ್ಕಾರ ಸಂಸತ್ತಿನಲ್ಲಿ ಅನುಮೋದನೆ ದೊರೆಯದಿದ್ದರೂ ಅದನ್ನು ಸುಗ್ರೀವಾಜ್ಞೆಯ ಮೂಲಕ ಈ 2014ರ ಭೂ ಸ್ವಾದೀನ ಮಸೂದೆಯನ್ನು ತರಲು ಹೊರಟಿದೆ. ಆದರೆ 1986ರ ಡಿ.ಸಿ. ವಾದ್ವ ಕೇಸಿನಲ್ಲಿ ಸುಪ್ರೀಂ ಕೋರ್ಟ ಏಕಪಕ್ಷೀಯವಾಗಿ ಸುಗ್ರೀವಾಜ್ಞೆಗಳನ್ನು ಜಾರಿಗೊಳಿಸುವುದನ್ನು ವಂಚನೆ ಮತ್ತು ಮೋಸ (ಜಿಡಿಚಿuಜ) ಮತ್ತು ಸಂವಿಧಾನ ವಿರೋಧಿ ಎಂದು ತೀರ್ಪು ನೀಡಿದೆ” ಎಂದು ವಿವರಿಸಿದ್ದಾರೆ.

’ಅಚ್ಛೆ ದಿನ್’, ’ಸಬ್ಕಾ ಸಾಥ್, ಸಬ್ಕಾ ವಿಕಾಸ್’ ಎನ್ನುವ ಬೋಗಸ್ ಸ್ಲೋಗನ್‌ಗಳನ್ನು ಮುಂದಿಟ್ಟುಕೊಂಡು ಭಾರತದ ಯುವ ಜನತೆಯನ್ನು ಮೋಸ ಮಾಡಿದ್ದ ನರೇಂದ್ರ ಮೋದಿಯ ಸರ್ವಾಧಿಕಾರಿ ಮುಖ ಇಂದು ಹಂತ ಹಂತವಾಗಿ ಬಯಲಾಗುತ್ತಿದೆ. ಕಾರ್ಪೋರೇಟ್ ಶಕ್ತಿಗಳಿಗೆ, ಬಂಡವಾಳ ಶಾಹಿಗಳಿಗೆ “ಅಚ್ಚೆ ದಿನ್” ತಂದು ಕೊಡಲು ಈ 56 ಇಂಚಿನ ಎದೆಯ ಮೋದಿ ಇಂಡಿಯಾ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಕೊಲೆ ಮಾಡಲು ಮುಂದಾಗಿದ್ದಾರೆ.

ಸಂಘ ಪರಿವಾರ – ಹಿಂದೂ, ಹಿಂದುತ್ವ, ಹಿಂದೂಯಿಸಂ: ಮತೀಯವಾದಿ ಕುಟುಂಬ

ಟಿ ಬಿ.ಶ್ರೀಪಾದ ಭಟ್

ಹಿಂದುಸ್ತಾನದ ಈ ಮಾತೃಭೂಮಿಯನ್ನು ಯಾರು ಪಿತೃಭೂಮಿ ಮತ್ತು ಪವಿತ್ರಭೂಮಿಯನ್ನಾಗಿ ಮಾಡಿಕೊಂಡಿರುತ್ತಾರೋ ಅವರು ಮಾತ್ರ ಹಿಂದೂಗಳು.ಈ ಹಿಂದೂ ಧರ್ಮ ಮತ್ತು ಸಂಸ್ಕೃತಿಯನ್ನು ಅಳವಡಿಸಿಕೊಳ್ಳದ ಮುಸ್ಲಿಂರು ಮತ್ತು ಕ್ರಿಶ್ಚಿಯನ್ನರು ಹಿಂದುಸ್ತಾನಕ್ಕೆ ಸೇರಿದವರಲ್ಲ– ವಿ.ಡಿ.ಸಾವರ್ಕರ್

ಹಿಂದುಸ್ತಾನದಲ್ಲಿರುವ ವಿದೇಶಿ ಜನಾಂಗಗಳು ( ಮುಸ್ಲಿಂರು,ಕ್ರೈಸ್ತರು) ಇಲ್ಲಿನ ಹಿಂದೂ ಸಂಸ್ಕೃತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.ಹಿಂದೂ ಧರ್ಮಕ್ಕೆ ಗೌರವ ತೋರಿಸಬೇಕು. ಒಂದು ಧ್ವಜ,ಒಬ್ಬನೇ ನಾಯಕ,ಒಂದೇ ಸಿದ್ಧಾಂತ ಇದು ಆರೆಸೆಸ್ ಮೂಲಮಂತ್ರ. ಇದು ದೇಶದ ಹಿಂದುತ್ವದ ಜ್ಯೋತಿಯನ್ನು ಬೆಳಗಿಸುತ್ತಿದೆ– ಗೋಲ್ವರ್ಕರ್.

ಇಂಗ್ಲೆಂಡ್ ನ ನಿವಾಸಿಗಳು ಇಂಗ್ಲೀಷರು, ಜರ್ಮನಿಯ ನಿವಾಸಿಗಳು ಜರ್ಮನ್ನರು, ಅಮೇರಿಕಾದ ನಿವಾಸಿಗಳು ಅಮೇರಿಕನ್ನರು ಎಂದು ಒಪ್ಪಿಕೊಳ್ಳಬಹುದಾದರೆ ಹಿಂದುಸ್ತಾನದಲ್ಲಿ ವಾಸಿಸುವವರೆಲ್ಲರೂ ಹಿಂದೂಗಳೆಂದು ನಾವೆಲ್ಲರೂ ಒಪ್ಪಿಕೊಳ್ಳಬೇಕು…ಹಿಂದೂಗಳು ಇಲ್ಲಿ ಇರುವವರೆಗೂ ಭಾರತ ಸುರಕ್ಷಿತವಾಗಿರುತ್ತದೆ. ಒಂದು ವೇಳೆ ಹಿಂದೂಗಳು ಇಲ್ಲದಿದ್ದರೆ ಭಾರತೀಯರೆಲ್ಲರೂ ಅಪಾಯಕ್ಕೆ ಸಿಲುಕಬೇಕಾಗುತ್ತದೆ. ಇಡೀ ವಿಶ್ವದ ಒಳಿತಿಗಾಗಿ ಬಲಾಢ್ಯ ಹಿಂದೂ ಸಮಾಜದ ನಿರ್ಮಾಣ ಅತ್ಯಗತ್ಯ — ಮೋಹನ್ ಭಾಗವತ್.

ಬಜರಂಗದಳವು ಹಿಂದೂಗಳನ್ನು ರಕ್ಷಿಸುವ ಸಂದರ್ಭದಲ್ಲಿ ಅವಶ್ಯಕತೆ ಉಂಟಾದಗಲೆಲ್ಲ ಹಿಂಸೆಯನ್ನು ಬಳಸಿಕೊಳ್ಳುತ್ತದೆ. ಹಾವು ನಮ್ಮನ್ನು ಕಚ್ಚಿದಾಗ ನಾವು ಅದನ್ನು ಸಾಯಿಸುವುದಿಲ್ಲವೇ? –ಸುಭಾಷ್ ಚೌಹಾಣ್, ಬಜರಂಗದಳದ ನಾಯಕ.

ಯುಪಿಎ ಸರ್ಕಾರವು ಬೀಫ್ ರಫ್ತಿನ ಮೂಲಕ ಪಿಂಕ್ ರೆವಲ್ಯೂಷನ್ ಅನ್ನು ಜಾರಿಗೊಳಿಸುತ್ತಿದೆ – ನರೇಂದ್ರ ಮೋದಿ.

ಒಂದು ವೇಳೆ ಹಿಂದೂ ರಾಜ್ ಎನ್ನುವ ಸಿದ್ಧಾಂತ ಅನುಷ್ಠಾನಗೊಂಡರೆ ಇದು ಈ ದೇಶದ ಬಲು ದೊಡ್ಡ ದುರ್ಘಟನೆ. ಹಿಂದೂಗಳು ಏನಾದರೂ ಹೇಳಿಕೊಳ್ಳಲಿ ಹಿಂದೂಯಿಸಂ ಸ್ವಾತಂತ್ರಕ್ಕೆ, ಸಮಾನತೆಗೆ, ಸಹೋದರತ್ವಕ್ಕೆ ಬಲು ದೊಡ್ಡ ಅಪಾಯ. ಹಿಂದೂ ರಾಜ್ ಅನ್ನು ಯಾವುದೇ ಬೆಲೆ ತೆತ್ತಾದರೂ ತಡೆಗಟ್ಟಬೇಕು– ಡಾ.ಬಿ.ಆರ್.ಅಂಬೇಡ್ಕರ್

ಮೇ 6, 1945ರಂದು ಅಖಿಲ ಭಾರತ ಪರಿಶಿಷ್ಟ ಜಾತಿ ಫೆಡರೇಷನ್ ಸಮ್ಮೇಳನವನ್ನು ಉಧ್ಘಾಟಿಸಿ ಮಾತನಾಡುತ್ತಾ ಅಂಬೇಡ್ಕರ್ ಅವರು ಹೇಳುತ್ತಾರೆ “ಇಂಡಿಯಾದಲ್ಲಿ ಬಹುಸಂಖ್ಯಾತರೆಂದರೆ ರಾಜಕೀಯ ಬಹುಸಂಖ್ಯಾತರಲ್ಲ. ಇಂಡಿಯಾದಲ್ಲಿ ಬಹುಸಂಖ್ಯಾತ ತತ್ವವನ್ನು ವ್ಯಕ್ತಿಯ ಹುಟ್ಟಿನ ನೆಲೆಯಿಂದ ನಿರ್ಧರಿಸಲಾಗುತ್ತದೆ. ಇದು ರಾಜಕೀಯ ಬಹುಸಂಖ್ಯಾತರು ಮತ್ತು ಮತೀಯ ಬಹುಸಂಖ್ಯಾತರು ನಡುವಿನ ವ್ಯತ್ಯಾಸವನ್ನು ಸೂಚಿಸುತ್ತದೆ. ರಾಜಕೀಯ ಬಹುಸಂಖ್ಯಾತ ತತ್ವವು ಶಾಶ್ವತವಲ್ಲ. ಅದು ತಾತ್ಕಾಲಿಕವಾಗಿರುತ್ತದೆ. ಈ ಮಾದರಿಯ ಬಹುಸಂಖ್ಯಾತ ತತ್ವವು ಕಟ್ಟಲ್ಪಡುತ್ತದೆ, ಮುರಿಯಲ್ಲಡುತ್ತದೆ, ಮರಳಿ ಕಟ್ಟಲ್ಪಡುತ್ತದೆ. ಆದರೆ ಮತೀಯ ಬಹುಸಂಖ್ಯಾತ ತತ್ವವು ಒಂದು ನಿರ್ದಿಷ್ಟ ಗ್ರಹಿಕೆಯ ನೆಲೆಯಲ್ಲಿ ರೂಪಿಸಲಾಗುತ್ತದೆ ಮತ್ತು ಇದು ಶಾಶ್ವತವಾಗಿರುತ್ತದೆ. ಇದನ್ನು ನಾಶಪಡಿಸಬಹುದು. ಆದರೆ ಪರಿವರ್ತಿಸಲಾಗುವುದಿಲ್ಲ. ನಿರಂಕುಶ (absolute) ಮಾದರಿಯ ಬಹುಸಂಖ್ಯಾತ ತತ್ವವನ್ನು ತಿರಸ್ಕರಿಸಿ ಸಾಪೇಕ್ಷತೆಯ (relative) ಆಧಾರದ ಬಹುಸಂಖ್ಯಾತ ತತ್ವವನ್ನು ಒಪ್ಪಿಕೊಳ್ಳಬೇಕೆಂದು ನಾನು ಹಿಂದೂಗಳನ್ನು ಕೇಳಿಕೊಳ್ಳುತ್ತೇನೆ. ಇದನ್ನು ಒಪ್ಪಿಕೊಳ್ಳದೆ ಹೋದರೆ ಅಲ್ಪಸಂಖ್ಯಾತರು ಇಂಡಿಯಾದ ಸ್ವಾತಂತ್ರವನ್ನು ತಡೆಹಿಡಿದಿದ್ದಾರೆ ಎನ್ನುವ ವಾದಕ್ಕೆ ಸಮರ್ಥನೆ ದೊರಕುವುದಿಲ್ಲ. ಈ ಮಾದರಿಯ ತಪ್ಪಾದ ಪ್ರಚಾರವು ಫಲ ಕೊಡಲಾರದು.”

ಸಂಘ ಪರಿವಾರ

ಆರೆಸ್ಸಸ್ – ಹಿಂದುತ್ವ ಐಡಿಯಾಜಿಯ ಮಾತೃ ಸಂಘಟನೆ. ( ಹೈಕಮಾಂಡ್)

ಬಿಜೆಪಿ – ರಾಜಕೀಯ ಪಕ್ಷ, ವಿ ಎಚ್ ಪಿ – ಧಾರ್ಮಿಕ ಘಟಕ, ಬಜರಂಗದಳ – ಮಿಲಿಟೆಂಟ್ ಘಟಕ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ – ವಿದ್ಯಾರ್ಥಿ ಸಂಘಟನೆ, ಅಖಿಲ ಭಾರತೀಯ ಸಾಹಿತ್ಯ ಪರಿಷತ್- ಸಾಹಿತ್ಯ ಕ್ಷೇತ್ರ, ದೀನ ದಯಾಳ್ ಸಂಶೋಧನ ಸಂಸ್ಥೆ, ಸೇವಾ ಭಾರತಿ, ವಿದ್ಯಾ ಭಾರತಿ, ಶಿಕ್ಷ ಭಾರತಿ, ಸರಸ್ವತಿ ವಿದ್ಯಾಮಂದಿರ, ಸರಸ್ವತಿ ಶಿಶುಮಂದಿರ, ವನವಾಸಿ ಕಲ್ಯಾಣ ಆಶ್ರಮ – ಬುಡಕಟ್ಟು ಜನರಿಗಾಗಿ, ಏಕಲ ವಿದ್ಯಾಲಯ, ವಿಕಾಸ ಭಾರತಿ, ಸಂಸ್ಕೃತ ಭಾರತಿ, ಜನಸೇವಾ ವಿದ್ಯಾಕೇಂದ್ರ, ಭಾರತೀಯ ಇತಿಹಾಸ ಸಂಕಲನಾ ಯೋಜನೆ, ರಾಷ್ಟ್ರೋತ್ಥಾನ ಸಾಹಿತ್ಯ, ವಿವೇಕಾನಂದ ಕೇಂದ್ರ, ಸ್ವದೇಶಿ ಜಾಗರಣ ಮಂಚ್, ಹಿಂದೂ ಜಾಗರಣ ಮಂಚ್, ಭಾರತ ವಿಕಾಸ್ ಪರಿಷತ್, ಭಾರತೀಯ ಮಜ್ದೂರ ಸಂಘ, ಭಾರತೀಯ ಕಿಸಾನ ಸಂಘ, ರಾಷ್ಟ್ರೀಯ ಸೇವಿಕಾ ಸಮಿತಿ.

ಅನಿವಾಸಿ ಭಾರತೀಯರಿಗಾಗಿ

ಭಾರತೀಯ ಸ್ವಯಂ ಸೇವಕ ಸಂಘ, ಹಿಂದೂ ಸ್ವಯಂ ಸೇವಕ ಸಂಘ, Overseas Friends of the BJP, ವಿ ಎಚ್ ಪಿ ಅಮೇರಿಕ, IDR

ಮೇಲ್ನೋಟಕ್ಕೆ ಅಬ್ಬರದಿಂದ ಸದಾ ದ್ವೇಷದ ಧ್ವನಿಯಲ್ಲಿ ಮಾತನಾಡುವ ಆರೆಸ್ಸಸ್ ಗೆ ಯಾವುದೇ ರೀತಿಯ ಜನ ಬೆಂಬಲವಿಲ್ಲ. RSS_meeting_1939ಆರೆಸ್ಸಸ್ ನಲ್ಲಿ ಜನನಾಯಕರಿಲ್ಲ. ಇತಿಹಾಸದ ಅನ್ಯಾಯಗಳಿಗೆ ಪ್ರತೀಕಾರವನ್ನು ತೀರಿಸಿಕೊಳ್ಳಬೇಕು ಎಂದು ದ್ವೇಷದ ಚಿಂತನೆಯನ್ನು ಬೋಧಿಸುವ ಆರೆಸ್ಸಸ್ ಹೊಸತನ್ನು ಚಿಂತಿಸಲು ನಿರಾಕರಿಸುತ್ತದೆ. ಜೀವಪರ ಆಧುನಿಕ ಚಿಂತನೆಗಳನ್ನು, ಅರ್ಥಪೂರ್ಣ ಬದಲಾವಣೆಗಳನ್ನು ತಿರಸ್ಕರಿಸುವ ಆರೆಸ್ಸಸ್ ಸ್ವತಃ ತನ್ನ ದೇಶದಲ್ಲಿಯೇ ಯಾವುದೇ ನೆಲೆಯಿಲ್ಲದ ಒಂದು ಮತೀಯವಾದಿ ಸಂಘಟನೆ. ಜನಸಾಮಾನ್ಯರ ಪಾಲಿಗೆ ಎಂದೋ ತಿರಸ್ಕೃತಗೊಂಡ ಗೋಳ್ವಲ್ಕರ್, ಸಾವರ್ಕರ್ರಂತಹವರ ಫ್ಯಾಸಿಸ್ಟ್ ಚಿಂತನೆಯನ್ನು ಎಂಬತ್ತು ವರ್ಷಗಳಿಂದ ಆರಾಧಿಸುತ್ತಿರುವ ಆರೆಸ್ಸಸ್ ತನ್ನೊಳಗೆ ಸಂಪೂರ್ಣವಾಗಿ ಟೊಳ್ಳಾದ, ದಿವಾಳಿಯಾದ, ಕೇವಲ ಕರ್ಮಠ ನೀತಿಗಳನ್ನು ನಂಬುವ ಬೌದ್ಧಿಕ ವಲಯವನ್ನು ಬೆಳೆಸಿಕೊಂಡಿದೆ. ವ್ಯಕ್ತಿ ಸ್ವಾತಂತ್ರ, ಅಭಿವ್ಯಕ್ತಿ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯಾತೀತತೆ, ಧರ್ಮನಿರಪೇಕ್ಷತೆ ಎನ್ನುವ ಪದಗಳು ಮತ್ತು ಜೀವನ ಕ್ರಮವನ್ನು ಆರೆಸ್ಸಸ್ ತಿರಸ್ಕರಿಸುತ್ತದೆ ಮತ್ತು ಸಂಪೂರ್ಣವಾಗಿ ನಿಷೇದಿಸುತ್ತದೆ. ಮಾತೃಭೂಮಿಯ ಕುರಿತಾಗಿ ಭಾವೋದ್ರೇಕದಿಂದ ಮಾತನಾಡುವ ಆರೆಸ್ಸಸ್ ಮಾತೃಭೂಮಿಯನ್ನು ಬ್ರಿಟೀಷರಿಂದ ಬಿಡುಗಡೆಗೊಳಿಸಲು ನಡೆದ ಸ್ವಾತಂತ್ರ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲೇ ಇಲ್ಲ. ಆ ಸಂದರ್ಭದಲ್ಲಿ ವಿತಂಡವಾದದಿಂದ ವರ್ತಿಸಿದ ಆರೆಸ್ಸಸ್ ಹಿಟ್ಲರ್ ನ ನಾಜಿ ಪಕ್ಷವನ್ನು ಬೆಂಬಲಿಸಿತು.

ಆರೆಸ್ಸಸ್ ಸಂಘಟನೆಯು ‘ಭಗವದ್ವಜ’ವನ್ನು ತನ್ನ ಅಧಿಕೃತ ಧ್ವಜವನ್ನಾಗಿ ಆರಿಸಿಕೊಂಡಿದೆ. ಓಂ, ಸ್ವಸ್ತಿಕ್, ಖಡ್ಗದ ಚಿತ್ರವಿರುವ ಕೇಸರಿ ಧ್ವಜವೇ ಹಿಂದೂ ರಾಷ್ಟ್ರದ ಧ್ವಜವಾಗಲಿದೆ. ಅದು ವೇದ ಕಾಲಗಳ ಸನಾತನ ಧರ್ಮವನ್ನು ಪ್ರತಿನಿಧಿಸುತ್ತದೆ ಎಂದು ಸಾವರ್ಕರ್ ಅವರು ಸ್ಪಷ್ಟವಾಗಿ ಹೇಳಿದ್ದರು. ಬೇರೆ ಸಮುದಾಯಗಳಿಗೆ, ಅನ್ಯಧರ್ಮೀಯರಿಗೆ ವಂದೇ ಮಾತರಂ ಹಾಡಬೇಕೆಂದು ಆಗ್ರಹಿಸುವ ಆರೆಸ್ಸಸ್ ತನ್ನ ಬೈಠಕ್ ಗಳಲ್ಲಿ, ಪ್ರತಿಯೊಂದು ಸಭೆಗಳಲ್ಲಿ, ಚಿಂತನಮಂಥನಗಳಲ್ಲಿ ಹಾಡುವುದು ಹೆಡ್ಗೇವಾರ್, ಗೋಳ್ವಲ್ಕರ್ ಮಾರ್ಗದರ್ಶನದಲ್ಲಿ ನಾರಾಯಣ ಭಿಡೆ ಸಂಸ್ಕೃತದಲ್ಲಿ ರಚಿಸಿದ ನಮಸ್ತೆ ಸದಾ ವತ್ಸಲೆ, ಮಾತೃಭೂಮಿ, ತ್ವಯಾ ಹಿಂದೂಭೂಮಿ ಎಂದು ಪ್ರಾರಂಭವಾಗುವ ಮತೀಯವಾದಿ ಪ್ರಾರ್ಥನಾ ಗೀತೆಯನ್ನು.

ಸ್ವತಂತ್ರ ಭಾರತದ ಇತಿಹಾಸದಲ್ಲಿ ಆರೆಸ್ಸಸ್ ಮೂರು ಬಾರಿ ನಿಷೇಧಕ್ಕೆ ಒಳಗಾಗಿತ್ತು.

1948ರಲ್ಲಿ ಮಹಾತ್ಮ ಗಾಂಧಿಯನ್ನು ಇದರ ಸಹಯೋಗಿ ಸಂಘಟನೆ ‘ಹಿಂದೂ ಮಹಾ ಸಭಾ’ದ ಸದಸ್ಯ ನಾಥುರಾಮ್ ಗೋಡ್ಸೆ ಹತ್ಯೆ ಮಾಡಿದಾಗ 1948 ಇದರ ಚಟುವಟಿಕೆಗಳನ್ನು ನಿಷೇಧಿಸಲಾಯಿತು.

1975-1977 ರ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಆರೆಸ್ಸಸ್ ನಿಷೇಧಕ್ಕೆ ಒಳಗಾಗಿತ್ತು.

1993ರ ಬಾಬರಿ ಮಸೀದಿ ಧ್ವಂಸದ ಸಂದರ್ಭದಲ್ಲಿ ನಿಷೇಧಕ್ಕೆ ಒಳಗಾಗಿತ್ತು.

2006ರಲ್ಲಿ ಮಾಲೆಗಾವ್ ನಲ್ಲಿ ಸಂಭವಿಸಿದ ಬಾಂಬ್ ಸ್ಪೋಟ ( 30 ಜನರ ಸಾವು), 2007ರಲ್ಲಿ ಸಂಜೋತ ಎಕ್ಸಪ್ರೆಸ್ ಸ್ಪೋಟ ( 60 ಜನರ ಸಾವು), 2007ರಲ್ಲಿ ಹೈದರಾಬಾದಿನ ಮೆಕ್ಕಾ ಮಸೀದಿ ಸ್ಪೋಟ (24 ಜನರ ಸಾವು), 2007ರಲ್ಲಿ ಅಜ್ಮೀರ ದರ್ಗಾ ಸ್ಪೋಟ( 3 ಜನರ ಸಾವು) ಈ ಎಲ್ಲಾ ಭಯೋತ್ಪಾದನೆಯ ದುಷ್ಕೃತ್ಯಗಳ ಹಿಂದೆ ಆರೆಸ್ಸಸ್ ನ ಕೈವಾಡವಿದೆ, ಇದರೊಂದಿಗೆ ಇತರೆ ಹಿಂದುತ್ವ ಗುಂಪುಗಳು ಕೈಜೋಡಿಸಿವೆ ಎಂದು ಆರೆಸ್ಸಸ್ನ ಹಿರಿಯ ಸದಸ್ಯ ಸ್ವಾಮಿ ಅಸ್ಸೀಮಾನಂದ ನ್ಯಾಯಾಲಯದ ಮುಂದೆ ತಪ್ಪೊಪ್ಪಿಕೆಯ ಹೇಳಿಕೆ ಕೊಟ್ಟಿದ್ದ. ಈ ದುಷ್ಕೃತ್ಯಗಳ ತನಿಖೆ ನಡೆಸುತ್ತಿರುವ ತನಿಖಾ ತಂಡ ಈ ಭಯೋತ್ಪಾದನೆಯ ಆರೋಪಕ್ಕೆ ಗುರಿಯಾಗಿರುವ ಅಸ್ಸೀಮಾನಂದ, ಸಾಧ್ವಿ ಪ್ರಜ್ಞಾಸಿಂಗ್, ಲೆ.ಕರ್ನಲ್ ಪುರೋಹಿತ್, ಚಂದ್ರಪ್ರತಾಪ್ ಸಿಂಗ್ ಠಾಕೂರ್ ಇನ್ನೂ ಹಲವು ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಬಂಧಿಸಿದೆ. ವಿಚಾರಣೆ ಮುಂದುವರೆಯುತ್ತಿದೆ.

ಇನ್ನು ಕಳೆದ ಐವತ್ತು ವರ್ಷಗಳಲ್ಲಿ ಆರೆಸಸ್ ನ ಬಲಿಷ್ಠ ಅಂಗ ಪಕ್ಷಗಳಾದ ಬಿಜೆಪಿ, ಬಜರಂಗದಳ, ವಿ ಎಚ್ ಪಿಗಳು ನಡೆಸಿದ ಹಿಂಸಾಚಾರ, ಮತೀಯ ಗಲಭೆಗಳು, ಹತ್ಯಾಕಾಂಡಗಳ ಕುರಿತಾಗಿ ತನಿಖೆ ನಡೆಸಿದ, ನಡೆಸುತ್ತಿರುವ ಕೆಲವು ಆಯೋಗಗಳ ವಿವರ ಈ ರೀತಿ ಇದೆ

1969ರಲ್ಲಿ ಅಹಮದಾಬಾದ್ನಲ್ಲಿ ನಡೆದ ಗಲಭೆೆಗಳ ತನಿಖೆಗಾಗಿ ಜಗಮೋಹನ್ ರೆಡ್ಡಿ ಕಮಿಷನ್, 1970ರಲ್ಲಿ ಭಿವಂಡಿಯಲ್ಲಿ ನಡೆದ ಕೋಮು ಗಲಭೆಗಳ ತನಿಖೆಗಾಗಿ ಮದನ್ ಕಮಿಷನ್, 1971ರಲ್ಲಿ ತೆಲ್ಲಿಚೆರಿ ಕೋಮು ಗಲಭೆಗಳ ತನಿಖೆಗಾಗಿ ವಿಠ್ಯಾತಿಲ್ ಕಮಿಷನ್, 1979ರಲ್ಲಿ ಜೆಮ್ಶೆಡ್ಪುರನಲ್ಲಿ ನಡೆದ ಗಲಭೆಗಳ ತನಿಖೆಗಾಗಿ ಜಿತೇಂದ್ರ ನಾರಾಯಣ ಕಮಿಷನ್, 1982ರಲ್ಲಿ ಕನ್ಯಾಕುಮಾರಿಯಲ್ಲಿ ನಡೆದ ಕೋಮು ಗಲಬೆಗಳ ತನಿಖೆಗಾಗಿ ಪ.ವೇಣುಗೋಪಾಲ್ ಕಮಿಷನ್, ಬಾಬರಿ ಮಸೀದಿ ಧ್ವಂಸ ಮತ್ತು ನಂತರದ ಹತ್ಯಾಕಾಂಡದ ಸಂಬಂಧ ಲಿಬರ್ ಹಾನ್ ಕಮಿಷನ್ ಇವು ಕೆಲವು ಉದಾಹರಣೆಗಳು ಮಾತ್ರ. ಇನ್ನು ಮತ್ತು 2002ರ ಗುಜರಾತ್ ಹತ್ಯಾಕಾಂಡದ ಸಂಬಂಧದ ತನಿಖೆಗಳು ಇಂದಿಗೂ ಪ್ರಗತಿಯಲ್ಲಿವೆ.

ಈ ಆರೆಸ್ಸಸ್ ಸಂಘಟನೆಯನ್ನು ಒಂದು ಸೀಕ್ರಟ್ ಸೊಸೈಟಿ ಎಂದು ಹೇಳಿದ ನೆಹರೂ ಅವರು ಮುಂದುವರೆದು ಆರೆಸ್ಸಸ್ ಮೂಲಭೂತವಾಗಿ ಸಾರ್ವಜನಿಕ ಮುಖವಾಡವನ್ನು ಹೊಂದಿದ ಒಂದು ಸೀಕ್ರೆಟ್ ಸಂಸ್ಥೆ. ಈ ಆರೆಸ್ಸಸ್ ಸಂಸ್ಥೆಯಲ್ಲಿ ಸದಸ್ಯರಿಲ್ಲ, ನೊಂದಣಿ ಇಲ್ಲ, ಅಸಂಖ್ಯಾತ ದೇಣಿಗೆಯನ್ನು ಪಡೆಯುತ್ತಿದ್ದರೂ ಅಲ್ಲಿ ಲೆಕ್ಕಪತ್ರಗಳಿಲ್ಲ, ಆರೆಸ್ಸಸ್ ಸಂಘಟನೆಗೆ ಶಾಂತಿಯುತ ವಿಧಾನಗಳಲ್ಲಿ ನಂಬಿಕೆ ಇಲ್ಲ ಇದು ಸತ್ಯಾಗ್ರಹ ನೀತಿಗೆ ವಿರೋಧಿ. ಸಾರ್ವಜನಿಕವಾಗಿ ಅವರು ಏನು ಹೇಳುತ್ತಾರೋ ಅದಕ್ಕೆ ವಿರುದ್ಧವಾಗಿ ಖಾಸಗಿಯಾಗಿ ನಡೆದುಕೊಳ್ಳುತ್ತಾರೆ ಎಂದು ಬರೆದಿದ್ದಾರೆ.

ನಿಜಕ್ಕೂ ಆರೆಸ್ಸಸ್ ಒಂದು ಸೀಕ್ರೆಟ್ ಸೊಸೈಟಿ. ಹಿಂದೂ ರಾಷ್ಟ್ರ ನಿರ್ಮಾಣ ಎನ್ನುವುದು ಆರೆಸ್ಸಸ್ ನ ಸಾರ್ವಜನಿಕ ಅಜೆಂಡವಾದರೆ ಅದರ ಗುಪ್ತ ಅಜೆಂಡ ಇಂದಿಗೂ ರಹಸ್ಯಮಯವಾಗಿದೆ. ವರ್ಣಾಶ್ರಮದ ಶ್ರೇಣೀಕೃತ ಸಮಾಜದ ಕನಸನ್ನು ಕಾಣುತ್ತಿರುವ ಆರೆಸ್ಸಸ್ ಅದರ ಅನುಷ್ಠಾನಕ್ಕಾಗಿ ಕಳೆದ ಎಂಬತ್ತು ವರ್ಷಗಳ ಕಾಲ ತನ್ನ ಇಡೀ ಸಂಘಟನೆಯನ್ನು ಒಂದು ಸೀಕ್ರೆಟ್ ಸೊಸೈಟಿ ಮಾದರಿಯಲ್ಲಿ ರೂಪಿಸಿತು. ಇಂದಿಗೂ ಆರೆಸ್ಸಸ್ ನ ಪ್ರಮುಖ ಸಂಚಾಲಕರು, ಮುಖ್ಯಸ್ಥರು ತಮ್ಮ ವ್ಯಕ್ತಿತ್ವದ ಆಳದಲ್ಲಿ ಅತ್ಯಂತ ನಿಗೂಢವಾಗಿ ವರ್ತಿಸುತ್ತಾರೆ. ಇಂಡಿಯಾದ ಸಂವಿಧಾನವನ್ನು ತಿರಸ್ಕರಿಸುವುದು ಸಹ ಇವರ ಸೀಕ್ರೆಟ್ ಅಜೆಂಡಾಗಳಲ್ಲೊಂದು.

ಇದಕ್ಕೆ ಇತಿಹಾಸವಿದೆ.

ಮಾನವೀಯತೆಯನ್ನು, ಜನಪರ ತತ್ವಗಳನ್ನು, ಅಹಿಂಸೆಯನ್ನು ಬೋಧಿಸಿದ ಬೌದ್ಧ ಧರ್ಮವನ್ನು ನಂತರ ಬಂದ ಭ್ರಾಹ್ಮಣ್ಯದ, ಸನಾತನವಾದಿ ಶಂಕರಾಚಾರ್ಯ ಬೇರು ಸಮೇತ ಕಿತ್ತು ಹಾಕಲು ನಿರ್ಧರಿಸಿ ಇದಕ್ಕೆ ಮುನ್ನುಡಿಯಾಗಿ ಶೂದ್ರರಿಗೆ ಶಿಕ್ಷಣವನ್ನು ನಿರಾಕರಿಸಿದ (ಆಗ ಈ ಹಿಂದೂ ಧರ್ಮ ಎನ್ನುವುದು ಇರಲಿಲ್ಲ.RSS ವರ್ಣಾಶ್ರಮ ಪದ್ಧತಿ ಆಚರಣೆಯಲ್ಲಿತ್ತು). ದಕ್ಷಿಣದಲ್ಲಿ ಪಲ್ಲವರು ಮತ್ತು ಉತ್ತರದಲ್ಲಿ ಚಾಲುಕ್ಯ ರಾಜಮನೆತನವನ್ನು ಬಳಸಿಕೊಂಡು ಬೌದ್ಧ ಧರ್ಮವನ್ನು ನಿರ್ಣಾಮ ಮಾಡಿದ್ದು ಈ ಶಂಕರಾಚಾರ್ಯ. ಬೌಧ್ಧರ ನಾಗಾರ್ಜುನಕೊಂಡವನ್ನು ತನ್ನ ಅನುಯಾಯಿಗಳ ಮತ್ತು ಮೇಲ್ಕಾಣಿಸಿದ ರಾಜಮನೆತನಗಳ ಬೆಂಬಲದಿಂದ ಧ್ವಂಸಗೊಳಿಸಿದ. ಅಲ್ಲಿನ ಸ್ತೂಪಗಳು, ಬೌದ್ಧ ವಿಗ್ರಹಗಳನ್ನು ಧ್ವಂಸ ಮಾಡಿದ ಕೀರ್ತಿ ಈ ಶಂಕರಾಚಾರ್ಯರಿಗೆ ಸಲ್ಲುತ್ತದೆ. ಇದು ಮುಂದುವರೆದು ಉತ್ತರ ಭಾರದಾದ್ಯಾಂತ ಬೌದ್ಧ ಧರ್ಮದ ಎಲ್ಲಾ ಸ್ತೂಪಗಳು, ಸ್ಮಾರಕ, ಗ್ರಂಥಗಳನ್ನು ನಾಶಪಡಿಸಲಾಯಿತು. ಈ ಶಂಕರಾಚಾರ್ಯರಿಂದ ಪ್ರಾರಂಭಗೊಂಡ ಅನ್ಯ ಧರ್ಮೀಯರ ವಿರುದ್ಧದ ದಾಳಿ ಮತ್ತು ಹಲ್ಲೆ ಇಪ್ಪತ್ತನೇ ಶತಮಾನದ ಚರ್ಚ ಮತ್ತು ಮಸೀದಿಗಳ ಧ್ವಂಸದವರೆಗೂ ಮುಂದುವರೆದು ಡಿಸೆಂಬರ್ 3, 2014ರಲ್ಲಿ ದೆಹಲಿಯ ಸೇಂಟ್ ಸೆಬಾಸ್ಟಿಯನ್ ಚರ್ಚ ಅನ್ನು ಧ್ವಂಸಗೊಳಿಸಲಾಗಿದೆ. ಡಿಸೆಂಬರ್ 11 2014ರಂದು ಲೂಧಿಯಾನದ ಕಲವರಿ ಚರ್ಚನ ಮೇಲೆ ದಾಳಿ ಮಾಡಲಾಗಿದೆ. ಕಂಧಮಾಲ್ ನಲ್ಲಿ ಹಿಂದೂ ಸ್ವಾಮಿಯೊಬ್ಬರನ್ನು ಭೂಗತ ಹೋರಾಟಗಾರರು ಹತ್ಯೆ ಮಾಡಿದರೆ ಸಂಘ ಪರಿವಾರ ಪ್ರತೀಕಾರವಾಗಿ ಅಲ್ಲಿನ ಚರ್ಚಗಳ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿತು. ಕ್ರಿಶ್ಚಿಯನ್ನರ ಮೇಲೆ ಪ್ರಾಣಾಂತಿಕ ಹಲ್ಲೆ ನಡೆಸಿತು. ಮೂಲಭೂತವಾಗಿ ‘ಭ್ರಾಹ್ಮಣ್ಯ’ದ ಧರ್ಮವನ್ನು ಹಿಂದೂಯಿಸಂನ ಐಡೆಂಟಿಟಿಯಾಗಿ ರೂಪಿಸಿದ್ದು ಆರೆಸ್ಸಸ್. ಈ ಭ್ರಾಹ್ಮಣ್ಯದ ಐಡೆಂಟಿಟಿಯನ್ನು ತೊಬತ್ತರ ದಶಕದವರೆಗೂ ಕಾಯ್ದುಕೊಂಡು ಬರಲಾಯಿತು. ಆದರೆ ಬಾಬರಿ ಮಸೀದಿ ಧ್ವಂಸದ ಸಂದರ್ಭದಲ್ಲಿ ಶೂದ್ರ ಸಮುದಾಯದ ಶಕ್ತಿ ರಾಜಕಾರಣವನ್ನು ಸಂಪೂರ್ಣವಾಗಿ ಬಳಸಿಕೊಂಡ ಆರೆಸ್ಸಸ್ ಇಂದು ಅನುಕೂಲಸಿಂಧು ರಾಜಕಾರಣದ ನೆಲೆಯಲ್ಲಿ ಒಳಗೊಳ್ಳುವಿಕೆಯ ಮಾತನಾಡುತ್ತಿದೆ.

ಆರೆಸ್ಸಸ್ ರಾಜಕೀಯ ಪಕ್ಷವಾದ ಬಿಜೆಪಿಗೆ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವ ಅಧಿಕಾರವನ್ನು ಕೊಡುವುದಿಲ್ಲ. ಆರೆಸ್ಸಸ್ ಬಯಸುವುದು ತನ್ನ ಐಡಿಯಾಜಿಯನ್ನು ರಾಜಕೀಯ ನೆಲೆಯಲ್ಲಿ ವಿಸ್ತರಿಸುವುದಕ್ಕಾಗಿ ಬಿಜೆಪಿ ಪಕ್ಷ ಕಾನೂನುಗಳನ್ನು ರೂಪಿಸಬೇಕು. ತಾನು ಸ್ವತಃ ರಾಜಕೀಯವನ್ನು ಪ್ರವೇಶಿಸಲು ನಿರಾಕರಿಸುವ ಆರೆಸ್ಸಸ್ ‘ನಮ್ಮ ಸಾಂಸ್ಕೃತಿಕ ನೀತಿಗಳೇ ನಮ್ಮ ರಾಜಕೀಯ’ ಎಂದು ಹೇಳುತ್ತದೆ. ತನ್ನ ಐಡಿಯಾಲಜಿಯನ್ನು ಪ್ರಶ್ನಿಸುವುದಿರಲಿ, ಚರ್ಚೆಗೆ ಎಳೆದುತಂದವರನ್ನು ನಿರ್ದಾಕ್ಷೀಣ್ಯವಾಗಿ ಹೊರ ತಳ್ಳುತ್ತದೆ ಆರೆಸ್ಸಸ್. ಉದಾಹರಣೆಗೆ ಜನಸಂಘ ರಾಜಕೀಯ ಪಕ್ಷವಾಗಿದ್ದ ಎಪ್ಪತ್ತರ ದಶಕದಲ್ಲಿ ಆಗಿನ ಅಧ್ಯಕ್ಷ ಬಲರಾಜ್ ಮಾಧೋಕ್ ಅವರು ಜನಸಂಘದ ಪಧಾದಿಕಾರಿಗಳನ್ನು ಆರೆಸ್ಸಸ್ ಸಂಘಟನೆಯಿಂದ ಹೇರುವುದನ್ನು ನಿಲ್ಲಿಸಿ ಜನಸಂಘದ ಒಳಗಡೆಯಿಂದಲೇ ಚುನಾವಣೆಯ ಮೂಲಕ ಆಯ್ಕೆ ಮಾಡಬೇಕು ಎಂದು ಪತ್ರ ಬರೆದಿದ್ದರು. ಆ ಕೂಡಲೆ ಅವರನ್ನು ಪಕ್ಷದಿಂದಲೇ ಉಚ್ಛಾಟಿಸಲಾಯಿತು. ಪಾಕಿಸ್ತಾನಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ಅಡ್ವಾನಿ ಜಿನ್ನಾ ಅವರನ್ನು ಪ್ರಶಂಸಿದ ಕಾರಣಕ್ಕೆ ಅವರನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದಲೇ ಪದಚ್ಯುತಿಗೊಳಿಸಲಾಯಿತು. ತೀರಾ ಇತ್ತೀಚೆಗೆ ಆರೆಸ್ಸಸ್ ವಿರುದ್ಧ ಭಿನ್ನ ರಾಗ ಹಾಡಿದ ಹಿರಿಯ ರಾಜಕಾರಣಿ ಜಸ್ವಂತ್ ಸಿಂಗ್ ಅವರನ್ನು ಪಕ್ಷದಿಂದಲೇ ಉಚ್ಛಾಟನೆ ಮಾಡಲಾಯಿತು.

ಇತಿಹಾಸಕಾರ ಡಿ.ಆರ್.ಗೋಯಲ್ ಅವರು ‘ಒಂದು ಕಾಲದ ಜನಸಂಘ ಅಥವಾ ಇಂದಿನ ಬಿಜೆಪಿ ಅದು ಬೆಳವಣಿಗೆ ಕಂಡುಕೊಳ್ಳುವುದು ರಾಜಕೀಯವಾಗಿ ಅಲ್ಲ, ಆರೆಸ್ಸಸ್ ಸಂಘಟನೆಯಲ್ಲಿ ಮಾತ್ರ. ಏಕೆಂದರೆ ಆರೆಸ್ಸಸ್ ಅದಕ್ಕೆ ಜನ್ಮ ನೀಡಿದ್ದು, ಹೀಗಾಗಿ ಆರೆಸ್ಸಸ್ ಗೆ ಶರಣಾಗಲೇಬೇಕು. ಬಿಜೆಪಿ ಪಕ್ಷವು ನಾವು ವಿಭಿನ್ನ ಸಂಸ್ಕೃತಿಯನ್ನು ಗೌರವಿಸುತ್ತೇವೆ ಎಂದು ಹೇಳಿದರೂ ವಾಸ್ತವದಲ್ಲಿ ಆರೆಸ್ಸಸ್ ಅನ್ಯ ಸಂಸ್ಕೃತಿಯನ್ನು ಮಾನ್ಯ ಮಾಡಿರುವುದೇ ಇಲ್ಲ. ಸಾರ್ವಜನಿಕ ಹೇಳಿಕೆಗೆ ಮಾತ್ರ ಇದನ್ನು ಸೀಮಿತಗೊಳಿಸಲಾಗುತ್ತದೆ, ಆಚರಣೆಗೆ ಆಲ್ಲ. ಉದಾಹರಣೆಗೆ ಗುಜರಾತ್ ಹತ್ಯಾಕಾಂಡ ನಡೆದ 2002ರ ಸಂದರ್ಭದಲ್ಲಿ ಪ್ರಧಾನಿಯಾಗಿದ್ದ ವಾಜಪೇಯಿ ಸಾರ್ವಜನಿಕವಾಗಿ ರಾಜಧರ್ಮ ಪಾಲಿಸುವಂತೆ ಹೇಳಿಕೆ ಇತ್ತರು. ಆದರೆ ಆಚರಣೆಯಲ್ಲಿ ಮೋದಿ ಸರ್ಕಾರವನ್ನು ಪದಚ್ಯುತಗೊಳಿಸಲಿಲ್ಲ. ತನ್ನ ಐಡಿಯಾಲಜಿಯನ್ನು ಸಹಿಸಿಕೊಳ್ಳುವ ನಾಯಕ ಇರುವವರೆಗೂ ಆರಸ್ಸಸ್ ಸಂತುಷ್ಟದಿಂದಿರುತ್ತದೆ’ ಎಂದು ಹೇಳುತ್ತಾರೆ. ಇದು ನಿಜ. ಮೊನ್ನೆ ಪ್ರಧಾನಿ ನರೇಂದ್ರ ಮೋದಿ ‘ನಮ್ಮ ಸರ್ಕಾರವು ಯಾವುದೇ ಬಗೆಯ ಅಸಹನೆ, ಹಲ್ಲೆಗಳನ್ನು ಸಹಿಸುವುದಿಲ್ಲ. ಇಲ್ಲಿ ಎಲ್ಲಾ ಧರ್ಮಗಳನ್ನು ಸಮಾನವಾಗಿ ಕಾಣುತ್ತೇವೆ’ ಎಂದು ಹೇಳಿಕೆ ಇತ್ತರು. ಆರೆಸ್ಸಸ್ ಅದನ್ನು ಹೇಳಿಕೆ ಮಟ್ಟದಲ್ಲಿಯೇ ಇರಲು ಬಯಸುತ್ತದೆ. ಆಚರಣೆಯಲ್ಲಿ ಅಲ್ಲ.ಇದು 56 ಇಂಚಿನ ಎದೆಯ ಮೋದಿಗೂ ಸಹ ಗೊತ್ತು. ಇದು ಕೋಮುವಾದದ ಮನಸ್ಥಿತಿ, ಚಹರೆ, ಸ್ವರೂಪ.

ಕೋಮುವಾದವೆಂದರೆ ಅದು ಒಂದು ಐಡೆಂಟಿಟಿ ರಾಜಕೀಯ. ದ್ವೇಷದ,ಹಗೆತನದ ರಾಜಕೀಯ. ಇಲ್ಲಿ ಈ ಐಡೆಂಟಿಟಿಯು ಸ್ಪಷ್ಟವಾಗಿ ಧಾರ್ಮಿಕ ನೆಲೆಯನ್ನು ಅವಲಂಬಿಸುತ್ತದೆ. ಈ ಕೋಮುವಾದವು ‘ನಾವು’ ಮತ್ತು ‘ಅವರು’ ಎಂದು ಎರಡು ಧರ್ಮಗಳ ನಡುವೆ ಸ್ಪಷ್ಟವಾದ ಗೆರೆಯನ್ನು ಎಳೆಯುತ್ತದೆ. ಕೋಮುವಾದ ಶಕ್ತಿಗಳು ಬಲಿಷ್ಠಗೊಂಡಂತೆ ಈ ಗೆರೆಯು ಒಂದು ಗೋಡೆಯಾಗಿ ಬೆಳೆಯುತ್ತ ಹೋಗುತ್ತದೆ. ಈ ಕೋಮುವಾದವು ತನ್ನ ಧಾರ್ಮಿಕ ಶ್ರೇಷ್ಠತೆಯನ್ನು ವೈಭವೀಕರಿಸುತ್ತಲೇ ಅನ್ಯ ಧರ್ಮ ಮತ್ತು ಅನ್ಯ ಧರ್ಮೀಯರನ್ನು ದ್ವೇಷಿಸುತ್ತಾ ಬಹುಸಂಖ್ಯಾತ ತತ್ವವನ್ನು ಸಾರ್ವಜನಿಕವಾಗಿ ಬಿತ್ತುತ್ತಿರುತ್ತದೆ. ಸಮಾಜದಲ್ಲಿ ಕೋಮುಗಲಭೆಗಳನ್ನು ಹುಟ್ಟು ಹಾಕುವುದರ ಮೂಲಕ ಅಧಿಕಾರವನ್ನು ಪಡೆದುಕೊಳ್ಳುವುದು ಈ ಕೋಮುವಾದದ ಮತ್ತೊಂದು ಮಾದರಿಗಳಲ್ಲೊಂದು. ಚಿಂತಕರು ಇಂಡಿಯಾದಲ್ಲಿ ಹಿಂದೂ ಕೋಮುವಾದವನ್ನು ಫ್ಯಾಸಿಸ್ಟ್ ನ ಮತ್ತೊಂದು ಮುಖವೆಂದೇ ಬಣ್ಣಿಸುತ್ತಾರೆ. ತನ್ನ ಧರ್ಮವನ್ನು ಶ್ರೇಷ್ಠವೆಂದು ಪರಿಗಣಿಸುವ ಈ ಧಾರ್ಮಿಕ ಐಡೆಂಟಿಟಿಯನ್ನು ಒಂದು ಫ್ಯಾಸಿಸ್ಟ್ ಶಕ್ತಿಯಾಗಿ ಕ್ರೋಢೀಕರಿಸಿದ್ದು ಸಾವರ್ಕರ್. ಸಾವರ್ಕರ್ರ ಹಿಂದುತ್ವದ ಕೋಮುವಾದವನ್ನೊಳಗೊಂಡ ಫ್ಯಾಸಿಸ್ಟ್ ಚಿಂತನೆಗಳನ್ನು ತನ್ನ ಸೀಕ್ರೆಟ್ ಕಾರ್ಯಸೂಚಿಯನ್ನಾಗಿಸಿಕೊಂಡ ಆರೆಸ್ಸಸ್ ದಶಕಗಳ ಕಾಲ ಸಾರ್ವಜನಿಕವಾಗಿ ಕೇವಲ ಹಿಂದುತ್ವವನ್ನು ಪ್ರಚಾರ ಮಾಡಿತು. ಇಂದು ಕೇಂದ್ರದಲ್ಲಿ ಅಧಿಕಾರ ಗಳಿಸಿದ ನಂತರ ತನ್ನೊಳಗೆ ಮಡುಗಟ್ಟಿಕೊಂಡ ಫ್ಯಾಸಿಸಂನ ಮುಖಗಳನ್ನು ಸಹ ಬಹಿರಂಗಗೊಳಿಸತೊಡಗಿದೆ.

ಆರಂಭದಲ್ಲಿ ಇಟಲಿಯ ಮುಸಲೋನಿಯ ಆಡಳಿತವನ್ನು ತನ್ನ ಸ್ವಯಂಸೇವಕರಿಗೆ ತರಬೇತಿ ಕೊಡಬೇಕೆಂದು ಕೊಂಡಾಡಿದ್ದ ಆರೆಸ್ಸಸ್ ನಂತರ ಹಿಟ್ಲರ್ ನನ್ನೂ ಪ್ರಶಂಸಿತ್ತು. ಇಂದಿಗೂ ರಾಷ್ಟ್ರ ಮತ್ತು ಅದರ ಪ್ರಜಾಪ್ರಭುತ್ವ ಮಾದರಿಯ ಗಣರಾಜ್ಯ ವ್ಯವಸ್ಥೆಯ ಕುರಿತಾಗಿ ಅಸಹನೆಯಿಂದಿರುವ ಆರೆಸ್ಸಸ್ ಅದಕ್ಕೆ ಪರ್ಯಾಯವಾಗಿ ಹಿಂದೂರಾಷ್ಟ್ರವೆಂದು ಹೇಳುತ್ತಿದೆಯಾದರೂ ಅದರ ಸ್ವರೂಪದ ಕುರಿತಾಗಿ ಅವರಲ್ಲೇ ಗೊಂದಲಗಳಿವೆ. ಆದರೆ 2014ರ ಚುನಾವಣೆಯ ಸಂದರ್ಭದಿಂದ ಇಡೀ ಸಂಘ ಪರಿವಾರದ ನಾಯಕರು ಬಳಸಿದ ಫೆನಟಿಸಂನ, ಹಿಂಸಾಚಾರದ ಭಾಷೆಗಳು ಹಿಟ್ಲರ್ ನ ನಾಜಿ ಪಾರ್ಟಿಯ ಫ್ಯಾಸಿಸಂ ಅನ್ನು ಹೋಲುತ್ತವೆ. ಚುನಾವಣೆಯ ಸಂದರ್ಭದಲ್ಲಿ ಕೋಮುವಾದವನ್ನು ಹುಟ್ಟು ಹಾಕುವುದು, ಜಾತಿಗಳ ಧೃವೀಕರಣ ಸಾಧಿಸುವುದು, ದೇಶ ವಿಭಜನೆಯ ಸಂದರ್ಭದ ಹಿಂಸಾಚಾರವನ್ನು ನೆನಪಿಸುತ್ತ ಸಿಖ್ಖರನ್ನು ಮುಸ್ಲಿಂರ ವಿರುದ್ಧ ಸಂಘಟಿಸುವುದು, ಮತಾಂತರದ ವಿರುದ್ಧ ಸಂಘಟಿತರಾಗುತ್ತಲೇ ಮರು ಮತಾಂತರ ಪ್ರಕ್ರಿಯೆ ಜಾರಿಗೊಳಿಸುವುದು, ಅನ್ಯ ಧರ್ಮೀಯರ ಧಾರ್ಮಿಕ ಸ್ಥಳಗಳನ್ನು ಧ್ವಂಸಗೊಳಿಸುವುದು, ಇವೆಲ್ಲವೂ ಕೋಮುವಾದದ ಫ್ಯಾಸಿಸಂ ಅಜೆಂಡಾಗಳು. ತನ್ನ ಪ್ರಣಾಳಿಕೆಯಲ್ಲಿ ಹಿಂದೂಯಿಸಂನ ಕುರಿತಾಗಿ ಸಮರ್ಥಿಸಿಕೊಂಡರೆ ಆಚರಣೆಯಲ್ಲಿ ಕೇವಲ ಎಲೈಟ್ ವರ್ಗಗಳ ಹಿತಾಸಕ್ತಿಯನ್ನು ಮತ್ತು ಭ್ರಾಹ್ಮಣ ಜಾತಿಯ ಶ್ರೇಷ್ಠತೆಯನ್ನು ಪ್ರತಿಪಾದಿಸುತ್ತದೆ.

ಮೇಲ್ಜಾತಿಗಳ ಅಧಿಪತ್ಯದಲ್ಲಿ ವರ್ಣಾಶ್ರಮ ಸಮಾಜವನ್ನು ಸ್ಥಾಪಿಸಲು ಹಿಂದೂ ಧರ್ಮದ ಇತರೇ ಜಾತಿಗಳನ್ನು ಬಳಸಿಕೊಳ್ಳುತ್ತದೆ. ಇದು ಕೋಮುವಾದದ ಫ್ಯಾಸಿಸಂ ಮುಖ. ಹಿಂದೂರಾಷ್ಟ್ರದ ಪರಿಕಲ್ಪನೆಯನ್ನು ಬೋಧಿಸುತ್ತ ಮುಸ್ಲಿಂರ ದೇಶ ಇದಲ್ಲ ಎಂದು ಮತೀಯವಾದಿ ನುಡಿಕಟ್ಟಿನಲ್ಲಿ ಮಾತನಾಡುವುದು, ಮುಸ್ಲಿಂರ ಏಜೆಂಟ್ ಎಂದು ಗಾಂಧೀಜಿಯನ್ನು ಹತ್ಯೆಗೈಯುವುದು ಕೋಮುವಾದ, ಫ್ಯಾಸಿಸಂ ಒಂದಕ್ಕೊಂದು ಬೆರೆತುಕೊಂಡ ಮುಖ. ರಾಮ ಜನ್ಮ ಭೂಮಿ ನಿರ್ಮಾಣಕ್ಕಾಗಿ ಹಿಂದೂ ಧರ್ಮದ ವಿವಿಧ ಜಾತಿಗಳನ್ನು ಒಗ್ಗೂಡಿಸಿ, ಶಿಲಾನ್ಯಾಸಕ್ಕಾಗಿ ಇಟ್ಟಿಗೆಗಳನ್ನು ಸಾಗಿಸುವುದು, ಅಯೋಧ್ಯೆಗೆ ರಥಯಾತ್ರೆ ಮತ್ತು ಇದೆಲ್ಲದರ ಮೂಲಕ ದೇಶಾದ್ಯಾಂತ ಗಲಭೆ,ಹಿಂಸಾಚಾರವನ್ನು ಸೃಷ್ಟಿಸುವುದು, ಇದೆಲ್ಲದರ ತಾರ್ಕಿಕ ಅಂತ್ಯವೆನ್ನುವಂತೆ ಹಿಂಸಾತ್ಮಕವಾಗಿ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದ್ದು ಕೋಮುವಾದ ಮತ್ತು ಫ್ಯಾಸಿಸಂನ ಬೆರೆತುಕೊಂಡ ಮುಖ.

ಗುಜರಾತ್ ನ ಗೋಧ್ರಾ ದುರಂತದ ನಂತರ ನಡೆದ ಮುಸ್ಲಿಂ ಸಮುದಾಯದ ಹತ್ಯಾಕಾಂಡದಲ್ಲಿ ಕ್ರಿಯೆ ಮತ್ತು ಪ್ರತಿಕ್ರಿಯೆಗಳುnarender_modi_rss ಸಮಾನವಾಗಿರುತ್ತವೆ ಎಂದು ಅಲ್ಲಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದು ಕೋಮುವಾದವಾದರೆ ನಂತರ ಹೆಣ್ಣುಮಕ್ಕಳು, ಮಕ್ಕಳನ್ನು ಇರಿದು ಹಲ್ಲೆ ಮಾಡಿ, ಅತ್ಯಾಚಾರ ನಡೆಸಿ ಹತ್ಯೆ ಮಾಡಿದ್ದು ಫ್ಯಾಸಿಸಂನ ಮುಖ. ಹಿಂದೂ ಧರ್ಮದ ಜಾತೀಯತೆ ಮತ್ತು ಅಸಮಾನತೆಯ ದೌರ್ಜನ್ಯಕ್ಕೆ ಬಲಿಯಾದ ತಳಸಮುದಾಯಗಳು ಬೇರೆ ಧರ್ಮಗಳಿಗೆ ಮತಾಂತರಗೊಂಡಿದ್ದನ್ನು ಕಟುವಾಗಿ ಟೀಕಿಸುವ ಆರೆಸ್ಸಸ್ ಈ ರೀತಿ ಮತಾಂತರಗೊಂಡವರನ್ನು ‘ಘರ್ ವಾಪಸಿ (ಮರಳಿ ಮನೆಗೆ)’ ಎನ್ನುವ ಸ್ಲೋಗನ್ ಅಡಿಯಲ್ಲಿ ಮರು ಹಿಂದೂ ಧರ್ಮಕ್ಕೆ ಮತಾಂತರಗೊಳಿಸುತ್ತಿದೆ. ಆದರೆ ಪೂರ್ವ ಮತ್ತು ಈಶಾನ್ಯ ಭಾರತದ ಆದಿವಾಸಿ ಸಮುದಾಯ ಸುಮಾರು ಮೂರು ತಲೆಮಾರುಗಳ ಹಿಂದಿನ ಕಾಲದಿಂದಲೂ ಕ್ರಿಶ್ಚಿಯನ್ ಧರ್ಮವನ್ನು ಪಾಲಿಸುತ್ತಿವೆ. ಅವರ ಧಾರ್ಮಿಕ ನಂಬಿಕೆ, ಅವೈದಿಕ ಆಚರಣೆಗಳು ಈ ಹಿಂದೂ ಧಾರ್ಮಿಕತೆಗಿಂತಲೂ ಸಂಪೂರ್ಣ ಭಿನ್ನವಾಗಿದೆ. ಆದರೆ ಮತೀಯವಾದಿ ಸಂಘ ಪರಿವಾರ ‘ಘರ್ ವಾಪಸಿ’ ಹೆಸರಿನಲ್ಲಿ ಅವರಿಗೆ ಪರಕೀಯವಾದ ಹಿಂದೂ ಧರ್ಮಕ್ಕೆ ಮತಾಂತರಗೊಳಿಸುತ್ತಿದೆ. ‘ಘರ್ ವಾಪಸಿ (ಮರಳಿ ಮನೆಗೆ)’ ಎನ್ನುವ ಇಡೀ ಪ್ರಕ್ರಿಯೆಯೇ ಹಿಂಸಾಚಾರದಿಂದ ರೂಪುಗೊಂಡಿದೆ. ಎಂಬತ್ತರ ದಶಕದಲ್ಲಿ ತಮಿಳುನಾಡಿನ ಮೀನಾಕ್ಷಿಪುರಂ ಮತಾಂತರದ ಹಿಂಸೆಯಿಂದ ಮೊದಲುಗೊಂಡು ಇತ್ತೀಚಿನ ಅಗ್ರಾದಲ್ಲಿ ನಡೆದ ಮರು ಮತಾಂತರದ ಪ್ರಹಸನದವರೆಗೂ ಸಂಘ ಪರಿವಾರದ ಹಿಂಸೆ ವಿಜೃಂಭಿಸಿದೆ. ಹೀಗೆ ಕೋಮುವಾದ ಮತ್ತು ಫ್ಯಾಸಿಸಂ ಎರಡನ್ನೂ ಒಂದುಗೂಡಿಸಿದ ಆರೆಸ್ಸಸ್ ತನ್ನ ಸಂಘಟನೆಗೆ ವಿ ಎಚ್ ಪಿ ಮತ್ತು ಬಜರಂಗದಳ ಗುಂಪುಗಳ ಮೂಲಕ ಮಿಲಿಟೆಂಟ್ ಸ್ವರೂಪವನ್ನು ಪಡೆದುಕೊಂಡಿದೆ.

ಸಂಘಪರಿವಾರದ ಫ್ಯಾಸಿಸಂ ಮತ್ತು ಕೋಮುವಾದ ಒಟ್ಟಿಗೆ ಮೇಳೈಸಿದ ತೀರಾ ಇತ್ತೀಚಿನ ಉದಾಹರಣೆ ಎಂದರೆ ಗೋಹತ್ಯೆ ನಿಷೇಧ ಕಾನೂನು. 2015ರಲ್ಲಿ ದನ, ಎಮ್ಮೆ, ಗೋವುಗಳ ಹತ್ಯೆ ನಿಷೇಧ ಮಸೂದೆಯನ್ನು ರಾಷ್ಟ್ರಪತಿಗಳಿಂದ ಅಂಗೀಕಾರ ಪಡೆದುಕೊಂಡ ನಂತರ ಮಹರಾಷ್ಟ್ರದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಯಾಗಿದೆ. ಇನ್ನು ಮುಂದೆ ಆ ರಾಜ್ಯದಲ್ಲಿ ಬೀಫ್ ಮಾರಾಟ ಮಾಡಿದರೆ, ಸೇವಿಸಿದರೆ, ಅದರ ತುಂಡನ್ನು ಕೈಯಲ್ಲಿ ಹಿಡಿದರೆ ಕನಿಷ್ಠ 5 ವರ್ಷಗಳ ಜೈಲು ಶಿಕ್ಷೆಯಾಗುತ್ತದೆ. ಗೋ ಹತ್ಯೆ ನಿಷೇಧವನ್ನು ಜಾರಿಗೊಳಿಸಲು ತುದಿಗಾಲಲ್ಲಿರುವ ಮಧ್ಯಪ್ರದೇಶ ಸರ್ಕಾರವು ಶಿಕ್ಷೆಯ ಪ್ರಮಾಣವನ್ನು 7 ವರ್ಷಗಳಿಗೆ ನಿಗದಿಪಡಿಸಲು ನಿರ್ಧರಿಸಿದೆ. ಹರ್ಯಾಣ ರಾಜ್ಯವು 9 ವರ್ಷಗಳ ಶಿಕ್ಷೆಯನ್ನು ಜಾರಿಗೊಳಿಸಲು ಚಿಂತಿಸುತ್ತಿದೆ. 2004ರಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದ ಉಮಾಭಾರತಿ ಗೋಹತ್ಯಾ ನಿಷೇಧಕ್ಕೆ ಸಂಬಂಧಪಟ್ಟಂತೆ ಮಸೂದೆಯನ್ನು ಜಾರಿಗೊಳಿಸಿದ್ದರು.

ಆ ಮಸೂದೆಯಲ್ಲಿ ಗೋಹತ್ಯೆ ನಿಷೇಧಕ್ಕೆ ಕಾರಣ ಕೊಡುತ್ತ ‘ಮನುಸ್ಮುತಿಯಲ್ಲಿ ಗೋ ಹತ್ಯೆಯನ್ನು ಅಕ್ಷಮ್ಯ ಅಪರಾಧವೆಂದು ಅದನ್ನು ಮಾಡಿದವರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಬರೆಯಲಾಗಿದೆ’ ಅದಕ್ಕೇ ಈ ಮಸೂದೆ ಎಂದು ಸಮರ್ಥಿಸಿಕೊಳ್ಳಲಾಗಿದೆ. ಬಿಜೆಪಿ ಪಕ್ಷವು ಸಂವಿಧಾನಿಕ ಮಸೂದೆಯೊಂದನ್ನು ಜಾರಿಗೊಳಿಸಲು ಮನುಸ್ಮುತಿಯನ್ನು ಬಳಸಿಕೊಂಡಿದ್ದು ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದೇ ಮೊದಲನೆಯದಾಗಿತ್ತು. ಆರೆಸ್ಸಸ್ ಮತ್ತು ಅದರ ಎಲ್ಲಾ ಪರಿವಾರ ಸಂಘಟನೆಗಳು ಈ ಗೋಹತ್ಯೆ ನಿಷೇಧಗೊಂಡ ಭಾರತವನ್ನು ನೆನಪಿಸಿಕೊಂಡು, ಸನಾತನ ಹಿಂದೂ ಧರ್ಮದ ಭಾರತವನ್ನು ನೆನಪಿಸಿಕೊಂಡು ಪುಳಕಗೊಳ್ಳುತ್ತಾ ಈ ಸನಾತನ ಭಾರತದಲ್ಲಿ ಮನುಷ್ಯರಿಗಿಂತ ಗೋವುಗಳು ಮುಖ್ಯ ಎಂದು ಎಚ್ಚರಿಸುತ್ತಿದ್ದಾರೆ. ಹೌದು ಇದು ನಿಜ. ಅಕ್ಟೋಬರ್ 12,2002 ರಂದು ಹರ್ಯಾಣ ರಾಜ್ಯದ ಜಾಜ್ಜರ್ ಪಟ್ಟಣದ ದುಲಿನಾ ಪೋಲಿಸ್ ಚೌಕಿಯ ಬಳಿ ದನಗಳನ್ನು ಸಾಗಿಸುತ್ತಿದ್ದಾರೆ ಎನ್ನುವ ಆಪಾದನೆಯ ಮೇಲೆ ಬಂಧಿತರಾಗಿದ್ದ 5 ದಲಿತರನ್ನು ಸುಮಾರು ಐನೂರು ಜನರ ಲುಂಪೆನ್ ಗುಂಪು ಕೊಚ್ಚಿ ಕೊಂದು ಹಾಕಿತು.

ಕೆಲವು ತಿಂಗಳುಗಳ ಹಿಂದೆ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಗಾಂಧೀಜಿ ಹಂತಕ, ಚಿತ್ಪಾವನ್ ಭ್ರಾಹ್ಮಣ, ಹಿಂದೂ ಮಹಾಸಭಾದ ಸದಸ್ಯ ಗೋಡ್ಸೆಯನ್ನು ಒಬ್ಬ ದೇಶಭಕ್ತ ಎಂದು ಬಣ್ಣಿಸಿದ್ದರು. ಹಿಂದೂ ಮಹಾಸಭಾದ ಅಧ್ಯಕ್ಷ ಚಂದ್ರ ಪ್ರಸಾದ್ ಕೌಶಿಕ್ ‘ ಗಾಂಧಿ ಹತ್ಯೆಗೆ ಸಂಬಂಧಪಟ್ಟಂತೆ ನಡೆದ ಘಟನೆಗಳನ್ನು ಕೂಲಂಕುಶ ತನಿಖೆ ಆಗಬೇಕಿದೆ. ಗೋಡ್ಸೆಯವರು ನಿಜಕ್ಕೂ ಹಂತಕನಲ್ಲ, ಆದರೆ ಗಾಂಧಿಯನ್ನು ಕೊಲ್ಲುವಂತೆ ಪ್ರೇರೇಪಿಸಲಾಗಿತ್ತು’ ಎಂದು ಹೇಳುತ್ತಾರೆ. ಈ ಹಿಂದೂ ಮಹಾ ಸಭಾ ದೇಶದ ಹದಿಮೂರು ಜಿಲ್ಲೆಗಳಲ್ಲಿ ಈ ಹಂತಕ ಗೋಡ್ಸೆ ಮೂರ್ತಿಗಳನ್ನು ಸ್ಥಾಪಿಸಲು ನಿರ್ಧರಿಸಿದೆ. ಈಗಾಗಲೇ ಗಾಂಧಿ ಲೆಗಸಿಯನ್ನು ಮಣ್ಣುಗೂಡಿಸಿ ಸ್ವಚ್ಛ ಭಾರತ ಎನ್ನುವ ಸವಕಲು ಸ್ಲೋಗನ್ನಿನ ಮೂಲಕ ಗಾಂಧಿಯನ್ನು ಹಿಂದೂಯಿಸಂನ ಜಠರದೊಳಗೆ ಜೀರ್ಣಿಸಿಕೊಳ್ಳಲಾಗಿದೆ.ಮುಂದುವರೆದ ಭಾಗವಾಗಿ ತಪ್ಪುದಾರಿಗೆಳೆಯಲ್ಪಟ್ಟ ದೇಶಭಕ್ತ ಎಂದು ಈ ಗೋಡ್ಸೆಯ ವೈಭವೀಕರಣದ ಮೂಲಕ ಸೆಕ್ಯುಲರಿಸಂ, ಮಾನವತವಾದದ ತತ್ವಗಳನ್ನು ಮಣ್ಣುಗೂಡಿಸಿ ನವಫ್ಯಾಸಿಸಂ ಮಾದರಿಯ ‘ಗೋಡ್ಸೆ ಸಿದ್ಧಾಂತ’ವನ್ನು ತೇಲಿ ಬಿಡುತ್ತಾ ಹಿಂದೂ ರಾಷ್ಟ್ರದ ಪರಿಕಲ್ಪನೆಯನ್ನು ಬಿತ್ತಲಾಗುತ್ತಿದೆ.

ಈ ಮತೀಯವಾದಿ ಆರೆಸ್ಸಸ್ ನ ಸೀಕ್ರೆಟ್ ಸೊಸೈಟಿಯ ಗುಪ್ತ ಅಜೆಂಡಾದ ಮತ್ತೊಂದು ಸಾರ್ವಜನಿಕ ಅವತಾರ ‘ಹಿಂದೂ ರಾಷ್ಟ್ರೀಯತೆ’. 1909ರಲ್ಲಿ ‘ಹಿಂದೂ ಸಾಯುತ್ತಿರುವ ಧರ್ಮ’ ಹೆಸರಿನ ಕರಪತ್ರದಲ್ಲಿ ‘ಮುಂದಿನ ಕೆಲವು ವರ್ಷಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿ, ಮುಸ್ಲಿಂರು ಬಹುಸಂಖ್ಯಾರಾಗುತ್ತಾರೆ’ ಎಂದು ಪ್ರಚೋದನಾತ್ಮಕವಾಗಿ ಬರೆಯಲಾಗಿತ್ತು. 1923ರಲ್ಲಿ ‘ಹಿಂದೂ ಎಂದರೆ ಏನು’ ಎನ್ನುವ ಲೇಖನದಲ್ಲಿ ಸಾವರ್ಕರ್ ಅವರು ‘ಹಿಮಾಲಯದ ತಪ್ಪಲಿನಿಂದ ಹಿಂದೂ ಮಹಾಸಾಗರದವರೆಗಿನ ಭೂಖಂಡವನ್ನು ಪಿತೃಭೂಮಿ, ಪವಿತ್ರ ಭೂಮಿ ಎಂದು ಪೂಜಿಸುವ ಹಿಂದೂ, ಜೈನ ಧರ್ಮಗಳ ಅನುಯಾಯಿಗಳು ಇಲ್ಲಿನ ನಾಗರಿಕರು. ಇತರೇ ಧರ್ಮೀಯರು ಬೇರೆ ಭೂಖಂಡವನ್ನು ಹುಡುಕಿಕೊಳ್ಳಬೇಕು’ ಎಂದು ಬರೆಯುತ್ತಾರೆ. ಅದೇ ಕಾಲದಲ್ಲಿ ‘ಮುಸ್ಲಿಂರು, ಕ್ರಿಶ್ಚಿಯನ್ನರನ್ನು ಎರಡನೇ ದರ್ಜೆಯ ನಾಗರಿಕರೆಂದು ಕರೆದ ಗೋಲ್ವಲ್ಕರ್ ಮುಂದುವರೆದು ಇವರನ್ನು ದೇಶದ ಅಂತರಿಕ ಶತೃಗಳೆಂದು ಜರೆದರು. ಗೋಳ್ವಲ್ಕರ್, ಸಾವರ್ಕರರಿಂದ ಮೊದಲುಗೊಂಡು ಇಂದಿನ ಮೋಹನ್ ಭಾಗವತ್ವರೆಗೂ ಎಲ್ಲರೂ ಭಾರತವನ್ನು ಅದರ ಧಾರ್ಮಿಕತೆಯನ್ನು ‘ಹಿಂದೂ ರಾಷ್ಟ್ರೀಯತೆ’ಯೊಂದಿಗೆ ನಂಟು ಹಾಕುತ್ತ ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯ ಗಣರಾಜ್ಯದ ಮಾಡೆಲ್ ಅನ್ನು ತಿರಸ್ಕರಿಸುತ್ತಾರೆ.

ಕಲೋನಿಯಲ್ ಆಡಳಿತ ವಿರೋಧಿಸಿದ ಸ್ವಾತಂತ್ರ ಚಳುವಳಿಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ಇಪ್ಪತ್ತು ಮತ್ತು ಮೂವತ್ತರ ದಶಕಗಳಲ್ಲಿRSS-mohanbhagwat ‘ಸೆಕ್ಯುಲರಿಸಂ’ ಅನ್ನು ‘ರಾಷ್ಟ್ರೀಯತೆ’ಯೊಂದಿಗೆ ಸಮೀಕರಿಸಿದರೆ ಈ ಸಮೀಕರಣವನ್ನೇ ಹೈಜಾಕ್ ಮಾಡಿದ ಆರೆಸ್ಸಸ್ ರಾಷ್ಟ್ರೀಯತೆಯನ್ನು ಕೋಮುವಾದದೊಂದಿಗೆ ಸಮೀಕರಿಸಿಬಿಟ್ಟಿತು. ನೆಹರೂ ಯುಗ ಪ್ರಾರಂಭಗೊಂಡು ಇಂದಿರಾಗಾಂಧಿ ತೀರಿಕೊಳ್ಳುವುವರೆಗೂ ಆರೆಸ್ಸಸ್ ನ ಈ ‘ಹಿಂದೂ ರಾಷ್ಟ್ರೀಯತೆ’ ತನ್ನ ಹೆಡೆ ಬಿಚ್ಚಲಿಕ್ಕೆ ಸಾಧ್ಯವಾಗಲಿಲ್ಲ. ತೊಂಬತ್ತರ ದಶಕದ ಜಾಗತೀಕರಣ ಈ ‘ಹಿಂದೂ ರಾಷ್ಟ್ರೀಯತೆ’ ಮರಳಿ ಮುಖ್ಯಧಾರೆಯಲ್ಲಿ ಚರ್ಚೆಗೆ ಬರುವುದಕ್ಕೆ ಅವಕಾಶ ಮಾಡಿಕೊಟ್ಟಿತು. ಮೂಲಭೂತವಾಗಿ ತಮ್ಮ ಚಹರೆಗಳಲ್ಲಿ, ನಡುವಳಿಕೆಗಳಲ್ಲಿ, ವ್ಯಕ್ತಿತ್ವದಲ್ಲಿ ಧಾರ್ಮಿಕ ನಂಬಿಕೆಯನ್ನು ಶ್ರದ್ಧಾಪೂರ್ವಕವಾಗಿ ವ್ಯಕ್ತಪಡಿಸುತ್ತಿದ್ದ ಇಂಡಿಯಾದ ಮಧ್ಯಮವರ್ಗ ಕಳೆದ ಎರಡು ದಶಕಗಳಲ್ಲಿ ‘ಮುಸ್ಲಿಂ ಭಯೋತ್ಪಾದನೆ’ ಎನ್ನುವ ಫೋಬಿಯಾಗೆ ಬಲಿಯಾಗಿ ಅದನ್ನು ವಿರೋಧಿಸಲು ಈ ಹಿಂದೂ ರಾಷ್ಟ್ರೀಯತೆಯ ಕಡೆಗೆ ಚಲಿಸತೊಡಗಿದರು. ಇಂದು ಬಿಜೆಪಿ ಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸಂದರ್ಭದಲ್ಲಿ ಆರೆಸ್ಸಸ್ ನ ಹಿಂದೂ ರಾಷ್ಟ್ರೀಯತೆಯ ಪರಿಕಲ್ಪನೆ ಎಲ್ಲೆಲ್ಲೂ ಪ್ರತ್ಯಕ್ಷಗೊಳ್ಳತೊಡಗಿದೆ. ಮೊಟ್ಟ ಮೊದಲ ಬಾರಿಗೆ ಇಂದಿನ ದಿನಗಳಲ್ಲಿ ದಸರಾ, ಗಣೇಶನ ಹಬ್ಬ, ದೀಪಾವಳಿಗಳಂತಹ ಹಿಂದೂ ಹಬ್ಬಗಳು ರಾಷ್ಟ್ರೀಯ ಹಬ್ಬಗಳಾಗಿ ಆಚರಿಸಲಾಗುತ್ತಿದೆ. ಮಧ್ಯಮವರ್ಗಗಳೂ ಸಹ ಈ ಸೋಕಾಲ್ಡ್ ರಾಷ್ಟ್ರೀಯ ಹಬ್ಬಗಳಲ್ಲಿ ಅತ್ಯಂತ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ. ಈ ಹಿಂದೂ ರಾಷ್ಟ್ರೀಯತೆಯಲ್ಲಿ ಹಿಂದುತ್ವದ ಹೊರತಾಗಿ ಬೇರೆ ಪರ್ಯಾಯ ಪಠ್ಯಗಳು, ಧರ್ಮಗಳು, ಸಂಸ್ಕೃತಿಗಳಿಗೆ ಸ್ಥಾನ ಇರುವುದೇ ಇಲ್ಲ.

ಈ ಸೀಕ್ರೆಟ್ ಸೊಸೈಟಿ ಆರೆಸ್ಸಸ್ ನ ಬಿಜೆಪಿ ಪಕ್ಷ ಇಂದು ರಾಜಕೀಯವಾಗಿ ಅಧಿಕಾರದಲ್ಲಿದೆ. ಸಧ್ಯದ ಪರಿಸ್ಥಿಯಲ್ಲಿ ಏಕಾಏಕಿ ಸಂವಿಧಾನವನ್ನು ಧಿಕ್ಕರಿಸಿ ಮರಳಿ ವರ್ಣಾಶ್ರಮಕ್ಕೆ ಮರಳಲು ಸಾಧ್ಯವಿಲ್ಲ ಎಂದು ಅರಿತಿರುವ ಆರೆಸ್ಸಸ್ ಇದಕ್ಕಾಗಿ ದೂರಗಾಮಿ ಯೋಜನೆಗಳನ್ನು ಹಾಕಿಕೊಂಡಿದೆ. 56 ಇಂಚಿನ ಎದೆಯ ನರೇಂದ್ರ ಮೋದಿ ಎಲ್ಲರ ವಿಕಾಸ, ಆಡಳಿತ ಮತ್ತು ಅಭಿವೃದ್ಧಿಯ ಸ್ಲೋಗನ್ ಅನ್ನು ತಮ್ಮ ಸರ್ಕಾರದ ಆದ್ಯತೆ ಎನ್ನುತ್ತಿರುವಾಗಲೇ ಮತ್ತೊಂದೆಡೆ ಆರೆಸ್ಸಸ್ ತನ್ನ ಸೀಕ್ರೆಟ್ ಅಜೆಂಡಾಗಳನ್ನು ಕ್ಷಣವೂ ವ್ಯರ್ಥ ಮಾಡದೆ ಏಕಕಾಲಕ್ಕೆ ಕಾರ್ಯರೂಪಕ್ಕೆ ತರುತ್ತಿದೆ. ಈ ಹಿಂದೆ ಧಾರ್ಮಿಕ ವ್ಯಕ್ತಿಗಳನ್ನು ಮಾಡಿಕೊಂಡಂತೆ ರಾಜಕೀಯ, ಸಾಮಾಜಿಕ ನಾಯಕರನ್ನು (ವಿವೇಕಾನಂದ, ವಲ್ಲಭಾಯಿ ಪಟೇಲ್, ಗಾಂಧಿ, ಅಂಬೇಡ್ಕರ್, ಪುಲೆ ದಂಪತಿಗಳು) ತನ್ನ ಹಿಂದುತ್ವಕ್ಕೆ appropriation ಮಾಡಿಕೊಳ್ಳುವುದು ಆರೆಸ್ಸೆಸ್ ನ ಪ್ರಮುಖ ಕಾರ್ಯಸೂಚಿ. ದಶಕಗಳ ಹಿಂದೆಯೇ ವಿವೇಕಾನಂದರನ್ನು ಹಿಂದೂ ಧರ್ಮದ ವಕ್ತಾರರಾಗಿ appropriation ಮಾಡಿಕೊಂಡ ಸಂಘ ಪರಿವಾರದ ಹಿಂದೂ ಮಹಾ ಸಭಾ ಇಂದು ಅಕ್ಟೋಬರ್ 2 ಗಾಂಧಿ ಹುಟ್ಟಿದ ದಿನವನ್ನು appropriation ಮಾಡಿಕೊಂಡು ಗೋಡ್ಸೆ ಗಾಂಧಿಯನ್ನು ಕೊಂದ ಜನವರಿ 30 ರ ದಿನದಂದು ದೇಶದ ನಾಲ್ಕು ಮೂಲೆಗಳಲ್ಲಿ ಗೋಡ್ಸೆಯ ಪ್ರತಿಮೆಗಳನ್ನು ನಿರ್ಮಿಸಲು ಹೊರಟಿತ್ತು. ಆ ದಿನವನ್ನು ವಿಜಯೋತ್ಸವವನ್ನಾಗಿ ಆಚರಿಸಲು ಸಿದ್ಧತೆ ನಡೆಸಿತ್ತು. ಅಂಬೇಡ್ಕರ್ ಅವರ ಪರಿನಿರ್ವಾಣ ದಿನವಾದ ಡಿಸೆಂಬರ್6 ಅನ್ನು ತುಂಬಾ ಲೆಕ್ಕಾಚಾರದಿಂದಲೇ ಆಯ್ದುಕೊಂಡ ಸಂಘ ಪರಿವಾರ ಆ ದಿನದಂದೇ ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಿತು. ಅದನ್ನು ವೈಭವೀಕರಿಸಲು ಡಿಸೆಂಬರ್ 6 ಅನ್ನು ವಿಜಯೋತ್ಸವ ಹಬ್ಬವನ್ನಾಗಿ ಆಚರಿಸುತ್ತಿದೆ. ಅಂದರೆ ಅಂಬೇಡ್ಕರ್ ನೆನಪಿನಲ್ಲಿ ಮೌನದ, ಧ್ಯಾನದ ದಿನವಾಗಬೇಕಿದ್ದ ಡಿಸೆಂಬರ್ 6 ರಂದು ವಿಜಯೋತ್ಸವ ದಿನವಾಗಿ appropriation ಮಾಡಿಕೊಂಡಿದೆ.

ತೊಂಬತ್ತರ ದಶಕದಲ್ಲಿ ಬಿಎಸ್ಪಿ ಪಕ್ಷವು ಮೇಲ್ಮುಖ ಚಲನೆಯಾಗಿ ‘ಬಹುಜನ’ರಿಂದ ‘ ಸರ್ವಜನ’ ಎನ್ನುವ ಘೋಷಣೆಯೊಂದಿಗೆ ರಾಜಕೀಯ ರೂಪಿಸಿದ್ದರೆ ಇಂದು ಅದನ್ನು ಬುಡಮೇಲು ಮಾಡಿರುವ ಆರೆಸ್ಸಸ್ ‘ಸರ್ವಜನ’ ರಿಂದ ‘ಬಹುಜನ’ರ ಕಡೆಗೆ ಎನ್ನುವ ಸಿದ್ಧಾಂತವನ್ನು ರೂಪಿಸುತ್ತಿದೆ. ತಳಸಮುದಾಯಗಳನ್ನು, ಆದಿವಾಸಿಗಳನ್ನು ಬಹುಸಂಖ್ಯಾತ ಎನ್ನುವ ತತ್ವದಲ್ಲಿ appropriation ಮಾಡಿಕೊಳ್ಳುವುದು ಈ ಆರೆಸ್ಸಸ್ ನ ಬಲು ಮುಖ್ಯ ಅಜೆಂಡಾಗಳಲ್ಲೊಂದು.

2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ದೇಶದಲ್ಲಿ ನಿರಂತರವಾಗಿ ನಡೆದ ಅಭಿವ್ಯಕ್ತಿ ಸ್ವಾತಂತ್ರದ ದಮನ, ಕೋಮು ಗಲಭೆಗಳು, ಅನ್ಯ ಧರ್ಮೀಯರ ಮೇಲಿನ ಹಲ್ಲೆಗಳು, ಪಠ್ಯ ಪುಸ್ತಕಗಳ ಮತೀಯವಾದಿಕರಣ, ಇತಿಹಾಸವನ್ನು ಪುನ ರಚನೆಗಳಂತಹ ಸಂಗತಿಗಳನ್ನು ಅವಲೋಕಿಸಿದಾಗ ಸಂವಿಧಾನದ ಕಲಮು 15(1) ಅನುಸಾರ ಜಾತಿ, ಧರ್ಮ, ಬಣ್ಣ, ಲಿಂಗ ಆಧಾರದ ಮೇಲೆ ತಾರತಮ್ಯ ನೀತಿಯನ್ನು ನಿಷೇಧಿಸಲಾಗಿದೆ ಎನ್ನುವ ತತ್ವವು ಇನ್ನು ಮುಂದಿನ ದಿನಗಳಲ್ಲಿ ಅಪ್ರಸ್ತುತಗೊಳ್ಳುತ್ತದೆ.

ಇದು ಆರೆಸಸ್ ಮತ್ತು ಅದರ ಕುಟುಂಬದ ಮತೀಯವಾದದ ಶೈಲಿ. ಅಪ್ಪಟ ಫ್ಯಾಸಿಸ್ಟ್ ಶೈಲಿ.