Monthly Archives: May 2015

ಆಮ್ ಆದ್ಮಿಗೆ ನೂರು ದಿನ ತುಂಬಿತು


– ಡಾ.ಎಸ್.ಬಿ. ಜೋಗುರ


ಅನೇಕ ಬಗೆಯ ಗುದಮುರಗೆಗಳ ನಡುವೆಯೇ ಆಮ್ ಆದ್ಮಿ ಪಾರ್ಟಿ ನೂರು ದಿನಗಳನ್ನು ಪೂರ್ಣಗೊಳಿಸಿತು. ದೆಹಲಿಯ ಚುನಾವಣೆಯ ಸಂದರ್ಭದಲ್ಲಿ ನಾನು ದೆಹಲಿಯಲ್ಲಿಯೇ ಇದ್ದೆ. ಯಾರನ್ನು ಕೇಳಿದರೂ ‘ಇಸ್ ಬಾರ್ ಕೇಜ್ರಿವಾಲಾ’ ಅನ್ನುವವರು. ದೆಹಲಿಯ ಜವಾಹರಲಾಲ್ ವಿಶ್ವವಿದ್ಯಾನಿಲಯದ ಕ್ಯಾಂಪಸ್ ನ ಯುವಕರು ಕೂಡಾ ಸಮೂಹ ಸನ್ನಿಗೊಳಗಾದವರಂತೆ ಕೇಜ್ರಿವಾಲಾ ಬಗ್ಗೆ ಮಾತನಾಡುವದಿತ್ತು. ನಾನು ಹತ್ತಿಳಿದ ಹತ್ತಾರು ರಿಕ್ಷಾವಾಲಗಳನ್ನು ಹೀಗೇ ಇಲೆಕ್ಷನ್ ಬಗ್ಗೆ ಕೇಳಿದರೆ ಅವರೂ ಕೂಡಾ ಬಹುತೇಕವಾಗಿ ‘ಕೇಜ್ರಿವಾಲಾ ಹೀ ಆಯೇಗಾ’ ಎನ್ನುತ್ತಿದ್ದರು. ಫ಼ಲಿತಾಂಶ ಹೊರಬಂದ ಸಂದರ್ಭದಲ್ಲಿಯೂ ನಾನು ಅಲ್ಲಿಯೇ ಇದ್ದೆ. feb142015kejriwalಎಲ್ಲವೂ ಜನರಾಡಿಕೊಂಡಂತೆಯೇ ಆಗಿತ್ತು. ಅಪಾರ ಪ್ರಮಾಣದ ಜನಮನ್ನಣೆಯ ನಡುವೆ ಕೇಜ್ರಿವಾಲಾ ಮತ್ತೊಮ್ಮೆ ದೆಹಲಿಯ ಮುಖ್ಯ ಮಂತ್ರಿಯಾಗಿದ್ದರು. ನಂತರದ ದಿನಗಳನ್ನು ಕೂಡಾ ನಾನು ಗಮನಿಸಿದ್ದೇನೆ. ಕೇಜ್ರಿವಾಲಾ ಆಗಾಗ ಪ್ರಜಸತ್ತಾತ್ಮಕ ವ್ಯವಸ್ಥೆಯೊಳಗಣ ಸರ್ವಾಧಿಕಾರಿಯಂತೆ ಭಾಸವಾಗುವುರ ಜೊತೆಗೆ ತುಸು ಆತುರವಾದಿಯೂ ಎನಿಸುವದಿದೆ. ಪಕ್ಷದ ಗೆಲುವಿನಲ್ಲಿ ಅವನಷ್ಟೇ ಶ್ರಮ ಮತ್ತು ಪ್ರಯತ್ನವನ್ನು ಹಾಕಿದ್ದ ಯೋಗೇಂದ್ರ ಯಾದವ್ ಮತ್ತು ಪ್ರಶಾಂತ ಭೂಷಣ ಮತ್ತು ತನ್ನ ಪಕ್ಷದ ಇಅತರರೊಂದಿಗಿನ ನಡುವಳಿಕೆ ಮತ್ತು ತೀರ್ಮಾನಗಳು ದೆಹಲಿಯ ಜನತೆ ಮುಖ್ಯಮಂತ್ರಿ ಕೇಜ್ರಿವಾಲಾ ಸ್ವಭಾವದ ಬಗ್ಗೆ ಮತ್ತೊಮ್ಮೆ ಗಂಭೀರವಾಗಿ ಆಲೋಚಿಸುವಂತೆ ಮಾಡಿದವು.

ಕೇಜ್ರಿವಾಲಾ ರಾಜಕಾರಣಕ್ಕೆ ಹಾಗೇ ಸುಮ್ಮನೆ ಎಂಟ್ರಿ ಹೊಡೆದವರಲ್ಲ. ಅದರ ಹಿಂದೆ ಸಾಕಷ್ಟು ತಾಲೀಮಿದೆ. ೧೯೫೯ ರಲ್ಲಿ ತೆರೆಗೆ ಬಂದ ಪೈಗಾಮ್ ಸಿನೇಮಾದ ’ಇನ್ಸಾನ್ ಕಾ ಇನ್ಸಾನ್ ಸೆ ಹೋ ಬೈಚಾರಾ’ ಎನ್ನುವ ಹಾಡನ್ನು ಹೇಳುವ ಮೂಲಕ ಮೊದಲ ಬಾರಿ ಮುಖ್ಯಮಂತ್ರಿಯ ಹುದ್ದೆಯ ಶಪಥವನ್ನು ಸ್ವೀಕರಿಸಿರುವದಿತ್ತು. ಮುಂಚಿನಿಂದಲೂ ಭ್ರಷ್ಟಾಚಾರದ ಬಗ್ಗೆ ಚಳುವಳಿಯನ್ನು ರೂಪಿಸಿ, ಸಂಘಟನೆಯನ್ನು ಹುಟ್ಟು ಹಾಕಿ ಸದಾ ಚಟುವಟಿಕೆಯಲ್ಲಿರುತ್ತಿದ್ದ ಕೇಜ್ರಿವಾಲಾ ಖುದ್ದಾಗಿ ಗಿಡ ಹತ್ತಿ ಬ್ಯಾನರ್ ಬಿಗಿಯುವ, ಗೋಡೆಗೆ ಪೋಸ್ಟರ್ ಹಚ್ಚುತಾ ಸಾಗುವ ಕೆಲಸಗಳನ್ನು ಕೂಡಾ ಪಕ್ಷ ಕಟ್ಟುವಷ್ಟೇ ಖುಷಿಯಿಂದ ಮಾಡಿರುವದಿದೆ. ೨೦೦೬ ರಲ್ಲಿ ಮಾಹಿತಿ ಹಕ್ಕು ಕಾಯ್ದೆಯನ್ನು ಅರ್ಥವತ್ತಾಗಿ ಜಾರಿಗೊಳಿಸುವಲ್ಲಿ ಹೋರಾಟ ಮಾಡಿದ ಹಿನ್ನೆಲೆಯಲ್ಲಿ ಅವನಿಗೆ ಸುಮಾರು ೫೦ ಸಾವಿರ ಡಾಲರ್ ಮೊತ್ತದ ರಾಮನ್ ಮ್ಯಾಗ್ಸಸ್ಸೇ ಪ್ರಶಸ್ತಿ ಲಭಿಸಿತು. ಅಲ್ಲಿಂದ ಜೋರಾಗಿ ಶುರುವಾದ ಕೇಜ್ರಿವಾಲಾ ಸಂಘಟನೆ ಆ ಬಹುಮಾನದ ಮೊತ್ತವನ್ನು ಸಂಘಟನೆಯ ಕಾರ್ಯ ಚಟುವಟಿಕೆಗಾಗಿಯೇ ಬಳಸಿಕೊಂಡಿರುವದಿದೆ. ೨೦೧೦ ರ ಸಂದರ್ಭದಲ್ಲಿ ಕಾಮನವೆಲ್ತ್ ಕ್ರೀಡೆಗಳನ್ನು ಸಂಘಟಿಸುವಲ್ಲಿ ಅಪಾರ ಪ್ರಮಾಣದ ಭ್ರಷ್ಟಾಚಾರವಾಗಿದೆ ಎಂದು ಆರೋಪಿಸಿ ಹೋರಾಟ ಆರಂಭಿಸಿದ ಕೇಜ್ರಿವಾಲ್ ಸುಮಾರು ೭೦ ಸಾವಿರ ಕೋಟಿ ರೂಪಾಯಿ ಅಪರಾತಪರಾ ಆಗಿದೆ ಎನ್ನುವ ಆರೋಪದ ಮೇಲೆ ಅದಕ್ಕೆ ಕಾರಣರಾದ ಪ್ರಮುಖರ ಮೇಲೆ ಎಫ಼್.ಆಯ್.ಆರ್. ದಾಖಲಿಸುವವರೆಗೂ ಬಿಟ್ಟಿರಲಿಲ್ಲ. ಅಲ್ಲಿಂದ ಆರಂಭವಾದ ಅವರ ಭ್ರಷ್ಟಾಚಾರ ವಿರೋಧಿ ಆಂದೋಲನ ಹಾಗೇ ಮುಂದುವರೆಯಿತು. ಜನಲೋಕಪಾಲ್ ಮಸೂದೆಯನ್ನು ಮಂಡಿಸಬೇಕೆಂದು ಒತ್ತಾಯಿಸಿ ಅಣ್ಣಾ ಹಜಾರೆ ಜೊತೆಗೆ ಉಪವಾಸ ಚಳುವಳಿಯನ್ನು ಕೈಗೊಂಡ ಕೇಜ್ರಿವಾಲಾ ಒಂದು ಸರಿಯಾದ ರಾಜಕೀಯ ಅಖಾಡಾ ರೂಪಿಸಿಕೊಳ್ಳುವ ಮೂಲಕ, ನವಂಬರ್ ೨೦೧೨ ರಲ್ಲಿ ಆಮ್ ಆದ್ಮಿ ಎನ್ನುವ ಪಕ್ಷದ ಹುಟ್ಟಿಗೆ ಕಾರಣನಾಗಿ ಅದರ ಜನುಮದಾತನೆನಿಸಿಕೊಂಡ. ಪ್ರಥಮ ಬಾರಿಗೆ ಆತ ದೆಹಲಿಯ ಮುಖ್ಯಮಂತ್ರಿಯಾಗಿ arvind-kejriwalಅಧಿಕಾರ ಸ್ವೀಕರಿಸುವ ವೇಳೆ ಹಾಡಿದ ಆ ಹಾಡು ದೆಹಲಿಯ ಅನೇಕ ಮುಸ್ಲಿಂ ಸಮುದಾಯಗಳ ಹೃದಯವನ್ನು ಗೆಲ್ಲುವಲ್ಲಿ ಸಾಕಾಗಿತ್ತು. ಅವರ ಬಗೆಗಿನ ಪೂರ್ವಾಗ್ರಹಗಳ ನಡುವೆ ಹಾಗೆ ಮೂಡಿಬಂದ ಪೈಗಾಮ್ ಚಿತ್ರದ ಹಾಡು ಮುಸ್ಲಿಂ ರ ಪಾಲಿಗೆ ಒಂದು ಆಶಾಕಿರಣವಾಗಿ ತೋರಿದ್ದರಲ್ಲಿ ತಪ್ಪಿಲ್ಲ.ಸಬಾ ನಖ್ವಿ ಎನ್ನುವವರು ಬರೆದ ’ಕ್ಯಾಪಿಟಲ್ ಕಾಂಕ್ವೆಸ್ಟ್’ ಎನ್ನುವದರಲಿ ಈ ಸಂಗತಿಯನ್ನು ಪ್ರಸ್ತಾಪಿಸಿರುವದೂ ಇದೆ. ಸಬಾ ಆ ಕೃತಿಯನ್ನು ರಚಿಸುವಾಗ ದೆಹಲಿಯ ಸ್ಲಮ್ ಒಂದರಲ್ಲಿ ವಾಸವಾಗಿರುವ ಮೊಹ್ಮದ್ ಇನ್ಸಾಫ಼್ ಎನ್ನುವವರನ್ನು ಭೇಟಿಯಾಗಿ ಮಾತನಾಡಿಸಿದಾಗ ಆತ ತುಂಬಾ ಭರವಸೆಯನ್ನು ಈ ಆಮ್ ಆದ್ಮಿ ಪಕ್ಷದ ಬಗ್ಗೆ ಇಟ್ಟುಕೊಂಡದ್ದು ತಿಳಿದು ಬಂತು. ಮೊದಲ ಬಾರಿ ಕೇವಲ ೨೮ ಸ್ಥಾನಗಳನ್ನು ಪಡೆದು ಕಾಂಗ್ರೆಸ್ ಬೆಂಬಲದಿಂದ ಸರಕಾರ ರಚಿಸಿದ್ದ ಆಮ್ ಆದ್ಮಿ ಪಕ್ಷ ಆಗಲೇ ಜನತೆಯ ಮುಂದೆ ಸಾಕಷ್ಟು ಆಶ್ವಾಸನೆಗಳನ್ನು ಇಟ್ಟಿರುವದಿತ್ತು. ಮುಖ್ಯವಾಗಿ ದೆಹಲಿಯ ಜನತೆ ಅನುಭವಿಸುತ್ತಿದ್ದ ನೀರು ಮತ್ತು ವಿದ್ಯುತ್ ವಲಯಕ್ಕೆ ಸಂಬಂಧಿಸಿದವುಗಳು. ನಂತರದ ದಿನಗಳಲ್ಲಿ ಗ್ಯಾಸ್ ಹಗರಣಕ್ಕೆ ಸಂಬಂಧಿಸಿ ಕಾರ್ಪೋರೇಟ್ ವಲಯದ ದಿಗ್ಗಜರಾದ ಮುಖೇಶ ಅಂಬಾನಿ ಮತ್ತು ಆಗಿನ ಪೆಟ್ರೊಲಿಯಂ ಖಾತೆ ಸಚಿವ ವೀರಪ್ಪ ಮೋಯ್ಲಿ ಯವರ ಮೇಲೆ ಎಫ಼್.ಆಯ್.ಆರ್. ದಾಖಲಿಸಿದ್ದೇ ಕೇಜ್ರಿವಾಲಾ ಸರಕಾರ ಇಕ್ಕಟ್ಟಿಗೆ ಸಿಲುಕುವಂತಾಯಿತು. ಕೇವಲ ೪೯ ದಿನಗಳಲ್ಲಿ ಅಧಿಕಾರವನ್ನು ಬಿಟ್ಟು ತೆರಳಿದ ಕೇಜ್ರಿವಾಲಾ ನಿರ್ಧಾರ ಆಗಲೂ ತರಾತುರಿಯ ನಿರ್ಧಾರ ಎಂದು ಕೆಲ ಮಾಧ್ಯಮಗಳು ವರ್ಣಿಸಿದ್ದವು. ಕೇಜ್ರಿವಾಲಾರನ್ನು ಕೆಲವು ಮಾಧ್ಯಮಗಳು ಮುಂಗೋಪಿ ಎಂದೂ, ಅರಾಜಕತೆಯನ್ನು ಮೈಗೂಡಿಸಿಕೊಂಡವನೆಂದೂ ಟೀಕಿಸಿರುವದಿತ್ತು.ಈ ಬಗೆಯ ಟೀಕೆಗಳನ್ನು ಮೀರಿಯೂ ಕೇಜ್ರಿವಾಲಾ ದೆಹಲಿಯ ಬಡಜನರ ಸಲುವಾಗಿ ಕೊರೆಯುವ ಛಳಿಯಲ್ಲೂ ಒಬ್ಬ ಸಾಮಾನ್ಯನಂತೆ ಹೋರಾಟ ಮಾಡಿರುವದಿತ್ತು. ದೆಹಲಿಯಲ್ಲಿ ಮನೆಯಿಲ್ಲದವರಿಗಾಗಿ ಹೋರಾಟ ಮಾಡಿದ ಕೇಜ್ರಿವಾಲಾ ಮುಂದಿನ ಚುನಾವಣೆಯಲ್ಲಿ ಅಷ್ಟು ದೊಡ್ಡ ಪ್ರಮಾಣದಲ್ಲಿ ಜಯಭೇರಿ ಭಾರಿಸುವ ಭರವಸೆ ಬಹುಷ: ಕೇಜ್ರಿವಾಲಾಗೂ ಇರಲಿಕ್ಕಿಲ್ಲ.

ಎರಡನೆಯ ಬಾರಿ ದೆಹಲಿಯ ಮುಖ್ಯ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದೇ ಮಾತು ಕೊಟ್ಟಂತೆ ದರದಲ್ಲಿ ನೀರು ಮತ್ತು ವಿದ್ಯುತ್ kejriwal_aap_pti_rallyವಿಷಯದಲ್ಲಿ ಆ ಪಕ್ಷ ನಡೆದುಕೊಂಡಿದೆ ಆದರೆ ಮಾಡಬೇಕಾದ ಕೆಲಸಗಳು ಇನ್ನೂ ಬೇಕಾದಷ್ಟಿವೆ. ದೆಹಲಿಯ ಬಡ ಜನತೆ ಮಾತ್ರ ಚುನಾವಣೆಯ ಸಂದರ್ಭದಲ್ಲಿ ತಮ್ಮ ನೆತ್ತಿಗೊಂದು ಸೂರು ಕೊಡುವ ಬಗ್ಗೆ ಮಾತನಾಡಿರುವ ಕೇಜ್ರಿವಾಲಾರ ಮೇಲಿನ ನಂಬುಗೆಯನ್ನು ಇನ್ನೂ ಕಳೆದುಕೊಂಡಿಲ್ಲ. ಪಕ್ಷದೊಳಗಿನ ಆಂತರಿಕ ಕಿತ್ತಾಟ, ಅಧಿಕಾರಶಾಹಿಯ ಜೊತೆಗಿನ ಗುದ್ದಾಟಗಳನ್ನು ನೋಡಿ ಜನಸಾಮಾನ್ಯನಿಗೂ ಆಗಾಗ ಬೇಸರ ಬಂದಿರುವದಿದೆ. ಹಿಂದೆ ಹೀಗೆ ಮಾಡಿಯೇ ರಾಜೀನಾಮೆಯನ್ನು ತೆರುವ ಪ್ರಸಂಗ ತಂದುಕೊಂಡಿರುವ ಕೇಜ್ರಿವಾಲಾ ಮತ್ತೆ ದುಡುಕಿ ಅಂಥಾ ತಪ್ಪುಗಳನ್ನು ಮಾಡದೇ ದೆಹಲಿಯ ಜನತೆ ಮಿಕ್ಕೆಲ್ಲ ರಾಜಕೀಯ ಪಕ್ಷಗಳಿಗಿಂತಲೂ ಆಮ್ ಆದ್ಮಿ ಮಾತ್ರ ತಮ್ಮ ಪಾಲಿಗೆ ಒಳ್ಳೆಯದು ಎನ್ನುವಂತೆ ಭಾರಿ ಬಹುಮತದಿಂದ ಆರಿಸಿ ತಂದಿರುವದಿದೆ ಅವರ ಭರವಸೆಯನ್ನು ಉಳಿಸಿಕೊಳ್ಳುವದು ಮಾತ್ರವಲ್ಲದೇ ಭವಿಷ್ಯದಲ್ಲಿ ಯಾವುದಾದರೂ ಪ್ರಾದೇಶಿಕ ಪಕ್ಷಗಳು ಒಳ್ಳೆಯ ಧೋರಣೆಯೊಂದಿಗೆ ಮುಂದೆ ಬಂದಾಗ ಆಮ್ ಆದ್ಮಿಗೆ ಸಿಕ್ಕ ಪ್ರೋತ್ಸಾಹ ಮತ್ತು ಬೆಂಬಲ ಸಿಗುವಂತಾಗಬೇಕಾದರೆ ಅತ್ಯಂತ ಅರ್ಥಪೂರ್ಣವಾಗಿ ಅಧಿಕಾರವನ್ನು ಚಲಾಯಿಸಿ ತೋರಿಸಬೇಕಿದೆ. ದೇಶದ ಇತರೆ ರಾಜಕೀಯ ಪಕ್ಷಗಳು ಅಲ್ಲಿ ನೋಡಿ ಆಮ್ ಆದ್ಮಿ ಹೇಗೆ ಮಾಡುತ್ತಿದೆ ಎಂದು ಪೊಜಿಟಿವ್ ಕಾರಣಗಳಿಗಾಗಿ ಕೇಜ್ರಿವಾಲಾರನ್ನು ತೋರಿಸುವಂತಾಗಬೇಕು ಅಂದಾಗ ಮಾತ್ರ ಜನರ ವಿಶ್ವಾಸವನ್ನು ಉಳಿಸಿಕೊಂಡಂತಾಗುತ್ತದೆ. ಹೀಗೆ ನೂರು ದಿನಗಳಾಗುವುದು.. ಒಂದು ವರ್ಷ ತುಂಬುವುದು.. ಮುಖ್ಯವಲ್ಲ, ಮುಖ್ಯ ಏನೆಂದರೆ ಆ ಅವಧಿಯಲ್ಲಿ ಆ ಪಕ್ಷ ಮಾಡಿರುವ ಸಾಧನೆಗಳೇನು..? ಎನ್ನುವದಾಗಿರುತ್ತದೆ.

ಚಾಯ್ ಪೆ ಚರ್ಚಾ : ಸುಳ್ಳುಗಾರನ ಬಂಡವಾಳಶಾಹಿ ಆಡಳಿತದ ಒಂದು ವರ್ಷ

– ಬಿ. ಶ್ರೀಪಾದ ಭಟ್

ಪ್ರಧಾನ ಮಂತ್ರಿ ನರೇಂದ್ರ ಮೋದಿಯ ವ್ಯಕ್ತಿತ್ವವನ್ನು ಮತ್ತು ಅವರ ಸರ್ಕಾರ ಒಂದು ವರ್ಷ ತುಂಬಿದ್ದರ ಕುರಿತಾಗಿ ವಿವರಿಸುತ್ತಾ ಪತ್ರಕರ್ತ ನೀಲಂಜನ್ ಮುಖ್ಯೋಪಾಧ್ಯಾಯ್ ಅವರು “ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವದ ರಚನೆಗಳೊಂದಿಗೆ ಕಾರ್ಯ ನಿರ್ವಹಿಸಲು ಮೋದಿ ಅಸಮರ್ಥರೆಂಬುದನ್ನು ಬಿಜೆಪಿ ಸರ್ಕಾರದ ಒಂದು ವರ್ಷದ ಆಡಳಿತವು ಸಾಕ್ಷೀಕರಿಸುತ್ತದೆ. ಮೋದಿಯು ಏಕವ್ಯಕ್ತಿ ಪ್ರದರ್ಶನದ ಮಾದರಿಗೆ ಹೊಂದಿಕೊಳ್ಳುತ್ತಾರೆ. Modiಒಬ್ಬ ವ್ಯಕ್ತಿ, ಏಕ ನಿಷ್ಠೆ, ಒಂದು ಸಂಸ್ಥೆ, ಏಕ ಸದನದ ಸಂಸತ್ತು; ಹೀಗೆ ಒಂದು ರೀತಿ ಏಕಮುಖಿ ಸಂಚಾರದಂತೆ. ಅಂದರೆ ಪರಸ್ಪರ ಸಂಭಾಷಣೆಯ ರೀತಿಯದಲ್ಲ, ಬದಲಾಗಿ ಸ್ವಗತ, ಆತ್ಮಗತ ಭಾಷಣದಂತೆ, ಮತ್ತು ನಿಜ, ಕಡ್ಡಾಯವಾಗಿ ಯಾವುದೇ ಪ್ರಶ್ನೆಗಳಿರುವುದಿಲ್ಲ” ಎಂದು ಬರೆಯುತ್ತಾರೆ.

ಸಮಾಜ ಶಾಸ್ತ್ರಜ್ಞ ನಿಸ್ಸಿಮ್ ಮನ್ನತುಕ್ಕರೆನ್ ಅವರು ಬರೆಯುತ್ತಾ, “ಒಂದು ವರ್ಷದ ಹಿಂದೆ ಮೋದಿ ಪ್ರಧಾನಿ ಆದಾಗ ಮೋದಿಯು ಇಂಡಿಯಾವನ್ನು ಬದಲಿಸುತ್ತಾರ? ಮನಮೋಹನ್ ಸಿಂಗ್ ಮಾಡಲಾಗದ್ದು ಇವರು ಮಾಡುತ್ತಾರ?ಮೋದಿಯು ಇಂಡಿಯಾವನ್ನು ಸೂಪೆರ್‌ಪವರ್ ಘಟ್ಟಕ್ಕೆ ಕೊಂಡೊಯ್ಯುತ್ತಾರ? ಎನ್ನುವ ಪ್ರಶ್ನೆಗಳನ್ನು ಕೇಳಲಾಗುತ್ತಿತ್ತು. ಆದರೆ ಅತ್ಯಂತ ಮುಖ್ಯವಾದ ಮತ್ತು ಸೂಕ್ಷ್ಮವಾದ ವಿಚಾರವೇನೆಂದರೆ ಪ್ರಜಾಪ್ರಭುತ್ವದ ಆಶಯಗಳಿಗೆ ಮೇಲಿನ ಪ್ರಶ್ನೆಗಳು ಸಂಪೂರ್ಣವಾಗಿ ವಿರೋಧಾತ್ಮಕವಾಗಿವೆ. ಆದರೆ ಈ ವಿರೋಧಾತ್ಮಕ ಮನಸ್ಥಿತಿಯಿಂದ ಹೊರಬರಲು ಅಸಮರ್ಥವಾಗಿರುವುದೇ ಇಂಡಿಯಾ ರಾಜಕೀಯದ ಒಂದು ದೊಡ್ಡ ಬಿಕ್ಕಟ್ಟು. ಪ್ರಜೆಗಳ ಹಕ್ಕು ಮತ್ತು ಶಕ್ತಿಯನ್ನು ವ್ಯವಸ್ಥಿತವಾಗಿ ನಾಶಪಡಿಸುತ್ತ ಅವರನ್ನು ಪ್ರಭುತ್ವಕ್ಕೆ, ಆಡಳಿತಗಾರರಿಗೆ ಶರಣಾಗಿಸಲಾಗುತ್ತಿದೆ. ಇಲ್ಲಿ ಮೋದಿಯು ತನಗೆ ಅಧಿಕಾರವನ್ನು ತಂದುಕೊಟ್ಟ ವ್ಯವಸ್ಥೆಯಿಂದಲೇ ಬೇರ್ಪಟ್ಟ ಒಂದು ನೀರ್ಗುಳ್ಳೆಯಂತೆ. ನಾವು ನಾಯಕನನ್ನು ಈ ರೀತಿಯಾಗಿ ಉದ್ಧಾರಕನೆಂದು ಪರಿಭಾವಿಸುವುದು ಸರಿಯೆ ಎನ್ನುವ ಪ್ರಶ್ನೆಗಳನ್ನು ಮತ್ತೆ ಮತ್ತೆ ಕೇಳುತ್ತಾ ಹೋದಂತೆ ಪಾರ್ಲಿಮೆಂಟರಿ ವ್ಯವಸ್ಥೆಯನ್ನೇ ತಿರಸ್ಕರಿಸುವ ಮತ್ತು ಪ್ರಧಾನ ಮಂತ್ರಿಯು ತನ್ನ ಸಹೋದ್ಯೋಗಿಗಳಿಗಿಂತ ಮೊದಲಿಗ ಎನ್ನುವ ಧೋರಣೆಯನ್ನು ನಾವು ಎದುರಿಸಬೇಕಾಗುತ್ತದೆ. modi_bjp_conclaveಪ್ರಧಾನ ಮಂತ್ರಿಯೊಬ್ಬರನ್ನು ಶಕ್ತಿಶಾಲಿ ಸರ್ವಜ್ಞನೆಂಬುವ ತರ್ಕಕ್ಕೆ ಬಲಿಯಾಗಿಸುವ ಕೈಮೀರಿದ ಕ್ಯಾಬಿನೆಟ್ ಅನ್ನು ನಾವು ಮತ್ತೆಲ್ಲಿ ಕಾಣಲು ಸಾಧ್ಯ? ಪ್ರಧಾನ ಮಂತ್ರಿ ಮೋದಿಯ ಎದುರು ಶಾಲಾ ಮಕ್ಕಳಂತೆ ಕೈಕಟ್ಟಿ ನಿಂತುಕೊಂಡ ಅವರ ಕ್ಯಾಬಿನೆಟ್ ಮಂತ್ರಿಗಳ ಪ್ರಾರಂಭದ ದುರದೃಷ್ಟಕರ ದಿನಗಳಿಂದ ಮೊದಲುಗೊಂಡು ವಿದೇಶಾಂಗ ಸಚಿವೆಯ ಎಲ್ಲಾ ಅಧಿಕಾರ ಮತ್ತು ಜವಬ್ದಾರಿಗಳನ್ನು ಕತ್ತರಿಸಿ ಅವರ ರೆಕ್ಕೆಗಳನ್ನೇ ತುಂಡರಿಸುವ ಅತಿಕ್ರೌರ್ಯದ ಅಧಿಕಾರದ ಇಂದಿನ ದಿನಗಳವರೆಗಿನ ಒಂದು ವರ್ಷದ ಆಡಳಿತ ಇಂಡಿಯಾದ ಜಾಗತಿಕ ಶಕ್ತಿಯನ್ನು ಕೀಳುದರ್ಜೆಗೆ ಇಳಿಸಿದೆ. ಹಳೆಯ ಯುಪಿಎ ಸರ್ಕಾರದಲ್ಲಿ ಅದರ ಪ್ರಧಾನಿ ಮನಮೋಹನ್ ಸಿಂಗ್ ಮಾತ್ರ ಮೌನಿಯಾಗಿದ್ದರೆ ಇಂದಿನ ಮೋದಿ ಸರ್ಕಾರದಲ್ಲಿ ಇಡೀ ಕ್ಯಾಬಿನೆಟ್ ಮೌನಿಯಾಗಿದೆ. ಈ ಮೌನಗೊಂಡ ಕ್ಯಾಬಿನೆಟ್ ದೇಶವನ್ನು ’ಮನ್ ಕಿ ಬಾತ್’ ಎನ್ನುವ ಆತ್ಮರತಿಯ ಮೂಲಕ ಗಣರಾಜ್ಯವನ್ನು ಕಟ್ಟಬಹುದೆಂದು ಅಹಂಕಾರದಿಂದ ವರ್ತಿಸುತ್ತಿದೆ. ೧೩೦ ಕೋಟಿ ಜನರ ಭವಿಷ್ಯವನ್ನು ಕೇವಲ ಒಂದು ವ್ಯಕ್ತಿಯ ಕೈಗೆ ಕೊಡಲಾಗುವುದಿಲ್ಲ” ಎಂದು ವಿವರಿಸುತ್ತಾರೆ. ( ದ ಹಿಂದೂ,೨೨,೨೩, ೨೦೧೫)

ಪ್ರಧಾನ ಮಂತ್ರಿ ಮೋದಿಯ ಒಂದು ವರ್ಷದ ಆಡಳಿತದ ಸಾಧನೆಯೆಂದರೆ ಅದು ಸ್ವತಃ ‘ಮೋದಿಯ ಪುನಃಸೃಷ್ಟಿ, ಶೋಧನೆ ಮತ್ತು ಮಾರಾಟ’ ಎಂದು ಸೋಷಿಯಾಲಜಿಸ್ಟ್ ಶಿವ ವಿಶ್ವನಾಥನ್ ಹೇಳಿದ್ದಾರೆ.

೫೬ ಇಂಚಿನ ಎದೆಯ ಸರ್ಕಾರ್ ಅವರ ಆಡಳಿತಕ್ಕೆ ಒಂದು ವರ್ಷ ತುಂಬಿದೆಯಂತೆ. ಅರುಣ್ ಜೇಟ್ಲಿ ಮನೆಯಲ್ಲಿ ದೇಶದ ಪ್ರಮುಖ ಪತ್ರಕರ್ತರು, ಸಂಪಾದಕರ ಜೊತೆ ಏರ್ಪಡಿಸಿದ್ದ ಮಧ್ಯರಾತ್ರಿಯ ಔತಣಕೂಟದಲ್ಲಿ ೫೬ ಇಂಚಿನ ಎದೆಯ ಸರ್ಕಾರ್ ಭಾಗವಹಿಸಿದ್ದರು. modi_ambani_tata_kamathಈ ಸರ್ಕಾರ್ ಅವರ ಋಣ ತೀರಿಸಲೋ ಎಂಬಂತೆ ಇಂಡಿಯಾದ ಮಾಧ್ಯಮಗಳು ಪುಂಖಾನುಪುಂಖವಾಗಿ ಸಮೀಕ್ಷೆಗಳು, ಚರ್ಚೆಗಳನ್ನು ಮಾಡುತ್ತಿವೆ. ದೇಶದ ಪ್ರತಿಯೊಂದು ಸ್ಟುಡಿಯೋಗಳಲ್ಲಿ ಬಿಜೆಪಿ ವಕ್ತಾರರು, ಕೇಂದ್ರ ಮಂತ್ರಿಗಳ ದಂಡೇ ನೆರೆದಿರುವಂತೆ ವ್ಯವಸ್ಥಿತವಾಗಿ ಆಯೋಜಿಸಲಾಗಿದೆ. ಗೋಬೆಲ್ಸ್ ತಂತ್ರವನ್ನು ಬಳಸಿಕೊಂಡು ಸುಳ್ಳುಗಳನ್ನು ದಿನವಿಡೀ ಪ್ರಚಾರ ಮಾಡಲಾಗುತ್ತಿದೆ. ಇದಕ್ಕೆ ಮಾಧ್ಯಮಗಳೂ ತಮ್ಮ ಶಕ್ತಿ ಮೀರಿ ಶ್ರಮಿಸುತ್ತಿವೆ. ಸುಳ್ಳುಗಳ ಭಾರವನ್ನು ಹೊತ್ತುಕೊಂಡ, ಅತಿರಂಜಿತ ಅಂಕಿಅಂಶಗಳನ್ನು ಉತ್ಪಾದಿಸಿ ಮಾಧ್ಯಮಗಳಲ್ಲಿ ಪ್ರಕಟಿಸಲಾಗುತ್ತಿದೆ. ೫೬ ಇಂಚಿನ ಎದೆಯ ಸರ್ಕಾರ್ ’ಖುಷ್ ಹೋನೇ ಕೆ ಲಿಯೆ’ ಸಂಘ ಪರಿವಾರ ಮತ್ತು ಬಹುಪಾಲು ಮಾಧ್ಯಮಗಳು ಹಗಲಿರುಳು ಶ್ರಮಪಡುತ್ತಿದ್ದಾರೆ. ಈ ೫೬ ಇಂಚಿನ ಎದೆಯ ಸರ್ಕಾರ್ ಅವರ ವರ್ಣರಂಜಿತ ಫೋಟೋಗಳು, ಅಸದೃಶ್ಯವಾದ ಡ್ರೆಸ್‌ಗಳು, ಫ್ಲೆಕ್ಸ್ ಬೋರ್ಡಗಳು ಕೇವಲ ಇಂಡಿಯಾದಲ್ಲಿ ಮಾತ್ರವಲ್ಲ, ವಿಶ್ವದಾದ್ಯಾಂತ ರಾರಾಜಿಸಲಿವೆ. ಆಕಾಶ ಮತ್ತು ಭೂಮಿಯನ್ನು ಒಳಗೊಂಡಂತೆ ಎಲ್ಲವೂ ಮೋದಿಯ ಆಡಳಿತ ಫಲವಾಗಿ ಸೃಷ್ಟಿಯಾಗಿವೆ ಎನ್ನುವ ಜಾಹೀರಾತುಗಳು ದೇಶದಾದ್ಯಾಂತ ಕಂಗೊಳಿಸಲಿವೆ

ಕಳೆದ ೬೫ ವರ್ಷಗಳಿಂದ ಬೆಸೆದುಕೊಂಡಿದ್ದ ಇಂಡಿಯಾದ ಗಣರಾಜ್ಯ ಪ್ರಜಾಪ್ರಭುತ್ವ ವ್ಯವಸ್ಥೆಯ ಎಲ್ಲಾ ಎಳೆಗಳನ್ನು, ಬಂಧಗಳನ್ನು ಕಳೆದ ಒಂದು ವರ್ಷದಲ್ಲಿ ನಾಶಗೊಳಿಸಿ, ಕ್ಯಾಬಿನೆಟ್ ಅರ್ಥಾತ್ ಕೇಂದ್ರ ಮಂತ್ರಿಮಂಡಲವನ್ನೇ ಅದೃಶ್ಯಗೊಳಿಸಿ ಅಧಿಕಾರವನ್ನು ತನ್ನ ಬಳಿ ಕೇಂದ್ರೀಕರಿಸಿಕೊಂಡ ಈ ಮೋದಿ ಅವರ ಸರ್ವಾಧಿಕಾರಿಯ ವ್ಯಕ್ತಿತ್ವವನ್ನು ’ಮನ್ ಕಿ ಬಾತ್’ ಎಂದು ವೈಭವೀಕರಿಸಿ ದೇಶದೆಲ್ಲಡೆ ಹಂಚಲಾಗುತ್ತಿದೆ. ಮೊಟ್ಟ ಮೊದಲು ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ಭಾವೋದ್ರೇಕದಿಂದ ಭಾಷಣ ಮಾಡಿದ ಮೋದಿಯವರ ನಂತರದ ಒಂದು ವರ್ಷದ ಆಡಳಿತದಲ್ಲಿ ರೈತರು ಸಂಪೂರ್ಣವಾಗಿ ಕಡೆಗಣಿಸಲ್ಪಟ್ಟು ಅವರ ಭವಿಷ್ಯವನ್ನು ಮಾರಕ ಭೂ ಸ್ವಾಧೀನ ಮಸೂದೆ ೨೦೧೪ರಲ್ಲ್ಲಿ ಮಣ್ಣು ಮಾಡಲಾಗಿದೆ. ambani-modiಮೋದಿಯ ಕಾರ್ಪೋರೇಟ್ ಪರವಾದ ಆರ್ಥಿಕ ನೀತಿಗಳ ಅನುಸಾರ ಕೃಷಿ ಸಾಗುವಳಿಯೇ ಹಂತಹಂತವಾಗಿ ಕಣ್ಮರೆಯಾಗಲಿದೆ. ದೇಶದ ತೆರಿಗೆದಾರರ ಹಣವನ್ನು ಬಳಸಿಕೊಂಡು (ಕಳೆದ ೯ ತಿಂಗಳ ಪ್ರವಾಸದ ಖರ್ಚು ೩೧೭ ಕೋಟಿ) ದೂರ ಜಿಗಿತದ ಹರ್ಡಲ್ಸ್ ಓಟಗಾರನ ಹಾಗೆ ಒಂದು ವರ್ಷದಲ್ಲಿ ೧೮ ವಿದೇಶಗಳನ್ನು ಸುತ್ತಿದ ಈ ಮೋದಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಮಹಾರಾಷ್ಟ್ರ, ಪಂಜಾಬ್, ತೆಲಂಗಾಣ ರಾಜ್ಯಗಳ ಕಡೆ ಕಾಲಿಟ್ಟಿಲ್ಲ. ಉದ್ಯೋಗ ಖಾತ್ರಿ ಯೋಜನೆಯ ನರೇಗಾದಿಂದ ಮೊದಲುಗೊಂಡು ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಒಳಗೊಂಡಂತೆ ಅನೇಕ ಜನಕಲ್ಯಾಣ ಯೋಜನೆಗಳಿಗೆ (Social Welfare Schemes) ಸಂಬಂದಿಸಿದ ಅನುದಾನವನ್ನು ಕ್ರಮೇಣ ಕಡಿತಗೊಳಿಸಿರುವುದು ಮೋದಿ ಸರ್ಕಾರದ ಮತ್ತೊಂದು ಕೊಡುಗೆ. ಬಂಡವಾಳಶಾಹಿಗಳಿಗಾಗಿಯೇ ಸರ್ಕಾರವನ್ನು ಸಜ್ಜುಗೊಳಿಸಿರುವ ಮುಕ್ತ ಮಾರುಕಟ್ಟೆಯ, ನವ ಉದಾರೀಕರಣದ ವ್ಯಾಮೋಹಿಯಾದ ಮೋದಿ ಯಾವುದೇ ಮಾದರಿಯ ಸಾಮಾಜಿಕ ಕಲ್ಯಾಣ ಯೋಜನೆಗಳನ್ನು ಮಾನ್ಯ ಮಾಡುವುದಿಲ್ಲ. ಎಲ್ಲಾ ಬಡಜನರ ಪರವಾದ ಯೋಜನೆಗಳು ಮುಂದಿನ ನಾಲ್ಕು ವರ್ಷಗಳಲ್ಲಿ ಹಂತಹಂತವಾಗಿ ರದ್ದಾದರೆ ಆಶ್ಚರ್ಯವಿಲ್ಲ.

ವಿದೇಶದಿಂದ ಕಪ್ಪುಹಣವನ್ನು ಮರಳಿ ತರುವ, ತಪ್ಪಿತಸ್ಥರನ್ನು ಶಿಕ್ಷಿಸುವ ಛಾತಿ ಬೇಕೆಂದರೆ ನನ್ನಂತೆ ೫೬ ಇಂಚಿನ ಎದೆ ಬೇಕು ಎಂದು ಚುನಾವಣಾ ಭಾಷಣದಲ್ಲಿ ಹೇಳಿದ್ದ ಈ ಮೋದಿ ಕನಿಷ್ಠ ಒಂದಂಕಿಯ ಮೊತ್ತವನ್ನೂ ಭಾರತೀಯರಿಗೆ ತಂದು ತೋರಿಸದೆ, ಈ ಕಪ್ಪು ಹಣವನ್ನು ಮರಳಿ ತರುವ ಆಶಯಗಳನ್ನು “Money Laundering Bill” ನಲ್ಲಿ ಮಣ್ಣು ಮಾಡಲಾಗಿದೆ. ಸದರಿ ಮೋದಿ ಸರ್ಕಾರದ ಯಶಸ್ವೀ ಮಸೂದೆ ಎಂದೇ ಬಣ್ಣಿಸಲಾಗುವ ಕಲ್ಲಿದ್ದಲು ಮತ್ತು ಸ್ಪೆಕ್ಟ್ರಮ್ ಹರಾಜು ನೀತಿಗಳು ಮುಂದಿನ ದಿನಗಳಲ್ಲಿ ನೇರವಾಗಿಯೇ ಕಾರ್ಪೋರೇಟ್ ಕುಟುಂಬಗಳಿಗೆ Autonomous ನ ಮುಕ್ತ ಸ್ವಾತಂತ್ರವನ್ನು ತಂದುಕೊಡುತ್ತವೆ. ಒಮ್ಮೆ ಈ ಕಾರ್ಪೋರೇಟ್ ಶಕ್ತಿಗಳಿಗೆ ಯಾವುದೇ ಕಾನೂನಿನ ಕಟ್ಟುಪಾಡುಗಳಿಲ್ಲದ ಮುಕ್ತ ಸ್ವಾತಂತ್ರ ದೊರೆತರೆ ಕಲ್ಲಿದ್ದಲಿನ, ಸೇವಾ ವಲಯದ, ಸರಕುಗಳ ಬೆಲೆಗಳು ಊಹೆಗೆ ನಿಲುಕದಷ್ಟು ಏರಿಕೆಯಾಗುತ್ತವೆ. ಜನಸಾಮಾನ್ಯರ ಬದುಕು ದುರ್ಭರಗೊಳ್ಳತೊಡಗುತ್ತದೆ. ಅವರು ಅಂಚಿಗೆ ತಳ್ಳಲ್ಪಡುತ್ತಾರೆ. ಇದು ಈ ಮೋದಿಯ ಒಂದು ವರ್ಷದ ಆಡಳಿತದ ಫಲ.

ಸ್ವಾತಂತ್ರದ ನಂತರದ ಮೊದಲ ಸಂಸತ್ತಿನ ಅಧಿವೇಶನದಲ್ಲಿ (೧೯೪೯-೫೦) ಮಕ್ಕಳ ಶಿಕ್ಷಣ ಹಕ್ಕಿನ ಕುರಿತಾಗಿ ಚರ್ಚೆchild-labour ನಡೆದಾಗ ಅನೇಕ ಸಂಸದರು ಮಕ್ಕಳೆಲ್ಲಾ ಶಾಲೆಗೆ ಸೇರಿಕೊಂಡರೆ ನಮ್ಮ ಹೊಲ ಗದ್ದೆಗಳಲ್ಲಿ ಕೂಲಿ ಮಾಡುವವರು ಯಾರು ಎಂದು ಪ್ರಶ್ನಿಸಿದ್ದರು. ಅಗ ಇದನ್ನು ಬಹುಪಾಲು ಸಂಸದರು ವಿರೋಧಿಸಿ ೧೧ ವಯಸ್ಸಿನವರೆಗೂ ಶಿಕ್ಷಣವನ್ನು ಕಡ್ಡಾಯ ಮಾಡಬೇಕು ಎಂದು ಗೊತ್ತುವಳಿ ಮಂಡಿಸಿದರು. ಇದನ್ನು ಮಾರ್ಪಡಿಸಿದ ಅಂಬೇಡ್ಕರ್ ಅವರು ಮಕ್ಕಳು ಬಾಲಕಾರ್ಮಿಕರಾಗುವುದೇ ೧೧ನೇ ವಯಸ್ಸಿನ ಸಂದರ್ಭದಲ್ಲಿ. ಬದಲಿಗೆ ೧೪ನೇ ವಯಸ್ಸಿನವರೆಗೂ ಮಕ್ಕಳ ಶಿಕ್ಷಣ ಕಡ್ಡಾಯ ಮತ್ತು ಹಕ್ಕು ಎಂದು ಪ್ರತಿಪಾದಿಸಿದರು. ನಂತರ ಅದು ಅನುಮೋದನೆಗೊಂಡು ೧೪ನೇ ವಯಸ್ಸಿನವರೆಗೂ ಶಿಕ್ಷಣ ಕಡ್ಡಾಯ ಮತ್ತು ಮಕ್ಕಳ ಹಕ್ಕಾಗಿ ಪರಿಗಣಿತವಾಯಿತು. ಆದರೆ ೧೩ ಮೇ, ೨೦೧೫ ರಂದು ಪ್ರಧಾನ ಮಂತ್ರಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಬಾಲ ಕಾರ್ಮಿಕ ಪದ್ಧತಿ (ನಿಷೇಧ ಮತ್ತು ನಿಯಂತ್ರಣ) ೨೦೧೨ರ ಮಸೂದೆಗೆ ಮತ್ತಷ್ಟು ತಿದ್ದುಪಡಿಗಳನ್ನು ಅನುಮೋದಿಸಿದೆ. ಈ ಮೊದಲಿನ ಬಾಲ ಕಾರ್ಮಿಕ ಪದ್ಧತಿಗೆ ಇರುವ ನಿಷೇಧಕ್ಕೆ ತಿದ್ದುಪಡಿಗಳನ್ನು ಮಾಡಿ ಕೌಟುಂಬಿಕ ಕೆಲಸಗಳು, ಕೌಟುಂಬಿಕ ಉದ್ಯಮದಲ್ಲಿ, ಅಪಾಯಕಾರಿಯಲ್ಲದ ಹೊರಗುತ್ತಿಗೆ ಕೆಲಸಗಳಲ್ಲಿ ಬಾಲಕರನ್ನು ಕಾರ್ಮಿಕರಾಗಿ ಬಳಸಿಕೊಳ್ಳಬಹುದೆಂದು ವಿವರಿಸಿದೆ. ಇದಕ್ಕೆ ಈ ಮೋದಿ ಸಚಿವ ಸಂಪುಟ ಸಭೆ ಕೊಟ್ಟ ವಿವರಣೆ ’ಮಕ್ಕಳ ಕೌಶಲ್ಯವನ್ನು ಹೆಚ್ಚಿಸುವುದು!’ ಅಂದರೆ ಈ ಸದರಿ ಮೋದಿ ಸರ್ಕಾರಕ್ಕೆ ಮಕ್ಕಳಿಗೆ ಶಿಕ್ಷಣದ ಅವಶ್ಯಕತೆಗಿಂತಲೂ ಕೌಟುಂಬಿಕ, ಕುಶಲ ಕೆಲಸಗಳಲ್ಲಿ ಕೌಶಲ್ಯವನ್ನು ಹೆಚ್ಚಿಸುವುದು ಪ್ರಮುಖವಾಗಿದೆ. ಅಂದರೆ ಭಾರತದಂತಹ ಸಂಕೀರ್ಣ ಸಾಮಾಜಿಕ ವ್ಯವಸ್ಥೆಯಲ್ಲಿನ ಕೌಟುಂಬಿಕದ ಹಿನ್ನೆಲೆಯಲ್ಲಿ ಬಾಲಕಿಯರಿಗೆ ದಿನವಿಡೀ ಕೆಲಸಕ್ಕೆ ಕೊರತೆ ಇರುವುದಿಲ್ಲ. ಈ ಮೋದಿ ಸರ್ಕಾರದ ಮಸೂದೆ ಜಾರಿಗೊಂಡರೆ ಮುಖ್ಯವಾಗಿ ಬಾಲಕಿಯರು child-marriage-indiaಕೌಟುಂಬಿಕ ಕೆಲಸಗಳಿಗೆ ಸೀಮಿತಗೊಂಡು ಅವರ ಶಿಕ್ಷಣ ಮೊಟಕುಗೊಳ್ಳುವುದರಲ್ಲಿ ಅನುಮಾನವೇ ಇಲ್ಲ. ಇದು ಗ್ರಾಮೀಣ ಭಾಗದ ಬಾಲಕರಿಗೂ ಅನ್ವಯಿಸುತ್ತದೆ. ಇಂಡಿಯಾದಂತಹ ಸಾಮಾಜಿಕ-ಆರ್ಥಿಕ ಸಂರಚನೆಯೇ ದುರ್ಬಲವಾಗಿರುವ ದೇಶದಲ್ಲಿ ಶಾಲೆಯಿಂದ ಹೊರಗುಳಿಯುವ ಮಕ್ಕಳ ಪ್ರಮಾಣವನ್ನು ಹೆಚ್ಚಾಗುತ್ತದೆ. ಇದು ಭಾರತದ ಮಕ್ಕಳಿಗೆ ತನ್ನ ಒಂದು ವರ್ಷದ ಆಡಳಿತ ಪೂರೈಸಿದ ಮೋದಿ ಸರ್ಕಾರದ ಪ್ರತಿಗಾಮಿ ನೀತಿಯ ಕೊಡುಗೆ

ಬಹುಸಂಖ್ಯಾತರ ಪ್ರಜಾಪ್ರಭುತ್ವದಲ್ಲಿ ಬಹುಸಂಖ್ಯಾತ ತತ್ವದ (Majoritarianism) ಪರವಾದ ಗುಣಗಳನ್ನು ಗೌಣಗೊಳಿಸಿಕೊಂಡು ಬಹುತ್ವದ, ಎಲ್ಲರನ್ನೂ ಒಳಗೊಳ್ಳುವಿಕೆಯ ಸಿದ್ಧಾಂತವನ್ನು ರೂಪಿಸಬೇಕಾದ ಅಗತ್ಯವಿರುತ್ತದೆ. ಆದರೆ ಮೋದಿ ಸ್ವತಃ ಒಬ್ಬ Authoritarian ವ್ಯಕ್ತಿತ್ವದ, Majoritarianism ತತ್ವದ ಪರವಾಗಿ ಅಪಾರವಾದ ಒಲವಿರುವ, ತನ್ನನ್ನು ಹಿಂದೂ ರಾಷ್ಟ್ರೀಯವಾದಿ ಎಂದು ಬಣ್ಣಿಸಿಕೊಂಡ ಪ್ರಧಾನಿ. ಆರೆಸ್ಸಸ್‌ನ ಕೇಂದ್ರ ಕಛೇರಿಯಲ್ಲಿ ರಾಜಕೀಯ ಫಿಲಾಸಫಿಯನ್ನು ನಿರ್ಧರಿಸುವ ಅಧಿಕಾರವನ್ನು ರೂಪಿಸಲಾಗಿದೆ. ಇದಕ್ಕೆ ಮೋದಿಯವರ ಅನುಮೋದನೆ ಇದೆ. ಆರೆಸ್ಸಸ್ ಹೆಡ್ ಕ್ವಾಟ್ರಸ್‌ನಲ್ಲಿ ರಾಜಕೀಯ, ಸಾಮಾಜಿಕ ತತ್ವ ಸಿದ್ದಾಂತಗಳು ರೆಕ್ಕೆ ಪಡೆದುಕೊಳ್ಳತೊಡಗಿದರೆ ಅಲ್ಲಿಗೆ ಈ ದೇಶದ ಜನರ ಸೆಕ್ಯುಲರಿಸಂ ಮತ್ತು ಸಾಮಾಜಿಕ ನ್ಯಾಯದ ಎಲ್ಲಾ ಆಶಯಗಳು ಮುಣ್ಣುಗೂಡಿದಂತೆ. ಕಳೆದ ಒಂದು ವರ್ಷದಲ್ಲಿ ಅಲ್ಪಸಂಖ್ಯಾತರ ದನಿಯನ್ನೇ ಒತ್ತಿ ಹಿಡಿಯಲಾಗಿದೆ. ಸಂಘ ಪರಿವಾರದ ಸದಸ್ಯರು, ಮೋದಿ ಮಂತ್ರಿಮಂಡಲದ ಮಂತ್ರಿಗಳು ಅಲ್ಪಸಂಖ್ಯಾತರ ವಿರುದ್ಧ ಕಳೆದ ವರ್ಷವಿಡೀ ಪ್ರಚೋದನಾತ್ಮಕವಾಗಿ ಹೇಳಿಕೆಗಳನ್ನು ಕೊಡುತ್ತ,ಬೆದರಿಸುತ್ತಾ ಅವರಿಗೆ ’ಹಿಂದೂ’ಸ್ತಾನದ ಮಹತ್ವವನ್ನು ಪ್ರತಿ ಕ್ಷಣಕ್ಕೂ ಮನವರಿಕೆ ಮಾಡಿಕೊಡಲಾಗುತ್ತಿದೆ. ಇತ್ತೀಚಿನ ವರದಿಗಳ ಪ್ರಕಾರ ಮೋದಿ ಸರ್ಕಾರಕ್ಕೆ ಒಂದು ವರ್ಷ ತುಂಬಿದ ಸಂದರ್ಭದ ವಿಜಯೋತ್ಸವಕ್ಕಾಗಿ ಸಂಘ ಪರಿವಾರದ ಕಾರ್ಯಕರ್ತರು ದೆಹಲಿಯ ರಸ್ತೆಗಳಿಗೆ ಮುಸ್ಲಿಂ ರಾಜರು, ನಾಯಕರುಗಳ ಹೆಸರಿರುವ ಸಫ್ದರ್ ಹಶ್ಮಿ ಮಾರ್ಗ, ಫಿರೋಜ್ ಶಾ ರಸ್ತೆ, ಔರಂಗಜೇಬ್ ರಸ್ತೆ, ಅಕ್ಬರ್ ರಸ್ತೆಗಳ ನಾಮಫಲಕಗಳಿಗೆ ಕಪ್ಪು ಮಸಿಯನ್ನು ಬಳಿದಿದ್ದಾರೆ ಮತ್ತು ಇಂಡಿಯಾದಲ್ಲಿ ಇಸ್ಲಾಮೀಕರಣವನ್ನು ಸಹಿಸುವುದಿಲ್ಲ ಎನ್ನುವ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ

ಕಳೆದ ಒಂದು ವರ್ಷದಲ್ಲಿ ಗಾಂಧಿ ಹಂತಕ ನಾತುರಾಮ್ ಗೋಡ್ಸೆಯ ವೈಭವೀಕರಣ, ಕೇಂದ್ರ ಶಿಕ್ಷಣ ಇಲಾಖೆಯ ಕೇಸರೀಕರಣ, narender_modi_rssಚರ್ಚುಗಳ ಮೇಲೆ ದಾಳಿ, ಮುಸ್ಲಿಂ ಮತ್ತು ಕ್ರಿಶ್ಚಿಯನ್ನರನ್ನು ಮರಳಿ ಹಿಂದೂ ಧರ್ಮಕ್ಕೆ ಮತಾಂತರಗೊಳಿಸುವ ‘ಘರ್ ವಾಪಸಿ’ ಎನ್ನುವ ಮೂಲಭೂತವಾದಿ ಕಾರ್ಯಚಟುವಟಿಕೆಗಳು, ಲವ್ ಜಿಹಾದಿಯ ಹೆಸರಿನಲ್ಲಿ ಹಿಂದೂ ಮಹಿಳೆಯರ ಮೇಲೆ ದೌರ್ಜನ್ಯ (ಮುಸ್ಲಿಂರನ್ನು ಮದುವೆಯಾಗುತ್ತಾರೆ ಎನ್ನುವ ಕಾರಣಕ್ಕೆ) ಗಳಂತಹ ಫ್ಯಾಸಿಸ್ಟ್ ಪ್ರವೃತ್ತಿಯ ವರ್ತನೆಗಳು, ಹಲ್ಲೆಗಳಿಂದಾಗಿ ಇಂಡಿಯಾದ ಸಾರ್ವಜನಿಕ ಬದುಕಿನ ಜೀವಪರವಾದ ಎಲ್ಲಾ ಸೆಲೆಗಳು ಮತ್ತು ಬಹುಸಂಸ್ಕೃತಿಯ ಜೀವನ ಶೈಲಿ ನಾಶಗೊಂಡಿದೆ.

ಕಡೆಗೆ ಕಳೆದ ಒಂದು ವರ್ಷದ ಹಿಂದೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಸದರಿ ನರೇಂದ್ರ ಮೋದಿಯ ಚುನಾವಣಾ ಪ್ರಚಾರಕ್ಕೆ ದಾಖಲೆ ಹಣವನ್ನು ಖರ್ಚು ಮಾಡಲಾಗಿದೆ. ಇದರ ಸಂಪೂರ್ಣ ವೆಚ್ಚವನ್ನು ಇಂಡಿಯಾದ ಪ್ರಮುಖ ಕಾರ್ಪೋರೇಟ್ ಕುಟುಂಬಗಳು ವಹಿಸಿಕೊಂಡಿದ್ದವು. ಈ ಕಾರ್ಪೋರೇಟ್ ಹಣದಿಂದ ಚುನಾವಣೆಯನ್ನು ಜಯಿಸಿದ ಮೋದಿ ಇಂದು ಅದರ ಮೊತ್ತವನ್ನು ಬಡ್ಡಿ ಸಮೇತ ಪಾವತಿಸಬೇಕಾದಂತಹ ಪರಿಸ್ಥಿತಿಯಲ್ಲಿದ್ದಾರೆ. ಈ ಕಾರ್ಪೋರೇಟ್ ಕುಟುಂಬಗಳಿಗೆ ಋಣ ತೀರಿಸಲು “ಭೂಸ್ವಾಧೀನ ಮಸೂದೆ ೨೦೧೪” ನ್ನು ಹಠದಿಂದ ಸಂಸತ್ತಿನಲ್ಲಿ ಅಥವಾ ಸುಗ್ರೀವಾಜ್ಞೆಯ ಮೂಲಕ ಜಾರಿಗೊಳಿಸಲು ಮೋದಿ ಪಣತೊಟ್ಟಿದ್ದಾರೆ. ಮತ್ತೊಂದೆಡೆ ಆರೆಸ್ಸಸ್ ತನ್ನ ಹಿಂದೂ ರಾಷ್ಟ್ರೀಯತೆಯ ತತ್ವಗಳನ್ನು ಜಾರಿಗೊಳಿಸುವ ತವಕದಲ್ಲಿದೆ. ಈ ಧಾರ್ಮಿಕ ಮೂಲಭೂತವಾದ ಮತ್ತು ಕಾರ್ಪೋರೇಟ್ ಶಕ್ತಿಗಳ ದೌರ್ಜನ್ಯದ ನಡುವೆ ಇಂದು ಇಂಡಿಯಾದ ಜನ ಸಾಮಾನ್ಯರು ಧ್ವಂಸವಾಗುತ್ತಿದ್ದಾರೆ. ಇದು ಯಾವ ಬಗೆಯ “ಅಚ್ಚೇ ದಿನ್”?

ಮಕ್ಕಳನ್ನು ದುಡಿಸುವುದು ದೇಶಕ್ಕೆ ಹೆಮ್ಮೆಯೋ? ನಾಚಿಕೆಗೇಡೋ?


– ರೂಪ ಹಾಸನ


ಈ ದೇಶದ ಮಕ್ಕಳು ಅತ್ಯಂತ ದುರದೃಷ್ಟವಂತರೆಂದು ಅನಿಸತೊಡಗಿದೆ. ಮಕ್ಕಳು ಅಸಹಾಯಕರು, ಮುಗ್ಧರು ಆಗಿರುವುದರಿಂದ, ಅವರು ತಮ್ಮ ಭವಿಷ್ಯವನ್ನು ತಾವೇ ಸ್ವತಃ ರೂಪಿಸಿಕೊಳ್ಳಲು ಸಾಧ್ಯವಿಲ್ಲದ್ದರಿಂದ ಸರ್ಕಾರ, ಸಮಾಜಗಳು ಮಕ್ಕಳ ಒಳಿತು-ಕೆಡುಕುಗಳ ಕುರಿತು ಅತ್ಯಂತ ಎಚ್ಚರಿಕೆಯಿಂದ ಕಾನೂನು-ನೀತಿಗಳನ್ನು ರೂಪಿಸಬೇಕು. ಆದರೆ…. ಇತ್ತೀಚೆಗೆ ಕೇಂದ್ರ ಸಚಿವ ಸಂಪುಟ ಅನುಮೋದಿಸಿರುವ ಬಾಲ ಕಾರ್ಮಿಕ [ನಿಷೇಧ ಹಾಗೂ ನಿಯಂತ್ರಣ] ತಿದ್ದುಪಡಿ ಮಸೂದೆ ೨೦೧೨ಕ್ಕೆ ಮತ್ತಷ್ಟು ತಿದ್ದುಪಡಿ ತರುವ ಮೂಲಕ ಮಕ್ಕಳನ್ನು ಶೋಷಿಸಲು ಕೆಂಪುಹಾಸು ಹಾಸಿಕೊಟ್ಟಂತಾಗಿದೆ. ಪ್ರತಿ ಜೂನ್ ೧೨ರಂದು “ಬಾಲ ಕಾರ್ಮಿಕ ಪದ್ಧತಿ ವಿರೋಧಿ” ದಿನಾಚರಣೆ ಆಚರಿಸುತ್ತಾ ಬರಲಾಗಿದೆ. ಮಸೂದೆಯ ತಿದ್ದುಪಡಿ ಈ ದಿನಾಚರಣೆಗಾಗಿ ಸರ್ಕಾರ ಮುಂಗಡವಾಗಿ ಕೊಟ್ಟ ಉಡುಗೊರೆಯೇchild-labour ಎಂದು ಪ್ರಶ್ನಿಸಿಕೊಳ್ಳುವಂತಾಗಿದೆ.

ಈಗಾಗಲೇ ಭಾರತ ವಿಶ್ವದಲ್ಲಿಯೇ ಅತಿ ಹೆಚ್ಚು ಬಾಲಕಾರ್ಮಿಕರನ್ನು ಹೊಂದಿರುವ ದೇಶವೆಂಬ ಕುಖ್ಯಾತಿಗೊಳಗಾಗಿದೆ. ರಾಷ್ಟ್ರೀಯ ಮಕ್ಕಳ ಹಕ್ಕು ಆಯೋಗದ ಪ್ರಕಾರ ದೇಶದಲ್ಲಿ sಸದ್ಯ ಒಟ್ಟು ೮.೨೨ ದಶಲಕ್ಷ ಬಾಲಕಾರ್ಮಿಕರಿದ್ದಾರೆ. ಇದರಿಂದ ಹೊರಬರಲು ಬಾಲಕಾರ್ಮಿಕ ಕಾಯ್ದೆಯನ್ನು ಮತ್ತಷ್ಟು ಕಠಿಣಗೊಳಿಸಬೇಕು ಮತ್ತು ಅನುಷ್ಠಾನದ ಕ್ರಮಗಳನ್ನು ತೀವ್ರಗೊಳಿಸಬೇಕಲ್ಲವೇ? ಅದು ಬಿಟ್ಟು ೧೪ವರ್ಷದೊಳಗಿನ ಮಕ್ಕಳು ಶಾಲೆ ಬಿಟ್ಟ ನಂತರ ಮತ್ತು ರಜೆಯಲ್ಲಿ ಶ್ರಮದಾಯಕವಲ್ಲದ, ಕಠಿಣವಲ್ಲದ ‘ಕೆಲವು’ ಕೆಲಸಗಳಲ್ಲಿ ತೊಡಗಿಕೊಳ್ಳಬಹುದು ಎಂಬ ತಿದ್ದುಪಡಿಯೇ ಮಕ್ಕಳ ಆರೋಗ್ಯಕರ ಬದುಕಿನ ಹಿತದೃಷ್ಟಿಯಿಂದ ಅಮಾನವೀಯವಾದುದಾಗಿದೆ.

ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆ ೧೯೮೯ರಲ್ಲಿ ಅಂಗೀಕಾರವಾಯ್ತು. ಅದಕ್ಕೀಗ ೨೫ ವರ್ಷ! ಅದರಂತೆ ಪ್ರತಿ ಮಗುವಿಗೆ ಅತ್ಯುತ್ತಮ ಗುಣಮಟ್ಟದ ಪೌಷ್ಟಿಕತೆ, ಆರೋಗ್ಯ, ಉತ್ತಮ ಜೀವನ ಶೈಲಿ, ಶಿಕ್ಷಣ, ಆರೈಕೆ ಒದಗಿಸುವುದು, ಎಲ್ಲಾ ರೀತಿಯ ಶೋಷಣೆ, ದುರ್ಬಳಕೆ, ಅಪಮಾನಕಾರಿಯಾಗಿ ನಡೆಸಿಕೊಳ್ಳುವುದರಿಂದ ಮತ್ತು ಲೈಂಗಿಕ ದೌರ್ಜನ್ಯದಿಂದ ರಕ್ಷಣೆಗಳ ಹಕ್ಕು ನೀಡುವುದು ಪ್ರತಿ ಸರ್ಕಾರ ಮತ್ತು ಸಮಾಜದ ಕರ್ತವ್ಯವಾಗಿದೆ. ಇದರೊಂದಿಗೆ ಮಕ್ಕಳಿಗೆ ಅವಶ್ಯಕ ವಿಶ್ರಾಂತಿ, ಬಿಡುವು, ಮನರಂಜನೆ ಮತ್ತು ಸಾಂಸ್ಕೃತಿಕ ಚಟುವಟಿಕೆಯಲ್ಲಿ ಭಾಗವಹಿಸುವ ಹಕ್ಕೂ ಇರಬೇಕೆಂದು ಅಂಗೀಕಾರವಾಗಿದೆ. ಹೀಗಿರುವಾಗ ಮಕ್ಕಳು ತಮ್ಮ ಬಿಡುವಿನ ವೇಳೆಯಲ್ಲಿ ದುಡಿಯುವಂತೆ ಮಾಡುವುದು ಮಕ್ಕಳ ಹಕ್ಕಿನ ಉಲ್ಲಂಘನೆಯಲ್ಲವೇ? ಮಕ್ಕಳಿಗೆ ಅವರ ಹಕ್ಕನ್ನೂ ಸಮರ್ಪಕವಾಗಿ ನೀಡದೇ ಈಗ ಮಸೂದೆಗೆ ತಿದ್ದುಪಡಿ ಮಾಡುವ ಮೂಲಕ ಕೇಂದ್ರ ಸರ್ಕಾರ ಬಡ ಮಕ್ಕಳ ಬದುಕನ್ನು ಇನ್ನಷ್ಟು ಶೋಚನೀಯಗೊಳಿಸುತ್ತಿರುವುದು ದುರಂತ.

ಕೆಲಸ ಮಾಡಲು ಭಾರತದಲ್ಲಿ ಹೆಚ್ಚಿನ ಜನಸಂಖ್ಯೆ ಇದ್ದಾಗ್ಯೂ ಮಕ್ಕಳನ್ನೇ ದುಡಿಮೆಗೆ ಬಳಸಿಕೊಳ್ಳುತ್ತಿರುವುದರ ಹಿಂದೆ ಅನೇಕ ಹುನ್ನಾರಗಳು ಕೆಲಸ ಮಾಡುತ್ತವೆ. ಮಕ್ಕಳಿಂದ ಅತ್ಯಂತ ಕಡಿಮೆ ಕೂಲಿಗೆ ಹೆಚ್ಚು ಕೆಲಸ ಪಡೆಯಬಹುದು. ಅವರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೆ. ಮಕ್ಕಳು ಅಸಹಾಯಕರು ಮತ್ತು ಮುಗ್ಧರು ಆಗಿರುವುದರಿಂದ ಪ್ರಶ್ನಿಸುವುದಿಲ್ಲ, ಸಂಘಟಿತರಾಗುವುದಿಲ್ಲ, ಹಕ್ಕುಗಳ ಉಲ್ಲಂಘನೆಯನ್ನು ವಿರೋಧಿಸುವುದಿಲ್ಲ, ಮುಷ್ಕರ ಹೂಡುವುದಿಲ್ಲ, ತಕರಾರು, ಚೌಕಾಶಿ ಮಾಡುವುದಿಲ್ಲ ಹೀಗಾಗಿ ಮಕ್ಕಳಿಂದ ದುಡಿಸಿಕೊಳ್ಳುವುದು ಉದ್ದಿಮೆದಾರರಿಗೆ ಎಲ್ಲ ರೀತಿಯಲ್ಲೂ ಲಾಭದಾಯಕ. ಎಲ್ಲಕ್ಕಿಂಥಾ ಕ್ರೌರ್ಯವೆಂದರೆ ಮಕ್ಕಳನ್ನು ವೇಶ್ಯಾವಾಟಿಕೆಗಾಗಿ ದುಡಿಸಿಕೊಳ್ಳುವುದು. ಮಕ್ಕಳು ಮಾರಕ ಲೈಂಗಿಕ ರೋಗರಹಿತರು ಮತ್ತು ಸುಲಭವಾಗಿ ಈ ದಂಧೆಗೆ ಪಳಗಿಸಬಹುದೆಂಬ ಕಾರಣಕ್ಕೇ ಹೆಚ್ಚಿನ ಪ್ರಮಾಣದಲ್ಲಿ ಇಲ್ಲಿ ಮತ್ತು ಸಮಾಜಘಾತುಕ ಕೆಲಸಗಳಲ್ಲಿ ಬಳಸಿಕೊಳ್ಳಲಾಗುತ್ತಿರುವುದುchildlabours ಮಕ್ಕಳ ಪಾಲಿನ ದುರದೃಷ್ಟವಲ್ಲದೇ ಬೇರಿನ್ನೇನು?

ಮಾರುಕಟ್ಟೆ ಕೇಂದ್ರಿತ ಜಾಗತೀಕರಣ ಇಂದು ಹೆಚ್ಚು ಕೆಲಸಗಳನ್ನು ಸೃಷ್ಟಿಸುತ್ತಿದೆ. ಅದಕ್ಕೆ ಕಡಿಮೆ ವೇತನಕ್ಕೆ ಹೆಚ್ಚು ಕೆಲಸ ಮಾಡುವ ಮಕ್ಕಳು ವರದಾನವಾಗಿ ಕಾಣುತ್ತಿದ್ದಾರೆ. ಮಾಲ್‌ಗಳಲ್ಲಿ, ಡಾಬಾ-ಹೋಟೆಲ್‌ಗಳಲ್ಲಿ, ಸಿದ್ಧ ಆಹಾರ ಪ್ಯಾಕಿಂಗ್ ಕೆಲಸಗಳಲ್ಲಿ, ಅಂಗಡಿಗಳಲ್ಲಿ ಇವರಿಗೆ ಬೇಡಿಕೆ ಹೆಚ್ಚುತ್ತಿದೆ. ಮನರಂಜನಾ ಕ್ಷೇತ್ರ ದೇಶದ ಪ್ರಮುಖ ಆದಾಯ ಸೃಷ್ಟಿಸುವ ಘಟಕವಾಗಿರುವುದರಿಂದ ಅಲ್ಲಿಯೂ ಸರಕಾಗಿ ಮಕ್ಕಳನ್ನು ಬಳಸಿಕೊಳ್ಳುವ ಉದ್ದೇಶವೂ ಈ ತಿದ್ದುಪಡಿಗಿದೆ. ಚೈನಾ ದೇಶದ ಮಾದರಿಯೂ ಕೇಂದ್ರ ಸರ್ಕಾರಕ್ಕೆ ಪ್ರಭಾವ ಬೀರಿರಬಹುದು. ಅಲ್ಲಿ “ಎಜುಕೇಷನಲ್ ಲೇಬರ್” ಎಂಬ ನೀತಿ ಜಾರಿಯಲ್ಲಿದೆ. ಶಾಲೆಯಲ್ಲಿ ಪಾರಂಪರಿಕ ವೃತ್ತಿ ಮತ್ತು ಕೃಷಿ ಚಟುವಟಿಕೆಯ ಶಾಲಾ ಅವಧಿಗಳಿರುತ್ತವೆ. ಆದರೆ ಈ ಮೂಲಕ ಅಲ್ಲಿ ಶಾಲೆಗಳು ಮಕ್ಕಳನ್ನು ಹೆಚ್ಚಿನ ರೀತಿಯಲ್ಲಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದು, ಮಕ್ಕಳನ್ನು ಮಾಲ್‌ಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳುತ್ತಿರುವುದು ಮತ್ತು ಕ್ರೀಡೆಯ ಹೆಸರಿನಲ್ಲಿ ಅಲ್ಲಿ ಮಕ್ಕಳಿಗೆ ವಿಪರೀತದ ಒತ್ತಡಗಳನ್ನು ಹೇರುತ್ತಿರುವುದೂ ದಾಖಲಾಗಿದೆ. ಕಡಿಮೆ ಆದಾಯದ ಬಡ ಕುಟುಂಬಗಳು ಮಾತ್ರ ಮಕ್ಕಳನ್ನು ದುಡಿಯಲು ಕಳಿಸುತ್ತವೆ ಎಂಬುದು ನಮಗೆ ನೆನಪಿರಬೇಕು. ಈ ರಿಯಾಯಿತಿಯನ್ನು ನೀಡುವ ಮೂಲಕ ಬಡ ಕುಟುಂಬಗಳಿಗೆ ಹೆಚ್ಚಿನ ದುಡಿಮೆಗೆ ಅವಕಾಶ ಕಲ್ಪಿಸುವ ನೆವದಲ್ಲಿ ಆ ಕುಟುಂಬಗಳ ಮಕ್ಕಳನ್ನು ಶಾಶ್ವತವಾಗಿ ಶ್ರಮದ ಕೆಲಸ ಮಾಡುವ ಜೀತದಾಳುಗಳಾಗಿ ಪರಿವರ್ತಿಸುವ ಹುನ್ನಾರವಷ್ಟೇ ಕಾಣುತ್ತಿದೆ. ಅದಕ್ಕೆಂದೇ ದಿಢೀರನೆ ಮಸೂದೆಯಲ್ಲಿ ತಿದ್ದುಪಡಿಗೆ ಸರ್ಕಾರ ಮುಂದಾಗಿದೆಯೇ ಎಂಬ ಅನುಮಾನ ಕಾಡುತ್ತಿದೆ.

ಮಕ್ಕಳ ಕೆಲಸಕ್ಕೂ, ಶಾಲೆಯಿಂದ ಮಕ್ಕಳು ಹೊರಗುಳಿಯುವ ಪ್ರಮಾಣದ ಹೆಚ್ಚಳಕ್ಕೂ ಅವಿನಾಭಾವ ಸಂಬಂಧವಿದೆ. ಶಿಕ್ಷಣ ಹಕ್ಕು ಕಾಯ್ದೆ ೨೦೦೯ರನ್ವಯ ೬-೧೪ವರ್ಷದವರೆಗಿನ ಮಕ್ಕಳಿಗೆ ಶಿಕ್ಷಣ ಕಡ್ಡಾಯ. ಆದರೆ ರಾಷ್ಟ್ರೀಯ ಮಾದರಿ ಸಮೀಕ್ಷೆ ೨೦೧೪ರ ವರದಿಯಂತೆ children-of-Indiaರಾಜ್ಯದ ಗ್ರಾಮೀಣ ಭಾಗದಲ್ಲಿ ೫-೧೪ವರ್ಷದೊಳಗಿನ ಪ್ರತಿ ೧೦೦೦ ಮಕ್ಕಳಿಗೆ ೩೦ ಮಕ್ಕಳು ಹಾಗೂ ನಗರಪ್ರದೇಶದಲ್ಲಿ ೧೦೦೦ಕ್ಕೆ ೬ ಮಕ್ಕಳು ಬಾಲಕಾರ್ಮಿಕರಾಗುತ್ತಿದ್ದಾರೆ. ಇದು ದೇಶಕ್ಕೆ ಹೆಮ್ಮೆಯ ಸಂಗತಿಯೋ? ನಾಚಿಕೆಗೇಡಿನದೋ? ಸರ್ಕಾರ ಆತ್ಮಾವಲೋಕನ ಮಾಡಿಕೊಳ್ಳಲಿ. ಮಕ್ಕಳ ದೇಹ ಭರಿಸುವುದಕ್ಕಿಂತಾ ಹೆಚ್ಚಿನ ಶ್ರಮ, ದುಡಿಮೆಯನ್ನು ಅವರ ಮೇಲೆ ಹೇರುವ ಮೂಲಕ ಅವರ ದೇಹ ಮತ್ತು ಬುದ್ಧಿಯ ಮೇಲೆ ಒತ್ತಡ ಹೇರಿದಂತಾಗಿ ಶಾಶ್ವತ ಮಾನಸಿಕ ಕ್ಷೆಭೆಗೆ ಅವರು ಒಳಗಾಗುತ್ತಾರೆ. ದುಡಿಯುವ ಮಕ್ಕಳು ತಮ್ಮ ಅಮೂಲ್ಯ ಬಾಲ್ಯ ಕಳೆದುಕೊಳ್ಳುವುದರೊಂದಿಗೆ, ಅನಾರೋಗ್ಯಕ್ಕೆ ಒಳಗಾಗುವುದು, ಪಠ್ಯದ ಕಡೆಗೆ ಗಮನಹರಿಸಲಾಗದಿರುವುದು, ಕ್ರಮೇಣ ಕೆಲಸದ ಸಮಯ ಮತ್ತು ಒತ್ತಡ ಹೆಚ್ಚಾಗಿ ಶಾಲೆ ಬಿಡುವ ಪ್ರಮಾಣ ಮತ್ತಷ್ಟು ಹೆಚ್ಚಾಗುತ್ತದೆ. ಬಾಲ್ಯಾವಸ್ಥೆಯ ಪ್ರತಿಯೊಂದು ಕೊರತೆ ಮಕ್ಕಳ ವ್ಯಕ್ತಿತ್ವವನ್ನು ಮುಕ್ಕಾಗಿಸುತ್ತದೆ ಎನ್ನುತ್ತಾರೆ ಮನೋವೈದ್ಯರು. ಬಡ ಪೋಷಕರೇ ಮಕ್ಕಳು ಶಾಲೆ ಬಿಟ್ಟು ದುಡಿಯುವುದನ್ನು ಪ್ರೋತ್ಸಾಹಿಸುತ್ತಿದ್ದಾರೆ. ಅವರಿಗೆ ಯಾವ ಶಿಕ್ಷೆಯ ಭಯವೂ ಇಲ್ಲವೆಂದಾದರೆ ಈ ದೇಶದಲ್ಲಿ ಮಕ್ಕಳನ್ನು ಇನ್ನು ದೇವರೇ ಕಾಪಾಡಬೇಕು!

ಭಾರತದಂತಹಾ ಸಂಕೀರ್ಣ ಆರ್ಥಿಕ -ಸಾಮಾಜಿಕ ಪರಿಸ್ಥಿತಿ ಇರುವ ದೇಶದಲ್ಲಿ ಕೃಷಿ, ಸೂಕ್ಷ್ಮ ಗುಡಿಕೈಗಾರಿಕೆ ಇತ್ಯಾದಿ ಕೆಲಸಗಳನ್ನು ಬಾಲ್ಯದಿಂದಲೇ ಕಲಿಯುವುದು ಅನಿವಾರ್ಯವೆಂಬ ಸಬೂಬನ್ನು ಸರ್ಕಾರ ಹೇಳುತ್ತಿದೆ. ಆದರೆ ಇಂತಹಾ ಕೆಲಸಗಳಲ್ಲಿ ತೊಡಗಿಕೊಳ್ಳುವುದು ಕೆಳವರ್ಗಗಳ ಮಕ್ಕಳೇ ಎಂಬುದು ಗಮನಾರ್ಹವಾದುದು. ಈ ನೆವದಲ್ಲಿ ಶಿಕ್ಷಣದ ಕಡೆಗೆ ಅವರಿಗೆ ಸರಿಯಾಗಿ ಗಮನಹರಿಸಲಾಗದೇ ಪರಂಪರಾಗತ ವೃತ್ತಿಯಲ್ಲೇ ತಮ್ಮ government_schoolಬದುಕು ಕಂಡು ಕೊಳ್ಳಲು ಹೆಣಗುತ್ತಾರೆ. ಇಂತಹಾ ಮತ್ತು ಬಿಳಿಕಾಲರಿನ ವೃತ್ತಿಯ ಮಧ್ಯೆ ಇರುವ ಆದಾಯದ ಅಗಾಧ ಕಂದರದಿಂದಾಗಿ ಬಡವರು ಬಡವರಾಗಿಯೇ ಉಳಿಯಬೇಕಾದ ಪರಿಸ್ಥಿತಿ ಈಗಾಗಲೇ ನಿರ್ಮಾಣವಾಗಿದೆ. ವೃತ್ತಿ ನೈಪುಣ್ಯತೆ ಕಲಿಸುವ ನೆವದಲ್ಲಿ ಬಾಲ ದುಡಿಮೆಯನ್ನು ಪ್ರೋತ್ಸಾಹಿಸುವ ಸರ್ಕಾರದ ಈ ನೀತಿ, ಸನಾತನ ಸಂಸ್ಕೃತಿಯ ಪರವಾದ ಸರ್ಕಾರದ ಕುಸಂಸ್ಕೃತಿಯ ದ್ಯೋತಕವಷ್ಟೇ ಆಗಿದೆ.

ಅನಕ್ಷರತೆ, ಬಡತನ, ದುಶ್ಚಟಗಳು, ಜಾತಿ-ವರ್ಗ ತಾರತಮ್ಯ, ಗ್ರಾಮಗಳಲ್ಲಿ ಕೆಲಸವಿಲ್ಲದೇ ಪೋಷಕರ ವಲಸೆ ಬಾಲಕಾರ್ಮಿಕತೆಗೆ ಪ್ರಮುಖ ಕಾರಣವಾಗಿದೆ. ಹೀಗಾಗಿ ರೋಗ ಲಕ್ಷಣಕ್ಕೆ ಮದ್ದು ನೀಡುವುದಕ್ಕಿಂತಾ ಈ ಮೂಲ ರೋಗಕ್ಕೆ ಮದ್ದು ನೀಡಬೇಕು. ಈ ಸಮಸ್ಯೆಗಳಿಂದ ಬಡ ಜನರನ್ನು ಬಿಡಿಸಲು ಆಡಳಿತ ಯಂತ್ರ ಒಗ್ಗೂಡಿ ಶ್ರಮಿಸಬೇಕು. ಜೊತೆಗೆ ಪ್ರತಿ ಮಗುವಿಗೂ ಕಡ್ಡಾಯ ಶಿಕ್ಷಣ ಜಾರಿಗೊಳಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಮೊದಲಿಗೆ ಮಗು ಕೇಂದ್ರಿತ ಚಿಂತನೆಯಿಂದ ದೇಶದ ಅಭಿವೃದ್ಧಿ ಮಾನದಂಡಗಳನ್ನೂ ಕಾನೂನನ್ನೂ ನೀತಿಗಳನ್ನೂ ನಮ್ಮ ಸರ್ಕಾರಗಳು ಪುನರ್ ರೂಪಿಸಿಕೊಳ್ಳಬೇಕು. ಸಮಾಜ ತನ್ನ ಅವಶ್ಯಕತೆಗೆ ಬಾಲ ದುಡಿಮೆಯನ್ನು ಮುಂದುವರೆಸದಂತೆ ಜಾಗೃತಿ ಮತ್ತು ಕಟ್ಟುನಿಟ್ಟಿನ ಕಾನೂನು ಅನುಷ್ಠಾನವಾಗಬೇಕಿದೆ. ಕನಿಷ್ಠ ೧೪ ವರ್ಷದವರೆಗಾದರೂ ಮಕ್ಕಳು ತಮ್ಮ ಬಾಲ್ಯವನ್ನು ಮುಕ್ತವಾಗಿ ಅನುಭವಿಸಲು ಬಿಡದಂತಹಾ ಯಾವುದೇ ಕಾನೂನು ಮತ್ತು ಸಾಮಾಜಿಕ ವ್ಯವಸ್ಥೆ ಅಮಾನವೀಯವಾದಂತದ್ದು.

ನನ್ನ ನೆನಪಿನಲ್ಲಿ ನೀನು ಕಣ್ಣೀರು ಹಾಕಬೇಡ, ಮನಸ್ಸು ನೋಯಿಸಿಕೊಳ್ಳಬೇಡ

– ಬಿ. ಶ್ರೀಪಾದ ಭಟ್

ಆತ ಲಖ್ನೋ ಬಾಯ್. ಹೆಸರು ತಲಾತ್ ಮಹಮೂದ್. ತನ್ನ ೧೬ನೇ ವಯಸ್ಸಿನಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಪರಿಣಿತಿ ಸಾಧಿಸಿದ್ಧ ಈ ಲಖ್ನೋ ಬಾಯ್ ಗಝಲ್ ಹಾಡುವುದರಲ್ಲಿ ಜನಪ್ರಿಯನಾಗಿದ್ದ. ಆತನ ೧೭ನೇ ವಯಸ್ಸಿನಲ್ಲಿಯೇ ಎಚ್‌ಎಂವಿ ಮೂಲಕ ಗಝಲ್ talat_mahmoodಹಾಡುಗಳ ಡಿಸ್ಕ್ ಬಿಡುಗಡೆಯಾಗಿತ್ತು. ಆ ೪೦ರ ದಶಕದ ಪ್ರಖ್ಯಾತ ಗಝಲ್ ಹಾಡುಗಾರ ಉಸ್ತಾದ್ ಬರ್ಖಾತ್ ಅಲಿ ಖಾನ್ ನೊಂದಿಗೆ ಈ ಲಖ್ನೋ ಬಾಯ್ “ತಲಾತ್ ಮಹಮೂದ್”ನ ಹಾಡುಗಳನ್ನು ಗುನುಗುನಿಸುತ್ತಿದ್ದರು. ೪೦ರ ದಶಕದ ಮಧ್ಯ ಭಾಗದಲ್ಲಿ ಬಾಂಬೆಗೆ ಬಂದ ತಲಾತ್‌ಗೆ ಆಗಿನ ಹಿಂದಿ ಸಿನಿಮಾದ ಸಂಗೀತ ನಿರ್ದೇಶಕರು ತೀರಾ ತೆಳುವಾದ ಧ್ವನಿ, ಹಾಡುವಾಗ ಕಂಪಿಸುತ್ತದೆ ಎಂದು ಮೂದಲಿಸಿ ಅವಕಾಶಗಳನ್ನು ನಿರಾಕರಿಸಿದ್ದರು. ಕಡೆಗೆ ೧೯೪೯ರಲ್ಲಿ ಅನಿಲ್ ಬಿಶ್ವಾಸ್ ಸಂಗೀತ ನಿರ್ದೇಶನದ, ದಿಲೀಪ್ ಕುಮಾರ್ ಅಭಿನಯದ ’ಆರ್ಜೂ’ ಸಿನಿಮಾಗೆ ’ಐ ದಿಲ್ ಮುಜೆ ಐಸೆ ಜಗಾ ಲೇ ಚಲ್’ ಎನ್ನುವ ಹಾಡನ್ನು ಹಾಡುವ ಅವಕಾಶ ದೊರಕಿತು. ಮುಂದೆ ಸುಮಾರು ಮೂರು ದಶಕಗಳ ಕಾಲ ಹಾಡಿದ ತಲಾತ್ ಮಹಮೂದ್ ತುಂಬಾ ಸರಳ ಮತ್ತು ಸಹಜ ಗಾಯಕರಾಗಿದ್ದರು. ಇವರ ಧ್ವನಿ ಮತ್ತು ಮೃದು ವ್ಯಕ್ತಿತ್ವ ಶಾಸ್ತ್ರೀಯ ಸಂಗೀತಕ್ಕೆ ಸರಿ ಎಂದು ಟೀಕಿಸುವವರಿಗೆ ಅತ್ಯುತ್ತಮ ಹಿಂದಿ ಹಾಡುಗಳನ್ನು ಹಾಡಿ ಬಾಯಿ ಮುಚ್ಚಿಸಿದ್ದರು. ತಲಾತ್ ಮಹಮೂದ್ ಅವರು ಪದಗಳನ್ನು ಬಳಸಿಕೊಳ್ಳುವ ಶೈಲಿ, ಸ್ವರ ಪ್ರಯೋಗದ ಶೈಲಿ, ಧ್ವನಿಯ ಏರಿಳಿದ ಶೈಲಿ ೪೦, ೫೦ ರ ದಶಕದ ಹಿಂದಿ ಹಾಡುಗಳಿಗೆ ನಾವೀನ್ಯತೆಯನ್ನು ತಂದು ಕೊಟ್ಟವು.

೫೦ರ ದಶಕದ ಆರಂಭದಲ್ಲಿ ಬಿಡುಗಡೆಯಾದ ದಿಲೀಪ್ ಕುಮಾರ್ ಅಭಿನಯದ ’ದಾಗ್’ ಸಿನಿಮಾಗೆ ’ಐ ಮೇರಿ ದಿಲ್ ಕಹೀ ಔರ್ ಚಲ್, ಗಮ್ ದುನಿಯಾ ಸೆ ದಿಲ್ ಭರ್ ಗಯಾ’ ಎನ್ನುವ ಹಾಡನ್ನು ಭೈರವಿ ರಾಗದಲ್ಲಿ ಹಾಡಿದರೆ, ಅದೇ ಸಮಯದಲ್ಲಿ ದೇವ್ ಆನಂದ್ ಅಭಿನಯದ ’ಟಾಕ್ಸಿ ಡ್ರೈವರ್’ ಸಿನಿಮಾಗೆ ಹಾಡಿದ ’ಜಾಯೆತೊ ಜಾಯೆ ಕಹಾ, ಸಮ್ಜೇಗಾ ಕೌನ್ ಯಹಾ’ ಎನ್ನುವ ಹಾಡನ್ನು ಜಾನ್‌ಪುರಿ ರಾಗದಲ್ಲಿ ಹಾಡಿದ್ದರು. dilip-kumar-and-dev-anandಆದರೆ ಎರಡೂ ಹಾಡುಗಳನ್ನು ತಲಾತ್ ಮಹಮೂದ್ ಎಷ್ಟು ಆಳದಲ್ಲಿ ಮತ್ತು ಮಾಧುರ್‍ಯದಲ್ಲಿ ಹಾಡಿದರೆಂದರೆ ಎರಡೂ ಹಾಡುಗಳು ವಿಭಿನ್ನ ನಾಯಕರ ಉದಾಸ, ಆಲಸ್ಯದ ಮನಸ್ಥಿತಿಯನ್ನು ಒಂದೇ ಸ್ತರದಲ್ಲಿ ಕೇಳುಗರಿಗೆ ತಲುಪಿಸುತ್ತಿದ್ದವು. ದಿಲೀಪ್ ಕುಮಾರ್ ಮತ್ತು ದೇವ್ ಆನಂದ್ ಸಮಾನ ದುಖಿಗಳಾಗಿಯೇ ನಮಗೆ ಕಂಡು ಬರುತ್ತಿದ್ದರು. ತಲಾತ್‌ರ ಪ್ರತಿಭೆ ಮತ್ತು ಪರಿಪೂರ್ಣತೆ ಇದನ್ನು ಸಾಧ್ಯವಾಗಿಸಿತ್ತು. ೧೯೫೩ರಲ್ಲಿ ಬಿಡುಗಡೆಗೊಂಡ ’ಫುಟ್‌ಪಾತ್’ ಸಿನಿಮಾಗೆ ದಿಲೀಪ್ ಕುಮಾರ್ ಅಭಿನಯದ ಖಯ್ಯಾಮ್ ಸಂಗೀತ ನೀಡಿದ ’ಶಾಮ್ ಎ ಗಮ್ ಕಿ ಕಸಮ್, ಆಜ್ ಗಮ್‌ಗೀ ಹೈ ಹಮ್’ ಎನ್ನುವ ಹಾಡನ್ನು ತಲಾತ್ ಮಹಮೂದ್ ತಮ್ಮೊಳಗಿನ ಜೀವವನ್ನೇ ಬಳಸಿ ಹಾಡಿದ್ದರು. ಅದಕ್ಕೆ ದಿಲೀಪ್ ಕುಮಾರ್ ಅಭಿನಯವೂ ಸಹ ಅಷ್ಟೇ ಸರಿಸಾಟಿಯಾಗಿತ್ತು. ಇಂದಿಗೂ ಆ ಹಾಡು ಅತ್ಯುತ್ತಮ ಹಿಂದಿ ಸಿನಿಮಾ ಗಝಲ್‌ಗಳಲ್ಲಿ ಒಂದು. ಇಂದಿಗೂ ಶಾಮ್ ಎ ಗಮ್ ಕಿ ಕಸಮ್ ಹಾಡು, ತಲಾತ್ ದ್ವನಿ ನಮ್ಮನ್ನು ಕಾಡುತ್ತದೆ, ಮತ್ತೊಂದು ಲೋಕಕ್ಕೆ ಕೊಂಡೊಯ್ಯುತ್ತದೆ. ಅದೇ ಕಾಲದ ರಾಜೇಂದ್ರ ಕ್ರಿಷ್ಣನ್ ಸಂಗೀತ ನೀಡಿದ ’ದೇಖ್ ಕಬೀರಾ ರೋಯಾ’ ಸಿನಿಮಾದಲ್ಲಿ ಹಾಡಿದ ’ಹಮ್‌ಸೆ ಆಯಾ ನ ಗಯಾ, ತುಮ್‌ಸೆ ಬುಲಾಯಾ ನ ಗಯಾ’ ಎನ್ನುವ ಹಾಡು ಹಗುರವಾದ ಮನಸ್ಥಿತಿಯಲ್ಲಿ, ನಿರುಮ್ಮಳ ಭಾವದಲ್ಲಿ ಪ್ರಾರಂಭವಾಗುತ್ತಾ ಕಡೆಗೆ ’ದಾಗ್ ಜೊ ತುಮ್ನೆ ದಿಯಾ, ದಿಲ್ ಸೆ ಮಿಠಾಯ ನ ಗಯಾ’ ಎಂದು ಭಾರವಾಗುತ್ತ ಕಳೆದುಕೊಂಡ, ಪಡೆದುಕೊಂಡಿದ್ದಾದರೂ ಏನು ಎನ್ನುವ ಮನಸ್ಥಿತಿಯೊಂದಿಗೆ ಮುಗಿಯುತ್ತದೆ. ಈ ಎರಡೂ ಭಾವಗಳನ್ನು ಪಡೆದುಕೊಂಡ, ಕಳೆದುಕೊಂಡ ಮನಸ್ಥಿತಿಯನ್ನು ತಲಾತ್ ಮಹಮೂದ್ ತನ್ನ ಧ್ವನಿಯಲ್ಲಿ, ಅದ್ಭುತವಾದ ಏರಿಳಿತಗಳ ಮೂಲಕ ನಮಗೆ ದಾಟಿಸುತ್ತಾ ಹೋಗುತ್ತಾರೆ. ಹೌದು ತಲಾತ್ ಧ್ವನಿ ನಮಗೆ ಎಲ್ಲಾ ಭಾವಗಳನ್ನು ದಾಟಿಸುತ್ತಾ ಹೋಗುತ್ತದೆ. ಅದೂ ಹೇಗೆ, ನಾವೂ ಅವರೊಂದಿಗೆ ಕಂಪಿಸುವ ಹಾಗೆ.

೧೯೫೫ ರಲ್ಲಿ ಬಿಡುಗಡೆಗೊಂಡ ’ಬಾರಾದರಿ’ ಸಿನಿಮಾದ ನಾಶಾದ್ ( ನೌಶಾದ್ ಅಲ್ಲ) ಸಂಗೀತ ನೀಡಿದ ’ತಸವೀರ್ ಬನಾತಾ ಹೂ, talat_mahmood_audio_cdತಸವೀರ್ ನಹೀ ಬನತೀ, ಎಕ್ ಖ್ವಾಬ್ ಸೆ ದೇಖಾ ಹೈ, ತಾಬೀರ್ ನಹೀ ಬನತೀ’ ಎನ್ನುವ ಹಾಡು ತಲಾತ್ ಮಹಮೂದ್ ಧ್ವನಿಯ ಒಂದು ಕ್ಲಾಸಿಕ್. ಅದನ್ನು ರೇಶ್ಮೆಯಂತಹ ನುಣುಪಿನ ಧ್ವನಿಯಲ್ಲಿ ಹಾಡಿದ ತಲಾತ್ ’ದಮ್ ಭರ್ ಕೆ ಲಿಯೆ ಮೇರಿ, ದುನಿಯಾ ಮೆ ಚಲೇ ಆವೋ’ ಎಂದು ಹಗುರ ಅಂದರೆ ಹಗುರ ಧ್ವನಿಯಲ್ಲಿ ಕರೆಯುವಾಗ ನಾವು ಆಗಲೇ ಆ ದುನಿಯಾದಲ್ಲಿ ಸೇರಿ ಹೋಗಿರುತ್ತೇವೆ.

ಛಾಯಾ ಸಿನಿಮಾದ ’ಇತನಾನ ಮುಜೆಸೆ ತು ಪ್ಯಾರ್ ಬಧಾ, ತೊ ಮೈ ಎಕ್ ಬಾದಲ್ ಆವಾರ’, ಸುಜಾತಾ ಸಿನಿಮಾದ ’ಜಲ್ತೇ ಹೈ ಜಿಸ್ಕೆ ಲಿಯೇ’, ಉಸ್ನೆ ಕಹಾ ಥಾ ಸಿನಿಮಾದ ’ಆಹಾ ರಿಮ್ ಜಿಮ್ ಕೆ ಯೆ ಪ್ಯಾರೆ ಪ್ಯಾರೆ ಗೀತ್ ಲಿಯೆ’, ಮಧೋಶ್ ಸಿನಿಮಾದ ’ಮೇರೆ ಯಾದ್ ಮೆ ತುಮ್ನಾ ಆಸೂ ಬಹಾ ನ, ನ ದಿಲ್ ಕೋ ಜಲಾನ, ಮುಜೇ ಭೂಲ್ ಜಾನಾ’, ಬಾಬುಲ್ ಸಿನಿಮಾದ ’ಮಿಲ್ತೆ ಹಿ ಆಂಖೇ, ದಿಲ್ ಹುವಾ ದೀವಾನಾ ಕಿಸಿ ಕಾ’ ಮತ್ತು ಮುಂತಾದ ಹಾಡುಗಳು ತಲಾತ್ ಮಹಮೂದ್ ಅವರ ಕ್ಲಾಸಿಕ್ ಹಾಡುಗಳು. ತಮ್ಮ ರೇಶ್ಮೆಯಂತಹಾ ನುಣುಪಾದ ಧ್ವನಿಯಲ್ಲಿ ಹತಾಶಗೊಂಡ ಮನಸ್ಸಿನ, ಮುರಿದ ಹೃದಯದ ಭಾವನೆಗಳನ್ನು ನಮ್ಮೊಳಗೆ ಆಳವಾಗಿ ತೇಲಿ ಬಿಡುವ ತಲಾತ್ ಒಬ್ಬ ಕ್ಲಾಸಿಕ್ ಹಾಡುಗಾರ. ಅವರ ಎಲ್ಲಾ ಹಾಡುಗಳಲ್ಲಿ ಉರ್ದು ಭಾಷೆಯನ್ನು ಬಳಸಿಕೊಂಡು,ಹೊರಹೊಮ್ಮಿಸುವ ಶೈಲಿ ಅನನ್ಯವಾದದ್ದು. ಉರ್ದು ಭಾಷೆ ತಲಾತ್ ಧ್ವನಿಯಲ್ಲಿ ತನ್ನ ಎಲ್ಲಾ ಗುಣಗಳೊಂದಿಗೆ ನಮ್ಮೊಳಗೆ ಇಳಿಯುತ್ತಾ ಹೋಗುತ್ತದೆ.

ಐವತ್ತರ ಆ ದಶಕದಲ್ಲಿ ಸಾಹಿರ್, ಕೈಫೀ ಅಜ್ಮಿ, ಖಯ್ಯಾಮ್, ನೌಶಾದ್, ಮಜರೂಹ್ ಸುಲ್ತಾನ್ ಪುರಿ, ಶೈಲೇಂದ್ರ, ಹಸರತ್ ಜೈಪುರಿ, ಮಹಮದ್ ರಫಿ, ಮುಖೇಶ್, ಶಕೀಲ್ ಬದಾಯೆ, ಸಿ.ರಾಮಚಂದ್ರ, ಮದನ್ ಮೋಹನ್, ಗುಲಾಮ್ ಮಹಮದ್, ಶಂಕರ್ ಜೈಕಿಶನ್, ಲತಾ ಮಂಗೇಶ್ಕರ್, talatmahmood1ಮನ್ನಾಡೆ ರಂತಹ ಮಹಾನ್ ಸಂಗೀತ ನಿರ್ದೇಶಕರು, ಕವಿಗಳೊಂದಿಗೆ ಹಾಡಿದ ತಲಾತ್ ಮಹಮೂದ್ ಮರೆಯಲಾಗದ ಹಾಡುಗಾರ. ಮನುಷ್ಯನ ಮನಸ್ಸು ಜೀವಂತಿಕೆಯಾಗಿರುವವರೆಗೂ ತಲಾತ್‌ರ velvety ಧ್ವನಿಗೆ ಮಾರು ಹೋಗುತ್ತಲೇ ಇರುತ್ತದೆ. ಲಿರಿಕ್ಸ್ ಅನ್ನು ಮತ್ತೊಂದು ಸ್ತರಕ್ಕೆ ಎತ್ತರಿಸುವ ತಲಾತ್ ಮಹಮೂದ್‌ರವರ ಧ್ವನಿ ನಮ್ಮನ್ನು ಕಾಡುತ್ತಲೇ ಇರುತ್ತದೆ.

ಈ ಲಖ್ನೋ ಬಾಯ್ ನಮ್ಮನ್ನು ಅಗಲಿ ೧೭ ವರ್ಷಗಳಾದವು. ಆದರೆ ತಲಾತ್ ಹಾಡಿದ “ಮನಸ್ಸಿನೊಳಗೆ ಆಸೆಗಳು ಬೇಯುತ್ತಿವೆ, ಕಣ್ಣಿನೊಳಗಡೆ ಕಣ್ಣೀರು ಬಾಕಿ ಇದೆ, ನಾನು ಮತ್ತು ನನ್ನ ಒಂಟಿತನ ಮಾತ್ರ ಇಲ್ಲಿದೆ” ಸಾಲುಗಳು ಸದಾ ನಮ್ಮೊಂದಿಗೆ…

ಗಾಂಧಿ ಎಂಬ “ಕನಿಷ್ಠ ಸಾಮಾನ್ಯ ಕಾರ್ಯಕ್ರಮ”


– ಶ್ರೀಧರ್ ಪ್ರಭು


ಫೆಬ್ರವರಿ ೧೯೪೮ ರ ಸಂದರ್ಭ. ಮಹಾತ್ಮಾ ಗಾಂಧಿಯವರ ಹತ್ಯೆಯಾಗಿ ಹತ್ತು ಹದಿನೈದು ದಿನಗಳು ಸಂದಿರಬೇಕು. ಪ್ರಧಾನಿ ನೆಹರು ಮತ್ತು ಉಪ ಪ್ರಧಾನಿ ಪಟೇಲರು ಅಧೀರರಾಗಿದ್ದರು. ಭಾರತದಲ್ಲಂತೂ ಸೂತಕದ ಛಾಯೆ. ಇಡೀ ಪ್ರಪಂಚದಾದ್ಯಂತ ಮಹಾತ್ಮರ ಹತ್ಯೆಯನ್ನು ಖಂಡಿಸಿ ಸಾವಿರಾರು ಶ್ರದ್ಧಾಂಜಲಿ ಸಭೆ ಸಮಾರಂಭಗಳು ನಡೆದಿದ್ದವು.

ಕೇವಲ ಎರಡು ಮೂರು ದಿನಗಳ ಅಂತರದಲ್ಲಿ, ಅತ್ಯಂತ ವಿಭಿನ್ನ ಹಿನ್ನೆಲೆಯ ಇಬ್ಬರು ಭಾರತೀಯ ಗಣ್ಯರು, gandhi_dead_bodyದೇಶವೆಂದೂ ಮರೆಯದ ಶ್ರದ್ಧಾಂಜಲಿ ಅರ್ಪಿಸಿದರು.

ಒಬ್ಬರು, ನಲವತ್ತರ ಅಂಚಿನ ಸರ್ವ ಸಂಗ ಪರಿತ್ಯಾಗಿ ಮತ್ತು ಅಂದು ಕರಾಚಿಯಲ್ಲಿನ ರಾಮಕೃಷ್ಣ ಆಶ್ರಮದ ಅಧ್ಯಕ್ಷ – ಸ್ವಾಮಿ ರಂಗನಾಥನಂದ.

ಇನ್ನೊಬ್ಬರು, ವರ್ಲಿ ರೈತ ದಂಗೆ, ತೆಲಂಗಾಣ ಸಶಸ್ತ್ರ ಹೋರಾಟ ಮತ್ತು ಮಹಾರಾಷ್ಟ್ರ ರಾಜ್ಯ ರಚನೆಯ ಸುಡುಬಿಸಿಯ ಹೋರಾಟಗಳ ನಡುಮಧ್ಯದಲ್ಲಿದ್ದ ಅರವತ್ತರ ಹರೆಯದ ಕಮ್ಯುನಿಸ್ಟ್ ನಾಯಕ – ಶ್ರೀಪಾದ ಅಮೃತ ಡಾಂಗೆ.

ಎಂತಹ ಅಗಾಧ ಭಿನ್ನತೆ ಮತ್ತು ಅಸಾಮ್ಯತೆ!

ವ್ಯಕ್ತಿಗಳ ಹಿನ್ನೆಲೆಗಳ ಅಗಾಧ ಭಿನ್ನತೆಯತೆಗಳ ಜೊತೆ ಜೊತೆಯಲ್ಲೇ ಗಮನಿಸಬೇಕಾದ ಇನ್ನೊಂದು ಮುಖ್ಯ ಅಂಶವೆಂದರೆ ಗಾಂಧಿಯವರೂ ಕೂಡ ಅಗಾಧ ವೈರುಧ್ಯ ಮತ್ತು ವಿರೋಧಬಾಸಗಳ ಮೊತ್ತವಾಗಿದ್ದರು. ಹೀಗಾಗಿ ಗಾಂಧಿಯನ್ನು ಕುರಿತು ಒಂದೇ ಹಿನ್ನೆಲೆಯ ಇಬ್ಬರು ವ್ಯಕ್ತಿಗಳು ಒಂದೇ ರೀತಿ ಮಾತನಾಡುವುದು ಸಾಧ್ಯವಿದೆಯೇ? ಸಾಧ್ಯವಾಯಿತು ನೋಡಿ!

ಇನ್ನೊಂದು ವಿಶೇಷತೆ ಗಮನಿಸಿ. ವಿವೇಕಾನಂದರಾಗಲಿ, ಅವರ ಗುರುಭಾಯಿಗಳಾಗಲಿ ಅಥವಾ ಆಶ್ರಮವಾಗಲಿ, ನೇರ ಅಥವಾ ಪರೋಕ್ಷವಾಗಿ ಯಾವುದೇ ರಾಜಕೀಯ ಹೋರಾಟ (ಸಾಮಾಜಿಕ ಹೋರಾಟಗಳಲ್ಲಿ ಕೂಡ) ಭಾಗಿಯಾಗಿರಲಿಲ್ಲ. ಏನಿದ್ದರೂ, ರಂಗನಾಥನಂದರಾಗಲಿ ಅವರ ಅಶ್ರಮವಾಗಲಿ ಗಾಂಧಿವಾದದ ಆಸುಪಾಸು ಎನ್ನುವಂತೆ ಕೂಡ ಇರಲಿಲ್ಲ.

ಇನ್ನು ಡಾಂಗೆಯವರಂತೂ ಗಾಂಧೀಜಿಯವರನ್ನು ಉದ್ದಕ್ಕೂ ವಿರೋಧಿಸಿದವರು. ಗಾಂಧಿ ಪ್ರೇರಿತ ಸಮಾಜವಾದ ಕಮ್ಯುನಿಸ್ಟ್ ರ ಮಟ್ಟಿಗೆ ಒಂದು ಕಾಗಕ್ಕ ಗುಬ್ಬಕ್ಕ ಕಥೆಗಿಂತ ಹೆಚ್ಚು ಮಹತಿಯದ್ದೇನಲ್ಲ.

ಹಾಗಿದ್ದರೆ, ಗಾಂಧಿಯವರ ಬದುಕು ಇವರನ್ನು ಒಟ್ಟು ಗೂಡಿಸಿತಲ್ಲದೆ, ಸಾವು ಕೂಡ ಹೇಗೆ ಸಾಮ್ಯತೆ ಬೆಸೆಯಿತು?

ಇವರಿಬ್ಬರ ಮಾತುಗಳಲ್ಲಿ ಅಗಾಧ ಸಾಮ್ಯತೆ ಇತ್ತು ಎಂದರೆ ಆಶ್ಚರ್ಯವಾಗುತ್ತದೆ. ಎಷ್ಟರ ಮಟ್ಟಿಗೆಂದರೆ, Gandhi's Funeralಇವರಿಬ್ಬರ ಭಾಷಣದ ವಾಕ್ಯಗಳನ್ನು ಬಿಡಿಯಾಗಿ ಉದಹರಿಸಿದರೆ, ಯಾವುದನ್ನು ಯಾರು ಹೇಳಿದ್ದು ಎಂದು ಹೇಳುವುದು ಕಷ್ಟ. ಇದಕ್ಕಿಂತ ಜಾಸ್ತಿ, ಹಂತಕ ಗೋಡ್ಸೆಯ ಕುರಿತಾದ ಇವರಿಬ್ಬರ ನಿಲುಮೆಯಲ್ಲಿ ಕೂಡ ಒಂದಿನಿತೂ ಭಿನ್ನತೆಗಳಿರಲಿಲ್ಲ. ಗೋಡ್ಸೆಯನ್ನು ಕ್ಷಮಿಸಿ ಬಿಡಬೇಕು ಎಂದು ಕೆಲವರು ರಾಗ ತೆಗೆದಿದ್ದನ್ನು ತಮ್ಮದೇ ರೀತಿಯಲ್ಲಿ ಇಬ್ಬರೂ ವಿರೋಧಿಸುತ್ತಾರೆ. ಡಾಂಗೆ ವಿಧಾನ ಸಭೆಯಲ್ಲಿ ಮಾತನಾಡಿದ್ದಕ್ಕೂ, ರಂಗನಾಥನಂದರು ಭಕ್ತರಿಗೆಂದು ಮೀಸಲಾದ ಸಂಜೆಯ ಪ್ರವಚನದಲ್ಲಿ ಹೇಳಿದ್ದೂ ಏಕಸೂತ್ರ ದಂತಿದೆ!

ಹಾಗೆಂದು ಸ್ವಾಮಿ ರಂಗನಾಥನಂದರು ನಮ್ಮ ಇಂದಿನ ಕೆಲವು ಪ್ರಗತಿಪರ ಮಠಾಧೀಶರ ಸಾಲಿನವರೇನಲ್ಲ. ರಂಗನಾಥನಂದರು ನಾಲ್ಕು ಕಂತುಗಳಲ್ಲಿ ಬರೆದ ಬರೆದ ಬೃಹತ್ ಮತ್ತು ಪ್ರಸಿದ್ಧ ಪುಸ್ತಕ “Eternal Values for a Changing Society” ವೇದ, ವೇದಾಂತ ಇತ್ಯಾದಿ ಕುರಿತೇ ಇರುವಂಥಹದ್ದು.

ಇದಕ್ಕಿಂತ ವಿಶೇಷ ಏನು ಗೊತ್ತೇ? ರಂಗನಾಥನಂದರ ಕರಾಚಿ ಆಶ್ರಮದಲ್ಲಿ ಅತ್ಯಂತ ಭೀಕರ ಕೋಮು ಭೀತಿಯ ವಾತಾವರಣ ಇತ್ತು. ಇಂಥ ಸಂದರ್ಭದಲ್ಲೂ ಗಾಂಧಿಯನ್ನು ಧೇನಿಸುವ ತಿಳಿ ಮನಸ್ಸು ನೋಡಿ!

ಇನ್ನೊಂದು ವಿಶೇಷವೆಂದರೆ ಕರಾಚಿ ರಾಮಕೃಷ್ಣ ಆಶ್ರಮದಲ್ಲಿ ಜರುಗುತ್ತಿದ್ದ ಭಜನೆ ಮತ್ತು ಉಪನ್ಯಾಸ ಕಾರ್ಯಕ್ರಮಗಳಿಗೆ ಸದಾ ಬರುತ್ತಿದ್ದವರಲ್ಲಿ ಒಬ್ಬ ವಿಶೇಷ ವ್ಯಕ್ತಿ ಕೂಡ ಇದ್ದರು. ಈ ವ್ಯಕ್ತಿ ಇಂದಿಗೂ ಸ್ವಾಮೀಜಿಯವರ ವ್ಯಕ್ತಿತ್ವ ಮತ್ತು ಅವರ ಅಧ್ಯಾತ್ಮಿಕತೆ ಕುರಿತ ಅವರ ಉಪನ್ಯಾಸ ಗಳನ್ನು ನೆನೆದುಕೊಳ್ಳುತ್ತಾರೆ. ಆದರೆ ಈ ವ್ಯಕ್ತಿ ಗಾಂಧಿ ಹತ್ಯೆ ಕುರಿತ ಸ್ವಾಮಿಜಿಯವರ ಈ ಉಪನ್ಯಾಸ ಕೇಳಿಸಿಕೊಂಡಿದ್ದ ಬಗ್ಗೆ ಎಲ್ಲೂ ಹೇಳಿಕೊಂಡಿಲ್ಲ. ಯಾರು ಗೊತ್ತೇ ಆ ವ್ಯಕ್ತಿ? ಲಾಲಕೃಷ್ಣ ಅಡ್ವಾಣಿ!

ಅಂದು ಮತ್ತೆ ಇಂದು, ಅಡ್ವಾಣಿಯವರಿಗಾಗಲಿ ಅಥವಾ ಸಂಘ ಪರಿವಾರಕ್ಕಾಗಲಿ ಗಾಂಧಿ ತತ್ವವನ್ನು ವಿರೋಧಿಸುವ ಮನಸ್ಸೇನೋ ತುಂಬಾ ಇದೆ Advaniಆದರೆ ಸ್ವಾಮಿ ರಂಗನಾಥನಂದರಂಥ ಸಂತರು ಗಾಂಧಿಯನ್ನು ಗೌರವಿಸುವಾಗ ಸಂಘ ಪರಿವಾರಕ್ಕೆ ಎಷ್ಟು ಇರುಸು ಮುರುಸು ಉಂಟಾಗುತ್ತದೆ ಗಮನಿಸಿ.

ಆ ವಿಷಯ ಹಾಗಿರಲಿ; ಗಾಂಧಿ ಎರಡಾಣೆ ಶುಲ್ಕ ಕೊಟ್ಟು ಕಾಂಗ್ರೆಸ್ ನ ಸದಸ್ಯರಾಗಿದ್ದರೋ ಇಲ್ಲವೋ ಗೊತ್ತಿಲ್ಲ, ಅವರು ಗಾಂಧಿ ಟೊಪ್ಪಿ ಎಂದೂ ತೊಡಲಿಲ್ಲ. ಎಂದಿಗೂ ಯಾವುದೇ ಮಠ ಮಾನ್ಯ ಗಳ ಬಾಗಿಲಿಗೆ ಹೋಗಲಿಲ್ಲ; ದೇವಸ್ಥಾನ, ಆಶ್ರಮ ಇತ್ಯಾದಿಗಳ ಗೋಜಿಗೂ ಹೋಗಲಿಲ್ಲ. ಬೆಳಗಾವಿಯಲ್ಲಿ ಜರುಗಿದ ಅಧಿವೇಶನ ಬಿಟ್ಟು ಬೇರೆಲ್ಲೂ ಕಾಂಗ್ರೆಸ್ ಅಧ್ಯಕ್ಷರಾಗಿರಲಿಲ್ಲ.

ಗಾಂಧಿ, ಭಾರತದ ಅತ್ಯಂತ ಪ್ರಭಾವಿ ಶಕ್ತಿ ಕೇಂದ್ರವಾಗಿದ್ದರೂ, ಯಾವ ವ್ಯಕ್ತ ಅಥವಾ ಪ್ರಕಟ ಸ್ವರೂಪದ ಅಧಿಕಾರವನ್ನು ಸ್ವೀಕರಿಸಲಿಲ್ಲ. ಭಾರತದ ಸ್ವಾಯತ್ತತೆ ಮತ್ತಿತರೇ ಮಹತ್ತರ ತೀರ್ಮಾನ ಗಳನ್ನು ಕೈಗೊಳ್ಳಲು ೧೯೪೫ ರಲ್ಲಿ ಅಂದಿನ ವೈಸ್ ರಾಯ್ ಮೌಂಟ್ ಬ್ಯಾಟನ್ ಶಿಮ್ಲಾದಲ್ಲಿ ಕರೆದ ಸಭೆಯನ್ನು ಗಾಂಧಿ ನಿರ್ದೇಶಿದ ರೀತಿ ನೋಡಿ. ಸಭೆಯ ಮುನ್ನಾ ದಿನ ಶಿಮ್ಲಾಗೆ ಬಂದಿಳಿಯುವ ಗಾಂಧಿ, ಸಭೆಗೆ ಹಾಜರಾಗುವುದಿಲ್ಲವಾದರೂ, ಸಭೆಗೆ ಹಾಜರಾಗುವ ಕಾಂಗ್ರೆಸ್ಸನ ಎಲ್ಲ ನಾಯಕರಿಗೆ ನೀತಿ ನಿರ್ದೇಶನ ನೀಡುತ್ತಾರೆ.

ಗಾಂಧಿ ಹಾಗೆಂದು ರಿಮೋಟ್ ಕಂಟ್ರೋಲ್ ನಾಯಕರಲ್ಲ. ಸ್ವಾತಂತ್ರ್ಯ ಬಂದ ಹೊಸ್ತಿಲಿನಲ್ಲಿ ಕೋಮು ದಳ್ಳುರಿ ತಣಿಸಲು ಗಾಂಧೀ ನೌಖಾಲಿಗೆ ಹೊರಡುತ್ತಾರೆ. ಅಲ್ಲಿ ಕೆಲವು ದುಷ್ಟರು ಗಾಂಧೀಜಿ ಉಳಿದುಕೊಂಡ ಗ್ರಾಮಗಳಲ್ಲಿ ಸಾಗುವ ದಾರಿಯುದ್ದಕ್ಕೂ ಮಲವನ್ನು ಮೂತ್ರ ಹರಡಿರುತ್ತಾರೆ. ಗಾಂಧೀಜಿಯ ಮೊಮ್ಮಗಳು ಮನು ಗಾಂಧಿ ಬೇಗನೆ ಮುಂದೆ ತೆರಳಿ ಅದನ್ನು ಸ್ವಚ್ಛ ಗೊಳಿಸುತ್ತಾರೆ. ಇದನ್ನು ಅರಿತ ಗಾಂಧಿ ಹೇಳುತ್ತಾರೆ “ಇಂದು ಶ್ರೇಷ್ಠ ವಾದದ್ದನ್ನು ನನ್ನಿಂದ ಕಸಿದುಕೊಂಡೆ”!

ಗಾಂಧಿಯ ಸಂವಹನ ಪ್ರಕ್ರಿಯೆ ತುಂಬಾ ಸೂಕ್ಷ್ಮ ಆದರೆ ತೀಕ್ಷ್ಣ ಮಟ್ಟದ್ದು. ಗಾಂಧಿ ಮೆಲ್ಪದರಿನ ರಾಜಕಾರಣ ಮಾಡಲೇ ಇಲ್ಲ. ದೇಶದ ವಿಭಜನೆಯೂ ಸೇರಿದಂತೆ, ಸರಕಾರದ ಅಥವಾ ಕಾಂಗ್ರೆಸ್ಸ್ ನ ಅನೇಕ ಮಹತ್ತರ ತೀರ್ಮಾನಗಳಲ್ಲಿ ಗಾಂಧಿ ನೇರವಾಗಿ ಭಾಗಿಯಲ್ಲ. ನೇತಾಜಿ – ಪಟ್ಟಾಭಿ ಸ್ಪರ್ಧೆಯ ಸಂದರ್ಭ ಬಿಟ್ಟರೆ ಗಾಂಧಿ ಕಾಂಗ್ರೆಸ್ಸನ ಸಂಘಟನೆಯ ಒಳಗಿನ ಸೋಲು ಗೆಲುವನ್ನು ತಮ್ಮ ಸೋಲು – ಗೆಲುವು ಎಂದು ಭಾವಿಸಲಿಲ್ಲ – ಕನಿಷ್ಠ ಬಿಂಬಿಸಲಂತೂ ಇಲ್ಲ .

ಹಾಗಿದ್ದಾಗ್ಯೂ, ಗೋಡ್ಸೆ ಕೊಲ್ಲುವುದು ಗಾಂಧಿಯನ್ನು; ಪ್ರಧಾನಿ ನೆಹರು ಅಥವಾ ಇತರ ಕಾಂಗ್ರೆಸ್ ನ ನಾಯಕರನ್ನಲ್ಲ. ಇನ್ನೊಂದು ಕಡೆಯಿಂದ ನೋಡಿದರೆ, ವರ್ಣಾಶ್ರಮವನ್ನು ಸಂಪೂರ್ಣವಾಗಿ ಒಪ್ಪುವ ಹಿಂದೂ ಆಗಿದ್ದ ಗಾಂಧಿಯನ್ನು ಕೊಂದದ್ದು ಇನ್ನೊಬ್ಬ ‘ಹಿಂದೂ’ – ಅದರಲ್ಲೂ ಬ್ರಾಹ್ಮಣ!

ಯುಗ ಯುಗಾಂತರದಿಂದ ಶೋಷಣೆ ಸಾಧನ ಮಾಡಿಕೊಂಡ ವೈದಿಕ ಧರ್ಮವನ್ನು ಸಮರ್ಥವಾಗಿ ಬೀದಿಯಲ್ಲಿ ಬೆತ್ತಲೆ ಮಾಡಿದ Young_Ambedkarಅಂಬೇಡ್ಕರರನ್ನು ಕಡೆಗಣಿಸಿದ ಸಾತ್ವಿಕ ಸಿಟ್ಟಿನ ಕಾರಣ ಯಾವ ದಲಿತನೂ ಗಾಂಧಿಯನ್ನು ಕೊಲ್ಲಲಿಲ್ಲ. ಪಾಕಿಸ್ತಾನದ ಮುಸ್ಲಿಂ ಉಗ್ರಪಂಥೀಯರಾಗಲಿ ಅಥವಾ ಸರ್ವಸ್ವ ಕಳೆದುಕೊಂಡ ವರಳಿಯ-ತೆಲಂಗಾಣದ ಕಮ್ಯುನಿಸ್ಟ್ ರೈತರಾಗಲಿ ಗಾಂಧಿಯನ್ನು ಕೊಲ್ಲಲಿಲ್ಲ. ಗಾಂಧಿಯನ್ನು ಕೊಂದದ್ದು ಒಬ್ಬ ‘ಹಿಂದೂ’ ಬ್ರಾಹ್ಮಣ! ಗಾಂಧಿಯ ರಾಮನ ಬಾಣ ಯಾರನ್ನು ಹೆಚ್ಚು ಚುಚ್ಚುತ್ತಿತ್ತು ಎಂದು ಇದರಿಂದಲೇ ವೇದ್ಯ ವಾಗುತ್ತದೆ.

ದಲಿತರಿಗೆ ಗಾಂಧೀ ಬಗೆಗಿನ ವಿರೋಧಕ್ಕೆ, ಅಂಬೇಡ್ಕರರ ವಿದ್ವತ್ ಪೂರ್ಣ ಸಿದ್ಧಾಂತ, ಬರಹ – ಭಾಷಣಗಳ ತಳಹದಿ ಇತ್ತು. ಕಮ್ಯುನಿಸ್ಟ್ ರಿಗೆ ಗಾಂಧಿವಾದದ ಎದುರು ಮಾರ್ಕ್ಸ್ ವಾದವೆಂಬ ವಿಶ್ವ ವಿಶಾಲ ತತ್ವದ ಆಸರೆಯಿತ್ತು. ಆದರೆ ವೈದಿಕಶಾಹಿಗಳಿಗೆ ಯಾವ ಸೈದ್ಧಾಂತಿಕ ತಲೆ ಬುಡವೂ ಇರಲಿಲ್ಲ. ಅವರ ಗರ್ಭಗುಡಿಯೊಳಗೇ ನಿಂತು ಅವರ ಮಂತ್ರ ಗಳನ್ನೂ ಉಚ್ಚರಿಸಿಯೇ ಅವರ ಭೂತವನ್ನು ಉಚ್ಚಾಟನೆ ಮಾಡುತ್ತಿದ್ದ ಗಾಂಧಿಯನ್ನು ದೈಹಿಕ ಹಲ್ಲೆ / ಕೊಲೆ ಮಾಡದೆ ಬೇರೆ ಮಾರ್ಗವೇ ಇರಲಿಲ್ಲ.

ಆದರೆ ಇಂದು ಹಿಂದುತ್ವ ಪರಿವಾರ ಗಾಂಧಿಯನ್ನು ಮತ್ತು ಗಾಂಧಿಯ ಅಂತರಂಗದ ಶಿಷ್ಯ ಪಟೇಲ್ ರನ್ನು ನುಂಗುತ್ತಿದೆ. ಸಂಘ ಪರಿವಾರವನ್ನು ನೆಹರುಗಿಂತ ಒಂದು ಕೈ ಹೆಚ್ಚೇ ವಿರೋಧಿಸುತ್ತಿದ್ದ ಪಟೇಲರು ಇಂದು ಗಣ ವೇಷ ತೊಟ್ಟು ನಡು ನೀರಿನಲ್ಲಿ ಮೂರ್ತಿಯಾಗಿ ನಿಂತಿದ್ದರೆ, ನೆಹರು ಇನ್ನೊಂದು ಐದು ವರ್ಷಕ್ಕೆ “ನಮಸ್ತೆ ಸದಾ ವತ್ಸಲೇ….” ಶುರು ಮಾಡಿಕೊಳ್ಳಬಹುದು. ಇನ್ನು ಅಂಬೇಡ್ಕರ್ ರಂತೂ “ಸಾಮಾಜಿಕ ಕ್ರಾಂತಿ ಸೂರ್ಯ” ರಾಗಿ ಹಿಂದೂ ಧರ್ಮದ ರಕ್ಷಣೆಗೆ ಕಂಕಣ ತೊಟ್ಟು ನಿಂತಾಗಿದೆ!

ಇಂಥದ್ದರಲ್ಲಿ, ಸಂಘ ಪರಿವಾರದ ಬದ್ಧ ವಿರೋಧಿಗಳಾದ ಸುಪ್ರೀಂ ಕೋರ್ಟಿನ ಮಾಜಿ ನ್ಯಾಯಾಧೀಶ ಮಾರ್ಕಂಡೇಯ ಕಟ್ಜು ‘ಮಹಾತ್ಮಾ ಗಾಂಧಿ ಬ್ರಿಟಿಷರ ಏಜೆಂಟ್’ ಎಂದು ಇತ್ತೀಚಿಗೆ ಅಪ್ಪಣೆ ಕೊಡಿಸಿದ್ದಾರೆ. ಅರುಂಧತಿ, ಗಾಂಧಿಯನ್ನು ಹಿಗ್ಗಾ ಮುಗ್ಗಾ ಖಂಡಿಸಿ, ನವಯಾನ ಪ್ರಕಟಿಸಿದ ಬಾಬಾ ಸಾಹೇಬರ “Annihilation of Caste” ನಲ್ಲಿ ಮುನ್ನುಡಿ ಬರೆದಿದ್ದಾರೆ. ಇದೆಲ್ಲದುರಿಂದ ಯಾರಿಗೆ ಯಾವ ರಾಜಕೀಯ ಲಾಭ ಸಿಗುತ್ತದೆ ಎಂದು ಗೊತ್ತಾಗದಷ್ಟು ಅಮಾಯಕರೇ ಇವರೆಲ್ಲ ಎಂದು ಅಚ್ಚರಿಯಾಗುತ್ತದೆ!

ಬುದ್ಧ- ಬಸವ-ಮಾರ್ಕ್ಸ್-ಫುಲೆ-ಅಂಬೇಡ್ಕರ್ ವಾದಿಗಳು ಗಾಂಧಿಯನ್ನು ಹೀಗೆ ದೂರ ಮಾಡಿಕೊಂಡಿದ್ದ ಪರಿಣಾಮ ಇಂದು ಗಾಂಧಿಯನ್ನು ಸಂಘಿಗಳು ಹೈಜಾಕ್ ಮಾಡಿಕೊಂಡಿದ್ದಾರೆ. ನಿಮಗೆ ಗೊತ್ತಿರಲಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಪ್ರಾತಃ ಸ್ಮರಣೀಯರ ಪಟ್ಟಿ ಒಂದಿದೆ; ಅದರಲ್ಲಿ ಗಾಂಧಿ ಕೂಡ ಒಬ್ಬರು. ೧೯೯೨ ರ ಸಂದರ್ಭದಲ್ಲಿ ರಾಮ ಮಂದಿರ ನಿರ್ಮಾಣದ ಜೊತೆ ಜೊತೆಗೆ ಕೈಗೆತ್ತಿ ಕೊಂಡ ಅಜೆಂಡಾ ಗಾಂಧಿಯ “ಸ್ವದೇಶೀ”. ಸಂಘ ಪರಿವಾರದ ಬೆನ್ನೆಲಬು ಎನಿಸಿಕೊಂಡ ವ್ಯಾಪಾರಸ್ಹರು ತಾವು ವಿದೇಶಿ ಸರಕು ಅಂಗಡಿಯಲ್ಲಿ ಇಟ್ಟುಕೊಂಡೇ “ಸ್ವದೇಶೀ ಸಾಮಗ್ರಿ ಕೊಳ್ಳಿ” ಎಂದು ಪ್ರಚಾರ ಶುರು ಮಾಡಿದರು. ಹೀಗೆ, ಗಾಂಧಿಯನ್ನು ಕಾಪಿ ಹೊಡೆಯದೆ ಇದ್ದಿದ್ದರೆ ಸಂಘಿಗಳಿಗೆ ಸಂಸತ್ತಿನಲ್ಲಿ “೩೫ ಮಾರ್ಕು” ದಾಟುತ್ತಿರಲಿಲ್ಲ.

ಇನ್ನು ಗಾಂಧಿಯನ್ನು ದೊಡ್ಡ ದೊಡ್ಡ ‘ಸೈದ್ಧಾಂತಿಕ’ ಕಾರಣಗಳಿಗೆ ವಿರೋಧಿಸಿದವರು ಇಂದು ಬೋರ್ಡಿಗಿಲ್ಲದೆ ಹೋದರು. ಏನೇ ಆದರೂ ಗಾಂಧಿ ವಿರೋಧದಿಂದ ಒಂದು ಪೈಸೆಯ ಲಾಭವಂತೂ ಇಲ್ಲ; ಉಲ್ಟಾ ನಷ್ಟವೇ ಜಾಸ್ತಿ. ಇಂದು ವಿದೇಶಗಳಲ್ಲಿ ಭಾರತ ಪ್ರತಿಮೆ ಎಂದರೆ ಗಾಂಧಿ ಪ್ರತಿಮೆ. ವಿದೇಶಗಳಲ್ಲಿ ಗಾಂಧಿಯನ್ನು ಬೈದುಕೊಂಡು ತಿರುಗಿದರೆ ಭಾರತ ವನ್ನೇ ಬೈದಂತೆ. ಉಗ್ರ ನಾಸ್ತಿಕವಾದಿ ಗೊ.ರಾ ಮತ್ತು ಹೆಚ್. ನರಸಿಂಹಯ್ಯನವರು ಎಷ್ಟು ಗಾಂಧಿವಾದಿಯೊ ಅಷ್ಟೇ ಸ್ವಮೂತ್ರ ಪಾನ ಮಾಡುವ ಕಟ್ಟಾ ಸಂಪ್ರದಾಯವಾದಿ ಮೊರಾರ್ಜಿ ಕೂಡ ಅಷ್ಟೇ ಗಾಂಧಿವಾದಿ. JP, ಲೋಹಿಯಾರಷ್ಟೇ ಗಾಂಧಿಯನ್ನು ಸರದಾರ್ ಪಟೇಲ್ ಮತ್ತು ಕೆ. ಎಲ್. ಮುನ್ಷಿ ಇಷ್ಟ ಪಟ್ಟಿದ್ದರು. ಇನ್ನು ತೆಲಂಗಾಣದಲ್ಲಿ ಪಟೇಲರ ಗುಂಡು ಎದುರಿಸುತ್ತಲೇ, ಗಾಂಧಿಗೆ ಶ್ರದ್ಧಾಂಜಲಿ ಅರ್ಪಿಸುವ ಡಾಂಗೆಯ ವೈಶಿಷ್ಟ್ಯ ನೋಡಿ! ತತ್ವ ಸಿದ್ಧಾಂತಗಳ ಎಲ್ಲೆ ಮೀರಿ ಎಲ್ಲ ಹಂತದ ಮತ್ತು ಭಿನ್ನ ಒಲವಿನ ವ್ಯಕ್ತಿ ಗಳನ್ನೂ ಆಕರ್ಷಿಸುವ ಶಕ್ತಿ ಮತ್ತು ಸತ್ವ ಗಾಂಧಿಯಲ್ಲಿತ್ತು.

ಗೋಡೆಗೆ ಬಣ್ಣ ಹಚ್ಚುವ ಮೊದಲು ಪುಟ್ಟಿ ಹಚ್ಚುವ ಮಾದರಿಯಲ್ಲಿ ರಾಜಕೀಯ ಹೋರಾಟಕ್ಕೆ ಮುನ್ನ ಮತ್ತು ನಂತರ ವಯಕ್ತಿಕ ಮತ್ತು MKGandhiಸಾಮಾಜಿಕ ಸನ್ನದ್ಧತೆ ತಂದು ಕೊಳ್ಳಬೇಕಾದ ಅಗತ್ಯತೆಯನ್ನು ಗಾಂಧಿಯಷ್ಟು ಪ್ರಖರವಾಗಿ ಪ್ರತಿಪಾದಿಸಿದವರೇ ಇಲ್ಲ. ಎಲ್ಲ ಪಕ್ಷ ಗಳಿಗೆ ರಾಜಕೀಯವೆಂದರೆ ಚುನಾವಣೆ ಮಾತ್ರ. ಆದರೆ ಸಂಘ ಪರಿವಾರಕ್ಕೆ ಚುನಾವಣಾ ಸೋಲು ಗೆಲವು ಗೌಣ. ಸಂಘ ಪರಿವಾರದ್ದು “ವಾಲ್ ಪುಟ್ಟಿ” ರಾಜಕಾರಣ. ಬಣ್ಣ ಯಾವುದಾದರೂ ಆದೀತು ತಳಹದಿ ಭದ್ರವಾಗಿರಬೇಕು. ಇದನ್ನೇ ಅವರು ಗಾಂಧಿಯಿಂದ ಕಲಿತದ್ದು ಮತ್ತು ಉಳಿದವರು ಬಿಟ್ಟಿದ್ದು. ಗಾಂಧಿಯನ್ನು ಪ್ರಗತಿಪರರು ತುಚ್ಚೀಕರಿಸಿದರೆ ಕೋಮುವಾದಿಗಳು ಗುರುವಾಗಿ ಸ್ವೀಕರಿಸಿದರು. ಇಂದು ಅದೇ ಗುರುವನ್ನು ಮುಂದಿಟ್ಟುಕೊಂಡು ಪ್ರಗತಿಪರರ ಹೆಬ್ಬೆಟ್ಟು ಕಿತ್ತಿದ್ದಾರೆ. ರಾಜಕೀಯದ ಇಸ್ಪೀಟ್ ಆಟದಲ್ಲಿ ನಮಗೆ ಬೇಡ ಎಂದು ಪ್ರಗತಿಪರರು ಎಸೆದ ಕಾರ್ಡ್ ಇಂದು ಸಂಘಿಗಳಿಗೆ ಟ್ರಂಪ್ ಕಾರ್ಡ್ ಆಗಿದೆ!

ಕಾಂಗ್ರೆಸ್ ಗೆ ಚುನಾವಣಾ ರಾಜಕಾರಣ ಬಿಟ್ಟರೆ ಬೇರೆ ಗೊತ್ತಿಲ್ಲ. ಸಿದ್ಧಾಂತದ ಗೋಜು ಏನಾದರೂ ಇದ್ದರೆ ಸಿಪಿಐ / ಸಿಪಿಎಂ ಮತ್ತು ಬಿ‌ಎಸ್‌ಪಿ ಗಳಿಗೆ. ಆದರೆ ಈ ಸೈದ್ಧಾಂತಿಕ ಪಕ್ಷಗಳ ಗತಿ ಏನಾಗಿದೆ? ಇಂದು ಸಂಘಿಗಳ ‘ರಾಮ’ನನ್ನು ಎದುರಿಸುವ ಶಕ್ತಿ ಏನಾದರೂ ಇದ್ದರೆ ಅದು ಗಾಂಧಿಯ ರಾಮನಿಗೆ ಮಾತ್ರ ಹೊರತು (ಯೆಚೂರಿ) ಸೀತರಾಮನಿಗಲ್ಲ ಅಥವಾ (ಕಾನ್ಷಿ) ರಾಮನನ್ನು ತೊರೆದ ಮಾಯಾವತಿಗೂ ಅಲ್ಲ. ಸತ್ವಹೀನ ಕಾಲರ ಕೀಟಾಣು ಗಳು ಕಾಲರ ರೋಗಕ್ಕೆ ಮದ್ದು. ಹಾಗೆಯೇ ಸಂಘಿಗಳ ಕೋಮುವಾದಕ್ಕೆ ಹಿಂದೂಧರ್ಮ ಮತ್ತು ವರ್ಣಾಶ್ರಮ ‘ಪ್ರತಿಪಾದಿಸುವ’ ಗಾಂಧಿಯೇ ಮದ್ದು. ಗಾಂಧಿಯಷ್ಟು ರಾಜಕಾರಣ ದಲ್ಲಿ ‘ಧರ್ಮವನ್ನು’ ಬೇರೆಸಿದವರೇ ಇಲ್ಲ. ಆದರೆ ಗಾಂಧಿ ಧರ್ಮವನ್ನು ಬಳಸಿದ್ದು ವಿಷವನ್ನು ವಿಷ ಕೊಳ್ಳುವಂತೆ ಗಾಂಧಿ ಬಿಡಿಸಿದ ಒಂದೊಂದೇ ಚಿತ್ರವು ವಿಚಿತ್ರವಾಗಿ ಕಂಡರೂ ಒಟ್ಟಿನ ಕೊಲಾಜ್ ಅರ್ಥಪೂರ್ಣವಾಗಿಸುವ ಗಾಂಧಿ ಭಾರತವನ್ನು ಒಟ್ಟು ಗೂಡಿಸಿದ ಶಕ್ತಿ.

ಗಾಂಧಿ, ಎರಡಲ್ಲ, ನಾಲ್ಕು ಧ್ರುವಗಳನ್ನು (ಹಿಂದೂ-ಮುಸ್ಲಿಂ-ಎಡ-ಬಲ) ಸಮಗ್ರವಾಗಿ ಸಮನ್ವಯಗೊಳಿಸಿದ ಶಕ್ತಿ. ಸಂವಿಧಾನ ರಚನೆಗೆ ಬಾಬಾ ಸಾಹೇಬರನ್ನೇ ನೇಮಿಸಬೇಕು ಎಂದು ನೆಹರುಗೆ ಒತ್ತಾಯಿಸಿದ್ದು ಗಾಂಧಿಯೇ. ಅಂಬೇಡ್ಕರ್ ಮತ್ತು ಗಾಂಧಿ ನಡುವಣ ಬಿನ್ನತೆಗಳು ಹೊರಪದರಿನ ಹೊಂದಾಣಿಕೆ ಸಮಸ್ಯೆಗಳೇ ವಿನಃ ಅಂತರಂಗದ ಸರಿಹೋಗಲು ಸಾಧ್ಯವೇ ಇಲ್ಲದ ವೈರುಧ್ಯಗಳಲ್ಲ. ಅಂಬೇಡ್ಕರ್, ಗಾಂಧಿಗಿಂತ ಹೆಚ್ಚು ವಿದ್ವತ್ಪೂರ್ಣ ಮತ್ತು ಪ್ರಖರ ಶಕ್ತಿ. ನಿಜ. ಆದರೆ, ಗಾಂಧಿಯನ್ನು ನಂಜಿಕೊಳ್ಳಲು ಒಲ್ಲದ ಅಂಬೇಡ್ಕರ್ ವಾದಕ್ಕೆ ನಂಜು ತಗಲುವ ಭಯವಿದೆ. ಹಾಗೆಯೇ, ಮಾರ್ಕ್ಸ್‌ವಾದ ಭಾರತದ ಸಂದರ್ಭಕ್ಕೆ ಗಾಂಧೀ ಸತ್ವ ಮತ್ತು ಅಂಬೇಡ್ಕರ್‌ರ ಕಾಣ್ಕೆಯನ್ನು ಅಂತರ್ಗತಗೊಳಿಸಿಕೊಳ್ಳಲೇಬೇಕು. ಹಾಗೆಯೇ ಮಾರ್ಕ್ಸ್ ಪ್ರತಿಪಾದಿಸಿದ ಅಂತರರಾಷ್ಟ್ರೀಯ ಶೋಷಿತರ ಭ್ರಾತೃತ್ವ, ಅರ್ಥಿಕ ಸಮಾನತೆಯ ತತ್ವ ಅಂಬೇಡ್ಕರ್ ಸಿದ್ಧಾಂತಕ್ಕೆ ಅತಿ ಮುಖ್ಯ.

ಈ ತತ್ವ ಸಮನ್ವಯ ಇಂದಿನ ಸಾಮಾಜಿಕ ಮತ್ತು ರಾಜಕೀಯ ತುರ್ತುಗಳಲ್ಲಿ ಒಂದು ಎಂದಾದ ಮೇಲೆ ಗಾಂಧಿ ಇಂದಿನ ತುರ್ತು ಎಂದು ಬೇರೆ ಹೇಳಬೇಕಿಲ್ಲ. ಏಕೆಂದರೆ ಈ ತತ್ವ ಸಮನ್ವಯ ಸಾಧ್ಯವಾಗುವುದು ಗಾಂಧಿ ಎಂಬ ಸಮಾನಾಂತರ ಕೇಂದ್ರ ಬಿಂದುವಿನಿಂದ.

ಇಂದು, ಅಂಬೇಡ್ಕರ್ ವಾದಿಗಳು, ಲೋಹಿಯಾ ಮತ್ತು ಮಾರ್ಕ್ಸ್ ವಾದಿಗಳು ಸೇರಿದಂತೆ ಎಲ್ಲ ಸಮಾಜಪರ ಪ್ರಗತಿಪರ ಶಕ್ತಿಗಳು, ನಮ್ಮ- ನಮ್ಮಲ್ಲಿ ೧೦೦-೫ ಎಂಬ ಭೇದ ಬೆಳೆಸಿಕೊಂಡರೂ, ಬೇರೆಯವರನ್ನು ೧೦೫ ರ ಶಕ್ತಿಯಿಂದ ಎದುರಿಸಬೇಕಾದ ಅಗತ್ಯವಿದೆ. ಈ ಒಗ್ಗಟ್ಟಿನ ಸಾಧ್ಯವಾಗಿಸುವ ಅತ್ಯಂತ ಸರಳ ಸಂವಹನ ಸಾಧನ ಇಂದಿಗೆ ಗಾಂಧಿ ಮಾತ್ರ.

ಗಾಂಧಿಯ ಕುರಿತ ಬಿಡಿ ಬಿಡಿ facts ಗಳು ಸತ್ಯವೆನಿಸಿಕೊಳ್ಳುವುದಿಲ್ಲ. ಇಂದಿಗೆ ಇದನ್ನೆಲ್ಲಾ ಕೆದಕಿ ಕೊಂಡು ಇದ್ದೊಂದು ಗುಡಿಸಲನ್ನೂ gandhi2ಮೈಮೇಲೆ ಕೆಡವಿಕೊಳ್ಳಲು ಇದು ಸಂದರ್ಭವೂ ಅಲ್ಲ. ಇನ್ನು ಈ ಎಲ್ಲ ಅಂತರ್ ಕಲಹದ ಲಾಭ ಯಾರಿಗೆ ಎಂದು ಬಿಡಿಸಿ ಹೇಳಬೇಕಾದ ಅಗತ್ಯವೂ ಇಲ್ಲ.

ವಿಚಿತ್ರವೆಂದರೆ, ಇಂದು ಬಿಜೆಪಿಯಲ್ಲಿನ ಅಡ್ವಾಣಿ ಮತ್ತು ಬ್ರಾಹ್ಮಣಶಾಹಿ ನಾಯಕತ್ವಕ್ಕೆ ಮೋದಿ ಮೇಲೆ ಇರುವಷ್ಟು ಸಿಟ್ಟು ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ರ ಮೇಲೂ ಇಲ್ಲ. ಆದರೂ ಹೇಗೆ ತೆಪ್ಪಗೆ ನುಂಗಿಕೊಂಡು ಕೂತಿದ್ದಾರೆ ನೋಡಿ. ಇಂತಹದ್ದರಲ್ಲಿ ನಾವು ನಾವುಗಳೇ ಇಲ್ಲ ಸಲ್ಲದ ರಾದ್ದಾಂತ ಮಾಡಿಕೊಂಡು ಹೋಗುತ್ತಿದ್ದೇವೆ. ಹಾಗೆಂದು ಪ್ರಗತಿಪರರ ವಿವಿಧ ಬಣಗಳು ತಮ್ಮ ಎಲ್ಲ ತಾತ್ವಿಕ ಭಿನ್ನಾಭಿಪ್ರಾಯಗಳನ್ನೂ ಸುಮ್ಮ ಸುಮ್ಮನೆ ಬಿಟ್ಟು ಬಿಡಬೇಕು ಸಕಾರಣವಿಲ್ಲದೆ ಸುಟ್ಟು ಬಿಡಬೇಕು ಎಂದಲ್ಲ. ಹೀಗೆ ಮಾಡಿದರೆ ಅದು ತುಂಬಾ ತಾತ್ಕಾಲಿಕ ಮತ್ತು ಕೃತ್ರಿಮವಾದೀತು.

ಅಭಿಪ್ರಾಯ ಮತ್ತು ಸೈದ್ಧಾಂತಿಕ ಭೇದಗಳು ಇರಲಿ. ಅವುಗಳನ್ನು ಮನಸ್ಸಿನ ಒಂದು ಒಳ ಕೊಣೆಯಲ್ಲಿ ಇಟ್ಟುಕೊಂಡೇ ಗಾಂಧಿ ಎಂಬ ಅಂಗಳದಲ್ಲಿ ಒಟ್ಟು ಸೇರೋಣ. ನಮ್ಮ ನಮ್ಮ ಕಾರ್ಯಕ್ರಮ ನಮಗಿರಲಿ; ಗಾಂಧಿ ಮಾತ್ರ ನಮ್ಮೆಲ್ಲರ “ಕನಿಷ್ಠ ಸಾಮಾನ್ಯ ಕಾರ್ಯಕ್ರಮ” ವಾಗಿರಲಿ.