ಅಭಿವೃದ್ಧಿಯ ಫಲ ಕೃಷಿಕನನ್ನು ತಲುಪಬಲ್ಲುದೆ?

– ಪ್ರಸಾದ್ ರಕ್ಷಿದಿ

ಇಂದು ಎಲ್ಲ ಸರ್ಕಾರಗಳೂ ಅಭಿವೃಧ್ದಿಯ ಮಾತನ್ನು ನಿತ್ಯ ವಿಧಿಯ ಮಂತ್ರದಂತೆ ಪಠಿಸುತ್ತಿವೆ. ದೇಶ ಅಭಿವೃದ್ಧಿಯಾದರೆ ಉಳಿದೆಲ್ಲ ಸಮಸ್ಯೆಗಳೂ ತಾನಾಗಿಯೇ ನಿವಾರಣೆಯಾಗುತ್ತದೆ ಎಂಬಂತ ಮಾತನ್ನು ಅನೇಕ ರಾಜಕಾರಣಿಗಳು. ಹಲವರು ಸಾಮಾಜಿಕ ಕಾರ್ಯಕರ್ತರೂ ಆಡುತ್ತಿದ್ದಾರೆ. ಆದರೆ ಅಭಿವೃದ್ಧಿ ಎಂದರೇನು ಎಂಬುದಕ್ಕೆ ರಾಜಕೀಯ ಪಕ್ಷಗಳಲ್ಲಿ ಸಾಮಾಜಿಕ ಕಾರ್ಯಕರ್ತರಲ್ಲಿ ಚಿಂತಕರಲ್ಲಿ ಹಲವಾರು ನಮೂನೆಗಳು, ವಿಭಿನ್ನ ಅಭಿಪ್ರಾಯಗಳೂ ಇವೆ. ಇವೆರಡರಲ್ಲಿ ಎರಡು ಮುಖ್ಯಧಾರೆಯ ಚಿಂತನೆಯನ್ನು ನಾವು ಗಮನಿಸಬಹುದು.

ಮೊದಲನೆಯದಾಗಿ ಅಭಿವೃದ್ಧಿ ಎಂದರೆ, ಜನ ಸಾಮಾನ್ಯನ ಜೀವನ ಮಟ್ಟವನ್ನು ಸುಧಾರಿಸುವುದು ಅದಕ್ಕಾಗಿ ಹಲವು ಜನಪರ farmersಯೋಜನೆಗಳು, ಎಲ್ಲರಿಗೂ ಉದ್ಯೋಗ, ವಸತಿ, ಆಹಾರ ಭದ್ರತೆ, ವೈದ್ಯಕೀಯ ಸೌಲಭ್ಯ. ವಿದ್ಯಾಭ್ಯಾಸದ ಅವಕಾಶ ಇತ್ಯಾದಿಯನ್ನು ಸರ್ಕಾರದ ಮೂಲಕ ಒದಗಿಸುವುದು. ಹಲವು ಕ್ಷೇತ್ರಗಳಲ್ಲಿ ಅನಗತ್ಯ ಸ್ಪರ್ಧೆಯನ್ನು ನಿಯಂತ್ರಿಸಿ, ಸರ್ಕಾರವೇ ಹಲವು ಉದ್ಯಮಗಳನ್ನು ನಡೆಸುವುದು, ಸೇವಾ ಸೌಲಭ್ಯಗಳನ್ನುಗಳನ್ನು ಒದಗಿಸುವುದು,ಇತ್ಯಾದಿಗಳು.

ಎರಡನೇ ಮಾದರಿಯೆಂದರೆ, ಮೊದಲು ಎಲ್ಲ ಕ್ಷೇತ್ರಗಳಲ್ಲಿ ಉದ್ಯೋಗಗಳನ್ನು ಸೃಷ್ಟಿಮಾಡುತ್ತ ಹೋಗುವುದು. ಅದಕ್ಕಾಗಿ ಸರ್ಕಾರದ ನಿಯಂತ್ರಣವನ್ನು ಕನಿಷ್ಟಗೊಳಿಸಿ ಖಾಸಗಿಯವರಿಗೆ ಉತ್ತೇಜನ ನೀಡುವುದು. ಉದ್ಯೋಗವಕಾಶಗಳು ಹೆಚ್ಚಿದಂತೆಲ್ಲ, ಎಲ್ಲಕಡೆ ಸ್ಪರ್ಧೆಗೆ ಅವಕಾಶ ನೀಡುವುದರಿಂದ ಉತ್ತಮ ಗುಣಮಟ್ಟದ ಸೇವೆ ಹಾಗೂ ಉತ್ಪನ್ನಗಳು, ಎರಡೂ ಜನರಿಗೆ ದೊರಕಿ ಅವನ ಜೀವನ ಮಟ್ಟ ತಾನಾಗಿಯೇ ಸುಧಾರಿಸುತ್ತದೆ. ಎನ್ನುವುದು.

ಭಾರತ ಸ್ವತಂತ್ರವಾದ ಮೊದಲ ಮೂವತ್ತೈದು ವರ್ಷಗಳು ಮೊದಲನೆಯ ಅಂದರೆ ಸಮಾಜವಾದಿ ನಮೂನೆಯ –ಚಿಂತನೆಯ ಸರ್ಕಾರಗಳಿದ್ದರೆ, ನಂತರದ ವರ್ಷಗಳಲ್ಲಿ ಎರಡನೆಯ, ಬಲಪಂಥೀಯ ವಾದದ ಆಡಳಿತವನ್ನು ಕಾಣುತ್ತಿದ್ದೇವೆ. ವಿಷೇಶವೆಂದರೆ ಎರಡೂ ಮಾದರಿಯ ಸರ್ಕಾರ- ಆಡಳಿತಗಳೂ ಅಭಿವೃದ್ಧಿಯನ್ನೇ ಮೂಲಗುರಿಯಾಗಿಸಿಕೊಂಡು ಆಡಳಿತ ನಡೆಸಿವೆ. ನಾನು ಉದ್ಧೇಶ ಪೂರ್ವಕವಾಗಿಯೇ ಯಾವುದೇ ಪಕ್ಷಗಳನ್ನು ಹೆಸರಿಸುತ್ತಿಲ್ಲ. ಯಾಕೆಂದರೆ ಮೇಲ್ನೋಟಕ್ಕೆ ಕಾಣುವ ಕೆಲವು ಮುಖವಾಡ ಸದೃಶ ಕಾರ್ಯಕ್ರಮಗಳನ್ನು ಹೊರತು ಪಡಿಸಿದರೆ ನಮ್ಮ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ದೊಡ್ಡಮಟ್ಟದ ಸೈದ್ಧಾಂತಿಕ ವೆತ್ಯಾಸವೂ ಇಲ್ಲ. ಆಡಳಿತಾತ್ಮಕ ಭಿನ್ನತೆಯೂ ಇಲ್ಲ.

ಹೀಗಿದ್ದರೂ ಭಾರತದ ಹಲವಾರು ಸಮಸ್ಯೆಗಳ ನಡುವೆಯೂ ಯಾವುದೇ ಅಭಿವೃದ್ದಿ ಆಗಿಯೇ ಇಲ್ಲವೆ? ಎಂದರೆ ಖಂಡಿತ ಇಂದು ನಾವು ಹಲವಾರು ಕ್ಷೇತ್ರಗಳಲ್ಲಿ ಸಾಧಿಸಿರುವ ಅಭಿವೃದ್ಧಿ ಗಣನೀಯವಾಗಿಯೇ ಇದೆ. ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ, ಶಿಕ್ಷಣ, ಕಲೆ, ಕ್ರೀಡೆ, ಉದ್ಯಮ ಹೀಗೆ ಎಲ್ಲ ವಿಚಾರಗಳಲ್ಲೂ ನಮ್ಮ ಸಾಧನೆ ಖಂಡಿತ ವಿಶ್ವವೇ ಗಮನಿಸುವಂತೆ ಇದೆ. ರಾಷ್ಟ್ರೀಯ ಉತ್ಪನ್ನ ಹಲವಾರು ಪಟ್ಟು ಹೆಚ್ಚಾಗಿದೆ. ಹಾಗೇ ಉದ್ಯೋಗಾವಕಾಶಗಳು ಹೆಚ್ಚಿವೆ. ಶ್ರೀಮಂತ ವರ್ಗ ಬಲೂನಿನಂತೆ ಉಬ್ಬಿದ್ದರೆ, ಮಧ್ಯಮ ವರ್ಗವೂ ದೊಡ್ಡ ಪ್ರಮಾಣದ ಫಲಾನುಭವಿಯಾಗಿದೆ. ಆದರೆ ಒಟ್ಟು ಏರಿಕೆಯಾಗಿರುವ ನಮ್ಮ ಜನಸಂಖ್ಯೆಯ ಪ್ರಮಾಣ ಮತ್ತು ತಲಾ ಆದಾಯವನ್ನು ಹೋಲಿಸಿದರೆ. ಕೆಳವರ್ಗದ, ಸಣ್ಣರೈತರ, ಕೂಲಿಕಾರ್ಮಿಕರ ಆದಾಯದಲ್ಲೂ ಸಾಕಷ್ಟು ಏರಿಕೆಯಾಗಿದ್ದು ಅವರ ಜೀವನ ಮಟ್ಟದಲ್ಲೂ ಬದಲಾವಣೆಯಾಗಿರುವುದು ಕಂಡುಬರುತ್ತದೆ. ಆದರೆ ನಮ್ಮ ಜನಸಂಖ್ಯೆಯ ಗಣನೀಯ ಭಾಗವಿನ್ನೂ ಬಡತನದಲ್ಲೇ ಉಳಿದಿದೆ. ಹಾಗೂ ಒಟ್ಟು ಸಂಪತ್ತಿನ ಹಂಚಿಕೆಯ ಅನುಪಾತ ಹಿಂದೆಂದಿಗಿಂತ ವಿಷಮವಾಗಿದೆ. ಇದು ಭಾರತದಾದ್ಯಂತ ರಾಜ್ಯದಿಂದ ರಾಜ್ಯಕ್ಕೆ ಮತ್ತೆ ರಾಜ್ಯಗಳೊಳಗೆ ಪ್ರಾದೇಶಿಕವಾಗಿಯೂ ಭಿನ್ನವಾಗಿದೆ. ಆದ್ದರಿಂದ ಸರ್ಕಾರ ಯೋಜಿಸುವ ಯಾವದೇ ಜನಪರ-ಅಭಿವೃದ್ದಿ ಯೋಜನೆಗಳು ನಮ್ಮ ಅಪಾರ ಪ್ರಾದೇಶಿಕ ಭಿನ್ನತೆ ಹಾಗೂ ಸಾಂಸ್ಕøತಿಕ ಬಹುತ್ವಗಳನ್ನು ಗಮನದಲ್ಲಿಟ್ಟುಕೊಂಡು. ಸ್ಥಳೀಯವಾಗಿ ರೂಪಿತವಾಗದಿದ್ದರೆ ನಿಶ್ಚಿತ ಪರಿಣಾಮವನ್ನು ಬೀರಲು ಅಸಮರ್ಥವಾಗುತ್ತದೆ. (ಉದಾ: ಉದ್ಯೋಗ ಖಾತ್ರಿಯಂತಹ ಯೋಜನೆಗಳು, ಪ್ರಾದೇಶಿಕ ಭಿನ್ನತೆ ಮತ್ತು ಅಗತ್ಯಗಳನ್ನು ಪರಿಗಣಿಸದೆ ದೇಶಾದ್ಯಂತ ಏಕರೂಪದಲ್ಲಿ ಜಾರಿಗೆ ತಂದದ್ದರಿಂದ ನಿಶ್ಚಿತ ಫಲವನ್ನೂ ನೀಡದೆ ವ್ಯಾಪಕ ಭ್ರಷ್ಟಾಚಾರಕ್ಕೆ ಕಾರಣವಾಯಿತು.)

ಈ ಎಲ್ಲ ವಿಚಾರಗಳ ಹಿನ್ನೆಲೆಯಲ್ಲಿ ಅಭಿವೃದ್ಧಿಯು ಕೃಷಿಕ್ಷೇತ್ರವನ್ನು ಹೇಗೆ ತಲುಪಿದೆ, ಅದರ ಪರಿಣಾಮಗಳೇನಾಗಿವೆ ಎಂದು ಪರಿಶೀಲಿಸಬೇಕಾಗಿದೆ.

ಕೃಷಿವಲಯವೆಂದರೆ, ರೈತಾಪಿವರ್ಗ ಮಾತ್ರವಲ್ಲ ಭೂರಹಿತ, ಅಲ್ಪಸ್ವಲ್ಪ ಭೂಮಿಹೊಂದಿದ ಕೃಷಿ ಕೂಲಿಗಾರರು, ಕೃಷಿಕರನ್ನೇ ಅವಲಂಬಿಸಿ ಬದುಕುತ್ತಿರುವ ಕಮ್ಮಾರ, ಬಡಗಿ, ಗಾರೆಯವರು, ಹಳ್ಳಿಗಳಲ್ಲಿರುವ ಯಂತ್ರೋಪಕರಣಗಳ ರಿಪೇರಿಯವರು, ದರ್ಜಿಗಳು ಇತರ ಸಣ್ಣಪುಟ್ಟ ಉಪಕಸುಬುದಾರರು ಎಲ್ಲರೂ ಬರುತ್ತಾರೆ. ಇವರೆಲ್ಲರೂ ಕೃಷಿಯನ್ನೇ ಅವಲಂಬಿಸಿ ಬದುಕುತ್ತಿರುವುದರಿಂದ ಕೃಷಿಯ ಮೇಲಾಗುವ ಯಾವುದೇ ಪರಿಣಾಮವೂ ಇವರನ್ನೂ ಆವರಿಸಿಕೊಳ್ಳುತ್ತದೆ.

ಇದರೊಂದಿಗೆ ಗಮನಿಸಬೇಕಾದ ಮುಖ್ಯವಾದ ಸಂಗತಿಯೆಂದರೆ. ದೇಶದಲ್ಲಿ ಸಮಾಜವಾದೀ ಮಾದರಿಯ ಸರ್ಕಾರ ಇದ್ದ ಕಾಲದಲ್ಲಿ. ನಮ್ಮ ಹಳ್ಳಿಗಳಲ್ಲಿ ಪಾಳೇಗಾರೀ-ಜಮೀನ್ದಾರೀ ಸಂಬಂಧಗಳೇ ಮುಂದುವರೆದಿದ್ದವು. ಕರ್ನಾಟಕದಂತಹ ಕೆಲವು ರಾಜ್ಯಗಳಲ್ಲಿ ಭೂಸುಧಾರಣೆ ಜಾರಿಗೆ ಬಂದ ನಂತರವೂ, ಹಳ್ಳಿಗಳಲ್ಲಿ ಭೂರಹಿತ ಕೃಷಿಕೂಲಿಗಾರರ ಬದುಕಿನಲ್ಲಿ ಮಹತ್ತರ ಬದಲಾವಣೆಯೇನೂ ಆಗಿರಲಿಲ್ಲ. ಭೂಸುಧಾರಣೆಯ ಫಲಾನುಭವಿಗಳಾದ ಗೇಣಿದಾರರು, ಕೂಲಿಗಾರ ಪಾಲಿಗೆ ಭೂಮಾಲಿಕರಾಗಿ ಹಳೆಯ ಜಮೀನ್ದಾರೀ ಸಂಬಂಧಗಳಲ್ಲೇ ಮುಂದುವರೆದರು. ಆದರೆ ಈ ಪಾಳೇಗಾರೀ ಸ್ವರೂಪದ ಸಂಬಂಧಗಳು ಬದಲಾಗಲು ಪ್ರಾರಂಭವಾದದ್ದು. ಭಾರತ ಸಮಾಜವಾದಿ ಮಾದರಿಯನ್ನು ಬಿಟ್ಟು ಬಲಪಂಥೀಯ ಮಾದರಿ ಆಡಳಿತವನ್ನು ಪ್ರಾರಂಭಿಸಿದ ನಂತರವೇ. ಇದಕ್ಕೆ ಅನೇಕ ಕಾರಣಗಳಿವೆ.

ಇತ್ತೀಚಿನ ಎಲ್ಲ (ರಾಜ್ಯ-ಕೇಂದ್ರಗಳ) ರೈತರಬಗ್ಗೆ, ಕೃಷಿವಲಯದ ಬಗ್ಗೆ ಬಹಳ ಮಾತನಾಡುತ್ತಿವೆ. ಪ್ರತ್ಯೇಕ ಬಜೆಟ್ಟನ್ನೂ ತಂದಿವೆ. farmer-land-acquisition-2ಕೃಷಿವಲಯಕ್ಕೆಂದೇ ಹಲವಾರು ಯೋಜನೆಗಳನ್ನು-ಕಾರ್ಯಕ್ರಮಗಳನ್ನೂ ಘೋಷಣೆ ಮಾಡುತ್ತಿದೆ. ಆದರೆ ಹಳ್ಳಿಗಳು ಬರಡಾಗುತ್ತ, ದುಡಿಯುವ ಶಕ್ತಿಯಿರುವ ಯುವಜನತೆ ನಗರ ವಲಸೆ ಹೋಗುತ್ತಿದ್ದಾರೆ. ಯಾವ ಹಳ್ಳಿಯನ್ನು ಪ್ರವೇಶಿಸಿ ಪ್ರತಿಯೊಂದು ಮನೆಯಲ್ಲಿ ಪ್ರಶ್ನಿಸಿದರೆ ಮನೆಯಲ್ಲಿ ಒಬ್ಬನಾ(ಳಾ)ದರೂ ಬೆಂಗಳೂರು, ಮುಂಬೈ ಅಥವಾ ಇನ್ನಾವುದೇ ನಗರ ಇಲ್ಲವೇ ವಿದೇಶದಲ್ಲಿದ್ದಾರೆ. ಇವರಲ್ಲೂ ಅನೇಕರು ತಮ್ಮ ಜೀವನಾವಶ್ಯಕತೆ ತಕ್ಕಷ್ಟು ಮಾತ್ರ ಗಳಿಸುತ್ತಿದ್ದು ಹಳ್ಳಿಯಲ್ಲಿರುವ ತಮ್ಮ ಕುಟುಂಬದವರಿಗೆ ಸಹಾಯ ಮಾಡುವ ಸ್ಥಿತಿಯಲ್ಲಿ ಇಲ್ಲ. ಆದರೆ ಹೀಗೆ ಹೊರ ಹೋದವರಲ್ಲಿ ಗಣನೀಯವಾದ ಸಂಖ್ಯೆಯ ಜನ ತಮ್ಮ ಗಳಿಕೆಯ ಒಂದು ಪಾಲನ್ನು ತಮ್ಮ ಕುಟುಂಬಕ್ಕೆ ನೀಡುತ್ತಿದ್ದಾರೆ. ಇದರಿಂದಾಗಿ ಅವರ ಆರ್ಥಿಕ ಮಟ್ಟವೂ ಸುಧಾರಿಸಿದೆ. ಜೊತೆಯಲ್ಲೇ ಹಳ್ಳಿಗಳಲ್ಲೇ ಕೂಲಿಕಾರ್ಮಿಕರ ಕೊರತೆ ಉಂಟಾಗಿರುವುದರಿಂದ, ಭೂರಹಿತ ಕೂಲಿಯಾಳುಗಳು ಕೂಲಿಗಾಗಿ ಭೂಮಾಲಿಕರ ಮುಂದೆ ದೈನೇಸಿಯಾಗಿ ನಿಲ್ಲಬೇಕಾದ ಪರಿಸ್ಥಿತಿ ಕಡಿಮೆಯಾಗಿದೆ. ಇಂತಹ ಪರಿಸ್ಥಿತಿ ದೇಶಾದ್ಯಂತ ಕೆಲವು ರಾಜ್ಯ-ಭಾಗಗಳಲ್ಲಿ ಕಂಡುಬಂದರೆ ಇನ್ನು ಕೆಲವು ಭಾಗಗಳಲ್ಲಿ ತೀವ್ರ ಬಡತನ ನಿರುದ್ಯೋಗವೇ ಮುಂದುವರೆದಿದೆ. ಈ ಪ್ರದೇಶಗಳಿಂದ ಜನರು ಕೂಲಿ-ಕೆಲಸಗಳಿಗಾಗಿ ಬೇರೆ ರಾಜ್ಯಗಳಿಗೆ ವಲಸೆ ಹೋಗುವುದು ನಿರಂತರವಾಗಿದೆ. ಉದಾಹರಣೆಗೆ ಕರ್ನಾಟಕದ ದಕ್ಷಿಣ ಒಳನಾಡು ,ಮಲೆನಾಡು ಹಾಗೂ ಕರಾವಳಿಯ ಭಾಗಗಳಲ್ಲಿ ಕೇವಲ ಮೂರು -ನಾಲ್ಕು ವರ್ಷಗಳ ಹಿಂದೆ ಕೃಷಿ ಸಾಧ್ಯವೇ ಇಲ್ಲವೆನ್ನುವಷ್ಟು ಕಾರ್ಮಿಕರ ಕೊರತೆ ಉಂಟಾಗಿತ್ತು. ಈಗ ಉದ್ಯೋಗವಕಾಶಗಳು ಕಡಿಮೆ ಇರುವ ಬಿಹಾರ, ಒರಿಸ್ಸಾ ಹಾಗೂ ಅಸ್ಸಾಮಿನಿಂದ ಸಾಕಷ್ಟು ಜನರು ವಲಸೆ ಬರುತ್ತಿದ್ದಾರೆ. ಆದರೆ ಇವರಿಗೆ ಈ ನೆಲದಲ್ಲಿ ಯಾವುದೇ ಸಂಬಂಧಗಳಿಲ್ಲದಿರುವುದರಿಂದ, ಇವರಿಗೆ ಸಂಬಳ ಸಾರಿಗೆ ವಿಚಾರದಲ್ಲಿ ಸ್ವಲ್ಪ ಮಟ್ಟಿನ ಆಯ್ಕೆಯ ಸ್ವಾತಂತ್ರ್ಯ ಇದೆ. ಇಲ್ಲೇ ಇರುವ ಸ್ಥಳೀಯ ಕುಶಲ ಕರ್ಮಿಗಳು-ಕೂಲಿಕಾರರಿಗೂ ಸ್ವಲ್ಪಮಟ್ಟಿಗೆ ಚೌಕಾಸಿಯ ಬಲ ಬಂದಿರುವುದರಿಂದ ತಮ್ಮ ಕೂಲಿ ಮತ್ತು ಕೆಲಸದ ಪರಿಸ್ಥಿತಿ ಇನ್ನಿತರ ವಿಷಯಗಳ ಬಗ್ಗೆ ಮಾಲೀಕರೊಂದಿಗೆ ಮಾತು ಕತೆಗೆ ನಿಲ್ಲಬಲ್ಲರು. ಇವೆಲ್ಲದರಿಂದ ಹಳೆಯ ಪಾಳೇಗಾರೀ ಸಂಬಂಧಗಳಿಗೆ ಬದಲಾಗಿ ಭಂಡವಾಳಶಾಹಿ ವ್ಯವಸ್ಥೆಯ ಮಾಲೀಕ ನೌಕರ ಸಂಬಂಧಗಳು ಏರ್ಪಡುತ್ತಿವೆ. ಮತ್ತು ಹಣ ಮುಖ್ಯ ಭೂಮಿಕೆಗೆ ಬಂದಿದೆ.

ಇದರಿಂದಾಗಿ ತಮ್ಮ ಬೆಳೆಗೆ ತಾವೇ ಬೆಲೆ ನಿರ್ಧರಿಸಲಾಗದ ಅಸಹಾಯಕತೆಯಲ್ಲಿರುವ ಕೃಷಿಕರು,farmers-suicide ಕೂಲಿಕಾರ್ಮಿಕರು ಕೂಲಿ ಮತ್ತು ಇತರ ಸೌಲಭ್ಯಗಳಿಗಾಗಿ ಚೌಕಾಸಿ ಮಾಡುವುದನ್ನು ಕಂಡು “ಕೂಲಿಗಾರರೆಲ್ಲ ಹೆಚ್ಚಿಹೋಗಿದ್ದಾರೆಂದೂ ಯಾರೂ ಕೆಲಸ ಮಾಡುತ್ತಿಲ್ಲವೆಂದೂ, ಸರ್ಕಾರ ಅನೇಕ ಯೋಜನೆಗಳ ಮೂಲಕ ಇವರನ್ನು ಇನ್ನಷ್ಟು ಸೋಮಾರಿಗಳಾಗಿ ಮಾಡುತ್ತಿದೆ”ಯೆಂದೂ ದೂರುತ್ತಿರುತ್ತಾರೆ. ಎಲ್ಲ ವಿದ್ಯಮಾನಗಳ ಅರಿವಿರುವ ದೊಡ್ಡ ಭೂಮಾಲಕರೂ ಮತ್ತು ಕೆಲವರು ನಗರಪ್ರದೇಶದ ಮಧ್ಯಮ ವರ್ಗದವರು ಇವರೊಂದಿಗೆ ಅಲಂಕಾರಿಕವಾಗಿ ದನಿಗೂಡಿಸುತ್ತಾರೆ. ಇದರಿಂದಾಗಿಯೇ ಮಾಧ್ಯಮಗಳಲ್ಲಿ ಸರ್ಕಾರದ ಆಹಾರ ಭದ್ರತಾ ಕಾರ್ಯಕ್ರಮ ಮತ್ತು ಇತರ ಜನಪ್ರಿಯ ಯೋಜನೆಗಳ ಬಗ್ಗೆ ಪರ-ವಿರೋಧಗಳ ಯುದ್ಧವೇ ನಡೆಯುತ್ತಿರುತ್ತದೆ.

ಇಂದು ಯಾವುದೇ ಹಳ್ಳಿಗೆ ಹೋದರೂ, ಅಂಗಡಿಗಳಲ್ಲಿ ನೇತುಹಾಕಿರುವ ಹಲವಾರು ಬಗೆಯ ಬಣ್ಣಗಳ ಪ್ಯಾಕೆಟ್‍ಗಳು. ಖರ್ಚಾಗುವ, ಪೆಪ್ಸಿ-ಕೋಕಾಕೋಲಾ ಬಾಟಲಿಗಳು. ಅಲ್ಲೇ ಗುಟ್ಟಾಗಿ ಮಾರಾಟವಾಗುವ ಮಧ್ಯದ ಪ್ರಮಾಣ, ಮನೆಮನೆಗಳನ್ನು ತಲುಪಿರುವ ಸ್ಮಾರ್ಟ್‍ಫೋನ್‍ಗಳು, (ಹಳ್ಳಿಗಳಲ್ಲಿಂದು ಆಹಾರ ಪಧಾರ್ಥಗಳಿಗಿಂತ ಹೆಚ್ಚಿನ ಮೊತ್ತದ ಹಣ ಮೊಬೈಲ್ ಕರೆನ್ಸಿಗೆ ಖರ್ಚಾಗುತ್ತಿದೆ) ಇದನ್ನು ಕಂಡಾಗ, ಹೊರಗಿನಿಂದ ಬಂದವರಿಗೆ ಹಳ್ಳಿಗಳಿಂದು ಸಮೃದ್ಧವಾಗಿದೆ ಎನ್ನಿಸದೆ ಇರದು.

ಆದರೆ ನಿಜವಾದ ಸಮಸ್ಯೆಯಿರುವುದು ಹೊರಗಿನ ಯಾವ ಆದಾಯವೂ ಇಲ್ಲದ, ಕೃಷಿಯನ್ನು ಮಾತ್ರ ನಂಬಿ ಬದುಕುತ್ತಿರುವವರಲ್ಲಿ, ಮತ್ತು ನಾನಾ ಕಾರಣಗಳಿಂದ ದುಡಿಯಲು ಅಸಮರ್ಥರಾಗಿರುವ ಕೂಲಿಕಾರ್ಮಿಕರಲ್ಲಿ, ಹಾಗೂ ಮಿತ ಆದಾಯ ಆಥವಾ ನಿಶ್ಚಿತ ಆದಾಯವಿಲ್ಲದ ದರ್ಜಿ, ಟ್ಯಾಕ್ಸಿ-ರಿಕ್ಷಾ ಓಡಿಸುವವರು, ಸಣ್ಣ ಉದ್ಯೋಗಿಗಳು ಮುಂತಾದವರಲ್ಲಿ. ಇವರ ಸಂಖ್ಯೆಯೂ ಗಣನೀಯವಾಗಿದೆ. ಸಾಮಾನ್ಯವಾಗಿ ಕಷ್ಟನಷ್ಟಗಳಲ್ಲಿ ಸೋತು ಆತ್ಮಹತ್ಯೆಯೋ ಪಲಾಯನವೋ ಮಾಡುವವರು. ಇಲ್ಲವೇ ಎಲ್ಲವನ್ನೂ ಮಾರಿ ಬೀದಿ ಪಾಲಾಗುವವರು ಇವರಲ್ಲೇ ಹೆಚ್ಚಾಗಿದ್ದಾರೆ. ಆದರೆ ಇಂದಿನ ಪರಿಸ್ಥಿತಿಯಲ್ಲಿ ಆಬಿವೃದ್ಧಿ ಫಲ ಕೃಷಿಕ್ಷೇತ್ರಕ್ಕೆ ದೊರೆತಿದೆಯೆ ಅಥವಾ ಅದರ ಪರಿಣಾಮಗಳೇನು ಎಂದು ನೋಡಬೇಕಾದರೆ. ಇದನ್ನು ಮಾತ್ರ ಗಮನಿಸಿದರೆ ಸಾಲದು. naxalite24fo4ಅನ್ಯ ಆದಾಯಗಳನ್ನು ಹೊರತು ಪಡಿಸಿದರೆ ಕೃಷಿಕ್ಷೇತ್ರ ಹೇಗಿದೆ. ನಿಜವಾಗಿಯೂ ಅಭಿವೃಧ್ಧಿಯ ಫಲ “ಕೃಷಿಭಾರತ’ ವನ್ನು ತಲಪಿದೆಯೆ? ಇಲ್ಲದಿದ್ದರೆ ಮುಂದೇನು ಎಂದು ಪರಿಶೀಲಿಸೋಣ.

ಎಲ್ಲ ಸರ್ಕಾರಗಳೂ ಕೃಷಿಗೆ ಉತ್ತೇಜನ ನೀಡುತ್ತೇವೆಂದು ಹೇಳುತ್ತ ಆಧುನಿಕ ತಂತ್ರಜ್ಞಾನದ ಫಲ ರೈತನಿಗೆ ಸಿಗಬೇಕೆಂದು ಹೇಳುತ್ತ ಅದಕ್ಕಾಗಿಯೇ ಒಂದಷ್ಟು ಹಣವನ್ನು ಮೀಸಲಿಡುತ್ತಿವೆ; ಜೊತೆಯಲ್ಲಿಯೇ ಸಾವಯವ ಕೃಷಿಯೇ ಎಲ್ಲ ಸಮಸ್ಯೆಗಳಿಗೆ ಪರಿಹಾರವೆಂಬಂತೆ ಪ್ರಚಾರವನ್ನೂ ಮಾಡುತ್ತವೆ. ಇದೆಲ್ಲದರ ಹಿನ್ನೆಲೆನ್ನೂ ಪರಿಶೀಲಿಸಿದರೆ ಅನೇಕ ಸಂಗತಿಗಳು ನಮ್ಮ ಗಮನಕ್ಕೆ ಬರುತ್ತವೆ.

ಒಂದೆಡೆ ಸಾವಯವ ಕೃಷಿಯ ಬಗ್ಗೆ ಮಾತನಾಡುವ ಸರ್ಕಾರ, ಹೈಟೆಕ್ ಕೃಷಿಗೆ ನೀಡುತಿರ್ತುವ ಸವಲತ್ತು ಮತ್ತು ಪ್ರಚಾರ ಊಹೆಗೂ ಮೀರಿದ್ದು. ಈ ಹೈಟೆಕ್ ತಂತ್ರಜ್ಞಾನವೆಂಬುದು ನಮ್ಮ ಜೀವನದ ಎಲ್ಲ ರಂಗಗಳನ್ನು ಪ್ರವೇಶಿಸಿದಂತೆಯೇ ಅಗಾಧ ಪ್ರಮಾಣದಲ್ಲಿ ಕೃಷಿ ವಲಯವನ್ನು ಆವರಿಸಿಕೊಳ್ಳುತ್ತಿದೆ. ಸರ್ಕಾರದ ಕೃಷಿ ಇಲಾಖೆಯ ವಿಜ್ಷಾನಿಗಳು, ಅಧಿಕಾರಿಗಳು, ತಂತ್ರಜ್ಷರ ಸಾಲು ಸಾಲುಗಳಲ್ಲದೆ, ಈ ಹೈಟೆಕ್ ತಂತ್ರಜ್ಞಾನದ ಪ್ರಚಾರ, ಮಾರಾಟ, ನಿರ್ವಹಣೆ ಮತ್ತು ತಾಂತ್ರಿಕಸಲಹೆಗಾಗಿ ದೊಡ್ಡ ಪಡೆಯನ್ನೇ ನಿರ್ಮಿಸಿರುವ ಬೃಹತ್ ವ್ಯಾಪಾರಿ ಸಂಸ್ಥೆಗಳು, ಇವರೆಲ್ಲರೂ ಸೇರಿ ಕೃಷಿಕರಿಗೆ ಒಡ್ಡುತ್ತಿರುವ ಆಮಿಷಗಳು ಹಲವಾರು. ನೀಟಾಗಿ ಡ್ರೆಸ್‍ಮಾಡಿ ಸರ್ಜರಿ ಆಪರೇಷನ್‍ಗೆ ಹೊರಟ ತಜ್ಞವೈದ್ಯರಂತೆ ಕಂಗೊಳಿಸುತ್ತ “ಕೃಷಿ ಕ್ಷೇತ್ರ’ಕ್ಕೆ ಭೇಟಿನೀಡುವ ‘ತಾಂತ್ರಿಕ ಸಲಹೆಗಾರರು’, ‘ಕ್ಷೇತ್ರ ಪರಿವೀಕ್ಷಕರು’ ಇವರನ್ನೆಲ್ಲ ಕಂಡಾಗ, ನಮ್ಮ ಕೃಷಿವಲಯ ಇಷ್ಟೊಂದು ಸಮೃದ್ಧವಾಗಿದೆಯೇ? ಎಂದು ಅನ್ನಿಸದೆ ಇರದು. ಅವರು ಬಳಸುವ ನುಡಿಗಟ್ಟುಗಳನ್ನು ಗಮನಿಸಿ, ತೋಟ ಹೊಲ ಗದ್ದೆಗಳ ಬದಲಾಗಿ. ‘ಕೃಷಿ ಕ್ಷೇತ್ರ’ ‘ಕೃಷಿಉದ್ಯಮ’ ಜೊತೆಗೆ ‘ಅಗ್ರಿಕ್ಲಿನಿಕ್’ ‘ಅಗ್ರಿಟೆಕ್ನಿಕ್’ ಇತ್ಯಾದಿ ಮಾಯಾಜಾಲದ ತಾಂತ್ರಿಕ ಪದಗಳು. ಇವುಗಳೊಂದಿಗೆ ಅವರು ತಯಾರಿಸಿಕೊಂಡ ತಜ್ಞವರದಿಗಳು, ಸಂಶೋಧನಾ ಪ್ರಬಂಧಗಳು. ಇವುಗಳೆಲ್ಲವೂ ಸೇರಿ ಇನ್ನು ಕೆಲವೇ ವರ್ಷಗಳಲ್ಲಿ ಕನ್ನಡದ ‘ತೋಟ, ಗದ್ದೆ, ಹೊಲ’ ಗಳೆಲ್ಲ ಮಾಯವಾಗಿಬಿಟ್ಟರೆ ಆಶ್ಚರ್ಯವೇನೂ ಇಲ್ಲ. ಸದ್ಯಕ್ಕೆ ಇವರನ್ನೆಲ್ಲ ನೋಡುತ್ತ ರೈತ ದಂಗಾಗಿರುವುದಂತೂ ನಿಜ.

ಸಾವಯವ ಕೃಷಿ ಮತ್ತು ಹೈಟೆಕ್ ಕೃಷಿ ಇವುಗಳು, ಪೂರ್ವ ಪಶ್ಚಿಮ ತುದಿಗಳಾದರೆ, ಇನ್ನೊಂದು ನಾವೀಗ ಹೆಚ್ಚಾಗಿ ರೂಪಿಸಿಕೊಂಡಿರುವ guj-agricultureಆಧುನಿಕ ಕೃಷಿ. ಸಾಕಷ್ಟು ರಸಗೊಬ್ಬರ, ಹೆಚ್ಚು ಇಳುವರಿಯ ಹೈಬ್ರಿಡ್ ತಳಿಗಳು, ಹೆಚ್ಚು ನೀರು, ತರಹೇವಾರಿ ಕೃಷಿವಿಷಗಳನ್ನೆಲ್ಲ ಬಳಸಿ ಬೆಳೆಯುವ, ಸಾಕಷ್ಟು ಯಂತ್ರೋಪಕರಣಗಳನ್ನು ಉಪಯೋಗಿಸಲು ಅವಕಾಶವಿರುವ ಕೃಷಿಯೇ ಈ ಆಧುನಿಕ ಕೃಷಿ.

ಆಧುನಿಕ ಕೃಷಿಯ ಸಮರ್ಥಕರು ನೀಡುವ ಅತಿ ಮುಖ್ಯ ಉದಾಹರಣೆಯೆಂದರೆ ಸ್ವಾತಂತ್ರ್ಯೋತ್ತರ ಭಾರತದ ಆಹಾರ ಪರಿಸ್ಥಿತಿ. ಸುಮಾರು ಎಪ್ಪತ್ತರ ದಶಕದವರೆಗೂ ಭಾರತದ ಆಹಾರ ಮಂತ್ರಿಯೆಂದರೆ ಭಿಕ್ಷಾನ್ನ ಮಂತ್ರಿಯೆಂದೇ ಪ್ರಖ್ಯಾತ!. ಆಗ ಅಮೆರಿಕಾ ಕೊಟ್ಟರೆ ಮಾತ್ರ ನಮಗೆ ಅನ್ನ ಎಂಬ ಪರಿಸ್ಥಿತಿ, “ಆದರೆ ಈಗ ನೋಡಿ ನಾವು ಆಹಾರವನ್ನು ರಫ್ತು ಮಾಡುತ್ತಿದ್ದೇವೆ… ಜನಸಂಖ್ಯೆಯ ಅಗಾಧ ಏರಿಕೆಯ ಜೊತೆಯಲ್ಲೇ ಆಹಾರ ದಾಸ್ತಾನು ಕೂಡಾ ಅದೇ ಪ್ರಮಾಣದಲ್ಲಿ ಹೆಚ್ಚಿದೆ ………..” ಇತ್ಯಾದಿ. ಇದು ಅಂಕಿ ಅಂಶಗಳ ಮತ್ತು ಆಹಾರದ ಲಭ್ಯತೆಯ ಮಟ್ಟದಲ್ಲಿ ಖಂಡಿತ ನಿಜ. ಆದರೆ ಇದಕ್ಕೆ ಆಧುನಿಕ ಕೃಷಿಪದ್ಧತಿ ಒಂದೇ ಕಾರಣವಲ್ಲ. ಇತ್ತೀಚಿನ ವರ್ಷಗಳಲ್ಲಿ ಆದ ನಮ್ಮ ಅನೇಕ ಹೊಸ ನೀರಾವರಿ ಯೋಜನೆಗಳು ಮತ್ತು ಅದರಿಂದಾದ ಕೃಷಿ ಭೂಮಿಯ ವಿಸ್ತರಣೆ, ಹಾಗೂ ನಾವು ಹೊಸದಾಗಿ ಕೃಷಿಗೆ ಒಳಪಡಿಸಿದ ಅರಣ್ಯ ಭೂಮಿಯ ಪ್ರಮಾಣ ಇವುಗಳನ್ನೆಲ್ಲ ಸಮಗ್ರವಾಗಿ ಅಧ್ಯಯನ ಮಾಡಿದರಷ್ಟೇ ಸರಿಯಾದ ಚಿತ್ರಣ ದೊರೆತೀತು. ಈ ಆಧುನಿಕ ಕೃಷಿಯನ್ನೇ ವೈಜ್ಞಾನಿಕವೆಂದು ನಂಬಿಕೊಂಡವರಿಂದ ಈ ಸಮೀಕ್ಷೆ- ಅಧ್ಯಯನಗಳು ನಡೆದಲ್ಲಿ ಯಾವುದೇ ಪ್ರಯೋಜನವಿಲ್ಲ. ಕೆಲವು ವರ್ಷಗಳ ಹಿಂದೆಯೇ, ನಮ್ಮ ಹತ್ತಿರದ ಕೃಷಿ ಸಂಶೋಧನಾ ಕೇಂದ್ರದ ಹಿರಿಯ ವಿಜ್ಞಾನಿಯೊಬ್ಬರಿಗೆ ಅವರ ಸಂಶೋಧನೆಯ ಕೆಲವು ಲೇಖನಗಳನ್ನು ಪ್ರಕಟಿಸಲು ಅವರ ನಿರ್ದೇಶನಾಲಯದಿಂದ ಅನುಮತಿ ಸಿಗಲಿಲ್ಲ. ಯಾಕೆಂದರೆ ಅವರ ಸಂಶೋಧನೆಯ ಫಲಶ್ರುತಿ, ಸರ್ಕಾರ ಪ್ರಚಾರ ಮಾಡುತ್ತಿದ್ದ ವಿಷಯಗಳ ಹಾಗೂ ಕೆಲವು ಕಂಪೆನಿಗಳ ಹಿತಾಸಕ್ತಿಯ ವಿರುದ್ಧವಾಗಿತ್ತು. ಅವರ ಅಭಿಪ್ರಾಯ ಹೀಗಿತ್ತು “ಈಗ ನಮ್ಮ ಮುಂದಿರುವುದು ಕೆಲವು ಕೃಷಿ ಪದ್ಧತಿಗಳು, ಸಾಂಪ್ರದಾಯಿಕ ಕೃಷಿ, ಸಾವಯವ ಕೃಷಿ, ಮತ್ತು ಆಧುನಿಕ ಕೃಷಿ ಇತ್ಯಾದಿ… ವೈಜ್ಞಾನಿಕ ಕೃಷಿ ಎನ್ನುವುದು ನಾವಿನ್ನು ಕಂಡುಕೊಳ್ಳಬೇಕಾದ ಮತ್ತು ನಿರಂತರ ಹುಡುಕಾಟದಲ್ಲಿರಬೇಕಾದ ಮಾರ್ಗ ಅಷ್ಟೆ”. ಈ ನಿರಂತರ ಹುಡುಕಾಟದ ಕ್ರಿಯೆ ನಮ್ಮ ಜೀವನದ ಎಲ್ಲ ರಂಗಗಳಿಗೂ ಅನ್ವಯವಾಗಬೇಕಾದ ವಿಷಯ. ಅದಲ್ಲದೆ ಆ ವಿಜ್ಞಾನಿ ಮತ್ತೂ ಮುಂದುವರಿದು “ಆಧುನಿಕ ಕೃಷಿಯೆನ್ನುವುದು ದೊಡ್ಡ ಪ್ರಮಾಣದ ಕೃಷಿಗೆ ಅನುಕೂಲಕರವಾಗಿದೆ, ಯಾಕೆಂದರೆ ಯಂತ್ರಗಳು, ನೀರಾವರಿ, ಸುಧಾರಿತ ಬೀಜಗಳು, ಹಾಗೇ ದೊಡ್ಡ ಪ್ರಮಾಣದಲ್ಲಿ ರಸಗೊಬ್ಬರ-ಕೀಟನಾಶಕ, ಕಳೆನಾಶಕ ಮುಂತಾದವುಗಳ ಬಳಕೆ ಇದಕ್ಕೆ ಬೇಕಾಗುವ ದೊಡ್ಡ ಪ್ರಮಾಣದ ಭಂಡವಾಳ ಹೂಡಿಕೆ ಎಲ್ಲವನ್ನೂ ಒಳಗೊಂಡು ಕೈಗಾರಿಕೆ ಆಧಾರಿತ ಕೃಷಿಯಾಗಿದೆ” ಎಂದಿದ್ದರು. ಈ ಎಲ್ಲ ಕಾರಣಗಳಿಗಾಗಿಯೇ ಈ ಆಧುನಿಕ ಕೃಷಿ ನಮ್ಮನ್ನಾಳುವವರಿಗೂ ಅತ್ಯಂತ ಆಪ್ಯಾಯಮಾನವಾದದ್ದಾಗಿದೆ.

ಇದೀಗ ಇನ್ನೊಂದು ಮಧ್ಯಮ ಮಾರ್ಗವಾದ ‘ಸಾವಯವ ಕೃಷಿ’ಯನ್ನು ಗಮನಿಸೋಣ. ಈಗ ಸರ್ಕಾರವೇ ಸಾವಯವ rural-indiaಕೃಷಿಯ ಬಗ್ಗೆ ಆಸಕ್ತಿ ತೋರಿದೆಯೆಂದರೆ, ಸರ್ಕಾರಕ್ಕೆ ಈ ಆಧುನಿಕ ಕೃಷಿಯ ಅನಾಹುತಗಳು ಅರ್ಥವಾಗಿ ಸಾವಯವ ಕೃಷಿಯ ಪ್ರತಿಪಾದಕನಾಗಿದೆ ಎಂದುಕೊಂಡರೆ ಅದು ನಮ್ಮ ದಡ್ಡತನವಷ್ಟೆ. ಯಾವುದೇ ಸರ್ಕಾರಕ್ಕೂ ಯಾವಾಗಲೂ ಬೃಹತ್ ಯೋಜನೆಗಳೇ ಅಚ್ಚುಮೆಚ್ಚು. ಯೋಜನೆಗಳ ಗಾತ್ರ ಹಿರಿದಾದಷ್ಟೂ ಆಳುವವರ ಹಿತವೂ ದೊಡ್ಡ ಪ್ರಮಾಣದಲ್ಲಿ ರಕ್ಷಣೆಯಾಗುತ್ತದೆ. ಇದಕ್ಕೆ ಆಧುನಿಕ ಹಾಗೂ ಹೈಟೆಕ್ ಕೃಷಿಯ ದೊಡ್ಡ ಕಂಪೆನಿಗಳೇ ಸೂಕ್ತವಾದದ್ದು. ಹೀಗಿದ್ದೂ ಸರ್ಕಾರ ಈಗೇಕೆ ಸಾವಯವದ ಧ್ವನಿಯೆತ್ತಿದೆ? ವೈಯಕ್ತಿಕ ಮಟ್ಟದಲ್ಲಿ ಈ ರೀತಿ ಯೋಚಿಸುವ ಕೆಲವರು ಶಾಸಕರೋ ಮಂತ್ರಿಗಳೋ ಇರಬಹುದು, ಆದರೆ ಒಟ್ಟೂ ಆಡಳಿತ ಯಂತ್ರ ಯಾವತ್ತೂ ದೊಡ್ಡ ಪ್ರಮಾಣದ ಆಧುನಿಕ ಕೃಷಿಯ ಪರವೇ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಪರ್ಯಾಯ ಕೃಷಿಗೆ ಮತ್ತು ಪರ್ಯಾಯ ಆರೋಗ್ಯ ಪದ್ಧತಿಗೆ ಸಿಗುತ್ತಿರುವ ಪ್ರಚಾರ ಜೊತೆಗೆ ಅಂತಾರಾಷ್ಟ್ರೀಯಮಟ್ಟದಲ್ಲೂ ಈ ಬಗ್ಗೆ ಮೂಡುತ್ತಿರುವ ಜಾಗೃತಿ ಹಾಗೂ ನಮ್ಮಲ್ಲೂ ಕೃಷಿಕರಲ್ಲಿ ಹಾಗೂ ಸಮಾಜದ ಅನೇಕ ವಲಯಗಳಲ್ಲಿ ಹೆಚ್ಚುತ್ತಿರುವ ತಿಳುವಳಿಕೆ, ಇವೆಲ್ಲವುಗಳಿಂದ ಸರ್ಕಾರದ ಮೇಲೆ ಬೀಳುತ್ತಿರುವ ಒತ್ತಡದಿಂದಾಗಿ ಸರ್ಕಾರ ಈ ಕೆಲಸಕ್ಕೆ ಮುಂದಾಗಿದೆಯಷ್ಟೆ.

ಇರಲಿ, ಸರ್ಕಾರದ ಉದ್ದೇಶ ಒಳ್ಳೆಯದೆಂದೇ ಇಟ್ಟುಕೊಳ್ಳೋಣ. ಸರ್ಕಾರ ಹೇಳುವಂತಹ ಅಥವಾ ನಾವು ಅಂದುಕೊಂಡಿರುವಂತಹ ಸಾವಯವ ಕೃಷಿ ಅಂದರೇನು? ರಾಸಾಯನಿಕ ವಸ್ತುಗಳನ್ನು ಅಂದರೆ ರಸಗೊಬ್ಬರಗಳು, ಕೀಟನಾಶಕಗಳು, ಕಳೆನಾಶಕಗಳನ್ನು ಉಪಯೋಗಿಸದೆ, ಹಟ್ಟಿಗೊಬ್ಬರ- ಸಸ್ಯಜನ್ಯ ಕೀಟನಾಶಕಗಳು, ಸಾವಯವಗೊಬ್ಬರ ಇತ್ಯಾದಿಗಳನ್ನು ಮಾತ್ರ ಬಳಸಿ ಆದಷ್ಟೂ ಸ್ಥಳೀಯವಾಗಿ ಲಭ್ಯವಾಗುವ ಸಾವಯವ ತ್ಯಾಜ್ಯವಸ್ತುಗಳನ್ನು ಉಪಯೋಗಿಸಿ ಮಾಡುವ ಕೃಷಿ. (ರಾಸಾಯನಿಕಗಳೇ ಆಗಿರುವ ಸುಣ್ಣ, ಬೋರ್ಡೋ ಮಿಶ್ರಣ ಇವುಗಳ ಬಳಕೆ ಇಲ್ಲಿ ನಿಷಿದ್ಧವಲ್ಲ ಕೆಲವರು ರಂಜಕಯುಕ್ತ ಗೊಬ್ಬರವಾದ ರಾಕ್ ಫಾಸ್ಫೇಟಿಗೂ ಅದು ಕಲ್ಲಿನ ಪುಡಿಯೆಂದು ವಿನಾಯಿತಿ ನೀಡಿದ್ದಾರೆ) ಇದರೊಂದಿಗೆ ಇತರ ಪೂರಕ ಚಟುವಟಿಕೆಗಳನ್ನು ಅಂದರೆ ಹೈನುಗಾರಿಕೆ, ಕೋಳಿಸಾಕಣೆ ಇತ್ಯಾದಿಗಳನ್ನು ಮಾಡಿದರೆ ಇನ್ನೂ ಒಳ್ಳೆಯದು. ಸಣ್ಣ ಮತ್ತು ಮಧ್ಯಮ ಗಾತ್ರದ ಹಿಡುವಳಿಗಳು ಇದಕ್ಕೆ ಹೆಚ್ಚು ಅನುಕೂಲದ್ದಾಗಿರುತ್ತವೆ.

ಹೀಗಿರುವಾಗ ಸಣ್ಣ ಮತ್ತು ಮಧ್ಯಮ ಕೃಷಿಕರು ಒಂದೆರಡು ದನಕರುಗಳನ್ನು ಜೊತೆಯಲ್ಲಿ ಕುರಿಕೋಳಿಗಳನ್ನು ಸಾಕುತ್ತ ಸಾವಯವ ಗೊಬ್ಬರ ತಯಾರಿಸಿ ಉಪಯೋಗಿಸುತ್ತಾ, ಅತಿ ಕಡಿಮೆ ರಾಸಾಯನಿಕ ಅಥವಾ ರಾಸಾಯನಿಕರಹಿತ ಕೃಷಿ ಮಾಡುತ್ತಾ ತಾನೂ ಆರೋಗ್ಯವಂತನಾಗಿ- ಭೂಮಿ ಮತ್ತು ಸಮಾಜದ ಎಲ್ಲರ ಆರೋಗ್ಯವನ್ನು ಕಾಪಾಡುತ್ತ ಸುಖವಾಗಿ ಇರಬಹುದಾಗಿತ್ತಲ್ಲವೇ?.

ಆದರೆ ನಾವೆಂದುಕೊಂಡಂತೆ ಪರಿಸ್ಥಿತಿ ಅಷ್ಟು ಸರಳವಾಗಿ ಖಂಡಿತ ಇಲ್ಲ. ಒಂದೆಡೆ ಪರಿಸರ ಪ್ರಿಯರು, ಕೃಷಿಪಂಡಿತರುಗಳು, ಭಾನುವಾರದ ಕೃಷಿಕರು, ಹವ್ಯಾಸಿ ಕೃಷಿಕರು, ಹಾಗೂ ಅನೇಕ ಸಂಘಟನೆಗಳು-ಸಹಜಕೃಷಿ, ಸಾವಯವ ಕೃಷಿ, ನೆಲಜಲ ಸಂರಕ್ಷಣೆ ಮುಂತಾದುವುಗಳ ಬಗ್ಗೆ ನಡೆಸುವ ಕಾರ್ಯಕ್ರಮಗಳು, ವಿಚಾರಸಂಕಿರಣಗಳು, ಚಳುವಳಿಗಳು, ಜೊತೆಗೆ ಹಲವು ಕೃಷಿಪತ್ರಿಕೆಗಳಲ್ಲಿ ನಿರಂತರವಾಗಿ ಬರುತ್ತಿರು ಲೇಖನಗಳು, ಇವೆಲ್ಲವುಗಳಿಂದ ಸಾವಯವ ಕೃಷಿಗೆ ಸಿಕ್ಕಿದ ಪ್ರಚಾರದಿಂದಾಗಿ, ಸಾವಯವ ಪರಿಸರ ಸ್ನೇಹಿವಸ್ತುಗಳ ದೊಡ್ಡ ಉತ್ಪಾದಕರುಗಳೇ ಹುಟ್ಟಿಕೊಂಡಿದ್ದಾರೆ. Tilling_Rice_Fieldsಇವರುಗಳು ಮುದ್ರಿಸಿ ಹಂಚುತ್ತಿರುವ ಕರಪತ್ರಗಳು ಯಾವುದೇ ದೊಡ್ಡ ರಾಸಾಯನಿಕ ಕಂಪೆನಿಗಳ ಪ್ರಚಾರ ಸಾಮಗ್ರಿಯನ್ನೂ ನಾಚಿಸುವಂತಿದೆ. ರಾಸಾಯನಿಕ ವಸ್ತುಗಳಿಗೆ ಹೋಲಿಸಿದರೆ ಇವುಗಳ ಬೆಲೆಯೂ ದುಬಾರಿಯಾಗಿದೆ. ಈ ವಿಚಾರ ಆಯುರ್ವೇದ ಔಷಧಿಗಳಂತಹ ವೈದ್ಯಕೀಯ ಉತ್ಪನ್ನಗಳಿಗೂ ಅನ್ವಯಿಸುತ್ತದೆ. ಸದ್ಯಕ್ಕಂತೂ ಇವುಗಳಲ್ಲಿ ಯಾವುದು ನಿಜವಾದ ಸಾವಯವ ಅಥವಾ ಪರಿಸರ ಸ್ನೇಹಿ ಎಂದು ನಿರ್ಧರಿಸಲು ಯಾವುದೇ ಮಾನದಂಡವೂ ಇಲ್ಲ. ವೈಯಕ್ತಿಕ ಪರಿಚಯ, ಅನುಭವ ನಂಬಿಕೆಗಳನ್ನಾಧರಿಸಿ ಇವುಗಳನ್ನು ಕೊಳ್ಳಬೇಕಷ್ಟೆ.

ನಮ್ಮ ರೈತರು ಸಾವಯವ-ಸುಸ್ಥಿರ ಕೃಷಿಯ ವಿರೋಧಿಗಳಂತೂ ಖಂಡಿತ ಅಲ್ಲ. ಇಂದು ಸಾಮಾನ್ಯನಿಗೂ ಭೂಮಿ ಬರಡಾಗುತ್ತಿರುವುದು, ಆಹಾರದಲ್ಲಿ ರುಚಿ ಸತ್ವ ಎರಡೂ ಇಲ್ಲದಿರುವುದು ಚೆನ್ನಾಗಿಯೇ ತಿಳಿದಿದೆ. ನಾಟಿ ಕೋಳಿಮಾಂಸದ ಮತ್ತು ನಾಟಿ ಹಸುಗಳಹಾಲಿನ ರುಚಿ ಹಾಗೇ ಸೆಗಣಿಯ ಶಕ್ತಿಯೂ ತಿಳಿದಿದೆ. ಎಲ್ಲಿಯವರೆಗೆ ಎಂದರೆ ಘನಘೋರ ವಿಷಸುರಿದು ಶುಂಠಿ ಬೆಳೆಯುತ್ತಿರುವ ರೈತ ತಾನು ಅದನ್ನು ತಪ್ಪಿಯೂ ಉಪಯೋಗಿಸುವುದಿಲ್ಲ. ಸ್ವಂತಕ್ಕೆ ತನ್ನ ಜಮೀನಿನ ಮೂಲೆಯಲ್ಲೊಂದಿಷ್ಟು ನಾಟಿ ಶುಂಟಿಯನ್ನು ವಿಷವುಣಿಸದೆ ಬೆಳೆದುಕೊಂಡಿರುತ್ತಾನೆ. ಕೃಷಿವಲಯದ ಆರ್ಥಿಕ ಪರಿಸ್ಥಿತಿಯೇ ಅವನನ್ನು ಸುಸ್ಥಿರ-ಸಾವಯವ ಕೃಷಿಯಿಂದ ದೂರವಿರುವಂತೆ ಮಾಡುತ್ತಿದೆ.

ನಮ್ಮ ರೈತರು ಇಂದು ಸಹಜ ಕೃಷಿಯ ಋಷಿ ಮುನಿಗಳಂತೆ ಬದುಕಲು ಖಂಡಿತ ಸಾಧ್ಯವಿಲ್ಲ. ಇಂದು ವಿದ್ಯುತ್, ಫೋನು, ಟಿ.ವಿ., ಸಾಧ್ಯವಾದರೆ ಕನಿಷ್ಟ ಒಂದು ಬೈಕು ಇತ್ಯಾದಿಗಳು ಆತನಿಗೂ ಬೇಕು. ಇಂದು ಟಿ.ವಿ. ಆಧುನಿಕ ಜಗತ್ತನ್ನು ಅವನ ಮನೆಯೊಳಗೇ ತಂದು ತೋರಿಸುತ್ತ ಹಲವು ಆಮಿಷಗಳನ್ನು ಒಡ್ಡುತ್ತಿದೆ. ಅಭಿವೃಧ್ದಿಗಿಂದ ಹೆಚ್ಚಾಗಿ ಕೊಳ್ಳುಬಾಕ ಸಂಸ್ಕøತಿ ಇಂದು ಹಳ್ಳಿಗಳನ್ನೂ ಆವರಿಸಿಬಿಟ್ಟಿದೆ. ಹೇಗಾದರೂ ಮಾಡಿ ಹಣ ಗಳಿಸಬೇಕಾದ ಒತ್ತಡದಲ್ಲಿ ಇಂದು ರೈತನೂ ಸಿಕ್ಕಿಬಿದ್ದಿದ್ದಾನೆ.

ಯಾವುದೇ ಬೆಳೆಯನ್ನು ಬೆಳೆಯುವಾಗ ಎಕರೆವಾರು ಖರ್ಚು ಮತ್ತು ಆದಾಯವನ್ನು ನೋಡಿದರೆ. ಸಧ್ಯದಲ್ಲಿ ರಾಸಾಯನಿಕಗಳನ್ನು paddy-rice-cropಬಳಸಿ ಮಾಡುವ ಕೃಷಿಯೇ ಅಗ್ಗದ್ದಾಗಿದ್ದು ರೈತನಿಗೆ ಸ್ವಲ್ಪಮಟ್ಟಿನ ಲಾಭವನ್ನು ತಂದುಕೊಡುತ್ತಿದೆ. ಅಲ್ಲದೇ ಅಧಿಕ ಇಳುವರಿ ನೀಡುತ್ತದೆಂದು ಹೇಳಲಾಗುವ ಹೈಬ್ರಿಡ್ ತಳಿಗಳು ರಾಸಾಯನಿಕ ಕೃಷಿಯನ್ನೇ ಅವಲಂಬಿಸಿವೆ.

ಶುದ್ಧ ಸಾವಯವವೆಂದು ಪ್ರಮಾಣೀಕರಿಸಿದ ಉತ್ಪನ್ನಗಳಿಗೆ ವಿದೇಶಗಳಲ್ಲಿ ಹೆಚ್ಚಿನ ಬೆಲೆ ದೊರಕುತ್ತದೆಂಬ ವಿಚಾರ ನಮ್ಮ ರೈತರಿಗೂ ತಿಳಿದಿದೆ. ಆದರೆ ಅದನ್ನು ಪ್ರಮಾಣೀಕರಿಸಲು ಇರುವ ವಿಧಿ ವಿಧಾನಗಳು ಮತ್ತು ಅವರ ಮಾನದಂಡಗಳು ಅದಕ್ಕೆ ತಕ್ಕಂತೆ ಅನುಸರಿಸ ಬೇಕಾದ ಕ್ರಮಗಳು, ಇಡಬೇಕಾದ ಠೇವಣಿ ಹಣ ಮತ್ತಿತರ ವೆಚ್ಚಗಳು ನಮ್ಮ ರೈತರ ಪಾಲಿಗೆ ತುಂಬ ದುಬಾರಿಯಾದವು.

ಇದನ್ನೆಲ್ಲ ನೋಡುತ್ತ ನೋಡುತ್ತ ಸಾಮಾನ್ಯ ಕೃಷಿಕ- ರೈತರು ಮೊದಲ ಬಾರಿಗೆ ಜಾತ್ರೆಗೆ ಹೋದ ಮಗುವಿನಂತಾಗಿ ಹೋಗಿದ್ದಾರೆ. ಎಲ್ಲವನ್ನೂ ನೋಡುತ್ತ ಬೆರಗುಗೊಳ್ಳುತ್ತ ಅಪ್ಪ ಕೊಟ್ಟ ಒಂದೇ ಒಂದು ರೂಪಾಯಿಯನ್ನು ಜೇಬೊಳಗಿಟ್ಟುಕೊಂಡು, ಕೈಹಾಕಿ ಅಲ್ಲೇ ಮುಟ್ಟಿ ನೋಡಿಕೊಳ್ಳುತ್ತ ಏನನ್ನೂ ಕೊಳ್ಳದೆ, ಏನನ್ನೂ ತಿನ್ನದೆ ಮನೆಗೆ ಬರುವಂತಹ ಸ್ಥಿತಿಯಲ್ಲಿದ್ದಾರೆ.

ಹೀಗಾಗಿ ಒಂದುವೇಳೆ ಸಾವಯವ ವಿಧಾನದಿಂದ ಬೆಳೆ ಬೆಳೆದರೂ ಸಹ ಇದರಿಂದ ಲಾಭ ಪಡೆಯುವ ಸ್ಥಿತಿಯಲ್ಲಿ ರೈತರು ಖಂಡಿತ ಇಲ್ಲ. ಆದ್ದರಿಂದ ಎಲ್ಲ ತೊಂದರೆಗಳ ಅರಿವಿದ್ದರೂ ಹೆಚ್ಚು ಲಾಭ ಬರಬಹುದೆಂಬ ಆಸೆಯಿಂದ ರಾಸಾಯನಿಕಗಳನ್ನು ಬಳಸಿ ಮಾಡುವ ಆಧುನಿಕ ಕೃಷಿಯತ್ತ ವಾಲುತ್ತಾರೆ. ದುಬಾರಿ ಬಡ್ಡಿಯ ಖಾಸಗಿ ಸಾಲಕ್ಕೆ ತಲೆಯೊಡ್ಡುತ್ತಾರೆ. ಸರೀಕರೊಡನೆ ತಲೆಯೆತ್ತಿ ನಿಲ್ಲಬೇಕೆಂದು, ವಾಹನ ಕೊಳ್ಳುತ್ತಾರೆ, ಸರಿಯಾದ ಯೋಜನೆಗಳಿಲ್ಲದೆ ಮನೆ ಕಟ್ಟಿಕೊಳ್ಳುತ್ತಾರೆ, ಮದುವೆ ಮುಂಜಿಗಳಲ್ಲಿ ಅಂದಾದುಂದಿ ಖರ್ಚು ಮಾಡುತ್ತಾರೆ. ಬೆಳೆ ಮತ್ತು ಬೆಲೆ ಅಥವಾ ಎರಡೂ ಕೈಕೊಟ್ಟರೆ ದಿಕ್ಕು ತೋಚದೆ ಆತ್ಮಹತ್ಯೆಯಂತಹ ವಿಪರೀತ ಕ್ರಮಕ್ಕೆ ಮುಂದಾಗುತ್ತಾರೆ.

ಹಿಂದಿನ ಕಾಲದಂತೆ ರೈತರು ತಮಗೆ ಬೇಕಾದ ಆಹಾರ, ತರಕಾರಿ, ಹಾಲು, ಮಾಂಸ, ಹಣ್ಣುಹಂಪಲು ಎಲ್ಲವನ್ನು ತಾವೇ ಬೆಳೆದುಕೊಳ್ಳುತ್ತ, ತಮ್ಮ ಅಗತ್ಯಕ್ಕೆ ಹೆಚ್ಚಿನದನ್ನು ಮಾರುತ್ತ ಬದುಕುವುದು ಇಂದಿನ ಆರ್ಥಿಕತೆಗೆ ಒಗ್ಗುವ ಸಂಗತಿಯಾಗಿ ಉಳಿದಿಲ್ಲ. ಇಂದು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಸಾಧ್ಯವಾಗುವಂತೆ ಪ್ರತಿಯೊಂದನ್ನು ದೊಡ್ಡ ಪ್ರಮಾಣದಲ್ಲಿ ‘ಉತ್ಪಾದಿಸುವುದು’ ಅನಿವಾರ್ಯವಾಗುವಂತ ಸನ್ನಿವೇಶ ಸೃಷ್ಟಿಯಾಗಿದೆ. ಆದ್ದರಿಂದ ತರಕಾರಿ ಬೆಳೆಯುವವರು, ಮೆಣಸಿನಕಾಯಿ ಬೆಳೆಯುವವರು, ಶುಂಠಿ ಬೆಳೆಯುವವರು, ಹೈನೋಧ್ಯಮದವರು, ಕೋಳಿಫಾರಂಗಳು, ಹೀಗೆ ಎಲ್ಲವೂ ಸಣ್ಣ ಪ್ರಮಾಣದಿಂದ ನಿಧಾನವಾಗಿ ದೊಡ್ಡ ಪ್ರಮಾಣಕ್ಕೆ ಬೆಳೆಯುತ್ತಿದೆ. ಗ್ರಾಹಕರ ಬೇಡಿಕೆಗೆ ತಕ್ಕಂತ ಉತ್ಪಾದನೆ, ಸ್ಪರ್ಧಾತ್ಮಕ ಬೆಲೆಗಳು, ಬ್ರಾಂಡೆಡ್ ಉತ್ಪಾದನೆ ಇತ್ಯಾದಿಗಳ ಜಾಗತೀಕರಣದ ಉನ್ಮಾದದ ಮಾರುಕಟ್ಟೆಯಲ್ಲಿ ಹೆಚ್ಚು ‘ಉತ್ಪಾದನೆ’ಯ ಒತ್ತಡಕ್ಕೊಳಗಾದ ಕೃಷಿಕ ಸಾವಯವ ಕೃಷಿಯತ್ತ ತಿರುಗಿ ನೋಡುವುದೂ ಇಲ್ಲ. ದ್ವೀಪಗಳಂತೆ ಅಲ್ಲಲ್ಲಿ ಕೆಲವು ಸ್ಥಳಗಳಲ್ಲಿ ಕೆಲವು ವಸ್ತುಗಳನ್ನು- ಅದೂ ಮುಖ್ಯ ಆಹಾರ ಪದಾರ್ಥಗಳನ್ನಲ್ಲ, ಅವುಗಳಿಗೆ ಅಸಾಮಾನ್ಯ ಕೆಲವೊಮ್ಮೆ ಊಹೆಗೂ ನಿಲುಕದಂತಹ ಹೆಚ್ಚನ ಬೆಲೆ ಬಂದಾಗ ಸಾವಯವ ವಿಧಾನದಲ್ಲಿ ಬೆಳೆ ಬೆಳೆಯಲು ತೊಡಗಬಲ್ಲರು. ಉದಾ: ವೆನಿಲ್ಲಾ, ಆ್ಯಂತೋರಿಯಂ ನಂತಹ ರಫ್ತು ಆಧಾರಿತ ಬೆಳೆಗಳು.

ಅಧಿಕ ಉತ್ಪಾದನೆಯ ಮಂತ್ರ ಜಪಿಸುವುದು, ಅದಕ್ಕಾಗಿ ಆಧುನಿಕ ತಂತ್ರಜ್ಞಾನ ಮತ್ತು ಯಂತ್ರಗಳ ಬಳಕೆಯಾಗುವಂತೆ ನೋಡಿಕೊಳ್ಳುವುದು, ಇದೆಲ್ಲದರ ಮೇಲೆ ಮೂಗಿಗೆ ತುಪ್ಪ ಸವರಿದಂತೆ ಒಟ್ಟು ಉತ್ಪನ್ನದ ಸ್ವಲ್ಪಭಾಗಕ್ಕೆ ವಿಶೇಷ ಬೆಲೆ ನೀಡಿ, ಉಳಿದದ್ದನ್ನು ಅವರ ಅನುಕೂಲಕ್ಕೆ ತಕ್ಕಂತೆ ಕೊಳ್ಳುವುದು, ಇದರಿಂದ ಬೆಳೆಗಾರ ಗಳಿಸಿದ ಅಲ್ಪಸ್ವಲ್ಪ ಹೆಚ್ಚವರಿ ಹಣವನ್ನು ಯಂತ್ರೋದ್ಯಮದ ಮೂಲಕ ತಮ್ಮಲ್ಲಿಗೇ ಬರುವಂತೆ ಮಾಡುವುದು, ಇದೆಲ್ಲಕ್ಕಿಂತ ಅಧಿಕ ಉತ್ಪಾದನೆಯಿಂದ ಬೆಳೆಗಾರ ಮಾರುಕಟ್ಟೆಯಲ್ಲಿ ಕ್ಯೂ ನಿಲ್ಲುವಂತ ಪರಿಸ್ಥಿತಿ ನಿರ್ಮಾಣ ಮಾಡಿ ಯಾವಾಗಲೂ ಕೊಳ್ಳುವವರ ಮರ್ಜಿಯನ್ನೇ ಕಾಯಬೇಕಾದ ಸ್ಥಿತಿಯಲ್ಲಿಡುವುದು, ಇವುಗಳೆಲ್ಲಾ ಅವರ ಉದ್ದೇಶವಾಗಿದೆ. ಅಧಿಕ ಉತ್ಪಾದನೆಯಿಂದ ರೈತನಿಗೆ ಲಾಭವಾಗುದೆನ್ನುವುದು ನಿಜವಲ್ಲವೆನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. (ನಮ್ಮ ದೇಶದ ಹಾಗೂ ವಿಯೆಟ್ನಾಂನ ಕಬ್ಬು ಬೆಳೆಗಾರರನ್ನು ನೋಡಿ)

ಮುಂದುವರೆದ ದೇಶಗಳಿಂದ ನಮ್ಮಲ್ಲಿಗೆ ಆಮದಾಗುವ ಹಲವಾರು ಔಷಧಿಗಳು, ಕ್ರಿಮಿನಾಶಕಗಳು, ತಳುಕಿನ ಐಷಾರಾಮೀ ಸಾಮಗ್ರಿಗಳು, Working_in_the_rice_paddyಅಷ್ಟೇಕೆ ಅಲ್ಲಿನ ಸಾವಯವ ಗೊಬ್ಬರಗಳು ಕೂಡಾ ಅಲ್ಲೇ ನಿಷೇಧಿಸಲ್ಪಟ್ಟವುಗಳು. ಅವುಗಳನ್ನು ಹಿಂದುಳಿದ ದೇಶಗಳಿಗೆ ಸಹಾಯದ- ದಾನದ ಹೆಸರಲ್ಲಿ ಸಾಗಹಾಕುವಾಗ ಇಲ್ಲದಿರುವ ನೈತಿಕತೆ-ಗುಣಮಟ್ಟ ಕಾಳಜಿ, ಅವರಲ್ಲಿಗೆ ಆಮದಾಗುವ ಹಿಂದುಳಿದ ದೇಶಗಳ ವಸ್ತುಗಳ ಬಗ್ಗೆ ಪ್ರತ್ಯಕ್ಷವಾಗಿಬಿಡುತ್ತದೆ. ಯಾವುದೋ ಒಂದು ಸಾರಿ ಕಳುಹಿಸಿದ ವಸ್ತುವಿನಲ್ಲಿ ಕಲಬೆರಲಕೆ ಕಂಡುಬಂದರೂ ಸಹ (ಕಲಬೆರಕೆ ಸರಿಯೆಂದು ನನ್ನ ವಾದವಲ್ಲ) ಇಡೀ ದೇಶದ ಉತ್ಪನ್ನವನ್ನೇ ತಿರಸ್ಕರಿಸುವ ಬೆದರಿಕೆ ಹಾಕುವ ಅಂತಾರಾಷ್ಟ್ರೀಯ ಮಾರುಕಟ್ಟೆ ಮುಂದುವರಿದ ದೇಶಗಳ ಹಾನಿಕಾರಕ ವಸ್ತುಗಳ ಬಗ್ಗೆ ದಿವ್ಯಮೌನ ವಹಿಸುತ್ತದೆ. ತೆಂಗಿನೆಣ್ಣೆಯಲ್ಲಿ ಕ್ಯಾನ್ಸರ್‍ಕಾರಕ ಗುಣವಿರುವುದನ್ನು ಸಂಶೋಧನೆ ಮಾಡುವ ಇವರು, ಕ್ರಿಮಿನಾಶಕವಾಗಿರುವ ಪೆಪ್ಸಿ- ಕೋಕಾಕೋಲಾ ಗಳ ಬಗ್ಗೆ ಮಾತನಾಡುವುದಿಲ್ಲ. ನಮ್ಮ ಹಾಲಿನ ಪುಡಿಯಲ್ಲಿ ಡಿ.ಡಿ.ಟಿ. ಪತ್ತೆಹಚ್ಚುವ ಇವರು ಆ ಡಿ.ಡಿ.ಟಿ.ಯನ್ನು ಪ್ರಪಂಚಕ್ಕೆಲ್ಲಾ ಹಂಚಿದ್ದು ತಾವೇ ಎನ್ನುವುದನ್ನು ಮರೆಯುತ್ತಾರೆ!.

ಇತ್ತೀಚಿನ ಇನ್ನು ಕೆಲವು ಬೆಳವಣಿಗೆಗಳನ್ನು ಗಮನಿಸಿ. ನೂರೈವತ್ತು ರೂಗಳಿಗೆ ಒಂದು ಟೀ ಶರ್ಟು ದೊರೆಯುತ್ತದೆಂದು ನಾವು ಖುಷಿ ಪಡುತ್ತಿರುವಾಗಲೇ, ಸಣ್ಣ ಊರುಗಳ- ಹಳ್ಳಿಗಳ ಟೈಲರ್‍ಗಳು ಅಂಗಡಿ ಮುಚ್ಚುತ್ತಿದ್ದಾರೆ. ಈಗಾಗಲೇ ಸಣ್ಣ ಸಣ್ಣ ಗರಾಜ್‍ಗಳು ಕೆಲಸವಿಲ್ಲದೆ ಒದ್ದಾಡುತ್ತಿವೆ. ಸಣ್ಣ ಹಿಡುವಳಿಯ ರೈತರು ಜಮೀನನ್ನು ಮಾರಿ ನಗರ ಸೇರುವ ಧಾವಂತದಲ್ಲಿದಾರೆ. ಹಲವು ಪ್ಲಾಂಟೇಷನ್ ಕಂಪೆನಿಗಳು ನಿರಂತರವಾಗಿ ತೋಟಗಳ ವಿಸ್ತರಣಾ ಖರೀದಿಯಲ್ಲಿ ತೊಡಗಿವೆ. ಈ ಸಂಗತಿಗಳಲ್ಲಾ ಏನನ್ನು ಸೂಚಿಸುತ್ತವೆ? ನಮ್ಮ ಕೃಷಿ ಭೂಮಿ ಪರಭಾರೆ ಕಾನೂನು ಮತ್ತು ಭೂಮಿತಿ ಕಾನೂನನ್ನು ಸಂಪೂರ್ಣವಾಗಿ ತೆಗೆದುಹಾಕಿದಲ್ಲಿ ಏನಾಗಬಹುದು? ಯೋಚಿಸಿ.

ಗುಣಮಟ್ಟದ ಹೆಸರಿನಲ್ಲಿ ಇವರು ಸೂಚಿಸುವ ಒತ್ತಾಯಿಸುವ ಕೃಷಿ ಪದ್ಧತಿಗಳು ಇನ್ನೂ ವಿಚಿತ್ರವಾಗಿವೆ. ಉದಾಹರಣೆಗೆ; Organic_farm_Turmericಕಾಫಿ ಒಣಗಿಸುವ ಕಣದ ಸುತ್ತಲೂ ನೀಲಗಿರಿ ಮರಗಳಿರಬಾರದು, ಮೆಣಸಿನ ಬಳ್ಳಿಗಳಿರಬಾರದು, ಕಾಫಿ ಒಣಗಿಸುವ ಕಣಕ್ಕೆ ಸೆಗಣಿಸಾರಿಸಬಾರದು ಇತ್ಯಾದಿ ಪ್ರತಿಬಂಧಗಳಿವೆ. (ಕಾಫಿಯ ಇಡಿಯ ಹಣ್ಣನ್ನು ನೇರವಾಗಿ ಒಣಗಿಸುವಾಗ ಮಾತ್ರ ಸೆಗಣಿ ಸಾರಿಸಿದ ಕಣವನ್ನು ಬಳಸುತ್ತಾರೆ. ಪಲ್ಪಿಂಗ್ ಮಾಡಿದ ಕಾಫಿಯನ್ನು ಯಾರೂ ಸೆಗಣಿಸಾರಿಸಿದ ಕಣದಲ್ಲಿ ಒಣಗಿಸುವದಿಲ್ಲ) ನಾವು ಸಾವಿರಾರು ವರ್ಷಗಳಿಂದ ಸೆಗಣಿ ಸಾರಿಸಿದ ಕಣದಲ್ಲೇ ಆಹಾರ ಧಾನ್ಯಗಳನ್ನು ಯಾವುದೇ ತೊಂದರೆಯಿಲ್ಲದೆ ಒಣಗಿಸುತ್ತಿದ್ದೇವೆ. ಸೆಗಣಿಯಿಂದಾಗಿ ಕಾಫಿಗೆ ಕೆಟ್ಟ ವಾಸನೆ ಬರುತ್ತದೆಂದು ದೂರುವ ಇವರು ಯಂತ್ರಗಳಲ್ಲಿ ಬಳಕೆಯಾಗುವ ಪೈಂಟ್‍ಗಳ ಬಗ್ಗೆಯಾಗಲೀ ಒಟ್ಟು ಉದ್ಯಮದಲ್ಲಿ ಬಳಕೆಯಾಗುವ ಇತರ ರಾಸಾಯನಿಕಗಳ ಬಗ್ಗೆಯಾಗಲೀ ಮಾತನಾಡುವುದಿಲ್ಲ.

ಈಗಾಗಲೇ ಅಕ್ಕಿಯಲ್ಲಿ- ಅಕ್ಕಿಯ ಗಾತ್ರ, ಉದ್ದ, ಬಣ್ಣಗಳ ನಿಯಂತ್ರಣಕ್ಕೆ ಪ್ರಯತ್ನಿಸುತ್ತಿದ್ದಾರೆ. ಹೀಗೆಯೇ ಮುಂದುವರೆದರೆ ಮುಂದೆ ಇಂತಿತಹ ಕಂಪೆನಿಗಳು ಒದಗಿಸಿದ ನೀರಿನಿಂದ ಬೆಳೆದ ಇಂತಿಂತಹ ಬೆಳೆಗಳು ಮಾತ್ರ ಪರಿಶುದ್ಧವಾದವು ಎಂದು ಪ್ರಮಾಣ ಪತ್ರ ನೀಡುವ ದಿನಗಳೂ ಬರಬಹುದು. ಆದ್ದರಿಂದ ಜಾಗತೀಕರಣವೆಂದರೆ ಮುಂದುವರಿದ ದೇಶಗಳ ಇನ್ನಷ್ಟು ಸಬಲೀಕರಣವಲ್ಲದೆ ಇನ್ನೇನೂ ಅಲ್ಲ. ನಾವು ಅಲ್ಲೊಂದು ಇಲ್ಲೊಂದು ಕ್ಷೇತ್ರದಲ್ಲಿ ಇವರೊಂದಿಗೆ ಸ್ಪರ್ಧಿಸುತ್ತಿದ್ದೇವೆಂದು ಹೆಮ್ಮೆ ಪಟ್ಟುಕೊಳ್ಳುತ್ತಾ, ನಮ್ಮ ಬೆನ್ನನ್ನೇ ನಾವು ತಟ್ಟಿಕೊಳ್ಳುತ್ತಾ ಕುಳಿತಿದ್ದೇವೆ ಅಷ್ಟೆ!

ಇವೆಲ್ಲವನ್ನೂ ಮೀರಿ ನಾವು ಕೆಲವು ಕ್ಷೇತ್ರಗಳಲ್ಲಿ ಅಥವಾ ಕೆಲವು ವಸ್ತುಗಳ ಉತ್ಪಾದನೆಯಲ್ಲಿ ಮುಂದುವರಿದ ದೇಶಗಳೊಂದಿಗೆ ಸ್ಪರ್ಧೆಗೆ ಇಳಿದೆವೆಂದರೆ, ಆಗ ಇನ್ನೂ ಕೆಲವು ಅಸ್ತ್ರಗಳು ಹೊರ ಬರುತ್ತವೆ. ಕೆಲವು ವಸ್ತುಗಳ ತಯಾರಿಕೆಯಲ್ಲಿ ಬಾಲ ಕಾರ್ಮಿಕರ ದುಡಿಮೆಯಿದೆ ಎಂದೂ ಇನ್ನು ಕೆಲವು ಉತ್ಪನ್ನಗಳು ಪ್ರಾಣಿ ಹಿಂಸೆಯಿಂದ ಕೂಡಿದ್ದೆಂದೂ ನಿಷೇಧಕ್ಕೆ ಒಳಗಾಗುತ್ತವೆ. ಅನೇಕ ಹಿಂದುಳಿದ ದೇಶಗಳಲ್ಲಿ ಇಂದು ಮಕ್ಕಳ ದುಡಿಮೆ ಅನಿವಾರ್ಯ ಅಗತ್ಯವೆನ್ನುವುದನ್ನು ಮರೆಯದಿರೋಣ. ದುಡಿಯದಿದ್ದಲ್ಲಿ ಅವರ ಹೊಟ್ಟೆಪಾಡಿಗೆ ಗತಿಯೇ ಇಲ್ಲದಿರುವ ಪರಿಸ್ಥಿತಿ ಅನೇಕ ದೇಶಗಳಲ್ಲಿ ಇದೆ. ಅವರು ದುಡಿದೂ ವಂಚನೆಗೊಳಗಾಗದಿರುವ-ದುಡಿಯುತ್ತ ಸ್ವಲ್ಪ ಮಟ್ಟಿಗಾದರೂ ವಿದ್ಯೆ ಕಲಿಯುವ ಬೇರೆ ಮಾರ್ಗಗಳತ್ತ ನಾವು ಯೋಚಿಸಬೇಕಾಗಿದೆ. ಅದನ್ನು ಬಿಟ್ಟು ದುಡಿಯುವ ಮಕ್ಕಳ ಸಾಮಾಜಿಕ ಸ್ಥಿತಿಗತಿಗಳನ್ನು ಗಮನಿಸದೆ ದುಡಿಮೆಯಿಂದ ಹೊರಗಿಡುವುದೆಂದರೆ ಅವರನ್ನು ಹಸಿವಿನತ್ತ ದೂಡುವುದೇ ಆಗಿದೆ. Indian-Cow-calfಇನ್ನು ಪ್ರಾಣಿ ಹಿಂಸೆಯ ಬಗ್ಗೆ ಹೇಳುವುದಾದರೆ ಯಾವುದೇ ಜಾತಿಯ ಪ್ರಾಣಿಗೆ ಸಾಂಕ್ರಾಮಿಕ ರೋಗವೊಂದು ಬಂದಿದೆಯೆಂದರೆ ಅದರ ಕುಲವನ್ನೇ ಗುಂಡಿಟ್ಟು ಸಾಯಿಸಿಬಿಡುವ ದೇಶಗಳು- ಪ್ರಾಣಿಹಿಂಸೆಯ ಮಾತನಾಡುತ್ತವೆ!

ಇವೆಲ್ಲವೂ ತಿಳಿದಿದ್ದರೂ ಸಹ ಈ ಮುಂದುವರಿದ ದೇಶಗಳು ಸಹಾಯದ ಹೆಸರಿನಲ್ಲೋ ಇನ್ನಾವುದೇ ರೀತಿಯಲ್ಲೋ ನಮ್ಮಲ್ಲಿಗೆ ಕಳಹಿಸುವ ಯಾವುದೇ ವಸ್ತುವನ್ನು ಅದು ಎಷ್ಟೇ ಹಾನಿಕಾರಕವಾಗಿದ್ದರೂ ಅದನ್ನು ನಿಷೇಧಿಸುವ ಧೈರ್ಯವನ್ನಾಗಲೀ, ಪ್ರಾಮಾಣಿಕತೆಯನ್ನಾಗಲೀ ಯಾವುದೇ ಹಿಂದುಳಿದ-ಅಭಿವೃದ್ಧಿಶೀಲ ದೇಶಗಳು ತೋರುವುದಿಲ್ಲ. ಯಾಕೆಂದರೆ ಈ ದೇಶಗಳ ರಾಜಕೀಯ-ಸಾಮಾಜಿಕ ಪರಿಸ್ಥಿತಿಗಳೇ ಇದಕ್ಕೆ ಅವಕಾಶ ನೀಡುವುದಿಲ್ಲ.

ಹೀಗಿರುವಾಗ ಸರ್ಕಾರಕ್ಕೆ ಇದ್ದಕ್ಕಿದ್ದಂತೆ ಜ್ಞಾನೋದಯವಾಗಿ ಸಾವಯವ ಕೃಷಿಯ ಬಗ್ಗೆ ಒಲವು ತೋರುತ್ತಿದೆಯೆಂದು ನಾವು ನಂಬಿಕೊಂಡರೆ ನಮ್ಮ ದಡ್ಡತನವಷ್ಟೆ. ಇದೂ ಕೂಡಾ ಅಂತರಾಷ್ಟ್ರೀಯ ಮಟ್ಟದ ಹುನ್ನಾರದ ಭಾಗ. ಇದರ ಅಂಗವಾಗಿ ಭಾರತ ಸರ್ಕಾರ ಮತ್ತು ಎಲ್ಲ ರಾಜ್ಯ ಸರ್ಕಾರಗಳು ಸಾವಯವ ಕೃಷಿಯ ಬೊಬ್ಬೆಯಲ್ಲಿ ತೊಡಗಿವೆ ಅಷ್ಟೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಹೈಟೆಕ್ ಸಾವಯವ ಕೃಷಿ ಮೇಳವನ್ನು ಗಮನಿಸಿ, ಈ ಬಗ್ಗೆ ವರದಿ ಮಾಡಿದ ಹಲವು ಪತ್ರಿಕೆಗಳು “ಭಾರತದ ಸಾವಯವ ಕೃಷಿಗೆ ಸಿದ್ಧತೆ- ಸಾವಯವ ಕೃಷಿ ಮೇಳ” ಎಂದು ದೊಡ್ಡದಾಗಿ ಬರೆದವು. ಅವು ವರದಿ ಮಾಡಿದ ರೀತಿ ಭಾರತ ದೇಶಕ್ಕೆ ಸಾವಯವ ಕೃಷಿ ಅನ್ನುವ ಸಂಗತಿಯೇ ಹೊಸತೇನೋ ಅನ್ನುವಂತಿತ್ತು. ಅದೃಷ್ಟವಷಾತ್ ಕೆಲವು ಪತ್ರಿಕೆಗಳು ಈ ಮೇಳದ ವಿರುದ್ಧವಾಗಿದ್ದ ಅನೇಕ ಕೃಷಿಕರ ಅಭಿಪ್ರಾಯಗಳನ್ನೂ ಪ್ರಕಟಿಸಿದ್ದವು.

ಈ ಸರ್ಕಾರಿ ಸಾವಯವ ಕೃಷಿ ಪ್ರಚಾರದ ಹಿಂದೆ ಬೆಕ್ಕಿನಂತೆ ಹೊಂಚುಹಾಕುತ್ತ ನಿಂತಿದೆ, ಬಯೋಟೆಕ್ನಾಲಜಿ ಉದ್ದಿಮೆದಾರರ ಗುಂಪು! ಈ ದೃಷ್ಟಿಯಿಂದಲೇ ಈ ‘ಸಾವಯವ ಕೃಷಿ’ಎನ್ನುವುದು ಈಗ ಆಧುನಿಕ ಕೃಷಿಗಿಂತಲೂ ಅಪಾಯಕಾರಿಯಾಗಿ ಕಾಣುತ್ತಿರುವುದು.

ನಮ್ಮ ಕೃಷಿಕರ ಅಗತ್ಯ ಮತ್ತು ಆಕಾಂಕ್ಷೆಗಳನ್ನು ಅಂದರೆ ಅನ್ನ, ವಸತಿ, ವಸ್ತ್ರ, ವಿದ್ಯೆಗಳಂತಹ ಮೂಲಭೂತ ಅಗತ್ಯಗಳ ಜೊತೆಗೆ ಆಧುನಿಕ ವಿಜ್ಞಾನದ ಕೊಡುಗೆಗಳ ಕನಿಷ್ಟ ಬಳಕೆಯೂ ಸೇರಿದಂತೆ, ಈಗ ನಾವು ಅನುಭವಿಸುತ್ತಿರುವ ವಾಹನ ಸೌಕರ್ಯ, ವಿದ್ಯುತ್, ಕನಿಷ್ಟ ವೈದ್ಯಕೀಯ ಸೌಲಭ್ಯಗಳು, ಟಿ.ವಿ., ಕಂಪ್ಯೂಟರ್, ಫೋನು ಇವುಗಳನ್ನು ನಿರಾಕರಿಸದೆ, ನಮ್ಮ ಪರಿಸರವನ್ನು ಸಂರಕ್ಷಿಸುವ ಚಿಂತನೆ ಮಾಡಬೇಕಾಗುತ್ತದೆ. ಮತ್ತು ಈ ಕನಿಷ್ಟ ಸೌಲಭ್ಯಗಳನ್ನು ಹೊಂದಲು ಕೃಷಿಕ-ಕೃಷಿ ಕೂಲಿಗಾರ ಸೇರಿದಂತೆ, ಸಾಮಾನ್ಯನೊಬ್ಬನಿಗೆ ಇರಬೇಕಾದ ಆದಾಯ ಮತ್ತು ಅದನ್ನು ಗಳಿಸಬಹುದಾದ ರೀತಿಯ ಬಗ್ಗೆಯೂ ಯೋಚಿಸ ಬೇಕಾಗುತ್ತದೆ.

ಕನಿಷ್ಟ ಖರ್ಚಿನಲ್ಲಿ ಮಾಡಬಹುದಾದ ಕೃಷಿ, ಮತ್ತು ಎಲ್ಲವನ್ನೂ ನಿರಾಕರಿಸದೆ ಬದುಕಬಹುದಾದ ಸಾಧ್ಯತೆಯನ್ನು ಸಮೀಕರಿಸಿ ಮಾಡಬಹುದಾದ ಯಾವುದೇ ಕೃಷಿ ಆಧಾರಿತ ಉದ್ಯಮ- ಉದ್ಯೋಗಗಳ ಶೋಧನೆ ಅಗತ್ಯವಾಗಿದೆ. ಇದಕ್ಕೆ ಬರೀ ಕೃಷಿ ವಲಯವನ್ನು ಮಾತ್ರ ಗಮನದಲ್ಲಿಟ್ಟುಕೊಂಡರೆ ಸಾಧ್ಯವಾಗಲಾರದು. ಇದಕ್ಕೆ ಮುಖ್ಯ ಕಾರಣವೆಂದರೆ. ನಮ್ಮ ಕೃಷಿಕ್ಷೇತ್ರ ಅನುಭವಿಸುವ ನಷ್ಟವೇ ಕೈಗಾರಿಕಾರಂಗದ ಲಾಭವಾಗಿ ಪರಿವರ್ತನೆಯಾಗುತ್ತಿರುವುದು. ರೈತ ಭೂಮಿ ಕಳೆದುಕೊಳ್ಳಲಿ ಅಥವಾ ಆತನ ಉತ್ಪನ್ನದ ಬೆಲೆ ಕಳೆದುಕೊಳ್ಳಲಿ ಅದರ ಲಾಭ ಸದಾ ದೊರೆಯುತ್ತಿರುವುದು ಉದ್ಯಮ ರಂಗಕ್ಕೆ. ಇದನ್ನು ತಿಳಿಯಲು ಮಹತ್ತರವಾದ ಆರ್ಥಿಕ ತಜ್ಞತೆಯೇನೂ ಬೇಕಾಗಿಲ್ಲ. ಈ ವೈರುಧ್ಯವನ್ನು ನಿವಾರಿಸದೆ ನಾವು ಮಾಡುವ ಯಾವುದೇ ಆಭಿವೃದ್ಧಿ ಕೃಷಿಕನನ್ನು ತಲುಪಲಾರದು. ಆದ್ದರಿಂದ ಕೈಗಾರಿಕಾ ಮತ್ತಿತರ ಉದ್ಯಮರಂಗ ಗಳಿಸುತ್ತಿರುವ ಲಾಭದ ಗಣನೀಯ ಅಂಶ ಕೃಷಿಕ್ಷೇತ್ರಕ್ಕೆ ಅಂದರೆ ರೈತ-ಕಾರ್ಮಿಕರಿಗೆ ಮರಳಿಸುವ ಕೆಲಸವನ್ನು ಮಾಡಬೇಕಾಗಿದೆ. ಮತ್ತು ಭೂಮಿಯ ಅತ್ಯುತ್ತಮ ಬಳಕೆಗಾಗಿ ಹಿಡುವಳಿಗಳ ಅಸಮಾನ ಹಂಚಿಕೆಯನ್ನು ನಿವಾರಿಸಬೇಕಾಗಿದೆ. ಈ ವೈರುಧ್ಯಗಳನ್ನು ನಿವಾರಿಸದೆ ಕೃಷಿ ಉತ್ಪನ್ನಗಳಿಗೆ ನೀಡುವ ಯಾವ ಬೆಲೆಯೂ ರೈತನ ಪಾಲಿಗೆ ನ್ಯಾಯಬೆಲೆ ಆಗಲಾರದು.

ನಮ್ಮ ಎಲ್ಲ ಉದ್ಯೋಗಗಳ ತಳಹದಿಯಾದ ಕೃಷಿಯನ್ನು ಮೂಲವಾಗಿಟ್ಟುಕೊಂಡು ಕಲೆ, ಸಾಹಿತ್ಯ, ವಿಜ್ಞಾನ, ಕ್ರೀಡೆ, harohalli-slaughter-house-areaಉದ್ಯಮಗಳು, ವಿದ್ಯಾಭ್ಯಾಸ, ಹೀಗೆ ಎಲ್ಲವನ್ನೂ ಒಳಗೊಂಡ ಪರ್ಯಾಯ ಸಂಸ್ಕೃತಿಯನ್ನು ಕಟ್ಟುವುದು ಅನಿವಾರ್ಯ. ಇಡೀ ಪ್ರಪಂಚವನ್ನು ಮಾರುಕಟ್ಟೆಯನ್ನಾಗಿ ನೋಡುವ, ಭೂಮಿಯಿರುವುದೇ ಮನುಷ್ಯನ ಉಪಯೋಗಕ್ಕಾಗಿ ಎಂದು ಯೋಚಿಸುವ ಮುಂದುವರಿದ ದೇಶಗಳ ಉದ್ದಿಮೆದಾರರು, ವ್ಯಾಪಾರಿಗಳು (ಮುಂದುವರಿದ ದೇಶಗಳಲ್ಲೂ ರೈತರು ಕೆಲಮಟ್ಟಿಗೆ ಬೇರೆಯೇ ಆಗಿ ಉಳಿದಿದ್ದಾರೆ. ಅವರಿಗೂ ಅವರದ್ದೇ ಆದ ಸಮಸ್ಯೆಗಳಿವೆ.) ಅವರ ಮಾರುಕಟ್ಟೆ ವಿಸ್ತರಣೆ ಯೋಜನೆಯ ಅಂಗವಾಗಿಯೇ ಅವರ ಕ್ರೀಡೆಗಳು, ಸಂಗೀತ, ನೃತ್ಯ, ಕಲೆ, ಭಾಷೆ, ಜೀವನಶೈಲಿ ಎಲ್ಲವೂ ಇತರರಿಗಿಂತ ಉತ್ತಮವಾದದ್ದು ಮತ್ತು ಇತರರಿಗೆ ಅನುಕರಣೆಗೆ ಯೋಗ್ಯವಾದದ್ದೆಂದು ವಿಶ್ವಾದ್ಯಂತ ಭ್ರಮೆ ಹುಟ್ಟಿಸುತ್ತಿರುವಾಗ- ನಾವು ನಿಜವಾದ ಜಾಗತೀಕರಣಕ್ಕೆ ಸಿದ್ಧವಾಗುವುದು ಅಗತ್ಯ. ಆ ನಿಟ್ಟಿನ ಪ್ರಯತ್ನಗಳು ವೈಯಕ್ತಿಕವಾಗಿರುವುದಂತೂ ಸಾಧ್ಯವೇ ಇಲ್ಲ. ಸಾಂಘಿಕ- ಸಾಂಸ್ಥಿಕ ಹಾಗೂ ಜಾಗತಿಕ ಮಟ್ಟದ ಅರಿವು-ಎಚ್ಚರಗಳಿಂದ ಯೋಚಿಸಿ ಕಾರ್ಯಕ್ರಮಗಳನ್ನು ಯೋಜಿಸಬೇಕಾಗುತ್ತದೆ. ಇದೊಂದು ರೀತಿಯಲ್ಲಿ Think globally act locally ಎಂಬ ಮಾತಿಗೆ ಬದಲಾಗಿ Think locally act globally ಇರಬಹುದೇನೋ? ನಮ್ಮ ಸಾಮಾಜಿಕ, ಪ್ರಾದೇಶಿಕ ಮತ್ತು ಸಾಂಸ್ಕೃತಿಕ ಭಿನ್ನತೆಗಳನ್ನು ಉಳಿಸಿಕೊಂಡೂ ಪರ್ಯಾಯ ಕೃಷಿ, ಕ್ರೀಡೆ, ಕಲೆ, ಸಾಹಿತ್ಯ, ವಿಜ್ಞಾನ, ಉದ್ಯಮ, ವಿದ್ಯೆ ಹೀಗೆ ಎಲ್ಲವನ್ನೂ ಒಳಗೊಂಡ ಸಂಸ್ಕೃತಿಯೊಂದನ್ನು ಕಟ್ಟುತ್ತಾ ಅದನ್ನು ಜಾಗತೀಕರಿಸುತ್ತಾ ಹೋಗುವ ಮೂಲಕ ನಮ್ಮ ನೆಲ, ಜಲ, ಆಕಾಶಗಳನ್ನು ಉಳಿಸಿಕೊಳ್ಳಲು ಸಾಧ್ಯವಾದೀತು.

2 thoughts on “ಅಭಿವೃದ್ಧಿಯ ಫಲ ಕೃಷಿಕನನ್ನು ತಲುಪಬಲ್ಲುದೆ?

  1. Ananda Prasad

    ಯೋಜಿತ ಬೆಳೆ ವ್ಯವಸ್ಥೆಯನ್ನು ತರದೇ ಇರುವುದು ನಮ್ಮ ಕೃಷಿಕರ ಕಷ್ಟಗಳಿಗೆ ಪ್ರಧಾನ ಕಾರಣವಾಗಿ ಕಂಡುಬರುತ್ತದೆ. ಕೃಷಿಕರು ಒಂದು ಬೆಳೆಗೆ ಒಳ್ಳೆಯ ಬೆಲೆ ಬಂದಾಗ ಎಲ್ಲರೂ ಅದಕ್ಕೇ ಮುಗಿಬೀಳುವುದು ತಪ್ಪಬೇಕು. ಈ ರೀತಿ ಹೆಚ್ಚಿನ ಬೆಲೆ ಇರುವ ಬೆಳೆಗೆ ಎಲ್ಲರೂ ಮುಗಿಬೀಳುವುದರಿಂದ ಉತ್ಪಾದನೆ ಮಿತಿಮೀರಿ ತೀವ್ರ ಬೆಳೆಕುಸಿತ ಉಂಟಾಗುತ್ತದೆ. ಹೀಗಾದಾಗ ಸರಕಾರವೂ ಏನೂ ಮಾಡಲಾಗದ ಪರಿಸ್ಥಿತಿಗೆ ಸಿಕ್ಕಿಕೊಳ್ಳುತ್ತದೆ. ಇದನ್ನು ತಪ್ಪಿಸಲು ಸರಕಾರ ಎಲ್ಲರೂ ಒಂದೇ ಬೆಳೆಯನ್ನು ಬೆಳೆಯದಂತೆ ರೈತರಿಗೆ ತಿಳುವಳಿಕೆ ನೀಡುವ ಕೆಲಸ ಮಾಡಬೇಕು. ಅದಕ್ಕಾಗಿ ರಾಜ್ಯ ಹಾಗೂ ದೇಶದ ಎಷ್ಟು ಪ್ರದೇಶದಲ್ಲಿ ಯಾವ ಯಾವ ಬೆಳೆ ಎಷ್ಟು ಪ್ರಮಾಣದಲ್ಲಿ ಬೆಳೆಯಬಹುದು ಎಂಬುದರ ವ್ಯವಸ್ಥಿತ ಗಣಕೀಕೃತ ಮಾಹಿತಿ ವೆಬ್ಸೈಟ್ ಒಂದನ್ನು ಆರಂಭಿಸಿ ರೈತರ ಅವಗಾಹನೆಗೆ ತರಬೇಕು. ಇದರಿಂದ ಹೆಚ್ಚು ಬೆಲೆ ಇರುವ ಒಂದೇ ಬೆಳೆಯನ್ನು ಎಲ್ಲರೂ ಬೆಳೆದು ಎಲ್ಲರೂ ನಷ್ಟಕ್ಕೆ ಒಳಗಾಗುವುದನ್ನು ತಪ್ಪಿಸಬಹುದು. ಇಂಥ ಒಂದು ಕೇಂದ್ರಿಕೃತ ವ್ಯವಸ್ಥೆಯನ್ನು ಇಷ್ಟರವರೆಗೆ ನಮ್ಮ ದೇಶದಲ್ಲಿ ಆರಂಭಿಸಲಾಗಿಲ್ಲ. ಸದ್ಯಕ್ಕೆ ನಮ್ಮ ದೇಶದಲ್ಲಿ ಮಾರುಕಟ್ಟೆಯ ಬೆನ್ನ ಹಿಂದೆ ಓಡುವ ಕೃಷಿ ವ್ಯವಸ್ಥೆ ಇದೆ. ಈ ವ್ಯವಸ್ಥೆಯಲ್ಲಿ ಯೋಜಿತ ಕೃಷಿ ಸಾಧ್ಯವಾಗುವುದಿಲ್ಲ.

    ಎರಡನೆಯದಾಗಿ ನಟ ಅನಂತನಾಗ್ ಅವರು ಹೇಳಿದಂತೆ ಕೆಎಂಎಫ್ (ಕರ್ನಾಟಕ ಹಾಲು ಮಹಾಮಂಡಲ) ಮಾದರಿಯಲ್ಲಿ ತರಕಾರಿ ಮಹಾಮಂಡಲ, ಬೇರೆ ಬೇರೆ ಧಾನ್ಯಗಳಿಗೆ ಸಂಯುಕ್ತವಾಗಿ ಒಂದು ಮಹಾಮಂಡಲ ಸಹಕಾರಿ ವ್ಯವಸ್ಥೆಯಲ್ಲಿ ರೂಪಿಸುವುದು ರೈತರಿಂದ ನೇರವಾಗಿ ಗ್ರಾಹಕರಿಗೆ ಕೃಷಿ ಉತ್ಪನ್ನಗಳನ್ನು ತಲುಪಿಸುವ ರಾಜ್ಯವ್ಯಾಪಿ ಜಾಲವೊಂದನ್ನು ಸ್ಥಾಪಿಸುವುದು ಕೃಷಿಕರಿಗೆ ಹಾಗೂ ಗ್ರಾಹಕರಿಗೆ ಲಾಭಕರವಾಗಬಲ್ಲದು. ಕೆಎಂಎಫ್ ಯಾವ ರೀತಿ ಹೆಚ್ಚುವರಿ ಹಾಲನ್ನು ಬೇರೆ ಬೇರೆ ಉಪ ಉತ್ಪನ್ನಗಳಾಗಿ ಮಾಡಿ ಮಾರುಕಟ್ಟೆ ಮಾಡುತ್ತದೋ ಅದೇ ರೀತಿ ಬೇರೆ ಬೇರೆ ಬೆಳೆಗಳ ಉಪ ಹಾಗೂ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ ತನ್ನ ಜಾಲದ ಮೂಲಕ ರಾಜ್ಯವ್ಯಾಪಿ ಗ್ರಾಹಕರಿಗೆ ನೇರವಾಗಿ ತಲುಪಿಸುವ ವ್ಯವಸ್ಥೆ ಮಾಡಬೇಕು.

    ಕೃಷಿಕರ ಸಹಕಾರಿ ವ್ಯವಸ್ಥೆಯಲ್ಲಿ ಪಾಲುಬಂಡವಾಳ ಸಂಗ್ರಹಿಸಿ ಸಕ್ಕರೆ ಕಾರ್ಖಾನೆಗಳನ್ನು ಸ್ಥಾಪಿಸಿ ರಾಜಕಾರಣಿಗಳ ಹಾಗೂ ಬಂಡವಾಳಶಾಹಿಗಳ ಹಿಡಿತದ ಸಕ್ಕರೆ ಕಾರ್ಖಾನೆಗಳಿಂದ ರೈತರು ಹೊರಬರಬೇಕು. ಆಗ ರೈತರಿಗೆ ಹೆಚ್ಚಿನ ಬೆಲೆ ದೊರೆಯಬಲ್ಲದು. ಅಡಿಕೆ ಬೆಳೆಗಾರರು ಸಹಕಾರಿ ವ್ಯವಸ್ಥೆಯಲ್ಲಿ ಕ್ಯಾಂಪ್ಕೋ ಸಂಸ್ಥೆಯನ್ನು ರೂಪಿಸಿ ದಲ್ಲಾಳಿಗಳ ಹಿಡಿತದಿಂದ ಮಾರುಕಟ್ಟೆಯನ್ನು ಹೊರತಂದು ಅಡಿಕೆ ಕೃಷಿಕರನ್ನು ತೀವ್ರವಾದ ಬೆಲೆ ಕುಸಿತದಿಂದ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೊಕ್ಕೋ ಬೆಳೆಯ ಬೆಲೆ ಕುಸಿದಾಗ ಕ್ಯಾಂಪ್ಕೋ ಸಂಸ್ಥೆ ತಾನೇ ಏಶ್ಯಾದಲ್ಲೇ ದೊಡ್ಡದಾದ ಚಾಕೊಲೇಟ್ ಕಾರ್ಖಾನೆಯನ್ನು ಸ್ಥಾಪಿಸಿ ಯಶಸ್ವಿಯಾಗಿದೆ. ಇದೇ ಮಾದರಿಯಲ್ಲಿ ಕಬ್ಬು ಕಬ್ಬು ಬೆಳೆಗಾರರು ಸಹಕಾರಿ ವಲಯದಲ್ಲಿ ಒಗ್ಗೂಡಿ ಸಕ್ಕರೆ ಕಾರ್ಖಾನೆಗಳನ್ನು ಸ್ಥಾಪಿಸುವುದು ಕಬ್ಬು ಬೆಳೆಗಾರರ ಸಮಸ್ಯೆಗೆ ಒಂದು ಪರಿಹಾರ ಆಗಬಲ್ಲುದು. ರೈತ ಸಂಘಟನೆಗಳು ಈ ನಿಟ್ಟಿನಲ್ಲಿ ಯೋಚಿಸುವುದು ಅಗತ್ಯ.

    Reply
  2. prasadraxidi

    ಹೌದು ಆನಂದ ಆವರೆ, ನೀವು ಹೇಳುವುದು ನಿಜ ಆದರೆ ಇಂದು ರೈತ ಸಂಘಟನೆಗಳ ಸ್ಥಿತಿ ಏನಾಗಿದೆಯೆಂದು ಎಲ್ಲರಿಗೂ ಗೊತ್ತು. ರೈತ ಚಳುವಳಿಗಳ ಕಾಲದಲ್ಲೇ ಪೂರ್ಣಚಂದ್ರ ತೇಜಸ್ವಿಯವರು. ಹೇಳುತ್ತಿದ್ದರು. ರೈತರ ಹಿತ ಕಾಯೋಕೆ ಯಾವ ಸರ್ಕಾವೂ ಬರೋದಿಲ್ಲ, ನಮ್ಮ ಹಿತವನ್ನು ನಾವೇ ಕಂಡುಕೊಳ್ಳಬೇಕು. ಮತ್ತು ಆರ್ಥಿಕ ಶಿಸ್ತನ್ನು ರೂಡಿಸಿಕೊಳ್ಳುತ್ತಾ ಸಂಘಟಿತ ಹೋರಾಟ ಮಾಡಬೇಕೆಂದು. … ಈಗ ಎಲ್ಲವನ್ನೂ ಮೊದಲಿನಿಂದ ಪ್ರಾರಂಭಿಸಬೇಕಾದ ಪರಿಸ್ಥಿತಿ ಇದೆ. ಈ ವಿಚಾರದಲ್ಲಿ ರೈತರು ಮಾತ್ರವಲ್ಲ ಎಲ್ಲ ಜನಪರ ಹೋರಾಟಗಾರರೂ ತಮ್ಮ ಭಿನ್ನಾಭಿಪ್ರಾಯ- ಬಿಗುಮಾನಗಳನ್ನು ಬಿಟ್ಟು ಒಂದಾಗಬೇಕು, ಕಾಫಿ ಬೆಳಗಾರರೂ ಕ್ಯಾಂಪ್ಕೋವನ್ನು ಅನುಸರಿಸಿ ಕೋಮಾರ್ಕ್ ಎಂಬ ಸಂಸ್ಥೆ ಕಟ್ಟಿದ್ದರು. ಒಂದಿಷ್ಟು ಭರವಸೆಯನ್ನೂ ಮೂಡಿಸಿತ್ತು. ಸರಿಯಾಗಿ ನಿರ್ವಹಿಸದೆ ,ಆಡಳಿತಾತ್ಮಕ ಸಮಸ್ಯೆಯಿಂದ ಮುಳುಗಿಹೋಯ್ತು. ಇದು ಬೆಕ್ಕಿಗೆ ಗಂಟೆ ಹಟ್ಟುವ ಕೆಲಸವಾಗಬಾರದು..

    Reply

Leave a Reply

Your email address will not be published. Required fields are marked *