Monthly Archives: July 2015

ಅಭಿವೃದ್ಧಿಯ ಫಲ ಕೃಷಿಕನನ್ನು ತಲುಪಬಲ್ಲುದೆ?

– ಪ್ರಸಾದ್ ರಕ್ಷಿದಿ

ಇಂದು ಎಲ್ಲ ಸರ್ಕಾರಗಳೂ ಅಭಿವೃಧ್ದಿಯ ಮಾತನ್ನು ನಿತ್ಯ ವಿಧಿಯ ಮಂತ್ರದಂತೆ ಪಠಿಸುತ್ತಿವೆ. ದೇಶ ಅಭಿವೃದ್ಧಿಯಾದರೆ ಉಳಿದೆಲ್ಲ ಸಮಸ್ಯೆಗಳೂ ತಾನಾಗಿಯೇ ನಿವಾರಣೆಯಾಗುತ್ತದೆ ಎಂಬಂತ ಮಾತನ್ನು ಅನೇಕ ರಾಜಕಾರಣಿಗಳು. ಹಲವರು ಸಾಮಾಜಿಕ ಕಾರ್ಯಕರ್ತರೂ ಆಡುತ್ತಿದ್ದಾರೆ. ಆದರೆ ಅಭಿವೃದ್ಧಿ ಎಂದರೇನು ಎಂಬುದಕ್ಕೆ ರಾಜಕೀಯ ಪಕ್ಷಗಳಲ್ಲಿ ಸಾಮಾಜಿಕ ಕಾರ್ಯಕರ್ತರಲ್ಲಿ ಚಿಂತಕರಲ್ಲಿ ಹಲವಾರು ನಮೂನೆಗಳು, ವಿಭಿನ್ನ ಅಭಿಪ್ರಾಯಗಳೂ ಇವೆ. ಇವೆರಡರಲ್ಲಿ ಎರಡು ಮುಖ್ಯಧಾರೆಯ ಚಿಂತನೆಯನ್ನು ನಾವು ಗಮನಿಸಬಹುದು.

ಮೊದಲನೆಯದಾಗಿ ಅಭಿವೃದ್ಧಿ ಎಂದರೆ, ಜನ ಸಾಮಾನ್ಯನ ಜೀವನ ಮಟ್ಟವನ್ನು ಸುಧಾರಿಸುವುದು ಅದಕ್ಕಾಗಿ ಹಲವು ಜನಪರ farmersಯೋಜನೆಗಳು, ಎಲ್ಲರಿಗೂ ಉದ್ಯೋಗ, ವಸತಿ, ಆಹಾರ ಭದ್ರತೆ, ವೈದ್ಯಕೀಯ ಸೌಲಭ್ಯ. ವಿದ್ಯಾಭ್ಯಾಸದ ಅವಕಾಶ ಇತ್ಯಾದಿಯನ್ನು ಸರ್ಕಾರದ ಮೂಲಕ ಒದಗಿಸುವುದು. ಹಲವು ಕ್ಷೇತ್ರಗಳಲ್ಲಿ ಅನಗತ್ಯ ಸ್ಪರ್ಧೆಯನ್ನು ನಿಯಂತ್ರಿಸಿ, ಸರ್ಕಾರವೇ ಹಲವು ಉದ್ಯಮಗಳನ್ನು ನಡೆಸುವುದು, ಸೇವಾ ಸೌಲಭ್ಯಗಳನ್ನುಗಳನ್ನು ಒದಗಿಸುವುದು,ಇತ್ಯಾದಿಗಳು.

ಎರಡನೇ ಮಾದರಿಯೆಂದರೆ, ಮೊದಲು ಎಲ್ಲ ಕ್ಷೇತ್ರಗಳಲ್ಲಿ ಉದ್ಯೋಗಗಳನ್ನು ಸೃಷ್ಟಿಮಾಡುತ್ತ ಹೋಗುವುದು. ಅದಕ್ಕಾಗಿ ಸರ್ಕಾರದ ನಿಯಂತ್ರಣವನ್ನು ಕನಿಷ್ಟಗೊಳಿಸಿ ಖಾಸಗಿಯವರಿಗೆ ಉತ್ತೇಜನ ನೀಡುವುದು. ಉದ್ಯೋಗವಕಾಶಗಳು ಹೆಚ್ಚಿದಂತೆಲ್ಲ, ಎಲ್ಲಕಡೆ ಸ್ಪರ್ಧೆಗೆ ಅವಕಾಶ ನೀಡುವುದರಿಂದ ಉತ್ತಮ ಗುಣಮಟ್ಟದ ಸೇವೆ ಹಾಗೂ ಉತ್ಪನ್ನಗಳು, ಎರಡೂ ಜನರಿಗೆ ದೊರಕಿ ಅವನ ಜೀವನ ಮಟ್ಟ ತಾನಾಗಿಯೇ ಸುಧಾರಿಸುತ್ತದೆ. ಎನ್ನುವುದು.

ಭಾರತ ಸ್ವತಂತ್ರವಾದ ಮೊದಲ ಮೂವತ್ತೈದು ವರ್ಷಗಳು ಮೊದಲನೆಯ ಅಂದರೆ ಸಮಾಜವಾದಿ ನಮೂನೆಯ –ಚಿಂತನೆಯ ಸರ್ಕಾರಗಳಿದ್ದರೆ, ನಂತರದ ವರ್ಷಗಳಲ್ಲಿ ಎರಡನೆಯ, ಬಲಪಂಥೀಯ ವಾದದ ಆಡಳಿತವನ್ನು ಕಾಣುತ್ತಿದ್ದೇವೆ. ವಿಷೇಶವೆಂದರೆ ಎರಡೂ ಮಾದರಿಯ ಸರ್ಕಾರ- ಆಡಳಿತಗಳೂ ಅಭಿವೃದ್ಧಿಯನ್ನೇ ಮೂಲಗುರಿಯಾಗಿಸಿಕೊಂಡು ಆಡಳಿತ ನಡೆಸಿವೆ. ನಾನು ಉದ್ಧೇಶ ಪೂರ್ವಕವಾಗಿಯೇ ಯಾವುದೇ ಪಕ್ಷಗಳನ್ನು ಹೆಸರಿಸುತ್ತಿಲ್ಲ. ಯಾಕೆಂದರೆ ಮೇಲ್ನೋಟಕ್ಕೆ ಕಾಣುವ ಕೆಲವು ಮುಖವಾಡ ಸದೃಶ ಕಾರ್ಯಕ್ರಮಗಳನ್ನು ಹೊರತು ಪಡಿಸಿದರೆ ನಮ್ಮ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ದೊಡ್ಡಮಟ್ಟದ ಸೈದ್ಧಾಂತಿಕ ವೆತ್ಯಾಸವೂ ಇಲ್ಲ. ಆಡಳಿತಾತ್ಮಕ ಭಿನ್ನತೆಯೂ ಇಲ್ಲ.

ಹೀಗಿದ್ದರೂ ಭಾರತದ ಹಲವಾರು ಸಮಸ್ಯೆಗಳ ನಡುವೆಯೂ ಯಾವುದೇ ಅಭಿವೃದ್ದಿ ಆಗಿಯೇ ಇಲ್ಲವೆ? ಎಂದರೆ ಖಂಡಿತ ಇಂದು ನಾವು ಹಲವಾರು ಕ್ಷೇತ್ರಗಳಲ್ಲಿ ಸಾಧಿಸಿರುವ ಅಭಿವೃದ್ಧಿ ಗಣನೀಯವಾಗಿಯೇ ಇದೆ. ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ, ಶಿಕ್ಷಣ, ಕಲೆ, ಕ್ರೀಡೆ, ಉದ್ಯಮ ಹೀಗೆ ಎಲ್ಲ ವಿಚಾರಗಳಲ್ಲೂ ನಮ್ಮ ಸಾಧನೆ ಖಂಡಿತ ವಿಶ್ವವೇ ಗಮನಿಸುವಂತೆ ಇದೆ. ರಾಷ್ಟ್ರೀಯ ಉತ್ಪನ್ನ ಹಲವಾರು ಪಟ್ಟು ಹೆಚ್ಚಾಗಿದೆ. ಹಾಗೇ ಉದ್ಯೋಗಾವಕಾಶಗಳು ಹೆಚ್ಚಿವೆ. ಶ್ರೀಮಂತ ವರ್ಗ ಬಲೂನಿನಂತೆ ಉಬ್ಬಿದ್ದರೆ, ಮಧ್ಯಮ ವರ್ಗವೂ ದೊಡ್ಡ ಪ್ರಮಾಣದ ಫಲಾನುಭವಿಯಾಗಿದೆ. ಆದರೆ ಒಟ್ಟು ಏರಿಕೆಯಾಗಿರುವ ನಮ್ಮ ಜನಸಂಖ್ಯೆಯ ಪ್ರಮಾಣ ಮತ್ತು ತಲಾ ಆದಾಯವನ್ನು ಹೋಲಿಸಿದರೆ. ಕೆಳವರ್ಗದ, ಸಣ್ಣರೈತರ, ಕೂಲಿಕಾರ್ಮಿಕರ ಆದಾಯದಲ್ಲೂ ಸಾಕಷ್ಟು ಏರಿಕೆಯಾಗಿದ್ದು ಅವರ ಜೀವನ ಮಟ್ಟದಲ್ಲೂ ಬದಲಾವಣೆಯಾಗಿರುವುದು ಕಂಡುಬರುತ್ತದೆ. ಆದರೆ ನಮ್ಮ ಜನಸಂಖ್ಯೆಯ ಗಣನೀಯ ಭಾಗವಿನ್ನೂ ಬಡತನದಲ್ಲೇ ಉಳಿದಿದೆ. ಹಾಗೂ ಒಟ್ಟು ಸಂಪತ್ತಿನ ಹಂಚಿಕೆಯ ಅನುಪಾತ ಹಿಂದೆಂದಿಗಿಂತ ವಿಷಮವಾಗಿದೆ. ಇದು ಭಾರತದಾದ್ಯಂತ ರಾಜ್ಯದಿಂದ ರಾಜ್ಯಕ್ಕೆ ಮತ್ತೆ ರಾಜ್ಯಗಳೊಳಗೆ ಪ್ರಾದೇಶಿಕವಾಗಿಯೂ ಭಿನ್ನವಾಗಿದೆ. ಆದ್ದರಿಂದ ಸರ್ಕಾರ ಯೋಜಿಸುವ ಯಾವದೇ ಜನಪರ-ಅಭಿವೃದ್ದಿ ಯೋಜನೆಗಳು ನಮ್ಮ ಅಪಾರ ಪ್ರಾದೇಶಿಕ ಭಿನ್ನತೆ ಹಾಗೂ ಸಾಂಸ್ಕøತಿಕ ಬಹುತ್ವಗಳನ್ನು ಗಮನದಲ್ಲಿಟ್ಟುಕೊಂಡು. ಸ್ಥಳೀಯವಾಗಿ ರೂಪಿತವಾಗದಿದ್ದರೆ ನಿಶ್ಚಿತ ಪರಿಣಾಮವನ್ನು ಬೀರಲು ಅಸಮರ್ಥವಾಗುತ್ತದೆ. (ಉದಾ: ಉದ್ಯೋಗ ಖಾತ್ರಿಯಂತಹ ಯೋಜನೆಗಳು, ಪ್ರಾದೇಶಿಕ ಭಿನ್ನತೆ ಮತ್ತು ಅಗತ್ಯಗಳನ್ನು ಪರಿಗಣಿಸದೆ ದೇಶಾದ್ಯಂತ ಏಕರೂಪದಲ್ಲಿ ಜಾರಿಗೆ ತಂದದ್ದರಿಂದ ನಿಶ್ಚಿತ ಫಲವನ್ನೂ ನೀಡದೆ ವ್ಯಾಪಕ ಭ್ರಷ್ಟಾಚಾರಕ್ಕೆ ಕಾರಣವಾಯಿತು.)

ಈ ಎಲ್ಲ ವಿಚಾರಗಳ ಹಿನ್ನೆಲೆಯಲ್ಲಿ ಅಭಿವೃದ್ಧಿಯು ಕೃಷಿಕ್ಷೇತ್ರವನ್ನು ಹೇಗೆ ತಲುಪಿದೆ, ಅದರ ಪರಿಣಾಮಗಳೇನಾಗಿವೆ ಎಂದು ಪರಿಶೀಲಿಸಬೇಕಾಗಿದೆ.

ಕೃಷಿವಲಯವೆಂದರೆ, ರೈತಾಪಿವರ್ಗ ಮಾತ್ರವಲ್ಲ ಭೂರಹಿತ, ಅಲ್ಪಸ್ವಲ್ಪ ಭೂಮಿಹೊಂದಿದ ಕೃಷಿ ಕೂಲಿಗಾರರು, ಕೃಷಿಕರನ್ನೇ ಅವಲಂಬಿಸಿ ಬದುಕುತ್ತಿರುವ ಕಮ್ಮಾರ, ಬಡಗಿ, ಗಾರೆಯವರು, ಹಳ್ಳಿಗಳಲ್ಲಿರುವ ಯಂತ್ರೋಪಕರಣಗಳ ರಿಪೇರಿಯವರು, ದರ್ಜಿಗಳು ಇತರ ಸಣ್ಣಪುಟ್ಟ ಉಪಕಸುಬುದಾರರು ಎಲ್ಲರೂ ಬರುತ್ತಾರೆ. ಇವರೆಲ್ಲರೂ ಕೃಷಿಯನ್ನೇ ಅವಲಂಬಿಸಿ ಬದುಕುತ್ತಿರುವುದರಿಂದ ಕೃಷಿಯ ಮೇಲಾಗುವ ಯಾವುದೇ ಪರಿಣಾಮವೂ ಇವರನ್ನೂ ಆವರಿಸಿಕೊಳ್ಳುತ್ತದೆ.

ಇದರೊಂದಿಗೆ ಗಮನಿಸಬೇಕಾದ ಮುಖ್ಯವಾದ ಸಂಗತಿಯೆಂದರೆ. ದೇಶದಲ್ಲಿ ಸಮಾಜವಾದೀ ಮಾದರಿಯ ಸರ್ಕಾರ ಇದ್ದ ಕಾಲದಲ್ಲಿ. ನಮ್ಮ ಹಳ್ಳಿಗಳಲ್ಲಿ ಪಾಳೇಗಾರೀ-ಜಮೀನ್ದಾರೀ ಸಂಬಂಧಗಳೇ ಮುಂದುವರೆದಿದ್ದವು. ಕರ್ನಾಟಕದಂತಹ ಕೆಲವು ರಾಜ್ಯಗಳಲ್ಲಿ ಭೂಸುಧಾರಣೆ ಜಾರಿಗೆ ಬಂದ ನಂತರವೂ, ಹಳ್ಳಿಗಳಲ್ಲಿ ಭೂರಹಿತ ಕೃಷಿಕೂಲಿಗಾರರ ಬದುಕಿನಲ್ಲಿ ಮಹತ್ತರ ಬದಲಾವಣೆಯೇನೂ ಆಗಿರಲಿಲ್ಲ. ಭೂಸುಧಾರಣೆಯ ಫಲಾನುಭವಿಗಳಾದ ಗೇಣಿದಾರರು, ಕೂಲಿಗಾರ ಪಾಲಿಗೆ ಭೂಮಾಲಿಕರಾಗಿ ಹಳೆಯ ಜಮೀನ್ದಾರೀ ಸಂಬಂಧಗಳಲ್ಲೇ ಮುಂದುವರೆದರು. ಆದರೆ ಈ ಪಾಳೇಗಾರೀ ಸ್ವರೂಪದ ಸಂಬಂಧಗಳು ಬದಲಾಗಲು ಪ್ರಾರಂಭವಾದದ್ದು. ಭಾರತ ಸಮಾಜವಾದಿ ಮಾದರಿಯನ್ನು ಬಿಟ್ಟು ಬಲಪಂಥೀಯ ಮಾದರಿ ಆಡಳಿತವನ್ನು ಪ್ರಾರಂಭಿಸಿದ ನಂತರವೇ. ಇದಕ್ಕೆ ಅನೇಕ ಕಾರಣಗಳಿವೆ.

ಇತ್ತೀಚಿನ ಎಲ್ಲ (ರಾಜ್ಯ-ಕೇಂದ್ರಗಳ) ರೈತರಬಗ್ಗೆ, ಕೃಷಿವಲಯದ ಬಗ್ಗೆ ಬಹಳ ಮಾತನಾಡುತ್ತಿವೆ. ಪ್ರತ್ಯೇಕ ಬಜೆಟ್ಟನ್ನೂ ತಂದಿವೆ. farmer-land-acquisition-2ಕೃಷಿವಲಯಕ್ಕೆಂದೇ ಹಲವಾರು ಯೋಜನೆಗಳನ್ನು-ಕಾರ್ಯಕ್ರಮಗಳನ್ನೂ ಘೋಷಣೆ ಮಾಡುತ್ತಿದೆ. ಆದರೆ ಹಳ್ಳಿಗಳು ಬರಡಾಗುತ್ತ, ದುಡಿಯುವ ಶಕ್ತಿಯಿರುವ ಯುವಜನತೆ ನಗರ ವಲಸೆ ಹೋಗುತ್ತಿದ್ದಾರೆ. ಯಾವ ಹಳ್ಳಿಯನ್ನು ಪ್ರವೇಶಿಸಿ ಪ್ರತಿಯೊಂದು ಮನೆಯಲ್ಲಿ ಪ್ರಶ್ನಿಸಿದರೆ ಮನೆಯಲ್ಲಿ ಒಬ್ಬನಾ(ಳಾ)ದರೂ ಬೆಂಗಳೂರು, ಮುಂಬೈ ಅಥವಾ ಇನ್ನಾವುದೇ ನಗರ ಇಲ್ಲವೇ ವಿದೇಶದಲ್ಲಿದ್ದಾರೆ. ಇವರಲ್ಲೂ ಅನೇಕರು ತಮ್ಮ ಜೀವನಾವಶ್ಯಕತೆ ತಕ್ಕಷ್ಟು ಮಾತ್ರ ಗಳಿಸುತ್ತಿದ್ದು ಹಳ್ಳಿಯಲ್ಲಿರುವ ತಮ್ಮ ಕುಟುಂಬದವರಿಗೆ ಸಹಾಯ ಮಾಡುವ ಸ್ಥಿತಿಯಲ್ಲಿ ಇಲ್ಲ. ಆದರೆ ಹೀಗೆ ಹೊರ ಹೋದವರಲ್ಲಿ ಗಣನೀಯವಾದ ಸಂಖ್ಯೆಯ ಜನ ತಮ್ಮ ಗಳಿಕೆಯ ಒಂದು ಪಾಲನ್ನು ತಮ್ಮ ಕುಟುಂಬಕ್ಕೆ ನೀಡುತ್ತಿದ್ದಾರೆ. ಇದರಿಂದಾಗಿ ಅವರ ಆರ್ಥಿಕ ಮಟ್ಟವೂ ಸುಧಾರಿಸಿದೆ. ಜೊತೆಯಲ್ಲೇ ಹಳ್ಳಿಗಳಲ್ಲೇ ಕೂಲಿಕಾರ್ಮಿಕರ ಕೊರತೆ ಉಂಟಾಗಿರುವುದರಿಂದ, ಭೂರಹಿತ ಕೂಲಿಯಾಳುಗಳು ಕೂಲಿಗಾಗಿ ಭೂಮಾಲಿಕರ ಮುಂದೆ ದೈನೇಸಿಯಾಗಿ ನಿಲ್ಲಬೇಕಾದ ಪರಿಸ್ಥಿತಿ ಕಡಿಮೆಯಾಗಿದೆ. ಇಂತಹ ಪರಿಸ್ಥಿತಿ ದೇಶಾದ್ಯಂತ ಕೆಲವು ರಾಜ್ಯ-ಭಾಗಗಳಲ್ಲಿ ಕಂಡುಬಂದರೆ ಇನ್ನು ಕೆಲವು ಭಾಗಗಳಲ್ಲಿ ತೀವ್ರ ಬಡತನ ನಿರುದ್ಯೋಗವೇ ಮುಂದುವರೆದಿದೆ. ಈ ಪ್ರದೇಶಗಳಿಂದ ಜನರು ಕೂಲಿ-ಕೆಲಸಗಳಿಗಾಗಿ ಬೇರೆ ರಾಜ್ಯಗಳಿಗೆ ವಲಸೆ ಹೋಗುವುದು ನಿರಂತರವಾಗಿದೆ. ಉದಾಹರಣೆಗೆ ಕರ್ನಾಟಕದ ದಕ್ಷಿಣ ಒಳನಾಡು ,ಮಲೆನಾಡು ಹಾಗೂ ಕರಾವಳಿಯ ಭಾಗಗಳಲ್ಲಿ ಕೇವಲ ಮೂರು -ನಾಲ್ಕು ವರ್ಷಗಳ ಹಿಂದೆ ಕೃಷಿ ಸಾಧ್ಯವೇ ಇಲ್ಲವೆನ್ನುವಷ್ಟು ಕಾರ್ಮಿಕರ ಕೊರತೆ ಉಂಟಾಗಿತ್ತು. ಈಗ ಉದ್ಯೋಗವಕಾಶಗಳು ಕಡಿಮೆ ಇರುವ ಬಿಹಾರ, ಒರಿಸ್ಸಾ ಹಾಗೂ ಅಸ್ಸಾಮಿನಿಂದ ಸಾಕಷ್ಟು ಜನರು ವಲಸೆ ಬರುತ್ತಿದ್ದಾರೆ. ಆದರೆ ಇವರಿಗೆ ಈ ನೆಲದಲ್ಲಿ ಯಾವುದೇ ಸಂಬಂಧಗಳಿಲ್ಲದಿರುವುದರಿಂದ, ಇವರಿಗೆ ಸಂಬಳ ಸಾರಿಗೆ ವಿಚಾರದಲ್ಲಿ ಸ್ವಲ್ಪ ಮಟ್ಟಿನ ಆಯ್ಕೆಯ ಸ್ವಾತಂತ್ರ್ಯ ಇದೆ. ಇಲ್ಲೇ ಇರುವ ಸ್ಥಳೀಯ ಕುಶಲ ಕರ್ಮಿಗಳು-ಕೂಲಿಕಾರರಿಗೂ ಸ್ವಲ್ಪಮಟ್ಟಿಗೆ ಚೌಕಾಸಿಯ ಬಲ ಬಂದಿರುವುದರಿಂದ ತಮ್ಮ ಕೂಲಿ ಮತ್ತು ಕೆಲಸದ ಪರಿಸ್ಥಿತಿ ಇನ್ನಿತರ ವಿಷಯಗಳ ಬಗ್ಗೆ ಮಾಲೀಕರೊಂದಿಗೆ ಮಾತು ಕತೆಗೆ ನಿಲ್ಲಬಲ್ಲರು. ಇವೆಲ್ಲದರಿಂದ ಹಳೆಯ ಪಾಳೇಗಾರೀ ಸಂಬಂಧಗಳಿಗೆ ಬದಲಾಗಿ ಭಂಡವಾಳಶಾಹಿ ವ್ಯವಸ್ಥೆಯ ಮಾಲೀಕ ನೌಕರ ಸಂಬಂಧಗಳು ಏರ್ಪಡುತ್ತಿವೆ. ಮತ್ತು ಹಣ ಮುಖ್ಯ ಭೂಮಿಕೆಗೆ ಬಂದಿದೆ.

ಇದರಿಂದಾಗಿ ತಮ್ಮ ಬೆಳೆಗೆ ತಾವೇ ಬೆಲೆ ನಿರ್ಧರಿಸಲಾಗದ ಅಸಹಾಯಕತೆಯಲ್ಲಿರುವ ಕೃಷಿಕರು,farmers-suicide ಕೂಲಿಕಾರ್ಮಿಕರು ಕೂಲಿ ಮತ್ತು ಇತರ ಸೌಲಭ್ಯಗಳಿಗಾಗಿ ಚೌಕಾಸಿ ಮಾಡುವುದನ್ನು ಕಂಡು “ಕೂಲಿಗಾರರೆಲ್ಲ ಹೆಚ್ಚಿಹೋಗಿದ್ದಾರೆಂದೂ ಯಾರೂ ಕೆಲಸ ಮಾಡುತ್ತಿಲ್ಲವೆಂದೂ, ಸರ್ಕಾರ ಅನೇಕ ಯೋಜನೆಗಳ ಮೂಲಕ ಇವರನ್ನು ಇನ್ನಷ್ಟು ಸೋಮಾರಿಗಳಾಗಿ ಮಾಡುತ್ತಿದೆ”ಯೆಂದೂ ದೂರುತ್ತಿರುತ್ತಾರೆ. ಎಲ್ಲ ವಿದ್ಯಮಾನಗಳ ಅರಿವಿರುವ ದೊಡ್ಡ ಭೂಮಾಲಕರೂ ಮತ್ತು ಕೆಲವರು ನಗರಪ್ರದೇಶದ ಮಧ್ಯಮ ವರ್ಗದವರು ಇವರೊಂದಿಗೆ ಅಲಂಕಾರಿಕವಾಗಿ ದನಿಗೂಡಿಸುತ್ತಾರೆ. ಇದರಿಂದಾಗಿಯೇ ಮಾಧ್ಯಮಗಳಲ್ಲಿ ಸರ್ಕಾರದ ಆಹಾರ ಭದ್ರತಾ ಕಾರ್ಯಕ್ರಮ ಮತ್ತು ಇತರ ಜನಪ್ರಿಯ ಯೋಜನೆಗಳ ಬಗ್ಗೆ ಪರ-ವಿರೋಧಗಳ ಯುದ್ಧವೇ ನಡೆಯುತ್ತಿರುತ್ತದೆ.

ಇಂದು ಯಾವುದೇ ಹಳ್ಳಿಗೆ ಹೋದರೂ, ಅಂಗಡಿಗಳಲ್ಲಿ ನೇತುಹಾಕಿರುವ ಹಲವಾರು ಬಗೆಯ ಬಣ್ಣಗಳ ಪ್ಯಾಕೆಟ್‍ಗಳು. ಖರ್ಚಾಗುವ, ಪೆಪ್ಸಿ-ಕೋಕಾಕೋಲಾ ಬಾಟಲಿಗಳು. ಅಲ್ಲೇ ಗುಟ್ಟಾಗಿ ಮಾರಾಟವಾಗುವ ಮಧ್ಯದ ಪ್ರಮಾಣ, ಮನೆಮನೆಗಳನ್ನು ತಲುಪಿರುವ ಸ್ಮಾರ್ಟ್‍ಫೋನ್‍ಗಳು, (ಹಳ್ಳಿಗಳಲ್ಲಿಂದು ಆಹಾರ ಪಧಾರ್ಥಗಳಿಗಿಂತ ಹೆಚ್ಚಿನ ಮೊತ್ತದ ಹಣ ಮೊಬೈಲ್ ಕರೆನ್ಸಿಗೆ ಖರ್ಚಾಗುತ್ತಿದೆ) ಇದನ್ನು ಕಂಡಾಗ, ಹೊರಗಿನಿಂದ ಬಂದವರಿಗೆ ಹಳ್ಳಿಗಳಿಂದು ಸಮೃದ್ಧವಾಗಿದೆ ಎನ್ನಿಸದೆ ಇರದು.

ಆದರೆ ನಿಜವಾದ ಸಮಸ್ಯೆಯಿರುವುದು ಹೊರಗಿನ ಯಾವ ಆದಾಯವೂ ಇಲ್ಲದ, ಕೃಷಿಯನ್ನು ಮಾತ್ರ ನಂಬಿ ಬದುಕುತ್ತಿರುವವರಲ್ಲಿ, ಮತ್ತು ನಾನಾ ಕಾರಣಗಳಿಂದ ದುಡಿಯಲು ಅಸಮರ್ಥರಾಗಿರುವ ಕೂಲಿಕಾರ್ಮಿಕರಲ್ಲಿ, ಹಾಗೂ ಮಿತ ಆದಾಯ ಆಥವಾ ನಿಶ್ಚಿತ ಆದಾಯವಿಲ್ಲದ ದರ್ಜಿ, ಟ್ಯಾಕ್ಸಿ-ರಿಕ್ಷಾ ಓಡಿಸುವವರು, ಸಣ್ಣ ಉದ್ಯೋಗಿಗಳು ಮುಂತಾದವರಲ್ಲಿ. ಇವರ ಸಂಖ್ಯೆಯೂ ಗಣನೀಯವಾಗಿದೆ. ಸಾಮಾನ್ಯವಾಗಿ ಕಷ್ಟನಷ್ಟಗಳಲ್ಲಿ ಸೋತು ಆತ್ಮಹತ್ಯೆಯೋ ಪಲಾಯನವೋ ಮಾಡುವವರು. ಇಲ್ಲವೇ ಎಲ್ಲವನ್ನೂ ಮಾರಿ ಬೀದಿ ಪಾಲಾಗುವವರು ಇವರಲ್ಲೇ ಹೆಚ್ಚಾಗಿದ್ದಾರೆ. ಆದರೆ ಇಂದಿನ ಪರಿಸ್ಥಿತಿಯಲ್ಲಿ ಆಬಿವೃದ್ಧಿ ಫಲ ಕೃಷಿಕ್ಷೇತ್ರಕ್ಕೆ ದೊರೆತಿದೆಯೆ ಅಥವಾ ಅದರ ಪರಿಣಾಮಗಳೇನು ಎಂದು ನೋಡಬೇಕಾದರೆ. ಇದನ್ನು ಮಾತ್ರ ಗಮನಿಸಿದರೆ ಸಾಲದು. naxalite24fo4ಅನ್ಯ ಆದಾಯಗಳನ್ನು ಹೊರತು ಪಡಿಸಿದರೆ ಕೃಷಿಕ್ಷೇತ್ರ ಹೇಗಿದೆ. ನಿಜವಾಗಿಯೂ ಅಭಿವೃಧ್ಧಿಯ ಫಲ “ಕೃಷಿಭಾರತ’ ವನ್ನು ತಲಪಿದೆಯೆ? ಇಲ್ಲದಿದ್ದರೆ ಮುಂದೇನು ಎಂದು ಪರಿಶೀಲಿಸೋಣ.

ಎಲ್ಲ ಸರ್ಕಾರಗಳೂ ಕೃಷಿಗೆ ಉತ್ತೇಜನ ನೀಡುತ್ತೇವೆಂದು ಹೇಳುತ್ತ ಆಧುನಿಕ ತಂತ್ರಜ್ಞಾನದ ಫಲ ರೈತನಿಗೆ ಸಿಗಬೇಕೆಂದು ಹೇಳುತ್ತ ಅದಕ್ಕಾಗಿಯೇ ಒಂದಷ್ಟು ಹಣವನ್ನು ಮೀಸಲಿಡುತ್ತಿವೆ; ಜೊತೆಯಲ್ಲಿಯೇ ಸಾವಯವ ಕೃಷಿಯೇ ಎಲ್ಲ ಸಮಸ್ಯೆಗಳಿಗೆ ಪರಿಹಾರವೆಂಬಂತೆ ಪ್ರಚಾರವನ್ನೂ ಮಾಡುತ್ತವೆ. ಇದೆಲ್ಲದರ ಹಿನ್ನೆಲೆನ್ನೂ ಪರಿಶೀಲಿಸಿದರೆ ಅನೇಕ ಸಂಗತಿಗಳು ನಮ್ಮ ಗಮನಕ್ಕೆ ಬರುತ್ತವೆ.

ಒಂದೆಡೆ ಸಾವಯವ ಕೃಷಿಯ ಬಗ್ಗೆ ಮಾತನಾಡುವ ಸರ್ಕಾರ, ಹೈಟೆಕ್ ಕೃಷಿಗೆ ನೀಡುತಿರ್ತುವ ಸವಲತ್ತು ಮತ್ತು ಪ್ರಚಾರ ಊಹೆಗೂ ಮೀರಿದ್ದು. ಈ ಹೈಟೆಕ್ ತಂತ್ರಜ್ಞಾನವೆಂಬುದು ನಮ್ಮ ಜೀವನದ ಎಲ್ಲ ರಂಗಗಳನ್ನು ಪ್ರವೇಶಿಸಿದಂತೆಯೇ ಅಗಾಧ ಪ್ರಮಾಣದಲ್ಲಿ ಕೃಷಿ ವಲಯವನ್ನು ಆವರಿಸಿಕೊಳ್ಳುತ್ತಿದೆ. ಸರ್ಕಾರದ ಕೃಷಿ ಇಲಾಖೆಯ ವಿಜ್ಷಾನಿಗಳು, ಅಧಿಕಾರಿಗಳು, ತಂತ್ರಜ್ಷರ ಸಾಲು ಸಾಲುಗಳಲ್ಲದೆ, ಈ ಹೈಟೆಕ್ ತಂತ್ರಜ್ಞಾನದ ಪ್ರಚಾರ, ಮಾರಾಟ, ನಿರ್ವಹಣೆ ಮತ್ತು ತಾಂತ್ರಿಕಸಲಹೆಗಾಗಿ ದೊಡ್ಡ ಪಡೆಯನ್ನೇ ನಿರ್ಮಿಸಿರುವ ಬೃಹತ್ ವ್ಯಾಪಾರಿ ಸಂಸ್ಥೆಗಳು, ಇವರೆಲ್ಲರೂ ಸೇರಿ ಕೃಷಿಕರಿಗೆ ಒಡ್ಡುತ್ತಿರುವ ಆಮಿಷಗಳು ಹಲವಾರು. ನೀಟಾಗಿ ಡ್ರೆಸ್‍ಮಾಡಿ ಸರ್ಜರಿ ಆಪರೇಷನ್‍ಗೆ ಹೊರಟ ತಜ್ಞವೈದ್ಯರಂತೆ ಕಂಗೊಳಿಸುತ್ತ “ಕೃಷಿ ಕ್ಷೇತ್ರ’ಕ್ಕೆ ಭೇಟಿನೀಡುವ ‘ತಾಂತ್ರಿಕ ಸಲಹೆಗಾರರು’, ‘ಕ್ಷೇತ್ರ ಪರಿವೀಕ್ಷಕರು’ ಇವರನ್ನೆಲ್ಲ ಕಂಡಾಗ, ನಮ್ಮ ಕೃಷಿವಲಯ ಇಷ್ಟೊಂದು ಸಮೃದ್ಧವಾಗಿದೆಯೇ? ಎಂದು ಅನ್ನಿಸದೆ ಇರದು. ಅವರು ಬಳಸುವ ನುಡಿಗಟ್ಟುಗಳನ್ನು ಗಮನಿಸಿ, ತೋಟ ಹೊಲ ಗದ್ದೆಗಳ ಬದಲಾಗಿ. ‘ಕೃಷಿ ಕ್ಷೇತ್ರ’ ‘ಕೃಷಿಉದ್ಯಮ’ ಜೊತೆಗೆ ‘ಅಗ್ರಿಕ್ಲಿನಿಕ್’ ‘ಅಗ್ರಿಟೆಕ್ನಿಕ್’ ಇತ್ಯಾದಿ ಮಾಯಾಜಾಲದ ತಾಂತ್ರಿಕ ಪದಗಳು. ಇವುಗಳೊಂದಿಗೆ ಅವರು ತಯಾರಿಸಿಕೊಂಡ ತಜ್ಞವರದಿಗಳು, ಸಂಶೋಧನಾ ಪ್ರಬಂಧಗಳು. ಇವುಗಳೆಲ್ಲವೂ ಸೇರಿ ಇನ್ನು ಕೆಲವೇ ವರ್ಷಗಳಲ್ಲಿ ಕನ್ನಡದ ‘ತೋಟ, ಗದ್ದೆ, ಹೊಲ’ ಗಳೆಲ್ಲ ಮಾಯವಾಗಿಬಿಟ್ಟರೆ ಆಶ್ಚರ್ಯವೇನೂ ಇಲ್ಲ. ಸದ್ಯಕ್ಕೆ ಇವರನ್ನೆಲ್ಲ ನೋಡುತ್ತ ರೈತ ದಂಗಾಗಿರುವುದಂತೂ ನಿಜ.

ಸಾವಯವ ಕೃಷಿ ಮತ್ತು ಹೈಟೆಕ್ ಕೃಷಿ ಇವುಗಳು, ಪೂರ್ವ ಪಶ್ಚಿಮ ತುದಿಗಳಾದರೆ, ಇನ್ನೊಂದು ನಾವೀಗ ಹೆಚ್ಚಾಗಿ ರೂಪಿಸಿಕೊಂಡಿರುವ guj-agricultureಆಧುನಿಕ ಕೃಷಿ. ಸಾಕಷ್ಟು ರಸಗೊಬ್ಬರ, ಹೆಚ್ಚು ಇಳುವರಿಯ ಹೈಬ್ರಿಡ್ ತಳಿಗಳು, ಹೆಚ್ಚು ನೀರು, ತರಹೇವಾರಿ ಕೃಷಿವಿಷಗಳನ್ನೆಲ್ಲ ಬಳಸಿ ಬೆಳೆಯುವ, ಸಾಕಷ್ಟು ಯಂತ್ರೋಪಕರಣಗಳನ್ನು ಉಪಯೋಗಿಸಲು ಅವಕಾಶವಿರುವ ಕೃಷಿಯೇ ಈ ಆಧುನಿಕ ಕೃಷಿ.

ಆಧುನಿಕ ಕೃಷಿಯ ಸಮರ್ಥಕರು ನೀಡುವ ಅತಿ ಮುಖ್ಯ ಉದಾಹರಣೆಯೆಂದರೆ ಸ್ವಾತಂತ್ರ್ಯೋತ್ತರ ಭಾರತದ ಆಹಾರ ಪರಿಸ್ಥಿತಿ. ಸುಮಾರು ಎಪ್ಪತ್ತರ ದಶಕದವರೆಗೂ ಭಾರತದ ಆಹಾರ ಮಂತ್ರಿಯೆಂದರೆ ಭಿಕ್ಷಾನ್ನ ಮಂತ್ರಿಯೆಂದೇ ಪ್ರಖ್ಯಾತ!. ಆಗ ಅಮೆರಿಕಾ ಕೊಟ್ಟರೆ ಮಾತ್ರ ನಮಗೆ ಅನ್ನ ಎಂಬ ಪರಿಸ್ಥಿತಿ, “ಆದರೆ ಈಗ ನೋಡಿ ನಾವು ಆಹಾರವನ್ನು ರಫ್ತು ಮಾಡುತ್ತಿದ್ದೇವೆ… ಜನಸಂಖ್ಯೆಯ ಅಗಾಧ ಏರಿಕೆಯ ಜೊತೆಯಲ್ಲೇ ಆಹಾರ ದಾಸ್ತಾನು ಕೂಡಾ ಅದೇ ಪ್ರಮಾಣದಲ್ಲಿ ಹೆಚ್ಚಿದೆ ………..” ಇತ್ಯಾದಿ. ಇದು ಅಂಕಿ ಅಂಶಗಳ ಮತ್ತು ಆಹಾರದ ಲಭ್ಯತೆಯ ಮಟ್ಟದಲ್ಲಿ ಖಂಡಿತ ನಿಜ. ಆದರೆ ಇದಕ್ಕೆ ಆಧುನಿಕ ಕೃಷಿಪದ್ಧತಿ ಒಂದೇ ಕಾರಣವಲ್ಲ. ಇತ್ತೀಚಿನ ವರ್ಷಗಳಲ್ಲಿ ಆದ ನಮ್ಮ ಅನೇಕ ಹೊಸ ನೀರಾವರಿ ಯೋಜನೆಗಳು ಮತ್ತು ಅದರಿಂದಾದ ಕೃಷಿ ಭೂಮಿಯ ವಿಸ್ತರಣೆ, ಹಾಗೂ ನಾವು ಹೊಸದಾಗಿ ಕೃಷಿಗೆ ಒಳಪಡಿಸಿದ ಅರಣ್ಯ ಭೂಮಿಯ ಪ್ರಮಾಣ ಇವುಗಳನ್ನೆಲ್ಲ ಸಮಗ್ರವಾಗಿ ಅಧ್ಯಯನ ಮಾಡಿದರಷ್ಟೇ ಸರಿಯಾದ ಚಿತ್ರಣ ದೊರೆತೀತು. ಈ ಆಧುನಿಕ ಕೃಷಿಯನ್ನೇ ವೈಜ್ಞಾನಿಕವೆಂದು ನಂಬಿಕೊಂಡವರಿಂದ ಈ ಸಮೀಕ್ಷೆ- ಅಧ್ಯಯನಗಳು ನಡೆದಲ್ಲಿ ಯಾವುದೇ ಪ್ರಯೋಜನವಿಲ್ಲ. ಕೆಲವು ವರ್ಷಗಳ ಹಿಂದೆಯೇ, ನಮ್ಮ ಹತ್ತಿರದ ಕೃಷಿ ಸಂಶೋಧನಾ ಕೇಂದ್ರದ ಹಿರಿಯ ವಿಜ್ಞಾನಿಯೊಬ್ಬರಿಗೆ ಅವರ ಸಂಶೋಧನೆಯ ಕೆಲವು ಲೇಖನಗಳನ್ನು ಪ್ರಕಟಿಸಲು ಅವರ ನಿರ್ದೇಶನಾಲಯದಿಂದ ಅನುಮತಿ ಸಿಗಲಿಲ್ಲ. ಯಾಕೆಂದರೆ ಅವರ ಸಂಶೋಧನೆಯ ಫಲಶ್ರುತಿ, ಸರ್ಕಾರ ಪ್ರಚಾರ ಮಾಡುತ್ತಿದ್ದ ವಿಷಯಗಳ ಹಾಗೂ ಕೆಲವು ಕಂಪೆನಿಗಳ ಹಿತಾಸಕ್ತಿಯ ವಿರುದ್ಧವಾಗಿತ್ತು. ಅವರ ಅಭಿಪ್ರಾಯ ಹೀಗಿತ್ತು “ಈಗ ನಮ್ಮ ಮುಂದಿರುವುದು ಕೆಲವು ಕೃಷಿ ಪದ್ಧತಿಗಳು, ಸಾಂಪ್ರದಾಯಿಕ ಕೃಷಿ, ಸಾವಯವ ಕೃಷಿ, ಮತ್ತು ಆಧುನಿಕ ಕೃಷಿ ಇತ್ಯಾದಿ… ವೈಜ್ಞಾನಿಕ ಕೃಷಿ ಎನ್ನುವುದು ನಾವಿನ್ನು ಕಂಡುಕೊಳ್ಳಬೇಕಾದ ಮತ್ತು ನಿರಂತರ ಹುಡುಕಾಟದಲ್ಲಿರಬೇಕಾದ ಮಾರ್ಗ ಅಷ್ಟೆ”. ಈ ನಿರಂತರ ಹುಡುಕಾಟದ ಕ್ರಿಯೆ ನಮ್ಮ ಜೀವನದ ಎಲ್ಲ ರಂಗಗಳಿಗೂ ಅನ್ವಯವಾಗಬೇಕಾದ ವಿಷಯ. ಅದಲ್ಲದೆ ಆ ವಿಜ್ಞಾನಿ ಮತ್ತೂ ಮುಂದುವರಿದು “ಆಧುನಿಕ ಕೃಷಿಯೆನ್ನುವುದು ದೊಡ್ಡ ಪ್ರಮಾಣದ ಕೃಷಿಗೆ ಅನುಕೂಲಕರವಾಗಿದೆ, ಯಾಕೆಂದರೆ ಯಂತ್ರಗಳು, ನೀರಾವರಿ, ಸುಧಾರಿತ ಬೀಜಗಳು, ಹಾಗೇ ದೊಡ್ಡ ಪ್ರಮಾಣದಲ್ಲಿ ರಸಗೊಬ್ಬರ-ಕೀಟನಾಶಕ, ಕಳೆನಾಶಕ ಮುಂತಾದವುಗಳ ಬಳಕೆ ಇದಕ್ಕೆ ಬೇಕಾಗುವ ದೊಡ್ಡ ಪ್ರಮಾಣದ ಭಂಡವಾಳ ಹೂಡಿಕೆ ಎಲ್ಲವನ್ನೂ ಒಳಗೊಂಡು ಕೈಗಾರಿಕೆ ಆಧಾರಿತ ಕೃಷಿಯಾಗಿದೆ” ಎಂದಿದ್ದರು. ಈ ಎಲ್ಲ ಕಾರಣಗಳಿಗಾಗಿಯೇ ಈ ಆಧುನಿಕ ಕೃಷಿ ನಮ್ಮನ್ನಾಳುವವರಿಗೂ ಅತ್ಯಂತ ಆಪ್ಯಾಯಮಾನವಾದದ್ದಾಗಿದೆ.

ಇದೀಗ ಇನ್ನೊಂದು ಮಧ್ಯಮ ಮಾರ್ಗವಾದ ‘ಸಾವಯವ ಕೃಷಿ’ಯನ್ನು ಗಮನಿಸೋಣ. ಈಗ ಸರ್ಕಾರವೇ ಸಾವಯವ rural-indiaಕೃಷಿಯ ಬಗ್ಗೆ ಆಸಕ್ತಿ ತೋರಿದೆಯೆಂದರೆ, ಸರ್ಕಾರಕ್ಕೆ ಈ ಆಧುನಿಕ ಕೃಷಿಯ ಅನಾಹುತಗಳು ಅರ್ಥವಾಗಿ ಸಾವಯವ ಕೃಷಿಯ ಪ್ರತಿಪಾದಕನಾಗಿದೆ ಎಂದುಕೊಂಡರೆ ಅದು ನಮ್ಮ ದಡ್ಡತನವಷ್ಟೆ. ಯಾವುದೇ ಸರ್ಕಾರಕ್ಕೂ ಯಾವಾಗಲೂ ಬೃಹತ್ ಯೋಜನೆಗಳೇ ಅಚ್ಚುಮೆಚ್ಚು. ಯೋಜನೆಗಳ ಗಾತ್ರ ಹಿರಿದಾದಷ್ಟೂ ಆಳುವವರ ಹಿತವೂ ದೊಡ್ಡ ಪ್ರಮಾಣದಲ್ಲಿ ರಕ್ಷಣೆಯಾಗುತ್ತದೆ. ಇದಕ್ಕೆ ಆಧುನಿಕ ಹಾಗೂ ಹೈಟೆಕ್ ಕೃಷಿಯ ದೊಡ್ಡ ಕಂಪೆನಿಗಳೇ ಸೂಕ್ತವಾದದ್ದು. ಹೀಗಿದ್ದೂ ಸರ್ಕಾರ ಈಗೇಕೆ ಸಾವಯವದ ಧ್ವನಿಯೆತ್ತಿದೆ? ವೈಯಕ್ತಿಕ ಮಟ್ಟದಲ್ಲಿ ಈ ರೀತಿ ಯೋಚಿಸುವ ಕೆಲವರು ಶಾಸಕರೋ ಮಂತ್ರಿಗಳೋ ಇರಬಹುದು, ಆದರೆ ಒಟ್ಟೂ ಆಡಳಿತ ಯಂತ್ರ ಯಾವತ್ತೂ ದೊಡ್ಡ ಪ್ರಮಾಣದ ಆಧುನಿಕ ಕೃಷಿಯ ಪರವೇ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಪರ್ಯಾಯ ಕೃಷಿಗೆ ಮತ್ತು ಪರ್ಯಾಯ ಆರೋಗ್ಯ ಪದ್ಧತಿಗೆ ಸಿಗುತ್ತಿರುವ ಪ್ರಚಾರ ಜೊತೆಗೆ ಅಂತಾರಾಷ್ಟ್ರೀಯಮಟ್ಟದಲ್ಲೂ ಈ ಬಗ್ಗೆ ಮೂಡುತ್ತಿರುವ ಜಾಗೃತಿ ಹಾಗೂ ನಮ್ಮಲ್ಲೂ ಕೃಷಿಕರಲ್ಲಿ ಹಾಗೂ ಸಮಾಜದ ಅನೇಕ ವಲಯಗಳಲ್ಲಿ ಹೆಚ್ಚುತ್ತಿರುವ ತಿಳುವಳಿಕೆ, ಇವೆಲ್ಲವುಗಳಿಂದ ಸರ್ಕಾರದ ಮೇಲೆ ಬೀಳುತ್ತಿರುವ ಒತ್ತಡದಿಂದಾಗಿ ಸರ್ಕಾರ ಈ ಕೆಲಸಕ್ಕೆ ಮುಂದಾಗಿದೆಯಷ್ಟೆ.

ಇರಲಿ, ಸರ್ಕಾರದ ಉದ್ದೇಶ ಒಳ್ಳೆಯದೆಂದೇ ಇಟ್ಟುಕೊಳ್ಳೋಣ. ಸರ್ಕಾರ ಹೇಳುವಂತಹ ಅಥವಾ ನಾವು ಅಂದುಕೊಂಡಿರುವಂತಹ ಸಾವಯವ ಕೃಷಿ ಅಂದರೇನು? ರಾಸಾಯನಿಕ ವಸ್ತುಗಳನ್ನು ಅಂದರೆ ರಸಗೊಬ್ಬರಗಳು, ಕೀಟನಾಶಕಗಳು, ಕಳೆನಾಶಕಗಳನ್ನು ಉಪಯೋಗಿಸದೆ, ಹಟ್ಟಿಗೊಬ್ಬರ- ಸಸ್ಯಜನ್ಯ ಕೀಟನಾಶಕಗಳು, ಸಾವಯವಗೊಬ್ಬರ ಇತ್ಯಾದಿಗಳನ್ನು ಮಾತ್ರ ಬಳಸಿ ಆದಷ್ಟೂ ಸ್ಥಳೀಯವಾಗಿ ಲಭ್ಯವಾಗುವ ಸಾವಯವ ತ್ಯಾಜ್ಯವಸ್ತುಗಳನ್ನು ಉಪಯೋಗಿಸಿ ಮಾಡುವ ಕೃಷಿ. (ರಾಸಾಯನಿಕಗಳೇ ಆಗಿರುವ ಸುಣ್ಣ, ಬೋರ್ಡೋ ಮಿಶ್ರಣ ಇವುಗಳ ಬಳಕೆ ಇಲ್ಲಿ ನಿಷಿದ್ಧವಲ್ಲ ಕೆಲವರು ರಂಜಕಯುಕ್ತ ಗೊಬ್ಬರವಾದ ರಾಕ್ ಫಾಸ್ಫೇಟಿಗೂ ಅದು ಕಲ್ಲಿನ ಪುಡಿಯೆಂದು ವಿನಾಯಿತಿ ನೀಡಿದ್ದಾರೆ) ಇದರೊಂದಿಗೆ ಇತರ ಪೂರಕ ಚಟುವಟಿಕೆಗಳನ್ನು ಅಂದರೆ ಹೈನುಗಾರಿಕೆ, ಕೋಳಿಸಾಕಣೆ ಇತ್ಯಾದಿಗಳನ್ನು ಮಾಡಿದರೆ ಇನ್ನೂ ಒಳ್ಳೆಯದು. ಸಣ್ಣ ಮತ್ತು ಮಧ್ಯಮ ಗಾತ್ರದ ಹಿಡುವಳಿಗಳು ಇದಕ್ಕೆ ಹೆಚ್ಚು ಅನುಕೂಲದ್ದಾಗಿರುತ್ತವೆ.

ಹೀಗಿರುವಾಗ ಸಣ್ಣ ಮತ್ತು ಮಧ್ಯಮ ಕೃಷಿಕರು ಒಂದೆರಡು ದನಕರುಗಳನ್ನು ಜೊತೆಯಲ್ಲಿ ಕುರಿಕೋಳಿಗಳನ್ನು ಸಾಕುತ್ತ ಸಾವಯವ ಗೊಬ್ಬರ ತಯಾರಿಸಿ ಉಪಯೋಗಿಸುತ್ತಾ, ಅತಿ ಕಡಿಮೆ ರಾಸಾಯನಿಕ ಅಥವಾ ರಾಸಾಯನಿಕರಹಿತ ಕೃಷಿ ಮಾಡುತ್ತಾ ತಾನೂ ಆರೋಗ್ಯವಂತನಾಗಿ- ಭೂಮಿ ಮತ್ತು ಸಮಾಜದ ಎಲ್ಲರ ಆರೋಗ್ಯವನ್ನು ಕಾಪಾಡುತ್ತ ಸುಖವಾಗಿ ಇರಬಹುದಾಗಿತ್ತಲ್ಲವೇ?.

ಆದರೆ ನಾವೆಂದುಕೊಂಡಂತೆ ಪರಿಸ್ಥಿತಿ ಅಷ್ಟು ಸರಳವಾಗಿ ಖಂಡಿತ ಇಲ್ಲ. ಒಂದೆಡೆ ಪರಿಸರ ಪ್ರಿಯರು, ಕೃಷಿಪಂಡಿತರುಗಳು, ಭಾನುವಾರದ ಕೃಷಿಕರು, ಹವ್ಯಾಸಿ ಕೃಷಿಕರು, ಹಾಗೂ ಅನೇಕ ಸಂಘಟನೆಗಳು-ಸಹಜಕೃಷಿ, ಸಾವಯವ ಕೃಷಿ, ನೆಲಜಲ ಸಂರಕ್ಷಣೆ ಮುಂತಾದುವುಗಳ ಬಗ್ಗೆ ನಡೆಸುವ ಕಾರ್ಯಕ್ರಮಗಳು, ವಿಚಾರಸಂಕಿರಣಗಳು, ಚಳುವಳಿಗಳು, ಜೊತೆಗೆ ಹಲವು ಕೃಷಿಪತ್ರಿಕೆಗಳಲ್ಲಿ ನಿರಂತರವಾಗಿ ಬರುತ್ತಿರು ಲೇಖನಗಳು, ಇವೆಲ್ಲವುಗಳಿಂದ ಸಾವಯವ ಕೃಷಿಗೆ ಸಿಕ್ಕಿದ ಪ್ರಚಾರದಿಂದಾಗಿ, ಸಾವಯವ ಪರಿಸರ ಸ್ನೇಹಿವಸ್ತುಗಳ ದೊಡ್ಡ ಉತ್ಪಾದಕರುಗಳೇ ಹುಟ್ಟಿಕೊಂಡಿದ್ದಾರೆ. Tilling_Rice_Fieldsಇವರುಗಳು ಮುದ್ರಿಸಿ ಹಂಚುತ್ತಿರುವ ಕರಪತ್ರಗಳು ಯಾವುದೇ ದೊಡ್ಡ ರಾಸಾಯನಿಕ ಕಂಪೆನಿಗಳ ಪ್ರಚಾರ ಸಾಮಗ್ರಿಯನ್ನೂ ನಾಚಿಸುವಂತಿದೆ. ರಾಸಾಯನಿಕ ವಸ್ತುಗಳಿಗೆ ಹೋಲಿಸಿದರೆ ಇವುಗಳ ಬೆಲೆಯೂ ದುಬಾರಿಯಾಗಿದೆ. ಈ ವಿಚಾರ ಆಯುರ್ವೇದ ಔಷಧಿಗಳಂತಹ ವೈದ್ಯಕೀಯ ಉತ್ಪನ್ನಗಳಿಗೂ ಅನ್ವಯಿಸುತ್ತದೆ. ಸದ್ಯಕ್ಕಂತೂ ಇವುಗಳಲ್ಲಿ ಯಾವುದು ನಿಜವಾದ ಸಾವಯವ ಅಥವಾ ಪರಿಸರ ಸ್ನೇಹಿ ಎಂದು ನಿರ್ಧರಿಸಲು ಯಾವುದೇ ಮಾನದಂಡವೂ ಇಲ್ಲ. ವೈಯಕ್ತಿಕ ಪರಿಚಯ, ಅನುಭವ ನಂಬಿಕೆಗಳನ್ನಾಧರಿಸಿ ಇವುಗಳನ್ನು ಕೊಳ್ಳಬೇಕಷ್ಟೆ.

ನಮ್ಮ ರೈತರು ಸಾವಯವ-ಸುಸ್ಥಿರ ಕೃಷಿಯ ವಿರೋಧಿಗಳಂತೂ ಖಂಡಿತ ಅಲ್ಲ. ಇಂದು ಸಾಮಾನ್ಯನಿಗೂ ಭೂಮಿ ಬರಡಾಗುತ್ತಿರುವುದು, ಆಹಾರದಲ್ಲಿ ರುಚಿ ಸತ್ವ ಎರಡೂ ಇಲ್ಲದಿರುವುದು ಚೆನ್ನಾಗಿಯೇ ತಿಳಿದಿದೆ. ನಾಟಿ ಕೋಳಿಮಾಂಸದ ಮತ್ತು ನಾಟಿ ಹಸುಗಳಹಾಲಿನ ರುಚಿ ಹಾಗೇ ಸೆಗಣಿಯ ಶಕ್ತಿಯೂ ತಿಳಿದಿದೆ. ಎಲ್ಲಿಯವರೆಗೆ ಎಂದರೆ ಘನಘೋರ ವಿಷಸುರಿದು ಶುಂಠಿ ಬೆಳೆಯುತ್ತಿರುವ ರೈತ ತಾನು ಅದನ್ನು ತಪ್ಪಿಯೂ ಉಪಯೋಗಿಸುವುದಿಲ್ಲ. ಸ್ವಂತಕ್ಕೆ ತನ್ನ ಜಮೀನಿನ ಮೂಲೆಯಲ್ಲೊಂದಿಷ್ಟು ನಾಟಿ ಶುಂಟಿಯನ್ನು ವಿಷವುಣಿಸದೆ ಬೆಳೆದುಕೊಂಡಿರುತ್ತಾನೆ. ಕೃಷಿವಲಯದ ಆರ್ಥಿಕ ಪರಿಸ್ಥಿತಿಯೇ ಅವನನ್ನು ಸುಸ್ಥಿರ-ಸಾವಯವ ಕೃಷಿಯಿಂದ ದೂರವಿರುವಂತೆ ಮಾಡುತ್ತಿದೆ.

ನಮ್ಮ ರೈತರು ಇಂದು ಸಹಜ ಕೃಷಿಯ ಋಷಿ ಮುನಿಗಳಂತೆ ಬದುಕಲು ಖಂಡಿತ ಸಾಧ್ಯವಿಲ್ಲ. ಇಂದು ವಿದ್ಯುತ್, ಫೋನು, ಟಿ.ವಿ., ಸಾಧ್ಯವಾದರೆ ಕನಿಷ್ಟ ಒಂದು ಬೈಕು ಇತ್ಯಾದಿಗಳು ಆತನಿಗೂ ಬೇಕು. ಇಂದು ಟಿ.ವಿ. ಆಧುನಿಕ ಜಗತ್ತನ್ನು ಅವನ ಮನೆಯೊಳಗೇ ತಂದು ತೋರಿಸುತ್ತ ಹಲವು ಆಮಿಷಗಳನ್ನು ಒಡ್ಡುತ್ತಿದೆ. ಅಭಿವೃಧ್ದಿಗಿಂದ ಹೆಚ್ಚಾಗಿ ಕೊಳ್ಳುಬಾಕ ಸಂಸ್ಕøತಿ ಇಂದು ಹಳ್ಳಿಗಳನ್ನೂ ಆವರಿಸಿಬಿಟ್ಟಿದೆ. ಹೇಗಾದರೂ ಮಾಡಿ ಹಣ ಗಳಿಸಬೇಕಾದ ಒತ್ತಡದಲ್ಲಿ ಇಂದು ರೈತನೂ ಸಿಕ್ಕಿಬಿದ್ದಿದ್ದಾನೆ.

ಯಾವುದೇ ಬೆಳೆಯನ್ನು ಬೆಳೆಯುವಾಗ ಎಕರೆವಾರು ಖರ್ಚು ಮತ್ತು ಆದಾಯವನ್ನು ನೋಡಿದರೆ. ಸಧ್ಯದಲ್ಲಿ ರಾಸಾಯನಿಕಗಳನ್ನು paddy-rice-cropಬಳಸಿ ಮಾಡುವ ಕೃಷಿಯೇ ಅಗ್ಗದ್ದಾಗಿದ್ದು ರೈತನಿಗೆ ಸ್ವಲ್ಪಮಟ್ಟಿನ ಲಾಭವನ್ನು ತಂದುಕೊಡುತ್ತಿದೆ. ಅಲ್ಲದೇ ಅಧಿಕ ಇಳುವರಿ ನೀಡುತ್ತದೆಂದು ಹೇಳಲಾಗುವ ಹೈಬ್ರಿಡ್ ತಳಿಗಳು ರಾಸಾಯನಿಕ ಕೃಷಿಯನ್ನೇ ಅವಲಂಬಿಸಿವೆ.

ಶುದ್ಧ ಸಾವಯವವೆಂದು ಪ್ರಮಾಣೀಕರಿಸಿದ ಉತ್ಪನ್ನಗಳಿಗೆ ವಿದೇಶಗಳಲ್ಲಿ ಹೆಚ್ಚಿನ ಬೆಲೆ ದೊರಕುತ್ತದೆಂಬ ವಿಚಾರ ನಮ್ಮ ರೈತರಿಗೂ ತಿಳಿದಿದೆ. ಆದರೆ ಅದನ್ನು ಪ್ರಮಾಣೀಕರಿಸಲು ಇರುವ ವಿಧಿ ವಿಧಾನಗಳು ಮತ್ತು ಅವರ ಮಾನದಂಡಗಳು ಅದಕ್ಕೆ ತಕ್ಕಂತೆ ಅನುಸರಿಸ ಬೇಕಾದ ಕ್ರಮಗಳು, ಇಡಬೇಕಾದ ಠೇವಣಿ ಹಣ ಮತ್ತಿತರ ವೆಚ್ಚಗಳು ನಮ್ಮ ರೈತರ ಪಾಲಿಗೆ ತುಂಬ ದುಬಾರಿಯಾದವು.

ಇದನ್ನೆಲ್ಲ ನೋಡುತ್ತ ನೋಡುತ್ತ ಸಾಮಾನ್ಯ ಕೃಷಿಕ- ರೈತರು ಮೊದಲ ಬಾರಿಗೆ ಜಾತ್ರೆಗೆ ಹೋದ ಮಗುವಿನಂತಾಗಿ ಹೋಗಿದ್ದಾರೆ. ಎಲ್ಲವನ್ನೂ ನೋಡುತ್ತ ಬೆರಗುಗೊಳ್ಳುತ್ತ ಅಪ್ಪ ಕೊಟ್ಟ ಒಂದೇ ಒಂದು ರೂಪಾಯಿಯನ್ನು ಜೇಬೊಳಗಿಟ್ಟುಕೊಂಡು, ಕೈಹಾಕಿ ಅಲ್ಲೇ ಮುಟ್ಟಿ ನೋಡಿಕೊಳ್ಳುತ್ತ ಏನನ್ನೂ ಕೊಳ್ಳದೆ, ಏನನ್ನೂ ತಿನ್ನದೆ ಮನೆಗೆ ಬರುವಂತಹ ಸ್ಥಿತಿಯಲ್ಲಿದ್ದಾರೆ.

ಹೀಗಾಗಿ ಒಂದುವೇಳೆ ಸಾವಯವ ವಿಧಾನದಿಂದ ಬೆಳೆ ಬೆಳೆದರೂ ಸಹ ಇದರಿಂದ ಲಾಭ ಪಡೆಯುವ ಸ್ಥಿತಿಯಲ್ಲಿ ರೈತರು ಖಂಡಿತ ಇಲ್ಲ. ಆದ್ದರಿಂದ ಎಲ್ಲ ತೊಂದರೆಗಳ ಅರಿವಿದ್ದರೂ ಹೆಚ್ಚು ಲಾಭ ಬರಬಹುದೆಂಬ ಆಸೆಯಿಂದ ರಾಸಾಯನಿಕಗಳನ್ನು ಬಳಸಿ ಮಾಡುವ ಆಧುನಿಕ ಕೃಷಿಯತ್ತ ವಾಲುತ್ತಾರೆ. ದುಬಾರಿ ಬಡ್ಡಿಯ ಖಾಸಗಿ ಸಾಲಕ್ಕೆ ತಲೆಯೊಡ್ಡುತ್ತಾರೆ. ಸರೀಕರೊಡನೆ ತಲೆಯೆತ್ತಿ ನಿಲ್ಲಬೇಕೆಂದು, ವಾಹನ ಕೊಳ್ಳುತ್ತಾರೆ, ಸರಿಯಾದ ಯೋಜನೆಗಳಿಲ್ಲದೆ ಮನೆ ಕಟ್ಟಿಕೊಳ್ಳುತ್ತಾರೆ, ಮದುವೆ ಮುಂಜಿಗಳಲ್ಲಿ ಅಂದಾದುಂದಿ ಖರ್ಚು ಮಾಡುತ್ತಾರೆ. ಬೆಳೆ ಮತ್ತು ಬೆಲೆ ಅಥವಾ ಎರಡೂ ಕೈಕೊಟ್ಟರೆ ದಿಕ್ಕು ತೋಚದೆ ಆತ್ಮಹತ್ಯೆಯಂತಹ ವಿಪರೀತ ಕ್ರಮಕ್ಕೆ ಮುಂದಾಗುತ್ತಾರೆ.

ಹಿಂದಿನ ಕಾಲದಂತೆ ರೈತರು ತಮಗೆ ಬೇಕಾದ ಆಹಾರ, ತರಕಾರಿ, ಹಾಲು, ಮಾಂಸ, ಹಣ್ಣುಹಂಪಲು ಎಲ್ಲವನ್ನು ತಾವೇ ಬೆಳೆದುಕೊಳ್ಳುತ್ತ, ತಮ್ಮ ಅಗತ್ಯಕ್ಕೆ ಹೆಚ್ಚಿನದನ್ನು ಮಾರುತ್ತ ಬದುಕುವುದು ಇಂದಿನ ಆರ್ಥಿಕತೆಗೆ ಒಗ್ಗುವ ಸಂಗತಿಯಾಗಿ ಉಳಿದಿಲ್ಲ. ಇಂದು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಸಾಧ್ಯವಾಗುವಂತೆ ಪ್ರತಿಯೊಂದನ್ನು ದೊಡ್ಡ ಪ್ರಮಾಣದಲ್ಲಿ ‘ಉತ್ಪಾದಿಸುವುದು’ ಅನಿವಾರ್ಯವಾಗುವಂತ ಸನ್ನಿವೇಶ ಸೃಷ್ಟಿಯಾಗಿದೆ. ಆದ್ದರಿಂದ ತರಕಾರಿ ಬೆಳೆಯುವವರು, ಮೆಣಸಿನಕಾಯಿ ಬೆಳೆಯುವವರು, ಶುಂಠಿ ಬೆಳೆಯುವವರು, ಹೈನೋಧ್ಯಮದವರು, ಕೋಳಿಫಾರಂಗಳು, ಹೀಗೆ ಎಲ್ಲವೂ ಸಣ್ಣ ಪ್ರಮಾಣದಿಂದ ನಿಧಾನವಾಗಿ ದೊಡ್ಡ ಪ್ರಮಾಣಕ್ಕೆ ಬೆಳೆಯುತ್ತಿದೆ. ಗ್ರಾಹಕರ ಬೇಡಿಕೆಗೆ ತಕ್ಕಂತ ಉತ್ಪಾದನೆ, ಸ್ಪರ್ಧಾತ್ಮಕ ಬೆಲೆಗಳು, ಬ್ರಾಂಡೆಡ್ ಉತ್ಪಾದನೆ ಇತ್ಯಾದಿಗಳ ಜಾಗತೀಕರಣದ ಉನ್ಮಾದದ ಮಾರುಕಟ್ಟೆಯಲ್ಲಿ ಹೆಚ್ಚು ‘ಉತ್ಪಾದನೆ’ಯ ಒತ್ತಡಕ್ಕೊಳಗಾದ ಕೃಷಿಕ ಸಾವಯವ ಕೃಷಿಯತ್ತ ತಿರುಗಿ ನೋಡುವುದೂ ಇಲ್ಲ. ದ್ವೀಪಗಳಂತೆ ಅಲ್ಲಲ್ಲಿ ಕೆಲವು ಸ್ಥಳಗಳಲ್ಲಿ ಕೆಲವು ವಸ್ತುಗಳನ್ನು- ಅದೂ ಮುಖ್ಯ ಆಹಾರ ಪದಾರ್ಥಗಳನ್ನಲ್ಲ, ಅವುಗಳಿಗೆ ಅಸಾಮಾನ್ಯ ಕೆಲವೊಮ್ಮೆ ಊಹೆಗೂ ನಿಲುಕದಂತಹ ಹೆಚ್ಚನ ಬೆಲೆ ಬಂದಾಗ ಸಾವಯವ ವಿಧಾನದಲ್ಲಿ ಬೆಳೆ ಬೆಳೆಯಲು ತೊಡಗಬಲ್ಲರು. ಉದಾ: ವೆನಿಲ್ಲಾ, ಆ್ಯಂತೋರಿಯಂ ನಂತಹ ರಫ್ತು ಆಧಾರಿತ ಬೆಳೆಗಳು.

ಅಧಿಕ ಉತ್ಪಾದನೆಯ ಮಂತ್ರ ಜಪಿಸುವುದು, ಅದಕ್ಕಾಗಿ ಆಧುನಿಕ ತಂತ್ರಜ್ಞಾನ ಮತ್ತು ಯಂತ್ರಗಳ ಬಳಕೆಯಾಗುವಂತೆ ನೋಡಿಕೊಳ್ಳುವುದು, ಇದೆಲ್ಲದರ ಮೇಲೆ ಮೂಗಿಗೆ ತುಪ್ಪ ಸವರಿದಂತೆ ಒಟ್ಟು ಉತ್ಪನ್ನದ ಸ್ವಲ್ಪಭಾಗಕ್ಕೆ ವಿಶೇಷ ಬೆಲೆ ನೀಡಿ, ಉಳಿದದ್ದನ್ನು ಅವರ ಅನುಕೂಲಕ್ಕೆ ತಕ್ಕಂತೆ ಕೊಳ್ಳುವುದು, ಇದರಿಂದ ಬೆಳೆಗಾರ ಗಳಿಸಿದ ಅಲ್ಪಸ್ವಲ್ಪ ಹೆಚ್ಚವರಿ ಹಣವನ್ನು ಯಂತ್ರೋದ್ಯಮದ ಮೂಲಕ ತಮ್ಮಲ್ಲಿಗೇ ಬರುವಂತೆ ಮಾಡುವುದು, ಇದೆಲ್ಲಕ್ಕಿಂತ ಅಧಿಕ ಉತ್ಪಾದನೆಯಿಂದ ಬೆಳೆಗಾರ ಮಾರುಕಟ್ಟೆಯಲ್ಲಿ ಕ್ಯೂ ನಿಲ್ಲುವಂತ ಪರಿಸ್ಥಿತಿ ನಿರ್ಮಾಣ ಮಾಡಿ ಯಾವಾಗಲೂ ಕೊಳ್ಳುವವರ ಮರ್ಜಿಯನ್ನೇ ಕಾಯಬೇಕಾದ ಸ್ಥಿತಿಯಲ್ಲಿಡುವುದು, ಇವುಗಳೆಲ್ಲಾ ಅವರ ಉದ್ದೇಶವಾಗಿದೆ. ಅಧಿಕ ಉತ್ಪಾದನೆಯಿಂದ ರೈತನಿಗೆ ಲಾಭವಾಗುದೆನ್ನುವುದು ನಿಜವಲ್ಲವೆನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. (ನಮ್ಮ ದೇಶದ ಹಾಗೂ ವಿಯೆಟ್ನಾಂನ ಕಬ್ಬು ಬೆಳೆಗಾರರನ್ನು ನೋಡಿ)

ಮುಂದುವರೆದ ದೇಶಗಳಿಂದ ನಮ್ಮಲ್ಲಿಗೆ ಆಮದಾಗುವ ಹಲವಾರು ಔಷಧಿಗಳು, ಕ್ರಿಮಿನಾಶಕಗಳು, ತಳುಕಿನ ಐಷಾರಾಮೀ ಸಾಮಗ್ರಿಗಳು, Working_in_the_rice_paddyಅಷ್ಟೇಕೆ ಅಲ್ಲಿನ ಸಾವಯವ ಗೊಬ್ಬರಗಳು ಕೂಡಾ ಅಲ್ಲೇ ನಿಷೇಧಿಸಲ್ಪಟ್ಟವುಗಳು. ಅವುಗಳನ್ನು ಹಿಂದುಳಿದ ದೇಶಗಳಿಗೆ ಸಹಾಯದ- ದಾನದ ಹೆಸರಲ್ಲಿ ಸಾಗಹಾಕುವಾಗ ಇಲ್ಲದಿರುವ ನೈತಿಕತೆ-ಗುಣಮಟ್ಟ ಕಾಳಜಿ, ಅವರಲ್ಲಿಗೆ ಆಮದಾಗುವ ಹಿಂದುಳಿದ ದೇಶಗಳ ವಸ್ತುಗಳ ಬಗ್ಗೆ ಪ್ರತ್ಯಕ್ಷವಾಗಿಬಿಡುತ್ತದೆ. ಯಾವುದೋ ಒಂದು ಸಾರಿ ಕಳುಹಿಸಿದ ವಸ್ತುವಿನಲ್ಲಿ ಕಲಬೆರಲಕೆ ಕಂಡುಬಂದರೂ ಸಹ (ಕಲಬೆರಕೆ ಸರಿಯೆಂದು ನನ್ನ ವಾದವಲ್ಲ) ಇಡೀ ದೇಶದ ಉತ್ಪನ್ನವನ್ನೇ ತಿರಸ್ಕರಿಸುವ ಬೆದರಿಕೆ ಹಾಕುವ ಅಂತಾರಾಷ್ಟ್ರೀಯ ಮಾರುಕಟ್ಟೆ ಮುಂದುವರಿದ ದೇಶಗಳ ಹಾನಿಕಾರಕ ವಸ್ತುಗಳ ಬಗ್ಗೆ ದಿವ್ಯಮೌನ ವಹಿಸುತ್ತದೆ. ತೆಂಗಿನೆಣ್ಣೆಯಲ್ಲಿ ಕ್ಯಾನ್ಸರ್‍ಕಾರಕ ಗುಣವಿರುವುದನ್ನು ಸಂಶೋಧನೆ ಮಾಡುವ ಇವರು, ಕ್ರಿಮಿನಾಶಕವಾಗಿರುವ ಪೆಪ್ಸಿ- ಕೋಕಾಕೋಲಾ ಗಳ ಬಗ್ಗೆ ಮಾತನಾಡುವುದಿಲ್ಲ. ನಮ್ಮ ಹಾಲಿನ ಪುಡಿಯಲ್ಲಿ ಡಿ.ಡಿ.ಟಿ. ಪತ್ತೆಹಚ್ಚುವ ಇವರು ಆ ಡಿ.ಡಿ.ಟಿ.ಯನ್ನು ಪ್ರಪಂಚಕ್ಕೆಲ್ಲಾ ಹಂಚಿದ್ದು ತಾವೇ ಎನ್ನುವುದನ್ನು ಮರೆಯುತ್ತಾರೆ!.

ಇತ್ತೀಚಿನ ಇನ್ನು ಕೆಲವು ಬೆಳವಣಿಗೆಗಳನ್ನು ಗಮನಿಸಿ. ನೂರೈವತ್ತು ರೂಗಳಿಗೆ ಒಂದು ಟೀ ಶರ್ಟು ದೊರೆಯುತ್ತದೆಂದು ನಾವು ಖುಷಿ ಪಡುತ್ತಿರುವಾಗಲೇ, ಸಣ್ಣ ಊರುಗಳ- ಹಳ್ಳಿಗಳ ಟೈಲರ್‍ಗಳು ಅಂಗಡಿ ಮುಚ್ಚುತ್ತಿದ್ದಾರೆ. ಈಗಾಗಲೇ ಸಣ್ಣ ಸಣ್ಣ ಗರಾಜ್‍ಗಳು ಕೆಲಸವಿಲ್ಲದೆ ಒದ್ದಾಡುತ್ತಿವೆ. ಸಣ್ಣ ಹಿಡುವಳಿಯ ರೈತರು ಜಮೀನನ್ನು ಮಾರಿ ನಗರ ಸೇರುವ ಧಾವಂತದಲ್ಲಿದಾರೆ. ಹಲವು ಪ್ಲಾಂಟೇಷನ್ ಕಂಪೆನಿಗಳು ನಿರಂತರವಾಗಿ ತೋಟಗಳ ವಿಸ್ತರಣಾ ಖರೀದಿಯಲ್ಲಿ ತೊಡಗಿವೆ. ಈ ಸಂಗತಿಗಳಲ್ಲಾ ಏನನ್ನು ಸೂಚಿಸುತ್ತವೆ? ನಮ್ಮ ಕೃಷಿ ಭೂಮಿ ಪರಭಾರೆ ಕಾನೂನು ಮತ್ತು ಭೂಮಿತಿ ಕಾನೂನನ್ನು ಸಂಪೂರ್ಣವಾಗಿ ತೆಗೆದುಹಾಕಿದಲ್ಲಿ ಏನಾಗಬಹುದು? ಯೋಚಿಸಿ.

ಗುಣಮಟ್ಟದ ಹೆಸರಿನಲ್ಲಿ ಇವರು ಸೂಚಿಸುವ ಒತ್ತಾಯಿಸುವ ಕೃಷಿ ಪದ್ಧತಿಗಳು ಇನ್ನೂ ವಿಚಿತ್ರವಾಗಿವೆ. ಉದಾಹರಣೆಗೆ; Organic_farm_Turmericಕಾಫಿ ಒಣಗಿಸುವ ಕಣದ ಸುತ್ತಲೂ ನೀಲಗಿರಿ ಮರಗಳಿರಬಾರದು, ಮೆಣಸಿನ ಬಳ್ಳಿಗಳಿರಬಾರದು, ಕಾಫಿ ಒಣಗಿಸುವ ಕಣಕ್ಕೆ ಸೆಗಣಿಸಾರಿಸಬಾರದು ಇತ್ಯಾದಿ ಪ್ರತಿಬಂಧಗಳಿವೆ. (ಕಾಫಿಯ ಇಡಿಯ ಹಣ್ಣನ್ನು ನೇರವಾಗಿ ಒಣಗಿಸುವಾಗ ಮಾತ್ರ ಸೆಗಣಿ ಸಾರಿಸಿದ ಕಣವನ್ನು ಬಳಸುತ್ತಾರೆ. ಪಲ್ಪಿಂಗ್ ಮಾಡಿದ ಕಾಫಿಯನ್ನು ಯಾರೂ ಸೆಗಣಿಸಾರಿಸಿದ ಕಣದಲ್ಲಿ ಒಣಗಿಸುವದಿಲ್ಲ) ನಾವು ಸಾವಿರಾರು ವರ್ಷಗಳಿಂದ ಸೆಗಣಿ ಸಾರಿಸಿದ ಕಣದಲ್ಲೇ ಆಹಾರ ಧಾನ್ಯಗಳನ್ನು ಯಾವುದೇ ತೊಂದರೆಯಿಲ್ಲದೆ ಒಣಗಿಸುತ್ತಿದ್ದೇವೆ. ಸೆಗಣಿಯಿಂದಾಗಿ ಕಾಫಿಗೆ ಕೆಟ್ಟ ವಾಸನೆ ಬರುತ್ತದೆಂದು ದೂರುವ ಇವರು ಯಂತ್ರಗಳಲ್ಲಿ ಬಳಕೆಯಾಗುವ ಪೈಂಟ್‍ಗಳ ಬಗ್ಗೆಯಾಗಲೀ ಒಟ್ಟು ಉದ್ಯಮದಲ್ಲಿ ಬಳಕೆಯಾಗುವ ಇತರ ರಾಸಾಯನಿಕಗಳ ಬಗ್ಗೆಯಾಗಲೀ ಮಾತನಾಡುವುದಿಲ್ಲ.

ಈಗಾಗಲೇ ಅಕ್ಕಿಯಲ್ಲಿ- ಅಕ್ಕಿಯ ಗಾತ್ರ, ಉದ್ದ, ಬಣ್ಣಗಳ ನಿಯಂತ್ರಣಕ್ಕೆ ಪ್ರಯತ್ನಿಸುತ್ತಿದ್ದಾರೆ. ಹೀಗೆಯೇ ಮುಂದುವರೆದರೆ ಮುಂದೆ ಇಂತಿತಹ ಕಂಪೆನಿಗಳು ಒದಗಿಸಿದ ನೀರಿನಿಂದ ಬೆಳೆದ ಇಂತಿಂತಹ ಬೆಳೆಗಳು ಮಾತ್ರ ಪರಿಶುದ್ಧವಾದವು ಎಂದು ಪ್ರಮಾಣ ಪತ್ರ ನೀಡುವ ದಿನಗಳೂ ಬರಬಹುದು. ಆದ್ದರಿಂದ ಜಾಗತೀಕರಣವೆಂದರೆ ಮುಂದುವರಿದ ದೇಶಗಳ ಇನ್ನಷ್ಟು ಸಬಲೀಕರಣವಲ್ಲದೆ ಇನ್ನೇನೂ ಅಲ್ಲ. ನಾವು ಅಲ್ಲೊಂದು ಇಲ್ಲೊಂದು ಕ್ಷೇತ್ರದಲ್ಲಿ ಇವರೊಂದಿಗೆ ಸ್ಪರ್ಧಿಸುತ್ತಿದ್ದೇವೆಂದು ಹೆಮ್ಮೆ ಪಟ್ಟುಕೊಳ್ಳುತ್ತಾ, ನಮ್ಮ ಬೆನ್ನನ್ನೇ ನಾವು ತಟ್ಟಿಕೊಳ್ಳುತ್ತಾ ಕುಳಿತಿದ್ದೇವೆ ಅಷ್ಟೆ!

ಇವೆಲ್ಲವನ್ನೂ ಮೀರಿ ನಾವು ಕೆಲವು ಕ್ಷೇತ್ರಗಳಲ್ಲಿ ಅಥವಾ ಕೆಲವು ವಸ್ತುಗಳ ಉತ್ಪಾದನೆಯಲ್ಲಿ ಮುಂದುವರಿದ ದೇಶಗಳೊಂದಿಗೆ ಸ್ಪರ್ಧೆಗೆ ಇಳಿದೆವೆಂದರೆ, ಆಗ ಇನ್ನೂ ಕೆಲವು ಅಸ್ತ್ರಗಳು ಹೊರ ಬರುತ್ತವೆ. ಕೆಲವು ವಸ್ತುಗಳ ತಯಾರಿಕೆಯಲ್ಲಿ ಬಾಲ ಕಾರ್ಮಿಕರ ದುಡಿಮೆಯಿದೆ ಎಂದೂ ಇನ್ನು ಕೆಲವು ಉತ್ಪನ್ನಗಳು ಪ್ರಾಣಿ ಹಿಂಸೆಯಿಂದ ಕೂಡಿದ್ದೆಂದೂ ನಿಷೇಧಕ್ಕೆ ಒಳಗಾಗುತ್ತವೆ. ಅನೇಕ ಹಿಂದುಳಿದ ದೇಶಗಳಲ್ಲಿ ಇಂದು ಮಕ್ಕಳ ದುಡಿಮೆ ಅನಿವಾರ್ಯ ಅಗತ್ಯವೆನ್ನುವುದನ್ನು ಮರೆಯದಿರೋಣ. ದುಡಿಯದಿದ್ದಲ್ಲಿ ಅವರ ಹೊಟ್ಟೆಪಾಡಿಗೆ ಗತಿಯೇ ಇಲ್ಲದಿರುವ ಪರಿಸ್ಥಿತಿ ಅನೇಕ ದೇಶಗಳಲ್ಲಿ ಇದೆ. ಅವರು ದುಡಿದೂ ವಂಚನೆಗೊಳಗಾಗದಿರುವ-ದುಡಿಯುತ್ತ ಸ್ವಲ್ಪ ಮಟ್ಟಿಗಾದರೂ ವಿದ್ಯೆ ಕಲಿಯುವ ಬೇರೆ ಮಾರ್ಗಗಳತ್ತ ನಾವು ಯೋಚಿಸಬೇಕಾಗಿದೆ. ಅದನ್ನು ಬಿಟ್ಟು ದುಡಿಯುವ ಮಕ್ಕಳ ಸಾಮಾಜಿಕ ಸ್ಥಿತಿಗತಿಗಳನ್ನು ಗಮನಿಸದೆ ದುಡಿಮೆಯಿಂದ ಹೊರಗಿಡುವುದೆಂದರೆ ಅವರನ್ನು ಹಸಿವಿನತ್ತ ದೂಡುವುದೇ ಆಗಿದೆ. Indian-Cow-calfಇನ್ನು ಪ್ರಾಣಿ ಹಿಂಸೆಯ ಬಗ್ಗೆ ಹೇಳುವುದಾದರೆ ಯಾವುದೇ ಜಾತಿಯ ಪ್ರಾಣಿಗೆ ಸಾಂಕ್ರಾಮಿಕ ರೋಗವೊಂದು ಬಂದಿದೆಯೆಂದರೆ ಅದರ ಕುಲವನ್ನೇ ಗುಂಡಿಟ್ಟು ಸಾಯಿಸಿಬಿಡುವ ದೇಶಗಳು- ಪ್ರಾಣಿಹಿಂಸೆಯ ಮಾತನಾಡುತ್ತವೆ!

ಇವೆಲ್ಲವೂ ತಿಳಿದಿದ್ದರೂ ಸಹ ಈ ಮುಂದುವರಿದ ದೇಶಗಳು ಸಹಾಯದ ಹೆಸರಿನಲ್ಲೋ ಇನ್ನಾವುದೇ ರೀತಿಯಲ್ಲೋ ನಮ್ಮಲ್ಲಿಗೆ ಕಳಹಿಸುವ ಯಾವುದೇ ವಸ್ತುವನ್ನು ಅದು ಎಷ್ಟೇ ಹಾನಿಕಾರಕವಾಗಿದ್ದರೂ ಅದನ್ನು ನಿಷೇಧಿಸುವ ಧೈರ್ಯವನ್ನಾಗಲೀ, ಪ್ರಾಮಾಣಿಕತೆಯನ್ನಾಗಲೀ ಯಾವುದೇ ಹಿಂದುಳಿದ-ಅಭಿವೃದ್ಧಿಶೀಲ ದೇಶಗಳು ತೋರುವುದಿಲ್ಲ. ಯಾಕೆಂದರೆ ಈ ದೇಶಗಳ ರಾಜಕೀಯ-ಸಾಮಾಜಿಕ ಪರಿಸ್ಥಿತಿಗಳೇ ಇದಕ್ಕೆ ಅವಕಾಶ ನೀಡುವುದಿಲ್ಲ.

ಹೀಗಿರುವಾಗ ಸರ್ಕಾರಕ್ಕೆ ಇದ್ದಕ್ಕಿದ್ದಂತೆ ಜ್ಞಾನೋದಯವಾಗಿ ಸಾವಯವ ಕೃಷಿಯ ಬಗ್ಗೆ ಒಲವು ತೋರುತ್ತಿದೆಯೆಂದು ನಾವು ನಂಬಿಕೊಂಡರೆ ನಮ್ಮ ದಡ್ಡತನವಷ್ಟೆ. ಇದೂ ಕೂಡಾ ಅಂತರಾಷ್ಟ್ರೀಯ ಮಟ್ಟದ ಹುನ್ನಾರದ ಭಾಗ. ಇದರ ಅಂಗವಾಗಿ ಭಾರತ ಸರ್ಕಾರ ಮತ್ತು ಎಲ್ಲ ರಾಜ್ಯ ಸರ್ಕಾರಗಳು ಸಾವಯವ ಕೃಷಿಯ ಬೊಬ್ಬೆಯಲ್ಲಿ ತೊಡಗಿವೆ ಅಷ್ಟೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಹೈಟೆಕ್ ಸಾವಯವ ಕೃಷಿ ಮೇಳವನ್ನು ಗಮನಿಸಿ, ಈ ಬಗ್ಗೆ ವರದಿ ಮಾಡಿದ ಹಲವು ಪತ್ರಿಕೆಗಳು “ಭಾರತದ ಸಾವಯವ ಕೃಷಿಗೆ ಸಿದ್ಧತೆ- ಸಾವಯವ ಕೃಷಿ ಮೇಳ” ಎಂದು ದೊಡ್ಡದಾಗಿ ಬರೆದವು. ಅವು ವರದಿ ಮಾಡಿದ ರೀತಿ ಭಾರತ ದೇಶಕ್ಕೆ ಸಾವಯವ ಕೃಷಿ ಅನ್ನುವ ಸಂಗತಿಯೇ ಹೊಸತೇನೋ ಅನ್ನುವಂತಿತ್ತು. ಅದೃಷ್ಟವಷಾತ್ ಕೆಲವು ಪತ್ರಿಕೆಗಳು ಈ ಮೇಳದ ವಿರುದ್ಧವಾಗಿದ್ದ ಅನೇಕ ಕೃಷಿಕರ ಅಭಿಪ್ರಾಯಗಳನ್ನೂ ಪ್ರಕಟಿಸಿದ್ದವು.

ಈ ಸರ್ಕಾರಿ ಸಾವಯವ ಕೃಷಿ ಪ್ರಚಾರದ ಹಿಂದೆ ಬೆಕ್ಕಿನಂತೆ ಹೊಂಚುಹಾಕುತ್ತ ನಿಂತಿದೆ, ಬಯೋಟೆಕ್ನಾಲಜಿ ಉದ್ದಿಮೆದಾರರ ಗುಂಪು! ಈ ದೃಷ್ಟಿಯಿಂದಲೇ ಈ ‘ಸಾವಯವ ಕೃಷಿ’ಎನ್ನುವುದು ಈಗ ಆಧುನಿಕ ಕೃಷಿಗಿಂತಲೂ ಅಪಾಯಕಾರಿಯಾಗಿ ಕಾಣುತ್ತಿರುವುದು.

ನಮ್ಮ ಕೃಷಿಕರ ಅಗತ್ಯ ಮತ್ತು ಆಕಾಂಕ್ಷೆಗಳನ್ನು ಅಂದರೆ ಅನ್ನ, ವಸತಿ, ವಸ್ತ್ರ, ವಿದ್ಯೆಗಳಂತಹ ಮೂಲಭೂತ ಅಗತ್ಯಗಳ ಜೊತೆಗೆ ಆಧುನಿಕ ವಿಜ್ಞಾನದ ಕೊಡುಗೆಗಳ ಕನಿಷ್ಟ ಬಳಕೆಯೂ ಸೇರಿದಂತೆ, ಈಗ ನಾವು ಅನುಭವಿಸುತ್ತಿರುವ ವಾಹನ ಸೌಕರ್ಯ, ವಿದ್ಯುತ್, ಕನಿಷ್ಟ ವೈದ್ಯಕೀಯ ಸೌಲಭ್ಯಗಳು, ಟಿ.ವಿ., ಕಂಪ್ಯೂಟರ್, ಫೋನು ಇವುಗಳನ್ನು ನಿರಾಕರಿಸದೆ, ನಮ್ಮ ಪರಿಸರವನ್ನು ಸಂರಕ್ಷಿಸುವ ಚಿಂತನೆ ಮಾಡಬೇಕಾಗುತ್ತದೆ. ಮತ್ತು ಈ ಕನಿಷ್ಟ ಸೌಲಭ್ಯಗಳನ್ನು ಹೊಂದಲು ಕೃಷಿಕ-ಕೃಷಿ ಕೂಲಿಗಾರ ಸೇರಿದಂತೆ, ಸಾಮಾನ್ಯನೊಬ್ಬನಿಗೆ ಇರಬೇಕಾದ ಆದಾಯ ಮತ್ತು ಅದನ್ನು ಗಳಿಸಬಹುದಾದ ರೀತಿಯ ಬಗ್ಗೆಯೂ ಯೋಚಿಸ ಬೇಕಾಗುತ್ತದೆ.

ಕನಿಷ್ಟ ಖರ್ಚಿನಲ್ಲಿ ಮಾಡಬಹುದಾದ ಕೃಷಿ, ಮತ್ತು ಎಲ್ಲವನ್ನೂ ನಿರಾಕರಿಸದೆ ಬದುಕಬಹುದಾದ ಸಾಧ್ಯತೆಯನ್ನು ಸಮೀಕರಿಸಿ ಮಾಡಬಹುದಾದ ಯಾವುದೇ ಕೃಷಿ ಆಧಾರಿತ ಉದ್ಯಮ- ಉದ್ಯೋಗಗಳ ಶೋಧನೆ ಅಗತ್ಯವಾಗಿದೆ. ಇದಕ್ಕೆ ಬರೀ ಕೃಷಿ ವಲಯವನ್ನು ಮಾತ್ರ ಗಮನದಲ್ಲಿಟ್ಟುಕೊಂಡರೆ ಸಾಧ್ಯವಾಗಲಾರದು. ಇದಕ್ಕೆ ಮುಖ್ಯ ಕಾರಣವೆಂದರೆ. ನಮ್ಮ ಕೃಷಿಕ್ಷೇತ್ರ ಅನುಭವಿಸುವ ನಷ್ಟವೇ ಕೈಗಾರಿಕಾರಂಗದ ಲಾಭವಾಗಿ ಪರಿವರ್ತನೆಯಾಗುತ್ತಿರುವುದು. ರೈತ ಭೂಮಿ ಕಳೆದುಕೊಳ್ಳಲಿ ಅಥವಾ ಆತನ ಉತ್ಪನ್ನದ ಬೆಲೆ ಕಳೆದುಕೊಳ್ಳಲಿ ಅದರ ಲಾಭ ಸದಾ ದೊರೆಯುತ್ತಿರುವುದು ಉದ್ಯಮ ರಂಗಕ್ಕೆ. ಇದನ್ನು ತಿಳಿಯಲು ಮಹತ್ತರವಾದ ಆರ್ಥಿಕ ತಜ್ಞತೆಯೇನೂ ಬೇಕಾಗಿಲ್ಲ. ಈ ವೈರುಧ್ಯವನ್ನು ನಿವಾರಿಸದೆ ನಾವು ಮಾಡುವ ಯಾವುದೇ ಆಭಿವೃದ್ಧಿ ಕೃಷಿಕನನ್ನು ತಲುಪಲಾರದು. ಆದ್ದರಿಂದ ಕೈಗಾರಿಕಾ ಮತ್ತಿತರ ಉದ್ಯಮರಂಗ ಗಳಿಸುತ್ತಿರುವ ಲಾಭದ ಗಣನೀಯ ಅಂಶ ಕೃಷಿಕ್ಷೇತ್ರಕ್ಕೆ ಅಂದರೆ ರೈತ-ಕಾರ್ಮಿಕರಿಗೆ ಮರಳಿಸುವ ಕೆಲಸವನ್ನು ಮಾಡಬೇಕಾಗಿದೆ. ಮತ್ತು ಭೂಮಿಯ ಅತ್ಯುತ್ತಮ ಬಳಕೆಗಾಗಿ ಹಿಡುವಳಿಗಳ ಅಸಮಾನ ಹಂಚಿಕೆಯನ್ನು ನಿವಾರಿಸಬೇಕಾಗಿದೆ. ಈ ವೈರುಧ್ಯಗಳನ್ನು ನಿವಾರಿಸದೆ ಕೃಷಿ ಉತ್ಪನ್ನಗಳಿಗೆ ನೀಡುವ ಯಾವ ಬೆಲೆಯೂ ರೈತನ ಪಾಲಿಗೆ ನ್ಯಾಯಬೆಲೆ ಆಗಲಾರದು.

ನಮ್ಮ ಎಲ್ಲ ಉದ್ಯೋಗಗಳ ತಳಹದಿಯಾದ ಕೃಷಿಯನ್ನು ಮೂಲವಾಗಿಟ್ಟುಕೊಂಡು ಕಲೆ, ಸಾಹಿತ್ಯ, ವಿಜ್ಞಾನ, ಕ್ರೀಡೆ, harohalli-slaughter-house-areaಉದ್ಯಮಗಳು, ವಿದ್ಯಾಭ್ಯಾಸ, ಹೀಗೆ ಎಲ್ಲವನ್ನೂ ಒಳಗೊಂಡ ಪರ್ಯಾಯ ಸಂಸ್ಕೃತಿಯನ್ನು ಕಟ್ಟುವುದು ಅನಿವಾರ್ಯ. ಇಡೀ ಪ್ರಪಂಚವನ್ನು ಮಾರುಕಟ್ಟೆಯನ್ನಾಗಿ ನೋಡುವ, ಭೂಮಿಯಿರುವುದೇ ಮನುಷ್ಯನ ಉಪಯೋಗಕ್ಕಾಗಿ ಎಂದು ಯೋಚಿಸುವ ಮುಂದುವರಿದ ದೇಶಗಳ ಉದ್ದಿಮೆದಾರರು, ವ್ಯಾಪಾರಿಗಳು (ಮುಂದುವರಿದ ದೇಶಗಳಲ್ಲೂ ರೈತರು ಕೆಲಮಟ್ಟಿಗೆ ಬೇರೆಯೇ ಆಗಿ ಉಳಿದಿದ್ದಾರೆ. ಅವರಿಗೂ ಅವರದ್ದೇ ಆದ ಸಮಸ್ಯೆಗಳಿವೆ.) ಅವರ ಮಾರುಕಟ್ಟೆ ವಿಸ್ತರಣೆ ಯೋಜನೆಯ ಅಂಗವಾಗಿಯೇ ಅವರ ಕ್ರೀಡೆಗಳು, ಸಂಗೀತ, ನೃತ್ಯ, ಕಲೆ, ಭಾಷೆ, ಜೀವನಶೈಲಿ ಎಲ್ಲವೂ ಇತರರಿಗಿಂತ ಉತ್ತಮವಾದದ್ದು ಮತ್ತು ಇತರರಿಗೆ ಅನುಕರಣೆಗೆ ಯೋಗ್ಯವಾದದ್ದೆಂದು ವಿಶ್ವಾದ್ಯಂತ ಭ್ರಮೆ ಹುಟ್ಟಿಸುತ್ತಿರುವಾಗ- ನಾವು ನಿಜವಾದ ಜಾಗತೀಕರಣಕ್ಕೆ ಸಿದ್ಧವಾಗುವುದು ಅಗತ್ಯ. ಆ ನಿಟ್ಟಿನ ಪ್ರಯತ್ನಗಳು ವೈಯಕ್ತಿಕವಾಗಿರುವುದಂತೂ ಸಾಧ್ಯವೇ ಇಲ್ಲ. ಸಾಂಘಿಕ- ಸಾಂಸ್ಥಿಕ ಹಾಗೂ ಜಾಗತಿಕ ಮಟ್ಟದ ಅರಿವು-ಎಚ್ಚರಗಳಿಂದ ಯೋಚಿಸಿ ಕಾರ್ಯಕ್ರಮಗಳನ್ನು ಯೋಜಿಸಬೇಕಾಗುತ್ತದೆ. ಇದೊಂದು ರೀತಿಯಲ್ಲಿ Think globally act locally ಎಂಬ ಮಾತಿಗೆ ಬದಲಾಗಿ Think locally act globally ಇರಬಹುದೇನೋ? ನಮ್ಮ ಸಾಮಾಜಿಕ, ಪ್ರಾದೇಶಿಕ ಮತ್ತು ಸಾಂಸ್ಕೃತಿಕ ಭಿನ್ನತೆಗಳನ್ನು ಉಳಿಸಿಕೊಂಡೂ ಪರ್ಯಾಯ ಕೃಷಿ, ಕ್ರೀಡೆ, ಕಲೆ, ಸಾಹಿತ್ಯ, ವಿಜ್ಞಾನ, ಉದ್ಯಮ, ವಿದ್ಯೆ ಹೀಗೆ ಎಲ್ಲವನ್ನೂ ಒಳಗೊಂಡ ಸಂಸ್ಕೃತಿಯೊಂದನ್ನು ಕಟ್ಟುತ್ತಾ ಅದನ್ನು ಜಾಗತೀಕರಿಸುತ್ತಾ ಹೋಗುವ ಮೂಲಕ ನಮ್ಮ ನೆಲ, ಜಲ, ಆಕಾಶಗಳನ್ನು ಉಳಿಸಿಕೊಳ್ಳಲು ಸಾಧ್ಯವಾದೀತು.

ಅನ್ನ ಹಾಕಿದ ತಪ್ಪಿಗೆ ದಂಡ ಕಟ್ಟಿದವರು – 2 (ಸಣ್ಣ ಕಲ್ಲಿನ ಮೇಲೆ ದೊಡ್ಡ ಕಲ್ಲು ಬಿದ್ದರೆ ಏನಾಗುತ್ತದೆ ಗೊತ್ತೆ?)

-ಜೀವಿ.

ಭಾಗ -1 : ಅನ್ನ ಹಾಕಿದ ತಪ್ಪಿಗೆ ದಂಡ ಕಟ್ಟಿದವರು..

ದಂಡ ಕಟ್ಟಿ ಊರಿನಿಂದ ದಲಿತರು ಬಹಿಷ್ಕಾರ ಹಾಕಿಸಿಕೊಂಡು ಐದು ದಿನ ಕಳೆದಿತ್ತು. ರಾತ್ರಿ 8 ರ ಸುಮಾರಿಗೆ ಪೊಲೀಸ್ ಜೀಪೊಂದು ಊರಿನತ್ತ ಬರುತ್ತಿರುವ ಶಬ್ಧ ಕೇಳಿತು. ಮಾರಮ್ಮನಿಗೆ ಅರ್ಪಿಸಲು ತಳಿಗೆ (ದೇವರಿಗೆ ಎಡೆ ಇಡುವ ಊಟ) ಹೊತ್ತು ಹೊರಟಿದ್ದ ದೇವರಾಜನ ಅಪ್ಪ ಪುಟ್ಟಯ್ಯ ಜೀಪಿನ ಶಬ್ಧ ಕೇಳಿ ವಾಪಸ್ ಮನೆಗೆ ಓಡಿ ಬಂದವನೇ ಪೊಲೀಸರು ಕೇರಿಯತ್ತ ಬರುತ್ತಿರುವ ಸುದ್ದಿ ತಿಳಿಸಿದ. dalit_panther2ನಂತರ ಮನೆಯ ಗಂಡು ಮಕ್ಕಳೊಂದಿಗೆ ಎದ್ದು ಬಿದ್ದು ಓಡಿ ಹೋಗಿ ಊರ ಹೊರಗಿನ ಬೇಲಿಯೊಂದರಲ್ಲಿ ಅಡಗಿ ಕುಳಿತ. ಮಾರಮ್ಮನಿಗೆ ತಳಿಗೆ ಒಪ್ಪಿಸಲು ಕೋಣನನ್ನು ಬಲಿ ಕೊಟ್ಟಿರುವ ವಿಷಯ ಗೊತ್ತಾಗಿ ಪೊಲೀಸರು ಕೇರಿಯತ್ತ ನುಗ್ಗುತ್ತಿದ್ದಾರೆ ಎಂಬುದು ಪುಟ್ಟಯ್ಯನ ಆತಂಕಕ್ಕೆ ಕಾರಣವಾಗಿತ್ತು. ಜೀಪು ಇಳಿದು ಬರುತ್ತಿದ್ದ ಪೊಲೀಸರ ಬೂಟಿನ ಸದ್ದು ಕೇಳಿ ಕೇರಿಯಲ್ಲಿ ಎಲ್ಲರ ಎದೆ ಬಡಿತ ಜಾಸ್ತಿಯಾಗಿತ್ತು. ಎಲ್ಲರ ಮನೆಗೂ ಮಾಂಸ ಹಂಚಿಕೆಯಾಗಿತ್ತು. ಮೇಲ್ಜಾತಿ ಹುಡುಗರಿಗೆ ಊಟ ಹಾಕಿರುವ ಸಿಟ್ಟಿನಿಂದ ಯಾರೋ ಪೊಲೀಸರಿಗೆ ಸುದ್ದಿ ಮುಟ್ಟಿಸಿರಬೇಕು ಎಂದುಕೊಂಡು ಎದೆ ಬಡಿತ ಹೆಚ್ಚಿಸಿಕೊಂಡಿದ್ದರು.

ಇದ್ಯಾವುದರ ಗೊಡವೆ ಇಲ್ಲದೆ ಮನೆಯಲ್ಲಿ ಮಾಂಸದೂಟ ಸಿದ್ದವಾಗಿರುವುದನ್ನು ನೆನೆದು ಸಂಭ್ರಮದಲ್ಲಿ ಓಡಾಡುತ್ತಿದ್ದ ಮಕ್ಕಳಲ್ಲಿ ಒಬ್ಬರನ್ನು ಕರೆದ ಪೊಲೀಸರು, ಗುಂಡಯ್ಯನ ಮನೆ ತೋರಿಸುವಂತೆ ತಿಳಿಸಿದರು. ಮನೆ ಬಾಗಿಲು ತಟ್ಟಿದ ಪೊಲೀಸರನ್ನು ಕಂಡು ಆತ ಆಶ್ಚರ್ಯಗೊಂಡು ತಬ್ಬಿಬ್ಬಾಗಿದ್ದ. ’ಗುಂಡಯ್ಯ ಎಂದರೆ ನೀನೇನಾ’ ಎಂದು ಕೇಳಿದ ಪೊಲೀಸರಿಗೆ ಆತಂಕದಿಂದಲೇ ’ನಾನೇ ಸ್ವಾಮಿ’ ಎಂದು ಉತ್ತರಿಸಿದ. ಮೇಲ್ಜಾತಿ ಹುಡುಗರಿಗೆ ಊಟ ಹಾಕಿದ ತಪ್ಪಿಗೆ ದಂಡ ಹಾಕಿ ಬಹಿಷ್ಕಾರಕ್ಕೆ ಒಳಗಾಗಿದೇವೆ. ಈಗ ಕೋಣವನ್ನು ಕಡಿತ ತಪ್ಪಿಗೆ ಜೈಲೇ ಸೇರಬೇಕೇನೋ ಎಂದು ಮನದಲ್ಲೆ ಗೊಣಗಿಕೊಂಡ ಗುಂಡಯ್ಯ ಮುಂದೇನು ಮಾಡುವುದು ಎಂದು ಆಲೋಚನೆಯಲ್ಲಿ ತೊಡಗಿದ್ದ. ಅಷ್ಟರಲ್ಲಿ ’ಐದು ದಿನದ ಹಿಂದೆ ನಾಮಕರಣ ಆಗಿದ್ದ ನಿನ್ನ ಮಗಳದ್ದೇನಾ?’ ಎಂದು ಪೊಲೀಸರು ಕೇಳಿದರು. ’ಹೌದು ಸ್ವಾಮಿ’ ಎಂದು ಗುಂಡಯ್ಯನಿಂದ ಅಂದು ಏನಾನಾಯ್ತು ಎಂಬ ಮಾಹಿತಿ ಪಡೆದುಕೊಂಡರು. ಅಷ್ಟೊತ್ತಿಗೆ ಕೇರಿಯ ಎಲ್ಲರೂ ಪೊಲೀಸರತ್ತ ಮುತ್ತಿಕೊಂಡಿದ್ದರು. ಅಲ್ಲಿಗೆ ಆಗಮಿಸಿದ ಪಕ್ಕದೂರಿನ ದಲಿತ ಕೇರಿಯ ರಾಮಕುಮಾರ, ನಡೆದಿರುವ ಎಲ್ಲಾ ವಿಷಯವನ್ನು ವಿವರವಾಗಿ ಪೊಲೀಸರಿಗೆ ತಿಳಿಸಿ ಯಾರಿಗೂ ಯಾವುದೇ ತೊಂದರೆ ಆಗುವುದಿಲ್ಲ ಎಂದು ದಂಡ ಹಾಕಿಸಿಕೊಂಡ ದಲಿತರಿಗೆ ಹೇಳಿದ. ಸುತ್ತಮುತ್ತಲ ಊರಿನಲ್ಲಿ ಒಂದಿಷ್ಟು ಓದಿಕೊಂಡು ದಲಿತ ಚಳವಳಿಯಲ್ಲಿ ತೊಡಗಿಕೊಂಡಿದ್ದ ರಾಮಕುಮಾರನ ಬಗ್ಗೆ ಎಲ್ಲರಿಗೂ ತಿಳಿದಿತ್ತು. ಏನು ತೊಂದರೆ ಆಗಲಾರದು ಎಂದುಕೊಂಡು ನಡೆದ ಸಂಗತಿಯನ್ನು ಪೊಲೀಸರ ಮುಂದೆ ತೆರದಿಟ್ಟರು.

ಕಾನೂನಿನ ಅರಿವಿದ್ದು ದಲಿತ ಚಳವಳಿಯಲ್ಲಿ ಗುರುತಿಸಿಕೊಂಡಿದ್ದ ರಾಮಕುಮಾರನಿಗೆ ತನ್ನ ಪಕ್ಕದೂರಿನ ದಲಿತರ ಮನೆಯಲ್ಲಿ cooked-riceಊಟ ಮಾಡಿದ ಮೇಲ್ಜಾತಿಯವರು ಕೊನೆಗೆ ದಂಡ ಕಟ್ಟಿಸಿಕೊಂಡು ಬಹಿಷ್ಕಾರ ಹಾಕಿರುವ ಸುದ್ದಿ ತಡವಾಗಿ ತಿಳಿದಿತ್ತು. ಹೊರ ಊರಿನಿಂದ ಬಂದ ಕೂಡಲೇ ವಿಷಯ ತಿಳಿದು ದಲಿತ ಕೇರಿಗೆ ರಾಮಕುಮಾರ ಬಂದಿದ್ದ. ಬೀದಿಯಲ್ಲಿ ಸಿಕ್ಕಿದ್ದ ಮುಕ್ಕಜ್ಜಿಯಿಂದ ಘಟನೆಯ ಸಂಪೂರ್ಣ ವಿವರ ಪಡೆದುಕೊಂಡಿದ್ದ. ದಲಿತ ಕೇರಿಯಲ್ಲಿ ಮತ್ಯಾರನ್ನು ಮಾತನಾಡಿಸದೆ ನೇರವಾಗಿ ಪಟ್ಟಣಕ್ಕೆ ಹೋಗಿ ಪತ್ರಕರ್ತರಿಗೆ ವಿಷಯ ಮುಟ್ಟಿಸಿದ್ದ. ಮರುದಿನ ರಾಜ್ಯಮಟ್ಟದಲ್ಲಿ ಸುದ್ದಿ ಪ್ರಕಟವಾಗಿತ್ತು. ಪತ್ರಿಕೆಗಳಲ್ಲಿ ಬಂದ ಸುದ್ದಿ ನೋಡಿ ಜಿಲ್ಲಾಧಿಕಾರಿ ಪ್ರಶ್ನೆ ಮಾಡಿದ ನಂತರ ಪೊಲೀಸರು ದಲಿತ ಕೇರಿಗೆ ದಾಂಗುಡಿ ಇಟ್ಟಿದ್ದರು. ಇದ್ಯಾವುದರ ಅರಿವಿಲ್ಲದ ದಲಿತ ಕೇರಿಯ ಜನ ಮೇಲ್ಜಾತಿ ಹುಡುಗರಿಗೆ ಊಟ ಹಾಕಿದ್ದು ನಮ್ಮದೇ ತಪ್ಪು, ಅದಕ್ಕಾಗಿ ದಂಡ ಮತ್ತು ಬಹಿಷ್ಕಾರದ ಹಾಕಿದ್ದಾರೆ ಎಂದು ಭಾವಿಸಿದ್ದರು. ಮುಂದೆ ಈ ರೀತಿ ತಪ್ಪು ಮಾಡದಂತೆ ನೋಡಿಕೊಳ್ಳಲು ತೋಟದ ಮಾರಿಗೆ ಕೋಣವೊಂದನ್ನು ಬಲಿಕೊಟ್ಟು ಸಂಕಷ್ಟದಿಂದ ಪಾರು ಮಾಡಲು ಕೇಳಿಕೊಂಡಿದ್ದರು. ದಂಡ ಮತ್ತು ಬಹಿಷ್ಕಾರದ ವಿಷಯವನ್ನು ರಾಮಕುಮಾರ ಬಹಿರಂಗಪಡಿಸಿದ ನಂತರ ಊರಿಗೆ ಕಾಲಿಟ್ಟಿದ್ದ ಪೊಲೀಸರು, ದಂಡ ಹಾಕಿದವರ ಮನೆ ಬಾಗಿಲು ತಟ್ಟಿ ಮಾರನೆಯ ದಿನ ಠಾಣೆಗೆ ಬರುವಂತೆ ಸೂಚನೆ ನೀಡಿ ಹೋದರು.

ಅದುವರೆಗೂ ದಲಿತರಿಗೆ ಬುದ್ದಿ ಕಲಿಸಿದ್ದೀವಿ ಎಂದುಕೊಂಡಿದ್ದ ಮೇಲ್ಜಾತಿ ಪಂಚಾಯ್ತಿದಾರರಿಗೆ ಪೊಲೀಸರ ಮಾತಿನಿಂದ ನಡುಕ ಉಂಟಾಯಿತು. ಪಕ್ಕದೂರಿನ ರಾಜಕೀಯ ಪುಡಾರಿಗಳ ಮನೆಗೆ ಧಾವಿಸಿ ಪೊಲೀಸರು ಬಂದು ಹೋಗಿರುವ ವಿಷಯ ತಿಳಿಸಿದರು. ಅಂದಿನ ರಾಜ್ಯ ಸರ್ಕಾರದಲ್ಲಿ ಪ್ರಮುಖ ಸಚಿವರಾಗಿದ್ದ ವ್ಯಕ್ತಿ ಪ್ರತಿನಿಧಿಸುತ್ತಿದ್ದ ಕ್ಷೇತ್ರ ಮತ್ತು ಅವರ ಹುಟ್ಟೂರಿನಿಂದ ಕೇವಲ ಒಂದೂವರೆ ಮೈಲಿ ದೂರದಲ್ಲಿರುವ ಊರಿನಲ್ಲಿ ಈ ಅಮಾನವೀಯ ಘಟನೆ ನಡೆದಿತ್ತು. dalit_panther1ದಲಿತರ ಮೇಲೆ ದೌರ್ಜನ್ಯ ನಡೆಸಿದವರು ಕೂಡ ಮಂತ್ರಿಯ ಸ್ವಜಾತಿಯವರೇ ಆಗಿದ್ದರು. ಕೆಲವರು ರಕ್ತ ಸಂಬಂಧಿಗಳು ಆಗಿದ್ದರು. ಪತ್ರಿಕೆಗಳಲ್ಲಿ ಓದಿ ವಿಷಯ ತಿಳಿದಿದ್ದ ಸಚಿವ, ಠಾಣೆಯಲ್ಲಿ ಮೊಕದ್ದಮೆ ದಾಖಲಾಗದಂತೆ ನೋಡಿಕೊಂಡಿದ್ದ. ಮತ್ತೊಂದು ಪಂಚಾಯ್ತಿ ಮಾಡಿ ಎಲ್ಲವನ್ನು ಸರಿಪಡಿಸುವುದಾಗಿ ಹೇಳಿದ್ದ. ಮೊಕದ್ದಮೆ ದಾಖಲಾಗಬೇಕು, ದಂಡ ಮತ್ತು ಬಹಿಷ್ಕಾರ ಹಾಕಿದವರಿಗೆ ಕಾನೂನಿನ ಅಡಿ ಶಿಕ್ಷೆ ಆಗಬೇಕು ಎಂಬ ಪಟ್ಟನ್ನು ಹೋರಾಟಗಾರ ರಾಮಕುಮಾರ ಹಿಡಿದಿದ್ದ. ಆದರೆ ಮೊಕದ್ದಮೆ ದಾಖಲಿಸದಂತೆ ಕೇವಲ ಸಚಿವ ಮಾತ್ರವಲ್ಲದೇ ಅಂದಿನ ಸರ್ಕಾರ ರಚನೆಗೆ ಪ್ರಮುಖ ಪಾತ್ರದಾರಿಯೂ ಆಗಿದ್ದ ಕಾರಣಕ್ಕಾಗಿ ಜಿಲ್ಲಾಧಿಕಾರಿ ಆದಿಯಾಗಿ ಯಾರೊಬ್ಬರು ಅವರ ಮಾತು ಉಲ್ಲಂಘಿಸುವ ಸ್ಥಿತಿಯಲ್ಲಿ ಇರಲಿಲ್ಲ.

ಸುತ್ತಮುತ್ತಲ ಊರಿಗೆ ವೃತ್ತದಂತಿದ್ದ ಪಕ್ಕದೂರಿನಲ್ಲಿ ದೊಡ್ಡ ಪಂಚಾಯ್ತಿ ಸೇರಿಕೊಂಡಿತು. ಅದಾಗಲೇ ಸುದ್ದಿ ಸುತ್ತಮುತ್ತಲ ಊರಿಗೆ ಹರಡಿತ್ತು. dalit_pantherಪ್ರಭಾವಿ ಸಚಿವ ಆಗಮಿಸುತ್ತಿರುವ ಕಾರಣಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. ಇದು ದಂಡ ಹಾಕಿದವರಿಗೆ ದೊಡ್ಡ ಬಲ ಇದ್ದಂತಾಗಿತ್ತು. ಸಚಿವ ಕೂಡ ನಮ್ಮ ಜಾತಿಯವನೇ ಆಗಿದ್ದು, ರಕ್ಷಣೆ ಮಾಡುವುದರಲ್ಲಿ ಅನುಮಾನ ಇಲ್ಲ ಎಂದುಕೊಂಡು ನಗು ಮುಖದೊಂದಿಗೆ ಪಂಚಾಯ್ತಿಗೆ ಹಾಜರಾಗಿದ್ದರು. ಆಗಮಿಸಿದ ಸಚಿವನಿಗೆ ಜೈಕಾರಗಳು ಮೊಳಗಿದವು. ಮೇಲ್ಜಾತಿಯವರ ಮೇಳದಲ್ಲಿ ಕಾಣೆಯಾದವರಂತೆ ಮೂಲೆಯೊಂದರಲ್ಲಿ ಕುಳಿತಿದ್ದ ದಲಿತರನ್ನು ಪಂಚಾಯ್ತಿ ಮುಂದೆ ಹಾಜರಾಗಲು ಸಚಿವ ಆಜ್ಞೆ ಮಾಡಿದ. ಈಗಲೂ ತಪ್ಪು ಮಾಡಿದ ಸ್ಥಿತಿಯಲ್ಲೇ ನಿಂತಿದ್ದ ದಲಿತರಿಗೆ ರಾಮಕುಮಾರ ನಾಯಕನಾಗಿದ್ದ. ಆತ ಮಾತ್ರ ಎದೆಗುಂದದೆ ದಲಿತರ ಮೇಲೆ ನಡೆದಿರುವ ದೌರ್ಜನ್ಯ ಮತ್ತು ಅಟ್ಟಹಾಸವನ್ನು ಪ್ರಶ್ನೆ ಮಾಡಿದ. ಅಮಾಯಕರಿಗೆ ನ್ಯಾಯ ಸಿಗಬೇಕು, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಪಟ್ಟು ಹಿಡಿದ. ’ನೀನಿನ್ನೂ ಯುವಕ, ಬಿಸಿರಕ್ತದಲ್ಲಿ ಮಾತನಾಡುತ್ತಿದ್ದಿಯಾ…’ ಎಂದು ಮಾತು ಆರಂಭಿಸಿದ ಮಂತ್ರಿ, ’ಎಲ್ಲರೂ ಅಣ್ಣತಮ್ಮಂದಿರಂತೆ ಬಾಳಬೇಕು. ನಮ್ಮ ಸಚಿವ ಸಂಪುಟದಲ್ಲಿ ರಾಮಯ್ಯ ಮಂತ್ರಿಯಾಗಿದ್ದಾರೆ. ಅವರು ಕೂಡ ದಲಿತರೇ ಆಗಿದ್ದು, ಅವರ ಮನೆಯಲ್ಲಿ ನಾನೂ ಕೂಡ ಊಟ ಮಾಡಿದ್ದೇನೆ. ಹಾಗೆಂದ ಮಾತ್ರಕ್ಕೆ ನನ್ನನ್ನು ಜಾತಿಯಿಂದ ಹೊರ ಹಾಕುತ್ತೀರಾ?’ ಎಂದು ಸ್ವಜಾತಿಯವರನ್ನು ಸಚಿವ ಪ್ರಶ್ನೆ ಮಾಡಿದ. ಹೀಗೆ ಮಾಡಬಾರದು ಎಂದು ಹೇಳಿದ ಸಚಿವನ ಮಾತಿಗೆ ಎಲ್ಲರೂ ಮರುಳಾದರು. ಬಹಿಷ್ಕಾರ ಹಿಂದಕ್ಕೆ ಪಡೆದು ದಂಡದ ಹಣ ವಾಪಸ್ ಕೊಡಿ ಎಂದು ಆಜ್ಞೆ ಮಾಡಿದ. ದಲಿತರಿಗೆ ಈತ ನಮ್ಮ ಪರವಾಗಿಯೇ ಮಾತನಾಡುತ್ತಿದ್ದಾನೆ ಎಂಬ ಭಾವನೆ ಬಂದಿತು. ಆದರೆ ಮಾತಿನ ನಡುವೆಯೇ ದಲಿತರತ್ತ ತಿರುಗಿ ನೀವು ಕೂಡ ಎಚ್ಚರಿಕೆಯಿಂದ ಬಾಳಬೇಕು. ’ಸಣ್ಣ ಕಲ್ಲಿನ ಮೇಲೆ ದೊಡ್ಡ ಕಲ್ಲು ಬಿದ್ದರೆ ಏನಾಗುತ್ತದೆ ಗೊತ್ತೆ?’ ಎಂದು ಪ್ರಶ್ನೆ ಮಾಡಿದ. ’ಕೇಸು ದಾಖಲಾದರೆ ಹಳ್ಳಿಯಲ್ಲಿ ಸೌಹಾರ್ದ ವಾತಾವರಣ ಹಾಳಾಗುತ್ತದೆ. ಅಣ್ಣ-ತಮ್ಮಂದಿರಂತೆ ಜೀವನ ನಡೆಸಿ’ ಎಂದು ಹೇಳಿ ಪಂಚಾಯ್ತಿಗೆ dalithsಕೊನೆಗೊಳಿಸಿದ.

’ದೊಡ್ಡ ಕಲ್ಲನ್ನು ಮತ್ತೆಂದೂ ಮೈಮೇಲೆ ಎಳೆದುಕೊಳ್ಳಬೇಡಿ’ ಎಂಬ ಎಚ್ಚರಿಕೆಯನ್ನು ಕೆಳಜಾತಿಯವರಿಗೆ ನೀಡಿ ಕಾನೂನಿನ ಅಂಕುಶಕ್ಕೆ ಸಿಗದಂತೆ ಸ್ವಜಾತಿಯವರನ್ನು ರಕ್ಷಣೆ ಮಾಡಿದ ಸಚಿವನ ಜಾಣತನ ಅಂದು ದಲಿತರಿಗೆ ಅರ್ಥವಾಗಲಿಲ್ಲ. ಅರ್ಥ ಮಾಡಿಕೊಂಡ ರಾಮಕುಮಾರ ಸೇರಿ ಕೆಲವರಿಂದ ಬೇರೇನು ಮಾಡಲಾಗಲಿಲ್ಲ. ನಾವು ದೊಡ್ಡಕಲ್ಲು ಎಂದು ಬೀಗಿಕೊಂಡು ಮೇಲ್ಜಾತಿಯವರು ಮತ್ತೊಮ್ಮೆ ಸಚಿವನಿಗೆ ಜೈಕಾರು ಮೊಳಗಿಸಿದರು. ಸಣ್ಣಕಲ್ಲಿಗೆ ಕಾನೂನಿನ ರಕ್ಷಣೆ ಇದ್ದರೂ ಅದರ ಹಿಡಿತ ದೊಡ್ಡ ಕಲ್ಲುಗಳ ಕೈಲಿದ್ದರೆ ಏನಾಗುತ್ತದೆ ಎಂಬುದಕ್ಕೆ ಅನ್ನ ಹಾಕಿದ ತಪ್ಪಿಗೆ ತಂಡ ಕಟ್ಟಿದ ದಲಿತರೇ ಸಾಕ್ಷಿ.

ಒಕ್ಕಲು ಮಗ ಬಿಕ್ಕದಂತೆ ಕಾಯಬೇಕು


– ಡಾ.ಎಸ್.ಬಿ. ಜೋಗುರ


ಭಾರತದ ಕೃಷಿಯಲ್ಲಿ 1990 ರ ದಶಕದ ನಂತರ ಸಾಕಷ್ಟು ಸ್ಥಿತ್ಯಂತರಗಳು ಉಂಟಾದವು. ಮುಖ್ಯವಾಗಿ ಆರ್ಥಿಕ ಉದಾರೀಕರಣದ ಹಿನ್ನೆಲೆಯಲ್ಲಿ ಆರಂಭವಾದ ಬದಲಾವಣೆಗಳು ನಮ್ಮ ಕೃಷಿಯ ಮೇಲೂ ಪ್ರಭಾವ ಬೀರಿದವು. ತೊಡಗಿಸಿರುವ ಹಣಕ್ಕಿಂತಲೂ ಕಡಿಮೆ ಆದಾಯ, ಸಾಲ, ಒಕ್ಕಲುತನ ಮಾಡಲು ತಗಲುವ ಖರ್ಚು ವೆಚ್ಚ, ಕೃಷಿ ಸಾಲ ಸೌಲಭ್ಯಗಳ ಅಸಮರ್ಪಕ ವಿತರಣೆ, ಮಾರುಕಟ್ಟೆಯ ಅಹಿತಕರ ವಾತಾವರಣ, ದುರ್ಬರವಾದ ಖಾಸಗಿ ಬದುಕು ಮುಂತಾವುಗಳು ಸಂಯುಕ್ತವಾಗಿ ರೈತನ ಜೀವವನ್ನೇ ಬಲಿ ತೆಗೆದುಕೊಳ್ಳುತ್ತಿವೆ. ಸೂಕ್ತ ಸಮಯಕ್ಕೆ ಸಿಗಬೇಕಾಗದ ನೆರವು ಕೂಡಾ ಆತನಿಗೆ ಒದಗದ ಕಾರಣ ಆತ್ಮಹತ್ಯೆಯಂಥಾ ತೀರ್ಮಾನವನ್ನು farmers-suicideಆತ ತೆಗೆದುಕೊಳ್ಳುತ್ತಿದ್ದಾನೆ. ಆತ್ಮಹತ್ಯೆ ಯಾವುದೇ ಸಮಸ್ಯೆಗಾಗಲೀ, ಯಾರಿಗೇ ಆಗಲೀ ಪರಿಹಾರವಂತೂ ಆಗುವದಿಲ್ಲ. ಕರ್ನಾಟಕದಲ್ಲಿ ಕಳೆದ ಕೆಲ ವರ್ಷಗಳಿಂದ ಈ ಕಬ್ಬು ಬೆಳೆದ ರೈತರ ಸ್ಥಿತಿ ಮಾತ್ರ ಮತ್ತೆ ಮತ್ತೆ ಅನೇಕ ಬಗೆಯ ಸಂದಿಗ್ಧಗಳನ್ನು ಸೃಷ್ಟಿ ಮಾಡುತ್ತಿದೆ. ಸರಕಾರ ಯಾವುದೇ ಇರಲಿ ರೈತರ ಸಮಸ್ಯೆಗಳು ಮಾತ್ರ ನಿರಂತರ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿರುವದಂತೂ ಹೌದು. ಒಕ್ಕಲುತನದಲ್ಲಿ ಯಾವ ಸುಖವೂ ಇಲ್ಲ ಎನ್ನುವ ಮತು ನಾನು ಹುಟ್ಟಿದಾಗಿನಿಂದಲೂ ಕೇಳುತ್ತಲೇ ಬೆಳೆದಿರುವೆ. ಬರುವ ಇಳುವರಿ ಬರೀ ಲಾಗೋಡಿಗೂ [ಕೃಷಿ ಖರ್ಚು ವೆಚ್ಚ] ಸಾಲುವದಿಲ್ಲ ಎನ್ನುವ ಮಾತು ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದವರಿಗೆಲ್ಲರಿಗೂ ತಿಳಿದಿದೆ. ಒಂದು ಕ್ವಿಂಟಲ್ ಹತ್ತಿ ಬೆಳೆಯಲು ಒಬ್ಬ ರೈತ 6000 ರೂಪಾಯಿ ಖರ್ಚು ಮಾಡಿದರೆ, ಅವನಿಗೆ ಇಳುವರಿ ಬಂದ ಮೇಲೆ ಒಂದು ಕ್ವಿಂಟಲ್ ಗೆ 4000 ರೂಪಾಯಿ ದರ ನಿಗದಿ ಮಾಡಿದರೆ ಆತನ ಮನಸ್ಥಿತಿ ಏನಾಗಬೇಡ..? ಬೇರೆ ಬೇರೆ ಮೂಲಗಳಿಲ್ಲದೇ ಕೇವಲ ಕೃಷಿ ಇಳುವರಿಯನ್ನೇ ಅವಲಂಬಿಸಿರುವ ರೈತ ಸಹಜವಾಗಿ ತನ್ನ ಕುಟುಂಬದ ಇತರೆ ಖರ್ಚು ವೆಚ್ಚಗಳಿಗಾಗಿ ಸಾಲ ಮಾಡುವುದು ಸಾಮಾನ್ಯ ಸ್ಥಿತಿ. ಇದ್ದಕ್ಕಿದ್ದಂತೆ ಬಂದೆರಗುವ ಬರಗಾಲ, ಇಳುವರಿ ಬಂದಾಗ ಉಂಟಾಗುವ ಬೆಲೆ ಕುಸಿತ, ಅವೈಜ್ಞಾನಿಕವಾದ ಬೆಂಬಲ ಬೆಲೆ, ಸಾಲಗಾರರ ಕಿರಕಿರಿ ಈ ಮುಂತಾದ ಕಾರಣಗಳಿಂದಾಗಿ ರೈತ ಆತ್ಮಹತ್ಯೆಯಂಥಾ ತೀರ್ಮಾನ ತೆಗೆದುಕೊಳ್ಳುವದಿದೆ. ಹಾಗೆ ನೋಡಿದರೆ ನಮ್ಮ ದೇಶದಲ್ಲಿ ಅತಿ ಹೆಚ್ಚು ರೈತರ ಆತ್ಮಹತ್ಯೆಗಳು ಮಹಾರಾಷ್ಟ್ರದಲ್ಲಿ ಜರುಗುವದಿದೆ. ಅದಕ್ಕಿರುವ ಕಾರಣಗಳು ಮಾತ್ರ ಸಾರ್ವತ್ರಿಕ. 2014 ರಲ್ಲಿ ಜರುಗಿದ ಒಟ್ಟು 1109 ರೈತರ ಆತ್ಮಹತ್ಯೆಗಳಲ್ಲಿ ಸುಮಾರು 986 ಪ್ರಕರಣಗಳು ಮಹಾರಾಷ್ಟ್ರ ಒಂದರಲ್ಲಿಯೆ ಜರುಗಿರುವದಿತ್ತು. ಅದರ ನಂತರದ ಸ್ಥಾನವನ್ನು ಆಂಧ್ರಪ್ರದೇಶ ಮತ್ತು ಜಾರ್ಖಂಡ ರಾಜ್ಯಗಳು ಪ್ರತಿನಿಧಿಸುವದಿತ್ತು. ಈ ಬಗೆಯ ಸಂಗತಿಗಳ ಪಟ್ಟಿಯಲ್ಲಿ ರಾಜ್ಯವೊಂದರ ಹೆಸರು ಇಲ್ಲದಿರುವದೇ ಉಚಿತ. ಆದರೆ ಈಗೀಗ ಕರ್ನಾಟÀಕದಲ್ಲಿ ರೈತರ ಆತ್ಮಹತ್ಯೆಗಳು ಸುದ್ಧಿಯಾಗುತ್ತಿವೆ. farmer-land-acquisition-2ಈ ವರ್ಷದ ಆರಂಭದಿಂದ ಹಿಡಿದು ಇಲ್ಲಿಯವರೆಗೆ ಅನೇಕ ರೈತರು ಸರಣಿ ರೂಪದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಇದು ಹೀಗೇ ಮುಂದುವರೆದರೆ ಕರ್ನಾಟಕ ಮಹಾರಾಷ್ಟ್ರವನ್ನು ಈ ವಿಷಯವಾಗಿ ಹಿಂದಿಕ್ಕಬಹುದು. ರೈತರಲ್ಲಿ ಈ ಆತ್ಮಹತ್ಯೆ ಎನ್ನುವುದು ಸಮೂಹಸನ್ನಿಯಾಗಿ ಮಾರ್ಪಡುವಂತೆ ತೋರುತ್ತಿದೆ. ಅವರಿಗೆ ಸೂಕ್ತ ಮಾರ್ಗದರ್ಶನ ಮತ್ತು ಸಕಾಲಿಕ ನೆರವಿನ ಅಗತ್ಯವಿದೆ. ನಮ್ಮ ದೇಶದಲ್ಲಿ 2012 ರಲ್ಲಿ ಒಟ್ಟು 1246 ರೈತರ ಆತ್ಮಹತ್ಯೆಯ ಪ್ರಕರಣಗಳು ವರದಿಯಾದರೆ, 2013 ರಲ್ಲಿ 879 ಆತ್ಮಹತ್ಯೆಗಳು ವರದಿಯಾಗಿದ್ದವು. ನೆರೆಯ ರಾಜ್ಯಗಳೊಂದಿಗೆ ಹೋಲಿಸಿದಾಗ ಕರ್ನಾಟಕದಲ್ಲಿ ರೈತರ ಆತ್ಮಹತ್ಯೆಗಳು ಹಿಂದೆಂದಿಗಿಂತಲೂ ಕಡಿಮೆಯೇ.. ಆದರೆ ಈಗಿನ ಪರಿಸ್ಥಿತಿ ಮತ್ತೆ ಮರುಕಳಿಸದಂತೆ ರಾಜ್ಯ ಸರಕಾರ ಎಚ್ಚರ ವಹಿಸುವ ಅಗತ್ಯವಿದೆ.

1990 ರ ದಶಕದ ನಂತರ ಆರಂಭವಾದ ಆರ್ಥಿಕ ಸುಧಾರಣೆಯ ನೀತಿಗಳು ಮತ್ತು ಜಾಗತೀಕರಣದ ಹಾವಳಿಯೂ ತೀವ್ರವಾಗಿ ಕೃಷಿ ಮತ್ತು ಅದರ ಉತ್ಪಾದನೆಗಳ ಮೇಲೆ ಪ್ರಭಾವ ಬೀರಲು ಆರಂಭಿಸಿದವು. ಮುಕ್ತ ಮಾರುಕಟ್ಟೆಯ ಹೆಸರಲ್ಲಿ ರೈತರ ಬೆಳೆಗೆ ಯೋಗ್ಯ ದರ ದೊರೆಯದ ಸ್ಥಿತಿ ನಿರ್ಮಾಣವಾಯಿತು. ಆಂಧ್ರಪ್ರದೇಶದಲ್ಲಂತೂ ಈ ಮಾತು ಬಹುತೇಕ ಸತ್ಯ. ಆಂದ್ರದ ನೆಲ್ಲೂರು ಭಾಗದಲ್ಲಿ ಬಹುತೇಕ ಕೃಷಿಕರು ವಾಣಿಜ್ಯ ಬೆಳೆಯನ್ನು ಬೆಳೆಯುವ ಭರಾಟೆಗೆ ಇಳಿದರು ಆ ಬೆಳೆಗೆ ಪೂರಕವಾಗಿ ನಿಲ್ಲಬಹುದಾದ ದುಬಾರಿ ಬೆಲೆಯ ನೀರಾವರಿ ವ್ಯವಸ್ಥೆಯನ್ನು ಅಳವಡಿಸಿಕೊಂಡರು. ಅವರ ನಿರೀಕ್ಷೆಗೆ ತಕ್ಕಂತೆ ಇಳುವರಿ ಬಂತಾದರೂ ಸೂಕ್ತವಾದ ಬೆಲೆ ಬಾರದ ಸ್ಥಿತಿ ನಿರ್ಮಾಣವಾಯಿತು. ಆರ್ಥಿಕ ಸುಧಾರೀಕರಣ ಎನ್ನುವುದು ರೈತರ ಪಾಲಿಗೆ ವರವಾಗದೇ ಶಾಪವಾಗಿ ಪರಿಣಮಿಸಿತು. ಪಂಜಾಬ, ಮಹಾರಾಷ್ಟ್ರ, ಆಂದ್ರಪ್ರದೇಶ,ಕರ್ನಾಟಕ ಮುಂತಾದ ಕಡೆಗಳಲ್ಲಿ ಕೇಳಿ ಬರುವ ರೈತರ ಆತ್ಮಹತ್ಯೆಯ ಹಿಂದಿನ ಕಾರಣ ಹೆಚ್ಚು ಖರ್ಚು, ಹೆಚ್ಚು ಇಳುವರಿ ಆದರೆ ಕಡಿಮೆ ಆದಾಯವೇ ಆಗಿದೆ. ಕರ್ನಾಟಕದಲ್ಲಿ ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳ ಮಾಲಿಕರು ಬಾಕಿ ಹಣವನ್ನು ನೀಡದೇ ಸತಾಯಿಸುತ್ತಿರುವದು ರೈತರು ಅನುಭವಿಸುತ್ತಿರುವ ಇತರೆ ಸಮಸ್ಯೆಗಳ ಜೊತೆಯಲ್ಲಿ ಒಂದು ವಿಶಿಷ್ಟ ಸಮಸ್ಯೆ.ಉಳ್ಳವರ ಬಳಿ ಯಪ್ಪಾ farmersಯಣ್ಣಾ ಅಂದು ಸಾಲ ಪಡೆದು ಕಬ್ಬು ಬೆಳೆದು ಅದನ್ನು ಜ್ವಾಕಿ ಜತ್ತನ ಮಾಡಿ ಬೆಳೆದ ಇಳುವರಿಯನ್ನು ಸಕ್ಕರೆ ಕಾರ್ಖಾನೆಗಳಿಗೆ ಸುರುಹಿದರೆ ಹಣವೇ ಕೊಡದ ಸ್ಥಿತಿ ಇರುವಾಗ ಮಾಡಿದ ಖರ್ಚಿಗೆ ಎಲ್ಲಿಂದ ಸುರಿಯುವದು..? ಆ ರೈತನನ್ನು ಅವಲಂಬಿಸಿ ಒಂದು ಕುಟುಂಬವೇ ಇದೆ ಅವರ ಖರ್ಚು ವೆಚ್ಚಗಳಿಗೆ ಆತ ಮತ್ತೆ ಸಾಲ ಮಾಡಬೇಕು. ಒಟ್ಟಿನಲ್ಲಿ ಸಾಲದ ಸಹವಾಸದಲ್ಲಿ ಅವನನ್ನು ಇಟ್ಟು ವೇದಿಕೆಗಳಲ್ಲಿ ‘ಉಳುವಾ ಯೋಗಿಯ ನೋಡಲ್ಲಿ’ ಎಂದು ಹಾಡುವುದೇ ದೊಡ್ಡ ಮುಜುಗರ ಎನಿಸುವದಿಲ್ಲವೆ..? ಒಬ್ಬ ರೈತ ತಾನೇ ಕಷ್ಟ ಪಟ್ಟು ಬೆಳೆದ ಕಬ್ಬಿನ ಪಡಕ್ಕೆ ಬೆಂಕಿ ಇಡುವ ಮಟ್ಟದ ಕಠೋರ ಮನ:ಸ್ಥಿತಿಯನ್ನು ತಲುಪುತ್ತಾನೆ ಎಂದರೆ ಅವನ ಪಡಪಾಟಲು ಹೇಗಿರಬಹುದು..? ರೈತರಿಗೆ ಕೃಷಿ ಸಾಂಸ್ಥಿಕ ಮೂಲಗಳಿಂದ ಹಣÀಕಾಸಿನ ನೆರವನ್ನು ಸಕಾಲದಲ್ಲಿ ಒದಗಿಸುವದು ಮಾತ್ರ ಸಾಲದು ಅದರ ಜೊತೆಯಲ್ಲಿಯೇ ಕೃಷಿ ಎನ್ನುವುದು ಒಂದು ಲಾಭದಾಯಕ ಉದ್ಯೋಗ ಎನ್ನುವ ಖಾತ್ರಿ ಮನ:ಸ್ಥಿತಿಯನ್ನು ರೂಪಿಸುವಂತಾಗಬೇಕು. ಬೆಳಗಾವಿಯಲ್ಲಿ ಅಧಿವೇಶನ ನಡೆಯುವದಿದೆ ಎನ್ನುವದನ್ನು ಗಮನದಲ್ಲಿರಿಸಿಕೊಂಡು ಆಳುವ ಪಕ್ಷಗಳು ಮತ್ತು ವಿರೋಧಿ ಪಕ್ಷಗಳು ಒಂದು ತಾತ್ಕಾಲಿಕ ತಾಲೀಮು ಮಾಡಿಕೊಂಡು ರೈತರ ಸಂಕಷ್ಟಗಳ ಬಗ್ಗೆ ಯೋಚಿಸದೇ ಅವರ ಸಮಸ್ಯೆಗಳ ಪರಿಹಾರಕ್ಕಾಗಿ ಒಂದು ಶಾಶ್ವತವಾದ ಯೋಜನೆಯನ್ನು ರೂಪಿಸಿ ಕ್ರಮ ಕೈಗೊಳ್ಳಬೇಕು. ಸಾಧ್ಯವಾದಷ್ಟು ರೈತನನ್ನು, rural-karnataka-2ಅವನ ಬದುಕು ಮತ್ತು ವೃತ್ತಿಯನ್ನು ರಾಜಕೀಯ ಸಂಗತಿಗಳಿಗೆ ಸಿಲುಕಿಸಿದೇ ಒಂದು ಪ್ರಾಮಾಣಿಕವಾದ ಕಳಕಳಿಯಿಂದ ರೈತನ ಸಮಸ್ಯೆಯನ್ನು ಬಗೆಹರಿಸುವಲ್ಲಿ ಒಂದು ನೈತಿಕ ಇಚ್ಛಾ ಶಕ್ತಿಯನ್ನು ಮೆರೆಯುವ ಅವಶ್ಯಕತೆಯಿದೆ.

ಕೃಷಿಯನ್ನು ಸಾಧ್ಯವಾದಷ್ಟು ನೈಸರ್ಗಿಕ ಅವಲಂಬನೆಯಿಂದ ವಿಚಲಿತಗೊಳಿಸುವ ದಿಸೆಯಲ್ಲಿ ಕ್ರಮ ಕೈಗೊಳ್ಳಬೇಕು. ರಾಜ್ಯಗಳು ತಮ್ಮಲ್ಲಿಯ ನೀರನ್ನು ಅತ್ಯಂತ ವೈಜ್ಞಾನಿಕವಾಗಿ ಬಳಸಿಕೊಳ್ಳುವ, ಕೃಷಿಗೆ ಪೂರಕವಾಗಿ ವಿನಿಯೋಗವಾಗುವ ಹಾಗೆ ಕ್ರಮ ಕೈಗೊಳ್ಳಬೇಕು. ಇನ್ನು ಕೃಷಿಗೆ ಕೆಲ ಸಾಂಸ್ಥಿಕ ಮೂಲಗಳಿಂದ ಸಾಲವನ್ನು ಒದಗಿಸುವಾಗ ದೊಡ್ಡ ರೈತರು ಮತ್ತು ಸಣ್ಣ ರೈತರ ನಡುವೆ ತಾರತಮ್ಯ ಎಸಗದೇ ಎಲ್ಲ ಬಡ ರೈತರಿಗೂ ಸಾಂಸ್ಥಿಕ ಮೂಲಗಳ ಸಾಲವನ್ನು ಸಮನಾಗಿ ಒದಗಿಸುವಲ್ಲಿ ನೆರವಾಗÀಬೇಕು. ಜೊತೆಗೆ ಸಾಲ ನೀಡಿದ ಕಾರಣಕ್ಕೆ ಸರಿಯಗಿ ಬಳಕೆ ಯಾಗುವಂತೆ ನಿಗಾ ವಹಿಸಬೇಕು. ಬೆಳೆ ಹಾನಿ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ರೈತರಿಗೆ ಕೃಷಿ ಇಲಾಖೆಯ ಮೂಲಕ ಇಲ್ಲವೇ ಸಂಬಂಧಿಸಿದ ಇಲಾಖೆಯ ಮೂಲಕ ತಿಳುವಳಿಕೆಯನ್ನು ನೀಡಬೇಕು. rural-indiaಸಣ್ಣ ಹಿಡುವಳಿದಾರರು ಕೂಡಾ ಲಾಭದಾಯಕ ಕೃಷಿಯಲ್ಲಿ ತೊಡಗಲು ಅನುಕೂಲವಾಗುವ ಹಾಗೆ ನೆರವು ನೀಡಬೇಕು. ರೈತರಿಗೆ ಕೃಷಿಗೆ ಪೂರಕವಾಗಿರುವ ಇತರೆ ಚಟುವಟಿಕೆಗಳಲ್ಲಿ ತೊಡಗಿ ಆರ್ಥಿಕ ಸಂಪನ್ಮೂಲಗಳನ್ನು ಕ್ರೂಢೀಕರಿಸುವ ಕೌಶಲ್ಯಗಳನ್ನು ಕಲಿಸಬೇಕು. ಬರಗಾಲದ ಸಂದರ್ಭದಲ್ಲಿ ಆ ಬಗೆಯ ವಿದ್ಯೆ ಅವರ ಕುಟುಂಬವನ್ನು ಸಲಹುವಂತಾಗಬೇಕು. ತೊಂದರೆಗೆ ಸಿಲುಕಿದ ರೈತರನ್ನು ಗುರುತಿಸಿ ಅವರು ಆತ್ಮ ಹತ್ಯೆ ಮಾಡಿಕೊಂಡ ನಂತರ ಪರಿಹಾರ ಕೊಡುವ ಬದಲಾಗಿ ಆತ ಇನ್ನೂ ಬದುಕಿರುವಾಗಲೇ ಆತ ಸಮಸ್ಯೆಯ ಸುಳಿಯಿಂದ ಹೊರಬರುವಲ್ಲಿ ನೆರವಾಗಬೇಕು. ಈ ಸಂಗತಿಗಳ ಜೊತೆಯಲ್ಲಿ ಕೆಲವು ಸಂಘ-ಸಂಸ್ಥೆಗಳು ಬರಗಾಲದ ಸಂದರ್ಭದಲ್ಲಿ ಆ ಭಾಗದ ರೈತರ ಕುಟುಂಬಗಳಿಗೆ ನೆರವಾಗುವ ಮೂಲಕ ಅವರ ಮನೋಸ್ಥೈರ್ಯವನ್ನು ವೃದ್ಧಿಸಬೇಕು. ಹೀಗೆ ರೈತರ ಬಗೆಗಿನ ಒಂದಷ್ಟು ಪ್ರಾಮಾಣಿಕ ಕಳಕಳಿಯಿಂದ ಈ ಬಗೆಯ ಆತ್ಮಹತ್ಯೆಗಳನ್ನು ನಾವು ತಡೆಯಬಹುದಾಗಿದೆ. ಒಕ್ಕಲು ಮಗ ಬಿಕ್ಕದಂತೆ ಕಾಯುವ ಹೊಣೆಗಾರಿಕೆ ಸರಕಾರದ ಮೇಲಿರುವಂತೆ ಸಮಾಜದ ಪ್ರತಿಯೊಂದು ಸಂಘ-ಸಂಸ್ಥೆಯ ಮೇಲೂ ಇದೆ.

ಹುಸಿ ಚಿಂತನೆಗಳ ಹೊಳೆ : ಆತ್ಮದ್ರೋಹವಾಗುತ್ತಿರುವ ಮಾತುಗಳು

ಬಿ.ಶ್ರೀಪಾದ ಭಟ್

***

ಆತ ಗ್ರೀಕ್ ಸಿನಿಮಾ ನಿರ್ದೇಶಕ. ಕಳೆದ 35 ವರ್ಷಗಳಿಂದ ತನ್ನ ದೇಶ ಗ್ರೀಕ್ ತೊರೆದು ಅಮೇರಿಕಾದಲ್ಲಿ ನೆಲೆಸಿದ್ದ. ಹಾಲಿವುಡ್‍ನಲ್ಲಿ ಸಿನಿಮಾಗಳನ್ನು ತಯಾರಿಸಿದ್ದ, ನಿರ್ದೇಶಿಸಿದ್ದ. ಆ ನಿರ್ದೇಶಕನ ಹೆಸರು ‘A’. 35 ವರ್ಷಗಳ ನಂತರ ತನ್ನ ಅತ್ಯಂತ ವಿವಾದಗ್ರಸ್ಥ ಸಿನಿಮಾದ ಪ್ರದರ್ಶನಕ್ಕಾಗಿ ತವರು ನೆಲ ಗ್ರೀಕ್‍ಗೆ ಮರಳಿದ್ದ.

ಆದರೆ ನಿರ್ದೇಶಕ ‘A’ನ ಉದ್ದೇಶ ಬೇರೆಯದಾಗಿತ್ತು. ಸಿನಿಮಾ ulyssesgazeಎನ್ನುವ ಮಾಂತ್ರಿಕತೆಯ ಪ್ರಾರಂಭದ ದಿನಗಳ ಸಂದರ್ಭದಲ್ಲಿ ಅಂದರೆ ಸುಮಾರು 1905ರಲ್ಲಿ ಛಾಯಾಗ್ರಾಹಕರಾದ ‘ಮನಕಿಯಾ’ ಸಹೋದರರು ಬಾಲ್ಕನ್ ಪ್ರದೇಶಕ್ಕೆ (ಪೂರ್ವ ಸೈಬೀರಿಯಾದ ಪರ್ವತ ಪ್ರದೇಶಗಳಿಂದ ಪೂರ್ವ ಬಲ್ಗೇರಿಯಾದ ಕಪ್ಪು ಸಮುದ್ರದವರೆಗೆ) ದೇಶಾಂತರ ಹೋಗಿ ಅಲ್ಲಿನ ಸಂಸ್ಕೃತಿ, ಜನಾಂಗದ ಆಚರಣೆಗಳು, ಮೂಲ ನಿವಾಸಿಗಳ ಬದುಕಿನ ಕುರಿತಾಗಿ 3 ರೀಲುಗಳ ಚಿತ್ರೀಕರಣ ಮಾಡಿಕೊಂಡಿದ್ದರು. ನಂತರ ಈ 3 ರೀಲುಗಳ ಸಿನಿಮಾ ಕಣ್ಮರೆಯಾಗಿತ್ತು. ಆದರೆ ಎಂದೂ ಬೆಳಕಿಗೆ ಬಾರದ ಈ ನಿಗೂಢ ರೀಲುಗಳ ತಲಾಶೆಗಾಗಿ ಗ್ರೀಕ್ ನಿರ್ದೇಶಕ ‘A’ ತನ್ನ ತಾಯ್ನಾಡಿಗೆ ಮರಳಿ ಬಂದಿದ್ದ.

‘ಮನಕಿಯಾ’ ಸೋದರರು ಚಿತ್ರೀಕರಿಸಿದ ಆ 3 ರೀಲುಗಳಲ್ಲಿ ಏನು ಅಡಗಿದೆ? ಅಂತಹ ಜನಾಂಗೀಯ ಘರ್ಷಣೆಗಳಿದ್ದ ಬಾಲ್ಕನ್ ಪ್ರದೇಶಕ್ಕೆ ಅಪಾಯಕಾರಿಯಾದ ಪಯಣವನ್ನು ಕೈಗೊಂಡಿರುವ ಉದ್ದೇಶ ಅಲ್ಲಿನ ಮೂಲನಿವಾಸಿಗಳ ಬದುಕನ್ನು ಚಿತ್ರೀಕರಿಸುವುದು ಮಾತ್ರವಾಗಿತ್ತೇ?

ಕಡೆಗೆ ಈ 3 ರೀಲುಗಳ ‘ಮನಕಿಯಾ ಸೋದರರ’ ಸಿನಿಮಾದ ಹುಡುಕಾಟಕ್ಕೆ ಹೊರಡುವ ನಿರ್ದೇಶಕ ‘A’ ಗ್ರೀಕ್‍ನಿಂದ ತನ್ನ ಪ್ರಯಾಣ ಆರಂಭಿಸುತ್ತಾನೆ. ಅಲ್ಲಿಂದ ಅಲ್ಬೇನಿಯಾದ ಗಡಿ ಭಾಗಕ್ಕೆ ತಲಪುತ್ತಾನೆ. ನಂತರ ಹಡಗಿನ ಮೂಲಕ ‘ಸರಜೀವೋ’ ಪ್ರಾಂತ್ಯಕ್ಕೆ ತಲುಪುತ್ತಾನೆ. UlyssesGaze-5ಆದರೆ ಅಲ್ಬೇನಿಯನ್, ಬೋಸ್ನಿಯನ್, ಬಲ್ಗೇರಿಯನ್, ಕ್ರೋಷಿಯನ್, ಗ್ರೀಕ್ಸ್, ಸ್ಲೋವಿಯನ್ಸ್, ಸೆರ್ಬಿಯನ್ಸ್, ರೊಮಾನಿಯನ್ಸ್ ಹೀಗೆ ವಿಭಿನ್ನ ಜನಾಂಗಗಳನ್ನೊಳಗೊಂಡ ಇಡೀ ಬಾಲ್ಕನ್ ಪೆನಿಸುಲಾ ಪ್ರಾಂತ್ಯವು ಜನಾಂಗೀಯ ಯುದ್ಧದಲ್ಲಿ ಮುಳುಗಿ ಹೋಗಿರುತ್ತದೆ. ಇಡೀ ಪ್ರಾಂತ್ಯವನ್ನೇ ಅಪಾಯಕಾರಿ ಪ್ರದೇಶವೆಂದು ಘೋಷಿಸಲಾಗಿರುತ್ತದೆ. ಇಂತಹ ಭೀಕರ ಜನಾಂಗೀಯ ಯುದ್ಧದ ಸಂದರ್ಭದಲ್ಲಿ, ಪ್ರತಿ ಕ್ಷಣಕ್ಕೂ ಪ್ರಾಣಪಾಯವಿರುವ ಪ್ರದೇಶಕ್ಕೆ ನಿರ್ದೇಶಕ ‘A’ ಬಂದು ತಲಪುತ್ತಾನೆ.

***

ಇದು ಗ್ರೀಕ್ ನಿರ್ದೇಶಕ ‘ಅಂಜೆಲೋಪೋಲಸ್’ ನ ನಿರ್ದೇಶನದ “Ulysses’ Gaze” ನ ಸ್ಥೂಲ ಕಥೆ. ಆದರೆ ಈ ನಿರ್ದೇಶಕ ‘A’ ಬಾಲ್ಕನ್ ಪ್ರದೇಶಕ್ಕೆ ಪ್ರಯಾಣಿಸುತ್ತಿರುವ ಸಂದರ್ಭದಲ್ಲಿ ಒಂದು ಫ್ಲಾಶ್‍ಬ್ಯಾಕ್ ಬರುತ್ತದೆ. ಅದು 1945ರ ಸಂದರ್ಭ. ನಿರ್ದೇಶಕ ‘A’ ನ ಬೆಲ್‍ಗ್ರೇಡ್ ಸ್ನೇಹಿತ ಹೇಳುತ್ತಾನೆ, ‘ನಾವು ಒಂದು ಜಗತ್ತಿನಲ್ಲಿ ಗಾಢ ನಿದ್ರೆಗೆ ಜಾರಿಕೊಳ್ಳುತ್ತೇವೆ ಮತ್ತು ಮತ್ತೊಂದು ಜಗತ್ತಿನಲ್ಲಿ ನಮ್ಮನ್ನು ಅತ್ಯಂತ ಒರಟಾಗಿ ಎಚ್ಚರಿಸಲಾಗುತ್ತದೆ’. ಇದು “Ulysses’ Gaze” ಸಿನಿಮಾದ ಭಾಷ್ಯೆಯನ್ನು ಹೇಳುತ್ತದೆ ಎAದೆನಿಸುತ್ತದೆ. ಏಕೆಂದರೆ ನಿರ್ದೇಶಕ ‘A’ ಯಾತಕ್ಕಾಗಿ ತನ್ನ ಜೀವದ ಹಂಗನ್ನು ತೊರೆದು ಕಳೆದು ಹೋದ ಆ ನಿಗೂಢ 3 ರೀಲುಗಳ ಸಿನಿಮಾದ ಹುಡುಕಾಟಕ್ಕೆ ಬರುತ್ತಾನೆ? ಆತನಿಗೆ 20ನೇ ಶತಮಾನದ ಆರಂಭದಲ್ಲಿ ಬದುಕಿದ್ದ ಇದೇ ಬಾಲ್ಕನ್ ಪ್ರಾಂತದ ಮೂಲ ನಿವಾಸಿಗಳ ಮನದ ಮಾತುಗಳನ್ನು ಅರಿತುಕೊಳ್ಳುವ ತವಕ. ಎಂಬತ್ತು ವರ್ಷಗಳ ನಂತರ ಇಂದು ವಿಭಿನ್ನ ಜನಾಂಗಗಳ ಪ್ರಾಂತವಾದ Ulysses'_Gaze_Posterಬಾಲ್ಕನ್ ಪೆನಿನ್ಸುಲಾದಲ್ಲಿ ಜನಾಂಗೀಯ ಘರ್ಷಣೆಗಳಾಗುತ್ತಿವೆ. ಪರಸ್ಪರ ಕಾದಾಡುತ್ತಿದ್ದಾರೆ. ಜನಾಂಗದ ಶ್ರೇಷ್ಟತೆಯ ಹೆಸರಿನಲ್ಲಿ ರಕ್ತಪಾತವಾಗುತ್ತಿದೆ. ಆದರೆ ಇವರ ಮೂಲ ನಿವಾಸಿಗಳು ಎಂಬತ್ತು ವರ್ಷಗಳ ಹಿಂದೆ ಏನು ಮಾತನಾಡಿದ್ದರು? ಇದು ಒಬ್ಬ ಕ್ರಿಯಾಶೀಲ ನಿರ್ದೇಶಕನ್ನು ಗಾಢವಾಗಿ ಕಾಡುತ್ತದೆ. ಹಾಗೆಯೇ ನಿರ್ದೇಶಕ ‘A’ ಗೂ ಕಾಡುತ್ತದೆ.

ಹೋಮರನ ಕಾವ್ಯದ ಓಡೆಶಿಯಸ್ ಟ್ರಾಯ್ ಯದ್ಧದ ಹತ್ತುವರ್ಷಗಳ ನಂತರ ತನ್ನ ತವರಿಗೆ ಮರಳುತ್ತಾನೆ. ಓಡೆಶಿಯಸ್‍ನ ಈ ಪಯಣವನ್ನು “Ulysses’ Gaze” ಸಿನಿಮಾದಲ್ಲಿ ಪ್ರತಿನಿಧಿಸುತ್ತಲೇ ನಿರ್ದೇಶಕ ‘ಅಂಜೆಲೋಪೋಲಸ್’ ಕೇವಲ ಗತಕಾಲದ ಹುಡುಕಾಟದಲ್ಲಿ ಮಾತ್ರ ತೊಡಗುವುದಿಲ್ಲ, ಬಾಲ್ಕನ್ ಪೆನಿಸುಲಾದ ಜನಾಂಗೀಯ ಗುಂಪುಗಳ ಮೂಲ ನಿವಾಸಿಗಳ ಮುಗ್ಧತೆ, ಅವರ ಸಂಸ್ಕೃತಿಯನ್ನು ಅರಿಯಲು ಆ 3 ರೀಲುಗಳ ಸಿನಿಮಾದ ಮೂಲಕ ಕಂಡುಕೊಳ್ಳಲು ಪ್ರಯತ್ನಿಸುತ್ತಾನೆ. ಅದಕ್ಕಾಗಿ ರಕ್ಷಣೆ ಇಲ್ಲದ ಅಪಾಯಕಾರಿ ಯುದ್ಧನಿರತ ಪ್ರಾಂತಕ್ಕೆ ತಲಪುತ್ತಾನೆ. ಸಿನಿಮಾದಲ್ಲಿ ನಿರ್ದೇಶಕ ‘A’ ತನ್ನ ಹುಡುಕಾಟದ ಕುರಿತಾಗಿ“ ಈ ಪ್ರಾಂತದ ಘರ್ಷಣೆಗಳು, ಸಂಧಿಗ್ಧತೆ, ತಲ್ಲಣಗಳು, ವಿರೋಧಾಭಾಸಗಳು ಮನಕಿಯಾ ಸೋದರರ 3 ರೀಲುಗಳ ಸಿನಿಮಾದಲ್ಲಿ ಹೇಳಲಾಗಿದೆ” ಎಂದು ಹೇಳುತ್ತಾನೆ. ಅಲ್ಬೇನಿಯಾ, ರೊಮೇನಿಯಾ, ಸ್ಲೋವಿಯಾ ಪ್ರಾಂತಗಳಲ್ಲಿ ಹಾದುಹೋಗುವಾಗ ಅಲ್ಲಿ ಯುದ್ಧದ ಸಾವುಗಳು, ಜನಾಂಗೀಯ ದಾಯಾದಿ ಕಲಹಗಳು ಅಲ್ಲಿನ ಮೂಲ ನಿವಾಸಿಗಳ ಕನಸುಗಳನ್ನು ನಾಶಗೊಳಿಸುತ್ತಿರಬಹುದೇ? ಆ ಮೂಲನಿವಾಸಿಗಳ ಕನಸುಗಳನ್ನು, ಬದುಕಿನ ಆಶಯಗಳನ್ನು ಅರಿಯಲು ಆ 3 ರೀಲಿನ ಸಿನಿಮಾಗಳ ಅವಶ್ಯಕತೆ ಇದೆ.

ಇಡೀ ಸಿನಿಮಾದ ಅವಧಿ ಸುಮಾರು 3 ತಾಸುಗಳು. ಇಡೀ ಸಿನಿಮಾದ ದಟ್ಟತೆಗೆ ಈ ಅವಧಿ ತುಂಬಾ ದೀರ್ಘವೆನಿಸುತ್ತದೆ. ಅನೇಕ ವೇಳೆ ಪ್ರೇಕ್ಷಕನ ಸಹನೆಯನ್ನು ಪರೀಕ್ಷಿಸುತ್ತದೆ. ಆದರೆ ಈ ಎಲ್ಲಾ ಬಿಡಿ ಬಿಡಿಯಾದ ಆಯಾಮಗಳನ್ನು ಒಂದೇ ಎಳೆಯಲ್ಲಿ ಜೋಡಿಸಲು ಹೊರಟ ನಿರ್ದೇಶಕ ‘ಅಂಜೆಲೋಪೋಲಸ್’ ಇದನ್ನು ಅತ್ಯಂತ ಕಾವ್ಯಾತ್ಮಕವಾಗಿ ಅನೇಕ ರೂಪಕಗಳಲ್ಲಿ ಹೇಳುತ್ತಾನೆ. ಒಂದು ದೃಶ್ಯದಲ್ಲಿ ದೇಹದಿಂದ ಬೇರ್ಪಟ್ಟ ಲೆನಿನ್‍ನ ವಿಗ್ರಹದ ತಲೆಯ ಭಾಗ ಮತ್ತು ದೇಹವನ್ನು ಹಡಗಿನಲ್ಲಿ ಮಲಗಿಸಿ ಸಾಗಿಸುತ್ತಾರೆ. ಎಲ್ಲಿಗೆ ಮತ್ತು ಯಾವ ದಿಕ್ಕಿಗೆ ಎಂದು ಗೊತ್ತಾಗುವುದಿಲ್ಲ. ಇದು ಸೋವಿಯತ್ ಛಿದ್ರಗೊಳ್ಳುತ್ತಿರುವ ಸಂದರ್ಭ. ಸೈಬೀರಿಯಾದ ಇಡೀ ಪ್ರಾಂತವೇ ಗಲಭೆಗ್ರಸ್ತವಾಗಿದೆ. UlyssesGaze-4ಭಗ್ನಗೊಂಡ ಲೆನಿನ್‍ನ ಭವ್ಯ ವಿಗ್ರಹವನ್ನು ಹಡಗಿನಲ್ಲಿ ಸಾಗಿಸುವ ದೃಶ್ಯ ಪರಿಣಾಮಕಾರಿಯಾಗಿದೆ.

ಗರುಕೆ ಹುಲ್ಲನ್ನೂ ಕೂಡ ಬೆಳೆಯಲು ಬಿಡದ ಮನುಷ್ಯ ಮೂಲಭೂತವಾಗಿ ‘ಈವಿಲ್’ ಎಂದು ಲಂಕೇಶ್ ಹೇಳಿದ್ದರು. ತನ್ನ ಸ್ವಾರ್ಥ ಮತ್ತು ಸ್ವಹಿತಾಸಕ್ತಿಗಾಗಿ ತನ್ನವರ ಕತ್ತನ್ನು ತಾನೇ ಸೀಳುವ ಹಂತಕ್ಕೆ ತಲಪುವ ಸ್ಥಿತಿಯನ್ನು ಸ್ವತಂತ್ರ ಪ್ರವೃತ್ತಿ ಎಂದು ಕರೆಯುವ ಚಿಂತಕ ಗ್ರಾಮ್ಷಿ ಮುಂದೆ ಇದನ್ನು ತನ್ನ ಮೂಲ ಹುಟ್ಟಿನ ನೆಲೆಯಿಂದ ಬಿಡುಗಡೆಗೊಂಡು ತಾನು ಮಾತ್ರ ಬಚಾವಾಗುವ ಪ್ರವೃತ್ತಿ ಎಂದು ಹೇಳುತ್ತಾನೆ. ಈ ಹುಟ್ಟಿನ ಮೂಲವನ್ನು ಹೇಳುವ ಮೂಲನಿವಾಸಿಗಳ ಮಾತುಗಳನ್ನು ಕೆಳುವ ವ್ಯವಧಾನ ನಮ್ಮಲ್ಲಿ ಎಲ್ಲಿದೆ? ತಳ ಸಮುದಾಯಗಳ ಪರವಾಗಿ ಅಕಡೆಮಿಕ್ ಭಾಷೆಯಲ್ಲಿ ಮಾತನಾಡುವ ಸಂದರ್ಭದಲ್ಲಿ ಮೂಲನಿವಾಸಿಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ನಮ್ಮ ಪಾಂಡಿತ್ಯದ ಪ್ರದರ್ಶನ ಮಾತ್ರ ಅನಾವರಣಗೊಳ್ಳುತ್ತಿರುತ್ತದೆ. ಈ ನೆಲದ ಮಕ್ಕಳ, ಇಲ್ಲಿನ ಮೂಲನಿವಾಸಿಗಳ ಒಳಗುದಿಯನ್ನು ಆಲಿಸಲು ಸದಾ ನಿರಾಕರಿಸುವ ನಾವೆಲ್ಲ ಕೇವಲ ವಿಶ್ವವಿದ್ಯಾಲಯಗಳ ಲೈಬ್ರೆರಿಗಳ ಮೂಲಕ ನಮ್ಮ ಪಾಂಡಿತ್ಯವನ್ನು ರೂಪಿಸಿಕೊಂಡಿರುತ್ತೇವೆ. ನವ ಉದಾರೀಕರಣದ ಸಂದರ್ಭದಲ್ಲಿ ಮುಕ್ತ ಮಾರುಕಟ್ಟೆಯ ಫಲಾನುಭವಿಗಳಾದ ನಮ್ಮೆಲ್ಲರ ಸಂವೇದನೆಗಳು ಕ್ಷೀಣಿಸುತ್ತಾ ಹೋಗುತ್ತವೆ. ಸಂವಹನದ ಮಾರ್ಗಗಳುUlyssesGaze-2 ಕೈಕೊಡುತ್ತವೆ. ನಮ್ಮ ಪ್ರಸ್ತುತೆಯನ್ನು ಗಟ್ಟಿಗೊಳಿಸಿಕೊಳ್ಳಲು ಮೂಲನಿವಾಸಿಗಳನ್ನು ವಿಸ್ಮೃತಿಗೆ ತಳ್ಳಲು ಹೇಸದ ಸುಸಂಸ್ಕೃತ ನಾಗರಿಕ ಸಮಾಜವು ಅವರ ಸಂಸ್ಕೃತಿಯ ಪರವಾಗಿ ಕಿರುಚುವುದನ್ನು ನಿಲ್ಲಿಸುವುದಿಲ್ಲ. ಕಣ್ಣಿನ ಪಟ್ಟಿಯನ್ನು ಕಳಚಿಕೊಂಡಿದ್ದೇವೆ ಎನ್ನುವ ಭ್ರಮೆಯಲ್ಲಿರುವ ನಾವೆಲ್ಲ ನಿಮ್ಮ ಕತ್ತಲನ್ನು ಓಡಿಸುತ್ತೇವೆ ಎಂದು ವ್ಯವಸ್ಥೆಯಲ್ಲಿನ ಅವಮಾನಿತ ತಳ ಸಮುದಾಯಗಳಿಗೆ ಆಶ್ವಾಸನೆ ಕೊಡುತ್ತೇವೆ. ಆದರೆ ಸ್ವತಃ ಬೆಳಕನ್ನು ಹಿಡಿದು ನಿಂತ ಮೂಲನಿವಾಸಿಗಳನ್ನು ಒದ್ದು ಗೋಳೀಕರಣದ ಗ್ಲೋಬಲ್‍ಗೆ ಜಿಗಿಯುತ್ತೇವೆ. ಚಾರಿತ್ರಿಕ ದೃಷ್ಟಿಕೋನದಿಂದ ನೋಡಲು ನಿರಾಕರಿಸುವ ನಾವೆಲ್ಲ ಮೂಲ ನಿವಾಸಿಗಳ UlyssesGaze-3ಅಂತರಂಗದ ಹತ್ತಿರಕ್ಕೂ ಸುಳಿಯಲು ಸೋಲುತ್ತೇವೆ.

ನಮ್ಮೆಲ್ಲರಿಗೂ ಆ 3 ರೀಲುಗಳ ಸಿನಿಮಾದಲ್ಲಿ ಬಾಲ್ಕನ್ ಪ್ರಾಂತದ ಮೂಲನಿವಾಸಿಗಳು ಏನು ಮಾತನಾಡುತ್ತಿದ್ದಾರೆ, ಅವರ ಸಂವೇದನೆಗಳೇನು ಎಂದು ಅರಿಯುವ ವ್ಯವಧಾನವೇ ಇಲ್ಲ. 80 ವರ್ಷಗಳ ಹಿಂದೆ ಅವರ ಮಾತನಾಡುವ ನುಡಿಕಟ್ಟಿಗೂ ನಮ್ಮ ಇಂದಿನ ಸಂದರ್ಭಕ್ಕೂ ಇರುವ ಕನೆಕ್ಷನ್ ಕುರಿತಾದ ಸೋಜಿಗವೂ ನಮ್ಮಲ್ಲಿ ಉಳಿದಿಲ್ಲ. ಹೀಗಾಗಿಯೇ ನಿರ್ದೇಶಕ ‘A’ ದೇಶಭ್ರಷ್ಟನಾಗಿ, ಪ್ರಾಣವನ್ನು ಪಣಕ್ಕಿಟ್ಟು ಅ ಮೂಲನಿವಾಸಿಗಳ ಸಂವೇದನೆಯನ್ನು ಹೇಳುವ ಸಿನಿಮಾ ರೀಲುಗಳಿಗಾಗಿ ಯುದ್ಧಭೂಮಿಯಲ್ಲಿ ಅಲೆಯುವುದನ್ನು ನಮಗೆಲ್ಲ ಒಂದು ಹುಚ್ಚಾಟದಂತೆಯೇ ಭಾಸವಾಗುತ್ತದೆ. ಏಕೆಂದರೆ ನಾಗರಿಕ ಸಮಾಜಕ್ಕೆ ನಡೆಕಾರನ ನಡೆಗಳು ಮತ್ತು ಬದುಕು ಸದಾ ಅಪಥ್ಯ. ಎಲ್ಲವನ್ನು ತಲಸ್ಪರ್ಶಿಯಾಗಿಯೇ ನೋಡುತ್ತೇವೆ ಎನ್ನುವ ಭ್ರಮೆಯಲ್ಲಿರುವ ನಾವೆಲ್ಲ ಚಾರಿತ್ರಿಕ ಕುರೂಪಗಳನ್ನು ಅರ್ಥ ಮಾಡಿಕೊಂಡಿರುವುದಿಲ್ಲ ಅಥವಾ ನಮ್ಮ ಪ್ರಜ್ಞೆಯನ್ನು ವಿಸ್ಮೃತಿಗೆ ತಳ್ಳಿರುತ್ತೇವೆ.

ಅನ್ನ ಹಾಕಿದ ‘ತಪ್ಪಿ’ಗೆ ದಂಡ ಕಟ್ಟಿದವರು!

– ಜೀವಿ

ಅದೊಂದು ಪುಟ್ಟ ಗ್ರಾಮ. 350 ಕುಟುಂಬ ವಾಸವಿರುವ ಹಳ್ಳಿ. ಅದರಲ್ಲಿ 25 ಕುಟುಂಬ ದಲಿತರದ್ದು, ಉಳಿದವರು ಮೇಲ್ಜಾತಿಯವರು. ದಲಿತರಿಗೆ ಊರಿನ ದೇಗುಲ ಮತ್ತು ಮೇಲ್ಜಾತಿಯವರ ಮನೆಗಳಿಗೆ ಪ್ರವೇಶ ನಿಷೇಧ ಇದ್ದೇ ಇತ್ತು. ಪಾತ್ರೆ-ಪಗಡೆ ಮುಟ್ಟುವಂತಿರಲಿಲ್ಲ. ಮೇಲ್ಜಾತಿಯವರು ಬಳಸುತ್ತಿದ್ದ ಬಾವಿ ನೀರು ಕೂಡ ದಲಿತರ ಬಾಯಾರಿಕೆ ನೀಗಿಸುತ್ತಿರಲಿಲ್ಲ. ದಲಿತ ಕೇರಿಯ ದೇವರಾಜ ಎಸ್‌ಎಸ್‌ಎಲ್‌ಸಿಯನ್ನು ಎರಡು-ಮೂರು ಕಂತಿನಲ್ಲಿ ಪಾಸು ಮಾಡಿದ್ದ. ಕೇರಿಯಲ್ಲಿ ಮೊಟ್ಟ ಮೊದಲ ಬಾರಿಗೆ ಕಾಲೇಜು ಮೆಟ್ಟಿಲು ಏರಿದ್ದ ಕೀರ್ತಿ ಅವನದಾಗಿತ್ತು. ಪಟ್ಟಣಕ್ಕೆ ಒಟ್ಟಾಗಿ ಕಾಲೇಜಿಗೆ ಹೋಗುತ್ತಿದ್ದ ಕಾರಣ ಅದೇ dalit_pantherಊರಿನ ಮೇಲ್ವರ್ಗದ ಪುಟ್ಟನಂಜ, ದೊರೆ ಮತ್ತು ಶನೇಶ ಜೊತೆ ಸ್ನೇಹ ಬೆಳೆದಿತ್ತು. ಊರಿನಲ್ಲಿ ಅಸ್ಪಶ್ಯತೆ ಆಚರಣೆ ಇದ್ದರೂ ಅದನ್ನೂ ಮೀರಿ ಈ ಮೂವರ ಸ್ನೇಹ ಬೆಳೆದಿತ್ತು. ಪುಟ್ಟನಂಜ, ದೊರೆ ಮತ್ತು ಶನೇಶ ದಲಿತ ಯುವಕ ದೇವರಾಜನ ಮನೆಗೆ ಆಗಾಗ ಬಂದು ಹೋಗುವುದು ಸಾಮಾನ್ಯವಾಗಿತ್ತು.

ಅದೊಂದು ದಿನ ದಲಿತ ಕೇರಿಯಲ್ಲ್ಲಿ ಸಂಭ್ರಮ ಮನೆ ಮಾಡಿತ್ತು. ಗುಂಡಯ್ಯನ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಆ ಸಂಭ್ರಮ ದಲಿತ ಕೇರಿಯ 25 ಮನೆಯಲ್ಲೂ ಪಾಲು ಪಡೆದಿತ್ತು. ಮಗು ಹುಟ್ಟಿದ ಜಾತಕ ಫಲ ತಿಳಿದು ಅದಕ್ಕೊಂದು ಹೆಸರಿಡಲು ನಿರ್ಧರಿಸಿದ ಗುಂಡಯ್ಯ, ಮರುದಿನ ಹೊತ್ತು ಮೂಡುವ ಮುನ್ನ ಪಕ್ಕದೂರಿನ ಅಯ್ನರ್ ಮನೆ ಬಾಗಿಲಲ್ಲಿ ಕುಳಿತ. ಮಗು ಹುಟ್ಟಿದ ದಿನ, ಗಳಿಗೆ ಎಲ್ಲವನ್ನು ನೋಡಿದ ಅಯ್ನರು ಶನಿವಾರ ದಿನದಂದು ಮಗುವಿಗೆ ರೂಪ ಅಂತ ಹೆಸರಿಡಲು ಆಜ್ಞೆ ಮಾಡಿದರು.

ಮುಂದಿನ ಶನಿವಾರ ಬಂದೇ ಬಿಟ್ಟಿತು, ಹೊತ್ತು ಇಳಿಯಲು ಆರಂಭಿಸುತ್ತಿದ್ದಂತೆ ಮನೆಯ ಮುಂದೆ ಒಲೆ ಹಾಕಿ ಅಡುಗೆ ತಯಾರಿಯಲ್ಲಿ ಗಂಡಸರು ತೊಡಗಿದರು. ಮಹಿಳೆಯರು ಮಕ್ಕಳು ಗುಂಡಯ್ಯನ ಮನೆ ಸೇರಿದರು. ಸೋಬಾನೆ ಪದಗಳು ಸಾಲು ಕಟ್ಟಿ ಬಂದವು. ಕಂಚಿನ ತಟ್ಟೆಯಲ್ಲಿದ್ದ ಸೇರು ಬೆಣ್ಣೆ ಉಂಡೆ ಮಗುವಿನ ಮೂತಿ ಸೇರುತ್ತಿತ್ತು. ಅದು ಖಾಲಿ ಆಗುವ ಹೊತ್ತಿಗೆ ಮಗುವಿನ ಮುಖದ ರೂಪ ಬದಲಾಗಿತ್ತು. ಆದರೆ ರೂಪ ಎಂಬ ಹೆಸರು ನಾಮಕರಣಗೊಂಡಿತ್ತು. ಕೇರಿಯಲ್ಲಿ ಸ್ವಲ್ಪ ದೊಡ್ಡದು ಎನ್ನುವಂತಿದ್ದ ದೇವರಾಜನ ಮನೆಯಲ್ಲಿ ಎಲ್ಲರು ಊಟಕ್ಕೆ ಕುಳಿತರು. ಹೆಂಗಸು-ಮಕ್ಕಳ ಊಟ ಮುಗಿದು ಕೊನೆಯದಾಗಿ ಊರಿನ ಹಿರಿಯರು, ಯುವಕರು ಊಟಕ್ಕೆ ಕುಳಿತರು.

ಅಷ್ಟೊತ್ತಿಗೆ ಅಲ್ಲಿಗೆ ಪುಟ್ಟನಂಜ, ದೊರೆ ಮತ್ತು ಶನೇಶ ಬಂದರು. ಆಗಾಗ ದೇವರಾಜನ ಮನೆಗೆ ಮೂವರು ಸ್ನೇಹಿತರು ಬಂದು ಹೋಗುತ್ತಿದ್ದರಿಂದ ಅದರಲ್ಲಿ ವಿಶೇಷ ಏನು ಇರಲಿಲ್ಲ. ಊಟದ ಸಮಯಕ್ಕೆ ಬಂದ ಕಾರಣಕ್ಕೆ ಬನ್ನಿ ಗೌಡ್ರೆ ಊಟ ಮಾಡಿ ಎಂದು ಸೌಜನ್ಯಕ್ಕೆ ಕೆಲವರು ಯುವಕರು ಕರೆದರು. ಹೊಲೆರ ಮನೆಲಿ ಅವರು ಊಟ ಮಾಡಕಿಲ್ಲ, ಸುಮ್ನೆ ಊಟ ಮಾಡಿ ಎಂದು ಹಿರಿಯರು ಗಧರಿಸಿದರು.

ಮೇಲ್ಜಾತಿಯ ಮೂವರು ಕಾಲೇಜು ಮೆಟ್ಟಿಲೇರಿದ್ದರಿಂದ ಒಂದಿಷ್ಟು ತಿಳುವಳಿಕೆ ಉಳ್ಳವರಂತೆ ಮಾತನಾಡಿ, ಊಟ ಮಾಡಿದರೆ ತಪ್ಪೇನು ಇಲ್ಲ, ನೀವು ಬಡಿಸಿದರೆ ಊಟ ಮಾಡಲು ನಾವು ಸಿದ್ದ ಎಂದರು. ಅವರೇ ಊಟ ಮಾಡ್ತೀವಿ ಅಂದ್ಮೇಲೆ ನಮ್ದೇನು ತಕರಾರು ಎಂದುಕೊಂಡು ಬನ್ನಿ ಸ್ವಾಮಿ ಎಂದು ಕೈನೀರು ಕೊಟ್ಟು ಊಟ ಬಡಿಸೇ ಬಿಟ್ಟರು. ದೇವರಾಜನನ್ನು ನೋಡಲು ಬಂದ ಮೂವರು ಮೇಲ್ಜಾತಿ ದಲಿತ ಕೇರಿಯ ಮನೇಲಿ ಮೊದಲ ಬಾರಿಗೆ ಊಟ ಮಾಡಿ ತಮ್ಮ ಮನೆ ಸೇರಿಕೊಂಡರು. ಈ ವಿಷಯವನ್ನು ಅಷ್ಟಾಗಿ ಗಂಭೀರವಾಗಿ ಪರಿಗಣಿಸದ ದಲಿತರು ತಮ್ಮಷ್ಟಕ್ಕೆ ತಾವು ಸುಮ್ಮನಾದರು.

ದಲಿತ ಕೇರಿಯ ಲಕ್ಕಜ್ಜನ ಮಗ ಸ್ವಾಮಿಗೆ ಆಗಿನ್ನು ಮೀಸೆ ಚಿಗುರುತ್ತಿದ್ದ ಕಾಲ. ಅಂಗನವಾಡಿಯಲ್ಲೆ ಓದು ನಿಲ್ಲಿಸಿದ್ದ ಸ್ವಾಮಿ, ಗೌಡರ ಮನೆ dalit_panther2ಜೀತಕ್ಕೆ ಸೇರಿ ಸದ್ಯ ಮುಕ್ತಿ ಹೊಂದಿ ಕೂಲಿ ಕೆಲಸ ಮಾಡಿಕೊಂಡಿದ್ದ. ಏತ ನೀರಾವರಿ ಯೋಜನೆಯ ಕಾಲುವೆ ತೆಗೆಯುವ ಕೆಲಸ ಊರಿನ ಜನರ ಕೂಲಿಗೆ ಆಧಾರವಾಗಿತ್ತು. ಕೆಲಸಕ್ಕೆ ರಜೆ ಇದ್ದ ವೇಳೆ ಮೇಲ್ಜಾತಿಯ ಡೊಳ್ಳಪ್ಪನ ಜೊತೆ ಕುರಿ ಮೇಯಿಸಲು ಬೆಟ್ಟಕ್ಕೆ ಹೋಗುತ್ತಿದ್ದ. ನಾಮಕರಣ ಕಾರ್ಯ ಮುಗಿದು ಮೂರ‌್ನಾಲ್ಕು ದಿನ ಕಳೆದಿತ್ತು. ಬೆಟ್ಟದಲ್ಲಿ ಕುರಿಗಳ ಜೊತೆ ಸುತ್ತಾಡಿ ಬಳಲಿದ್ದ ಸ್ವಾಮಿ, ಡೊಳ್ಳಪ್ಪನ ಟಿಫನ್ ಬಾಕ್ಸ್‌ನಲ್ಲಿ ತಂದಿದ್ದ ನೀರು ಕೇಳಿದ.

ಟಿಫನ್ ಬಾಕ್ಸ್‌ನಲ್ಲಿ ಮೊದಲೇ ನೀರು ಕಡಿಮೆ ಇತ್ತು. ಬಾಕ್ಸ್ ಓಪನ್ ಮಾಡಿದ ಡೊಳ್ಳಪ್ಪ ಎರಡೂ ಕೈ ಹಿಡಿ ಎಂದ, ಬಾಕ್ಸ್ ಸ್ವಾಮಿ ದೇಹಕ್ಕೆ ಸೋಕದಂತೆ ಮೇಲಿಂದಲೇ ನೀರನ್ನು ಕೈಗೆ ಹನಿಕಿಸಿದ. ಅದರಲ್ಲಿ ಸ್ವಲ್ಪ ಕೆಳಕ್ಕೆ ಬಿದ್ದು ಒಂದೆರಡು ತೊಟ್ಟನ್ನು ಮಾತ್ರ ಸ್ವಾಮಿ ನಾಲಿಗೆ ಹೀರಿ ಕೊಂಡಿತು. ಬಾಯಾರಿ ಬೆಂಡಾಗಿದ್ದ ಸ್ವಾಮಿ, ನನ್ನ ಕೈಗೆ ಬಾಕ್ಸ್ ಕೊಟ್ಟಿದ್ದರೆ ಒಂದೆರಡು ಗುಟುಕು ನೀರಾದರೂ ಕುಡಿಯುತ್ತಿದ್ದೆ ಎಂದ. ಡೊಳ್ಳಪ್ಪನ ಕೋಪ ನೆತ್ತಿಗೇರಿತು ಓ..ಹೋ.. ನಿಮ್ದು ಜಾಸ್ತಿ ಆಯ್ತು, ಯಾಕೆ,,,? ಮನೆಗೆ ಬಂದ್ಬಿಡು, ಒಳಗ್ ಕರೆದು ಹಿಟ್ ಇಕ್ತೀನಿ. ನನ್ನ ಮಕ್ಳಾ ಜಾಸ್ತಿ ಆಯ್ತು ನಿಮ್ದು ಎಂದು ಸಿಡಿಮಿಡಿಗೊಂಡ.

ಅಯ್ಯ ಶಿವನೆ ನೀರ್ ಕೇಳಿದ್ದಕ್ಕೆ ಇಷ್ಟ್ಯಾಕ್ ಸಿಟ್ಟಾಗ್ತಿ ರಾಜಣ್ಣ, ಬಾಕ್ಸ್ ಮುಟ್ಟಿದ್ರೆ ಏನಾಪ್ಪ ಆಯ್ತದೆ. ಮೊನ್ನ ನಮ್ ಗುಂಡಯ್ಯನ ಮನೆ ನಾಮಕರಣದಲ್ಲಿ ಪುಟ್ನಂಜ, ಶನೇಶ ಊಟನೇ ಮಾಡಿದ್ರು. ಅವರಿಗೇನಾಗಿದೆ? ಚೆನ್ನಾಗೇ ಅವ್ರೆ ಎಂದ ಸ್ವಾಮಿ.

ಎಲ್ಲೋ ಕುರಿಮಂದೆ ಕಡೆ ಗಮನ ಇಟ್ಟಿದ್ದ ಡೊಳ್ಳಪ್ಪ, ಒಮ್ಮೆಲೆ ತಿರುಗಿ ಏನು!? ಪುಟ್ನಂಜ ಗುಂಡನ ಮನೆ ಕಾರ್ಯದಲ್ಲಿ ಊಟ ಮಾಡಿದ್ನಾ? ಎಂದು ಗಂಭೀರವಾಗಿ ಕೇಳಿದ. ಪಿಸುಮಾತಿನಲ್ಲಿ ಸ್ವಾಮಿಯನ್ನು ಹತ್ತಿರಕ್ಕೆ ಕರೆದು ಅಂದು ನಡೆದ ಊಟದ ಪ್ರಸಂಗವನ್ನು ಕೇಳಿಕೊಂಡ. ಇದರಿಂದಾಗುವ ಅನಾಹುತ ಅರಿಯದ ಸ್ವಾಮಿ ಎಲ್ಲವನ್ನು ಕಡ್ಡಿಲಿ ಬರೆದಂತೆ ಹೇಳಿಬಿಟ್ಟ.

ಸಂಜೆ ಕುರಿಗಳನ್ನು ಕೊಟ್ಟಿಗೆಗೆ ಮುಟ್ಟಿಸಿ ಊರ ಮುಂದಿನ ಬಸವಣ್ಣನ ಗುಡಿ ಮುಂದೆ ಡೊಳ್ಳಪ್ಪ ಬಂದು ಕುಳಿತ. ಅಲ್ಲಿ ಕುಳಿತಿದ್ದ ಊರಿನ ಒಂದಿಬ್ಬರು ಹಿರಿಯರ ಕಿವಿಗೆ ಹೊಲೆರ ಮನೆಲಿ ಮೇಲ್ಜಾತಿಯ ಹುಡುಗರು ಊಟ ಮಾಡಿದ ವಿಷಯವನ್ನು ಊದಿದ. ನಾಳೆ ಬೆಳಕು ಹರಿದು ಸೂರ್ಯ ಮುಳುಗುವ ಹೊತ್ತಿಗೆ ಊರಿನ ಎಲ್ಲ ಮೇಲ್ಜಾತಿಯವರ ಕಿವಿಗೂ ವಿಷಯ ಬಿತ್ತು.

ಮರುದಿನ ರಾತ್ರಿ ಬಸವಣ್ಣನ ಗುಡಿ ಮುಂದೆ ಪಂಚಾಯ್ತಿ ಸೇರಿಕೊಂಡಿತು. ಕರೀರ‌್ಲಾ ಹೊಲಿ ನನ್ನ ಮಕ್ಕಳ್ನಾ ಎಂದು ಹುಕ್ಕುಂ ಕೂಡ ಆಯಿತು. ಅಷ್ಟೊತ್ತಿಗಾಗಲೇ ಊಟದ ವಿಷಯ ಎಲ್ಲರಿಗೂ ಗೊತ್ತಾಗಿ ಕೆಂಡ ಕಾರುತ್ತಿರುವ ವಿಷಯ ದಲಿತರಿಗೂ ತಿಳಿದಿತ್ತು. ರಾತ್ರಿ ಪಂಚಾಯ್ತಿ ಇರುವ ವಿಷಯ ತಿಳಿದು ಕೆಲವರು ಊರು ಖಾಲಿ ಮಾಡುವ ಮಾತನಾಡಿದ್ದರು. ಆದರೆ ಎಲ್ಲೇ ಹೋದರೂ ನಾಳೆ ಊರಿಗೆ ಬರಲೇಬೇಕು. ಬಂದ ನಂತರವೂ ಇವರು ಬಿಡುವ ಜನ ಅಲ್ಲ ಎಂದು ಧೈರ್ಯ ಮಾಡಿ ಪಂಚಾಯ್ತಿ ಮುಂದೆ ಹಾಜರಾದರು.

ಪಂಚಾಯ್ತಿ ಹಿರಿಯ ಕರಿಗೌಡ, ರಂಗಪ್ಪಣ್ಣ ಸೇರಿದಂತೆ ಎಲ್ಲರೂ ಜಮಾಯಿಸಿದ್ದರು. ಅಪರಾಧಿ ಸ್ಥಾನದಲ್ಲಿ ದಲಿತರು ಕೂಡ ಕೈಕಟ್ಟಿ ನಿಂತಿದ್ದರು. ಕರೀರ‌್ಲಾ ಆ ಗುಂಡನ್ನ ಎಂದು ಕರೀಗೌಡ ಆಜ್ಞೆ ಮಾಡಿದ. ಎಲ್ಲೋ ಮರೆಯಲ್ಲಿ ನಿಂತಿದ್ದ ಗುಂಡಯ್ಯ ನಿಂತಲ್ಲೇ ಗೌಡ್ರೇ ಇಲ್ಲೇ ಇದ್ದೀನಿ ಎಂದು ಮೆಲು ಧ್ವನಿಯಲ್ಲಿ ಹೇಳಿದ. ಅಲ್ಲೇನ್ಲಾ ಮಾಡ್ತಿದ್ದೀಯಾ ಸಂಪ್ಲಲ್ಲಿ, ಬಾರ‌್ಲಾ ಮುಂದ್ಕೆ ಎಂದು ಕರೀಗೌಡ ಗದರಿಸಿದ ಕೂಡಲೇ ಒಂದು ಹೆಜ್ಜೆ ಮುಂದೆ ಬಂದು ನಿಂತ ಗುಂಡಯ್ಯ, ಹೇಳಿ ಗೌಡ್ರೆ? ಎಂದು ಮತ್ತದೆ ಮೆಲುಧ್ವನಿಯಲ್ಲೇ ಕೇಳಿದ.

ಯಾಕ್ಲಾ ಉಸ್ರು ನಿಂತೋಯ್ತ? ನಮ್ ಹುಡುಗ್ರಗೆ ಊಟ ಇಕ್ಕಾಬೇಕಾದ್ರೆ ಬುದ್ದಿ ಸತ್ತೋಗಿತ್ತಾ?, ಎಂದು ಕೂತಲ್ಲೇ ಕೂಗಾಡಿದ. ಮುಂದೆ ಕುಳಿತಿದ್ದ ಕೆಲ ಮೇಲ್ಜಾತಿ ಯುವಕರು ಹಿಡಿದು ಕಂಬಕ್ಕೆ ಕಟ್ಟಿ ನಾಲ್ಕು ಕೊಟ್ರೆ ಸರಿ ಹೊಯ್ತರೆ, ಬಾಲ ಈಗ್ಲೇ ಕತ್ತರಿಸ್ಬೇಕು, ಇಲ್ದಿದ್ರೆ ಜಾತಿ ಕೆಡಿಸೊ ಕೆಲ್ಸ ಮಾಡ್ತಲೇ ಇರ‌್ತಾರೆ ಎಂದು ಸಲಹೆ ಕೊಟ್ಟರು.

ಮಾಡಬಾರದ ತಪ್ಪು ಮಾಡಿದವರ ರೀತಿಯಲ್ಲಿ ಕೈಕಟ್ಟಿ ತಲೆ ಬಗ್ಗಿಸಿ ನಿಂತಿದ್ದ ದಲಿತರು, ಇಂದು ವಾಪಸ್ ಮನೆಗೆ ಹೋಗುವುದು ಸಾಧ್ಯವಿಲ್ಲ ಎಂದು ಮನದಲ್ಲೇ ಅಂದುಕೊಂಡರು. ಮೇಲ್ಜಾತಿ ಹುಡುಗರನ್ನ ಹೊಲಗೇರಿಗೆ ಕರ‌್ಕೊಂಡ್ ಹೋಗಿದ್ಯಾರು?, ಊಟಕ್ಕೆ ಕರದಿದ್ಯಾರು?, ಎಲೆ ಕೊಟ್ಟಿದ್ಯಾರು? ಕೈನೀರು ಕೊಟ್ಟಿದ್ಯಾರು?, ಮುದ್ದೆ ಇಕ್ಕಿದ್ಯಾರು?, ಸಾರು ಬಿಟ್ಟಿದ್ಯಾರು?, ಎಲೆ ಎತ್ತಿದ್ಯಾರು? ಎಲ್ಲರು ಮುಂದೆ ಬಂದು ನಿಲ್ಲಬೇಕು ಎಂದು ಕರೀಗೌಡ ಆಜ್ಞೆ ಮಾಡಿದ. ಸಾಲಾಗಿ ಬಂದು ನಿಂತ ದಲಿತರು, ಎನ್ ಮಾಡ್ಬೇಕು ಎಂಬುದು ತಿಳಿಯದೆ ಒಬ್ಬರ ಮುಖ ಒಬ್ಬರು ನೋಡಿಕೊಂಡರು. ಮೇಲ್ಜಾತಿ ಹುಡುಗರ ಸ್ನೇಹ ಮಾಡಿದ್ದ ದೇವರಾಜನ ಮೇಲೆ ಎಲ್ಲರು ಕೆಂಗಣ್ಣು ಬೀರಿದರು.

ನೋಡು ಹೆಂಗ್ ನಿಂತವ್ರೆ, ನಮ್ ಹುಡುಗ್ರಿಗೆ ಉಣ್ಣಕ್ ಇಕ್ಕಿ, ಜಾತಿ ಕೆಡ್ಸಿ, ಈಗ ಏನು ಗೊತ್ತಿಲ್ಲದ ಮಳ್ ನನ್ ಮಕ್ಳು ತರ ನಿಂತವ್ರೆ ಎಂದ ಕರೀಗೌಡ, ಈ ಸಂದರ್ಭದಲ್ಲಿ ’ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಲ್ಲು’ ಎಂಬಂತೆ ಇದ್ದವರೆಲ್ಲಾ ಹೀನಾಮಾನವಾಗಿ ನಿಂದಿಸಿದರು.

ದಲಿತರ ಮನೆಯ ಮಹಿಳೆಯರು, ಮಕ್ಕಳು, ಮುದುಕರು-ಮೋಟರು ಎಲ್ಲರೂ ಗುಡಿಯ ಹಿಂಭಾಗದ ಮೂಲೆಯ ಮರೆಯಲ್ಲೇ ಅಸಹಾಯಕರಾಗಿ ನಿಂತಿದ್ದರು. ಮಹಿಳೆಯರು ಸೀರೆ ಸೆರಗು ಬಾಯಿಗೆ ಕೊಟ್ಟು ಗಳಗಳನೆ ಕಣ್ಣೀರು ಸುರಿಸುತ್ತಿದ್ದರು. ನಮ್ಮದು ತಪ್ಪಾಯ್ತು ಗೌಡ್ರೆ, ಇನ್ಮುಂದೆ ಜಲ್ಮ ಕೂಯ್ದ್ರು ಇಂತಾ ಕೆಲಸ ಮಾಡಕಿಲ್ಲ. ಮಾಡಿರೊ ತಪ್ಪಿಗೆ ನೀವ್ ಕೊಟ್ಟಿದ್ ಶಿಕ್ಷೆ ಅನುಭವಿಸ್ತೀವಿ, ಇದೊಂದ್ ಸರಿ ಕ್ಷಮಿಸಿಬಿಡಿ ಗೌಡ್ರೆ ಎಂದು ಗುಂಡಯ್ಯ ಬೇಡಿಕೊಂಡ.

ನಮ್ ಮನೆ ಹುಡುಗ್ರಗೆ ಊಟ ಇಕ್ಕಿ ಊರು-ಹೊಲಗೇರಿ ಒಂದ್ ಮಾಡೋಕ್ ಹೊಂಟವ್ರೆ, ಈ ನನ್ ಮಕ್ಳಾ ಹಿಂಗೆ ಬಿಟ್ರೆ ನಾಳೆ ನಮ್ ಮನೆ ಹೆಣ್ ಕೇಳ್ತರೆ. ದಂಡ ಹಾಕಿ ಊರಿಂದ ಹೊರಿಕಾಕ್ಬೇಕು ಎಂದು ಜನರ ನಡುವಿಂದ ಒಬ್ಬ ಸಲಹೆ ಕೊಟ್ಟ. ದಂಡ ಹಾಕ್ದೆ ಬಿಡಾಕ್ ಆಯ್ತದ್, ಎಂದು ಪಂಚಾಯ್ತಿದಾರರೇ ಗುಟ್ಟಾಗಿ ಮಾತನಾಡಿಕೊಂಡು ತೀರ್ಪು ಪ್ರಕಟಿಸಿದರು. ಜಾತಿ ಕೆಡಿಸುವ ಕೆಲಸ ಮಾಡಿರುವ ಪ್ರತಿಯೊಬ್ಬರೂ ತಲಾ 1000 ದಂಡ ಕಟ್ಟಬೇಕು. ಅದು ನಿಂತ ಸ್ಥಳದಲ್ಲೇ, ಎಂದು ಆದೇಶ ನೀಡಿದರು. ಅಲ್ಲದೇ ಊರಿನ ಯಾವುದೇ ಅಂಗಡಿಯಲ್ಲಿ ಬೀಡಿ-ಬೆಂಕಿಪಟ್ಟಣದ ಆದಿಯಾಗಿ ಏನನ್ನೂ ಕೊಡಬಾರದು ಎಂದು ಫಾರ್ಮಾನು ಹೊರಡಿಸಿದರು.

ದಲಿತರ ಎದೆ ದಸಕ್ ಎಂದಂತಾಯ್ತು. 1000 ರೂ. ದಂಡ ಕಟ್ಟಲು ಭೂಮಾಲೀಕನ ಮನೇಲಿ ಕನಿಷ್ಠ 2 ವರ್ಷ ಜೀತ ಮಾಡ್ಬೇಕು. ಹೊತ್ತಿನ ಊಟಕ್ಕೇ ಗತಿ ಇಲ್ಲದ ಸ್ಥಿತಿಯಲ್ಲಿ ನಿಂತ ಸ್ಥಳದಲ್ಲೆ 1000 ರೂ. ದಂಡ ಪಾವತಿಸುವುದು dalit_panther1ಅಸಾಧ್ಯದ ಮಾತು.

ಅದಗಲೇ ಜೀತಕ್ಕೆ ಸೇರಿಕೊಂಡಿದ್ದ ದಲಿತರ ಮಾಲೀಕರು ಕೂಡ ಅಲ್ಲೇ ಇದ್ದರು. ಅವರ ಕಾಲಿಗೆ ಬಿದ್ದು ನನ್ನನ್ನು ಕಾಪಾಡಿ ಎಂದು ಕೆಲವರು ಬೇಡಿಕೊಂಡರು. ಮತ್ತೆ ಕೆಲವರು ತಮ್ಮ ಮನೆಯ ದನಕರುಗಳನ್ನು ಹಿಡಿದು ತಂದು ಅಲ್ಲೇ ಮೇರ್ಲ್ವದವರಿಗೆ ಒಪ್ಪಿಸಿದರು. ದಲಿತ ಮಹಿಳೆಯರ ಕಿವಿ-ಮೂಗಿನಲ್ಲಿದ್ದ ಒಡವೆಗಳನ್ನು ಬಿಚ್ಚಿಕೊಟ್ಟರು. ಹೀಗೆ ಒಬ್ಬರು ಒಂದೊಂದು ರೀತಿಯಲ್ಲಿ ನಿಂತಲ್ಲೇ ದಂಡ ಕಟ್ಟಿದರು. ದನ-ಕರುಗಳು, ಒಡವೆ ಏನೇನು ಇಲ್ಲದ ಇನ್ನೂ ಕೆಲವರು ನಾನು ಮತ್ತು ನನ್ನ ಮಗ ಜೀತಕ್ಕೆ ಸೇರ‌್ತೀವಿ ಎಂದು ಕೆಲ ಭೂ ಮಾಲೀಕರ ಬಳಿ ಹಲುಬಿದರು. ಆದರೆ ಮೇಲ್ವರ್ಗದ ಯುವಕರಿಗೆ ಊಟ ಹಾಕಿದ ತಪ್ಪಿಗೆ ಊರಿನಿಂದ ಬಹಿಷ್ಕಾರಕ್ಕೆ ಒಳಗಾಗಿರುವ ಕಾರಣಕ್ಕೆ ಜೀತಕ್ಕೆ ಸೇರಿಸಿಕೊಳ್ಳಲು ಸಹ ಒಪ್ಪಲಿಲ್ಲ. ಅಪರಾಧಿ ಸ್ಥಾನದಲ್ಲಿ ಇಲ್ಲದ ದಲಿತರು ಕೂಡ ದನಕರುಗಳನ್ನು ಮೇಲ್ವರ್ಗದವರಿಗೆ ಒಪ್ಪಿಸಿ ದಂಡದ ಹಣ ಪಾವತಿ ಮಾಡಿ ಸದ್ಯದ ಸೆರೆ ಬಿಡಿಸಿಕೊಂಡರು.

ದಂಡದ ಹಣದಲ್ಲೇ ದಲಿತ ಕೇರಿಯಲ್ಲಿ ಊಟ ಮಾಡಿ ಜಾತಿ ಕೆಡಿಸಿಕೊಂಡಿದ್ದ ಹುಡುಗರಿಗೆ ಹಣ ಕೊಡಲಾಯಿತು. ಧರ್ಮಸ್ಥಳಕ್ಕೆ ಹೋಗಿ ಹೊಳೇಲಿ ಸ್ನಾನ ಮಾಡಿ ಪೂಜೆ ಮಾಡಿಸಿ ಮೈಲಿಗೆ ತೊಳೆದುಕೊಂಡು ಬನ್ನಿ ಎಂದು ಪಂಚಾಯ್ತಿ ಪ್ರಮುಖರು ಆದೇಶ ನೀಡಿದರು.

ಮೇಲ್ಜಾತಿ ಹುಡುಗರಿಗೆ ಊಟ ಹಾಕಿದ ಹೊಲೇರಿಗೆ ಬುದ್ದಿ ಕಲಿಸಿದ್ವಿ ಎಂದು ಮೇಲ್ವರ್ಗದವರು ಬೀಗಿಕೊಂಡು ಮನೆ ಸೇರಿಕೊಂಡರೆ, ಊಟ ಹಾಕಿದ ತಪ್ಪಿಗೆ ಶಿಕ್ಷೆ ಪಡೆದು ಕಣ್ಣಲ್ಲಿ ನೀರು, ಎದೆಯಲ್ಲಿ ದುಃಖ ತುಂಬಿಕೊಂಡ ದಲಿತರು ತಮ್ಮ ಕೇರಿಯತ್ತ ಹೆಜ್ಜೆ ಹಾಕಿದರು.

(ದಂಡ ಮತ್ತು ಬಹಿಷ್ಕಾರದ ನಂತರ ಏನಾಯಿತು? ಅಂದಿನ ಪ್ರಭಾವಿ ಸಚಿವರು ಮಾಡಿದ್ದೇನು? ಮುಂದಿನ ಭಾಗದಲ್ಲಿ.)